Saturday, October 11, 2014

ಪ್ಯಾಟೆ ದನಗಳ ಹಳ್ಳಿ ಲೈಪು

ಒಂದು ದಿನ ಪೇಟೆಯ ದನಗಳು
ಹಳ್ಳಿಯ ಕಡೆಗೆ ವಲಸೆ ಹೊರಟವು |
ಪೇಟೆ ಬೇಜಾರಾಗಿಬಿಟ್ಟಿದೆ
ಹಳ್ಳಿ ಬದುಕು ಮಜಾ ಮಾಡೋಣ
ಎಂದು ಧಾವಿಸಿದವು |

ಹಳ್ಳಿಗೇನೋ ಬಂದೇಬಿಟ್ಟವು
ಎಲ್ಲವೂ ಚಿತ್ರ ವಿಚಿತ್ರ |
ಹಳ್ಳಿಯಲ್ಲೂ ದನಗಳಿವೆ
ಬಡಕಲು ಶರೀರಿ ಸಾಧು |
ಪೊಗರು ಮಾಡೋದಿಲ್ಲ |
ಅಲ್ಲೆಲ್ಲೋ ವಾಹನ ಬಂದರೂ
ದೂರಕೆ ಓಡ್ತಾವಲ್ಲ ||

ನಮ್ಮಲ್ಲೆಲ್ಲೂ ಹಂಗೇನಿಲ್ಲ..
ಗಾಡಿಯ ಸದ್ದಿಗೆ ಹೆದರೋದಿಲ್ಲ
ಉಜ್ಜಿಕೊಂಡೇ ಸಾಗುವವರು ನಾವು |
ಬೇಕಾದ್ರೆ ಜೀವ
ಉಳಿಸ್ಕೋಬೇಕು ನೀವು ||

ಹಳ್ಳಿದನಗಳು ತಿಂತಾವಂತೆ
ಅದೇನೋ ಹಸಿರು ಹುಲ್ಲು |
ನಮ್ ಬಾಯಿಗೆ ಅದು ರುಚಿಸೋದಿಲ್ಲ
ಹುಲ್ಲಿನ ರುಚಿ ಗೊತ್ತೇ ಇಲ್ಲ |
ನಮ್ಮದೇನಿದ್ರೂ ಪ್ಲಾಸ್ಟೀಕ್ ಚೀಲ
ಗೋಡೆಮೇಲಿನ ಕಾಗದ ಎಲ್ಲೋ ||

ನಗರದ ಹಸುಗಳು ನಾವೇನಿದ್ದರು
ನೋಡಲು ದಷ್ಟಪುಷ್ಟ |
ಹಳ್ಳಿ ಹಸುಗಳು ಎಲುಬು ಚಕ್ಕಳ
ಪಾಪ ಕಷ್ಟ ಕಷ್ಟ ||

ನಗರದ ತುಂಬ ನಾವೇ ರಾಜರು
ಬಿಡಾಡಿ ದನಗಳು ನಾವು |
ಕೇಳೋರಿಲ್ಲ ಕಟ್ಟೋರಿಲ್ಲ
ಸ್ವರ್ವ ಸ್ವತಂತ್ರರ ತಾವು |

ಹಳ್ಳಿ ದನಗಳಿಗೆ ಹಗ್ಗದ ಬಂಧನ
ಬಿಚ್ಚಲೆ ಬೇಕು ಹಗ್ಗ |
ಕಟ್ಟ ಬೇಕು, ಅಟ್ಟಬೇಕು
ಸ್ವಾತಂತ್ರ್ಯವೇ ಇಲ್ಲ ||

ನಗರದ ಬೀದಿಯು ನಮಗೆ ಜಗತ್ತು
ನಮಗ್ಯಾರ ಹಂಗಿಲ್ಲ |
ಓಡಿದರೂನೂ ಕುಣಿದರೂನೂ
ನಮ್ಮನು ಕೇಳೋರಿಲ್ಲ ||

ರಸ್ತೆಯೇ ನಮ್ಮ ಮನೆ
ರಸ್ತೆಯೇ ಹಾಸಿಗೆ
ಹಳ್ಳೀಲಿ ಹೀಗೇನಿಲ್ಲ |
ಕೊಟ್ಟಿಗೆಯಂತೆ ಕಟ್ಟಿ ಹಾಕುವರು
ಕುತ್ತಿಗೆಗೊಂದು ಹಗ್ಗ ||
ಹೊಟ್ಟೆಗೆ ಅಷ್ಟು ಹುಲ್ಲು, ನೀರು
ಹಾಲಿನ ಬಯಕೆ ಪಕ್ಕಾ ||

ಹಳ್ಳಿ ದನಗಳು ಹಾಲನು ಕೊಡದಿರೆ
ಬೆನ್ನಿನ ಮೇಲೆ ಏಟು |
ಅಯ್ಯೋ ಪಾಪ ಅವರ ಪಾಡು
ರೂಪಾಯಿ ಲೆಕ್ಕದ ನೋಟು ||

ನಮ್ಮ ಬದುಕು ನಮಗೆ ಚೆಂದ
ಹಳ್ಳಿ ಬದುಕು ಕಷ್ಟ.
ವಯಸ್ಸಾದರೆ ಕಟುಕನ ಮನೆಗೆ
ಅಟ್ಟುವುದೇ ಪಕ್ಕ ||

ಬೇಡವೇ ಬೇಡ ಹಳ್ಳಿ ಬದುಕು
ಎಂದವು ನಗರದ ಹಸುಗಳು
ಹಳ್ಳಿಗಿಂತ ನಗರವೇ ವಾಸಿ
ಎನ್ನುತ ನಗರಕೆ ಮರಳಿದವು |
ಹಳ್ಳಿ ಬದುಕಿಗೆ ಹೆದರಿದವು |
ಮತ್ತೆ ನಗರಕೆ ಓಡಿದವು ||

Friday, October 10, 2014

ಬೆಂಗಾಲಿ ಸುಂದರಿ-31

(ಜಮುನಾ ನದಿಯ ಬಂಗಬಂಧು ಸೇತುವೆ)
           ಏಲೆಂಗಾದ ಹೊರವಲಯವನ್ನು ತಲುಪುವಷ್ಟರಲ್ಲಿ ಸಂಜೆಯಾಗತೊಡಗಿತ್ತು. ಕತ್ತಲೆಯ ಕಾವಳ ನಿಧಾನಕ್ಕೆ ಸುರಿಯಲು ಆರಂಭವೂ ಆಗಿತ್ತು. ಮುಂದಕ್ಕೆ ಸಾಗಲು ಯಾವುದಾದರೂ ವಾಹನ ಸಿಗಬಹುದೇ ಎನ್ನುವ ನಿರೀಕ್ಷೆಯಲ್ಲಿಯೇ ಹೆಜ್ಜೆಯನ್ನು ಹಾಕುತ್ತಿದ್ದರು. ಇವರ ಅದೃಷ್ಟವೋ ಎಂಬಂತೆ ಸರಕು ಸಾಗಣೆಯ ಆಟೋ ರಿಕ್ಷಾವೊಂದು ಅದೇ ಮಾರ್ಗವಾಗಿ ಬಂದಿತು. ವಿನಯಚಂದ್ರ ಕೈಮಾಡಿ ಅದನ್ನು ನಿಲ್ಲಿಸಿದ. ಆ ಆಟೋದವನು ತಾನು ಜಮುನಾ ಇಕೋ ಪಾರ್ಕಿನ ಸಮೀಪ ತೆರಳುತ್ತಿದ್ದೇನೆ. ಅಲ್ಲಿಯವರೆಗೆ ಕರೆದುಕೊಂಡು ಹೋಗುವುದಾಗಿ ತಿಳಿಸಿದ. ಅಲ್ಲಿಯ ತನಕ ಸಾಗಿದರೆ ಗಮ್ಯ ಮತ್ತಷ್ಟು ಸನಿಹವಾಗುತ್ತದೆ ಎಂದುಕೊಂಡು ಆಟೋ ಏರಲು ಮುಂದಾದರು. ಹಿಂಭಾಗದಲ್ಲಿ ಹತ್ತಿ ಎಂದ. ಹಿಂದಕ್ಕೆ ಸಾಗಿದರೆ ವಾಹನದ ತುಂಬೆಲ್ಲ ಕೋಳಿಪಂಜರಗಳಿದ್ದವು. ಕೋಳಿಗಳ ಕೂಗು, ಮರಿಗಳ ಕಿಂಯೋ ಪಿಂಯೋ ಸದ್ದು ಜೊತೆಯಲ್ಲಿ ಅವುಗಳ ಹಿಕ್ಕೆಯ ಗಬ್ಬು ವಾಸನೆ. ಆಟೋ ಏರಲೋ ಬೇಡವೋ ಎನ್ನುವ ಅನುಮಾನ ಇಬ್ಬರಲ್ಲೂ ಒಮ್ಮೆ ಮನೆಮಾಡಿತು. ಆದರೆ ಈ ಗಾಡಿಯನ್ನು ತಪ್ಪಿಸಿಕೊಂಡರೆ ಮತ್ತೆ 20-25 ಕಿ.ಮಿ ಸುಮ್ಮನೆ ನಡೆಯಬೇಕಲ್ಲ. ಇಬ್ಬರ ಕಾಲೂ ಮತ್ತೆ ನಡೆಯಲಾರೆವು ಎಂದು ಹೇಳುತ್ತಲಿತ್ತು. ಹಿಂಬದಿಯಲ್ಲಿದ್ದ ಕೊಂಚ ಜಾಗದಲ್ಲೇ ಹತ್ತಿ ನಿಂತುಕೊಂಕೊಂಡರು.
           ಯಾವ ಕಾಲದ್ದೋ ಆಟೋ. ನಿಧಾನವಾಗಿ ಸಾಗುತ್ತಿತ್ತು. ಶಬ್ದವನ್ನು ಮಾಡುತ್ತಿದ್ದ ಅಬ್ಬರ ವೇಗಕ್ಕೆ ಇರಲಿಲ್ಲ. ಹಿಂಬದಿ ಕುಳಿತವರಿಗೆ ಆಟೋದ ರೌರವ ಸದ್ದು, ಅದು ಹೊರ ಸೂಸುತ್ತಿದ್ದ ಹೊಗೆ, ಕೋಳಿ ಹಿಕ್ಕೆಯ ವಾಸನೆಯ ಜೊತೆಗೆ ಮಿಶ್ರವಾಗಿ ಹೇಳಿಕೊಳ್ಳಲಾಗದಂತಹ ಯಾತನೆ ಆರಂಭವಾಯಿತು. ಇಬ್ಬರಿಗೂ ಹೊಟ್ಟೆ ತೊಳೆಸಲು ಆರಂಭವಾಯಿತು. ಆಟೋದಿಂದ ತಲೆಯನ್ನು ಹೊರಕ್ಕೆ ಹಾಕಿ ಶುದ್ಧ ಗಾಳಿ ಸಿಗುತ್ತದೆಯೇ ಎಂದು ಪ್ರಯತ್ನಿಸಿದರು. ಆಟೋ, ಕೋಳಿಗಳ ಹಿಕ್ಕೆಯ ವಾಸನೆಯ ಎದುರು ಅವರ ಪ್ರಯತ್ನ ವಿಫಲವಾಯಿತು ಎಂದೇ ಹೇಳಬಹುದು. ರಸ್ತೆಯ ಇಕ್ಕೆಲಗಳಲ್ಲಿ ಗದ್ದೆಯ ಬಯಲು ಕಡಿಮೆಯಾಗುತ್ತಲಿತ್ತು. ಅಲ್ಲಲ್ಲಿ ಕುರುಚಲು ಕುರುಚಲು ಮರಗಳು, ಪೊದೆಗಳು ಕಾಣಲು ಆರಂಭಿಸಿದ್ದವು. ವಾತಾವರಣ ಮತ್ತಷ್ಟು ಹಸಿರಾಗಲು ಆರಂಭಿಸಿತ್ತು. ಹತ್ತಿರದಲ್ಲೇ ನದಿಯಿದೆ ಎಂದುಕೊಂಡ ವಿನಯಚಂದ್ರ.
         `ವಿನು.. ಈಗ ನಾವು ದೊಡ್ಡದೊಂದು ಸೇತುವೆ ದಾಟಬೇಕಿದೆ. ಬ್ರಹ್ಮಪುತ್ರಾ ನದಿ ಸೇತುವೆ. ಅದಕ್ಕೆ ಇಲ್ಲಿ ಜಮುನಾ ನದಿ ಎಂದು ಕರೆಯುತ್ತಾರೆ. ಸೇತುವೆ ಬಹು ದೀರ್ಘವಾಗಿದೆ. ನಾನು ಚಿಕ್ಕಂದಿನಲ್ಲಿ ಶಾಲಾ ಪ್ರವಾಸಕ್ಕೆ ಈ ಸೇತುವೆ ನೋಡಲು ಬಂದಿದ್ದೆ. ಸೇತುವೆಯ ಮಧ್ಯದಲ್ಲಿ ನಿಂತು ತೂರಿ ಬರುವ ಗಾಳಿಗೆ ಮುಖ ಕೊಟ್ಟರೆ ಆಹಾ.. ಎಂತ ಆನಂದ ಅಂತೀಯಾ.. ನದಿಯ ಮಧ್ಯದಲ್ಲೊಂದು ದ್ವೀಪವಿದೆ. ಅಲ್ಲೊಂದಷ್ಟು ಮನೆಗಳಿವೆ. ಗದ್ದೆಗಳೂ ಇವೆ. ಮಳೆಗಾಲ ಬಂತೆಂದರೆ ಆ ದ್ವೀಪ ಮುಳುಗಿ ಹೋಗುತ್ತದೆ. ಅಷ್ಟಲ್ಲದೇ ನದಿಯಲ್ಲಿ ಪ್ರವಾಹ ಏರಿ ಇಕ್ಕೆಲಗಳ ಹತ್ತಿಪ್ಪತ್ತು ಕಿಲೋಮೀಟರ್ ಗಳನ್ನು ಮುಳುಗಿಸಿಬಿಡುತ್ತದೆ. ಆಗ ಬಾಂಗ್ಲಾ ಎನ್ನುವುದು ಅಕ್ಷರಶಃ ನರಕ. ಎಲ್ಲೆಲ್ಲೂ ನೀರು. ನೂರಾರು ಮೈಲುಗಳ ವರೆಗೆ ನೀರು ನಿಂತಿದೆಯೇನೋ ಎನ್ನುವಂತೆ ಭಾಸವಾಗುತ್ತದೆ ನೋಡು' ಎಂದಳು ಮಧುಮಿತಾ. ವಿನಯಚಂದ್ರ ಹೂಂ ಅಂದ.
         `1971ರಲ್ಲಿ ಸಂದರ್ಭದಲ್ಲಿ ನದಿಗೆ ಸೇತುವೆ ಇರಲಿಲ್ಲ. 1990ರ ದಶಕದಲ್ಲಿ ನಿರ್ಮಾಣ ಮಾಡಲಾಗಿದೆ. ಈ ಸೆತುವೆಯಂನ್ನೇ ಬಂಗಬಂಧು ಸೇತುವೆ ಎಂದು ಕರೆಯಲಾಗುತ್ತದೆ. ಬಾಂಗ್ಲಾದ ಬಹುದೊಡ್ಡ ಸೇತುವೆಗಳಲ್ಲಿ ಇದೂ ಒಂದು. ರಾತ್ರಿಯ ವೇಳೆ ಈ ಸೇತುವೆಗೆ ಲೈಟ್ ಹಾಕಲಾಗುತ್ತದೆ. ಆಗ ಎಷ್ಟು ಚಂದ ಕಾಣುತ್ತದೆ ಗೊತ್ತಾ ಇದು..ಓಹ್.. ಪಾಕಿಸ್ತಾನ ಈ ನದಿಯನ್ನು ದಾಟಲು ಬಹಳ ಹರಸಾಹಸ ಮಾಡಿತ್ತು. ಬಾಂಗ್ಲಾದ ಬಡಪಾಯಿ ಜನರೂ ಈ ನದಿಯಿಂದ ಆಗ ಅನುಭವಿಸಿದ ಬವಣೆ ಅಷ್ಟಿಷ್ಟಲ್ಲ. ಬೆನ್ನ ಹಿಂದೆ ಪಾಕಿಸ್ತಾನ ಸೇನೆ ರಣಹದ್ದುಗಳಂತೆ ಬೆನ್ನಟ್ಟಿ ಬರುತ್ತಿದ್ದರೆ ಮುಂದೆ ಈ ನದಿ ಅಡ್ಡಾಗಿತ್ತು. ಅದನ್ನು ದಾಟಲಾಗದೇ ಹಲವರು ಪಾಕಿಸ್ತಾನಿ ಸೇನೆಯ ಫಿರಂಗಿಗಳಿಗೆ, ಬಂದೂಕುಗಳಿಗೆ ಬಲಿಯಾಗಿದ್ದರು. ನದಿಯನ್ನು ಕಷ್ಟಪಟ್ಟು ಈಜಿ ದಾಟಿದ ಕೆಲವೇ ಕೆಲವು ಮಂದಿ ಮುಂದೆ ಬಾಂಗ್ಲಾದ ನದಿಯಾಚೆಗಿನ ಪ್ರದೇಶಕ್ಕೆ ಹೋದರು. ಕೊನೆಗೊಮ್ಮೆ ಭಾರತಕ್ಕೂ ನಿರಾಶ್ರಿತರಾಗಿ ಹೋಗಬೇಕಾಯಿತು. 1971ರ ಸಮಯದಲ್ಲಿ ಈ ನದಿಯಲ್ಲಿ ಉರುಳಿದ ಹೆಣಗಳು ಲಕ್ಷಕ್ಕೂ ಅಧಿಕ ಎಂದು ಅಂದಾಜು ಮಾಡಲಾಗುತ್ತದೆ. ನದಿ ನೀರು ರಕ್ತದಿಂದ ಕೆಂಪಾಗಿ ಹರಿಯುತ್ತಿತ್ತು ಎಂದೂ ಹೇಳುತ್ತಾರೆ. ಬೇಸಿಗೆಯಲ್ಲಿ ತಣ್ಣಗೆ ಹರಿಯುವ ನದಿಯ ಆರ್ಭಟವನ್ನು ನೋಡಬೇಕಾದರೆ ಮಳೆಗಾಲ ಬರಬೇಕು..' ಎಂದಳು.
       ಅಷ್ಟರಲ್ಲಿ ಆಟೋದಲ್ಲಿದ್ದ ಕೋಳಿಗಳ ಕೂಗನ್ನೂ ಮೀರಿಸುವಂತಹ ಕರ್ಕಶ ಧ್ವನಿಯೊಂದು ರಾಗ ರಾಗವಾಗಿ ಕೇಳಿಬರಲಾರಂಭಿಸಿತು. ವಿನಯಚಂದ್ರ ಹಾಗೂ ಮಧುಮಿತಾ ಮೊದ ಮೊದಲು ಬೆಚ್ಚಿದರೂ ಕೊನೆಗೆ ಗಮನವಿಟ್ಟು ಕೇಳಿದಾಗ ಆಟೋ ಡ್ರೈವರ್ ಹಾಡುತ್ತ ಸಾಗುತ್ತಿದ್ದ ಎನ್ನುವುದು ಸ್ಪಷ್ಟವಾಯಿತು. ಮೊದಲೇ ಕಂಗೆಟ್ಟಿದ್ದ ಇವರಿಗೆ ಇನ್ನೊಂದು ಹೊಸ ಬಗೆಯ ಸಮಸ್ಯೆ ಎದುರಾದಂತಾಯಿತು. ಬೆಂಗಾಲಿಯಲ್ಲಿ ಯಾವುದೋ ಹಾಡನ್ನು ತನ್ನ ಲಹರಿಯಲ್ಲಿ ಆ ಡ್ರೈವರ್ ಹಾಡುತ್ತಲೇ ಇದ್ದ. ಯಾವುದೋ ಬೆಂಗಾಲಿ ಸಿನೆಮಾದ್ದಿರಬೇಕು. ತನ್ನ ಖುಷಿಗೆ, ತನ್ನ ಪಾಡಿಗೆ ತಾನು ಹಾಡುತ್ತಿದ್ದ. ಆದರೆ ವಾಹನದ ಹಿಂಬದಿ ಇದ್ದವರು ಮಾತ್ರ ಅದನ್ನು ಕೇಳಲಾರದೇ ತೊಂದರೆ ಪಡುವಂತಾಗಿತ್ತು. ವಿಚಿತ್ರವೆಂದರೆ ಆತ ಹಾಡು ಹೇಳಲು ಆರಂಭಿಸಿದ ನಂತರ ಒಂದೇ ಒಂದು ಕೋಳಿ ಸಹ ಧ್ವನಿಯನ್ನು ಹೊರ ಹಾಕಲಿಲ್ಲ. ಯಾರೋ ಗಪ್ ಚುಪ್ ಎಂದರೋ ಎಂಬಂತೆ ಸುಮ್ಮನೆ ಕುಳಿತಿದ್ದವು.!
         ಅಂತೂ ಇಂತೂ ಒಂದು ತಾಸು ಪ್ರಯಾಣ ಮಾಡಿದ ಬಳಿಕ ಆ ಆಟೋದಿಂದ ಇಳಿಯುವ ಸಮಯ ಬಂದಿತು. ನಡೆದು ಬಂದಿದ್ದರೆ ಇನ್ನಷ್ಟು ಆರಾಮಾಗಿತ್ತೇನೋ ಅನ್ನಿಸಿದ್ದು ಸುಳ್ಳಲ್ಲ. ಜಮುನಾ ಇಕೋ ಪಾರ್ಕಿನ ಪಕ್ಕದ ರಸ್ತೆಯ ಕಡೆಗೆ ಆ ಆಟೋದವನು ತೆರಳುವವನಿದ್ದ. ಮಧುಮಿತಾ ಹಾಗೂ ವಿನಯಚಂದ್ರರಿಂದ ದುಡ್ಡನ್ನು ಪಡೆದು ಮುಂದಕ್ಕೆ ಹೋದ. ಆತ ಅತ್ತ ಹೋದ ನಂತರ ಇವರು ನಿರಾಳರಾದರು. ಜಮುನಾ ನದಿಯಿಂದ ಹಾದು ಬರುತ್ತಿದ್ದ ಶುದ್ಧ ಗಾಳಿಯನ್ನು ಮೂಗರಳಿಸಿ ದೇಹದೊಳಕ್ಕೆ ಎಳೆದುಕೊಂಡರು. ಒಮ್ಮೆ ಹಾಯೆನ್ನಿಸಿತು. ಸ್ನಾನ ಮಾಡಿದ್ದರೆ ಚನ್ನಾಗಿತ್ತು ಎಂದೂ ಅನ್ನಿಸದೇ ಇರಲಿಲ್ಲ.
         ಅಲ್ಲಿಂದ ಜಮುನಾ (ಬ್ರಹ್ಮಪುತ್ರ) ಕಾಣುತ್ತಿತ್ತು.  ಭಾರತದಲ್ಲಿ ಬ್ರಹ್ಮಪುತ್ರ ಎಂದು ಗಂಡು ಹೆಸರಿನಿಂದ ಕರೆಯಲ್ಪಡುವ ನದಿ ಬಾಂಗ್ಲಾ ನಾಡಿನಲ್ಲಿ ಜಮುನಾ ಆಗಿ ಬದಲಾಗುತ್ತದಲ್ಲ ಎನ್ನಿಸಿತು. ಗಂಡು ನದಿ ಇಲ್ಲಿ ಹೆಣ್ಣು ನದಿಯಾಗಿ ಬದಲಾಗುತ್ತದೆಯಲ್ಲ ಎಂದುಕೊಂಡ ವಿನಯಚಂದ್ರ. ರಾತ್ರಿಯಾಗುವುದರೊಳಗೆ ನದಿ ದಾಟಿಬಿಡಬೇಕು ಎಂದುಕೊಂಡು ಮುಂದಕ್ಕೆ ಹೆಜ್ಜೆ ಹಾಕಿದರು. ಕೆಲವೇ ನಿಮಿಷದ ಅವಧಿಯಲ್ಲಿ ಜಮುನಾ ನದಿ ಕಣ್ಣಮುಂದೆ ವಿಸ್ತಾರವಾಗಿ ಕಾಣಿಸಿತು. ರಸ್ತೆಯ ಒಂದು ಪಕ್ಕದಲ್ಲಿ ಜಮುನಾ ಇಕೋ ಪಾರ್ಕ್ ಇತ್ತು. ಇನ್ನೊಂದು ಪಕ್ಕದಲ್ಲಿ ಯಾವುದೋ ಒಂದು ಚಿಕ್ಕ ನದಿ ಜಮುನಾ ನದಿಯನ್ನು ಬಂದು ಸೇರುತ್ತಿತ್ತು. ಹೆದ್ದಾರಿಗೆ ನಿರ್ಮಾಣ ಮಾಡಲಾಗಿದ್ದ ಸೇತುವೆ ಅದೆಷ್ಟೋ ದೂರವಿದ್ದಂತೆ ಕಾಣಿಸುತ್ತಿತ್ತು. ನದಿಯ ಮೇಲಿನಿಂದ ಬೀಸಿ ಬರುತ್ತಿದ್ದ ಗಾಳಿ ಸುಂಯ್ ಎಂದು ಶಬ್ದ ಮಾಡುತ್ತಿತ್ತು.
           ನಿಧಾನವಾಗಿ ಹೆಜ್ಜೆ ಹಾಕಿದರು. ಜಮುನಾ ನದಿಯ ನಟ್ಟ ನಡುವೆಯೆಲ್ಲೋ ನೀರಿನ ಸೆಳವು ಇರಬೇಕು. ಸೇತುವೆ ಮೇಲಿನಿಂದ ಕಾಣುತ್ತಿತ್ತು. ಉಳಿದಂತೆ ನೀರು ನಿಂತಂತೆ ಇತ್ತು. ಆದರೆ ನದಿ ಸಾಕಷ್ಟು ಆಳವಾಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿತ್ತು. ಮುಂದೆ ಮುಂದೆ ಸಾಗಿದಂತೆಲ್ಲ ನದಿಯ ಅಗಾಧತೆ ಇವರನ್ನು ಸೆಳೆಯಿತು. ವಿನಯಚಂದ್ರ `ಆಹ್.. ಈ ನದಿಯ ಸಮ್ಮುಖದಲ್ಲಿ ನಾನು ಕವಿಯಾಗೋಣ, ಸುಮ್ಮನೆ ಕಳೆದುಹೋಗೋಣ ಎನ್ನಿಸುತ್ತಿದೆ. ನಮ್ಮೂರ ಸನಿಹ ಹರಿಯುವ ಅಘನಾಶಿನಿ ನದಿಯಲ್ಲಿ ಈಜಿದ್ದೆ. ಈ ನದಿಯಲ್ಲಿಯೂ ಈಜಬೇಕು ಅಂತ ಮನಸ್ಸಾಗುತ್ತಿದೆ..' ಎಂದ.
         `ಅಂತ ಹುಚ್ಚು ಸಾಹಸಕ್ಕೆ ಕೈ ಹಾಕಬೇಡ ಮಾರಾಯಾ.. ಈ ನದಿಯಲ್ಲಿ ಈಜುವುದು ಅಷ್ಟು ಸುಲಭವಲ್ಲ. ನದಿ ಮಧ್ಯದಲ್ಲಿ ಭಾರಿ ಸೆಳವಿದೆ. ಒಂದೇ ಏಟಿಗೆ ಕೊಚ್ಚಿಕೊಂಡು ಹೋಗುತ್ತದೆ. ಎಂತಹ ನುರಿತ ಈಜುಗಾರನಿದ್ದರೂ ಅವನನ್ನು ತನ್ನೊಳಗೆ ಎಳೆದುಕೊಂಡು ಜಲಸಮಾಧಿ ಮಾಡುವ ತಾಕತ್ತು ಜಮುನೆಗಿದೆ. ಈಜುವವರು ಅತ್ಲಾಗಿರಲಿ ಬಾಂಗ್ಲಾದಲ್ಲಿ ದೊಡ್ಡ ದೊಡ್ಡ ದೋಣಿಗಳನ್ನು ಸಂಚಾರಕ್ಕಾಗಿ ಬಳಕೆ ಮಾಡಲಾಗುತ್ತದೆ. ಅವನ್ನು ತನ್ನ ಒಡಲೊಳಗೆ ಎಳೆದುಕೊಂಡು ಬಿಡುತ್ತಾಳೆ ಈಕೆ. ಅದಕ್ಕಾಗಿಯೇ ವಿಶ್ವದಲ್ಲಿ ಅಮೇಝಾನ್ ನದಿಯನ್ನು ಬಿಟ್ಟರೆ ಅತ್ಯಂತ ಹೆಚ್ಚು ದೋಣಿ ದುರಂತಗಳು ಸಂಭವಿಸುವುದು ಬಾಂಗ್ಲಾದಲ್ಲಿ. ಅದೂ ಕೂಡ ಇದೇ ನದಿಯಲ್ಲಿ. ಒಂದೊಂದು ದೋಣಿಯಲ್ಲೂ ನೂರಿನ್ನೂರು ಜನ ಪ್ರಯಾಣ ಮಾಡುತ್ತಾರೆ. ದೋಣಿ ಮುಳುಗಿದಾಗ ಅವರಲ್ಲಿ ಒಂದಿಬ್ಬರು ಬದುಕಿ ಉಳಿದರೂ ಪವಾಡವೇ..' ಎಂದಳು.
            `ಹುಂ..' ಎಂದು ಸುಮ್ಮನಾದ ವಿನಯಚಂದ್ರ ಸುಮ್ಮನೆ ನಡೆಯತೊಡಗಿದ. ಕೆಲ ಹೊತ್ತಿನ ಬಳಿಕ `ಈ ಸೇತುವೆ ಬಹಳ ಚನ್ನಾಗಿದೆ ಕಣೆ. ಸಾಕಷ್ಟು ಆಧುನಿಕವೂ ಹೌದು. ಎರಡೂ ಪಕ್ಕದಲ್ಲಿ ಲೈಟ್. ದೊಡ್ಡ ದೊಡ್ಡ ವಿದ್ಯುತ್ ಕಂಬಗಳು, ಪಕ್ಕದಲ್ಲಿ ರೈಲ್ವೆ ಮಾರ್ಗ ಕೂಡ ಇದೆ. ಬಂಗಬಂಧು.. ಸೇತುವೆಯ ಹೆಸರೂ ಚನ್ನಾಗಿದೆ...' ಎಂದ.
            `ಹೌದು.. ಬಾಂಗ್ಲಾ ದೇಶದ ಎರಡು ಪ್ರಮುಖ ಭಾಗಗಳನ್ನು ಒಂದುಗೂಡಿಸುವ ಸೇತುವೆ ಇದು. ಅದಕ್ಕೇ ಈ ಹೆಸರಿದೆ. ತೀರಾ ಇತ್ತೀಚಿನ ದಿನಗಳಲ್ಲಿ ಈ ಸೇತುವೆಯ ಮೂಲಕ ಪ್ರವಾಸೋದ್ಯಮವನ್ನೂ ಕೈಗೊಳ್ಳಲಾಗುತ್ತಿದೆ. ರಾತ್ರಿ ವೇಳೆ ಲೈಟ್ ಹಾಕುತ್ತಾರಲ್ಲ.. ಅದನ್ನು ನೋಡಲೆಂದೇ ದೂರ ದೂರದ ಪ್ರದೇಶದಿಂದ ಜನರು ಬರುತ್ತಾರೆ. ಆದರೆ ಇವತ್ತು ಲೈಟ್ ಹಾಕುತ್ತಾರೋ ಇಲ್ಲವೋ ಗೊತ್ತಿಲ್ಲ. ನಾಡಿನ ತುಂಬೆಲ್ಲ ಹಿಂಸಾಚಾರ ಭುಗಿಲೆದ್ದಿದೆ. ಇವತ್ತು ಈ ಸೇತುವೆಯ ಮೇಲೆ ವಿದ್ಯುದ್ದೀಪಗಳು ಉರಿದರೆ ಅಚ್ಚರಿ ಎನ್ನಬಹುದು...' ಎಂದಳು.
           ಸೂರ್ಯ ಅದಾಗಲೇ ಬಾನಿನ ಅಂಚಿಗೆ ಜಾರಿದ್ದ. ಪಡುವಣ ಬಾನು ಆಗಲೇ ಕೆಂಪಾಗಿ ನಾಚಿತ್ತು. `ನಿಮ್ಮ ಬಾಂಗ್ಲಾ ಸರ್ಕಾರ ಲೈಟ್ ಹಾಕದಿದ್ದರೆ ಏನಂತೆ.. ಅದೋ ನೋಡು ಬಾನಲ್ಲಿ ಸೂರ್ಯ ಕೆಂಪಾಗಿದ್ದಾನೆ. ಆತನೇ ನಮ್ಮ ಪಾಲಿಗೆ ಬಹುದೊಡ್ಡ ಲೈಟ್. ಸೇತುವೆ ದಾಟುತ್ತಿರುವ ಪ್ರೇಮಿಗಳನ್ನು ನೋಡಿ ಆತ ನಾಚಿಬಿಟ್ಟಿದ್ದಾನೆ. ನೋಡು ಆತನ ಮುಖ ಅದೆಷ್ಟು ಕೆಂಪಾಗಿದೆ ಅಂತ..' ಎಂದ ವಿನಯಚಂದ್ರ.
          `ಹೂಂ... ನೀನು ಕವಿಯಾಗುತ್ತಿದ್ದೀಯಾ... ಓ ದೇವರೆ...' ಎಂದಳು.. ಹಾಗೆಂದವಳೇ ವಿನಯಚಂದ್ರನ ಕೆನ್ನೆಗೊಂದು ಮುತ್ತನ್ನು ನೀಡಿದಳು. ವಿನಯಚಂದ್ರ ಒಮ್ಮೆ ಅಚ್ಚರಿಗೊಂಡ. `ಆಹಾ.. ಇಂತಹ ಮುತ್ತುಗಳು ಸಿಗುತ್ತದೆ ಅಂತಾದರೆ ಮತ್ತಷ್ಟು ಒಳ್ಳೊಳ್ಳೆಯ ಸಾಲುಗಳನ್ನು ನಾನು ಪುಂಖಾನುಪುಂಖವಾಗಿ ಹೇಳುವಂತೆ ಮಾಡು ದೇವರೆ..' ಎಂದು ಬೇಡಿಕೊಂಡ. ಮಧುಮಿತಾಳನ್ನು ನೋಡಿ ಕಣ್ಣುಮಿಟುಕಿಸಿದ. ಮಧುಮಿತಾ ವಿನಯಚಂದ್ರನನ್ನು ಹಿತವಾಗಿ ಜಿಗುಟಿದಳು.
(ಬಂಗಬಂಧು ಸೇತುವೆಯ ಇನ್ನೊಂದು ನೋಟ)
             ನದಿ ಮಧ್ಯದ ದ್ವೀಪ ಅಷ್ಟರಲ್ಲಿ ಇವರಿಗೆ ಕಾಣಿಸಿತು. ಮೂರ್ನಾಲ್ಕು ಕಿಲೋಮೀಟರ್ ವಿಸ್ತಾರವಾದ ದ್ವೀಪವಿರಬೇಕು ಅದು. ಕೆಲವು ಮನೆಗಳೂ ಇದ್ದವು. ವಿಸ್ತಾರವಾದ ಗದ್ದೆ ಬಯಲಿತ್ತು. ಗದ್ದೆಯಲ್ಲಿ ಅದಾಗಲೆ ಬೆಳೆದಿದ್ದ ಬೆಳೆಗಳು ಕಟಾವಿಗೆ ಬಂದು ನಿಂತಿದ್ದವು. ಭತ್ತ, ರಾಗಿ, ಜೋಳಗಳು ಎಲ್ಲೆಂದರಲ್ಲಿ ತುಂಬಿದ್ದವು. `ಮಧು.. ಇಲ್ಲಿ ಜಮೀನು ಸಿಗುತ್ತಾ ಕೇಳಬೇಕು.. ನಾಲ್ಕೆಕರೆ ಜಮೀನು ತಗೊಂಡು ಇಲ್ಲಿ ವಾಸ ಮಾಡೋಣವಾ..?' ವಿನಯಚಂದ್ರ ತಮಾಷೆ ಮಾಡಿದ್ದ.
           `ಬೇಡ ಮಾರಾಯಾ.. ಅಂತಹ ಕೆಲಸ ಮಾಡಬೇಡ. ಈಗ ನಿನಗೆ ಇದು ಸ್ವರ್ಗ. ಮಳೆಗಾಲದಲ್ಲಿ ಇದೆಲ್ಲ ನೀರಿನಡಿ ಮುಳುಗಿರುತ್ತದೆ. ನೀನೂ ಇರುವುದಿಲ್ಲ. ನಿನ್ನ ಜಮೀನೂ ಇರುವುದಿಲ್ಲ.. ಅಂತಹ ಆಲೋಚನೆ ಮಾಡೋದೇ ಬೇಡ..' ಎಂದಳು.
             `ಮಳೆಗಾಲ ಕಳೆದಾಗ ನಮ್ಮದಾಗುವ, ಮಳೆಗಾಲ ಬಂದಾಗ ಸರ್ಕಾರ ನೋಡಿಕೊಳ್ಳುವಂತಹ ಯೋಜನೆಗಳಿದ್ದರೆ ಹೇಳು ಮಾರಾಯ್ತಿ. ಮಳೆಗಾಲದಲ್ಲಿ ಸರ್ಕಾರಕ್ಕೆ ಈ ಜಮೀನು ವಾಪಾಸು ಕೊಟ್ಟು ಪರಿಹಾರ ಪಡೆದುಕೊಳ್ಳೋಣ. ಬೇಸಿಗೆ ಬಂದ ತಕ್ಷಣ ವಾಪಾಸು ಬಂದು ಬೇಸಾಯ ಮಾಡೋಣ..' ಎಂದ ವಿನಯಚಂದ್ರ. `ಸಾಕು ಸುಮ್ಮನೆ ಬಾರೋ..' ಎಂದು ಆತನ ಕೈ ಹಿಡಿದು ಮುಂದಕ್ಕೆ ಎಳೆದುಕೊಂಡು ಹೊರಟಳು. ವಿನಯಚಂದ್ರ ನಗುತ್ತಿದ್ದ.
           ಆ ದ್ವೀಪದ ಮಧ್ಯದಲ್ಲೊಂದು ಕಾರ್ಖಾನೆಯಿತ್ತು. ಅದ್ಯಾವ ಕಾರ್ಖಾನೆ ಎಂಬುದು ಸ್ಪಷ್ಟವಾಗಲಿಲ್ಲ. ಕಾರ್ಖಾನೆಯ ಸುತ್ತ 25 ಅಡಿಗೂ ಎತ್ತರದ ದಪ್ಪನೆಯ ಸಿಮೆಂಟ್ ಗೋಡೆ ನಿರ್ಮಾಣ ಮಾಡಲಾಗಿತ್ತು. ಕಾರ್ಖಾನೆಯಿಂದ ಹೊಗೆ ಉಗುಳುವ ಚಿಮಣಿಗಳು ಮಾತ್ರ ಕಾಣುತ್ತಿದ್ದವು. `ನೋಡು.. ಆ ಕಾರ್ಖಾನೆಯವರು ನದಿಯ ಪ್ರವಾಹದ ನೀರನ್ನು ತಡೆಯುವ ಸಲುವಾಗಿ ಏನೆಲ್ಲ ಪ್ರಯತ್ನ ಮಾಡಿಕೊಂಡಿದ್ದಾರೆ. ಆದರೂ ಮಳೆಗಾಲದಲ್ಲಿ ಅಲ್ಲಿ ನೀರು ನುಗ್ಗುವುದು ಮಾತ್ರ ತಪ್ಪಿಲ್ಲ..' ಎಂದಳು ಮಧುಮಿತಾ. ಬೆರಗಿನಿಂದ ನೋಡಿದ ವಿನಯಚಂದ್ರ ಮುಂದಕ್ಕೆ ಹೆಜ್ಜೆ ಹಾಕಿದ.
           ನದಿಯ ನಡುವೆ ಇದ್ದ ದ್ವೀಪ ಕೊನೆಯಾಗುತ್ತ ಬಂದಿತ್ತು. ದ್ವೀಪದ ಆಚೆಗಿನ ಎರಡನೇ ಕವಲು ಮೊದಲಿನ ಕವಲಿನಷ್ಟು ದೊಡ್ಡದಾಗಿರಲಿಲ್ಲ. ಸೆಳವೂ ಅಷ್ಟೊಂದು ಪ್ರಮಾಣದಲ್ಲಿ ಇರಲಿಕ್ಕಿಲ್ಲ ಎಂದುಕೊಂಡ ವಿನಯಚಂದ್ರ. ಎರಡನೇ ಕವಲು ದೊಡ್ಡದಾಗಿರದಿದ್ದ ಕಾರಣ ಬಹುಬೇಗನೆ ಸೇತುವೆಯನ್ನು ದಾಟಿಬಿಟ್ಟರು. ನದಿಯಾಚೆಗೂ ಜಮುನಾ ಇಕೋ ಪಾರ್ಕು ಹಬ್ಬಿತ್ತು. ನದಿಯ ಇಕ್ಕೆಲಗಳಲ್ಲಿದ್ದ ಜೈವಿಕ ಉದ್ಯಾನವನ್ನು ಸರ್ಕಾರ ರಕ್ಷಣೆ ಮಾಡುತ್ತಿತ್ತು. ಈ ಉದ್ಯಾನದಾಚೆ ಟೋಲ್ ನಾಕಾವೊಂದಿತ್ತು. ಸೇತುವೆಯ ಮೇಲೆ ಪ್ರಯಾಣ ಮಾಡುವ ವಾಹನಗಳಿಗೆ ಇಲ್ಲಿ ಟೋಲ್ ಸಂಗ್ರಹ ಮಾಡಲಾಗುತ್ತಿತ್ತು. `ಭಾರತದಂತೆ ಇಲ್ಲೂ ಟೋಲ್ ಸಂಗ್ರಹವಿದೆ..' ಎಂದುಕೊಂಡ ವಿನಯಚಂದ್ರ.
             `ವಿನೂ ನಾವೀಗ ಸಿರಾಜ್ ಗಂಜ್ ವಲಯದಲ್ಲಿದ್ದೇವೆ. ನಾವಿಲ್ಲಿಂದ ಸಿರಾಜ್ಗಂಜ್ ತಲುಪುವುದು ಬೇಡ. ಬದಲಾಗಿ ನೇರವಾಗಿ ಬೋಗ್ರಾಕ್ಕೆ ಹೋಗೋಣ. ಅಲ್ಲಿಂದ ರಂಗಪುರಕ್ಕೆ ಪ್ರಯಾಣ ಮಾಡೋಣ. ಅಲ್ಲಿಂದ ಭಾರತದ ಗಡಿಯನ್ನು ತಲುಪುವುದು ಸುಲಭವಾಗುತ್ತದೆ.. ಬೋಗ್ರಾ ಅಜಮಾಸು 50 ಕಿ,ಮಿ ಆಗಬಹುದು. ಅಲ್ಲಿಂದ 50 ಕಿ.ಮಿ ಅಂತರದಲ್ಲಿ ರಂಗಪುರವಿದೆ ' ಎಂದಳು ಮಧುಮಿತಾ. ಅದಕ್ಕೆ ಒಪ್ಪಿಗೆ ಸೂಚಿಸಿದ ವಿನಯಚಂದ್ರ. ಆಗಲೇ ಸೂರ್ಯ ಪಡುವಣದ ಬಾನಿನಲ್ಲಿ ಮುಳುಗಿಬಿಟ್ಟಿದ್ದ. ನಿಧಾನವಾಗಿ ಕತ್ತಲು ಆವರಿಸಿಬಿಟ್ಟಿತ್ತು. ಆ ರಾತ್ರಿ ಪ್ರಯಾಣ ಮಾಡುವುದೋ ಬೇಡವೋ ಎನ್ನುವ ಸಂದಿಗ್ಧತೆ ಇಬ್ಬರಲ್ಲೂ ಮನೆಮಾಡಿತು. ಸಾಧ್ಯವಾದಷ್ಟು ದೂರ ಸಾಗುವುದೇ ಸೂಕ್ತ. ವಾಹನ ಸಿಕ್ಕರೆ ಅದರಲ್ಲಿ ಹೋಗುವುದು ಇಲ್ಲವಾದರೆ ಕಾಲ್ನಡಿಗೆಯಲ್ಲಿ ಮುಂದೆ ಸಾಗುವುದು ಎಂದು ನಿರ್ಧರಿಸಿದರು ಇಬ್ಬರೂ. ಕೆಲನಿಮಿಷಗಳ ಪ್ರಯಾಣದ ನಂತರ ಸೈದಾಬಾದ್ ಎಂಬ ಗ್ರಾಮ ಸಿಕ್ಕಿತು. ಅಲ್ಲಿಂದ ಸಿರಾಜ್ ಗಂಜಿಗೆ ತೆರಳಲು ರಸ್ತೆ ಕವಲೊಡೆಯುತ್ತದೆ. ಅಲ್ಲೊಂದಷ್ಟು ಹೊಟೆಲುಗಳಿದ್ದವು. ಆದರೆ ಯಾವುದೂ ಬಾಗಿಲು ತೆಗೆದಿರಲಿಲ್ಲ. ಹೊಟೆಲಿನ ಕಟ್ಟೆಯ ಮೇಲೆ ಕೆಲಕಾಲ ದಣಿವಾರಿಸಿಕೊಂಡು ಮತ್ತೆ ಮುಂದಕ್ಕೆ ಸಾಗಿದರು.

(ಮುಂದುವರಿಯುತ್ತದೆ..)

ಇನ್ನೊಂದಿಷ್ಟು ಹನಿಗವಿತೆಗಳು

ಕೀರ್ತನದ ಪರಿಣಾಮ

ಅದೊಂದು ಕಾರ್ಯಕ್ರಮ ಕೀರ್ತನ
ಮಾಡುತ್ತಿದ್ದರು ಅಲ್ಲಿ ಗಾಯನ |
ನೋಡಿದರೆ ಕುಳಿತವರ ಮುಖ
ಹೋಗುವಂತಿತ್ತು ಪ್ರಾಣ ||

**

ಬೇಗ-ಭಾಗ

ದೇಶದಲ್ಲಿ ಹುಡುಕಿದರೀಗ
ಸಿಗುವುದು ತುಂಡುನೋಟಿನ ಭಾಗ |
ಜೊತೆಗೆ ಕಾಣುವುದು ನಕಲಿಯ
ತೆಲಗಿ, ರೋಶನ್ ಬೇಗ ||

(ಕರೀಂ ಲಾಲಾ ತೆಲಗಿಯ ನಕಲಿ ಛಾಪಾ ಕಾಗದದ ಹಗರಣದ ಸಂದರ್ದಭಲ್ಲಿ ಬರೆದಿದ್ದು)

**

ಮಚ್ಚು-ಹುಚ್ಚು

ಇತ್ತಿಚಿನ
ಕನ್ನಡದ ಚಲನಚಿತ್ರಗಳಲ್ಲಿ
ಹೆಚ್ಚುತ್ತಿದೆ ಲಾಂಗು-ಮಚ್ಚು |
ಹಾಗಾಗಿ ನೋಡಿದವನಿಗೆ
ಹಿಡಿಯುತ್ತಿದೆ ಹುಚ್ಚು ||

**

ಹುಚ್ಚು

ಭೂಮಿಯ ಮೇಲೆ
ಎಲ್ಲರಿಗೂ ಹಿಡಿದಿದೆ ಹುಚ್ಚು |
ಅದರಲ್ಲೂ, ಮೆಗಾ
ಸೀರಿಯಲ್ ನೋಡುವವರಿಗೆ
ತುಸು ಹೆಚ್ಚು ||

**

ಕಾಸು-ಲಾಸು

ಒಂದಾನೊಂದು ಕಾಲದಲ್ಲಿ
ಸಿಗುತ್ತಿತ್ತು ವೆನಿಲ್ಲಾ ಬೆಳೆದರೆ
ಕಾಸು |
ಈಗೇನಿದ್ದರೂ ಬರೀ ಲಾಸು ||

***

Thursday, October 9, 2014

ಬೆಂಗಾಲಿ ಸುಂದರಿ-30

(ಏಲೆಂಗಾದ ರೆಸಾರ್ಟ್)
             ಎಲ್ಲವೂ ಕೆಲವೇ ತಾಸುಗಳ ಅವಧಿಯಲ್ಲಿ ನಡೆದುಹೋಗಿದ್ದವು. ತಾಸುಗಳ ಹಿಂದಷ್ಟೇ ಜೊತೆಯಲ್ಲಿದ್ದ ಸಲೀಂ ಚಾಚಾ ಸಾವನ್ನಪ್ಪಿದ್ದ. ಅಷ್ಟೇ ಅಲ್ಲದೇ ಅಗ್ನಿಯಲ್ಲಿ ಲೀನವಾಗಿದ್ದ. ಮಧುಮಿತಾ ಹಾಗೂ ವಿನಯಚಂದ್ರರಿಗೆ ಇದು ಅರಗಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲ. ಮೌನವಾಗಿ ಮುಂದ ಮುಂದಕ್ಕೆ ನಡೆಯುತ್ತಲೇ ಇದ್ದರು. ಹೀಗೆ ನಡೆಯುತ್ತಿದ್ದಾಗಲೇ ಯಾವಾಗಲೂ ಕತ್ತಲಾವರಿಸಿತ್ತು. ಅದೂ ಕೂಡ ಅವರ ಗಮನಕ್ಕೆ ಬಂದಿರಲಿಲ್ಲ. ಸಲೀಂ ಚಾಚಾನ ಸಾವು ಇಬ್ಬರ ಮನದಲ್ಲಿ ತರಂಗಗಳನ್ನು ಎಬ್ಬಿಸಿದ್ದವು. ಯಾಕೋ ಅವರಿಗೆ ತಮ್ಮ ಜೀವನವೇ ಬೇಡ ಎನ್ನಿಸತೊಗಿತ್ತು. ಆದರೂ ಮುಂದಕ್ಕೆ ಸಾಗುತ್ತಲೇ ಇದ್ದರು.
             ಅಲ್ಲಿದೆ ನಮ್ಮನೆ... ಎಂಬಂತೆ ನಡೆಯುತ್ತಿದ್ದವರಿಗೆ ನಿಧಾನವಾಗಿ ತಾಂಗೈಲ್ ನಗರಿ ಹಿಂದಕ್ಕೆ ಸಾಗಿತು. ತಾಸು ತಾಸುಗಳ ಕಾಲ ನಡೆದರೂ ಸಲೀಂ ಚಾಚಾ ನೆನಪಿನಲ್ಲಿ ಆದ್ದರಿಂದ ಹಸಿವಾಗಲಿಲ್ಲ. ನೀರಡಿಕೆ ಕೂಡ ಆಗಲಿಲ್ಲ. ಹೆದ್ದಾರಿಯಲ್ಲಿ ವಾಹನಗಳೂ ಇರಲಿಲ್ಲ. ಕತ್ತಲೆ ಗವ್ವೆನ್ನುತ್ತಿತ್ತು. ಕತ್ತಲೆಯಲ್ಲಿ ಇವರಿಬ್ಬರೇ ನಡೆದುಕೊಂಡು ಹೋಗುತ್ತಿದ್ದರು. ಸಲೀಂ ಚಾಚಾನ ಶಕ್ತಿ ಇವರಿಬ್ಬರಲ್ಲಿ ಆಹ್ವಾನಗೊಂಡಿದೆಯೋ ಎಂಬಂತೆ ನಡೆಯುತ್ತಲೇ ಇದ್ದರು. ಹಗಲಿನಲ್ಲಿ ಕಾದಿದ್ದ ಟಾರು ರಸ್ತೆಯಿಂದ ಧಗೆ ಹೊರ ಸೂಸುತ್ತಿದ್ದುದು ಇಬ್ಬರ ಮೈಗೂ ಅನುಭವಕ್ಕೆ ಬರುತ್ತಿತ್ತು. ಅಕ್ಕಪಕ್ಕದ ಗದ್ದೆ ಬಯಲಿನ ತಂಗಾಳಿ ಇವರ ಮನಸ್ಸನ್ನು, ಮೈಯನ್ನು ತಂಪುಮಾಡಲು ಯತ್ನಿಸಿತಾದರೂ ವಿಫಲವಾಯಿತು ಎನ್ನಬಹುದು.
              ಕೆಲ ಹೊತ್ತಿನ ನಂತರ ತಾಂಗೈಲ್ ನಿಂದ ಹಾದು ಬಂದ ಮುಖ್ಯ ರಸ್ತೆಯೊಂದು ಸಿಕ್ಕಿತು. ಅದನ್ನು ಹಾದು ಮುಂದಕ್ಕೆ ಸಾಗಿದರು. ಹಿಂತಿರುಗಿ ನೀಡಿದರೆ ಬಾನಿನ ತುಂಬ ತಾಂಗೈಲ್ ನಗರದ ಬೆಳಕು ಪ್ರತಿಫಲನವಾಗುತ್ತಿತ್ತು. ಮಧುಮಿತಾ ಕಣ್ಣೊರೆಸಿಕೊಂಡಳು. ವಿನಯಚಂದ್ರ ಮೌನಿಯಾಗಿದ್ದವನು ಇದ್ದಕ್ಕಿದ್ದಂತೆ `ಮಧು..' ಎಂದ. ಆಕೆ ಹೂಂ ಅಂದಳು.
             `ಸಲೀಂ ಚಾಚಾನನ್ನು ಸೊಕಾಸುಮ್ಮನೆ ಅನುಮಾನಿಸಿಬಿಟ್ಟೆ. ಛೇ.. ನಮಗಾಗಿ, ನಮ್ಮ ಪ್ರೀತಿಗಾಗಿ, ನಾವು ಭಾರತವನ್ನು ತಲುಪಬೇಕು ಎನ್ನುವ ಕಾರಣಕ್ಕಾಗಿ ಆತ ಏನೆಲ್ಲ ಮಾಡಿದ. ಆದರೆ ನಾನು ಅವೆಲ್ಲವನ್ನೂ ಅನುಮಾನದಿಂದಲೇ ನೋಡಿದೆ. ನಮಗಾಗಿ ಮಾಡುತ್ತಿದ್ದ ಕಾರ್ಯದಲ್ಲೆಲ್ಲ ನಾನು ಆತನ ಸ್ವಾರ್ಥವಿದೆಯೇನೋ ಎಂದುಕೊಂಡೆ. ನನ್ನನ್ನು ಧರ್ಮಾಂತರ ಮಾಡುತ್ತಾನಾ ಎಂದೆಲ್ಲ ಅಂದುಕೊಂಡೆ. ಛೇ.. ನನಗೀಗ ನಾಚಿಕೆಯಾಗುತ್ತಿದೆ.. ಎಂತಹ ಮನುಷ್ಯನನ್ನು ಕಳೆದುಕೊಂಡುಬಿಟ್ಟೆವಲ್ಲ..' ಎಂದ. ಮಧುಮಿತಾ ಮಾತಾಡಲಿಲ್ಲ.
            `ಆತ ನಮಗಾಗಿ ಎಂತೆಂತಹ ಕಾರ್ಯವನ್ನು ಮಾಡಿದ್ದ. ತನ್ನ ಮನೆ-ಮಠವನ್ನು ಬಿಟ್ಟು ಬಂದಿದ್ದ. ನಮ್ಮನ್ನು ಭಾರತಕ್ಕೆ ತಲುಪಿಸುವುದೇ ಆತನ ಪರಮಗುರಿ ಎನ್ನುವಂತೆ ಕೆಲಸ ಮಾಡಿದ್ದ. ಆತನಿಗೆ ಯಾಕಾದರೂ ನಮ್ಮ ಮೇಲೆ ಇಷ್ಟೆಲ್ಲ ಪ್ರೀತಿಯೋ. ನಮಗಾಗಿಯೇ ಎಲ್ಲವನ್ನೂ ಮಾಡಿದ. ಕೊನೆಗೆ ಪ್ರಾಣವನ್ನೂ ತ್ಯಾಗ ಮಾಡಿದನಲ್ಲ. ನಾವ್ಯಾರು ಅಂತ ಆತ ಹೀಗೆ ಮಾಡಿದ? ಮನಸ್ಸು ತಲ್ಲಣಿಸಿದೆ ಮಧು. ಏನು ಹೇಳಬೇಕು ಎನ್ನುವುದೇ ಗೊತ್ತಾಗುತ್ತಿಲ್ಲ...' ಎಂದ ವಿನಯಚಂದ್ರ. ಮಧುಮಿತಾ ಸುಮ್ಮನೇ ಇದ್ದಳು.
           `ಮಾತಾಡು ಮಧು.. ನನಗೆ ಈ ಮೌನ, ಚಾಚಾನ ಸಾವು ಯಾಕೋ ಭಯವನ್ನು ತರುತ್ತಿದೆ. ಮನಸ್ಸಿನಲ್ಲಿ ಹೇಳಿಕೊಳ್ಳಲಾಗದ ಯಾತನೆ..' ಎಂದ ವಿನಯಚಂದ್ರ.
            `ಏನು ಮಾತಾಡಲಿ ವಿನೂ.. ಸಲೀಂ ಚಾಚಾ ಸತ್ತಿದ್ದನ್ನೇ ಮತ್ತೆ ಮತ್ತೆ ಹೇಳಿ ಮತ್ತಷ್ಟು ದುಃಖವನ್ನು ಉಂಟುಮಾಡುವುದಾ? ಛೇ.. ಆತ ಸಾಯಬಾರದಿತ್ತು ಅಂದುಕೊಳ್ಳುವುದಾ? ಏನು ಹೇಳಬೇಕು ಅಂತ ಅರ್ಥವೇ ಆಗುತ್ತಿಲ್ಲ. ಸಲೀಂ ಚಾಚಾನನ್ನು ಕಳೆದುಕೊಂಡು ನೀನು ಇಷ್ಟು ದುಃಖಿಸುತ್ತಿದ್ದೀಯಾ.. ಆದರೆ ನಾನು ಕಳೆದ 15 ದಿನಗಳ ಅಂತರದಲ್ಲಿ ಅಪ್ಪ-ಅಮ್ಮ-ಬಂಧು-ಬಳಗ ಕಳೆದುಕೊಂಡೆ. ಕೊನೆಗೆ ಆಪ್ತವಾಗಿದ್ದ ಸಲೀಂ ಚಾಚಾನನ್ನೂ ಕಳೆದುಕೊಂಡೆ. ನಾನು ಏನುಮಾಡಬೇಕು ಅಂತಲೇ ತಿಳಿಯುತ್ತಿಲ್ಲ ವಿನೂ.. ನನಗೆ ಆಪ್ತರಾದವರೆಲ್ಲ ಸಾಯುತ್ತಾರಾ ಅನ್ನುವ ಭಯ ಮೂಡತೊಡಗಿದೆ. ನೀನು ಆಪ್ತವಾಗಿದ್ದೀಯಾ.. ನಿನಗೂ ಏನಾದರೂ ಆಗುತ್ತದೆಯಾ ಎನ್ನುವ ಬಾವನೆ ನನ್ನ ಮನಸ್ಸಿನಲ್ಲಿ ಕಾಡುತ್ತಿದೆ. ಎಲ್ಲರೂ ದೂರಾಗಿದ್ದಾರೆ. ನೀನು ದೂರಾಗುವುದಿಲ್ಲ ತಾನೆ..' ಎಂದವಳೇ ಮಧುಮಿತಾ ನಡೆಯುತ್ತಿದ್ದವಳು ವಿನಯಚಂದ್ರನ ಸನಿಹಕ್ಕೆ ಬಂದು ಕೈ ಹಿಡಿದುಕೊಂಡಳು. ಬಾಂಗ್ಲಾದ ಬಾನಿನಲ್ಲಿ ಯಾವಾಗಲೋ ಮೂಡಿದ್ದ ಕರಿ ಮೋಡ ಇನ್ನೊಂದು ಮೋಡಕ್ಕೆ ಢಿಕ್ಕಿ ಹೊಡೆದು ದೊಡ್ಡದೊಂದು ಮಿಂಚಿನೊಂದಿಗೆ ದಢಾರ್ ಎಂಬ ಶಬ್ದವನ್ನು ಮಾಡಿತು. ಮಳೆ ಬರುತ್ತದೆಯಾ ಎಂದುಕೊಂಡರು. ದೂರದಲ್ಲೆಲ್ಲೋ ಮಳೆ ಬಂದಿದೆ ಎನ್ನುವುದಕ್ಕೆ ಸಾಕ್ಷಿಯಾಗಿ ಆಗೀಗ ಸುಳಿದು ಬರುತ್ತಿದ್ದ ಗಾಳಿ ಮಣ್ಣಿನ ವಾಸನೆಯನ್ನು ಹೊತ್ತು ತರುತ್ತಿತ್ತು.
           ಗಕ್ಕನೆ ನಿಂತ ವಿನಯಚಂದ್ರ ತನ್ನ ಕೈಯಿಂದ ಅವಳನ್ನು ಭದ್ರವಾಗಿ ಹಿಡಿದು `ಏನೂ ಆಗುವುದಿಲ್ಲ ಬಿಡು ಮಧು. ಏನೇ ಆದರೂ ನಾನು ನಿನ್ನನ್ನು ಬಿಟ್ಟು ಹೋಗುವುದಿಲ್ಲ. ಕೈಬಿಡುವುದಿಲ್ಲ. ನಿನ್ನ ಜೊತೆಗೆ ಬದುಕುತ್ತೇನೆ. ನಿನಗಾಗಿಯೇ ಬದುಕುತ್ತೇನೆ. ಯಾರೇ ಎದುರಾದರೂ ಹೋರಾಡುತ್ತೇನೆ. ನೀನು ಭಯ ಪಡಬೇಡ ಮಧು. ಸಮಾಧಾನ ಮಾಡಿಕೋ. ದೂರವಾದವರನ್ನು ಕಷ್ಟಪಟ್ಟಾದರೂ ಮರೆಯಲೇಬೇಕು. ಇವತ್ತಿದ್ದವರು ನಾಳೆ ಇರುತ್ತಾರೆ ಅಂತ ಹೇಳಿಲಿಕ್ಕೆ ಬರುವುದೇ ಇಲ್ಲ. ಈಗಿದ್ದವರು ಇನ್ನರೆಘಳಿಗೆಯಲ್ಲಿ ಇರ್ತಾರೆ ಅಂತನ್ನೋಕೂ ಆಗೋದಿಲ್ಲ. ಚಾಚಾನೇ ಇದಕ್ಕೆ ನಿದರ್ಶನ. ನಾವು ಜಗ್ಗದೇ ಕುಗ್ಗದೇ ಸಾಗೋಣ.. ಸಲೀಂ ಚಾಚಾ ಭಾರತವನ್ನು ಸುರಳೀತವಾಗಿ ತಲುಪುವಂತೆ ತಿಳಿಸಿದ್ದಾನೆ. ನಾವು ಮಾತುಕೊಟ್ಟಿದ್ದೇವೆ. ಆತನ ಕೊನೆಯ ಆಸೆಯೂ ಅದೇ. ಅದನ್ನು ಪೂರೈಸೋಣ. ಗುರಿ ತಲುಪುವ ವರೆಗೆ ಸಾಗೋಣ.. ಗೆಲ್ಲೋಣ..' ಎಂದ. ಮಧುಮಿತಾಳಲ್ಲಿ ಹೊಸಭರವಸೆಯ ಕಿರಣ ಮೂಡಿದಂತಾಯಿತು.
          ಮತ್ತೆ ನಡೆಯಲು ಆರಂಭಿಸಿದರು. ಒಂದೆರಡು ತಾಸು ನಡೆದ ನಂತರ ನಿಧಾನವಾಗಿ ಆಯಾಸವಾಗತೊಡಗಿತು. ಹೊಟ್ಟೆಯಲ್ಲಿನ ಹಸಿವು ಗಮನಕ್ಕೆ ಬಂದಿತು. ಸಂಜೆ ಏನೂ ತಿಂದಿಲ್ಲ ಎನ್ನುವುದು ಅರಿವಾಯಿತು. ಅಲ್ಲೇ ರಸ್ತೆಯ ಪಕ್ಕಕ್ಕೆ ಸಾಗಿ ಗದ್ದೆಯ ಬದುವಿನ ಮೇಲೆ ಕುಳಿತರು ಇಬ್ಬರೂ. ಚೀಲದಲ್ಲಿದ್ದ ರೊಟ್ಟಿಯನ್ನೂ ತಿಂದು ನೀರು ಕುಡಿದರು. ಹೊಟ್ಟೆಗೆ ತಿಂಡಿ ಬಿದ್ದ ಮೇಲೆ ಚಳಿಯ ಅರಿವಾಯಿತು. ದೇಹಕ್ಕೆ ಸುಸ್ತಾಗಿತ್ತು. ಮನಸಿಗೆ ನೋವಾಗಿತ್ತು. ಆ ರಾತ್ರಿ ಅಲ್ಲಿಯೇ ಮಲಗಿ ವಿಶ್ರಾಂತಿ ಪಡೆಯಲು ಇಬ್ಬರೂ ನಿರ್ಧಾರ ಮಾಡಿದರು. ವಿನಯಚಂದ್ರ ಬೆಳೆದಿದ್ದ ಗದ್ದೆಯಲ್ಲೇ ಉತ್ತಮ ಜಾಗವೊಂದನ್ನು ಹುಡುಕಿದ. ಅಲ್ಲಿ ತಾವು ತಂದಿದ್ದ ಚೀಲವನ್ನೇ ತಲೆದಿಂಬಿನಂತೆ ಹಾಕಿ ಮಧುಮಿತಾಳಿಗೆ ಮಲಗಲು ಜಾಗ ಮಾಡಿಕೊಟ್ಟ. ಪಕ್ಕದಲ್ಲೇ ತಾನೂ ಮಲಗಿದ.
          ಮಲಗಿದವರಿಗೆ ನಿದ್ದೆ ಹತ್ತಿರ ಸುಳಿಯಲಿಲ್ಲ. ಮೋಡಕಟ್ಟಿದ ಆಕಾಶ ಯಾವಾಗಲೋ ತಿಳಿಯಾಗಿತ್ತು. ಆಕಾಶದಲ್ಲಿ ನಕ್ಷತ್ರಗಳು ಮಿನುಗುತ್ತಿದ್ದವು. ಕೆಲವು ಹಸಿರು ಬಣ್ಣವನ್ನು ಮಿಣುಕು ಮಿಣುಕಿಸುತ್ತಿದ್ದರೆ ಮತ್ತೆ ಕೆಲವು ಕೆಂಪು ಬಣ್ಣವನ್ನು ಸೂಸುತ್ತಿದ್ದವು. ಸಲೀಂ ಚಾಚಾನ ಸಾವನ್ನು ಮರೆಸಲು ಯತ್ನಿಸಿದ ವಿನಯಚಂದ್ರ ನಕ್ಷತ್ರವನ್ನು ನೋಡುತ್ತ ಮಧುಮಿತಾಳ ಬಳಿ `ನೋಡು ಅದು ಸೀರಿಯಸ್ ನಕ್ಷತ್ರ. ಎಷ್ಟು ಹಸಿರಾಗಿ ಹೊಳೆಯುತ್ತಿದೆ ಅಲ್ಲವಾ?.. ಅಗೋ ಅಲ್ಲಿ ನೋಡು.. ಆ 8 ನಕ್ಷತ್ರಗಳನ್ನೇ ಗಮನವಿಟ್ಟು ನೋಡು. ಚಿಟ್ಟೆಯ ಆಕಾರ ಹೊಂದಿದೆ. ಎಷ್ಟು ಚನ್ನಾಗಿ ಕಾಣುತ್ತದೆ ಅಲ್ಲವಾ..' ಎಂದ. ಆಕೆಯೂ ಹೂಂ ಅಂದಳು. ಅಂಗಾತವಾಗಿ ಮಲಗಿ ನಕ್ಷತ್ರ ನೋಡುವುದರಲ್ಲಿ ಎಂತಾ ಖುಷಿಯಿದೆ ಎನ್ನಿಸಿತು. ಬಾಲ್ಯದಲ್ಲಿ ಹೀಗೆ ಮಾಡುತ್ತಿದ್ದೆವಲ್ಲವಾ ಎಂದೂ ವಿನಯಚಂದ್ರನ ಮನಸ್ಸಿನಲ್ಲಿ ಅನ್ನಿಸಿತು. ಯಾವ ಕ್ಷಣದಲ್ಲಿ ನಿದ್ರೆಯೆಂಬ ಮಾಯಾಂಗನೆ ಆವರಿಸಿದ್ದಳೋ ಇಬ್ಬರಿಗೂ ಅರಿವಾಗಿರಲಿಲ್ಲ.

**
 
(ಏಲೆಂಗಾದ ಬಸ್ ನಿಲ್ದಾಣ)
      ಕಣ್ಣು ಬಿಟ್ಟೊಡನೆ ಆಗಲೇ ಸೂರ್ಯ ಬಾನಿನಲ್ಲಿ ಏರಿ ಬಂದಿದ್ದ. ವಿನಯಚಂದ್ರ ಬೇಗನೆ ಎದ್ದು ಗದ್ದೆಯ ಬಳಿ ನೀರಿದೆಯಾ ಎಂದು ಹುಡುಕಿ ಹೋಗಿದ್ದ. ಮಧುಮಿತಾ ಮಲಗಿದ್ದವಳು ಧಡಕ್ಕನೆ ಎದ್ದಳು. ಒಮ್ಮೆ ಹಿತವಾಗಿ ಮೈಮುರಿದವಳಿಗೆ ಮೈಮೇಲೆ ಜರ್ಕಿನ್ ಇರುವುದು ಗೊತ್ತಾಯಿತು. ರಾತ್ರಿ ಯಾವುದೋ ಜಾವದಲ್ಲಿ ಚಳಿಯಾಗಿದ್ದಾಗ ವಿನಯಚಂದ್ರ ತನ್ನ ಜರ್ಕಿನ್ ತೆಗೆದು ಹೊದೆಸಿರಬೇಕು ಎಂದುಕೊಂಡಳು. ಅದೇ ಕ್ಷಣದಲ್ಲಿ ಈತನಿಗೆ ತಾನೆಂದರೆ ಎಷ್ಟು ಅಕ್ಕರೆಯಲ್ಲವಾ ಎನ್ನಿಸಿತು. ಮನಸ್ಸಿನಲ್ಲಿ ವಿನಯಚಂದ್ರನ ಕಡೆಗೆ ಸಂತಸ, ಸಂಭ್ರಮ ಎರಡೂ ಮೂಡಿತು. ತಾನು ಈತನನ್ನು ಪ್ರೀತಿಸಿ, ತನ್ನ ಊರು, ನೆಲ, ದೇಶವನ್ನೇ ಬಿಟ್ಟು ಹೋಗುತ್ತಿರುವುದಕ್ಕೆ ಹೆಮ್ಮೆಯೂ ಆಯಿತು.
          ಕೆಲ ಕ್ಷಣದಲ್ಲಿ ವಿನಯಚಂದ್ರ ಮರಳಿ ಬಂದಿದ್ದ. ಖಾಲಿಯಾಗಿದ್ದ ನೀರಿನ ಬಾಟಲಿ ತುಂಬ ನೀರನ್ನು ತಂದಿದ್ದ. ಬ್ರಹ್ಮಪುತ್ರಾ ನದಿಯನ್ನು ಸೇರುವ ಯಾವುದೋ ಉಪನದಿಯ ನೀರು ಬಹಳ ಹಿತವಾಗಿತ್ತು. ಮನದಣಿಯೆ ಇಬ್ಬರೂ ಕುಡಿದು, ಪ್ರಾತರ್ವಿಧಿಗಳನ್ನು ಮುಗಿಸಿ, ತಂದಿದ್ದ ತಿಂಡಿಯನ್ನು ತಿಂದು ಮತ್ತೆ ಹೆಜ್ಜೆ ಹಾಕಲು ಅನುವಾದರು. ತಾವು ತಂದಿದ್ದ ತಿಂಡಿ ಇನ್ನೆರಡು ದಿನಕ್ಕೆ ಸಾಕು ಎನ್ನುವುದನ್ನು ವಿನಯಚಂದ್ರ ಗಮನಿಸಿದ್ದ. ಮುಂದೆ ಯಾವುದಾದರೂ ಪಟ್ಟಣ ಸಿಕ್ಕಾಗ ಅಲ್ಲಿ ತಿಂಡಿಗೆ ವ್ಯವಸ್ಥೆಯನ್ನು ಮಾಡಿಕೊಂಡು ಪ್ರಯಾಣ ಮಾಡಬೇಕು ಎಂದುಕೊಂಡ. ಮುಂಜಾವಿನ ತಿಳಿಬಿಸಿಲಿನ ಜೊತೆಯಲ್ಲಿ ಮತ್ತೆ ಪ್ರಯಾಣ ಶುರುವಾಯಿತು.
            ಮೂರ್ನಾಲ್ಕು ತಾಸು ಬಿಡುವಿಲ್ಲದೇ ನಡೆದರು. ಈ ಅವಧಿಯಲ್ಲಿ ಒಂದೇ ಒಂದು ವಾಹನ ಅವರಿಗೆ ಸಿಗಲಿಲ್ಲ. ರಸ್ತೆಯ ಇಕ್ಕೆಲಗಳಲ್ಲಿ ಗದ್ದೆಯ ಬಯಲಿನಲ್ಲಿ ಅಲ್ಲೊಬ್ಬರು ಇಲ್ಲೊಬ್ಬರು ತಮ್ಮ ಪಾಡಿಗೆ ತಾವು ಕೆಲಸ ಮಾಡುತ್ತಿದ್ದರು. ಅವರನ್ನು ನೋಡಿದ ವಿನಯಚಂದ್ರ `ಅಬ್ಬಾ.. ಅಂತೂ ಇಲ್ಲಿ ಜನರಿದ್ದಾರಲ್ಲ ಥ್ಯಾಂಕ್ ಗಾಡ್..' ಅಂದುಕೊಂಡ. ಬಿಸಿಲೇರುವವರೆಗೆ 15 ಕಿ.ಮಿ ಪ್ರಯಾಣ ಮಾಡಿದ್ದರು. ನಡೆದು ರೂಢಿ ತಪ್ಪಿದ್ದವರು ಮತ್ತೊಮ್ಮೆ ಕಾಲ್ನಡಿಗೆ ಮಾಡಲು ಆರಂಭಿಸಿದ್ದರಿಂದ ಕಾಲು ವಿಪರೀತ ನೋಯಲಾರಂಭಿಸಿತ್ತು. ಇಬ್ಬರಿಗೂ ಇನ್ನು ನಡೆಯಲಾರೆ ಎನ್ನಿಸತೊಡಗಿತ್ತು. ಆದರೂ ಹೆಜ್ಜೆಹಾಕುತ್ತಲೇ ಇದ್ದರು. ಅಲ್ಲೊಂದು ಕಡೆಗೆ ಬಸ್ ತಂಗುದಾಣ ಸಿಕ್ಕಿತು. ಅಲ್ಲಿ ಕೊಂಚ ಹೊತ್ತು ಕುಳಿತರು.
            ಕುಳಿತಿದ್ದವರಿಗೆ ಇದ್ದಕ್ಕಿದ್ದಂತೆ ಯಾವುದೋ ವಾಹನ ಬರುತ್ತಿರುವ ಸದ್ದು ಕೇಳಿಸಿತು. ಇಬ್ಬರ ಮನಸ್ಸಿನಲ್ಲೂ ಗೊಂದಲ. ಯಾವ ವಾಹನ ಬಂದಿರಬಹುದು? ನಿನ್ನೆ ನಡೆದಂತೆ ಪುಂಡರು, ಹಿಂಸಾಚಾರಿಗಳು ವಾಹನದಲ್ಲಿ ಬಂದರೆ ಏನು ಮಾಡುವುದು? ಅವರದಲ್ಲದಿದ್ದರೆ ಏನು ಮಾಡುವುದು ಎಂದುಕೊಂಡರು. ಇಬ್ಬರೂ ಒಂದುಕ್ಷಣ ಓಡಿ ತಪ್ಪಿಸಕೊಳ್ಳಬೇಕಾ ಅಥವಾ ವಾಹನ ನಿಲ್ಲಿಸಿ ಅವರಲ್ಲಿ ಮುಂದಿನ ಊರಿಗೆ ಕರೆದುಕೊಂಡು ಹೋಗುವಂತೆ ಕೇಳಬೇಕಾ ಎಂಬುದು ಸ್ಪಷ್ಟವಾಗಲಿಲ್ಲ. ಮಧುಮಿತಾಳನ್ನು ಮರೆಯಲ್ಲಿ ನಿಲ್ಲುವಂತೆ ಹೇಳಿದ ವಿನಯಚಂದ್ರ ರಸ್ತೆ ಪಕ್ಕದಲ್ಲಿ ವಾಹನಕ್ಕಾಗಿ ಕಾಯುತ್ತ ನಿಂತ. ವಾಹನ ಹತ್ತಿರ ಬಂದಾಗ ಅದೊಂದು ಕಾರು ಎನ್ನುವುದು ಸ್ಪಷ್ಟವಾಯಿತು.
           ಏನಾದರಾಗಲಿ ಎಂದುಕೊಂಡು ಕಾರಿಗೆ ಕೈಮಾಡಿಯೇ ಬಿಟ್ಟ ವಿನಯಚಂದ್ರ. ಇವರ ಅದೃಷ್ಟಕ್ಕೆ ಕಾರಿನವನು ನಿಲ್ಲಿಸಯೇಬಿಟ್ಟ. ನಿಲ್ಲಿಸಿದವನು `ಏನು..' ಎಂಬಂತೆ ಸನ್ನೆ ಮಾಡಿದ. ಹರಕುಮುರುಕು ಹಿಂದಿಯಲ್ಲಿ `ಏಲೆಂಗಾಕ್ಕೆ ಲಿಫ್ಟ್ ಬೇಕಿತ್ತು..' ಅಂದ. ಕಾರಿನವನು ಒಪ್ಪಿದ. ತಕ್ಷಣವೇ ಮಧುಮಿತಾಳನ್ನೂ ಕರೆದು ಕಾರಿನಲ್ಲಿ ಕೂರಿಸಿ ತಾನೂ ಕುಳಿತುಕೊಂಡ. ಕಾರು ಮುಂದಕ್ಕೆ ಸಾಗಿತು.
          ಸಾಗಿದಂತೆಲ್ಲ ಮಾತಿಗೆ ನಿಂತ ಕಾರಿನವನು `ಎಲ್ಲಿಗೆ, ಯಾಕೆ ಹೋಗುತ್ತಿದ್ದೀರಿ..' ಎಂದೆಲ್ಲ ವಿಚಾರಿಸಿದ. ಅದಕ್ಕೆ ಪ್ರತಿಯಾಗಿ ವಿನಯಚಂದ್ರ ತಾವು ಹೊಸದಾಗಿ ಮದುವೆಯಾಗಿರುವವರೆಂದೂ ಏಲೆಂಗಾದಿಂದ ಮುಂದಕ್ಕೆ ಜಮುನಾ ನದಿಯನ್ನು ದಾಟಿಸಿ ಅವಳನ್ನು ನದಿಯಾಚೆಗಿನ ಪ್ರದೇಶವನ್ನು ತೋರಿಸುವ ಸಲುವಾಗಿ ಹೊರಟಿದ್ದೆಂದೂ ತಿಳಿಸಿದ. ಅದನ್ನು ಒಪ್ಪಿದಂತೆ ಕಂಡ ಕಾರಿನ ಚಾಲಕ ತಾನು ಏಲೆಂಗಾದಿಂದ ಮುಂದೆ ಶೋಲಾಕುರಾಕ್ಕೆ ಹೊರಟಿದ್ದೇನೆ. ನಿಮ್ಮನ್ನು ಏಲೆಂಗಾದಲ್ಲಿ ಬಿಡುತ್ತೇನೆ. ಅಲ್ಲಿ ಯಾವುದಾದರೂ ವಾಹನ ಸಿಗಬಲ್ಲದು ಎಂದ. ಜೊತೆಯಲ್ಲಿಯೇ ಈಗ ಬಾಂಗ್ಲಾದೇಶದ ಪರಿಸ್ಥಿತಿ ಸರಿಯಿಲ್ಲ ಎನ್ನುವುದು ಮತ್ತೆ ಹೇಳಬೇಕಿಲ್ಲವಲ್ಲ. ನಿನ್ನೆ ತಾನೇ ತಾಂಗೈಲ್ ನಗರಿಯಲ್ಲಿ 25ಕ್ಕೂ ಅಧಿಕ ಕೊಲೆಗಳು ಸಂಭವಿಸಿದೆ. ಹುಷಾರಾಗಿ ಹೋಗಿ ಎಂದು ಹೇಳುವುದನ್ನೂ ಮರೆಯಲಿಲ್ಲ. ಅರ್ಧಗಂಟೆಯವ ಅವಧಿಯಲ್ಲಿ ಏಲೆಂಗಾಕ್ಕೆ ಅವರು ತಲುಪಿದರು. ಏಲೆಂಗಾ ಬಸ್ ನಿಲ್ದಾಣದ ಬಳಿ ಇವರನ್ನು ಬಿಟ್ಟು ಕಾರಿನವನು ಮುಂದಕ್ಕೆ ಸಾಗಿದ. ವಿನಯಚಂದ್ರ ಕಾರಿನವನಿಗೆ ಹಣ ನೀಡಲು ಹೋದ. ಆದರೆ ಹಣ ಪಡೆಯದೇ ಇರುವುದು ವಿನಯಚಂದ್ರನ ಮನಸ್ಸಿನಲ್ಲಿ ಅಚ್ಚರಿಯನ್ನು ಮೂಡಿಸಿತು. ಬಸ್ ನಿಲ್ದಾಣದಲ್ಲಿ ಬಸ್ಸು ಬರುತ್ತದೆಯಾ ಎಂದು ಇವರಿಬ್ಬರೂ ಕಾಯುತ್ತ ಕುಳಿತರು. ಏಲೆಂಗಾ ಪಟ್ಟಣವೂ ನಿರ್ಮಾನುಷವಾಗಿತ್ತು. ಯಾವುದೇ ವಾಹನಗಳ ಸುಳಿವಿರಲಿಲ್ಲ. ಮಧುಮಿತಾ ಅಲ್ಲೇ ಒಂದು ಕಡೆ ಯಾರೋ ಒಬ್ಬರ ಬಳಿ ಮಾತಿಗೆ ನಿಂತಳು.
         ನಂತರ ವಿನಯಚಂದ್ರನ ಬಳಿ ಬಂದ ಮಧುಮಿತಾ `ಹಿಂಸಾಚಾರದ ಕಾರಣ ಬಸ್ ಸಂಚಾರವನ್ನು ನಿಲ್ಲಿಸಲಾಗಿದೆಯಂತೆ. ಯಾವುದಾದರೂ ಖಾಸಗಿ ವಾಹನಗಳಿದ್ದರೆ ಅದರಲ್ಲಿ ಪ್ರಯಾಣ ಮಾಡುವುದು ಒಳ್ಳೆಯದು ಎಂದು ತಿಳಿಸಿದರು..' ಎಂದಳು. ವಿನಯಚಂದ್ರ ಖಾಸಗಿ ವಾಹನ ಹುಡುಕಲು ತೊಡಗಿದ. ಯಾವುದೇ ವಾಹನಗಳೂ ಕಾಣಿಸಲಿಲ್ಲ. ಬಸ್ ನಿಲ್ದಾಣದಿಂದ ಹೊರಕ್ಕೆ ಬಂದರು. ಹೆದ್ದಾರಿಗುಂಟ ಸಾಗುವುದೇ ಸಮಂಜಸ ಎಂದೆನ್ನಿಸಿ ಮುಂದಕ್ಕೆ ಹೊರಟರು. ಸೂರ್ಯ ನಿಧಾನವಾಗಿ ಪಶ್ಚಿಮದ ಕಡೆಗೆ ಮುಖಮಾಡಿದ್ದ. ಹೆದ್ದಾರಿಗುಂಟ ಮತ್ತೆ ನಡೆಯಲು ಆರಂಭಿಸಿದ ಇವರಿಗೆ ಯಾವುದೇ ವಾಹನಗಳು ಸಿಗುವ ಲಕ್ಷಣಗಳು ಕಾಣಲಿಲ್ಲ.

(ಮುಂದುವರಿಯುತ್ತದೆ)

ಕನಸಿನ ಕನ್ಯೆ ನಿನ್ನ ನೋಡಿ.. (ಪ್ರೇಮಪತ್ರ-14)

(ಚಿತ್ರ : ವಿನಾಯಕ ಹೆಗಡೆ)
ಓಹ್ ಗೆಳತಿ..

        ನಿಜವಾ ಇದು. ನನ್ನೆದುರು ನಿಂತಿದ್ದು ನೀನೇ ಹೌದಾ ಎಂದು ಮತ್ತೆ ಮತ್ತೆ ಪರೀಕ್ಷೆ ಮಾಡಿಕೊಂಡು ಪತ್ರಿಸುತ್ತಿದ್ದೇನೆ ಗೆಳತಿ. ಕನಸಲ್ಲ. ಸತ್ಯ ಎನ್ನುವುದು ರುಜುವಾತಾದಾಗ ನನಗಾದ ರೋಮಾಂಚನ ಬಣ್ಣಿಸಲು ಪದಗಳು ಸಾಲುತ್ತಿಲ್ಲ.
         ಗೆಳತಿ, ನೀನು ನನ್ನ ಪರಿಚಯವಾಗಿದ್ದು ಹೇಳಿಯೇಬಿಡುತ್ತೀನಿ. ಇಲ್ಲವಾದರೆ ಏನೋ ಬಾಕಿ ಉಳಿಸಿದ ಹಾಗೆ ಆಗುತ್ತದೆ ನೋಡು. ಆವತ್ತು ಇದ್ದಕ್ಕಿದ್ದಂತೆ ನನಗೆ ಮಿಸ್ ಕಾಲ್ ಬಂದಿತ್ತು. ನಾನು ಅದಕ್ಕೆ ತಿರುಗಿ ಪೋನ್ ಮಾಡಿದ್ದಾಗ `ಹಲೋ..' ಎಂದಿದ್ದು ನೀನೇ ಅಲ್ಲವಾ.. ಅದೆಂತಹ ಇಂಪಾದ ಮಾತು ನಿನ್ನದು. ನಾನು ಪೋನ್ ಮಾಡುತ್ತಿದ್ದವನು ಒಮ್ಮೆ ಸುಮ್ಮನಾಗಿಬಿಟ್ಟಿದ್ದೆ. ನೀನೆ ಮುಂದುವರಿದು `ಯಾರಿದು ಮಾತಾಡ್ರೀ..' ಎಂದಿದ್ದೆ. ಕೊನೆಗೆ ನಾನು ನಿನ್ನ ಬಳಿ `ಮೊಸ್ ಕಾಲು ಕೊಟ್ಟವರು ನೀವು. ನನ್ನ ಬಳಿ ಯಾರು ಅಂತ ಕೇಳಿದರೆ ಹೇಗೆ..?' ಎಂದಿದ್ದೆ. ನಿನಗೆ ಆಗ ಸಿಟ್ಟು ಬಂದಿತ್ತೋ, ಗೊಂದಲವಾಗಿತ್ತೋ ನನಗೆ ನೆನಪಿಲ್ಲ. ಕೊನೆಗೆ ನೀನು `ಹೇಯ್ ನೀವು ಅವರಲ್ಲವಾ...' ಎಂದಿದ್ದೆ. ನಾನು ಹೌದು ಎಂದಾಗ `ನಿಮ್ಮ ಬರವಣಿಗೆಗೆ ನಾನು ಬಹಳ ಫಿದಾ ಆಗಿಬಿಟ್ಟಿದ್ದೇನೆ. ನಿಮ್ ಕಥೆ ಚನ್ನಾಗಿದೆ ಕಣ್ರೀ ಎಂದಿದ್ದೆ..' ಅಲ್ಲವಾ. ಆಗಲೇ ನಿನ್ನ ಇಂಪಾದ ಮಾತಿಗೆ ನಾನು ಮರುಳಾಗಿದ್ದೆ. ಹೆಸರೇನು ಅಂತ ಕೇಳಿದಾಗ `ಪಾರಿಜಾತ..' ಅಂದಿದ್ದೆ. ನಾನು ಬೆರಗಿನಿಂದ `ಅಂತಹ ಹೆಸರು ಇಡ್ತಾರಾ..' ಎಂದು ಬೆಪ್ಪಾಗಿ ಕೇಳಿದ್ದೆ. ನೀನು ಪ್ರತಿಯಾಗಿ `ಯಾಕೆ ಇಡಬಾರದು..?' ಎಂದಿದ್ದೆ. ನಿನ್ನ ಹೆಸರು ನನಗೆ ಆಗಲೇ ಆಪ್ತವಾಗಿತ್ತು. ಇಷ್ಟವಾಗಿತ್ತು.
          ಆ ನಂತರ ನೀನು ಪದೇ ಪದೆ ಪೋನ್ ಮಾಡುವುದು, ಅದೂ ಇದೂ ಸುದ್ದಿ ಹೇಳುವುದು ನಡೆದೇ ಇತ್ತು. ನೀನು ಪೋನ್ ಮಾಡಿದಾಗಲೆಲ್ಲ ನಾನು ಖುಷಿಯಿಂದಲೇ ಉತ್ತರ ನಿಡುತ್ತಿದ್ದೆ. ಹರಟೆ ಹೊಡೆಯುತ್ತಿದ್ದೆ. ಕೊನೆ ಕೊನೆಗಂತೂ ನಿನ್ನ ಪೋನ್ ಯಾವಾಗ ಬರುತ್ತದೆಯೋ ಎಂದು ಕಾಯುತ್ತ ಕುಳಿತುಬಿಡುತ್ತಿದ್ದೆ. ಹೀಗೆ ನೀನು ನನ್ನನ್ನು ಆವರಿಸಿಕೊಂಡಿದ್ದು ಎಂದರೆ ತಪ್ಪಿಲ್ಲ ನೋಡು. ಆಮೇಲೆ ಆಮೇಲೆ ನೀನಿಲ್ಲದ ಜಗತ್ತೇ ಇಲ್ಲ ಅನ್ನಿಸತೊಡಗಿದ್ದು ಸುಳ್ಳಲ್ಲ.
ನೀನೆಂದರೆ ನನ್ನೊಳಗೆ ಏನೋ ಒಂದು ಸಂಚಲನ
ನಾ ಬರೆಯದ ಕವಿತೆಗಳ.. ನೀನೆ ಒಂದು ಸಂಕಲನ
             ಈ ಹಾಡು ನನ್ನ ಪಾಲಿಗೆ ಪರಮಾಪ್ತ. ಪದೇ ಪದೆ ನಾನು ಈ ಹಾಡನ್ನು ಗುನುಗುತ್ತ ಇರುತ್ತೇನೆ. ನಿನ್ನ ಜೊತೆಗೆ ಸಖ್ಯ ಬೆಳೆದ ನಂತರ ನಾನು ಈ ಈ ಹಾಡನ್ನು ಅದೆಷ್ಟು ಸಹಸ್ರ ಸಾರಿ ಹಾಡಿದ್ದೆನೋ ಲೆಕ್ಖವಿಲ್ಲ ಬಿಡು. ನಿನ್ನ ನೆನಪಾದಾಗಾಲೆಲ್ಲ ಈ ಹಾಡು ತನ್ನಿಂದ ತಾನೇ ನನ್ನ ಬಾಯಲ್ಲಿ ಗುನುಗುತ್ತದೆ. ಮನಸ್ಸು ತನ್ನಿಂದ ತಾನೇ ರೋಮಾಂಚನಗೊಳ್ಳುತ್ತದೆ.
             ಮೊನ್ನೆ ತಾನೆ ನೀನು ಹೇಳಿದ್ದೆ ಸಿಗಬೇಕು ಮಾರಾಯಾ.. ಅಂತ. ನಾನು ಮತ್ತಷ್ಟು ಖುಷಿಯಾಗಿದ್ದೆ ಆಗ. ನೀನು ಬಂದಿದ್ದು, ಮಾತಾಡಿಸಿದ್ದು, ನಿನ್ನ ಜೊತೆಗೆ ಕಾಫಿಡೇಯಲ್ಲಿ ಕಾಫಿ ಕುಡಿದಿದ್ದು ಎಲ್ಲವೂ ನನಗೆ ಕನಸಂತೆ ಇದೆ. ಎದುರಿಗೆ ಬಂದ ನೀನು ನನಗೆ ಒಮ್ಮೆ ಸ್ವರ್ಗದಿಂದಿಳಿದ ದೇವತೆಯಂತೆ ಕಂಡಿದ್ದೆ. ನೀನು ಎದುರು ಬಂದು ಮಾತನಾಡಿಸುತ್ತಿದ್ದಾಗಲಂತೂ ನನಗೆ ಅದು ಕನಸಾ, ನನಸಾ ಎನ್ನುವುದು ತಿಳಿಯಲಿಲ್ಲ. ಪೆಚ್ಚಾಗಿ ನಿಂತು ನೋಡುತ್ತಲೇ ಇದ್ದೆ. ನೀನು ಬಂದು ಒಂದೆರಡು ಸಾರಿ ಹಾಯ್ ಅಂದಾಗ ನನಗೆ ತಿಳಿದೇ ಇರಲಿಲ್ಲ. ಕೊನೆಗೊಮ್ಮೆ ವಾಸ್ತವಕ್ಕೆ ಬಂದಿದ್ದೆ. ನನ್ನ ಪಾಲಿನ ಕನಸಿನ ಕನ್ಯೆ ನೀನು. ನೀನು ಎದುರಿಗೆ ಬಂದಿದ್ದು ನನಗೆಷ್ಟು ಖುಷಿಕೊಟ್ಟಿತು ಗೊತ್ತಾ? ಅದೇ ಕಾರಣಕ್ಕೆ ಬಹು ದಿನಗಳ ನಂತರ ನಾನು ಮತ್ತೊಮ್ಮೆ ಬರವಣಿಗೆಗೆ ಕುಳಿತಿದ್ದು.
            ಈಗ ತಾನೇ ಮಳೆ ಬಂದಿ ನಿಂತಿದೆ. ಧೋ ಎಂದು ಮೂರ್ನಾಲ್ಕು ತಾಸು ಮಳೆ ಸುರಿದಿತ್ತು. ಗುಡುಗು, ಸಿಡಿಲು ಕೂಡ ಅಬ್ಬರಿಸಿತ್ತು.  ಅಪರೂಪಕ್ಕೆ ಕರೆಂಟ್ ಇರಲಿಲ್ಲ. ಮನಸ್ಸು ಕೂಡ ಮೌನವಾಗಿತ್ತು. ಮನಸೋಇಚ್ಛೆ ಸುರಿದ ಮಳೆ ನಿಂತ ಮೇಲೆ ನಿನ್ನ ನೆನಪು ಮತ್ತಷ್ಟು ಜೋರಾಗುತ್ತಿದೆ. ಮಳೆ ಸುರಿದ ನಂತರವೂ ಹನಿಗಳು ಪಟಪಟಿಸುತ್ತಿವೆ. ಈ ಕ್ಷಣ ನೀನು ನನ್ನ ಜೊತೆಗಿದ್ದಿದ್ದರೆ ಸುಮ್ಮನೆ ಒಂದು ವಾಕ್ ಮಾಡಬಹುದಿತ್ತು. ಕೈ ಕೈ ಹಿಡಿದು ಬಹುದೂರ ಸಾಗಬಹುದಿತ್ತು. ಖಾಲಿ ಪೀಲಿ ಕಥೆಗಳನ್ನೋ, ಸುಳ್ಳೆ ಪಿಳ್ಳೆ ಸುದ್ದಿಗಳನ್ನೂ ಖುಷಿಯಿಂದ ಹಂಚಿಕೊಳ್ಳಬಹುದಿತ್ತು ಅನ್ನಿಸುತ್ತಿದೆ.
            ನಿಜ ಹೇಳಿಬಿಡುತ್ತೇನೆ ಗೆಳತಿ.. ನೀನು ನನ್ನ ಬರಹಗಳ, ಕವಿತೆಗಳ ಅಭಿಮಾನಿಯೇ ಇರಬಹುದು. ಆದರೆ ನಾನು ಬರೆಯದೇ ಅನೇಕ ವಸಂತಗಳೇ ಕಳೆದಿದ್ದವು ನೋಡು. ನಿನ್ನ ಸಖ್ಯ ಬೆಳೆದ ನಂತರವೇ ನಾನು ಮತ್ತೊಮ್ಮೆ ಬರವಣಿಗೆಯತ್ತ ಮುಖಮಾಡಿದ್ದು. ಇವತ್ತಂತೂ ಬಹಳ ಕವಿತೆಗಳು ಮನದಲ್ಲಿ ಮೂಡುತ್ತಿವೆ. ಬೇಡ ಬೇಡ ಎಂದರೂ ಮನಸಿನೊಳಗಳ ಬಾವಗಳು ಅಕ್ಷರದ ರೂಪವನ್ನು ತಾಳಿ ಹೊರಬರುತ್ತಿವೆ.
             ಇದನ್ನು ನಾನು ಪ್ರೇಮವೆನ್ನಲಾ? ಅಥವಾ ಸ್ನೇಹಕ್ಕಿಂತ ಮಿಗಿಲಾದ ಇನ್ನೊಂದು ರೂಪವೆನ್ನಲಾ. ಗೊಂದಲದಲ್ಲಿದ್ದೇನೆ. ನೀನು ನನ್ನನ್ನು ಭೇಟಿ ಮಾಡಿ ಹೋದ ಅರ್ಧಗಂಟೆಯಲ್ಲೇ ಮತ್ತೆ ಪೋನ್ ಮಾಡಿ ಮಾತಾಡಿದೆಯಲ್ಲ. ನನ್ನ ಮನದ ಹಕ್ಕಿಗೆ ಮತ್ತೆ ರೆಕ್ಕೆ ಬಲಿತಂತಾಗಿದೆ. ಖುಷಿಯಿಂದ ಬಾನನ್ನು ಮುಟ್ಟುವ ಸಡಗರ ತುಂಬಿಕೊಂಡಿದೆ.
              ಕಾಲೇಜು ದಿನಗಳಲ್ಲಿ ನನ್ನಿಂದ ಅನೇಕ ಜನರು ಪ್ರೇಮಪತ್ರ ಬರೆಸಿಕೊಂಡು ಹೋಗಿದ್ದಾರೆ. ಹಲವರ ಪ್ರೇಮ ಸಕ್ಸಸ್ಸಾಗಿದೆ. ಮತ್ತೆ ಕೆಲವರು ನಾನು ಬರೆದುಕೊಟ್ಟ ಪ್ರೇಮಪತ್ರ ಕೊಟ್ಟು ಬೈಸಿಕೊಂಡವರೂ ಇದ್ದಾರೆ. ಒಂದಕ್ಷರ ನೆಟ್ಟಗೆ ಬರೆಯಲಿಕ್ಕೆ ಬರದವನು ಉದ್ದದ, ಚೆಂದದ ಪ್ರೇಮಪತ್ರ ಹೇಗೆ ಬರೆದುಕೊಟ್ಟ ಎಂದು ಅನುಮಾನ ಮೂಡಿ ವಿಚಾರಿಸಿದ್ದರು. ನಾನು ಬರೆದುಕೊಟ್ಟಿದ್ದು ಗೊತ್ತಾಗಿತ್ತು. ಪಾ..ಪ. ಅವರ ಪ್ರೇಮದ ಸೌಧ ಉದುರಿ ಬಿದ್ದಿತ್ತು. ಎಂತಾ ತಮಾಷೆ ಅಲ್ಲವಾ? ಇಷ್ಟಾದರೂ ಆ ದಿನಗಳಲ್ಲಿ ನಾನು ನನಗೆ ಅಂತ ಯಾರಿಗೂ ಪ್ರೇಮಪತ್ರ ಬರೆದೇ ಇರಲಿಲ್ಲ ನೋಡು. ಯಾರಿಗೂ ಬರೆಯಬೇಕು ಅನ್ನಿಸಲಿಲ್ಲ. ಇಷ್ಟವೂ ಆಗಿರಲಿಲ್ಲ. ಕಾಲೇಜು ಮುಗಿದ ನಂತರ ಇದೀಗ ನೀನು ಇಷ್ಟವಾಗಿದ್ದೀಯ. ನನಗಾಗಿ ಪತ್ರ ಬರೆಯುತ್ತಿದ್ದೇನೆ. ವಿಚಿತ್ರವೆನ್ನಿಸುತ್ತಿರುವುದು ಪ್ರೇಮಪತ್ರ ಬರೆಯುವ ಶೈಲಿ ಬದಲಾಗಿರುವ ಕಾರಣಕ್ಕೆ. ಆಗ ಬರೆಯುತ್ತಿದ್ದ ಶೈಲಿಗೂ ಈಗಿನದ್ದಕ್ಕೂ ಅಜಗಜಾಂತರ ವ್ಯತ್ಯಾಸವಾಗಿದೆ. ಅದ್ಯಾರದ್ದೋ ಪ್ರೇಮ ಕ್ಲಿಕ್ಕಾಗಲಿ ಎನ್ನುವ ಕಾರಣಕ್ಕೆ ನಾನು ಬರೆದುಕೊಡುತ್ತಿದ್ದ ಪತ್ರಗಳು ಬಹಳ ಚನ್ನಾಗಿ ಇರುತ್ತಿದ್ದವು. ಆದರೆ ನನಗಾಗಿ ಬರೆದುಕೊಳ್ಳುತ್ತಿರುವ ಈ ಪತ್ರ ಅದೆಷ್ಟು ಸಾರಿ ಬರೆದರೂ ಅಪೂರ್ಣ ಎನ್ನಿಸುತ್ತಿದೆ. ಅದೇನೋ ಕೊರತೆಯಾಗಿದೆ ಎಂದುಕೊಳ್ಳುತ್ತಿದ್ದೇನೆ. ಅದಕ್ಕಾಗಿಯೇ ಬರೆದು ಬರೆದು ನಾಲ್ಕಾರು ಸಾರಿ ಹರಿದು ಹಾಕಿದ್ದೇನೆ. ಈ ಪತ್ರವೂ ನನಗಷ್ಟು ತೃಪ್ತಿ ಕೊಟ್ಟಿಲ್ಲ. ಆದರೂ ನಿನಗೆ ಕಳಿಸುತ್ತಿದ್ದೇನೆ.
             ನೀನು ನನಗೆ ಬಹಳ ಇಷ್ಟವಾಗಿದ್ದೀಯಾ ಗೆಳತಿ. ನಿನ್ನ ನಡೆ, ನುಡಿಗಳು ಬಹಳ ಆಪ್ತವಾಗಿದೆ. ಮೇಲ್ನೋಟಕ್ಕೆ ಮನಸ್ಸು ನಿಷ್ಕಲ್ಮಷವೇನೋ ಅನ್ನಿಸುತ್ತಿದೆ. ನಿನ್ನ ನುಗುವಿದೆಯಲ್ಲ. ಅದಕ್ಕೆ ನಾನು ದಾಸನಾಗಿಬಿಟ್ಟಿದ್ದೇನೆ. ಕೆಲವರಿಗೆ ನಗು ಅದೆಷ್ಟು ಭೂಷಣ ಅಲ್ಲವಾ? ನಿನಗೆ ಅದು ಒಂದು ತೂಕ ಹೆಚ್ಚೇ ಎನ್ನಬಹುದೇನೋ. ನಾನು ನಿನ್ನನ್ನು ಇಷ್ಟಪಟ್ಟಿದ್ದೇನೆ. ನಿನ್ನ ಭಾವನೆಗಳನ್ನು ತಿಳಿಸು ಅಂತ ನೇರಾನೇರ ಹೇಳಿಬಿಡುತ್ತೇನೆ ಗೆಳತಿ. ಗೊಂದಲ ಬೇಡ ಎನ್ನುವ ಕಾರಣಕ್ಕೆ ಈ ನಿರ್ಧಾರ.
ನಿನ್ನ ಭಾವವ ನಾನು ತಿಳಿಯೆ
ಮನದ ತುಂಬ ನೀನೇ ಇರುವೆ...
ಎಂದು ಹಾಡುವಂತಾಗಿದೆ... ಗೆಳತಿ.. ಹೆಚ್ಚು ಕಾಯಿಸಬೇಡ. ನಿನ್ನೊಳಗೆ ನನ್ನೆಡೆಗೆರುವ ವಿಷಯ ಅರುಹಿಬಿಡು. ನಾನು ಪತ್ರ ಬರೆದೆ ಅಂತ ನೀನೂ ಬರೆಯಬೇಕಿಲ್ಲ ಗೆಳತಿ. ಆಧುನಿಕ ಜಗತ್ತಿನ ಮುಂದುವರಿದ ಯಾವುದಾದರೊಂದು ಮಾರ್ಗದ ಮೂಲಕ ಹೇಳಿದರೂ ಸಾಕು. ಪೋನ್ ಮಾಡು, ಮೆಸೇಜ್ ಮಾಡು.
          ಈ ಪತ್ರವನ್ನು ನೋಡಿ ನೀನು ಸಿಟ್ಟಾಗುವುದಿಲ್ಲ ಎನ್ನುವುದು ನನಗೆ ಗೊತ್ತು. ಆದರೆ ಇಂತವನ ಮನಸ್ಸಿನಲ್ಲಿ ಹೀಗೆಲ್ಲ ಭಾವನೆಗಳು ತುಂಬಿದೆಯಾ ಎಂದುಕೊಳ್ಳುತ್ತೀಯೇನೋ. ಆದರೆ ಇದ್ದಿದ್ದನ್ನು ನೇರವಾಗಿ ಹೇಳುವ ಸ್ವಭಾವ ನನ್ನದು. ನನ್ನ ಮನದೊಳಗಣ ವಿಷಯಗಳನ್ನು ನೇರಾನೇರ ನಿನ್ನ ಮುಂದೆ ಅರುಹಿದ್ದೇನೆ. ನಿಜಕ್ಕೂ ಈ ಸಾಲುಗಳನ್ನೆಲ್ಲ ಬರೆಯುವಾಗ ನಾಣು ಪಟ್ಟ ಪಾಡು ಅಷ್ಟಿಷ್ಟಲ್ಲ. ಹೀಗೆ ಬರೆಯಲಾ, ಹಾಗೆ ಬರೆಯಲಾ ಎಂದೆಲ್ಲ ಆಲೋಚಿಸಿದ್ದೆ. ಹೇಗ್ಹೇಗೋ ಬರೆಯಬೇಕು, ಬರೆಯಬಹುದು ಎಂದುಕೊಂಡಿದ್ದೆ. ಆದರೆ ಬರೆಯಲು ಕುಳಿತಾಗ ಮಾತ್ರ ಅವೆಲ್ಲ ಮರೆತೇ ಹೋಗಿದ್ದವು ನೋಡು. ಏನೇನೋ ಅಂದುಕೊಂಡಿದ್ದ ನಾನು ಮತ್ತಿನ್ನೇನನ್ನೋ ಬರೆದುಬಿಟ್ಟಿದ್ದೇನೆ. ಆದರೆ ಬೇಸರಿಸಬೇಡ ಗೆಳತಿ. ಪೂರ್ತಿ ಓದುತ್ತೀಯಾ ಎನ್ನುವ ನಂಬಿಕೆ ನನ್ನಲ್ಲಿದೆ.
          ಮೊಬೈಲು, ಮೆಸೇಜು. ಇಂಟರ್ನೆಟ್ಟು, ಫೇಸ್ಬುಕ್ಕು, ವಾಟ್ಸಾಪುಗಳ ಕಾಲದಲ್ಲಿ ಇವನೆಂತ ಪತ್ರ ಬರೆಯುತ್ತಿದ್ದಾನೆ ಎಂದುಕೊಳ್ಳಬೇಡ. ನಿನಗೆ ಅಕ್ಷರಗಳು ಇಷ್ಟ ಎನ್ನುವುದು ನನಗೆ ಗೊತ್ತಿದೆ. ಮುಂದುವರಿದ ಆ ಎಲ್ಲ ತಂತ್ರಜ್ಞಾನಗಳಲ್ಲಿ ಭಾವನೆಗಳನ್ನು ಬಿತ್ತರಿಸುವುದು ಕಷ್ಟ. ಬರಹಕ್ಕೆ, ಪತ್ರಕ್ಕೆ ಮಾತ್ರ ಅಂತಹ ತಾಕತ್ತಿದೆ. ಬೇಸರಿಸಬೇಡ ಗೆಳತಿ.
          ನಿನಗೆ ನಾನು ಇಷ್ಟವಾದರೆ ನನ್ನಂತಹ ಸಂತಸದ ಬಾನಾಡಿ ಇನ್ನೊಬ್ಬನಿಲ್ಲ ಎಂದುಕೊಳ್ಳುತ್ತೇನೆ. ನೀನು ನನ್ನನ್ನು ತಿರಸ್ಕರಿಸಿದರೂ ಬೇಜಾರೇನೂ ಆಗುವುದಿಲ್ಲ. ನನ್ನಂತವನನ್ನು ಪ್ರೀತಿಸುವ ಅರ್ಹತೆ ನಿನಗಿಲ್ಲ. ನನ್ನನ್ನು ನೀನು ಕಳೆದುಕೊಂಡೆ ಎಂದುಕೊಳ್ಳುತ್ತೇನೆ. ಬೇಗ ಉತ್ತರಿಸು ಗೆಳತಿ. ನಿನ್ ಉತ್ತರ ಧನಾತ್ಮಕವಾಗಿರಲಿ ಎನ್ನುವ ಆಶಯ ನನ್ನದು.

ಇಂತಿ
ಜೀವನ್