Thursday, January 16, 2014

ಬೆಂಗಾಲಿ ಸುಂದರಿ-1


ಹೃದಯವೆ ಬಯಸಿದೆ ನಿನ್ನನೆ..
ತೆರೆಯುತ ಕನಸಿನ ಕಣ್ಣನೇ...
ಮೊಬೈಲ್ ರಿಂಗಣಿಸತೊಡಗಿತು. ಎಂತಕ್ಕಾದ್ರೂ ಬಂತೋ ಪೋನು ಎಂದುಕೊಂಡೇ ತುಸು ಆಲಸ್ಯದಿಂದ ಪೋನೆತ್ತಿಕೊಂಡ ವಿನಯಚಂದ್ರ.
             `ಗುಡ್ ನ್ಯೂಸ್ ವಿನು... ಕೊನೆಗೂ ನೀನು ಕಬ್ಬಡ್ಡಿ ವಿಶ್ವ ಕಪ್ ನ್ಯಾಷನಲ್ ಟೀಮಿಗೆ ಸೆಲೆಕ್ಟಾದೆ.. ಕಂಗ್ರಾಟ್ಸ್ ದೋಸ್ತಾ..ನಂಗಂತೂ ಬಹಳ ಖುಷಿ ಆಗ್ತಾ ಇದೆ' ಎಂದು ಮಿತ್ರ ಸಂಜಯ ಪೋನ್ ಮಾಡಿದ ತಕ್ಷಣ ವಿನಯಚಂದ್ರಂಗೆ ಒಂದ್ ಸಾರಿ ಕಾಲು ನೆಲದ್ಮೇಲೆ ನಿಲ್ಲಲಿಲ್ಲ. ರಾಶಿ ದಿನದ ಕನಸು ನನಸಾದ ಹಾಗೆ ಮನಸ್ಸಿನಲ್ಲಿ ಹೊಯ್ದಾಟ.
             `ಹೇಯ್ ವಿನು.. ಎಲ್ಲೋದ್ಯಾ..? ಅಲ್ಲೇ ಇದ್ಯನಾ.. ಮಾತಾಡಾ..ಈ ಸಾರಿ ವಿಶ್ವ ಕಪ್ ಬಾಂಗ್ಲಾ ದೇಶದಲ್ಲಿದ್ದು.. ಅದಾರು ಗೊತ್ತಿದ್ದಾ ಇಲ್ಯಾ ನಿಂಗೆ? ಮುಂದಿನವಾರ ಅಲ್ಲಿಗೆ ಹೊರಡವು. ತಯಾರಾಗು ಬೇಗ.. ಕನಸು ಕಂಡಿದ್ದು ಸಾಕು..' ಎಂದು ಸಂಜಯ ಮತ್ತೊಂದ್ ಸಾರಿ ಅಂದಾಗ್ಲೇ ವಿನಯಚಂದ್ರ ಕನಸಿನಲೋಕದಿಂದ ವಾಸ್ತವಕ್ಕೆ ಬಂದಿದ್ದು.. ಮತ್ತೊಮ್ಮೆ ತನ್ನನ್ನು ತಾನೇ ಚಿವುಟಿಕೊಂಡು ಇದು ಕನಸಲ್ಲ ಎನ್ನುವುದನ್ನು ಖಚಿತಪಡಿಸಿಕೊಂಡ. ಮನಸ್ಸಿನಲ್ಲಿ ಸಂತೋಷದ ಅಲೆ ಉಕ್ಕುಕ್ಕಿ ಬರುತ್ತಿತ್ತು.
            `ಥ್ಯಾಂಕ್ಸಲೆ ದೋಸ್ತಾ..' ಎಂದ ವಿನಯಚಂದ್ರ. ಮನಸ್ಸಿಗೆ ರೆಕ್ಕೆ ಬಂದಿತ್ತು.
             ಹಾಳಾದ ಟಿ.ವಿ ಮಾಧ್ಯಮದವರು ಯಾವಾಗ ನೋಡಿದ್ರೂ ಕ್ರಿಕೆಟ್ ಕ್ರಿಕೆಟ್.. ಅದನ್ನು ಬಿಟ್ರೆ ಟೆನ್ನಿಸ್ಸು ಫುಟ್ ಬಾಲ್.. ಅಪರೂಪಕ್ಕೆ  ಹಾಕಿ.. ಅವರಿಗೆಂತಕ್ಕೆ ನಮ್ಮ ದೇಸಿಯ ಕ್ರೀಡೆ ಕಬ್ಬಡ್ಡಿ ಕಾಣತಿಲ್ಯೋ..ನಮ್ಮದೇ ನಾಡಿನ, ಕ್ರಿಕೆಟ್ಟಿಗಿಂತಲೂ ರೋಚಕತೆಯನ್ನು ತಂದುಕೊಡುವ ಕಬ್ಬಡ್ಡಿ ಕುರಿತು ಒಂದೇ ಒಂದು ಸುದ್ದಿನೂ ಹಾಕ್ಕತ್ವಿಲ್ಲೆ.. ಎಂದು ಮಾಧ್ಯಮದವರಿಗೆ ಬೈದುಕೊಂಡ ವಿನಯಚಂದ್ರ. ತಾನು ಕಬ್ಬಡ್ಡಿಯ ವಿಶ್ವಕಪ್ ಟೀಮಿಗೆ ರಾಷ್ಟ್ರೀಯ ತಂಡಕ್ಕೆ ಸೆಲೆಕ್ಟ್ ಆಗಿದ್ದನ್ನೂ ಯಾರೋ ದೋಸ್ತರಿಂದ ತಿಳಕಳ ಹಂಗಾತು ಅನ್ನೋದು ಮುಜುಗರ ತಂದಿತು. ಅದೇ ಆತನ ಸಿಟ್ಟಿಗೆ ಸ್ವಲ್ಪ ಜಾಸ್ತಿ ಉಪ್ಪು-ಖಾರವನ್ನು ಹಾಕಚು ಹೇಳಲಕ್ಕು. `ತಥ್...' ಎಂದುಕೊಂಡ ಮನಸ್ಸಿನಲ್ಲಿಯೇ.
             `ಸಂಜೂ.. ನಿಂಗೆ ಯಾರ್ ಹೇಳಿದ್ವಾ ಮಾರಾಯಾ.. ಆನಂತೂ ಬೆಳಗಿಂದ ಟಿ.ವಿ ಮುಂದೆ ಕುತ್ಗಂಡಿದ್ದಿ.. ಒಂದೇ ಒಂದ್ ಸುದ್ದಿನೂ ಗೊತ್ತಾಜಿಲ್ಲೆ.. ಯಾವಾಗ್ಲೂ ಪೋನ್ ಮಾಡತಾ ಇದ್ದಿದ್ ಚಿದಂಬರ ಸರ್ರೂ ಪೋನ್ ಮಾಡಿದ್ವಿಲ್ಯಲಾ ಇನ್ನೂವಾ.. ಸುಳ್ ಹೇಳಡದಾ.. ಸೀರಿಯಸ್ಸಾಗಿ ಹೇಳಾ ಮಾರಾಯಾ..ಖರೆ ಹೌದನಾ.. ತಮಾಷೆ ಅಲ್ಲ ಹದಾ' ಎಂದ ವಿನಯಚಂದ್ರ. ಗೆಳೆಯ ಹೇಳಿದ ಮಾತನ್ನು ನಂಬಲು ಇನ್ನೂ ಅಳುಕಿತ್ತು ಮನದ ಮೂಲೆಯಲ್ಲಿ.
             `ಥೋ.. ಇಲ್ಲೆಲ್ಲಾ ಎಂತಾ ಜೋಕಾ.. ನಿಜ ಮಾರಾಯಾ.. ಪಕ್ಕಾ ಸುದ್ದಿನೇಯಾ..ನೀನು ಕಬ್ಬಡ್ಡಿ ಟೀಮಿಗೆ ಆಯ್ಕೆಯಾಜೆ. ಹೀಗೆ ಕಬ್ಬಡ್ಡಿ ತಂಡಕ್ಕೆ ಆಯ್ಕೆಯಾದ ಮೊಟ್ಟ ಮೊದಲ ಹವ್ಯಕರವನು ನೀನು.. ಈ ಕಾರಣಕ್ಕೆ ನಮಗೆ ಬಹಳ ಹೆಮ್ಮೆ ಆಗ್ತಾ ಇದ್ದೋ' ಎಂದ ಸಂಜಯ.
             ದೊಡ್ಡ ಚ್ಯಾನಲ್ ರಿಪೋರ್ಟರ್ ಸಂಜಯ. ಅಂವಂಗೆ ಬೇಗ್ನೆ ಸುದ್ದಿ ಗೊತ್ತಾಜಕ್ಕು.. ಅದು ಸತ್ಯನೂ ಆಗಿಕ್ಕು ಅಂದುಕೊಂಡ. `ಮಾರಾಯಾ.. ಎಂತಾದ್ರೂ ಡೀಟೇಲ್ಸ್ ಗೊತ್ತಾದ್ರೆ ಹೇಳಾ..' ಎಂದ..
              `ಯಂಗೆ ಗೊತ್ತಾಗಿದ್ದು ಇಷ್ಟೇಯಾ ನೋಡು.. ಇನ್ 15 ದಿನಕ್ಕೆ ಬಾಂಗ್ಲಾದೇಶದಲ್ಲಿ ಕಬ್ಬಡ್ಡಿ ವಿಶ್ವಕಪ್ಪು. 18 ಟೀಂ ಬತ್ತಾ ಇದ್ದು. ವರ್ಡ್ ಚಾಂಪಿಯನ್ ನಮ್ಮ ಟೀಮಿನ ಸೆಲೆಕ್ಷನ್ನು ಆಜು. ಅದರಲ್ಲಿ ನೀನು ಒಬ್ಬಂವ ಸೆಲೆಕ್ಟ್ ಆದಂವ.. ಹೋಯ್ ಕರ್ನಾಟಕದಿಂದ ಸೆಲೆಕ್ಟ್ ಆದಂವ ನೀನೊಬ್ನೆಯಾ ಮಾರಾಯಾ.. ನಮ್ ಹವ್ಯಕರಲ್ಲಿ ನೀನೆ ಮೊದಲ್ನೇಯವ್ವಾ ನೋಡು.. ಅಂತೂ ವರ್ಡ್ ಕಪ್ಪಿಗೆ ನ್ಯಾಶನಲ್ ಟೀಮಿಗೆ ಸೆಲೆಕ್ಟ್ ಆಗೋ ಮೂಲಕ ಭಾರತದ ಪರ ಆಡವ್ವು ಹೇಳೋ ನಿನ್ ಕನಸು ನನಸು ಮಾಡ್ಕ್ಯತ್ತಾ ಇದ್ದೆ.. ಯಂಗಂತೂ ರಾಶಿ ಖುಷಿ ಆಗ್ತಾ ಇದ್ದು ಮಾರಾಯಾ.. ಆನಂತೂ ನಿನ್ ಬಗ್ಗೆ.. ನಿನ್ ಸಾಧನೆ ಬಗ್ಗೆ ದೊಡ್ ಸುದ್ದಿ ಬರೆಯವ್ವು ಹೇಳಿ ಮಾಡ್ಕತ್ತಾ ಇದ್ದಿ ಡಿಟೇಲ್ಸ್ ಕೊಡಾ..' ಎಂದ ಸಂಜಯ.
               `ಡೀಟೇಲ್ಸನಾ.. ನಿಂಗೊತ್ತಿಲ್ದೆ ಇದ್ದಿದ್ದು ಯಂತಿದ್ದಾ.. ಮಣ್ಣಾಂಗಟ್ಟಿ.. ನೀನೆ ಬರಕಳಾ' ಎಂದ ವಿನಯಚಂದ್ರ
                `ಥೋ ಹಂಗಲ್ದಾ ಮಾರಾಯಾ.. ಆನು ನೀನು ದೋಸ್ತ ಇದ್ದಿಕ್ಕು. ನಿನ್ ಬಗ್ಗೆ ಹೆಚ್ಚು ಕಡಿಮೆ ಎಲ್ಲಾ ವಿಷಯವೂ ಗೊತ್ತಿದ್ದು.. ಗೊತ್ತಿದ್ದು ಹೇಳಿ ಆ ಬರದ್ದಿ ಅಂದ್ಕ.. ನಿನ್ ಬಾಯಿಂದ ಕೇಳದಾಂಗೆ ಆಕ್ತನಾ.. ಹೇಳಾ..ನೀನು ಯಂಗೆ ಪರಿಚಯ ಇದ್ದ ಕಾಲದ್ದೆಲ್ಲಾ ಗೊತ್ತಿದ್ದು. ಆದರೂ ವಿಶೇಷತೆಗಳು ಅಂತ ಇನ್ನೇನಾದ್ರೂ ಇದ್ದಿಕ್ಕಲಾ' ಎಂದ..
               ಅಷ್ಟರಲ್ಲಿ ಡ್ಯೂಯೆಲ್ ಸಿಮ್ಮಿನ ವಿನಯಚಂದ್ರನ ಪೋನು ಕಿರಿ ಕಿರಿ ಮಾಡಲೆ ಹಣಕಚು. ಯಾರೋ ಪೋನ್ ಮಾಡಿದ್ದ ಅಂದಕಂಡ ವಿನಯಚಂದ್ರ..
               `ದೋಸ್ತಾ.. ಇನ್ನೊಂದು ಪೋನು ಬತ್ತಾ ಇದ್ದಲೆ.. ಆನು ಯೆಲ್ಲಾ ರೆಡಿ ಮಾಡಿಟ್ಕಂಡು ನಿಂಗೆ ಪೋನ್ ಮಾಡ್ತ್ನಾ..' ಎಂದು ಪೋನ್ ಇಡ್ತಾ ಇದ್ದಾಂಗೆ ವಿನಯಚಂದ್ರನ ಮೊಬೈಲು ಮತ್ತೊಮ್ಮೆ ರಿಂಗಣ. ನೋಡಿದ್ರೆ ಚಿದಂಬರ ಸರ್ ಮಾಡಿದ್ದರು. ಅವರ ಪೋನ್ ಎತ್ಕಂಡು ಮಾತಾಡಲು ಹಿಡದ್ರೆ ಅವರೂ ಇದೇ ವಿಷಯ ಹೇಳಲೆ ಹಣಕಿದ್ರು. ಸಂಜಯ ಹೇಳಿದ್ ವಿಷಯಾನೇ ಅವರೂ ಹೇಳಿದ್ರು. ಅದನ್ನು ಕೇಳಿದ ವಿನಯ ಚಂದ್ರ `ಯಂಗೆ ವಿಷಯ ಗೊತ್ತಾಜು.. ಸಂಜಯ ಹೇಳಿದ್ದ ಹಿಂಗಿಂಗೆ ಅಂದ.. ಖುಷಿಯಾದ ಚಿದಂಬರ ಮಾಸ್ತರ್ರು `ವಿನಯಾ.. ಅಂತೂ ನಿನ್ ಶ್ರಮಕ್ಕೆ ಬೆಲೆ ಬಂತಲೆ.. ಒಳ್ಳೇ ರೀತಿ ಹೆಸರು ಮಾಡವ್ವು....ನಿನ್ನ ಮೇಲೆ ಬಹಳ ನಿರೀಕ್ಷೆ ಇದೆ. ಅದನ್ನು ಹುಸಿ ಮಾಡಬೇಡ ಮಾರಾಯಾ' ಅಂದರು.
              `ಸರ್ ನೀವು ನಂಗೆ ಕೋಚಿಂಗ್ ಕೊಟ್ಟಿದ್ದು.. ಅದನ್ನು ಮರಿತ್ನಿಲ್ಲೆ ಸರ್.. ನಿಮ್ಮಿಂದ್ಲೆ ಈ ಹಂತಕ್ಕೆ ಬಂದಿದ್ದು.. ಯನ್ನ ಈ ಸಾಧನೆ ಹಿಂದೆ ಕಾಂಬದು ನಿಮ್ಮ ಬೆವರು..ನೀವಿಲ್ಲದಿದ್ರೆ ನಾನು ಈ ಮಟ್ಟಕ್ಕೆ ಏರುತ್ತಿರಲಿಲ್ಲವೇನೋ.. ನಿಮಗೆ ನಾನೆಷ್ಟು ಧನ್ಯವಾದ ಹೇಳಿದ್ರೂ ಕಮ್ಮಿನೇಯಾ' ಎಂದ. ಕೋಚ್ ಚಿದಂಬರ ಅವ್ರು ಒಂದು ಸಾರಿ ಸುಮ್ಮಗಾದ್ರು. ನಿಡಿದಾದ ಉಸಿರು ಬಿಟ್ಟ ಶಬ್ದ ಮೊಬೈಲಿನಲ್ಲಿ ಕೇಳಚು. ಮನದಾಳದ ಭಾವವೊಂದು ನಿಟ್ಟುಸಿರಿನ ಮೂಲಕ ಹೊರಬಂದ ಹಾಗಿತ್ತು.
            `ಸರ್.. ಇಲ್ಲೀತನಕ ಆನು ರಾಜ್ಯದ ಟೀಮಲ್ಲಿ ಆಡಿದಿದ್ದಿ.. ಈಗ ಬಹಳ ಟೆನ್ಶನ್ ಆಗ್ತಾ ಇದ್ದು..ಹೆಂಗೋ ಏನೋ.. ಎಕ್ ದಮ್ ನ್ಯಾಷನಲ್ ಟೀಮಿಗೆ ಸೆಲೆಕ್ಷನ್ನಾಗಿದ್ದು, ಅದೂ ವಿಶ್ವಕಪ್ಪಿಗೆ...ಮನದಲ್ಲಿ ಒಂಥಡಾ ಢಕ ಢುಕಿ..' ಎಂದ ವಿನಯಚಂದ್ರ..
             `ಥೋ.. ನಿಂಗೆ ಹಂಗೆಂತಕ್ಕೆ ಆಗವಾ..? ಇಲ್ಲೀವರೆಗೆ ಹೆಂಗೆ ಆಡಿದ್ಯಾ ಮುಂದೂ ಹಂಗೆ ಆಡು.. ಯಶಸ್ಸು ನಿನ್ ಜೊತೆಗೆ ಬತ್ತು. ತಲೆಬಿಸಿ ಮಾಡ್ಕ್ಯಳಡಾ ಮಾರಾಯಾ.. ಏನೇ ಆದರೂ ನಿನ್ನ ಮೇಲಿನ ನಂಬಿಕೆ ನೀನು ಕಳಕಳಡ. ನಮ್ಮ ನಮ್ಮ ಮೇಲೆ ನಮಗಿರುವ ನಂಬಿಕೆಯೇ ನಮ್ಮನ್ನು ಸದಾ ಕಾಪಾಡ್ತು. ನೀನೂ ನಂಬಿಕೆಯನ್ನು ಎಂದಿಗೂ ಕಳೆದುಕೊಳ್ಳದೇ ಮುನ್ನುಗ್ಗು. ಅಷ್ಟಾದರೆ ಗೆಲುವು ಸದಾ ನಿನ್ನ ಬೆನ್ನಿಗೆ ಬರ್ತು' ಎಂದ ಚಿದಂಬರ್ ಅವರು `ನೋಡಾ.. ಟೀಂ ಇಂಡಿಯಾಕ್ಕೆ ಪ್ರಕಾಶ ಜಾಧವ್ ಅಂತ ಕೋಚ್ ಇದ್ರು. ಯನ್ನ ದೋಸ್ತನೂ ಹೌದು.. ಅಗ್ ದಿ ಒಳ್ಳೆ ಮನುಷ್ಯಾ.. ಆನು ಅಂವ ಒಟ್ಟಿಗೆ ರೈಲ್ವೇಸ್ ಪರ ಕಬ್ಬಡ್ಡಿ ಆಡಿದಿದ್ಯ.. ಅಂವನ ಹತ್ರ ನಿನ್ ಬಗ್ಗೆ ಹೇಳಿರ್ತಿ.. ಅಂವ ಎಲ್ಲಾ ನೋಡ್ಕತ್ತಾ.. ನಿಂಗೆ ಎಂತಾ ಸಮಸ್ಯೆ ಆಕ್ತಿಲ್ಯಾ.. ನಿಂಗೆ ತರಬೇತಿಗೆ ಸಮಸ್ಯೆ ಆಗ್ತಿಲ್ಲೆ. ಚೊಲೋ ಆಡು..' ಎಂದು ಪೋನಿಟ್ಟರು.
              ವಿನಯಚಂದ್ರನ ಮನಸ್ಸಿನಲ್ಲಿ ಖುಷಿಯ ಉಬ್ಬರ ಕಾಣ್ತಾ ಇತ್ತು. ಚಿದಂಬರ ಸರ್ ಪೋನ್ ಇಡ್ತಾ ಇದ್ದಾಂಗೆ ಸುಮಾರಸ್ಟ್ ಪೋನ್ ಬಪ್ಪಲೆ ಹಿಡತ್ತು ವಿನಯ ಚಂದ್ರಂಗೆ.. ಎಲ್ಲಾವ್ಕೂ ಉತ್ತರ ಕೊಡುವಷ್ಟರಲ್ಲಿ ವಿನಯಚಂದ್ರಂಗೆ ಬೆವರು ಇಳಿಯಲೆ ಹತ್ತಿತ್ತು. ಆದರೂ ನ್ಯಾಷನಲ್ ಟೀಮಿಗೆ ಸೆಲೆಕ್ಟ್ ಆಗಿದ್ ಖುಷಿ ಬೆವರನ್ನು ಮರೆಸಿ ಹಾಕಿತ್ತು. ಲೆಕ್ಖವಿಲ್ಲದಷ್ಟು ಕರೆಗಳು, ನೂರಾರು ಮೆಸೇಜುಗಳು.. ಒಟ್ನಲ್ಲಿ ವಿನಯಚಂದ್ರ ಪುಲ್ ಹ್ಯಾಪಿ.
                  ವಿನಯ ಚಂದ್ರ ನ್ಯಾಷನಲ್ ಟೀಮಿಗೆ ಸೆಲೆಕ್ಟ್ ಆಗುವ ಮುನ್ನ ನಡೆದ ಹಾದಿ ಇದ್ದಲಿ ಅದು ಬಹಳ ಶ್ರಮದಿಂದ ಕೂಡಿದ್ದು. ಉತ್ತರ ಕನ್ನಡದ ಮಲೆನಾಡಿನ ಹಳ್ಳಿ ಮೂಲೆಯೊಂದರ ಹುಡುಗ ವಿನಯಚಂದ್ರ. ಮನೆಲ್ಲಿ ಸಿಕ್ಕಾಪಟ್ಟೆ ಅನುಕೂಲಸ್ತರಾಗಿರುವ ಕಾರಣ ದುಡ್ಡು ಕಾಸಿಗೆ ತೊಂದರೆ ಇರಲಿಲ್ಲ. ಹಾಗಂತ ವಿನಯಚಂದ್ರ ಕೇಳಿದ್ದು, ಬಯಸಿದ್ದೆಲ್ಲವೂ ಸುಲಭಕ್ಕೆ ಸಿಗುತ್ತಲೂ ಇರಲಿಲ್ಲ. ವಿನಯಚಂದ್ರನೂ ಸಣ್ಣಕ್ಕಿದ್ದಾಗಿನಿಂದಲೂ ಚೂಟಿಯ ಹುಡುಗ. ಅವನ ಓರಗೆ ಹುಡುಗರು ಕ್ರಿಕೆಟ್ ಆಡಕತ್ತ ಬೆಳದಾಂಗೆ ಇಂವ ಕಬ್ಬಡ್ಡಿ ಆಡಕತ್ತ ಬೆಳೆದಿದ್ದ. ಹವ್ಯಕರ ಹುಡುಗ ಆಗಿದ್ರಿಂದ ಅವನ ವಯಸ್ಸಿನ ಹವ್ಯಕ ಹುಡುಗರೆಲ್ಲ `ಅಲ್ದಾ ವಿನಯಾ.. ನೀ ಹವ್ಯಕ ಆಕ್ಯಂಡು ಅದೆಂತದಾ ಇತರೇರು ಆಡೋ ಆಟ ಆಡ್ತೆ.. ಕ್ರಿಕೆಟ್ಟಾಡಲೆ ಬಾರಾ..' ಎಂದು ಛೇಡಿಸುತ್ತಿದ್ದರು.
                `ಯಾರು ಹೇಳಿದ್ದು ಕಬ್ಬಡ್ಡಿ ನಾವ್ ಆಡದಲ್ಲ ಹೇಳಿ..? ಇಂತವ್ವೇ ಆಡದು ಹೇಳಿ ಎಲ್ಲಾದ್ರೂ ಬರಕಂಡು ಇದ್ದಾ.. ಯಂಗೆ ಕಬ್ಬಡ್ಡಿ ಇಷ್ಟ.. ನಿಂಗಕ್ಕಿಗೆ ಕ್ರಿಕೆಟ್ ಆಗಿಕ್ಕು.. ಯಂಗೆ ಕ್ರಿಕೆಟ್ ಆಡಲೆ ಬನ್ನಿ ಹೇಳಿ ನಿಂಗವ್ವು ಒತ್ತಾಯ ಮಾಡಡಿ..' ಹೇಳಿ ಕೂಗಿ ಅವರನ್ನೆಲ್ಲ ಸುಮ್ಮನಿರಿಸಿದ್ದ ವಿನಯಚಂದ್ರ. ದೇಹದಲ್ಲಿ ದಾಢಸಿಯಿದ್ದ ಕಾರಣ ಆತನ ಮಾತಿಗೆ ಯಾರೂ ಎದುರು ಆಡುತ್ತಿರಲಿಲ್ಲ. ವಿನಯಚಂದ್ರ ಎದುರಿಗೆ ಇರದಿದ್ದಾಗ ಮಾತ್ರ ಎಲ್ಲರೂ ನಕ್ಕವರೇ.
                 ವಿನಯಚಂದ್ರ ಕಬ್ಬಡ್ಡಿಯಲ್ಲೇ ಮುಂದುವರಿದ. ಅವನ ಜೊತೆಗೆ ಬೆಳೆದ ಹುಡುಗರು ಕ್ರಿಕೆಟ್ ಆಡುತ್ತ ಬೆಳೆದರು. ಕಬ್ಬಡ್ಡಿ ಮನಸ್ಥಿತಿಯ ವಿನಯಚಂದ್ರ ಓದೋದ್ರಲ್ಲಿ ಹಿಂದೆಬಿದ್ದ ಅಂದ್ಕಂಬಲೆ ಬತ್ತಿಲ್ಲೆ.. ಓದೋದ್ರಲ್ಲೂ ಆತ ಚೂಟಿ. ಎಲ್ಲರ ಹಾಂಗೆ ತೀರಾ ಮುವತ್ಮೂರ್ ಮೂರಲೆ ಮಾರ್ಕಸ್ ತಗಳದೇ ಇದ್ರೂ 80-85ಕ್ಕಂತೂ ಕಡಿಮೆ ಆಕ್ತಿತ್ತಿಲ್ಲೆ..
                  ಇವನ ವಾರಗೆ ಹುಡುಗರು ಕ್ರಿಕೆಟ್ ಟೀಮಿಗೆ ಸೆಲೆಕ್ಟ್ ಆಪಲೆ ಪಡಿಪಾಟಲು ಪಡ್ತಿದ್ರೆ ಇವರ ಶಾಲೆ ಕಬ್ಬಡ್ಡಿ ಟೀಮಿಗೆ ಇವನೇ ಕ್ಯಾಪ್ಟನ್ನು. ತಾನೇ ಕೋಚ್ ಕೂಡ. ತನ್ನದೇ ಟೀಮ್ ಕಟ್ಟಿಕೊಂಡು ಶಾಲಾ ಕ್ರೀಡಾಕುಟಗಳಲ್ಲಿ ಜಯಭೇರಿ ಭಾರಿಸಿಕೊಂಡು ಬರುತ್ತಿದ್ದ. ಕ್ರಿಕೆಟ್ ಬೆನ್ನೇರಿ ಅತ್ತ ದೊಡ್ಡ ಆಟಗಾರರೂ ಆಗದೇ ಇತ್ತ ಕ್ರಿಕೆಟ್ ಬಿಡಲೂ ಆಗದೇ ಒದ್ದಾಡುತ್ತಿದ್ದರು ವಿನಯಚಂದ್ರನ ಗೆಳೆಯರು. ಆದರೆ ವಿನಯಚಂದ್ರ ಮಾತ್ರ ಕಬ್ಬಡ್ಡಿಯನ್ನು ಜೀವಕ್ಕಿಂತ ಹೆಚ್ಚಾಗಿ ಇಷ್ಟಪಟ್ಟ. ಕಬ್ಬಡ್ಡಿಯ ಕೈಹಿಡಿದಿದ್ದ ವಿನಯಚಂದ್ರನನ್ನು ಕಬ್ಬಡ್ಡಿ ಕೈಬಿಡಲಿಲ್ಲ.
                  ತಮ್ಮೂರ ಫಾಸಲೆಯಲ್ಲಿ ಹೊನಲು ಬೆಳಕಿನ ಕಬ್ಬಡ್ಡಿ ಪಂದ್ಯಾವಳಿಗಳು ನಡೆಯುತ್ತಿದ್ದಾಗಲೆಲ್ಲ ಬೆಳಗಿನವರೆಗೂ ಮೊದಲನೆ ಸಾಲಲ್ಲಿ ಕುಂತ್ಗಂಡು ಎದ್ದು ಬತ್ತಿದ್ದ ವಿನಯಚಂದ್ರ. ಅವಂಗೆ ಅದ್ಯಾವ ಮಾಯೆಯಲ್ಲಿ ಕಬ್ಬಡ್ಡಿ ಚಟ ಅಂಟಿಕೊಂಡಿತ್ತೋ ಏನೋ. ಕಬ್ಬಡ್ಡಿ, ಭಾವಗೀತೆ, ಕುಂಗ್ ಫೂ, ಪುಸ್ತಕ ಓದೋದು, ಹಳೆಯ ಹಾಡುಗಳನ್ನು ಅದರಲ್ಲೂ ಹೆಚ್ಚಾಗಿ ಹಿಂದಿಯ ಮುಖೇಶ್, ರಫಿ, ಮನ್ನಾಡೆ, ಕನ್ನಡದಲ್ಲಿ ಘಂಟಸಾಲ, ಪಿಬಿಶ್ರೀ ಅಂದರೆ ಜೀವ ಬಿಡುವಷ್ಟು ಇಷ್ಟ. ಇವೆಲ್ಲ ಒಂಥರಾ ವಿಚಿತ್ರ ಕಾಂಬಿನೇಷನ್ನಾದರೂ ಚಿಕ್ಕಂದಿನಿಂದ ಹಾಗೆಯೇ ಬೆಳೆದವನು ವಿನಯಚಂದ್ರ. ಅವನ ವಾರಗೆಯ ಹುಡುಗರಲ್ಲಿ ವಿನಯಚಂದ್ರನೆಂದರೆ ವಿಚಿತ್ರ ಜೀವಿ ಎನ್ನುವಂತೆ ಬೆಳೆದಿದ್ದ.
                   ಶಾಲಾಮಟ್ಟದಲ್ಲಿ ಶಾಸ್ತ್ರೀಯವಾಗಿ ಕಬ್ಬಡ್ಡಿ ಆಡಲು ಬರದಿದ್ದರೂ ಇತರರು ಇವನಷ್ಟು ಒಳ್ಳೆಯದಾಗಿ ಆಡದಿದ್ದ ಕಾರಣ ಆ ಮಟ್ಟದಲ್ಲಿ ಇವನದ್ದೇ ಸಾಮ್ರಾಜ್ಯ ಎನ್ನಬಹುದಿತ್ತು. ಆದರೆ ಹೈಸ್ಕೂಲು ಓದಲಿಕ್ಕೆಂದು ವಿನಯಚಂದ್ರನನ್ನು ಆತನ ತಂದೆ ಶಿವರಾಮ ಹೆಗಡೆ ಶಿರಸಿಗೆ ಕಳಿಸಿದಾಗ ತನ್ನ ಜೀವನದ ದಿಕ್ಕು ಬದಲಾಗುತ್ತದೆ ಎಂದು ವಿನಯಚಂದ್ರನಿಗೂ ಗೊತ್ತಿರಲಿಲ್ಲವೇನೋ. ಎಂಟನೇ ಕ್ಲಾಸಿನಲ್ಲಿ ಪೀ ಪಿರಿಯಡ್ಡಿನಲ್ಲಿ ಯಾರ್ಯಾರು ಏನೇನ್ ಆಟ ಆಟ ಆಡ್ತೀರಿ ಎಂದಾಗ ಎದ್ದುನಿಂತು `ಕಬ್ಬಡ್ಡಿ..' ಎಂದಿದ್ದ. ತಕ್ಷಣ ಅಲ್ಲಿದ್ದ ದೈಹಿಕ ಶಿಕ್ಷಕರು ಈತನ ಹೆಸರು ಕೇಳಿದ್ದರು. ಅದಕ್ಕವನು `ವಿನಯಚಂದ್ರ ಶಿವರಾಮ ಹೆಗಡೆ' ಎಂದು ಉತ್ತರಿಸಿದ್ದ. ಹೆಸರು ಕೇಳಿ ಶಿಕ್ಷಕರು ಒಮ್ಮೆ ವಿಸ್ಮಯರಾಗಿದ್ದರೂ `ಲೇ ಪುಳಿಚಾರು.. ನೀ ಏನ್ ಕಬ್ಬಡ್ಡಿ ಆಡ್ತೀಯೋ..' ಎಂದು ವ್ಯಂಗ್ಯವಾಡಿದ್ದರು. ವಿನಯಚಂದ್ರ ನಾಚಿಕೆಯಿಂದ ಸುಮ್ಮನುಳಿದಿದ್ದ.
                 ನಂತರದ ದಿನಗಳಲ್ಲಿ ಯಾವ ಯಾವ ವಿದ್ಯಾರ್ಥಿ ಹೇಗೆ ಆಡುತ್ತಾನೆಂದು ಗಮನಿಸಿದ್ ಹೈಸ್ಕೂಲಿನ ದೈಹಿಕ ಶಿಕ್ಷಕರು ವಿನಯಚಂದ್ರ ನಿಜಕ್ಕೂ ಚನ್ನಾಗಿ ಆಡುತ್ತಾನೆ ಆದರೆ ಇನ್ನಷ್ಟು ಪಳಗಬೇಕಾದ ಅಗತ್ಯವಿದೆ ಎಂಬುದನ್ನು ಮನಗಂಡಿದ್ದರು. ಅದಕ್ಕೆ ತಕ್ಕಂತೆ ತರಬೇತಿ ನೀಡಲು ಮುಂದಾಗಿದ್ದರು. ಒಬ್ಬ ಹೈಗರ ಹುಡುಗ ಕಬ್ಬಡ್ಡಿ ಆಡುತ್ತಾನೆ ಎಂಬುದು ಅವರಿಗೆ ವಿಶೇಷ ಎನ್ನಿಸಿದ್ದರೂ ಆತ ಚನ್ನಾಗಿ ಆಡುತ್ತಿದ್ದ ಕಾರಣ ಪ್ರೋತ್ಸಾಹ ನೀಡಲು ಮುಂದಾಗಿದ್ದರು.  ಹೈಸ್ಕೂಲಿನ ಈ ಶಿಕ್ಷಕರೇ ವಿನಯಚಂದ್ರನನ್ನು ಚಿದಂಬರ್ ಅವರಿಗೆ ಪರಿಚಯ ಮಾಡಿಸಿದ್ದು. ಚಿದಂಬರ ಅವರ ಪರಿಚಯವಾದ ನಂತರ ವಿನಯಚಂದ್ರ ಇಂದಿನವರೆಗೂ ಮುನ್ನಡೆಯುತ್ತಲೇ ಇದ್ದಾನೆ ಎಂದರೂ ತಪ್ಪಾಗಲಿಕ್ಕಿಲ್ಲ.

**

                     ಕೋಚ್ ಚಿದಂಬರ  ಅವರೂ ಕೂಡ ವಿನಯಚಂದ್ರನಂತೆಯೇ ಮಲೆನಾಡಿನವರು. ಮಲೆನಾಡಿನಲ್ಲಿ ಜನಿಸಿ ಹುಬ್ಬಳ್ಳಿಗೆ ಹೋಗಿ ನೆಲೆಸಿದ್ದರು ಚಿದಂಬರ್ ಅವರು. ತಮ್ಮ ಕಾಲದಲ್ಲಿ ಜಿಲ್ಲಾಮಟ್ಟ, ವಲಯಮಟ್ಟ, ರಾಜ್ಯ ಹಾಗೂ ದಕ್ಷಿಣ ಭಾರತ ಮಟ್ಟಗಳಲ್ಲಿ ಆಡಿ ಅನೇಕ ಸಾರಿ ರಾಷ್ಟ್ರೀಯ ತಂಡದ ಬಾಗಿಲು ಬಡಿದಿದ್ದರೂ ಕ್ರೀಡಾಲೋಕದ ರಾಜಕೀಯದ ಕಾರಣ ಇವರಿಗೆ  ಅವಕಾಶ ಲಭ್ಯವಾಗಿರಲಿಲ್ಲ. ಈ ಕೊರಗು ಮರೆಯಬೇಕೆಂಬ ಕಾರಣಕ್ಕಾಗಿಯೇ ಕಬ್ಬಡ್ಡಿ ಕೋಚಿಂಗ್ ಕೊಡುವ ಕಾರ್ಯವನ್ನು ಮಾಡುತ್ತಿದ್ದರು. ಆದರೆ  ವಿನಯಚಂದ್ರ ಸಿಗುವವರೆಗೂ ಅವರ ಕೋಚಿಂಗ್ ಗೆ ತಕ್ಕ ವಿದ್ಯಾರ್ಥಿ ಸಿಕ್ಕೇ ಇರಲಿಲ್ಲ. ವಿನಯಚಂದ್ರ ಸಿಕ್ಕ ನಂತರ ಆತನಿಗೆ ಕಬ್ಬಡ್ಡಿಯ ಎಲ್ಲ ಪಟ್ಟುಗಳನ್ನೂ ಕಲಿಸಿಕೊಟ್ಟಿದ್ದರು. ಅವರ ತರಬೇತಿಯ ಪರಿಣಾಮ ಆತ ಎಲ್ಲ ಕಡೆಗಳಲ್ಲಿಯೂ ಮುನ್ನಡೆದ. ಇದೀಗ ಬಾಂಗ್ಲಾದೇಶಕ್ಕೂ ಹೊರಟಿದ್ದಾನೆ.
                  ಬಾಂಗ್ಲಾದೇಶದಲ್ಲಿ ವಿನಯಚಂದ್ರನಿಗೆ ಹೊಸದೊಂದು ಲೋಕ ಅನಾವರಣಗೊಂಡು ಬದುಕಿನ ಇನ್ನೊಂದು ಮಜಲು ತೆರೆಯಲಿತ್ತು. ಬಾಂಗ್ಲಾದಲ್ಲಿ ನಡೆಯುವ ಕಬ್ಬಡ್ಡಿ ವಿಶ್ವಕಪ್ಪಿಗೆ ತೆರಳಲು ವಿನಯಚಂದ್ರ ತಯಾರಾಗತೊಡಗಿದ್ದ. ಹೊಸ ಕನಸುಗಳು ಆತನಲ್ಲಿ ತುಂಬಿದ್ದವು. ಬಾಂಗ್ಲಾದೇಶ, ಬೆಂಗಾಲಿ ನಾಡು ಆತನನ್ನು ಕೈಬೀಸಿ ಕರೆಯುತ್ತಿತ್ತು.

(ಮುಂದುವರಿಯುತ್ತದೆ..)

Wednesday, January 15, 2014

ತಾಯಿ-ತುತ್ತು

ಅಮ್ಮಾ ನಿನ್ನ ಕೈತುತ್ತು
ನನ್ನ ಮನಕೆ ಸ್ವಾತಿಮುತ್ತು ||

ಹಲವೆಂಟು ಕಷ್ಟಗಳನ್ಹೊತ್ತು
ನೀ ನೀಡಿದ ಸಿಹಿ ತುತ್ತು
ನನ್ನೊಲವ ಜೀವಧಾರೆಗೆ
ಸಿಹಿಮುತ್ತು| ಅದಿರ್ಮುತ್ತು ||

ಒಂಭತ್ತು ತಿಂಗಳು ಹೊತ್ತು
ಮಡಿಲ ನೋವುಂಡು ಹೆತ್ತು
ನೀಡಿರೆ ಕೆನ್ನೆಗೆ ಮುತ್ತು
ಕೈತುತ್ತು| ಪ್ರೀತಿಯಿತ್ತು ||


ಈ ಜೀವ ನಿನ್ನ ಸ್ವತ್ತು
ಜೊತೆಗೆ ನೆತ್ತರ ತರ್ಪಣವಿಟ್ಟು
ನಿನ್ನೆಯ ಋಣ ತೀರಿಸಿರೆ
ಬಾಳಿಗೊಂದು ಸಾರ್ಥಕವಿತ್ತು ||

(ಈ ಕವಿತೆಯನ್ನು 24-01-2006ರಲ್ಲಿ ದಂಟಕಲ್ಲಿನಲ್ಲಿ ಬರೆದಿದ್ದೇನೆ)


Monday, January 13, 2014

ಕಾಡುಕೋಣದೊಡನೆ ಮುಖಾಮುಖಿ

(ನಾನು ತೆಗೆದ ಪೋಟೋ ಬ್ಲರ್ರಾದ ಕಾರಣ ಸಾಂದರ್ಭಿಕ ಚಿತ್ರ ಹಾಕಿದ್ದೇನೆ.)
ಉಫ್....

ನಿನ್ನೆ ರಾತ್ರಿ ಮನೆಯ ಕಡೆಗೆ ಹೊರಟಿದ್ದೆ.
ನಮ್ಮೂರ ದಾರಿ ಅಂಕುಡೊಂಕು.. ಗುಡ್ಡ ಹತ್ತಿಳಿದು ಸಾಗಬೇಕು..
ಮನೆಯಿನ್ನೇನು ಒಂದು ಕಿ.ಮಿ ದೂರವಿದೆ ಎನ್ನುವಾಗ ರಸ್ತೆಯಲ್ಲಿ ಒಂದಿಷ್ಟು ದನಗಳು ನಿಂತಿವೆ.
ಮೂರ್ನಾಲ್ಕು ರಸ್ತೆಯ ಪಾರ್ಶ್ವದಲ್ಲಿ ಮೇಯುತ್ತ ನಿಂತಿದ್ದವು.
ಹತ್ತಿರ ಹತ್ತಿರ ನಮ್ಮ ಮನೆಯ ಜೆರ್ಸಿ ದನದಷ್ಟು ದೊಡ್ಡವು.
ದನಗಳು ಕಳ್ ಮೇಯಲು ಬರುವುದು ಸಾಮಾನ್ಯ ಎಂದುಕೊಂಡು ಮುಂದಕ್ಕೆ ಹೋಗಲು ಅನುವಾದೆ.
ರಸ್ತೆಯ ಪಕ್ಕದ ಮಟ್ಟಿಯಲ್ಲಿ ಅದೆಲ್ಲಿತ್ತೋ.. ಒಂದು ದೈತ್ಯ ಕಾಡುಕೋಣ ಸರಕ್ಕನೆ ರಸ್ತೆಯ ಮೇಲೆ ಬಂದು ನಿಂತುಕೊಂಡಿತು..
ಬೈಕಿಗೆ ಸರಕ್ಕನೆ ಬ್ರೇಕ್ ಹಾಕಿದೆ.
ದನಗಳು ಹಾಗೂ ಕಾಡುಕೋಣ ಇದೆಂತಾ ನಮೂನಿ ಅಂದುಕೊಂಡೆ.
ಸರಿಯಾಗಿ ದಿಟ್ಟಿಸಿದಾ ಅವು ದನಗಳಲ್ಲ.. ಕಾಡೆಮ್ಮೆಕರುಗಳು..
ಐದಾರಿದ್ದವೇನೋ.. ಚಿಕ್ಕವು..

ಅವುಗಳಿಗೆ ಡಾನ್ ಎಂಬಂತೆ ಅನಾಮತ್ತು 10 ಅಡಿ ಎತ್ತರದ ದೈತ್ಯ ಕಾಡುಕೋಣ ರಸ್ತೆಯ ನಡುಮಧ್ಯದಲ್ಲಿ ನಿಂತುಕೊಂಡಿತ್ತು.
ನನಗೆ ಒಮ್ಮೆ ಕೈಕಾಲು ನಡುಕ ಆರಂಭವಾಯಿತಾದರೂ ಕಾಡೆಮ್ಮೆ ಎಂತದ್ದೂ ಮಾಡುವುದಿಲ್ಲ ಎನ್ನುವ ಹುಂಭ ಧೈರ್ಯ.
ಕಾಡುಕೋಣದ ಕೊಬ್ಬಿನ ಚರ್ಮದ ವಾಸನೆ ಮೂಗಿಗೆ ಅಡರುವಷ್ಟು ಹತ್ತಿರದಲ್ಲಿ ನಾನಿದ್ದೇನೆ.
ಒಂದಿಪ್ಪತ್ತು ಮೀಟರ್ ಇರಬಹುದು.
ತುರ್ತಾಗಿ ಮನೆ ಸೇರಿಕೊಳ್ಳುವ ಅವಸರ ನನಗಿತ್ತು.. 
ನಾನು ಮನೆಗೆ ಹೋಗೋಣ ಎಂದುಕೊಂಡರೆ ಕಾಡುಕೊಣ ದಾರಿಬಿಟ್ಟು ಇಳಿಯಲಿಲ್ಲ..
ನನ್ನನ್ನೇ ನೋಡಲಾರಂಭ ಮಾಡಿತ್ತು..
ತನ್ನ ಮರಿಗಳಿಗೆ ಇಂವ ಇನಾದರೂ ಮಾಡಿಬಿಟ್ಟಾನು ಎನ್ನುವ ಭಯವಿತ್ತೇನೋ.
ಮುಂದಿನ ಕಾಲಿನಿಂದ ನೆಲವನ್ನು ಕೆರೆಯಲಾರಂಭಿಸಿತು..
`ಅಯ್ಯೋ ದೇವ್ರೆ.. ಗ್ಯಾರಂಟಿ ಸತ್ತೆ..ಹ್ಯಾಂಗಂದ್ರೂ ಕಾಡುಕೋಣ ನನ್ನ ಮೇಲೆ ದಾಳಿ ಮಾಡುತ್ತದೆ..'
 `ಕಾಡುಕೋಣದ ದಾಳಿಗೆ ಪತ್ರಕರ್ತ ಬಲಿ' ಎಂಬ ಸುದ್ದಿ ನಾಳೆ ಬರುತ್ತದೆಯೇ ಎಂಬ ದಿಗಿಲೂ ಆಯಿತು..
ನನ್ನ ದುರಾದೃಷ್ಟಕ್ಕೆ ನಮ್ಮೂರಿನಿಂದ ಆರೆಂಟು ಕಿಲೋಮೀಟರ್ ಫಾಸಲೆಯಲ್ಲಿರುವ  ಒಂದು ಊರಿನಲ್ಲಿ ಎರಡು ಮೂರು ದಿನಗಳ ಹಿಂದೆ ತೋಟಕ್ಕೆ ಹೋಗಿದ್ದ ಗೌಡರೊಬ್ಬರ ಮೇಲೆ ಕಾಡುಕೋಣ ಏಕಾಏಕಿ ದಾಳಿ ಮಾಡಿ ಗಾಯಗೊಳಿಸಿದ್ದ ವಿಷಯ ನೆನಪಾಯಿತು. ಆ ಸುದ್ದಿಯನ್ನು ನಾನೇ ಬರೆದಿದ್ದರಿಂದ ಮತ್ತಷ್ಟು ಭೀತಿ ಹೆಚ್ಚಾಯಿತು.
ಸ್ವಲ್ಪ ಹೊತ್ತು ಬಿಟ್ಟರೆ ಪಕ್ಕಕ್ಕೆ ಹೋಗಬಹುದು ಎಂದು ಕಾದೆ.
ಊಹೂಂ ಪಕ್ಕಕ್ಕೆ ಹೋಗಲಿಲ್ಲ..
ಬೈಕಿನ ಹೆಡ್ ಲೈಟನ್ನು ಡಿಪ್-ಡಿಮ್ ಮಾಡಿದೆ..
ಬುಸ್ ಎಂದು ಶ್ವಾಸ ಬಿಟ್ಟಿತು ಕಾಡುಕೋಣ..
ಸುತ್ತಮುತ್ತ ನೋಡಿ ಗಾಡಿಯನ್ನು ಹಿಂದಕ್ಕೆ ತಿರುಗಿಸೋಣ ಎಂದುಕೊಂಡು ನೋಡಿದೆ..
ಯಾಕೋ ಮತ್ತೆ ಧೈರ್ಯ ಸಾಲಲಿಲ್ಲ.
10 ನಿಮಿಷ ಕಳೆದರೂ ಕಾಡೆಮ್ಮೆ ರಸ್ತೆ ಮಧ್ಯವೇ ಇತ್ತು..
ನಾನು ಕ್ಯಾಮರಾ ತೆಗೆಯಲೋ ಬೇಡವೋ ಎಂಬ ದ್ವಂದ್ವದಲ್ಲಿ ಬಿದ್ದೆ..
ರಾತ್ರಿಯಾಗಿದೆ.. ಕ್ಯಾಮರಾ ಫ್ಲಾಷ್ ಲೈಟ್ ಬಿದ್ದು ಎಲ್ಲಿ ಸಿಟ್ಟಿನಿಂದ ಕಾಡುಕೊಣ ನನ್ನ ಮೇಲೆ ಮುಗಿ ಬೀಳಬಹುದೋ ಎಂಬ ಭಯವಾಯಿತು.
ಕ್ಯಾಮರಾ ಕೈಯಲ್ಲಿ ಹಿಡಿದೆನಾದರೂ ಕ್ಲಿಕ್ಕಿಸಲಿಲ್ಲ..
ಅಷ್ಟರಲ್ಲಿ ಕೊಂಚ ಧೈರ್ಯ ಬಂದಂಗಾಯ್ತು..
ಕ್ಯಾಮರಾದ ಫ್ಲಾಷ್ ಆಫ್ ಮಾಡಿ ಕಾಡುಕೋಣದ ಪೋಟೋ ಕ್ಲಿಕ್ಕಿಸಿದೆ..
ಕಾಡುಕೋಣ `ಎಸ್ಟ್ ಪೋಟೋ ಬೇಕಾದ್ರೂ ಹೊಡ್ಕೋ..' ಎಂದು ನನ್ನ ಕ್ಯಾಮರಾಕ್ಕೆ ಪೋಸು ಕೊಟ್ಟಂತೆ ಅನ್ನಿಸಿತು.
ನನಗೆ ಒಮ್ಮೆ ಅಪ್ಪನ ನೆನಪಾಯಿತು.
ರಾತ್ರಿಯ ವೇಳೆ ಪೇಟೆ ಕೆಲಸ ಮುಗಿಸಿ ಬರುವ ಆತನಿಗೆ ನಮ್ಮೂರ ಫಾಸಲೆಯಲ್ಲಿ ಕಾಡೆಮ್ಮೆ ಸಿಗುವುದು ಸರ್ವೇ ಸಾಮಾನ್ಯ..
ಆಗೆಲ್ಲ ಅವುಗಳ ಜೊತೆಗೆ ಮಶ್ಕಿರಿ ಮಾಡುವ ಸ್ವಭಾವ ಆತನದ್ದು. ಕಾಡೆಮ್ಮೆ ಹಿಂಡಿನ ಬಳಿ ಹೋಗಿ ಎಮ್ಮೆಯಂತೆ `ವಾಂಯ್..' ಗುಡುವುದು ಆತನ ಹುಚ್ಚಾಟ.. ಒಂದೆರಡು ಸಾರಿ ಆತ ಹೀಗೆ ಕೂಗಿದ್ದಕ್ಕೆ ಆತನ ಹಿಂದೆಯೇ ನಮ್ಮ ಮನೆಯ ಹತ್ತಿರಕ್ಕೂ ಬಂದಿದ್ದವಂತೆ ಕಾಡುಕೋಣಗಳು..
ನಾನೂ ಸುಮ್ಮನೆ ಅವರ ಬಳಿ `ವಾಂಯ್..' ಅನ್ನಲೇ..? ಎಂದುಕೊಂಡೆ..
`ಯಾರಿಗೆ ಬೇಕು ಉಸಾಬರಿ..' ಎಂದಿತು ಮನಸ್ಸು.. ನಾಲಿಗೆಯಿಂದ ಶಬ್ದ ಹೊರಬರಲಿಲ್ಲ..
ಕಾಡುಕೋಣವನ್ನು ಬಿಟ್ಟು ಅದರ ಜೊತೆಗಿದ್ದ ಮರಿಗಳನ್ನು ನೋಡಿದೆ..
ಐದಾರಿದ್ದವು ಎಂದಿದ್ದೆನಲ್ಲ.. ಹೌದು.. ಮರಿಗಳೇ ನಮ್ಮ ಮನೆಯ ಜರ್ಸಿ ದನದಷ್ಟು ದೊಡ್ಡವಿದ್ದವು..
ಸಾಮಾನ್ಯವಾಗಿ ಇವನ್ನು ಮರಿ ಎನ್ನುವುದು ಕಷ್ಟ. ಆದರೆ ಚಿಕ್ಕ ಚಿಕ್ಕ ಮೊಳಕೆ ಕೋಡಿನ ಕಾರಣದಿಂದ ಅವನ್ನು ಮರಿಗಳು ಎನ್ನಬಹುದು..
ಮನೆಯಲ್ಲಿ ಸಾಕಿದರೆ ಕಾಣುವಂತಹ ಎಲುಬಿನ ಹಂದರವಲ್ಲ. ದಷ್ಟಪುಷ್ಟವಾಗಿದ್ದವು.
`ವಾವ್..' ಎನ್ನೋಣ ಎಂದರೂ ಶಬ್ದ ಹೊರಬರುತ್ತಿಲ್ಲ..
 ಅದರಲ್ಲೊಂದು ಪುಟ್ಟ ಮರಿ.. ಹುಟ್ಟಿ ಆರೇಳು ದಿನಗಳಿರಬಹುದು..
ಬೆಳ್ಳಿಯಂತೆ ಬೆಳ್ಳಗಿತ್ತು..
ಪಾ..ಪ... ಕುಂಟುತ್ತಿತ್ತು..
ಏನಾಗಿರಬಹುದು ಎಂದುಕೊಂಡೆ..
ಬಿದ್ರಕಾನಿನಲ್ಲಿ ಕಾಲು ಒಡೆ ಬಾಯಿ ಒಡೆ ರೋಗಕ್ಕೆ ಯುವ ಕಾಡುಕೋಣವೊಂದು ಸಾವನ್ನಪ್ಪಿರುವ ಸುದ್ದಿ ಬಂದಿತ್ತು ಇದಕ್ಕೂ ಹಂಗೆ ಆಗಿರಬಹುದಾ..? ಎಂದುಕೊಂಡೆ..
ಮರಿಗಳು.. ಓಡುವ ಆಡುವ ಭರದಲ್ಲಿ ಬಿದ್ದು ಪೆಟ್ಟು ಮಾಡಿಕೊಂಡಿರಬಹುದು ಎನ್ನಿಸಿತು..
ಇಷ್ಟು ಹೊತ್ತು ಕಾಡುಕೋಣ ಎಂದರೂ ಅದು ಗಂಡೋ ಹೆಣ್ಣೋ ಗೊತ್ತಾಗಲಿಲ್ಲ ನೋಡಿ..
ಮರಿಗಳಿವೆಯಾದ್ದರಿಂದ ತಾಯಿಯೇ ಇರಬೇಕು ಎಂದುಕೊಂಡೆ..

ಸ್ವಲ್ಪ ಹೊತ್ತಾದ ಮೇಲೆ ಆ ದೈತ್ಯ ಕಾಡೆಮ್ಮೆ/ಕೋಣಕ್ಕೆ ನನ್ನ ಪೆಚ್ಚು ಪೆಚ್ಚು ಮುಖ, ಬೆದರಿದ ರೀತಿ ಕಂಡು ಬೇಜಾರು ಬಂದಿರಬಹುದು ಅಥವಾ ನನ್ನಿಂದ ಯಾವುದೇ ತೊಂದರೆಯೂ ಆಗುವುದಿಲ್ಲ ಎಂಬ ಭರವಸೆಯಿಂದಲೇನೋ ಹಗೂರಕ್ಕೆ ದಾರಿಯಿಂದ ನನ್ನ ಹತ್ತಿರಕ್ಕೆ ಬಂದಿತು. ನನ್ನೆದೆಯಲ್ಲಿ ಮತ್ತೆ ಢವ ಢವ..
ಬೈಕ್ ಸ್ಟಾಂಡ್ ಹಾಕಿ ಓಡಲು ಟ್ರೈಮಾಡುತ್ತಿದ್ದಂತೆ ಕಾಡುಕೋಣ ನಿಧಾನವಾಗಿ ರಸ್ತೆಯಿಂದ ಪಕ್ಕಕ್ಕೆ ಸಾಗಿತು..
ಅದರ ಮರಿಗಳ ಪಂಗಡವೂ ನಿಧಾನಕ್ಕೆ ಸಾಗಿತು..
ಪಕ್ಕಕ್ಕೆ ಹೋದ ಕಾಡೆಮ್ಮೆ ಒಮ್ಮೆ ತಿರುಗಿ ನೋಡಿತು..
ಬಹುಶಃ ನಾನು ಹೋದ್ನಾ ಇಲ್ವಾ ನೋಡಿತೇನೋ..
ಅಥವಾ ಅದರ ಹಿಂದೆ ಬರುತ್ತಿರುವ ಮರಿಗಳೆಗ ತೊಂದರೆ ಕೊಟ್ಟೆನಾ ಎಂದು ನೋಡಿರಲೂಬಹುದು..

ನಾನೊಮ್ಮೆ ನಿರಾಳ..
ಇಷ್ಟು ಮಾಡಿದ್ದೇ ತಡ.. ಬೈಕಿಗೆ ಮತ್ತಷ್ಟು ಎಕ್ಸಲರೇಟ್ ಕೊಟ್ಟು ರೊಂಯ್ ಅನ್ನಿಸಿ ಓಡಿಸಿದೆ..
ಮುಂದಕ್ಕೆ ಹೊದಂತೆ ಹಿಂದಕ್ಕೆಲ್ಲ ಚರಕ್ ಪರಕ್ ಸದ್ದು..
ನನ್ನ ಬೆನ್ನತ್ತಿದೆ ಕಾಡೆಮ್ಮೆ  ಎಂದುಕೊಂಡು ರೊಯ್ಯನೆ ಮುಂದಕ್ಕೆ ಹೋದೆ..
ಹಿಂದಕ್ಕೆ ತಿರುಗಿ ನೋಡುವ ಸಾಹಸವನ್ನೂ ಮಾಡಲಿಲ್ಲ..
ಸುಮಾರು ದೂರ ಬಂದಮೇಲೆ ಇಲ್ಲ.. ಕಾಡೆಮ್ಮೆ ಬೆನ್ನತ್ತಿಲ್ಲ ಎನ್ನಿಸಿತು..
**

ಮನೆಗೆ ಬಂದವನೇ ಮನೆಯಲ್ಲಿ ಅಪ್ಪ-ಅಮ್ಮನ ಬಳಿ ಈ ಸಂಗತಿ ಹೇಳಿದೆ..
ಅಮ್ಮ ಗಾಬರಿಯಾದರು..
ಅಪ್ಪ ಮತ್ತದೇ ಹುಚ್ಚಾಟ.. `ತಮಾ.. ಕಾಡೆಮ್ಮೆ ಎಂತಾ ಮಾಡ್ತಿಲ್ಯಾ..' ಎಂದ..
ನನ್ನ ಪಡಿಪಾಟಲನ್ನು ಹೇಳಿದೆ..
`ಮೊನ್ನೆ ಯಂಗೆ ಕಾನಬೈಕ್ಲು ಹತ್ರ ಸಿಕ್ಕಿತ್ತಾ.. ಒಂದ್ ದೊಡ್ಡದು ಉಳಿದವು ಸಣ್ಣವು.. ಅಲ್ದನಾ..' ಎಂದ..
ಹೌದು ಅಂದೆ
ಹದಾ.. ಇತ್ಲಾಬದಿಗೆ ಇದ್ದ ಹೇಳಾತು..
`ಕಾಡುಕೋಣ ಪಾಪದವ್ವಾ ತಮಾ.. ನಾವೆಂತಾದ್ರೂ ಮಾಡಿದ್ರೆ ಮಾತ್ರ ಅವ್ವು ಮೈಮೇಲೆ ಬರ್ತಾ..
ಮರಿ ಇದ್ದಿದ್ದಕ್ಕೆ ಅದು ರಸ್ತೆಯಲ್ಲಿ ನಿನ್ನ ಅಡ್ಡಗಟ್ಟಿದ್ದು ಕಾಣ್ತು..' ಎಂದು ತನಗೆ ಗೊತ್ತಿದ್ದನ್ನು ಹೇಳಿದ..
`ಆ ಮರಿ ಕಾಲು ಕುಂಟಾಕ್ತಿತ್ತು..' ಎಂದೆ..
`ಕಾಲು-ಬಾಯಿ ರೋಗ ಬಂದಿಕ್ಕಾ.. ಎಂದವನು `ಹುಲಿ ಹಿಡಿದಿಕ್ಕಾ..' ಎಂದ
`ಹುಲಿ..!? ನಮ್ ಬದಿಗೆ ಹುಲಿ ಎಲ್ಲಿದ್ದಾ' ಎಂದೆ..
`ಚಳಿಗಾಲವಲಾ.. ಹುಲಿ ಬತ್ವಾ.. ಕಾಡೆಮ್ಮೆ ಗ್ವಾಲೆ ಇದ್ದು ಹೇಳಾದ್ರೆ ಅದರ ಹಿಂದೆ ಹುಲಿಯೂ ಬರ್ತಾ.. ಹುಲಿಗೂ ಆಹಾರ ಬ್ಯಾಡದಾ.. ಮರಿ ಕಂಡು ಹಿಡಿಯಲೆ ನೋಡಿಕ್ಕು..'ಎಂದ..
ನನಗೆ ಡಿಸ್ಕವರಿ ಚಾನಲ್ ನೆನಪಾಯಿತು..
`ಚಳಿಗಾಲದಲ್ಲಿ ನಮ್ಮೂರ್ ಬದಿಗೆ ಕಾಡುಕೋಣ-ಹುಲಿ ಇರ್ತ್ವಾ.. ನಮ್ಮೂರ ಬ್ಯಾಣದಲ್ಲಿ ಹುಲ್ ಮೆಂದಕಂಡು ಮುತ್ಮುರ್ಡು ಶಾಲೆ ಹತ್ರ ಇಳದು ಗದ್ದೆ ಬೈಲಿಗೆ ಹೋಗಿ ಅಲ್ಲಿ ಹೊಳೆಯ ನೀರು ಕುಡಿತ.. ನಿಂಗೆ ಸಿಕ್ಕಿದ್ದ ಮೇಲೆ ಏಕಾದಶಿ ಗುಡ್ಡ ಹತ್ತಿ ಅಲ್ಲಿಗೇ ಹೋಗ್ತ ನೋಡು..' ಎಂದು ಅಪ್ಪ ಕಾಡುಕೋಣಗಳ ರೊಟೀನು ಕಾರ್ಯಗಳನ್ನು ಹೇಳಿದ.
**

ನನಗೆ ಕಾಡುಕೋಣ ಹೊಸದಲ್ಲ.. ಈ ಹಿಂದೆ ಶಾಲೆಗೆ ಹೋಗುವಾಗಲೆಲ್ಲ.. ಕಾಡುಕೋಣಗಳ ದರ್ಶನವಾಗುತ್ತಿತ್ತು.. ಚುಮು ಚುಮು ಚಳಿಯ ಮಂಜಿನ ಮುಂಜಾನೆಯಲ್ಲಿ ನಮ್ಮೂರಿನ ಪರಮಯ್ಯನ ಬ್ಯಾಣದಲ್ಲಿ ಗಮಯನ ಗ್ವಾಲೆ ಮೇಯುತ್ತಿದ್ದರೆ ನಾನು ಅರ್ಧ ಭಯ ಹಾಗೂ ಅರ್ಧ ಕುತೂಹಲದಿಂದ ನೋಡಿದ್ದೆ. ಅವೂ ಆ ಸಂದರ್ಭದಲ್ಲಿ ಮೇಯುವುದನ್ನು ಬಿಟ್ಟು ನನ್ನನ್ನು ತಲೆಯೆತ್ತಿಕೊಂಡು ನೋಡುತ್ತಿದ್ದವು.. ಗ್ವಾಲೆಯಲ್ಲಿನ ಒಂದೆರಡು ಪುಕ್ಕಲುಗಳು ನನ್ನನ್ನು ಕಂಡಿದ್ದೆ ದಡಕ್ಕನೆ ಓಡಲು ಯತ್ನಿಸುತ್ತಿದ್ದವು.. ಅವನ್ನು ಉಳಿದವುಗಳು ಹಿಂಬಾಲಿಸುತ್ತಿದ್ದವು.
ಆ ನಂತರ ನಾನು ಕಾಲೇಜಿಗೆ ಹೋಗುವಾಗ ಹೊಸದಾಗಿ ಬೈಕು ಕಲಿತಿದ್ದೆ. ದಣಿ ದಣಿ ಡಬ್ಬಲ್ ರೈಡಿಂಗ್ ಮಾಡುವುದು ರೂಢಿಯಾಗಿತ್ತು.. ಒಂದು ಚುನಾವಣೆಯ ಸಂದರ್ಭ ಅಮ್ಮನನ್ನು ಕರೆದುಕೊಂಡು ಚುನಾವಣೆಯಲ್ಲಿ ಮತಹಾಕಿ ವಾಪಾಸಾಗುತ್ತಿದ್ದೆವು.. ನಡುಮದ್ಯಾಹ್ನ.. ಕಾಡೆಮ್ಮೆಗಳ ಹಿಂಡು ನಮಗೆದುರಾಗಿತ್ತು.. ಸರಕ್ಕನೆ ಕಾಣಿಸಿಕೊಂಡ ಕಾಡೆಮ್ಮೆಯಿಂದಾಗಿ ನಮಗರಿವಿಲ್ಲದಂತೆ ಕೂಗು ಹೊರಬಿದ್ದಿತ್ತು.. ನಮ್ಮ ಕೂಗನ್ನು ಕೇಳಿ ಗಮಿಯನ ಗ್ವಾಲೆ ದಿಕ್ಕಾಪಾಲಾಗಿ ಓಡಿ ಹೋಗಿದ್ದವು.. ಆ ಗಡಬಡೆಯಲ್ಲಿ ನಾನು ಬೈಕನ್ನು ಕೈಬಿಟ್ಟು ದಬ್ಬಾಕದಿದ್ದುದೇ ಪುಣ್ಯ..
ಆ ನಂತರದ ದಿನಗಳಲ್ಲಿ ಕಾಡುಕೋಣಗಳನ್ನು ಕಂಡಿದ್ದೆನಾದರೂ ಇಷ್ಟು ಹತ್ತಿರದಲ್ಲಿ ಮುಖಾಮುಖಿಯಾಗಿರಲಿಲ್ಲ. ಕಾಡುಕೋಣದ ಮೈಯ ಕಂಪು ಮೂಗಿಗೆ ತಾಗುವಷ್ಟು ಸನಿಹ..
`ಹ್ವಾ.. ಅದು ಹೊತ್ತಿದ್ರೆ ಯಂತಾ ಮಾಡಕಾಗಿತ್ತಾ..' ಅಪ್ಪನನ್ನು ಕೇಳಿದೆ..
`ತಮಾ.. ಕಾಡೆಮ್ಮೆಯಾಗಲಿ ಅಥವಾ ಇನ್ಯಾವುದೇ ಕಾಡು ಪ್ರಾಣಿಯಾಗಲಿ ಸುಮ್ಮ ಸುಮ್ಮನೆ ದಾಳಿ ಮಾಡುವುದಿಲ್ಲ.. ಅವಕ್ಕೆಂತಾದ್ರೂ ತೊಂದರೆಯಾದರೆ ಅಥವಾ ನಾವು ತೊಂದರೆ ಮಾಡಿದರೆ ಮಾತ್ರ ಅದು ದಾಳಿ ಮಾಡ್ತು.. ಸುಮ್ ಸುಮ್ನೆ ಜಗಳ ಮಾಡವು, ಮೈಮೇಲೆ ಏರಿ ಬರದು ಅಂದ್ರೆ ಮನುಷ್ಟು ಒಬ್ನೇಯಾ ನೋಡು, ಎಂದ ಅಪ್ಪ..
`ನನಗೂ ಹೌದೆನ್ನಿಸಿತು..'
`ಮತ್ತೆ ಸಿಕ್ಕರೆ ಕಾಡೆಮ್ಮೆಯನ್ನು ಮುದ್ದು ಮಾಡಬೇಕು ಎನ್ನಿಸುತ್ತಿದೆ..' ಎಂದೆ..
 ಅಂತ ಹುಚ್ಚಾಟ ಬಿಟ್ ಬಿಡು ಎಂದು ಮನೆಯಲ್ಲಿ ವಾರ್ನಿಂಗ್ ಬೆಲ್ ಬಾರಿಸಿತು..
ಮೊದ ಮೊದಲು ಕಾಣುತ್ತಿದ್ದಂತಹ 10-15 ಕಾಡುಕೋಣಗಳ ಹಿಂಡು ಈಗಿಲ್ಲ.. ಬದಲಾಗಿ 6-7ಕ್ಕೆ ಇಳಿದಿದೆ..
ನಮ್ಮೂರು ಕಡೆಗಳಲ್ಲಿ ಹೇರೂರು, ಹೆಗಡೆಕಟ್ಟಾ, ರೇವಣಕಟ್ಟಾ ಕಡೆಯವರು ಆಗಾಗ ಬೇಟೆ ಬರುವವರುಂಟು.. ಹೀಗೆ ಬರುವವರು ಕಾಡೆಮ್ಮೆ ಹೊಡೆಯುತ್ತಾರೆ ಎಂದು ಕೇಳಿದ್ದೆ.. ಅದಕ್ಕೆ ಅವುಗಳ ಸಂಖ್ಯೆ ಕಡಿಮೆಯಾಗಿದೆ ಎಂದೂ ಕೇಳಿದ್ದೆ..
ಇನ್ನು ಮುಂದೆ ನಮ್ಮ ಭಾಗದಲ್ಲಿ ಬೇಟೆಗೆ ಯಾರಾದರೂ ಬಂದರೆ ಅವರಿಗೆ ತಡೆಯೊಡ್ಡಬೇಕು ಎಂದುಕೊಂಡಿದ್ದೇನೆ..
ಕಾಡೆಮ್ಮೆಯ ಬೇಟೆಯನ್ನು ತಡೆಯಬೇಕು ಎಂಬ ನಿರ್ಧಾರ ನನ್ನದು..
ಆದರೂ ಇನ್ನೊಮ್ಮೆ ಕಾಡುಕೋಣದ ಗ್ವಾಲೆ ಸಿಕ್ಕಾಗ ಅವುಗಳೆದುರು ನಿಂತು `ವಾಂಯ್..' ಅನ್ನಬೇಕು ಎನ್ನಿಸುತ್ತಿದೆ..
ಅದಕ್ಕಾಗಿ ಕಾಯುತ್ತಿದ್ದೇನೆ..!!



Sunday, January 12, 2014

ಎಣ್ಣೆ ಸುಬ್ಬಣ್ಣ ಮಿಲಿಯನೇರಾದದ್ದು..

ಎಣ್ಣೆ ಸುಬ್ಬಣ್ಣ...
                ಇಂತದ್ದೊಂದು ಹೆಸರಿನ ವ್ಯಕ್ತಿಯನ್ನು ಮೊನ್ನೆ ಮೊನ್ನೆಯವರೆಗೂ ಅಸಲಿ ಹೆಸರಿನಿಂದ ಕರೆದವರು ಕಡಿಮೆಯೇ.        ಈಗೊಂದು ದಶಕದ ಹಿಂದಿನಿಂದ ಈ ಹೆಸರು ನಮ್ಮ ಭಾಗದಲ್ಲಿ ಬಹಳ ಹೆಸರುಮಾತನ್ನು ಪಡೆದುಕೊಂಡಿತ್ತು. ಯಾರ ಬಾಯಲ್ಲಿ ಕೇಳಿದರೂ ಎಣ್ಣೆ ಸುಬ್ಬಣ್ಣ ಎಂದರೆ ಆತನ ಚಹರೆ ಕಣ್ಣಮುಂದೆ ಬರುತ್ತಿತ್ತು. `ಓ ಅವ್ನಾ.. ಯಂಗೊತ್ತಿದ್ದು... ಮಾರಾಯಾ ಆವತ್ತು ಹಿಂಗಾಗಿತ್ತು ಅವ್ನ ಕಥೆ.. ' ಎಂದು ಹೇಳುವಷ್ಟು ಚಿರಪರಿಚಿತನಾಗಿದ್ದ ಎಣ್ಣೆ ಸುಬ್ಬಣ್ಣ..
                ಎಣ್ಣೆ ಸುಬ್ಬಣ್ಣ ಎಂಬ ಹೆಸರೇ ಆತನ ವಿಶೇಷ ಗುಣಕ್ಕೆ ಕಾರಣವಾದ್ದರಿಂದ ಈ ಬರಹದ ಕೊನೆಯವರೆಗೂ ಆತನನ್ನು ಇದೇ ಹೆಸರಿನಿಂದ ಕರೆಯುತ್ತೇನೆ. ಬೇಸರಿಸಬೇಡಿ. ಎಣ್ಣೆ ಸುಬ್ಬಣ್ಣ ನಮ್ಮ ನಿಮ್ಮತೆಯೇ ಕಾಮನ್ ಮ್ಯಾನ್. ಬಹುಶಃ ಎಣ್ಣೆ ಎಂಬ ಹೆಸರು ಹಾಗೂ ಎಣ್ಣೆಯೇ ಆತನ ಬದುಕು ಬದಲಾಗಲು ಕಾರಣವಾಯಿತು ಎಂಬುದು ಜೋಕಲ್ಲ.
                 ನಮ್ಮ ಸರ್ವೆ ನಂಬರಿನಲ್ಲಿ ಸುಬ್ಬಣ್ಣ ಎಂದರೆ ಯಾರಿಗೂ ಗೊತ್ತಾಗುವುದಿಲ್ಲ. ಸುಬ್ಬಣ್ಣನ ನಿಜ ನಾಮಧೃಯವಾದ ಸುಬ್ರಮಣ್ಯ ಹೆಗಡೆ ಎಂದರೂ ಹಲವರು ಯಾರಿರಬಹುದು ಎಂದು ತಲೆ ಕೆರೆದುಕೊಳ್ಳುತ್ತಾರೆ. ಆದರೆ ಎಣ್ಣೆ ಸುಬ್ಬಣ್ಣ ಎಂದರೆ ಸಾಕು ಎಲ್ಲರೂ ಹೌದು ಹೌದು ಎಂದು ಹೇಳಿ ಗುರುತು ಹಿಡಿದು ಹೇಳುತ್ತಾರೆ. ಇಂತಹ ಸುಬ್ಬಣ್ಣನ ಈಗಿನ ಚಹರೆಯನ್ನು ಹೇಳುವ ಮೊದಲು ದಶಕದ ಹಿಂದೆ ಹೇಗಿದ್ದ ಎಂಬುದನ್ನು ಹೇಳಿಕೊಂಡು ಮುಂದೆ ಹೋಗುತ್ತೇನೆ.
                 ಗಿಡ್ಡ ಬೆಲ್ ಬಾಟಮ್ ಪ್ಯಾಂಟು, ಬಿಳಿ ಬಣ್ಣದ ಮಾಸಲು ಅಂಗಿ ಮೇಲ್ನೋಟಕ್ಕೆ ಅಂದಿನ ಎಣ್ಣೆ ಸುಬ್ಬಣ್ಣನ ಚಹರೆ. ಪ್ಯಾಂಟಿನ ಮುಂಭಾಗದ ತುದಿ ಪಾದಕ್ಕಿಂತ ತುಸು ಜಾಸ್ತಿ ಮೇಲ್ಭಾಗದಲ್ಲಿಯೇ ಇದ್ದರೆ ಹಿಂಭಾಗ ಮಾತ್ರ ಕಾಲಿಗೆ ಹಾಕಿದ್ದ ಕ್ಯಾನವಾಸ್ ಬೂಟಿನ ಅಡಿಗೆ ಸಿಕ್ಕಿ ಮಣ್ಣು ಮಣ್ಣು. ಅಂದಹಾಗೆ ಹಾಕಿದ ಪ್ಯಾಂಟು ಒಂದಾನೊಂದು ಕಾಲದಲ್ಲಿ ಕಪ್ಪಾಗಿದ್ದು ನಂತರದ ದಿನಗಳಲ್ಲಿ ಅದು ಹಲವು ವರ್ಣಗಳ ಮಿಶ್ರಣವಾಗಿದ್ದೂ ಇದೆ. ಕ್ಯಾನವಾಸ್ ಬೂಟಿನ ಕಥೆಯೂ ಅದೇ. ತನ್ನ ಅಸಲಿ ಬಣ್ಣವಾದ ನೀಲಿಯನ್ನು ಅದು ಯಾವತ್ತೋ ಕಳೆದುಕೊಂಡಿದೆ. ಪರಿಣಾಮವಾಗಿ ಅದು ಧೂಳಿನ ಬಣ್ಣಕ್ಕೆ ತಿರುಗಿ ಸಮಾನತೆಯ ತತ್ವವನ್ನು ಸಾರುತ್ತಿದೆ. ಸುಬ್ಬಣ್ಣ ಎಂದೂ ಸಲೀಸಾಗಿ ನಡೆದವನಲ್ಲ. ತೆಪರು ತೆಪರಾಗಿ ಹೆಜ್ಜೆ ಹಾಕುತ್ತ ಕೈಯಲ್ಲೊಂದು ಅರ್ಧ ಹರಿದ ಚೀಲವನ್ನು ಹಿಡಿದುಕೊಂಡು ಎತ್ತ ಕಡೆಯಾದರೂ ಹೊರಟರೆ ಆತನಿಗೆ ತೃಪ್ತಿ. ಇನ್ನು ಸುಬ್ಬಣ್ಣ ಮಾತನಾಡಲು ಹಿಡಿದ ಎಂದರೆ ಹೆಚ್ಚಿನವರಿಗೆ ಅದು ಅರ್ಥವಾಗುವುದಿಲ್ಲ. ಅಷ್ಟು ವಿಚಿತ್ರ. `ಯೇ ಇವ್ನೆ.. ಯಂಗೆ ಇಲ್ಲಿಗೆ ಹೋಗಕಾಗಿತ್ತು.. ಇದಕ್ಕೆ ಎಂತಾ ಮಾಡವು..' `ಇವರ ಪರಿಚಯ ಆಜಿಲ್ಲೆ ಕಾಣ್ತು ಅಲ್ಲದಾ.. ಇವ್ರು.. ಅಂದ್ರೆ ಅದೇ ಅವ್ರಾ.. ಇದರ ಗಂಡ ಆಗಬೇಕು ಅವರು..' ಎಂದು ಹೇಳಿದರೆ ನಿಮ್ಮಲ್ಲಿ ಹೆಚ್ಚಿನವರಿಗೆ ತಲೆಬುಡ ಅರ್ಥವಾಗಲಿಲ್ಲ ಅಲ್ಲವೇ.. ಸುಬ್ಬಣ್ಣನ ಮಾತಿನ ವೈಖರಿಯೇ ಹಾಗಿತ್ತು. ಇದು, ಅದು ಎಂದು ಹೇಳದಿದ್ದರೆ ಆತನಿಗೆ ಮಾತೇ ಹೊರಳುತ್ತಿರಲಿಲ್ಲ.. ಇಂವನನಾ.. ಇಂವ ಅಂವನಾ.. ಎಂದು ಆತನ ಮೇಲೆ ತಮಾಷೆ ಮಾಡುವವರೂ ಹಲವಿದ್ದರು.
               ಇಂತಹ ಎಣ್ಣೆ ಸುಬ್ಬಣ್ಣ ಹೆಸರಿಗೆ ಬಿಳಿ ಬಣ್ಣದ ಅಂಗಿ ಹಾಕುತ್ತಾನಾದರೂ ಅದು ಬಿಳಿಯ ಬಣ್ಣವೇ ಎಂದು ಹೇಳುವುದು ಕಷ್ಟ. ಏಕೆಂದರೆ ಆತ ಹಾಕಿದ್ದ ಅಂಗಿ ಬಿಳಿಯದ್ದೇ ಆಗಿತ್ತು ಎನ್ನುವುದಕ್ಕೆ ಅನುಮಾನವಾಗುವಷ್ಟು ಬಣ್ಣ ಬದಲಾಗಿದೆ. ಅಂಗಿಯ ಮೇಲ್ಭಾಗದಲ್ಲಿ ಅರ್ಧ ಬಾಯಿಗೆ ಹಾಕಿದ್ದ ಕವಳದ ಕೆಂಪಿನ ಬಣ್ಣವಾದರೆ ಕೆಳ ಅರ್ಧ ಭಾಗ ಹಾರುವ ಧೂಳಿನ ಬಣ್ಣ ಸೇರಿದೆ. ಎಣ್ಣೆ ಸುಬ್ಬಣ್ಣ ತಾನು ಹೋದ ಕಡೆಯಲ್ಲೆಲ್ಲ ಗೋಡೆಗೆ ಅಥವಾ ಇನ್ಯಾವುದೇ ಬೋರ್ಡಿಗೆ ಸಾದಿಕೊಂಡು ನಿಲ್ಲುವುದರಿಂದ ಆತನ ಅಂಗಿಯ ಬಣ್ಣ ಬದಲಾಗಿದೆ ಎನ್ನುವುದು ಎಲ್ಲರೂ ಹೇಳುವ ಮಾತು. ಅದು ಹೌದೂ ಅನ್ನಿ. ಎಣ್ಣೆ ಸುಬ್ಬಣ್ಣ ಆ ದಿನಗಳಲ್ಲಿ ಪಕ್ಕಾ ಅಡಿಕೆ ಬೆಳೆಗಾರ. ಹೆಸರಿಗೆ ಸಾಕ್ಷಿ ಎಂಬಂತೆ ಕವಳ ಹಾಕಿ ಕೆಂಪಡಿರುವ ಹಲ್ಲುಗಳು ಆತನ ವೃತ್ತಿಯನ್ನು ಸಾರಿ ಹೇಳುತ್ತಿದ್ದವು.
               ಸುಬ್ಬಣ್ಣ ಎಂಬ ಆಮ್ ಆದ್ಮಿ ಎಣ್ಣೆ ಸುಬ್ಬಣ್ಣ ಎಂದು ಹೆಸರು ಗಳಿಸಿಕೊಳ್ಳಲು ಕಾರಣವಿದೆ.  ಸುಮ್ ಸುಮ್ನೆ ಹೆಸರಿನ ಮುಂದೆ ಇನ್ನೊಂದು ಶಬ್ದ ಇಟ್ಟುಕೊಳ್ಳಲು ಆತನೇನು ಕನ್ನಡ ಸಿನಿಮಾದ ಹೊಸ ನಟರಲ್ಲೊಬ್ಬನೇ? ಸೊಖಾ ಸುಮ್ಮನೆ ಈ ಹೆಸರು ಬಂದಿಲ್ಲ ನೋಡಿ. ಸುಬ್ಬಣ್ಣ ಹುಟ್ಟಿದ್ದು ಅವಿಭಕ್ತ ಕುಟುಂಬದಲ್ಲಾದರೂ ಮಧ್ಯವಯಸ್ಸಿಗೆ ಬರುವ ವೇಳೆಗೆ ಮನೆಯಲ್ಲಿ ಹಿಸ್ಸೆ ನಡೆದ ಕಾರಣ ಆತನಿಗೆ ಚಿಕ್ಕ ಹಿಡುವಳಿದಾರ ಎನ್ನುವ ಬಿರುದು ಲಭ್ಯವಾಗಿತ್ತು. ಹಿಸ್ಸೆಗೆ ಮುಂಚೆ ಮನೆಯ ಯಜಮಾನನಾಗಿ ಉರಾಉರಿ ಮಾಡಿದ್ದರೂ ಹಿಸ್ಸೆಯಾದ ನಂತರ ಬದುಕು ನಡೆಸುವುದು ಕಷ್ಟ ಎನ್ನಿಸುವಂತಹ ಸನ್ನಿವೇಶಕ್ಕೆ ಆತ ತಳ್ಳಲ್ಪಟ್ಟಿದ್ದ. ಅಜ್ಜ, ಅಪ್ಪಂದಿರಾದಿಯಾಗಿ ಹಿರಿಯರು ಮಾಡಿದ್ದ ಸಾಲದಲ್ಲಿ ಹೆಚ್ಚಿನ ಪಾಲು ಸುಬ್ಬಣ್ಣನ ತಾಬಾ ಬಂದ ಕಾರಣ ಆತನಿಗೆ ಆ ದಿನಗಳಲ್ಲಿ ತಾನು ಯಾಕಾದರೂ ಹಿಸ್ಸೆಯಾದೆನೋ ಅನ್ನಿಸಿದ್ದಂತೂ ಸುಳ್ಳಲ್ಲ. ಹೀಗಿರುವಾಗ ಆತನ ಕೈ ಹಿಡಿದಿದ್ದು ಎಣ್ಣೆ.
              ಕನ್ನಡ ಪದಕ್ಕೆ ಹನ್ನೆರಡು ಅರ್ಥವಿರುವ ಕಾರಣ ಎಣ್ಣೆಯೆಂದರೆ ತಪ್ಪು ತಿಳಿದುಕೊಳ್ಳುವವರೇ ಅಧಿಕ. ಈ ಎಣ್ಣೆ ನೀವಂದುಕೊಂಡಂತೆ ಆ ಎಣ್ಣೆಯಲ್ಲ. ಈ ಎಣ್ಣೆಯೇ ಬೇರೆ. ನೀವು ಈ ಎಣ್ಣೆಯನ್ನು ಲಿಕ್ಕರ್ ಅಂದುಕೊಂಡಿರಿ ಎಂದರೆ ನಿಮ್ಮ ಊಹೆ ಖಂಡಿತ ತಪ್ಪು. ಇದು ಲಿಕ್ಕರ್ ಅಲ್ಲ. ಇದು ತೈಲ ಮಾರಾಯ್ರೆ.. ಮನೆಯಲ್ಲಿ ತೀವ್ರ ಆರ್ಥಿಕ ತೊಂದರೆಯುಂಟಾದ ಪರಿಣಾಮ ಮನೆಯೊಡತಿ ತಯಾರು ಮಾಡಿದ ವಿವಿಧ ಬಗೆಯ ತೈಲವೇ ಎಣ್ಣೆ ಸುಬ್ಬಣ್ಣನ ಖ್ಯಾತಿಗೆ ಕಾರಣವಾದದ್ದು.  ಮನೆಯೊಡತಿ ಮನೆಯಲ್ಲಿ ಎಣ್ಣೆ ಉರುಫ್ ತೈಲವನ್ನು ತಯಾರು ಮಾಡಿದರೆ ಸುಬ್ಬಣ್ಣನದು ಅದನ್ನು ಮಾರಾಟ ಮಾಡುವ ಜವಾಬ್ದಾರಿ. ಮೊಟ್ಟ ಮೊದಲ ದಿನ ಸುಬ್ಬಣ್ಣನ ಮನೆಯೊಡತಿ ಈ ಎಣ್ಣೆಯನ್ನು ತಯಾರು ಮಾಡಿದಾಗ ಸುಬ್ಬಣ್ಣನೇ ನಕ್ಕಿದ್ದ. ಆದರೆ ಖಾಲಿಯಾದ ಕಿಸೆ ಅನಿವಾರ್ಯವಾಗಿ ಸುಬ್ಬಣ್ಣನನ್ನು ಮಾರಾಟರಂಗಕ್ಕೆ ದೂಡಿತ್ತು.
             ಎಲ್ಲ ಕಂಪನಿಗಳೂ ಆರಂಭದ ದಿನಗಳಲ್ಲಿ ಚಿತ್ರ ವಿಚಿತ್ರವಾಗಿಯೇ ಕಾರ್ಯ ನಿರ್ವಹಣೆ ಮಾಡುತ್ತವೆ ಎನ್ನುವ ಮಾತಿನಂತೆ ಎಣ್ಣೆ ಸುಬ್ಬಣ್ಣನದ್ದೂ ಆಗಿತ್ತು. ಅಲ್ಲೆಲ್ಲೋ ಬಿದ್ದ ಕಂತ್ರಿ ಸಾರಾಯಿಯ ಕ್ವಾರ್ಟರ್ ಬಾಟಲಿಯನ್ನುಹೆಕ್ಕಿ ತಂದು ಅದನ್ನು ಶುದ್ಧಮಾಡಿ ಅದರಲ್ಲಿ ಮನೆಯೊಡತಿ ತಯಾರಿಸಿದ ಎಣ್ಣೆ ತುಂಬಿ ಅದಕ್ಕೆ ಸುಂದರ ರೂಪಕೊಟ್ಟು ಲೇಬಲ್ ಹಚ್ಚಿ ಮಾರಾಟಕ್ಕೆ ಒಯ್ಯುವಷ್ಟರಲ್ಲಿ ಉಫ್... ಆಗಾಗ ಕ್ವಾರ್ಟರ್ ಬಾಡಲಿ ಸಿಗದಿದ್ದಾಗ ಯಾವುದೋ ಹಳೆಯ ಟಾನಿಕ್ ಬಾಟಲಿಯಾದರೂ ನಡೆಯುತ್ತದೆ.. ಆರಂಭದ ದಿನಗಳಲ್ಲಿ ಸುಬ್ಬಣ್ಣ ಸುತ್ತಮುತ್ತಲ ಮನೆ ಮನೆಗೆ ಹೋಗಿ ತನ್ನ ಎಣ್ಣೆಯನ್ನು ಮಾರಾಟ ಮಾಡುತ್ತಿದ್ದ ಕಾರಣದಿಂದಲೇ ಈತ ಎಣ್ಣೆ ಸುಬ್ಬಣ್ಣ ಎಂದು ಹೆಸರಾದದ್ದು.
             ನಂತರದ ದಿನಗಳಲ್ಲಿ ಸುಬ್ಬಣ್ಣನ ಕಡೆಗೆ ಸುತ್ತಮುತ್ತಲ ಜನರು ಎಣ್ಣೆಯ ಕುರಿತು ಮಾತನಾಡಲಾರಂಭಿಸುತ್ತಿದ್ದ ಹೊತ್ತಿನಲ್ಲಿಯೇ ಆತನಿಗೆ ಮಾರ್ಕೇಟಿಂಗಿನ ಲಿಂಕು ಎಲ್ಲೋ ಸಿಕ್ಕಿದ ಪರಿಣಾಮ ತನ್ನ ಎಣ್ಣೆಗೆ ಕ್ವಾರ್ಟರ್ ಬಾಟಲಿ ಬಳಕೆ ನಿಲ್ಲಿಸಿ ಅದಕ್ಕೆ ಬಣ್ಣ ಬೆಗಡೆ ಮಾಡಿ ಮಾರುಕಟ್ಟೆ ಲೋಕಕ್ಕೆ ಬಿಟ್ಟ. ಅದ್ಯಾವುದೋ  ಪುಣ್ಯಾತ್ಮ ತನಗೆ ಗೊತ್ತಿದ್ದನ್ನು ಸುಬ್ಬಣ್ಣನಿಗೆ ಹೇಳಿದ. ಪಕ್ಕಾ ಹಳ್ಳಿ ಹೈದ ಸುಬ್ಬಣ್ಣ ಆತ ಹೇಳಿದ್ದನ್ನು ಚಾಚೂ ತಪ್ಪದೆ ಮಾಡಿದ. ಪರಿಣಾಮ ಆತನ ದಿಕ್ಕೇ ಬದಲಾಗಿದೆ.
             ಹಳ್ಳಿಗಾಡಿನ ಶ್ರಾದ್ಧ, ಮದುವೆ, ಮುಂಜಿಗಳಲ್ಲಿ ಮಂಡಲ ಪಂಚಾಯತಿ ನಡೆದಾಗಲೆಲ್ಲ ತಪ್ಪದೇ ಹಾಜರಾಗಿ ಅದರಲ್ಲಿ ತಾನೂ ಪಾಲ್ಗೊಳ್ಳುತ್ತಿದ್ದ ಸುಬ್ಬಣ್ಣ ಅಷ್ಟಕ್ಕೆ ನಿಲ್ಲದೇ ಓಸಿಯಂತಹ ಹಲವಾರು ಚಟಗಳೂ ಆತನಲ್ಲಿ ಇದ್ದವು. ಆದರೆ ಅದ್ಯಾವಾಗ ಆತನಿಗೆ ಜ್ಞಾನೋದಯವಾಯಿತೋ ಗೊತ್ತಿಲ್ಲ. ಇದ್ದಕ್ಕಿದ್ದಂತೆ ಅವುಗಳನ್ನೆಲ್ಲ ಬಿಟ್ಟು ಬಿಟ್ಟಿದ್ದ. ಈ ದುರ್ಗುಣಗಳಿಗೆ ಆತ ತಿಲಾಂಜಲಿ ನೀಡಿದ ಮೇಲೆಯೇ ಸುಬ್ಬಣ್ಣನ ಮನೆಯೊಡತಿ ಆತನ ಮೇಲೆ ಸುರಿಸುವ ಬೈಗುಳಗಳು ಕಡಿಮೆಯಾದದ್ದು ಎಂದರೂ ತಪ್ಪಾಗಲಿಕ್ಕಿಲ್ಲ.
             ಹುಶ್... ಈಗ ಎಣ್ಣೆ ಸುಬ್ಬಣ್ಣ ಎಂದು ಕರೆಯುವ ಮುನ್ನ ಒಮ್ಮೆ ಆಲೋಚಿಸಿ ಮಾರಾಯ್ರೆ. ಇತ್ತೀಚಿನ ದಿನಗಳಲ್ಲಿ ಸುಬ್ಬಣ್ಣನ ಖದರು ಬೇರೆಯಾಗಿದೆ. ಆದ್ದರಿಂದ ಮೊದಲೆಲ್ಲ ಕರೆದಂತೆ ಎಣ್ಣೆ ಸುಬ್ಬಣ್ಣ ಎಂದು ಕರೆಯುವ ಹಾಗಿಲ್ಲ. ಎಣ್ಣೆ ಸುಬ್ಬಣ್ಣ ಎಂದು ಕರೆಯಬೇಡಿ ಎಂದು ಸುಬ್ಬಣ್ಣನೇನೂ ಹೇಳಿಲ್ಲ. ಬದಲಾಗಿ ಆತನ ತನ್ನ ಎಣ್ಣೆ ಮಾರಾಟ ಮಾಡಿ ಬದುಕಿನಲ್ಲಿ ಒಂದೊಂದೆ  ಮೆಟ್ಟಿಲು ಮೇಲೇರಿದಂತೆಲ್ಲ ಜನಸಾಮಾನ್ಯರು ತನ್ನಿಂದ ತಾನೆ ಎಣ್ಣೆ ಸುಬ್ಬಣ್ಣ ಎಂದು ಕರೆಯುವುದನ್ನು ಬಿಟ್ಟಿದ್ದಾರೆ. ಪ್ರಾರಂಭದಲ್ಲಿ ಎಣ್ಣೆ ಸುಬ್ಬಣ್ಣ ಎಂದು ವ್ಯಂಗ್ಯವಾಡಿದವರೆಲ್ಲ ನಂತರದ ದಿನಗಳಲ್ಲಿ ಆತನನ್ನು ಆಯಿಲ್ ಕಿಂಗ್ ಎಂತಲೂ, ಆಮೇಲೆ ಎಣ್ಣೆ ಪ್ರಾಡಕ್ಟ್ ಸುಬ್ರಹ್ಮಣ್ಯ ಎಂತಲೂ ತದನಂತರ ಸುಬ್ರಹ್ಮಣ್ಯ ಹೆಗಡೆ ಎಂದೂ ಅಷ್ಟರ ನಂತರ ಹೆಗಡೇರೆ ಎಂದೂ ಕರೆದರು. ಅಷ್ಟಕ್ಕೆ ನಿಲ್ಲದೇ ಎಣ್ಣೆ ಸುಬ್ಬಣ್ಣ ಮುಂದಿನ ದಿನಗಳಲ್ಲಿ ಸುಬ್ರಹ್ಮಣ್ಯ ಸಾವುಕಾರನಾಗಿಯೂ ಬೆಳೆದುಬಿಟ್ಟಿದ್ದಾನೆ. ಹೆಚ್ಚಿನವರಿಗೆ ಎಣ್ಣೆ ಸುಬ್ಬಣ್ಣ ಹೆಸರು ಮರೆತೇ ಹೋಗಿ ಸುಬ್ರಹ್ಮಣ್ಯ ಸಾವುಕಾರ ಎನ್ನುವ ಹೆಸರೇ ತಟ್ಟನೆ ನೆನಪಾಗಿ ಬಿಡುತ್ತದೆ.
             ಸುಬ್ಬಣ್ಣ ತನ್ನ ಹೆಸರು ಬದಲಾದ ಹಾಗೆಯೇ ತನ್ನ ನಡೆ ನುಡಿಯನ್ನೂ ಬದಲಾಯಿಸಿಕೊಂಡಿದ್ದಾನೆ. ಮೊದ ಮೊದಲು ತನ್ನನ್ನು ಎಣ್ಣೆ ಸುಬ್ಬಣ್ಣ ಎಂದು ಕರೆಯುತ್ತಿದ್ದವರ ಕಡೆಗೆ ಕಿಡಿ ಕಾರಿ ಬೈಗುಳ ಸುರಿಸುತ್ತಿದ್ದ ಸುಬ್ಬಣ್ಣ ತನ್ನ ಕೈಯಲ್ಲಿ ದುಡ್ಡು ಆಡತೊಡಗಿದಂತೆಲ್ಲ ಅವರ ಕಡೆಗೆ ಸಿಟ್ಟನ್ನು ಬಿಟ್ಟು ಉದಾಸೀನ ಭಾವನೆ ತಾಳಿದ್ದ. ಮತ್ತೂ ಮೇಲ ಮೇಲಕ್ಕೆ ಏರಿದಂತೆಲ್ಲ ಅವರ ಪಾಡಿಗೆ ತಾನು ನಕ್ಕು ಸುಮ್ಮನಾಗಿದ್ದ. ಆಮೇಲಾಮೇಲೆ ಏನಾಯಿತೆಂದರೆ ಯಾರು ಆತನನ್ನು ಎಣ್ಣೆ ಸುಬ್ಬಣ್ಣ ಎಂದು ಕರೆದಿದ್ದರೋ ಅಂತವರ ಕಷ್ಟಕಾಲದಲ್ಲಿ ನಿಲ್ಲುವ ಮೂಲಕ ಆದರ್ಶವನ್ನೂ ಮೆರೆದಿದ್ದು ಆತನ ದೊಡ್ಡಗುಣ ಎಂದರೂ ತಪ್ಪಾಗಲಿಕ್ಕಿಲ್ಲ ನೋಡಿ. ಈಗಂತೂ ನಮ್ಮ ಸುತ್ತಮುತ್ತಲೆಲ್ಲ ಸುಬ್ಬಣ್ಣನನ್ನು ಗುಣಗಾನ ಮಾಡುವವರೇ. ಹಲವು ಕಾರ್ಯಕ್ರಮಗಳಿಗೆ ಆತನನ್ನು ಅತಿಥಿಯಾಗಿಯೋ ಅಥವಾ ಇನ್ಯಾವುದೋ ಪ್ರಮುಖ ವ್ಯಕ್ತಿಯಾಗಿಯೋ ಕರೆಯುತ್ತಾರೆ. ಸುಬ್ಬಣ್ಣ ಸುಮ್ಮನೆ ಹೋಗಿ ಕುಳಿತು ತನ್ನ ಮನಸ್ಸಿಗೆ ತೋಚಿದ್ದನ್ನು ಆಡಿ ಬರುತ್ತಾನೆ. ಸುಬ್ಬಣ್ಣ ಯಾವುದೇ ದೊಡ್ಡ ದೊಡ್ಡ ಗೃಂಥಗಳನ್ನು ಓದಿದವನಲ್ಲ. ಆದ್ದರಿಂದ ಆತ ಕಾರ್ಯಕ್ರಮಗಳಲ್ಲಿಯೂ ಅಂತಹ ಯಾವುದೇ ದೊಡ್ಡ ದೊಡ್ಡ ಮಾತುಗಳನ್ನೂ ಆಡುವುದಿಲ್ಲ. ಬದಲಾಗಿ ನಮ್ಮ ನಡುವಿನ ಚಿಕ್ಕ ಚಿಕ್ಕ ಸಂಗತಿಗಳನ್ನು ಕಟ್ಟಿಕೊಡುತ್ತಾನೆ. ಜೊತೆಗೆ ನಮ್ಮ ನಿಮ್ಮಂತವರೂ ಸಾಧನೆಗಳನ್ನು ಮಾಡಬಹುದು ಎನ್ನುವುದನ್ನು ಹೇಳುತ್ತಾನೆ. ತನ್ನದೇ ಗ್ರಾಮ್ಯ ಭಾಷೆಯಲ್ಲಿ ಹೇಳುವ ಕಾರಣ ಜನರಿಗೆ ಅದು ಆಪ್ತವೂ ಆಗುತ್ತಿದೆ. ಹೀಗಾಗಿ ಸುಬ್ಬಣ್ಣ ನಮ್ಮ ಭಾಗದಲ್ಲಿ ವರ್ಡ್ ಫೇಮಸ್ ಆಗಿದ್ದಾನೆಂದರೆ ತಪ್ಪಾಗಲಿಕ್ಕಿಲ್ಲ ನೋಡಿ.
              ಇದೀಗ ಯಾರಾದರೂ ಸುಬ್ಬಣ್ಣನ ಡ್ರೆಸ್ಸಿನ ಬಗ್ಗೆ ಮಾತನಾಡಲೂ ಹಿಂದೇಟು ಹಾಕುತ್ತಾರೆ. ಮೊದಲಿನ ಹಾಗೆ ಪರಮ ಗಲೀಜಾದ ವಸ್ತ್ರಗಳನ್ನು ಆತ ತೊಡುವುದಿಲ್ಲ. ವೈಟ್ ಎಂಡ್ ವೈಟ್ ಆಗಿ ಶಿಸ್ತಾಗಿರುತ್ತಾನೆ. ತೆಪರುಗಾಲನ್ನು ಹಾಕುತ್ತ ಊರೂರು ತಿರುಗುತ್ತಿದ್ದ ಸುಬ್ಬಣ್ಣ ಈಗ ಕಾರಿನಲ್ಲಿ ಓಡಾಡುತ್ತಾನೆ. ಆತನ ಈ ಬದಲಾವಣೆ ನೋಡಿದ ಅನೇಕರು `ಸುಬ್ಬಣ್ಣನಿಗೆ ಯಾವುದೋ ಯಕ್ಷೀಣಿ ಒಲಿದಿದ್ದಾಳೆ' ಎಂದು ಆಡಿಕೊಂಡೂ ಇದ್ದಾರೆ. `ಇಲ್ಲಾ ಮಾರಾಯಾ.. ಸುಬ್ಬಣ್ಣನಿಗೆ ಲಾಟರಿ ಹೊಡೆದಿದೆ..' ಎಂದು ಹೇಳಿದವರೂ ಇದ್ದಾರೆ.. ಒಟ್ಟಿನಲ್ಲಿ ಸುಬ್ಬಣ್ಣ ಮಿಲಿಯನೇರ್ ಆಗಿದ್ದಾನೆ.. ಜನರೆಲ್ಲ ಬಾಯಿಗೆ ಬೀಗ ಹಾಕಿಕೊಂಡಿದ್ದಾರೆ. ಮತ್ತೆ ನಮ್ಮ ಭಾಗಕ್ಕೆ ಬಂದು ಯಾರಾದರೂ ಎಣ್ಣೆ ಸುಬ್ಬಣ್ಣ ಎಂದು ಹೇಳಿಬಿಟ್ಟೀರಾ ಹುಷಾರು..

**
(ಇದನ್ನು ಶಿರಸಿಯಲ್ಲಿ ಬರೆದಿದ್ದು, ಜ.9-10-11-12ರಂದು 2014ನೇ ಇಸ್ವಿ)

Tuesday, January 7, 2014

ಜಾಂಡೀಸಾಯ ನಮಃ

ನಗು ನಗು ಎನ್ನುತ್ತಲೇ ಬಂದ
ನನಗೆ ಆ ದಿನ ಹೊಟ್ಟೆಯಾಳದಲ್ಲೆಲ್ಲೋ
ಒತ್ತರಿಸಿ ಬಂದಿತ್ತು ನೋವು |
ಅಷ್ಟಕ್ಕೇ ನಿಲ್ಲಲಿಲ್ಲ, ಜ್ವರ ಮತ್ತು ಸುಸ್ತು|
ತಿನ್ನಹೊರಟರೆ ಹೊಟ್ಟೆಗೇನೂ ಸೇರದು
ತಿಂದರೆ ವಾಂತಿಯ ಜಬರದಸ್ತು||

ಕೂಡಲೆ ವೈದ್ಯರನ್ನು ಕಂಡದ್ದಾಯ್ತು
ಆಸ್ಪತ್ರೆಗೆ ಅಡ್ಮಿಟ್ಟು ಬೇರೆ |
ಆದರೆ ಅವರಿಗೆ ರೋಗ ಕಾಣಲಿಲ್ಲ||
ಡ್ರಿಪ್ಪೆಂದರು, ಟೆಸ್ಟೆಂದರು, ರೋಗದ ಕುರುಹಿಲ್ಲ
ಮೊದಲು ಡೆಂಗ್ಯೂ ಎಂದರು
ನಂತರ ಇಲಿಜ್ವರ |
ಕೊನೆಗೊಮ್ಮೆ ವೈರಲ್ ಫಿವರ್ರು ಎಂದರು!
ಟೆಸ್ಟಿಗಾಗಿ ರಕ್ತ ಹರಿಸಿದ್ದೇ ಬಂತು ||

ಮಧ್ಯ-ಮದ್ಯ ಆಸ್ಪತ್ರೆಯ ನರ್ಸುಗಳು
ಬಹು-ಬಹಳೇ ಕಾಡಿದರು, ಕಟುಕಿಯರು |
ಜೊತೆಗೆ ವೈದ್ಯರ ಬೈಗುಳ ಬೇರೆ,
`ನೀನು ಪತ್ರಕರ್ತ.. ಏನೇನೋ ಬರೀತಿಯಲ್ಲ
ಈಗ ಅನುಭವಿಸು' ಎಂದು ಮೂದಲಿಸಿದರು||

ತಾಸಿಗೊಂದು ಇಂಜೆಕ್ಷನ್ನು, ಮತ್ತೊಂದು ಟೆಸ್ಟು
ಸಾಕಪ್ಪಾ ಸಾಕು, ಜೀವ ಹೈರಾಣಾಯ್ತು ||
ನಡುವೆಯೇ ಎಲ್ಲೋ ಮುಖ
ಕಣ್ಣು, ಕೈ, ಕಾಲುಗಳೆಲ್ಲ ಹಳದಿಯಾಯ್ತು ||

ಮನೆಯಲ್ಲಿ ಅಮ್ಮನಿಗೆ ನಿದಿರೆಯಿಲ್ಲ
ಅಪ್ಪನಿಗೆ ಕೈಯಲ್ಲಿ ದುಡ್ಡಿಲ್ಲ,
ನಡುವೆಯೇ ಡಾಕ್ಟರ್ರು `ಅವನಿಗ
ಜಾಂಡೀಸೂ ಐತ್ರಿ..' ಎಂದರು ||

ಆಸ್ಪತ್ರೆಯಲ್ಲೇ ಅರಾಮಾಗಿರುವಾ ಎಂದರೆ
ಮತ್ತೆ ಮತ್ತೆ ಕಾಡುವ ಆ ನರ್ಸಿಗಳು,
ಅವರ ಕೈ ಕಬ್ಬಿಣವೇನೋ?
ಅಷ್ಟು ಗಟ್ಟು-ಮುಟ್ಟು!
ಇಂಜೆಕ್ಷನ್ ಕೊಟ್ಟರೆ ಯಮಯಾತನೆ||
ಕೊನೆಗೆ ಗೊತ್ತಾಗಿದ್ದೇನೆಂದರೆ ನಂಗೆ ಬಂದಿದ್ದು
ಬೇರೇನೂ ಅಲ್ಲ, ಬರೀ ಜಾಂಡೀಸು |
ಡಾಕ್ಟರರಿಗೋ ಬಹು ಕಾಸು ||

`ವಾರದಲ್ಲೇ ಜಬರದಸ್ತಾಗಿ, ಖದರು
ತೋರಿಸಿದೆಯಲ್ಲಾ ಜಾಮಡೀಸೇ ನಿನಗೆ
ಹಳ್ಳಿಗರೇ ತಕ್ಕ ಪಾಠ ಕಲಿಸ್ತಾರೆ ಬಾ'
ಅಂತ ಹಳ್ಳಿ ಔಷಧಿಗೆ ಮೊರೆ ಹೋದೆ ||

ಅಬ್ಬಾ ಹಳ್ಳಿ ಔಷಧಿಯೇ,
ಅದೆಷ್ಟು ದಿನ ನಿನ್ನ ಪಥ್ಯ?
ಊಟದಲ್ಲಿ ಉಪ್ಪಿಲ್ಲ, ಹುಳಿಯಿಲ್ಲ,
ರುಚಿಯಿಲ್ಲ, ಖಾರವಂತೂ ಮಾರು ದೂರ !
ಎಲ್ಲವೂ ಸಪ್ಪೆ ಸಪ್ಪೆ !
ಬರೀ ಅನ್ನ, ಹೆಸರು ಕಟ್ಟು |
ಯಾರೋ ಅಂದದ್ದು ನೆನಪಾಯ್ತು
ಅಧರಕ್ಕೆ ಕಹಿ, ಉಧರಕ್ಕೆ ಸಿಹಿ ||

ಅಂತೂ ಸುಸ್ತು-ವೀಕನೆಸ್ಸು-ಬಡಕಲು
ಶರೀರಗಳ ಪಳೆಯುಳಿಕೆಯುಳಿಸಿ
ಜಾಡೀಸು ಮರೆಯುತ್ತಿದೆ ||

ವಾರದಲ್ಲಿಯೇ ಪರಂಧಾಮವನ್ನು ಒಮ್ಮೆ
ತೋರಿಸಿದ ಜಾಂಡೀಸೇ
ನಿನಗೆ ನಮೋನ್ನಮಃ ||


(ನನಗೆ ಜಾಂಡೀಸು ಬಂದು ವಾರಗಟ್ಟಲೇ ಆಸ್ಪತ್ರೆಯ ಬೆಡ್ಡಿನ ಮೇಲೆ ಮಲಗಿದ್ದಾಗ ಬರೆದ ಒಂದು ಅನುಭವ ಕವಿತೆ. ರೋಗ ಗೊತ್ತಾಗದಿದ್ದರೂ ಆ ರೋಗ, ಈ ರೋಗ ಎಂದು ಟೆಸ್ಟ್ ಮಾಡುವ ಡಾಕ್ಟರು, ಇದ್ದ ಬದ್ದ ದುಡ್ಡೆಲ್ಲ ಖಾಲಿಯಾಗಿ ಅಸಹಾಯಕತೆಯ ಪರಮಾವಧಿಯನ್ನು ತಲುಪಿದ ಅಪ್ಪಯ್ಯ, ಎಲ್ಲಾ ಮುಗತ್ತು ದೇವರೇ ನೀನೇ ಕಾಪಾಡು ಎಂದು ಅಂತಿಮವಾಗಿ ದೇವರ ಪಾದಕ್ಕೆ ಶರಣೆನ್ನುವ ಅಮ್ಮ, ನಿಂಗೆಂತ ಆತಲೆ.. ಅರಾಮಾಗ್ತೆ ಬೇಗ .. ಬಾ ಮಾರಾಯಾ ಎಂದು ಆಗಾಗ ಬಂದು ಸಮಾಧಾನ ಮಾಡುತ್ತಿದ್ದ ಗೆಳೆಯರು.. ಅಯ್ಯೋ ಎಷ್ಟ್ ದಪ್ಪ ಇದ್ದಂವ ಹೆಂಗ್ ತೆಳ್ಳಗಾಗೋಜ್ಯಲಾ..ಎಂದ ಗೆಳತಿ, ಹಳ್ಳಿ ಔಷಧಿಯ ಕಹಿ, ವಾರದಲ್ಲಿ 7 ದಿನವೂ ಕುಡಿಯಲೇ ಬೇಕು ಕಬ್ಬಿನ ಹಾಲು ಎಂಬ ಹಳ್ಳಿ ಡಾಕ್ಟರ ಫರ್ಮಾನು, ಹುಷಾರಿಲ್ಲ ಎಂದಾಗಲೇ ಬಾಯಲ್ಲಿ ನೀರು ತರಿಸಿ ಕಾಡುವ ಪಾನೀಪುರಿ, ಸೇವ್ ಭಾಜಿ, ಮಿಸ್ಸಳ ಭಾಜಿ, ಸುರಭಿ ಹೋಟ್ಲ ಮಂಜಣ್ಣನ ಪಾವ್ ಭಾಜಿ.. ಥೋ.. ಅನುಭವಗಳಿಗೆ ಕೊನೆಯಿಲ್ಲ ಬಿಡಿ..ಅಂತಹ ಜಾಂಡೀಸಿನ ಕುರಿತು ಒಂದು ಕವಿತೆ ಇದು.. ಸುಮ್ಮನೆ ಓದಿ)
(ದಂಟಕಲ್ಲಿನಲ್ಲಿ ಈ ಕವಿತೆಯನ್ನು 6-09-2007ರಂದು ಬರೆದಿದ್ದೇನೆ)