Thursday, October 19, 2017

ಮುಕ್ತಿ ವಾಹಿನಿ

ನಗುವವರೆಂದೂ ನನ್ನ ಜೊತೆ
ಪಯಣಿಸುವುದಿಲ್ಲ
ಕೇಕೆ ಕಲರವಗಳ ಸದ್ದು
ನನ್ನೊಳಿಲ್ಲ|

ಕೆಲವೊಮ್ಮೆ ಒಬ್ಬಂಟಿ
ಆಗಾಗ ಜಂಟಿ
ಬಂಧುಬಾಂಧವರು ಸುತ್ತ
ಬತ್ತದಂತ ಅಳುವೇ
ಸುತ್ತಮುತ್ತ |

ಬರುವವರಲ್ಲಿ ಮುಗಿಯದ
ಕಣ್ಣೀರು
ಬಿಕ್ಕುತ್ತ ಸಾಗುವವರೇ ಎಲ್ಲರೂ,
ಕಿವಿ ಗಡಚಿಕ್ಕಿದೆ
ತಮಟೆಯ ಸದ್ದು
ಯಮ ಸನಿಹಕೆ ಬಂದರೂ
ಅವನೆದೆಗೂ ಗುದ್ದು |

ಮನೆಯಿಂದ ಮಸಣ
ನನ್ನ ಏಕೈಕ ಮಾರ್ಗ
ನಡುವೆ ಪ್ರತಿಧ್ವನಿಸುವುದು
ಗೋವಿಂದ...ಗೋವಿಂದಾ..
ರಾಮ ನಾಮ ಸತ್ಯ ಹೇ...|

ನನಗೂ ನಗುವ
ಕೇಳುವ ಆಸೆಯಿದೆ
ಪುಟ್ಟ ಮಗುವ ಅಳುವ
ಹೊಸಹುಟ್ಟಿನ ಕೇಕೆಯ
ಕೇಳುವ ಆಸೆ ಹೆಚ್ಚಿದೆ |

ನಾನು ಮುಕ್ತಿ ವಾಹಿನಿ
ನನಗಿದೆ ಕರ್ತವ್ಯ
ಸತ್ತವರ ಹೊತ್ತೊಯ್ಯುವ
ಕೈಂಕರ್ಯ ನನ್ನದು
ಹುಟ್ಟುವವರ ಕರೆದೊಯ್ಯುವ
ಕನಸು ಕಾಣುವ ಅರ್ಹತೆಯೆನಗಿಲ್ಲ |

ಆದರೂ
ಕನಸು ಕಾಣುತ್ತೇನೆ ನಾನು
ಸತ್ತವರ ಹೊತ್ತೊಯ್ಯುವ
ಕಾರ್ಯದ ನಡುವೆಯೂ
ಹೊಸ ಹುಟ್ಟಿನ,
ಮಗುವಿನ ಅಳುವಿಗಾಗಿ |

ಅತ್ತಿತ್ತ ತುಯ್ದಾಡಿ
ತೊಟ್ಟಿಲಾಗುತ್ತೇನೆ ||


===================

(ಈ ಕವಿತೆಯನ್ನು ಬರೆದಿರುವುದು ಅಕ್ಟೋಬರ್ ೧೮, ೨೦೧೭ರಂದು ದಂಟಕಲ್ಲಿನಲ್ಲಿ)

No comments:

Post a Comment