Saturday, October 28, 2017

ಚೌಕಟಿ ಹೆಗಡೆ ಪುರಾಣ

ಚೌಕಳಿ ಚೌಕಳಿ ಅಂಗಿ, ಮಾಸಲು ಮಣ್ಣ ಬಣ್ಣದ ದೊಗಳೆ ಪ್ಯಾಂಟು ಹಾಕಿಕೊಂಡ ಅನಾಮತ್ತು ಆರಡಿ ಮೂರಿಂಚು ಎತ್ತರದ ಆದರೆ ಅಷ್ಟೇನೂ ದೃಢಕಾಯವಲ್ಲದ ಬಡಕಲು ಶರೀರದ ವ್ಯಕ್ತಿ ನಮ್ಮೂರ ದಾರಿಯಲ್ಲಿ ನಡೆದು ಬರುತ್ತಿದ್ದಾನೆ ಎಂದರೆ ಖಂಡಿತವಾಗಿಯೂ ಅವನು ಚೌಕಟಿ ಹೆಗಡೆಯೇ ಹೌದು ಎಂಬುದು ನಮ್ಮೂರು ಮಾತ್ರವಲ್ಲ ಸುತ್ತಮುತ್ತಲ ಫಾಸಲೆಯ ಚೌಕಟಿ ಹೆಗಡೆಯನ್ನು ಬಲ್ಲಾದವರ ಅಭಿಪ್ರಾಯ. ಮನೇಗದ್ದೆಯ ಶಿರಿ ಹೆಗಡೆ ಎಂಬ ಸ್ವಲ್ಪ ವಿಶಿಷ್ಟವಾದ ಮನೋಭಾವದ ಹಾಗೂ ಉಳಿದಂತೆ ಸೀದಾಸಾದ ಆದ ವ್ಯವ್ಯಕ್ತಿ ಚೌಕಟಿ ಹೆಗಡೆ ಎಂದು ಹೆಸರಾಗಿ ಎಲ್ಲರ ಮನಸ್ಸಿನಲ್ಲಿಯೂ ಅಚ್ಚಳಿಯದೇ ಉಳಿದುಕೊಂಡಿದ್ದು ಮಾತ್ರ ಶತಮಾನದ ವೈಶಿಷ್ಟ್ಯ ಎಂಬ ಖ್ಯಾತಿ ನಮ್ಮ ಭಾಗದಲ್ಲಿದೆ.
ಒಂದಾನೊಂದು ಕಾಲದಲ್ಲಿ, ತನ್ನ ಯವ್ವನದಲ್ಲಿ ಮನೆಗದ್ದೆ ಶ್ರೀಧರಮೂರ್ತಿ ಹೆಗಡೆ ಎಂಬ ಪೂರ್ಣನಾಮಧೇಯವನ್ನು ಹೊಂದಿದ್ದ ಈ ವ್ಯಕ್ತಿ ಕಾಲಾಂತರದಲ್ಲಿ ಶಿರಿ ಹೆಗಡೆಯಾಗಿ ಬದಲಾಗಿದ್ದನ್ನು ಕಂಡವರು ಅನೇಕರಿದ್ದಾರೆ. ಇಂತಹ ಶಿರಿ ಹೆಗಡೆಯೇ ತದನಂತರದಲ್ಲಿ, ಯಾವುದೋ ಒಂದು ಹಂತದಲ್ಲಿ ಚೌಕಟಿ ಹೆಗಡೆಯಾಗಿ ಅಭಿದಾನವನ್ನು ಪಡೆದುಕೊಂಡಿರುವುದು ಹಲವರಲ್ಲಿ ಎಂದೂ ಮರೆಯಲಾಗದಂತಹ ವಿಸ್ಮಯದ ಸಂಗತಿ.
 ಮೂಲತಃ ಆರೆಕರೆ ಭಾಗಾಯ್ತದ ಜಮೀನನ್ನು ಹೊಂದಿದ್ದ ಶಿರಿ ಹೆಗಡೆ ಒಂದು ಕಾಲದಲ್ಲಿ ದೊಡ್ಡ ಕುಳ. ಅಲ್ಲದೇ ಕೈಕಾಲಿಗೂ ಆಳು-ಕಾಳು ಹೊಂದಿದ್ದ. ಅದಕ್ಕಿಂತಲೂ ಹೆಚ್ಚಾಗಿ ಒಂದಾನೊಂದು ಕಾಲದಲ್ಲಿ ಹೈನೋದ್ಯಮದ ಪಂಟರ್ ಈತ. ಮನೆಯಲ್ಲಿ ಏನಿಲ್ಲವೆಂದರೂ ಕನಿಷ್ಟ 15ಕ್ಕೂ ಹೆಚ್ಚಿನ ಕಾಲ್ನಡೆಗಳಿದ್ದವು ಎಂದರೆ ಆತನ ಹೈನುಗಾರಿಕೆಯ ಹೆಚ್ಚುಗಾರಿಕೆಯನ್ನು ಅರಿಯಲೇಬೇಕು ಬಿಡಿ. ಆದರೆ ಕಾಲಾನಂತರದಲ್ಲಿ ಅದೆಲ್ಲವನ್ನೂ ಕಳೆದುಕೊಂಡಿದ್ದು ಮಾತ್ರ ಜಗತ್ತಿನ ಬದಲಾಣೆಗೆ ಸಾಕ್ಷಿಯಾಗಿದ್ದು ಸುಳ್ಳಲ್ಲ. ಜಮೀನನ್ನು ಹೊಂದಿದ್ದ ಸಂದರ್ಭದಲ್ಲಿ  ಶ್ರೀಧರಮೂರ್ತಿ ಹೆಗಡೇರು ಎನ್ನುವ ಗೌರವವನ್ನು ಗಳಿಸಿಕೊಂಡಿದ್ದವನು ತನ್ನ ಜಮೀನು ಹಾಗೂ ಕೊಟ್ಟಿಗೆಯಲ್ಲಿನ ರಾಸುಗಳನ್ನು ಕಳೆದುಕೊಂಡ ಹಾಗೆಲ್ಲ ಹೆಸರು, ಗೌರವವನ್ನೂ ಕಳೆದುಕೊಂಡಿದ್ದ. ಆರೆಕರೆ ಜಮೀನು ಮೂರೆಕರೆಗೆ ಇಳಿದಾಗ ಶಿರಿ ಹೆಗಡೆಯಾದ ಈತ ಎಲ್ಲ ಜಮೀನು ಕಳೆದುಕೊಂಡು ಅಕ್ಷರಶಃ ಬೀದಿಗೆ ಬಿದ್ದ ಸಂದರ್ಭದಲ್ಲೇ ಚೌಕಟಿ ಹೆಗಡೆಯಾಗಿ ಬದಲಾಗಿದ್ದ.
 ಚೌಕಟಿ ಹೆಗಡೆ ಆರು ಅಡಿ ಮೂರಿಂಚು ಎತ್ತರದವನು ಎಂದು ಆಗಲೇ ಹೇಳಿದೆನಲ್ಲ ಮಾರಾಯ್ರೇ. ಆತನಿಗೆ ಚೌಕಟಿ ಹೆಗಡೆ ಎಂಬ ಹೆಸರು ಬರಲು ಕಾರಣ ಏನು ಎನ್ನುವುದನ್ನು ಹೇಳದೇ ಇದ್ದರೆ, ಸ್ವಾರಸ್ಯವೇ ಇರುವುದಿಲ್ಲ ಬಿಡಿ. ಇಂತಹ ಮಾಸ್ಟರ್ಪೀಸ್ ಕಟೌಟ್ ಚೌಕಟಿ ಹೆಗಡೆ ಆಗೀಗ ನಮ್ಮೂರಿಗೆ ಬರುತ್ತಾನೆ. ಚೌಕಟಿ ಹೆಗಡೆಯನ್ನು ಬಲ್ಲಾದವರಿಗೆ ಆತ ದೂರದಿಂದಲೇ ಇಂವ ಇಂತವನೇ ಎಂಬುದು ನಜರಿಗೆ ಬರುತ್ತದೆ. ಆದರೆ ಊರಿಗೆ ಯಾರಾದರೂ ಹೊಸಬರು ಬಂದರೆ ಮಾತ್ರ ಇವರು ಯಾರು ಬಲ್ಲಿರೇನು ಎಂದು ಮೂಗಿನ ಒಳಗೆ ಬೆರಳಿಡುವುದು ಖಚಿತ. ಹೀಗೆ ಒಂದು ಯಮಗಂಡ ಕಾಲದಲ್ಲಿ ಈತ ನಮ್ಮೂರಿಗೆ ಕಾಲಿರಿಸಿದ್ದ. ಆ ಸಂದರ್ಭದಲ್ಲಿ ನಮ್ಮೂರಿನಲ್ಲಿ ಏನೋ ಒಂದು ವಿಶೇಷ ಕಾರ್ಯಕ್ರಮದ ಸಂಭ್ರಮ. ನೂರಾರರು ಜನರು ನೆಂಟರು-ಇಷ್ಟರು ನಮ್ಮೂರಿನಲ್ಲಿ ಗೌಜಿಯನ್ನು ಹುಟ್ಟುಹಾಕಿದ್ದರು. ನೂರಾರು ಜನರು ಸೇರಿದ್ದ ಸಂದರ್ಭದಲ್ಲಿ ಚೌಕಟಿ ಹೆಗಡೆ ಊರಿನ ಫಾಸಲೆಯಲ್ಲಿ ಕಾಲಿಟ್ಟಾಗ ಕೇಳಬೇಕೇ? ಒಂದಲ್ಲಾ ಒಂದು ಕಡೆ ಈತ ಕ್ವಶ್ಚನ್ ಮಾರ್ಕ್ ಆಗದೇ ಇರುತ್ತಾನೆಯೇ? ಆ ಸಂದರ್ಭದಲ್ಲಿ ನಮ್ಮೂರಿನಲ್ಲಿ ದಿವ್ಯ ಉಪಸ್ಥಿತಿ ಹೊಂದಿದ್ದ ವ್ಯಕ್ತಿಯೊಬ್ಬನಿಗೆ ಶಿರಿ ಹೆಗಡೆ ಬಹಳ ಕುತೂಹಲಕರವಾಗಿ ಕಂಡಿದ್ದ. ಹೇಳಿ ಕೇಳಿ ಅದು ಇಸ್ಪೀಟ್, ರಮ್ಮಿ, ಅಂದರ್ ಬಾಹರ್ನ ಖದರ್ರಿನ ಕಾಲ. ಊರಿಗೆ ಬಂದ ಬಹುತೇಕರು ಆ ಅಂತರಾಷ್ಟ್ರೀಯ ಕ್ರೀಡೆಯಲ್ಲಿ ಗಿನ್ನಿಸ್ ರೆಕಾರ್ಡ್ ಹೋಲ್ಡರ್ಗಳು.
 ಶಿರಿ ಹೆಗಡೆಯನ್ನು ನೋಡಿದ ವ್ಯಕ್ತಿ ಸ್ವಲ್ಪ ತಮಾಷೆಯ ಸ್ವಭಾವದವನೂ ಆಗಿದ್ದ. ಅಲ್ಲದೇ ಅವರಿವರನ್ನು ಕಾಲೆಳೆಯುತ್ತ, ವ್ಯಂಗ್ಯವಾಗಿ ಆಡಿಕೊಳ್ಳುತ್ತ ಇರುವವನೂ ಆಗಿದ್ದ. ಅಂತಹವನು ಶಿರಿ ಹೆಗಡೆಯನ್ನು ಕಾಡಿಸಲು ಮುಂದಾದ. ಶಿರಿ ಹೆಗಡೆಗೆ ಏನಾದರೂ ಬಿರುದು, ಬಾವಲಿಗಳನ್ನು ನೀಡಬೇಕಲ್ಲ ಎಂಬ ಅಂಶ ಆತನ ಮನಸ್ಸಿನಲ್ಲಿ ಮೂಡಿತು. ಆ ವ್ಯಕ್ತಿಗೆ ಶಿರಿ ಹೆಗಡೆ ಇಸಪೀಟ್ ಆಟದ ಚೌಕಟ್ (ಡೈಸ್)ನಂತೆ ಕಾಣಿಸಿದನಂತೆ. ಚೌಕಟ್ ಹೇಗೆ ಉದ್ದುದ್ದವಾಗಿ ಇರುತ್ತದೆಯೋ ಅದೇ ರೀತಿ ಕಾಣಿಸಿದ್ದನಂತೆ. ಅಲ್ಲದೇ ದುರದೃಷ್ಟವೋ ಅಥವಾ ಎಂದಿನಂತೇ ಸಹಜ ಸಂಗತಿಯೋ ಏನೋ ಆ ದಿನ ಶಿರಿ ಹೆಗಡೆ ಚೌಕ ಚೌಕ ಬಣ್ಣದ ಡಿಸೈನ್ ಹೊಂದಿದ್ದ ಅಂಗಿಯನ್ನು ಹಾಕಿಕೊಂಡು ಬಂದಿದ್ದ. ಈ ಕಾರಣದಿಂದಲೇ ಶಿರಿ ಹೆಗಡೆಯನ್ನು ನೋಡಿ ವ್ಯಕ್ತಿ `ಇವನ್ಯಾರೋ ಚೌಕಟಿ ಹೆಗಡೆ... ಚೌಕಳಿ ಚೌಕಳಿ ಮನೆಯಂತಿದ್ದಾನಲ್ಲ' ಎಂದು ನಾಲ್ಕು ಜನರಿಗೆ ಕೇಳುವಂತೆಯೇ ಕರೆದುಬಿಟ್ಟಿದ್ದ. ಅಂದಿನಿಂದಲೇ ಶಿರಿ ಹೆಗಡೆ ಎಂಬ ಹೆಸರು ಮರೆಯಾಗಿ ಚೌಕಟಿ ಹೆಗಡೆ ಎಂಬ ಹೆಸರು ಮನೆಗದ್ದೆಯ  ಶ್ರೀಧರಮೂರ್ತಿಗೆ ಪ್ರಾಪ್ತವಾಗಿತ್ತು.
 ಇನ್ನು ಮುಂದಿನ ಸಂದರ್ಭಗಳಲ್ಲೆಲ್ಲ ಚೌಕಟಿ ಹೆಗಡೆಯನ್ನು ಚೌಕಟಿ ಹೆಗಡೆ ಎಂದೇ ಕರೆಯೋಣ. ಪ್ರಸ್ತುತ ನಮ್ಮ ಕಥೆಯಲ್ಲಿ ಚೌಕಟಿ ಹೆಗಡೆಯ ಪುರಾಣ ಹೇಳುವುದೇ ಆಗಿರುವುದರಿಂದ ಶ್ರೀಧರಮೂರ್ತಿ ಹೆಗಡೆ ಎಂಬ ಹೆಸರು ಪರಕೀಯವಾಗುತ್ತದೆ. ಹೀಗಾಗಿ ಚೌಕಟಿ ಎಂಬ ಹೆಸರಿನಲ್ಲಿಯೇ ಮುಂದುವರಿಯೋಣ. ಚೌಕಟಿ ಹೆಗಡೆಯ ಗಾತ್ರವನ್ನೇನೋ ಹೇಳಿಯಾಯಿತು. ಅಲ್ಲದೇ ಆತನ ವಸ್ತ್ರವಿನ್ಯಾಸವನ್ನೂ ಅರುಹಿ ಆಯಿತು. ಇನ್ನುಳಿದ ಆತನ ವಿವರಗಳನ್ನು, ಪ್ರವರಗಳನ್ನೆಲ್ಲ ಹೇಳಲೇಬೇಕಲ್ಲ ಮಾರಾಯ್ರೇ.. ಇವುಗಳಲ್ಲಿಯೇ ಇದೆ ನೋಡಿ ಆಸಕ್ತಿದಾಯಕ ಅಂಶಗಳು.  ಚೌಕಟಿ ಹೆಗಡೆಯ ಬಾಹ್ಯ ರೂಪಗಳು ಎಷ್ಟು ಮಹತ್ವದ್ದೆನ್ನಿಸುತ್ತವೆಯೋ, ಆತನ ಬಿಳಿಯ ಗಡ್ಡ ಕೂಡ ಇನ್ನೊಂದು ವಿಶಿಷ್ಟ ಅಂಶಗಳಲ್ಲಿ ಒಂದು. ಆತನ ಗಡ್ಡ ಬಿಳಿಯದೆಂದರೆ ಬಿಳಿಯದು ಖಂಡಿತವಾಗಿಯೂ ಅಲ್ಲ ಬಿಡಿ. ಅದೊಂಥರಾ ಮಾಸಿದ ಬಿಳಿ ಬಣ್ಣ ಅಥವಾ ಕಂದು ಎಂದರೆ ತಪ್ಪಾಗುವುದಿಲ್ಲ ನೋಡಿ. ಹಾಲುಬಣ್ಣದ ಬಿಳುಪು ಕಂದಾಗಲು ಮುಖ್ಯಕಾರಣ ಎಂದರೆ ಆತನ ಮೋಟು ಬೀಡಿ. ಹಾ ಹೇಳಲು ಮರೆತಿದ್ದೆ ನೋಡಿ, ಈ ಚೌಕಟಿ ಹೆಗಡೆ ಬೀಡಿ ಸೇದುವುದರಲ್ಲಿ ಎತ್ತಿದ ಕೈ. ಆದರೆ ಆತ ಪೂತರ್ಿ ಬೀಡಿಯನ್ನು ಸೇದಿದ್ದನ್ನು ಯಾವತ್ತೂ ಕಂಡವರಿಲ್ಲ. ಆತ ಬೀಡಿ ಸೇದುತ್ತಿದ್ದ ಸಂದರ್ಭದಲ್ಲಿ ಪ್ರತಿಯೊಬ್ಬರೂ ಚೌಕಟಿ ಹೆಗಡೆ ಕೈಯಲ್ಲಿ ಮೋಟು ಬೀಡಿಯನ್ನೇ ಕಂಡಿದ್ದಾರೆ. ಈ ಕಾರಣದಿಂದಲೇ ಮೋಟು ಬೀಡಿಯ ಚೌಕಟಿ ಹೆಗಡೆ ಎಂದು ಕರೆಯುವವರೂ ಇದ್ದಾರೆ. ಇಂತಹ ಮೋಟು ಬೀಡಿಯ ಹೊಗೆ ತಾಗಿದ ಕಾರಣದಿಂದ ಚೌಕಟಿ ಹೆಗಡೆಯ ಗಡ್ಡದ ರೂಪು ಬದಲಾಗಿದೆ ಎಂದು ಹೇಳುವವರೂ ಇದ್ದಾರೆ.
 ಚೌಕಟಿ ಹೆಗಡೆಯ ಹಲ್ಲುಗಳ ಬಗ್ಗೆ ಹೇಳಬೇಕು. ಈ ಹಲ್ಲುಗಳು ತಮ್ಮ ಮೂಲ ರೂಪ, ಬಣ್ಣ ಹಾಗೂ ವಾಸನೆಯನ್ನು ಕಳೆದುಕೊಂಡು ಹಲವು ದಶಕಗಳೇ ಕಳೆದಿವೆ. ಈತನ ಹಲ್ಲಿನ ನಿಜವಾದ ರೂಪ ಕಂಡವರು ಯಾರೂ ಇಲ್ಲ ಎನ್ನಲಾಗುತ್ತದೆ. ಸಹಜವಾಗಿ ಪ್ರತಿಯೊಬ್ಬರ ಹಲ್ಲುಗಳ ಬಣ್ಣ ಬಿಳಿ. ಮತ್ತೆ ಕೆಲವರ ಬಣ್ಣ ಹಳದಿಯೂ ಇರುತ್ತದೆ ಬಿಡಿ. ಆದರೆ ಚೌಕಟಿ ಹೆಗಡೆಯ ಮೇಲ್ಪಂಕ್ತಿ ಹಾಗೂ ಕೆಳ ಪಂಕ್ತಿಯ ತಲಾ ನಾಲ್ಕು ಹಲ್ಲುಗಳ ಬಣ್ಣ ಕಡುಗೆಂಪು. ಇನ್ನುಳಿದ ಹಲ್ಲುಗಳಲ್ಲಿ ಒಂದೆರಡು ಹಾಳಾಗಿರುವ ಕಾರಣ ಅವುಗಳ ಬಣ್ಣ ನೀಲಿ. ಕವಳ, ಗುಟ್ಕಾ, ತಂಬಾಕಿನ ಕಾರಣದಿಂದ ಹಲ್ಲುಗಳು ಈ ಬಣ್ಣಕ್ಕೆ ಬಂದಿವೆ ಎನ್ನುವ ಅಭಿಪ್ರಾಯ ಚೌಕಟಿ ಹೆಗಡೆಯ ಕುರಿತು ದೀರ್ಘ ಸಂಶೋಧನೆ ಮಾಡಿದದ ವ್ಯಕ್ತಿಗಳದ್ದು. ಬಿಡಿ ಈತನೂ ಅಷ್ಟೇ ದಿನಕ್ಕೆ ಕನಿಷ್ಟ ಒಂದು ಡಜನ್ನಷ್ಟು ಕವಳ ಹಾಕುತ್ತಾನೆ. ಪ್ರತಿಯೊಂದು ಕವಳಕ್ಕೂ ಅರ್ಧ ಎಸಳು ತಂಬಾಕು ಬೇಕೇ ಬೇಕು. ಇನ್ನು ಗುಟ್ಕಾ ಎಷ್ಟು ಎನ್ನುವುದು ಮಾತ್ರ ಲೆಕ್ಖ ಇಟ್ಟವರಿಲ್ಲ ನೋಡಿ.
 ಚೌಕಟಿ ಹೆಗಡೆ ಎಂಬುವವನು ಮೇಲ್ನೋಟಕ್ಕೆ ಒಳ್ಳೆಯವನು. ಆದರೆ ಆತನಲ್ಲಿಯೂ ಒಂದೆರಡು ಕೆಟ್ಟಗುಣಗಳಿವೆ ಎನ್ನುವುದು ಪ್ರತಿಯೊಬ್ಬರಿಗೂ ತಿಳಿದಿರುವ ಗುಟ್ಟೇ ಸರಿ. ಆತ ಸಣ್ಣ ಪ್ರಮಾಣದಲ್ಲಿ ಕಳ್ಳತನ ಮಾಡುತ್ತಾನೆ ಎನ್ನುವ ಮಾಹಿತಿಗಳು ಬಹುತೇಕರಿಗೆ ತಿಳಿದಿದೆ ಬಿಡಿ. ಹಾಗಂತ ಆತ ಯಾರದ್ದೋ ಮನೆಗೆ ಕನ್ನವಿಕ್ಕಿದ್ದಾನೆ ಎಂದೋ ಅಥವಾ ಯಾರ ಮನೆಯಲ್ಲಿಯೋ ಇರುವ ಚಿಕ್ಕಪುಟ್ಟ ಸಾಮಾನು-ಸರಂಜಾಮುಗಳನ್ನು ಕದ್ದುಕೊಂಡು ಹೋಗುತ್ತಾನೆ ಎಂದುಕೊಂಡರೆ ಖಂಡಿತವಾಗಿಯೂ ಅದು ತಪ್ಪು. ಮನೆಗಳಿಗೆ ಸಂಬಂಧಿಸಿದ ಯಾವುದೇ ಒಂದು ವಸ್ತುವನ್ನೂ ಕೂಡ ಆತ ಕದ್ದುಕೊಂಡು ಹೋಗುವುದಿಲ್ಲ. ಈ ದೆಸೆಯಿಂದ ಚೌಕಟಿ ಹೆಗಡೆ ಬಹಳ ಒಳ್ಳೆಯವನು ಬಿಡಿ. ಆದರೆ ಆತ ತೋಟಗಳಲ್ಲಿನ ಸಣ್ಣಪುಟ್ಟ ವಸ್ತುಗಳನ್ನು ಖಂಡಿತವಾಗಿಯೂ ಕದ್ದೊಯ್ಯುತ್ತಾನೆ. ಸಾಮಾನ್ಯವಾಗಿ ನಮ್ಮೂರಿನ ತೋಟಗಳಲ್ಲಿ, ತೋಟಪಟ್ಟಿಯ ಮಧ್ಯದಲ್ಲಿ ಅಲ್ಲಲ್ಲಿ ಸೂಜಿ ಮೆಣಸಿನ ಗಿಡಗಳನ್ನು ಬೆಳೆಯುತ್ತಾರೆ. ತೋಟದ ಫಲವತ್ತತೆಗೆ ತಕ್ಕಂತೆ ಉತ್ತಮವಾಗಿ ಕಾಯಿಗಳನ್ನು ಬಿಡುತ್ತವೆ. ಇಂತಹ ಸೂಜು ಮೆಣಸನ್ನು ಆತ ಕೊಯ್ದುಕೊಂಡು ಹೋಗುತ್ತಾನೆ ಎನ್ನುವುದು ಆತನ ಮೇಲೆ ಇರುವ ಗಂಭೀರ ಆರೋಪ.
 ಅಷ್ಟೇ ಅಲ್ಲದೇ ಶೀಗೆಕಾಯಿಗಳು, ಅಣಲೆ ಕಾಯಿಗಳು, ಅಂಟುವಾಳ ಕಾಯಿಗಳು, ಜಾಯಿಕಾಯಿ, ಕಂಚೀಕಾಯಿ ಹೀಗೆ ವಿವಿಧ ಸಾಂಬಾರ ಪದಾರ್ಥಗಳನ್ನು ಈತ ಕೊಯ್ದುಕೊಂಡು ಹೋಗುತ್ತಾನೆ ಎನ್ನುವುದು ಈತನ ಮೇಲೆ ಇರುವ ಮತ್ತಷ್ಟು ಆರೋಪಗಳು. ಈ ಕುರಿತು ಚೌಕಟಿ ಹೆಗಡೆಯನ್ನು ಕೇಳಿದರೆ ಆತ ಹೇಳುವುದೇ ಬೇರೆ ಬಿಡಿ. ಆತನ ಪ್ರಕಾರ ಇದು ತಪ್ಪಲ್ಲವೇ ಅಲ್ಲ. ಮಂಗನೋ ಅಥವಾ ಇನ್ಯಾವುದೋ ಕಾಡು ಪ್ರಾಣಿಗಳು ಹಾಳು ಮಾಡುವುದನ್ನು ತಾನು ಕೊಯ್ಯುತ್ತೇನೆ ಅಷ್ಟೇ ಎನ್ನುತ್ತಾನೆ. ಸಾಮಾನ್ಯವಾಗಿ ನಮ್ಮೂರಿನಲ್ಲಿ ಇಂತಹ ಬೆಳೆಗಳನ್ನು ಕೊಯ್ದು ಮಾರಾಟ ಮಾಡುವುದರಲ್ಲಿ ಯಾರೂ ಆಸಕ್ತಿ ತೋರುವುದಿಲ್ಲ. ಆಗೀಗ ಮನೆ ಬಳಕೆಗೆ ಇಂತವನ್ನು ಕೊಯ್ಯುತ್ತಾರೆ ಬಿಟ್ಟರೆ ಉಳಿದದ್ದೆಲ್ಲ ಕಾಡುಪ್ರಾಣಿಗಳ ಪಾಲಾಗುತ್ತದೆ. ಹೀಗಿರುವ ಸಂದರ್ಭದಲ್ಲಿ ತಾನು ಕೊಯ್ದರೆ ತಪ್ಪೇನಿಲ್ಲ ಎನ್ನುವುದು ಚೌಕಟಿ ಹೆಗಡೆಯ ವಾದ. ಈ ಕುರಿತು ಚಿಂತನೆ ನಡೆಸಿದಾಗ ಆತ ಹೇಳುವುದರಲ್ಲಿ ತಪ್ಪಿಲ್ಲ ಎಂದೂ ಅನ್ನಿಸುತ್ತದೆ. ಕೊಯ್ದಿದ್ದನ್ನು ಪಟ್ಟಾಗಿ ಒಣಗಿಸಿ, ಸಂಸ್ಕರಿಸಿ ನಾಲ್ಕು ಕಾಸು ಮಾಡಿಕೊಂಡು, ಆ ಕಾಸಿನಿಂದ ಗಣೇಶ ಬೀಡಿಯನ್ನೋ, ಮಂಗಳೂರು ಬೀಡಿಯನ್ನೋ ತೆಗೆದುಕೊಂಡು ಇಳಿಸಂಜೆಯ ಹೊತ್ತಿಗೆ ಧಮ್ಮು ಎಳೆದರೆ ಆತನಿಗೆ ಸಿಗುವ ಸುಖವೇ ಬೇರೆ ಬಿಡಿ.
 ಹಾ, ಇಷ್ಟು ಹೊತ್ತೂ ಕೂಡ ನೆನಪಾಗಿರಲಿಲ್ಲ ನೋಡಿ. ಆತನಲ್ಲಿನ ಇನ್ನೊಂದು ಪ್ರಮುಖ ಗುಣ ಎಂದರೆ ಓಸಿ. ದೋ ನಂಬರಿನ ಮಟ್ಕಾದಲ್ಲಿ ಚೌಕಟಿ ಹೆಗಡೆಯದ್ದು ಎತ್ತಿದ ಕೈ. ಪ್ರತಿದಿನವೂ ಚೌಕಟಿ ಹೆಗಡೆ ಕನಿಷ್ಟ ನೂರು ರೂಪಾಯಿ ಮೊತ್ತದ ಓಸಿಯನ್ನು ಆಡದೇ ಇದ್ದರೆ ಆತನಿಗೆ ನಿದ್ದೆ ಬರುವುದೂ ಇಲ್ಲವೇನೋ. ಪ್ರತಿದಿನ ಅವರಿವರ ಬಳಿ ನಿನಗೆ ಆ ಕನಸು ಬಿತ್ತಾ, ಈ ಕನಸು ಬಿತ್ತಾ ಎಂದು ಕೇಳುವ ಈತ ಕನಸಿನ ಆಧಾರದ ಮೇಲೆ ನಂಬರನ್ನು ಹುಡುಕಿ ತೆಗೆದು, ಆ ನಂಬರಿಗೆ ಹಣ ಹೂಡುವ ಕಾರ್ಯವನ್ನೂ ಮಾಡುತ್ತಾನೆ. ಇಂತಹ ವ್ಯಕ್ತಿಯ ಪಾಲಿಗೆ ನಾನು ಒಂದೆರಡು ಸಾರಿ ಅದೃಷ್ಟ ದೇವರಾಗಿದ್ದೆ. ನನ್ನ ಬಳಿಯೂ ಒಂದೆರಡು ಸಾರಿ ಕನಸಿನ ಬಗ್ಗೆ ಕೇಳಿದ್ದ ಈತ. ನಾನು ನನಗೆ ರಾತ್ರಿಯ ವೇಳೆ ಬೀಳುತ್ತಿದ್ದ ಕನಸಿನ ಬಗ್ಗೆ ಹೇಳುತ್ತಿದ್ದೆ. ಇದರ ಆಧಾರದ ಮೇಲೆ ಯಾವುದೋ ರೇಖಾಗಣಿತವನ್ನು ಲೆಕ್ಕ ಹಾಕಿ ನಂಬರು ಹುಡುಕಿ ಅದಕ್ಕೆ ದುಡ್ಡು ಹೂಡಿದ್ದ. ವಿಚಿತ್ರವೆಂದರೆ ಒಂದೆರಡು ಸಾರಿ ದುಡ್ಡು ಬಂದೇ ಬಿಟ್ಟಿತ್ತು. ಆ ನಂತರದಲ್ಲಿ ನನ್ನ ಬೆನ್ನು ಬಿದ್ದು, ಕನಸು ಬಿದ್ದರೆ ಹೇಳು ಮಾರಾಯ ಎಂದು ತಿಂಗಳು ಗಟ್ಟಲೆ ಕಾಡಿದ್ದು ನನಗೆ ಸದಾ ನೆನಪಿನಲ್ಲಿ ಇತ್ತು. ಆ ನಂತರ ಎಷ್ಟೋ ದಿನಗಳ ವರೆಗೆ ನಾನು ಚೌಕಟಿ ಹೆಗಡೆಯ ನಜರಿಗೆ ಬೀಳದಂತೆ ತಪ್ಪಿಸಿಕೊಂಡು ಓಡಾಡಿದ್ದೆ..!
 ಇಂತಹ ಚೌಕಟಿ ಹೆಗಡೆ ಇತ್ತೀಚಿನ ದಿನಗಳಲ್ಲಿ ಭಾರೀ ಸುಭಗನಾಗಿದ್ದಾನೆ ಎನ್ನುವ ಮಾತುಗಳು ನನ್ನನ್ನೂ ಸೇರಿದಂತೆ ಹಲವರಲ್ಲಿ ಅಚ್ಚರಿಯನ್ನು ಹುಟ್ಟು ಹಾಕಿದೆ. ಚೌಕಟಿ ಹೆಗಡೆ ಓಸಿ ಬಿಟ್ಟನಂತೆ ಎನ್ನುವುದು ನಮಗೆ ಮೊಟ್ಟಮೊದಲು ಕೇಳಿ ಬಂದ ಸುದ್ದಿ. ಅಬ್ಬ ಏನೋ ಆಗಿದೆ ಚೌಕಟಿ ಹೆಗಡೆಗೆ ಅಂದುಕೊಳ್ಳುತ್ತಿದ್ದಾಗಲೇ, ಚೌಕಟಿ ಹೆಗಡೆ ಮೋಟು ಬೀಡಿಯ ಸಹವಾಸವನ್ನೂ ಬಿಟ್ಟನಂತೆ ಎನ್ನುವ ಮಾತು ಕಿವಿಗೆ ಬಿದ್ದಾಗ ಮಾತ್ರ ನಮಗೆ ಶಾಕ್ ಆಗಿದ್ದು ಸತ್ಯ. ಇದೇನಿದು ಚೌಕಟಿ ಹೆಗಡೆ ಇದ್ದಕ್ಕಿದ್ದಂತೆ ಹೀಗಾದನಲ್ಲ ಎಂದುಕೊಳ್ಳುತ್ತಿರುವ ವೇಳೆಗೆ ಆತ ತಾನು ಕಳೆದುಕೊಂಡಿದ್ದನ್ನೆಲ್ಲ ಮತ್ತೆ ಸಂಪಾದಿಸಬೇಕು ಎಂಬ ಹುಕಿಗೆ ಬಿದ್ದಿದ್ದಾನಂತೆ ಎನ್ನುವ ಮಾತು ಕೇಳಿ ಬಂದಾಗ ಮೊದಲ ಬಾರಿಗೆ ನನಗೆ ಆತನ ಮೇಲೆ ಅಭಿಮಾನ ಉಕ್ಕಿತು. ಜಮೀನು, ರಾಸುಗಳನ್ನು ಮತ್ತೆ ಪಡೆಯಬೇಕು. ಅದೆಲ್ಲವನ್ನೂ ನ್ಯಾಯಯುತ ಮಾರ್ಗದಲ್ಲಿಯೇ ಸಂಪಾದಿಸಬೇಕು ಎನ್ನುವ ಆಶಯ ಇಟ್ಟುಕೊಂಡ ಚೌಕಟಿ ಹೆಗಡೆ ತೋಟಗಳಲ್ಲಿ ಮಾಡುತ್ತಿದ್ದ ಸಣ್ಣಪುಟ್ಟ ಕರಾಮತ್ತುಗಳನ್ನೂ ನಿಲ್ಲಿಸಿದ ಮಾಹಿತಿ ಸಿಕ್ಕವು. ಹಾಗಾದರೆ ಆತ ಮುಂದೇನು ಮಾಡಬಹುದು ಎಂದು ಆಲೋಚಿಸುತ್ತಿದ್ದ ಸಂದರ್ಭದಲ್ಲಿಯೇ ಆತ ಕೊಳಿ ಅಡಿಕೆ ವ್ಯಾಪಾರ ಸೇರಿದಂತೆ ಹಲವು ಸಣ್ಣ-ಪುಟ್ಟ ವ್ಯಾಪಾರ ನಡೆಸಲು ಆರಂಭಿಸಿದ ವಿಷಯ ತಿಳಿದು ಬೆರಗು ಮೂಡಿತು. ಇಷ್ಟೆಲ್ಲದದ ನಡುವೆ ನನಗೆ ಕಾಡಿದ್ದು ಹಾಗೂ ಕಾಡುತ್ತಿರುವುದೇನೆಂದರೆ ಚೌಕಟಿ ಹೆಗಡೆ ಇದ್ದಕ್ಕಿದ್ದಂತೆ ಸುಭಗನಾಗಿದ್ದು ಹೇಗೆ ಎನ್ನುವುದು..! ತಾನು ಕಳೆದುಕೊಂಡಿದ್ದನ್ನು ಮತ್ತೆ ಸಂಪಾದಿಸಲು ಮುಂದಾಗಿದ್ದೇಕೆ ಎನ್ನುವುದು ಖಂಡಿತವಾಗಿಯೂ ನನಗೆ ಗೊತ್ತಿಲ್ಲ ನೋಡಿ. ಅದನ್ನು ಹುಡುಕುವ ಯತ್ನ ಮಾಡುತ್ತಿದ್ದೇನೆ. ಗೊತ್ತಾದರೆ ಖಂಡಿತವಾಗಿಯೂ ತಿಳಿಸುತ್ತೇನೆ ಹಾ..!

Wednesday, October 25, 2017

ಪೇಪರ್ ಹಾಕುವ ಹುಡುಗನೂ ಕ್ಯಾಶ್ ಲೆಸ್

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ನಗದು ರಹಿತ ವ್ಯವಹಾರಕ್ಕೆ ನಗರದಲ್ಲಿ ಪೇಪರ್ ಹಾಕುವ ಯುವಕನೊಬ್ಬ ತನ್ನದೆ ಆದ ಕೊಡುಗೆ ನೀಡುತ್ತಿದ್ದು, ಎಲ್ಲರಿಗೂ ಮಾದರಿಯಾಗಿದ್ದಾನೆ.
ಶಿರಸಿಯ ಗಣೇಶ ನಗರದ ಮದನ ಬಿ. ಗೌಡ ಎನ್ನುವ ಯುವಕ ನಗದು ರಹಿತ ವ್ಯವಹಾರವನ್ನು ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸುತ್ತಿದ್ದಾನೆ.  ಕಳೆದ ಹತ್ತು ವರ್ಷಗಳಿಂದ ಈತ ಪೇಪರ್ ಹಾಕುತ್ತಿದ್ದು, ನಗರದ ಸುಮಾರು 300 ಮನೆಗಳಿಗೆ ಪ್ರತಿನಿತ್ಯ ದಿನಪತ್ರಿಕೆ ಹಂಚುತ್ತಾನೆ. ದುಡಿದು ತಿನ್ನುವ ಈತನಿಗೆ ನಗದು ರಹಿತ ವ್ಯವಹಾರ ಅನಿವಾರ್ಯವಲ್ಲ. ದೇಶ ಬದಲಾಗುವ ಸಂದರ್ಭದಲ್ಲಿ ನಾವೂ ಸಹ ಬದಲಾಗಬೇಕು ಎನ್ನುವ ಮಹತ್ವಾಕಾಂಕ್ಷೆಯಿಂದ ಮದನ್ ಈ ಕೆಲಸಕ್ಕೆ ಮುಂದಾಗಿದ್ದಾನೆ.
ಪ್ರತಿ ತಿಂಗಳು ದಿಪತ್ರಿಕೆಯ ಬಿಲ್ ಕಲೆಕ್ಟ ಮಾಡುವಾಗ ತನ್ನ ಅಕೌಂಟ್ ನಂಬರ್ ನೀಡಿ ಹಣವನ್ನು ಹಾಕಲು ಹೇಳುತ್ತಾನೆ. ಅದರ ಜೊತೆಗೆ ಬಿಲ್ ಹಿಂಬದಿಯಲ್ಲಿ ಪೆಟಿಎಮ್ ಹಾಗೂ ಭೀಮ್ ಆಪ್ ಬಳಸಿಯೂ ಸಹ ಹಣ ಸಂದಾಯ ಮಾಡುವ ವ್ಯವಸ್ಥೆಯನ್ನು ಕಲ್ಪಿಸಿದ್ದಾನೆ. ಈಗಾಗಲೇ ಸುಮಾರು 30 ಕ್ಕೂ ಅಧಿಕ ಜನರು ಇತನ ಜತೆ ನಗದು ರಹಿತ ವ್ಯವಹಾರಕ್ಕೆ ಕೈಜೋಡಿಸಿದ್ದಾರೆ.
ದೇಶದಲ್ಲಿ ಬದಲಾಣೆಯ ಹಾದಿಯಲ್ಲಿದೆ. ನಾವು ಸಹ ಬದಲಾಗಬೇಕಿದೆ. ಕಾಲಕ್ಕೆ ತಕ್ಕಂತೆ ನಾವು ಹೊಂದಿಕೊಂಡು ಹೋಗಬೇಕು. ನಾವು ಮೊದಲು ಯೋಜನೆಯನ್ನು ರೂಢಿಸಿಕೊಂಡರೆ ಇನ್ನೊಬ್ಬರಿಗೆ ತಿಳಿ ಹೇಳಲು ಸಾಧ್ಯ. ಆದ್ದರಿಂದ ನೋಟ್ ಬ್ಯಾನ್ ನಂತರದಿಂದ ನಾನು ನಗದು ರಹಿತ ವ್ಯವಹಾರ ಮಾಡುತ್ತಿದ್ದೇನೆ" ಎಂದು ಮದನ ಗೌಡ ಹೇಳುತ್ತಾರೆ.
 ಕೆಲವೊಂದು ಮಂದಿ ಕಡಿಮೆ ಹಣವನ್ನು ನಗದು ರಹಿತವಾಗಿ ನೀಡುವುದಕ್ಕೆ ಇಷ್ಟ ಪಡುವುದಿಲ್ಲ. ಈ ಪ್ರಯತ್ನಕ್ಕೆ ಜನರಿಂದ ಮಿಶ್ರ ಪ್ರತಿಕ್ರಿಯೆ ದೊರಕುತ್ತಿದೆ ಎಂದು ತಿಳಿಸಿದ್ದಾರೆ.


-----------
ಪೇಟ್ರೋಲ್ ಬಂಕ್, ಹೋಟೇಲ್ ಹೀಗೆ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡಗಳು ನಡೆಯುವ ಎಲ್ಲಾ ಕಡೆಯುವಲ್ಲಿಯೂ ನಾನು ನಗದು ರಹಿತವಾಗಿಯೇ ವ್ಯವಹಾರ ನಡೆಸುತ್ತೇನೆ. 
ಮದನ ಗೌಡ, 
ಪೇಪರ್ ಹಾಕುವ ಯುವಕ 

Thursday, October 19, 2017

ಮುಕ್ತಿ ವಾಹಿನಿ

ನಗುವವರೆಂದೂ ನನ್ನ ಜೊತೆ
ಪಯಣಿಸುವುದಿಲ್ಲ
ಕೇಕೆ ಕಲರವಗಳ ಸದ್ದು
ನನ್ನೊಳಿಲ್ಲ|

ಕೆಲವೊಮ್ಮೆ ಒಬ್ಬಂಟಿ
ಆಗಾಗ ಜಂಟಿ
ಬಂಧುಬಾಂಧವರು ಸುತ್ತ
ಬತ್ತದಂತ ಅಳುವೇ
ಸುತ್ತಮುತ್ತ |

ಬರುವವರಲ್ಲಿ ಮುಗಿಯದ
ಕಣ್ಣೀರು
ಬಿಕ್ಕುತ್ತ ಸಾಗುವವರೇ ಎಲ್ಲರೂ,
ಕಿವಿ ಗಡಚಿಕ್ಕಿದೆ
ತಮಟೆಯ ಸದ್ದು
ಯಮ ಸನಿಹಕೆ ಬಂದರೂ
ಅವನೆದೆಗೂ ಗುದ್ದು |

ಮನೆಯಿಂದ ಮಸಣ
ನನ್ನ ಏಕೈಕ ಮಾರ್ಗ
ನಡುವೆ ಪ್ರತಿಧ್ವನಿಸುವುದು
ಗೋವಿಂದ...ಗೋವಿಂದಾ..
ರಾಮ ನಾಮ ಸತ್ಯ ಹೇ...|

ನನಗೂ ನಗುವ
ಕೇಳುವ ಆಸೆಯಿದೆ
ಪುಟ್ಟ ಮಗುವ ಅಳುವ
ಹೊಸಹುಟ್ಟಿನ ಕೇಕೆಯ
ಕೇಳುವ ಆಸೆ ಹೆಚ್ಚಿದೆ |

ನಾನು ಮುಕ್ತಿ ವಾಹಿನಿ
ನನಗಿದೆ ಕರ್ತವ್ಯ
ಸತ್ತವರ ಹೊತ್ತೊಯ್ಯುವ
ಕೈಂಕರ್ಯ ನನ್ನದು
ಹುಟ್ಟುವವರ ಕರೆದೊಯ್ಯುವ
ಕನಸು ಕಾಣುವ ಅರ್ಹತೆಯೆನಗಿಲ್ಲ |

ಆದರೂ
ಕನಸು ಕಾಣುತ್ತೇನೆ ನಾನು
ಸತ್ತವರ ಹೊತ್ತೊಯ್ಯುವ
ಕಾರ್ಯದ ನಡುವೆಯೂ
ಹೊಸ ಹುಟ್ಟಿನ,
ಮಗುವಿನ ಅಳುವಿಗಾಗಿ |

ಅತ್ತಿತ್ತ ತುಯ್ದಾಡಿ
ತೊಟ್ಟಿಲಾಗುತ್ತೇನೆ ||


===================

(ಈ ಕವಿತೆಯನ್ನು ಬರೆದಿರುವುದು ಅಕ್ಟೋಬರ್ ೧೮, ೨೦೧೭ರಂದು ದಂಟಕಲ್ಲಿನಲ್ಲಿ)

Wednesday, September 27, 2017

ಮೋಹಿನಿಯಾಗಿ ಬರುತ್ತಿದ್ದಾಳೆ ಸಿದ್ದಾಪುರದ ಭಾರತಿ

ಈಕೆ ನಮ್ಮದೇ ಸಿದ್ದಾಪುರದ ಹವ್ಯಕರ ಹುಡುಗಿ. ಅಭಿನಯ, ನೃತ್ಯ, ಯೋಗಾಭ್ಯಾಸದಲ್ಲಿ ಎತ್ತಿದ ಕೈ. ಕಾಲೇಜು ದಿನಗಳಲ್ಲಿಯೇ ಅತ್ಯುತ್ತಮ ನಟಿ ಎಂದು ರಾಜ್ಯ ಮಟ್ಟದಲ್ಲಿ ಪ್ರಶಸ್ತಿ ಗಳಿಸಿಕೊಂಡಾಕೆ. ಚಿಕ್ಕ ವಯಸ್ಸಿನಲ್ಲಿ ದೊಡ್ಡ ಕನಸು ಹಾಗೂ ಆದರ್ಶಗಳನ್ನು ಮನಸ್ಸಿನಲ್ಲಿ ತುಂಬಿಕೊಂಡಾಕೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಯಾರೇ ನೀ ಮೋಹಿನಿ ಧಾರವಾಹಿಯಲ್ಲಿ ಈಕೆಯದು ಮೋಹಿನಿಯ ಪಾತ್ರ. ಮೊದಲ ಧಾರಾವಾಹಿಯೇಲ್ಲಿಯೇ ಸಾಕಷ್ಟು ಸ್ಟ್ರಾಂಗ್ ಹಾಗೂ ಕಠಿಣ ಪಾತ್ರ ನಿರ್ವಹಣೆಯ ಹೊಣೆ ಈಕೆಯ ಹೆಗಲ ಮೇಲಿದೆ. ಧಾರಾವಾಹಿ ಲೋಕಕ್ಕೆ ಕಾಲಿಟ್ಟ ನಮ್ಮೂರ ಹುಡುಗಿಯನ್ನು ಬೆಂಬಲಿಸೋಣ ಬನ್ನಿ..

ಕಣ್ಣಿನಲ್ಲಿ ಅಗಾಧವಾದ ಸಾಧನೆಯ ಕನಸು. ಮನಸ್ಸಿನಲ್ಲಿ ಕಾರ್ಮಿಕರಿಗೆ, ಸಾಮಾಜಿಕವಾಗಿ ಸೌಲಭ್ಯಗಳನ್ನು ಒದಗಿಸುವ ತುಡಿತ. ಕರಗತವಾಗಿರುವ ಅಭಿನಯ ಕಲೆ. ಅಗಾಧವಾದ ಪ್ರತಿಭೆ. ಇವೆಲ್ಲವನ್ನೂ ಇಟ್ಟುಕೊಂಡು ಧಾರವಾಹಿ ಲೋಕಕ್ಕೆ ಕಾಲಿಟ್ಟಿದ್ದಾಳೆ ಭಾರತಿ ಹೆಗಡೆ. ಜೀ ಕನ್ನಡ ವಾಹಿನಿಯಲ್ಲಿ ಆರಂಭಗೊಂಡಿರುವ ಯಾರೇ ನೀ ಮೋಹಿನಿ ಧಾರವಾಹಿಯಲ್ಲಿ ಮೋಹಿನಿ ಪಾತ್ರವನ್ನು ಹಾಕಿರುವ ಭಾರತಿ ಹೆಗಡೆ ಈಗಾಗಲೇ ಬಿತ್ತರವಾಗಿರುವ ಧಾರವಾಹಿ ಟ್ರೇಲರ್ಗಳಲ್ಲಿ ಸಾಕಷ್ಟು ಹೆಸರು ಗಳಿಸಿದ್ದಾಳೆ. ಕೆಲವೇ ದಿನಗಳಲ್ಲಿ ತೆರೆಯ ಮೇಲೆ ಕಾಣಿಸಿಕೊಳ್ಳಲಿರುವ ಭಾರತಿ ಅವರ ಕನಸ್ಸು ದೊಡ್ಡದಿದೆ. ಹೊಸ ಆಕಾಂಕ್ಷೆಗಳೊಂದಿಗೆ ಧಾರವಾಹಿ ಲೋಕಕ್ಕೆ ಕಾಲಿಟ್ಟಿರರುವ ಭಾರತಿ ಹೆಗಡೆಯವರುಮಾತಿಗೆ ಸಿಕ್ಕಾಗ ತಮ್ಮ ಕುರಿತು, ಆಸೆ, ಆಕಾಂಕ್ಷೆಗಳ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ.

* ನಿಮ್ಮ ಊರು, ನಿಮ್ಮ ಬಗ್ಗೆ, ಕುಟುಂಬದವರ ಬಗ್ಗೆ ಹೇಳಿ
ನನ್ನ ಊರು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ. ನಮ್ಮದು ಕೃಷಿ ಕುಟುಂಬ. ಅಪ್ಪ ಕೃಷಿಕರು. ತಾಯಿ ಗೃಹಿಣಿ. ಅಣ್ಣ ಕೂಡ ಕೃಷಿಕರು. ಪ್ರಾಥಮಿಕ ಶಾಲೆಯ ಅಭ್ಯಾಸವನ್ನು ನಾನು ಊರಿನಲ್ಲಿಯೇ ಮಾಡಿದ್ದೇನೆ. ಉನ್ನತ ಶಿಕ್ಷಣ ಬೆಂಗಳೂರಿನಲ್ಲಿ ಕೈಗೊಂಡಿದ್ದೇನೆ. ಬಿಎ ಪದವಿಯನ್ನು ಬೆಂಗಳೂರಿನ ಅಮ್ಮಣ್ಣಿ ಕಾಲೇಜಿನಲ್ಲಿ ಮಾಡಿರುವ ನಾನು, ಎಂಎಸ್ಡಬ್ಲೂವನ್ನು ಕ್ರೈಸ್ಟ್ ಯುನಿವರ್ಸಿಟಿಯಲ್ಲಿ ಕೈಗೊಂಡಿದ್ದೇನೆ. ಇನ್ನೂ ಹೆಚ್ಚಿನ ಓದಿನ ಕನಸು ಇದೆ. ಅಭಿನಯದ ಜೊತೆಗೆ ಓದನ್ನು ಮುಂದುವರಿಸುತ್ತಿದ್ದೇನೆ.

* ನಿಮ್ಮ ಅಭಿನಯ, ಆಸಕ್ತಿಗಳ ಕುರಿತು ಹೇಳಿ..
ನನಗೆ ಚಿಕ್ಕಂದಿನಿಂದ ನೃತ್ಯ, ನಟನೆ, ಸಂಗೀತದಲ್ಲಿ ಆಸಕ್ತಿ. ನಾನು ಆಕ್ಟಿಂಗ್ಗೆ ವಿಶೇಷ ತರಬೇತಿಯನ್ನೇನೂ ಪಡೆದುಕೊಂಡಿಲ್ಲ. ಚಿಕ್ಕಂದಿನಲ್ಲಿ ಪ್ರತಿಭಾ ಕಾರಂಜಿಯಲ್ಲಿ ಪಾಲ್ಗೊಳ್ಳುತ್ತಿದ್ದೆ. ಆಗೆಲ್ಲ ಬಹುಮಾನಗಳು ಬಂದಿವೆ. ನಂತರ ಅದನ್ನೇ ಸ್ವಲ್ಪ ಮಾರ್ಪಡಿಸಿಕೊಂಡೆ. ನಾನು ಭರತನಾಟ್ಯವನ್ನು ಕಲಿತಿದ್ದೇನೆ. ಕಾಲೇಜಿನಲ್ಲಿ ಓದುತ್ತಿದ್ದ ಸಂದರ್ಭದಲ್ಲಿ ನಾಟಕ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದೆ. 2009ರಿಂದ 2012ರ ವರೆಗಿನ ಕಾಲೇಜು ಅಧ್ಯಯನದ ಸಂದರ್ಭದಲ್ಲಿ ಸತತ ಮೂರು ವರ್ಷಗಳ ಕಾಲ ಅತ್ಯುತ್ತಮ ನಟಿ ಎಂಬ ರಾಜ್ಯ ಮಟ್ಟದಲ್ಲಿ ಪ್ರಶಸ್ತಿ ಸಿಕ್ಕಿದೆ. ಇದರ ಜೊತೆಗೆ ಸಂಗೀತ ಕೇಳೋದು ನನ್ನ ಆಸಕ್ತಿಯ ವಿಷಯ. ಯೋಗಾಭ್ಯಾಸ ಮಾಡಿದ್ದೇನೆ. ಯೋಗಾಸನ ನನ್ನ ಆಸಕ್ತಿಯ ವಿಷಯವೂ ಹೌದು.

* ಮನೆಯಲ್ಲಿ ಧಾರಾವಾಹಿ ನಟನೆ ಬಗ್ಗೆ ಬೆಂಬಲ ಇದೆಯಾ?
ಹೌದು. ಅಪ್ಪ, ಅಮ್ಮ ಹಾಗೂ ಅಣ್ಣ ನನ್ನ ನಟನೆ ಹಾಗೂ ಈ ರೀತಿಯ ಸಾಮಾಜಿಕ ಚಟುವಟಿಕೆಗಳಿಗೆ ಸಂಪೂರ್ಣ ಬೆಂಬಲ ನೀಡಿದ್ದಾರೆ. ನೀಡುತ್ತಲೂ ಇದ್ದಾರೆ. ನಾನು ಒಳ್ಳೆಯದನ್ನು ಮಾಡಿದಾಗಲೆಲ್ಲ ನನ್ನ ಬೆನ್ನಿಗೆ ನಿಂತು ಪ್ರೋತ್ಸಾಹಿಸಿದ್ದಾರೆ. ನನ್ನ ಬೆಳವಣಿಗೆಗೆ ಪೂರಕವಾಗಿ ಉತ್ತೇಜನ ನೀಡಿದ್ದಾರೆ.


* ಯಾರೇ ನೀ ಮೋಹಿನಿ, ಇದು ನಿಮ್ಮ ಮೊದಲ ಧಾರವಾಹಿಯಾ? ಈ ಮೊದಲು ಯಾವುದಾದರೂ ಧಾರಾವಾಹಿಯಲ್ಲಿ ನಟನೆ ಮಾಡಿದ್ದೀರಾ?
ಪೂರ್ಣ ಪ್ರಮಾಣದ, ಮುಖ್ಯ ಪಾತ್ರ ಇರುವ ಧಾರವಾಹಿ ಎಂದರೆ ಅದು ಯಾರೇ ನೀ ಮೋಹಿನಿ. ಈ ಧಾರಾವಾಹಿಗೂ ಮೊದಲು ನಾನು ಬಣ್ಣ ಹಚ್ಚಿದ್ದೆ. 4-5 ವರ್ಷಗಳ ಹಿಂದೆ ಜನಶ್ರೀ ಸುದ್ದಿ ವಾಹಿನಿಗಾಗಿ ತಯಾರಿಸಲಾಗಿದ್ದ `ಸಮಾಜ`  ಎಂಬ ಕಿರುಚಿತ್ರ ಸರಣಿಯಲ್ಲಿ ಪಾತ್ರ ಮಾಡಿದ್ದೆ. ನಂತರ ಕಲಸರ್್ ಸೂಪರ್ನಲ್ಲಿ ಬರುತ್ತಿರುವ ಶಾಂತಂ ಪಾಪಂನ ಒಂದು ಎಪಿಸೋಡ್ನಲ್ಲಿ ಸಾಮಾಜಿಕ ಹೋರಾಟಗಾರ್ತಿಯ ಪಾತ್ರ ಮಾಡಿದ್ದೆ. ಇದೀಗ ಯಾರೇ ನೀ ಮೋಹಿನಿ ಧಾರವಾಹಿಯಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದೇನೆ.

* ಯಾರೇ ನೀ ಮೋಹಿನಿ ಪಾತ್ರದ ಹೇಗಿದೆ? ನಿಮ್ಮದು ನೆಗೆಟಿವ್ ಪಾತ್ರವಾ?
ಯಾರೇ ನೀ ಮೋಹಿನಿಯಲ್ಲಿ ನನ್ನದು ವಿಶಿಷ್ಟ ಪಾತ್ರ. ಇದರಲ್ಲಿ ಈಗಾಗಲೇ ಸತ್ತುಹೋಗಿರುವ ಮೋಹಿನಿಯ ಪಾತ್ರವನ್ನು ನಾನು ನಿರ್ವಹಿಸುತ್ತಿದ್ದೇನೆ. ಸ್ವಲ್ಪ ವಿಶಿಷ್ಟ ಹಾಗೂ ವಿಭಿನ್ನವಾದ ಪಾತ್ರ ನನ್ನದು. ಈ ಧಾರಾವಾಹಿಯಲ್ಲಿ ಅತ್ತೆಗೆ ಕಾಟ ಕೊಡುವ ಮೋಹಿನಿಯಾಗಿ ನಾನು ನಟನೆ ಮಾಡಿದ್ದೇನೆ. ಪ್ರೀತಿಸುವ ಗಂಡ, ಸಾಯಿಸುವ ಅತ್ತೆ ಇದು ಮುಖ್ಯ ಹಂದರ. ಜೊತೆಯಲ್ಲಿ ಮುಗ್ಧವಾಗಿರುವ ಗಂಡನ ರಕ್ಷಣೆಯ ಹೊಣೆಯೂ ನನ್ನ ಪಾತ್ರಕ್ಕಿದೆ. ಧಾರಾವಾಹಿಯಲ್ಲಿರುವ ಇನ್ನೊಂದು ಮುಖ್ಯ ಪಾತ್ರವಾದ ಬೆಳ್ಳಿಯನ್ನು ನನ್ನ ಗಂಡನ ಜೊತೆಗೆ ಸೇರಿಸುವ ಬಹುಮುಖ್ಯ ಕಾರ್ಯವೂ ಮೋಹಿನಿಯದ್ದು. ಖಂಡಿತವಾಗಿಯೂ ಇದು ನೆಗೆಟಿವ್ ಪಾತ್ರ ಅಂತ ಹೇಳಲಾರೆ. ಪಾಸಿಟಿವ್ ಹಾಗೂ ನೆಗೆಟಿವ್ ಎರಡೂ ಶೇಡ್ ಇದೆ. ಪ್ರತಿ ಹಂತದಲ್ಲಿಯೂ ಗಂಡ ಹಾಗೂ ಬೆಳ್ಳಿಯನ್ನು ಕಾಪಾಡುವ ಪಾತ್ರವಾಗಿ ಪಾಸಿಟಿವ್ ಆಗಿ ಕಾಣಿಸಿಕೊಳ್ಳುವ ನಾನು ಅತ್ತೆಯ ವಿಷಯದಲ್ಲಿ ನೆಗೆಟಿವ್ ಶೇಡ್ನಲ್ಲಿ ಕಾಣಿಸಿಕೊಳ್ಳುತ್ತೇನೆ.

* ಈ ಧಾರವಾಹಿಗೆ ನೀವು ಆಯ್ಕೆಯಾಗಿದ್ದು ಹೇಗೆ? ಶೃತಿ ನಾಯ್ಡು ಅವರ ಪ್ರೊಡಕ್ಷನ್ ಅಲ್ವಾ..
ಶಾಂತಂಪಾಪಂ ನಲ್ಲಿ ನಟಿಸಿದಾಗ ಕೆಲವರು ನನಗೆ ಧಾರವಾಹಿ ಆಫರ್ ಕೊಟ್ಟಿದ್ದರು. ನಂತರ ಯಾರೇ ನೀ ಮೋಹಿನಿ ಧಾರಾವಾಹಿ ಆಡಿಷನ್ ಬಗ್ಗೆ ಗೊತ್ತಾಯಿತು. ಆಡಿಷನ್ನಲ್ಲಿ ಭಾಗವಹಿಸಿದೆ. 2 ಸಾರಿ ಸ್ಕ್ರೀನ್ ಟೆಸ್ಟ್ ನಡೆಯಿತು. ಅದರಲ್ಲಿಯೂ ಆಯ್ಕೆಯಾದೆ. ಈ ಸಂದರ್ಭದಲ್ಲಿ ಶೃತಿ ನಾಯ್ಡು ಅವರು ಪರಿಚಯವಾದರು. ಮೀಡಿಯಾ ಬಗ್ಗೆ ಒಲವಿತ್ತು. ಮುಖ್ಯ ಪಾತ್ರಗಳನ್ನು ಬಯಸಿದ್ದೆ. ಅದೇ ಸಿಕ್ಕಿತು.

* ಮೊದಲ ಪಾತ್ರದಲ್ಲೇ ಮೋಹಿನಿಯಾಗಿದ್ದೀರಲ್ಲ
ಹಾಗೇನೂ ಇಲ್ಲ. ಪಾತ್ರ ಬಹಳ ಸ್ಟ್ರಾಂಗ್ ಆಗಿದೆ. ಮಾಧುರಿ ದೀಕ್ಷಿತ್ ಅಂತಹ ಮಹಾನ್ ನಟಿಯರೇ ಮೋಹಿನಿಯ ಪಾತ್ರ ಮಾಡಿದ್ದಾರೆ. ನನಗೆ ಬಹಳ ಸವಾಲಿನ ಪಾತ್ರ. ಮೋಹಿನಿಯಾಗಿದ್ದಕ್ಕೆ ಖಂಡಿತವಾಗಿಯೂ ಬೆಜಾರಿಲ್ಲ. ಖುಷಿಯಾಗುತ್ತಿದೆ. ಎಲ್ಲರೂ ಈಗೀಗ ನನ್ನನ್ನು ಮೋಹಿನಿ ಅಂತಲೇ ಕರೆಯುತ್ತಿದ್ದಾರೆ. ಬಹಳ ಸಂತೋಷವಾಗ್ತಿದೆ. ಈಗ ಕೆಲವು ದಿನಗಳ ಕಾಲ ನನ್ನ ಪಾತ್ರ ಮೋಹನಿಯಾಗಿ ಬರುತ್ತದೆ. ಕೆಲವು ದಿನಗಳ ನಂತರ ಫ್ಲಾಷ್ಬ್ಯಾಕ್ ಕಥೆ ಆರಂಭವಾಗುತ್ತೆ. ಅಲ್ಲಿ ನನ್ನ ನಿಜವಾದ ಪಾತ್ರ ಆರಂಭ ಅನ್ನಬಹುದು

* ಧಾರಾವಾಹಿ ತಂಡ ಹೇಗಿದೆ?
ಧಾಆರಾವಾಹಿ ಟೀಂ ಸಂಪೂರ್ಣ ಬೆಂಬಲ ನೀಡುತ್ತಿದೆ. ಎಪಿಸೋಡ್ ನಿರ್ದೇಶಕರಾದ ಸಂತೋಷ್ ಗೌಡರ್ ಅವರು ಎಲ್ಲ ಸಂದರ್ಭಗಳಲ್ಲಿಯೂ ಬೆಂಬಲ ನೀಡುತ್ತಾರೆ. ಸಲಹೆ, ಸಹಕಾರ ನೀಡುತ್ತಾರೆ. ನನಗೆ ನಟನೆ ಕಷ್ಟವೇನಲ್ಲ. ಮೊದಲ ಸಾರಿ ಕ್ಯಾಮರಾಆ ಎದುರಿಸಿದಾಗ ಭಯವೇನೂ ಆಗಲಿಲ್ಲ. ಆಂಕರಿಂಗ್ ಮಾಅಡುತ್ತ ಬಂದವಳಾದ್ದರಿಂದ ಸ್ಟೇಜ್ ಫಿಯರ್ ಕೂಡ ಇರಲಿಲ್ಲ. ಹೀಗಾಗಿ ಮೊದಲ ಸಾರಿ ಕ್ಯಾಮರಾ ಎದುರಿಸಿದ್ದಕ್ಕೆ ತೊಂದರೆ ಏನೂ ಆಗಲಿಲ್ಲ.


* ನಿಮ್ಮ ನಟನೆ ಬಗ್ಗೆ ನಿಮ್ಮ ಬಳಗ, ಊರಿನವರು ಏನಂತಾರೆ? ರೆಸ್ಪಾನ್ಸ್ ಹೇಗಿದೆ?
ನಾನು ಊರಿನಿಂದ ಬಂದು 8 ವರ್ಷಗಳೆ ಆದವು. ಯಾರೇ ನೀ ಮೋಹಿನಿ ಧಾರವಾಹಿ ಶುರುವಾದ ನಂತರ ಊರಿಗೆ ಹೋಗಿಲ್ಲ. ಆದರೆ ಊರಿನಿಂದ ಪೋನ್ಗಳು ಬರುತ್ತಿರುತ್ತವೆ. ಪಾಸಿಟಿವ್ ರೆಸ್ಪಾನ್ಸ್ ಇದೆ. ಫೇಸ್ ಬುಕ್ಕಲ್ಲಿ ಕೂಡ ಒಳ್ಳೆಯ ರೆಸ್ಪಾನ್ಸ್ ಇದೆ. ನನಗೆ ಪ್ರೆಂಡ್ಸ್ ಕಡಿಮೆ. ಕಡಿಮೆ ಅನ್ನುವುದಕ್ಕಿಂತಲೂ ಹೆಚ್ಚಾಗಿ, ನಾನು ಸೆಲೆಕ್ಟಿವ್. ಬಳಗದವರೆಲ್ಲ ಒಳ್ಳೆಯ ಅಭಿಪ್ರಾಯಗಳನ್ನೇ ಹೇಳುತ್ತಿದ್ದಾರೆ.


* ಸಾಮಾಜಿಕವಾಗಿ ಮುಂದುವರಿಯುವ ಇಚ್ಛೆ ವ್ಯಕ್ತಪಡಿಸಿದ್ದೀರಿ. ಅದರ ಬಗ್ಗೆ ಹೇಳಿ
ಧಾರಾವಾಹಿ ಲೋಕಕ್ಕೆ ಬರುವ ಮೊದಲು ನಾನು ಲೇಬರ್ ಡಿಪಾರ್ಟ್ಮೆಂಟಿನಲ್ಲಿ ನಾನು ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದೆ. 2014-15ರಲ್ಲಿ ಈ ಕೆಲಸ ಮಾಡುತ್ತಿದ್ದ ನಾನು ನಂತರದಲ್ಲಿ ಅದನ್ನು ಬಿಟ್ಟಿದ್ದೇನೆ. ಎನ್ಜಿಓಗಳಲ್ಲಿ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದು ನನಗೆ ಮೊದಲಿನಿಂದಲೂ ಆಸಕ್ತಿ. ನನ್ನದೇ ಆದ ಎನ್ಜಿಓ ಆರಂಬಿಸುವ ಆಸೆಯೂ ಇದೆ. ಸಾಮಾಜಿಕವಾಗಿ ಜನಸಾಮಾನ್ಯರಿಗೆ ಸಹಾಯ ಮಾಡುವ ಗುರಿ ಇದೆ. ಇದೀಗ ನಾನು ಚಂದ್ರಾ ಲೇ ಔಟ್ನಲ್ಲಿ ವಾರದಲ್ಲಿ ಐದು ದಿನಗಳ ಕಾಲ ಯೋಗಾಸನ ಕ್ಲಾಸ್ ನಡೆಸುತ್ತಿದ್ದೇನೆ. ಜೊತೆಯಲ್ಲಿ ಪ್ರಚೋದಯ ನಾಟ್ಯಾಲಯ ಎನ್ನುವ ಭರತನಾಟ್ಯ ಶಾಲೆಯನ್ನೂ ಕೂಡ ತೆರೆದಿದ್ದೇನೆ. ಆಸಕ್ತರಿಗೆ ನೃತ್ಯ ಹೇಳಿಕೊಡುತ್ತಿದ್ದೇನೆ.

* ಬಹಳಷ್ಟು ಆಫರ್ ಬಂದಿರಬೇಕಲ್ಲ? ಸಿನೆಮಾ ಆಫರ್ಗಳಿಗೆ ಒಪ್ಕೋತೀರಾ?
ಹೌದು ಬಹಳಷ್ಟು ಆಫರ್ ಬಂದಿದೆ. ಎಲ್ಲ ಆಫರ್ಗಳೂ ಸಿನೆಮಾಗಳಿಗೇ ಬಂದಿದೆ. ಒಳ್ಳೆಯ ಪಾತ್ರಗಳು ಸಿಕ್ಕರೆ ಖಂಡಿತವಾಗಿಯೂ ನಾನು ನಟಿಸುತ್ತೇನೆ. ಸುದೀಪ್, ದರ್ಶನ್, ಪುನೀತ್ ಸರ್ ಅವರ ಜೊತೆಗೆ ನಟಿಸಲು ಆಸೆಯಿದೆ. ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ನನಗೆ ಆಸಕ್ತಿ ಇದೆ. ಈ ಕಾರಣದಿಂದ, ಸಿನೆಮಾಗಳಲ್ಲಿ ಆಫರ್ ಬಂದರೆ ಮಾಡಲೋ, ಬೇಡವೋ ಅನ್ನುವ ಗೊಂದಲವೂ ಕಾಡುತ್ತಿದೆ. ಆದರೆ ಪಾತ್ರ ಚನ್ನಾಗಿದ್ದರೆ ಖಂಡಿತವಾಗಿಯೂ ನಟಿಸುತ್ತೇನೆ. ಮಾಡೆಲಿಂಗ್ ಆಫರ್ ಕೂಡ ಬರ್ತಿದೆ. ಆದರೆ ಮೊದಲೇ ಹೇಳಿದಂತೆ ನಾನು ಸೆಲೆಕ್ಟಿವ್. ಕಥೆ ಚನ್ನಾಗಿರಬೇಕು. ಪಾತ್ರ ಕೂಡ.

Monday, August 21, 2017

ಸಿಹಿ-ಕಹಿ ಸಾಲುಗಳು

ತಂತ್ರ-ಪ್ರತಿತಂತ್ರ

ಪ್ರಚೋದನೆಗೆ ತಕ್ಕ ಪ್ರತಿಕ್ರಿಯೆ..
ಇದಕ್ಕೊಂದು ಉದಾಹರಣೆ ...
ಐಟಿ ರೈಡ್ ಆದ ತಕ್ಷಣ 
ಕರೇಂಟ್ ಹೋಗುವುದು.!


ರೂವಾರಿ

ಐಟಿ ರೈಡ್ ಆದಾಗ 
ಎಲ್ರೂ ಷಾ ಕಡೆ ನೋಡ್ತಾ ಇದ್ರು...
ಸಿದ್ದಣ್ಣ ಖುಷಿಯಿಂದ 
ಒಳಗೊಳಗೆ ನಕ್ರು...


ಕಾರಣ 

ಪಪ್ಪೂ..:
ಗುಜರಾತಲ್ಲಿ ಸಿಕ್ಕಾಪಟ್ಟೆ ಮಳೆ ಬರ್ತಿದೆ..
ಇದಕ್ಕೆ ಮೋದಿ ಕಾರಣ..
ರಾಜೀನಾಮೆ ಕೊಡ್ಬೇಕು...!


ನೋಟ

ಬೆಂಗಳೂರಲ್ಲಿ ಮಳೆ 
ಬರುತ್ತಿರುವಾಗ ರೈನ್ ಕೋಟ್ ಹಾಕ್ಕೊಂಡು ಹೋಗುವವನನ್ನು 
ಅನ್ಯಗ್ರಹ ಜೀವಿಯಂತೆ ದಿಟ್ಟಿಸುತ್ತಾರೆ..!

ಜೂಜು

ಟ್ರಾಫಿಕ್ಕಿನಲ್ಲಿಸಿಗ್ನಲ್ ಬಿಟ್ಟ ತಕ್ಷಣಪ್ರತಿಯೊಬ್ಬಬೈಕ್ ಸವಾರನೂರೇಸಿಗೆ ಇಳಿದ ಕುದುರೆಯಾಗುತ್ತಾನೆ..!


ರೂಪಾಂತರ

ಜಪಾನಿಗರ ಬೋನ್ಸಾಯ್ 
ತಂತ್ರಜ್ಞಾನಕ್ಕೆ ಸಿಕ್ಕು ತಮ್ಮ 
ದೈತ್ಯ ದೇಹ ಕಳೆದುಕೊಂಡ 
ಡೈನೋಸಾರ್ ಗಳೇ 
ಈಗಿನ ಓತಿಕ್ಯಾತಗಳು..!


ಪ್ರಯೋಗ ಪಶು

ಜಪಾನಿಗರು ಮೊಟ್ಟಮೊದಲು 
ಬೋನ್ಸಾಯ್ ತಂತ್ರಜ್ಞಾನ 
ಪ್ರಯೋಗ ಮಾಡಿದ್ದು 
ಡೈನೋಸಾರ್ ಗಳ ಮೇಲಂತೆ..!


ಕಾರಣ

ಅವ್ನು ತೊಡೆ ಕಚ್ಚಿದ್ನಂತೆ..
ಇವ್ನು ಕಂಪ್ಲೇಂಟ್ ಕೊಟ್ನಂತೆ..
ಅದೆಲ್ಲ ಸರಿ.. 
ಅವ್ನು ತೊಡೆ ಕಚ್ಚೋ ತನಕ 
ಇವನೇನ್ ಮಾಡ್ತಿದ್ದ ಅಂತ..!

ಪೂಜೆ

ಹೆಂಡತಿಯಿಂದ ಗಂಡನಿಗೆ
ಭೀಮನ ಅಮಾವಾಸ್ಯೆ 
ದಿನ ಪಾದಪೂಜೆ..‌
ಉಳಿದ ದಿನಗಳಲ್ಲಿ ಮಂಗಳಾರತಿ..!!!


ಬದಲಾವಣೆ

ಹುಡುಗಿಯರು ಆಕೆಯ 
ಹುಡುಗ ಸ್ವಾಭಿಮಾನಿ ಆಗಿರಬೇಕು 
ಎಂದು ಬಯಸುತ್ತಾರೆ..!
ಅದೇ ರೀತಿ ಆ ಹುಡುಗ 
ತಾನು ಹೇಳಿದ್ದನ್ನೆಲ್ಲ 
ಕುರಿಯಂತೆ ಕೇಳಲಿ ಎಂದುಕೊಳ್ಳುತ್ತಾರೆ.!


-------------------
(ಆಗಾಗ ಬರೆಯುತ್ತಿದ್ದ ಸ್ಟೇಟಸ್ಸುಗಳಲ್ಲಿ ಆಯ್ದ... ುತ್ತಮವಾದ ಸ್ಟೇಟಸ್ಸುಯಗಳನ್ನು ಈ ರೂಪದಲ್ಲಿ ನಿಮ್ಮ ಮುಂದೆ ಇಟ್ಟಿದ್ದೇನೆ.. ಓದಿ ಹೇಳಿ)


Friday, August 18, 2017

ತಮಾಷೆಯ ಸಾಲುಗಳು..!

ಬದಲಾವಣೆ..

ಕಿವಿಯ ಮೇಲೆ ಪೆನ್ ಇಟ್ಕಂಡ್.. 

ಕೈಯಲ್ ಟಕ್ ಟಕ್ ಅನ್ನಿಸ್ತಾ 
ಟಿಕೆಟ್ ಟಿಕೆಟ್ ಅನ್ನುವ 
ಕಂಡಕ್ಟರ್ ಗಳು ಏನಾದರು..? ಏನಾದರು?

ಅಪ್ ಡೇಟ್ ಆದರು..!


ಆಸೆ


ಕಾಣದ ಕಡಲಿಗೆ..

ಹಂಬಲಿಸಿದೆ ಮನ..
ಕಾಣುವ ಕಡಲನು
ಮೂದಲಿಸಿದೆ..!

ಕ`ಬಡ್ಡಿ'


ಬ್ಯಾಂಕ್
'ಬಡ್ಡಿ' 
ಹೆಚ್ಚಿದಾಗೆಲ್ಲಾ 
ಕ'ಬಡ್ಡಿ' 
ಆಡುವ 
ಆಸೆ..



ಅಸಹಿಷ್ಣು ಮನ


ಹತ್ ವರ್ಷದಿಂದ 

ಕಾಡದ ಅಸಹಿಷ್ಣುತೆ...
ಅಧಿಕಾರದಿಂದ 
ಕೆಳಗಿಳಿಯುವ ಸಂದರ್ಭದಲ್ಲಿ..
ಕಾಡ್ತಾ ಇದೆಯಂತೆ..!

ಬೇಡಿಕೆ


ಉಪ್ಪ ಕೊಡ್ತೀನಿ

ಒಪ್ಕೋ ಅಂದೆ...
OPPO ಕೊಡ್ಸು
ಒಪ್ಕೋತೀನಿ ಅಂದ್ಲು..!



(ಸುಮ್ನೆ ತಮಾಷೆಗೆ ಬರೆದ ಸಾಲುಗಳು.. 
ಫೇಸ್ ಬುಕ್ಕಲ್ಲಿ ಆಗಾಗ ಬಂದಿದೆ... ಇವುಗಳು..)

Saturday, August 5, 2017

ಕಳವೆಯ ಮುದ್ದಿನ ಗೌರಿ ಇನ್ನಿಲ್ಲ

ಕಾಡು-ನಾಡಿನ ಕೊಂಡಿಯಾಗಿದ್ದ ಜಿಂಕೆ - 17 ವರ್ಷದ ಒಡನಾಟ ಅಂತ್ಯ

ಕಾಡು ಹಾಗೂ ನಾಡಿನ ನಡುವೆ ಕೊಂಡಿಯಾಗಿ, ಕಾಡು ಸಂರಕ್ಷಣೆಯ ಪಾಠವನ್ನು ನಾಡಿನ ಮಂದಿಗೆಲ್ಲ ಸಾರಿ ಹೇಳುತ್ತಿದ್ದ ಗೌರಿ ಜಿಂಕೆ ಇನ್ನಿಲ್ಲ. ಕಳವೆಯ ಕಾಡಿನಲ್ಲಿ ಹುಟ್ಟಿ, ನಾಡಿನ ಜನರ ಪ್ರೀತಿಯನ್ನು ಗಳಿಸಿಕೊಂಡಿದ್ದ ಗೌರಿ ಜಿಂಕೆ ತನ್ನ ವಯೋಸಹಜ ಕಾರಣಗಳಿಂದಾಗಿ ಇಹಲೋಕ ತ್ಯಜಿಸಿದ್ದಾಳೆ.
ಕಾಡಿನ ಜಿಂಕೆ ನಾಡಿನ ಒಡನಾಡಿ :
2001ರ ಆಸುಪಾಸಿನಲ್ಲಿ ಮರಿಯಾಗಿದ್ದ ಗೌರಿ ಬೇಟೆ ನಾಯಿಗಳ ದಾಳಿಗೆ ಸಿಕ್ಕಿ ತತ್ತರಿಸಿತ್ತು. ಹುಟ್ಟಿ ಆಗಷ್ಟೇ ಐದಾರು ದಿನಗಳು ಕಳೆದಿದ್ದ ಗೌರಿಯ ಮೇಲೆ ಬೇಟೆಗಾರರ ನಾಯಿಗಳು ದಾಳಿ ಮಾಡಿದ್ದವು. ಹಾಗಿದ್ದಾಲೇ ಸ್ಥಳೀಯರೊಬ್ಬರು ತಾಯಿಯಿಂದ ಬೇರ್ಪಟ್ಟು ಪರಿತಪಿಸುತ್ತಿದ್ದ ಗೌರಿಯನ್ನು ಹಿಡಿದು ತಂದಿದ್ದರು. ಮನೆಗೆ ತಂದವರಿಗೆ ತಮ್ಮ ಮನೆಯಲ್ಲಿ ಜಿಂಕೆ ಮರಿಗೆ ಅಗತ್ಯವಾದ ಹಾಲು ಇಲ್ಲ ಎನ್ನುವುದು ಅರಿವಾಗಿ, ಹೈನುಗಳನ್ನು ಸಾಕಿದ್ದ ಪರಿಸರ ಬರಹಗಾರ ಶಿವಾನಂದ ಕಳವೆಯವರ ಮನೆಗೆ ಮರಿಜಿಂಕೆಯನ್ನು ಬಿಟ್ಟು ಬಂದಿದ್ದರು. ಅಂದಿನಿಂದ ಜಿಂಕೆ ಶಿವಾನಂದ ಕಳವೆ ಅವರ ಮನೆಯ ಒಡನಾಡಿಯಾಗಿತ್ತು.
ಮನೆಯಲ್ಲಿ ಕುಟುಂಬದ ಸದಸ್ಯರಂತೆ ಬೆಳೆದ ಜಿಂಕೆ ಮರಿಗೆ ಗೌರಿ ಎಂದು ಹೆಸರಿಟ್ಟಿದ್ದೂ ಆಯಿತು. ಮನೆಯ ಎಲ್ಲ ಸದಸ್ಯರೂ ಕೂಡ ಗೌರಿಯ ಪ್ರತಿಗೆ ಪಾತ್ರರಾದರು. ಮನೆಯ ನಾಯಿ, ದನ-ಕರುಗಳ ಜೊತೆಗೆ ತಾನೂ ಬೆಳೆಯಿತು ಗೌರಿ. ಇಂತಹ ಗೌರಿ ಕೆಲ ದಿನಗಳಲ್ಲಿಯೂ ಕಳವೆ ಊರಿನ ಎಲ್ಲರ ಪ್ರೀತಿಯನ್ನೂ ಗಳಿಸಿಕೊಂಡಿತು. ಶಿವಾನಂದ ಕಳವೆಯವರ ಮನೆಯಲ್ಲಿನ ದೋಸೆ, ಸಂಕಷ್ಟಿ ದಿನದಂದು ಮಾಡುವ ಪಂಚಕಜ್ಜಾಯ, ಸಿಹಿತಿಂಡಿಗಳು ಗೌರಿಯ ಅಚ್ಚುಮೆಚ್ಚಿನ ಆಹಾರವಾದವು. ಕಾಡಿನ ಪ್ರಾಣಿ ಜಿಂಕೆ ನಾಡಿನ ಪ್ರೀತಿಪಾತ್ರ ಪ್ರಾಣಿಯಾಗಿ ರೂಪುಗೊಂಡಿತ್ತು.
ಶಿವಾನಂದ ಕಳವೆಯವರು ಆಗಾಗ್ಗೆ ಗೌರಿಯನ್ನು ಕಾಡಿಗೆ ಪರಿಚಯಿಸುವ ಕಾರ್ಯ ಮಾಡುತ್ತಲೇ ಇದ್ದರು. ಗೌರಿ ಬೆಳೆಯುತ್ತಿದ್ದಂತೆಲ್ಲ ಕಳವೆಯವರ ಮನೆಯ ಬಳಿಗೆ ಬರುತ್ತಿದ್ದ ಜಿಂಕೆಗಳ ಹಿಂಡು ಗೌರಿಯನ್ನು ಆಕಷರ್ಿಸಿತು. ಆ ಸಂದರ್ಭದಲ್ಲಿಯೇ ಕಳವೆಯವರು ಗೌರಿಯನ್ನು ಕಾಡಿಗೆ ಕಳಿಸುವ ಕಾರ್ಯವನ್ನೂ ಮಾಡಿದರು. ಕಾಡಿನ ಹಿಂಡಿನ ಜೊತೆಗೆ ಗೌರಿಯನ್ನು ಕಳಿಸಿದರು. ಮೊದ ಮೊದಲು ಅಂಜಿದ್ದ ಗೌರಿ ನಂತರ ಕಾಡಿನ ಗೆಳೆಯರ ಜೊತೆ ಬೆರೆತುಕೊಂಡಿತು.
ಗೌರಿಗೊಬ್ಬ ಮಗ ಗಣೇಶ :
ಗೌರಿಗೆ ಒಂಭತ್ತು ವರ್ಷವಾಗಿದ್ದಾಗ ಅದು ಗರ್ಭ ಧರಿಸಿತು. ಅಲ್ಲದೇ ಮರಿಯನ್ನೂ ಹಾಕಿತು. ಹುಟ್ಟಿದ ಮರಿಗೆ ಗಣೇಶ ಎನ್ನುವ ನಾಮಕರಣವೂ ಆಯಿತು. ಶಿವಾನಂದ ಕಳೆವಯವರ ಮನೆಯನ್ನು ತವರು ಮನೆ ಮಾಡಿಕೊಂಡಿದ್ದ ಗೌರಿ ತನ್ನ ಮರಿಯನ್ನು ಅವರ ಮನೆಗೆ ಕರೆದುಕೊಂಡು ಬಂದಿತು. ಕಾಡಿನಲ್ಲಿ ಮರಿ ಇದ್ದರೆ ಅದರ ಜೀವಕ್ಕೆ ಅಪಾಯ ಉಂಟಾಗಬಹುದು ಎನ್ನುವ ಕಾರಣಕ್ಕಾಗಿ ನಾಡಿನತ್ತ ಮರಿಯನ್ನು ಕರೆತಂದ ಗೌರಿ ಕೆಲ ದಿನಗಳ ಕಾಲ ಗಣೇಶನನ್ನು ಮನೆಯಲ್ಲಿಯೇ ಇರಿಸಿತ್ತು ಎನ್ನುತ್ತಾರೆ ಶಿವಾನಂದ ಕಳವೆಯವರು.
ಅದಾದ ನಂತರ ಗೌರಿ ಏನಿಲ್ಲವೆಂದರೂ ಒಂಭತ್ತಕ್ಕೂ ಹೆಚ್ಚಿನ ಮರಿಗಳನ್ನು ಹಾಕಿದೆ. ಆ ಮರಿಗಳೆಲ್ಲ ಇದೀಗ ದೊಡ್ಡವಾಗಿವೆ. ಅವು ಕೂಡ ಮಕ್ಕಳು-ಮರಿಗಳನ್ನು ಮಾಡಿಕೊಂಡು ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಕಳವೆಯ ಕಾಡಿನಲ್ಲಿ ದೊಡ್ಡದೊಂದು ಹಿಂಡನ್ನು ಸೃಷ್ಟಿ ಮಾಡಿವೆ. ಕಾಡಿನಲ್ಲಿ ಹುಟ್ಟಿ, ನಾಡಿನಲ್ಲಿ ಬೆಳೆದು ನಂತರ ಮತ್ತೆ ಕಾಡಿಗೆ ಹಿಂತಿರುಗಿದ ಗೌರಿ ಆಗಾಗ ಕಳವೆಗೆ ಬರುತ್ತಲೇ ಇದ್ದಳು. ಶಿವಾನಂದ ಕಳವೆಯವರು ಹಾಗೂ ಅವರ ಕುಟುಂಬದ ಯಾರೇ ಸದಸ್ಯರು ಕಾಡಿನತ್ತ ಮುಖ ಮಾಡಿ `ಗೌರಿ... ಬಾ ಇಲ್ಲಿ..' ಎಂದರೆ ಸಾಕು ಕ್ಷಣಾರ್ಧದಲ್ಲಿ ಮನೆಯತ್ತ ಓಡಿಬರುತ್ತಿದ್ದಳು ಗೌರಿ.
ಈ ಗೌರಿಯ ಕಾರಣದಿಂದಲೇ ಕಳವೆ ಹಾಗೂ ಸುತ್ತಮುತ್ತಲ ಊರುಗಳಲ್ಲಿ ಸಾಂಪ್ರದಾಯಿಕವಾಗಿ ನಡೆಯುತ್ತಿದ್ದ ಕಾಡಿನ ಬೇಟೆಗಳೂ ನಿಂತವು ಎನ್ನುತ್ತಾರೆ ಕಳವೆಯವರು. ಊರಿನ ಯಾರದೇ ಮನೆಗೆ ಹೋಗಿ ಮನೆಯ ಸದಸ್ಯರ ಮುಂದೆ ನಿಂತು ತಿಂಡಿಯನ್ನು ಕೇಳಿ ಪಡೆಯುತ್ತಿದ್ದ ಗೌರಿ ಇನ್ನಿಲ್ಲ. ಗೌರಿ ಸಾವನ್ನಪ್ಪಿರುವ ವಿಷಯ ಕೇಳಿದ ಪ್ರತಿಯೊಬ್ಬರೂ ಹೌಹಾರಿದ್ದಾರೆ. ತಮ್ಮದೇ ಕುಟುಂಬದ ಸದಸ್ಯರನ್ನು ಕಳೆದುಕೊಂಡಷ್ಟು ದುಃಖ ಪಡುತ್ತಿದ್ದಾರೆ. ವಯೋ ಸಹಜ ಕಾರಣಗಳಿಂದ ಗೌರಿ ಸಾವನ್ನಪ್ಪಿದ್ದಾಳೆ. ಆದರೂ ಕೂಡ ಹಾವು ಅಥವಾ ಇನ್ಯಾವುದೇ ವಿಷ ಜಂತು ಕಚ್ಚಿರಬಹುದು ಎನ್ನುವ ಸಣ್ಣ ಅನುಮಾನಗಳೂ ಕೂಡ ಇದೆ. ಶಿವಾನಂದ ಕಳವೆಯವೆ ಮನೆಯ ಹಿಂಭಾಗದ ಕಾಡಿನಲ್ಲಿನ ರಾಮಪತ್ರೆ ಮರದ ಕೆಳಗೆ ಗೌರಿಯ ಮೃತದೇಹ ಸಿಕ್ಕಿದೆ. ಗೌರಿಯ ಸಾವಿನ ಸುದ್ದಿ ತಿಳಿದ ತಕ್ಷಣ ಗೌರಿಯನ್ನು ಕಂಡವರು, ಮಾತನಾಡಿಸಿದವರು, ಸ್ಥಲೀಯರು, ಪರಿಸರ ಪ್ರೇಮಿಗಳು, ಪ್ರಾಣಿ-ಪಕ್ಷಿ ಪ್ರಿಯರು ಕಳವೆಯತ್ತ ಮುಖಮಾಡಿ ಗೌರಿಯ ಅಂತಿಮ ದರ್ಶನ ಮಾಡಿಕೊಂಡು ಬಂದಿದ್ದಾರೆ. ಕಾಡು-ನಾಡನ್ನು ಬೆಸೆದ ಜೀವಿಯೊಂದು ಇನ್ನಿಲ್ಲವಾಗಿದೆ. ತನ್ನದೇ ಆದ ಮೂಕಭಾಷೆಯ ಮೂಲಕ ಕಾಡಿನ ಪಾಠವನ್ನು ತಿಳಿಸಿದ ಗೌರಿ ಜಿಂಕೆ ಎಲ್ಲರ ಮನಸ್ಸಿನಲ್ಲಿ ಮಾಸಲಾರಂತಹ ನೆನಪನ್ನು ಬಿಟ್ಟು ಹೋಗಿದ್ದಾಳೆ.

-----
ಅಂತ್ಯಸಂಸ್ಕಾರಕ್ಕೆ ಸಾಕ್ಷಿಯಾದ ನೂರಾರು ಜನರು :
ಯಾರಾದರೂಗಣ್ಯ ವ್ಯಕ್ತಿಗಳು ಸತ್ತರೆ ನೂರಾರು ಜನರು, ಸಾವಿರಾರು ಜನರು ಅವರ ಅಂತ್ಯಸಂಸ್ಕಾರಕ್ಕೆ ಸಾಕ್ಷಿಯಾಗುವುದನ್ನು ನಾವು ಕಾಣುತ್ತೇವೆ. ಕೇಳುತ್ತೇವೆ. ಕಾಡು ಪ್ರಾಣಿ ಸತ್ತರೆ ನೂರಾರು ಜನರು ಅದರ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳುತ್ತಾರೆ ಎನ್ನುವುದನ್ನು ಕೇಳಿದ್ದೀರಾ? ಗೌರಿಯ ಅಂತ್ಯ ಸಂಸ್ಕಾರದಲ್ಲಿ ಕಳವೆ ಹಾಗೂ ಸುತ್ತಮುತ್ತಲಿನ ನೂರಾರು ಜನರು ಪಾಲ್ಗೊಂಡಿದ್ದರು. ಅಂತ್ಯಸಂಸ್ಕಾರದ ಸಂದರ್ಭದಲ್ಲಿ ಪ್ರತಿಯೊಬ್ಬರ ಕಣ್ಣಾಲಿಗಳು ತುಂಬಿದ್ದವು. ಕಳವೆಯ ಗ್ರಾಮಸ್ಥರು ಬಿಕ್ಕಿ ಬಿಕ್ಕಿ ಅಳುತ್ತಿದ್ದರು. ಕಾಡು ಹಾಗೂ ನಾಡಿನ ನಡುವೆ ಕೊಂಡಿಯಾಗಿ, ನಾಡಿನ ಮಂದಿಯ ಪ್ರೀತಿಯನ್ನು ಗಳಿಸಿ, ಕಾಡಿನ ಸೂಕ್ಷ್ಮಗಳನ್ನು, ನಾಡಿನ ಕ್ರೌರ್ಯಗಳನ್ನು ಒಟ್ಟಾಗಿ ಕಂಡಿದ್ದ ಗೌರಿ ಇನ್ನು ಬರಿ ನೆನಪು ಮಾತ್ರ

-------------------

17 ವರ್ಷದ ಒಡನಾಟ
2001ರಲ್ಲಿ ಹುಟ್ಟಿ ಐದು ದಿನವಾದಾಗ ನಮ್ಮ ಮನೆಗೆ ಬಂದಿದ್ದ ಗೌರಿ 17 ವರ್ಷ ನಮ್ಮ ಜೊತೆ ಒಡನಾಡಿದೆ. ಅದಕ್ಕೆ 9ನೇ ವರ್ಷವಾದಾಗ ಕಾಡಿನ ಜೊತೆ ಒಡಡನಾಡಿ, ತದನಂತರ 9 ಮರಿಗಳನ್ನು ಹಾಕಿತ್ತು. ಸಾಮಾನ್ಯವಾಗಿ ಜಿಂಕೆಗಳು 23-25 ವರ್ಷಗಳ ಕಾಲ ಬದುಕುತ್ತವೆ. ಮನುಷ್ಯರ ಒಡನಾಟ ಇದ್ದರೆ ಜಾಸ್ತಿ ವರ್ಷಗಳ ಕಾಲ ಬದುಕಲೂ ಬಹುದು. ಆದರೆ ಗೌರಿ ಮಂಗಳವಾರ ಸಾವನ್ನಪ್ಪಿದೆ. ಗೌರಿಯ ಅಂತ್ಯಸಂಸ್ಕಾರವನ್ನು ಅರಣ್ಯ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಕೈಗೊಳ್ಳಲಾಗಿದೆ. ಅದರ ಅಂತ್ಯಸಂಸ್ಕಾರಕ್ಕೆ ನೂರಾರು ಜನರು ಆಗಮಿಸಿದ್ದರು. ಇದು ಪ್ರಾಣಿಯೊಂದು ಜನರ ಜೊತೆ ಹೊಂದಿದ್ದ ಒಡನಾಟಕ್ಕೆ, ಪ್ರೀತಿಗೆ ಸಾಕ್ಷಿ.
ಶಿವಾನಂದ ಕಳವೆ
ಪರಿಸರ ಬರಹಗಾರರು


(ಈ ಲೇಖನವು ಹೊಸ ದಿಗಂತದಲ್ಲಿ ಪ್ರಕತವಾಗಿದೆ)

Friday, March 10, 2017

ಯಲ್ಲಾಪುರದಲ್ಲಿ ಸ್ವಾತಂತ್ರ್ಯದ ಕಹಳೆ ಮೊಳಗಿಸಿದ ಅಮ್ಮಕ್ಕ

98ರ ಹರೆಯದ ಅಮ್ಮಕ್ಕಜ್ಜಿ ಬಿಚ್ಚಿಟ್ಟ ಸ್ವಾತಂತ್ರ್ಯ ಹೋರಾಟದ ವಿವರಗಳು

*****
ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಅದೆಷ್ಟೋ ಕೋಟ್ಯಂತರ ಜನರು ಹೋರಾಡಿದ್ದಾರೆ. ಹಲವರು ಹೋರಾಟ, ಹರತಾಳ, ಪ್ರತಿಭಟನೆಗಳ ಮೂಲಕ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದರೆ ಇನ್ನೂ ಹಲವರು ತೆರೆಮರೆಯಲ್ಲಿ ಉಳಿದು ಸಕ್ರಿಯ ಹೋರಾಟದಲ್ಲಿ ತೊಡಗಿಕೊಂಡವರಿಗೆ ಸಹಾಯ ಮಾಡುವ ಮೂಲಕ ಸ್ವಾತಂತ್ರ್ಯ ಹೋರಾಟಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. ಅಂತವರಲ್ಲೊಬ್ಬರು ಬರಬಳ್ಳಿಯ ಗುಡ್ಡೇಮನೆಯ ಅಮ್ಮಕ್ಕ ಗಣಪತಿ ಭಟ್.
ಅಮ್ಮಕ್ಕ ಗಣಪತಿ ಭಟ್ಟರು ಸ್ವಾತಂತ್ರ್ಯ ಹೋರಾಟಕ್ಕೆ ತಮ್ಮದೇ ಆದ ರೀತಿಯಲ್ಲಿ ಕೊಡುಗೆಯನ್ನು ನೀಡುವ ಮೂಲಕ ಜನಮಾನಸದಲ್ಲಿ ನೆಲೆನಿಂತಿದ್ದಾರೆ. ಪತಿ ಗಣಪತಿ ಭಟ್ಟರು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು ಸೆರೆಮನೆ ವಾಸ ಅನುಭವಿಸಿದ ಸಂದರ್ಭದಲ್ಲಿ ಅಮ್ಮಕ್ಕ ಗಣಪತಿ ಭಟ್ಟರು ಕೈಗೊಂಡ ಕಾರ್ಯ ಅನುಪಮವಾದುದು. ತೆರೆಮರೆಯಲ್ಲಿ ಅಮ್ಮಕ್ಕ ಗಣಪತಿ ಭಟ್ಟರು ಕೈಗೊಂಡ ಕಾರ್ಯ ಅದೆಷ್ಟೋ ಸ್ವಾತಂತ್ರ್ಯ ಹೋರಾಟಗಾರರನ್ನು ಕಾಪಾಡಿದೆ.
ಅಮ್ಮಕ್ಕ ಗಣಪತಿ ಭಟ್ಟರು ಪತಿ ಗಣಪತಿ ಭಟ್ಟರನ್ನು ಮದುವೆಯಾಗುವ ವರೆಗೂ ಆಗೊಮ್ಮೆ ಈಗೊಮ್ಮೆ ಸ್ವಾತಂತ್ರ್ಯ ಹೋರಾಟದ ಬಗ್ಗೆ ಮಾತುಗಳನ್ನು ಕೇಳುತ್ತಿದ್ದರಷ್ಟೇ. ಬೆಳಗಾವಿಯಲ್ಲಿ ನಡೆದಿದ್ದ ಕಾಂಗ್ರೆಸ್ ಅಧಿವೇಶನ, ಉತ್ತರ ಕನ್ನಡ ಜಿಲ್ಲೆಯಲ್ಲಿ ಮಹಾತ್ಮಾ ಗಾಂಧೀಜಿಯವರ ಪ್ರವಾಸ ಸೇರಿದಂತೆ ಸ್ವಾತಂತ್ರ್ಯ ಹೋರಾಟದ ಬಗ್ಗೆ ಆಗೊಮ್ಮೆ ಈಗೊಮ್ಮೆ ಮಾಹಿತಿಗಳನ್ನು ಕೇಳುತ್ತಿದ್ದರು. ನಂತರದಲ್ಲಿ ಬರಬಳ್ಳಿಯ ಗುಡ್ಡೆಮನೆ ಗಣಪತಿ ಭಟ್ಟರ ಜೊತೆ ಅಮ್ಮಕ್ಕ ಭಟ್ಟರ ವಿವಾಹ ನಡೆಯಿತು. ಪತಿ ಗಣಪತಿ ಭಟ್ ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಸ್ವಾತಂತ್ರ್ಯ ಹೋರಾಟಗಾರ ಪತಿಯ ಜೊತೆಗೆ ಆಗೀಗ ಅನೇಕ ಸ್ವಾತಂತ್ರ್ಯ ಹೋರಾಟಗಾರರು ಗುಡ್ಡೇಮನೆಗೆ ಬರುತ್ತಿದ್ದರು. ಹೀಗೆ ಬರುವವರಲ್ಲಿ ಅನೇಕ ಕ್ರಾಂತಿಕಾರಿಗಳೂ ಇದ್ದರು. ಅಂತವರಿಗೆಲ್ಲ ಮನೆಯಲ್ಲಿ ಆಶ್ರಯ ನೀಡಿ ಅಡುಗೆ ಮಾಡಿ ಹಾಕುವ ಕಾರ್ಯ ಅಮ್ಮಕ್ಕ ಗಣಪತಿ ಭಟ್ಟರದ್ದಾಗಿತ್ತು.
1940ರ ದಶಕದಲ್ಲಿ ಅದೆಷ್ಟೋ ಸ್ವಾತಂತ್ರ್ಯ ಹೋರಾಟಗಾರರು ಮನೆಗೆ ಬರುತ್ತಿದ್ದರು. ಪತಿ ಗಣಪತಿ ಭಟ್ಟರ ನೇತೃತ್ವದಲ್ಲಿ ಸಾಕಷ್ಟು ಸಭೆಯೂ ನಡೆಯುತ್ತಿತ್ತು. ಆ ಸಂದರ್ಭದಲ್ಲಿ ಅಮ್ಮಕ್ಕ ಗಣಪತಿ ಬಟ್ಟರು ಪಾಲ್ಗೊಳ್ಳುತ್ತಿದ್ದರು. ಸ್ವಾತಂತ್ರ್ಯ ಹೋರಾಟದ ನಿಮಿತ್ತ ಗಣಪತಿ ಭಟ್ಟರು ಮನೆಯಿಂದ ಹೊರ ಹೋಗಿದ್ದ ಸಂದರ್ಭದಲ್ಲಿಯೂ ಕೂಡ ಸ್ವಾತಂತ್ರ್ಯ ಹೋರಾಟಗಾರರನ್ನು ಮನೆಯಲ್ಲಿ ಇರಲು ಅವಕಾಶ ಕಲ್ಪಿಸಿ, ಅವರಿಗೆ ಅಡುಗೆ ಮಾಡಿ ಹಾಕುವ ಕಾರ್ಯವನ್ನು ಕೈಗೊಂಡಿದ್ದರು. ಅಷ್ಟೇ ಅಲ್ಲದೇ ಸ್ವಾತಂತ್ರ್ಯ ಹೋರಾಟಗಾರರನ್ನು ಹುಡುಕಿ ಬರುತ್ತಿದ್ದ ಪೊಲೀಸರ ಕಣ್ಣನ್ನು ತಪ್ಪಿಸಿ ಅವರನ್ನು ಬೇರೆಡೆಗೆ ಕಳಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಹೀಗೆ ತಾವು ಅದೆಷ್ಟೋ ನೂರು ಸ್ವಾತಂತ್ರ್ಯ ಹೋರಾಟಗಾರರಿಗೆ ಊಟ ಹಾಕಿದ್ದೇನೆ ಎಂದು ಅಮ್ಮಕ್ಕ ಹೇಳುತ್ತಾರೆ.
ನಾನು ಅಕ್ಷರ ಕಲಿತಿಲ್ಲ. ಮದುವೆಯಾಗುವ ವರೆಗೂ ಸ್ವಾತಂತ್ರ್ಯ ಹೋರಾಟದ ಬಗ್ಗೆ ನನಗೆ ಹೆಚ್ಚು ತಿಳಿದಿರಲಿಲ್ಲ. ಆಗೊಮ್ಮೆ ಈಗೊಮ್ಮೆ ಹೋರಾಟದ ಮಾಹಿತಿಗಳು ಕಿವಿಗೆ ಬೀಳುತ್ತಿದ್ದವು. ನಾನು ಮದುವೆಯಾಗಿ ಬಂದ ಮೇಲೆ ಮನೆಯಲ್ಲಿ ಅದೆಷ್ಟೋ ಸಾರಿ ಸ್ವಾತಂತ್ರ್ಯ ಹೋರಾಟದ ಕರಪತ್ರಗಳನ್ನು ಅಡಗಿಸಿ ಇಟ್ಟಿದ್ದೇನೆ. ತಲೆ ತಪ್ಪಿಸಿಕೊಂಡು ಬರುತ್ತಿದ್ದ ಚಳುವಳಿಗಾರರನ್ನು ಉಳಿಸಿ, ಊಟ ಹಾಕಿದ್ದೇನೆ. ಇವರನ್ನು ಹುಡುಕಿ ಬರುವ ಪೊಲೀಸರ ಬಳಿ ಏನೇನೋ ಸಬೂಬುಗಳನ್ನು ಹೇಳಿ ಸಾಗಹಾಕಿದ್ದೇನೆ. ಅದೆಷ್ಟೋ ಜನರು ಸ್ವಾತಂತ್ರ್ಯ ಹೋರಾಟದಲ್ಲಿ ಸೆರೆಮನೆ ವಾಸ ಮಾಡಿದ್ದಾರೆ. ನಾನು ನನಗೆ ತಿಳಿದ ರೀತಿಯಲ್ಲಿ ಕಾರ್ಯ ಮಾಡಿದ್ದೇನೆ. ನಿಜಕ್ಕೂ ಇದೊಂದು ಅಲ್ಪ ಮಟ್ಟದ ದೇಶಸೇವೆ. ಸ್ವಾತಂತ್ರ್ಯ ಹೋರಾಟದಲ್ಲಿ ಎಲ್ಲರಂತೆ ನಾನು ಸೆರೆಮನೆ ವಾಸ ಮಾಡಿಲ್ಲ ಎನ್ನುವ ಬೆಜಾರೂ ನನಗಿದೆ ಎಂದು ಅಮ್ಮಕ್ಕ ಗಣಪತಿ ಭಟ್ ಹೇಳುತ್ತಾರೆ.
ಈಗ ಅಮ್ಮಕ್ಕ ಗಣಪತಿ ಭಟ್ಟರಿಗೆ 95 ವರ್ಷಗಳಾಗಿದೆ. ಕಿವಿ ಕೇಳುವುದಿಲ್ಲ. ಕಣ್ಣು ಅಸ್ಪಷ್ಟವಾಗಿ ಕಾಣಿಸುತ್ತದೆ. ಸಕ್ರಿಯರಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಕೊಳ್ಳುವವರಿಗೆ ಸಹಾಯ ಮಾಡಿದ ಅಮ್ಮಕ್ಕರಂತಹ ಅದೆಷ್ಟೋ ಸಾಧ್ವಿಯರು ಇಂದಿಗೂ ಎಲ್ಲರ ಮನಸ್ಸಿನಲ್ಲಿ ಅಚ್ಚಳಿಯದಂತೆ ಉಳಿಯುತ್ತಾರೆ. ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಇಂತಹ ಮಹಿಳಾ ಸಾಧಕಿಯರ ಸಾಧನೆ ಎಲ್ಲರಿಗೂ ಪ್ರೇರಣಾದಾಯವಾಗುತ್ತದೆ. ಆಧುನಿಕ ತಂತ್ರಜ್ಞಾನ ಬೆಳೆದು ನಿಂತಿರುವ ಇಂದಿನ ದಿನಮಾನದಲ್ಲಿ, ಏನೂ ಇಲ್ಲದ ಕಾಲದಲ್ಲಿ ಸ್ವಾತಂತ್ರ್ಯ ಹೋರಾಟಕ್ಕಾಗಿ ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡಿದ ಅಮ್ಮಕ್ಕ ಗಣಪತಿ ಭಟ್ ಸ್ಪೂತರ್ಿಯ ಸೆಲೆಯಾಗಿ ನಿಲ್ಲುತ್ತಾರೆ.


ದಾಸ್ಯ (ಕಥೆ)

             `ನಾನು ಏನ್ ಮಾಡಿದ್ದೆ ಅಂತ ನನ್ನ ಮಾತನಾಡಿಸಲಿಕ್ಕೆ ಬಂದ್ಯೋ.. ಹೋಗ್ ಹೋಗು.. ಬೇರೆ ಏನಾದರೂ ಕೆಲಸ ನೋಡ್ಕೋ ಹೋಗ್..' ಎಂದು ದೇವಮ್ಮ ನನ್ನನ್ನು ಗದರಿದಾಗ ನಾನು ಒಮ್ಮೆ ಪೆಚ್ಚಾಗಿದ್ದೆ. ಹಿರಿಯ ಸ್ವಾತಂತ್ರ್ಯ ಹೋರಾಟಗಾರ್ತಿಯ ಬಳಿ ನಾನು ಹೋಗಿ ಬಂದ ಕಾರಣವನ್ನು ತಿಳಿಸಿದಾಗ ಒಮ್ಮೆಲೆ ಸಾರಾ ಸಗಟಾಗಿ ನನ್ನ ಕೋರಿಕೆಯನ್ನು ತಿರಸ್ಕರಿಸಿದ್ದರು ದೇವಮ್ಮ. ಆದರೂ ಮನಸ್ಸಿನಲ್ಲಿ ಏನೋ ಒಂದು ಆಶಾವಾದ. ದೇವಮ್ಮನವರು ಗದರಿದ್ದರೂ ನಾನು ಅಲ್ಲಾಡದೇ ಕುಳಿತಿದ್ದೆ.
             95-96 ವರ್ಷದ ದೇವಮ್ಮನವರನ್ನು ನಾನು ಮಾತನಾಡಿಸಲು ತೆರಳಿದ್ದರ ಹಿಂದೆ ಮೂರ್ನಾಲ್ಕು ಕಾರಣಗಳಿದ್ದವು. ನಮ್ಮ ಸುತ್ತಮುತ್ತಲ ಪ್ರದೇಶದಲ್ಲಿಯೇ ದೇವಮ್ಮನವರು ಬದುಕಿರುವ ಹಿರಿಯ ವ್ಯಕ್ತಿ ಎಂಬುದು ಒಂದು ಕಾರಣವಾಗಿದ್ದರೆ, ಸ್ವಾತಂತ್ರ್ಯ ಹೋರಾಟದಲ್ಲಿ ದೇವಮ್ಮನವರ ಕುರಿತು ನಾನು ಯಾವುದೋ ಒಂದು ಪುಸ್ತಕದಲ್ಲಿ ಓದಿದ್ದೆ. ಅದರ ಅನ್ವಯ ಸ್ವಾತಂತ್ರ್ಯ ಹೋರಾಟದಲ್ಲಿ ದೇವಮ್ಮನವರು ಪಾಲ್ಗೊಂಡ ಬಗ್ಗೆ ವಿವರಗಳನ್ನು ಪಡೆದು ಅದನ್ನು ಸಾಕ್ಷ್ಯಚಿತ್ರ ಮಾಡಬೇಕೆಂದು ಹೊರಟಿದ್ದೆ.
              ದೇವಮ್ಮನವರನ್ನು ಭೇಟಿ ಮಾಡುವ ಮೊದಲು ನನ್ನಲ್ಲಿ ಅನೇಕ ಕಲ್ಪನೆಗಳಿದ್ದವು. ಸ್ವಾತಂತ್ರ್ಯ ಹೋರಾಟ ಮಾಡಿದ್ದ ಹಲವರನ್ನು ನಾನು ಕಂಡಿದ್ದೆ. ಅವರೆಲ್ಲರೂ ಪುರುಷರಾಗಿದ್ದರು. ಬಿಳಿಯ ಧೋತಿ. ಅಷ್ಟೇ ಶುಭ್ರ ಜುಬ್ಬಾ, ತಲೆಯ ಮೇಲೆ ಬಿಳಿಯ ಟೊಪ್ಪಿಗೆ ಹಾಕಿಕೊಂಡು ಠಾಕು, ಠೀಕಾಗಿ ನಡೆದು ಬರುತ್ತಿದ್ದ ಅದೆಷ್ಟೋ ಹಿರಿಯ ಸ್ವಾತಂತ್ರ್ಯ ಹೋರಾಟಗಾರರನ್ನು ನಾನು ನೋಡಿ ಮನದಣಿಯೆ ವಂದಿಸಿದ್ದೆ. ಕಣ್ಣು ಮಂಜಾಗಿದ್ದರೂ, ಕೈಕಾಲುಗಳಲ್ಲಿ ತ್ರಾಣ ಇಲ್ಲದೇ ಇದ್ದರೂ ಯಾರ ಸಹಾಯವೂ ಇಲ್ಲದೇ ಸ್ವಾಭಿಮಾನದಿಂದ ನಡೆದು ಬರುತ್ತಿದ್ದ ಹಿರಿಯ ಜೀವಗಳನ್ನು ಕಣ್ತುಂಬಿಕೊಂಡು ಅವರ ಪಾದಕ್ಕೆರಗಿದ್ದೆ. ಆದರೆ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿಯರು ಹೇಗಿರಬಹುದು ಎನ್ನುವುದು ನನಗೆ ಖಂಡಿತವಾಗಿಯೂ ತಿಳಿದಿರಲಿಲ್ಲ. ಅಲ್ಲೊಬ್ಬರು ಇದ್ದಾರಂತೆ, ಇಲ್ಲೊಬ್ಬರು ಇದ್ದಾರಂತೆ, ಯಾರಿಗೋ ಸ್ವಾತಂತ್ರ್ಯ ಹೋರಾಟಗಾರರ ಪೆನ್ಶನ್ ಬರುತ್ತದಂತೆ ಎಂಬ ಮಾಹಿತಿಗಳನ್ನಷ್ಟೇ ಕೇಳಿ ತಿಳಿದಿದ್ದೆ. ದೇವಮ್ಮನವರ ಬಗ್ಗೆ ತಿಳಿದಾಗ ನಾನು ಒಮ್ಮೆಲೆ ಬಾನೆತ್ತರಕ್ಕೆ ನೆಗೆದು ಖುಷಿಯಿಂದ ಅವರನ್ನು ಮಾತನಾಡಿಸುವುದೇ ಸರಿಯೆಂದುಕೊಂಡು ತಯಾರಾಗಿದ್ದೆ.
             ದೇವಮ್ಮ ದೇವತೆಯಂತೆ ಕಾಣಬಹುದೇ? ಖಾದಿ ಸೀರೆಯನ್ನು ಉಟ್ಟು ಗತ್ತಿನಿಂದ ಬರಬಹುದೇ? ಎಂಬೆಲ್ಲ ಭಾವನೆಗಳು ನನ್ನ ಮನದಲ್ಲಿ ಕುಣಿದಾಡುತ್ತಿದ್ದವು. ಇದೇ ಆಲೋಚನೆಯಲ್ಲಿಯೇ ದೇವಮ್ಮನವರ ಮನೆಯ ಬಾಗಿಲನ್ನು ತೆಗೆದಾಗ ದೇವಮ್ಮನ ಮೊಮ್ಮಕ್ಕಳ್ಯಾರೋ ಇರಬೇಕು ಬಾಗಿಲು ತೆಗೆದಿದ್ದರು. ನಾನು ಅವರ ಬಳಿ ಬಂದ ವಿಷಯವನ್ನು ಹೇಳಿದಾಗ ಅವರು ನನ್ನ ಬಳಿ `ಒಂದು ನಿಮಿಷ, ನಿಂತ್ಕೊಂಡಿರಿ..' ಎಂದು ಒಳಹೋಗಿದ್ದರು.
           ಅವರು ಒಳಹೋದ ಅರ್ಧ ಗಳಿಗೆಯಲ್ಲಿ ಆ ಮನೆಯ ಕತ್ತಲೆಯ ಆಳದಲ್ಲಿ  ದೊಡ್ಡ ಧ್ವನಿಯಲ್ಲಿ ನನ್ನ ಬಳಿ ಮಾತನಾಡಿದ ವ್ಯಕ್ತಿ `ಯಾರೋ ಬಂದಿದ್ದಾರೆ, ನಿಮ್ಮನ್ನು ಮಾತನಾಡಿಸಬೇಕಂತೆ. ಅದೇನೋ ಸಾಕ್ಷ್ಯಚಿತ್ರ ಮಾಡ್ತಾರಂತೆ..' ಎಂದು ಕೂಗುತ್ತಿದ್ದುದು ಕಿವಿಗೆ ಬಿದ್ದಿತ್ತು. ಅದಕ್ಕೆ ಪ್ರತಿಯಾಗಿ ಕ್ಷೀಣ ಧ್ವನಿಯೊಂದು ಏನೋ ಮಾತನಾಡಿದ್ದು ಅಸ್ಪಷ್ಟವಾಗಿ ನನ್ನ ಕಿವಿಗೆ ಬಿದ್ದಿತ್ತು. ಏನೋ ಕಸಿವಿಸಿ ನನ್ನೊಳಗೆ ಆ ಕ್ಷಣದಲ್ಲಿ ಮೂಡಿದ್ದು ಸುಳ್ಳಲ್ಲ. ನನ್ನನ್ನು ನಿಲ್ಲಿಸಿ ಹೋದ ವ್ಯಕ್ತಿ ಮರಳಿ ಬಂದು `ಒಳಗೆ ಬನ್ನಿ. ಕುಳಿತುಕೊಳ್ಳಿ. '  ಎಂದರು.
        ದೇವಮ್ಮ ಅಜ್ಜಿಯ ಆಹ್ವಾನಕ್ಕಾಗಿ ಕಾಯುತ್ತ ಕುಳಿತಿದ್ದ ನಾನು ಮನೆಯನ್ನೆಲ್ಲ ಗಮನಿಸತೊಡಗಿದ್ದೆ. ದೊಡ್ಡ ಹಳೆಯ ಕಾಲದ ಮನೆ. ಆರು ಅಡಿ ಅಗಲದ ಮಣ್ಣಿನ ಗೋಡೆ. ದಪ್ಪ ದಪ್ಪನೆಯ ತೇಗದ ಮರದ ಕಂಬಗಳು. ಯಾವ ಶತಮಾನದಲ್ಲಿ ಕಟ್ಟಿದ್ದರೋ ಏನೋ. ಸಾಕಷ್ಟು ಕೋಣೆಗಳು ಆ ಮನೆಗಿದ್ದರೂ ಮನೆಯ ಮಧ್ಯದಲ್ಲಿ ಒಂದು ಆಟದ ಅಂಗಳ. ಅಲ್ಲೊಂದಷ್ಟು ಹೂಗಿಡಗಳನ್ನು ಬೆಳೆಸಲಾಗಿತ್ತು. ಗೋಡೆಯ ಮೇಲೆಲ್ಲ ಹಳೆಯ ಕಾಲದ ರೇಖಾಚಿತ್ರಗಳು. ಯಾರ್ಯಾರೋ ಹಿರಿಯರನ್ನು ಆ ಚಿತ್ರಗಳು ಬೆಡಗಿನಿಂದ ಮೂಡಿಸಿದ್ದವು. `ಒಳಗೆ ಬರಬೇಕಂತೆ..' ಅಜ್ಜಿಯಿಂದ ತಾರನ್ನು ತಂದ ವ್ಯಕ್ತಿ ನನ್ನ ಬಳಿ ಹೇಳಿದ್ದರು. ಅವರ ಹಿಂದೆ ನಾನು ಹೆಜ್ಜೆ ಹಾಕಿದೆ.
ಕತ್ತಲೆಯ ಆಳದಲ್ಲಿ ಅಜ್ಜಿ ದೇವಮ್ಮ ಕುಳಿತಿದ್ದರು. ಬೆಳಕು ಬರದಂತಹ ಕೋಣೆ ಅದಾಗಿತ್ತಾದರೂ ನಾವು ಬಂದ ಬಾಗಿಲಿನಿಂದ ಮಸುಕಾದ ಬೆಳಕು ಕೋಣೆಯೊಳಕ್ಕೆ ಇಣುಕುತ್ತಿತ್ತು. ಅಲ್ಲೊಂದು ಹಳೆಯ ಮಂಚದ ಮೇಲೆ ಕುಳಿತಿದ್ದರು ದೇವಮ್ಮ. ನಾನು ಹೋದ ಕೂಡಲೇ `ನೀ ಯಾರಾ?' ಎಂದರು. ನಾನು ಏನೋ ಹೇಳಲು ಮುಂದಾದೆ. ಆದರೆ ನನ್ನ ಜೊತೆ ಬಂದಿದ್ದ ವ್ಯಕ್ತಿ `ಅವರಿಗೆ ಕಿವಿ ಕೇಳಿಸುವುದಿಲ್ಲ. ಅವರ ಬಳಿ ಹೋಗಿ ದೊಡ್ಡದಾಗಿ ಹೇಳಿ..' ಎಂದರು. ನಾನು ದೇವಮ್ಮನವರ ಹತ್ತಿರ ಹೋಗಿ `ನಾನು ವಿನಯ..' ಎಂದೆ. `ನೀನು ವಿನಯನಾ? ಯಾರ ಮನೆ ನಿನಗೆ..' ಮತ್ತೆ ಕೇಳಿದ್ದರು ದೇವಮ್ಮ. `ದಂಟಕಲ್ ಸುಬ್ಬಣ್ಣನ ಮಗ ನಾನು..' ಎಂದೆ. `ಸುಬ್ಬಣ್ಣ ಅಂದರೆ ಯಾರಾ? ಇಗ್ಗಣ್ಣನ ಮಗನಾ?' ಅಜ್ಜಿ ಮತ್ತೆ ಕೇಳಿದ್ದರು. `ಹು.. ಹೌದು..' ಎಂದೆ. `ಇಗ್ಗಜ್ಜ.. ಬಹಳ ಒಳ್ಳೆಯ ಮನುಷ್ಯ.. ಇಗ್ಗಜ್ಜನ ಹಿರಿ ಮೊಮ್ಮಗ ನೀನು ಹೇಳಾತು.. ಅಲ್ದನಾ..?' ಎಂದರು ದೇವಮ್ಮ. ನಮ್ಮ ನಡುವೆ ಆಪ್ತತೆ ಬೆಳೆಯುತ್ತಿತ್ತು. ನಾನು ಬಂದ ಕಾರ್ಯವನ್ನು ಸಾಂಗವಾಗಿ ಮಾಡಲು ಇದು ಅನುಕೂಲ ಮಾಡಿಕೊಡುತ್ತಿತ್ತು. ಹೀಗಾಗಿ ಅಜ್ಜಿಯ ಬಳಿ ನನ್ನ ಮನೆಯ, ಅಜ್ಜನ ವಿಷಯಗಳನ್ನೆಲ್ಲ ಮಾತನಾಡಿದೆ.
`ನಿಂಗ್ ಎಂತಾ ಬೇಕು? ಅದೆಂತದ್ದೋ ಮಾಡ್ತ್ಯಡಾ..?' ಎಂದರು ದೇವಮ್ಮ. `ಏನಿಲ್ಲ ಅಜ್ಜಿ ನೀವು ಹಿರಿಯ ಸ್ವಾತಂತ್ರ್ಯ ಹೋರಾಟಗಾರರು ಅಂತ ಕೇಳದಿ. ಅದ್ಕೆ ನಿಮ್ಮ ಸ್ವಾತಂತ್ರ್ಯ ಹೋರಾಟದ ಕಥೆಗಳನ್ನ, ಸ್ವಾತಂತ್ರ್ಯ ಹೋರಾಟಗಳ ಕುರಿತಾದ ವಿವರಗಳನ್ನು ಸಂಗ್ರಹಿಸೋಣ ಅಂತ ಬಂಜಿ. ಅದನ್ನ ವೀಡಿಯೋ ಮಾಡಿ ಇಟ್ಕಳವು ಅಂತ ಬಂಜಿ..' ಎಂದೆ.
`ಅದರಿಂದ ಎಂತಾ ಆಗ್ತಾ.. ಸ್ವಾತಂತ್ರ್ಯ ಬಂತು.. ಈಗಿನವ್ಕೆ ಅದರ ಬೆಲೆ ಎಲ್ಲಾ ಗೊತ್ತಿಲ್ಯಲಾ ತಮಾ.. ನಾನು ಆ ಕಥೆನೆಲ್ಲಾ ಹೇಳಿದ್ರೆ ಯಾರು ಕೇಳ್ತ್ವಾ? ನಿಂಗ್ ಬೇರೆ ಹ್ವಾರ್ಯ ಇಲ್ಲೆ ಕಾಣಿಸ್ತು ನೋಡು. ಬೇರೆ ಎಂತಾದ್ರೂ ಮಾಡು..' ದೇವಮ್ಮನ ದನಿಯಲ್ಲಿ ಅದೇನೋ ಬೇಸರವಿತ್ತು. ನಾನು ಪಟ್ಟು ಬಿಡದೇ ಮತ್ತೆ ಮತ್ತೆ ಕೇಳಿದೆ. ಅಜ್ಜಿಯೂ ಮೊಂಡು ಹಠ ಮಾಡುತ್ತಿದ್ದರು. ಹೇಗಾದರೂ ಆಗಲಿ, ಅಜ್ಜಿಯ ಬಾಯಿಂದ ಆಕೆಯ ಸ್ವಾತಂತ್ರ್ಯ ಹೋರಾಟದ ಕಥೆಗಳನ್ನು ಕೇಳಿ, ಅದನ್ನು ದಾಖಲಿಸಿಕೊಂಡು ಹೋಗುವುದೇ ಸೈ ಎಂದು ಕುಳಿತಿದ್ದೆ.
ನಾನು ಬಿಡುವವನಲ್ಲ ಅನ್ನಿಸಿರಬೇಕು ಅಜ್ಜಿಗೆ. ಕೊನೆಗೊಮ್ಮೆ ಅಜ್ಜಿಯೇ ಸೋತರು. `ಎಂತಾ ಹೇಳವಾ ನಿಂಗೆ.. ನಂಗೆ ಎಲ್ಲಾ ಮರ್ತೋಗ್ತಾ ಇದ್ದು. ಸರಿ ನೆನಪಿಲ್ಲೆ..' ಎನ್ನುತ್ತಿದ್ದಂತೆಯೇ ನಾನು `ನೆನಪಿದ್ದಷ್ಟನ್ನ ಹೇಳಿ..' ಎಂದೆ. `ಆತೋ.. ಅಂತೂ ನೀ ಬಿಡಂವ ಅಲ್ಲ ಹೇಳಾತು..' ಎಂದು ಬೊಚ್ಚು ಬಾಯಿಯಲ್ಲಿ ನಕ್ಕರು.
`ತಮಾ.. ನಂಗೀಗ 95 ವರ್ಷದ ಮೇಲಾತು. ನೋಡು 80 ವರ್ಷದ ಹಿಂದೆ ಎಲ್ಲ ಶುರು ಆತು ಅಂದ್ಕ. ಆಗ ಭಾರತದಲ್ಲಿ ಎಲ್ಲ ಕಡೆ ಫಿರಂಗಿಯವ್ ಇದ್ದಿದ್ದ. ಬಿಳಿ ಬಿಳಿ ಮುಷಡಿಯವ್ವು. ನಾನು ಸಣ್ಣಕ್ಕಿದ್ದಾಗ ಯನ್ ಅಪ್ಪಯ್ಯ ಈ ಬ್ರಿಟೀಷರ ಕಥೆ ಹೇಳತಿದ್ದಾ. ಆವಾಗ ಆನು ಯನ್ ತಮ್ಮ ಬಿಟ್ಟ ಕಣ್ ಬಿಟ್ಟಂಗೆ, ಬಾಯಿ ಕಳಕಂಡು ಕೇಳತಿದ್ಯಾ. ಯಾರೋ ಗೋಖಲೆ ಅಂತ ಇದ್ರಡಾ, ಬಾಲಗಂಗಾಧನಾಥ ತಿಲಕ್ ಅಂತ ಇದ್ರಡಾ.. ಸ್ವರಾಜ್ಯ ಹೋರಾಟ ಹೇಳಿ ಶುರು ಹಚ್ಚಕಂಜ್ರಡ, ಅದ್ಯಾರೋ ಗಾಂಧೀಜಿ ಹೇಳಿ ಇದ್ರಡ ಅಂತೆಲ್ಲ ಹೇಳತಿದ್ದ.. ಅಪ್ಪಯ್ಯ ಹೇಳತಿದ್ದ ಕಥೆಗಳೇ ಯನ್ನ ಸ್ವಾತಂತ್ರ್ಯ ಹೋರಾಟಕ್ಕೆ ಪ್ರೇರಣೆ..' ಎಂದು ದೇವಮ್ಮ ಶುರು ಮಾಡಿದ್ದರು. ನಾನು ಸದ್ದಿಲ್ಲದಂತೆ ನನ್ನ ನೈಟ್ ವಿಷನ್ ಕ್ಯಾಮರಾ ತೆಗೆದು ಅಜ್ಜಿಯ ವಿವರಗಳನ್ನೆಲ್ಲ ದಾಖಲಿಸಲು ಆರಂಭಿಸಿದ್ದೆ.
`ಅಪ್ಪಯ್ಯ ಹೇಳುತ್ತಿದ್ದ ಕಥೆಗಳನ್ನೆಲ್ಲ ಕೇಳಿ ಕೇಳಿ ಯಂಗೂ, ತಮ್ಮಂಗೂ ಎಂತಾದ್ರೂ ಮಾಡವು ಅನ್ನಿಸ್ತಿತ್ತು. ಆದರೆ ಆವಾಗೆಲ್ಲ ಯಂಗಕ್ಕಿಗೆ ಸಣ್ಣವಯಸ್ಸು ನೋಡು. ಯಂಗಂತೂ 10-15 ವರ್ಷ. ತಮ್ಮ ಯನ್ನಕ್ಕಿಂತ ಇನ್ನೂ ಎರಡು ವರ್ಷ ಸಣ್ಣವ. ಬಾಯಲ್ಲಿ ನಂಗವ್ ಹಾಂಗ್ ಮಾಡಿ ಬಿಡ್ತ್ಯ ಹಿಂಗ್ ಮಾಡಿ ಬಿಡ್ತ್ಯ ಹೇಳಿ ಹೇಳಕತ್ತ ಇರ್ತಿದ್ಯ. ಆದರೆ ಎಂತಾ ಮಾಡವು ಅಂತ ಇಬ್ರಿಗೂ ಗೊತ್ತಿತ್ತಿಲ್ಲೆ. ಮನೆಯಲ್ಲಿ ಆವಾಗ ನಾನೇ ದೊಡ್ಡವ. ಹಿಂಗಾಗಿ ಆನು ಎಂತಾ ಹೇಳತ್ನೋ ಹಂಗೆ ತಮ್ಮ ಮಾಡ್ತಿದ್ದ. ಸ್ವಾತಂತ್ರ್ಯ ಹೋರಾಟದಲ್ಲಿ ನಂಗವ್ವೂ ಪಾಲ್ಗೊಳ್ಳವು ಹೇಳಿ ಇತ್ತು. ಆದರೆ ಹೆಂಗೆ ಅಂತ ಗೊತ್ತಿಲ್ಲೆ. ಎಲ್ಲಾ ಹರತಾಳದ ಕಥೆಗಳನ್ನ ಹೇಳ್ತಾ ಇದ್ರೆ ನಂಗಕ್ಕಿಗೆ ಮೈಯೆಲ್ಲ ರೋಮಾಂಚನ. ಯಾರೋ ಬೋಲೋ ಭಾರತ ಮಾತಾ ಕಿ.. ಎಂದರೆ ಎಲ್ಲರಿಗಿಂತ ಮೊದಲು ಜೈ ಎನ್ನುವವರು ಯಂಗವ್ವೇ ಆಗಿದ್ಯ. ಹಿಂಗಿದ್ದಾಗ ಆವತ್ತೊಂದಿನ ನಮ್ಮೂರಲ್ಲಿ ಒಬ್ರು ಸ್ವಾತಂತ್ರ್ಯ ಹೋರಾಟಗಾರರು ಬಂದಿದ್ದರು. ಅವರ ಭಾಷಣ ಇತ್ತು. ನಮ್ಮೂರಲ್ಲಿ ಜನರನ್ನ ಹುರಿದುಂಬಿಸಿ ಸ್ವಾತಂತ್ರ್ಯ ಹೋರಾಟಕ್ಕೆ ಅಣಿಗೊಳಿಸೋದು ಅವರ ಉದ್ದೇಶ ಆಗಿತ್ತು. ಆ ಭಾಷಣ ಕಾರ್ಯಕ್ರಮಕ್ಕೆ ನಾನು-ತಮ್ಮ ಇಬ್ರೂ ಹೋಗವು ಅಂತ ಅಂದಕಂಡ್ಯ. ತಂಗೀ.. ನಿಂಗಕ್ಕಿಗೆ ಇದರ ಉಸಾಬರಿ ಬ್ಯಾಡ. ಯಂಗವ್ವು ದೊಡ್ಡವ್ ಇದ್ಯ. ಯಂಗವ್ ಇದ್ನೆಲ್ಲಾ ನೋಡಕತ್ಯ. ನಿಂಗವ್ ಮನೆಬದಿಗೆ ಇರಿ ಅಂತ ಅಪ್ಪಯ್ಯ ತಾಕೀತು ಮಾಡಿಬಿಟ್ಟಿದ್ದ.. ಅಪ್ಪಯ್ಯನ ಕಣ್ಣುತಪ್ಪಿಸಿ ಹೋಗವು ಅಂತ ನಾನು-ತಮ್ಮ ನಿರ್ಧಾರ ಮಾಡಿದ್ಯ..' ಎಂದು ಅಜ್ಜಿ ಮಾತು ನಿಲ್ಲಿಸಿದಳು. ಒಮ್ಮೆ ತಾವು ಕುಳಿತಿದ್ದ ಹಾಸಿಗೆಯಿಂದ ಏಳಲು ಯತ್ನಿಸಿದರು. ಸಾಧ್ಯವಾಗಲಿಲ್ಲ. `ತಮಾ.. ಇಲ್ ಬಾ.. ಸ್ವಲ್ಪ ಯನ್ನ ಕೈ ಹಿಡ್ಕ ನೋಡನ..' ಎಂದರು. ನಾನು `ಅಜ್ಜಿಯನ್ನು ಹಿಡಿದುಕೊಂಡೆ. ನಿಧಾನವಾಗಿ ಎದ್ದು ನಿಂತ ಅಜ್ಜಿ.. ಕೋಣೆಯಿಂದ ಹೊರಕ್ಕೆ ನನ್ನನ್ನು ಹಿಡಿದುಕೊಂಡೇ ಬಂದಳು. ಬಂದವಳೇ ಸೀದಾ ಹೊರಗಡೆ ಇದ್ದ ಬಾಂಕಿನ ಮೇಲೆ ಕುಳಿತು ಅಲ್ಲೇ ಇದ್ದ ಎಲೆಬಟ್ಟಲಿಗೆ ಕೈ ಹಾಕಿದಳು. ನಾನು ಮೌನವಾಗಿ ಅಜ್ಜಿಯನ್ನು ಗಮನಿಸುತ್ತ ನಿಂತೆ.
`ಅಪ್ಪಯ್ಯ ಭಾಷಣ ಕೇಳಲು ಹೋಗಿದ್ದ. ಆನು-ತಮ್ಮ ಹಿತ್ಲಾಕಡೆ ಬಾಗಿಲಿಂದ ಸೀದಾ ಭಾಷಣ ನಡೆತಾ ಇದ್ದಿದ್ ಜಾಗಕ್ಕೆ ಹೊಂಟ್ಯ. ನಂಗವ್ ಹೋಗೋ ಹೊತ್ತಿಗೆ ಅಲ್ಲಿ ಮಾತು ಶುರುವಾಗಿ ಹೋಗಿತ್ತು. ಎಂತಾ ಮಾತು ಹೇಳ್ತೆ.. ನಮ್ಮೂರ್ನವ್ ಅಲ್ದೆ ಅಚ್ಚಿಚ್ಚೆ ಊರ್ನವ್ವೂ ಬಂದಿದ್ದ. ದೇವಸ್ಥಾನ ಕಟ್ಟೆ ಮೇಲೆ ನಿಂತಕಂಡಿದ್ದ ವ್ಯಕ್ತಿ ಎಷ್ಟು ಗಟ್ಟಿಯಾಗಿ ಮಾತಾಡ್ತಾ ಇದ್ದಿದ್ರು ಅಂದ್ರೆ ಆಹಾ.. ಆನು-ತಮ್ಮ ಇಬ್ರೂ ಮೈಮರೆತುಬಿಟ್ಟಿದಿದ್ಯ.. ಹಿಂಗೇ ಮಾತು ನಡೀತಾ ಇತ್ತು. ಆವಾಗ್ಲೇ ನಂಗಳ ಹಿಂದಿಂದ ದೊಡ್ಡ ಶಬ್ದ ಕೇಳಚು..' ಎಂದ ಅಜ್ಜಿ ಚಿಕ್ಕದೊಂದು ನಿಟ್ಟುಸಿರು ಬಿಟ್ಟಳು. ನನಗೆ ಕುತೂಹಲ ಶುರುವಾಗಿತ್ತು.

(ಮುಂದುವರಿಯುತ್ತದೆ )

Tuesday, March 7, 2017

ಹುಲಿರಾಯ ಬಂದು ಹಾಯ್ ಅಂದಿದ್ದ...! ಜೊತೆಯಲ್ಲಿ ಮರಿಯನ್ನೂ ಕರೆತಂದಿದ್ದ!!


            ಇದು ನಿನ್ನೆ ಬೆಳಗನ ಜಾವ ನಡೆದ ಘಟನೆ. ಇನ್ನೂ ನನ್ನ ಮನಸ್ಸಿನಲ್ಲಿ ಹಸಿಯಾಗಿಯೇ ಇದೆ.
 ನಿನ್ನೆ ರಾತ್ರಿ ನಾನು ಮಲಗಲು ನಡುರಾತ್ರಿ 2 ಗಂಟೆ ಆಗಿತ್ತು. ಮಲಗಿ ಅರೆಘಳಿಗೆ ಆಗಿರಲಿಲ್ಲ. ಅಪ್ಪ `ತಮಾ ಹುಲಿ ಕೂಗ್ತಾ ಇದ್ದು ಕೇಳು..' ಎಂದ.. ನಾನು ಏಳಲಿಲ್ಲ. ನಮ್ಮೂರಿನಲ್ಲಿ ಆಗೊಮ್ಮೆ ಈಗೊಮ್ಮೆ ಹುಲಿ ಕೂಗುವುದು ಕೇಳಿದ್ದ ನನಗೆ ಇದು ಸಹಜ ಅನ್ನಿಸಿ ಕಡ್ಡ ಹರಿದು ಮಲಗಿದ್ದೆ. ಅಮ್ಮ ಎದ್ದಿದ್ದಳಿರಬೇಕು. `ಮೇಲಿನ ಮನೆ ಹತ್ರ ಕಾನಿನಲ್ಲಿ ಎಲ್ಲೋ ಹುಲಿ ಕೂಗ್ತಾ ಇದ್ದು..' ಎಂದು ಹೇಳಿದ ಅಪ್ಪ ಸುಮ್ಮನಾಗಿದ್ದ. ಅದಾಗಿ ಮತ್ತೊಂದು ಹತ್ತು ಹದಿನೈದು ನಿಮಿಷವಾಗಿರಲಿಲ್ಲ. ಮನೆಯ ಪಕ್ಕದಲ್ಲೇ ಒಮ್ಮೆ ಗಂವ್... ಎಂದಿತು ಸದ್ದು. ನಮ್ಮ ಮನೆಯೇ ಅದುರಿತೇನೋ ಎಂಬಂತೆ ಸದ್ದು. ಅಜಮಾಸು 10 5ರಿಂದ 10 ಸೆಕೆಂಡುಗಳ ಕಾಲ. ಮನೆಯೊಳಕ್ಕೆ ಮಲಗಿದ್ದ ನಾವು ಒಮ್ಮೆ ಬೆಚ್ಚಿ ಬಿದ್ದಿದ್ದೆವು. ಗಂವ್.. ಎನ್ನುವ ಸದ್ದು ಅಘನಾಶಿನಿ ಕಣಿವೆಯಲ್ಲಿ ಮತ್ತೆ ಮಾರ್ದನಿಸಿದಂತಾಯಿತು.
              `ತಮಾ... ಹುಲಿ ಬಂಜೋ... ಇಲ್ಲೇ ಎಲ್ಲೋ ಇದ್ದು..' ಅಮ್ಮ ಎದ್ದು ಲೈಟ್ ಹಾಕಿ ಕೂಗಿದಳು. ಅಪ್ಪ `ಯೇಹೇ.. ಅದು ಹುಲಿಯಲ್ಲ.. ಹಂದಿ..' ಎಂದ. `ಇಲ್ಯಪಾ ಇಲ್ಲೆ.. ಇದು ಹುಲಿನೇಯಾ..' ಎಂದ ಅಮ್ಮ ಸೀದಾ ಅಡುಗೆ ಮನೆಗೆ ಹೋಗಿ ಲೈಟ್ ಹಾಕಿದಳು. ಅಲ್ಲಿಂದ ಸೀದಾ ಅಪ್ಪನನ್ನು ಕರೆದು `ಬನ್ನಿ... ನಂಗೆ ಒಬ್ಬನೇ ಹೋಪಲೆ ಹೆದರ್ಕೆ ಆಗ್ತಾ ಇದ್ದು.. ಕೊಟ್ಟಿಗೆಗೆ ಹೋಗೋಣ..' ಎಂದಿದ್ದು ಕೇಳಿಸಿತು. ಅಪ್ಪ ಎದ್ದು ಬಂದ. ಅಮ್ಮ ಕೊಟ್ಟಿಗೆ ಲೈಟ್ ಹಾಕಿದಳು.
              ಕೊಟ್ಟಿಗೆಯಲ್ಲಿದ್ದ ಒಂದೆ ಒಂದು ಹಸು. ಪ್ರೀತಿಯ ಶ್ರೀದೇವಿ ಆಗಲೇ ಬೆಚ್ಚಿ ಬೆದರಿ ಮೈ ರೋಮಗಳನ್ನೆಲ್ಲ ನೆಟ್ಟಗೆ ಮಾಡಿಕೊಂಡು ಕಿವಿಚಟ್ಟೆಯನ್ನು ಸುತ್ತಲೂ ತಿರುಗಿಸುತ್ತ, ಮನೆಯ ಪಕ್ಕದಲ್ಲಿನ ಕಾಡನ್ನೂ, ಮನೆಯ ಕೆಳಭಾಗದಲ್ಲಿದ್ದ ರಸ್ತೆಯನ್ನೂ ನೋಡುತ್ತ ನಿಂತಿದ್ದಳು. ಹುಲಿ ಬಂದಿದ್ದು ಖರೆಯಾಗಿತ್ತು. ಆದರೆ ಎಲ್ಲಿ ಬಂದಿದೆ ಎಂಬುದು ಗೊತ್ತಾಗಲಿಲ್ಲ. ಮನೆಯ ಅಂಗಳದಲ್ಲೆಲ್ಲೋ ಇದೆ ಎನ್ನಿಸಿತ್ತು. ಅಪ್ಪ ಹುಡುಕಲು ಹೋಗುತ್ತಿದ್ದನೇನೋ, ಅಮ್ಮ ಬೇಡವೇ ಬೇಡ ಎಂದು ಗದರಿಸಿ ಸುಮ್ಮನಾಗಿಸಿದ್ದಳು.
               ಸೀದಾ ದೇವರ ಒಳಕ್ಕೆ ಬಂದಿದ್ದ ಅಮ್ಮ ಜಂವಟೆಯನ್ನು ತೆಗೆದುಕೊಂಡು ಬಡಿಯಲು ಹೊರಟಿದ್ದಳು. ನಾನು ಸುಮ್ಮನಿರು ಮಾರಾಯ್ತಿ.. ಜಂವಟೆ ಎಲ್ಲ ಬಡಿಯೋದು ಬೇಡ ಎಂದೆ. ಆಕೆ ಸುಮ್ಮನಾಗಿದ್ದಳು. ದೊಡ್ಡದಾಗಿ ಗದ್ದಲ ಮಾಡಿ ಹುಲಿಯನ್ನು ಓಡಿಸುವುದು ಅಮ್ಮನ ಉದ್ದೇಶವಾಗಿತ್ತು. ಕೊಟ್ಟಿಗೆಯಲ್ಲಿ ಒಂದೇ ಒಂದು ದನ ಇದೆ. ಅದಕ್ಕೆ ಏನಾದರೂ ತೊಂದರೆ ಮಾಡಿದರೆ ಎನ್ನುವ ಭಯ ಅಮ್ಮನನ್ನು ಕಾಡುತ್ತಿತ್ತು. ಅಲ್ಲಿಂದ ಶುರುವಾಯಿತು ನೋಡಿ ಅಮ್ಮನಿಗೆ ಸಂಕಟ. ಮೂನರ್ಾಲ್ಕು ಸಾರಿ ಮನೆಯನ್ನೆಲ್ಲ ಓಡಾಡಿದಳು. ಹುಲಿ ಬಂದಿದೆ ಎನ್ನುವುದು ಖಚಿತವಾಗಿತ್ತು. ಆದರೆ ಹುಲಿ ಹುಂಚುತ್ತ ಕುಳಿತರೆ ಕಷ್ಟ ಎನ್ನುವುದು ಅಮ್ಮನ ಭಾವನೆ.
ಅಮ್ಮನಿಗೆ ದನವನ್ನು ಉಳಿಸಿಕೊಳ್ಳಬೇಕು ಎನ್ನುವ ಆಲೋಚನೆ ತಲೆಯಲ್ಲಿ. ಸೀದಾ ಹೋದವಳೇ ಕೊಟ್ಟಿಗೆಯಲ್ಲಿ ಕಾಯಿಸಿಪ್ಪೆ, ಅದೂ ಇದೂ ತಂದು ದೊಡ್ಡಾಗಿ ಬೆಂಕಿಯನ್ನು ಹಾಕಿದಳು. ಅಪ್ಪನ ಬಳಿ ಇಲ್ಲೇ ಇರಿ ಎಂದು ಹೇಳಿ ಬೆಳಕು ಮೂಡುವವರೆಗೂ ಕೊಟ್ಟಿಗೆಯಲ್ಲಿ ಕಾಯುತ್ತಲೇ ಇದ್ದರು. ಅಷ್ಟರ ನಡುವೆ ತಿಂಡಿಯನ್ನು ಮಾಡುವ ಸಲುವಾಗಿ ಅಮ್ಮ ಮಿಕ್ಸರ್ ಸದ್ದು ಮಾಡಿದ್ದಳು. ಆಗ ಇನ್ನೊಮ್ಮೆ ಕೂಗಿತ್ತು ನೋಡಿ ಹುಲಿ. ಆದರೆ ಮೊದಲಿನಷ್ಟು ದೊಡ್ಡದಾಗಿರಲಿಲ್ಲ. ಸಣ್ಣ ಸ್ವರ ಇತ್ತು. ಹುಲಿ ಎಲ್ಲೋ ದೂರ ಹೋಯಿತು ಎಂದುಕೊಂಡೆವು. ಬೆಳಕಾದ ಮೇಲೆಯೇ ಮನೆಯವರಿಗೆಲ್ಲ ಸಮಾಧಾನ.
                 ದೂರದಲ್ಲೆಲ್ಲೋ ಮಂಗನ ಗ್ವಾಲೆ ದೊಡ್ಡದಾಗಿ ಕಿರುಚಾಡಿದ್ದು ಕೇಳಿಸಿತು. ನಾನು, ಅಮ್ಮ, ಅಪ್ಪ ಎಲ್ಲ ಕಿವಿಗೊಟ್ಟು ಆಲಿಸಿದೆವು. ನನ್ನ ಮನೆಯ ಜಮೀನಿನ ಪಕ್ಕದಲ್ಲಿಯೇ ಹಾದು ಹೋಗಿದ್ದ ಅಘನಾಶಿನಿ ನದಿಯ ಇನ್ನೊಂದು ದಡಡದಲ್ಲಿ ಮಂಗನ ಗ್ವಾಲೆ ದೊಡ್ಡದಾಗಿ ಕೂಗಿದ ಸದ್ದು ಕೇಳಿಸಿತ್ತು. `ಹುಲಿ ಹೊಳೆ ದಾಟಿ ಹೋಗಿದೆ..' ಎಂದ ಅಪ್ಪ. ಹುಲಿಯನ್ನು ಕಂಡರೆ ಮಂಗಗಳು ವಿಚಿತ್ರ ಸ್ವರದಲ್ಲಿ ಕೂಗುತ್ತವಂತೆ. ಹಾಗೆಯೇ ಕೂಗಿದ್ದವು ಮಂಗಗಳು. ಅರ್ಧಗಂಟೆಯ ನಂತರ ಮಂಗಗಳ ಕಮಾಂಡರ್ ಇರಬೇಕು. ಅದು ದೊಡ್ಡದಾಗಿ ಸಿಗ್ನಲ್ ಕೊಟ್ಟಿತು. ಅಷ್ಟಾದ ಮೇಲೆ ಮಂಗಗಳು ಕೂಗುವುದು ಬಂದಾಯಿತು. ಬಹುಶಃ ಹುಲಿ ಅವರ ಕಣ್ಣಂಚಿನಿಂದ ದೂರ ಹೋಗಿರಬೇಕು. ಎಲ್ಲರೂ ಸೇಫ್.. ಎಂದು ಮಂಗನ ಗ್ವಾಲೆಯ ನಾಯಕ ಹೇಳಿರಬೇಕು. ಎಲ್ಲ ಚುಪ್ ಚಾಪ್..
                ಆ ಸಮಯದಲ್ಲಿಯೇ ದೂರದಲ್ಲೆಲ್ಲೋ ನಾಯಿ ಬೊಗಳಿದ್ದೂ ಕೂಡ ನಮ್ಮ ಕಿವಿಗೆ ಬಿದ್ದಿತ್ತು. ಒಂದೋ ಎರಡೋ ನಾಯಿಗಳು ತಾರಕ ಸ್ವರದಲ್ಲಿ ಅರಚುತ್ತಿದ್ದವು. ಹುಲಿ ಅಲ್ಲಿಗೆ ಹೋಗಿರುವುದು ಪಕ್ಕಾ ಆಗಿದ್ದು. ಅಷ್ಟರಲ್ಲಿ ಬೆಳಕು ಮೂಡಿತ್ತಲ್ಲ..., ಅಮ್ಮ ಹುಲಿಯ ಜಾಡನ್ನು ಹುಡುಕಲು ಆರಂಬಿಸಿಬಿಟ್ಟಿದ್ದಳು. ಅಂಗಳದಲ್ಲೆಲ್ಲೋ ಹುಡುಕಿದ್ದವಳಿಗೆ ಹುಲಿಯ ಜಾಡು ಸಿಕ್ಕಿರಲಿಲ್ಲ. ಕೊನೆಗೆ ನನ್ನ ಮನೆಗೆ ಬರುವ ರಸ್ತೆಯಲ್ಲಿ ಹುಲಿಯ ಹೆಜ್ಜೆಗಳು ಕಾಣಿಸಿದವು. ಅಮ್ಮ ನನ್ನನ್ನು ಕರೆದು ತೋರಿಸಿದಳು. ನಾನು ಕೂಡಲೇ ಒಂದಷ್ಟು ಪೋಟೋಗಳನ್ನು ಕ್ಲಿಕ್ಕಿಸಿಕೊಂಡೆ. ಹುಲಿ ಯಾವ ದಿಕ್ಕಿನಲ್ಲಿ ಹೋಗಿರಬೇಕು ಎಂದುಕೊಂಡೆವು. `ತಮಾ.. ನೋಡ್ಕ್ಯಂಡು ಬಪ್ಪನ ನೆಡಿ..' ಎಂದಳು. ನಾನು ಹೊರಟೆ. ಮೊದ ಮೊದಲಿಗೆ ನಾಲ್ಕು ಹೆಜ್ಜೆಗಳು ಕಾಣಿಸಿದವು. ನಂತರ ಎಂಟು ಹೆಜ್ಜೆಗಳು ಕಣ್ಣಿಗೆ ಬಿದ್ದವು. ಎರಡು ಜೊತೆ ಹೆಜ್ಜೆಗಳು ಅಜಜಮಾಸು ನಾಲ್ಕಿಂಚಿಗಿಂತ ದೊಡ್ಡದು. ಮತ್ತೆರಡು ಜೊತೆ ಹೆಜ್ಜೆಗಳು 2-3 ಇಂಚು ದೊಡ್ಡದಾಗಿತ್ತು. ಎರಡು ಹುಲಿಗಳಿದ್ದು ಸಾಬೀತಾಗಿತ್ತು. ಒಂದು ದೊಡ್ಡದು. ಇನ್ನೊಂದು ಮರಿ. ದೊಡ್ಡ ಹೆಜ್ಜೆಯ ಗಾತ್ರ ನೋಡಿದರೆ ದೊಡ್ಡ ಹುಲಿ ಏನಿಲ್ಲ ಎಂದರೂ ಆರು ಅಡಿ ಇರಲೇ ಬೇಕು ಎಂದು ತಕರ್ಿಸಿದೆ. ಧೂಳಿನ ರಸ್ತೆಯಲ್ಲಿ ಆಳವಾದ ಅಚ್ಚಾಗಿತ್ತು. ಹೀಗಾಗಿ ತೂಕವೂ ಸಾಕಷ್ಟಿರಬೇಕು ಎಂದುಕೊಂಡೆ.


               ನನ್ನ ಮನೆಯಿಂದ 100 ಮೀಟರ್ ದೂರ ಹೋಗುವ ವೇಳೆಗೆ ಇದ್ದಕ್ಕಿದ್ದಂತೆ ಹಂದಿಯ ಹೆಜ್ಜೆಗಳು ಕಾಣಲು ಸಿಕ್ಕಿತು. ಹುಲಿಯ ಹೆಜ್ಜೆಗಳ ನಡುವೆ ಹಂದಿಯ ಹೆಜ್ಜೆಗಳು. ಓಹೋ ಹಂದಿ ಗ್ವಾಲೆಗೂ-ಹುಲಿಗೂ ಮುಖಾಮುಖಿಯಾಗಿದೆ ಎಂದುಕೊಂಡೆ. ಅಮ್ಮ `ಹಂದಿ ಗ್ವಾಲೆಯನ್ನು ಹುಲಿ ಬೆನ್ನಟ್ಟಿರಬೇಕು..' ಎಂದಳು. ನನಗೆ ಇದು ಹೌದೆನ್ನಿಸಿತು. ಸುಮಾರು ಅರ್ಧ ಕಿಲೋಮೀಟರ್ ವರೆಗೂ ಈ ಹೆಜ್ಜೆಗಳು ರಸ್ತೆಯಲ್ಲಿ ಕಾಣಿಸಿಕೊಂಡಿದ್ದು ನಂತರ ತೋಟದ ಕಡೆಗೆ ಹೊರಳಿದ್ದವು. ಅಲ್ಲಿಯ ವರೆಗೆ ಹೆಜ್ಜೆ ಜಾಡು ಹಿಡಿದು ಹೊರಟಿದ್ದ ನಾವು ಹುಲಿ ಇಲ್ಲೆ ಎಲ್ಲೋ ಹೊರಳಿ ನದಿ ದಾಟಿದೆ ಎಂದುಕೊಂಡು ವಾಪಾಸಾದೆವು. ಮನೆಗೆ ಬಂದು ಅಪ್ಪನ ಬಳಿ ವಿಷಯ ಹೇಳಿದೆ. `ಹಂದಿ ಗ್ವಾಲೆ ಇದ್ದರೆ ಹುಲಿ ಯಾವತ್ತಿಗೂ ಅದನ್ನು ಬೆನ್ನಟ್ಟುವುದಿಲ್ಲ. ಒಂಟಿ ಹಂದಿ ಇದ್ದರೆ ಮಾತ್ರ ಅದನ್ನು ಬೆನ್ನಟ್ಟುತ್ತದೆ..' ಎಂದ. ನನಗೂ ಹಂದಿಯ ಹೆಜ್ಜೆಗಳು ಎರಡು ಜೊತೆ ಮಾತ್ರ ಇದ್ದಂತೆ ಕಾಣಿಸಿ ಒಂಟೀ ಹಂದಿಯನ್ನು ಹುಲಿ ಬೆನ್ನಟ್ಟಿದೆ ಎಂಬ ನಿರ್ಧಾರಕ್ಕೆ ಬಂದೆ.
               ಮನೆಯಲ್ಲಿ ನಂತರ ಹುಲಿಯದ್ದೇ ಮಾತು. ನಮ್ಮೂರಿನವರಿಗೆಲ್ಲ ಹುಲಿ ಕೂಗಿದ ಸದ್ದು ಕೇಳಿಸಿತ್ತಂತೆ. ದಂಟಕಲ್ ಸುಬ್ಬಣ್ಣನ ಮನೆಯ ಹತ್ತಿರ ಹುಲಿ ಬಂದಿದೆ. ಬಹುಶಃ ಕೊಟ್ಟಿಗೆಗೆ ಬಂದು ದನಕ್ಕೆ ತೊಂದರೆ ಕೊಟ್ಟಿರಬೇಕು ಎಂದು ನಮ್ಮೂರಿನವರು ಮಾತಾಡಿಕೊಂಡಿದ್ದರಂತೆ. ಆದರೆ ಮನೆಯ ಹತ್ತಿರ ಬಂದಿದ್ದ ಹುಲಿ ಕೂಗಿದ್ದು ಬಿಟ್ಟರೆ ಬೇರೆ ಯಾವುದೇ ಭಾನಗಡಿ ಮಾಡಿರಲಿಲ್ಲ. ನಮ್ಮ ಮನೆಯಲ್ಲಿ ಎಲ್ಲ ನಿಟ್ಟುಸಿರಾಗಿದ್ದರು. ಸಂಜೆ ಅಘನಾಶೀನಿಯನ್ನು ದಾಟಿ ಪಕ್ಕದ ಊರಿಗೆ ಕಾರ್ಯ ನಿಮಿತ್ತ ಹೋಗಿದ್ದೆ. ಅಲ್ಲೂ ಕೂಡ ಹುಲಿ ಬಂದಿರುವ ವಿಷಯ ಮಾತಾಡುತ್ತಿದ್ದರು.
               ಪ್ರತಿ ವರ್ಷ ನಮ್ಮೂರಿನಲ್ಲಿ ಒಮ್ಮೆ ಅಥವಾ ಎರಡು ಮೂರು ಸಾರಿ ಹುಲಿ ಕಾಣಿಸಿಕೊಳ್ಳುತ್ತದೆ. ನಾನು ಶಾಲೆಗೆ ಹೋಗುವ ಸಂದರ್ಭದಲ್ಲಿ ಒಂದೆರಡು ಸಾರಿ ಹುಲಿರಾಯನ ದರ್ಶನ ಮಾಡಿದ್ದೆ. ಆದರೆ ಹುಲಿರಾಯ ಇಷ್ಟು ಹತ್ತಿರದಲ್ಲಿ ಗರ್ಜನೆ ಮಾಡಿದ್ದು ಕೇಳಿರಲಿಲ್ಲ. ನಮ್ಮೂರ ಫಾಸಲೆಯಲ್ಲಿ ಚಿಟ್ಟು ಚಿರತೆ, ಕಪ್ಪು ಚಿರತೆಗಳೆಲ್ಲ ಆಗೀಗ ಬಂದು ಹಾಯ್ ಎನ್ನುತ್ತವೆ. ಗಮಿಯಗಳಂತೂ ನಮ್ಮೂರಿನ ಗದ್ದೆಯನ್ನು ತಮ್ಮ ಮೈದಾನ ಮಾಡಿಕೊಂಡಿವೆ. ಹಂದಿಗಳಿಗಂತೂ ನಮ್ಮೂರಿನ ಬಾಳೆಯ ಗಡ್ಡೆಗಳು ಸಿಕ್ಕಿಲ್ಲ ಎಂದರೆ ಅದೇನನ್ನೋ ಕಳೆದುಕೊಂಡೆವು ಎಂಬಂತೆ ವರ್ತಿಸುತ್ತವೆ.
ಇಂತಹ ವನ್ಯ ಪ್ರಾಣಿಗಳಿರುವಲ್ಲಿ ಬೇಟೆಗಾರರೂ ಇದ್ದಾರೆ. ಕಳೆದ ವರ್ಷ ಹೇರೂರಿನ ಕೆಲವರು ಕಾಡೆಮ್ಮೆ ಬೇಟೆ ಮಾಡಿದ್ದರು. ಅದು ಸಾಕಷ್ಟು ಸುದ್ದಿಯೂ ಆಗಿತ್ತು. ಈ ವರ್ಷದ ಚಳಿಗಾಲದಲ್ಲಿ ಹುಲಿರಾಯ ಬಂದಿರಲಿಲ್ಲ. ಹುಲಿರಾಯನ ಹಾಯಿಸಾಲಿನಲ್ಲಿ ನಮ್ಮೂರು ಬಿಟ್ಟಿತೇನೋ ಎಂದುಕೊಂಡಿದ್ದೆ. ಆದರೆ ಹುಲಿರಾಯ ನಮ್ಮ ಮನೆಯ ಅಂಗಳಕ್ಕೆ ಬಂದು ಹಾಯ್ ಹೇಳಿದ್ದ. ಅಷ್ಟೇ ಅಲ್ಲ ತನ್ನ ಮುಂದಿನ ಪೀಳಿಗೆಯನ್ನೂ ಕರೆತಂದು ನನ್ನ ಮನೆಯನ್ನು ತೋರಿಸಿದ್ದ.
                 ಹಿಂದೆ ನಮ್ಮೂರಿನಲ್ಲಿ ಸಿಕ್ಕಾಪಟ್ಟೆ ಹುಲಿಗಳಿದ್ದವಂತೆ. ನಮ್ಮೂರಿನ ಹಿರಿಯರಾಗಿದ್ದ ದಿ. ಗಣಪತಿ ಗಣೇಶ ಹೆಗಡೆಯವರು ತಮ್ಮ ಯವ್ವನದ ದಿನಗಳಲ್ಲಿ ಮೂರು ಹುಲಿಗಳನ್ನು ಗುಂಡಿಕ್ಕಿ ಕೊಂದಿದ್ದರಂತೆ. ನಂತರದ ದಿನಗಳಲ್ಲಿ ಹುಲಿ ಸಂತತಿಯೂ ಕಡಿಮೆಯಾಗಿತ್ತು. ಆಗೊಮ್ಮೆ ಈಗೊಮ್ಮೆ ಹುಲಿಗಳು ಬಂದಿದ್ದರೂ ದಾಂಡೇಲಿಯ ಕಾಡಿನಿಂದ ಬಂದಿರಬೇಕು ಎಂದಕೊಂಡಿದ್ದೇವೆ. ಈ ವರ್ಷ ದಾಂಡೇಲಿ-ಅಣಶಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ಒಂದೆರಡು ಕಡೆಗಳಲಿ ಬೆಂಕಿ ಬಿದ್ದಿದೆ. ನೀರು ಬತ್ತಿದೆ. ಆಹಾರವೂ ಕಡಿಮೆಯಾಗಿರಬೇಕು. ಹೀಗಾಗಿ ಹುಲಿ ತನ್ನ ಮರಿಯ ಜತೆಗೂಡಿ ಆಹಾರ ಹುಡುಕಿ ಬಂದಿರಬೇಕು. ಹೀಗೆ ಬಂದ ಹುಲಿ ನಮ್ಮೂರ ಕಡೆಗೆ ಹೆಜ್ಜೆ ಹಾಕಿರಬೇಕು. ಹುಲಿ ಬಂದಿದ್ದರಿಂದ ನಮ್ಮ ಮನೆಯಲ್ಲಿ ಭಯವಾಗಿದ್ದರೂ, ನನಗೆ ಖುಷಿಯಾಗಿದೆ. ನಶಸುತ್ತಿರುವ ಹುಲಿ ನನ್ನ ಮನೆಯಂಗಳಕ್ಕೆ ಬಂದು ಗರ್ಜನೆ ಮಾಡಿದ್ದು, ನಾನಿದ್ದಿನಿ ಕಣೋ.. ಎಂದಂತೆ ಭಾಸವಾಗಿದ್ದು ನನಗೆ ಖುಷಿಯನ್ನು ಕೊಟ್ಟಿದೆ. ಮುಂದೆ ಹುಲಿ ಬಂದರೆ ಹೆಂಗಾದರೂ ಮಾಡಿ ಪೋಟೋ ಹೊಡ್ಕಳ್ಳಬೇಕು ಎಂಬ ಭಾವನೆ ಬಲವಾಗುತ್ತಿದೆ.




ಈ ಚಿತ್ರದಲ್ಲಿ ಕಾಡುಹಂದಿಯ ಹಾಗೂ ಹುಲಿಯ ಹೆಜ್ಜೆಗಳಿವೆ.
ಇದರಲ್ಲಿ ಹುಲಿಯ ಹೆಜ್ಜೆಯ ಚಿತ್ರಗಳನ್ನು ನನ್ನ ಮನೆಯ ಅಂಗಳದಲ್ಲಿ ತೆಗೆದಿದ್ದು.
ಕಾಡುಹಂದಿಯ ಹೆಜ್ಜೆಗಳ ಚಿತ್ರಗಳನ್ನು ಮನೆಯಿಂದ 200 ಮೀಟರ್ ದೂರದಲ್ಲಿ ತೆಗೆದಿದ್ದು.
 

Sunday, March 5, 2017

ಈಕೆಗೆ ಅಮಿತಾಬ್ ಬಚ್ಚನ್ರ ಭಾಗಬನ್ ಪ್ರೇರಣೆ/ವಿಕಲ ಚೇತನರಿಗಾಗಿ ಮಿಡಿದ ಅಂಗವಿಕಲೆ

ಈಕೆಗೆ ಅಮಿತಾಬ್ ಬಚ್ಚನ್ರ ಭಾಗಬನ್ ಪ್ರೇರಣೆ
ವಿಕಲ ಚೇತನರಿಗಾಗಿ ಮಿಡಿದ ಅಂಗವಿಕಲೆ



 ಈಕೆಗೆ ನಡೆದಾಡಲು ಬರುವುದಿಲ್ಲ. ಗಾಲಿಖುಚರ್ಿಯ ಮೇಲೆ ಸದಾಕಾಲ ಓಡಾಡಿ ಬದುಕು ನಡೆಸುತ್ತಿರುವಾಕೆ. ಇಂತಹ ವಿಕಲಚೇತನ ಮಹಿಳೆ ತನ್ನಂತೆಯೇ ಬದುಕು ನಡೆಸುತ್ತಿರುವವರ ನೆರವಿಗೆ ನಿಲ್ಲುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾಳೆ. ಕಾಲಿಲ್ಲದವರಿಗೆ ಊರುಗೋಲಾಗುವ ಕನಸನ್ನು ಹೊತ್ತಿದ್ದಾಳೆ. ಅವಳೇ ಶಿರಸಿಯ ಮುಸ್ಲಿಂ ಗಲ್ಲಿಯ ನಿವಾಸಿ ಸೀಮಾ ಶುಂಟಿ.
 38 ವರ್ಷ ವಯಸ್ಸಿನ ಸೀಮಾ ಶುಂಟಿ ಬಡತನದಲ್ಲಿಯೇ ಬೆಳೆದವಳು. ಶಿರಸಿಯ ಅಬ್ದುಲ್ ಸತ್ತಾರ್ ಹಾಗೂ ಖೈರುನ್ನಿಸಾ ದಂಪತಿಗಳ ಐವರು ಹೆಣ್ಣುಮಕ್ಕಳ ಪೈಕಿ ಮೂರನೆಯವಳು. ಮದುವೆಯಾಗುವ ವರೆಗೂ ಎಲ್ಲರಂತೆಯೇ ಆರಾಮವಾಗಿ ಇದ್ದ ಸೀಮಾ ಶುಂಟಿ ವಿವಾಹವಾದ ಬಳಿಕ ಕಾಲಿನ ಸ್ವಾಧೀನ ಕಳೆದುಕೊಂಡರು. ಈಕೆಗೆ ಎದುರಾದ ಅಂಗವೈಕಲ್ಯವನ್ನೇ ಮುಂದಿಟ್ಟುಕೊಂಡು, ಮದುವೆಯಾದ ವ್ಯಕ್ತಿ ಸೀಮಾಳಿಗೆ ಡೈವಸರ್್ ನೀಡಿದ. ಎದ್ದು ಓಡಾಡಲು ಆಗದಂತಹ ಪರಿಸ್ಥಿತಿ, ಕಾಡುವ ಬಡತನ, ಬೆನ್ನಲ್ಲಿ ಜನಿಸಿದ ಇಬ್ಬರು ತಂಗಿಯರಿಗೂ ಕಾಡಿದ ಅಂಗವೈಕಲ್ಯ, ಎದ್ದು ಓಡಾಡಲಾಗದಂತಹ ತಂದೆ. ಹೀಗೆ ಹಲವು ರೀತಿಯಲ್ಲಿ ನೋವನ್ನು ಉಂಡ ಸೀಮಾ ಇದೀಗ ಎನ್ಜಿಒ ಆರಂಭಿಸಿ ಅಂಗವೈಕಲ್ಯಕ್ಕೆ ಒಳಗಾದವರ ಬದುಕನ್ನು ಹಸನು ಮಾಡುವ ಪ್ರಯತ್ನದಲ್ಲಿ ತೊಡಗಿಕೊಂಡಿದ್ದಾರೆ.



ನಿಖಾ, ಡೈವೋಸರ್್, ಅಧಿಕಾರಿಗಳ ಕಿರುಕುಳ :
 ಸೀಮಾಅ ಶುಂಟಿಯನ್ನು ರೇವಣಕಟ್ಟಾದ ವ್ಯಕ್ತಿಯೋರ್ವರು 2000ದಲ್ಲಿ ಮದುವೆಯಾದರು. ಮದುವೆಯಾದ ಒಂದೇ ತಿಂಗಳಿಗೆ ಸೀಮಾ ಅವರ ಕಾಲುಗಳು ಶಕ್ತಿ ಕಳೆದುಕೊಂಡವು. ಹೀಗಿದ್ದಾಗಲೇ ಸೀಮಾಅ ಅವರನ್ನು ಮದುವೆಯಾದ ವ್ಯಕ್ತಿ ತಲಾಖ್ ನೀಡಿದ. ಇದರಿಂದ ತನ್ನ ಬದುಕು ಬೀದಿಗೆ ಬಿದ್ದಿತು ಎಂದುಕೊಂಡಾಕೆಗೆ ಆಕೆಯ ಛಲವೇ ಕೈಹಿಡಿದಿದೆ. ಮದುವೆಗೂ ಮೊದಲು ಎಸ್ಎಸ್ಎಲ್ಸಿ ಓದಿದಾಕೆ ನಂತರದಲ್ಲಿ ಪೋಸ್ಟಲ್ ಸವರ್ೀಸ್ ಮೂಲಕ ಪಿಯುಸಿ ಹಾಗೂ ಪದವಿಯನ್ನೂ ಮುಗಿಸಿದ್ದಾಳೆ. ಅಷ್ಟೇ ಅಲ್ಲದೇ ಎಂಬ್ರಾಯ್ಡರಿ, ಹೊಲಿಗೆ, ಕಂಪ್ಯೂಟರ್ ತರಬೇತಿಯನ್ನೂ ಮಾಡಿಕೊಂಡಳು. ತರಬೇತಿಯನ್ನು ಪಡೆದುಕೊಂಡ ಸೀಮಾ ಶುಂಠಿ ಅದೆಷ್ಟೋ ವಿದ್ಯಾಥರ್ಿಗಳಿಗೆ ತರಬೇತಿಯನ್ನೂ ನೀಡುವ ಮೂಲಕ ವಿದ್ಯಾಥರ್ಿಗಳ ಬದುಕಿಗೆ ಬೆಳಕಾಗುವ ಕಾರ್ಯ ಕೈಗೊಂಡರು.
 ಬಡತನವಿದ್ದರೂ ಹೊಲಿಗೆ ಹಾಗೂ ಇತ್ಯಾದಿ ಕಾರ್ಯಗಳ ಮೂಲಕ ಮನೆಯನ್ನು ನೋಡಿಕೊಳ್ಳುತ್ತಿದ್ದ ತನಗೆ ಕಾರವಾರದ ಮಹಿಳಾ ಮತ್ತು ಸಮಾಜಕಲ್ಯಾಣ ಇಲಾಖೆಯ ಅಧಿಕಾರಿಯೋರ್ವರು ಕೊಟ್ಟ ಕಿರುಕುಳವೇ ಛಲ ಹುಟ್ಟಲು ಕಾರಣ ಎನ್ನುವ ಸೀಮಾ ಶುಂಠಿ ಅವರು ತನಗೆ ಕಿರುಕುಳ ನೀಡದೇ ಇದ್ದಲ್ಲಿ ತನ್ನಲ್ಲಿ ಛಲವೇ ಹುಟ್ಟುತ್ತಿರಲಿಲ್ಲ. ತನ್ನಂತೆಯೇ ಇರುವ ವಿಕಲಚೇತನರಿಗೆ ಸಹಾಯ ಮಾಡುವ ಕನಸು ಕಾಣಲು ಸಾಧ್ಯವಾಗುತ್ತಲೇ ಇರಲಿಲ್ಲ ಎನ್ನುತ್ತಾರೆ.


ಗುರುಕುಲ ಆರಂಭಕ್ಕೆ ಭಾಗಬನ್ ಪ್ರೇರಣೆ :
 ವಿಕಲಚೇತನರಿಗೆ ಸಹಾಯ ಮಾಡುವ ಸಲುವಾಗಿ ಸೀಮಾ ಶುಂಠಿ ಅವರು ಇದೀಗ ಗುರುಕುಲ ಎನ್ನುವ ಎನ್ಜಿಓ ಆರಂಭಸಿದ್ದಾರೆ. ತಮ್ಮ ಸ್ವಯಂಸೇವಾ ಸಂಸ್ಥೆಯ ಮೂಲಕ ಕಾಲಿಲ್ಲದವರಿಗೆ, ಅಪಘಾತದಲ್ಲಿ ಕಾಲು ಕಳೆದುಕೊಂಡವರಿಗೆ ಗಾಲಿಖುಚರ್ಿ, ಊರುಗೋಲು, ತ್ರಿಚಕ್ರ ಬೈಕ್/ಸೈಕಲ್, ಕೃತಕ ಕಾಲು ಸೇರಿದಂತೆ ಹಲವು ಸೌಕರ್ಯಗಳನ್ನು ಒದಗಿಸಿಕೊಡುವ ಕನಸನ್ನು ಹೊತ್ತಿದ್ದಾರೆ. ಅದಲ್ಲದೇ ಅಧಿಕಾರಿಗಳಿಂದ ಆಗುವ ಕಿರುಕುಳಗಳನ್ನು ತಪ್ಪಿಸುವ ನಿಟ್ಟಿನಲ್ಲಿಯೂ ಪ್ರಯತ್ನ ಮಾಡಲಿದ್ದಾರೆ. ಗುರುಕುಲ ಎಂಬ ಸ್ವಯಂಸೇವಾ ಸಂಸ್ಥೆಯ ಕನಸು ಹುಟ್ಟಿಕೊಳ್ಳುವುದಕ್ಕೂ ಒಂದು ವಿಶಿಷ್ಟ ಕನಸು ಇದೆ ಎನ್ನುವುದನ್ನು ಸೀಮಾ ಶುಂಠಿ ಹೇಳಲು ಮರೆಯುವುದಿಲ್ಲ.
 ಬದುಕಿನಲ್ಲಿ ಕಷ್ಟದ ದಿನಗಳನ್ನು ಎದುರಿಸುತ್ತಿದ್ದ ಸಂದರ್ಭದಲ್ಲಿ ಟಿವಿಯಲ್ಲಿ ಒಮ್ಮೆ ಅಮಿತಾಬ್ ಭಚ್ಚನ್ ಅವರ ಭಾಗಬನ್ ಸಿನೆಮಾವನ್ನು ನೋಡಿದೆ. ಆ ಸಿನೆಮಾದಲ್ಲಿ ಅಮಿತಾಬ್ ಬಚ್ಚನ್ ವಿಕಲಚೇತನರಿಗಾಗಿ ಸ್ವಯಂಸೇವಾ ಸಂಸ್ಥೆಯನ್ನು ಆರಂಭಿಸಿ ಸೇವೆ ಮಾಡುತ್ತಾರೆ. ನನಗೂ ಕೂಡ ಹಾಗೆಯೇ ಸ್ವಯಂ ಸೇವಾ ಸಂಸ್ಥೆಯನ್ನು ಆರಂಬಿಸಬೇಕು ಎನ್ನಿಸಿತು. ಹೀಗಾಗಿ ಗುರುಕುಲ ಎಂಬ ಸ್ವಯಂಸೇವಾ ಸಂಸ್ಥೆಯನ್ನು ಆರಂಭಿಸಿದ್ದೇನೆ. ಈ ಸ್ವಯಂ ಸೇವಾ ಸಂಸ್ಥೆಯು ಫೆ.24ರಂದು ಉದ್ಘಾಟನೆಯಾಗಲಿದೆ ಎಂದು ಸೀಮಾ ಶುಂಠಿ ಹೇಳಿದ್ದಾರೆ.
 ಸ್ವತಃ ವಿಕಲಚೇತನ ವ್ಯಕ್ತಿಯಾಗಿದ್ದರೂ ಕೂಡ ತನ್ನಂತೆಯೇ ವಿಕಲಾಂಗರಾದವರಿಗೆ ಸಹಾಯ ಮಾಡುವ ಉದ್ದೇಶದಿಂದ ಸ್ವಯಂಸೇವಾ ಸಂಸ್ಥೆ ಆರಂಭಿಸುತ್ತಿರುವುದು ಇತರರಿಗೆ ಮಾದರಿಯಾಗಿದೆ. ತಾನು ಅಧಿಕಾರಿಗಳಿಂದ ಕಿರುಕುಳ ಅನುಭವಿಸಿದರೂ ಕೂಡ ಉಳಿದ ವಿಕಲ ಚೇತನರು ತನ್ನಂತೆ ಸಮಸ್ಯೆ ಎದುರಿಸಬಾರದು ಎನ್ನುವ ಕಾರಣದಿಂದ ಸ್ವಯಂಸೇವಾ ಸಂಸ್ಥೆ ಆರಂಭಿಸಿ ಕಾಲಿಲ್ಲದವರಿಗೆ ಆಸರೆಯಾಗುವ ಪ್ರಯತ್ನ ಮಾಡಿರುವುದು ಪ್ರತಿಯೊಬ್ಬರಿಗೂ ಸ್ಪೂತರ್ಿದಾಯಕರಾಗಿದ್ದಾರೆ.




-------

 ಸ್ವಯಂಸೇವಾ ಸಂಸ್ಥೆ ಆರಂಭದ ಕನಸನ್ನು ಇಟ್ಟುಕೊಂಡ ಸೀಮಾ ಶುಂಠಿಗೆ ಪ್ರಾರಂಭದಲ್ಲಿ ಯಾರಿಂದಲೂ ಸಹಕಾರ ದೊರೆಯಲೇ ಇಲ್ಲ. ಐವರು ಸದಸ್ಯರನ್ನು ಪ್ರಾರಂಭದಲ್ಲಿ ಸೇರಿಸಿಕೊಂಡಿದ್ದರೂ ದಿನಕಳೆದಂತೆ ಒಬ್ಬೊಬ್ಬರಾಗಿ ದೂರ ಸರಿದರು. ಆದರೂ ಫಲ ಬಿಡದೇ ಒಬ್ಬಂಟಿಯಾಗಿಯೇ ಕೆಲಸ ಮಾಡಿದವರು ಸೀಮಾ ಶುಂಠಿ. ಸರಕಾರದ ಯಾವುದೇ ಸೌಲಭ್ಯವನ್ನು ಪಡೆದುಕೊಳ್ಳದೇ ಇತರರಿಗೆ ಮಾದರಿಯಾಗುವಂತಹ ಕಾರ್ಯದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾಳೆ. ಈಕೆಯ ಕಾರ್ಯ ಉಳಿದವರಿಗೆ ಅನುಕರಣೀಯ.



Monday, February 27, 2017

ಅಕ್ಷರಸ್ಥರ ವಿಕೃತಿಗೆ ಜಲ್ಲೆಯ ಪ್ರವಾಸಿ ತಾಣಗಳು ಬಲಿ

ಪ್ರವಾಸಿ ತಾಣಗಳ ಗೋಡೆಗಳ ಮೇಲೆ ಪ್ರವಾಸಿಗರಿಂದ ಚಿತ್ತಾರ

ಶೀರ್ಷಿಕೆ ಸೇರಿಸಿ
 ಅಕ್ಷರಸ್ಥರ ವಿಕೃತಿಗೆ ಜಿಲ್ಲೆಯ ಪ್ರವಾಸಿತಾಣಗಳು ಬಲಿಯಾಗುತ್ತಿವೆ. ಪ್ರವಾಸಕ್ಕಾಗಿ ಆಗಮಿಸುತ್ತಿರುವವರ ``ಕೈ ಚಳಕ'ಕಕ್ಕೆ ಜಿಲ್ಲೆಯ ಹೆಸರಾಂತ ಪ್ರವಾಸಿ ತಾಣಗಳು ಅಂದ ಕಳೆದುಕೊಳ್ಳುತ್ತಿವೆ.
 ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಶಿವಗಂಗಾ ಜಲಪಾತ, ಗಣೇಶ ಪಾಲ, ಯಲ್ಲಾಪುರ ತಾಲೂಕಿನ ಮಾಗೋಡ ಜಲಪಾತ, ಸಿದ್ದಾಪುರ ತಾಲೂಕಿನ ಉಂಚಳ್ಳಿ ಜಲಪಾತ, ಜೋಯಿಡಾ ತಾಲೂಕಿನ ಆಕಳಗವಿ, ಪಂಚಲಿಂಗ ಗವಿ, ಮಹಾಮನೆ ಗವಿ, ಅಂಕೋಲಾ, ಕುಮಟಾ, ಹೊನ್ನಾವರ ತಾಲೂಕಿನ ಪ್ರವಾಸಿ ತಾಣಗಳು ಅತ್ಯಂತ ಹೆಚ್ಚಿನ ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುತ್ತವೆ. ದಿನಂಪ್ರತಿ ಸಾವಿರಾರು ಜನರು ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ನಿದರ್ಶನಗಳೂ ಇದೆ. ಜಿಲ್ಲೆಯ ಆದಾಯಕ್ಕೆ ಇಂತಹ ಪ್ರವಾಸಿ ತಾಣಗಳ ಕೊಡುಗೆಯೂ ಹೇರಳವಾಗಿದೆ. ಆದರೆ ಹೀಗೆ ಆಗಮಿಸುವ ಪ್ರವಾಸಿಗರ ಕಿತಾಪತಿಯಿಂದಾಗಿ ಪ್ರವಾಸಿ ಸ್ಥಳಗಳು ತಮ್ಮ ಅಂದವನ್ನು ಕಳೆದುಕೊಳ್ಳುತ್ತಿವೆ.
 ಉತ್ತರ ಕನ್ನಡ ಜಿಲ್ಲೆಯ ಹೆಚ್ಚಿನ ಪ್ರವಾಸಿ ತಾಣಗಳ ಗೋಡೆಗಳ ಮೇಲೆ ಪ್ರವಾಸಿಗರು ಬರೆದ ವಿವಿಧ ಬರಹಗಳು ಕಣ್ಣಿಗೆ ಬೀಳುತ್ತಿವೆ. ಹೆಸರುಗಳನ್ನು ಕೆತ್ತುವ, ತಮ್ಮ ಹೆಸರುಗಳ ಜೊತೆಗೆ ತಾವು ಪ್ರೇಮಿಸುತ್ತಿರುವವರ ಹೆಸರನ್ನು ಬರೆಯುವ, ತಮ್ಮ ಊರುಗಳ ಹೆಸರುಗಳನ್ನು ಬರೆದಿಡುವ, ದೂರವಾಣೀ ಸಂಕ್ಯೆಗಳನ್ನು ನಮೂದು ಮಾಡುವ ಬರಹಗಳೂ ಹೆಚ್ಚಾಗಿವೆ. ವಿಕಾರ ಚಿತ್ರಗಳು ಹಾಗೂ ಅಶ್ಲೀಲ ಬರಹಗಳೂ ಕೂಡ ಪ್ರವಾಸಿ ತಾಣಗಳ ಗೋಡೆಗಳಲ್ಲಿ ರಾರಾಜಿಸುತ್ತಿವೆ. ಇದರಿಂದ ಪ್ರವಾಸಿ ತಾಣಗಳಿಗೆ ಆಗಮಿಸುವ ಸಭ್ಯ ಪ್ರವಾಸಿಗರು ಮೂಗು ಮುರಿಯುವವಂತಾಗಿದೆ.
 ಉಂಚಳ್ಳಿ ಜಲಪಾತದ ವೀಕ್ಷಣಾ ಗೋಪುರಗಳಿರಲಿ, ಮಾಗೋಡು ಜಲಪಾತದ ವೀಕ್ಷಣಾ ಮಂದಿರಗಳಿರಲಿ, ಅರಣ್ಯದ ನಡುವೆಯೇ ಇರುವ ಶಿವಪುರದಂತಹ ಊರುಗಳ ತೂಗುಸೇತುವೆಗಳ ಕಂಬಗಳ ಮೇಲೂ ಪ್ರವಾಸಿಗರ ಇಂತಹ ಬರಹಗಳು ಕಾಣಸಿಗುತ್ತಿವೆ. ಉತ್ತರ ಕನರ್ಾಟಕದ ಪ್ರವಾಸಿಗರು ಆಗಮಿಸುವ ಪ್ರದೇಶಗಳಲ್ಲಿ ಇಂತಹ ಬರಹಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಣಸಿಗುತ್ತಿದೆ. ಅಲ್ಲದೇ ಉತ್ತರ ಕನರ್ಾಟಕದ ಊರುಗಳ ಹೆಸರುಗಳೇ ಗೋಡೆಗಳ ಮೇಲೆ ವಿಕಾರರೂಪದಲ್ಲಿ, ಸುಣ್ಣದಲ್ಲಿಯೋ, ಆಯಿಲ್ ಪೇಂಟ್ಗಳಲ್ಲಿಯೋ, ಕಲ್ಲಿನ ಮೂಲಕ ಕೆತ್ತಿಯೋ ಬರೆಯಲಾಗುತ್ತಿದೆ.
 ಜೋಯಿಡಾ ತಾಲೂಕಿನ ದಟ್ಟ ಅಅರಣ್ಯದ ನಡುವೆ ಆಕಳಗವಿ, ಮಹಾಮನೆ ಗವಿ, ಪಂಚಲಿಂಗ ಗವಿಗಳಿದೆ. ಈ ಪ್ರದೇಶಗಳಲ್ಲಿ ದೈತ್ಯ ಗುಹೆಗಳು, ಅವುಗಳ ನಡುವೆ ಶಿವಲಿಂಗಗಳಿದೆ. ಈ ತಾಣಗಳಿಗೆ ಉತ್ತರ ಕನರ್ಾಟಕದ ಪ್ರವಾಸಿಗರು ಪ್ರತಿದಿನ ಸಾವಿರ ಸಾವಿರ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಐತಿಹಾಸಿಕ ಸ್ಥಳವಾದ ಯಾಣದಂತೆಯೇ ಭವ್ಯ ಶಿಲಾ ಪರ್ವತದ ಸಾಲುಗಳು ಇಲ್ಲಿದೆ. ಆದರೆ ಈ ಶಿಲಾ ಸಾಲುಗಳ ಮೇಲೆ ಬಿಳಿಯ ಅಕ್ಷರಗಳಲ್ಲಿ ಸಾವಿರ ಸಾವಿರ ಹೆಸರುಗಳು, ಊರುಗಳು ಬರೆಯಲ್ಪಟ್ಟು ಅಸಹ್ಯವನ್ನು ಮೂಡಿಸುತ್ತಿದೆ. ಪ್ರವಾಸಿಗರ ವಿಕ್ರತ ಮನಸ್ಸುಗಳಿಗೆ ಇವು ಸಾಕ್ಷಿಯಾಗಿ ನಿಂತಿವೆ. ಆಕಳ ಗವಿಯಲ್ಲಿನ ಹಾಲು ಬಣ್ಣದ ಶಿವಲಿಂಗದ ರಚನೆಯ ಮೇಲೂ ಕೂಡ ಯಾವುದೋ ಪ್ರವಾಸಿ ತನ್ನ ಹೆಸರನ್ನು ಕೆತ್ತಿರುವುದು ಕೂಡ ಪ್ರವಾಸಿಗರ ದುಬರ್ುದ್ಧಿಯನ್ನು ಎತ್ತಿ ತೋರಿಸುತ್ತಿದೆ. ಅಲ್ಲದೇ ಪ್ರವಾಸಿಗರು ಕಷ್ಟಪಟ್ಟು ಹೋಗುವಂತಹ ಸ್ಥಳ ಎನ್ನಿಸಿಕೊಂಡಿರುವ ಶಿವಪುರದ ತೂಗುಸೇತುವೆಯ ಕಮಾನಿನ ಮೂಲೂ ಕೈಚಳಕವನ್ನು ಪ್ರವಾಸಿಗರು ಮೂಡಿಸಿದ್ದಾರೆ. ಅಷ್ಟೇ ಅಲ್ಲ ಪ್ರವಾಸಿ ತಾಣಗಳಲ್ಲಿನ ಮರಗಳ ಮೇಲೂ ಕೂಡ ಹೆಸರುಗಳನ್ನು ಕೆತ್ತಲಾಗಿದೆ. ಚಿತ್ರ ವಿಚಿತ್ರ ಚಿನ್ಹೆಗಳು ರಾರಾಜಿಸುತ್ತಿವೆ.
 ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರು ಬರೆದಿರುವ ಇಂತಹ ಬರಹಗಳ ಬಗ್ಗೆ ಪ್ರವಾಸಿಗರೇ ಮೂಗು ಮುರಿಯುತ್ತಾರೆ. ಪ್ರವಾಸಿ ತಾಣಗಳ ಗೋಡೆಗಳ ಮೇಲೆ ಬರೆದು ಅದರ ಅಂದವನ್ನು ಹಾಳುಗೆಡವುವ ಬದಲು ಪರೀಕ್ಷಾ ಸಂದರ್ಭದಲ್ಲಿ ಉತ್ತರ ಪತ್ರಕೆಗಳಲ್ಲಿ ಇಷ್ಟು ಚನ್ನಾಗಿ ಬರೆದಿದ್ದರೆ ಒಳ್ಳೆಯ ಅಂಕಗಳನ್ನು ಗಳಿಸಿಕೊಳ್ಳಬಹುದಿತ್ತು ಎನ್ನುವುದು ಜೋಯಿಡಾ ತಾಲೂಕಿನ ಆಕಳಗವಿಗೆ ಆಗಮಿಸಿದ್ದ ಪ್ರವಾಸಿಯೊಬ್ಬರ ಅಭಿಪ್ರಾಯವಾಗಿದೆ. ಪ್ರವಾಸಿ ತಾಣಗಳ ಗೋಡೆಗಳ ಮೇಲೆ ಬರೆಯುವುದನ್ನು ತಡೆಯುವುದಕ್ಕಾಗಿ ಪ್ರವಾಸೋದ್ಯಮ ಇಲಾಖೆ ಹಾಗೂ ಸ್ಥಳೀಯ ಆಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಅಗತ್ಯವಿದೆ ಎನ್ನುವ ಅಭಿಪ್ರಾಯ ಕೂಡ ಪ್ರವಾಸಿಗರಿಂದಲೇ ಕೇಳಿ ಬಂದಿದೆ.
 ಪ್ರವಾಸಿಗರ ದಾಂಧಲೆಯಿಂದ ಹೈರಾಣಾದ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ತಾರಗಾರ ಗ್ರಾಮದ ಜನರು ತಮ್ಮೂರಿನ ಫಾಸಲೆಯಲ್ಲಿರುವ ಅಜ್ಜಿಗುಂಡಿ ಜಲಪಾತಕ್ಕೆ ಪ್ರವಾಸಿಗರ ಆಗಮನವನ್ನು ನಿಷೇಧಿಸಿದ್ದಾರೆ. ಇಂತಹ ಕ್ರಮಗಳು ಇನ್ನಷ್ಟು ಪ್ರವಾಸಿ ತಾಣಗಳಲ್ಲಿ ನಡೆದರೂ ಅಚ್ಚರಿ ಪಡಬೇಕಿಲ್ಲ. ಈ ನಿಟ್ಟಿನಲ್ಲಿ ಪ್ರವಾಸಿಗರೂ ಕೂಡ ತಮ್ಮದೇ ಆದ ಹೊಣೆಗಾರಿಕೆಯನ್ನು ಮೆರೆಯಬೇಕಿದೆ. ಪ್ರವಾಸಿ ತಾಣಗಳ ಅಂದವನ್ನು ಕಾಪಾಡುವ ಅಗತ್ಯವಿದೆ. ಪ್ರವಾಸೋದ್ಯಮ ಇಲಾಖೆ ಪ್ರವಾಸಿ ತಾಣಗಳಲ್ಲಿ ಅಭಿವೃದ್ಧಿ ಕಾಅರ್ಯಗಳನ್ನು ಕೈಗೊಳ್ಳುವುದರ ಜೊತೆಗೆ ಇಂತಹವುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಜರೂರತ್ತಿದೆ. ಪ್ರವಾಸಿ ತಾಣಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆ ಮುಂದಾಗಬೇಕೆಂಬ ಆಆಶಯ ಎಲ್ಲರದ್ದಾಗಿದೆ.


--------
 ಪ್ರವಾಸಿ ತಾಣಗಳ ಗೋಡೆಗಳ ಮೇಲೆ ವಿಕಾರವಾಗಿ ಬರೆಯುವುದು ಸರಿಯಲ್ಲ. ಇದು ಸಹಿಸಲು ಅಸಾಧ್ಯ. ಪ್ರತಿ ಪ್ರವಾಸಿ ತಾಣದಲ್ಲಿಯೂ ಕೂಡ ಪ್ರವಾಸೋದ್ಯಮ ಇಲಾಖೆ ಹಾಗೂ ಸ್ಥಳೀಯ ಆಡಳಿತ ಜಂಟಿಯಾಗಿ ಯಾರಾದರೂ ಒಬ್ಬರನ್ನು ನೇಮಿಸಬೇಕು. ಪ್ರವಾಸಿ ಸ್ಥಳಕ್ಕೆ ಆಗಮಿಸಿ ತಾಣಗಳ ಗೋಡೆಗಳ ಮೇಲೆ ಬರೆಯುವವರನ್ನು ಗುರುತಿಸಿ, ಹಿಡಿದು ಅಂತಹ ವ್ಯಕ್ತಿಗಳ ಮೇಲೆ ದಂಡವನ್ನು ಹಾಕುವ ಕೆಲಸವನ್ನು ನೇಮಿಸಲ್ಪಟ್ಟ ವ್ಯಕ್ತಿಯು ಮಾಡುವ ಅಗತ್ಯವಿದೆ. ಜೊತೆಯಲ್ಲಿ ಯಾರು ಬರೆಯುತ್ತಾರೋ ಅಅಂತವರಿಂದಲೇ ಅದನ್ನು ಅಳಿಸುವ ಕೆಲಸವನ್ನೂ ಮಾಡಬೇಕು. ಹೀಗಾದಾಗ ಮಾತ್ರ ಪ್ರವಾಸಿ ತಾಣಗಳ ಗೋಡೆಗಳನ್ನು ಅಂದಗೆಡಿಸುವವರನ್ನು ತಡೆಯಬಹುದಾಗಿದೆ. ಪ್ರವಾಸಿ ತಾಣಗಳನ್ನು ಉಳಿಸಬಹುದಾಗಿದೆ.
ವಿಜಯ ರಾಥೋಡ
ಬೆಳಗಾವಿ
ಪ್ರವಾಸಿ