Saturday, February 14, 2015

ಮಾತಾಡು ಮಲ್ಲಿಗೆ

ಮಾತಾಡು ನನ್ನ ಮಲ್ಲಿಗೆಯೇ
ಆ ಬದುಕು ಬರಡಾಗಿಸುವ
ಮೌನವೋಡಿಸಲೊಮ್ಮೆ |
ಆ ಗ್ರೀಷ್ಮದುರಿಯ ಬೆಂದು ತಿನ್ನುವ
ಬಿಸಿಲೆಡೆಗೆ ತಂಪಾಗಲೊಮ್ಮೆ |

ಬತ್ತಿ ಹೋದ ಒಡಲ ಭಾವನೆಗಳು
ಚಿಗಿತು ಹಸಿರಾಗಿ ನಳನಳಿಸಲೊಮ್ಮೆ |
ಮನ ಕೊರೆವೇಕಾಂತವ ಹಿಡಿದು
ಬಡಿದು ಓಡಿಸಲೊಮ್ಮೆ |
ಖಾಲಿಯಾಗಿರುವ ಕವಿಮನಕ್ಕೆ
ಸ್ಪೂರ್ತಿಯಾಗಿ ಕವನ ಬರೆಸಲೊಮ್ಮೆ ||

ಮಾತಾಡು ನನ್ನ ಮಲ್ಲಿಗೆಯೇ
ಹೆಚ್ಚೆಲ್ಲ ನುಡಿ ಬೇಡ |
ಒಂದೆರಡು ನುಡಿ ಸಾಕು. ಇಷ್ಟು
ದಿನಗಳ ಕಾಯುವಿಕೆಗೆ, ಕಾತರಿಕೆಗೆ
ಮೌನವ ಮರೆಸುವಿಕೆಗೆ |
ಸ್ಪರ್ಷ ಬೇಡ, ಮುತ್ತೂ ಬೇಡ
ನಿನ್ನ ಮಧುರ ಮಾತೆರಡಷ್ಟೇ ಸಾಕು |
ಜೊತೆಗಷ್ಟು ಬೆಚ್ಚ ನಗು, ನಟ್ಟ ನೋಟ
ಅಷ್ಟು ಸಾಕು, ಅಷ್ಟೇ ಸಾಕು ||

***
(ಈ ಕವಿತೆಯನ್ನು ಬರೆದಿರುವುದು 02-09-2006ರಂದು ದಂಟಕಲ್ಲಿನಲ್ಲಿ)

Thursday, February 12, 2015

ಅಘನಾಶಿನಿ ಕಣಿವೆಯಲ್ಲಿ-11

                ಇವತ್ತು ಎಪ್ರೀಲ್ 11. ಈ ಒಂದು ದಿನವೇ ಎಷ್ಟೆಲ್ಲ ಘಟನೆಗಳು ನಡೆದುಬಿಟ್ಟವಲ್ಲ. ಗಿರ ಗಿರಪತ್ಥರ್ ನೋಡಿದ್ದು, ಲಾಲಗುಳಿ ಜಲಪಾತ ದರ್ಶನ, ಸಿದ್ಧಿಯ ಜೊತೆಗಿನ ಮಾತು-ಕಥೆ, ಆ ವಿಷ್ಣುವಿಗೆ ಹಾವು ಕಚ್ಚಿದ್ದು, ಆತನ ವೃತ್ತಾಂತ, ಎಲ್ಲಕ್ಕಿಂತ ಮಿಗಿಲಾಗಿ ತನ್ನ ಅಪ್ಪ ಹೇಳಿದ ಸುದ್ದಿ, ವಿಜೇತಾಳ ವೃತ್ತಾಂತ ಇತ್ಯಾದಿಗಳ ಬಗ್ಗೆ ಯೋಚಿಸಿದ. ಎಲ್ಲವನ್ನೂ ತನಗಾಗಿ, ತನ್ನ ಮಗನಿಗಾಗಿ ಎಂಬ ಧೋರಣೆಯ ತನ್ನ ಅಪ್ಪ ಮಾಡುತ್ತಿದ್ದ ಈ ಕೆಲಸ, ಅದನ್ನೂ ತನಗೆ ಹೇಳದೇ ಇದ್ದುದು, ಜೊತೆಗೆ ಕೆಲಸ ಮಾಡುತ್ತಿದ್ದರೂ ತಾನು ಮೊದಲೇ ಪರಿಚಯದವಳು ಎಂಬುದನ್ನು ತಿಳಿಸದ ವಿಜೇತ, ಕೆಟ್ಟವನಂತೆ ಕಾಣಿಸಿಕೊಳ್ಳುತ್ತ ಒಳ್ಳೆಯದನ್ನೇ ಮಾಡುತ್ತಿದ್ದ ವಿಷ್ಣು, ಜೊತೆಗೆ ನಿಘೂಡ ವ್ಯಕ್ತಿತ್ವದ ಪ್ರದೀಪ ಇವರೆಲ್ಲರಿಂದ ತನಗೆ ಏನೋ ದೊಡ್ಡ ಗುಟ್ಟು ತಿಳಿಯುವುದು ಇರಬೇಕು. ಅದೆಲ್ಲವನ್ನೂ ಎಲ್ಲರೂ ಸೇರಿ ಮುಚ್ಚಿಟ್ಟಿದ್ದಾರಾ ಎಂದೆಲ್ಲ ಆಲೋಚಿಸಿದ.
                  ಹೀಗೆ ಯೋಚಿಸುತ್ತಿದ್ದ ಸ್ವಲ್ಪ ಹೊತ್ತಿನಲ್ಲಿಯೇ ಅಲ್ಲಿಗೆ ವಿಜೇತಾ ಬಂದಳು. ಆಕೆ ಬಂದವಳೇ `ಏನಪ್ಪಾ.. ಏನನ್ನೋ ಆಲೋಚನೆ ಮಾಡುತ್ತಿರೋ ಹಾಗಿದೆ..? ಏನಾದರೂ ಸಮಸ್ಯೆ ಆಗಿದೆಯಾ?' ಎಂದಳು.
                  `ಏನಿಲ್ಲಾ ನವೀನಚಂದ್ರ ಅವರು ವಹಿಸಿರುವ ಆ ಸ್ಮಗ್ಲಿಂಗ್ ಗುಂಪನ್ನು ಹುಡುಕೋ ಬಗ್ಗೆ ಎಲ್ಲಾ ಯೋಚನೆ ಮಾಡ್ತಾ ಇದ್ದೀನಿ. ನಾನು ಇಲ್ಲಿಗೆ ಬಂದಿದ್ದೇ ಇದಕ್ಕಾಗಿ. ಆದರೆ ಇಲ್ಲಿ ಮತ್ತಿನ್ನೇನೋ ಆಗ್ತಾ ಇದೆ. ನಾನು ಬಂದ ಕೆಲಸವೇ ಮರೆತು ಹೋಗುವಂತಾಗುತ್ತಿದೆ..' ಎಂದ ಅಸಹನೆಯಿಂದ ವಿಕ್ರಂ.
                   ` ಹೇಯ್.. ತಲೆ ಕೆಡಿಸಿಕೊಳ್ಳಬೇಡ ಮಾರಾಯಾ.. ಎಲ್ಲಾನೂ ಯಾವಾಗ ಆಗಬೇಕೋ.. ಅದೇ ಆಗುತ್ತೆ.. ನೀನು ಸುಮ್ನೆ ಗೊಂದಲ ಮಾಡ್ಕೋತಿದಿಯಾ ಅಷ್ಟೆ..' ಎಂದಳು ವಿಜೇತಾ.
                   `ಆದರೆ ನನ್ನ ಪ್ರಯತ್ನ ನಾನು ಮಾಡಲೇಬೇಕಲ್ಲ. ನಮ್ ಹೊಣೆಗಾರಿಕೆಯನ್ನೂ ಮರೀಬಾರದಲ್ಲ..'
                   `ನಿಂಗೊತ್ತಾ.. ನಾವು ನಿಂಗೆ ಈ ಕೆಲಸ ವಹಿಸಿರುವುದನ್ನು ಕೇಳಿದ ನಿಮ್ಮ ತಂದೆ ನವೀನಚಂದ್ರರ ಜೊತೆ ಗಲಾಟೆ ಮಾಡಿದ್ರು. ನಿನಗೆ ಇದರಿಂದ ಏನಾದ್ರೂ ತೊಂದ್ರೆ ಆದ್ರೆ ಎನ್ನೋ ಹಾಗೆ ವರ್ತಿಸಿದ್ರು. ಅದಕ್ಕಾಗ್ಲೇ ಒಂದ್ ಸಾರಿ ನಿನ್ಹತ್ರ ನವೀನಚಂದ್ರರು ಈ ಕೇಸಿನ ಬಗ್ಗೆ ಮುಂದುವರಿಯಬೇಡ ಎಂದಿದ್ದು..'
                   `ಏನು.. ಹೀಗೆಲ್ಲಾ ನಡೆದಿತ್ತಾ? ನಂಗ್ಯಾಕೆ ಹೇಳಲಿಲ್ಲ.. ಅಷ್ಟಕ್ಕೂ ನನ್ನಪ್ಪ ಯಾಕೆ ಹೀಗ್ಮಾಡಿದ?'
                  `ನೋಡು ವಿಕ್ರಂ. ನಮ್ಮ ಹೆತ್ತವರು ಎಷ್ಟೇ ನಮ್ಮನ್ನು ಬೈದರೂ, ಅದು ತೋರಿಕೆಗೆ ಮಾತ್ರ. ನಮ್ಮ ಮಕ್ಕಳು ಒಳ್ಳೆಯವರಾಗಬೇಕು, ಅವರು ಜೀವನದಲ್ಲಿ ಮುಂದೆ ಬರಬೇಕು. ಅವರಿಗೆ ಯಾವುದೇ ಕಷ್ಟಗಳು ಬರಬಾರದು ಎಂದೆಲ್ಲಾ ಅಂದ್ಕೊಂಡಿರ್ತಾರೆ. ಮಕ್ಕಳಿಗಾಗಿ ಎಷ್ಟೇ ಕಷ್ಟವನ್ನು ತಾವು ಎದುರಿಸೋಕೆ ತಯಾರಾಗಿರ್ತಾರೆ. ಈ ಕಾರಣಕ್ಕಾಗಿಯೇ ನಿನ್ನ ತಂದೆ ಈ ರೀತಿ ಮಾಡಿದ್ದು..'
                  `ಆದ್ರೂ ನಂಗೆ ಇದೆಲ್ಲ ಅರ್ಥಾನೇ ಆಗೋದಿಲ್ಲ. ಎಲ್ಲಾರ ಥರಹ ಇಲ್ಲಿ ಇಲ್ಲ. ಯಾವುದೋ ಮೂಲೆಯ ಹಳ್ಳಿಯೊಂದರಿಂದ ಅಲ್ಲಿರುವ ಓರ್ವ ವ್ಯಕ್ತಿ ತಾನು ಯಾವುದೇ ಇಂಗ್ಲೀಷ್ ಗಳಂತಹ ಭಾಷಾಜ್ಞಾನ ಜೊತೆಗೆ ಆತ ಯಾರನ್ನೂ, ದೊಡ್ಡ ಊರನ್ನೂ ನೋಡದೇ ಹೀಗೆಲ್ಲ ಮಾಡ್ಲಿಕ್ಕೆ ಸಾಧ್ಯವಾ?'
                  `ನೋಡು ವಿಕ್ರಂ. ನಮ್ಮ ಜನರ ಬಗ್ಗೆ ಒಂದ್ಮಾತು ಹೇಳಬೇಕು. ಅದೇನೆಂದ್ರೆ ನಮ್ಮ ಜನ ಏನೂ ಗೊತ್ತಿಲ್ಲದಿದ್ದರೂ ತನ್ನಿಂದ ತಾನೇ ಅವರಿಗೆ ಅದರ ಅರಿವಿರುತ್ತದೆ. ಯಾವುದೇ ಜ್ಞಾನ ಇಲ್ಲದಿದ್ದರೂ ಅವರು ಎಲ್ಲಿ, ಏನನ್ನು ಬೇಕಾದರೂ ಸಾಧಿಸಬಲ್ಲ, ಮಾಡಬಲ್ಲ ಸಾಮರ್ಥ್ಯವನ್ನು ಹೊಂದಿರ್ತಾರೆ ನೆನಪಿಟ್ಕೋ.. ನಮ್ಮ ಹಳ್ಳಿಗರು ಯಾರಿಗೂ ಕಮ್ಮಿಯಿಲ್ಲ. ಅವರ ಜ್ಞಾನ ದೇಸೀ ಜ್ಞಾನ ಜಗತ್ತಿನಲ್ಲೇ ಶ್ರೇಷ್ಟವಾದುದು. ಅಂತವರು ಮನಸ್ಸು ಮಾಡಿದರೆ ಇನ್ನೆಂತದ್ದಾದರೂ ಸಾಧನೆ ಮಾಡಬಲ್ಲರು..'
                  `ಅದಿರ್ಲಿ ನೋಡೋಣ ಮುಂದೇನಾಗುತ್ತೆ ಅಂತ. ಬಹುಶಃ ನಾಳೆ ಅಥವಾ ನಾಡಿದ್ದು ನಾವು ಇಲ್ಲಿಂದ ಹೊರಡಬೇಕಾಗುತ್ತದೆ. ಶಿರಸಿ ನಮ್ಮ ಕಾರ್ಯಸ್ಥಾನ. ಹಾಗಾಗು ಶಿರಸಿಯ ಕಡೆಗೆ ನಾವು ಹೋಗಲೇಬೇಕು. ಶಿರಸಿಗೆ ಹತ್ತಿರದ ಊರಾದ ದಂಟಕಲ್ ಗೆ ಹೋಗೋಣ. ಅಲ್ಲಿ ಉಳಿದುಕೊಂಡೇ ನಾವೆಲ್ಲ ಕೆಲಸ ಮುಂದುವರಿಸೋಣ. ಮುಖ್ಯವಾಗಿ ನಾವು ಇನ್ನು ಮೊದಲಿನ ಹಾಗೆ ಇರಲು ಸಾಧ್ಯವಿಲ್ಲ. ಹೆಜ್ಜೆ ಹೆಜ್ಜೆಗೆ ಅಪಾಯ ಬಂದರೂ ಬರಬೌದು. ಜೊತೆಗೆ ಆ ನವೀನಚಂದ್ರರು ಹೇಳಿದಂತೆ ಯಾವುದಾದರೂ ರಿಸರ್ಚಿನವರು ಅಂಡ್ಕೊಂಡು ಹೋಗೋಣ. ಈ ವಿಷ್ಯಾನ ಕೇವಲ ವಿನಾಯಕನಿಗೆ ಮಾತ್ರ ತಿಳಿಸಬೇಕು. ಉಳಿದವರ್ಯಾರಿಗೂ ಗೊತ್ತಾಗಬಾರದು. ತಿಳೀತಾ..?'
                   `ಸರಿ ಯಾವ ರಿಸರ್ಚಿನೋರು ಅಂತಾ ಹೋಗೋದು..?'
                   `ಉಂ ಇದ್ದೇ ಇದೆಯಲ್ಲ ಉತ್ತರ ಕನ್ನಡದ ಕಾಡು ಮೃಗಗಳು ಹಾಗೂ ಜೀವ ವೈವಿಧ್ಯದ ಪರಿವೀಕ್ಷಣೆಯ ಹೆಸರು ಹೇಳಿದರಾಯ್ತು..'
                   `ಹುಂ.. ಒಳ್ಳೆ ಐಡಿಯಾ.. ಸರಿ ಹಾಗೇ ಮಾಡೋಣ..' ಎನ್ನುವಲ್ಲಿಗೆ ಆಗಲೇ ಹೊತ್ತು ಮದ್ಯರಾತ್ರಿಯನ್ನು ಮೀರಿತ್ತು. ಇಬ್ಬರೂ ಮಾತು ಮುಗಿಸಿ ನಿದ್ರೆಯ ಕಡೆಗೆ ಜಾರಿದರು.

***10***

                `ಮೊದ್ಲು ಯಾಣಕ್ಕೆ.. ಆ ನಂತ್ರ ಬೇರೆ ಕಡಿಗೆ..' ಎಂದು ಕಿರುಚಿದಳು ರಮ್ಯ.
                 `ಊಹೂ.. ಅದೆಲ್ಲಾ ಆಗ್ತಿಲ್ಲೆ.. ಮೊದಲು ಬನವಾಸಿ.. ನಂತರ ಯಾಣ.. ಆಮೇಲೆ ಸಹಸ್ರಲಿಂಗ..'ಎಂದು ಹೇಳಿದ ವಿನಾಯಕ.
                 `ಶ್.. ಸುಮ್ನಿರಿ ಎಲ್ಲರೂ.. ಮೊದಲು ದಂಟ್ಕಲ್ಲಿಗೆ ಹೋಗೋಣ. ಆ ನಂತ್ರ ಬೇರೆ ಕಡೆಗೆ. ನಾವು ಮುಖ್ಯವಾಗಿ ರಿಸರ್ಚಿಗೆ ಬಂದಿದದ್ದು. ಹಾಗಾಗಿ ಮೇರೆ ಕಡೆಗೆಲ್ಲಾ ನಿಧಾನವಾಗಿ ಹೋಗಿ ಬಂದರಾಯ್ತು' ಎಂದ ವಿಕ್ರಂ
                  `ಸರಿ ಹಾಗೇ ಆಗ್ಲಿ..' ಎಲ್ಲರ ಒಪ್ಪಿಗೆಯೂ ಸಿಕ್ಕೇ ಬಿಟ್ಟಿತು. ಜೊತೆಗೆ ಎಲ್ಲರೂ ದಂಟಕಲ್ಲಿಗೆ ಸಾಗಲು ಅಗತ್ಯ ವಸ್ತುಗಳನ್ನು ಸಂಗ್ರಹಿಸತೊಡಗಿದರು. ಆ ದಿನ ಮದ್ಯಾಹ್ನವೇ ದಂಟಕಲ್ ಗೆ ತೆರಳಲು ಮುಹೂರ್ತವನ್ನು ಹುಡುಕತೊಡಗಿದರು.
                 ಅಂತೂ ಕಣ್ಣೀರುಮನೆಗೆ ಬಂದು ಐದಾರಿ ದಿನ ಕಳೆದ ನಂತರ ಅಂದು ಅಂದರೆ ಎಪ್ರಿಲ್ 12ರಂದು ದಂಟಕಲ್ಲಿನೆಡೆಗೆ ಸಾಗಲು ಅವಸರಿಸಿದರು.
                 ವಿಕ್ರಂ, ವಿನಾಯಕ, ವಿಜೇತಾ, ರಮ್ಯ, ಪ್ರದೀಪ ಮದ್ಯಾಹ್ನದ ಉರಿಬಿಸಿಲ ಹೊತ್ತಿನೊಳು ಹೊರಡಲುಪಕ್ರಮಿಸಿದಾಗ ಅಲ್ಲಿಗೆ ಬಂದ ವಿಷ್ಣು ತಾನೂ ಬರುವೆನೆಂದ. ಬೇಡವೆಂದರೂ ಆತನ ಹಠಕ್ಕೆ ಎಲ್ಲರೂ ಕೊನೆಗೆ ಒಪ್ಪಿಗೆ ನೀಡಲೇಬೇಕಾಯಿತು. ಕೊನೆಗೊಮ್ಮೆ ಎಲ್ಲರೂ ಹೊರಟರು. ಅವರೆಲ್ಲರೂ ಹೊರಡಲು ಮುಂದಡಿಯಿಡುತ್ತಿದ್ದಾಗಲೇ ವಿಕ್ರಮನ ತಾಯಿಗೆ ಏತಕ್ಕೋ ಒಮ್ಮೆ ಬಲಗಣ್ಣು ಅದುರಲಾರಂಭಿಸಿತ್ತು. ಆದರೆ ಅವರು ಅದನ್ನು ಯಾರಲ್ಲೂ ಹೇಳಲಿಲ್ಲ.
                ಸಾಮಾನ್ಯವಾಗಿ ಗಂಡಸರಿಗೆ ಎಡಗಣ್ಣು ಅದುರಿದರೆ, ಹೆಂಗಸರಿಗೆ ಬಲಗಣ್ಣು ಅದುರಿದರೆ ಅವು ಬರಲಿರುವ ಅಪಾಯದ, ಕೇಡಿನ ಮುನ್ಸೂಚನೆ ಎಂಬ ನಂಬಿಕೆ ಜನಸಾಮಾನ್ಯರಲ್ಲಿದೆ. ಇದು ಬಹುತೇಕ ಸತ್ಯವಾಗಿದೆ ಕೂಡ. ಹಾಗಾದರೆ ಈ ಅದುರುವಿಕೆ ಮುಂದೆ ಬರುವ ಅಪಾಯದ ಮುನ್ನುಡಿಯಾ? ಅಥವಾ ಇಂದಿನ ವೈಜ್ಞಾನಿಕ ಅಧ್ಯಯನಿಗಳು ಹೇಳುವ ಪ್ರಕಾರ ನರಗಳ ಮಿಡಿತವಾ? ಈ ಬಗ್ಗೆ ಯೋಚನೆ ಮಾಡಿದಷ್ಟೂ ನಿಘೂಡವೇ ಮೆರೆದು ನಿಲ್ಲುತ್ತದೆ.

*****

                ಇತ್ತ ಬೇಣದಗದ್ದೆಯ ಸುಬ್ಬಣ್ಣನಿಗೆ ಅದೇಕೋ ಎಡಗಣ್ಣು ಅದುರುತ್ತಿತ್ತು. ಸ್ವಭಾವತಃ ಸಂಪ್ರದಾಯ ವಿರೋಧಿಯಾದ ಆತ ಆಗ ಇದನ್ನು ನಂಬುವ ಗೋಜಿಗೇನೂ ಹೋಗಲಿಲ್ಲ. ಅವನ ಪ್ರಕಾರ ಇದೊಂದು ನರಗಳ ಸ್ಪಂದನ-ಪ್ರತಿಸ್ಪಂದನ. ಹಾಗಾಗಿ ಆತ ಇದಕ್ಕೆ ತಲೆ ಕೆಡಿಸಿಕೊಳ್ಳಲಿಲ್ಲ. ಆದರೆ ತಾನು ಮಾಡ್ತಾ ಇರುವ ಕೆಲಸ ತನ್ನ ಅಣ್ಣನಿಗೆ ಗೊತ್ತಾಗಲೇ ಬಾರದು ಎಂದು ಮತ್ತಷ್ಟು ಜಾಗರೂಕನಾಗಿ ಕಾರ್ಯ ನಿರ್ವಹಿಸಲು ಆರಂಭಿಸಿದ.

****

             ಅಂತೂ ಇಂತೂ ಹೊರಟ ಪಯಣ ನಿಧಾನವಾಗಿ ಯಲ್ಲಾಪುರವನ್ನು ದಾಟಿ ಮುಂದೆ ಸಾಗಿತು. ಕಾರಿನಲ್ಲಿ ವಿಕ್ರಂ, ಪ್ರದೀಪ, ವಿನಾಯಕ, ವಿಜೇತಾ, ರಮ್ಯ, ವಿಷ್ಣು ಇಷ್ಟು ಜನರು ಕಾಡು ಹರಟೆಗಳ ಜೊತೆಗೆ ಸಾಗುತ್ತಿದ್ದರು. ಪ್ರದೀಪನ ಹಾಸ್ಯ, ವಿನಾಯಕನ ಕವನಗಳ ಲಾಸ್ಯದ ಜೊತೆಗೆ ಇದ್ದವರಿಗೆ ಚಲಿಸಿದ ಮಾರ್ಗದ ಅರಿವೇ ಆಗಲಿಲ್ಲ. ಅವರು ಹಾದು ಬರುತ್ತಿದ್ದ ಯಲ್ಲಾಪುರ-ಶಿರಸಿ ಮಾರ್ಗದಲ್ಲಿ ಬಹುತೇಕ ಬಂದಂತೆ ವಿಕ್ರಮ ಒಮ್ಮೆಲೆ ಕಾರು ನಿಲ್ಲಿಸಿದ. ಎಲ್ಲರೂ ಏಕೆಂದು ಕೇಳಲಾಗಿ ಅದು ಹುಳಗೋಳವೆಂದೂ, ಸನಿಹದಲ್ಲೇ ಸಹಸ್ರಲಿಂಗವೆಂಬ ಅದ್ಭುತ ತಾಣವಿದೆಯೆಂದೂ ನೋಡಿ ಬರುವಾ ಎಂದೂ ತಿಳಿಸಿದ. ಎಲ್ಲರಿಂದ ಒಪ್ಪಿಗೆ ಸಿಗಲಾಗಿ ಅತ್ತ ಸಾಗಿದರು. ಅಂಕುಡೊಂಕಿನ ದಾರಿಯನ್ನು ಕ್ರಮಿಸಿದ ಕಾರು ಕೊನೆಗೊಮ್ಮೆ ಸಹಸ್ರಲಿಂಗದ ಬಾಯಿ ತಲುಪಿತು.
              ಸುತ್ತಲೂ ಕಾನನದ ಕರಿ ಮಟ್ಟಿಗಳು.ಕೆಳಗಡೆ ನಿತ್ಯ ಸಂಜೀವಿನಿಯಾದ ಶ್ಯಾಮಲ ನದಿ ಶಾಲ್ಮಲೆ ಜುಳು ಜುಳು ಸದ್ದನ್ನು ಮಾಡುತ್ತಾ ಹರಿಯುತ್ತಿದ್ದಳು. ಕಾರಿನಿಂದಿಳಿದ ಎಲ್ಲರೂ ಮೆಟ್ಟಿಲನ್ನು ಓಡುತ್ತಲೇ ಇಳಿದರು. ಆ ನದಿಯ ಒಡಲನ್ನು ಬಹುಬೇಗನೇ ನೋಡುವ ತವಕ ಅವರಿಗಿತ್ತು. ನದಿ ತಟಾಕದಲ್ಲಿ ಅವರಿಗೆ ಕಾಣಿಸಿದ್ದು ಕಾಲಿಟ್ಟ ಕಡೆಯಲ್ಲೆಲ್ಲ ಶಿವಲಿಂಗ. ಅದ್ಯಾವ ಶಿಲ್ಪಿ ಅದ್ಯಾವ ಕಾರಣಕ್ಕೆ ಕೆತ್ತಿದ್ದನೋ.. ಸಹಸ್ರ ಸಹಸ್ರ ಸಂಖ್ಯೆಯಲ್ಲಿದ್ದವು ಲಿಂಗಗಳು. ಪುಟ್ಟ ಪುಟ್ಟ ಲಿಂಗಗಳಿಂದ ಹಿಡಿದು ಬೃಹತ್ ಗಾತ್ರದ ಲಿಂಗಗಳು ಅಲ್ಲಿದ್ದವು.
              ಮೊದಲು ಓಡಿದ ಪ್ರದೀಪ ಅಲ್ಲಿಯೇ ಇದ್ದ ಬೃಹತ್ ನಂದಿಯನ್ನು ಕಂಡ. ಕಂಡವನೇ ಭವ್ಯವಾದ ನಂದಿಯ ಮೇಲೆ ಹತ್ತಿ ಕುಳಿತುಕೊಂಡ. ಆತನ ಮನಸ್ಸು ಮಗುವಂತಾಗಿತ್ತು.. ಕುದುರೆ ಸವಾರನಂತೆ ಕುಳಿತು `ಹೇಯ್... ಪೋಟೋ ತೆಗಿರ್ರೋ...' ಎಂದು ಕೂಗಿದ. ಯಾರೋ ಕ್ಯಾಮರಾವನ್ನು ಕ್ಲಿಕ್ಕಿಸಿದರು. ವಿಕ್ರಮನಂತೂ ಕೂಡಲೇ `ಬಸವನ ಮೇಲೊಬ್ಬ ಕೋಲೇಬಸವ..' ಎಂದ. ನಗು ಬುಗ್ಗೆಯಾಗಿ ಹರಡಿ, ಚಿಮ್ಮಿತು.
              ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಶಿಲ್ಪಿಯ ಉಳಿಯೇಟಿಗೆ ಬೆನ್ನೊಡ್ಡಿ ಸುಂದರ ದೃಶ್ಯ ಕಾವ್ಯವಾಗಿ ಮೈತಳೆದಿದ್ದ ಸಹಸ್ರಲಿಂಗ ಶಾಲ್ಮಲೆಯ ರಮ್ಯ ನಿನಾದಕ್ಕೂ, ರೌದ್ರ ಆರ್ಭಟಕ್ಕೂ ಹಿಡಿದ ಇರುಳ ಸೂಡಿಯಾಗಿತ್ತು. ಅಲ್ಲಲ್ಲಿ ಸವೆದ ಲಿಂಗಗಳು, ಒಡೆದ ಕಲ್ಲುಗಳು, ಚೆಲ್ಲಾಪಿಲ್ಲಿಯಾಗಿದ್ದ ಭಗ್ನ ಮೂರ್ತಿಗಳು ವಿನಾಯಕನ ಕಣ್ಣಲ್ಲಿ ನೀರು ತರಿಸಿದವು. ಅದ್ಯಾರೋ ಪ್ರೇಮಿಗಳು ಒಂದಿಷ್ಟು ಕಲ್ಲಿನ ಮೇಲೆ ತನ್ನ ಹಾಗೂ ತನ್ನ ಪ್ರೇಯಸಿಯ ಹೆಸರುಗಳನ್ನು ಕೆತ್ತಿ ವಿಕಾರ ಮಾಡಿದ್ದರು. ತಮ್ಮ ಅಜ್ಞಾನವನ್ನು, ಕೆಟ್ಟ ಸಂಸ್ಕೃತಿಯನ್ನು ಕಾರಿಕೊಂಡಿದ್ದರು.
               ಸಹಸ್ರಲಿಂಗದ ಸಹಸ್ರಬಿಂಬ ಛಿದ್ರ ವಿಛಿದ್ರದ ರೂಪದಲ್ಲಿ ಅಲ್ಲಿ ಕಾಣಿಸಲು ಆರಂಭವಾಗಿತ್ತು. ಸ್ತ್ರೀ ಲಲನೆಯರೋ ಆಗಲೇ ಶಾಲ್ಮಲೆಯ ನೀರಿನಲ್ಲಿ ಕಾಲನ್ನು ಇಳಿಬಿಟ್ಟು ಆಗಲೇ ಹರಟೆ ಕೊಚ್ಚಲು ಆರಂಭಿಸಿದ್ದರು. ಸೂರ್ಯ ಪಶ್ಚಿಮದ ಹೆಬ್ಬಾಗಿಲಿನ ಮೂಲಕ ಸಹ್ಯಾದ್ರಿಯ ಮನೆ-ಮನವನ್ನು ಕೊನೆಯ ಸಾರಿಯೆಂಬಂತೆ ನೋಡಿ ಅಸ್ತಮಿಸುತ್ತಿದ್ದ. ಎಲ್ಲರೂ ಲಗುಬಗೆಯಿಂದ ಮರಳುವಾಗಲೇ ಸಂಜೆಯ ಕಣ್ಣೋಟ ರಸ್ತೆಯ ಮೇಲೆ ಹರಡಿತ್ತು.

(ಮುಂದುವರಿಯುತ್ತದೆ)

Thursday, February 5, 2015

ಜನಪದ-ಹೊಸಪದ

ಹೊಸದಯ್ಯ ಹೊಸತು
ತಾನಿ ತಂದಾನ..
ಹೊಸ ಹೊಸತು ಬದುಕೇ
ಕೋಲಣ್ಣಕೋಲೆ ||

ವಾಟ್ಸಾಪ್ ನಲ್ಲಿ ನಾನು ಬರ್ತಿನಿ
ಟ್ವೀಟರಲ್ಲಿ ನೀನು ಬಾರೋ
ಚಾಟಿಂಗ್ ಮಾಡ್ತಾ
ಮಾತನಾಡೋಣ ||

ಅಚ್ಚುಮೆಚ್ಚು ಪ್ರೀತಿ ಹುಚ್ಚು
ಆದ ಮೇಲೆ ಹುಚ್ಚು ಹೆಚ್ಚು
ಸದಾ ಕಾಲ
ಎಂಜಾಯ್ ಮಾಡೋಣ ||

ಫಲ್ಸರ್ನಲ್ಲಿ ನಾನು ಬರ್ತಿನಿ
ಸ್ಕೂಟಿಯಲ್ಲಿ ನೀನು ಬಾರೆ
ಟ್ರಿಪ್ಪು ಮಾಡ್ತ
ಮಾತನಾಡೋಣ ||

ನಲ್ಲಿ ನೀರಿಗ್ ನಾನು ಬರ್ತೀನಿ
ಹಾಲು ಹಾಕೋಕ್ ನೀನು ಬಾರೋ
ಸೈಲೆಂಟಾಗಿ
ಮಾತನಾಡೋಣ ||

ಹೊಸದಯ್ಯ ಹೊಸತೋ
ತಾನ ತಂದನಾ..
ಹೊಸ ಹೊಸತು ಬದುಕೇ
ಕೋಲಣ್ಣಕೋಲೆ ||

***
ವಿ. ಸೂ : ಚಲುವಯ್ಯ ಚಲುವೋ ತಾನಿತಂದಾನ ಅಂತ ಒಂದು ಜಾನಪದ ಗೀತೆಯಿದೆ.. ನನ್ನ ಬಹಳ ಇಷ್ಟದ ಜಾನಪದ ಗೀತೆ ಇದು.. ಇದೇ ಗೀತೆಯನ್ನು ಇಂದಿನ ಕಾಲಕ್ಕೆ ತಕ್ಕಂತೆ ಅಲ್ಪ ಸ್ವಲ್ಪ ಬದಲಾಯಿಸಿ ಬರೆದಿದ್ದೇನೆ. ಯಾರೋ ಜಾನಪದ ಕವಿ ಪುಣ್ಯಾತ್ಮ ಇದನ್ನು ಬರೆದಿದ್ದಾನೆ. ಆತನಿಗೆ ಶರಣು ಶರಣಾರ್ಥಿ. ಆತನ ಬಳಿ ಕ್ಷಮೆ ಕೋರುತ್ತಿದ್ದೇನೆ. ಸುಮ್ಮನೆ ತಮಾಷೆಗೆಂಬಂತೆ ನಾನು ಬರೆದಿರುವ ಈ ಕವಿತೆ ನಿಮ್ಮ ಮುಂದೆ.
ಈ ಕವಿತೆ ಬರೆದಿದ್ದು ಶಿರಸಿಯಲ್ಲಿ ಫೆ.5, 2014ರಂದು.

Wednesday, January 28, 2015

ನಾನು-ನೀನು-ಪ್ರೀತಿ (ಗಝಲ್)

ನಾನು ಪ್ರೇಮದ ದೋಣಿ ನೀನೇ ಹಾಯಿ
ನಾನು ಉಲಿಯುವ ಸ್ವರ ನೀನೇ ಬಾಯಿ ||

ನಾನು ಹರಿಯುವ ನದಿ ನೀನೇ ಕಡಲು
ದುಮ್ಮಿಕ್ಕಿ, ಓಡೋಡಿ ಸೇರುವೆ ಒಡಲು ||

ನಾನು ಕಪ್ಪೆಯ ಚಿಪ್ಪು ನೀನು ಮುತ್ತು
ನೀನಿಲ್ಲದಿರೆ ಮಾತ್ರ ಬದುಕಿಗೆ ಕುತ್ತು ||

ನಾನು ಬಣ್ಣ ನೀನು ನೀರಿನ ತಿಳಿ
ಆಡೋಣ ಎಂದೆಂದೂ ಬಣ್ಣದೋಕುಳಿ ||

ನಾನು ಬಿರು ಭೂಮಿ ನೀನು ಹನಿಮಳೆ
ಬಾನಿಂದ ನೀನಿಳಿಯೆ ಹಸಿಯಾಗಲಿ ಇಳೆ ||


***

(ಸುಮ್ಮನೆ ಬರೆಯುತ್ತ ಸಾಗಿದ ಎರಡೆರಡು ಸಾಲುಗಳು.. ಗಝಲ್ ವ್ಯಾಪ್ತಿಗೆ ಬರುತ್ತದೋ ನಾನರಿಯೆ.. ಸುಮ್ಮನೆ ಒಂದು ಪ್ರಯತ್ನ ಮಾಡಿದ್ದೇನೆ ಅಷ್ಟೇ )
(ಕವಿತೆ ಬರೆದಿದ್ದು 28-1-2015ರಂದು ಶಿರಸಿಯಲ್ಲಿ)


Tuesday, January 27, 2015

ಅಘನಾಶಿನಿ ಕಣಿವೆಯಲ್ಲಿ-10

(ಸೀತಾದಂಡೆ.)
            ವಾಪಸ್ಸಾಗುವ ದಾರಿಯನ್ನು ಹಿಡಿದು ಎಲ್ಲರೂ ಬರುತ್ತಿದ್ದರು. ಸ್ವಲ್ಪ ದೂರ ಬಂದಿರಬಹುದಷ್ಟೇ, ಆಗ ಅಲ್ಲಿ ಒಬ್ಬ ವ್ಯಕ್ತಿ ನೆಲದ ಮೇಲೆ ಬಿದ್ದು ಹೊರಳಾಡುತ್ತಿರುವುದು, ಒದ್ದಾಡುತ್ತಿರುವುದು ಕಾಣಿಸಿತು. ಆ ವ್ಯಕ್ತಿಯ ಬಾಯಲ್ಲಿ ಬಿಳಿ ನೊರೆ ಬರುತ್ತಿತ್ತು. ಹತ್ತಿರ ಹೋಗಿ ನೋಡಿದಾಗ ಅಲ್ಲಿ ಬಿದ್ದಾತ ಆಗಷ್ಟೇ ಜಲತಾತದಿಂದ ಓಡಿ ಕಣ್ಮರೆಯಾದ, ಎಲ್ಲೆಂದರಲ್ಲಿ ಹಿಂಬಾಲಿಸಿ ಕಾಟಕೊಟ್ಟು ಕಾಡುತ್ತಿದ್ದ ಅಪರಿಚಿತನೇ ಎಂಬುದು ತಿಳಿಯಿತು. ಎಲ್ಲರೂ ಗಡಬಡಿಸಿ ಕೇಳಿದಾಗ ಆತ `ಹಾವು.. ಹಾವು..' ಎಂದು ಅಸ್ಪಷ್ಟವಾಗಿ ತೊದಲಿದ. ಎಲ್ಲರೂ ನೋಡಲಾಗಿ ಕಾಲಿನ ಪಾದದ ಬಳಿ ಹಾವು ಕಚ್ಚಿದ ಗುರುತು ಕಾಣಿಸಿತು. ವಿಕ್ರಮ ತಕ್ಷಣ ಪ್ರಥಮ ಚಿಕಿತ್ಸೆಗೆಂಬಂತೆ ಒಂದು ದಾರ ಹಾಗೂ ಬ್ಲೇಡನ್ನು ತೆಗೆದುಕೊಂಡ. ತಕ್ಷಣವೇ ಪ್ರದೀಪ `ಏ ವಿಕ್ರಂ.. ನಿನಗೆ ತಲೆ ಕೆಟ್ಟಿದೆಯಾ.. ಎಲ್ಲೆಂದರಲ್ಲಿ ಆತ ನಿನ್ನನ್ನು ಫಾಲೋ ಮಾಡಿ, ಕಾಟಕೊಟ್ಟವನು ಇವನು.. ಇಂತವನಿಗೆ ಪ್ರಥಮ ಚಿಕಿತ್ಸೆ ಯಾಕೆ ಮಾರಾಯಾ? ನಿನ್ನ ಫಾಲೋ ಮಾಡಿದವನ ಜೀವ ಉಳಿಸಲಿಕ್ಕೆ ನೋಡ್ತೀಯಲ್ಲೋ..' ಎಂದ.
             `ಏ ಸುಮ್ನಿರೋ.. ಪಾಪ ಆತ ಸಾಯ್ತಿದ್ದಾನೆ. ಸೇಡಿದ್ದರೆ ಅದು ಕೊನೆಗಿರಲಿ. ಈಗ ಆತನನ್ನು ಉಳಿಸೋದು ಮುಖ್ಯ. ಬದುಕಿ ಉಳಿದರೆ ಯಾಕೆ ನಮ್ಮನ್ನು ಆತ ಹಿಂಬಾಲಿಸುತ್ತಿದ್ದ ಎಂಬುದನ್ನು ಕೇಳಿದರಾಯ್ತು..' ಎಂದ ವಿಕ್ರಂ. ಜೊತೆಗೆ ಪ್ರದೀಪನ ಮಾತನ್ನು ನಿರ್ಲಕ್ಷಿಸಿ ಆಗಂತುಕನಿಗೆ ಪ್ರಥಮ ಚಿಕಿತ್ಸೆ ನೀಡಿದ.
              ಸ್ವಲ್ಪ ಹೊತ್ತಿನ ನಂತರ ಆ ಅಪರಿಚಿತ ವ್ಯಕ್ತಿ ಚೇತರಿಸಿಕೊಂಡ. ತಕ್ಷಣ ವಿಕ್ರಂ `ಈಗ ಹೇಳು.. ಯಾರು ನೀನು..?' ಎಂದ.
            `ಅದನ್ನೆಲ್ಲಾ ಆಮೇಲೆ ಹೇಳ್ತೀನಿ.. ಮೊದಲು ನಿಮ್ಮ ಮನೆಗೆ ಹೋಗೋಣ ನಡೀರಿ..' ಎಂದ ಆಗಂತುಕ.
            `ನಮ್ಮ ಮನೆಗಾ..? ಅದೆಲ್ಲಾ ಆಗೋದಿಲ್ಲ..'
            `ಮೊದ್ಲು ಹೋಗೋಣ.. ಆ ನಂತ್ರ ನಾನ್ಯಾರು ಎನ್ನುವುದನ್ನೆಲ್ಲಾ ಹೇಳ್ತೀನಿ.. ಪ್ಲೀಸ್ ನಾನು ಹೇಳೋದನ್ನು ಕೇಳಿ..' ಅಂಗಲಾಚಿದ ಆಗಂತುಕ.
             `ಓಕೆ.. ಸರಿ..' ಎಂದ್ಹೇಳಿ ಆತನನ್ನು ಕರೆದೊಯ್ಯಲು ಹೊರಟ ವಿಕ್ರಮನನ್ನು ಪ್ರದೀಪ ಮತ್ತೆ ವಿರೋಧಿಸಿದ. ಈಗಲೂ ಪ್ರದೀಪನ ಮಾತನ್ನು ತೆಗೆದುಹಾಕಲಾಯ್ತು. ಅಂತೂ ಸಂಜೆಯ ವೇಳೆಗೆ ಆ ಆಗಂತುಕನೊಡಗೂಡಿ ಅವರ ತಂಡ `ಕಣ್ಣೀರು ಮನೆ'ಗೆ ವಾಪಸಾಯಿತು.
              ಹಾಗಾದರೆ ಇದೇ ಕಥೆಗೆ ದೊಡ್ಡ ತಿರುವೇ? ಆ ಆಗಂತುಕ ಯಾರಿರಬಹುದು? ಆತ ಒಳ್ಳೆಯವನೇ? ಕೆಟ್ಟವನೇ? ಎಲ್ಲವುಗಳಿಗೂ ಕಾಲವೇ ಉತ್ತರ ಹೇಳಬೇಕು.

*****9*****

            ಅತ್ತ ಬೇಣದಗದ್ದೆಯ ಶಿವರಾಮನ ಮನೆಯಲ್ಲಿ, ಅಲ್ಲಿಗೆ ಬಂದಿದ್ದ ಸುಬ್ರಮಣ್ಯ ಅಲಿಯಾಸ್ ಸುಬ್ಬಣ್ಣ ಯಾವುದೋ ವಿಷಯಕ್ಕಾಗಿ ಶತಪಥ ತಿರುಗುತ್ತಿದ್ದ. ಆತನಿಗೆ ಬರಬೇಕಿದ್ದ ವಸ್ತುಗಳಿಗೋ, ಬರಬೇಕಿದ್ದ ವ್ಯಕ್ತಿಗಳಿಗೋ ಕಾಯುತ್ತಿರುವುದು ಸ್ಪಷ್ಟವಾಗಿತ್ತು. ಅದಲ್ಲದೇ ಈಗ್ಗೆರಡು ದಿನಗಳಿಂದ ತನ್ನ ಅಣ್ಣ ಬೇಣದಗದ್ದೆಯ ಶಿವರಾಮನಲ್ಲಿಯೂ ಏನೋ ಒಂದು ಬದಲಾವಣೆ ಆಗಿತ್ತು. ಮೊದಲಿನ ಹಾಗೇ ಇಲ್ಲದ ಆತನಿಗೆ ತಾನು ಮಾಡುತ್ತಿರುವ ಕೆಲಸದ ಬಗ್ಗೆ ಅನುಮಾನ ಬಂದಿದೆಯಾ ಎಂದೂ ಸುಬ್ರಹ್ಮಣ್ಯ ಯೋಚನೆ ಮಾಡುತ್ತಿದ್ದ. `ಹಾಗಾಗದಿದ್ದರೆ ಸಾಕು..' ಎಂದುಕೊಳ್ಳುತ್ತಿದ್ದ.
             ಹಾಗಾದರೆ ಆತ ಮಾಡುತ್ತಿದ್ದ ಕೆಲಸ ಏನು? ಮುಂದೆ ಶಿವರಾಮ್ ಹಾಗೂ ಸುಬ್ಬಣ್ಣ ಏನಾಗುತ್ತಾರೆ? ಎಲ್ಲವೂ ಗೋಜಲು ಗೋಜಲಾಗಲು ಆರಂಭಿಸಿತ್ತು.

*****

                `ಅದಕ್ಕುತ್ತ ಆನು ಹೇಳ್ತಿ.. ತಡಿ...' ಎಂದು ಧ್ವನಿ ಬಂದಾಗ ಎಲ್ಲರಿಗೆ ಅಚ್ಚರಿ. ತಿರುಗಿ ನೋಡಿದರೆ ರಾಜಾರಾಮ ಭಟ್ಟರು.
                  ಆ ಆಗಂತುಕನನ್ನು ಕಣ್ಣೀರು ಮನೆಗೆ ಕರೆತಂದ ನಂತರ ಆತನನ್ನು ವಿಚಾರಿಸಲಾಗಿ ರಾಜಾರಾಮ ಭಟ್ಟರು ಹೀಗೆಂದಿದ್ದರು.
               `ವಾಟ್.. ಇಂವನ ಬಗ್ಗೆ ನಿಂಗೊತ್ತಿದ್ದನಾ ಅಪ್ಪಯ್ಯಾ..' ಎಂದು ಕಕ್ಕಾಬಿಕ್ಕಿಯಾಗಿ ಕೇಳಿದ್ದ ವಿಕ್ರಮ. `ಹುಂ.. ಹೌದಾ.. ಪ್ವಾರಾ.. ಯಂಗೊತ್ತಿದ್ದು.. ಅದು ದೊಡ್ಡ ಕಥೆ.. ಇಂವ ಇದ್ನಲಾ.. ಇಂವ ಬೇರೆ ಯಾರೂ ಅಲ್ದಾ.. ಯಂಗಳ ರಾಂಕೃಷ್ಣ ಗಾಂವ್ಕಾರರ ಮನೆ ಪ್ವಾರನಾ.. ವಿಷ್ಣು..' ಎಂದು ಹೇಳಿದರು ಭಟ್ಟರು.
                `ಆ..? ಹೌದಾ..? ಹಂಗಾದ್ರೆ ಅಂವ ಯನ್ನ ಫಾಲೋ ಮಾಡಿದ್ದೆಂತಕ್ಕೆ? ಎಲ್ಲೋದ್ರೂ ಹಿಂದಿಂದೇ ಬರ್ತಿದ್ದಿದ್ದು, ಹುಡುಕ್ತಿದ್ದು, ಮಾತು ಕೇಳಲು ಪ್ರಯತ್ನ ಮಾಡ್ತಿದ್ದಿದ್ದು ಯಂತಕ್ಕೆ..?' ಕೇಳಿದ ವಿಕ್ರಮ.
                `ಹೇಳ್ತಿ ತಡಿ.. ಇಂವ ಸಣ್ಣಕ್ಕಿದ್ದಾಗ ಮನೆ ಬಿಟ್ಟು ಓಡಿ ಹೋಯಿದ್ನಡಾ ಹೇಳಿ ಹೇಳ್ತಿಪ್ವಿಲ್ಯಾ.. ಅದಾದ ಮೇಲೆ ಒಂದ್ ಸಲ ಯಂಗ ಯಾವ್ದೋ ಊರಲ್ಲಿ ಸಿಕ್ಕಿದ್ದ ಬಿಲ್ಯ.. ಅಲ್ಲಿ ಇವ್ನ ಪರಿಸ್ಥಿತಿ ಭಾಳ ತೊಂದ್ರೇಲಿ ಇತ್ತು.. ಆಗ ಇಂವನ್ನ ಾನೇ ಕಾಪಾಡಿದ್ದು..'
              `ಅದೇನೋ ಸರಿ.. ಆದ್ರೆ ಅಂವ ಯನ್ನ ಹಿಂದಿಂದೇ ಬರ್ತಿದ್ದಿದ್ದು ಯಂತಕ್ಕೆ? ವಿಷ್ಣೂನೇ ಹೇಳಿ ಯಂಗೆಂತಕ್ಕೆ ತಿಳೀದಿಲ್ಲೆ? ನಿ ಯಂತಕ್ಕೆ ಹೇಳಿದ್ಲೆ?'' ಎಂದು ನಡುವೆ ಬಾಯಿ ಹಾಕಿ ಕೇಳಿದ ವಿಕ್ರಮ.
               ``ಅಂವನ್ನ ನಿಂಗೆ ಸಹಾಯ ಮಾಡ ಹೇಳಿ ಆನೆ ಕಳಿಸಿದ್ದಿದ್ದಿ ಬಿಲ್ಯ. ನಿಂಗೆ ಯಾರೇ ತೊಂದ್ರೆ ಕೊಟ್ಟರೂ ಅಂವ ನಿನ್ನ ಉಳಿಸ್ತಿದ್ದ. ಹಂಗಾಗಿ ನಿನ್ನ ಜೊತೆಗೆ ಅಂವ ಬರ್ತಿದ್ದ. ಅಂವ ಆವಾಗಾವಾಗ ತನ್ನ ವೇಷ ಬದಲಾಯಿಸ್ತಿದ್ದ. ಅದಕ್ಕಾಗಿ ನಿಂಗೆ ಗೊತ್ತಾಯ್ದಿಲ್ಲೆ.. ಮತ್ತೆ ಅದನ್ನ ನಿಂಗೆ ತಿಳಿಸದು ಯಂಗೆ ಸಡಿ ಕಂಡಿದ್ಲೆ. ಜೊತಿಗೆ ನೀನು ಯಂತದ್ದನ್ನೇ ಮಾಡಿದ್ರೂ ಮಾಡ್ತಿದ್ರೂ ಅದನ್ನ ಯಂಗೆ ತಿಳಿಸ್ತಿದ್ದ. ನೀನು ಕುಂಗ್ ಫು ಶಾಲೆ ಬಿಟ್ಟು ಪೇಪರ್ರಿಗೆ ಸೇರಿದ್ದನ್ನೆಲ್ಲಾ ಯಂಗೆ ಇವನೇ ಹೇಳಿ ಬಿಟ್ಟಿಕಿದ.' ಎಂದರು ಭಟ್ಟರು.
            `ಅಯ್ಯಪ್ಪಾ.. ಎಲ್ಲಿಂದ ಎಲ್ಲೀವರೆಗೆ ಲಿಂಕ್ ಉಂಟಪ್ಪಾ..' ಎಂದು ಗೊಣಗಿದ ಪ್ರದೀಪ. ವಿಕ್ರಮ ಕಕ್ಕಾಬಿಕ್ಕಿಯಾಗಿದ್ದ.
            `ಇಷ್ಟೇ ಅಲ್ಲ ತಡಿ.. ನಿನ್ನ ಆ ಕುಂಗ್ ಫೂ ಶಾಲೆ ಯಂಗೆ ಇಷ್ಟ ಆಯ್ದಿಲ್ಲೆ.. ನಿಂಗೂ ಅದು ಗೊತ್ತಿದ್ದು.. ಅದಕ್ಕಾಗೇ ನೀನಾಗೇ ಆ ಶಾಲೆ ಬಾಗಿಲು ಹಾಕ್ಲಿ ಹೇಳಿ ನಾನು ಮಾಡಿದ್ದಿ.. ಕೊನೆಗೆ ಆ ಮಂಗ್ಳೂರಿನ ಪೇಪರ್ರಿನಲ್ಲಿ ಕೆಲ್ಸ ಸೊಗೋ ಹಂಗೆ ಮಾಡಿ, ನಿನ್ನ ಕೆಲಸ ಬದ್ಲು ಮಾಡದಿ.. ಇಷ್ಟೇ ಅಲ್ದಾ.. ಇನ್ನೂ ಒಂದು ಮುಖ್ಯ ಸಂಗ್ತಿ ಹೇಳ್ತಿ ಕೇಳು.. ಈ ವಿಜೇತಾ ಇದ್ದಲಾ.. ಇದು ಯಂಗೆ ಮೊದಲಿಂದ್ಲೂ ಗೊತ್ತಿತ್ತಿದ್ದೇಯಾ.. ಯನ್ನ ಷಡ್ಕ ಅಂದ್ರೆ ನಿನ್ನ ಆಯಿಯ ಕೌಟುಂಬಿಕ ಸಂಬಂಧಿಕರಡ. ಹಂಗಾಗಿ ಅವ್ಳೂ ಇದರಲ್ಲಿ ಮುಖ್ಯ ಪಾತ್ರ ವಹಿಸಿದ್ದ..' ಎಂದರು ಭಟ್ರು.
             ವಿಕ್ರಮನಿಗೆ ಮತ್ತೆ ದಿಘ್ಬ್ರಾಂತಿ. ತಾನು ನಂಬಿದ್ದ ವಿಜೇತಾ ಹೀಗಿರಲು ಸಾಧ್ಯ ಎಂದುಕೊಂಡಿರದ ವಿಕ್ರಮನಿಗೆ ಶಾಕ್ ಮೇಲೆ ಶಾಕ್. ತಾನು ನಂಬಿಕೊಂಡಿದ್ದೆಲ್ಲವೂ ಸುಳ್ಳಾದಂತೆ, ಜಗತ್ತಿನಲ್ಲಿ ತನ್ನ ವಿರುದ್ಧದಲ್ಲಿ ಗೂಢಚಾರಿಕೆ ಮಾಡಿದಂತೆ ಅನ್ನಿಸಿತು. ತಾನಂದುಕೊಂಡಿದ್ದೆಲ್ಲವೂ ನಿಜವಲ್ಲ. ತಾನೊಬ್ಬನೆ ಒಂದು ಕಡೆ.. ಉಳಿದವರೆಲ್ಲ ತನ್ನ ವಿರುದ್ಧ ಇರುವವರೇ.  ತನ್ನ ಅಸ್ತಿತ್ವವೇ ಸುಳ್ಳಾ.. ಇವರೆಲ್ಲರ ಆಟದ ಕಾಯಿಯಾಗಿ ತಾನು ಬಳಕೆಯಾದೆನಾ ಎಂದುಕೊಂಡ ವಿಕ್ರಮ. `ವಾಟ್.. ಇದನ್ನೆಲ್ಲಾ ನಂಬೂಲೆ ಆವ್ತ್ಲೆ.. ಹೌದಾ ವಿಜೇತಾ..?' ಎಂದ ವಿಕ್ರಮ.
               `ಯಸ್.. ಇದೆಲ್ಲಾ ನಂಗೂ ಗೊತ್ತಿತ್ತು.. ನನ್ನ ಹೆಲ್ಪ್ ಕೂಡ ಇತ್ತು. ಏನೋ ಲೈಫ್ ನಲ್ಲಿ ಒಂದು ಟ್ವಿಸ್ಟ್ ಇರಲಿ ಅಂತ ಹೀಗೆ ಮಾಡಿದೆ. ಆದರೆ ಈ ಊರನ್ನು ನಾನು ನೋಡಿರಲಿಲ್ಲ. ಯಾರ್ಯಾರದ್ದೋ ಮೂಲಕ ಭಟ್ರ ಬಗ್ಗೆ, ನಿನ್ನ ಬಗ್ಗೆ ನನಗೆ ತಿಳೀತು. ಏನೋ ಹೀಗೆ ಮಾಡಿದೆ. ಆದರೆ ಈ ವಿಷ್ಣುವಿನ ಬಗ್ಗೆ ನನಗೆ ಗೊತ್ತಿರಲಿಲ್ಲ. ಇನ್ನು ನಿನ್ನ ಬಗ್ಗೆ ಹೇಳಬೇಕಂದ್ರೆ ನಿನ್ನ ಚಿಕ್ಕಂದಿನಿಂದ್ಲೂ ನೋಡ್ತಿದ್ದೆ. ಆದರೆ ನಾನು ಬೆಳೆಯುತ್ತಿದ್ದಂತೆ ನನ್ನ ಮಮ್ಮಿ ಡ್ಯಾಡಿ ಮಂಗಳೂರಿಗೆ ಬಂದರು. ಹಾಗಾಗಿ ನೀನು ಏನಾದೆ ಎನ್ನುವುದು ಗೊತ್ತಾಗಿರಲಿಲ್ಲ. ಆ ನಂತರ ನಿನ್ನನ್ನು ನೋಡಿದ್ದು ಮಂಗಳೂರಿನಲ್ಲಿ ಕುಂಗ್ ಫೂ ಸಂದರ್ಶನದಲ್ಲಿ. ನಂತರ ಭಟ್ರು ಪರಿಚಯವಾದರು. ಕೊನೆಗೆ ನೀನು ಗೊತ್ತಿದ್ರೂ ಗೊತ್ತಿಲ್ಲದ ಹಾಗೆ ನಡೆದುಕೊಂಡೆ. ನಿಂಗೊತ್ತಿರಬಹುದು, ಒಂದಿನ ನೀನು ನಮ್ಮನೆಗೆ ಬಂದಿದ್ದಾಗ ನನ್ನ ಡ್ಯಾಡಿ ಶಿರಸಿ ಏರಿಯಾದಲ್ಲಿ ಎಲ್ಲಾ ಗೊತ್ತಿದೆ ಎಂದಿದ್ದರು. ಹೀಗೆ.. ಮೂಲತಃ ಅವರೂ ಇಲ್ಲಿಯ ಏರಿಯಾದವರೇ. ಜೊತೆಗೆ ನನಗೂ ಕೂಡ ಈ ಏರಿಯಾ ನೋಡೋಣ ಎನ್ನಿಸ್ತು ನಿಂಜೊತೆ ಬಂದು ಬಿಟ್ಟೆ..' ಎಂದಳು ವಿಜೇತಾ..
                ಉಫ್... ಒಂದು ಹೊಡೆತದ ಮೇಲೆ ಇನ್ನೊಂದು ಹೊಡೆತ.. ಒಂದನ್ನು ನಂಬಬೇಕೋ ಬೇಡ್ವೋ ಎನ್ನುವುದರೊಳಗೆ ಇನ್ನೊಂದು... ಯಾವ ಯಾವ ರೀತಿಯ ತಿರುವುಗಳು.. ಎಷ್ಟೆಲ್ಲಾ ಚೇಂಜು.. ಇದೆಲ್ಲ ಹೌದಾ.. ಆದರೆ ಯಾಕಾಗಿ ಇವೆಲ್ಲಾ? ನಿಮ್ಮೆಲ್ಲರ ಪಾಲಿಗೆ ನಾನು ಆಟದ ವಸ್ತು ಆದೆನಾ? ನಿಮ್ಮೆಲ್ಲರಿಗೂ ಎಲ್ಲವೂ ಗೊತ್ತಿದೆ. ಆದರೆ ನಾನು ಮಾತ್ರ ಏನೂ ಗೊತ್ತಿಲ್ಲದ ಹಾಗೆ ಬಫೂನ್ ಆಗಿಬಿಟ್ಟೆ.. ಪ್ರದೀಪ, ವಿನಾಯಕ.. ನೀವೂ ಈ ಸುರುಳಿಯ ಒಂದು ಭಾಗ ಆಗಿದ್ದರೆ ಹೇಳಿ ಬಿಡ್ರಪ್ಪಾ.. ಶಾಕುಗಳ ಸರಮಾಲೇ ಈಗಲೇ ಮುಗಿದು ಹೋಗಲಿ..' ದೀನನಾಗಿದ್ದ ವಿಕ್ರಮ
            ಪ್ರದೀಪ ಹಾಗೂ ವಿನಾಯಕರು ತಮಗೂ ಇದಕ್ಕೂ ಯಾವುದೇ ಸಂಬಂಧಿವಿಲ್ಲ. ತಮಗೇನೂ ಗೊತ್ತಿಲ್ಲ ಎಂದರು.
            `ತಂದೆಯಾದವಂಗೆ ಮಗನ್ನ ಸರಿಯಾದ ಹಾದಿಯಲ್ಲಿ ಹೋಗೂಲೆ ಹೇಳೋ ಹೊಣೆ ಇರ್ತು. ನೀನೂ ಕೂಡ ಒಳ್ಳೆಯ ದಾರಿಯಲ್ಲಿ ಹೋಗೂದು ನಂಗೆ ಬೇಕಿತ್ತು ಅದಕ್ಕಾಗಿ ಹಿಂಗೆ ಮಾಡಿದೆ..' ಎಂದರು ಭಟ್ಟರು.
              `ಹಂಗಾರೆ ಕುಂಗ್ ಫೂ ಕಲ್ಸೂದು ಒಳ್ಳೆ ದಾರಿ ಅಲ್ದಾ..?'
              `ಒಳ್ಳೇದೋ ಕೆಟ್ಟದ್ದೋ.. ನಮಗ್ಯಾಕೆ ಬೇಕು ಆ ಹೊಡೆದಾಟದ ವೃತ್ತಿ? ನಿನ್ನ ಆ ಹೊಲ್ಸು ಉಸಾಬರಿ ನಮಗೆ ಬೇಕಾದ ಹಣ ಕೊಡ್ತ್ಲೆ. ಅದು ಜೊತೆಗೆ ಸುಖಾ ಸುಮ್ನೆ ಮೈ ಮುರಿಯೋ ಹಂಗೆ ಒದ್ದಾಡೂದು. ಇನ್ನು ನಾವು ಹವ್ಯಕರು. ನಮಗೆಲ್ಲಾ ಇದು ಅವ್ತ್ಲೆ.. ನಾವು ಯಂತಿದ್ರೂ ಸಸ್ಯಾಹಾರಿಗಳು. ಅಂತಾದ್ದೆಲ್ಲಾ ಆ ನಾಯ್ಕರಿಗೋ, ಗೌಡ್ರಿಗೋ, ಕುಣಬಿ ಮರಾಟ್ಯಕ್ಕಗೋ, ಸಿದ್ದಿಗಳಿಗೋ ಲಾಯಕ್ಕು.. ಅದ್ಕೆ ಹಿಂಗ್ಮಾಡಿದಿ ಬಿಲ್ಯ. ಇನ್ನು ನೀನು ಪತ್ರಿಕೆಗೆ ಸೇರಿದ್ದು ನಾನು ಒಪ್ದಿ. ಯಂತಕ್ಕಂದ್ರೆ ಅದರಲ್ಲಿ ನಿಂಗೆ ಹೆಸರು ಬತ್ತು. ನಾಕು ಜನ ನಿನ್ನ ಬಗ್ಗೆ ಹೆಮ್ಮೆಯಿಂದ ಮಾತಾಡದ್ನ ನೋಡಲಾವುತು,, ಹಂಗಾಗಿ ಹಿಂಗ್ ಮಾಡದಿ..'
              ಭಟ್ಟರ ಈ ಮಾತಿಗೆ ವಿಕ್ರಮ ಏನೂ ಮಾತಾಡಲಿಲ್ಲ. ಅವನ ತಲೆಯ ತುಂಬಾ ದಿಗ್ಬ್ರಾಂತಿ, ವಿಶಿಷ್ಟತೆ, ಅಚ್ಚರಿ, ನಿಘೂಡತೆಗಳಲ್ಲೇ ತುಂಬಿ ಹೋಗಿತ್ತು. ಅಷ್ಟು ಹೊತ್ತಿಗೆ ಸಾಕಷ್ಟು ಕತ್ತಲೂ ಆವರಿಸಿದ್ದರಿಂದ ಎಲ್ಲರೂ ಮುಂದಿನ ಕಾರ್ಯಗಳತ್ತ ಮುಖಮಾಡಿದರು. ವಿಕ್ರಮ ಯೋಚಿಸಡೊಗಿದ್ದ.
               ಅಷ್ಟರಲ್ಲೇ ಊಟಕ್ಕೆ ಬುಲಾವ್ ಬಂದಿತ್ತು. ಊಟ ಮುಗಿದ ನಂತರ ವಿನಾಯಕ, ಪ್ರದೀಪ, ವಿಜೇತಾ ಇವರೆಲ್ಲ ವಿಷ್ಣುವಿನ ಬಳಿ ಮಾತನಾಡತೊಡಗಿದ್ದರು. ಆದರೆ ವಿಕ್ರಂ ಅವರ ಜೊತೆಗೆ ಸೇರಲಿಲ್ಲ. ಮನೆಯ ಹೊರಗೆ ಅಂಗಳದಲ್ಲಿ ಒಮದು ಕಡೆ ಕುಳಿತು ಆಲೋಚಿಸತೊಡಗಿದ್ದ.

(ಮುಂದುವರಿಯುತ್ತದೆ..)