Saturday, January 18, 2014

ನಿನ್ನ ಸನಿಹ

ನಿನ್ನ ಸನಿಹವೆನ್ನ ಮನದ
ದುಗುಡ ದೂರ ಮಾಡಿದೆ |
ನಿನ್ನ ಪ್ರೀತಿಯೆನ್ನ ಎದೆಯ
ಬಯಕೆ ನೂರು ಎಂದಿದೆ ||


ನೀನು ಜೊತೆಗೆ ನಿಂತರಾಯ್ತು
ಮನದ ಹರುಷ ರಿಂಗಣ |
ನಿನ್ನ ಪ್ರೀತಿಯಿಂದಲೆನ್ನ
ಮನದಿ ಅರ್ಥ ಸಿಂಚನ ||


ಮನದ ಬಯಕೆ ನಿನ್ನ ಬಯಸಿ
ಪ್ರೀತಿ ಸೊಗಕೆ ಕಾದಿದೆ|
ನೀನು ನನ್ನ ಜೀವ ಬಿಂದು
ಹಗಲಿರುಳು ನಿನ್ನ ನೆನೆದಿದೆ ||

(ಇದನ್ನು ಬರೆದಿದ್ದು ದಂಟಕಲ್ಲಿನಲ್ಲಿ 23-12-2006ರಲ್ಲಿ)

Friday, January 17, 2014

ಬೆಂಗಾಲಿ ಸುಂದರಿ-2

              ವಿನಯಚಂದ್ರನ ಅಪ್ಪ ಶಿವರಾಮ ಹೆಗಡೆ ಸಣ್ಣ ಸಾಮಾನ್ಯ ಮನುಷ್ಯನಲ್ಲ. ಪಿರ್ತಾರ್ಜಿತವಾಗಿ ಬಂದ 8 ಎಕರೆ ತೋಟ ತೋಟಕ್ಕೆ ಎಕರೆಗೆ 9 ಎಕರೆಯಂತೆ ಬೆಟ್ಟ, ವರ್ಷಕ್ಕೆ ಎರಡು ಬೆಳೆ ಬೆಳೆಯುವ ಮೂರೆಕರೆ ಗದ್ದೆಯಿತ್ತು. ಇಷ್ಟೆಲ್ಲ ಇದೆ ಎಂದಾದ ಮೇಲೆ ಶಿವರಾಮ ಹೆಗಡೆ ಸಣ್ಣ ಹಿಡುವಳಿದಾರ ಎಂದು ಕರೆದರೆ ತಪ್ಪಾಗುತ್ತದೆ. ಸುತ್ತಮುತ್ತಲ ಊರುಗಳಲ್ಲಿ ಅವರನ್ನು ದೊಡ್ಡ ಹಿಡುವಳಿದಾರ ಎಂದು ಕರೆಯುವ ಬದಲು ಶಿವರಾಮ ಹೆಗಡೇರು ಎಂದೇ ಕರೆಯಲಾಗುತ್ತದೆ. ಜಮೀನ್ದಾರ ಎಂದ ಮೇಲೆ ಅದಕ್ಕೆ ತಕ್ಕಂತೆ ಗತ್ತು ಗಾಂಭೀರ್ಯವನ್ನು ತೋರಿಸದೇ ಇರಲಾದೀತೆ? ಹೆಗಡೇರು ಎನ್ನಿಸಿಕೊಂಡ ಕಾರಣಕ್ಕೆ ತಮ್ಮ ಭಾಗದಲ್ಲಿ ಹಲವು ಮೊದಲುಗಳನ್ನು ಶುರುಮಾಡಿದ ಕೀರ್ತಿಯೂ ಶಿವರಾಮ ಹೆಗಡೆಯವರದ್ದೇ ಎಂದರೆ ತಪ್ಪಲ್ಲ ಬಿಡಿ.
               ತಮ್ಮೂರ ಫಾಸಲೆಯಲ್ಲಿ ಮೊಟ್ಟಮೊದಲು ಎಸ್ಸೆಎಎಲ್ಸಿಯ ನಂತರದ ತರಗತಿಯಲ್ಲಿ ಓದಿದ್ದೆಂದರೆ ಅದು ಶಿವರಾಮ ಹೆಗಡೇರೇ ಸೈ. ಊರಿನವರಿಗೆ ಹಾಗೂ ಸುತ್ತಮುತ್ತಲ ಮಂದಿಗೆ ಅದೇ ಕಾರಣಕ್ಕೆ ಶಿವರಾಮ ಹೆಗಡೆಯವರೆಂದರೆ ಆ ದಿನಗಳಿಂದಲೇ ಭಯ, ಗೌರವ ಹಾಗೂ ಕುತೂಹಲ. ತಮ್ಮೂರು ಮುಖ್ಯ ಹೆದ್ದಾರಿಯಿಂದ ನಾಲ್ಕೈದು ಕಿ.ಮಿ ದೂರವಿದ್ದರೂ ಪ್ರತಿದಿನ ಮನೆಗೆ ಎರಡಾದರೂ ಪೇಪರ್ ಬರುತ್ತಿತ್ತು. ಬೆಳಿಗ್ಗೆಯೇ ಮೇನ್ ರೋಡಿನಲ್ಲಿರುವ ಏಜೆಂಟನ ಕೈಯಿಂದ ಹೊರಡುವ ಪತ್ರಿಕೆ ಹೆಗಡೆಯವರ ಮನೆಗೆ ಮದ್ಯಾಹ್ನ ತಲುಪುವ ವೇಳೆಗೆ ದಾರಿ ಮಧ್ಯದಲ್ಲಿ ಕನಿಷ್ಟ ಐದು ಜನರ ಕೈದಾಟಿ ಬರುತ್ತಿದ್ದುದು ವಿಶೇಷ. ಪೇಪರ್ ಏಜೆಂಟ ವಿಷ್ಣುರಾವ್ ನಿಂದ ಸ್ಥಳೀಯ ಶಾಲೆಗೆ ಬರುವ ಭಂಡಾರ್ಕರ್ ಮಾಸ್ತರ್ರು, ಅಲ್ಲಿಂದ ಹತ್ತಿರದ ಮನೆಗೆ ಬರುವ ನಾಗವೇಣಿ ಅವಳ ಕೈದಾಟಿ ತಿಮ್ಮ ಹಾಗೂ ಕೊನೆಯದಾಗಿ ಶಿವರಾಮ ಹೆಗಡೆಯವರ ಮನೆಯ ಕೆಲಸದ ಆಳು ರಾಮನ ಮೂಲಕ ಹೆಗಡೆಯವರ ಮನೆಗೆ ಬರುತ್ತಿತ್ತು. ಮಾಸ್ತರ್ರು ಪೇಪರ್ ಓದುತ್ತಿದ್ದರಾದರೂ ಉಳಿದವರು ಅಕ್ಷರ ಕಲಿತಿದ್ದು ಅಷ್ಟಕ್ಕಷ್ಟೆ. ಆ ಕಾರಣದಿಂದ ಮದ್ಯಾಹ್ನ ಸಮಯಕ್ಕಾದರೂ ಪೇಪರ್ ಮನೆಗೆ ಬರುತ್ತಿತ್ತು. ಎಲ್ಲರೂ ಓದಲು ಕಲಿತಿದ್ದರೆ ಬಹುಶಃ ಪತ್ರಿಕೆ ಮರುದಿನ ಬಂದು ಮುಟ್ಟುತ್ತಿತ್ತೋ ಏನೋ ಎಂದು ಆಗಾಗ ಹೆಗಡೆಯವರು ಹೇಳುತ್ತಿದ್ದ ಮಾತು ಸುಳ್ಳಲ್ಲ ಬಿಡಿ.
                ಬೆಳಿಗ್ಗೆ ಮುಂಚೆ ಹೆಗಡೆಯವರ ಮನೆಗೆ ಕೆಲಸಕ್ಕೆ ಬರುತ್ತಿದ್ದ ರಾಮ ಮಧ್ಯದಲ್ಲಿ ಕೆಲಸವನ್ನು ಬಿಟ್ಟು ಪೇಪರ್ ತರಲಿಕ್ಕೆಂದೇ ತಿಮ್ಮನ ಮನೆಯ ಬಳಿ ಹೋಗುತ್ತಿದ್ದುದು ಪ್ರತಿದಿನದ ವಿಶೇಷ ಕಾಯಕ. ಪೇಪರ್ ಮನೆಗೆ ಬಂದ ತಕ್ಷಣ ಮನೆಯಲ್ಲಿದ್ದಾಗಲೆಲ್ಲ ಮೊಟ್ಟ ಮೊದಲು ಓದುತ್ತಿದ್ದುದು ವಿನಯಚಂದ್ರನೇ. ಆಮೇಲೆ ಉಳಿದವರಿಗೆ ಸಿಗುತ್ತಿತ್ತು.
               `ಯಲ್ಲಾ ಬಿಟ್ಟು ಮಗ ಭಂಗಿ ನೆಟ್ಟ ಹೇಳವಾಂಗೆ ಆಗ್ತಾ ಹೆಂಗೆ ನೀ ಕಬ್ಬಡ್ಡಿ ಆಡದು..?' ಎಂದು ಆಗಾಗ ಮಗನನ್ನು ಬಯ್ಯದಿದ್ದರೆ ಶಿವರಾಮ ಹೆಗಡೆಯವರಿಗೆ ಏನನ್ನೋ ಕಳೆದುಕೊಂಡಂತಹ ಅನುಭವ. ಕೊನೆ ಕೊನೆಗಂತೂ ಮಗನ ಕಬ್ಬಡ್ಡಿ ಗೀಳಿನಿಂದ ಸುಬ್ಬುಲಕ್ಷ್ಮಿಯವರ ಬೆಳಗಿನ ಸುಪ್ರಭಾತವಾದರೂ ತಪ್ಪುತ್ತದೆ, ಶಿವರಾಮ ಹೆಗಡೆಯವರು ಮಗನನ್ನು ಬಯ್ಯುವುದು ತಪ್ಪುವುದಿಲ್ಲ ಎನ್ನುವಂತಾಗಿತ್ತು.
              ಮನೆಗೆ ಬರುತ್ತಿದ್ದ ಆಳುಮಕ್ಕಳು `ಸಣ್ ಹೆಗ್ಡೇರೆ.. ಇವತ್ ನೆಲೆಮಾಂವಿನಾಗೆ ಕಬ್ಬಡ್ಡಿ ಟೂರ್ನಮೆಂಟೈತಿ.. ನಿಮಗೆ ಸುದ್ದಿ ಗೊತ್ತಾಗ್ಲನ್ರಾ?' ಎಂದೋ ಅಥವಾ ಇನ್ನೆಲ್ಲೋ ಕಬ್ಬಡ್ಡಿ ಪಂದ್ಯಾವಳಿ ನಡೆಯುತ್ತಿದ್ದ ಸುದ್ದಿ ಹೇಳಿದರೋ ಮುಗಿದೇ ಹೋಯಿತು. ಆ ದಿನವಿಡಿ ಶಿವರಾಮ ಹೆಗಡೆಯವರ ಸಹಸ್ರನಾಮಾರ್ಚನೆ ಕಟ್ಟಿಟ್ಟದ್ದೇ ಎನ್ನಬಹುದು. ಈ ಕಾರಣದಿಂದಲೇ ವಿನಯಚಂದ್ರ ಕಬ್ಬಡ್ಡಿ ಪಂದ್ಯಾವಳಿಯ ಸುದ್ದಿಯಿದ್ದರೆ ತನ್ನೊಬ್ಬನ ಎದುರಿಗೆ ಹೇಳಬೇಕು ಎಂದು ತಾಕೀತು ಮಾಡಿಬಿಟ್ಟಿದ್ದ.
             `ಈಗ ಹಿಂಗೆಳ್ತೆ ನೀನು.. ಆನೂ ಒಂದಿನ ವರ್ಡ್ ಫೇಮಸ್ ಆಗ್ತಿ.. ಆವಾಗ ಆನು ಮಾತಾಡ್ತ್ನಾ...' ಎಂದು ತಂದೆಯ ಬೈಗುಳಕ್ಕೆ ಉತ್ತರ ನೀಡುವ ಮಗ. ಮಗನ ಉತ್ತರ ಬರುವುದರೊಳಗಾಗಿ ಶಿವರಾಮ ಹೆಗಡೆ `ನೀ ಕಬ್ಬಡ್ಡಿ ಆಡದೇ ಚೊಲೋದೋ ಮಾರಾಯಾ.. ಎಲ್ಲಾ ಹುಡುಗರ ಹಾಂಗೆ ಕ್ರಿಕೆಟ್ ಆಡ್ತಿಲ್ಯಲಾ.. ಸಾಕು ಬಿಡು..' ಎಂದಾಗ ಮಾತ್ರ ವಿನಯಚಂದ್ರ ಮುಗುಳುನಕ್ಕು ಸುಮ್ಮನಾಗುತ್ತಿದ್ದ. ಕಬ್ಬಡ್ಡಿ ಆಟ ಕ್ರಿಕೆಟಿಗಿಂತ ಒಳ್ಳೆಯದು ಎನ್ನುವ ಭಾವನೆ ತಂದೆಯ ಮನಸ್ಸಿನಲ್ಲಿದೆಯಲ್ಲ ಭಗವಂತಾ.. ಅಷ್ಟು ಸಾಕು ಎಂದುಕೊಳ್ಳುತ್ತಿದ್ದ ವಿನಯಚಂದ್ರ.
               ಮಗ ಇಂತದ್ದೇ ಓದಲಿ, ಇಂತದ್ದನ್ನೇ ಮಾಡಲಿ ಎಂದು ಯಾವತ್ತೂ ಶಿವರಾಮ ಹೆಗಡೆಯವರು ಒತ್ತಾಯ ಮಾಡಿಲ್ಲ, ಒತ್ತಡವನ್ನೂ ಹೇರಿಲ್ಲ. ಮಗ ಏನು ಮಾಡಿದರೂ ಒಳ್ಳೆಯದನ್ನೇ ಮಾಡುತ್ತಾನೆ. ಆತನಿಗೆ ಉತ್ತಮ ದಾರಿಯಲ್ಲಿ ಹೋಗುವ ಸಂಸ್ಕಾರವನ್ನೇ ಧಾರೆಯೆರೆದು ನೀಡಿದ್ದೇನೆ ಎನ್ನುವ ಆತ್ಮವಿಶ್ವಾಸದ ಕಾರಣ ಶಿವರಾಮ ಹೆಗಡೆಯವರು ಆತನ ಓದಿನ ಕುರಿತು ಅಥವಾ ಕಬ್ಬಡ್ಡಿ ಕೋಚಿಂಗಿನ ಕುರಿತು ಅಥವಾ ಕಬ್ಬಡ್ಡಿಗಾಗಿ ಬೇರೆ ಬೇರೆ ರಾಜ್ಯಗಳಿಗೆ ತೆರಳುವ ಕುರಿತು ಯಾವುದೇ ತಡೆಯೊಡ್ಡಿಲ್ಲ. ಅಪ್ಪಯ್ಯ ಸಿಕ್ಕಾಪಟ್ಟೆ ಸ್ವಾತಂತ್ರ್ಯ ಕೊಟ್ಟಿದ್ದ ಹೇಳಿ ವಿನಯಚಂದ್ರನೂ ಅಂಕೆ ಮೀರಿಲ್ಲ. ಓದಿನಲ್ಲೂ ಹಿಂದೆ ಬಿಳಲಿಲ್ಲ. ಎಲ್ಲ ತಂದೆ-ತಾಯಿಗಳೂ ಮಕ್ಕಳು ಮೊದಲ ರಾಂಕೇ ಬರಬೇಕು, ಶೆ.95ರ ಮೇಲೆ ಅಂಕಗಳು ಬರಲೇಬೇಕು ಎಂದು ಹೇಳಿದ್ದರೆ ವಿನಯಚಂದ್ರನ ಪಾಡು ಇಷ್ಟು ಹೊತ್ತಿಗೆ ಏನಾಗಿಬಿಡುತ್ತಿತ್ತೋ. ಶಿವರಾಮ ಹೆಗಡೆಯವರು ಅಂತಹ ತಪ್ಪನ್ನು ಮಾಡಿರಲಿಲ್ಲ. ವಿನಯಚಂದ್ರ ಕೂಡ ಓದಿನಲ್ಲಿ ಟಠಡಢಣ ಆಗಲಿಲ್ಲ.
                ಮಗನ ಎದುರು ಆತ ಕಬ್ಬಡ್ಡಿ ಆಟ ಆಡುವುದನ್ನು ವಿರೋಧ ಮಾಡಿದಂತೆ ಮಾತನಾಡುವ ಶಿವರಾಮ ಹೆಗಡೆಯವರು ಆತ ಕಬ್ಬಡ್ಡಿಯಿಂದಲೇ ಒಂದೊಂದೇ ಮೆಟ್ಟಿಲು ಹತ್ತಿ ಗೆಲುವನ್ನು ಸಾಧಿಸುತ್ತ ಹೋದುದನ್ನು ಕಂಡು ಒಳಗೊಳಗೆ ಖುಷಿಪಟ್ಟರೂ ಹೊರಗೆ ತೋರಿಸಿಕೊಡಲಿಲ್ಲ. ಇಂತಹ ಶಿವರಾಮ ಹೆಗಡೆಯವರು ಮಗ ನ್ಯಾಷನಲ್ ಟೀಮಿಗೆ ಆಯ್ಕೆಯಾಗಿದ್ದಾನೆ. ವಿಶ್ವಕಪ್ಪಿನಲ್ಲಿ ಆಡುತ್ತಾನೆ ಎಂದಾಗ ಒಂದು ಸಾರಿ ಖುಷಿಯಿಂದ ತುಂಡುಗುಪ್ಪಳ ಹೊಡೆದಿದ್ದರು. ಆದರೆ ವಿಶ್ವಕಪ್ ಪಂದ್ಯಾವಳಿ ಬಾಂಗ್ಲಾದೇಶದಲ್ಲಿ ನಡೆಯುತ್ತಿದೆ ಎಂದಾಗ ಮಾತ್ರ ಕಸಿವಿಸಿಯನ್ನು ಅನುಭವಿಸಿದ್ದರು.
              `ಅಲ್ದಾ ತಮಾ.. ನೀ ವಿಶ್ವಕಪ್ಪಿಗೆ ಆಯ್ಕೆಯಾಗಿದ್ದು ಖುಷಿನೇಯಾ.. ಆದರೆ ಬಾಂಗ್ಲಾದೇಶದಲ್ಲಿ ವಿಶ್ವಕಪ್ ಆಕ್ತಡಾ ಮಾರಾಯಾ.. ಅಲ್ಲಿಗೆ ಹೋಗಿ ಹೆಂಗೆ ಆಡತ್ಯಾ..?' ಎಂದು ಮಗನ ಎದುರು ಹೇಳಿಯೂ ಹೇಳಿದ್ದರು. ಆಗ ಮಾತ್ರ ವಿನಯಚಂದ್ರ ಅಪ್ಪನ ಮಾತಿಗೆ ಬೆರಗಾಗಿದ್ದ.
             `ಅಲ್ದಾ ಅಪ್ಪಯ್ಯಾ.. ಆನು ಕಬ್ಬಡ್ಡಿಗೆ ಹೇಳಿ ಸುಮಾರ್ ಸಾರಿ ಮನಿಂದ ಬೇರೆ ಬೇರೆ ಕಡಿಗೆ ಹೋಜಿ. ಈಗ ಮೂರು ವರ್ಷದಿಂದ ರಾಜ್ಯದ ತಂಡದ ಪರವಾಗಿ ಆಡ್ತಾ ಇದ್ದಿ. ಮೊದಲನೇ ವರ್ಷ ಮಹಾರಾಷ್ಟ್ರದ ಕೊಲ್ಲಾಪುರಕ್ಕೆ ಆಮೇಲೆ ಭೋಪಾಲಕ್ಕೆ ಈ ವರ್ಷ ಓರಿಸ್ಸಾದ ಕಟಕ್ ಗೆ ಹೋಗಿ ಬಂಜನಿಲ್ಯನಾ.. ಈಗ್ಲೂ ಹಂಗೇಯಾ.. ಬಾಂಗ್ಲಾದೇಶಕ್ಕೆ ಹೋಗಿ ಬಂದರಾತು..' ಎಂದು ಉತ್ತರಿಸಿದ.
           ಹೇಳುವುದಕ್ಕೇನೋ ಹೇಳಿದ ವಿನಯಚಂದ್ರ. ಅಸಲಿಗೆ ಅಲ್ಲಿಗೆ ಹೋದರೆ ಹೇಗೋ ಏನೋ ಎನ್ನುವ ಭಾವನೆ ಕಾಡದೇ ಇರಲಿಲ್ಲ.
             `ತಮಾ.. ಇಲ್ಲೀವರೆಗೆ ಭಾರತದ್ದೇ ಬೇರೆ ಬೇರೆ ರಾಜ್ಯಗಳಿಗೆ ನೀನು ಹೋಗಿದ್ದೆ ಹಂಗಾಗಿ ಎಂತಾ ಸಮಸ್ಯೆ ಆಜಿಲ್ಯಾ.. ಆದರೆ ಇದು ಬಾಂಗ್ಲಾದೇಶ.. ಹೆಸರು ಚೊಲೋ ಇದ್ದು. ಆದರೆ ಈಗಿತ್ಲಾಗಿ ಸಿಕ್ಕಾಪಟ್ಟೆ ಗಲಾಟೆ ನಡೀತಾ ಇದ್ದಡಾ ಹೇಳಿ ಸುದ್ದಿ.. ಎಂತಾದ್ರೂ ಹೆಚ್ಚೂಕಡಿಮೆ ಆದರೆ ಯಂತಾ ಮಾಡವಾ..?' ಎಂದು ತಮ್ಮ ಮನದಾಳದ ಭೀತಿಯನ್ನು ಮಗನ ಮುಂದಿಟ್ಟರು.
             `ಅಯ್ಯೋ ಮಾರಾಯಾ.. ಅಂತಾ ನಕ್ಸಲೈಟ್ ಹಾವಳಿ ಏರಿಯಾ ಓರಿಸ್ಸಾ, ಛತ್ತೀಸಗಢಕ್ಕೇ ಹೋಗಿ ಬಂಜಿ.. ಇದೆಂತದಾ.. ಎಂತದ್ದೂ ಆಕ್ತಿಲ್ಲೆ.. ನೀ ತಲೆಬಿಸಿ ಮಾಡ್ಕ್ಯಳಡಾ' ಎಂದು ತಂದೆಯ ಮಾತನ್ನು ಹಾರಿಸಿದ್ದ ವಿನಯಚಂದ್ರ.
              ಮಗ ಹೀಗೆಂದಿದ್ದರೂ ಮನದಾಳದಲ್ಲಿ ಭೀತಿಯನ್ನು ಹೊಂದಿದ್ದ ಶಿವರಾಮ ಹೆಗಡೆಯವರು ತಮ್ಮ ಬಳಗದಲ್ಲೆಲ್ಲ ಬಾಂಗ್ಲಾದೇಶದ ಕುರಿತು, ಈಗ ಅಲ್ಲಿನ ಪರಿಸ್ಥತಿಯ ಬಗ್ಗೆ ಮಾಹಿತಿ ಕಲೆಹಾಕತೊಡಗಿದ್ದರು. ಮಗ ಬಾಂಗ್ಲಾದೇಶಕ್ಕೆ ಹೊರಡುವ ಮುನ್ನ ಸಾಧ್ಯವಾದಷ್ಟು ತಾನು ಮಾಹಿತಿ ನೀಡಬಹುದು ಎನ್ನುವ ಆಲೋಚನೆ ಅವರದ್ದು. ಶಿವರಾಮ ಹೆಗಡೆಯವರ ಮಿತ್ರಮಂಡಳಿಗೂ ಬಾಂಗ್ಲಾದೇಶದ ಬಗ್ಗೆ ಗೊತ್ತಿದ್ದುದು ಅಷ್ಟಕ್ಕಷ್ಟೇ ಆಗಿತ್ತು. ಹಿಂದೊಮ್ಮೆ ಭಾರತದ್ದೇ ಆದ ರಾಷ್ಟ್ರ. ಭಾರತದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಬ್ರಿಟೀಷರ ವಿರುದ್ಧ ಸೋತ ರಾಜ ಬಾಂಗ್ಲಾದವನು. ಬ್ರಿಟೀಷರ ಆಳ್ವಿಕೆಗೆ ಮೊದಲ ಬಾರಿಗೆ ಒಳಪಟ್ಟ ಪ್ರದೇಶ. ಸುಭಾಷಚಂದ್ರಭೋಸರು ಓಡಾಡಿದ ಸ್ಥಳ. ಸ್ವಾತಂತ್ರ್ಯ ಹೋರಾಟಕ್ಕೆ ಉಗ್ರರೂಪದ ಕೆಚ್ಚು ಹಾಗೂ ಕಿಚ್ಚನ್ನು ನೀಡಿದ ದೇಶ, ಎಲ್ಲಕ್ಕಿಂತ ಹೆಚ್ಚಾಗಿ ಸ್ವಾತಂತ್ರ್ಯ ಬಂದಾಗಿನಿಂದ ಇಲ್ಲಿಯವರೆಗೂ ನಿರಂತರವಾಗಿ ಬಾಂಗ್ಲಾ ನಿರಾಶ್ರಿತರೆಂಬ ಸಮಸ್ಯೆಯನ್ನು ಭಾರತದೊಳಗೆ ತಳ್ಳುತ್ತಿರುವ ರಾಷ್ಟ್ರ ಇತ್ಯಾದಿ ಇತ್ಯಾದಿ ಮಾಹಿತಿಗಳು ಶಿವರಾಮ ಹೆಗಡೆಯವರಿಗೆ ಲಭ್ಯವಾದವು.
                ಮುಸ್ಲಿಂ ರಾಷ್ಟ್ರವಾಗಿದ್ದರೂ ಸಾಕಷ್ಟು ಸಂಖ್ಯೆಯಲ್ಲಿ ಹಿಂದುಗಳಿದ್ದಾರೆ. ಬೆಂಗಾಲಿ ಬಾಬುಗಳಿದ್ದಾರೆ. ಬಿಳಿ ಸೀರೆಯ ಬೆಂಗಾಲಿ ಹೆಂಗಸರಿದ್ದಾರೆ. ಬ್ರಾಹ್ಮಣರೂ ಇದ್ದಾರೆ. ದೇಶವನ್ನು ಆಳುತ್ತಿರುವುದು ಓರ್ವ ಮಹಿಳೆ. ಮಹಿಳೆಯ ವಿರುದ್ಧ ಹೋರಾಡುತ್ತಿರುವಾಕೆಯೂ ಇನ್ನೊಬ್ಬ ಮಹಿಳೆ ಇತ್ಯಾದಿ ಕೌತುಕಭರಿತ ವಿಷಯಗಳೂ ಶಿವರಾಮ ಹೆಗಡೆಯವರ ಬಳಿ ಸಂಗ್ರಹವಾದವು. ಮಗ ಹೊರಡುವ ಮುನ್ನ ಈ ಎಲ್ಲ ವಿಷಯಗಳನ್ನೂ ತಿಳಿಸಬೇಕು ಎನ್ನುವುದು ಅವರ ಬಯಕೆ. ಅದಕ್ಕೆ ಸಾಧ್ಯವಾದ ಮಟ್ಟಿಗೆ ಎಲ್ಲ ವಿವರಗಳನ್ನೂ ಸಂಗ್ರಹಣೆ ಮಾಡತೊಡಗಿದ್ದರು. ಟಿಪ್ಪಣಿಯ ಮೂಲಕ ಬರೆದಿಡಲು ಆರಂಭಿಸಿದ್ದರು.

**
               
                `ಹೋಯ್.. ಏನೂಂದ್ರೆ... ಇಲ್ ಕೇಳಚ.. ವಿನಯಂಗೆ ಸ್ವಲ್ಪ ಹೇಳಿ.. ಆ ಬಾಂಗ್ಲಾದೇಶಕ್ಕೆಲ್ಲಾ ಹೋಪದು ಬ್ಯಾಡಾ ಹೇಳಿ.. ಎಂತಕ್ಕೆ ಬೇಕು ಹೊರ ದೇಶದ ಉಸಾಬರಿ.. ಒಂಚೂರು ಬುದ್ದಿ ಹೇಳಲಾಗ್ತಿಲ್ಯಾ..?' ಎಂಬ ಮಾತು ಕೇಳಿತೆಂದರೆ ಅದು ಶಿವರಾಮ ಹೆಗಡೆಯವರ ಏಕಮಾತ್ರ ಧರ್ಮಪತ್ನಿ ಸುಶೀಲಾ ಎಂದೇ ಹೇಳಬಹುದು.
               ಟಿಪಿಕಲ್ ಹಳ್ಳಿ ಹೆಂಗಸು. ಆಟಿವಿ, ಈಟಿವಿ, ಊಟಿವಿ ಸೇರಿದಂತೆ ಎಲ್ಲಾ ಕನ್ನಡ ಚಾನಲ್ಲುಗಳಲ್ಲಿ ಬರುವ ಒಂದರಿಂದ ಹತ್ತರವರೆಗಿನ ಬಾಗಿಲುಗಳ ಹೆಸರಿನ ಧಾರಾವಾಹಿಗಳ ಪರಮ ಭಕ್ತೆ. ಲಲಿತಾ ಸಹಸ್ರನಾಮ, ಗಣಪತಿ ಉಪನಿಷತ್ತಿನ ಕನ್ನಡ ಅನುವಾದ,  ಸೇರಿದಂತೆ ಹಲವಾರು ಮಂತ್ರಗಳನ್ನು ಪಠಣ ಮಾಡುವ ಮೂಲಕ ದೇವರು ದಿಂಡರನ್ನೂ ಒಲಿಸಿಕೊಂಡಿದ್ದಾಳೆ. ಮಗನೆಂದರೆ ಅಚ್ಚುಮೆಚ್ಚು. ಆಗಾಗ ಮಗನನ್ನು ಗದರಿಸುತ್ತಾಳಾದರೂ ಅದು ಪ್ರೀತಿಯಿಂದಲೇ ಹೊರತು ಮತ್ತಿನ್ಯಾವ ಭಾವದಿಂದಲ್ಲ.
              ಕಬ್ಬಡ್ಡಿ ಆಟದ ಕಡೆಗೆ ವಿನಯಚಂದ್ರ ಹೊರಳಿದಾಗ ಶಿವರಾಮ ಹೆಗಡೆಯವರು ಅದರ ವಿರುದ್ಧ ಮಾತನಾಡಿದರೂ ಸುಶೀಲಾ ಹೆಗಡೆ ಮಾತ್ರ ಆತನ ಬೆನ್ನಿಗೆ ನಿಂತಿದ್ದಳು. `ಕಬ್ಬಡ್ಡಿ ಆಡು ತಮಾ.. ಅವ್ವುಕೆ ಆನು ಹೇಳ್ತಿ..' ಎಂದು ಗ್ರೀನ್ ಸಿಗ್ನಲ್ ನೀಡಿದ್ದೇ ಸುಶೀಲಾ. ಮಗ ಯಾಕೋ ಉದ್ಧಾರವಾಗುವ ಲಕ್ಷಣಗಳು ಕಾಣುತ್ತಿಲ್ಲ ಎಂದು ಶಿವರಾಮ ಹೆಗಡೆಯವರು ಮನಸ್ಸಿನಲ್ಲಿ ಅಂದುಕೊಳ್ಳುತ್ತಿದ್ದ ಹೊತ್ತಿನಲ್ಲಿ ಮಗನ ಗುಣಗಾನ ಮಾಡಿ ಶಿವರಾಮ ಹೆಗಡೆಯವರ ಮನಸ್ಸನ್ನು ಬದಲಾಯಿಸಿದ ಶ್ರೇಯಸ್ಸು ಇವರಿಗೇ ದಕ್ಕಬೇಕು. `ಮಗ ಎಂತಾದ್ರೂ ಆಗಿ ಬದುಕು ಹಾಳ್ ಮಾಡ್ಕ್ಯಂದ್ರೆ ಅದ್ಕೆ ನಿಂದೇ ಜವಾಬ್ದಾರಿ... ನೀ ಇದ್ದೆ ನಿನ್ ಮಗ ಇದ್ದಾ..' ಎಂದು ಹೆಗಡೆಯವರು ಆಗಾಗ ಹೆಂಡತಿಯನ್ನು ಬಯ್ಯುವುದೂ ಇತ್ತು.
               ಮಗ ಬಾಂಗ್ಲಾದೇಶಕ್ಕೆ ಹೋಗುತ್ತಾನೆ ಎಂಬುದು ಸುಶೀಲಾ ಅವರ ಮನಸ್ಸಿನಲ್ಲಿ ಭಯಕ್ಕೆ ಕಾರಣವಾಗಿತ್ತು. ಸದಾ ಒಂದಿಲ್ಲೊಂದು ಅರಾಜಕತೆಯ ಕಾರಣದಿಂದ ಸುದ್ದಿ ಮಾಡುತ್ತಿರುವ ಬಾಂಗ್ಲಾ ದೇಶದ ಬಗ್ಗೆ ಸುಶೀಲಾ ಹೆಗಡೆಯವರಿಗೆ ಅದ್ಯಾರು ಹೇಳಿದ್ದರೂ ಅಥವಾ ಅದ್ಯಾವುದೋ ಕ್ರೈಂ, ಡೈರಿಯ ಸ್ಟೋರಿ ತಿಳಿಸಿತ್ತೋ ಏನೋ.. ಬಾಂಗ್ಲಾದೇಶಕ್ಕೆ ಮಗ ಹೋಗುವುದನ್ನು ವಿರೋಧ ಮಾಡಲಾರಂಭಿಸಿದ್ದರು. ಮಗನ ಬಳಿ ಹಲವಾರು ಬಾರಿ `ತಮಾ.. ಹೋಪದೆ ಇಪ್ಪಲೆ ಆಕ್ತಿಲ್ಯನಾ.. ಅಲ್ಲಿ ಪರಿಸ್ಥಿತಿ ಸರಿ ಇಲ್ಯಡಾ ಮಾರಾಯಾ.. ಎಂತಾದ್ರೂ ಹೆಚ್ಚೂ ಕಮ್ಮಿ ಆದ್ರೆ ಎಂತಾ ಮಾಡವಾ..' ಎಂದು ಅಲವತ್ತುಕೊಂಡಿದ್ದರೂ ಮಗ ಅದನ್ನು ಕಿವಿಗೆ ಹಾಕಿಕೊಂಡಿರಲಿಲ್ಲ. ಅದಕ್ಕೆಂದೇ ತಮ್ಮ ಯಜಮಾನರ ಬಳಿ ಕೊಟ್ಟ ಕೊನೆಯದಾಗಿ ಬುದ್ಧಿ ಹೇಳಬೇಕೆಂದು ದುಂಬಾಲುಬಿದ್ದಿದರು.
                ಆದರೆ ಪ್ರತಿ ಸಾರಿ ಮಗ ಕಬ್ಬಡ್ಡಿ ಆಡುವುದರ ವಿರುದ್ಧ ಕೊಂಕು ಮಾತನಾಡುತ್ತಿದ್ದ ಶಿವರಾಮ ಹೆಗಡೆಯವರು ಈ ಸಾರಿ ಮಗನನ್ನು ಖುಷಿಯಿಂದ ಕಳಿಸಿಕೊಡಲು ಮುಂದಾಗಿದ್ದನ್ನು ನೋಡಿ ಸುಶೀಲಮ್ಮ ಅಚ್ಚರಿಯನ್ನು ಪಟ್ಟಿದ್ದರು.

(ಮುಂದುವರಿಯುತ್ತದೆ..)

Thursday, January 16, 2014

ಬೆಂಗಾಲಿ ಸುಂದರಿ-1


ಹೃದಯವೆ ಬಯಸಿದೆ ನಿನ್ನನೆ..
ತೆರೆಯುತ ಕನಸಿನ ಕಣ್ಣನೇ...
ಮೊಬೈಲ್ ರಿಂಗಣಿಸತೊಡಗಿತು. ಎಂತಕ್ಕಾದ್ರೂ ಬಂತೋ ಪೋನು ಎಂದುಕೊಂಡೇ ತುಸು ಆಲಸ್ಯದಿಂದ ಪೋನೆತ್ತಿಕೊಂಡ ವಿನಯಚಂದ್ರ.
             `ಗುಡ್ ನ್ಯೂಸ್ ವಿನು... ಕೊನೆಗೂ ನೀನು ಕಬ್ಬಡ್ಡಿ ವಿಶ್ವ ಕಪ್ ನ್ಯಾಷನಲ್ ಟೀಮಿಗೆ ಸೆಲೆಕ್ಟಾದೆ.. ಕಂಗ್ರಾಟ್ಸ್ ದೋಸ್ತಾ..ನಂಗಂತೂ ಬಹಳ ಖುಷಿ ಆಗ್ತಾ ಇದೆ' ಎಂದು ಮಿತ್ರ ಸಂಜಯ ಪೋನ್ ಮಾಡಿದ ತಕ್ಷಣ ವಿನಯಚಂದ್ರಂಗೆ ಒಂದ್ ಸಾರಿ ಕಾಲು ನೆಲದ್ಮೇಲೆ ನಿಲ್ಲಲಿಲ್ಲ. ರಾಶಿ ದಿನದ ಕನಸು ನನಸಾದ ಹಾಗೆ ಮನಸ್ಸಿನಲ್ಲಿ ಹೊಯ್ದಾಟ.
             `ಹೇಯ್ ವಿನು.. ಎಲ್ಲೋದ್ಯಾ..? ಅಲ್ಲೇ ಇದ್ಯನಾ.. ಮಾತಾಡಾ..ಈ ಸಾರಿ ವಿಶ್ವ ಕಪ್ ಬಾಂಗ್ಲಾ ದೇಶದಲ್ಲಿದ್ದು.. ಅದಾರು ಗೊತ್ತಿದ್ದಾ ಇಲ್ಯಾ ನಿಂಗೆ? ಮುಂದಿನವಾರ ಅಲ್ಲಿಗೆ ಹೊರಡವು. ತಯಾರಾಗು ಬೇಗ.. ಕನಸು ಕಂಡಿದ್ದು ಸಾಕು..' ಎಂದು ಸಂಜಯ ಮತ್ತೊಂದ್ ಸಾರಿ ಅಂದಾಗ್ಲೇ ವಿನಯಚಂದ್ರ ಕನಸಿನಲೋಕದಿಂದ ವಾಸ್ತವಕ್ಕೆ ಬಂದಿದ್ದು.. ಮತ್ತೊಮ್ಮೆ ತನ್ನನ್ನು ತಾನೇ ಚಿವುಟಿಕೊಂಡು ಇದು ಕನಸಲ್ಲ ಎನ್ನುವುದನ್ನು ಖಚಿತಪಡಿಸಿಕೊಂಡ. ಮನಸ್ಸಿನಲ್ಲಿ ಸಂತೋಷದ ಅಲೆ ಉಕ್ಕುಕ್ಕಿ ಬರುತ್ತಿತ್ತು.
            `ಥ್ಯಾಂಕ್ಸಲೆ ದೋಸ್ತಾ..' ಎಂದ ವಿನಯಚಂದ್ರ. ಮನಸ್ಸಿಗೆ ರೆಕ್ಕೆ ಬಂದಿತ್ತು.
             ಹಾಳಾದ ಟಿ.ವಿ ಮಾಧ್ಯಮದವರು ಯಾವಾಗ ನೋಡಿದ್ರೂ ಕ್ರಿಕೆಟ್ ಕ್ರಿಕೆಟ್.. ಅದನ್ನು ಬಿಟ್ರೆ ಟೆನ್ನಿಸ್ಸು ಫುಟ್ ಬಾಲ್.. ಅಪರೂಪಕ್ಕೆ  ಹಾಕಿ.. ಅವರಿಗೆಂತಕ್ಕೆ ನಮ್ಮ ದೇಸಿಯ ಕ್ರೀಡೆ ಕಬ್ಬಡ್ಡಿ ಕಾಣತಿಲ್ಯೋ..ನಮ್ಮದೇ ನಾಡಿನ, ಕ್ರಿಕೆಟ್ಟಿಗಿಂತಲೂ ರೋಚಕತೆಯನ್ನು ತಂದುಕೊಡುವ ಕಬ್ಬಡ್ಡಿ ಕುರಿತು ಒಂದೇ ಒಂದು ಸುದ್ದಿನೂ ಹಾಕ್ಕತ್ವಿಲ್ಲೆ.. ಎಂದು ಮಾಧ್ಯಮದವರಿಗೆ ಬೈದುಕೊಂಡ ವಿನಯಚಂದ್ರ. ತಾನು ಕಬ್ಬಡ್ಡಿಯ ವಿಶ್ವಕಪ್ ಟೀಮಿಗೆ ರಾಷ್ಟ್ರೀಯ ತಂಡಕ್ಕೆ ಸೆಲೆಕ್ಟ್ ಆಗಿದ್ದನ್ನೂ ಯಾರೋ ದೋಸ್ತರಿಂದ ತಿಳಕಳ ಹಂಗಾತು ಅನ್ನೋದು ಮುಜುಗರ ತಂದಿತು. ಅದೇ ಆತನ ಸಿಟ್ಟಿಗೆ ಸ್ವಲ್ಪ ಜಾಸ್ತಿ ಉಪ್ಪು-ಖಾರವನ್ನು ಹಾಕಚು ಹೇಳಲಕ್ಕು. `ತಥ್...' ಎಂದುಕೊಂಡ ಮನಸ್ಸಿನಲ್ಲಿಯೇ.
             `ಸಂಜೂ.. ನಿಂಗೆ ಯಾರ್ ಹೇಳಿದ್ವಾ ಮಾರಾಯಾ.. ಆನಂತೂ ಬೆಳಗಿಂದ ಟಿ.ವಿ ಮುಂದೆ ಕುತ್ಗಂಡಿದ್ದಿ.. ಒಂದೇ ಒಂದ್ ಸುದ್ದಿನೂ ಗೊತ್ತಾಜಿಲ್ಲೆ.. ಯಾವಾಗ್ಲೂ ಪೋನ್ ಮಾಡತಾ ಇದ್ದಿದ್ ಚಿದಂಬರ ಸರ್ರೂ ಪೋನ್ ಮಾಡಿದ್ವಿಲ್ಯಲಾ ಇನ್ನೂವಾ.. ಸುಳ್ ಹೇಳಡದಾ.. ಸೀರಿಯಸ್ಸಾಗಿ ಹೇಳಾ ಮಾರಾಯಾ..ಖರೆ ಹೌದನಾ.. ತಮಾಷೆ ಅಲ್ಲ ಹದಾ' ಎಂದ ವಿನಯಚಂದ್ರ. ಗೆಳೆಯ ಹೇಳಿದ ಮಾತನ್ನು ನಂಬಲು ಇನ್ನೂ ಅಳುಕಿತ್ತು ಮನದ ಮೂಲೆಯಲ್ಲಿ.
             `ಥೋ.. ಇಲ್ಲೆಲ್ಲಾ ಎಂತಾ ಜೋಕಾ.. ನಿಜ ಮಾರಾಯಾ.. ಪಕ್ಕಾ ಸುದ್ದಿನೇಯಾ..ನೀನು ಕಬ್ಬಡ್ಡಿ ಟೀಮಿಗೆ ಆಯ್ಕೆಯಾಜೆ. ಹೀಗೆ ಕಬ್ಬಡ್ಡಿ ತಂಡಕ್ಕೆ ಆಯ್ಕೆಯಾದ ಮೊಟ್ಟ ಮೊದಲ ಹವ್ಯಕರವನು ನೀನು.. ಈ ಕಾರಣಕ್ಕೆ ನಮಗೆ ಬಹಳ ಹೆಮ್ಮೆ ಆಗ್ತಾ ಇದ್ದೋ' ಎಂದ ಸಂಜಯ.
             ದೊಡ್ಡ ಚ್ಯಾನಲ್ ರಿಪೋರ್ಟರ್ ಸಂಜಯ. ಅಂವಂಗೆ ಬೇಗ್ನೆ ಸುದ್ದಿ ಗೊತ್ತಾಜಕ್ಕು.. ಅದು ಸತ್ಯನೂ ಆಗಿಕ್ಕು ಅಂದುಕೊಂಡ. `ಮಾರಾಯಾ.. ಎಂತಾದ್ರೂ ಡೀಟೇಲ್ಸ್ ಗೊತ್ತಾದ್ರೆ ಹೇಳಾ..' ಎಂದ..
              `ಯಂಗೆ ಗೊತ್ತಾಗಿದ್ದು ಇಷ್ಟೇಯಾ ನೋಡು.. ಇನ್ 15 ದಿನಕ್ಕೆ ಬಾಂಗ್ಲಾದೇಶದಲ್ಲಿ ಕಬ್ಬಡ್ಡಿ ವಿಶ್ವಕಪ್ಪು. 18 ಟೀಂ ಬತ್ತಾ ಇದ್ದು. ವರ್ಡ್ ಚಾಂಪಿಯನ್ ನಮ್ಮ ಟೀಮಿನ ಸೆಲೆಕ್ಷನ್ನು ಆಜು. ಅದರಲ್ಲಿ ನೀನು ಒಬ್ಬಂವ ಸೆಲೆಕ್ಟ್ ಆದಂವ.. ಹೋಯ್ ಕರ್ನಾಟಕದಿಂದ ಸೆಲೆಕ್ಟ್ ಆದಂವ ನೀನೊಬ್ನೆಯಾ ಮಾರಾಯಾ.. ನಮ್ ಹವ್ಯಕರಲ್ಲಿ ನೀನೆ ಮೊದಲ್ನೇಯವ್ವಾ ನೋಡು.. ಅಂತೂ ವರ್ಡ್ ಕಪ್ಪಿಗೆ ನ್ಯಾಶನಲ್ ಟೀಮಿಗೆ ಸೆಲೆಕ್ಟ್ ಆಗೋ ಮೂಲಕ ಭಾರತದ ಪರ ಆಡವ್ವು ಹೇಳೋ ನಿನ್ ಕನಸು ನನಸು ಮಾಡ್ಕ್ಯತ್ತಾ ಇದ್ದೆ.. ಯಂಗಂತೂ ರಾಶಿ ಖುಷಿ ಆಗ್ತಾ ಇದ್ದು ಮಾರಾಯಾ.. ಆನಂತೂ ನಿನ್ ಬಗ್ಗೆ.. ನಿನ್ ಸಾಧನೆ ಬಗ್ಗೆ ದೊಡ್ ಸುದ್ದಿ ಬರೆಯವ್ವು ಹೇಳಿ ಮಾಡ್ಕತ್ತಾ ಇದ್ದಿ ಡಿಟೇಲ್ಸ್ ಕೊಡಾ..' ಎಂದ ಸಂಜಯ.
               `ಡೀಟೇಲ್ಸನಾ.. ನಿಂಗೊತ್ತಿಲ್ದೆ ಇದ್ದಿದ್ದು ಯಂತಿದ್ದಾ.. ಮಣ್ಣಾಂಗಟ್ಟಿ.. ನೀನೆ ಬರಕಳಾ' ಎಂದ ವಿನಯಚಂದ್ರ
                `ಥೋ ಹಂಗಲ್ದಾ ಮಾರಾಯಾ.. ಆನು ನೀನು ದೋಸ್ತ ಇದ್ದಿಕ್ಕು. ನಿನ್ ಬಗ್ಗೆ ಹೆಚ್ಚು ಕಡಿಮೆ ಎಲ್ಲಾ ವಿಷಯವೂ ಗೊತ್ತಿದ್ದು.. ಗೊತ್ತಿದ್ದು ಹೇಳಿ ಆ ಬರದ್ದಿ ಅಂದ್ಕ.. ನಿನ್ ಬಾಯಿಂದ ಕೇಳದಾಂಗೆ ಆಕ್ತನಾ.. ಹೇಳಾ..ನೀನು ಯಂಗೆ ಪರಿಚಯ ಇದ್ದ ಕಾಲದ್ದೆಲ್ಲಾ ಗೊತ್ತಿದ್ದು. ಆದರೂ ವಿಶೇಷತೆಗಳು ಅಂತ ಇನ್ನೇನಾದ್ರೂ ಇದ್ದಿಕ್ಕಲಾ' ಎಂದ..
               ಅಷ್ಟರಲ್ಲಿ ಡ್ಯೂಯೆಲ್ ಸಿಮ್ಮಿನ ವಿನಯಚಂದ್ರನ ಪೋನು ಕಿರಿ ಕಿರಿ ಮಾಡಲೆ ಹಣಕಚು. ಯಾರೋ ಪೋನ್ ಮಾಡಿದ್ದ ಅಂದಕಂಡ ವಿನಯಚಂದ್ರ..
               `ದೋಸ್ತಾ.. ಇನ್ನೊಂದು ಪೋನು ಬತ್ತಾ ಇದ್ದಲೆ.. ಆನು ಯೆಲ್ಲಾ ರೆಡಿ ಮಾಡಿಟ್ಕಂಡು ನಿಂಗೆ ಪೋನ್ ಮಾಡ್ತ್ನಾ..' ಎಂದು ಪೋನ್ ಇಡ್ತಾ ಇದ್ದಾಂಗೆ ವಿನಯಚಂದ್ರನ ಮೊಬೈಲು ಮತ್ತೊಮ್ಮೆ ರಿಂಗಣ. ನೋಡಿದ್ರೆ ಚಿದಂಬರ ಸರ್ ಮಾಡಿದ್ದರು. ಅವರ ಪೋನ್ ಎತ್ಕಂಡು ಮಾತಾಡಲು ಹಿಡದ್ರೆ ಅವರೂ ಇದೇ ವಿಷಯ ಹೇಳಲೆ ಹಣಕಿದ್ರು. ಸಂಜಯ ಹೇಳಿದ್ ವಿಷಯಾನೇ ಅವರೂ ಹೇಳಿದ್ರು. ಅದನ್ನು ಕೇಳಿದ ವಿನಯ ಚಂದ್ರ `ಯಂಗೆ ವಿಷಯ ಗೊತ್ತಾಜು.. ಸಂಜಯ ಹೇಳಿದ್ದ ಹಿಂಗಿಂಗೆ ಅಂದ.. ಖುಷಿಯಾದ ಚಿದಂಬರ ಮಾಸ್ತರ್ರು `ವಿನಯಾ.. ಅಂತೂ ನಿನ್ ಶ್ರಮಕ್ಕೆ ಬೆಲೆ ಬಂತಲೆ.. ಒಳ್ಳೇ ರೀತಿ ಹೆಸರು ಮಾಡವ್ವು....ನಿನ್ನ ಮೇಲೆ ಬಹಳ ನಿರೀಕ್ಷೆ ಇದೆ. ಅದನ್ನು ಹುಸಿ ಮಾಡಬೇಡ ಮಾರಾಯಾ' ಅಂದರು.
              `ಸರ್ ನೀವು ನಂಗೆ ಕೋಚಿಂಗ್ ಕೊಟ್ಟಿದ್ದು.. ಅದನ್ನು ಮರಿತ್ನಿಲ್ಲೆ ಸರ್.. ನಿಮ್ಮಿಂದ್ಲೆ ಈ ಹಂತಕ್ಕೆ ಬಂದಿದ್ದು.. ಯನ್ನ ಈ ಸಾಧನೆ ಹಿಂದೆ ಕಾಂಬದು ನಿಮ್ಮ ಬೆವರು..ನೀವಿಲ್ಲದಿದ್ರೆ ನಾನು ಈ ಮಟ್ಟಕ್ಕೆ ಏರುತ್ತಿರಲಿಲ್ಲವೇನೋ.. ನಿಮಗೆ ನಾನೆಷ್ಟು ಧನ್ಯವಾದ ಹೇಳಿದ್ರೂ ಕಮ್ಮಿನೇಯಾ' ಎಂದ. ಕೋಚ್ ಚಿದಂಬರ ಅವ್ರು ಒಂದು ಸಾರಿ ಸುಮ್ಮಗಾದ್ರು. ನಿಡಿದಾದ ಉಸಿರು ಬಿಟ್ಟ ಶಬ್ದ ಮೊಬೈಲಿನಲ್ಲಿ ಕೇಳಚು. ಮನದಾಳದ ಭಾವವೊಂದು ನಿಟ್ಟುಸಿರಿನ ಮೂಲಕ ಹೊರಬಂದ ಹಾಗಿತ್ತು.
            `ಸರ್.. ಇಲ್ಲೀತನಕ ಆನು ರಾಜ್ಯದ ಟೀಮಲ್ಲಿ ಆಡಿದಿದ್ದಿ.. ಈಗ ಬಹಳ ಟೆನ್ಶನ್ ಆಗ್ತಾ ಇದ್ದು..ಹೆಂಗೋ ಏನೋ.. ಎಕ್ ದಮ್ ನ್ಯಾಷನಲ್ ಟೀಮಿಗೆ ಸೆಲೆಕ್ಷನ್ನಾಗಿದ್ದು, ಅದೂ ವಿಶ್ವಕಪ್ಪಿಗೆ...ಮನದಲ್ಲಿ ಒಂಥಡಾ ಢಕ ಢುಕಿ..' ಎಂದ ವಿನಯಚಂದ್ರ..
             `ಥೋ.. ನಿಂಗೆ ಹಂಗೆಂತಕ್ಕೆ ಆಗವಾ..? ಇಲ್ಲೀವರೆಗೆ ಹೆಂಗೆ ಆಡಿದ್ಯಾ ಮುಂದೂ ಹಂಗೆ ಆಡು.. ಯಶಸ್ಸು ನಿನ್ ಜೊತೆಗೆ ಬತ್ತು. ತಲೆಬಿಸಿ ಮಾಡ್ಕ್ಯಳಡಾ ಮಾರಾಯಾ.. ಏನೇ ಆದರೂ ನಿನ್ನ ಮೇಲಿನ ನಂಬಿಕೆ ನೀನು ಕಳಕಳಡ. ನಮ್ಮ ನಮ್ಮ ಮೇಲೆ ನಮಗಿರುವ ನಂಬಿಕೆಯೇ ನಮ್ಮನ್ನು ಸದಾ ಕಾಪಾಡ್ತು. ನೀನೂ ನಂಬಿಕೆಯನ್ನು ಎಂದಿಗೂ ಕಳೆದುಕೊಳ್ಳದೇ ಮುನ್ನುಗ್ಗು. ಅಷ್ಟಾದರೆ ಗೆಲುವು ಸದಾ ನಿನ್ನ ಬೆನ್ನಿಗೆ ಬರ್ತು' ಎಂದ ಚಿದಂಬರ್ ಅವರು `ನೋಡಾ.. ಟೀಂ ಇಂಡಿಯಾಕ್ಕೆ ಪ್ರಕಾಶ ಜಾಧವ್ ಅಂತ ಕೋಚ್ ಇದ್ರು. ಯನ್ನ ದೋಸ್ತನೂ ಹೌದು.. ಅಗ್ ದಿ ಒಳ್ಳೆ ಮನುಷ್ಯಾ.. ಆನು ಅಂವ ಒಟ್ಟಿಗೆ ರೈಲ್ವೇಸ್ ಪರ ಕಬ್ಬಡ್ಡಿ ಆಡಿದಿದ್ಯ.. ಅಂವನ ಹತ್ರ ನಿನ್ ಬಗ್ಗೆ ಹೇಳಿರ್ತಿ.. ಅಂವ ಎಲ್ಲಾ ನೋಡ್ಕತ್ತಾ.. ನಿಂಗೆ ಎಂತಾ ಸಮಸ್ಯೆ ಆಕ್ತಿಲ್ಯಾ.. ನಿಂಗೆ ತರಬೇತಿಗೆ ಸಮಸ್ಯೆ ಆಗ್ತಿಲ್ಲೆ. ಚೊಲೋ ಆಡು..' ಎಂದು ಪೋನಿಟ್ಟರು.
              ವಿನಯಚಂದ್ರನ ಮನಸ್ಸಿನಲ್ಲಿ ಖುಷಿಯ ಉಬ್ಬರ ಕಾಣ್ತಾ ಇತ್ತು. ಚಿದಂಬರ ಸರ್ ಪೋನ್ ಇಡ್ತಾ ಇದ್ದಾಂಗೆ ಸುಮಾರಸ್ಟ್ ಪೋನ್ ಬಪ್ಪಲೆ ಹಿಡತ್ತು ವಿನಯ ಚಂದ್ರಂಗೆ.. ಎಲ್ಲಾವ್ಕೂ ಉತ್ತರ ಕೊಡುವಷ್ಟರಲ್ಲಿ ವಿನಯಚಂದ್ರಂಗೆ ಬೆವರು ಇಳಿಯಲೆ ಹತ್ತಿತ್ತು. ಆದರೂ ನ್ಯಾಷನಲ್ ಟೀಮಿಗೆ ಸೆಲೆಕ್ಟ್ ಆಗಿದ್ ಖುಷಿ ಬೆವರನ್ನು ಮರೆಸಿ ಹಾಕಿತ್ತು. ಲೆಕ್ಖವಿಲ್ಲದಷ್ಟು ಕರೆಗಳು, ನೂರಾರು ಮೆಸೇಜುಗಳು.. ಒಟ್ನಲ್ಲಿ ವಿನಯಚಂದ್ರ ಪುಲ್ ಹ್ಯಾಪಿ.
                  ವಿನಯ ಚಂದ್ರ ನ್ಯಾಷನಲ್ ಟೀಮಿಗೆ ಸೆಲೆಕ್ಟ್ ಆಗುವ ಮುನ್ನ ನಡೆದ ಹಾದಿ ಇದ್ದಲಿ ಅದು ಬಹಳ ಶ್ರಮದಿಂದ ಕೂಡಿದ್ದು. ಉತ್ತರ ಕನ್ನಡದ ಮಲೆನಾಡಿನ ಹಳ್ಳಿ ಮೂಲೆಯೊಂದರ ಹುಡುಗ ವಿನಯಚಂದ್ರ. ಮನೆಲ್ಲಿ ಸಿಕ್ಕಾಪಟ್ಟೆ ಅನುಕೂಲಸ್ತರಾಗಿರುವ ಕಾರಣ ದುಡ್ಡು ಕಾಸಿಗೆ ತೊಂದರೆ ಇರಲಿಲ್ಲ. ಹಾಗಂತ ವಿನಯಚಂದ್ರ ಕೇಳಿದ್ದು, ಬಯಸಿದ್ದೆಲ್ಲವೂ ಸುಲಭಕ್ಕೆ ಸಿಗುತ್ತಲೂ ಇರಲಿಲ್ಲ. ವಿನಯಚಂದ್ರನೂ ಸಣ್ಣಕ್ಕಿದ್ದಾಗಿನಿಂದಲೂ ಚೂಟಿಯ ಹುಡುಗ. ಅವನ ಓರಗೆ ಹುಡುಗರು ಕ್ರಿಕೆಟ್ ಆಡಕತ್ತ ಬೆಳದಾಂಗೆ ಇಂವ ಕಬ್ಬಡ್ಡಿ ಆಡಕತ್ತ ಬೆಳೆದಿದ್ದ. ಹವ್ಯಕರ ಹುಡುಗ ಆಗಿದ್ರಿಂದ ಅವನ ವಯಸ್ಸಿನ ಹವ್ಯಕ ಹುಡುಗರೆಲ್ಲ `ಅಲ್ದಾ ವಿನಯಾ.. ನೀ ಹವ್ಯಕ ಆಕ್ಯಂಡು ಅದೆಂತದಾ ಇತರೇರು ಆಡೋ ಆಟ ಆಡ್ತೆ.. ಕ್ರಿಕೆಟ್ಟಾಡಲೆ ಬಾರಾ..' ಎಂದು ಛೇಡಿಸುತ್ತಿದ್ದರು.
                `ಯಾರು ಹೇಳಿದ್ದು ಕಬ್ಬಡ್ಡಿ ನಾವ್ ಆಡದಲ್ಲ ಹೇಳಿ..? ಇಂತವ್ವೇ ಆಡದು ಹೇಳಿ ಎಲ್ಲಾದ್ರೂ ಬರಕಂಡು ಇದ್ದಾ.. ಯಂಗೆ ಕಬ್ಬಡ್ಡಿ ಇಷ್ಟ.. ನಿಂಗಕ್ಕಿಗೆ ಕ್ರಿಕೆಟ್ ಆಗಿಕ್ಕು.. ಯಂಗೆ ಕ್ರಿಕೆಟ್ ಆಡಲೆ ಬನ್ನಿ ಹೇಳಿ ನಿಂಗವ್ವು ಒತ್ತಾಯ ಮಾಡಡಿ..' ಹೇಳಿ ಕೂಗಿ ಅವರನ್ನೆಲ್ಲ ಸುಮ್ಮನಿರಿಸಿದ್ದ ವಿನಯಚಂದ್ರ. ದೇಹದಲ್ಲಿ ದಾಢಸಿಯಿದ್ದ ಕಾರಣ ಆತನ ಮಾತಿಗೆ ಯಾರೂ ಎದುರು ಆಡುತ್ತಿರಲಿಲ್ಲ. ವಿನಯಚಂದ್ರ ಎದುರಿಗೆ ಇರದಿದ್ದಾಗ ಮಾತ್ರ ಎಲ್ಲರೂ ನಕ್ಕವರೇ.
                 ವಿನಯಚಂದ್ರ ಕಬ್ಬಡ್ಡಿಯಲ್ಲೇ ಮುಂದುವರಿದ. ಅವನ ಜೊತೆಗೆ ಬೆಳೆದ ಹುಡುಗರು ಕ್ರಿಕೆಟ್ ಆಡುತ್ತ ಬೆಳೆದರು. ಕಬ್ಬಡ್ಡಿ ಮನಸ್ಥಿತಿಯ ವಿನಯಚಂದ್ರ ಓದೋದ್ರಲ್ಲಿ ಹಿಂದೆಬಿದ್ದ ಅಂದ್ಕಂಬಲೆ ಬತ್ತಿಲ್ಲೆ.. ಓದೋದ್ರಲ್ಲೂ ಆತ ಚೂಟಿ. ಎಲ್ಲರ ಹಾಂಗೆ ತೀರಾ ಮುವತ್ಮೂರ್ ಮೂರಲೆ ಮಾರ್ಕಸ್ ತಗಳದೇ ಇದ್ರೂ 80-85ಕ್ಕಂತೂ ಕಡಿಮೆ ಆಕ್ತಿತ್ತಿಲ್ಲೆ..
                  ಇವನ ವಾರಗೆ ಹುಡುಗರು ಕ್ರಿಕೆಟ್ ಟೀಮಿಗೆ ಸೆಲೆಕ್ಟ್ ಆಪಲೆ ಪಡಿಪಾಟಲು ಪಡ್ತಿದ್ರೆ ಇವರ ಶಾಲೆ ಕಬ್ಬಡ್ಡಿ ಟೀಮಿಗೆ ಇವನೇ ಕ್ಯಾಪ್ಟನ್ನು. ತಾನೇ ಕೋಚ್ ಕೂಡ. ತನ್ನದೇ ಟೀಮ್ ಕಟ್ಟಿಕೊಂಡು ಶಾಲಾ ಕ್ರೀಡಾಕುಟಗಳಲ್ಲಿ ಜಯಭೇರಿ ಭಾರಿಸಿಕೊಂಡು ಬರುತ್ತಿದ್ದ. ಕ್ರಿಕೆಟ್ ಬೆನ್ನೇರಿ ಅತ್ತ ದೊಡ್ಡ ಆಟಗಾರರೂ ಆಗದೇ ಇತ್ತ ಕ್ರಿಕೆಟ್ ಬಿಡಲೂ ಆಗದೇ ಒದ್ದಾಡುತ್ತಿದ್ದರು ವಿನಯಚಂದ್ರನ ಗೆಳೆಯರು. ಆದರೆ ವಿನಯಚಂದ್ರ ಮಾತ್ರ ಕಬ್ಬಡ್ಡಿಯನ್ನು ಜೀವಕ್ಕಿಂತ ಹೆಚ್ಚಾಗಿ ಇಷ್ಟಪಟ್ಟ. ಕಬ್ಬಡ್ಡಿಯ ಕೈಹಿಡಿದಿದ್ದ ವಿನಯಚಂದ್ರನನ್ನು ಕಬ್ಬಡ್ಡಿ ಕೈಬಿಡಲಿಲ್ಲ.
                  ತಮ್ಮೂರ ಫಾಸಲೆಯಲ್ಲಿ ಹೊನಲು ಬೆಳಕಿನ ಕಬ್ಬಡ್ಡಿ ಪಂದ್ಯಾವಳಿಗಳು ನಡೆಯುತ್ತಿದ್ದಾಗಲೆಲ್ಲ ಬೆಳಗಿನವರೆಗೂ ಮೊದಲನೆ ಸಾಲಲ್ಲಿ ಕುಂತ್ಗಂಡು ಎದ್ದು ಬತ್ತಿದ್ದ ವಿನಯಚಂದ್ರ. ಅವಂಗೆ ಅದ್ಯಾವ ಮಾಯೆಯಲ್ಲಿ ಕಬ್ಬಡ್ಡಿ ಚಟ ಅಂಟಿಕೊಂಡಿತ್ತೋ ಏನೋ. ಕಬ್ಬಡ್ಡಿ, ಭಾವಗೀತೆ, ಕುಂಗ್ ಫೂ, ಪುಸ್ತಕ ಓದೋದು, ಹಳೆಯ ಹಾಡುಗಳನ್ನು ಅದರಲ್ಲೂ ಹೆಚ್ಚಾಗಿ ಹಿಂದಿಯ ಮುಖೇಶ್, ರಫಿ, ಮನ್ನಾಡೆ, ಕನ್ನಡದಲ್ಲಿ ಘಂಟಸಾಲ, ಪಿಬಿಶ್ರೀ ಅಂದರೆ ಜೀವ ಬಿಡುವಷ್ಟು ಇಷ್ಟ. ಇವೆಲ್ಲ ಒಂಥರಾ ವಿಚಿತ್ರ ಕಾಂಬಿನೇಷನ್ನಾದರೂ ಚಿಕ್ಕಂದಿನಿಂದ ಹಾಗೆಯೇ ಬೆಳೆದವನು ವಿನಯಚಂದ್ರ. ಅವನ ವಾರಗೆಯ ಹುಡುಗರಲ್ಲಿ ವಿನಯಚಂದ್ರನೆಂದರೆ ವಿಚಿತ್ರ ಜೀವಿ ಎನ್ನುವಂತೆ ಬೆಳೆದಿದ್ದ.
                   ಶಾಲಾಮಟ್ಟದಲ್ಲಿ ಶಾಸ್ತ್ರೀಯವಾಗಿ ಕಬ್ಬಡ್ಡಿ ಆಡಲು ಬರದಿದ್ದರೂ ಇತರರು ಇವನಷ್ಟು ಒಳ್ಳೆಯದಾಗಿ ಆಡದಿದ್ದ ಕಾರಣ ಆ ಮಟ್ಟದಲ್ಲಿ ಇವನದ್ದೇ ಸಾಮ್ರಾಜ್ಯ ಎನ್ನಬಹುದಿತ್ತು. ಆದರೆ ಹೈಸ್ಕೂಲು ಓದಲಿಕ್ಕೆಂದು ವಿನಯಚಂದ್ರನನ್ನು ಆತನ ತಂದೆ ಶಿವರಾಮ ಹೆಗಡೆ ಶಿರಸಿಗೆ ಕಳಿಸಿದಾಗ ತನ್ನ ಜೀವನದ ದಿಕ್ಕು ಬದಲಾಗುತ್ತದೆ ಎಂದು ವಿನಯಚಂದ್ರನಿಗೂ ಗೊತ್ತಿರಲಿಲ್ಲವೇನೋ. ಎಂಟನೇ ಕ್ಲಾಸಿನಲ್ಲಿ ಪೀ ಪಿರಿಯಡ್ಡಿನಲ್ಲಿ ಯಾರ್ಯಾರು ಏನೇನ್ ಆಟ ಆಟ ಆಡ್ತೀರಿ ಎಂದಾಗ ಎದ್ದುನಿಂತು `ಕಬ್ಬಡ್ಡಿ..' ಎಂದಿದ್ದ. ತಕ್ಷಣ ಅಲ್ಲಿದ್ದ ದೈಹಿಕ ಶಿಕ್ಷಕರು ಈತನ ಹೆಸರು ಕೇಳಿದ್ದರು. ಅದಕ್ಕವನು `ವಿನಯಚಂದ್ರ ಶಿವರಾಮ ಹೆಗಡೆ' ಎಂದು ಉತ್ತರಿಸಿದ್ದ. ಹೆಸರು ಕೇಳಿ ಶಿಕ್ಷಕರು ಒಮ್ಮೆ ವಿಸ್ಮಯರಾಗಿದ್ದರೂ `ಲೇ ಪುಳಿಚಾರು.. ನೀ ಏನ್ ಕಬ್ಬಡ್ಡಿ ಆಡ್ತೀಯೋ..' ಎಂದು ವ್ಯಂಗ್ಯವಾಡಿದ್ದರು. ವಿನಯಚಂದ್ರ ನಾಚಿಕೆಯಿಂದ ಸುಮ್ಮನುಳಿದಿದ್ದ.
                 ನಂತರದ ದಿನಗಳಲ್ಲಿ ಯಾವ ಯಾವ ವಿದ್ಯಾರ್ಥಿ ಹೇಗೆ ಆಡುತ್ತಾನೆಂದು ಗಮನಿಸಿದ್ ಹೈಸ್ಕೂಲಿನ ದೈಹಿಕ ಶಿಕ್ಷಕರು ವಿನಯಚಂದ್ರ ನಿಜಕ್ಕೂ ಚನ್ನಾಗಿ ಆಡುತ್ತಾನೆ ಆದರೆ ಇನ್ನಷ್ಟು ಪಳಗಬೇಕಾದ ಅಗತ್ಯವಿದೆ ಎಂಬುದನ್ನು ಮನಗಂಡಿದ್ದರು. ಅದಕ್ಕೆ ತಕ್ಕಂತೆ ತರಬೇತಿ ನೀಡಲು ಮುಂದಾಗಿದ್ದರು. ಒಬ್ಬ ಹೈಗರ ಹುಡುಗ ಕಬ್ಬಡ್ಡಿ ಆಡುತ್ತಾನೆ ಎಂಬುದು ಅವರಿಗೆ ವಿಶೇಷ ಎನ್ನಿಸಿದ್ದರೂ ಆತ ಚನ್ನಾಗಿ ಆಡುತ್ತಿದ್ದ ಕಾರಣ ಪ್ರೋತ್ಸಾಹ ನೀಡಲು ಮುಂದಾಗಿದ್ದರು.  ಹೈಸ್ಕೂಲಿನ ಈ ಶಿಕ್ಷಕರೇ ವಿನಯಚಂದ್ರನನ್ನು ಚಿದಂಬರ್ ಅವರಿಗೆ ಪರಿಚಯ ಮಾಡಿಸಿದ್ದು. ಚಿದಂಬರ ಅವರ ಪರಿಚಯವಾದ ನಂತರ ವಿನಯಚಂದ್ರ ಇಂದಿನವರೆಗೂ ಮುನ್ನಡೆಯುತ್ತಲೇ ಇದ್ದಾನೆ ಎಂದರೂ ತಪ್ಪಾಗಲಿಕ್ಕಿಲ್ಲ.

**

                     ಕೋಚ್ ಚಿದಂಬರ  ಅವರೂ ಕೂಡ ವಿನಯಚಂದ್ರನಂತೆಯೇ ಮಲೆನಾಡಿನವರು. ಮಲೆನಾಡಿನಲ್ಲಿ ಜನಿಸಿ ಹುಬ್ಬಳ್ಳಿಗೆ ಹೋಗಿ ನೆಲೆಸಿದ್ದರು ಚಿದಂಬರ್ ಅವರು. ತಮ್ಮ ಕಾಲದಲ್ಲಿ ಜಿಲ್ಲಾಮಟ್ಟ, ವಲಯಮಟ್ಟ, ರಾಜ್ಯ ಹಾಗೂ ದಕ್ಷಿಣ ಭಾರತ ಮಟ್ಟಗಳಲ್ಲಿ ಆಡಿ ಅನೇಕ ಸಾರಿ ರಾಷ್ಟ್ರೀಯ ತಂಡದ ಬಾಗಿಲು ಬಡಿದಿದ್ದರೂ ಕ್ರೀಡಾಲೋಕದ ರಾಜಕೀಯದ ಕಾರಣ ಇವರಿಗೆ  ಅವಕಾಶ ಲಭ್ಯವಾಗಿರಲಿಲ್ಲ. ಈ ಕೊರಗು ಮರೆಯಬೇಕೆಂಬ ಕಾರಣಕ್ಕಾಗಿಯೇ ಕಬ್ಬಡ್ಡಿ ಕೋಚಿಂಗ್ ಕೊಡುವ ಕಾರ್ಯವನ್ನು ಮಾಡುತ್ತಿದ್ದರು. ಆದರೆ  ವಿನಯಚಂದ್ರ ಸಿಗುವವರೆಗೂ ಅವರ ಕೋಚಿಂಗ್ ಗೆ ತಕ್ಕ ವಿದ್ಯಾರ್ಥಿ ಸಿಕ್ಕೇ ಇರಲಿಲ್ಲ. ವಿನಯಚಂದ್ರ ಸಿಕ್ಕ ನಂತರ ಆತನಿಗೆ ಕಬ್ಬಡ್ಡಿಯ ಎಲ್ಲ ಪಟ್ಟುಗಳನ್ನೂ ಕಲಿಸಿಕೊಟ್ಟಿದ್ದರು. ಅವರ ತರಬೇತಿಯ ಪರಿಣಾಮ ಆತ ಎಲ್ಲ ಕಡೆಗಳಲ್ಲಿಯೂ ಮುನ್ನಡೆದ. ಇದೀಗ ಬಾಂಗ್ಲಾದೇಶಕ್ಕೂ ಹೊರಟಿದ್ದಾನೆ.
                  ಬಾಂಗ್ಲಾದೇಶದಲ್ಲಿ ವಿನಯಚಂದ್ರನಿಗೆ ಹೊಸದೊಂದು ಲೋಕ ಅನಾವರಣಗೊಂಡು ಬದುಕಿನ ಇನ್ನೊಂದು ಮಜಲು ತೆರೆಯಲಿತ್ತು. ಬಾಂಗ್ಲಾದಲ್ಲಿ ನಡೆಯುವ ಕಬ್ಬಡ್ಡಿ ವಿಶ್ವಕಪ್ಪಿಗೆ ತೆರಳಲು ವಿನಯಚಂದ್ರ ತಯಾರಾಗತೊಡಗಿದ್ದ. ಹೊಸ ಕನಸುಗಳು ಆತನಲ್ಲಿ ತುಂಬಿದ್ದವು. ಬಾಂಗ್ಲಾದೇಶ, ಬೆಂಗಾಲಿ ನಾಡು ಆತನನ್ನು ಕೈಬೀಸಿ ಕರೆಯುತ್ತಿತ್ತು.

(ಮುಂದುವರಿಯುತ್ತದೆ..)

Wednesday, January 15, 2014

ತಾಯಿ-ತುತ್ತು

ಅಮ್ಮಾ ನಿನ್ನ ಕೈತುತ್ತು
ನನ್ನ ಮನಕೆ ಸ್ವಾತಿಮುತ್ತು ||

ಹಲವೆಂಟು ಕಷ್ಟಗಳನ್ಹೊತ್ತು
ನೀ ನೀಡಿದ ಸಿಹಿ ತುತ್ತು
ನನ್ನೊಲವ ಜೀವಧಾರೆಗೆ
ಸಿಹಿಮುತ್ತು| ಅದಿರ್ಮುತ್ತು ||

ಒಂಭತ್ತು ತಿಂಗಳು ಹೊತ್ತು
ಮಡಿಲ ನೋವುಂಡು ಹೆತ್ತು
ನೀಡಿರೆ ಕೆನ್ನೆಗೆ ಮುತ್ತು
ಕೈತುತ್ತು| ಪ್ರೀತಿಯಿತ್ತು ||


ಈ ಜೀವ ನಿನ್ನ ಸ್ವತ್ತು
ಜೊತೆಗೆ ನೆತ್ತರ ತರ್ಪಣವಿಟ್ಟು
ನಿನ್ನೆಯ ಋಣ ತೀರಿಸಿರೆ
ಬಾಳಿಗೊಂದು ಸಾರ್ಥಕವಿತ್ತು ||

(ಈ ಕವಿತೆಯನ್ನು 24-01-2006ರಲ್ಲಿ ದಂಟಕಲ್ಲಿನಲ್ಲಿ ಬರೆದಿದ್ದೇನೆ)


Monday, January 13, 2014

ಕಾಡುಕೋಣದೊಡನೆ ಮುಖಾಮುಖಿ

(ನಾನು ತೆಗೆದ ಪೋಟೋ ಬ್ಲರ್ರಾದ ಕಾರಣ ಸಾಂದರ್ಭಿಕ ಚಿತ್ರ ಹಾಕಿದ್ದೇನೆ.)
ಉಫ್....

ನಿನ್ನೆ ರಾತ್ರಿ ಮನೆಯ ಕಡೆಗೆ ಹೊರಟಿದ್ದೆ.
ನಮ್ಮೂರ ದಾರಿ ಅಂಕುಡೊಂಕು.. ಗುಡ್ಡ ಹತ್ತಿಳಿದು ಸಾಗಬೇಕು..
ಮನೆಯಿನ್ನೇನು ಒಂದು ಕಿ.ಮಿ ದೂರವಿದೆ ಎನ್ನುವಾಗ ರಸ್ತೆಯಲ್ಲಿ ಒಂದಿಷ್ಟು ದನಗಳು ನಿಂತಿವೆ.
ಮೂರ್ನಾಲ್ಕು ರಸ್ತೆಯ ಪಾರ್ಶ್ವದಲ್ಲಿ ಮೇಯುತ್ತ ನಿಂತಿದ್ದವು.
ಹತ್ತಿರ ಹತ್ತಿರ ನಮ್ಮ ಮನೆಯ ಜೆರ್ಸಿ ದನದಷ್ಟು ದೊಡ್ಡವು.
ದನಗಳು ಕಳ್ ಮೇಯಲು ಬರುವುದು ಸಾಮಾನ್ಯ ಎಂದುಕೊಂಡು ಮುಂದಕ್ಕೆ ಹೋಗಲು ಅನುವಾದೆ.
ರಸ್ತೆಯ ಪಕ್ಕದ ಮಟ್ಟಿಯಲ್ಲಿ ಅದೆಲ್ಲಿತ್ತೋ.. ಒಂದು ದೈತ್ಯ ಕಾಡುಕೋಣ ಸರಕ್ಕನೆ ರಸ್ತೆಯ ಮೇಲೆ ಬಂದು ನಿಂತುಕೊಂಡಿತು..
ಬೈಕಿಗೆ ಸರಕ್ಕನೆ ಬ್ರೇಕ್ ಹಾಕಿದೆ.
ದನಗಳು ಹಾಗೂ ಕಾಡುಕೋಣ ಇದೆಂತಾ ನಮೂನಿ ಅಂದುಕೊಂಡೆ.
ಸರಿಯಾಗಿ ದಿಟ್ಟಿಸಿದಾ ಅವು ದನಗಳಲ್ಲ.. ಕಾಡೆಮ್ಮೆಕರುಗಳು..
ಐದಾರಿದ್ದವೇನೋ.. ಚಿಕ್ಕವು..

ಅವುಗಳಿಗೆ ಡಾನ್ ಎಂಬಂತೆ ಅನಾಮತ್ತು 10 ಅಡಿ ಎತ್ತರದ ದೈತ್ಯ ಕಾಡುಕೋಣ ರಸ್ತೆಯ ನಡುಮಧ್ಯದಲ್ಲಿ ನಿಂತುಕೊಂಡಿತ್ತು.
ನನಗೆ ಒಮ್ಮೆ ಕೈಕಾಲು ನಡುಕ ಆರಂಭವಾಯಿತಾದರೂ ಕಾಡೆಮ್ಮೆ ಎಂತದ್ದೂ ಮಾಡುವುದಿಲ್ಲ ಎನ್ನುವ ಹುಂಭ ಧೈರ್ಯ.
ಕಾಡುಕೋಣದ ಕೊಬ್ಬಿನ ಚರ್ಮದ ವಾಸನೆ ಮೂಗಿಗೆ ಅಡರುವಷ್ಟು ಹತ್ತಿರದಲ್ಲಿ ನಾನಿದ್ದೇನೆ.
ಒಂದಿಪ್ಪತ್ತು ಮೀಟರ್ ಇರಬಹುದು.
ತುರ್ತಾಗಿ ಮನೆ ಸೇರಿಕೊಳ್ಳುವ ಅವಸರ ನನಗಿತ್ತು.. 
ನಾನು ಮನೆಗೆ ಹೋಗೋಣ ಎಂದುಕೊಂಡರೆ ಕಾಡುಕೊಣ ದಾರಿಬಿಟ್ಟು ಇಳಿಯಲಿಲ್ಲ..
ನನ್ನನ್ನೇ ನೋಡಲಾರಂಭ ಮಾಡಿತ್ತು..
ತನ್ನ ಮರಿಗಳಿಗೆ ಇಂವ ಇನಾದರೂ ಮಾಡಿಬಿಟ್ಟಾನು ಎನ್ನುವ ಭಯವಿತ್ತೇನೋ.
ಮುಂದಿನ ಕಾಲಿನಿಂದ ನೆಲವನ್ನು ಕೆರೆಯಲಾರಂಭಿಸಿತು..
`ಅಯ್ಯೋ ದೇವ್ರೆ.. ಗ್ಯಾರಂಟಿ ಸತ್ತೆ..ಹ್ಯಾಂಗಂದ್ರೂ ಕಾಡುಕೋಣ ನನ್ನ ಮೇಲೆ ದಾಳಿ ಮಾಡುತ್ತದೆ..'
 `ಕಾಡುಕೋಣದ ದಾಳಿಗೆ ಪತ್ರಕರ್ತ ಬಲಿ' ಎಂಬ ಸುದ್ದಿ ನಾಳೆ ಬರುತ್ತದೆಯೇ ಎಂಬ ದಿಗಿಲೂ ಆಯಿತು..
ನನ್ನ ದುರಾದೃಷ್ಟಕ್ಕೆ ನಮ್ಮೂರಿನಿಂದ ಆರೆಂಟು ಕಿಲೋಮೀಟರ್ ಫಾಸಲೆಯಲ್ಲಿರುವ  ಒಂದು ಊರಿನಲ್ಲಿ ಎರಡು ಮೂರು ದಿನಗಳ ಹಿಂದೆ ತೋಟಕ್ಕೆ ಹೋಗಿದ್ದ ಗೌಡರೊಬ್ಬರ ಮೇಲೆ ಕಾಡುಕೋಣ ಏಕಾಏಕಿ ದಾಳಿ ಮಾಡಿ ಗಾಯಗೊಳಿಸಿದ್ದ ವಿಷಯ ನೆನಪಾಯಿತು. ಆ ಸುದ್ದಿಯನ್ನು ನಾನೇ ಬರೆದಿದ್ದರಿಂದ ಮತ್ತಷ್ಟು ಭೀತಿ ಹೆಚ್ಚಾಯಿತು.
ಸ್ವಲ್ಪ ಹೊತ್ತು ಬಿಟ್ಟರೆ ಪಕ್ಕಕ್ಕೆ ಹೋಗಬಹುದು ಎಂದು ಕಾದೆ.
ಊಹೂಂ ಪಕ್ಕಕ್ಕೆ ಹೋಗಲಿಲ್ಲ..
ಬೈಕಿನ ಹೆಡ್ ಲೈಟನ್ನು ಡಿಪ್-ಡಿಮ್ ಮಾಡಿದೆ..
ಬುಸ್ ಎಂದು ಶ್ವಾಸ ಬಿಟ್ಟಿತು ಕಾಡುಕೋಣ..
ಸುತ್ತಮುತ್ತ ನೋಡಿ ಗಾಡಿಯನ್ನು ಹಿಂದಕ್ಕೆ ತಿರುಗಿಸೋಣ ಎಂದುಕೊಂಡು ನೋಡಿದೆ..
ಯಾಕೋ ಮತ್ತೆ ಧೈರ್ಯ ಸಾಲಲಿಲ್ಲ.
10 ನಿಮಿಷ ಕಳೆದರೂ ಕಾಡೆಮ್ಮೆ ರಸ್ತೆ ಮಧ್ಯವೇ ಇತ್ತು..
ನಾನು ಕ್ಯಾಮರಾ ತೆಗೆಯಲೋ ಬೇಡವೋ ಎಂಬ ದ್ವಂದ್ವದಲ್ಲಿ ಬಿದ್ದೆ..
ರಾತ್ರಿಯಾಗಿದೆ.. ಕ್ಯಾಮರಾ ಫ್ಲಾಷ್ ಲೈಟ್ ಬಿದ್ದು ಎಲ್ಲಿ ಸಿಟ್ಟಿನಿಂದ ಕಾಡುಕೊಣ ನನ್ನ ಮೇಲೆ ಮುಗಿ ಬೀಳಬಹುದೋ ಎಂಬ ಭಯವಾಯಿತು.
ಕ್ಯಾಮರಾ ಕೈಯಲ್ಲಿ ಹಿಡಿದೆನಾದರೂ ಕ್ಲಿಕ್ಕಿಸಲಿಲ್ಲ..
ಅಷ್ಟರಲ್ಲಿ ಕೊಂಚ ಧೈರ್ಯ ಬಂದಂಗಾಯ್ತು..
ಕ್ಯಾಮರಾದ ಫ್ಲಾಷ್ ಆಫ್ ಮಾಡಿ ಕಾಡುಕೋಣದ ಪೋಟೋ ಕ್ಲಿಕ್ಕಿಸಿದೆ..
ಕಾಡುಕೋಣ `ಎಸ್ಟ್ ಪೋಟೋ ಬೇಕಾದ್ರೂ ಹೊಡ್ಕೋ..' ಎಂದು ನನ್ನ ಕ್ಯಾಮರಾಕ್ಕೆ ಪೋಸು ಕೊಟ್ಟಂತೆ ಅನ್ನಿಸಿತು.
ನನಗೆ ಒಮ್ಮೆ ಅಪ್ಪನ ನೆನಪಾಯಿತು.
ರಾತ್ರಿಯ ವೇಳೆ ಪೇಟೆ ಕೆಲಸ ಮುಗಿಸಿ ಬರುವ ಆತನಿಗೆ ನಮ್ಮೂರ ಫಾಸಲೆಯಲ್ಲಿ ಕಾಡೆಮ್ಮೆ ಸಿಗುವುದು ಸರ್ವೇ ಸಾಮಾನ್ಯ..
ಆಗೆಲ್ಲ ಅವುಗಳ ಜೊತೆಗೆ ಮಶ್ಕಿರಿ ಮಾಡುವ ಸ್ವಭಾವ ಆತನದ್ದು. ಕಾಡೆಮ್ಮೆ ಹಿಂಡಿನ ಬಳಿ ಹೋಗಿ ಎಮ್ಮೆಯಂತೆ `ವಾಂಯ್..' ಗುಡುವುದು ಆತನ ಹುಚ್ಚಾಟ.. ಒಂದೆರಡು ಸಾರಿ ಆತ ಹೀಗೆ ಕೂಗಿದ್ದಕ್ಕೆ ಆತನ ಹಿಂದೆಯೇ ನಮ್ಮ ಮನೆಯ ಹತ್ತಿರಕ್ಕೂ ಬಂದಿದ್ದವಂತೆ ಕಾಡುಕೋಣಗಳು..
ನಾನೂ ಸುಮ್ಮನೆ ಅವರ ಬಳಿ `ವಾಂಯ್..' ಅನ್ನಲೇ..? ಎಂದುಕೊಂಡೆ..
`ಯಾರಿಗೆ ಬೇಕು ಉಸಾಬರಿ..' ಎಂದಿತು ಮನಸ್ಸು.. ನಾಲಿಗೆಯಿಂದ ಶಬ್ದ ಹೊರಬರಲಿಲ್ಲ..
ಕಾಡುಕೋಣವನ್ನು ಬಿಟ್ಟು ಅದರ ಜೊತೆಗಿದ್ದ ಮರಿಗಳನ್ನು ನೋಡಿದೆ..
ಐದಾರಿದ್ದವು ಎಂದಿದ್ದೆನಲ್ಲ.. ಹೌದು.. ಮರಿಗಳೇ ನಮ್ಮ ಮನೆಯ ಜರ್ಸಿ ದನದಷ್ಟು ದೊಡ್ಡವಿದ್ದವು..
ಸಾಮಾನ್ಯವಾಗಿ ಇವನ್ನು ಮರಿ ಎನ್ನುವುದು ಕಷ್ಟ. ಆದರೆ ಚಿಕ್ಕ ಚಿಕ್ಕ ಮೊಳಕೆ ಕೋಡಿನ ಕಾರಣದಿಂದ ಅವನ್ನು ಮರಿಗಳು ಎನ್ನಬಹುದು..
ಮನೆಯಲ್ಲಿ ಸಾಕಿದರೆ ಕಾಣುವಂತಹ ಎಲುಬಿನ ಹಂದರವಲ್ಲ. ದಷ್ಟಪುಷ್ಟವಾಗಿದ್ದವು.
`ವಾವ್..' ಎನ್ನೋಣ ಎಂದರೂ ಶಬ್ದ ಹೊರಬರುತ್ತಿಲ್ಲ..
 ಅದರಲ್ಲೊಂದು ಪುಟ್ಟ ಮರಿ.. ಹುಟ್ಟಿ ಆರೇಳು ದಿನಗಳಿರಬಹುದು..
ಬೆಳ್ಳಿಯಂತೆ ಬೆಳ್ಳಗಿತ್ತು..
ಪಾ..ಪ... ಕುಂಟುತ್ತಿತ್ತು..
ಏನಾಗಿರಬಹುದು ಎಂದುಕೊಂಡೆ..
ಬಿದ್ರಕಾನಿನಲ್ಲಿ ಕಾಲು ಒಡೆ ಬಾಯಿ ಒಡೆ ರೋಗಕ್ಕೆ ಯುವ ಕಾಡುಕೋಣವೊಂದು ಸಾವನ್ನಪ್ಪಿರುವ ಸುದ್ದಿ ಬಂದಿತ್ತು ಇದಕ್ಕೂ ಹಂಗೆ ಆಗಿರಬಹುದಾ..? ಎಂದುಕೊಂಡೆ..
ಮರಿಗಳು.. ಓಡುವ ಆಡುವ ಭರದಲ್ಲಿ ಬಿದ್ದು ಪೆಟ್ಟು ಮಾಡಿಕೊಂಡಿರಬಹುದು ಎನ್ನಿಸಿತು..
ಇಷ್ಟು ಹೊತ್ತು ಕಾಡುಕೋಣ ಎಂದರೂ ಅದು ಗಂಡೋ ಹೆಣ್ಣೋ ಗೊತ್ತಾಗಲಿಲ್ಲ ನೋಡಿ..
ಮರಿಗಳಿವೆಯಾದ್ದರಿಂದ ತಾಯಿಯೇ ಇರಬೇಕು ಎಂದುಕೊಂಡೆ..

ಸ್ವಲ್ಪ ಹೊತ್ತಾದ ಮೇಲೆ ಆ ದೈತ್ಯ ಕಾಡೆಮ್ಮೆ/ಕೋಣಕ್ಕೆ ನನ್ನ ಪೆಚ್ಚು ಪೆಚ್ಚು ಮುಖ, ಬೆದರಿದ ರೀತಿ ಕಂಡು ಬೇಜಾರು ಬಂದಿರಬಹುದು ಅಥವಾ ನನ್ನಿಂದ ಯಾವುದೇ ತೊಂದರೆಯೂ ಆಗುವುದಿಲ್ಲ ಎಂಬ ಭರವಸೆಯಿಂದಲೇನೋ ಹಗೂರಕ್ಕೆ ದಾರಿಯಿಂದ ನನ್ನ ಹತ್ತಿರಕ್ಕೆ ಬಂದಿತು. ನನ್ನೆದೆಯಲ್ಲಿ ಮತ್ತೆ ಢವ ಢವ..
ಬೈಕ್ ಸ್ಟಾಂಡ್ ಹಾಕಿ ಓಡಲು ಟ್ರೈಮಾಡುತ್ತಿದ್ದಂತೆ ಕಾಡುಕೋಣ ನಿಧಾನವಾಗಿ ರಸ್ತೆಯಿಂದ ಪಕ್ಕಕ್ಕೆ ಸಾಗಿತು..
ಅದರ ಮರಿಗಳ ಪಂಗಡವೂ ನಿಧಾನಕ್ಕೆ ಸಾಗಿತು..
ಪಕ್ಕಕ್ಕೆ ಹೋದ ಕಾಡೆಮ್ಮೆ ಒಮ್ಮೆ ತಿರುಗಿ ನೋಡಿತು..
ಬಹುಶಃ ನಾನು ಹೋದ್ನಾ ಇಲ್ವಾ ನೋಡಿತೇನೋ..
ಅಥವಾ ಅದರ ಹಿಂದೆ ಬರುತ್ತಿರುವ ಮರಿಗಳೆಗ ತೊಂದರೆ ಕೊಟ್ಟೆನಾ ಎಂದು ನೋಡಿರಲೂಬಹುದು..

ನಾನೊಮ್ಮೆ ನಿರಾಳ..
ಇಷ್ಟು ಮಾಡಿದ್ದೇ ತಡ.. ಬೈಕಿಗೆ ಮತ್ತಷ್ಟು ಎಕ್ಸಲರೇಟ್ ಕೊಟ್ಟು ರೊಂಯ್ ಅನ್ನಿಸಿ ಓಡಿಸಿದೆ..
ಮುಂದಕ್ಕೆ ಹೊದಂತೆ ಹಿಂದಕ್ಕೆಲ್ಲ ಚರಕ್ ಪರಕ್ ಸದ್ದು..
ನನ್ನ ಬೆನ್ನತ್ತಿದೆ ಕಾಡೆಮ್ಮೆ  ಎಂದುಕೊಂಡು ರೊಯ್ಯನೆ ಮುಂದಕ್ಕೆ ಹೋದೆ..
ಹಿಂದಕ್ಕೆ ತಿರುಗಿ ನೋಡುವ ಸಾಹಸವನ್ನೂ ಮಾಡಲಿಲ್ಲ..
ಸುಮಾರು ದೂರ ಬಂದಮೇಲೆ ಇಲ್ಲ.. ಕಾಡೆಮ್ಮೆ ಬೆನ್ನತ್ತಿಲ್ಲ ಎನ್ನಿಸಿತು..
**

ಮನೆಗೆ ಬಂದವನೇ ಮನೆಯಲ್ಲಿ ಅಪ್ಪ-ಅಮ್ಮನ ಬಳಿ ಈ ಸಂಗತಿ ಹೇಳಿದೆ..
ಅಮ್ಮ ಗಾಬರಿಯಾದರು..
ಅಪ್ಪ ಮತ್ತದೇ ಹುಚ್ಚಾಟ.. `ತಮಾ.. ಕಾಡೆಮ್ಮೆ ಎಂತಾ ಮಾಡ್ತಿಲ್ಯಾ..' ಎಂದ..
ನನ್ನ ಪಡಿಪಾಟಲನ್ನು ಹೇಳಿದೆ..
`ಮೊನ್ನೆ ಯಂಗೆ ಕಾನಬೈಕ್ಲು ಹತ್ರ ಸಿಕ್ಕಿತ್ತಾ.. ಒಂದ್ ದೊಡ್ಡದು ಉಳಿದವು ಸಣ್ಣವು.. ಅಲ್ದನಾ..' ಎಂದ..
ಹೌದು ಅಂದೆ
ಹದಾ.. ಇತ್ಲಾಬದಿಗೆ ಇದ್ದ ಹೇಳಾತು..
`ಕಾಡುಕೋಣ ಪಾಪದವ್ವಾ ತಮಾ.. ನಾವೆಂತಾದ್ರೂ ಮಾಡಿದ್ರೆ ಮಾತ್ರ ಅವ್ವು ಮೈಮೇಲೆ ಬರ್ತಾ..
ಮರಿ ಇದ್ದಿದ್ದಕ್ಕೆ ಅದು ರಸ್ತೆಯಲ್ಲಿ ನಿನ್ನ ಅಡ್ಡಗಟ್ಟಿದ್ದು ಕಾಣ್ತು..' ಎಂದು ತನಗೆ ಗೊತ್ತಿದ್ದನ್ನು ಹೇಳಿದ..
`ಆ ಮರಿ ಕಾಲು ಕುಂಟಾಕ್ತಿತ್ತು..' ಎಂದೆ..
`ಕಾಲು-ಬಾಯಿ ರೋಗ ಬಂದಿಕ್ಕಾ.. ಎಂದವನು `ಹುಲಿ ಹಿಡಿದಿಕ್ಕಾ..' ಎಂದ
`ಹುಲಿ..!? ನಮ್ ಬದಿಗೆ ಹುಲಿ ಎಲ್ಲಿದ್ದಾ' ಎಂದೆ..
`ಚಳಿಗಾಲವಲಾ.. ಹುಲಿ ಬತ್ವಾ.. ಕಾಡೆಮ್ಮೆ ಗ್ವಾಲೆ ಇದ್ದು ಹೇಳಾದ್ರೆ ಅದರ ಹಿಂದೆ ಹುಲಿಯೂ ಬರ್ತಾ.. ಹುಲಿಗೂ ಆಹಾರ ಬ್ಯಾಡದಾ.. ಮರಿ ಕಂಡು ಹಿಡಿಯಲೆ ನೋಡಿಕ್ಕು..'ಎಂದ..
ನನಗೆ ಡಿಸ್ಕವರಿ ಚಾನಲ್ ನೆನಪಾಯಿತು..
`ಚಳಿಗಾಲದಲ್ಲಿ ನಮ್ಮೂರ್ ಬದಿಗೆ ಕಾಡುಕೋಣ-ಹುಲಿ ಇರ್ತ್ವಾ.. ನಮ್ಮೂರ ಬ್ಯಾಣದಲ್ಲಿ ಹುಲ್ ಮೆಂದಕಂಡು ಮುತ್ಮುರ್ಡು ಶಾಲೆ ಹತ್ರ ಇಳದು ಗದ್ದೆ ಬೈಲಿಗೆ ಹೋಗಿ ಅಲ್ಲಿ ಹೊಳೆಯ ನೀರು ಕುಡಿತ.. ನಿಂಗೆ ಸಿಕ್ಕಿದ್ದ ಮೇಲೆ ಏಕಾದಶಿ ಗುಡ್ಡ ಹತ್ತಿ ಅಲ್ಲಿಗೇ ಹೋಗ್ತ ನೋಡು..' ಎಂದು ಅಪ್ಪ ಕಾಡುಕೋಣಗಳ ರೊಟೀನು ಕಾರ್ಯಗಳನ್ನು ಹೇಳಿದ.
**

ನನಗೆ ಕಾಡುಕೋಣ ಹೊಸದಲ್ಲ.. ಈ ಹಿಂದೆ ಶಾಲೆಗೆ ಹೋಗುವಾಗಲೆಲ್ಲ.. ಕಾಡುಕೋಣಗಳ ದರ್ಶನವಾಗುತ್ತಿತ್ತು.. ಚುಮು ಚುಮು ಚಳಿಯ ಮಂಜಿನ ಮುಂಜಾನೆಯಲ್ಲಿ ನಮ್ಮೂರಿನ ಪರಮಯ್ಯನ ಬ್ಯಾಣದಲ್ಲಿ ಗಮಯನ ಗ್ವಾಲೆ ಮೇಯುತ್ತಿದ್ದರೆ ನಾನು ಅರ್ಧ ಭಯ ಹಾಗೂ ಅರ್ಧ ಕುತೂಹಲದಿಂದ ನೋಡಿದ್ದೆ. ಅವೂ ಆ ಸಂದರ್ಭದಲ್ಲಿ ಮೇಯುವುದನ್ನು ಬಿಟ್ಟು ನನ್ನನ್ನು ತಲೆಯೆತ್ತಿಕೊಂಡು ನೋಡುತ್ತಿದ್ದವು.. ಗ್ವಾಲೆಯಲ್ಲಿನ ಒಂದೆರಡು ಪುಕ್ಕಲುಗಳು ನನ್ನನ್ನು ಕಂಡಿದ್ದೆ ದಡಕ್ಕನೆ ಓಡಲು ಯತ್ನಿಸುತ್ತಿದ್ದವು.. ಅವನ್ನು ಉಳಿದವುಗಳು ಹಿಂಬಾಲಿಸುತ್ತಿದ್ದವು.
ಆ ನಂತರ ನಾನು ಕಾಲೇಜಿಗೆ ಹೋಗುವಾಗ ಹೊಸದಾಗಿ ಬೈಕು ಕಲಿತಿದ್ದೆ. ದಣಿ ದಣಿ ಡಬ್ಬಲ್ ರೈಡಿಂಗ್ ಮಾಡುವುದು ರೂಢಿಯಾಗಿತ್ತು.. ಒಂದು ಚುನಾವಣೆಯ ಸಂದರ್ಭ ಅಮ್ಮನನ್ನು ಕರೆದುಕೊಂಡು ಚುನಾವಣೆಯಲ್ಲಿ ಮತಹಾಕಿ ವಾಪಾಸಾಗುತ್ತಿದ್ದೆವು.. ನಡುಮದ್ಯಾಹ್ನ.. ಕಾಡೆಮ್ಮೆಗಳ ಹಿಂಡು ನಮಗೆದುರಾಗಿತ್ತು.. ಸರಕ್ಕನೆ ಕಾಣಿಸಿಕೊಂಡ ಕಾಡೆಮ್ಮೆಯಿಂದಾಗಿ ನಮಗರಿವಿಲ್ಲದಂತೆ ಕೂಗು ಹೊರಬಿದ್ದಿತ್ತು.. ನಮ್ಮ ಕೂಗನ್ನು ಕೇಳಿ ಗಮಿಯನ ಗ್ವಾಲೆ ದಿಕ್ಕಾಪಾಲಾಗಿ ಓಡಿ ಹೋಗಿದ್ದವು.. ಆ ಗಡಬಡೆಯಲ್ಲಿ ನಾನು ಬೈಕನ್ನು ಕೈಬಿಟ್ಟು ದಬ್ಬಾಕದಿದ್ದುದೇ ಪುಣ್ಯ..
ಆ ನಂತರದ ದಿನಗಳಲ್ಲಿ ಕಾಡುಕೋಣಗಳನ್ನು ಕಂಡಿದ್ದೆನಾದರೂ ಇಷ್ಟು ಹತ್ತಿರದಲ್ಲಿ ಮುಖಾಮುಖಿಯಾಗಿರಲಿಲ್ಲ. ಕಾಡುಕೋಣದ ಮೈಯ ಕಂಪು ಮೂಗಿಗೆ ತಾಗುವಷ್ಟು ಸನಿಹ..
`ಹ್ವಾ.. ಅದು ಹೊತ್ತಿದ್ರೆ ಯಂತಾ ಮಾಡಕಾಗಿತ್ತಾ..' ಅಪ್ಪನನ್ನು ಕೇಳಿದೆ..
`ತಮಾ.. ಕಾಡೆಮ್ಮೆಯಾಗಲಿ ಅಥವಾ ಇನ್ಯಾವುದೇ ಕಾಡು ಪ್ರಾಣಿಯಾಗಲಿ ಸುಮ್ಮ ಸುಮ್ಮನೆ ದಾಳಿ ಮಾಡುವುದಿಲ್ಲ.. ಅವಕ್ಕೆಂತಾದ್ರೂ ತೊಂದರೆಯಾದರೆ ಅಥವಾ ನಾವು ತೊಂದರೆ ಮಾಡಿದರೆ ಮಾತ್ರ ಅದು ದಾಳಿ ಮಾಡ್ತು.. ಸುಮ್ ಸುಮ್ನೆ ಜಗಳ ಮಾಡವು, ಮೈಮೇಲೆ ಏರಿ ಬರದು ಅಂದ್ರೆ ಮನುಷ್ಟು ಒಬ್ನೇಯಾ ನೋಡು, ಎಂದ ಅಪ್ಪ..
`ನನಗೂ ಹೌದೆನ್ನಿಸಿತು..'
`ಮತ್ತೆ ಸಿಕ್ಕರೆ ಕಾಡೆಮ್ಮೆಯನ್ನು ಮುದ್ದು ಮಾಡಬೇಕು ಎನ್ನಿಸುತ್ತಿದೆ..' ಎಂದೆ..
 ಅಂತ ಹುಚ್ಚಾಟ ಬಿಟ್ ಬಿಡು ಎಂದು ಮನೆಯಲ್ಲಿ ವಾರ್ನಿಂಗ್ ಬೆಲ್ ಬಾರಿಸಿತು..
ಮೊದ ಮೊದಲು ಕಾಣುತ್ತಿದ್ದಂತಹ 10-15 ಕಾಡುಕೋಣಗಳ ಹಿಂಡು ಈಗಿಲ್ಲ.. ಬದಲಾಗಿ 6-7ಕ್ಕೆ ಇಳಿದಿದೆ..
ನಮ್ಮೂರು ಕಡೆಗಳಲ್ಲಿ ಹೇರೂರು, ಹೆಗಡೆಕಟ್ಟಾ, ರೇವಣಕಟ್ಟಾ ಕಡೆಯವರು ಆಗಾಗ ಬೇಟೆ ಬರುವವರುಂಟು.. ಹೀಗೆ ಬರುವವರು ಕಾಡೆಮ್ಮೆ ಹೊಡೆಯುತ್ತಾರೆ ಎಂದು ಕೇಳಿದ್ದೆ.. ಅದಕ್ಕೆ ಅವುಗಳ ಸಂಖ್ಯೆ ಕಡಿಮೆಯಾಗಿದೆ ಎಂದೂ ಕೇಳಿದ್ದೆ..
ಇನ್ನು ಮುಂದೆ ನಮ್ಮ ಭಾಗದಲ್ಲಿ ಬೇಟೆಗೆ ಯಾರಾದರೂ ಬಂದರೆ ಅವರಿಗೆ ತಡೆಯೊಡ್ಡಬೇಕು ಎಂದುಕೊಂಡಿದ್ದೇನೆ..
ಕಾಡೆಮ್ಮೆಯ ಬೇಟೆಯನ್ನು ತಡೆಯಬೇಕು ಎಂಬ ನಿರ್ಧಾರ ನನ್ನದು..
ಆದರೂ ಇನ್ನೊಮ್ಮೆ ಕಾಡುಕೋಣದ ಗ್ವಾಲೆ ಸಿಕ್ಕಾಗ ಅವುಗಳೆದುರು ನಿಂತು `ವಾಂಯ್..' ಅನ್ನಬೇಕು ಎನ್ನಿಸುತ್ತಿದೆ..
ಅದಕ್ಕಾಗಿ ಕಾಯುತ್ತಿದ್ದೇನೆ..!!