Thursday, September 18, 2014

ನಿನಗಾಗಿ

ನಿನಗಾಗಿ ಕೇಳೆ ಓ ಗೆಳತಿ
ಹೃದಯವೊಂದು ಕಾದಿದೆ |
ನಿನ್ನ ನೆನಪ ನೆರಳಿನಲ್ಲಿ
ಜೀವ ಹಿಡಿದು ನಿಂತಿದೆ ||

ಧಮನಿಯ ಎಳೆ ಎಳೆಗಳಲ್ಲಿ
ನಿನ್ನ ಬಿಂಬ ತುಂಬಿದೆ |
ನಿನ್ನ ಪ್ರೀತಿ ಹಸಿರಿಗಾಗಿ
ಸಕಲ ಕಾಲವೂ ಕಾದಿದೆ ||

ನೀನೆಂದರೆ ಹೃದಯಕಾಯ್ತು
ಜೀವ-ಪ್ರೀತಿ-ಉಸಿರು |
ನೀನು ಮರೆತೆನೆಂದರಾಯ್ತು
ಹರಿದು ಬಿಡುವುದು ನೆತ್ತರು ||

ಹೃದಯ-ಮನಸು ನಿನ್ನದಂತೆ
ತನ್ನ ಜೀವ ಮರೆತಿದೆ |
ತನ್ನ ಪ್ರಾಣಕಿಂತ ಮಿಗಿಲು
ನಿನ್ನ ಒಲವ ಬಯಸಿದೆ ||

***
(ಈ ಕವಿತೆಯನ್ನು ಬರೆದಿರುವುದು ದಂಟಕಲ್ಲಿನಲ್ಲಿ 05-12-2006ರಂದು)

ಸೋದೆ ಸದಾಶಿವರಾಯನ ನೆಪದಲ್ಲಿ ಇತಿಹಾಸದ ಪುಟಗಳಲ್ಲಿ ಓಡಾಟ


ಚರಿತ್ರೆಯ ಪುಟದಲ್ಲಿ ಮರೆಯಾದ ಸೋದೆಯ ವಿದ್ವಾಂಸ ದೊರೆ ಸದಾಶಿವರಾಯಯನ್ನು ಸ್ಮರಿಸುವ ಸಲುವಾಗಿ, ಸಾರಸ್ವತ ಲೋಕದಿಂದಲೂ ಕಡೆಗಣಿಸಲ್ಪಟ್ಟ ಶ್ರೇಷ್ಠ ಇತಿಹಾಸ ತಜ್ಞರಿಗೆ ಮತ್ತು ಇತಿಹಾಸ ಸಂಶೋಧಕರಿಗೆ ಇವನ ಹೆಸರಿನಲ್ಲಿಯೇ `ಸೋದೆ ಸದಾಶಿವರಾಯ ಪ್ರಶಸ್ತಿ'ಯನ್ನ ಕೊಡುವ ಕಾರ್ಯಕ್ರಮವೊಂದು ಶಿರಸಿಯಲ್ಲಿ ಆಯೋಜನೆಯಾಗಿದೆ.
ಈ ವರ್ಷದಿಂದ ಪ್ರತಿ ವರ್ಷ ಶಿರಸಿಯಲ್ಲಿ ಸೋದೆಯ ಮೂರು ಮಠಗಳಾದ ಸ್ವರ್ಣವಲ್ಲೀ ಮಠ, ಸೋದೆ ವಾದಿರಾಜಮಠ, ಸ್ವಾದಿ ಜೈನಮಠ ಹಾಗೂ ಶ್ರೀನಿಕೇತನ ವಿದ್ಯಾಲಯ ಸಹಯೋಗದಲ್ಲಿ ಜಾಗೃತವೇದಿಕೆ ಸೋಂದಾ(ರಿ) ಇವರು ಸೋದೆ ಸದಾಶಿವರಾಯ ಪ್ರಶಸ್ತಿ ಪ್ರದಾನ ಸಮಿತಿಯ ಮೂಲಕ ರಾಜ್ಯ ಮಟ್ಟದ ಇತಿಹಾಸ ಸಮ್ಮೇಳನವನ್ನ ಸಂಘಟಿಸಿ ಈ ಪ್ರಶಸ್ತಿಯನ್ನ ಪ್ರದಾನ ಮಾಡಲಾಗುತ್ತದೆ. ಸೆ.20ರಂದು ಶಿರಸಿಯಲ್ಲಿ ಡಾ. ಶ್ರೀನಿವಾಸ ರಿತ್ತಿಯವರಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ. ಪ್ರಾದೇಶಿಕ ಇತಿಹಾಸದ ಜಾಗೃತಿ, ವಿದ್ಯಾರ್ಥಿಗಳಲ್ಲಿ ಇತಿಹಾಸದಲ್ಲಿ ಆಸಕ್ತಿ ಮೂಡಿಸುವುದು ಮತ್ತು ಮರೆಯಲ್ಲಿರುವ ಇತಿಹಾಸ ತಜ್ಞರನ್ನು ಗೌರವಿಸುವುದು ಇದರ ಉದ್ದೇಶವಾಗಿದೆ. ಇನ್ಮೂಲಕ  ಸದಾಶಿವರಾಯನೂ ಚಿರಂತನವಾಗಲಿ ಎನ್ನುವುದು ಈ ಕಾರ್ಯಕ್ರಮದ ಪ್ರಮುಖ ಆಶಯವಾಗಿದೆ.
ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಈಗಿನ ಸೋಂದಾ ಹಾಗೂ ಸುತ್ತಮುತ್ತಲ ಪ್ರದೇಶಗಳ ಅರಸರ ಆಳ್ವಿಕೆಯಲ್ಲಿ ರಾಜಧಾನಿಯಾಗಿ ಮೆರೆದ ಸುಂದರ ಸ್ಥಳ. ಪ್ರಕೃತಿಯ ರಮಣೀಯತೆಯ ಮಧ್ಯೆ ಕಂಗೊಳಿಸುತ್ತಿರುವ ಸೋದೆ ಪ್ರದೇಶದಲ್ಲಿ ಮಠಗಳು, ಮಂದಿರಗಳು ಕೋಟೆ ಕೊತ್ತಲೆಗಳು, ಇನ್ನಿತರ ಐತಿಹಾಸಿಕ ಕುರುಹುಗಳು ಸೋದೆ ಅರಸರ ಆಳ್ವಿಕೆಯ ಕುರುಹುಗಳೇ ಆಗಿವೆ. ಸೋದೆಯ ಅರಸರ ಸಾಮ್ರಾಜ್ಯದ ಪ್ರಮುಖ ಅರಸರುಗಳೆಂದರೆ ಇಮ್ಮಡಿ ಅರಸಪ್ಪ ನಾಯಕ, ರಾಮಚಂದ್ರ ನಾಯಕ, ಮಧುಲಿಂಗ ನಾಯಕ, ರಘುನಾಥ ನಾಯಕ, ಇಮ್ಮಡಿ ಸದಾಶಿವರಾಯ. ಉತ್ತರ ಕನ್ನಡ ಜಿಲ್ಲೆಯ ಘಟ್ಟದ ಮೇಲಿನ ಪ್ರದೇಶ, ಘಟ್ಟದ ಕೆಳಗಿನ ಪ್ರದೇಶ, ಹಾವೇರಿ ಜಿಲ್ಲೆಯ ಹಾನಗಲ್, ಶಿವಮೊಗ್ಗ ಜಿಲ್ಲೆಯ ಸೊರಬ ಈ ಮುಂತಾದ ಪ್ರದೇಶಗಳಲ್ಲಿ ಅಜಮಾಸು 230ವರ್ಷ ಸಮೃದ್ಧ ಆಳ್ವಿಕೆಯನ್ನು ನೀಡಿದ್ದ ಈ ಸೋದೆ ಸಾಮ್ರಾಜ್ಯ ಮೈಸೂರಿನ ಹೈದರಾಲಿಯ ದಾಳಿಗೆ ಸಿಲುಕಿ ಕ್ರಿ.ಶ. 1763ರಲ್ಲಿ ಅವನತಿಯನ್ನ ಕಂಡಿತು.
ಇಂತಹ ಸುಂದರ ಸಾಮ್ರಾಜ್ಯದ ಪ್ರಬಲ ಅರಸನಾಗಿ ಆಳ್ವಿಕೆ ಮಾಡಿದ ಮಹಾನ್ ವ್ಯಕ್ತಿತ್ವದ ಅರಸನೇ ಸೋದೆಯ ಇಮ್ಮಡಿ ಸದಾಶಿವರಾಯ. ಚರಿತ್ರೆಯ  ಪುಟಗಳಲ್ಲಿ ಸಾಮಂತ ಸಾಮ್ರಾಜ್ಯದ ಸಾಮಂತ ಅರಸರು ಸ್ವತಂತ್ರ ಅರಸರಿಗಿಂತ ಮಿಗಿಲಾದ ವ್ಯಕ್ತಿತ್ವವನ್ನು ಹೊಂದಿದ್ದು ಅವರಿಗಿಂತ ಹೆಚ್ಚು ಸಾಧನೆ ಮಾಡಿದ್ದರೂ ಇತಿಹಾಸ ಪುಟಗಳಲ್ಲಿ  ಹೊಳೆಯದಿದ್ದರೂ ಕನಿಷ್ಠ ಪಕ್ಷ ಒಂದು ಸಾಲಿನ ಸ್ಥಾನವನ್ನು ಪಡೆಯದಿರುವುದು ದುರದೃಷ್ಟಕರ. ಇಂತಹ ಅನೇಕ ಸಾಮಂತ ಅರಸರು ನಮ್ಮ ನೆಲದಲ್ಲಿ ಮಿಂಚಿ ಮರೆಯಾಗಿದ್ದಾರೆ. ಅವರಲ್ಲಿ ಅಗ್ರಗಣ್ಯನೇ ಸೋದೆಯ ಸದಾಶಿವರಾಯ. ಈತ ಸೋದೆಯನ್ನ ಕ್ರಿ.ಶ. 1618ರ ವರೆಗೆ ಅರಸನಾಗಿ ಆಳ್ವಿಕೆ ಮಾಡಿದ್ದ. ತನ್ನ 26 ವರ್ಷಗಳ ಈ ಸುದೀರ್ಘ ಅವಧಿಯಲ್ಲಿ ಕಲೆ, ಸಂಸ್ಕೃತಿ, ಧರ್ಮ, ಸಾಹಿತ್ಯ, ವಾಸ್ತು ಶಿಲ್ಪಕ್ಕೆ ಈತನ ಕೊಡಿಗೆ ಅನನ್ಯ, ಅನುಪಮವಾದುದು.
ಸದಾಶಿವರಾಯ ಮಧುಲಿಂಗ ನಾಯಕನ ಪುತ್ರ. ಪ್ರಸಿದ್ಧಳಾಗಿರುವ ಬೆಳವಡಿ ಮಲ್ಲಮ್ಮಳ ಸಹೋದರ ಬಾಲ್ಯದಿಂದಲೇ ಚುರುಕುಮತಿಯಾಗಿದ್ದ ಸದಾಶಿವರಾಯ ಚತುರ್ಭಾಷಾ ಪಂಡಿತ. ಕನ್ನಡ, ಸಂಸ್ಕೃತ, ಉರ್ದು, ಮರಾಠಿ ಭಾಷೆಯಲ್ಲಿ ಪರಿಣಿತಿಯನ್ನು ಸಾಧಿಸಿದ್ದ. ನಂತರ ಅಣ್ಣನಾದ ರಾಮಚಂದ್ರ ನಾಯಕನ ಆಳ್ವಿಕೆಯ ನಂತರ ವಂಶಪಾರಂಪರ್ಯವಾಗಿ ಸೋದೆಯ ಅರಸನಾಗಿ ಸಿಂಹಾಸನ ಅಲಂಕರಿಸಿದ.
ಆಡಳಿತದಲ್ಲಿ ನಿಷ್ಣಾತನಾಗಿದ್ದ ಈತ ಸಾಮ್ರಾಜ್ಯವನ್ನು ಘಟ್ಟದ ಕೆಳಗಿನ ಕಾರವಾರದವರೆಗೆ ವಿಸ್ತರಿಸಿ ಅಲ್ಲಿ ತನ್ನ ಹೆಸರಿನಲ್ಲಿ ಸದಾಶಿವಗಡ ಕೋಟೆಯನ್ನು ನಿರ್ಮಿಸಿದ. ಪೋರ್ಚುಗೀಸರ ಜೊತೆ ಒಡಂಬಡಿಕೆಯನ್ನ ಮಾಡಿಕೊಂಡು ವ್ಯಾಪಾರದಲ್ಲಿ ಹಿಡಿತಸಾಧಿಸಿ ರಾಜ್ಯವನ್ನ ಆರ್ಥಿಕವಾಗಿ ಬಲಪಡಿಸಿದ ಅವನ ಆಳ್ವಿಕೆಯ ಕಾಲದಲ್ಲಿ ಸೋದೆ ರಾಜ್ಯದ ಮೇಲೆ ಕಣ್ಣಿಟ್ಟಿದ್ದ ಕೆಳದಿ ಅರಸರು ಮತ್ತು ಮೊಘಲರ ದಾಳಿಯನ್ನ ತಡೆಗಟ್ಟಲು ಬಿಜಾಪುರದ ಆದಿಲ್ಷಾಹಿಗಳ ಸಹಾಯವನ್ನು ಪಡೆದಿದ್ದ. ಬಿಜಾಪುರದ ಅದಿಲ್ ಶಾಹಿಗಳ ಜೊತೆ ಉತ್ತಮ ಬಾಂಧವ್ಯವನ್ನ ಹೊಂದಿದ್ದ ಈತನ ಸಾಮ್ರಾಜ್ಯದ ಮೇಲೆ ವೈರಿಗಳು ದಾಳಿ ಮಾಡಿದಾಗ ಸಹಾಯಕ್ಕೆ ಬರುತ್ತಿದ್ದವರು ಬಿಜಾಪುರದ ಆದಿಲ್ಷಾಹಿಗಳು.
ಸದಾಶಿವರಾಯನ ಮೇಲೆ ಆದಿಲ್ಷಾಹಿಗಳ ಪ್ರಭಾವ ಹೇಗಿತ್ತೆಂದರೆ ಈತನು ಇದೇ ಇಸ್ಲಾಮಿಕ್ ಶೈಲಿಯ ಅನೇಕ ಸ್ಮಾರಕಗಳನ್ನ ಶಿರಸಿ ಮತ್ತು ಸೋದೆಯಲ್ಲಿ ನಿರ್ಮಿಸಿದ್ದ. ಮುಖ್ಯವಾಗಿ ಸೋದೆಯಲ್ಲಿರುವ ಗದ್ದಿಗೆ ಸ್ಮಾರಕ ಇದೊಂದು ತೀರಾ ಅಪರೂಪದ ಸ್ಮಾರಕ. ಇಡೀ ದಕ್ಷಿಣ ಭಾರತದಲ್ಲೇ ಇದು ಅಪರೂಪದ್ದು  ಎನ್ನಿಸಿಕೊಂಡಿದೆ. ಇದು 40 ಅಂಕಣದ ಕರಿಕಲ್ಲಿನ ಬೃಹತ್ ಅರಮನೆಯಾಗಿದೆ. ಮುಂದೆ ಇವನ ಸಮಾಧಿಯನ್ನ ಇಲ್ಲೇ  ಮಾಡಲಾಯಿತು. ಇಂದಿಗೂ ಸದಾಶಿವರಾಯನ ಸಮಾಧಿಯನ್ನು ಸೋದೆಯ ಗದ್ದಿಗೆ ಮನೆಯಲ್ಲಿ ಕಾಣಬಹುದು. ಇವನ ಗದ್ದಿಗೆಯಿಂದಾಗಿಯೇ ಈ ಸ್ಥಳಕ್ಕೆ ಆ ಹೆಸರು ಬಂದಿದೆ. ಸದಾಶಿವರಾಯನ ಇನ್ನೊಂದು ಪ್ರಮುಖ ಇಂಡೋ ಇಸ್ಲಾಮಿಕ್ ವಸ್ತುಶಿಲ್ಪೀಯ ಕೊಡುಗೆ ಎಂದರೆ ಶಿರಸಿಯಲ್ಲಿರುವ ' ಮುಸುಕಿನ ಬಾವಿ'. ಇದನ್ನು ತನಗೆ  ಸ್ಪೂರ್ತಿ ಯಾಗಿದ್ದ ತನ್ನ ಪ್ರೇಯಸಿಯೋರ್ವಳಿಗೆ ಆತ ನಿರ್ಮಿಸಿದ್ದ, ಇದೊಂದು  ಪ್ರೇಮ ಸ್ಮಾರಕವಾಗಿ ಮೌನವಾಗಿ ನಿಂತಿದೆ.
ಸೋದೆಯ ಹಳೆಯೂರು ಎಂಬಲ್ಲಿ ಶಂಕರನಾರಾಯಣ ದೇವಾಲಯ ನಿರ್ಮಿಸಿದವನೂ ಕೂಡ ಸದಾಶಿವರಾಯನೇ. ಇದರಲ್ಲಿ ಶಂಕರ ಮತ್ತು ನಾರಾಯಣರ ಎರಡು ಪ್ರತ್ಯೇಕ ಗರ್ಭಗುಡಿಗಳಿದ್ದು ಶೈವ ಮತ್ತು ವೈಷ್ಣವರ ಮಧ್ಯೆ ಮಧುರ ಬಾಂಧವ್ಯ ಸ್ಥಾಪನೆಗೆಂದೇ ಸದಾಶಿವರಾಯ ಇದನ್ನು ನಿಮರ್ಮಿಸಿದ್ದು ಇದರಿಂದ ಆತನ ಸೌಹಾರ್ದ ಭಾವನೆ ಅರ್ಥವಾಗುತ್ತದೆ. ಹಾಗೆಯೇ ಸೋದೆಯಲ್ಲಿ ಸದಾಶಿವ ದೇವಸ್ಥಾನ ಮತ್ತು ಮೊಘಲರಿಂದ ರಕ್ಷಣೆ ಪಡೆಯಲೆಂದು ಸ್ವರ್ಣವಲ್ಲೀ ಮಠದ ಸಮೀಪ ನಿರ್ಮಿಸಿರುವ ಕೋಟೆ ಇವನ  ನಿರ್ಮಾಣವೇ ಆಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಈಗ ಕರ್ನಾಟಕದ ಅತ್ಯಂತ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿರುವ ಶಿರಸಿಯ ಮಾರಿಕಾಂಬಾ ದೇವಾಲಯವನ್ನು ನಿರ್ಮಿಸಿದವನು ಇದೇ ಸದಾಶಿವರಾಯ ಎಂಬುದು ಉಲ್ಲೇಖನೀಯ ಸಂಗತಿ. ಬನವಾಸಿಯಲ್ಲಿ ಸದಾಶಿವೇಶ್ವರ ದೇವಾಲಯ ನಿರ್ಮಾಣ ಮತ್ತು ಸುಂದರವಾದ ತ್ರಿಲೋಕಮಂಟಪವೂ ಸದಾಶಿವ ರಾಯನ ಕೊಡುಗೆಯೇ ಆಗಿದೆ.
ಆತನ ಸಾಂಸ್ಕೃತಿಕ ಕಳಕಳಿ ಬಹು ವಿಶಿಷ್ಟವಾದುದು. ಬಿಜಾಪುರ ಆದಿಲ್ಷಾಹಿಗಳಿಗೆ ತೋರಿಸುವ ಸಲುವಾಗಿ ತನ್ನ ರಾಜ್ಯದ ಒಂದು ಯಕ್ಷಗಾನ ಮೇಳವನ್ನ ಬಿಜಾಪುರಕ್ಕೆ ಕರೆದುಕೊಂಡುಹೋಗಿ ಆಡಿಸಿದ್ದ ಎಂಬುದು ಯಕ್ಷಗಾನದ ಚರಿತ್ರೆಗೆ ಸಂಬಂಧಿಸಿದಂತೆಯೂ ಮಹತ್ವದ ಸಂಗತಿಯಾಗುತ್ತದೆ. ಇದು ಸದಾಶಿವರಾಯನ ಒಂದು ಮುಖವಾದರೆ ಇನ್ನೊಂದು ಮುಖ ಆತನ ಸಾಹಿತ್ಯದ ಮುಖ. ಆತ ಆಡಳಿತಾತ್ಮಕವಾಗಿ ಎಷ್ಟು ಉತ್ತಮ ಅರಸನಾಗಿದ್ದನೋ ಸಾಹಿತ್ಯಿಕವಾಗಿಯೂ ಅಷ್ಟೇ ದೊಡ್ಡ ವಿದ್ವಾಂಸನಾಗಿದ್ದ.
ಆ ಕಾಲದಲ್ಲೇ ಆತ ಹದಿನೇಳು ಕೃತಿಗಳನ್ನ ರಚಿಸಿದ್ದ, ಅದರಲ್ಲಿ ಈಗ ಒಂದು ಪ್ರಕಟಗೊಂಡಿದೆ. 'ಸದಾಶಿವ ನೀತಿ'. ಇದನ್ನ ಹೊರತುಪಡಿಸಿ ಆತನ ಇನ್ನಿತರರ ಕೃತಿಗಳೆಂದರೆ ಸ್ವರವಚನಗಳು, ಸಮಸ್ಯಾಪೂರ್ಣ ವೃತ್ತಕಂದ, ರಾಗಮಾಲಿಕೆ, ಪಂಚವಿಂಶತಿ ಲೀಲೆಯ ರಗಳೆ, ತ್ರಿವಿಧಿ, ಉಳುವೆಯ ಮಹಾತ್ಮೆ, ಜೋಗುಳ ಪದಗಳು, ನವರಸ ಜಕ್ಕಿಣಿ, ಪಂಚವಿಂಶತಿ ಲೀಲೆಯ ಮೂಲ ಪದ್ಯ, ಜಾವಡಿ, ಭಿಕ್ಷಾಟನಾ ಲೀಲೆಯ ಕಂದ, ಖಡ್ಗ ಪ್ರಬಂಧ, ಮಂಗಲಾಷ್ಟಿಕೆಗಳು, ಪ್ರಭುಲಿಂಗ ಲೀಲೆಯ ಜಾವಡಿ ಮಹಾ ಚದುರಂಗ ಲಕ್ಷಣ, ಕಲಹಕೇತಯ್ಯಗಳ ಲಕ್ಷಣ, ಕಂದಪದ್ಯ, ಮುಂತಾದವು. ಇಂತಹ ನಾಯಕನ ನೆನಪಿಗೋಸ್ಕರ ಹಾಗೂ ಇತಿಹಾಸದ ಪುಟಗಳಲ್ಲಿ ಮತ್ತೊಮ್ಮೆ ಕನ್ಣಾಡಿಸುವ ಸಲುವಾಗಿ ರಾಜ್ಯಮಟ್ಟದ ಇತಿಹಾಸ ಮೇಳಕ್ಕೆ ಶಿರಸಿ ಸಜ್ಜಾಗುತ್ತಿದೆ. ಇತಿಹಾಸ ತಜ್ಞರನ್ನು ತನ್ನತ್ತ ಕೈಬೀಸಿ ಕರೆಯುತ್ತಿದೆ.

***
(ಸೆ.18ರ ಕನ್ನಡಪ್ರಭದಲ್ಲಿ ಪ್ರಕಟವಾಗಿದೆ.)
(ಪೂರಕ ಮಾಹಿತಿ ನಿಡಿದವರು ಇತಿಹಾಸ ತಜ್ಷ ಲಕ್ಷ್ಮೀಶ ಹೆಗಡೆ ಸೋಂದಾ)

Wednesday, September 17, 2014

ಚಿತ್ರ-ವಿಚಿತ್ರ

ಪಪ್ಪುವಿನ ಬಯಕೆ

ಮೋದಿಯ ಫ್ಯಾನಿಗೆ
ಬಿರುಗಾಳಿಗೆ ಬಲಿಯಾಗಿ
ಪಪ್ಪೂ ಅಳಲು
`ನನಗೂ ಕಮಲ ಬೇಕು...'

***
ಆಗ್ರಹ

ನಮ್ಮೂರ ಹಾಲು ಡೇರಿ ಸಂಘದ ಚುನಾವಣೆಯಲ್ಲಿ ರಂಗಣ್ಣಂಗೆ ಗೆಲುವು..
`ಇದು ಮೋದಿ ವೈಫಲ್ಯದ ಪರಮಾವಧಿ. ಕೂಡಲೇ ಪಿ. ಎಂ. ಸ್ಥಾನಕ್ಕೆ ರಾಜಿನಾಮೆ ಕೋಡಬೇಕು' : ಪಪ್ಪೂ

***

ಕಲಿ

ಯಾರೇ ಕೂಗಾಡಲಿ..
ಊರೇ ಹೋರಾಡಲಿ
ವಾಟಾಳ ಮಾತ್ರ
ಗಂಡುಗಲಿ |

***

ಚಿತ್ರನಟ

ಅಂಬರೀಶ್ ಚಿತ್ರದ ಹೆಸರು
ಮಂಡ್ಯದ ಗಂಡು
ಕುಮಾರಣ್ಣನ ಮಗ ನಿಖಿಲ
ಸಿನಿಮಾ ಹೀರೋ ಆದರೆ
ಚಿತ್ರದ ಹೆಗಡೆ
ಹಾಸನದ ಗುಂಡು |

**

ಲೈಕ್ ಪ್ರಿಯ

ಬಾಕ್ಸಿಂಗ್ ಚತುರ
ಮೈಕ್ ಟೈಸನ್..
ಲೈಕ್ ಒತ್ತುವ ಚತುರ
ಲೈಕ್ ಟೈಸನ್ |

Monday, September 15, 2014

ಸುಮ್ನೆ ತಮಾಷೆಗೆ

ಸುಮ್ನೆ ತಮಾಷೆಗೆ
ಪಗ್ ನಾಯಿಯ ಹಚ್ ಪುರಾಣ

ಕ್ಯೂಟ್ ಕ್ಯೂಟ್ ಪಗ್ ನಾಯಿ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ.
ಹಚ್ ಜಾಹಿರಾತಿಗೆ ಬಂದು ಎಲ್ಲರ ಮನಗೆದ್ದ ಪಗ್ ನಾಯಿಯನ್ನು ಹಚ್ ನಾಯಿ ಎಂದೇ ಕರೆಯುತ್ತಾರೆ.
ಇಂತಹ ಹಚ್ ನಾಯಿಯ ಮುಖ ಎಷ್ಟು ಚನ್ನಾಗಿದೆಯಲ್ಲ.
ಕುಳ್ಳು ಆಕಾರ, ಕಪ್ಪು ಮೂತಿ, ಊದ್ದ ನಾಲಿಗೆ ಸದಾ ಹೊರಚಾಚಿರುತ್ತದೆ. 
ನನಗೆ ಹಚ್ ನಾಯಿಯ ಮುಖ ಕಂಡಾಗಲೆಲ್ಲ ಮುಖಾ ಮುಖಿ ಡಿಕ್ಕಿಯಾದ ಟಾಟಾ ಏಸೋ ಅಥವಾ ಮಾರುತಿ ಓಮ್ನಿಯೋ ಕಂಡಂತೆ ಕಾಣುತ್ತದೆ. ಆ ವಾಹನಗಳು ಢಿಕ್ಕಿಯಾದರೆ ಹಚ್ ನಾಯಿಯ ಕುತ್ತಿಗೆಯಲ್ಲಿ ದಪ್ಪ ದಪ್ಪ ರೋಮ ಇರುತ್ತದಲ್ಲ ಹಾಗೆ ಇರುತ್ತದೆ ಎನ್ನಿಸುತ್ತದೆ.

ಈ ಹಚ್ ನಾಯಿಯ ಕಣ್ಣು ನೋಡಿದ್ದೀರಾ..
ಯಾವಾಗಲೂ ಟೆನ್ಶನ್ ಮಾಡಿಕೊಂಡೇ ಇದೆಯೇನೋ ಎಂಬಂತೆ, ಬೆದರಿದಂತೆ, ಗೊಂದಲದಲ್ಲಿ ಇದ್ದಂತೆ ಕಾಣುತ್ತದೆ.
ಆಕ್ಚುಲಿ ಇದಕ್ಕೊಂದು ಕಾರಣವೂ ಇದೆ. ಮಜವಾಗಿದೆ ಹೇಳ್ತೀನಿ ಕೇಳಿ.
ಹಚ್ ನಾಯಿ ಯುವಕ-ಯುವತಿಯರ ಪರಮ ಪ್ರಿಯ ನಾಯಿ.
ಹುಡುಗಿಯರು ಈ ಹಚ್ ನಾಯಿಯನ್ನು ಕರೆದುಕೊಂಡು ಹೋಗುತ್ತಿರುತ್ತಾರೆ ಎನ್ನಿ.
ಆಗೆಲ್ಲ ಹುಡುಗರು ಹುಡುಗಿಯರನ್ನು ಕಿಚಾಯಿಸುವುದು, ಲೈನ್ ಹೊಡೆಯುವುದು ಮಾಡುತ್ತಾರಲ್ಲ.. ಅದಕ್ಕೆ ಪ್ರತಿಯಾಗಿ ಹುಡುಗಿಯರ ರಿಯಾಕ್ಷನ್ನೂ ಇರುತ್ತದಲ್ಲ..
ಇದನ್ನೆಲ್ಲ ಗಮನಿಸಿ `ಛೇ.. ಇವರನ್ನು ಹೇಗೆ ಸಂಭಾಳಿಸುವುದು ಮಾರಾಯ್ರೆ.. ನಾನೇ ನೋಡ್ಬೇಕಲ್ಲ..' ಎಂದ್ಕೊಂಡ ಪರಿಣಾಮವೇ ಹಚ್ ನಾಯಿಯ ಕಣ್ಣು ಹಾಗಿಗಿರುವುದು.
ಹುಡುಗರು ಹಚ್ ನಾಯಿಯನ್ನು ಕರೆದೊಯ್ಯುತ್ತಿದ್ದರೂ ಅದರ ಕಣ್ಣು ಅದೇ ರೀತಿ ಇರುತ್ತದೆ. ಯಾಕೆ ಗೊತ್ತಾ.
ಈ ಹುಡುಗರು ಸುಮ್ಮನಿರದೇ ಹುಡುಗಿರನ್ನು ಕಿಚಾಯಿಸುವುದು, ಲೈನ್ ಹೊಡೆಯೋದು, ಚುಡಾಯಿಸೋದು ಮಾಡ್ತಾರಲ್ಲಾ.. ಈ ಹುಡುಗರನ್ನು ಹೇಗೆ ಸಂಭಾಳಿಸೋದಪ್ಪಾ.. ಇಷ್ಟು ಕೆಟ್ಟದಾಗಿ ಬಿಹೇವ್ ಮಾಡ್ತಾರೆ.. ಇವರ ಜೊತೆಗೆ ಹೋಗ್ತೀರೋ ನನ್ನ ಮರ್ಯಾದೆನೂ ತೆಗೀತಾರಲ್ಲಪ್ಪಾ.. ಇವರಿಗೆ ಹೇಗೆ ಒಳ್ಳೆ ಬುದ್ಧಿ ಹೇಳೋದು ಎಂದುಕೊಳ್ಳುವ ಹಚ್ ನಾಯಿಯ ಕಣ್ಣು ಮತ್ತಷ್ಟು ಗಲಿಬಿಲಿ ಗೊಳ್ಳುತ್ತದೆ. ಅಗಲವಾಗಿ ಕಣ್ಣನ್ನು ಬಿಡುತ್ತದೆ.



***
ಸೆಲ್ಲು

ಕೆಲವು ಪಕ್ಷಗಳಲ್ಲಿ ಈಗ ಅಲ್ಪಸಂಖ್ಯಾತ ಸೆಲ್ ಗಳು ಇವೆ.
ಯಾವ ಪ್ರಮಾಣದಲ್ಲಿ ಈ ಅಲ್ಪ ಸಂಖ್ಯಾತ ಸೆಲ್ ಇವೆ ಎಂದರೆ ಈ ಸೆಲ್ಲುಗಳಿಗೆ ಬೋಪರಾಕ್ ಹಾಕುವಷ್ಟು.
ಖಂಡಿತವಾಗಿಯೂ ಮುಂದಿನ ದಿನಗಳಲ್ಲಿ ಹಿಂದೂಗಳ ಕುರಿತು ಪಕ್ಷಗಳು ಅಲ್ಪ ಸಂಖ್ಯಾತ ಸೆಲ್ಲುಗಳನ್ನು ತೆರೆಯಬಹುದು.
ಈಗಿನ ವೇಗ ನೋಡಿದರೆ ಆ ದಿನಗಳು ದೂರವಿಲ್ಲವೇನೋ ಅನ್ನಿಸುತ್ತದೆ.

***

ಫರ್ಮಾನು

ವೋಡಾ..... ಪೋನ್ ಬಳಕೆದಾರರಿಗೆ ಹೀಗೊಂದು ಫರ್ಮಾನು ಹೊರಡಿಸಿದರೆ ಹೇಗಿರುತ್ತದೆ?

`ಹಚ್ ನಾಯಿಗೆ ಹಚ್ಯಾ ಎಂದು ಕನ್ನಡದಲ್ಲಿ ಬರೆಯುವುದನ್ನು ನಿಷೇಧಿಸಲಾಗಿದೆ..'
`ಇಂಗ್ಲೀಷಿನಲ್ಲಿಯೇ ಹಚ್ ನಾಯಿಯನ್ನು ಬಯ್ಯತಕ್ಕದ್ದು..'

@@@@@

Sunday, September 14, 2014

ಬೆಂಗಾಲಿ ಸುಂದರಿ-25

(ಮಿರ್ಜಾಪುರದ ಬೀದಿ)
           ಮದುಮಿತಾ ಹಾಗೂ ವಿನಯಚಂದ್ರರಿಗೆ ಸಲೀಂ ಚಾಚಾ ಅಚ್ಚರಿಯೋ ಅಚ್ಚರಿ. ಢಾಕಾದ ಸಲೀಂ ಚಾಚಾ, ಹೈದರಾಬಾದಿನಿಂದ ಓಡಿಬಂದ ಸಲೀಂ ಚಾಚಾ ಬಾಂಗ್ಲಾ ದೇಶವನ್ನು ಅರ್ಥ ಮಾಡಿಕೊಂಡಿದ್ದ ಪರಿ ಬಹಳ ಬೆರಗನ್ನು ಮೂಡಿಸಿತ್ತು. ಢಾಕಾದಲ್ಲಿ ಸೈಕಲ್ ರಿಕ್ಷಾ ತುಳಿಯುತ್ತಿದ್ದ ಸಲೀಂ ಚಾಚಾ ಮಿರ್ಜಾಪುರದ ಗಲ್ಲಿಗಲ್ಲಿಗಳನ್ನು ತಿಳಿದುಕೊಂಡಿದ್ದನಲ್ಲ. ಮುಪ್ಪಿನ ವಯಸ್ಸಾಗಿದ್ದರೂ ಎಳವೆಯಂತೆ ಸೈಕಲ್ ತುಳಿಯುವ ಸಲೀಂ ಚಾಚಾನ ಬಗ್ಗೆ ಆಲೋಚಿಸಿದಷ್ಟೂ ಕುತೂಹಲ ಹುಟ್ಟುಹಾಕುತ್ತ ಹೋಗುತ್ತಿದ್ದ. ಈ ನಡುವೆಯೇ ವಿನಯಚಂದ್ರನ ಮನಸ್ಸಿನಲ್ಲಿ ಸಲೀಂ ಚಾಚಾ ಯಾತಕ್ಕಾಗಿ ಇಷ್ಟೆಲ್ಲ ಮಾಡುತ್ತಿದ್ದಾನೆ? ಒಳ್ಳೆಯದನ್ನು ಮಾಡುವ ನೆಪದಲ್ಲಿ ತಮ್ಮನ್ನು ಹಿಡಿದು ಹಾಕುವ ಹುನ್ನಾರ ನಡೆಸುತ್ತಿಲ್ಲವಷ್ಟೇ ಎಂದು ಆಲೋಚಿಸಿದ. ಸಹಾಯ ಮಾಡುವ ನೆಪದಲ್ಲಿ ನಮ್ಮನ್ನು ಯಾವುದೋ ಕೂಪಕ್ಕೆ ತಳ್ಳುತ್ತಿದ್ದಾನೆಯಾ ಎಂದೂ ಶಂಕೆ ಮೂಡಿತು. ಕೊನೆಗೆ ಖಂಡಿತ ಹಾಗೆ ಮಾಡಲಾರ. ಹಾಗೆ ಮಾಡುವುದೇ ಆಗಿದ್ದರೆ ಢಾಕಾದಲ್ಲೇ ತಮ್ಮನ್ನು ಹಿಂಸಾಚಾರಿಗಳ ವಶಕ್ಕೋ ಮತ್ಯಾರಿಗೋ ಕೊಟ್ಟು ಸುಮ್ಮನಾಗುತ್ತಿದ್ದ. ನಮ್ಮ ಪಾಲಿಗೆ ಸಲೀಂ ಚಾಚಾ ಆಪದ್ಭಾಂಧವನಂತೆ ಬಂದಿದ್ದಾನೆ. ಈಗ ಆತನ ಸಹಾಯ ನಮಗೆ ಬೇಕೇ ಬೇಕು. ಹೀಗಾಗಿ ಆತನನ್ನು ನಂಬುವುದು ಅನಿವಾರ್ಯ ಎಂದುಕೊಂಡ.
           ಮನೆಯೊಳಗೆ ಹೋಗಿದ್ದ ಸಲೀಂ ಚಾಚಾ ಹತ್ತು ನಿಮಿಷದ ನಂತರ ಹೊರಗೆ ಬಂದಿದ್ದ. ಜೊತೆಯಲ್ಲಿ ಒಬ್ಬರನ್ನು ಕರೆತಂದಿದ್ದ. ಅವರ ಬಳಿ ಅದೇನು ಹೇಳಿದ್ದನೋ. ಮೊದಲ ನೋಟದಲ್ಲೇ ಆ ಮನೆಯ ಯಜಮಾನರು ಎಂಬುದು ಅರ್ಥವಾಯಿತು. ಸಲೀಂ ಚಾಚಾ ಆ ಮನುಷ್ಯನನ್ನು ಖಾದಿರ್ ಎಂದು ಪರಿಚಯಿಸಿದ. ಖಾದಿರ್ ಗೆ ವಿನಯಚಂದ್ರ ಹಾಗೂ ಮಧುಮಿತಾಳನ್ನು ಪರಿಚಯ ಮಾಡಿಸಿದ. ಖಾದಿರ್ ಇವರನ್ನು ತನ್ನ ಮನೆಯೊಳಗೆ ಕರೆದೊಯ್ದ. ಮನೆಯೊಳಗೆ ಹೋದ ತಕ್ಷಣ ಖಾದಿರ್ ಬಾಯಿ ಇವರಿಗೆ ಒಣದ್ರಾಕ್ಷಿ, ಗೋಡಂಬಿ, ಖರ್ಜೂರ ಸೇರಿದಂತೆ ಹಲವು ಬಗೆಯ ಹಣ್ಣುಗಳನ್ನು ತಂದಿಟ್ಟರು. ಸಲೀಂ ಚಾಚಾ ಖಾದಿರ್ ತನ್ನ ಹಳೆಯ ಸ್ನೇಹಿತನೆಂದೂ ತನ್ನಂತೆ ಭಾರತದಿಂದ ಹೊಟ್ಟೆಪಾಡಿಗೆ ಓಡಿಬಂದವನೆಂದೂ ತಿಳಿಸಿದ. ವಿನಯಚಂದ್ರ ಹಾಗೂ ಮಧುಮಿತಾ ಸಂತಸ ಪಟ್ಟರು.
          ಮಾತಿಗೆ ನಿಂತ ಖಾದಿರ್ `ಮಿರ್ಜಾಪುರದಲ್ಲಿ ಇವತ್ತು ಬೆಳಿಗ್ಗೆಯಿಂದ ಹಿಂಸಾಚಾರ ಭುಗಿಲೆದ್ದಿದೆ. ಪುಂಡರ ಗುಂಪು ಕಂಡಕಂಡಲ್ಲಿ ದಾಳಿ ಮಾಡಿ, ಸಿಕ್ಕಿದ್ದನ್ನು ದೋಚುತ್ತಿದೆ. ಎಲ್ಲೆಂದರಲ್ಲಿ ಬೆಂಕಿ ಹಚ್ಚುತ್ತಿದೆ. ಎಲ್ಲೆಡೆ ಕರ್ಫ್ಯೂ ವಿಧಿಸಲಾಗಿದೆ. ಯಾವಾಗ ಸುಮ್ಮನಾಗುತ್ತೋ ಮಿರ್ಜಾಪುರ..' ಎಂದರು.
          `ಅರೇ ನಮಗೆ ಕಾಣಿಸಲೇ ಇಲ್ಲವಲ್ಲ. ನಾವು ಆರಾಮಾಗಿ ಮಿರ್ಜಾಪುರ ಬಂದೆವು ನೋಡಿ..' ವಿನಯಚಂದ್ರ ಅಚ್ಚರಿಯಿಂದ ಹೇಳಿದ.
           `ನನಗೂ ಅದೇ ಅಚ್ಚರಿಗೆ ಕಾರಣವಾಗಿದೆ. ಎಲ್ಲೆಡೆ ಗಲಾಟೆ ನಡೆಯುತ್ತಿದ್ದರೂ ಪುಂಡರ ಗುಂಪಿಗೆ ನೀವು ಸಿಗಲಿಲ್ಲವಲ್ಲ. ಪುಂಡರು ಹೋಗಲಿ ಪೊಲೀಸರಿಗೂ ನೀವು ಸಿಗಲಿಲ್ಲ ಎಂಬುದೇ ಅತ್ಯಾಶ್ಚರ್ಯ ನೋಡಿ.' ಖಾದಿರ್ ಹೇಳುತ್ತಿದ್ದರೆ ವಿನಯಚಂದ್ರ ತಮ್ಮ ಅದೃಷ್ಟವನ್ನು ನೆನೆದು ಖುಷಿಪಟ್ಟ. ಮಧುಮಿತಾ ಮಾತ್ರ ಆಲೋಚನಾ ಲಹರಿಯಲ್ಲಿ ಜಾರಿದ್ದಳು. ಯಾಕೋ ಏನೋ ತಾವು ಹೋದ ಕಡೆಯಲ್ಲೆಲ್ಲ ಹಿಂಸಾಚಾರ ನಡೆಯುತ್ತಿದೆ. ಬಿಟ್ಟೆನೆಂದರೂ ಬಿಡದೀ ಮಾಯೆ. ಯಾಕೆ ಹೀಗೆ. ತಮಗೆ ಶಾಂತಿ ದೊರಕುವುದೇ ಇಲ್ಲವೇ ಎಂದುಕೊಂಡಳು. ಸಲೀಂ ಚಾಚಾ ಅದಕ್ಕೆ ಸರಿಯಾಗಿ `ಬೇಟಿ ನೀವು ಭಾರತ ತಲುಪಿದರೆ ಮಾತ್ರ ನಿಮಗೆ ಶಾಂತಿ ಸಿಗುತ್ತದೇನೋ.. ಅಲ್ಲಿಯವರೆಗೂ ಉಸಿರುಕಟ್ಟಿ ಓಡುತ್ತಲೇ ಇರಬೇಕು. ಇವತ್ತು ಏಜೆಂಟ ನಮ್ಮನ್ನು ಭೆಟಿ ಮಾಡುತ್ತಾನೆ. ಸಂಜೆ ವೇಳೆಗೆ ನಾವು ಇಲ್ಲಿಮದ ಹೊರಡಲೇ ಬೇಕು. ಹಿಂಸಾಚಾರ ತಣ್ಣಗಾಗಿರಲಿ ಅಥವಾ ಗಲಭೆ ಹೆಚ್ಚಿಯೇ ಇರಲಿ. ನಾವು ನಿಲ್ಲುವಂತಿಲ್ಲ.. ತಿಳೀತಾ ಮಕ್ಕಳಾ' ಎಂದರು ಪ್ರೀತಿಯಿಂದ. ಪ್ರೇಮಿಗಳು ತಲೆಯಲ್ಲಾಡಿಸಿದರು.
            ಇರುಕಾದ ಬಾಗಿಲಿನಿಂದ ಓಳಹೋಗುವಂತ ಮನೆ ಅದಾಗಿದ್ದರೂ ಖಾದಿರ್ ಭಾಯಿಯ ಮನೆ ವಿಶಾಲವಾಗಿತ್ತು. 50-60 ಜನ ಬೇಕಾದರೂ ಆರಾಮಾಗಿ ಇರಬಹುದಿತ್ತು. ಮನೆಯ ತುಂಬ ಜನವೋ ಜನ. ವಿನಯಚಂದ್ರ ಎಣಿಸಲು ನೋಡಿ ಸುಸ್ತಾಗಿದ್ದ. ಎಣಿಸಿದಂತೆಲ್ಲ ಜನರು ಜಾಸ್ತಿಯಾಗುತ್ತಿದ್ದಾರೋ ಹೇಗೆ ಎಂದನ್ನಿಸುತ್ತಿತ್ತು. ಮನೆಯ ಒಳ ಕೋಣೆಗಳಿಂದ ಮಧ್ಯ ವಯಸ್ಕರು, ಹಿರಿಯರು, ಮಕ್ಕಳು, ಮರಿಗಳು ಬರುತ್ತಲೇ ಇದ್ದರು. ಬಂದವರನ್ನೆಲ್ಲ ಖಾದರ್ ಈತ ತನ್ನ ಮಗ ಎಂದೋ, ಸೊಸೆ ಎಂದೋ, ಮೊಮ್ಮಗ ಎಂದೋ, ಇವಳು ಹೆಂಡತಿ ಎಂದೋ ಪರಿಚಯಿಸುತ್ತಲೇ ಇದ್ದ. ಖಾದಿರ್ ನ ಒಂದಿಬ್ಬರು ಮಡದಿಯರಂತೂ ಆತನದ್ದೇ ಹೆಣ್ಣುಮಕ್ಕಳಿಗಿಂತ ಚಿಕ್ಕವರಿದ್ದರು. ಬೆಪ್ಪಾಗಿ ವಿನಯಚಂದ್ರ ನೋಡುತ್ತಿದ್ದಾಗಲೇ ಸಲೀಂ ಚಾಚಾ `ಖಾದಿರ್ ಗೆ 12 ಜನ ಮಡದಿಯರು... ಮಕ್ಕಳ ಸಂಖ್ಯೆ ಎಷ್ಟು ಎನ್ನುವುದನ್ನು ಆತನ ಬಳಿಯೇ ಕೇಳಬೇಕು..' ಎಂದು ತಮಾಷೆ ಮಾಡಿ ಕಣ್ಣು ಮಿಟುಕಿಸಿದರು.
         ಖಾದಿರ್ `38 ಮಕ್ಕಳು.. ಈ ವರ್ಷ ಇನ್ನೆರಡು ಸೇರ್ಪಡೆಯಾಗುತ್ತವೆ. 8 ಮೊಮ್ಮಕ್ಕಳು. ಒಬ್ಬ ಮರಿ ಮಗ ಇದ್ದಾನೆ.. ಎಲ್ಲ ಅಲ್ಲಾಹುವಿನ ಕೃಪೆ..' ಎಂದಾಗ ಮಾತ್ರ ವಿನಯಚಂದ್ರ ಸುಸ್ತಾಗಿ ಬೀಳುವುದೊಂದೇ ಬಾಕಿ. `ನಿಮ್ಮ ತಾಕತ್ತು ಭಾರಿ ಬಿಡಿ..' ಎಂದು ಹೇಳಿ ಸುಮ್ಮನಾದ ವಿನಯಚಂದ್ರ. ಮಧುಮಿತಾಳನ್ನು ನೋಡಿ ಕಣ್ಣುಮಿಟಿಕಿಸಿ `ನೋಡಿದೆಯಾ ಖಾದಿರ್ ಭಾಯಿಯ ತಾಕತ್ತು..' ಎಂದು ಪಿಸುಗುಟ್ಟಿದ. ಒಮ್ಮೆ ಕಣ್ಣರಳಿಸಿದ ಮಧುಮಿತಾ ವಿನಯಚಂದ್ರ ಹೇಳಿದ್ದು ಅರ್ಥವಾದ ತಕ್ಷಣ ನಾಚಿಕೊಂಡಳು.
                 ಆ ದಿನ ಹಾಗೆಯೇ ಕಳೆಯಿತು. ಆದರೆ ಮಿರ್ಜಾಪುರದಲ್ಲಿ ಹಿಂಸಾಚಾರ ಕಡಿಮೆಯಾಗುವ ಲಕ್ಷಣ ತೋರಲಿಲ್ಲ. ಸಲೀಂ ಚಾಚಾ ಏಜೆಂಟನಿಗಾಗಿ ಕಾಯುತ್ತಿದ್ದ. ಸಮಯ ಸರಿಯುತ್ತಿತ್ತಾದರೂ ಏಜೆಂಟನ ಪತ್ತೆಯಿರಲಿಲ್ಲ. ಮಿರ್ಜಾಪುರದಿಂದ ಅಂದು ಶತಾಯಗತಾಯ ಪಯಣ ಆರಂಭಿಸಲೇ ಬೇಕಿತ್ತು. ಏಜೆಂಟ ಬರದೇ ಇದ್ದರೆ ಏನು ಮಾಡುವುದು ಎಂಬ ಆಲೋಚನೆ ಎಲ್ಲರ ಮನಸ್ಸಿನಲ್ಲಿ ಮೂಡಿದರೂ ಸಲೀಂ ಚಾಚಾ `ಭಾರತದ ಗಡಿಯತ್ತ ಪ್ರಯಾಣ ಮಾಡುವ ದಾರಿ ನನಗೆ ಗೊತ್ತಿದೆ. ಏಜೆಂಟ ಬರಲಿ, ಅಥವಾ ಬರದೇ ಇರಲಿ.. ನೀವು ಸಾಗಬೇಕು. ನಿಮ್ಮನ್ನು ಅಲ್ಲಿಯವರೆಗೆ ನಾನು ಕಳಿಸಿ ಬರಲೇಬೇಕು..' ಎಂದ.
                   ಇಷ್ಟರ ನಡುವೆ ಮಾಡಲೇಬೇಕಾದ ಕೆಲವು ಕೆಲಸಗಳಿದ್ದವು. ಎಲ್ಲರ ಬಳಿ ಹಣ ಖರ್ಚಾಗಿತ್ತು. ಅಗತ್ಯ ವಸ್ತುಗಳನ್ನೆಲ್ಲ ನದೀ ತೀರದ ದರೋಡೆಕೋರರು ಕದ್ದೊಯ್ದಿದ್ದರು. ಹೀಗಾಗಿ ಅವನ್ನೆಲ್ಲ ಸಂಪಾದಿಸಬೇಕಿತ್ತು. ಅಥವಾ ಯಾರ ಬಳಿಯಾದರೂ ಪಡೆಯಬೇಕಿತ್ತು. ಖಾದಿರ್ ಈ ವಿಷಯವನ್ನು ಅರಿತ ತಕ್ಷಣ ಹಣ, ಆಹಾರ ಹಾಗೂ ಅಗತ್ಯ ವಸ್ತುಗಳನ್ನೆಲ್ಲ ಪೂರೈಸಿದ್ದ. ಇವೆಲ್ಲವುಗಳ ಜೊತೆಗೆ ಇನ್ನೊಂದು ಕೆಲಸ ಬಾಕಿ ಇತ್ತು. ಖಾದಿರ್ ಬಳಿ ಮಾತನಾಡಿದ ಸಲೀಂ ಚಾಚಾ ತಕ್ಷಣವೇ ವಿನಯಚಂದ್ರನನ್ನು ಮನೆಯಿಂದ ಹೊರಗೆ ಕರೆದೊಯ್ದ. ಮಿರ್ಜಾಪುರದ ನಿರ್ಮಾನುಷವೆನ್ನಿಸುವಂತಹ ಒಂದೆರಡು ಬೀದಿಗಳನ್ನು ಹಾದು ಅವರು ಸಾಗಿ ಅದೆಲ್ಲೋ ಒಂದು ದುಕಾನ್ ಎದುರು ನಿಂತರು. ಬೆಂಗಾಲಿ ಹಾಗೂ ಉರ್ದುವಿನಲ್ಲಿ ಬರೆದಿದ್ದ ಆ ಅಂಗಡಿ ಏನು ಎನ್ನುವುದು ವಿನಯಚಂದ್ರನಿಗೆ ಅರ್ಥವಾಗಲಿಲ್ಲ. ಮೇಲ್ನೋಟಕ್ಕೆ ಆಸ್ಪತ್ರೆಯೆಂಬಂತೆ ಕಂಡಿತು. ಆದರೆ ತನ್ನನ್ನೇಕೆ ಅಲ್ಲಿಗೆ ಸಲೀಂ ಚಾಚಾ ಕರೆತಂದಿದ್ದಾರೆ ಎನ್ನುವುದು ಗೊತ್ತಾಗಲಿಲ್ಲ.
              ಆ ದುಕಾನ್ ಒಳಹೋದಗ ಮಾತ್ರ ಅದು ಆಸ್ಪತ್ರೆಯೆನ್ನುವುದು ವಿನಯಚಂದ್ರನಿಗೆ ಸ್ಪಷ್ಟವಾಯಿತು. ಆಗಲೇ ಸಲೀಂ ಚಾಚಾ `ಬೇಟಾ.. ಇದು ಬಾಂಗ್ಲಾ ದೇಶ. ನೀವು ಬಾಂಗ್ಲಾದಲ್ಲಿ ಇರುವಷ್ಟು ಕಾಲ ನಿಮ್ಮನ್ನು ರಕ್ಷಿಸುವ ಜವಾಬ್ದಾರಿ ನನ್ನದು. ಹೀಗಿರುವಾಗ ನನಗೇನಾದರೂ ಸಮಸ್ಯೆ ಆದರೆ ನೀವೇ ಬಾಂಗ್ಲಾ ನಾಡಿನಲ್ಲಿ ಸಂಚರಿಸಿ ಭಾರತ ತಲುಪಬೇಕು. ಇದಕ್ಕಾಗಿಯೇ ನಾನು ನಿನ್ನನ್ನು ಇಲ್ಲಿಗೆ ಕರೆತಂದಿದ್ದು..' ಎಂದ.
(ಮಿರ್ಜಾಪುರದ ಇನ್ನೊಂದು ನೋಟ)
         `ಇಲ್ಲಿಗೆ ಸರಿ.. ಇಲ್ಲೇನು ಮಾಡುವುದು..?' ವಿನಯಚಂದ್ರ ಅರ್ಥವಾಗದೇ ಕೇಳಿದ್ದ.
         `ಎಷ್ಟೇ ಚಹರೆ ಬದಲಾಯಿಸಿದರೂ ಕೂಡ ಸಾಮಾನ್ಯವಾಗಿ ಮುಸ್ಲೀಮರು ಹಾಗೂ ಮುಸ್ಲೀಮರಲ್ಲದವರ ನಡುವೆ ವ್ಯತ್ಯಾಸ ಕಂಡು ಹಿಡಿಯಲು ಪ್ರಮುಖವಾಗಿ ಆತನಿಗೆ ಮುಂಜಿ ಆಗಿದೆಯೇ ಇಲ್ಲವೇ ಎಂದು ಪರೀಕ್ಷೆ ಮಾಡುತ್ತಾರೆ. ಮುಸ್ಲೀಮರಲ್ಲದವರಲ್ಲಿ ಮುಂಜಿ (ಖತ್ನಾ) ಮಾಡುವುದಿಲ್ಲ. ಯಾರು ಮುಂಜಿ ಮಾಡಿಸಿಕೊಂಡಿರುತ್ತಾನೋ ಆತ ಮುಸ್ಲೀಂ ಎಂದುಕೊಳ್ಳುತ್ತಾರೆ. ನೀನು ಸುರಕ್ಷಿತವಾಗಿರಬೇಕು ಎಂದಾದಲ್ಲಿ ನೀನು ಮುಂಜಿ ಮಾಡಿಸಿಕೊಳ್ಳಬೇಕು. ಮುಂಜಿ ಮಾಡಿಸಿಕೊಂಡರೆ ಬಾಂಗ್ಲಾದಲ್ಲಿ ಇರುವಷ್ಟು ಸಮಯ ನಿನಗೆ ಸಮಸ್ಯೆ ಇಲ್ಲ. ಮುಂದಿನ ಅಪಾಯವನ್ನು ತಪ್ಪಿಸಿಕೊಳ್ಳಲೋಸುಗ ಈ ಕಾರ್ಯ...ಅದಕ್ಕೆ ನಿನ್ನನ್ನು ಇಲ್ಲಿಗೆ ಕರೆದುಕೊಂಡು ಬಂದಿದ್ದು. ತಯಾರಾಗಬೇಕು ನೀನು ಅದಕ್ಕಾಗಿ. ಈ ವಿಷಯವನ್ನು ನಾನು ನಿನಗೆ ಮೊದಲೇ ಹೇಳಬಹುದಿತ್ತು. ಆದರೆ ಸುಮ್ಮನೆ ನೀನು ಗಾಬರಿಯಾಗಬಹುದು ಎಂದು ಹೇಳಲಿಲ್ಲ ಅಷ್ಟೇ' ಎಂದ ಸಲೀಂ ಚಾಚಾ.
         `ಅಲ್ಲಾ ಚಾಚಾ.. ಮುಂಜಿ ಮಾಡಿಸಿಕೊಳ್ಳುವುದು ಅಂದರೆ...' ಚಿಕ್ಕಂದಿನಿಂದ ಆ ಕುರಿತು ಕೇಳಿದ್ದನಾದರೂ ಯಾವುದೇ ಮುನ್ಸೂಚನೆ ಇಲ್ಲದೇ ಸಲೀಂ ಚಾಚಾ ಮುಂಜಿ ಕುರಿತು ಪ್ರಸ್ತಾಪಿಸಿ ಈಗಿಂದೀಗಲೇ ಅದಕ್ಕೆ ತಯಾರಾಗು ಎಂದು ಹೇಳಿದ್ದರಿಂದ ಕೊಂಚ ಗಲಿಬಿಲಿಗೆ ಒಳಗಾಗಿದ್ದ ವಿನಯಚಂದ್ರ.
          `ನಾವು ಜೀವನದಲ್ಲಿ ಅದೆಷ್ಟೋ ನೋವನ್ನು ಸಹಿಸಿಕೊಳ್ಳುತ್ತೇವೆ. ಅಂತವುಗಳ ಎದುರು ಈ ಮುಂಜಿ ಯಾವ ನೋವನ್ನೂ ಕೊಡುವುದಿಲ್ಲ. ನಮ್ಮಲ್ಲಿ ಚಿಕ್ಕ ಚಿಕ್ಕ ಮಕ್ಕಳಿಗೆ ಮುಂಜಿ ಮಾಡುತ್ತಾರೆ ಗೊತ್ತಾ. ಅವರೇ ಸಹಿಸಿಕೊಳ್ಳುತ್ತಾರೆ. ನೀನು ಬೆಳೆದವನು ನಿನಗೆ ಇದನ್ನು ಸಹಿಸಲು ಆಗುವುದಿಲ್ಲವೇ..?' ಎಂದು ಕೇಳಿದಾಗ ಮತ್ತೆ ಮುಜುಗರ ಪಟ್ಟುಕೊಂಡ ವಿನಯಚಂದ್ರ `ಥೋ ಚಾಚಾ.. ಉರಿ ಅಥವಾ ನೋವಿನ ಪ್ರಶ್ನೆಯಲ್ಲ. ನಾನು ಇಷ್ಟು ವರ್ಷಗಳವರೆಗೆ ಬೆಳೆಸಿಕೊಂಡು ಬಂದ ಕಟ್ಟುಪಾಡುಗಳು ಏನೆನ್ನುತ್ತಾವೆಯೋ ಎನ್ನುವ ಭಯ. ಎಂತದ್ದೇ ನೋವನ್ನೂ ನಾನು ಸಹಿಸಿಕೊಳ್ಳಬಲ್ಲೆ. ಆದರೆ ನಂಬಿಕೆಗಳು.. ನಮ್ಮ ಹಿಂದೂಗಳಲ್ಲಿ ಅದನ್ನು ಮಾಡಿಕೊಳ್ಳುವುದು ಅಪರಾಧ ಎನ್ನುವ ಭಾವನೆ ಇದೆ ಚಾಚಾ. ಖತ್ನಾ ಮಾಡಿಕೊಳ್ಳುವುದು ಎಂದರೆ ಧರ್ಮದಿಂದ ಹೊರಕ್ಕೆ ಹೋದ ಎಂಬಂತೆ ನೋಡುತ್ತಾರೆ ಚಾಚಾ' ಎಂದ ಗಲಿಬಿಲಿಯಿಂದ
          `ಬದುಕಿ ಉಳಿದರೆ ತಾನೆ ನಂಬಿಕೆಗಳು, ಧರ್ಮ ಎಲ್ಲ. ಬದುಕಿ ಉಳಿಯುವುದೇ ಅಸಾಧ್ಯ ಎಂದಾದರೆ ನಂಬಿಕೆಗಳಿಗೂ ತಿಲಾಂಜಲಿ ಕೊಡಬೇಕು ಅಲ್ಲವೇ. ನಾವು ಬದುಕಿದರಷ್ಟೇ ನಮ್ಮ ನಂಬಿಕೆಗಳೂ ಜೀವಂತ ಇರುತ್ತವೆ.. ನೀನು ಮುಂಜಿ (ಖತ್ನಾ) ಮಾಡಿಕೊಳ್ಳುವುದು ಖಂಡಿತವಾಗಿಯೂ ತಪ್ಪಲ್ಲ. ನನಗೆ ತಿಳಿದ ಮಟ್ಟಿಗೆ ನಿಮ್ಮ ಧರ್ಮದಲ್ಲಿ ಎಲ್ಲೂ ಮುಂಜಿ ಮಾಡುವುದು ನಿಷಿದ್ಧ ಎಂದು ಹೇಳಿಲ್ಲ.. ಅಲ್ಲವೇ.. ಮತ್ಯಾಕೆ ಹಿಂಜರಿಕೆ.. ಇನ್ನೊಂದು ವಿಷಯ. ನೀನಾಗಿಯೇ ಹೇಳದ ಹೊರತು ನಿನಗೆ ಮುಂಜಿಯಾಗಿದೆ ಎಂದು ಯಾರಿಗೆ ಗೊತ್ತಾಗುತ್ತದೆ? ಸೊಕಾ ಸುಮ್ಮನೆ ನಿನ್ನ ಚೆಡ್ಡಿ ಬಿಚ್ಚಿ ಯಾರು ಅದನ್ನು ನೋಡುತ್ತಾ ಇರುತ್ತಾರೆ ಹೇಳು' ಎಂದ ಚಾಚಾ.
          ಅರೆಘಳಿಗೆಯ ಆಲೋಚನೆಯ ನಂತರ ವಿನಯಚಂದ್ರ ಒಪ್ಪಿಕೊಂಡ. ಆ ಆಸ್ಪತ್ರೆಯ ಹಿರಿಯ ವೈದ್ಯನಾರೋ ವಿನಯಚಂದ್ರನನ್ನು ಒಳಗೆ ಕರೆದೊಯ್ದು ತೊಟ್ಟಿದ್ದ ಪೈಜಾಮಾ ಬಿಚ್ಚಿಸಿಯೇ ಬಿಟ್ಟ. ಒಂದೆರಡು ಕ್ಷಣದಲ್ಲಿಯೇ ಶಿಶ್ನ ಮುಂದೊಗಲನ್ನು ಕತ್ತರಿಸಿ ಮುಂಜಿ ಕಾರ್ಯವನ್ನು ಮುಗಿಸಿದ.  ಈ ಕ್ಷಣದಲ್ಲಿಯೇ ವಿನಯಚಂದ್ರನ ಮನಸ್ಸಿನಲ್ಲಿ `ಸಲೀಂ ಚಾಚಾ ಯಾಕೋ ನಮ್ಮ ಮನಸ್ಸನ್ನು ಪರಿವರ್ತಿಸಿ ತನ್ನನ್ನು ಧರ್ಮಾಂತರ ಮಾಡಲು ಯತ್ನಿಸುತ್ತಿದ್ದಾನೆಯೇ? ಒಳ್ಳೆಯ ಮಾತುಗಳನ್ನು ಆಡಿ, ಒಳ್ಳೆಯವನಂತೆ ವರ್ತಿಸಿ ಸಹಾಯ ಮಾಡುವ ನೆಪದಲ್ಲಿ ತಮ್ಮನ್ನು ಆತನ ಧರ್ಮಕ್ಕೆ ಸೇರಿಸಿಕೊಳ್ಳಲು ಹುನ್ನಾರ ಮಾಡುತ್ತಿದ್ದಾನೆಯೇ? ಈ ಮುಂಜಿ ಕಾರ್ಯವೂ ಆತನ ಹುನ್ನಾರದ ಒಂದು ಭಾಗವೇ? ಯಾಕೋ ಮುಂದಿನ ದಿನಗಳಲ್ಲಿ ಹುಷಾರಾಗಿರಬೇಕು...' ಎಂದುಕೊಂಡ.
          ಸಲೀಂ ಚಾಚಾ ಮುಂಜಿ ಮಾಡಿದ್ದ ವೈದ್ಯನಿಗೆ ದುಡ್ಡುಕೊಟ್ಟು ಹೊರಡಲು ಅನುವಾದ. ಆ ವೈದ್ಯ ಗಾಯಗೊಂಡ ಭಾಗಕ್ಕೆ ಹಚ್ಚಲು ಅದೇನೋ ಚಿಕ್ಕ ಟ್ಯೂಬಿನ ಮುಲಾಮನ್ನು ನೀಡಿದ. ವಿನಯಚಂದ್ರನಿಗೆ ಕತ್ತರಿಸುವಾಗ ಉರಿಯಾಗದಿದ್ದರೂ ಈಗ ಉರಿಯಾಗಲಾರಂಭಿಸಿತ್ತು. `ಚಲ್ ಬೇಟಾ.. ದೊಡ್ಡ ಕೆಲಸ ಮುಗಿಯಿತು. ಇನ್ನು ಯಾವುದೇ ಅಪಾಯವಿಲ್ಲ.. ಇನ್ನು ಯಾರೇ ಬಂದರೂ ಬಾಂಗ್ಲಾವಿರಲಿ ವಿಶ್ವದ ಯಾವುದೇ ಕಡೆ ನೀನು ಚಹರೆ ಬದಲಿಸಿಕೊಂಡಿದ್ದರೂ ಮುಸ್ಲೀಮನಲ್ಲ ಎಂದು ಹೇಳುವುದು ಕಷ್ಟ...' ಎಂದ. ವಿನಯಚಂದ್ರನಿಗೆ ಮತ್ತೊಮ್ಮೆ ಮನಸ್ಸು ಧಸಕ್ಕೆಂದಿತು. ಕತ್ತರಿ ಹಾಕಿದ್ದ ಜಾಗದಲ್ಲಿ ಉರಿ ಹೆಚ್ಚಾಗಿತ್ತು.

(ಮುಂದುವರಿಯುತ್ತದೆ...)