Saturday, March 28, 2020

ಕತ್ತಲೆಕಾನು (ಕಥೆ ಭಾಗ- 3)

ನನಗೆ ಈಗ ನಿಜಕ್ಕೂ ಗಾಬರಿಯಾಯಿತು. ` ತಮಾಷೆ ಮಾಡಬೇಡಿ, ಹೇಳಿ, ಒಂದು ಲಾರಿ ಹೋಗಿರಬೇಕಲ್ಲ ಇದೆ ದಾರಿಯಾಗಿ..' ಎಂದೇ.
`ರೀ ನನಗೇನು ತಲೆ ಹಾಳಾಗಿದೆಯಾ. ಯಾವ ಲಾರಿನೂ ಇಲ್ಲ ಏನೂ ಇಲ್ಲ. ಹೋಗ್ರಿ ಸುಮ್ನೆ' ಎಂದ ಗಾರ್ಡ್. ನಾನು ನಿಧಾನವಾಗಿ ಮುಂದೆ ಹೋದೆ. ನನ್ನ ತಲೆಯಲ್ಲಿ ನೂರಾರು ಪ್ರಶ್ನೆಗಳು ತರಂಗಗಳಂತೆ ಎದ್ದು ಬಂದಿದ್ದವು.
ಮಾವಿನಗುಂಡಿಯಲ್ಲಿ ಒಂದು ಚಹಾ ಅಂಗಡಿ ಬಾಗಿಲು ಹಾಕುತ್ತಿತ್ತು. ಸೀದಾ ಅತ್ತ ಹೋಗಿ `ಒಂದು ಟಿ ಕೊಡಿ' ಎಂದೇ. ಆತ ನನ್ನನ್ನು ಒಮ್ಮೆ ದುರುಗುಟ್ಟಿಕೊಂಡು ನೋಡಿ, ಹ್ಮ್ ಎಂದು ಚಹಾ ತರಲು ಹೋದ.
ಅರೆ ನಾನು ಗೇರುಸೊಪ್ಪದಿಂದ ಆ ಲಾರಿಯ ಜೊತೆ ಬಂದಿದ್ದೇನಲ್ಲ. ಎಲ್ಲಿ ಹೋಗಲು ಸಾಧ್ಯ. ದಾರಿ ಮಧ್ಯದಲ್ಲಿ ಎಲ್ಲಾದರೂ ಕಳ್ಳ ನಟ ಹೊಡೆಯಲು ಅದು ಹೋಯಿತೇ? ಅಥವಾ ಬೇರೆ ಮಧ್ಯದಲ್ಲಿ ಯಾವುದಾದರು ಊರಿಗೆ ಹೋಯಿತೇ ಎಂಬ ಆಲೋಚನೆಗಳು ಬಂದವು. ಆದರೆ ಯಾರೇ ಆಗಿದ್ದರೂ ಕೂಡ ಅಂಕುಡೊಂಕಿನ ಹಾದಿಯಲ್ಲಿ ಅಷ್ಟೆಲ್ಲ ವೇಗವಾಗಿ ಗಡಿ ಓಡಿಸಲು ಸಾಧ್ಯವೇ ಇಲ್ಲ. ಇದರಲ್ಲಿ ಏನೋ ಇದೆ ಎಂದುಕೊಂಡೆ.
ನೋಡೋಣ ಈ ಚಹಾ ಅಂಗಡಿಯವನಿಗಾದರು ಗೊತ್ತಿರಬಹುದು, ಬರಲಿ ಅವ ಎಂದು ಸುಮ್ಮನಾದೆ. ಕೆಲ ಹೊತ್ತಿನ ನಂತರ ಹಬೆಯಾಡುತ್ತಿದ್ದ ಬಿಸಿ ಬಿಸಿ ಚಹಾ ಜೊತೆಗೆ ಬಂದ ಅವ. ಅವನ ಬಳಿ `ಹೊಯ್, ಈ ದಾರಿಯಲ್ಲಿ ಈಗಷ್ಟೇ ಯಾವುದಾದ್ರೂ ಲಾರಿ ಹೋಗಿದ್ದು ನೋಡಿದ್ರಾ' ಎಂದು ಕೇಳಿದೆ.
`ಲಾರಿಯಾ? ಯಾವ ಲಾರಿ? ಹೇಗಿದೆ ಬಣ್ಣ?' ಎಂದು ನನ್ನ ಬಳಿಯೇ ಮರು ಪ್ರಶ್ನೆ ಹಾಕಿದ. ಅದಕ್ಕೆ ನಾನು ಮೊದಲಿಂದ ನಡೆದ ಎಲ್ಲ ವಿಷಯ ಹೇಳಿದೆ.
ಅದಕ್ಕೆ ಕೊನೆಗೆ ಅವನು ಹೇಳಿದ ` ಹೊಯ್ ಮಾರಾಯ್ರೆ, ನಿಮ್ಮ ಅದೃಷ್ಟ ಚೊಲೋ ಇದೆ ಬಿಡಿ'ಎಂದ
ನಾನು ಗಾಬರಿಯಾಗಿ `ಯಾಕೆ ಎಂತ ಆಯಿತು?' ಎಂದೇ.
`ಅದು ಲಾರಿಯಲ್ಲ. ನೀವು ಬಂದಿದ್ದು ಲಾರಿಯ ಜೊತೆಗೂ ಅಲ್ಲ'
`ಮತ್ತೆ.. ಎಂತದ್ದು ಅದು?'
`ಅದು ಈ ಭಾಗದ ಭೂತ'
`ತಮಾಷೆ ಮಾಡಬೇಡಿ ಮಾರಾಯ್ರೆ.. ನಾನು ಆ ಲಾರಿಯ ಜೊತೆಗೆ ಬಂದಿದ್ದೆ, ಅದರ ಬೆಳಕು ಕಂಡಿದ್ದೇನೆ. ಆ ಲಾರಿ ಸೂಸುತ್ತಿದ್ದ ಹೊಗೆಗೆ ಮುಖ ಕೊಟ್ಟಿದ್ದೇನೆ. ಆ ಹೊಗೆಯ ಬಿಸಿ ಅನುಭವ ನನಗಾಗಿದೆ..' ಎಂದೇ.
`ಹ್ಮ್ಮ್,. ಈ ಥರ ಅನುಭವ ಹಲವರಿಗಾಗಿದೆ. ಬಹಳ ಜನರು ಇದೆ ರೀತಿ ಹೇಳಿದ್ದಾರೆ. ಆದರೆ ನಿಜಕ್ಕೂ ಅಂತಹ ಲಾರಿ ಇಲ್ಲವೇ ಇಲ್ಲ..' ಎಂದ.
ನಾನು ಬೆಪ್ಪಾಗಿ ನೋಡಲು ಆರಂಭಿಸಿದೆ.
`ಸುಮಾರು ವರ್ಷಗಳ ಹಿಂದೆ ಕತ್ತಲೆಕನು ಘಟ್ಟದಲ್ಲಿ ತಮಿಳುನಾಡಿನ ಲಾರಿಯೊಂದು ಉರುಳಿ ಶರಾವತಿ ಕಣಿಗೆಗೆ ಬಿದ್ದಿತ್ತು. ಆ ಲಾರಿಯಲ್ಲಿದ್ದ ಡ್ರೈವರ್ ಹಾಗೂ ಕ್ಲೀನರ್ ಇಬ್ಬರೂ ಸಾವನ್ನಪ್ಪಿದ್ದರು. ಅವರ ಹೆಣ ಕೂಡ ಸಿಕ್ಕಿರಲಿಲ್ಲ. ಅಂದಿನಿಂದ ಈ ಲಾರಿ ಭೂತ ಹಲವರನ್ನು ಕಾಡುತ್ತಿದೆ ನೋಡಿ.' ಎಂದ.
` ಈ ಲಾರಿ ಹಲವರಿಗೆ ಸಿಕ್ಕಿದೆ. ಹಲವರನ್ನು ಹೆದರಿಸಿದೆ,. ಕಾಡಿದೆ. ಬೀಳಿಸಿದೆ. ಹಲವಾರು ಗಾಯಗೊಂಡಿದ್ದಾರೆ. ಹಲವಾರು ತೀವ್ರ ಜ್ವರದಿಂದ ಬಳಲಿದ್ದಾರೆ. ಹಲವಾರು ಮತಿಭ್ರಮಣೆಗೆ ಒಳಗಾಗಿದ್ದಾರೆ. ಅದರಲ್ಲಿ ಇಷ್ಟುಹೊತ್ತು ಸರಿಯಾಗಿ ಇದ್ದಿದ್ದು ಎಂದರೆ ನೀವೊಬ್ಬರೇ ಇರಬೇಕು ನೋಡಿ' ಎಂದ.
ತಕ್ಷಣ ನನಗೆ ಆ ಲಾರಿ, ಅದರ ಹೊಗೆಯ ಅನುಭವ, ಅದರಿಂದ ಕೇಳಿ ಬರುತ್ತಿದ್ದ ತಮಿಳು ಹಾಡು ಎಲ್ಲ ನೆನಪಾಯಿತು. ಅದು ಭೂತವಾಗಿತ್ತು ಎಂದು ಕೇಳಿದಾಗಿನಿಂದ ಬರಲು ಶುರುವಾಗಿದ್ದ ಬೆವರು ಇನ್ನಷ್ಟು ಧಾರಾಕಾರವಾಗಿತ್ತು.
ನಾನು ಚಹಾದ ಬಿಲ್ಲು ಕೊಡುವಂತೆ ನನ್ನ ಮುಂದೆ ನಿಂತಿದ್ದ ಹೋಟೆಲಿನವನ ಕಾಲಿನ ಕಡೆಗೆ ದೃಷ್ಟಿ ಹೋಯಿತು. ಏನೋ ಸರಿ ಇಲ್ಲ ಎನ್ನುವಂತೆ ಅನ್ನಿಸಿತು. ದಿಟ್ಟಿಸಿ ನೋಡಿದೆ. ಆತನ ಕಾಲು ನೋಡಿ ಒಮ್ಮೆ ಎದೆಯಲ್ಲಿ ಚಳುಕು ಶುರುವಾಯಿತು. ಆತನ ಕಾಲು ತಿರುಗಾಮುರುಗ ಇತ್ತು. ಅಂದರೆ ಈತನೂ ಭೂತನೇ? ಅಯ್ಯೋ ದೇವರೇ.. ಎಲ್ಲಿಗೆ ಬಂದೇನಪ್ಪಾ ನಾನು ಎಂದುಕೊಳ್ಳುತ್ತಿರುವಂತೆ ಮೈಯಲ್ಲಿ ನಡುಕ ಶುರುವಾಗಿತ್ತು. ಎದೆಯಲ್ಲಿ ಅದೇನೋ ನೋವು. `ಅಹ್...' ಎಂದೇ. ಅದೇ ನನ್ನ ಕೊನೆಯ ಶಬ್ಧವಾಗಿತ್ತು.

(ಮುಗಿಯಿತು)

Monday, December 30, 2019

ಕತ್ತಲೆಕಾನು (ಕಥೆ ಭಾಗ- 2)


'ಮತ್ತೆ.. ಇನ್ನೇನು..?' ನಾನು ಕುತೂಹಲದಿಂದ ಕೇಳಿದೆ.
'ಇದು ಕತ್ತಲೆಕಾನು.. ಈ ಪ್ರದೇಶದ ಬಗ್ಗೆ ಸಾಕಷ್ಟು ಊಹಾಪೋಹಗಳಿವೆ. ಕತ್ತಲೆಕಾನು ಘಟ್ಟ ಹೆದರಿಸ್ತದೆ.. ಪ್ರಯಾಣಿಕರನ್ನ ಭೀತಿಗೆ ಒಡ್ಡುತ್ತವೆ. ಒಬ್ಬೊಬ್ಬರೇ ಹೋಗುವವರನ್ನ ಕತ್ತಲೆಕಾನಿನ ದೆವ್ವಗಳು ಅಡ್ಡಗಟ್ಟುತ್ತವೆ, ಕೈಹಿಡಿದು ಕಾಡಿನೊಳಕ್ಕೆ ಕರೆದೊಯ್ದುಬಿಡುತ್ತವೆ.. ಎಂಬ ಮಾತುಗಳಿವೆ..' ಎಂದರು..
'ಹ.. ಹ.. ನಾನು‌ ಇಂತದ್ದನ್ನ ನಂಬೋದಿಲ್ಲ ಬಿಡಿ..' ಎಂದೆ.
'ನಿಮಗೆ ಗೊತ್ತಿಲ್ಲ ಕತ್ತಲೆಕಾನಿನ ಕರಾಮತ್ತು. ಇಲ್ಲಿ ಬಹಳಷ್ಟು ವಿಚಿತ್ರ ಘಟನೆಗಳು ನಡೆದಿವೆ. ಯಾವುದೋ ಗಾಡಿಯವರು ಈ ಕಾರಣದಿಂದಲೇ ಬಿದ್ದು ಸತ್ತಿದ್ದೂ ಇದೆ. ಇನ್ನೂ ಹಲವರು ದೆವ್ವದ ಕಾಟದಿಂದ ಹೆದರಿ ವಾರಗಟ್ಟಲೆ ಕಾಲ ಚಳಿ ಜ್ವರದಿಂದ ಮಲಗಿದ್ದೂ ಇದೆ.. ಮತಿಭ್ರಮಣೆಗೆ ಒಳಗಾದವರೂ ಇದ್ದಾರೆ.. ಹೀಗಾಗಿ ಹೇಳ್ತಿದ್ದೇನೆ. ನಿಮ್ಮ ಒಳ್ಳೇದಕ್ಕೆ. ಸಾಧ್ಯವಾದಷ್ಟೂ ಈ ರಾತ್ರಿಯ ಪ್ರಯಾಣವನ್ನ ನಿಲ್ಲಿಸಿ.. ' ಎಂದರು.
'ನನಗೆ ಹೋಗಲೇಕು.. ಬಹಳ ಅನಿವಾರ್ಯತೆ ಇದೆ..' ಎಂದು ಅಲವತ್ತುಕೊಂಡೆ. ಕೊನೆಗೆ ಅವರೇ ಸಲಹೆ ನೀಡಿದರು, ' ಇವರೇ.., ನೀವು ಒಂದು ಕೆಲಸ ಮಾಡಿ ಈಗ ಹೋಗುವಾಗ ಒಬ್ಬರೇ ಹೋಗಬೇಡಿ. ಯಾರಾದರೂ ಸಿಗುತ್ತಾರೋ ನೋಡಿ. ಅದಿಲ್ಲವಾದರೆ ಯಾವುದಾದರೂ ಗಾಡಿ, ಬಸ್ಸು, ಲಾರಿ ಬಂದರೆ ಅದರ ಜತೆಗೇ ಹೋಗಿ. ಆವಾಗ ನೀವು ಒಬ್ಬಂಟಿಯಾಗಿ ಇರುವುದಿಲ್ಲ. ನಿಮ್ಮ ಜತೆ ಆ ವಾಹನ ಇರುವ ಕಾರಣ ಯಾವುದೇ ಆತಂಕವೂ ಇರುವುದಿಲ್ಲ.. ಸುರಳೀತವಾಗಿ ನೀವು ಸಾಗರ ತಲುಪಬಹುದು..' ಎಂದರು. ಅವರ ಸಲಹೆ ನನಗೆ ಒಪ್ಪಿಗೆಯಾಯಿತು. ಅವರಿಗೆ ಬಿಲ್ ಕೊಟ್ಟು, ರಸ್ತೆಗೆ ಬಂದು ಯಾವುದಾದರೂ ವಾಹನ ಬರಬಹುದು ಎಂದು ಕಾಯುತ್ತ ನಿಂತೆ. ಕೆಲ ಕಾಲ ಕಳೆದರೂ ಯಾವುದೇ ಗಾಡಿ ಬರಲಿಲ್ಲ.
ಕೊನೆಗೆ ಅದೆ ಹೊಟೆಲ್ ನ ಯಜಮಾನರು ಬಳಿ ಬಂದು ' ಒಂದು ಕೆಲಸ ಮಾಡಿ, ಇಲ್ಲಿಂದ ಸ್ವಲ್ಪ ದೂರ ಹೋದ ಮೇಲೆ ಗೇರುಸೊಪ್ಪಾ ಅಣೆಕಟ್ಟೆ ಕಾಣಿಸ್ತದೆ. ಅಲ್ಲಿಂದ ಸಾಗರ ಕಡೆಗೆ ವಾಹನಗಳು ಓಡಾಡುತ್ತಿರುತ್ತವೆ. ಅಲ್ಲಿಗೆ ಹೋದರೆ ನಿಮಗೆ ಅನುಕೂಲ ಆಗಬಹುದು ನೋಡಿ..' ಎಂದರು. ಅವರ ಸಲಹೆಯಂತೆ ನಾನು ಹೆದ್ದಾರಿಯಿಂದ ಗೇರುಸೊಪ್ಪಾ ಅಣೆಕಟ್ಟು ಕಾಣುವ ಸ್ಥಳದ ಕಡೆಗೆ ತೆರಳಿದೆ.
ಗೇರುಸೊಪ್ಪಾದಿಂದ ಅಣೆಕಟ್ಟೆಗೆ ಒಂದೆರಡು ಕಿಲೋಮೀಟರ್ ದೂರ. ನಾನು ಬಾಹುಬಲಿಯನ್ನೇರಿ ಅಲ್ಲಿಗೆ ತೆರಳಿದರೂ ಯಾವುದೇ ವಾಹನ ಬರಲಿಲ್ಲ. ಕೊನೆಗೆ ಗೇರುಸೊಪ್ಪೆ ಅಣೆಕಟ್ಟೆ ಎದುರು ಕೆಲ ಕಾಲ ನಿಂತೆ. ಆಗಲೂ ಯಾವುದೇ ವಾಹನ ಆ ರಸ್ತೆಗುಂಟ ಬರಲಿಲ್ಲ. ನನಗೋ ಸಮಯ ಸುಮ್ಮನೇ ಕಳೆದು ಹೋಗುತ್ತಿದೆಯಲ್ಲ ಎನ್ನಿಸಿದರೂ, ಆ ಹೊಟೆಲ್ ನ ಯಜಮಾನರು ಹೇಳಿದ ಮಾತುಗಳು ಕಿವಿಯಲ್ಲಿ ಗುಂಯೆನ್ನುತ್ತಿದ್ದವು.
ಕೊನೆಗೂ ಯಾವುದೇ ವಾಹನ ಬರಲಿಲ್ಲ. ನಾನು ಆದದ್ದಾಗಲಿ ಎಂದುಕೊಂಡು ಬಾಹುಬಲಿಯ ಕಿವಿ ಹಿಂಡಿ ನಿಧಾನವಾಗಿ ಮುಂದಕ್ಕೆ ಹೊರಟೆ.. ಕೆಲ ಹೊತ್ತಿನಲ್ಲಿಯೇ ಕತ್ತಲೆಕಾನು ಘಟ್ಟ ನನ್ನನ್ನು ಸ್ವಾಗತಿಸಿತು.
ಕಡುಗತ್ತಲೆಯ ನಡುವೆ ಏರು ಹಾದಿಯಲ್ಲಿ ನಾನು ನನ್ನ ಬಾಹುಬಲಿಯನ್ನೇರಿ ನಿಧಾನವಾಗಿ ಸಾಗುತ್ತಲೇ ಇದ್ದೆ. ರಸ್ತೆಯ ಇಕ್ಕೆಲಗಳಲ್ಲಿಯೂ ಇದ್ದ ದಟ್ಟ ಕಾಡು, ನೀರವ ಮೌನ ನನ್ನ ಮನದಾಳದಲ್ಲಿ ಭೀತಿಯ ಕಿರು ತೆರೆಯನ್ನು ಎಬ್ಬಿಸಿತು. ಆ ಮೂಲೆಯಲ್ಲಿ ಯಾವುದಾದರೂ ದೆವ್ವ ನನ್ನನ್ನ ಅಡ್ಡಗಟ್ಟಬಹುದಾ?, ಅದೋ ಆ ದೊಡ್ಡ ಮರದ ಪಕ್ಕದಿಂದ ಯಾವುದಾದರೂ ಕಾಳಿಂಗ ಸರ್ಪ ಧುತ್ತೆಂದು‌ ನನ್ನನ್ನು ತಡೆದು ನಿಲ್ಲಿಸಬಹುದಾ? ಅಗೋ ಅಲ್ಲಿ ಏನೋ ಬೆಳಕು ಕಂಡಂತಾಗುತ್ತದೆಯಲ್ಲ.. ಎಂದುಕೊಳ್ಳುತ್ತಲೇ ನಿಧಾನಕ್ಕೆ ಹೋಗುತ್ತಿದ್ದೆ. ರಸ್ತೆಯ ಪಕ್ಕದ ಮರಗಳ ಮೇಲೆ, ಬಳ್ಳಿಗಳ ಮೇಲೆ ಬಾಹುಬಲಿಯಿಂದ ಚಿಮ್ಮಿದ ಬೆಳಕು‌ ಬಿದ್ದು ತರಹೇವಾರಿ ಆಕೃತಿಯನ್ನು ಮೂಡಿಸುತ್ತಿತ್ತು. ಕಿರುಗಣ್ಣಿನಲ್ಲಿ, ವಾರೆಗಣ್ಣಿನಲ್ಲಿ ಅವನ್ನ ನೋಡುತ್ತ, ನೋಡಿಯೂ ನೋಡದಿದ್ದವನಂತೆ ನಟಿಸುತ್ತ ಮುಂದಕ್ಕೆ ಹೋದೆ.
ಕೆಲ ಹೊತ್ತಿನ ನಂತರ ನನ್ನ ಹಿಂಭಾಗದಲ್ಲಿ ದೊಡ್ಡ ಬೆಳಕು ಮೂಡಿದಂತಾಯಿತು. ಥಟ್ಟನೆ ಗಾಡಿಯ ಕನ್ನಡಿಯಲ್ಲಿ ಗಮನಿಸಿದಾಗ ಎರಡು ಬೃಹತ್ ಲೈಟುಗಳು ದೂರದಲ್ಲಿ ಬರುತ್ತಿದ್ದವು. ಯಾವುದೋ ವಾಹನ ಬಂತಿರಬೇಕು ಎಂದುಕೊಂಡು ನಾನು ಮತ್ತಷ್ಟು ನಿಧಾನವಾಗಿ ಸಾಗಿದೆ. ಭರ್ರನೆ ಬಂದ ಬೆಳಕು‌ ನನ್ನನ್ನು ದಾಟಿ ಮುಂದಕ್ಕೆ ಹೋಗುವ ವೇಳೆಗೆ ಅದೊಂದು ಮಿನಿ ಲಾರಿ ಎನ್ನುವುದು ನನ್ನ ಅರಿವಿಗೆ ಬಂದಿತು.
ಅಬ್ಬ ಅಂತೂ ನನಗೆ ಈ ಲಾರಿಯ ಜತೆಗೆ ಸಾಗುವ ಯೋಗ ಬಂತಲ್ಲ ಎಂದುಕೊಂಡೆ. ಲಾರಿಯ ಹಿಂಭಾಗದಲ್ಲಿಯೇ ಬೈಕನ್ನು ಓಡಿಸಿದೆ. ಕತ್ತಲೆಕಾನಿನ ಘಟ್ಟವನ್ನ ಏರಿದಂತೆಲ್ಲ ಚಳಿ ದಟ್ಟವಾಗತೊಡಗಿತು. ಅಲ್ಲಲ್ಲಿ ಮಂಜಿನ ತೆರೆಯೂ ಆವರಿಸತೊಡಗಿತು. ಚಳಿ ಹೆಚ್ಚಿದಂತೆಲ್ಲ ನಾನು ಲಾರಿಯ ಹತ್ತಿರ ಹತ್ತಿರಕ್ಕೆ ಹೋದೆ. ಲಾರಿಯಿಂದ ಬರುತ್ತಿದ್ದ ಹೊಗೆ ನನ್ನ‌ಮುಖಕ್ಕೆ ತಾಗುತ್ತಿತ್ತು. ತನ್ಮೂಲಕ ನನಗೆ ಚಳಿಯನ್ನು‌ ಕಡಿಮೆ ಮಾಡುತ್ತಿತ್ತು. ಲಾರಿಯ ಹಿಂಭಾಗದಲ್ಲಿಯೇ ಹೋದರೆ ಚಳಿ‌ ಕಡಿಮೆ ಎಂಬ ಸ್ವ ಅನುಭವ ಮತ್ತೊಮ್ಮೆ ದಟ್ಟವಾಯಿತು.
ಲಾರಿಯ ಹಿಂದು ಹಿಂದೆಯೇ ಹೋಗುತ್ತಿದ್ದರೂ ನನ್ನ ಕಣ್ಣು ಅಕ್ಕಪಕ್ಕದ ದಟ್ಟ ಕಾಡಿನ ಕಡೆಗೆ, ಶರಾವತಿಯ ಮೌನ ಕಣಿವೆಯ ಕಡೆಗೇ ಇತ್ತು. ಯಾವುದೋ ಕ್ಷಣದಲ್ಲಿ ರಸ್ತೆಗೆ ಅಡ್ಡ ಬರಬಹುದಾದ ದೊಡ್ಡ ಹೆಬ್ಬಾವನ್ನು ಎದುರಿಸಲು, ಎಂಟು, ಹತ್ತು ಅಡಿ ಉದ್ದದ‌ ಅಷ್ಟೇ ಎತ್ತರಕ್ಕೆ ನೆಟ್ಟಗೆ ನಿಲ್ಲಬಹುದಾದ ಕಾಳಿಂಗ ಸರ್ಪವನ್ನ ತಪ್ಪಿಸಿಕೊಳ್ಳುವುದು ಹೇಗೆ ಎಂಬ ಆಲೋಚನೆಯೇ ಆವರಿಸಿತ್ತು. ಇಂತಹ ಎಷ್ಟು ಕಾಡಲ್ಲಿ ನಾನು ಓಡಾಡಿಲ್ಲ ಎಂಬ ಹುಂಭ ಧೈರ್ಯ ಮನದಲ್ಲಿ ಮೂಡಿದ ಕೆಲವೇ ಕ್ಷಣ ದಲ್ಲಿಯೇ ನನಗರಿವಿಲ್ಲದಂತೆಯೇ ಬಾಯಲ್ಲಿ ಓಂ ಭೂರ್ಭುವ ಸ್ವಃ.. ಎಂದು ಗಾಯತ್ರಿ ಮಂತ್ರದ ಪಠಣವೂ ನಡೆಯಿತು. ಗಾಯತ್ರಿ ಮಂತ್ರ ಪಠಣ ನನ್ನೊಳಗೆ ಅದೇನೋ ಶಕ್ತಿ ತುಂಬುತ್ತಿದೆ ಎಂಬ ಅರೆಘಳಿಗೆಯಲ್ಲಿಯೇ ಲಾರಿಯೊಳಗಿಂದ ಅದ್ಯಾವುದೋ ತಮಿಳು ಸಿನಿಮಾದ ಹಾಡು ಅಲೆ ಅಲೆಯಾಗಿ ಕೇಳಿ ಬಂತು. ನಾನು ದೆವ್ವ-ಭೂತ, ಕಾಳಿಂಗಗಳ ಭ್ರಮೆಯಿಂದ ಅರೆಘಳಿಗೆ ಹೊರಬಂದೆ.
ನಾನೇ ನಿಧಾನವಾಗಿ ಹೋಗುತ್ತಿದ್ದೇನೆಯೇ? ಅಥವಾ ಈ ದಾರಿಯೇ ದೀರ್ಘವಾಗುತ್ತಿದೆಯಾ ಎನ್ನುವ ಭಾವನೆ ನನ್ನಲ್ಲಿ ಮೂಡಿತು. ಕಡುಗತ್ತಲ ರಾತ್ರಿಯಲ್ಲಿ ದಟ್ಟ ಮಂಜಿನ ನಡುವೆ ದೊಡ್ಡದೊಂದು ಲಾರಿ, ಹಿಂದೊಂದು ಬೈಕ್ ಸಾಗುತ್ತಲೇ ಇತ್ತು. ಕೆಲವೇ ಕ್ಷಣದ ನಂತರ ಕತ್ತಲೆಕಾನಿನ ತಿರುವುಗಳೆಲ್ಲ ಮುಗಿದು ಮಲೆಮನೆಯ ಫಾಸಲೆ ಆರಂಭವಾಯಿತು. ಅಲ್ಲೊಂದು ಕಡೆ ಒಂದಷ್ಟು ಕಟ್ಟೆಗಳೂ, ಯಾವಾಗಲೋ ಪೂಜೆ ಮಾಡಿದ್ದರೋ ಎಂಬಂತಹ ಕುರುಹುಗಳೂ ಕಂಡವು. ಪೂಜೆ ಮಾಡಿದ್ದರೋ ಅಥವಾ ಕೋಳಿ, ಕುರಿಯನ್ನು ಬಲಿಕೊಟ್ಟಿದ್ದರೋ.. ಅದು ದೇವರೋ ಅಥವಾ ಚೌಡಿ, ಮಾಸ್ತಿಯಂತಹ ಗಣಗಳೋ ಗೊತ್ತಾಗಲಿಲ್ಲ. ನನ್ನ ದೃಷ್ಟಿ ಲಾರಿಯ ಕಡೆಗೇ ಇತ್ತು. ಒಮ್ಮೆ ಈ ಘಟ್ಟವನ್ನು ಏರಿ ಮುಗಿದರೆ ಸಾಕು ಎಂದುಕೊಂಡು ನೆಟ್ಟ ನೋಟದಿಂದ ಲಾರಿಯನ್ನು ಹಿಂಬಾಲಿಸುತ್ತಿದ್ದೆ.
ಇನ್ನೇನು ಘಟ್ಟ ಮುಗಿಯಬೇಕಷ್ಟೇ, ನೋಡ ನೋಡುತ್ತಿದ್ದಂತೆ ಲಾರಿ ವೇಗವನ್ನು ಪಡೆದುಕೊಂಡಿತು. ನನ್ನ ಬಾಹುಬಲಿಗೂ ಹಾಗೂ ಆ ಲಾರಿಗೂ ನಡುವೆ ಇದ್ದ ಅಂತರ ಹತ್ತು ಮೀಟರ್ ಆಯಿತು.. ಹತ್ತು ಇಪ್ಪತ್ತಾಯಿತು.. ಇಪ್ಪತ್ತು ಐವತ್ತಾಯಿತು.. ನಾನು ಬಾಹುಬಲಿಯ ವೇಗ ಹೆಚ್ಚಿಸಲು ಆಲೋಚಿಸುತ್ತಿದ್ದಂತೆಯೇ ಮತ್ತಷ್ಟು ವೇಗ ಪಡೆದುಕೊಂಡ ಲಾರಿ ರಸ್ತೆಯಲ್ಲಿ ಕಾಣದಂತಾಗಿ
ಮಂಜಿನ ತೆರೆಯಲ್ಲಿ ಕಳೆದು ಹೋಯಿತು. ನಾನು ತಬ್ಬಿಬ್ಬಾದೆನಾದರೂ ಸಾವರಿಸಿಕೊಂಡು ಬಾಹುಬಲಿಯ ವೇಗ ಹೆಚ್ಚಿಸಿದೆ. ನನ್ನ ಬೈಕ್ ಎಂಭತ್ತರ ಗಡಿ ದಾಟಿ ನೂರು ಕಿಲೋಮೀಟರ್ ವೇಗ ಪಡೆದುಕೊಂಡಿತು. ಆದರೂ ಆ ಲಾರಿ ನನಗೆ ಸಿಗದಂತಾಯಿತು.
ಲಾರಿಯ ಡ್ರೈವರನ್ಯಾರೋ ಪಳಗಿದವನೇ ಇರಬೇಕು. ಅಥವಾ ಈ ರಸ್ತೆಯಲ್ಲಿ ಪದೇ ಪದೆ ಓಡಾಡಿ ಗೊತ್ತಿರುವವನೇ ಇರಬೇಕು. ಇಂತಹ ಕತ್ತಲೆಯಲ್ಲಿ, ಮಂಜಿನ ಪರದೆಯ ನಡುವೆಯೂ ವೇಗವಾಗಿ, ನನಗೆ ಸಿಗದಂತೆ ಹೋಗಿರಬೇಕೆಂದರೆ ಆತನ ಡ್ರೈವಿಂಗ್ ಕೈಚಳಕ ಇನ್ನೆಷ್ಟು ಚನ್ನಾಗಿರಬೇಡ? ಎಂದುಕೊಂಡೆ.
ಐದಾರು ಕಿಲೋಮೀಟರ್ ಹಾದು ಬಂದರೂ ಲಾರಿ ಕಾಣಿಸಲಿಲ್ಲ. ಇನ್ನಷ್ಟು ಮುಂದೆ ಸಾಗಿದೆ. ಹತ್ತು-ಹದಿನೈದು ನಿಮಿಷದ ಪ್ರಯಾಣದ ನಂತರ ಇದ್ದಕ್ಕಿದ್ದಂತೆ ಒಂದು ಚೆಕ್ ಪೋಸ್ಟ್ ಕಾಣಿಸಿತು. ಬೈಕ್ ವೇಗ ತಗ್ಗಿಸಿದೆ. ನಾಕಾ ಬಂದಿ ಹಾಕಲಾಗಿತ್ತು. ಅಲ್ಲಲ್ಲಿ ಬೆಳಕುಗಳು, ಅಂಗಡಿಗಳ ದೀಪಗಳೂ ಕಾಣಿಸಿದವು. ಅಲ್ಲೇ ಇದ್ದ ಅರಣ್ಯ ಇಲಾಖೆ ಗಾರ್ಡ್ ಒಬ್ಬ ನನ್ನ ಗಾಡಿಯನ್ನು ನೋಡಿ ಅನುಮಾನ ಪಟ್ಟುಕೊಂಡನಾದರೂ ನಿಧಾನವಾಗಿ ಬಂದು ಚೆಕ್ ಪೋಸ್ಟ್ ಬಾಗಿಲು ತೆರೆಯಲು ಮುಂದಾದ.
ನಾನು ಸೀದಾ ಹೋಗಿ ಅವನ ಬಳಿ ನಿಂತು, 'ಹೋಯ್, ಈಗ ಇದೇ ದಾರಿಯಲ್ಲಿ ಒಂದು ಲಾರಿ ಹೋಯ್ತಾ?' ಎಂದು ಕೇಳಿದೆ.
ಆತ ಮತ್ತೊಮ್ಮೆ ನನ್ನನ್ನು ವಿಚಿತ್ರವಾಗಿ ನೋಡಿ, 'ಲಾರಿ? ಎಂತ ಲಾರಿ?' ಎಂದ

(ಮುಂದುವರಿಯುವುದು)

Wednesday, October 30, 2019

ಕತ್ತಲೆಕಾನು (ಕಥೆ ಭಾಗ 1)


'ಅರ್ಜೆಂಟ್ ಸಾಗರಕ್ಕೆ ಬಾ..' ಎಂದು ಸಹೋದರ‌ ಗುರುಪ್ರಸಾದನಿಂದ‌ ದೂರವಾಣಿ ಕರೆ. ಏನು? ಯಾಕೆ? ಎಂಬ ಯಾವುದೇ ಪ್ರಶ್ನೆಗೆ ಉತ್ತರವಿರಲಿಲ್ಲ.
ಆಗಲೇ ಬಾನಂಚಿನಲ್ಲಿ ಸೂರ್ಯ ಇಳಿದು ಪಶ್ಚಿಮದಲ್ಲಿ ಅರಬ್ಬಿ ಜಲಧಿಯಲ್ಲಿ ಅಸ್ತಮಿಸುತ್ತಿದ್ದ. ಬಾನು-ಸಮುದ್ರದ ಗಡಿಯಾದ್ಯಂತ ಹೊಂಬಣ್ಣದ ಕಲಾಕೃತಿಯನ್ನು ಮೂಡಿಸಿದ್ದ.
'ನಾನು ಹೊನ್ನಾವರದಲ್ಲಿ ಇದ್ದೇನಲ್ಲ ಮಾರಾಯಾ. ಈಗ ಬೇರೆ ಸಂಜೆಯಾಗುತ್ತಿದೆ.. ಈಗ ಬರಬೇಕಾ?' ಕೊಂಚ ಆಲಸ್ಯದಿಂದ ಆತನಿಗೆ ಹೇಳಿದ್ದೆ.
'ಇವತ್ ಎಷ್ಟೇ ಹೊತ್ತಾದರೂ ನೀನು ಸಾಗರಕ್ಕೆ ಬರಲೇಬೇಕು.. ನೀನು ಬರಲಿಲ್ಲ ಅಂದರೆ ಬಹುಮುಖ್ಯ ಸಂಗತಿಯೊಂದನ್ನ ನೀನು ಕಳೆದುಕೊಳ್ಳಬಹುದು.. ರಾತ್ರಿ ಎಷ್ಟು ಹೊತ್ತಾದರೂ ತೊಂದರೆ ಇಲ್ಲ.. ನಾನು ಕಾಯುತ್ತಿರುತ್ತೇನೆ.. ಬಾ' ಎಂದು ಪೋನ್ ಇರಿಸಿದ್ದ.
ಇದೊಳ್ಳೆ ಕಥೆಯಾಯ್ತಲ್ಲ.. ಎಂದುಕೊಂಡೆ. ಒಲ್ಲದ ಮನಸ್ಸಿನಿಂದ ನಿಧಾನವಾಗಿ ಎದ್ದೆ. ನನ್ನ ಜತೆ ಒಯ್ದಿದ್ದ ಬಟ್ಟೆಯನ್ನು ಬ್ಯಾಗಿಗೆ ತುಂಬಿಕೊಂಡೆ. ನನ್ನ ಪಲ್ಸರಿನ ಕಿವಿಯನ್ನ ಹಿಂಡಿದೆ. ಗುರ್ರೆಂದು ಸದ್ದು ಮಾಡಿದ ಪಲ್ಸರ್ ನಿಧಾನವಾಗಿ ವೇಗ ಪಡೆದುಕೊಂಡಿತು. 
ಶರಾವತಿ ತೀರದಿಂದ ಹಾದು ಬಿಎಚ್ ರೋಡ್ ಆರಂಭವಾಗುವ ಸರ್ಕಲ್ಲಿಗೆ ಬರುವ ವೇಳೆಗೆ ಚಹಾ ಕುಡಿಯುವ ಮನಸ್ಸಾಗಿ ಪಕ್ಕದಲ್ಲೇ ಇದ್ದ ಪೆಟ್ಟಿಗೆ ಅಂಗಡಿಗೆ ಹೋದೆ. ನನ್ನ ಹೊಟ್ಟೆಗೆ ಚಹಾವನ್ನೂ, ಬಾಹುಬಲಿ ಎಂದು ನಾನು ಆಪ್ತವಾಗಿ ಕರೆಯುವ ಪಲ್ಸರಿನ ಹೊಟ್ಟೆಗೆ ಪೆಟ್ರೂಲನ್ನೂ ಹತ್ತಿರದ ಬಂಕ್‌ ನಲ್ಲಿ ಸುರುವಿ ಸಾಗರದ ಕಡೆಗೆ ಪಯಣ ಬೆಳೆಸುವ ವೇಳೆಗಾಗಲೇ ಸಂಪೂರ್ಣ ಕತ್ತಲಾಗಿತ್ತು. ದೂರದ ದಿಗಂತದಲ್ಲಿ ಪಶ್ಚಿಮ ಘಟ್ಟಗಳ ಸಾಲು ಕರ್ರಗೆ, ಮಬ್ಬಾಗಿ ಕಾಣುತ್ತಿತ್ತು. 
'ಹುಟ್ಟೆಟ್ಟೆಟ್ಟೆಟ್ರೋ...' ಎಂಬ ಟಿಟ್ಟಿಭ ಹಕ್ಕಿಯ ದೊಡ್ಡ ಸದ್ದಿನ ಆಲಾಪ ನನ್ನ ಬಾಹುಬಲಿಯ ಗುರ್ರೆಂಬ ಸದ್ದಿನ‌ ನಡುವೆಯೂ ಕಿವಿಗಪ್ಪಳಿಸಿ ಒಮ್ಮೆ ಮನಸ್ಸಿನಲ್ಲಿ ಅಲೆಯನ್ನೆಬ್ಬಿಸಿತ್ತು. 
ಅದಾಗಲೇ ಚಳಿಗಾಲ ಆರಂಭವಾಗಿದ್ದ ಕಾರಣ ತಿಳಿಯಾಗಿ ಇಬ್ಬನಿ ಧರೆಯನ್ನು ಚುಂಬಿಸಲು ಆರಂಭಿಸಿತ್ತು. ಎದುರಿನಿಂದ ಬರುತ್ತಿದ್ದ ವಾಹನಗಳ ದಟ್ಟ ಬೆಳಕು ಕಣ್ಣನ್ನ ಮಂಜಾಗಿಸುತ್ತಿತ್ತು. ರಾಷ್ಟ್ರೀಯ ಹೆದ್ದಾರಿಯಾಗಿದ್ದರೂ ನಿಧಾನವಾಗಿ ಬಾಹುಬಲಿಯನ್ನ ಓಡಿಸಲು ಆರಂಭಿಸಿದ್ದೆ.
ಕೆಲ‌ ಸಮಯದ ನಂತರ ಕವಲಕ್ಕಿಯೂ ತದನಂತರ ಉಪ್ಪೋಣಿಯೂ ಸಿಕ್ಕಿತು. ಇಲ್ಲೇ ಅಲ್ಲವಾ ಹೈಗುಂದ ಇರುವುದು ಎಂದುಕೊಂಡು ಮುಂದಕ್ಕೆ ತೆರಳಿದೆ. ರಸ್ತೆಯ ಪಕ್ಕದಲ್ಲೆಲ್ಲೋ ಶರಾವತಿ ನಿಶ್ಶಬ್ಧವಾಗಿ ಹರಿಯುತ್ತಿದ್ದಳು. ಅಂಕು ಡೊಂಕಾದ ರಸ್ತೆಯಲ್ಲಿ ಬಾಹುಬಲಿ ನಿಯಮಿತ ವೇಗದಲ್ಲಿ ಓಡುತ್ತಿದ್ದ. ಹಾಗೂ ಹೀಗೂ ಗೇರುಸೊಪ್ಪೆಗೆ ಬರುವ ವೇಳೆಗಾಗಲೇ ದಟ್ಟ ರಾತ್ರಿ.
ಕಾಳುಮೆಣಸಿನ ರಾಣಿ ಚನ್ನಭೈರಾದೇವಿಯ ರಾಜಧಾನಿ ಗೇರುಸೊಪ್ಪೆ. ಚಿಕ್ಕದೊಂದು ಊರು. ಸಾಕಷ್ಟು ಅಂಗಡಿ, ಮಳಿಗೆಗಳಿವೆ. ಗೇರುಸೊಪ್ಪಾ ಅಣೆಕಟ್ಟೆಯ ಕೆಲಸಗಾರರಿಗಾಗಿ ನಿರ್ಮಿಸಿದ ಕಾಲೋನಿ, ಒಂದಷ್ಟು ಸರ್ಕಾರಿ ಕಚೇರಿಗಳು ಇಲ್ಲಿವೆ. ನದಿಯ ಇನ್ನೊಂದು ದಡದಲ್ಲಿ ಚನ್ನಭೈರಾದೇವಿ ಅರಮನೆಯ ಕುರುಹುಗಳೂ, ಜೈನ ಬಸದಿಯ ಅವಶೇಷಗಳೂ ಇವೆ. ಹೊನ್ನಾವರದ ಕಡೆಯಿಂದ ಬರುವ ರಾತ್ರಿ ವೇಳೆಯ ಬಸ್ಸುಗಳು, ಪ್ರವಾಸಿ ವಾಹನಗಳು ಗೇರುಸೊಪ್ಪೆಯ ಸಣ್ಣ ಸಣ್ಣ ಹೊಟೆಲ್ ಗಳ ಬಳಿ ನಿಲ್ಲುತ್ತವೆ. ಚಾಲಕರು ತಿಂಡಿಯನ್ನೋ, ಊಟವನ್ನೋ ಮಾಡಿ ಮುನ್ನಡೆಯುತ್ತಾರೆ. ಗೇರುಸೊಪ್ಪೆಯಿಂದ ಘಟ್ಟದ ರಸ್ತೆ ಆರಂಭವಾಗುವ ಕಾರಣ, ಅದೆಷ್ಟೋ ದೂರದ ವರೆಗೆ ಮನೆಗಳು, ಅಂಗಡಿಗಳು ಸಿಗದ ಕಾರಣ ಇಲ್ಲಿ ನಿಲ್ಲುವುದು ವಾಡಿಕೆಯಾಗಿಬಿಟ್ಟಿದೆ.
ಪಶ್ಚಿಮ ಘಟ್ಟದ ಸಾಲಿನ ಕೊನೆಯ ಅಂಚಿನ ತುಣುಕಾಗಿ ಗೇರುಸೊಪ್ಪೆ ಇದ್ದು ಕರಾವಳಿಗೂ-ಘಟ್ಟದ ನಾಡಿಗೂ ಬೆಸುಗೆಯಾಗಿ ನಿಂತಿದೆ. ನಾನು ಗೇರುಸೊಪ್ಪೆಯ ಬಳಿ ಬರುವ ವೇಳೆಗಾಗಲೇ ಸಮಯ ಒಂಭತ್ತು ಗಂಟೆಯನ್ನ ಮೀರಿಯಾಗಿತ್ತು. ಗೇರುಸೊಪ್ಪೆ ಬಹುತೇಕ ಬಾಗಿಲು ಹಾಕುವ ಸಮಯ ಅದು. ಒಂದೋ ಎರಡೋ ಅಂಗಡಿಗಳು, ಹೊಟೆಲುಗಳು ಬೆಳಕು ಬೀರುತ್ತಿದ್ದುದು ಬಿಟ್ಟರೆ ಬಹುತೇಕ ಊರಿಗೆ ನಿದ್ರಾಸುರನ ಛಾಯೆ ಆವರಿಸಿತ್ತು. ಬಿಎಚ್ ರಸ್ತೆಯಲ್ಲಿ ಆಗಲೇ ವಾಹನಗಳ ಸಂಖ್ಯೆ ಬಹಳ ಕಡಿಮೆಯಾಗಿತ್ತು.
ನಾನು ಎಷ್ಟೇ ವೇಗವಾಗಿ ಸಾಗಿದರೂ ಸಾಗರವನ್ನು ತಲುಪಲು ಹನ್ನೆರಡು ಗಂಟೆಯಾಗುತ್ತದೆ. ಆ ಹೊತ್ತಿನಲ್ಲಿ‌ ಸಾಗರದಲ್ಲಿ ಯಾವುದೇ ಹೊಟೆಲ್ ತೆರೆದಿರುವುದಿಲ್ಲ. ಇನ್ನು ಘಟ್ಟದ ಮೇಲಿನ‌ ಮಾವಿನಗುಂಡಿಯನ್ನು ತಲುಪಿದರೂ ಅಲ್ಲಿಯೂ ಹೊಟೆಲ್ ತೆರೆದಿರುವ‌ ಅನುಮಾನ ಮನದಲ್ಲಿ ಮೂಡಿತು. ಯಾವುದಕ್ಕೂ ಗೇರುಸೊಪ್ಪೆಯಲ್ಲಿ ಊಟ ಮಾಡುವುದು ಒಳಿತು, ಎಂದುಕೊಂಡು ಅಲ್ಲಿ‌ನ ಹೊಟೆಲನ್ನು ಹೊಕ್ಕೆ.
ಹೊಟೆಲ್ ಒಳಕ್ಕೆ ಒಬ್ಬರೋ, ಇಬ್ಬರೋ ಜನರಿದ್ದರಷ್ಟೇ. ಅವರಾಗಲೇ ತಮ್ಮ ಊಟ ಮುಗಿಸಿ ಇನ್ನೇನು ಹೊರಡುವ ಹವಣಿಕೆಯಲ್ಲಿದ್ದರು. ರಾತ್ರಿ ಒಂಭತ್ತೂವರೆಯ ಮೇಲೆ ಬಂದ ಒಬ್ಬಂಟಿ ಪಯಣಿಗನಾದ ನನ್ನನ್ನು ಕೊಂಚ ಅನುಮಾನದಿಂದಲೇ ನೋಡಿ, ತಮ್ಮ ಕೆಲಸದಲ್ಲಿ ನಿರತರಾದರು. ನಾನೋ ವೃತ್ತಿಪರ ಬೈಕರ್ ಗಳ ಹಾಗೇ ಕೈಗೆ  ದಪ್ಪನೆಯ ಗ್ಲೌಸ್, ಮೊಣಕಾಲಿಗೆ ಪಟ್ಟಿಯನ್ನೆಲ್ಲ ಕಟ್ಟಿಕೊಂಡಿದ್ದೆ. ಹೆಲ್ಮೆಟ್ಟನ್ನೂ ಸರಿಯಾಗಿ ಹಾಕಿ ಗಾಡಿ ಓಡಿಸದ ಅವರಿಗೆ ಇದು ಸ್ವಲ್ಪ ವಿಚಿತ್ರವಾಗಿ ಕಾಣಿಸಿತಿರಬೇಕು.
'ಏನು ಬೇಕು?' ಹೊಟೆಲಿನ ಓನರ್ ಹಾಗೂ ಸಪ್ಲಾಯರ್ ಆಗಿದ್ದ ವ್ಯಕ್ತಿ ಕೇಳಿದಾಗ ' ಊಟ..' ಅಂದೆ.
'ಕಾರವಾರ- ಬೆಂಗಳೂರು ಬಸ್ ಇವತ್ ಬಹಳ ಲೇಟಂತೆ.. ಈ ಸಾರಿ‌ ಮಳೆಗಾಲ ಅಂತೂ ನಿಂತಿತಲ್ಲ.. 
ಇವತ್ತಿಂದ ಚಳಿ ಸ್ವಲ್ಪ ಶುರುವಾಗಿದೆ ಅಲಾ.. 
ಯಾವ್ ಥರ ಇಬ್ಬನಿ ಬೀಳ್ತಾ ಉಂಟು.. ಹೀಗೆ ಹಲವು ಮಾತುಗಳು ನನ್ನ ಕಿವಿಗೆ ಬಿದ್ದವು. ಕೆಲ ಕ್ಷಣದಲ್ಲಿ ಊಟ ಬಂದು, ನಾನು ಊಟವನ್ನು ಮುಗಿಸುವ ವೇಳೆಗಾಗಲೇ ಹೊಟೆಲ್ ಬಹುತೇಕ ಖಾಲಿ ಖಾಲಿಯಾಗಿತ್ತು.
ಬಿಲ್ ಕೊಡಲು ಹೋದಾಗ ನನಗೆ ಊಟವನ್ನು ಕೊಟ್ಟ ಯಜಮಾನರು ಸುಮ್ಮನೆ ಮಾತಿಗೆ ನಿಂತರು. 
' ಎಲ್ಲಿಂದ ಬಂದದ್ದು..' ಎಂದರು..
'ಹೊನ್ನಾವರದಿಂದ..' ಎಂದೆ.
'ಯಾವ ಕಡೆ ಹೊರಟದ್ದು?'
'ಸಾಗರಕ್ಕೆ ಹೋಗಬೇಕು..'

'ಸಾಗರಕ್ಕಾ? ಈ ಹೊತ್ತಿನಲ್ಲಿ ಹೊರಟ್ರಾ? ನಿಮ್ಮದೆಂತ ಬೈಕಲ್ಲಿ ಸವಾರಿಯಾ?' ಎಂದು ತುಸು ಅಚ್ಚರಿ ಹಾಗೂ ಗಾಬರಿಯಿಂದ ಕೇಳಿದರು.
'ಹೌದು.. ಯಾಕೆ?' ನಾನು ಕೇಳಿದೆ.
'ಈ ಹೊತ್ತಿನಲ್ಲಿ ಒಬ್ಬಂಟಿಯಾಗಿ ಹೋಗೋದು ಬೇಡವಾಗಿತ್ತು..' ಸಣ್ಣದಾಗಿ ಹೇಳಿದರು.
'ಅಯ್ಯೋ ನನಗೇನು ತೊಂದರೆ ಇಲ್ಲ ಬಿಡಿ.. ಇದೇ ರಸ್ತೆಯಲ್ಲಿ ಅದೆಷ್ಟೋ ಸಾರಿ ಓಡಾಡಿದ್ದೇನೆ. ಅದೂ ಅಲ್ಲದೇ ಕರ್ನಾಟಕದ ಅದೆಷ್ಟೋ ಊರುಗಳನ್ನ ಬೈಕಿನಲ್ಲಿಯೇ ಸುತ್ತಿದ್ದೇನೆ. ಹಗಲು, ರಾತ್ರಿ ಎನ್ನದೇ ಓಡಾಡಿದ್ದೇನೆ...' ಎಂದೆ
'ಹೌದ? ಘಟ್ಟದ ರಸ್ತೆಯಲ್ಲಿ ಓಡಾಡಿದ್ದೀರಾ? ಕತ್ತಲೆಕಾನು ಘಟ್ಟದಲ್ಲಿ ಹೋಗಿದ್ದಿರಾ?' ಎಂದು ಕೇಳಿದರು.
' ಹು.. ಅರಬೈಲು, ದೇವಿಮನೆ, ಬಡಾಳ, ಅಂಬೋಲಿ, ಚಾರ್ಮಾಡಿ, ಬಿಸಿಲೆ ಹೀಗೆ ಅದೆಷ್ಟೋ ಘಟ್ಟದಲ್ಲಿ‌ನಾನು ಹಾಗೂ ನನ್ನ ಬಾಹುಬಲಿ ಏಕಾಂಗಿಯಾಗಿ ಓಡಾಡಿದ್ದೇವೆ. ಈ ಕತ್ತಲೆಕಾನು ಘಟ್ಟದಲ್ಲಿಯೂ ಮೂರ್ನಾಲ್ಕು ಸಾರಿ ಓಡಾಡಿದ್ದೇನೆ...' ಎಂದೆ.
'ಕತ್ತಲೆಕಾನು ಘಟ್ಟದಲ್ಲಿ ರಾತ್ರಿ ಹೋಗಿದ್ದೀರಾ?' ಮತ್ತೊಮ್ಮೆ ಕೇಳಿದರು ಅವರು.
'ರಾತ್ರಿ ಹೋಗಿಲ್ಲ.. ಆದರೆ ಹಗಲಿನಲ್ಲಿ ಓಡಾಡಿದ್ದೇನೆ..' ಎಂದೆ.
'ಅದನ್ನೇ ನಾನು ಕೇಳಿದ್ದು. ಕತ್ತಲೆಕಾನು ಘಟ್ಟ ಇದೆಯಲ್ಲ ಇದು ಎಲ್ಲದರಂತಲ್ಲ. ಶರಾವತಿ ನದಿಯ ಪಕ್ಕದಲ್ಲಿ ಹಾದು ಹೋಗುವ ಇದು ದಟ್ಟ ಕಾಡಿನ ಪ್ರದೇಶ.. ಇಲ್ಲಿ ಹಗಲಿನಲ್ಲಿಯೇ ಒಬ್ಬಂಟಿಯಾಗಿ ಓಡಾಡುವುದು ಅಪಾಯಕರ. ಇನ್ನು ರಾತ್ರಿ ಕೇಳಬೇಕೆ? ನಮ್ಮ ಜಿಲ್ಲೆಯಲ್ಲಿ ಎಲ್ಲೇ ಕಾಳಿಂಗ ಸರ್ಪದಂತಹ ವಿಷ ಜಂತುಗಳು, ಅದೆಷ್ಟೋ ಕಾಡುಮೃಗಗಳು ಸಿಕ್ಕರೂ ಅವನ್ನು ಕತ್ತಲೆಕಾನಿಗೆ ತಂದು ಬಿಡುತ್ತಾರೆ. ಕತ್ತಲೆಕಾನು ಕಾಳಿಂಗ ಸರ್ಪಗಳ ತವರು ಎಂದೇ ಖ್ಯಾತಿ. ಕಾಳಿಂಗ ಸರ್ಪಗಳ ಸಂತಾನೋತ್ಪತ್ತಿ ಸ್ಥಳವಂತೆ ಅದು..' ಎಂದರು ಅವರು.
ನಾನು‌ ಮಧ್ಯದಲ್ಲಿಯೇ ಬಾಯಿ ಹಾಕಿ ' ಹಾ.. ಹಾ.. ಹೌದು ಹೌದು.. ನನಗೆ ಗೊತ್ತು ಅದು.. ಕತ್ತಲೆಕಾನಿನ ಕಾಳಿಂಗ ಸರ್ಪಗಳ ಬಗ್ಗೆ ಡಿಸ್ಕವರಿ ಚಾನಲ್ಲಿನವರು ದೊಡ್ಡ ಕಾರ್ಯಕ್ರಮವನ್ನೇ ಮಾಡಿದ್ದಾರೆ. ಕಾಡಿನಲ್ಲಿಯೇ ಓಡಾಡುತ್ತ ಇರುವ ನನಗೆ ಇವುಗಳ ಕುರಿತು ಅಷ್ಟೇನೂ ಭಯ ಇಲ್ಲ ಬಿಡಿ..' ಎಂದೆ.

'ವಿಷಯ ಅದಲ್ಲ... ' ಎಂದು ಮಾತು ನಿಲ್ಲಿಸಿದರು ಯಜಮಾನರು.

(ಮುಂದುವರಿಯುತ್ತದೆ)

Monday, July 15, 2019

ಕೇರಳದ ಮಾರ್ಗ ಹಿಡಿಯಲಿ ಕರ್ನಾಟಕ ಟೂರಿಸಂ


ಪ್ರವಾಸಿಗರನ್ನು ಸೆಳೆಯಲು ವಿಶಿಷ್ಟ ಪ್ರಯತ್ನ / ಆಯಾಯಾ ರಾಜ್ಯಗಳಿಗೆ ಅಲ್ಲಿನದೇ ಭಾಷೆ ಬಳಕೆ


ದೇವರ ನಾಡು ಕೇರಳದ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಅಸಂಖ್ಯಾತ ಪ್ರವಾಸಿ ತಾಣಗಳ ತವರು. ಕೇರಳದ ಪ್ರವಾಸೋದ್ಯಮ ಇಲಾಖೆ ಪ್ರವಾಸಿಗರನ್ನು ಸೆಳೆಯಲು ಸಾಕಷ್ಟು ಆಕರ್ಷಕ ವಿಧಾನಗಳನ್ನು ಅಳವಡಿಸಿಕೊಂಡಿದ್ದರೆ ಕರ್ನಾಟಕ ಪ್ರವಾಸಿಗರನ್ನು ಸೆಳೆಯುವಲ್ಲಿ ಹಿಂದುಳಿದಿದೆ.
ಕೇರಳದ ಪ್ರವಾಸೋದ್ಯಮ ಇಲಾಖೆ ಪ್ರವಾಸಿಗರನ್ನು ದೇವರ ನಾಡಿನತ್ತ ಕರೆಸಿಕೊಳ್ಳಲು ಸಾಕಷ್ಟು ಮಾರ್ಗಗಳನ್ನು ಹಾಕಿಕೊಂಡಿದೆ. ಇಲಾಖಾ ವೆಬ್‌ಸೈಟ್‌ಗಳು, ಸಾಮಾಜಿಕ ಜಾಲತಾಣಗಳಲ್ಲಿ ಪ್ರೊಮೋಷನ್ ಮಾಡುವ ಮೂಲಕ ಪ್ರವಾಸಿಗರನ್ನು ತನ್ನ ಕಡೆಗೆ ಸೆಳೆಯುವ ಯತ್ನ ಮಾಡುತ್ತಿದೆ. ಅಷ್ಟೇ ಏಕೆ, ದೇಶದ ಹಾಗೂ ಬೇರೆ ಬೇರೆ ದೇಶಗಳ ಪ್ರವಾಸಿಗರನ್ನು ತನ್ನ ಕಡೆಗೆ ಸೆಳೆದುಕೊಳ್ಳುವ ಸಲುವಾಗಿ ಆಯಾಯಾ ಪ್ರದೇಶದ ಭಾಷೆಗಳನ್ನು ಬಳಸಿಕೊಂಡು, ಆಕರ್ಷಕ ಪ್ರೋಮೋ ಕೈಗೊಳ್ಳುತ್ತಿದೆ. ತನ್ಮೂಲಕ ಪ್ರಾದೇಶಿಕ ಪ್ರವಾಸಿಗರ ಮನಸ್ಸಿನಲ್ಲಿ ಸ್ಥಾನ ಪಡೆಯುತ್ತಿದೆ.
ಕರ್ನಾಟಕದ ಪ್ರವಾಸಿಗರನ್ನು ಸೆಳೆಯಲು ಕನ್ನಡ, ಮಹಾರಾಷ್ಟ್ರದ ಪ್ರವಾಸಿಗರನ್ನು ಸೆಳೆಯಲು ಮರಾಠಿ, ತಮಿಳುನಾಡು ಪ್ರವಾಸಿಗರನ್ನು ಸೆಳೆಯಲು ತಮಿಳು, ಆಂಧ್ರ ಹಾಗೂ ತೆಲಂಗಾಣದ ಪ್ರವಾಸಿಗರನ್ನು ಸೆಳೆಯಲು ತೆಲುಗು ಭಾಷೆಯಲ್ಲಿಯೇ ಪ್ರಚಾರ ಮಾಡಲಾಗುತ್ತಿದೆ. ಆಯಾಯಾ ರಾಜ್ಯಗಳ ವ್ಯಾಪ್ತಿಯಲ್ಲಿ ಆಯಾಯಾ ಭಾಷೆಯಲ್ಲಿಯೇ ಪೋಸ್ಟ್‌ಗಳನ್ನು ಹಾಕುವ ಮೂಲಕ ಜನರನ್ನು ತನ್ನ ಕಡೆಗೆ ಸೆಳೆದುಕೊಳ್ಳುತ್ತಿದೆ.

ಹೆಚ್ಚು ಭಾಷೆ ಬಳಸಿಕೊಳ್ಳದ ಕರ್ನಾಟಕ ಟೂರಿಸಂ
ಕೇರಳಕ್ಕೆ ಹೋಲಿಸಿದರೆ ಕರ್ನಾಟಕದ ಪ್ರವಾಸೋದ್ಯಮ ಇಲಾಖೆ ಸಾಕಷ್ಟು ಹಿಂದುಳಿದಿದೆ. ಸಹಸ್ರಾರು ಪ್ರವಾಸಿ ತಾಣಗಳನ್ನು ಹೊಂದಿರುವ ಕರ್ನಾಟಕ ಪ್ರವಾಸಿಗರನ್ನು ಸೆಳೆಯುವ ವಿನೂತನ ತಂತ್ರಗಳನ್ನು ಅಳವಡಿಸಿಕೊಳ್ಳುವಲ್ಲಿ ಎಡವುತ್ತಿದೆ. ಕೇವಲ ಕನ್ನಡ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ಮಾತ್ರ ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಪೋಸ್ಟ್ ಗಳನ್ನು ಹಾಕುವ ಮೂಲಕ ಪ್ರವಾಸಿಗರನ್ನು ಸೆಳೆಯುತ್ತಿದೆ. ಭಾರತದ ಇತರ ಭಾಷೆಗಳಲ್ಲಿ ಪೋಸ್ಟ್ ಹಾಕುವ ನಿಟ್ಟಿನಲ್ಲಿ ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಇನ್ನೂ ಚಿಂತನೆ ನಡೆಸದೇ ಇರುವುದು ಇಲಾಖೆಯ ಕಾರ್ಯವೈಖರಿಯ ಜಡತ್ವಕ್ಕೊಂದು ಉದಾಹರಣೆ.
ಮಲೆಯಾಳಂ, ತೆಲುಗು, ತಮಿಳು, ಮರಾಠಿ, ಒಡಿಸ್ಸಿಘಿ, ಅಸ್ಸಾಮಿ, ಹಿಂದಿ ಹೀಗೆ ಭಾರತೀಯ ಭಾಷೆಗಳಲ್ಲಿ ಕರ್ನಾಟಕದ ಪ್ರವಾಸಿ ತಾಣಗಳ ಕುರಿತು ಕಿರು ಮಾಹಿತಿ ನೀಡಿ ಅವುಗಳನ್ನು ತನ್ನ ವೆಬ್ ಸೈಟ್‌ನಲ್ಲೋ ಅಥವಾ ಇನ್ಯಾವುದೇ ಜಾಲತಾಣಗಳಲ್ಲಿಯೋ ಪ್ರಕಟಿಸಿದರೆ ಆಗ ಅದನ್ನು ಗಮನಿಸುವ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗುತ್ತದೆ. ಪ್ರವಾಸಿಗರೂ ಕರ್ನಾಟಕದ ಕಡೆಗೆ ಮುಖ ಮಾಡುತ್ತಾರೆ. ಆದರೆ ಈ ನಿಟ್ಟಿನಲ್ಲಿ ಕರ್ನಾಟಕದ ಪ್ರವಾಸೋದ್ಯಮ ಇಲಾಖೆ ಚಿಂತನೆ ನಡೆಸದೇ ಇರುವುದು ಬೇಸರದ ಸಂಗತಿ.
ಮುಂದಿನ ದಿನಗಳಲ್ಲಿ ಕರ್ನಾಟಕ ಪ್ರವಾಸೋದ್ಯಮ ಇಲಾಖೆ ತನ್ನ ಕಡೆಗೆ ಪ್ರವಾಸಿಗರನ್ನು ಸೆಳೆಯುವ ಸಲುವಾಗಿ ವಿನೂತನ ತಂತ್ರಗಳನ್ನು ಅಳವಡಿಸಿಕೊಳ್ಳಲಿ, ತನ್ಮೂಲಕ ದೇಶದ ಹಾಗೂ ವಿದೇಶಗಳ ಪ್ರವಾಸಿಗರನ್ನು ಸೆಳೆಯಲಿ. ರಾಜ್ಯದ ಆದಾಯಕ್ಕೆ ಹೆಚ್ಚಿನ ಕಾಣಿಕೆ ನೀಡುವಂತಾಗಲಿ ಎನ್ನುವುದು ಪ್ರವಾಸ ಪ್ರಿಯರ ಆಶಯವಾಗಿದೆ.


---
ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಕೇರಳ ಪ್ರವಾಸೋದ್ಯಮ ಇಲಾಖೆ ಕೈಗೊಳ್ಳುತ್ತಿರುವ ಕ್ರಮಗಳು ಶ್ಲಾಘನೀಯ. ಆಯಾಯಾ ರಾಜ್ಯಗಳ ಮಟ್ಟದಲ್ಲಿ ಅಲ್ಲಿನ ಭಾಷೆಗಳನ್ನೇ ಬಳಸಿಕೊಂಡು ತನ್ನ ನಾಡಿನ ಪ್ರವಾಸಿ ತಾಣಗಳ ಕುರಿತು ವಿವರ ನೀಡುವ ಕೇರಳ ಪ್ರವಾಸೋದ್ಯಮದ ತಂತ್ರಗಳನ್ನು ಕರ್ನಾಟಕವೂ ಅಳವಡಿಸಿಕೊಂಡರೆ ರಾಜ್ಯಕ್ಕೆ ಆಗಮಿಸುವ ಪ್ರವಾಸಿಗಳ ಸಂಖ್ಯೆ ಹೆಚ್ಚಳವಾಗುವುದರಲ್ಲಿ ಸಂಶಯವಿಲ್ಲ.
-ರಾಘವ ಹೆಗಡೆ,
ಪ್ರವಾಸೋದ್ಯಮಿ


Tuesday, July 9, 2019

ಐತಿಹಾಸಿಕವಾಗಿಯೂ ಕಾಡುವ “ಬೆಂಗಾಲಿ ಬೆಡಗಿ” !


ನನ್ನಿಂದ ಮೊಟ್ಟ ಮೊದಲ ಕಾದಂಬರಿ ಪುಸ್ತಕವನ್ನು ಕೊಂಡು, ಆಟೋಗ್ರಾಫ್ ಕೂಡ ಹಾಕಿಸಿಕೊಂಡು, ಓದಿ ಅಭಿಪ್ರಾಯ ತಿಳಿಸಿದವರು ಗುರುವರ್ಯ ಶಿವರಾಮ ಕಾನಸೇನ್ ಅವರು. ಸಹೋದರ ಗುರುಪ್ರಸಾದ ಕಲ್ಲಾರೆ ಅವರಿಂದ ಪರಿಚಿತರಾದ ಶಿವರಾಮ ಕಾನಸೇನ್ ಅವರು ಆಗಾಗ ನನ್ನ ಜತೆ ಹಲವು ಸಾಹಿತ್ಯ ವಿಷಯಗಳನ್ನು ಹಂಚಿಕೊಂಡವರು. ಬೆಂಗಾಲಿ ಬೆಡಗಿ ಕಾದಂಬರಿ ಓದುವ ಸಂದರ್ಭದಲ್ಲಿಯೂ `ವಿನಯ್, ನೀವು ಬಾಂಗ್ಲಾಕ್ಕೆ ಹೋಗಿದ್ದಿರಾ?’ ಎಂದು ಕೇಳಿ, ನಾನು ಹೋಗಿಲ್ಲ ಎಂದಾಗ, ನಂಬಲಿಕ್ಕಾಗುತ್ತಿಲ್ಲ.. ನೀವು ಹೋಗಿ ಬರೆದಂತಿದೆ ಎಂದಿದ್ದವರು.
ಅವರು ನನ್ನ ಬೆಂಗಾಲಿ ಬೆಡಗಿ ಕಾದಂಬರಿಯನ್ನು ಓದಿ ಅವರ ಅನಿಸಿಕೆಗಳನ್ನು ನನಗೆ ನೀಡಿದ್ದಾರೆ. ಅವನ್ನು ಯಥಾವತ್ ನಿಮ್ಮಮುಂದೆ ಇಟ್ಟಿದ್ದೇನೆ.


---------------------------


“ಬೆಂಗಾಲಿ ಬೆಡಗಿ” ಕೇವಲ ಬೆರಗುಗೊಳಿಸುವ ಬೆಡಗಿನ ಹೆಣ್ಣೊಬ್ಬಳ ಕಥೆಯಲ್ಲ. ಅಥವಾ ಬೆಡಗಿಯೊಬ್ಬಳ ಹಿಂದೆ ಓಡುವ ಹುಂಬನ ಕಥೆಯಲ್ಲ. ಅವಿಭಜಿತ ವಂಗರಾಜ್ಯವೂ ಸೇರಿದಂತೆ ಅಖಂಡ ಭಾರತದ ಇತಿಹಾಸ, ಭೂಗೋಳ, ಆರ್ಥಿಕ, ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಸ್ಥಿತ್ಯಂತರಗಳ ಕಥನವಿದೆ. ದೇಶ-ನೆರೆದೇಶಗಳ ನಡುವಿನ ಕೊಡು-ಕೊಳ್ಳುವಿಕೆಯ ಹೊಣೆಗಾರಿಕೆಯೂ ಇದೆ. ಕ್ರೀಡಾಪ್ರೇಮಿಯೊಳಗೊಬ್ಬ ಸಾಹಿತ್ಯಪ್ರಿಯ ಇತಿಹಾಸಕಾರ ಅಡಗಿದ್ದರೆ “ಬೆಂಗಾಲಿ ಬೆಡಗಿ”ಯ ಹುಟ್ಟು ಸಾಧ್ಯವಾಗುತ್ತದೆ.



ಇಲ್ಲಿ ಕತೆಗಾರನಿಗೆ ಕಬಡ್ಡಿ ಒಂದು ನೆಪವಷ್ಟೇ. ಹಾಗಂತ ಕಬಡ್ಡಿಯನ್ನು ಆರಂಭದಲ್ಲೋ, ಮಧ್ಯದಲ್ಲೋ ಕೈಬಿಟ್ಟಿಲ್ಲ ಅಥವಾ ಕೊನೆಯಲ್ಲೆಲ್ಲೋ ಕಬಡ್ಡಿ-ಕಬಡ್ಡಿ ಅಂತಾ ಕೈ-ಕಾಲಾಡಿಸಲು ಮಾತ್ರ ಬಳಸಿಕೊಂಡಿಲ್ಲ. ಆರಂಭದಲ್ಲಿ “ಲೇ ಪುಳಿಚಾರು, ನೀ ಏನ್ ಕಬಡ್ಡಿ ಆಡ್ತೀಯೋ” ಎಂದವರೇ ಮುಂದೊಮ್ಮೆ “ಶಹಬ್ಬಾಸ್” ಎನ್ನುವಂತೆ ಕಬಡ್ಡಿಯ ರೈಡಿಂಗ್-ಕ್ಯಾಚಿಂಗ್-ಡಿಫೆನ್ಸ್ ಮುಂತಾಗಿ ಕಬಡ್ಡಿಯ ಸಕಲ ಆಯಾಮಗಳನ್ನೂ ದಾಖಲಿಸುವ ಕಥೆಗಾರ, ಬದುಕಿನ ಹಲವಾರು ಘಟ್ಟಗಳನ್ನು ಕಬಡ್ಡಿ ಆಟದ ರೀತಿಯಲ್ಲಿಯೇ ಎದುರಿಸುತ್ತಾನೆ.

ಉತ್ತರ ಕನ್ನಡದ ಹವಿಗನ್ನಡಿಗ ಮಾಣಿಯೊಬ್ಬ ಭಾರತದ ಕಬಡ್ಡಿಯಾಡುತ್ತಾ, ಪೂರ್ವದ ಡಾಕಿನಿಯ ಬಾಂಗ್ಲಾಕ್ಕೆ ಭೇಟಿ ನೀಡಿ, ಅಲ್ಲಿನ “ಹಡುಡು” ಹೆಸರಿನ ಕಬಡ್ಡಿ ಆಡುತ್ತಾ, ಅಖಂಡ ಭಾರತೀಯ ಮೂಲದ ಬೆಡಗಿಯೊಡನೆ ಬೆರೆಯುವ ವಿಶಿಷ್ಟ ಕಥಾಹಂದರ ಹಲವು ಆಯಾಮಗಳನ್ನು ತೆರೆದಿಡುತ್ತದೆ.



ಮಗನ ಕಬಡ್ಡಿ ಪ್ರೇಮವನ್ನು ಆರಂಭದಲ್ಲಿ ಪ್ರೋತ್ಸಾಹಿಸದ ಅಪ್ಪ, ಸಾಧನೆಗೈದು ಹೊರನಾಡಿಗೆ ಸ್ಫರ್ಧಿಸಲು ಹೊರಟಾಗ ಬಾಂಗ್ಲಾದೇಶದ ಮ್ಯಾಪು, ಮಾಹಿತಿ ಪುಸ್ತಕ ಕೊಟ್ಟು ಹುರಿದುಂಬಿಸುವುದು, ಸುಶೀಲಮ್ಮನವರ ತಾಯಿಕರುಳು ಮಗನನ್ನು ವಿದೇಶಕ್ಕೆ ಕಳುಹಿಸಲು ಹಿಂಜರಿಯುವುದು ಇವೆಲ್ಲವೂ ಪ್ರತಿ ತಂದೆ-ತಾಯಿಯರ ಮನಃಸ್ಥಿತಿಯನ್ನು ಬಿಂಬಿಸುತ್ತದೆ. ಕಬಡ್ಡಿಯನ್ನು ಕಲಿಯುವಾಗ ಜನಿವಾರ ತೊಡಕಾಗುವುದು, ಪುಳ್ಚಾರ್ ಎಗ್ ರೈಸ್ ತಿನ್ನುವುದು, ಪರಿಸ್ಥಿತಿಯ ಕೈಗೊಂಬೆಯಾಗಿ “ಮುಸಲ ಮುಂಜಿ” ಮಾಡಿಸಿಕೊಳ್ಳುವುದು ವಾಸ್ತವತೆಯನ್ನು ಬಿಂಬಿಸುತ್ತದೆ. “ಮುಂಜಿಯ ಉರಿಗಿಂತ ಮನಸ್ಸಿನ ಉರಿ ಹೆಚ್ಚು ನೋವನ್ನು ಕೊಡುತ್ತದೆ.” ಅಗ್ನಿಯಲ್ಲಿ ಲೀನವಾಗುವ ಸಲೀಂ ಚಾಚಾ ! ಬದುಕಿ ಉಳಿದರೆ ತಾನೆ ನಂಬಿಕೆಗಳು-ಧರ್ಮ ಎಲ್ಲ, ಬದುಕಿ ಉಳಿಯುವುದೇ ಅಸಾಧ್ಯವಾದಾಗ ನಂಬಿಕೆಗಳಿಗೂ ತಿಲಾಂಜಲಿ ಕೊಡಬೇಕಾದ ಅನಿವಾರ್ಯತೆ !



ಕತೆ ಹೆಣೆಯುವಾಗ ಭಾರತಕ್ಕಿಂತ ಬಾಂಗ್ಲಾದೇಶ ಅರ್ಧಗಂಟೆ ಮುಂದಿದೆ ಎಂಬಂತಹ ಸಣ್ಣಪುಟ್ಟ ಮಾಹಿತಿ ಕೊಡುವುದನ್ನು ಕತೆಗಾರ ಮರೆಯುವುದಿಲ್ಲ. ಉತ್ತರಕನ್ನಡವನ್ನು ಕರ್ನಾಟಕದ ಕಾಶ್ಮೀರ ಎನ್ನಲು ಹೆಮ್ಮೆಯೆನಿಸುತ್ತದೆ. ಜಗತ್ತಿನಲ್ಲಿ ಹೆಚ್ಚು ಓದಿಕೊಂಡವರೆಂಬ ಹೆಮ್ಮೆಯೂ ಇದೆ. ಕೆನಡಾದಲ್ಲಿ ಪಂಜಾಬಿಗಳು ಇರುವುದನ್ನೂ ಸೂಕ್ಷ್ಮವಾಗಿ ದಾಖಲಿಸಿದ್ದಾರೆ. ಬಾಂಗ್ಲಾ ರೈತರು ಮಾಳಗಳನ್ನು ಕಟ್ಟಿ ಬೆಳೆಯ ರಕ್ಷಣೆ ಮಾಡುವುದನ್ನು ಕರಾವಳಿ ಕನ್ನಡಿಗ ಕಾಣುತ್ತಾನೆ. ಮಳೆಗಾಲವೆಂದರೆ ಬಾಂಗ್ಲಾದಲ್ಲಿ ನರಕ. ಬಾಂಗ್ಲಾದ ಅಡಿಕೆಗೆ ಭಾರತವೇ ಪ್ರಧಾನ ಮಾರುಕಟ್ಟೆ ಎಂದಾಗ ನಮ್ಮ ಕರುನಾಡಿನ ಅಡಿಕೆ ಬೆಳೆಗಾರರ ಹಲವು ಸಮಸ್ಯೆಗಳು ಧುತ್ತನೆ ನಮ್ಮ ಕಣ್ಣೆದುರಿಗೆ ಬಂದು ನಿಲ್ಲುತ್ತವೆ.



ಪರದೇಶಿ ಕ್ರೀಡೆ ಕ್ರಿಕೆಟಿಗರಿಗೆ ನೀಡುವ ಐಷಾರಾಮಿ ಸೌಲಭ್ಯಗಳು ಮತ್ತು ಸ್ವದೇಶಿ ಕ್ರೀಡೆ ಕಬಡ್ಡಿಗೆ ತೋರುವ ತಾರತಮ್ಯವನ್ನು ಕಥೆಗಾರ ಎತ್ತಿತೋರಿಸಿದ್ದಾರೆ. ಪ್ರಸ್ತುತ ಹಾಕಿ ಆಟವೂ ಬಹುಜನರ ಉದಾಸೀನಕ್ಕೆ ಒಳಗಾಗಿರುವುದೂ ಸತ್ಯ.



ಕಬಡ್ಡಿ ಆಟಗಾರನ ಕಣ್ಣಿಗೆ ಡಿ-ಫ್ರಾನ್ಸ್ ಪ್ರಶಸ್ತಿ ವಿಜೇತ ದುರಂತನಾಯಕ ಲ್ಯಾನ್ಸ್ ಆರ್ಮ್ ಸ್ಟ್ರಾಂಗ್ ಕೂಡಾ ಕಂಡಿದ್ದಾನೆ ! ಬಡ ಬಾಂಗ್ಲಾದೇಶದವರೆಲ್ಲ ಭಾರತಕ್ಕೆ ಕದ್ದು ಹೋಗಿ ಅಲ್ಲಿ ಬದುಕು ಜೀವನ ಕಟ್ಟಿಕೊಂಡರೆ ಸಾಕು ಎನ್ನುವ ಕಾಲಘಟ್ಟದಲ್ಲೇ ಭಾರತೀಯ ವಿನಯಚಂದ್ರನಿಗೆ ಕಬಡ್ಡಿ ನೆಪದಲ್ಲಿ ಬಾಂಗ್ಲಾವನ್ನು ನೋಡುವ ಆಸೆ ! ಬಾಂಗ್ಲಾದೇಶದ ಕಾಂತಾಜಿ ದೇಗುಲದಲ್ಲಿನ ಮೂರ್ತಿಯ ಮೇಲೆ ಸೂರ್ಯನ ಕಿರಣಗಳು ಬೀಳುವ ಸಂದರ್ಭದಲ್ಲಿ ನಮ್ಮದೇ ಹಂಪಿಯ ವಿಜಯ ವಿಠಲ ದೇಗುಲದಲ್ಲಿಯೂ ಸೂರ್ಯನ ಕಿರಣಗಳು ಬೀಳುವುದನ್ನು ನೆನೆದರೆ, ಭಾರತ-ಬಾಂಗ್ಲಾ ಸಂಸ್ಕೃತಿ ಬೇರೆಬೇರೆಯಲ್ಲ ಎನಿಸುವುದು ಸಹಜ. ಭಾರತ-ಬಾಂಗ್ಲಾ-ನೇಪಾಳ ನಡುವಿನ ಕೋಳಿ ಕತ್ತು (ಚಿಕನ್ ನೆಕ್)  ನೋಡುವ ಹಂಬಲದ ಕತೆಗಾರನೊಳಗೊಬ್ಬ ಇತಿಹಾಸ-ಭೂಗೋಳದ ವಿದ್ಯಾರ್ಥಿಯಿದ್ದಾನೆ. ಅಳಿವಿನಂಚಿನಲ್ಲಿರುವ ಬಂಗಾಲದ ಹುಲಿಗಳ ರಕ್ಷಣೆ, ರಕ್ಷಿತಾರಣ್ಯಗಳಿದ್ದಲ್ಲಿ ಚಂಡಮಾರುತದಂತಹ ವಿಕೋಪಗಳನ್ನು ಕಡಿಮೆ ಮಾಡುವ ನೀತಿಯಿದೆ. “ಭಾರತದ ಪಾಲಿಗೆ ಅಕ್ರಮ ನುಸುಳುಕೋರರು ಎಂದರೆ ಬಾಂಗ್ಲಾ ದೇಶಿಯರು. ಗಡಿಯಲ್ಲಿ ಬೇಲಿ ನಿರ್ಮಾಣಕ್ಕೆ ಮುಂದಾದರೆ ವನ್ಯಮೃಗಳಿಗೆ ಸಮಸ್ಯೆಯಾಗುತ್ತದೆ. ಬೇಲಿ ನಿರ್ಮಿಸದಿದ್ದರೆ ನುಸುಳುಕೋರ ಮನುಷ್ಯರು ಸಮಸ್ಯೆಯಾಗುತ್ತಾರೆ” ತನ್ನದಲ್ಲದ ತಪ್ಪಿಗೆ ಭಾರತಕ್ಕೆ ಶಿಕ್ಷೆ !



ಕೋಮು ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕುತಂತ್ರ-ರಕ್ತದೋಕುಳಿಯಲ್ಲೇ ಜನಿಸಿದ ಧರ್ಮಾಂಧರ ಪಾಕಿಸ್ತಾನ-ಬಾಂಗ್ಲಾ ದೇಶಗಳು ವರ್ತಮಾನದಲ್ಲೂ ಬದಲಾಗಿಲ್ಲ. ತಮ್ಮೊಳಗಿನ ಹಿಂಸಾಚಾರವನ್ನು ಜಗತ್ತಿಗೆ ತಿಳಿಯದಂತೆ, ತಿಳಿದರೂ ದುರಂತ ಪರಿಣಾಮದ ಭೀಕರತೆಯನ್ನು ಮುಚ್ಚಿಡಲೇಬೇಕಾದ ದೈನೇಸಿ ಸ್ಥಿತಿ ಈ ಎರಡೂ ದೇಶಗಳದ್ದು. ಹೀಗಾಗಿ ಪಾಕ್-ಬಾಂಗ್ಲಾ ಎರಡೂ ಅನಿಶ್ಚಿತತೆಯ ತಾಣ ! ಕಾರಣ; ಅವುಗಳ ಹುಟ್ಟು ಮತ್ತು ವರ್ತನೆ. ಯಾವುದೇ ಪಕ್ಷಕ್ಕೆ ನಿಷ್ಠನಾಗಿರದ ಸರ್ಕಾರಿ ನೌಕರನಿಗೆ ಎರಡೂ ಪಕ್ಷದ ಬೆಂಬಲಿಗರಿಂದ ಭಯ. ಒಟ್ಟಾರೆ ಅಲ್ಲಿಯೂ ನಮ್ಮಂತೆ ಬಕೀಟು ಬ್ಯುರೋಕ್ರಾಟ್ ಮಾತ್ರ ಬದುಕಬಲ್ಲ ! ಎಂತಹ ಜನ್ನತ್ ಆಗಿದ್ದರೂ ಅದನ್ನು ಕ್ಷಣದಲ್ಲಿ ಕುಲಗೆಡಿಸುವ ರಾಜಕಾರಣಿಗಳು ನಮ್ಮಲ್ಲಿರುವಂತೆ ಬಾಂಗ್ಲಾದಲ್ಲೂ ಇದ್ದಾರೆ ! ದುರ್ಬಲರ ಮೇಲೆ ರಕ್ಕಸಧರ್ಮೀಯರ ಪೌರುಷ ಪ್ರದರ್ಶನ ಅನಾದಿ ಕಾಲದಿಂದಲೂ ನಡೆದುಬಂದದ್ದೇ.




“ಅಖಂಡ ಭಾರತದ ಅವಿಭಾಜ್ಯ ಅಂಗವಾಗಿದ್ದ ಈ ನಾಡನ್ನು ಬ್ರಿಟಿಷರು ಯಾವಾಗ ಒಡೆದರೋ, ಆಗಲೇ ಶುರುವಾಯಿತು ನರಕ. ಪ್ರತಿ ವರ್ಷ ಏನಿಲ್ಲವೆಂದರೂ ಕನಿಷ್ಠ 5000ಕ್ಕೂ ಹೆಚ್ಚು ಹಿಂದೂಗಳ ಹತ್ಯೆಯಾಗುತ್ತದೆ. ಅದಕ್ಕೂ ಹೆಚ್ಚು ಮತಾಂತರವಾಗುತ್ತದೆ. ಹಿಂದೂ ಮಹಿಳೆಯರ ಮೇಲೆ ಬಲಾತ್ಕಾರ ನಡೆಯುತ್ತದೆ. 1941ರಲ್ಲಿ 28%ರಷ್ಟಿದ್ದ ಹಿಂದೂಗಳು 1974ರಲ್ಲಿ 13.5%ಕ್ಕೆ ಇಳಿದು, 2001ರಲ್ಲಿ 9.6% ಆಗಿದೆ” ಎಂಬುದನ್ನು ದಾಖಲಿಸುವಾಗ ನಿಜಕ್ಕೂ ಭಯೋತ್ಪಾದಕರು ಯಾರು ಮತ್ತು ಭಯಭೀತರಾಗಿರುವುದು ಯಾರು ಎಂಬ ಘೋರಸತ್ಯ ಅರಿವಾಗುತ್ತದೆ. ಬ್ರಹ್ಮಪುತ್ರಾ @ ಜಮುನಾ ನದಿಗೆ ಕಟ್ಟಿರುವ ಬಂಗಬಂಧು ಸೇತುವೆಯು 1971ರ ಸಮಯದಲ್ಲಿ ಪಾಕಿಸ್ತಾನಿಯರಿಗೆ ಹೆದರಿ ಓಡುತ್ತಿದ್ದ ಲಕ್ಷಕ್ಕೂ ಮೀರಿ ಜನರು ಜಲಸಮಾಧಿಯಾಗಿದ್ದಕ್ಕೆ ಸಾಕ್ಷಿಯಾಗಿದೆ. ವಿಶ್ವಸಂಸ್ಥೆ, ಜಾಗತಿಕ ಮಾನವ ಹಕ್ಕುಗಳ ಆಯೋಗ, ವಿಶ್ವ ಮಹಿಳಾ ಆಯೋಗಗಳ ಜಾಣಕುರುಡುತನಕ್ಕೆ ಇದಾವುದೂ ಕಾಣಲೇ ಇಲ್ಲ !



ಬಾಂಗ್ಲಾದೇಶದ ಮುಷ್ಪಿಕರನ ಹೆಂಡತಿಯೇ ತನ್ನ ಗಂಡನ ಮೇಲೆ ಹಲ್ಲೆ ಮಾಡುವುದಕ್ಕೆ ಸಹಕರಿಸುವುದು, ಕಾಮಾಂಧರ ಬಹುಪತ್ನಿತ್ವದ ವಿರುದ್ಧ ಹೆಣ್ಣಿನ ಆಕ್ರೋಶದ ಪ್ರತೀಕ. 75ನೇ ವಯಸ್ಸಿನಲ್ಲೂ ಸೈಕಲ್ ತುಳಿಯುವ ಸಲೀಂ ಚಾಚಾ, “ನಾನು ಸಾಯುವುದು ಮುಖ್ಯವಲ್ಲ, ನೀವು ಬದುಕುವುದು ಮುಖ್ಯ” ಎಂದಾಗ ಆಪದ್ಬಾಂಧವರು ಎಲ್ಲೆಲ್ಲಿ ಯಾರ್ಯಾರ ರೂಪದಲ್ಲಿ ರಕ್ಷಿಸುತ್ತಾರೋ ಬಲ್ಲವರಾರು?



ಬಾಂಗ್ಲಾದೇಶದ ಹಿಂದೂ ಅರ್ಚಕರು “ನನ್ನ ಮಗಳನ್ನು ಎತ್ತಿಕೊಂಡು ಹೋದರು, ಈವರೆಗೆ ಅವಳು ಏನಾದಳು ಎಂಬುದು ಗೊತ್ತಿಲ್ಲ. ಬಾಂಗ್ಲಾದೇಶದಲ್ಲಿ ಹಿಂದುವಾಗಿ ಹುಟ್ಟುವುದು ತಪ್ಪು. ಅದರಲ್ಲೂ ಹಿಂದೂ ಹುಡುಗಿಯಾಗಿ ಹುಟ್ಟುವುದಂತೂ…ಬೇಡ ಬಿಡಿ. ಇಲ್ಲಿನ ದೌರ್ಜನ್ಯಕ್ಕೆ ಹೆದರಿ ನಾನೂ ಭಾರತಕ್ಕೆ ಬಂದರೆ ಈ ದೇವಾಲಯದ ಪೂಜೆಗೆ ಜನ ಸಿಗುವುದಿಲ್ಲ. ನಾನು ಇಲ್ಲೇ ಹುಟ್ಟಿ-ಬೆಳೆದವನು. ತಾಯ್ನಾಡು ಹೇಗೇ ಇರಲಿ, ಅಲ್ಲೇ ಬಾಳಿ ಬದುಕಬೇಕಾದುದು ಅನಿವಾರ್ಯ. ಗಡಿದಾಟಿ ಭಾರತಕ್ಕೆ ಹೋಗಲು ಹಂಬಲಿಸುವವರಿಗೆ ಸಹಾಯ ಮಾಡಲು ಯಾರೂ ಇರುವುದಿಲ್ಲ. ನಾನು ನನ್ನ ತೃಪ್ತಿಗಾಗಿ ಗಡಿ ದಾಟಿಸುವಂತಹ ಸಹಾಯ ಮಾಡುತ್ತೇನೆ” ಎಂದಾಗ ಸ್ವಧರ್ಮರಕ್ಷಣೆಗಾಗಿ ಪ್ರಜ್ಞಾಪೂರ್ವಕ ಬಲಿದಾನವಾದವರ ನೆನಪಾಗುತ್ತದೆ. ಅಂತಹ ಜೀವಿಗಳಿಗೆ ಶತಕೋಟಿ ನಮನಗಳು. ಭಾರತದಲ್ಲಿರುವ ಆಮದು ರಕ್ಕಸ ಧರ್ಮೀಯರು ಮತ್ತು ಅವರ ಜೊತೆ ಕೈಜೋಡಿಸುವ ಕೆಲವು ಸ್ವಘೋಷಿತ ಹಿಂದೂ ಉದಾರವಾದಿಗಳ ಕಣ್ಣಿಗೆ ಇವಾವುದೂ ಕಾಣುವುದೇ ಇಲ್ಲ ! ಭಾರತೀಯರ ವಿಶೇಷವಾಗಿ ಹಿಂದೂಗಳ ಔದಾರ್ಯ ಮತ್ತು ಅತೀವ ಸಹಿಷ್ಣುತೆಯೇ ಮಹಾದೌರ್ಬಲ್ಯ ಎಂಬುದು ಇಂದಿಗೂ ಬಹುಜನರಿಗೆ ಮನವರಿಕೆಯಾಗಿಲ್ಲ. ಬಾಂಗ್ಲಾ ದೇಶೀಯರೂ ಸೇರಿದಂತೆ ಪರದೇಶಗಳಿಗೆಲ್ಲ ಭಾರತ ಸ್ವರ್ಗ. ಒಮ್ಮೆ ಭಾರತಕ್ಕೆ ನುಸುಳಿಬಿಟ್ಟರೆ ಆರಾಮಾಗಿ ಜೀವನ ನಡೆಸಬಹುದು ಎಂಬ ನಂಬಿಕೆ ಅವರೆಲ್ಲರದು.



ವಿನಯಚಂದ್ರ-ಮಧುಮಿತಾ ಎಂಬ ನಾಯಕ-ನಾಯಕಿಯ ಹೆಸರುಗಳ ಆಯ್ಕೆ ಸಹಿತ ಅಪ್ಪ ಶಿವರಾಮ ಹೆಗಡೆ, ಅವ್ವ ಸುಶೀಲಮ್ಮ, ತಂಗಿ ಅಂಜಲಿ,(ತಂಗಿಗೆ ಅಣ್ಣನೇ ವಿಕಿಪೀಡಿಯಾ, ಗೂಗಲ್ ಸರ್ಚ್,…) ಕೋಚ್ ಚಿದಂಬರ, ಒಂದೇ ಒಂದು ಅಂಕಕ್ಕೂ ಮಹತ್ವ ನೀಡುವ ಕೋಚ್ ಜಾಧವ್ ಸರ್, ಸಹಕ್ರೀಡಾವರ್ತಿ ಜೊಲ್ಲುಪಾರ್ಟಿ ರ್ಸೂರ್ಯನ್ ಒಳಗೊಬ್ಬ ಹೃದಯವಂತ, ಹಿತೈಷಿ ಗೆಳೆಯ ಸಂಜಯ, ದೈಹಿಕ ಶಿಕ್ಷಕರು, ಸಲೀಂ ಚಾಚಾ ಎಲ್ಲವೂ ಸದಾ ಕಾಡುವ ಪಾತ್ರಗಳು. ಇಲ್ಲಿನ ಯಾವುದೇ ಘಟನೆ ಅಥವಾ ಪಾತ್ರಗಳು ವಾಸ್ತವದಲ್ಲಿ ಕಾಣುವಂತವೇ ಆಗಿವೆ.



ಬೆಂಗಾಲಿಗಳು ಎಷ್ಟು ಸ್ನೇಹಿತರೋ ಅಷ್ಟೇ ಸಿಟ್ಟಿನವರೂ ಕೂಡಾ ! ಇತಿಹಾಸದ ಪುಟಗಳಲ್ಲಿಯೂ ಬಂಗಾಳಿಗಳ ಕ್ರಾಂತಿಕಾರಿ ಚಟುವಟಿಕೆಗಳದ್ದು ಅಗ್ರಸ್ಥಾನ. ಬಂಕಿಮಚಂದ್ರರ “ಆನಂದಮಠ” (1882) ಓದಿದ್ದವರಿಗೆ 136 ವರ್ಷಗಳ ನಂತರದ “ಬೆಂಗಾಲಿ ಬೆಡಗಿ”ಯ ಘಟನೆಗಳು-ಪಾತ್ರಗಳು, ಸಾಮಾಜಿಕ ಸ್ಥಿತಿಗತಿ ಕಾಲ್ಪನಿಕ ಎನಿಸುವುದಿಲ್ಲ. {ಹಾಗಂತ ಆನಂದಮಠಕ್ಕೂ ಬೆಂಗಾಲಿ ಬೆಡಗಿಗೂ ಇಲ್ಲಿ ಹೋಲಿಕೆ ಮಾಡುತ್ತಿಲ್ಲ}



ತುಂಡುಗುಪ್ಪಳ, ಅಜಮಾಸು, ಮೆತ್ತಿಯನ್ನು ಹತ್ತುವುದು, ತೊಡೆದೇವು ಇತ್ಯಾದಿ ಹವಿಗನ್ನಡ ಪದಗಳ ಬಳಕೆ ಮತ್ತು ಪರಿಚಾರಿಕೆ ಕಾದಂಬರಿಗೆ ಮೆರುಗು ತಂದಿದೆ. ನಗಣ್ಯವೆನಿಸುವ ಮುದ್ರಣ ದೋಷ, ಒಂದೆರೆಡು ಸಿನಿಮೀಯ ಘಟನೆಗಳ ಹೊರತಾಗಿ ಮತ್ತೆಮತ್ತೆ ಮೆಲುಕುಹಾಕುವಂತಹ ಕೃತಿ “ಬೆಂಗಾಲಿ ಬೆಡಗಿ”. ಬೆಂಗಾಲಿ ಬೆಡಗಿಯನ್ನು ಓದುತ್ತಲೇ “ಸ್ಲಾವೋಮಿರ್ ರಾವಿಸ್ ನ ಮಹಾಪಲಾಯನ” ಮತ್ತು ಬಂಕಿಮಚಂದ್ರರ “ಆನಂದ ಮಠ”ವನ್ನೂ ಓದುವಂತೆ ಪ್ರಚೋದಿಸಿದ್ದಾರೆ ಕತೆಗಾರ ವಿನಯ್ ದಂಟಕಲ್ ! ವಿಶ್ವಕ್ಕೆ ಯೋಗವನ್ನು ನೀಡಿದ ಭಾರತದಿಂದಲೇ ಕಬಡ್ಡಿಯೂ ವಿಶ್ವಮಾನ್ಯವಾಗಲಿ. ಲೇಖಕರ ಬಯಕೆಯಂತೆ ಏಳು ಆಟಗಾರರ ಕಬಡ್ಡಿ ಏಳೂ ಖಂಡಗಳಲ್ಲಿ ಪ್ರಾಧಾನ್ಯತೆ ಪಡೆಯಲಿ.  ಆ ಮೂಲಕ ವಿಶ್ವಭ್ರಾತೃತ್ವ ಬೆಳೆಯಲಿ. ಬೆಂಗಾಲಿ ಭಾಷೆ ಸೇರಿದಂತೆ ಬಹುಭಾಷೆಗೆ “ಬೆಂಗಾಲಿ ಬೆಡಗಿ” ತರ್ಜುಮೆಯಾಗಲಿ. ವಿನಯ್ ದಂಟಕಲ್ ಮತ್ತು ಪ್ರಕಾಶಕರಾದ ಅರ್ಜುನ್ ದೇವಾಲದಕೆರೆ ರವರಿಂದ ಮತ್ತಷ್ಟು ಸಾಹಿತ್ಯಾತ್ಮಕ ಬೆಡಗು ಸೃಷ್ಟಿಯಾಗಲಿ.

- ಶಿವರಾಮ್ ಕಾನ್ ಸೇನ್


ಕಾದಂಬರಿ ಬೇಕಾದರೆ

https://www.instamojo.com/vindyapoonacha/


ಈ ಲಿಂಕ್ ನ್ನು ತೆರೆದು ಬುಕ್‌ ಮಾಡಬಹುದು.. ಮನೆ ಬಾಗಿಲಿಗೆ ಪುಸ್ತಕ ತಲುಪುತ್ತದೆ