Monday, December 22, 2014

ಜೊತೆ (ಕಥೆ)

      ಅವಳು ಮಕ್ಕಳು ಹುಟ್ಟಿದ ಒಂದೂ ವರೆ ವರ್ಷದ ತರುವಾಯ ಅನಿತಾ ಮತ್ತೆ ಕೆಲಸಕ್ಕೆ ಸೇರಬೇಕು ಎಂದು ಬಯಸಿದಳು. ಅದಕ್ಕಾಗಿ ಹಲವಾರು ಕಡೆಗಳಲ್ಲಿ ಅಪ್ಲಿಕೇಶನ್ನುಗಳನ್ನೂ ಹಾಕಿ ಬಂದಿದ್ದಳು. ಕೊನೆಗೊಂದು ಕಂಪನಿ ಆಕೆಯನ್ನು ಇಂಟರ್ವ್ಯೂಗೆ ಕರೆದಿತ್ತು. ಶುಭದಿನದಂದು ಆಕೆ ಇಂಟರ್ವ್ಯೂಗೆ ಹೋದ ಅನಿತಾ ಸರದಿಯ ಪ್ರಕಾರ ಕಾದು ತನ್ನ ಸಮಯ ಬಂದಾಗ ಕಂಪನಿ ಮಾಲೀಕರ ಚೇಂಬರ್ ಒಳ ಹೊಕ್ಕಳು. ಒಳ ಹೋಗಿ ನೋಡಿದವಳಿಗೆ ಒಮ್ಮೆ ದಿಘ್ಬ್ರಾಂತಿ. ಮಾಲೀಕನ ಸೀಟಿನಲ್ಲಿ ಕುಳಿತವನು ವಿನಾಯಕನೇ. ಅವನನ್ನೇ ಕಂಡ ಹಾಗೆ ಆಗುತ್ತದೆಯಲ್ಲ. ಅವನೇ ಹೌದಾ? ಅಥವಾ ಬೇರೆ ಯಾರಾದರೂ? ಜಗತ್ತಿನಲ್ಲಿ ಒಂದೇ ಥರದ ಜನ 7 ಮಂದಿ ಇರುತ್ತಾರಂತೆ. ವಿನಾಯಕನ ರೀತಿ ಇರುವ ವ್ಯಕ್ತಿಯಾ ಇವನು? ಎಂದುಕೊಂಡಳು ಅನಿತಾ.
                 ಒಮ್ಮೆ ಕಣ್ಣುಜ್ಜಿಕೊಂಡು ನೋಡಿದರೂ ರೂಪ ಬದಲಾಗಲಿಲ್ಲ. ವಿನಾಯಕನೇ ಹೌದು ಕಾಲೇಜು ದಿನಗಳಲ್ಲಿ ನೋಡಿದ್ದಕ್ಕಿಂತ ಬಹಳ ದಪ್ಪಗಾಗಿದ್ದಾನೆ. ರೂಪು ಕೊಂಚ ಚೇಂಜಾಗಿದೆ. ಆದರೆ ಈತ ಮಾಲೀಕನಾಗಲು ಹೇಗೆ ಸಾಧ್ಯ? ಏನಾಯ್ತು.. ಎಂದು ಕೊಂಡವಳಿಗೆ ಒಮ್ಮೆ ಭೂಮಿ ನಿಂತಂತಹ ಅನುಭವ. ಕಣ್ಣಲ್ಲಿ ಧಳ ಧಳನೆ ನೀರು ಇಳಿಯುತ್ತಲಿತ್ತು.

*****

            `ನಮಗೆ ಕೂಸು ಹುಟ್ಟಿದ್ರೆ ಅವನಿ ಹೇಳಿ ಹೆಸರು ಇಡೊಣ.. ಮಾಣಿ ಹುಟ್ಟಿದರೆ ಅತ್ರಿ ಅಂತ ಹೆಸರಿಡೋಣ.. ಏನಂತೀಯಾ..?' ವಿನಾಯಕ ಕೇಳಿಬಿಟ್ಟಿದ್ದ.
             `ಮಾರಾಯಾ.. ಅದೆಲ್ಲ ಕೊನೆಗಾಯ್ತು.. ಮೊದಲು ನಮಗೆ ಮದುವೆಯಾಗಲಿ.. ಆಮೇಲೆ ಮಕ್ಕಳು ಮರಿ ಎಲ್ಲ.. ಆಮೇಲೆ ಮಕ್ಕಳ ಹೆಸರನ್ನು ಯೋಚಿಸಿದರಾಯ್ತು.. ಬಿಡು..' ಎಂದಿದ್ದಳು ಅನಿತಾ.
             `ನಮಗೆ ಮದುವೆ ಆಗೇ ಆಗ್ತದೆ ಮಾರಾಯ್ತಿ.. ಯಾಕೆ ನೀನು ಹಂಗೆ ಆಲೋಚನೆ ಮಾಡೋದು? ನಮ್ಮನ್ನು ದೂರ ಮಾಡುವವರು ಯಾರಿದ್ದಾರೆ ಹೇಳು? ಅದು ಬಿಟ್ಹಾಕು.. ಈ ಹೆಸರುಗಳು ಹೇಗಿದೆ ಹೇಳು..?' ಎಂದು ಕೇಳಿದ್ದ ವಿನಾಯಕ.
             `ಹೆಸರು ಬಹಳ ಚಂದಿದ್ದು... ಆದರೆ ಈ ಹೆಸರೇ ಯಾಕೆ?'
             `ಈ ಎರಡೂ ಹೆಸರು ಯಾಕೋ ಬಹಳ ಇಷ್ಟವಾಗಿದೆ.. ನಿಂಗೂ ಇಷ್ಟವಾದರೆ ಮುಂದೆ ನಮಗೆ ಹುಟ್ಟುವ ಮಕ್ಕಳಿಗೆ ಇಡೋಣ...' ಎಂದ ವಿನಾಯಕ.
             `ನಮ್ಮ ಮದುವೆ ಇನ್ನೂ ಬಹಳ ಸಮಯ ಹಿಡಿಯುತ್ತದೆ ಮಾರಾಯಾ.. ಇನ್ನೂ ನಮ್ಮ ಓದು ಮುಗೀಬೇಕು.. ಆಮೇಲೆ ನಮ್ಮ ಮನೆಯಲ್ಲಿ ಮದುವೆ ಪ್ರಸ್ತಾಪ ಇಡಬೇಕು.. ಮದುವೆಗೆ ಮನೆಯಲ್ಲಿ ಒಪ್ಪಿಕೊಳ್ಳಬೇಕು.. ಉಫ್.. ಇಷ್ಟೆಲ್ಲ ಆಗಲಿಕ್ಕಿ ಇನ್ನೂ ಮೂರ್ನಾಲ್ಕು ವರ್ಷಗಳೇ ಬೇಕು.. ಆದರೂ ನೀನು ಈಗಲೇ ನಮ್ಮ ಮಕ್ಕಳಿಗೆ ಹೆಸರು ಇಡುವ ಹಂತಕ್ಕೆ ಬಂದೆಯಲ್ಲ ಮಾರಾಯಾ.. ಎಂತಾ ಕನಸೋ ನಿನ್ನದು...' ಎಂದಳು.
             ಹುಂ ಎಂದು ನಸುನಕ್ಕಿದ್ದ ವಿನಾಯಕ. ಹಿತವಾಗಿ ಆತನ ಕೈಯನ್ನು ಹಿಡಿದು ನಡೆಯತೊಡಗಿದಳು ಅನಿತಾ. ಮಾತು ಮುಂದಕ್ಕೆ ಸಾಗಿತ್ತು.
            ವಿನಾಯಕ ಹಾಗೂ ಅನಿತಾ ಪ್ರೀತಿಸಲಿಕ್ಕೆ ಹಿಡಿದು ಆರು ತಿಂಗಳಾಯಿತು. ವಿನಾಯಕನಿಗೆ ಕಾಲೇಜಿನಲ್ಲಿ ಸುಮ್ಮನೆ ಪರಿಚಯವಾದವಳು ಅನಿತಾ. ಪರಿಚಯ ಸ್ನೇಹವಾಗಿ, ಬಿಡಿಸದ ಬಂಧವಾಗಿ ಅದ್ಯಾವುದೋ ಘಳಿಗೆಯಲ್ಲಿ ಮಾರ್ಪಟ್ಟಿತ್ತು. ಓದುತ್ತಿದ್ದ ಕಾಲೇಜಿನಲ್ಲಿ ಸುದ್ದಿಯಾಗುವಷ್ಟು ಬಂಧ ಬೆಳೆದಿತ್ತು. ಇಬ್ಬರೂ ಒಬ್ಬರಿಗೊಬ್ಬರು ಜೀವಕ್ಕೆ ಜೀವ ಎನ್ನುವಷ್ಟು ಒಂದಾಗಿದ್ದು. ಹೀಗಿದ್ದಾಗಲೇ ವಿನಾಯಕ ಅನಿತಾಳ ಬಳಿ ತನ್ನ ಮನಸ್ಸಿನಲ್ಲಿ ಮೂಡಿದ ಭಾವನೆಯನ್ನು ಬಿಚ್ಚಿಟ್ಟಿದ್ದ. ಆಕೆಯೂ ಅದಕ್ಕೆ ಹಿತವಾಗಿ ಮಾತನಾಡಿದ್ದಳು.
            `ಅಲ್ಲಾ.. ಅವನಿ ಹಾಗೂ ಅತ್ರಿ ಎನ್ನುವ ಹೆಸರೇ ಯಾಕೆ ನಿನ್ನ ಮನಸ್ಸಿನಲ್ಲಿ ಮೂಡಿದ್ದು?' ಎಂದೂ ಕೇಳಿದ್ದಳು ಅನಿತಾ. `ಅವನಿ ಎನ್ನುವ ಹೆಸರಿನಲ್ಲಿ ಅ ಅಕ್ಷರ ಇದೆ. ವ ಇದೆ. ನಿ ಇದೆ. ಅ ಅಂದರೆ ನಿನ್ನ ಹೆಸರಿನ ಮೊದಲ ಅಕ್ಷರ ಅನಿತಾ. ವ ಹಾಗೂ ನಿ ಯಲ್ಲಿ ನನ್ನ ಹೆಸರಿನಲ್ಲಿರುವ ಅಕ್ಷರಗಳಿವೆ. ಅದಕ್ಕೆ ಅವನಿ ಹೆಸರು ಆಯ್ಕೆ ಮಾಡಿಕೊಂಡಿದ್ದು. ಅತ್ರಿ ಹೆಸರು.. ಸುಮ್ಮನೆ ಆಯ್ಕೆಮಾಡಿಕೊಂಡಿದ್ದು. ಆದರೂ ಅದಲ್ಲಿ ನಿನ್ನ ಹೆಸರಿನಲ್ಲಿರುವ ಅಕ್ಷರಗಳಿವೆ..' ಎಂದು ಹೇಳಿ ಪೆಚ್ಚು ನಗು ನಕ್ಕಿದ್ದ ವಿನಾಯಕ.  `ನಿಂಗೆ ಪಕ್ಕಾ ಹುಚ್ಚೇಯಾ...' ಎಂದು ನಕ್ಕಿದ್ದಳು ಅನಿತಾ.
             ಇಬ್ಬರೂ ಈ ಹೆಸರುಗಳ ಬಗ್ಗೆ ತಮಾಷೆ ಮಾಡಿಕೊಂಡಿದ್ದರೂ ಮನಸ್ಸಿನಲ್ಲಿ ಮಾತ್ರ ನೆನಪಿಟ್ಟುಕೊಂಡಿದ್ದರು. ಇದೇ ಹೆಸರನ್ನು ಇಡಬೇಕು ಎಂದುಕೊಂಡೂ ಆಗೀಗ ಅಂದುಕೊಳ್ಳುತ್ತಿದ್ದರು. ಹೀಗೆ ಹೆಸರನ್ನು ಇಟ್ಟುಕೊಳ್ಳುವುದರಲ್ಲೂ ಒಂಥರಾ ಮಜವಿದೆ ಎಂದು ಇಬ್ಬರಿಗೂ ಅನ್ನಿಸಿತ್ತು. ಭೂಮಿಯೆಂಬ ಅರ್ಥ ಕೊಡುವ ಅವನಿ, ಮಹಾಮುನಿ ಅತ್ರಿಯ ಹೆಸರುಗಳು ವಿನಾಯಕನಿಗೆ ಯಾವ ಕ್ಷಣದಲ್ಲಿ ಹೊಳೆದವೋ ಎಂದುಕೊಂಡಿದ್ದಳು ಅನಿತಾ.
             `ಚೆಂದದ ಹೆಸರು ಕಣೋ ವಿನು.. ಇಂತಹ ವಿಶಿಷ್ಟ ಕಾರಣಗಳಿಗೆ ನೀನು ನಂಗಿಷ್ಟವಾಗ್ತೀಯಾ.. ಐ ಲವ್ ಯೂ..' ಎಂದು ಹೇಳಿದ್ದಳು ಅನಿತಾ. ಖುಷಿಯಿಂದ ಅವಳನ್ನು ತಬ್ಬಿ ನೇವರಿಸಿದ್ದ ವಿನಾಯಕ.
             ಅವರ ಪ್ರೇಮಯಾನದ ಬದುಕು ಕಾಲೇಜು ದಿನಗಳಲ್ಲಿ ಸರಳವಾಗಿ, ಸುಂದರವಾಗಿ ಯಾವುದೇ ತೊಂದರೆಯಿಲ್ಲದೇ ನಿರಾತಂಕವಾಗಿ ಮುಂದಕ್ಕೆ ಸಾಗಿತ್ತು. ಕಾಲೇಜು ಜೀವನ ಮುಕ್ತಾಯ ಎನ್ನುವುದು ಅವರ ಬಾಳ ನೌಕೆಗೆ ತಡೆಯನ್ನೊಡ್ಡಿತ್ತು. ಕಾಲೇಜು ಮುಗಿದ ತಕ್ಷಣ ವಿನಾಯಕನ ಮುಂದೆ ಬದುಕಿನ ಕಲ್ಲು ಮುಳ್ಳಿನ ದಾರಿ ಎದುರು ನಿಂತು ಅಣಕಿಸುತ್ತಿತ್ತು. ಆದರೆ ಅನಿತಾಳಿಗೆ ಈ ಸಮಸ್ಯೆ ಇರಲಿಲ್ಲ. ಮನೆಯಲ್ಲಿ ಸಾಕಷ್ಟು ಅನುಕೂಲಸ್ತರಾಗಿದ್ದರು. ಅನಿತಾಳೇ ತಂದೆಯ ಬಳಿ ಹರಪೆ ಬಿದ್ದು ಬೆಂಗಳೂರಿಗೆ ಜಾಬ್ ಮಾಡಲು ಹೋಗುತ್ತೇನೆ ಎಂದಿದ್ದಳು. ಆಕೆಯ ಅಪ್ಪಯ್ಯ ಅದಕ್ಕೆ ಒಪ್ಪಿಗೆಯನ್ನೂ ಕೊಟ್ಟುಬಿಟ್ಟಿದ್ದ. ಇತ್ತ ವಿನಾಯಕನ ಬದುಕು ಮಾತ್ರ ಎತ್ತೆತ್ತಲೋ ಸಾಗುತ್ತಿತ್ತು.
***
           ಕೆಳ ಮಧ್ಯಮವರ್ಗದ ಕುಟುಂಬಕ್ಕೆ ಸೇರಿದ ವಿನಾಯಕನ ಮನೆಯಲ್ಲಿ ಕಾಲೇಜು ಮುಗಿಸಿದವನು ಕೆಲಸ ಮಾಡಲೇಬೇಕಾದ ಜರೂರತ್ತಿತ್ತು. ಸೊಸೈಟಿಯ ಸಾಲದ ನೊಟೀಸು ಪದೇ ಪದೆ ಬಂದು ಪೋಸ್ಟ್ ಮನ್ ಮೂಲಕ ಕದ ತಟ್ಟುತ್ತಿತ್ತು. ವಿನಾಯಕನ ಅಪ್ಪಯ್ಯ ಮಗನ ಬಳಿ ಏನಾದರೂ ಕೆಲಸವನ್ನು ಹಿಡಿ ಎನ್ನುವ ಒತ್ತಡವನ್ನೂ ಹಾಕತೊಡಗಿದ್ದ. ಹುಡುಗಿಯರಿಗೆ ಬಹುಬೇಗನೆ ಕೆಲಸ ಸಿಕ್ಕಿಬಿಡುತ್ತದೆ.. ಆದರೆ ಹುಡುಗರಿಗೆ ಹಾಗಲ್ಲ. ವಿನಾಯಕನ ಪರಿಸ್ಥಿತಿಯೂ ಇದೇ ಆಗಿತ್ತು. ವರ್ಷಗಳು ಉರುಳಿದರೂ ವಿನಾಯಕನಿಗೆ ಗಟ್ಟಿ ಕೆಲಸ ಸಿಗಲೇ ಇಲ್ಲ. ಅತ್ತ ಅನಿತಾ ವಿನಾಯಕನ ಮೇಲೆ ಒತ್ತಡ ಹಾಕತೊಡಗಿದ್ದಳು.
          `ಮನೆಲಿ ಅಪ್ಪಯ್ಯ ಗಮಡು ನೋಡಲೆ ಹಿಡದ್ದಾ.. ಬೇಗ ನೀ ಒಂದ್ ಜಾಬ್ ಹಿಡಿ ಮಾರಾಯಾ.. ಆಮೇಲೆ ಅಪ್ಪಯ್ಯನ ಕೈಲಿ ಹೇಳು.. ಯನ್ನ ಮದುವೆ ಆಗುವ ಬಗ್ಗೆ ಮಾತನಾಡು...' ಎಂದು ಅನಿತಾ ಹೇಳಿದಾಗಲೆಲ್ಲ ವಿನಾಯಕ ಸಬೂಬು ಹೇಳುತ್ತಿದ್ದ. ವಿನಾಯಕನ ಕೆಲಸದ ಅನ್ವೇಷಣೆ ಸಾಗಿಯೇ ಇತ್ತು. ಅದ್ಯಾವುದೋ ಸಾಡೆ ಸಾತಿನ ಶನಿ ವಿನಾಯಕನ ಹೆಗಲ ಮೇಲೆ ಏರಿ ಕುಳಿತಿದ್ದ. ಯಾವುದೇ ಕೆಲಸ ವಿನಾಯಕನ ಕೈಯನ್ನು ಭದ್ರವಾಗಿ ಹಿಡಿದಿರಲಿಲ್ಲ.
           ಇತ್ತ ಅನಿತಾ ಕೂಡ ನೋಡುವಷ್ಟು ನೋಡಿದಳು. ವಿನಾಯಕನಿಗೆ ಯಾವುದೇ ಕೆಲಸ ಸಿಗುವ ಭರವಸೆ ಉಳಿದಿರಲಿಲ್ಲ. ಅಪ್ಪಯ್ಯ ಒಂದಿನ ಬೆಂಗಳೂರಿನಲ್ಲಿ ಸಿಎ ಪಾಸು ಮಾಡಿ ಒಳ್ಳೆ ಕೆಲಸದಲ್ಲಿದ್ದ ಹುಡುಗನೊಬ್ಬ ಪೋಟೋ ತೋರಿಸಿ ಮದುವೆ ಪ್ರಸ್ತಾಪ ಇಟ್ಟೇಬಿಟ್ಟದಿದ್ದರು. ಕೊಟ್ಟ ಕೊನೆಯ ಬಾರಿಗೆ ವಿನಾಯಕನ ಬಳಿ ಕೆಲಸದ ವಿಷಯ ಹೇಳಿದ ಅನಿತಾ ಕೊನೆಗೊಮ್ಮೆ ಅಪ್ಪಯ್ಯ ತೋರಿಸಿದ ಹುಡುಗನನ್ನು ಮದುವೆಯಾಗಲು ಹೂಂ ಅಂದುಬಿಟ್ಟಿದ್ದಳು. ಧಾಂ.. ಧೂಂ.. ಆಗಿ ಮದುವೆಯೂ ನಡೆಯಿತು. ಸಿ.ಎ. ಮಾಡಿ ಕೆಲಸದಲ್ಲಿದ್ದ ಹುಡುಗನ ಹೆಂಡತಿಯಾಗಿ ಅನಿತಾ ಬೆಂಗಳೂರಲ್ಲಿ ಬದುಕು ಕಟ್ಟಿಕೊಳ್ಳುತ್ತಿದ್ದರೆ ವಿನಾಯಕ ಒಳಗೊಳಗೆ ಮರುಗಿ, ಕೊರಗಿ, ಖಿನ್ನತೆಯಿಂದ ಬಳಲಿ ಹೋಗಿದ್ದ. ಬದುಕಿನ ಎಲ್ಲ ದಾರಿಗಳು ಮುಚ್ಚಿ ಹೋದಂತಾಗಿ ಮಂಕಾಗಿ ಕುಳಿತಿದ್ದ. ಬದುಕಿನ ದಾರಿಯಲ್ಲಿ ದೊಡ್ಡದೊಂದು ಗುಡ್ಡ ಕುಸಿದು ಬಿದ್ದಂತೆ ದಿಕ್ಕು ಕಾಣದಂತೆ ಉಳಿದುಬಿಟ್ಟಿದ್ದ.
            ಅನಿತಾಳ  ಮದುವೆ ಯಾರೊಬ್ಬನ ಜೊತೆಗೋ ಆದಾಗಲೇ ವಿನಾಯಕನ ಹೆಗಲಿನ ಮೇಲೆ ಕುಳಿತಿದ್ದ ಶನಿ ನಿಧಾನವಾಗಿ ಇಳಿದುಬಿಟ್ಟಿದ್ದ. ಅದ್ಯಾವುದೋ ಕ್ಷಣದಲ್ಲಿ ಮಾಡಿಕೊಂಡಿದ್ದ ಪುಣ್ಯದ ಫಲವಾಗಿ ವಿನಾಯಕನಿಗೆ ಹೆಸರಾಂತ ಕಂಪನಿಯೊಂದರಲ್ಲಿ ಕೆಲಸವೂ ಸಿಕ್ಕಿತ್ತು. ಪರಿಣಾಮವಾಗಿ ವಿನಾಯಕ ಕೂಡ ಬೆಂಗಳೂರು ವಾಸಿಯಾಗಿದ್ದ.
           ಬೆಂಗಳೂರಿನ ಬದುಕು ವಿನಾಯಕನಿಗೆ ದುಡ್ಡು ಮಾಡುವ ದಾರಿಯನ್ನು ಕಲಿಸಿಬಿಟ್ಟಿತ್ತು. ಬೆಂಗಳೂರಿಗೆ ಹೋದ ಎರಡೇ ವರ್ಷದಲ್ಲಿ ಒಂದೆರಡು ಸೈಟುಗಳನ್ನು ಕೊಳ್ಳುವಷ್ಟು ಹಣವೂ ಸಂಗ್ರಹವಾಗಿತ್ತು. ಹೀಗಿದ್ದಾಗಲೇ ವಿನಾಯಕನ ಮನೆಯಲ್ಲೂ ಆತನಿಗೆ ಹುಡುಗಿಯನ್ನು ಹುಡುಕಿ ಮದುವೆ ಮಾಡಲು ಮುಂದಾಗಿದ್ದರು. ವಿನಾಯಕ ಕೂಡ ಸಾಕಷ್ಟು ಹುಡುಗಿಯರನ್ನು ನೋಡಿದನಾದರೂ ಯಾರೊಬ್ಬರೂ ಇಷ್ಟವಾಗಲಿಲ್ಲ. ಅನಿತಾಳ ನೆನಪಿನ್ನೂ ಆತನ ಮನಸ್ಸಿನಲ್ಲಿ ಕೂತಿತ್ತು. ಪದೇ ಪದೆ ಕೊರೆಯುತ್ತಲೇ ಇತ್ತು.
**********

        ಮದುವೆಯಾಗಿ ಮೂರು ವರ್ಷ ಕಳೆದ ನಂತರವೂ ಅನಿತಾಳಿಗೆ ವಿನಾಯಕ ನೆನಪಾಗುತ್ತಲೇ ಇದ್ದ. ಕೆಲಸ ಮಾಡುವ ಗಂಡ, ಕೈತುಂಬ ಸಂಬಳ ತರುತ್ತಾನೆ. ಕಾರಿದೆ, ದೊಡ್ಡದೊಂದು ಫ್ಲಾಟ್ ಇದೆ. ವೀಕೆಂಡಲ್ಲಿ ಹೊಗೆನಕಲ್ ಜಲಪಾತಕ್ಕೋ, ಮುತ್ತತ್ತಿಗೋ, ಬನ್ನೇರುಘಟ್ಟಕ್ಕೋ, ಅಪರೂಪಕ್ಕೊಮ್ಮೆ ಕೊಡಗಿಗೋ, ಮೈಸೂರಿಗೋ ಕರೆದುಕೊಂಡು ಹೋಗಿ ಬರುತ್ತಾನೆ. ಆದರೂ ಏನೋ ಕೊರತೆಯಿದೆ ಎನ್ನುವುದು ಆಕೆಗೆ ಅನ್ನಿಸಲು ಆರಂಭಿಸಿತ್ತು. ತಾನೂ ಕೆಲಸಕ್ಕೆ ಹೂಗುವವಳಾದರೂ ಆಗೀಗ ವಿನಾಯಕನ ನೆನಪು ಥಟ್ಟನೆ ನೆನಪಾಗುತ್ತಿತ್ತು. ಹೀಗಿದ್ದಾಗಲೇ ಅನಿತಾಳಿಗೆ ಅವಳಿ ಜವಳಿ ಮಕ್ಕಳು ಜನಿಸಿದ್ದರು.

************

            ವಿನಾಯಕ ಕೊನೆಗೂ ಹುಡುಗಿಯೊಬ್ಬಳನ್ನು ಮದುವೆಯಾಗಲು ಒಪ್ಪಿದ. ಹೀಗಾಗುವ ವೇಳೆಗೆ ಕೈಗೆ ಸಿಕ್ಕಿದ್ದ ಕೆಲಸವನ್ನು ಬಿಟ್ಟು ಬಿಟ್ಟಿದ್ದ ವಿನಾಯಕ ತನ್ನದೇ ಸ್ವಂತ ಕಂಪನಿಯೊಂದನ್ನು ಹುಟ್ಟು ಹಾಕಿದ್ದ. ಮದುವೆಯಾದ ನಂತರವಂತೂ ಆ ಕಂಪನಿ ಲಾಭದ ಗುಡ್ಡವನ್ನು ಏರಲಾರಂಭಿಸಿತ್ತು. ಇದಕ್ಕೆ ಕೈ ಹಿಡಿದವಳ ದೆಸೆ ಎನ್ನಬಹುದು. ಬಹುತೇಕರು ಹೀಗೆಯೇ ಹೇಳುತ್ತಾರೆ. ಕಂಪನಿ ಆರಂಭಿಸಿ ವರ್ಷ ಕಳೆಯುವಷ್ಟರಲ್ಲಿ ನಾಲ್ಕಾರು ಕಡೆಗಳಲ್ಲಿ ಶಾಖೆಗಳನ್ನೂ ತೆರೆದು ವಿಸ್ತಾರವಾಗುತ್ತಲಿತ್ತು. ಹೀಗಿದ್ದಾಗಲೇ ಒಂದು ದಿನ ವಿನಾಯಕ ಕಂಪನಿಯ ಹೊಸದೊಂದು ಶಾಖೆಗೆ ಕೆಲಸಗಾರರನ್ನು ನೇಮಿಸಿಕೊಳ್ಳಲು ಜಾಹೀರಾತು ನೀಡಿದ್ದ. ಸಾಕಷ್ಟು ಅರ್ಜಿಗಳೂ ಬಂದಿದ್ದವು. ಇಂಟರ್ವ್ಯೂಗೆ  ಬಂದವರಲ್ಲಿ ಅನಿತಾಳೂ ಇರುತ್ತಾಳೆ ಎಂದು ಕನಸಿನಲ್ಲೂ ಅಂದಕೊಂಡಿರಲಿಲ್ಲ.
          ಎದುರಿಗೆ ಅನಿತಾ ಬಂದು ನಿಂತಿದ್ದಾಗ ಏನು ಹೇಳಬೇಕು ಎನ್ನುವುದು ವಿನಾಯಕನಿಗೆ ಒಮ್ಮೆಗೆ ತೋಚಲೇ ಇಲ್ಲ. ಸುಮ್ಮನೆ ಗರಬಡಿದವನಂತೆ ಕುಳಿತಿದ್ದ. ಅನಿತಾಳೂ ತಬ್ಬಿಬ್ಬಾಗಿ ನಿಂತಿರುವುದು ಸ್ಪಷ್ಟವಾಗಿತ್ತು. `ಬನ್ನಿ ಕುಳಿತುಕೊಳ್ಳಿ..' ಎಂದವನೇ `ಚನ್ನಾಗಿದ್ದೀಯಾ?..' ಎಂದು ಕೇಳಿದ್ದ. ಕಣ್ಣಲ್ಲಿ ಹನಿಗೂಡಿಸಿಕೊಂಡಿದ್ದ ಅನಿತಾ ಹೂಂ ಅಂದಿದ್ದು ವಿನಾಯಕನ ಕಿವಿಗೆ ಕೇಳಿಸಲಿಲ್ಲ. ಅಷ್ಟು ಅಸ್ಪಷ್ಟವಾಗಿತ್ತು. ಉಳಿದಂತೆ ವಿನಾಯಕ ಸಂದರ್ಶನದಲ್ಲಿ ಬೇರೇನನ್ನೂ ಕೇಳಲಿಲ್ಲ. ಮೌನವಾಗಿಯೇ ಕುಳಿತಿದ್ದ ಅನಿತಾ ಕೆಲ ಘಳಿಗೆಯ ನಂತರ ವಾಪಾಸು ಬಂದಿದ್ದಳು.
         ಇದಾದ ಮರುದಿನವೇ ಕೆಲಸ ಅನಿತಾಳಿಗೆ ಸಿಕ್ಕಿರುವುದು ಖಾತ್ರಿಯಾಗಿತ್ತು.

********
           ತನ್ನದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೂ ವಿನಾಯಕ ಅನಿತಾಳನ್ನು ಎಂದೂ ಮಾತನಾಡಿಸಲು ಮುಂದಾಗಲಿಲ್ಲ. ಅನಿತಾ ಮಾತ್ರ ಒಂದೆರಡು ಸಾರಿ ಮಾತನಾಡಲು ಪ್ರಯತ್ನಿಸಿದ್ದಳಾದರೂ ವಿನಾಯಕ ಕಂಪನಿಗೆ ಬಾಸ್ ಆಗಿದ್ದ ಕಾರಣ ತೀರಾ ಹುಡಾಯಲು ಹೋಗಿರಲಿಲ್ಲ.
           ವರ್ಷವೊಂದು ಕಳೆದಿತ್ತು. ವಿಚಿತ್ರವೆಂದರೆ ವಿನಾಯಕನಿಗೂ ಅವಳಿಜವಳಿ ಮಕ್ಕಳು ಹುಟ್ಟಿದ್ದರು. ಮಕ್ಕಳು ಹುಟ್ಟಿದ್ದ ಖುಷಿಯಲ್ಲಿ ಕಂಪನಿಯ ಕೆಲಸಗಾರರಿಗೆಲ್ಲ ಪಾರ್ಟಿಕೊಡಲು ಮುಂದಾದ ವಿನಾಯಕ. ಮಕ್ಕಳ ಹೆಸರಿಡುವ ಕಾರ್ಯ ಮುಗಿದ ನಂತರ ಬಂದು ಎಲ್ಲರಿಗೂ ಪಾರ್ಟಿಗೆ ಏರ್ಪಾಟು ಮಾಡಿದ್ದ. ಪ್ರತಿಯೊಬ್ಬರೂ ಕುಟುಂಬದ ಸದಸ್ಯರ ಜೊತೆಗೆ ಬರಬೇಕೆಂಬ ತಾಕೀತನ್ನೂ ಮಾಡಿದ್ದ. ಆತನ ತಾಕೀತಿಗೆ ಪ್ರತಿಯಾಗಿ ಅನಿತಾಳೂ ತನ್ನ ಗಂಡನನ್ನು ಕರೆದುಕೊಂಡು ಬಂದಿದ್ದಳು.
           ವಿನಾಯಕ ಪಾರ್ಟಿಯಲ್ಲಿ ಅನಿತಾಳಿಗೆ ಸಿಕ್ಕಿದ್ದ. ತನ್ನ ಹೆಂಡತಿಗೆ ಪರಿಚಯ ಮಾಡಿದ್ದ. ಅನಿತಾಳ ಗಂಡ ವಿನಾಯಕನಿಗೆ ಹಾಗೂ ವಿನಾಯಕನ ಹೆಂಡತಿ ಅನಿತಾಳಿಗೆ ಆಪ್ತರಾಗಿದ್ದರು. ಯಾವುದೋ ಕಾಲದ ಗೆಳೆಯರೇನೋ ಎಂಬಂತೆ ಮಾತಿಗೆ ಕುಳಿತಿದ್ದರು. ಮಾತಿನ ಮಧ್ಯದಲ್ಲಿಯೇ ವಿನಾಯಕ ಅನಿತಾಳ ಗಂಡನ ಬಳಿ ಮಕ್ಕಳ ಬಗ್ಗೆ ಕೇಳಿದ್ದ. ಅದಕ್ಕೆ ಪ್ರತಿಯಾಗಿ ಇಬ್ಬರು ಮಕ್ಕಳ ವಿಷಯವನ್ನು ತಿಳಿಸಿದ್ದ ಅನಿತಾಳ ಗಂಡ ಅವಳಿ-ಜವಳಿ ಮಕ್ಕಳಲ್ಲಿ ಒಬ್ಬ ಹುಡುಗ ಇನ್ನೊಬ್ಬಳು ಹುಡುಗಿ ಎನ್ನುವುದನ್ನು ತಿಳಿಸಿದ್ದ. ಹುಡುಗನಿಗೆ ಅತ್ರಿಯೆಂದೂ ಹುಡುಗಿಗೆ ಅವನಿಯೆಂದೂ ಹೆಸರಡಲಾಗಿದೆ. ಅನಿತಾಳ ಒತ್ತಾಯದಿಂದಲೇ ಈ ಹೆಸರನ್ನು ಇಟ್ಟಿದ್ದಾಗಿ ತಿಳಿಸಿದರು. ವಿನಾಯಕ ಮಾತನಾಡುತ್ತಿದ್ದವನು ಇದ್ದಕ್ಕಿದ್ದಂತೆ ಮೌನಿಯಾಗಿದ್ದ. ಮನಸ್ಸಿನಲ್ಲಿ ಒನಕೆಯಿಂದ ಕುಟ್ಟಿದ ಅನುಭವವಾಗಿತ್ತು. ಕಣ್ಣಂಚು ಹನಿಗೂಡಿದ್ದರೂ ಮಾತು ಮರೆಸಿ ಸುಮ್ಮನಾಗಿದ್ದ.
******
       ವಿನಾಯಕನ ಹೆಂಡತಿಯ ಬಳಿ ಮಾತಿಗೆ ಕುಳಿತಿದ್ದ ಅನಿತಾಳಿಗೆ ಗಮನವೆಲ್ಲ ವಿನಾಯಕ ಹಾಗೂ ತನ್ನ ಗಂಡ ಮಾತನಾಡುತ್ತಿರುವುದರ ಮೇಲೆಯೇ ನಿಂತಿತ್ತು. ಮಾತಿನ ಭರದಲ್ಲಿ ವಿನಾಯಕ ಎಲ್ಲಾದರೂ ತನ್ನ ಗಂಡನ ಬಳಿ ತಾವಿಬ್ಬರೂ ಪ್ರೀತಿಸಿದ ವಿಷಯ ಹೇಳಿಬಿಡುತ್ತಾನಾ ಎಂದೂ ಕ್ಷಣಕಾಲ ಅನುಮಾನಿಸಿದ್ದಳು ಅನಿತಾ. ವಿನಾಯಕನಿಗೆ ಕೆಲಸ ಇಲ್ಲ ಎನ್ನುವ ಕಾರಣಕ್ಕಾಗಿ ಆತನನ್ನು ಧಿಕ್ಕರಸಿ ಹೋಗಿದ್ದಕ್ಕೆ ಪ್ರತಿಯಾಗಿ ವಿನಾಯಕ ಎಲ್ಲಾದರೂ ತನ್ನ ಹಾಗೂ ಅವನ ಪ್ರೇಮದ ಕುರಿತು ಹೇಳಿ ಸಂಸಾರದಲ್ಲಿ ಹುಳಿ ಹಿಂಡಿಬಿಟ್ಟರೆ ಎಂದೂ ಆಲೋಚಿಸತೊಡಗಿದ್ದಳು. ಆದರೆ ನಗು ನಗುತ್ತ ಮಾತನಾಡುತ್ತಿದ್ದ ಅವರು ಯಾವ ಹೊತ್ತಿನಲ್ಲೂ ಸಿಟ್ಟಾಗಿದ್ದು ಕಾಣಿಸಲಿಲ್ಲ. ಬದಲಾಗಿ ಯಾವುದೋ ಮಾತಿಗೆ ಇದ್ದಕ್ಕಿದ್ದಂತೆ ವಿನಾಯಕ ಮೌನಿಯಾಗಿದ್ದು ಮಾತ್ರ ಕಾಣಿಸಿತು. ಯಾರಿಗೂ ಕಾಣದಂತೆ ಕಣ್ಣೊರೆಸಿಕೊಂಡಿದ್ದು ಮಾತ್ರ ಅನಿತಾಳಿಗೆ ಸ್ಪಷ್ಟವಾಗಿತ್ತು. ಅನಿತಾ ದೀರ್ಘ ನಿಟ್ಟುಸಿರು ಬಿಟ್ಟದ್ದಳು.
****
           `ಅವಳಿ ಜವಳಿ ಮಕ್ಕಳು ನೋಡಿ ನಮಗೆ.. ಒಂದು ಗಂಡು ಒಂದು ಹೆಣ್ಣು...' ಎಂದು ವಿನಾಯಕನ ಹೆಂಡತಿ ಹೇಳುತ್ತಿದ್ದಂತೆ ಅನಿತಾ ತನಗೂ ಅವಳಿ ಜವಳಿ ಮಕ್ಕಳು ಹುಟ್ಟಿದ್ದು ನೆನಪಾಯಿತು. ಒಂದು ಕ್ಷಣ ಎಲ್ಲೋ ಏನೋ ನೆನಪಾದಂತಾಯಿತು. `ಹೆಸರೆಂತಾ ಇಟ್ಟಿದ್ದಿ?' ಕೇಳಿದ್ದಳು  ಅನಿತಾ.. `ಕೂಸಿಗೆ ಅವನಿ.. ಮಾಣಿಗೆ ಅತ್ರಿ... ನಮ್ಮನೆಯವರೇ ಈ ಹೆಸರು ಇಟ್ಟಿದ್ದು.. ಎಂತಾ ಚಂದ ಹೆಸರು ಅಲ್ದಾ...' ಎಂದು ವಿನಾಯಕನ ಹೆಂಡತಿ ಹೇಳುತ್ತಿದ್ದಂತೆ ಅನಿತಾ ಮೌನಿಯಾಗಿದ್ದಳು. ಮಾತು ಮರೆತಂತಾಗಿದ್ದಳು.


(ಮುಗತ್ತು)
   
       

7 comments: