Monday, July 6, 2015

ಅಘನಾಶಿನಿ ಕಣಿವೆಯಲ್ಲಿ-21

            ದಂಟಕಲ್ಲಿನಲ್ಲಿ ಪ್ರತಿಯೊಬ್ಬರೂ ಪೊಲೀಸರು ಬಂಧಿಸಿದ ಕಾರಣವನ್ನು ಕೇಳುವವರೇ ಆಗಿದ್ದರು. ಅವರೆಲ್ಲರಿಗೂ ಕಾರಣವನ್ನು ಹೇಳುವಷ್ಟರಲ್ಲಿ ಸುಸ್ತೋ ಸುಸ್ತು. ಪೊಲೀಸರ ದರ್ಪ, ಪ್ರದೀಪನ ಸಮಯಪ್ರಜ್ಞೆ, ಗಪ್ಪಜ್ಜನ ಪ್ರೀತಿ ಇತ್ಯಾದಿಗಳೆಲ್ಲ ಬಾಯಿಂದ ಬಾಯಿಗೆ ರಸವತ್ತಾಗಿ, ರೋಚಕವಾಗಿ ಹರಿದು ಬಂದಿದ್ದು ಮಾತ್ರ ವಿಶೇಷವಾಗಿತ್ತು. ಮಲೆನಾಡಿನ ಹಳ್ಳಿಗೆ ಬಂದಿದ್ದ ಯುವ ಪಡೆ ಮಲೆನಾಡಿನ ತುಂಬೆಲ್ಲ, ಅಷ್ಟೇ ಏಕೆ ರಾಜ್ಯದಾದ್ಯಂತ ಒಂದೇ ಕ್ಷಣದಲ್ಲಿ ಹೆಸರು ಮಾಡಿದ್ದು ಮಾತ್ರ ಸುಳ್ಳಲ್ಲ. ಪೊಲೀಸರಿಗೆ ಅದ್ಯಾರು ಮಾಹಿತಿ ನೀಡಿದ್ದರೋ ಏನೋ, ತಮ್ಮನ್ನು ನಕ್ಸಲರು ಎಂದುಕೊಂಡು ಬಂಧಿಸಿದ್ದು ಮಾತ್ರ ವಿಚಿತ್ರವಾಗಿತ್ತು. ಆದರೂ ಈ ಬಂಧನದ ಹಿಂದೆ ಇನ್ಯಾವುದೋ ಸಂಚಿದೆ ಎಂದು ವಿಕ್ರಮನಿಗೆ ಒಮ್ಮೆ ಅನ್ನಿಸಿತ್ತಾದರೂ ತನ್ನೆದುರು ಇರುವ ಅಗೋಚರ ಶತ್ರು ಇಷ್ಟೆಲ್ಲ ಮುಂದಕ್ಕೆ ಯೋಚಿಸಿರಲಾರ ಎಂದುಕೊಂಡ.
               ಅದ್ಯಾವುದೋ ದೊಡ್ಡ ಕಂಟಕ ಇಷ್ಟು ಚಿಕ್ಕದರಲ್ಲೇ ಹೋಯಿತು ಎಂದುಕೊಂಡರು ಎಲ್ಲರೂ. ಖಂಡಿತವಾಗಿಯೂ ಗುಡ್ಡೇತೋಟದ ಕೋಟೆ ವಿನಾಯಕನ ಶ್ರೀರಕ್ಷಯಿಂದ ದೊಡ್ಡ ಆಪತ್ತು ಚಿಕ್ಕದರಲ್ಲಿಯೇ ಪರಿಹಾರವಾಗಿದೆ ಎಂದುಕೊಂಡರು ಎಲ್ಲರೂ. ಮರುದಿನ ಗುಡ್ಡೇತೋಟಕ್ಕೆ ಹೋಗಿ ದೇವರಿಗೆ ಪೂಜೆ ಮಾಡಿ ಬರಬೇಕು ಎಂದು ನಿಶ್ಚಯಿಸಿಕೊಂಡರು.

000000

              `ಗುಡ್.. ಒಳ್ಳೆಯಕ ಕೆಲಸ ಮಾಡಿದ್ದಿರಿ. ಆದರೆ ಇಷ್ಟು ಸುಲಭದಲ್ಲಿ ಅವರು ತಪ್ಪಿಸಿಕೊಂಡು ಬರುತ್ತಾರೆ ಎನ್ನುವುದು ಮಾತ್ರ ಗೊತ್ತಿರಲಿಲ್ಲ ನೋಡಿ..' ಎಂದ ಒಬ್ಬಾತ.
             `ನಾವೇನೋ ಸರಿಯಾದ ಮಾಹಿತಿಯನ್ನೇ ಕೊಟ್ಟಿದ್ದೆವು. ಪೊಲೀಸರ ಬಳಿ ದಂಟಕಲ್ಲಿಗೆ ಬಂದಿದ್ದವರು ನಕ್ಸಲರು ಎಂದೇ ಹೇಳಿದ್ದೆವು. ಅಷ್ಟೇ ಅಲ್ಲದೇ ಮೀಡಿಯಾಕ್ಕೂ ತಿಳಿಸಿ ಆಗಿತ್ತು. ಆದರೆ ಬಂಧಿಸಿದವರಲ್ಲಿ ಒಬ್ಬಾತ ಮಾತ್ರ ದೊಡ್ಡ ದೊಡ್ಡ ಕಾಂಟ್ಯಾಕ್ಟ್ ಹೊಂದಿದ್ದಾನೆ. ಅವನೇ ಇಷ್ಟು ಬೇಗ ಎಲ್ಲರೂ ವಾಪಾಸು ಬರಲು ಪ್ರಮುಖ ಕಾರಣ ನೋಡಿ..' ಎಂದ ಇನ್ನೊಬ್ಬಾತ.
           `ಓಹ್ ಹೌದಾ. ಯಾವುದಕ್ಕೂ ಹುಷಾರಾಗಿರಿ. ಯಾವುದೇ ಅವಕಾಶಕ್ಕಾಗಿ ಕಾಯುತ್ತಿರಿ. ಅನುಕೂಲಕರ ಅವಕಾಶ ಸಿಕ್ಕ ತಕ್ಷಣ ಬಂದಿದ್ದವರನ್ನು ಹಣಿದು ಹಾಕಿ. ಯಾಕೋ ಅವರು ಸುಮ್ಮನೆ ಬಂದಿಲ್ಲ ಎಂಬ ಅನುಮಾನ ಬರುತ್ತಿದೆ. ಪಾತರಗಿತ್ತಿ ಸರ್ವೆ ಮಾಡುವುದು, ಕಾಡು ಸುತ್ತುವುದು ಕೇವಲ ನೆಪ ಇರಬೇಕು. ನಾವು ಎಲ್ಲದಕ್ಕೂ ಸಜ್ಜಾಗಿ ಇರೋಣ. ಸದವಕಾಶ ಸಿಕ್ಕ ತಕ್ಷಣ ಅವರನ್ನು ವಾಪಾಸು ಕಳಿಸುವ ಕೆಲಸ ಮಾಡೋಣ..'ಎಂದು ಮೊದಲನೆಯವನು ಹೇಳಿದ್ದಕ್ಕೆ ಎರಡನೆಯವರು ಒಪ್ಪಿಗೆ ಸೂಚಿಸಿದ. ತಲೆಯಲ್ಲಾಡಿಸಿದ.
            ವಿಕ್ರಮ ಹಾಗೂ ಆತನ ಜೊತೆಗಾರರು ದಂಟಕಲ್ ಹಾಗೂ ಸುತ್ತಮುತ್ತಲ ಹಳ್ಳಿಗೆ ಬಂದಿರುವುದನ್ನು ಗಮನಿಸುವವರೂ ಇದ್ದಾರೆ ಎನ್ನುವುದು ಮಾತ್ರ ಸಾಬೀತಾಗಿತ್ತು. ಅವಕಾಶ ಸಿಕ್ಕರೆ ವಿಕ್ರಮನ ತಂಡವನ್ನು ಹಣಿದು ಹಾಕಲೂ ಸನ್ನದ್ದರಾಗಿದ್ದರು. ಆದರೆ ವಿಕ್ರಮನ ಗುಂಪಿಗೆ ಇದರ ಅರಿವಿದೆಯಾ? ಬಲ್ಲವರ್ಯಾರು?

++++++

          ಮುಂಜಾನೆದ್ದು ಪ್ರಾತರ್ವಿಧಿಗಳನ್ನು ಮುಗಿಸಿ ಎಲ್ಲರೂ ಗುಡ್ಡೇತೋಟಕ್ಕೆ ತೆರಳಲು ಸಜ್ಜಾದರು. ಮನೆಯಿಂದ ಹೊರಟು ಅಘನಾಶಿನಿ ನದಿಗುಂಟ ಹಾದು ಬಂದು ಗದ್ದೆಯ ಮನೆ ಬಳಿ ತೆರಳಿದರು. ಅಲ್ಲಿಯೇ ಇರುವ ಕಾಕಾಲಗದ್ದೆ ಎಂಬಲ್ಲಿ ಅಘನಾಶಿನಿ ನದಿ ವಿಶಾಲವಾಗಿ ಹರಿಯುತ್ತಾಳೆ. ಉಳಿದ ಕಡೆಗಳಲ್ಲಿ ಎದೆ ಮಟ್ಟವೋ, ಕುತ್ತಿಗೆ ಮಟ್ಟವೋ ಆಳವಾಗಿ ಹರಿಯುವ ಅಘನಾಶಿನಿ ನದಿ ಕಾಕಾಲ ಗದ್ದೆ ಎಂಬಲ್ಲಿ ಮಾತ್ರ ಪಾದ ಮುಳುಗುವಷ್ಟು ಮಾತ್ರ ಆಳವಾಗಿದ್ದಾಳೆ. ವಿಶಾಲವಾಗಿ ಹರಿಯುವ ಕಾರಣ ಕಾಕಾಲ ಗದ್ದೆಯಲ್ಲಿ ನದಿ ಆಳವಾಗಿಲ್ಲ. ಚಿಕ್ಕ ಮಕ್ಕಳೂ ಕೂಡ ಸಲೀಸಾಗಿ ನದಿಯನ್ನು ನಡೆದುಕೊಂಡು ದಾಟಬಹುದು. ಅಷ್ಟೇ ಏಕೆ ಕೆಲವು ಉತ್ಸಾಹಿ ಹೈದರು ಈ ಕಾಕಾಲ ಗದ್ದೆಯಲ್ಲಿಯೇ ತಮ್ಮ ಬೈಕನ್ನೂ ದಾಟಿಸುವ ಸಾಹಸ ಮಾಡುತ್ತಾರೆ. ಈ ಪ್ರದೇಶಕ್ಕೆ ಕರೆದುಕೊಂಡು ಬಂದ ವಿನಾಯಕ ಹೊಳೆಯನ್ನು ದಾಟಬೇಕು ಎಂದ. ಅಘನಾಶಿನಿಯನ್ನು ದಾಟಲೋಸುಗ ಎಲ್ಲರೂ ನದಿಯಲ್ಲಿ ಕಾಲಿಟ್ಟು. ನದಿ ನೀರು ಅದೆಷ್ಟು ತಣ್ಣಗಿತ್ತು ಎಂದರೆ ಪಾದದ ಮೂಲಕ ನೆತ್ತಿಯೂ ತಂಪಾದಂತೆ ಅನ್ನಿಸಿತು.
            ವಿಜೇತಾ ಹಾಗೂ ಮಹಿಳಾ ಮಣಿಯರು ತಂಪಾದ ನೀರಿನಲ್ಲಿ ಆಡಲು ಮುಂದಾಗಿದ್ದರು. ಆದರೆ ಮೊದಲು ದೇಗುಲ ದರ್ಶನ ಮಾಡಿ ನಂತರ ಮುಂದಿನ ಕೆಲಸ ಎಂದುಕೊಂಡು ನದಿಯನ್ನು ಬೇಗನೇ ದಾಟಲು ಮುಂದಾದರು. ನದಿಯನ್ನು ದಾಟಿದಂತೆಯೇ ದೊಡ್ಡದೊಂದು ಗದ್ದೆ ಬಯಲು ಸಿಗುತ್ತದೆ. ಹಿತ್ತಲಕೈ ಗ್ರಾಮಕ್ಕೆ ಸೇರಿದ ಈ ಗದ್ದೆ ಬಯಲಿನ ಪಕ್ಕದಲ್ಲಿಯೇ ಒಂದೆರಡು ಮನೆಗಳಿರುವ ಕಾಕಾಲಗದ್ದೆ ಎನ್ನುವ ಹಳ್ಳಿ ಇದೆ. ಇಲ್ಲಿ ಹಾದು ಮುಂದಕ್ಕೆ ಅಡಿ ಇಟ್ಟಂತೆಲ್ಲ ನಿಧಾನವಾಗಿ ಕಾಡು ಆವರಿಸತೊಡಗಿತು. ಸರಿಸುಮಾರು 1 ಕಿ.ಮಿ ದೂರದವರೆಗೆ ಕಾಡಿನ ದಾರಿಯಲ್ಲಿ ನದಿಗೆ ಸಮಾನಾಂತರವಾಗಿ ಸಾಗಿದ ನಂತರ ದೊಡ್ಡದೊಂದು ಗುಡ್ಡ ಎದುರಾಯಿತು.
            `ಈ ಗುಡ್ಡದ ಮೇಲೆಯೇ ಗುಡ್ಡೇತೋಟ ಊರಿದೆ. ಇಲ್ಲಿಯೇ ಕೋಟೆ ವಿನಾಯಕನ ದೇವಸ್ಥಾನ ಇದೆ..' ಎಂದ ವಿನಾಯಕ. ಎಲ್ಲರೂ ಗುಡ್ಡವನ್ನು ಏರಲು ಉತ್ಸುಕರಾದರು. ಎದೆಯ ಮಟ್ಟಕ್ಕಿದ್ದ ಗುಡ್ಡವನ್ನು ಏರುವುದು ಸುಲಭವಲ್ಲ ನೋಡಿ. ಪ್ರತಿಯೊಬ್ಬರಿಗೂ ಏದುಸಿರುವ ಬರುತ್ತಿತ್ತು. ಆದರೂ ಗುಡ್ಡವನ್ನೇರುವ ಛಲ ಯಾರಲ್ಲೂ ಕಡಿಮೆಯಾಗಿರಲಿಲ್ಲ. ದೇಹಕ್ಕೆ ಸುಸ್ತಾಗುತ್ತಿತ್ತದ್ದರೂ ಅದನ್ನು ತೋರಿಸಿಕೊಳ್ಳದೇ ಮುಂದಕ್ಕೆ ಹೋಗುತ್ತಿದ್ದರು.
           ಇದ್ದಕ್ಕಿದ್ದಂತೆ `ಅರೇ.. ಅಲ್ಲಿ ನೋಡಿ.. ಅದು ಕಾಡುಕೋಣ ಅಲ್ಲವಾ..' ಎಂದ ಪ್ರದೀಪ.
           ಪ್ರದೀಪ ತೋರಿಸಿದತ್ತ ಎಲ್ಲರೂ ದೃಷ್ಟಿ ಹಾಯಿಸಿದರು. ` ಹೌದು.. ಕಾಡುಕೋಣದ ಹಿಂಡು ಅಲ್ಲಿ ಹುಲ್ಲು ತಿನ್ನುತ್ತಿದೆ ನೋಡಿ.. ಆರು ಇದೆ. ಅಲ್ಲಲ್ಲ.. ಎಂಟು ಇರಬೇಕು ನೋಡಿ..' ಎಂದ ವಿನಾಯಕ.
            ಸನಿಹದಲ್ಲೇ ಇದ್ದ ನೀರಿನ ಒರತೆಯಲ್ಲಿ ಕಾಡೆಮ್ಮೆಗಳ ಹಿಂಡೊಂದು ಹುಲ್ಲು ತಿನ್ನುತ್ತ ಆರಾಮಾಗಿ ನಿಂತಿತ್ತು. ದೇವಸ್ಥಾನ ನೋಡಲು ಹೊರಟಿದ್ದವರನ್ನು ಕಾಡೆಮ್ಮೆಗಳು ಒಮ್ಮೆ ತಲೆಯೆತ್ತಿ ನೋಡಿದವು. ಯುವ ಪಡೆಯ ಮಾತು, ಕತೆಗಳು ಕಾಡೆಮ್ಮೆಗಳಲ್ಲಿಯೂ ವಿಸ್ಮಯ ಮೂಡಿಸಿರಬೇಕು. ಹಾಗೆಯೇ ಕೆಲಕಾಲ ತಲೆ ಎತ್ತಿ ನೋಡುತ್ತಿದ್ ಅವುಗಳು ಯುವ ಪಡೆಯಿಂದ ತಮಗೆ ಯಾವುದೇ ಅಪಾಯ ಆಗುವುದಿಲ್ಲ ಎಂದುಕೊಂಡಿರಬೇಕು. ನಿಧಾನವಾಗಿ ತಮ್ಮ ಕೆಲಸದಲ್ಲಿ ತಾವು ನಿರತವಾದವು. ಯುವ ಪಡೆ ಕೂಡ ಕೆಲ ಕಾಲ ಕಾಡೆಮ್ಮೆಗಳನ್ನು ನೋಡಿ, ಅವುಗಳ ಗಾತ್ರ, ನಿಲುವುಗಳನ್ನೆಲ್ಲ ಲೆಕ್ಖಹಾಕಿ, ಅವುಗಳ ಬಗ್ಗೆ ಮಾತನಾಡುತ್ತ ಮುಂದಕ್ಕೆ ಹೆಜ್ಜೆ ಇಟ್ಟಿತು.
           ಗುಡ್ಡೇತೋಟದ ದೇವಸ್ಥಾನವನ್ನು ದರ್ಶನ ಮಾಡಬೇಕೆಂದರೆ ಎದೆಯ ಎತ್ತರದ ಗುಡ್ಡವನ್ನು ಏರುವುದು ಅನಿವಾರ್ಯ. ಗುಡ್ಡವನ್ನು ಏರಿದ ನಂತರ ಸ್ವಲ್ಪ ವಿಶಾಲ ಎನ್ನಬಹುದಾದ ಸ್ಥಳ ಸಿಕ್ಕಿತು. ಬಯಲಿನಲ್ಲಿ ಒಂದು ಕಡೆ ಗದ್ದೆಯನ್ನು ಬೆಳೆಯಲಾಗಿದದ್ದರೆ ಇನ್ನೊಂದು ಕಡೆಯಲ್ಲಿ ಹಳೆಯದು ಎನ್ನುವಂತಹ ದೇವಾಲಯ ಭವ್ಯವಾಗಿ ನಿಂತಿತ್ತು. ದೇಗುಲದ ಎದುರು ಒಂದು  ದೇವಕಣಗಿಲೆ ಮರವಿತ್ತು. ಅದರಲ್ಲಿ ಬಿಳಿಯ ಬಣ್ಣದ ಹೂವುಗಳು ಸುವಾಸನೆಯನ್ನು ಬೀರುತ್ತ ಅರಳಿ ನಿಂತಿದ್ದವು. ದೇಗುಲದ ಹಿಂಭಾಗದಲ್ಲಿ ಸ್ವರ್ಣವಲ್ಲಿ ಸಂಸ್ಥಾನದ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮೀಜಿಗಳ ಅಮೃತ ಹಸ್ತದಿಂದ ಉದ್ಘಾಟನೆಯಾದ ಭೋಜನ ಶಾಲೆಯಿತ್ತು.
            ಗುಡ್ಡೇತೋಟದ ಕೋಟೆ ವಿನಾಯಕನ ಸನ್ನಿಧಾನದ ಒಳಗೆ ಎಲ್ಲರೂ ಕೈ ಕಾಲುಗಳನ್ನು ತೊಳೆದುಕೊಂಡು ಕಣ್ಣಿಗೆ ನೀರನ್ನು ಹಚ್ಚಿಕೊಂಡು ಮುನ್ನಡೆದರು. ದೇಗುಲದ ಅರ್ಚಕರು ಆಗಲೇ ಪೂಜೆಯಲ್ಲಿ ನಿರತರಾಗಿದ್ದರು. ದೇಗುಲದ ಒಳಕ್ಕೆ ಕಾಲಿರಿಸಿದವರೇ ದೇವಾಲಯವನ್ನು ನಾಲ್ಕೈದು ಸಾರಿ ಸುತ್ತು ಹೊಡೆದು ಗಂಟೆಯನ್ನು ಭಾರಿಸಿ ದೇವರಿಗೆ ಉದ್ದಾಂಡ ನಮಸ್ಕಾರವನ್ನೂ ಮಾಡಿದರು. ಇವರಿಗಾಗಿಯೇ ಕಾಯುತ್ತಿದ್ದರೋ ಎನ್ನುವಂತೆ ದೇವಾಲಯದಲ್ಲಿ ಅರ್ಚಕರು ಮಂಗಳಾರತಿಯನ್ನು ಕೈಗೊಂಡರು. ಪ್ರತಿಯೊಬ್ಬರೂ ಹಣ್ಣು-ಕಾಯಿ ಮಾಡಿಸಿಕೊಂಡು ದೇವರಿಂದ ಪ್ರಸಾದ ಪಡೆದು ಒಳ್ಳೆಯದನ್ನು ಮಾಡಪ್ಪ ಭಗವಂತಾ ಎಂದರು.
             ವಿಕ್ರಮ, ವಿಜೇತಾರು ತಾವು ಬಂದಿದ್ದ ಕಾರ್ಯ ಕೈಗೂಡಲಿ ಎಂದು ಬೇಡಿಕೊಂಡರು. ಅಷ್ಟರಲ್ಲಿಯೇ ಗರ್ಭಗುಡಿಯಲ್ಲಿ ಪೂಜಾ ಕೈಂಕರ್ಯವನ್ನು ಮುಗಿಸಿ ಹೊರಬಂದರು. `ಅರೇ ವಿನಾಯಕ.. ಯಾರಪ್ಪಾ ಬಂದವರು ಎಂದುಕೊಂಡೆ.. ಇವರೆಲ್ಲ ಯಾರು...?' ಎಂದರು.
          `ಇವರೆಲ್ಲ ನನ್ನ ಗೆಳೆಯರು ಬೆಂಗಳೂರು ಕಡೆಯಿಂದ ಬಂದಿದ್ದಾರೆ. ನಮ್ಮೂರ ಭಾಗದಲ್ಲಿ ಪಾತರಗಿತ್ತಿ ಹಾಗೂ ವಿವಿಧ ಪ್ರಾಣಿಗಳ ದಾಖಲೆ ಮಾಡಲು ಬಂದಿದ್ದಾರೆ..' ಎಂದ.
            `ಹೌದಾ.. ಯಾರೋ ಬಂದಿದ್ದಾರೆ ಎಂದು ಸುದ್ದಿಯಾಗಿತ್ತು. ಇವರೇಯೋ ಹೇಗೆ..' ಎಂದರು. ಎಲ್ಲರೂ ತಲೆಯಾಡಿಸಿದರು.
            ವಿನಾಯಕ ಭಟ್ಟರ ಬಳಿ ದೇವಸ್ಥಾನದ ವಿಶೇಷತೆಗಳನ್ನು ಎಲ್ಲರಿಗೂ ಹೇಳಿ ಎಂದ. ದೇವಸ್ಥಾನದ ವಿಶೇಷತೆಗಳನ್ನು ಹೇಳಲು ಮುಂದಾದ ಭಟ್ಟರು ಎಲ್ಲರನ್ನೂ ಒಂದು ಕಡೆ ಕುಳ್ಳಿರಿಸಿದರು.
          `ನೋಡಿ ಈ ದೇವಸ್ಥಾನಕ್ಕೆ ಕನಿಷ್ಟವೆಂದರೂ 500 ರಿಂದ 600 ವರ್ಷ ಇತಿಹಾಸವಿದೆ. ಬಹಳಾ ಘಟಾಘಟಿ ಜಾಗ. ಈ ಮೊದಲು ಈ ದೇವಸ್ಥಾನ ನಮ್ಮೂರಿಗೆ ಹತ್ತಿರದ ಹೂವಿನಮನೆಯ ಕೋಟೆಗುಡ್ಡ ಎಂಬಲ್ಲಿ ಇತ್ತು. ಆ ನಂತರ ಅದ್ಯಾರಿಗೂ ಕನಸಿನಲ್ಲಿ ಬಂದ ಕಾರಣ ಇಲ್ಲಿಗೆ ದೇವಸ್ಥಾನವನ್ನು ಬದಲಿಸಲಾಯಿತು. ಬಾಳೂರಿನ ಅರಸರ ಆಳ್ವಿಕೆಯ ಕಾಲದಲ್ಲಿ ಈ ದೇವಸ್ಥಾನಕ್ಕೆ ಕಟ್ಟಡವನ್ನು ನಿರ್ಮಾಣ ಮಾಡಲಾಯಿತು. ಬಾಳೂರು ಅರಸರು ದೇವಸ್ಥಾನ ನಿರ್ಮಾಣ ಮಾಡಿದ ಕಾರಣದಿಂದಾಗಿ ದೇಗುಲದ ಮುಂದೆ ಒಂದು ನಂದಿ ಆಕೃತಿಯನ್ನು ಸ್ಥಾಪಿಸಲಾಗಿದೆ. ಈ ನಂದಿ ಬಾಳೂರ ಅಸನ ಪ್ರತೀಕ. ಗಣಪನ ದೇವಾಲಯದ ಮುಂದೆ ನಂದಿ ಇರುವ ಕೆಲವೇ ಕೆಲವು ವಿಶಿಷ್ಟ ನಿದರ್ಶನಗಳಲ್ಲಿ ಇದು ಒಂದು ನೋಡಿ..' ಎಂದರು ಭಟ್ಟರು. ಎಲ್ಲರೂ ಅತ್ತ ಕಡೆ ಕಣ್ಣು ಹಾಯಿಸಿದರು.
              `ಈ ದೇವಸ್ಥಾನಕ್ಕೆ ಇನ್ನೂ ಒಂದು ವಿಶೇಷತೆಯಿದೆ ನೋಡಿ. ಈ ಗಣಪನನ್ನು ಎಲೆಕ್ಷನ್ ಗಣಪ ಎಂದೂ ಕರೆಯಲಾಗುತ್ತದೆ. ಅಂದರೆ ಎಲೆಕ್ಷನ್ ಸಮಯದಲ್ಲಿ ನಮ್ಮ ಗಣಪನಿಗೆ ಎಲ್ಲಿಲ್ಲದ ಬೇಡಿಕೆ. ಚುನಾವಣೆಯಲ್ಲಿ ಟಿಕೆಟ್ ಬೇಕಾದವರು ಇಲ್ಲಿಗೆ ಬಂದು ಹರಕೆ ಹೊತ್ತುಕೊಂಡರೆ ಟಿಕೆಟ್ ಸಿಗುತ್ತದೆ ಎನ್ನುವ ನಂಬಿಕೆಯಿದೆ. ಟಿಕೆಟ್ ಸಿಕ್ಕವರಲ್ಲಿ ಕೆಲವರು ಗೆಲುವಿಗಾಗಿ ಪೂಜೆಯನ್ನು ಮಾಡಿಸುವುದೂ ಇದೆ. ಗೆದ್ದವರೂ ಬಂದು ಪೂಜೆ ಮಾಡಿಸುತ್ತಾರೆ ನೋಡಿ. ಈ ಕಾರಣದಿಂದ ನಮ್ಮ ಗಣಪ ಎಲೆಕ್ಷನ್ ಗಣಪ ಆಗಿದ್ದಾನೆ. ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿಯೂ ಕೂಡ ಹಲವರು ಬಂದು ಪೂಜೆ ಮಾಡಿಸಿದ್ದರು ನೋಡಿ..' ಎಂದರು ಭಟ್ಟರು.
             `ದೇವರಿಗೆ ಪೂಜೆ ಸಲ್ಲಿಸಿ, ಗಂಟೆಯನ್ನು ಹರಕೆಯ ರೂಪದಲ್ಲಿ ಒಪ್ಪಿಸುವುದು ಇಲ್ಲಿನ ವಾಡಿಕೆ. ಕಾಡಿನ ಮಧ್ಯದಲ್ಲಿ ಇರುವ ಈ ದೇವರನ್ನು ನೋಡಲು ರಾಜ್ಯದ ಹಲವು ಕಡೆಗಳಿಂದ ಬರುತ್ತಾರೆ ನೋಡಿ. ಇಂತಹ ಈ ದೇವಾಲಯದ ಪ್ರದೇಶ ಗುಡ್ಡದ ಮೇಲಿದ್ದರೂ ಇಲ್ಲಿ ನೀರಿನ ಸೆಲೆ ಚನ್ನಾಗಿದೆ. ಎಲ್ಲ ಭಗವಂತನ ಆಶೀರ್ವಾದ ನೋಡಿ..' ಎಂದರು ಭಟ್ಟರು.
            ಪ್ರತಿಯೊಬ್ಬರೂ ದೇವರ ಮಹಿಮೆಯ ಬಗ್ಗೆ ಅಚ್ಚರಿ ತೋರಿಸುತ್ತಾ ವಾಪಾಸಾಗಲು ಮುಂದಾದರು. ಆಗ ಇದ್ದಕ್ಕಿದ್ದಂತೆ ಅಚಾತುರ್ಯವೊಂದು ಘಟಿಸಿಬಿಟ್ಟಿತು. ಯಾರೂ ಅಂದುಕೊಂಡಿರದ ಘಟನೆಯೊಂದು ಜರುಗಿತು. ಅಚಾನಕ್ ಆಗಿ ನಡೆದ ಘಟನೆ ಎಲ್ಲರ ಮನಸ್ಸಿನಲ್ಲಿ ಭಯದ ಛಾಯೆ ಆವರಿಸಿತು.

(ಮುಂದುವರಿಯುತ್ತದೆ.)

No comments:

Post a Comment