Tuesday, December 18, 2012

ನೀರೆ ನೀ ಯಾರೆ..?

ನೀರೆ ನೀ ಯಾರೆ..?

ಹೊತ್ತಲ್ಲದ ಹೊತ್ತಿನಲಿ
ಮನದೊಳಗೆ ಕಾಡುತಿಹ
ನೀರೆ ನೀ ಯಾರೆ?
ನನ್ನೆದುರು ಬಾರೆ..||

ನದಿಗುಂಟ ಬಂದಾಗ
ಮೌನವಾಗಿಯೇ ನಗುವ
ಮನವೆಲ್ಲ ಸೆಳೆ-ಸೆಳೆವ
ನೀರೆ, ನೀಯಾರೆ?
ನನ್ನೆದುರು ಬಾರೆ..||

ಕೆಂಪಂಚು ಜರಿ ಸೀರೆ
ಮುಸುಕೊಳಗೆ ನಗು ನಗುವ
ಕಣ್ಣಿನಲೇ ಬರಸೆಳೆವ
ನೀರೆ, ನೀ ಯಾರೆ?
ನನ್ನೆದುರು ಬಾರೆ...||

ಅಚ್ಚಮಲ್ಲೆಯ ಮುಡಿದು
ಕಾಲುಗೆಜ್ಜೆಯ ಬಡಿದು
ನಿಂತಲ್ಲೆ ಸೆಳೆಯುತಿಹ
ನೀರೆ, ನೀಯಾರೆ
ನನ್ನೆದುರು ಬಾರೆ..||

ದೂರದಿಂದಲೇ ಸೆಳೆವ
ಸನಿಹದಲಿ ಬರದಿರುವ
ಸಿಗಸಿಗದೇ ಓಡುವ
ನೀರೆ, ನೀ ಯಾರೆ?
ನನ್ನೆದುರು ಬಾರೆ..||

ಬರೆದಿದ್ದು ದಂಟಕಲ್ಲಿನಲ್ಲಿ ದಿನಾಂಕ 22-11-2007ರಂದು

Monday, December 17, 2012

ನಿಗೂಢ ದೇವರಕಾನಿನ ಜಾಡಿನಲ್ಲಿ...

ನಿಗೂಢ ದೇವರಕಾನಿನ ಜಾಡಿನಲ್ಲಿ... 

ದೇವರ ಕಾನು.. ಹಾಗೊಂದು ಹೆಸರಿನ ಚಿಕ್ಕ ಪ್ರದೇಶ ನಮ್ಮೂರಿನ ಫಾಸಲೆಯಲ್ಲಿದೆ. ನಮ್ಮೂರು ಹಾಗೂ ಹಿತ್ತಲಕೈ ನಡುವೆ ಇರುವ ಚಿಕ್ಕ ಕಾಡಿನಂತಹ ಸ್ಥಳ ಇದು. ಅಘನಾಶಿನಿ ನದಿಯ ದಡದ ಮೇಲೆ ಇದು ಇದೆ. ನಮ್ಮೂರಿನಿಂದ ದೇವರಕಾನಿಗೆ ಹೋಗಬೇಕೆಂದಾದಲ್ಲಿ ಅಘನಾಶಿನಿಯನ್ನು ದಾಟಿ, ವಾಟೆ ಮಟ್ಟಿಯ ಸಾಲನ್ನು ಹಾದು ಹೋಗಬೇಕು.
     ಮೇಲ್ನೋಟಕ್ಕೆ ಅಲ್ಲಿ ಏನೂ ಕಾಣುವುದಿಲ್ಲ. ಏಕೆಂದರೆ ಬೇಸಿಗೆಯ ದರಕು, ಕಾಡು ಬಳ್ಳಿಗಳು, ಗಣಪೆಕಾಯಿಯ ದೊಡ್ಡ ಬಳ್ಳಿಯ ಸಾಲುಗಳು ಅಲ್ಲಿ ಏನನ್ನೂ ಕಾಣದಂತೆ ಮಾಡಿಬಿಟ್ಟಿವೆ. ಆದರೆ ಸ್ವಪಲ್ಪ ಸೂಕ್ಷ್ಮವಾಗಿ, ಕೂಲಂಕಷವಾಗಿ ವೀಕ್ಷಿಸಿದರೋ ಗತಕಾಲದ ಪಳೆಯುಳಿಕೆಗಳ ಅನಾವರಣ ನೋಡುಗರಿಗೆ ಆಗುತ್ತದೆ.
    ಹೌದು ಅಲ್ಲಿ ಯಾವುದೋ ಕಾಲದ ಪ್ರಾಚೀನ ಗೊಂಬೆಗಳು, ಮಣ್ಣಿನ ಮಡಿಕೆಗಳು, ಮೃತ್ತಿಕೆಯಿಂದ ಮಾಡಿದ ಒಡೆದು ಹೋಗಿರುವ ಗೊಂಎಬಗಳು ಕಾಣಬಲ್ಲವು. ಹೂಕುಂಡ, ಸ್ತೀ, ವೇಷಧಾರಿ, ಆಭರಣಗಳು, ಈ ಮುಂತಾದವುಗಳು ಅಲ್ಲಿವೆ. ಪ್ರತಿಯೊಂದು ಮಡಿಕೆಗಳ ತುಂಡಿನ ಮೇಲೂ ಸೂಕ್ಷ್ಮ ಚಿತ್ತಾರಗಳು. ಕಷ್ಟಪಟ್ಟು ಕಣ್ಣಲ್ಲಿ ಕಣ್ಣಿಟ್ಟು ತಯಾರಿಸಿದ ಪರಿಶ್ರಮ ಎದ್ದು ಕಾಣುತ್ತದೆ.
    ಈ ಗೊಂಬೆಗಳನ್ನು ಅದ್ಯಾವ ಗತಶತಮಾನದಲ್ಲಿ ತಯಾರು ಮಾಡಲಾಗಿದೆಯೋ. ಅದ್ಯಾಕೆ ಅಲ್ಲಿ ತಂದಿಟ್ಟರೋ ಒಂದೂ ಗೊತ್ತಿಲ್ಲ. ಇದನ್ನು ಮುಟ್ಟಬಾರದು ಎಂಬ ವಿಚಿತ್ರ ನಿಗೂಢ ನಂಬಿಕೆ ನಮ್ಮೂರು ಸೇರಿದಂತೆ ಸುತ್ತಮುತ್ತಲ ಊರುಗಳಲ್ಲಿವೆ. ಆ ಕಾರಣದಿಂದಲೇ ದೇವರಕಾನಿನ ಪ್ರದೇಶ ಈಗಲೂ ನಮ್ಮೂರಿಗರಲ್ಲಿ ವಿಚಿತ್ರ ಹಾಗೂ ಭಯಭರಿತ ಪ್ರದೇಶವಾಗಿ ಉಳಿದುಬಿಟ್ಟಿದೆ.
    ಬಹುಶಃ ಈ ಕಾರಣದಿಂದಲೇ ಆ ಗೊಂಬೆಗಳು ಉಳಿದುಕೊಂಡಿದೆಯೇನೋ. ಇಲ್ಲವಾದಲ್ಲಿ ಆ ಗೊಂಬೆಗಳು ಅದೆಷ್ಟು ಮನೆಯ ಶೋಕೆಸುಗಳಲ್ಲಿ ಉಳಿದುಬಿಡುತ್ತಿದ್ದವೋ. ಅದೆಷ್ಟು ಮನೆಯ ಹೂವುಗಳನ್ನು ಇಡುವ ಕುಂಡಗಳಾಗಿಬಿಡುತ್ತಿದ್ದವೋ. ಸೋದೆಯ ಅರಸರ ಕಾಲದ್ದೋ ಅಥವಾ ಕೋಡಸಿಂಗೆಯ, ಕರೂರಿನ ಗೌಡರದ್ದೂ ಅಥವಾ ಬಾಳೂರು ಗೌಡರ ಕಾಲಕ್ಕೆ ಸೇರಿರ ಬಹುದಾದ ಈ ದೇವರ ಕಾನಿನ ಪಳೆಯುಳಿಕೆಗಳ ಕುರಿತು ನಮ್ಮೂರಿನ ಹಿರಿಯರಿಗೂ ಹೆಚ್ಚು ಗೊತ್ತಿಲ್ಲ. ಆ ಬಗ್ಗೆ ಹೇಳಿ ಅಂದರೆ ಅದು ದೇವರ ಕಾಡು. ಅಲ್ಲಿಗೆ ಹೋಗಬೇಡಿ ಎಂದು ಹೇಳಿ ಸುಮ್ಮನಾಗುತ್ತಾರೆ.
    ಅದೇನು ಸ್ಮಶಾನವೋ, ಅಥವಾ ಹೆಸರೇ ಹೇಳಿದಂತೆ ದೇವರಿಗೆ ಸೇರಿದ ತಾಣವೋ, ಚೌಡಿ, ಮಾಸ್ತಿಯ ಸ್ಥಳವೋ, ಅಥವಾ ಒಂದಾನೊಂದು ಕಾಲದಲ್ಲಿ ನಾಗರಬನ ಆಗಿತ್ತೋ ಯಾರಿಗೂ ಗೊತ್ತಿಲ್ಲ. ಮುಂಚೆ ಯಾವಾಗಲೂ ನಾವು ಅಲ್ಲಿಗೆ ಹೋಗಿ ಬಂದು ಮಾಡುತ್ತಿದ್ದೆವು. ಕೊನೆ ಕೊನೆಗೆ ಆ ದೇವರ ಕಾನಿನ ಸುತ್ತ ಕಿತ್ತಲಕೈ ಊರಿನವರ್ಯಾರದ್ದೂ ಬೇಲಿಯೂ ಎದ್ದು ನಿಂತಿದೆ. ಸೂರ್ಯನ ಕಿರಣಗಳು ನೆಲವನ್ನು ಏನು ಮಾಡಿದರೂ ಮುಟ್ಟದಂತಿರುವ ಈ ಸ್ಥಳದಲ್ಲಿ ಅದೇನೋ ಒಂದು ರೀತಿಯ ನೀರವ, ಭೀತಿಯುಕ್ತ ವಾತಾವರಣ ನೆಲೆಸಿರುವುದು ವಿಚಿತ್ರವೂ ವಿಶಿಷ್ಟವೂ ಹೌದು.
    ಈ ಕುರಿತು ಹೆಚ್ಚು ತಿಳಿದವರಿಲ್ಲ. ಈ ಸ್ಥಳವನ್ನು ಉತ್ಖನನ ಮಾಡಿದರೆ ಇನ್ನಷ್ಟು ಮಾಹಿತಿ ಸಿಗಬಹುದು. ಅಗೆದರೆ ಅಲ್ಲಿ ನಿಧಿ ಇದೆ, ಅದನ್ನು ಕಾಳಸರ್ಪವೊಂದು ಕಾಯುತ್ತಿದೆ, ಅಲ್ಲೇ ಜೊತೆಯಲ್ಲಿ ಹುತ್ತವೂ ಇದೆ ಎಂದು ವಾಡಿಕೆಯ ಮಾತುಗಳಿವೆ. ನನ್ನ ಕಣ್ಣಿಗೆ ಹುತ್ತ ಕಾಣಿಸಿದೆ. ಅಲ್ಲದೆ ಮಂಟಪದಂತಹ ಸ್ಥಳವೂ ಕಂಡಿದೆ. ನಿಧಿ ಇದೆಯೋ ಇಲ್ಲವೋ ಗೊತ್ತಿಲ್ಲ. ಒಮ್ಮೆ ಶಿರಸಿಯ ನಮ್ಮ ಇತಿಹಾಸ ಪ್ರಾದ್ಯಾಪಕರೂ, ಪ್ರಾಚೀನ ವಸ್ತುವನ್ನು ಸಂಗ್ರಹಿಸಿ ಶಿರಸಿಯಲ್ಲಿ ಮ್ಯೂಸಿಯಂ ಮಾಡುತ್ತಿರುವ ಟಿ. ಎಸ್. ಹಳೆಮನೆ ಅವರನ್ನು ಕರೆದುಕೊಂಡು ಹೋಗಿದ್ದೆ. ಆಗೆಲ್ಲ ನಮ್ಮೂರಿಗರು ಹಾಗೂ ಸುತ್ತಮುತ್ತಲ ಭಾಗದವರು ನನ್ನನ್ನು ವಿಚಿತ್ರವಾಗಿ, ಅನುಮಾನದಿಂದ ನೋಡಿದ್ದಿದೆ. ಜೊತೆಗೆ ಅಲ್ಲಿ ಮಣ್ಣಿನಲ್ಲಿ ಬಿದ್ದು ಕಾಲನ ಹೊಡೆತಕ್ಕೆ ಸಿಕ್ಕು ಹಾಳಾಗಿ ಹೋಗುತ್ತಿದ್ದ ಗೊಂಬೆಗಳನ್ನು ತಂದು ಮ್ಯೂಸಿಯಂನಲ್ಲಿ ಇಡುತ್ತೇನೆ ಎಂಬ ಹಳೆಮನೆ ಸರ್ ಪ್ರಸ್ತಾಪವನ್ನು ತೀವ್ರವಾಗಿ ವಿರೋಧಿಸಿದ್ದು ಇನ್ನೂ ಕಣ್ಣಿಗೆ ಕಟ್ಟಿದಂತಿದೆ.
    ಹಾಗಿದ್ದರೆ ಅದೇನಿರಬಹುದು? ನಮ್ಮೂರಿನಲ್ಲೆ, ನಾನು ಓಡಾಡುವ ಜಾಗದಲ್ಲಿಯೇ ಇಂತಹ ಸ್ಥಳ ಇದ್ದರೂ ಅದರ ಹಿನ್ನೆಲೆ ಗೊತ್ತಿಲ್ಲವಲ್ಲಾ.. ಅದನ್ನು ಉಳಿಸೋಣ ಎಂದುಕೊಂಡು ಮಾಡಿದ ಕೆಲಸಗಳೆಲ್ಲ ವ್ಯರ್ಥವಾಗಿದೆಯಲ್ಲ ಎಂಬ ಬೇಸರವಿದೆ. ಮಳೆ, ಗಾಳಿ, ಕಾಡಿನ ಪ್ರಾಣಿಗಳ ಹಾವಳಿಗಳಿಂದ ಮಣ್ಣಾಗುತ್ತಿರುವ ಈ ಗೊಂಬೆಗಳನ್ನು ಕಾಪಾಡಲು ಆಗುತ್ತಿಲ್ಲವೆನ್ನುವ ವ್ಯಥೆಯೂ ಇದೆ. ಮೂಢನಂಬಿಕೆಯಿಂದಲೋ ಅಥವಾ ಇನ್ಯಾವ ಕಾರಣವೋ.. ನಮ್ಮ ಪ್ರಯತ್ನವನ್ನು ವಿರೋಧಿಸಿದ ಈ ಕುರಿತು ಕುತೂಹಲವೂ ಇದೆ. ಇತಿಹಾಸ ಅರಿಯುವ ಅವಕಾಶವಿದ್ದರೂ ಆಗುತ್ತಿಲ್ಲವೆನ್ನುವ ಅಸಹಾಯಕತೆ.
    ಇವೆಲ್ಲದರ ಜೊತೆಗೆ ಹಾಗೆಯೇ ಬಿದ್ದುಕೊಂಡಿರುವ ಆ ನಿಗೂಢ ಗೊಂಬೆಗಳು ಅಲ್ಲೇ ಕಣ್ಮರೆಯಾಗ್ತವಾ? ನಮ್ಮೂರಿನ ದೇವರಕಾನು, ದೇವರ ಹೆಸರಿನ ಮೂಲಕ ಕಾನು ಉಳಿದುಕೊಂಡಿದ್ದೆಲ್ಲ ಮರೆಯಾಗುತ್ತದಾ ಎಂಬ ಆಲೋಚನೆಯಲ್ಲಿದ್ದೇನೆ.

ಒಂದಷ್ಟು ಹನಿಗಳು

ಒಂದಷ್ಟು ಹನಿಗಳು

(ಐದು ಹನಿಚುಟುಕಗಳು, ಚುನಾವಣೆ, ನ್ಯೂ ಈಯರ್, ಹೃದಯದ ಸ್ಥಿತಿ, ಚುನಾವಣಾ ಸಮಯ ಹಾಗೂ ಇಂಡಿಯಾ ಶೈನಿಂಗ್)

33)ಚುನಾವಣೆ

ಚುನಾವಣೆ ಚುನಾವಣೆ
ಜನರ ಜಮಾವಣೆ
ನೋಟು, ಓಟುಗಳ ಚಲಾವಣೆ
ಅಭ್ಯರ್ಥಿಗಳ ಪ್ರಚಾರಣೆ, ಹಣಾಹಣಿ,
ಹೆಂಡ ಸಾರಾಯಿಗಳ ಸಮರ್ಪಣೆ,
ರೌಡಿ ಪಡೆಗಳ ದಬಾವಣೆ
ಗೆದ್ದ ಅಭ್ಯರ್ಥಿ ಹಿಡಿದ ಚುಕ್ಕಾಣಿ
ಇನ್ನೈದು ವರ್ಷ ಅವನ ಮುಖ ನಾಕಾಣೆ|
ನಾ ಕಾಣೆ..||

34) ನ್ಯೂ ಈಯರ್

ಹಳೆ ಸಮಸ್ಯೆ
ಮರೆಸಿ
ಹೊಸ ಸಮಸ್ಯೆಯ
ಜನನಕ್ಕೆ
ನಾಂದಿ ಆಗುವ ದಿನವೇ
ಹೊಸ ವರ್ಷ||

35)ಹೃದಯದ ಸ್ಥಿತಿ

ನಲ್ಲೆ ನೀನು ಒಪ್ಪಿದರೆ
ಈ ಹೃದಯ ನಿನದು
ಆದರೆ ನೀನು ಒಪ್ಪದಿದ್ದರೆ
ಇದರ ಸ್ಥಿತಿ ಬರ್ಬಾದ್ಉ...||

36)ಚುನಾವಣಾ ಸಮಯ

ಹಿಂದೆ ನಡೆದಿತ್ತಂತೆ ಐದು
ವರ್ಷಕ್ಕೊಂದು ಚುನಾವಣೆ
ಆದರೆ ಈಗ ನಡೆಯುತ್ತಿದೆ
ವರ್ಷಕ್ಕೆ ಐದು ಚುನಾವಣೆ||

37)ಇಂಡಿಯಾ ಶೈನಿಂಗ್

ಅಲ್ಲಿ ನೋಡು ಇಲ್ಲಿ ನೋಡು
ಪ್ರಕಾಶಿಸಿದೆ ಭಾರತ
ಕಣ್ಣು ಬಿಟ್ಟು ಸರಿಯಾಗಿ ನೋಡು
ಬೆಳಕಿಲ್ಲದ ಟ್ಯೂಬ್ ಲೈಟಾ..|

Wednesday, December 12, 2012

ವಿಸ್ಮಯಗಳ ಗೂಡು ಈ ಮಲೆನಾಡು : ಭಾಗ-1

ವಿಸ್ಮಯಗಳ ಗೂಡು ಈ ಮಲೆನಾಡು 

ಭಾಗ-1

ಈ ಮಲೆನಾಡು ವಿಸ್ಮಯಗಳ ಆಗರ. ವೈಶಿಷ್ಟ್ಯತೆಗಳ ಸಾಗರ. ಈ ಪ್ರದೇಶವೇ ವಿಶಿಷ್ಟ, ವಿಚಿತ್ರ.. ಮಲೆನಾಡಿನಲ್ಲಿ ಅದರದೇ ಆದ ಬೆರಗಿನ ಲೋಕವಿದೆ. ಅದಕ್ಕೆ ಅದರದೇ ಆದ ಸೊಬಗಿದೆ. ಪ್ರಾಣಿ ಸಮುದಾಯ, ಪಕ್ಷಿ ಲೋಕ, ಚಿಟ್ಟೆ, ಜಂತು, ಕೀಟಗಳ ಸಾಗರವೇ ಇಲ್ಲಿದೆ. ಇತರ ಕಡೆಗಳಿಗಿಂತ ಇವು ಭಿನ್ನ. ಎಲ್ಲಕ್ಕಿಂತ ಮಿಗಿಲಾಗಿ ಇಲ್ಲಿನ ಮಣ್ಣು ಹಾಗೂ ಮಣ್ಣಿನ ಗುಣಗಳೇ ಭಿನ್ನ. ಇಲ್ಲಿ ನಿಮ್ಮೆದುರು ನಾನು ಮಲೆನಾಡಿನ ಕೆಲವು ವಿಶಿಷ್ಟತೆಗಳ ಪಟ್ಟಿಮಾಡಿ ಇಡುತ್ತಿದ್ದೇನೆ ನೋಡಿ..,

ವಿಶಿಷ್ಟ ಹಣ್ಣುಗಳು;

    ಮಲೆನಾಡಿನ ಬೆಟ್ಟಗುಡ್ಡಗಳು ಸದಾಕಾಲ ಒಂದಲ್ಲ ಒಂದು ಹಣ್ಣುಗಳಿಂದ ತುಂಬಿಯೇ ಇರುತ್ತದೆ. ಬಿರು ಬೇಸಿಗೆಯಿರಲಿ, ಜೊರಗುಡುವ, ಜಿಟ ಜಿಟಿಯ ಮಳೆಗಾಲವಿರಲಿ ಅಥವಾ ಕೊರೆವ ಚಳಿಗಾಲವಿರಲಿ ಮಲೆನಾಡಿನ ಗುಡ್ಡಗಳಲ್ಲಿ ಒಂದಲ್ಲ ಒಂದು ಜಾತಿಯ ಗಿಡಗಳು ಹಣ್ಣನ್ನು ಬಿಟ್ಟೇ ಬಿಡುತ್ತವೆ. ಸುಮ್ಮನೆ ಗುಡ್ಡದ ಗುಂಟ ನೀವು ಅಲೆದಾಟ ನಡೆಸಿದರೆ ಸಾಕು ಅಲ್ಲೆಲ್ಲ ಒಂದೆಷ್ಟು ಬಗೆ, ರುಚಿಯಾದ, ಸವಿಯ ಹಣ್ಣುಗಳು ಬೊಗಸೆ ತುಂಬಾ ಸಿಗಬಲ್ಲವು. ಇಂತಹ ಹಣ್ಣುಗಳಲ್ಲಿ ಮುಖ್ಯವಾದವುಗಳೆಂದರೆ
    ಬಿಕ್ಕೆ ಹಣ್ಣು(ಬುಕ್ಕೆ ಹಣ್ಣು), ನೇರಲೆ ಹಣ್ಣು, ಕುಂಟ ನೇರಲೆ ಹಣ್ಣು, ಗುಂಡು ನೇರಲೆ ಹಣ್ಣು, ಸಳ್ಳೆ ಹಣ್ಣು, ಇವುಗಳು ಮಳೆಗಾಲಕ್ಕೆ ಮೆರಗುಕೊಟ್ಟರೆ, ಬಿಳಿ ಮುಳ್ಳೆ ಹಣ್ಣು, ಕರಿ ಮುಳ್ಳೆ ಹಣ್ಣು (ಪರಗೆ), ಪೆಟ್ಲ ಹಣ್ಣು, ಜಂಬೆ ಹಣ್ಣು ಇವುಗಳು ಚಳಿಗಾಲವನ್ನು ಸುಂದರವಾಗಿಸುತ್ತವೆ. ಗುಡ್ಡೇ ಗೇರು, ಕವಳೀ, ಬಿಳಿ ಮುಳ್ಳಣ್ಣು, ಹೂಡ್ಲು ಹಣ್ಣು, ದಾಸಾಳ, ಹಲಿಗೆ, ಸಂಪಿಗೆ ಇತ್ಯಾದಿ ಹಣ್ಣುಗಳು ಬೇಸಿಗೆಯ ಬೆಡಗನ್ನು ಹೆಚ್ಚಿಸುತ್ತವೆ. ಆಗೆಲ್ಲ ಮಲೆನಾಡು ಅದರದೇ ವಿಸ್ಮತೆಯನ್ನು ಹೊಂದಿ ಸುತ್ತೆಲ್ಲ ಹರಡುತ್ತದೆ.

ಕೆಲವು ವೈಶಿಷ್ಟ್ಯತೆಗಳು

    ಮಲೆನಾಡಿನ ಹೆಸರಿನಲ್ಲೇ ವೈಶಿಷ್ಟ್ಯತೆಗಳು ಅಡಗಿವೆ. ಇಲ್ಲಿನ ಪ್ರತಿಯೊಂದು ನದಿ-ಗಿರಿ-ಕಾನು-ವಿಷಯ-ವಸ್ತು-ಮೃಗ-ಖಗ-ಸಸ್ಯ-ಸೊಬಗು ಇವೆಲ್ಲವುಗಳಿಗೂ ಅದರದೇ ಆದ ವೈಶಿಷ್ಟ್ಯ ಹಾಗೂ ಸೊಬಗನ್ನು ಹೊಂದಿವೆ.
    ಮಳೆಗಾಲದಲ್ಲಿಯೇ ಕಾಣ ಸಿಗುವ ಸೀತಾದಂಡೆ, ದ್ರೌಪದಿ ದಂಡೆ ಎಂಬ ಎರಡು ಬಗೆಯ ಪರಾವಲಂಬಿ ಸಸ್ಯಗಳ ಹೂಗೊಂಚಲು ಮಲೆನಾಡಿನ ಮಳೆಗಾಲಕ್ಕೆ ದೃಷ್ಟಯಕಾವ್ಯವನ್ನು ಕಟ್ಟುತ್ತವೆ. ಯಾವುದೋ ಮರಗಳಿಗೆ ಅಂಟಿಕೊಂಡು ಬೆಳೆಯುವ ಈ ಸಸ್ಯಗಳು ಪರಾವಲಭಿಯಾಗಿದ್ದರೂ ಸುಂದರ ಹೂಗಳನ್ನು ಅರಳಿಸಿಕೊಂಡು ಮಳೆಗಾಲವನ್ನು ಅದರಲ್ಲೂ ಹೆಚ್ಚಾಗಿ ಜಿಟಿ ಜಿಟಿ ಮಳೆಯನ್ನು ಸ್ವಾಗತಿಸುತ್ತ ನಿಂತಿರುತ್ತವೆ. ಈ ಹೂಗಳ ಬಣ್ಣವೂ ಅಷ್ಟೆ ಸುಂದರ. ಬಿಳಿ-ತಿಳಿ ಗುಲಾಬಿ ಬಣ್ಣಗಳ ಈ ಚಿಕ್ಕ ಚಿಕ್ಕ ಹೂ ಪಕಳೆಗಳು ದಂಡೆಗಳಂತಿರುವ ಪೋಣಿಸಿ ಮಾಲೆಯನ್ನಾಗಿ ಮಾಡಿ ಇಟ್ಟಂತಿರುವ ಹೂಗೊಂಚಲಿನ ಬುಡದ ಹೂಗಳು ಅರಳಿದ್ದರೆ ತುದಿಯ ಹೂಗಳು ಇನ್ನೂ ಮೊಗ್ಗಾಗಿ ಅರಳಲು ಕಾಯುತ್ತ ಕುಳಿತಿರುವ ದೃಶ್ಯ ನೋಡುಗರಿಗಂತೂ ಹಬ್ಬವನ್ನೇ ಉಂಟುಮಾಡುತ್ತವೆ.
    ಅಷ್ಟೇ ಅಲ್ಲ. ಮಲೆನಾಡಿನ ಹೆಜ್ಜೆ ಹೆಜ್ಜೆಗಳಲ್ಲಿ ಕೌತುಕತೆ ಕಾಲಿಗೆ ತೊಡರುತ್ತದೆ. ಪದೆ ಪದೆ ತೊಡಕುತ್ತದೆ. ನೋಡುಗ ಸ್ವಲ್ಪ ಭಾವನಾ ಜೀವಿಯಾಗಿದ್ದರೂ ಸಾಕು ಎಂತಹವನೆ ಆದರೂ ಕವಿಯಾಬಲ್ಲ, ಕವಿತೆ ಕಟ್ಟಬಲ್ಲ. ಮತ್ತೆ ಮತ್ತೆ ಭಾವಲೋಕವನ್ನು ಕವಿತೆಗಳ ಮೂಲಕ ತೆರೆದಿಡಬಲ್ಲ. ಇನ್ನು ಹಾಡುವ ಖಯಾಲಿಯಿದ್ದರಂತೂ ಜಗತ್ತಿನ ಪರಿವೆಯೇ ಇಲ್ಲದಂತೆ ಸುಂದರ ಹಾಡುಗಳಿಗೆ ದನಿಯಾಗಬಲ್ಲ. ಅಂತಹ ಸಾಮರ್ಥ್ಯ ಮಲೆನಾಡಿಗಿದೆ.
    ಮಲೆನಾಡು ಅದೆಷ್ಟೇ ವಿಸ್ಮಿತವಾದರೂ ನೋಡುಗರ ದೃಷ್ಟಿಯೂ ಅಗತ್ಯ. ನೋಡುಗನ ಮನಸ್ಥಿತಿಯಲ್ಲಿ ಪ್ರದೇಶಗಳ ವಿಶೇಷತೆಯೂ ಇರುತ್ತದೆ. ಕೆಲವರಿಗೆ ಯಾವುದೇ ಸ್ಥಳಗಳೂ ಬೆರಗು ಮೂಡಿಸಬಲ್ಲದು. ಮತ್ತೆ ಕೆಲವರಿಗೆ ಊಹೂಂ ಅವರನ್ನು ಜೋಗದ ಒಡಲಿಗೆ ಕರೆದೊಯ್ದರೂ ಇಷ್ಟೇನಾ.. ನೀರು ಮೇಲಿಂದ ಕೆಳಕ್ಕೆ ಬೀಳ್ತದೆ.. ನಾವು ಮೂತ್ರ ಮಾಡಿದರೆ ಬೀಳಲ್ಲವಾ.. ಅನ್ನುವ ಮಾತುಗಳನ್ನು ಆಡುತ್ತಾರೆ.
    ಮಲೆನಾಡೂ ಅಷ್ಟೆ ನಮ್ಮೊಳಗಿನ ವಿಸ್ಮಯದ ಕಣ್ಣನು ತೆರೆದು ನೋಡಿದರೆ ಬಹಳ ಸುಂದರ. ಆಗ ಮಾತ್ರ ಸುತ್ತಲ ಸುಂದರ ವೈಭೋಗಗಳು ಮನದಣಿಸುತ್ತವೆ ಅಲ್ಲವೇ..

Tuesday, December 11, 2012

ಎಲ್ಲ ಮರೆತಿರುವಾಗ (ಕಥೆ ಭಾಗ -7)

ಎಲ್ಲ ಮರೆತಿರುವಾಗ


ಭಾಗ -7

(ಇಲ್ಲಿಯವರೆಗೆ : ಮೆಂಟಲ್ ಆಗಿದ್ದ ಜೀವನ್ ರಚನಾ ಕೈಗೆ ಸಿಕ್ಕಿ ಸರಿಯಾದ.. ಅಂದುಕೊಂಡಂತೆ ಹಾಡುಗಾರನಾದ.. ನೀಯಾಕೆ ಹೀಗಾಗಿದ್ದೆ ಗೆಳೆಯಾ ಎಂದು ಕೇಳಿದ ರಚನಾಗೆ ತನ್ನ ಕಥೆಯನ್ನು ಹೇಳಲು ಪ್ರಾರಂಭ ಮಾಡಿದ್ದ ಆತ..ಮುಂದೆ.. ಓದಿ..)
-----------------
ನಮ್ಮೂರು ಮಲೆನಾಡಿನ ಪುಟ್ಟ ಹಳ್ಳಿ. ನಿಂಗೆ ಗೊತ್ತಲ್ಲ ರಚನಾ ನಿಮ್ಮೂರಿನ ತರಹವೇ. ಹಸಿರು ಗಿರಿ, ಗುಡ್ಡ, ಬೆಟ್ಟ, ಅಡಿಕೆ ತೋಟ, ಕರಡದ ಬ್ಯಾಣ.. ಇವೆಲ್ಲ ನಮ್ಮೂರಿನ ವಿಶೇಷ ಗುಣಲಕ್ಷಣಗಳು. ಅಪ್ಪ-ಅಮ್ಮ ಟಿಪಿಕಲ್ ಶಿರಸಿ ಭಾಗದ ಹವಿಗರು. ನಮ್ಮೂರಿನಲ್ಲಿ 8-10 ಮನೆಗಳಿವೆ. ನಮ್ಮೂರಿನಿಂದ ಮುಖ್ಯ ಪಟ್ಟಣ ಶಿರಸಿಗೆ ಬರಬೇಕೆಂದರೆ ಅನಾಮತ್ತು 6-8 ಕಿ.ಮಿ ನಡೆದು, ಬಸವಳಿದು ಬರುವ ಬಸ್ಸಿಗೆ ಕಾದು ಕಾದು ಸುಸ್ತಾಗಿ ಬರಬೇಕು. ಅಂತಹ ಹಳ್ಳಿ.
ನಮ್ಮೂರಿನ ಸುತ್ತ ಮುತ್ತೆಲ್ಲ ಕಗ್ಗಾಡು. ಕಗ್ಗಾಡೆಂದರೆ ಅಲ್ಲಿ ಕಡವೆ, ಕಾಡೆಮ್ಮೆ, ಕಪ್ಪು ಹುಲಿ, ಚಿರತೆ, ಹಂದಿ ಇವೆಲ್ಲ ಕಾಮನ್ನುಗಳು. ನಾನು ಪ್ರೈಮರಿ ಓದಿದ್ದೆಲ್ಲ ನಮ್ಮೂರು ಬಳಿಯ ಹಿ.ಪ್ರಾ. ಶಾಲೆಯಲ್ಲಿ. ಆಮೇಲೆ ನೆಂಟರ ಮನೆಯಲ್ಲಿ ಉಳಿದು ಹೈಸ್ಕೂಲು, ಪಿಯುಸಿಯನ್ನೂ ಮುಗಿಸಿದೆ. ಸರಿ, ಮುಂದೆ ಓದಬೇಕೋ ಬೇಡವೋ ಎಂಬ ಗೊಡವೆಯಲ್ಲಿದ್ದಾಗ ಹಲವರು ಡಿಗ್ರಿ ಮಾಡು ಅಂದರು. ಮನೆಯಲ್ಲಿ ಹರಪೆ ಬಿದ್ದು ಡಿಗ್ರಿಗೆ ಜಾಯಿನಾದೆ. ಅಲ್ಲಿಂದ ಬದಲಾಯಿತು ನನ್ನ ಬದುಕು. 
ನಾನು ಡಿಗ್ರಿಗೆ ಬರುವ ವೇಳೆಗೆ ಜಗತ್ತೆಂದರೆ ಹಾಗೆ, ಹೀಗೆ ಅಂತೆಲ್ಲ ಕನಸು ಕಂಡಿದ್ದೆ. ಡಿಗ್ರಿಯ ನಂತರವೇ ಜಗತ್ತಿನ ಬವಣೆ ಅರ್ಥವಾಗಿದ್ದು ನನಗೆ. ನಾನಂದುಕೊಂಡಂತಿಲ್ಲ ಜಗತ್ತು. ಅದು ಸಮ್ ಥಿಂಗ್ .. ಬೇರೆಯ ಥರಾ ಅಂದುಕೊಂಡೆ.. ನಿಧಾನವಾಗಿ ಬದಲಾಯಿತು ಬದುಕು.
ಇಷ್ಟರ ಜೊತೆಗೆ ಇನ್ನೊಂದೆರಡು ವಿಷಯ ಹೇಳಲೇ ಬೇಕು ನಿನಗೆ. ನಮ್ಮ ಮನೆಯ ಕುರಿತು ಒಂದು ವಿಷಯ ಆದರೆ ನಮ್ಮೂರಿನ ಕುರಿತು ಇನ್ನೊಂದು.  ನಮ್ಮ ಮನೆ.. ಎಲ್ಲ ಹವ್ಯಕರ ಮನೆಗಳಂತೆಯೇ ಮಧ್ಯಮವರ್ಗದ ಜನ. ಆರಕ್ಕೆ ಏರುವ ಕನಸು, ಮೂರಕ್ಕಿಳಿಯದಂತೆ ಜೀವನ ನಡೆಸುವ ಸರ್ಕಸ್ಸು.. ಮನೆಯ ಸದಸ್ಯರಿಗೆ ತಂದು ಹಾಕಲು ಒದ್ದಾಡುವ ಅಪ್ಪ. ಇದ್ದಿದ್ದರಲ್ಲೇ ಮೃಷ್ಟಾನ್ನ ಭೋಜನ ತಯಾರಿಸುವ ಅಮ್ಮ. ಹೈಸ್ಕೂಲು ಓದಲು 6-8 ಕಿ.ಮಿ ನಡೆಯುವ ತಂಗಿ. ಇದು ನಮ್ಮ ಆಗಿನ ಬದುಕು ಅಂದರೆ ನೀನು ನಂಬ್ತೀಯಾ ರಚನಾ?
ನಾನಂತೂ ಬಿಡು ಹುಡುಗ. ನನ್ನ ತಂಗಿಯ ಪಾಡು ಬಹಳ ಕೆಟ್ಟದಾಗಿತ್ತು. ಜೀವನ ಆ ಸಂದರ್ಭದಲ್ಲಿ ಅದೆಷ್ಟು ಕಷ್ಟವನ್ನು ನೀಡಿತೋ. ಪ್ರೈಮರಿ ಸ್ಕೂಲು ಓದಿದ ನಂತರ ಹೈಸ್ಕೂಲು ಓದಬೇಕಲ್ಲ. ಹೇಗೆ ಓದಿಸಲಿ ಅಂತ ತಿಳಿಯದೆ ಅಸಹಾಯಕನಾಗಿ ಕೈಚೆಲ್ಲಿದ್ದ ಅಪ್ಪ.  ಇಲ್ಲ ಓದಿಸೋಕೆ ಸಾಧ್ಯವೇ ಇಲ್ಲ ಅಂತ ಖಂಡತುಂಡವಾಗಿ ಹೇಳಿಯೂಬಿಟ್ಟಿದ್ದ. ಪಾಪ ತಂಗಿ. ಓದಬೇಕು ಅಂತ ಅಮ್ಮನ ಬಳಿ ಕಾಡಿ ಬೇಡಿದಳು. ಅಮ್ಮ ಅದ್ಯಾವ ಸಾಮಾನು ಡಬ್ಬದಲ್ಲಿ ಯಾವತ್ತು ಹುದುಗಿಸಿ ಇಟ್ಟಿದ್ದಳೋ, ಾ ಹಣವನ್ನು ಕೊಟ್ಟು ಹೈಸ್ಕೂಲಿಗೆ ಸೇರಿಸಿದ್ದಳು.

ಹೈಸ್ಕೂಲಿಗೆ ಹೋದರೆ ಮುಗಿಯಿತಾ? ಯುನಿಫಾರ್ಮ್ ಬೇಡವಾ, ಪಟ್ಟಿ, ಪುಸ್ತಕಗಳು ಬೇಡವಾ..? ಶುರುವಾಯಿತಲ್ಲ ಸಮಸ್ಯೆಗಳ ಸರಮಾಲೆ.. ಆಕೆ ನಮ್ಮೂರಿನಲ್ಲೇ ಇದ್ದ ಅವಳಿಗಿಂತ ಒಂದೆರಡು ವರ್ಷದ ದೊಡ್ಡ ವಾರಿಗೆಯಲ್ಲಿ ಅಕ್ಕನಾಗಬೇಕಾದ ಹುಡುಗಿಯಿಂದ ಹಳೆಯ ಪುಸ್ತಕಗಳನ್ನು ಪಡೆದಿದ್ದೂ ಆಗಿದೆ. ಜೊತೆಗೆ ಆಕೆಯೇ ಬಳಸಿ ಬಿಟ್ಟ ಯುನಿಫಾರ್ಮನ್ನೂ ಕೂಡ. ವಿಷಿತ್ರವೆಂದರೆ ಆ ಯುನಿಫಾರ್ಮ್ ಕೊಡುವಾಗಲೂ ಸಾಕಷ್ಟು ಬಯ್ದು ಕೊಟ್ಟಿದ್ದಳಂತೆ. 
ಯುನಿಫಾರ್ಮು ಡ್ರೆಸ್ಸು, ಹಳೆಯದು ಹೇಗಿತ್ತು ಅಂತೀಯಾ.. ಬಿಳಿಯ ಅಂಗಿ, ನೀಲಿ ಸ್ಕರ್ಟು. ಆ ಸ್ಕರ್ಟು ಕೂಡ ಸೊಂಟದ ಬಳಿ ಹರಿದುಹೋಗಿತ್ತು. ಹಾಕಿಕೊಂಡರೆ ಹಾಗೆಯೇ ಬಿದ್ದು ಬಿಡುತ್ತದೆಯೇನೋ ಎನ್ನಿಸುತ್ತಿತ್ತು. ಅದಕ್ಕೆ ಪಿಟ್ಟಾಗಿ ಪಿನ್ನನ್ನು ಸಿಕ್ಕಿಸಿಕೊಂಡು ಹೋಗುತ್ತಿದ್ದಳು ನನ್ನ ತಂಗಿ.
ಬಿಡು ಬವಣೆಯ ಕಾಲ ಅದು. ಆದರೂ ಸ್ಪೋರ್ಟ್ಸ್ ಅಂದರೆ ಆಗೆ ಎಂದೂ ಮುಂದು. ಓಡೋಕೆ ಬರ್ತಿರಲಿಲ್ಲ. ಆಡೋಕೆ ಬರ್ತಿರಲಿಲ್ಲ. ಮನೆಯಲ್ಲಿ ಪ್ರತಿದಿನ ಬೆಳಗಿನ ತಿಂಡಿ ಲೇಟಾಗುತ್ತಿತ್ತು. ಹೈಸ್ಕೂಲಿನ ಟೈಮಿಗೆ ಹೋಗಿ ತಲುಪಬೇಕಲ್ಲ. ಗಬಗಬನೆ ತಿಂಡಿ ತಿಂದು ವೇಗವಾಗಿ ನಡೆಯುತ್ತಿದ್ದಳು ನನ್ನ ತಂಗಿ. ಆಕೆ ನಡೆಯುವ ವೇಗ ಹೇಗಿತ್ತು ಅಂದ್ರೆ ಸಾಮಾನ್ಯರು ಅವಳ ಸರಿಸಮಕ್ಕೆ ನಡೆಯಬೇಕೆಂದರೆ ತುಸು ಓಡಲೇಬೇಕಿತ್ತು. ಅದನ್ನೇ ಅವಳ ಶಿಕ್ಷಕರೊಬ್ಬರು ಗುರುತಿಸಿ, ಪ್ರೋತ್ಸಾಹವನ್ನೂ ನಿಡಿದರು. ಅದಕ್ಕೆ ತಕ್ಕಂತೆ ಆಕೆ ಸ್ಥಳೀಯ,ಹೋಬಳಿ, ಜಿಲ್ಲಾಮಟ್ಟ, ವಲಯಮಟ್ಟಗಳಲ್ಲೂ ಗೆದ್ದು ರಾಜ್ಯಮಟ್ಟದವರೆಗೆ ಹೋಗಿಬಂದಿದ್ದಳು ಎಂಬುದನ್ನು ನಂಬುತ್ತೀಯಾ? ಆದರೂ ಚನ್ನಾಗಿ ಓದಿಯೂ ಎಸ್ಸೆಸ್ಸೆಲ್ಸಿಯಲ್ಲಿ ಒಂದು ಸಬ್ಜೆಕ್ಟಿನಲ್ಲಿ ಫೇಲಾದಳು.
ಬಿಡು ಛಲದಂಕಮಲ್ಲಿ ಆಕೆ. ಮತ್ತೆ ಪಾಸಾಗಿ, ಎಕ್ಸಟರ್ನಲ್ ಆಗಿ ಪಿಯು ಪಾಸು ಮಾಡಿ, ನಂತರ ಡಿಗ್ರಿಯನ್ನೂ ಮುಗಿಸಿ ಬಯಸಿದವನನ್ನೇ ಮದುವೆಯಾಗಿ ಈಗ ಆರಾಮಾಗಿದ್ದಾಳೆ. ಯಾಕೆ ಈ ವಿಷಯ ಹೇಳಿದೆ ಅಂದರೆ ನನ್ನ ಮನೆಯ ಹಾಗೂ ನನ್ನ ತಂಗಿಯ ವಿಷಯಗಳನ್ನು ಹೇಳಿದ ಹೊರತು ನನ್ನ ಬಗ್ಗೆ ಹೇಳಿದರೆ ಸರಿಯಾಗಿ ಅರ್ಥವಾಗೋಲ್ಲ.
ಇನ್ನು ನನ್ನ ವಿಷಯಕ್ಕೆ ಬರ್ತೀನಿ. ನಾನು ಕಾಲೇಜು ಸೇರಿದ ಸಮಯದಲ್ಲಿ ನಮ್ಮೂರಿನ ಪರಿಸ್ಥಿತಿ ಹೇಗಿತ್ತೆಂದರೆ ನಮ್ಮೂರಿನಿಂದ ನಾನೊಬ್ಬನೆ ಪ್ರತಿದಿನ ಶಿರಸಿಗೆ ಹೋಗಿ ಬರುತ್ತಿದ್ದೆ. ಆದ್ದರಿಂದ ಇಡೀಯ ನಮ್ಮೂರಿಗರು ತುರ್ತಾಗಿ ಏನಾದರೂ ತರಬೇಕಿದ್ದಲ್ಲಿ ನನ್ನನ್ನು ಸಂಪರ್ಕ ಮಾಡುತ್ತಿದ್ದರು. ಬೆಳಿಗ್ಗೆ ಎಷ್ಟೇ ಬೇಗನೆ ಎದ್ದು ತಯಾರಾದರೂ 6-8 ಕಿಮಿ ನಡೆದು ಕಾಲೇಜು ತಲುಪುವ ವೇಳೆಗೆ ಗಂಟೆ 11 ಆಗುತ್ತಿತ್ತು. ಗೆಳೆಯರೆಲ್ಲ ರೇಗಿಸುತ್ತಿದ್ದರು. ನಿನ್ನ ಮನೆಯಲ್ಲಿ ಸೂರ್ಯ 11ಕ್ಕೆ ಬರ್ತಾನಾ ಅಂತ.
ವಿಚಿತ್ರ ನೋಡಿ ಸುತ್ತ ದಶ ದಿಕ್ಕುಗಳೂ ಕಾಡು ಹಾಗೂ ಗುಡ್ಡಗಳಿಂದ ಆವೃತವಾಗಿದ್ದ ನಮ್ಮೂರಿಗೆ ಸೂರ್ಯನ ಮೊದಲ ಕಿರಣಗಳು ಬೀಳುತ್ತಿದ್ದುದು ಗಂಟೆ 11ಕ್ಕೆ. ಅಲ್ಲಿಯವರೆಗೂ ನಮ್ಮೂರನ್ನು ಇಬ್ಬನಿ ತಬ್ಬಿ ಆಳುತ್ತದೆ. ಆಗಲೂ.. ಈಗಲೂ.
ಸರಿ ನನ್ನ ಕಾಲೇಜು ಬದುಕಿನ ಕುರಿತು ಸ್ಪಲ್ಪವಾದರೂ ಹೇಳಬೇಕು. ಸ್ಪಲ್ಪವೇನು ಜಾಸ್ತಿಯೇ ಹೇಳಬೇಕು. ಯಾಕಂದರೆ ನನ್ನ ಬದುಕಿನಲ್ಲಿ ಔನ್ನತ್ಯ ಹಾಗೂ ಪಾತಾಳ ಎರಡನ್ನೂ ಕಾಣಿಸಿದ್ದು ಇದೇ ಕಾಲೇಜು ಬದುಕು ಎಂದರೆ ನೀನು ನಂಬಲೇ ಬೇಕು ರಚನಾ.
11 ಗಂಟೆಗೆ ಕಾಲೇಜಿಗೆ ಬರುತ್ತಿದ್ದೆನಾದ್ದರಿಂದ ಮೊದಲ ಎರಡು ಕ್ಲಾಸುಗಳು ಬಂಕಾಗಿರುತ್ತಿದ್ದವು. ಮತ್ತೆ ಮದ್ಯಾಹ್ನ 3ಅಥವಾ4ಕ್ಕೆ ಹೊರಡಲೇ ಬೇಕಿತ್ತು. ಇಲ್ಲವಾದಲ್ಲಿ ನಾನು ಕತ್ತಲೆಯಲ್ಲಿ ಕಾಡುಪಾಲಾಗುತ್ತಿದ್ದೆ. ಹೀಗಾಗಿ ಸಂಜೆಯೂ ಒಂದೆರಡು ಕ್ಲಾಸು ಬಂಕು. ನನ್ನ ಹಣೆಬರಹಕ್ಕೆ ನನಗೆ ದೋಸ್ತರ ದಂಡೂ ಬಹಳ ಇತ್ತು ನೋಡು.  ಆ ಕಾರಣಕ್ಕಾಗಿಯೇ ನಾನು ಅವರ ನಡುವೆ ಗೇಲಿಗೂ ತುತ್ತಾಗಿದ್ದೆ.
ಮೊದಲಿನಿಂದಲೂ ನಾನೊಂಥರಾ ಮೂಡಿ ಹುಡುಗ. ಎಲ್ಲೂ ತೆರೆದುಕೊಳ್ಳದ, ನನ್ನಷ್ಟಕ್ಕೆ ನಾನಿರುವ, ನನ್ನಲ್ಲೆ ನಾನು ಬಚ್ಚಿಟ್ಟುಕೊಳ್ಳುವ ಜಾಯಮಾನದವ. ಆ ಕಾರಣದಿಂದಲೇ ನನಗೆ ಗೊತ್ತಿಲ್ಲದ ನನ್ನೊಳಗಿನ ಅನೇಕ ವೈಶಿಷ್ಟಯಗಳು ಸುಪ್ತವಾಗಿದ್ದವು. ಈಗ ನನ್ನ ಕೈ ಹಿಡಿದಿರುವ ಸಂಗೀತವೂ ಅದರಲ್ಲಿ ಒಂದು.
ನಾನು ಹಾಡಬಲ್ಲೆ, ನಟನೆ ಮಾಡಬಲ್ಲೆ, ಅಪರೂಪಕ್ಕೆ ಬರೆಯಬಲ್ಲೆ ಎಂಬ ಯಾವ ಸಂಗತಿಗಳೂ ನನ್ನಿಂದ ಹೊರಬಂದಿರಲಿಲ್ಲ. ಆದರೆ ಕಾಲೇಜು ಲೈಫು ಅದಕ್ಕೊಂದು ವೇದಿಕೆಯಾಯಿತು.
ಈ ಸಂದರ್ಭದಲ್ಲೆ ನನ್ನ ಲೈಫಿನಲ್ಲಿ ಟರ್ನಿಂಗ್ ಪಾಯಿಂಟೂ ಬಂತು...

(ಮುಂದಿನದು.. ಇನ್ನೊಮ್ಮೆ...)