Monday, May 19, 2014

ದಾರಿ ತಪ್ಪಿದ ಗಾಂಜಾವಾಲ ಮ,ತ್ತೊಮ್ಮೆ ಸಿಕ್ಕಿದ್ದ

ಇದು `ಮನದ ತುಂಬಾ ಕನಸು ಕಟ್ಟಿ ನಲಿದ ಗೆಳೆಯ ಗಾಂಜಾವಾಲನಾಗಿ ಹೋದ ಪರಿ'ಯ ಮುಂದಿನ ಭಾಗ.  ಆಗ ಹಾಗೆ ಆಗಿದ್ದ ಗೆಳೆಯ ಮತ್ತೊಮ್ಮೆ ಸಿಕ್ಕಿದ್ದ. ಈಗ ಹೇಗಾಗಿದ್ದಾನೆ ಎನ್ನುವುದು ಇಲ್ಲಿ ಅಡಕವಾಗಿದೆ.. ಓದಿ

**
         ಮನದ ತುಂಬಾ ಕನಸು ಕಟ್ಟಿ ನಲಿದ ಗೆಳೆಯ ಗಾಂಜಾವಾಲನಾಗಿ ಹೋದವನು ಸರಿದಾರಿಯೆಡೆಗೆ ಅಂತೂ ಇಂತೂ ಬರತೊಡಗಿದ್ದಾನೆ. ಏಕೋ ಏನೋ ಮನಸ್ಸು ಉಲ್ಲಾಸದಿಂದ ಹೂವಂತಾಗುತ್ತಿದೆ. ಯಾರ್ಯಾರದ್ದೋ ಬೆಂಬಲ-ಕೈವಾಡದಿಂದಾಗಿ ಹಾದಿತಪ್ಪಿ ಗಾಂಜಾವಾಲನಾಗಿ ಹೋಗಿದ್ದ ದೀಪಕ ಮತ್ತೆ ದಡ ಹತ್ತಲು ಯತ್ನಿಸುತ್ತಿದ್ದಾನೆ.
         ಗಾಂಜಾ ಸೇದುವುದು, ಇಸ್ಪೀಟ್ ಆಡುವುದು, ಕುಡಿಯೋದು ಹೊಡೆದಾಟ, ರೌಡಿಸಂಗಳಂತಹ ಕೂಪಕ್ಕೆ ಬಿದ್ದು ಮರ್ಯಾದೆ ಕಳೆದುಕೊಂಡು ಬದುಕನ್ನು ಮೂರಾಬಟ್ಟೆಯಾಗಿಸಿಕೊಮಡಿದ್ದ ಗೆಳೆಯನೀಗ ಹೊಸ ಮನುಷ್ಯನಾಗುವತ್ತ ಹೆಜ್ಜೆ ಇಡುತ್ತಿದ್ದಾನೆ.
          ಹಿಂದೊಮ್ಮೆ ದುಃಖಪಟ್ಟು ಬೇಜಾರದಿಂದ ನಾನೇ ಬರೆದಿದ್ದೆ. ಆದರೆ ಈಗ ಸಮಾಧಾನಪಟ್ಟುಕೊಳ್ಳುವಷ್ಟರ ಮಟ್ಟಿಗೆ ಬದಲಾಗಿದ್ದಾನೆ. ಹಳೆಯ ದೀಪಕ ಇವನೇನಾ ಅನ್ನುವಷ್ಟಾಗಿದ್ದಾನೆ. ಅವನೊಳಗಣ ಬದಲಾವಣೆಯನ್ನು ನಾವು ಕಾಣಬಹುದೆನ್ನುವಷ್ಟರ ಮಟ್ಟಿಗೆ ಹೊಸತನವನ್ನು ಮೈಗೂಡಿಸಿಕೊಂಡಿದ್ದಾರೆ.
           ಪಾ..ಪ.. ಅವನನ್ನು ಸರಿಮಾಡಲು ಅವನ ತಾಯಿ ಅದೆಷ್ಟು ಕಷ್ಟ ಪಟ್ಟಳೋ. ಮಾತೆತ್ತಿದರೆ `ಏಯ್.. ನಿನ್ನಕ್ಕನ್...' ಅಂತನ್ನುತ್ತಿದ್ದ ಅವನನ್ನು ಅವಳು ಅದ್ಹೇಗೆ ಸಹಿಸಿಕೊಂಡಳೋ. ತಿದ್ದಿ ತೀಡಿದ್ದಾಳೆ ಆಕೆ.
           ಹಿಂದೆ ನಾನು ತಿಳಿಸಿದ ಸಂದರ್ಭದಲ್ಲಿಯೇ ಪೊಲೀಸರ ಪುಸ್ತಕದಲ್ಲಿ ಹೆಸರುವಾಸಿಯಾಗಿದ್ದ ದೀಪಕ ಮುಂದೂ ಕೆಲವು ತಿಂಗಳೂ ಅದೇ ವೃತ್ತಿಯಲ್ಲಿ ಮುಂದುವರಿದ.. ಆತನ ಮಾವ ಗಣೇಶ ಭಟ್ಟರಿಗೆ ಹಾಗೂ ಊರಿನ ತುಂಬೆಲ್ಲ ಆತನ ಉಪಟಳ ತಡೆಯಲಾಗದಂತಾಯ್ತು. ಕೋತಿ ತಾನು ಕೆಡೋದಲ್ಲದೇ ಇತರರನ್ನೂ ಕೆಡಿಸಿತ್ತು ಎನ್ನುವಂತೆ ಈತನನ್ನು ನೋಡಿ ಉಳಿದ ಕಿರಿಯ ಹುಡುಗರೆಲ್ಲ ತಾವೂ ಪುಂಡಾಟಕ್ಕೆ ಶುರುಹಚ್ಚಿಕೊಂಡರು. ಒಂದಿಬ್ಬರು ದೀಪಕನ ಜೊತೆಗೆ ಸೇರಿ ಸಿಗರೇಟಿನ ದಮ್ಮೆಳೆದ ಮೇಲಂತೂ ಮಾವನಿಗೆ ಈತನ ಮೇಲೆ ಬರುವ ಕಂಪ್ಲೇಂಟೂ ಹೆಚ್ಚಾಯಿತು. ಇನ್ನು ತಡೆಯುವುದು ಅಸಾಧ್ಯ ಎಂದರಿತ ಆತನ ಮಾವ ದೀಪಕನನ್ನು ಊರು ಬಿಡಿಸುವ ನಿರ್ಧಾರಕ್ಕೆ ಬಂದರು. ಒಂದು ದಿನ ಊರನ್ನೂ ಬಿಡಿಸಿದರು.
            ಮುಂದೆ ಅಂವ ಪಟ್ಟ ಪಡಿಪಾಟಲನ್ನು ಅವನ ಬಾಯಲ್ಲೇ ಕೇಳಿ :- ಮಾವ ಅಂತೂ ನನ್ನ ಊರಿಂದ ಓಡಿಸಿಬಿಟ್ಟ. ಮಾಡೋದೇನು? ನನಗಂತೂ ಚಿಂತೆಯಾಯಿತು. ಅಮ್ಮ ಬೆಂಗಳೂರಿನಲ್ಲಿದ್ದಳು. ತಮ್ಮ ಹೈಸ್ಕೂಲು ಮೆಟ್ಟಿಲು ಹತ್ತಿದ್ದ. ನನಗೆ ಅಲ್ಲಿಗೆ ಹೋಗಲು ಮನಸ್ಸಾಗಲಿಲ್ಲ. ಕೊನೆಗೆ ಉಡುಪಿಗೆ ಹೋದೆ. ಅಲ್ಲಿ ಉಳಿದುಕೊಳ್ಳಲು ಚಿಕ್ಕಪ್ಪ ಜಾಗಕೊಟ್ಟರು. ಮಾಡಲಿಕ್ಕೆಂದು ಎಂತದ್ದೋ ಒಂದು ಚಿಕ್ಕ ಕೆಲಸವನ್ನೂ ಹಿಡಿಸಿಕೊಟ್ಟರು. ಆದರೆ ಕುಡಿತ, ಸಿಗರೇಟು ಬಿಡಲಿಲ್ಲ. ನಾನು ದುಡಿದದ್ದನ್ನೆಲ್ಲ ಅವಕ್ಕೆ ಸುರಿದರೂ ದುಡ್ಡು ಸಾಕಾಗದೇ ಒದ್ದಾಡುವಂತಾಯಿತು. ರೌಡಿಯಿಸಮ್ಮನ್ನೂ ಬಿಡಲಿಕ್ಕಿ ಆಗಲಿಲ್ಲ. ಆದರೆ ಬದಲಾದ ಜಾಗ, ಹೊಸ ಜನರು, ಹಳೆಯ ರೌಡಿ ಗೆಳೆಯರ ಸಹವಾಸ ಬಿಟ್ಟಿತ್ತಲ್ಲಾ.. ನನಗೆ ಗೊತ್ತಿಲ್ಲ.. ಅದ್ಯಾವಾಗಲೋ ನನ್ನೊಳಗೆ ರೌಡಿಸಂ ಮಾಯವಾಯಿತು. ನಾನು ಮೃದುವಾಗಿದ್ದೆ. ನನಗೆ ಈಗಲೂ ಅನ್ನಿಸ್ತಾ ಇದೆ ವಿನೂ.. ಹಾಗೆ ಗಲಾಟೆ ಮಾಡಿ, ಯಾರಿಗೋ ಹೊಡೆದು.. ಬೆದರಿಸಿ.. ಊರು ತುಂಬಾ ಗಲಾಟೆ ಮಾಡಿ.. ಮಾತೆತ್ತಿದರೆ ಸೂ.. ಮಕ್ಕಳಾ.. ಬೋ ಮಕ್ಕಳಾ.. ಅಂತ ಬಯ್ಯುತ್ತಿದ್ದವನು ನಾನೇನಾ ಅಂತ.. ಯಾವ ಮಾಯೆಯೋ ನನ್ನೊಳಗಿನ ರೌಡಿಗುಣ ಮರೆಯಾಗಿತ್ತು.
            ಈ ಮಧ್ಯದಲ್ಲೇ ಪಿಯುಸಿಯನ್ನು ಎಕ್ಸಟರ್ನಲ್ ಆಗಿ ಕಟ್ಟಿ ಪಾಸು ಮಾಡಿದೆ. ಹೀಗೆ ಒಂದು ವರ್ಷ ನಾನು ಅಲ್ಲಿ ಕಳೆದೆ. ಆಗ ನನಗೆ ಅಲ್ಲಿ ಪರಿಚಯವಾದವಳೇ ರಜನಿ. ಚಿಕ್ಕಪ್ಪನ ಎದುರು ಮನೆಯ ಹುಡುಗಿ. ಮಾತಾಯಿತು ಕಥೆಯಾಯಿತು.. ಪರಿಚಯ ಬೆಳೆದು ಸ್ನೇಹವೂ ಆಯಿತು. ನಂತರದ ದಿನಗಳಲ್ಲಿ ಈ ಸ್ನೇಹ ಪ್ರೇಮಕ್ಕೂ ತಿರುಗಿತು. ಅವಳ ಸಹವಾಸದಿಂದಲೇ ಕುಡಿತವೂ ಬಿಟ್ಟು ಹೋಯಿತು. ಬಿಟ್ಟು ಹೋಯಿತು ಅನ್ನುವುದಕ್ಕಿಂತ ಬಿಡಿಸಿದಳು ಎಂದರೆ ಸರಿಯಾಗುತ್ತದೆ ದೋಸ್ತಾ. ಹೀಗೆ.. ನನಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ನನ್ನ ಬದುಕು ಬದಲಾಗುತ್ತಿತ್ತು. ಅವಳು ಹಾಗೂ ನಾನು ಕೆಲವು ದಿನಗಳ ಕಾಲ ಖುಷಿಯಿಂದ ಕಳೆದೆವು. ಹೀಗಿರುವಾಗಲೇ ನಮ್ಮ ಪ್ರೇಮದ ವಿಷಯ ರಜನಿಯ ಮನೆಯಲ್ಲಿ ತಿಳಿದುಬಿಟ್ಟಿತು..
            ಆಕೆಯ ಮನೆಯಲ್ಲಿ ಸಿಟ್ಟಾದರು. ಹುಡುಗನಿಗೆ ಸರಿಯಾದ ಜಾಬೇ ಇಲ್ಲ. ಹಾಗೆ ಹೀಗೆ ಅಂದ್ರು. ಕೊನೆಗೆ ನಾನು ಜಾಬ್ ಹಿಡೀತಿನಿ ಎಂದು ರಜನಿಯ ಮನೆಯವರಿಗೆ ಹೇಳಿ ಅವರನ್ನು ಒಪ್ಪಿಸಿ ಬೆಂಗಳೂರಿನ ದಾರಿ ಹಿಡಿದೆ. ಬೆಂಗಳೂರಿನಲ್ಲಿ ಒಂದೆರಡು ವಾರ ಕಳೆದರೂ ಯಾವುದೇ ಕೆಲಸ ಸಿಗುವ ಲಕ್ಷಣ ಕಾಣಲಿಲ್ಲ. ನಾನು ಕಲ್ತಿದ್ದ ಓದಿಗೆ ಯಾವ ಘನಾಂದಾರಿ ಕೆಲಸ ಕೊಡ್ತಾರೆ ನಂಗೆ ಹೇಳು. ಮನೆಯಲ್ಲಿ ಸುಮ್ಮನೆ ಕುಳಿತಿರಲೂ ಆಗುತ್ತಿಲ್ಲ. ಅಮ್ಮ ಅದ್ಯಾರದ್ದೋ ಮನೆಯಲ್ಲಿ ಕೆಲಸಕ್ಕೆ ಹೋಗುತ್ತಿದ್ದಳು. ತಮ್ಮ ಓದುತ್ತಿದ್ದ. ಜೊತೆಯಲ್ಲಿ ಪಾರ್ಟ್ ಟೈಂ ಕೆಲಸ. ನಾನೇ ಯಾಕೋ ವೇಸ್ಟ್ ಫೆಲೋ ಆಗಿಬಿಟ್ಟೆನೇನೋ ಅನ್ನಿಸತೊಡಗಿತು. ಕೊನೆಗೆ ಅಲ್ಲಿ ಇಲ್ಲಿ ಅಂತ ಯಾವುದಾದ್ರೂ ಮನೆಗಳಿಗೆ ಅಡಿಕೆ ಕೆಲಸಕ್ಕೆ ಹೋಗತೊಡಗಿದೆ. ದೊಡ್ಡ ದೊಡ್ಡ ಕಲ್ಯಾಣ ಮಂಟಪದಲ್ಲಿ ನಡೆಯುವ ಮದುವೆಗಳಲ್ಲಿ ನಾನು ಅಡುಗೆ ಮಾಡುವ ಕೆಲಸವನ್ನು ನಿಭಾಯಿಸತೊಡಗಿದೆ. ಆದರೆ ಇತ್ತ ಉಡುಪಿಯಲ್ಲಿ ರಜನಿಗೆ ಬೇರೆ ಹುಡುಗನ ಜೊತೆಗೆ ಮದುವೆ ಮಾಡಿದರು ಎನ್ನುವ ಸುದ್ದಿ ಬಂದಿತು. ಒಂದ್ಸಾರಿ ತುಂಬಾ ಬೇಜಾರಾಯ್ತು ವಿನು.. ಆದರೆ ಮೊದಲು ಹೈಸ್ಕೂಲು ಲೈಫು ಹಾಗೂ ಅದರ ನಂತ್ರ ಆ ಥರಾ ಸಿಟ್ಟು ಬರ್ತಿತ್ತಲ್ಲಾ.. ಈ ಸಾರಿ ನಂಗೆ ಹಾಗೆ ಸಿಟ್ಟೇ ಬರಲಿಲ್ಲ ಕಣೋ.. ಯಾಕೆ ಅಂತ ಗೊತ್ತಿಲ್ಲ..
            ಸಧ್ಯ ಕನ್ನಡ ಕಾಲ್ ಸೆಂಟರ್ ನಲ್ಲಿ ನೈಟ್ ಡ್ಯೂಟಿ, ಬೆಳಿಗ್ಗೆ ನ್ಯೂಸ್ ಪೇಪರ್ ಹಂಚೋದು ಜೊತೆಗೆ ಅಡುಗೆ ಕೆಲಸ ಮಾಡ್ತಿದ್ದೀನಿ ನೋಡು. ಒಂದು ಸೆಕೆಂಡ್ ಹ್ಯಾಂಡ್ ಇಂಡಿಕಾ ಕಾರನ್ನು ತಗೊಳ್ಳಬೇಕು ಎಂದುಕೊಂಡಿದ್ದೇನೆ. ಬಾಡಿಗೆ ಹೊಡೆಯೋಣ ಅಂತ. ಅದಕ್ಕೆ ಓಡಾಡ್ತಾ ಇದ್ದೀನಿ. ಇದು ಬೆಂಗಳೂರು ನೋಡು.. ಹಿಂಗೆ ಜೀವ ಬಿಟ್ಟು ದುಡಿದೇ ಇದ್ರೆ ಆಗೋದೇ ಇಲ್ಲ. ಹೀಗಾಗಿ ದುಡೀತಿದ್ದೀನಿ.. ಮತ್ತೆ ಅಮ್ಮನ್ನ, ತಮ್ಮನ್ನ ನಾನೇ ನೋಡ್ಕೋತಾ ಇದ್ದೀನಿ. ಈಗ ಕುಡಿಯೋದಿಲ್ಲ.. ಗುಟ್ಕಾ ಹಾಕೋದಿಲ್ಲ. ಗಾಂಜಾ ಕೂಡ ಹಾಕೋದಿಲ್ಲ. ಆದ್ರೆ ಸಿಗರೇಟು ಇದೆ. ಭಾಳ ಮೊದಲೇ ಕಲಿತಿದ್ನಲ್ಲಾ. ಯಾಕೋ ಬಿಡೋಕೆ ಆಗ್ತಾ ಇಲ್ಲ. ನಂ ಹೈಸ್ಕೂಲ್ ಲೈಫಲ್ಲಿ ನನಗೆ ಕಾಪಿ ಹೊಡೆಯಲು ಹೆಲ್ಪ್ ಮಾಡಿದ್ದೆ. ಆಮೇಲೆ ಇನ್ನೂ ಎಷ್ಟೋ ಹೆಲ್ಪನ್ನೂ ಮಾಡಿದ್ದೆ.. ಸಾಕಷ್ಟು ಸಾರಿ ಬುದ್ದಿ ಕುಡ ಹೇಳಿದ್ದೆ. ಆದರೆ ನಾನು ತಿಳ್ಕೊಂಡಿರಲಿಲ್ಲ. ಥ್ಯಾಂಕ್ಸ್ ಕಣೋ ದೋಸ್ತಾ.. ಅಂದ ಹಾಗೆ ಇನ್ನೊಂದು ಹೆಲ್ಪ್ ಬೇಕು ನಿನ್ನಿಂದ..' ಎಂದು ಹೇಳಿದ್ದವನ ಬಳಿ ನಾನು ಏನೆಂದು ಕೇಳಿದ್ದೆ.
         ನಾನು ಸೆಕೆಂಡ್ ಹ್ಯಾಂಡ್ ಇಂಡಿಕಾ ಕಾರು ತಗೋತಾ ಇದ್ದೀನಿ ಅಂದಿದ್ನಲ್ಲಾ.. ಅದಕ್ಕೆ ಲೋನ್ ಮಾಡೋಣ ಅಂದ್ಕೊಂಡಿದ್ದೀನಿ. ನಿಂದು ಎಸ್.ಬಿ.ಐ. ಅಕೌಂಟ್ ಇದ್ರೆ ನಂಗೆ ಜಾಮೀನು ಹಾಕ್ತೀಯಾ..?' ಎಂದು ಕೇಳಿದ್ದ. `ನಾನು ಖಂಡಿತ.. ಯಾವತ್ತು ಹೇಳು. ಜಾಮೀನು ಹಾಕ್ತೀನಿ. ಆಗ ಆದ್ರೆ ನಿಂಗೆ ಜಾಮೀನು ಹಾಕೋಕೆ ನಾನು ಖಂಡಿತ ಒಪ್ತಾ ಇರಲಿಲ್ಲ. ಈಗ ಯಾಕೋ ಹಂಗನ್ನಿಸ್ತಾ ಇಲ್ಲ. ಅದೇನ್ ಕಾಗದ ಪತ್ರಗಳು ಬೇಕೋ ಅವನ್ನು ತಂದು ನಂಗೆ ಪೋನ್ ಮಾಡು..' ಎಂದಿದ್ದೆ.
           ಇನ್ನೂ ಇಪ್ಪತ್ನಾಲ್ಕರ ಅರಳು ಜೀವನ ದೀಪಕಂದು. ಅವನ ಬದುಕಲ್ಲಿ ಸಿಕ್ಕಿದ ತಿರುವುಗಳು ಅದೆಷ್ಟೋ ತೆರನಾದವುಗಳು. ನಾನು ಕೂಡ ಇನ್ನೂ ಅವ ತನ್ನ ಬದುಕಿನಲ್ಲಿ ಅನುಭವಿಸಿದ ಅರ್ಧದಷ್ಟನ್ನಾದರೂ ಅನುಭವಿಸಿಲ್ಲ ಎಂದುಕೊಂಡೆ. ಕೆಲವರ ಬದುಕಿನಲ್ಲಿ ಯಾವಾಗಲೂ ಹೀಗೆಯೇ ಆಗುತ್ತದೆಯೇ ಎಂದುಕೊಂಡೆ.
           ಹಿಂದೊಮ್ಮೆ ಬಹಳ ಬೇಜಾರು ಪಟ್ಕೊಂಡಿದ್ದ ಅವನ ಅಮ್ಮ ತೀರಾ ಅಪರೂಪಕ್ಕೆ ಖುಷಿ ಪಟ್ಟಿದ್ದನ್ನು ಆ ದಿನ ಕಂಡಿದ್ದೆ. ಹೇಗಿದ್ದವನು ಹೇಗಾಗಿ ಹೇಗೇಗೋ ಆಗಿ, ಹೇಗಿದ್ದಾನಪ್ಪಾ ಅಂದರೆ ಹೀಗಾಗಿದ್ದಾನಲ್ಲ ಅನ್ನಿಸಿತು. ಈಗಲೂ ಆಗಾಗ ಪೋನ್ ಮಾಡ್ತಾ ಇರ್ತಾನೆ ದೀಪಕ್. ಇನ್ನೊಂದು ವಿಚಿತ್ರ ಅಂದರೆ ಅದೇನಾಯ್ತೋ ಏನೋ `ಇಂಡಿಕಾ ಕಾರಿನ ಲೋನಿಗೆ ಜಾಮೀನುದಾರ ಬೇಕು ಎಂದಿದ್ದ. ಇದುವರೆಗೂ ನನ್ನ ಬಳಿ ಬಂದಿಲ್ಲ. ಯಾಕೋ ಏನಾಯ್ತೋ ಎನ್ನುವ ಆಲೋಚನೆ, ಕುತೂಹಲ ಕಾಡುತ್ತಿರುವುದು ಸುಳ್ಳಲ್ಲ.
           ಸಿಕ್ಕ ಮಿತ್ರರಲ್ಲಿ ಇವನೊಬ್ಬ ದಾರಿ ತಪ್ಪಿದ್ದನಲ್ಲ. ಅಂತೂ ದಾರಿಗೆ ಬರುತ್ತಿದ್ದಾನೆಂಬ ಖುಷಿಯೂ ಆಗ್ತಿದೆ. ಕತ್ತಲೆಯ ನಂತರ ಬೆಳಕು, ರಾತ್ರಿಯ ನಂತರ ಹಗಲು, ನೆರಳಿನ ನಂತರ ಬೆಳಕು, ನೋವಿನ ನಂತರ ನಲಿವು, ಇಂತಹ ಶಬ್ದಗಳು ದೀಪಕನಂತವರಿಗಾಗಿಯೇ ಸರಷ್ಟಿಯಾಗಿದೆಯೇನೋ ಅನ್ನಿಸಿದ್ದಂತೂ ನಿಜ. ಇಂತದ್ದೇ ಕೆಲಸ ಬೇಕು, ಇಂತದ್ದನ್ನೇ ಮಾಡಬೇಕು. ಪ್ರೆಸ್ಟೀಜು, ಹಂಗೆ ಹಿಂಗೆ ಅನ್ನುವವರ ನಡುವೆ ಸಿಕ್ಕಿದ ಕೆಲಸ ಮಾಡುತ್ತ, ತಾನು ಏನು ಮಾಡಬಲ್ಲೆ ಎಂಬ ಅರಿವನ್ನಿಟ್ಟುಕೊಂಡು, ತನ್ನಿಂದ ಸಾಧ್ಯವಾದುದರಲ್ಲೇ ಬದುಕನ್ನು ಕಂಡುಕೊಂಡನಲ್ಲ ದೀಪಕ.. ಅಂತೂ ಛೇಂಜಾಗ್ತಾ ಇದ್ದಾನಲ್ಲ.. ಸಲಾಂ ಎನ್ನಬೇಕೆನ್ನಿಸುತ್ತಿದೆ. ಹ್ಯಾಟ್ಸಾಪ್ ದೀಪು.. ಆಲ್ ದಿ ಬೆಸ್ಟ್..

**
(ಮತ್ತೆ ಸಿಕ್ಕರೆ ಮುಂದಿನದನ್ನು ಬರೆಯಬಲ್ಲೆ)

1 comment:

  1. ನಿನ್ ಈ ಬ್ಲಾಗ್ ಅಂವ್ ನೋಡ್ತ್ನ ಇಲ್ಯ ಗೊತ್ತಿಲ್ಲೆ ಆದ್ರು ಅವಂಗ್ ನನ್ ಕಡೆಯಿಂದಾನು ಆಲ್ ದ ಬೆಸ್ಟ್..

    ReplyDelete