Friday, August 7, 2015

ನಾವು ಹವ್ಯಕರು-3

ನಾವು ಹವ್ಯಕರು ನಾವು ಹವ್ಯಕರು
ಅಡಿಕೆಯ ಬೆಳೆಗಾರರು |
ವೇದ ಪಾರಂಗತರು
ನಾವು ಹವ್ಯಕರು ನಾವು ಹವ್ಯಕರು ||

ಉತ್ತರದಿಂದ ಬಂದವ್ವಡ
ನಾವು ಹವ್ಯಕರು
ಹೈಗುಂದದಲ್ಲಿ ನಿಂತವ್ವಡ
ನಾವು ಹವ್ಯಕರು ||

ಏಳು ಗೋತ್ರ ಸಣಕಲು ಗಾತ್ರ
ನಾವು ಹವ್ಯಕರು
ವೇದ ಪಾಠ, ಮೂರು ಮಠ
ನಾವು ಹವ್ಯಕರು ||

ಉ.ಕ, ದ.ಕ, ಶಿವಮೊಗ್ಗ
ಎಲ್ಲೆಲ್ಲೂ ಹವ್ಯಕರು
ಕಾಸರಗೋಡು, ಕುಂಬ್ಳೆ ಸೀಮೆ
ನಾವು ಹವ್ಯಕರು ||

ಕೃಷಿಗೂ ಸೈ, ಸಾಫ್ಟ್ ವೇರ್ ಗೂ ಜೈ
ನಾವು ಹವ್ಯಕರು
ಬದುಕಿಗಾಗಿ ನೂರಾರು ರೂಪ
ನಾವು ಹವ್ಯಕರು ||

ದೋಸೆ, ಅನ್ನ, ಅಪ್ಪೆಹುಳಿ
ಪ್ರೀತಿಯ ಹವ್ಯಕರು
ಉಪ್ಪಿನಕಾಯಿ, ಅಪ್ಪೆಮಿಡಿ
ಮೆಲ್ಲುವ ಹವ್ಯಕರು ||

ಯಂತ್ರಕ್ಕೂ ಸೈ, ಮಂತ್ರಕ್ಕೂ ಸೈ
ನಾವು ಹವ್ಯಕರು
ಕಷ್ಟ ಬಂದ್ರೂ ನಗ್ತಾ ಇರುವವರು
ನಾವು ಹವ್ಯಕರು ||

***

(ಹವ್ಯಕರ ಬಗ್ಗೆ ವಿವರ ನೀಡುವ ನಾವು ಹವ್ಯಕರು ಶೀರ್ಷಿಕೆಯಲ್ಲಿ ಈಗಾಗಲೇ ಎರಡು ಕವಿತೆ ಬರೆದಿದ್ದೆ. ಆ ಎರಡು ಕವಿತೆಗಳ ಮುಂದುವರಿದ ಭಾಗವಾಗಿ ಈ ಕವಿತೆ ಬರೆದಿದ್ದೇನೆ. ಹವ್ಯಕರ ಮತ್ತಷ್ಟು ಗುಣಗಳನ್ನು ಈ ಕವಿತೆ ತಿಳಿಸುತ್ತದೆ. ನಿಮಗಿಷ್ಟವಾಗಬಹುದು.)

(ಈ ಕವಿತೆಯನ್ನು ಬರೆದಿರುವುದು ಆಗಸ್ಟ್ 7, 2015ರಂದು ಸಿರಸಿಯಲ್ಲಿ)



Wednesday, August 5, 2015

ಚಲಿಸುವ ಮೋಡಗಳು

ಚಲಿಸುವ ಮೋಡಗಳು
ಏನೋ ಹೇಳುತಿವೆ |
ಬಾವದ ಬದುಕಲ್ಲಿ
ಬಯಕೆಯ ತುಂಬುತಿವೆ ||

ಚಲಿಸುವ ಮೋಡಗಳು
ಚಲನೆಯ ತುಂಬುತಿವೆ |
ಮನದೇಕಾಂತದಲಿ
ಪ್ರೀತಿಯ ನೀಡುತಿವೆ ||

ಚಲಿಸುವ ಮೋಡಗಳು
ಶಾಂತಿಯ ನೀಡುತಿವೆ |
ಅಜ್ಞಾನದ ಇರುಳಲ್ಲಿ
ಜ್ಞಾನವ ಹಂಚುತಿವೆ ||

ಚಲಿಸುವ ಮೋಡಗಳು
ಕಣ್ಮನ ಸೆಳೆಯುತಿವೆ |
ಭಯದ ಬದುಕಲ್ಲಿ
ಧೈರ್ಯವ ತುಂಬುತಿವೆ ||

ಚಲಿಸುವ ಮೋಡಗಳು
ಎಲ್ಲೋ ಸಾಗುತಿವೆ |
ಬಾಳಿನ ಬಯಲಲ್ಲಿ
ನಲಿವನು ನೀಡುತಿವೆ ||

***

(ಈ ಕವಿತೆಯನ್ನು ಬರೆದಿರುವುದು ದಂಟಕಲ್ಲಿನಲ್ಲಿ 23-11-2005ರಂದು)

Tuesday, August 4, 2015

ಮಾಸ್ತರ್ ಮಂದಿ-5

ಸಿ. ಎಂ. ಹೆಗಡೆ :
           ಉಫ್.. ಇವರ ಬಗ್ಗೆ ಎಷ್ಟು ಅಂತ ಹೇಳುವುದು? ಪೂರ್ತಿ ಹೇಳಿದರೆ ನಾಲ್ಕೈದು ಭಾಗಗಳು ಬೇಕಾಗುತ್ತವೆಯೇನೋ ಗೊತ್ತಿಲ್ಲ. ಇವರಿಂದ ನಾನು ಅನುಭವಿಸಿದಷ್ಟು ಬಹುಶಃ ಇನ್ನೊಬ್ಬರು ಅನುಭವಿಸಿರಲಿಕ್ಕಿಲ್ಲ. ನನ್ನ ತಂಗಿ ಸುಪರ್ಣಾಳೂ ಇವರ ಬಗ್ಗೆ ಕಿಡಿಕಾರುತ್ತಾಳೆ. ನಾನು ಮೂರು ಅಥವಾ ನಾಲ್ಕನೇ ಕ್ಲಾಸಿನಲ್ಲಿ ಇದ್ದಾಗ ನಮ್ಮ ಶಾಲೆಗೆ ಬಂದವರು ಸಿ. ಎಂ. ಹೆಗಡೆಯವರು. ಜಿ. ಎಸ್. ಭಟ್ಟರು ಸತ್ತು ಹೋದ ನಂತರ ಶಾಲೆಗೆ ಶಿಕ್ಷಕರಾಗಿ ಬಂದವರು ಇವರೇ ಇರಬೇಕು. ಮೊದಲ ಪೋಸ್ಟಿಂಗೇ ನಮ್ಮ ಶಾಲೆಯಿರಬೇಕು. ಬಂದ ಹೊಸತರಲ್ಲಿ ಯಂಗ್ ಎಂಡ್ ಎನರ್ಜೆಟಿಕ್ ಆಗಿದ್ದರು ಸಿ. ಎಂ. ಹೆಗಡೆಯವರು.
           ನನ್ನ ಅಪ್ಪನಿಗೂ-ಗಡ್ಕರ್ ಮಾಸ್ತರಿಗೂ ಬಹಳ ಪರಿಚಯವಿತ್ತು. ಸಿ. ಎಂ. ಹೆಗಡೆಯವರು ಬಂದ ಒಂದೆರಡು ದಿನಗಳಲ್ಲಿ ನನ್ನ ಬಳಿ ಗಡ್ಕರ್ ಮಾಸ್ತರ್ರು ಅಪ್ಪನ ಕರ್ಕೊಂಡು ಬಾ ಎಂದಿದ್ದರು. ನನಗೆ ದಿಘಿಲ್ ದಬ್ಬಾಕ್ಕಂಡಿತ್ತು. ನಾ ಏನ್ ತಪ್ಪು ಮಾಡಿದ್ನೋ? ಯಾಕ್ ಅಪ್ಪನ್ನ ಕರೆಸ್ತಿದ್ದಾರೋ ಎಂದು ಭಯಗೊಂಡಿದ್ದೆ. ನಾ ಏನೇ ತಪ್ಪು ಮಾಡಿದರೂ ಮಾಸ್ತರ್ರು ಹೊಡೆತ ಹಾಕುತ್ತಾರೆಯೇ ಹೊರತು ತೀರಾ ಮನೆಯವರನ್ನು ಕರೆದುಕೊಂಡು ಬಾ ಎಂದು ಹೇಳಿರಲಿಲ್ಲ. ಅಂತದ್ದರಲ್ಲಿ ಅಪ್ಪನ್ನ ಕರ್ಕೊಂಡು ಬಾ ಎಂದು ಗಡ್ಕರ್ ಮಾಸ್ತರ್ರು ಹೇಳುತ್ತಿದ್ದಾರೆ ಎಂದರೆ ಏನೋ ಆಗಿರಬೇಕು ಎಂದುಕೊಂಡೆ. ನನ್ನ ತಂಟೆ, ತಕರಾರಿನ ಲೀಸ್ಟನ್ನೆಲ್ಲ ಜ್ಞಾಪಕ ಮಾಡಿಕೊಂಡೆ. ನಾನು ತೀರಾ ತಲೆಹೋಗುವಂತಹ ಕೆಲಸ ಮಾಡಿರಲಿಲ್ಲವಾದರೂ ಮಾಸ್ತರ್ರು ಅಪ್ಪನ್ನ ಕರ್ಕೊಂಡು ಬಾ ಎಂದು ಹೇಳಿದ್ದಕ್ಕೆ ಮಾತ್ರ ಚಿಂತೆಗೀಡು ಮಾಡಿತ್ತು.
            ಭಯದಿಂದಲೇ ಅಪ್ಪನ ಬಳಿ ವಿಷಯ ಪ್ರಸ್ತಾಪ ಮಾಡಿದ್ದೆ. `ದರಿದ್ರ ಮಾಣಿ.. ಎಂತಾ ಭಾನಗಡಿ ಮಾಡ್ಕಂಡು ಬಂಜ್ಯೇನ..' ಕೂಗಿದ ಅಪ್ಪ ನಾಲ್ಕೇಟು ಬಡಿದು ಶಾಲೆಗೆ ಬಂದಿದ್ದ. ಆದರೆ ಶಾಲೆಗೆ ಬಂದಾಗ ಮಾತ್ರ ವಿಷಯ ಬೇರೆಯದೇ ಆಗಿತ್ತು. ಸಿ. ಎಂ. ಹೆಗಡೆಯವರು ಹೊಸದಾಗಿ ಶಾಲೆಗೆ ಬಂದಿದ್ದರಲ್ಲ. ಅವರಿಗೆ ಮದ್ಯಾಹ್ನದ ಊಟಕ್ಕೆ ಏಲ್ಲಾದರೂ ಹೋಗಬೇಕಿತ್ತು. ಪ್ರಾರಂಭದಲ್ಲಿ ನಮ್ಮೂರಿನ ಪೋಸ್ಟ್ ಮ್ಯಾನ್ ಪ್ರಕಾಶಣ್ಣನ ಮನೆಯಲ್ಲಿ ಊಟಕ್ಕೆ ವ್ಯವಸ್ಥೆ ಮಾಡೋಣ ಎಂದು ಎಲ್ಲರೂ ಚಿಂತನೆ ಮಾಡಿದ್ದರು. ಆದರೆ ಅವರಿಗೆ ಅದೇನು ಅನಿವಾರ್ಯ ಕಾರಣ ಬಂದಿತ್ತೋ ಗೋತ್ತಿಲ್ಲ, ಆಗುವುದಿಲ್ಲ ಎಂದುಬಿಟ್ಟಿದ್ದರು. ಕೊನೆಗೆ ಮೂರ್ನಾಲ್ಕು ಮನೆಗಳಲ್ಲಿ ಮದ್ಯಾಹ್ನದ ಊಟದ ವ್ಯವಸ್ಥೆ ಮಾಡಲು ಪ್ರಯತ್ನಿಸಲಾಗಿತ್ತಾದರೂ ಯಾರ ಮನೆಯಲ್ಲಿಯೂ ಹೂ ಅಂದಿರಲಿಲ್ಲ. ಕೊನೆಗೆ ಗಡ್ಕರ್ ಮಾಸ್ತರ್ರಿಗೆ ನಮ್ಮನೆ ನೆನಪಾಗಿತ್ತು.
          `ಸುಬ್ರಾಯ ಹೆಗ್ಡೇರೇ.. ನೀವು ಈ ಒಂದ್ ಕೆಲಸ ಮಾಡಿಕೊಟ್ಟರೆ ಬಹಳ ಉಪಕಾರವಾಗ್ತದೆ ನೋಡಿ..' ಎಂದು ಗಡ್ಕರ್ ಮಾಸ್ತರ್ರ ವಿನಮ್ರತೆಗೆ ಅಪ್ಪ ಹೂ ಅಂದು ವಾಪಾಸು ಬಂದಿದ್ದ. ಅವಿಭಕ್ತ ಕುಟುಂಬದ ಮದ್ಯಾಹ್ನದ ಊಟದ ಸಾಲಿಗೆ ಒಂದು ಮಣೆ ಜಾಸ್ತಿಯಾಗಿತ್ತಷ್ಟೆ. ಆದರೆ ವಿನಾಕಾರಣ ಅಪ್ಪನಿಂದ ಹೊಡೆತ ತಿಂದಿದ್ದ ಬೆನ್ನು ಕೆಂಪಾಗಿದ್ದು ಇಳಿಯಲು ಮತ್ತೆರಡು ದಿನಗಳೇ ಬೇಕಾಗಿದ್ದವು. ಆ ನಂತರ ಸಿ. ಎಂ. ಹೆಗಡೆ ಮಾಸ್ತರ್ರು ಪ್ರತಿ ದಿನ ನಮ್ಮನೆಗೆ ಮದ್ಯಾಹ್ನದ ಊಟಕ್ಕೆ ಬರುತ್ತಿದ್ದರು. ಮನೆಯಲ್ಲಿರುತ್ತಿದ್ದ 10-12 ಜನರ ಪೈಕಿ ನನ್ನ ಅಜ್ಜಿ ಮಂಕಾಳಿ ಹಾಗೂ ಈಗಲೂ ಶಾಲಾ ಮಾಸ್ತರ್ರಿಕೆ ಮಾಡುತ್ತಿರುವ ವಿ. ವಿ. ಹೆಗಡೆ ಮಾಸ್ತರ್ರು ಮಾತ್ರ ಸಿ. ಎಂ. ಹೆಗಡೆ ಮಾಸ್ತರ್ರು ಊಟ ಮಾಡಲು ಬರುತ್ತಿದ್ದುದಕ್ಕೆ ಸಿಟ್ಟಾಗಿದ್ದರು. ಏನೇನೋ ಕೊಂಕು ಮಾತನಾಡುತ್ತಿದ್ದರು. ಆದರೆ ಮನೆ ಯಜಮಾನನಾದ ನನ್ನ ಅಪ್ಪನಾಗಲೀ, ಮನೆಯ ಎಲ್ಲ ಸದಸ್ಯರಿಗೆ ಪ್ರತಿದಿನ ಎಷ್ಟೇ ಕಷ್ಟ ಬಂದರೂ ಅಡುಗೆ ಮಾಡಿ ಬಡಿಸುತ್ತಿದ್ದ ಅಮ್ಮನಾಗಲೀ ಒಂದಿನಿತೂ ಬೇಸರ ಪಟ್ಟುಕೊಳ್ಳಲಿಲ್ಲ.
            11.30ಕ್ಕೆ ಶಾಲೆ ಬಿಟ್ಟರೆ 12ಕ್ಕೆ ಮನೆಗೆ ಬರುವ ನಾವು ಆಸ್ರಿಗೆ ಕುಡಿದು, ನಂತರ ಊಟ ಮಾಡುತ್ತಿದ್ದೆವು. ನನ್ನ ಜೊತೆಗೆ ನಡೆದು ಬರುವ ಸಿ. ಎಂ. ಹೆಗಡೆಯವರೂ ಇದೇ ರೀತಿ ಮಾಡುತ್ತಿದ್ದರು. ಊಟ ಮುಗಿಸುತ್ತಿದ್ದ ನಾವು ಸೀದಾ ಗುಡ್ಡ ಹತ್ತಿ ಓಡಿ ಬರುತ್ತಿದ್ದರೆ ಮಾಸ್ತರ್ರು ಮಾತ್ರ 15 ನಿಮಿಷ ನಿದ್ದೆ ಮಾಡಿ ಬರುತ್ತಿದ್ದರು. ಮುಂದಿನ ದಿನಗಳಲ್ಲಿ ಸಿ. ಎಂ. ಹೆಗಡೆಯವರು ಬೈಕ್ ತೆಗೆದುಕೊಂಡಿದ್ದರು. ಪ್ರತಿದಿನ ಶಾಲೆಯಿಂದ ಮನೆಗೆ ಬರುವಾಗ ನನ್ನನ್ನು ಬೈಕಿನಲ್ಲಿ ಕರೆದುಕೊಂಡು ಬರುತ್ತಿದ್ದರು. ಆದರೆ ವಾಪಾಸು ಶಾಲೆಗೆ ಹೋಗುವಾಗ ಮಾತ್ರ ನಾನು ಎದೆ ಎತ್ತರದ ಗುಡ್ಡ ಹತ್ತಿ ಬರಬೇಕಾಗಿತ್ತು. ಸರಿಸುಮಾರು 2 ವರ್ಷಗಳ ಕಾಲ ನಮ್ಮ ಮನೆಯಲ್ಲಿ ಮನೆಯ ಸದಸ್ಯರಂತೆ ಆಗಿ ಹೋಗಿದ್ದರು ಸಿ. ಎಂ. ಹೆಗಡೆಯವರು. ಆದರೆ ನಂತರದ ದಿನಗಳಲ್ಲಿ ನಮ್ಮ ಮನೆಯಲ್ಲಿ ಹಿಸೆ ಪಂಚಾಯ್ತಿಕೆ ಆರಂಭವಾಗಿತ್ತು. ಜಗಳಗಳೂ ಆಗಾಗ ನಡೆಯುತ್ತಿದ್ದವು. ಅಪ್ಪನಿಗೂ-ಚಿಕ್ಕಪ್ಪಂದಿರಿಗೂ ಸಾಕಷ್ಟು ಜಗಳಗಳಾಗುತ್ತಿದ್ದವು. ಮುಂದೆ ಮಾತ್ರ ಸಿ. ಎಂ. ಹೆಗಡೆಯವರು ನನ್ನ ಚಿಕ್ಕಪ್ಪಂದಿರ ಮಾತನ್ನು ಕಟ್ಟಿಕೊಂಡು ನನ್ನ ವಿರುದ್ಧ ಹಾಗೂ ನನ್ನ ತಂಗಿಯ ವಿರುದ್ಧ ದ್ವೇಷ ಕಾರಿದ್ದು ಮಾತ್ರ ಇಂದಿಗೂ ನೆನಪಾಗುತ್ತಲೇ ಇರುತ್ತದೆ.
            ಸಿ. ಎಂ. ಹೆಗಡೆಯವರು ನನಗೆ ಮೊಟ್ಟಮೊದಲು ಕಲಿಸಿದ್ದು 5ನೇ ಕ್ಲಾಸಿನಲ್ಲಿ ಬೀಜಗಣಿತವನ್ನು. ತಾರಕ್ಕೋರು ಕ್ಲಾಸಿನಲ್ಲಿ ಕಲಿಸುತ್ತಿದ್ದವರು ಗಣಿತ ವಿಷಯ ಕಲಿಸಲು ಸಿ. ಎಂ. ಹೆಗಡೆಯವರ ಬಳಿ ಹೇಳಿದ್ದರು. ನಂತರದ ದಿನಗಳಲ್ಲಿ 2 ಅಥವಾ 3 ವಿಷಯಗಳನ್ನು ನನ್ನ ಕ್ಲಾಸಿನವರಿಗೆ ಹೇಳಲು ಆರಂಭಿಸಿದ್ದರು. ಹರೀಶ ನಾಯ್ಕ ಮಾಸ್ತರ್ರು ನಮ್ಮ ಶಾಲೆಗೆ ಬರುವ ವರೆಗೂ ಸಿ. ಎಂ. ಹೆಗಡೆಯವರು ನನಗೆ ಕಲಿಸುತ್ತಿದ್ದರು.
          `ನನ್ನ ಕೈಗೆ ಸಿಕ್ಕಿದ್ದರೆ ನಿನ್ನ ಚರ್ಮ ಸುಲಿದು ಬಿಡ್ತಿದ್ದೆ ನೋಡು ವಿನಯಾ..' ಎಂದು ಪದೇ ಪದೆ ಹೇಳುತ್ತಿದ್ದ ಸಿ. ಎಂ. ಹೆಗಡೆಯವರು ಅವಕಾಶ ಸಿಕ್ಕಾಗಲೆಲ್ಲ ನನಗೆ ಹೊಡೆಯುತ್ತಿದ್ದರು. ಚಿಕ್ಕಪ್ಪಂದಿರ ಮಾತು ಕಟ್ಟಿಕೊಂಡು ಸಾಕಷ್ಟು ಆರೋಪಗಳನ್ನೂ ನನ್ನ ಮೇಲೆ ಸುರಿಸಿದ್ದರು. `ವಿನಯ ಓದಿದ್ದರೆ ಬುದ್ಧಿವಂತನೇ ಆಗಿದ್ದ..' ಎಂದು ಪದೇ ಪದೆ ಹೇಳುತ್ತಿದ್ದ ಇವರು ಬಹಳಷ್ಟು ಪರೀಕ್ಷೆಗಳಲ್ಲಿ ಬೇಕಂತಲೇ ಅಂಕಗಳನ್ನು ಕಟ್ ಮಾಡಿದ್ದೂ ಇದೆ. ಒಮ್ಮೆ ಹೀಗಾಗಿತ್ತು. ಸಮಾಜ ವಿಜ್ಞಾನ ವಿಷಯ ನನ್ನ ಫೆವರೇಟ್. ಅದರಲ್ಲೂ ಭೂಪಟ ನೋಡುವುದು, ಗ್ಲೋಬ್ ನೋಡುವುದು, ನಕಾಶೆ ಬಿಡಿಸುವುದು, ಚಿತ್ರ ಬಿಡಿಸುವುದು, ರಾಷ್ಟ್ರದ ರಾಜಧಾನಿಗಳ ಚಿತ್ರವನ್ನು ಬಿಡಿಸುವುದು ಇತ್ಯಾದಿ ವಿಷಯಗಳಲ್ಲಂತೂ ನನ್ನನ್ನು ಮೀರಿಸುವವರೇ ಇರಲಿಲ್ಲ. ಹೀಗಿದ್ದಾಗ ನಾನು ಒಂದು ಪರೀಕ್ಷೆಯಲ್ಲಿ 25ಕ್ಕೆ 23 ಅಂಕಗಳನ್ನು ಪಡೆದುಕೊಂಡು ಬಿಟ್ಟಿದ್ದೆ. ಯಾವಾಗಲೂ ಸಿ. ಎಂ. ಹೆಗಡೆಯವರ ಕೈಚಳಕದಿಂದ 20ಕ್ಕಿಂತ ಜಾಸ್ತಿ ಅಂಕ ಪಡೆಯದ ನಾನು ಆ ಪರೀಕ್ಷೆಯಲ್ಲಿ ಮಾತ್ರ 25ಕ್ಕೆ 23 ಬಂತಲ್ಲ ಎಂದು ಬಹಳ ಖುಷಿಯಾಗಿಬಿಟ್ಟಿದ್ದೆ. `ಓಹೋ.. ನಂಗೆ 25ಕ್ಕೆ 23 ಬಿತ್ತು..' ಎಂದು ಖುಷಿಯಾಗಿ ನನ್ನ ಖಾಸಾ ದೋಸ್ತ್ ವಿಜಯನ ಬಳಿ ಹೇಳಿಯೂ ಬಿಟ್ಟಿದ್ದೆ. ಆತ ಮತ್ತೆ ಕೆಲವರ ಬಳಿ ಹೇಳಿದ್ದ. ಕೊನೆಗೆ ನಾನು ಹೇಳಿದ ವಿಷಯ ಸಿ. ಎಂ. ಹೆಗಡೆಯವರ ಕಿವಿಗೂ ಬಿದ್ದಿತ್ತು. ತಕ್ಷಣವೇ ನನ್ನನ್ನು ವಾಪಾಸು ಕರೆದ ಅವರು `ನಿಂಗೆ 23 ಕೊಟ್ಟಿಗಿದ್ನನಾ.. ತಡಿ..' ಎಂದರು. ಏನೇನೋ ಹುಡುಕಿದರು. ಹಾಗೂ ಹೀಗೂ ಮಾಡಿ 4 ಅಂಕಕ್ಕೆ ಕತ್ತರಿಯನ್ನು ಹಾಕಿಬಿಟ್ಟರು. ಪರಿಣಾಮವಾಗಿ ನನಗೆ 19 ಅಂಕಗಳು ಮಾತ್ರ ಬಂದಿದ್ದವು. ಇಷ್ಟೆಲ್ಲ ಮಾಡಿದ ನಂತರ ಏನೋ ಸಾಧನೆ ಮಾಡಿದೆ ಎನ್ನುವ ಕಿರುನಗು ಅವರ ತುಟಿಯ ಮೇಲೆ ಇದ್ದಿದ್ದು ಇಂದಿಗೂ ನೆನಪಾಗುತ್ತಿದೆ.
           ಶಾಲಾ ಮಟ್ಟದಲ್ಲಿ ಕ್ರೀಡಾಕೂಟ ನಡೆದಾಗಲೆಲ್ಲ ಏನಾದರೂ ನೆಪ ಹೂಡಿ ನನಗೆ ತೊಂದರೆ ಕೊಡುತ್ತಿದ್ದುದು ಇನ್ನೂ ನೆನಪಿದೆ ನೋಡಿ. `ಏನ್ ಹುಳುಕು ಮಾಸ್ತರ್ರು ಇವರು..' ಎಂದು ನಾನು ನನ್ನ ದೋಸ್ತರ ಬಳಿ ಹೇಳಿಕೊಂಡಿದ್ದೆ. ದೋಸ್ತರು ಸೀದಾ ಸಿ. ಎಂ. ಹೆಗಡೆಯವರ ಬಳಿ ಫಿಟ್ಟಿಂಗ್ ಇಟ್ಟು ಬೈಯಲೂ ಬೈದಿದ್ದರು. ಹೊಡೆತವನ್ನೂ ಕೊಟ್ಟಿದ್ದರು. ಪ್ರತಿದಿನ ಒಂದಲ್ಲ ಒಂದು ನೆಪವನ್ನು ಹುಡುಕಿ ಕ್ಲಾಸಿನಿಂದ ಹೊರಗೆ ಹಾಕುವುದೂ ಇತ್ತು. ಅದೊಮ್ಮೆ ಕಾನಸೂರಿನಲ್ಲಿ ಕೇಂದ್ರಮಟ್ಟದ ಕ್ರೀಡಾಕೂಟ ನಡೆದಿತ್ತು. ನಮ್ಮ ಶಾಲೆಯಲ್ಲಿ ಆ ಸಮಯದಲ್ಲಿ ವೇಗದ ರನ್ನರ್ ನಾನೇ ಆಗಿದ್ದೆ. ಕ್ರೀಡಾಕೂಟದ ಸಮಯದಲ್ಲಿ ನನ್ನ ಕಾಲಿನ ಹೆಬ್ಬೆರಳು ಮುರಿದು ಹೋಗಿತ್ತು. ನಾನು ಓಡುವುದು ಸಾಧ್ಯವೇ ಇಲ್ಲ ಎಂದು ಡಾಕ್ಟರ್ ಆದಿಯಾಗಿ ಎಲ್ಲರೂ ಹೇಳಿಬಿಟ್ಟಿದ್ದರು. ಆದರೆ ಸಿ. ಎಂ. ಹೆಗಡೆಯವರು ಕೇಳಬೇಕೆ? ಓಡಿಸಿಯೇ ಬಿಟ್ಟರು. ನಾನು ಹೆಬ್ಬೆರಳನ್ನು ನೆಲಕ್ಕೆ ಊರದೇ ನಾಲ್ಕೇ ಬೆರಳಿನ ಸಹಾಯದಿಂದ ಓಡಿದೆ. ಬಿಡಿ ಮೊದಲ ಮೂರು ಸ್ಥಾನಗಳೇನೂ ಬರಲಿಲ್ಲ. ನಾಲ್ಕನೇ ಸ್ಥಾನ ನನ್ನದಾಗಿತ್ತು. ನಾನು ನಾಲ್ಕನೇ ಸ್ಥಾನ ಬಂದಿದ್ದೇನೆ ಎಂದು ಸಿ. ಎಂ. ಹೆಗಡೆಯವರು ಬೆನ್ನ ಮೇಲೆ ಸಿಕ್ಕಾಪಟ್ಟೆ ಬಡಿದಿದ್ದರು. ಕಾಲ್ಬೆರಳು ಮುರಿದ ಕಾರಣದಿಂದಾಗಿಯೇ ನಮ್ಮ ಶಾಲೆಯ ವಾಲೀಬಾಲ್ ತಂಡದಲ್ಲಿ ನಾನು ಒಬ್ಬನಾಗಿದ್ದರೂ ಭಾಗವಹಿಸಿರಲಿಲ್ಲ. ಕಬ್ಬಡ್ಡಿಯಲ್ಲೂ ಪಾಲ್ಗೊಂಡಿರಲಿಲ್ಲ. ಆದರೆ ಲಾಂಗ್ ಜಂಪ್ ಹಾಗೂ ಇತರ ರನ್ನಿಂಗ್ ರೇಸಿನಲ್ಲಿ ಭಾಗವಹಿಸಿದ್ದೆ. ವಾಲೀಬಾಲಿನಲ್ಲಿ ನಾನು ಟೀಂ ಸದಸ್ಯನಾಗಿದ್ದರೆ ನನ್ನಿಂದ ತಂಡಕ್ಕೆ ಲಾಭವಾಗುವ ಬದಲು ಹಾನಿಯಾಗುವುದೇ ಹೆಚ್ಚಿತ್ತು ಬಿಡಿ. ಆ ದಿನಗಳಲ್ಲಿ ನಾನು ಸರ್ವೀಸ್ ಮಾಡಿದರೆ ಅದು ನೆಟ್ ದಾಟುತ್ತಲೂ ಇರಲಿಲ್ಲ. ನಾನು ಭಾಗವಹಿಸದೇ, ನನ್ನ ಬದಲು ಬೇರೋಬ್ಬರು ಭಾಗವಹಿಸಿ ತಂಡ ಮೊದಲ ಸ್ಥಾನ ಬಂದಿತ್ತು. ಆದರೆ ಶಾಲೆಗೆ ವಾಪಾಸು ಬಂದ ನಂತರ ಸಿ. ಎಂ. ಹೆಗಡೆಯವರು ಮಾತ್ರ ನಾನು ಬೇಕಂತಲೇ ಭಾಗವಹಿಸಲಿಲ್ಲ. ಶಾಲೆಗೆ ನನ್ನಿಂದಾಗಿ ಕೆಟ್ಟ ಹೆಸರು ಬಂದಿದೆ ಎಂದು ಹಬ್ಬಿಸಿ ಶಾಲೆಯಲ್ಲಿ ನನ್ನನ್ನು ಖಳನಾಯಕನನ್ನಾಗಿ ಮಾಡಿದ್ದರು.
           ಆ ದಿನಗಳಲ್ಲಿ ನಾನು ಸುಂದರವಾಗಿ ಚಿತ್ರ ಬಿಡಿಸುತ್ತಿದ್ದೆ. ಶಾಲೆಯ ಎಲ್ಲಾ ಮಾಸ್ತರ್ರು ನಿರ್ಣಾಯಕರಾಗಿ ಇರುತ್ತಿದ್ದರು. ಸಿ. ಎಂ. ಹೆಗಡೆಯವರೊಬ್ಬರನ್ನು ಹೊರತುಪಡಿಸಿ ಉಳಿದವರೆಲ್ಲ 10ಕ್ಕೆ 9 ಅಂಕ ಕೊಟ್ಟರೆ ಸಿ. ಎಂ. ಹೆಗಡೆಯಯವರು ಮಾತ್ರ 10ಕ್ಕೆ 3 ಅಂಕಗಳನ್ನು ಕೊಟ್ಟು ತಮ್ಮ ಸಿಟ್ಟನ್ನು ತೀರಿಸಿಕೊಳ್ಳುತ್ತಿದ್ದರು. ಅವರು ಕಡಿಮೆ ಅಂಕ ಕೊಟ್ಟರೂ ನಾನು ಮೊದಲ ಸ್ಥಾನ ಬರುತ್ತಿದ್ದೆ ಅದು ಬೇರೆಯ ವಿಷಯ ಬಿಡಿ.
            ನನಗಿಂತ ಎರಡು ಕ್ಲಾಸಿಗೆ ಹಿರಿಯವನಾಗಿ ಗಣಪತಿ ಎಂಬಾತ ಬರುತ್ತಿದ್ದ. ಈ ಗಣಪತಿಯ ಬಗ್ಗೆ ಜಿ. ಎಸ್. ಭಟ್ಟರ ಬಗ್ಗೆ ಬರೆಯುವಾಗ ಬರೆದಿದ್ದೆ. ಆತ ಹಾಗೂ ನಾನು ಶಾಲೆಯ ವೇಗದ ರನ್ನರುಗಳು. ಅಲ್ಲದೆ ಶಾಲೆಯ ಹಲವಾರು ಭಾನಗಡಿಗಳಲ್ಲಿ ನಮ್ಮ ಕೈ ಇದ್ದೇ ಇರುತ್ತಿತ್ತು ಎಂದರೆ ತಪ್ಪಾಗಲಿಕ್ಕಿಲ್ಲ ನೋಡಿ. ಆದರೂ ಗಣಪತಿ ನನಗಿಂತ ಬಹಳ ಜೋರಿದ್ದ. ಭಯಂಕರ ಕಿಲಾಡಿ, ತಂಟೆ ಮನುಷ್ಯ. ಗಲಾಟೆ, ತಂಟೆ, ಕಳ್ಳತನಗಳಲ್ಲಿ ಆತನದು ಎತ್ತಿದ ಕೈ ಆಗಿತ್ತು. ತಾನು ಮಾಡಿದ ಭಾನಗಡಿಯನ್ನು ನನ್ನ ಮೇಲೆ ಹಾಕುತ್ತಿದ್ದ. ನಾನು ಸಿಗದಿದ್ದರೆ ನಮ್ಮೂರಿನಿಂದ ಶಾಲೆಗೆ ಬರುತ್ತಿದ್ದ ಶ್ರೀಪಾದನ ಮೇಲೋ, ಶ್ರೀಪಾದನ ತಂಗಿಯರಾದ ಅನಸೂಯ, ನಾಗರತ್ನಾಳ ಮೇಲೋ ಹಾಕುತ್ತಿದ್ದ. ಈತ ಶಾಲೆಗೆ ಕಳ್ಳ ಬೀಳುತ್ತಿದ್ದ ಬಗ್ಗೆ ನಿಮಗೆ ಮೊದಲೆ ತಿಳಿಸಿದ್ದೇನೆ. ಬಹುಶಃ ಸಿ. ಎಂ. ಹೆಗಡೆಯವರಿಗೆ ಗಣಪತಿ ಕದ್ದು ಕೂರುತ್ತಿದ್ದ ಜಾಗಗಳನ್ನು ನಾನು ತೋರಿಸಿಕೊಟ್ಟ ಮೇಲೆಯೇ ಗಣಪತಿ ಶಾಲೆಗೆ ಹೋಗದೇ ಕದ್ದು ಕೂರುತ್ತಿದ್ದುದು ಕಡಿಮೆಯಾಗಿದ್ದು ಎಂದರೆ ತಪ್ಪಾಗಲಿಕ್ಕಿಲ್ಲ ನೋಡಿ.
          ಒಂದು ದಿನ ನಾನು, ಗಣಪತಿ. ಶ್ರೀಪಾದ, ಅನಸೂಯಾ ಮುಂತಾದವರೆಲ್ಲ ಒಂದು ಭಾನಗಡಿಗೆ ಕೈ ಹಾಕಿದ್ದೆವು. ಮನೆಯಿಂದ ಬೆಂಕಿಪೆಟ್ಟಿಗೆಯನ್ನು ಕದ್ದುಕೊಂಡು ಬರುವುದು. ನಾವು ಶಾಲೆಗೆ ಬರುವಾಗ ಗುಡ್ಡೆತಲೆ ಎನ್ನುವ ಜಾಗವೊಂದಿದೆ. ಅಲ್ಲಿಗೆ ಬಂದು ಒಂದಿಷ್ಟು ಕರಡ ( ಒಣಗಿದ ಹುಲ್ಲು)ವನ್ನು ತಂದು ಗುಡ್ಡೆ ಮಾಡಿ ಬೆಂಕಿ ಹಾಕುವುದು ನಮ್ಮ ಪ್ಲಾನ್ ಆಗಿತ್ತು. ಇಂತಹ ಪ್ಲಾನಿನ ರೂವಾರಿ ಗಣಪತಿಯೇ ಆಗಿದ್ದ. ಅಷ್ಟೇ ಅಲ್ಲದೇ ಬೆಂಕಿಪೆಟ್ಟಿಗೆಯನ್ನು ಮೊದಲು ಕದ್ದು ತಂದವನೂ ಅವನೇ, ಕರಡ ಕಿತ್ತು ತಂದು ಬೆಂಕಿ ಹಾಕಿದ್ದೂ ಅವನೇ. ಮೂರ್ನಾಲ್ಕು ದಿನ ಈ ಕೆಲಸವನ್ನು ನಾವೆಲ್ಲ ಸಾಂಗವಾಗಿ ನೆರವೇರಿಸಿದ್ದೆವು. ಆದರೆ ಅದೊಂದು ದಿನ ಬೆಂಕಿಪೆಟ್ಟಿಗೆಯನ್ನು ಕದ್ದು ತರುವ ಪಾಳಿ ನನ್ನದಾಗಿತ್ತು. ನಾನು ಬೆಂಕಿ ಪೆಟ್ಟಿಗೆ ಕದ್ದು ತರುವಾಗ ನನ್ನ ಅಜ್ಜಿ ಮಂಕಾಳಿಯ ಕೈಗೆ ಸಿಕ್ಕಿಬಿದ್ದಿದ್ದೆ. ನಾನು ಏನೇ ಕೆಲಸ ಮಾಡಿದರೂ ಅದಕ್ಕೆ ಕಾಲು-ಬಾಲ ಸೇರಿಸಿ ಹಿಗ್ಗಿಸುವ ಪ್ರವೃತ್ತಿಯ ಅಜ್ಜಿ ಹುಯ್ಯಲಿಟ್ಟಿದ್ದಳು. ಮೊಮ್ಮಗ ಏನೋ ಭಾನಗಡಿಗೆ ತೊಡಗಿಕೊಂಡಿದ್ದಾನೆ ಎಂದಳು. ಅಪ್ಪ-ಚಿಕ್ಕಪ್ಪ ಎಲ್ಲರೂ ಬಂದು ತಲೆಗೆ 10ರಂತೆ ಏಟು ಬಿಗಿದಿದ್ದರು. ನಾನು ನಿಜ ಹೇಳಿದ್ದೆ. ನಾನು ನಿಜ ಹೇಳಿದ್ದು ಮಾತ್ರ ಅಜ್ಜಿಯ ಬಾಯಲ್ಲಿ `ಹುಡ್ರು ಅಡ್ಕಳ್ಳಿ, ಬ್ಯಾಣಕ್ಕೆ ಬೆಂಕಿ ಕೊಟ್ಟಿದ್ದ..' ಎಂದಾಗಿ ಬದಲಾಗಿತ್ತು. ನಾವು ಬಲಿಪಶುಗಳಾಗಿದ್ದೆವು.
        ನಾವು ಬೆಂಕಿ ಕೊಟ್ಟೆದ್ದೆವು ಎಂದು ಅಪಪ್ರಚಾರ ಮಾಡಿ ಯಶಸ್ವಿಯಾಗಿದ್ದ ಮಂಕಾಳಜ್ಜಿ ನಮ್ಮ ಮನೆಗೆ ಊಟಕ್ಕೆ ಬರುತ್ತಿದ್ದ ಸಿ. ಎಂ. ಹೆಗಡೆಯವರ ಬಳಿ ವಿಷಯವನ್ನು ತಿಳಿಸಿಬಿಟ್ಟಿದ್ದಳು. ಸಿ. ಎಂ. ಹೆಗಡೆಯವರು ಶಾಲೆಗೆ ಬಂದವರೇ ನಮ್ಮೂರಿನಿಂದ ಬರುತ್ತಿದ್ದ ಎಲ್ಲರನ್ನೂ ಹಿಡಿದು ದನಕ್ಕೆ ಬಡಿದಹಾಗೆ ಬಡಿದು ಬಿಟ್ಟಿದ್ದರು. ಅಷ್ಟೇ ಅಲ್ಲ ಗಣಪತಿಗೆ ಚೋರ ಗುರು ಎಂದೂ ನನಗೆ ಚಂಡಾಲ ಶಿಷ್ಯ ಎಂದೂ ಹೆಸರನ್ನು ಇಟ್ಟುಬಿಟ್ಟಿದ್ದರು.
          ಸಿ. ಎಂ. ಹೆಗಡೆಯವರಿಂದ ನಾನು ಅನುಭವಿಸಿದ್ದು ಒಂದೆರಡಲ್ಲ ಬಿಡಿ. ಈಗಲೂ ಎಲ್ಲಾದರೂ ಸಿ. ಎಂ. ಹೆಗಡೆಯವರು ಎದುರಿಗೆ ಸಿಕ್ಕಾಗ ಕೇಳಬೇಕು ಎನ್ನಿಸುತ್ತದೆ. ನಾನೇನು ತಪ್ಪು ಮಾಡಿದ್ದೆ ಎಂದು ನನಗೆ ಸೊಕಾ ಸುಮ್ಮನೆ ಇಲ್ಲ ಸಲ್ಲದ ಹೆಸರನ್ನು ಇಟ್ಟಿರಿ? ಯಾಕೆ ಅಪಪ್ರಚಾರ ಮಾಡಿದಿರಿ? ಯಾಕೆ ವಿನಾಕಾರಣ ಹೊಡೆಯುತ್ತಿದ್ದಿರಿ? ಯಾಕೆ ಹುಳುಕು ಮಾಡುತ್ತಿದ್ದಿರಿ? ಸುಳ್ಳು ಸುಳ್ಳೆ ಹೇಳಿ ನನ್ನನ್ನು ತೇಜೋವಧೆ ಮಾಡುತ್ತಿದ್ದಿರಿ ಎಂದು ಕೇಳಬೇಕು ಎನ್ನಿಸುತ್ತದೆ. ಆದರೆ ಸುಮ್ಮನಾಗುತ್ತೇನೆ. ಆದರೆ ನನ್ನ ಅಮ್ಮ ಮಾತ್ರ ಆಗಾಗ ಹೇಳುತ್ತಿರುತ್ತಾಳೆ `ತಮಾ ಸಿ. ಎಂ. ಹೆಗಡೆಯವರಿಗೆ ನಾನು ಅನ್ನ ಹಾಕಿದ್ದೆ. ಆ ಋಣದ ಪರಿಜ್ಞಾನವೂ ಇಲ್ಲದಂತೆ ಚಿಕ್ಕಪ್ಪಂದಿರ ಮಾತು ಕಟ್ಟಿಕೊಂಡು ನಿನ್ನ ಮೇಲೆ ಸಿಟ್ಟು ಮಾಡಿದರು. ಚಿಕ್ಕಪ್ಪಂದಿರ ಮಾತು ಕಟ್ಟಿಕೊಂಡು ಶಾಲೆಯಲ್ಲಿ ಹಾಗೆ ಮಾಡುತ್ತಿದ್ದರು.' ಎಂದು. ನಾನು ಈಗಲೂ ಸಿ. ಎಂ. ಹೆಗಡೆಯರವ ತಪ್ಪಿಲ್ಲವೇನೋ ಎಂದುಕೊಂಡು ಸುಮ್ಮನಾಗುತ್ತಿದ್ದೇನೆ ಅಷ್ಟೇ. ಆದರೂ ಆಗೀಗ ನೆನಪಾದರೆ ಮಾತ್ರ ಸಿಟ್ಟು ಬರುತ್ತದೆ.
             ನಾನು ಏಳನೇ ಕ್ಲಾಸಿನಲ್ಲಿದ್ದಾಗ ಸಿ. ಎಂ. ಹೆಗಡೆರಿಗೆ ಮದುವೆಯಾಯಿತು. ನಮ್ಮ ಮನೆಯ ಪಕ್ಕದ ಮನೆಗೆ ಅವರು ದೂರದಿಂದ ನೆಂಟರೂ ಆದರು. ನೆಂಟಸ್ತನದ ಪರಿಣಾಮ ಒಂದಿಷ್ಟು ದಿನ ಅವರ ಮನೆಗೂ ಊಟಕ್ಕೆ ಹೋಗುತ್ತಿದ್ದರು. ಆ ದಿನಗಳಲ್ಲಿ ನಮ್ಮ ಮನೆ ಸಂಪೂರ್ಣ ಹಿಸೆಯಾಗಿತ್ತು ಬಿಡಿ. ಹೀಗಿದ್ದಾಗ ಒಂದು ದಿನ ನಮ್ಮ ಮನೆಯಲ್ಲಿಯೇ ಇದ್ದ ಬೆಳ್ಳ ಎಂಬ ನಾಯಿಯೊಂದು ಮನೆ ಹಿಂದಿನ ಹಲಸಿನ ಮರಕ್ಕೆ ಬಂದಿದ್ದ ಮಂಗವೊಂದನ್ನು ಕ್ಯಾಚ್ ಹಿಡಿದಿತ್ತು. ಅನಾಮತ್ತು 6-8 ತಾಸುಗಳ ಕಾಲ ನಾಯಿಗೂ ಮಂಗನಿಗೂ ಕಾದಾಟ ನಡೆದಿತ್ತು. ಕೊನೆಗೊಮ್ಮೆ ಬೆಳ್ಳ ನಾಯಿ ಮಂಗವನ್ನು ಕೊಂದು ಹಾಕಿ ತಿಂದಿತ್ತು. ಈ ಲಡಾಯಿಯಲ್ಲಿ ಬೆಳ್ಳನ ಕಣ್ಣು, ದೇಹ ಎಲ್ಲ ಮಂಗನ ಗೀರಿಗೆ ಸಿಗಿದು ಹೋಗಿತ್ತು. ನಾಯಿ ಹಾಗೂ ಮಂಗನ ಈ ಲಡಾಯಿ ನಮಗೆಲ್ಲ ಬಹಳ ವಿಶೇಷ ಸಂಗತಿಯಾಗಿತ್ತು. ನಾನಂತೂ ಕುಣಿದು ಕುಪ್ಪಳಿಸುತ್ತ ನೋಡಿದ್ದೆ. ನಮ್ಮೂರಿಗರಿಗೆಲ್ಲ ನಾನೇ ವಿಷಯವನ್ನೂ ಹೇಳಿದ್ದೆ. ಅದೇ ಪ್ರಕಾರವಾಗಿ ನಮ್ಮ ಪಕ್ಕದ ಮನೆಗೂ ಹೋಗಿ ಹೇಳಿದ್ದೆ. ಆ ಮನೆಯಲ್ಲಿ ಊಟಕ್ಕೆಂದು ಬಂದಿದ್ದ ಸಿ. ಎಂ. ಹೆಗಡೆಯವರು ಜಸ್ಟ್ ಮಲಗಿದ್ದರು. ನಾನು ಹೋಗಿ ಹೇಳಿದ ತಕ್ಷಣ `ಎಂತಾ.. ನಾಯಿ ಮಂಗನ್ನ ಹಿಡದು ಬಿಟ್ಚಾ.. ಬ್ಯಾರೆ ಎಂತಾ ಹಿಡದ್ದಿಲ್ಯಾ? ಥೋ... ಆ ಮಂಗನ್ನ ಬದಲು ನಿನ್ನನ್ನಾದರೂ ಹಿಡಿದಿದ್ದರೆ ಚನ್ನಾಗಿತ್ತು..' ಎಂದಿದ್ದು ಮಾತ್ರ ಇಂದಿಗೂ ನೆನಪಿನಲ್ಲಿದೆ ನೋಡಿ.
            ನಮ್ಮ ಮನೆಯಲ್ಲಿ ಹಿಸೆ ಪಂಚಾಯ್ತಿಗೆ ಜೋರಾದಂತೆಲ್ಲ ಮಾಸ್ತರ್ರು ನಮ್ಮ ಮನೆಗೆ ಊಟಕ್ಕೆ ಬರುವುದನ್ನು ನಿಲ್ಲಿಸಿದ್ದರು. ಕಲ್ಮನೆಯ ಪ್ರಕಾಶಣ್ಣನ ಮನೆಗೆ ಊಟಕ್ಕೆ ಹೋಗಲು ಆರಂಭಿಸಿದ್ದರು. ಆದರೆ ನನ್ನ ವಿರುದ್ಧದ ಅಪಪ್ರಚಾರ, ಸಿಟ್ಟು, ಹೊಡೆತ, ನನ್ನನ್ನು ಅಕ್ಷರಶಃ ನಾಯಯನ್ನು ಕಂಡ ಹಾಗೆ ಮಾಡುವುದೆಲ್ಲ ಜೋರಾಗಿಯೇ ಇತ್ತು. ಹರೀಶ ನಾಯ್ಕರು, ಗಡ್ಕರ್ ಮಾಸ್ತರ್ರು ಹಾಗೂ ತಾರಕ್ಕೋರ ಕಾರಣದಿಂದ ನಾನು ಶಾಲೆಯಲ್ಲಿ ಹೇಗೋ ಬಚಾವಾಗಿದ್ದೆ ಎನ್ನುವುದು ಮಾತ್ರ ಸತ್ಯಸ್ಯ ಸತ್ಯ ನೋಡಿ.
            ನನಗೆ ಮಾತ್ರ ಹೀಗೆ ಮಾಡಿದರಾ ಸಿ. ಎಂ. ಹೆಗಡೆಯವರು ಎಂದುಕೊಂಡಿದ್ದೆ. ಆದರೆ ನನ್ನ ತಂಗಿಗೂ ಇದೇ ರೀತಿ ಮಾಡಿದ್ದರು ಎನ್ನುವುದು ಕೇಳಿದಾಗ ಮಾತ್ರ ಅವರ ಮೇಲಿನ ಮುನಿಸು ಜಾಸ್ತಿಯಾಗಿತ್ತು ನೋಡಿ. ಶಾಲೆಯಲ್ಲಿ ಪ್ರತಿದಿನ ಮುಂಜಾನೆ ಕಸ ಹೆಕ್ಕುವುದು ರೂಢಿ. ಒಂದಿನ ತಂಗಿ ಕಸ ಹೆಕ್ಕಿ ಗುಡ್ಡೆ ಹಾಕಿದ್ದಳಂತೆ. ನಮ್ಮ ಶಾಲೆಯ ಹೊರ ಆವರಣದಲ್ಲಿ ದೊಡ್ಡ ಕಟ್ಟೆಯ ಬಾವಿಯೊಂದಿದೆ. ಬಾವಿಯ ಪಕ್ಕದಲ್ಲಿರುವ ಆಕೇಶಿಯಾ ಮರಗಳು ಇದ್ದು, ಅದರ ಎಲೆಗಳು ಸದಾ ಬಾವಿಗೆ ಬೀಳುತ್ತವೆ. ಒಂದಿನ ಬೆಳಿಗ್ಗೆ ಬಂದವರೇ ತಂಗಿಯ ಬಳಿ ಜೋರು ಸಿಟ್ಟು ಮಾಡುತ್ತ `ಬಾವಿಗೆ ಕಸ ಹಾಕ್ತೀಯಾ.? ನೋಡು ನೀನು ಕಸ ಹಾಕಿದ್ದಕ್ಕೆ ಬಾವಿಯ ತುಂಬೆಲ್ಲ ಅಷ್ಟು ಕಸಗಳು ಬಿದ್ದಿವೆ.' ಎಂದು ಕೂಗಾಡಿದವರೇ ಶೆಳಕೆಯಿಂದ ಹೊಡೆತಗಳ ಮೇಲೆ ಹೊಡೆತ ಕೊಟ್ಟರು. ತಂಗಿಗೆ ಮಾತ್ರ ಯಾಕೆ ಹೊಡೆಯುತ್ತಿದ್ದಾರೆ? ಏನಾಗಿದೆ ಎನ್ನುವುದು ಗೊತ್ತಿರಲೇ ಇಲ್ಲ. ನಾನಲ್ಲ ಎಂದು ಹೇಳಿದರೂ ತಂಗಿಯ ಮಾತನ್ನು ಅವರು ಕೇಳಲೇ ಇಲ್ಲ. ತಂಗಿಯಂತೂ ಮುಂದಿನ ದಿನಗಳಲ್ಲಿ ಸಿ. ಎಂ. ಹೆಗಡೇರೆಂದರೆ ಕಿಡಿ ಕಾರುತ್ತಿದ್ದಳು. ಕೊಸ ಕೊಸ ಮಾಸ್ತರ್ರು ಎಂದೂ ಅಡ್ಡ ಹೆಸರನ್ನು ಇಟ್ಟು ಬಿಟ್ಟಿದ್ದಳು. ಅದಕ್ಕೆ ಪ್ರತಿಯಾಗಿ ಮಾಸ್ತರ್ರೂ ಚಿಕ್ಕ ಚಿಕ್ಕ ವಿಷಯಗಳಿಗೆ ಕೊಂಕನ್ನು ಹುಡುಕುತ್ತ ಬೈಯುತ್ತಿದ್ದರು. ಇಂತಹ ಮಾಸ್ತರ್ರು ಇದೀಗ ನಮ್ಮ ಶಾಲೆಯಿಂದ ವರ್ಗವಾಗಿ ಬೇರೆಲ್ಲೋ ಕೆಲಸ ಮಾಡುತ್ತಿದ್ದಾರೆ.
           ನನ್ನ ವಿದ್ಯಾರ್ಥಿ ಜೀವನದಲ್ಲಿ ಮ್ಯಾಕ್ಸಿಮಮ್ ನೋವಿಗೆ ಕಾರಣವಾದವರು ಸಿ. ಎಂ.ಹೆಗಡೆಯವರು ಎಂದರೆ ತಪ್ಪಾಗಲಿಕ್ಕಿಲ್ಲ. ಜಿ. ಎಸ್. ಭಟ್ಟರು ಹೊಡೆಯುತ್ತಿದ್ದರು. ಬೇಜಾರಿರಲಿಲ್ಲ. ತಾರಕ್ಕೋರ ಪ್ರೀತಿ, ಗಡ್ಕರ್ ಮಾಸ್ತರ್ರ ಅಕ್ಕರೆಯೆಲ್ಲ ಇಷ್ಟವಾಗುತ್ತಿತ್ತು. ಆದರೆ ಸಿ. ಎಂ. ಹೆಗಡೆಯವರು ಚಿಕ್ಕಪ್ಪಂದಿರ ಮಾತು ಕಟ್ಟಿಕೊಂಡು ನನ್ನ ಮೇಲೆ ವಿನಾಕಾರಣ ಸಿಟ್ಟು ಮಾಡಿದರಲ್ಲ ಎನ್ನುವುದು ಮಾತ್ರ ಈಗಲೂ ಕಾಡುತ್ತಿದೆ. ಮಾತು ಮಾತಿಗೂ `ನಿನ್ ಕೈಲಿ ಎಂತದೂ ಆಗ್ತಿಲ್ಲೆ.. ಸುಮ್ಮಂಗ್ ತ್ವಾಟ ಗದ್ದೆ ನೋಡ್ಕಂಡ್ ಇರಾ..' ಎನ್ನುತ್ತ ಹಂಗಿಸುತ್ತಿದ್ದ, ಹಿಯಾಳಿಸುತ್ತಿದ್ದ ಮಾತುಗಳೇ ನೆನಪಿಗೆ ಬರುತ್ತವೆ. ಬಹುಶಃ ಈ ಎಲ್ಲ ಕಾರಣಗಳು ನನ್ನ ಜೀವನದ ಮೇಲೆ ಬಹು ದೊಡ್ಡ ಪ್ರಭಾವವನ್ನೇ ಬೀರಿದವೇನೋ. ನನ್ನಲ್ಲಿ ಅದೇನೋ ಒಂದು ಜಿದ್ದು ಬೆಳೆಯಲು ಸಿ. ಎಂ. ಹೆಗಡೆಯವರೇ ಕಾರಣರಾದರೇನೋ ಅನ್ನಿಸುತ್ತಿದೆ. ಇಂತಹ ಮಾಸ್ತರ್ರು ಚನ್ನಾಗಿರಲಿ. ಆದರೆ ನನಗೆ ಮಾಡಿದರೆ ಮತ್ಯಾರಿಗೂ ಮಾಡದೇ ಇರಲಿ.

(ಮುಂದುವರಿಯುತ್ತದೆ)

ಅವಳು

ಅವಳು...
ನುಡಿ ಮುತ್ತಾಗಿದ್ದಳು
ಸ್ಪೂರ್ತಿಯ ತೊತ್ತಾಗಿದ್ದಳು

ನಲಿವು ನೀಡುತ್ತ
ಮನಸಿನಲಿ ಮೆರೆಯುತ್ತ
ಕಾಣದಲೇ ಮಾಯವಾದಳು ||

ಅವಳು...
ತುಟಿಯ ನಗುವಾಗಿದ್ದಳು
ಜೊತೆಗೆ ಮಗುವಾಗಿದ್ದಳು

ಏನೇನೋ ಹುಡುಕುತ್ತ
ಎಲ್ಲೆಲ್ಲೊ ಅಲೆಯುತ್ತ
ಕತ್ತಲಲಿ ಕರಗಿ ಹೋದಳು ||

ಅವಳು...
ಒಂದು ಹಾಡಾಗಿದ್ದಳು
ಸಂತಸದ ಗೂಡಾಗಿದ್ದಳು

ಎಲ್ಲೆಲ್ಲೋ ಎಡವುತ್ತ
ಏನೇನೋ ತಡವುತ್ತ
ಕಣ್ಣಂಚಿನಿಂದ ಮರೆಯಾದಳು ||

ಅವಳು...
ಹೂವಂತ ಮನಸಾಗಿದ್ದಳು
ಪ್ರೀತಿಯನು ಅರಿತಿದ್ದಳು

ಮನಸನ್ನು ತಿಳಿಯುತ್ತ
ನನಸನ್ನು ಬಯಸುತ್ತ
ಕೊನೆಗೊಮ್ಮೆ ಆಕೆ ಕನಸಾದಳು ||

ಅವಳು...
ಒಲವ ಸವಿಯಾಗಿದ್ದಳು
ಜೊತೆಗೆ ಕವಿಯಾಗಿದ್ದಳು

ಹೊಸ ಹಾಡ ಕಟ್ಟುತ್ತ
ಹಳೆ ನೆನಪ ಮೆರೆಸುತ್ತ
ಕೊನೆಗೊಮ್ಮೆ ಎಲ್ಲೂ ಕಾಣದಾದಳು ||

ಅವಳು...
ಜೀವದ ಸೆಲೆಯಾಗಿದ್ದಳು
ಕರುಣೆಯ ಬಲೆಯಾಗಿದ್ದಳು

ಪ್ರೀತಿ ಬೆಲೆ ತಿಳಿಸುತ್ತ
ಹೊಸ ಅಲೆಯ ಬೆಳೆಸುತ್ತ
ಬೇರೆಲ್ಲೋ ನೆಲೆಯ ಕಂಡುಕೊಂಡಳು ||

***

(ಈ ಕವಿತೆಯನ್ನು ಬರೆದಿರುವುದು ದಂಟಕಲ್ಲಿನಲ್ಲಿ 21-11-2005ರಂದು)

Saturday, August 1, 2015

ಮಾಸ್ತರ್ ಮಂದಿ-4

ರಮೇಶ ಗಡ್ಕರ್ :
                  ಆರ್ ವೈ ಗಡ್ಕರ್ ಮಾಸ್ತರ್ರ ಬಗ್ಗೆ ಏನಂತ ಹೇಳುವುದು, ಏನಂತ ಬಿಡುವುದು? ರಮೇಶ ಗಡ್ಕರ್ ಎಂಬ ಹೆಸರಿನ ಮಾಸ್ತರ್ರು ಜಿ. ಎಸ್. ಭಟ್ಟರು ಅಪಘಾತತದಲ್ಲಿ ತೀರಿಕೊಂಡ ತರುವಾಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೋಡ್ಸಿಂಗೆ, ಅಡ್ಕಳ್ಳಿಗೆ ಬಂದವರು. ಶಾಲೆಗೆ ಪೂರ್ಣಾವದಿ ಹೆಡ್ಮಾಸ್ತರ್ರಾಗಿ ಬಂದವರೆಂದರೆ ಇವರೇ ಮೊದಲಿಗರೇನೋ. ಗಡ್ಕರ್ ಮಾಸ್ತರ್ ನಮ್ಮ ಶಾಲೆಗೆ ಬರುವಾಗ ಶಾಲೆಗೆ ಪ್ರಮುಖವಾಗಿ ಇದ್ದುದು ಒಂದೇ ಕೋಣೆ. ಬಂದವರೇ ಶಾಲೆಗೆ ಇದ್ದ ಬಹುದೊಡ್ಡ ಕೋಣೆಯನ್ನು ಭಾಗ ಮಾಡಿ ಎರಡು ಕೋಣೆ ಮಾಡಿಸಿದರು. ಅಷ್ಟೇ ಅಲ್ಲ ಸಕ್ಕ ಪಕ್ಕ ಇನ್ನೂ ಎರಡು ಹೊಸ ಕೋಣೆಗಳನ್ನು ಕಟ್ಟಿಸಲು ಕಾರಣರಾದರು.
            ಗಡ್ಕರ್ ಮಾಸ್ತರ್ರು ಅಂದ ತಕ್ಷಣ ನನಗೆ ಪ್ರಮುಖವಾಗಿ ನೆನಪಾಗುವುದು ಅವರ ಹ್ಯಾಂಡ್ ರೈಟಿಂಗ್. ಬಹಳ ಸುಂದರವಾಗಿ ಬರೆಯುತ್ತಿದ್ದ ಅವರ ಅಕ್ಷರಗಳು ಇನ್ನೂ ನನ್ನ ಕಣ್ಣ ಮುಂದೆ ಇದೆ. ಶಾಲೆಯ ಎಲ್ಲ ಬೋರ್ಡುಗಳ ಮೇಲೂ ಸುಂದರ ಅಕ್ಷರಗಳನ್ನು ಬರೆದರು. ಮಕ್ಕಳ ಸಂಖ್ಯೆ, ಶಿಕ್ಷಕರ ಸಂಖ್ಯೆ, ನುಡಿಮುತ್ತು, ಅಮರವಾಣಿ, ತಿಥಿ-ಪಂಚಾಂಗ, ಮ್ಯಾಪ್ ಇವುಗಳನ್ನೆಲ್ಲ ಅದೆಷ್ಟು ಸುಂದರವಾಗಿ ಬರೆದರೆಂದರೆ ಇಂದಿಗೂ ಅವುಗಳ ನೆನಪಾಗುತ್ತಿರುತ್ತವೆ. ಗಡ್ಕರ್ ಮಾಸ್ತರ್ರು ಎಂದ ಕೂಡಲೇ ನನಗೆ ಮೊಟ್ಟ ಮೊದಲು ನೆನಪಾಗುವುದು ಎಂದರೆ ಒಂದು ದಿನ ಶಾಲೆಯಲ್ಲಿ ಪ್ರಾರ್ಥನೆ ಮುಗಿದ ತಕ್ಷಣ ಪ್ರತಿಯೊಬ್ಬರ ಎಣಿಕೆ ನಡೆಯುತ್ತಿತ್ತು. ಎತ್ತರ ಪ್ರಕಾರ ನಿಲ್ಲ ಬೇಕಿದ್ದವರು ಒಂದು, ಎರಡು, ಮೂರು ಎಂದು ಸರಣಿಯಲ್ಲಿ ಹೇಳಬೇಕಿತ್ತು. ನನ್ನ ಮುಂದೆ 10-15 ಕುಳ್ಳರು ನಿಂತಿದ್ದರು. ಅವರೆಲ್ಲ ಎಣಿಕೆ ಮುಗಿಸಿ ನನ್ನ ಬಳಿ ಬಂದಿತು. ಮಳೆ-ಗಾಳಿಯ ಸಮಯ. ನಾನು ಎಣಿಕೆ ಮಾಡುವುದನ್ನು ಬಿಟ್ಟು ದಿಕ್ಕು ನೋಡುತ್ತಿದ್ದೆ. ಭಾರಿ ಗಾಳಿ ಬೀಸುತ್ತಿತ್ತಲ್ಲ ಭೂತಪ್ಪನ ಕಟ್ಟೆಯ ಮಾವಿನಮರದ ಕೊಂಬೆಗಳು ಸಿಕ್ಕಾಪಟ್ಟೆ ಓಲಾಡುತ್ತಿದ್ದವು. ಅವನ್ನು ನೋಡುತ್ತ ಮರ ಈಗ ಬೀಳುತ್ತದೆ, ಆಗ ಬೀಳುತ್ತದೆ ಎಂದು ಕಾಯುತ್ತ ನಿಂತಿದ್ದೆ. ಹಾಗೆ ನೋಡುತ್ತಿದ್ದವನು ನಾನು ನನ್ನ ಸಂಕ್ಯೆಯನ್ನು ಗಟ್ಟಿ ಹೇಳಲು ಮರೆತಿದ್ದೆ. ಗಡ್ಕರ್ ಮಾಸ್ತರ್ರು ಸೀದಾ ಹತ್ತಿರ ಬಂದವರೇ ನನ್ನ ಬುರ್ಡೆ ಮೇಲೆ ರಪ್ಪನೆ ಬಡಿದು ಎಲ್ಲಿ ನೋಡಾಕ್ ಹತ್ತೀಯೋ ಎಂದು ಗನಾಕೆ ಬೈದರು. ನಾನು ಒಮ್ಮೆ ಕುಮುಟಿ ಬಿದ್ದಿದ್ದೆ.
           ಆಮೇಲೆ ಐದನೇ ಕ್ಲಾಸಿಗೆ ಬಂದಾಗ ಮಾತ್ರ ಅವರ ಜೊತೆ ಹತ್ತಿರದಿಂದ ಒಡನಾಡುವ ಭಾಗ್ಯ ನನಗೆ ಸಿಕ್ಕಿತು. ಐದನೇ ಕ್ಲಾಸಿನಿಂದ ಏಳನೆತ್ತಿವರೆಗೆ ಗಡ್ಕರ ಮಾಸ್ತರ್ರೇ ನನಗೆ ಹಿಂದಿ ಕಲಿಸಿದವರು. `ಬಾರ ಬಾರ ಆತೀ ಹೈ ಮುಝಕೋ.. ಮಧುರ ಯಾದ ಬಚಪನ್ ತೇರಿ..' ಎಂಬ ಹಾಡನ್ನು ಗಡ್ಕರ್ ಮಾಸ್ತರ್ರು ತಲೆ ಹಾಗೂ ಕಾಲನ್ನು ಕುಣಿಸುತ್ತಾ ಹೇಳುತ್ತಿದ್ದರೆ ನಾವೆಲ್ಲ ತಲ್ಲೀನರಾಗುತ್ತಿದ್ದೆವು. ಯಾವ ಪರೀಕ್ಷೆಗಳಲ್ಲಿ ಅದೆಷ್ಟು ಮಾರ್ಕ್ಸ್ ಬೀಳುತ್ತಿತ್ತೋ ಗೊತ್ತಿಲ್ಲ. ಹಿಂದಿಯಲ್ಲಿ ಮಾತ್ರ 25ಕ್ಕೆ 20ರ ಮೇಲೆ ಪಕ್ಕಾ ಬೀಳುತ್ತಿತ್ತು. ಅಷ್ಟು ಚನ್ನಾಗಿ ಕಲಿಸುತ್ತಿದ್ದರು ಅವರು.
            ಗಡ್ಕರ್ ಮಾಸ್ತರ್ ಎಂದ ಕೂಡಲೇ ಅದೊಂದು ಘಟನೆ ನನ್ನ ಕಣ್ಣೆದುರು ಸದಾ ನೆನಪಿಗೆ ಬರುತ್ತದೆ. ಒಮ್ಮೆ ಹರೀಶ ಮಾಸ್ತರ್ರು ನಮಗೆ ವಿಜ್ಞಾನ ವಿಷಯವನ್ನು ಕಲಿಸುತ್ತಿದ್ದರು. ಅದ್ಯಾವುದೋ ಪ್ರಯೋಗವನ್ನು ಕೈಗೊಂಡಿದ್ದರು. ಗಂಧಕದ ನೀರನ್ನೋ ಅಥವಾ ಆಸಿಡ್ ಮಿಶ್ರಿತ ನೀರನ್ನೋ ಬಳಸಿ ವಿಜ್ಞಾನದ ಪ್ರಯೋಗ ಮಾಡಿದ್ದರು. ಆದರೆ ಪ್ರಯೋಗ ಮುಗಿಸಿದ ನಂತರ ಅದನ್ನು ಒಗೆಯುವುದನ್ನು ಬಿಟ್ಟು ಒಂದು ಚೊಂಬಿನಲ್ಲಿ ಹಾಕಿ ಹಾಗೇ ಇಟ್ಟಿದ್ದರು. ಗಡ್ಕರ್ ಮಾಸ್ತರ್ರು ಕವಳ ಹಾಕುತ್ತಿದ್ದರು. ಕವಳ ಹಾಕಿದ ನಂತರ ಬಾಯಿಯನ್ನು ತೊಳೆಯುವುದು ಅವರ ಹವ್ಯಾಸ. ಅವರು ಹಿಂದೆ ನೋಡಲಿಲ್ಲ ಮುಂದೆ ನೋಡಲಿಲ್ಲ. ಪ್ರಯೋಗಕ್ಕೆ ಬಳಕೆ ಮಾಡಿ ಹಾಗೇ ಇಟ್ಟಿದ್ದ ರಾಸಾಯನಿಕ ಮಿಶ್ರಿತ ನೀರನ್ನು ಬಾಯಿಗೆ ಹಾಕಿಯೇ ಬಿಟ್ಟರು. ಯಾಕೋ ನೀರು ಎಂದಿನಂತೆ ಇಲ್ಲವಲ್ಲ ಎಂದು ಅವರಿಗೆ ಅನ್ನಿಸಿತು. ತಕ್ಷಣ ತುಪ್ಪಿದರು. ಹರೀಶ ನಾಯ್ಕರೇ ನೀರು ಹಾಳಾಗಿದೆಯಾ? ಎಂದರು. ಆಗಲೇ ಹರೀಶ ನಾಯ್ಕರಿಗೆ ಅನುಮಾನ ಬಂದು ಯಾವ ನೀರು ಕುಡಿದಿದ್ದೀರಿ ಎಂದರು. ತಕ್ಷಣ ಗಡ್ಕರ್ ಮಾಸ್ತರ್ರು ವಿಷಯ ಹೇಳಿದ್ದರು. ಆಗ ಹೌಹಾರಿದ್ದ ಹರೀಶ ಮಾಸ್ತರ್ರು ರಾಸಾಯನಿಕ ಮಿಶ್ರಿತ ನೀರಿನ ವಿಷಯ ಹೇಳಿದ್ದರು.
             ಗಡ್ಕರಿ ಮಾಸ್ತರ್ರು ಬಾಯನ್ನು ಮುಕ್ಕಳಿಸಿದ್ದವರು ಒಂದು ಗುಟುಕನ್ನೂ ಕುಡಿದು ಬಿಟ್ಟಿದ್ದರಂತೆ. ಯಾವಾಗ ಹರೀಶ ಮಾಸ್ತರ್ರಿಂದ ರಾಸಾಯನಿಕ ವಿಷಯವನ್ನು ತಿಳಿದರೋ ಆಗ ಒಮ್ಮೆ ಕುಸಿದು ಕುಳಿತ ರಮೇಶ ಗಡ್ಕರ್ ಮಾಸ್ತರ್ರು ಅಳುವುದೊಂದು ಬಾಕಿ. ತಾರಕ್ಕೋರು, ಸಿ. ಎಂ. ಹೆಗಡೇರು ಹತ್ತಿರ ಬಂದು ಸಮಾಧಾನ ಹೇಳುತ್ತಿದ್ದರೂ ಕೇಳುವ ಮನಸ್ಸಿರಲಿಲ್ಲ. ಏನೋ ಆಯಿತು ಎಂದುಕೊಂಡರು. ತಕ್ಷಣವೇ ಅವರನ್ನು ಕಾನಸೂರಿನ ಬೆಳ್ಳೇಕೇರಿ ಡಾಕ್ಟರ್ ಬಳಿ ಕರೆದೊಯ್ದು ಚಿಕಿತ್ಸೆ ನೀಡಲಾಯಿತು. ಸುದೈವದಿಂದ ಗಡ್ಕರ್ ಮಾಸ್ತರ್ರಿಗೆ ಏನೂ ಆಗಿರಲಿಲ್ಲ. ಬಹುಶಃ ಈಗಿನ ಮಾಸ್ತರ್ರುಗಳಾದರೆ ಇದೇ ನೆಪ ಎಂದುಕೊಂಡು ವಾರಗಟ್ಟಲೆ ರಜಾ ಹಾಕುತ್ತಿದ್ದರೇನೋ. ಆದರೆ ಗಡ್ಕರ್ ಮಾಸ್ತರ್ರು ಹಾಗೆ ಮಾಡಲಿಲ್ಲ. ಆಸ್ಪತ್ರೆಯಿಂದ ಮತ್ತೆ ಶಾಲೆಗೆ ವಾಪಾಸು ಬಂದು ಪಾಠ ಕಲಿಸುವಲ್ಲಿ ನಿರತರಾಗಿದ್ದರು. ಮರುದಿನ ಗಡ್ಕರ್ ಮಾಸ್ತರ್ರನ್ನು ಶ್ಲಾಘಿಸಿ ಸಿರಸಿಯಿಂದ ಬರುವ `ಲೋಕಧ್ವನಿ' ಪತ್ರಿಕಯಲ್ಲಿ ವರದಿಯೊಂದು ಪ್ರಕಟಗೊಂಡಿತ್ತು.
             ಶಾಲೆಯಲ್ಲಿದ್ದ ವಿದ್ಯಾರ್ಥಿಗಳಲ್ಲಿ ನಾಲ್ಕು ತಂಡ ಮಾಡಿ ನಾಲ್ವರು ಮಾಸ್ತರ್ರು ಅವರನ್ನು ಹಂಚಿಕೊಂಡು ವಿವಿಧ ರಚನಾತ್ಮಕ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕೆಂದು ಚಿಂತಿಸಿ ಅದನ್ನು ಕಾರ್ಯರೂಪಕ್ಕೆ ತಂದವರು ಗಡ್ಕರ್ ಮಾಸ್ತರ್ರು. ನಾನು ಗಡ್ಕರ್ ಮಾಸ್ತರ್ರ ತಂಡಕ್ಕೆ ಸೇರಿದ್ದೆ. ತಾರಕ್ಕೋರ ತಂಡಕ್ಕೆ ಸೆರಿದ್ದರೆ ಚನ್ನಾಗಿತ್ತು ಎನ್ನುವುದು ನನ್ನ ಮನದಾಳದ ಆಸೆಯಾಗಿದ್ದರೂ ಗಡ್ಕರ್ ಮಾಸ್ತರ್ ತಂಡಕ್ಕೆ ಸೇರಿದ್ದರಿಂದ ಬೇಜಾರೇನೂ ಆಗಿರಲಿಲ್ಲ.
            ಗಡ್ಕರ್ ಮಾಸ್ತರ್ ವಾಲೀಬಾಲ್ ಆಡುವ ರೀತಿ ನಮ್ಮೆಲ್ಲರಿಗೆ ತಮಾಷೆಯ ವಿಷಯವಾಗಿತ್ತು. ಸರ್ವೀಸ್ ಮಾಡುವಾಗ ಅವರು ಮಾಡುತ್ತಿದ್ದ ವಿಚಿತ್ರ ಆಕ್ಷನ್ ನಮ್ಮೆಲ್ಲರಲ್ಲಿ ನಗುವನ್ನು ಉಕ್ಕಿಸುತ್ತಿತ್ತು. ನಾವೆಲ್ಲರೂ ನೇರವಾಗಿ ನಿಂತುಕೊಂಡು ನೆಟ್ ದಾಟಿಸಿ ಸರ್ವೀಸ್ ಮಾಡುತ್ತಿದ್ದರೆ ಗಡ್ಕರ್ ಮಾಸ್ತರ್ ಮಾತ್ರ ನೆಟ್ ಗೆ ವಿರುದ್ಧ ದಿಕ್ಕಿನಲ್ಲಿ ತುದಿಗಾಲಿನಲ್ಲಿ ಕುಳಿತುಕೊಳ್ಳುತ್ತಿದ್ದರು. ಇದ್ದಕ್ಕಿದ್ದಂತೆ ರಪ್ಪನೆ ತಿರುಗಿ ಕುಪ್ಪಳಿಸಿದಂತೆ ಮಾಡಿ ಸರ್ವೀಸ್ ಮಾಡುತ್ತಿದ್ದರು. ವಾಲೀಬಾಲ್ ಸೀದಾ ನೆಟ್ ದಾಟಿ ರೊಯ್ಯಂನೆ ಬಂದು ಬೀಳುತ್ತಿತ್ತು. ಮೊದ ಮೊದಲು ಇದು ನಮ್ಮೆಲ್ಲರಿಗೆ ತಮಾಷೆಯನ್ನು ತಂದಿದ್ದರೂ ಕೊನೆ ಕೊನೆಗೆ ಇದೂ ಒಂದು ಆಟದ ತಂತ್ರ ಎನ್ನುವುದು ಅರಿವಾಗಿ ಹೆಮ್ಮೆಯುಂಟಾಗಿತ್ತು.
             ಗಡ್ಕರ್ ಮಾಸ್ತರ್ ಎಂದರೆ ಸಾಕು ನನಗೆ ಎಲ್ಲಕ್ಕಿಂತ ಹೆಚ್ಚು ನೆನಪಿನಲ್ಲಿರುವುದು ಚೆಸ್. ನನಗೆ ಚೆಸ್ ಆಟವನ್ನು ಶಾಸ್ತ್ರೋಕ್ತವಾಗಿ ಕಲಿಸಿದವರು ಇವರೇ ಎಂದರೆ ತಪ್ಪಾಗಲಿಕ್ಕಿಲ್ಲ. ನಾನು ಐದು ವರ್ಷದವನಿದ್ದಾಗ ಚಿಕ್ಕಪ್ಪ ಮಹೇಶ ನನಗೆ ಮೊದಲು ಚೆಸ್ ಕಲಿಸಿದ್ದ. ಆ ನಂತರ ಅಪ್ಪನ ಬಳಿ ಹರಪೆ ಬಿದ್ದು ನಾನು ಚೆಸ್ ಬೋರ್ಡನ್ನು ತಂದುಕೊಂಡಿದ್ದೆ. ಪುರಸೊತ್ತಾದಾಗಲೆಲ್ಲ ಅಮ್ಮನ ಜೊತೆ ಚೆಸ್ ಆಡುತ್ತಿದ್ದೆ. ಅಮ್ಮನನ್ನು ಚೆಸ್ಸಿನಲ್ಲಿ ಸೋಲಿಸುವ ಮೂಲಕ ನಮ್ಮನೆಯಲ್ಲಿ ಚೆಸ್ ಲೋಕದಲ್ಲಿ ನಾನೇ ಅನಭಿಷಿಕ್ತ ದೊರೆಯಾಗಿ ಮೆರೆಯುತ್ತಿದ್ದೆ. ಈ ವಿಷಯ ನನ್ನ ಕ್ಲಾಸ್ ಮೇಟ್ ಮಹೇಶ ಎಂಬಾತನಿಗೆ ತಿಳಿದುಹೋಗಿತ್ತು. ಆತ ಒಂದು ದಿನ ಶಾಲೆಯಲ್ಲಿ ಚೆಸ್ ಆಡಲು ನನ್ನನ್ನು ಕರೆಸಿ ಹೀನಾಯವಾಗಿ ಸೋಲಿಸಿದ್ದ. ಅಷ್ಟರ ನಂತರ ನನ್ನ ಚೆಸ್ ಪ್ರತಾಪದ ಪುಂಗಿ ಬಂದಾಗಿತ್ತು.
             ರಮೇಶ ಗಡ್ಕರ್ ಮಾಸ್ತರ್ ಜೊತೆಗೆ ಮುತ್ಮೂರ್ಡ್ ಶಾಲೆಗೆ ಕಲಿಸಲು ಹೋಗುವ ರಮೇಶ ನಾಯ್ಕರು ಖಾಯಂ ಆಗಿ ಚೆಸ್ ಆಡುತ್ತಿದ್ದರು. ರಮೇಶ ನಾಯ್ಕರು ಬರದೇ ಇದ್ದ ದಿನ ಮಹೇಶನ ಜೊತೆಗೆ ಚೆಸ್ ಆಡುತ್ತಿದ್ದರು. ಶಾಲೆಯಲ್ಲಿ ಆಟಕ್ಕೆ ಬಿಡುತ್ತಿದ್ದ ಸಮಯದಲ್ಲಿ ಮಹೇಶ ರಮೇಶ ನಾಯ್ಕರ ಜೊತೆ ಚೆಸ್ ಆಡಿದರೆ ಊಟದ ಗ್ಯಾಪಿನಲ್ಲಿ ರಮೇಶ ನಾಯ್ಕರು ಚೆಸ್ ಆಡುತ್ತಿದ್ದರು. ಯಾವುದೋ ಒಂದು ದಿನ ಮಹೇಶನಿಗೆ ಏನಾಗಿತ್ತೋ? ನನ್ನ ಮೇಲೆ ಸಿಟ್ಟು ಬಂದಿತ್ತೇನೋ. `ಸಾರ್.. ವಿನಯ ಭಯಂಕರ ಚೊಲೋ ಚೆಸ್ ಆಡ್ತಾನೆ..' ಎಂದುಬಿಟ್ಟಿದ್ದ. ಗಡ್ಕರ್ ಮಾಸ್ತರ್ `ಹೌದಾ.. ಬಾ ಆಡೋಣ..' ಎಂದಿದ್ದರು. ಅಂದಿನಿಂದ ನಾನು ಅವರ ಜೊತೆ ಖಾಯಂ ಚೆಸ್ ಆಡುವವನಾಗಿಬಿಟ್ಟೆ. ಪರಿಣಾಮವಾಗಿ ಆಟದ ವಿರಾಮಕ್ಕೆ ಆಡಲು ಹೋಗಲು ನನಗೆ ಆಗುತ್ತಲೇ ಇರಲಿಲ್ಲ. ಆ ಸಮಯದಲ್ಲಿ ಗಡ್ಕರ್ ಮಾಸ್ತರ್ ಜೊತೆ ಚೆಸ್ ಆಡಬೇಕಿತ್ತು. ಕೊನೆ ಕೊನೆಗೆ ನನಗೆ ಅಳು ಬರುವಷ್ಟು ಮಟ್ಟಕ್ಕೆ ಇದು ಮುಟ್ಟಿತ್ತು. ನನ್ನನ್ನು ಚೆಸ್ ಆಡಲು ತಗಲುಹಾಕಿದ ಮಹೇಶ ಮಾತ್ರ ಆಟಕ್ಕೆ ಹೋಗುತ್ತಿದ್ದನಷ್ಟೇ ಅಲ್ಲದೇ ಸಮಾ ಮಾಡಿದೆ ಎಂದು ನಗುತ್ತಿದ್ದ.
            ರಮೇಶ ಮಾಸ್ತರ್ರು ಚೆಸ್ ಆಡುವ ರೀತಿಯೂ ವಿಚಿತ್ರವಾಗಿತ್ತು. ಚೆಸ್ ಆಡುವ ಸಂದರ್ಭದಲ್ಲಿ ಅವರು ಯಾವಾಗಲೂ ಕಪ್ಪು ಕಾಯಿಗಳನ್ನೇ ಇಟ್ಟುಕೊಳ್ಳುತ್ತಿದ್ದರು. ನಾನು ಯಾವಾಗಲೂ ಬಿಳಿಯಕಾಯಿಯನ್ನು ಇಟ್ಟುಕೊಳ್ಳಬೇಕಿತ್ತಲ್ಲದೇ ನಿಯಮದ ಪ್ರಕಾರ ನಾನೇ ಆಟವನ್ನು ಆರಂಭಿಸಬೇಕಿತ್ತು. ಬಹಳ ಚನ್ನಾಗಿ ಆಡುತ್ತಿದ್ದ ರಮೇಶ ಗಡ್ಕರ್ ಆಟದ ಎದುರು ಸೋಲೆಂಬುದು ಕಟ್ಟಿಟ್ಟ ಬುತ್ತಿಯಾಗಿತ್ತು. ಹೀಗಿರುವಾಗ ಒಂದು ದಿನ ಆಲೋಚನೆಯೊಂದು ಬಂದಿತು. ಆಲೋಚನೆ ಎನ್ನುವುದಕ್ಕಿಂತ ಬೇಸರ ಎಂದರೆ ಉತ್ತಮ. ದಿನಾ ಬಿಳಿಯ ಕಾಯಿಯಲ್ಲಿ ಚದುರಂಗವನ್ನು ಆಡಿ ಆಡಿ ಬೇಸರವಾಗಿ ಅದೊಂದು ದಿನ ಕಪ್ಪು ಕಾಯಿಯನ್ನು ನನಗೆ ಕೊಡಿ ಎಂದರೆ. ಗಡ್ಕರ್ ಮಾಸ್ತರ್ ಒಪ್ಪಲಿಲ್ಲ. ಕೊನೆಗೆ ಹರಪೆ ಬಿದ್ದು ಕಪ್ಪು ಕಾಯಿ ಪಡೆದುಕೊಂಡೆ. ವಿಚಿತ್ರವೆಂದರೆ ಆ ದಿನ ನಾನು ಪಂದ್ಯಗಳನ್ನು ಗೆದ್ದೆ. ಒಂದಾದ ಮೇಲೆ ಒಂದರಂತೆ ಗೆದ್ದೆ. ಆ ದಿನ ರಮೇಶ ಮಾಸ್ತರ್ರಿಗೆ ಸಿಕ್ಕಾಪಟ್ಟೆ ಸಿಟ್ಟು ಬಂದಿತ್ತು. ಪಾಠದ ಸಮಯದಲ್ಲಿ ನನಗೆ ಹಿಡಿದು ಬಡಿದೂ ಬಿಟ್ಟಿದ್ದರು. ಕೊನೆಗೆ ಗೊತ್ತಾಗದ್ದೆಂದರೆ ರಮೇಶ ಮಾಸ್ತರ್ರ ವೀಕ್ ನೆಸ್ ಕಪ್ಪು ಕಾಯಿಯಲ್ಲಿತ್ತು. ಕಪ್ಪು ಕಾಯಿಯ ಗಾಢ ಬಣ್ಣ ಎದ್ದು ಕಾಣುತ್ತಿದ್ದ ಕಾರಣದಿಂದಾಗಿ ಅವರು ಯಾವಾಗಲೂ ಅದೇ ಕಾಯಿಯನ್ನು ಇಟ್ಟುಕೊಳ್ಳುತ್ತಿದ್ದರು. ಅಪ್ಪಿತಪ್ಪಿ ಬಿಳಿ ಕಾಯಿಯನ್ನು ಇಟ್ಟುಕೊಂಡರೋ ಅವರ ದೃಷ್ಟಿದೋಷದ ಕಾರಣ ಗೊಂದಲ ಪಟ್ಟುಕೊಂಡು ಪಂದ್ಯ ಸೋಲುತ್ತಿದ್ದರು. ರಮೇಶ ಮಾಸ್ತರ್ರ ಈ ಗೊಂದಲವನ್ನು ಮಹೇಶನ ಬಳಿಗೆ ಯಾವಾಗ ಹೇಳಿದೆನೋ ಆ ದಿನದಿಂದ ಮಹೇಶ ಮತ್ತೆ ಗಡ್ಕರ್ ಮಾಸ್ತರ್ರ ಜೊತೆ ಚೆಸ್ ಆಡಲು ತೊಡಗಿದ್ದ ಎನ್ನುವುದು ವಿಶೇಷವಾಗಿತ್ತು.
           ಆರ್. ವೈ. ಗಡ್ಕರ್ ಮಾಸ್ತರ್ ಚೆಸ್ ಆಡುವಾಗ ಸಾಕಷ್ಟು ತಮಾಷೆಯನ್ನೂ ಮಾಡುತ್ತಿದ್ದರು. ಚೆಸ್ ಆಟದ ಕುದುರೆಗಳನ್ನು ನಮ್ಮೂರಿನ ಕಡೆಗೆ ಮುಖ ಮಾಡಿ ನಿಲ್ಲಿಸಿ `ನೋಡೋ ವಿನಯಾ.. ನನ್ ಕುದುರೆ ನಿಮ್ಮೂರ್ ಕಡೆ ಮುಖ ಮಾಡೈತಿ. ಗ್ಯಾರಂಟಿ ನಿನ್ ಸೋಲ್ಸಿ ನಿಮ್ಮೂರಿಗೆ ಹೊತ್ಕಂಡ್ ಹೊಕ್ಕೈತಿ..' ಎನ್ನುತ್ತಿದ್ದರು. ಇಂತಹ ಮಾಸ್ತರ್ ಜೊತೆ ಚೆಸ್ ಆಡಿದ ಕಾರಣದಿಂದಲೇ ನಾನು ಕೊನೆಗೆ ನನ್ನ ಕಾಲೇಜು ಬದುಕಿನಲ್ಲಿ ಚೆಸ್ ಟೀಂ ಕ್ಯಾಪ್ಟನ್ ಆಗಿದ್ದೆ. ಅಷ್ಟೇ ಅಲ್ಲದೇ ಕೊನೆಗೊಂದು ದಿನ ಯುನಿವರ್ಸಿಟಿ ಬ್ಲೂ ಆಗಿಯೂ ಹೊರಹೊಮ್ಮಿದ್ದೆ. ಇಂತಹದ್ದಕ್ಕೆ ಕಾರಣವಾದ ಗಡ್ಕರ್ ಮಾಸ್ತರ್ರಿಗೆ ಸಲಾಂ.
              ನಾನು 7ನೇ ಕ್ಲಾಸ್ ಪಾಸಾಗಿ ಬರುವ ವೇಳೆಗೆ ಟಿಸಿ ತರಬೇಕಿತ್ತಲ್ಲ ಆಗ ಶಾಲಾಭಿವೃದ್ಧಿ ನಿಧಿಗಾಗಿ 100 ರು. ಪಡೆದುಕೊಂಡಿದ್ದು ಇನ್ನೂ ನೆನಪಿದೆ. ತೋಂಡಿ ಪರೀಕ್ಷೆಯಲ್ಲಿ ಅಪರೂಪಕ್ಕೆಂಬಂತೆ ಎಲ್ಲರಿಗಿಂತ ಜಾಸ್ತಿ ಮಾರ್ಕ್ಸ್ ಪಡೆದುಕೊಂಡಾಗ ಬುರ್ಡೆಗೆ ಒಂದೇಟು ಕೊಟ್ಟು `ಯಾವಾಗ್ಲೂ ಹಿಂಗೆ ಓದಾಕ್ ಏನಾಕೈತ್ಲೇ ನಿಂಗೆ..' ಎಂದು ಬೈದಿದ್ದೂ ನೆನಪಿನಲ್ಲಿದೆ. ಇಂತಹ ಗಡ್ಕರ್ ಮಾಸ್ತರ್ರನ್ನು ನಾನು ಹೆಚ್ಚೂ ಕಡಿಮೆ ಮರೆತೇ ಬಿಟ್ಟಿದ್ದೆ. ತೀರಾ ಇತ್ತೀಚೆಗೆ ಹೊನ್ನಾವರದ ಬಿಇಒ ಕಚೇರಿಯಲ್ಲಿ ಯಾವುದೋ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದ ಅವರು ನಿವೃತ್ತಿ ಹೊಂದಿದರು ಎನ್ನುವ ಸುದ್ದಿಯನ್ನು ಕೇಳಿದಾಗ ಮಾತ್ರ ಮನಸ್ಸು ಕಲ್ಲವಿಲಗೊಂಡಿತ್ತು. ಅಷ್ಟೇ ಅಲ್ಲದೇ ನನ್ನ ಪ್ರಾಥಮಿಕ ಶಾಲಾ ದಿನಗಳು, ಗಡ್ಕರ್ ಮಾಸ್ತರ್ ಜೊತೆಗಿನ ಒಡನಾಟ ನೆನಪಾಗಿತ್ತು. ಇಂತಹ ಗುರುಗಳನ್ನು ನಾನು ಹೇಗೆ ಮರೆಯಲಿ?

(ಮುಂದುವರಿಯುತ್ತದೆ)