Wednesday, May 20, 2015

ಪ್ರಕೃತಿ

(ಚಿತ್ರ : ಬಾಲಸುಬ್ರಹ್ಮಣ್ಯ, ನಿಮ್ಮೊಳಗೊಬ್ಬ ಬಾಲು)
ಈ ಭೂಮಿಯು ದೇವ ಮಂದಿರ
ಸೃಷ್ಟಿ ಸೊಬಗಿದು ಸುಂದರ
ಜೀವ ಜೀವವು ಸೇರಿ ಇರುವೆಡೆ
ಇರುವ ಬಾನಿನ ಚಂದಿರ ||

ಶಿಲ್ಪಕಲೆಗಳ ಹಾಗೆ ಇರುವ
ಗುಡ್ಡ ಬೆಟ್ಟ ನದಿಗಳು
ಸಾಲು ಸಾಲು ಗಿಡಮರಗಳು
ಬಾಗಿ ತೂಗುತಿರ್ಪವು ||

ಜಗಕೆ ಬೆಳಕೇ ಆಗಿರುವ
ಸರ್ವ ವಂದ್ಯ ಸೂರ್ಯನು
ದಿನ ದಿನವೂ ದಣಿಯದೇ
ಅಮರ ಜೀವ ಕೊಡುವನು ||

ತೇಗ ಮತ್ತಿಯ ಮರಗಳೆಲ್ಲವು
ಹಸಿರ ಹೊನ್ನು ಆಗಿದೆ
ಮಾನವನ ಜೀವದೊಡನೆ
ಪ್ರಕೃತಿಯ ಸೊಬಗು ನರಳಿದೆ ||

***
(ನಾನು ಪಿಯುಸಿ ಓದುವಾಗ ಬರೆದ ಕವಿತೆಗಳ ಮಾಲಿಕೆಯಲ್ಲಿ ಇದೂ ಒಂದು. ಇನ್ನೂ ಕವಿ ಮನಸ್ಸು ಅರಳುತ್ತಿದ್ದ ಕಾಲದ ಕವಿತೆ. ಸ್ವಲ್ಪ ಸುಧಾರಿಸಿಕೊಂಡು ಓದಿ)
(ಈ ಕವಿತೆ ಬರೆದಿರುವುದು 08-07-2004ರಂದು ದಂಟಕಲ್ಲಿನಲ್ಲಿ)
(ಬಾಲಸುಬ್ರಹ್ಮಣ್ಯ, ನಿಮ್ಮೊಳಗೊಬ್ಬ ಬಾಲು ಅವರ ಚಿತ್ರವನ್ನು ಅವರ ಅನುಮತಿ ಇಲ್ಲದೇ ಬಳಕೆ ಮಾಡಿಕೊಂಡಿದ್ದೇನೆ. ಅವರ ಬಳಿ ಕ್ಷಮೆ ಕೋರುತ್ತಾ..)

Tuesday, May 19, 2015

ಕರೆ

ಹೇ ಯುವಕ ಸಾಧಿಸು
ಫಲ ಸಿಗುವ ವರೆಗೆ ಸಾಧಿಸು
ಗುರಿ ತಲುಪುವ ವರೆಗೆ ಸಾಧಿಸು
ಜೀವ ವಿರುವ ವರೆಗೂ ಜಯಿಸು ||

ಕಲ್ಲು ಮುಳ್ಳುಗಳ ದಾರಿ
ಈ ಬಾಳಿನೊಳು ತುಂಬಿಹುದು
ಅವನೆಲ್ಲ ಸರಿಸಿ ಪಕ್ಕಕ್ಕಿಟ್ಟು ನೀ
ಲೋಕದೊಳು ಜಯಗಳಿಸು ||

ಈ ಜೀವನವೊಂದು ಸ್ಪರ್ಧೆ
ಗೆಲುವೊಂದೆ ಬಾಳಿನ ಗುರಿ
ಕೊನೆಯ ಜಯವ ಪಡೆದು ನಿಲ್ಲಲು
ಅತಿಮ ಚರಣದವರೆಗೂ ಸಾಧಿಸು ||

ದುಃಖ ನಿರಾಸೆ ಬಾಳಿನಲಿ
ತುಂಬಿಹುದು ಪ್ರತಿ ಕ್ಷಣದಲಿ
ಅವುಗಳೆಲ್ಲವ ತಾಳುಮೆಯಿಂದ
ಜಯಿಸು ನೀ ಜಗದಲಿ ||

****
(ಈ ಕವಿತೆಯನ್ನು ಬರೆದಿರುವುದು 15-03-2004ರಂದು ದಂಟಕಲ್ಲಿನಲ್ಲಿ)
(11 ವಸಂತಗಳ ಹಿಂದೆ ಬರೆದ ಈ ಕವಿತೆ ನನ್ನ ನನ್ನ ಬರವಣಿಗೆಯ ಪಯಣದ ನಾಲ್ಕನೇ ಕವಿತೆ. ಮೊದಲ ತೊದಲು ಹೀಗಿದೆ ನೋಡಿ)

Tuesday, May 12, 2015

ಸಿಡಿ ರೂಪದಲ್ಲಿ ಹವ್ಯಕರ ಹಾಡು

(ವೀಣಾ ಜೋಶಿ)
ಸಮಾಜದಲ್ಲಿ ಸಂಪ್ರದಾಯ ಹಾಡುಗಳಿಗೆ ವಿಶೇಷವಾದ ಬೆಲೆಯಿದೆ. ತಲೆಮಾರಿನಿಂದ ತಲೆಮಾರಿಗೆ ಹರಿದು ಬಂದ ಹಾಡುಗಳನ್ನು ಎಲ್ಲರೂ ಹಾಡುತ್ತ ಬಂದಿರುವ ಸಂಪ್ರದಾಯಗದ ಹಾಡುಗಳು ವಿಶೇಷ ಆಕರ್ಷಣೆಗೂ ಕಾರಣವಾಗಿದೆ. ಶಿರಸಿಯ ಜೋಶಿ ಮತ್ತು ಕಂಪನಿ ಹವ್ಯಕರ ಸಂಪ್ರದಾಯದ ಹಾಡುಗಳ ಸಿಡಿಯನ್ನು ಹೊರ ತಂದಿದ್ದು ಎಲ್ಲರ ಮೆಚ್ಚುಗೆಯನ್ನು ಗಳಿಸಿಕೊಳ್ಳುತ್ತಿದೆ.
ಕರ್ನಾಟಕದಲ್ಲಿ ಸಾವಿರಾರು ವರ್ಷಗಳಿಂದ ಸಮಾಜದಲ್ಲಿ ನಿರುಪದ್ರವಿಗಳಾಗಿ ಬದುಕುತ್ತಿರುವ ಜನಾಂಗವೆಂದರೆ ಹವ್ಯಕರು. ಕೃಷಿಯನ್ನೇ ಪ್ರಧಾನ ಉದ್ಯೋಗವನ್ನಾಗಿ ನಂಬಿರುವ ಇವರು ಸರಳ ಜೀವಿಗಳು. ಹವ್ಯಕರಲ್ಲಿ ಧಾರ್ಮಿಕ ಸಂಪ್ರದಾಯಗಳಿಗೆ ಎಲ್ಲಿಲ್ಲದ ಆದ್ಯತೆ. ಹವ್ಯಕ ಕುಟುಂಬಗಳಲ್ಲಿ ನಡೆಯುವ ಶುಭ ಸಮಾರಂಭಗಳು, ಹಬ್ಬ ಹರಿದಿನಗಳಿಗೆ ವಿಶೇಷವಾದ ಮಹತ್ವವಿದೆ. ಇಂಥ ಸಂಧರ್ಭಗಳಲ್ಲಿ ಹಾಡಲ್ಪಡುವ ಸಂಪ್ರದಾಯದ ಹಾಡುಗಳು ಕೇಳಲು ಇಂಪಾಗಿರುವುದು ಮಾತ್ರವಲ್ಲ, ಸಂಸ್ಕೃತಿಯನ್ನು ಎತ್ತಿ ಹಿಡಿಯುವಂತಿವೆ.
ಶಿರಸಿಯ ವೀಣಾ ಜೋಶಿಯವರ ಪರಿಕಲ್ಪನೆಯಲ್ಲಿ ಹೊರ ಬಂದಿರುವ ವಿಘ್ನೇಶ್ವರನ ಬಲಗೊಂಬೆ ಎನ್ನುವ ಹವ್ಯಕರ ಸಂಪ್ರದಾಯದ ಹಾಡುಗಳ ಸಿಡಿ ಎಲ್ಲರ ಮನಸ್ಸನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಮೊದಲ ಪೂಜೆಯನ್ನು ಸಾರುವ ವಿಘ್ನೇಶ್ವರನ ಬಲಗೊಂಬೆ, ಅಕ್ಕಿ ತೊಳೆಸುವ ಸೂವಿ ಸೂವಿ, ಅಕ್ಷತೆ ಕಲೆಸುವ ಹಾಡು, ಮಂಗಳಾರತಿಯ ಗೈವೆ ಎಂಬ ಆರತಿ ಮಾಡಿದ ಹಾಡು, ಬಿಡಬೇಡ ಸದ್ಗುಣವ ಎಂಬ ಹಾಡು, ಎದುರುಗೊಳ್ಳುವ ಹಾಡು, ಹೆಣ್ಣು ಕೇಳಿದ್ದು, ಹಸೆಗೆ ಕರೆತಂದಿದ್ದು, ವಧು ಮಂಟಪಕ್ಕೆ ತಂದಿದ್ದು, ಮಾಲೆ ಹಾಕಿದ್ದು, ಮಂಗಲಸೂತ್ರವನ್ನು ಕಟ್ಟಿದ್ದು, ಆರತಿ ಮಾಡಿದ್ದು, ಹೊಸ್ತಿಲ ಪೂಜೆ ಹಾಗೂ ವಧುವರರಿಗೆ ಹರಸುವ ಅಂಶಗಳನ್ನು ಹೊಂದಿರುವ ವಿಘ್ನೇಶ್ವರನ ಬಲಗೊಂಬೆ ಸಿಡಿಯಲ್ಲಿ 15 ಹಾಡುಗಳಿವೆ.
ಕೆಲವು ಹಾಡುಗಳು ಪುರಾಣದ ಕಥೆಯನ್ನು ಹೇಳಿದರೆ, ಕೆಲವು ನೀತಿಯನ್ನು ಬೋಧಿಸುತ್ತವೆ. ಮತ್ತೆ ಕೆಲವು ಭಗವಂತನ ನಾಮವನ್ನು ಕೊಂಡಾಡುತ್ತವೆ.ನಮ್ಮ ದೇಶದ ಇನ್ಯಾವುದೇ ಭಾಗದಲ್ಲೂ ಈ ರೀತಿಯ ಹಾಡುಗಳನ್ನು ನಾವು ಕೇಳಲು ಸಾದ್ಯವಿಲ್ಲ. ಎಷ್ಟೋ ಹಾಡುಗಳು ಲಿಖಿತ ರೂಪದಲ್ಲಿ ಇರದೇ ಬಾಯಿಯಿಂದ ಬಾಯಿಗೆ ಹರಡಿ ಜನಪ್ರಿಯವಾಗಿವೆ. ಆದರೆ ಹಿಂದಿನ ಕಾಲದಲ್ಲಿ ಎಲ್ಲಾ ಶುಭಕಾರ್ಯಗಳಲ್ಲೂ ಅನಿವಾರ್ಯವಾಗಿದ್ದ ಇಂಥ ಸಂಪ್ರದಾಯದ ಹಾಡುಗಳು ಇಂದು ತೀರಾ ವಿರಳವಾಗುತ್ತಿರುವುದು ದುರಾದೃಷ್ಟವೇ ಸರಿ. ಆದ್ದರಿಂದ ಅಂಥ ಹಾಡುಗಳನ್ನು ಸಂಗ್ರಹಿಸಿ, ಪರಿಷ್ಕರಿಸಿ, ಧ್ವನಿಸುರುಳಿಯನ್ನು ತಯಾರಿಸಿ ಅವುಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ವರ್ಗಾಯಿಸಬೇಕೆಂಬುದು ಸಿಡಿ ತಯಾರಿಸಿದ ವೀಣಾ ಜೋಶಿಯವರ ಬಹುದಿನಗಳ ಕನಸು. ಈ ನಿಟ್ಟಿನಲ್ಲಿ ಸಿಡಿಯನ್ನು ಹೊರ ತರುವ ಮೂಲಕ ಕನಸನ್ನು ನನಸು ಮಾಡಿಕೊಂಡಿದ್ದಾರೆ.
ಆ ಹಾಡುಗಳಿಗೆ ಹಿನ್ನೆಲೆ ಸಂಗೀತವನ್ನು ಸೇರಿಸಬೇಕೆ? ಬೇಡವೇ? ಸೇರಿಸಿದರೂ ಎಷ್ಟು ಸೇರಿಸಬೇಕು? ಹೇಗಿರಬೇಕು? ಎಂಬ ವಿಚಾರಗಳನ್ನು ವೀಣಾ ಜೋಶಿಯವರು ಸಿಡಿಗೆ ಸಂಗೀತ ನಿರ್ಧೇಶಿಸಿರುವ ಗುರುಮೂರ್ತಿ ವೈದ್ಯ ಅವರೊಂದಿಗೆ ಚರ್ಚಿಸಿದಾಗ ಅವರು ದಾರಿ ತೋರಿಸಿದರು. ಅವರ ಸಹಕಾರದಿಂದ ಈ ದ್ವನಿಸುರುಳಿಯನ್ನು ತಯಾರಿಸಲು ಸಾದ್ಯವಾಗಿದೆ. ಹವ್ಯಕರಲ್ಲದೆ ಬೇರೆ ಬೇರೆ ಸಮುದಾಯದ ಜನರು ಕೂಡ ಇದನ್ನು ಕೇಳಿ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಸಾಂಪ್ರದಾಯಿಕ ಹಾಡುಗಳು ಮರೆತು ಮೂಲೆಗುಂಪಾಗಿರುವ ಇಂದಿನ ದಿನಗಳಲ್ಲಿ ಜನರು ಈ ಧ್ವನಿಸುರುಳಿಯನ್ನು ಕೇಳಿ ತನ್ಮೂಲಕ ಅದರಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡು ಕಲಿತು ಹಾಡುವಂತಾದರೆ ಎಲ್ಲರ ಶ್ರಮ ಸಾರ್ಥಕವಾಗಲಿದೆ.
ಕೇವಲ ಹವ್ಯಕ ಸಮುದಾಯಕ್ಕೆ ಮಾತ್ರ ಸೀಮಿತವಾಗಿರದೇ ಎಲ್ಲ ಸಮುದಾಯಕ್ಕೂ ಅತ್ಯಗತ್ಯವೆನ್ನಿಸುವಂತಹ ಸಂಪ್ರದಾಯದ ಹಾಡುಗಳ ಸಿಡಿ ಇದಾಗಿದ್ದು, ಸಂಪ್ರದಾಯದ ಹಾಡುಗಳ ರಕ್ಷಣೆಯಲ್ಲಿ ಮುಖ್ಯ ಪಾತ್ರ ವಹಿಸಲಿದೆ. ನಾಗವೇಣಿ ಭಟ್, ರಶ್ಮಿ ಭಟ್ ಅವರ ಸಹಗಾಯನವಿರುವ ಈ ಸಿಡಿಯ ಬೆಲೆ 100 ರೂಪಾಯಿಗಳಾಗಿದೆ. ಸಿಡಿಯ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದಲ್ಲಿ 9449715611 ಈ ದೂರವಾಣಿಗೆ ಕರೆ ಮಾಡಬಹುದಾಗಿದೆ.
***
ಸಂಪ್ರದಾಯದ ಹಾಡುಗಳ ಸಂಗ್ರಹಣೆ ಮಾಡಿ, ಅವನ್ನು ಸಿಡಿ ರೂಪದಲ್ಲಿ ಹೊರತರಬೇಕೆನ್ನುವುದು ಬಹುದಿನಗಳ ಕನಸಾಗಿತ್ತು. ಪ್ರಾರಂಭಿಕ ಹಂತದಲ್ಲಿ ಈ ಸಿಡಿಯನ್ನು ಹೊರತರಲಾಗಿದೆ. ಮುಂದಿನ ದಿನಗಳಲ್ಲಿ ಸಂಪ್ರದಾಯದ ಹಾಡುಗಳನ್ನು ಇನ್ನಷ್ಟು ಹೊರ ತರುವ ಕನಸಿದೆ. ಈ ನಿಟ್ಟಿನಲ್ಲಿ ಪ್ರಯತ್ನಗಳನ್ನು ಕೈಗೊಳ್ಳಲಾಗಿದೆ.
ವೀಣಾ ಜೋಶಿ
ಹವ್ಯಕರ ಸಂಪ್ರದಾಯದ ಹಾಡಿನ ಸಿಡಿಯ ರೂವಾರಿ 

Saturday, May 9, 2015

ಅರ್ಥವಾಗಬೇಕು ಗೆಳತಿ

ಅರ್ಥವಾಗ ಬೇಕು ಗೆಳತಿ
ನಾನು ನೀನು ಇಬ್ಬರೂ |

ಸನಿಹ ಜೊತೆಗೆ ಬಂದ ಹಾಗೆ
ಅಲ್ಪ ಸ್ವಲ್ಪ ದೂರ
ಒಲವ, ಮನಸು ಅರಿವ ವೇಳೆ
ಬದುಕು ಮತ್ತೆ ಭಾರ ||

ಹೆಜ್ಜೆ ಹೆಜ್ಜೆ ಜೊತೆಗೆ ಇಟ್ಟು
ಮೈಲು ದೂರ ಬಂದೆವು
ಅರಿಯ ಹಾಗೆ ನಟನೆ ಮಾಡಿ
ನಮ್ಮ ನಾವು ಮರೆತೆವು ||

ವ್ಯರ್ಥವಾಗದಂತೆ ಎಂದೂ
ನಮ್ಮ ಪ್ರೀತಿ ನಿಲ್ಲಲಿ
ಅರಿತು ನಡೆದು, ಕಲೆಯು ಉಳಿದು
ಗಾಯ ಮರೆತು ಹೋಗಲಿ ||

ನನ್ನ ಕನಸು ನಿನ್ನ ಮನಸು
ಬೆರೆಯ ಬೇಕು ಜೊತೆಯಲಿ
ಅರ್ಥೈವಾಗಬೇಕು ನಾವು
ಪ್ರೀತಿ ಸದಾ ಉಳಿಯಲಿ||


Friday, May 8, 2015

ಶಿರ್ಲೆ : ಜಲಪಾತದ ಊರಿನಲ್ಲಿ ಸಮಸ್ಯೆಗಳ ಸರಮಾಲೆ

(ಶಿರ್ಲೆ ಜಲಪಾತ)
ಜಿಲ್ಲೆಯಲ್ಲಿ ಅನೇಕ ಪ್ರವಾಸಿ ತಾಣಗಳಿವೆ. ಮನಸೆಳೆಯುವ ಜಲಪಾತಗಳಿವೆ. ದೂರ ದೂರದ ಪ್ರದೇಶಗಳ ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುತ್ತಿವೆ. ಆದರೆ ಇಂತಹ ಪ್ರವಾಸಿ ತಾಣಕ್ಕೆ ತೆರಳುವ ರಸ್ತೆಗಳು ಮಾತ್ರ ಸಮರ್ಪಕವಾಗಿಲ್ಲ. ಇಂತದ್ದಕ್ಕೊಂದು ತಾಜಾ ಉದಾಹರಣೆಯೆಂದರೆ ಯಲ್ಲಾಪುರ ತಾಲೂಕಿನ ಶಿರ್ಲೆ ಜಲಪಾತಕ್ಕೆ ತೆರಳುವ ಮಾರ್ಗವಾಗಿದೆ.
ಯಲ್ಲಾಪುರ ಪಟ್ಟಣದಿಂದ 15 ಕಿ.ಮಿ ದೂರದಲ್ಲಿರುವ ಶಿರ್ಲೆ ಜಲಪಾತ ದಿನವಹಿ ನೂರಾರು ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ಯಲ್ಲಾಪುರ, ಹುಬ್ಬಳ್ಳಿ, ಕಾರವಾರ, ಕುಮಟಾ, ಶಿರಸಿ, ಶಿವಮೊಗ್ಗ ಸೇರಿದಂತೆ ಹಲವಾರು ಪ್ರದೇಶಗಳಿಂದ ಯುವಕರು, ಮಹಿಳೆಯರೆನ್ನದೇ ತಂಡೋಪತಂಡವಾಗಿ ಆಗಮಿಸಿ ಜಲಪಾತ ವೀಕ್ಷಣೆ ಮಾಡಿ ಹೋಗುತ್ತಾರೆ. 50 ಅಡಿಗೂ ಅಧಿಕ ಎತ್ತರದಿಂದ ಧುಮ್ಮಿಕ್ಕುವ ಜಲಪಾತ ತನ್ನ ಸೌಂದರ್ಯದಿಂದ ಎಲ್ಲರನ್ನೂ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಆಗಮಿಸುವ ಪ್ರವಾಸಿಗರು ಜಲಪಾತದ ನೀರಿಗೆ ತಲೆಯೊಡ್ಡಿ ಸ್ನಾನ ಮಾಡಿ ಸಂತಸವನ್ನೂ ಅನುಭವಿಸುತ್ತಾರೆ. ಆದರೆ ಇಂತಹ ಜಲಪಾತ ಮೂಲಬೂತ ಸೌಕರ್ಯದ ಕೊರತೆಯನ್ನು ಎದುರಿಸುತ್ತಿದೆ.
ಜಲಪಾತವಿರುವ ಶಿರ್ಲೆ ಗ್ರಾಮದಲ್ಲಿ 8-10 ಮನೆಗಳಿವೆ. ಇಡಗುಂದಿ ಗ್ರಾಮ ಪಂಚಾಯತದ ಅರಬೈಲ್ ಮಜರೆಯಲ್ಲಿರುವ ಈ ಜಲಪಾತವಿದೆ. ಇಂತಹ ಸುಂದರ ಜಲಪಾತವಿರುವ ಶಿರ್ಲೆ ಗ್ರಾಮಕ್ಕೆ ತೆರಳವುದು ಮಾತ್ರ ದುಸ್ತರ ಎನ್ನುವಂತಹ ಪರಿಸ್ಥಿತಿಯಿದೆ. ಮುಖ್ಯ ರಸ್ತೆಯಿಂದ 1.5 ಕಿ.ಮಿ ದೂರ ಕಡಿದಾದ ಘಟ್ಟದ ರಸ್ತೆಯಿದೆ. ರಸ್ತೆ ಕೂಡ ಚೂಪಾದ ಕಲ್ಲುಗಳು ಹಾಗೂ ಕೊರಕಲುಗಹಳಿಂದ ಆವೃತವಾಗಿದೆ. ದಿನಂಪ್ರತಿ 25ಕ್ಕೂ ಅಧಿಕ ವಾಹನಗಳು ಈ ರಸ್ತೆಯಲ್ಲಿ ಓಡಾಡುತ್ತವೆ. ಆದರೆ ರಸ್ತೆ ಸಮರ್ಪಕವಾಗಿ ಇಲ್ಲದ ಕಾರಣ ಈ ರಸ್ತೆಯಲ್ಲಿ ಪ್ರಾಣ ಕೈಯಲ್ಲಿ ಹಿಡಿದು ಓಡಾಡಬೇಕು ಎನ್ನುವಂತಹ ಪರಿಸ್ಥಿತಿಯಿದೆ.
ಶಿರ್ಲೆ ಗ್ರಾಮಕ್ಕೆ ಸರ್ವಋತು ರಸ್ತೆ ನಿರ್ಮಾಣ ಮಾಡಿಕೊಡಿ ಎಂದು ಅನೇಕ ಸಾರಿ ಸ್ಥಳೀಯರು ಬೇಡಿಕೆಗಳನ್ನು ಇಟ್ಟಿದ್ದಾರೆ. ಸ್ಥಳೀಯ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿಗಳನ್ನೂ ಸಲ್ಲಿಸಿದ್ದಾರೆ. ಬೇಸಿಗೆಯಲ್ಲಿಯೇ ಓಡಾಡಲು ತೊಂದರೆಯಾಗುವ ಈ ರಸ್ತೆಯಲ್ಲಿ ಮಳೆಗಾಲ ಬಂತೆಂದರೆ ಮತ್ತಷ್ಟು ತೊಂದರೆ ಅನುಭವಿಸುವ ಅನಿವಾರ್ಯವಿದೆ. ತಮ್ಮ ಊರಿಗೆ ಸಮರ್ಪಕ ರಸ್ತೆ ನಿರ್ಮಾಣ ಮಾಡುವುದು ಬೇಡ. ಬದಲಾಗಿ ಜಲಪಾತಕ್ಕೆ ತೆರಳುವವರಿಗಾದರೂ ರಸ್ತೆ ನಿರ್ಮಾಣ ಮಾಡಿಕೊಡಿ. ಜಲಪಾತದ ನೆಪದಲ್ಲಿ ನಮ್ಮೂರಿಗಾದರೂ ಉತ್ತಮ ರಸ್ತೆಯ ಭಾಗ್ಯ ಸಿಗಲಿ ಎಂದು ಸ್ಥಳೀಯರು ತಮ್ಮ ಬೇಡಿಕೆ ಮುಂದಿಡುತ್ತಿದ್ದಾರೆ. ರಾಜ್ಯದ ಪ್ರವಾಸೋದ್ಯಮ ಸಚಿವರು ಜಿಲ್ಲೆಯವರೇ ಆಗಿದ್ದಾರೆ. ಅವರ ಬಗ್ಗೆ ಭರವಸೆಯನ್ನು ಹೊಂದಿದ್ದ ಸ್ಥಳೀಯರು ಇದೀಗ ಹತಾಶೆಯನ್ನು ಅನುಭವಿಸುತ್ತಿದ್ದಾರೆ.
ದಟ್ಟ ಕಾನನದ ನಡುವೆ ಇರುವ ಶಿರ್ಲೆ ಗ್ರಾಮದಲ್ಲಿ ಅಜಮಾಸು 35ರಷ್ಟು ಜನಸಂಖ್ಯೆಯಿದೆ. ದಟ್ಟ ಕಾನನದ ನಡುವೆ ಇರುವ ಈ ಗ್ರಾಮದ ನಿವಾಸಿಗಳ ಬವಣೆ ಒಂದೆರಡಲ್ಲ. ಈ ಗ್ರಾಮಸ್ಥರು ಸೊಸೈಟಿ, ಪಡಿತರ ಹಾಗೂ ಶಾಲೆಗಳಿಗೆ 5 ಕಿ.ಮಿ ದೂರದಲ್ಲಿರುವ ಇಡಗುಂದಿಯನ್ನೇ ನೆಚ್ಚಿಕೊಳ್ಳಬೇಕಾದಂತಹ ಪರಿಸ್ಥಿತಿಯಿದೆ. ಶಿರ್ಲೆ ಗ್ರಾಮದಲ್ಲಿ ಕಿ. ಪ್ರಾ. ಶಾಲೆಯನ್ನು ಆರಂಭಿಸಲು ಅವಕಾಶಗಳಿದ್ದರೂ ಸರ್ಕಾರ ಮಾತ್ರ ಕಡಿಮೆ ಮಕ್ಕಳ ಸಂಖ್ಯೆಯ ನೆಪವನ್ನೊಡ್ಡಿ ಶಾಲೆಗೆ ಅವಕಾಶ ನೀಡುತ್ತಿಲ್ಲ. ಈ ಗ್ರಾಮದ ನಿವಾಸಿಗಳು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸಂಬಂಧಿಕರ ಮನೆಗಳನ್ನೇ ನಂಬಿಕೊಂಡಿದ್ದಾರೆ. ಮಕ್ಕಳನ್ನು ತಮ್ಮ ನೆಂಟರ ಮನೆಗಳಲ್ಲಿ ಇಟ್ಟು ಓದಿಸುತ್ತಿದ್ದಾರೆ.
ಈ ಊರಿನ ಶಾಲೆ, ಸೊಸೈಟಿ ಹಾಗೂ ಪಡಿತರದ ಕುರಿತು ಬವಣೆ ಒಂದು ರೀತಿಯಾದರೆ ಈ ಗ್ರಾಮಸ್ಥರು ಮತದಾನ ಮಾಡಬೇಕೆಂದರೆ ಇನ್ನಷ್ಟು ತೊಂದರೆ ಅನುಭವಿಸಬೇಕಾದ ಪರಿಸ್ಥಿತಿ ಇನ್ನೊಂದು ಕಡೆ. ಈ ಊರಿನ ಮತದಾರರು ಮತದಾನ ಮಾಡಬೇಕೆಂದರೆ 13 ಕಿ.ಮಿ ಸಾಗುವುದು ಅನಿವಾರ್ಯ. ತಮ್ಮ ಗ್ರಾಮದಿಂದ 13 ಕಿ.ಮಿ ದೂರದಲ್ಲಿರುವ ಬೀರಗದ್ದೆಗೆ ತೆರಳಿ ಮತದಾನ ಮಾಡಿ ಬರುತ್ತಿದ್ದಾರೆ. ಮತದಾನಕ್ಕೆ ಅಷ್ಟು ದೂರ ತೆರಳುವುದು ಅಸಾಧ್ಯ, ಈ ಕಾರಣದಿಂದ ಶಿರ್ಲೆ ಗ್ರಾಮದಲ್ಲಿ ಮತಗಟ್ಟೆ ಸ್ಥಾಪಿಸಿ ಎಂದು ಅಧಿಕಾರಿಗಳಿಗೆ ಬೇಡಿಕೆಯನ್ನಿಟ್ಟಿದ್ದರೂ ಅದಕ್ಕೆ ಮನ್ನಣೆ ಸಿಕ್ಕಿಲ್ಲ. ಬಹುದೂರ ಹೋಗಿ ಬರುವ ಕಾರಣದಿಂದ ಚುನಾವಣೆಗಳಲ್ಲಿ ಅನೇಕರು ಮತದಾನವನ್ನೇ ಮಾಡಿಲ್ಲ ಎಂದು ಸ್ಥಳೀಯರು ಹೇಳುತ್ತಾರೆ.
ಇವು ಜಲಪಾತಕ್ಕೆ ತೆರಳುವ ರಸ್ತೆ ಹಾಗೂ ಜಲಪಾತವಿರುವ ಗ್ರಾಮದ ಸಮಸ್ಯೆಯಾದರೆ, ನಯನಮನೋಹರ ಜಲಪಾತವಿರುವ ಪರಿಸರದ ಕಥೆ ಮತ್ತಷ್ಟು ಶೋಚನೀಯವಾಗಿದೆ. ಶಿರ್ಲೆಯ ಜಲಪಾತವನ್ನು ಕಣ್ತುಂಬಿಕೊಳ್ಳಲು ಆಗಮಿಸುವ ಪ್ರವಾಸಿಗರು ಸುಮ್ಮನೆ ಬರುತ್ತಿಲ್ಲ. ಮದ್ಯದ ಬಾಟಲಿ, ಪ್ಲಾಸ್ಟಿಕ್ ಇತ್ಯಾದಿಗಳನ್ನು ತರುತ್ತಾರೆ. ಮದ್ಯಪಾನ ಮಾಡಿದ ನಂತರ ಬಾಟಲಿಗಳನ್ನು ಎಲ್ಲೆಂದರಲ್ಲಿ ಬಿಸಾಡಿ ಹೋಗುತ್ತಿದ್ದಾರೆ. ಕಟ್ಟಿಕೊಂಡು ಬರುವ ತಿಂಡಿಯ ಪ್ಯಾಕೇಟ್ಗಳನ್ನು ಕಂಡಕಂಡಲ್ಲಿ ಎಸೆಯುತ್ತಿದ್ದಾರೆ. ಇದರಿಂದಾಗಿ ಜಲಪಾತದ ಸೌಂದರ್ಯಕ್ಕೆ ಕುಂದುಂಟಾಗುತ್ತಿದೆ. ಪ್ರವಾಸೋದ್ಯಮ ಎಂದು ಭಾಷಣಗಳಲ್ಲಿ ಭಾರಿ ಭಾರಿ ಮಾತನಾಡುವ ಜನಪ್ರತಿನಿಧಿಗಳು ಇಂತಹ ಸಮಸ್ಯೆಗಳನ್ನು ಪರಿಹರಿಸಲು ಮನಸ್ಸು ಮಾಡುತ್ತಿಲ್ಲ ಎಂದು ಸ್ಥಳೀಯರು ದೂರುತ್ತಾರೆ. ನಿಸರ್ಗದ ನಡುವೆ ಇರುವ ಸುಂದರ ಜಲಪಾತ ಹಾಗೂ ಗ್ರಾಮದ ಸಮಸ್ಯೆಗಳಿಗೆ ಪೂರ್ಣವಿರಾಮ ಹಾಕಲು ಪ್ರವಾಸೋದ್ಯಮ ಸಚಿವರು, ಯಲ್ಲಾಪುರ ಶಾಸಕರು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಇನ್ನಾದರೂ ಮುಂದಾಗಬೇಕಿದೆ.
***
ನಮ್ಮೂರಿಗೆ ಸಮರ್ಪಕ ರಸ್ತೆ ನಿರ್ಮಾಣ ಮಾಡಿಕೊಡಿ. ರಾಷ್ಟ್ರೀಯ ಹೆದ್ದಾರಿಯಿಂದ ಕೇವಲ 1.5 ಕಿಮಿ ಅಂತರದಲ್ಲಿ ನಮ್ಮೂರಿದ್ದರೂ ಇಲ್ಲಿ ಸಂಚಾರ ಮಾಡುವುದು ಮಾತ್ರ ತೀರಾ ಅಪಾಯಕಾರಿ ಎನ್ನುವಂತಹ ಪರಿಸ್ಥಿತಿಯಿದೆ. ಅಪಾಯವನ್ನು ಸದಾ ಕೈಯಲ್ಲಿ ಹಿಡಿದು ನಾವು ಪ್ರಯಾಣ ಮಾಡುತ್ತಿದ್ದೇವೆ. ಜಲಪಾತಕ್ಕೆ ಬಹಳಷ್ಟು ಪ್ರವಾಸಿಗರು ಬರುತ್ತಿದ್ದಾರೆ. ಜಲಪಾತದ ಅಭಿವೃದ್ಧಿಯ ಹೆಸರಿನಲ್ಲಾದರೂ ನಮಗೊಂದು ಸರ್ವಋತು ರಸ್ತೆ ಮಾಡಿಕೊಡಬೇಕಾಗಿದೆ.
ನಾರಾಯಣ ರಾಮಚಂದ್ರ ಭಟ್
ಶಿರ್ಲೆ ನಿವಾಸಿ