Monday, October 13, 2014

ಭಾವಾಶಯ

ಒಂದು ಕವನದ ಜೊತೆಗೆ
ಭಾವದೊಡಲು ಬೇಕು |
ಮನವ ತಣಿಸಲು ಬೇಕು
ಒಂದು ಹಾರಯಿಕೆ |

ಕವನ ಗೆಲ್ಲಲು ಬೇಕು
ಪ್ರೀತಿಸುವ ಮನವೊಂದು |
ಅರ್ಥವಾಗಲು ಬೇಕು
ಹೊಸತು ಪರಿಭಾಷೆ |

ಕವನ ಹುಟ್ಟಲು ಬೇಕು
ನವ ಉಸಿರು, ಹಸಿ ಮನಸು |
ಬಾಳು ಬದುಕಲು ಬೇಕು
ಗಮ್ಯತೆಯ ಬಿಂದು |

ಮನಸು ಅರಳಲು ಬೇಕು
ನಲಿವೊಂದು ಸ್ಪೂರ್ತಿ |
ಜೊತೆ ಬೇಕು ಆದರ್ಶ
ಮನಕೊಂದು ಮೂರ್ತಿ |

**
(ಈ ಕವಿತೆಯನ್ನು ಬರೆದಿರುವುದು 26-10-2006ರಂದು ದಂಟಕಲ್ಲಿನಲ್ಲಿ)

Sunday, October 12, 2014

ಬೆಂಗಾಲಿ ಸುಂದರಿ-32

(ಬಾಂಗ್ಲಾದೇಶದ ಗ್ರಾಮೀಣ ಪ್ರದೇಶ)
          ಮುಂದಕ್ಕೆ ಸಾಗುವುದು ಅನಿವಾರ್ಯವೂ ಅತ್ಯಗತ್ಯವೂ ಆಗಿತ್ತು. ಕೆಲಕಾಲ ವಿಶ್ರಮಿಸಿಕೊಂಡ ಬಳಿಕ ಮತ್ತೆ ಮುಂದಕ್ಕೆ ಹೆಜ್ಜೆಹಾಕಿದರು ಮಧುಮಿತಾ ಹಾಗೂ ವಿನಯಚಂದ್ರ. ಆಗಲೇ ಸಾಕಷ್ಟು ಕತ್ತಲೆ ಕವಿದಿತ್ತು. ಹೆದ್ದಾರಿಯ ಪಕ್ಕದಲ್ಲಿಯೇ ರೈಲ್ವೆ ಹಳಿ ಹಾದು ಹೋಗಿತ್ತು. ನಡೆಯುತ್ತಿದ್ದವರಿಗೆ ಬಾಂಗ್ಲಾದ ಅಪ್ಪಟ ಗ್ರಾಮೀಣ ಭಾಗಗಳ ಪರಿಚಯವಾಗತೊಡಗಿತ್ತು. ಮನೆಗಳು ನಿಧಾನವಾಗಿ ಕಡಿಮೆಯಾಗಿ ಅಲ್ಲಲ್ಲಿ ಕುರುಚಲು ಕಾಡುಗಳು, ನಡು ನಡುವೆ ಗದ್ದೆಗಳು, ಬಯಲುಗಳು ಕಾಣಿಸತೊಡಗಿದ್ದವು. ನದಿಯಾಚೆಗೆ ಹಿಂಸಾಚಾರ ತೀವ್ರವಾಗಿದ್ದರೂ ನದಿಯ ಇನ್ನೊಂದು ಭಾಗದಲ್ಲಿ ಹಿಂಸಾಚಾರವಿದ್ದಂತೆ ಕಾಣಿಸಲಿಲ್ಲ. ಅಲ್ಲೊಂದು ಇಲ್ಲೊಂದು ವಾಹನಗಳು ಸಂಚಾರ ಮಾಡುತ್ತಿದ್ದವು. ವಿನಯಚಂದ್ರ ಕೆಲವು ವಾಹನಗಳನ್ನು ನಿಲ್ಲಿಸಲು ಪ್ರಯತ್ನಪಟ್ಟನಾದರೂ ಯಾರೂ ಕೂಡ ಇವರ ಬಳಿ ನಿಲ್ಲಿಸಲಿಲ್ಲ.
                    `ಕಾಲ್ನಡಿಯೆಯೇ ಹಣೆಯಲ್ಲಿ ಬರೆದುಕೊಂಡಿದ್ದರೆ ಏನುಮಾಡಲಿಕ್ಕೆ ಬರುತ್ತದೆ ಹೇಳು..' ಎಂದಳು ಮಧುಮಿತಾ..
                     `ಹುಂ.. ಹೌದು ಕಣೆ.. ಬಾ ನಡೆಯೋಣ..ನಮ್ಮಲ್ಲಿ ಕಸುವು ಸಾಕಷ್ಟಿದೆ ಅಲ್ಲವಾ' ಎಂದು ಮತ್ತಷ್ಟು ಹುಮ್ಮಸ್ಸಿನಿಂದ ಹೆಜ್ಜೆ ಹಾಕಿದರು. ಅಲ್ಲೆಲ್ಲೋ ಒಂದು ಕಡೆಯಲ್ಲಿ ರಾತ್ರಿಯ ಊಟವನ್ನೂ ಮಾಡಿದರು.
                      `ವಿನು ನೀನು ನನಗೆ ಸಿಗದೇ ಇದ್ದರೆ ನನ್ನ ಗತಿ ಏನಾಗುತ್ತಿತ್ತೋ ಅಲ್ಲವಾ?.' ಎಂದಳು ಮಧುಮಿತಾ
                      `ಗೊತ್ತಿಲ್ಲ ಮಧು. ನೀನು ನನಗೆ ಸಿಕ್ಕಿದ್ದು ಮಾತ್ರ ನನ್ನ ಅದೃಷ್ಟ ಎಂದೇ ಹೇಳಬೇಕು ನೋಡು. ಕಾಲೇಜಿನ ದಿನಗಳಲ್ಲಿ ಒಂದಿಬ್ಬರು ಹುಡುಗಿಯರು ನನ್ನಲ್ಲಿ ಆಸಕ್ತಿಯನ್ನು ಮೂಡಿಸಿದ್ದರಾದರೂ ತೀರಾ ಇಷ್ಟಪಡುವಷ್ಟು ಹತ್ತಿರವಾಗಿರಲಿಲ್ಲ. ಆದರೆ ನೀನು ಮಾತ್ರ ಮೊದಲ ನೋಟದಲ್ಲೇ ನನಗಿಷ್ಟವಾಗಿಬಿಟ್ಟೆ. ನನ್ನ ಮನಸ್ಸನ್ನು ಆವರಿಸಿಕೊಂಡು ಬಿಟ್ಟಿದ್ದೆ. ನಿಜ ಹೇಳುತ್ತೇನೆ ಮಧು. ಆ ದಿನ ನಾವು ಕಾಂತಾಜಿ ದೇವಾಲಯಕ್ಕೆ ಹೋಗಿದ್ದೆವಲ್ಲ. ಆ ದಿನ ನನಗೆ ಹುಷಾರಿರಲಿಲ್ಲ ಎಂದು ಸೂರ್ಯನ್ ಹೇಳಿದ್ದ ನೆನಪಿದೆಯಾ? ಅದು ನಿಜವಲ್ಲ. ನಿನ್ನ ಜೊತೆ ಮಾತನಾಡಬೇಕು, ನಿನ್ನ ಸನಿಹ ಇರಬೇಕು ಎನ್ನುವ ಕಾರಣಕ್ಕಾಗಿ ಸೂರ್ಯನ್ ಮಾಡಿದ ಪ್ಲಾನ್ ಅದಾಗಿತ್ತು' ಎಂದ ವಿನಯಚಂದ್ರ.
                      `ನಂಗೊತ್ತಿತ್ತು. ಆ ದಿನ ನಿನಗೆ ಏನೂ ಆಗಿರಲಿಲ್ಲ ಎನ್ನುವುದು ನನಗೆ ತಿಳಿದಿತ್ತು. ನೀನು ನಾಟಕ ಮಾಡುತ್ತಿದ್ದುದೂ ನನಗೆ ತಿಳಿದಿತ್ತು ವಿನು. ಆದರೂ ನಾನು ನಿನ್ನ ಜೊತೆ ಮಾತನಾಡಿದೆ. ಬೆರೆತೆ. ಯಾಕೆ ಗೊತ್ತಾ, ಮೊದಲ ನೋಟದಲ್ಲಿಯೇ ನೀನೂ ನನಗೆ ಇಷ್ಟವಾಗಿಬಿಟ್ಟಿದೆ' ಎಂದು ಮಧುಮಿತಾ ಹೇಳಿದಾಗ ವಿನಯಚಂದ್ರ ಬೆರಗಾಗಿದ್ದ. ಯಲಾ ಇವಳಾ ಎಂದುಕೊಳ್ಳುತ್ತಿದ್ದಾಗಲೇ ಮಾತು ಮುಂದುವರಿಸಿದ ಮಧುಮಿತಾ `ನಾನು ಢಾಕಾ ಯುನಿವರ್ಸಿಟಿಯಲ್ಲಿ ಎಂಎಯನ್ನೂ ಮುಗಿಸಿದ್ದೇನೆ. ನನ್ನ ಕಾಲೇಜು ಬದುಕಿನಲ್ಲಿ ಅದೆಷ್ಟೋ ಜನರು ಪ್ರೇಮ ನಿವೇದನೆ ಮಾಡಿಕೊಂಡಿದ್ದರು. ಎಲ್ಲರೂ ಮುಸಲ್ಮಾನರು. ಯಾರೊಬ್ಬರನ್ನೂ ನಾನು ಇಷ್ಟ ಪಡಲಿಲ್ಲ ನೋಡು. ಒಂದಿಬ್ಬರಂತೂ ಅತ್ಯಾಚಾರ ಮಾಡಿಬಿಡುತ್ತೇನೆ ಎಂದೂ ಬೆದರಿಕೆ ಹಾಕಿದ್ದರು. ಮುಖಕ್ಕೆ ಆಸಿಡ್ ಎರಚುತ್ತೇನೆ ಎಂದೂ ಹೆದರಿಸಿದ್ದರು. ಆದರೆ ನಾನು ಮಾತ್ರ ಅವರ ಬೆದರಿಕೆಗೆ ಜಗ್ಗಿರಲಿಲ್ಲ, ಕುಗ್ಗಿರಲಿಲ್ಲ ನೋಡು. ಆದರೆ ಆ ದಿನ ಹೊಟೆಲಿನಲ್ಲಿ ಯಾವಾಗ ನಿನ್ನನ್ನು ಕಂಡೆನೋ ಆ ಕ್ಷಣವೇ ಇಷ್ಟವಾಗಿಬಿಟ್ಟೆ ವಿನು. ಬಾಗಿಲು ತೆಗೆದಾಕ್ಷಣ ನೀನು ನನ್ನನ್ನು ಬಿಟ್ಟ ಕಣ್ಣು ಬಿಟ್ಟಂತೆ ನೋಡುತ್ತಿದ್ದುದು ನನ್ನ ಅರಿವಿಗೆ ಬಂದಿತ್ತು. ನಾನೂ ಕೂಡ ಅಷ್ಟೇ ಅಚ್ಚರಿ, ಪ್ರೀತಿಯಿಂದ ನಿನ್ನನ್ನು ನೋಡಲು ಆರಂಭಿಸಿದ್ದೆ..' ಎಂದು ಮಧುಮಿತಾ ಹೇಳಿದಾಗ ಮಾತ್ರ ವಿನಯಚಂದ್ರ ಮತ್ತಷ್ಟು ಅಚ್ಚರಿ ಹಾಗೂ ಹೆಮ್ಮೆಯಿಂದ ವಿನಯಚಂದ್ರ ನೋಡಿದ್ದ.
               `ಮಧು ನಾವು ಭಾರತವನ್ನು ತಲುಪುತ್ತೀವೋ ಇಲ್ಲವೋ ಗೊತ್ತಿಲ್ಲ. ಇಲ್ಲಿಯವರೆಗೆ ಒಟ್ಟಾಗಿದ್ದೇವೆ. ಪ್ರೇಮದ ರಸಾನುಭೂತಿಯನ್ನು ಅನುಭವಿಸಿದ್ದೇವೆ. ನಮ್ಮ ಮುಂದಿನ ಭವಿಷ್ಯ ಖಂಡಿತವಾಗಿಯೂ ನನಗೆ ಗೊತ್ತಿಲ್ಲ. ನಿನಗೂ ಗೊತ್ತಿಲ್ಲ. ಬದುಕಿದರೆ ಒಟ್ಟಿಗೆ ಒಬ್ಬರನ್ನೊಬ್ಬರು ಸದಾಕಾಲ ಪ್ರೀತಿಸುತ್ತಾ ಜೀವನ ನಡೆಸೋಣ. ಶ್ರೀಮಂತಿಕೆ ಬಂದರೆ ಬರಲಿ, ಬಡತನ ಇದ್ದರೆ ಇರಲಿ ನಮ್ಮ ಪ್ರೀತಿ ಮುಕ್ಕಾಗಬಾರದು. ಸದಾಕಾಲ ನಾವು ಪ್ರೀತಿಸುತ್ತ ಬದುಕಬೇಕು. ಸಾವು ಬರುತ್ತದೆ ಎಂದರೆ ಅದಕ್ಕೂ ಹೆದರಬಾರದು. ಒಂದೇ ಏಟಿಗೆ ಸತ್ತು ಹೋಗೋಣ.. ಅಲ್ಲವಾ' ಎಂದ ವಿನಯಚಂದ್ರ.
               `ಗೆಲ್ಲುತ್ತೇವೆ ವಿನು ನಾವು. ಸಾವಿನ ಮಾತು ಯಾಕೆ ಈ ಸಂದರ್ಭದಲ್ಲಿ ಹೇಳು. ನಾವು ಗೆಲ್ಲೋಣ. ಭಾರತವನ್ನು ತಲುಪೋಣ. ಭಯ ಬೇಡ..' ಎಂದಿದ್ದಳು ಮಧುಮಿತಾ. ಇಬ್ಬರಲ್ಲೂ ಭಯದ ನಾಡಿನಲ್ಲಿಯೂ ಭರವಸೆಯ ಬೆಳಕು ಮೂಡಿತ್ತು.
                 ಚೀಲದಲ್ಲಿ ಊಟ, ತಿಂಡಿ ಕಡಿಮೆಯಾಗುತ್ತಿತ್ತು. ಹೆಚ್ಚೆಂದರೆ ಇನ್ನೊಂದು ದಿನಕ್ಕೆ ಸಾಕಾಗುವಷ್ಟು ಮಾತ್ರ ಬಾಕಿ ಉಳಿದಿತ್ತು. ಜೇಬಿನಲ್ಲಿ ದುಡ್ಡೂ ಕೂಡ ಅಗತ್ಯ ಪ್ರಮಾಣದಲ್ಲಿ ಇರಲಿಲ್ಲ. ಭಾರತವನ್ನು ತಲುಪಿದರೂ ಭಾರತದಲ್ಲಿ ಹೊಟ್ಟೆಗೇನು ಮಾಡುವುದು ಎನ್ನುವ ಸಮಸ್ಯೆ ಇವರ ತಲೆಯಲ್ಲಿ ಕೊರೆಯಲಾರಂಭಿಸಿತ್ತು. ಈಗ ಖರ್ಚು ಮಾಡುತ್ತಿರುವುದೇ ಕನಿಷ್ಟ ಪ್ರಮಾಣದ್ದು. ಆ ನಡುವೆಯೂ ದುಡ್ಡಿನ ಖರ್ಚನ್ನು ಇನ್ನಷ್ಟು ಕಡಿಮೆ ಮಾಡಲು ಚಿಂತಿಸಿದರು. ನೇರವಾದ ರಸ್ತೆ ಎಷ್ಟು ನಡೆದರೂ ಮುಗಿಯುವುದೇ ಇಲ್ಲವೇ ಎಂದುಕೊಂಡರು ಇಬ್ಬರೂ. ಅಷ್ಟರಲ್ಲಿ ಒಂದು ಜೀಪು ಅದೇ ಮಾರ್ಗದಲ್ಲಿ ಸಾಗಿ ಬಂದಿತು. ವಿನಯಚಂದ್ರ ಕೈ ಮಾಡುವ ಮೊದಲೇ ಜೀಪು ನಿಂತಿತು. ಜೀಪಿನಲ್ಲಿ ನಾಲ್ಕೈದು ಜನರಿದ್ದುದು ಕಂಡುಬರುತ್ತಿತ್ತು. ಜೀಪಿನ ಡ್ರೈವರ್ `ಬರ್ತೀರಾ ಸಾಬ್..' ಎಂದು ಕೇಳಿದ್ದ. ವಿನಯಚಂದ್ರನಿಗೆ ಹೋಗುವ ಮನಸ್ಸಿತ್ತು. ಮಧುಮಿತಾ ಯಾಕೋ ಹಿಂದೇಟು ಹಾಕಿದಳು. ವಿನಯಚಂದ್ರನನ್ನು ಕೈ ಹಿಡಿದು ಜಗ್ಗಿ ನಿಲ್ಲಿಸಿದಳು. ಮಧುಮಿತಾಳಿಗೆ ಯಾಕೋ ಅನುಮಾನ ಬಂದಂತಾಗಿತ್ತು. ಅಷ್ಟರಲ್ಲಿ ಜೀಪಿನಲ್ಲಿದ್ದವರೇ ಮೂರ್ನಾಲ್ಕು ಜನರು ಜೀಪಿನಿಂದ ಇಳಿದು ಬಂದು ಏಕಾಏಕಿ ವಿನಯಚಂದ್ರ ಹಾಗೂ ಮಧುಮಿತಾರನ್ನು ಹಿಡಿದು ಗಾಡಿಯೊಳಕ್ಕೆ ತುಂಬಿಕೊಂಡುಬಿಟ್ಟರು.
           ಜೀಪಿನ್ನು ಏರುವಾಗ ವಿನಯಚಂದ್ರ ಹಾಗೂ ಮಧುಮಿತಾ ಸಾಕಷ್ಟು ಪ್ರತಿರೋಧ ಒಡ್ಡಿದರಾದರೂ ಅದು ಸಾಕಾಗಲಿಲ್ಲ. ಕೂಗಿದರು, ಗಲಾಟೆ ಮಾಡಿದರು. ಕೊಸರಾಡಿದರು. ಜೀಪಿನಲ್ಲಿದ್ದವರು ಅವ್ಯಾವುದಕ್ಕೂ ಸೊಪ್ಪು ಹಾಕಲಿಲ್ಲ. ಬಯಲಿನಲ್ಲಿ ನಡೆದು ಬರುತ್ತಿದ್ದ ಕಾರಣ ಇವರು ಕೂಗಿದ್ದು ಮತ್ಯಾರಿಗೂ ಕೇಳಿಸಲೇ ಇಲ್ಲ. ಯಾರವರು, ಯಾಕೆ ಇವರನ್ನು ಗಾಡಿಯಲ್ಲಿ ತುಂಬಿಕೊಂಡು ಹೋಗುತ್ತಿದ್ದಾರೆ ಒಂದೂ ಅರ್ಥವಾಗಲಿಲ್ಲ. ವಿನಯಚಂದ್ರ ಜಬರದಸ್ತಿಗೆ ಇಳಿದ. ಜೀಪಿನಲ್ಲಿದ್ದವರು ವಿನಯಚಂದ್ರನ ಮುಖ ಮೂತಿ ನೋಡದೆ ನಾಲ್ಕೇಟು ಬಿಗಿದರು. ವಿನಯಚಂದ್ರ ಆ ಏಟಿಗೆ ತತ್ತರಿಸಿದ. ಪ್ರಜ್ಞೆತಪ್ಪಿ ಬಿದ್ದ.
           ಹತ್ತು ಹದಿನೈದು ಕಿಲೋಮೀಟರ್ ದೂರ ಚಲಿಸಿದ ಜೀಪು ನಂತರ ಅಲ್ಲೇ ಒಂದು ಕಡೆ ಊರಿನೊಳಕ್ಕೆ ತಿರುಗಿತು. ವಿನಯಚಂದ್ರನಿಗೆ ಯಾವುದೋ ಲೋಕದಲ್ಲಿ ಸಾಗುತ್ತಿದ್ದಂತೆ ಅನ್ನಿಸುತ್ತಿತ್ತು. ಜೀಪು ಸಾಗುತ್ತಿರುವುದು ಗೊತ್ತಾಗುತ್ತಿತ್ತಾದರೂ ಕೈಕಾಲು ಆಡುತ್ತಿರಲಿಲ್ಲ. ಮಾತಾಡೋಣ ಎಂದರೆ ನಾಲಿಗೆಯೇ ಬಿದ್ದು ಹೋಗಿದೆಯೇನೋ ಎಂಬಂತಾಗಿತ್ತು. ಅಲ್ಲೊಂದು ಮನೆಯ ಎದುರು ಜೀಪು ನಿಂತಿತ್ತು. ಮನೆಯೆಂದರೆ ಮನೆಯಲ್ಲ ಅದು. ದೊಡ್ಡ ಜಮೀನ್ದಾರನ ಬಂಗಲೆ ಎನ್ನಬಹುದು. ಹುಬ್ಬಳ್ಳಿ ಕಡೆಯಲ್ಲಿ ವಾಡೆಗಳಿರುತ್ತಾವಲ್ಲ. ಆ ರೀತಿಯದ್ದು. ದೊಡ್ಡ ಕೋಟೆಯಂತಹ ರಚನೆ. ವಿನಯಚಂದ್ರನಿಗೆ ಅದು ಅಸ್ಪಷ್ಟವಾಗಿ ಗೊತ್ತಾಗುತ್ತಿತ್ತು. ಯಾರೋ ಇಬ್ಬರು ಮಧುಮಿತಾಳನ್ನು ಕೈಯಲ್ಲಿ ಹಿಡಿದುಕೊಂಡು ಹೋಗುತ್ತಿದ್ದರೆ ಮತ್ತಿಬ್ಬರು ವಿನಯಚಂದ್ರನ್ನು ದರದರನೆ ಎಳೆದುಕೊಂಡು ಹೋಗುತ್ತಿದ್ದರು. ಆ ಮನೆಯ ಒಳಗೆ ಸುತ್ತಿ ಬಳಸಿ ಸಾಗುತ್ತಿರುವುದು ತಿಳಿಯುತ್ತಿತ್ತು. ಕೊನೆಗೆ ಅದೊಂದು ಕತ್ತಲೆಯ ಕೋಣೆಗೆ ಒಯ್ದು ಮಧುಮಿತಾ ಹಾಗೂ ವಿನಯಚಂದ್ರನನ್ನು ಹಾಕಿ ಕೋಣೆಯ ಬಾಗಿಲನ್ನು ಹಾಕಿಬಿಟ್ಟರು.
           ವಿನಯಚಂದ್ರನಿಗಿನ್ನೂ ಸ್ಪಷ್ಟವಾಗಿ ಎಚ್ಚರಾಗಿರಲಿಲ್ಲ. ಮಧುಮಿತಾ ಮಾತ್ರ ಭಯದಿಂದ ಮಾತೇ ಬಾರದಂತೆ ಕುಳಿತಿದ್ದಳು. ಯಾರು, ಯಾಕೆ ಇಲ್ಲಿಗೆ ಕರೆತಂದಿದ್ದಾರೆ ಒಂದೂ ಬಗೆಹರಿಯಲಿಲ್ಲ. ಮಧುಮಿತಾ ಮಾತ್ರ ಪಕ್ಕದಲ್ಲೇ ಕವುಚಿ ಬಿದ್ದುಕೊಂಡಿದ್ದ ವಿನಯಚಂದ್ರನನ್ನು ಬಡಿದು ಎಬ್ಬಿಸಲು ಪ್ರಯತ್ನಿಸಿದಳು. ನಾಲ್ಕೈದು ಸಾರಿ ಪ್ರಯತ್ನಿಸಿದ ನಂತರ ನಿಧಾನವಾಗಿ ವಿನಯಚಂದ್ರ ಕಣ್ಣುಬಿಟ್ಟ. ಕಣ್ಣುತೆರೆದವನಿಗೆ ಒಮ್ಮೆ ತಾನೆಲ್ಲಿದ್ದೇನೆ, ಏನಾಗುತ್ತಿದೆ ಒಂದೂ ತಿಳಿಯಲಿಲ್ಲ.
          `ಮಧು.. ಏನಿದು..? ನಾವೆಲ್ಲಿದ್ದೇವೆ? ಏನಾಗುತ್ತಿದೆ..?' ಅರ್ಥವಾಗದವನಂತೆ ಕೇಳಿದ.
          `ನನಗೂ ಗೊತ್ತಿಲ್ಲ ವಿನೂ.. ಯಾರೋ ಎಳೆದುಕೊಂಡು ಬಂದರು. ಗಾಡಿಯಲ್ಲಿ ನಿನಗೆ ಹೊಡೆದರು. ನೀನು ಎಚ್ಚರ ತಪ್ಪಿದೆ. ನಂತರ ನಮ್ಮಿಬ್ಬರನ್ನೂ ಎಲ್ಲೋ ಕರೆದುಕೊಂಡು ಬಂದು ಮನೆಯೊಂದರಲ್ಲಿ ಕೂಡಿಹಾಕಿದ್ದಾರೆ. ಅದಷ್ಟೇ ಗೊತ್ತಿದೆ.. ಆದರೆ ಯಾಕೆ ಹೀಗೆ, ನಾವೇನು ತಪ್ಪು ಮಾಡಿದ್ದೇವೆ.. ಒಂದೂ ಗೊತ್ತಿಲ್ಲ.. ಅಬ್ಬಾ.. ಗಾಡಿಯಲ್ಲಿದ್ದವರು ಕುಡಿದಿದ್ದರು. ಅದೆಷ್ಟು ತೊಂದರೆ ಕೊಟ್ಟರು ಅಂದರೆ ಛೀ...' ಎಂದಳು ಮಧುಮಿತಾ..
         `ಛೇ... ಕ್ರೂರಿಗಳು..' ಎಂದ ವಿನಯಚಂದ್ರ.. `ಮುಂದೇನು ಮಾಡುವುದು? ಎಲ್ಲೋ ಹೋಗುವವರು ಎಲ್ಲಿಗೆ ಬಂದೆವಪ್ಪಾ? ಇಲ್ಲಿಂದ ತಪ್ಪಿಸಿಕೊಂಡು ಹೋಗುವುದು ಹೇಗೆ? ಅದು ಸಾಧ್ಯವಾ? ಅಸಾಧ್ಯವಾ? ನಮಗೇಕೆ ಇಷ್ಟೆಲ್ಲ ಕಷ್ಟಗಳು ಎದುರಾಗುತ್ತಿವೆ..' ಎಂದ ಅಸಹನೆಯಿಂದ.
           ಕೆಲ ಹೊತ್ತಿನ ಬಳಿಕ ಯಾರೋ ಆ ಕೋಣೆಯ ಬಾಗಿಲು ತೆರೆಯುತ್ತಿರುವ ಸದ್ದಾಯಿತು. ವಿನಯಚಂದ್ರ ಕೂಡಲೇ ಜಾಗೃತನಾದ. ಕೋಣೆಯ ತುಂಬ ಕತ್ತಲಾವರಿಸಿದ್ದರೂ ಕಣ್ಣು ಆ ಕತ್ತಲೆಗೆ ಹೊಂದಿಕೊಂಡಿತ್ತು. ಮಬ್ಬಾದ ದೀಪದ ಬೆಳಕಿನಲ್ಲಿ ಆ ಕೋಣೆಯನ್ನೆಲ್ಲ ಸರಸರನೆ ಹುಡುಕಾಡಿದ ವಿನಯಚಂದ್ರ ಆತ್ಮರಕ್ಷಣೆಗೆ ಏನಾದರೂ ಆಯುಧ ಸಿಗಬಲ್ಲದೇ ಎಂದು ಹುಡುಕತೊಡಗಿದ. ಅಲ್ಲೆಲ್ಲೋ ಮೂಲೆಯಲ್ಲಿ ಮಂಚದ ಕಾಲಿನ ಮುರಿದ ರಚನೆಯಂತದ್ದಿತ್ತು. ಅದನ್ನೇ ತೆಗೆದು ಜಾಗೃತೆಯಿಂದ ಅಡಗಿಸಿ ಇಟ್ಟುಕೊಂಡ. ಬಾಗಿಲು ತೆಗೆದು ಒಳಬಂದಿತೊಂದು ಆಕೃತಿ. ಮೊದಲಿಗೆ ಸರಿಯಾಗಿ ಗೊತ್ತಾಗಲಿಲ್ಲ. ತೀರಾ ಹತ್ತಿರಕ್ಕೆ ಬಂದ ನಂತರ ಒಳಬಂದಿದ್ದೊಬ್ಬಳು ಹೆಂಗಸು ಎನ್ನುವುದು ಅರಿವಾಯಿತು. ಒಳಬಂದವಳೇ ಕೈಯ್ಯಲ್ಲಿ ತಿಂಡಿಯನ್ನು ಹಿಡಿದುಕೊಂಡು ಬಂದಿದ್ದಳು.
         ಮಧುಮಿತಾಳ ಬಳಿ ಬಂದ ಆಕೆ ಕೈಯಲ್ಲಿದ್ದುದ್ದನ್ನು ಕೊಟ್ಟು ತಿನ್ನು ಎಂದಳು. ಮಧುಮಿತಾ ಒಮ್ಮೆ ಆ ಹೆಂಗಸನ್ನು ನೋಡಿದವಳೇ ಆಕೆ ಕೊಟ್ಟಿದ್ದನ್ನು ತಿನ್ನಲು ನಿರಾಕರಿಸಿದಳು. `ನಮ್ಮನ್ಯಾಕೆ ಇಲ್ಲಿ ಕೂಡಿ ಹಾಕಿದ್ದಾರೆ.. ಯಾರು ನೀವು..? ಏನು ಇದೆಲ್ಲ..?' ಎಂದು ಸಿಟ್ಟಿನಿಂದ ಕೇಳಿದಳು ಮಧುಮಿತಾ.
          ಯವ್ವನವನ್ನು ಆಗಷ್ಟೇ ದಾಟುತ್ತಿದ್ದ ಆ ಹೆಂಗಸು ಮಧುಮಿತಾಳ ಕೈಯನ್ನು ಹಿಡಿದುಕೊಂಡು `ಅದೊಂದು ದೊಡ್ಡ ಕಥೆ.. ಏನಂತ ಹೇಳುವುದು..' ಎಂದಳು.. ಅದಕ್ಕುತ್ತರವಾಗಿ `ಈ ರೀತಿಯ ಸುತ್ತುಬಳಸಿನ ಮಾತುಗಳು ಬೇಡ.. ನಿಜ ಹೇಳಿ.. ನೀವ್ಯಾರು? ನಮ್ಮನ್ಯಾಕೆ ಇಲ್ಲಿ ಕೂಡಿ ಹಾಕಿದ್ದೀರಿ?' ಎಂದು ಚೀರಿದಳು.
          `ಇಲ್ಲ.. ನಾನು ಈ ಕೆಲಸ ಮಾಡಿಲ್ಲ. ಈ ಕೆಲಸ ಮಾಡಿದವನು ಮುಷ್ಪಿಕರ್. ಆತ ಈ ಸುತ್ತಮುತ್ತಲ ಭಾಗದ ಬಹುದೊಡ್ಡ ಜಮೀನ್ದಾರ. ಯಾರೇ ಹೊಸ ಹುಡುಗಿಯರು, ಹೆಂಗಸರು ಕಾಣಲಿ ಅವರನ್ನು ಎಳೆದುಕೊಂಡು ಬಂದು ಅವರ ಮೇಲೆ ಅತ್ಯಾಚಾರ ಮಾಡುವುದು ಆತನ ಕೆಲಸ. ಅದಕ್ಕಾಗಿಯೇ ತನ್ನದೊಂದು ಪಡೆಯನ್ನೇ ನೇಮಿಸಿಕೊಂಡಿದ್ದಾರೆ. ಆತನ ಕಣ್ಣಿಗೆ ನೀನು ಕಾಣಿಸಿದ್ದೀಯಾ.. ಅದೇ ಕಾರಣಕ್ಕೆ ನಿನ್ನನ್ನು ಎಳೆದುಕೊಂಡು ಬಂದಿದ್ದಾರೆ..' ಎಂದು ಹೇಳಿದಳು ಆ ಹೆಂಗಸು.
         ಮಾತು ಕೇಳಿ ಬೆಚ್ಚಿ ಬಿದ್ದರು ವಿನಯಚಂದ್ರ ಹಾಗೂ ಮಧುಮಿತಾ. ಮುಂದೇನು ಮಾಡುವುದು ಎಂದು ಆಲೋಚನೆ ಮಾಡುತ್ತಿದ್ದಾಗಲೇ ತಿಂಡಿಯನ್ನು ತಂದಾಕೆಯೇ ಮಾತು ಮುಂದುವರಿಸಿದಳು. `ಪ್ರತಿ ದಿನ ಇದೇ ರೀತಿ ಆಗಿದೆ. ಇವರು ಯಾರು ಯಾರನ್ನೋ ಎಳೆದುಕೊಂಡು ಬರುತ್ತಾರೆ. ಅವರ ಮೇಲೆ ಅತ್ಯಾಚಾರ ನಡೆಯುತ್ತದೆ. ಬೆಳಗಾಗುವ ವೇಳೆಗೆ ಕೆಲವರು ಸತ್ತಿರುತ್ತಾರೆ. ಅರೆ ಜೀವ ಆಗಿರುವವರನ್ನು ಅದೇ ಗುಂಪು ಎಲ್ಲೋ ಹೋಗಿ ಒಗೆದು ಬರುತ್ತಾರೆ...' ಎಂದು ನಿಟ್ಟುಸಿರು ಬಿಟ್ಟವಳು `ನನ್ನನ್ನು ಮದುವೆಯಾದಾಗಿನಿಂದ ಇದನ್ನು ನೋಡಿ ರೋಸಿ ಹೋಗಿದ್ದೇನೆ. ನಾನು ಮದುವೆಯಾದ ನಂತರ ಅದೆಷ್ಟೋ ಸಹಸ್ರ ಹೆಂಗಳೆಯರು ತಮ್ಮ ಬದುಕನ್ನು ಇಲ್ಲಿ ಕಳೆದುಕೊಂಡಿದ್ದಾರೆ. ಅನೇಕ ಸಾರಿ ಇವನ್ನು ಪ್ರತಿಭಟಿಸಿದ್ದೇನೆ. ಆದರೆ ಪ್ರತಿಭಟನೆ ಮಾಡಿದಾಗಲೆಲ್ಲ ಮೈಸುಲಿಯುವಂತಹ ಹೊಡೆತಗಳು ಬಿದ್ದಿವೆ..' ಎಂದಳು.
          `ನೀನು ಇದನ್ನು ಹೇಳಲು ನಮ್ಮೆದುರು ಬಂದೆಯಾ?' ಎಂದು ಕೇಳಿದ ಮಧುಮಿತಾ ಮತ್ತೇನೋ ಹೊಳೆದಂತೆ `ನಿನ್ನ ಯಜಮಾನ ಎಳೆದುಕೊಂಡು ಬರುವ ಪ್ರತಿಯೊಬ್ಬ ಹೆಂಗಸರ ಬಳಿಯೂ ನೀನು ಇದೇ ಕಥೆಯನ್ನು ಹೇಳುತ್ತೀಯಾ? ಅವರಿಗೆ ನೀನು ಈ ಕಥೆ ಹೇಳುವುದನ್ನು ಬಿಟ್ಟು ಬೇರೆ ಸಹಾಯ ಮಾಡುವುದೇ ಇಲ್ಲವೇ? ನಿನ್ನದೂ ಒಂದು ಬದುಕಾ. ಥೂ..' ಎಂದಳು ಮಧುಮಿತಾ.
           `ಬಯ್ಯಬೇಡಿ. ಅವರಲ್ಲಿ ಶಕ್ತಿಯಿದೆ. ನಾನು ಅಸಹಾಯಕಿ. ನಾನು ಈ ಕೆಲಸವನ್ನಲ್ಲದೇ ಇನ್ನೇನು ಮಾಡಬಲ್ಲೆ ಹೇಳಿ? ನಾನು ಏನು ಮಾಡಲು ಹೋದರೂ ನನ್ನನ್ನು ಹೊಡೆಯುತ್ತಾರೆ. ಬಡಿಯುತ್ತಾರೆ. ಕೊಲ್ಲಲಿಕ್ಕೂ ಹೇಸುವುದಿಲ್ಲ ಕ್ರೂರಿಗಳು' ಎಂದು ಹೇಳಿದಾಕೆ ಅಳುವುದೊಂದೇ ಬಾಕಿ.
         `ಅಸಹಾಯಕಿ.. ಎಂತಹ ನೆಪವನ್ನು ಹೇಳ್ತೀಯಾ ನೀನು. ನೆಪ ಅಷ್ಟೆ. ನಿನಗೆ ಮನಸ್ಸಿಲ್ಲ ಅಷ್ಟೇ. ಯಾರು ಯಾರದ್ದೋ ಬದುಕು ಹಾಳಾದರೆ ನಿನಗೇನು. ನೀನು ಮಾತ್ರ ಆರಾಮಾಗಿರ್ತೀಯಾ. ಕೈಯಲ್ಲಿ ಆಗೋದಿಲ್ಲ ಅಂತೀಯಲ್ಲ.. ನಾವು ತಪ್ಪಿಸಿಕೊಳ್ಳಬೇಕು. ಸಹಾಯ ಮಾಡ್ತೀಯಾ?' ಎಂದು ಕೇಳಿಬಿಟ್ಟಳು ಮಧುಮಿತಾ.
            ಬೆರಗು ಗಣ್ಣಿನಿಂದ ನೋಡಿದ ಆ ಹೆಂಗಸು ಕೆಲಕಾಲ ಮೌನವಾದಳು. ಅಷ್ಟರಲ್ಲಿ ವಿನಯಚಂದ್ರ ಅಲ್ಲಿಯೇ ಇರುವುದು ಗಮನಕ್ಕೆ ಬಂದಿತ್ತು. ಆತನ ಕಡೆಗೆ ದೃಷ್ಟಿ ಹಾಯಿಸಿ `ಇವರ್ಯಾರು?' ಎಂದಳು. ಮುಷ್ಪೀಕರ್ ನ ಬಂಟರೇ ಯಾರೋ ಇಲ್ಲಿದ್ದಾರೆ. ತನ್ನ ಮಾತನ್ನು ಅವರು ಕೇಳಿಬಿಟ್ಟಿದ್ದಾರೆ ಎನ್ನುವ ಭಯ ಆಕೆಯಲ್ಲಿ ಒಮ್ಮೆ ಕಾಡಿತು. ಕೊನೆಗೆ ಮಾತಿಗೆ ನಿಂತ ಮಧುಮಿತಾಳೆ ತಾವು ಯಾವ ಕಾರಣಕ್ಕೆ ಬಂದಿದ್ದೇವೆ. ಯಾರು? ಎತ್ತ ಸಾಗುತ್ತಿದ್ದೇವೆ ಎನ್ನುವುದನ್ನು ತಿಳಿಸಿದಳು. ಎಲ್ಲ ಹೇಳಿದ ನಂತರ ಮಧುಮಿತಾ ಹಾಗೂ ವಿನಯಚಂದ್ರ ತಪ್ಪಿಸಿಕೊಳ್ಳಲು ಸಹಾಯ ಮಾಡುವುದಾಗಿ ಭರವಸೆ ನೀಡಿದಳು.
         ತಪ್ಪಿಸಿಕೊಳ್ಳುವ ಕಾರ್ಯ ಬಹುಬೇಗನೆ ಆಗಬೇಕಾಗಿತ್ತು. ಯಾವ ಕ್ಷಣದಲ್ಲಿ ಮುಷ್ಪೀಕರ್ ಮಧುಮಿತಾಳನ್ನು ತನ್ನ ಮಂಚಕ್ಕೆ ಬರುವಂತೆ ಬುಲಾವ್ ನೀಡುತ್ತಾನೋ ಗೊತ್ತಿರಲಿಲ್ಲ. ತಪ್ಪಿಸಿಕೊಳ್ಳುವುದೇನೋ ಸರಿ. ಆದರೆ ಮುಷ್ಪೀಕರ್ ನಿಗೆ ಯಾಕೆ ಬುದ್ಧಿ ಕಲಿಸಿ ಹೋಗಬಾರದು ಎನ್ನುವ ಆಲೋಚನೆ ವಿನಯಚಂದ್ರನ ಮನಸ್ಸಿನಲ್ಲಿ ಮೂಡಿತು. ತಕ್ಷಣವೇ ಮಧುಮಿತಾಳ ಕಿವಿಯಲ್ಲಿ ಈ ವಿಷಯವನ್ನು ತಿಳಿಸಿದ. ಮಧುಮಿತಾ ಕೂಡ ಆ ವಿಷಯಕ್ಕೆ ಒಪ್ಪಿಗೆ ಸೂಚಿಸಿದಳು. ಅಲ್ಲೇ ಎದುರಿಗಿದ್ದ ಮುಷ್ಪೀಕರನ ಹೆಂಡತಿಯ ಬಳಿ ಈ ವಿಷಯವನ್ನು ತಿಳಿಸಿದಳು. ಹೀಗೊಂದು ಸಾಧ್ಯತೆಯನ್ನು ಯಾವತ್ತೂ ಯೋಚಿಸಿರಲಿಲ್ಲವೋ ಎಂಬಂತೆ  `ಯಾ ಅಲ್ಲಾ..' ಎಂದವಳೇ `ತಾನೂ ಇದಕ್ಕೆ ಕೈ ಜೋಡಿಸುತ್ತೀನಿ.. ಒಳ್ಳೆಯ ಸಾಧ್ಯತೆ. ಆದರೆ ನೀವು ಯಾವ ರೀತಿ ಬುದ್ಧಿ ಕಲಿಸುತ್ತೀರಿ ಹಾಗೂ ಇದರಿಂದ ಅಪಾಯವೇನೂ ಆಗುವುದಿಲ್ಲ ಅಲ್ಲವಾ?' ಎಂದು ಕೇಳಿದಳು.
          ಪ್ರತಿಯಾಗಿ ವಿನಯಚಂದ್ರ `ಯಾವ ರೀತಿ ಬುದ್ಧಿ ಕಲಿಸಬೇಕು ಎನ್ನುವುದು ಇನ್ನೂ ಗೊತ್ತಿಲ್ಲ. ಇನ್ನು ಮುಂದೆ ಹೆಂಗಸರ ಬದುಕನ್ನು ಹಾಳುಮಾಡಬಾರದು. ಆ ರೀತಿಯಲ್ಲಿ ಏನಾದರೂ ಮಾಡಬೇಕು. ನಿಮ್ಮ ಸಹಾಯ ಸಹಕಾರ ಇಲ್ಲದೇ ಈ ಕೆಲಸ ಅಸಾಧ್ಯ. ಈ ಕೆಲಸ ಅಪಾಯಕರವಂತೂ ಹೌದು. ಆದರೆ ಎಷ್ಟು ದೊಡ್ಡ ಪ್ರಮಾಣದ್ದೆಂಬುದು ನಮಗೂ ಗೊತ್ತಿಲ್ಲ. ನಮ್ಮಿಂದ ಆಗದಿದ್ದರೆ ನೀವಾದರೂ ಈ ಕೆಲಸ ಮಾಡಲೇಬೇಕು. ನಂತರ ನಮಗೆ ಬೋಗ್ರಾವನ್ನು ತಲುಪುವ ಮಾರ್ಗವನ್ನೂ ನೀವೇ ತಿಳಿಸಬೇಕು. ಹೇಳಿ ನಿಮ್ಮಿಂದ ಇದು ಸಾಧ್ಯವಾ? ಆಗೋದಿಲ್ಲ ಅಂತಾದರೆ ಹೇಳಿಬಿಡಿ.. ನಾವೇ ಈ ಕೆಲಸವನ್ನು ಹೇಗಾದರೂ ಮಾಡುತ್ತೇವೆ. ಆದರೆ ದಯವಿಟ್ಟು ಯಾರ ಬಳಿಯೂ ಈ ಬಗ್ಗೆ ಬಾಯಿ ಬಿಡಬೇಡಿ..' ಎಂದ.
            `ಖಂಡಿತ ಯಾರ ಬಳಿಯೂ ಹೇಳೋದಿಲ್ಲ..' ಎಂದವಳೇ ಒಮ್ಮೆ ಎದ್ದು ಹೋಗಿ ಕೋಣೆಯ ಕದವನ್ನು ಗಟ್ಟಿಯಾಗಿ ಹಾಕಲಾಗಿದೆಯೋ ಇಲ್ಲವೋ ಎಂದು ನೋಡಿಕೊಂಡು ಬಂದಳು. `ಆ ಹರಾಮಖೋರನನ್ನು ನನ್ನ ಗಂಡ ಎನ್ನಲು ನಾಚಿಕೆಯಾಗುತ್ತಿದೆ. ಸಮಯ ಸಿಕ್ಕಾಗ ಆತನಿಗೆ ಬುದ್ಧಿ ಕಲಿಸಬೇಕು ಎಂದು ನಾನು ಅನೇಕ ಸಾರಿ ಆಲೋಚನೆ ಮಾಡಿದ್ದೇ. ಆದರೆ ಆ ಕೆಲಸ ನನ್ನೊಬ್ಬನಿಂದ ಸಾಧ್ಯವಾಗುವುದಿಲ್ಲ ಎಂದು ಸುಮ್ಮನಾಗಿದ್ದೆ. ಆದರೆ ನೀವು ಇವತ್ತು ದೇವರಂತೆ ಬಂದಿದ್ದೀರಿ. ಅಲ್ಲಾಹುವೇ ನಿಮ್ಮನ್ನು ಕಳಿಸಿದ್ದಾನೆ ಎಂದುಕೊಳ್ಳುತ್ತೇನೆ. ಇಲ್ಲಿಯವರೆಗೆ ಆತ ಅವರಿವರ ಬದುಕನ್ನು ಹಾಳುಮಾಡಿದ್ದೇ ಸಾಕು. ಇನ್ನು ಮುಂದಾದರೂ ಉಪಕಾರಿಯಾಗಿ ಬಾಳಲಿ..' ಎಂದು ಹೇಳಿದ ಆಕೆಯ ಬಾಯಲ್ಲಿ ಎಷ್ಟೋ ದಿನಗಳ ಅಸಹನೆ, ನೋವು ತುಂಬಿರುವುದು ಸ್ಪಷ್ಟವಿತ್ತು. ತಕ್ಷಣವೇ ಮನಸ್ಸಿನಲ್ಲಿ ಏನೋ ಆಲೋಚನೆ ಮಾಡಿದ ವಿನಯಚಂದ್ರ ಕೂಡಲೇ ಇಬ್ಬರ ಬಳಿಯೂ ಮಾಡಬೇಕಾದ ಕಾರ್ಯಗಳನ್ನು ವಿವರಿಸಿದ. ಆ ಪ್ರಕಾರವಾಗಿ ಕಾರ್ಯಪ್ರವೃತ್ತರಾದರು.

(ಮುಂದುವರಿಯುತ್ತದೆ)

Saturday, October 11, 2014

ಪ್ಯಾಟೆ ದನಗಳ ಹಳ್ಳಿ ಲೈಪು

ಒಂದು ದಿನ ಪೇಟೆಯ ದನಗಳು
ಹಳ್ಳಿಯ ಕಡೆಗೆ ವಲಸೆ ಹೊರಟವು |
ಪೇಟೆ ಬೇಜಾರಾಗಿಬಿಟ್ಟಿದೆ
ಹಳ್ಳಿ ಬದುಕು ಮಜಾ ಮಾಡೋಣ
ಎಂದು ಧಾವಿಸಿದವು |

ಹಳ್ಳಿಗೇನೋ ಬಂದೇಬಿಟ್ಟವು
ಎಲ್ಲವೂ ಚಿತ್ರ ವಿಚಿತ್ರ |
ಹಳ್ಳಿಯಲ್ಲೂ ದನಗಳಿವೆ
ಬಡಕಲು ಶರೀರಿ ಸಾಧು |
ಪೊಗರು ಮಾಡೋದಿಲ್ಲ |
ಅಲ್ಲೆಲ್ಲೋ ವಾಹನ ಬಂದರೂ
ದೂರಕೆ ಓಡ್ತಾವಲ್ಲ ||

ನಮ್ಮಲ್ಲೆಲ್ಲೂ ಹಂಗೇನಿಲ್ಲ..
ಗಾಡಿಯ ಸದ್ದಿಗೆ ಹೆದರೋದಿಲ್ಲ
ಉಜ್ಜಿಕೊಂಡೇ ಸಾಗುವವರು ನಾವು |
ಬೇಕಾದ್ರೆ ಜೀವ
ಉಳಿಸ್ಕೋಬೇಕು ನೀವು ||

ಹಳ್ಳಿದನಗಳು ತಿಂತಾವಂತೆ
ಅದೇನೋ ಹಸಿರು ಹುಲ್ಲು |
ನಮ್ ಬಾಯಿಗೆ ಅದು ರುಚಿಸೋದಿಲ್ಲ
ಹುಲ್ಲಿನ ರುಚಿ ಗೊತ್ತೇ ಇಲ್ಲ |
ನಮ್ಮದೇನಿದ್ರೂ ಪ್ಲಾಸ್ಟೀಕ್ ಚೀಲ
ಗೋಡೆಮೇಲಿನ ಕಾಗದ ಎಲ್ಲೋ ||

ನಗರದ ಹಸುಗಳು ನಾವೇನಿದ್ದರು
ನೋಡಲು ದಷ್ಟಪುಷ್ಟ |
ಹಳ್ಳಿ ಹಸುಗಳು ಎಲುಬು ಚಕ್ಕಳ
ಪಾಪ ಕಷ್ಟ ಕಷ್ಟ ||

ನಗರದ ತುಂಬ ನಾವೇ ರಾಜರು
ಬಿಡಾಡಿ ದನಗಳು ನಾವು |
ಕೇಳೋರಿಲ್ಲ ಕಟ್ಟೋರಿಲ್ಲ
ಸ್ವರ್ವ ಸ್ವತಂತ್ರರ ತಾವು |

ಹಳ್ಳಿ ದನಗಳಿಗೆ ಹಗ್ಗದ ಬಂಧನ
ಬಿಚ್ಚಲೆ ಬೇಕು ಹಗ್ಗ |
ಕಟ್ಟ ಬೇಕು, ಅಟ್ಟಬೇಕು
ಸ್ವಾತಂತ್ರ್ಯವೇ ಇಲ್ಲ ||

ನಗರದ ಬೀದಿಯು ನಮಗೆ ಜಗತ್ತು
ನಮಗ್ಯಾರ ಹಂಗಿಲ್ಲ |
ಓಡಿದರೂನೂ ಕುಣಿದರೂನೂ
ನಮ್ಮನು ಕೇಳೋರಿಲ್ಲ ||

ರಸ್ತೆಯೇ ನಮ್ಮ ಮನೆ
ರಸ್ತೆಯೇ ಹಾಸಿಗೆ
ಹಳ್ಳೀಲಿ ಹೀಗೇನಿಲ್ಲ |
ಕೊಟ್ಟಿಗೆಯಂತೆ ಕಟ್ಟಿ ಹಾಕುವರು
ಕುತ್ತಿಗೆಗೊಂದು ಹಗ್ಗ ||
ಹೊಟ್ಟೆಗೆ ಅಷ್ಟು ಹುಲ್ಲು, ನೀರು
ಹಾಲಿನ ಬಯಕೆ ಪಕ್ಕಾ ||

ಹಳ್ಳಿ ದನಗಳು ಹಾಲನು ಕೊಡದಿರೆ
ಬೆನ್ನಿನ ಮೇಲೆ ಏಟು |
ಅಯ್ಯೋ ಪಾಪ ಅವರ ಪಾಡು
ರೂಪಾಯಿ ಲೆಕ್ಕದ ನೋಟು ||

ನಮ್ಮ ಬದುಕು ನಮಗೆ ಚೆಂದ
ಹಳ್ಳಿ ಬದುಕು ಕಷ್ಟ.
ವಯಸ್ಸಾದರೆ ಕಟುಕನ ಮನೆಗೆ
ಅಟ್ಟುವುದೇ ಪಕ್ಕ ||

ಬೇಡವೇ ಬೇಡ ಹಳ್ಳಿ ಬದುಕು
ಎಂದವು ನಗರದ ಹಸುಗಳು
ಹಳ್ಳಿಗಿಂತ ನಗರವೇ ವಾಸಿ
ಎನ್ನುತ ನಗರಕೆ ಮರಳಿದವು |
ಹಳ್ಳಿ ಬದುಕಿಗೆ ಹೆದರಿದವು |
ಮತ್ತೆ ನಗರಕೆ ಓಡಿದವು ||

Friday, October 10, 2014

ಬೆಂಗಾಲಿ ಸುಂದರಿ-31

(ಜಮುನಾ ನದಿಯ ಬಂಗಬಂಧು ಸೇತುವೆ)
           ಏಲೆಂಗಾದ ಹೊರವಲಯವನ್ನು ತಲುಪುವಷ್ಟರಲ್ಲಿ ಸಂಜೆಯಾಗತೊಡಗಿತ್ತು. ಕತ್ತಲೆಯ ಕಾವಳ ನಿಧಾನಕ್ಕೆ ಸುರಿಯಲು ಆರಂಭವೂ ಆಗಿತ್ತು. ಮುಂದಕ್ಕೆ ಸಾಗಲು ಯಾವುದಾದರೂ ವಾಹನ ಸಿಗಬಹುದೇ ಎನ್ನುವ ನಿರೀಕ್ಷೆಯಲ್ಲಿಯೇ ಹೆಜ್ಜೆಯನ್ನು ಹಾಕುತ್ತಿದ್ದರು. ಇವರ ಅದೃಷ್ಟವೋ ಎಂಬಂತೆ ಸರಕು ಸಾಗಣೆಯ ಆಟೋ ರಿಕ್ಷಾವೊಂದು ಅದೇ ಮಾರ್ಗವಾಗಿ ಬಂದಿತು. ವಿನಯಚಂದ್ರ ಕೈಮಾಡಿ ಅದನ್ನು ನಿಲ್ಲಿಸಿದ. ಆ ಆಟೋದವನು ತಾನು ಜಮುನಾ ಇಕೋ ಪಾರ್ಕಿನ ಸಮೀಪ ತೆರಳುತ್ತಿದ್ದೇನೆ. ಅಲ್ಲಿಯವರೆಗೆ ಕರೆದುಕೊಂಡು ಹೋಗುವುದಾಗಿ ತಿಳಿಸಿದ. ಅಲ್ಲಿಯ ತನಕ ಸಾಗಿದರೆ ಗಮ್ಯ ಮತ್ತಷ್ಟು ಸನಿಹವಾಗುತ್ತದೆ ಎಂದುಕೊಂಡು ಆಟೋ ಏರಲು ಮುಂದಾದರು. ಹಿಂಭಾಗದಲ್ಲಿ ಹತ್ತಿ ಎಂದ. ಹಿಂದಕ್ಕೆ ಸಾಗಿದರೆ ವಾಹನದ ತುಂಬೆಲ್ಲ ಕೋಳಿಪಂಜರಗಳಿದ್ದವು. ಕೋಳಿಗಳ ಕೂಗು, ಮರಿಗಳ ಕಿಂಯೋ ಪಿಂಯೋ ಸದ್ದು ಜೊತೆಯಲ್ಲಿ ಅವುಗಳ ಹಿಕ್ಕೆಯ ಗಬ್ಬು ವಾಸನೆ. ಆಟೋ ಏರಲೋ ಬೇಡವೋ ಎನ್ನುವ ಅನುಮಾನ ಇಬ್ಬರಲ್ಲೂ ಒಮ್ಮೆ ಮನೆಮಾಡಿತು. ಆದರೆ ಈ ಗಾಡಿಯನ್ನು ತಪ್ಪಿಸಿಕೊಂಡರೆ ಮತ್ತೆ 20-25 ಕಿ.ಮಿ ಸುಮ್ಮನೆ ನಡೆಯಬೇಕಲ್ಲ. ಇಬ್ಬರ ಕಾಲೂ ಮತ್ತೆ ನಡೆಯಲಾರೆವು ಎಂದು ಹೇಳುತ್ತಲಿತ್ತು. ಹಿಂಬದಿಯಲ್ಲಿದ್ದ ಕೊಂಚ ಜಾಗದಲ್ಲೇ ಹತ್ತಿ ನಿಂತುಕೊಂಕೊಂಡರು.
           ಯಾವ ಕಾಲದ್ದೋ ಆಟೋ. ನಿಧಾನವಾಗಿ ಸಾಗುತ್ತಿತ್ತು. ಶಬ್ದವನ್ನು ಮಾಡುತ್ತಿದ್ದ ಅಬ್ಬರ ವೇಗಕ್ಕೆ ಇರಲಿಲ್ಲ. ಹಿಂಬದಿ ಕುಳಿತವರಿಗೆ ಆಟೋದ ರೌರವ ಸದ್ದು, ಅದು ಹೊರ ಸೂಸುತ್ತಿದ್ದ ಹೊಗೆ, ಕೋಳಿ ಹಿಕ್ಕೆಯ ವಾಸನೆಯ ಜೊತೆಗೆ ಮಿಶ್ರವಾಗಿ ಹೇಳಿಕೊಳ್ಳಲಾಗದಂತಹ ಯಾತನೆ ಆರಂಭವಾಯಿತು. ಇಬ್ಬರಿಗೂ ಹೊಟ್ಟೆ ತೊಳೆಸಲು ಆರಂಭವಾಯಿತು. ಆಟೋದಿಂದ ತಲೆಯನ್ನು ಹೊರಕ್ಕೆ ಹಾಕಿ ಶುದ್ಧ ಗಾಳಿ ಸಿಗುತ್ತದೆಯೇ ಎಂದು ಪ್ರಯತ್ನಿಸಿದರು. ಆಟೋ, ಕೋಳಿಗಳ ಹಿಕ್ಕೆಯ ವಾಸನೆಯ ಎದುರು ಅವರ ಪ್ರಯತ್ನ ವಿಫಲವಾಯಿತು ಎಂದೇ ಹೇಳಬಹುದು. ರಸ್ತೆಯ ಇಕ್ಕೆಲಗಳಲ್ಲಿ ಗದ್ದೆಯ ಬಯಲು ಕಡಿಮೆಯಾಗುತ್ತಲಿತ್ತು. ಅಲ್ಲಲ್ಲಿ ಕುರುಚಲು ಕುರುಚಲು ಮರಗಳು, ಪೊದೆಗಳು ಕಾಣಲು ಆರಂಭಿಸಿದ್ದವು. ವಾತಾವರಣ ಮತ್ತಷ್ಟು ಹಸಿರಾಗಲು ಆರಂಭಿಸಿತ್ತು. ಹತ್ತಿರದಲ್ಲೇ ನದಿಯಿದೆ ಎಂದುಕೊಂಡ ವಿನಯಚಂದ್ರ.
         `ವಿನು.. ಈಗ ನಾವು ದೊಡ್ಡದೊಂದು ಸೇತುವೆ ದಾಟಬೇಕಿದೆ. ಬ್ರಹ್ಮಪುತ್ರಾ ನದಿ ಸೇತುವೆ. ಅದಕ್ಕೆ ಇಲ್ಲಿ ಜಮುನಾ ನದಿ ಎಂದು ಕರೆಯುತ್ತಾರೆ. ಸೇತುವೆ ಬಹು ದೀರ್ಘವಾಗಿದೆ. ನಾನು ಚಿಕ್ಕಂದಿನಲ್ಲಿ ಶಾಲಾ ಪ್ರವಾಸಕ್ಕೆ ಈ ಸೇತುವೆ ನೋಡಲು ಬಂದಿದ್ದೆ. ಸೇತುವೆಯ ಮಧ್ಯದಲ್ಲಿ ನಿಂತು ತೂರಿ ಬರುವ ಗಾಳಿಗೆ ಮುಖ ಕೊಟ್ಟರೆ ಆಹಾ.. ಎಂತ ಆನಂದ ಅಂತೀಯಾ.. ನದಿಯ ಮಧ್ಯದಲ್ಲೊಂದು ದ್ವೀಪವಿದೆ. ಅಲ್ಲೊಂದಷ್ಟು ಮನೆಗಳಿವೆ. ಗದ್ದೆಗಳೂ ಇವೆ. ಮಳೆಗಾಲ ಬಂತೆಂದರೆ ಆ ದ್ವೀಪ ಮುಳುಗಿ ಹೋಗುತ್ತದೆ. ಅಷ್ಟಲ್ಲದೇ ನದಿಯಲ್ಲಿ ಪ್ರವಾಹ ಏರಿ ಇಕ್ಕೆಲಗಳ ಹತ್ತಿಪ್ಪತ್ತು ಕಿಲೋಮೀಟರ್ ಗಳನ್ನು ಮುಳುಗಿಸಿಬಿಡುತ್ತದೆ. ಆಗ ಬಾಂಗ್ಲಾ ಎನ್ನುವುದು ಅಕ್ಷರಶಃ ನರಕ. ಎಲ್ಲೆಲ್ಲೂ ನೀರು. ನೂರಾರು ಮೈಲುಗಳ ವರೆಗೆ ನೀರು ನಿಂತಿದೆಯೇನೋ ಎನ್ನುವಂತೆ ಭಾಸವಾಗುತ್ತದೆ ನೋಡು' ಎಂದಳು ಮಧುಮಿತಾ. ವಿನಯಚಂದ್ರ ಹೂಂ ಅಂದ.
         `1971ರಲ್ಲಿ ಸಂದರ್ಭದಲ್ಲಿ ನದಿಗೆ ಸೇತುವೆ ಇರಲಿಲ್ಲ. 1990ರ ದಶಕದಲ್ಲಿ ನಿರ್ಮಾಣ ಮಾಡಲಾಗಿದೆ. ಈ ಸೆತುವೆಯಂನ್ನೇ ಬಂಗಬಂಧು ಸೇತುವೆ ಎಂದು ಕರೆಯಲಾಗುತ್ತದೆ. ಬಾಂಗ್ಲಾದ ಬಹುದೊಡ್ಡ ಸೇತುವೆಗಳಲ್ಲಿ ಇದೂ ಒಂದು. ರಾತ್ರಿಯ ವೇಳೆ ಈ ಸೇತುವೆಗೆ ಲೈಟ್ ಹಾಕಲಾಗುತ್ತದೆ. ಆಗ ಎಷ್ಟು ಚಂದ ಕಾಣುತ್ತದೆ ಗೊತ್ತಾ ಇದು..ಓಹ್.. ಪಾಕಿಸ್ತಾನ ಈ ನದಿಯನ್ನು ದಾಟಲು ಬಹಳ ಹರಸಾಹಸ ಮಾಡಿತ್ತು. ಬಾಂಗ್ಲಾದ ಬಡಪಾಯಿ ಜನರೂ ಈ ನದಿಯಿಂದ ಆಗ ಅನುಭವಿಸಿದ ಬವಣೆ ಅಷ್ಟಿಷ್ಟಲ್ಲ. ಬೆನ್ನ ಹಿಂದೆ ಪಾಕಿಸ್ತಾನ ಸೇನೆ ರಣಹದ್ದುಗಳಂತೆ ಬೆನ್ನಟ್ಟಿ ಬರುತ್ತಿದ್ದರೆ ಮುಂದೆ ಈ ನದಿ ಅಡ್ಡಾಗಿತ್ತು. ಅದನ್ನು ದಾಟಲಾಗದೇ ಹಲವರು ಪಾಕಿಸ್ತಾನಿ ಸೇನೆಯ ಫಿರಂಗಿಗಳಿಗೆ, ಬಂದೂಕುಗಳಿಗೆ ಬಲಿಯಾಗಿದ್ದರು. ನದಿಯನ್ನು ಕಷ್ಟಪಟ್ಟು ಈಜಿ ದಾಟಿದ ಕೆಲವೇ ಕೆಲವು ಮಂದಿ ಮುಂದೆ ಬಾಂಗ್ಲಾದ ನದಿಯಾಚೆಗಿನ ಪ್ರದೇಶಕ್ಕೆ ಹೋದರು. ಕೊನೆಗೊಮ್ಮೆ ಭಾರತಕ್ಕೂ ನಿರಾಶ್ರಿತರಾಗಿ ಹೋಗಬೇಕಾಯಿತು. 1971ರ ಸಮಯದಲ್ಲಿ ಈ ನದಿಯಲ್ಲಿ ಉರುಳಿದ ಹೆಣಗಳು ಲಕ್ಷಕ್ಕೂ ಅಧಿಕ ಎಂದು ಅಂದಾಜು ಮಾಡಲಾಗುತ್ತದೆ. ನದಿ ನೀರು ರಕ್ತದಿಂದ ಕೆಂಪಾಗಿ ಹರಿಯುತ್ತಿತ್ತು ಎಂದೂ ಹೇಳುತ್ತಾರೆ. ಬೇಸಿಗೆಯಲ್ಲಿ ತಣ್ಣಗೆ ಹರಿಯುವ ನದಿಯ ಆರ್ಭಟವನ್ನು ನೋಡಬೇಕಾದರೆ ಮಳೆಗಾಲ ಬರಬೇಕು..' ಎಂದಳು.
       ಅಷ್ಟರಲ್ಲಿ ಆಟೋದಲ್ಲಿದ್ದ ಕೋಳಿಗಳ ಕೂಗನ್ನೂ ಮೀರಿಸುವಂತಹ ಕರ್ಕಶ ಧ್ವನಿಯೊಂದು ರಾಗ ರಾಗವಾಗಿ ಕೇಳಿಬರಲಾರಂಭಿಸಿತು. ವಿನಯಚಂದ್ರ ಹಾಗೂ ಮಧುಮಿತಾ ಮೊದ ಮೊದಲು ಬೆಚ್ಚಿದರೂ ಕೊನೆಗೆ ಗಮನವಿಟ್ಟು ಕೇಳಿದಾಗ ಆಟೋ ಡ್ರೈವರ್ ಹಾಡುತ್ತ ಸಾಗುತ್ತಿದ್ದ ಎನ್ನುವುದು ಸ್ಪಷ್ಟವಾಯಿತು. ಮೊದಲೇ ಕಂಗೆಟ್ಟಿದ್ದ ಇವರಿಗೆ ಇನ್ನೊಂದು ಹೊಸ ಬಗೆಯ ಸಮಸ್ಯೆ ಎದುರಾದಂತಾಯಿತು. ಬೆಂಗಾಲಿಯಲ್ಲಿ ಯಾವುದೋ ಹಾಡನ್ನು ತನ್ನ ಲಹರಿಯಲ್ಲಿ ಆ ಡ್ರೈವರ್ ಹಾಡುತ್ತಲೇ ಇದ್ದ. ಯಾವುದೋ ಬೆಂಗಾಲಿ ಸಿನೆಮಾದ್ದಿರಬೇಕು. ತನ್ನ ಖುಷಿಗೆ, ತನ್ನ ಪಾಡಿಗೆ ತಾನು ಹಾಡುತ್ತಿದ್ದ. ಆದರೆ ವಾಹನದ ಹಿಂಬದಿ ಇದ್ದವರು ಮಾತ್ರ ಅದನ್ನು ಕೇಳಲಾರದೇ ತೊಂದರೆ ಪಡುವಂತಾಗಿತ್ತು. ವಿಚಿತ್ರವೆಂದರೆ ಆತ ಹಾಡು ಹೇಳಲು ಆರಂಭಿಸಿದ ನಂತರ ಒಂದೇ ಒಂದು ಕೋಳಿ ಸಹ ಧ್ವನಿಯನ್ನು ಹೊರ ಹಾಕಲಿಲ್ಲ. ಯಾರೋ ಗಪ್ ಚುಪ್ ಎಂದರೋ ಎಂಬಂತೆ ಸುಮ್ಮನೆ ಕುಳಿತಿದ್ದವು.!
         ಅಂತೂ ಇಂತೂ ಒಂದು ತಾಸು ಪ್ರಯಾಣ ಮಾಡಿದ ಬಳಿಕ ಆ ಆಟೋದಿಂದ ಇಳಿಯುವ ಸಮಯ ಬಂದಿತು. ನಡೆದು ಬಂದಿದ್ದರೆ ಇನ್ನಷ್ಟು ಆರಾಮಾಗಿತ್ತೇನೋ ಅನ್ನಿಸಿದ್ದು ಸುಳ್ಳಲ್ಲ. ಜಮುನಾ ಇಕೋ ಪಾರ್ಕಿನ ಪಕ್ಕದ ರಸ್ತೆಯ ಕಡೆಗೆ ಆ ಆಟೋದವನು ತೆರಳುವವನಿದ್ದ. ಮಧುಮಿತಾ ಹಾಗೂ ವಿನಯಚಂದ್ರರಿಂದ ದುಡ್ಡನ್ನು ಪಡೆದು ಮುಂದಕ್ಕೆ ಹೋದ. ಆತ ಅತ್ತ ಹೋದ ನಂತರ ಇವರು ನಿರಾಳರಾದರು. ಜಮುನಾ ನದಿಯಿಂದ ಹಾದು ಬರುತ್ತಿದ್ದ ಶುದ್ಧ ಗಾಳಿಯನ್ನು ಮೂಗರಳಿಸಿ ದೇಹದೊಳಕ್ಕೆ ಎಳೆದುಕೊಂಡರು. ಒಮ್ಮೆ ಹಾಯೆನ್ನಿಸಿತು. ಸ್ನಾನ ಮಾಡಿದ್ದರೆ ಚನ್ನಾಗಿತ್ತು ಎಂದೂ ಅನ್ನಿಸದೇ ಇರಲಿಲ್ಲ.
         ಅಲ್ಲಿಂದ ಜಮುನಾ (ಬ್ರಹ್ಮಪುತ್ರ) ಕಾಣುತ್ತಿತ್ತು.  ಭಾರತದಲ್ಲಿ ಬ್ರಹ್ಮಪುತ್ರ ಎಂದು ಗಂಡು ಹೆಸರಿನಿಂದ ಕರೆಯಲ್ಪಡುವ ನದಿ ಬಾಂಗ್ಲಾ ನಾಡಿನಲ್ಲಿ ಜಮುನಾ ಆಗಿ ಬದಲಾಗುತ್ತದಲ್ಲ ಎನ್ನಿಸಿತು. ಗಂಡು ನದಿ ಇಲ್ಲಿ ಹೆಣ್ಣು ನದಿಯಾಗಿ ಬದಲಾಗುತ್ತದೆಯಲ್ಲ ಎಂದುಕೊಂಡ ವಿನಯಚಂದ್ರ. ರಾತ್ರಿಯಾಗುವುದರೊಳಗೆ ನದಿ ದಾಟಿಬಿಡಬೇಕು ಎಂದುಕೊಂಡು ಮುಂದಕ್ಕೆ ಹೆಜ್ಜೆ ಹಾಕಿದರು. ಕೆಲವೇ ನಿಮಿಷದ ಅವಧಿಯಲ್ಲಿ ಜಮುನಾ ನದಿ ಕಣ್ಣಮುಂದೆ ವಿಸ್ತಾರವಾಗಿ ಕಾಣಿಸಿತು. ರಸ್ತೆಯ ಒಂದು ಪಕ್ಕದಲ್ಲಿ ಜಮುನಾ ಇಕೋ ಪಾರ್ಕ್ ಇತ್ತು. ಇನ್ನೊಂದು ಪಕ್ಕದಲ್ಲಿ ಯಾವುದೋ ಒಂದು ಚಿಕ್ಕ ನದಿ ಜಮುನಾ ನದಿಯನ್ನು ಬಂದು ಸೇರುತ್ತಿತ್ತು. ಹೆದ್ದಾರಿಗೆ ನಿರ್ಮಾಣ ಮಾಡಲಾಗಿದ್ದ ಸೇತುವೆ ಅದೆಷ್ಟೋ ದೂರವಿದ್ದಂತೆ ಕಾಣಿಸುತ್ತಿತ್ತು. ನದಿಯ ಮೇಲಿನಿಂದ ಬೀಸಿ ಬರುತ್ತಿದ್ದ ಗಾಳಿ ಸುಂಯ್ ಎಂದು ಶಬ್ದ ಮಾಡುತ್ತಿತ್ತು.
           ನಿಧಾನವಾಗಿ ಹೆಜ್ಜೆ ಹಾಕಿದರು. ಜಮುನಾ ನದಿಯ ನಟ್ಟ ನಡುವೆಯೆಲ್ಲೋ ನೀರಿನ ಸೆಳವು ಇರಬೇಕು. ಸೇತುವೆ ಮೇಲಿನಿಂದ ಕಾಣುತ್ತಿತ್ತು. ಉಳಿದಂತೆ ನೀರು ನಿಂತಂತೆ ಇತ್ತು. ಆದರೆ ನದಿ ಸಾಕಷ್ಟು ಆಳವಾಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿತ್ತು. ಮುಂದೆ ಮುಂದೆ ಸಾಗಿದಂತೆಲ್ಲ ನದಿಯ ಅಗಾಧತೆ ಇವರನ್ನು ಸೆಳೆಯಿತು. ವಿನಯಚಂದ್ರ `ಆಹ್.. ಈ ನದಿಯ ಸಮ್ಮುಖದಲ್ಲಿ ನಾನು ಕವಿಯಾಗೋಣ, ಸುಮ್ಮನೆ ಕಳೆದುಹೋಗೋಣ ಎನ್ನಿಸುತ್ತಿದೆ. ನಮ್ಮೂರ ಸನಿಹ ಹರಿಯುವ ಅಘನಾಶಿನಿ ನದಿಯಲ್ಲಿ ಈಜಿದ್ದೆ. ಈ ನದಿಯಲ್ಲಿಯೂ ಈಜಬೇಕು ಅಂತ ಮನಸ್ಸಾಗುತ್ತಿದೆ..' ಎಂದ.
         `ಅಂತ ಹುಚ್ಚು ಸಾಹಸಕ್ಕೆ ಕೈ ಹಾಕಬೇಡ ಮಾರಾಯಾ.. ಈ ನದಿಯಲ್ಲಿ ಈಜುವುದು ಅಷ್ಟು ಸುಲಭವಲ್ಲ. ನದಿ ಮಧ್ಯದಲ್ಲಿ ಭಾರಿ ಸೆಳವಿದೆ. ಒಂದೇ ಏಟಿಗೆ ಕೊಚ್ಚಿಕೊಂಡು ಹೋಗುತ್ತದೆ. ಎಂತಹ ನುರಿತ ಈಜುಗಾರನಿದ್ದರೂ ಅವನನ್ನು ತನ್ನೊಳಗೆ ಎಳೆದುಕೊಂಡು ಜಲಸಮಾಧಿ ಮಾಡುವ ತಾಕತ್ತು ಜಮುನೆಗಿದೆ. ಈಜುವವರು ಅತ್ಲಾಗಿರಲಿ ಬಾಂಗ್ಲಾದಲ್ಲಿ ದೊಡ್ಡ ದೊಡ್ಡ ದೋಣಿಗಳನ್ನು ಸಂಚಾರಕ್ಕಾಗಿ ಬಳಕೆ ಮಾಡಲಾಗುತ್ತದೆ. ಅವನ್ನು ತನ್ನ ಒಡಲೊಳಗೆ ಎಳೆದುಕೊಂಡು ಬಿಡುತ್ತಾಳೆ ಈಕೆ. ಅದಕ್ಕಾಗಿಯೇ ವಿಶ್ವದಲ್ಲಿ ಅಮೇಝಾನ್ ನದಿಯನ್ನು ಬಿಟ್ಟರೆ ಅತ್ಯಂತ ಹೆಚ್ಚು ದೋಣಿ ದುರಂತಗಳು ಸಂಭವಿಸುವುದು ಬಾಂಗ್ಲಾದಲ್ಲಿ. ಅದೂ ಕೂಡ ಇದೇ ನದಿಯಲ್ಲಿ. ಒಂದೊಂದು ದೋಣಿಯಲ್ಲೂ ನೂರಿನ್ನೂರು ಜನ ಪ್ರಯಾಣ ಮಾಡುತ್ತಾರೆ. ದೋಣಿ ಮುಳುಗಿದಾಗ ಅವರಲ್ಲಿ ಒಂದಿಬ್ಬರು ಬದುಕಿ ಉಳಿದರೂ ಪವಾಡವೇ..' ಎಂದಳು.
            `ಹುಂ..' ಎಂದು ಸುಮ್ಮನಾದ ವಿನಯಚಂದ್ರ ಸುಮ್ಮನೆ ನಡೆಯತೊಡಗಿದ. ಕೆಲ ಹೊತ್ತಿನ ಬಳಿಕ `ಈ ಸೇತುವೆ ಬಹಳ ಚನ್ನಾಗಿದೆ ಕಣೆ. ಸಾಕಷ್ಟು ಆಧುನಿಕವೂ ಹೌದು. ಎರಡೂ ಪಕ್ಕದಲ್ಲಿ ಲೈಟ್. ದೊಡ್ಡ ದೊಡ್ಡ ವಿದ್ಯುತ್ ಕಂಬಗಳು, ಪಕ್ಕದಲ್ಲಿ ರೈಲ್ವೆ ಮಾರ್ಗ ಕೂಡ ಇದೆ. ಬಂಗಬಂಧು.. ಸೇತುವೆಯ ಹೆಸರೂ ಚನ್ನಾಗಿದೆ...' ಎಂದ.
            `ಹೌದು.. ಬಾಂಗ್ಲಾ ದೇಶದ ಎರಡು ಪ್ರಮುಖ ಭಾಗಗಳನ್ನು ಒಂದುಗೂಡಿಸುವ ಸೇತುವೆ ಇದು. ಅದಕ್ಕೇ ಈ ಹೆಸರಿದೆ. ತೀರಾ ಇತ್ತೀಚಿನ ದಿನಗಳಲ್ಲಿ ಈ ಸೇತುವೆಯ ಮೂಲಕ ಪ್ರವಾಸೋದ್ಯಮವನ್ನೂ ಕೈಗೊಳ್ಳಲಾಗುತ್ತಿದೆ. ರಾತ್ರಿ ವೇಳೆ ಲೈಟ್ ಹಾಕುತ್ತಾರಲ್ಲ.. ಅದನ್ನು ನೋಡಲೆಂದೇ ದೂರ ದೂರದ ಪ್ರದೇಶದಿಂದ ಜನರು ಬರುತ್ತಾರೆ. ಆದರೆ ಇವತ್ತು ಲೈಟ್ ಹಾಕುತ್ತಾರೋ ಇಲ್ಲವೋ ಗೊತ್ತಿಲ್ಲ. ನಾಡಿನ ತುಂಬೆಲ್ಲ ಹಿಂಸಾಚಾರ ಭುಗಿಲೆದ್ದಿದೆ. ಇವತ್ತು ಈ ಸೇತುವೆಯ ಮೇಲೆ ವಿದ್ಯುದ್ದೀಪಗಳು ಉರಿದರೆ ಅಚ್ಚರಿ ಎನ್ನಬಹುದು...' ಎಂದಳು.
           ಸೂರ್ಯ ಅದಾಗಲೇ ಬಾನಿನ ಅಂಚಿಗೆ ಜಾರಿದ್ದ. ಪಡುವಣ ಬಾನು ಆಗಲೇ ಕೆಂಪಾಗಿ ನಾಚಿತ್ತು. `ನಿಮ್ಮ ಬಾಂಗ್ಲಾ ಸರ್ಕಾರ ಲೈಟ್ ಹಾಕದಿದ್ದರೆ ಏನಂತೆ.. ಅದೋ ನೋಡು ಬಾನಲ್ಲಿ ಸೂರ್ಯ ಕೆಂಪಾಗಿದ್ದಾನೆ. ಆತನೇ ನಮ್ಮ ಪಾಲಿಗೆ ಬಹುದೊಡ್ಡ ಲೈಟ್. ಸೇತುವೆ ದಾಟುತ್ತಿರುವ ಪ್ರೇಮಿಗಳನ್ನು ನೋಡಿ ಆತ ನಾಚಿಬಿಟ್ಟಿದ್ದಾನೆ. ನೋಡು ಆತನ ಮುಖ ಅದೆಷ್ಟು ಕೆಂಪಾಗಿದೆ ಅಂತ..' ಎಂದ ವಿನಯಚಂದ್ರ.
          `ಹೂಂ... ನೀನು ಕವಿಯಾಗುತ್ತಿದ್ದೀಯಾ... ಓ ದೇವರೆ...' ಎಂದಳು.. ಹಾಗೆಂದವಳೇ ವಿನಯಚಂದ್ರನ ಕೆನ್ನೆಗೊಂದು ಮುತ್ತನ್ನು ನೀಡಿದಳು. ವಿನಯಚಂದ್ರ ಒಮ್ಮೆ ಅಚ್ಚರಿಗೊಂಡ. `ಆಹಾ.. ಇಂತಹ ಮುತ್ತುಗಳು ಸಿಗುತ್ತದೆ ಅಂತಾದರೆ ಮತ್ತಷ್ಟು ಒಳ್ಳೊಳ್ಳೆಯ ಸಾಲುಗಳನ್ನು ನಾನು ಪುಂಖಾನುಪುಂಖವಾಗಿ ಹೇಳುವಂತೆ ಮಾಡು ದೇವರೆ..' ಎಂದು ಬೇಡಿಕೊಂಡ. ಮಧುಮಿತಾಳನ್ನು ನೋಡಿ ಕಣ್ಣುಮಿಟುಕಿಸಿದ. ಮಧುಮಿತಾ ವಿನಯಚಂದ್ರನನ್ನು ಹಿತವಾಗಿ ಜಿಗುಟಿದಳು.
(ಬಂಗಬಂಧು ಸೇತುವೆಯ ಇನ್ನೊಂದು ನೋಟ)
             ನದಿ ಮಧ್ಯದ ದ್ವೀಪ ಅಷ್ಟರಲ್ಲಿ ಇವರಿಗೆ ಕಾಣಿಸಿತು. ಮೂರ್ನಾಲ್ಕು ಕಿಲೋಮೀಟರ್ ವಿಸ್ತಾರವಾದ ದ್ವೀಪವಿರಬೇಕು ಅದು. ಕೆಲವು ಮನೆಗಳೂ ಇದ್ದವು. ವಿಸ್ತಾರವಾದ ಗದ್ದೆ ಬಯಲಿತ್ತು. ಗದ್ದೆಯಲ್ಲಿ ಅದಾಗಲೆ ಬೆಳೆದಿದ್ದ ಬೆಳೆಗಳು ಕಟಾವಿಗೆ ಬಂದು ನಿಂತಿದ್ದವು. ಭತ್ತ, ರಾಗಿ, ಜೋಳಗಳು ಎಲ್ಲೆಂದರಲ್ಲಿ ತುಂಬಿದ್ದವು. `ಮಧು.. ಇಲ್ಲಿ ಜಮೀನು ಸಿಗುತ್ತಾ ಕೇಳಬೇಕು.. ನಾಲ್ಕೆಕರೆ ಜಮೀನು ತಗೊಂಡು ಇಲ್ಲಿ ವಾಸ ಮಾಡೋಣವಾ..?' ವಿನಯಚಂದ್ರ ತಮಾಷೆ ಮಾಡಿದ್ದ.
           `ಬೇಡ ಮಾರಾಯಾ.. ಅಂತಹ ಕೆಲಸ ಮಾಡಬೇಡ. ಈಗ ನಿನಗೆ ಇದು ಸ್ವರ್ಗ. ಮಳೆಗಾಲದಲ್ಲಿ ಇದೆಲ್ಲ ನೀರಿನಡಿ ಮುಳುಗಿರುತ್ತದೆ. ನೀನೂ ಇರುವುದಿಲ್ಲ. ನಿನ್ನ ಜಮೀನೂ ಇರುವುದಿಲ್ಲ.. ಅಂತಹ ಆಲೋಚನೆ ಮಾಡೋದೇ ಬೇಡ..' ಎಂದಳು.
             `ಮಳೆಗಾಲ ಕಳೆದಾಗ ನಮ್ಮದಾಗುವ, ಮಳೆಗಾಲ ಬಂದಾಗ ಸರ್ಕಾರ ನೋಡಿಕೊಳ್ಳುವಂತಹ ಯೋಜನೆಗಳಿದ್ದರೆ ಹೇಳು ಮಾರಾಯ್ತಿ. ಮಳೆಗಾಲದಲ್ಲಿ ಸರ್ಕಾರಕ್ಕೆ ಈ ಜಮೀನು ವಾಪಾಸು ಕೊಟ್ಟು ಪರಿಹಾರ ಪಡೆದುಕೊಳ್ಳೋಣ. ಬೇಸಿಗೆ ಬಂದ ತಕ್ಷಣ ವಾಪಾಸು ಬಂದು ಬೇಸಾಯ ಮಾಡೋಣ..' ಎಂದ ವಿನಯಚಂದ್ರ. `ಸಾಕು ಸುಮ್ಮನೆ ಬಾರೋ..' ಎಂದು ಆತನ ಕೈ ಹಿಡಿದು ಮುಂದಕ್ಕೆ ಎಳೆದುಕೊಂಡು ಹೊರಟಳು. ವಿನಯಚಂದ್ರ ನಗುತ್ತಿದ್ದ.
           ಆ ದ್ವೀಪದ ಮಧ್ಯದಲ್ಲೊಂದು ಕಾರ್ಖಾನೆಯಿತ್ತು. ಅದ್ಯಾವ ಕಾರ್ಖಾನೆ ಎಂಬುದು ಸ್ಪಷ್ಟವಾಗಲಿಲ್ಲ. ಕಾರ್ಖಾನೆಯ ಸುತ್ತ 25 ಅಡಿಗೂ ಎತ್ತರದ ದಪ್ಪನೆಯ ಸಿಮೆಂಟ್ ಗೋಡೆ ನಿರ್ಮಾಣ ಮಾಡಲಾಗಿತ್ತು. ಕಾರ್ಖಾನೆಯಿಂದ ಹೊಗೆ ಉಗುಳುವ ಚಿಮಣಿಗಳು ಮಾತ್ರ ಕಾಣುತ್ತಿದ್ದವು. `ನೋಡು.. ಆ ಕಾರ್ಖಾನೆಯವರು ನದಿಯ ಪ್ರವಾಹದ ನೀರನ್ನು ತಡೆಯುವ ಸಲುವಾಗಿ ಏನೆಲ್ಲ ಪ್ರಯತ್ನ ಮಾಡಿಕೊಂಡಿದ್ದಾರೆ. ಆದರೂ ಮಳೆಗಾಲದಲ್ಲಿ ಅಲ್ಲಿ ನೀರು ನುಗ್ಗುವುದು ಮಾತ್ರ ತಪ್ಪಿಲ್ಲ..' ಎಂದಳು ಮಧುಮಿತಾ. ಬೆರಗಿನಿಂದ ನೋಡಿದ ವಿನಯಚಂದ್ರ ಮುಂದಕ್ಕೆ ಹೆಜ್ಜೆ ಹಾಕಿದ.
           ನದಿಯ ನಡುವೆ ಇದ್ದ ದ್ವೀಪ ಕೊನೆಯಾಗುತ್ತ ಬಂದಿತ್ತು. ದ್ವೀಪದ ಆಚೆಗಿನ ಎರಡನೇ ಕವಲು ಮೊದಲಿನ ಕವಲಿನಷ್ಟು ದೊಡ್ಡದಾಗಿರಲಿಲ್ಲ. ಸೆಳವೂ ಅಷ್ಟೊಂದು ಪ್ರಮಾಣದಲ್ಲಿ ಇರಲಿಕ್ಕಿಲ್ಲ ಎಂದುಕೊಂಡ ವಿನಯಚಂದ್ರ. ಎರಡನೇ ಕವಲು ದೊಡ್ಡದಾಗಿರದಿದ್ದ ಕಾರಣ ಬಹುಬೇಗನೆ ಸೇತುವೆಯನ್ನು ದಾಟಿಬಿಟ್ಟರು. ನದಿಯಾಚೆಗೂ ಜಮುನಾ ಇಕೋ ಪಾರ್ಕು ಹಬ್ಬಿತ್ತು. ನದಿಯ ಇಕ್ಕೆಲಗಳಲ್ಲಿದ್ದ ಜೈವಿಕ ಉದ್ಯಾನವನ್ನು ಸರ್ಕಾರ ರಕ್ಷಣೆ ಮಾಡುತ್ತಿತ್ತು. ಈ ಉದ್ಯಾನದಾಚೆ ಟೋಲ್ ನಾಕಾವೊಂದಿತ್ತು. ಸೇತುವೆಯ ಮೇಲೆ ಪ್ರಯಾಣ ಮಾಡುವ ವಾಹನಗಳಿಗೆ ಇಲ್ಲಿ ಟೋಲ್ ಸಂಗ್ರಹ ಮಾಡಲಾಗುತ್ತಿತ್ತು. `ಭಾರತದಂತೆ ಇಲ್ಲೂ ಟೋಲ್ ಸಂಗ್ರಹವಿದೆ..' ಎಂದುಕೊಂಡ ವಿನಯಚಂದ್ರ.
             `ವಿನೂ ನಾವೀಗ ಸಿರಾಜ್ ಗಂಜ್ ವಲಯದಲ್ಲಿದ್ದೇವೆ. ನಾವಿಲ್ಲಿಂದ ಸಿರಾಜ್ಗಂಜ್ ತಲುಪುವುದು ಬೇಡ. ಬದಲಾಗಿ ನೇರವಾಗಿ ಬೋಗ್ರಾಕ್ಕೆ ಹೋಗೋಣ. ಅಲ್ಲಿಂದ ರಂಗಪುರಕ್ಕೆ ಪ್ರಯಾಣ ಮಾಡೋಣ. ಅಲ್ಲಿಂದ ಭಾರತದ ಗಡಿಯನ್ನು ತಲುಪುವುದು ಸುಲಭವಾಗುತ್ತದೆ.. ಬೋಗ್ರಾ ಅಜಮಾಸು 50 ಕಿ,ಮಿ ಆಗಬಹುದು. ಅಲ್ಲಿಂದ 50 ಕಿ.ಮಿ ಅಂತರದಲ್ಲಿ ರಂಗಪುರವಿದೆ ' ಎಂದಳು ಮಧುಮಿತಾ. ಅದಕ್ಕೆ ಒಪ್ಪಿಗೆ ಸೂಚಿಸಿದ ವಿನಯಚಂದ್ರ. ಆಗಲೇ ಸೂರ್ಯ ಪಡುವಣದ ಬಾನಿನಲ್ಲಿ ಮುಳುಗಿಬಿಟ್ಟಿದ್ದ. ನಿಧಾನವಾಗಿ ಕತ್ತಲು ಆವರಿಸಿಬಿಟ್ಟಿತ್ತು. ಆ ರಾತ್ರಿ ಪ್ರಯಾಣ ಮಾಡುವುದೋ ಬೇಡವೋ ಎನ್ನುವ ಸಂದಿಗ್ಧತೆ ಇಬ್ಬರಲ್ಲೂ ಮನೆಮಾಡಿತು. ಸಾಧ್ಯವಾದಷ್ಟು ದೂರ ಸಾಗುವುದೇ ಸೂಕ್ತ. ವಾಹನ ಸಿಕ್ಕರೆ ಅದರಲ್ಲಿ ಹೋಗುವುದು ಇಲ್ಲವಾದರೆ ಕಾಲ್ನಡಿಗೆಯಲ್ಲಿ ಮುಂದೆ ಸಾಗುವುದು ಎಂದು ನಿರ್ಧರಿಸಿದರು ಇಬ್ಬರೂ. ಕೆಲನಿಮಿಷಗಳ ಪ್ರಯಾಣದ ನಂತರ ಸೈದಾಬಾದ್ ಎಂಬ ಗ್ರಾಮ ಸಿಕ್ಕಿತು. ಅಲ್ಲಿಂದ ಸಿರಾಜ್ ಗಂಜಿಗೆ ತೆರಳಲು ರಸ್ತೆ ಕವಲೊಡೆಯುತ್ತದೆ. ಅಲ್ಲೊಂದಷ್ಟು ಹೊಟೆಲುಗಳಿದ್ದವು. ಆದರೆ ಯಾವುದೂ ಬಾಗಿಲು ತೆಗೆದಿರಲಿಲ್ಲ. ಹೊಟೆಲಿನ ಕಟ್ಟೆಯ ಮೇಲೆ ಕೆಲಕಾಲ ದಣಿವಾರಿಸಿಕೊಂಡು ಮತ್ತೆ ಮುಂದಕ್ಕೆ ಸಾಗಿದರು.

(ಮುಂದುವರಿಯುತ್ತದೆ..)

ಇನ್ನೊಂದಿಷ್ಟು ಹನಿಗವಿತೆಗಳು

ಕೀರ್ತನದ ಪರಿಣಾಮ

ಅದೊಂದು ಕಾರ್ಯಕ್ರಮ ಕೀರ್ತನ
ಮಾಡುತ್ತಿದ್ದರು ಅಲ್ಲಿ ಗಾಯನ |
ನೋಡಿದರೆ ಕುಳಿತವರ ಮುಖ
ಹೋಗುವಂತಿತ್ತು ಪ್ರಾಣ ||

**

ಬೇಗ-ಭಾಗ

ದೇಶದಲ್ಲಿ ಹುಡುಕಿದರೀಗ
ಸಿಗುವುದು ತುಂಡುನೋಟಿನ ಭಾಗ |
ಜೊತೆಗೆ ಕಾಣುವುದು ನಕಲಿಯ
ತೆಲಗಿ, ರೋಶನ್ ಬೇಗ ||

(ಕರೀಂ ಲಾಲಾ ತೆಲಗಿಯ ನಕಲಿ ಛಾಪಾ ಕಾಗದದ ಹಗರಣದ ಸಂದರ್ದಭಲ್ಲಿ ಬರೆದಿದ್ದು)

**

ಮಚ್ಚು-ಹುಚ್ಚು

ಇತ್ತಿಚಿನ
ಕನ್ನಡದ ಚಲನಚಿತ್ರಗಳಲ್ಲಿ
ಹೆಚ್ಚುತ್ತಿದೆ ಲಾಂಗು-ಮಚ್ಚು |
ಹಾಗಾಗಿ ನೋಡಿದವನಿಗೆ
ಹಿಡಿಯುತ್ತಿದೆ ಹುಚ್ಚು ||

**

ಹುಚ್ಚು

ಭೂಮಿಯ ಮೇಲೆ
ಎಲ್ಲರಿಗೂ ಹಿಡಿದಿದೆ ಹುಚ್ಚು |
ಅದರಲ್ಲೂ, ಮೆಗಾ
ಸೀರಿಯಲ್ ನೋಡುವವರಿಗೆ
ತುಸು ಹೆಚ್ಚು ||

**

ಕಾಸು-ಲಾಸು

ಒಂದಾನೊಂದು ಕಾಲದಲ್ಲಿ
ಸಿಗುತ್ತಿತ್ತು ವೆನಿಲ್ಲಾ ಬೆಳೆದರೆ
ಕಾಸು |
ಈಗೇನಿದ್ದರೂ ಬರೀ ಲಾಸು ||

***