Monday, August 11, 2014

ಪ್ರೀತಿಯ ಕವನ

ಕತ್ತಲೆಯ ನೆತ್ತಿಯಲಿ
ನಿಶೆಯೊಡಲ ಬುತ್ತಿಯಲಿ
ಘಮಿಸಿ ಬರುತಿದೆಯಲ್ಲೆ
ನನ್ನ ಮುಗುದ ಪ್ರೀತಿ |

ಬಿಸಿಲ ತಲೆ ಬೆಂಕಿಯಲಿ
ಸುರಿವ ಹನಿ ಬೆವರಿನಲಿ
ನಿಂತು ಸಿಲುಕಿದೆಯಲ್ಲೇ
ನನ್ನ ಹಸಿರು ಪ್ರೀತಿ |

ನವ ನಲಿವ ಬಂಡಿಯಲಿ
ಜೊತೆ ಜೀವ ಗುಂಡಿಯಲಿ
ಮುಳುಗೇಳುತಿದೆಯಲ್ಲೇ
ನನ್ನ ಹನಿಯ ಪ್ರೀತಿ |

ಸುಡುವ ಸೇಡಿನ ಮದ್ಯ
ಜೊತೆಗೆ ಬೆಂಕಿಯ ಸಖ್ಯ
ನಡುವೆ ಬೆಳೆದಿದೆಯಲ್ಲೇ
ನನ್ನ ಬದುಕ ಪ್ರೀತಿ |

**

ಈ ಕವಿತೆಯನ್ನು ಬರೆದಿರುವುದು 11-12-2006ರಂದು ದಂಟಕಲ್ಲಿನಲ್ಲಿ 

Sunday, August 10, 2014

ಬೆಂಗಾಲಿ ಸುಂದರಿ-20

        `ಒಳಗೆ ಬನ್ನಿ...' ಎಂದು ಸಲೀಂ ಚಾಚಾ ಮತ್ತೊಮ್ಮೆ ಕರೆದಾಗ ತುಸು ನಾಚಿಕೆಯಿಂದಲೇ ಒಳಗಡಿಯಿರಿಸಿದರು ವಿನಯಚಂದ್ರ ಹಾಗೂ ಮಧುಮಿತಾ. ಹಿಂದೆ ಒಂದೆರಡು ಸಾರಿ ಮಧುಮಿತಾ  ಸಲೀಂ ಚಾಚಾನ ಮನೆಗೆ ಬಂದಿದ್ದಳಾದರೂ ಸಲುಗೆಯಿರಲಿಲ್ಲ. ಆದ್ದರಿಂದ ಮುಜುಗರದಿಂದಲೇ ಹೆಜ್ಜೆ ಹಾಕಿದಳು. ಇವರು ಒಳಗೆ ಹೆಜ್ಜೆ ಇರಿಸಿದಂತೆಲ್ಲ ಒಂದಿಬ್ಬರು ಚಿಕ್ಕ ಚಿಕ್ಕ ಹುಡುಗರು ಓಡಿಬಂದು ಸಲೀಂ ಚಾಚಾನನ್ನು ತಬ್ಬಿಕೊಂಡರು. ಸಲೀಮ ಚಾಚಾ ತನ್ನ ಉದ್ದನೆಯ ಬಿಳಿ ನಿಲುವಂಗಿಯಿಂದ ಚಿಕ್ಕ ಚಾಕಲೇಟುಗಳನ್ನು ನೀಡಿದ ನಂತರ ಮನೆಗೆ ಹೊಸದಾಗಿ ಬಂದಿದ್ದ ವಿನಯಚಂದ್ರ ಹಾಗೂ ಮಧುಮಿತಾಳತ್ತ ಕುತೂಹಲದ ಕಣ್ಣು ಹಾಯಿಸುತ್ತ ಮನೆಯ ಒಳಗೆ ಓಡಿದರು. ಅಪರಿಚಿತರ ಕಡೆಗೆ ಭಯ ಹಾಗೂ ಬೆರಗೂ ಎರಡೂ ಇದ್ದಿದ್ದು ಮಕ್ಕಳ ಕಣ್ಣಿನಲ್ಲಿ ಸ್ಪಷ್ಟವಾಗಿತ್ತು.
            ವಿನಯಚಂದ್ರ ಹಾಗೂ ಮಧುಮಿತಾರಿಗೆ ಸಲೀಂ ಚಾಚಾ ಉಳಿಯಲಿಕ್ಕೊಂದು ಕೋಣೆಯನ್ನು ತೋರಿಸಿದರು. ಅಲ್ಲದೇ ತಮ್ಮ ಮನೆಯ ಸದಸ್ಯರನ್ನೂ ಪರಿಚಯಿಸಿದರು. ಸ್ವಲ್ಪ ಹೊತ್ತಿನ ನಂತರ ಮನೆಯ ಮಕ್ಕಳಿಗೆ ವಿನಯಚಂದ್ರ ಹಾಗೂ ಮಧುಮಿತಾಳಿಗೆ ಸಲುಗೆ ಬೆಳೆದ ಕಾರಣ ಹತ್ತಿ ಬಂದರು. ಇಬ್ಬರ ಮನಸ್ಸೂ ಕೊಂಚ ನಿರಾಳವಾಗಿತ್ತಾದರೂ ಮಧುಮಿತಾಳಿಗೆ ಬೆಳಿಗ್ಗೆ ನಡೆದಿದ್ದ ಘಟನೆ ಮಾಸಿರಲಿಲ್ಲ. ಆಗಾಗ ಬಿಕ್ಕುತ್ತಲೇ ಇದ್ದಳು. ವಿನಯಚಂದ್ರ ಆಕೆಯನ್ನು ಯಾವ ರೀತಿ ಸಮಾಧಾನ ಮಾಡಬೇಕು ಎನ್ನುವುದರಲ್ಲಿಯೇ ಸುಸ್ತಾಗಿದ್ದ. ಒಂದೇ ಘಳಿಗೆಯಲ್ಲಿ ಮನೆಯವರನ್ನೆಲ್ಲ ಕಳೆದುಕೊಂಡ ಕಾರಣ ಮಧುಮಿತಾ ಮೌನಕ್ಕೆ ಶರಣಾಗಿದ್ದಳು. ಮನಸ್ಸು ಮರುಗುತ್ತಿತ್ತು.
            ಸಲೀಂ ಚಾಚಾ ಒಳಗಿನಿಂದ ತಿಂಡಿಯನ್ನು ತಂದರು. ವಿನಯಚಂದ್ರನಿಗೆ ಒಮ್ಮೆ ಹಿಂಜರಿಕೆಯಾಯಿತು. ಅದನ್ನು ಗಮನಿಸಿದ ಸಲೀಂ ಚಾಚಾ `ಬೇಟಾ.. ಇದು ಅಪ್ಪಟ ಸಸ್ಯಾಹಾರ.. ಗೋಧಿ ರೊಟ್ಟಿ. ನಿಮಗೆ ತೊಂದರೆಯಾಗೋದಿಲ್ಲ.. ತಿನ್ನಿ.' ಎಂದ ನಂತರವೇ ವಿನಯಚಂದ್ರ ತಿನ್ನಲು ಮುಂದಾದದ್ದು. ಮಧುಮಿತಾಳಿಗೆ ತಿನ್ನಲು ಇಷ್ಟವಿರಲಿಲ್ಲ. ಒಂದೇ ರಾತ್ರಿಯಲ್ಲಿ ಅಪ್ಪ, ಅಮ್ಮ, ಸಹೋದರ, ಜೊತೆಗಾರರನ್ನೆಲ್ಲ ಕಳೆದುಕೊಂಡ ನಂತರದ ಶೂನ್ಯಭಾವ ಆಕೆಯನ್ನು ಆವರಿಸಿತ್ತು. ವಿನಯಚಂದ್ರನೇ ಒತ್ತಾಯ ಮಾಡಿ ಆಕೆಗೆ ತುತ್ತು ತಿನ್ನಿಸಿದ. ವಿನಯಚಂದ್ರನ ಭುಜಕ್ಕೆ ಒರಗಿಕೊಂಡೇ ತಿಂಡಿ ತಿಂದಳು ಮಧುಮಿತಾ. ಸಲೀಮ ಚಾಚಾ ಮನೆಯನ್ನೆಲ್ಲ ತೋರಿಸಿದ. ಚಾಚಾನಿಗೆ ಅದೇನು ಕೆಲಸವಿತ್ತೋ, ಮನೆಯ ಸದಸ್ಯರ ಬಳಿ ಮಾತನಾಡುತ್ತಿರುವಂತೆ ಹೇಳಿ ತಾನು ಹೊರಟ. ವಿನಯಚಂದ್ರನಿಗೆ ಅಪರಿಚಿತರ ಬಳಿ ಮಾತನಾಡುವುದು ಏನು ಎನ್ನಿಸಿತು. ಮಧುಮಿತಾಳನ್ನು ಸಲೀಮ್ ಚಾಚಾನ ಮಡದಿ ಸಂತೈಸತೊಡಗಿದ್ದಳು. ವಿನಯಚಂದ್ರ ಮಾಡಲು ಬೇರೆ ಕೆಲಸವಿಲ್ಲದೇ ಸಲೀಮ ಚಾಚಾನ ಮನೆಯ ಗೋಡೆಯ ಮೇಲಿದ್ದ ಚಿತ್ತಾರಗಳತ್ತ ದೃಷ್ಟಿ ಹಾಯಿಸತೊಡಗಿದ.
            ತನ್ನ ಹುಮ್ಮಸ್ಸಿನ ವಯಸ್ಸಿನಲ್ಲಿ ಸಲೀಂ ಚಾಚಾ ಅದೇನು ಉದ್ಯೋಗ ಮಾಡುತ್ತಿದ್ದನೋ. ಆದರೆ ಆತನ ಆಸಕ್ತಿಗಳು ಬಹಳ ಕುತೂಹಲವನ್ನು ಹುಟ್ಟುಹಾಕುವಂತಿದ್ದವು. ಗೋಡೆಯ ಮೇಲೆ ಬಳ್ಳಿ ಬಳ್ಳಿಗಳ ಸುಂದರ ಚಿತ್ರಣ.  ತನ್ನೂರಿನಲ್ಲಿ ಪ್ರಧಾನ ಬಾಗಿಲ ಪಕ್ಕದಲ್ಲಿ ಅಂತಹ ಬಳ್ಳಿಗಳನ್ನು ಚಿತ್ರಿಸುತ್ತಿದ್ದ ನೆನಪಾಯಿತು. ನಡು ನಡುವೆ ಉರ್ದು ಲಿಪಿಯಲ್ಲಿ ಬರೆಯಲಾಗಿತ್ತು. ಖುರ್-ಆನ್ ನ ವಾಕ್ಯಗಳಿರಬೇಕು ಎಂದುಕೊಂಡ. ನೆಲಕ್ಕೆಲ್ಲ ಟೈಲ್ಸ್ ಹಾಕಲಾಗಿತ್ತು. ಬಿಳಿಬಣ್ಣದ ಗೋಡೆಗಳು ಒಂಚೂರೂ ಮುಕ್ಕಾಗಿರಲಿಲ್ಲ. ಮುಟ್ಟಿದರೆ ತನ್ನ ಕೈಯ ಕೊಳೆಯೇ ಅಂಟುತ್ತವೆಯೇನೋ ಎನ್ನುವಷ್ಟು ಬಿಳುಪಾಗಿತ್ತು. ಶುಭ್ರವಾಗಿತ್ತು. ನೋಡುತ್ತಿದ್ದಾಗಲೇ ಸಲೀಮ ಚಾಚಾನ ಮೊಮ್ಮಕ್ಕಳು ಬಂದು ವಿನಯಚಂದ್ರನನ್ನು ಮುತ್ತಕೊಂಡವು. ವಿನಯಚಂದ್ರನನ್ನು ಆಟಕ್ಕೆ ಬರುವಂತೆ ಕರೆದವು. ಸಮಯ ಹೋಗಬೇಕಿತ್ತಲ್ಲ. ವಿನಯಚಂದ್ರ ಆ ಹುಡುಗರ ಜೊತೆಗೆ ಹುಡಗಾಟಕ್ಕಿಳಿದ.
           ಒಂದೊಪ್ಪತ್ತಿನ ನಂತರ ಸಲೀಮ ಚಾಚಾ ವಾಪಾಸು ಬಂದಿದ್ದರು. ಬಂದವರೇ ವಿನಯಚಂದ್ರನ ಬಳಿ `ಬೇಟಾ.. ನೀನು ಭಾರತಕ್ಕೆ ಮರಳಬೇಕಲ್ಲ. ಅದಕ್ಕೆ ನಾನು ಹಲವು ಜನರ ಬಳಿ ವಿಚಾರಿಸಿದೆ...' ಎಂದರು.
           `ಯಾಕೆ ಚಾಚಾ.. ವಿಮಾನವಿದೆಯಲ್ಲ.. ನಾನು ಅದರಲ್ಲೆ ಮರಳುತ್ತೇನೆ ಬಿಡಿ.. ಮಧುಮಿತಾಳನ್ನೂ ಕರೆದೊಯ್ಯುತ್ತೇನೆ..ಅವಳಿಗೆ ಏನೂ ತೊಂದರೆಯಾಗಲಿಕ್ಕಿಲ್ಲ. ಮಿತ್ರ ಸೂರ್ಯನ್ ಸಹಾಯ ಮಾಡುತ್ತೇನೆ ಎಂದು ಹೇಳಿದ್ದಾನೆ. ಅವನ ಬಳಿ ವಿಚಾರಿಸಿ ಮುಂಡುವರಿಯುತ್ತೇನೆ' ಎಂದ ಎಂದ ವಿನಯ ಚಂದ್ರ,
               `ವಿಮಾನ....' ಎಂದವರೇ ಒಮ್ಮೆಲೆ ನಕ್ಕ ಸಲೀಂ ಚಾಚಾ `ಬಾಂಗ್ಲಾದಲ್ಲಿ ಹಿಂಸಾಚಾರ ಹೆಚ್ಚಾದಂತೆ ವಿಮಾನ ನಿಲ್ದಾಣ ಮುಚ್ಚಲಾಗಿದೆ. ನಿಮ್ಮ ಕಬ್ಬಡ್ಡಿ ತಂಡದವರೂ ಭಾರತ ಸೇರಿದ್ದಾರೋ ಇಲ್ಲವೋ ಗೊತ್ತಿಲ್ಲ. ಆ ಬಗ್ಗೆ ಅನುಮಾನಗಳಿವೆ. ಸಾಧ್ಯವಾದರೆ ಭಾರತ ತಂಡದ ಬಗ್ಗೆ ವಿಚಾರಿಸು. ಅವರು ಗಲಾಟೆಯಲ್ಲಿ ಸಿಕ್ಕಿಬಿದ್ದು ಭಾನಗಡಿ ಆಗದಿದ್ದರೆ ಸಾಕು ನೋಡು. ಈಗ ನೀನು ಭಾರತ ಸೇರಬೇಕೆಂದರೆ ಒಂದೋ ಹಡಗಿನ ಮೂಲಕ ಹೋಗಬೇಕು. ಇಲ್ಲವಾದಲ್ಲಿ ಭೂ ಮಾರ್ಗದ ಮೂಲಕ ಹೋಗಬೇಕು. ಎರಡೂ ಸುಲಭದಲ್ಲಿಲ್ಲ..' ಎಂದರು.
            `ಯಾಕೆ ಚಾಚಾ.. ಭಾರತ-ಪಾಕಿಸ್ತಾನ ನಡುವೆ ಬಸ್ ಸಂಚಾರ ಇದೆಯಲ್ಲ.. ಹಾಗೆಯೇ ಭಾರತ-ಬಾಂಗ್ಲಾ ನಡುವೆ ಬಸ್ ಸಂಚಾರ ಇಲ್ಲವೇ? ..ಬಸ್ ಮೂಲಕ ಹೋದರೆ ಆಯ್ತು.' ಮುಗ್ಧವಾಗಿ ಕೇಳಿದ ವಿನಯಚಂದ್ರ.
            ನಸುನಕ್ಕ ಸಲೀಂ ಚಾಚಾ `ಮೊದಲ್ನೇನಾಗಿ ಹೇಳಬೇಕು ಅಂದರೆ ಭಾರತ-ಬಾಂಗ್ಲಾ ನಡುವೆ ಬಸ್ ಸಂಚಾರ ಇಲ್ಲ. ಭಾರತ ಹಾಗೂ ಪಾಕಿಸ್ತಾನದ ನಡುವೆ ರಾಜಕಾರಣಿಗಳಿಗೆ ತಮ್ಮ ಸಾಮರ್ಥ್ಯ ತೋರಿಸಲು ಏನಾದರೂ ಬೇಕಲ್ಲ. ಅದಕ್ಕೆ ಬಸ್ ಬಿಡಿಸುತ್ತಾರೆ. ರೈಲನ್ನೂ ಓಡಿಸುತ್ತಾರೆ. ಆದರೆ ಇದು ಬಾಂಗ್ಲಾದೇಶ. ಭಾರತಕ್ಕೆ ಬಾಂಗ್ಲಾದಿಂದ ಆಗಬೇಕಾದದ್ದು ಏನೂ ಇಲ್ಲವಲ್ಲ. ಹಾಗಾಗಿ ಇಲ್ಲಿಗೆ ಬಸ್ಸೂ ಇಲ್ಲ ರೈಲೂ ಇಲ್ಲ. ಇನ್ನೊಂದಂದ್ರೆ ಇಂತಹ ಹಿಂಸಾಚಾರದ ಸಂದರ್ಭದಲ್ಲಿ ಬಸ್ ಸಂಚಾರ ಏರ್ಪಡುತ್ತಾ? ಅದರಲ್ಲೂ ಭಾರತಕ್ಕೆ ಬಸ್ ಸಂಚಾರ ಊಹೂಂ.. ನಿಂತುಬಿಟ್ಟಿರುತ್ತದೆ.' ಎಂದರು ಸಲೀಂ ಚಾಚಾ.
            `ಮತ್ತೆ .. ಇನ್ನು ಹೇಗೆ ಭಾರತಕ್ಕೆ ಹೋಗೋದು..? ಇಲ್ಲಿ ಎಷ್ಟು ದಿನ ಅಂತ ಇರೋದು. ಗುರ್ತಿಲ್ಲ, ಪರಿಚಯ ಇಲ್ಲ. ನಮ್ಮ ಪರಿಸ್ತಿತಿ ಅತಂತ್ರವಾದಂತೆಯಾ? '
            `ಬೇಟಾ ನಾನು ಇರುವ ತನಕ ನೀವು ಹೇಗೆ ಅತಂತ್ರರಾಗುತ್ತೀರಿ? ಎಷ್ಟು ದಿನ ಇದ್ದರೂ ತೊಂದರೆಯಿಲ್ಲ. ನಮ್ಮ ಮನೆಯಲ್ಲಿ ಉಳಿದಕೊಳ್ಳಬಹುದು. ಭಾರತಕ್ಕೆ ಹೋಗಲೇಬೇಕು ಎನ್ನುವ ಸಂದರ್ಭದಲ್ಲಿ ನೋಡೋಣ. ಅದಕ್ಕಾಗಿ ಪ್ರಯತ್ನ ಮಾಡೋಣ. ಭಾರತಕ್ಕೆ ಹೋಗೋಕೆ ಪ್ರಮುಖ ಮಾರ್ಗವೊಂದಿದೆ. ಅದನ್ನು ಪ್ರಯತ್ನಿಸಬಹುದು. ಭಾರತದ ಗಡಿಗೆ ಹೋಗಿ.. ಅಲ್ಲಿ ಕದ್ದು ನುಸುಳೋದು.. ಅದರ ಬಗ್ಗೆಯೇ ನಾನು ವಿಚಾರಿಸಿಕೊಂಡು ಬಂದಿದ್ದು. ಇಂತಹ ಪರಿಸ್ಥಿತಿಯಲ್ಲಿ ಹಡಗು, ದೋಣಿಗಳಲ್ಲಿ ಕದ್ದು ಭಾರತಕ್ಕೆ ನುಸುಳುವುದು ಬಹಳ ಕಷ್ಟದ ಕೆಲಸ. ಭೂ ಮಾರ್ಗದಲ್ಲೇ ಪ್ರಯತ್ನಿಸಬೇಕು. ಬಾಂಗ್ಲಾ ದೇಶದಿಂದ ದಿನವಹಿ ಅದೆಷ್ಟೋ ಜನರು ಭಾರತಕ್ಕೆ ನುಸುಳುತ್ತಾರಲ್ಲ.. ನೀವೂ ಹಾಗೆಯೇ ನುಸುಳುವುದು. ಹೇಗಂದರೂ ನೀನು ಭಾರತದ ಕಬ್ಬಡ್ಡಿ ಆಟಗಾರ. ಭಾರತದ ಗಡಿಯೊಳಗೆ ಹೋದ ತಕ್ಷಣ ಅಲ್ಲಿನ ಮಿಲಿಟರಿ ಅಧಿಕಾರಿಗಳ ಬಳಿ ನಿನ್ನ ಬಗ್ಗೆ ಹೇಳಿದರೆ ಎಲ್ಲ ಸೌಕರ್ಯಗಳನ್ನು ಅವರೇ ಕಲ್ಪಿಸಿಕೊಡುತ್ತಾರೆ..' ಎಂದು ಸಲೀಂ ಚಾಚಾ ಸಲಹೆ ನೀಡಿದರು.
             ವಿನಯಚಂದ್ರನ ಕಣ್ಣಲ್ಲಿ ಬೆಳಕು ಮೂಡಿತು. ಆದರೆ ಮನದಲ್ಲಿ ಮೂಡಿದ್ದ ಬೆಳಕು ತಕ್ಷಣವೇ ಆರಿದಂತಾಯಿತು. ಹಿಂಸಾಪೀಡಿತ ರಾಷ್ಟ್ರದಲ್ಲಿ ಗಡಿ ಪ್ರದೇಶಕ್ಕೆ ತೆರಳುವುದು ಸುಲಭದ ಕೆಲಸವಂತೂ ಆಗಿರಲಿಲ್ಲ. ದೇಶದ ನಟ್ಟ ನಡುವೆ ಇದ್ದ ರಾಜಧಾನಿಯಿಂದ ಗಡಿ ಭಾಗಕ್ಕೆ ಏನಿಲ್ಲವೆಂದರೂ ಕನಿಷ್ಟ 300 ರಿಂದ 500 ಕಿ.ಮಿ ಪ್ರಯಾಣ ಮಾಡಬೇಕಿತ್ತು. ಅದು ಸುಲಭದ್ದಾಗಿರಲಿಲ್ಲ. ಹೀಗೆ ಪ್ರಯಾಣ ಮಾಡುವುದೆಂದರೆ ಬೆಂಕಿಯ ಮೇಲೆ ನಡೆದಂತೆ ಎಂಬುದು ವಿನಯಚಂದ್ರನ ಮನಸ್ಸಿನಲ್ಲಿ ಮೂಡಿದ ತಕ್ಷಣ ಆತನ ಮನಸ್ಸು ಒಮ್ಮೆ ಮಂಕಾಯಿತು.
            ವಿನಯಚಂದ್ರ ತಕ್ಷಣವೇ ತನ್ನ ಮೊಬೈಲನ್ನು ಸ್ವಿಚ್ ಆನ್ ಮಾಡಿದ. ತನ್ನ ಮೊಬೈಲಿಗೆ ಜಾಧವ್ ಹಾಗೂ ಸೂರ್ಯನ್ ರಿಂದ ನೂರಾರು ಕರೆಗಳು ಬಂದಿರುವ ಮೆಸೆಜುಗಳು ಗುಪ್ಪೆ ಗುಪ್ಪೆಯಾಗಿ ಬಂದು ಬಿದ್ದಿದ್ದವು. ಜಾಧವ್ ಅವರಿಗೆ ದೂರವಾಣಿ ಕರೆಮಾಡಿ ವಿಷಯ ಹೇಳಲು ಯತ್ನಿಸಿದ. ಪೋನ್ ಕನೆಕ್ಟ್ ಆಗಲಿಲ್ಲ. ಬಾಂಗ್ಲಾದೇಶದ ಫಾಸಲೆಯಲ್ಲಿ ಇದ್ದರೆ ಮೊಬೈಲ್ ಸಂಪರ್ಕಕ್ಕೆ ಸಿಗಬೇಕಿತ್ತು. ಆದರೆ ಅವರು ಭಾರತಕ್ಕೆ ಹೋಗಿ ತಲುಪಿದ್ದಾರೆ. ಆ ಕಾರಣದಿಂದಲೇ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದುಕೊಂಡ ವಿನಯಚಂದ್ರ. ಸೂರ್ಯನ್ ಮೊಬೈಲ್ ಕೂಡ ಅದೇ ರಾಗ ಹಾಡಿತ್ತು.
            ವಿನಯಚಂದ್ರ ಹಾಗೂ ಮಧುಮಿತಾ ಭಾರತದ ಗಡಿಯನ್ನು ನುಸುಳುವ ಬಗ್ಗೆ ತಯಾರಿ ಮಾಡಿಕೊಳ್ಳುವುದು ಸೂಕ್ತ ಎಂದು ಚಾಚಾ ಸಲಹೆ ನೀಡಿದ. ಭಾರತಕ್ಕೆ ತಲುಪಬೇಕೆಂದರೆ ಭೂಮಾರ್ಗದಲ್ಲಿ ಪ್ರಯಾಣ ಮಾಡುವುದು ಅನಿವಾರ್ಯ ಎಂದೂ ಸಲಿಂ ಚಾಚಾ ಹೇಳಿದ. ಎಷ್ಟೇ ಕಷ್ಟ ಬಂದರೂ ಇದ್ದುದರಲ್ಲಿ ಒಳ್ಳೆಯ ಮಾರ್ಗ ಇದು ಎಂದೂ ಹೇಳಿದ. ಸಲೀಂ ಚಾಚಾ ಪದೇ ಪದೆ ಭೂಮಾರ್ಗದ ಪ್ರಸ್ತಾಪವನ್ನು ಮಾಡಿದಾಗ ವಿನಯಚಂದ್ರನಿಗೆ ಸ್ವಲ್ಪ ಭರವಸೆ ಮೂಡಿತು. ಸಲೀಂ ಚಾಚಾ ಅಷ್ಟು ನಿರ್ದಿಷ್ಟವಾಗಿ ಹೇಳುತ್ತಿದ್ದಾನೆ ಎಂದಾದರೆ ಆತ ಖಂಡಿತವಾಗಿಯೂ ಭೂಮಾರ್ಗದ ಕುರಿತು ಯಾರ ಬಳಿಯೋ ಮಾತನಾಡಿರುತ್ತಾನೆ. ಆದ್ದರಿಂದ ಸಲೀಂ ಚಾಚಾನ ಸಹಾಯ ಕೇಳಬೇಕು ಹಾಗೂ ಅವನು ಹೇಳಿದಂತೆ ನಡೆಯಬೇಕು ಎಂದುಕೊಂಡ. ವಿನಯಚಂದ್ರ ಯಾವ ಮಾರ್ಗದ ಮೂಲಕ ಭಾರತದೊಳಗೆ ನುಸುಳುವುದು ಎನ್ನುವದನ್ನು ಚಾಚಾನ ಬಳಿ ಚರ್ಚಿಸಿದ.
           ಮಾತನಾಡಲು ಆರಂಭಿಸಿದ ಚಾಚಾ `ಬೇಟಾ.. ನಿನಗೆ ಭಾರತದೊಳಕ್ಕೆ ನುಸುಳಲು ನೂರಾರು ಮಾರ್ಗಗಳಿವೆ. ಪಶ್ಚಿಮ ಬಂಗಾಲದ ಗಡಿಯಲ್ಲಿ ನುಸುಳಬಹುದು. ಅಸ್ಸಾಂ ಗಡಿಯಲ್ಲಿ ಒಳಹೋಗಬಹುದು. ಅದಿಲ್ಲವಾದರೆ ಮೇಘಾಲಯ, ತ್ರಿಪುರಗಳ ಮೂಲಕವೂ ಭಾರತಕ್ಕೆ ತೆರಳಬಹುದು. ಆದರೆ ಯಾವುದು ಒಳ್ಳೆಯದು ಎನ್ನುವ ಆಯ್ಕೆ ನಿನ್ನದು..' ಎಂದರು.
           `ಗೊತ್ತಿಲ್ಲ ಚಾಚಾ.. ನನಗೆ ಏನೂ ತೋಚುತ್ತಿಲ್ಲ.. ನನಗೆ ಗಡಿ ನುಸುಳುವುದೂ ಗೊತ್ತಿಲ್ಲ. ಹಿಂಸಾ ಪೀಡಿತ ಸ್ಥಳಗಳಲ್ಲಿ ಓಡಾಡಿಯೂ ಗೊತ್ತಿಲ್ಲ. ಗಡಿ ನುಸುಳುವುದು ಸುಲಭದ ಕೆಲಸವೇ? ಭಾರತೀಯ ಸೈನ್ಯದವರು ಸದಾ ಕಾಲ ಕಾಯುತ್ತಿರುತ್ತಾರೆ. ಗಡಿ ನುಸುಳುವ ಸಂದರ್ಭದಲ್ಲಿ ನಾವು ಸಿಕ್ಕಿಬಿದ್ದರೆ ಏನು ಮಾಡುವುದು? ಅವರು ಕೊಲ್ಲಬಹುದು ಅಂಥವಾ ಬಂಧಿಸಬಹುದು ಅಲ್ಲವಾ? ನಮ್ಮ ಈ ಪ್ರಯತ್ನ ಯಶಸ್ವಿಯಾಗುತ್ತದೆ ಎಂದು ಹೇಗೆ ಹೇಳುತ್ತೀಯಾ?' ವಿನಯಚಂದ್ರ ಆತಂಕದಿಂದ ಕೇಳಿದ್ದ.
           `ಪಶ್ಚಿಮ ಬಂಗಾಲದಲ್ಲಿ ನುಸುಳಬಹುದು. ಆದರೆ ಇತ್ತೀಚೆಗೆ  ಆ ಭಾಗದಲ್ಲಿ ಉದ್ವಿಘ್ನ ಪರಿಸ್ಥಿತಿ ಇದೆಯಂತೆ. ಅಲ್ಲದೇ ಅಲ್ಲಿ ಕಟ್ಟುನಿಟ್ಟಿನ ಪಹರೆ ಕೂಡ ಹಾಕಲಾಗಿದೆ ಎಂದು ಹೇಳುತ್ತಾರೆ. ತ್ರಿಪುರಾ ಹಾಗೂ ಮೇಘಾಲಯದ ಮೂಲಕ ಹೋಗಬೇಕೆಂದಾದರೆ ಆ ಮಾರ್ಗದಲ್ಲಿ ಕಡಿದಾದ ಗುಡ್ಡಗಳಿವೆ. ಚಿತ್ತಗಾಂಗ್, ಮೇಘಾಲಯ, ತುರಾ ಗುಡ್ಡದ ಶ್ರೇಣಿಗಳನ್ನು ನೀವು ದಾಟಲೇಬೇಕು. ಬಹಳ ಕಷ್ಟ ಪಡಬೇಕಾಗುತ್ತದೆ. ಇವೆಲ್ಲವುಗಳಿಗಿಂತ ಅಸ್ಸಾಂ ಗಡಿಯಲ್ಲಿ ನುಸುಳುವುದೇ ಸುಲಭ. ಬಹುಶಃ ಭಾರತದಲ್ಲಿ ಅತ್ಯಂತ ಹೆಚ್ಚು ಬಾಂಗ್ಲಾದೇಶಿಯರು ನುಸುಳುವ ಜಾಗ ಎಂದರೆ ಅಸ್ಸಾಂ ಗಡಿಯೇ ಇರಬೇಕು. ಇಲ್ಲಿಂದ ನೀವು ಸುಲಭವಾಗಿ ಹೋಗಬಹುದು.. ನನಗೆ ಒಬ್ಬ ಏಜೆಂಟ್ ಗೊತ್ತಿದ್ದಾನೆ. ಬಾಂಗ್ಲಾದಿಂದ ಭಾರತಕ್ಕೆ ಯಾರಾದರೂ ನುಸುಳಬೇಕು ಎಂದಾದರೆ ಅವರನ್ನು ಭಾರತಕ್ಕೆ ಕಳಿಸುವ ಕೆಲಸ ಆತನದ್ದು. ಈಗ ನಾನು ಅವರನ್ನು ಭೇಟಿಯಾಗಿ ಬಂದಿದ್ದೇನೆ.. ಎಷ್ಟೋ ಜನ ಹೀಗೆ ಭಾರತದ ಗಡಿಯೊಳಕ್ಕೆ ನುಸುಳುತ್ತಿದ್ದಾರೆ. ನುಸುಳಲು ಕಾಯುತ್ತಲೂ ಇದ್ದಾರೆ. ಅವರಲ್ಲಿ ನೀವೂ ಕೂಡ ಇಬ್ಬರು. ಪ್ರಯತ್ನಿಸುವುದರಲ್ಲಿ ತಪ್ಪಿಲ್ಲ. ಗುಂಡು ಹೊಡೆಯಲಾರರು ಎನ್ನುವ ನಂಬಿಕೆ ನನಗಿದೆ. ಸಿಕ್ಕಿಬಿದ್ದರೆ ನೀನು ನಿನ್ನ ಎಲ್ಲ ವಿವರಗಳನ್ನು ಹೇಳಿದರಾಯಿತು. ಆಗ ಭಾರತದ ಸೈನ್ಯವೇ ನಿನ್ನ ಸಹಾಯಕ್ಕೆ ಧಾವಿಸಬಹುದು ಅಲ್ಲವಾ' ಎಂದರು ಸಲೀಮ ಚಾಚಾ.
            ಭಾರತಕ್ಕೆ ನುಸುಳಬೇಕೆಂದರೂ ಎಷ್ಟೆಲ್ಲ ಜಾಲಗಳು ಕೆಲಸ ನಿರ್ವಹಿಸುತ್ತವಲ್ಲ. ಏನೆಲ್ಲ ಸರ್ಕಸ್ ಮಾಡಬೇಕಾಗುತ್ತದಲ್ಲ ಎಂದುಕೊಂಡ ವಿನಯಚಂದ್ರ ತಾನು ಭಾರತೀಯನೇ ಆದರೂ ತನ್ನ ತಾಯ್ನೆಲ ಭಾರತಕ್ಕೆ ನುಸುಳಿ ಹೋಗುವಂತಹ ಪರಿಸ್ಥಿತಿ ಬಂದೊದಗಿತಲ್ಲ ಎಂಬ ಬಾವ ಕಾಡಿತು. ತನ್ನೊಳಗೆ ನಸುನಕ್ಕ. ಸೀದಾ ಮಧುಮಿತಾಳ ಬಳಿ ವಿಷಯವನ್ನು ತಿಳಿಸಿದ. ಆದರೆ ಆಕೆಯಿಂದ ಬಂದ ಉತ್ತರ ಮಾತ್ರ ವ್ಯತಿರಿಕ್ತವಾಗಿತ್ತು. ತನ್ನ ಕುಟುಂಬದ ಸದಸ್ಯರನ್ನೆಲ್ಲ ಕಳೆದುಕೊಂಡಿದ್ದ ಮಧುಮಿತಾ ಭಾರತಕ್ಕೆ ಬರಲು ಸುತಾರಾಂ ಒಪ್ಪಲಿಲ್ಲ. ವಿನಯಚಂದ್ರ ಒತ್ತಾಯ ಮಾಡುತ್ತಲೇ ಇದ್ದ. ಅದಕ್ಕೆ ಮಧುಮಿತಾ ನಕಾರಾತ್ಮಕವಾಗಿ ಉತ್ತರ ನೀಡುತ್ತಲೇ ಇದ್ದಳು. ವಿಷಯವನ್ನು ತಿಳಿದ ಸಲೀಂ ಚಾಚಾ ಬಂದು ಒಪ್ಪಿಸಿದ ನಂತರವೇ ಮಧುಮಿತಾ ಭಾರತಕ್ಕೆ ತೆರಳಲು ಒಪ್ಪಿಕೊಂಡಿದ್ದು. ಈ ಸಂದರ್ಭದಲ್ಲಿ ವಿನಯಚಂದ್ರನಿಗೆ ಸಲೀಂ ಚಾಚಾ ಒಬ್ಬ ಸಂತನಂತೆಯೂ, ಪ್ರೀತಿಯಿಂದ ಮೈದಡವುವ ಅಜ್ಜನಂತೆಯೂ, ಯಾವತ್ತೋ ಬಿಟ್ಟು ಹೋದ ಗೆಳೆಯನಂತೆಯೂ ಕಂಡ. ಮುಸ್ಲಿಂ ರಾಷ್ಟ್ರದಲ್ಲಿ ಹಿಂದೂಗಳಾದ ತಮ್ಮನ್ನು ಕಾಪಾಡಲು ಒಬ್ಬ ಮುಸ್ಲಿಂ ಎಷ್ಟೆಲ್ಲ ಸಹಾಯ ಮಾಡುತ್ತಾನೆ ಎಂದುಕೊಂಡ ವಿನಯಚಂದ್ರ. ಹೇಗಾದರೂ ಮಾಡಿ ತಮ್ಮನ್ನು ಭಾರತಕ್ಕೆ ಕಳಿಸಬೇಕೆಂದು ಪ್ರಯತ್ನಿಸುತ್ತಿರುವ ಸಲೀಂ ಚಾಚಾನ ಗುಣ ಇಷ್ಟವಾಯಿತು. ಬಹಳ ಸೆಳೆಯಿತು.

***
           ಇದಾದ ನಂತರ ಪ್ರತಿ ಕ್ಷಣ, ಪ್ರತಿ ಸಮಯದಲ್ಲೂ ಭಾರತಕ್ಕೆ ಹೇಗೆ ಹೋದರೆ ಚನ್ನ, ಯಾವ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳಬೇಕು ಎನ್ನುವ ಚರ್ಚೆ ಸಲೀಂ ಚಾಚಾನ ಮನೆಯಲ್ಲಿ ಆರಂಭವಾಯಿತು. ಪ್ರತಿಯೊಬ್ಬರೂ ತಮಗೆ ತಿಳಿದ ಅಂಶಗಳನ್ನು ತಿಳಿಸುತ್ತಿದ್ದರು. ಢಾಕಾದಿಂದ ಬ್ರಹ್ಮಪುತ್ರ ನದಿಗುಂಟ ಸಾಗಿ, ಅಲ್ಲಿಂದ ಸೀದಾ ಅಸ್ಸಾಂ ಗಡಿಗೆ ಹೋಗಿ ಒಳ್ಳೆಯ ಅವಕಾಶಕ್ಕಾಗಿ ಕಾಯುವುದು, ಚಿಕ್ಕ ಅವಕಾಶ ಸಿಕ್ಕ ತಕ್ಷಣ ಭಾರತಕ್ಕೆ ದಾಟಿಕೊಂಡು ಬಿಡುವುದು ಎನ್ನುವುದು ಎಲ್ಲರ ಸಲಹೆಯಾಗಿತ್ತು. ಪ್ರತಿಯೊಬ್ಬರೂ ಈ ಸಲಹೆಯನ್ನು ಒಪ್ಪಿಕೊಂಡಿದ್ದರು. ಇದಕ್ಕಾಗಿ ಎಲ್ಲ ತಯಾರಿಗಳನ್ನೂ ಕೈಗೊಳ್ಳಲಾಯಿತು. ಹಿಂಸಾಪೀಡಿತ ಬಾಂಗ್ಲಾದೇಶದಿಂದ ಭಾರತದ ಗಡಿಯವರೆಗೆ ತೆರಳುವುದು ಸುಲಭದ ಕೆಲಸವಾಗಿರಲಿಲ್ಲ. ಅದರಲ್ಲೂ ಹಿಂದೂಗಳಾಗಿದ್ದ ಇವರ ಬಗ್ಗೆ  ಚಿಕ್ಕ ಸಂದೇಹ ಬಂದರೂ ಸಾವನ್ನಪ್ಪುವುದು ಗ್ಯಾರಂಟಿಯಾಗಿತ್ತು. ತಲೆಮರೆಸಿಕೊಂಡು, ಮುಸ್ಲೀಮನಂತೆ ವೇಷ ಧರಿಸಿಕೊಂಡೋ ಅಥವಾ ಇನ್ಯಾವುದೋ ಬಗೆಯಲ್ಲಿ ಹೋಗುವುದು ಅನಿವಾರ್ಯವಾಗಿತ್ತು. ಅದಕ್ಕಾಗಿಯೇ ವಿನಚಂದ್ರ ಗಡ್ಡ ಬಿಡಲು ತೀರ್ಮಾನಮಾಡಿದ್ದ. ಪ್ರತಿದಿನ ಮಾಡುತ್ತಿದ್ದ ಶೇವಿಂಗನ್ನು ನಿಲ್ಲಿಸಿದ್ದ. ಮೂರನೇ ದಿನಕ್ಕೆಲ್ಲ ಸಾಕಷ್ಟು ಗಡ್ಡ ಬೆಳೆದಿತ್ತು. ಸಲೀಂ ಚಾಚಾ ವಿನಯಚಂದ್ರ ಮುಸ್ಲೀಮನಂತೆ ಕಾಣಲು ಏನೇನು ಬೇಕೋ ಅದೆಲ್ಲವನ್ನೂ ಮಾಡಿದ್ದರು.
             ಬಾಂಗ್ಲಾದ ಫಾಸಲೆಯಲ್ಲಿ ಇದ್ದಾಗ ವಿನಯಚಂದ್ರ ಹಾಗೂ ಮಧುಮಿತಾ ಇಬ್ಬರೂ ಮುಸ್ಲೀಂ ಹೆಸರನ್ನು ಇಟ್ಟುಕೊಳ್ಳಬೇಕು. ಇಬ್ಬರೂ ಗಂಡ ಹೆಂಡತಿಯರೆಂದು ಎಲ್ಲರ ಬಳಿಯೂ ಹೇಳಿಕೊಳ್ಳಬೇಕು ಎಂದು ಸಲೀಂ ಚಾಚಾನ ಮಗ ಸಲಹೆ ನೀಡಿದ್ದರು. ಎಲ್ಲರಿಗೂ ಈ ಸಲಹೆ ಹೌದೆನ್ನಿಸಿತ್ತು. ತಕ್ಷಣ ಆ ಕುರಿತು ಎಲ್ಲರೂ ಸಿದ್ಧತೆ ನಡೆಸಲಾರಂಭಿಸಿದರು. ಸಲೀಂ ಚಾಚಾ ವಿನಯಚಂದ್ರ ಹಾಗೂ ಮಧುಮಿತಾಳಿಗೆ ಮದುವೆ ಮಾಡಲು ನಿರ್ಧರಿಸಿದ್ದರು. ಈ ಬಗ್ಗೆ ವಿನಯಚಂದ್ರನಿಗೆ ತಿಳಿಸಿದಾಗ ಆತನಿಗೆ ಮನಸ್ಸಿನೊಳಗೆ ಖುಷಿಯಾಗಿತ್ತು. ಆದರೆ ಭಾರತದಲ್ಲಿ ತನ್ನ ಮನೆಯಲ್ಲಿ ಮಧುಮಿತಾಳನ್ನು ಮದುವೆಯಾಗಬೇಕು ಎಂದುಕೊಂಡಿದ್ದವನಿಗೆ ಬಾಂಗ್ಲಾದೇಶದ ರಾಜಧಾನಿ ಢಾಕಾದ ನಡುವಿನ ಯಾವುದೋ ಒಂದು ಮೂಲೆಯಲ್ಲಿ ತಂದೆ, ತಾಯಿ, ಬಂಧು, ಬಳಗ ಯಾರೂ ಇಲ್ಲದೇ ಮದುವೆಯಾಗಬೇಕಾಗುತ್ತದೆಯಲ್ಲಾ ಎನ್ನುವುದೂ ಕಾಡಿತು. ಮದುಮಿತಾಳ ಬಳಿ ಈ ವಿಷಯ ತಿಳಿಸಿದಾಗ ಆಕೆ ಆರಂಭದಲ್ಲಿ ಮಾತನಾಡಿರಲಿಲ್ಲ. ನಂತರ ಆಕೆ ಕೂಡ ವಿನಯಚಂದ್ರನ ಮನಸ್ಸಿನಲ್ಲಿ ಮೂಡಿದ್ದ ಅಂಶಗಳನ್ನೇ ತಿಳಿಸಿದಾಗ ವಿನಯಚಂದ್ರ ಒಮ್ಮೆ ಅಚ್ಚರಿ ಹೊಂದಿದ್ದ. ಎಷ್ಟು ಚನ್ನಾಗಿ ಆಲೋಚನೆ ಮಾಡುತ್ತಾಳಲ್ಲ ಇವಳು. ತನಗೆ ಅನುರೂಪಳು ಎಂದುಕೊಂಡ.
                ಕೊನೆಗೆ ಸಲೀಂ ಚಾಚಾ ನೆ `ಇಲ್ಲಿ ಮದುವೆಯ ಶಾಸ್ತ್ರ ಆಗಲಿ. ಭಾರತಕ್ಕೆ ಹೋದ ನಂತರ ಶಾಸ್ತ್ರೋಕ್ತವಾಗಿ ನಿಮಗೆ ಬೇಕಾದ ಹಾಗೆ ಮದುವೆಯಾಗಿ. ಇಲ್ಲಿ ತೋರಿಕೆಗಾದರೂ ಮದುವೆಯಾಗಲೇ ಬೇಕಾಗುತ್ತದೆ..' ಎಂದಾಗ ವಿಧಿಯಿಲ್ಲದೇ ಒಪ್ಪಿಕೊಳ್ಳಬೇಕಾಯಿತು. ಕೊನೆಗೆ ಸಲೀಂ ಚಾಚಾನೆ ಯಾವ ಯಾವುದೋ ಕಡೆಗೆ ತೆರಳಿ ಅದೇನೇನೋ ಶಾಸ್ತ್ರಗಳನ್ನು ಮಾಡಿಸಿದರು. ದರ್ಗಾಕ್ಕೂ ಕರೆದೊಯ್ದರು. ಅಲ್ಲೆಲ್ಲ ತಮಗೆ ಗೊತ್ತಿದ್ದ ಶಾಸ್ತ್ರಗಳ ಮೂಲಕ ಪೂಜೆಯನ್ನೂ ಮಾಡಿಸಿದರು. ಮಧುಮಿತಾ ದಿನದಿಂದ ದಿನಕ್ಕೆ ಗೆಲುವಾಗಿದ್ದಳು. ತಂದೆ, ತಾಯಿಗಳನ್ನು, ಬಂಧು ಬಳಗವನ್ನು ಕಳೆದುಕೊಂಡಿದ್ದ ನೋವು ನಿಧಾನವಾಗಿ ಮಾಸುತ್ತಿತ್ತು. ಅದೇ ಜಾಗದಲ್ಲಿ ವಿನಯಚಂದ್ರನ ಕಡೆಗೆ ಒಲವು ಇಮ್ಮಡಿಯಾಗುತ್ತಿತ್ತು. ಕಡೆಗೆ ಇನ್ನೊಂದು ವಾರದ ನಂತರ ಭಾರತಕ್ಕೆ ತೆರಳುವುದು ಎನ್ನುವುದು ನಿಶ್ಚಯವಾಯಿತು. ಅದಕ್ಕೆ ಕೊನೆಯ ಹಂತದ ತಯಾರಿಯನ್ನು ಕೈಗೊಳ್ಳಲಾಯಿತು.
            ಭಾರತದ ಗಡಿಯವರೆಗೆ ತೆರಳುವ ವರೆಗೆ ಬೇಕಾಗುತ್ತದೆ ಎನ್ನುವ ಕಾರಣಕ್ಕಾಗಿ ಸಲೀಂ ಚಾಚಾನ ಮನೆಯ ಸದಸ್ಯರು ಜೋಳದ ರೊಡ್ಡಿ, ಅದಕ್ಕೆ ಖಡಕ್ ಕಾರದ ಚಟ್ನಿ ಸೇರಿದಂತೆ ಹಲವಾರು ಅಗತ್ಯದ ವಸ್ತುಗಳನ್ನು ತಯಾರಿಸಿಕೊಟ್ಟಿದ್ದರು. ಸಲೀಂ ಚಾಚಾ ತಾನೂ ವಿನಯಚಂದ್ರ ಹಾಗೂ ಮಧುಮಿತಾಳ ಜೊತೆಗೆ ಭಾರತದ ಗಡಿಯವರೆಗೆ ಬಿಟ್ಟು ಬರುವುದಾಗಿ ತಯಾರಾಗಿದ್ದ. ಯಾರು ಬೇಡವೆಂದರೂ ಕೇಳದೇ ಹೊರಟು ನಿಂತಿದ್ದ. ತಾನು ಮಾತನಾಡಿದ್ದ ಏಜೆಂಟನನ್ನು ಕರೆದು ಪರಿಚಯಿಸಿ, ಭಾರತಕ್ಕೆ ಕರೆದುಕೊಂಡು ಹೋಗುವ ಬಗ್ಗೆ ತಿಳಿಸಿದ್ದ. ಸಲೀಂ ಚಾಚಾನ ಕಾರ್ಯವೈಖರಿ ನೋಡಿ ವಿನಯಚಂದ್ರನ ಮನಸ್ಸು ತುಂಬಿಬಂದಿತ್ತು. ಕಣ್ಣಂಚಿನಲ್ಲಿ ಹನಿ ಮೂಡಿದ್ದವು.

(ಮುಂದುವರಿಯುತ್ತದೆ..)

Tuesday, August 5, 2014

ಬನಿಯಂತಹ ಹನಿಗಳು

ನೆನಪು

ಕೆಲವು ಹೆಸರುಗಳು

ಬದುಕಿನ ತುಂಬ 
ನೆನಪಾಗುತ್ತವೆ..|
ಮತ್ತೆ ಕೆಲವು ವ್ಯಕ್ತಿಗಳು
ಜೀವನದ ತುಂಬೆಲ್ಲ
ಹುಣ್ಣಿನಂತೆ
ಕಾಡುತ್ತಾರೆ..||

ಅಜಗಜಾಂತರ

ಹಿಂದೊಮ್ಮೆ ಆಗಿದ್ದವು
ಕೊಳವೆ ಬಾವಿಗಳು
ನೀರಿನ ಚಿಲುಮೆಗಳು
ಈಗ ಆಗಿವೆ
ಮುಗ್ದ ಕಂದಮ್ಮಗಳನ್ನು
ಬಲಿ ಪಡೆಯುವ
ಶವ ಪೆಟ್ಟಿಗೆಳು |

ಅದೃಷ್ಟ

ನಿಮಗೆ
ಬೇರೆ ಸುದ್ದಿಯೇ ಇಲ್ಲವೇ
ಎಂದು ರೇಗಾಡುತ್ತಿದ್ದರು ಸಿದ್ದಣ್ಣ..
ಅವರ ಲಕ್ಕೋ ಎಂಬಂತೆ
ಸಿಕ್ಕರು
ವಿ. ಆರ್. ಭಟ್ಟರು
ಮಾಧ್ಯಮದ ಬಾಯಿಗೆ
ಬಿದ್ದರು |

ಬಲಿ

ಚೀರಾಡುವ 
ಬಾಯಿಗಳಿಗೆ
ಸಿಗುವವರು ಮಾತ್ರ
ಪುರೋಹಿತ 
ಶಾಹಿಗಳು

Monday, August 4, 2014

ಕಂಡದ್ದು ಕಂಡಾಂಗೆ

(ದಿಲ್ ಸೇ...)
ವಿಕ್ಟರಿ...

ಒಂದು ಮಜಾ ಸಿನಿಮಾ ನೋಡಿದೆ.
ಹಿಂದಿ ಭಾಷೆಯ ವಿಕ್ಟರಿ.. ಹರ್ಮನ್ ಬವೇಜಾ ಸಿನಿಮಾ.
ಒಂದೊಂದು ಸೀನು ಎಷ್ಟು ಮಜಾ ಅಂತೀರಾ.. ಆಹಾ.. ನೋಡೋಕೆ ಎರಡು ಕಣ್ಣು ಸಾಲದು.. ಛೇ..
ಸಿನೆಮಾದಲ್ಲಿ ಬವೇಜಾ ಕ್ರಿಕೆಟ್ ಆಟಗಾರ.
ಡೈರೆಕ್ಟ್ ಆಗಿ ಇಮಡಿಯನ್ ನ್ಯಾಷನಲ್ ಕ್ರಿಕೆಟ್ ಟೀಮ್ ಕೋಚಿಗೆ ಚಾಲೆಂಜ್ ಮಾಡೋದು, ಒಂದೇ ಒಂದು ರಣಜಿ ಮ್ಯಾಚ್ ಆಡಿ ಭಾರತ ತಂಡಕ್ಕೆ ಸೆಲೆಕ್ಟ್ ಆಗೋದು.. ಎಷ್ಟೆಲ್ಲ ಮ್ಯಾಜಿಕ್ ಇದೆ ಸಿನೆಮಾದಲ್ಲಿ ಅಂದ್ರೆ... ಬಣ್ಣಿಸಲಸದಳ.
ಸಿನೆಮಾದಲ್ಲಿ ಒಂದು ಸನ್ನಿವೇಶ. ನಾಯಕ ಎಲ್ಲ ದಾಖಲೆಗಳನ್ನು ಚಿಂದಿ ಉಡಾಯಿಸುತ್ತ ಬರುತ್ತಾನೆ. ಅಲ್ಲೊಂದು ಸನ್ನಿವೇಶದಲ್ಲಿ ಸಿಕ್ಸರ್ ಗಳ ಸುರಿಮಳೆ ಸುರಿಸುತ್ತಿರುತ್ತಾನೆ. ಸಿಕ್ಸರ್ ಹೊರೆಯುವ ಭರದಲ್ಲಿ ಮೊದಲ ಎಸೆತ ನೋಬಾಲ್ ಸಿಕ್ಸ್, ಆಮೇಲಿನ ಐದು ಎಸೆತಗಳು ಸಿಕ್ಸ್. ನೋಬಾಲ್ ಸಿಕ್ಸ್ ಸೇರಿ ಆರು ಸಿಕ್ಸರ್ ಹೊಡೆಯುತ್ತಾನೆ ನಾಯಕ. ಅಲ್ಲಿಗೆ ಅಂಪಾಯರ್ ಓವರ್ ಆಯ್ತು ಎಂದು ಹೇಳಿದರೆ ಕಾಮೆಂಟರಿ ಹೇಳುವವರು ಹೀರೋನನ್ನು ರವಿಶಾಸ್ತ್ರಿ, ಹರ್ಷಲ್ ಗಿಬ್ಸ್, ಯುವರಾಜ್ ಸಿಂಗ್ ಗೆ ಹೋಲಿಸುತ್ತಾರೆ. ನನ್ನನ್ನು ಕಾಡಿದ್ದು ನೋಬಾಲ್ ಆದ ಬಾಲನ್ನು ಬಿಟ್ಟರೆ ಉಳಿದಂತೆ ಒಂದು ಓವರ್ ಗೆ ಆರು ಬಾಲ್ ಹಾಕಬೇಕು. ಐದೇ ಬಾಲ್ ಹಾಕಿದ ಎನ್ನುವುದು ಒಂದು ಕಡೆ. ಐದು ಬಾಲ್ ಗೆ ಓವರ್ ಮಾಡಿದ ನಿರ್ದೇಶಕನಿಗೆ ಸಲಾಂ ಎಂದೆನಾದರೂ ಇನ್ನೊಂದು ಬಾಲನ್ನು ಹೆಚ್ಚುವರಿ ಹಾಕಿದ್ದರೆ ನಾಯಕನಿಂದ ಇನ್ನೊಂದು ಸಿಕ್ಸರ್ ನೋಡುವ ದೌರ್ಭಾಗ್ಯ ನಮ್ಮದಾಗುತ್ತಿತ್ತು. ಜೊತೆಗೆ ಅದೊಂದು ವಿಶ್ವದಾಖಲೆಯಾಗಿ ಏಳು ಸತತ ಸಿಕ್ಸರ್ ಹೊಡೆದು ಹರ್ಮನ್ ಬವೇಜಾ ಎಲ್ಲರನ್ನೂ ಮೀರಿಸಿಬಿಡುತ್ತಿದ್ದ.. ಇರಲಿ..ಅಂದ ಹಾಗೆ ಆತ ಸಿಕ್ಸರ್ ಹೊಡೆದಿದ್ದು ಯಾರಿಗೆ ಗೊತ್ತಾ ಆಸ್ಟ್ರೇಲಿಯಾದ ಕ್ರಿಕೆಟ್ ಪ್ಲೇಯರ್ ಗೆ..

ಇನ್ನೊಂದು ವಿಷಯ.. ಮಜವಾಗಿದೆ... ಸಿನೆಮಾಕ್ಕೂ ನಿಜವಾದ ಕ್ರಿಕೆಟ್ ಗೂ ತಾಳೆಯಾಗುವಂತದ್ದು.. ಸಿನೆಮಾದಲ್ಲಿ 20ಕ್ಕೂ ಅಧಿಕ ಕ್ರಿಕೆಟ್ ಆಟಗಾರರು ನಟಿಸಿದ್ದಾರೆ. ಆಸಿಸ್ ನ ಬ್ರೆಟ್ ಲಿ, ಹಾಡ್ಜ್, ಹಾಗ್ , ಸೌಥಾಪ್ರಕಾದ ಸ್ಮಿತ್, ಪಾಕಿಸ್ತಾನದ ಶೊಯೆಬ್ ಮಲಿಕ್, ಅಕ್ಮಲ್, ಗುಲ್, ವೆಸ್ಟಿಂಡೀಸಿನ ಸ್ಮಿತ್, ಬ್ರಾವೋ, ಶ್ರೀಲಂಕಾದ ಜಯಸೂರ್ಯ, ಮೆಂಡಿಸ್, ಅರ್ನಾಲ್ಡ್, ಭಾರತದ ದಿನೇಶ್ ಕಾರ್ತೀಕ್, ಹರ್ಭಜನ್, ನೆಹ್ರಾ, ರಮೇಶ್ ಪವಾರ್, ರೈನಾ, ಪಂಕಜ ಸಿಂಗ್, ಯುಸುಫ್ ಪಠಾಣ್, ಉತ್ತಪ್ಪ, ಇಶಾಂಥ ಶರ್ಮಾ ಇತ್ಯಾದಿ..
ಸಿನೆಮಾದ ಮಜಾ ಸಂಗತಿಗಳೆಂದರೆ
ಇದೀಗ ಅಂತರಾಷ್ಟ್ರೀಯ ಪಂದ್ಯಕ್ಕೆ ಪಾದಾರ್ಪಣೆ ಮಾಡಲು ಕಾಯುತ್ತಿರುವ ಪಂಕಜ್ ಸಿಂಗ್ ಅಲ್ಲಿ ಆಗಲೇ ಭಾರತ ತಂಡದ ಖಾಯಂ ಆಟಗಾರ.
ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಹೇಗೆ ಯುಸುಫ್ ಪಠಾಣ್ ಆರಂಭ ಶೂರನೋ ಆ ಸಿನೆಮಾದಲ್ಲೂ ಹಾಗೇ..
ಫೈನಲ್ ಪಂದ್ಯದಲ್ಲಿ ಭಾರತ ಆಸ್ಟ್ರೇಲಿಯಾದ 389 ರನ್ ಚೇಸ್ ಮಾಡಿ ಗೆಲ್ಲುತ್ತದೆ. ಹೀರೋ 15 ಬಾಲ್ ನಲ್ಲಿ 50 ಹೊಡೆಯುವುದು ಸಾಮಾನ್ಯವಲ್ಲ ಬಿಡಿ..

ಅಂದಹಾಗೆ ಆಸ್ಟ್ರೇಲಿಯನ್ನರ ಸ್ಲೆಡ್ಜಿಂಗನ್ನು ಇಲ್ಲಿ ಯಥಾವತ್ ಚಿತ್ರಿಸಲಾಗಿದೆ. ಮೊದಲ ಮೂರು ಪಂದ್ಯಗಳಲ್ಲಿ ಶತಕ ಬಾರಿಸುವುದು ಅತಿಶಯ ಎನ್ನಿಸುತ್ತದೆ. ಆಸಿಸ್ ಆಟಗಾರ ಬ್ರೆಟ್ ಲಿಗೆ ಕ್ರಿಕೆಟ್ ಹೊರತಾಗಿ ಒಂದೆರಡು ಇತರೆ ಮಾತುಗಳಿವೆ... ಹೀರೋಯಿನ್ನ ಚನ್ನಾಗಿದ್ದರೂ ಇಂತ ಸಿನೆಮಾದಲ್ಲಿ ಅವಳ ಪಾತ್ರ ಅಷ್ಟಕ್ಕಷ್ಟೆ...

ಎಲ್ಲಕ್ಕಿಂತ ಇಂಟರೆಸ್ಟಿಂಗ್ ಹಾಗೂ ರಿಯಲ್ ಆಗಿ ಮೂಡಿಬಂದಿದ್ದು ಅಂದರೆ...
ಹರ್ಭಜನ್, ಇಶಾಂತ ಶರ್ಮಾ ಸಿನೆಮಾದಲ್ಲಿ ಸಿಕ್ಕಾಪಟ್ಟೆ ರನ್ ಹೊಡೆಸಿಕೊಳ್ಳುತ್ತಾರೆ. ರಿಯಲ್ ಮ್ಯಾಚಿನಲ್ಲಿ ರನ್ ಹೊಡೆಸಿಕೊಳ್ಳುವಂತೆ...
ಇನ್ನೂ ಅಬ್ಬಾ ಎನ್ನಿಸುವುದು ಆಶಿಶ್ ನೆಹ್ರಾ..
ಆತ ಇಂಟರ್ನ್ಯಾಶನಲ್ ಪಂದ್ಯಗಳಲ್ಲಿ ರನ್ ಹೊಡೆಸಿಕೊಳ್ಳುವುದು ಕಾಮನ್ನು ಬಿಡಿ..
ಚಿತ್ರದಲ್ಲಿ ಹರ್ಮನ್ ಬವೇಜಾನಿಂದ ಯಾವ್ ರೀತಿ ರನ್ ಹೊಡೆಸಿಕೊಳ್ಳತಾನೆ ಗೊತ್ತಾ..
ಆಹಾ.. ಆಗಲೇ ನನಗೆ ಅನ್ನಿಸಿದ್ದು ಆವತ್ತಿಗೂ, ಈವತ್ತಿಗೂ ಯಾವತ್ತಿಗೂ ಆಶಿಶ್ ನೆಹ್ರಾ.. ಆಶಿಶ್ ನೆಹ್ರಾನೇ.. ಯಾವತ್ತೂ ಬದಲಾಗೋದಿಲ್ಲ.. ಎದುರಾಳಿ ಯಾರೇ ಇರಲಿ.. ಬದಲಾಗಿ ಹರ್ಮನ್ ಬವೇಜಾ ನೇ ಇರಲಿ..
ಆಶಿಶ್ ನೆಹ್ರಾ ಕೊಡೋದೊಂದೆ ರನ್ನು..!!

ನಿರ್ದೇಶಕನ ಕ್ರಿಯೇಟಿವಿಟಿಗೆ ಅಡ್ಡಬಿದ್ದೆ...



**2**

ಸಂಗಮ್.. ಹಾಗೂ ಕನ್ನಡ ಹೀರೋಗಳು

ಮೆ ಕ್ಯಾ ಕರೂ ರಾಂ ಮುಝೆ ಬುಡ್ಡಾ ಮಿಲ್ ಗಯಾ ಎನ್ನುವ ಮೂಲಕ 1964ರಲ್ಲಿ ತೆರೆಕಂಡ ಸಂಗಮ್ ಸಿನೆಮಾವನ್ನು ಮತ್ತೊಮ್ಮೆ ನೋಡಿದೆ. ಸರಳ ಪ್ರೇಮಕಥೆ. ವಿವಾಹದ ನಂತರದ ಅನುಮಾನ ಎಂಬ ಅಂಶಗಳನ್ನಿಟ್ಟುಕೊಂಡು ರಾಜ್ ಕಪೂರ್ ಈ ಸಿನೆಮಾವನ್ನು ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ.
ಕಥಾನಾಯಕ ರಾಜ್ ಕಪೂರ್.. ನಾಯಕಿ ವೈಜಯಂತಿಮಾಲಾ .. ಜೊತೆಯಲ್ಲಿ ರಾಜೇಂದ್ರಕುಮಾರ್ ಮುಖ್ಯ ಭೂಮಿಕೆಯ ಸಿನೆಮಾದಲ್ಲಿ ಬಹು ಅಂಶಗಳಲ್ಲಿ ಈ ಮೂವರೇ ಇರುತ್ತಾರೆ. ತ್ರಿಕೋನ ಪ್ರೇಮ ಕಥೆ.
ವೈಜಯಂತಿ ಮಾಲಾಳನ್ನು ಪ್ರೀತಿಸುವ ರಾಜ್ ಕಪೂರ್, ರಾಜೇಂದ್ರ ಕುಮಾರ್ ಇಬ್ಬರದ್ದೂ ಸೂಪರ್ ಅಭಿನಯ.
ತನ್ನ ಪ್ರೀತಿಯನ್ನು ರಾಜ್ ಕಪೂರ್ ಡಂಗುರ ಸಾರಿದಂತೆ ಗೆಳೆಯನ ಬಳಿ ಹೇಳಿಕೊಂಡರೆ ತನ್ನೊಳಗೆ ಪ್ರೀತಿಯ ಮಹಲನ್ನು ಕಟ್ಟಿ `ಯೇ ಮೇರಾ ಪ್ರೇಮ ಪತ್ರ ಪಡಕರ್..' ಎಂದು ಹಾಡಿ ವೈಜಯಂತಿಯನ್ನು ಸೆಳೆಯುವ ರಾಜೇಂದ್ರಕುಮಾರ್. ವೈಜಯಂತಿ ಮಾಲಾಳಿಗೂ ರಾಜೇಂದ್ರಕುಮಾರನ ಮೇಲೆ ಪ್ರೇಮದ ಭಾವವಿದೆ. ಆದರೆ ಮೂವರೂ ಗೆಳೆಯರು. ರಾಜೇಂದ್ರಕುಮಾರ್ ಸ್ನೇಹಕ್ಕಾಗಿ ತನ್ನ ಪ್ರೀತಿಯನ್ನು ತ್ಯಾಗ ಮಾಡಿ ರಾಜ್ ಕಪೂರನಿಗೆ ವೈಜಯಂತಿಯನ್ನು ಮದುವೆ ಮಾಡಿಸುವಲ್ಲಿಗೆ ಸಿನೆಮಾ ಅರ್ಧ ಮುಗಿಯುತ್ತದೆ. 
ಇನ್ನು ಮುಂದಿರುವುದೇ ನಿಜವಾದ ಕಥೆ. ಮದುವೆಗೆ ಮುನ್ನ ತನ್ನ ಹೆಂಡತಿ ಯಾರನ್ನೋ ಪ್ರೀತಿಸುತ್ತಿದ್ದಳು ಎನ್ನುವ ಅಂಶವನ್ನು ತಿಳಿದುಕೊಂಡ ರಾಜ್ ಕಪೂರ್ ಕೂತಲ್ಲಿ ನಿಂತಲ್ಲಿ `ಯಾರವನು..' ಎಂದು ಪ್ರಶ್ನೆ ಮಾಡುತ್ತಾನೆ. ರಾಜೇಂದ್ರಕುಮಾರನಿಗೂ ಗೊತ್ತಿರಬಹುದು ಎಂದು ಆತನಲ್ಲೂ ಕೇಳುತ್ತಾನೆ. ಕೊನೆಗೊಮ್ಮೆ `ದೋಸ್ತ್ ದೋಸ್ತ್ ನಾ ರಹಾ.. ಪ್ಯಾರ್ ಪ್ಯಾರ್ ನಾ ರಹಾ..' ಎಂದೂ ಹಾಡುತ್ತಾನೆ.. ಅಂತ್ಯದಲ್ಲಿ ರಾಜೇಂದ್ರಕುಮಾರ ಹಾಗೂ ವೈಜಯಂತಿಮಾಲಾ ಪ್ರೀತಿಸಿದ್ದರು. ಅವರ ನಡುವೆ ತಾನು ಬಂದು ಬದುಕನ್ನು ಹಾಳು ಮಾಡಿದೆ ಎನ್ನುವ ದುಃಖ ರಾಜ್ ಕಪೂರನನ್ನು ಕಾಡಿದರೆ ರಾಜೇಮದ್ರಕುಮಾರ್ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಅಲ್ಲಿಗೆ ಸಿನೆಮಾ ಮುಕ್ತಾಯವಾದರೂ ನೋಡುಗನ ಮನದಲ್ಲಿ ಏನೆಲ್ಲ ಭಾವನೆಗಳನ್ನು ಉಳಿಸಿಬಿಡುತ್ತದೆ..
ಸಿನೆಮಾದಲ್ಲಿ ಇಷ್ಟೇ ಅಂಶಗಳಲ್ಲದೇ ನೋಡಲೇ ಬೇಕು ಎನ್ನಿಸುವಂತಹದ್ದು ಸಾಕಷ್ಟಿವೆ. ಬೋಲ್ ರಾಧಾ ಬೋಲ್ ಸಂಗಂ ಹೋಗಾ ಕೆ ನಹಿ ಎನ್ನುವಂತಹ ಸುಮಧುರ ಹಾಡುಗಳು ಇಲ್ಲಿವೆ. ಯುದ್ಧ ವಿಮಾನದ ಪೈಲಟ್ ಆಗುವ ರಾಜ್ ಕಪೂರ್.. ಯುದ್ಧದಲ್ಲಿ ಪಾಲ್ಗೊಳ್ಳುವ ದೃಶ್ಯ. 
ಕ್ಲೈಮ್ಯಾಕ್ಸಿನಲ್ಲಿ ತ್ರಿಕೋನದಂತೆ ನಿಲ್ಲುವ ರಾಜ್ಕಪೂರ್, ರಾಜೇಂದ್ರಕುಮಾರ್, ವೈಜಯಂತಿ ಮಾಲಾ...
ರಾಜ್ ಕಪೂರ್ ನಡೆದುಕೊಂಡು ವೈಜಯಂತಿ ಮಾಲಾ ಬಳಿ ಬಂದರೆ ಆಕೆ ನಿಧಾನವಾಗಿ ನಡೆದುಕೊಂಡು ರಾಜೇಂದ್ರಕುಮಾರ್ ಬಳಿ ಹೋಗುವುದು, ರಾಜೇಂದ್ರ ಕುಮಾರ್ ಆಕೆಯಿಂದ ದೂರ ಹೋಗಿ ನಿಲ್ಲುವುದು.. ಇಂತಹ ಮನಮುಟ್ಟುವ ಪಾತ್ರಗಳು ಬಹಳಷ್ಟಿವೆ. ತುಂಟಾಟದ ಮನೋಭಾವದವರಿಗೆ ಮೇ ಕ್ಯಾ ಕರೂ ರಾಂ ಇಷ್ಟವಾಗಬಹುದು.. ಸ್ವಿಡ್ಜರ್ಲೆಂಡಿನಲ್ಲಿ ಮೊಟ್ಟ ಮೊದಲು ಚಿತ್ರೀಕರಣಗೊಂಡ ಭಾರತದ ಚಿತ್ರ ಇದು ಎನ್ನುವ ಹೆಗ್ಗಳಿಕೆ ಇದೆ. ಕನ್ನಡದಲ್ಲಿಯೂ ಸ್ವಪ್ನ ಎನ್ನುವ ಹೆಸರಿನಲ್ಲಿ ಈ ಚಿತ್ರ ರಿಮೇಕ್ ಆಗಿ ಬಂದಿದೆಯಂತೆ.
**
ಇನ್ನೊಂದು ಸಂಗತಿ ಹೇಳಲೇ ಬೇಕು. ಇದೇ ಚಿತ್ರವನ್ನು ಈಗ ಕನ್ನಡದಲ್ಲಿ ರಿಮೇಕ್ ಮಾಡಿದರೆ ಹೇಗಿರುತ್ತದೆ ಎನ್ನುವುದು ನನ್ನ ಆಲೋಚನೆ. ಹಳೆಯ ಕಥೆಯ ಅಂಶವನ್ನು ಇಟ್ಟುಕೊಂಡು ಇಂದಿನ ತಲೆಮಾರಿಗೆ ಹೊಂದಿಕೆಯಾಗುವಂತೆ ಚಿತ್ರ ಮಾಡುವುದು. ನನ್ನ ಪ್ರಕಾರ ಚಿತ್ರದಲ್ಲಿ ರಾಜ್ ಕಪೂರ್ ಪಾತ್ರಕ್ಕೆ ದರ್ಶನ್ ಹೊಂದಿಕೆಯಾಗುತ್ತಾರೆ. ರಾಜೇಂದ್ರಕುಮಾರ್ ಪಾತ್ರಕ್ಕೆ ಸುದೀಪ್ ಹೊಂದಿಕೆಯಾಗುತ್ತಾರೆ. ನೋಡುಗರಿಗೆ ಸುದೀಪ್ ಪಾತ್ರ ಸೆಕೆಂಡ್ ಹೀರೋ ಅಂತವನಿಗೆ ಸೆಕೆಂಡ್ ಹೀರೋ ಪಾತ್ರ ಕೊಟ್ಟರಲ್ಲ ಎನ್ನಿಸಬಹುದು. ಆದರೆ ಚಿತ್ರದಲ್ಲಿ ಸೆಕೆಂಡ್ ಹೀರೋ ಅನ್ನೋದೇ ಇಲ್ಲ. ಮೂರು ಪಾತ್ರಗಳೂ ಜೀವಾಳ. ದರ್ಶನ್ ತನ್ನ ತುಂಟಾಟದ ಮ್ಯಾನರಿಸಂ ಹೈಟು, ಫೈಲಟ್ಟು ಇತ್ಯಾದಿಗಳ ಮೂಲಕ ಪಾತ್ರಕ್ಕೆ ಒಗ್ಗಬಹುದು. ಅದೇ ರೀತಿ ಸೈಲಂಟಾಗಿ ಮನದೊಳಗೆ ರೋಧಿಸುವ ತನ್ನ ಪ್ರೇಮವನ್ನು ಸ್ನೇಹಕ್ಕಾಗಿ ತ್ಯಾಗ ಮಾಡಿ ಕೊನೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ದುರಂತ ನಾಯಕನಾಗಿ, ನಾಯಕನಿಗಿಂತ ಹೆಚ್ಚಿನ ಅಂಕ ಪಡೆಯುವ ಮೂಲಕ ರಾಜೇಂದ್ರಕುಮಾರ್ ಪಾತ್ರವನ್ನು ಸುದೀಪ್ ಮಾಡಬಹುದು ಎನ್ನಿಸುತ್ತದೆ. ವೈಜಯಂತಿ ಮಾಲಾ ನ ಪಾತ್ರಕ್ಕೆ ರಾಧಿಕಾ ಪಂಡಿತ್ ಸೂಕ್ತ ಎನ್ನಿಸುತ್ತದೆ.
ಈ ಇಬ್ಬರೂ ನಾಯಕರು ಒಂದು ಚಿತ್ರದಲ್ಲಿ ಒಂದಾಗಿ ನಟಿಸಬೇಕು ಎನ್ನುವುದು ಅವರ ಅಭಿಮಾನಿಗಳ ಹಾರಯಿಕೆ. ಇಬ್ಬರ ಇಮೇಜಿಗೂ ಧಕ್ಕೆ ಬರಬಾರದು. ಚಿತ್ರದಲ್ಲಿ ಏನಾದರೂ ಈ ಇಬ್ಬರೂ ಫೈಟ್ ಮಾಡಿಕೊಂಡೆ ಅವರ ಅಭಿಮಾನಿಗಳಲ್ಲಿ ಅದು ಮರುಧ್ವನಿಸುತ್ತದೆ. ಫೈಟ್ ಸಿನೆಮಾದ ಬದಲು ಈ ಫೈಟಿಲ್ಲದ ಸಿನೆಮಾ ಮಾಡಿದರೆ ಇಬ್ಬರ ಇಮೇಜು ಉಳಿಯುತ್ತದೆ. ಅಭಿಮಾನಿಗಳೂ ಒಟ್ಟಾಗಿ ಇರುತ್ತಾರೆ. ದಿಗ್ಗಜರ ಸಿನೆಮಾ ಆದ ಕಾರಣ ಬಾಕ್ಸಾಫಿಸಿನಲ್ಲಿ ನಿರೀಕ್ಷೆ ಹುಟ್ಟಿಸಿ ಹಣಗಳಿಕೆಗೆ ದಾರಿಯಾಗಬಹುದು. ನೋಡೋಣ ಯಾವ ಪುಣ್ಯಾತ್ಮನಾದರೂ ಈ ಕೆಲಸಕ್ಕೆ ಮುಂದಾಗುತ್ತಾನೋ ಎಂದು. 

ಒಂದೊಳ್ಳೆ ಚಿತ್ರ.. ಸಂಗಂ ಚಿತ್ರ ನೋಡುವಾಗ ಕನ್ನಡದ ಈ ಇಬ್ಬರು ನಟರನ್ನು ಮನಸ್ಸಿನಲ್ಲಿಯೇ ಕಲ್ಪನೆ ಮಾಡಿಕೊಂಡು ನೋಡಿ.. ಖುಷಿ ಕೊಡಬಲ್ಲದು.


**3**
ಕಡ್ಡಿಪುಡಿ... ಪುಡಿ ಪುಡಿ

ಶಿವಣ್ಣ-ಸೂರಿ ಕಾಂಬಿನೇಶನ್ನಿನ ಕಡ್ಡಿಪುಡಿ ನೋಡಿದೆ. ಬಹಳ ಇಷ್ಟವಾಯಿತು ಚಿತ್ರ. ಬದುಕು ಚಿಕ್ಕ ಚಿಕ್ಕ ಅಚ್ಚರಿಗಳ ಸಂತೆ ಎನ್ನುವುದಕ್ಕೆ ಈ ಸಿನಿಮಾವೊಂದು ಸಾಕ್ಷಿ. ಚಿತ್ರ ದುದ್ದಕ್ಕೂ ಚಿಕ್ಕ ಚಿಕ್ಕ ಅಚ್ಚರಿಗಳಿವೆ. ಅಬ್ಬಾ ಎಂದು ಎಂದು ಉದ್ಘಾರ ಮಾಡಿಸುತ್ತವೆ. ರೌಡಿಯಿಸಂ ಬಿಟ್ಟ ಮಧ್ಯವಯಸ್ಕನ ಪಾತ್ರದಲ್ಲಿ ಶಿವಣ್ಣ ಬಹಳ ಚನ್ನಾಗಿ ನಟಿಸಿದ್ದಾರೆ. ಶಿವಣ್ಣನ ಚಿತ್ರವೊಂದು ನೋಡಿಸಿಕೊಂಡು ಹೋಗುತ್ತದೆ ಎನ್ನುವುದಕ್ಕೆ ಈ ಚಿತ್ರವೇ ಸಾಕ್ಷಿ. ಅದಕ್ಕೆ ತಕ್ಕಂತೆ ಶಿವಣ್ಣ ಸಾಕಷ್ಟು ಕಷ್ಟಪಟ್ಟಿದ್ದೂ ಎದ್ದು ಕಾಣುತ್ತದೆ. ಚಪ್ಪಲಿಗೆ ಪಿನ್ ಹಾಕಿಕೊಂಡು, ಆಗಾಗ ಪಿನ್ ಕಿತ್ತೋದಾಗ ಸರಿಪಡಿಸಿಕೊಳ್ಳುವ ರಾಧಿಕಾ ಪಂಡಿತ್ ನಟನೆ ಬಹಳ ಸೆಳೆಯುತ್ತದೆ. ಒಂದು ಹಂತದಲ್ಲಿ ಈಕೆ ಹೀರೋನನ್ನೂ ಮಿರಿಸಬಿಡುತ್ತಾಳೆ. ಆದರೆ ನಿರ್ದೇಶಕರು ಆಕೆಯ ಅಭಿನಯಕ್ಕೆ ಅಲ್ಲಲ್ಲಿ ತಡೆ ಹಾಕಿದ್ದಾರೆ. ಬಹುಶಃ ಶಿವಣ್ಣನ ಕ್ರೆಡಿಟ್ಟನ್ನು ಈಕೆ ಎಲ್ಲಿ ನುಂಗಿ ಬಿಡುತ್ತಾಳೋ ಎನ್ನುವ ಭಯ ಇದಕ್ಕೆ ಕಾರಣವಿರಬಹುದು. ರಂಗಾಯಣ ರಘು ಚಿತ್ರದಲ್ಲಿ ಓವರ್ ಆಕ್ಟಿಂಗ್ ಮಾಡಿದ್ದಾರೆ ಎಂದರೆ ತಪ್ಪಾಗಲಿಕ್ಕಿಲ್ಲ. ರಾಜೇಶ್ ನಟರಂಗ ಸೆಳಯುತ್ತಾರೆ. ಆಂದ್ರಿತಾ ರೈ ದೇಹದ ಸೊಬಹನ್ನು ನೋಡಲು ಮತ್ತೊಮ್ಮೆ ಸಿನೆಮಾ ನೋಡಬೇಕೆನ್ನಿಸುತ್ತದೆ. ಆಕೆಯ ಬೆತ್ತಲೆ ಬೆನ್ನೂ ಸಹ ಸೆಳೆಯುತ್ತದೆ.
ಮೊದಲ ರಾತ್ರಿಯ ಸಮಯದಲ್ಲಿ ಶಿವಣ್ಣ-ರಾಧಿಕಾ ಪಂಡಿತರ ರೊಮ್ಯಾನ್ಸನ್ನು ಯಾಕೋ ಮನಸ್ಸು ಒಪ್ಪಿಕೊಳ್ಳುವುದಿಲ್ಲ. ತಲೆ ಕೊಡವುವಂತೆ ಮಾಡುತ್ತದೆ. ಆದರೆ ಅದೇ ಸಂದರ್ಭದಲ್ಲಿ ಮಂಚದ ಅಡಿಯಲ್ಲಿ ಸದ್ದು ಮಾಡುವ ರೌಡಿಸಂ ಬಿಟ್ಟವನ ಮಚ್ಚು, ಮದುವೆಯಾದವನ ಮನೆಗೆ ಬಂದು ಗಂಡನ ಎದುರಲ್ಲೇ ಶಿವಣ್ಣನನ್ನು ತಬ್ಬಿಕೊಳ್ಳುವ ವೇಶ್ಯೆ ಆಂದ್ರಿತಾ, ದೊಡ್ಡಪ್ಪ, ಚಿಕ್ಕಪ್ಪನನ್ನು ಕಳೆದುಕೊಂಡು ಸೇಡು ಕಟ್ಟಿಕೊಳ್ಳುವ ಹುಡುಗ. ಅನಂತನಾಗ್ ಅವರ ಪೊಲೀಸ್ ಅಧಿಕಾರಿ ಪಾತ್ರ.. ಇನ್ನುಳಿದಂತೆ ರಂಗಾಯಣ ರಘು ಅವರ ಹಸಿ ಹಸಿಯಾಗಿ ಬಿಸಿಯೇರಿಸುವ ಶಬ್ದಪುಂಜಗಳು ಚಿತ್ರದಲ್ಲಿ ಸಾಕಷ್ಟಿವೆ. ಶಿವಣ್ಣ ಬೆವರು ಸುರಿಸಿರುವುದು ಸಾಕಷ್ಟು ಕಣ್ಣಿಗೆ ರಾಚುತ್ತದೆ. ಆದರೆ ಯಾಕೋ ಶಿವಣ್ಣ-ರಾಧಿಕಾ ಪಂಡಿತರ ಕಾಂಬಿನೇಶನ್ನು ತಾಳೆಯಾಗುವುದೇ ಇಲ್ಲ. ಇವರಿಬ್ಬರೂ ಗಂಡ ಹೆಂಡತಿಯರಾ? ಎನ್ನುವ ಭಾವನೆಗಳೂ ಮೂಡುತ್ತವೆ. ನೋಡಲು ಅಣ್ಣ-ತಂಗಿ ಹಾಗೆ ಕಾಣುತ್ತಾರೆ. ಇರಲಿ. ಚಿತ್ರದಲ್ಲಿ ಮೊದಲ ಬಾರಿಗೆ ರಾಧಿಕಾ ಪಂಡಿತ್ ದೇಹ ಪ್ರದರ್ಶನವಾಗುತ್ತದೆ. 
ಹಾಡುಗಳು ಏನು ಮಾಡಿದರೂ ನೆನಪಿನಲ್ಲಿ ಉಳಿಯುವುದಿಲ್ಲ. ಆದರೆ ಮಧುರವಾಗಿದೆ. ಶಿವಣ್ಣನ ಪಾತ್ರಕ್ಕೆ ಶಿವಣ್ಣನನ್ನು ಹೊರತು ಪಡಿಸಿದರೆ ಸುದೀಪ್, ದರ್ಶನ್, ವಿಜಯ್ ಇತ್ಯಾದಿ ನಟರನ್ನು ಹೋಲಿಕೆ ಮಾಡಿ ನೋಡಿದೆ. ಆದರೆ ಮಚ್ಚಿನ ಮೆಚ್ಚಿನ ಪಾತ್ರಕ್ಕೆ ಅವರೇ ಸರಿ ಎಂದು ಕೊನೆಯಲ್ಲಿ ಸಮಾಧಾನ ಮಾಡಿಕೊಂಡಿದ್ದೇನೆ. ತಮಿಳಿನಲ್ಲಿ ವಿಜಯ್, ತೆಲುಗಿನಲ್ಲಿ ರವಿತೇಜ ಅಥವಾ ಗೋಪಿಚಂದ್ ಅಥವಾ ನಾಗಾರ್ಜುನ ಈ ಪಾತ್ರ ಮಾಡಿದರೆ ಚೆನ್ನ. ಹಿಂದಿಯಲ್ಲಿ ರೌಡಿಯಿಸಂ ಮಚ್ಚನ್ನು ಬಿಟ್ಟು ಬಂದೂಕಿನ ನಳಿಕೆಗೆ ಬಂದಿದೆ. ಸೋ.. ಅಲ್ಲಿನ ನೇಟಿವಿಟಿಗೆ ಕತೆ ಬದಲು ಮಾಡಬೇಕು. ಕಥೆ ಬದಲಾಯಿಸಿದರೆ ಸಂಜಯ್ ದತ್ತ, ಸಲ್ಮಾನ್ ಅಥವಾ ಅಕ್ಕಿ ಹೊಂದಿಕೆಯಾಗಬಹುದು.
ಇದೆಲ್ಲ ಬಿಟ್ಹಾಕಿ.. ಚಿತ್ರ ಮಾತ್ರ ನೋಡಿದ ನಂತರವೂ ಬಹಳಷ್ಟು ಕಾಡುತ್ತದೆ.. ಮನಸ್ಸಿನಲ್ಲಿ ಅಚ್ಚಳಿಯದೇ ನಿಲ್ಲುತ್ತದೆ..

**4**
ದಿಲ್ ಸೇ..

ಛೇ... ಶಾರುಕ್ .. ಮನೀಶಾ.. ಸಾಯಬಾರದಿತ್ತು ಕಣ್ರೀ..
ಯಾಕೋ ಅವರು ಸತ್ತು ಕಣ್ಣಂಚಿನ ನೀರಾಗಿಬಿಟ್ಟರು. ಶಾಕ್ ಆಗಿಬಿಟ್ಟರು ಅನ್ನಿಸುತ್ತಿದೆ.
ಆರಂಭದಿಂದ ಕೊನೆಯವರೆಗೂ ಸಿಗ್ತಾಳೋ-ಇಲ್ಲವೋ ಎಂದುಕೊಂಡು ನೋಡಿದವರಿಗೆ ಕೊನೆಯ ಎರಡು ನಿಮಿಷ ಕೊಡುವ ಶಾಕ್ ಇದೆಯಲ್ಲ.. ಆಹಾ ದಿಲ್ ಸೇ.... ಎಂದೂ ಮರೆಯದಂತಾಗುತ್ತದೆ.. 
ಹಾಡುಗಳು, ದೃಶ್ಯಗಳು, ಶಾರುಕ್, ಮನೀಶಾ, ಪ್ರೀತಿ ಝಿಂಟಾ ಅಭಿನಯ ಎಲ್ಲಾ ಚನ್ನಾಗಿದೆ. ಕಥೆ ಮತ್ತಷ್ಟು ಸೂಪರ್.. ಎಲ್ಲವನ್ನೂ ಸವಿಯುತ್ತ ಛಂಯಾ ಛಂಯಾ ಎನ್ನುತ್ತ, ದಿಲ್ ಸೆ ರಹೆ ಎಂದೂ ಗುನುಗುತ್ತ, ಮಲೆಯಾಳಿ ಹಾಡನ್ನು ಸವಿಯುತ್ತ ಸಿನೆಮಾ ಆಸ್ವಾದಿಸುತ್ತಿರುವವರು ಕೊನೆಯಲ್ಲಿ ಮಾತ್ರ ಬೆಚ್ಚಿ ಬೀಳುತ್ತಾರೆ. ಬಹುಶಃ ಈ ಅಂತ್ಯವನ್ನು ಇಟ್ಟ ಕಾರಣಕ್ಕೆ ಮಣಿರತ್ನಂ ಗೆ ಹಲವರು ಶಾಪ ಹಾಕಿರಬಹುದು. ಆದರೆ ಚಿತ್ರ ಹಿಂಗಾಗಿದ್ದಕ್ಕೇ ಗೆದ್ದಿತು. ಅಚ್ಚಳಿಯದೇ ಉಳಿಯುವಂತಾಯಿತು. ಮತ್ತೊಮ್ಮೆ ಹ್ಯಾಟ್ಸಾಫ್ ಮಣಿ.. ಎನ್ನುವಂತಾಗುತ್ತದೆ. ಜೊತೆಯಲ್ಲಿ ರೆಹಮಾನ್ ಗೂ ಸಲಾಂ ಎನ್ನುವಂತೆ...
ಚಿತ್ರದಲ್ಲಿ ತಪ್ಪುಗಳಿಲ್ಲ ಅಂತಿಲ್ಲ.. ಇರುವ ತಪ್ಪುಗಳು ಬಹಳ ಚಿಕ್ಕವು. ಒಳ್ಳೆಯ ಕಥೆಗೆ, ಒಳ್ಳೊಳ್ಳೆಯ ಜಾಗವನ್ನು ಆಯ್ಕೆ ಮಾಡಿ ದೃಶ್ಯಕಾವ್ಯ ಕಟ್ಟಿಕೊಟ್ಟ ನಿರ್ದೇಶಕ ಬಹಳ ಸೆಳೆಯುತ್ತಾರೆ. ಸಂಭಾಷಣೆ ಕೂಡ ಬಹಳ ಅತ್ಯಾಪ್ತ.
ದಿಲ್ ಸೇ ನೋಡಿಲ್ಲದಿದ್ದರೆ ಬಿಡುವು ಮಾಡಿಕೊಂಡು ನೋಡಿ..
ಮಿಸ್ ಮಾಡಿಕೊಂಡ ಅಪರೂಪದ ಸಿನೆಮಾವನ್ನು ಕಣ್ತುಂಬಿಕೊಳ್ಳಿ..

Sunday, August 3, 2014

ಬುದ್ಧಿ ಬೇಕಿತ್ತೇ

ಬುದ್ದಿ ಬೇಕಿತ್ತೇ ಕೂಸೆ
ಬುದ್ದಿ ಬೇಕಿತ್ತೆ
ಒಂದು ಹೆಜ್ಜೆ ಮುಂದಿಡಕಾದ್ರೂ
ಯೋಚಿಸಬೇಕಿತ್ತೆ |

ಮೊಬೈಲಲ್ಲಿ ಮಾತಾಡಕಾದರೆ
ಯೋಚಿಸಬೇಕಿತ್ತೆ |
ಮನೆಯಿಂದ ಓಡೋಪಕಾರೆ
ಬುದ್ಧಿ ಬೇಕಿತ್ತೇ ಕೂಸೆ |

ಆಟೋ ಡ್ರೈವರ್ನ
ಹುಷಾರಾಗಿ ನೋಡಕಾಗಿತ್ತೆ |
ಮೊಬೈಲ್ ನಂಬರ್
ತಗಳಕಿದ್ರೆ ಯೋಚಿಸಬೇಕಿತ್ತೆ |

ಸಿಕ್ಕಿದ್ದೊಂದೆ ಶಿಕ್ಷಣ ಬದುಕು
ಓದಕಾಗಿತ್ತೇ ಕೂಸೆ |
ಎಲ್ಲಾ ಬಿಟ್ಟು ಓಡುವ ಮುನ್ನ
ನಿಲ್ಲಕಾಗಿತ್ತೆ |

ಅಪ್ಪಯ್ಯ ಆಯಿ ಕಣ್ಣೀರನ್ನ
ನೋಡಕಾಗಿತ್ತೇ ಕೂಸೆ |
ಮಾನಕ್ಹೆದ್ರಿ ಸುಮ್ಮಂಗಿದ್ದಿದ್
ತಿಳಿಯಕ್ಕಾಗಿತ್ತೆ |

ಬುದ್ದಿ ಬೇಕಿತ್ತೇ ಕೂಸೆ
ಬುದ್ದಿ ಬೇಕಿತ್ತೆ
ಒಂದು ಹೆಜ್ಜೆ ಮುಂದಿಡಕಾದ್ರೂ
ಯೋಚಿಸಬೇಕಿತ್ತೆ |

**
(ಹವ್ಯಕರ ನುಡಿಯ ಟಪ್ಪಾಂಗುಚ್ಚಿ ಹಾಡನ್ನು ಬರೆದಿದ್ದು 3-08-2014ರಂದು ಶಿರಸಿಯಲ್ಲಿ )