Saturday, March 23, 2013

ಬೇಡರ ವೇಷದ ಸಡಗರ

ನಗರದಾದ್ಯಂತ ಬೇಡರ ವೇಷದ ಸಡಗರ. ನಗರದ ಪ್ರಮುಖ ವೃತ್ತಗಳಲ್ಲಿ ಬೇಡನ ಅಬ್ಬರಕ್ಕೆ ಕ್ಷಣಗಣನೆ ಆರಂಭವಾಗಿದೆ. ಇನ್ನೂ ಮೂರ್ನಾಲ್ಕು ದಿನಗಳ ಕಾಲ ನಗರದಾದ್ಯಂತ ತಮಟೆಯ ಸದ್ದಿನ ಜೊತೆಗೆ ಬೇಡನ ಹೂಂಕಾರ, ಬೇಡರ ವೇಷವೆಂಬ ಸಂಪ್ರದಾಯದ ಕುಣಿತವನ್ನು ಕಾಣಬಹುದಾಗಿದೆ.
    ಶಿರಸಿ ಹಾಗೂ ಸುತ್ತಮುತ್ತಲಿನ ಕೆಲವೇ ಕಡೆಗಳಲ್ಲಿ ಕಾಣಬಹುದಾದ ಬೇಡರ ವೇಷ ಸಂಪ್ರದಾಯ ಪ್ರತಿ ಎರಡು ವರ್ಷಕ್ಕೊಮ್ಮೆ ಕಾಣಸಿಗುತ್ತದೆ. ಶಿರಸಿಯ ಮಾರಿಕಾಂಬೆ ಜಾತ್ರೆ ನಡೆಯುವ ವರ್ಷ ಹೋಳಿ ಹಬ್ಬ ಇರುವುದಿಲ್ಲ. ಉಳಿದ ವರ್ಷಗಳಂದು ಹೋಳಿ ಹುಣ್ಣಿಮೆಯ ಮುನ್ನಾ ದಿನಗಳಲ್ಲಿ ಬೇಡರ ವೇಷದ ಸಂಬ್ರಮ ಮುಗಿಲುಮುಟ್ಟುತ್ತದೆ. ಹೋಳಿ ಹುಣ್ಣಿಮೆಗೂ ಮುಂಚಿನ ಮೂರು ದಿನ ಬೇಡರ ವೇಷದ ಸಡಗರ ಸಂಭ್ರಮ ಕಾಣಸಿಗುತ್ತದೆ. ಕಳೆದ 20-22 ದಿವಸಗಳಿಂದಲೇ ಬೇಡರ ವೇಷದ ತಾಲೀಮು ಶುರುವಾಗಿದೆ. ಇದರಿಂದಾಗಿ ನಗರದ ಪ್ರಮುಖ ವೃತ್ತಗಳಲ್ಲಿ ಬೇಡರ ವೇಷದ ತಾಲೀಮು, ತಮಟೆ ಸದ್ದು ಸವರ್ೇ ಸಾಮಾನ್ಯವಾಗಿದೆ.
    ಕಳೆದ ಒಂದು ದಶಕಗಳ ಹಿಂದೆ ನಗರದಲ್ಲಿ ಕೆಲವೇ ಕೆಲವು ಕಡೆಗಳಲ್ಲಿ ಮಾತ್ರ ಬೇಡರ ವೇಷವನ್ನು ಹಾಕಲಾಗುತ್ತಿತ್ತು. ಆದರೆ ಈಗ ಅವುಗಳ ಸಂಖ್ಯೆಯಲ್ಲಿ ಗಣನೀಯವಾಗಿ ಹೆಚ್ಚಳವಾಗಿದೆ. ಹೀಗೆ ಬೇಡರ ವೇಷವನ್ನು ಹಾಕುವ ಗುಂಪೊಂದನ್ನು ಬಂಡಿ ಎಂದು ಕರೆಯಲಾಗುತ್ತದೆ. ದಶಕಗಳ ಹಿಂದೆ ಕೆಲವೇ ಕೆಲವಿದ್ದ ಬಂಡಿಗಳ ಸಂಖ್ಯೆ ಈಗ ಬಹಳಷ್ಟು ಹೆಚ್ಚಿದೆ. ನಗರದ ಪ್ರಮುಖ ಭಾಗದಲ್ಲಿ ದಿನವೊಂದಕ್ಕೆ 15-20 ಬಂಡಿಗಳು ಸಂಚರಿಸಿ ಬೇಡರ ನೃತ್ಯವನ್ನು ಮಾಡಲಾಗುತ್ತದೆ. ಈ ವರ್ಷ ಅಜಮಾಸು 40ಕ್ಕೂ ಹೆಚ್ಚು ಬಂಡಿಗಳಿವೆ ಎಂದು ಹೇಳಲಾಗುತ್ತಿದೆ. ಗಲ್ಲಿಗೊಂದರಂತೆ ಬಂಡಿಗಳು ಹುಟ್ಟಿಕೊಂಡಿದ್ದು ಈಗಾಗಲೇ ತಾಲೀಮಿನಲ್ಲಿ ತೊಡಗಿಕೊಂಡಿವೆ. ನಗರದ ಅಧಿದೇವತೆ ಮಾರಿಕಾಂಬಾ ದೇವಸ್ಥಾನಕ್ಕೆ ತೆರಳಿ ಮಾರಿಕಾಂಬೆಗೆ ಪೂಜೆ ಸಲ್ಲಿಸುವ ಬಂಡಿ ನಂತರ ನಗರದ ವಿವಿಧ ಬೀದಿಗಳಲ್ಲಿ ರಾತ್ರಿಯಾಗುತ್ತಿದ್ದಂತೆ ಸಂಚರಿಸುತ್ತವೆ. ರಾತ್ರಿ 10 ಗಂಟೆಯಿಂದ ಮುಂಜಾನೆ 4 ಗಂಟೆಯವರೆಗೆ ಬೇಡರ ವೇಷದ ವೈವಿಧ್ಯತೆ ಕಾಣಬಹುದಾಗಿದೆ.
ಹಿನ್ನೆಲೆ
       ಉತ್ತರಕನ್ನಡ ಜಿಲ್ಲೆಯ ಶಿರಸಿಯಲ್ಲಿ ಮಾತ್ರ ಕಾಣ ಸಿಗಬಹುದಾದ ಬೇಡರ ವೇಷ ಎಂಬ ಸಾಂಪ್ರದಾಯಿಕ ಕಲೆಗೆ ನಾಲ್ಕಾರು ಶತಮಾನಗಳ ಇತಿಹಾಸವಿದೆ. ಶಿರಸಿ ಪ್ರದೇಶಗಳನ್ನು ಆಳ್ವಿಕೆ ನಡೆಸಿದ್ದ ಸೋದೆಯ ಅರಸರ ಕಾಲದಿಂದ ಬೇಡರ ವೇಷವೆಂಬುದು ಚಾಲ್ತಿಗೆ ಬಂದಿದೆ ಎನ್ನುವ ಮಾಹಿತಿಗಳು ಲಭ್ಯವಾಗುತ್ತವೆ.
    ಬೇಡರ ವೇಷ ಎಂಬ ಸಾಂಪ್ರದಾಯಿಕ ಕಲೆ ಬೆಳೆದು ಬಂದ ಕುರಿತು ಹಲವಾರು ಕಥೆಗಳೂ ಚಾಲ್ತಿಯಲ್ಲಿವೆ. ಶಿರಸಿ ಭಾಗದಲ್ಲಿ 15-16ನೇ ಶತಮಾನದಲ್ಲಿ ಜನರನ್ನು ಹೆದರಿಸಿ, ಬೆದರಿಸಿ ಸುಲಿಗೆ ಮಾಡುತ್ತಿದ್ದ ದರೋಡೆಕೋರ ಬೇಡನ ಕಥೆಯನ್ನು ಈ ಕುರಿತು ಉಲ್ಲೇಖಿಸಲಾಗುತ್ತದೆ. ಜನರನ್ನು ಕಾಡುತ್ತಿದ್ದ ಕಾನನ ವಾಸಿ ಬೇಡನನ್ನು ಹಿಡಿಯಲು ಸೋದೆಯ ಅರಸ ಸೈನಿಕರನ್ನು ಅಟ್ಟಿ, ಹರಸಾಹಸದಿಂದ ಆತನನ್ನು ಬಂಧಿಸಲು ಯಶಸ್ವಿಯಾಗುತ್ತಾನೆ. ಬಂಧನಕ್ಕೊಳಗಾದ ಬೇಡ ಆಕ್ರೋಶದಿಂದ ಹೂಂಕರಿಸುತ್ತಾನೆ. ಆತನನ್ನು ನಗರದಾದ್ಯಂತ ಮೆರವಣಿಗೆ ಮಾಡಲಾಗುತ್ತದೆ ಎನ್ನುವುದೊಂದು ಕಥೆ.
    ಸೋದೆ ಅರಸರ ಕಾಲದಲ್ಲಿ ಶಿರಸಿಯೆಂಬುದು ಚಿಕ್ಕ ಹಳ್ಳಿ. ಆದರೂ ಇಲ್ಲಿ ನಾಲ್ಕಾರು ಅಂಗಡಿ ಮುಂಗಟ್ಟುಗಳಿದ್ದು, ಸಾರ್ವಜನಿಕರು ಅಗತ್ಯವಸ್ತುಗಳನ್ನು ಕೊಳ್ಳುವ ಪ್ರಮುಖ ಸ್ಥಳವಾಗಿತ್ತು. ಅಲ್ಲದೇ ಬಯಲುಸೀಮೆ ಹಾಗೂ ಕರಾವಳಿಯನ್ನು ಸಂಪಕರ್ಿಸುವ ಆಯಕಟ್ಟಿನ ಸ್ಥಳವೂ ಇದಾಗಿತ್ತು. ಸಂಪದ್ಭರಿತ ಈ ಸ್ಥಳದ ಮೇಲೆ ಬಹಮನಿ ಅರಸರ ಹಾಗೂ ಮೊಘಲರ ದಾಳಿ ಪದೆ ಪದೆ ನಡೆಯುತ್ತಿತ್ತು. ಅದನ್ನು ತಡೆಯುವ ಸಲುವಾಗಿ ಸೋದೆಯ ಅರಸ ಕಲ್ಯಾಣ ಶೆಟ್ಟಿ ಎನ್ನುವವನನ್ನು ಶಿರಸಿಯಲ್ಲಿ ನೇಮಕ ಮಾಡುತ್ತಾನೆ. ಕಲ್ಯಾಣ ಶೆಟ್ಟಿ ತನ್ನ ಬಂಟರ ಸಹಾಯದಿಂದ ಹೊರ ಭಾಗದ ಧಾಳಿಯನ್ನು ತಡೆಗಟ್ಟಲು ಯಶಸ್ವಿಯಾಗುತ್ತಾನೆ.
    ಮಲ್ಲೇಶಿ ಎನ್ನುವವನು ಕಲ್ಯಾಣ ಶೆಟ್ಟಿಯ ಬಂಟರಲ್ಲೊಬ್ಬ. ಈತನ ಕಣ್ಣಿನಲ್ಲಿ ವಿಶೇಷ ಶಕ್ತಿಯಿದೆ ಎನ್ನುವ ಕಾರಣದಿಂದಲೇ ವೈರಿಗಳ ದಾಳಿಯನ್ನು ಹಿಮ್ಮೆಟ್ಟಿಸುವಲ್ಲಿ ಈತ ಪ್ರಮುಖ ಪಾತ್ರ ವಹಿಸುತ್ತಾನೆ. ಕಣ್ಣಿನಲ್ಲಿ ವಿಶೇಷ ಶಕ್ತಿಯುಳ್ಳ ಮಲ್ಲೇಶಿ ರಾತ್ರಿಯ ಸಂದರ್ಭದಲ್ಲಿ ವೈರಿ ಪಡೆಯನ್ನು ಸೋಲಿಸಲು ಕಾರಣನಾಗುತ್ತಾನೆ. ಕೊನೆಗೊಮ್ಮೆ ಕಣ್ಣಿನ ವಿಶೇಷ ಶಕ್ತಿಯೇ ಆತನಲ್ಲಿ ಅಹಂಕಾರ ಬೆಳೆಯುವುದಕ್ಕೆ ಕಾರಣವಾಗುತ್ತದೆ. ವಿಶೇಷ ಶಕ್ತಿಯಿರುವ ತನ್ನನ್ನು ಸೋಲಿಸಲು ಯಾರಿಗೂ ಸಾಧ್ಯವಿಲ್ಲ. ತಾನೊಬ್ಬ ಮಹಾನ್ ವ್ಯಕ್ತಿ ಎಂದು ಸೊಕ್ಕಿನಿಂದ ಮೆರೆಯುವ ಮಲ್ಲೇಶಿ ಪಟ್ಟಣದ ಮಹಿಳೆಯರ ಮೇಲೆ ಕಣ್ಣು ಹಾಕಲು ಯತ್ನಿಸುತ್ತಾನೆ.
    ಅಂದಿನ ಶಿರಸಿಯ ಮಹಿಳೆಯರು, ಹುಡಿಗಿಯರಿಗೆ ತೊಂದರೆ ನೀಡುವ ಮಲ್ಲೇಶಿ ಅವರನ್ನು ಹೊತ್ತೊಯ್ಯಲು ಪ್ರಾರಂಭಿಸುತ್ತಾನೆ. ಹೀಗಿರಲು ಒಂದು ದಿನ ಕಲ್ಯಾಣ ಶೆಟ್ಟಿಯ ಮಗಳಾದ ರುದ್ರಾಂಬೆಯ ಮೇಲೆ ಮಲ್ಲೇಶಿಯ ದೃಷ್ಟಿ ಹಾಯುತ್ತದೆ. ರುದ್ರಾಂಬೆಯನ್ನು ಬಯಸುವ ಮಲ್ಲೇಶಿ ಆಕೆಯನ್ನು ತನ್ನ ಜೊತೆಗೆ ಬರುವಂತೆ ಕೇಳಿಕೊಳ್ಳುತ್ತಾನೆ. ಆತನ ಹಾವಳಿಯನ್ನು ಅರಿತಿದ್ದ ರುದ್ರಾಂಬೆ ಮಲ್ಲೇಶಿಗೆ ಪಾಠವನ್ನು ಕಲಿಸುವ ಸಲುವಾಗಿ ಆತನ ಜೊತೆಗೆ ಹೋಗಲು ಒಪ್ಪಿಕೊಳ್ಳುತ್ತಾಳೆ.
    ಈ ನಡುವೆ ಮಲ್ಲೇಶಿಯ ಗುಣಾವಗುಣಗಳನ್ನು ತಿಳಿದುಕೊಳ್ಳುವ ರುದ್ರಾಂಬೆ ಆತನಿಗೆ ತಕ್ಕ ಪಾಠ ಕಲಿಸುವ ಸಲುವಾಗಿ ಸೂಕ್ತ ಸಮಯವನ್ನು ಎದುರುನೋಡುತ್ತಿರುತ್ತಾಳೆ. ಪ್ರತಿ ಹುಣ್ಣಿಮೆಯ ದಿನ ಮಾರಿಕಾಂಬೆ (ದೇವಿ)ಯ ಪೂಜೆ ಮಾಡುವ ವಿಷಯವನ್ನು ತಿಳಿದುಕೊಳ್ಳುವ ರುದ್ರಾಂಬೆ ಆತನಿಗೆ ಪಾಠ ಕಲಿಸಲು ಇದೇ ಸೂಕ್ತ ಸಮಯವೆಂದು ನಿರ್ಧರಿಸಿ ಹೋಳಿ ಹುಣ್ಣಿಮೆ ಸಂದರ್ಭದಲ್ಲಿ ಆತ ಪೂಜೆ ಮಾಡುತ್ತಿದ್ದಾಗ ಮಲ್ಲೇಶಿಯ ಕಣ್ಣಿಗೆ ರಾಸಾಯನಿಕಗಳನ್ನು ಎರಚಿಬಿಡುತ್ತಾಳೆ. ಇದರಿಂದಾಗಿ ಕಣ್ಣಿನ ಶಕ್ತಿ ಕಳೆದುಕೊಳ್ಳುವ ಮಲ್ಲೇಶಿ ವೇದನೆಯಿಂದ ಕೂಗಿಕೊಳ್ಳುತ್ತಾನೆ. ಆತನ ಕಣ್ಣು ಕುರುಡಾಗುತ್ತದೆ. ಇದರಿಂದಾಗಿ ಹಳ್ಳಿಯ ಜನರಿಗೆಲ್ಲ ಸಂತಸವಾಗಿ ಸಂಭ್ರಮಾಚರಣೆಗಳನ್ನು ನಡೆಸುತ್ತಾರೆ. ಮಲ್ಲೇಶಿಯನ್ನು ಹಗ್ಗದಿಂದ ಬಂಧಿಸಿ ಆತನನ್ನು ಊರಿನಾದ್ಯಂತ ಮೆರವಣಿಗೆ ಮಾಡುತ್ತಾರೆ. ಕಣ್ಣಿನ ವೇದನೆ ಹಾಗೂ ಬಂಧನದ ಸಿಟ್ಟಿನಿಂದ ಹೂಂಕರಿಸುವ ಮಲ್ಲೇಶಿಯನ್ನು ರುದ್ರಾಂಬೆ ಕೆಣಕುತ್ತ ಮುಂದೆ ಸಾಗುತ್ತಾಳೆ. ನಂತರ ಸತಿ ಸಹಗಮನದ ಮೂಲಕ ತನ್ನ ಜೀವನವನ್ನು ಕೊನೆಗೊಳಿಸಿಕೊಳ್ಳುವ ರುದ್ರಾಂಬೆಯ ನೆನಪಿಗಾಗಿ ಬೇಡರ ವೇಷವನ್ನು ಹಾಕಿ ಕುಣಿಯಲಾಗುತ್ತದೆ ಎನ್ನುವುದು ಹಿರಿಯರ, ಪ್ರಾಜ್ಞರ ಅಂಬೋಣವಾಗಿದೆ.
ಆಚಾರ ವಿಚಾರ   
ಬೇಡರ ವೇಷವನ್ನು ಹಾಕಿ ಕುಣಿಯುವವನು ಕೈಗೊಳ್ಳಬೇಕಾದ ಕೆಲವು ವಿಶಿಷ್ಟ ಆಚಾರ ವಿಚಾರಗಳೂ ಇವೆ. ಮೂರು ದಿನಗಳ ಕಾಲ ನಡೆಯುವ ಬೇಡರ ವೇಷದ ಕುಣಿತವನ್ನು ಮೊದಲೇ ನಿರ್ಧರಿಸಿಕೊಳ್ಳಲಾಗುತ್ತದೆ. ಯಾವ ದಿನ ಯಾವ ಭಾಗದ ವ್ಯಕ್ತಿ ವೇಷ ಹಾಕಬೇಕೆಂದು ಮೊದಲೇ ತಿಳಿದುಕೊಂಡು ಅವರದೇ ಆದ ಕೆಲವು ಆಚಾರ ವಿಚಾರ, ಸಂಪ್ರದಾಯಗಳನ್ನು ಕೈಗೊಳ್ಳುತ್ತಾರೆ. ಬೇಡರ ವೇಷವನ್ನು ತೊಡುವ ವ್ಯಕ್ತಿ ಬಣ್ಣ ತೊಡುವ ಮೊದಲು ದೇವರಿಗೆ ಕಾಯಿ ಇಟ್ಟು ಪೂಜೆ ಮಾಡುತ್ತಾನೆ. ಆ ದಿನ ಆತನಿಗೆ ಮಾಂಸಾಹಾರ ನಿಷಿದ್ದ. ಕೇವಲ ಹಾಲು ಹಾಗೂ ದೇವರ ನೈವೇದ್ಯದ ಹಣ್ಣುಗಳನ್ನು ಮಾತ್ರ ತಿನ್ನುತ್ತಾನೆ.
          ಬೇಡರ ವೇಷ ತೊಡುವವನಿಗೆ ಇನ್ನೊಬ್ಬ ವ್ಯಕ್ತಿ ಬಣ್ಣ ಹಚ್ಚುತ್ತಾನೆ. ಬಣ್ಣ ಹಚ್ಚುವ ವ್ಯಕ್ತಿ ಮೊದಲೇ ವೀಳ್ಯದೆಲೆ, ದಕ್ಷಿಣೆ, ಕಾಣಿಕೆಗಳನ್ನು ನೀಡಿ ಬಣ್ಣ ಹಚ್ಚಲು ಪ್ರಾರಂಭಿಸುತ್ತಾನೆ. ಬೇಡರ ವೇಷವನ್ನು ತೊಡುವ ವ್ಯಕ್ತಿ ದೇವರಿಗೆ ಸಮಾನ ಎನ್ನುವ ನಂಬಿಕೆಯಿರುವ ಕಾರಣ ಆತನನ್ನು ವಿಶೇಷ ಗೌರವದಿಂದ ಕಾಣಲಾಗುತ್ತದೆ. ಬೇಡನ ವೇಷ ತೊಟ್ಟವನು ಬಣ್ಣ ಹಚ್ಚಿದ ನಂತರ ಕನ್ನಡಿಯಲ್ಲಿ ತನ್ನ ಮುಖವನ್ನು ತಾನೇ ನೋಡಿಕೊಳ್ಳಬಾರದು ಎನ್ನುವ ಸಂಪ್ರದಾಯವೂ ಚಾಲ್ತಿಯಲ್ಲಿದೆ.
    ನಂತರ ಆತನನ್ನು ನಾಲ್ಕಾರು ಜನರು ತಮಟೆ ಬಡಿಯುವ ಮೂಲಕ ನಗರ ಸಂಚಾರಕ್ಕೆ ಕರೆದೊಯ್ಯುತ್ತಾರೆ. ನಗರದಲ್ಲಿ ವಿವಿಧ ಪ್ರದೇಶಗಳಲ್ಲಿ ವಿವಿಧ ದೇವರಿಗೆ ಸೇರಿದ ಸ್ಥಳಗಳಿವೆ. ಅಂದರೆ ಮಾರಿಕಾಂಬೆಗೆ ಸೇರಿದ ಪ್ರದೇಶ, ದೇವಿಕೆರೆಯಲ್ಲಿ ಭೂತಪ್ಪನ ಕಟ್ಟೆ, ಶಿವಾಜಿ ಚೌಕದಲ್ಲಿ ವೀರಾಂಜನೇಯನಿಗೆ ಸೇರಿದ ಕಟ್ಟೆ ಪ್ರದೇಶ ಹೀಗೆ. ಆ ದೇವರಿಗೆ ಸೇರುವ ಜಾಗದ ಗಡಿಯನ್ನು ಬೇಡರ ವೇಷಧಾರಿ ಕಾಲಿಟ್ಟ ತಕ್ಷಣ ಆತನಿಗೆ ಆ ದೇವರು ರಕ್ಷಣೆ ನೀಡಿ, ದುಷ್ಟ ಶಕ್ತಿಗಳ ಕಾಟವನ್ನು ತಡೆಗಟ್ಟುವಂತೆ ಸುಳಿಕಾಯಿ ಒಡೆಯಲಾಗುತ್ತದೆ. ಇದು ಬೇಡ ವೇಷಧಾರಿಗೆ ಶ್ರೇಯಸ್ಸನ್ನು ತಂದುಕೊಡುತ್ತದೆ ಎನ್ನುವ ನಂಬಿಕೆಯಿದೆ.
    ಬದಲಾದ ಕಾಲಘಟ್ಟದಲ್ಲಿ ಈ ಸಂಪ್ರದಾಯಗಳಲ್ಲಿ ಹಲವು ಬಿಟ್ಟುಹೋಗಿದೆ. ಸಾರ್ವಜನಿಕರು ತಮ್ಮ ಅನುಕೂಲಕ್ಕೆ ತಕ್ಕಂತೆ ಸಂಪ್ರದಾಯಗಳನ್ನು ಬದಲಾಯಿಸಿಕೊಂಡಿದ್ದಾರೆ. ಕಷ್ಟದ ಕೆಲವು ಸಂಪ್ರದಾಯಗಳು ಮರೆಯಾಗಿದೆ. ಸುಲಭದ ಸಂಪ್ರದಾಯಗಳು ಹಾಗೆಯೇ ಉಳಿದಿವೆ. ಬೇಡರ ವೇಷವನ್ನು ಹಾಕುವ ವ್ಯಕ್ತಿಗೆ ಅಪಾರವಾದ ದೈಹಿಕ ಸಾಮಥ್ರ್ಯದ ಅಗತ್ಯವಿರುತ್ತದೆ. ಮೈಲಿಗಟ್ಟಲೆ ನಡೆಯಬೇಕು, ಕುಣಿಯಬೇಕು. ರಂಜಿಸಬೇಕು. ಇದಕ್ಕಾಗಿ ಸಾಕಷ್ಟು ಶ್ರಮವಹಿಸಬೇಕು ಎಂದು ಬೇಡರ ವೇಷದ ಖ್ಯಾತಿಯ ಸಂತೋಷ ಕುಮಾರ್ ಅಭಿಪ್ರಾಯಪಡುತ್ತಾರೆ.
ವೇಷ-ಭೂಷಣ
    ನವಿಲುಗರಿಯ ಕಿರೀಟ, ಕೈಯಲ್ಲೊಂದು ಕತ್ತಿ, ಗುರಾಣಿ, ಕತ್ತಿಯ ತುದಿಯಲ್ಲಿ ನಿಂಬೆಯಹಣ್ಣು, ಕುತ್ತಿಗೆಗೆ ನೋಟಿನ ಹಾರ, ಕೆಂಪು ಬಣ್ಣದ ಧಿರಿಸು, ಕಡಿ ಕಾರುವ ಕಣ್ಣು, ಕೋಡು ಈ ಮುಂತಾದ ವಿಚಿತ್ರ ರೌದ್ರ ಧಿರಿಸನ್ನು ಧರಿಸುವ ಬೇಡರ ವೇಷಧಾರಿ ಕುಣಿಯುತ್ತ ಸಾಗಿದರೆ ಆತನನ್ನು ಹಗ್ಗದ ಮೂಲಕ ಎರಡೂ ದಿಕ್ಕಿನಲ್ಲಿ ಇಬ್ಬರು ಹಿಡಿದು ನಿಯಂತ್ರಿಸುತ್ತಾರೆ. ತಮಟೆ, ವಾದ್ಯಗಳನ್ನು ಬಾರಿಸುತ್ತ ಸಾಗುತ್ತಿದ್ದರೆ ಬೇಡರ ವೇಷಧಾರಿ ಹೂಂಕರಿಸುತ್ತಾ, ಕುಣಿಯುತ್ತಾ ಸಾಗುವ ದೃಷ್ಯವೇ ಸುಂದರವಾದುದು. ಈ ಬೇಡರವೇಷವನ್ನು ನೋಡುವ ಸಲುವಾಗಿಯೇ ಜಿಲ್ಲೆಯ ವಿವಿಧ ಭಾಗಗಳಿಂದ ಹಾಗೂ ರಾಜ್ಯದ ಹಲವಾರು ಕಡೆಗಳಿಂದ ಪ್ರವಾಸಿಗರು ಶಿರಸಿಗೆ ಆಗಮಿಸುತ್ತಾರೆ.
    ಶನಿವಾರ, ಭಾನುವಾರ ಹಾಗೂ ಸೋಮವಾರ ರಾತ್ರಿ ನಡೆಯುವ ಈ ಬೇಡರ ವೇಷವನ್ನು ನೋಡುವ ಸೊಬಗೇ ಬೇರೆ. ಬೇಡರ ವೇಷವೆಂಬ ನಮ್ಮೊಳಗಿನ ವಿಶೇಷ ಸಂಪ್ರದಾಯ, ಕಲೆ, ಜಾನಪದ ಪ್ರಾಕಾರಕ್ಕೆ ಸಾರ್ವಜನಿಕರೂ ಸಹಕರಿಸಿ, ಬೇಡರ ವೇಷದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರ ನೃತ್ಯಕ್ಕೆ, ತಲೆದೂಗಿ ಶ್ರಮಕ್ಕೆ ವಿಸ್ಮಯ ಪಡಬೇಕಿದೆ.
ಹಾಗಾದ್ರೆ ಯಾಕೆ ತಡ ಮಾಡ್ತಾ ಇದ್ದೀರಿ... ಈಗ್ಲೇ ಬನ್ನಿ.... ಮುಗಿದು ಹೋಗುವ ಮುನ್ನ ಕಣ್ಮನವನ್ನು ತಣಿಸಿಕೊಳ್ಳಿ....
ಹೋ....... ಹಾ........ಹೀ.....

Tuesday, March 19, 2013

ಕೊನೆ ಗೌಡರೆಡೆಗಿನ ಹೊಣೆ

ಕೊನೆ ಗೌಡರೆಡೆಗಿನ ಹೊಣೆ


ತೀರಾ ಇತ್ತೀಚೆಗೆ ಯಲ್ಲಾಪುರದ ಗ್ರಾಮೀಣ ಭಾಗದಲ್ಲಿ ಒಬ್ಬ ಕೊನೆ ಗೌಡ ಮರದಿಂದ ಬಿದ್ದು ತೀವ್ರವಾಗಿ ಗಾಯಗೊಂಡು ಸತ್ತೇ ಹೋದ. ಶಿರಸಿ ಸೀಮೆಯಲ್ಲಿ ಇನ್ನೊಬ್ಬ ಮರದಿಂದ ಬಿದ್ದು ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾನೆ. ಕಳೆದ ಒಂದೆರಡು ವರ್ಷಗಳ ಹಿಂದೆ ನಮ್ಮೂರ ಬಳಿಯ ಗವಿನಗುಡ್ಡದಲ್ಲಿ ಒಬ್ಬ ಕೊನೆಗೌಡ ಮರದಿಂದ ಬಿದ್ದಿದ್ದ., ಬಿದ್ದವನು ಒಕ್ಕುಡುತೆ ನೀರಿಗೆ ಬಾಯ್ದೆರೆಯಲಿಲ್ಲ. ನಂತರವೇ ಇರಬಹುದು ನಮ್ಮೂರ ಭಾಗದಲ್ಲಿ ಕೊನೆಗೌಡರ ಕಡೆಗಷ್ಟು ಹೊಣೆಗಾರಿಕೆಯನ್ನು ತೋರಿಸಿ ಅದನ್ನು ನೆನಪು ಮಾಡಿಕೊಂಡಿದ್ದು.
 ಕೊನೆಗೌಡ ಎಂದ ಮೇಲೆ ಆತನ ಸ್ಪಷ್ಟ ಚಿತ್ರಣ ನೀಡಬೇಕಲ್ಲ..!! ಇಲ್ಲಿದೆ ಕೇಳಿ., ಕೊನೆಗೌಡನೆಂದಕೂಡಲೇ ನಮಗೆ ನೆನಪಿಗೆ ಬರುವಂತದ್ದು, ಉದ್ದನೆಯ ದೋಟಿ ಅಡಿಕೆ ಮರವನ್ನು ಎಳೆದು ಬಾಗಿಸಿ ತರಲು ಉಪಯೋಗಿಸುವಂತದ್ದು, ಕೊಯ್ದ ಕೊನೆ ಉದುರದಂತೆ, ಚದುರದಂತೆ ಭೂಮಿಗಿಳಿಸಲು ಹನುಮನ ಬಾಲದಂತಹ ಉದ್ದನೆಯ ಹಗ್ಗ, ಕೈಯಲ್ಲಿ ಮೋಟುಗತ್ತಿ, ಕಾಲಲ್ಲಿ ತಳೆ, ಮರದ ಮೇಲೆಯೇ ಕುಳಿತು ಕೆಲಸ ಮಾಡಲು ಕಡಕುಮಣೆ ಹಾಗೂ ಮೀಟರುಗಟ್ಟೆ ದೂರಕ್ಕೆ ಬರುವ ಆತನ ಮೈಯ ಎಣ್ಣೆಯ ವಾಸನೆ.
 ಇವೆಲ್ಲವುಗಳ ಜೊತೆಗೆ ನಮಗೆ ನೆನಪಾಗುವುದು ಮರವೇರುವ ಆತನ ಕೌಶಲ್ಯ. ಜೊತೆ ಜೊತೆಯಲ್ಲಿಯೇ ಮರದಿಂದ ಮರಕ್ಕೆ ದಾಟುವ ಆತನ ಚಾಕಚಕ್ಯತೆ. ಒಂದೆ ಒಂದು ಅಡಿಕೆಯೂ ಉದುರದಂತೆ ಕೊನೆಯನ್ನು ಕೊಯ್ದು ಭೂಮಿಯ ಮೇಲೆ ಹಗ್ಗ ಹಿಡಿದು ನಿಲ್ಲುವ ವ್ಯಕ್ತಿಗೆ ತಲುಪುವಂತೆ ರೊಂಯ್ಯನೆ ಬಿಡುವ ಕೊನೆಗೌಡನ ಕೆಲಸ ಸುಲಭದ್ದಲ್ಲ ಬಿಡಿ. ಹಾಳಾದವ್ನು.., ಇವತ್ತು ಬರ್ಲೇ ಇಲ್ಲ ಮಾರಾಯಾ ಎಂದು ಕೊನೆಗೌಡನನ್ನು ಬಯ್ಯುವುದು ಸುಲಭ.. ಆದರೆ ಆತನ ಕೆಲಸದ ಕುರಿತು ಬಲ್ಲವರೇ ಹೇಳಬೇಕು.
 ಕೊನೆಗೌಡನ ಕುರಿತು ಬರಹದ ಮೂಲಕ ಹೇಳುವುದು ಬಹಳ ಸುಲಭ. ಆದರೆ ಕೊನೆಗೌಡರ ವೃತ್ತಿ ಬಹಳ ಕಠಿಣವಾದುದು. ಮರವೇರಿದ ಕೊನೆಗೌಡನನ್ನು ಕೆಳಗಿನಿಂದ ಯಾರಾದರೂ ನೋಡಿದರೆ ಕೆಳಗಿನವರಿಗೆ ತಲೆ ತಿರುಗುತ್ತದೆ. ಅಂತದ್ದರಲ್ಲಿ ಮಂಗನಿಗಿಂತ ಸಲೀಸಾಗಿ, ಮಿಗಿಲಾಗಿ ಚಕಚಕನೆ ಕುಪ್ಪಳಿಸಿ ಮರವನ್ನೇರುವ, ಅಷ್ಟೇ ಸಲೀಸಾಗಿ ಮರದಿಂದ ಮರಕ್ಕೆ ದಾಟುವ ಕೊನೆಗೌಡರಿಗೆ ಭಯವಾಗುವುದಿಲ್ಲವಾ..? ಗೊತ್ತಿಲ್ಲ. ಜೀವ ಕೈಯಲ್ಲಿ ಹಿಡಿದಾದರೂ ಮರವೇರಿ ಆತ ಅಡಿಕೆ ಕೊಯ್ಯುತ್ತಾನಲ್ಲಾ, ಅಂಥವರೇ ಗ್ರೇಟ್ ಆಗುತ್ತಾರೆ. ಆದರೆ ನಮಗದು ತಿಳಿಯುವುದೇ ಇಲ್ಲ.
 ನಾವು ಕೊಡುವ ನಾನೂರು ರೂಪಾಯಿ ಕಡಿಮೆಯಾಯ್ತು ವಡಿಯಾ ಎಂದು ಕೊನೆಗೌಡ ಕ್ಯಾತೆ ತೆಗೆದ ಸಂದರ್ಭದಲ್ಲಿ ಹಚ್ಚಾಹುಚ್ಚಿ ಬಯ್ಯುವ ನಮಗೆ ಆತನ ಕೆಲಸದ ವೈಖರಿಯೇಕೆ ತಿಳಿದುಬರುವುದಿಲ್ಲ..? ಕೆಲಸಕ್ಕೆ ಬಂದ ವಪ್ಪತ್ತಿನಲ್ಲೆ ಕನಿಷ್ಟವೆಂದರೂ ಮೂರ್ನಾಲ್ಕು ಕ್ವಿಂಟಾಲು ಅಡಿಕೆ ಕೊಯ್ಯುವ ಸಾಮಥ್ರ್ಯವಿರುವ ಕೊನೆಗೌಡರಿಗೆ ನಾನೂರು ರೂಪಾಯಿ ಕಡಿಮೆಯ ಬಾಬ್ತೇ ಸರಿ. ಅವನ ಕೆಲಸದ ವೈಖರಿಗೆ ಅಷ್ಟಾದರೂ ಬೇಡವೇ..? ಅಡಿಕೆಗೆ ಕೊಳೆಮದ್ದು ಹೊಡೆಸಿ, ಕೊನೆಕೊಯ್ಲಿನ ಸಂದರ್ಭದಲ್ಲಿ ಹಸಿಯಡಿಕೆ-ಗೋಟಿನ ಕೊನೆ (ತೆರಿಯಡಿಕೆ ಪ್ರೀ..), ಕೊಯ್ಯುವ ವ್ಯಕ್ತಿಗೆ ಮಾಡಿದ ಶ್ರಮಕ್ಕೆ ತಕ್ಕ ಬೆಲೆ ಬಂದರೆ ಆತ ಹಷರ್ಿಸುತ್ತಾನೆ.
 `ಹ್ವಾಯ್.. ಹೆಗುಡ್ರೂ... ನಾನ್ ಬಂದೇನಿ.. ಜಲ್ದಿ ಆಸ್ರಿಗೆ ರೆಡಿ ಮಾಡಿ.. ಮರಾ ಹತ್ತಾಕ್ ಹೋಗ್ಬೇಕು.. ಇವತ್ತೆಷ್ಟೇ ಹೊತ್ತಾದ್ರೂ.. ದೊಡ್ಡಪಾಲು, ಹೊಳೆಯಂಚಿನ ಪಾಲು ಕೊನೆಕೊಯ್ದೇ ಮರ ಇಳಿಯೂದ್ ಸಯ್ಯಿ... ಕೊನೆ ಕೊಯ್ಯಾಕ್ ನೀವ್ ಗಟ್ಟಿಯಾಗಿರ್ರಿ... ಮಧ್ಯ ಕೈಕೊಟ್ಬುಡ್ಬೇಡಿ... ' ಎಂದು ತಮಾಷೆಯಾಗಿ ಹೇಳುತ್ತಾ... ತನಗೆ ತಾನೇ ಗುರಿಯನ್ನೂ ನಿರ್ಧರಿಸಿಕೊಂಡು ಕೆಲಸ ಪ್ರಾರಂಭಿಸುವ ಕೊನೆಗೌಡನ ಕಾರ್ಯಕ್ಕೆ ತಲೆದೂಗಲೇಬೇಕು.. ಬಿಡಿ ಇದು ಆಗಿನ ಮಾತು. ಈಗಿನ ಕೊನೆಗೌಡರುಗಳು ಆದಷ್ಟು ಕಳ್ಳಬೀಳಲು ಯತ್ನಿಸುತ್ತಾರೆ. ಸಾಕಷ್ಟು ಕಿರಿಕಿರಿಯನ್ನೂ ಮಾಡುತ್ತಾರೆ. ಆದ್ರೂ ಅವರ ಕೆಲಸಕ್ಕೆ ನಮ್ಮದೊಂದು ಹ್ಯಾಟ್ಸಾಫ್ ಹೇಳಲೇ ಬೇಕು. ಅಲ್ವೇ.

Tuesday, March 12, 2013

ಮುಖಗಳು

ಮುಖಗಳು




ಭಾವಗಳು ಉಕ್ಕಿದಂತೆಲ್ಲ
ಪ್ರವಾಹಗಳು ಏರುತ್ತವೆ..!!

**

ಪ್ರೀತಿಗೆ ಬೇಕಿದ್ದುದು
ದೇಹಗಳಲ್ಲ, ಕಾಮವಲ್ಲ.
ಮೋಹವಲ್ಲ, ಆಸೆಯಲ್ಲ
ದೋಷವಲ್ಲ, ದ್ವೇಷವಲ್ಲ
ಬರೀ ನಂಬಿಕೆ ಮಾತ್ರ !!!

**

ಅವಳು ಬಯಸಿದಾಗೆಲ್ಲಾ
ನಾ ಸಿಗಲಿಲ್ಲ....
ನಾ ಬಯಸುತ್ತಿರುವಾಗೆಲ್ಲಾ
ಅವಳು ಸಿಗೋಲ್ಲಾ..!!!

**

ನಿರಾಸೆಯಿದ್ದಾಗ
ಬೀಳುವ ಕನಸೂ
ಕೆಟ್ಟದ್ದಾಗಿರುತ್ತದೆ..!!!

**

ಸಾಯಲಿಕ್ಕೆ ಭೂಕಂಪ,
ನೆರೆ, ಬರ, ಸಾಲವೇ
ಬೇಕೆಂದಿಲ್ಲ..
ಒಂದು ಮರಣಪತ್ರ
ಅಷ್ಟೇ ಸಾಕು.. !!!

**

ಬದುಕಿನಲ್ಲಿ ಸಮಸ್ಯೆಗಳು
ತುಂಡಾಗುವುದೇ ಇಲ್ಲ..
ಒಂದು ಮುಗಿಯುವುದರೊಳಗೆ
ಇನ್ನೊಂದು ಹುಟ್ಟಿರುತ್ತದೆ..!!!

**

ಬರೆದ ಅಕ್ಷರ ಎಷ್ಟೇ
ಸುಂದರವಾಗಿದ್ದರೂ ಕೂಡ
ಒಂದು ಹನಿ ನೀರು ಬಿದ್ದರೆ ಸಾಕು
ಹಿಂಜಿ ಬಿಡುತ್ತದೆ..!!!

**

ವ್ಯಕ್ತಿ ಮರಕಾಲು
ಕಟ್ಟಿಕೊಂಡರೂ
ವ್ಯಕ್ತಿತ್ವ ಎತ್ತರ
ವಾಗುವುದಿಲ್ಲ..!!!

**

ಹೇಗೆ ಇರಲಿ,
ನನ್ನ ಪ್ರೀತಿಯ ಹುಡುಗಿ
ದೇವತೆಯೇ....

**

ಶತಮಾನಗಳ ವೈರಿ
ಸುಮ್ಮನೊಂದು ನಗುವಿಗೆ
ಮಿತ್ರನಾಗಿಬಿಟ್ಟ ..!!

**

ಆಕಳಿಕೆ,
ನಿದ್ದೆಯ ಮೊದಲ
ಮೆಟ್ಟಿಲು..!!

**

ಎಂಥ ಸರ್ವಾಧಿಕಾರಿಯೇ
ಆಗಿರಲಿ... ಆತ
ಮಲಗಿ ನಿದ್ರಿಸುತ್ತಿದ್ದಾಗ
ಮಗುವೇ...!!

(ಬದುಕಿನ ಎಂತದ್ದೋ ದಿನಗಳಲ್ಲಿ... ಏನೋ ಅನುಭವಗಳಾದಾಗ.. ಹಾಗೆ ಸುಮ್ಮನೇ ಗೀಚಿದ್ದು.. ಕೆಲವು ಸತ್ಯ.. ಮತ್ತೆ ಕೆಲವು ಫನ್ನಿ...ಸುಮ್ಮನೇ ಓದಲು... ನಾಲ್ಕಷ್ಟು ಸಾಲುಗಳು... ಖಯಾಲಿಯ, ಲಹರಿಯ ಸಮಯದಲ್ಲಿ ಬರೆಯಲಾಗಿದ್ದಷ್ಟೇ... ಓದಿ ಅನಿಸಿಕೆಗಳನ್ನು ಗೀಚಿ..)

Sunday, February 10, 2013

ತುರಗ ಕರ್ನಾಟಕ


ಬೆಂದ ಕಾಳನ್ನು ಹುಡುಕುತ್ತ
ಕಾಣದೂರಿಗೆ ಹೊರಟಿದೆ
ನಮ್ಮ ತುರಗ..!

ಆಚೆ ಈಚೆ ನೋಡದಂತೆ ತುರಗಕ್ಕೆ
ಕಣ್ಣು ಪಟ್ಟಿ ಕಟ್ಟಿದ್ದಾರೆ..
ತುರಗದ ಬಾಲ ಥೇಟು
ಅವಳ ಜಡೆಯಂತೇ ಕುಣಿಯುತ್ತಿದೆ..
ಅಂತಿಂತದ್ದಲ್ಲ ಈ
ತುರಗಕ್ಕೆ ಕೊಂಬೂ ಇದೆ. !!

ಅಜ್ಜ ಅಜ್ಜಿ ಅಪ್ಪ ಅಮ್ಮ
ಯಾರಮಾತಿಗೂ ಕವಡೆ ಕಾಸಿನ ಕಿಮ್ಮತ್ತಿಲ್ಲ
ಸಾಕಿ ಬೆಳೆಸಿದವನ ಕೂಗಿಗೆ ಬೆಲೆಯಿಲ್ಲ
ತುರಗಕ್ಕೆ ಹಸಿರು ಹುಲ್ಲು ಬೇಡ
ದಾಣಿ ಬೂಸಾವನ್ನು ಹುಡುಕುತ್ತಿದೆ..!!


ತುರಗಕ್ಕೆ ತುರಗವೇ ಜೊತೆಗಾರ
ಬೆನ್ನ ಮೇಲೆ ಜೀನಿಲ್ಲ..!
ಮಲೆನಾಡಿನ ಕಸುವೆಲ್ಲ
ತಿಂದು ಕೊಬ್ಬಿದರೂ
ನಾಗಾಲೂಟದಲ್ಲಿರುವ ತುರಗಕ್ಕೆ
ಇದೆಲ್ಲ ಕಾಲು ಕಸ..!!

ನುಗ್ಗುವ ಕುದುರೆಗೆ ಅದ್ಯಾರೋ
ಲಗಾಮು ಹಾಕಿ ಗಾಣಕ್ಕೆ ಕಟ್ಟಿದರೂ
ಆಸೆಗೆ ಅಂಕೆಯಿಲ್ಲ..!
ಉಸಿರುಕಟ್ಟಿ ಓಡಿದ ಬೆಟ್ಟದ ತುದಿ
ಬಯಲಾದರೂ ಓಟ ನಿಂತಿಲ್ಲ..!!


ಇಷ್ಟರ ನಡುವೆ ಮನೆಯೊಳಗಣ
ಅಪ್ಪ ಅಮ್ಮ ಅಜ್ಜ ಅಜ್ಜಿಯ ಕಣ್ಣೀರು
ಬ್ರೇಕಿಂಗ್ ನ್ಯೂಸ್ ಆಗಲೇ ಇಲ್ಲ..!!

ವಸಂತಗಳಾಚೆ
ಮರದ ಹಣ್ಣೆಲೆಗಳು ಉದುರಿದವು
ಇತಿಹಾಸ ಮರುಕಳಿಸಿತು..
ತುರಗ ಹಣ್ಣಾಯಿತು.!!

ಕೊನೆಗೂ ಕಾಲಚಕ್ರದಲ್ಲಿ
ತುರಗ ಅಜ್ಜ ಅಜ್ಜಿ..
ಅನಿವಾರ್ಯ ಅಸಹಾಯಕ ಪಾತ್ರಧಾರಿ..!!

ಕವಿತೆಯನ್ನು ಬರೆಯದೇ ಬಹಳ ದಿವಸಗಳೇ ಕಳೆದಿದ್ದವು ನೋಡಿ...ವರುಷಗಳೆ ಸಂದಿದ್ದವೇನೋ.. ಮೊನ್ನೆ ತಾನೆ ಶಿರಸಿಯಲ್ಲಿ ತಾಲೂಕಾ ಮಟ್ಟದ ಸಾಹಿತ್ಯ ಸಮ್ಮೇಳನ ನಡೆಯಿತು. ಕವಿ ಸಮಯದಲ್ಲಿ ನನ್ನ ಹೆಸರನ್ನೂ ಹಾಕಿ ಕವಿತೆ ವಾಚನ ಮಾಡಬೇಕೆಂದರು.. ಅದಕ್ಕೆ ಬರೆದು ವಾಚಿಸಿದ ಕವಿತೆ ಇದೆ..

Thursday, January 31, 2013

ಅಬ್ಬ...ಆಲೆಮನೆ ಹಬ್ಬ..!!

ಅಬ್ಬ...ಆಲೆಮನೆ ಹಬ್ಬ..!! 

 ಒಂದು ಕಾಲವಿತ್ತು. ಆಲೆಮನೆ ಅಂದರೆ ಹಬ್ಬದ ವಾತಾವರಣವನ್ನೇ ಸೃಷ್ಟಿಸುವಂತಹ ಕಾಲ ಅದಾಗಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಆಲೆಮನೆ ಎಂಬುದು ತೀರಾ ಅಪರೂಪ ಎನ್ನುವಂತಾಗಿದೆ. ಆಲೆಮನೆ ಎಲ್ಲಿ ನಡೆಯುತ್ತಿದೆ ಎಂದು ಹುಡುಕಬೇಕಾದಂತಹ ಸ್ಥಿತಿ ಇಂದಿನದು.
    ಮಲೆನಾಡಿನಲ್ಲಿ ಕಬ್ಬುಬೆಳೆಸುವುದು ಸಾಹಸದ ಕೆಲಸ. ಅರಣ್ಯಗಳು ನಾಶವಾಗಿದ್ದರಿಂದ ಕಾಡುಪ್ರಾಣಿಗಳು ರೈತನ ಹೊಲಗದ್ದೆಗಳಿಗೆ ಮುಗಿ ಬೀಳುತ್ತಿವೆ. ಅದೇ ರೀತಿ ಕಬ್ಬಿನ ಗದ್ದೆಗಳಿಗೂ ಮಂಗ, ಕಾಡುಹಂದಿ, ಇಣಚಿ ಮುಂತಾದವುಗಳ ಕಾಟ. ಇವೆಲ್ಲವನ್ನೂ ಮೀರಿ ಕಬ್ಬು ಬೆಳೆದು ಆಲೆಮನೆ ಮಾಡೋಣವೆಂದರೆ ಕೂಲಿ ಕಾರ್ಮಿಕರ ಸಮಸ್ಯೆ. ಮತ್ತೊಂದೆಡೆ ಕಬ್ಬಿನ ಹಾಲನ್ನು ಬೇಯಿಸಿ ಬೆಲ್ಲ ತಯಾರಿಸಲು ಉರುವಲು ಸಮಸ್ಯೆ. ಉರುವಲು ತರಬೇಕೆಂದರೆ ಅರಣ್ಯ ಇಲಾಖೆಯವರ ಕಾಟ. ಹಾಗಾಗಿ ರೈತಾಪಿ ವರ್ಗ ಆಲೆಮನೆ ಸಹವಾಸದಿಂದಲೇ ದೂರ ಸರಿದಿದೆ. ಬೆಲ್ಲವನ್ನು ಕೊಂಡು ತರುವುದೇ ಸಲೀಸು ಎನ್ನುವ ಧೋರಣೆಯಿಂದಾಗಿ ಆಲೆಮನೆಗಳು ಮಾಯವಾಗುತ್ತಲಿವೆ. ಇನ್ನೊಂದೆಡೆ ಬೆಲ್ಲದ ದರ ವರ್ಷದಿಂದ ವರ್ಷಕ್ಕೆ ಏರುಮುಖದತ್ತ ಸಾಗಿದೆ.
    ಆಲೆಮನೆ ಈ ಪದವೇ ಸಾಕು ಮೈಮನಗಳನ್ನು ರೋಮಾಂಚನಗೊಳಿಸುತ್ತದೆ. ಕಬ್ಬು ಕಡಿದು ಅದನ್ನು ಗಾಣಕ್ಕೆ ಕೊಟ್ಟು ಹಾಲನ್ನು ಕುಡಿದು ಬೆಲ್ಲವನ್ನು ತಿಂದರೆ ಹಬ್ಬದ ಮೆರುಗು, ಮೆಲುಕು ಅನಿರ್ವಚನೀಯ. ಈಗ ಆಲೆಮನೆಯನ್ನು ಹಬ್ಬವನ್ನಾಗಿ ಮಾಡುವ ಮೂಲಕ ಅಚನಳ್ಳಿಯಲ್ಲಿ ಅದಕ್ಕೊಂದು ವಾಣಿಜ್ಯಾತ್ಮಕ ರೂಪವನ್ನು ನೀಡುತ್ತಿರುವುದು ವಿಶೇಷ.
    ಆಲೆಮನೆಯೆಂದಕೂಡಲೇ ಕಬ್ಬು, ಕಣೆ, ಬೃಹತ್ ಕೋಣಗಳು, ಅವನ್ನು ಓಡಿಸುವವನು, ವಾರಗಟ್ಟಲೆ ಕಬ್ಬು ಕಡಿಯುವ ಸಂಭ್ರಮ, ಕಬ್ಬಿನ ಹಾಲು ಸಂಗ್ರಹಣೆ, ಬಂದ ಅತಿಥಿಗಳಿಗೆಲ್ಲ ಅದನ್ನು ನೀಡುವುದು, ಬೆಲ್ಲ ತಯಾರಿಸುವುದು ಇತ್ಯಾದಿಗಳು ನೆನಪಾಗುತ್ತವೆ. ಬದಲಾದ ಸಂಗತಿಯಲ್ಲಿ ಈ ಆಲೆಮನೆ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಬೆಳೆದಿದೆ. ಕೂಲಿ ಕಾಮರ್ಿಕರ ಸಮಸ್ಯೆಯ ಕಾರಣ ವಾರಗಟ್ಟಲೆ ನಡೆಯುತ್ತಿದ್ದ ಆಲೆಮನೆಗಳು ಈಗ ಒಂದೆರಡು ದಿನಕ್ಕೆ ಇಳಿದುಬಿಟ್ಟಿವೆ. ಎಕರೆಗಟ್ಟಲೆ ಕಬ್ಬುಬೆಳೆಯುತ್ತಿದ್ದವರೀಗ ಒಂದೆರಡು ಗದ್ದೆಗಳಿಗೆ ಸೀಮಿತವಾಗಿದ್ದಾರೆ. ಹಳೆಯಕಾಲದ ಕೋಣನ ಕಣೆಯ ಜಾಗದಲ್ಲಿ ಆಧುನಿಕ ಯಂತ್ರದ ಮೂಲಕ ಓಡುವ ಕಣೆ ಬಂದಿದೆ. ಅದರ ಜೊತೆಗೆ ಬೆಲ್ಲ ತಯಾರಿಸುವ ಕೊಪ್ಪರಿಗೆಗೂ ಚಕ್ರಗಳು, ನಲ್ಲಿಗಳನ್ನು ಕೂಡ್ರಿಸುವ ಮೂಲಕ ಆಲೆಯಮನೆಗೆ ಮತ್ತಷ್ಟು ಆಧುನಿಕ ಮೆರಗನ್ನು ನೀಡಲಾಗಿದೆ.
            ಹಿಂದೆಲ್ಲ ಆಲೆಮನೆ ಬಂತೆಂದರೆ ಸುತ್ತಮುತ್ತಲ ಊರುಗಳಲ್ಲಿ ಸಂಭ್ರಮ ಸಡಗರ. ಯಾವುದೇ ಕಡೆಗಳಲ್ಲಿ ಆಲೆಮನೆ ಇದೆಯೆಂಬ ಸುದ್ದಿ ಕಿವಿಗೆ ಬಿದ್ದರೆ ಸಾಕು ತಂಡೋಪತಂಡವಾಗಿ ಬಂದು ಜನರು ಹಾಲುಕುಡಿದು ಕಬ್ಬನ್ನು ಪಡೆದು ಹೋಗುತ್ತಿದ್ದರು. ಎಷ್ಟೇ ಜನ ಬಂದರೂ ಮನೆಯವರು ಬೇಸರಿಸದೇ, ಸಿಟ್ಟಾಗದೇ ಕೇಳಿದಷ್ಟು ಹಾಲುಕೊಟ್ಟು ಕಳಿಸುತ್ತಿದ್ದರು. ಕಬ್ಬಿನ ಹಾಲು ಹಾಗೂ ಕಬ್ಬನ್ನು ಬೇರೆಯವರಿಗೆ ಹೆಚ್ಚು ಹೆಚ್ಚು ಕೊಟ್ಟಷ್ಟೂ ಮುಂದಿನ ವರ್ಷ ನಮ್ಮ ಬೆಳೆ ಜಾಸ್ತಿಯಾಗುತ್ತದೆ ಎಂಬ ಮಾತುಗಳನ್ನು ಹಿರಿಯರು ಆಡುತ್ತಿದ್ದರು. ಆದರೆ ಆಧುನಿಕ ದಿನಮಾನದಲ್ಲಿ ಅವೆಲ್ಲವೂ ಕಳೆದುಹೋಗಿ ಆಲೆಮನೆಯೆಂದರೆ ಸ್ವಂತ ಬಳಕೆಗಷ್ಟೇ ಎಂಬಂತಹ ವಾತಾವರಣ ನಿರ್ಮಾಣವಾಗತೊಡಗಿತ್ತು.
    ತುಂಡು ಹಿಡುವಳಿ, ಕಡಿಮೆ ಪ್ರಮಾಣದಲ್ಲಿ ಕಬ್ಬು ಬೆಳೆಯುವುದು ಇತ್ಯಾದಿಗಳ ಜೊತೆಗೆ ಒಂದೆರಡು ದಿನಗಳಲ್ಲಿ ಮುಗಿದುಹೋಗುವ ಆಲೆಮನೆಗಳಲ್ಲಿ  ಮೊದಲಿದ್ದ ಬಾಂಧವ್ಯದ ವಾತಾವರಣ ಕಾಣಲು ಸಾಧ್ಯವೇ ಇಲ್ಲ. ಅದಕ್ಕೆ ತಕ್ಕಂತೆ ಬೆಲ್ಲದ ಬೆಲೆ ಗಗನವನ್ನು ಮುಟ್ಟಿದಾಗ ಬೆಳೆಗಾರರು ಕಬ್ಬಿನ ಬೆಳೆಯನ್ನು ವಾಣಿಜ್ಯಾತ್ಮಕ ದೃಷ್ಟಿಯಿಂದ ನೋಡುವುದು ಹೆಚ್ಚಾಯಿತು. ಅದು ಅನಿವಾರ್ಯವೂ ಆಯಿತು. ಅದಕ್ಕೆ ತಕ್ಕಂತೆ ಮಾರ್ಪಾಡುಗಳೂ ಬಂದವು.
    ಇಂತಹ ದಿನಗಳಲ್ಲಿ ಆಲೆಮನೆಯನ್ನು ಹಬ್ಬವಾಗಿ ಮಾಡುವ ಆಲೋಚನೆಗೆ ಮುಂದಾಗಿದ್ದು ಅಚ್ಚನಳ್ಳಿಯ ಮಂಜುನಾಥ ಹೆಗಡೆ ಹಾಗೂ ಮಿತ್ರರು. ತುಂಡು ತುಂಡು ಕಬ್ಬು ಬೆಳೆಗಾರರು ಒಂದೆಡೆಗೆ ಸೇರಿ ಒಂದೆರಡು ದಿನಗಳ ಬದಲಾಗಿ ಹಿಂದಿನ ದಿನಮಾನದಲ್ಲಿದ್ದಂತೆ ವಾರಗಟ್ಟಲೆ ಆಲೆಮನೆಯನ್ನು ಮಾಡಿ, ಆಲೆಮನೆಗೆ ಪ್ರವಾಸಿಗರನ್ನು ಕರೆತಂದು, ಮಾಹಿತಿ ನೀಡಿ ಕಬ್ಬು ಟೂರಿಸಂ ಮಾಡುವ ಆಲೋಚನೆಯನ್ನು ರೂಪಿಸಿ ಅದನ್ನು ಯಶಸ್ವಿಯಾಗುವಂತೆ ಮಾಡಿದವರು ಮಂಜುನಾಥ ಹೆಗಡೆ.
    ಮಂಜುನಾಥ ಹೆಗಡೆಯವರ ಕನಸಿನ ಆಲೆಮನೆ ಹಬ್ಬಕ್ಕೆ ಬೆನ್ನೆಲುಬಾಗಿ ನಿಂತಿದ್ದು ಶಿರಸಿಯ ಕದಂಬ ಮಾರ್ಕೇಟಿಂಗ್ ಸೊಸೈಟಿ ಮತ್ತು ಅದರ ಅಧ್ಯಕ್ಷ ಶಂಭುಲಿಂಗ ಹೆಗಡೆ ನಡಗೋಡ. ಈ ಹಬ್ಬ ಜ.11ರಂದು ನಡೆದು ಜ.16ರಂದು ಮುಕ್ತಾಯಗೊಂಡಿತು. ಅಚನಳ್ಳಿ, ದೊಡ್ನಳ್ಳಿ ಹಾಗೂ ಸುತ್ತಮುತ್ತಲ ಊರುಗಳ ಕಬ್ಬು ಬೆಳೆಗಾರರು ಸೇರಿ ಮಾಡುತ್ತಿರುವ ಈ ಆಲೆಮನೆ ಹಬ್ಬಕ್ಕೆ ಶಿರಸಿಯ ಕದಂಬ ಸಂಸ್ಥೆ ಪ್ರವಾಸೋದ್ಯಮದ ಕಲ್ಪನೆ ನೀಡಿತು. ವಾಣಿಜ್ಯೀಕರಣವನ್ನಾಗಿ ಮಾರ್ಪಡಿಸಿತು. ಹಬ್ಬಕ್ಕೆ ಆಗಮಿಸುವವರು 100 ರು.ನ ಟಿಕೆಟ್ ಖರೀದಿ ಮಾಡುವುದು ಅಗತ್ಯ. ಹಣ ಕೊಟ್ಟು ಟಿಕೆಟ್ ಪಡೆದ ಪ್ರವಾಸಿಗರಿಗೆ ತಕ್ಕ ಆಥಿತ್ಯವನ್ನು ಮಾಡಲಾಗುತ್ತದೆ. ಜೊತೆಯಲ್ಲಿ ಕಬ್ಬು ಬೆಳೆಗಾರನಿಗೆ ಹೆಚ್ಚಿನ ವರಮಾನವನ್ನೂ ಕಲ್ಪಿಸುತ್ತದೆ.
    ಹಬ್ಬಕ್ಕೆ ಆಗಮಿಸಿದವರಿಗೆ ಕಬ್ಬಿನ ಹಾಲಿನ ಜೊತೆಗೆ ನೊರೆಬೆಲ್ಲ ನೀಡಲಾಗುತ್ತದೆ. ನೂರು ರು. ನೀಡಿ ಟಿಕೆಟ್ ತೆಗೆದುಕೊಂಡವರಿಗೆ ಒಂದು ತೊಡದೇವು ಪ್ಯಾಕೇಟ್, ಮಿರ್ಚಿ ಬಜೆ ಪ್ಯಾಕೆಟ್, ಖಾಂದಾ ಬಜೆ ಪ್ಯಾಕ್, ಗೋಬಿ ಮಂಚೂರಿ ಹಾಗೂ ವಿವಿಧ ಸ್ನಾಕ್ಸ್ಗಳ ಪ್ಯಾಕೇಟನ್ನು ನೀಡಲಾಗುತ್ತದೆ. ಇಷ್ಟೇ ಅಲ್ಲದೇ ಆಲೆಮನೆಯ ಹಬ್ಬದಲ್ಲಿ ಸಾದಾ ಕಬ್ಬಿನ ಹಾಲಿನ ಜೊತೆಗೆ ಶುಂಟಿಯ ಕಬ್ಬಿನ ಹಾಲು, ಕಿತ್ತಳೆ ಹಣ್ಣು, ದಾಲ್ಚಿನ್ನಿ, ಲವಂಗ, ಲಿಂಬೆ ಹಾಗೂ ಮಜ್ಜಿಗೆ ಹುಲ್ಲಿನ ಕಬ್ಬಿನ ಹಾಲುಗಳೂ ಸವಿಯಲು ಸಿಗುತ್ತದೆ. ಸಾದಾ ಹಾಲಿಗಿಂತ ಹಾಗೂ ಅದರಷ್ಟೇ ವಿಶಿಷ್ಟ ರುಚಿಯ ಅನುಭವ ನೀಡುವ ಈ ರೀತಿಯ ಆರೋಗ್ಯಪೂರ್ಣ ಸುವಾಸನೆಯುಕ್ತ ಹಾಲುಗಳನ್ನು ಯಾರಾದರೂ ಕುಡಿದಲ್ಲಿ ಅವುಗಳಿಗೆ ಮಾರುಹೋಗುವುದು ಖಂಡಿತ.
    ಬೆಂಗಳೂರು, ಉತ್ತರ ಭಾರತ, ಬಿಹಾರ ಕಡೆಗಳಿಂದ ಬರುವ ಪ್ರವಾಸಿಗರಿಗಾಗಿ ಆಲೆಮನೆಯ ಕುರಿತು ಸಮಗ್ರ ಮಾಹಿತಿ ನೀಡಲಾಯಿತು. ಅಲ್ಲದೇ ಆಗಮಿಸುವ ಪ್ರವಾಸಿಗರಿಗೆ ಆಲೆಮನೆ, ಕಬ್ಬಿನಿಂದ ಬೆಲ್ಲ ತಯಾರಿಸುವ ಬಗೆ, ಕಬ್ಬನ ಹಾಲಿನಿಂದ ತಯಾರಿಸಬಹುದಾದ ಉಪ ಉತ್ಪನ್ನಗಳು,  ಸೇರಿದಂತೆ ಕಬ್ಬನ್ನು ಬೆಳೆಯುವುದು ಹೇಗೆ ಈ ಮುಂತಾದ ಎಲ್ಲ ವಿವರಗಳಿಗೆ ಮಾಹಿತಿಯನ್ನೂ ನೀಡಲಾಯಿತು. ಅನುಭವ ಟೂರಿಸ್ಟ್ ಮುಂತಾದ ಸಂಸ್ಥೆಗಳವರು ಆಲೆಮನೆ ಹಬ್ಬಕ್ಕೆ ಪ್ರವಾಸಿಗರನ್ನು ಕರೆತಂದಿದ್ದರು ಎಂದು ಹಬ್ಬದ ರೂವಾರಿಗಳಲ್ಲೊಬ್ಬರಾದ ಮಂಜುನಾಥ ಹೆಗಡೆ ಮಾಹಿತಿ ನೀಡುತ್ತಾರೆ.

    ಕಳೆದ ವರ್ಷ ಆಲೆಮನೆ ನಡೆಸುತ್ತಿದ್ದ ವೇಳೆ ಈ ಆಲೆಮನೆಯನ್ನೂ ಹಬ್ಬವನ್ನಾಗಿ ಮಾಡಿ ಆಲೆಮನೆ ಸಂಸ್ಕೃತಿಯನ್ನು ವಿಶ್ವಕ್ಕೆ ಪರಿಚಯ ಮಾಡುವ ಆಲೋಚನೆ ಹೊಳೆಯಿತು. ಅಲ್ಲದೇ ಇದನ್ನೂ ಪ್ರವಾಸಿಗರನ್ನು ಕರೆತರುವ ತಾಣವನ್ನಾಗಿ ಮಾಡಬಹುದು. ಈ ಮೂಲಕ ಆಲೆಮನೆ ಲುಕ್ಸಾನು ಉಂಟು ಮಾಡದೇ, ಪ್ರವಾಸಿಗರನ್ನು ಕರೆತರುವ ಮೂಲಕ ಸಂಪೂರ್ಣ ಪ್ರವಾಸೋದ್ಯಮ ಹಾಗೂ ವಾಣಿಜ್ಯೀಕರಣಗೊಳಿಸುವ ಆಲೋಚನೆ ಬಂದಿತು. ಅದರ ಫಲವಾಗಿಯೇ ಈ ಹಬ್ಬವನ್ನು ನಡೆಸುತ್ತಿದ್ದೇವೆ ಎಂದು ಮಂಜುನಾಥ ಹೆಗಡೆ ವಿವರಿಸುತ್ತಾರೆ.
    ಒಟ್ಟಿನಲ್ಲಿ ಆಲೆಮನೆಯನ್ನು ವಿಶ್ವಕ್ಕೆ ಪರಿಚಯಿಸುವ, ಆಲೆಮನೆಯ ಮೂಲಕ ಪ್ರವಾಸಿಗರನ್ನು ಕರೆತರುವ ಹಾಗೂ ಅದರಲ್ಲಿ ವಿವಿಧತೆಗಳನ್ನು ಬಳಕೆ ಮಾಡಿಕೊಂಡು ವಾಣಿಜ್ಯಾತ್ಮಕವಾಗಿ ಹಬ್ಬವನ್ನಾಗಿ ಮಾಡಿದ ಅಚ್ಚನಳ್ಳಿಯ ಮಂಜುನಾಥ ಹೆಗಡೆಯವರ ಆಲೆಮನೆ ಹಬ್ಬ ಇತರ ಕಬ್ಬಿನ ಬೆಳೆಗಾರರಿಗೂ ಸ್ಫೂತರ್ಿಯಾಗುವುದರಲ್ಲಿ ಸಂದೇಹವೇ ಇಲ್ಲ. ಜೊತೆಗೆ ಮುಂದಿನ ದಿನಗಳಲ್ಲಿ ಶುಗರ್ಕೇನ್ ಟೂರಿಸಂ ಆಗುವ ಎಲ್ಲ ಸಾಧ್ಯತೆಗಳನ್ನೂ ಆಲೆಮನೆ ಹಬ್ಬ ಹುಟ್ಟುಹಾಕಿದೆ. ಈ ಹಬ್ಬದ ಕುರಿತು ನಿಮ್ಮಲ್ಲೂ ಕುತೂಹಲ ಮೂಡಿದ್ದರೆ ಯಾಕೆ ತಡ.. ಇಂತಹ ಪರಿಕಲ್ಪನೆಯನ್ನು ನೀವೂ ಮಾಡಿ..ಆಲೆಮನೆಯ ಹಬ್ಬ ಆಚರಿಸಿ.. ಹೆಚ್ಚಿನ ಮಾಹಿತಿ ನೀಡಲು ಮಂಜುನಾಥ ಹೆಗಡೆ 9483613900, 9036418230 ಅಥವಾ ಎಂ. ಎಸ್. ಹೆಗಡೆ 9483998511 ಈ ದೂರವಾಣಿ ಸಂಖ್ಯೆಯ ಮೂಲಕ ಪಡೆದುಕೊಳ್ಳಬಹುದಾಗಿದೆ.

    ಆಲೆಮನೆ ಹಬ್ಬಕ್ಕೆ ಕದಂಬ ಮಾರ್ಕೇಟಿಂಗ್ ಸಂಸ್ಥೆ ಬೆನ್ನೆಲುಬಾಗಿ ನಿಂತಿದೆ. ಸಹಾಯ, ಸಹಕಾರ, ಸಲಹೆಗಳನ್ನು ನೀಡುವ ಜೊತೆಗೆ ಈ ಆಲೆಮನೆಯಲ್ಲಿ ತಯಾರಾದ ಬೆಲ್ಲವನ್ನು ಸಂಸ್ಥೆ ಕೊಂಡು ಮಾರಾಟ ಮಾಡುತ್ತದೆ. ಕಬ್ಬು ಬೆಳೆಗಾರರಿಗೆ ಬೆಲ್ಲದ ದರ ವಿತರಿಸಲಾಗುತ್ತದೆ. ಆಲೆಮನೆಯನ್ನು ಹೊರ ಪ್ರದೇಶಗಳ ಪ್ರವಾಸಿಗರಿಗೆ ಪರಿಚಯಿಸುವ ನಿಟ್ಟಿನಲ್ಲಿ ಇದೊಂದು ಹೊಸ ಪ್ರಯತ್ನ
ಶಂಭುಲಿಂಗ ಹೆಗಡೆ
ಕೆ.ಎಂ.ಎಫ್. ನಿರ್ದೇಶಕ

    ನಮ್ಮೂರಿನ ಆಲೆಮನೆಯನ್ನೂ ಉದ್ಯಮವನ್ನಾಗಿ ಮಾಡಿ, ಪ್ರವಾಸಿಗರನ್ನು ಆಕಷರ್ಿಸುವುದು ನಮ್ಮ ಉದ್ದೇಶ. ಕೇವಲ ಕಬ್ಬು ಬೆಳೆದು ಆಲೆಮನೆ ಮಾಡಿ ಮುಗಿಸುವುದರ ಬದಲಾಗಿ ಹೀಗೆ ವಿವಿಧತೆಯನ್ನು ಅನುಸರಿಸಿ ಆದಾಯ ಗಳಿಸಬಹುದು. ಕಬ್ಬು ಬೆಳೆಗಾರರಿಗೆ ಇದೊಂದು ಹೊಸ ಆಶಯ ಮೂಡಿಸಬಲ್ಲದು. ಜೊತೆಗೆ ಆಲೆಮನೆ ಸಂಸ್ಕೃತಿಯನ್ನು ವಿಶ್ವಕ್ಕೆ ಪರಿಚಯ ಮಾಡಬಹುದಾಗಿದೆ.
ಮಂಜುನಾಥ ಹೆಗಡೆ