Thursday, August 21, 2014

ಬೆತ್ತಲೆ ಮರ ಬಿತ್ತಲೆ

ಮರವೊಂದರ ಗಾತ್ರ ಎಷ್ಟು ದೊಡ್ಡದಿರಬಹುದು? 10 ಅಡಿ, 15 ಅಡಿ? ಶಿರಸಿ ತಾಲೂಕಿನ ಕೆಂಗ್ರೆಹೊಳೆಯ ಕಾನಿನಲ್ಲಿ ಒಂದು ಮರವಿತ್ತು. ಆ ಮರದ ಸುತ್ತಳತೆಯನ್ನು ಅರಿಯಬೇಕಾದರೆ 15-20 ಮಂದಿ ಅಕ್ಕಪಕ್ಕ ಕೈ ಅಗಲಿಸಿ ನಿಂತು ಮರವನ್ನು ತಬ್ಬಿ ಹಿಡಿಯಬೇಕಿತ್ತು. ಅಂತಹ ಹೆಮ್ಮರ ಇದೀಗ ಮುರಿದು ಬಿದ್ದಿದೆ.
ಸ್ಥಳೀಯರ ಬಾಯಲ್ಲಿ ಮಲೆಯಾಳಿಮರ ಎಂದು ಕರೆಯಲ್ಪಡುತ್ತಿದ್ದ ಹೆಮ್ಮರದ ನೈಜ ಹೆಸರು ಬೊಂಡಾಲೆ ಎಂದು. ಈ ಮರದ ವೈಜ್ಞಾನಿಕ ನಾಮಧೇಯ ಟೈಟ್ರಾಮೆಲಸ್ ನ್ಯೂಡಿಫ್ಲೋರಾ. ಈ ಮರದ ಬುಡದಲ್ಲಿ ಅರಣ್ಯ ಇಲಾಖೆ ಹಾಕಿರುವ ಫಲಕದ ಮೇಲೆ ಮರದ ಸುತ್ತಳತೆ 7 ಮೀಟರ್ (22 ಅಡಿ 9 ಇಂಚು) ಹಾಗೂ ಎತ್ತರ 52 ಮೀಟರ್ (169 ಅಡಿ) ಎಂದು ನಮೂದು ಮಾಡಲಾಗಿದೆ. ಅಗಾಧ ಗಾತ್ರವನ್ನು ಹೊಂದಿದ್ದ ಈ ಮರ ನೂರಾರು ಜೇನು ಕುಟುಂಬಗಳಿಗೆ ಗೂಡು ಕಟ್ಟಲು ಆಶ್ರಯ ನೀಡಿತ್ತು. ಈ ಕಾರಣದಿಂದಾಗಿ ಈ ಮರವನ್ನು ಜೇನುಮರ ಎಂದೂ ಕರೆಯಲಾಗುತ್ತಿತ್ತು.
ಶಿರಸಿ ನಗರದಿಂದ 8 ಕಿ.ಮಿ ದೂರದ ಕೆಂಗ್ರೆಹೊಳೆಯ ಅರವಿಂದ ನರ್ಸರಿ ಬಳಿಯ ಕಾಡಿನಲ್ಲಿದ್ದ ಈ ಮರದ ಆಯಸ್ಸು 350 ರಿಂದ 400 ವರ್ಷಗಳಿಗಿಂತಲೂ ಅಧಿಕ. ಅಂದರೆ ಭಾರತಕ್ಕೆ ಬ್ರಿಟೀಷರು ಆಗಮಿಸಿದ್ದ ಸಂದರ್ಭ. ಬ್ರಿಟೀಷರು ಭಾರತಕ್ಕೆ ಬಂದಿದ್ದು, ವ್ಯಾಪಾರವನ್ನು ಮಾಡಿದ್ದು, ಭಾರತವನ್ನು ವಸಾಹತುವನ್ನಾಗಿ ಮಾಡಿಕೊಂಡಿದ್ದು, ಭಾರತೀಯರ ಸ್ವಾತಂತ್ರ್ಯಹೋರಾಟ, ಸ್ವತಂತ್ರವಾಗಿದ್ದು ಇವೆಲ್ಲವನ್ನೂ ಈ ಮರ ಕಂಡಿತ್ತು. ನಾಲ್ಕು ಶತಮಾನಗಳ ಕಾಲ ಮರಗಳ್ಳರ ಕೊಡಲಿಯೇಟಿಗೆ ಬಲಿಯಾಗದೇ ಅಗಾಧವಾಗಿ ನಿಂತಿತ್ತು. ದೈತ್ಯವಾಗಿ ಕಂಡಿತ್ತು. ಹುಲೇಕಲ್, ಸಾಲಕಣಿ, ಕೆಂಗ್ರೆಹೊಳೆ, ಓಣಿಕೇರಿ, ವಾನಳ್ಳಿ ಈ ಭಾಗದ ಸಾರ್ವಜನಿಕರಂತೂ ಈ ದೈತ್ಯಮರವನ್ನು ತಮ್ಮ ಭಾಗದ ಹೆಮ್ಮೆ ಎಂದೇ ಆರಾಧಿಸುತ್ತ ಬಂದಿದ್ದರು.
ಈ ಮರದ ಅಗಲವಾದ ಬೇರುಗಳ ಗಾತ್ರವನ್ನು ಗಮನಿಸಿದರೆ ನೋಡುಗರು ವಿಸ್ಮಯ ಪಡುವಂತಿತ್ತು. ಮರದ ಸುತ್ತಲೂ ಚಾಚಿರುವ ಬೇರುಗಳಲ್ಲಿ ಒಂದು ಬೇರಿನಿಂದ ಇನ್ನೊಂದು ಬೇರಿನ ನಡುವೆ ಆರಡಿಯ ಆಜಾನುಬಾಹು ನಿಂತಿದ್ದರೂ ಬೇರಿನ ಇನ್ನೊಂದು ಪಕ್ಕದಲ್ಲಿ ನಿಂತಿದ್ದವರಿಗೆ ಕಾಣುತ್ತಿರಲಿಲ್ಲ. ಅಷ್ಟೇ ಏಕೆ ಈ ಬೇರುಗಳ ನಡುವೆ ಆರೆಂಟು ಅಡಿಯ ಕೋಣೆಗಳನ್ನೂ ಮಾಡಿ ಬದುಕಬಹುದಿತ್ತು. ಈ ಕೆಲವೇ ಕೆಲವು ಅಂಶಗಳೇ ಮರದ ಬೃಹತ್ ಗಾತ್ರವನ್ನು ಕಣ್ಣಮುಂದೆ ಕಟ್ಟಿಕೊಡುತ್ತವೆ.
ಪರಿಸರ ಹೋರಾಟಗಾರ, ಬರಹಗಾರ ಶಿವಾನಂದ ಕಳವೆಯವರ ಪರಿಸರ ಕಾಳಜಿಯಿಂದಾಗಿ ಈ ಮರದ ರಕ್ಷಣೆ ಕಾರ್ಯವನ್ನು ಅರಣ್ಯ ಇಲಾಖೆ ಕೈಗೊಂಡಿತ್ತು. ಈ ಮರವನ್ನು ಅರಣ್ಯಗಳ್ಳರು ಕಡಿಯದಂತೆ ವಿಶೇಷ ಮುತುವರ್ಜಿಯನ್ನೂ ವಹಿಸಲಾಗಿತ್ತು. ಮರದ ಮೇಲೆ ನೂರಾರು ಜೇನು ಕುಟುಂಬಗಳು ಸದಾಕಾಲ ಗೂಡು ಕಟ್ಟಿಕೊಂಡು ಇರುತ್ತಿದ್ದವು. ಈ ಕಾರಣದಿಂದಲೇ ಮರ ವಿಶೇಷತೆಯನ್ನು ಪಡೆದುಕೊಂಡಿತ್ತು. ಸ್ಥಳೀಯರು ಈ ಮರದಿಂದ ಜೇನುತುಪ್ಪವನ್ನು ಸಂಗ್ರಹ ಮಾಡುತ್ತಿದ್ದರು. ಜೇನುತುಪ್ಪ ಸಂಗ್ರಹಿಸುವಾಗ ಮರಕ್ಕೆ ಪೂಜೆ ಮಾಡಿ ನಂತರ ಜೇನುತುಪ್ಪ ಸಂಗ್ರಹಿಸುತ್ತಿದ್ದುದು ಮರ-ಜೇನು ಹಾಗೂ ಮನುಷ್ಯರ ನಡುವಿನ ಅವಿನಾಭಾವ ಸಂಬಂಧವನ್ನು ತೋರಿಸುತ್ತದೆ.
ತನ್ನ ಬೃಹತ್ ಗಾತ್ರದಿಂದಲೇ ಪರಿಸರ ಪ್ರಿಯರನ್ನೂ ಪ್ರವಾಸಿಗರನ್ನೂ ಈ ಮರ ತನ್ನತ್ತ ಸೆಳೆದುಕೊಂಡಿತ್ತು. ಪ್ರತಿ ವಾರ ಈ ಮರವನ್ನು ನೋಡಲೆಂದೇ ನೂರಾರು ಜನ ಕೆಂಗ್ರೆ ಹೊಳೆಯ ಈ ಕಾಡಿಗೆ ಪಿಕ್ ನಿಕ್ ಬರುತ್ತಿದ್ದರು. ಈ ಮರವನ್ನು ನೋಡಿ ವಿಸ್ಮಯರಾಗುತ್ತಿದ್ದರು. ಮರದ ಬುಡದಲ್ಲಿ ಕುಳಿತು ಪೋಟೋ ಕ್ಲಿಕ್ಕಿಸುತ್ತಿದ್ದರು. ಮರದ ದೈತ್ಯತೆ, ದೊಡ್ಡ ದೊಡ್ಡ ಬೇರುಗಳನ್ನು ನೋಡಿ ಖುಷಿಪಡುತ್ತಿದ್ದರು. ಮರದ ಬುಡದಲ್ಲಿ ಆಡುತ್ತಿದ್ದರು.
ಪಶ್ಚಿಮ ಘಟ್ಟದಲ್ಲಿ ಇಂತಹ ಮರಗಳು ಸಾಕಷ್ಟಿವೆ. ಪ್ರತಿ ಐದು ಕಿ.ಮಿ ಗೆ ಒಂದು ದೈತ್ಯ ಮರವಿದ್ದು ಇಂತಹ ದೈತ್ಯ ಮರಕ್ಕೆ ಜೇನುಗಳು ಗೂಡು ಕಟ್ಟಲು ಆಗಮಿಸುತ್ತವೆ. ಆದ್ದರಿಂದ ಇಂತಹ ಮರಗಳನ್ನು ಜೇನುಮರ ಎಂದು ಕರೆಯುತ್ತಾರೆ. ಮೃದು ಜಾತಿಯ ಈ ಮರ ಬೇಸಿಗೆಯಲ್ಲಿ ತನ್ನ ಸಂಪೂರ್ಣ ಎಲೆಗಳನ್ನು ಉದುರಿಸುತ್ತವೆ. ಆದ್ದರಿಂದಲೇ ಈ ಮರವನ್ನು ಬೆತ್ತಲೆ ಮರ ಎಂದೂ ಕರೆಯಲಾಗುತ್ತದೆ. ಹುಲೇಕಲ್, ಸಾಲಕಣಿ, ವಾನಳ್ಳಿ ಭಾಗದ ಈ ದೈತ್ಯ ಮರ ಮಳೆಗಾಲದಲ್ಲಿ ಮುರಿದು ಬಿದ್ದಿದೆ ಎಂದು ಪರಿಸರ ಬರಹಗಾರ ಶಿವಾನಂದ ಕಳವೆ ಹೇಳುತ್ತಾರೆ.
ಇಂತಹ ದೈತ್ಯ ಮರ ಈ ಮಳೆಗಾಲದಲ್ಲಿ ಗಾಳಿ-ಮಳೆಯ ಅಬ್ಬರಕ್ಕೆ ಮುರಿದುಬಿದ್ದಿದೆ. ಮರದ ರೆಂಬೆ ಕೊಂಬೆಗಳೆಲ್ಲ ಭೂಮಿಪಾಲಾಗಿದೆ. ಜೇನು ಗೂಡು, ಹಕ್ಕಿಗಳು, ಕೀಟ, ಪತಂಗಗಳಿಂದ ತುಂಬಿ ತುಳುಕುತ್ತಿದ್ದ ಮರದ ರೆಂಬೆ, ಕೊಂಬೆಗಳೆಲ್ಲ ಭೂಮಿಗೊರಗಿವೆ. ಮೃದು ಜಾತಿಯ ಮರ ಮುರಿದು ಬಿದ್ದಿರುವುದು ಸ್ಥಳೀಯರ ಮನಸ್ಸಿಗೆ ತೀವ್ರ ಆಘಾತವನ್ನು ಉಂಟುಮಾಡಿದೆ. ತಮ್ಮ ಪ್ರದೇಶದ ಹೆಮ್ಮೆಯಾಗಿದ್ದ ಜೇನುಮರದ ಅವಸಾನದಿಂದ ಸ್ಥಳೀಯರು, ಪರಿಸರ ಪ್ರೇಮಿಗಳು ಕಣ್ಣೀರುಗರೆಯುತ್ತಿದ್ದಾರೆ. ಮರವೊಂದು ಕಟ್ಟಿಕೊಟ್ಟಿದ್ದ ಕಲರವ ಸ್ಥಬ್ಧವಾಗಿದೆ. ಮರವೂ ಕೂಡ ಪ್ರವಾಸಿಗರನ್ನು ಸೆಳೆಯಬಲ್ಲದನ್ನು ತೋರಿಸಿಕೊಟ್ಟಿದ್ದ ಮರ ಇನ್ನಿಲ್ಲವಾಗಿದೆ. ಶತಮಾನಗಳ ಕಥೆ ಹೇಳುತ್ತಿದ್ದ ಮಹಾಮರ ಕಣ್ಮುಚ್ಚಿದೆ. ತನ್ಮೂಲಕ ಮರ ನೆನಪಾಗಿ ಉಳಿದಿದೆ.

***
(ಇದು ಆ.21,2014ರ ಬೈ2ಕಾಫಿಯ ಟೂರು ಕೇರಿಯಲ್ಲಿ ಪ್ರಕಟಗೊಂಡಿದೆ)

No comments:

Post a Comment