Monday, August 21, 2017

ಸಿಹಿ-ಕಹಿ ಸಾಲುಗಳು

ತಂತ್ರ-ಪ್ರತಿತಂತ್ರ

ಪ್ರಚೋದನೆಗೆ ತಕ್ಕ ಪ್ರತಿಕ್ರಿಯೆ..
ಇದಕ್ಕೊಂದು ಉದಾಹರಣೆ ...
ಐಟಿ ರೈಡ್ ಆದ ತಕ್ಷಣ 
ಕರೇಂಟ್ ಹೋಗುವುದು.!


ರೂವಾರಿ

ಐಟಿ ರೈಡ್ ಆದಾಗ 
ಎಲ್ರೂ ಷಾ ಕಡೆ ನೋಡ್ತಾ ಇದ್ರು...
ಸಿದ್ದಣ್ಣ ಖುಷಿಯಿಂದ 
ಒಳಗೊಳಗೆ ನಕ್ರು...


ಕಾರಣ 

ಪಪ್ಪೂ..:
ಗುಜರಾತಲ್ಲಿ ಸಿಕ್ಕಾಪಟ್ಟೆ ಮಳೆ ಬರ್ತಿದೆ..
ಇದಕ್ಕೆ ಮೋದಿ ಕಾರಣ..
ರಾಜೀನಾಮೆ ಕೊಡ್ಬೇಕು...!


ನೋಟ

ಬೆಂಗಳೂರಲ್ಲಿ ಮಳೆ 
ಬರುತ್ತಿರುವಾಗ ರೈನ್ ಕೋಟ್ ಹಾಕ್ಕೊಂಡು ಹೋಗುವವನನ್ನು 
ಅನ್ಯಗ್ರಹ ಜೀವಿಯಂತೆ ದಿಟ್ಟಿಸುತ್ತಾರೆ..!

ಜೂಜು

ಟ್ರಾಫಿಕ್ಕಿನಲ್ಲಿಸಿಗ್ನಲ್ ಬಿಟ್ಟ ತಕ್ಷಣಪ್ರತಿಯೊಬ್ಬಬೈಕ್ ಸವಾರನೂರೇಸಿಗೆ ಇಳಿದ ಕುದುರೆಯಾಗುತ್ತಾನೆ..!


ರೂಪಾಂತರ

ಜಪಾನಿಗರ ಬೋನ್ಸಾಯ್ 
ತಂತ್ರಜ್ಞಾನಕ್ಕೆ ಸಿಕ್ಕು ತಮ್ಮ 
ದೈತ್ಯ ದೇಹ ಕಳೆದುಕೊಂಡ 
ಡೈನೋಸಾರ್ ಗಳೇ 
ಈಗಿನ ಓತಿಕ್ಯಾತಗಳು..!


ಪ್ರಯೋಗ ಪಶು

ಜಪಾನಿಗರು ಮೊಟ್ಟಮೊದಲು 
ಬೋನ್ಸಾಯ್ ತಂತ್ರಜ್ಞಾನ 
ಪ್ರಯೋಗ ಮಾಡಿದ್ದು 
ಡೈನೋಸಾರ್ ಗಳ ಮೇಲಂತೆ..!


ಕಾರಣ

ಅವ್ನು ತೊಡೆ ಕಚ್ಚಿದ್ನಂತೆ..
ಇವ್ನು ಕಂಪ್ಲೇಂಟ್ ಕೊಟ್ನಂತೆ..
ಅದೆಲ್ಲ ಸರಿ.. 
ಅವ್ನು ತೊಡೆ ಕಚ್ಚೋ ತನಕ 
ಇವನೇನ್ ಮಾಡ್ತಿದ್ದ ಅಂತ..!

ಪೂಜೆ

ಹೆಂಡತಿಯಿಂದ ಗಂಡನಿಗೆ
ಭೀಮನ ಅಮಾವಾಸ್ಯೆ 
ದಿನ ಪಾದಪೂಜೆ..‌
ಉಳಿದ ದಿನಗಳಲ್ಲಿ ಮಂಗಳಾರತಿ..!!!


ಬದಲಾವಣೆ

ಹುಡುಗಿಯರು ಆಕೆಯ 
ಹುಡುಗ ಸ್ವಾಭಿಮಾನಿ ಆಗಿರಬೇಕು 
ಎಂದು ಬಯಸುತ್ತಾರೆ..!
ಅದೇ ರೀತಿ ಆ ಹುಡುಗ 
ತಾನು ಹೇಳಿದ್ದನ್ನೆಲ್ಲ 
ಕುರಿಯಂತೆ ಕೇಳಲಿ ಎಂದುಕೊಳ್ಳುತ್ತಾರೆ.!


-------------------
(ಆಗಾಗ ಬರೆಯುತ್ತಿದ್ದ ಸ್ಟೇಟಸ್ಸುಗಳಲ್ಲಿ ಆಯ್ದ... ುತ್ತಮವಾದ ಸ್ಟೇಟಸ್ಸುಯಗಳನ್ನು ಈ ರೂಪದಲ್ಲಿ ನಿಮ್ಮ ಮುಂದೆ ಇಟ್ಟಿದ್ದೇನೆ.. ಓದಿ ಹೇಳಿ)


Friday, August 18, 2017

ತಮಾಷೆಯ ಸಾಲುಗಳು..!

ಬದಲಾವಣೆ..

ಕಿವಿಯ ಮೇಲೆ ಪೆನ್ ಇಟ್ಕಂಡ್.. 

ಕೈಯಲ್ ಟಕ್ ಟಕ್ ಅನ್ನಿಸ್ತಾ 
ಟಿಕೆಟ್ ಟಿಕೆಟ್ ಅನ್ನುವ 
ಕಂಡಕ್ಟರ್ ಗಳು ಏನಾದರು..? ಏನಾದರು?

ಅಪ್ ಡೇಟ್ ಆದರು..!


ಆಸೆ


ಕಾಣದ ಕಡಲಿಗೆ..

ಹಂಬಲಿಸಿದೆ ಮನ..
ಕಾಣುವ ಕಡಲನು
ಮೂದಲಿಸಿದೆ..!

ಕ`ಬಡ್ಡಿ'


ಬ್ಯಾಂಕ್
'ಬಡ್ಡಿ' 
ಹೆಚ್ಚಿದಾಗೆಲ್ಲಾ 
ಕ'ಬಡ್ಡಿ' 
ಆಡುವ 
ಆಸೆ..



ಅಸಹಿಷ್ಣು ಮನ


ಹತ್ ವರ್ಷದಿಂದ 

ಕಾಡದ ಅಸಹಿಷ್ಣುತೆ...
ಅಧಿಕಾರದಿಂದ 
ಕೆಳಗಿಳಿಯುವ ಸಂದರ್ಭದಲ್ಲಿ..
ಕಾಡ್ತಾ ಇದೆಯಂತೆ..!

ಬೇಡಿಕೆ


ಉಪ್ಪ ಕೊಡ್ತೀನಿ

ಒಪ್ಕೋ ಅಂದೆ...
OPPO ಕೊಡ್ಸು
ಒಪ್ಕೋತೀನಿ ಅಂದ್ಲು..!



(ಸುಮ್ನೆ ತಮಾಷೆಗೆ ಬರೆದ ಸಾಲುಗಳು.. 
ಫೇಸ್ ಬುಕ್ಕಲ್ಲಿ ಆಗಾಗ ಬಂದಿದೆ... ಇವುಗಳು..)

Saturday, August 5, 2017

ಕಳವೆಯ ಮುದ್ದಿನ ಗೌರಿ ಇನ್ನಿಲ್ಲ

ಕಾಡು-ನಾಡಿನ ಕೊಂಡಿಯಾಗಿದ್ದ ಜಿಂಕೆ - 17 ವರ್ಷದ ಒಡನಾಟ ಅಂತ್ಯ

ಕಾಡು ಹಾಗೂ ನಾಡಿನ ನಡುವೆ ಕೊಂಡಿಯಾಗಿ, ಕಾಡು ಸಂರಕ್ಷಣೆಯ ಪಾಠವನ್ನು ನಾಡಿನ ಮಂದಿಗೆಲ್ಲ ಸಾರಿ ಹೇಳುತ್ತಿದ್ದ ಗೌರಿ ಜಿಂಕೆ ಇನ್ನಿಲ್ಲ. ಕಳವೆಯ ಕಾಡಿನಲ್ಲಿ ಹುಟ್ಟಿ, ನಾಡಿನ ಜನರ ಪ್ರೀತಿಯನ್ನು ಗಳಿಸಿಕೊಂಡಿದ್ದ ಗೌರಿ ಜಿಂಕೆ ತನ್ನ ವಯೋಸಹಜ ಕಾರಣಗಳಿಂದಾಗಿ ಇಹಲೋಕ ತ್ಯಜಿಸಿದ್ದಾಳೆ.
ಕಾಡಿನ ಜಿಂಕೆ ನಾಡಿನ ಒಡನಾಡಿ :
2001ರ ಆಸುಪಾಸಿನಲ್ಲಿ ಮರಿಯಾಗಿದ್ದ ಗೌರಿ ಬೇಟೆ ನಾಯಿಗಳ ದಾಳಿಗೆ ಸಿಕ್ಕಿ ತತ್ತರಿಸಿತ್ತು. ಹುಟ್ಟಿ ಆಗಷ್ಟೇ ಐದಾರು ದಿನಗಳು ಕಳೆದಿದ್ದ ಗೌರಿಯ ಮೇಲೆ ಬೇಟೆಗಾರರ ನಾಯಿಗಳು ದಾಳಿ ಮಾಡಿದ್ದವು. ಹಾಗಿದ್ದಾಲೇ ಸ್ಥಳೀಯರೊಬ್ಬರು ತಾಯಿಯಿಂದ ಬೇರ್ಪಟ್ಟು ಪರಿತಪಿಸುತ್ತಿದ್ದ ಗೌರಿಯನ್ನು ಹಿಡಿದು ತಂದಿದ್ದರು. ಮನೆಗೆ ತಂದವರಿಗೆ ತಮ್ಮ ಮನೆಯಲ್ಲಿ ಜಿಂಕೆ ಮರಿಗೆ ಅಗತ್ಯವಾದ ಹಾಲು ಇಲ್ಲ ಎನ್ನುವುದು ಅರಿವಾಗಿ, ಹೈನುಗಳನ್ನು ಸಾಕಿದ್ದ ಪರಿಸರ ಬರಹಗಾರ ಶಿವಾನಂದ ಕಳವೆಯವರ ಮನೆಗೆ ಮರಿಜಿಂಕೆಯನ್ನು ಬಿಟ್ಟು ಬಂದಿದ್ದರು. ಅಂದಿನಿಂದ ಜಿಂಕೆ ಶಿವಾನಂದ ಕಳವೆ ಅವರ ಮನೆಯ ಒಡನಾಡಿಯಾಗಿತ್ತು.
ಮನೆಯಲ್ಲಿ ಕುಟುಂಬದ ಸದಸ್ಯರಂತೆ ಬೆಳೆದ ಜಿಂಕೆ ಮರಿಗೆ ಗೌರಿ ಎಂದು ಹೆಸರಿಟ್ಟಿದ್ದೂ ಆಯಿತು. ಮನೆಯ ಎಲ್ಲ ಸದಸ್ಯರೂ ಕೂಡ ಗೌರಿಯ ಪ್ರತಿಗೆ ಪಾತ್ರರಾದರು. ಮನೆಯ ನಾಯಿ, ದನ-ಕರುಗಳ ಜೊತೆಗೆ ತಾನೂ ಬೆಳೆಯಿತು ಗೌರಿ. ಇಂತಹ ಗೌರಿ ಕೆಲ ದಿನಗಳಲ್ಲಿಯೂ ಕಳವೆ ಊರಿನ ಎಲ್ಲರ ಪ್ರೀತಿಯನ್ನೂ ಗಳಿಸಿಕೊಂಡಿತು. ಶಿವಾನಂದ ಕಳವೆಯವರ ಮನೆಯಲ್ಲಿನ ದೋಸೆ, ಸಂಕಷ್ಟಿ ದಿನದಂದು ಮಾಡುವ ಪಂಚಕಜ್ಜಾಯ, ಸಿಹಿತಿಂಡಿಗಳು ಗೌರಿಯ ಅಚ್ಚುಮೆಚ್ಚಿನ ಆಹಾರವಾದವು. ಕಾಡಿನ ಪ್ರಾಣಿ ಜಿಂಕೆ ನಾಡಿನ ಪ್ರೀತಿಪಾತ್ರ ಪ್ರಾಣಿಯಾಗಿ ರೂಪುಗೊಂಡಿತ್ತು.
ಶಿವಾನಂದ ಕಳವೆಯವರು ಆಗಾಗ್ಗೆ ಗೌರಿಯನ್ನು ಕಾಡಿಗೆ ಪರಿಚಯಿಸುವ ಕಾರ್ಯ ಮಾಡುತ್ತಲೇ ಇದ್ದರು. ಗೌರಿ ಬೆಳೆಯುತ್ತಿದ್ದಂತೆಲ್ಲ ಕಳವೆಯವರ ಮನೆಯ ಬಳಿಗೆ ಬರುತ್ತಿದ್ದ ಜಿಂಕೆಗಳ ಹಿಂಡು ಗೌರಿಯನ್ನು ಆಕಷರ್ಿಸಿತು. ಆ ಸಂದರ್ಭದಲ್ಲಿಯೇ ಕಳವೆಯವರು ಗೌರಿಯನ್ನು ಕಾಡಿಗೆ ಕಳಿಸುವ ಕಾರ್ಯವನ್ನೂ ಮಾಡಿದರು. ಕಾಡಿನ ಹಿಂಡಿನ ಜೊತೆಗೆ ಗೌರಿಯನ್ನು ಕಳಿಸಿದರು. ಮೊದ ಮೊದಲು ಅಂಜಿದ್ದ ಗೌರಿ ನಂತರ ಕಾಡಿನ ಗೆಳೆಯರ ಜೊತೆ ಬೆರೆತುಕೊಂಡಿತು.
ಗೌರಿಗೊಬ್ಬ ಮಗ ಗಣೇಶ :
ಗೌರಿಗೆ ಒಂಭತ್ತು ವರ್ಷವಾಗಿದ್ದಾಗ ಅದು ಗರ್ಭ ಧರಿಸಿತು. ಅಲ್ಲದೇ ಮರಿಯನ್ನೂ ಹಾಕಿತು. ಹುಟ್ಟಿದ ಮರಿಗೆ ಗಣೇಶ ಎನ್ನುವ ನಾಮಕರಣವೂ ಆಯಿತು. ಶಿವಾನಂದ ಕಳೆವಯವರ ಮನೆಯನ್ನು ತವರು ಮನೆ ಮಾಡಿಕೊಂಡಿದ್ದ ಗೌರಿ ತನ್ನ ಮರಿಯನ್ನು ಅವರ ಮನೆಗೆ ಕರೆದುಕೊಂಡು ಬಂದಿತು. ಕಾಡಿನಲ್ಲಿ ಮರಿ ಇದ್ದರೆ ಅದರ ಜೀವಕ್ಕೆ ಅಪಾಯ ಉಂಟಾಗಬಹುದು ಎನ್ನುವ ಕಾರಣಕ್ಕಾಗಿ ನಾಡಿನತ್ತ ಮರಿಯನ್ನು ಕರೆತಂದ ಗೌರಿ ಕೆಲ ದಿನಗಳ ಕಾಲ ಗಣೇಶನನ್ನು ಮನೆಯಲ್ಲಿಯೇ ಇರಿಸಿತ್ತು ಎನ್ನುತ್ತಾರೆ ಶಿವಾನಂದ ಕಳವೆಯವರು.
ಅದಾದ ನಂತರ ಗೌರಿ ಏನಿಲ್ಲವೆಂದರೂ ಒಂಭತ್ತಕ್ಕೂ ಹೆಚ್ಚಿನ ಮರಿಗಳನ್ನು ಹಾಕಿದೆ. ಆ ಮರಿಗಳೆಲ್ಲ ಇದೀಗ ದೊಡ್ಡವಾಗಿವೆ. ಅವು ಕೂಡ ಮಕ್ಕಳು-ಮರಿಗಳನ್ನು ಮಾಡಿಕೊಂಡು ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಕಳವೆಯ ಕಾಡಿನಲ್ಲಿ ದೊಡ್ಡದೊಂದು ಹಿಂಡನ್ನು ಸೃಷ್ಟಿ ಮಾಡಿವೆ. ಕಾಡಿನಲ್ಲಿ ಹುಟ್ಟಿ, ನಾಡಿನಲ್ಲಿ ಬೆಳೆದು ನಂತರ ಮತ್ತೆ ಕಾಡಿಗೆ ಹಿಂತಿರುಗಿದ ಗೌರಿ ಆಗಾಗ ಕಳವೆಗೆ ಬರುತ್ತಲೇ ಇದ್ದಳು. ಶಿವಾನಂದ ಕಳವೆಯವರು ಹಾಗೂ ಅವರ ಕುಟುಂಬದ ಯಾರೇ ಸದಸ್ಯರು ಕಾಡಿನತ್ತ ಮುಖ ಮಾಡಿ `ಗೌರಿ... ಬಾ ಇಲ್ಲಿ..' ಎಂದರೆ ಸಾಕು ಕ್ಷಣಾರ್ಧದಲ್ಲಿ ಮನೆಯತ್ತ ಓಡಿಬರುತ್ತಿದ್ದಳು ಗೌರಿ.
ಈ ಗೌರಿಯ ಕಾರಣದಿಂದಲೇ ಕಳವೆ ಹಾಗೂ ಸುತ್ತಮುತ್ತಲ ಊರುಗಳಲ್ಲಿ ಸಾಂಪ್ರದಾಯಿಕವಾಗಿ ನಡೆಯುತ್ತಿದ್ದ ಕಾಡಿನ ಬೇಟೆಗಳೂ ನಿಂತವು ಎನ್ನುತ್ತಾರೆ ಕಳವೆಯವರು. ಊರಿನ ಯಾರದೇ ಮನೆಗೆ ಹೋಗಿ ಮನೆಯ ಸದಸ್ಯರ ಮುಂದೆ ನಿಂತು ತಿಂಡಿಯನ್ನು ಕೇಳಿ ಪಡೆಯುತ್ತಿದ್ದ ಗೌರಿ ಇನ್ನಿಲ್ಲ. ಗೌರಿ ಸಾವನ್ನಪ್ಪಿರುವ ವಿಷಯ ಕೇಳಿದ ಪ್ರತಿಯೊಬ್ಬರೂ ಹೌಹಾರಿದ್ದಾರೆ. ತಮ್ಮದೇ ಕುಟುಂಬದ ಸದಸ್ಯರನ್ನು ಕಳೆದುಕೊಂಡಷ್ಟು ದುಃಖ ಪಡುತ್ತಿದ್ದಾರೆ. ವಯೋ ಸಹಜ ಕಾರಣಗಳಿಂದ ಗೌರಿ ಸಾವನ್ನಪ್ಪಿದ್ದಾಳೆ. ಆದರೂ ಕೂಡ ಹಾವು ಅಥವಾ ಇನ್ಯಾವುದೇ ವಿಷ ಜಂತು ಕಚ್ಚಿರಬಹುದು ಎನ್ನುವ ಸಣ್ಣ ಅನುಮಾನಗಳೂ ಕೂಡ ಇದೆ. ಶಿವಾನಂದ ಕಳವೆಯವೆ ಮನೆಯ ಹಿಂಭಾಗದ ಕಾಡಿನಲ್ಲಿನ ರಾಮಪತ್ರೆ ಮರದ ಕೆಳಗೆ ಗೌರಿಯ ಮೃತದೇಹ ಸಿಕ್ಕಿದೆ. ಗೌರಿಯ ಸಾವಿನ ಸುದ್ದಿ ತಿಳಿದ ತಕ್ಷಣ ಗೌರಿಯನ್ನು ಕಂಡವರು, ಮಾತನಾಡಿಸಿದವರು, ಸ್ಥಲೀಯರು, ಪರಿಸರ ಪ್ರೇಮಿಗಳು, ಪ್ರಾಣಿ-ಪಕ್ಷಿ ಪ್ರಿಯರು ಕಳವೆಯತ್ತ ಮುಖಮಾಡಿ ಗೌರಿಯ ಅಂತಿಮ ದರ್ಶನ ಮಾಡಿಕೊಂಡು ಬಂದಿದ್ದಾರೆ. ಕಾಡು-ನಾಡನ್ನು ಬೆಸೆದ ಜೀವಿಯೊಂದು ಇನ್ನಿಲ್ಲವಾಗಿದೆ. ತನ್ನದೇ ಆದ ಮೂಕಭಾಷೆಯ ಮೂಲಕ ಕಾಡಿನ ಪಾಠವನ್ನು ತಿಳಿಸಿದ ಗೌರಿ ಜಿಂಕೆ ಎಲ್ಲರ ಮನಸ್ಸಿನಲ್ಲಿ ಮಾಸಲಾರಂತಹ ನೆನಪನ್ನು ಬಿಟ್ಟು ಹೋಗಿದ್ದಾಳೆ.

-----
ಅಂತ್ಯಸಂಸ್ಕಾರಕ್ಕೆ ಸಾಕ್ಷಿಯಾದ ನೂರಾರು ಜನರು :
ಯಾರಾದರೂಗಣ್ಯ ವ್ಯಕ್ತಿಗಳು ಸತ್ತರೆ ನೂರಾರು ಜನರು, ಸಾವಿರಾರು ಜನರು ಅವರ ಅಂತ್ಯಸಂಸ್ಕಾರಕ್ಕೆ ಸಾಕ್ಷಿಯಾಗುವುದನ್ನು ನಾವು ಕಾಣುತ್ತೇವೆ. ಕೇಳುತ್ತೇವೆ. ಕಾಡು ಪ್ರಾಣಿ ಸತ್ತರೆ ನೂರಾರು ಜನರು ಅದರ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳುತ್ತಾರೆ ಎನ್ನುವುದನ್ನು ಕೇಳಿದ್ದೀರಾ? ಗೌರಿಯ ಅಂತ್ಯ ಸಂಸ್ಕಾರದಲ್ಲಿ ಕಳವೆ ಹಾಗೂ ಸುತ್ತಮುತ್ತಲಿನ ನೂರಾರು ಜನರು ಪಾಲ್ಗೊಂಡಿದ್ದರು. ಅಂತ್ಯಸಂಸ್ಕಾರದ ಸಂದರ್ಭದಲ್ಲಿ ಪ್ರತಿಯೊಬ್ಬರ ಕಣ್ಣಾಲಿಗಳು ತುಂಬಿದ್ದವು. ಕಳವೆಯ ಗ್ರಾಮಸ್ಥರು ಬಿಕ್ಕಿ ಬಿಕ್ಕಿ ಅಳುತ್ತಿದ್ದರು. ಕಾಡು ಹಾಗೂ ನಾಡಿನ ನಡುವೆ ಕೊಂಡಿಯಾಗಿ, ನಾಡಿನ ಮಂದಿಯ ಪ್ರೀತಿಯನ್ನು ಗಳಿಸಿ, ಕಾಡಿನ ಸೂಕ್ಷ್ಮಗಳನ್ನು, ನಾಡಿನ ಕ್ರೌರ್ಯಗಳನ್ನು ಒಟ್ಟಾಗಿ ಕಂಡಿದ್ದ ಗೌರಿ ಇನ್ನು ಬರಿ ನೆನಪು ಮಾತ್ರ

-------------------

17 ವರ್ಷದ ಒಡನಾಟ
2001ರಲ್ಲಿ ಹುಟ್ಟಿ ಐದು ದಿನವಾದಾಗ ನಮ್ಮ ಮನೆಗೆ ಬಂದಿದ್ದ ಗೌರಿ 17 ವರ್ಷ ನಮ್ಮ ಜೊತೆ ಒಡನಾಡಿದೆ. ಅದಕ್ಕೆ 9ನೇ ವರ್ಷವಾದಾಗ ಕಾಡಿನ ಜೊತೆ ಒಡಡನಾಡಿ, ತದನಂತರ 9 ಮರಿಗಳನ್ನು ಹಾಕಿತ್ತು. ಸಾಮಾನ್ಯವಾಗಿ ಜಿಂಕೆಗಳು 23-25 ವರ್ಷಗಳ ಕಾಲ ಬದುಕುತ್ತವೆ. ಮನುಷ್ಯರ ಒಡನಾಟ ಇದ್ದರೆ ಜಾಸ್ತಿ ವರ್ಷಗಳ ಕಾಲ ಬದುಕಲೂ ಬಹುದು. ಆದರೆ ಗೌರಿ ಮಂಗಳವಾರ ಸಾವನ್ನಪ್ಪಿದೆ. ಗೌರಿಯ ಅಂತ್ಯಸಂಸ್ಕಾರವನ್ನು ಅರಣ್ಯ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಕೈಗೊಳ್ಳಲಾಗಿದೆ. ಅದರ ಅಂತ್ಯಸಂಸ್ಕಾರಕ್ಕೆ ನೂರಾರು ಜನರು ಆಗಮಿಸಿದ್ದರು. ಇದು ಪ್ರಾಣಿಯೊಂದು ಜನರ ಜೊತೆ ಹೊಂದಿದ್ದ ಒಡನಾಟಕ್ಕೆ, ಪ್ರೀತಿಗೆ ಸಾಕ್ಷಿ.
ಶಿವಾನಂದ ಕಳವೆ
ಪರಿಸರ ಬರಹಗಾರರು


(ಈ ಲೇಖನವು ಹೊಸ ದಿಗಂತದಲ್ಲಿ ಪ್ರಕತವಾಗಿದೆ)

Friday, March 10, 2017

ಯಲ್ಲಾಪುರದಲ್ಲಿ ಸ್ವಾತಂತ್ರ್ಯದ ಕಹಳೆ ಮೊಳಗಿಸಿದ ಅಮ್ಮಕ್ಕ

98ರ ಹರೆಯದ ಅಮ್ಮಕ್ಕಜ್ಜಿ ಬಿಚ್ಚಿಟ್ಟ ಸ್ವಾತಂತ್ರ್ಯ ಹೋರಾಟದ ವಿವರಗಳು

*****
ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಅದೆಷ್ಟೋ ಕೋಟ್ಯಂತರ ಜನರು ಹೋರಾಡಿದ್ದಾರೆ. ಹಲವರು ಹೋರಾಟ, ಹರತಾಳ, ಪ್ರತಿಭಟನೆಗಳ ಮೂಲಕ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದರೆ ಇನ್ನೂ ಹಲವರು ತೆರೆಮರೆಯಲ್ಲಿ ಉಳಿದು ಸಕ್ರಿಯ ಹೋರಾಟದಲ್ಲಿ ತೊಡಗಿಕೊಂಡವರಿಗೆ ಸಹಾಯ ಮಾಡುವ ಮೂಲಕ ಸ್ವಾತಂತ್ರ್ಯ ಹೋರಾಟಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. ಅಂತವರಲ್ಲೊಬ್ಬರು ಬರಬಳ್ಳಿಯ ಗುಡ್ಡೇಮನೆಯ ಅಮ್ಮಕ್ಕ ಗಣಪತಿ ಭಟ್.
ಅಮ್ಮಕ್ಕ ಗಣಪತಿ ಭಟ್ಟರು ಸ್ವಾತಂತ್ರ್ಯ ಹೋರಾಟಕ್ಕೆ ತಮ್ಮದೇ ಆದ ರೀತಿಯಲ್ಲಿ ಕೊಡುಗೆಯನ್ನು ನೀಡುವ ಮೂಲಕ ಜನಮಾನಸದಲ್ಲಿ ನೆಲೆನಿಂತಿದ್ದಾರೆ. ಪತಿ ಗಣಪತಿ ಭಟ್ಟರು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು ಸೆರೆಮನೆ ವಾಸ ಅನುಭವಿಸಿದ ಸಂದರ್ಭದಲ್ಲಿ ಅಮ್ಮಕ್ಕ ಗಣಪತಿ ಭಟ್ಟರು ಕೈಗೊಂಡ ಕಾರ್ಯ ಅನುಪಮವಾದುದು. ತೆರೆಮರೆಯಲ್ಲಿ ಅಮ್ಮಕ್ಕ ಗಣಪತಿ ಭಟ್ಟರು ಕೈಗೊಂಡ ಕಾರ್ಯ ಅದೆಷ್ಟೋ ಸ್ವಾತಂತ್ರ್ಯ ಹೋರಾಟಗಾರರನ್ನು ಕಾಪಾಡಿದೆ.
ಅಮ್ಮಕ್ಕ ಗಣಪತಿ ಭಟ್ಟರು ಪತಿ ಗಣಪತಿ ಭಟ್ಟರನ್ನು ಮದುವೆಯಾಗುವ ವರೆಗೂ ಆಗೊಮ್ಮೆ ಈಗೊಮ್ಮೆ ಸ್ವಾತಂತ್ರ್ಯ ಹೋರಾಟದ ಬಗ್ಗೆ ಮಾತುಗಳನ್ನು ಕೇಳುತ್ತಿದ್ದರಷ್ಟೇ. ಬೆಳಗಾವಿಯಲ್ಲಿ ನಡೆದಿದ್ದ ಕಾಂಗ್ರೆಸ್ ಅಧಿವೇಶನ, ಉತ್ತರ ಕನ್ನಡ ಜಿಲ್ಲೆಯಲ್ಲಿ ಮಹಾತ್ಮಾ ಗಾಂಧೀಜಿಯವರ ಪ್ರವಾಸ ಸೇರಿದಂತೆ ಸ್ವಾತಂತ್ರ್ಯ ಹೋರಾಟದ ಬಗ್ಗೆ ಆಗೊಮ್ಮೆ ಈಗೊಮ್ಮೆ ಮಾಹಿತಿಗಳನ್ನು ಕೇಳುತ್ತಿದ್ದರು. ನಂತರದಲ್ಲಿ ಬರಬಳ್ಳಿಯ ಗುಡ್ಡೆಮನೆ ಗಣಪತಿ ಭಟ್ಟರ ಜೊತೆ ಅಮ್ಮಕ್ಕ ಭಟ್ಟರ ವಿವಾಹ ನಡೆಯಿತು. ಪತಿ ಗಣಪತಿ ಭಟ್ ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಸ್ವಾತಂತ್ರ್ಯ ಹೋರಾಟಗಾರ ಪತಿಯ ಜೊತೆಗೆ ಆಗೀಗ ಅನೇಕ ಸ್ವಾತಂತ್ರ್ಯ ಹೋರಾಟಗಾರರು ಗುಡ್ಡೇಮನೆಗೆ ಬರುತ್ತಿದ್ದರು. ಹೀಗೆ ಬರುವವರಲ್ಲಿ ಅನೇಕ ಕ್ರಾಂತಿಕಾರಿಗಳೂ ಇದ್ದರು. ಅಂತವರಿಗೆಲ್ಲ ಮನೆಯಲ್ಲಿ ಆಶ್ರಯ ನೀಡಿ ಅಡುಗೆ ಮಾಡಿ ಹಾಕುವ ಕಾರ್ಯ ಅಮ್ಮಕ್ಕ ಗಣಪತಿ ಭಟ್ಟರದ್ದಾಗಿತ್ತು.
1940ರ ದಶಕದಲ್ಲಿ ಅದೆಷ್ಟೋ ಸ್ವಾತಂತ್ರ್ಯ ಹೋರಾಟಗಾರರು ಮನೆಗೆ ಬರುತ್ತಿದ್ದರು. ಪತಿ ಗಣಪತಿ ಭಟ್ಟರ ನೇತೃತ್ವದಲ್ಲಿ ಸಾಕಷ್ಟು ಸಭೆಯೂ ನಡೆಯುತ್ತಿತ್ತು. ಆ ಸಂದರ್ಭದಲ್ಲಿ ಅಮ್ಮಕ್ಕ ಗಣಪತಿ ಬಟ್ಟರು ಪಾಲ್ಗೊಳ್ಳುತ್ತಿದ್ದರು. ಸ್ವಾತಂತ್ರ್ಯ ಹೋರಾಟದ ನಿಮಿತ್ತ ಗಣಪತಿ ಭಟ್ಟರು ಮನೆಯಿಂದ ಹೊರ ಹೋಗಿದ್ದ ಸಂದರ್ಭದಲ್ಲಿಯೂ ಕೂಡ ಸ್ವಾತಂತ್ರ್ಯ ಹೋರಾಟಗಾರರನ್ನು ಮನೆಯಲ್ಲಿ ಇರಲು ಅವಕಾಶ ಕಲ್ಪಿಸಿ, ಅವರಿಗೆ ಅಡುಗೆ ಮಾಡಿ ಹಾಕುವ ಕಾರ್ಯವನ್ನು ಕೈಗೊಂಡಿದ್ದರು. ಅಷ್ಟೇ ಅಲ್ಲದೇ ಸ್ವಾತಂತ್ರ್ಯ ಹೋರಾಟಗಾರರನ್ನು ಹುಡುಕಿ ಬರುತ್ತಿದ್ದ ಪೊಲೀಸರ ಕಣ್ಣನ್ನು ತಪ್ಪಿಸಿ ಅವರನ್ನು ಬೇರೆಡೆಗೆ ಕಳಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಹೀಗೆ ತಾವು ಅದೆಷ್ಟೋ ನೂರು ಸ್ವಾತಂತ್ರ್ಯ ಹೋರಾಟಗಾರರಿಗೆ ಊಟ ಹಾಕಿದ್ದೇನೆ ಎಂದು ಅಮ್ಮಕ್ಕ ಹೇಳುತ್ತಾರೆ.
ನಾನು ಅಕ್ಷರ ಕಲಿತಿಲ್ಲ. ಮದುವೆಯಾಗುವ ವರೆಗೂ ಸ್ವಾತಂತ್ರ್ಯ ಹೋರಾಟದ ಬಗ್ಗೆ ನನಗೆ ಹೆಚ್ಚು ತಿಳಿದಿರಲಿಲ್ಲ. ಆಗೊಮ್ಮೆ ಈಗೊಮ್ಮೆ ಹೋರಾಟದ ಮಾಹಿತಿಗಳು ಕಿವಿಗೆ ಬೀಳುತ್ತಿದ್ದವು. ನಾನು ಮದುವೆಯಾಗಿ ಬಂದ ಮೇಲೆ ಮನೆಯಲ್ಲಿ ಅದೆಷ್ಟೋ ಸಾರಿ ಸ್ವಾತಂತ್ರ್ಯ ಹೋರಾಟದ ಕರಪತ್ರಗಳನ್ನು ಅಡಗಿಸಿ ಇಟ್ಟಿದ್ದೇನೆ. ತಲೆ ತಪ್ಪಿಸಿಕೊಂಡು ಬರುತ್ತಿದ್ದ ಚಳುವಳಿಗಾರರನ್ನು ಉಳಿಸಿ, ಊಟ ಹಾಕಿದ್ದೇನೆ. ಇವರನ್ನು ಹುಡುಕಿ ಬರುವ ಪೊಲೀಸರ ಬಳಿ ಏನೇನೋ ಸಬೂಬುಗಳನ್ನು ಹೇಳಿ ಸಾಗಹಾಕಿದ್ದೇನೆ. ಅದೆಷ್ಟೋ ಜನರು ಸ್ವಾತಂತ್ರ್ಯ ಹೋರಾಟದಲ್ಲಿ ಸೆರೆಮನೆ ವಾಸ ಮಾಡಿದ್ದಾರೆ. ನಾನು ನನಗೆ ತಿಳಿದ ರೀತಿಯಲ್ಲಿ ಕಾರ್ಯ ಮಾಡಿದ್ದೇನೆ. ನಿಜಕ್ಕೂ ಇದೊಂದು ಅಲ್ಪ ಮಟ್ಟದ ದೇಶಸೇವೆ. ಸ್ವಾತಂತ್ರ್ಯ ಹೋರಾಟದಲ್ಲಿ ಎಲ್ಲರಂತೆ ನಾನು ಸೆರೆಮನೆ ವಾಸ ಮಾಡಿಲ್ಲ ಎನ್ನುವ ಬೆಜಾರೂ ನನಗಿದೆ ಎಂದು ಅಮ್ಮಕ್ಕ ಗಣಪತಿ ಭಟ್ ಹೇಳುತ್ತಾರೆ.
ಈಗ ಅಮ್ಮಕ್ಕ ಗಣಪತಿ ಭಟ್ಟರಿಗೆ 95 ವರ್ಷಗಳಾಗಿದೆ. ಕಿವಿ ಕೇಳುವುದಿಲ್ಲ. ಕಣ್ಣು ಅಸ್ಪಷ್ಟವಾಗಿ ಕಾಣಿಸುತ್ತದೆ. ಸಕ್ರಿಯರಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಕೊಳ್ಳುವವರಿಗೆ ಸಹಾಯ ಮಾಡಿದ ಅಮ್ಮಕ್ಕರಂತಹ ಅದೆಷ್ಟೋ ಸಾಧ್ವಿಯರು ಇಂದಿಗೂ ಎಲ್ಲರ ಮನಸ್ಸಿನಲ್ಲಿ ಅಚ್ಚಳಿಯದಂತೆ ಉಳಿಯುತ್ತಾರೆ. ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಇಂತಹ ಮಹಿಳಾ ಸಾಧಕಿಯರ ಸಾಧನೆ ಎಲ್ಲರಿಗೂ ಪ್ರೇರಣಾದಾಯವಾಗುತ್ತದೆ. ಆಧುನಿಕ ತಂತ್ರಜ್ಞಾನ ಬೆಳೆದು ನಿಂತಿರುವ ಇಂದಿನ ದಿನಮಾನದಲ್ಲಿ, ಏನೂ ಇಲ್ಲದ ಕಾಲದಲ್ಲಿ ಸ್ವಾತಂತ್ರ್ಯ ಹೋರಾಟಕ್ಕಾಗಿ ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡಿದ ಅಮ್ಮಕ್ಕ ಗಣಪತಿ ಭಟ್ ಸ್ಪೂತರ್ಿಯ ಸೆಲೆಯಾಗಿ ನಿಲ್ಲುತ್ತಾರೆ.


ದಾಸ್ಯ (ಕಥೆ)

             `ನಾನು ಏನ್ ಮಾಡಿದ್ದೆ ಅಂತ ನನ್ನ ಮಾತನಾಡಿಸಲಿಕ್ಕೆ ಬಂದ್ಯೋ.. ಹೋಗ್ ಹೋಗು.. ಬೇರೆ ಏನಾದರೂ ಕೆಲಸ ನೋಡ್ಕೋ ಹೋಗ್..' ಎಂದು ದೇವಮ್ಮ ನನ್ನನ್ನು ಗದರಿದಾಗ ನಾನು ಒಮ್ಮೆ ಪೆಚ್ಚಾಗಿದ್ದೆ. ಹಿರಿಯ ಸ್ವಾತಂತ್ರ್ಯ ಹೋರಾಟಗಾರ್ತಿಯ ಬಳಿ ನಾನು ಹೋಗಿ ಬಂದ ಕಾರಣವನ್ನು ತಿಳಿಸಿದಾಗ ಒಮ್ಮೆಲೆ ಸಾರಾ ಸಗಟಾಗಿ ನನ್ನ ಕೋರಿಕೆಯನ್ನು ತಿರಸ್ಕರಿಸಿದ್ದರು ದೇವಮ್ಮ. ಆದರೂ ಮನಸ್ಸಿನಲ್ಲಿ ಏನೋ ಒಂದು ಆಶಾವಾದ. ದೇವಮ್ಮನವರು ಗದರಿದ್ದರೂ ನಾನು ಅಲ್ಲಾಡದೇ ಕುಳಿತಿದ್ದೆ.
             95-96 ವರ್ಷದ ದೇವಮ್ಮನವರನ್ನು ನಾನು ಮಾತನಾಡಿಸಲು ತೆರಳಿದ್ದರ ಹಿಂದೆ ಮೂರ್ನಾಲ್ಕು ಕಾರಣಗಳಿದ್ದವು. ನಮ್ಮ ಸುತ್ತಮುತ್ತಲ ಪ್ರದೇಶದಲ್ಲಿಯೇ ದೇವಮ್ಮನವರು ಬದುಕಿರುವ ಹಿರಿಯ ವ್ಯಕ್ತಿ ಎಂಬುದು ಒಂದು ಕಾರಣವಾಗಿದ್ದರೆ, ಸ್ವಾತಂತ್ರ್ಯ ಹೋರಾಟದಲ್ಲಿ ದೇವಮ್ಮನವರ ಕುರಿತು ನಾನು ಯಾವುದೋ ಒಂದು ಪುಸ್ತಕದಲ್ಲಿ ಓದಿದ್ದೆ. ಅದರ ಅನ್ವಯ ಸ್ವಾತಂತ್ರ್ಯ ಹೋರಾಟದಲ್ಲಿ ದೇವಮ್ಮನವರು ಪಾಲ್ಗೊಂಡ ಬಗ್ಗೆ ವಿವರಗಳನ್ನು ಪಡೆದು ಅದನ್ನು ಸಾಕ್ಷ್ಯಚಿತ್ರ ಮಾಡಬೇಕೆಂದು ಹೊರಟಿದ್ದೆ.
              ದೇವಮ್ಮನವರನ್ನು ಭೇಟಿ ಮಾಡುವ ಮೊದಲು ನನ್ನಲ್ಲಿ ಅನೇಕ ಕಲ್ಪನೆಗಳಿದ್ದವು. ಸ್ವಾತಂತ್ರ್ಯ ಹೋರಾಟ ಮಾಡಿದ್ದ ಹಲವರನ್ನು ನಾನು ಕಂಡಿದ್ದೆ. ಅವರೆಲ್ಲರೂ ಪುರುಷರಾಗಿದ್ದರು. ಬಿಳಿಯ ಧೋತಿ. ಅಷ್ಟೇ ಶುಭ್ರ ಜುಬ್ಬಾ, ತಲೆಯ ಮೇಲೆ ಬಿಳಿಯ ಟೊಪ್ಪಿಗೆ ಹಾಕಿಕೊಂಡು ಠಾಕು, ಠೀಕಾಗಿ ನಡೆದು ಬರುತ್ತಿದ್ದ ಅದೆಷ್ಟೋ ಹಿರಿಯ ಸ್ವಾತಂತ್ರ್ಯ ಹೋರಾಟಗಾರರನ್ನು ನಾನು ನೋಡಿ ಮನದಣಿಯೆ ವಂದಿಸಿದ್ದೆ. ಕಣ್ಣು ಮಂಜಾಗಿದ್ದರೂ, ಕೈಕಾಲುಗಳಲ್ಲಿ ತ್ರಾಣ ಇಲ್ಲದೇ ಇದ್ದರೂ ಯಾರ ಸಹಾಯವೂ ಇಲ್ಲದೇ ಸ್ವಾಭಿಮಾನದಿಂದ ನಡೆದು ಬರುತ್ತಿದ್ದ ಹಿರಿಯ ಜೀವಗಳನ್ನು ಕಣ್ತುಂಬಿಕೊಂಡು ಅವರ ಪಾದಕ್ಕೆರಗಿದ್ದೆ. ಆದರೆ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿಯರು ಹೇಗಿರಬಹುದು ಎನ್ನುವುದು ನನಗೆ ಖಂಡಿತವಾಗಿಯೂ ತಿಳಿದಿರಲಿಲ್ಲ. ಅಲ್ಲೊಬ್ಬರು ಇದ್ದಾರಂತೆ, ಇಲ್ಲೊಬ್ಬರು ಇದ್ದಾರಂತೆ, ಯಾರಿಗೋ ಸ್ವಾತಂತ್ರ್ಯ ಹೋರಾಟಗಾರರ ಪೆನ್ಶನ್ ಬರುತ್ತದಂತೆ ಎಂಬ ಮಾಹಿತಿಗಳನ್ನಷ್ಟೇ ಕೇಳಿ ತಿಳಿದಿದ್ದೆ. ದೇವಮ್ಮನವರ ಬಗ್ಗೆ ತಿಳಿದಾಗ ನಾನು ಒಮ್ಮೆಲೆ ಬಾನೆತ್ತರಕ್ಕೆ ನೆಗೆದು ಖುಷಿಯಿಂದ ಅವರನ್ನು ಮಾತನಾಡಿಸುವುದೇ ಸರಿಯೆಂದುಕೊಂಡು ತಯಾರಾಗಿದ್ದೆ.
             ದೇವಮ್ಮ ದೇವತೆಯಂತೆ ಕಾಣಬಹುದೇ? ಖಾದಿ ಸೀರೆಯನ್ನು ಉಟ್ಟು ಗತ್ತಿನಿಂದ ಬರಬಹುದೇ? ಎಂಬೆಲ್ಲ ಭಾವನೆಗಳು ನನ್ನ ಮನದಲ್ಲಿ ಕುಣಿದಾಡುತ್ತಿದ್ದವು. ಇದೇ ಆಲೋಚನೆಯಲ್ಲಿಯೇ ದೇವಮ್ಮನವರ ಮನೆಯ ಬಾಗಿಲನ್ನು ತೆಗೆದಾಗ ದೇವಮ್ಮನ ಮೊಮ್ಮಕ್ಕಳ್ಯಾರೋ ಇರಬೇಕು ಬಾಗಿಲು ತೆಗೆದಿದ್ದರು. ನಾನು ಅವರ ಬಳಿ ಬಂದ ವಿಷಯವನ್ನು ಹೇಳಿದಾಗ ಅವರು ನನ್ನ ಬಳಿ `ಒಂದು ನಿಮಿಷ, ನಿಂತ್ಕೊಂಡಿರಿ..' ಎಂದು ಒಳಹೋಗಿದ್ದರು.
           ಅವರು ಒಳಹೋದ ಅರ್ಧ ಗಳಿಗೆಯಲ್ಲಿ ಆ ಮನೆಯ ಕತ್ತಲೆಯ ಆಳದಲ್ಲಿ  ದೊಡ್ಡ ಧ್ವನಿಯಲ್ಲಿ ನನ್ನ ಬಳಿ ಮಾತನಾಡಿದ ವ್ಯಕ್ತಿ `ಯಾರೋ ಬಂದಿದ್ದಾರೆ, ನಿಮ್ಮನ್ನು ಮಾತನಾಡಿಸಬೇಕಂತೆ. ಅದೇನೋ ಸಾಕ್ಷ್ಯಚಿತ್ರ ಮಾಡ್ತಾರಂತೆ..' ಎಂದು ಕೂಗುತ್ತಿದ್ದುದು ಕಿವಿಗೆ ಬಿದ್ದಿತ್ತು. ಅದಕ್ಕೆ ಪ್ರತಿಯಾಗಿ ಕ್ಷೀಣ ಧ್ವನಿಯೊಂದು ಏನೋ ಮಾತನಾಡಿದ್ದು ಅಸ್ಪಷ್ಟವಾಗಿ ನನ್ನ ಕಿವಿಗೆ ಬಿದ್ದಿತ್ತು. ಏನೋ ಕಸಿವಿಸಿ ನನ್ನೊಳಗೆ ಆ ಕ್ಷಣದಲ್ಲಿ ಮೂಡಿದ್ದು ಸುಳ್ಳಲ್ಲ. ನನ್ನನ್ನು ನಿಲ್ಲಿಸಿ ಹೋದ ವ್ಯಕ್ತಿ ಮರಳಿ ಬಂದು `ಒಳಗೆ ಬನ್ನಿ. ಕುಳಿತುಕೊಳ್ಳಿ. '  ಎಂದರು.
        ದೇವಮ್ಮ ಅಜ್ಜಿಯ ಆಹ್ವಾನಕ್ಕಾಗಿ ಕಾಯುತ್ತ ಕುಳಿತಿದ್ದ ನಾನು ಮನೆಯನ್ನೆಲ್ಲ ಗಮನಿಸತೊಡಗಿದ್ದೆ. ದೊಡ್ಡ ಹಳೆಯ ಕಾಲದ ಮನೆ. ಆರು ಅಡಿ ಅಗಲದ ಮಣ್ಣಿನ ಗೋಡೆ. ದಪ್ಪ ದಪ್ಪನೆಯ ತೇಗದ ಮರದ ಕಂಬಗಳು. ಯಾವ ಶತಮಾನದಲ್ಲಿ ಕಟ್ಟಿದ್ದರೋ ಏನೋ. ಸಾಕಷ್ಟು ಕೋಣೆಗಳು ಆ ಮನೆಗಿದ್ದರೂ ಮನೆಯ ಮಧ್ಯದಲ್ಲಿ ಒಂದು ಆಟದ ಅಂಗಳ. ಅಲ್ಲೊಂದಷ್ಟು ಹೂಗಿಡಗಳನ್ನು ಬೆಳೆಸಲಾಗಿತ್ತು. ಗೋಡೆಯ ಮೇಲೆಲ್ಲ ಹಳೆಯ ಕಾಲದ ರೇಖಾಚಿತ್ರಗಳು. ಯಾರ್ಯಾರೋ ಹಿರಿಯರನ್ನು ಆ ಚಿತ್ರಗಳು ಬೆಡಗಿನಿಂದ ಮೂಡಿಸಿದ್ದವು. `ಒಳಗೆ ಬರಬೇಕಂತೆ..' ಅಜ್ಜಿಯಿಂದ ತಾರನ್ನು ತಂದ ವ್ಯಕ್ತಿ ನನ್ನ ಬಳಿ ಹೇಳಿದ್ದರು. ಅವರ ಹಿಂದೆ ನಾನು ಹೆಜ್ಜೆ ಹಾಕಿದೆ.
ಕತ್ತಲೆಯ ಆಳದಲ್ಲಿ ಅಜ್ಜಿ ದೇವಮ್ಮ ಕುಳಿತಿದ್ದರು. ಬೆಳಕು ಬರದಂತಹ ಕೋಣೆ ಅದಾಗಿತ್ತಾದರೂ ನಾವು ಬಂದ ಬಾಗಿಲಿನಿಂದ ಮಸುಕಾದ ಬೆಳಕು ಕೋಣೆಯೊಳಕ್ಕೆ ಇಣುಕುತ್ತಿತ್ತು. ಅಲ್ಲೊಂದು ಹಳೆಯ ಮಂಚದ ಮೇಲೆ ಕುಳಿತಿದ್ದರು ದೇವಮ್ಮ. ನಾನು ಹೋದ ಕೂಡಲೇ `ನೀ ಯಾರಾ?' ಎಂದರು. ನಾನು ಏನೋ ಹೇಳಲು ಮುಂದಾದೆ. ಆದರೆ ನನ್ನ ಜೊತೆ ಬಂದಿದ್ದ ವ್ಯಕ್ತಿ `ಅವರಿಗೆ ಕಿವಿ ಕೇಳಿಸುವುದಿಲ್ಲ. ಅವರ ಬಳಿ ಹೋಗಿ ದೊಡ್ಡದಾಗಿ ಹೇಳಿ..' ಎಂದರು. ನಾನು ದೇವಮ್ಮನವರ ಹತ್ತಿರ ಹೋಗಿ `ನಾನು ವಿನಯ..' ಎಂದೆ. `ನೀನು ವಿನಯನಾ? ಯಾರ ಮನೆ ನಿನಗೆ..' ಮತ್ತೆ ಕೇಳಿದ್ದರು ದೇವಮ್ಮ. `ದಂಟಕಲ್ ಸುಬ್ಬಣ್ಣನ ಮಗ ನಾನು..' ಎಂದೆ. `ಸುಬ್ಬಣ್ಣ ಅಂದರೆ ಯಾರಾ? ಇಗ್ಗಣ್ಣನ ಮಗನಾ?' ಅಜ್ಜಿ ಮತ್ತೆ ಕೇಳಿದ್ದರು. `ಹು.. ಹೌದು..' ಎಂದೆ. `ಇಗ್ಗಜ್ಜ.. ಬಹಳ ಒಳ್ಳೆಯ ಮನುಷ್ಯ.. ಇಗ್ಗಜ್ಜನ ಹಿರಿ ಮೊಮ್ಮಗ ನೀನು ಹೇಳಾತು.. ಅಲ್ದನಾ..?' ಎಂದರು ದೇವಮ್ಮ. ನಮ್ಮ ನಡುವೆ ಆಪ್ತತೆ ಬೆಳೆಯುತ್ತಿತ್ತು. ನಾನು ಬಂದ ಕಾರ್ಯವನ್ನು ಸಾಂಗವಾಗಿ ಮಾಡಲು ಇದು ಅನುಕೂಲ ಮಾಡಿಕೊಡುತ್ತಿತ್ತು. ಹೀಗಾಗಿ ಅಜ್ಜಿಯ ಬಳಿ ನನ್ನ ಮನೆಯ, ಅಜ್ಜನ ವಿಷಯಗಳನ್ನೆಲ್ಲ ಮಾತನಾಡಿದೆ.
`ನಿಂಗ್ ಎಂತಾ ಬೇಕು? ಅದೆಂತದ್ದೋ ಮಾಡ್ತ್ಯಡಾ..?' ಎಂದರು ದೇವಮ್ಮ. `ಏನಿಲ್ಲ ಅಜ್ಜಿ ನೀವು ಹಿರಿಯ ಸ್ವಾತಂತ್ರ್ಯ ಹೋರಾಟಗಾರರು ಅಂತ ಕೇಳದಿ. ಅದ್ಕೆ ನಿಮ್ಮ ಸ್ವಾತಂತ್ರ್ಯ ಹೋರಾಟದ ಕಥೆಗಳನ್ನ, ಸ್ವಾತಂತ್ರ್ಯ ಹೋರಾಟಗಳ ಕುರಿತಾದ ವಿವರಗಳನ್ನು ಸಂಗ್ರಹಿಸೋಣ ಅಂತ ಬಂಜಿ. ಅದನ್ನ ವೀಡಿಯೋ ಮಾಡಿ ಇಟ್ಕಳವು ಅಂತ ಬಂಜಿ..' ಎಂದೆ.
`ಅದರಿಂದ ಎಂತಾ ಆಗ್ತಾ.. ಸ್ವಾತಂತ್ರ್ಯ ಬಂತು.. ಈಗಿನವ್ಕೆ ಅದರ ಬೆಲೆ ಎಲ್ಲಾ ಗೊತ್ತಿಲ್ಯಲಾ ತಮಾ.. ನಾನು ಆ ಕಥೆನೆಲ್ಲಾ ಹೇಳಿದ್ರೆ ಯಾರು ಕೇಳ್ತ್ವಾ? ನಿಂಗ್ ಬೇರೆ ಹ್ವಾರ್ಯ ಇಲ್ಲೆ ಕಾಣಿಸ್ತು ನೋಡು. ಬೇರೆ ಎಂತಾದ್ರೂ ಮಾಡು..' ದೇವಮ್ಮನ ದನಿಯಲ್ಲಿ ಅದೇನೋ ಬೇಸರವಿತ್ತು. ನಾನು ಪಟ್ಟು ಬಿಡದೇ ಮತ್ತೆ ಮತ್ತೆ ಕೇಳಿದೆ. ಅಜ್ಜಿಯೂ ಮೊಂಡು ಹಠ ಮಾಡುತ್ತಿದ್ದರು. ಹೇಗಾದರೂ ಆಗಲಿ, ಅಜ್ಜಿಯ ಬಾಯಿಂದ ಆಕೆಯ ಸ್ವಾತಂತ್ರ್ಯ ಹೋರಾಟದ ಕಥೆಗಳನ್ನು ಕೇಳಿ, ಅದನ್ನು ದಾಖಲಿಸಿಕೊಂಡು ಹೋಗುವುದೇ ಸೈ ಎಂದು ಕುಳಿತಿದ್ದೆ.
ನಾನು ಬಿಡುವವನಲ್ಲ ಅನ್ನಿಸಿರಬೇಕು ಅಜ್ಜಿಗೆ. ಕೊನೆಗೊಮ್ಮೆ ಅಜ್ಜಿಯೇ ಸೋತರು. `ಎಂತಾ ಹೇಳವಾ ನಿಂಗೆ.. ನಂಗೆ ಎಲ್ಲಾ ಮರ್ತೋಗ್ತಾ ಇದ್ದು. ಸರಿ ನೆನಪಿಲ್ಲೆ..' ಎನ್ನುತ್ತಿದ್ದಂತೆಯೇ ನಾನು `ನೆನಪಿದ್ದಷ್ಟನ್ನ ಹೇಳಿ..' ಎಂದೆ. `ಆತೋ.. ಅಂತೂ ನೀ ಬಿಡಂವ ಅಲ್ಲ ಹೇಳಾತು..' ಎಂದು ಬೊಚ್ಚು ಬಾಯಿಯಲ್ಲಿ ನಕ್ಕರು.
`ತಮಾ.. ನಂಗೀಗ 95 ವರ್ಷದ ಮೇಲಾತು. ನೋಡು 80 ವರ್ಷದ ಹಿಂದೆ ಎಲ್ಲ ಶುರು ಆತು ಅಂದ್ಕ. ಆಗ ಭಾರತದಲ್ಲಿ ಎಲ್ಲ ಕಡೆ ಫಿರಂಗಿಯವ್ ಇದ್ದಿದ್ದ. ಬಿಳಿ ಬಿಳಿ ಮುಷಡಿಯವ್ವು. ನಾನು ಸಣ್ಣಕ್ಕಿದ್ದಾಗ ಯನ್ ಅಪ್ಪಯ್ಯ ಈ ಬ್ರಿಟೀಷರ ಕಥೆ ಹೇಳತಿದ್ದಾ. ಆವಾಗ ಆನು ಯನ್ ತಮ್ಮ ಬಿಟ್ಟ ಕಣ್ ಬಿಟ್ಟಂಗೆ, ಬಾಯಿ ಕಳಕಂಡು ಕೇಳತಿದ್ಯಾ. ಯಾರೋ ಗೋಖಲೆ ಅಂತ ಇದ್ರಡಾ, ಬಾಲಗಂಗಾಧನಾಥ ತಿಲಕ್ ಅಂತ ಇದ್ರಡಾ.. ಸ್ವರಾಜ್ಯ ಹೋರಾಟ ಹೇಳಿ ಶುರು ಹಚ್ಚಕಂಜ್ರಡ, ಅದ್ಯಾರೋ ಗಾಂಧೀಜಿ ಹೇಳಿ ಇದ್ರಡ ಅಂತೆಲ್ಲ ಹೇಳತಿದ್ದ.. ಅಪ್ಪಯ್ಯ ಹೇಳತಿದ್ದ ಕಥೆಗಳೇ ಯನ್ನ ಸ್ವಾತಂತ್ರ್ಯ ಹೋರಾಟಕ್ಕೆ ಪ್ರೇರಣೆ..' ಎಂದು ದೇವಮ್ಮ ಶುರು ಮಾಡಿದ್ದರು. ನಾನು ಸದ್ದಿಲ್ಲದಂತೆ ನನ್ನ ನೈಟ್ ವಿಷನ್ ಕ್ಯಾಮರಾ ತೆಗೆದು ಅಜ್ಜಿಯ ವಿವರಗಳನ್ನೆಲ್ಲ ದಾಖಲಿಸಲು ಆರಂಭಿಸಿದ್ದೆ.
`ಅಪ್ಪಯ್ಯ ಹೇಳುತ್ತಿದ್ದ ಕಥೆಗಳನ್ನೆಲ್ಲ ಕೇಳಿ ಕೇಳಿ ಯಂಗೂ, ತಮ್ಮಂಗೂ ಎಂತಾದ್ರೂ ಮಾಡವು ಅನ್ನಿಸ್ತಿತ್ತು. ಆದರೆ ಆವಾಗೆಲ್ಲ ಯಂಗಕ್ಕಿಗೆ ಸಣ್ಣವಯಸ್ಸು ನೋಡು. ಯಂಗಂತೂ 10-15 ವರ್ಷ. ತಮ್ಮ ಯನ್ನಕ್ಕಿಂತ ಇನ್ನೂ ಎರಡು ವರ್ಷ ಸಣ್ಣವ. ಬಾಯಲ್ಲಿ ನಂಗವ್ ಹಾಂಗ್ ಮಾಡಿ ಬಿಡ್ತ್ಯ ಹಿಂಗ್ ಮಾಡಿ ಬಿಡ್ತ್ಯ ಹೇಳಿ ಹೇಳಕತ್ತ ಇರ್ತಿದ್ಯ. ಆದರೆ ಎಂತಾ ಮಾಡವು ಅಂತ ಇಬ್ರಿಗೂ ಗೊತ್ತಿತ್ತಿಲ್ಲೆ. ಮನೆಯಲ್ಲಿ ಆವಾಗ ನಾನೇ ದೊಡ್ಡವ. ಹಿಂಗಾಗಿ ಆನು ಎಂತಾ ಹೇಳತ್ನೋ ಹಂಗೆ ತಮ್ಮ ಮಾಡ್ತಿದ್ದ. ಸ್ವಾತಂತ್ರ್ಯ ಹೋರಾಟದಲ್ಲಿ ನಂಗವ್ವೂ ಪಾಲ್ಗೊಳ್ಳವು ಹೇಳಿ ಇತ್ತು. ಆದರೆ ಹೆಂಗೆ ಅಂತ ಗೊತ್ತಿಲ್ಲೆ. ಎಲ್ಲಾ ಹರತಾಳದ ಕಥೆಗಳನ್ನ ಹೇಳ್ತಾ ಇದ್ರೆ ನಂಗಕ್ಕಿಗೆ ಮೈಯೆಲ್ಲ ರೋಮಾಂಚನ. ಯಾರೋ ಬೋಲೋ ಭಾರತ ಮಾತಾ ಕಿ.. ಎಂದರೆ ಎಲ್ಲರಿಗಿಂತ ಮೊದಲು ಜೈ ಎನ್ನುವವರು ಯಂಗವ್ವೇ ಆಗಿದ್ಯ. ಹಿಂಗಿದ್ದಾಗ ಆವತ್ತೊಂದಿನ ನಮ್ಮೂರಲ್ಲಿ ಒಬ್ರು ಸ್ವಾತಂತ್ರ್ಯ ಹೋರಾಟಗಾರರು ಬಂದಿದ್ದರು. ಅವರ ಭಾಷಣ ಇತ್ತು. ನಮ್ಮೂರಲ್ಲಿ ಜನರನ್ನ ಹುರಿದುಂಬಿಸಿ ಸ್ವಾತಂತ್ರ್ಯ ಹೋರಾಟಕ್ಕೆ ಅಣಿಗೊಳಿಸೋದು ಅವರ ಉದ್ದೇಶ ಆಗಿತ್ತು. ಆ ಭಾಷಣ ಕಾರ್ಯಕ್ರಮಕ್ಕೆ ನಾನು-ತಮ್ಮ ಇಬ್ರೂ ಹೋಗವು ಅಂತ ಅಂದಕಂಡ್ಯ. ತಂಗೀ.. ನಿಂಗಕ್ಕಿಗೆ ಇದರ ಉಸಾಬರಿ ಬ್ಯಾಡ. ಯಂಗವ್ವು ದೊಡ್ಡವ್ ಇದ್ಯ. ಯಂಗವ್ ಇದ್ನೆಲ್ಲಾ ನೋಡಕತ್ಯ. ನಿಂಗವ್ ಮನೆಬದಿಗೆ ಇರಿ ಅಂತ ಅಪ್ಪಯ್ಯ ತಾಕೀತು ಮಾಡಿಬಿಟ್ಟಿದ್ದ.. ಅಪ್ಪಯ್ಯನ ಕಣ್ಣುತಪ್ಪಿಸಿ ಹೋಗವು ಅಂತ ನಾನು-ತಮ್ಮ ನಿರ್ಧಾರ ಮಾಡಿದ್ಯ..' ಎಂದು ಅಜ್ಜಿ ಮಾತು ನಿಲ್ಲಿಸಿದಳು. ಒಮ್ಮೆ ತಾವು ಕುಳಿತಿದ್ದ ಹಾಸಿಗೆಯಿಂದ ಏಳಲು ಯತ್ನಿಸಿದರು. ಸಾಧ್ಯವಾಗಲಿಲ್ಲ. `ತಮಾ.. ಇಲ್ ಬಾ.. ಸ್ವಲ್ಪ ಯನ್ನ ಕೈ ಹಿಡ್ಕ ನೋಡನ..' ಎಂದರು. ನಾನು `ಅಜ್ಜಿಯನ್ನು ಹಿಡಿದುಕೊಂಡೆ. ನಿಧಾನವಾಗಿ ಎದ್ದು ನಿಂತ ಅಜ್ಜಿ.. ಕೋಣೆಯಿಂದ ಹೊರಕ್ಕೆ ನನ್ನನ್ನು ಹಿಡಿದುಕೊಂಡೇ ಬಂದಳು. ಬಂದವಳೇ ಸೀದಾ ಹೊರಗಡೆ ಇದ್ದ ಬಾಂಕಿನ ಮೇಲೆ ಕುಳಿತು ಅಲ್ಲೇ ಇದ್ದ ಎಲೆಬಟ್ಟಲಿಗೆ ಕೈ ಹಾಕಿದಳು. ನಾನು ಮೌನವಾಗಿ ಅಜ್ಜಿಯನ್ನು ಗಮನಿಸುತ್ತ ನಿಂತೆ.
`ಅಪ್ಪಯ್ಯ ಭಾಷಣ ಕೇಳಲು ಹೋಗಿದ್ದ. ಆನು-ತಮ್ಮ ಹಿತ್ಲಾಕಡೆ ಬಾಗಿಲಿಂದ ಸೀದಾ ಭಾಷಣ ನಡೆತಾ ಇದ್ದಿದ್ ಜಾಗಕ್ಕೆ ಹೊಂಟ್ಯ. ನಂಗವ್ ಹೋಗೋ ಹೊತ್ತಿಗೆ ಅಲ್ಲಿ ಮಾತು ಶುರುವಾಗಿ ಹೋಗಿತ್ತು. ಎಂತಾ ಮಾತು ಹೇಳ್ತೆ.. ನಮ್ಮೂರ್ನವ್ ಅಲ್ದೆ ಅಚ್ಚಿಚ್ಚೆ ಊರ್ನವ್ವೂ ಬಂದಿದ್ದ. ದೇವಸ್ಥಾನ ಕಟ್ಟೆ ಮೇಲೆ ನಿಂತಕಂಡಿದ್ದ ವ್ಯಕ್ತಿ ಎಷ್ಟು ಗಟ್ಟಿಯಾಗಿ ಮಾತಾಡ್ತಾ ಇದ್ದಿದ್ರು ಅಂದ್ರೆ ಆಹಾ.. ಆನು-ತಮ್ಮ ಇಬ್ರೂ ಮೈಮರೆತುಬಿಟ್ಟಿದಿದ್ಯ.. ಹಿಂಗೇ ಮಾತು ನಡೀತಾ ಇತ್ತು. ಆವಾಗ್ಲೇ ನಂಗಳ ಹಿಂದಿಂದ ದೊಡ್ಡ ಶಬ್ದ ಕೇಳಚು..' ಎಂದ ಅಜ್ಜಿ ಚಿಕ್ಕದೊಂದು ನಿಟ್ಟುಸಿರು ಬಿಟ್ಟಳು. ನನಗೆ ಕುತೂಹಲ ಶುರುವಾಗಿತ್ತು.

(ಮುಂದುವರಿಯುತ್ತದೆ )