Friday, September 12, 2014

ಸಾಗುವ ಬಾ ಜೊತೆಗಾರ

ಸಾಗುವ ಬಾ ಜೊತೆಗಾರ
ಮೆರೆವ ಮರೀಚಿಕೆಯ
ಮರುಳು ಗಾಡಿನ ನಾಡೊಳಗೆ |

ತಲೆಯ ಮೇಲೆ ಸುಡುವ
ರಣ ಬಿಸಿಲು, ಬಸವಳಿಕೆ
ಬಾಯಾರಿಕೆ, ಜೊತೆಗಿರುವ
ಕಷ್ಟ-ನಕ್ಷತ್ರಿಕರು |

ಸಾಗುವ ಬಾ ಜೊತೆಗಾರ.
ಅಳುಕಿಲ್ಲ, ಬಳುಕಿಲ್ಲ
ಕೊನೆಗಾಣದ ರವೆ ರವೆಯ
ಮರಳ ಕಣ ಕಣವ
ಪಾದದಿಂದೊದ್ದು ಸಾಗುವಾ,
ಗಮ್ಯ ತಲುಪುವಾ |

ಹಲ್ಕಿರಿಯುವ ನೆರಳು
ಸಾವ ಸೆಳವು,
ಹಾಗೆಯೇ ಇರಲಿ ಬಿಡು |
ಮೆರೆವ ಮರುಳು
ಮರಳು ದಿಬ್ಬವ
ಮರೆತು ಬಿಡು |

ನಾನು ನೀನಷ್ಟೇ
ಜೊತೆಗಾರರು ಕೊನೆತನಕ.
ಅಳುಕ ಬೇಡ ನೀ,
ಸ್ವರ್ಗದ ಮೆಟ್ಟಿಲೇರುವವರೆಗೆ
ಧರ್ಮರಾಜನ ಜೊತೆಗೊಂದು
ಶ್ವಾನವಿತ್ತಲ್ಲವೇ ಹಾಗೆ
ನನ್ನೊಡನೆ ನೀನು |

ಬಿಡಿಸದ ಬಂಧ, ನಂಟು
ಗಟ್ಟೀ ಛಲ, ದಿಟ್ಟತನ
ಸಾಗುವ ಬಾ ಜೊತೆಗಾರ |

**

(ಈ ಕವಿತೆಯನ್ನು ಬರೆದಿರುವುದು 04-02-2007ರಂದು ದಂಟಕಲ್ಲಿನಲ್ಲಿ)

Tuesday, September 9, 2014

ಪರಾಮಶಿ (ಕಥೆ)

                `ರಾಮಚಂದ್ರ ಆತ್ಮಹತ್ಯೆ ಮಾಡ್ಕ್ಯಂಡನಡಾ.. ನಿಂಗೊತ್ತಾತಾ' ಎಂದು ಮುಂಜಾನೆ ನಾನು ಏಳುತ್ತಿದ್ದಂತೆಯೇ ಮಾಬಲು ಹೇಳಿದ್ದ. ನಾನು ಒಮ್ಮೆ ಅಚ್ಚರಿಗೊಂಡೆ. ಚಿಕ್ಕ ಶಾಕ್ ನೊಂದಿಗೆ `ಹೌದನಾ..?, ಎಂತಕ್ಕಡಾ? ಯಾವತ್ತು ಆತ್ಮಹತ್ಯೆ ಮಾಡಿಕೊಂಡಿದ್ದು..?' ಎಂದು ವಿಚಾರಿಸಲಾಗಿ ಮಾಬಲು `ಗೊತ್ತಿಲ್ಲೆ ಮಾರಾಯಾ.. ನಿನ್ನೆ ರಾತ್ರಿ ಅದ್ಯಾವುದೋ ಲಾಡ್ಜಿಗೆ ಹೋಗಿ ರೂಂ ಮಾಡಿಕೊಂಡು ಫ್ಯಾನಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡ್ಕ್ಯಂಜಾ ಅಂತ ಎಲ್ಲ ಕಡೆ ಸುದ್ದಿ. ಯಂಗೂ ಖರೆ ವಿಷ್ಯ ಇನ್ನೂ ತೆಳದ್ದಿಲ್ಲೆ ನೋಡು. ಆದ್ರೆ ಸಣ್ಣ ವಯಸ್ಸಾಗಿತ್ತಲಾ ಮಾರಾಯಾ.. ಅಂವ ಆತ್ಮಹತ್ಯೆ ಮಾಡ್ಕ್ಯತ್ತಾ  ಅಂದ್ರೆ ಯಾರೂ ನಂಬಲೆ ಸಾಧ್ಯ ಇಲ್ಲೆ ನೋಡು..' ಎಂದ ಮಾಬಲು.
               `ಹೌದಾ ಮಾರಾಯಾ.. ಆರಡಿ ಆಳು ಆಗಿದ್ನಲಾ.. ಮೊನ್ನೆ ಅಷ್ಟೆ ಎಂತದ್ದೋ ಜಾಬ್ ಸಿಕ್ಕಿದ್ದು ಹೇಳಿ ಸ್ವೀಟ್ ಕೊಟ್ಟಿಕ್ಕೆ ಹೋಗಿದ್ದ. ಖರೆ ಅಂವ ಆತ್ಮಹತ್ಯೆ ಮಾಡ್ಕ್ಯಂಡಿದ್ದೇ ಹೌಡನಾ..? ' ವಿಷಯವನ್ನು ಸ್ಪಷ್ಟಪಡಿಸಿಕೊಳ್ಳಲು ನಾನು ಮತ್ತೊಮ್ಮೆ ಕೇಳಿದ್ದೆ.
               `ಥೋ ಮಾರಾಯಾ.. ಆನೂ ಹಿಂಗೆ ಅಂದಕಂಡಿದ್ನಾ.. ಎಲ್ಲಾರೂ ಹಂಗೆ ಅಂದ್ವಾ.. ಅದಕ್ಕಾಗಿ ನಂಬಲೇ ಬೇಕಾತು ನೋಡು..' ಎಂದು ಮಾಬಲು ಹೇಳಿದಾಗ ನಾನು ನಂಬಲೇಬೇಕಾಯಿತು. `ಬಾ ಅವ್ನ ಅಂತ್ಯಸಂಸ್ಕಾರ ನೋಡ್ಕ್ಯಂಡಾದ್ರೂ ಬಪ್ಪನ..' ಎಂದು ಮಾಬಲುವನ್ನು ರಾಮಚಂದ್ರನ ಮನೆಯ ಕಡೆಗೆ ಕರೆದೊಯ್ದೆ.
               ಮೂಲೆಮನೆ ರಾಮಚಂದ್ರ ಅಂದರೆ ನಮ್ಮ ಬಳಗದಲ್ಲಿಯೇ ಅತ್ಯಂತ ಕ್ರಿಯಾಶೀಲ ವ್ಯಕ್ತಿಯಾಗಿದ್ದ ಅಂದರೆ ತಪ್ಪಾಗಲಿಕ್ಕಿಲ್ಲ. ನಮ್ಮದೆಲ್ಲ ಒಂದೇ ವಯಸ್ಸು. ಆತನಿಗೂ ನನ್ನಷ್ಟೇ ಅಂದರೆ 25ರ ಆಜುಬಾಜಿನ ವಯಸ್ಸು. ಉಕ್ಕುವ ಯೌವನ. ಹುಚ್ಚುಖೋಡಿಯ ಮನಸ್ಸು. ಕಾಲೇಜು ದಿನಗಳಲ್ಲಿ ಕ್ರೀಡೆಗಳಲ್ಲಿ ರಾಮಚಂದ್ರನನ್ನು ಬಿಟ್ಟರೆ ಇನ್ನೊಬ್ಬರಿರಲಿಲ್ಲ. ಎಲ್ಲದರಲ್ಲಿಯೂ ಆತನೇ ಮುಂದು. ಆರಡಿಯ ಆಜಾನುಬಾಹು ಬೇರೆ. ಹುಡುಗಿಯರಂತೂ ಆತನನ್ನು ಮುತ್ತಿಕೊಳ್ಳುತ್ತಿದ್ದರು. ಇಂತಹ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದ ಎಂದರೆ ನಂಬಲು ಅಸಾಧ್ಯವೇ. ಯಾಕೋ ಏನೆಲ್ಲ ಆಲೋಚನೆಗಳು ಮನಸ್ಸಿನಲ್ಲಿ ಮೂಡಿದವು. ಥಟ್ಟನೆ ತಲೆ ಕೊಡವಿ ಮಾಬಲುವಿನ ಜೊತೆ ಅವರ ಮನೆಯ ಕಡೆಗೆ ಮುನ್ನಡೆದೆ.
                ನಮ್ಮ ಗೆಳೆಯರ ಬಳಗದಲ್ಲಿ ರಾಮಚಂದ್ರನದ್ದು ವಿಶೇಷ ಪಾತ್ರ. ಎಲ್ಲ ಕಡೆ ಕಾಣಿಸಿಕೊಂಡು ಎಲ್ಲೆಡೆ ಸಲ್ಲುವವನಾಗಿದ್ದ. ನಗುತ್ತ, ನಗಿಸುತ್ತ ಖುಷಿ ಖುಷಿಆಯಗಿ ಇರುತ್ತಿದೆ. ಆತನಿದ್ದ ಕಡೆಯಲ್ಲಿ ಕ್ರಿಯಾಶೀಲತೆಯೇ ಇದೆಯೇನೋ ಎನ್ನುವಂತಿದ್ದ. ಆತನ ಮನೆಯಲ್ಲೂ ಕೂಡ ಆತನಿಗೆ ಪೂರಕವಾಗಿಯೇ ಇದ್ದರು. ಕೇಳಿದ್ದನ್ನು ಕೊಡಿಸುವ ಅಪ್ಪ, ಮಗನ ನಡೆ ನುಡಿಗಳಿಗೆಲ್ಲ ಸೈ ಎನ್ನುವ ಅಮ್ಮ. ಒಟ್ಟಿನಲ್ಲಿ ಆತನ ಬದುಕಿನಲ್ಲಿ ಎಲ್ಲವೂ ಇದ್ದವು. ಅಂತವನು ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ ಎಂದರೆ ನಂಬುವುದು ಕಷ್ಟವೇ.
              ರಾಮಚಂದ್ರನನ್ನು ನಾನು ಅನೇಕ ಸಾರಿ ಅರ್ಥಮಾಡಿಕೊಳ್ಳಲು ಯತ್ನಿಸಿ ಸೋತಿದ್ದಿದೆ. ಆಗೊಮ್ಮೆ ಈಗೊಮ್ಮೆ ನಗುತ್ತಾನೆ. ತಮಾಷೆ ಮಾಡುತ್ತಾನೆ. ತಾನಿರುವ ವಾತಾವರಣವನ್ನು ಸದಾ ಖುಷಿ ಖುಷಿಯಾಗಿ ಇಡಲು ಪ್ರಯತ್ನಿಸುತ್ತಿದ್ದಂತಹ ವ್ಯಕ್ತಿ. ಆದರೆ ತನ್ನ ಹಾಸ್ಯವನ್ನು ಎಂದೂ ಎಲ್ಲೆ ಮೀರಲು ಬಿಟ್ಟವನಲ್ಲ. ಗಂಭೀರ ಅಂಶಗಳು ಆತನಲ್ಲಿ ಸಾಕಷ್ಟಿದ್ದವು. ಜೀವನದಲ್ಲಿ ಎಂದೂ ನಿರಾಸೆಯನ್ನು ಅನುಭವಿಸಿದವನಲ್ಲ. ಸೋಲಿಗೆ ಹೆದರಿದವನಂತೂ ಅಲ್ಲವೇ ಅಲ್ಲ. ಇಂತಹ ವ್ಯಕ್ತಿ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ ಎಂದರೆ ಹೇಗೆ ಸಾಧ್ಯ ಎನ್ನುವ ಆಲೋಚನೆಯಲ್ಲಿಯೇ ಆತನ ಮನೆಗೆ ಹೋದೆ.
             ಮನೆ ನೀರವವಾಗಿತ್ತು. ತಂದೆ-ತಾಯಿಗಳು ದುಃಖದಲ್ಲಿದ್ದರು. ಆತನ ಶವ ಹೊರ ಮನೆಯಲ್ಲಿತ್ತು. ಬಂಧುಗಳು ಆಗಲೇ ಮುಂದಿನ ಕಾರ್ಯವನ್ನು ಕೈಗೊಂಡಾಗಿತ್ತು. ನಾನು ಅರೆಘಳಿಗೆ ರಾಮಚಂದ್ರನ ಶವದ ಮುಂದೆ ನಿಂತೆ. ಮನಸ್ಸಿನಲ್ಲಿ ಆತನ ಆತ್ಮಕ್ಕೆ ಶಾಂತಿ ಸಿಗಲಿ ಭಗವಂತ ಎಂದು ಹಾರೈಸಿದೆ. ಮೆಚ್ಚಿನ ಗೆಳೆಯನನ್ನು ಕಳೆದುಕೊಂಡ ದುಃಖ ಬಹಳೆ ಕಾಡಿತು. ಕೆಲ ಹೊತ್ತಿನ ನಂತರ ಆತನ ಅಂತ್ಯ ಸಂಸ್ಕಾರ ಕೂಡ ನಡೆಯಿತು. ಭಾರವಾದ ಹೃದಯದೊಂದಿಗೆ ನಾನು ಅಲ್ಲಿಂದ ಮರಳಿದೆ.
              ರಾಮಚಂದ್ರನ ಆತ್ಮಹತ್ಯೆಗೆ ಕಾರಣವೇನು ಎನ್ನುವುದು ನನಗೆ ಕೊನೆಗೂ ತಿಳಿದಿರಲಿಲ್ಲ. ನಾನು ಅದನ್ನು ತಿಳಿಯಬೇಕಲ್ಲ ಎಂದುಕೊಂಡು ಹೊರಟೆ. ಸೊಕಾಸುಮ್ಮನೆ ಪತ್ತೆದಾರಿಕೆ ಕೆಲಸಕ್ಕೆ ಇಳಿದೆ ಎನ್ನಿ. ಆತನ ಪರಿಚಯ ಇದ್ದವರ ಬಳಿ ವಿಚಾರಿಸಿದೆ. ನಾನು ವಿಚಾರಿಸಿದವರೆಲ್ಲರೂ ಬಗೆ ಬಗೆಯ ಕಾರಣಗಳನ್ನು ತಿಳಿಸಿದರು. ಒಬ್ಬ ಅನಾರೋಗ್ಯ ಎಂದರೆ ಮತ್ತೊಬ್ಬ ಪ್ರೇಮವೈಫಲ್ಯ ಎಂದರು. ಮತ್ತಿನ್ಯಾರೋ ಆತ ಕೆಲಸ ಮಾಡುತ್ತಿದ್ದ ಆಫೀಸಿನಲ್ಲಿ ಮೇಲಧಿಕಾರಿಗಳ ಜೊತೆ ವೈಮನಸ್ಸು ಉಂಟಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದೂ ತಿಳಿಸಿದರು. ಆದರೆ ಯಾರೊಬ್ಬರೂ ನಿಖರ ಕಾರಣವನ್ನು ತಿಳಿಸಲಿಲ್ಲ. ನನಗೆ ಉತ್ತರ ಗೊತ್ತಾಗುವ ಬದಲು ಮತ್ತಷ್ಟು ಗೊಂದಲವೇ ಹೆಚ್ಚಿತು. ಕೊನೆಗೆ ಆತನ ಮನೆಗೆ ಹೋಗಿ ವಿಚಾರಿಸಿದರೆ ನಿಖರ ಕಾರಣ ಗೊತ್ತಾಗುತ್ತದೆ ಎಂದುಕೊಂಡೆ. ನಾಲ್ಕೈದು ದಿನಗಳ ನಂತರ ಆತನ ಮನೆಗೆ ಹೋದೆ.
           ಮನೆಯಲ್ಲಿ ವಿಷಯವನ್ನು ಹೇಗೋ ತಿಳಿಸಿದೆ. ದುಃಖದ ಮಡುವಿನಲ್ಲಿದ್ದ ಆತನ ಮನೆಯವರು ಆತನ ಕೋಣೆಯನ್ನು ತೋರಿಸಿದರು. ನಾನು ರಾಮಚಂದ್ರನ ಕೋಣೆಗೆ ತೆರಳಿ ಆತನ ಆತ್ಮಹತ್ಯೆಗೆ ಕಾರಣ ಸಿಗಬಹುದಾ ಎಂದು ಹುಡುಕಾಡಲಾರಂಭಿಸಿದೆ. ಆತ ಕೂರುತ್ತಿದ್ದ ಜಾಗ, ಟೇಬಲ್, ಮಂಚದ ಕೆಳಗೆ ಎಲ್ಲ ಹುಡುಕಿದೆ. ಹೀಗೆ ಹುಡುಕುತ್ತಿದ್ದಾಗ ಅಚಾನಕ್ಕಾಗಿ ಮೆಡಿಕಲ್ ರಿಪೋರ್ಟ್ ಒಂದು ಸಿಕ್ಕಿತು. ಬೇಗನೆ ತೆಗೆದು ನೋಡಿದೆ. ರಾಮಚಂದ್ರನ ಬ್ಲಡ್ ಟೆಸ್ಟ್ ರಿಪೋರ್ಟ್ ಇತ್ತು. ಯಾವು ಯಾಔಉದೋ ಟೆಸ್ಟುಗಳು. ಏನೇನೋ ತಪಾಸಣೆ ಮಾಡಿದ್ದರು. ಮೊದಲಿಗೆ ನನಗೆ ತಲೆಬುಡ ಅರ್ಥವಾಗಲಿಲ್ಲ. ಆದರೆ ಅಲ್ಲೊಂದು ಕಡೆಗೆ ನನ್ನ ಕಣ್ಣು ಹಾಗೆಯೇ ನಿಂತಿತು. ಬ್ಲಡ್ ರಿಪೋರ್ಟಿನ ಕೊನೆಯಲ್ಲಿ ಎಚ್.ಐ.ವಿ. ಟೆಸ್ಟ್ ಮಾಡಲಾಗಿತ್ತು. ಅದು ಪಾಸಿಟಿವ್ ರಿಪೋರ್ಟ್ ತೋರಿಸುತ್ತಿತ್ತು. ನನಗೆ ಒಂದರೆಘಳಿಗೆ ಕೈಕಾಲು ಕಂಪಿಸತೊಡಗಿತು. ಅಂದರೆ ರಾಮಚಂದ್ರನಿಗೆ ಏಡ್ಸ್ ಇತ್ತೇ? ಒಂದು ಕ್ಷಣ ನನ್ನಲ್ಲಿ ಆತಂಕ ಕಾಡಿತು. ಮನಸ್ಸು ಒಪ್ಪಲು ನಿರಾಕರಿಸಿತು.
             ತಕ್ಷಣವೇ ಆತನ ಮನೆಯವರಿಗೆ ಈ ರಿಪೋರ್ಟ್ ತೋರಿಸಿದೆ. ಅವರಿಗೂ ಒಂದು ಕ್ಷಣ ನಂಬುವುದು ಸಾಧ್ಯವಾಗಲಿಲ್ಲ. ಕಣ್ಣಲ್ಲಿ ಅಚ್ಚರಿಗಳಿತ್ತು. ಆತಂಕವೂ ಇತ್ತು. ಮನೆಯವರಂತೂ ಆ ರಿಪೋರ್ಟನ್ನು ನಂಬಲು ತಯಾರಿರಲಿಲ್ಲ. ಆತನ ತಾಯಿಯಂತೂ `ರಾಮಚಂದ್ರನಿಗೆ ಮದುವೆ ಗೊತ್ತಾಗಿತ್ತು. ಎಂಗೇಜ್ ಮೆಂಟಿಗೆ ತಯಾರಿ ಕೂಡ ನಡೆದಿತ್ತು. ಹುಡುಗಿ ಕಡೆಯವರು ಜಾತಕದ ಜೊತೆಗೆ ಮೆಡಿಕಲ್ ಚೆಕ್ ಅಪ್ ರಿಪೋರ್ಟ್ ಕೇಳಿದ್ದರು. ಅದಕ್ಕೆ ರಾಮಚಂದ್ರ ಬ್ಲಡ್ ಟೆಸ್ಟ್ ಮಾಡಿಸಿಕೊಂಡು ಬಂದಿದ್ದ. ಆದರೆ ನನ್ನ ಮನಸ್ಸು ಹೇಳುತ್ತಿದೆ. ಆತನಿಗೆ ಏಡ್ಸ್ ಇರಲಿಲ್ಲ. ಖಂತಿವಾಗಿಯೂ ರಾಮಚಂದ್ರ ತೀರಾ ಹೆಂಗಸರ ಸಹವಾಸ ಮಾಡುವಂತವನಲ್ಲ. ಏನೇ ಇದ್ದರೂ ನಮ್ಮ ಬಳಿ ಹೇಳುತ್ತಿದ್ದ. ಈಗ ಆತನ ಮದುವೆಗೆ ಗೊತ್ತು ಮಾಡಿದ್ದ ಹುಡುಗಿ ಕೂಡ ಪರಿಚಯದವಳೇ ಇದ್ದಳು. ಅವರು ಒಬ್ಬರಿಗೊಬ್ಬರು ಒಪ್ಪಿದ್ದರೂ ಕೂಡ. ಮದುವೆಗೆ ಈಗ ಎಲ್ಲರೂ ಬ್ಲಡ್ ಟೆಸ್ಟ್ ಮಾಡಿಸಬೇಕು ಎನ್ನುತ್ತಾರಲ್ಲ. ಅದಕ್ಕೆ ಈತನೂ ಟೆಸ್ಟ್ ಮಾಡಿಸಿದ್ದ..' ಎಂದು ಹೇಳಿದರು.
         ರಾಮಚಂದ್ರನ ತಾಯಿ ಹೇಳಿದ ಮಾತಿನಲ್ಲೂ ಸತ್ಯವಿದೆ ಎನ್ನಿಸಿತು. ಅಷ್ಟೇ ಏಕೆ. ನನಗೆ ರಾಮಚಂದ್ರನ ಮೇಲೆ ನಂಬಿಕೆ ಇತ್ತಲ್ಲ. ಆತನಿಗೆ ಏಡ್ಸ್ ಇದೆ ಎನ್ನುವ ಕಳಂಕ ಬೇರೆ ಬಂದಿತಲ್ಲ. ಈ ಕಾರಣದಿಂದಲೇ ಆತ ಆತ್ಮಹತ್ಯೆ ಮಾಡಿಕೊಂಡನಲ್ಲ ಎನ್ನಿಸಿತು. ಹೊರ ಜಗತ್ತಿಗೆ ಈ ವಿಷಯ ತಿಳಿದರೆ ರಾಮಚಂದ್ರನನ್ನು ಕೀಳಾಗಿ ಕಾಣುತ್ತಾರಲ್ಲ ಛೆ.. ಎಂದೂ ಅನ್ನಿಸಿತು. ಮನಸ್ಸು ಬೇಜಾರಾಗಿದ್ದಾಗಲೇ ಹೊರಗಡೆ ಪೋಸ್ಟ್ ಮ್ಯಾನ್ ಬಂದು ಬಾಗಿಲು ತಟ್ಟಿದ್ದ. ರಾಮಚಂದ್ರನ ತಂದೆ ಪತ್ರವನ್ನು ತೆಗೆದುಕೊಂಡು ಒಡೆದು ನೋಡಿದರು. ಲಕೋಟೆಯನ್ನು ಒಡೆದು ನೋಡಿದವರೇ ಕುಸಿದು ಕುಳಿತರು.
          ಹೌಹಾರಿದ ನಾನು ಅವರ ಬಳಿಯಿದ್ದ ಲಕೋಟೆ ಪಡೆದು ಓದಲಾರಂಭಿಸಿದೆ. ಅದರಲ್ಲೊಂದು ಬ್ಲಡ್ ರಿಪೋರ್ಟ್ ಇತ್ತು. ಜೊತೆಗೊಂದು ಪತ್ರ. ಬ್ಲಡ್ ರಿಪೋರ್ಟ್ ರಾಮಚಂದ್ರನ ಹೆಸರಿನಲ್ಲಿತ್ತು. ಅದರಲ್ಲಿ ಎಚ್.ಐ.ವಿ. ಕಾಲಮ್ಮಿನಲ್ಲಿ ನೆಗೆಟಿವ್ ಎಂದಿತ್ತು. ನನಗೆ ಮತ್ತೆ ಗೊಂದಲ. ರಾಮಚಂದ್ರನಿಗೆ ಏಡ್ಸ್ ಇತ್ತೋ ಇಲ್ಲವೋ ಅಂತ. ಕೊನೆಗೆ ಜೊತೆಯಲ್ಲಿದ್ದ ಪತ್ರವನ್ನು ಓದಲಾರಂಭಿಸಿದೆ. ಆತನ ಬ್ಲಡ್ ಟೆಸ್ಟ್ ಮಾಡಿದ್ದ ಲ್ಯಾಬಿನವರು ಬರೆದಿದ್ದ ಪತ್ರ ಅದು.
           ರಾಮಚಂದ್ರನಿಗೆ ಬರೆದಿದ್ದ ಆ ಪತ್ರದಲ್ಲಿ `ಬ್ಲಡ್ ಟೆಸ್ಟ್ ರಿಪೋರ್ಟಿನಲ್ಲಿ ಪ್ರಮಾದವಾಗಿದೆಯೆಂದೂ, ಹಿಂದೆ ಕಳಿಸಿದ್ದ ರಿಪೋರ್ಟ್ ನಲ್ಲಿ ಟೆಸ್ಟ್ ಮಾಹಿತಿ ಕೊಂಚ ಹೆಚ್ಚೂ ಕಡಿಮೆಯಾಗಿದೆಯೆಂದೂ, ಕಣ್ತಪ್ಪಿನಿಂದ ಒಂದೆರಡು ಪ್ರಮಾದವಾಗಿದೆ. ಎಚ್.ಐ.ವಿ ನೆಗೆಟಿವ್ ಇದ್ದಿದ್ದನ್ನು ಎಚ್.ಐ.ವಿ. ಪಾಸಿಟಿವ್ ಎಂದು ಬರೆಯಲಾಗಿದೆ. ಆದರೆ ತಮಗೆ ಎಚ್.ಐ.ವಿ. ಪಾಸಿಟಿವ್ ಆಗಿಲ್ಲ. ನೆಗೆಟಿವ್ ಆಗಿದೆ. ತಾವು ಈ ಕುರಿತು ಭಯಪಡಬೇಕಿಲ್ಲ. ತಮಗೆ ಈಗ ನೀಡಲಾಗಿರುವ ರಿಪೊರ್ಟ್ ಬೇರೊಬ್ಬರದ್ದಾಗಿದೆ.  ಹಳೆಯ ಮೆಡಿಕಲ್ ರಿಪೋರ್ಟ್ ಬದಲು ಸರಿಪಡಿಸಿ ಕಳಿಸಿರುವ ಈ ಹೊಸ ರಿಪೋರ್ಟ್ ತೆಗೆದುಕೊಳ್ಳಿ. ಲ್ಯಾಬಿನ ಕೆಲಸಗಾರರ ಪರಾಮಶಿಯಿಂದ ಈ ರೀತಿಯಾಗಿದೆ. ದಯವಿಟ್ಟು ಕ್ಷಮೆಯಿರಲಿ' ಎಂದು ಬರೆದಿತ್ತು.
          ಪತ್ರ ಓದಿ ಮುಗಿಸುತ್ತಿದ್ದಂತೆ ನನ್ನೊಳಗೆ ಹೇಳಿಕೊಳ್ಳಲಾಗದ ತಳಮಳ. ಸಿಟ್ಟೋ, ಸೆಡವೋ ಏನೊಂದೂ ಅರ್ಥವಾಗಲಿಲ್ಲ. ಲ್ಯಾಬಿನ ಕೆಲಸಗಾರರ ತಪ್ಪಿನಿಂದಾಗಿ ಒಂದು ಜೀವ ಬಲಿಯಾಗಿತ್ತು. ಲ್ಯಾಬಿನವರು ಪರಾಮಶಿಯ ಹೆಸರು ಹೇಳುತ್ತಿದ್ದರೂ ಈಗೊಂದು ಪ್ರಮಾದ ಜರುಗಿಬಿಟ್ಟಿತ್ತು. ಯಾವುದೇ ರೋಗವಿಲ್ಲದೇ ಆರಾಮಾಗಿದ್ದ ರಾಮಚಂದ್ರ ಟೆಸ್ಟಿನಲ್ಲಿದ್ದ ತಪ್ಪಿನ ಕಾರಣ ಆತ್ಮಹತ್ಯೆ ಮಾಡಿಕೊಂಡಿದ್ದ. ಏನೂ ಇಲ್ಲದಿದ್ದರೂ ತಾನೇ ಬಲಿಯಾಗಿದ್ದ. ರಾಮಚಂದ್ರನಿಗೆ ಏಡ್ಸ್ ಇರಲಿಲ್ಲ ಎಂದು ಖುಷಿಪಡಲೋ ಅಥವಾ ಆತ ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ದುಃಖ ಪಡಲೋ, ಲ್ಯಾಬಿನ ಕೆಲಸಗಾರರ ನಿರ್ಲಕ್ಷ್ಯಕ್ಕೆ ಸಿಟ್ಟಾಗಲೋ ಅರ್ಥವಾಗಲಿಲ್ಲ. ಏನೂ ಇಲ್ಲದೇ ಏಡ್ಸ್ ಹಣೆಪಟ್ಟಿ ಹೊತ್ತು, ಆ ಹಣೆಪಟ್ಟಿಯನ್ನು ಕಳಚಿಡುವ ಸಮಸಯದಲ್ಲಿ ಆತನೇ ಇರಲಿಲ್ಲ. ಹನಿಗೂಡಿದ ಕಣ್ಣಿನೊಂದಿಗೆ ಆತನ ಮನೆಯಿಂದ ವಾಪಾಸಾಗಿದ್ದೆ.

**
(ಈ ಕಥೆಯನ್ನು ಬರೆದಿದ್ದು 09-09-2014ರಂದು ಶಿರಸಿಯಲ್ಲಿ)

Monday, September 8, 2014

ಹನಿಗಳೊಂದಿಗೆ ಎಂಜಾಯ್ ಮಾಡಿ

ಪಾಕಿಸ್ತಾನ

ಪಾಕಿಸ್ತಾನವೆಂದರೆ ನಿಲುಕಿಗೆ
ಕಾಣುವ ಮರುಭೂಮಿ ನಾಡು |
ಒಡಲೊಳಗೆ ಅರಾಜಕತೆಯ ಗೂಡು ||
ಆದರೂ ತುಂಬಿ ತುಳುಕುತ್ತಿದೆ
ಭಾರತದ ವಿರುದ್ಧ ಸೇಡು ||

ಹೊಸ ಆಶ್ರಮ

ಅಭಲಾಶ್ರಮ, ಅನಾಥಾಶ್ರಮ,
ವೃದ್ಧಾಶ್ರಮ, ಪಾದುಕಾಶ್ರಮ
ಇವೆಲ್ಲವನ್ನೂ ಕಂಡದ್ದಾಯ್ತು |
ಇನ್ನು ಕಮಂಡಲಾಶ್ರಮ
ಲಾಂಗೂಲಾಶ್ರಮ ಹಾಗೂ
ಕೌಪೀನ ಆಶ್ರಮಗಳನ್ನಷ್ಟು
ನೋಡುವುದೊಂದೇ ಬಾಕಿ ||

ಸಾನಿಯಾ ಆಟ

ಹಿಂದೊಮ್ಮೆ ಅಧ್ಬುತವಾಗಿ ಆಡುತ್ತಿದ್ದಳು
ಸಾನಿಯಾ ಆಟ |
ಹುಡುಗರಿಗಂತೂ ಆಕೆಯ ಕಡೆಗೇ ನೋಟ ||
ಆನಂತರ ಪ್ರಸಿದ್ಧವಾಗಿದ್ದು ಮಾತ್ರ
ಆಕೆಯ ಮೈಮಾಟ ||

ರೈತನ ಕಥೆ

ನಮ್ಮ ನಾಡಿನ ರೈತ
ಬೆಳೆದ ಬೆಳೆಗೆ
ಬೆಲೆ ಬಂದರೆ
ಆತ ಧನಿಕ |
ಬೆಲೆ ಬರದಿದ್ದರೆ ಮಾತ್ರ
ಕುಡಿಯುವ ಕೀಟನಾಶಕ ||

ಗೋರ್ಮೆಂಟು ಬಸ್ಸು

ಜೋರಾಗಿ ಓಡಲು ಪ್ರಯತ್ನಿಸಿ
ಸಾಧ್ಯವಾಗದೇ ನಿಲ್ಲುವ ಹಾಗೂ
ಪ್ರತಿ ಘಟ್ಟದಲ್ಲೂ ದಮ್ಮು
ಕೆಮ್ಮುಗಳನ್ನು ಪ್ರದರ್ಶಿಸುವುದೇ
ಗೋರ್ಮೆಂಟು ಬಸ್ಸು ||


Sunday, September 7, 2014

ನನ್ನ ಒಲವು

ನೀನೆಂದರೆ ಒಲವ ಖನಿ
ಪ್ರೀತಿಯ ಬನಿ |

ಎದೆಯಾಳದಲ್ಲಿ ಹುದುಗಿಟ್ಟ
ಅವ್ಯಕ್ತ ಬಾವ ನೀನು |
ಕಣ್ಣಲ್ಲಿ ಜಿನುಗಿದ್ದರೂ 
ಉದುರದ ನೀರು ನೀನು |

ಬಾಯಿ ಬೊಚ್ಚಾಗಿದ್ದರೂ
ಉಕ್ಕುವ ನಗು ನೀನು |
ಮಗುವಿನ ಒಡಲಿನಿಂದ 
ಇಳಿವ ಕೇಕೆ ನೀನು |

ಶತಮಾನಗಳಿಂದ ಬಂದ
ಸಂಪ್ರದಾಯ ನೀನು |
ಹರಿವ ನದಿಗೆ ಅಡ್ಡಾಗಿ
ಕಟ್ಟಿದ ಒಡ್ಡು ನೀನು |

ಮರೆತರೂ ಮರೆಯದ
ಸೇಡಿನ ಕಿಡಿ ನೀನು |
ವರ್ಷಗಳುರುಳಿದರೂ ಮಾಯದ
ಗಾಯದ ಕಲೆ ನೀನು |

ಒಲವೇ ಹೀಗೆ ಸದಾ ಕಾಲ ಕಾಡುತ್ತದೆ
ಬಿಡದೇ ಸೆಳೆಯುತ್ತದೆ. |
ಒಳಗೊಳಗೆ ಮೊಳೆಯುತ್ತದೆ.
ಹೆಮ್ಮರವಾಗಿ ನಿಲ್ಲುತ್ತದೆ |

**

(ಈ ಕವಿತೆಯನ್ನು ಬರೆದಿದ್ದು 07-09-2014ರಂದು ಶಿರಸಿಯಲ್ಲಿ)

Friday, September 5, 2014

ಬೆಂಗಾಲಿ ಸುಂದರಿ-24

(ಬಾಂಗ್ಲಾದಲ್ಲಿ ಹಿಂದೂ ಹಬ್ಬದ ಆಚರಣೆ)
             ತುಳಿದಷ್ಟೂ ದಾರಿ ದೂರವಾಗುತ್ತಿದೆಯಾ ಎನ್ನಿಸುತ್ತಿತ್ತು. ಬಂಗಾಳದಲ್ಲಿ ಮುಂಜಾವು ಆಗಷ್ಟೆ ಕಣ್ತೆರೆಯುತ್ತಿತ್ತು. ಸೂರ್ಯ ನಿಧಾನವಾಗಿ ಮೂಡಣದಲ್ಲಿ ಏರಿ ಬರುತ್ತಿದ್ದ. ಬಾನು ರಂಗೇರಿತ್ತು. ಬೆಳಗಿನ ಹೊಸ ಹುಮ್ಮಸ್ಸು ವಿನಯಚಂದ್ರ ಸಾಕಷ್ಟು ವೇಗವಾಗಿ ಸೈಕಲ್ ತುಳಿಯುತ್ತಲೇ ಇದ್ದ. ಸಲೀಂ ಚಾಚಾ ರಾತ್ರಿಯೆಲ್ಲ ಸೈಕಲ್ ತುಳಿದ ಕಾರಣ ಈಗತಾನೆ ನಿದ್ದೆಗೆ ಜಾರಿದ್ದ. ಚಾಚಾನಿಗೆ ವಯಸ್ಸಾಗಿದ್ದರೂ ಕೂಡ ಮೈಯಲ್ಲಿ ಬಹಳ ಕಸುವನ್ನು ಹೊಂದಿದ್ದಾನೆ. ಅದೆಷ್ಟು ದಶಕಗಳ ಕಾಲ ಸೈಕಲ್ ತುಳಿದಿದ್ದನೋ ಚಾಚಾ. ಈಗಲೂ ಯುವಕರನ್ನು ನಾಚಿಸುವಂತೆ ಸೈಕಲ್ ತುಳಿಯಿತ್ತಿದ್ದ. ಚಾಚಾನ ವೇಗ, ಸಮಯಪ್ರಜ್ಞೆ ಹಾಗೂ ಚಾಕಚಕ್ಯತೆ ವಿನಯಚಂದ್ರನನ್ನು ಬೆರಗುಗೊಳಿಸಿದ್ದವು. ಈ ಚಾಚಾನ ಸಹಾಯ, ಸಹಯೋಗ ಇಲ್ಲದಿದ್ದರೆ ಬಾಂಗ್ಲಾದ ಯಾವುದೋ ಗಲ್ಲಿಯಲ್ಲಿ ಹೆಣವಾಗಿ ಬೀಳುತ್ತಿದ್ದೆವು ತಾವು ಎಂದುಕೊಂಡ ವಿನಯಚಂದ್ರ.
                ರಸ್ತೆಯಲ್ಲಿ ಆಗೊಮ್ಮೆ ಈಗೊಮ್ಮೆ ವಾಹನಗಳು ಭರ್ರೆಂದು ಹಾದು ಹೋಗುತ್ತಿದ್ದವು. ಕಾಲಿಯಾಖೈರ್ ನ ಹೊರ ರಸ್ತೆಯಲ್ಲಿ ಸಾಗಿ ಮಿರ್ಜಾಪುರದ ರಸ್ತೆಯ ಕಡೆಗೆ ಹೊರಳುವ ವೇಳೆಗೆ ಆಗಲೇ ಸೂರ್ಯ ತನ್ನ ಮೊದಲ ಕಿರಣಗಳನ್ನು ಭೂಮಿಯ ಮೇಲೆ ಚೆಲ್ಲಿಯಾಗಿತ್ತು. ಕಾಲಿಯಾಖೈರ್ ದಾಟುತ್ತಿದ್ದಂತೆ ಮತ್ತೆ ವಿಸ್ತಾರವಾದ ಗದ್ದೆಯ ಬಯಲುಗಳು ಕಾಣಿಸಿದವು. ಗದ್ದೆಬಯಲಿನ ಕೊನೆಯಲ್ಲಿ ಗೆರೆ ಎಳೆದಂತೆ ನದಿಯೊಂದು ಹಾದು ಹೋಗಿತ್ತು. ಬ್ರಹ್ಮಪುತ್ರಾ ನದಿಯ ಒಡಲನ್ನು ಸೇರುವ ಈ ನದಿಯನ್ನು ನಾವು ದಾಟಿ ಬಂದಿದ್ದೇವೆ ಎಂದುಕೊಂಡ ವಿನಯಚಂದ್ರ.
               ಮಾತಿನ ಹುಕಿಗೆ ಬಿದ್ದಿದ್ದ ಮಧುಮಿತಾ `ಮಳೆಗಾಲದಲ್ಲಿ ಪ್ರವಾಹ ಉಕ್ಕೇರಿದಾಗ ಬ್ರಹ್ಮಪುತ್ರಾ ನದಿ ಈ ಪ್ರದೇಶವನ್ನೆಲ್ಲ ಮುಳುಗಿಸಿಬಿಡುತ್ತದೆ..' ಎಂದಳು.
              `ಹಾಗಾದರೆ ಬ್ರಹ್ಮಪುತ್ರಾ ನದಿ ಕೂಡ ಇಲ್ಲೇ ಎಲ್ಲೋ ಹತ್ತಿರದಲ್ಲಿರಬೇಕು..' ಎಂದು ಕೇಳಿದ ವಿನಯಚಂದ್ರ.
                `ಊಹೂಂ. ಆ ನದಿ ಸಾಕಷ್ಟು ದೂರದಲ್ಲಿಯೇ ಇದೆ. ಆದರೆ ಮಳೆಗಾಲದಲ್ಲಿ ಅದರಲ್ಲಿ ನೀರಿನ ಹರಿವು ಸಿಕ್ಕಾಪಟ್ಟೆ ಜಾಸ್ತಿಯಾಗಿರುತ್ತದೆ. ಬಾಂಗ್ಲಾ ನಾಡು ಬಯಲು. ಈ ಗದ್ದೆ ಬಯಲಿನ ತುಂಬೆಲ್ಲ ನೀರು ತುಂಬಿ ಬಿಡುತ್ತವೆ. ಜೊತೆಗೆ ಮಳೆಗಾಲದ ಸಂದರ್ಭದಲ್ಲಿ ಬ್ರಹ್ಮಪುತ್ರ ನದಿಯ ಉಪನದಿಗಳೂ ಉಕ್ಕೇರುವ ಕಾರಣ ನೀರು ಎಲ್ಲೆಂದರಲ್ಲಿ ನಿಲ್ಲುತ್ತವೆ. ಮಳೆಗಾಲದಲ್ಲಿ ನೋಡಬೇಕು. ಆಗ ಈ ರಸ್ತೆಯಿದೆಯಲ್ಲ ಇದರ ಅಕ್ಕಪಕ್ಕದಲ್ಲೆಲ್ಲ ನೀರು ನಿಂತಿರುತ್ತವೆ. ನಡುವೆ ಮಾತ್ರ ಕರ್ರಗೆ ಉದ್ದಾನುದ್ದ ಟಾರು ರಸ್ತೆ ಹಾದು ಹೋಗಿದ್ದು ಎಂತ ಚಂದ ಕಾಣಿಸುತ್ತೆ ಅಂತೀಯಾ..'
           `ಓಹೋ.. ನೀನು ಈ ಪ್ರದೇಶದಲ್ಲಿ ಅನೇಕ ಸಾರಿ ಓಡಾಡಿದ್ದೀಯಾ ಅನ್ನು...'
           `ಹುಂ.. ಬಹಳಷ್ಟು ಸಾರಿ ಓಡಾಡಿದ್ದೀನಿ. ಆದರೆ ಸೈಕಲ್ಲಿನ ಮೇಲೆ ಹೀಗೆ ಭಯದ ನೆರಳಿನಲ್ಲಿ ಓಡಾಡುತ್ತಿರುವುದು ಇದೇ ಮೊದಲು ನೋಡು. ನನ್ನದು ಸರ್ಕಾರಿ ಕೆಲಸವಾಗಿರೋ ಕಾರಣ ಒಂದೆರಡು ಸಾರಿ ಇಲ್ಲಿಗೆ ಕೆಲಸದ ನಿಮಿತ್ತ ಬಂದಿದ್ದೆ. ಮಳೆಗಾಲದಲ್ಲಿ ಪ್ರವಾಹದ ರಿಪೋರ್ಟ್ ಗೂ ಬಂದಿದ್ದೆ. ಆಗಲೇ ನನಗೆ ಅನುಭವವಾಗಿದ್ದು.' ಎಂದಳು ಮಧುಮಿತಾ.
          `ನಾನೊಂದು ಮಾತು ಕೇಳಲಾ..?' ಎಂದ ವಿನಯಚಂದ್ರ
          `ಹುಂ..ಕೇಳು.. ಅದಕ್ಕೆಂತ ಸಂಕೋಚ? ನೀನು ಒಂದು ಬಿಟ್ಟು ಹತ್ತು ಮಾತು ಕೇಳು.. ನಾನು ಉತ್ತರಿಸುತ್ತೇನೆ..'
          `ನಿಂದು ಸರ್ಕಾರಿ ನೌಕರಿ ಅಂತೀಯಾ.. ಆದರೆ ಇಂತಹ ನೌಕರಿಯಲ್ಲಿದ್ದೂ ನಾವು ಹೀಗೆ ಕದ್ದು ಓಡಿ ಬರಬೇಕಾ? ಸರ್ಕಾರದ ಮಟ್ಟದಲ್ಲಿ ಪರಿಚಯದವರನ್ನು ಹಿಡಿದು ಹೇಗಾದರೂ ಮಾಡಿ ನಾವು ಭಾರತ ತಲುಪಬಹುದಿತ್ತಲ್ಲ.. ಈ ರಿಸ್ಕು, ಭಯ, ಭೀತಿ, ದುಗುಡ ಇವೆಲ್ಲ ಬೇಕಿತ್ತಾ?' ಎಂದ ವಿನಯಚಂದ್ರ.
           `ಹುಂ.. ನೀನು ಹೇಳೋದು ಸರಿ. ಆದರೆ ಬಾಂಗ್ಲಾದಲ್ಲಿ ಸರ್ಕಾರಿ ಕೆಲಸ ಅಂದರೆ ಅಷ್ಟಕ್ಕಷ್ಟೆ. ನಾನು ನನಗೆ ಪರಿಚಯ ಇರೋ ಯಾರನ್ನೋ ಹಿಡಿದು ಭಾರತಕ್ಕೆ ಹೋಗಲು ತಯಾರಿ ನಡೆಸಿದೆ ಅಂತ ಇಟ್ಟುಕೊಂಡರೆ ಅವರಿಗೆ ಆಗದವರ ಮೂಲಕ ಹಿಂಸಾವಾದಿಗಳಿಗೆ ಮಾಹಿತಿ ಸಿಕ್ಕು ಏನೇನೋ ಮಾಡಿಬಿಡುತ್ತಾರೆ. ಅಲ್ಲದೇ ಇಲ್ಲಿ ಬಹುತೇಕ ಪ್ರತಿಯೊಬ್ಬ ಸರ್ಕಾರಿ ನೌಕರನೂ ಒಂದೊಂದು ರಾಷ್ಟ್ರೀಯ ಪಕ್ಷಕ್ಕೆ ನಿಷ್ಟನಾಗಿರಬೇಕು. ಅಂದರೆ ಆತ ತಾನು ಯಾರ ಆಡಳಿತದ ಅವಧಿಯಲ್ಲಿ ನೌಕರಿ ಮಾಡಲು ಆರಂಭಿಸುತ್ತಿದ್ದಾನೋ ಆ ಪಕ್ಷಕ್ಕೆ ಆತ ನಿಷ್ಟನಾಗಿರುತ್ತಾನೆ. ಬಿಡು ಹಾಗೆ ನಿಷ್ಟನಾಗಿರುವುದು ಆತನಿಗೆ ಅನಿವಾರ್ಯವೂ ಆಗಿರುತ್ತದೆ. ಇಂತಹ ವ್ಯಕ್ತಿಗಳು ತಮಗಾಗದವರ ಅಂದರೆ ತಮ್ಮ ಪಕ್ಷಕ್ಕೆ ನಿಷ್ಟನಾಗಿರದ ಅಧಿಕಾರಿಗಳ ತಪ್ಪು ಹುಡುಕುವಲ್ಲಿ, ಅವರ ವಿರುದ್ಧ ಕೆಲಸ ಮಾಡುವಲ್ಲಿ ಉತ್ಸುಕರಾಗಿರುತ್ತಾರೆ. ನಾನು ಯಾವುದೇ ಪಕ್ಷಕ್ಕೆ ನಿಷ್ಟೆ ತೋರಿಸಿಲ್ಲ. ಅದೂ ಕೂಡ ತಪ್ಪಾಗಿದೆ. ನಾನು ಯಾವುದೇ ಪಕ್ಷಕ್ಕೆ ಸೇರಿರದ ಕಾರಣ ಎಲ್ಲ ರಾಷ್ಟ್ರೀಯ ಪಕ್ಷಗಳೂ ನನ್ನ ವಿರುದ್ಧ ಸೇಡು ತೀರಿಕೊಳ್ಳಲು ಕಾಯುತ್ತಿರುವುದು ಸಾಮಾನ್ಯ. ನಾನು ಹಾಗೂ ನೀನು ಭಾರತಕ್ಕೆ ಹೊರಡಲು ತಯಾರಿ ನಡೆಸುತ್ತಿರುವುದು, ವಿಮಾನಯಾನ  ಮಾಡಲು ಯತ್ನಿಸುವುದನ್ನು ತಡೆಯಲು ಎಂತಹ ಕಾರ್ಯಕ್ಕೂ ಅವರು ಮುಂದಾಗುತ್ತಾರೆ. ಹತ್ಯೆಯನ್ನೂ ಮಾಡಲು ಹಿಂದೆ ಮುಂದೆ ನೋಡುವುದಿಲ್ಲ. ಬಹುಶಃ ನಾವೀಗ ಕದ್ದು ಭಾರತದ ಗಡಿಯೊಳಕ್ಕೆ ನುಸುಳುವ ಪ್ರಯತ್ನ ನಡೆಸುವುದು ಆ ವಿಧಾನಕ್ಕಿಂತ ಸುಲಭವನ್ನಿಸುತ್ತದೆ. ಅದಕ್ಕೇ ಸಲೀಂ ಚಾಚಾ ಈ ವಿಧಾನವನ್ನು ಹೇಳಿದಾಗ ನಾನು ಒಪ್ಪಿಕೊಂಡಿದ್ದು.' ಎಂದಳು ಮಧುಮಿತಾ.
          `ಹುಂ..' ಎಂದು ತಲೆಕೊಡವಿದ ವಿನಯಚಂದ್ರ `ಹಾಳಾದ ರಾಜಕಾರಣ.. ಏನೆಲ್ಲಾ ಮಾಡಿಬಿಡುತ್ತದೆ.. ಶಿಟ್..' ಎಂದ.
          `ವಿನೂ ಒಂದು ಮಾತು ಹೇಳಲಾ. ನಾವು ವಿಮಾನಯಾನ ಮಾಡಿ ಭಾರತಕ್ಕೆ ಹೋಗಿದ್ದರೆ ಒಮದು ತಾಸು ಅಥವಾ ಎರಡು-ಮೂರು ತಾಸುಗಳಲ್ಲಿ ಭಾರತವನ್ನು ತಲುಪಿಬಿಡುತ್ತಿದ್ದೆವು. ಆದರೆ ನಾವು ಈ ರೀತಿಯಲ್ಲಿ ರಸ್ತೆಯ ಮೂಲಕ ಭಾರತವನ್ನು ತಲುಪುವುದು ಮಾತ್ರ ಬಹಳ ಖುಷಿ ಕೊಡುವ ವಿಚಾರ ನೋಡು. ಬದುಕಿನಲ್ಲಿ ಅದೆಷ್ಟೋ ಕಷ್ಟಗಳಿಗೆ ನಮ್ಮನ್ನು ನಾವು ಒಡ್ಡಿಕೊಳ್ಳುತ್ತೇವೆ. ಇದು ಕಷ್ಟಕರವೇ ಹೌದು. ಈ ಕಷ್ಟವನ್ನೂ ಒಮ್ಮೆ ನಾವು ಅನುಭವಿಸಿಬಿಡೋಣ. ಸವಾಲುಗಳಿಗೆ ಒಡ್ಡಿಕೊಳ್ಳುವುದು ಅಂದರೆ ನನಗೆ ಬಹಳ ಖುಷಿ ಕೊಡುವ ವಿಚಾರ. ನಿನಗೂ ಕೂಡ ಸವಾಲುಗಳಿಗೆ ಎದುರು ನಿಲ್ಲುವುದು ಅಂದರೆ ಇಷ್ಟ ಅಂತ ಹೇಳಿದ್ದೆಯಲ್ಲ. ಮುಂದೇನಾಗುತ್ತದೆಯೋ ಅಂತ ನೋಡಿಬಿಡೋಣ.. ಅಲ್ಲವಾ' ಎಂದಳು ಮಧುಮಿತಾ.
           `ಹೌದು ಮಧು. ನೀ ಹೇಳುವುದು ನಿಜ. ಬಾಂಗ್ಲಾ ನಾಡಿನಲ್ಲಿ ಹೀಗೆ ಪ್ರಯಾಣ ಮಾಡಿ ಗಡಿಯೊಳಗೆ ನುಸುಳುವುದು ಒಂಥರಾ ಮಜಾ ಇರುತ್ತದೆ. ಅದರಲ್ಲಿಯೂ ಭಾರತದ ಗಡಿಯನ್ನು ನುಸುಳುವುದಿದೆಯಲ್ಲ. ನಾನು ಕನಸು, ಮನಸಿನಲ್ಲಿಯೂ ಇಂತಹದ್ದೊಂದು ಜರುಗಬಹುದು ಎಂದು ಆಲೋಚನೆ ಮಾಡಿರಲಿಲ್ಲ ನೋಡು..' ಎಂದ ವಿನಯಚಂದ್ರ. ಮುಂದುವರಿದವನೇ ಬಾಂಗ್ಲಾದೇಶದ ಹಿಂಸಾಚಾರ, ಅಲ್ಲಿಯ ರಾಜಕಾರಣ, ರಾಜಕೀಯ ಪಕ್ಷಗಳ ನಡೆ ಇವುಗಳ ಬಗ್ಗೆ ಮಾತನಾಡಿ ಹಿಡಿಶಾಪ ಹಾಕಿದ
          ಮಧುಮಿತಾ ಮಾತನ್ನು ಕೇಳಿಸಿಕೊಂಡು ನುಡಿದಳು. `ಇಷ್ಟೇ ಅಲ್ಲ ವಿನೂ. ನಮ್ಮ ಬಾಂಗ್ಲಾದಲ್ಲಿ ಹಿಂದುಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ, ಹಿಮಸಾಚಾರಕ್ಕೆಲ್ಲ ರಾಜಕಾರಣವೇ ಕಾರಣ. ಮುಖ್ಯವಾಗಿ ಇರುವುದು ಎರಡು ಪಕ್ಷ. ಇವರನ್ನು ಬೆಂಬಲಿಸಿದರೆ ಅವರು, ಅವರನ್ನು ಬೆಂಬಲಿಸಿದರೆ ಇವರು ನಮ್ಮ ಮೇಲೆ ಹಿಂಸಾಚಾರ ಮಾಡುತ್ತಾರೆ. ಹೋಗಲಿ ಮೂರನೇ ಪಕ್ಷವಾದರೂ ಇದೆಯಾ? ಅದನ್ನೂ ಬೆಳೆಯಲು ಕೊಡುವುದಿಲ್ಲ ಈ ಎರಡು ಪಕ್ಷಗಳು. ಹಿಂದೂಗಳೇ ಪಕ್ಷವನ್ನು ಕಟ್ಟಲು ಹಲವು ಸಾರಿ ಯೋಚನೆ ಮಾಡಿದ್ದರಂತೆ. ಆದರೆ ಅದು ಸಾಧ್ಯವೇ ಆಗಿಲ್ಲ. ಬಹುಶಃ ಕುಟಿಲ ರಾಜಕಾರಣದಲ್ಲಿ ಸಿಲುಕಿ ಹಿಂದೂಗಳ ಪಕ್ಷ ಕಟ್ಟುವ ಕನಸು ಕನಸಾಗಿಯೇ ಉಳಿದಿರಬೇಕು. ' ಎಂದಳು ಮಧುಮಿತಾ.
          `ಛೇ.. ಇಷ್ಟು ಪುಟ್ಟ ದೇಶವನ್ನು ಹೇಗೆಲ್ಲ ತಯಾರು ಮಾಡಬಹುದಿತ್ತು. ಆದರೆ ತನ್ನ ಸ್ವಾರ್ಥಕ್ಕಾಗಿ ಕೆಲವೇ ಕೆಲವು ನಡೆಸುವ ದಾಳಕ್ಕೆ ಇಲ್ಲಿನ ಜನರು ಬಲಿಯಾಗುತ್ತಿದ್ದಾರಲ್ಲ.. ಇಂತಹ ಕಾರಣಗಳಿಗಾಗಿ ಈ ದೇಶ ಪ್ರತ್ಯೇಕವಾಗಬೇಕಿತ್ತೇ? ಮೊದಲು ಭಾರತದಿಂದ ಆಮೇಲೆ ಪಾಕಿಸ್ತಾನದಿಂದ.. ಏನೋ ಆಗಬೇಕು ಎಂದುಕೊಂಡವರು ಮತ್ತೇನೋ ಆಗಿಬಿಟ್ಟರಲ್ಲ. ಗಂಗೆಯ ಮುಖಜ ಭೂಮಿ, ಸುಂದರಬನ್ಸ್, ಚಿತ್ತಗಾಂಗ್ ಬೆಟ್ಟಗಳು, ಮೇಘಾಲಯ, ತುರಾ ಬೆಟ್ಟಗಳ ಒಂದು ಪಾರ್ಶ್ವ, ಅಸಂಖ್ಯಾತ ಹಿಂದೂ ದೇಗುಲಗಳು, ಢಾಕಾ ಎಂಬ ಸುಂದರ ನಗರಿ, ಭತ್ತವನ್ನು ಬೆಳೆಯುವ ಲಕ್ಷಗಟ್ಟಲೆ ಎಕರೆ ಪ್ರದೇಶಗಳು.. ಓಹ್.. ಸ್ವರ್ಗವಾಗಲು ಇನ್ನೆಂತದ್ದು ಬೇಕಿತ್ತು. ತಾನೇ ತನ್ನನ್ನು ನರಕಕ್ಕೆ ದೂಡಿಕೊಳ್ಳುವುದು ಎಂದರೆ ಇದೇ ಏನೋ..' ಎಂದು ತನ್ನೊಳಗಿನ ಅಸಮಧಾನ ತೋಡಿಕೊಂಡ ವಿನಯಚಂದ್ರ.
           `ಹುಂ. ಖಂಡಿತ ಹೌದು. ಈ ದೇಶದಲ್ಲಿ ಸಮಸ್ಯೆಗಳು ಖಂಡಿತ ಕೊನೆಗೊಳ್ಳುವುದಿಲ್ಲ ನೋಡು. ಭಾರತದ ಅವಿಭಾಜ್ಯ ಅಂಗವಾಗಿದ್ದ ಈ ನಾಡನ್ನು ಯಾವಾಗ ಬ್ರಿಟೀಷರು ಒಡೆದರೋ ಆಗಲೇ ಶುರುವಾಯಿತು ನರಕ. ಮೊಟ್ಟಮೊದಲು ಬ್ರಿಟೀಷರ ವಿರುದ್ಧ ಸೋತ ಸಿರಾಜುದ್ದೌಲ, ಆತನಿಗೆ ಮೋಸ ಮಾಡಿದ ಮಿರ್ ಸಾಧಿಕ್ ಎಲ್ಲ ಆ ನಂತರ ನಡೆದ ಸಾಲು ಸಾಲು ಯುದ್ಧಗಳು, ನಡುವೆ ಮಿಚಿಂನಂತೆ ಬಂದು ಕ್ಷಣಕಾಲ ಸ್ವಾತಂತ್ರ್ಯವನ್ನು ಕೊಡಿಸಿದ ಸೇನಾನಿ ನೇತಾಜಿ.. ಈ ಎಲ್ಲವನ್ನೂ ಕಂಡಿದ್ದು ಇದೇ ನಾಡು. ಭಾರತದಿಂದ ಪ್ರತ್ಯೇಕವಾದ ನಂತರವಾದರೂ ಬಾಂಗ್ಲಾ ನಾಡು ಆರಾಮಾಗಿದೆಯಾ ಅದೂ ಇಲ್ಲ. ಪಾಕಿಸ್ತಾನದ ಸತ್ಯಾಚಾರಕ್ಕೆ ಸತತ 2 ದಶಕ ನಲುಗಿದೆ. ಭಾರತದ ಸಹಾಯದಿಂದಲೇ ಸ್ವತಂತ್ರವಾಗಿದ್ದರೂ ಕೂಡ ಭಾರತದ ವಿರುದ್ಧವೇ ಭಯೋತ್ಪಾದನೆಯಂತಹ ಕೆಲಸಗಳನ್ನು ಈ ದೇಶ ನಡೆಸುತ್ತಿದೆ. ಬಾಂಗ್ಲಾ ನಾಡಿನ ಸ್ವಾತಂತ್ರ್ಯಕ್ಕಾಗಿ ಶೇಕ್ ಮುಜೀಬುರ್ ರೆಹಮಾನ್ ಹೋರಾಡಿದರು. ಗಾಂಧೀಜಿಯವರಂತೆ ಇವರನ್ನೂ ಹತ್ಯೆ ಮಾಡಲಾಯಿತು. ಇದೀಗ ಅವರ ಮಗಳು ಇಲ್ಲಿನ ರಾಜಕಾರಣಿ. ವಿಚಿತ್ರವೆಂದರೆ ಅವರ ಆಡಳಿತವಾಗಿದ್ದರೂ ಇಲ್ಲಿ ಹಿಂಸಾಚಾರ ನಿಂತಿಲ್ಲ. ಬಹುಶಃ ನಿಲ್ಲುವುದೂ ಇಲ್ಲ. ಮತೋನ್ಮಾದ, ರಾಜಕಾರಣ, ಯುದ್ಧೋತ್ಸಾಹ ಈ ನಾಡನ್ನು ಹಾಳುಮಾಡಿದೆ. ಪ್ರತಿ ವರ್ಷ ಏನಿಲ್ಲವೆಂದರೂ ಕನಿಷ್ಟ 5000ಕ್ಕೂ ಅಧಿಕ ಹಿಂದೂಗಳ ಹತ್ಯೆಯಾಗುತ್ತದೆ. ಅದಕ್ಕೂ ಹೆಚ್ಚು ಮತಾಂತರವಾಗುತ್ತದೆ. ಹಿಂದೂ ಮಹಿಳೆಯರ ಬಲಾತ್ಕಾರ ನಡೆಯುತ್ತದೆ. ಆದರೆ ಪೊಲೀಸ್ ಸ್ಟೇಷನ್ನುಗಳಲ್ಲಿ ಇವುಗಳ ಪ್ರಕರಣ ದಾಖಲಾಗುವುದಿಲ್ಲ. ಯಾರಾದರೂ ಪ್ರಕರಣ ದಾಖಲು ಮಾಡಲು ಹೋದರೆ ಅವರು ಇದ್ದಕ್ಕಿದ್ದಂತೆ ಕಾಣೆಯಾಗುತ್ತಾರೆ. ಇಲ್ಲವೇ ಹೆದರಿಸಿ, ಬೆದರಿಸಿ ಸುಮ್ಮನಿರಿಸಲಾಗುತ್ತದೆ. ಇದು ನಾನು ಅತ್ಯಂತ ಹತ್ತಿರದಿಂದ ನೋಡಿದ ಅನುಭವವೂ ಹೌದು.' ಎಂದು ಮಧುಮಿತಾ ಹೇಳಿದಳು.
          `ಮಧು.. ಈ ದೇಶದಲ್ಲಿ ಎಷ್ಟು ಹಿಂದುಗಳಿರಬಹುದು? ಮೊದಲೆಷ್ಟಿದ್ದರು? ಈಗ ಎಷ್ಟಾಗಿದ್ದಾರೆ? ಅವರ್ಯಾಕೆ ಬಾಂಗ್ಲಾ ಹಿಂಸಾಚಾರದ ವಿರುದ್ಧ ತಿರುಗಿಬೀಳಬಾರದು? ಶಸ್ತ್ರದ ಮೂಲಕವಾದರೂ ಸರಿ ಯಾಕೆ ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳಬಾರದು? ಹಿಂಸೆಗೆ ಹಿಂಸೆಯೇ ಉತ್ತರವಲ್ಲವಾ? ಕತ್ತಿಗೆ ಕತ್ತಿಯಿಂದಲೇ ಉತ್ತರ ಕೊಡಬೇಕು ಎಂದು ಶಿವಾಜಿಯಾದಿಯಾಗಿ ಅನೇಕರು ಹೇಳಿಲ್ಲವಾ? ಯಾಕೆ ಬಾಂಗ್ಲಾ ದೇಶದ ಹಿಂದೂಗಳು ಹಾಗೆ ಮಾಡುತ್ತಿಲ್ಲ? ಯಾಕೆ ನೋವನ್ನು ಉಂಡು ಸುಮ್ಮನೆ ಉಳಿದಿದ್ದಾರೆ? ಯಾಕೆ ಎಲ್ಲರೂ ಹಿಂದುಗಳನ್ನು ಕೊಂದರೂ ಏನು ಮಾಡದೇ ಸುಮ್ಮನೆ ಉಳಿದುಹೋಗಿದ್ದಾರೆ?' ಎಂದು ಅಸಹನೆಯಿಂದ ಕೇಳಿದ ವಿನಯಚಂದ್ರ.
(ಹಿಂಸಾಚಾರಕ್ಕೆ ಮನೆ ಕಳೆದುಕೊಂಡ ಹಿಂದೂ ಯುವತಿ ರೋಧಿಸುತ್ತಿರುವುದು)
           `ಬಾಂಗ್ಲಾದೇಶದಲ್ಲಿ 1941ರ ವೇಳೆಗೆ ಹಿಂದೂಗಳ ಸಂಖ್ಯೆ ಶೆ.28ರಷ್ಟಿತ್ತು. ಆ ನಂತರ ಆ ಪ್ರಮಾಣದಲ್ಲಿ ತೀವ್ರ ಇಳಿಕೆಯಾಗುತ್ತ ಬಂದಿದೆ. 1974ರಲ್ಲಿ ಹಿಂದೂಗಳ ಪ್ರಮಾಣ ಶೆ.13.5ಕ್ಕೆ ಇಳಿಕೆಯಾಯಿತು. ಅಂದರೆ ಎರಡು ದಶಕದಲ್ಲಿ ಶೆ.50ರಷ್ಟು ಕಡಿಮೆಯಾಯಿತು. 2001ರಲ್ಲಿ ಹಿಂದೂಗಳ ಪ್ರಮಾಣ ಶೆ.9.6ಕ್ಕೆ ಇಳಿಕೆಯಾಗಿದೆ. ಭಾರತವನ್ನು ವಿಭಜಿಸಿ ಪಶ್ಚಿಮ ಪಾಕಿಸ್ತಾನ ಹಾಗೂ ಪೂರ್ವ ಪಾಕಿಸ್ತಾನ ಎಂದು ವಿಭಾಗಿಸಲಾಯಿತು. ಆ ಸಂದರ್ಭದಲ್ಲಿ ಈಗ ಬಾಂಗ್ಲಾ ಎಂದು ಕರೆಯುವ ಪೂರ್ವ ಪಾಕಿಸ್ತಾನದಲ್ಲಿ ಹಿಂದೂಗಳೇ ಹೆಚ್ಚಿನ ಸಂಖ್ಯೆಯಲ್ಲಿರುವ ಚಿತ್ತಗಾಂಗ್ ಪ್ರದೇಶ ಕೂಡ ಕಣ್ತಪ್ಪಿನಿಂದಲೋ ಅಥವಾ ಬ್ರಿಟೀಶರ ಕುಟಿಲ ನೀತಿಯಿಂದಲೋ ಬಾಂಗ್ಲಾದಲ್ಲೇ ಉಳಿದುಹೋಯಿತು. ಭಾರತಕ್ಕೆ ಸೇರಲೇಬೇಕಾಗಿದ್ದ ಪ್ರದೇಶ ಬಾಂಗ್ಲಾದಲ್ಲಿ ಉಳಿದುಬಿಟ್ಟಿತು. ಈಗಲೂ ಕೂಡ ಬಾಂಗ್ಲಾದಲ್ಲೇ ಅತ್ಯಂತ ಹೆಚ್ಚು ಹಿಂದೂಗಳಿರುವ ಪ್ರದೇಶವೆಂದರೆ ಅದು ಚಿತ್ತಗಾಂಗ್. ಆದರೆ ತೀರಾ ಇತ್ತೀಚೆಗಂತೂ ಹಿಂದೂಗಳ ಸಂಖ್ಯೆಯಲ್ಲಿ ಗಣನೀಯವಾಗಿ ಕುಸಿತವಾಗುತ್ತಿದೆ. ಬಾಂಗ್ಲಾದ ಹಿಂದೂಗಳು ಬಡವರು. ಎರಡು ಹೊತ್ತಿನ ಊಟಕ್ಕೆ ಕಷ್ಟಪಡಬೇಕು. ಅಂತದ್ದರಲ್ಲಿ ಹೋರಾಟ ಹೇಗೆ ಮಾಡಬೇಕು? ಅವರು ಯಾವ ರೀತಿ ಸಶಸ್ತ್ರ ಹೋರಾಟ ಮಾಡಬೇಕು? ಭಾರತ ಏನಾದರೂ ಸಹಾಯ ಮಾಡಿದ್ದರೆ ತಮ್ಮ ರಕ್ಷಣೆಗಾದರೂ ಹೋರಾಟ ಮಾಡುತ್ತಿದ್ದರೇನೋ. ಆದರೆ ಭಾರತ ಸಹಾಯಕ್ಕೇ ಬರಲಿಲ್ಲ. ಇಲ್ಲಿನ ಹಿಂದೂಗಳ ಧ್ವನಿ ಈಗಾಗಲೇ ಕ್ಷೀಣಿಸಿದೆ. ಪಕ್ಕದ ಹಿಂದೂ ಬಹುಸಂಖ್ಯಾತ ರಾಷ್ಟ್ರ ನಮ್ಮ ದೇಶದ ತಾಯಿ. ಆದರೂ ಅದು ಸಹಾಯಕ್ಕೆ ಬಂದಿಲ್ಲ. ಎಲ್ಲೋ ಯಾರ್ಯಾರೋ ಹತ್ಯೆಯಾಗುತ್ತಿದ್ದರೆ ಮಾನವ ಹಕ್ಕುಗಳ ಸಂಘಟನೆ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ಹುಯ್ಯಲಿಡುತ್ತಾರೆ. ಆದರೆ ಬಾಂಗ್ಲಾ ದೇಶದ ಕುರಿತು ಮಾತ್ರ ಅವರು ಮಾತೇ ಆಡುವುದಿಲ್ಲ. ಖಂಡಿತವಾಗಿಯೂ ಬಾಂಗ್ಲಾ ಹಿಂದೂಗಳ ನೋವು, ದುಃಖ ಅವರ ಕಣ್ಣಿಗೆ ಕಾಣುತ್ತಿಲ್ಲವೇ? ಅಥವಾ ಜಾಣ ಕುರುಡೇ? ಯಾಕೋ ಮನಸ್ಸು ತುಂಬಾ ಪ್ರಕ್ಷುಬ್ಧಗೊಳ್ಳುತ್ತದೆ.' ಎಂದು ಹತಾಶಳಾಗಿ ನುಡಿದಳು ಮಧುಮಿತಾ.
          `ಬಾಂಗ್ಲಾ ದೇಶದ ಕಥೆ ಹಾಗಿರಲಿ. ನಿಮ್ಮದೇ ದೇಶದಲ್ಲಿ ಹಿಂದೂಗಳ ಮಾರಣ ಹೋಮ ನಡೆಯುತ್ತಿದೆಯಲ್ಲ ವಿನೂ. ಅದಕ್ಕೇ ನಿಮ್ಮ ದೇಶ ಮಾತನಾಡುತ್ತಿಲ್ಲ. ಇನ್ನು ನಮ್ಮ ದೇಶದಲ್ಲಿ ನಡೆಯುವ ಕಗ್ಗೊಲೆಗಳ ಬಗ್ಗೆ ಮಾತನಾಡುತ್ತದೆಯಾ? ಕೋಮುಗಲಭೆ ಸಂಭವಿಸಿದಾಗೆಲ್ಲ ಹಿಂದೂಗಳದ್ದೇ ತಪ್ಪು ಎಂದು ಹೇಳಿ ಅವರ ಮೇಲೆ ಪ್ರಕರಣ ದಾಖಲಿಸಿ ಜೈಲಿಗಟ್ಟಲಾಗುತ್ತದೆ. ಆಗ ನಿಮ್ಮದೇ ಭಾರತ ಸರ್ಕಾರ ಏನಾದರೂ ಮಾಡಿದೆಯಾ? ನಾವೆಲ್ಲ ಗೋವನ್ನು ಪವಿತ್ರ ಪ್ರಾಣಿಯಾಗಿ ಪೂಜೆ ಮಾಡುತ್ತೇವೆ. ದೇವರು ಎನ್ನುತ್ತೇವೆ. ಅಂತಹ ಗೋವನ್ನು ವಿಶ್ವದಲ್ಲೇ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಭಾರತದಲ್ಲಿ ಕೊಲ್ಲಲಾಗುತ್ತದೆ. ಅದನ್ನು ತಡೆಗಟ್ಟಲಾಗಿದೆಯಾ ಹೇಳು. ಹೀಗೆಲ್ಲಾ ಇದ್ದಾಗ ಪಕ್ಕದ ದೇಶದಲ್ಲಿ ತಮ್ಮದೇ ಬಾಂಧವರು ಸಾಯುತ್ತಿದ್ದರೂ ಅವರಿಗೆ ಹೇಗೆ ಸಹಾಯ ಮಾಡುತ್ತಾರೆ? ಶಸ್ತ್ರಕ್ಕೆ ಶಸ್ತ್ರವೇ ಉತ್ತರವಾಗುತ್ತದೆ ನಿಜ. ಆದರೆ  ಬಾಂಗ್ಲಾದ ಬಡ ಹಿಂದೂಗಳಿಗೆ ಶಸ್ತ್ರವನ್ನು ನೀಡುವವರು ಯಾರು? ಅದ್ಯಾರೋ ಕಣ್ಣಿಗೆ ಕಾಣದ ನಕ್ಸಲರಿಗೆ ಪುರೂಲಿಯಾದಂತಹ ಪ್ರದೇಶಗಳಲ್ಲಿ ಅನಾಮಧೇಯ ವಿಮಾನಗಳೂ ಕೂಡ ಶಸ್ತ್ರಾಸ್ತ್ರವನ್ನು ಎಸೆದು ಹೋಗುತ್ತವೆ. ಬಾಂಗ್ಲಾದಲ್ಲಿ ಇಂತದ್ದನ್ನೆಲ್ಲ ಕನಸು ಕಾಣಲು ಸಾಧ್ಯವಿಲ್ಲ ಬಿಡು. ಬಾಂಗ್ಲಾದ ಹಿಂದೂಗಳು ಮೊದಲು ಹೊಟ್ಟೆಗೆ ಸಿಗಲಿ ಎಂದು ಬಯಸುತ್ತಾರೆ. ಆ ನಂತರ ಅವರು ಶಸ್ತ್ರದ ಬಗ್ಗೆ ಆಲೋಚನೆ. ನೀನೇನಾದರೂ ಭಾರತಕ್ಕೆ ಹೋಗಿ, ಬಂದೂಕು ಅಥವಾ ಶಸ್ತ್ರಾಸ್ತ್ರ ತಯಾರು ಮಾಡುವ ಕಾರ್ಖಾನೆ ತೆಗೆದರೆ ಹೇಳು. ಬಾಂಗ್ಲಾದಲ್ಲಿ ಯಾವ ಯಾವ ಪ್ರದೇಶಕ್ಕೆ ಎಷ್ಟು ಪ್ರಮಾಣದಲ್ಲಿ ಹಿಂದೂಗಳಿಗಾಗಿ ಶಸ್ತ್ರವನ್ನು ಒದಗಿಸಬೇಕು ಎಂಬುದನ್ನು ನಾನು ಹೇಳುತ್ತೇನೆ..' ಎಂದು ಹೇಳಿದ ಮಧುಮಿತಾ ಕಣ್ಣುಮಿಟುಕಿಸಿದಳು.
          ವಿನಯಚಂದ್ರ ಒಮ್ಮೆ ಅಸಹನೆಯಿಂದ ಹೊಯ್ದಾಡಿದ. ನಂತರ ಮಾತನಾಡಿದ ಆತ `ಬಾಂಗ್ಲಾದಲ್ಲಿ ಇರುವ ಪಕ್ಷಗಳಲ್ಲಿ ಹಿಂದೂ ನಾಯಕರಿಲ್ಲವೇ? ಅವರೂ ಮಾತನಾಡುತ್ತಿಲ್ಲವೇ?' ಎಂದು ಕೇಳಿದ.
         `ಇದ್ದಾರೆ. ಹಲವರು ಪ್ರಮುಖ ಮಂತ್ರಿ ಸ್ಥಾನವನ್ನೂ ಪಡೆದಿದ್ದರು. ಆದರೆ ಅವರ್ಯಾರೂ ಹಿಂದೂಗಳ ಪರಿಸ್ಥಿತಿ ಬಗ್ಗೆ ಆಲೋಚಿಸಲೂ ಇಲ್ಲ. ಅವರ ಸಮಸ್ಯೆಗಳ ಬಗ್ಗೆ ಹೋರಾಟವನ್ನೂ ನಡೆಸಿಲ್ಲ. ಛೇ..' ಎಂದಳು ಮಧುಮಿತಾ.
         ವಿನಯಚಂದ್ರನ ಮನಸ್ಸಿನಲ್ಲಿ ನೂರಾರು ಹೊಯ್ದಾಟಗಳು ಶುರುವಾದಂತಿತ್ತು. ಅದೇ ಗುಂಗಿನಲ್ಲಿ ಸೈಕಲ್ ತುಳಿಯುತ್ತಿದ್ದ. ಸಲೀಂ ಚಾಚಾನಿಗೆ ನಿದ್ದೆ ಬಂದಿತ್ತೋ ಗೊತ್ತಿಲ್ಲ. ಒಟ್ಟಿನಲ್ಲಿ  ಮಾತಾಡದೇ ಮಲಗಿದ್ದರು. ಕೆಲವೇ ಸಮಯದ ನಂತರ ಮಿರ್ಜಾಪುರ ಹತ್ತಿರಕ್ಕೆ ಬಂದಿತು. ಮಿರ್ಕಾಪುರದ ಫಾಸಲೆಗೆ ಬಂದ ತಕ್ಷಣ ಮಧುಮಿತಾ ಸಲೀಂ ಚಾಚಾನನ್ನು ಎಚ್ಚರಿಸಿದಳು. ಆತ ಯಾವು ಯಾವುದೋ ದಾರಿಯಲ್ಲಿ ಸೈಕಲ್ ತುಳಿಯುವಂತೆ ಹೇಳಿದ. ಸಲೀಂ ಚಾಚಾನ ಅಣತಿಯಂತೆ ವಿನಯಚಂದ್ರ ಮಿರ್ಜಾಪುರದ ಗಲ್ಲಿ ಗಲ್ಲಿಗಳಲ್ಲಿ ಸೈಕಲ್ ತುಳಿಯಲಾರಂಭಿಸಿದ. ಸಲೀಮ ಚಾಚಾ ಅದ್ಯಾವಾಗ ಮಿರ್ಜಾಪುರವನ್ನು ನೋಡಿದ್ದನೋ ಎಷ್ಟು ಸರಾಗವಾಗಿ ರಸ್ತೆಯನ್ನು ಹೇಳುತ್ತಿದ್ದನೆಂದರೆ ವಿನಯಚಂದ್ರ ಅಚ್ಚರಿಗೊಂಡಿದ್ದ. ಕೊನೆಗೆ ಅದೊಂದು ಮನೆಯ ಬಳಿ ಸೈಕಲ್ ನಿಲ್ಲಿಸುವಂತೆ ಹೇಳಿದ. ವಿನಯಚಂದ್ರ ಸೈಕಲ್ ನಿಲ್ಲಿಸಿದ. ಸಲೀಂ ಚಾಚಾ ಇಳಿದು ಮನೆಯೊಂದರ ಕದ ತಟ್ಟಿದ. ವಿನಯಚಂದ್ರ ಹಾಗೂ ಮಧುಮಿತಾ ವಿಸ್ಮಯದಿಂದ ನೋಡುತ್ತಿದ್ದರು.

(ಮುಂದುವರಿಯುತ್ತದೆ.)