Friday, November 27, 2015

ಅಘನಾಶಿನಿ ಕಣಿವೆಯಲ್ಲಿ -29

`ಯಾರು ನೀನು?' ಹುಚ್ಚನ ಮಾತಿಗೆ ತಕ್ಷಣವೇ ಪ್ರತಿಕ್ರಿಯೆ ನೀಡಿದ್ದ ಪ್ರದೀಪ.
`ನಾನು ಯಾರು ಬೇಕಾದರೂ ಆಗಿರಲಿ. ಅದು ಮುಖ್ಯವಲ್ಲ. ನಿಮ್ಮ ಕೆಲಸ ಏನಿದೆಯೋ ಅದರ ಕಡೆಗೆ ಗಮನ ಹರಿಸಿಕೊಳ್ಳಿ.. ನಾನು ಹುಚ್ಚ ಎಂದಷ್ಟೇ ನಿಮ್ಮ ಗಮನದಲ್ಲಿರಲಿ. ಅದು ಸಾಕು ಬಿಡಿ..' ಎಂದ ಆ ಹುಚ್ಚ.
`ಇದು ಯಾಕೋ ಸರಿ ಕಾಣುತ್ತಿಲ್ಲ. ನೀನು ಯಾರು? ನಮ್ಮ ಕೆಲಸದ ಬಗ್ಗೆ ನೀನೇಕೆ ಹೇಳುತ್ತಿದ್ದೀಯಾ?' ಈ ಸಾರಿ ಉತ್ತರ ನೀಡುವ ಸರದಿ ವಿಕ್ರಮನದ್ದಾಗಿತ್ತು.
`ಆಗಲೇ ಹೇಳಿದೆನಲ್ಲ. ನಾನು ಹುಚ್ಚ. ನೀವೇ ನನ್ನನ್ನು ಉಂಚಳ್ಳಿ ಜಲಪಾತದ ಒಡಲಿನಿಂದ ಕಾಪಾಡಿಕೊಂಡು ಬಂದಿದ್ದೀರಲ್ಲ. ನೋಡಿ ನಾನು ಯಾರು ಬೇಕಾದರೂ ಆಗಿರಲಿ. ನಿಮಗೆ ತೊಂದರೆ ಕೊಡುವವನು ನಾನಲ್ಲ. ನಿಮಗೆ ಸಹಾಯ ಮಾಡುವುದು ನನ್ನ ಮುಖ್ಯ ಕೆಲಸ. ನನ್ನಿಂದ ನಿಮಗೆ ಯಾವ ರೀತಿಯ ಸಹಾಯ ಬೇಕು ಎನ್ನುವುದನ್ನು ನೀವು ಹೇಳಿ. ಹೇಳದಿದ್ದರೂ ತೊಂದರೆಯೇನಿಲ್ಲ ಬಿಡಿ..' ಎಂದ ಹುಚ್ಚ.
ಎಲ್ಲರಿಗೂ ಒಮ್ಮೆ ಅಚ್ಚರಿ. ಈತ ನಿಜವಾಗಿಯೂ ಹುಚ್ಚನೇ? ಅಥವಾ ಹುಚ್ಚನ ವೇಷದಲ್ಲಿರುವ ಯಾವುದಾದರೂ ವ್ಯಕ್ತಿಯೋ? ನಮ್ಮ ಮೇಲೆ ನಿಗಾ ವಹಿಸುವ ಸಲುವಾಗಿ ಯಾರಾದರೂ ಬೆನ್ನು ಬಿದ್ದಿದ್ದಾರೋ ಹೇಗೆ ಎನ್ನುವ ಆಲೋಚನೆಗಳೆಲ್ಲ ಮನಸ್ಸಿನಲ್ಲಿ ಮೂಡಿದವು. ಅಷ್ಟರಲ್ಲಿಯೇ ಇನ್ನೊಂದು ಘಟನೆ ನಡೆದು ಹೋಗಿತ್ತು. `ನೋಡಿ ನಿಮ್ಮೆದುರು ಇರುವ ಸವಾಲು ಸಣ್ಣದಲ್ಲ. ಹುಷಾರಾಗಿರಿ. ನೀವು ಈಗಾಗಲೇ ಸಿಂಹದ ಬಾಯಿಗೆ ಕೈ ಹಾಕಿದ್ದೀರಿ. ಈಗಾಗಲೇ ಒಬ್ಬನ ಸಾವಿಗೆ ಕಾರಣರಾಗಿದ್ದೀರಿ. ಶತ್ರು ಸುಮ್ಮನೇ ಇರುವುದಿಲ್ಲ. ನಿಮ್ಮೆದುರು ಸೇಡು ತೀರಿಸಿಕೊಳ್ಳಲು ಕಾಯುತ್ತಿದ್ದಾನೆ. ಪ್ರತಿಯೊಬ್ಬರೂ ಎಚ್ಚರದಿಂದ ಇರಿ. ಭಯ ಬೇಡ. ನಿಮ್ಮ ಚಲನವಲನಗಳನ್ನು ನಾನು ಸಾಧ್ಯವಾದಷ್ಟೂ ಗಮನಿಸುತ್ತಲೇ ಇರುತ್ತೇನೆ.' ಎಂದು ಹೇಳಿದ ಹುಚ್ಚ ಇದ್ದಕ್ಕಿದ್ದಂತೆ ಗಾಡಿಯಿಂದ ಕೆಳಗೆ ಜಿಗಿದೇ ಬಿಟ್ಟ.
ಹುಚ್ಚ ಗಾಡಿಯಿಂದ ಕೆಳಗೆ ಜಿಗಿಯಬಹುದು ಎನ್ನುವುದನ್ನು ಯಾರೂ ನಿರೀಕ್ಷೆ ಮಾಡಿರಲಿಲ್ಲ. ವಾಹನ ಚಾಲನೆ ಮಾಡುತ್ತಿದ್ದ ವಿನಾಯಕ ಹಟಾತ್ತನೆ ಗಾಡಿ ಬ್ರೇಕ್ ಹಾಕಿದ. ಗಾಡಿಯಲ್ಲಿ ಕುಳಿತಿದ್ದವರೆಲ್ಲ ಒಮ್ಮೆ ಮುಗ್ಗರಿಸಿಬಿದ್ದರು. ಪ್ರದೀಪ ಕೂಡ ಹುಚ್ಚನ ಹಿಂದೆ ಅವನಷ್ಟೇ ವೇಗವಾಗಿ ಗಾಡಿಯಿಂದ ಜಿಗಿದಿದ್ದ. ಅವನ ಹಿಂದೆ ವಿಕ್ರಮ ಕೂಡ ಇಳಿದಿದ್ದ. ಹುಚ್ಚನ ಬಗ್ಗೆ ಬಹಳ ಅಚ್ಚರಿಯಾಗಿತ್ತು. ಆತನನ್ನು ಹಿಡಿಯುವುದು ವಿಕ್ರಮ ಹಾಗೂ ಪ್ರದೀಪನ ಉದ್ದೇಶವಾಗಿತ್ತು. ಆದರೆ ವಾಹನದಿಂದ ಜಿಗಿದಿದ್ದ ಹುಚ್ಚ ಪಕ್ಕದ ಕಾಡೊಳಕ್ಕೆ ನುಗ್ಗಿ ಮರೆಯಾಗಿ ಬಿಟ್ಟಿದ್ದ. ಪ್ರದೀಪ ಹಾಗೂ ವಿಕ್ರಮ ಕೂಡ ಹುಚ್ಚನಷ್ಟೇ ವೇಗವಾಗಿ ಕಾಡೊಳಗೆ ನುಗ್ಗಿದ್ದರೂ ಅರೆಘಳಿಗೆಯಲ್ಲಿ ಆತ ತಪ್ಪಿಸಿಕೊಂಡು ಬಿಟ್ಟಿದ್ದ. `ಛೇ.. ಸ್ವಲ್ಪದರಲ್ಲಿ ತಪ್ಪಿಸಿಕೊಂಡ..' ಎಂದು ಗೊಣಗಿದ ಪ್ರದೀಪ.
`ಇಂವ ಯಾರು ಮಾರಾಯಾ. ನಮ್ಮ ಕೆಲಸದ ಬಗ್ಗೆ ಅಷ್ಟು ನಿಖರವಾಗಿ ಹೇಳ್ತಾ ಇದ್ದ. ಇಂವ ಹುಚ್ಚ ಅಂತೂ ಅಲ್ಲ. ಕಾಡುಗಳ್ಳರ ಬಗ್ಗೆ ಸರ್ಕಾರ ಏನಾದರೂ ವಿಶೇಷ ಅಧಿಕಾರಿಯನ್ನು ನೇಮಕ ಮಾಡಿದೆಯಾ? ಅವನು ಇವನೇನಾ? ನಮ್ಮ ಕಾರ್ಯದ ಬಗ್ಗೆ ಎಷ್ಟು ಸಲೀಸಾಗಿ ಹೇಳ್ತಾ ಇದ್ದ. ಒಂದ್ ಸಾರಿ ಎಷ್ಟ್ ಆಶ್ಚರ್ಯ ಆಗಿತ್ತು ಮಾರಾಯಾ..' ಎಂದ ವಿಕ್ರಮ.
`ಹುಂ. ನಂಗೂ ಹಂಗೆ ಅನ್ನಿಸ್ತಾ ಇದ್ದು. ಖಂಡಿತ ಇಂವ ಹುಚ್ಚನಂತೂ ಅಲ್ಲ. ನೋಡು ಏನೇ ಆಗಲಿ, ಇಂವ ಯಾರೇ ಆಗಿರಲಿ, ಇನ್ನುಮುಂದೆ ನಾವು ಬಹಳ ಹುಷಾರಾಗಿ ಇರಬೇಕು. ಅಷ್ಟೇ ಅಲ್ಲ, ನಮ್ಮ ಕೆಲಸವನ್ನು ಇನ್ನಷ್ಟು ತ್ವರಿತವಾಗಿ ಮಾಡಿ ಮುಗಿಸಬೇಕು. ಇಲ್ಲ ಅಂದರೆ ಸಲ್ಲದ ಸಮಸ್ಯೆಯನ್ನು ತಲೆಯ ಮೇಲೆ ಎಳೆದುಕೊಂಡಂತೆ ಆಗುತ್ತದೆ..' ಎಂದ ಪ್ರದೀಪ.
`ಹೌದು. ನನಗೂ ಹಾಗೆಯೇ ಅನ್ನಿಸುತ್ತಿದೆ. ಅಷ್ಟೇ ಅಲ್ಲ ಈ ಕೆಲಸವನ್ನು ಯಾಕಾದರೂ ಶುರು ಹಚ್ಚಿಕೊಂಡೆನೋ ಎಂದೂ ಅನ್ನಿಸಲು ಆರಂಭಿಸಿದೆ ನೋಡು. ಒಂದು ಸಾರಿ ಕೆಲಸ ಮುಗಿದರೆ ಸಾಕು. ಅಷ್ಟಾಗಿಬಿಟ್ಟಿದೆ...' ವಿಕ್ರಮ ನಿಟ್ಟುಸಿರಿನಿಂದ ಹೇಳಿದ್ದ.
`ಮುಗಿಸೋಣ. ಬೇಗನೇ ಮುಗಿಸಿಬಿಡೋಣ. ಏನ್ ಬೇಕಾದರೂ ಆಗಲಿ..' ಎಂದ ವಿಕ್ರಮ.
ವಾಪಾಸು ಕಾರಿನ ಬಳಿ ಬಂದಕೂಡಲೇ ವಿನಾಯಕ `ಏನಾಯ್ತು? ಸಿಕ್ಕಿದ್ನಾ ಅವ?' ಎಂದು ಕೇಳಿದ. ಇಬ್ಬರೂ ಇಲ್ಲ ಎಂದು ತಲೆಯಲ್ಲಾಡಿಸಿದರು. ಅಷ್ಟರಲ್ಲಿ ಮಧ್ಯದಲ್ಲಿ ಬಾಯಿ ಹಾಕಿದ ರಮ್ಯ `ಅಂವ ಯಾರು? ನಿಮ್ಮ ಕೆಲಸದ ಬಗ್ಗೆ ಏನೋ ಹೇಳಿದನಲ್ಲ. ನಿಜ ಹೇಳಿ. ನೀವು ಯಾವ ಉದ್ದೇಶದಿಂದ ಈ ಕಡೆಗೆ ಬಂದಿದ್ದೀರಿ? ನಿಮಗೆ ಶತ್ರುಗಳು ಇರಲು ಸಾಧ್ಯವಾ? ಆ ಹುಚ್ಚ ಶತ್ರುಗಳ ಬಗ್ಗೆ ಎಚ್ಚರಿಕೆಯಿಂದ ಇರಿ ಎಂದನಲ್ಲ. ಅದರ ಅರ್ಥ ಏನು? ಏನೋ ಮುಚ್ಚಿಡುತ್ತಿದ್ದೀರಿ.. ಹೇಳೀ..' ಎಂದಳು.
`ಏನು ಇಲ್ಲ ಮಾರಾಯ್ತಿ. ಈ ಮರಗಳ್ಳರ ಬಗ್ಗೆ ಹೇಳಿದ್ದು ಆತ. ದಂಟಕಲ್ಲಿನಲ್ಲಿ ಮರ ಕಡಿಯುತ್ತಿದ್ದ ಒಬ್ಬಾತನ ಸಾವಿಗೆ ನಾವು ಕಾರಣರಾದೆವಲ್ಲ. ಅದಕ್ಕೆ ನಮ್ಮ ವಿರುದ್ಧ ಸೇಡು ತೀರಿಸಿಕೊಳ್ಳಲು ಮರಗಳ್ಳರು ಸಜ್ಜಾಗಿದ್ದಾರಂತೆ. ಇದನ್ನೇ ಅವನು ಹೇಳಿದ್ದು..' ವಿಕ್ರಮ ಸಮಜಾಯಿಶಿ ನೀಡಿದ.
`ಅವ ಹುಚ್ಚ. ನಿಮ್ಮ ಬಗ್ಗೆ ಅವನಿಗೆ ಗೊತ್ತಿಲ್ಲ. ಅವ ಯಾಕೆ ನಿಮ್ಮ ಬಳಿ ಬಂದು ಹೇಳಬೇಕು? ಅವನಿಗೆ ನಿಮ್ಮ ಬಳಿ ಹೇಳುವುದರಿಂದ ಆಗುವ ಲಾಭ ಏನು?..?' ರಮ್ಯ ಪಟ್ಟು ಬಿಡದೇ ಕೇಳಿದ್ದಳು.
ನಡುವೆ ಬಾಯಿ ಹಾಕಿದ ವಿನಾಯಕ `ನಿಂಗ್ ಗೊತ್ತಾಗ್ತಿಲ್ಲೆ ಸುಮ್ಮಂಗ್ ಕುತ್ಕ ನೋಡನ. ಅಂವ ಹುಚ್ಚ ಇದ್ದಿಕ್ಕು ಅಥವಾ ಹುಚ್ಚ ಅಲ್ಲದೇ ಇದ್ದಿಕ್ಕು. ಮರಗಳ್ಳರ ಪತ್ತೆಗೆ ಸರ್ಕಾರ ಯಾರನ್ನಾದರೂ ನೇಮಕ ಮಾಡಿಕ್ಕು. ಆ ಅಧಿಕಾರಿಯೇ ಈ ರೀತಿ ಮಾರು ವೇಷದಲ್ಲಿ ಓಡಾಟ ನಡೆಸುತ್ತಿರಬಹುದು. ಆತನಿಗೆ ನಮ್ಮೂರಿನಲ್ಲಿ ಮರಗಳ್ಳರ ಮೇಲೆ ಹಲ್ಲೆ ನಡೆದು, ಒಬ್ಬ ಕಳ್ಳ ನಾಟಾ ಸಾಗಣೆದಾರ ಸತ್ತಿರುವ ಬಗ್ಗೆ ಗೊತ್ತಾಗಿರಲಕ್ಕು. ನಮ್ಮ ಬಗ್ಗೆ ಮಾಹಿತಿ ಕಲೆ ಹಾಕಿರಲಕ್ಕು. ಅದಕ್ಕೆಂತಕ್ ಈ ಥರ ತಲೆಕೆಡಿಸ್ಕಳ್ತೆ?' ಎಂದು ದಬಾಯಿಸಿದ. ರಮ್ಯ ಏನೋ ಹೇಳಲು ಮುಂದಾದವಳು ಹಾಗೆಯೇ ಸುಮ್ಮನಾದಳು.
ಪ್ರತಿಯೊಬ್ಬರಲ್ಲೂ ಹಲವಾರು ಪ್ರಶ್ನೆಗಳಿದ್ದವು. ಯಾವುದನ್ನೂ ಕೇಳಿದರೂ ಸ್ಪಷ್ಟ ಉತ್ತರ ಸಿಗುತ್ತದೆ ಎನ್ನುವ ನಿಂಬಿಕೆ ಇಲ್ಲವಾದ್ದರಿಂದ ಪ್ರತಿಯೊಬ್ಬರ ಪ್ರಶ್ನೆಗಳೂ ಬಾಯಿಂದ ಹೊರಗೆ ಬರಲೇ ಇಲ್ಲ. ಪ್ರತಿಯೊಬ್ಬರೂ ಮೌನವಾಗಿಯೇ ಕಾರಿನಲ್ಲಿ ಕುಳಿತಿದ್ದರು. ವಿನಾಯಕ ಮುಂದಕ್ಕೆ ಕಾರನ್ನು ಚಾಲನೆ ಮಾಡಿದ.
ದಾರಿ ಮಧ್ಯದಲ್ಲಿ ಕೆಲ ದಿನಗಳ ಹಿಂದೆ ಮರಗಳ್ಳರಿಗೂ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳಿಗೂ ಜಟಾಪಟಿ ನಡೆದ ಸ್ಥಳ ಬಂದಿತು. ಅಲ್ಲೊಂದು ಕಡೆ ನಿರ್ಮಾಣ ಮಾಡಲಾಗಿದ್ದ ಚೆಕ್ ಪೋಸ್ಟ್ ಕಿತ್ತು ಹೋಗಿತ್ತು. ಅದನ್ನು ನೋಡಿಕೊಂಡು ಮುಂದಕ್ಕೆ ನಡೆದರು. ಒಂದಿಬ್ಬರು ಅರಣ್ಯ ಇಲಾಖೆಯ ಕಾವಲುಗಾರರು ಮಿಕಿ ಮಿಕಿ ನೋಡುತ್ತ ನಿಂತಿದ್ದರಷ್ಟೇ. ಮರಳಿ ದಂಟಕಲ್ಲನ್ನು ತಲುಪುವ ವೇಳೆಗೆ ಸೂರ್ಯ ಆಗಲೇ ಬಾನಂಚಿಗೆ ಜಾರಿದ್ದ.

(ಮುಂದುವರಿಯುತ್ತದೆ)

Monday, November 2, 2015

ಅಘನಾಶಿನಿ ಕಣಿವೆಯಲ್ಲಿ -28

              ವಿಕ್ರಮ ಸಧ್ಯದಲ್ಲಿಯೇ ಪ್ರಪೋಸ್ ಮಾಡಬಹುದು ಎನ್ನುವ ನಿರೀಕ್ಷೆಯಿತ್ತು. ಆದರೆ ಹೀಗೆ ಉಂಚಳ್ಳಿ ಜಲಪಾತದಲ್ಲಿ ಪ್ರಪೋಸ್ ಮಾಡುತ್ತಾನೆ ಎನ್ನುವುದನ್ನು ವಿಜೇತಾ ನಿರೀಕ್ಷಿಸಿರಲಿಲ್ಲ. ತಕ್ಷಣವೇ ಒಪ್ಪಿಕೊಂಡು ಬಿಡಲಾ ಎಂದು ಆಲೋಚಿಸಿದಳು ವಿಜೇತಾ. ಆದರೆ ವಿಕ್ರಮನನ್ನು ಸ್ವಲ್ಪ ಆಟ ಆಡಿಸೋಣ, ತಕ್ಷಣಕ್ಕೆ ಒಪ್ಪಿಕೊಳ್ಳಬಾರದು ಎಂದುಕೊಂಡಳು. `ನೀನು ನನ್ನ ಲವ್ ಮಾಡ್ತಾ ಇದ್ಯಾ? ಜೋಕ್ ಮಾಡ್ತಾ ಇದ್ದೀಯಾ ಅಥವಾ ತಮಾಷೆಯಾ?' ಎಂದು ಕೇಳಿದಳು ವಿಜೇತಾ.
            `ತಮಾಷೆಯಲ್ಲ. ಇದು ನಿಜ. ಬೇಗ ಹೇಳು ಪ್ಲೀಸ್. ಏನೇ ಇರಲಿ, ನಿನ್ನ ನಿರ್ಧಾರ ತಕ್ಷಣ ತಿಳಿಸು..' ವಿಕ್ರಮ ಗೋಗರೆಯುವ ರೀತಿಯಲ್ಲಿ ಹೇಳಿದ.
             `ನಿಜವಾಗಿಯೂ ನನಗೆ ಆಶ್ಚರ್ಯ ಆಗ್ತಾ ಇದ್ದು ನೋಡು. ಖಂಡಿತ ನೀನು ಈ ರೀತಿ ಆಲೋಚನೆ ಮಾಡ್ತೀಯಾ ಅಂತ ಅಂದ್ಕೊಂಡಿರ್ಲಿಲ್ಲ..'
             `ಅಂದರೆ.. ನಿಂಗೆ ಇಷ್ಟ ಇಲ್ಲವಾ..?' ಎಂದು ಕೇಳಿದ ವಿಕ್ರಮ ಧ್ವನಿಯಲ್ಲಿ ನಿರಾಸೆಯ ಪದರವಿತ್ತು.
            `ಉಹೂಂ. ಇಷ್ಟವಿಲ್ಲ ಅಂತ ಹೇಳಲಾರೆ. ಹಾಗಂತ ಹೂ ಅನ್ನೋದಕ್ಕೂ ಆಗ್ತಾ ಇಲ್ಲ. ಸ್ವಲ್ಪ ಗೊಂದಲ. ನನಗೆ ಆಲೋಚನೆ ಮಾಡೋಕೆ ಸ್ವಲ್ಪ ಟೈಂ ಬೇಕು. ಇನ್ನೊಂದೆರಡು, ಮೂರು ದಿನಗಳಲ್ಲಿ ಹೇಳಲಾ?' ಕೇಳಿದಳು ವಿಜೇತಾ.
           `ಹೂಂ. ಆದರೆ ಬೇಗ ಹೇಳು ಪ್ಲೀಸ್. ಕಾಯುವಿಕೆ ಕಷ್ಟ..' ಎಂದವನು ಪೂರ್ತಿಯಾಗಿ ಶರಣಾದನೋ ಎಂಬಂತಿದ್ದ.
            ಅಷ್ಟರಲ್ಲಿ ಜಲಪಾತದ ಬುಡದ ಗುಂಡಿಯಲ್ಲಿ ಈಸು ಬಿದ್ದಿದ್ದ ವಿನಾಯಕ ಮೇಲಕ್ಕೆ ಬಂದು ವಿಕ್ರಮನ ಬಳಿ `ಏನಪ್ಪಾ.. ಏನ್ ವಿಷ್ಯ. ಹೇಳಿದ್ಯಾ? ಹಣ್ಣೋ.. ಕಾಯೋ..' ಎಂದ.
             ವಿಜೇತಾಳಿಗೆ ಒಮ್ಮೆಲೆ ಅಚ್ಚರಿ. ಅರೇ ಈ ವಿಷ್ಯ ಎಲ್ಲರಿಗೂ ಗೊತ್ತಿದೆಯಲ್ಲ. ನನಗೆ ಮಾತ್ರ ಗೊತ್ತಿರಲಿಲ್ಲ. ಅನುಮಾನ ಇತ್ತಾದರೂ ಎಲ್ಲರಿಗೂ ಗೊತ್ತಾಗಿರಬಹುದು ಎಂದುಕೊಂಡಿರಲಿಲ್ಲವಲ್ಲ ಎಂದುಕೊಂಡಳು. `ಯಾಕಪ್ಪಾ.. ಏನಾಯ್ತು.. ಸಪ್ಪಗಿದ್ದೀಯಾ..' ವಿನಾಯಕ ವಿಕ್ರಮನನ್ನು ಛೇಡಿಸಿದ.
            `ನಾನು ಹೇಳೋದನ್ನೆಲ್ಲ ಹೇಳಿದ್ದಿ ನೋಡಿ ವಿನು. ಸ್ವಲ್ಪ ಟೈಂ ಬೇಕು ಅಂತ ಹೇಳಿದ್ದು. ಇಷ್ಟು ದಿನ ಕಾದು ಕುಳಿತಿದ್ದಿ. ಇನ್ನೊಂದೆರಡು ದಿನ ಕಾಯೋದು ಕಷ್ಟವಾ?..' ವಿಕ್ರಮ ಹೇಳಿದ. ನಾಚಿದ ವಿಜೇತಾ ದೂರದಲ್ಲಿ ನೀರಾಟವಾಡುತ್ತಿದ್ದ ರಮ್ಯಳ ಬಳಿ ಹೋಗಿ ಕುಳಿತುಕೊಂಡಳು.
            ಪ್ರದೀಪ, ವಿಷ್ಣು ಕೂಡ ಈಸು ಬಿದ್ದವರು ಮೇಲೆದ್ದು ಬಂದು ಬಿಸಿಲಿಗೆ ಮೈಯೊಡ್ಡಿ ನಿಂತರು. ವಿಕ್ರಮ ಹಾಗೂ ವಿನಾಯಕ ಇಬ್ಬರೂ ಮಾತನಾಡುತ್ತಲೇ ಉಂಚಳ್ಳಿ ಜಲಪಾತದ ಛಾಯಾಚಿತ್ರಗಳನ್ನು ಕ್ಯಾಮರಾದಲ್ಲಿ ಸೆರೆ ಹಿಡಿಯಲು ಆರಂಭಿಸಿದರು.
ಜಲಪಾತದ ಇತಿಹಾಸವೂ ವಿಶಿಷ್ಟವಾಗಿದೆ. ಜಲಪಾತವನ್ನು ಬ್ರಿಟೀಷ್ ಅಧಿಕಾರಿ ಜಾರ್ಜ್ ಲೂಷಿಂಗ್ ಟನ್ ಎಂಬಾತ ಪತ್ತೆ ಹಚ್ಚಿದ ಕಾರಣಕ್ಕಾಗಿ ಲೂಷಿಂಗ್ ಟನ್ ಜಲಪಾತ ಎನ್ನುವ ಹೆಸರನ್ನೂ ಪಡೆದುಕೊಂಡಿದೆ. ಪಶ್ಚಿಮ ಘಟ್ಟದ ತುದಿಯಿಂದ ಕರಾವಳಿಯತ್ತ ಓಡುವ ನದಿ ಭೊರ್ಗರೆಯುತ್ತ ಇಳಿಯುವುದನ್ನು ನೋಡುವುದೇ ಚಂದ. ಈ ಸಂದರ್ಭದಲ್ಲಿ ಉಂಟಾಗುವ ಸಪ್ಪಳಕ್ಕೆ ಕಿವಿ ಕಿವುಡಾಗುವಂತಾಗುತ್ತದೆ. ಈ ಕಾರಣದಿಂದಲೇ ಇದನ್ನು ಕೆಪ್ಪ ಜೋಗ ಎಂದೂ ಕರೆಯಲಾಗುತ್ತದೆ. ಪ್ರತಿ ವರ್ಷ ಮಳೆಗಾಲದಲ್ಲಿ ಜಲಪಾತ ಚೈತನ್ಯದಿಂದ ಮನಸೆಳೆಯುತ್ತದೆ.
               ಬೋರ್ಘರೆಯುವ ನದಿ ಮಾಡುವ ಸಪ್ಪಳ ಮೂರ್ನಾಲ್ಕು ಕಿ.ಮಿ ದೂರದ ವರೆಗೂ ಕೇಳುತ್ತದೆ. ಗೋಕರ್ಣದ ಆತ್ಮಲಿಂಗದ ಆಕಾರದಲ್ಲಿ ಕಣಿವೆಯಾಳಕ್ಕಿಳಿಯುವ ಜಲಪಾತದ ಚಿತ್ರಣ ಮೈಮನಸ್ಸನ್ನು ಆವರಿಸುತ್ತದೆ. ಜಲಪಾತದ ಎರಡೂ ಕಡೆಗಳಲ್ಲಿರುವ ದೈತ್ಯ ಘಟ್ಟಗಳು, ಬಾನೆತ್ತರಕ್ಕೆ ಚಾಚಿ ನಿಂತ ಮರಗಳು ಜಲಪಾತಕ್ಕೆ ಶೋಭೆಯನ್ನು ನೀಡುತ್ತವೆ. ದಟ್ಟಕಾನನದ ನಡುವೆ ಸೌಂದರ್ಯದ ಖನಿಯಾಗಿ ಬೆಡಗು ಮೂಡಿಸುತ್ತಿರುವ ಜಲಪಾತಕ್ಕೆ ಪ್ರವಾಸಿಗರು ಸಹಸ್ರ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಬೆಂಗಳೂರು, ಮಂಡ್ಯ, ಹಾಸನ, ಕೋಲಾರ, ಮೈಸೂರು, ಚಿಕ್ಕಮಗಳೂರು, ಬಿಜಾಪುರ, ಬಳ್ಳಾರಿ, ಚಿತ್ರದುರ್ಗ, ರಾಯಚೂರು, ಮಹಾರಾಷ್ಟ್ರದ ರತ್ನಗಿರಿ, ಕೊಲ್ಲಾಪುರ, ಪೂಣಾ ಹೀಗೆ ರಾಜ್ಯ ಹಾಗೂ ಹೊರ ರಾಜ್ಯದ ಪ್ರವಾಸಿಗರು ಜಲಪಾತದ ವೀಕ್ಷಣೆಗೆ ಆಗಮಿಸುತ್ತಾರೆ. ವಿಕ್ರಮ ಹಾಗೂ ಗೆಳೆಯರು ಜಲಪಾತ ನೋಡಲು ಹೋಗಿದ್ದಾಗ ಮಾತ್ರ ಸಾಕಷ್ಟು ಜನರಿರಲಿಲ್ಲ. ಅಲ್ಲೊಬ್ಬರು, ಇಲ್ಲೊಬ್ಬರು ಇದ್ದರು ಅಷ್ಟೇ.
              `ಹಸಿವಾಗ್ತಾ ಇದೆ. ಕಟ್ಟಿಸಿಕೊಂಡು ಬಂದಿರುವ ಫಲಾವ್ ನ ಎಲ್ಲಾ ತೆಗಿರಿ..' ಎಂದು ರಮ್ಯ ಕೂಗಿದವಳೇ ದೊಡ್ಡದೊಂದು ಬಂಡೆಯ ಮೇಲೆ ಏರಿ ತಿಂಡಿ ತಿನ್ನಲು ತಯಾರಾಗಿಬಿಟ್ಟಳು. ಉಳಿದವರಿಗೂ ಅದೇ ಸರಿ ಎನ್ನಿಸಿ ರಮ್ಯಳನ್ನು ಹಿಂಬಾಲಿಸಿದರು. ಮದ್ಯಾಹ್ನದ ವೇಳೆಗೆಲ್ಲಾ ಉಂಚಳ್ಳಿ ಜಲಪಾತವನ್ನು ವೀಕ್ಷಣೆ ಮಾಡಿ, ಆ ಭಾಗದಲ್ಲಿ ಸಂಚಾರ ಮಾಡಿದವರು ಮದ್ಯಾಹ್ನದ ನಂತರ ಜಲಪಾತದ ಬುಡದಿಂದ ಮೇಲಕ್ಕೆ ಬಂದರು. ಅಷ್ಟರಲ್ಲಿ ಜಲಪಾತದ ವೀಕ್ಷಣಾ ಗೋಪುರದಲ್ಲಿ ಚಿಕ್ಕದೊಂದು ಗಲಾಟೆಯೆ ನಡೆದಿತ್ತು.
              ಮಾನಸಿಕ ಅಸ್ವಸ್ತ ವ್ಯಕ್ತಿಯೊಬ್ಬ ಆ ಭಾಗದಲ್ಲಿ ಕೆಲ ದಿವಸಗಳಿಂದ ಓಡಾಡುತ್ತಿದ್ದ. ಉಂಚಳ್ಳಿ ಜಲಪಾತದ ಭಾಗದಲ್ಲಿ ಓಡಾಟ ಮಾಡುತ್ತಿದ್ದ ವ್ಯಕ್ತಿ ಅಲ್ಲಿಗೆ ಆಗಮಿಸುವ ಪ್ರವಾಸಿಗರ ಬಳಿ ಊಟ, ತಿಂಡಿಯನ್ನು ಪಡೆದುಕೊಂಡಿದ್ದ. ಕೆಲ ದಿನಗಳ ಕಾಲ ಸುಮ್ಮನೆ ಇದ್ದ ಆ ವ್ಯಕ್ತಿ ನಂತರದ ದಿನಗಳಲ್ಲಿ ಅಲ್ಲಿಗೆ ಆಗಮಿಸುವ ಪ್ರವಾಸಿಗರನ್ನು ಕೆಕ್ಕರಿಸಿ ನೋಡುವುದು, ತೊಂದರೆ ಕೊಡುವುದು ಈ ಮುಂತಾದ ಕೆಲಸಗಳನ್ನು ಮಾಡಲು ಆರಂಭಿಸಿದ. ಇದರಿಂದ ಪ್ರವಾಸಿಗರು ಬೇಸತ್ತಿದ್ದರು. ಸ್ಥಳೀಯರಿಗೆ ಈ ಕುರಿತು ಹೇಳಲಾಗಿ ಒಂದೆರಡು ಸಾರಿ ಮಾನಸಿಕ ಅಸ್ವಸ್ತ ವ್ಯಕ್ತಿಯನ್ನು ಪಕ್ಕದೂರಿಗೆ ಗಡಿಪಾರು ಮಾಡಿ ಬಂದಿದ್ದರು. ಆದರೆ ಹೀಗೆ ಗಡಿಪಾರು ಮಾಡಿ ಬಂದ ಒಂದೆರಡು ದಿನಗಳ ಒಳಗಾಗಿ ಆ ವ್ಯಕ್ತಿ ಮತ್ತೆ ಅಲ್ಲಿ ಪ್ರತ್ಯಕ್ಷನಾಗುತ್ತಿದ್ದ.
          ಮೂರ್ನಾಲ್ಕು ಸಾರಿ ಈ ರೀತಿ ನಡೆದ ನಂತರ ಆ ವ್ಯಕ್ತಿ ಜಲಪಾತ ವೀಕ್ಷಣೆಗೆ ಆಗಮಿಸಿದ್ದ ಪ್ರವಾಸಿಗರೊಬ್ಬರ ಜೊತೆ ಅಸಹ್ಯವಾಗಿ ವರ್ತನೆ ಮಾಡಿದ್ದ. ಇದರಿಂದ ಸಿಟ್ಟಿಗೆದ್ದ ಪ್ರವಾಸಿಗರು ಆತನ ಮೇಲೆ ಹಲ್ಲೆ ಮಾಡಿದ್ದರು. ಪರಿಣಾಮವಾಗಿ ಗಲಾಟೆ ನಡೆದಿತ್ತು. ಮಾನಸಿಕ ಅಸ್ವಸ್ತ ವ್ಯಕ್ತಿ ಹೊಡೆತ ತಾಳಲಾಗದೇ ಕೂಗಾಡುತ್ತಿದ್ದ. ಜೊತೆ ಜೊತೆಯಲ್ಲಿಯೇ ಅವಾಚ್ಯ ಶಬ್ದಗಳಿಂದ ನಿಂದನೆಯನ್ನೂ ಮಾಡುತ್ತಿದ್ದ. ಇದನ್ನು ನೋಡಿದ ಪ್ರದೀಪ ಗಲಾಟೆಯನ್ನು ಬಿಡಿಸಲು ಮುಂದಾದ. ಸಿಟ್ಟಿಗೆದ್ದವರನ್ನು ಸಮಾಧಾನ ಮಾಡಿದ. ಅಷ್ಟೇ ಅಲ್ಲದೇ ಹುಚ್ಚನನ್ನು ಹಿಡಿದುಕೊಂಡು ಬಂದ. ಬಂದವನೇ ಅವನನ್ನು ವಿಕ್ರಮನ ಕಾರಿನಲ್ಲಿ ಕೂರಿಸಿದ.
           ವಿಕ್ರಮನಿಗೆ ಇದು ಅಸಹ್ಯ ಎನ್ನಿಸಿತು. ಯಾರೋ ಹುಚ್ಚನನ್ನು ತಂದು ಗಾಡಿಯಲ್ಲಿ ಕೂರಿಸಿದನಲ್ಲ ಎನ್ನಿಸಿತು. ಸಿಟ್ಟಿನಿಂದ ಪ್ರದೀಪನ ಬಳಿ ಕೂಗಾಡಲು ಆರಂಭಿಸಿದ. `ಇದೆಂತ ಹುಚ್ಚಾಟ ನಿಂದು? ಅವನನ್ನು ಗಾಡಿಯಲ್ಲಿ ಹತ್ತಿಸಿದ್ದು. ಛೇ. ಮೊದ್ಲು ಇಳಿಸು..' ಎಂದ.
            `ಇಲ್ಲ ಮಾರಾಯಾ.. ಅವನನ್ನು ಬೇರೆ ಎಲ್ಲಾದರೂ ಕರೆದುಕೊಂಡು ಹೋಗಿ ಬಿಡೋಣ. ಅಥವಾ ಯಾವುದಾದರೂ ಮಾನಸಿಕ ತಜ್ಞರ ಬಳಿ ಕರೆದುಕೊಂಡು ಹೋಗಿ ಬಿಡೋಣ. ಇಲ್ಲಿದ್ದರೆ ಅವನನ್ನು ಹೊಡೆದು ಕೊಂದೇ ಬಿಡುತ್ತಾರೆ. ಸರಿಯಲ್ಲ ಅದು. ಮಾನವೀಯತೆಯೂ ಅಲ್ಲ. ಮೊದಲು ಬೇರೆ ಎಲ್ಲಾದರೂ ಬಿಡೋಣ.. ನಡಿ. ಗಾಡಿ ಚಾಲೂ ಮಾಡು..' ಎಂದ.
              ಅಸಮಧಾನದಿಂದಲೇ ವಿಕ್ರಮ ಗಾಡಿಯನ್ನು ಚಾಲೂ ಮಾಡಿದ. ಗೊಣಗುತ್ತಲೇ ಉಳಿದವರೂ ಹತ್ತಿಕೊಂಡರು. ಉಂಚಳ್ಳಿ ಜಲಪಾತದಿಂದ ಅಂಕುಡೊಂಕಿನ ಹಾದಿಯಲ್ಲಿ ಮರಳಲು ಆರಂಭಿಸಿದರು. `ಏ.. ಏನ್ರೋ.. ನಿಮಗೆ ಮಾಡಲಿಕ್ಕೆ ಬೇರೆ ಕೆಲ್ಸಾ ಇಲ್ಲವಾ? ಹೋಗಿ ಹೋಗಿ ಈ ಕಾಡಿಗೆ ಬಂದು ಕಳ್ಳರನ್ನು ಹುಡುಕಲು ಹೊರಟಿದ್ದೀರಾ? ತಲೆ ಸರಿ ಉಂಟಾ? ಎಚ್ಚರ ತಪ್ಪಿದರೆ ಮರಗಳ್ಳರ ಗುಂಪು ನಿಮ್ಮನ್ನು ಕಡಿದು ಹಾಕಿ ಬಿಡಬಹುದು. ಹುಷಾರು..' ಎಂದು ಇದ್ದಕ್ಕಿದ್ದಂತೆ ಆ ಹುಚ್ಚ ಮಾತನಾಡಿದಾಗ ಒಮ್ಮೆಗೆ ಕಾರಲ್ಲಿದ್ದವರು ಬೆಚ್ಚಿ ಬಿದ್ದರು.

(ಮುಂದುವರಿಯುತ್ತದೆ..)

Thursday, October 29, 2015

ಸಜ್ಜನರೊಡನೆ.. ಸಜ್ಜನಘಡದ ಕಡೆಗೆ -3

           ಆಟೋದಲ್ಲಿ ಲಗೆಜ್ ಹೇರುವ ಜಾಗದಲ್ಲಿ ನಾನು ಕುಳಿತಿದ್ದೆ. ಉಸಿರು ಕಟ್ಟುತ್ತಿತ್ತು. ಆಟೋ ಓಡಿಸುತ್ತಿದ್ದ ಚಾಲಕನ ಬಳಿ ಸಂಜಯ ಮಾತಿಗೆ ನಿಂತಿದ್ದ. ಸಜ್ಜನಘಡಕ್ಕೆ ಹೋಗುವುದು ಹೇಗೆ ಎಂಬ ವಿವರಗಳನ್ನು ಕೇಳಲು ಆರಂಭಿಸಿದ್ದ. ಸಜ್ಜನಘಡಕ್ಕೆ ಬಸ್ ವ್ಯವಸ್ಥೆ ಬಹಳ ಕಡಿಮೆ ಇದೆಯೆಂದೂ, ಯಾವುದಾದರೂ ಖಾಸಗಿ ವಾಹನಗಳನ್ನು ಮಾಡಿಕೊಂಡು ಹೋಗಬಹುದೆಂದೂ ಆಟೋ ಚಾಲಕ ತಿಳಿಸಿದ. ಮಾತಿಗಿಳಿದಿದ್ದ ಸಂಜಯ ಆತನ ಹೆಸರು ನೀಲೇಶ ಮಂತ್ರಿ ಎಂಬುದನ್ನು ಕೇಳಿ ತಿಳಿದುಕೊಂಡ. ಸಂಜಯ ಆಟೋವನ್ನು ಮಾಡಿಸಿಕೊಂಡು ಹೋದರೆ ಹೇಗೆ ಎನ್ನುವ ಬಗ್ಗೆ ಪ್ರಶಾಂತ ಭಾವನ ಬಳಿ ಕೇಳಿದ. ರೇಟು ಎಷ್ಟಾಗಬಹುದು ಎನ್ನುವ ಚರ್ಚೆ ನಡೆಯಲಾಗಿ ಕೊನೆಗೊಮ್ಮೆ ಆಟೋ ಮಾಡಿಸಿಕೊಂಡು ಹೋಗೋಣ ಎಂದು ಎಲ್ಲರೂ ಒಪ್ಪಿಕೊಂಡರು. 600 ರು. ಗೆ ಮಾತಾಯಿತು.
          ಸತಾರಾ ನಗರಕ್ಕೆ ಬಂದು ಆಟೋ ನಿಲ್ಲಿಸಿ, ಆಟೋದಲ್ಲಿದ್ದ ಎಲ್ಲರನ್ನೂ ಇಳಿಸಿದ ಆಟೋ ದ್ರೈವರ್ ನಮ್ಮನ್ನು ಕೂರಿಸಿಕೊಂಡು ಪೆಟ್ರೂಲ್ ಬಂಕಿನತ್ತ ಸಾಗಿದ. ಬಂಕಿನಲ್ಲಿ ಪೆಟ್ರೂಲ್ ತುಂಬಿಸಿಕೊಂಡವನೇ ನಮ್ಮ ಬಳಿ ದುಡ್ಡು ಕೇಳಿದಾಗ ಒಮ್ಮೆಲೆ ನಮಗೆ ಪಿಗ್ಗಿ ಬಿದ್ದೆವೇನೋ ಅನ್ನುವ ಅನುಮಾನ. ಆದರೆ ಆತನ ಆಟೋವನ್ನು ನಾವು ಇಳಿಯುವ ಕೆಲಸ ಮಾತ್ರ ಮಾಡಲಿಲ್ಲ. ಹಾಗಾಗಿ ಎಲ್ಲೋಗ್ತಾನೆ ನೋಡೋಣ ಎನ್ನುವ ಧೈರ್ಯ ನಮ್ಮಲ್ಲಿ ಮೂಡಿತು.
           ಬೆಳಗಿನ ಜಾವ 5 ಗಂಟೆ ಆಗಿದ್ದ ಕಾರಣ ಸತಾರಾದಲ್ಲಿ ಯಾವುದೇ ಪೆಟ್ರೋಲ್ ಬಂಕುಗಳು ಬಾಗಿಲು ತೆರೆದಿರಲಿಲ್ಲ. ಸತಾರಾ ನಗರಿಯಲ್ಲಿ ಒಂದೆರಡು ಕಡೆಗಳಲ್ಲಿ ಸುತ್ತಾಡಿಸಿದ ಆಟೋ ಡ್ರೈವರ್. ಆಮೇಲೆ ಮಾತು ಶುರು ಮಾಡಿದ ನೋಡಿ. ಇನ್ನು ಸಜ್ಜನಘಡಕ್ಕೆ ಹೋಗುವ ವರೆಗೆ ಅವನ ಬಾಯಲ್ಲಿನ ವಿಷಯವನ್ನೇ ಹೇಳುತ್ತೇನೆ.
          `ಇದು ನೋಡಿ ಸತಾರಾದ ಕ್ರಿಕೆಟ್ ಸ್ಟೇಡಿಯಂ. ಇಲ್ಲಿ ರಣಜಿ ಪಂದ್ಯಗಳು ಜಾಸ್ತಿ ನಡೆಯುತ್ತವೆ.'
          `ಈ ಸತಾರಾ ಇದೆಯಲ್ಲ, ಮಹಾರಾಷ್ಟ್ರದ ದೊಡ್ಡ ಜಿಲ್ಲೆಗಳಲ್ಲಿ ಇದೂ ಒಂದು. ಎಲ್ಲ ಸೌಲಭ್ಯಗಳೂ ಇಲ್ಲಿದೆ. ಸತಾರಾದ ಸುತ್ತಮುತ್ತ ಒಟ್ಟೂ ಏಳು ದೊಡ್ಡ ದೊಡ್ಡ ಬೆಟ್ಟಗಳಿವೆ. ಇವನ್ನು ತಾರಾ ಎಂದು ಕರೆಯುತ್ತಾರೆ. ಏಳು ನಕ್ಷತ್ರಗಳಿರುವ ಈ ಊರಗೆ ಒಂದಾನೊಂದು ಕಾಲದಲ್ಲಿ ಸಾತ್ ತಾರಾ ಎಂದು ಕರೆಯುತ್ತಿದ್ದರಂತೆ. ಇದೇ ಈಗ ಸತಾರಾ ಆಗಿದೆ. ಇದೋ ನೋಡಿ, ಈಗ ಸರಿಯಾಗಿ ಕಾಣುವುದಿಲ್ಲ. ಪೂರ್ತಿ ಬೆಳಕಾಗಲಿ. ಇಲ್ಲೊಂದು ದೈತ್ಯ ಗುಡ್ಡವಿದೆ. ಗುಡ್ಡದ ಮೇಲೊಂದು ಕೋಟೆ. ಅದನ್ನು ಅಜಿಂಕ್ಯತಾರಾ ಎಂದು ಕರೆಯಲಾಗುತ್ತದೆ. ಈ ಸುತ್ತಮುತ್ತಲ ಪ್ರದೇಶಗಳೆಲ್ಲ ಹಿಂದೂ ಸಾಮ್ರಾಟ ಶಿವಾಜಿ ಓಡಾಡಿದ ನಾಡು. ಇಲ್ಲೆಲ್ಲ ಶಿವಾಜಿಯ ಖುರಪುಟದ ಸದ್ದುಗಳಿವೆ..' ಎಂದು ಆಟೋ ಡ್ರೈವರ್ ಹಿಂದಿ ಹಾಗೂ ಮರಾಠಿ ಮಿಶ್ರಿತ ಭಾಷೆಯಲ್ಲಿ ಹೇಳುತ್ತಲೇ ಇದ್ದ. ನಾವು ಮೌನವಾಗಿ ಕೇಳುತ್ತಿದ್ದರೂ ಮಧ್ಯಮದ್ಯದಲ್ಲಿ, ಗೊಂದಲ ಬಗೆಹರಿಸಿಕೊಳ್ಳುತ್ತಿದ್ದೆವು.
            ಸತಾರಾದ ಬಾನಿನಲ್ಲೀ ಸೂರ್ಯ ಇನ್ನೂ ಹುಟ್ಟಿರಲಿಲ್ಲ. ಮೋಡಗಳು ಸಾಕಷ್ಟು ದಟ್ಟೈಸಿದ್ದರೂ ಮಳೆ ಸುರಿಯುವ ಲಕ್ಷಣಗಳಿರಲಿಲ್ಲ. ಗುಡ್ಡ ಹತ್ತಿ, ಇಳಿದು ಆಟೋ ಸಾಗುತ್ತಲೇ ಇತ್ತು. ಇದ್ದಕ್ಕಿದ್ದಂತೆ ಸುರಂಗವೊಂದು ನಮ್ಮೆದುರು ಕಾಣಿಸಿತು. ಹಾದು ಹೋಗುತ್ತಿದ್ದಂತೆಯೇ ಆಟೋ ಡ್ರೈವರ್ ಬೆಳ್ಳಂಬೆಳಿಗ್ಗೆ ನನಗೆ ಸಮರ್ಥ ರಾಮದಾಸರನ್ನು ದರ್ಶನ ಮಾಡುವ ಭಾಗ್ಯವನ್ನು ನೀವು ಕರುಣಿಸಿದ್ದೀರಿ. ಪ್ರತಿದಿನ 4 ಗಂಟೆಗೆ ಎದ್ದು ನಾನು ಬಾಡಿಗೆ ಹೊಡೆಯಲು ಆರಂಭಿಸುತ್ತೇನೆ. ಆದರೆ ಅಪರೂಪಕ್ಕೆ ಮಾತ್ರ ಇಂತಹ ಅವಕಾಶ ನಮಗೆ ಲಭ್ಯವಾಗುತ್ತದೆ. ನಾನು ಇವತ್ತು ಧನ್ಯನಾಗಿದ್ದೇನೆ. ನಿಮ್ಮಬಳಿ ತಲಾ 50 ರು. ನಂತೆ ಜಾಸ್ತಿ ಪಡೆದುಕೊಂಡಿದ್ದೆನೆ ಎನ್ನುವುದು ನನಗೆ ಗೊತ್ತಿದೆ. ಆದರೆ ಇದು ಅನಿವಾರ್ಯ. ನಾನು ಈ ಕಾರಣದಿಂದಾಗಿ ನಿಮಗೆ ಒಂದು ತೋಫಾ ಕೊಡಲು ಇಷ್ಟ ಪಡುತ್ತೇನೆ..' ಎಂದ ಆಟೋ ಡ್ರೈವರ್.
            ಸೀದಾ ಚಹಾ ಅಂಗಡಿಯೊಂದರ ಬಳಿ ನಿಲ್ಲಿಸಿದ ಆತ. ನಿಲ್ಲಿಸಿದವನೇ ಪ್ರತಿಯೊಬ್ಬರಿಗೂ ಬಿಸ್ಸಿ ಬಿಸಿ ಚಹಾ ಆರ್ಡರ್ ಮಾಡಿದ. ಬೆಲ್ಲದ ಚಹ ಬಹಳ ಹಿತವಾಗಿತ್ತು. ಆಟೋದಿಂದ ಆಳಿಸಿದವನೇ ಒಮ್ಮೆ ಹಿಂತಿರುಗಿ ನೋಡಿ ಎಂದ. ನೋಡಿದೆವು. ಆಹ್, ಎಂತ ಸುಂದರ ದೃಶ್ಯ ಅದು. ದೊಡ್ಡದೊಂದು ಸುರಂಗ. ಸುರಂಗದ ನಡುವೆ ಕಾಣುತ್ತಿದ್ದ ಸತಾರಾದ ಮನೆ ಮನೆಗಳು. ಮನೆಮನೆಗಳಲ್ಲಿ ಬೆಳಗಿಸಿದ್ದ ವಿದ್ಯುತ್ ದೀಪಗಳು. ಅದೆಂತಹ ಆಕರ್ಷಕ. ಅದೆಂತಹ ಸೊಬಗು. ನಾವೆಲ್ಲ ಅದೆಷ್ಟು ಪೋಟೋಗಳನ್ನು ತೆಗೆಸಿಕೊಂಡೆವೋ. ಚಹಾ ಕುಡಿದಾದ ನಂತರ ಮತ್ತೆ ನಮ್ಮ ಪಯಣ ಸಾಗಿತು.
            `ನಮ್ಮವರೂ ಇದ್ದಾರೆ ಅದೆಲ್ಲೋ ದೂರ ದೂರದ ಸ್ಥಳಗಳಂತೆ, ಅಲ್ಲೆಲ್ಲಿಗೋ ಹೋಗುತ್ತಾರಂತೆ. ಆದರೆ ನೀವು ನೋಡಿ ದೂರದ ಕರ್ನಾಟಕದಿಂದ ನಮ್ಮ ಪ್ರದೇಶ ಅದರಲ್ಲೂ  ಮುಖ್ಯವಾಗಿ ಸ್ವಾಮಿ ಸಮರ್ಥರು ನಡೆದಾಡಿದ ಸ್ಥಳವನ್ನು ನೋಡಲು ಬಂದಿದ್ದೀರಿ. ನಮ್ಮವರಿಗೆ ಇದು ಗೊತ್ತೇ ಇಲ್ಲ. ಸ್ವಾಮಿ ಸಮರ್ಥರಾಮದಾಸರ ಸ್ಥಳದ ಬಗ್ಗೆ ಯಾರೂ ಗಮನ ಕೊಡುವುದೇ ಇಲ್ಲ. ನಮ್ಮವರಿಗೆ ನಮ್ಮದರ ಬಗ್ಗೆ ಅಸಡ್ಡೆ. ಆದರೆ ನಿಮ್ಮನ್ನು ನೋಡಿ ನನಗೆ ಬಹಳ ಸಂತೋಷವಾಗುತ್ತಿದೆ. ನಿಜಕ್ಕೂ ನೀವು ಪುಣ್ಯಪುರುಷರು. ನಿಮಗೆ ನಮಸ್ಕಾರಗಳನ್ನು ತಿಳಿಸಲೇಬೇಕು. ನೀವು ಅಲ್ಲಿಂದ ಬಂದಿದ್ದೀರಿ. ಬೆಳ್ಳಂಬೆಳಿಗ್ಗೆ ದೇಗುಲ ದರ್ಶನಕ್ಕೆ ಕಾರಣರಾಗುತ್ತಿದ್ದೀರಿ. ನಿಮಗೆ ನಾನೊಂದು ವ್ಯೂ ಪಾಯಿಂಟನ್ನು ತೋರಿಸುತ್ತೇನೆ. ಇದು ನನ್ನ ಇನ್ನೊಂದು ತೋಫಾ..' ಎಂದು ಆಟೋ ಡ್ರೈವರ್ ಮಾತನಾಡುತ್ತಲೇ ಇದ್ದ.
            ನಾವು ಅಷ್ಟರಲ್ಲಿ ಮಹಾಭಲೇಶ್ವರ, ರಾಯಘಡದ ಬಗ್ಗೆ ಕೇಳಿದೆವು. `ಮಹಾಭಲೇಶ್ವರದಲ್ಲೇನಿದೆ ಮಣ್ಣು. ನಿಜ. ಅಲ್ಲಿ ನೋಡುವಂತದ್ದು ಸಾಕಷ್ಟಿದೆ. ಆದರೆ ಎಲ್ಲವೂ ದುಬಾರಿ. ಆದರೆ ಸತಾರಾದಲ್ಲಿ ಹಾಗಲ್ಲ. ಸಜ್ಜನಘಡದಲ್ಲಂತೂ ಎಲ್ಲವೂ ಫ್ರಿ. ಊಟ, ವಸತಿ ಎಲ್ಲವೂ ಕೊಡುತ್ತಾರೆ. ಮಹಾಭಲೇಶ್ವರ ನೋಡುವುದು ಬೇಡ. ಸುಮ್ಮನೆ ನಿಮಗೆ ದುಡ್ಡು ಜಾಸ್ತಿಯಾಗಿದ್ದರೆ ಹೋಗಿ ಬನ್ನಿ ಅಷ್ಟೆ. ರಾಯಘಡವನ್ನು ನೋಡಬಹುದು. ಶಿವಾಜಿ ಮಹಾರಾಜರ ರಾಜಧಾನಿ ಅದು. ಚನ್ನಾಗಿದೆ ಎಂದು ಆತ ಉತ್ತರಿಸಿದ್ದ. ಆತನ ಉತ್ತರ ಕೇಳಿದ ನಾವು ರಾಯಘಡ ಹಾಗೂ ಮಹಾಭಲೇಶ್ವರವನ್ನು ನೋಡಿ ಬರುವ ಆಲೋಚನೆಯನ್ನು ಕೈಬಿಟ್ಟೆವು.
           ಶಿವಾಜಿ ಮಹಾರಾಜರು ಆರಂಭದಲ್ಲಿ ರಾಯಘಡವನ್ನು ತಮ್ಮ ರಾಜಧಾನಿಯನ್ನಾಗಿ ಮಾಡಿಕೊಂಡರಂತೆ. ಆ ನಂತರ ಅವರಿಗೆ ಸಜ್ಜನಘಡದಲ್ಲಿ ಸ್ವಾಮಿ ಸಮರ್ಥ ರಾಮದಾಸರು ಇರುವ ಬಗ್ಗೆ ಮಾಹಿತಿ ಸಿಕ್ಕಿತಂತೆ. ರಾಮದಾಸರನ್ನು ಭೇಟಿಯಾಗಬೇಕು ಎಂದು ಶಿವಾಜಿ ಮಹಾರಾಜ್ ಕುದುರೆಯನ್ನೇರಿ ಬಂದರಂತೆ. ಸಿಟ್ಟು ಹಾಗೂ ಅಹಂಕಾರದಿಂದ ಸಜ್ಜನಘಡವನ್ನು ಏರಿ ಬಂದ ಸಂದರ್ಭದಲ್ಲಿ ಸಮರ್ಥ ರಾಮದಾಸರು ಧ್ಯಾನ ಹಾಗೂ ಪೂಜೆಯಲ್ಲಿ ನಿರತರಾಗಿದ್ದರಂತೆ. ಶಿವಾಜಿ ಬಂದು ಸಮರ್ಥ ರಾಮದಾಸರ ಎದುರು ಗತ್ತಿನಿಂದ ಕುಳಿತರಂತೆ. ಆದರೆ ರಾಮದಾಸರು ಅದನ್ನು ಗಮನಿಸಿಯೂ ಗಮನಿಸದಂತೆ ಉಳಿದರಂತೆ. ಕೊನೆಗೆ ಶಿವಾಜಿ ನಮಸ್ಕಾರ ಮಾಡಿ ಆಶಿರ್ವಾದ ಬೇಡಿದರಂತೆ. ಕೊನೆಗೆ ಸಮರ್ಥ ರಾಮದಾಸರು ಅತ್ಯಂತ ಮಿದುವಾದ ಕಲ್ಲನ್ನು ಹೊತ್ತುಕೊಂಡು ಬಾ. ಹುಡುಕಿ ತಾ. ಆಗ ಆಶಿರ್ವಾದ ಮಾಡುತ್ತೇನೆ. ಹಿಂದೂ ಸಾಮ್ರಾಟನಾಗುತ್ತೀಯಾ ಎಂದರಂತೆ. ಕೊನೆಗೆ ಶಿವಾಜಿ ಮಹಾರಾಜರು ಬಹಳ ಹುಡುಕಿ ಕೊನೆಗೊಂದು ಮೃದು ಕಲ್ಲನ್ನು ಹೊತ್ತು ತಂದರಂತೆ. ಆ ಕಲ್ಲನ್ನು ನೋಡಿದ ರಾಮದಾಸರು ಕೈಯಲ್ಲಿ ಮುಟ್ಟಿ `ಇದು ಗಟ್ಟಿಯಾಗಿದೆ. ಇನ್ನೂ ಮಿದುವಾದ ಕಲ್ಲನ್ನು ತನ್ನಿ..' ಎಂದರಂತೆ. ಕೊನೆಗೆ ಹುಡುಕಿ ತಂದಾಗ ಮತ್ತೆ ಇದೇ ಘಟನೆ ಪುನರಾವರ್ತನೆ ಆಯಿತಂತೆ. ಕೊನಗೊಮ್ಮೆ ಶಿವಾಜಿ ಮಹಾರಾಜರು ದಿಕ್ಕೆಟ್ಟು ಸೋತಂತಾಗಿ ಸಜ್ಜನಘಡಕ್ಕೆ ತೆರಳಿ ಸ್ವಾಮಿ ರಾಮದಾಸರ ಚರಣದಲ್ಲಿ ಶರಣಾದರಂತೆ. ಆಗ ಸಮರ್ಥ ರಾಮದಾಸರು ಹೇಳಿದ್ದೆಂದರೆ `ಮೃದುವಾದ ಕಲ್ಲು ಎಂದರೆ ಏನೆಂದುಕೊಂಡೆ ಮಹಾರಾಜಾ. ನೀನೇ ಮೃದುವಾದ ಕಲ್ಲು. ನೀನು ಕಲ್ಲಿನಷ್ಟು ಕಠಿಣ. ಆದರೆ ಸಿಟ್ಟು ಹಾಗೂ ಅಹಂಕಾರವನ್ನು ಬಿಟ್ಟು ಮೃದುವಾಗಿ ಬಾ ಎಂದು ಹೇಳಿದ್ದೆನಷ್ಟೇ ಎಂದು ಹೇಳಿದಾಗ ಶಿವಾಜಿ ಮಹಾರಾಜರ ಕಣ್ಣಿನಲ್ಲಿ ಆಶ್ರುಧಾರೆ ಸುರಿಯಲಾರಂಭಿಸಿತಂತೆ. ಆ ಕ್ಷಣದಲ್ಲಿ ಸಮರ್ಥ ರಾಮದಾಸರು ಶಿವಾಜಿ ಮಹಾರಾಜರ ತಲೆಯ ಮೇಲೆ ಕೈ ಇಟ್ಟು ಹಿಂದೂ ಸಾಮ್ರಾಟನಾಗಿ ಲೋಕವಿಖ್ಯಾತನಾಗಿ. ವಿಜಯೀಭವ ಎಂದು ಹರಸಿದರಂತೆ. ನಂತರದ ದಿನಗಳಲ್ಲಿ ಶಿವಾಜಿ ಮಹಾರಾಜ ಯಾವರೀತಿ ವಿಖ್ಯಾತಿ ಗಳಿಸಿದ ಎನ್ನುವುದು ಇತಿಹಾಸ ಎಂದು ಆಟೋ ಡ್ರೈವರ್ ದೀರ್ಘವಾಗಿ ಹೇಳಿದಾಗ ನಮಗೆ ಒಮ್ಮೆಲೆ ಮೈಯೆಲ್ಲ ಪುಳಕವಾಯಿತು. ನಾವು ಆಟೋ ಡ್ರೈವರ್ ಜೊತೆ ಬಂದಿದ್ದೇವೋ ಅಥವಾ ಸತಾರಾದ ಸಮಗ್ರ ಮಾಹಿತಿಯನ್ನು ತಿಳಿದುಕೊಂಡು ಬಂದಿರುವ ಗೈಡ್ ಜೊತೆ ಬಂದಿದ್ದೇವೋ ಎನ್ನುವ ಅನುಮಾನವೂ ನಮ್ಮನ್ನು ಕಾಡಿತು. 600 ರು. ಕೊಟ್ಟಿದ್ದಕ್ಕೂ ಅನ್ಯಾಯವಾಗಲಿಲ್ಲ ಎಂದುಕೊಂಡೆವು.
          `ಶಿವಾಜಿ ಮಹಾರಾಜರು ನಂತರದ ದಿನಗಳಲ್ಲಿ ಸಜ್ಜನಘಡಕ್ಕೆ ದೊಡ್ಡದೊಂದು ದ್ವಾರವನ್ನು ಕಟ್ಟಿಸಿದರು. ಕೋಟೆಯೊಂದನ್ನು ನಿರ್ಮಾಣ ಮಾಡಿದರು. ಅಷ್ಟೇ ಅಲ್ಲ. ಅಲ್ಲಿ ಒಂದೆರಡು ದೇಗುಲಗಳ ಕಟ್ಟಡವನ್ನೂ ಕಟ್ಟಿಸಿದರು. ಇದೇ ಸಜ್ಜನಘಡದಲ್ಲಿಯೇ ಮಾಫಳಾ ಯುವಕರ ಜೊತೆ ಸೇರಿ ರಕ್ತ ತರ್ಪಣ ನೀಡಿ ಹಿಂದೂ ರಕ್ಷಣೆಗೆ ಶಿವಾಜಿ ಪಣ ತೊಟ್ಟಿದ್ದು. ಒಮ್ಮೆ ನೀವು ಈ ನಾಡಿನಲ್ಲಿ ಶಿವಾಜಿ ಮಹಾರಾಜ ಕುದುರೆಯ ಮೇಲೆ ಹೋಗುತ್ತಿದ್ದುದನ್ನು ಕಲ್ಪನೆ ಮಾಡಿಕೊಳ್ಳಿ ಎಂದ. ನಮಗೆ ಮೈಯೆಲ್ಲ ಒಮ್ಮೆಗೆ ರೋಮಾಂಚನ.
           ನಿಧಾನವಾಗಿ ಬೆಳಗಾಗುತ್ತಿತ್ತು. ಆಕಾಶದೆತ್ತರದ ದೂರದಲ್ಲೊಂದು ಬೆಳಕಿನ ಬಿಂಬವನ್ನು ತೋರಿಸಿದ ಆಟೋ ಡ್ರೈವರ್ ಅದೋ ನೋಡಿ ಅಲ್ಲಿಯೇ ಸಜ್ಜನ ಘಡ ಇದೆ. ನಾವು ಅದನ್ನು ಏರಬೇಕು ಎಂದ. ಕತ್ತನ್ನು ಎತ್ತಿ ನೋಡಿ ಹಿತವಾಗಿ ನೋವು ಮಾಡಿಕೊಂಡೆವು. ಸತಾರಾದಿಂದ 17 ಕಿ.ಮಿ ದೂರದಲ್ಲಿರುವ ಸಜ್ಜನಘಡಕ್ಕೆ ಹೋಗುವ ಸಲುವಾಗಿ ಆಟೋ ಏರಿದ್ದ ನಾವು ಅಂಕುಡೊಂಕಿನ ದಾರಿಯಲ್ಲಿ ಸಾಗುತ್ತಲೇ ಇದ್ದೆವು. ಬೆಳಗಿನ ಮುಂಜಾವು ನಮ್ಮನ್ನು ಹಿತವಾಗಿ ಚುಂಬಿಸುತ್ತಿತ್ತು. ಮಂಜಿನ ಹನಿಗಳು ಮುತ್ತಿಕ್ಕುತ್ತಿದ್ದವು. ಅಲ್ಲಿಯೇ ಇದ್ದ ಮಿಲಿಟರಿ ಕ್ಯಾಂಪನ್ನು ನೀಲೇಶ ಮಂತ್ರಿ ತೋರಿಸಿದ. ಮರಾಠಾ ಪ್ಲಟೂನ್ ಇಲ್ಲಿಯೇ ತಯಾರಾಗುತ್ತದೆ. ಇಲ್ಲಿ ತರಬೇತಿ ಪಡೆದವರು ಪ್ರತಿಯೊಬ್ಬರೂ ಸೈನ್ಯಕ್ಕೆ ಆಯ್ಕೆಯಾಗುತ್ತಾರೆ ಎಂದು ಹೆಮ್ಮೆಯಿಂದ ಹೇಳಿದ. ನಮಗೂ ಹೆಮ್ಮೆ ಎನ್ನಿಸಿ ಎದೆಯುಬ್ಬಿತು.

(ಮುಂದುವರಿಯುತ್ತದೆ)

Wednesday, October 21, 2015

ಸಜ್ಜನರೊಡನೆ.. ಸಜ್ಜನಘಡದ ಕಡೆಗೆ - 2

          ಹುಬ್ಬಳ್ಳಿಯಿಂದ ಧಾರವಾಡಕ್ಕೆ ಬಂದಿದ್ದರೂ ರೈಲು ವೇಗವಾಗಿ ಸಾಗುತ್ತಿರಲಿಲ್ಲ. ಲೋಂಡಾ, ಅಳ್ನಾವರ, ಖಾನಾಪುರ ಮೂಲಕ ಬೆಳಗಾವಿಗೆ ಹೋಗುತ್ತಿತ್ತು ರೈಲು. ಖಾಲಿ ಖಾಲಿ ರೈಲು. ನಾನು, ಸಂಜಯ ಹಾಗೂ ಪ್ರಶಾಂತ (ನಿರಂತರ ಚಲನೆಯಲ್ಲಿರುವ ಖ್ಯಾತಿಯ) ಸಾಕಷ್ಟು ಹಲುಬಿಕೊಳ್ಳುತ್ತ ಸಾಗಿದೆವು. ನಮ್ಮ ಪಕ್ಕದಲ್ಲಿ ಒಂಟಿ ಸೀಟಿನಲ್ಲಿ ಒಬ್ಬಾತ ಗಡವನಂತನು ಬಂದು ಕುಳೀತುಕೊಂಡಿದ್ದ. ಆತನಿಗೆ ಆಗಲೇ ನಿದ್ದೆ. ಬಾಯಿಂದಂತೂ ಸಪ್ತಸ್ವರಗಳೂ ಸಮ್ಮಿಳಿತವಾಗಿ ಗೊರ್.. ಎನ್ನುತ್ತ ಬರುತ್ತಿದ್ದವು.
           ಧಾರವಾಡ ಕಳೆದ ನಂತರ ನಿಧಾನವಾಗಿ ವಾತಾವರಣ ಬದಲಾಗತೊಡಗಿತು. ಪ್ರಶಾಂತ ಭಾವ ತನ್ನ ಮೊಬೈಲಿನಲ್ಲಿದ್ದ ಹಲವು ಆಪ್ ಗಳನ್ನು ನನ್ನ ಮೊಬೈಲಿಗೆ ರವಾನೆ ಮಾಡತೊಡಗಿದ. ಜಿಪಿಎಸ್, ಅದು, ಇದು ಎಂಬಂತೆ ಬಹಳಷ್ಟು ಆಪುಗಳು ನನ್ನ ಮೊಬೈಲಿಗೆ ಬಂದವು. ರೈಲಿಗೆ ವೇಗವಿನ್ನೂ ಸಿಕ್ಕಿರಲಿಲ್ಲ. ಬರಬರುತ್ತ ಹಸಿರು ಹೆಚ್ಚಾಯಿತು. ಅಳ್ನಾವರ ಬರುವ ಮುನ್ನ ನಾಲ್ಕೈದು ಕಿಲೋಮೀಟರ್ ದೂರ ಉತ್ತರ ಕನ್ನಡ ಜಿಲ್ಲೆಯಲ್ಲಿ ರೈಲು ಮಾರ್ಗ ಹಾದು ಹೋಗಿದೆ. ನಾನು ಪ್ರಶಾಂತ ಹಾಗೂ ಸಂಜಯನ ಬಳಿ ಈ ವಿಷಯವನ್ನು ಹೇಳಿ ವಾದಿಸಿದೆ. ಅವರು ಸಾಧ್ಯವೇ ಇಲ್ಲ ಎಂದು ಹೇಳಿದರೆ ನಾನು ಇದೆ ಎಂದು ಹೇಳುತ್ತಿದೆ. ನನ್ನ ಬಳಿ ಸೂಕ್ತ ಸಾಕ್ಷ್ಯ ಹಾಗೂ ದಾಖಲೆಗಳಿರದಿದ್ದ ಕಾರಣ ಸುಮ್ಮನಾದೆ.
           ಎಲ್ಲೋ ಮಳೆ ಬಿದ್ದಿರಬೇಕು. ನಾವು ಹೋರಟಿದ್ದು ಮಳೆಗಾಲವಾದರೂ ಹಾಗನ್ನಿಸುತ್ತಿರಲಿಲ್ಲ. ರಭಸದಿಂದ ಸುರಿಯಬೇಕಿದ್ದ ಮಳೆ ನಾಪತ್ತೆಯಾಗಿತ್ತು. ಆಗೊಮ್ಮೆ ಈಗೊಮ್ಮೆ ತುಂತುರು ಮಳೆ ಮಾಲೆ ಮಾಲೆಯಾಗಿ ಇಳಿಯುತ್ತಿತ್ತು. ದಾರಿಯಲ್ಲಿ ಕಾಣುವ ನದಿ, ಹಳ್ಳ, ತೊರೆಗಳಲ್ಲೆಲ್ಲ ನೀರಿದೆಯೇ ಎಂದು ಇಣುಕುತ್ತಿದ್ದೆವು. ಯಾವುದೋ ಒಂದೆರಡು ಹೊಳೆ ಹಳ್ಳಗಳು ತುಂಬಿ ಹರಿಯುತ್ತಿದ್ದವು. ಅಜಮಾಸು 5 ಅಥವಾ ಇನ್ನೂ ಜಾಸ್ತಿ ಗಂಟೆಯೇನೋ, ಅಳ್ನಾವರ ಹಾಗೂ ಲೋಂಡಾಗಳನ್ನು ದಾಟಿದ ನಮ್ಮ ಚುಕುಬುಕು ರೈಲು ಖಾನಾಪುರಕ್ಕೂ ಬಂದಿತು. 15 ನಿಮಿಷಕ್ಕೊಮ್ಮೆಯೋ ಅಥವಾ 30 ನಿಮಿಷಕ್ಕೆ ಒಮ್ಮೆ ಎಂಬಂತೆಯೋ ನಿಂತು ನಿಂತು ಸಾಗುತ್ತಿದ್ದ ರೈಲು ನಿಧಾನಕ್ಕೆ ರಶ್ಶಾಗತೊಡಗಿತು.
           ಸಂಜಯ ತನ ಡಿಎಸ್.ಎಲ್.ಆರ್ ಕ್ಯಾಮರಾಕ್ಕೆ ಆಗಲೇ ಕೆಲಸ ಕೊಟ್ಟಿದ್ದ. ನಾನು ಹಾಗೂ ಪ್ರಶಾಂತ ಭಾವ ಸಾಧ್ಯವಾದಷ್ಟು ಪೋಟೋಗಳನ್ನು ಮೊಬೈಲಿನಲ್ಲಿಯೇ ಕ್ಲಿಕ್ಕಿಸಿಕೊಂಡೆವು. ಬಾಯಲ್ಲಿ ಬಾ ಮಳೆಯೇ ಬಾ.. ಎಂಬ ಹಾಡೂ ಗುನುಗುತ್ತಿತ್ತು. ದಾರಿಯಲ್ಲಿ ಎಲ್ಲೋ ಒಂದೆರಡು ಕಡೆಗಳಲ್ಲಿ ರೈಲುಗಳು ಅಡ್ಡಾದವು. ವೇಗದ ರೈಲುಗಳು ದಡದಡನೆ ಸಾಗುತ್ತಿದ್ದರೆ ಪಕ್ಕದಲ್ಲಿಯೇ ನಿಂತ ನಾವು ಪೋಟೋ ಕ್ಲಿಕ್ಕಿಸಿ ಹಿತವಾಗಿ ಬೆಚ್ಚಿದ್ದೆವು.
            ಈ ನಡುವೆ ಇನ್ನೊಂದು ವಿಷಯ ಹೇಳಲೇಬೇಕು ನೋಡಿ. ಧಾರವಾಡ ದಾಟಿ ರೈಲು ಮುಂದೆ ಹೋಗುತ್ತಿದ್ದಂತೆ ಟಿಸಿ ಬಂದು ತಪಾಸಣೆಗೆ ಇಳಿದ. ನಾನು ಹಾಗೂ ಸಂಜಯ ಟಿಕೆಟ್ ಕೊಟ್ಟು ನಮ್ಮ ಗುರುತಿನ ಚೀಟಿಯನ್ನು ನೀಡಿದೆವು. ಪ್ರಶಾಂತ ಭಾವನ ಬಳಿ ಗುರುತಿನ ಚೀಟಿ ತೋರಿಸು ಎಂದರೆ ಚೀಟಿ ಎಲ್ಲಿದೆ? ವೋಟಿಂಗ್ ಕಾರ್ಡ್, ರೇಶನ್ ಕಾರ್ಡ್, ಆಧಾರ್ ಕಾರ್ಡುಗಳ ಝೆರಾಕ್ಸ್ ತಂದಿದ್ದ. ಟಿಸಿ ವರಾತ ಶುರುಮಾಡಿದ. ಒರಿಜಿನಲ್ ದಾಖಲೆಗಳನ್ನು ತೋರಿಸಿ, ಝೆರಾಕ್ಸ್ ಬೇಡ ಎಂದ. ಎಷ್ಟು ಹುಡುಕಿದರೂ ಒರಿಜಿನಲ್ ಸಿಗಲಿಲ್ಲ.
           ಕೊನೆಗೆ 500 ರು. ದಂಡ ಕಟ್ಟಬೇಕಾಗುತ್ತದೆ ಎನ್ನಲು ಆರಂಭಿಸಿದ. ಸಂಜಯ ಟಿಸಿ ಬಳಿ ಮಾತಿಗೆ ನಿಂತ. ರೈಲ್ವೆ ರೂಲ್ಸು, ರೆಗ್ಯುಲೇಶನ್ನುಗಳನ್ನೆಲ್ಲ ಪಟಪಟನೆ ಮಾತನಾಡಿದ. ಹೀಗಿದ್ದಾಗಲೇ ಟಿಸಿ ಪ್ರಶಾಂತ ಭಾವನ ಬಳಿ ನೀವೇನು ಕೆಲಸ ಮಾಡುತ್ತಿದ್ದೀರಿ ಎಂದ. ಭಾವ ಕೃಷಿ ಎಂದು ಉತ್ತರಿಸಿದ. ಸಂಜಯನೂ ಕೃಷಿ ಮಾಡುತ್ತಿದ್ದೇನೆ ಎಂದ. ನನ್ನ ಬಳಿಯೂ ಕೇಳಿದ. ಕೊನೆಗೆ ನಾನು ಪತ್ರಕರ್ತ ಎಂದೆ. ಎಲ್ಲಿ ನಿನ್ನ ಕಾರ್ಡ್ ತೋರಿಸು ನೋಡೋಣ ಎಂದ. ಕಾರ್ಡ್ ನೋಡಿದವನೇ ಸ್ವಲ್ಪ ಅನುಮಾನ ಮಾಡಿದ. ಮೊದಲೇ ಹೇಳಿದ್ದರೆ ಆಗುತ್ತಿರಲಿಲ್ಲವಾ ಎಂದ. ನಾನು ಮಿಕಿ ಮಿಕಿ ನೋಡಿದೆ. ಇನ್ನೊಮ್ಮೆ ಬರುವಾಗ ಝೆರಾಕ್ಸ್ ಅಲ್ಲ. ಎಲ್ಲ ಒರಿಜಿನಲ್ ದಾಖಲೆಗಳನ್ನೇ ತನ್ನಿ ಎಂದು ಹೇಳಿ ಹೊರಟುಹೋದ.
           `ಮಾರಾಯಾ.. ನೀನು ಪತ್ರಕರ್ತ ಹೇಳಕಾಗಿತ್ತಿಲ್ಲೆ. ಟಿಸಿ ಎಂತಾ ಮಾಡ್ತ ನೋಡ್ಲಾಗಿತ್ತು..' ಎಂದು ಸಂಜಯ ಹೇಳಿದ. `ಸುಮ್ನೆ ಎಂತಾ 500 ರು. ಕೊಡ್ತಿದ್ರಾ ಮಾರಾಯಾ..' ಎಂದೆ. ಹೌದೆನ್ನಿಸಿರಬೇಕು ಸುಮ್ಮನಾದರು.
              ರೈಲಿನಲ್ಲಿ ಹೋಗುತ್ತಿದ್ದ ನಮಗೆ ಇದ್ದಕ್ಕಿದ್ದಂತೆ ಆಲೋಚನೆಯೊಂದು ಮೂಡಿತು. ಯಾವಾಗಲೂ ನಾವು ಜೊತೆಗೂಡಿದರೆ ಎಲ್ಲಾದರೂ ಹೋಗಬೇಕು ಎನ್ನಿಸಿದರೆ ತಕ್ಷಣಕ್ಕೆ ಹೊರಟುಬಿಡುತ್ತೇವೆ. ಸಜ್ಜನಘಡಕ್ಕೂ ಹೀಗೆಯೇ. ದಿಢೀರ್ ನಿರ್ಧಾರ ಮಾಡಿ ಹೊರಟಿದ್ದೇ. ರೈಲಿನಲ್ಲಿ ಹೋಗುವಾಗ ಪ್ರಶಾಂತ ಭಾವ ಇದ್ದಕ್ಕಿದ್ದಂತೆ `ಹೋಯ್.. ಉತ್ತರ ಭಾರತಕ್ಕೆ ಹೊರಟು ಬಿಡೋಣ್ವಾ..?' ಎಂದ. ನಾನು ಹಾಗೂ ಸಂಜಯ ಇಬ್ಬರೂ ಇಂತದ್ದೇ ಮನೋಭಾವದವರು. ಹೋ.. ಹೋಗೋಣ ಎಂದು ತಯಾರಾದೆವು. `ನೋಡೋಣ. ಮೊದಲು ಸಜ್ಜನಘಡಕ್ಕೆ ಹೋಗಿ ಆ ನಂತರ ಆಲೋಚನೆ ಮಾಡೋಣ..' ಎಂದ ಪ್ರಶಾಂತ ಭಾವ. ನಾವು ತಲೆಯಲ್ಲಾಡಿಸಿದೆವು.
                   ಬೆಳಗಾವಿ ತಲುಪುವ ವೇಳೆಗೆ ಸೂರ್ಯನೂ ಬಾನಂಚಿನಲ್ಲಿ ರಥವನ್ನು ಹೋಡಿ ಹೋಗಿದ್ದ. ಬೆಳಗಾವಿ ತಲುಪುವ ವೇಳೆ ರೈಲಿನಲ್ಲಿ ಸುಮಾರು ಜನವೋ ಜನ. ಅಲ್ಲಿಂದ ಮುಂದಕ್ಕೆ ರೈಲು ಚಲಿಸಿದಂತೆಲ್ಲ ನಿಧಾನವಾಗಿ ಕತ್ತಲು ಆವರಿಸಿತು. ಗೋಕಾಕ ರೋಡ್, ಘಟಪ್ರಭಾ, ಚಿಕ್ಕೋಡಿ ಕ್ರಾಸ್ ಈ ಮುಂತಾದ ಪ್ರದೇಶಗಳನ್ನು ದಾಟಿದ ರೈಲು ಕೊನೆಗೊಮ್ಮೆ ಮಹಾರಾಷ್ಟ್ರಕ್ಕೆ ಕಾಲಿಟ್ಟಿತು. ಮಹಾರಾಷ್ಟ್ರಕ್ಕೆ ಬಂದಿದ್ದೇವೆ ಎನ್ನುವುದರ ಕುರಹಾಗಿ ನಮ್ಮ ಮೊಬೈಲ್ ರೋಮಿಂಗ್ ಏರಿಯಾದಲ್ಲಿದೆ ಎನ್ನುವುದನ್ನು ಸಾರಿ ಸಾರಿ ಹೇಳುತ್ತಿತ್ತು.
             ಅದೇ ಸಂದರ್ಭದಲ್ಲಿ ರಾತ್ರಿಯ ಊಟ ಮಾಡಬೇಕಿತ್ತು. ಪ್ರಶಾಂತ ಭಾವ ಇಡ್ಲಿಯನ್ನು ಕಟ್ಟಿಸಿಕೊಂಡು ಬಂದ. ಗಡದ್ದಾಗಿ ತಿಂದೆವು. ಮಲಗಿ ನಿದ್ರಿಸೋಣವೇ? ಎಂದುಕೊಂಡರೆ ನಿದ್ದೆ ಬರಲೊಲ್ಲದು. ಮರುದಿನ ಮುಂಬಯಿಯಲ್ಲಿ ಎಫ್.ಡಿ.ಎ ಎಕ್ಸಾಂ ಇದ್ದ ಕಾರಣ ಒಂದಷ್ಟು ಯುವಕರು ನಾವಿದ್ದಲ್ಲಿ ಬಂದು ಕುಳಿತರು. ಬಂದವರೇ ಹರಟೆಗೆ ಕುಳಿತರು.
                 ನಿಧಾನಕ್ಕೆ ನಮ್ಮನ್ನು ನಿದ್ದೆ ಆವರಿಸುತ್ತಿತ್ತು. ಆ ಹುಡುಗರೂ ಮರಾಠಿ ಹಾಗೂ ಹಿಂದಿಯಲ್ಲಿ ಮಾತನಾಡುತ್ತಿದ್ದರು. ಅವರಲ್ಲೊಬ್ಬನಿಗೆ ಅಲ್ಪ ಸ್ವಲ್ಪ ಕನ್ನಡ ಬರುತ್ತಿತ್ತು. ಅವರೊಂದಿಗೆ ಸಾಕಷ್ಟು ಸಮಯ ಹರಟೆ ಹೊಡೆದೆವು. ಕೊನೆಗೊಮ್ಮೆ ಸಾಂಗ್ಲಿ ಹಾಗೂ ಮಿರಜನ್ನು ದಾಟಿದ ರೈಲು ಮುಂದಕ್ಕೆ ಸಾಗಿತು. ರಾತ್ರಿಯಾಗಿ ಬಹಳ ಹೊತ್ತು ಸಂದಿತ್ತು. ಕೊನೆಗೂ ಒಮ್ಮೆ ನಮ್ಮ ನಿಗದಿತ ಗಮ್ಯ ಸಿಕ್ಕಿತು. ಮಧ್ಯರಾತ್ರಿ 12.10ರ ವೇಳೆಗೆ ನಾವು ಇಳಿಯಬೇಕಿದ್ದ ಸತಾರಾ ಹತ್ತಿರ ಬಂದಿತು. ಲಗುಬಗೆಯಿಂದ ಇಳಿದೆವು.
            ಇಳಿದವರು ಹೋಗುವುದೆಲ್ಲಿ? ಸತಾರಾ ರೈಲ್ವೆ ನಿಲ್ದಾಣದಿಂದ ಬಸ್ ನಿಲ್ದಾಣಕ್ಕೆ ಅಥವಾ ಮುಖ್ಯ ಪೇಟೆಗೆ ಅಜಮಾಸು 8-10 ಕಿಮಿ ದೂರವಿದೆ. ರಾತ್ರಿ ಯಾವುದೇ ವಾಹನ ಸಂಚಾರ ಇರುವುದಿಲ್ಲ. ಯಾವುದಾದರೂ ಹೊಟೆಲಿಗೋ, ಲಾಡ್ಜಿಗೋ ಹೋಗಿ ಉಳಿಯೋಣ ಎಂದರೆ ಅದು ಸಾಧ್ಯವಿಲ್ಲದ ಮಾತು ಬಿಡಿ. ಕೊನೆಗೊಮ್ಮೆ ಅಲ್ಲಿಯೇ ಬಿಸ್ಸಿ ಬಿಸಿ ಕಾಫಿ ಕುಡಿದೆವು. ರೈಲ್ವೆ ನಿಲ್ದಾಣದಲ್ಲಿಯೇ ಮಲಗಿ ನಿದ್ರಿಸೋಣ ಎಂದುಕೊಂಡೆವು. ಪ್ರಶಾಂತ ಭಾವ ನಿಲ್ದಾಣದಲ್ಲಿಯೇ ಇದ್ದ ಪೊಲೀಸರ ಬಳಿ ಮಾತನಾಡಲು ಆರಂಭಿಸಿದ. ಪೊಲೀಸರು ಹೇಳಿದ ಪ್ರಕಾರ ಸಜ್ಜನಘಡ ಸತಾರಾದಿಂದ 18 ಕಿಮಿ ದೂರದಲ್ಲಿತ್ತು. ದಿನಕ್ಕೆ 3 ಬಸ್ಸುಗಳು ಹೋಗುತ್ತಿದ್ದವು. ಯಾವುದಾದರೂ ವಾಹನ ಮಾಡಿಕೊಂಡು ಹೋಗಬೇಕಿತ್ತು. ಅಲ್ಲದೇ ಸತಾರಾ ರೈಲ್ವೆ ನಿಲ್ದಾಣದಿಂದ ಸತಾರಾ ನಗರಕ್ಕೆ ಹೋಗಲು ಬೆಳಗಿನವರೆಗೆ ಯಾವುದೇ ವಾಹನ ಸೌಲಭ್ಯ ಇಲ್ಲ ಹಾಗೂ ರಾತ್ರಿ ಜಪ್ಪಯ್ಯ ಅಂದರೂ ಯಾವುದೇ ಹೊಟೆಲಿನವರು ಉಳಿಯಲು ರೂಮು ಕೊಡುವುದಿಲ್ಲ. ಆದ್ದರಿಂದ ರೈಲ್ವೆ ನಿಲ್ದಾಣದಲ್ಲಿಯೇ ಮಲಗಿಕೊಳ್ಳಿ ಎಂದರು.
          ನಿಲ್ದಾಣದಲ್ಲಿದ್ದ ಎರಡು ಸೀಟಿನ ಮೇಲೆ ನಾನು, ಸಂಜಯ ಹಾಗೂ ಪ್ರಶಾಂತ ಭಾವ ಅಡ್ಡಾದೆವು. ಪಕ್ಕದಲ್ಲಿಯೇ ದೊಡ್ಡದೊಂದು ಮರವಿತ್ತು. ಅದರ ತುಂಬಾ ಹಕ್ಕಿಗಳಿದ್ದವು. ರಪ್ಪನೆ, ಪಿಚ್ಚನೆ ಹಿಕ್ಕೆಯನ್ನು ಹಾಕುತ್ತಿದ್ದವು. ಅದು ನಮ್ಮ ಮುಖ ಹಾಗೂ ಮೈಮೇಲೆ ಬೀಳುತ್ತಿತ್ತು. ಅದನ್ನು ತಪ್ಪಿಸಿಕೊಳ್ಳಬೇಕು ಎಂದು ಮುಖಕ್ಕೆ ಟವೆಲ್ ಹೊದ್ದುಕೊಂಡು ಮಲಗಿದೆವು. ಸ್ವಲ್ಪ ಸಮಯದಲ್ಲಿ ಅಲ್ಲಿಯೇ ಇದ್ದ ಪೊಲೀಸರು ಮತ್ತೆ ನಮ್ಮನ್ನು ಎಬ್ಬಿಸಿದರು. ಎಬ್ಬಿಸಿದವರೇ ಪಕ್ಕದಲ್ಲಿದ್ದ ಪ್ರವಾಸಿ ಬಂಗಲೆ ತೋರಿಸಿ ಅಲ್ಲಿ ಹೋಗಿ ಮಲಗಿಕೊಳ್ಳಿ, ಯಾವುದೇ ತೊಂದರೆ ಇಲ್ಲ ಎಂದರು.
            ಪ್ರವಾಸಿ ಬಂಗಲೆಯೆಂದರೆ ಮಲಗಲಿಕ್ಕೆ ಬಹಳ ಅವಕಾಶ ಇರುತ್ತದಲ್ಲ ಎಂದುಕೊಂಡು ಖುಷಿಯಿಂದ ಹೋದವರಿಗೆ ನಿರಾಸೆ ಕಾದಿತ್ತು. ಅಲ್ಲೇನಿದೆ ಮಣ್ಣು. ದೊಡ್ಡದೊಂದು ರೂಮು ಬಿಟ್ಟರೆ ಇನ್ನೇನೋ ಇಲ್ಲ. ಪಕ್ಕದಲ್ಲಿ ಎರಡು ಬಾಂಕುಗಳಿದ್ದವು. ಬಾಂಕಿನ ಮೇಲಿನ ಭಾಗದಲ್ಲಿ ಪ್ರಶಾಂತ, ಮಧ್ಯ ಭಾಗದಲ್ಲಿ ಸಂಜಯ ಹಾಗೂ ಕೆಳಭಾಗದಲ್ಲಿ ನಾನು ಮಲಗುವುದೆಂದು ತೀರ್ಮಾನವಾಯಿತು. ಆಗಲೇ 1.30 ದಾಟಿ 2 ಗಂಟೆಯತ್ತ ಗಡಿಯಾರ ಚಲಿಸುತ್ತಿತ್ತು. ಸೊಳ್ಳೆ ಕಾಟ ಬೇರೆ. ಬಾಂಕಿನ ಮೇಲೆ ಬಿದ್ದುಕೊಂಡೆವು. ಪ್ರಶಾಂತ ಭಾವ ಹಾಗೂ ಸಂಜಯನಿಗೆ ನಿದ್ದೆ ಬಂದಿತ್ತೇನೋ. ನನಗೆ ಮಾತ್ರ ಏನು ಮಾಡಿದರೂ ನಿದ್ದೆ ಹತ್ತಿರ ಸುಳಿಯುತ್ತಿಲ್ಲ. ಬಾಂಕಿನ ಮೇಲೆ ಹೊರಳಾಡಿದೆ. ಸೊಳ್ಳೆಗಳು ಕೂಡ ಮೈಮೇಲೆ ದಾಳಿ ಮಾಡುತ್ತಿದ್ದೆವು.ಸ್ವಲ್ಪ ನಿದ್ದೆ ಜೊಂಪು ಬಂದಂತಾಗಿತ್ತು. ಪ್ರಶಾಂತಭಾವ ಎಬ್ಬಿಸಿದ್ದ. 4.30 ಆಗುತ್ತಿತ್ತು. ಮುಖ ತೊಳೆದ ಶಾಸ್ತ್ರ ಮಾಡಿದವರೇ ಸತಾರಾ ಬಸ್ ನಿಲ್ದಾಣಕ್ಕೆ ಹೋಗಬೇಕು ಎಂದುಕೊಂಡೆವು.
          5 ಗಂಟೆಯಿಂದ ವಾಹನ ಓಡಾಡಲು ಆರಂಭವಾಗುತ್ತದೆ ಎಂದು ಪೊಲೀಸ ಹೇಳಿದ್ದ ನೆನಪು. ರೈಲ್ವೆ ನಿಲ್ದಾಣದಿಂದ ಹೊರಗೆ ಬಂದು ನೋಡಿದರೆ ಯಾವ ದಿಕ್ಕಿನಲ್ಲಿ ಸಾಗಬೇಕು ಎನ್ನುವುದರ ಕುರಿತು ಅಂತ-ಪಾರವೇ ಹರಿಯುತ್ತಿಲ್ಲ. ಕತ್ತಲೆಯಲ್ಲಿ ಒಂದು ದಾರಿಯಲ್ಲಿ ಹೋದೆವು. ಯಾಕೋ ಆ ದಾರಿ ಸರಿಯಲ್ಲ ಎನ್ನಿಸಿತು. ಮತ್ತೊಂದು ದಾರಿಯನ್ನು ಹಿಡಿದೆವು. ಆ ದಾರಿಯೂ ತಪ್ಪು ಎಂದೆನ್ನಿಸಿ ವಾಪಾಸು ಬಂದೆವು. ಕೊನೆಗೊಮ್ಮೆ ನಾನು ಮತ್ತೆ ಜಿಪಿಎಸ್ ಹಾಕಿ ನೋಡಿ ನಾವು ಹೋಗಬೇಕಿದ್ದ ದಾರಿಯನ್ನು ಹುಡುಕಿದೆ. ಮೂರ್ನಾಲ್ಕು ದಾರಿ ಕಾಣಿಸಿತು. ಮತ್ತೆ ಗೊಂದಲ. ಕೊನೆಗೆ ಯಾವುದೋ ಒಂದು ದಾರಿ ಕಾಣಿಸಿ, ಏನಾದರಾಗಲಿ ಇದರಲ್ಲಿಯೇ ಹೋಗೋಣ ಎಂದುಕೊಂಡು ಹೊರಟೆವು.
           1 ಕಿಮಿ ನಡೆದ ನಂತರ ನಮಗೆ ಸತಾರಾ-ಫಂಡರಾಪುರ ಹೈವೆ ಸಿಕ್ಕಿತು. ಎಲ್ಲಾದರೂ ಬಸ್ ನಿಲ್ದಾಣವನ್ನು ಹುಡುಕೋಣ ಎಂದುಕೊಂಡವರಿಗೆ ಪಕ್ಕದಲ್ಲಿಯೇ ಇದ್ದ ಬಸ್ ನಿಲ್ದಾಣ ಕಾಣಿಸಿತು. ಅಲ್ಲಿಗೆ ಹೋದರೆ ಆರೆಂಟು ಜನ ಆಗಲೇ ಸೇರಿದ್ದರು. ಒಂದೆರಡು ಆಟೋಗಳು ಹಾದು ಹೋದವು. ನಿಲ್ಲಿಸಲಿಲ್ಲ. ಕೊನೆಗೊಂದು ಆಟೋ ಬಂದಿತು. ಬರುವಾಗಲೇ ಅರ್ಧ ತುಂಬಿದ್ದ ಆಟೋದ ಬಳಿ ನಾವು ಹೋದೆವು. ನಿಲ್ಲಿಸಿದ ಪುಣ್ಯಾತ್ಮ, ನಾವು ಮೂವರು ಬರುತ್ತೇವೆ ಎಂದೆವು. ಜಾಗ ಸಾಲುತ್ತಿಲ್ಲ ಎನ್ನಿಸಿತು. ಕೊನೆಗೆ ಹೇಗು ಹೇಗೋ ಗುದ್ಯಾಡಿ ಆಟೋ ಹತ್ತಿದ್ದಾಯಿತು. ಓಲಾಡುತ್ತ ಸತಾರಾ ನಗರಿಯತ್ತ ಆಟೋ ಸಾಗಿತು.

(ಮುಂದುವರಿಯುತ್ತದೆ)

ನಾವು ಹವ್ಯಕರು-4

ನಾವು ಹವ್ಯಕರು ನಾವು ಹವ್ಯಕರು
ಪ್ರೀತಿಯ ಕರು..||
ಆಕಳು ಸಾಕಿ, ಅಡಿಕೆಯ ಬೆಳೆದು
ದುಡಿಯುವವರು ನಾವು ಹವ್ಯಕರು ||

ಯಾಲಕ್ಕಿ, ವೆನಿಲ್ಲಾ, ಕಾಳುಮೆಣಸು ಎಲ್ಲಾ
ಬಾಳೆಯ ಜೊತೆಗೆ ತೆಂಗಿನ ಬೆಳೆ
ಅಡಿಕೆ, ಕೊಕ್ಕೋ, ಭತ್ತದ ಗದ್ದೆಯ
ನಾವು ಹವ್ಯಕರು ||

ಉತ್ತರಕ್ಕೆ ಸ್ವರ್ಣವಲ್ಲಿ,
ದಕ್ಷಿಣಕ್ಕೆ ರಾಮಚಂದ್ರಾಪುರ
ಮಧ್ಯದಲ್ಲೊಂದು ನೆಲೆಮಾವು
ನಾವು ಹವ್ಯಕರು ||

ಹಬ್ಬ ಹರಿದಿನಗಳಲ್ಲಿ ನಗು
ಸೊಸೈಟಿ ಸಾಲದಲ್ಲಿ ಬಿಗು
ದಿನಂಪ್ರತಿ ನಗ್ತಾ ಇರುವ
ನಾವು ಹವ್ಯಕರು ||

ಓದಿನಲ್ಲಿ ಜೋರು, ಭಟ್ಟತನಿಕೆಯಲ್ಲಿ ಮುಂದು
ಸಾಪ್ಟ್ ವೇರ್ ಉದ್ಯೋಗದ ಜೊತೆ ಅರ್ಚಕರು
ಎಲ್ಲೆಲ್ಲು ಹವ್ಯಕರು
ನಾವು ಪ್ರೀತಿಯ ಕರು ||

-----

(ಈ ಹವಿಗವಿತೆ ಬರೆದಿದ್ದು 21-10-2015ರಂದು ಶಿರಸಿಯಲ್ಲಿ)
(ನಾವು ಹವ್ಯಕರು ಸರಣಿಯ 4ನೇ ಕವಿತೆ ಇದು. ಈ ಹಿಂದೆ ಬರೆದಿದ್ದ ಮೂರು ಕವಿತೆಗಳೂ ಬಹಳ ಚನ್ನಾಗಿದೆ ಎಂದು ಪ್ರತಿಯೊಬ್ಬರೂ ಹೇಳಿ, ಆದರಿಸಿದ್ದರಿಂದ ಖುಷಿಯಾಗಿ ನಾಲ್ಕನೆ ಕವಿತೆ ಬರೆದಿದ್ದೇನೆ ಎಂದರೆ ತಪ್ಪಾಗಲಿಕ್ಕಿಲ್ಲ. ಇದೂ ಕೂಡ ಟಪ್ಪಾಂಗುಚ್ಚಿ. ಸುಮ್ನೆ ತಮಾಷೆಗೆ ಬರೆದಿದ್ದಾದರೂ ಹೇಳಿರುವ ವಿಷಯ ಕಟು ವಾಸ್ತವ. ಓದಿ, ಖುಷಿಪಡಿ)

Tuesday, October 20, 2015

ಸಜ್ಜನರೊಡನೆ... ಸಜ್ಜನಗಡದ ಕಡೆಗೆ - 1

ಮೊದಲೇ ಒಂದೆರಡು ಮಾತು :
ಪ್ರವಾಸ ಕಥನ ಬರೆಯುವುದು ಅಂದರೆ ನನಗೆ ಬಹಳ ಅಚ್ಚುಮೆಚ್ಚು. ಬಹಳ ದಿನಗಳ ಹಿಂದೆ ಹಲವು ಪ್ರವಾಸ ಕಥನಗಳನ್ನು ಬರೆದಿದ್ದೆ. ಆಮೇಲೆ ಅದೆಷ್ಟೋ ನೂರಾರು ಪಯಣಗಳು, ಟ್ರೆಕ್ಕಿಂಗುಗಳನ್ನು ಮಾಡಿದ್ದರೂ ಬರೆಯಲು ಸಾಧ್ಯವಾಗಿರಲಿಲ್ಲ. ಕೆಲವು ತಿಂಗಳುಗಳ ಹಿಂದೆ ಮಿತ್ರರ ಜೊತೆ ಸಜ್ಜನಘಡಕ್ಕೆ ಹೋಗಿದ್ದೆ. ಬಹಳ ದಿನಗಳ ಆಸೆ. ಅವುಗಳ ಬಗ್ಗೆ ಇಲ್ಲಿ ಬರೆದಿದ್ದೇನೆ. 

****

            ಸಜ್ಜನಘಡಕ್ಕೆ ಒಂದ್ ಸಾರಿ ಹೋಗ್ ಬರವು.. ಇಂತದ್ದೊಂದು ಆಲೋಚನೆ ನನ್ನಲ್ಲಿ ಮೂಡಲು ಪ್ರಮುಖ ಕಾರಣ ಎಂದರೆ ದೊಡ್ಡಮ್ಮನ ಮಗ ಗಿರೀಶ ಕಲ್ಲಾರೆ. ಮೂರ್ನಾಲ್ಕು ವರ್ಷಗಳ ಹಿಂದೆ ಅಕ್ಟೋಬರ್ ರಜೆಯ ಸಂದರ್ಭದಲ್ಲಿ ಆತ ನನ್ನ ಬಳಿ ಸಜ್ಜನಘಡಕ್ಕೆ ಹೋಗಿ ಬರೋಣ್ವಾ ಎಂದು ಕೇಳಿದ್ದ. ಆದರೆ ಅದೇನು ಕಾರಣವೋ, ನಮಗೆ ಅದು ಸಾಧ್ಯವಾಗಿರಲಿಲ್ಲ. ಪಾಪ ಗಿರೀಶಣ್ಣ ನನ್ನ ಬಳಿ ಪ್ರತಿ ವರ್ಷ ಹೋಗೋಣ್ವಾ ಎಂದು ಕೇಳುತ್ತಲೇ ಇದ್ದ. ನಾನೂ ಒಪ್ಪಿಕೊಳ್ಳುತ್ತಿದ್ದೆ. ಆದರೆ ತದನಂತರ ಅದೇನು ನೆಪವೋ ನಮಗೆ ಹೋಗಲಾಗುತ್ತಿರಲಿಲ್ಲ.
          ಈ ಸಜ್ಜನಘಡದ ವಿಷಯವನ್ನು ಮಾವನ ಮಗ ಪ್ರಶಾಂತನ ಬಳಿ ಗಿರೀಶ ಹೇಳಿದ್ದ. ನಂತರದ ದಿನಗಳಲ್ಲಿ ನಾನೂ ಅಲ್ಲಿಗೆ ಹೋಗಿ ಬರೋಣ ಎಂದು ಮಾತನಾಡಿದ್ದೆ. ಆತನೂ ಒಪ್ಪಿಕೊಂಡಿದ್ದ. ಇದೂ ಕೂಡ ಒಂದೆರಡು ವರ್ಷಗಳ ಹಿಂದಿನ ಮಾತು. ಆಮೇಲೆ ನಮಗೆ ಸಜ್ಜನಘಡಕ್ಕೆ ಹೋಗಿ ಬರಬೇಕೆಂಬ ಬಯಕೆ ಪದೇ ಪದೆ ಮನಸ್ಸಿನಲ್ಲಿ ಮೂಡುತ್ತಲೇ ಇತ್ತು. ಹೋಗಿದ್ದಾಗ ಕಳೆದ ಒಂದೂವರೆ ತಿಂಗಳಿನ ಹಿಂದೆ ಪ್ರಶಾಂತ ಭಾವ ಇದ್ದಕ್ಕಿದ್ದಂತೆ ಪೋನ್ ಮಾಡಿ, `ವಿನಯಾ.. ಸಜ್ಜನಘಡಕ್ಕೆ ಹೋಗಿ ಬಪ್ಪನಾ. ಬತ್ಯನಾ?' ಎಂದ. ನಾನು ಹೂ ಅಂದೆ. 
          ಮನಸ್ಸಿನಲ್ಲಿ ಈ ಸಾರಿಯೂ ಅಲ್ಲಿಗೆ ಹೋಗುವುದರ ಬಗ್ಗೆ ಸಂದೇಹಗಳಿದ್ದವು. ಆದರೆ ಪ್ರಶಾಂತ ಭಾವನ ಜೊತೆ ನಾನು ಹೊರಟರೆ ಏನಾದರೂ ಮಾಡಿ ಬಿಡುತ್ತೇವೆ ಎನ್ನುವ ಆಲೋಚನೆಯೂ ಬಂದಿತು. ಈ ಹಿಂದೊಮ್ಮೆ ತಿರುಪತಿಗೆ ನಾವಿಬ್ಬರೇ ಹೋಗಿದ್ದೆವು. ಮದ್ಯಾಹ್ನ ಹುಬ್ಬಳ್ಳಿಗೆ ಹೋಗಿ, ಹರಿಪ್ರಿಯಾ ಎಕ್ಸ್ ಪ್ರೆಸ್ ಹತ್ತಿ, ಮರುದಿನ 11 ಗಂಟೆಯ ವೇಳೆಗೆ 45 ರು. ವೆಚ್ಚದಲ್ಲಿ ತಿರುಪತಿ ಮುಟ್ಟಿದ್ದ ನಾವು ಸಂಜೆಯ ಒಳಗೆ ತಿರುಪತಿ ದೇವರ ದರ್ಶನ ಮಾಡಿದ್ದೆವು. ನಂತರ ಸಂಜೆ ತಿರುಪತಿ-ಮೈಸೂರು ರೈಲು ಹತ್ತಿ, ಬೆಂಗಳೂರಿಗೆ ಮರುದಿನ ಬೆಳಿಗ್ಗೆ ವೇಳೆಗೆ ಬಂದಿಳಿದಿದ್ದೆವು. ಅಲ್ಲಿಂದ ಯಲ್ಲಾಪುರ ಬಸ್ಸನ್ನು ಹತ್ತಿ  ಎರಡು ದಿನಗಳ ಒಳಗಾಗಿ ವಾಪಸಾಗಿದ್ದೆವು.
               ವಿಚಿತ್ರವೆಂದರೆ 2008ರ ಸಂದರ್ಭ ಅದು, ನನಗಿನ್ನೂ ಉದ್ಯೋಗ ಸಿಕ್ಕಿರಲಿಲ್ಲ. ನನ್ನ ಬಳಿ ನಯಾಪೈಸೆ ದುಡ್ಡಿರಲಿಲ್ಲ. ಮನೆಯಲ್ಲಿಯೂ ಬಹಳ ಕಷ್ಟದ ದಿನಗಳು ಅವು. ಅಮ್ಮನ ಬಳಿ ತಿರುಪತಿ ಟ್ರಿಪ್ಪಿನ ವಿಷಯ ಹೇಳಿದಾಗ ಅಲ್ಲಿ ಇಲ್ಲಿ ಹುಡುಕಿ 150 ರು. ಕೊಟ್ಟಿದ್ದರು. ಅದರಲ್ಲಿ ಹುಬ್ಬಳ್ಳಿ ಬಸ್ಸಿನಲ್ಲಿ ಟಿಕೆಟ್ ಕೊಂಡು ಹೋಗಿದ್ದಾಗ ಟಿಕೆಟ್ ಕಳೆದು ಹೋಗಿ ಗಲಾಟೆ ಆಗಿತ್ತು. ಕೊನೆಗೆ ದಮ್ಮಯ್ಯ ದಾತಾರಾ ಎಂದು ಹೇಳಿ ಹುಬ್ಬಳ್ಳಿ ತಲುಪಿದ್ದೆ. ನಂತರ ಪ್ರಶಾಂತ ಭಾವನೇ ನನ್ನೆಲ್ಲ ಖರ್ಚುಗಳನ್ನು ಹಾಕಿಕೊಂಡು ತಿರುಪತಿ ದರ್ಶನ ಮಾಡಿಸಿದ್ದ.
              ಸಜ್ಜನಘಡಕ್ಕೆ ಹೋಗೋಣ ಎಂದು ಹೇಳಿದಾಗಲೂ ನನ್ನ ಪರಿಸ್ತಿತಿ ಇದಕ್ಕಿಂತ ಭಿನ್ನವಾಗಿರಲಿಲ್ಲ. ಹೆಸರಿಗೆ ನಾನು ಕನ್ನಡಪ್ರಭದಲ್ಲಿ ವರದಿಗಾರನಾಗಿ ಕೆಲಸ ಮಾಡುತ್ತಿದ್ದೆ. ಆದರೆ ಕಳೆದ 6 ತಿಂಗಳಿನಿಂದ ಸಂಬಳ ಕೊಟ್ಟಿರಲಿಲ್ಲ. ಕೇಳಿದರೆ ಇವತ್ತು, ನಾಳೆ ಎಂದು ಸಬೂಬು ಹೇಳುತ್ತಿದ್ದರು. ಕನ್ನಡಪ್ರಭಕ್ಕೆ, ಅದರ ಮ್ಯಾನೇಜ್ ಮೆಂಟಿಗೆ ಪ್ರತಿದಿನ ಹಿಡಿಶಾಪ ಹಾಕುತ್ತಿದ್ದೆ. ಆ ಸಂದರ್ಭದಲ್ಲಿ ಪ್ರಶಾಂತ ಭಾವ ಪೋನ್ ಮಾಡಿ ಸಜ್ಜನಘಡಕ್ಕೆ ಹೋಗುವ ಬಗ್ಗೆ ತಿಳಿಸಿದ್ದ. ನಾನು ಒಪ್ಪಿಕೊಂಡ ಮೇಲೆ ಆತನ ಬಳಿ ಕನ್ನಡಪ್ರಭದವರು ದುಡ್ಡು ಕೊಟ್ಟಿಲ್ಲ. ನನ್ನ ಖರ್ಚನ್ನು ನೀನೇ ನೋಡಿಕೊಳ್ಳಬೇಕು ಎಂದು ಹೇಳಿದ್ದೆ. ಆತ ಒಪ್ಪಿಕೊಂಡಿದ್ದ.
             `ನಮ್ ಜೊತೆ ಇನ್ಯಾರಾದರೂ ಬರ್ತಿ ಅಂದ್ರೆ ಅವ್ಕೆಲ್ಲಾ ಹೇಳಲಕ್ಕನೋ..' ಎಂದು ಪ್ರಶಾಂತ ಭಾವನ ಬಳಿ ಕೇಳಿದ್ದೆ. `ಹೇಳು ಮಾರಾಯಾ.. ತೊಂದರೆ ಇಲ್ಲ..' ಎಂದಿದ್ದ. ನಾನು ನನ್ನ ತಂಗಿ ಸುಪರ್ಣ ಹಾಗೂ ಭಾವ ನಾಗರಾಜನ ಬಳಿ ಹೇಳಿದ್ದೆ. ಮೊದ ಮೊದಲು ಅವರು ಒಪ್ಪಿಕೊಂಡಿದ್ದರು. ಆದರೆ ಅವರಿಗೂ ಕನ್ನಡಪ್ರಭದ ಸಂಬಳ ಬಂದಿರಲಿಲ್ಲ. ಹಾಗಾಗಿ ಕೊನೆಯ ಕ್ಷಣದಲ್ಲಿ ಪ್ರವಾಸ ರದ್ದು ಮಾಡಿದರು. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ದೋಸ್ತ ನಾಗರಾಜ ವೈದ್ಯನ ಬಳಿ  ಪ್ರಶಾಂತ ಭಾವ ಕೇಳಿದ್ದನಂತೆ. ಆತನೂ ಬರಲಿಕ್ಕಾಗುವುದಿಲ್ಲ ಎಂದಿದ್ದ. ಕೊನೆಗೆ ದೊಡ್ಡಮ್ಮನ ಮಗ ಗುರುವಿನ ಬಳಿ ಹೇಳಲಾಯಿತು. ಮೊದ ಮೊದಲು ಬರಲು ಒಪ್ಪಿದ್ದ ಗುರು ನಂತರದ ದಿನಗಳಲ್ಲಿ ಬರಲಿಕ್ಕಾಗುವುದಿಲ್ಲ ಎಂದ. ಗಿರೀಶನೂ ಆಗುವುದಿಲ್ಲ ಎಂದ. ಕೊನೆಗೆ ಮಿತ್ರ ಸಂಜಯ ಭಟ್ಟ ಬೆಣ್ಣೆ ನೆನಪಾದ. ಆತನಿಗೆ ಹೊರಡಲು ಎರಡು ದಿನ ಇದ್ದಾಗ ಪೋನ್ ಮಾಡಿದೆ. `ದೋಸ್ತಾ, ತಿರುಗಾಟ ಎಲ್ಲೇ ಇರ್ಲಿ. ಹೇಳಾ ನೀನು. ಆನು ಬತ್ತಿ..' ಎಂದವನೇ ತಯಾರಾಗಿದ್ದ.
           ನಂತರದ ದಿನಗಳಲ್ಲಿ ಹೋಗುವ ತಯಾರಿ ಸ್ವಲ್ಪ ಭರದಿಂದ ನಡೆಯಿತು. ಜುಲೈ 11 ಹಾಗೂ 12ರಂದು ಸಜ್ಜನಘಡಕ್ಕೆ ಹೋಗುವುದು ನಿಕ್ಕಿಯಾಗಿತ್ತು. ಹೋಗುವ ಮೊದಲು ನಾನು ಹಾಗೂ ಪ್ರಶಾಂತ ಭಾವ ಹೆಗೆ ಹೋಗೋದು ಎನ್ನುವ ಬಗ್ಗೆ ಬಹಳ ಮಾತನಾಡಿಕೊಂಡಿದ್ದೆವು. ನಾನೂ ನನ್ನ ಮೊಬೈಲಿನಲ್ಲಿ ರೂಟ್ ಮ್ಯಾಪ್ ನೋಡಿಕೊಂಡಿದ್ದೆ. ರೈಲಿನಲ್ಲಿ ಹೋಗುವುದು ಚೀಪ್ ಎಂಡ್ ಬೆಸ್ಟ್ ಎಂಬ ನಿರ್ಧಾರಕ್ಕೆ ಬಂದಿದ್ದೆವು. ಶಿರಸಿಯಿಂದ ಸಜಮಾಸು 500 ಕಿಮಿ ದೂರದಲ್ಲಿರುವ ಸಜ್ಜನ ಘಡಕ್ಕೆ ಹೋಗುವ ಮೊದಲು ಸತಾರಾ ವರೆಗೆ ಹುಬ್ಬಳ್ಳಿಯಿಂದ ರೈಲಿನಲ್ಲಿ ಹೋಗುವುದು ಎನ್ನುವ ತೀರ್ಮಾನಕ್ಕೆ ನಾವು ಬಂದೆವು. ಆದರೆ ನಮಗೆ ರೈಲು ಟಿಕೆಟ್ ಸಿಕಬೇಕಲ್ಲ ಮಾರಾಯ್ರೆ. ಹುಬ್ಬಳ್ಳಿಯಲ್ಲಿ ಮದ್ಯಾಹ್ನ 3.30ಕ್ಕೆ ಹೊರಡುವ ರೈಲು ಮಧ್ಯರಾತ್ರಿ 12 ಗಂಟೆಗೆ ಸತಾರಾಕ್ಕೆ ತಲುಪುತ್ತದೆ. ಅಲ್ಲಿಂದ ಸಜ್ಜನಘಡಕ್ಕೆ ಹೋಗುವುದೆಂದರೆ ರಾತ್ರಿಯ ವೇಳೆ ಅಸಾಧ್ಯದ ಮಾತು. ಮೊದಲು ಸತಾರಾ ತನಕ ಹೋಗೋಣ ಆಮೇಲೆ ಮುಂದಿನದ್ದನ್ನು ನೋಡೋಣ ಎಂದುಕೊಂಡೆವು.
          ನಾನು ಯಾವುದಕ್ಕೂ ಇರಲಿ ಎಂದು ನನ್ನ ಸೀನಿಯರ್ ಆಗಿ ಕೆಲಸ ಮಾಡುತ್ತಿದ್ದ ಹುಬ್ಬಳ್ಳಿಯ ಮಹಾದೇವ ಸರ್ ಅವರ ಬಳಿ ಸಜ್ಜನಘಡದ ವಿಷಯವನ್ನು ಹೇಳಿದ್ದೆ.  `ನೀವ್ ಯಾಕ್ರೀ ತಲೆ ಕೆಡಿಸ್ಕಳ್ತೀರಿ. ಬರ್ರೀ ಸುಮ್ನೆ. ಟಿಕೆಟ್ ವಿಷ್ಯ ನಂಗ್ ಬಿಡ್ರಿ..' ಎಂದು ಹೇಳಿದ್ದರು. `ಬರುವಾಗ ನಿಮ್ಮ ಐಡೆಂಟಿಟಿ ಕಾರ್ಡ್ ತರೋದನ್ನ ಮರೀಬ್ಯಾಡ್ರೀ..' ಎಂದೂ ತಿಳಿಸಿದ್ದರು. ನಾನು `ಬೇಡ ಬಿಡ್ರೀ...' ಎಂದು ಹೇಳುತ್ತಿದ್ದರೂ ಅವರು ಪೋನ್ ಇಟ್ಟಿದ್ದರು.
           ಜುಲೈ 11ರಂದು ಮುಂಜಾನೆ ನನಗೆ ಅನೇಕ ಕೆಲಸಗಳಿದ್ದವು. ಮದ್ಯಾಹ್ನ 2 ಗಂಟೆ ಒಳಗೆ ಹುಬ್ಬಳ್ಳಿಯನ್ನು ತಲುಪಿ ಅಲ್ಲಿ ಊಟ ಮುಗಿಸಿ ರೈಲು ಹತ್ತಬೇಕಿತ್ತು. ಮುಂಜಾನೆಯೇ ಸ್ನಾನ ಮುಗಿಸಿ ತಯಾರಾಗಿದ್ದೆ. ಅಷ್ಟರಲ್ಲಿ ಸಂಜಯ ಪೋನ್ ಮಾಡಿ `ಆನು ಬರ್ತಾ ಇದ್ದಿ.. ಬೈಕ್ ಎಲ್ಲಿಡವೋ..' ಎಂದಿದ್ದ. ಆತನನ್ನು ಶಿರಸಿಯ ತಂಗಿಯ ಮನೆಗೆ ಕರೆಸಿಕೊಂಡು ಆತನ ಬೈಕ್ ಇರಿಸಿ, ತಿಂಡಿ ತಿನ್ನುವ ಶಾಸ್ತ್ರ ಮುಗಿಸಿ ಶಿರಸಿ ಬಸ್ ನಿಲ್ದಾಣದ ಕಡೆ ಹೊರಡುವ ವೇಳೆಗೆ 12 ಗಂಟೆಯಾಗುತ್ತಿತ್ತು. ಅದೇನೋ ಮರೆತೆವು ಎಂದು ಮತ್ತೆ ರೂಮಿಗೆ ವಾಪಾಸಾಗಿ ಮರಳಿ ಬಸ್ ಹತ್ತುವ ವೇಳೆಗೆ ಆಗಲೇ 12.15.
            ಬೆಳಿಗ್ಗೆಯೇ ಹೆಗ್ಗಾರಿನಿಮದ ಹೊರಟಿದ್ದ ಪ್ರಶಾಂತ ಭಾವ ಹುಬ್ಬಳ್ಳಿಯನ್ನು ತಲುಪಿ ಪೋನ್ ಮೇಲೆ ಪೋನ್ ಮಾಡುತ್ತಿದ್ದ. `ಥೋ.. ಇನ್ನೂ ಬಂಜ್ರಿಲ್ಯನಾ ಮಾರಾಯಾ.. ಟೈಮ್ ಆಗೋತು. ಬಡಾ ಬಡಾ ಬನ್ನಿ ನೋಡ್ವಾ.. ರೈಲು ತಪ್ಪಿ ಹೋದ್ರೆ ನಮ್ ಕಥೆ ಅಷ್ಟೇಯಾ..' ಎಂದು ಹೇಳುತ್ತಿದ್ದ. ಅವನಿಗೆ ಏನೇನೋ ಸಬೂಬು ಹೇಳಿದ್ದಾಯಿತು.
           ನಾವು ಹತ್ತಿದ್ದ ಬಸ್ ವೇಗವಾಗಿಯಾದರೂ ಸಾಗುತ್ತದೆಯೇ ಇಲ್ಲ. ಕುಯ್ಯೋ.. ಮರ್ರೋ.. ಎಂದು ನಿಧಾನವಾಗಿ ಸಾಗುತ್ತಿತ್ತು. ನಾವು ದಾರಿಯನ್ನು ಸವೆಸಬೇಕಾದರೆ ಬೇಸರ ಆಗದಿರಲಿ ಎಂದು ಸುದ್ದಿ ಹೇಳಿದೆವು. ಮುಂಡಗೋಡಿನಲ್ಲಿ ಜೋಳವನ್ನು ತಿಂದು ಹುಬ್ಬಳ್ಳಿಯನ್ನು ತಲುಪುವ ವೇಳೆಗೆ ಆಗಲೇ 2.45 ಆಗಿತ್ತು. ಟೈಮಿಲ್ಲ ಮಾರಾಯ್ರೇ ಎಂದುಕೊಂಡವರಿಗೆ ಮಾದೇವ ಸರ್ ಸಿಕ್ಕಿರಲಿಲ್ಲ. ಅವರು ಟಿಕೆಟ್ ಕೊಡುತ್ತೇನೆ ಸಿಗ್ರಿ ಎಂದು ಹೇಳಿದ್ದರು. ನಮಗೆ ಊಟವೂ ಆಗಿರಲಿಲ್ಲ. ಮಾದೇವ ಸರ್ ಪೋನ್ ಮಾಡಿ `ನೀವು ಊಟ ಮುಗಿಸಿ. ಅಷ್ಟರಲ್ಲಿ ನಾನು ನಿಮಗೆ ಸಿಗ್ತೀನಿ. ಟಿಕೆಟ್ ಕೊಡ್ತೀನಿ..' ಎಂದಿದ್ದರು. ಆಗಲೇ ಗಡಿಯಾರದಲ್ಲಿ ಮೂರು ಗಂಟೆ ತೋರಿಸುತ್ತಿತ್ತು. ಟೈಂ ಆಗ್ತಾ ಇದೆ ಬನ್ರೋ ಬೇಗ ಎಂದು ಪ್ರಶಾಂತ ಭಾವ ಊಟ ಮಾಡಲಿಕ್ಕೂ ಬಿಡದಂತೆ ನಿಮಿಷಕ್ಕೊಂದು ಪೋನ್ ಮಾಡುತ್ತಿದ್ದ.
          ಅಯೋಧ್ಯಾ ಹೊಟೆಲಿನಲ್ಲಿ ಊಟ ಮುಗಿಸುವ ವೇಳೆಗೆ ಸರಿಯಾಗಿ ಮಾದೇವ ಸರ್ ಬಂದಿದ್ದರು. ಟಿಕೆಟ್ ಕೊಟ್ಟರು. 3 ಬರ್ತ್ ಸೀಟುಗಳನ್ನು ಬುಕ್ಕಿಂಗ್ ಮಾಡಿಸಿದ್ದರು. 250*3 ರಂತೆ 750 ರು. ಆಗಿತ್ತು. ನಾವು ಟಿಕೆಟ್ ದುಡ್ಡು ಕೊಡಲು ನೋಡಿದರೆ ಮಾದೇವ ಸರ್ ಇಸ್ಕೊಳ್ಳಲಿಲ್ಲ. ಎಷ್ಟು ಒತ್ತಾಯ ಮಾಡಿದರೂ ಕೊನೆಗೂ ಇಸ್ಕೊಳ್ಳಲೇ ಇಲ್ಲ ಬಿಡಿ. ಆಗಲೇ 3.15 ಆಗಿತ್ತು. ಮತ್ತೊಮ್ಮೆ ಪೋನ್ ಮಾಡಿದ ಪ್ರಶಾಂತ ಭಾವ `ಯಾವ್ದೋ ರೈಲು ಹೊರಡ್ತಾ ಇದ್ದು. ಬೇಗ ಬರ್ರೋ..' ಎಂದು ಮತ್ತೊಮ್ಮೆ ಪೋನ್ ಮಾಡಿದ್ದ. ತಡಿಯಾ ಬತ್ತಾ ಇದ್ಯ ಎಂದು ಹೇಳಿ ಆಟೋವೊಂದನ್ನು ಹತ್ತಿ ರೈಲ್ವೆ ನಿಲ್ದಾಣದ ಬಳಿ ಬಳಿ ಬರುವಾಗಲೇ 3.25. ಇನ್ನೈದು ನಿಮಿಷದಲ್ಲಿ ನಿಲ್ದಾಣದ ಒಳಗೆ ಹೋಗಿ, ಪ್ರಶಾಂತ ಭಾವನನ್ನು ಹುಡುಕಿ, ಟ್ರೈನನ್ನು ಹಿಡಿಯಲು ಇನ್ನು ಕನಿಷ್ಟ 10 ನಿಮಿಷ ಬೇಕಾಗುತ್ತದೆ. ರೈಲು ತಪ್ಪೋದು ಗ್ಯಾರಂಟಿ ಎಂದುಕೊಂಡೆವು. ಓಡೋಡುತ್ತ ನಿಲ್ದಾಣದ ಒಳಗೆ ಹೋದರೆ ಪ್ರಶಾಂತ ಭಾವ ನಮಗಾಗಿ ಕಾಯುತ್ತ ನಿಂತಿದ್ದ.
           `ಬೇಗ್ನೆ ಬನ್ನಿ ಹೇಳಿದ್ದಿ. ನಿಂಗವ್ ಬಂಜ್ರಿಲ್ಲೆ. ಆನು ಬಂದು ಆಗ್ಲೆ 2-3 ತಾಸು ಆತು ನೋಡಿ..' ಎಂದ. ನಾನು ರೈಲು ಟಿಕೆಟ್ ತೋರಿಸಿದೆ. 3.45ಕ್ಕೆ ರೈಲಿನ ಸಮಯ ನಿಗದಿಯಾಗಿತ್ತು. ಒಮ್ಮೆ ನಿರಾಳರಾಗಿ ಪ್ಲಾಟ್ ಫಾರ್ಮನ್ನು ಹತ್ತಿ ರೈಲಿನ ಬಳಿಗೆ ಹೋದೆವು. ಸತಾರಾ, ಪುಣಾ ಮಾರ್ಗವಾಗಿ ಹೋಗಲು 3.30ಕ್ಕೆ ಒಂದು ಹಾಗೂ 3.45ಕ್ಕೆ ಇನ್ನೊಂದು ರೈಲುಗಳಿದ್ದವು. ಪ್ರಶಾಂತ ಭಾವ ನಾವು ಹೋಗಬೇಕಿದ್ದುದು 3.30ರ ರೈಲು ಇರಬೇಕು ಎಂದುಕೊಂಡು ಬಹಳ ಗಡಬಡೆ ಮಾಡಿದ್ದ. ನಾವು ಎದ್ದೋಬಿದ್ದೋ ಬಂದಿದ್ದೆವು. ಆದರೆ ನಾವು ಹೋಗಬೇಕಿದ್ದ 3.45ರ ಲೋಕಮಾನ್ಯ ತಿಲಕ್ ಎಕ್ಸ್ ಪ್ರೆಸ್ ನಮಗಾಗಿಯೇ ಕಾಯುತ್ತಿತ್ತು.
           ನಮಗೆ ಬುಕ್ ಆಗಿದ್ದ ಟಿಕೆಟಿನಲ್ಲಿ ನನಗೆ ಹಾಗೂ ಸಂಜಯನಿಗೆ 1 ಬೋಗಿಯಲ್ಲಿ 2 ಸೀಟ್ ಸಿಕ್ಕಿದ್ದರೆ ಪ್ರಶಾಂತ ಭಾವನಿಗೆ ಮಾತ್ರ ಇನ್ನೊಂದು ಬೋಗಿಯಲ್ಲಿ ಸೀಟ್ ಸಿಕ್ಕಿತ್ತು. ಟಿಸಿ ಬಂದು ಕೇಳಿದರೆ ಏನಾದರೂ ಸಬೂಬು ಹೇಳೋಣ ಎಂದುಕೊಂಡ ಕುಳಿತೆವು. ಅಷ್ಟರಲ್ಲಿ ಒಂದಿಷ್ಟು ತಿಂಡಿ ಸೇವನೆಯೂ ನಡೆಯಿತು. ರೈಲು ನಿಧಾನವಾಗಿ ಹೊರಡಲು ಅನುವಾಯಿತು. ಒಂದೆರಡು ಸಾರಿ ಕೂಗಿಕೊಂಡ ರೈಲು ನಿಧಾನವಾಗಿ ಮುನ್ನಡೆಯಿತು. ನಾಳೆ ಬೆಳಗಾದರೆ ಸಜ್ಜನಘಡ ಎಂಬ ಕನಸಿನೊಂದಿಗೆ ನಾವು ಹಿಗ್ಗಿದೆವು. ಟ್ರೈನಿನಲ್ಲಿ ಜನರೇ ಇರಲಿಲ್ಲ. ಮತ್ತೊಂದು 10 ನಿಮಿಷಕ್ಕೆ ಧಾರವಾಡ ರೈಲು ನಿಲ್ದಾಣ ಬಂದಿತು. ನಮ್ಮ ಕೈಗೆ ಮೊಬೈಲುಗಳು ಬಂದಿದ್ದವು. ಒಂದೆರಡು ಸೆಲ್ಫಿಗಳನ್ನು ಕ್ಲಿಕ್ಕಿಸಿಯೂ ಆಗಿತ್ತು. ಆಗಲೇ ಫೇಸ್ ಬುಕ್ಕಿಗೆ ಏರಿಸಿ ನಾಲ್ಕೈದು ಲೈಕುಗಳೂ ಬಂದಿದ್ದವು. ಖಾಲಿಯಿದ್ದ ರೈಲಿನಲ್ಲಿ, ನಿಂತು, ಕುಳಿತು, ಮಲಗಿ, ಬಾಗಿಲಿನಲ್ಲಿ ನಿಂತು ಈ ಮುಂತಾದ ಬಗೆಯಲ್ಲೆಲ್ಲ ಪೋಟೋಗಳನ್ನು ಕ್ಲಿಕ್ಕಿಸಿದ್ದಾಯಿತು. ಈ ನಡುವೆ ಎಂದೋ ಪರಿಚಯವಾಗಿ ಮರೆತು ಹೋಗವಂತಾಗಿದ್ದ ಪ್ರಶಾಂತ ಹಾಗೂ ಸಂಜಯರನ್ನು ಮತ್ತೊಮ್ಮೆ ಪರಿಚಯ ಮಾಡಿಕೊಟ್ಟು  ಮಾತಾಡ್ಕಳ್ಳಿ ಎಂದು ನಾನು ಸುಮ್ಮನಾಗಿದ್ದೆ. ಅಂತೂ ಇಂತೂ ಮೂವರೂ ಸಜ್ಜನಘಡದ ಕಡೆಗೆ ಹೊರಟಿದ್ದೆವು. ಮಹಾರಾಷ್ಟ್ರದ ಸತಾರಾ ಜಿಲ್ಲೆಯಲ್ಲಿದ್ದ ಸಮರ್ಥರಾಮದಾಸರ ಭೂಮಿ, ಶಿವಾಜಿಗೆ ಮಾರ್ಗ ತೋರಿದ ನಾಡು, ಸದ್ಗುರು ಶ್ರೀಧರ ಸ್ವಾಮೀಜಿಗಳು ತಪಸ್ಸನ್ನಾಚರಿಸಿದ ಮಹಿಮಾ ಸ್ಥಳದ ಕಡೆಗೆ ನಾವು ಹೊರಟಿದ್ದೆವು. ಸೂರ್ಯ ಪಶ್ಚಿಮದ ಕಡೆಗೆ ಮುಖ ಮಾಡಿದ್ದನಾದರೂ ತೇಜಸ್ಸು ಕಡಿಮೆಯಾಗಿರಲಿಲ್ಲ.

(ಮುಂದುವರಿಯುತ್ತದೆ)

Friday, October 9, 2015

ಮಾಸ್ತರ್ ಮಂದಿ-8

           ಕಾನ್ಲೆ ಹೈಸ್ಕೂಲಿನಲ್ಲಿ ಕಲಿಸಿದ ವಿನೋದಾ ನಾಯ್ಕ್ ಹಾಗೂ ಸುಜಾತಾ ಮೇಡಮ್ ಬಗ್ಗೆ ಬರೆಯಲೇಬೇಕು. ಇಬ್ಬರೂ ಅಷ್ಟೇನೂ ಸ್ಟ್ರಿಕ್ಟ್ ಇರಲಿಲ್ಲ ಬಿಡಿ. ಆದರೆ ಅವರ ವಿಶಿಷ್ಟ ಹಾವ ಭಾವದಿಂದಾಗಿ ನಮ್ಮಲ್ಲಿ ಅಚ್ಚಳಿಯದೇ ಉಳಿದು ಹೋಗಿದ್ದಾರೆ. ಸುಜಾತಾ ಮೇಡಮ್ ಹಿಂದಿ ಕಲಿಸುತ್ತಿದ್ದರು. ವಿನೋದಾ ನಾಯ್ಕ್ ಮೇಡಮ್ ಹೊಲಿಗೆ ಕಲಿಸಲು ಬರುತ್ತಿದ್ದರು. ಅವರ ಕ್ಲಾಸಿನಲ್ಲಿ ಕೂರುವುದು ಅಂದರೆ ಮಜವೇ ಮಜಾ ಬಿಡಿ

ವಿನೋದಾ ನಾಯ್ಕ್ :
            ವಿ.ಎಸ್.ಎನ್  ಎಂಬ ಶಾರ್ಟ್ ಫಾರ್ಮಿನಿಂದ ಕರೆಸಿಕೊಳ್ಳುತ್ತಿದ್ದ ವಿನೋದಾ ನಾಯ್ಕ ಮೇಡಮ್ ನಾನು ಎಂಟನೇ ಕ್ಲಾಸಿನಲ್ಲಿದ್ದಾಗ ಕೊನೆ ಕೊನೆಯಲ್ಲಿ ಶಾಲೆಗೆ ವರ್ಗವಾಗಿ ಬಂದಿದ್ದರು. ಮೂಲತಃ ಉತ್ತರ ಕನ್ನಡದವರಾಗಿದ್ದ ವಿನೋದಾ ನಾಯ್ಕ ಅವರ ಯಜಮಾನರೂ ಹೈಸ್ಕೂಲು ಶಿಕ್ಷಕರಾಗಿದ್ದರು. ಹೊಲಿಗೆ ಶಿಕ್ಷಕಿಯಾಗಿ ಬಂದಿದ್ದ ಮೇಡಂ ಏನು ಕಲಿಸಿದರೋ. ನಾವೇನು ಕಲಿತೆವೋ ಗೊತ್ತಿಲ್ಲ ನೋಡಿ. ನಾಲ್ಕೈದು ದಿನ ಕಾನಲೆಯ ನನ್ನ ದೊಡ್ಡಪ್ಪನ ಮನೆಯಿಂದ ದೊಡ್ಡಮ್ಮನಿಗೆ ಭಾಗಿನಕ್ಕೆಂದು ಬಂದಿದ್ದ ಒಂದೆರಡು ವಾರುಗಳನ್ನು, ಶರ್ಟ್ ಫೀಸುಗಳನ್ನು ಹೈಸ್ಕೂಲಿಗೆ ಒಯ್ದಿದ್ದೆ. ದಾರದುಂಡೆ, ಸೂಜಿಗಳನ್ನು ಹಿಡಿದು ಹೋಗುತ್ತಿದ್ದೆವು. ತೋಳಿಲ್ಲದ ಝಬಲಾ, ಚೈನ್ ಹೊಲಿಗೆ ಈ ಮುಂತಾದ ಕೆಲವು ಹೊಲಿಗೆ ಪದ್ಧತಿಗಳನ್ನು ನಮಗೆ ಕಲಿಸಿದ್ದು ನೆನಪಿನಲ್ಲಿದೆ. ಆದರೆ ಹೊಲಿಗೆಗೆ ಸಂಬಂಧಿಸಿದಂತೆ ಯಾವುದೇ ಪರೀಕ್ಷೆಗಳನ್ನು ವಿನೋದಾ ಮೇಡಂ ನಡೆಸಲಿಲ್ಲ.
            ಒಂಭತ್ತನೇ ಕ್ಲಾಸಿನಲ್ಲಿ ನಾನು ಓದುತ್ತಿದ್ದಾಗ ವಿನೋದಾ ಮೇಡಂ ಕೆಲ ಕಾಲ ಇಂಗ್ಲೀಷ್ ಹಾಗೂ ಮತ್ತೆ ಕೆಲ ಕಾಲ ಸಮಾಜ ವಿಜ್ಞಾನಗಳನ್ನು ಕಲಿಸಲು ಬರುತ್ತಿದ್ದರು. ಇಂಗ್ಲೀಷ್ ಶಿಕ್ಷಕರಾಗಿದ್ದ ಬಿ. ಆರ್. ಲಕ್ಷ್ಮೀನಾರಾಯಣ ಹಾಗೂ ಸಮಾಜ ವಿಜ್ಞಾನ ಶಿಕ್ಷಕರಾಗಿದ್ದ ವನಮಾಲಾ ಮೇಡಂ ದೀರ್ಘಕಾಲದ ರಜೆ ಹಾಕಿದಾಗ ವಿನೋದಾ ಮೇಡಂ ಇವೆರಡೂ ವಿಷಯಗಳನ್ನು ಕಲಿಸಲು ಬರುತ್ತಿದ್ದರು. ಒಂದು ದಿನ ವಿದ್ಯಾರ್ಥಿಗಳೆಲ್ಲ ಸೇರಿ ಗ್ಲೋಬ್ ನೋಡುತ್ತಿದ್ದೆವು. ವಿನೋದಾ ಮೇಡಂ ಸಮಾಜ ವಿಜ್ಞಾನ ಕಲಿಸುತ್ತಿದ್ದವರು ಸಖತ್ ಜೋಶ್ ನಲ್ಲಿದ್ದರು. ಆ ದಿನಗಳಲ್ಲಿ ನಾನು ಕ್ಲಾಸಿಗೆ ಅತ್ಯಂತ ಇಂಟಲಿಜೆಂಟ್ ವಿದ್ಯಾರ್ಥಿ. ವಿನೋದಾ ಮೇಡಂ ಗ್ಲೋಬಿನಲ್ಲಿ ವಿವಿಧ ದೇಶಗಳನ್ನು ತೋರಿಸುತ್ತಿದ್ದರು. ನಾನು ಪ್ರೈಮರಿ ಶಾಲೆಯಲ್ಲಿದ್ದಾಗಲೇ ಗ್ಲೋಬ್ ಗಳನ್ನು ನೋಡಿ ದೇಶಗಳನ್ನು ಹುಡುಕಿ, ಅವುಗಳ ರಾಜಧಾನಿಗಳ ಹೆಸರನ್ನು ಬಾಯಲ್ಲಿ ಉರುಹೊಡೆದುಕೊಳ್ಳುತ್ತಿದ್ದೆ. ಅಮೇರಿಕಾ, ಕೆನಡಾ, ಬ್ರಿಟನ್ ಸೇರಿದಂತೆ ಹಲವಾರು ಖ್ಯಾತನಾಮ ದೇಶಗಳನ್ನು ವಿನೋದಾ ಮೇಡಂ ಹುಡುಕಲು ಕೇಳಿದರು. ನಮ್ಮದೇ ಕ್ಲಾಸಿನ ಹಲವು ವಿದ್ಯಾರ್ಥಿಗಳು ಅವುಗಳನ್ನು ತೋರಿಸಿದರು. ಆಮೇಲೆ ದಕ್ಷಿಣ ಕೋರಿಯಾ ಹಾಗೂ ಉತ್ತರ ಕೋರಿಯಾ ಯಾವ ಖಂಡದಲ್ಲಿ ಬರುತ್ತದೆ. ಅದನ್ನು ತೋರಿಸಿ ಎಂದರು. ಯಾರೊಬ್ಬರೂ ಇದಕ್ಕೆ ಮುಂದಾಗಲೇ ಇಲ್ಲ. ಕೊನೆಗೆ ನಾನು ಎದ್ದು ನಿಂತು `ಈ ಎರಡೂ ದೇಶಗಳು ಏಷ್ಯಾ ಖಂಡದಲ್ಲಿ ಬರುತ್ತದೆ. ಜಪಾನ್ ಪಕ್ಕಕ್ಕಿವೆ' ಎಂದೆ. `ನಿನ್ ತಲೆ.. ನೀ ಜೋರಿದ್ದೆ ಅನ್ನೊದು ನಂಗೊತ್ತು. ಹಾಗಂತ ಬಾಯಿಗೆ ಬಂದ ಹಾಗೆ ಹೇಳಬೇಡ. ಇವೆರಡೂ ದೇಶಗಳು ಅಮೆರಿಕಾ ಖಂಡದಲ್ಲಿವೆ..' ಎಂದರು.
            ನಾನು ಎದ್ದು ನಿಂತವನೇ `ಗ್ಲೋಬ್ ಕೊಡಿ.. ತೋರಿಸುತ್ತೇನೆ..' ಎಂದೆ. ಅವರು ಕೊಡಲು ಒಪ್ಪಲಿಲ್ಲ. ಗ್ಲೋಬ್ ಕಿತ್ತುಕೊಂಡು ಸೀದಾ ಚೀನಾದ ಪಕ್ಕಕ್ಕಿದ್ದ ಆ ಎರಡು ದೇಶಗಳನ್ನು ಹುಡುಕಿ ತೋರಿಸಿದೆ. ಮೇಡಂ ಮುಖ ಸಪ್ಪಗಾಗಿತ್ತು. ನಮ್ಮ ಕ್ಲಾಸಿನ ಹುಡುಗರು ಒಮ್ಮೆ ಹೋ ಎಂದಿದ್ದರು. ಏನೋ ಖುಷಿ ನನ್ನ ಮನಸ್ಸಿನಲ್ಲಿ ಮೂಡಿತ್ತು. ಆಮೇಲಿಂದ ನನ್ನ ಮೇಲೆ ಮೇಡಮ್ಮಿಗೆ ಎಲ್ಲಿಲ್ಲದ ದ್ವೇಷ ಬೆಳೆದಿತ್ತು ನೋಡಿ. ನಂತರದ ದಿನಗಳಲ್ಲಿ ಮೇಡಂ ಯಾವುದಾದರೂ ಕ್ಲಾಸನ್ನು ಕಲಿಸಲು ಬಂದರೆ ಸುಮ್ಮ ಸುಮ್ಮನೆ ಬೈಯುವುದು, ಪರೀಕ್ಷೆಗಳಲ್ಲಿ ಅಂಕಗಳನ್ನು ಕತ್ತರಿಸುವುದು ಇತ್ಯಾದಿ ಮಾಡುತ್ತಿದ್ದರು. ಒಂಭತ್ತನೇ ಕ್ಲಾಸು ಮುಗಿಯುವ ವೇಳೆಗೆ ಅವರಿಗೆ ಇದ್ದಕ್ಕಿದ್ದಂತೆ ದ್ವೇಷವೂ ಕಡಿಮೆಯಾಗಿತ್ತು ಬಿಡಿ.
           ವಿನೋದಾ ಮೇಡಂ ಅವರ ಗಂಡ ಪ್ರತಿದಿನ ಹೈಸ್ಕೂಲು ಬಿಡುವ ಸಮಯಕ್ಕೆ ಬಂದು ಮೇಡಂ ಅವರನ್ನು ಬೈಕಿನಲ್ಲಿ ಕರೆದುಕೊಂಡು ಹೋಗುತ್ತಿದ್ದರು. ಹೀರೋಹೊಂಡಾ ಸ್ಪ್ಲೆಂಡರ್ ಬೈಕ್ ಅವರದ್ದು. ಆದರೆ ಅವರು ಎಷ್ಟು ಕುಳ್ಳಗಿದ್ದರು ಎಂದರೆ  ಬೈಕಿನ ಮೇಲೆ ಅವರು ಕುಳಿತರೆ ಕಾಲು ನೆಲಕ್ಕೆ ಮುಟ್ಟುತ್ತಿರಲಿಲ್ಲ. ನಾವು ಹುಡುಗರೆಲ್ಲ ಸೇರಿ ಕುಳ್ಳ-ಕುಳ್ಳಿ ಸವಾರಿ ಹೊರಟಿದೆ ನೋಡ್ರೋ ಎಂದು ತಮಾಷೆ ಮಾಡಿದ್ದೂ ಇದೆ. ಒಂಭತ್ತನೇ ತರಗತಿ ಕೊನೆ ಕೊನೆಯಲ್ಲಿ ವಿನೋದಾ ನಾಯ್ಕ್ ಅವರು ಹೈಸ್ಕೂಲಿಗೆ ಕಲಿಸಲು ಬರುತ್ತಿರಲಿಲ್ಲ. ಅವರು ಗರ್ಭಿಣಿಯಾಗಿದ್ದರು. ಹತ್ತನೇ ಕ್ಲಾಸಿನಲ್ಲಿ ನಾವು ಇದ್ದ ಸಂದರ್ಭದಲ್ಲಿ ವಿನೋದಾ ಮೇಡಮ್ಮಿಗೆ ಗಂಡು ಮಗುವಾಗಿದೆ ಎನ್ನುವ ವಿಷಯವೂ ತಿಳಿಯಿತು. ನಂತರ ಕೆಲವು ತಿಂಗಳುಗಳ ನಂತರ ಹೈಸ್ಕೂಲಿಗೆ ಬಂದು ಸ್ವೀಟ್ ಕೊಟ್ಟಿದ್ದರು. ಮಜಾ ಎಂದರೆ ನಮ್ಮ ದೈಹಿಕ ಶಿಕ್ಷಕರಾಗಿದ್ದ ಸಿ. ಆರ್. ಲಿಂಗರಾಜು ಅವರು ವಿನೋದಾ ಮೇಡಂ ಜೊತೆಗೂ ಸಿಕ್ಕಾಪಟ್ಟೆ ಜಗಳ ಮಾಡಿದ್ದರು. ಹೈಸ್ಕೂಲಿನ ಗ್ರೌಂಡಿನಲ್ಲಿ ಒಮ್ಮೆ ಸಿಕ್ಕಾಪಟ್ಟೆ ಕೂಗಾಡಿಕೊಂಡಿದ್ದರು. ಆಮೇಲೆ ಆ ಮೇಡಮ್ಮಿಗೆ ವರ್ಗವಾಯಿತೋ ಅಥವಾ ದೀರ್ಘಕಾಲದ ರಜಾ ತೆಗೆದುಕೊಂಡರೋ ಗೊತ್ತಿಲ್ಲ ನೋಡಿ. ನಾನು ಎಸ್ ಎಸ್ ಎಲ್ ಸಿ ಮುಗಿಯುವ ವೇಲೆಗೆ ಅವರು ಇರಲಿಲ್ಲ.

ಸುಜಾತಾ ಮೇಡಂ :
                 `ಏನೋ.. ಧನವೇ... ಗೊತ್ತಾಗದಿಲ್ಲೇನೋ ನಿಂಗೆ..' `ಏನೇನೂ ಇಲ್ಲ.. ಈ ಸಾರಿ ನಮ್ ಹುಡುಗ್ರು ಏನೇನೂ ಇಲ್ಲ..' ಎಂದು ರಾಗವಾಗಿ ಹೇಳುತ್ತಿದ್ದ ಸುಜಾತಾ ಮೇಡಂ ಹೈಸ್ಕೈಲಿನಲ್ಲೆಲ್ಲ ಹೆಚ್.ಎಸ್.ಎಸ್. ಎಂದೇ ಖ್ಯಾತಿ ಪಡೆದಿದ್ದವರು. ಹಿಂದಿ ವಿಷಯವನ್ನು ಕಲಿಸುತ್ತಿದ್ದ ಸುಜಾತಾ ಮೇಡಂ ಅದೆಷ್ಟು ಎತ್ತರ ಇದ್ದರು ಅಂದರೆ ಆರು ಅಡಿಗಿಂತ ಜಾಸ್ತಿ ಇರಬೇಕು. ಮೇಡಂ ಮುಂದಿನ ನಾಲ್ಕು ಹಲ್ಲುಗಳು ಸಿಕ್ಕಾಪಟ್ಟೆ ಹೊರಕ್ಕೆ ಬಂದಿದ್ದವು. ಪಾಪ ಮೇಡಂ ನಮಗೆ ಪಾಠ ಮಾಡುವಾಗ ಒಂದು ಕೈಯಲ್ಲಿ ಬಾಯಿ ಮುಚ್ಚಿಕೊಂಡು ಪಾಟ ಮಾಡುತ್ತಿದ್ದರು. ನಾವೆಲ್ಲ ನಗುತ್ತಿದ್ದೆವು.
              ಆ ದಿನಗಳಲ್ಲಿ ನಾನು ಹೋಂ ವರ್ಕ್ ಮಾಡದೇ ಕಳ್ಳ ಬೀಳುತ್ತಿದ್ದೆ. ಒಂದು ದಿನ ಹೋಂ ವರ್ಕ ಮಾಡದೇ ಇರುವ ಕಾರಣ ಹಲವು ವಿದ್ಯಾರ್ಥಿಗಳನ್ನು ಕ್ಲಾಸಿನಿಂದ ಹೊರಕ್ಕೆ ಹಾಕಿದ್ದರು. ನಾನೂ ಕೂಡ ಹೊರಕ್ಕೆ ಹೋಗಿದ್ದೆ. ಆ ದಿನಗಳಲ್ಲಿ ನನಗೆ ಹಿಂದಿ ಗೆ 25 ಕ್ಕೆ 24 ಮಾರ್ಕ್ಸುಗಳು ಬೀಳುವಷ್ಟು ಬುದ್ಧಿವಂತ. ನನ್ನನ್ನು ಹೊರಕ್ಕೆ ಕಳಿಸಿದ್ದ ಮೇಡಂ `ವಿನಯನ ಹೊರಕ್ಕೆ ಕಳಿಸಿದ್ನಾ ನಾನು.. ಏ ವಿನಯಾ.. ಬಾ ಒಳಕ್ಕೆ..' ಅಂದರು. ನಾನು ಹೋದೆ. `ನೀನು ಹೋಂ ವರ್ಕ್ ಮಾಡಿದ್ದೆ ಅಲ್ಲವಾ..?' ಎಂದರು. ನಾನು `ಇಲ್ಲ ಅಂದೆ...' `ಏನೋ.. ಧನವೇ... ಏನೋ ಅಂದಕಂಡಿದ್ದೆ ನಿನ್ನಾ.. ಹೋಗು.. ಹೋಗು ಹೊರಗೆ.. ನೆಡಿ..' ಎಂದು ಮತ್ತೆ ಬೆನ್ನಟ್ಟಿದ್ದರು.
            ಈ ಮೇಡಂ ಹೊಡೆಯುತ್ತಿದ್ದರು. ಆ ಹೊಡೆತ ಮಾತ್ರ ಯಾರಿಗೂ ತಾಗುತ್ತಲೇ ಇರಲಿಲ್ಲ. ಅವರು ಹೊಡೆಯುತ್ತಿದ್ದಾಗ ಮಾತ್ರ ನಾವು ನೋವಾದಂತೆ ನಟಿಸಬೇಕಿತ್ತು. ನಾವು ಹಾಗೆ ನಟಿಸುತ್ತಿದ್ದೆವು ಕೂಡ. ಆದರೆ ಒಳಗೊಳಗೆ ನಗು. ಇಂತಹ ಮೇಡಂ ಹಿಂದಿ ಕಲಿಸಿದ ಪರಿಣಾಮ ಎಸ್.ಎಸ್.ಎಲ್.ಸಿ ಪ್ರಿಪ್ರೆಟರಿ ಪರೀಕ್ಷೆಯಲ್ಲಿ ನನಗೆ 100ಕ್ಕೆ 97 ಅಂಕಗಳು ಬಂದಿದ್ದವು. ಪಬ್ಲಿಕ್ ಪರೀಕ್ಷೆಯಲ್ಲಿ 88 ಅಂಕಗಳು ಬಂದಿದ್ದವು ಬಿಡಿ. ಪ್ರತಿ ವರ್ಷ ಹೈಸ್ಕೂಲಿನಲ್ಲಿ ವಿವಿಧ ಸ್ಪರ್ಧೆಗಳು ನಡೆಯುತ್ತಿದ್ದವು. ಅದರಲ್ಲಿ ಕಂಠಪಾಠ ಸ್ಪರ್ಧೆಯೂ ಒಂದು. ನಾನು 8, 9 ಹಾಗೂ 10 ಈ ಮೂರೂ ವರ್ಷ ಕಂಠಪಾಠ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಗಳಿಸಿಕೊಂಡಿದ್ದೆ. ನನಗಿಂತ ಚಂದ ಮಾಡಿ ಹಿಂದಿ ಹಾಡುಗಳನ್ನು ಹಾಡುವವರು ನನ್ನ ಕ್ಲಾಸಿನಲ್ಲಿದ್ದರು. ರಾಗವಾಗಿ ಹಾಡುವವರೂ ಇದ್ದರು. ಆದರೆ ಯಾರೊಬ್ಬರೂ ಪೂರ್ತಿ ಹೇಳುತ್ತಿರಲಿಲ್ಲ. ಅಲ್ಲದೇ ಹಾಡಿನ ಮಧ್ಯ ಸುಮ್ಮ ಸುಮ್ಮನೆ ನಗುವುದು, ಮರೆತು ಹೋಗಿ ನಿಲ್ಲುವುದು ಇವನ್ನೆಲ್ಲ ಮಾಡುತ್ತಿದ್ದರು. ನಾನು ಉರು ಹೊಡೆದುಕೊಳ್ಳುತ್ತಿದ್ದ ಹಿಂದಿ ಕವಿತೆಯನ್ನು ಸ್ಫುಟವಾಗಿ ಹೇಳುತ್ತಿದ್ದೆ. ಹೀಗಾಗಿ ನನಗೆ ಮೊದಲ ಸ್ಥಾನ ಬರುತ್ತಿತ್ತು.
         ಇಂತಹ ಸುಜಾತಾ ಮೇಡಮ್ಮಿಗೆ ನನ್ನದೇ ಕ್ಲಾಸಿನ ಹುಡುಗರು ಕೊಕ್ಕರೆ ಎನ್ನುವ ಹೆಸರನ್ನೂ ಇಟ್ಟಿದ್ದರು. ಉದ್ದವಿದ್ದ ಅವರಿಗೆ ಈ ಹೆಸರನ್ನು ಇಟ್ಟಿದ್ದಾರೆ ಎನ್ನುವುದು ನಂತರದ ದಿನಗಳಲ್ಲಿ ನನಗೆ ತಿಳಿದಿತ್ತು. ನನಗೆ ಈಗ ಸ್ವಲ್ಪವಾದರೂ ಹಿಂದಿ ಓದಲು, ಮಾತನಾಡಲು ಬರುತ್ತದೆ ಎಂದರೆ ಅದಕ್ಕೆ ಸುಜಾತಾ ಮೇಡಂ ಕಾರಣ. ಅವರಿಗೆ ಎಷ್ಟು ಧನ್ಯವಾದಗಳನ್ನು ಅರ್ಪಿಸಿದರೂ ಸಾಲದು ಬಿಡಿ. ಬಹುಶಃ ಸುಜಾತಾ ಮೇಡಂ ಈಗ ನಿವೃತ್ತಿಯಾಗಿರಬೇಕು ಎನ್ನಿಸುತ್ತದೆ. ಎಲ್ಲಿದ್ದಾರೋ ಗೊತ್ತಿಲ್ಲ. ಅವರು ಚನ್ನಾಗಿರಲಿ.

(ಮುಂದುವರಿಯುತ್ತದೆ)

Wednesday, October 7, 2015

ಅಘನಾಶಿನಿ ಕಣಿವೆಯಲ್ಲಿ-27

             ಉಂಚಳ್ಳಿ ಜಲಪಾತವನ್ನು ನೋಡುವುದೇ ಒಂದು ಸೊಬಗು. ಥಟ್ಟನೆ ನೋಡಿದರೆ ಗೋಕರ್ಣದ ಆತ್ಮಲಿಂಗದ ಆಕಾರದಲ್ಲಿ ಕಾಣುವ ಜಲಪಾತದ ಚೆಲುವಿಗೆ ಸಾಟಿಯಿಲ್ಲ ಬಿಡಿ. ದೂರದಿಂದಲೇ ಭೋರೆಂದು ಸದ್ದು ಮಾಡುವ ಜಲಪಾತಕ್ಕೆ ಸರ್ವ ಕಾಲದಲ್ಲಿಯೂ ಪ್ರವಾಸಿಗರು ದಂಡು ದಂಡಾಗಿ ಆಗಮಿಸುತ್ತಾರೆ. ವಿಕ್ರಮ ಹಾಗೂ ತಂಡಕ್ಕೆ ಜಲಪಾತದ ಬುಡಕ್ಕೆ ತಲುಪುವ ತವಕ ಮತ್ತಷ್ಟು ಹೆಚ್ಚಿತು. ಜಲಪಾತ ವೀಕ್ಷಣೆಗೆ ಹಾಕಲಾಗಿದ್ದ ಸಿಮೆಂಟ್ ಮೆಟ್ಟಿಲುಗಳನ್ನು ಇಳಿದು ಪಕ್ಕದಲ್ಲಿಯೇ ಜರುಗಿ ಜಲಪಾತದ ಬುಡಕ್ಕೆ ಇಳಿಯಲಾರಂಭಿಸಿದರು. ಎಪ್ರಿಲ್ ತಿಂಗಳಾದ್ದ ಕಾರಣ ಜಲಪಾತದಲ್ಲಿ ಸಾಕಷ್ಟು ನೀರು ಇರಲಿಲ್ಲ. ಸೀದಾ ಜಲಪಾತ ಬೀಳುವ ಪ್ರದೇಶಕ್ಕೆ ತೆರಳಿ, ಜಲಪಾತದ ನೀರಿಗೆ ತಲೆಕೊಟ್ಟು ನಿಲ್ಲಬಹುದಾಗಿತ್ತು.
         ಅರ್ಧಗಂಟೆಯ ಸಮಯದಲ್ಲಿ ಜಲಪಾತದ ಬುಡಕ್ಕೆ ತಲುಪಿದ್ದರು. ದೊಡ್ಡ ದೊಡ್ಡ ಕಲ್ಲು ಬಂಡೆಗಳನ್ನು ದಾಟಿ ನೀರು ಬೀಳುತ್ತಿದ್ದ ಪ್ರದೇಶಕ್ಕೆ ಹೋದವರಿಗೆ ಆಸೆ ತಡೆಯಲಿಲ್ಲ. ಸೀದಾ ತೊಟ್ಟಿದ್ದ ಬಟ್ಟೆ ಯನ್ನು ಲೆಕ್ಕಿಸದೇ ಜಲಪಾತದ ನೀರಿಗೆ ತಲೆ ಕೊಟ್ಟರು. ದೊಡ್ಡದೊಂದು ನೀರಿನ ಗುಂಡಿಯನ್ನು ಈಜಲು ವಿನಾಯಕ ಮುಂದಾದ. ವಿಷ್ಣು ಹಾಗೂ ಪ್ರದೀಪ ಕೂಡ ವಿನಾಯಕನನ್ನು ಹಿಂಬಾಲಿಸಿದರು. ವಿಜೇತಾಳನ್ನು ಹೊರತುಪಡಿಸಿ ಉಳಿದೆಲ್ಲ ಹೆಂಗಳೆಯರು ಜಲಪಾತ ಬೀಳುತ್ತಿದ್ದ ಜಾಗಕ್ಕೆ ಸುತ್ತು ಬಳಸಿನ ಹಾದಿಯಲ್ಲಿ ಸಾಗಿ ತಲೆಕೊಟ್ಟು ನಿಂತರು. ಕ್ಷಣ ಕ್ಷಣಕ್ಕೂ ರೋಮಾಂಚನ ಅನುಭವಿಸಿದ ಇವರೆಲ್ಲರ ಬಾಯಿಂದ ಹಾ... ಹೋ... ಎನ್ನುವ ಕೂಗು ಉಂಚಳ್ಳಿ ಜಲಪಾತದ ಕಣಿವೆಯಿಂದ ಅಲೆ ಅಲೆಯಾಗಿ ಕೇಳುತ್ತಿತ್ತು. ಜಲಪಾತದ ಸದ್ದಿಗೆ ಪೈಪೋಟಿ ನೀಡುವಂತಿತ್ತು ಇವರ ಕೂಗು.
         ವಿಕ್ರಮ ಹಾಗೂ ವಿಜೇತಾ ಇಬ್ಬರೇ ದೂರದಲ್ಲಿ ಕಲ್ಲು ಬಂಡೆಯ ಮೇಲೆ ಕುಳಿತು ನೀರಿಗೆ ತಲೆ ಕೊಟ್ಟವರ ಹಾಗೂ ಜಲಪಾತದ ಗುಂಡಿಯಲ್ಲಿ ಈಸು ಬಿದ್ದಿದ್ದವರನ್ನು ನೋಡುತ್ತಿದ್ದರು. ವಿನಾಯಕ ಇದ್ದಕ್ಕಿದ್ದಂತೆ ವಿಜೇತಾಳ ಬಳಿ `ನಾನು ಒಂದು ವಿಷಯ ಕೇಳಲಾ..?' ಎಂದ.
          `ಹುಂ.. ಕೇಳು.. ನೀನು ಏನನ್ನಾದರೂ ಕೇಳಲು ನನ್ನ ಪರ್ಮಿಷನ್ ಬೇಕಾ? ಇವತ್ತೇನು ಹೊಸ ರೀತಿ ಕೇಳ್ತಾ ಇದ್ದೀ..?' ಎಂದಳು ವಿಜೇತಾ.
          `ಇದು ಸಾಮಾನ್ಯ ವಿಷಯ ಅಲ್ಲ. ಸ್ವಲ್ಪ ಬೇರೆಯ ವಿಷಯ. ಕೇಳಲೋ.. ಬೇಡವೋ ಅಂತ..' ಎಂದ ವಿಕ್ರಮ.
          `ಇದೊಳ್ಳೆ ಕಥೆ ನಿಂದು. ನನ್ನ ಹತ್ರ ಕೇಳೋಕೆ ಮುಜುಗರವಾ? ನಿಂದೊಳ್ಳೆ ಕಥೆ ಮಾರಾಯಾ.. ಸುಮ್ನೆ ಕೇಳು..'
           `ಹೆಂಗ್ ಕೇಳೋದು ಅಂತ ಗೊತ್ತಾಗ್ತಾ ಇಲ್ಲ.. ಯಾಕೋ ಸ್ವಲ್ಪ ನರ್ವಸ್ ಆಗಿದ್ದೇನೆ ನೋಡು..'
           `ಹೆಂಗೆ ಅಂದ್ರೆ..? ಬಾಯಲ್ಲಿ ಕೇಳು ಮಾರಾಯಾ.. ನೀನು ನರ್ವಸ್ ಆಗೋದಾ? ದಿ ಗ್ರೇಟ್ ಕರಾಟೆ ಚಾಂಪಿಯನ್ ನರ್ವಸ್ ಆಗೋದು ಅಂದ್ರೆ ಏನ್ ತಮಾಷೆನಾ? ಅಂತದ್ದೇನಪ್ಪಾ ವಿಷಯ..' ತಮಾಷೆ ಮಾಡಿದಳು ವಿಜೇತಾ.
            `ತಮಾಷೆ ಮಾಡ್ಬೇಡ ಪ್ಲೀಸ್.. ಹೆಂಗ್ ಕೇಳೋದು ಅಂತ ನಂಗೆ ಗೊತ್ತಾಗ್ತಿಲ್ಲ. ಮತ್ತೆ.. ನೀನು ಯಾರನ್ನಾದರೂ ಲವ್ ಮಾಡಿದ್ಯಾ?'
             ಇದ್ದಕ್ಕಿದ್ದಂತೆ ಸ್ವಲ್ಪ ಗಂಭೀರವಾದ ವಿಜೇತಾ ಒಮ್ಮೆ ವಿಕ್ರಮನನ್ನು ತೀಕ್ಷ್ಣವಾಗಿ ನೋಡಿದಳು. ನಂತರ ಇದು ತಮಾಷೆಯಿರಬೇಕು ಎಂದುಕೊಂಡು `ಹು.. ಮಾರಾಯಾ.. ಪಿಯುಸಿಯಲ್ಲಿ ಇರಬೇಕಾದರೆ ಒಬ್ಬ ಹುಡುಗ ಪ್ರಪೋಸ್ ಮಾಡಿದ್ದ ನೋಡು. ಒಳ್ಳೆಯ ಹುಡುಗ. ಆದರೆ ಹೇಳಿಕೊಳ್ಳಲು ಸಂಕೋಚ ಪಟ್ಟುಕೊಂಡಿದ್ದ. ಆತ ಹೆದರಿ ಹೆದರಿ ಹೇಳಿಕೊಂಡಿದ್ದ. ನಾನು ಸಿಟ್ಟಿನಿಂದಲೇ ಆತನಿಗೆ ಉತ್ತರ ಕೊಟ್ಟಿದ್ದೆ. ಆ ನಂತರ ಯಾಕೋ ಇಷ್ಟವಾಗಿದ್ದ ಆತ. ಆತನ ಪ್ರಪೋಸಲ್ ಗೆ ಒಪ್ಪಿಗೆ ಸೂಚಿಸಬೇಕು ಅಂತ ನಾನು ಅವನನ್ನು ಹುಡುಕಿ ಹೊರಟಿದ್ದೆ. ಆದರೆ ಆ ನಂತರ ಅಂವ ಏನಾದನೋ ಗೊತ್ತಿಲ್ಲ ನೋಡು.. ನಾಪತ್ತೆಯಾಗಿದ್ದ. ಆಮೇಲಿ ಡಿಗ್ರಿ ಓದುವಾಗ ಒಂದಿಬ್ಬರು ಲವ್ ಮಾಡ್ತೀಯಾ ಅಂತ ಕೇಳಿದ್ದರು. ನನಗೆ ಇಷ್ಟವಾಗಿರಲಿಲ್ಲ.. ರಿಜೆಕ್ಟ್ ಮಾಡಿದ್ದೆ.. ಹೌದು.. ಈಗ ಈ ಪ್ರಶ್ನೆ ಯಾಕೆ ಕೇಳಿದ್ದು..?'
            `ಹಿಂಗೆ ಸುಮ್ನೆ ಕೇಳಿದ್ದು ನೋಡು.. ಯಾಕೋ ನೀನು ಯಾರನ್ನಾದರೂ ಲವ್ ಮಾಡ್ತಿರಬಹುದಾ ಎಂಬ ಕುತೂಹಲ ಕಾಡಿತು. ಅದ್ಕೆ ಕೇಳಿದೆ ಅಷ್ಟೆ..' ವಿಕ್ರಮ ಉತ್ತರಿಸಿದ್ದ.
             `ಸುಮ್ನೆ ಎಲ್ಲಾ ಕೇಳೊ ವ್ಯಕ್ತಿಯಲ್ಲವಲ್ಲ ನೀನು.. ಏನೋ ಕಾರಣ ಇರಬೇಕು ನೋಡು. ಯಾವುದಾದರೂ ಪ್ರಪೋಸಲ್ ಬಂದಿದೆಯಾ? ಅಥವಾ ಜಾತಕ ಗೀತಕ ಬಂದಿದೆಯಾ.. ಹೇಳು ಮಾರಾಯಾ... ತಲೆಯಲ್ಲಿ ಹುಳ ಬಿಡಬೇಡ..' ವಿಜೇತಾ ಹೇಳಿದ್ದಳು.
             `ಏ ಏನಿಲ್ಲ. ಸುಮ್ನೆ ಕೇಳಿದೆ..'
             `ಹೇಳೋ ಮಾರಾಯಾ.. ನನ್ನನ್ನು ಯಾರಾದರೂ ಲವ್ ಮಾಡ್ತಾರಾ.. ನಾನು ಸಧ್ಯಕ್ಕೆ ಖಾಲಿ ಇದ್ದೇನೆ ನೋಡು.. ಯಾರಾದರೂ ನಿನ್ನ ಬಳಿ ಕೇಳಿದ್ದರೆ ಡೈರೆಕ್ಟಾಗಿ ಬಂದು ಕೇಳೋಕೆ ಹೇಳು.. ಇಷ್ಟ ಆದರೆ ಥಟ್ಟನೆ ಒಪ್ಪಿಕೊಂಡು ಬಿಡ್ತೀನಿ ನೋಡು..' ಮತ್ತೆ ತಮಾಷೆಯಾಗಿ ಹೇಳಿದ್ದಳು ವಿಜೇತಾ.
             `ಅಯ್ಯಯ್ಯೋ.. ಯಾರೂ ಹೇಳಿಲ್ಲ ನನ್ನ ಹತ್ರ. ನಾನೇ ಸುಮ್ಮನೆ ಕೇಳಿದೆ ನೋಡು..' ವಿಕ್ರಮ ತೊದಲಿದ.
             `ಇಲ್ಲ ಇದರಲ್ಲಿ ಏನೋ ಇದೆ. ನೀನು ಸುಮ್ಮನೆ ಕೇಳಿಲ್ಲ ಬಿಡು. ಯಾರಪ್ಪಾ ಅದು ನನ್ನ ಬಗ್ಗೆ ವಿಚಾರಿಸಿದ್ದು? ಯಾರಾದರೂ ನನ್ನ ಲವ್ ಮಾಡ್ತಾ ಇದ್ದಾರಾ ಹೇಗೆ? ನೀನೇನಾದ್ರೂ ಲವ್ ಮಾಡ್ತಾ ಇದ್ದೀಯಾ ಹೇಗೆ? ಹಂಗೇನಾದ್ರೂ ಇದ್ರೆ ಡೈರೆಕ್ಟ್ ಆಗಿ ಹೇಳ್ ಬಿಡು ಮಾರಾಯಾ.. ಮತ್ತಿನ್ಯಾರಾದ್ರೂ ಮನಸ್ಸಿನೊಳಗೆ ತೂರಿಕೊಳ್ಳುವ ಮೊದಲು ನಿಂಗೆ ಒಕೆ ಅಂತ ಹೇಳಿ ಬಿಡ್ತೀನಿ..' ಡೈರೆಕ್ಟ್ ಶೂಟ್ ಮಾಡಿದ್ದಳು ವಿಜೇತಾ. ಅವಳ ಮಾತಿನಲ್ಲಿ ತಮಾಷೆಯ ಸೆಳಕಿದ್ದರೂ ಸೀರಿಯಸ್ ಅಂಶಗಳು ಸಾಕಷ್ಟಿದ್ದವು.
            ವಿಕ್ರಮ ಬೆವೆತು ಹೋಗಿದ್ದ. ಏನು ಹೇಳಬೇಕು ಎನ್ನುವುದು ಆತನಿಗೆ ಗೊತ್ತಾಗಲಿಲ್ಲ. ಪರಿಚಯವಾದ ದಿನದಿಂದಲೇ ವಿಕ್ರಮನಿಗೆ ಮಾಡಿದರೆ ಇಂತಹ ಹುಡುಗಿಯನ್ನು ಲವ್ ಮಾಡಬೇಕು ಎನ್ನಿಸಿದ್ದು ಸುಳ್ಳಲ್ಲ. ಯಾಕೋ ಮೊದಲ ಸಂದರ್ಶನದ ದಿನದಂದೆ ವಿಜೇತಾ ವಿಕ್ರಮನಿಗೆ ಇಷ್ಟವಾಗಿ ಬಿಟ್ಟಿದ್ದಳು.ನಂತರದ ದಿನಗಳಲ್ಲಿ ವಿಕ್ರಮನಿಗೆ ಆಕೆ ಮತ್ತಷ್ಟು ಹತ್ತಿರವಾಗಿದ್ದಳು. ಹತ್ತಿರವಾದಂತೆಲ್ಲ ಪ್ರೀತಿಯ ಸಸಿ ಮೊಳಕೆಯೊಡೆದು ಹೆಮ್ಮರವಾಗಿತ್ತು. ವಿಕ್ರಮ ಕೂಡ ಆ ಸಸಿಗೆ ಪೋಷಣೆ ನೀಡಿ ಎದೆಯಲ್ಲಿ ಬೆಚ್ಚಗೆ ಕಾಪಾಡಿಕೊಂಡಿದ್ದ.
            ಕೆಲವು ದಿನಗಳಿಂದ ತನ್ನ ಮನದ ಅಭಿಲಾಷೆಯನ್ನು ಹೇಳಬೇಕು ಎಂದುಕೊಳ್ಳುತ್ತಿದ್ದ ವಿಕ್ರಮ. ಅದಕ್ಕೆ ಸರಿಯಾದ ಸಮಯ ಹಾಗೂ ಸಂದರ್ಭ ಒದಗಿ ಬಂದಿರಲಿಲ್ಲ. ತಾನು ಹೇಳಿಕೊಳ್ಳಬೇಕು ಅಂದಾಗಲೆಲ್ಲ ಜೊತೆಯಲ್ಲಿ ಮತ್ಯಾರೋ ಇರುತ್ತಿದ್ದರು. ಹೇಗಾದರೂ ಮಾಡಿ ಹೇಳಿಕೊಳ್ಳಬೇಕು ಎಂದುಕೊಂಡವನಿಗೆ ನೆನಪಾದದ್ದು ಉಂಚಳ್ಳಿ ಜಲಪಾತ. ಅಲ್ಲಿಗೆ ಹೋದಾಗ ತನ್ನ ಮನಸ್ಸಿನ ಭಾವನೆಯನ್ನು ವಿಜೇತಾಳಿಗೆ ಹೇಳಬೇಕು ಎಂದುಕೊಂಡಿದ್ದ ವಿಕ್ರಮ. ಎಲ್ಲರನ್ನೂ ಎಲ್ಲಾದರೂ ಸಾಗಹಾಕಿ ಅವಳೆದು ತನ್ನ ಅಂತರಂಗವನ್ನು ತೋಡಿಕೊಳ್ಳಬೇಕು ಎಂದುಕೊಂಡವನಿಗೆ ಇದುವರೆಗೆ ತಾನು ಬಯಸಿದಂತೆಯೇ ಎಲ್ಲವೂ ಆಗಿತ್ತು. ಜಲಪಾತಕ್ಕೆ ಬಂದಿದ್ದವರೆಲ್ಲಿ ಉಳಿದವರು ಅವರವರ ಲೋಕದಲ್ಲಿದ್ದರು. ವಿಜೇತಾ ಹಾಗೂ ವಿಕ್ರಮ ಇಬ್ಬರೆ ಜೊತೆಯಲ್ಲಿ ಕುಳಿತು ಮಾತನಾಡುತ್ತಿದ್ದರು. ಆದರೆ ವಿಕ್ರಮನಿಗೆ ಮಾತ್ರ ಮನದಾಳದ ಭಾವನೆಗಳನ್ನು ಏನೂ ಮಾಡಿದರೂ ಹೇಳಿಕೊಳ್ಳಲು ಆಗುತ್ತಿಲ್ಲ. ಇದು ಆತನಿಗೆ ಅಚ್ಚರಿಯನ್ನು ತಂದಿತ್ತು.
          ವಿಜೇತಾಳೇ ನೇರವಾಗಿ ಕೇಳುತ್ತಿದ್ದಾಳೆ. ಆದರೆ ತನಗೆ ಮಾತ್ರ ಹೇಳಿಕೊಳ್ಳಲು ಆಗುತ್ತಿಲ್ಲ. ಯಾಕೆ ಈ ಥರಾ? ಎಂದುಕೊಂಡ ವಿಕ್ರಮ. ಅವಳೇ ಕೇಳುತ್ತಿದ್ದಾಗ ತನಗೆ ಹೌದು ನಿನ್ನನ್ನು ಪ್ರೀತಿಸುತ್ತಿದ್ದೇನೆ ಎಂದು ಹೇಳಲು ಆಗುತ್ತಿಲ್ಲವಲ್ಲ. ಯಾಕೋ ಈ ಪ್ರೇಮ ಎನ್ನುವುದು ಸುಲಭವಲ್ಲ ಅನ್ನಿಸಿತು ಅವನಿಗೆ. ಕರಾಟೆಯಲ್ಲಿ ತನ್ನೆದುರು ಹತ್ತಾರು ಜನರು ಏಕಕಾಲಕ್ಕೆ ಮುಗಿ ಬೀಳಲಿ ಅವರನ್ನು ಮಣ್ಣುಮುಕ್ಕಿಸುತ್ತೇನೆ. ಆದರೆ ಇವಳಿಗೆ ಪ್ರೇಮದ ವಿಷಯ ತಿಳಿಸುವುದು ಹೇಗೆ? ಎಂದ.
           `ಹೇಯ್.. ಎಂತಾ ಆಲೋಚನೆ ಮಾಡ್ತಾ ಇರೋದು.. ಯಾರು ಕೇಳಿದ್ದು ಹೇಳು ಮಾರಾಯಾ..' ಎಂದು ವಿಜೇತಾ ತಿವಿದಾಗಲೇ ವಿಕ್ರಮ ವಾಸ್ತವಕ್ಕೆ ಮರಳಿದ್ದು.
            `ಏನ್ ಹೇಳೋದು ಅಂತ ಗೊತ್ತಾಗ್ತಾ ಇಲ್ಲೆ. ನಿನ್ ಬಗ್ಗೆ ವಿಷಯ ಗೊತ್ತಾಗಬೇಕಿತ್ತು, ನೀನು ಯಾರನ್ನಾದರೂ ಪ್ರೀತಿಸ್ತಾ ಇದ್ಯಾ ಅನ್ನೋದು ತಿಳಿದುಕೊಳ್ಳಬೇಕು ಅನ್ನೋದು ನಿಜ. ಆದರೆ...' ನಿಲ್ಲಿಸಿದ ವಿಕ್ರಮ
             `ಎಂತ ಆದರೆ.. ಒಗಟಾಗಿ ಮಾತನಾಡಬೇಡ. ಸ್ವಲ್ಪ ಬಿಡಿಸಿ ಹೇಳು ಮಾರಾಯಾ..'
              `ನಂಗೇ ಬೇಕಾಗಿತ್ತು...ಅದ್ಕೆ ಕೇಳಿದ್ದು..' ತೊದಲಿದ ವಿಕ್ರಮ.
               `ಅಂದರೆ ಎಂತ? ಸ್ವಲ್ಪ ಬಿಡಿಸಿ ಹೇಳೋ ಮಾರಾಯಾ.. ನಿಂಗೆಂತಾ ಬೇಕಾಗಿದ್ದು. ನಿಂಗ್ ನನ್ನ ವಿಷ್ಯ ಗೊತ್ತಿದ್ದಿದ್ದೇ. ಆದರೆ ಮತ್ತೆಂತಕ್ ಕೇಳ್ತಾ ಇದ್ದಿದ್ದು..?' ಕಾಡಿಸಿದಳು ವಿಜೇತಾ. ಅವಳಿಗೆ ಸ್ವಲ್ಪ ಅನುಮಾನ ಬರಲು ಆರಂಭವಾಗಿತ್ತು. ವಿಕ್ರಮನೇ ತನ್ನನ್ನು ಲವ್ ಮಾಡುತ್ತಿರಬಹುದಾ? ಕೆಲ ದಿನಗಳಿಂದ ಮನಸ್ಸಿನಲ್ಲಿ ಮೂಡಿದ್ದ ಅನುಮಾನದ ಸೆಲೆಯೊಂದು ದೊಡ್ಡದಾದಂತೆ ಭಾಸವಾಯಿತು.
              `ಹುಂ.. ನಾನು ನಿನ್ನ ಪ್ರೀತಿಸ್ತಾ ಇದ್ದೆ. ಆದರೆ ಹೇಳ್ಕಳೋದು ಹೆಂಗೆ ಅಂತ ಒದ್ದಾಡ್ತಿದ್ದೆ ನೋಡು. ಹೇಳೋಕೂ ಆಗದೇ, ನನ್ನಲ್ಲೇ ಇಟ್ಟುಕೊಳ್ಳೋದಕ್ಕೂ ಆಗದೇ ಪರಿತಪಿಸುತ್ತಿದ್ದೆ. ನಾನು ನಿನ್ನ ಪ್ರೀತಿಸ್ತಾ ಇದ್ದೇನೆ. ನೀನು ನನ್ನ ಪ್ರೀತಿಸ್ತೀಯಾ? ನಿನ್ನ ಮನಸ್ಸಿನಲ್ಲಿ ನನಗೆ ಸ್ವಲ್ಪ ಜಾಗ ಕೊಡ್ತೀಯಾ..?' ಹೇಗೋ ಧೈರ್ಯ ಮಾಡಿಕೊಂಡು ವಿಕ್ರಮ ಕೇಳಿಯೇ ಬಿಟ್ಟಿದ್ದ.
               ವಿಜೇತಾ ಅವಾಕ್ಕಾಗಿದ್ದಳು. ವಿಜೇತಾಳ ಮನಸ್ಸಿನಲ್ಲಿ ಚಿಕ್ಕದೊಂದು ಅನುಮಾನದ ಸೆಲೆಯಿತ್ತಾದರೂ ವಿಕ್ರಮ ಇಷ್ಟು ನೇರಾ ನೇರ ಕೇಳುತ್ತಾನೆ ಎಂದುಕೊಂಡಿರಲಿಲ್ಲ. ಇನ್ನಷ್ಟು ದಿನಗಳ ನಂತರ ಕೇಳಬಹುದು ಎಂದುಕೊಂಡಿದ್ದಳೇನೋ. ವಿಕ್ರಮ ಕೇಳಿದರೆ ಏನು ಹೇಳಬೇಕು ಎನ್ನುವುದು ವಿಜೇತಾಳಿಗೆ ಗೊತ್ತಿರಲಿಲ್ಲ. ಸುಮ್ಮನೆ ಕಾಡಿಸುತ್ತಿದ್ದಳಾದರೂ ಆಕೆಯಲ್ಲಿಯೇ ಸ್ಪಷ್ಟ ಭಾವನೆ ಇನ್ನೂ ಇರಲಿಲ್ಲ. ಆಲೋಚಿಸತೊಡಗಿದಳು ವಿಜೆತಾ.

(ಮುಂದುವರಿಯುತ್ತದೆ)

Saturday, October 3, 2015

ಅಘನಾಶಿನಿ ಕಣಿವೆಯಲ್ಲಿ-26

             ಉಂಚಳ್ಳಿ ಜಲಪಾತದ ಮಾರ್ಗದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳಿಗೂ, ಮರಗಳ್ಳರಿಗೂ ನಡೆದಿದ್ದ ಕಣ್ಣಾಮುಚ್ಚಾಲೆಯ ಘಟನೆಗೂ, ದಂಟಕಲ್ಲಿನಲ್ಲಿ ನಡೆದಿದ್ದ ಮರಗಳ್ಳರ ಮೇಲಿನ ದಾಳಿಯ ನಡುವೆಯೂ ಏನೋ ಸಂಬಂಧ ಇರಬೇಕು ಎಂದು ತರ್ಕಿಸುತ್ತಿದ್ದ ಪ್ರದೀಪ. ಮರಗಳ್ಳರು ಹಲವು ಕಡೆಗಳಲ್ಲಿದ್ದರೂ ಸಾಮಾನ್ಯವಾಗಿ ಯಾರಾದರೂ ಮರಗಳ್ಳತನ ಮಾಡುತ್ತಿದ್ದ ಸಂದರ್ಭದಲ್ಲಿ ಕಣ್ಣಿಗೆ ಕಾಣಿಸಿದರೆ ಓಡಿ ಹೋಗುತ್ತಾರೆ. ಆದರೆ ಈ ಎರಡೂ ಘಟನೆಗಳಲ್ಲಿ ಮರಗಳ್ಳರು ಮೈಮೇಲೆ ಏರಿ ಬಂದಿದ್ದರು. ಜನಸಾಮಾನ್ಯರು ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳ ಮೇಲೆ ಧಾಳಿ ನಡೆಸಲು ಪ್ರಯತ್ನಿಸಿದ್ದರು. ಈ ಹಿನ್ನೆಲೆಯಲ್ಲಿ ದಾಳಿಗೆ ಮುಂದಾದ ಮರಗಳ್ಳರು ಖಂಡಿತ ಒಂದೇ ಗುಂಪಿಗೆ ಸೇರಿರಬೇಕು. ಖಂಡಿತ ಈ ಮರಗಳ್ಳರನ್ನು ಯಾವುದೋ ವ್ಯಕ್ತಿ ಅಥವಾ ಯಾವುದೋ ತಂಡ ನಿರ್ವಹಣೆ ಮಾಡುತ್ತಿರಬೇಕು. ಮರಗಳ್ಳರಿಗೆ ಎಲ್ಲೋ ಖಂಡಿತ ತರಬೇತಿಯೂ ಸಿಗುತ್ತಿರಬೇಕು ಎಂದು ಪ್ರದೀಪ ಆಲೋಚಿಸಿದ್ದ. ಮುಂದಿನ ದಿನಗಳಲ್ಲಿ ಪ್ರದೀಪನ ಆಲೋಚನೆಗೆ ಪೂರಕವಾಗಿ ಘಟನೆಗಳು ನಡೆಯಲಿದ್ದವು.
             ಉಂಚಳ್ಳಿ ಜಲಪಾತಕ್ಕೆ ಹೋಗಬೇಕು ಎಂದು ನಿರ್ಧಾರ ಮಾಡಿಕೊಂಡಿದ್ದವರು ಅನಿರೀಕ್ಷಿತವಾಗಿ ನಡೆದ ಮರಗಳ್ಳರ ಮೇಲಿನ ಹಲ್ಲೆಯ ಘಟನೆಯಿಂದ ತಮ್ಮ ಯೋಜನೆಯನ್ನು ಬದಲಾಯಿಸಿಕೊಳ್ಳಬೇಕಾಯಿತು. ಮರಗಳ್ಳರು ಹಗೆಯನ್ನು ಸಾಧಿಸಬಹುದು ಎಂದು ಆಲೋಚನೆ ಮಾಡಿಕೊಂಡಿದ್ದ ಇವರು ಕಾಲಕಾಲಕ್ಕೆ ತಮ್ಮ ಯೋಜನೆಗಳನ್ನು ಬದಲಾಯಿಸಿಕೊಳ್ಳಬೇಕಾಗುತ್ತದೆ ಎನ್ನುವುದನ್ನೂ ಮನಗಂಡಿದ್ದರು. ಅದು ಅನಿವಾರ್ಯವೂ ಆಗಿತ್ತು.
                ಮರುದಿನದಿಂದಲೇ ರಾಮುವಿನ ಧಾಳಿಯಿಂದ ಗಾಯಗೊಂಡಿದ್ದ ವ್ಯಕ್ತಿಯನ್ನು ಹುಡುಕುವ ಕೆಲಸ ಆರಂಭವಾಯಿತು. ಆರೋಗ್ಯ ಗಣತಿಯ ನೆಪವನ್ನು ಮಾಡಿಕೊಂಡು ವಿಕ್ರಮ, ಪ್ರದೀಪ, ವಿನಾಯಕ, ವಿಜೇತಾ, ವಿಷ್ಣು ಇವರೆಲ್ಲ ತಲಾ ಎರಡೆರಡು ತಂಡಗಳಂತೆ ಒಂದೊಂದು ಊರಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಲು ಆರಂಭಿಸಿದರು. ದಂಟಕಲ್ಲಿನ ಸುತ್ತಮುತ್ತ ಇರುವ ಊರುಗಳಿಗೆಲ್ಲ ಹೋಗಲಾಯಿತು. ಕೊನೆಗೊಮ್ಮೆ ಬೇಣದಗದ್ದೆಯ ಆಚೆಗೆ ಇರುವ ಹೊಸಗದ್ದೆ ಎಂಬಲ್ಲಿ ಬಾಸು ಗೌಡ ಎಂಬಾತನ ಮನೆಯಲ್ಲಿ ಬಾಸು ಗೌಡನ ಕಾಲಿಗೆ ಗಾಯವಾಗಿರುವ ವಿಷಯ ಪತ್ತೆಯಾಯಿತು. ಮನೆಯ ಮಾಡಿನ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಜಾರಿಬಿದ್ದು ಹಗರು ದಬ್ಬೆ ಬಡಿದು ಗಾಯವಾಗಿದೆ ಎಂದು ಬಾಸು ಗೌಡನ ಮನೆಯಲ್ಲಿ ಸಬೂಬನ್ನು ಹೇಳಿದರು. ಬಾಸು ಗೌಡನೂ ಸ್ಥಳದಲ್ಲಿದ್ದ. ಆತನ ಕಾಲಿಗೆ ಗಾಯವಾಗಿತ್ತು. ಗಾಯಕ್ಕೆ ಬ್ಯಾಂಡೇಜ್ ಸುತ್ತಲಾಗಿತ್ತು. ಮುಂಜಾನೆಯೇ ಎದ್ದು ಯಾವುದೋ ಆಸ್ಪತ್ರೆಗೆ ಹೋಗಿ ಬಂದಿರಬೇಕು ಎಂದುಕೊಂಡರು.
            ಬಾಸು ಗೌಡನ ಮನೆಯನ್ನು ಸೂಕ್ಷ್ಮವಾಗಿ ಪರೀಕ್ಷೆ ಮಾಡಿದಾಗ ಎಲ್ಲಿಯೂ ಮಾಡು ನಿರ್ಮಾಣ ಮಾಡಿದಂತಹ ಕುರುಹು ಸಿಗಲಿಲ್ಲ. ಆತ ಸುಳ್ಳು ಹೇಳಿದ್ದು ಸ್ಪಷ್ಟವಾಗಿತ್ತು. ಮರುದಿನದಿಂದಲೇ ಆತನ ಮೇಲೆ ಕಣ್ಣಿಡಬೇಕು ಎಂದುಕೊಂಡರು ಎಲ್ಲರೂ. ಆತ ಎಲ್ಲೆಲ್ಲಿ ಹೋಗುತ್ತಾನೆ? ಏನು ಮಾಡುತ್ತಾನೆ ಎನ್ನುವುದನ್ನು ಸೂಕ್ಷ್ಮವಾಗಿ ತಿಳಿದುಕೊಳ್ಳಬೇಕು ಎಂದುಕೊಂಡರು.
               ಬಾಸು ಗೌಡ ಮರಗಳ್ಳತನ ಮಾಡುತ್ತಿದ್ದಾನೆ ಎನ್ನುವುದು ಸ್ಪಷ್ಟವಾದ ಮೇಲೆ ಆತನ ಹಿನ್ನೆಲೆಯನ್ನು ತಿಳಿದುಕೊಳ್ಳಲು ವಿಕ್ರಮನ ತಂಡ ಪ್ರಯತ್ನಿಸಿತು. ಬಹಳ ಕಡೆಗಳಲ್ಲಿ ವಿಚಾರಿಸಿದಾಗ ಬಾಸು ಗೌಡ ಮೂಲತಃ ಈ ಕಡೆಯವನಲ್ಲವೆಂದೂ ತೀರ್ಥಹಳ್ಳಿಯಿಂದ ಬಂದವನೆಂದೂ ತಿಳಿಯಿತು. ಬಂದ ಹೊಸತರಲ್ಲಿ ಅವರಿವರ ಮನೆಯಲ್ಲಿ ಕೆಲಸ ಮಾಡುತ್ತಿದ್ದನೆಂಬುದೂ ತಿಳಿಯಿತು. ನಂತರ ಇದ್ದಕ್ಕಿದ್ದಂತೆ 407 ವಾಹನವನ್ನು ಕೊಂಡಾಗ ಮಾತ್ರ ಪ್ರತಿಯೊಬ್ಬರೂ ಬಾಸು ಗೌಡನ ಬಗ್ಗೆ ಹುಬ್ಬೇರಿಸಿದ್ದರು. ಆತ 407 ವಾಹನವನ್ನು ಕೊಂಡುಕೊಂಡ ಮೂರು ದಿನಗಳಲ್ಲಿಯೇ ಪೊಲೀಸರು ಬಾಸು ಗೌಡನನ್ನು ಬಂಧಿಸಿದಾಗ ಮಾತ್ರ ಬಾಸು ಗೌಡನ ಅಸಲೀ ಮುಖ ಹೊರಬಂದಿತ್ತು. ಸುತ್ತಮುತ್ತಲ ಊರುಗಳಲ್ಲಿ ಬಾಸುಗೌಡ ವೆನಿಲ್ಲಾ ಕಳ್ಳತನ ಮಾಡುತ್ತಿದ್ದ ಎನ್ನುವುದು ಪೊಲೀಸರ ಬಂಧನದ ನಂತರವೇ ಜಗಜ್ಜಾಹೀರಾಗಿತ್ತು. ವೆನಿಲ್ಲಾ ಕದ್ದು ಕದ್ದು ಸಾಕಷ್ಟು ಹಣ ಮಾಡಿಕೊಂಡು ಕೊನೆಗೊಮ್ಮೆ 407 ವಾಹನವನ್ನು ಕೊಂಡಿದ್ದ. ಬಾಸುಗೌಡನ ಪೋಟೋ ಇಂದಿಗೂ ಪೊಲೀಸ್ ಠಾಣೆಯಲ್ಲಿ ಇದೆ ಎಂದು ಒಂದಿಬ್ಬರು ಮಾಹಿತಿ ನೀಡಿದ್ದರು. ಇಂತಹ ಬಾಸುಗೌಡನನ್ನು `ಪಾಪ..' ಹೋಗಲಿ ಬಿಡಿ ಎಂದುಕೊಂಡು ಬೇಣದಗದ್ದೆಯ ಸುಬ್ರಹ್ಮಣ್ಯ ಹೆಗಡೆ ಬೇಲು ಕೊಡಿಸಿ ಬಿಡುಗಡೆ ಮಾಡಿಸಿದ್ದರಂತೆ.
             ಬಿಡುಗಡೆಯಾದ ಮೇಲೆ ಸಾಚಾತನ ತೋರಿಸಿದ ಬಾಸು ಗೌಡ ತನ್ನ 407 ವಾಹನದಲ್ಲಿ ಅವರಿವರಿಗೆ ಮನೆ ಕಟ್ಟುವ ಕೆಂಪು ಕಲ್ಲುಗಳನ್ನು, ಜಲ್ಲಿ, ಮರಳುಗಳನ್ನು ತಂದುಕೊಡುವ ಕೆಲಸ ಮಾಡತೊಡಗಿದ. ಮೂರ್ನಾಲ್ಕು ವರ್ಷ ಕಳೆದ ಮೇಲೆ ಸಣ್ಣ ಪ್ರಮಾಣದ ರೌಡಿಯಿಸಂ ಕೆಲಸಕ್ಕೂ ಬಾಸು ಗೌಡ ಇಳಿದಿದ್ದ. ಜನರಿಂದ ಮುಂಗಡ ಹಣ ಪಡೆದುಕೊಳ್ಳುವುದು, ಅದಕ್ಕೆ ಪ್ರತಿಯಾಗಿ ಸೆಕೆಂಡ್ ಗುಣಮಟ್ಟದ ಕಲ್ಲುಗಳನ್ನು ಸರಬರಾಜು ಮಾಡುವ ಕಾರ್ಯ ಮಾಡುತ್ತಿದ್ದ. ಇದಕ್ಕೆ ಪ್ರತಿಯಾಗಿ ಜನಸಾಮಾನ್ಯರು ಗಲಾಟೆ ಮಾಡಿದರೆ ತಂದು ಹಾಕಿದ್ದ ಕಲ್ಲನ್ನು ಬಲಾತ್ಕಾರವಾಗಿ ಎತ್ತಿಕೊಂಡು ಬರುವ ಕೆಲಸವನ್ನೂ ಮಾಡುತ್ತಿದ್ದ. ಈ ಕುರಿತಂತೆ ಒಂದೆರಡು ಸಾರಿ ಪೊಲೀಸ್ ಠಾಣೆಗಳಲ್ಲಿ ಪ್ರಕರಣವೂ ದಾಖಲಾಗಿತ್ತು. ಆದರೆ ಹಣದ ಪ್ರಭಾವ ಹಾಗೂ ರೌಡಿಯಿಸಮ್ಮಿನ ಕಾರಣದಿಂದ ಅಂತಹ ಪ್ರಕರಣ ಮುಚ್ಚಿಹಾಕುವ ಕಾರ್ಯದಲ್ಲಿ ಬಾಸು ಗೌಡ ಯಶಸ್ವಿಯಾಗುತ್ತಿದ್ದ. ಇಂತಹ ಬಾಸುಗೌಡ ಮರಗಳ್ಳತನ ಮಾಡುತ್ತಿದ್ದ ಎನ್ನುವುದು ಈಗ ಆಗಿರುವ ಗಾಯದಿಂದ ಗೊತ್ತಾದಂತಾಗಿತ್ತು. ರಾಮು ಮಾಡಿದ ದಾಳಿಯಿಂದಾಗಿ ಬಾಸು ಗೌಡನ ಇನ್ನೊಂದು ಮುಖ ಜಗತ್ತಿಗೆ ತಿಳಿದಂತಾಗಿತ್ತು. ಪ್ರದೀಪ ಈ ಎಲ್ಲ ಮಾಹಿತಿಗಳನ್ನು ಪಡೆದುಕೊಂಡು ಆಲೋಚನೆಯಲ್ಲಿ ಬಿದ್ದಿದ್ದ.
             ಮರಗಳ್ಳತನ ಮಾಡಿ ಗಾಯಗೊಂಡಿರುವವನು ಬಾಸು ಗೌಡನಾದರೆ ತನ್ನ ಕೈಯಲ್ಲಿ ಹೊಡೆತ ತಿಂದು ಸಾವನ್ನಪ್ಪಿದವನು ಯಾರು ಎನ್ನುವುದು ಪ್ರದೀಪನ ತಲೆಯಲ್ಲಿ ಕೊರೆಯಲಾರಂಭಿಸಿತ್ತು. ಬಾಸುಗೌಡ ಪಕ್ಕದ ಊರಿನವನೇ ಆಗಿದ್ದರೂ ಸತ್ತವನು ಎಲ್ಲಿಯವನು? ಪಕ್ಕದ ಊರಿನವನಾಗಿದ್ದರೆ ಗೊತ್ತಾಗಬೇಕಿತ್ತಲ್ಲ. ಯಾರೂ ಸಾವನ್ನಪ್ಪಿರುವ ಬಗ್ಗೆ ಮಾಹಿತಿ ಬಂದಿಲ್ಲ. ಬೇರೆ ಕಡೆಯಿಂದ ಬಂದವನೇ ಎಂದು ಆಲೋಚಿಸಿದ. ಸುತ್ತಮುತ್ತ ಮಾಹಿತಿ ಸಂಗ್ರಹಿಸಿದಾಗ ಇಬ್ಬರಿಗೆ ಹಾರ್ಟ್ ಎಟ್ಯಾಕ್ ಆಗಿ ಆಸ್ಪತ್ರೆಯಲ್ಲಿದ್ದಾರೆ ಎನ್ನುವ ಮಾಹಿತಿ ಸಿಕ್ಕಿತ್ತು. ಒಬ್ಬರಿಗೆ ಬ್ರೈನ್ ಟ್ಯೂಮರ್ ಆಗಿ ಮಂಗಳೂರಿನ ಆಸ್ಪತ್ರೆಗೆ ಎರಡು ದಿನಗಳ ಹಿಂದೆ ಕರೆದೊಯ್ಯಲಾಗಿದೆ ಎನ್ನುವ ಮಾಹಿತಿಯೂ ಸಿಕ್ಕಿತ್ತು. ಇವರ್ಯಾರೂ ಅಲ್ಲ. ಬೇರೆ ಇನ್ಯಾರು ಸತ್ತಿರಬಹುದು ಎಂದು ಪ್ರದೀಪ ಆಲೋಚನೆ ಮಾಡಲಾರಂಭಿಸಿದ್ದ.

***

              ಒಂದೆರಡು ದಿನಗಳಲ್ಲಿ ಏನೆಲ್ಲ ನಡೆದು ಹೋದವಲ್ಲ ಎಂದುಕೊಂಡ ವಿಕ್ರಮ. ಪ್ರದೀಪನಿಂದ ಸುಮ್ಮ ಸುಮ್ಮನೇ ಯಾವುದೋ ಸಮಸ್ಯೆ ಉದ್ಭವವಾಗಿರಬಹುದೇ ಎಂದೂ ಆತನ ಮನದಲ್ಲಿ ಮೂಡಿತು. ಪ್ರದೀಪ ಖಂಡಿತವಾಗಿಯೂ ಸಾಮಾನ್ಯನಲ್ಲ. ಈತ ಬೇರೇನೋ ಇರಬೇಕು ಎನ್ನುವ ಶಂಕೆ ಮತ್ತಷ್ಟು ಬಲವಾಯಿತು. ಅಷ್ಟರಲ್ಲಿ ಅವನ ಬಳಿಗೆ ಬಂದ ವಿಜೇತಾ `ವಿಕ್ಕಿ.. ಉಂಚಳ್ಳಿ ಜಲಪಾತಕ್ಕೆ ಹೋಗಿ ಬರೋಣವಾ? ಯಾಕೋ ಮನಸ್ಸೆಲ್ಲ ಒಂಥರಾ ಆಗಿದೆ. ಸ್ವಲ್ಪ ಮನಸ್ಸಿಗೆ ರಿಲ್ಯಾಕ್ಸ್ ಸಿಗುತ್ತೇನೋ ಅಂತ..' ಎಂದಳು.
             `ಖಂಡಿತ. ನಾನೂ ಅದನ್ನೇ ಹೇಳೋಣ ಅಂದುಕೊಂಡಿದ್ದೆ. ನೀನು ಹೇಳಿದ್ದು ಚೆನ್ನಾಯಿತು ನೋಡು. ಎಲ್ಲರಿಗೂ ಹೇಳುತ್ತೇನೆ. ಇವತ್ತೇ ಹೋಗಿ ಬರೋಣ..' ಎಂದು ತಯಾರಾಗಲು ಅನುವಾದ ವಿಕ್ರಮ.
              `ಬೇಗ.. ' ಅವಸರಿಸಿದಳು ವಿಜೇತಾ.
               ಕೆಲವೇ ಸಮಯದಲ್ಲಿ ಎಲ್ಲರಿಗೂ ಸುದ್ದಿ ತಿಳಿದು ಪ್ರತಿಯೊಬ್ಬರೂ ತಯಾರಾದರು. ವಿಕ್ರಮ ಕಾರನ್ನು ತೆಗೆದಿದ್ದ. ವಿನಾಯಕ, ವಿಷ್ಣು, ಪ್ರದೀಪ, ವಿಜೇತಾ, ವಿಕ್ರಮ ಹಾಗೂ ವಿನಾಯಕನ ತಂಗಿಯರು ತಯಾರಾಗಿ ಕಾರನ್ನೇರಿದ್ದರು. ದಂಟಕಲ್ಲಿನಿಂದ ಒಂದು ತಾಸಿನ ಅಂತರದಲ್ಲಿ ಯಲುಗಾರ, ಹೊಸಗದ್ದೆ, ಹೇರೂರು, ಹೆಗ್ಗರಣೆ ಈ ಮುಂತಾದ ಊರುಗಳನ್ನು ದಾಟಿ ಉಂಚಳ್ಳಿ ಜಲಪಾತದ ಬಳಿ ತೆರಳಿದರು.
              ಅಘನಾಶಿನಿ ನದಿಯಿಂದ ಸೃಷ್ಟಿಯಾಗುವ ಈ ಜಲಪಾತವನ್ನು ಲೂಷಿಂಗ್ಟನ್ ಜಲಪಾತ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ. ಶಿರಸಿಯಿಂದ 30 ಕಿಲೋಮೀಟರ್ ಅಂತರದಲ್ಲಿರುವ ಈ ಜಲಪಾತದ ಎತ್ತರ 116 ಮೀಟರ್. 1845ರಲ್ಲಿ ಉತ್ತರ ಕನ್ನಡದಲ್ಲಿ ಸರ್ವೇ ಕಾರ್ಯ ನಿರ್ವಹಿಸುತ್ತಿದ್ದ ಬ್ರಿಟೀಷ್ ಅಧಿಕಾರಿ ಜೆ. ಡಿ. ಲೂಷಿಂಗ್ಟನ್ ಈ ಜಲಪಾತವನ್ನು ಕಂಡುಹಿಡಿದ ಎಂಬ ಮಾಹಿತಿಯಿದೆ. ಆದ್ದರಿಂದ ಈ ಜಲಪಾತವನ್ನು ಲೂಷಿಂಗ್ಟನ್ ಜಲಪಾತ ಎಂದು ಕರೆಯುತ್ತಾರೆ. ಈ ಜಲಪಾತದ ನೀರು ಬೀಳುವಾಗ ಭಾರಿ ದೊಡ್ಡ ಶಬ್ದ ಉಂಟುಮಾಡುತ್ತದೆ. ಆ ಕಾರಣದಿಂದ ಸ್ಥಳೀಯರು ಈ ಜಲಪಾತವನ್ನು `ಕೆಪ್ಪ ಜೋಗ' ಎಂದು ಕರೆಯುತ್ತಾರೆ. ವರ್ಷದ ಎಲ್ಲ ಕಾಲದಲ್ಲಿಯೂ ಈ ಜಲಪಾತದ ದರ್ಶನ ಲಭ್ಯ. ಮಳೆಗಾಲದಲ್ಲಂತೂ ಇದು ರುದ್ರರಮಣೀಯ.
              ಬೇಸಿಗೆಯಾದ್ದರಿಂದ ಜಲಪಾತದಲ್ಲಿ ನೀರು ಅಷ್ಟಾಗಿ ಇರಲಿಲ್ಲ. ಆದರೆ ಜಲಪಾತ ಬಹಳ ಸುಂದರವಾಗಿ ಕಾಣುತ್ತಿತ್ತು. ಕಾರಿನಿಂದ ಇಳಿದವರು ಓಡಿದಂತೆ ಸಾಗಿದರು. ವೀಕ್ಷಣಾ ಗೋಪುರದ ಬಳಿ ನಿಂತು ಜಲಪಾತ ನೋಡಿದವರಿಗೆ ಸಮಯ ಸರಿದಿದ್ದೇ ಗೊತ್ತಾಗಲಿಲ್ಲ. ಜಲಪಾತಕ್ಕೆ ಮಳೆಗಾಲದ ಅಬ್ಬರ ಇರಲಿಲ್ಲ. ಕಲಕಲಕಿಸುತ್ತ ಇಳಿದು ಬರುತ್ತಿದ್ಧಳು ಅಘನಾಶಿನಿ. ಮಳೆಗಾಲದಲ್ಲಿ ಅಬ್ಬರದಿಂದ ಸದ್ದು ಮಾಡುತ್ತಿದ್ದವಳು ಇವಳೇ ಹೌದಾ ಎನ್ನುವಷ್ಟು ಸೌಮ್ಯ. ಒಂದೇ ನೋಟಕ್ಕೆ ಎಲ್ಲರ ಮನಸ್ಸನ್ನು ಕದ್ದು ಬಿಟ್ಟಿದ್ದಳು.
           'ಕೆಳಗೆ ಹೋಗಬಹುದಾ?' ಕೇಳಿದ್ದಳು ವಿಜೇತಾ.

(ಮುಂದುವರಿಯುತ್ತದೆ)

Friday, October 2, 2015

ಅಂ-ಕಣ-7

ನಿಶ್ಚಿಂತೆ

ತಲೆ ಮೇಲೆ
ಹತ್ತಿ ಕೂರುವವರು
ತಲೆ ದೊಡ್ಡದೋ, ಸಣ್ಣದೋ
ಎಂದು
ತಲೆ ಕೆಡಿಸಿಕೊಳ್ಳುವುದಿಲ್ಲ ||


ಹೊಸಮನೆ ಹೆಸರು

ಸಿನಿಮಾ ನಿರ್ದೇಶಕ
ಮಠ ಗುರುಪ್ರಸಾದ್
ಹೊಸ ಮನೆ ಕಟ್ಟಿಸಿದರೆ
ಇಡಬಹುದಾದ
ಹೊಸ ಹೆಸರು
ಗುರು-ವಿಲ್ಲಾ|
ಗುರುವಿಲ್ಲಾ||


ದಪ್ಪ

ದಪ್ಪ ಇರುವವರನ್ನು
ನೋಡಿದಾಗಲೆಲ್ಲಾ
HOWದಪ್ಪ ಎನ್ನಿಸುತ್ತದೆ ||

Tuesday, September 22, 2015

ಮಾಸ್ತರ್ ಮಂದಿ-7

             ಇಲ್ಲಿಯ ತನಕ ಪ್ರಾಥಮಿಕ ಶಾಲೆಯಲ್ಲಿ ಕಲಿಸುತ್ತಿದ್ದ ಶಿಕ್ಷಕರ ಬಗ್ಗೆ ಬರೆದಿದ್ದೇನೆ. ನಂತರ ಹೈಸ್ಕೂಲಿನಲ್ಲಿ ಕಲಿಸಿದವರ ಬಗ್ಗೆ ಬರೆಯಲೇ ಬೇಕು. ಪ್ರತಿಯೊಬ್ಬರ ಬದುಕಿನಲ್ಲಿಯೂ ಹೈಸ್ಕೂಲು ಎನ್ನುವುದು ಬದಲಾವಣೆಯ ಪ್ರಮುಖ ಘಟ್ಟ. ಬಾಲ್ಯದ ಬದುಕನ್ನು ಕಳೆದು ಟೀನೇಜ ಬದುಕಿಗೆ ಕಾಲಿಡುವ ಘಳಿಗೆ ಇದು. ಯಾವು ಯಾವುದೋ ಆಕರ್ಷಣೆ, ಹುಚ್ಚು ಬಯಕೆಗಳಿಗೆ ಬಿದ್ದುಬಿಡುವ ಸಮಯವೂ ಇದೆ. ಇಂತಹ ಸಂದರ್ಭದಲ್ಲಿ ಕಲಿಸುವ ಶಿಕ್ಷಕರು ಬಹಳ ಪ್ರಭಾವ ಬೀರುತ್ತಾರೆ ಎನ್ನುವುದು ಸುಳ್ಳಲ್ಲ ನೋಡಿ. ಅಂದಹಾಗೆಯೇ ನಾನು ಹೈಸ್ಕೂಲನ್ನು ಓದಲು ಹೋಗಿದ್ದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿರುವ ಕಾನಲೆಯಲ್ಲಿ. ಆ ದಿನಗಳಲ್ಲಿ ನಮ್ಮ ಮನೆಯಲ್ಲಿ ಜಸ್ಟ್ ಹಿಸೆ ಆಗಿತ್ತು. ಅಪ್ಪನ ಕೈಯಲ್ಲಿ ನಯಾಪೈಸೆ ದುಡ್ಡಿರಲಿಲ್ಲ. ಹೆಂಗಪ್ಪಾ ಓದಿಸೋದು ಎಂದು ಹೇಳುತ್ತಿದ್ದ ಹಾಗೆಯೇ ನಾನು ಕಾನಲೆಯಲ್ಲಿ ಓದುತ್ತೇನೆ ಎಂದು ಹೇಳಿಬಿಟ್ಟಿದ್ದೆ. ನನಗೆ ಗುರಣ್ಣ ಹಾಗೂ ಗಿರೀಶಣ್ಣ ಇರುತ್ತಾರೆ ಎನ್ನುವ ಕಾರಣವೂ ಮುಖ್ಯವಾಗಿತ್ತು. ಕಾನಲೆಯಲ್ಲಿ ದೊಡ್ಡಪ್ಪನ ಮನೆಯಲ್ಲಿ ಈ ವಿಷಯ ಪ್ರಸ್ತಾಪ ಮಾಡಿದಾಗ ಓಕೆ ಎಂದಿದ್ದರು. ಅರ್ಧ ಭಯದಿಂದ, ಅರ್ಧ ಕುತೂಹಲದಿಂದ ನನ್ನ ಹಡಪ ಕಟ್ಟಿಕೊಂಡು ಹೈಸ್ಕೂಲಿಗೆ ಕಾಲಿಟ್ಟಿದ್ದೆ.
                ಕಾನಲೆ ಹೈಸ್ಕೂಲಿನ ಬಗ್ಗೆ ಕೆಲವು ಮಾತುಗಳನ್ನು ಹೇಳಿದ ನಂತರವೇ ನನಗೆ ಕಲಿಸಿದ ಶಿಕ್ಷಕರ ಬಗ್ಗೆ ವಿವರಗಳನ್ನು ನೀಡುತ್ತೇನೆ. ಕಾನಲೆಯಲ್ಲಿ ಮುಖ್ಯವಾಗಿ ಮೂರು ಕೇರಿಗಳಿವೆ. ಬ್ರಾಹ್ಮಣರ ಕೇರಿ, ಅಚ್ಚೆಕೇರಿ ಹಾಗೂ ಇನ್ನೊಂದು ಕೇರಿ. ಸಾಗರ ಹಾಗೂ ಸಿದ್ದಾಪುರಕ್ಕೆ ಖಾಸಗಿ ಬಸ್ಸುಗಳು ಹೆಚ್ಚಾಗಿ ಓಡಾಡುವ ಮೇನ್ ರೋಡಿನಲ್ಲಿ ಬ್ರಾಹ್ಮಣರ ಕೇರಿಯಿದ್ದರೆ ಆ ಕೇರಿಯ ಕೊಟ್ಟ ಕೊನೆಯಲ್ಲಿ ಗುಡ್ಡದ ಮೇಲೆ ಕಾನಲೆ ಹೈಸ್ಕೂಲಿತ್ತು. 5 ಎಕರೆಯ ಕಂಪೌಂಡಿನಲ್ಲಿದ್ದ ಹೈಸ್ಕೂಲಿಗೆ ನಾನು ಬರುವ ವೇಳೆಗೆ ಹೊಸ ಕಟ್ಟಡ ನಿರ್ಮಾಣವಾಗಿ ಮೂರೋ ನಾಲ್ಕೋ ವರ್ಷಗಳು ಕಳೆದಿದ್ದವು. ಇಂಗ್ಲೀಷಿನ L ಆಕಾರದಲ್ಲಿ ಕೈಸ್ಕೂಲಿ ನಿರ್ಮಾಣವಾಗಿದ್ದರೆ ಅದಕ್ಕೆ ತಾಗಿಕೊಂಡಂತೆ ದೊಡ್ಡ ಮೈದಾನವಿತ್ತು. ಗೊಚ್ಚುಮಣ್ಣಿನ ಮೈದಾನದಲ್ಲಿ ಉರುಳಿಬಿದ್ದರೆ ಮೈ ಕೈ ತರಚಿ ಹೋಗುತ್ತಿತ್ತು ಬಿಡಿ. ಹೈಸ್ಕೂಲಿಗೆ ಹೋಗುವ ರಸ್ತೆಯ ಕುರಿತಂತೆ ಗಲಾಟೆ ನಡೆಯುತ್ತಿತ್ತು.
            ಕಾನಲೆಯ ಹೈಸ್ಕೂಲು ಐದು ಎಕರೆ ಕಂಪೌಂಡು ಎಂದು ಆಗಲೇ ಹೇಳಿದ್ದೆನಲ್ಲ. ಈ ಐದು ಎಕರೆ ಜಮೀನು ಕಾನಲೆಯ ಬ್ರಾಹ್ಮಣರ ಕೇರಿಗೆ ಸರ್ಕಾರಿ ಗೋಮಾಳ ಎನ್ನುವ ಹೆಸರಿನಲ್ಲಿತ್ತು. ಆದರೆ ಊರಿಗೆ ಹೈಸ್ಕೂಲು ಬಂದರೆ ಒಳ್ಳೆಯದಲ್ಲವೇ ಎನ್ನುವ ಕಾರಣಕ್ಕಾಗಿ ಊರ ಬ್ರಾಹ್ಮಣರ ಮುಖಂಡರುಗಳು ಸೇರಿಕೊಂಡು ಜಾಗ ಬಿಟ್ಟುಕೊಟ್ಟಿದ್ದರು. ಆದರೆ ಈ ಹೈಸ್ಕೂಲಿಗೆ ಬರಲು ರಸ್ತೆಯೇ ಸರಿ ಇರಲಿಲ್ಲ. ಗಡೇಮನೆ ಹಾಗೂ ಕಾನಲೆಗೆ ಸೇರಿದ ಗುಡ್ಡದ ಹಿಂಭಾಗದಲ್ಲಿ ಹೈಸ್ಕೂಲಿಗೆ ಬರಲು ಗುಡ್ಡವನ್ನು ಹತ್ತಬೇಕು. ಹೈಸ್ಕೂಲಿಗೆ ಬರಲು ರಸ್ತೆಗೆ ಜಾಗವನ್ನು ನೀಡಲು ಯಾರೂ ತಯಾರಿರಲಿಲ್ಲ. ಈ ಕಾರಣದಿಂದ ಒಂದಿಷ್ಟು ದಿನ ಕಾಲುಹಾದಿಯೇ ಹೈಸ್ಕೂಲಿಗೆ ಗತಿಯಾಗಿತ್ತು. ನಂತರದ ದಿನಗಳಲ್ಲಿ ಸ್ಥಳೀಯ ಗ್ರಾಮ ಪಂಚಾಯತಿಗೆ ಅಧ್ಯಕ್ಷನಾಗಿ ಆಯ್ಕೆಯಾಗಿದ್ದ ಸೊಸೈಟಿ ರಾಮಪ್ಪ ಎನ್ನುವವನ ಮನೆಯ ಪಕ್ಕದಲ್ಲಿ ರಸ್ತೆಯಾಯಿತು. ನಂತರ ಪುಟ್ಟಜ್ಜನ ಮನೆ ಪಕ್ಕದಲ್ಲಿ ರಸ್ತೆಯಾಯಿತು.
           ಪುಟ್ಟಜ್ಜನ ಮನೆಯ ಪಕ್ಕದಲ್ಲಿ ಪುಟ್ಟಜ್ಜನ ಮನೆ ಜಾಗದಲ್ಲಿಯೇ ರಸ್ತೆ ಮಾಡಿದ್ದು ಹಲವಾರು ದಿನಗಳ ಕಾಲ ಗಲಾಟೆಗೂ ಕಾರಣವಾಗಿತ್ತು. ಪುಟ್ಟಜ್ಜ ಮೂರು ಮೂರು ಇಂಜೆಕ್ಷನ್ ಅರ್ಜಿಗಳನ್ನೂ ಹಾಕಿದ್ದರು. ಆದರೆ ಆ ನಂತರದ ದಿನಗಳಲ್ಲಿ ಕಾನಲೆಯ ಶೇಷಗಿರಿಯಣ್ಣ ಹಾಗೂ ಇತರರು ಜಾಗವನ್ನು ಬಿಟ್ಟುಕೊಡುವ ಮೂಲಕ ದೊಡ್ಡತನ ಮೆರೆದಿದ್ದರು. ಪದೆ ಪದೆ ನಡೆಯುತ್ತಿದ್ದ ಗಲಾಟೆಗೆ ಪುಲ್ ಸ್ಟಾಪ್ ಹಾಕಿದ್ದರು. ಇಂತಹ ಕಾನಲೆಯ ಹೈಸ್ಕೂಲಿನಲ್ಲಿ ನಾನು ಓದುತ್ತಿದ್ದ ಸಂದರ್ಬದಲ್ಲಿ 150ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದರು. ಅವರಲ್ಲಿ ನನ್ನ ಕ್ಲಾಸಿನಲ್ಲಿ ನಾವು ನಾಲ್ಕು ಜನ ಹಾಗೂ ಮೇಲಿನ ಕ್ಲಾಸಿನಲ್ಲಿ ನಾಲ್ಕು ಜನ ಸೇರಿ ಒಟ್ಟೂ ಎಂಟು ಜನ ಬ್ರಾಹ್ಮಣರ ಹುಡುಗರಿದ್ದರು. ಉಳಿದವರೆಲ್ಲ ದೀವರು, ಗೌಡರು, ಒಕ್ಕಲಿಗರು, ಶೆಟ್ಟರು ಈ ಮುಂತಾದವರೇ ಆಗಿದ್ದರು. ಹೈಸ್ಕೂಲಿನ ಶಿಕ್ಷಕರ ವಿಷಯ ಸಾಕಷ್ಟು ಹೇಳಲೇಬೇಕು ಬಿಡಿ. ಬಿಆರ್.ಎಲ್, ಸಿ.ಆರ್.ಎಲ್, ಪಿಬಿಎನ್, ವನಮಾಲಾ ಟೀಚರ್, ವಿನೋದಾ ನಾಯ್ಕ, ಕೆಬಿಎನ್, ಲಕ್ಷಪ್ಪ ಸರ್, ಭಾರತೀ ಹೆಗಡೆ, ಎಚ್.ಎಸ್.ಎಸ್., ಗ್ರೇಸ್ ಪ್ರೇಮಕುಮಾರಿ ಇವರ ಬಗ್ಗೆ ಹೇಳುವುದು ಸಾಕಷ್ಟಿದೆ ಎನ್ನಿ.

ವನಮಾಲಾ ಮೇಡಮ್ :
ಸಾಗರದಿಂದ ಕಾನಲೆಗೆ ಡೈಲಿ ಬಂದು ಹೋಗಿ ಮಾಡುತ್ತಿದ್ದ ವನಮಾಲಾ ಮೇಡಮ್ ಆ ದಿನಗಳಲ್ಲಿ ನನ್ನ ಕ್ಲಾಸಿನ ಅನೇಕ ಹುಡುಗರ ಮನಸ್ಸನ್ನು ಕದ್ದವರು ಬಿಡಿ. ನೋಡಲು ಸುಂದರವಾಗಿದ್ದರು. ನಕ್ಕರೆ ಗುಳಿಕೆನ್ನೆ ಎದ್ದು ಕಾಣುತ್ತಿತ್ತು. ಅಪರೂಪಕ್ಕೆ ಬಯ್ಯುತ್ತಿದ್ದರು. ಸಿಟ್ಟು ಕಡಿಮೆ. ಧ್ವನಿ ಕೂಡ ಬಹಳ ಕಡಿಮೆ. ನಿಧಾನವಾಗಿ ಪಾಠ ಮಾಡುತ್ತಿದ್ದ ವನಮಾಲಾ ಮೇಡಮ್ಮಿಗೆ ಬಹುಶಃ 25-26ರ ಆಜೂಬಾಜಿನಲ್ಲಿ ವಯಸ್ಸಾಗಿತ್ತೇನೋ ಬಿಡಿ. ಇನ್ನೂ ಮದುವೆಯಾಗಿರಲಿಲ್ಲ. ವಿ.ಎನ್.ಆರ್. ಎಂದು ಶಾರ್ಟ್ ಫಾರ್ಮಿನಲ್ಲಿ ಕರೆಯುತ್ತಿದ್ದೆವು. ಸಮಾಜ ವಿಜ್ಞಾನವನ್ನು ಕಲಿಸಲು ಬರುತ್ತಿದ್ದರು. ಎಂಟನೇ ಕ್ಲಾಸಿನಲ್ಲಿ ನಾನು ಓದುತ್ತಿದ್ದಾಗ ಇವರ ಮೊದಲ ತರಗತಿಗೆ ನಾನು ಅಟೆಂಡ್ ಆಗಿದ್ದೆ. ಶಿವಮೊಗ್ಗ ಜಿಲ್ಲೆಯಲ್ಲಿದ್ದ ಹೈಸ್ಕೂಲಿನಲ್ಲಿ ಉತ್ತರ ಕನ್ನಡದಿಂದ ಬಂದಿದ್ದ ಏಕೈಕ ಹುಡುಗ ನಾನಾಗಿದ್ದೆ ಬಿಡಿ. ಶಿವಮೊಗ್ಗ ಸೀಮೆಯಲ್ಲಿ ಪ್ರತಿಯೊಬ್ಬರ ಹೆಸರನ್ನೂ ಇನ್ ಶಿಯಲ್ ಮೂಲಕ ಕರೆಯುತ್ತಿದ್ದರೆ ನಮ್ಮಲ್ಲಿ ಮಾತ್ರ ಉದ್ದುದ್ದಕ್ಕೆ ಕರೆಯುತ್ತಿದ್ದರು. ಹೆಸರಿನ ಮುಂದೆ ಅಪ್ಪನ ಹೆಸರು ಹಾಗೂ ಊರಿನ ಹೆಸರನ್ನು ಶಿವಮೊಗ್ಗ ಸೀಮೆಯಲ್ಲಿ ಮೊದಲ ಅಕ್ಷರದ ಜೊತೆಗೆ ಕರೆಯುತ್ತಿದ್ದರು. ಆದರೆ ನನಗೆ ಹಾಗಲ್ಲ ನೋಡಿ. ನಾನು ವಿನಯ ಸುಬ್ರಾಯ ಹೆಗಡೆ ಎಂದೇ ಕರೆಸಿಕೊಳ್ಳಬೇಕಿತ್ತು. ಒಮ್ಮೆ ವನಮಾಲಾ ಮೇಡಮ್ ಈ ಹೆಸರನ್ನು ಕೇಳಿ ತಮಾಷೆಯೂ ಮಾಡಿದ್ದರು.
ಎಂಟನೇ ಕ್ಲಾಸಿನಲ್ಲಿ ನಾನು ಹೈಸ್ಕೂಲಿಗೆ ಬುದ್ಧಿವಂತ ಹುಡುಗ ಎನ್ನುವ ಬಿರುದು ಬಾವಲಿಯನ್ನು ಗಳಿಸಿಕೊಂಡಿದ್ದೆ. ಅಕ್ಷರವೂ ಸಾಕಷ್ಟು ಸುಂದರವಾಗಿ ಮೂಡುತ್ತಿತ್ತು. ಆ ಕಾರಣದಿಂದ ನಾನು ಮಾಡಿಕೊಳ್ಳುತ್ತಿದ್ದ ನೋಟ್ಸಿಗೆ ಸಾಕಷ್ಟು ಬೇಡಿಕೆ ಬರುತ್ತಿತ್ತು. ಹೈಸ್ಕೂಲಿನ ಹುಡುಗಿಯರ ವಲಯದಲ್ಲಿ ನನ್ನ ನೋಟ್ ಪುಸ್ತಕ ಯಾವಾಗಲೂ ಓಡಾಡುತ್ತಿತ್ತು. ವನಮಾಲಾ ಮೇಡಮ್ ಕೂಡ ಪರೀಕ್ಷೆಯ ದಿನಗಳಲ್ಲಿ ನನ್ನ ನೋಟ್ಸನ್ನು ಪಡೆದುಕೊಂಡು ಹೋಗಿ ಅದರಲ್ಲಿನ ವಿಷಯಗಳನ್ನು ಪ್ರಶ್ನೆ ರೂಪದಲ್ಲಿ ಕೇಳುತ್ತಿದ್ದರು.
ಒಂಭತ್ತನೇ ಕ್ಲಾಸಿನಲ್ಲಿದ್ದಾಗ ಒಂದು ಘಟನೆ ಜರುಗಿತ್ತು. ವನಮಾಲಾ ಮೇಡಂ ಅವರಿಗೆ ಸಿಕ್ಕಾಪಟ್ಟೆ ಜ್ವರ. ಮೂರ್ನಾಲ್ಕು ದಿನ ಹೈಸ್ಕೂಲಿಗೆ ಬಂದಿರಲಿಲ್ಲ. ಆ ಸಂದರ್ಭದಲ್ಲಿಯೇ ಎಕ್ಸಾಂ ಕೂಡ ಬಂದಿತ್ತು. ಯಥಾಪ್ರಕಾರ ನನ್ನ ನೋಟ್ಸನ್ನು ತೆಗೆದುಕೊಂಡು ಹೋದ ವನಮಾಲಾ ಮೇಡಮ್ ಅದರ ಮೇಲೆ ಪ್ರಶ್ನೆ ಪತ್ರಿಕೆ ತಯಾರು ಮಾಡಿದ್ದರು. ಬರೆಯಲು ಅಸಾಧ್ಯ ಎನ್ನುವಂತಾಗಿದ್ದರಿಂದ ಎಂಟನೇ ತರಗತಿಯಲ್ಲಿ ಓದುತ್ತಿದ್ದ ಒಬ್ಬ ವಿದ್ಯಾರ್ಥಿನಿಯಿಂದ ಪ್ರಶ್ನೆಗಳನ್ನು ಬರೆಸಿದ್ದರು. ಆ ದಿನಗಳಲ್ಲಿ ಪರೀಕ್ಷೆಗಳಲ್ಲಿ ನನಗೆ 25ಕ್ಕೆ 20ರ ಮೇಲೆ ಅಂಕಗಳು ಬೀಳುತ್ತಿತ್ತು ಎಂದೆನಲ್ಲ. ನನಗೆ ಪ್ರತಿಸ್ಪರ್ಧಿಗಳೂ, ಆಗದೇ ಇದ್ದವರೂ ಸಾಕಷ್ಟು ಸಂಖ್ಯೆಯಲ್ಲಿದ್ದರು. ಅವರು ಈ ಸಾರಿ ಮಾತ್ರ ನನ್ನಿಂದ ವನಮಾಲಾ ಮೇಡಂ ನೋಟ್ಸನ್ನು ಪಡೆದು ಪ್ರಶ್ನೆ ಪತ್ರಿಕೆ ರೂಪಿಸಿದ್ದಾರೆ ಎನ್ನುವುದನ್ನು ತಿಳಿದು ಸುಳ್ಳು ಸುಳ್ಳೇ ಗಾಳಿ ಸುದ್ದಿಯನ್ನು ಹಬ್ಬಿಸಿಬಿಟ್ಟರು. ವಿನಯನ ನೋಟ್ ಬುಕ್ಕಿನ ಮೇಲೆ ವನಮಾಲಾ ಮೇಡಂ ಯಾವ ಯಾವ ಪ್ರಶ್ನೆ ತೆಗೆದಿದ್ದೇನೆ ಎಂದು ಟಿಕ್ ಮಾಡಿದ್ದಾರೆ. ಇದರಿಂದ ವಿನಯನಿಗೆ ಜಾಸ್ತಿ ಅಂಕಗಳು ಬೀಳುತ್ತವೆ. ಎಂಟನೇ ತರಗತಿ ವಿದ್ಯಾರ್ಥಿನಿಯಿಂದ ಬರೆಸಿದ್ದಾರೆ ಎಂದೂ ಹಬ್ಬಿಸಿದರು. ಅಷ್ಟೇ ಅಲ್ಲದೇ ಈ ವಿಷಯವನ್ನು ಇಂಗ್ಲೀಷ್ ಕಲಿಸಲು ಬರುತ್ತಿದ್ದ ಬಿ.ಆರ್.ಎಲ್. ಅವರ ಬಳಿ ಹೇಳಿಬಿಟ್ಟಿದ್ದರು. ಅವರೋ ಶಾಲೆಯಲ್ಲಿ ಗಲಾಟೆಯನ್ನೂ ಮಾಡಿದರು ಎನ್ನಿ. ಈ ಸಂದರ್ಭದಲ್ಲಿ ಜ್ವರ ಕಡಿಮೆಯಾದ ಮೇಲೆ ಶಾಲೆಗೆ ವಾಪಾಸು ಬಂದ ವನಮಾಲಾ ಮೇಡಂ ಮೊಟ್ಟ ಮೊದಲ ಬಾರಿಗೆ ಬಂದು ಜಗಳ ಮಾಡಿದ್ದು ನೋಡಬೇಕಿತ್ತು. ಚೆಂದದ ಮೇಡಮ್ ಇಷ್ಟು ಸಿಟ್ಟು ಮಾಡಿಕೊಳ್ಳಲು ಸಾಧ್ಯವೇ ಎಂದು ಬೆರಗಿನಿಂದ ನೋಡಿದ್ದೆ.
ನನ್ನ ನೋಟ್ ಬುಕ್ಕಿನ ತಪಾಸಣೆಯೂ ಆಗಿತ್ತು. ಅದರ ಮೇಲೆ ಯಾವುದೇ ಟಿಕ್ಕುಗಳಿರಲಿಲ್ಲ. ಎಂಟನೇ ಕ್ಲಾಸಿನಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ ಪ್ರಶ್ನೆ ಪತ್ರಿಕೆಯನ್ನು ತನ್ನ ಕೈಯಲ್ಲಿ ಮೇಡಮ್ ಬರೆಸಿರುವುದಾಗಿ ಒಪ್ಪಿಕೊಂಡಳು. ಕೊನೆಗೆ ಗಲಾಟೆ ಹೆಚ್ಚಾಗಿ ಮರು ಪರೀಕ್ಷೆ ಮಾಡಲಾಯಿತು. ವಿಚಿತ್ರ ಎಂದರೆ ಮೊದಲು ಮಾಡಿದ್ದ ಪರೀಕ್ಷೆಯಲ್ಲಿ ನನಗೆ 25ಕ್ಕೆ 21 ಅಂಕಗಳು ಬಿದ್ದಿದ್ದವು. ಆದರೆ 2ನೇ ಸಾರಿ ಮಾಡಿದ ಪರೀಕ್ಷೆಯಲ್ಲಿ ನನಗೆ 25ಕ್ಕೆ 24 ಅಂಕಗಳು ಬೀಳುವ ಮೂಲಕ ನನ್ನ ಮೇಲೆ ಬರುತ್ತಿದ್ದ ಆಪಾದನೆಯನ್ನೂ ತಪ್ಪಿಸಿಕೊಂಡಿದ್ದೆ ಬಿಡಿ.
ನಮಗೆ ದೈಹಿಕ ಶಿಕ್ಷಕರಾಗಿ ಸಿ.ಆರ್. ಲಿಂಗರಾಜು ಎನ್ನುವವರಿದ್ದರು. ಅದೇನು ಕಾರಣವೋ ಗೊತ್ತಿಲ್ಲ. ವನಮಾಲಾ ಮೇಡಮ್ಮಿಗೂ ಲಿಂಗರಾಜ ಸರ್ ಗೂ ಬಹಳ ಗಲಾಟೆ ನಡೆಯುತ್ತಿತ್ತು. ಕ್ಲಾಸಿನ ನಡುವೆಯೇ ಒಂದೆರಡು ಸಾರಿ ಈ ಇಬ್ಬರೂ ಜಗಳ ಮಾಡಿಕೊಂಡಿದ್ದನ್ನು ನಾವಿಬ್ಬರೂ ಕಂಡಿದ್ದೇವೆ. ಸಮಾಜ ವಿಜ್ಞಾನದ ತರಗತಿ ಸಂದರ್ಭದಲ್ಲಿ ಲಿಂಗರಾಜು ಸರ್ ಕ್ಲಾಸ್ ತೆಗೆದುಕೊಂಡು ಬಿಡುತ್ತಿದ್ದರು. ಲಿಂಗರಾಜು ಸರ್ ಕ್ಲಾಸ್ ಸಂದರ್ಭದಲ್ಲಿ ವನಮಾಲಾ ಮೇಡಂ ಸ್ಪೆಷಲ್ ಕ್ಲಾಸ್ ತೆಗೆದುಕೊಂಡು ಬಿಡುತ್ತಿದ್ದರು. ಇದರಿಂದ ಇಬ್ಬರ ನಡುವೆ ಗಲಾಟೆ ಬಹಳ ಆಗಿತ್ತೆನ್ನಿ. ಗಲಾಟೆ ನಮಗೆ ಮಜಾ ಅನ್ನಿಸಿತ್ತು. ಆ ಸಂದರ್ಭದಲ್ಲಿ ನಾವು ವಿದ್ಯಾರ್ಥಿಗಳೆಲ್ಲ ವನಮಾಲಾ ಮೇಡಂ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದೆವು. ನಮಗೆಲ್ಲ ಸಿಕ್ಕಾಪಟ್ಟೆ ಹೊಡೆಯುತ್ತಿದ್ದ ಲಿಂಗರಾಜ ಮಾಸ್ಟರ್ರಿಗೆ ಶರಂಪರ ಬಯ್ಯುತ್ತಿದ್ದೆವು ಬಿಡಿ. ಇತ್ತೀಚೆಗೆ ಕಾನಲೆ ಹೈಸ್ಕೂಲಿಗೆ ಭೇಟಿ ಕೊಟ್ಟಿದ್ದೆ. ಅಲ್ಲಿ ವನಮಾಲಾ ಮೇಡಮ್ ಇರಲಿಲ್ಲ. ಯಾವುದೋ ಹೈಸ್ಕೂಲಿಗೆ ವರ್ಗವಾಗಿದೆ ಎನ್ನುವ ಮಾಹಿತಿ ಬಂತು. ತಕ್ಷಣವೇ ಈ ಘಟನೆಗಳೆಲ್ಲ ನೆನಪಾಯಿತು.

(ಮುಂದುವರಿಯುತ್ತದೆ)

ಅಂ-ಕಣ-6

ಸಲಿಗೆ(ಸಲುಗೆ)

ಕೆಲವರನ್ನು 
ಹತ್ತಿರ ಬಿಟ್ಟುಕೊಂಡರೆ 
ತಲೆಯ ಮೇಲೆ 
ಹತ್ತಿ ಕುಳಿತುಕೊಳ್ಳುತ್ತಾರೆ..!!!

ಗೊಂದಲ

ಆಕೆ ತಿರುಗಿ 
ನೋಡುತ್ತಾಳೆ ಎಂದುಕೊಂಡೆ
ಕನ್ನಡಿಯಲ್ಲಿ ಇಣುಕಿದಳು ||

ಆರ್ತನಾದ

ಭಗವಾನರಿಗೆ 
ಪ್ರಶಸ್ತಿ ಕೊಟ್ಟ 
ಸಾಹಿತ್ಯ ಅಕಾಡೆಮಿ 
ಪ್ರತಿಭಟನೆಗೆ ಪ್ರತಿಯಾಗಿ 
ಹೀಗೆ ಹೇಳಬಹುದೇ?
`ಹೇ ಭಗವಾನ್....!!!'

ಬದಲಾವಣೆ

ನನ್ನನ್ನು ಬದಲಿಸಿದಳು
ಅವಳು ಬದಲಾದಳು ||

ಅಯ್ಯೋ ಪಾಪ:

ಹಿಂದೆ  ಭಗವಾನ್ ಅಂತ ಕನ್ನಡ ಸಿನೆಮಾ ಒಂದು ಬಂದಿತ್ತು. ದರ್ಶನ್ ಹಾಗೂ ಸಾಯಿಕುಮಾರ್ ಹೀರೋ ಆಗಿದ್ದರು. ಸಿನೆಮಾದಲ್ಲಿ ಹಲವಾರು ಭರ್ಜರಿ ಡೈಲಾಗುಗಳಿದ್ದವು. ಸಾಯಿಕುಮಾರ್ ಬ್ರಾಂಡಿನ ಹೇಯ್... ನಿನ್ನ..ನ್.. ಅನ್ನುವ ಡೈಲಾಗುಗಳಿಗೂ ಕೊರತೆಯಿರಲಿಲ್ಲ. ಇದೀಗ ಭಗವಾನ್ ಹೇಳಿಕೆಗಳು ಅದೇ ರೀತಿ ಇದೆ. ಒಟ್ನಲ್ಲಿ ಅಯ್ಯೋ ಪಾ...ಪ..

ವೈರುಧ್ಯ :

ಭಗವಂತ ಅಂದರೆ
ಗೌರವ
ಭಗವಾನ್ ಎಂದರೆ
ರೌರವ ||

ಕಾಣೆ

ಆಕೆ
ಕನ್ನಡಿಯಲ್ಲಿ ಕಂಡೂ
ಕಾಣೆಯಾದಳು ||

Monday, September 21, 2015

ಮಧ್ಯರಾತ್ರಿಯ ಕನಸು

ಮಧ್ಯರಾತ್ರಿಯ ಕನಸು
ಸವಿಯಲಿಕೆ ಬಲು ಸೊಗಸು
ಸವಿದು ಸವಿದೊಡೆ ಅದುವೆ
ಜೇನಿನಂತೆ, ಸವಿಯ ಸಂತೆ ||

ಮಧ್ಯರಾತ್ರಿಯ ಕನಸು
ಒಮ್ಮೆ ಭೀತಿಯ ತಿನಿಸು
ಮನದ ದೈರ್ಯಕೆ ಅಳುಕು
ಶಬ್ದದಂತೆ, ಜೀರುಲಿಯೆ ಅಂತೆ ||

ಮಧ್ಯರಾತ್ರಿಯ ಕನಸು
ಹೇಳಲಿಕೆ ಬಲು ಸೊಗಸು
ಸುಲಿದ ಕದಳಿಯ ಫಲವ
ಮೆಲ್ಲಿದಂತೆ, ರಸವ ಹೀರಿದಂತೆ ||

ಮಧ್ಯರಾತ್ರಿಯ ಕನಸು
ಅರ್ಥವಾಗದದು ಮನಸು
ಹಲವೆಂಟು ಚಿತ್ರಣವು
ಅರಿಯದಂತೆ, ಏನೂ ತಿಳಿಯದಂತೆ ||

ಮಧ್ಯರಾತ್ರಿಯ ಕನಸು
ಹೊಂದಿಹುದು ಹಲ ಧಿರಿಸು
ಹಲವಕ್ಕೆ ಕೆಲವಕ್ಕೆ ಅರ್ಥವಿಲ್ಲ
ಇದ್ದರೂ, ಅದು ವ್ಯರ್ಥವಂತೆ ||

------

(ಈ ಕವಿತೆಯನ್ನು ಬರೆದಿರುವುದು 04-04-2006ರಂದು ದಂಟಕಲ್ಲಿನಲ್ಲಿ)

Thursday, September 3, 2015

ಓಡಿ ಹೋಗಡ

ಮನೆ ಬಿಟ್ಟು, ಸಂಗ ತೊಟ್ಟು
ಓಡಿ ಹೋಗಡ ಕೂಸೆ
ಅಪ್ಪ ಅಮ್ಮನ ಜೊತೆಗೆ ಇಪ್ಪಲೆ
ನಿಂಗೇನು ಜಡಾ?

ಹಳ್ಳಿ ಮನೆ ಒಳ್ಳೆ ಬಾಳು
ನಿಂಗೆಂತಾ ಕಷ್ಟಾ ಕೂಸೆ
ಅಪ್ಪನ ಪ್ರೀತಿ, ಅಮ್ಮನ ಅಕ್ಕರೆ
ಮರೆತು ಬಿಡಡಾ |

ಕನಸು ಕಟ್ಟಿದ ಅಪ್ಪ ಅಮ್ಮನ
ಮರೆತು ಹೋಗಡಾ ಕೂಸೆ
ಓಡಿ ಹೋಗಿ ಎಲ್ಲ ಬಿಟ್ಟು
ಕಣ್ಣೀರ್ ಹಾಕ್ಸಡಾ |

ಕೂಸುಗಳಿಗೆ ಓದ್ಸೋದ್ ತಪ್ಪು
ಅಂತ ಹೇಳ್ಸಡಾ ಕೂಸೆ
ಮನೆ ಪ್ರೀತಿ ನೀರಲ್ ಹೋಮದ
ಹಂಗೆ ಮಾಡ್ಸಡಾ |

ಓಡುವ ಮುನ್ನ ಮನೆಯ ಪ್ರೀತಿ
ನೆನಪು ಮಾಡ್ಕಳೇ ಕೂಸೆ
ಅಪ್ಪ ಅಮ್ಮನ ಹೆಸರಿಗೆ ಹೊಲಸು
ಕಳಂಕ ಹೊರ್ಸಡಾ ||

****

(ಓಡಿ ಹೋಗುವ ಕೂಸುಗಳಿಗೆ ಬುದ್ಧಿ ಹೇಳುವ ರೀತಿಯದ್ದೊಂದು ಟಪ್ಪಾಂಗುಚ್ಚಿ ಸಾಂಗ್. ಮುಂದಿನ ದಿನಗಳಲ್ಲಿ ಈ ಸಾಂಗನ್ನೇ ವಿಸ್ತರಿಸಿ 2, 3ನೇ ಭಾಗ ಮಾಡುವ ಆಲೋಚನೆಯೂ ಇದೆ. ಸುಮ್ಮನೆ ತಮಾಷೆಗೆ ಬರೆದಿದ್ದು. ತೀರಾ ಮನಸಿಗೆ ಹಚ್ಗ್ಯಳಡಿ. ಮನಸಿಗೆ ಹಚ್ಗ್ಯಂಡಿ ಅಂದ್ರೆ ಆ ಎಂತಾ ಮಾಡಲೂ ಬರ್ತಿಲ್ಲೆ..)

Sunday, August 23, 2015

ಮಗುವಿನ ನಗು

ತೊಟ್ಟಿಲಲಿ ಮಲಗಿದ್ದ
ಪುಟ್ಟ ಕಂದನ ನಗುವು
ಮನೆಯೆಲ್ಲಾ ತುಂಬಿತ್ತು
ನನ್ನೊಲವ ಸೆಳೆದಿತ್ತು ||

ತೊಟ್ಟಿಲೊಳಗೆ ಆಡುತ್ತ
ಕೇಕೆಯನು ಹಾಕುತ್ತ
ಮಗುವದು ನಲಿದಿತ್ತು
ಕವಿ ಹೃದಯವ ತಾಕಿತ್ತು ||

ಜಗವದು ಕುಣಿವಂತೆ
ಮಾಡುವ ಶಕ್ತಿಯದು
ಪುಟ್ಟ ಮಗು ಮೂಡಿಸುವ
ಮುಗ್ಧತೆಯ ನಗೆಗಿತ್ತು ||

ಮಗುವದು ನಗುತಿರಲು
ಶಶಿಯುದಿಸಿ ಬಂದಂತೆ
ದೇವರನು ಕಂಡಂತೆ
ಜೀವ ಪುಳಕಗೊಂಡಿತು ||

****

(ಈ ಕವಿತೆಯನ್ನು ಬರೆದಿರುವುದು 19-12-2005ರಂದು ದಂಟಕಲ್ಲಿನಲ್ಲಿ)

ಮಾಸ್ತರ್ ಮಂದಿ-6

ಹರೀಶ ನಾಯ್ಕ :
              ನಾನು ಐದನೇ ಕ್ಲಾಸಿನಲ್ಲಿದ್ದಾಗ ಶಾಲೆಗೆ ಶಿಕ್ಷಕರಾಗಿ ಬಂದವರು ಹರೀಶ ನಾಯ್ಕರು. ಮೊಟ್ಟಮೊದಲ ಪೋಸ್ಟಿಂಗ್ ನಮ್ಮ ಶಾಲೆ. ಬಹಳ ಯಂಗ್ ಎಂಡ್ ಎನರ್ಜೆಟಿಕ್ ಆಗಿದ್ದ ಮಾಸ್ತರ್ ಬಹಳ ಚೆಂದ ಹಾಡು ಹೇಳುತ್ತಿದ್ದರು. ಪೋಸ್ಟಿಂಗಿಗೆ ಹಾಕುವ ಮುನ್ನ ಉತ್ತರ ಕನ್ನಡ ಜಿಲ್ಲೆಯ ಮ್ಯಾಪನ್ನು ನೋಡಿದ ಹರೀಶ ಮಾಸ್ತರ್ರಿಗೆ ಅಡ್ಕಳ್ಳಿ ಶಾಲೆ ಮುಖ್ಯ ರಸ್ತೆಯ ಪಕ್ಕದಲ್ಲಿಯೇ ಇದ್ದಂತೆ ಕಾಣಿಸಿತಂತೆ. ಒಳ್ಳೆಯ ಶಾಲೆ ಶಿರಸಿಗೂ ಹತ್ತಿರ ಇರಬಹುದು ಎಂದು ಪೋಸ್ಟಿಂಗ್ ಹಾಕಿಸಿಕೊಂಡು ಬಂದೇ ಬಿಟ್ಟರು. ಬಂದ ಮೇಲೆಯೇ ಗೊತ್ತಾಗಿದ್ದು ಮುಖ್ಯ ರಸ್ತೆಯಿಂದ ಅಡ್ಕಳ್ಳಿ ಶಾಲೆ 2 ಕಿಮಿ ದೂರದಲ್ಲಿದೆ ಎನ್ನುವುದು. ಶಿರಸಿಗೇನೋ 15 ಕಿ.ಮಿ ದೂರದಲ್ಲಿ ಶಾಲೆಯಿತ್ತು. ಆದರೆ ಶಾಲೆಗೆ ಬಸ್ ಸಂಪರ್ಕ ಬೇಕಲ್ಲ. ದಿನಕ್ಕೆ ಬೆಳಿಗ್ಗೆ ಹಾಗೂ ಸಂಜೆ ತಲಾ ಒಂದೊಂದು ಬಸ್ಸುಗಳಿದ್ದವು. ಅದನ್ನು ಬಿಟ್ಟರೆ ಬೇರೆ ಬಸ್ಸುಗಳೇ ಇರಲಿಲ್ಲ. ಹೀಗಾಗಿ ಅಡ್ಕಳ್ಳಿಯ ಸುತ್ತಮುತ್ತಲ ಊರುಗಳಲ್ಲಿ ಎಲ್ಲಾದರೂ ಉಳಿದುಕೊಳ್ಳಲು ಜಾಗವಿದೆಯೇ ಎಂದು ಪ್ರಯತ್ನಿಸಿದರು. ಅವರಿಗೆ ಎಲ್ಲೂ ಜಾಗಸಿಗಲಿಲ್ಲ. ಕೊನೆಗೆ ಶಾಲೆಯ ಪಕ್ಕದಲ್ಲಿಯೇ ಇದ್ದ ಕ್ವಾಟ್ರಸ್ಸಿನಲ್ಲಿ ಉಳಿದುಕೊಂಡರು. ಮುತ್ಮುರ್ಡಿನ ಕಿರಿಯ ಪ್ರಾಥಮಿಕ ಶಾಲೆಗೆ ಆಗತಾನೆ ಮಾಸ್ತರ್ರಾಗಿ ಬಂದಿದ್ದ ರಮೇಶ ನಾಯ್ಕರೂ ಅವರ ಜೊತೆ ಉಳಿದುಕೊಳ್ಳಲು ಆರಂಭಿಸಿದರು.
             ಹರೀಶ ಮಾಸ್ತರ್ರು ಅಡ್ಕಳ್ಳಿ ಶಾಲೆಗೆ ಬಂದ ದಿನ ನಾನು ದೋಸ್ತ ವಿಜಯನ ಜೊತೆಗೆ ಅಡ್ಕಳ್ಳಿಯ ಆರ್. ಜಿ. ಹೆಗಡೇರ ಮೆನೆಗ ಹೋಗಿದ್ದೆ. ಶಾಲೆಗೆ ಹೊಸ ಮಾಸ್ತರ್ರು ಬರ್ತಾರಂತೆ. ಅರ್ಜೆಂಟು ಬರಬೇಕಂತೆ ಎಂದು ಹೇಳಲು ನಾವು ತೆರಳಿದ್ದೆವು. ನಾವು ವಾಪಾಸು ಬರುವಷ್ಟರಲ್ಲಿ ಮಾರ್ಗ ಮಧ್ಯದಲ್ಲಿ ಹರೀಶ ಮಾಸ್ತರ್ರು ಗಡ್ಕರ್ ಮಾಸ್ತರ್ರ ಜೊತೆಗೆ ಆರ್. ಜಿ. ಹೆಗಡೇರ ಮನೆಗೆ ಬರುತ್ತಿರುವುದು ಕಾಣಿಸಿತ್ತು. ಗಡ್ಕರ್ ಮಾಸ್ತರ್ರು ನಮ್ಮನ್ನು ತೋರಿಸಿ `ನೋಡ್ರೀ.. ಇವ್ರೂ ನಿಮ್ಮ ಕ್ಲಾಸಿಗೆ ಬರೋ ಹುಡುಗರು. ಇಂವ ಹಾಂಗೆ.. ಅಂವ ಹೀಂಗೆ..' ಎಂದು ನನ್ನ ಹಾಗೂ ವಿಜಯನ ಗುಣಗಾನ ಮಾಡಿದರು. ನಾವು ಮಾಸ್ತರ್ರು ಹಂಗಂತೆ.. ಹಿಂಗಂತೆ ಎನ್ನುತ್ತಾ ಶಾಲೆಗೆ ಮರಳಿದ್ದೆವು.
           ಬಂದವರೇ ನಮ್ಮನ್ನೆಲ್ಲ ಪರಿಚಯ ಮಾಡಿಕೊಂಡರು. ಬಂದ ಹೊಸತರಲ್ಲಿ ನನಗೆ, ವಿಜಯನಿಗೆ ಹಾಗೂ ಹರೀಶ ಮಾಸ್ತರ್ರಿಗೆ ವಿಶೇಷ ಬಂಧ ಬೆಳೆಯಿತು. ಆದರೆ ಯಾವಾಗ ತಿಂಗಳೊಪ್ಪತ್ತಿನಲ್ಲಿ ಅವರು ಶೆಳಕೆಯಿಂದ ನಮಗೆಲ್ಲ ಹೊಡೆಯಲು ಆರಂಭಿಸಿದರೂ ಆವಾಗ ನಾವೂ ಬುದ್ಧಿವಂತಿಕೆಯಿಂದ ಸ್ವಲ್ಪ ಡಿಸ್ಟೆನ್ಸ್ ಮೆಂಟೆನ್ ಮಾಡಿದೆವು. ನಾವು ಬಿಟ್ಟರೂ ಹರೀಶ ಮಾಸ್ತರ್ರು ಬಿಡಬೇಕಲ್ಲ. ನಮ್ಮನ್ನು ಕಾಡಿದರು. ಅದೇನೇನೋ ಕೆಲಸಗಳನ್ನು ಕೊಟ್ಟರು. ವಿಜ್ಞಾನ ವಿಷಯವೆಂದರೆ ಕೇವಲ ಪಠ್ಯಕ್ಕೆ ಮಾತ್ರ ಸೀಮಿತವಾಗಿದ್ದ ನಮಗೆಲ್ಲ ವಿಜ್ಞಾನ ಪ್ರಯೋಗಗಳನ್ನು ಮಾಡುವುದು ಎಂದರೆ ಹೀಗೆ ಎನ್ನುವುದನ್ನು ತೋರಿಸಿಕೊಟ್ಟರು. ಲಿಟ್ಮಸ್ ಕಾಗದ ಬಣ್ಣ ಬದಲಾಯಿಸುವುದು ಇವೆಲ್ಲ ಅವರಿಂದಲೇ ನೋಡಿದ್ದು. ಲಿಟ್ಮಸ್ ಕಾಗದ ಹರೀಶ ಮಾಸ್ತರ್ರ ಕೈಯಲ್ಲಿ ಬಣ್ಣ ಬದಲಾಯಿಸಿದ್ದನ್ನು ನೋಡಿ ಈ ಮಾಸ್ತರ್ರು ಪಕ್ಕಾ ಮಂತ್ರವಾದಿಯೋ ಅಥವಾ ಇಂದ್ರಜಾಲಿಕನೋ ಇರಬೇಕು ಎಂದೂ ಆಲೋಚಿಸಿದ್ದೆವು ಬಿಡಿ. ಆದರೆ ಯಾವಾಗ ಶಾಸ್ತ್ರ ಸಹಿತವಾಗಿ ಯಾಕೆ ಆ ಕಾಗದ ಬಣ್ಣ ಬದಲಾಯಿಸಿತು ಎನ್ನುವನ್ನು ತಿಳಿಸಿದಾಗ ಹೀಗೂ ಉಂಟೇ ಎಂದು ಮೂಗಿನ ಮೇಲೆ ಬೆರಳು ಇಟ್ಟಿದ್ದೆವು.
             ನಾನು ಹಾಗೂ ವಿಜಯ ಆ ದಿನಗಳಲ್ಲಿ ಒಂದೇ ದೋಣಿ ಕಳ್ಳರು ಬಿಡಿ. ನಮ್ಮ ಕ್ಲಾಸಿನಲ್ಲಿ ಮೂವರು ಗಂಡು ಹುಡುಗರು ಇದ್ದೆವು. ಏಳು ಜನರ ಹುಡುಗಿಯರು. ಮೂವರ ಪೈಕಿ ಮಹೇಶ ಬುದ್ಧಿವಂತನೆಂಬ ಹಣೆಪಟ್ಟಿ ಕಟ್ಟಿಕೊಂಡು ನಮ್ಮಿಂದ 1 ಪೋಟ್ ಡಿಸ್ಟೆನ್ಸಿನಲ್ಲಿ ಇರುತ್ತಿದ್ದ. ನಾನು ಹಾಗೂ ವಿಜಯ ಇಬ್ಬರೂ ಸಮಾನ ದುಃಖಿಗಳು.. ಸಮಾನ ಸುಖಿಗಳು. ಅಂಕಗಳೂ ಹೆಚ್ಚೂ ಕಡಿಮೆ ಒಂದೇ ಹದದಲ್ಲಿ ಬೀಳುತ್ತಿದ್ದವು ಬಿಡಿ. ಹುಡುಗಿಯರಲ್ಲಿ ಸಂಧ್ಯಾ ಹಾಗೂ ಸವಿತಾ ಎಂಬಿಬ್ಬರು ಇದ್ದರು. ಅವರೂ ಕೂಡ ಓದುವುದರಲ್ಲಿ ಎತ್ತಿದ ಕೈ. ಮಹೇಶನಿಗೆ ಸವಾಲು ಹಾಕಿ ಓದುತ್ತಿದ್ದ ಇವರು ಆಗೀಗ ಮಹೇಶನನ್ನು ಹಿಂದಕ್ಕೆ ಹಾಕುತ್ತಲೂ ಇರುತ್ತಿದ್ದರು. ವೀಣಾ ಎಂಬಾಕೆಯೊಬ್ಬಳಿದ್ದಳು. ಆಕೆಗೂ ನನಗೂ ಹಾಗೂ ವಿಜಯನಿಗೂ ಹೆಚ್ಚೂ ಕಡಿಮೆ ಒಂದೇ ಸಮನಾದ ಅಂಕಗಳು ಬರುತ್ತಿದ್ದವು. ವೀಣಾ, ಸಂಧ್ಯಾ, ಹಾಗೂ ಸವಿತಾರಿಗೆ ನಾನು ಹಾಗೂ ವಿಜಯ ಬಹಳ ಆಪ್ತರು. ಮಹೇಶ ಸಾಕಷ್ಟು ಸೊಕ್ಕು ಮಾಡುತ್ತಿದ್ದ ಕಾರಣ ಅವನನ್ನು ಕಂಡರೆ ಉಳಿದವರಿಗೆ ಅಷ್ಟಕ್ಕಷ್ಟೇ ಆಗಿತ್ತು. ನಾನು ಹಾಗೂ ವಿಜಯ ಸಿಕ್ಕಾಪಟ್ಟೆ ಓದುವವರಿಗೆ ಕಾಂಪಿಟೇಟರ್ ಅಲ್ಲ. ಆ ಕಾರಣದಿಂದ ನಾವು ಆಪ್ತರಾಗಿರಬಹುದು. ಅದು ಹಾಗಿರಲಿ ಬಿಡಿ. ಶಶಿಕಲಾ, ರಂಜನಾ ಹಾಗೂ ವಿಜಯಲಕ್ಷ್ಮೀ ಎಂಬ ಮತ್ತೂ ಮೂವರು ಇದ್ದರು. ಅವರೆಲ್ಲ ನಮಗಿಂತ ಸ್ವಲ್ಪ ಕಡಿಮೆ ಮಾರ್ಕ್ಸ್ ಪಡೆಯುತ್ತಿದ್ದ ಕಾರಣ ಅವರ ಪಡೆಯೇ ಬೇರೆ ಆಗಿತ್ತು.
             ಹೀಗಿದ್ದ ನಮ್ಮ ಕ್ಲಾಸಿನಲ್ಲಿ ನೀವು ನಂಬ್ತೀರೋ ಇಲ್ಲವೋ, ನಾನು ಹಾಗೂ ವಿಜಯ ಇಬ್ಬರೂ ವೀಣಾಳಿಗೆ ಲೈನ್ ಹೊಡೆಯುತ್ತಿದ್ದೆವು. ಆಕೆಯನ್ನು ಇಂಪ್ರೆಸ್ ಮಾಡಲು ಎಲ್ಲಿಲ್ಲದ ಪ್ರಯತ್ನ ನಡೆಸುತ್ತಿದ್ದೆವು. ನನ್ನ ಬಳಿ ಜಾಸ್ತಿ ಮಾತನಾಡಿದರೆ ವಿಜಯ, ವಿಜಯನ ಬಳಿ ಜಾಸ್ತಿ ಮಾತನಾಡಿದರೆ ನಾನು ಇಬ್ಬರೂ ಪೈಪೋಟಿಗೆ ಬಿದ್ದಂತೆ ಆಕೆಯನ್ನು ಇಂಪ್ರೆಸ್ ಮಾಡುವ ಪ್ರಯತ್ನ ಪ್ರತಿ ದಿನ ಸಾಗುತ್ತಿತ್ತು. ಹರೀಶ ಮಾಸ್ತರ್ರಿಗೆ ನಾವೆಲ್ಲರೂ ಆಪ್ತರೇ. ನಾನು ಹಾಗೂ ವಿಜಯ ಇಬ್ಬರೂ ಆಕೇಶಿಯಾ ಗಿಡದ್ದೋ ಇಲ್ಲವೇ ಗಾಳಿ ಗಿಡದ್ದೋ ಶಳಕೆಯನ್ನು ತರುವ ಕೆಲಸ ಮಾಡಬೇಕಿತ್ತು. ತಂದ ತಪ್ಪಿಗೆ ನಮಗೇ ಮೊದಲ ಹೊಡೆತ ಬೀಳುತ್ತಿತ್ತು.
            ನಮಗೆ ಪರೀಕ್ಷೆಗಳಲ್ಲಿ ಸಿಕ್ಕಾಪಟ್ಟೆ ಮಾರ್ಕ್ಸು ಬೀಳ್ತಿತ್ತು ಅಂದ್ಕೋಬೇಡಿ. ನಾವೆಲ್ಲ ಎಪಿಎಲ್ ಕಾರ್ಡಿನ ಥರದವರು. ತೀರಾ 25ಕ್ಕೆ 20 ಬೀಳದಿದ್ದರೂ ಪಾಸ್ ಮಾರ್ಕ್ಸ್ ಆಗಿದ್ದ 9ರಿಂದ 18ರ ನಡುವೆ ಯಾವುದಾದರೂ ಒಂದು ಮಾರ್ಕ್ಸಿಗೆ ದಾಸರಾಗುತ್ತಿದ್ದೆವು. 20ರ ಮೇಲೇ ಏನಿದ್ದರೂ ಮಹೇಶನಿಗೋ, ಸಂಧ್ಯಾಳಿಗೋ, ಸವಿತಾಳಿಗೋ ಸಿಗಲಿ ಬಿಡಿ ಎಂದು ಬಿಟ್ಟಿದ್ದೆವು. ಆಗೊಮ್ಮೆ ಈಗೊಮ್ಮೆ ಗಣಿತದಲ್ಲಿ ನಾವು ನಪಾಸಾಗುವುದೂ ಇತ್ತು. ಆ ದಿನಗಳಲ್ಲಿ ನಮಗೆ ನಮ್ಮ ಮಾರ್ಕ್ಸ್ ಕಾರ್ಡುಗಳನ್ನು ಮನೆಯಲ್ಲಿ ತೋರಿಸುವುದು ಎಂದರೆ ಪರಮ ಭಯದ ಸಂಗತಿ. ನನ್ನ ಮನೆಯಲ್ಲಂತೂ ಮೊದಲ ಸ್ಥಾನವನ್ನೇ ಗಳಿಸಿಕೊಳ್ಳಬೇಕು ಎಂದು ಫರ್ಮಾನು ಹೊರಡಿಸಿಬಿಟ್ಟಿದ್ದರು. ಆದರೆ ಸಿ. ಎಂ. ಹೆಗಡೆಯವರಂತಹ ಮಾಸ್ತರ್ರು ಇದ್ದ ಕಾರಣ ನಾನು ಎಷ್ಟು ಓದಿದ್ದರೂ ಬೀಳುವ ಅಂಕಗಳು ಅಷ್ಟಕ್ಕಷ್ಟೇ ಆಗಿತ್ತು ಬಿಡಿ. ನಮಗೆಲ್ಲ ಆಗ ನಮ್ಮ ಸೀನಿಯರ್ ಆಗಿದ್ದ ಗಣಪತಿಯೇ ಆಪದ್ಭಾಂಧವ. ಮನೆಯಲ್ಲಿ ಮಾರ್ಕ್ಸ್ ಕಾರ್ಡುಗಳನ್ನು ಯಾವ ಸಂದರ್ಭದಲ್ಲಿ ತೋರಿಸಬಾರದು, ಯಾವ ಸಂದರ್ಭದಲ್ಲಿ ತೋರಿಸಬೇಕು ಎಂಬುದನ್ನು ತಿಳಿಸ ಹೇಳುತ್ತಿದ್ದ. ತೀರಾ ಪಾಸು ಮಾರ್ಕ್ಸ್ ಬೀಳದೇ ಇದ್ದರೆ ಆತನೇ ನಮ್ಮ ಮನೆಯ ಅಪ್ಪ, ಅಮ್ಮನ ಸಹಿಯನ್ನು ಫೋರ್ಜರಿ ಮಾಡಿ ಮಾರ್ಕ್ಸ್ ಕಾರ್ಡಿನ ಮೇಲೆ ಹಾಕುತ್ತಿದ್ದ. ನಾವು ಮೊದ ಮೊದಲು ಹೆದರುತ್ತಿದ್ದರೂ ನಂತರ ಮನೆಯವರ ಕಾಟ ತಪ್ಪಿಸಿಕೊಳ್ಳಲು ಗಣಪತಿಯ ಮೊರೆಯನ್ನೇ ಹೋಗಿದ್ದೆವು ಬಿಡಿ. ಕೊನೆಗೊಂದು ದಿನ ಮನೆಯಲ್ಲಿ ಈ ಸಂಗತಿ ಗೊತ್ತಾಗಿ ರಾದ್ಧಾಂತವಾಗಿದ್ದು ಬೇರೆಯ ಸಂಗತಿ. ಇದನ್ನು ಇನ್ನೊಮ್ಮೆ ಹೇಳುತ್ತೇನೆ. ಮಾರ್ಕ್ಸುಗಳ ಬೆನ್ನು ಹತ್ತದೇ ಅದರ ಬದಲಾಗಿ ಉಳಿದ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗ ಕಡೆಗೆ ನಾವು ಕಣ್ಣು ಹಾಯಿಸಿದ್ದೆವು.
           ಶಾಲೆಯ ಕ್ರೀಡಾರಂಗದಲ್ಲಿ ನಾನು ಮುಂದಡಿಯಿಟ್ಟಿದ್ದೆ. ನನ್ನ ಕಾಲದಲ್ಲಿ 100 ಮೀಟರ್ ಓಟದಲ್ಲಿ ಶಾಲೆಯ ಪ್ರತಿನಿಧಿ ನಾನಾಗಿದ್ದೆ. ಕಬ್ಬಡ್ಡಿ ತಂಡದಲ್ಲಿ ನನ್ನ ಸೇರಿಸಿಕೊಂಡಿದ್ದರು. ಆದರೆ ನಾನು ರೈಡರ್ರೂ ಆಗಿರಲಿಲ್ಲ. ಡಿಫೆಂಡರ್ರೂ ಆಗಿರಲಿಲ್ಲ. ತಂಡ 7 ಜನರಲ್ಲಿ ನಾನು ಇದ್ದೆ ಅಷ್ಟೆ. ಸುಮ್ಮನೆ ನಿಲ್ಲುತ್ತಿದ್ದೆ. ಲಾಸ್ಟ್ ಮೇಂಬರ್ ಆಗಿ ಔಟಾಗುತ್ತಿದ್ದೆ. ವಾಲೀಬಾಲ್ ಆಡುತ್ತಿದ್ದೆನಾದರೂ ಸರ್ವೀಸ್ ನೆಟ್ ದಾಟುತ್ತಿರಲಿಲ್ಲ. ಕುಳ್ಳಗಿದ್ದ ಕಾರಣ ಖೋ ಖೋ ಚನ್ನಾಗಿ ಆಡುತ್ತಿದ್ದೆ. ಸಿಕ್ಕಾಪಟ್ಟೆ ಓಡುತ್ತಿದ್ದ ಕಾರಣ ಬಹಳ ಬೇಗನೆ ಸುಸ್ತಾಗುತ್ತಿತ್ತು. ಲಾಂಗ್ ಜಂಪ್ ವೀರನಾಗಿದ್ದೆ. ಬಹಳ ದಿನಗಳ ಪ್ರಾಕ್ಟೀಸ್ ಮಾಡಿದ ತಪ್ಪಿಗೆ ಕ್ರೀಡಾಕೂಟದಲ್ಲಿ 2ನೇ ಸ್ಥಾನ ಲಭ್ಯವಾಗಿತ್ತು ಎನ್ನುವುದು ಹೆಮ್ಮೆಯೇ ಹೌದು. ಕ್ರೀಡಾರಂಗದಲ್ಲಿ ವಿಜಯನೂ ಸಾಕಷ್ಟು ಸಾಧನೆ ಮಾಡಿದ್ದ ಬಿಡಿ.
             ನಾಟಕ, ಅದೂ ಇದೂ ಎಂದು ನಮ್ಮದು ಹಲವು ಆಲೋಚನೆಗಳು. ಹರೀಶ ಮಾಸ್ತರ್ರ ಕನಸಿಗೆ ನಾವು ಶಿಲೆಯಂತೆ ಸಿಕ್ಕಿದ್ದೆವು. ನಮ್ಮನ್ನು ಕೆತ್ತಿ ಮೂರ್ತಿಯನ್ನಾಗಿ ಮಾಡಿದ್ದರು. ವಿಚಿತ್ರವೆಂದರೆ ಶಾಲೆಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದವು. ಆದರೆ ಹೆಚ್ಚಿನ ಕಾರ್ಯಕ್ರಮದಲ್ಲಿ ನಾನು ಕುಡುಕನ ಪಾತ್ರವೋ, ಅಥವಾ ಅದಕ್ಕೆ ಸಂಬಂಧಿಸಿದಂತೆ ಪಾತ್ರಗಳೋ ಸಿಗುತ್ತಿದ್ದವು ಎನ್ನುವುದು ಮಾತ್ರ ವಿಚಿತ್ರವೇ ಹೌದು ನೋಡಿ. ನಮ್ಮ ಎಲ್ಲ ಕಾರ್ಯಕ್ರಮಗಳಿಗೆ ಹರೀಶ ಮಾಸ್ತರ್ರೇ ಸಿಂಗರ್ ಆಗಿದ್ದರು. ಘಟ್ಟದ ಕೆಳಗಿನ ಹೊನ್ನಾವರ ತಾಲೂಕಿನ ಯಾವುದೋ ಊರಿನವರಾಗಿದ್ದ ಹರೀಶ ಮಾಸ್ತರ್ರು ನಮ್ಮ ಭಾಗದ ವಾತಾವರಣಕ್ಕೆ ಹೊಂದಿಕೊಳ್ಳಲು ಸ್ವಲ್ಪ ಕಷ್ಟವೇ ಆಯಿತು ಎನ್ನಿ.
              ಆಗೊಮ್ಮೆ, ಈಗೊಮ್ಮೆ ಹರೀಶ ಮಾಸ್ತರ್ರು ನಮ್ಮ ಜೊತೆ ಕ್ರಿಕೆಟ್ ಆಡಲು ಬರುತ್ತಿದ್ದರು. ಕ್ರೀಡಾಕೂಟಕ್ಕೆ ತಯಾರು ಮಾಡಲಿಕ್ಕೂ ಮುಂದಾಗುತ್ತಿದ್ದರು. ರಮೇಶ ಗಡ್ಕರ್ ಮಾಸ್ತರ್ರ ಜೊತೆ ವಿಶ್ರಾಂತಿ ವೇಳೆಯಲ್ಲಿ ಚೆಸ್ ಆಡುವ ಮೂಲಕ ನನಗೆ ಬಹುದೊಡ್ಡ ಕಾಟವನ್ನು ತಪ್ಪಿಸಿದ ಖ್ಯಾತಿ ಹರೀಶ ಮಾಸ್ತರ್ರದ್ದಾಗಿತ್ತು. ಹರೀಶ ಮಾಸ್ತರ್ರು ಗಡ್ಕರ್ ಮಾಸ್ತರ್ರ ಜೊತೆ ಚೆಸ್ ಆಡದೇ ಇದ್ದಲ್ಲಿ ನಾನು ಅದೆಷ್ಟೋ ದಿನಗಳಲ್ಲಿ ಕ್ರಿಕೆಟ್ ಸೇರಿದಂತೆ ವಿವಿಧ ಕ್ರೀಡೆಗಳನ್ನು ಆಡುವುದನ್ನು ತಪ್ಪಿಸಿಕೊಳ್ಳುತ್ತಿದ್ದೆ ಬಿಡಿ. ಈ ಕಾರಣದಿಂದಾಗಿ ನಾನು ಹರೀಶ ಮಾಸ್ತರ್ರನ್ನು ಎಷ್ಟೋ ಪಾಲು ನೆನಪಿಸಿಕೊಳ್ಳಬೇಕು. ಹರೀಶ ಮಾಸ್ತರ್ರು ಎಂದರೆ ನೆನಪಾಗುವುದು ಇಷ್ಟೇ ನೋಡಿ. ನಾನು ಏಳನೆ ಕ್ಲಾಸಿನವರೆಗೂ ಅವರ ಕೈಯಲ್ಲೇ ಓದುತ್ತಿದ್ದೆ. ನಾನು ಶಾಲೆ ಮುಗಿಸಿ ಬೇರೆಡೆಗೆ ಹೋಗುವ ಮುನ್ನ ಅವರ ಬಳಿ ದಿನಗಟ್ಟಲೆ ಮಾತನಾಡಿದ್ದೂ ಇದೆ. ನಾನು ಹೈಸ್ಕೂಲು ಸೇರಿ ಒಂದೆರಡು ವರ್ಷಗಳಾದರೂ ಹರೀಶ ಮಾಸ್ತರ್ರು ಅದೇ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ಆದರೆ ಆ ನಂತರದ ದಿನಗಳಲ್ಲಿ ಸಿ. ಎಂ. ಹೆಗಡೆಯವರ ರಾಜಕಾರಣದಿಂದಾಗಿ ಹರೀಶ ಮಾಸ್ತರ್ರು ವರ್ಗಾವಣೆ ಮಾಡಿಸಿಕೊಂಡು ಹೋದರು ಎನ್ನುವ ಸುದ್ದಿಯೂ ಕೇಳಿಬಂದಿತು. ಗಡ್ಕರ್ ಮಾಸ್ತರ್ ಹಾಗೂ ತಾರಕ್ಕೋರು ಇಂತಹ ಕಾರಣದಿಂದಲೇ ವರ್ಗ ಮಾಡಿಸಿಕೊಂಡು ಹೋದರು ಎನ್ನುವುದನ್ನು ಕೇಳಿ ಸಿ. ಎಂ. ಹೆಗಡೆಯವರ ಬಗ್ಗೆ ಸಿಟ್ಟೂ ಬಂದಿತ್ತು.
             ಹೈಸ್ಕೂಲಿನಲ್ಲಿ 8ನೇ ಕ್ಲಾಸಿನಲ್ಲಿ ಸಿಕ್ಕಾಪಟ್ಟೆ ಓದಿ ನಾನು ಮೊದಲ ಸ್ಥಾನ ಪಡೆದುಕೊಂಡು ಬಂದಾಗ ನನ್ನ ಅಪ್ಪ ಗಡ್ಕರ್ ಮಾಸ್ತರ್ ಹಾಗೂ ಹರೀಶ ಮಾಸ್ತರ್ರ ಬಳಿ ಹೇಳಿದ್ದರಂತೆ. ಅದನ್ನು ಕೇಳಿ ಸಂತೋಷ ಪಟ್ಟಿದ್ದ ಈ ಇಬ್ಬರೂ ಮಾಸ್ತರ್ರು ನಾನು ಮೊದಲ ಸ್ಥಾನ ಪಡೆದಿದ್ದನ್ನು ಕೇಳಿ ಬಹಳ ಜನರ ಬಳಿ ಹೊಗಳಿದ್ದರಂತೆ. ನಮ್ಮ ಶಾಲೆಯಲ್ಲಿ ವಿನಯ ಬಹಳ ಕಷ್ಟಪಟ್ಟಿದ್ದ ಬಿಡಿ. ಆದರೆ ಹೈಸ್ಕೂಲಿನಲ್ಲಾದರೂ ಆತನಿಗೆ ಒಳ್ಳೆಯದಾಗುತ್ತಿದೆಯಲ್ಲ. ಅಷ್ಟು ಸಾಕು ಬಿಡಿ. ಹಿಂಗೇ ಚನ್ನಾಗಿ ಓದಲು ಹೇಳಿ ಎಂದೂ ಹೇಳಿದ್ದರಂತೆ. ಈಗಲೂ ಅವರ ಮಾತುಗಳು ನನ್ನನ್ನು ಕಾಡುತ್ತಿರುತ್ತವೆ. ನೆನಪಾಗುತ್ತಿರುತ್ತವೆ.

ಪಿ. ಜಿ. ಹಾವಗೋಡಿ :
               ಹೌದು. ಹಾವಗೋಡಿ ಮಾಸ್ತರ್ ನನಗ ಕೆಲಕಾಲ ಕಲಿಸಿದ್ದಾರೆ. ಹಾವಗೋಡಿ ಮಾಸ್ತರ್ರನ್ನು ನಾನು ಮೊದಲು ನೋಡಿದ್ದು ಮುತ್ಮೂರ್ಡು ಶಾಲೆಗೆ ಅವರು ಮಾಸ್ತರ್ರಾಗಿ ಬರುತ್ತಿದ್ದ ಸಂದರ್ಭದಲ್ಲಿ. ನಮ್ಮೂರ ಸ್ಕಿಡ್ ಆಗುವ ರಸ್ತೆಯಲ್ಲಿ ಲೂನಾ ಮೇಲೆ ಬರುತ್ತಿದ್ದರು ಅವರು. ಅದೊಮ್ಮೆ ನಾವು ನಡೆದುಕೊಂಡು ಬರುತ್ತಿದ್ದಾಗ ಮಾರ್ಗ ಮಧ್ಯದಲ್ಲಿ  ನಮ್ಮೆದುರೇ ಅವರ ಲೂನಾ ಗಿರಿಗಿರಿ ತಿರುಗಿ ಲಗಾಟಿ ಹೊಡಯುವಂತಾಗಿತ್ತು. ಆಗ ನಮ್ಮನ್ನು ನೋಡಿದ ಹಾವಗೋಡಿ ಮಾಸ್ತರ್ರು `ನೋಡ್ರಾ ತಮಾ.. ಹೆಂಗ್ ಮುಕಳಿ ಕುಂಡೆ ತಿರುಗಿಸ್ತು ಈ ಗಾಡಿ..' ಎಂದಿದ್ದು ನೆನಪಿನಲ್ಲಿದೆ.
               ಮುಂದೆ ಇದೇ ಹಾವಗೋಡಿ ಮಾಸ್ತರ್ರು ಕೋಡ್ಸರ ಶಾಲೆಯಲ್ಲಿ ಕಲಿಸುತ್ತಿದ್ದ ಸಂದರ್ಭದಲ್ಲಿ ಯಾರಿಗೋ ಗೆರೆಪಟ್ಟಿಯಲ್ಲಿ ಹೊಡೆದಿದ್ದರಂತೆ. ಹೊಡೆದಿದ್ದ ಪರಿಗೆ ಗೆರೆಪಟ್ಟಿ ಮುರಿದು ಹೋಗಿದ್ದರೆ ಹೊಡೆತ ತಿಂದವನಿಗೆ ದೊಡ್ಡ ಗಾಯವಾಗಿತ್ತಂತೆ. ನಾಲ್ಕು ದಿನ ಜ್ವರ ಮಾಡಿದ್ದನಂತೆ. ಆ ಬಾಲಕನ ತಂದೆ ತಾಯಿಯರು ಬಂದು ಹಾವಗೋಡಿ ಮಾಸ್ತರ್ರನ್ನು ವರ್ಗಾವಣೆ ಮಾಡಬೇಕು ಎಂದು ಪ್ರತಿಭಟನೆಯನ್ನೂ ಮಾಡಿದ್ದರಂತೆ. ಈ ಸುದ್ದಿಯನ್ನೆಲ್ಲ ಕೇಳಿದಾಗ ಹಾವಗೋಡಿ ಮಾಸ್ತರ್ರೆಂದರೆ ಯಾರೋ ಭಯೋತ್ಪಾದಕರೇ ಇರಬೇಕು ಎಂದುಕೊಂಡಿದ್ದೆವು ಬಿಡಿ. ಇಂತಹ ಮಾಸ್ತರ್ರಿಗೆ ಏಳನೇ ತರಗತಿಯಲ್ಲಿ `ಸೇತುಬಂಧ' ಪರೀಕ್ಷೆಯ ಪೇಪರ್ ಚೆಕ್ ಮಾಡುವ ಕೆಲಸ ಸಿಕ್ಕಿತ್ತು. ನನ್ನ ಪೇಪರ್ರನ್ನು ಚೆಕ್ ಮಾಡಿದ್ದರು. ನನಗೆ ಸಿಕ್ಕಾಪಟ್ಟೆ ಅಂಕಗೂ ಬಿದ್ದಿದವು ಬಿಡಿ.
             ಆಮೇಲೆ ಯಾವಾಗಲೋ ಒಮ್ಮೆ ಬಹುಶಃ ಐದನೇ ಕ್ಲಾಸಿನಲ್ಲಿ ಇರಬೇಕು. ಅವರು ನನಗೆ ಶಿಕ್ಷಕರಾಗಿ ನಮ್ಮ ಶಾಲೆಗೆ ಬಂದಿದ್ದರು. ಕನ್ನಡ ವಿಷಯವನ್ನು ಬಹಳ ಚನ್ನಾಗಿ ಕಲಿಸುತ್ತಿದ್ದರು ಅವರು. ಆದರೆ ಅವರ ಮೇಲೆ ಇದ್ದ ಒಂದೇ ಬೇಜಾರು ಎಂದರೆ ನಮಗೆ ಆಟದ ಪಿರಿಯಡ್ಡಿನಲ್ಲಿ ಆಟಕ್ಕೇ ಬಿಡುತ್ತಿರಲಿಲ್ಲ. ಆಗಲೂ ಪಾಠವನ್ನೇ ಕಲಿಸುತ್ತಿದ್ದರು. ಕೊನೆಗೊಮ್ಮೆ ನಾವು ವಿದ್ಯಾರ್ಥಿಗಳೆಲ್ಲ ಸೇರಿ ಮಾಸ್ತರ್ರ ಬಳಿ ಗಲಾಟೆ ಮಾಡಿದಾಗಲೇ ನಮ್ಮನ್ನು ಆಟಕ್ಕೆ ಬಿಡಲು ಆರಂಭ ಮಾಡಿದ್ದು. ಹಾವಗೋಡಿ ಮಾಸ್ತರ್ರು ಶಿಕ್ಷಕರಾಗಿದ್ದ ಸಂದರ್ಭದಲ್ಲಿ ಮತ್ತಿನ್ನೇನೂ ವಿಶೇಷ ಘಟನೆಗಳು ಜರುಗಲಿಲ್ಲ ಬಿಡಿ.

          ಪ್ರೈಮರಿ ಬದುಕು ಕಳೆದು ಎಷ್ಟೋ ವರ್ಷಗಳು ಕಳೆದು ಹೋಗಿದೆ. ಆ ದಿನಗಳಲ್ಲಿ ನಮ್ಮದು ಹಸಿ ಮನಸ್ಸೇ ಸರಿ. ಏನೇ ನಡೆದಿದ್ದರೂ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದು ಬಿಡುತ್ತವೆ. ಆ ಕಾರಣದಿಂದಲೇ ಬಹಳಷ್ಟು ಸಂಗತಿಗಳನ್ನು ನಾನು ಇಲ್ಲಿ ಉಲ್ಲೇಖ ಮಾಡಿದ್ದೇನೆ. ತಾರಕ್ಕೋರನ್ನೋ, ಗಡ್ಕರ್ ಮಾಸ್ತರ್ರನ್ನೋ, ಹರೀಶ ಮಾಸ್ತರ್ರನ್ನೋ ಪ್ರೀತಿಯಿಂದ ಕಾನುತ್ತಿದ್ದೇನೆ, ನೆನೆಯುತ್ತೇನೆ ಎಂದರೆ ಆ ದಿನಗಳಲ್ಲಿ ಅವರು ತೋರಿದ ಅಕ್ಕರೆಗಳೆ ಕಾರಣವಾಗುತ್ತವೆ. ಜಿ. ಎಸ್. ಭಟ್ಟರಂತೂ ಅವರ ಸಿಟ್ಟಿನಿಂದಲೇ ನೆನಪಿನಲ್ಲಿ ಉಳಿದು ಹೋಗಿದ್ದಾರೆ. ಇನ್ನು ಸಿ. ಎಂ. ಹೆಗಡೆಯವರ ಬಗ್ಗೆ ನಾನು ಹೀಗೆ ಅಂದುಕೊಳ್ಳಲಿಕ್ಕೆ ಕಾರಣ ಅವರೇ ಬಿಡಿ. ಅಲ್ಲಿಂದ ಮುಂದಕ್ಕೆ ನನ್ನ ಹೈಸ್ಕೂಲಿನ ಬದುಕು ಆರಂಬಗೊಂಡಿತು. ಏಳನೇ ಕ್ಲಾಸಿಗೆ ಆಗ ಇದ್ದ ಪಬ್ಲಿಕ್ ಪರೀಕ್ಷೆಯಲ್ಲಿ ನಾಲ್ಕನೇ ಟಾಪರ್ ಆಗಿ ಪಾಸಾಗಿದ್ದೆ. ಸಂದ್ಯಾ, ಸವಿತಾ, ಮಹೇಶ ಮೊದಲ ಮೂರು ಸ್ಥಾನಗಳನ್ನು ಪಡೆದುಕೊಂಡಿದ್ದರೆ ನಾನು ನಾಲ್ಕನೇ ಸ್ಥಾನ ಪಡೆದಿದ್ದೆ. ವಿಜಯ ನನಗಿಂತ ಮೂರು ಅಂಕ ಕಡಿಮೆ ಪಡೆದುಕೊಂಡು ಮುಂದಿನ ಸ್ಥಾನ ಪಡೆದುಕೊಂಡಿದ್ದ. ಶಾಲೆಗೆ ದೊಡ್ಡದಂದು ಟೇಬಲ್ಲನ್ನು ಕೊಡುಗೆಯಾಗಿ ಕೊಟ್ಟು ನಾವು ಶಾಲೆಯನ್ನು ಬಿಟ್ಟಿದ್ದೆವು. ಆಮೇಲಿಂದ ಬೇರೆಯದೇ ಬದುಕು ಆರಂಭಗೊಂಡಿತ್ತು. ಹೈಸ್ಕೂಲು ನಮ್ಮನ್ನು ಕೈಬೀಸಿ ಕರೆದಿತ್ತು.

(ಮುಂದುವರಿಯುತ್ತದೆ)
(ಮುಂದಿನ ಕಂತಿನಲ್ಲಿ ನನ್ನ ಹೈಸ್ಕೂಲು ಬದುಕಿನ ಮಾಸ್ತರ್ರ ಬಗ್ಗೆ ಬರೆಯಲಿದ್ದೇನೆ)

Friday, August 21, 2015

ಪರಿವರ್ತನೆ (ಕಥೆ)

              ನನ್ನ ಹೊಚ್ಚ ಹೊಸ ಬೈಕು ಮೊಟ್ಟ ಮೊದಲ ಬಾರಿಗೆ ಪಂಚರ್ ಆಗಿದ್ದಾಗ ನಾನು ನಮ್ಮೂರಿನ ಪಂಚರ್ ಕಟ್ಟುವ ಅಮಿರ್ ಖಾನ್ ನ ಮೊರೆ ಹೋಗಿದ್ದೆ. ಬಹುಶಃ ಈ ಪಂಚರ್ ದೆಸೆಯಿಂದಲೇ ನನಗೆ ಅಮೀರ್ ಖಾನ್ ಪರಿಚಯ ಆಗಿದ್ದು ಎಂದರೆ ತಪ್ಪಾಗಲಿಕ್ಕಿಲ್ಲ ನೋಡಿ. ನನ್ನ ಯಮಭಾರದ ಗಾಡಿಯನ್ನು ತಳ್ಳಿಕೊಂಡು ಅಮೀರ್ ಖಾನ್ ನ ಪಂಚರ್ ಅಂಗಡಿಯ ವರೆಗೆ ಏದುಸಿರು ಬಿಡುತ್ತಾ ಹೋಗುವ ವೇಳೆಗೆ ಅಂಗಡಿಯಲ್ಲಿ ಅಮೀರ್ ಖಾನ್ ಇರಲಿಲ್ಲ. ಅಂಗಡಿಗೆ ತಾಗಿಕೊಂಡಂತೆ ಇದ್ದ ಮನೆಯಲ್ಲಿ ಆತನ ಬೇಗಂ ಇದ್ದಳು. ಅವರ ಬಳಿ ಅಮೀರ್ ಖಾನ್ ಇದ್ದಾನಾ ಎಂದು ಕೇಳಿ, ಈಗ ಬರುತ್ತಾರೆ ಇರಿ ಎನ್ನುವ ಉತ್ತರ ಕೇಳಿ ಕಾಯುತ್ತ ಕುಳಿತಿದ್ದೆ. ಕೆಲ ಹೊತ್ತಿನಲ್ಲಿ ಅಮೀರ್ ಖಾನ್ ಬಂದಿದ್ದ.
            ಮೊಟ್ಟ ಮೊದಲ ಪಂಚರ್ ಅನ್ನು ಸರಿಮಾಡಿಕೊಟ್ಟಿದ್ದ ಅಮಿರ್ ಖಾನ್ ನಂತರದ ದಿನಗಳಲ್ಲಿ ನನ್ನ ತೀರಾ ಪರಿಚಯದ ವ್ಯಕ್ತಿಗಳಲ್ಲಿ ಒಬ್ಬನಾಗಿ ಬದಲಾಗಿದ್ದ. ನಮ್ಮೂರಿನ ರಸ್ತೆ ಹೇಳಿ-ಕೇಳಿ ಮಣ್ಣು ರಸ್ತೆ. ಅಭಿವೃದ್ಧಿ ಪರ ಭಾಷಣ ಮಾಡುವ ರಾಜಕಾರಣಿಗಳ ಮಾತಿಗೆ ನುಜ್ಜುಗುಜ್ಜಾಗಿ ಮತ್ತಷ್ಟು ಹಾಳಾಗಿದ್ದ ನಮ್ಮೂರ ರಸ್ತೆಯಲ್ಲಿ ಗಾಡಿ ಓಡಿಸುವುದು ಯಮಯಾತನೆಯ ಕೆಲಸವೇ ಹೌದಾಗಿತ್ತು. ಇಂತಹ ರಸ್ತೆಯಲ್ಲಿ ನನ್ನ ಗಾಡಿ ಪದೇ ಪದೆ ಪಂಚರ್ ಆಗುತ್ತಿತ್ತು. ಆಗೆಲ್ಲ ನಾನು ಅಮೀರ್ ಖಾನ್ ಮೊರೆ ಹೋಗುತ್ತಿದ್ದೆ. ಆತ ಪಂಚರ್ ಸರಿಪಡಿಸಿಕೊಡುತ್ತಿದ್ದ. ಹೀಗೆ ನಾನು ಪದೇ ಪದೆ ಅವನ ಮೊರೆ ಹೋದ ಕಾರಣ ಆತ ನನ್ನ ಪರಿಚಿತನಾದ. ಕೊನೆ ಕೊನೆಗೆ ಆತ ಅದೆಷ್ಟು ಪರಿಚಿತನಾಗಿದ್ದನೆಂದರೆ ತನ್ನ ಮನೆಯ ಸಮಸ್ಯೆಗಳನ್ನೂ ಹೇಳಿಕೊಳ್ಳುವಷ್ಟು ಆಪ್ತನಾಗಿ ಬದಲಾಗಿದ್ದ.
             ಅಮೀರ್ ಖಾನ್ ಗೆ ಬಹುಃ 45-50 ವರ್ಷ ವಯಸ್ಸಾಗಿರಬೇಕು. ಮೂವರು ಹೆಂಡತಿಯರು ಹಾಗೂ 11 ಜನ ಮಕ್ಕಳು ಅಮೀರ್ ಖಾನ್ ನ ಆಸ್ತಿ. ಆಮೀರ್ ಭಾಯ್.. ಇಷ್ಟೆಲ್ಲ ಮಕ್ಕಳನ್ನು ಹೇಗೆ ಸಾಕ್ತೀಯಾ? ಕಷ್ಟ ಆಗೋಲ್ಲವಾ ಎಂದು ನಾನು ಕೇಳಿದ್ದೆ. ಅಲ್ಲಾಹು ಕರುಣಿಸಿದ್ದಾನೆ.. 11 ಇರಲಿ ಅಥವಾ 20 ಇರಲಿ. ಅವರನ್ನು ಸಾಕುತ್ತೇನೆ. ತೊಂದರೆಯಿಲ್ಲ. ಸ್ವಲ್ಪ ದೊಡ್ಡವರಾಗುವ ವರೆಗೆ ಕಷ್ಟವಾಗುತ್ತದೆ. ಆ ಮೇಲೆ ಅವರ ಕೆಲಸವನ್ನು ಅವರೇ ಮಾಡಿಕೊಳ್ಳುತ್ತಾರೆ ಎಂದು ಹೇಳಿದ್ದ ಅಮೀರ್ ಖಾನನ ಮೊದಲ ಮಗ ಖಾದರ್ ಆಗಲೇ ಇನ್ನೊಂದು ಮೆಕಾನಿಕ್ ಅಂಗಡಿಯನ್ನೂ ಆರಂಭಿಸಿದ್ದ. ಇಂತಹ ಅಮೀರ್ ಖಾನ್ ನ ಕಿರಿಯ ತಮ್ಮ ಸಲ್ಮಾನ್.
              ಸಲ್ಮಾನ್ ಹಾಗೂ ಆಮೀರ್ ಎಂದರೆ ಆ ಊರಿನಲ್ಲಿ ಎಲ್ಲರಿಗೂ ಪ್ರೀತಿ ಹಾಗೂ ಅಕ್ಕರೆ. ಊರಿನಲ್ಲಿ ಪಂಚರ್ ಅಂಗಡಿ ಹಾಗೂ ಮೆಕಾನಿಕ್ ಅಂದರೆ ಇವರಿಬ್ಬರೇ ಎಂಬ ಕಾರಣವೂ ಅಕ್ಕರೆ ಹಾಗೂ ಪ್ರೀತಿಗೆ ಪ್ರಮುಖ ಕಾರಣವಾಗಿತ್ತು. ಇದ್ದವರ ಪೈಕಿ ಸಲ್ಮಾನ್ ಎಲ್ಲರ ಜೊತೆ ಬೆರೆಯುವಂತಹ ವ್ಯಕ್ತತ್ವದವನಾಗಿದ್ದರೆ, ಆಮೀರ್ ಸ್ವಲ್ಪ ಗುಮ್ಮನ ಗುಸ್ಕ. ಮನೆಯಲ್ಲಿ ಮಾತ್ರ ಅವಳಿಗಳೇನೋ ಎನ್ನುವಂತೆ ಬೆಳೆದಿದ್ದವರು ಅವರು. ಸಲ್ಮಾನ್ ಗೆ ಮೂವರು ಹೆಂಡತಿಯರು. ಆರು ಮಕ್ಕಳು. ಸಲ್ಮಾನ್ ಆತ್ಮೀಯತೆಯ ಪ್ರತೀಕ. ಆದರೆ ಆಮೀರ್ ಸ್ವಲ್ಪ ಸಿಡುಕ. ಬಡತನ ಹಾಸುಹೊಕ್ಕಾಗಿದ್ದರೂ ಇವರಿಗೆ ಮಾತ್ರ ಯಾವುದೇ ಕುಂದನ್ನು ಉಂಟುಮಾಡಿರಲಿಲ್ಲ. ಆದರೆ ಧರ್ಮದ ವಿಷಯ ಬಂದರೆ ಮಾತ್ರ ಸಲ್ಮಾನ್ ಅಪ್ಪಟ ಕರ್ಮಠರು ಎಂದರೆ ತಪ್ಪಾಗಲಿಕ್ಕಿಲ್ಲ.
             ಆಮೀರ್ ಗೂ ಧರ್ಮಪ್ರೇಮ ಅಲ್ಪ-ಸ್ವಲ್ಪ ಇತ್ತು. ಆದರೆ ತಾನಾಯಿತು ತನ್ನ ಕೆಲಸವಾಯಿತು ಎಂದುಕೊಳ್ಳುತ್ತಿದ್ದವನಿಗೆ ಧರ್ಮದ ಬಗ್ಗೆ ಹೆಚ್ಚಿಗೆ ಆಲೋಚನೆ ಮಾಡಲು ಸಮಯವೇ ಇರಲಿಲ್ಲ. ತಾನು ಮಾಡುವ ಕೆಲಸದಲ್ಲಿಯೇ ಧರ್ಮ, ದೇವರು ಅಡಗಿದ್ದಾನೆ ಎಂದುಕೊಂಡಿದ್ದವನು ಆಮೀರ್. ಆದರೆ ಅಪರೂಪಕ್ಕೊಮ್ಮೆ ಮಸೀದಿಗೆ ಹೋಗಿ ನಮಾಜ್ ಮಾಡಿ, ಖುರಾನ್ ಪಠಣವನ್ನೂ ಮಾಡಿ ಬರುತ್ತಾನೆ. ಆದರೆ ಸಲ್ಮಾನ್ ಹಾಗಲ್ಲ. ಎಷ್ಟಕ ಕರ್ಮಠ ಎಂದರೆ ದಿನಕ್ಕೆ ಐದು ಬಾರಿ ಸಮಯಕ್ಕೆ ಸರಿಯಾಗಿ ನಮಾಜ್ ಮಾಡುತ್ತಿದ್ದ. ಅಷ್ಟೇ ಏಕೆ ಮನೆಗೂ ಆಗಾಗ ಮೌಲ್ವಿಗಳನ್ನು ಕರೆಸಿ ಪ್ರವಚನಗಳನ್ನು ಮಾಡಿಸುತ್ತಿದ್ದ.
              ನನ್ನ ಹಾಗೂ ಸಲ್ಮಾನ್ ನ ನಡುವೆ ಆಗಾಗ ಧರ್ಮದ ಕುರಿತಂತೆ ಚರ್ಚೆಗಳು ನಡೆಯುತ್ತಿದ್ದವು. ನಾನು ನನ್ನ ಧರ್ಮವನ್ನು ಸಮರ್ಥನೆ ಮಾಡಿ ಕೊಂಡರೆ ಆತ ಅವನ ಧರ್ಮವನ್ನು ಸಮರ್ಥನೆ ಮಾಡಿಕೊಳ್ಳುತ್ತಿದ್ದ. ನಾವು ವಾದ ಮಾಡುವ ಸಂದರ್ಭದಲ್ಲಿ ಅನೇಕ ಜನರೂ ಸೇರಿ ಗಲಾಟೆ ನಡೆಯುತ್ತಿದೆಯೋ ಎನ್ನುವಂತಹ ವಾತಾವರಣವೂ ಮೂಡುತ್ತಿದ್ದವು. ಮೊದ ಮೊದಲಿಗೆಲ್ಲ ಆರೋಗ್ಯಕರ ಚರ್ಚೆಗೆ ಮುಂದಾಗುತ್ತಿದ್ದ ಸಲ್ಮಾನ್ ಕೊನೆ ಕೊನೆಗೆ ನನ್ನ ಪಟ್ಟುಗಳನ್ನು ತಾಳಲಾರದೇ ವ್ಯಗ್ರನೂ ಆಗುತ್ತಿದ್ದ. ಒಂದೆರಡು ಸಾರಿ ನಾವು ಚರ್ಚೆ ಮಾಡುತ್ತಿದ್ದ ಸಂದರ್ಭದಲ್ಲಿ ಸಿಟ್ಟಿಗೆದ್ದು ನನ್ನ ಮೇಲೇರಿ ಬಂದಿದ್ದೂ ಇತ್ತು. ಕೊನೆಗೆ ಯಾವಾಗಲೋ ಶಾಂತನಾದಾಗ `ಮಾಫ್ ಕರೋ ಭಾಯ್..' ಎಂದು ಆಲಿಂಗನ ಮಾಡಿಕೊಂಡು ಕ್ಷಮೆ ಕೋರುತ್ತಿದ್ದ. ನನಗಂತೂ ಕಸಿವಿಸಿಯಾಗುತ್ತಿತ್ತು. ಕ್ಷಮೆಕೋರಿ ದೂರ ಹೋದರೂ ಆತನ ಬಟ್ಟೆಗೆ ಪೂಸಿಕೊಂಡಿದ್ದ ಅತ್ತರಿನ ವಾಸನೆ ಅದೆಷ್ಟೋ ತಾಸುಗಳ ಕಾಲ ಅಲ್ಲಿಯೇ ಘಂಮ್ಮೆನ್ನುತ್ತಿತ್ತು.
               ಹೀಗಿದ್ದಾಗಲೇ ಈ ಅಣ್ಣತಮ್ಮಂದಿರಿಗೆ ಮೆಕ್ಕಾಕ್ಕೆ ಹೋಗುವ ಹುಚ್ಚು ಹತ್ತಿ ಬಿಟ್ಟಿತ್ತು. ಮೆಕ್ಕಾಕ್ಕೆ ಹೋಗುವ ಕಾರಣಕ್ಕಾಗಿಯೇ ಅಣ್ಣ-ತಮ್ಮಂದಿರಿಬ್ಬರೂ ನನ್ನ ಬೆನ್ನು ಬಿದ್ದು ಬಿಟ್ಟಿದ್ದರು. ಸರ್ಕಾರ ಕೊಡ ಮಾಡುವ ಸಬ್ಸಿಡಿಯನ್ನು ಇಬ್ಬರೂ ಪಡೆದುಕೊಳ್ಳಬೇಕೆನ್ನುವ ಸಲುವಾಗಿ ಅವರು ನನ್ನ ಮೊರೆ ಹೋಗಿದ್ದರು. ನಾನು ನನ್ನ ಪರಿಚಯದವರನ್ನು ಬಳಸಿಕೊಂಡು ಸಬ್ಸಿಡಿ ಕೊಡಿಸುವ ಜವಾಬ್ದಾರಿಯಿತ್ತು. ಜೊತೆಯಲ್ಲಿ ಮೆಕ್ಕಾಕ್ಕೆ ಹೋಗುವ ಸಲುವಾಗಿ ಪಾಸ್ ಪೋರ್ಟ್ ಮಾಡಿ ವೀಸಾ ಕ್ಕೆ ಪ್ರಯತ್ನಿಸುವುದನ್ನೂ ನಾನು ಮಾಡಿಕೊಡಬೇಕಿತ್ತು. ನನಗೆ ತಿಂಗಳಾನುಗಟ್ಟಲೆ ದುಂಬಾಲು ಬಿದ್ದಿದ್ದ ಅವರನ್ನು ನಾನು ಆ ಸಂದರ್ಭದಲ್ಲಿಯೇ ಹೆಚ್ಚು ಗಮನಿಸಿದ್ದು ಎಂದರೆ ತಪ್ಪಾಗಲಿಕ್ಕಿಲ್ಲ ನೋಡಿ.
              ಆಮೀರ್ ಹಾಗೂ ಸಲ್ಮಾನ್ ಇಬ್ಬರೂ ಒಂದೇ ಧರ್ಮದವರಾಗಿದ್ದರೂ ಸಾಕಷ್ಟು ಭಿನ್ನರೂ ಕೂಡ ಹೌದು. ಇಬ್ಬರೂ ಒಂದೇ ತಾಯಿಯ ಮಕ್ಕಳಾಗಿದ್ದರೂ ಅವರ ಗುಣದಲ್ಲಿ ಮಾತ್ರ ಅದ್ಯಾವ ಪತಿಯ ಭಿನ್ನತೆಯಿತ್ತೆಂದರೆ ನಾನು ಬಹಳ ಅಚ್ಚರಿ ಪಟ್ಟುಕೊಂಡಿದ್ದೆ. ಆಮೀರ್ ಸೌಮ್ಯ ವ್ಯಕ್ತಿತ್ವದವನಾಗಿದ್ದರೆ ಸಲ್ಮಾನ್ ಮಾತ್ರ ಬೇಗನೆ ರೊಚ್ಚಿಗೇಳುತ್ತಿದ್ದ. ಸಿಟ್ಟಿನ ಪ್ರವೃತ್ತಿಯ ಸಲ್ಮಾನ್ ನನ್ನು ಸಂಭಾಳಿಸುವುದು ಕಷ್ಟದ ಕೆಲಸವಾಗಿತ್ತು. ನೋಡಲಿಕ್ಕೆ ಇಬ್ಬರೂ ಅವಳಿಯೇನೋ ಅನ್ನುವಂತೆ ಕಾಣಿಸುತ್ತಿದ್ದರು. ಆದರೆ ಇಬ್ಬರ ಮನಸ್ಥಿತಿಯೂ ಬೇರೆ ಬೇರೆಯಾಗಿತ್ತು. ಮೆಕ್ಕಾಕ್ಕೆ ಹೋಗುವ ಸಲುವಾಗಿ ಅವರಿಬ್ಬರ ಪಾಸ್ ಪೋರ್ಟ್ ತಯಾರಿಸಲು ನಾನು ಪ್ರಯತ್ನಿಸಿದ್ದೇನೋ ನಿಜ. ಆದರೆ ಆ ದಾಖಲೆ ಪತ್ರಗಳು ರೂಪುಗೊಳ್ಳಲು ಕೆಲ ಸಮಯ ತಗುಲಿದ್ದವು. ಆಗೆಲ್ಲ ತಮ್ಮ ಸಲ್ಮಾನ್ ನನ್ನ ಬಳಿ ಬಂದು ಕೂಗಾಡಿ ಹೋಗಿದ್ದ. ಬೇಕಂತಲೇ ಪಾಸ್ ಪೋರ್ಟ್ ನಿಧಾನವಾಗಿ ಆಗುತ್ತಿದೆ. ನಾವು ಮೆಕ್ಕಾಕ್ಕೆ ಹೋಗಬಾರದು ಎನ್ನುವ ಉದ್ದೇಶ ಇದ್ದ ಹಾಗಿದೆ ಹಾಗೆ ಹೀಗೆ ಎನ್ನುವಂತೆಲ್ಲ ಗಲಾಟೆ ಮಾಡಿದ್ದ. ನಾನು ಆತನನ್ನು ಸಮಾಧಾನ ಪಡಿಸಲು ಹೈರಾಣಾಗಿದ್ದೆ. ಆದರೆ ಆಮೀರ್ ಬಂದು ತಮ್ಮನನ್ನು ಸಮಾಧಾನ ಮಾಡಿ ಕರೆದೊಯ್ದಿದ್ದ.
                ಕೊನೆಗೊಂದು ದಿನ ಪಾಸ್ ಪೋರ್ಟ್ ಆಗಿಯೇ ಬಿಟ್ಟಿತು. ಆ ದಿನ ಮಾತ್ರ ಸಲ್ಮಾನ್ ನನ್ನ ಬಳಿ ಬಂದು ಖುಷಿಯಿಂದ ಹೇಳಿಕೊಂಡಿದ್ದ. ಮೆಕ್ಕಾಕ್ಕೆ ಹೋಗಿ ಧರ್ಮೋಪದೇಶ ಪಡೆದುಕೊಂಡು ಬಂದು ನಮ್ಮೂರಿನಲ್ಲಿ ತಾನೊಂದು ಮೌಲ್ವಿಯಾಗುತ್ತೇನೆ ನೋಡುತ್ತಿರಿ ಎಂದು ಹೇಳಿದ್ದ ಸಲ್ಮಾನ್ ಸ್ವಲ್ಪ ವ್ಯಗ್ರನಾಗಿಯೂ ಮಾತನಾಡಿದ್ದ. ಪಾಸ್ ಪೋರ್ಟ್ ಸಿಕ್ಕಿದ್ದಾಗಿದೆ. ಇನ್ನೇಕೆ ನಿನ್ನ ಹಂಗು ಬೇಕು ಎನ್ನುವಂತಿತ್ತು ಸಲ್ಮಾನ್ ನ ವರಸೆ. ನಾನು ಹೆಚ್ಚು ಮಾತನಾಡದೇ ಸುಮ್ಮನುಳಿದಿದ್ದೆ. ಯಥಾಪ್ರಕಾರ ಆಮಿರ್ ಬಂದು ನನ್ನ ಬಳಿ ಕ್ಷಮೆ ಕೋರಿ ಹೋಗಿದ್ದ ಎನ್ನಿ.
              ಇದಾಗಿ ಹಲವು ದಿನಗಳು ಕಳೆದಿದ್ದವು. ಅಣ್ಣ-ತಮ್ಮಂದಿರ ಸುದ್ದಿ ಇರಲಿಲ್ಲ. ಬಹುಶಃ ಹಜ್ ಯಾತ್ರೆಗೆ ಹೋಗಿದ್ದಾರೇನೋ ಅಂದುಕೊಂಡಿದ್ದೆ. ತಿಂಗಳುಗಟ್ಟಲೆ ದಿನಗಳನ್ನು ಕಳೆದ ನಂತರ ಅದೊಂದು ದಿನ ಆ ಅಣ್ಣ-ತಮ್ಮಂದಿರಿ ಸಿಕ್ಕಿದ್ದರು. `ಏನ್ರಪ್ಪಾ.. ನಾಪತ್ತೆಯಾಗಿದ್ದಿರಿ..? ಯಾವ ಕಡೆ ಹೋಗಿದ್ರಿ?' ಎಂದು ಕೇಳಿದ್ದೆ. ಕೊನೆಗೆ ಅವರ ಪೈಕಿ ಸಲ್ಮಾನ್ ಖುಷಿಯಿಂದ ಮಾತನಾಡಿದ್ದ. ಆದರೆ ಆಮೀರ್ ಮಾತನಾಡಿರಲಿಲ್ಲ. ಸಲ್ಮಾನ್ ನನ್ನ ಬಳಿ ಹಜ್ ಯಾತ್ರೆಗೆ ಹೋಗಿ ಬಂದೆವೆಂದೂ ಹಾಜಿಗಳೆನ್ನಿಸಿಕೊಂಡೆವೆಂದೂ ಹೇಳಿದ್ದ. ಫಾಸಪೋರ್ಟ್ ಮಾಡಿಸಿಕೊಡಲು ನಾನು ಸಹಾಯ ಮಾಡಿದ್ದಕ್ಕಾಗಿಯೇ ಹಜ್ ಯಾತ್ರೆ ಸಾಧ್ಯವಾಯಿತು ಎಂದೂ ಹೇಳಿದ್ದ. ಯಾವಾಗಲೂ ನನ್ನ ಬಳಿ ಪ್ರೀತಿಯಿಂದ ಮಾತನಾಡಿ, ಖುಷಿಯಿಂದ ಕಳೆಯುತ್ತಿದ್ದ ಆಮೀರ್ ನನ್ನನ್ನು ಮಾತನಾಡಿಸದೇ ಸಿಟ್ಟಿನ ಮುಖಭಾವದಿಂದ ಹೋಗಿದ್ದು ನನಗೆ ವಿಚಿತ್ರವೆನ್ನಿಸಿತ್ತು. ನನ್ನ ಜೊತೆಗೆ ಸದಾಕಾಲ ಜಗಳಕ್ಕೆ ನಿಲ್ಲುತ್ತಿದ್ದ ಸಲ್ಮಾನ್ ಹಳೆಯ ಕಾಲದ ಯಾವುದೋ ಮಿತ್ರನಂತೆ ಮಾತನಾಡಿದ್ದು, ಆದರಿಸಿದ್ದು ಕೂಡ ಅಚ್ಚರಿಗೆ ಕಾರಣವಾಗಿತ್ತು.
               ನಂತರದ ದಿನಗಳಲ್ಲಿ ಮಾತ್ರ ಬಹಳ ವಿಚಿತ್ರ ಘಟನೆಗಳು ಜರುಗಿದ್ದವು. ಆಮೀರ್ ಹಾಗೂ ಸಲ್ಮಾನ್ ವಾಸವಾಗಿದ್ದ ಊರಿನ ಸುತ್ತಮುತ್ತಲ ಪ್ರದೇಶಗಳಲ್ಲಿ ಈ ಮೊದಲು ಸಲ್ಮಾನ್ ಯಾವ ರೀತಿಯಲ್ಲಿ ತನ್ನ ಧರ್ಮದ ಪ್ರಚಾರಕ್ಕಾಗಿ ಕೆಲಸ ಮಾಡುತ್ತಿದ್ದನೋ ಈಗ ಆಮೀರ್ ಅದೇ ಕೆಲಸಕ್ಕೆ ಮುಂದಾಗಿದ್ದ. ಸಲ್ಮಾನ್ ತನ್ನ ಚೌಕಟ್ಟಿನ ಅಡಿಯಲ್ಲಿ ಕೆಲಸ ಮಾಡುತ್ತಿದ್ದನಾದರೂ, ವಾದಕ್ಕೆ ಸೀಮಿತನಾಗಿದ್ದನಾದರೂ ಆಮೀರ್ ಮಾತ್ರ ಇನ್ನೂ ಹಲವಾರು ಹೆಜ್ಜೆ ಮುಂದಕ್ಕೆ ಸಾಗಿದ್ದ. ಆತ ಯಾರ ಮಾತನ್ನೂ ಕೇಳದೇ ಇರುವ ಹಂತವನ್ನು ತಲುಪಿದ್ದ. ಅದಕ್ಕೆ ಬದಲಾಗಿ ಸಲ್ಮಾನ್ ಮಾತ್ರ ಸಾಮಾಜಿಕವಾಗಿ ತನ್ನನ್ನು ತಾನು ಗುರುತಿಸಿಕೊಳ್ಳಲು ಆರಂಭಿಸಿದ್ದ.
           
***

              ಅದೊಂದು ದಿನ ಬೆಳಿಗ್ಗೆ ಇದ್ದಕ್ಕಿದ್ದಂತೆ ನನಗೆ ಸುದ್ದಿಯೊಂದು ಬಂದಿತ್ತು. ಆಮೀರ್ ಖಾನ್ ಮನೆಯ ಮೇಲೆ ಭಯೋತ್ಪಾದನಾ ನಿಗ್ರಹ ದಳದವರು ಧಾಳಿ ಮಾಡಿದ್ದಾರೆ. ಆಮೀರ್ ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿ ಇಟ್ಟಿದ್ದ ಬಂದೂಕುಗಳು, ಪಿಸ್ತೂಲುಗಳು ಸಿಕ್ಕಿವೆಯಂತೆ. ಮನೆಯ ಯಜಮಾನನಾದ ಆಮೀರ್ ಹಾಗೂ ಆತನ ತಮ್ಮ ಸಲ್ಮಾನ್ ಇಬ್ಬರನ್ನೂ ಪೊಲೀಸರು ಬಂಧಿಸಿ ಕರೆದೊಯ್ದಿದ್ದಾರಂತೆ ಎಂಬ ಸುದ್ದಿ ಕೇಳಿಬಂದಿತ್ತು. ಅದಾದ ಮರುದಿನವೇ ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಗಳು ನನ್ನ ಮನೆಯ ಕದವನ್ನೂ ತಟ್ಟಿದ್ದರು. ನಾನು ಈಗ ಮಾತ್ರ ಭಯಗೊಂಡಿದ್ದೆ. ಅಧಿಕಾರಿಗಳು ನನ್ನನ್ನು ಸೀದಾ ಅವರ ಕಚೇರಿಗೆ ಕರೆದೊಯ್ದಿದ್ದರು. ಸದಾ ಧರ್ಮದ ಪರವಾಗಿ ಮಾತನಾಡಿ ಗಲಾಟೆಗೆ ತಯಾರಾಗುತ್ತಿದ್ದ ಸಲ್ಮಾನ್ ಏನೋ ಭಾನಗಡಿ ಮಾಡಿರಬೇಕು ಎಂದುಕೊಂಡಿದ್ದೆ.
             ಕರೆದೊಯ್ದವರೇ ನನ್ನ ಬಳಿ ಕೇಳಿದ್ದಿಷ್ಟು. ಆಮೀರ್ ಹಾಗೂ ಸಲ್ಮಾನ್ ಇಬ್ಬರೂ ಹಜ್ ಯಾತ್ರೆ ಮಾಡಲು ಅನುಕೂಲವಾಗುವಂತೆ ಪಾಸಪೋರ್ಟ್ ಮಾಡಿಸಿಕೊಟ್ಟಿದ್ದು, ಅದಕ್ಕೆ ಸಹಾಯ ಮಾಡಿದ್ದು ನಾನಾಗಿದ್ದೆ. ಅದನ್ನು ಯಾವ ಕಾರಣಕ್ಕೆ ಮಾಡಿಸಿಕೊಟ್ಟಿದ್ದೆಂದು ಕೇಳಿದ್ದರು. ನಾನು ಎಲ್ಲ ವಿವರಗಳನ್ನೂ ಹೇಳಿದ್ದೆ. ಕೊನೆಗೆ ನನ್ನ ಮಾತನ್ನು ಅವರು ನಂಬಿದರೋ ಬಿಟ್ಟರೋ ಎನ್ನುವುದು ಗೊತ್ತಾಗಲಿಲ್ಲ. ಆದರೆ ನನ್ನನ್ನು ವಾಪಾಸು ಹೋಗುವಂತೆ ಹೇಳಿದ್ದರಿಂದ ನಾನು ನಿರಾಳನಾಗಿದ್ದೆ. ಹೋಗುವ ಮುನ್ನ ಅಧಿಕಾರಿಗಳ ಬಳಿ ಬಂಧನಕ್ಕೊಳಪಟ್ಟಿರುವ ಆಮೀರ್ ಹಾಗೂ ಸಲ್ಮಾನ್ ಅವರನ್ನು ಮಾತನಾಡಿಸಬಹುದೇ ಎಂದು ಹೇಳಿದ್ದೆ. ಅದಕ್ಕವರು ಸಾಕಷ್ಟು ಫಾರ್ಮುಗಳ ಮೇಲೆ ಸಹಿ ಹಾಕಿಸಿಕೊಂಡು ಒಪ್ಪಿಗೆ ಸೂಚಿಸಿದ್ದರು.
          ದೊಡ್ಡ ಜೈಲಿನಲ್ಲಿ ಎರಡು ಪ್ರತ್ಯೇಕ ಕೋಣೆಗಳಲ್ಲಿ ಆಮೀರ್ ಹಾಗೂ ಸಲ್ಮಾನ್ ರನ್ನು ಕೂಡಿ ಹಾಕಲಾಗಿತ್ತು. ಅವರು ಇದ್ದ ಸ್ಥಿತಿಯನ್ನು ಗಮನಿಸಿದರೆ ಸತ್ಯವನ್ನು ಬಾಯಿ ಬಿಡಿಸುವ ಸಲುವಾಗಿ ಸಾಕಷ್ಟು ಚಿತ್ರಹಿಂಸೆ ನೀಡಿರುವುದು ಗಮನಕ್ಕೆ ಬರುತ್ತಿತ್ತು. ನಾನು ಸೀದಾ ಆಮೀರ್ ಇದ್ದ ಕೋಣೆಯತ್ತ ಹೋದೆ. ಆಮೀರನಿಗೆ ನಾನು ಬರುತ್ತಿರುವುದು ಕಾಣಿಸಿತ್ತು. ಆದರೆ ನನ್ನ ಜೊತೆಗೆ ಮಾತನಾಡಲು ಸಿದ್ಧನಿರದ ಆಮೀರ್ ಮುಖ ತಿರುಗಿಸಿಕೊಂಡ. ಕೊನೆಗೆ ಸಲ್ಮಾನ್ ಬಳಿಗೆ ಹೋದೆ. ಸಲ್ಮಾನ್ ನನ್ನನ್ನು ನೋಡಿದವನೇ ಕಣ್ಣಿನಲ್ಲಿ ನೀರು ತಂದುಕೊಂಡು `ಮಾಫ್ ಕರೋ. ನಾನು ಏನೂ ಧೋಖಾ ಮಾಡಿಲ್ಲ. ನನ್ನನ್ನು ಇಲ್ಲಿ ಸುಮ್ಮನೇ ಸಿಕ್ಕಿಸಿದ್ದಾರೆ. ಹೇಗಾದರೂ ಮಾಡಿ ನನ್ನನ್ನು ಬಿಡಿಸಿ ಮಾರಾಯ್ರೇ..' ಎಂದು ಹಲುಬಲು ಆರಂಭಿಸಿದ. ನನಗೆ ಮತ್ತೆ ವಿಚಿತ್ರವೆನ್ನಿಸಿತ್ತು.
            `ಏನಾಗುತ್ತದೋ ಗೊತ್ತಿಲ್ಲ. ಆದರೆ ಇದೆಲ್ಲ ಹೇಗಾಯಿತು? ಇದಕ್ಕೆಲ್ಲ ಏನು ಕಾರಣ? ನಿಮ್ಮ ಮನೆಯಲ್ಲಿ ಭಯೋತ್ಪಾದಕ ವಸ್ತುಗಳು ಸಿಗುತ್ತವೆ ಎಂದರೆ ಹೇಗೆ ಸಾಧ್ಯ? ನೋಡಿ ನಿಮಗೆ ಪಾಸ್ ಪೋರ್ಟ್ ಮಾಡಿಸಿಕೊಡಲು ಸಹಾಯ ಮಾಡಿದ ನನ್ನ ತಲೆಗೂ ಇದು ಸುತ್ತಿಕೊಳ್ಳುತ್ತಿದೆ..' ಎಂದು ಸಿಟ್ಟಿನಿಂದ ನುಡಿದೆ.
            `ಭಾಯ್.. ಇದು ನನ್ನ ಕೆಲಸವಲ್ಲ ಭಾಯ್. ಇದಕ್ಕೂ ನನಗೂ ಏನೂ ಸಂಬಂಧವಿಲ್ಲ. ಇದೆಲ್ಲ  ಆಮೀರ್ ನ ಕೆಲಸ. ನಾನು ಯಾವುದಕ್ಕೂ ಸಂಬಂಧ ಇಲ್ಲದವನು. ಆದರೆ ಆಮೀರ್ ನಿಂದಾಗಿ ನಾನೂ ಈಗ ಜೈಲುಪಾಲಾಗುವ ಪರಿಸ್ಥಿತಿ ಬಂದಿತು. ಅವನಿಂದಲೇ ನಿಮಗೂ ಕೆಟ್ಟ ಹೆಸರು ಬಂದಿತು ನೋಡಿ.. ಛೇ..' ಎಂದು ತಲೆ ಕೊಡವಿದ ಸಲ್ಮಾನ್.
            `ಆಮೀರ್..? ಆತ ಹೀಗೆ ಮಾಡಿದನಾ? ಹೇಗೆ ಸಾಧ್ಯ? ಮತ್ತೆ ಆಗ ಅಷ್ಟೆಲ್ಲ ಒಳ್ಳೆಯವನಾಗಿದ್ದನಲ್ಲ.. ಹಜ್ ಯಾತ್ರೆ ಮಾಡಿದ ನಂತರ ಏನಾಯಿತು ನಿಮಗೆ?' ಎಂದು ಅಚ್ಚರಿ, ದುಗುಡ ಹಾಗೂ ಕುತೂಹಲದಿಂದ ಕೇಳಿದ್ದೆ.
           `ಅಯ್ಯೋ ಅದೊಂದು ದೊಡ್ಡ ಕಥೆ. ಹಜ್ ಯಾತ್ರೆಗೆ ಮುನ್ನ ನಾನು ಉಗ್ರವಾದ ಆಲೋಚನೆಗಳನ್ನು ಹೊಂದಿದ್ದೇನೋ ನಿಜ. ನನ್ನಣ್ಣ ಆಮೀರ್ ಒಳ್ಳೆಯವನಾಗಿದ್ದಿದ್ದೂ ನಿಜ. ಆದರೆ ಅಲ್ಲಿಗೆ ಹೋದ ಮೇಲೆಯೇ ನಮ್ಮಲ್ಲಿ ಬದಲಾವಣೆಗಳು ಜರುಗಿದ್ದು ನೋಡಿ. ಹೇಗೋ ಇದ್ದ ಆತ ಹೇಗೋ ಆದ. ಮತ್ತೆ ಇನ್ನು ಹೇಗೋ ಇದ್ದ ನಾನು ಹೀಗೆ ಆಗಿದ್ದೇನೆ ನೋಡಿ..' ಎಂದು ಹಲುಬಿದ ಸಲ್ಮಾನ್.
           `ಅರ್ಥವಾಗುತ್ತಿಲ್ಲ.. ಬಿಡಿಸಿ ಹೇಳು ಮಾರಾಯಾ.' ಎಂದೆ ನಾನು
           `ನಿಮ್ಮ ಧರ್ಮದಲ್ಲಿ ಕಾಶೀ ಯಾತ್ರೆಯನ್ನು ಹೇಗೆ ಮಾಡುತ್ತೀರೋ ಹಾಗೆ ನಮ್ಮ ಧರ್ಮದಲ್ಲಿ ಮೆಕ್ಕಾ ಯಾತ್ರೆ ಮಾಡುತ್ತೇವೆ. ಕಾಶಿ ನಿಮಗೆ ಪವಿತ್ರ. ನಮಗೆ ಮೆಕ್ಕಾ ಹಾಗೂ ಮದೀನಾ ಯಾತ್ರೆ. ಇದನ್ನೇ ಹಜ್ ಯಾತ್ರೆ ಎಂದು ಕರೆಯಲಾಗುತ್ತದೆ. ಹಜ್ ಯಾತ್ರೆ ಮಾಡಿದವರನ್ನು ಹಾಜಿ ಎಂದೂ ಹೇಳಲಾಗುತ್ತದೆ. ಹೀಗೆ ಹಜ್ ಯಾತ್ರೆಗೆ ನಮ್ಮಂತೆ ಕೋಟ್ಯಂತರ ಜನರು ದೇಶ ವಿದೇಶಗಳಿಂದ ಬರುತ್ತಾರೆ. ನಾವು ಕೂಡ ಹೋದ್ವಿ. ಅಲ್ಲಿಯವರೆಗೆ ಎಲ್ಲವೂ ಸರಿಯಾಗಿಯೇ ಇತ್ತು. ಅಲ್ಲಿಂದಲೇ ಎಲ್ಲ ಬದಲಾಗಿದ್ದು ನೋಡಿ.' ಎಂದ ಸಲ್ಮಾನ್. `ಅಂದರೆ? ಏನಾಯಿತು ಅಲ್ಲಿ?' ನಾನು ನಡುವೆ ಬಾಯಿ ಹಾಕಿ ಕೇಳಿದೆ.
            `ಅಲ್ಲಿ ಎಲ್ಲಾ ರಾಷ್ಟ್ರಗಳ ಜನರೂ ಬರುತ್ತಾರೆ ಎಂದೆನಲ್ಲ. ಅಣ್ಣ ಆಮೀರ್ ಗೆ ಹೇಗೋ ಗೊತ್ತಿಲ್ಲ ಪಾಕಿಸ್ತಾನದಿಂದ ಬಂದಿದ್ದ ಕೆಲವು ಭಯೋತ್ಪಾದಕರ ಪರಿಚಯವಾಗಿಬಿಟ್ಟಿತ್ತು. ಸೌಮ್ಯನಾಗಿ, ಎಲ್ಲರಿಗೂ ಬೇಕಾಗಿ ಜೀವಿಸುತ್ತಿದ್ದ ಆತನ ತಲೆಯನ್ನು ಭಯೋತ್ಪಾದಕರು ವ್ಯವಸ್ಥಿತವಾಗಿ ತಿರುಗಿಸಿಬಿಟ್ಟಿದ್ದರು. ಪರಿಣಾಮವಾಗಿ ಆತನ ತನ್ನ ಧರ್ಮವನ್ನು ಬಿಟ್ಟು ಉಳಿದೆಲ್ಲ ಧರ್ಮವನ್ನೂ ದ್ವೇಷಿಸುವ ಹಂತಕ್ಕೆ ತಲುಪಿದ್ದ. ಧರ್ಮದ ಸ್ಥಾಪನೆಗಾಗಿ ಧರ್ಮಯುದ್ಧ ಮಾಡಲೂ ಸಿದ್ಧ ಎಂದು ಹೇಳುವ ಮಟ್ಟಕ್ಕೆ ಆತ ಬಂದು ತಲುಪಿದ್ದ. ಇದೇ ಕಾರಣಕ್ಕೆ ಈಗ ಆತ ಯಾರ ಬಳಿಯೂ ಹೆಚ್ಚು ಮಾತನಾಡುವುದಿಲ್ಲ. ಎಲ್ಲರನ್ನೂ ದ್ವೇಷ ಮಾಡುತ್ತಾನೆ. ಎಲ್ಲರ ಮೇಲೂ ಕೆಂಡ ಕಾರುತ್ತಾನೆ. ಇದೀಗ ಅಕ್ರಮವಾಗಿ ಶಸ್ತ್ರಾಸ್ತ್ರಗಳನ್ನು ಸಂಗ್ರಹ ಮಾಡಿ ಇರಿಸಿಕೊಳ್ಳುವುದಕ್ಕೂ ಇದೇ ಕಾರಣ. ಈಗ ನೋಡಿ ಇದು ಎಲ್ಲಿಗೆ ಬಂದು ತಲುಪಿದೆ ಅಂತ..' ಎಂದ ಸಲ್ಮಾನ್.
            ನನ್ನಲ್ಲಿ ಅಚ್ಚರಿಯಿತ್ತು. ಎಲ್ಲರನ್ನೂ ಸ್ನೇಹದಿಂದ ಕಾಣುತ್ತಿದ್ದ, ಎಲ್ಲಾ ಧರ್ಮದವರನ್ನೂ ಪ್ರೀತಿಯಿಂದ ಸಲಹುತ್ತಿದ್ದ ಆಮೀರ್ ನಲ್ಲಿ ಇಂತಹ ಬದಲಾವಣೆಯಾಗಿದೆ ಎಂದರೆ ಸಾಮಾನ್ಯವೇನಲ್ಲ. ಆಮೀರ್ ಉಗ್ರನಾದ ಎನ್ನುವುದನ್ನು ನನ್ನ ಮನಸ್ಸು ಹೇಗೆ ನಂಬಲು ತಯಾರಿರಲಿಲ್ಲವೋ ಅದೇ ರೀತಿ ಉಗ್ರ ಗುಣಗಳನ್ನು ಹೊಂದಿದ್ ಸಲ್ಮಾನ್ ಹೇಗೆ ಸೌಮ್ಯನಾದ ಎನ್ನುವುದನ್ನೂ ನಂಬಲು ಸಿದ್ಧವಿರಲಿಲ್ಲ. ಕುತೂಹಲ ತಡೆಯಲಾಗದೇ ಕೇಳಿಯೂಬಿಟ್ಟೆ. `ಹಾಗಾದರೆ ನೀನು ಇಷ್ಟೆಲ್ಲ ಸುಮ್ಮನಾಗಲು, ನಿನ್ನೊಳಗಿನ ಉಗ್ರ ಗುಣಗಳು ಕಾಣೆಯಾಗಲು ಕಾರಣ ಏನು? ನಿನಗೂ ಉಗ್ರರ ಗುಂಪು ಸಿಗಲಿಲ್ಲವಾ? ನಿನ್ನನ್ನು ಮನಃಪರಿವರ್ತನೆ ಮಾಡಲು ಅವರು ಪ್ರಯತ್ನಿಸಲಿಲ್ಲವಾ?' ಎಂದು ಕೇಳಿದೆ.
            ಒಮ್ಮೆ ನಕ್ಕ ಸಲ್ಮಾನ್ `ಭಾಯ್.. ನಿಮ್ಮ ಧರ್ಮದಲ್ಲಿ ನೀವು ಕಾಶಿಗೆ ಹೋಗುತ್ತೀರಾ. ಕಾಶಿಗೆ ಹೋಗಿ ಬಂದವರನ್ನು ಸರಿಯಾಗಿ ಮಾತನಾಡಿಸಿದರೆ ಅವರಲ್ಲಿ ಅದೇನೋ ಒಂದು ರೀತಿಯ ಭಾವ ಕಾಡುತ್ತಿರುತ್ತದೆ. ಬೌದ್ಧುಕವಾಗಿ ಔನ್ನತ್ಯ ಸಾಧಿಸಿರುತ್ತಾರೆ. ತಾವು ಇದುವರೆಗೂ ಮಾಡಿದ್ದು ಸಾಕು. ಇನ್ನಾದರೂ ಸಮಾಜಮುಖಿಯಾಗೋಣ, ಜನರಿಗೆ ಒಳ್ಳೆಯದನ್ನು ಮಾಡೋಣ ಎಂದುಕೊಂಡು ಜೀವನ ನಡೆಸುತ್ತಾರೆ. ನನಗೂ ಕೂಡ ಹಾಗೆಯೇ ಆಯಿತು. ನಮ್ಮ ಧರ್ಮದ ಅತ್ಯುನ್ನತ ಕ್ಷೇತ್ರಕ್ಕೆ ಹೋದ ನನಗೆ ಎಲ್ಲ ಆಸೆಗಳೂ ಸಂಪೂರ್ಣವಾಗಿ ಕರಗಿಬಿಟ್ಟವು. ಯಾಕೋ ನಾನು ಇದುವರೆಗೂ ಸುಮ್ಮನೇ ಧರ್ಮ-ಧರ್ಮ ಎಂದು ಹೊಡೆದಾಟ ಮಾಡುತ್ತಿದ್ದೆ. ಆದರೆ ಅದರಿಂದ ನನಗೆ ಸಿಕ್ಕಿದ್ದೇನು ಎನ್ನಿಸಿತು. ಸಮಾಜದಿಂದಲೂ ದೂರವಾದೆ. ನನ್ನನ್ನು ಕಂಡರೆ ಎಲ್ಲರೂ ಹೆದರಲು ಆರಂಭಿಸಿದರು. ನಾನು ನನ್ನ ಮನೆಯಲ್ಲಿರುವ ನನ್ನ ಧರ್ಮದ ಗೃಂಥವನ್ನು ಅದೆಷ್ಟು ಸಹಸ್ರ ಸಾರಿ ಓದಿದ್ದೆನೊ. ಆದರೆ ಅದರಲ್ಲಿನ ವಾಕ್ಯಗಳು ಸಂಪೂರ್ಣ ಅರ್ಥವಾಗಿರಲಿಲ್ಲ. ಅದಕ್ಕಿಂತ ಹೆಚ್ಚಾಗಿ ನಾನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಲಿಲ್ಲ. ಹೀಗಾಗಿ ಧರ್ಮ ಹಾಗೆ ಹೇಳುತ್ತಿದೆ, ಹೀಗೆ ಹೇಳುತ್ತದೆ ಎಂದೆಲ್ಲ ವಾದಿಸುತ್ತಿದೆ. ಆದರೆ ಯಾತ್ರೆಗೆ ಹೋದ ನನಗೆ ಒಬ್ಬ ಪ್ರಸಿದ್ದ ಮೌಲ್ವಿಗಳ ದರ್ಶನ ಭಾಗ್ಯ ಸಿಕ್ಕಿತು. ಅವರು ನನಗೆ ನನ್ನ ಧರ್ಮದ ಗೃಂಥದ ಎಳೆ ಎಳೆಯನ್ನೂ ಸಂಪೂರ್ಣವಾಗಿ ವಿವರಿಸಿದರು. ನನ್ನ ಧರ್ಮ ಉಗ್ರವಾದುದಲ್ಲ. ಯುದ್ಧ ಮಾಡಿ ಎಂದು ಹೇಳುವುದಿಲ್ಲ. ಬದಲಾಗಿ ಪ್ರೀತಿಯನ್ನು ಹಂಚಿ ಎಂದು ಹೇಳುತ್ತದೆ ಎಂದರು. ನಾನು ಎಷ್ಟು ತಪ್ಪು ಮಾಡುತ್ತಿದ್ದೆ ಎನ್ನುವುದು ಅರಿವಾಯಿತು. ತಕ್ಷಣವೇ ನಾನು ಬದಲಾಗಲು ನಿರ್ಧಾರ ಮಾಡಿದೆ. ನನ್ನೊಳಗಿನ ಉಗ್ರ ಹಾಗೇ ಕಾಣೆಯಾಗಿದ್ದ..' ಎಂದ ಸಲ್ಮಾನ್.
               ನನ್ನಲ್ಲಿ ಅಚ್ಚರಿಯಿತ್ತು. ಆತನೇ ಮುಂದುವರೆದ `ನನಗೂ ಅನೇಕ ಜನರು ಬಂದು ಹಾಗೆ ಮಾಡು ಹೀಗೆ ಮಾಡು ಎಂದರು. ಭಯೋತ್ಪಾದಕ ಸಂಘಟನೆಗೆ ಸೇರಲು ಆಹ್ವಾನವನ್ನೂ ನೀಡಿದ್ದರು. ಆದರೆ ಅವರ ಬಳಿ ನಾನು ಪ್ರೀತಿಯ ಪಾಠವನ್ನು ಹೇಳಿದೆ. ಇದರಿಂದಾಗಿ ಯಾತ್ರೆಯ ಮಧ್ಯದಲ್ಲಿಯೇ ನನ್ನ ಮೇಲೆ ಹಲ್ಲೆಯೂ ನಡೆಯಿತು. ಆದರೆ ಮೌಲ್ವಿಗಳ ಸಹಾಯದಿಂದ ನಾನು ಬದುಕಿದೆ. ಆದರೆ ನನ್ನಣ್ಣ ಸಂಪೂರ್ಣವಾಗಿ ಅವರ ವಶಕ್ಕೆ ಸಿಲುಕಿದ್ದ. ಆತನನ್ನು ಬದಲಾಯಿಸಲು ಪ್ರಯತ್ನಿಸಿ ಸೋತು ಹೋದೆ. ಮುಂದೊಂದು ದಿನ ಶಸ್ತ್ರಾಸ್ತ್ರಗಳನ್ನೂ ತಂದು ಇರಿಸಿದ. ಇದನ್ನು ನಾನು ಉಗ್ರವಾಗಿ ವಿರೋಧ ಮಾಡಿದ್ದೆ. ಆದರೆ ಅಣ್ಣ ನನ್ನ ಮಾತು ಕೇಳಲಿಲ್ಲ. ಕೊನೆಗೊಂದು ದಿನ ನಾನೇ ಭಯೋತ್ಪಾದನೆ ನಿಗ್ರಹ ದಳದವರಿಗೆ ಮಾಹಿತಿಯನ್ನೂ ನೀಡಿದೆ. ಈಗ ನೋಡಿ ದಳದ ಅಧಿಕಾರಿಗಳು ನನ್ನ ಮಾತನ್ನು ಕೇಳುತ್ತಿಲ್ಲ. ನಾನೇ ಮಾಹಿತಿ ನೀಡಿದವನು ಎಂದರೂ ನಂಬುತ್ತಿಲ್ಲ. ನನ್ನನ್ನೂ ಭಯೋತ್ಪಾದಕ ಎಂಬಂತೆ ಕಾಣುತ್ತಿದ್ದಾರೆ' ಎಂದ.
             ಸಲ್ಮಾನ್ ಇಂತಹದ್ದೊಂದು ಮಾಹಿತಿ ನೀಡುತ್ತಾನೆ ಎಂದು ನಾನು ಖಂಡಿತವಾಗಿಯೂ ಅಂದಾಜು ಮಾಡಿರಲಿಲ್ಲ. ದೇಶದಾದ್ಯಂತ ಇರುವ ನಮ್ಮದೇ ದೇಶದ ಗುಪ್ತಚರರು ಈ ಅಣ್ಣತಮ್ಮಂದಿರ ಮೇಲೆ ಕಣ್ಣಿರಿಸಿದ್ದರು. ಅವರ ತನಿಖೆಗೆ ಸಿಕ್ಕಿಬಿದ್ದಿದ್ದಾರೆ ಎಂದುಕೊಂಡಿದ್ದೆ. ಆದರೆ ಸಲ್ಮಾನ್ ಮಾಹಿತಿ ನೀಡಿದ್ದಾನೆ ಎನ್ನುವುದು ನನ್ನಲ್ಲಿ ಶಾಕ್ ನೀಡಿತ್ತು. ಸಲ್ಮಾನ್ ಇಂತಹ ಕೆಲಸ ಮಾಡಿದ್ದಾನೆ ಎನ್ನುವುದು ನನ್ನ ನಿರೀಕ್ಷೆಗೆ ನಿಲುಕದ ಸಂಗತಿಯಾದ್ದರಿಂದ ಒಮ್ಮೆ ಬೆಚ್ಚಿದ್ದೆ. ನಾನು ಮಾತುಕತೆಗೆ ಆಡಲು ಬಂದಾಗ ನನ್ನ ಜೊತೆ ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಯೊಬ್ಬ ಬಂದಿದ್ದ. ಆತ ನಮ್ಮ ಮಾತುಕತೆಗಳನ್ನೆಲ್ಲ ರೆಕಾರ್ಡ್ ಮಾಡಿಕೊಳ್ಳುತ್ತಿದ್ದ. ಸಲ್ಮಾನನ ಮಾತನ್ನು ಕೇಳಿ ಆತನಿಗೂ ಒಮ್ಮೆ ಅಚ್ಚರಿಯಾಗಿದ್ದು ಮುಖಭಾವದಿಂದ ಕಾಣುತ್ತಿತ್ತು.
             `ಒಳ್ಳೆಯ ಕೆಲಸ ಮಾಡಿದ್ದೀಯಾ ಸಲ್ಮಾನ್ ಭಾಯ್. ನಿಜಕ್ಕೂ ನಿನ್ನ ದೇಶಪ್ರೇಮ, ಪ್ರೀತಿಯ ಪಾಠ ಮೆಚ್ಚುವಂತದ್ದು. ನಾನು ಅಧಿಕಾರಿಗಳ ಬಳಿ ಹೇಳುತ್ತೇನೆ. ನನ್ನ ಮಾತನ್ನು ಕೇಳಿದರೆ ಆಯಿತು. ಇಲ್ಲವಾದರೆ ಮುಂದೆ ಏನಾಗುತ್ತದೆಯೋ ನೋಡೋಣ. ಆದರೆ ನೀನು ಹೇಳಿದ ಮಾತುಗಳಿದೆಯಲ್ಲ. ಇದನ್ನು ಜಗತ್ತು ಅನುಸರಿಸಿದರೆ ಮಾತ್ರ ಎಷ್ಟು ಒಳ್ಳೆಯದು ಅಲ್ಲವಾ. ದ್ವೇಷದಿಂದ, ಭಯದಿಂದ ಜಗತ್ತನ್ನು ಗೆಲ್ಲಲು ಸಾಧ್ಯವಿಲ್ಲ. ಪ್ರೀತಿಯಿಂದ ಮಾತ್ರ ಸಾಧ್ಯವಿದೆ. ನನಗೆ ಅರ್ಥವಾಗುತ್ತದೆ. ನಿನಗೆ ಅರ್ಥವಾಗುತ್ತದೆ. ಆದರೆ ಜಗತ್ತಿಗೆ ಮಾತ್ರ ಇದು ಅರ್ಥವಾಗುತ್ತಿಲ್ಲ ನೋಡು.' ಎಂದೆ. ಮುಂದಿನ ಕೆಲ ಘಳಿಗೆಯಲ್ಲಿ ಆತನ ಜೊತೆ ಮಾತುಕತೆಯೂ ನಡೆಯಿತು. ಅಷ್ಟರಲ್ಲಿ ನನ್ನ ಜೊತೆಗೆ ಇದ್ದ ಅಧಿಕಾರಿ ಸನ್ನೆ ಮಾಡಿದ. ಮಾತು ಸಾಕು ಎನ್ನುವಂತೆ ಹೇಳಿ ನನ್ನನ್ನು ಹೊರಕ್ಕೆ ಹೋಗುವಂತೆ ತಿಳಿಸಿದ. ನಾನು ಸಲ್ಮಾನನನ್ನು ಬೀಳ್ಕೊಟ್ಟೆ. ಸಲ್ಮಾನನ ಕೋಣೆ ದಾಟಿ ಆಮೀರ್ ಇದ್ದ ಕೋಣೆಯ ಬಳಿ ಬಂದಾಗ ಇದ್ದಕ್ಕಿದ್ದಂತೆ ಆಮೀರ್ `ಧರ್ಮಯುದ್ಧ ಶಾಶ್ವತ. ಧರ್ಮಯುದ್ಧಕ್ಕೆ ಜಯವಾಗಲಿ.' ಎಂದು ದೊಡ್ಡದಾಗಿ ಕೂಗಿದ. ನಾನು ಬೆಚ್ಚಿಬಿದ್ದು ಹೊರಕ್ಕೆ ಬಂದಿದ್ದೆ.

****

            ಇದಾಗಿ ಒಂದು ವಾರ ಕಳೆಯುವಷ್ಟರಲ್ಲಿ ಅಚ್ಚರಿಯ ಸುದ್ದಿಯೊಂದು ಬಂದಿತ್ತು. ಜೈಲಿನಲ್ಲಿ ಸಲ್ಮಾನ್ ತನ್ನ ಅಣ್ಣ  ಆಮೀರನನ್ನು ಕೊಲೆ ಮಾಡಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದ. ಈ ಕುರಿತು ಅಚ್ಚರಿಯಿಂದ ಭಯೋತ್ಪಾದನೆ ನಿಗ್ರಹ ದಳದ ಅಧಿಕಾರಿಗಳ ಬಳಿ ಕೇಳಿದಾಗ `ಉಗ್ರನ ಮನಸ್ಸು ಪರಿವರ್ತನೆಗೆ ಪ್ರಯತ್ನ ಮಾಡಿದ್ದ ಸಲ್ಮಾನ್. ಅದರೆ ಆಮೀರ್ ಆ ಮಾತಿಗೆ ಬೆಲೆ ಕೊಡಲಿಲ್ಲ. ಕೊನೆಗೆ ಇಂತಹ ಉಗ್ರ ಮನೋಭಾವದವನು ಇರುವುದಕ್ಕಿಂತ ಸಾಯುವುದೇ ಒಳ್ಳೆಯದು. ಆತನನ್ನು ಸಾಯಿಸಿದರೆ ಜಗತ್ತಿನಲ್ಲಿ ಅದೆಷ್ಟೋ ಅಮಾಯಕರು ನಿಶ್ಚಿಂತೆಯಿಂದ ಇರುತ್ತಾರೆ ಎಂದು ಎಂದು ಪತ್ರ ಬರೆದು ಆಮೀರನನ್ನು ಹತ್ಯೆ ಮಾಡಿದ್ದ. ಅಲ್ಲದೇ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದ ನೋಡಿ..' ಎಂದಿದ್ದರು.
            ಒಂದು ಯಾತ್ರೆ ಇಬ್ಬರಲ್ಲೂ ಎಂತಹ ಬದಲಾವಣೆ ತಂದಿತಲ್ಲ. ಸೌಮ್ಯನಾಗಿದ್ದವನು ಉಗ್ರನಾದ. ಉಗ್ರನಾದವನು ಸೌಮ್ಯಭಾವವನ್ನು ಹೊಂದಿದ. ಒಬ್ಬ ಹಿಂಸೆಯ ಹಾದಿ ಹಿಡಿದರೆ ಇನ್ನೊಬ್ಬ ಪ್ರೀತಿಯ ಹೂವನ್ನು ಮುಡಿದ. ಎಂತಹ ಬದಲಾವಣೆಗಳಲ್ಲವಾ ಎಂದುಕೊಂಡೆ. ಸಲ್ಮಾನ್ ಹಾಗೂ ಆಮೀರ್ ಸಹೋದರರ ಈ ರೀತಿಯ ಬದಲಾವಣೆಗಳು ನನ್ನಲ್ಲೂ ತರಂಗಗಳನ್ನು ಎಬ್ಬಿಸಿದ್ದವು.