Thursday, December 4, 2014

ಮುಪ್ಪಿನಲ್ಲೂ ಮುಕ್ಕಾಗದ ಕ್ರಿಯಾಶೀಲತೆ

ದೇಹಕ್ಕೆ ಮುಪ್ಪಾಗಿದ್ದರೂ ಕಲೆಗೆ, ಕ್ರಿಯಾಶೀಲತೆಗೆ ಮುಪ್ಪಿಲ್ಲ ಎನ್ನುವುದಕ್ಕೆ ನಗರದ ವೀರಭದ್ರಗಲ್ಲಿಯ ನಿವಾಸಿ ಮೀನಾಕ್ಷಿ ಶಿವಪ್ಪ ಬೆಂಡೀಗೇರಿ ಇವರೇ ಸಾಕ್ಷಿ. ವಯಸ್ಸು ಎಂಭತ್ತಾಗಿದ್ದರೂ ಚಟುವಟಿಕೆಯಿಂದ ಕೆಲಸ ಮಾಡುವ ಇವರ ಉತ್ಸಾಹ ಕುಂದಿಲ್ಲ.
ಮೀನಾಕ್ಷಿ ಬೆಂಡೀಗೇರಿಯವರ ಮನೆಯ ಒಳಹೊಕ್ಕರೆ ಸಾಕು. ನೋಡಗರನ್ನು ಹಲವಾರು ವಿಶಿಷ್ಟ ವಸ್ತುಗಳು ಸೆಳೆಯುತ್ತವೆ. ವಿಶಿಷ್ಟ ವಿನ್ಯಾಸದ ಬಾಗಿಲು ತೋರಣ, ಗ್ಲಾಸ್ ಪೇಂಟಿಂಗ್ಸ್, ಬಳೆ ಡಿಸೈನ್ಸ್, ಮೇಟಿ, ಉಲ್ಲನ್ನಿನ ಹಾರ ಹೀಗೆ ನೂರಾರು ಬಗೆಯ ವಸ್ತುಗಳನ್ನು ಮಾಡಿದ್ದಾರೆ. ಯವ್ವನದ ಹುರುಪಿನಲ್ಲಿಯೇ ಈಗಲೂ ಕೆಲಸ ಮಾಡುವ ಮೀನಾಕ್ಷಿ ಬೆಂಡೀಗೇರಿಯವರು ಸದಾ ಒಂದಿಲ್ಲೊಂದು ವಿಶಿಷ್ಟ ವಸ್ತುಗಳನ್ನು ತಯಾರಿಸುತ್ತಲೇ ಇರುತ್ತಾರೆ.
ಟಿಕಲಿ ಕುಶಲತೆ, ಸೀರೆ ಡಿಸೈನ್, ವಿಧ ವಿಧದ ಗೊಂಬೆಗಳು, ಉಲ್ಲನ್ನಿನ ರಚನೆಗಳು, ಮಫ್ಲರ್ಗಳು, ಬಟ್ಟೆಯ ಮೇಲಿನ ಅಲಂಕಾರಗಳು, ತೂಗಾಡುವ ವಿವಿಧ ಅಲಂಕಾರಿಕ ವಸ್ತುಗಳು ಹೀಗೆ ನೂರಾರು ಬಗೆಯ ವಸ್ತುಗಳು ಮೀನಾಕ್ಷಿ ಬೆಂಡೀಗೇರಿಯವರ ಕೈಯಲ್ಲಿ ಅರಳಿವೆ. ಟಿಕಲಿ ಸೇರಿದಂತೆ ಹಲವಾರು ವಸ್ತುಗಳಿಂದ ಮಾಡಿದ ಬಗೆ ಬಗೆಯ ಚಿತ್ರಗಳಿಗೆ ಗ್ಲಾಸು, ಮರದ ಚೌಕಟ್ಟನ್ನು ಹಾಕಿ ಇಡಲಾಗಿದೆ. ಮೀನಾಕ್ಷಿ ಅವರು ತಯಾರಿಸಿದ ಹಲವು ವಸ್ತುಗಳು ನಗರದ, ತಾಲೂಕಿನ, ಜಿಲ್ಲೆಯ ಬೇರೆ ಬೇರೆ ಸ್ಥಳಗಳಲ್ಲಿರುವ ಪರಿಚಯದವರ ಮನೆಯ ಕಪಾಟುಗಳನ್ನು ಅಲಂಕರಿಸಿವೆ. ಮನೆ ಮನೆಯ ಶೋಕೇಸ್ ಗಳಲ್ಲಿ ನಗುತ್ತ ನಿಂತಿವೆ.
(ಮೀನಾಕ್ಷಿ ಬೆಂಡೀಗೇರಿ)
80 ವರ್ಷ ವಯಸ್ಸಾಗಿರುವ ಮೀನಾಕ್ಷಿ ಶಿವಪ್ಪ ಬೆಂಡೀಗೇರಿ ಅವರು ಕಳೆದ 50 ವರ್ಷಗಳಿಂದ ವಿವಿಧ ಬಗೆಯ ವಸ್ತುಗಳನ್ನು ತಯಾರಿಸುತ್ತಿದ್ದಾರೆ. ಪರಿಚಯಸ್ತರು ಕೇಳಿದರೆ ಬಗೆ ಬಗೆಯ ವಸ್ತುಗಳನ್ನು ತಯಾರು ಮಾಡುವ ಮೀನಾಕ್ಷಿ ಬೆಂಡೀಗೇರಿಯವರು ದುಡ್ಡಿಗಾಗಿ ಎಂದೂ ಮಾರಾಟ ಮಾಡಿಲ್ಲ. ಬಗೆ ಬಗೆಯ ವಸ್ತುಗಳನ್ನು ತಯಾರು ಮಾಡಲು ಅಗತ್ಯವಿರುವ ಸಾಮಗ್ರಿಗಳನ್ನು ಅವರಿಗೆ ತಂದುಕೊಟ್ಟರೆ ಬಗು ಬೇಗನೆ ಬಯಸಿದ ಆಲಂಕಾರಿಕ ವಸ್ತುಗಳನ್ನು ತಯಾರಿಸಿಕೊಡುತ್ತಾರೆ. 50 ವರ್ಷದ ಅವಧಿಯಲ್ಲಿ ಅದೆಷ್ಟೋ ಸಹಸ್ರ ವಸ್ತುಗಳನ್ನು ತಯಾರು ಮಾಡಿರುವ ಮೀನಾಕ್ಷಿ ಬೆಂಡೀಗೇರಿಯವರು ಓದಿರುವುದು ಕೇವಲ 6ನೇ ತರಗತಿ. ಇವರಿಗೆ ಈಗಾಗಲೇ 2 ಸಾರಿ ಹೃದಯದ ಶಸ್ತ್ರಚಿಕಿತ್ಸೆಯೂ ಆಗಿದೆ. ಹೃದಯದ ಶಸ್ತ್ರಚಿಕಿತ್ಸೆ ಮೀನಾಕ್ಷಿ ಬೆಂಡೀಗೇರಿಯವರ ಉತ್ಸಾಹವನ್ನು ಕುಗ್ಗಿಸಿಲ್ಲ.
ಒಂದು ದಿನದಲ್ಲಿ ಕನಿಷ್ಟ 10 ತಾಸುಗಳ ಕಾಲ ಈ ರೀತಿಯ ವಿವಿಧ ವಸ್ತುಗಳನ್ನು ತಯಾರು ಮಾಡುತ್ತಾರೆ. ಹವ್ಯಾಸವಾಗಿ ಬೆಳೆದು ಬಂದಿರುವ ವಿಶಿಷ್ಟ ಕಲೆ ಮುಪ್ಪಿನಲ್ಲಿ ಬೇಸರವನ್ನು ಓಡಿಸುವ ಕಾರ್ಯವಾಗಿ ಬೆಳೆದು ನಿಂತಿದೆ. ಯುವಕರು, ಯುವತಿಯರು ನಾಚುವಂತೆ ಕೆಲಸ ಮಾಡುವ ಮೀನಾಕ್ಷಿ ಬೆಂಡೀಗೇರಿಯವರಿಗೆ 80 ವರ್ಷಗಳಾದರೂ ಕಣ್ಣು ಸೂಕ್ಷ್ಮವಾಗಿದೆ. 20 ವರ್ಷದ ಯುವಕರಿಗೆ ಕಣ್ಣಿನ ಸಮಸ್ಯೆ ಬಂದು ಕನ್ನಡಕ ಹಾಕಿಕೊಳ್ಳುತ್ತಿರುವ ಈ ಕಾಲದಲ್ಲಿ 80 ವರ್ಷದ ಮೀನಾಕ್ಷಿಯವರು ಯಾರ ಸಹಾಯವೂ ಇಲ್ಲದೇ ಸೂಜಿಗೆ ದಾರವನ್ನು ಪೋಣಿಸುವುದನ್ನು ನೋಡಿದಾಗ ಅಚ್ಚರಿಯೆನ್ನಿಸುತ್ತದೆ. ಅವರ ಕೈಗೆ ಯಾವುದೇ ವಸ್ತುಗಳು ಸಿಕ್ಕರೆ ಸಾಕು ಚಕಚಕನೆ ವಿಶಿಷ್ಟವಾದ ಆಕೃತಿ ಪಡೆದುಕೊಳ್ಳುತ್ತವೆ. ಗಣಪ, ಗೊಂಬೆ, ನವಿಲು, ಬಾತುಕೋಳಿ, ತಾಜಮಹಲ್, ತೂಗಾಡುವ ಬೆಳಕಿನ ದೀಪಗಳು, ಆಕಾಶ ಬುಟ್ಟಿಗಳು ಹೀಗೆ ಮೀನಾಕ್ಷಿಯವರ ಕೈಯಿಂದ ಜೀವತಳೆದ ವಸ್ತುಗಳು ಒಂದಕ್ಕಿಂತ ಒಂದು ಸುಂದರವಾಗಿದೆ. ನೋಡುಗರನ್ನು ಸೆಳೆಯುತ್ತವೆ.
ಮೀನಾಕ್ಷಿ ಬೆಂಡೀಗೇರಿಯವರಿಗೆ 12 ಜನ ಮಕ್ಕಳು. ಅವರಲ್ಲಿ 6 ಮಕ್ಕಳು ಬದುಕಿದ್ದಾರೆ. ಶಿರಸಿ ಮೂಲದವರೇ ಆಗಿರುವ ಮೀನಾಕ್ಷಿಯವರ ಕೈಚಳಕ ವೀಕ್ಷಿಸುವವರು ಮೀನಾಕ್ಷಿಯವರ ಮೊಮ್ಮಗ ನಿರಂಜನ ಅವರ ಮೊಬೈಲ್ ಸಂಖ್ಯೆ 8123297802ಗೆ ಕರೆ ಮಾಡಬಹುದಾಗಿದೆ.
****
ಕಳೆದ 50 ವರ್ಷಗಳಿಂದ ನಾನು ವಿವಿಧ ಬಗೆಯ ವಸ್ತುಗಳನ್ನು ತಯಾರಿಸುತ್ತಿದ್ದೇನೆ. ಈಗ ಈ ವಸ್ತುಗಳೇ ನನಗೆ ಬೇಸರ ಕಳೆಯುತ್ತವೆ. ಒಂದು ದಿನಕ್ಕೆ 4-5 ವಿವಿಧ ವಸ್ತುಗಳನ್ನು ತಯಾರು ಮಾಡಬಲ್ಲೆ. ಯಾರಿಗೂ ಮಾರಾಟ ಮಾಡುವುದಿಲ್ಲ. ಬದಲಾಗಿ ಖುಷಿಯಿಂದ ಮಾಡಿಕೊಡುತ್ತೇನೆ. ಹಲವರು ನನ್ನಿಂದ ವಿವಿಧ ವಸ್ತುಗಳನ್ನು ತಯಾರು ಮಾಡುವುದನ್ನು ಕಲಿತುಕೊಂಡವರಿದ್ದಾರೆ. ನನಗಿಂತ ಜಾಸ್ತಿ ಸಾಧನೆ ಮಾಡಿವರನ್ನು ಕಂಡು ಸಂತಸವಾಗುತ್ತದೆ.
~ಮೀನಾಕ್ಷಿ ಬೆಂಡೀಗೇರಿ
ವೀರಭದ್ರಗಲ್ಲಿ
***
ನನ್ನ ಅಜ್ಜಿ ಪ್ರತಿದಿನ ಹಲವಾರು ಆಲಂಕಾರಿಕ ವಸ್ತುಗಳನ್ನು ತಯಾರು ಮಾಡುತ್ತಾರೆ. ಅವರಿಗೆ ಅಗತ್ಯವಾದ ವಸ್ತುಗಳನ್ನು ನಾವು ಮಾರುಕಟ್ಟೆಗೆ ಹೋಗಿ ತಂದುಕೊಡುತ್ತೇವೆ. ಸದಾ ಒಂದಿಲ್ಲೊಂದು ವಸ್ತುವನ್ನು ಮಾಡುತ್ತಲೇ ಇರುತ್ತಾರೆ. ಅವರ ಕಣ್ಣು ಇನ್ನೂ ಸೂಕ್ಷ್ಮವಾಗಿದೆ. ಯಾರ ಮೇಲೂ ಅವಲಂಬಿತರಾಗಿಲ್ಲ. ಕೆಲವೊಮ್ಮೆ ಅವರ ಉತ್ಸಾಹ ಕಂಡು ನಾವು ದಂಗಾಗಿದ್ದಿದ್ದೆ. ಅವರ ಕಾರ್ಯ ವೈಖರಿ ನಮಗೆ ಸಂತೋಷವನ್ನು ನಿಡುತ್ತದೆ.
~ನಿರಂಜನ
ಮೀನಾಕ್ಷಿಯವರ ಮೊಮ್ಮಗ

Tuesday, December 2, 2014

ಸಾಧನೆಗೆ ಅಂಗವೈಕಲ್ಯ ಅಡ್ಡಿಯಲ್ಲ

ಅಂಗವೈಕಲ್ಯದಲ್ಲೂ ಸಾಧನೆ ಮಾಡುತ್ತಿರುವ ವಿನಾಯಕ ಹೆಗಡೆ
***
(\ವಿನಾಯಕ ಹೆಗಡೆ/)
ಸಾಧಿಸುವ ಛಲ ಎಂತವರಲ್ಲೂ ಕಿಚ್ಚನ್ನು ಹಚ್ಚಿಸುತ್ತದೆ. ಸಾಧಿಸಬೇಕೆಂಬ ಮನಸ್ಸಿದ್ದರೆ ಅಂಗವೈಕಲ್ಯವೂ ತಡೆಯಾಗುವುದಿಲ್ಲ. ಅಂಗವೈಕಲ್ಯವಿದ್ದರೂ ಸಾಧನೆ ಮಾಡುತ್ತಿರುವ ವ್ಯಕ್ತಿಯೊಬ್ಬರು ಶಿರಸಿಯಲ್ಲಿದ್ದಾರೆ ಅವರೇ ವಿನಾಯಕ ಹೆಗಡೆ.
ನಗರದಲ್ಲಿ ಊದಬತ್ತಿ ವಿನಾಯಕ ಎಂದೇ ಖ್ಯಾತಿಯನ್ನು ಗಳಿಸಿರುವ ವಿನಾಯಕ ಹೆಗಡೆ ಅಂಗವೈಕಲ್ಯದಿಂದ ಬಳಲುತ್ತಿದ್ದಾರೆ. ವಿನಾಯಕ ಹೆಗಡೆಯವರನ್ನು ಸಮಾಜ ಬುದ್ಧಿಮಾಂದ್ಯ ಎಂದು ಕಡೆಗಣಿಸಿಬಿಟ್ಟಿದೆ. ನಗರದ ಕೆ.ಎಚ್.ಬಿ. ಕಾಲೋನಿಯ ನಿವಾಸಿಯಾಗಿರುವ ವಿನಾಯಕ ಹೆಗಡೆ ಊದಬತ್ತಿ, ಧೂಪ, ಕಪರ್ೂರ, ಲೋಬಾನ ಈ ಮುಂತಾದ ಗೃಂಧಿಗೆ  ವಸ್ತುಗಳನ್ನು ಮಾರಾಟ ಮಾಡುವ ಮೂಲಕ ಜೀವನವನ್ನು ನಡೆಸುತ್ತಿದ್ದಾರೆ.
ವಿನಾಯಕನ ಶೃದ್ಧೆ, ಛಲ, ಹೋರಾಟ ಮನೋಭಾವ, ಗುರಿ ಇತ್ಯಾದಿಗಳ ಬಗ್ಗೆ ಎರಡು ಮಾತಿಲ್ಲ. ಕೇವಲ 24 ವರ್ಷ ವಯಸ್ಸಿನ ವಿನಾಯಕ ಹೆಗಡೆ ಹತ್ತನೇ ತರಗತಿಯ ವರೆಗೆ ಓದಿದ್ದಾನೆ. ಜೀವನದಲ್ಲಿ ಕಠಿಣ ಶ್ರಮ ವಹಿಸಿದರೆ ಏನನ್ನು ಬೇಕಾದರೂ ಸಾಧಿಸಬಹುದು ಎನ್ನುವುದಕ್ಕೆ ವಿನಾಯಕನೇ ಸಾಕ್ಷಿ. ಪ್ರಾರಂಭದ ದಿನಗಳಲ್ಲಿ ವಿನಾಯಕ ಹೆಗಡೆ ನಗರದಲ್ಲಿ ಊದಬತ್ತಿ ತಂದು ಮಾರಾಟ ಮಾಡಲು ಆರಂಭಿಸಿದರೆ ಕೊಳ್ಳುವವರೇ ಇರಲಿಲ್ಲ. ಬೇಡವೇ ಬೇಡ ಎಂದು ಹೀಗಳೆದವರು ಅನೇಕಮಂದಿ. ಹೀಗಿದ್ದಾಗಲೇ ಸ್ಥಳೀಯರ ನೆರವಿನಿಂದಲೇ ಊದಬತ್ತಿ ಮಾರಾಟದ ಪಟ್ಟುಗಳನ್ನು ಕಲಿತವನು ವಿನಾಯಕ ಹೆಗಡೆ. ಕೆಲವೇ ವರ್ಷಗಳ ಹಿಂದೆ ಸಮಾಜ ಈತನನ್ನು ಬುದ್ಧಿಮಾಂದ್ಯ, ಮಾನಸಿಕ ಅಸ್ವಸ್ಥ ಎಂದೆಲ್ಲ ಕರೆದಿತ್ತು. ಇಂತಹ ವ್ಯಕ್ತಿ ಈಗ ಸಂಪೂರ್ಣ ಸ್ವಾವಲಂಬಿ. ಮಾನಸಿಕವಾಗಿ ಸ್ವಸ್ಥಡೀಗ ಒಬ್ಬನೇ ಹುಬ್ಬಳ್ಳಿಗೆ ಹೋಗಿ, ಹುಬ್ಬಳ್ಳಿ ನಗರವನ್ನು ಸುತ್ತಾಡಿ ಊದಬತ್ತಿ, ಲೋಬಾನ, ಕಪರ್ೂರ ಸೇರಿದಂತೆ ಅಗತ್ಯವಸ್ತುಗಳನ್ನು ಯಾರ ಸಹಾಯವಿಲ್ಲದೇ ತರಬಲ್ಲ. ಅದನ್ನು ಶಿರಸಿಗೆ ತಂದು ಮಾರಾಟ ಮಾಡಬಲ್ಲವನಾಗಿದ್ದಾನೆ.
ಊದಬತ್ತಿ ಮಾರಾಟದ ಆರಂಭದ ದಿನಗಳಲ್ಲಿ ಅಪಾರ ಕಷ್ಟವನ್ನು ಅನುಭವಿಸಿದ ವಿನಾಯಕನನ್ನು ಹೀಗಳೆದವರೇ ಅನೇಕ. ಆದರೆ ಆತನ ಶೃದ್ಧೆ, ಛಲ, ವಿಶ್ವಾಸ, ಸಾಧಿಸಬೇಕೆಂಬ ಬಯಕೆ ಎಲ್ಲರನ್ನೂ ಮರುಳು ಮಾಡಿಬಿಟ್ಟಿದೆ. ಹೀಗಳೆದವರೇ ಈಗ ಆತನ ಬೆನ್ನಿಗೆ ನಿಂತಿದ್ದಾರೆ. ಆರಂಭದ ದಿನಗಳಲ್ಲಿ ವಿನಾಯಕನಿಂದ ಊದಬತ್ತಿಯನ್ನು ಕೊಂಡವರು ದುಡ್ಡನ್ನು ಕೊಡದೇ ಸತಾಯಿಸಿದ್ದಾರೆ. ಆದರೆ ವಿನಾಯಕನ ಶ್ರಮ ಅವರ ಮನಸ್ಸನ್ನು ಬದಲಿಸಿಬಿಟ್ಟಿದೆ. ಊದಬತ್ತಿ ಕೊಳ್ಳಲು ಯಾರು ಹಿಂದೇಟು ಹಾಕಿದ್ದರೋ ಅವರೇ ತಮ್ಮ ಪರಿಚಯದವರಿಗೆ ಹೇಳಿ ವಿನಾಯಕನ ಬಳಿ ಊದಬತ್ತಿಯನ್ನು ಕೊಳ್ಳುವಂತೆ ಮಾಡುತ್ತಿದ್ದಾರೆ. ನಗರದ ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡುವವರು ವಿನಾಯಕನ ಊದಬತ್ತಿಯ ಖಾಯಂ ಗಿರಾಕಿಗಳು. ಬ್ಯಾಂಕ್ ನೌಕರರು, ಲಾಯರ್ಗಳೂ ಈತನ ಊದಬತ್ತಿಯನ್ನು ಕೊಳ್ಳುವವರೇ. ದೈಹಿಕ ವೈಕಲ್ಯದ ಕಾರಣದಿಂದಾಗಿ ಮಾತನಾಡಲು ಕಷ್ಟಪಡುವ ವಿನಾಯಕನ ಸ್ನೇಹಮಯ ಮನೋಭಾವ ಎಲ್ಲರನ್ನು ಸೇಳೆದುಬಿಟ್ಟಿದೆ. ಇದೀಗ ವಿನಾಯಕ ಹೆಗಡೆ ಊದಬತ್ತಿಯನ್ನು ಮಾರಾಟ ಮಾಡಲು ಹಿಡಿದು ಐದು ವರ್ಷಗಳಾಗಿವೆ.
ವಿನಾಯಕನ ಮನೆಯಲ್ಲಿ ತಾಯಿ, ಮಗ ಇಬ್ಬರೇ. ತಾಯಿಗೆ ಅನಾರೋಗ್ಯ. ಊದಬತ್ತಿಯನ್ನು ಮಾರಾಟ ಮಾಡುವ ಮಗ ತಾಯಿಯನ್ನು ಸಾಕುತ್ತಿದ್ದಾನೆ. ಬದುಕಿನಲ್ಲಿ ಅದಿಲ್ಲ, ಇದಿಲ್ಲ, ಉದ್ಯೋಗವಿಲ್ಲ, ಸೌಲಭ್ಯವಿಲ್ಲ ಎಂದು ಕೊರಗುವವರಿಗೆ ವಿನಾಯಕ ಒಂದು ಮಾದರಿಯಾಗುತ್ತಾನೆ. ಜೀವನದಲ್ಲಿ ಮುಂದೆ ಊದಬತ್ತಿ ಮಾರಾಟವನ್ನು ದೊಡ್ಡ ಉದ್ಯಮವನ್ನಾಗಿ ಮಾಡಿ ನಾಲ್ಕಾರು ಜನರಿಗೆ ಕೆಲಸವನ್ನು ನೀಡಬೇಕು ಎನ್ನುವ ಕನಸನ್ನು ಹೊಂದಿರುವ ವಿನಾಯಕ ಹೆಗಡೆಯ ಶ್ರಮಕ್ಕೆ ಎಲ್ಲರೂ ಬೆಂಬಲ ನೀಡುತ್ತಿದ್ದಾರೆ. ಇಂತಹ ವಿನಾಯಕನಿಗೆ ಶಿರಸಿ ನಗರದಾದ್ಯಂತ ಮಿತ್ರರೇ. ಕೆಲವು ಮೊಬೈಲ್ ಶಾಪಿನವರು ಈತನಿಗೆ ವ್ಯಾಪಾರ ಮಾಡಿಸಿಕೊಟ್ಟರೆ ನಗರದ ಅನೇಕ ಆಟೋಗಳವರು ವಿನಾಯಕನಿಂದ ದುಡ್ಡನ್ನು ತೆಗೆದುಕೊಳ್ಳದೇ ಬೇಕಾದಲ್ಲಿಗೆ ಆತನನ್ನು ಕರೆದೊಯ್ದು ಬಿಡುತ್ತಾರೆ. ನಗರದ ಬಹುತೇಕ ಬ್ಯಾಂಕುಗಳ ನೌಕರರು ಈತನ ಬಳಿ ವ್ಯಾಪಾರ ಮಾಡುತ್ತಾರೆ. ಈತನ ಶ್ರಮವನ್ನು ಕಂಡ ನಗರವಾಸಿಗಳು ನಗರದ ಬ್ಯಾಂಕಿನಲ್ಲಿ ಸಾಲವನ್ನೂ ಕೊಡಿಸಿದ್ದಾರೆ.
ಯಾರೂ ತನ್ನನ್ನು ಕರುಣೆಯಿಂದ ಕಾಣುವುದು ಬೇಡ. ಹೀಗಳೆಯುವುದು ಬೇಡ. ಕಷ್ಟಪಟ್ಟು ವ್ಯಾಪಾರ ಮಾಡುತ್ತೇನೆ. ಅದಕ್ಕೆ ಬೆಲೆ ನೀಡಿದರೆ ಸಾಕು ಎನ್ನುವ ವಿನಾಯಕ ಹೆಗಡೆ ಊದಬತ್ತಿ ವ್ಯಾಪಾರದಲ್ಲಿ ಮಹತ್ ಸಾಧನೆಯನ್ನು ಮಾಡುವ ಗುರಿ ಇಟ್ಟುಕೊಂಡಿದ್ದಾನೆ. ಸಾಧನೆಯ ಮಾರ್ಗದಲ್ಲಿ ಅಂಗವೈಕಲ್ಯತೆ ಸಮಸ್ಯೆಯೇ ಅಲ್ಲ ಎನ್ನುವುದು ಈತನ ಮನದಾಳದ ಮಾತು. ನೂರಾರು ಜನ ನಿರುದ್ಯೋಗಿಗಳಿಗೆ, ವಿಕಲಚೇತನರಿಗೆ ವಿನಾಯಕ ಹೆಗಡೆ ಮಾದರಿಯಾಗಿದ್ದಾನೆ. ತಮ್ಮ ಕಾಲಿನ ಮೇಲೆ ತಾವೇ ನಿಂತುಕೊಳ್ಳಲು ಸ್ಪೂರ್ತಿಯಾಗಿದ್ದಾನೆ. ಊದಬತ್ತಿ ವಿನಾಯಕ ಹೆಗಡೆಯವರನ್ನು ಸಂಪರ್ಕಿಸಬೇಕಾದರೆ 9483068087 ಈ ದೂರವಾಣಿಗೆ ಕರೆ ಮಾಡಬಹುದಾಗಿದೆ.

Monday, November 24, 2014

ಬಯಕೆ

ಮುಗಿಲು ಮುಟ್ಟಿದೆ  ನೂರು ಚಿಂತೆ
ಕೇಳುವವರು ಇಲ್ಲವೇ |
ಒಡಲು ತುಂಬಿದೆ ನೋವ ಸಂತೆ
ಅರಿಯುವವರು ಇಲ್ಲವೆ ||

ತುಂಬಿ ತುಳುಕಿದೆ ನೋವು ದುಗುಡ
ಹಂಚಿಕೊಳ್ಳಲೆ ನಾನು?
ಹಲವು ಪ್ರೀತಿ, ಸವಿ ನುಡಿಯ
ತುಂಬಿ ಕೊಡುವಿರೆ ನೀವು?|

ನನ್ನ ದುಗುಡಕೆ ನೀವು ನೀಡಿ
ಪುಟ್ಟ ನಲಿವು-ಪ್ರೀತಿ |
ನನ್ನ ಭಯವ ಅರಿತು ನೀವು
ಮಾತಿನಿಂದಲೇ ಓಡಿಸಿ ||

**

(ಈ ಕವಿತೆಯನ್ನು ಬರೆದಿರುವುದು 10-12-2006ರಂದು ದಂಟಕಲ್ಲಿನಲ್ಲಿ)

Saturday, November 22, 2014

ಬೆಂಗಾಲಿ ಸುಂದರಿ-41

(ಖೈದಿಗಳ ಕೋಣೆ)
         ಗುಂಡಿಯ ಒಳಗೆ ಕತ್ತಲಿದ್ದ ಕಾರಣ ಏನೊಂದೂ ಗೊತ್ತಾಗಲಿಲ್ಲ. ಆದರೆ  ಮುಂಚಾಚಿಕೊಂಡಿದ್ದ ಆ ಹೊಂಡದಲ್ಲಿ ತಡವರಿಸುತ್ತಾ, ಎಡವುತ್ತಾ, ಏಳುತ್ತ ಬೀಳುತ್ತ ಮುಂದಕ್ಕೆ ಸಾಗಿದ ವಿನಯಚಂದ್ರ. ದೂರದಲ್ಲಿ ಮಬ್ಬು ಬೆಳಕು ಕಂಡಂತಾಯಿತು. ಸೀದಾ ಬಂದು ಆ ಬೆಳಕಿನ ಕಿಂಡಿಯಲ್ಲಿ ಇಣುಕಿದವನಿಗೆ ಭಾರತದ ಗಡಿಯಲ್ಲಿ ಬಂದಿರುವುದು ಖಾತ್ರಿಯಾಯಿತು. ಒಮ್ಮೆ ಮೈಮನಸ್ಸುಗಳಿಗೆ ರೆಕ್ಕೆ ಬಂದಂತಾಯಿತು. ಮಧುಮಿತಾಳನ್ನು ಕರೆದುಕೊಂಡು ಬರಬೇಕು ಎಂದುಕೊಂಡು ಅದೇ ಗುಂಡಿಯಲ್ಲಿ ಮತ್ತೆ ವಾಪಾಸಾದ. ವಿನಯಚಂದ್ರ ವಾಪಾಸು ಬರುವ ವೇಳೆಗೆ ಸರ್ಚ್ ಲೈಟ್ ಮತ್ತೆ ನಾಲ್ಕು ಸುತ್ತು ಸುತ್ತಿ ಬಂದಿತ್ತು. ಸಮಯವನ್ನು ನೋಡಿ ಮಧುಮಿತಾ ಅಡಗಿ ಕುಳಿತಿದ್ದ ಪೊದೆಯ ಬಳಿ ಹೋದರೆ ಅಲ್ಲಿ ಮಧುಮಿತಾಳಿಗಿಂತ ಮೊದಲು ಅಮ್ಜದ್ ಕಾಣಿಸಿದ. ವಿನಯಚಂದ್ರನಿಗೆ ಮತ್ತೆ ರೇಗಿಹೋಯಿತು. ಆವಾಗಲೇ ಹಿಂಬಾಲಿಸಬೇಡ ಎಂದರೂ ಮತ್ತೆ ಜೊತೆಗೆ ಬಂದಿದ್ದೀಯಾ ಎಂದು ಬೈದುಕೊಂಡು ಹೊಡೆತ ಹಾಕಲು ಮುನ್ನುಗ್ಗಿದವನನ್ನು ಮಧುಮಿತಾಳೇ ತಡೆದಳು.
          ತಾನು ಹೋಗಿಬಂದ ಸಂಗತಿಯನ್ನು ವಿವರಿಸಿದ ವಿನಯಚಂದ್ರ ಆಕೆಯನ್ನು ಆ ಗುಂಡಿಯ ಮೂಲಕ ಭಾರತಕ್ಕೆ ಕರೆದೊಯ್ಯಲು ಹವಣಿಸಿದ. ಮತ್ತೆರಡು ಸಾರಿ ಸರ್ಚ್ ಲೈಟ್ ಸುತ್ತು ಹೊಡೆಯಿತು. ಮಧ್ಯರಾತ್ರಿಯಾಗಿರುವುದು ಖಾತ್ರಿಯಾಗಿತ್ತು. ನಿಧಾನವಾಗಿ ಕೂರುತ್ತ, ಏಳುತ್ತ, ನಡೆಯುತ್ತ ಮುಂದಕ್ಕೆ ಸಾಗಿ ತಾನು ಹೊಂಡದಲ್ಲಿ ಇಳಿದ ವಿನಯಚಂದ್ರ ಮಧುಮಿತಾಳನ್ನು ಇಳಿಸಿದ. ಮುಂದಕ್ಕೆ ಸಾಗುತ್ತಿರುವ ವೇಳೆ ಧಬಾರ್ ಎನ್ನುವ ಸದ್ದಾಯಿತು. ಏನೋ ಯಡವಟ್ಟಾಗಿದೆ ಎಂದು ಆಲೋಚನೆ ಮಾಡುತ್ತಿದ್ದಂತೆ ತಮ್ಮನ್ನು ಹಿಂಬಾಲಿಸುತ್ತ ಬಂದ ಅಮ್ಜದ್ ನೆನಪಾದ. `ತಥ್.. ಹಾಳಾದವನು.. ನಮ್ಮ ಯೋಜನೆ ಹಾಳುಮಾಡುತ್ತಿದ್ದಾನೆ..' ಎಂದು ಬೈದುಕೊಂಡ. ವಿನಯಚಂದ್ರ ಹಾಗೂ ಮಧುಮಿತಾರನ್ನುಹಿಂಬಾಲಿಸಿ ಬಂದಿದ್ದ ಅಮ್ಜದ್ ಆ ಗುಂಡಿಯ ಆಳವನ್ನು ಅರಿಯದೇ ಉರುಳಿಬಿದ್ದಿದ್ದ. ಉರುಳಿದ್ದ ರಭಸಕ್ಕೆ ಆತನ ಕಾಲು ತಿರುಚಿಕೊಂಡಿತ್ತು. ಒಮ್ಮೆ ನರಳಿದ. ದೊಡ್ಡದಾಗಿ ಕೂಗಿದರೆ ಎಲ್ಲಿ ಭಾರತಕ್ಕೆ ನುಸುಳುವಲ್ಲಿ ತೊಂದರೆಯಾಗುತ್ತದೆಯೋ ಎಂದು ಬಾಯಿ ಕಚ್ಚಿ ನೋವನ್ನು ಸಹಿಸಿಕೊಂಡ. ವಿನಯಚಂದ್ರ ಮುಂದಕ್ಕೆ ಕತ್ತಲೆಯಲ್ಲಿ ಸಾಗುತ್ತಿದ್ದರೆ ಆತನ ಕೈ ಹಿಡಿದು ಮಧುಮಿತಾ ಹಿಂದಕ್ಕೆ ಅನುಸರಿಸಿಕೊಂಡು ಬರುತ್ತಿದ್ದಳು.
            20-25 ಮೀಟರ್ ದೂರವಿದ್ದ ಆ ಸುರಂಗ ಒಬ್ಬರು  ಕುಕ್ಕರು ಗಾಲಿನಲ್ಲಿ ಸಾಗುವಷ್ಟು ದೊಡ್ಡದಾಗಿತ್ತು. ಸಾಕಷ್ಟು ಇಕ್ಕಟ್ಟಾಗಿಯೂ ಇತ್ತು. ವಿನಯಚಂದ್ರ ಮುಂದೆ ಹೋಗುತ್ತಿದ್ದವನು ಭಾರತದ ಗಡಿಯೊಳಗಿನ ಗುಂಡಿಯಲ್ಲಿ ಇಣುಕಿದ. ಇಣುಕಿದವನು ಹಾಗೇ ಕೆಲ ಸಮಯ ಕಾಯುತ್ತ ನಿಂತ. ಹಿಂದೆ ಬರುತ್ತಿದ್ದ ಮಧುಮಿತಾ `ಏನಾಯ್ತು..?' ಎಂದು ಪಿಸುದನಿಯಲ್ಲಿ ಕೇಳಿದಳು. `ಶ್..' ಎಂದು ಸನ್ನೆ ಮಾಡಿದವನೇ ಮತ್ತೆ ಕಾಯುತ್ತ ಕುಳಿತ.
         ಸಮಯ ಸರಿಯುತ್ತಲೇ ಇತ್ತು. ಆದರೆ ವಿನಯಚಂದ್ರ ಆ ಸುರಂಗದಿಂದ ಹೊರ ಹೋಗುತ್ತಲೇ ಇಲ್ಲ. ಸುರಂಗದ ಒಳಗೆ ಕುಳಿತ ಮಧುಮಿತಾಳಿಗಂತೂ ಉಸಿರುಕಟ್ಟಿದ ಅನುಭವವಾಗತೊಡಗಿತ್ತು. ಭಾರತದ ಗಡಿಯೊಳಗೆ ಸೈನಿಕರು ಓಡಾಡಲು ಆರಂಭಿಸಿದ್ದರು. ಈ ಕಾರಣಕ್ಕಾಗಿ ವಿನಯಚಂದ್ರ ಮುಂದಕ್ಕೆ ಹೋಗದೆ ಕುಳಿತಿದ್ದ. ಭಾರತದ ಸೈನಿಕರ ಕಣ್ಣಿಗೆ ಬೀಳದಂತೆ ಇರಬೇಕಿತ್ತು. ಚಿಕ್ಕ ಸದ್ದಾದರೂ ಭಾರತದ ಸೈನಿಕರ ಮಿಷಿನ್ ಗನ್ನುಗಳು ದೇಹದಲ್ಲಿ ಗುಂಡುಗಳನ್ನು ಇಳಿಸುತ್ತಿದ್ದವು. ಆದ್ದರಿಂದ ವಿಳಂಬವಾದರೂ ಕಾಯುವುದು ಅನಿವಾರ್ಯವಾಗಿತ್ತು.
          ಮುಂಬದಿಯಲ್ಲಿ ವಿನಯಚಂದ್ರ, ಹಿಂಬದಿಯಲ್ಲಿ ಅಮ್ಜದ್ ಇದ್ದ ಕಾರಣ ನಡುವೆ ಸಿಕ್ಕಿಬಿದ್ದಂತಾಗಿದ್ದ ಮುಧುಮಿತಾಳಿಗೆ ಉಸಿರಾಡಲು ಅವಕಾಶವೇ ಇಲ್ಲ ಎನ್ನುವಂತಾಗಿತ್ತು. ಬೆವರು ಧಾರಾಕಾರವಾಗಿ ಇಳಿಯುತ್ತಿತ್ತು. ಸಮಯ ಕಳೆದಂತೆಲ್ಲ ಕಿರಿಕಿರಿಯುಮಟಾಗಲು ಆರಂಭವಾಯಿತು. ವಿನಯಚಂದ್ರನ ಬಳಿ ಬೇಗ ಹೋಗಲು ಸಾಧ್ಯವೇ ಎಂದು ಮತ್ತೊಮ್ಮೆ ಕೇಳಿದ್ದಳು. ಆದರೆ ಹೊರ ಭಾಗದಲ್ಲಿ ಸೈನಿಕರ ಸಂಚಾರ ಇನ್ನೂ ನಿಂತಂತಿರದ ಕಾರಣ ವಿನಯಚಂದ್ರನಿಗೆ ಏನು ಹೇಳಬೇಕೋ ಅರ್ಥವಾಗದೇ ಸುಮ್ಮನುಳಿದಿದ್ದ.
           ಮತ್ತೊಂದು ಅರ್ಧ ಗಂಟೆಯ ನಂತರ ಭಾರತೀಯ ಸೈನಿಕರು ದೂರಕ್ಕೆ ಹೋದಂತಾಯಿತು. ಅಷ್ಟರಲ್ಲಿ ಮಧುಮಿತಾ ಬಸವಳಿದಿದ್ದಳು. ಸರ್ಚ್ ಲೈಟ್ ಹಾದು ಹೋಗಿದ್ದನ್ನು ಗಮನಿಸಿ ನಿಧಾನಕ್ಕೆ ಹೊರಬಂದ. ಅವನ ಹಿಂದೆ ಮಧುಮಿತಾಳೂ ಬೇಗನೆ ಹೊರಕ್ಕೆ ಮುಖ ಹಾಕಿ ದೀರ್ಘವಾಗಿ ಉಸಿರೆಳೆದುಕೊಂಡಳು. ನಾಲ್ಕೈದು ಸಾರಿ ಉಸಿರೆಳೆದುಕೊಂಡ ನಂತರ ಆಕೆಗೆ ಸಮಾಧಾನವಾದಂತಾಯಿತು. ವಿನಯಚಂದ್ರ ಆ ಸುರಂಗವಿದ್ದ ಪ್ರದೇಶದಿಂದ ಸುತ್ತಮುತ್ತ ಎಲ್ಲಾದರೂ ಪೊದೆಗಳಿದೆಯೇ ಎನ್ನುವುದನ್ನು ವೀಕ್ಷಿಸಿದ. ಅಲ್ಲೆಲ್ಲೋ ಒಂದು ಕಡೆ ಚಿಕ್ಕದೊಂದು ಗಿಡವಿತ್ತು. ಮಧುಮಿತಾಳ ಕೈ ಹಿಡಿದವನೇ ಓಡಿದಂತೆ ಆ ಗಿಡದ ಬುಡಕ್ಕೆ ಹೋದ. ವಿಚಿತ್ರವೆಂದರೆ ಈ ಗಿಡದ ಹತ್ತಿರಕ್ಕೆ ಅಮ್ಜದ್ ಮಾತ್ರ ಬಂದಿರಲಿಲ್ಲ. ಎಲ್ಲಿ ಹೋಗಿಬಿಟ್ಟನೋ ಎಂದುಕೊಂಡ ವಿನಯಚಂದ್ರ. ಸುರಂಗದಲ್ಲಿ ಉಸಿರು ಕಟ್ಟಿ ಸಿಕ್ಕಿಬಿದ್ದನೇ ಎಂದುಕೊಂಡಳು ಮಧುಮಿತಾ. ಪಿಸುದನಿಯಲ್ಲಿ ವಿನಯಚಂದ್ರನ ಬಳಿ `ಅಮ್ಜದ್ ನನ್ನು ನೋಡಿ ಬರೋಣವೇ..?' ಎಂದು ಕೇಳಿದಳು. ವಿನಯಚಂದ್ರ ಸಿಟ್ಟಿನಿಂದ `ನಿನಗೆ ತಲೆಕೆಟ್ಟಿದೆಯಾ? ಈಗಲೇ ಕಷ್ಟಪಟ್ಟು ಇಲ್ಲಿಗೆ ಬಂದಾಗಿದೆ. ಇನ್ನು ಮತ್ತೆ ವಾಪಾಸು ಹೋಗಿ ಆತನನ್ನು ಹುಡುಕಿ ಬರೋದು ಅಂದ್ರೆ ಸುಮ್ಮನೆ ಆಗುವ ಕೆಲಸವಲ್ಲ. ಯಾರಿಗ್ಗೊತ್ತು ಮತ್ತೆ ಸೈನಿಕರು ವಾಪಾಸು ಬಂದರೆ..? ಸುಮ್ಮನೆ ಆ ಬಗ್ಗೆ ಮಾತನಾಡಬೇಡ..' ಎಂದ. 
            ದೂರದಲ್ಲೆಲ್ಲೋ ಯಾರದ್ದೋ ಹೆಜ್ಜೆಯ ಸಪ್ಪಳ ಕೇಳುತ್ತಿತ್ತು. ನಿಶ್ಶಬ್ಧವಾಗಿದ್ದ ಆ ಸ್ಥಳದಲ್ಲಿ ವಿನಯಚಂದ್ರ ಹಾಗೂ ಮಧುಮಿತಾ ಇಬ್ಬರು ತೆವಳುತ್ತ ತೆವಳುತ್ತ ಮುಂದಕ್ಕೆ ಸಾಗಿದ್ದರು. ಅರ್ಚಕರು ಭಾರತ ಗಡಿಯಲ್ಲೊಂದು ರಸ್ತೆಯಿದೆ ಎಂದು ಹೇಳಿದ್ದರಲ್ಲ ಅದರ ಕಡೆಗೆ ಸಾಗಬೇಕಿತ್ತು.  ನಡು ನಡುವೆ ಸರ್ಚ್ ಲೈಟಿನ ಕಣ್ಣು ತಪ್ಪಿಸಲೇ ಬೇಕಿತ್ತು. ಮುಂದೆ ಮುಂದೆ ಸಾಗುತ್ತಿದ್ದಂತೆ ಇದ್ದಕ್ಕಿದ್ದಂತೆ ಆ ಸಮಯದಲ್ಲೇ ಯಾರೋ ಓಡಿದಂತಹ ಅನುಭವವಾಯಿತು. ಹೆಜ್ಜೆಯ ಸಪ್ಪಳ ತೀವ್ರವಾಗಿತ್ತು. ಅದೇ ಸಮಯದಲ್ಲಿ ಇದ್ದಕ್ಕಿದ್ದಂತೆ ಗುಂಡಿನ ಮೊರೆತವೂ ಕೇಳಿತು. ಒಬ್ಬ ವಿಕಾರವಾಗಿ ಅರಚಿಕೊಂಡಿದ್ದೂ ಕೇಳಿಸಿತು. ಬೆಚ್ಚಿಬಿದ್ದ ವಿನಯಚಂದ್ರ ಹಾಗೂ ಮಧುಮಿತಾ ಒಮ್ಮೆಲೆ ಬೆವೆತುಬಿಟ್ಟರು.
           ಇಬ್ಬರಿಗೂ ಗುಂಡು ತಗುಲಿರಲಿಲ್ಲ. ಹಾಗಾದರೆ ಯಾರಿಗೆ ಗುಂಡು ತಾಗಿದೆ ಎನ್ನುವ ಪ್ರಶ್ನೆ ಉದ್ಭವವಾಗಿತ್ತು. ಮಧುಮಿತಾ ಮೆಲ್ಲಗೆ `ಅಮ್ಜದ್..' ಎಂದಳು. `ಇರಬಹುದು.. ಹಿಂಬಾಲಿಸಬೇಡ ಎಂದಿದ್ದೆ.. ಕೇಳಲಿಲ್ಲ.. ಗುಂಡಿಗೆ ಸಿಕ್ಕು ಸತ್ತನೇನೋ..' ಎಂದು ಪಿಸುಗುಟ್ಟಿದ ವಿನಯಚಂದ್ರ. `ಛೇ..' ಎಂದು ತಲೆಕೊಡವಿದಳು ಮಧುಮಿತಾ.. ಆದರೆ ಏನೂ ಸ್ಪಷ್ಟವಾಗಲಿಲ್ಲ. ಅಮ್ಜದ್ ಬದುಕಿದ್ದರೆ ಸಾಕಿತ್ತು ಎಂದುಕೊಂಡಳು.
           ಭಾರತದ ಫಾಸಲೆಯಲ್ಲಿ ಪೊದೆಯಂತಹ ರಚನೆಗಳು ಜಾಸ್ತಿಯಿದ್ದವು. ಗಡಿಯಿಂದ ಸಾಕಷ್ಟು ದೂರ ಬಂದಿದ್ದೇವೆ ಎನ್ನುವುದು ಅರಿವಾದಾಗ ಇಬ್ಬರೂ ನಿಂತುಕೊಂಡರು. ತೆವಳಿದ ಪರಿಣಾಮವಾಗಿ ಇಬ್ಬರ ಬಟ್ಟೆಗಳೂ ಅಲ್ಲಲ್ಲಿ ಸಾಕಷ್ಟು ಹರಿದಿತ್ತು. ತನ್ನನ್ನು ನಂಬಿ ಬಂದ ಮಧುಮಿತಾಳಿಗೆ ಏನೆಲ್ಲ ಕಷ್ಟಗಳನ್ನು ನೀಡಬೇಕಾಗಿ ಬಂತಲ್ಲ ಎಂದುಕೊಂಡ ವಿನಯಚಂದ್ರ. ಆಕೆಯ ಕಿವಿಯಲ್ಲಿ ಪಿಸುಗುಟ್ಟಿದ. ಆಕೆ ಆತನ ಬಾಯನ್ನು ಮುಚ್ಚಿ ಸುಮ್ಮನಿರುವಂತೆ ಹೇಳಿದಳು. `ಹಾಗೇಕೆ ಅಂದ್ಕೊಳ್ತೀಯಾ ವಿನು.. ಈಗ ಇಷ್ಟೆಲ್ಲ ಕಷ್ಟಗಳು ಬಂದಿದೆ ನಿಜ. ಆದರೆ ಮುಂದಿನ ದಿನಗಳು ಚನ್ನಾಗಿಯೇ ಇರುತ್ತವೆ. ಉಜ್ವಲವಾಗಿಯೂ ಇರುತ್ತವೆ.. ಇದಕ್ಕೆ ಬೇಜಾರು ಮಾಡ್ಕೋಬೇಡ್ವೋ..' ಎಂದಳು.
          ಅಷ್ಟರಲ್ಲಿ `ಕೌನ್ ಹೇ..' ಎಂಬ ಗಡುಸಾದ ಮಾತೊಂದು ಕೇಳಿಸಿತು. ಮಾತು ಕೇಳಿದ ತಕ್ಷಣವೇ ಇಬ್ಬರೂ ತಮ್ಮೆರಡೂ ಕೈಗಳನ್ನು ಮೇಲೆತ್ತಿ ದಬಾರನೆ ನೆಲದ ಮೇಲೆ ಬಿದ್ದುಕೊಂಡರು. ಒಬ್ಬ ಸೈನಿಕ ಬಂದೂಕನ್ನು ಹಿಡಿದು ಬಂದಿದ್ದ. ಬಂದವನೇ ವಿನಯಚಂದ್ರನ ಕಾಲಿಗೆ ಒಂದು ಗುಂಡನ್ನು ಹೊಡೆದೇಬಿಟ್ಟಿದ್ದ. ವಿನಯಚಂದ್ರ ಗುಂಡನ್ನು ತಿಂದ ಪರಿಣಾಮ ನರಳಲು ಆರಂಭಿಸಿದ. ಕಣ್ಣು ಮಂಜಾದಂತೆ ಆಗುತ್ತಿತ್ತು.  ಸೈನಿಕ ನಂತರ ಇಬ್ಬರನ್ನೂ ಕಟ್ಟಿಹಾಕಿದ್ದ. ಮಧುಮಿತಾಳ ತಲೆಗೊಂದು ಏಟನ್ನು ಹಾಕಿದ್ದ. ಇಬ್ಬರೂ ಎಚ್ಚರ ತಪ್ಪಿದ್ದರು.
          ವಿನಚಯಚಂದ್ರ ಕಣ್ಣುಬಿಡುವ ವೇಳೆಗೆ ಕೋಣೆಯೊಂದರಲ್ಲಿ ಬಂಧಿಯಾಗಿದ್ದ. ಎದುರು ಇದ್ದ ಸೈನಿಕ ಅಧಿಕಾರಿಗಳು ವಿನಯಚಂದ್ರನ ಮುಖಕ್ಕೆ ನೀರನ್ನು ಸೋಕುತ್ತಿದ್ದರು. ವಿನಯಚಂದ್ರನಿಗೆ ಎಚ್ಚರ ಬಂದಿದ್ದೇ ತಡ ಕಮಾಂಡರ್ ಒಬ್ಬ ಬಂದು ಮುಖಕ್ಕೆ ಏಟು ಕೊಟ್ಟು ಯಾರು ನೀನು, ಎಂಬಂತೆಲ್ಲ ವಿಚಾರಿಸತೊಡಗಿದ. ವಿನಯಚಂದ್ರ ಮಾತನಾಡಲು ಆರಂಭಿಸಿದ. ತನ್ನ ಕಥೆಯನ್ನು ಸಂಪೂರ್ಣ ಹೇಳಿದ. ಸೈನಿಕರು ಅದೆಷ್ಟು ನಂಬಿದರೋ ತಿಳಿಯಲಿಲ್ಲ. ಏಟುಗಳು ಬೀಳುತ್ತಲೇ ಇದ್ದವು.
          ಬಂಧಿಯಾಗಿದ್ದ ಒಂದು ದಿನದ ನಂತರ ಕಮಾಂಡರ್ ಒಬ್ಬ ಬಂದು ವಿನಯಚಂದ್ರನ ಬಳಿ ಆತನ ಕಥೆಯನ್ನು ಮತ್ತೊಮ್ಮೆ ಕೇಳಿದ. ವಿನಯಚಂದ್ರ ಹೇಳಿದ ನಂತರ `ನೀವು ಹೇಳಿದ್ದನ್ನು ಪರಿಶೀಲನೆ ಮಾಡುತ್ತೇವೆ. ಹೇಳಿದ್ದು ಸತ್ಯವಾಗಿದ್ದರೆ ತೊಂದರೆಯಿಲ್ಲ. ಆದರೆ ಸುಳ್ಳಾಗಿದ್ದರೆ ಇಬ್ಬರನ್ನೂ ಗುಂಡು ಹೊಡೆದು ಸಾಯಿಸಲಾಗುತ್ತದೆ.. ಎಚ್ಚರಿಕೆ..' ಎಂದರು.
          `ಆದರೂ ಭಾರತದ ಗಡಿಯೊಳಕ್ಕೆ ನುಸುಳು ಬರಬಾರದಿತ್ತು. ನೀವು ನುಸುಳಿ ಬಂದಿದ್ದಕ್ಕಾದರೂ ಶಿಕ್ಷೆಯನ್ನು ಅನುಭವಿಸಲೇಬೇಕಾಗುತ್ತದೆ..' ಎಂದು ಹೇಳಿ ಕಮಾಂಡರ್ ಕೋಣೆಯಿಂದ ಹೊರಕ್ಕೆ ಹೋದರು. ಮಧುಮಿತಾ ಅಲ್ಲೇ ಇದ್ದಾಳಾ ಎನ್ನುವುದು ವಿನಯಚಂದ್ರನಿಗೆ ಗೊತ್ತಾಗಲಿಲ್ಲ. ಸೈನಿಕರು ಆಕೆಯನ್ನೂ ಹಿಂಸಿಸುತ್ತಾರಾ ಎಂದುಕೊಂಡು ಭೀತಿಗೊಳಗಾದ. ಭಾರತದ ಸೈನಿಕರು ಹಾಗೆಲ್ಲ ಮಾಡೋದಿಲ್ಲ ಎಂದುಕೊಂಡು ಸಮಾಧಾನವನ್ನೂ ಪಟ್ಟುಕೊಂಡ. ದುರದ ಕರ್ನಾಟಕ ಕೈಬೀಸಿ ಕರೆಯುತ್ತಿತ್ತು. ಆಗಸದ ಅಂಚಿನಲ್ಲಿ  ಹೊಸ ಕನಸಿನ ಸೂರ್ಯೋದಯವಾಗುತ್ತಿತ್ತು.

(ಮುಗಿಯಿತು)

ಕಾದಂಬರಿ ಬರೆಯುವ ಸಂದರ್ಭದಲ್ಲಿ ಮಾಹಿತಿಗಾಗಿ ನಾನು ಮೊರೆ ಹೋದದ್ದು :

* ಬಾಂಗ್ಲಾದೇಶದ ಹಿಂದೂಗಳ ಮಾರಣಹೋಮದ ಕುರಿತು ಗೂಗಲ್ ವೀಕಿಪಿಡಿಯಾ ಮಾಹಿತಿಗಳು
* ಬಾಂಗ್ಲಾ ಹಿಸ್ಟರಿ (ಇಂಗ್ಲೀಷ್ ಪುಸ್ತಕ)
* ಕಬ್ಬಡ್ಡಿ ವೀಡಿಯೋಗಳು
* ಕಬ್ಬಡ್ಡಿ ಕುರಿತು ಯುಟ್ಯೂಬ್ ವೀಡಿಯೋಗಳು, ವೀಕಿಪಿಡಿಯಾ ಮಾಹಿತಿಗಳು
* ರವೀಂದ್ರನಾತ್ ಠ್ಯಾಗೂರ್ ರ ಪುಸ್ತಕಗಳು (ಕನ್ನಡ ಅನುವಾದ)
* ಅಮ್ಜದ್ ಹುಸೇನ್ (ಫೇಸ್ ಬುಕ್ಕಿನ ಬೆಂಗಾಲಿ ಗೆಳೆಯ) ಕೊಟ್ಟ ಕೆಲವು ಮಾಹಿತಿಗಳು
* 1971 (ಬಾಂಗ್ಲಾದೇಶದ ಕಾದಂಬರಿ)
* Bangladesh at war- biplob roy
* ಅಸ್ಲಂ ಶಫೀಕ್ ಅವರು ಬರೆದ ಹಿಂದೂ ಟೆಂಪಲ್ಸ್, ಹೋಮ್ಸ್ ಅಟ್ಯಾಕ್ಡ್ ಅಕ್ರಾಸ್ ಬಾಂಗ್ಲಾದೇಶ (ಲೇಖನ ಮಾಲಿಕೆ ಕೃಪೆ : ಇಂಟರ್ನೆಟ್)

ಇತ್ಯಾದಿ..

ಕೊನೆಯ ಮಾತು :
         ಈ ಕಾದಂಬರಿಯನ್ನು ಬರೆಯಲು ಆರಂಭಿಸಿ ಬಹುತೇಕ 10 ತಿಂಗಳುಗಳೇ ಕಳೆದುಹೋದವು. ಆಗೊಮ್ಮೆ ಈಗೊಮ್ಮೆ ಸಮಯ ಸಿಕ್ಕಾಗ ಬರೆಯುತ್ತಿದ್ದೆ. ಆದರೆ ಕಳೆದ ಜೂನ್ ನಿಂದ ಈಚೆಗೆ ಸೀರಿಯಸ್ ಆಗಿ ಬರೆಯಲು ಆರಂಭಿಸಿದ್ದೆ. ಬರವಣಿಗೆ ನಿಧಾನವಾದಾಗ ಎಚ್ಚರಿಸಿ ಬೇಗ ಬರೆಯಲು ಹೇಳಿದ್ದು, ಲೈಟಾಗಿ ಎಚ್ಚರಿಕೆ ನೀಡಿದ್ದು ನೀವು. ಬರೆದಿದ್ದನ್ನು ಯಾರು ಓದ್ತಾರೆ.. ಸುಮ್ಮನೆ ವೇಸ್ಟು ಎಂದುಕೊಂಡಾಗಲೆಲ್ಲಾ ಅಭಿಪ್ರಾಯ ತಿಳಿಸಿ, ನನ್ನ ಮನೋಭಾವವನ್ನು ಬದಲು ಮಾಡಿದ ನಿಮಗೆಲ್ಲರಿಗೆ ಮತ್ತೊಮ್ಮೆ ನಾನು ಧನ್ಯವಾದ ಹೇಳಲೇಬೇಕು. ಮೊದಲಿಗೆ 35 ಭಾಗಗಳಿಗೆ ಮುಗಿಸಬೇಕು ಎಂದುಕೊಂಡವನು ಕೊನೆಗೆ 41ಕ್ಕೆ ಮುಗಿಸಿದ್ದೇನೆ. ಇಷ್ಟವಾಗಿದೆ ಎನ್ನುವುದು ನನ್ನ ಮನದ ಭಾವನೆ. ನಿಜಕ್ಕೂ ನಾನು ಪೂರ್ಣವಾಗಿ ಬರೆದ ಮೊದಲ ಕಾದಂಬರಿ ಇದು. ಈ ಮೊದಲು `ಅಘನಾಶಿನಿ ಕಣಿವೆಯಲ್ಲಿ..' ಎಂಬ ಕಾದಂಬರಿಯೊಂದನ್ನು ಅರ್ಧ ಬರೆದು ಇಟ್ಟಿದ್ದೇನೆ. ಅದನ್ನು ಮುಂದಿನ ದಿನಗಳಲ್ಲಿ ಪೂರ್ಣಗೊಳಿಸುತ್ತೇನೆ. ಮುಂದೆ ಬೆಂಗಾಲಿ ಕಾದಂಬರಿ ಪುಸ್ತಕ ರೂಪದಲ್ಲಿ ಹೊರಬಂದರೆ ಬ್ಲಾಗಿನಲ್ಲಿ ಬರೆದಾಗ ನೀಡಿದ ಸಹಾಯ, ಸಹಕಾರ, ಪ್ರೀತಿ, ಆದರಗಳನ್ನು ನೀಡುತ್ತೀರಿ ಎಂಬ ನಂಬಿಕೆ ನನ್ನದು. ಮತ್ತೊಮ್ಮೆ ಎಲ್ಲರಿಗೂ ಧನ್ಯವಾದಗಳು

ಬೆಂಗಾಲಿ ಸುಂದರಿ -40

(ವಿನಯಚಂದ್ರ-ಮಧುಮಿತಾ ದಾಟಿದ ಗಡಿ ಭಾಗದ ಹಳ್ಳ)
             ಆಗಾಗ ಬೀಳುತ್ತಿದ್ದ ಸರ್ಚ್ ಲೈಟಿನ ಬೆಳಕಿನಿಂದಾಗಿ ದೂರದಲ್ಲಿ ಮಬ್ಬು ಮಬ್ಬಾಗಿ ಬಾಂಗ್ಲಾ ಹಾಗೂ ಭಾರತದ ನಡುವೆ ಇರುವ ತಡೆಗೋಡೆ ಅಸ್ಪಷ್ಟವಾಗಿ ಕಾಣುತ್ತಿತ್ತು. ರಿಕ್ಷಾವಾಲ ತಾನಿನ್ನು ಮುಂದಕ್ಕೆ ಹೋಗುವುದು ಅಪಾಯವೆಂದೂ ಹೇಳಿದ. ಇಲ್ಲೇ ನಿಲ್ಲುತ್ತೇನೆ ಎಂದು ಹೇಳಿದವನು ದೂರದಲ್ಲಿ ಹರಿಯುತ್ತಿದ್ದ ನದಿಯೊಂದನ್ನು ತೋರಿಸಿದ. ಆ ನದಿಯ ಬಳಿ ಹೋದರೆ ಭಾರತದೊಳಕ್ಕೆ ನುಸುಳಲು ಸುಲಭವಾಗುತ್ತದೆ ಎಂದು ಹೇಳಿದ. ಪುಟ್ಟ ನದಿಯೊಂದು ದೈತ್ಯನದಿಯಾದ ಜಮುನೆಯನ್ನು ಸೇರುವ ಸ್ಥಳ ಅದಾಗಿತ್ತು. ಆ ನದಿಯ ಹತ್ತಿರ ಗಡಿ ಅಸ್ಪಷ್ಟವಾಗಿತ್ತು.
             ಅರ್ಚಕರು ಗಡಿಬಿಡಿ ಬೇಡ ಎಂದು ಸನ್ನೆ ಮಾಡಿದರು. ಗಡಿ ಬೇಲಿಯಿದ್ದ ಸ್ಥಳದಲ್ಲಿ ಸೇನಾಪಡೆಯ ಜವಾನರು ಇದ್ದಂತೆ ಕಾಣಲಿಲ್ಲ. ಅರ್ಚಕರು ಇಳಿದನಿಯಲ್ಲಿ ನದಿಯ ಬಳಿ ಸೈನಿಕರಿರುತ್ತಾರೆ. ಆದರೆ ಇಲ್ಲಿ ಅವರ ಸಮಸ್ಯೆಯಿಲ್ಲ. ಬೇಲಿಯಿರುವ ಕಾರಣ ಸೈನಿಕರ ಸಂಖ್ಯೆ ಕಡಿಮೆಯಿದೆ. ಆದರೆ ಬೇಲಿ ಕಡಿಮೆಯಿರುವಲ್ಲಿ ಸೈನಿಕರು ಜಾಸ್ತಿ ಇರುತ್ತಾರೆ ಎಂದು ಹೇಳಿದರು.
           ಗಡಿಯ ಪರಿಸ್ಥಿತಿಯನ್ನು ಎಷ್ಟು ಸೂಕ್ಷ್ಮವಾಗಿ ಅರ್ಚಕರು ಅರಿತುಕೊಂಡಿದ್ದಾರಲ್ಲ ಎಂದುಕೊಂಡ ವಿನಯಚಂದ್ರ. ದೂರದಿಂದ ನೋಡಿದರೆ ಆರಾಮಾಗಿ ದಾಟಬಹುದು ಎನ್ನಿಸುವಂತಿದ್ದ ಗಡಿ ಪ್ರದೇಶವನ್ನು ದಾಟುವುದು ಅಂದುಕೊಂಡಂತಿರಲಿಲ್ಲ. ಮುಂದಿನ ಹಾದಿಯಂತೂ ಕತ್ತಿಯ ಮೇಲಿನ ನಡುಗೆಯೇ ಆಗಿತ್ತು. ಇಲ್ಲಿಯವರೆಗೆ ಹಾದು ಬಂದಿದ್ದು ಒಂದು ಹೆಜ್ಜೆಯಾದರೆ ಇನ್ನುಮುಂದೆ ಹೋಗಬೇಕಿರುವುದೇ ಮತ್ತೊಂದು ಹೆಜ್ಜೆಯಾಗಿತ್ತು.
            ಮತ್ತಷ್ಟು ಕತ್ತಲಾಯಿತು. ಅರ್ಚಕರು ನಿಧಾನವಾಗಿ ಸನ್ನೆ ಮಾಡಿದರು. ತಮ್ಮನ್ನು ಹಿಂಬಾಲಿಸುವಂತೆ ಹೇಳಿದ ಅರ್ಚಕರು ಮುನ್ನಡೆಯಲು ಆರಂಭಿಸಿದರು. ಅವರ ಹಿಂದೆ ವಿನಯಚಂದ್ರ ಹಾಗೂ ಕೊನೆಯಲ್ಲಿ ಮಧುಮಿತಾ ಇದ್ದರು. 100 ಮೀಟರ್ ಸಾಗುವ ವೇಳೆಗೆ ಅರ್ಚಕರು ವಿನಯಚಂದ್ರನ ಬಳಿ ಗಡಿ ಪ್ರದೇಶದ ಕಡೆಗೆ ಕೈ ತೋರಿಸುತ್ತಾ `ಅದೋ ಅಲ್ಲಿ ನೋಡಿ.. ಆ ಕಡೆ ಚಿಕ್ಕದೊಂದು ದಿಬ್ಬ ಕಾಣುತ್ತದಲ್ಲ. ಅಲ್ಲೊಂದು ಸುರಂಗವಿದೆ. ಸಮಯ ನೋಡಿಕೊಂಡು ಆ ಸುರಂಗ ದಾಟಬೇಕು. ಜಾಗೃತೆಯಾಗಿರು. ಆ ಸುರಂಗದ ಆಚೆಗೆ ಭಾರತೀಯ ಸೈನಿಕರು ಇದ್ದರೂ ಇರಬಹುದು. ಐದು ನಿಮಿಷಕ್ಕೊಮ್ಮೆ ಅಥವಾ ಆ ಸಮಯದೊಳಗೆ ಸರ್ಚ್ ಲೈಟ್ ಸುತ್ತು ಹಾಕುತ್ತದೆ. ಎಚ್ಚರವಿರಲಿ. ನಾನು ಇನ್ನು ಮುಂದಕ್ಕೆ ಬರುವುದು ಸರಿಯಲ್ಲ. ನಾನು ಮಾಡಬೇಕಿರುವ ಕಾರ್ಯ ಸಾಕಷ್ಟಿದೆ. ಹೇಳಲಿಕ್ಕೆ ಮರೆತಿದ್ದೆ ನೋಡಿ. ಇಲ್ಲಿ ಚಿಕ್ಕದೊಂದು ಹಳ್ಳವಿದೆ. ಮೊಳಕಾಲು ಮುಳುಗುವಷ್ಟು ನೀರಿರುತ್ತದೆ. ನಿಧಾನವಾಗಿ, ಸದ್ದಾಗದಂತೆ ದಾಟಿ. 15-20 ಮೀಟರ್ ಅಗಲವಿರಬಹುದು. ಆದರೆ ಆಳವಿಲ್ಲ. ಎಚ್ಚರಿಕೆಯಿಂದ ಹೋಗಿ. ನಿಮಗೆ ಶುಭವಾಗಲಿ..' ಎಂದರು.
          `ಗಡಿಯ ಆಚೆ ಪ್ರದೇಶದಲ್ಲಿ ಅಸ್ಸಾಮ್ ರಾಜ್ಯವಿರುತ್ತದೆ. ಅಲ್ಲಿ ಹೋದವರೇ ಯಾವುದಾದರೂ ಸೈನಿಕರ ಕ್ಯಾಂಪಿಗೆ ತೆರಳು ನಿಮ್ಮ ಸಂಪೂರ್ಣ ವಿವರಗಳನ್ನು ತಿಳಿಸಿ. ಅವರು ನಿಮಗೆ ಸಹಾಯ ಮಾಡಬಹುದು. ಬಹುಶಃ ಗಡಿಯಾಚೆಗೆ ಭಾರತೀಯರು ಉತ್ತಮ ರಸ್ತೆಗಳನ್ನೂ ಮಾಡಿರಬಹುದು. ಸಾಕಷ್ಟು ವಾಹನ ಸಂಚಾರವೂ ಇರಬಹುದು. ಯಾವುದಾದರೊಂದು ವಾಹನ ಹತ್ತಿ ಹತ್ತಿರದ ಗೋಲಕಗಂಜಿಗೋ ಗೌರಿಪಾರಕ್ಕೋ ಹೋಗಿಬಿಡಿ. ಅಲ್ಲಿಂದ ಮುಂದಕ್ಕೆ ನೀವು ನಿಮ್ಮ ಗುರಿಯನ್ನು ತಲುಪಲು ಅನುಕೂಲವಾಗುತ್ತದೆ..' ಎಂದರು.
          ವಿನಯಚಂದ್ರ ಅರ್ಚಕರ ಕೈ ಹಿಡಿದುಕೊಂಡ. ಕಣ್ತುಂಬಿ ಬಂದಂತಾಯಿತು. ಢಾಕಾದಿಂದ ಬಂದವರಿಗೆ ರಂಗಪುರದ ಬಳಿ ಸಂಪೂರ್ಣ ದುಡ್ಡು ಖಾಲಿಯಾಗಿ ಹಸಿವಿನಿಂದ ಕಂಗೆಡಬೇಕಾದ ಸಂದರ್ಭದಲ್ಲಿ ಸಹಾಯಕ್ಕೆ ಬಂದಿದ್ದರೂ ಅಲ್ಲದೇ ಬಾಂಗ್ಲಾದ ಗಡಿಯ ವರೆಗೆ ಕರೆತಂದು ಬಿಟ್ಟರಲ್ಲ. ಅಷ್ಟರ ಜೊತೆಗೆ ಗಡಿ ದಾಟುವ ಬಗ್ಗೆ ಸಹಾಯ ಮಾಡುತ್ತಲೂ ಇದ್ದಾರೆ ಎಂದುಕೊಂಡ. ಮಧುಮಿತಾಳೂ ಧನ್ಯವಾದಗಳನ್ನು ಹೇಳಿದಳು. ಸರ್ಚ್ ಲೈಟ್ ಸುತ್ತುತ್ತಲೇ ಇತ್ತು. `ಬೇಗ ಹೊರಡಿ..' ಎಂದರು ಅರ್ಚಕರು. ಬೀಳ್ಕೊಟ್ಟು ಮುಂದಕ್ಕೆ ಹೆಜ್ಜೆ ಹಾಕಿದರು ವಿನಯಚಂದ್ರ ಹಾಗೂ ಮಧುಮಿತಾ.
          ಮಧುಮಿತಾಳಿಗಂತೂ ತವರು ಮನೆಯಿಂದ ಬಹುದೂರ ಹೊರಟಂತಾಗಿತ್ತು. ಮತ್ತಿನ್ನು ಬಾಂಗ್ಲಾ ದೇಶಕ್ಕೆ ಬರುವುದು ಅಸಾಧ್ಯ ಎನ್ನುವಂತೆ ಅವಳಿಗೆ ಅನ್ನಿಸುತ್ತಿತ್ತು. ಭಾರತದ ಗಡಿಯತ್ತ ಒಂದೊಂದೇ ಹೆಜ್ಜೆ ಇಟ್ಟಂತೆಲ್ಲ ಬಾಂಗ್ಲಾದೇಶ ಎನ್ನುವ ತಾಯಿನಾಡು ತನ್ನನ್ನು ಶಾಶ್ವತವಾಗಿ ಕಳೆದುಕೊಳ್ಳಲಿದೆಯಾ ಎನ್ನಿಸುತ್ತಿತ್ತು. ಮುನ್ನಡೆದಂತೆಲ್ಲ ಕತ್ತಲು ಮತ್ತಷ್ಟು ಆವರಿಸಿದಂತೆ ಭಾಸವಾಯಿತು. ಕೈಬೀಸಿ ಶುಭಕೋರುತ್ತಿದ್ದ ಅರ್ಚಕರೂ ಕಾಣದಾದರು. ಕುರುಚಲು ಪೊದೆಗಳು, ಹಾಳುಬಿದ್ದ ಗದ್ದೆ ಬಯಲುಗಳು ಕಾಣಿಸತೊಡಗಿದ್ದವು. ಕೆಲ ಕ್ಷಣಗಳಲ್ಲಿ ಚಿಕ್ಕದೊಂದು ಹಳ್ಳ ಎದುರಾಯಿತು. ಅರ್ಚಕರು ಹೇಳಿದಂತೆ ಆ ಹಳ್ಳದಲ್ಲಿ ಮೊಣಕಾಲೆತ್ತರದ ನೀರಿತ್ತು. ನೀರಿನ ಅಡಿಯಲ್ಲಿ ರಾಡಿ ರಾಡಿ ಮರಳಿದ್ದುದು ಸ್ಪಷ್ಟವಾಗುತ್ತಿತ್ತು. ತಣ್ಣಗೆ ಕೊರೆಯುವಂತೆ ಹರಿಯುತ್ತಿದ್ದ ಆ ಹಳ್ಳವನ್ನು ಅರೆಘಳಿಗೆಯಲ್ಲಿ ದಾಟಿದವರೇ ಹಳ್ಳದ ಏರಿ ಹತ್ತುವಷ್ಟರಲ್ಲಿ ಎದುರಿಗೆ ಯಾರೋ ಮಿಸುಕಾಡಿದಂತಾಯಿತು. ಅಯ್ಯೋ ದೇವರೇ ಇದೇನಾಯ್ತು.. ಬಾಂಗ್ಲಾ ಸೈನಿಕನೋ, ಅಥವಾ ಮತ್ತಿನ್ಯಾರೋ ಸಿಕ್ಕಿಬಿಟ್ಟರೆ ಇನ್ನೇನು ಗತಿ.? ಇಷ್ಟೆಲ್ಲ ಮಾಡಿ ಕೊಟ್ಟ ಕೊನೆಯ ಘಳಿಗೆಯಲ್ಲಿ ನಮ್ಮ ಪ್ರಯತ್ನ ವಿಫಲವಾಗಿಬಿಟ್ಟರೆ..? ಎನ್ನುವ ಭಾವಗಳು ಕಾಡಿದವು.
         ಮಿಸುಕಾಡುತ್ತಿದ್ದ ಆ ಆಕೃತಿಗೆ ಕಾಣದಂತೆ ಅಡಗಿಕುಳಿತುಕೊಳ್ಳಲು ಸಾಕಷ್ಟು ಪ್ರಯತ್ನಿಸಿದರು. ಬಯಲೇ ಇದ್ದಂತೆ ಕಾಣುತ್ತಿತ್ತಾದ್ದರಿಂ ಎಲ್ಲಿ ಅಡಗಿ ಕೂರುವುದು ಎನ್ನುವುದೂ ಸ್ಪಷ್ಟವಾಗಲಿಲ್ಲ. ಎದುರಿನಲ್ಲಿ ಮಿಸುಕಾಡುತ್ತಿದ್ದ ಆ ಆಕೃತಿ ಕೆಲಕಾಲ ದೂರಾದಂತೆ ಮತ್ತೆ ಕೆಲಕಾಲ ಮಧುಮಿತಾ-ವಿನಯಚಂದ್ರ ರಬ್ಬಿಕೊಂಡು ಕುಳಿತ ಸನಿಹದಲ್ಲೇ ಹಾದು ಹೋದಂತೆ ಮಾಡುತ್ತಿತ್ತು. ಹತ್ತಿರಕ್ಕೆ ಹೋದ ಸಂದರ್ಭದಲ್ಲಿ ಮಾತ್ರ ಆ ಆಕೃತಿಯೊಂದು 14-16 ವರ್ಷದ ಪುಟ್ಟ ಹುಡುಗನಂತೆ ಕಾಣಿಸಿತು. ಆತ ಅದೇನು ಮಾಡುತ್ತಿದ್ದನೋ? ಎಲ್ಲಿಗೆ ಹೊರಟಿದ್ದನೋ? ಹೋಗಿದ್ದನೋ ? ಈ ಗಡಿಯಲ್ಲಿ ಅವನಿಗೇನು ಕೆಲಸವೋ ಎಂದುಕೊಂಡ ವಿನಯಚಂದ್ರ. ಎರಡೂ ಕಡೆಯ ಸೈನಿಕರ ಕಣ್ಣಿಗೆ ಬಿದ್ದರೆ ಕ್ಷಣಾರ್ಧದಲ್ಲಿ ಆತನ ದೇಹ ಗುಂಡಿನಿಂದ ಛಿದ್ರ ಛಿದ್ರವಾಗುವುದು ನಿಶ್ಚಿತ ಎನ್ನಿಸಿತು. ಕೆಲ ಸಮಯದ ನಂತರ ಆತ ದೂರಕ್ಕೆ ಸರಿದುಹೋದ.ಇವರು ಮುಂದಕ್ಕೆ ಹೆಜ್ಜೆ ಹಾಕಿದರು.
         ಸರ್ಚ್ ಲೈಟ್ ಪ್ರತಿ ಐದು ನಿಮಿಷಕ್ಕೊಮ್ಮೆ ಬೆಳಕನ್ನು ಬೀರುತ್ತದೆ ಎನ್ನುವುದು ಅರ್ಚಕರು ಹೇಳಿದ ಮಾತು. ಗಮನವಿಟ್ಟು ನೋಡಿದ ವಿನಯಚಂದ್ರನಿಗೆ ಯಾವ ಕ್ಷಣದಲ್ಲಿ ಸರ್ಚ್ಲೈಟಿನ ಬೆಳಕು ಯಾವ ಜಾಗದಲ್ಲಿ ಬೀಳುತ್ತದೆ ಎನ್ನುವುದು ಮನದಟ್ಟಾಯಿತು. ಆ ಬೆಳಕಿನ ಕಣ್ಣಿಗೆ ಬೀಳದಂತೆ ಸಾಗುವುದು ಮುಖ್ಯವಾಗಿತ್ತು. ಅರ್ಚಕರ ಮುಂಜಾಗರೂಕತೆಯಿಂದಾಗಿ ಸರ್ಚ್ಲೈಟಿನ ಪ್ರಭೆಗೆ ಅಷ್ಟಾಗಿ ಸಿಗದಂಹ ಮಣ್ಣಿನ ಬಣ್ಣದ ಬಟ್ಟೆಯನ್ನು ಇಬ್ಬರೂ ತೊಟ್ಟಿದ್ದರು. ಸರ್ಚ್ ಲೈಟ್ ಇಬ್ಬರ ಮೇಲೆ ಬಿದ್ದರೂ ಅಷ್ಟು ತೊಂದರೆಯಾಗಬಾದರು, ಅಥವಾ ಸರ್ಚ್ ಲೈಟ್ ಸಹಾಯದಿಂದ ಸೈನಿಕರು ನೋಡಿದರೂ ತಕ್ಷಣಕ್ಕೆ ಅವರಿಗೆ ಏನೋ ಗೊತ್ತಾಗಬಾದರು ಎಂಬ ಕಾರಣಕ್ಕೆ ಈ ನಿರ್ಧಾರ ಮಾಡಲಾಗಿತ್ತು.
         ಹಳ್ಳವನ್ನು ದಾಟಿದ ತಕ್ಷಣ ಸಿಕ್ಕ ಚಿಕ್ಕ ಬಯಲಂತೂ ಮರಳುಮಯವಾಗಿತ್ತು. ಮಳೆಗಾಲದಲ್ಲಿ ಉಕ್ಕಿ ಹರಿಯುವ ಹಳ್ಳ ತಂದು ಶೇಖರಿಸಿದ ಮರಳು ಅದಾಗಿರಬೇಕು. ಮರಳಿನಾಳದಿಂದ ಧಗೆ ಹೊರಬರುತ್ತಿತ್ತು. ಅದನ್ನು ದಾಟಿ ಮುಂದಕ್ಕೆ ಬಂದ ತಕ್ಷಣ ಮಧುಮಿತಾ ಇದ್ದಕ್ಕಿದ್ದಂತೆ ಬೆಚ್ಚಿದಳು. ಅದನ್ನು ಗಮನಿಸಿದ ವಿನಯಚಂದ್ರ ಸೀದಾ ಹೋಗಿ ಅವಳ ಬಾಯನ್ನು ಮುಚ್ಚಿದ. ಅವಳ ಬಾಯನ್ನು ಹಾಗೆ ಮುಚ್ಚದಿದ್ದರೆ ಅವಳು ಖಂಡಿತ ಕೂಗಿಕೊಳ್ಳುತ್ತಿದ್ದಳು. ಬೆಚ್ಚಿದ ವಿನಯಚಂದ್ರ ಸುತ್ತೆಲ್ಲ ಪರೀಕ್ಷಾ ದೃಷ್ಟಿ ಬೀರಿದ. ಕೆಲ ಘಳಿಗೆಯಲ್ಲೇ ಆತನ ಕಣ್ಣಿಗೆ ಬಾಲಕ ಕಾಣಿಸಿದ. ಹಳ್ಳದ ದಿಬ್ಬವನ್ನು ಏರುವಾಗ ಕಾಣಿಸಿದ್ದ ಬಾಲಕ ಇಲ್ಲಿ ಮತ್ತೆ ಕಾಣಿಸಿದ್ದ. ಅಷ್ಟೇ ಅಲ್ಲದೇ ಆ ಬಾಲಕನ ಕಣ್ಣಿಗೆ ಇಬ್ಬರೂ ಕಾಣಿಸಿಕೊಂಡು ಬಿಟ್ಟಿದ್ದರು. ಇಬ್ಬರಿಗೂ ಒಮ್ಮೆ ದಿಘಿಲಾಯಿತು. ಬಾಲಕನಲ್ಲೂ ಭಯ ಮೂಡಿರುವುದು ಸ್ವಷ್ಟವಾಗಿತ್ತು. ` ಈತ ಸೈನಿಕರಿಗೆ ಮಾಹಿತಿ ವಿನಿಮಯ ಮಾಡುವವನಾಗಿದ್ದರೆ ಏನು ಮಾಡುವುದು..?' ಎನ್ನುವ ಆತಂಕ ಒಮ್ಮೆ ವಿನಯಚಂದ್ರನ ಮನಸ್ಸಿನಲ್ಲಿ ಮೂಡಿದ್ದೆ ಬೆನ್ನಿನ ಆಳದಲ್ಲಿ ಬೆವರೊಡೆಯಿತು. ಆ ಬಾಲಕನಿಗೆ ಹೊಡೆದು ಎಚ್ಚರತಪ್ಪಿಸಿಬಿಡಲೇ ಎಂದುಕೊಮಡು ಸೀದಾ ಆತನ ಮೇಲೆ ದಾಳಿ ಮಾಡಲು ಮುಂದಾದ.
         ಅಷ್ಟರಲ್ಲಿ ಆ ಬಾಲಕನೇ ಇವರ ಕಾಲಿಗೆ ಬಿದ್ದುಬಿಟ್ಟಿದ್ದ. ಅರ್ಧ ಬೆಂಗಾಲಿಯಲ್ಲಿ ಅರ್ಧ ಉರ್ದುವಿನಲ್ಲಿ ಏನೇನೋ ಹಲುಬುತ್ತಿದ್ದ. ಆತ ಹೇಳಿದ್ದೇನೆಂಬುದು ಸ್ಪಷ್ಟವಾಗಲಿಲ್ಲ. ಆದರೆ ಆ ಬಾಲಕ ಹಾಗೇ ಹಲುಬುತ್ತ ಬಿಡುವುದೂ ಸಾಧ್ಯವಿರಲಿಲ್ಲ. ವಿನಯಚಂದ್ರ ಬಗ್ಗಿ ಆತನ ಬಾಯನ್ನು ಒತ್ತಿ ಹಿಡಿದು `ಶ್..' ಎಂದ. ಕೆಲ ಕ್ಷಣಗಳ ನಂತರ ಆ ಬಾಲಕನಿಗೆ ಅದೇನೆನ್ನಿಸಿತೋ ಅಥವಾ ಆತನಲ್ಲಿದ್ದ ಭಯ ದೂರವಾಯಿತೋ.. ಬಾಯಿಗೆ ಅಡ್ಡಲಾಗಿ ಹಿಡಿದಿದ್ದ ಕೈಯನ್ನು ಬಿಡಿಸಿಕೊಂಡು ಇಳಿದನಿಯಲ್ಲಿ ಮಾತನಾಡತೊಡಗಿದ. ಆತ ಮಾತನಾಡಿದ್ದು ವಿನಯಚಂದ್ರನಿಗೆ ಸಂಪೂರ್ಣ ಅರ್ಥವಾಗಲಿಲ್ಲ. ಆದರೆ ಮಧುಮಿತಾಳಿಗೆ ಅರ್ಥವಾಗಿತ್ತು.
(ಗಡಿ ಭಾಗದ ಗದ್ದೆಗಳು)
         ತಮ್ಮಂತೆ ಅವನೂ ಕೂಡ ಭಾರತದ ಗಡಿಯೊಳಕ್ಕೆ ನುಸುಳು ಬಂದವನಾಗಿದ್ದ. ಮನೆಯಲ್ಲಿ 12 ಜನ ಅಣ್ಣತಮ್ಮಂದಿರು. ಢಾಕಾದಿಂದ ಭಾರತಕ್ಕೆ ಸಾಗಬೇಕು ಎನ್ನುವ ಕಾರಣಕ್ಕಾಗಿಯೇ ಹೇಗೋ ಪಡಿಪಾಟಲು ಪಟ್ಟು ಬಂದಿದ್ದ. ಬಡತನದಿಂದ ಕೂಡಿದ್ದ ಕುಟುಂಬದಲ್ಲಿ ಮಾತು ಮಾತಿಗೆ ಬೈಗುಳಗಳು, ಹೊಡೆತಗಳು ಸಿಗುತ್ತಿದ್ದವು. ಹೊಟ್ಟೆತುಂಬ ಊಟ ಸಿಗುತ್ತಿರಲಿಲ್ಲ. ಮಾತು ಮಾತಿಗೆ ಏಟು ಸಿಗುತ್ತಿದ್ದವು. ಚಿಕ್ಕಂದಿನಲ್ಲೇ ಮೆಕ್ಯಾನಿಕ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದನಾದರೂ ಮನೆಯಲ್ಲಿ ಸದಾಕಾಲ ಬೈಗುಳ ಅಥವಾ ಹೊಡೆತ ತಪ್ಪುತ್ತಿರಲಿಲ್ಲ. ಅಪ್ಪ, ನಾಲ್ಕು ಜನ ಅಮ್ಮಂದಿರು, ಅಣ್ಣಂದಿರು ಇಷ್ಟು ಸಾಲದೆಂಬಂತೆ ಸಂಬಂಧಿಕರೆಲ್ಲ ಬಂದು ಯಥಾನುಶಕ್ತಿ ಹೊಡೆಯುತ್ತಿದ್ದರು. ಹೀಗಿದ್ದಾಗಲೇ ಯಾರೋ ಒಬ್ಬರು ಆತನಿಗೆ ಭಾರತದ ಬಗ್ಗೆ ಹೇಳಿದ್ದರು. ಅಲ್ಲಿಗೆ ಓಡಿಹೋಗಲು ತಿಳಿಸಿದ್ದರು. ಅಷ್ಟಲ್ಲದೇ ಅಲ್ಲಿ ಬದುಕು ಹಸನಾಗುತ್ತದೆ ಎಂಬ ಕನಸನ್ನೂ ಬಿತ್ತಿದ್ದರು. ಆ ಕಾರಣಕ್ಕಾಗಿಯೇ ಮನೆಯಲ್ಲಿ ತಂದೆಯ ದುಡ್ಡನ್ನು ಕದ್ದು ಭಾರತಕ್ಕೆ ಸಾಗಲು ಗಡಿಯ ಬಳಿ ಬಂದಿದ್ದ. ಗಡಿಯ ಬಳಿ ಬಂದವನು ಹೇಗೆ ಹೋಗಬೇಕು ತಿಳಿಯದೇ ಒದ್ದಾಡಲು ಆರಂಭಿಸಿದ್ದ. ಭಾರತದ ಗಡಿಯಲ್ಲಿ ನುಸುಳಲು ಸೂಕ್ತ ಜಾಗವನ್ನು ಹುಡುಕುತ್ತ ಇತ್ತಿಂದತ್ತ, ಅತ್ತಿಂದಿತ್ತ ಅಲೆದಾಡುತ್ತಿದ್ದ. ವಿನಯಚಂದ್ರ-ಮುಧುಮಿತಾರ ಕೈಗೆ ಸಿಕ್ಕುಬಿದ್ದಿದ್ದ.
           ಆತನೇ ಮಧುಮಿತಾಳ ಬಳಿ ಹೇಳಿದಂತೆ ಮೊದಲಿಗೆ ವಿನಯಚಂದ್ರ-ಮಧುಮಿತಾರು ಬಾಂಗ್ಲಾದೇಶದ ಸೈನಿಕರಿರಬೇಕು ಎಂದುಕೊಂಡಿದ್ದನಂತೆ. ಅದೇ ಕಾರಣಕ್ಕೆ ಕೈಕಾಲಿಗೆ ಬಿದ್ದು ಬೇಡಿಕೊಳ್ಳಲು ಆರಂಭಿಸಿದ್ದು. ಕೊನೆಗೆ ಯಾವಾಗ ವಿನಯಚಂದ್ರ ಬಾಯನ್ನು ಗಟ್ಟಿಯಾಗಿ ಮುಚ್ಚಿದನೋ ಆಗಲೇ ಇವರೂ ಗಡಿಯಲ್ಲಿ ನುಸುಳಲು ಆಗಮಿಸಿದ್ದು ಎನ್ನುವುದು ಅರಿವಾಗಿ ಸುಮ್ಮನಾಗಿದ್ದ,
           `ನಾನೂ ಭಾರತದೊಳಕ್ಕೆ ಹೋಗಬೇಕು. ನೀವು ಹೋಗುತ್ತಿದ್ದೀರಲ್ಲಾ.. ದಯವಿಟ್ಟು ನನ್ನನ್ನೂ ನಿಮ್ಮ ಜೊತೆಗೆ ಕರೆದುಕೊಂಡು ಹೋಗಿ.. ಈ ನರಕದಲ್ಲಿ ಇದ್ದು ಸಾಕಾಗಿದೆ. ಭಾರತದಲ್ಲಿ ನೀವು ಹೇಳಿದ ಕೆಲಸ ಮಾಡಿಕೊಂಡಿರುತ್ತೇನೆ.. ನನ್ನನ್ನು ಕರೆದೊಯ್ಯಿರಿ..' ಎಂದು ಅಂಗಲಾಚಲು ಆರಂಭಿಸಿದ್ದ. ಮಧುಮಿತಾಳ ಮನಸ್ಸು ಕರಗಲು ಆರಂಭಿಸಿತ್ತು. ಆತನ ಹೆಸರನ್ನು ಕೇಳಿದ್ದಕ್ಕೆ ಪ್ರತಿಯಾಗಿ ಆತ `ಅಮ್ಜದ್..' ಎಂದಿದ್ದ.
          ಆತನ ಬೇಡಿಕೆಯನ್ನು ಮಧುಮಿತಾ ವಿನಯಚಂದ್ರನ ಬಳಿ ತಿಳಿಸಿದಾಗ ಆತ ಕಡ್ಡಿ ತುಂಡುಮಾಡಿದಂತೆ ಬೇಡ ಎಂದಬಿಟ್ಟ. ತಾವಿಬ್ಬರು ಗಡಿಯನ್ನು ಸುರಕ್ಷಿತವಾಗಿ ದಾಟುವುದು ಬಹುಮುಖ್ಯ. ಅಷ್ಟು ಮಾಡಿದ್ದರೆ ಸಾಕಿತ್ತು. ಈ ಬಾಲಕನನ್ನು ಕರೆದೊಯ್ದು ಮತ್ತೊಂದು ಅಪಾಯವನ್ನು ಮೈಮೇಲೆ ಎಳೆದುಕೊಳ್ಳುವುದು ಬೇಕಾಗಿರಲಿಲ್ಲ. ನೇರವಾಗಿ ಮಧುಮಿತಾಳ ಬಳಿ ಬೇಡವೇ ಬೇಡ ಎಂದುಬಿಟ್ಟಿದ್ದ. ಆಕೆಯೂ ವಿನಯಚಂದ್ರನ ಬಳಿ ಹಲವಾರು ರೀತಿಯಿಂದ ಹೇಳಿ ನೋಡಿದಳು. ಯಾವುದಕ್ಕೂ ವಿನಯಚಂದ್ರ ಜಗ್ಗದಿದ್ದಾಗ ಮಧುಮಿತಾ ಅಮ್ಜದ್ ಬಳಿ ತಿರುಗಿ ವಿನಯಚಂದ್ರ ಹೇಳಿದಂತೆ ಬೇಡವೇ ಬೇಡ ಎಂದಳು. ಮತ್ತೆ ಬೇಡಿಕೊಳ್ಳಲು ಮುಂದಾದ ಆತನಿಗೆ `ತಮ್ಮನ್ನು ಹಿಂಬಾಲಿಸಬೇಡ..' ಎಂದು ತಾಕೀತು ಮಾಡಿ ಮುನ್ನಡೆದರು. ಆತ ಅಂಗಲಾಚುತ್ತಲೇ ಇದ್ದ.
        ಮುಂದಕ್ಕೆ ಸಾಗುವುದು ಸುಲಭವಾಗಿರಲಿಲ್ಲ. ಸರ್ಚ್ ಲೈಟಿನ ಕಣ್ತಪ್ಪಿಸಿ, ನಿಂತು ನಿಂತು ಸಾಗಬೇಕಿತ್ತು. ಹೀಗಾಗಿ ಅವಿತು ಅವಿತು ಮುಂದಕ್ಕೆ ಸಾಗಿದರು. ಮುಂದೆ ಮುಂದೆ ಹೋದಂತೆಲ್ಲ ಭಾರತ-ಬಾಂಗ್ಲಾ ನಡುವಿನ ಗಡಿಬೇಲಿ ಕಾಣಿಸಲಾರಂಭಿಸಿತು. ದೊಡ್ಡದೊಂದು ದಿಬ್ಬ. ದಿಬ್ಬದ ಮೇಲೆ ಮುಳ್ಳಿನ ಬೇಲಿ ಇರುವುದು ಕಾಣಸುತ್ತಿತ್ತು. ಆಗಾಗ ಬೀಳುತ್ತಿದ್ದ ಸರ್ಚ್ ಲೈಟಿನ ಬೆಳಕಿನಲ್ಲಿ ಮೂರು ಹಂತದ ಬೇಲಿ ಇರುವುದು ಸ್ಪಷ್ಟವಾಗುತ್ತಿತ್ತು. ಅರ್ಚಕರು ಹೇಳಿದ್ದ ದಿಕ್ಕಿನ ಜಾಡು ಹಿಡಿದವರಿಗೆ ಗಡಿ ಹತ್ತಿರಕ್ಕೆ ಬಂದರೂ ಸುರಂಗವಿರುವುದು ಕಾಣಿಸಲಿಲ್ಲ. ಹಾದಿ ತಪ್ಪಿದ್ದೇವಾ ಎಂದುಕೊಂಡರಾದರೂ ಎರಡು ದೇಶಗಳ ನಡುವಿನ ಬೇಲಿಯಲ್ಲಿ ಕದ್ದು ನುಸುಳಲು ಮಾಡಿದ ಸುರಂಗ ಸುಲಭಕ್ಕೆ ಕಾಣುವುದಿಲ್ಲ ಎನ್ನುವುದು ಅರಿವಾಯಿತು. ಗಡಿಗೆ ಕೆಲವೇ ಮೀಟರು ದೂರವಿದೆ ಎನ್ನುವಾಗ ಸರ್ಚ್ ಲೈಟಿನ ಆಗಮನದ ಅರಿವಾಯಿತು. ಅದರ ಕಣ್ಣಿಗೆ ಬೀಳದೇ ತಪ್ಪಿಸಿಕೊಳ್ಳಬೇಕಾಗಿತ್ತು. ವಿನಯಚಂದ್ರ ಹಾಗೂ ಮಧುಮಿತಾ ಇಬ್ಬರೂ ಸರ್ಚ್ ಲೈಟ್ ಹತ್ತಿರದಲ್ಲಿದೆ ಎನ್ನುವಾಗ ಪೊದೆಯಂತಹ ಸ್ಥಳವನ್ನು ನೋಡಿ ಅಲ್ಲಿ ಅಡಗಿದರು. ಆ ಪೊದೆಯ ಮೇಲೆ ಹಾದು ಹೋದ ಸರ್ಚ್ ಲೈಟ್ ಬೆಳಕು ಇಬ್ಬರ ಮುಖದ ಮೇಲೂ ಬಿದ್ದಿತು. ಬೆಳಕು ತಮ್ಮಿಂದ ದೂರ ಹೋಗಿದ್ದು ಗೊತ್ತಾದ ತಕ್ಷಣ ವಿನಯಚಂದ್ರ ಜಾಗೃತನಾದ. ಭಾರತದೊಳಕ್ಕೆ ನುಸುಳಲು ಇದ್ದ ಸುರಂಗದ ಬಾಯನ್ನು ಹುಡುಕಲು ನಿಂತ. ಆತನ ಹಿಂದೆ ಮತ್ತೆ ಸದ್ದಾಂತಾಯಿತು. ತಿರುಗಿ ನೋಡಿದರೆ ಮತ್ತದೇ ಬಾಲಕ ನಿಂತಿದ್ದ. ಹಿಂಬಾಲಿಸಬೇಡ ಎಂದು ಹೇಳಿದ್ದರೂ ಹಿಂದೆಯೇ ಬಂದಿದ್ದವನ ಮೇಲೆ ವಿನಯಚಂದ್ರನಿಗೆ ಎಲ್ಲಿಲ್ಲದ ಕೋಪ ಬಂದಿತು. ನಾಲ್ಕು ಏಟು ಇಕ್ಕಿಬಿಡಲೇ ಎಂದುಕೊಂಡನಾದರೂ ಗಡಿಯಲ್ಲಿ ಇಂತದ್ದೊಂದು ಗಲಾಟೆ ಬೇಡ ಎಂದುಕೊಂಡು ಕಷ್ಟಪಟ್ಟು ನಿಯಂತ್ರಿಸಿಕೊಂಡ.
          ಕೆಲಕಾಲದ ಹುಡುಕಾಟದ ನಂತರ ದೊಡ್ಡದೊಂದು ಹೊಂಡ ಕಾಣಿಸಿತು. ಆದರೆ ಈ ಹೊಂಡವೇ ಸುರಂಗವೇ ಎನ್ನುವುದು ಮಾತ್ರ ಸ್ಪಷ್ಟವಾಗಲಿಲ್ಲ. ಕೊನೆಗೆ ಈ ಹೊಂಡದಲ್ಲಿ ಇಳಿದು ತಾನು ಪರೀಕ್ಷೆ ಮಾಡುತ್ತೇನೆ. ಇದು ಸುರಂಗವೇ ಹೌದಾದರೆ ನಿನ್ನನ್ನು ಕರೆಯುತ್ತೇನೆ. ಅಲ್ಲಿಯ ವರೆಗೆ ಮರೆಯಲ್ಲಿ ಅಡಗಿರು ಎಂದು ಮಧುಮಿತಾಳಿಗೆ ಹೇಳಿದ ವಿನಯಚಂದ್ರ. ಅಷ್ಟರಲ್ಲಿ ಸರ್ಚ್ ಲೈಟ್ ಇನ್ನೊಂದು ಸುತ್ತು ಹಾಕಿ ಬರುತ್ತಿತ್ತು. ವಿನಯಚಂದ್ರ ಹೊಂಡದೊಳಗೆ ಅಡಗಿ ಕುಳಿತ. ಮಧುಮಿತಾ ವಾಪಾಸು ಬಂದು ಮರೆಯಲ್ಲಿ ಕುಳಿತಳು. ಅಮ್ಜದ್ ಅವಳನ್ನು ಹಿಂಬಾಲಿಸಿದ್ದ.!

(ಮುಂದುವರಿಯುತ್ತದೆ.)