Thursday, July 9, 2015

ಅಘನಾಶಿನಿ ಕಣಿವೆಯಲ್ಲಿ-22

             ದೇವಸ್ಥಾನದಲ್ಲಿ ಪೂಜೆ ಮುಗಿಸಿ ಭಟ್ಟರ ಬಳಿ ಮಾತನಾಡಿ ಹಾಗೆಯೇ ಎಲ್ಲರೂ ವಾಪಾಸಾಗುತ್ತಿದ್ದರು. ವಿಕ್ರಮ, ವಿನಾಯಕ, ವಿಜೇತಾ, ಪ್ರದೀಪರು ದೇವಸ್ಥಾನದಿಂದ ಹೊರಗೆ ಬಂದಿದ್ದರು. ವಿಷ್ಣು ದೇವಸ್ಥಾನದಲ್ಲಿಯೇ ಇದ್ದವನು ಹಾಗೆಯೇ ಹೊರಬರುತ್ತಿದ್ದ. ಇದ್ದಕ್ಕಿದ್ದಂತೆ ದೇವಸ್ಥಾನದ ಬಾಗಿಲ ಪಟ್ಟಿ ಎಡವಿ ದಡಾರನೆ ಬಿದ್ದು ಬಿಟ್ಟ. ಆತ ಬಿದ್ದಿದ್ದನ್ನು ಕಂಡು ಎಲ್ಲರೂ ಒಮ್ಮೆ ಭೀತಿ ಪಟ್ಟುಕೊಂಡರು. ಇದೇನಿದು ಹೀಗಾಯಿತಲ್ಲ ಎಂದುಕೊಂಡರು. ಪ್ರದೀಪ ಬೇಗನೇ ಬಂದು ವಿಷ್ಣುವನ್ನು ಹಿಡಿದು ಎಬ್ಬಿಸಿದ. ಪುಣ್ಯಕ್ಕೆ ವಿಷ್ಣುವಿಗೆ ಏಟು ಬಿದ್ದಿರಲಿಲ್ಲ. ಕಾಲು ಎಡವಿ ಕವುಚಿ ಬಿದ್ದಿದ್ದ ಕಾರಣ ಒಮ್ಮೆ ಮೈ ಕೈ ಜಜ್ಜಿತ್ತು. ಕೆಲಕಾಲ ವಿಷ್ಣು ದೇವಸ್ಥಾನದ ಹೊರಗಿನ ಕಟ್ಟೆಯಲ್ಲಿ ಸಾವರಿಸುತ್ತ ಕುಳಿತ.
          ವಿಷ್ಣು ಬಿದ್ದಿದ್ದನ್ನು ನೋಡಿ ಭಟ್ಟರು ಇದ್ದಕ್ಕಿದ್ದಂತೆ ಏನನ್ನಿಸಿತೋ ಏನೋ ದೇವಸ್ಥಾನದ ಒಳಕ್ಕೆ ಹೋಗಿ ಒಮ್ಮೆ ತುಪ್ಪದ ದೀಪವನ್ನು ಹಚ್ಚಿಟ್ಟರು. ದೇವಸ್ಥಾನದ ಬಾಗಿಲಿನಲ್ಲಿ ಬಿದ್ದಿದ್ದು ಅದು ಗಣಪನಿಗೆ ವಿರುದ್ಧವಾಗಿ ಬಿದ್ದಿದ್ದು ಮಾತ್ರ ಅಪಶಕುನದ ಹಾಗೇ ಅನ್ನಿಸಿತು. ಛೇ ಹೀಗಾಗಬಾರದಿತ್ತು ಎನ್ನಿಸಿತು. `ಯೇ ತಮಾ.. ಒಳಗೆ ಬಾ ಇಲ್ಲಿ.. ಒಂದ್ ಸಾರಿ ದೇವರ ಹತ್ತಿರ ಏನೂ ಕೆಡುಕು ಆಗದೇ ಇರಲಿ ಹೇಳಿ ಬೇಡ್ಕ.. ಒಳ್ಳೇದಾಗ್ತು..' ಎಂದರು ಭಟ್ಟರು.
         ` ನಾನು ಅಪಶಕುನ ನಂಬೋದಿಲ್ಲ ಬಿಡಿ..' ಎಂದ ವಿಷ್ಣು. ಆದರೂ ಭಟ್ಟರು ಹೇಳುದಂತೆ ದೇವರ ಎದುರು ಬಂದು ನಮಸ್ಕರಿಸಿದಂತೆ ಮಾಡಿದ. ವಿಷ್ಣುವಿನ ಉತ್ತರ ಮಾತ್ರ ಎಲ್ಲರಲ್ಲಿಯೂ ಆಶ್ಚರ್ಯವನ್ನು ತಂದಿತ್ತು. ಇದಾದ ಸ್ವಲ್ಪ ಸಮಯದ ನಂತರ ಎಲ್ಲರೂ ದೇವಾಲಯದಿಂದ ವಾಪಾಸು ಹೊರಟರು.
           ಮನುಷ್ಯ ತಾನೇ ಎಲ್ಲರಿಗಿಂತ ಮಿಗಿಲು ಎಂದುಕೊಳ್ಳುತ್ತಾನೆ. ಆದರೆ ಆಗಾಗ ಪ್ರಕೃತಿ ಅಥವಾ ನಮ್ಮ ಮೇಲಿರುವ ಕಾಣದ ಶಕ್ತಿಗಳು ಮುಂದೆ ಆಗುವ ಅನಾಹುತಗಳನ್ನು ಸೂಚ್ಯವಾಗಿ ತಿಳಿಸುತ್ತವೆ. ದೇವರ ಶಕ್ತಿಯನ್ನು ನಂಬುವವರು ಮಾತ್ರ ಇಂತಹ ಸೂಚನೆಗಳಿಂದಾಗಿ ಎಚ್ಚರಿಕೆಯನ್ನು ವಹಿಸಿಕೊಳ್ಳುತ್ತಾರೆ. ವಿಷ್ಣುವಿಗೂ ಕೂಡ ಮುಂದೆ ಆಗುವ ಯಾವುದೋ ಅಪಾಯವನ್ನು ಈ ರೀತಿಯ ಸೂಚನೆಯ ರೂಪದಲ್ಲಿ ದೇವರು ನೀಡಿದನೇ? ಗೊತ್ತಾಗಲಿಲ್ಲ. ಆದರೆ ಉಳಿದವರಿಗೆ ಮಾತ್ರ ಮುಂದೆ ಏನೋ ಅಪಾಯ ಬಂದು ಒದಗಲಿದೆ. ವಿಷ್ಣು ಯಾವುದೋ ತೊಂದರೆಯಲ್ಲಿ ಸಿಲುಕಿಕೊಳ್ಳಲಿದ್ದಾನೆ ಎನ್ನುವುದು ಮಾತ್ರ ಸ್ಪಷ್ಟವಾಗುತ್ತಿತ್ತು. ವಿಷ್ಣು ಇದನ್ನು ನಂಬಲು ತಯಾರಿರಲಿಲ್ಲ. ಇದೇ ಕಥೆಗೆ ತಿರುವನ್ನು ನೀಡಲಿದೆಯೇ? ಆಲೋಚನೆ ಮಾಡಿದಷ್ಟೂ ಗೋಜಲು ಗೋಜಲಾಗಿ ಪರಿಣಮಿಸುತ್ತಿತ್ತು.

****

          `ಎರಡು ತೇಗದ ಮರ ಅರ್ಜೆಂಟು ಬೇಕು. ನಮ್ಮೂರ ಕಾಡಿನಲ್ಲಿ ಇದ್ದಿದ್ದು ಸುಳ್ಳು. ಉಂಚಳ್ಳಿ ಜಲಪಾತದ ಬಳಿ ಬಹಳ ಇದೆ. ಅಲ್ಲಿಗೆ ಹೋಗಿ ಕಡಿದುಕೊಂಡು ಬನ್ನಿ. ನನ್ನ ಬಳಿ ಇರುವ ಅಡ್ರೆಸ್ ಗೆ ತಲುಪಿಸಿ..' ಮುಂದಾಳು ಸೂಚನೆ ನೀಡಿದ್ದ. ಜೊತೆಗಿದ್ದವರು ಒಪ್ಪಿಕೊಂಡಿದ್ದರು. `ನೋಡಿ ಮಾರ್ಗ ಮಧ್ಯದಲ್ಲಿ ಈಗ ಚೆಕ್ ಪೋಸ್ಟ್ ಮಾಡಲಾಗಿದೆ. ಯಾವುದೇ ವಾಹನಗಳನ್ನಾದರೂ ಬಿಗಿಯಾಗಿ ಪಹರೆ ಕಾಯಲಾಗುತ್ತಿದೆ. ಸ್ವಲ್ಪ ಅನುಮಾನ ಬಂದರೂ ಸಾಕು ಹಿಡಿದು ಹಾಕುತ್ತಾರೆ. ಹೇಗೆ ಸಾಗಿಸಬೇಕು, ಯಾವ ಥರ ಹೋಗಬೇಕು ಎನ್ನುವುದನ್ನು ನಾನು ಬಿಡಿಸಿ ಹೇಳಬೇಕಿಲ್ಲ ತಾನೆ. ಒಳ ದಾರಿಗಳು, ಕಳ್ಳ ಮಾರ್ಗಗಳೆಲ್ಲ ಗೊತ್ತಿದೆಯಲ್ಲ..' ಎಂದ ಬಾಸ್. ಎಲ್ಲರೂ ತಲೆಯಾಡಿಸಿದರು.
          ಇದಾಗಿ ಒಂದು ದಿನ ಕಳೆಯುತ್ತಿದ್ದಂತೆಯೇ ಉಂಚಳ್ಳಿ ಜಲಪಾತದ ಬಳಿಯ ಕಾಡಿನಲ್ಲಿ ಎರಡು ಬೃಹತ್ ತೇಗದ ಮರಗಳು ಧರಗುರುಳಿದ್ದವು. ದೊಡ್ಡದೊಂದು ಟ್ರಕ್ಕಿನಲ್ಲಿ ಯಾವುದೋ ಪಾರ್ಸಲ್ಲನ್ನು ತುಂಬಿಕೊಂಡು ಹೋಗಲಾಗುತ್ತಿದೆ ಎನ್ನುವಂತೆ ಮಾಡಿ ಅದರೊಳಕ್ಕೆ ತೇಗದ ಮರದ ತುಂಡುಗಳನ್ನು ತುಂಬಿ ಮುಂದಕ್ಕೆ ಒಯ್ಯಲಾಯಿತು. ಟ್ರಕ್ಕಿನ ಚಹರೆಯನ್ನು ಬದಲಿಸಿದ್ದ ಕಾರಣ ಮುಖ್ಯ ರಸ್ತೆಯಲ್ಲಿಯೇ ಹೋಗಬೇಕು ಎನ್ನುವ ತೀರ್ಮಾನ ಕಳ್ಳ ಸಾಗಾಣಿಕೆದಾರರದ್ದಾಗಿತ್ತು. ಅಲ್ಲೊಂದು ಕಡೆ ಅರಣ್ಯ ಇಲಾಖೆಯ ಚೆಕ್ ಪೋಸ್ಟ್ ಇತ್ತು. ಟ್ರಕ್ ಹತ್ತಿರ ಬರುತ್ತಿದ್ದಂತೆಯೇ ಟ್ರಕ್ಕನ್ನು ಇಬ್ಬರು ಗಾರ್ಡುಗಳು ಕೈ ಅಡ್ಡ ಹಾಕಿ ನಿಲ್ಲಿಸಿ ಬಿಟ್ಟರು. ಟ್ರಕ್ಕಿನಲ್ಲಿದ್ದವರಿಗೆ ಒಮ್ಮೆ ಭಯವಾಯಿತಾದರೂ ಜೊತೆಯಲ್ಲಿದ್ದವನೊಬ್ಬ ರೇಶನ್ ಸಾಗಿಸುತ್ತಿದ್ದೇವೆ ಎಂದ.
          ಆದರೆ ಗಾರ್ಡುಗಳಿಗೆ ಮಾತ್ರ ಅನುಮಾನ ಬಂದಂತಾಯಿತು. ಗಾಡಿ ನಿಲ್ಲಿಸಿ ಎಂದವರೇ ಟ್ರಕ್ಕಿನ ಹಿಂಭಾಗಕ್ಕೆ ಹೋಗಿ ತಪಾಸಣೆ ನಡೆಸಲು ಮುಂದಾದರು. ಕೂಡಲೇ ಬೆದರಿಸ ಕಳ್ಳಸಾಗಾಣಿಕೆದಾರರು ಅರಣ್ಯ ಇಲಾಖೆಯವರು ಹಾಕಿದ್ದ ಚೆಕ್ ಪೋಸ್ಟಿನ ಅಡ್ಡ ಕಂಬವನ್ನು ದಡಾರನೆ ಟ್ರಕ್ಕಿನ ಮೂಲಕ ಕಿತ್ತು ಮುಂದಕ್ಕೆ ಗಾಡಿಯನ್ನು ಚಲಾಯಿಸಿಯೇ ಬಿಟ್ಟರು. ತಕ್ಷಣ ಎಚ್ಚೆತ್ತುಕೊಂಡ ಗಾರ್ಡುಗಳು ಟ್ರಕ್ಕಿನ ನಂಬರ್ ಬರೆದುಕೊಂಡರು. ಅರಣ್ಯ ಇಲಾಖೆಯ ಕಚೇರಿಗೆ ಮಾಹಿತಿ ನೀಡಲು ಮುಂದಾದರು. ವಯರ್ ಲೆಸ್ ಮೂಲಕ ಹತ್ತಿರದ ಕಚೇರಿಗೆ ವಿಷಯವನ್ನು ತಿಳಿಸಿದರು. ಟ್ರಕ್ಕು, ಬಣ್ಣ, ಟ್ರಕ್ಕಿನಲ್ಲಿ ಏನನ್ನೋ ಕಳ್ಳಸಾಗಾಣಿಕೆ ಮಾಡಲಾಗುತ್ತಿದೆ ಕೂಡಲೇ ಹಿಡಿಯಿರಿ ಎಂದಿದ್ದಷ್ಟೇ ಅಲ್ಲದೇ ತಮ್ಮ ಬಳಿ ಇದ್ದ ಬೈಕಿನ ಮೂಲಕ ಲಾರಿಯನ್ನು ಬೆನ್ನತ್ತಿದರು. ಆ ನಂತರ ನಡೆದಿದ್ದು ಮಾತ್ರ ಸಿನೆಮಾ ಮಾದರಿಯ ಕಣ್ಣಾಮುಚ್ಚಾಲೆ. ಲಾರಿಯನ್ನು ಹಿಂಬಾಲಿಸಿ ಹಿಡಿಯಲು ಅನೇಕ ಸಾರಿ ಪ್ರಯತ್ನಿಸಿ ಸೋತರು ಗಾರ್ಡುಗಳು. ಕೊನೆಗೊಮ್ಮೆ ಟ್ರಕ್ಕಿನಲ್ಲಿದ್ದವರು ಏನೋ ಟ್ರಿಕ್ಕು ಮಾಡಿದರು. ಇದರಿಂದಾಗಿ ಟ್ರಕ್ಕನ್ನು ಬೆನ್ನತ್ತಿ ಹೋಗುತ್ತಿದ್ದ ಗಾರ್ಡುಗಳು ರಸ್ತೆ ಪಕ್ಕದ ಕಾಲುವೆಯಲ್ಲಿ ದಬಾರನೆ ಬಿದ್ದರು. ಬಿದ್ದವರೇ ತಮಗಾಗಿದ್ದ ಗಾಯವನ್ನೂ ನೋಡಿಕೊಳ್ಳದೇ ಹಿಗ್ಗಾ ಮುಗ್ಗಾ ಬಯ್ಯಲು ಆರಂಬಿಸಿದರು. ವೇಗವಾಗಿ ಹೋಗುತ್ತಿದ್ದ ಟ್ರಕ್ ರಸ್ತೆಯ ತಿರುವಿನಲ್ಲಿ ಕಣ್ಮರೆಯಾಯಿತು.

***

             ದೇಗುಲ ದರ್ಶನ ಮಾಡಿದವರು ಮನೆಗೆ ವಾಪಾಸಾಗುತ್ತಿದ್ದ ದಾರಿಯಲ್ಲಿ ಕಾಡನ್ನು ವೀಕ್ಷಣೆ ಮಾಡುತ್ತ ಬರುತ್ತಿದ್ದರು. ದಾರಿಯ ಇಕ್ಕೆಲಗಳಲ್ಲಿ ಅದೆಷ್ಟೋ ದೈತ್ಯ ಮರಗಳನ್ನು ಕಡಿದ ದೃಶ್ಯ ಕಾಣಿಸುತ್ತಿತ್ತು. ಮರಗಳ ಬುಡಗಳಷ್ಟೇ ನಿಂತಿದ್ದವು. ದೊಡ್ಡ ದೊಡ್ಡ ಬೊಡ್ಡೆಗಳಿದ್ದವು. ಬರುತ್ತಿದ್ದವರೆಲ್ಲ ಒಮ್ಮೆ ಛೇ ಎಂದುಕೊಂಡು ತಲೆಯನ್ನು ಕೊಡವಿದರು. ಬಂದ ದಾರಿಯಲ್ಲಿಯೇ ನದಿಯನ್ನು ದಾಟಿ ಮುನ್ನಡೆದರು. ವಿಕ್ರಮ ಹಾಗೂ ವಿಜೇತಾರಿಗೆ ಮಾತ್ರ ತಾವು ಮಾಡಬೇಕೆಂದುಕೊಂಡಿದ್ದ ಕೆಲಸ ಮುನ್ನಡೆಯುತ್ತಿಲ್ಲ ಎನ್ನುವ ತಲೆಬಿಸಿ ಹೆಚ್ಚಿತ್ತು. ಯಾವುದೋ ಒಂದು ಜಾಡನ್ನು ಹುಡುಕಿ, ಇನ್ನೇನು ಸುಳಿವು ಸಿಕ್ಕಿತು ಎನ್ನುವಷ್ಟರಲ್ಲಿ ಛೇ ಅದಲ್ಲ ಇದು  ಬೇರೆ ಮಾರ್ಗ ಬದಲಾಗುತ್ತಿತ್ತು. ಹೊಸ ಪಯಣವನ್ನು ಹುಡುಕಬೇಕಾಗುತ್ತಿತ್ತು. ವಿಕ್ರಮ ಹಾಗೂ ವಿಜೇತಾರು ಅದೆಷ್ಟು ಸಾರಿ ತಲೆ ಕೊಡವಿಕೊಂಡಿದ್ದರೋ.
               ಉಳಿದೆಲ್ಲ ಕೆಲಸವನ್ನು ಖೈದು ಮಾಡಿ ತಾವು ಬಂದ ಕೆಲಸಕ್ಕೇ ಮೊದಲು ಪ್ರಾಶಸ್ತ್ಯವನ್ನು ನೀಡಬೇಕು ಎಂದುಕೊಳ್ಳುತ್ತಿದ್ದಾಗಲೇ ಪಕ್ಕದ ಮನೆಯ ಗಣಪಜ್ಜ ಓಡಿ ಬಂದಿದ್ದ. ಕೈಯಲ್ಲಿ ಕೆಲವು ಕಾಗದಪತ್ರಗಳಿದ್ದವು. ಅಜ್ಜ ಬಂದವರೆ ಹೋಗಿ ಬಂದ್ರಾ ದೇವಸ್ತಾನಕ್ಕೆ..' ಎಂದರು. ಎಲ್ಲರೂ ತಲೆಯಾಡಿಸಿದರು. ಕೈಯಲ್ಲಿದ್ದ ಕಾಗದಪತ್ರವನ್ನು ತೆಗೆಯುತ್ತಾ `ನೋಡಿ. ಯನ್ನ ಅಪ್ಪಯ್ಯ ಗಣೇಶ ಹೆಗಡೆ ಅವರು ಅಡಿಕೆಯಿಂದ ಚಹಾ ಹಾಗೂ ಕಾಫಿಯ ತರಹ ಪೇಯವನ್ನು ತಯಾರು ಮಾಡಿದ್ದರಂತೆ. ಮೈಸೂರಿನ ಆಹಾರ ಗುಣಮಟ್ಟ ಪರಿಷ್ಕರಣ ಮಂಡಳಿಯಿಂದ ಪ್ರಮಾಣ ಮತ್ರ ಕೂಡ ಬಂದಿದೆ ನೋಡಿ.. ಏನೋ ಹುಡುಕುತ್ತಿದ್ದೆ. ಇದು ಸಿಕ್ಕಿತು. ತಕ್ಷಣ ನಿಮಗೆ ತೋರಿಸೋಣ ಎಂದು ತೆಗೆದುಕೊಂಡು ಬಂದಿ..' ಎಂದ ಗಣಪಜ್ಜ.
          ತೀರ್ಥಹಳ್ಳಿಯಲ್ಲಿ ಇತ್ತೀಚೆಗೆ ಯುವ ವಿಜ್ಞಾನಿಯೊಬ್ಬರು ಅಡಿಕೆಯಿಂದ ಪೇಯವನ್ನು ಕಂಡು ಹಿಡಿದಿದ್ದಾರೆ ಎನ್ನುವುದನ್ನು ಓದಿ ತಿಳಿದಿದ್ದ ವಿಜೇತಾ ಹಾಗೂ ವಿಕ್ರಮರಿಗೆ ಇದರಿಂದ ಅಚ್ಚರಿಯಾಯಿತು. ಅರ್ಧ ಶತಕದಷ್ಟು ವರ್ಷಗಳ ಹಿಂದೆಯೇ ಮಲೆನಾಡಿನ ಹಳ್ಳಿ ಮೂಲೆಯಲ್ಲಿ ಅಜ್ಜನೊಬ್ಬ ತಯಾರಿಸಿದ್ದ ಅಡಿಕೆ ಪೇಯ ಇತಿಹಾಸದ ಕಾಲಗರ್ಭದೊಳಗೆ ಮರೆಯಾಗಿ ಹೋಗಿತ್ತು. ಮತ್ತೆ ಎಲ್ಲೋ ಏನೋ ನೆನಪುಗಳು ಮರುಕಳಿಸಿದ ಹಾಗಾಯಿತು. ದಂಟಕಲ್ ಎಂಬ ಹಳ್ಳಿಯಲ್ಲಿ ಯಾವುದೋ ಕಾಲದಲ್ಲಿ ಏನೇನನ್ನೆಲ್ಲಾ ಮಾಡಿದ್ದರಲ್ಲಾ ಎಂದು ಯುವ ಪಡೆ ಹುಬ್ಬೇರಿಸುವ ಹಾಗೆ ಆಯಿತು.
          ಗಣೇಶಜ್ಜ ನ ಹಲವಾರು ಮುಖಗಳ ಅನಾವರಣವಾದಂತಾಗಿತ್ತು. ಸ್ವಾತಂತ್ರ್ಯ ಹೋರಾಟಗಾರನಾಗಿ, ಸಮಾಜ ಸೇವಕನಾಗಿ, ಶಿಕ್ಷಣ ಪ್ರೇಮಿಯಾಗಿ, ಕೃಷಿ ವಿಜ್ಞಾನಿಯಾಗಿ ಗಣೇಶಜ್ಜ ಅನಾವರಣಗೊಂಡಿದ್ದ. ಬಾದಾಮಿ ತೋಟ ಮಾಡಿದ್ದ, ಚಹಾ ಗಿಡಗಳನ್ನು ಬೆಳೆದಿದ್ದ, ಅನಂತ ಭಟ್ಟನ ಅಪ್ಪೆ ಮಿಡಿ ತಳಿ ರಕ್ಷಣೆ ಮಾಡಿದ್ದ, ಅಡಿಕೆಯ ಮೌಲ್ಯವರ್ಧನೆಯಲ್ಲಿ ತೊಡಗಿದ್ದ, ಬಹು ಉತ್ಪನ್ನ ತಯಾರಿಕೆಗೆ ಮುಂದಾಗಿದ್ದ. ಇವೆಲ್ಲ ಯುವ ಪಡೆಯ ಮನಸ್ಸನ್ನು ಸೂರೆಗೊಳಿಸಿತ್ತು. ಎಲ್ಲರೂ ಅಜ್ಜನಿಗೆ ನಮಿಸಿದರು.

(ಮುಂದುವರಿಯುತ್ತದೆ)

(ಗಣೇಶಜ್ಜ ಮಾಡಿದ್ದೆಲ್ಲವೂ ನಿಜವಾದ ಘಟನೆಗಳಾಗಿವೆ. ಯಾವುದೇ ಕಲ್ಪನೆಗಳಲ್ಲ)

No comments:

Post a Comment