Tuesday, May 5, 2015

ಅಘನಾಶಿನಿ ಕಣಿವೆಯಲ್ಲಿ-17

(ಹುಲಿ ಶಿಖಾರಿಯ ಸಾಂದರ್ಭಿಕ ಚಿತ್ರ)
        `ಆ ಕಾಲದ ಬಗ್ಗೆ ಹೇಳೋದು ಅಂದ್ರೆ ಎಷ್ಟು ಖುಷಿಯ ಸಂಗ್ತಿ ಗೊತ್ತಿದ್ದಾ? ಆವಾಗ ನಾವು ಇಲ್ಲಿಂದ ದಿಲ್ಲಿಯವರೆಗಾದ್ರೂ ಬರಿಗಾಲಲ್ಲಿ ನಡ್ಕೊಂಡೇ ಹೋಗ್ತಿದ್ಯಾ. ಈಗಿನ ಹಾಂಗೆ ಬೈಕು-ಕಾರು ಇತ್ತಿಲ್ಲೆ. ರೈಲು ಇತ್ತು. ಆದರೆ ರೈಲು ಹತ್ತಲೆ ಹೋಗವು ಅಂದ್ರೂ ಅದೆಷ್ಟೋ ಕಿಲೋಮೀಟರ್ ದೂರ ಹೋಗಕಾಗಿತ್ತು. ಬಗಲ ಚೀಲದ ತುಂಬ ಊಟ ಕಟ್ಟಿಕ್ಯಂಡು ನಡೆಯಲೆ ಶುರು ಹಚ್ಚಿಕ್ಯಂಡ್ರೆ ಅದೆಷ್ಟು ಮೈಲಿ ದೂರ ಒಂದೇ ಉಸಿರಿಗೆ ನಡ್ಕೊಂಡು ಹೋಗ್ತಿದ್ಯ ಗೊತ್ತಿದ್ದಾ. ನಾ ಆಗ ಸಣ್ಣಕ್ಕಿದ್ದಿದ್ದೆ. ನಂಗಿನ್ನೂ ಅದು ಅಸ್ಪಷ್ಟ ನೆನಪು. ಈಗ ನಮ್ಮೂರ ಹೊಳೆ ದಂಡೆಯ ಮೇಲೆ ವಾಟೆಮಟ್ಟಿ ಬೆಳೆದುಕೊಂಡಿದ್ದಲ್ಲಾ.. ಅಲ್ಲಿ ಮೊದಲು ನಮ್ಮೂರಿನ ಎತ್ತಿನ ಗಾಡಿ ರಸ್ತೆ ಇತ್ತು. ಶಿರಸಿಯಿಂದ ಹೋಗಿ ಬಂದು ಮಾಡವು ಅಂದ್ರ ಅದೇ ರಸ್ತೆ ಅವಲಂಬನೆ ಮಾಡಕಾಗಿತ್ತು. ನಮ್ಮೂರಿನಿಂದ ಹೊಳೆ ತೀರದಲ್ಲಿ ನಡ್ಕೊಂಡು ಹೋಗಿ, ಮುತ್ಮೂರ್ಡು ತಲುಪಿ, ಅಲ್ಲಿಂದ ಬಾಳಗಾರಿಗೆ ಹೋಗಿ ಆಮೇಲೆ ಭತ್ತಗುತ್ತಿಗೆ ತಲುಪಿ ಅಲ್ಲಿಂದ ಶಿರಸಿಗೆ ಹೋಗಕಾಗಿತ್ತು. ನಮ್ಮೂರಲ್ಲಂತೂ ಈಗಿರೋದಕ್ಕಿಂತ ಹತ್ತು ಪಟ್ಟು ಕಾಡಿತ್ತು. ಮನೆ ಬಾಗಿಲಲ್ಲೇ ಹುಲಿಯ ಬಿಡಾರ ಇತ್ತು ಅಂದ್ರೂ ತಪ್ಪಿಲ್ಲೆ ನೋಡಿ. ಆಗ್ಲೇ ನಾನು ಮೂರು ಹುಲಿ ಕೊಂದಿದ್ದಿ ಗೊತ್ತಿದ್ದಾ..' ಎಂದರು ಗಪ್ಪಜ್ಜ.
          ಎಲ್ಲರೂ ಒಮ್ಮೆಲೆ ಬೆಚ್ಚಿ ಬಿದ್ದು `ವಾಟ್...' ಎಂಬ ಉದ್ಗಾರದೊಂದಿಗೆ ಕುಮುಟಿ ಬಿದ್ದರು.
            ಹುಲಿ ಹೊಡೆಯುವುದು ಸಾಮಾನ್ಯವೇ..? ಇಲಿಯನ್ನು ಕೊಲ್ಲಲು ಹಲವರು ಹೆದರುವ ಇಂದಿನ ದಿನಮಾನದಲ್ಲಿ ಹುಲಿ ಹೊಡೆಯುವುದು ಅಂದರೆ ಸುಲಭವೇನಲ್ಲ ಬಿಡಿ. ಗಪ್ಪಜ್ಜ ಇಂತಹ ಸಾಹಸ ಮಾಡಿದ್ದಾನೆ ಎಂದಿದ್ದನ್ನು ಕೇಳಿ ಎಲ್ಲರಿಗೂ ಒಳಗೊಳಗೆ ಖುಷಿ. ಊರಿನ ತುಂಬೆಲ್ಲ ಗಪ್ಪಜ್ಜನಿಗೆ ಹುಲಿ ಹೊಡೆದ ಗಪ್ಪಜ್ಜ ಎನ್ನುವ ಮಾತು ಚಾಲ್ತಿಯಲ್ಲಿ ಬಂದಿತ್ತು. ವಿನಾಯಕನಿಗೆ ಇದು ಒಮ್ಮೆಲೆ ನೆನಪಿಗೆ ಬಂದಿತು. ಅಲ್ಲದೇ ಅಜ್ಜ ಎದುರು ಸಿಕ್ಕಾಗಲೆಲ್ಲ `ಗಪ್ಪಜ್ಜ .. ಹುಲಿ ಹೊಡೆದಿದ್ನಡಾ ಮಾರಾಯಾ..' ಎಂದು ಹೇಳುವ ಮೂಲಕ ಗಪ್ಪಜ್ಜ ನೆಂದರೆ ಕನ್ನಡ ಚಿತ್ರರಂಗದ ವಿಲನ್ನೇ ಇರಬೇಕು ಎಂದು ಅನೇಕರು ನನ್ನಲ್ಲಿ ಭೀತಿಯನ್ನು ಹುಟ್ಟುಹಾಕಿದ್ದರು. ವಿನಾಯಕನಲ್ಲಿ ಈ ಮಾತು ಬಹಳ ಕುತೂಹಲಕ್ಕೆ ಕಾರಣವಾಗಿತ್ತು. ತಾನು ಚಿಕ್ಕವನಾಗಿದ್ದಾಗ ಸದಾ ಕಿಲಾಡಿ ಮಾಡುವ ನಮ್ಮ ವಿರುದ್ಧ ಗಪ್ಪಜ್ಜ ಬೈಗುಳಗಳ ಸುರಿಮಳೆಯನ್ನೇ ಸುರಿಸುತ್ತಿದ್ದ. ಆಗಾಗ ತನ್ನ ಊರುಗೋಲಿನಿಂದ ಬಾಸುಂಡೆ ಬರುವಂತೆ ಬಡಿದಿದ್ದೂ ಇದೆ. ಇಂತಹ `ಗಪ್ಪಜ್ಜ ಹುಲಿ ಹೊಡೆದಿದ್ನಡಾ..' ಎಂದು ದಂಟಕಲ್ಲಿನ ಹಿರಿಯರ ಆದಿಯಾಗಿ ಹೇಳುತ್ತಿದ್ದ ಮಾತು ಚಿಕ್ಕಂದಿನಲ್ಲಿ ಭಯವನ್ನು ಹುಟ್ಟಿಸಿದರೂ ದೊಡ್ಡವನಾದ ಮೇಲೆ ಕುತೂಹಲಕ್ಕೆ ಕಾರಣವಾಗಿತ್ತು.
                ವಿನಾಯಕನಿಗೆ ದೊಡ್ಡವನಾದಂತೆಲ್ಲ ಗಪ್ಪಜ್ಜ ನ ಮೇಲಿದ್ದ ಭಯ ದೂರವಾಗಿತ್ತು. ಅಷ್ಟರಲ್ಲಿ ವಯಸ್ಸಾಗಿದ್ದ ಗಪ್ಪಜ್ಜ ತನ್ನ ಸಿಟ್ಟು ಸೆಡವನ್ನು ದೂರ ಮಾಡಿಕೊಂಡು ಪರಿಸ್ಥಿತಿಗೆ ತಕ್ಕಂತೆ ಅಸಹಾಯಕತೆಯನ್ನು, ಸೌಮ್ಯ ಸ್ವಭಾವವನ್ನೂ ಹೊಂದಿದ್ದ. ವಿನಾಯಕ ಕಾಲೇಜಿಗೆ ಹೋಗಿ ಬರುತ್ತಿದ್ದ ಸಂದರ್ಭದಲ್ಲೆಲ್ಲ ಆಗಾಗ ಮಾತಿಗೆ ಸಿಗುತ್ತಿದ್ದ ಗಣಪಜ್ಜ `ಹ್ವಾ..ಶಿರಸಿಂದ ಬರಕಿದ್ರೆ ಸಂಯುಕ್ತ ಕರ್ನಾಟಕ ತಗಂಡು ಬಾರಾ..ಓದಕಾಗಿತ್ತು..' ಎಂದು ಹೇಳುವ ಮೂಲಕ ಮಾತಿಗೆ ಪೀಠಿಕೆ ಹಾಕುತ್ತಿದ್ದ. ವಿನಾಯಕನೂ ಮೊದ ಮೊದಲು ಭಯದಿಂದ ಮಾತನಾಡುತ್ತಿದ್ದ. ಕೊನೆ ಕೊನೆಗೆ ಮಾತು ಆಪ್ತವಾಗುವ ಹಂತಕ್ಕೆ ಬಂದಿತ್ತು. ಸಲಿಗೆಯೂ, ಕುಶಾಲಿ ಮಾಡುವ ಹಂತವೂ ತಲುಪಿತ್ತು.
                ವಿನಾಯಕ ನೆನಪು ಮಾಡಿಕೊಳ್ಳುತ್ತಿದ್ದಂತೆಯೇ ವಿಜೇತಾ ಹಾಗೂ ವಿಕ್ರಮರು ಗಪ್ಪಜ್ಜನ ಬಳಿ ಹುಲಿ ಹೊಡೆದ ವೃತ್ತಾಂತವನ್ನು ಹೇಳುವಂತೆ ಪೀಡಿಸಲು ಆರಂಭಿಸಿದರು. ತನ್ನ ಯವ್ವನದಲ್ಲಿ ಹುಲಿಯಂತೆಯೇ ಅಬ್ಬರದಿಂದ ಮೆರೆದಿದ್ದ ಗಪ್ಪಜ್ಜ ನ ಬಳಿ ಆತನ ಯವ್ವನದ ದಿನಗಳ ಬಗ್ಗೆ ಹೇಳು ಎಂದಾಗ ಆತ ಬಿಡುತ್ತಾನೆಯೇ..? ವಯಸ್ಸಾದ ಮೇಲೆ ಆತನಿಗೂ ಹೊತ್ತು ಹೋಗಬೇಕು. ಮನೆಯಲ್ಲಿ ಮಾತುಕೆಳುತ್ತಿದ್ದವರೆಲ್ಲ ಈಗ ದೊಡ್ಡವರಾಗಿದ್ದಾರೆ. ಆತನಿಗೆ ಮಾತನಾಡಲು ಒಬ್ಬರು ಬೇಕಿತ್ತು. ಅದೇ ಸಮಯಕ್ಕೆ ಸಿಕ್ಕು ಕೇಳಿದ್ದರು. `ತಡಿರಾ ತಮಾ ಚಾ ಕುಡ್ಕತ್ತ ಮಾತಾಡನಾ..' ಎಂದು ಹೇಳಿ ಮೊಟ್ಟ ಮೊದಲನೇ ಸಾರಿ ತಾನು ಹುಲಿ ಹೊಡೆದ ಕಥೆಯನ್ನು ಹೇಳಲು ಶುರು ಮಾಡಿದ್ದ. ತೊಂಭತ್ತು ವಸಂತಗಳನ್ನು ಮೀರಿದ್ದ ಗಪ್ಪಜ್ಜ ತನ್ನ ಇಪ್ಪತ್ತರ ಹರೆಯದಲ್ಲಿ ಮಾಡಿದ್ದ ಸಾಹಸದ ವಿವರವನ್ನು ಕೇಳಲು ಎಲ್ಲರೂ ಅವರ ಮನೆಯ ಖುರ್ಚಿಯ ತುದಿಯಲ್ಲಿ ಚೂಪಗೆ ಕುಂತಿದ್ದರು..

**
            `ನಂಗಾಗ  ಇಪ್ಪತ್ತೋ ಇಪ್ಪತ್ತೈದೋ.. ಸಮಾ ನೆನಪಿಲ್ಲೆ.. ಆಗ ಆನು ಅಂದ್ರೆ ಸುತ್ತಮುತ್ತಲೆಲ್ಲ ಭಯಂಕರ ಹೆದರ್ತಿದ್ದ. ಉರಾಉರಿ ಕಾಲ.. ಯನ್ನ ಉರಾಉರಿ ನೋಡಿ ಎಷ್ಟ್ ಜನ ಯನ್ನ ಅಪ್ಪಯ್ಯನ ಕೈಲಿ ಬಂದ್ ಪುಕಾರು ಹೇಳಿದ್ವೇನ. ಯನ್ನ ಅಪ್ಪಯ್ಯನೂ ಅಷ್ಟೇ ಅಬ್ಬರದ ಮನುಷ್ಯ ಆಗಿದ್ದ. ಅದಕಾಗೇ ಆ ದಿನಗಳಲ್ಲಿ ಆನು ಬಹಳಷ್ಟು ಹಾರಾಡಿದ್ರೂ ಅಂವ ಯಂಗೆ ಎಂತದ್ದೂ ಮಾಡ್ತಿದ್ನಿಲ್ಲೆ..' ಎಂದ.
`ಹೂಂ.. ಹೂಂ..' ಎಂದರು ಎಲ್ಲರೂ
                     'ಈಗ ಯಂಗೆ ತೊಂಭತ್ತಾತ ಮಾರಾಯಾ.. ಯಂಗೆ ಇಪ್ಪತ್ತು ವರ್ಷದ ಆಜು ಬಾಜಲ್ಲಿ ನಡೆದಿದ್ದು ಅಂದ್ರೆನಿಮಗೆಂತದಾದ್ರೂ ತಲಿಗೆ ಹೋಗ್ಲಕ್ಕ..? ಆಗಿನ ಕಾಲ, ಹೆಂಗಿತ್ತು ಗೊತ್ತಿದ್ದ.. ಈ ಊರಿದ್ದಲಾ ಇದರ ಸುತ್ತಮುತ್ತ ಈಗ ಬೋಳು ಗುಡ್ಡ ಕಾಣ್ತಲಾ.. ಆಗೆಲ್ಲಾ ಬರೀ ಕಾನೇ ಇದ್ದಿತ್ತು.. ಈಗ ಯಮ್ಮನೆ ಕೊಟ್ಗೆ ಇದ್ದಲಾ ಅಲ್ಲೀವರಿಗೆ ಹುಲಿ ಬಂದು ದನ-ಕರ ಎಲ್ಲಾ ಹೊತ್ಕಂಡು ಹೋಗ್ತಿತ್ತು ಹುಲಿ. ಹುಲಿಯ ಅಬ್ಬರಕ್ಕೆ ದನಗಳ ಜೊತೆಗೆ ಜನಗಳೂ ಬೆಚ್ಚಿ ಬಸವಳಿದು ಬಿಟ್ಟಿದಿದ್ದ ಒಂದು ಕಾಲದಲ್ಲಿ.. ಬ್ರಿಟೀಷರ ಕಾಲ ಬೇರೆ ನೋಡು...' ಎಂದರು.
                      ಎಲ್ಲರೂ ಅವರು ಹೇಳಿದಂತೆಲ್ಲ ಕಣ್ಮುಂದೆ ಎಪ್ಪತ್ತು ವರ್ಷಗಳ ಹಿಂದಿನ ಚಿತ್ರಣ ಅಂದರೆ 1930-40ರ ದಶಕದ ಚಿತ್ರಣವನ್ನು ಕಟ್ಟಿಕೊಳ್ಳುತ್ತ ಹೋದರು. ಅವರು ಹುಲಿಯನ್ನು ರೌಧ್ರ ಭಯಂಕರವಾಗಿ ಚಿತ್ರಿಸುತ್ತ ಹೋದರು. ಎಲ್ಲರ ಕಣ್ಣಮುಂದೆ ಹುಲಿಯೆಂದರೆ ರೌದ್ರ ಎನ್ನಿಸಲೇ ಇಲ್ಲ. ಅಂದಿನ ಹಾಗೆ ಹುಲಿ ಕಣ್ಣೆದುರಿಗೆ ಬಂದು ಎಡತಾಕಿ ಹಾಯ್ ಹೇಳಿ ಹೋಗುವುದಿಲ್ಲ ನೋಡಿ. ಹುಲಿಯ ಭಯವೂ ಇಲ್ಲವಲ್ಲ. ಅದಕ್ಕೆ ಹುಲಿಯೆಂದರೆ ಬಹುತೇಕ ದಂತಕಥೆಯಂತೆ, ಚಿಕ್ಕಮಕ್ಕಳ ಪಾಲಿಗೆ ಆಟಿಕೆಯಂತೆ ಅನ್ನಿಸಿತು. ಅದಕ್ಕೆ ತಕ್ಕಂತೆ ಚಿತ್ರಣ ಕೂಡ.
                      `ಯಂಗವ್ವು ನಿಂಗಳ ಹಾಂಗೆ ಇದ್ದ ಕಾಲ ಅದು. ಬ್ರಿಟೀಷ್ ರೂಲಿತ್ತು. ಈಗಿನ ಹಾಂಗೆ ಹುಲಿ ಬೇಟೆ ನಿಷೇಧ ಇತ್ತಿಲ್ಲೆ. ಮತ್ತೊಂದ್ ವಿಷ್ಯ ಅಂದ್ರೆ ಆಗ ಬ್ರಿಟೀಷರೇ ಹುಲಿ ಹೊಡೆಯಲೆ ಅಡ್ಡಿಲ್ಲೆ ಹೇಳಿ ಹೇಳಿದಿದ್ದ. ಹುಲಿ ಹೊಡೆದು ಅದರ ಬಾಲ ತಂದು ಪಟೇಲನ ಬಳಿ ತೋರಿಶಿದವ್ಕೆ ಇನಾಮೂ ಸಿಕ್ತಿತ್ತು. ನಮ್ಮೂರಲ್ಲೂ ಹುಲಿ ಕಾಟ ಇತ್ತಲಾ.. ಹುಲಿ ಹೊಡಿಯದೇ ಸೈ..ಅಂದಕಂಡಿ..ಬಂದೂಕು ಬೇಕು ಹೇಳಿ ಅಪ್ಪಯ್ಯನ ಹತ್ರೆ ಕೇಳದು ಹೆಂಗೆ..? ತಲೆಬಿಶಿ ಶಿಕ್ಕಾಪಟ್ಟೆ ಆಗೋತು. ಅಪ್ಪಯ್ಯನ ಹತ್ರ ಕೇಳಿರೆ ಎಲ್ಲಾದ್ರೂ ಬೈದು ಸುಮ್ಮಂಗಿರಾ.. ನೀ ಹುಲಿ ಉಸಾಬರಿಗೆ ಹೋಗದು ಬ್ಯಾಡಾ.. ಹೇಳಿ ಹೇಳಿದ್ರೆ ಎನ್ನುವ ಹೆದ್ರಿಕೆ ಇತ್ತು.. ಕೊನಿಗೂ ಬಿಟ್ಟಿದ್ನಿಲ್ಲೆ.. ಕೇಳ್ದಿ ಹೇಳಾತು.. ಅಪ್ಪಯ್ಯ ಅಡ್ಡಿಲ್ಲೆ ಅಂದ್ ಬಿಟ್ನಾ..
                   ಈಗಿನ ಹಾಂಗೆ ಬಸ್ಸಿತ್ತಿಲ್ಯಲಾ..ಅದೇ ಖುಷಿಯಲ್ಲಿ ಶಿರಸಿಗೆ ನೆಡ್ಕಂಡು ಹೋಗಿ ಬಂದೂಕು ತಗಂಡ್ ಬಂದಿ.. ತಗಾ.. ಇದೇ ಇಲ್ನೋಡು.. ಇದೇ ಬಂದೂಕು..' ಎಂದು ಗಪ್ಪಜ್ಜ ಬಂದೂಕು ತೋರಿಸಿದಾಗ ಗಪ್ಪಜ್ಜ ಹುಲಿ ಹೇಗೆ ಹೊಡೆದಿರಬಹುದು ಎನ್ನುವ ಕಲ್ಪನೆ ಮನದಲ್ಲಿ ಮೂಡಿ ಎಲ್ಲರಲ್ಲೂ ರೋಮಾಂಚನ..
                   ಹಳೇ ತೇಗದ ಮರದ ದೊಡ್ಡ ಹಿಡಿಕೆ ಹೊಂದಿದ್ದ ಬಂದೂಕು ಅದು. 70 ವರ್ಷ ಹಿಂದಿಂದು ಬೇರೆ. ಈಗತಾನೆ ಎಣ್ಣೆ ಹಾಕಿ ಒರೆಸಿ ಇಟ್ಟಿದ್ದರೋ ಎನ್ನುವಂತೆ ಮಿಂಚುತ್ತಿತ್ತು. ತಗಳ್ರಾ ಎಂದು ಹೇಳಿದವರೇ ಎಲ್ಲರ ಮುಂದೆ ಬಂದೂಕನ್ನು ಹಿಡಿದರು.. ಪ್ರದೀಪ ಎತ್ತಿಕೊಂಡ.. ರಾವಣ ಬಿಲ್ಲನ್ನೆತ್ತಲೂ ಅಷ್ಟು ಕಷ್ಟಪಟ್ಟಿದ್ದನೋ ಇಲ್ಲವೋ.. ಅದರ ಭಾರಕ್ಕೆ ಒಮ್ಮೆ ಆಯ ತಪ್ಪಿದ.. `ತಮಾ.. ನಿಂಗೆ ಎತ್ತಲೆ ಆಗ್ತಿಲ್ಲೆ.. ನೋಡು.. ಆಗ ಯಂಗವ್ವು ಇದನ್ನ ವಂದೇ ಕೈಯಲ್ಲಿ ಹಿಡಕಂಡು ಬೇಟೆ ಮಾಡ್ತಿದ್ಯ.. ಹುಲಿ ಹೊಡೆದಿದ್ದೂ ಇದರಲ್ಲೇಯಾ.. ಅಂದ್ರೆ ನೀ ನಂಬ್ತಿಲ್ಲೆ..' ಎಂದಾಗ ಪ್ರದೀಪ ಕಕ್ಕಾಬಿಕ್ಕಿ.
ಗಪ್ಪಜ್ಜ ಮುಂದುವರಿದ..
                     `ಒಂದು ಚಳಿಗಾಲ ಹುಲಿಗೆ ಗತಿ ಕಾಣ್ಸವು ಹೇಳಿ ಅಂದಕಂಡಿದ್ದಿದ್ದಿ. ಆನು ಬಂದೂಕು ತಂದಿಟ್ಟು ತಿಂಗಳು ಗಟ್ಟಲೆ ಆಗಿತ್ತು.. ಆದರೆ ಎಲ್ಲೋ ಅದಕ್ಕೆ ಸೂಟು ಸಿಕ್ಕಿತ್ತು ಕಾಣ್ತು.. ಹುಲಿಯ ಪತ್ತೇನೆ ಇಲ್ಲೆ.. ಅಪ್ಪಯ್ಯಂತೂ ಗಪ್ಪತಿ ಬಂದೂಕು ತಗಬಂಜಾ ಹೇಳಿ ಹುಲಿಗೆ ಗೊತ್ತಾಗೋಜು ಕಾಣ್ತು.. ಹುಲಿ ಇತ್ಲಾಗೆ ಮಕಾನೆ ಹಾಕಿದ್ದಿಲ್ಲೆ ಹೇಳಿ ಹೇಳಲೆ ಶುರು ಮಾಡಿದ್ದ. ವಾರಕ್ಕೆ ಎರಡು ಸಾರಿಯಾದರೂ ಬಂದು ಕೊಟ್ಗೆ ಮೇಲೆ ದಾಳಿ ಮಾಡ್ತಾ ಇದ್ದಿದ್ ಹುಲಿ ಎತ್ಲಾಗ್ ಹೋತು ಅನ್ನೋ ತಲೆಬಿಸಿ... ಹಿಂಗೆ ಸ್ವಲ್ಪ ದಿನ ಆದ್ಮೇಲೆ ಒಂದಿನ ಮೂರು ಸಂಜೆ ಹೊತ್ತಲ್ಲಿ ನಮ್ಮೂರ್ ಜೀಡೆಹೊಂಡ ಇದ್ದಲಾ ಅಲ್ಲಿ ಹುಲಿ ಗಂವ್ ಅಂತಾ.. ಹೋ ಬಂತು ಹುಲಿ ಅಂದ್ಕಂಡಿ.. ಮೈಯೆಲ್ಲಾ ಚುರು ಚುರುಗುಡಲೆ ಹಿಡತ್ತು.. ಹುಲಿ ಹೊಡೆಯವ್ವು ಹೇಳಿ ಒಂಥರಾ ಖುಷಿ.. ಬಂದೂಕು ಎತ್ತಿ ಲೋಡು ಮಾಡಿಟ್ಗಂಡಿ..
                     `ಸುಮಾರ್ ಹೊತ್ತಾತು..ಜೀಡೆ ಹೊಂಡದಲ್ಲಿ ಕೂಗೋ ಹುಲಿ ಮನೆ ಹತ್ರ ಬತ್ತೇ ಇಲ್ಲೆ.. ಯಂಗಂತೂ ಯದೆಯಲ್ಲಿ ಢವ ಢವ.. ರಾತ್ರಿ ಎಂಟ್ ಗಂಟೆ ಆದ್ರೂ ಹುಲಿ ಬಪ್ಪ ಲಕ್ಷಣನೇ ಇಲ್ಲೆ .. ಈ ಹುಲಿಗೆ ಹುಲಿ ಹಿಡಿಲಿ ಹೇಳಿ ಬೈದು ದಣೀ ಬಂದು ಊಟಕ್ ಕುಂತಿದ್ದಿದ್ದಿ.. ಕ್ವಟ್ಗೇಲಿ ದನ ಕರ ಎಲ್ಲಾ ಹುಯ್ಯಲೆಬ್ಸಿಬಿಟ್ಟ.. ಓಹೋ ಹುಲಿ ಬಂಜು ಅಂದ್ಕಂಡಿ.. ಅದಕ್ ಸರಿಯಾಗಿ ಅಪ್ಪಯ್ಯ.. ತಮಾ ಕೊಟ್ಗಿಗೆ ಹುಲಿ ಬಂಜು ಕಾಣ್ತು.. ನೋಡು.. ಎಂದ.. ಅಲ್ಲೆಲ್ಲೋ ಇಟ್ಟಿದ್ದು ಲಾಟನ್ ಹಿಡ್ಕಂಡು ಕ್ವಟ್ಗಿಗೆ ಹೋದ್ರೆ ಹೌದು.. ಹುಲಿ ಬಂಜು..'
                   ಎಂದು ನಿಟ್ಟುಸಿರಿಟ್ಟರು..
                  ಎಲ್ಲರಿಗೂ ಮುಂದೇನಾಯ್ತು ಅನ್ನುವ ಕುತೂಹಲ.. ಆಮೇಲೆ ಎಂದರು.. ತಡಿರಾ ವಂದಕ್ಕೆ ಹೋಗಿ ಬತ್ತಿ ಎಂದರು ಗಪ್ಪಜ್ಜ .. ಎಲ್ಲರಿಗೂ ಸಿನೆಮಾ ಮಧ್ಯ ಇಂಟರ್ವಲ್ ಬಂದಂಗಾಯ್ತು.. ವಂದಕ್ಕೆ ಹೋದ ಗಪ್ಪಜ್ಜ ವಾಪಾಸು ಬರುವುದರೊಳಗಾಗಿ ಬಂದೂಕನ್ನು ನೋಡಿ ಅದರ ಭಾರದ ಕಾರಣ ಉಸಾಬರಿ ಬ್ಯಾಡ ಎಂದು ಪ್ರದೀಪ ಅದನ್ನು ದೂರಕ್ಕಿಟ್ಟು ಪೆಕರನಂತೆ ನಕ್ಕಿದ್ದ..
                     ಅವರ ಹಳೆಯ ಮನೆಯ ಗೋಡೆಯ ಮೇಲೆ ಹತ್ತು ಹಲವು ತರಹೇವಾರಿ ಕ್ಯಾಲೆಂಡರುಗಳಿದ್ದರೂ ಅಲ್ಲೊಂದು ಕಡೆಗೆ ಪ್ಲಾಸ್ಟಿಕ್ ಹೂವಿನ ಹಾರ ಹಾಕಿದ ಒಂದು ಪೋಟೋ ಹಾಗೂ ಅದರ ಕೆಳಭಾಗದಲ್ಲಿದ್ದ ತಾಮ್ರಪಟ ಕಣ್ಣಿಗೆ ಕಂಡಿತು. ಹತ್ತಿರ ಹೋಗಿ ನೋಡಿದಳು ವಿಜೇತಾ. ಅದು ಗಪ್ಪಜ್ಜ ನ ಅಪ್ಪಯ್ಯ ಗಣೇಶಜ್ಜನ ಪೋಟೋ ಹಾಗೂ ಆತ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಕ್ಕಾಗಿ ಭಾರತ ಸರ್ಕಾರ ನೀಡಿದ ಗೌರವ ಫಲಕವಾಗಿತ್ತು.. ಅದರಲ್ಲಿ ಬರೆದಿದ್ದ ಇಂಗ್ಲೀಷ್ ಹಾಗೂ ಹಿಂದಿ ಅಕ್ಷರಗಳನ್ನು ಹೆಕ್ಕಿ ಹೆಕ್ಕಿ ಓದಿ ಮುಗಿಸುವುದರೊಳಗಾಗಿ ಒಂದು ನಂಬರ್ ಕಾರ್ಯ ಮುಗಿಸಿ ಬಂದ ಗಪ್ಪಜ್ಜ ಅವರ ಮನೆಯ ಕಾಲಮಣೆ ಮೇಲೆ ಕುಳಿತು ಮಾತಿಗೆ ತೊಡಗಿದ್ದರು.

(ಮುಂದುವರಿಯುತ್ತದೆ...)

ಸೆಳೆಯುತ್ತಿದೆ ಕಲ್ಪ-ಶಿಲ್ಪ


             ಶಿರಸಿ ತಾಲೂಕಿನ ಸೋಂದಾ ಸ್ವರ್ಣವಲ್ಲಿ ಮಠದಲ್ಲಿ ನಡೆದ ಕೃಷಿ ಜಯಂತಿ ಹಲವಾರು ವಿಶೇಷತೆಗಳನ್ನು ಅನಾವರಣಗೊಳಿಸಿತು. ರೈತರು, ತೋಟಿಗರು ಪೋಷಿಸಿಕೊಂಡು ಬಂದಿರುವ ಹಲವಾರು ಕಲೆ, ವೈವಿಧ್ಯತೆಗಳನ್ನು ಅನಾವರಣಗೊಳಿಸಿತು. ಶ್ರೀಮಠದಲ್ಲಿ ಅನಾವರಣಗೊಂಡ ಕಲಾ ವಿಶಿಷ್ಟತೆಯಲ್ಲಿ ಕಲ್ಪ ಶಿಲ್ಪವೂ ಒಂದು.
      ಕುಮಟಾ ತಾಲೂಕಿನ ಮೂರೂರಿನ ಸಿದ್ಧರ ಮಠದ ಶಿವಮೂರ್ತಿ ಭಟ್ಟರ ಕೈಯಲ್ಲರಳಿದ ಬೇರು ಬೊಗಟೆ ಕಲಾಕೃತಿಗಳು, ತೆಂಗಿನ ಚಿಪ್ಪಿನ ಕಲಾಕೃತಿಗಳು, ಮರದ ವಿಶಿಷ್ಟ ಕೆತ್ತನೆಗಳು ಶ್ರೀಮಠದ ಆವರಣದಲ್ಲಿ ಪ್ರದರ್ಶನಕ್ಕಿದ್ದವು. ಹಲವಾರು ವರ್ಷಗಳ ಶ್ರಮದಿಂದ ಮೂಡಿದ್ದ ವಿಶಿಷ್ಟ ಆಕೃತಿಗಳು ಪ್ರದರ್ಶನದಲ್ಲಿದ್ದವು. ಕೃಷಿ ಜಯಂತಿಗೆ ಆಗಮಿಸಿದ್ದ ಕೃಷಿಕರ, ರೈತರ ಹಾಗೂ ತೋಟಿಗರ ಮನಸ್ಸನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದವು.      

                    ಚಿಕ್ಕ ಕಿರುಬೆರಳ ಗಾತ್ರದ ಆಕೃತಿಗಳಿಂದ ಹಿಡಿದು ಒಂದಡಿ ಎತ್ತರದ ಬೇರು ಬೊಗಟೆ ಕಲಾಕೃತಿಗಳೂ ಕಲ್ಪ ಶಿಲ್ಪದಲ್ಲಿದ್ದವು. ತೆಂಗಿನ ಕಾಯಿಯ ಚಿಪ್ಪಿನಿಂದ ತಯಾರಿಸಲಾಗಿದ್ದ ಬಗೆ ಬಗೆಯ ಆಕೃತಿಗಳಂತೂ ಎಲ್ಲರನ್ನೂ ಸೆಳೆದವು. ಕಲ್ಲಿನಿಂದಲೇ ಮಾಡಿದ್ದ ಕೊಳಲು ಎಲ್ಲರಲ್ಲಿಯೂ ಬೆರಗು ಮೂಡಿಸಿತು. ಕಲ್ಲಿನಿಂದ ಕೊಳಲನ್ನು ಮಾಡಲು ಸಾಧ್ಯವಿದೆ ಎನ್ನುವುದು ವಿಸ್ಮಯಕ್ಕೆ ಕಾರಣವಾಯಿತು. ಬಿದಿರು, ಶಮೆ ಹಾಗೂ ವಾಟೆ ಬಿದಿರಿನಿಂದ ಕೊಳಲನ್ನು ಮಾಡಲಾಗುತ್ತದೆ. ಆದರೆ ಕಲ್ಲಿನಿಂದ ಕೊಳಲನ್ನು ಮಾಡುವ ಪರಿಕಲ್ಪನೆಯೇ ವಿಶಿಷ್ಟವಾದುದು. ಶಿಲ್ಪ ಕಲ್ಪದ ರೂವಾರಿಯಾದ ಶಿವಮೂರ್ತಿ ಭಟ್ಟರ ತನ್ಮಯತೆ ಕಲ್ಲಿನ ಕೊಳಲಿಗೆ ಕಾರಣವಾಗಿದೆ. ಎರಡು ದಿನಗಳ ಕಾಲ ಶೃದ್ಧೆಯಿಂದ ಕೆಲಸ ಮಾಡಿ ಕಲ್ಲಿನ ಕೊಳಲನ್ನು ತಯಾರಿಸಿದ್ದೇನೆ ಎಂದು ಭಟ್ಟರು ಹೇಳುತ್ತಾರೆ. ಕಲ್ಲಿನ ಕೊಳಲಿನಿಂದ ಧ್ವನಿಯನ್ನು ಹೊರಡಿಸಬಹುದೇ ಎಂದು ಕೃಷಿಜಯಂತಿಗೆ ಆಗಮಿಸಿದ್ದ ಜನಸಾಮಾನ್ಯರು ಪರೀಕ್ಷೆ ಮಾಡಿ, ಕೊಳಲನ್ನು ಊದಿ ನೋಡುತ್ತಿದ್ದುದು ವಿಶೇಷವಾಗಿತ್ತು.  

                           ತನ್ನ ತಂದೆ ಸತ್ಯನಾರಾಯಣ ಭಟ್ಟರು ಬೇರು ಬೊಗಟೆ ಕಲಾಕೃತಿಗಳನ್ನು ಮಾಡುತ್ತಿದ್ದರು. ಅವರೇ ತನಗೆ ಸ್ಪೂರ್ತಿ ಎಂದು ಹೇಳುವ ಶಿವಮೂರ್ತಿ ಭಟ್ಟರು ತೆಂಗಿನಕಾಯಿಯ ಚಿಪ್ಪಿನಿಂದ ಸ್ಪ್ರಿಂಗ್, ಗಣಪತಿ, ವಾಲ್ ಪ್ಲೇಟ್, 50-60ಕ್ಕೂ ಹೆಚ್ಚಿನ ವಿವಿಧ ಕೀಟಗಳು, ಇಲಿ, ಮುಖ, ಆಮೆ, ಪಿಗ್ಮಿ ಮನುಷ್ಯ, ತಾಯಿ-ಮಗು, ಜಿರಾಫೆ, ಸಿಯಾಳದ ಚಿಪ್ಪಿನಿಂದ ಬೇಲೂರು ಶಿಲಾಬಾಲಿಕೆ ಹೀಗೆ ಹಲವು ಬಗೆಯ ಕಲಾಕೃತಿಗಳನ್ನು ತಯಾರು ಮಾಡಿದ್ದಾರೆ. ಕಳೆದ 10-12 ವರ್ಷಗಳಿಂದ ಈ ಕಾರ್ಯವನ್ನು ಕೈಗೊಳ್ಳುತ್ತ ಬಂದಿದ್ದೇನೆ ಎಂದು ಭಟ್ಟರು ತಿಳಿಸುತ್ತಾರೆ.
ಶಿವಮೂರ್ತಿ ಭಟ್ಟರು ಓದಿರುವುದು ಕೇವಲ ಎಸ್ಎಸ್ಎಲ್ಸಿ ಆದರೆ ಅವರು ತಮ್ಮ ಕೈಚಳಕದ ಮೂಲಕ ಮಹತ್ತರ ಸಾಧನೆಯ ಹಾದಿಯಲ್ಲಿದ್ದಾರೆ. ಇವರು ತಯಾರಿಸಿರುವ ಅಡಿಕೆ ದಬ್ಬೆಯ ಚಾಕುವಂತೂ ಎಲ್ಲರಲ್ಲಿಯೂ ಬೆರಗನ್ನು ಮೂಡಿಸುತ್ತಿದೆ. ಪ್ರಾಚೀನ ಕಾಲದಲ್ಲಿ ರಾಜ ಮಹಾರಾಜರು ಬಳಕೆ ಮಾಡುತ್ತಿದ್ದ ಕತ್ತಿಯಂತೆಯೇ ಇರುವ ಈ ಚಾಕುವಿನ ಮೇಲೆ ಕೆತ್ತಲಾಗಿರುವ ವಿಶಿಷ್ಟ ಕೆತ್ತನೆಗಳು ಎಲ್ಲರನ್ನೂ ಸೆಳೆಯುತ್ತಿದೆ. ಕತ್ತಿಯ ಹಿಡಿಕೆಯ ಮೇಲಿನ ಚಿತ್ತಾರಗಳು ಮತ್ತಷ್ಟು ಆಕರ್ಷಕವಾಗಿದೆ.

               ಮರದ ತುಂಡುಗಳಿಂದ ವ್ಯಾನಿಟಿ ಬ್ಯಾಗ್ ಒಂದನ್ನು ತಯಾರಿಸಿದ್ದು ಮನಮೋಹಕವಾಗಿದೆ. ಹೂಜಿಗಳು, ಹೂದಾನಿಗಳು, ಚಿಕ್ಕ ಪೆಟ್ಟಿಗೆ ಇತ್ಯಾದಿಗಳ ಅಷ್ಟೇ ಸುಂದರವಾಗಿದೆ. ವಾಣಿಜ್ಯ ಉದ್ದೇಶಕ್ಕಾಗಿ ಈ ಕಲಾಕೃತಿಗಳನ್ನು ಮಾಡುತ್ತಿಲ್ಲ. ಬದಲಾಗಿ ಹವ್ಯಾಸವಾಗಿ ಇವನ್ನು ತಯಾರು ಮಾಡುತ್ತಿದ್ದೇನೆ. ಅನೇಕ ಕಡೆಗಳಲ್ಲಿ ಪ್ರದರ್ಶನಕ್ಕಾಗಿ ಒಯ್ದಿದ್ದೇನೆ. ಎಲ್ಲ ಕಡೆಗಳಲ್ಲಿ ಮೆಚ್ಚುಗೆಯನ್ನು ಪಡೆದುಕೊಳ್ಳುತ್ತಿದೆ. ಒಂದೆರಡು ಸಾರಿ ಮಾರಾಟಕ್ಕಾಗಿ ಬೇಡಿಕೆಗಳು ಬಂದಿದ್ದವು. ಆದರೆ ಮಾರಾಟ ಮಾಡಿಲ್ಲ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕಲಾಕೃತಿಗಳು, ಕಾಷ್ಟಶಿಲ್ಪ ರಚನೆಗಳನ್ನು ಮಾಡುವ ಉದ್ದೇಶವಿದೆ ಎಂದು ಶಿವಮೂರ್ತಿ ಭಟ್ಟರು ಹೇಳುತ್ತಾರೆ.
ಶಿವಮೂರ್ತಿ ಭಟ್ಟರು ತಯಾರಿಸಿದ ಇಂತಹ ಕಲಾಕೃತಿಗಳನ್ನು ವೀಕ್ಷಣೆ ಮಾಡಲು ಮುರೂರಿಗೆ ತೆರಳಬಹುದಾಗಿದೆ. ಇಲ್ಲವಾದಲ್ಲಿ ಅವರನ್ನು 08386-268205 ಅಥವಾ ಮೊಬೈಲ್ ಸಂಖ್ಯೆ 9902451009 ಈ ದೂರವಾಣಿ ಸಂಖ್ಯೆ ಮೂಲಕ ಸಂಪರ್ಕಿಸಬಹುದಾಗಿದೆ.


Thursday, April 30, 2015

ಅಬ್ಬರದ ಗಾಳಿ, ಮಳೆಗೆ ನಲುಗಿದ ಉಂಚಳ್ಳಿ

(ಚಲ್ಲಾಪಿಲ್ಲಿಯಾಗಿರುವ ಹಂಚು)
ಎತ್ತ ನೋಡಿದರತ್ತ ಮುರಿದು ಬಿದ್ದು ಭೂಮಿಪಾಲಾಗಿರುವ ಬಾಳೆಯ ಗಿಡಗಳು, ಅಲ್ಲಲ್ಲಿ ನೆಲಕಚ್ಚಿರುವ ತೆಂಗಿನ ಮರಗಳು, ಮುರಿತು ಬಿದ್ದ ಅಡಿಕೆಯ ಮರಗಳು, ಕಿತ್ತುಬಿದ್ದಿರುವ ಮಾವು, ಹಲಸಿನ ಮರಗಳು. ಅಬ್ಬರದ ಗಾಳಿಯ ಪರಿಣಾಮವಾಗಿ ಫಸಲು ಬಿಡುತ್ತಿದ್ದ ಮರಗಳೆಲ್ಲ ಕಿತ್ತು ಬಿದ್ದಿರುವ ದೃಶ್ಯ ತಾಲೂಕಿನ ಉಂಚಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ ಉಪಳೇಕೊಪ್ಪದಲ್ಲಿ ಕಾಣಸಿಗುತ್ತಿದೆ.
ತಾಲೂಕಿನಾದ್ಯಂತ ಬೀಸಿದ ಗಾಳಿ ಕೆಲವು ಕಡೆಗಳಲ್ಲಿ ತೀವ್ರ ಪ್ರತಾಪವನ್ನೇ ತೋರಿದೆ. ಮಳೆಯಿಂದ ಹಾನಿ ಅಷ್ಟಾಗಿ ಸಂಭವಿಸದೇ ಇದ್ದರೂ ಮಳೆಗೂ ಪೂರ್ವ ಬೀಸಿದ ಅಬ್ಬರದ ಗಾಳಿಗೆ ಉಂಚಳ್ಳಿ, ಕೆರೆಕೊಪ್ಪ ಹಾಗೂ ಉಪಳೇಕೊಪ್ಪಗಳಲ್ಲಿ ಭಾರಿ ಹಾನಿಯನ್ನುಂಟುಮಾಡಿದೆ. ಕೆರೆಕೊಪ್ಪದಲ್ಲಿ ಮನೆಯೊಂದರ ಮೇಲೆ ತೆಂಗಿನಮರ ಮುರಿದು ಬಿದ್ದು ಹಾನಿ ಸಂಭವಿಸಿದ್ದರೆ ಉಂಚಳ್ಳಿಯಲ್ಲಿ 10ಕ್ಕೂ ಅಧಿಕ ತೆಂಗಿನ ಮರಗಳು ನೆಲಕಚ್ಚಿವೆ. ಉಪಳೇಕೊಪ್ಪದಲ್ಲಂತೂ ಗಾಳಿಯ ಹಾನಿ ತೀವ್ರವಾಗಿತ್ತು. ಸಂಜೆ 6 ಗಂಟೆಯ ಸುಮಾರಿಗೆ 20 ರಿಂದ 25 ನಿಮಿಷಗಳ ಕಾಲ ಬೀಸಿದ ಅಬ್ಬರದ ಗಾಳಿಗೆ ಗ್ರಾಮದ 8-10 ಮನೆಗಳ ಹಂಚುಗಳು ಹಾರಿ ಹೋಗಿದೆ. ವಿದ್ಯುತ್ ತಂತಿಗಳ ಮೇಲೂ ಮರಗಳು ಮುರಿದು ಬಿದ್ದಿದ್ದು ತಂತಿಗಳು ತುಂಡಾಗಿದೆ. 5-10 ವಿದ್ಯುತ್ ಕಂಬಗಳು ಮುರಿದು ಹೋಗಿದೆ.
ಉಪಳೇಕೊಪ್ಪದ ವಿಘ್ನೇಶ್ವರ ಗೋವಿಂದ ನಾಯ್ಕ ಅವರು 3 ಎಕರೆ ಪ್ರದೇಶದಲ್ಲಿ ಬಾಳೆಯನ್ನು ಬೆಳೆದಿದ್ದರು. ಅವರು ಬೆಳೆದ ಬಾಳೆ ಇನ್ನೊಂದೆರಡು ತಿಂಗಳಿನಲ್ಲಿ ಫಸಲನ್ನು ಬಿಡಲು ತಯಾರಾಗಿತ್ತು. 2 ಲಕ್ಷಕ್ಕೂ ಅಧಿಕ ರು. ಖರ್ಚು ಮಾಡಿ ಬಾಳೆಯನ್ನು ಬೆಳೆದಿದ್ದ ಅವರು ಲಕ್ಷಗಟ್ಟಲೆ ಆದಾಯದ ನಿರೀಕ್ಷೆಯಲ್ಲಿದ್ದರು. ಆದರೆ ಬಿರುಗಾಳಿ ಅವರ ಆಸೆಯನ್ನು ಮಣ್ಣುಪಾಲು ಮಾಡಿದೆ. ತೋಟದಲ್ಲಿ ಬಹುತೇಕ ಬಾಳೆಯ ಮರಗಳು ಕಿತ್ತು ಬಿದ್ದಿದೆ. ಇಷ್ಟೂ ಸಾಲದು ಎನ್ನುವಂತೆ ತೋಟದ ಸುತ್ತಮುತ್ತಲೂ ಬೆಳೆದಿದ್ದ ದೈತ್ಯ ಮರಗಳು ಬಾಳೆಯ ತೋಟದ ಮೇಲೆ ಕಿತ್ತು ಬಿದ್ದಿವೆ. ಮನೆಯ ಪಕ್ಕದಲ್ಲೇ ಇದ್ದ ಹಲಸಿನ ಮರವೊಂದು ಕಿತ್ತು ಬಿದ್ದಿದೆ. ಇದರಿಂದಾಗಿ ಇನ್ನೂ ಬೆಳೆಯದ 150ಕ್ಕೂ ಅಧಿಕ ಹಲಸಿನ ಕಾಯಿ ಎಲ್ಲೆಂದರಲ್ಲಿ ಬಿದ್ದುಕೊಂಡಿದೆ. ಫಲ ಬರುತ್ತಿದ್ದ ತೆಂಗಿನ ಮರ ಮುರಿದು ಬಿದ್ದಿದೆ. ಎರಡು ಗೇರು ಮರಗಳು ಕಿತ್ತು ಬಿದ್ದಿವೆ. 200 ಕ್ಕೂ ಅಧಿಕ ಹಂಚುಗಳು ಗಾಳಿಗೆ ಹಾರಿ ಹೋಗಿದೆ.
ಕವಿ, ಬರಹಗಾರ ಎನ್. ವಿ. ಮಂಜುನಾಥ ಅವರ ಮನೆಯ ಪರಿಸ್ಥಿತಿಯೂ ಇದಕ್ಕಿಂತ ಹೊರತಾಗಿಲ್ಲ. ಅವರ ಮನೆಯ 500 ಹಂಚುಗಳು ಗಾಳಿಯ ಅಬ್ಬರಕ್ಕೆ ಹಾರಿ ಹೋಗಿ ಪುಡಿ ಪುಡಿಯಾಗಿದೆ. ಮಾವಿನ ಮರವೊಂದು ಕೊಟ್ಟಿಗೆಯ ಮೇಲೆ ಉರುಳಿ ಬಿದ್ದಿದೆ. 25 ವರ್ಷ ಪ್ರಾಯದ ಕಳೆದ 15 ವರ್ಷಗಳಿಂದ ಫಲ ನೀಡುತ್ತಿದ್ದ ತೆಂಗಿನ ಮರ ಅರ್ಧದಲ್ಲಿಯೇ ಮುರಿದು ಬಿದ್ದಿದೆ. ಮೇವಿಗಾಗಿ ಹುಲ್ಲನ್ನು ತಂದು ಪೇರಿಸಿ ಇಡಲಾಗಿತ್ತು. ಅದರ ಮೇಲೆ ದೈತ್ಯ ಮಾವಿನ ಮರ ಉರುಳಿದೆ. ತೋಟದಲ್ಲಿದ್ದ ಬಾಳೆಯ ಗಿಡಗಳಂತೂ ಅರ್ಧದಲ್ಲಿಯೇ ಮುರಿದು ನಿಂತಿದೆ. 25ಕ್ಕೂ ಅಧಿಕ ಅಡಿಕೆಯ ಮರಗಳು ಗಾಳಿಯ ಅಬ್ಬರಕ್ಕೆ ಮುರಿದು ಹೋಗಿದೆ.
      ಉಪಳೇಕೊಪ್ಪದ ಜಾನಕಿ ನಾರಾಯಣ ನಾಯ್ಕ, ಜಗದೀಶ ರಾಮ ನಾಯ್ಕ, ವೀರಭದ್ರ ಶೇಷಗಿರಿ ನಾಯ್ಕ, ನೀಲಕಂಠ ರಾಮ ನಾಯ್ಕ, ಸುರೇಶ ಗಣಪತಿ ನಾಯ್ಕ, ವಿಘ್ನೇಶ್ವರ ಗಣಪತಿ ನಾಯ್ಕ, ಲೋಕೇಶ ಗೋಪಾಲ ನಾಯ್ಕ, ಕೇಶವ ಶ್ರೀಧರ ನಾಯ್ಕ, ಕನ್ನ ಬಡಿಯಾ ನಾಯ್ಕ, ವೆಂಕಟೇಶ ರಾಮ ನಾಯ್ಕ ಅವರ ಮನೆಯ ಹಂಚುಗಳು ಹಾರಿ ಹೋಗಿದೆ. ಫಲ ಬಿಡುತ್ತಿದ್ದ ಹಣ್ಣಿನ ಮರಗಳು ಕಿತ್ತು ಬಿದ್ದಿವೆ. ಅಷ್ಟೇ ಅಲ್ಲದೇ ಬಾಳೆಯ ಮರಗಳು, ಅಡಿಕೆ ಗಿಡಗಳು ಮುರಿದು ಬಿದ್ದಿವೆ. ಮುನಿದ ಪ್ರಕೃತಿ ಅದೆಷ್ಟೋ ವರ್ಷಗಳ ಶ್ರಮವನ್ನು ಮಣ್ಣುಪಾಲು ಮಾಡಿದೆ. ಅದೆಷ್ಟೋ ಲಕ್ಷ ರು. ಆದಾಯವನ್ನು ತರಬೇಕಿದ್ದ ಹಣ್ಣಿನ ಮರಗಳು, ತೋಟಗಾರಿಕೆ ಗಿಡಗಳೆಲ್ಲ ಧರಾಶಾಹಿಯಾಗಿವೆ. ಇದರಿಂದಾಗಿ ಉಪಳೇಕೊಪ್ಪದ ಗ್ರಾಮಸ್ಥರು ಕಂಗಾಲಾಗಿದ್ದಾರೆ. ಗಾಳಿಯ ಅಬ್ಬರ ಉಪಳೇಕೊಪ್ಪಕ್ಕೆ ಸೀಮಿತವಾಗದೇ ಹಳೆ ಉಂಚಳ್ಳಿ, ಉಂಚಳ್ಳಿ ಹಾಗೂ ಕೆರೆಕೊಪ್ಪಗಳಲ್ಲಿಯೂ ಪ್ರತಾಪವನ್ನು ತೋರಿದೆ. ಕನಿಷ್ಟ 25 ಲಕ್ಷಕ್ಕೂ ಅಧಿಕ ರು. ಹಾನಿಯಾಗಿರಬಹುದು ಎಂದು ಅಂದಾಜು ಮಾಡಲಾಗಿದೆ.
ಬಡ, ಕೂಲಿ ಕಾರ್ಮಿಕರಾದ ಉಪಳೇಕೊಪ್ಪದ ನಿವಾಸಿಗಳು ಪ್ರಕೃತಿಯ ಮುನಿಸಿನ ಪರಿಣಾಮ ಕಂಗಾಲಾಗಿದ್ದಾರೆ. ಜೀವನಾಧಾರವಾಗಿದ್ದ ಬೆಳೆಯೆಲ್ಲ ಮಣ್ಣುಪಾಲಾಗಿರುವ ಕಾರಣ ಮುಂದೆ ಜೀವನವನ್ನು ಯಾವ ರೀತಿ ನಡೆಸಬೇಕು ಎನ್ನುವುದು ತಿಳಿಯದೇ ತಲೆಯ ಮೇಲೆ ಕೈಹೊತ್ತು ಕುಳಿತಿದ್ದಾರೆ. ಸರ್ಕಾರ ಕೂಡಲೇ ಬೆಳೆಹಾನಿಯನ್ನು ಅಂದಾಜು ಮಾಡಿ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ. ಸ್ಥಳಕ್ಕೆ ಶಿರಸಿಯ ತಹಶಿಲ್ದಾರ್ ಬಸಪ್ಪ ಪೂಜಾರ, ಶಾನುಭೋಗರಾದ ಆರ್. ಎಂ. ನಾಯ್ಕ ಹಾಗೂ ಉಂಚಳ್ಳಿ ಪಂಚಾಯತ ಅಭಿವೃದ್ಧಿ ಅಧಿಕಾರಿ ದತ್ತಾತ್ರೆಯ ಭಟ್ ಅವರು ಭೇಟಿ ನೀಡಿ ಹಾನಿಯನ್ನು ಪರಿಶೀಲಿಸಿ ಪರಿಹಾರ ಒದಗಿಸುವ ಭರವಸೆ ನೀಡಿದ್ದಾರೆ.
***
25 ನಿಮಿಷ ಬೀಸಿದ ಗಾಳಿ 25 ವರ್ಷಗಳ ಶ್ರಮವನ್ನು ಮಣ್ಣುಪಾಲು ಮಾಡಿದೆ. ಮನೆಯ ಮಕ್ಕಳಂತೆ ಪ್ರೀತಿಯಿಂದ ಸಲಹಿ ಬೆಳೆಸಿದ್ದ ಗಿಡ ಮರಗಳೆಲ್ಲ ನೆಲಕಚ್ಚಿವೆ. ದೇವರು ನಮ್ಮ ಮೇಲೆ ಯಾಕೆ ಸಿಟ್ಟಾಗಿದ್ದಾನೆ ಎನ್ನುವುದು ತಿಳಿಯುತ್ತಿಲ್ಲ. ರಾತ್ರಿಯ ಅಬ್ಬರದ ಗಾಳಿ ಎಲ್ಲರಲ್ಲೂ ಭಯವನ್ನು ಹುಟ್ಟು ಹಾಕಿದೆ. ಮರಗಳನ್ನೆಲ್ಲ ತಿರುಗಿಸಿ ತಿರುಗಿಸಿ ಒಗೆಯುತ್ತಿತ್ತು. ಮನೆಯ ಹಂಚುಗಳನ್ನೆಲ್ಲ ಹಾರಿಸುತ್ತಿತ್ತು. ನಮಗೆ ಮನೆಯೊಳಗೆ ಕುಳಿತುಕೊಳ್ಳಲೂ ಭಯ, ಮನೆಯಿಂದ ಹೊರಗೆ ಬರಲೂ ಭಯ ಎನ್ನುವಂತಾಗಿತ್ತು.
ರಾಧಾ ವೆಂಕಟ್ರಮಣ ನಾಯ್ಕ
ಉಪಳೇಕೊಪ್ಪ
ಅಧಿಕಾರಿಗಳು ನಮ್ಮೂರಿಗೆ ಭೇಟಿ ನೀಡಿ ಆಗಿರುವ ಹಾನಿಯನ್ನು ಅಂದಾಜು ಮಾಡಿ ಪರಿಹಾರ ನೀಡುವ ಭರವಸೆ ಕೊಟ್ಟು ಹೋಗಿದ್ದಾರೆ. ಸರ್ಕಾರ ನಮಗೆ ಕೊಡುವ ಪರಿಹಾರ ಸಾವಿರ ಸಾವಿರ ರು.ಗಳ ಮಟ್ಟದಲ್ಲಿರುತ್ತದೆ. ಆದರೆ ನಮಗೆ ಆಗಿರುವ ಹಾನಿ ಮಾತ್ರ ಲಕ್ಷಾಂತರ ರು. ಸರ್ಕಾರ ನೀಡುವ ಪರಿಹಾರವೂ ಇನ್ನೂ ನಾಲ್ಕೈದು ತಿಂಗಳುಗಳ ನಂತರ ನಮ್ಮ ಕೈಗೆ ತಲುಪುತ್ತದೆ. ಆದ್ದರಿಂದ ಸರ್ಕಾರ ಪರಿಹಾರ ನೀಡುವಲ್ಲಿ ವಿಳಂಬವನ್ನು ಮಾಡಬಾರದು. ಆಗಿರುವ ಹಾನಿಯನ್ನು ಸರಿಯಾಗಿ ಅಂದಾಜು ಮಾಡಿ ಅದಕ್ಕೆ ತಕ್ಕ ಪರಿಹಾರ ಒದಗಿಸಬೇಕಾಗಿದೆ.
ವೆಂಕಟೇಶ ರಾಮಾ ನಾಯ್ಕ

Tuesday, April 28, 2015

ಅಂ-ಕಣ-5

ಸ್ವಲ್ಪ ವಿಚಿತ್ರ ಬಾಸ್ :

ಮನೆಗಳಿಗೆ ಚಿತ್ರ ವಿಚಿತ್ರ ಹೆಸರಿಡುವುದು ಫ್ಯಾಷನ್..
ಅಂತದ್ದೊಂದು ವಿಚಿತ್ರ ಹೆಸರು
.....
ಪ್ರವೇಶ-ವಿಲ್ಲಾ !!

ಒಟ್ಟಿಗೆ ಓದಿ ಹಾಗೂ ಬಿಡಿಸಿ ಓದಿ

ಇನ್ನೊಂದು ಮನೆಯ ಎದುರು ಕಂಡ ಹೆಸರು
ರಾಧಾ ಕೇ ಶವ್ |


ಸುಮ್ನೆ ಒಂದು ದುರಾಲೋಚನೆ :

ರಾಮಂಗೂ ಮಾರ್ಚ್ ಎಂಡು
ಭೀಮಂಗೂ ಮಾರ್ಚ್ ಎಂಡು..
ನಿಂಗೂ ಮಾರ್ಚ್ ಎಂಡು..
ನನಗೂ ಮಾರ್ಚ್ ಎಂಡು..
ಈ ಮಾರ್ಚ್ ತಿಂಗಳಿಂದಲೇ ಇಷ್ಟೆಲ್ಲ ಸಮಸ್ಯೆ..
ಮಾರ್ಚ್ ತಿಂಗಳು ಇಲ್ಲದೇ ಇರುವ ಕ್ಯಾಲೆಂಡರ್ ತಂದರೆ ಹೇಗೆ?

ಸುಮ್ನೆ ಒಂದ್ ಟಾಂಗು :

ಇವತ್ತು ಮನೆ
ಮನೆಗಳಲ್ಲಿ
ಕ್ಯಾಂಡಲ್ ಲೈಟ್ ಡಿನ್ನರ್
ಕಾರಣ
ವಿದ್ಯುತ್ ವ್ಯತ್ಯಯ ||

ಮತ್ತೊಂಚೂರು ಹಿಡಿಶಾಪ :

ಓಹ್..
ಮತ್ತೊಮ್ಮೆ  ಕ್ಯಾಂಡಲ್
ಲೈಟ್ ಡಿನ್ನರ್ |
ವಿದ್ಯುತ್ ವ್ಯತ್ಯಯದೊಂದಿಗೆ
ಸಹಕರಿಸಿದ್ದಕ್ಕಾಗಿ
ಥ್ಯಾಂಕ್ಸ್ ಟು ಹೆಸ್ಕಾಂ ||

Saturday, April 18, 2015

ಅಘನಾಶಿನಿ ಕಣಿವೆಯಲ್ಲಿ-16


             ಹದಿನೈದು ನಿಮಿಷದ ಧ್ಯಾನ ಮುಗಿಸಿ ಬಂದ ವಿನಾಯಕನ ಎದುರು ವಿಜೇತಾ ಒಂದು ದೊಡ್ಡ ಪತ್ರಗಳ ಕಟ್ಟನ್ನೇ ಹಿಡಿದು ತಂದು `ಇದೇನು?' ಎಂದು ಕೇಳಿದಳು.
              ಅವಳ ಕೈಯೊಳಗಿನ ಪತ್ರಗಳ ಕಟ್ಟನ್ನು ನಿಧಾನವಾಗಿ ಇಸಿದುಕೊಂಡ ವಿನಾಯಕ ದೊಡ್ಡದೊಂದು ನಿಟ್ಟುಸಿರಿನೊಂದಿಗೆ ಮಾತು ಪ್ರಾರಂಭಿಸಿದ. `ಇದು ನನ್ನ ಬಾವಯಾನದ ಚಿಕ್ಕ ತುಣುಕುಗಳು. ಇದರೊಳಗೆ ಇದ್ದಿದ್ದೆಲ್ಲ ಪತ್ರಗಳು. ಪತ್ರಮೈತ್ರಿ ಅನ್ನುತ್ತೀವಲ್ಲ. ಅದೇ ಇದು. ಎಂದೊ ಒಮ್ಮೆ ತುಂಬ ಉತ್ಸಾಹದ ದಿನಗಳಲ್ಲಿ ಮಾಡುತ್ತಿದ್ದ ಹಲವು ಕೆಲಸಗಳಲ್ಲಿ ಇದೂ ಒಂದು. ಆಗ ನಾಡಿನ ಮೂಲೆ ಮೂಲೆಯಿಂದ ಈ ವಿನಾಯಕನಿಗೆ ಪತ್ರಗಳು ಬರುತ್ತಿದ್ದವು. ಯಾರ್ಯಾರೋ ಪತ್ರ ಬರೆಯುತ್ತಿದ್ದರು..' ಎಂದ.
              `ಅಂದರೆ ಈಗ ಇಲ್ವಾ?' ಕೇಳಿದಳು ವಿಜೇತಾ
              `ಈಗ ನನ್ನ ಪತ್ರ ಮೈತ್ರಿ ಬಹುತೇಕ ಸತ್ತು ಹೋಗಿದೆ. ಇದೆಲ್ಲ ಮೊಬೈಲ್ ಇನ್ನೂ ಮನೆಮಾತು ಆಗಿರದ ಕಾಲದ್ದು. ಆಗಿನ್ನೂ ನೋಕಿಯಾದ ಬೇಸಿಕ್ ಮೊಬೈಲುಗಳು ಎಲ್ಲೆಡೆ ಇದ್ದ ಕಾಲ. ನನಗೆ ಬರೆಯುವ ಹುಕಿ ಬಹಳ ಇತ್ತು. ಆಗ ಮಾಡಿದ ಹಲವಾರು ಕಾರ್ಯಗಳಲ್ಲಿ ಇದೂ ಒಂದು. ಕಾಲ ಬದಲಾಯ್ತು. ಈಗ ಪತ್ರಗಳನ್ನು ಯಾರು ಬರೀತಾರೆ ಹೇಳು. ಬರೀ ಮೊಬೈಲು, ಫೇಸ್ ಬುಕ್ಕು ವಾಟ್ಸಾಪು..' ಎಂದು ನಿಟ್ಟುಸಿರು ಬಿಟ್ಟ ವಿನಾಯಕ.
               `ಆದರೂ ಪತ್ರ ಬರೆಯಬಹುದಿತ್ತಲ್ವಾ? ಯಾಕೆ ಮುಂದುವರೆಸಲಿಲ್ಲ..' ಪಟ್ಟು ಬಿಡದೇ ಕೇಳಿದಳು ವಿಜೇತಾ..
               `ಬಿಡಿ.. ಕೆಲವು ವಿಷಯಗಳಿಗೆ ಕಾರಣಗಳನ್ನು ಹೇಳಲು ಆಗುವುದಿಲ್ಲ. ಹೇಳಿದರೆ ಮನಸ್ಸು ಕಲ್ಲವಿಲವಾಗುತ್ತದೆ. ಕೆಲವಕ್ಕೆ ಕಾರಣಗಳು ಇರುವುದಿಲ್ಲ. ನನ್ನ ಪತ್ರ ಮೈತ್ರಿ ಸಾಯಲು ಕಾರಣ ಇದೆ ಎಂದರೆ ಇದೆ. ಇಲ್ಲ ಎಂದರೆ ಇಲ್ಲ. ನನಗಾಗಿ ಬರೆದವರು ಅನೇಕ. ಆದರೆ ನಾನೇ ಮುಂದುವರೆಸಲಿಲ್ಲ. ಎಲ್ಲವನ್ನೂ ಕೊನೆಗೊಳಿಸಕೊಂಡೆ ನೋಡು..' ಎಂದ ವಿನಾಯಕ.
               `ಯಾಕೆ? ಯಾಕೆ ಹಾಗೆ ಮಾಡ್ಕೊಂಡ್ರಿ..?' ಎಂದು ಕೇಳಿದಳು ವಿಜೇತಾ. ವಿನಾಯಕ ಕಾರಣ ಹೇಳಲೇ ಇಲ್ಲ. ವಿಜೇತಾ ಅದೆಷ್ಟೋ ಬಗೆಯಲ್ಲಿ ಕೇಳಿದರೂ ವಿನಾಯಕ ಮಾತ್ರ ನಿರುತ್ತರನಾಗಿದ್ದ. ಕೆಲವು ಸಾರಿ ನಿಸ್ಸಾರ ಉತ್ತರಗಳನ್ನೇ ಕೊಟ್ಟ. ಬೇಸರಗೊಂಡ ವಿಜೇತಾ ಕೇಳುವುದನ್ನು ನಿಲ್ಲಿಸಿದಳು. ಆದರೆ ವಿನಾಯಕನ ಮೇಲೆ ವಿಜೇತಾಳಿಗೆ ಕುತೂಹಲ ಹೆಚ್ಚಿತ್ತು. ಮೊದಲೇ ಇದ್ದ ಕುತೂಹಲ ದುಪ್ಪಟ್ಟಾಗಿತ್ತು. ಕವಿ, ಬರಹಗಾರ, ಸಿದ್ಧಾಂತಿ, ಪತ್ರ ಮೈತ್ರಿ ಮಾಡುವವನು, ಹಾಡುಗಾರ, ಇಂತಹ ಅದೆಷ್ಟೋ ಪ್ರತಿಭೆಗಳ ಸಂಗಮವಾಗಿದ್ದ ವಿನಾಯಕ ಯಾಕೋ ಜಗತ್ತಿನ ಕಡೆಗೆ ಬೇಸರಿಸಿಕೊಂಡಿದ್ದಾನೆ. ಪ್ರತಿಯೊಂದರಲ್ಲಿಯೂ ಆತನಿಗೆ ನಿಸ್ಸಾರ. ತಾತ್ಸಾರ. ಮೊದಲಿನ ಉತ್ಸಾಹ ಕಳೆದು ಹೋಗಿದೆಯೇನೋ ಅನ್ನುವ ಭಾವನೆಯಲ್ಲಿದ್ದಾನೆ. ಇದನ್ನು ಕಂಡುಹಿಡಿಯಬೇಕಲ್ಲ ಎಂದುಕೊಂಡಳು ವಿಜೇತಾ.

***15***

              ಮರುದಿನ ಎಂದಿನಂತೆ ಬೆಳಗಾಯಿತು. ಮೂಡಣದಲ್ಲಿ ಸೂರ್ಯ ಚಿನ್ನದ ಹಾಸಿಗೆ ಹಾಸಿ, ಹೂ ಚೆಲ್ಲಿ, ನಗು ನಗುತ್ತಾ ಮೂಡಿ ಬಂದ. ಎಲ್ಲರೂ ಮೊದಲೇ ನಿರ್ಧಾರ ಮಾಡಿಕೊಂಡಂತೆ ಹೊರಟಿದ್ದು ಹಿಮದೆ ಐವತ್ತು ವರ್ಗಷಳಾಚೆ ಕರೆಂಟು (ವಿದ್ಯುತ್) ಉತ್ಪಾದಿಸುತ್ತಿದ್ದ ಸ್ಥಳ ನೋಡಲು.
              ಹಳೆಯ ಭವ್ಯ ಭವಂತಿ ಮನೆಗೆ ಎಲ್ಲರನ್ನೂ ಕರೆದೊಯ್ದ ವಿನಾಯಕ. ` ಈ ಮನೆಯಲ್ಲಿಯೇ ಹಿಂದೆ ವಿದ್ಯುತ್ ಉತ್ಪಾದನೆ ಮಾಡುತ್ತಿದ್ದರು..' ಎಂದು ಹೇಳುತ್ತಿದ್ದಂತೆಯೇ ಆ ಮನೆಯ ಯಜಮಾನರಾದ ಗಣಪತಿ ಹೆಗಡೆಯವರು ಹಳೆಯ ಮನೆಯ ಕತ್ತಲೆಯಾಳದಿಂದ ಕೋಲೂರಿಕೊಂಡು ನಡೆದು ಬಂದರು. ಕತ್ತಲೆಯಿಮದ ಹೊರ ಬಂದ ಅವರಿಗೆ ಹೊರಗಿನ ಬೆಳಕಿಗೆ ಕಣ್ಣನ್ನು ಹೊಂದಿಸಿಕೊಳ್ಳಲು ಕೆಲ ಕ್ಷಣಗಳು ಬೇಕಾದವು. ನಂತರ ಕನ್ಣಿಗೆ ಬಿದ್ದ ಯುವ ಪಡೆಯನ್ನು ಮೂಕ ವಿಸ್ಮಿತರಾಗಿ ನೋಡುತ್ತಿದ್ದಂತೆಯೇ ವಿನಾಯಕ ಬಂದವರೆಲ್ಲರನ್ನೂ ಪರಸ್ಪರ ಪರಿಚಯ ಮಾಡಿಕೊಟ್ಟ.
           `ಓಹೋ.. ನಮ್ಮೂರಿಗೆ ಯಾರೋ ಬಂಜ್ವಡಾ ಹೇಳಿ ಕೇಳಿದ್ದೆ.. ನೀವೇಯೋ ಬಂದವ್ರು..' ಎಂದು ಕೇಳಿದರು. ಮನೆಗೆ ಯುವಕರು ಬಂದಿದ್ದರಿಂದ ತೊಂಭತ್ತರ ಗಣಪಜ್ಜ ಹುರುಪು ಬಂದವರಂತೆ  `ಓಹೋ ನಿಂಗವೆಲ್ಲಾ ಕರೆಂಟು ಉತ್ಪಾದನೆ ಮಾಡ್ತಿದ್ದಿದ್ದ ಹೇಳದ್ನ ಕೇಳ್ಕಂಡು.. ಅದನ್ನ ನೋಡಲೆ ಬಂಜ್ರಾ.. ಬನ್ನಿ ತೋರಿಸ್ತೆ...' ಎಂದು ಕರೆದೊಯ್ದರು. ಅಲ್ಲಿದ್ದ ಯುವಕರೆಲ್ಲ ಅಜ್ಜನಿಗೆ ವಯಸ್ಸಾಗಿದೆ. ಬೇರೆ ಯಾರಾದರೂ ತೋರಿಸಿದರೆ ನೋಡಬಹುದು. ಅಜ್ಜನಿಗೆ ಆರಾಮಾಗಿ ಕುಳಿತುಕೊಳ್ಳಲು ಹೇಳೋಣ ಎಂದುಕೊಂಡರಾದರೂ ಅಜ್ಜನ ಹುರುಪನ್ನು ಕಂಡು ಬಾಯಿ ಬಿಡಲಿಲ್ಲ.
           ಮನೆಯ ಹಿಂಭಾಗದಲ್ಲಿಯೇ ಇದ್ದ ದೊಡ್ಡದೊಂದು ಗುಡ್ಡವನ್ನು ಹತ್ತಿಸಿದ ಅಜ್ಜ. ಎದೆಯ ಮಟ್ಟಕ್ಕಿಂತ ಎತ್ತರಕ್ಕಿದ್ದ ಗುಡ್ಡವನ್ನು ಯುವ ಪಡೆ ಏದುಸಿರು ಬಿಡುತ್ತ ಹತ್ತಿತು. ಆದರೆ 90ರ ಅಜ್ಜ ಆಯಾಸವಿಲ್ಲದೇ ಹತ್ತಿದ. ಗುಡ್ಡದ ಮೇಲೊಂದು ಬಹುದೊಡ್ಡ ನೀರು ಸಂಗ್ರಹಾಗಾರವಿತ್ತು. ಅನಾಮತ್ತು 10 ಸಾವಿರಕ್ಕೂ ಅಧಿಕ ಲೀಟರ್ ನೀರನ್ನು ಸಂಗ್ರಹ ಮಾಡಲಾಗುವಂತಹ ಬಹುದೊಡ್ಡ ಟ್ಯಾಂಕ್ ಅದು. ಇನ್ನೂ ಹೆಚ್ಚಿನ ನೀರನ್ನು ಸಂಗ್ರಹ ಮಾಡಬಹುದಿತ್ತೇನೋ. ಬಹುದೊಡ್ಡದಾಗಿದ್ದ ತೊಟ್ಟಿ ಇದೀಗ ಒಡೆದು ಹೋಗಿತ್ತು. ಒಂದು ಪಾರ್ಶ್ವ ಕುಸಿದು ಬಿದ್ದಿತ್ತು. ಆ ನೀರಿನ ಟ್ಯಾಂಕ್ ಇದೀಗ ಅವಸಾನದ ಕೊನೆಯ ಮೆಟ್ಟಿಲಿನಲ್ಲಿತ್ತು. ಮಾತನಾಡಲು ಆರಂಭಿಸಿದ ಅಜ್ಜ `ಇದೋ ನೋಡಿ ಇದೇ ಟ್ಯಾಂಕಿನಲ್ಲಿ ನೀರನ್ನು ಸಂಗ್ರಹ ಮಾಡಲಾಗುತ್ತಿತ್ತು. ಈ ಟ್ಯಾಂಕಿಗೆ ಕನಿಷ್ಟ ಮೂರು ಕಿಮಿ ದೂರದಿಮದ ನೀರು ಹರಿದು ಬರುತ್ತಿತ್ತು. ನಮ್ಮೂರಿನ ಎತ್ತರದ  ಗುಡ್ಡದ ಮೇಲೊಂದು ಕೆರೆಯಿದೆ. ಅದರಿಂದ ನೀರು ಬರುತ್ತಿತ್ತು. ಈ ಟ್ಯಾಂಕಿನಲ್ಲಿ ಸಂಗ್ರಹ ಮಾಡಿ, ಕೆಳಗೆ ಮನೆಯ ಬಳಿ ಚಿಕ್ಕ ಗಾತ್ರದ ಟರ್ಬೈನ್ ಕೂರಿಸಿ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿತ್ತು.. ನೋಡಿ..' ಎಂದರು.
            `ಅಜ್ಜಾ.. ಇಲ್ಲಿ ವಿದ್ಯುತ್ ಉತ್ಪಾದನೆ ಮಾಡುತ್ತಿದ್ದುದು ಯಾವಾಗ?' ಎಂದು ಕೇಳುದ್ದಳು ವಿಜೇತಾ..
            `ಭಾರತಕ್ಕೆ ಸ್ವಾತಂತ್ರ್ಯ ಬಂದ ಹೊಸತರಲ್ಲಿ ಇಲ್ಲಿ ವಿದ್ಯುತ್ ಉತ್ಪಾದನೆ ಆರಂಭ ಮಾಡಿದ್ದು. ಯನ್ನ ಅಪ್ಪಯ್ಯ ಗಣೇಶ ಹೆಗಡೆ ವಿದ್ಯುತ್ ಉತ್ಪಾದನೆ ಕಾರ್ಯಕ್ಕೆ ಮುಂದಾಗಿದ್ದು. ನಂತರ ಆನೂ ಸುಮಾರ್ ವರ್ಷ ವಿದ್ಯುತ್ ಉತ್ಪಾದನೆ ಮಾಡ್ತಿದ್ದಿ. 1972ರ ಸಮಯದಲ್ಲಿ ಜೋಗದಲ್ಲಿ ವಿದ್ಯುತ್ ಉತ್ಪಾದನೆ ಕಾರ್ಯ ಶುರು ಆತು. ಆವಾಗ ನಮ್ಮೂರಿಗೆ ಕರೆಮಟ್ ಬಂತು. ಆಮೇಲೆ ಈ ವಿದ್ಯುತ್ ಉತ್ಪಾದನೆ ಕಾರ್ಯ ನಿಲ್ಲಿಸಿದ್ಯ..' ಎಂದರು ಗಣಪಜ್ಜ.
           ಎಲ್ಲರೂ ಬೆರಗಾಗಿ ಕೇಳುತ್ತಿದ್ದರು. ಮನೆ ಮನೆಗಳಲ್ಲಿ ಕಿರು ಜಲವಿದ್ಯುತ್ ಉತ್ಪಾದನೆ ಮಾಡುವ ಬಗ್ಗೆ ಇದೀಗ ಎಲ್ಲ ಕಡೆಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಇಂತಹ ಕಾರ್ಯವನ್ನು ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿಯೇ ಕೈಗೊಮಡ ಗಣಪಜ್ಜ ಹಾಗೂ ಗಣೇಶಜ್ಜನ ಬಗ್ಗೆ ಹೆಮ್ಮೆ ಮೂಡಲಾರಂಭಿಸಿತ್ತು. ಗುಡ್ಡವನ್ನು ಇಳಿಸಿಕೊಂಡು ಎಲ್ಲರನ್ನೂ ಕರೆದೊಯ್ದ ಗಣಪಜ್ಜ. ಗುಡ್ಡದ ಕೆಳಭಾಗದಲ್ಲಿ ಒಮದು ಕಡೆ ನಿಲ್ಲಿಸಿದ. ಅಲ್ಲೊಂದು ದೊಡ್ಡ ದಿಬ್ಬ, ಮುರಿದು ಹೋಗಿದ್ದ ಕೆಲವು ಯಂತ್ರಗಳಿದ್ದವು. `ಇದೇ ನೋಡಿ.. ಟರ್ಬೈನ್ ಕೂರಿಸಿದ್ದ ಜಾಗ..' ಎಂದ.
           ಯಾವುದೋ ಕಾಲದಲ್ಲಿ ಮುರಿದು ಬಿದ್ದಂತಿತ್ತು. ಯಂತ್ರದ ಬಿಡಿ ಭಾಗಗಳೆಲ್ಲ ಚೆಲ್ಲಾಪಿಲ್ಲಿಯಾಗಿದ್ದವು. `ಅಜ್ಜಾ.. ಯಾಕೆ ಈ ವಿದ್ಯುತ್ ಉತ್ಪಾದನಾ ಯಂತ್ರ ಹೀಗಾಗಿದೆ.? ಯಾಕೆ ನೀವು ನಂತರದ ದಿನಗಳಲ್ಲಿ ವಿದ್ಯುತ್ ಉತ್ಪಾದನೆ ಮಾಡಲಿಲ್ಲ?' ವಿಜೇತಾಳೇ ಕೇಳಿದ್ದಳು.
           `ಜೋಗದ ವಿದ್ಯುತ್ ಬಂತಲೆ ತಂಗಿ.. ಆ ವಿದ್ಯುತ್ ಎಲ್ಲ ಕಡೆ ಬಳಕೆ ಮಾಡಲೆ ಹಿಡಿದ. ನಂತರದ ದಿನಗಳಲ್ಲಿ ಈ ವಿದ್ಯುತ್ ಉತ್ಪಾದನೆ ಮಾಡೋದು ಕಷ್ಟದ ಕೆಲಸ ಅನ್ನಿಶ್ಚು. ಕಡಿಮೆ ದರದಲ್ಲಿ ಜೋಗದ ವಿದ್ಯುತ್ ಸಿಗಲೆ ಶುರು ಆತು. ಆವಾಗ ಇದನ್ನು ಬಿಡದೇ ಆಗ್ತು ಅಲ್ದಾ.. ನಿರ್ವಹಣೆ ಮಾಡೋದು ಕಷ್ಟ ಆಗ್ತಾ ಬಂತು ನೋಡು.. ಯನ್ನ ತರುವಾಯ ಮತ್ಯಾರೂ ಮಾಡವ್ ಇಲ್ಲೆ ಅನ್ನಿಶಿ ಬಿಟ್ ಹಾಕಿದಿ.. ಕಾಲ ಕ್ರಮೇಣ ಎಲ್ಲಾ ಹಾಳಾಗೋತು..' ಎಂದು ನಿಟ್ಟುಸಿರು ಬಿಟ್ಟರು ಗಣಪಜ್ಜ.
           `ಸುಮಾರ್ ಎಷ್ಟು ಪ್ರಮಾಣದಲ್ಲಿ ಕರೆಂಟು ಉತ್ಪಾದನೆ ಮಾಡ್ತಿದ್ದಿ?' ಪ್ರದೀಪ ಕೇಳಿದ್ದ.
           `ಹುಂ.. ಸುಮಾರ್ ಉತ್ಪಾದನೆ ಮಾಡ್ತಿದ್ಯ ನೋಡಿ. ನಮ್ಮೂರಿಗೆಲ್ಲಾ ಸಿಂಗಲ್ ಫೆಸ್ ಕರೆಂಟ್ ಕೊಡಲೆ ಸಾಕಾಗ್ತಿತ್ತು, ನಮ್ಮನೆಲಿ ಅವಲಕ್ಕಿ ಗಿರಣಿ ನಡೆಸ್ತಾ ಇದ್ದಿದ್ಯ. ಆದರೆ ನಿರ್ವಹಣೆ ಕಷ್ಟ ಆಗ್ತಾ ಬಂತು. ಹಂಗಾಗಿ ಬಿಡಕಾತು..' ಎಂದರು ಅಜ್ಜ.
           `ನಮ್ಮೂರಿನಲ್ಲಿ ಕರೆಂಟು ಉತ್ಪಾದನೆ ಮಾಡೋದು ಶಾಲೆಗಳಲ್ಲಿ ಪಾಠವಾಗಿ ಬಂದಿತ್ತಂತೆ..' ಎಂದ ವಿನಾಯಕ
           `ಹೌದು.. ಪಾಠವಾಗಿ ಕಲಿಸ್ತಾ ಇದ್ದರು. ಕನ್ನಡ ಶಾಲೆಯಲ್ಲಿ ನೀರಿನ ಹೌದು ಎಂಬ ತಲೆಬರಹದ ಅಡಿಯಲ್ಲಿ ಪಾಠ ಕಲಿಸಲಾಗುತ್ತಿತ್ತು. 1980ರ ದಶಕದ ವರೆಗೂ ಆ ಪಾಠ ಇತ್ತು. ಈಗ ಇಲ್ಲ. ಮೊನ್ನೆ ಮೊನ್ನೆಯ ವರೆಗೂ ನಮ್ಮೂರಿಗೆ ಈ ನೀರಿನ ಹೌದನ್ನು ನೋಡುವ ಸಲುವಾಗಿಯೇ ಮಕ್ಕಳು ಪ್ರವಾಸಕ್ಕೆ ಬರ್ತಾ ಇದ್ದಿದ್ದ. ಈಗಲೇ ಬರ್ತಾ ಇಲ್ಲೆ ನೋಡಿ..' ಎಂದು ಗಣಪಜ್ಜ ಹೇಳಿದ. ಎಲ್ಲರೂ ನಿಟ್ಟುಸಿರು ಬಿಟ್ಟರು.
           ಗಣಪತಿ ಹೆಗಡೆಯವರು ತೋರಿಸಿದ ಟರ್ಬೈನ್, ಟ್ಯಾಂಕು, ಮಿಲ್ಲು ಇವೆಲ್ಲ ಬಹುತೇಕ ಅವಸಾನದ ಹಾದಿಯನ್ನು ತಲುಪಿಯಾಗಿ ಆಗಿತ್ತು. ಕೊನೆಯ ಕೊಂಡಿಗಳಷ್ಟೇ ಉಳಿದಕೊಂಡಿದ್ದವು. ಪ್ರತಿಯೊಬ್ಬರೂ ಈ ಕಾರಣದಿಂದ ಮರುಕ ಪಟ್ಟುಕೊಂಡರು. `ಅಲ್ಲಾ ಅಜ್ಜಾ ಈಗಲೂ ನಮ್ಮ ಸರ್ಕಾರ ವಿದ್ಯುತ್ತನ್ನು ಮನೆಯಲ್ಲಿ ಉತ್ಪಾದನೆ ಮಾಡೋದಾದ್ರೆ ಅವರಿಗೆ ಸಹಾಯ, ಸಹಕಾರ ಎಲ್ಲ ಕೊಡ್ತದಂತಲ್ಲಾ..' ಎಂದಳು ವಿಜೇತಾ.
           `ತಥ್.. ಅದೆಂತಾ ಕೇಳ್ತೆ.. ಯಾವ್ದಕ್ಕೂ ಈಗ ದುಡ್ಡು ಇಲ್ದೇ ಹೋದ್ರೆ ಆಗ್ತಿಲ್ಲೆ. ನೀನು ಲಂಚ ಮಡಗಿದ್ಯ, ನಿಂಗೆ ಎಲ್ಲಾನೂ ಸಿಕ್ತು. ಈಗಲೂ ಆನು ಲಂಚ ಕೊಟ್ಟಿದ್ರೆ ಈ ವಿದ್ಯುತ್ ಉತ್ಪಾದನೆ ಮಾಡೋದ್ನ ಮುಂದುವರಿಶಿಗ್ಯಂಡು ಹೋಪಲೆ ಆಗ್ತಿತ್ತು. ಆದರೆ ಊಹೂಂ.. ಆನು ಹಂಗೆ ಮಾಡಂವ ಅಲ್ಲ. ಲಂಚಾ ಎಲ್ಲಾ ಕೊಡಂವ ಅಲ್ಲ ಆನು. ಯನ್ನ ಅಪ್ಪಯ್ಯ ಒಬ್ಬ ಸ್ವಾತಂತ್ರ್ಯ ಹೋರಾಟಗಾರ. ಅಂಥವ್ನ ಮಗ ಆಗಿ ಆನು ಲಂಚ ಗಿಂಚ ಕೊಟ್ಟು ಕೆಲ್ಸ ಮಾಡಿಸ್ಕಂಬದು ಅಂದ್ರೆ.. ಶಿ ಶಿ..' ಎಂದು ಗಣಪಜ್ಜ ಹೇಳಿದಾಗ ಹೆಮ್ಮೆಯಿಮದ ಬೀಗಿದಳು ವಿಜೇತಾ.
           `ಅಲ್ಲಾ ಅಜ್ಜಾ.. ನಿಂಗೆ 90 ವರ್ಷದ ಮೇಲೆ ಆತು.. ನಿಮ್ಮ ಕಾಲದಲ್ಲಿ ಹ್ಯಾಂಗಿತ್ತು.. ಯಾವ್ ಯಾವ್ ಥರಾ ಆಗಿತ್ತು.. ಎಲ್ಲಾ ಹೇಳು.. ನೀವು ನಿಮ್ಮ ಹರೆಯದಲ್ಲಿ ಅದೇನೇನು ಸಾಹಸಗಳನ್ನು ಮಾಡಿದ್ದಿರೋ.. ಅದೆಲ್ಲವನ್ನೂ ಹೇಳಿ..' ಎಂದು ಪಕ್ಕಾ ಪತ್ರಕರ್ತನ ಹಾಗೆ ಕೇಳಿದ ವಿಕ್ರಮ. ಅಜ್ಜನ ಮನಸ್ಸು ಉಲ್ಲಾಸಗೊಂಡಿತ್ತು. ಮಾತಿನ ಹುಕಿಗೆ ಬಿದ್ದಿದ್ದ ಅಜ್ಜ ತನ್ನ ಕಾಲದ ಸಾಹಸಗಳನ್ನು ಹೇಳಲು ಆರಂಭಿಸಿದ್ದ.

(ಮುಂದುವರಿಯುತ್ತದೆ)
(ವಿ,. ಸೂ : ಗಣಪಜ್ಜ ಹೇಳಿದ ಸಂಗತಿಗಳೆಲ್ಲ ನಿಜವಾಗಿಯೂ ನಡೆದಿದ್ದು.)