Wednesday, July 16, 2014

ಬೆಂಗಾಲಿ ಸುಂದರಿ-18


                 ಸುಂದರಬನ್ ಕಾಡಿನ ನಡುವೆ ತಿಂಡಿ ತಿಂದು, ಊಟ ಮುಗಿಸಿ ಕಬ್ಬಡ್ಡಿ ತಂಡದ ಆಟಗಾರರು ಕಾನನದಲ್ಲಿ ಸುತ್ತಾಡಲು ಆರಂಭಿಸಿದರು. ಅಲ್ಲೊಂದು ಕಡೆ ಯಾವುದೋ ಪ್ರಾಣಿ ಕೂಗಿದ ಸದ್ದು. ಎಲ್ಲರಿಗೂ ಅಚ್ಚರಿ ಹಾಗೂ ಶಾಕ್. ಭಯದೊಂದಿಗೆ ಅತ್ತ ಸಾಗಿದಾಗ ಬಿಳಿ ಹುಲಿಯೊಂದು ಮೊಸಳೆಯ ಜೊತೆಗೆ ಕಾದಾಡುತ್ತಿತ್ತು. ಡಿಸ್ಕವರಿ ಚಾನಲ್ಲಿನಲ್ಲಿಯೂ ಅಥವಾ ಇನ್ಯಾವುದೋ ಪ್ರಾಣಿ-ಪಕ್ಷಿಗಳ ಚಾನಲ್ಲಿನಲ್ಲಿಯೂ ನೋಡಿದ್ದವರಿಗೆ ನೇರಾನೇರ ಪ್ರಾಣಿಗಳ ಕಾಳಗ ಭಲೆ ಸಂತಸವನ್ನು ತಂದಿತು. ಖುಷಿಗೂ ಕಾರಣವಾಯಿತು. ಹುಲಿ-ಮೊಸಳೆಗಳು ಹದಪಟ್ಟಿಗೆ ಒಬ್ಬರನ್ನೊಬ್ಬರು ಬಿಟ್ಟುಕೊಡಲಿಲ್ಲ. ಕಾದಾಡುತ್ತಲೇ ಇದ್ದವು. ಹುಲಿ ಹಾಗೂ ಮೊಸಳೆಯ ಮೈಯಿಂದ ರಕ್ತ ಧಾರೆಯಾಗಿ ಇಳಿಯುತ್ತಿತ್ತು. ಅವುಗಳಿದ್ದ ಜಾಗ ಮಣ್ಣು ರಾಡಿಯಾಗಿಬಿಟ್ಟಿತ್ತು. ನೀರಂತೂ ಕೆಂಪಾಗಿ ಹೋಗಿತ್ತು. ವಿನಯಚಂದ್ರ ಸೇರಿದಂತೆ ಹಲವರು ಈ ದೃಶ್ಯವನ್ನು ಮೊಬೈಲಿನಲ್ಲಿ ಚಿತ್ರಿಸಿಕೊಂಡರು. ಕೊನೆಗೊಮ್ಮೆ ಆ ಅರಣ್ಯದ ಗಾರ್ಡ್ ಒಬ್ಬರು ಬಂದು ಗಾಳಿಯಲ್ಲಿ ಗುಂಡು ಹಾರಿಸಿ ಹುಲಿ ಹಾಗೂ ಮೊಸಳೆಯ ಕಾದಾಟವನ್ನು ತಪ್ಪಿಸಿದರು. ಮೊಸಳೆ ನೀರಿನೊಳಕ್ಕೆ ಸುಲಭವಾಗಿ ಇಳಿದು ಓಡಿ ಹೋದರೆ ಹುಲಿ ಮಾತ್ರ ಕೆಲಕಾಲ ಪ್ರವಾಸಿಗರನ್ನು, ಆಗಂತುಕರನ್ನು ಗುರುಗುಟ್ಟಿ ನೋಡುತ್ತ, ನಿಮ್ಮನ್ನು ನೋಡಿಕೊಳ್ಳುತ್ತೇನೆ ಎನ್ನುವ ಸನ್ನೆ ಮಾಡಿತೋ ಎಂಬಂತೆ  ಕಾಡಿನ ನಡುವೆ ಮರೆಯಾಯಿತು. ಈ ದೃಶ್ಯವನ್ನು ಕಣ್ತುಂಬಿಕೊಂಡ ಕಬ್ಬಡ್ಡಿ ಆಟಗಾರರ ತಂಡ ಢಾಕಾಕ್ಕೆ ಮರಳುವ ವೇಳೆಗೆ ಸೂರ್ಯ ಸಂಜೆಯ ಕಡೆಗೆ ಮುಖಮಾಡಿದ್ದ.
          ಇತ್ತ ಢಾಕಾದಲ್ಲಿ ಹಿಂಸಾಚಾರ ಮೇರೆ ಮೀರಿತ್ತು. ಹೊಸ ಹೊಸ ಪ್ರದೇಶಗಳಿಗೆ ಹಿಂಸಾಚಾರ ಹಬ್ಬಿತ್ತು. ಕಬ್ಬಡ್ಡಿ ಆಟಗಾರರು ತಾವಿದ್ದ ಹೊಟೆಲಿಗೆ ತಲುಪುವುದೂ ದುಸ್ತರ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಲ್ಲೊಂದು ಕಡೆಯಂತೂ ಹಿಂಸಾಚಾರ ನಡೆಸುತ್ತಿದ್ದವರಿಗೂ ಕಬ್ಬಡ್ಡಿ ಆಟಗಾರರಿದ್ದ ಬಸ್ಸಿಗೂ ಮುಖಾಮುಖಿಯಾಗಿ ಅವರು ಒಂದು ಕಲ್ಲನ್ನು ಬಸ್ಸತ್ತ ಬೀಸಿದ್ದರು. ಬೀಸದ ಕಲ್ಲಿಗೆ ಬಸ್ಸಿನದೊಂದು ಗಾಜು ಫಳ್ಳೆಂದು ಒಡೆದಿದ್ದೂ ಆಗಿತ್ತು. ಮತ್ತಷ್ಟು ಹತ್ಯಾರಗಳೊಂದಿಗೆ ಬಸ್ಸಿನತ್ತ ನುಗ್ಗಿ ಬರುತ್ತಿದ್ದಂತೆ ಕಬ್ಬಡ್ಡಿ ಆಟಗಾರರ ತಂಡಕ್ಕೆ ಜೀವವೆಲ್ಲ ಉಡುಗಿದಂತಾಯಿತು. ತಾವು ಖಂಡಿತ ಬದುಕಲಾರೆವು ಎಂದುಕೊಂಡರು. ಹೇಗಾದರೂ ಮಾಡಿ ಬದುಕಿದರೆ ಸಾಕು ಎಂದುಕೊಂಡರು. ಜೀವ-ಉಸಿರನ್ನು ಬಿಗಿ ಹಿಡಿದು ಬಸ್ಸಿನಲ್ಲಿ ಸದ್ದಿಲ್ಲದಂತೆ ಕುಳಿತಿದ್ದರು. ಬಸ್ಸಿನ ಡ್ರೈವರ್ ಹರಸಾಹಸ ಪಡುತ್ತಿದ್ದ. ಎದುರು ಬರುತ್ತಿದ್ದ ಹಿಂಸಾಚಾರಿಗಳ ಗುಂಪನ್ನು ತಪ್ಪಿಸಲು ಒದ್ದಾಡುತ್ತಿದ್ದುದು ಸ್ಪಷ್ಟವಾಗಿತ್ತು. ಕೊನೆಗೆ ವಾಹನದ ಡ್ರೈವರ್ ಹಾಗೂ ಬಸ್ಸಿನಲ್ಲಿದ್ದ ಇತರ ಬಾಂಗ್ಲಾದ ಅಧಿಕಾರಿಗಳು ಹಾಗೂ ಹೀಗೂ ಕಷ್ಟಪಟ್ಟು ಕಬ್ಬಡ್ಡಿ ಆಟಗಾರರನ್ನು ಹೊಟೆಲಿಗೆ ತಲುಪಿಸುವ ವೇಳೆಗೆ ಎಲ್ಲರಿಗೂ ಹೋದ ಜೀವ ಬಂದಂತಾಗಿತ್ತು.
          ಇನ್ನು ಇಂತಹ ದೇಶಕ್ಕೆ ಬರಲಾರೆವು. ಒಮ್ಮೆ ಜೀವ ಉಳಿಯಿತಲ್ಲ ಎಂದು ನಿಟ್ಟುಸಿರು ಬಿಟ್ಟರು ಎಲ್ಲರೂ. ಸಾವಿನ ದವಡೆಗೆ ಸಿಲುಕಿ ವಾಪಾಸು ಬಂದ ಅನುಭವ. ಪ್ರತಿಯೊಬ್ಬರೂ ಭಯಗೊಂಡಿದ್ದರು. ಆದರೆ ಯಾರೂ ಎದುರಿಗೆ ತೋರಿಸಕೊಳ್ಳದೇ ಪೆಚ್ಚು ನಗೆಯನ್ನು ಬೀರುತ್ತಿದ್ದರು. ಹೊಟೆಲಿಗೇನೋ ಬಂದಾಗಿದೆ. ನಾಳೆ ಬೆಳಿಗ್ಗೆ ಎದ್ದು ಏರ್ ಪೋರ್ಟಿಗೆ ಹೋಗಬೇಕು. ಹೇಗೆ ಸಾಗುವುದೆಂಬ ಚಿಂತೆ ಎಲ್ಲರ ಮನದಲ್ಲಿ ಆವರಿಸಿತ್ತು. ಬೆಳಗಾಗುವ ವೇಳೆಗೆ ಹಿಂಸಾಚಾರ ತಹಬಂದಿಗೆ ಬರಬಹುದು ಎನ್ನುವ ಆಶಾವಾದ ಕೆಲವರಲ್ಲಿ ಮೂಡಿತ್ತು. ಭಾರತೀಯ ಕಬ್ಬಡ್ಡಿ ತಂಡದ ಜೊತೆಗೆ ಸುಂದರಬನ್ಸ್ ಅರಣ್ಯ ಪ್ರದೇಶಕ್ಕೆ ತೆರಳಿದ್ದ ಮಧುಮಿತಾ ತನ್ನ ಅಪಾರ್ಟ್ ಮೆಂಟ್ ಗೆ ಹೇಗೆ ಸಾಗಬೇಕು ಎನ್ನುವ ಆಲೋಚನೆಯಲ್ಲಿ ತೊಡಗಿಕೊಂಡಿದ್ದಳು. ವಿನಯಚಂದ್ರನ ಗಮನಕ್ಕೂ ಇದು ಬಂದಿತ್ತು. ಆತನಿಗೂ ಈಕೆಯನ್ನು ಅವಳ ಮನೆಗೆ ಹೇಗೆ ಕಳಿಸಬೇಕು ಎಂದುಕೊಂಡ.
         ತಂಡದ ಇತರರರಿಗೂ ವಿಷಯವನ್ನು ವಿನಯಚಂದ್ರ ತಿಳಿಸಿದ್ದ. ಎಲ್ಲರೂ ಏನು ಉತ್ತರ ನೀಡಬೇಕೆಂದು ತಿಳಿಯದೇ ಸುಮ್ಮನಾದರು. ಒಂದೆರಡು ಜನ ಹೊಟೆಲಿನಲ್ಲಿಯೇ ಉಳಿಯಲಿ ಎಂದರಾದರೂ ಬಗೆಹರಿಯಲಿಲ್ಲ. ಜಾಧವ್ ಅವರೂ ಈ ಕುರಿತು ಏನು ಹೇಳಬೇಕೋ ತಿಳಿಯದಾದರು. ಸೂರ್ಯನ್ ವಿನಯಚಂದ್ರನ ಬಳಿ `ನಾನು ರೂಮು ಬಿಟ್ಟು ಹೋಗುತ್ತೇನೆ. ನೀನು ಹಾಗೂ ಆಕೆ ಉಳೀರಪ್ಪಾ..' ಎಂದು ತುಂಟತನದಿಂದ ಮಾತನಾಡಿದ. `ಸುಮ್ಮನಿರು ಮಾರಾಯಾ..' ಎಂದು ಆತನನ್ನು ವಿನಯಚಂದ್ರ ಸುಮ್ಮನಿರಿಸುವ ವೇಳೆಗೆ ಸುಸ್ತೋ ಸುಸ್ತು. ಮಧುಮಿತಾ ಒಂದೇ ಸಮನೆ ಮನೆಗೆ ಪೋನ್ ಮಾಡಲು ಯತ್ನಿಸುತ್ತಿದ್ದಳು. ಆದರೆ ಮನೆಯ ಸಂಪರ್ಕ ಸಾಧ್ಯವಾಗಿರಲಿಲ್ಲ. ಆ ಕಾರಣದಿಂದಲೇ ಮಧುಮಿತಾ ವ್ಯಾಕುಲಗೊಂಡಿದ್ದಳು. ಅಪಾರ್ಟ್ ಮೆಂಟಿನ ಅಕ್ಕಪಕ್ಕದವರಿಗೆ ಪೋನಾಯಿಸಬೇಕೆಂದರೆ ಅವರ ದೂರವಾಣಿಯೂ ಸಂಪರ್ಕಕ್ಕೆ ಲಭ್ಯವಾಗುತ್ತಿಲ್ಲ. ಇದರಿಂದ ಮತ್ತಷ್ಟು ಭಯಗೊಂಡಳು ಮಧುಮಿತಾ. ಮನೆಯವರಿಗೆ ಏನೋ ಆಗಿದೆ ಎನ್ನುವ ನಿರ್ಧಾರಕ್ಕೂ ಬಂದಳು. ವಿನಯಚಂದ್ರ ಆಕೆಗೆ ಸಮಾಧಾನ ಹೇಳುವ ಪ್ರಯತ್ನ ಮಾಡಿದ.
          ಭಯದ ಕಾರಣದಿಂದಲೇ ಮಧುಮಿತಾಳಿಗೆ ರಾತ್ರಿಯ ಊಟ ಸೇರಲಿಲ್ಲ. ವಿನಯಚಂದ್ರ ಆಕೆಗೆ ಊಟ ಮಾಡಲು ಒತ್ತಾಯ ಮಾಡಿದ. ಆಕೆ ಮಾತ್ರ ಊಟ ಮಾಡದೇ ಅಳಲು ಆರಂಭಿಸಿದಳು. ತನ್ನ ಮನೆಯ ಬಳಿಯೇ ಸೈಕಲ್ ರಿಕ್ಷಾ ಹೊಡೆಯುತ್ತಿದ್ದ ಸಲೀಂ ಚಾಚಾನಿಗೆ ಪೋನ್ ಮಾಡಿದಳು ಮಧುಮಿತಾ. ಸಲೀಂ ಚಾಚಾ ಕೂಡಲೇ ಮಧುಮಿತಾಳ ಮನೆಗೆ ಹೋಗಿ ಬರುವ ಭರವಸೆ ನೀಡಿದ. ಆತನಿಂದ ಉತ್ತರ ಬರುವವರೆಗೂ ಮಧುಮಿತಾ ಚಡಪಡಿಸಿ ಹೋದಳು. ಕೆಲ ಹೊತ್ತಿನಲ್ಲಿಯೇ ಪೋನ್ ಮಾಡಿದ ಸಲೀಂ ಚಾಚಾ ಮಧುಮಿತಾಳ ಅಪಾರ್ಟ್ ಮೆಂಟ್ ಬಳಿ ಹೋಗಲು ಸಾಧ್ಯವಾಗುತ್ತಿಲ್ಲ ಎಂದು ಉತ್ತರ ನೀಡಿದ. ಮತ್ತೊಮ್ಮೆ ಗಾಬರಿಗೊಳ್ಳುವ ಪರಿಸ್ಥಿತಿ ಮಧುಮಿತಾಳದ್ದಾಯಿತು.
          ರಾತ್ರಿಯ ವೇಳೆ ಏನಾದರಾಗಲಿ ತಾನು ಅಪಾರ್ಟ್ ಮೆಂಟ್ ಗೆ ಹೊರಡುತ್ತೇನೆ ಎಂದು ಹೊರಟು ನಿಂತಳು ಮಧುಮಿತಾ. ಆಕೆಯನ್ನು ತಡೆಯುವ ವಿನಯಚಂದ್ರನ ಯತ್ನ ವಿಫಲವಾಯಿತು. ಕೊನೆಗೆ ಆಕೆಯ ಜೊತೆಗೆ ತಾನೂ ಹೋಗುವುದಾಗಿ ನಿರ್ಧರಿಸಿದ. ತನ್ನ ನಿರ್ಧಾರವನ್ನು ತಂಡದ ಇತರರಿಗೆ ಹೇಳಿದರೆ ಖಂಡಿತವಾಗಿಯೂ ಆತನನ್ನು ಹೋಗಲು ಅವಕಾಶ ನೀಡುವುದಿಲ್ಲ ಎನ್ನುವುದು ಖಾತ್ರಿಯಿತ್ತು. ಕೊನೆಗೆ ಮಧುಮಿತಾಳ ಬಳಿ ತಾನೂ ಬರುತ್ತೇನೆ. ಈ ವಿಷಯ ಯಾರಿಗೂ ಗೊತ್ತಾಗಬಾರದು ಎಂದು ತಿಳಿಸಿದ. ಆಕೆ ಮೊದ ಮೊದಲು ವಿರೋಧಿಸಿದಳಾದರೂ ಕೊನೆಗೆ ಒಪ್ಪಿಕೊಂಡಳು.
                  ಯಾರಿಗೆ ಗೊತ್ತು ಮತ್ತೆ ವಾಪಾಸು ಬರಲಿಕ್ಕಾಗುತ್ತದೆಯೋ ಎಲ್ಲವೋ. ಬಾಂಗ್ಲಾದೇಶದಲ್ಲಿಯೇ ಇರುವ ಅನಿವಾರ್ಯತೆ ಬಂದರೂ ಬರಬಹುದು. ಯಾವುದಕ್ಕೂ ಸಜ್ಜಾಗಿಯೇ ಹೋಗಬೇಕು ಎಂದು ಆಲೋಚಿಸಿದ. ವಿನಯಚಂದ್ರ ಬಾಂಗ್ಲಾದೇಶದಲ್ಲಿ ಅಗತ್ಯವೆನ್ನಿಸುವ ಕೆಲವೇ ಕೆಲವು ವಸ್ತುಗಳನ್ನು ತೆಗೆದುಕೊಂಡ. ತಾನು ಭಾರತದವನು ಎಂಬುದಕ್ಕೆ ಸಾಕ್ಷಿಯಾಗಿ ಒಂದು ಗುರುತಿನ ಚೀಟಿಯನ್ನೂ ತೆಗೆದುಕೊಂಡ. ಉಳಿದ ವಸ್ತುಗಳನ್ನು ರೂಮಿನಲ್ಲಿಯೇ ಬಿಟ್ಟ. ಕೊನೆಗೆ ಸೂರ್ಯನ್ ಹಾಗೂ ತನ್ನ ಕಬ್ಬಡ್ಡಿ ತಂಡದ ಮುಖ್ಯಸ್ಥರಿಗೆ ಪತ್ರವೊಂದನ್ನು ಬರೆದು ತಾನು ಮಧುಮಿತಾಳೊಂದಿಗೆ ತೆರಳುತ್ತಿದ್ದೇನೆ. ಸಾಧ್ಯವಾದಷ್ಟು ಬೇಗ ಮರಳುತ್ತೇನೆ. ಇಲ್ಲವಾದರೆ ನೀವೆಲ್ಲ ಭಾರತಕ್ಕೆ ಮರಳಿ. ನಾನು ಶತಪ್ರಯತ್ನದಿಂದ ಬಂದು ತಲುಪುತ್ತೇನೆ ಎಂದು ಬರೆದಿದ್ದ. ಸದ್ದಿಲ್ಲದಂತೆ ಸೂರ್ಯನ್ ಮಲಗಿದ್ದ ಜಾಗದಲ್ಲಿ ಇಟ್ಟು ಹೊರಟ. ಮಧುಮಿತಾ ಹಿಂಬಾಲಿಸಿದಳು.
           ಕಗ್ಗತ್ತಲ ರಾತ್ರಿಯಲ್ಲಿ ಮಧುಮಿತಾ ಹಾಗೂ ವಿನಯಚಂದ್ರ ಢಾಕಾದ ಬೀದಿಗಳಲ್ಲಿ ನಡೆಯುತ್ತಿದ್ದರೆ ಬೇಕೆಂದರೂ ಇನ್ನೊಂದು ಜೀವಿ ಅಲ್ಲಿರಲಿಲ್ಲ. ಎಲ್ಲ ನಗರಗಳಂತೆ ರಾತ್ರಿಯ ವೇಳೆ ಅಬ್ಬರದಿಂದ ಓಡಾಡುವ ವಾಹನಗಳು ಅಲ್ಲೊಂದು ಇಲ್ಲೊಂದು ಇದ್ದವು. ಆಗೊಮ್ಮೆ ಈಗೊಮ್ಮೆ ಪೊಲೀಸ್ ಸೈರನ್ ಕೇಳಿಸುತ್ತಿತ್ತು. ದಾರಿಯ ತುಂಬೆಲ್ಲ ಯಾವುದೋ ಮೂಲೆಯಲ್ಲಿ ನಾಯಿಯೊಂದು ಬೊಗಳಿ ಅರಚುತ್ತಿತ್ತು. ಮಧುಮಿತಾಳಿಗೆ ಭಯವಾಗಿ ಥಟ್ಟನೆ ವಿನಯಚಂದ್ರನ ಕೈ ಹಿಡಿದುಕೊಂಡಳು. ವಿನಯಚಂದ್ರ ಒಮ್ಮೆ ಬೆಚ್ಚಿದನಾದರೂ ಆಕೆಯ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡು ನಡೆಯಹತ್ತಿದ.
           ಅರೇ ಇಳಿಸಂಜೆಯ ವೇಳೆ ಹಿಂಸಾಚಾರದಿಂದ ಉರಿಯುತ್ತಿದ್ದ ಊರು, ಬೀದಿ ಇದೇನಾ ಎನ್ನುವಷ್ಟು ಶಾಂತವಾಗಿತ್ತು ಆ ಬೀದಿ. ನಿರ್ಮಾನುಷವಾಗಿದ್ದ ಕಾರಣ ಅವ್ಯಕ್ತ ಭೀತಿ ಗೂಡು ಕಟ್ಟಿಕೊಂಡಿತ್ತು. ಅಲ್ಲೊಮ್ಮೆ ಇಲ್ಲೊಮ್ಮೆ ಬೀದಿ ದೀಪಗಳು ಮಿಣುಕುತ್ತಿದ್ದವು. ನೇರ ಹಾದಿಯಲ್ಲಿ ಸಾಗಲು ಭಯವಾಯಿತು. ಬಳಸು ಹಾದಿಯನ್ನು ಹಿಡಿದು ಸಾಗಿದರು. ಮಧುಮಿತಾಳಿಗೆ ಢಾಕಾ ಪರಿಚಿತವಾಗಿದ್ದ ಕಾರಣ ಅವಳನ್ನೇ ಅನುಸರಿಸುತ್ತಿದ್ದ ವಿನಯಚಂದ್ರ. ಯಾವು ಯಾವುದೋ ಕಡೆಗಳಲ್ಲಿ ತಿರುಗುತ್ತ, ಹುಡುಕುತ್ತ ಅವರಿಬ್ಬರೂ ಸಾಗುತ್ತಿದ್ದರೆ ಅತಿಯಾಗಿ ಸುರೆ ಕುಡಿದ ದೇವತೆಗಳು ಸ್ವರ್ಗದ ಯಾವುದೋ ಮೂಲೆಯಲ್ಲಿ ಅಲೆದಾಡುತ್ತಿದ್ದಂತೆ ಅನ್ನಿಸುತ್ತಿತ್ತು. ಬಾನಂಚಿನಲ್ಲಿ ಬಿರು ಬೇಸಿಗೆಯಲ್ಲಿ ಅಪರೂಪಕ್ಕೆ ಬಂದ ಮೋಡದ ಜೋಡಿ ಎತ್ತ ಸಾಗಬೇಕೆಂದು ತಿಳಿಯದೇ ಗಾಳಿ ಸುಳಿದಾಡಿದ ಕಡೆಯಲ್ಲಿ ಸಾಗಿದಂತೆ ಅನ್ನಿಸುತ್ತಿತ್ತು. ಭಯದ ನಡುವೆಯೂ ಮಧುಮಿತಾಳಿಗೆ ವಿನಯಚಂದ್ರನ ಸಾನ್ನಿಧ್ಯ ಖುಷಿ ಕೊಟ್ಟಿತ್ತು.
            ಅದ್ಯಾವುದೋ ಸರ್ಕಲ್ಲಿನ ಮೂಲೆಯಲ್ಲಿ ನಿಂತು ಮಧುಮಿತಾ ಸಲೀಂ ಚಾಚಾನಿಗೆ ಪೋನಾಯಿಸಿದಳು. ಆತನ ಬಳಿ ತಮ್ಮ ಪರಿಸ್ಥಿತಿಯನ್ನು ವಿವರಿಸಿ ತಮ್ಮನ್ನು ಅಪಾರ್ಟ್ ಮೆಂಟಿನ ಬಳಿ ಕರೆದೊಯ್ಯುವಂತೆ ಹೇಳಿದ್ದಳು. ಅದಕ್ಕೆ ಸಲೀಂ ಚಾಚಾ ಯಾವುದೋ ಪ್ರದೇಶಕ್ಕೆ ಬರುವಂತೆ ಹೇಳಿದ. ಮಧುಮಿತಾ ಹಾಗೂ ವಿನಯಚಂದ್ರ ಅತ್ತ ಕಡೆ ಹೆಜ್ಜೆ ಹಾಕಿದರು. ಅದ್ಯಾವುದೋ ಮೂಲೆಯಲ್ಲಿ ಗುಂಪೊಂದು ಕೇಕೆ ಹಾಕುತ್ತ ನಗುತ್ತಿತ್ತು. ಇದನ್ನು ಕೇಳಿದ್ದೇ ವಿನಯಚಂದ್ರ ಹಾಗೂ ಮಧುಮಿತಾ ದೊಡ್ಡ ಕಂಪೌಂಡಿನ ಹಿಂದಕ್ಕೆ ಸರಿದು ಅಡಗಿ ಕೂತರು. ಆ ಗುಂಪು ಹತ್ತಿರಕ್ಕೆ ಬಂದಂತೆ ಭಾಸವಾಯಿತು. ಮಾತುಗಳು ದೊಡ್ಡದಾಗುತ್ತಿದ್ದವು. ಭಯದಿಂದ ತತ್ತರಿಸಿದ ಮಧುಮಿತಾ ವಿನಯಚಂದ್ರನನ್ನು ತಬ್ಬಿಹಿಡಿದು ಕುಳಿತಿದ್ದಳು. ಮಧುಮಿತಾ ತಬ್ಬಿಕೊಂಡಿದ್ದರಿಂದ ಒಮ್ಮೆ ವಿನಯಚಂದ್ರ ಕಸಿವಿಸಿಗೊಂಡಿದ್ದರೂ ನಂತರ ತುಂಟತನದಿಂದ ಆಕೆಯ ಕೆನ್ನೆಯ ಮೇಲೊಂದು ಮುತ್ತನ್ನು ಕೊಟ್ಟು ಕಣ್ಣು ಹೊಡೆದಿದ್ದ. ಮಧುಮಿತಾ ಭಯದ ನಡುವೆಯೂ ನಾಚಿಕೊಂಡಿದ್ದಳು. ನಿಧಾನವಾಗಿ ಆ ಗುಂಪಿನ ಧ್ವನಿ ದೂರಾದಾಗ ನಿರಾಳರಾದರು. ಮಧುಮಿತಾ ಕೂಡ ಮುತ್ತಿಗೆ ಪ್ರತಿಯಾಗಿ ಮುತ್ತನು ನೀಡಿ ಸರಸರನೆ ಹೆಜ್ಜೆ ಹಾಕಿದ್ದಳು. ವಿನಯಚಂದ್ರ ಎಳೆದು ಆಕೆಯನ್ನು ತಬ್ಬಿಕೊಂಡಿದ್ದ. ಆಕೆ ತುಂಟತನದಿಂದ ಕೊಸರಿಕೊಂಡು ಮುಂದಕ್ಕೆ ಸಾಗಿದ್ದಳು. ವಿನಯಚಂದ್ರ ಚಿಗರೆಯ ಮರಿಯಂತೆ ಕುಣಿಯುತ್ತ ಸಾಗಿದ್ದ.
           ಸಲೀಂ ಚಾಚಾ ಹೇಳಿದ್ದ ಜಾಗಕ್ಕೆ ಬರುವ ವೇಳೆಗೆ ಇನ್ನೂ ಅರ್ಧಗಂಟೆ ಬೇಕಾಯಿತು. ನೇರವಾಗಿ ಬರಬಹುದಾಗಿದ್ದ ದಾರಿಯಲ್ಲಿ ಅಪಾಯವಿರಬಹುದೆಂದು ಅರಿತು ಸುತ್ತು ಬಳಸಿಯೂ ಅಥವಾ ಇನ್ನಾವುದೋ ಮಾರ್ಗವನ್ನು ಹಿಡಿದೋ ಬಂದಿದ್ದರು. ಬೀದಿಯ ಕೊನೆಯಲ್ಲಿ ಜನರ ಸುಳಿವು ಕಂಡುಬಂದ ತಕ್ಷಣ ಇವರೂ ಅಡಗುತ್ತ, ಜೀವವನ್ನು ಕೈಯಲ್ಲಿ ಹಿಡಿದು ಬಂದಿದ್ದರು. ನಡು ನಡುವೆ ರೊಮ್ಯಾಂಟಿಕ್ ಆಗುತ್ತ, ಮುತ್ತಿನ ವಿನಿಮಯ ಮಾಡಿಕೊಳ್ಳುತ್ತಲೇ ಸಾಗಿದ್ದರು. ಬದು ಕತ್ತಿಯ ಮೇಲಿನ ನಡಿಗೆಯಾಗಿದೆ. ಆದರೆ ಇದು ಹಿತವಾಗಿದೆ ಎಂದುಕೊಂಡ ವಿನಯಚಂದ್ರ.
          ಸಲೀಂ ಚಾಚ ಬಹು ಹೊತ್ತಿನ ನಂತರ ಬಂದ. ಆತ ಬರುವುದು ವಿಳಂಬವಾಗುತ್ತಿದ್ದಂತೆ ಬರುತ್ತಾನೋ ಇಲ್ಲವೋ ಎನ್ನುವ ಅನುಮಾನವೂ ಒಂದು ಕ್ಷಣ ಕಾಡದೇ ಇರಲಿಲ್ಲ. ಆ ಸ್ಥಳದಿಂದ ಮಧುಮಿತಾಳಿದ್ದ ಅಪಾರ್ಟ್ ಮೆಂಟ್ ಅನಾಮತ್ತು 8 ಕಿ.ಮಿ ದೂರದಲ್ಲಿತ್ತು. ಸಲೀಂ ಚಾಚಾ ಬರದಿದ್ದರೆ ಅಲ್ಲಿಗೆ ತೆರಳುವುದು ಹೇಗೆ ಎನ್ನುವ ಆಲೋಚನೆ ಮಧುಮಿತಾಳ ಮನಸ್ಸಿನಲ್ಲಿ ಮೂಡದೇ ಇರಲಿಲ್ಲ. ಕೊನೆಗೊಮ್ಮೆ ಸಲೀಂ ಚಾಚಾ ಬಂದ. ಸಲೀಂ ಚಾಚಾನ ಮೈತುಂಬ ರಕ್ತದ ಕಲೆಗಳಾಗಿದ್ದವು. ಹೌಹಾರಿದ ವಿನಯಚಂದ್ರ ಹಾಗೂ ಮಧುಮಿತಾ ಸಲೀಂ ಚಾಚಾನ ಬಳಿ ವಿಚಾರಿಸಿದಾಗ `ದಾರಿಯಲ್ಲಿ ಬರುವಾಗ ಒಂದು ಕುಟಂಬದ ಮೇಲೆ ಹಲ್ಲೆ ನಡೆದಿತ್ತು. ಅವರನ್ನು ರಕ್ಷಿಸಿ ಬಂದೆ. ಅದಕ್ಕೆ ಹೀಗಾಗಿದೆ..' ಎಂದು ಉತ್ತರಿಸಿದಾಗ ನಿರಾಳರಾದರಷ್ಟೆ ಅಲ್ಲದೇ ಸಲೀಂ ಚಾಚಾನ ಬಗ್ಗೆ ಖುಷಿಯನ್ನೂ ಪಟ್ಟರು. ಮಧುಮಿತಾ ಸಲೀಂ ಚಾಚಾನಿಗೆ ವಿನಯಚಂದ್ರನನ್ನು ಪರಿಚಯಿಸಿದಳು. ಸಲೀಂ ಚಾಚಾ ಬೆರಗುಗಣ್ಣಿನಿಂದ ವಿನಯಚಂದ್ರನನ್ನು ನೋಡಿದ. ವಿನಯಚಂದ್ರ ಚಾಚಾನಿಗೆ ನಮಸ್ಕರಿಸಲು ನೋಡಿದಾಗ `ಜೀತೆ ರಹೋ ಬೇಟಾ..' ಎಂದು ಹರಸಿದ.
            ಸಲೀಂ ಚಾಚಾನ ಬಳಿ ತನ್ನ ಅಪಾರ್ಟ್ ಮೆಂಟಿನ ಕುರಿತು ವಿಚಾರಿಸಿದಾಗ `ಆ ಪ್ರದೇಶದಲ್ಲಿ ಇನ್ನೂ ಹಿಂಸಾಚಾರ ನಡೆಯುತ್ತಲೇ ಇದೆ. ಉಳಿದ ಕಡೆಗಳಲ್ಲಿ ಹಿಂಸಾಚಾರ ಹಬ್ಬದಂತೆ ಪೊಲೀಸರು ಸಾಕಷ್ಟು ಪ್ರಯತ್ನಿಸಿದ್ದರೂ ಆ ಪ್ರದೇಶದಲ್ಲಿ ಪೊಲೀಸರಿಗೆ ಸಾಧ್ಯವಾಗಿಲ್ಲ. ನಾನು ಹಲವು ಸಾರಿ ಅಲ್ಲಿಗೆ ಹೋಗಲು ಪ್ರಯತ್ನ ಪಟ್ಟಿದ್ದಿದೆ. ಆದರೆ ಸಾಧ್ಯವಾಗಲಿಲ್ಲ..' ಎಂದ.
            `ನಮ್ಮನ್ನು ಅಲ್ಲಿಗೆ ಕರೆದುಕೊಂಡು ಹೋಗು ಚಾಚಾ.. ಯಾಕೋ ಮನೆಯವರನ್ನು ನೋಡಬೇಕು ಎನ್ನಿಸುತ್ತಿದೆ..' ಎಂದು ಮಧುಮಿತಾ ಹೇಳಿದಾಗ ಚಾಚಾನಿಗೆ ಇಲ್ಲ ಎನ್ನಲಾಗಲಿಲ್ಲ.
            ಮಧುಮಿತಾಳಿಗೆ ಮನೆಯೇಕೋ ಬಹಳ ನೆನಪಾಗುತ್ತಿತ್ತು. ಅಪ್ಪ, ಅಮ್ಮ ಹಾಗೂ ಮನೆಯ ಸದಸ್ಯರು ಬಹಳ ಕಾಡುತ್ತಿದ್ದರು. ಅವರಿಗೇನೋ ಆಗಿದೆ ಎಂದು ಒಳಮನಸ್ಸು ಹೇಳಿತ್ತಿತ್ತು. ಜೊತೆಯಲ್ಲಿಯೇ ಏನೂ ಆಗದಿರಲಿ ದೇವರೆ ಎಂದೂ ಮನಸ್ಸು ದೇವರಲ್ಲಿ ಪ್ರಾರ್ಥನೆಯನ್ನು ಮಾಡಿಕೊಳ್ಳುತ್ತಿತ್ತು. ಸಲೀಂ ಚಾಚಾ ತನ್ನ ಸೈಕಲ್ ರಿಕ್ಷಾ ಮೇಲೆ ಕುಳ್ಳಿರಿಸಿಕೊಂಡು ಅವರನ್ನು ಕರೆದೊಯ್ಯತೊಡಗಿದ. ವಿನಯಚಂದ್ರನಿಗೆ ಮತ್ತೆ ಕಸಿವಿಸಿ. 75 ವರ್ಷ ವಯಸ್ಸಾಗಿದ್ದ ಸಲೀಂ ಚಾಚಾ ಸೈಕಲ್ ತುಳಿಯುತ್ತಿದ್ದರೆ ಹರೆಯದಲ್ಲಿದ್ದ ನಾವು ಸೈಕಲ್ಲಿನಲ್ಲಿ ಆರಾಮಾಗಿ ಕುಳಿತುಕೊಳ್ಳುತ್ತಿದ್ದೇವಲ್ಲ.. ಎನ್ನಿಸಿತು. ಚಾಚಾನ ಬಳಿ `ನಾನು ಸೈಕಲ್ ತುಳಿಯಲೇ..' ಎಂದ. ಚಾಚಾ ಅದಕ್ಕೆ ಪ್ರತಿಯಾಗಿ `ಯಾಕೆ ಬೇಟಾ.. ಏನಾಯಿತು.. ನಾನು ಸೈಕಲ್ ತುಳಿಯುವುದು ನಿನಗಿಷ್ಟವಿಲ್ಲವೇ..?' ಎಂದು ಕೇಳಿದ್ದ. ಚಿಕ್ಕಂದಿನಲ್ಲಿ ಅತಿಯಾಗಿ ಮುದ್ದು ಮಾಡುತ್ತಿದ್ದ ಅಜ್ಜನ ನೆನಪಾಗಿತ್ತು ವಿನಯಚಂದ್ರನಿಗೆ.
           `ಇಲ್ಲ ಚಾಚಾ.. ನೀವು ಸೈಕಲ್ ತುಳೀತಿದ್ರೆ.. ನಾವು ಕುಳಿತಿರೋದು.. ನನಗೆ ಸರಿ ಕಾಣುತ್ತಿಲ್ಲ.. ವಯಸ್ಸಾದವರು ನೀವು.. ಬನ್ನಿ ಕುಳಿತುಕೊಳ್ಳಿ.. ನಾನು ಸೈಕಲ್ ತುಳಿಯುತ್ತೇನೆ..'
            `ನಯಿ ಬೇಟಾ.. ಸೈಕಲ್ ತುಳಿದು ಜೀವನ ನಡೆಸುವುದು ನಮ್ಮ ವೃತ್ತಿ. ಹೇಗೆ ಇರಲಿ,.. ಎಂತದ್ದೇ ಆಗಿರಲಿ ನಾವು ಸೈಕಲ್ ತುಳಿದೇ ಜೀವಿಸುತ್ತೇವೆ. ನನಗೆ ತೊಂದರೆಯಿಲ್ಲ ಬೇಟಾ.. ನೀನು ಆರಾಮಾಗಿ ಕುಳಿತುಕೋ..'
             `ಇಲ್ಲ ಚಾಚಾ.. ನಾನು ಕಬ್ಬಡ್ಡಿ ಆಟಗಾರ.. ನನಗೂ ಸೈಕಲ್ ತುಳಿದು ಗೊತ್ತಿದೆ. ಬನ್ನಿ ನಾನೊಮ್ಮೆ ತುಳಿಯುತ್ತೇನೆ..' ಎಂದವನೇ ವಿನಯಚಂದ್ರ ಸಲೀಂ ಚಾಚಾನನ್ನು ಸೈಕಲ್ಲಿನಿಂದ ಇಳಿಸಿ ತಾನು ಸೈಕಲ್ ಹತ್ತಿಯೇ ಬಿಟ್ಟ. ಅನಿವಾರ್ಯವಾಗಿ ಚಾಚಾ  ತಾನು ತುಳಿಯುತ್ತಿದ್ದ ಸೈಕಲ್ಲಿನಲ್ಲಿ ಪ್ರಯಾಣಿಕನಾಗಬೇಕಾಯಿತು. ಮೊದ ಮೊದಲಿಗೆ ವಿನಯಚಂದ್ರನಿಗೆ ಸೈಕಲ್ ರಿಕ್ಷಾ ತುಳಿಯುವುದು ಕಷ್ಟವಾದರೂ ಕೆಲವೇ ಮಾರುಗಳ ದೂರ ಹೋಗುವಷ್ಟರಲ್ಲಿ ಹದ ಸಿಕ್ಕಿತು. ಸಲೀಂ ಚಾಚಾ ಮಾತಿಗೆ ತೊಡಗಿದ್ದ. ವಿನಯಚಂದ್ರನ ಬಳಿ ಆತನ ಪೂರ್ವಾಪರಗಳನ್ನೆಲ್ಲ ವಿಚಾರಿಸಿದ. ಮಧುಮಿತಾ ಹೇಳಿದಳು. ಕೊನೆಗೆ ತಾನು ವಿನಯಚಂದ್ರನನ್ನು ಪ್ರೀತಿಸುತ್ತಿರುವ ವಿಷಯವನ್ನೂ ತಿಳಿಸಿದಾಗ ಸಲೀಂ ಚಾಚಾ ಸಂತಸಪಟ್ಟರು. ವಿನಯಚಂದ್ರ ಭಾರತದವನೆಂದು ತಿಳಿದಾಗ ಸ್ವಾತಂತ್ರ್ಯ ಪೂರ್ವದಲ್ಲಿ ತಾನೂ ಭಾರತದಲ್ಲಿದ್ದೆ.. ಹೈದರಾಬಾದ್ ತನ್ನ ಊರಾಗಿತ್ತು. ಚಿಕ್ಕಂದಿನಲ್ಲಿಯೇ ಮನೆಯಿಂದ ಓಡಿ ಬಂದಿದ್ದೆ. ಢಾಕಾದಲ್ಲಿ ಕೆಲಸ ಮಾಡುತ್ತಿದ್ದಾಗ ಸ್ವಾತಂತ್ರ್ಯ ಸಿಕ್ಕಿತ್ತು. ಬಾಂಗ್ಲಾದೇಶ ಭಾರತದಿಂದ ಬೇರೆಯಾಗಿತ್ತು. ನನಗೆ ಭಾರತಕ್ಕೆ ಮರಳಲು ಸಾಧ್ಯವೇ ಆಗಿಲ್ಲ ಎಂದೂ ಹೇಳಿದ.
             ವಿನಯಚಂದ್ರ ಈ ಕುರಿತು ವಿಚಾರಿಸಿದಾಗ `ಹತ್ತೋ ಹದಿನೈದೋ ವರ್ಷದವನಿದ್ದಾಗ ಮನೆಯಲ್ಲಿ ತಂದೆ ತಾಯಿಗಳ ಜೊತೆ ಜಗಳವಾಡಿ ಓಡಿ ಬಂದಿದ್ದೆ. ಆದರೆ ನಂತರ ಹೈದರಾಬಾದಿಗೆ ಹೋಗಲು ಇಂದಿನವರೆಗೂ ಆಗಿಲ್ಲ. ಬಹುಶಃ ಮುಂದೂ ಆಗುವುದಿಲ್ಲವೇನೋ.. ನನಗಿಲ್ಲಿ ಮನೆ, ಮಡದಿ ಮಕ್ಕಳು ಎಲ್ಲ ಇದ್ದಾರೆ. ಈ ಬೇಟಿ ಮಧು ಇದ್ದಾಳಲ್ಲ.. ಒಂದಿನ ಸೈಕಲ್ ತುಳಿದು ಸುಸ್ತಾಗಿತ್ತು. ಇಳಿಸಂಜೆಯ ಸಮಯದಲ್ಲಿ ಅದ್ಯಾರೋ ನನ್ನ ಸೈಕಲ್ ರಿಕ್ಷಾಕ್ಕೆ ಢಿಕ್ಕಿ ಹೊಡೆದು ನನ್ನನ್ನು ಬೀಳಿಸಿದ್ದರು. ಆಸ್ಪತ್ರೆಗೆ ಸೇರಿಸಿ ಆರೈಕೆ ಮಾಡಿದ್ದಳು. ಅಂದಿನಿಂದ ನನಗೆ ಮಧು ಮಗಳಂತೆಯೇ ಆಗಿದ್ದಾಳೆ.. ' ಎಂದ. ಮಧುಮಿತಾ ಏನೆಲ್ಲ ಮಾಡಿದ್ದಾಳಲ್ಲ.. ಎಂದುಕೊಂಡ ವಿನಯಚಂದ್ರ.
           ಚಾಚಾ ವಿನಯಚಂದ್ರನ ಮನೆಯ ಬಗ್ಗೆ ವಿಚಾರಿಸಿದಾಗ ವಿನಯಚಂದ್ರ ವಿವರಿಸಿ ತನ್ನ ತಾತನನ್ನು ನೀವು ನೆನಪು ಮಾಡಿದಿರಿ ಎಂದು ತಿಳಿಸಿದ. ಸಲೀಂ ಚಾಚಾ ತನ್ನ ಉದ್ದನೆಯ ಬಿಳಿ ಗಡ್ಡವನ್ನು ನೀವಿಕೊಂಡು ಪುಕು ಪುಕು ನಕ್ಕರು. ಅಷ್ಟರಲ್ಲಿ ಇವರು ಸಾಗುತ್ತಿದ್ದ ದಾರಿಯಲ್ಲಿ ಹತ್ತೋ ಹದಿನೈದೋ ಜನರಿದ್ದ ಗುಂಪು ಗಲಾಟೆ ಮಾಡುತ್ತ ಬರುತ್ತಿದ್ದು ಕಂಡು ಬಂದಿತು. ಸಲೀಂ ಚಾಚಾ ಇದ್ದಕ್ಕಿದ್ದಂತೆ ಸೈಕಲ್ ನಿಲ್ಲಿಸಿ ವಿನಯಚಂದ್ರನನ್ನು ಸೈಕಲ್ಲಿನಿಂದ ಇಳಿಸಿ ಹಿಂದಕ್ಕೆ ಕುಳ್ಳಿರಿಸಿ ತಾನು ಸೈಕಲ್ ಹೊಡೆಯಲು ಆರಂಭಿಸಿದ. ಆ ಗುಂಪು ಹತ್ತಿರಕ್ಕೆ ಬಂದಿತು. ವಿನಯಚಂದ್ರನಿಗೆ ಮುಂದೇನಾಗುತ್ತದೆಯೋ ಎನ್ನುವ ಭಯ. ಹತ್ತಿರ ಬಂದ ಗುಂಪು ಸಲೀಂ ಚಾಚಾನನ್ನು ನಿಲ್ಲಿಸಿ `ಯಾರು ನೀವು.. ಎಲ್ಲಿಗೆ ಸಾಗುತ್ತಿದ್ದೀರಿ.. ಯಾರಿದ್ದಾರೆ ಗಾಡಿಯಲ್ಲಿ ..' ಎಂದೇನೋ ವಿಚಾರಿಸಿದರಿರಬೇಕು. ಸಲೀಂ ಚಾಚಾ ಅದೇನು ಹೇಳಿದರೂ.. ಒಬ್ಬಾತ ಬಂದು ಗಾಡಿಯಲ್ಲಿ ಇಣುಕಿನೋಡಿದ. ವಿನಯಚಂದ್ರನಿಗೆ ಮಾತು ಹೊರಡಲಿಲ್ಲ. ಗಾಡಿಯಲ್ಲಿ ಇಣುಕುತ್ತಿದ್ದವನ ಮೇಲೆ ಮುಗಿಬಿದ್ದು ನಾಲ್ಕು ಏಟು ಹಾಕಿಬಿಡಲೇ ಎಂದುಕೊಂಡನಾಡದೂ ಸುಮ್ಮನಾದ. ಗಾಡಿಯಲ್ಲಿ ಇಣುಕಿ ನೋಡಿದವನು ಸುಮ್ಮನೇ ಹೋದ. ಮನಸ್ಸು ನಿರಾಳವಾಯಿತು. ಸೈಕಲ್ ರಿಕ್ಷಾ ಮುಂದಕ್ಕೆ ಸಾಗಿತು.

(ಮುಂದುವರಿಯುತ್ತದೆ.)

Monday, July 14, 2014

ಗಣಪಜ್ಜಿಯ ಹಾಡುಗಳು-3

        ಗಣಪಜ್ಜಿಯ ಕುರಿತು ಎರಡು ಕಂತುಗಳನ್ನು ಈಗಾಗಲೇ ಬರೆದಿದ್ದೇನೆ. ಮೂರನೇ ಕಂತು ಬರೆಯದಿದ್ದರೆ ಮನಸ್ಸು ತಡೆಯಲಾರದೇನೋ ಎಂದುಕೊಂಡು ಬರೆಯಲು ಕುಂತಿದ್ದೇನೆ. ಗಣಪಜ್ಜಿಯ ಬಾಯಿಂದ ಕೇಳಿದ ಹಾಡುಗಳನ್ನು ನಾನು ಹಾಗೂ ಸಂಜಯ ಬರೆದುಕೊಂಡು ಬಂದಿದ್ದೇವೆ ಎಂದು ಹೇಳಿದ್ದೆನಷ್ಟೆ. ಇನ್ನೂ ಹಲವು ಹಾಡುಗಳು ನನ್ನಲ್ಲಿ ಬಾಕಿ ಉಳಿದುಬಿಟ್ಟಿವೆ. ಮೊನ್ನೆ ತಾನೆ ಸಂಜಯ ಸಿಕ್ಕಿದ್ದ. ನಾನು ಗಣಪಜ್ಜಿಯ ಹಾಡುಗಳನ್ನು ಬ್ಲಾಗುಗಳ ಮೂಲಕ ಬರೆದ ವಿಷಯವನ್ನು ಅವನ ಮುಂದಿಟ್ಟೆ. ಖಂಡಿತ ಒಳ್ಳೆಯ ಕೆಲಸ. ಅದನ್ನು ಮುದ್ದಾಂ ಮಾಡು ಎಂದು ಹಾರೈಸಿದ್ದಲ್ಲದೇ ತನ್ನ ಬಳಿ ಇರುವ ಹಾಡಿನ ಸಂಗ್ರಹವನ್ನೂ ತಂದುಕೊಡುವ ಭರವಸೆಯನ್ನು ನೀಡಿದ್ದಾನೆ. ಆತನಿಗೆ ಖಂಡಿತವಾಗಿಯೂ ಧನ್ಯವಾದ ಹೇಳಲೇಬೇಕು.
          ಗಣಪಜ್ಜಿಯಿಂದ ಬರೆದುಕೊಂಡು ಬಂದ ಹಾಡುಗಳಲ್ಲಿ ಹೆಚ್ಚಿನವು ತಮಾಷೆ ಹಾಗೂ ಪೋಲಿಯ ಹಾಡುಗಳು. ಆದರೂ ನಡು ನಡುವೆ ಒಂದೆರಡು ಪುರಾಣದ ಹಾಡುಗಳೂ ಇವೆ. ದೊಡ್ಡ ಹಬ್ಬದಲ್ಲಿ ಗೋವನ್ನು ಬಿಟ್ಟಿದ್ದು, ಗೋವಿನ ಬಳಿ ಮಾತನಾಡಿದ್ದು ಸೇರಿದಂತೆ ಹಲವಾರು ಹಾಡುಗಳು ಆಕೆಯಿಂದ ಹೇಳಲ್ಪಟ್ಟಿವೆ. ಅಂತದ್ದೇ ಒಂದು ತಮಾಷೆಯ ಹಾಡು ಇಲ್ಲಿದೆ ನೋಡಿ. ಈ ಹಾಡು ದೊಡ್ಡ ಹಬ್ಬದ ಸಂದರ್ಭದಲ್ಲಿ ಗೋವುಗಳನ್ನು ಬಿಡುವುದು ಹಾಗೂ ಗೋವಿನ ಜೊತೆಗೆ ಮನೆಯ ಯಜಮಾನ್ತಿ ಮಾತನಾಡುವುದು, ಗೋವಿಗೆ ಜಾಗೃತೆಯಿಂದ ಇರು ಎನ್ನುವ ಭಾವಗಳಿವೆ.

ಗೋವು ಕಣ್ಣಿಯ ಬಿಡುವನಕ
ಮನೆ ದೇವರ ಕೃಪೆಯಿರಲೆ
ಹೋಕ್ಹೋಗಿ ಮನೆಗೆ ಬರುವನಕ
ಹುಲಿದೇವರ ಕೃಪೆಯಿರಲೆ..|
-ಆಕಳು ಮೇಯಲು ಹೋಗಿ ಮನೆಗೆ ಸುರಕ್ಷಿತವಾಗಿ ಬರುವಾಗ ದೇವರು ಹಾಗೂ ಹುಲಿ ಕೂಡ ಕೃಪೆ ತೋರಿಸು ಎಂದು ಮನುಷ್ಯ ಬೇಡಿಕೊಳ್ಳುವುದು ಇನ್ನೆಲ್ಲಿ ಕಾಣಲು ಸಾಧ್ಯವಿದೆ.?
ಅದೇ ಹಾಡು ಮುಂದುವರಿಯುತ್ತದೆ..

ಅಪ್ಪನ ಮನೆ ತುರುಹಿಂಡು ಎಪ್ಪತ್ತು ಸಾವಿರ
ಹೊಸ್ತಿಲೊಳಗವರು ನಡೀವಾಗ
ನಡೀವಾಗ ಗೋವಕ್ಕನ
ಹತ್ತು ಸಾವಿರ ಗಂಟೆ ಗುಯ್ಯಲೆಂದು..|
-ಆಹಾ.. ಗೋವನ್ನೂ ಅಕ್ಕನೆಂದು ಕರೆಯುತ್ತಾಳಲ್ಲ... ಈ ಹವ್ಯಕ ಹಾಡನ್ನು ಅದ್ಯಾರು ಬರೆದರೋ.. ಅಂತಹ ಆಶುಕವಿಗೆ ಧನ್ಯೋಸ್ಮಿ.

ಹತ್ತಲಾರದ ಗುಡ್ಡೆ ಹತ್ತೇಳು ಪಶುತಾಯಿ
ತಿರುಗಿ ನೋಡಲಿಕೆ ಅರಿಯಾಳು
ಅರಿಯಾಳು ಗೋಮಾಳ
ಮುತ್ತಿನ ಸನ್ನೆಯಲಿ ಹೊಡತಾರೋ..|

ಕೊಟ್ಟಿಗೆ ಕೆಸರೆಂದು ಹಾದಿ ದೂರ ಎಂದು
ಬಾರದುಳಿಯಡ ಪಶುತಾಯೆ
ಪಶುತಾಯೆ ನಿನ್ನೊಡೆಯರು
ಹಾಲಿಲ್ಲದುಣ್ಣರು ಇರುಳೂಟ |
-ಆಕಳನ್ನು ಪಶುವೆಂದು ಭಾವಿಸದೆ ಮನೆಯ ಒಬ್ಬ ಸದಸ್ಯನೆಂದು ಪರಿಗಣಿಸಿ, ವಿನಮ್ರನಾಗಿ ಆಕಳ ಬಳಿ ಕೇಳಿಕೊಳ್ಳುವ ಪರಿ ಬಹಳ ಕಾಡುತ್ತದೆ. ಆಕಳ ಬಳಿ ನೆಪ ಹೂಡಬೇಡ. ಸುಮ್ಮನೆ ಸಿಟ್ಟಾಗಿ ಕೊಟ್ಟಿಗೆಗೆ ಬರದೇ ಉಳಿದುಬಿಡಬೇಡ ಎನ್ನುವ ಈ ಹವ್ಯಕ ಹಾಡುಗಳು ಎಂತವನನ್ನೂ ಸೆಳೆದುಬಿಡುತ್ತವೆ.

**

ಈ ಮೇಲಿನ ಹಾಡು ಬೆಳಿಗ್ಗೆ ಮುಂಚೆ ಆಕಳ ಬಳಿ ಹೀಗೆ ಹೇಳುವಂತದ್ದಾದರೆ ಸಂಜೆಯ ವೇಳೆಗೆ ಕೊಟ್ಟಿಗೆಗೆ ಆಗಮಿಸುವ ಆಕಳನ್ನು ಸ್ವಾಗತಿಸುವ ಸಲುವಾಗಿ ಇನ್ನೊಂದು ಸುಂದರ ಹಾಡನ್ನೂ ಹಾಡಲಾಗುತ್ತದೆ. ಆ ಹಾಡು ಇನ್ನೂ ಮಜವಾಗಿದೆ ನೋಡಿ. ಈ ಹಾಡಿನಲ್ಲಿ ಆಕಳು ದೂರನ್ನೂ ಹೇಳುತ್ತದೆ ಗಮನಿಸಿ.

ಗೋವು ಬರುವ ಬಾಗಿಲಿಗೆ
ತಟ್ಟನಿಕ್ಕಿದರು ಒನಕೆಯನು
ಅಪ್ಪ ಕೃಷ್ಣರ ಮನೆಯ
ಗೋವು ಬರುವ ಬಾಗಿಲಿಗೆ |
ಎತ್ತು ಬರುವ ಬಾಗಿಲಿಗೆ
ತಟ್ಟನಿಕ್ಕಿದರು ಒನಕೆಯನು
ಅಪ್ಪ ಕೃಷ್ಣರ ಮನೆಯ
ಎತ್ತು ಬರುವ ಬಾಗಿಲಿಗೆ |
**

ಮನೆಗೆ ಬರುವ ಗೋವು (ಎತ್ತು) ಮನೆಯೊಡತಿಯ ಬಳಿ ದೂರನ್ನು ಹೇಳುತ್ತದೆ.. ಇದು ಮಜವಾಗಿದೆ ನೋಡಿ

ಗುಡ್ಡ ಬೆಟ್ಟಗಳೆಲ್ಲ ತಿರುಗಿಸಿ
ಅಟ್ಟು ಹೊಡೆದನೇ ಗೋವಳನು
ಬೆತ್ತದ ಶೆಳೆಯಲಿ
ಹೊಡೆದನೆಂದ್ವಡೆಯಗೇಳಿದವೇ..
**
ಮುಂದುವರಿದು ಗೋವು ಇನ್ನೂ ಪುಕಾರು ಹೇಳುತ್ತವೆ ಕೇಳಿ.. ಓದಿದಂತೆಲ್ಲ ನಿಮ್ಮ ಮನಸ್ಸು ಮುದಗೊಳ್ಳುವುದು ಖಚಿತ

ಹುಲ್ಲು ಸತ್ತಿತು ಹೊಲನೊಳಗೆ
ನೀರು ಬತ್ತಿತು ಕೊಣದೊಳಗೆ
ಹ್ಯಾಂಗೆ ಜೀವಿಸಲೆಂದು
ಯೋಚನೆಗೊಂಡವು ಪಶುಗಳು..
**

ಗೋವಿನ ಪುಕಾರಿಗೆ ಪ್ರತಿಯಾಗಿ ಮನೆಯೊಡತಿ ಗೋವನ್ನು ಸಮಾಧಾನ ಮಾಡಿ ಸಂತೈಸುವ ಪರಿ ನೋಡಿ ಹೇಗಿದೆ.. ಅಂತ..

ಗುತ್ತಿಯ ಹೊಲನೊಳಗೆ
ಮುತ್ತಿನ ದೋಣಿಯ ಕಳುಸಿ
ಮತ್ತೊಮ್ಮೆ ಅದರ ತರಿಸೂವಿ
ಮುತ್ತಿನ ದೋಣಿಯ ಕಳುಸಿ
ಮಿತ್ರೆಯರ ಕೂಡ ಉದುಕವ
ಉದುಕವ ಹೊಯ್ಸೂವಿ ಗೋವೆ
ನೀ ಚಿಂತೆ ಪಡದೀರು |

ಬಡಗೀಯ ಮನೆಗ್ಹೋಗಿ
ಕುಡುಗೋಲು ಮಾಡ್ತರಿಸಿ
ಬಡ ಬಟ್ಟನ ಕೂಡ ಹೊರೆ ಹುಲ್ಲ
ಬಡ ಬಟ್ಟನ ಕೂಡ ಹೊರೆಹುಲ್ಲ ತರಿಸೂವಿ
ಗೋವೆ ನೀ ಚಿಂತಿ ಪಡದೀರು. |
-ಆಹಾ.. ನಮ್ಮ ಹಿರೀಕರು ಅದೆಷ್ಟು ಸಹೃದಯಿಗಳಾಗಿರಬೇಕು. ಅವರ ಮನದಲ್ಲಿನ ಪ್ರಾಣಿಪ್ರೀತಿಗಳನ್ನು ಇಂದಿನವರಾದ ನಾವು ಖಂಡಿತವಾಗಿಯೂ ವಿವರಿಸುವುದು ಅಸಾದ್ಯ. ನಮ್ಮ ಹಿರಿಯರ ಪ್ರಾಣಿಪ್ರಿಯ ಗುಣ ಎಂತಹ ಕಾಲದಲ್ಲೂ ಎಂತವರನ್ನೂ ಮೋಡಿ ಮಾಡಬಲ್ಲದು.

***
ಇನ್ನೊಂದು ಮಜವಾದ ಹಾಡಿದೆ. ಈ ಹಾಡಿನಲ್ಲಿ ಪ್ರಶ್ನೋತ್ತರ ಸರಣಿಗಳಿವೆ.. ಓದಿ ಮಜಾ ಅನುಭವಿಸಿ.

ಉತ್ತುಮರಾ ಮಗನೆಂದು
ಉಪ್ಪರಿಗೆ ಕರೆಸಿದ್ಯ
ಪೆಟ್ಟಿಗೆಯ ಬೀಗ ತೆಗೆಸಿದ್ಯ..|
ಪೆಟ್ಟಿಗೆಯ ಬೀಗ ತೆಗೆಸಿದ್ಯ ಮಾವಯ್ಯ
ತಾಳಿ ಸರ ಕದ್ದು ಹುಗಸೀದ |

ಒಳ್ಯವರ ಮಗನೆಂದು
ಮಾಳಿಗೆ ಕರೆಸಿದ್ಯ
ಪೆಟ್ಟಿಗೆಯ ಬೀಗ ತೆಗೆಸಿದ್ಯ
ಪೆಟ್ಟಿಗೆಯ ಬೀಗ ತೆಗೆಸಿದ್ಯ ಅತ್ಯವ್ವ
ಮುತ್ತಿನ ಸರ ಕದ್ದು ಹುಗಸೀದ..|

-ಇದು ಆರೋಪವಾದರೆ.. ಇದಕ್ಕೆ ಪ್ರಿಯಾಗಿ ಸಮಝಾಯಿಶಿ ಅಥವಾ ಸಮರ್ಥನೆಯನ್ನು ನೀಡುವ ಪರಿ ಗಮನಿಸಿ

ಮಾವುಗಳ ಸಂತಿಗೆ
ತ್ವಾಟಕ್ಕೆ ಹೋಗಿಕ್ಕು
ನೆರೆಮನೆಯ ಬಾಳೆಕೊನೆ ಕಳಹೂದ
ಕಳಹೂದ ಕಂಡ್ಕಂಡು
ಕದಿಯುವ ಬುದ್ದಿ ಕಲಿತಿಕ್ಕು |

ಅತ್ಯಗುಳ ಸಂತಿಗೆ
ಹಿತ್ತಲಿಗೆ ಹೋಗಿಕ್ಕು
ನೆರೆಮನೆಯ ಬದ್ನೆಕಾಯಿ ಕಳಹೂದ
ಹಳಹೂದ ಕಂಡ್ಕಂಡು
ಕಳುವ ಬುದ್ದಿಯನೇ ಕಲಿತಿಕ್ಕು |

ಯಾವಾಗಲೂ ನನ ಮಗಗೆ
ಕಳುವ ಬುದ್ಧಿಗಳಿಲ್ಲೆ
ಅತ್ತೆಯ ಮನೆಯ ಹಸೆ ಮೇಲೆ
ಹಸೆ ಮೇಲೆ ಇದ್ದಾಗ
ಅತ್ಯಗ್ಯಕ್ಕಳು ಕಳವ ಹೊರಸೀರಿ..|

ಇಂದು ಬಟ್ಟಲ ಕದ್ದ
ನಾಳೆ ಗಿಂಡಿಯ ಕದ್ದ
ನಾಡದತ್ತೆಯಾ ಮಗಳ ಕದ್ದು
ಮಗಳ ಕದ್ದು ಹೋಪಾಗ
ಯಾರ ಮೇಲೆ ಕಳುವ ಹೊರಿಸೂವಿ..|
-ಈ ಹಾಡನ್ನು ಹೇಳುವ ವೇಳೆಗೆ ಅಜ್ಜಿಗೆ ಹಲವಾರು ತಮಾಷೆಯ ಹಾಡುಗಳು ನೆನಪಾಗ ಹತ್ತಿದ್ದವು. ನಾನು ಹಾಗೂ ಸಂಜಯ ರೋಮಾಂಚನದಿಂದ ಬರೆದುಕೊಳ್ಳಹತ್ತಿದ್ದೆವು. ಅಜ್ಜಿಯೂ ತಮಾಷೆ ಮಾಡುತ್ತಲೇ ಹಾಡನ್ನು ಹೇಳುತ್ತಿತ್ತು. ಆದರೆ ವಯಸ್ಸಾದ ಅಜ್ಜಿ ಒಂದು ಕಡೆ ಕುಳಿತಲ್ಲಿ ಕೂರಲಾಗದೇ ಚಡಪಡಿಸುತ್ತಿತ್ತು. ಆಗೀಗ ನಿಲ್ಲುತ್ತ, ಆಗೀಗ ಕೂರುತ್ತ `ತಮಾ.. ಯನ್ನ ಸ್ವಂಟ ಹಿಡದೋತು.. ಹನೀ ಕೈ ಹಿಡ್ಕಳ.. ಯನ್ನ ಒಂಚೂರು ಎತ್ತ ಮಾರಾಯಾ..' ಎನ್ನುತ್ತ ಕರೆದಾಗಲೆಲ್ಲ ನಾನು ಆಜ್ಞಾ ಪಾಲಕನಾಗಿ ಆಕೆಯ ಕೈಯನ್ನು ಹಿಡಿದು ಎಳೆದು ಕೂರಿಸುತ್ತಿದ್ದೆ. ಪ್ರತಿಯಾಗಿ ಅಜ್ಜಿ `ನಿಂಗೆ ಗನಾ ಕೂಸು ಸಿಗಲ.. ದಂಟಕಲ್ ಮಂಕಾಳಕ್ಕನ ಹಾಂಗೆ ಇರಲಿ..' ಎಂದು ಹಾರೈಸುತ್ತಿತ್ತು. ನಾನು ಪೆಚ್ಚುನಗೆಯನ್ನು ಹಾರಿಸುತ್ತಿದ್ದೆ. ಈ ಅಜ್ಜಿ ನಮಗೆ ಬೆಳಿಗ್ಗೆಯಿಂದ ರಾತ್ರಿಯ ತನಕ ಅಜಮಾಸು 10 ತಾಸುಗಳ ಕಾಲ ಹಾಡನ್ನು ಹೇಳಿತ್ತು. ಪಾಪ ಅದೆಷ್ಟು ತೊಂದರೆಯನ್ನು ಅನುಭವಿಸಿದ್ದರೋ ಅಜ್ಜಿ. ಏನನ್ನೂ ಹೇಳದೆ ನಾವು ಕೇಳುತ್ತಿದ್ದೇವೆ ಎನ್ನುವ ಕಾರಣಕ್ಕಾಗಿ ತನ್ನ ದೈಹಿಕ ಸಮಸ್ಯೆಗಳನ್ನೆಲ್ಲ ಮರೆತು ಹಾಡುತ್ತಿದ್ದುದನ್ನು ನೆನಪು ಮಾಡಿಕೊಂಡರೆ ಹಾಡು ಸಂಗ್ರಹದ ನೆಪದಲ್ಲಿ ಅಜ್ಜಿಗೆ ತ್ರಾಸು ಕೊಟ್ಟೆವಾ ಎಂದುಕೊಂಡಿದ್ದಿದೆ. ಆದರೆ ಅಜ್ಜಿ `ತಮಾ.. ನಿಂಗ ಒಳ್ಳೆ ಕೆಲಸ ಮಾಡ್ತಾ ಇದ್ದಿ.. ಹಿಂಗಿದ್ ಮಾಡವ್ ಯಾರಾದ್ರೂ ಶಿಕ್ತ್ವಾ ಹೇಳಿ ಆನೂ ಕಾಯ್ತಾ ಇದ್ದಿದ್ದಿ.. ನಿಂಗವ್ವು ಶಿಕ್ದಿ.. ಚೊಲೋ ಆತು..' ಎಂದು ಹೇಳಿದ್ದು ನಮ್ಮ ಪಾಲಿಗೆ ಸಿಕ್ಕ ಬಹುದೊಡ್ಡ ಸರ್ಟಿಫಿಕೆಟ್ ಎಂದುಕೊಂಡು ಖುಷಿಯಾಗಿದ್ದೇವೆ.

(ಅಜ್ಜಿಯ ಹಾಡುಗಳು ಇನ್ನಷ್ಟಿದ್ದು.. ಮುಂದಿನ ಭಾಗದಲ್ಲಿ ಅದನ್ನು ತಿಳಿಸಲಾಗುವುದು)



Saturday, July 12, 2014

ಹನಿಸುತಿದೆ..

ಮಧ್ಯವರ್ತಿ

ನಾನು ಬಡವಿ
ಆತ ಬಡವ 
ಒಲವೆ ನಮ್ಮ ಬದುಕು..
ನಾನು ನೀನು
ಒಟ್ಟಿಗಿರಲು
ಬಜೆಟ್ ಯಾಕೆ ಬೇಕು..?


ಬಯಕೆ

ಸದನದಲ್ಲಿ 
ನಿದ್ದೆ ಮಾಡುವ ಭಾಗ್ಯಕ್ಕೊಬ್ಬ 
ಮುಖ್ಯಮಂತ್ರಿ..
ಇದೀಗ
ರಾಹುಲ್ ಗಾಂಧಿಗೆ
ವಿರೋಧ ಪಕ್ಷದ
ಸ್ಥಾನಮಾನವೂ ಬೇಕಂತ್ರೀ..!!


ಸ್ಪೂರ್ತಿ

ಸದನದಲ್ಲಿ ಸದಾ
ಸಿದ್ದರಾಮಯ್ಯರ ನಿದ್ದೆ
ಅದಕ್ಕೆ ಸ್ಪೂರ್ತಿ ಮಾತ್ರ
ರಾಹುಲ್ ಗಾಂಧಿ ಅವರದ್ದೇ,,!!


ಗೌಡರ ರೈಲು

ವಿರೋಧ ಪಕ್ಷದವರು
ಎಷ್ಟೇ ಕೂಗಾಡಿದರೂ
ಕಿರುಚಿದರು,,
ಬೋರ್ಡು ಮೆಟ್ಟಿ ತುಳಿದರೂ
ರೈಲು ಬಿಟ್ಟೇ ಬಿಟ್ಟರು
ಸದಾನಂದ ಗೌಡರು |


ಮಗುವಿನ ಇಷ್ಟ


ಪುಟ್ಟ ಮಗುವಿಗೆ ಬೇಕಿಲ್ಲ
ಪೊಕೆಮಾನು
ಇಷ್ಟಪಡುತ್ತಿಲ್ಲ
ಡೋರೆಮಾನು..
ಈಗೇನಿದ್ದರೂ ಬೇಕಂತೆ
ರಾಹುಲ್ ಗಾಂಧಿಯ
ಕಾರ್ಟೂನು..|


ಇದೇ ಮೊದಲು

ಜಗತ್ತಿನ ಮೊಟ್ಟ ಮೊದಲ
ಟ್ಯಾಬ್ಲೆಟ್ಟು..
ನಮ್ಮ ಪ್ರೀತಿಯ
ಬಳಪ ಮತ್ತು ಸ್ಲೇಟು |


ಎಲ್ಲೆಲ್ಲೂ ನಿದ್ದೆಯೇ

ಚಿಂತೆ ಇಲ್ಲದವನಿಗೆ
ಸಂತೆಯಲ್ಲೂ ನಿದ್ದೆ
ಇದು ಹಳೆಯದಾಯ್ತು..|
ಈಗೇನಿದ್ದರೂ
ಚಿಂತೆ ಇಲ್ಲದವನಿಗೆ
ಸದನದಲ್ಲೂ ನಿದ್ದೆ..||

ವ್ಯತ್ಯಾಸ
ಮದುವೆಯಾಗದಿರುವುದನ್ನು
ಅವಿವಾಹಿತ, ಬ್ರಹ್ಮಚಾರಿ ಎನ್ನಬಹುದು
ಆದರೆ ಈ ಎರಡೂ ಶಬ್ದಗಳಲ್ಲಿ
ಅದೆಷ್ಟು ವ್ಯತ್ಯಾಸ
ರಾಹುಲ್ ಗಾಂಧಿ ಅವಿವಾಹಿತ
ವಾಜಪೇಯಿ ಬ್ರಹ್ಮಚಾರಿ..|

**
(ಆಗೀಗ ನೆನಪಾದಾಗ, ಹೊಳೆದಾಗ ಬರೆದು ಫೆಸ್ ಬುಕ್ಕಿನ ನನ್ನ ವಾಲಿನಲ್ಲಿ ಹಾಕುತ್ತಿದ್ದೆ.. 
ಅವನ್ನು ಸಂಗ್ರಹಿಸಿ ಈ ರೂಪದಲ್ಲಿ ಇಟ್ಟಿದ್ದೇನೆ.. ಓದಿ ಹೇಳಿ ನಿಮ್ಮ ಅಭಿಪ್ರಾಯವ)

Friday, July 11, 2014

ಗಣಪಜ್ಜಿಯ ಹಾಡುಗಳು-2

            ಗಣಪಜ್ಜಿ ಹುಕಿಗೆ ಬಿದ್ದು ಹಾಡನ್ನು ಒಂದರ ಹಿಂದೊಂದರಂತೆ ಹೇಳುತ್ತಿದ್ದಳು. ನಾನು ಹಾಗೂ ಸಂಜಯ ಬರೆದುಕೊಳ್ಳುತ್ತ ಸಾಗಿದ್ದೆವು. ಮಧ್ಯದಲ್ಲಿ ನಾವು ಅಜ್ಜಿಗೆ ಪ್ರಶ್ನೆ ಕೇಳಲೂ ಭಯವಾಗಿತ್ತು. ನಾವು ಪ್ರಶ್ನೆ ಕೇಳುವ ಭರದಲ್ಲಿ ಅಜ್ಜಿಗೆ ನೆನಪಾಗಿದ್ದ ಹಾಡುಗಳು ಮರೆತು ಹೋದರೆ ಏನು ಮಾಡುವುದು ಎನ್ನುವುದು ನಮ್ಮೊಳಗಿನ ದುಗುಡವಾಗಿತ್ತು. ನಮ್ಮ ಪ್ರಶ್ನೆಗೆ ಆಸ್ಪದವೇ ಇಲ್ಲದಂತೆ ಗಣಪಜ್ಜಿ ಯಾವ ಸಂದರ್ಭದಲ್ಲಿ ಹೇಳುವ ಹಾಡು, ಯಾಕೆ ಹೇಳುತ್ತಾರೆ? ಅದನ್ನು ಹೇಳಿದರೆ ಏನು ಪ್ರಯೋಜನ, ಹಾಡಿನ ಧಾಟಿ ಇತ್ಯಾದಿಗಳ ಬಗ್ಗೆಯೆಲ್ಲ ಮಾಹಿತಿ ನೀಡುತ್ತ ಹಾಡುತ್ತಿದ್ದುದರಿಂದ ನಮ್ಮ ಹಲವಾರು ಸಮಸ್ಯೆಗಳು ಪರಿಹಾರವಾದಂತಾಗಿದ್ದವು. ಬರೆದುಕೊಳ್ಳುತ್ತಿದ್ದ ನಾನು ಹಾಗೂ ಸಂಜಯ ಸುಸ್ತಾಗಿದ್ದಂತೂ ಸುಳ್ಳಲ್ಲ.
             ಖಂಡಿತವಾಗಿಯೂ ನಾನು ಹಾಗೂ ಸಂಜಯ ಮಾತಿಗೆ ಬಿದ್ದರೆ ಮೇರೆ ಮೀರು ಬಿಡುತ್ತೇವೆ. ಪೋಲಿ ಮಾತುಗಳು ಸರಾಗವಾಗಿ ಹೊರಬರುತ್ತವೆ. ಅಜ್ಜಿಗೆ ಪೋಲಿಯೆನ್ನಿಸುವ ಹವ್ಯಕರ ಹಳ್ಳಿ ಹಾಡು ಸಾಕಷ್ಟು ಗೊತ್ತಿದ್ದ ಕಾರಣ ಆ ಬಗೆಯ ಹಾಡುಗಳು ಗೊತ್ತಿದ್ದರೆ ಹೆಚ್ಚು ಹೆಚ್ಚು ಹೇಳು ಎಂದೆವು. `ನೆನಪಿದ್ದಷ್ಟು ಹೇಳ್ತಿ ಅಕಾ..' ಎಂದು ಹೇಳಿದ ಅಜ್ಜಿ ಹಾಡಿದ ಹಾಡುಗಳಲ್ಲಿ ಪೂರ್ತಿ ಸಿಕ್ಕಿದ್ದು ಒಂದೋ ಎರಡೋ ಅಷ್ಟೆ. ಸಿಕ್ಕಿದಷ್ಟು ಹಾಡನ್ನು ಇಲ್ಲಿಡುವ ಪ್ರಯತ್ನ ನಮ್ಮದು

**
ಅತ್ತೆಯ ಮನೆಯಲ್ಲಿ ಸುತ್ತಿ ನಾಗಂತಿಗೆ
ಸುತ್ತಿ ದೀವಿಗೆಯ ಚಲಿಸಲಿ..
ಸುತ್ತಿ ದೀವಿಗೆಯ ಚಲಿಸಲಿ ನಮ್ಮ ಮಗಳು
ಔಪಾಸನ್ಯಕೊಟ್ಟು ಪ್ರೀತ್ಯರ್ತರಾಗುವಳೋ.|

ಮಾವನ ಮನೆಯಲಿ ಕೂಡೆ ನಾಗಂತಿಗೆ
ಸುತ್ತಿ ದೀವಿಗೆಯ ಚಲಿಸಲಿ..
ಸುತ್ತಿ ದೀವಿಗೆಯ ಚಲಿಸಲಿ ನಮ್ಮ ಮಗಳು
ಔಪಾಸನ್ಯಕೊಟ್ಟು ಪ್ರೀತ್ಯರ್ತರಾಗುವಳೋ.
ಶ್ರೀರಾಮರ ಮಡದಿ..||ಪ||

ದ್ವಾರಕಾ ಪುರದಲ್ಲಿ, ದೇವರ ಬಲದಲ್ಲಿ
ದೇವಕಿ ದೇವಿಯರ ಸಮ್ಮಿಳದಲ್ಲಿ
ಬೆಟ್ಟ ಬಡಿದಳು ಶ್ರೀಕೃಷ್ಣರ ರಮಣಿ
ಕೃಷ್ಣರ ರಾಣಿ ರುಕ್ಮಿಣಿ ದೇವಿ..|

ಅತ್ತೆಯ ಮನೆಯಲ್ಲಿ ದೇವರ ಬಲದಲ್ಲಿ
ದೇವಕಿ ದೇವಿಯರ ಸಮ್ಮಿಳದಲ್ಲಿ..||
 ಎಂದು ಹಾಡಿದ ಅಜ್ಜಿಗೆ ಮುಂದಿನ ಸಾಲುಗಳು ನೆನಪಾಗಲೇ ಇಲ್ಲ. ಮಾವನ ಮನೆಗೆ ಹೋಗುವ ಮಗಳು ಮಾವನ ಮನೆಯನ್ನು ಬೆಳಗಲಿ ಎಂದು ಹೇಳುವ ತಾಯಿ ಮಾವನ ಮನೆಯೊಂದು ದೇವರ/ಶ್ರೀಕೃಷ್ಣನ ನಿವಾಸ. ಅಲ್ಲಿನ ಸದಸ್ಯರೆಲ್ಲ ದೇವ ದೇವತೆಗಳು. ಅವರಿಗೆ ಗೌರವನ್ನು ಕೊಟ್ಟು, ನೀನೂ ಗೌರವವನ್ನು ಪಡೆದುಕೊ. ಜೊತೆಯಲ್ಲಿ ಕೊಟ್ಟ ಮನೆಯನ್ನು ಬೆಳಗು ಎಂದು ಹಾರೈಸುವ ಈ ಹಾಡು ಇಂದಿನ ಕಾಲಕ್ಕೆ ಪ್ರಸ್ತುತ ಎನ್ನಿಸುವಂತದ್ದು.

**
ಉಪ್ಪರಿಗೆಯಲ್ಲೇ ಪಟ್ಟೆ ಮಂಚ ಹಾಕಿರಬೇಕು
ಅತ್ರದೆಣ್ಣೆ ಮೇಜು-ಕುರ್ಚಿ ತಂದಿಟ್ಟಿರಬೇಕು
ಒಲ್ಲೆ ಎನ್ನಲು ಬೇಡಿ ಪತಿಯೆ ಎನ್ನ |
ತಾಳೀ ತಂಬ್ಗೆ ಬೆಳಗಿಡಬೇಕು ಜಳ-ಜಳ
ಮಜ್ಗೆ ಡಾವ್ ಇಟ್ಟಿರಬೇಕು ಸಳ-ಸಳ
ಒಲ್ಲೆ ಎನ್ನಲು ಬೇಡಿ ಪತಿಯೆ ಎನ್ನ |

-ಇದೊಂದು ಮಜವಾದ ಹಾಡು. ಗಂಡನನ್ನು ಹೆಂಡತಿ ಒಲಿಸುವ, ಒಪ್ಪಿಸುವ ಪರಿಯನ್ನು ಗಮನಿಸಿ. ಈ ಹಾಡೂ ನಮಗೆ ಪೂರ್ತಿಯಾಗಿ ಸಿಗಲಿಲ್ಲ. ಛೇ.

**
ಎಂಟು ಎಂದು ದಿನ ರೊಕ್ಕ
ಎಣಿಸಿ ಕೈಯಲಿ ಕೊಟ್ಟೆ
ಗಂಟು ಹೋಯ್ತು ಗೋವಳ ರಾಯ
ನೆಂಟರ ಮಲ್ಲಿ ಇಟ್ಟು ಬಂದ್ಯ
ಆಕಳು ಕಾಣೆ ನಂ ಆಕಳು ಕಾಣೆ |

ಆಕಳ ಗುತ್ ನಾ ನರಿಯೆ
ಆಕೆ ನಂಕೈಲಿ ಹೇಳಲಿಲ್ಲ
ಸೆರಗನ್ಹಾಸಿ ಬೇಡಿದ್ದಾದರೆ
ಸಾವಿರದಾಕಳ ತರಿಸಿಕೊಡುವೆ
ಆಕಳು ಬಕ್ಕು ನಿಂ ಆಕಳು ಬಕ್ಕು |

ಹಳ್ಳದಂಚಿಗೆ ಮೇಯ್ತಿತ್ತು
ಮನಿಗ್ ಹಾದಿ ಹಿಡದಿತ್ತು
ಕರನಾಸಿಗ್ ವದರತಿತ್ತು
ಮನೆಗಾಗೇ ಬರತಿತ್ತು
ಆಕಳು ಬಕ್ಕು ನಿಮ್ ಆಕಳು ಬಕ್ಕು..||

-ಎಂಬ ಈ ಹಾಡಿನಲ್ಲಿ ಕಳೆದು ಹೋದ ಆಕಳಿಗಾಗಿ ಮನೆಯೊಡತಿ ಪರಿತಪಿಸುವ ಪರಿ ಬಿಂಬಿತವಾಗಿದೆ. ಸೂಚ್ಯವಾಗಿ ಗಂಡ ಮನೆಗೆ ಬರುತ್ತಿಲ್ಲ ಎನ್ನುವುದನ್ನೂ ಹೇಳಲಾಗುತ್ತಿದೆ. ಬಹುದಿನಗಳಿಂದ ಗಂಡ ಮನೆಗೆ ಬಂದಿಲ್ಲ ಎನ್ನುವ ಅಂಶವನ್ನು ಈ ಹಾಡು ಬಿಡಿಸಿ ಹೇಳುತ್ತಿದೆ. ಇದೂ ಕೂಡ ಪೂರ್ತಿಯಾಗಿ ಸಿಗದ ಹಾಡು.
**

ಮಧುರ ವಾಕ್ಯವು
ಚಿನ್ಮಯನೆ ನೀನಾಡಿದ ವಾಕ್ಯವು
ಸನ್ಮತವಾಯ್ತು ಯನ್ನ ಮನುಸಿಗೆ
ಯನ್ನ ನಿನ್ನೆಯ ಗಂಗೆ ಗೌರಿಯ ಬೇಧದಲ್ಲಿ
ತನ್ನ ಮನಸಿಗೆ ತಾರದ ಹರುಷದಲಿ
ಒಮ್ಮೆಯಲಿ ಸದ್ಭಕ್ತ ಜನರಲಿ
ಬ್ರಹ್ಮ ಪದವಿಯಲಿ ವಾಸವಾಗಿಹ
ಎಂದ ಮಾಧವನು |

ಆಶೀವರ್ಣೆಯಲಿ ಪಂಚ ಗಂಗೆಯು
ಎಡ ಎಡೆಗೆ ಮುನ್ನೂರಮೂರು ಕೋಟಿ ತೀರ್ಥವು
ಈ ಸ್ಥಳದೊಳಗೆ ಉದ್ಭವವಾಗಲೆಂದರು
ಹರ ನಗುತ ಮಾಧವನೊಳರುಹಿದರು
ಮಧುರ ವಾಕ್ಯದಲಿ |

ವಾರಣಾಸಿಗೆ ಬಂದ ಜನರಿಗೆ
ಬೇಡಿದಾ ಇಷ್ಢಾರ್ಥ ಈವಳು
ಭಾವಿಸುತಾ ಬಂದವರಿಗೆ
ಕುಲಕೋಟಿಗಳು ಪಾವನವೇ
ಸ್ನಾನ ಪಾನವ ಮಾಡಿದವರಿಗೆ
ಸಾಯುಜ್ಯ ಮುಕ್ತಿಯ ಈವಳು
ಸೋಮಶೇಖರ ಮರವ ಪಾಲಿಸ
ರೆಂದ ಮಾಧವನು |

ಈ ಹಾಡೂ ಕೂಡ ಪೂರ್ತಿ ಇದೆಯೋ ಇಲ್ಲವೋ ಗೊತ್ತಿಲ್ಲ. ಮಾಧವನು ಶಿವನ ಕುರಿತಾಗಿ ಹೀಗೆನ್ನುತ್ತಾನೆ ಎನ್ನುವ ಹವ್ಯಕ ಹಾಡು. ಖಂಡಿತವಾಗಿಯೂ ನನಗೆ ಈ ಹಾಡಿನ ಧಾಟಿ ಅರ್ಥವಾಗಿಲ್ಲ. ಆ ಅಜ್ಜಿ ರಾಗವಾಗಿ ಹಾಡುತ್ತಿದ್ದರೆ ನಾವು ಅಷ್ಟೇ ತನ್ಮಯರಾಗಿ ಬರೆದುಕೊಂಡಿದ್ದಷ್ಟೇ ನೆನಪಿದೆ. ಈ ಹಾಡಿನ ಬಗ್ಗೆಯೂ ಗೊತ್ತಿದ್ದವರು ತಿಳಿಸಬಹುದು.

(ಗಣಪಜ್ಜಿ ಹೇಳಿದ ಒಂದೆರಡು ತಮಾಷೆಯ ಹಾಡುಗಳು ಇವೆ. ಅವನ್ನು ಮುಂದಿನ ಕಂತಿನಲ್ಲಿ ಹೇಳುತ್ತೇನೆ.. )

ದುಬಾಯ್ ರಾಜು


      `ದುಬಾಯ್ ರಾಜು' ಇಂತದ್ದೊಂದು ಹೆಸರು ರಾಜೇಂದ್ರನಿಗೆ ಅಂಟಿಕೊಳ್ಳಲು ದೊಡ್ಡದೊಂದು ಹಿನ್ನೆಲೆಯೇ ಇದೆ ಎಂದರೆ ತಪ್ಪಾಗಲಿಕ್ಕಿಲ್ಲ. ಸುಖಾ ಸುಮ್ಮನೆ ದುಬಾಯಿ ರಾಜು ಎಂದು ಸಾರ್ವಜನಿಕರೂ ಆತನನ್ನು ಕರೆದಿಲ್ಲ ಬಿಡಿ. ತನ್ನೂರನ್ನು ಬಿಟ್ಟು ದುಬಾಯಿಗೆ ಹೋಗಿ ನಾಲ್ಕೆಂಟು ವರ್ಷ ಕೆಲಸ ಮಾಡಿ ಬಂದ ಕಾರಣಕ್ಕಾಗಿಯೇ ಆತನನ್ನು ದುಬಾಯಿ ರಾಜು ಎಂದು ಕರೆಯಲಾರಂಭಿಸಿದ್ದು.
          ರಾಜೇಂದ್ರ ಎನ್ನುವ ಹೆಸರಿನ ಮೂರ್ನಾಲ್ಕು ಮಂದಿ ಆತನ ಊರಿನಲ್ಲಿ ಇದ್ದರು. ಒಬ್ಬ ರಾಜೇಂದ್ರನನ್ನು ಕರೆದರೆ ಮತ್ತೊಬ್ಬ ಮಾತನಾಡುತ್ತಿದ್ದ, ಮತ್ಯಾರನ್ನೋ ಕರೆದರೆ ಇನ್ನೊಬ್ಬ. ಈ ಗೊಂದಲ ತಪ್ಪಿಸಲೋಸುಗ ಪ್ರತಿಯೊಬ್ಬ ರಾಜೇಂದ್ರನಿಗೂ ಒಂದೊಂದು ಅಡ್ಡ ಹೆಸರನ್ನು ಇಟ್ಟು ಕರೆಯಲು ಪುರಜನರು ಮುಂದಾಗಿದ್ದರು. ಹೀಗಾಗಿ ಇರುವ ಮೂರ್ನಾಲ್ಕು ರಾಜೇಂದ್ರರೂ ಕೆಂಪು ರಾಜೇಂದ್ರ, ಕುಳ್ಳ ರಾಜೇಂದ್ರ, ತುದಿಮನೆ ರಾಜೇಂದ್ರ ಹಾಗೂ ದುಬಾಯ್ ರಾಜೇಂದ್ರ ಎಂದು ಕರೆಸಿಕೊಳ್ಳಲಾರಂಭಿಸಿದ್ದರು. ಈ ಎಲ್ಲ ರಾಜೇಂದ್ರರ ಪೈಕಿ ಈತ ಎಲ್ಲರಿಗೂ ಸ್ವಲ್ಪ ಆಪ್ತನಾದ ಕಾರಣ ಹಾಗೂ ತನ್ನ ವಿಲಕ್ಷಣ ಬುದ್ಧಿಯಿಂದ ದುಬಾಯ್ ರಾಜು ಆಗಿ ಬದಲಾಗಿದ್ದ.
           ದುಬಾಯ್ ರಾಜು ಒಂತರಾ ವ್ಯಕ್ತಿ. ಮಜವಾಗಿರುತ್ತಿದ್ದ. ಇತರರನ್ನು ನಗಿಸುವ ಕಾರ್ಯ ಮಾಡುತ್ತಿದ್ದ. ಹೆಂಗಸರಿದ್ದರಂತೂ ಪುಂಖಾನುಪುಂಕವಾಗಿ ಎರಡರ್ಥದ ಶಬ್ದಗಳನ್ನು ವಗಾಯಿಸಿ ವಗಾಯಿಸಿ ಇತರರು ನಗುವ ಮುನ್ನ ತಾನೇ ನಕ್ಕು ಹಾಸ್ಯಕ್ಕೆ ಕಾರಣವಾಗುತ್ತಿದ್ದ, ಹಾಸ್ಯಾಸ್ಪದವಾಗುತ್ತಿದ್ದ. ಸಾಮಾನ್ಯವಾಗಿ ದುಬಾಯಿ ರಾಜು ಯಾರ ಬಳಿಯಾದರೂ ಮಾತನಾಡಲು ಬಂದ ಎಂದರೆ ಎದುರಿಗಿದ್ದವರು ಮಾರು ದೂರ ನಿಂತುಕೊಂಡೇ ಮಾತನಾಡುತ್ತಿದ್ದರು. ಆತನ ಬಾಯಲ್ಲಿ ಸದಾಕಾಲ ಕವಳವೋ ಅಥವಾ ಗುಟ್ಕಾವೋ ಇದ್ದೇ ಇರುತ್ತಿತ್ತು. ಒಂದರೆಘಳಿಗೆಯೂ ಆತನ ಬಾಯಿ ಖಾಲಿಯಿರುತ್ತಿರಲಿಲ್ಲ. ಹೀಗಾಗಿ ಆತನ ಬಾಯಿಯನ್ನು ಎಲ್ಲರೂ ಜೈವಿಕ ಗ್ರೈಂಡರ್ ಎಂದೇ ಕರೆಯುತ್ತಿದ್ದರು. ಕವಳವನ್ನು ಜಗಿದು ಜಗಿದೂ ಆತನ ತುಟಿ, ನಾಲಿಗೆ ಹಾಗೂ ಹಲ್ಲುಗಳು ತಮ್ಮ ನೈಜಬಣ್ಣವನ್ನು ಅದ್ಯಾವುದೋ ಶತಮಾನದಲ್ಲಿ ಕಳೆದುಕೊಂಡಿರುವುದು ಸುಳ್ಳಲ್ಲ. ಹೀಗಾಗಿ ಆತನ ಬಾಯಿ, ಹಲ್ಲು ಹಾಗೂ ತುಟಿ ಈ ಮೂರೂ ಒಂದೇ ಬಣ್ಣವಾಗಿದ್ದವು.
            ದುಬಾಯ್ ರಾಜು ದುಬಾಯಿಯಲ್ಲಿ ಅದೇನು ಕೆಲಸ ಮಾಡಿದ್ದನೋ ಗೊತ್ತಿಲ್ಲ. ಆತ ದುಬಾಯಿಗೆ ಹೋಗುವ ಮುನ್ನ ಹೇಗಿದ್ದ, ಅಲ್ಲಿ ಹೋಗಿದ್ದೇನು ಮಾಡಿದ ಆ ನಂತರ ಬಂದು ಏನು ಮಾಡುತ್ತಿದ್ದಾನೆ ಎಂದು ಗಮನಿಸಿದವರೂ ಇದ್ದಾರೆ. ದುಬಾಯಿ ರಾಜುವನ್ನು ಗಮನಿಸಿದ ಮಹನೀಯರನ್ನು ವಿಚಾರಿಸಿದರೆ ಯಾವುದಾದರೂ ಪಿಎಚ್ಡಿಯನ್ನು ಮಂಡಿಸಬಹುದಾದಷ್ಟು ಸರಕು ಲಭ್ಯವಾಗುತ್ತದೆ. ದುಬಾಯಿಬಾಬು ಆಗಿನಕಾಲಕ್ಕೇ ಎಲ್ಲರಿಗಿಂತ ಹೆಚ್ಚು ಓದಿದ್ದ. ಆದರೆ  ಆತ ಬದುಕಿನ ದಾರಿಯಲ್ಲಿ ಏಳು ಬೀಳು ಕಾಣಲಾರಂಭಿಸಿದಾಗಲೇ ತಾನು ಓದಿದ್ದು ಯಾವ ಮೂಲೆಗೂ ಸಾಲುವುದಿಲ್ಲ ಎಂದುಕೊಂಡಿದ್ದು. ಹೀಗಿದ್ದಾಗಲೇ ಅವನಿಗೆ ಯಾರೋ ದುಬಾಯಿಯ ಕನಸಿನ ಬೀಜ ಬಿತ್ತಿದ್ದರು. ದುಬಾಯಿಯಲ್ಲಿ ಎಣ್ಣೆ ಬಾವಿಗಳಿವೆ. ಅಲ್ಲಿ ಹೋಗಿ ಕೆಲಸ ಮಾಡಿದರೆ ಭಾರತದ ಒಂದು ವರ್ಷಕ್ಕಾಗುವಷ್ಟು ಹಣವನ್ನು ಒಂದೇ ತಿಂಗಳಲ್ಲಿ ದುಡಿಯಬಹುದು ಎಂದು ಅದ್ಯಾವ ಪುಣ್ಯಾತ್ಮ ಹೇಳಿದ್ದನೋ. ಈತ ಆ ಕುರಿತು ತನ್ನ ಶತಪ್ರಯತ್ನವನ್ನು ಆರಂಭಿಸಿದ್ದ.
            ದುಬಾಯಿಗೆ ಹೋಗಬೇಕು ಎಂದರೆ ಸುಮ್ಮನೆ ಆಗಿಬಿಡುತ್ತದೆಯೇ? ಪಾಸ್ಪೋರ್ಟು, ವಿಸಾ ಎಲ್ಲಾ ಆಗಬೇಕು, ಹಣಕಾಸಿಗೆ ಕೊರತೆಯಿರಲಿಲ್ಲ. ಆದರೆ ಈ ಎಲ್ಲವುಗಳಿಗಿಂತ ಪ್ರಮುಖ ಸಮಸ್ಯೆಯೊಂದಿತ್ತು. ರಾಜುವಿಗೆ ಇಂಗ್ಲೀಷು ಬರುತ್ತಲೇ ಇರಲಿಲ್ಲ. ವಿಮಾನ ನಿಲ್ದಾಣದಲ್ಲಿ ಇಂಗ್ಲೀಷಿನಲ್ಲಿ ಮಾತನಾಡಬೇಕು ಎಂದು ಯಾರೋ ರಾಜೇಂದ್ರನ ಕಿವಿ ಕಚ್ಚಿಬಿಟ್ಟಿದ್ದರು. ಅದಕ್ಕೆ ಆತ ಇಂಗ್ಲೀಷನ್ನು ಕಲಿಯಲು ಸಕಲ ರೀತಿಯಿಂದ ಪ್ರಯತ್ನವನ್ನು ಆರಂಭಿಸಿದ್ದ. ಹಳ್ಳಿಗನಿಗೆ ಇಂಗ್ಲೀಷು ಸುಲಭಕ್ಕೆ ಒಗ್ಗಲಿಲ್ಲ ಬಿಡಿ. ಕೊನೆಗೆ ಅದ್ಯಾರೋ ಬರೆದುಕೊಟ್ಟ ಇಂಗ್ಲೀಷ್ ಚೀಟಿಯನ್ನು ಉರು ಹೊಡೆದು ಅಲ್ಪ ಮಟ್ಟಿಗೆ ಇಂಗ್ಲೀಷು ಬಲ್ಲವರ ರೀತಿಯಲ್ಲಿ ಆಡತೊಡಗಿದ್ದ.
            ದುಬಾಯಿಯಲ್ಲಿ ಆತ ಅದೇನು ಕೆಲಸ ಮಾಡಿದನೋ ದೇವರಿಗೇ ಪ್ರೀತಿ.  ಕೇಳಿದವರ ಬಳಿಯಲ್ಲೆಲ್ಲ ಯಾವುದೋ ಆಯಿಲ್ ಕಂಪನಿಯ ಮ್ಯಾನೇಜರ್ ಆಗಿದ್ದೆನೆಂದು ಹೇಳುತ್ತಿದ್ದ. ಸರಿ ಸುಮಾರು ನಾಲ್ಕು ವರ್ಷಗಳಿಗಿಮತಲೂ ಅಧಿಕ ಸಮಯ ಅಲ್ಲಿದ್ದ. ಬರುವಾಗ ದುಬಾಯಿ ದೊರೆಗಳು ಬೇಡ ಎಂದು ಬಿಸಾಕಿದ್ದನೆಲ್ಲ ಭಕ್ತಿಯಿಂದ ಎತ್ತಿಕೊಂಡು ಬಂದಿದ್ದ. ಈ ನಾಡಿನಲ್ಲಿ ಆತನನ್ನು ವಿಸ್ಮಯದಿಂದ ನೋಡಿದ್ದರು.
           ದುಬಾಯಿ ರಾಜು ದುಬಾಯಿಗೆ ಹೋದವನು ಇದ್ದಕ್ಕಿದ್ದಂತೆ ಮನೆಗೆ ವಾಪಾಸು ಬಂದಿರುವುದರ ಕುರಿತು ಹಲವು ರೀತಿಯಲ್ಲಿ ತರ್ಕಿಸುತ್ತಾರೆ. ಮದುವೆಯಾಗಬೇಕು ಎನ್ನುವ ಕಾರಣಕ್ಕೆ ವಾಪಾಸು ಬಂದ ಎಂದು ಒಂದಿಬ್ಬರು ಹೇಳಿದರೆ ಅವಿಭಕ್ತ ಕುಟುಂಬವಾದ ಮನೆಯಲ್ಲಿ ಹಿಸೆ ಆದರೆ ಆಸ್ತಿಯಲ್ಲಿ ಪಾಲು ಕೇಳಬೇಕು ಎನ್ನುವ ಕಾರಣಕ್ಕಾಗಿ ಮನೆಗೆ ಮರಳಿ ಬಂದ ಎಂದು ಹೇಳುವವರೂ ಇದ್ದಾರೆ. ಇವರು ಹೀಗಂದಿದ್ದಕ್ಕೆ ತಲೆದೂಗುವವರು ಸಾಕಷ್ಟು ಜನರಿರುವ ಕಾರಣ ತರ್ಕಕ್ಕೆ ಬೆಲೆ ಬಂದಿದೆ. ಆ ತರ್ಕ ಬಹುಮಟ್ಟಿಗೆ ಸತ್ಯವೂ ಆಗಿರುವುದರಿಂದ ತರ್ಕಿಸಿದ ಮಹನೀಯರೆಲ್ಲ ತರ್ಕಶಾಸ್ತ್ರ ಪಂಡಿತರೆಂದು ಕರೆಸಿಕೊಳ್ಳಲು ಆರಂಭಿಸಿದ್ದಾರೆ.
           ದುಬಾಯ್ ರಾಜು ಕೆಲವೊಂದು ದುರ್ಗುಣಗಳನ್ನು ಹೊಂದಿದ್ದಾನೆ ಎನ್ನುವುದನ್ನು ಬಿಟ್ಟರೆ ಬಹುತೇಕ ಒಳ್ಳೆಯವನೇ. ಇಲ್ಲಿನದನ್ನು ಅಲ್ಲಿಗೆ ಹೇಳುವುದು, ಅಲ್ಲಿನದ್ದನ್ನು ಇಲ್ಲಿಗೆ ಹೇಳುವುದು ಆತನ ಪ್ರಮುಖ ದುರ್ಗುಣ. ಆದ್ದರಿಂದ ದುಬಾಯ್ ರಾಜುವಿನ ಆರಲ್ಲಿ ನಾರದ, ಶಕುನಿ ಮುಂತಾದ ಹಲವಾರು ಬಿರುದುಗಳನ್ನೂ ಹೊಂದಿದ್ದಾನೆ. ಈತನ ಕಾರಣದಿಂದಲೇ ಊರಲ್ಲಿ ಮೂರ್ನಾಲ್ಕು ಮಹಾಯುದ್ಧಗಳೂ ಜರುಗಿವೆ. ಸಾಮಾನ್ಯವಾಗಿ ಆತ ಯಾರು ಯಾರಿಗೆ ಆಗುವುದಿಲ್ಲವೋ ಅಂತವರ ಪಟ್ಟಿ ಮಾಡಿಕೊಂಡು ಅವರ ಹಾಗೂ ಇವರ ನಡುವಿನ ವಕ್ತಾರನಾಗಿಯೂ, ಅವರ ಮಾತನ್ನು ಇವರಿಗೆ ತಿಳಿಸಿ, ಇವರ ಮಾತನ್ನು ಅವರಿಗೆ ತಿಳಿಸಿ ತನ್ನ ಬೇಳೆಯನ್ನು ಬೇಯಿಸಿಕೊಂಡವನು. ಆತನ ಊರಿನಲ್ಲಿ ದುಬಾಯಿ ರಾಜುವಿನ ಈ ದುರ್ಗುಣ ಬಹು ದಿನಗಳ ವರೆಗೆ ಯಾರಿಗೂ ತಿಳಿದೇ ಇರಲಿಲ್ಲ. ಕೊನೆಗೊಂದು ದಿನ ಮಹಾನುಭಾವರೊಬ್ಬರು ಹೊಂಚು ಹಾಕಿ ಗೊತ್ತು ಮಾಡಿದಾಗ ದುಬಾಯಿ ರಾಜು `ನಾನವನಲ್ಲ.. ನಾನವನಲ್ಲ..' ಎಂದು ಹುಯ್ಯಲೆಬ್ಬಿಸಿ, ಕಿಡಿಕಾರಿ, ಹಲುಬಿಕೊಂಡು ಗಲಾಟೆಯನ್ನೂ ಮಾಡಿದ್ದಿದೆ.
            ದುಬಾಯ್ ರಾಜುವಿನ ಮನೆಯಲ್ಲಿ ಇತ್ತೀಚೆಗೆ ನಡೆಯುತ್ತಿರುವ ಆಸ್ತಿ ಗಲಾಟೆಯ ಹಿಂದಿನ ರೂವಾರಿ ದುಬಾಯಿ ರಾಜು ಎನ್ನುವ ವಿಷಯವನ್ನು ಮುಚ್ಚಿಟ್ಟರೂ ಸದ್ದಿಲ್ಲದೆ ಜಗಜ್ಜಾಹೀರಾಗಿಬಿಟ್ಟಿದೆ. ಇದು ಖಂಡಿತ ದುಬಾಯಿ ರಾಜುವಿನ ತಪ್ಪಲ್ಲ ಬಿಡಿ. ದುಬಾಯ್ ರಾಜುವಿನ ಮನೆಯಲ್ಲಿ ಆರೆಂಟು ಜನ ಸದಸ್ಯರು. ಅಂತವರು ಹಿಸೆಗಾಗಿ ಮನೆಯಲ್ಲಿ ಕಿತ್ತಾಡಿದರೆ ಅದು ಜಗತ್ತಿಗೆ ತಿಳಿಯುವುದಿಲ್ಲವೇ.. ಆದರೆ ಎಲ್ಲವುಗಳಿಗೂ ದುಬಾಯ್ ರಾಜುವೇ ಮೂಲ ಎಂದು ಗೂಬೆ ಕೂರಿಸಲು ಆತನ ದುರ್ಗುಣವೇ ಕಾರಣ.
           ತನ್ನೂರಿನಲ್ಲಿ ಸರ್ಕಾರ ಯಾವುದೇ ಕಾಮಗಾರಿಗಳನ್ನು ಕೈಗೊಳ್ಳಲಿ ಅದರಲ್ಲಿ ಮೂಗು ತೂರಿಸುವುದರಲ್ಲಿ ದುಬಾಯಿರಾಜು ಶತಸಿದ್ಧ. ಕಾಮಗಾರಿಗಳಲ್ಲಿ ಹುಳುಕು ಹುಡುಕುವ ದುಬಾಯಿ ರಾಜು ತಾನು ಅದನ್ನು ಜಗತ್ತಿನ ಎದುರು ಇಡುವ ದುಸ್ಸಾಹಸಕ್ಕೆ ಮುಂದಾಗುವುದಿಲ್ಲ. ತನ್ನೂರಿನ ಇತರರ ಬಳಿ ಹೇಳಿಕೊಂಡು ನೀನು ಆ ಕುರಿತು ಮಾತನಾಡು ಅದು ಸರಿಯಿಲ್ಲ, ನೀನು ಈ ಕುರಿತು ಮಾತನಾಡು ಇದು ಸರಿಯಿಲ್ಲ ಎಂದು ಹೇಳುವ ಮೂಲಕ ಯೋಜನೆ ವಿರುದ್ಧ ಮಾತನಾಡುವಂತೆ ಮಾಡುತ್ತಾನೆ. ದುಬಾಯಿ ರಾಜುವಿನ ಮಾತು ಕಟ್ಟಿಕೊಂಡು ಆ ವ್ಯಕ್ತಿ ಮಾತನಾಡಿದ ಎಂದರೆ ದುಬಾಯಿ ರಾಜುವೇ ಮುಂದೆ ನಿಂತುಕೊಂಡು `ಊರಿನ ಅಭಿವೃದ್ಧಿಗೆ ಎದುರು ಮಾತನಾಡುತ್ತಿದ್ದಾನೆ. ಊರಿನ ಅಭಿವೃದ್ಧಿ ಕಂಡರೆ ಆಗುವುದಿಲ್ಲ. ಇವನದ್ದು ಯಾವಾಗಲೂ ಹೀಗೆಯೇ ವಿರೋಧ ಮಾಡುವ ಸ್ವಭಾವ..' ಎನ್ನುವ ಮೂಲಕ ಉಲ್ಟಾ ಹೊಡೆಯುವ ಮೂಲಕ ಹಲವರ ದ್ವೇಷವನ್ನೂ ಕಟ್ಟಿಕೊಂಡಿದ್ದಾನೆ.
            ಇತ್ತೀಚಗೆ ಒಂದು ದೊಡ್ಡ ಘಟನೆ ಜರುಗಿದೆ. ಅದೇನೆಂದರೆ ದುಬಾಯಿ ರಾಜುವಿನ ಮದುವೆ. ಆತನ ಊರನ್ನೂ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ದುಬಾಯ್ ರಾಜುವಿನ ಮದುವೆ ಬಹುದೊಡ್ಡ ಸುದ್ದಿ. ಮದುವೆಯಾದ ನಂತರ ಆತನ ಹಲವು ನಡವಳಿಗೆಳು ಸರಿಯಾಗಬಹುದು ಎಂದು ಪುರಜನರು ಭಾವಿಸಿದ್ದರು. ಆದರೆ ಬದಲಾಗಿ ಇನ್ನಷ್ಟು ಉಪದ್ವಾಪಿಯಾಗಿ ಬದಲಾಗಿರುವುದು ದುರಂತದ ಸಂಗತಿಯೆನ್ನಬಹುದು. ಮೊದಲು ತನಗೊಬ್ಬನಿಗೆ ಎಂದುಕೊಂಡಿದ್ದ ದುಬಾಯಿ ರಾಜು ಇದೀಗ ತನ್ನ ಹಾಗೂ ತನ್ನ ಪತ್ನಿಗೆ ಎನ್ನುವುದು ಒಳ್ಳೆಯ ಸಂಗತಿಯಾದರೂ ಇದಕ್ಕಾಗಿ ಅಡ್ಡದಾರಿಯನ್ನು ಹಿಡಿದಿರುವುದು ಬೇಸರದ ಸಂಗತಿಯೆನ್ನಬಹುದು. ಈ ಕಾರಣದಿಂದಲೇ ಇತ್ತೀಚಿನ ದಿನಗಳಲ್ಲಿ ಪಕ್ಕದ ಮನೆಯ ಮಾವಿನ ಮರದ ಹಣ್ಣುಗಳು, ಹಲಸಿನ ಹಣ್ಣುಗಳು, ಪೇರಲ, ತರಕಾರಿಗಳು ಸೇರಿದಂತೆ ಬಹು ಅಮೂಲ್ಯ ವಸ್ತುಗಳೆಲ್ಲ ಇದ್ದಕ್ಕಿದ್ದಂತೆ ಕಾಣೆಯಾಗುತ್ತಿದೆ. ಈ ಕಾರಣಕ್ಕಾಗಿ ದುಬಾಯಿ ರಾಜು ಮತ್ತೊಮ್ಮೆ ತರಾಟೆಯನ್ನು ಎದುರಿಸಬೇಕಾಗಿ ಬಂದಿದ್ದೂ ಇದೆ. ಯಥಾ ಪ್ರಕಾರ ನಾನವನಲ್ಲ ಎಂದು ಹೇಳಿದ ದುಬಾಯ್ ರಾಜು ನೀವು ಕಂಡಿದ್ದೀರಾ..? ದಾಖಲೆಯಿದ್ದರೆ ಕೊಡಿ ಎನ್ನುವ ಮೂಲಕ ಹೊಸ ವರಸೆಯನ್ನು ಶುರು ಮಾಡಿಕೊಂಡಿದ್ದರ ಹಿಂದೆ ಹೆಂಡಿತ ಕೈವಾಡವನ್ನೂ ಸಂಶಯಿಸುವವರಿದ್ದಾರೆ.
          ಇಂತಿಪ್ಪ ದುಬಾಯಿ ರಾಜು ತನಗಷ್ಟೇ ಅಲ್ಲದೇ ಇತರರಿಗೂ ಹೊರೆಯಾಗಿ, ಪರಾವಲಂಬಿಯಾಗಿ, ಅವರಿವರಿಗೆ ಕಾಟಕೊಡುತ್ತಿರುವ ಸುದ್ದಿ ಹಳೆಯದಾಗುತ್ತಿದೆ. ತಾನು ದುಬಾಯಿಗೆ ಹೋಗಿದ್ದೆ ಎನ್ನುವ ವಿಷಯ ಬಹುಶಃ ಇದೀಗ ಅವನಿಗೂ ನೆನಪಿಲ್ಲವೇನೋ. ಸ್ಥಳೀಯ ರಾಜಕಾರಣದಲ್ಲಿ ತೀವ್ರ ಆಸಕ್ತಿಯನ್ನು ಹೊಂದಿರುವ ದುಬಾಯಿ ರಾಜು ಮುಂದಿನ ದಿನಗಳಲ್ಲಿ ಪಂಚಾಯ್ತಿಯ ಚುನಾವಣೆಗೂ ನಿಲ್ಲಬಹುದು ಎನ್ನುವ ಮಾತುಗಳು ಕೇಳಿಬರುತ್ತಲಿವೆ. ಹೀಗಾದರೆ ದೇವರೇ ಗತಿ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ಮುಂದಿನದನ್ನು ಕಾದು ನೋಡಬೇಕಾಗಿದೆ.