Monday, October 21, 2013

ಪೋಲಿ ಜಾನಿಯ ಕಾಲಿ ಪೀಲಿ ಸ್ಟೋರಿ

`ಯೇ ತಮಾ...
ನಿನ್ ಮಿಣ್ಣಿ ಕೊಯ್ತೇನಿ ನೋಡು...' ಎನ್ನುವ ಡೈಲಾಗ್ ಕೇಳಿಬಂತೆಂದರೆ ಅದು ಜಾನಿಯೇ ಹೌದು..
ಎತ್ತರದ, ಬಡಕಲು ದೇಹದ, ಮಾಸಲು ಮಾಸಲು ಸೀರೆಯ, ಕಪ್ಪು ಬಣ್ಣದ, ಬಾಯಿತುಂಬ ತಂಬಾಕಿನ ಕವಳದ ಕೆಂಪಿನ, ಕೈಯಲ್ಲಿ ಸದೆಗತ್ತಿಯ ಹಿಡಿದ ಜಾನಿಯ ಬಾಹ್ಯ ಚರ್ಯೆ ಎಂತವರಿಗಾದರೂ ದೀರ್ಘಕಾಲ ನೆನಪಿನಲ್ಲಿ ಇರುತ್ತದೆ.. ಅದಕ್ಕೆ ತಕ್ಕಂತೆ ಸೆನ್ಸಾರ್ ಇಲ್ಲದ ಆಕೆಯ  ಪೋಲಿ ಮಾತುಗಳು ಆಕೆಯನ್ನು ನೆನಪಿನ ಪುಟದಲ್ಲಿ ಅಚ್ಚಳಿಯದಂತೆ ಮಾಡುತ್ತವೆ..
ಜಾನಿ ನೋಡಲು ಬಡಕಲಾದರೂ ಆಕೆಯ ಮಾತುಗಳಿಂದಲೇ ವರ್ಡ್ ಫೇಮಸ್ಸಾಗಿರುವುದು.. ಊರಿಗೆ ಜಾನಿ ಕಾಲಿಟ್ಟಕೂಡಲೇ ಊರಲ್ಲಿರುವ ಹೆಂಗಸರು ತಮ್ಮ ಮನೆಯ ಬೆಳೆಯುತ್ತಿರುವ ಮಕ್ಕಳು, ಹರೆಯದ ಹುಡುಗ-ಹುಡುಗಿಯರನ್ನು ಏನೋ ನೆಪ ಹೇಳಿ ಜಾನಿಯ ಮಾತು ಕೇಳದಷ್ಟು ದೂರಕ್ಕೆ ಕಳಿಸಲು ನೋಡುತ್ತಾರೆ.. ಈಕೆಯ ಕಣ್ಣಿಗೇನಾದರೂ ಇಂತ ಹುಡುಗರು/ಹುಡುಗಿಯರು ಮಕ್ಕಳು ಬಿದ್ದರೋ, ಪೋಲಿ ಮಾತುಗಳು ಮೇರೆ ಮೀರುತ್ತವೆ. ಮಾತು ಮಾತಿಗೆ ದ್ವಂದ್ವಾರ್ಥದ ಸಂಭಾಷಣೆಗಳನ್ನು ಪುಂಖಾನುಪುಂಖವಾಗಿ ಬಿಡುತ್ತ ಸಾಗುವ ಈಕೆಯ ಎದುರು ಜಗ್ಗೇಶ, ಎನ್ನೆಸ್ ರಾವ್, ಉಮಾಶ್ರೀಯರೆಲ್ಲ ಮಂಡಿಗಾಲು ಊರಿ ಶರಣು ಶರಣಾರ್ಥಿ ಎನ್ನಬೇಕು. ಈಕೆಯ ಪೋಲಿ ಮಾತಿಗೋ ಅಂಕೆಯೇ ಇಲ್ಲ. ಒಂದರ ಹಿಂದೊಂದರಂತೆ. ಕೇಳುಗರೇ ನಾಚಿಕೆಯಿಂದ ಕಿವಿ ಮುಚ್ಚಿಕೊಳ್ಳಬೇಕು. ಆಕೆಯ ಪೋಲಿ ಮಾತು ಅಷ್ಟು ಪರಿಣಾಮಕಾರಿ.
ಈ ಜಾನಿಗೆ ನಮ್ಮೂರಿನ ಸನಿಹವೇ ಊರು. ಬಾಯಿ ಬೊಂಬಾಯಿ ಎನ್ನುವುದನ್ನು ಬಿಟ್ಟರೆ ದುರ್ಗುಣಗಳೇನಿಲ್ಲ. ಮನೆಗೆಲಸ, ತೋಟದ ಕೆಲಸ ಈಕೆಯ ಪ್ರಮುಖ ಕಾರ್ಯಗಳು.. ಸೀಸನ್ ಟೈಮಿನಲ್ಲಿ ಮಾತ್ರ ಈಕೆ ಸೂಲಗಿತ್ತಿಯಾಗುತ್ತಾಳೆ.. ಹೌದು ಸೂಲಗಿತ್ತಿ ಕೆಲಸ ಇವಳ ಪ್ರಮುಖ ಕೆಲಸಗಳಲ್ಲಿ ಒಂದು ಎಂದರೂ ತಪ್ಪಾಗಲಿಕ್ಕಿಲ್ಲ.
`ಹೆಗಡ್ರೆ ನಾ ಮಾಡೋ ಕೆಲ್ಸಾ ಸುಲಭದ್ದಲ್ಲ ತಿಳ್ಕಳಿ.. ನನ್ ಹಂಗೆ ಮಾಡೋವ್ರು ಯಾರೂ ಇಲ್ಲ ಸುತ್ತಮುತ್ತ 10 ಹಳ್ಳಿಯಾಗೆ.. ನಾ ಕೇಳದಷ್ಟು ಕೊಡ್ಲುಲ್ಲಾ ಅಂದ್ರೆ ನಾಳಿಂದ ಬೇರೆ ಯಾರ್ ಬತ್ತಾರೆ ಅಂತ ನೋಡ್ತೂನಿ..' ಎಂದು ಲೈಟಾಗಿ ರೋಪ್ ಹಾಕುವ ಗೌಡರ ಪೈಕಿಯ ಜಾನಿ ಖಯಾಲಿಯ ಸಮಯದಲ್ಲಿ `ಅಯ್ಯೋ ಸಣ್ ಹೆಗ್ಡೇರೆ.. ಅದೆಂತಾ ಹಂಗೆ ಮುಚ್ಕಂತೀರಿ.. ನಾ ನೋಡ್ದೇ ಇರೋದೆ..' ಎಂದು ಸರಕ್ಕನೆ ಹೇಳಿ ಗಲಿಬಿಲಿಯನ್ನೂ ಹುಟ್ಟು ಹಾಕುತ್ತಾಳೆ..
ಹರೆಯದಲ್ಲಿ ಹೀಗಿದ್ದಿರಬಹುದಾ ಜಾನಿ..?

ಹತ್ತಿರ ಹತ್ತಿರ ಆರು ಅಡಿಯಷ್ಟು ಎತ್ತರದ ಜಾನಿ ನಾಜೂಕಿನ ಹೆಂಗಸಲ್ಲ. ಯಾವುದೇ ಕೆಲಸ ಮಾಡಿದರೂ ಒರಟುತನವೆನ್ನುವುದು ಎದ್ದು ಕಾಣುತ್ತದೆ. ಪಾತ್ರೆ ತೊಳೆದರೆ ಕನಿಷ್ಟ ನಾಲ್ಕು ಕಡೆಯಾದರೂ ಅದು ನಪ್ಪತ್ತಬೇಕು. ಬಟ್ಟೆ ಒಗೆದರೆ ಹರಿಯದಿದ್ದರೆ ಪುಣ್ಯ ಎನ್ನುವಷ್ಟು ಒರಟುತನ. ಈ ಕಾರಣದಿಂದಲೇ ಅನೇಕ ಮನೆಗಳಲ್ಲಿ ಜಾನಿಯನ್ನು ಮನೆಗೆಲಸಕ್ಕೆ ಕರೆಯುವುದನ್ನು ಬಿಟ್ಟಿದ್ದಾರೆ ಎಂದರೂ ತಪ್ಪಿಲ್ಲ. ತೋಟದ ಕೆಲಸವನ್ನು ಜಾನಿ ನಿಜವಾಗಿಯೂ ಚನ್ನಾಗಿ ಮಾಡುತ್ತಾಳೆ.. ಗಂಡಾಳಿಗೆ ಸರಿಸಮನಾಗಿ ದುಡಿಯುತ್ತಾಳೆ ಎನ್ನಬಹುದು. ಗಂಡಾಳು ತರುವಂತಹ ಹುಲ್ಲು ಹೊರೆ, ಕಟ್ಟಿಗೆ ಹೊರೆ, ಸೊಪ್ಪಿನ ಹೊರೆಯನ್ನು ಹೊತ್ತು ತಂದಾಗ ನಾನೇ ಅನೇಕ ಸಾರಿ `ಜಾನಿ.. ನೀ ಗಂಡ್ಸಾಗಬೇಕಿತ್ತೆ..' ಎಂದು ಛೇಡಿಸಿದ್ದಿದೆ.. ಅದಕ್ಕವಳು ಸಿಟ್ಟಿನಿಂದ `ಸಣ್ಣ ಹೆಗುಡ್ರೆ.. ನಿಮ್ ಗಂಡುಸ್ರದ್ದೆಲ್ಲ ಕಂಡೀನಿ ಸುಮ್ಕಿರಿ.. ನನ್ ಹತ್ರ ಹೇಳೂಕ್ ಬರ್ಬೇಡಿ.. ಎಲ್ಲಾರ್ದೂ ಒಂದೇ ನಮೂನಿ..' ಎಂದು ಬಾಂಬ್ ಒಗೆದ ಮೇಲೆ ನಾನು ಮರುಮಾತಿಲ್ಲದೇ ಮಂಗಮಾಯವಾಗಬೇಕು.. ಅಂತಹ ಮಾತುಗಳು ಬರುತ್ತಿದ್ದವು.
`ಅಮ್ಮಾ..ನಮ್ ದೊಡ್ಡ ಹೆಗುಡ್ರಿಗೆ  ಲುಂಗಿ ಗಟ್ಟಿ ಕಟ್ಗಳಾಕೆ ಹೇಳಿ.. ಮೊನ್ನೆ ಗದ್ದೆ ಹಾಳಿ ಮ್ಯಾಲೆ ದೊಡ್ಡ ಗಾಳಿ ಬೀಸಿ ಲುಂಗಿ ಬಿಚ್ಚೋಗಿ ದೇವರ ದರ್ಶನ ಆಗೋತು..' ಎಂದು ಲೈಟಾಗಿ ವಾರ್ನಿಂಗು ಮಾಡುವ ಕಲೆಯೂ ಜಾನಿಗೆ ಗೊತ್ತಿದೆ.. ಅಗತ್ಯಬಿದ್ದ ಸಂದರ್ಭದಲ್ಲಿ ಸಮಯವನ್ನು ನೋಡಿ ರೈಲಾಗ್ ಹೊಡೆದು ಮರ್ಯಾದಿಯನ್ನು ಕಳೆಯುವ ಸಕಲಗುಣ ಸಂಪನ್ನೆ ಈ ಜಾನಿ.
ಜಾನಿಯ ಜನ್ಮಪುರಾಣ ಹೇಳಲೇ ಬೇಕು. ಆಕೆ ಹುಟ್ಟಿದ್ದು ಬೆಳೆದಿದ್ದು ಇತ್ಯಾದಿ ಇತಿಹಾಸಗಳೆಲ್ಲ ನಮ್ಮ ಪಕ್ಕದ ಊರಲ್ಲೇ. ಆಕೆಯ ತಾಯಿಯೂ ಜಾನಿಯಷ್ಟೇ ಪೋಲಿಮಾತಿನ ಸರದಾರಿಣಿಯಾಗಿದ್ದಳಂತೆ.. ತಾಯಿಯದೇ ಹುಟ್ಟುಗುಣ ಸುಡದೇ ಈಕೆಯ ಪಾಲಿಗೆ ಧಾರೆ ಧಾರೆಯಾಗಿ, ಓತಪ್ರೋತವಾಗಿ ಬಂದಿದೆ. ಬಾಲ್ಯದಲ್ಲಿ ಗಂಡುಬೀರಿಯಾಗಿದ್ದ ಈಕೆ ಹರೆಯದಲ್ಲೂ ಹಾಗೆಯೇ ಇದ್ದಳಂತೆ.. `ನಾ ನಿಮ್ ವಯಸ್ನಾಗೆ ಹೆಂಗಿದ್ದೆ ಗೊತ್ತಾ..? ಸುತ್ತಮನೆ ಮಾಬ್ಲು ಹಿಂದ್ ಬಿದ್ದು ಕಾಟ ಕೊಡ್ತಿದ್ದ.. ಆ ಮಾಬ್ಲೇಸ್ರ ಅಂತೂ ಮೂರ್ ಸಾರಿ ನನ್ ತಾವ ಮದ್ವೆ ಆಯ್ತೀಯೇನೆ..' ಎಂದು ಕೇಳಿದ್ದ.. ಕೊನೆಗೆ ಆಕೆಯನ್ನು ಮದುವೆಯಾಗಿದ್ದು ಅವಳದೇ ಊರಿನ ದ್ಯಾವ. ಈ ದ್ಯಾವನ ಪುರಾಣ ಬರೆದರೆ ಇನ್ನೊಂದು ದೊಡ್ಡ ಕಥೆಯಾಗುತ್ತದೆ ಬಿಡಿ.. ಅದನ್ನು ಅಲ್ಪಸ್ವಲ್ಪ ಹೇಳಿ ಮುಂದೊಮ್ಮೆ ತಿಳಿಸುತ್ತೇನೆಂಬ ಆಶ್ವಾಸನೆ ಕೊಟ್ಟು ಮುಂದಕ್ಕೆ ಹೋಗ್ತೇನೆ..
ದ್ಯಾವ ಏಕ್ ದಂ ಆರೂವರೆ ಅಡಿಯ ಆಳು. ಅಜಾನುಬಾಹು ಎನ್ನುವ ಪದ ಇವನನ್ನು ನೋಡಿಯೇ ಹುಟ್ಟಿದ್ದೇನೋ ಅನ್ನುವಂತಹ ವ್ಯಕ್ತಿ. ಎತ್ತರಕ್ಕೆ ತಕ್ಕ ದಪ್ಪ ಆತನ ಚಹರೆಯ ವಿಶೇಷ ಅಂಶ. ಕಪ್ಪು ಬಣ್ಣದ ನಗುಮೊಗದ ಸರದಾರ. ಓಸಿಯ ಚಟವೊಂದಿಲ್ಲದಿದ್ದರೆ ಆತ ಬಹಳ ಒಳ್ಳೆಯವನೆಂಬ ಸರ್ಟಿಫಿಕೇಟ್ ಕೊಡಬಹುದು.. ಪ್ರಾರಂಭದಲ್ಲಿ ಕೃಷಿಕನಾಗಿದ್ದ ದ್ಯಾವ ಕೊನೆ ಕೊನೆಗೆ ಕೊನೆಗೌಡನಾಗಿ ಬದಲಾಗಿದ್ದನ್ನು ಹಲವರು ವಿಸ್ಮಯದಿಂದ ನೋಡುತ್ತಾರೆ. ಕೊನೆಗೌಡನಾದ ಮೇಲೆ ದ್ಯಾವನದ್ದು ಪ್ಯಾಮಿಲಿ ಪ್ಯಾಕೇಜು ಎಂಬ ಜೋಕು ನಮ್ಮ ಸುತ್ತಮುತ್ತಲ ಊರುಗಳಲ್ಲಿ ಪ್ರಚಲಿತಕ್ಕೆ ಬಂದಿದೆ. ಕೊನೆಗೌಡನಾಗಿ ಚಾಲ್ತಿಗೆ ಬಂದ ದ್ಯಾವ ಸುಲಭದಲ್ಲಿ ಕೈಗೆ ಸಿಗುವ ಅಡಿಕೆ ಕೊನೆ ಕೊಯ್ಯುತ್ತಾನೆ. ಸ್ವಲ್ಪ ಕಸ್ಟಪಡಬೇಕು ಎಂದಾದರೆ ಆ ಕೊನೆಗೆ ದೋಟಿಗಳ ಹಾಕಿ ಎಳೆದು ತೆರಿಯಡಿಕೆ ಮಾಡಿ ಬಿಡುತ್ತಾನೆ ಎನ್ನುವುದು ಆತನ ಮೇಲಿನ ಗಂಭೀರ ಆರೋಪ. ಆರೋಪ ಮಾಡಿ ಕೆಲವು ವರ್ಷಗಳಾಗಿದೆ. ಇನ್ನೂ ಸ್ಪಷ್ಟನೆ ಸಿಕ್ಕಿಲ್ಲವಾದ್ದರಿಂದ ಹೌದೆಂದು ಒಪ್ಪಿಕೊಂಡಿದ್ದಾನೆ ಎಂಬ ಮಾತುಗಳೂ ಚಾಲ್ತಿಯಲ್ಲಿದೆ.  ಆತ ಕೊನೆಗೌಡನಾಗಿ ಹೋಗುವ ಮನೆಗೆ ಆತನ ಜೊತೆಗೆ ಜಾನಿ ಹೋಗಲೇಬೇಕೆಂಬ ಷರತ್ತು ಇದೆ. ಆತ ಕೊನೆಗೌಡಿಕೆ ಮಾಡಿದರೆ ಆಕೆ ತೆರಿಯಡಿಕೆ ಹೆಕ್ಕಲೇಬೇಕು. ಇದರಿಂದ ಆತನಿಗೆ ಡಬ್ಬಲ್ ಪ್ರಾಫಿಟ್ಟು. ತೆರಿಯಡಿಕೆ ಹೆಕ್ಕುವಿಕೆಯಲ್ಲಿ ಲಾಭವಾಗಲಿ ಎಂಬ ಕಾರಣಕ್ಕೆ ಆತ ಹಾಗೆಮಾಡುತ್ತಾನೆ. ಆತನಿಗೆ ಈ ಐಡಿಯಾ ಕೊಟ್ಟಿದ್ದು ಜಾನಿಯೇ ಎಂಬ ಆಪಾದನೆ ಜಾನಿಯ ಕಿವಿಗೆ ಬಿದ್ದ ದಿನ ಬಹಳ ರಂಪಗಳಾಗಿವೆ.
ಇಂತಹ ದ್ಯಾವ ಜಾನಿಯ ತಂದೆಯ ಒತ್ತಾಯಕ್ಕೆ ಕಟ್ಟುಬಿದ್ದು ಆಕೆಯನ್ನು ಮದುವೆಯಾದನಂತೆ. ಜಾನಿಗೆ ಹುಡುಗರ ಕಾಟ ಹೆಚ್ಚಾದಂತೆಲ್ಲ ಚಿಂತಾಕ್ರಾಂತನಾದ ಆಕೆಯ ಅಪ್ಪ ಸಾಕಷ್ಟು ಕಡೆಗಳಲ್ಲಿ ಜಾನಿಗೆ ಗಂಡು ಹುಡುಕಿದ್ದ. ಆದರೆ ಜಾನಿಯ ಮನಸ್ಸಿಗೆ ಹೋಗಿರಲಿಲ್ಲ. ಕೊನೆಗೆ ಬೇಸತ್ತು ಊರಿನಲ್ಲಿ ಆಗ ತಾನೇ ಪ್ರಾಯಕ್ಕೆ ಬಂದಿದ್ದ, ಜಾನಿಗಿಂತ ನಾಕು ವರ್ಷ ದೊಡ್ಡವನಾದ ದ್ಯಾವನ ಅಪ್ಪನ ಬಳಿ ಮದುವೆ ಪ್ರಸ್ತಾಪ ಇಟ್ಟಿದ್ದ. ಎಲ್ಲ ಪೋಲಿ ಸುದ್ದಿಗಳನ್ನೂ ದೊಡ್ಡದಾಗಿ ಒದರುವ ಜಾನಿ ಈ ವಿಷಯದಲ್ಲಿ ಮಾತ್ರ ನಾಚಿ ನೀರಾಗುತ್ತಾಳೆ..
`ಜಾನಿ.. ನೀ ಮದ್ವೆ ಆಗಿದ್ ಸುದ್ದಿ ಹೇಳೆ..' ಅಂದ್ರೆ
`ಈ ಶಣ್ ಹೆಗುಡ್ರಿಗೆ ಬ್ಯಾರೆ ಕೆಲ್ಸಿಲ್ಲಾ.. ಅದನ್ನ ತಗುಂಡ್ ಎಂತಾ ಮಾಡ್ತೀರಿ ಹೇಳಿ..?' ಎಂದು ಹೇಳುವಷ್ಟರಲ್ಲಿ ಕಪ್ಪನೆಯ ಆಕೆಯ ಮುಖ ಕೆಂಪಾದರೂ `ಈ ನಮ್ಮನೇವ್ರ್ ಇದ್ರಲ್ರಾ.. ಅವರು ನನ್ ಮದ್ವೇನೆ ಆಗೂದಿಲ್ಲಾ ಹೇಳಿ ಕುಂತೀರು,.. ನಮ್ ಅಪ್ಪುಗೆ ಸಾಕ್ ಬೇಕಾಗೋತ್ರಾ.. ನಮ್ಮನೇವ್ರ ಅಪ್ಪಂತೂ 100 ರುಪಾಯ್ ಮಡಗಿದ ಮೇಲೆ ಮದ್ವೆ ಅಂದ್ರು.. ಕೊನಿಗೆ ಕೋಡ್ಸರ ಹೆಗುಡ್ರ ಮನಿಂದ ಸಾಲ ತಂದ್ ಕೊಟ್ಟಾರ್ರಾ.. ಆಮೇಲೆ ಮದ್ವೆ ಆತು ನೋಡಿ..' ಎಂದಿದ್ದಳು..
ಈ ಕುರಿತು ದ್ಯಾವನನ್ನೂ ಕೇಳಿದ್ದೆ..ಆತ ಮೊದಮೊದಲು ನಾಚಿಕೆ ಪಟ್ಟಿದ್ದ.. ಆಮೇಲೆ ಮದುವೆಯ ಪ್ರವರ ಬಿಚ್ಚಿಟ್ಟಿದ್ದ.. `ಸುಳ್ಲೇಳ್ತಾಳ್ರಾ... ನೂರ್ ರುಪಾಯಿ ಕೇಳೋಕೆ ನಮಗೆಂತಾ ಮಳ್ಳನ್ರ..? ಅದೆಂತದೋ ಹೇಳದೆ.. ನೀವ್ ಕೇಳ್ಕಂಡ್ರಿ.. ಆಗ ನಂಗೆ ಮದ್ವೆ ಆಗೋ ವಯಸ್ಸೇಯಾ.. ಇವ್ಳನ್ನೂ ದಿನಾ ನೋಡ್ತಿದ್ನಾ.. ಆದ್ರೆ ಇಂತವ್ಳನ್ನೇ ಆಗ್ಬೇಕೂ ಅಂದಕಂಡಿದ್ದೆ.. ಆದ್ರೆ ಕೇಳೋದ್ ಹೆಂದೆ..? ಹಿಂಗೆ ಇದ್ದಾಗ ಹಾಕಿದ ಬಾಂಬಿಗೆ ಮೀನು ಬಿದ್ದಾಂಗೆಯಾ ಇವ್ಳ ಅಪ್ಪ ಬಂದು ಕೇಳಿದ್ನಾ.. ಆಮೇಲೆ ನಾ ಬ್ಯಾಡ ಹೇಳಿದ್ನಾ.. ಕೊನೆಗೆ ಮದ್ವೆ ಆದ ಮೇಲೆ ...' ಎಂದು ಹೇಳಿದ್ದ.. ಮುಂದಿನದು ಅನ್ ಇಂಟರೆಸ್ಟಿಂಗ್..
ಇಂಥ ಜಾನಿ ಮದುವೆಯಾಗಿ ಸಾಲು ಸಾಲಾಗಿ ನಾಲ್ಕು ಹೆಣ್ಣು ಮಕ್ಕಳನ್ನು ಹೆತ್ತಿದ್ದಳು.. ಕೊನೆಗೂ ಐದನೆಯವನು ಕುಲಪುತ್ರ ಹುಟ್ಟಿದ ಮೇಲೆಯೇ ಆಕೆಯ ಹಡೆಯುವ ಕಾಯಕ ನಿಂತಿದ್ದು. ಜಾನಿಯ ತಾಯಿಯಿಂದ ಪೋಲಿ ಮಾತು ಧಾರೆಯೆರೆದು ಬಂದಿದೆ ಎಂದೆನಲ್ಲ.. ಹಾಗೆಯೇ ಬಂದಿದ್ದು ಈ ಸೂಲಗಿತ್ತಿತನವೂ.. ತನ್ನ ಇದುವರೆಗಿನ ಜೀವನದಲ್ಲಿ ಏನಿಲ್ಲವೆಂದರೂ 50ಕ್ಕೂ ಹೆಚ್ಚು ಮಕ್ಕಳ ಬಾಳಂತನ ಆರೈದ ಖ್ಯಾತಿ ಜಾನಿಯದ್ದು. ಬಾಳಂತಿಗೆ ಅಗತ್ಯವಿರುವ ಎಲ್ಲ ಕೆಲಸಗಳನ್ನೂ ಮಾಡಿಸಿ, ನವಜಾತ ಮಗುವಿನ ಸ್ನಾನ, ಬಾಳಂತಿ ಸ್ನಾನ, ಮಗುವಿನ ಬಟ್ಟೆ ತೊಳೆಯುವ ಕಾಯಕ, ಬಾಳಂತಿಗೆ ಹಳ್ಳಿ ಔಷಧಿ ನೀಡುವಿಕೆ ಯಿಂದ ಹಿಡಿದು ಮಗುವಿನ ದೃಷ್ಟಿ ತೆಗೆದು, ಹಾನ ಸುಳಿದು ಮಲಗಿಸುವ ವರೆಗೆ ದೈನಂದಿನ ಕಾಯಕ ಸಾಂಗವಾಗಿ ಮುಗಿಯುವವರೆಗೂ ಪೋಲಿ ಮಾತುಗಳಿಗೆ ಬರವಿರಲಿಲ್ಲ.
ಸುತ್ತಮುತ್ತಲ ಊರಿನಲ್ಲಿ ಹೊಸ ಮಗು ಜನನ ವಾದರೆ ಈಕೆಗೆ ಆಹ್ವಾನ ನೀಡಲೇಬೇಕು ಎನ್ನುವ ಫಾರ್ಮಾಲಿಟೀಸ್ ಗಳು, ಪ್ರೋಟೋಕಾಲುಗಳಿಲ್ಲ. ಈಕೆ ಬಿಂಕವಿಲ್ಲದೇ ಬರುತ್ತಾಳೆ ಎಂಬುದು ಈಕೆಯ ದೊಡ್ಡಗುಣಗಳಲ್ಲೊಂದು. ನೀವ್ ಎಂತಾ ಬೇಕಂತ ಮಾಡ್ತೀರನ್ರಾ..? ಮಗು ಹುಟ್ಯದೆ.. ಎಲ್ಲೋ ಮರ್ತೋಕ್ತದೆ.. ಇರ್ಲಿ ಬಿಡಿ. ನಾ ಎಂತಾ ಅಂದ್ಕಳ್ಲಿಲ್ಲ.. ಎಂದು ಹೇಳಿ ಮಾತಿಗೆ ನಿಂತು ನಯವಾಗಿ ಬೆಣ್ಣೆ ಹಚ್ಚಿ ಡೀಲು ಕುದುರಿಸುವ ಜಾನಿ ಕೊನೆಗೆ ಹಣವನ್ನು ಮಾತ್ರ ಜಬರದಸ್ತಿನಿಂದಲೇ ಇಸಗೊಂಡು ಹೋಗುತ್ತಾಳೆ..
ದ್ಯಾವ ಜಾನಿಗೆ ಸಿಕ್ಕಾಪಟ್ಟೆ ಹೆದರುತ್ತಾನೆಂಬ ಗಾಳಿಮಾತುಗಳಿವೆ.. ಅದಕ್ಕೆ ತಕ್ಕಂತೆ ನಮ್ಮೆದುರು ಇಬ್ಬರೂ ಎದುರಾಬದುರಾ ಆಗಿಬಿಟ್ಟರೆ ಪರಸ್ಪರ ಮಾತೇ ಆಡುವುದಿಲ್ಲ. ಕೆಲವು ಸಮಯ ಜಾನಿ ವ್ಯಂಗ್ಯವಾಗಿ ಗಂಡನನ್ನು ಚುಚ್ಚುವುದೂ ಇದೆ. ಹುಲಿಯಂತಿದ್ದು, ಹಸುವಿನಂತಾಗಿರುವ ದ್ಯಾವ ಜಾನಿಯ ಮಾತುಗಳಿಗೆಲ್ಲ ಮೌನವಾಗಿ ಇದ್ದು ಬುದ್ದಿವಂತಿಕೆ ಪ್ರದರ್ಶನ ಮಾಡುತ್ತಾನೆ. ಇಂತಹ ಜಾನಿ ನಮ್ಮೂರಿನ ಹಲವು ಹೆಂಗಳೆಯರಿಗೆ ಗಂಡನನ್ನು ಬುಟ್ಟಿಯಲ್ಲಿ ಇಟ್ಟುಕೊಳ್ಳುವುದು ಹೇಗೆ ಎನ್ನುವ ಗುಟ್ಟನ್ನು ಹೇಳಿಕೊಟ್ಟು ಪಾಪ ಕಟ್ಟಿಕೊಂಡಿದ್ದಾಳೆ. ಜಾನಿಯ ಬಂಢಾರದಲ್ಲಿ ಅನೇಕ ಪಿಲಾನುಗಳಿದ್ದು ಆಗಾಗ ಒಂದೊಂದನ್ನೇ ಹೇಳಿಕೊಡುವ ಮೂಲಕ ನಮ್ಮೂರಿನಲ್ಲಿ ಕ್ರಾಂತಿಯಾಗಲು ಕಾರಣೀಭೂತವಾಗಿದ್ದಾಳೆ ಎಂದರೆ ತಪ್ಪಾಗಲಿಕ್ಕಿಲ್ಲ ಬಿಡಿ.
ಇಂತಹ ಜಾನಿಯನ್ನು ಕಂಡರೆ ಈಗಷ್ಟೇ ನಡೆಯಲು, ಮಾತನಾಡಲು ಕಲಿತ ಮಕ್ಕಳು ಚಿಟ್ಟನೆ ಚೀರಿ, ಬೆದರಿ ರಚ್ಚೆ ಹಿಡಿದು ಅಳುತ್ತಾರೆ. ಇದಕ್ಕೆ ಕಾರಣವೂ ಇಲ್ಲದಿಲ್ಲ. ಸದೆಗತ್ತಿ ಹಿಡಿದು ಬರುವ ಜಾನಿಯನ್ನು ತೋರಿಸಿ ಮಕ್ಕಳನ್ನು ಸುಮ್ಮನಿರಿಸುವ ಯತ್ನ ಮಾಡುತ್ತಾರೆ ಮನೆಯ ದೊಡ್ಡವರು. ಅದಕ್ಕೆ ತಕ್ಕಂತೆ ಜಾನಿಯೂ ನಡೆದುಕೊಳ್ಳುತ್ತಾಳೆ. ಜಾನಿಯನ್ನು ತೋರಿಸಿ ಮಕ್ಕಳಿಗೆ ಊಟ ಮಾಡಿಸುವ, ಹಾಲು ಕುಡಿಸುವ ಕೆಲಸ ಮಾಡಿಸುವ ಭರದಲ್ಲಿ ಜಾನಿಯೆಂದರೆ ಯಾವುದೋ ಭೂತದಂತೆ ಚಿತ್ರಿಸಲಾಗುತ್ತದೆ.. ಅಪ್ಪಿತಪ್ಪಿ ಆ ಸಮಯದಲ್ಲಿ ಜಾನಿ ಎದುರಿಗೆ ಬಂದಳೋ ರಗಳೆ ಮಾಡುವ ಮಕ್ಕಳ ಬಳಿ ಹೋಗಿ ಕತ್ತಿಯನ್ನು ಎತ್ತಿ `ಏ ತಮಾ... ನೀ ಹಿಂಗೆ ರಗಳೆ ಮಾಡ್ತಾ ಇರು.. ನಿನ್ ಮಿಣ್ಣಿ ಕೊಯ್ದು ಸಾರಿಗೆ ಹಾಕ್ತೀನೊ ನೋಡು.. ' ಎಂದು ಅಭಿನಯ ಪೂರ್ವಕವಾಗಿ ತೋರಿಸುವ ಭರದಲ್ಲಿ ಮಕ್ಕಳು ಚಡ್ಡಿಯಲ್ಲೇ ಉಚ್ಚೆ ಹೊಯ್ದುಕೊಳ್ಳುತ್ತವೆ..
ಹೌದು.. ನಾನೂ ಹೀಗೆ ಮಾಡಿದ್ದೆನಂತೆ.. ಈ ವಿಷಯವನ್ನು ಜಗಜ್ಜಾಹೀರು ಮಾಡಿದ್ದು ಜಾನಿಯೇ.. ಇದಕ್ಕಾಗಿ ಆಕೆಗೆ ಕೆಜಿಗಟ್ಟಲೆ ಹಿಡಿಶಾಪ ಹಾಕಿದ್ದೇನೆ. ನಾನು ಹಿಡಿಶಾಪ ಹಾಕಿದ ಮೇಲೆ ಈ ವಿಷಯ ಜಗಜ್ಜಾಹೀರಾತಾಗುವುದು ತಪ್ಪಿದೆ.. ಇರ್ಲಿ ಬಿಡಿ..
ಹಾಗೆ ಉಚ್ಚೆಹೊಯ್ದುಕೊಳ್ಳುವ ಮಕ್ಕಳು ನಮ್ಮೂರ ಫಾಸಲೆಯಲ್ಲಿ ಜಾನಿ ಕಾಲಿಟ್ಟ ತಕ್ಷಣ ತಮ್ಮ ಕಿಲಾಡಿ, ರಗಳೆಗಳನ್ನೆಲ್ಲ ಬಂದ್ ಮಾಡಿ ಕೋಣೆಯನ್ನೋ, ಮೂಲೆಯನ್ನೋ ಸೇರುತ್ತವೆ. ಊಹೂಂ.. ಜಪ್ಪಯ್ಯ ಎಂದರೂ ಹೊರಬರುವುದಿಲ್ಲ..
ಇಷ್ಟರ ನಡುವೆ.. ಜಾನಿ `ನಾನೇ ಈ ಮಕ್ಕಳ ಕುಂಡೆ ತೊಳ್ಸೇನಿ.. ಶಣ್ಣಕಿದ್ದಾಗ ನಾನೇ ಎಲ್ಲಾ ಕೆಲ್ಸ ಮಾಡ್ಸೇನಿ.. ಈಗ ನನ್ ಹತ್ರಾ ಬರಾದಿಲ್ಲ ಅಂತಾವೆ.. ಎಂತಕ್ಕೇನ..' ಎಂದು ಅಲವತ್ತುಕೊಳ್ಳುತ್ತಾಳೆ.. ಜಾನಿಯ ವಿಶ್ವರೂಪಕ್ಕೆ ಬೆದರುವ ಮಕ್ಕಳು ಈ ಕಾರಣದಿಂದಲೇ ಅವಳಿಂದ ದೂರ ಉಳಿಯುತ್ತಾರೆ ಎನ್ನುವುದನ್ನು ಯಾರೂ ಅವಳೆದುರು ಹೇಳಲು ಹೋಗುವುದಿಲ್ಲ.
ಇತ್ತೀಚೆಗೆ ಈ ಜಾನಿ ಬಹಳ ಥಂಡಾಗಿದ್ದಾಳೆ.. ಮೊದಲಿನ ಹುರುಪಿಲ್ಲ. ಮೊದಲಿದ್ದಷ್ಟು ಪೋಲಿ ಮಾತುಗಳಿಲ್ಲ. ತನ್ನಷ್ಟಕ್ಕೆ ತಾನು ಬರುತ್ತಾಳೆ.. ಹೋಗುತ್ತಾಳೆ.. ಹೇಳಿದ ಕೆಲಸವನ್ನು ಮಾಡಿ ಹೋಗುತ್ತಾಳೆ.. ಬಡಕಾಗಿದ್ದ ಜಾನಿ ಮತ್ತಷ್ಟು ಬಡಕಾಗಿದ್ದಾಳೆ.. ಕವಳದ ಸೈಡೆ ಎಫೆಕ್ಟಿನಿಂದಾಗಿ ಕಡುಗೆಂಪಾಗಿದ್ದ ಹಲ್ಲುಗಳಲ್ಲಿ ಹಲವು ಬಿದ್ದು ಹೋಗಿ ಕನ್ನಂಬಾಡಿಯ ಗೇಟನ್ನು ಓಪನ್ ಮಾಡಿದಂತೆ ಕಾಣುತ್ತದೆ. ಇದನ್ನು ನೋಡಿದಾಗಲೆಲ್ಲ.. ಯಾಕೋ ಕಾಲ ಕಟ್ಹೋಯ್ತು ಎಂದು ನಾವು ಅಂದುಕೊಂಡಿದ್ದಿದೆ..ಆದರೆ ಯಾಕ್ಹೀಗೆ ಅನ್ನುವ ಕಾರಣ ಮೊನ್ನೆಯವರೆಗೂ ಗೊತ್ತಾಗಿರಲಿಲ್ಲ.. ಇದಕ್ಕೆ ಪ್ರಮುಖ ಎರಡು ಕಾರಣಗಳನ್ನು ಜಾನಿಯ ಅಕ್ಕಪಕ್ಕದ ಮನೆಯವರು ಕೊಡುತ್ತಾರೆ.
ಜಾನಿಗೆ ಯಾರೋ ಆಗದವರು ಮದ್ದು ಹಾಕಿದ್ದಾರೆ. ಅದರಿಂದಾಗಿ ಆಕೆ ಮೊದಲಿನ ಹುರುಪು ಕಳೆದುಕೊಂಡಿದ್ದಾಳೆ.. ತಲೆ ಹಾಳು ಮಾಡಿಕೊಂಡಿದ್ದಾಳೆ ಎನ್ನುವುದು ಒಂದು ಗಾಳಿಸುದ್ದಿಯ ಮಾಹಿತಿ. ಇನ್ನೊಂದೇನೆಂದರೆ ಆಕೆಯ ಹೆಣ್ಣುಮಕ್ಕಳ ಮದುವೆ. ಸಾಲು ಸಾಲು ನಾಲ್ಕು ಹೆಣ್ಣು ಮಕ್ಕಳು.. ಎಷ್ಟೇ ತನ್ನ ಸುಪರ್ದಿಯಲ್ಲಿದ್ದರೂ ಓಸಿಯಾಡುವ ದ್ಯಾವ ಮೊನ್ನೆ ಏನೋ ಭಯಂಕರ ಲುಕ್ಸಾನು ಮಾಡಿಕೊಂಡಿದ್ದಾನೆಂಬ ಮಾತುಗಳೂ ಕೇಳಿಬಂದಿವೆ. ಹೆಣ್ಣು ಮಕ್ಕಳ ಮದುವೆ ಮಾಡಿರುವ ಜಾನಿ ಪದೆ ಪದೆ ವರದಕ್ಷಿಣೆ ನೀಡಲಾಗುತ್ತಿಲ್ಲ ಎಂಬ ಸಮಸ್ಯೆಯಲ್ಲಿ ನಲುಗುತ್ತಿದ್ದಾಳಂತೆ.. ಅಳಿಯನ ಮನೆಯಲ್ಲಿ ಹೆಣ್ಣು ಮಕ್ಕಳಿಗೆ ತೊಂದರೆ ಕೊಡುತ್ತಿರುವ ಸುದ್ದಿಯೂ ಇದೆ. ಇದರ ನಡುವೆ ಗಂಡನಿಗಾದ ಲುಕ್ಸಾನು ಆಕೆಯ ಧೈರ್ಯವನ್ನು ಕಿತ್ತುಹಾಕಿದೆ.. ಪರಿಣಾಮವಾಗಿ ಜಾನಿ ಥಂಡಾಗಿದ್ದಾಳೆ.. ಮಕ್ಕಳೂ ಅಷ್ಟೇ ಜಾನಿಗೆ ಹೆದರುವುದನ್ನು ಬಿಟ್ಟುಬಿಟ್ಟಿವೆ..
ಇಷ್ಟರ ನಡುವೆ ಬ್ರೇಕಿಂಗ್ ನ್ಯೂಸ್ ಒಂದು ಬಂದಿದೆ.. ಜಾನಿ ತನ್ನ ಆಜನ್ಮ ಕಸುಬಾಗಿದ್ದ ಸೂಲಗಿತ್ತಿ ಕಾರ್ಯ ಬಿಡಲು ನಿರ್ಧರಿಸಿದ್ದಾಳಂತೆ.. ಆಕೆಗೆ ಏನಾಯಿತೋ ಏನೋ.. ಎಲ್ಲ ಕೆಲಸಗಳಿಗೆ ಶರಣೆಂದು ಸನ್ಯಾಸಿ ಗಿನ್ಯಾಸಿ ಆಗಲು ಹೊರಟಳೋ ಎನ್ನುವ ಭಾವ ಕಾಡುತ್ತಿದೆ.. ಆಕೆಯಿಂದ ಹಲವು ಪಿಲಾನುಗಳನ್ನು ಕಲಿತಿದ್ದ ನಮ್ಮೂರ ಹೆಂಗಳೆಯರೂ ಇದರಿಂದ ಚಿಂತಾಕ್ರಾಂತರಾಗಿದ್ದಾರೆ. ಸಂಸಾರದ ಹಲವು ಮಂತ್ರಗಳನ್ನು ಹೇಳಿಕೊಟ್ಟಿದ್ದ ಗುರು ಜಾನಿಗೆ ಬಂದ ತೊಂದರೆ ತಮಗೆ ಬಂದಿದೆಯೇನೋ ಎಂಬಂತೆ ಕಸಿವಿಸಿಗೊಳಗಾಗಿ `ಪಾಪ.. ಹಂಗಾಗಕಾಗಿತ್ತಿಲ್ಲೆ..' ಎಂದು ಹೇಳುತ್ತಿರುವುದೂ ಆಗಾಗ ತಮ್ಮ ನಾಲ್ಕು ಗೋಡೆಯ ನಡುವಿನಿಂದ ಹೊರಬಂದು ಕೇಳಿದೆ.
ಜೊತೆಯಲ್ಲಿ ನಮ್ಮೂರಿನ ನಿಯೋಗವೊಂದು ತೆರಳಿ ಜಾನಿಗೆ ಸಾಕಷ್ಟು ಸಲಹೆಗಳನ್ನು  ನೀಡಿ, ಸಮಸ್ಯೆಗಳಿಗೆ ಪರಿಹಾರದ ಉಪಾಯಗಳನ್ನು ನೀಡಿ, ಮೊದಲಿನ ರಿತಿಯಾಗು, ಸೂಲಗಿತ್ತಿ ಕಾರ್ಯ ಬಿಡಬೇಡ ಎಂದು ಹೇಳಿ ಬಂದಿದೆಯಂತೆ..
ಅದಕ್ಕೆ ಪ್ರತಿಯಾಗಿ `ನೋಡ್ವಾ.. ಕಾಲ ಹೆಂಗಿರ್ತದೇನೋ.. ನಂಗೂ ವಯಸ್ಸಾಯ್ತಲ್ರ.. ನೋಡ್ವಾ,.. ನಾ ಎಷ್ಟೋ ನೋಡೀನಲ್ರ.. ಇನ್ನೂ ನನ್ನ ಜೀವನದಾಗೆ ಎಷ್ಟು ನೋಡಬೇಕು ಅಂತೈತೋ..ನೀವ್ ಹೇಳೀರಿ ಅಂತ ನಾ ಮಾಡ್ತೇನಿ.. ಈಗ ನಿಮ್ಮನಿಯವ್ರ ಜೊತೆ ಬೆಚ್ಚಗೆ ಮಲ್ಕಳಿ...' ಎಂದು ಹೇಳಿ ಕಳಿಸಿದ್ದಾಳಂತೆ..
ಅದಕ್ಕೆ ತಕ್ಕಂತೆ ನಮ್ಮೂರ ಲೋಕಲ್ ಪತ್ರಿಕೆಯವರು ಫಾರ್ಮಿಗೆ ಮರಳಿದ ಜಾನಿ ಎಂಬ ತಲೆಬರಹದಲ್ಲಿ ಸುದ್ದಿ ಬರೆಯಲು ರೆಡಿಯಾಗಿದ್ದಾರಂತೆ.. ಅಂತೂ ಜಾನಿ ಮತ್ತೆ ಫಾರ್ಮಿಗೆ ಬಂದಿದ್ದಾಳೆ... ಇನ್ನು ನಮ್ಮೂರಿನಲ್ಲಿ ಕಿವಿ ಬಿಡುವ ಹಾಗಿಲ್ಲ ಬಿಡಿ..


Sunday, October 20, 2013

ಗೆಳತಿ, ಮತ್ತೆ ನಿನ್ನ ನೆನಪಾಗುತ್ತಿದೆ


ಗೆಳತಿ,
ಅತ್ತು ಅತ್ತು ಬತ್ತಿದ
ಕಣ್ಣೆವೆಯಲ್ಲಿ ಮತ್ತೆ
ನೀರು ಜಿನುಗುತ್ತಿದೆ ||

ಮನದ ಬಣ್ಣಗೆಟ್ಟ ಕ್ಯಾನವಾಸಿನಲ್ಲಿ
ಸರ್ವಬಣ್ಣದ
ಕಾಮನಬಿಲ್ಲು ಮೂಡುತ್ತಿದೆ ||

ಮರೆತೇ ಹೋದಂತಿದ್ದ
ಹಳೆಯದೊಂದು ಹಾಡು
ಮತ್ತೆ ಗುನುಗುತ್ತಿದೆ ||

ನಿದ್ದೆಗೆಡುವ ನಿರಭ್ರ ರಾತ್ರಿಗಳು
ಸರಿದು, ತರತರದ
ಕನಸು ಬೀಳುತ್ತಿದೆ ||

ಬೋಳು, ಬರಲೆದ್ದ
ಒಂಟಿ ಮರ ಚಿಗುರಿ
ಹಸಿಹಸಿರಾಗುತ್ತಿದೆ ||

ನೀನೆದ್ದು, ಒದ್ದು ಹೋದ
ಎದೆಯ ಗಾಯ
ನಿಧಾನವಾಗಿ ಮಾಯುತ್ತಿದೆ ||

ನೀ ಬಿಟ್ಟುಹೋದ
ಕಾಲುಗೆಜ್ಜೆ ನನ್ನ ಬಳಿ
ಮತ್ತೆ ಕಿಣಿಕಿಣಿಸುತ್ತಿದೆ ||

ಸುರಿವ ಮಂಜಿನ ಧಾರೆ
ನಡು ನಡುವಲ್ಲೊಂದು
ಸೂರ್ಯಕಿರಣ ಹಾಯುತ್ತಿದೆ ||

ಗೆಳತಿ
ಮನದ ಪಟಲದೊಳಗೆ
ಮತ್ತೆ ನಿನ್ನ ಬಿಂಬ
ಮೂಡುತ್ತಿದೆ||

ಹಾಗೇ
ಮತ್ತೆ ನಿನ್ನ ನೆನಪಾಗುತ್ತಿದೆ ||

ಈ ಕವಿತೆಯನ್ನು ಆಕಾಶವಾಣಿ ಕಾರವಾರದಲ್ಲಿ 23-01-2008ರಂದು ವಾಚಿಸಲಾಗಿದೆ
2008ರ ಫೆಬ್ರವರಿ 16ರಂದು ಬೆಳಲೆಯಲ್ಲಿ ನಡೆದ ಎಂ.ಎಂ ಕಲಾ ಮತ್ತು ವಿಜ್ಞಾನ ಮತ್ತು ಕಲಾ ಕಾಲೇಜಿನ ಎನ್ನೆಸ್ಸೆಸ್ ಕ್ಯಾಂಪಿನಲ್ಲಿ ವಾಚಿಸಲಾಗಿದೆ.
ಜುಲೈ 12, 2009ರ ಕರ್ಮವೀರ ವಾರಪತ್ರಿಕೆಯ ಯುವ ಲಹರಿಯಲ್ಲಿ ಪ್ರಕಟವಾಗಿದೆ

Friday, October 18, 2013

ಮತ್ತಷ್ಟು ಹಾಯ್ಕುಗಳು


ದಿನದಿನವೂ ಸೂರ್ಯ
ಹುಟ್ಟಿಬರುತ್ತಲೇ ಇದ್ದಾನೆ
ಚಿಕ್ಕದಾಗುತ್ತಿಲ್ಲ||

ಗುಲಾಬಿಯೋ ನೋಡಲಿಕ್ಕೆ
ಚೆಂದವುಂಟು, ಒಡಲಲ್ಲಿ
ಮುಳ್ಳಿದೆ ||

ಯಾವಾಗಲೂ ಬಾನ
ಚಂದಿರ ರಾತ್ರಿಯಲ್ಲೇ
ಬರುತ್ತಾನೆ||

ಅವನು ಜೋರಾಗಿ
ನಗುತ್ತಿದ್ದಾನೆ, ಆದರೆ
ಹುಚ್ಚನಲ್ಲ||

ಅವನು ಸ್ವಲ್ಪಹೊತ್ತು
ನಕ್ಕಕೂಡಲೇ
ಸುಮ್ಮನಾಗಿಬಿಟ್ಟ ||

ಆತ ಕುಳಿತಿದ್ದಾನೆ.
ಧ್ಯಾನ ಮಾಡುತ್ತಿಲ್ಲ
ಯೋಚಿಸುತ್ತಿದ್ದಾನೆ||

(ಇವು ಹಾಯ್ಕಾಗಬಹುದಾ ಅಥವಾ ಹೈಕಾಗಬಹುದಾ ಅನ್ನುವ ಸ್ಪಷ್ಟನೆಯಿಲ್ಲ.. ಒಂದು ಪ್ರಯತ್ನ ಮಾಡಿದ್ದೇನೆ..
ಹಾಗೆ ಸುಮ್ಮನೆ ಓದಿ ನೋಡಿ...)

(ಬರೆದಿದ್ದು 26-10-2006ರಂದು ದಂಟಕಲ್ಲಿನಲ್ಲಿ)
 

Thursday, October 17, 2013

ಬಲಿಪಶು (ಕಥೆ)

    ಶಿರಸಿಯ ದೊಡ್ಡ ಆಸ್ಪತ್ರೆ. ಅಲ್ಲಿಯ ಮಹಡಿಯ ಕೊಠಡಿಯೊಂದರಲ್ಲಿ ನಾನು ಮಲಗಿದ್ದೆ. ಮೈತುಂಬಾ ಬ್ಯಾಂಡೇಜು ಸುತ್ತಲಾಗಿತ್ತು. ಕಾಲಿನ ಮೂಳೆಯೊಂದು ಮುರಿದಿದ್ದರಿಂದ ಕಾಲಿಗೆ ತುಸು ದೊಡ್ಡದಾದ ಬ್ಯಾಂಡೇಜನ್ನು ಹಾಕಲಾಗಿತ್ತು. ತಲೆ, ಮುಖಗಳಿಗೆಲ್ಲಾ ಪೆಟ್ಟು ಬಿದ್ದಿದ್ದ ಪರಿಣಾಮ ಅಲ್ಲೆಲ್ಲಾ ಬ್ಯಾಂಡೇಜುಗಳನ್ನು ಹಾಕಿದ್ದರು. ನಾನು ಅಲ್ಲಿ ನನ್ನ ದೇಹವನ್ನು ಕೊಂಚವೂ ಅಲ್ಲಾಡಿಸಲು ಅಸಾಧ್ಯ ಎನ್ನುವಂತೆ ಮಲಗಿದ್ದೆ. ಅದೆಷ್ಟು ದಿನವಾಗಿತ್ತೋ ಗೊತ್ತಿ.. ಕನಿಷ್ಟವೆಂದರೂ ಹದಿನೈದು ದಿನಗಳು ಸಂದಿರಬಹುದು. ಆದರೆ ಕಳೆದ ಒಂದೆರಡು ಗಂಟೆಗಳ ಹಿಂದೆ ಅರೆಬರೆ ಪ್ರಜ್ಞೆ ಬಂದಿತ್ತು. ಸಂಪೂರ್ಣ ಪ್ರಜ್ಞೆ ಬರಲು ಕೆಲ ಕಾಲ ಹಿಡಿಯಿತು.
    ಒಂದೆರಡು ದಿನ ಕಳೆದವು. ಎಲ್ಲರ ಆರೈಕೆಯಿಂದಾಗಿ ನಾನು ನಿಧಾನವಾಗಿ ಎದ್ದು ಕುಳಿತುಕೊಳ್ಳುವಂತಾಗಿದ್ದೆ. ಆಗ ನನಗೆ ನಿಧಾನವಾಗಿ ನಡೆದಿದ್ದೆಲ್ಲವೂ ಜ್ಞಾಪಕಕ್ಕೆ ಬರತೊಡಗಿತು. ನಾನು ಕ್ರಮೇಣ ನೆನಪಿನ ಆಳಕ್ಕೆ ಇಳಿದೆ. ಮೊದಮೊದಲು ಅಸ್ಪಷ್ಟವಾಗಿ ನಂತರ ನಿಚ್ಚಳವಾಗಿ ಘಟನೆಗಳೆಲ್ಲ ನೆನಪಾಯಿತು. ಹಾಗೆ ಸುಮ್ಮನೇ ವಿಷಾದವೊಂದು ಸುಳಿದುಹೋಯಿತು. ಕಣ್ಣಿನ ಮುಂದೆ ನಡೆದ ಘಟನೆ ಪರದೆಯಂತೆ ಸರಿಯುತ್ತಿತ್ತು. ಪಕ್ಕನೆ ಎಚ್ಚರಾದಂತಾಯಿತು. ಎದ್ದು ಕುಳಿತು ನೋಡಿದರೆ ಡಾಕ್ಟರಾದಿಯಾಗಿ ಒಂದೆರಡು ಜನ ನನ್ನ ಮುಂದೆ ಕುಳಿತು ಕುತೂಹಲದಿಂದ ದಿಟ್ಟಿಸುತ್ತಿದ್ದಾರೆ. ವೈದ್ಯರು ಮುಂದೆ ಕುಳಿತು ಪರಿಕ್ಷಾರ್ಥವಾಗಿ ನನ್ನನ್ನು ನೋಡುತ್ತಿದ್ದರೆ ಅವರ ಹಿಂಬದಿಯಲ್ಲಿ ಭಯಭೀತರಾಗಿ ಅಮ್ಮ ನಿಂತು ಮುಂದೇನು ಎಂಬಂತೆ ಗಮನಿಸುತ್ತಿದ್ದಳು.
    ಡಾಕ್ಟರು ನನ್ನ ಬಳಿ `ಹಲೋ.. ಹೇಗಿದ್ದೀರಿ..?' ಎಂದರು. ನಾನು ಸನ್ನೆಯಲ್ಲಿಯೇ ಮುಗುಳುನಕ್ಕು ಚನ್ನಾಗಿದ್ದೇನೆ ಎಂದೆ. ನಂತರ ಅವರು `ಈಗ ತಲೆನೋವು ಹೇಗಿದೆ' ಎಂದರು. ನಾನು ನಿಧಾನವಾಗಿ `ಪರವಾಗಿಲ್ಲ ಡಾಕ್ಟ್ರೆ..' ಎಂದೆ
    `ಡೋಂಟ್ ವರಿ.. ಇನ್ನೊಂದೆರಡು ವಾರದಲ್ಲಿ ನೀನು ಹುಷಾರಾಗಬಲ್ಲೆ.. ನಿನ್ನ ವಿಲ್ ಪವರ್ ಚನ್ನಾಗಿದೆ. ಅದೇ ನಿನ್ನನ್ನು ಉಳಿಸಿದೆ..' ಎಂದರು.. ನಾನು `ಥ್ಯಾಂಕ್ಸ್..' ಎಂದೆ..
    ಅದಾಗಿ ಒಂದೆರಡು ದಿನ ಡಾಕ್ಟರ್ ಬಂದು ಚೆಕಪ್ ಮಾಡಿ ಹೋಗುತ್ತಿದ್ದರು.. ಅಷ್ಟರಲ್ಲಿ ನಾನು ಎಷ್ಟೋ ಸುಧಾರಿಸಿದ್ದೆ. ಕೊನೆಗೊಂದು ದಿನ ತಮ್ಮ ಕೆಲಸ ಮುಗಿಸಿ ಬಂದ ಡಾಕ್ಟರ್ ನನ್ನ ಜೊತೆ ಹಾಗೆ ಸುಮ್ಮನೆ ಮಾತಿಗಿಳಿದರು.. ನಾನೂ ಹೊತ್ತು ಹೋಗದ ಕಾರಣ ಮಾತನಾಡತೊಡಗಿದೆ.. ಅವರು ತಮ್ಮ ಕುಟುಂಬ ಸೇರಿದಂತೆ ಹಲವು ವಿಷಯಗಳನ್ನು ನನ್ನೆದುರು ಬಿಚ್ಚಿಟ್ಟರು.. ಅದ್ಯಾಕೆ ಹಾಗೆ ಮಾಡಿದರೋ ನನಗೆ ಅರ್ಥವಾಗಲಿಲ್ಲ. ನನ್ನೆಡೆಗೆ ಅವರಿಗೆ ಕುತೂಹಲ ಇರಬಹುದು.. ನಾನ್ಯಾಕೆ ಗಾಯಗೊಂಡು ಆಸ್ಪತ್ರೆಯನ್ನು ಸೇರುವಂತಾಯ್ತು..? ನಾನು ಅರೆಪ್ರಜ್ಞಾವಸ್ತೆಗೆ ಮರಳಲು ಏನು ಕಾರಣ ಇತ್ಯಾದಿ ಗೊಂದಲಗಳು ಕಾಡಿರಬಹುದು.. ನನ್ನ ಮನೆಯವರು ಈ ಕುರಿತು ಹೇಳಿದರೂ ನನ್ನ ಬಳಿ ಸ್ಪಷ್ಟವಾಗಿ ತಿಳಿದುಕೊಳ್ಳುವ ಇಚ್ಛೆಯೂ ಇರಬಹುದು.. ಅಂತೂ ಮಾತಿಗೆ ನಿಂತರು.. ವಿಷಯಕ್ಕೂ ಬಂದರು..
    ನಾನು ನನ್ನೊಳಗಿದ್ದ ಆ ಘಟನೆಯನ್ನು ಅವರೆದುರು ನಿಧಾನವಾಗಿ ಹೇಳಲು ಆರಂಭಿಸಿದೆ..

******

    ಅದು ಶಿರಸಿಯ ದೊಡ್ಡ ಕಾಲೇಜು.. ಅಲ್ಲಿ ನಾನು ಕೊನೆಯ ವರ್ಷದ ಬಿ.ಎಸ್ಸಿ ವಿದ್ಯಾರ್ಥಿ. ಈ ಸಾರಿಯ ಪರೀಕ್ಷೆಯೊಂದು ಚನ್ನಾಗಿ ಆಗಿಬಿಟ್ಟಿತೆಂದರೆ ರ್ಯಾಂಕ್ ಕಟ್ಟಿಟ್ಟ ಬುತ್ತಿ ಎನ್ನುವುದು ನನ್ನ ಆಸೆಯಾಗಿತ್ತು. ಅದಕ್ಕೆ ತಕ್ಕಂತೆ ನನ್ನ ತಾಲೀಮೂ ಇತ್ತು.
    ಕಾಲೇಜಿನ ಆರಂಭದ ದಿನಗಳಿಂದಲೂ ಕಾಲೇಜಿನಲ್ಲಿ ನಾನು ಇಬ್ಬರು ಪರಮಾಪ್ತ ಮಿತ್ರರನ್ನು ಹೊಂದಿದ್ದೆ. ಒಬ್ಬನ ಹೆಸರು ವಿಶಾಲ್ ಇನ್ನೊಬ್ಬಾತ ಕುಮಾರ. ಇಬ್ಬರೂ ಶಿರಸಿಯವರೇ ಆಗಿದ್ದರು. ನಾನು ಮಾತ್ರ ಹಳ್ಳಿಯಿಂದ ಬಂದವನಾಗಿದ್ದೆ. ಈ ಇಬ್ಬರೂ ಪರಮ ಮುಂಗೋಪಿಗಳು. ಎದುರು ಸಿಟ್ಟಿನವರು.. ನಾನು ಶಾಂತಿದೂತ. ನನಗೂ ಇವರಿಗೂ ಅದ್ಯಾವ ಮಾಯೆಯಲ್ಲಿ ಸ್ನೇಹವಾಯಿತೋ ಗಿತ್ತಿಲ್ಲ. ನಮ್ಮ ಗೆಳೆತನ ಕಾಲೇಜಿನ ಕಿಟಕಿ ಬಾಗಿಲುಗಳಿಗೆ, ಬೇಂಚು ಡೆಸ್ಕುಗಳಿಗೆ ಗೊತ್ತಿತ್ತು.. ಅಷ್ಟೇ ಏಕೆ ವಾರಕ್ಕೊಮ್ಮೆ ಕದ್ದುಮುಚ್ಚಿ ನೋಡುವ ಸಿನಿಮಾ ಥಿಯೇಟರಿನ ಕೊನೆಯ ಸಾಲಿನ ಖುರ್ಚಿಗಳಿಗೂ ಗೊತ್ತಿತ್ತು.. ರಿಸರ್ವ್ ಕೂಡ ಆಗಿತ್ತು. ಈ ಇಬ್ಬರೂ ಸಾಕಷ್ಟು ದುಡ್ಡಿದ್ದವರಾಗಿದ್ದರೂ ಅಷ್ಟೇನೂ ಸ್ಥಿತಿವಂತನಾಗಿಲ್ಲದ ನಾನು ಅವರ ಪಾಲಿಗೆ ದೋಸ್ತನಾಗಿದ್ದೆ. ಹಣದ ವಿಷಯದಲ್ಲಿ ಅವರು ನನ್ನ ಪಾಲಿಗೆ ಗಾಡ್ ಫಾದರ್ ಆಗಿದ್ದರೆ ಪಠ್ಯದ ಚಟುವಟಿಕೆಗಳಿಗೆ ನಾನು ಅವರ ಪಾಲಿನ ವೀಕೀಪೀಡಿಯಾ ಆಗಿದ್ದೆ. ನಮ್ಮ ಕಾಲೇಜು ಜೀವನದ ಮೊದಲೆರಡು ವರ್ಷ ಇದೇ ಅಲೆಯಲ್ಲಿ ಏರಿಳಿಯುತ್ತಾ ಸಾಗಿತ್ತು.. ಬಹು ಸಂತಸದ ದಿನಗಳಾಗಿ ಸಾಗಿದ್ದವು.
    ಹೀಗಿರಲೊಂದು ದಿನ ಕಾಲೇಜಿನ ಕೊನೆಯ ವರ್ಷದ ಸಂಸತ್ ಚುನಾವಣೆ ಹತ್ತಿರಕ್ಕೆ ಬಂದಿತು. ನಮ್ಮ ಮೂವರಲ್ಲಿ ಸ್ವಲ್ಪ ಹುಡುಗಾಟದ ಸ್ವಭಾವದ ನಾನು ನನ್ನಿಬ್ಬರು ದೋಸ್ತರನ್ನೂ ಚುನಾವಣೆಗೆ ನಿಲ್ಲಿಸಿದೆ. ಬೇರೆ ಬೇರೆ ಕಾಂಬಿನೇಶನ್ನಿನ ಈ ಇಬ್ಬರೂ ದೋಸ್ತರು ನನ್ನ ಒತ್ತಾಯದ ಸುರಿಮಳೆಗೆ ಬಲಿಯಾಗಿ ಚುನಾವಣೆಗೆ ನಿಂತರು. ಅಷ್ಟೇ ಅಲ್ಲದೇ ನಾನೂ ಚುನಾವಣೆಗೆ ನಿಲ್ಲುವಂತೆ ಮಾಡಿದರು.
    ಅದೊಂದು ದುನ ಚುನಾವಣೆಯೂ ನಡೆಯಿತು. ಆಶ್ಚರ್ಯವೆಂಬಂತೆ ಆ ಚುನಾವಣೆಯಲ್ಲಿ ನಾವು ಮೂರೂ ಜನ ಆರಿಸಿ ಬಂದಿದ್ದೆವು. ಬಹುಶಃ ಇದೇ ನನ್ನ ಹಣೆಬರಹ ಹಾಳಾಗಲು ಕಾರಣವೇನೋ ಅನ್ನಿಸಿತು. ನಮ್ಮ ಬದುಕು ಅಡ್ಡದಾರಿಯಲ್ಲಿ ಹೊರಳಲೂ ಇದೂ ಕಾರಣವಾಯಿತು. ತಮಾಷೆಗೆ ಚುನಾವಣೆಗೆ ಸ್ಪರ್ಧಿಸಿದ್ದ ನಾವು ಸೀರಿಯಸ್ಸಾಗಿ ಗೆದ್ದ ಪರಿಣಾಮ ನಮ್ಮ ಬದುಕು ಸೀರಿಯಸ್ಸಾಯಿತು. ಈ ಸಾರಿ ಮಾತ್ರ ನಾನು ಎಷ್ಟು ಹೇಳಿದರೂ ಕಿವಿ ಮೇಲೆ ಹಾಕಿಕೊಳ್ಳದ ವಿಶಾಲ ಹಾಗೂ ಕುಮಾರ ವಿದ್ಯಾರ್ಥಿ ಯೂನಿಯನ್ನಿನ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿದರು.
    ಇದರ ಲಾಭವನ್ನು ಪಡೆದುಕೊಂಡ ಕೆಲವು ವ್ಯಕ್ತಿಗಳು, ನಮಗಾಗದವರು ವಿಶಾಲ ಹಾಗೂ ಕುಮಾರನ ನಡುವೆ ದ್ವೇಷದ ಬೀಜವನ್ನು ಬಿತ್ತಿದರು. ಈ ಇಬ್ಬರೂ ಇದರ ಪರಿಣಾಮವಾಗಿ ಪ್ರಭಲ ದ್ವೇಷಿಗಳಾಗಿ ಬದಲಾದರು. ಅಷ್ಟೇ ಅಲ್ಲದೇ ಸುತ್ತಮುತ್ತ ಜೊತೆಗಾರರನ್ನು ಕಟ್ಟಿಕೊಂಡು ಗ್ಯಾಂಗ್ ಮನ್ನುಗಳಾಗಿ ಬದಲಾದರು. ಒಬ್ಬರನ್ನು ಕಂಡರೆ ಮತ್ತೊಬ್ಬರು ಸಾಯಿಸುವಷ್ಟು ದ್ವೇಷಪಡಲಾರಂಭಿಸಿದರು. ನಾನು ಮಾತ್ರ ಇಬ್ಬರ ನಡುವೆ ಸಂಧಾನದ ಹಲವು ವಿಫಲ ಯತ್ನಗಳನ್ನು ನಡೆಸಿದೆ. ಸುಸ್ತಾಗಿ ಏಕಾಂಗಿಯಾದೆ. ಹಾಗೆಮದು ಈ ಇಬ್ಬರೂ ನನ್ನ ಬಳಿ ಚನ್ನಾಗಿಯೇ ಇದ್ದರು. ಆದರೆ ತಮ್ಮಲ್ಲಿ ಮಾತ್ರ ಸಿಟ್ಟಿನ ಬೆಟ್ಟವನ್ನೇ ಹೊಂದಿದ್ದರು.
    ಕೊನೆಯದಾಗಿ ಕಾರ್ಯದರ್ಶಿಯ ಆಯ್ಕೆಗಾಗಿ ಚುನಾವಣೆ ಬಂದಿತು. ಆ ದಿನ ನಾನು ಹಲವು ಕಾರಣಗಳಿಂದಾಗಿ ಕಾಲೇಜಿಗೆ ಹೋಗಲು ಆಗಲೇ ಇಲ್ಲ. ಮರುದಿನ ಹೋದೆ. ಆಗ ತಿಳಿಯಿತು ವಿಶಾಲ್ ಹಾಗೂ ಕುಮಾರ ಇಬ್ಬರಿಗೂ ಸಮನಾದ ಮತಗಳು ಬಿದ್ದಿದ್ದವು ಎಂಬುದು. ಅಂತಿಮವಾಗಿ ಗೆಲುವಿನ ನಿರ್ಧಾರ ಮಾಡುವುದು ನನ್ನ ಮತ ಎನ್ನುವುದನ್ನು ತಿಳಿದು ಗೊಂದಲದಲ್ಲಿ ಮುಳುಗಿದೆ. ಹೇಗಾದರೂ ಮಾಡಿ ತೊಂದರೆ ತಪ್ಪಿದರೆ ಸಾಕಪ್ಪಾ ಅಂದುಕೊಂಡಿದ್ದವನಿಗೆ ಏನು ಮಾಡಿದರೂ ಸಮಸ್ಯೆ ಬಿಡಲೊಲ್ಲದು.
    ತಮಗೇ ಮತ ಹಾಕಬೇಕೆಂದು ವಿಶಾಲ ಹಾಗೂ ಕುಮಾರ ಇಬ್ಬರೂ ಸಾಕಷ್ಟು ಆಮಿಷಗಳ ಜೊತೆಗೆ ಚಿಕ್ಕ ಪ್ರಮಾಣದ ಬೆದರಿಕೆಯನ್ನೂ ಒಡ್ಡಿದ್ದರು. ಏನು ಮಾಡೋದು ಎನ್ನುವ ಸಂದಿಗ್ಧತೆ ನನ್ನದಾಗಿತ್ತು. ಆದರೂ ಹಲವು ಕ್ಷಣಗಳ ಕಾಲ ಆಲೋಚನೆಯನ್ನು ಮಾಡಿ ಕೊನೆಗೆ ವಿಶಾಲನಿಗೆ ಮತವನ್ನು ಹಾಕಿದೆ. ನಾನು ಹಾಗೇಕೆ ಮಾಡಿದ್ದೆಂದು ಈಗಲೂ ಅರ್ಥವಾಗಿಲ್ಲ. ನನ್ನ ಮತದಿಂದಾಗಿ ವಿಶಾಲ ಕಾಲೇಜಿನ ಕಾರ್ಯದರ್ಶಿಯಾಗಿ ಆಯ್ಕೆಯಾದ. ಈಗಲಾದರೂ ಅವರೀರ್ವರ ನಡುವಣ ವೈರತ್ವ, ವೈಶಮ್ಯ ಕಡಿಮೆಯಾಗಬಹುದು ಎಂದು ಆಲೋಚಿಸಿದೆ. ಆದರೆ ಹಾಗಾಗಲೇ ಇಲ್ಲ.
    ಅವರು ಹಾಗೂ ಅವರ ಗುಂಪು ಸಂದರ್ಭ ಸಿಕ್ಕಾಗಲೆಲ್ಲಾ ಒಬ್ಬರನ್ನೊಬ್ಬರು ಹಳಿಯಬೇಕು, ತುಳಿಯಬೇಕು ಎಂದು ಕಾಯುತ್ತಲೇ ಇದ್ದವು. ಅವರಿಗಿಂತ ತಾವು ಕಡಿಮೆಯಿಲ್ಲ, ನಾವೇ ಹೆಚ್ಚಿನವರು ಎನ್ನಿಸಿಕೊಳ್ಳಬೇಕೆಂಬ ದೃಷ್ಟಿಯಿಂದ ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದರು. ಹೀಗಿದ್ದಾಗಲೇ ಕಾಲೇಜಿನ ಕ್ರೀಡಾ ವಿಭಾಗಗಳಲ್ಲಿ, ಹಲವು ಕ್ರೀಡೆಗಳಲ್ಲಿ ಕುಮಾರ ಹಾಗೂ ಆತನ ಜೊತೆಗಾರರೇ ಗೆಲುವು ಜಯಗಳಿಸಿದ್ದರು. ಇದು ವಿಶಾಲನಿಗೆ ಸಿಟ್ಟನ್ನು ತರಿಸಿತ್ತು. ಅವನು ಹೇಗಾದರೂ ಮಾಡಿ ಒಂದು ವಿಷಯದಲ್ಲಾದರೂ ಕುಮಾರನನ್ನು ಸೋಲಿಸಬೇಕು ಎಂದು ಕಾಯುತ್ತಿದ್ದ.
    ಕೊನೆಗೆ ಬಿ.ಎಸ್ಸಿ ಪರೀಕ್ಷೆಗಳು ಹತ್ತಿರಬಂದವು. ಇಲ್ಲೂ ಪುನಃ ಮೇಲಾಟ, ತುಳಿದಾಟ, ಹಗೆ, ವೈಶಮ್ಯಗಳು ಮೆರೆದವು. ಅವರಿಬ್ಬರೂ ತಮ್ಮ ತಮ್ಮ ಗ್ಯಾಂಗಿನಿಂದ ಒಬ್ಬ ವ್ಯಕ್ತಿಯಾದರೂ ರ್ಯಾಂಕ್ ಬರಬೇಕು ಎಂದು ಬಯಸಿದರು.
    ತಾವೇ ಓದಿ ರ್ಯಾಂಕ್ ಗಳಿಸಲು ಪ್ರಯತ್ನ ಮಾಡುವುದನ್ನು ಬಿಟ್ಟು ಅವರಿಬ್ಬರೂ ತಮ್ಮ ಗ್ಯಾಂಗುಗಳ ಸಮೇತ ನನ್ನ ಬಳಿ ಬಂದರು. ನಾನು ಆಗ ಕಾಲೇಜಿನ ರ್ಯಾಂಕ್ ವಿದ್ಯಾರ್ಥಿ. ರ್ಯಾಂಕ್ ಪಡೆಯುವುದರಲ್ಲಿ ಎಲ್ಲರಿಗಿಂತ ಮುಂದಿದ್ದ ಕಾರಣ ನನ್ನನ್ನು ಹುಡುಕಿಕೊಂಡು ಬಂದಿದ್ದರು. ನನಗೆ ಮತ್ತೆ ಉಭಯ ಸಂಕಟ ಹಾಗೂ ಪೇಚಾಟ.. ಏನು ಮಾಡುವುದಕ್ಕೂ ಬಗೆ ಹರಿಯಲಿಲ್ಲ. ಕೊನೆಗೆ ಮತ್ತೆ ಯೋಚನಾ ಲಹರಿಯನ್ನು ಕೈಗೊಂಡು ಈ ಸಾರಿ ಕುಮಾರನ ಜೊತೆಗೆ ಇರುವುದೆಂದು ನಿರ್ಧಾರ ಮಾಡಿದೆ. ಚುನಾವಣೆಯಲ್ಲಿ ವಿಶಾಲನ ಪರವಾಗಿ ಮತಹಾಕಿದ್ದರಿಂದ ಈ ಸಾರಿ ಕುಮಾರನ ಜೊತೆಗೆ ಇರಬೇಕು ಇದರಿಂದಾಗಿ ಇಬ್ಬರಿಗೂ ನ್ಯಾಯ ದೊರಕಿಸಿದಂತಾಗುತ್ತದೆ ಎನ್ನುವುದು ನನ್ನ ಭಾವನೆಯಾಗಿತ್ತು. ನನ್ನ ನಿರ್ಧಾರದಿಂದ ವಿಶಾಲ ಸಿಟ್ಟಾಗಿಬಿಟ್ಟ. ಸಿಟ್ಟಿನಿಂದ ಆತ `ಏಯ್.. ನಾನ್ ನಿನ್ನ ಸುಮ್ನೆ ಬಿಡೋದಿಲ್ವೋ.. ಒಂದು ಕೈ ನೋಡ್ಕೋತೀನಿ..' ಎಂದು ಬೆದರಿಸಿ ಅಲ್ಲಿಂದ ಹೋದ.. ನಾನು ಈ ಘಟನೆಯನ್ನು ತಮಾಷೆಯೆಂದುಕೊಂಡು ಸುಮ್ಮನೆ ಬಿಟ್ಟುಬಿಟ್ಟೆ.
    ಹಲವು ದಿನಗಳು ಕಳೆದವು... ಕೊನೆಗೆ ಪರೀಕ್ಷೆಗೆ ಒಂದು ವಾರವಷ್ಟೇ ಉಳಿದಿತ್ತು. ನಾನು ಆ ದಿನ ಕಾಲೇಜಿಗೆ ಬಂದವನು ನನ್ನ ಹಾಲ್ ಟಿಕೆಟ್ ಪಡೆದು ಕಾಲೇಜಿನಿಂದ ಬಸ್ ನಿಲ್ದಾಣದ ಕಡೆಗೆ ನಡೆದುಕೊಮಡು ಬರುತ್ತಿದ್ದೆ. ಇನ್ನೇನು ದೇವಿಕೆರೆಯನ್ನು ದಾಟಿ ತಿರುವಿನಲ್ಲಿ ಮುನ್ನಡೆಯಬೇಕೆನ್ನಿಸುವಷ್ಟರಲ್ಲಿ ಎದುರಿನಿಂದ ಒಂದು ಟೆಂಪೋ ಬಂತು. ನಾಲ್ಕಾರು ಜನ ಹುಡುಗರು ಸರಸರನೆ ಇಳಿದರು. ಅವರೆಲ್ಲರ ಕೈಯಲ್ಲಿ ತರಹೇವಾರಿ ಆಯುಧಗಳಿದ್ದವು. ದೊಣ್ಣೆ, ರಾಡು, ಚೈನು ಇನ್ನೂ ಏನೇನೋ.. ನಾನು ವಿಸ್ಮಯದಿಂದ ನೋಡುತ್ತಿದ್ದಂತೆಯೇ ಆ ಗುಂಪು ನನ್ನ ಮೇಲೆ ಮುಗಿಬಿದ್ದು ಬಿಟ್ಟಿತು. ದಾಳಿ ಮಾಡಿತು. ಒಂದೆರಡು ಹೊಡೆತ ಬಿದ್ದಿದ್ದಷ್ಟೇ ನೆನಪು. ನಂತರ ಎಚ್ಚರಾದಾಗ ನಾನು ಇಲ್ಲಿ ಬಿದ್ದುಕೊಂಡಿದ್ದೆ.

*****

    ಇದು ನನ್ನ ಕತೆ ಡಾಕ್ಟ್ರೆ.. ಈಗ ಹೇಳಿ ನಾನು ಇದಕ್ಕೇನು ಮಾಡಬೇಕು..? ಈಗ ಪರೀಕ್ಷೆಗಳೆಲ್ಲ ಮುಗಿದು ಹೋಗಿದೆ. ನಾನು ರ್ಯಾಂಕ್ ಪಡೆಯಬೇಕೆಂಬುದು ಪರಮಗುರಿಯಾಗಿತ್ತು.. ಆದರೆ ನನ್ನ ಕನಸೆಲ್ಲಾ ನುಚ್ಚು ನೂರಾಗಿ ಹೋಯಿತು.. ಎಂದು ಬಿಕ್ಕಳಿಸಿದೆ.
    ಬೇರೆ ಇನ್ನೇನನ್ನೋ ಆಲೋಚಿಸುತ್ತಿದ್ದ ಡಾಕ್ಟರ್ `ಅಲ್ಲಪ್ಪಾ ನಿನ್ನನ್ನು ಹೊಡೆದವರನ್ನೆಲ್ಲ ಪೊಲೀಸರು ಅರೆಸ್ಟು ಮಾಡ್ಕೊಂಡು ಹೋಗಿದ್ದಾರಲ್ಲಾ..' ಎಂದರು.
    `ಇನ್ನು ಅವರನ್ನು ಅರೆಸ್ಟ್ ಮಾಡಿ ಏನು ಪ್ರಯೋಜನ ಹೇಳಿ.. ನಾನು ನನ್ನ ದೋಸ್ತರನ್ನು ಚುನಾವಣೆಗೆ ನಿಲ್ಲಿಸಲೇ ಬಾರದಿತ್ತು. ಅದೇ ಇಷ್ಟಕ್ಕೆಲ್ಲ ಕಾರಣವಾಯಿತು.. ನನ್ನ ವಿಲಕ್ಷಣ ನಿರ್ಧಾರಗಳು ಮತ್ತೂ ವಿಕೋಪವನ್ನು ಉಂಟುಮಾಡಿತು. ಕೊನೆಗೆ ನನ್ನ ಆತ್ಮೀಯ ಗೆಳೆಯ ವಿಶಾಲನೇ ನನ್ನ ಮೇಲೆ ಹಲ್ಲೆ ಮಾಡಿಸಿದ.. ನಾನು ಅವರನ್ನು ಚುನಾವಣೆಗೆ ನಿಲ್ಲಿಸಿದ ತಪ್ಪಿಗೆ ಹಾಸಿಗೆ ಸೇರುವಂತಾಯಿತು..' ಎಂದು ಚೀರಿದೆ.
    ಡಾಕ್ಟರ್ ಅಸ್ಪಷ್ಟವಾಗಿ `ಛೇ.. ನಿನಗೆ ಹೀಗಾಗಬಾರದಿತ್ತು..' ಎಂದರು
    ಆಗ ನಾನು `ನಾನು ಮಾಡಿದ್ದಕ್ಕೆ ನನಗೆ ಹೀಗಾಯ್ತಾ ಎನ್ನುವ ಗೊಂದಲ ಇದೆ.. ಒಟ್ಟಿನಲ್ಲಿ ನಾನು ಇಲ್ಲಿ ಬಲಿಪಶು ಆಗಿಬಿಟ್ಟೆ. ವಿಧಿ ನನ್ನನ್ನು ಬಲಿಪಶು ಮಾಡಿತು. ನನ್ನ ಅದೃಷ್ಟ ನೆಟ್ಟಗಿರಲಿಲ್ಲ.. ಯಾವಾಗಲೋ ವಿಧಿಯನ್ನು ನಾನು ಹಳಿದಿದ್ದೆನೇನೋ.. ಅದಕ್ಕೆ ಈ ರೂಪದಲ್ಲಿ ಈಗ ನನ್ನನ್ನು ಅದು ಕಾಡುತ್ತಿದೆ.. ಎಂದು ಅರಚಿದೆ..
    ಇದನ್ನು ಕೇಳಿದ ಡಾಕ್ಟರ್ `ಬಹುಶಃ ಬಡವರು ಪ್ರತಿಭಾವಂತರಾಗಿದ್ದರೆ ಹೀಗೆ ಆಗುತ್ತೇನೋ.. ಅವರ ಪಾಲಿಗೆ ಅದೃಷ್ಟವೆಂಬುದು ಗಗನಕುಸುಮವೇ ಹೌದೇನೋ..' ಎಂದು ಹೇಳಿ ದೋರ್ಘ ನಿಟ್ಟುಸಿರನ್ನು ಬಿಟ್ಟರು..
    ಆ ನಿಟ್ಟುಸಿರು ನನಗೆ ಒಂದು ಕ್ಷಣದಲ್ಲಿ ವಿಧಿಯ ಅಟ್ಹಾಸದಂತೆಯೂ ಮತ್ತೊಮ್ಮೆ ಸಮಾಜದ ಅಸಹಾಯಕತೆಯ ನಿಟ್ಟುಸಿರಿನಂತೆಯೂ ಅನ್ನಿಸಿತು.

Monday, October 14, 2013

ಸಂಜೆ ಬಕುಲ


ಮೂಡಿತೊಂದು ಸಂಜೆ ಬಕುಲ
ಕಾವ್ಯಲೋಕ ಕಲ ಕಲ|
ನಿರ್ಧಾರವು ಅಚಲ ಅಚಲ
ಒಮ್ಮೆಗೆಲ್ಲಾ ತಳಮಳ ||

ಬಯಸಿತದು ಸರ್ವಸಕಲ
ಪರಿಸರಗಳ ನಿರ್ಮಲ |
ಪ್ರೇಮ ಛಾಯೆ, ಸರಳ, ಸುಜಲ
ಮರುಗು ಮನಸು ಮಮ್ಮಲ ||

ಕೊಂಚ ಕಠಿಣ, ಕೊಂಚ ವಿರಲ
ಜೀವ ಹೃದಯ ಶ್ಯಾಮಲ |
ಬಕುಲವಿದುವೆ ರಂಜಲ
ಎಂದೆಂದಿಗು ಕುಶಲ ||

ಅಂತರಂಗ ಶುಭ್ರ ಸಲಿಲ
ಆಗದದುವೆ ಚಂಚಲ |
ಸಂಜೆಬಕುಲ ವಿರಲ ಸರಲ
ಕಾವ್ಯಧಾರೆ ಫಲ ಫಳ ||


(ಕವಿಮಿತ್ರ, ಗೆಳೆಯ ಸಂಜೆಬಕುಲ/ಸಂಜಯ ಭಟ್ಟ ಬೆಣ್ಣೆ ಕುರಿತು ಹಾಗೆ ಸುಮ್ಮನೆ ಬರೆದ ಕವಿತೆ)
(ಬರೆದಿದ್ದು : 10-12-2005ರಂದು, ದಂಟಕಲ್ಲಿನಲ್ಲಿ )