Tuesday, December 10, 2013

ಹೊಟ್ಟೆ ತುಂಬಾ ಕಾಫಿ ಹಣ್ಣು ತಿಂದಾಗ..

ಪ್ರತಿಯೊಬ್ಬರಿಗೂ ಬಾಲ್ಯವೆಂದರೆ ಜೀವಂತಿಕೆ. ಮರೆಯಲಾಗದ ಮಹಾನ್ ಮಜಲುಗಳ, ಸುಂದರ ಸವಿ ನೆನಪುಗಳ ಆಗರ-ಸಾಗರ. ಹಾಗೆಯೇ ಕಿಲಾಡಿ-ತುಂಟತನಗಳ ಬುತ್ತಿ. ನನ್ನ ಬದುಕಿನಲ್ಲಿ ಬಾಲ್ಯದಲ್ಲಿ ನೂರಾರು ವಿಶಿಷ್ಟ ವಿಚಿತ್ರ ಹಾಗೂ ಖುಷಿ ನಿಡುವ ಘಟನೆಗಳು ಜರುಗಿವೆ. ಅಂತಹ ಘಟನೆಗಳ ಸರಮಾಲೆಯಲ್ಲೊಂದು ಈ ಪ್ರಸಂಗ.
ಮೊದಲೇ ಹೇಳಿ ಬಿಡುತ್ತೇನೆ. ಈ ಕಾಫಿ ಹಣ್ಣು ಇದೆಯಲ್ಲ ಇದರ ರುಚಿಯೇ ರುಚಿ. ಸಿಪ್ಪೆ ಸುಲಿದು ಬಾಯಿಗಿಟ್ಟರೆ ಸಿಹಿಯೋ ಸಿಹಿ. ಶಿರಸಿ, ಸಿದ್ದಾಪುರ ಕಡೆಗಳಲ್ಲಿ ಕಾಫಿ ಹಣ್ಣನ್ನು ತೋಟದ ನಡುವೆ ಅಲ್ಲೊಂದು ಇಲ್ಲೊಂದು ಎಂಬಂತೆ ಹಾಗೆ ಸುಮ್ಮನೆ ನೆಡುತ್ತಾರೆ. ಯಾವುದಾದರೂ ಅಧಿಕಾರಿಗಳು ಬಂದರೆ ನೋಡ್ರಿ ನಮ್ಮಲ್ಲಿ ಕಾಫಿಯೂ ಬೆಳೀತಿವೆ ಎಂದು ಸಾಕ್ಷಿ ಹೇಳುವಂತೆ. ಕೆಂಪ ಕೆಂಪನೆಯ ಹಣ್ಣು ಬಿಡುವ ಕಾಫಿ ಚಾಕಲೇಟು ಕೊಳ್ಳಲು ದುಡ್ಡಿಲ್ಲದ ಸಮಯದಲ್ಲು ಚಾಕಲೇಟಿನಂತೆ .. ಬಾಲ್ಯದಲ್ಲಿ ಇಂತಹ ಕಾಫಿ ಗಿಡಗಳಿಗೆ ದಾಳಿ ಇಟ್ಟರೆ ಕೆಂಬಣ್ಣದ ಹಣ್ಣುಗಳು ಮಾಯವಾಗಬೇಕು.. ಹಾಗೆ ತಿನ್ನುತ್ತಿದ್ದೆವು.
ಅದು ಹಾಗಿರ್ಲಿ ಬಿಡಿ.. ಈಗ ವಿಷಯಕ್ಕೆ ಬರುತ್ತೇನೆ. ಚಿಕ್ಕಂದಿನಲ್ಲಿ ನಮ್ಮೂರಿನ ಓರಗೆಯ ಹುಡುಗರಿಗೆ ನಾನೇ ನಾಯಕ. ಎಲ್ಲರಿಗಿಂತ ವಯಸ್ಸಿನಲ್ಲಿ ದೊಡ್ಡವನಾಗಿದ್ದರೂ ಆಕಾರ ಮಾತ್ರ ಕುಳ್ಳ ನೋಡಿ.. ಮಾತು, ಕಿಲಾಡಿ ಜೋರಾಗಿಯೇ ಇತ್ತು. ಇತರರೂ ಕಿಲಾಡಿಯ ವಿಷಯದಲ್ಲಿ ಜೋರಿದ್ದರೂ ನನ್ನಷ್ಟಿರದ ಕಾರಣ ನಾಯಕತ್ವವನ್ನು ನನಗೆ ದಯಪಾಲಿಸಿ ನಾನ್ ಸರಿಯಿಲ್ಲ ಎಂದು ಸುಮ್ಮನಾಗಿ ಸೈಡಿಗೆ ಹೋಗಿದ್ದರು. ನನ್ನ ಸೈನ್ಯ ಸುಮಾರು ದೊಡ್ಡದಿತ್ತು. ಹೆಚ್ಚೂ ಕಡಿಮೆ ಅರ್ಧ ಕ್ರಿಕೆಟ್ ಟೀಮಿನಷ್ಟು. ಉಳಿದವರೆಲ್ಲ ಚಿಕ್ಕವರು. ಚಿಕ್ಕ ಹುಡುಗರಲ್ವಾ.. ಅವರಿಗೆ ನಾನು ಹೇಳಿದ್ದೇ ವೇದವಾಕ್ಯ. ನಾನು ಸತ್ಯ ಹೇಳಿದರೂ, ಸುಳ್ಳು ಹೇಳಿದರೂ ನಂಬುತ್ತಿದ್ದರು. ಇದನ್ನು ನಾನು ಅಡ್ವಾಂಟೇಜ್ ಆಗಿ ತೆಗೆದುಕೊಂಡು ಹಲವು ಸುಳ್ಳುಗಳನ್ನು ಸತ್ಯದ ತಲೆಯ ಮೇಲೆ ಹೊಡೆದಂತೆ ಹೇಳಿ ಅವರನ್ನೆಲ್ಲ ನಂಬಿಸಿಬಿಡುತ್ತಿದ್ದೆ. ಬಿಡಿ.. ನಾನು ಆ ದಿನಗಳಲ್ಲಿ ಒಂಥರಾ.. ನಮ್ಮೂರಿಗೆ ಡಾನ್ ಇದ್ದಹಾಗೆ...
ಒಂದು ಭಾನುವಾರದ ಶುಭ ಮುಂಜಾವು. ಭಾನುವಾರದ ರಜಾದ ಮಜಾ ನಮ್ಮೆದುರಿಗಿತ್ತು. ಕಂಡಕಂಡಲ್ಲಿ ದಾಳಿ ಇಡುವ ಪರಿಪಾಠ ನಮ್ಮದು. ಇವತ್ತೇನು ಕಡಿದು ದಬ್ಬಾಕಬೇಕು ಎನ್ನುವ ಆಲೋಚನೆಯಲ್ಲಿ ಮುಂಜಾನೆಯೇ ಎದ್ದು ತಿಂಡಿಯನ್ನು ತಿಂದು ಕಣ್ಣಾ ಮುಚ್ಚಾಲೆಯೋ, ಮತ್ತಿನೇನೋ ಆಡುವ ನೆಪದಿಂದ  ನಮ್ಮೂರಿನ ಖ್ಯಾತಿಯೂ ಕುಖ್ಯಾತಿಯೂ ಆಗಿರುವ `ಜೀಡೇಹೋಂಡ' ಎಂಬ ಸ್ಥಳದ ಕಡೆಗೆ ಹೊರಟೆವು. ಆಟ ರಂಗೇರುತ್ತಿತ್ತು. ಸ್ವಲ್ಪ ಹೊತ್ತು ಆಡಿರಬೇಕು. ಅಷ್ಟರಲ್ಲಿ ನಮ್ಮೂರಿನ ಇನ್ನೊಂದು ಭಾಗದಿಂದ ಒಂದು ಬಹುದೊಡ್ಡ ದನ-ಎಮ್ಮೆ-ಕ್ವಾಣಗಳ ಗ್ವಾಲೆ ಕಂಡು ಬಂತು. ನಮ್ಮತ್ತಲೇ ಬರುತ್ತಿದ್ದ ಕಾರಣ ಯಾರೋ ಅದನ್ನು ಬೆನ್ನಟ್ಟುತ್ತಿದ್ದಾರೆ ಎನ್ನುವುದು ಕನ್ ಫರ್ಮ್ ಆಯಿತು. ನೋಡಿದರೆ ನಮ್ಮೂರಿನವರೇ ಆದ ಮೇಲಿನಮನೆಯ ನರಸಿಂಹಣ್ಣ.
ನಮ್ಮೂರಿನ ಬ್ಯಾಣಕ್ಕೆ ಕದ್ದು ಮೇಯಲು ಬರುತ್ತಿದ್ದ ಇನ್ನೊಂದು ಊರಿನ ಗ್ವಾಲೆ ಅದಾಗಿತ್ತು. ನಮ್ಮನ್ನು ಕಂಡವರೇ ನರಸಿಂಹಣ್ಣ ಈ ದನಗಳ ಗ್ವಾಲೆಯನ್ನು ದೂರಕ್ಕೆ ಅಟ್ಟಿ ಬನ್ನಿ. ಕಳ್ಳ ಮೇವು ಮಾಡುತ್ತಿವೆ, ನಮ್ಮ ಜಮೀನು ಹಾಳು ಮಾಡುತ್ತಿವೆ.. ಎಂದರು.
ನಮಗಂತೂ ಸಿಕ್ಕಿದ್ದೇ ಛಾನ್ಸು.. ಎಂತಾ ಕೆಲಸ.. ಆಹಾ... ಓಹೋ... ನನ್ನ ತಂಗಿ ಸುಪರ್ಣ, ಪಕ್ಕದ ಮನೆಯ ನಂದನ, ಗುರುಪ್ರಸಾದ ಮುಂತಾದ ಮಂತ್ರಿ-ಸೇನಾಧಿಪತಿಗಳೊಂದಿಗೆ ನಾನು ಯುದ್ಧಕ್ಕೆ ಜೊರಟಂತೆ ಬೆನ್ನಟ್ಟಿಕೊಂಡು ಹೊರಟೆ.
ದನದ ಗ್ವಾಲೆಯನ್ನು ಹತ್ತಿರದಲ್ಲೇ ಬಿಟ್ಟರೆ ನಮ್ಮ ಮನೆಯ ಗದ್ದೆಗೆ ನುಗ್ಗಿದರೆ ಏನ್ ಮಾಡೋದು ಎನ್ನುವ ಸಾಮಾಜಿಕ ಪ್ರಜ್ಞೆ.
ಆ ಗ್ವಾಲೆಯನ್ನು ಅಟ್ಟಿದೆವು.. ಅಟ್ಟಿದೆವು... ಓಡಿಸಿ ಓಡಿಸಿ ಸುಸ್ತಾಗಿಸಿದೆವು.. ಹಿಂದೆ ಓಡಿ ನಾವೂ ಸುಸ್ತಾದೆವು. ಕೊನೆಗೊಮ್ಮೆ ನಮ್ಮೂರಿನಿಂದ ಒಂದೋ ಎರಡೋ ಕಿಲೋಮೀಟರ್ ದೂರದಲ್ಲಿದ್ದ ಕಾಕಾಲಗದ್ದೆ ಎಂಬಲ್ಲಿ ಅಘನಾಶಿನಿ ನದಿಯನ್ನು ದಾಟಿಸಿ ಬಂದೆವು. ಮನೆಗೆ ಬರುವ ವೇಳೆಗೆ ಶುರುವಾಯ್ತು ನೋಡಿ ಮನೆಯ ಹಿರಿಯರಿಂದ ಮಂತ್ರಾಕ್ಷತೆ.. ಸಂಜೆಯಾದರೂ ಕುಂಭದ್ರೋಣ ಮಳೆಯಂತೆ ಸುರಿಯುತ್ತಲೇ ಇತ್ತು.
**
ಮರುದಿನ ಇನ್ನೂ ಭೀಕರ ಪರಿಸ್ಥಿತಿ. ಆ ದನದ ಗ್ವಾಲೆಯ ಯಜಮಾನ ಬಂದ. ನಮ್ಮ ದುರಾದೃಷ್ಟಕ್ಕೆ ಆ ಗ್ವಾಲೆಯಲ್ಲಿದ್ದ ಮರಿ ಕೋಣವೊಂದು ರಾತ್ರಿ ಹಿತ್ಲಕೈ ಎಂಬ ಊರಿನ ತೋಟಕ್ಕೆ ನುಗ್ಗಲೆತ್ನಿಸಿ, ಆ ಊರಿನವರು ತೋಟವನ್ನು ಹಂದಿ ಕಾಟದಿಂದ ರಕ್ಷಣೆ ಮಾಡಿಕೊಳ್ಳಬೇಕೆಂದು ಹಾಕಿಕೊಂಡಿದ್ದ ಕರೇಂಟ್ ಬೇಲಿಯ ಶಾಕ್ ಗೆ ಸಿಕ್ಕಿ ಸತ್ತು ಹೋಗಿತ್ತಂತೆ.
ಸಿಟ್ಟಿನಿಂದ ಹಾಗೂ ತೀರ್ಥ ಸೇವನೆಯಿಂದ ಕಂಣು ಕೆಂಪಗೆ ಮಾಡಿಕೊಂಡು ದಾರಿಯಡಿ ಬಯ್ಯುತ್ತ ಬರುತ್ತಿದ್ದ ಆತ. ನಮ್ಮೂರಿನ ಕಡೆಗೆ ಮುಖ ಮಾಡಿ ಬರುತ್ತಿದ್ದ ಆತ. ನಾನು ಹಾಗೂ ತಂಗಿ ಅದೇ ದಾರಿಯಲ್ಲಿ ನಮ್ಮ ದುರಾದೃಷ್ಟಕ್ಕೆ ಹೋಗುತ್ತಿದ್ದೆವು. ಹುಲಿ ಬಾಯಿಗೆ ಮಿಕವೇ ತಾನಾಗಿ ಬಂದು ಬಿದ್ದಂತೆ ನಾವು ಎದುರಿಗೆ ಸಿಕ್ಕೆವು. ತಿನ್ನಲು ಬಹಳ ಸಿಹಿ ಎನ್ನಿಸಿದ್ದ ಕಾಫಿ ಹಣ್ಣುಗಳು ನಮ್ಮ ಬೊಗಸೆ ಹಾಗೂ ಕಿಸೆಯ ತುಂಬ ತುಂಬಿಕೊಂಡಿದ್ದನ್ನು ಗಮನಿಸಿದ ಯಾರಾದರೂ ಕೂಡ ನಾವು ತೋಟದ ಕಾಫಿ ಗಿಡಕ್ಕೆ ಲಗ್ಗೆ ಇಟ್ಟು ಬಂದಿದ್ದೆವು ಎನ್ನುವುದನ್ನು ದೂಸರಾ ಮಾತಿಲ್ಲದೇ ಹೇಳಬಹುದಿತ್ತು.
ನಮ್ಮೂರಿನಲ್ಲಿ ಚೌಡಿ ಮಟ್ಟಿ ಎಂಬ ಇನ್ನೊಂದು ಫೇಮಸ್ ಜಾಗವಿದೆ. ಚೌಡಿಯ ಕಟ್ಟೆ ಇರುವ ಬೃಹತ್ ಮಾವಿನ ಮರ ಇರುವ ಸ್ಥಳವೇ ಚೌಡಿ ಮಟ್ಟಿ. ಮಧ್ಯಾಹ್ನದ ವೇಳಗೆ ಅಲ್ಲಿಗೆ ಹೋಗ ಬೇಡಿ ರಣ ತಿರುಗ್ತಿರ್ತದೆ ಎಂದು ಒಂದಾನೊಂದು ಕಾಲದಲ್ಲಿ ನಮ್ಮನ್ನು ಹೆದರಿಸಿದ್ದ ಪರಿಣಾಮ ನಮ್ಮೊಳಗೆ ಭೀತಿಯನ್ನು ಹುಟ್ಟುಹಾಕಿದ್ದ ಜಾಗ ಅದು. ಆತ ಸಮಾ ಅಲ್ಲೇ ನಮಗೆ ಸಿಕ್ಕ. ನಾವು ಸಿಗುವ ವರೆಗೂ ಆತನ ಬಾಯಿಂದ ಕನ್ನಡದ ಬೈಗುಳ ನಿಗಂಟು ಓತಪ್ರೋತವಾಗಿ ಬರುತ್ತಿದ್ದವು.. ಸೆನ್ಸಾರ್ ಪ್ರಾಬ್ಲಮ್ ಸಾರ್.. ಆತನ ಬೈಗುಳಗಳ ಪೈಕಿ `ಸೂ...ಮ..., ಬೋ...ಮ..' ಇತ್ಯಾದಿಗಳೆಲ್ಲ ಇದ್ದವು.. ನಮಗಂತೂ ಧಿಗಿಲ್ ದಬ್ಬಾಕ್ಕಂಡಂಗಾಗಿತ್ತು.
ಆತನ ಕಂಚಿನ ಕಂಠದ ಏರು ಧ್ವನಿಗೆ ನಾವೀ ಹೆದರಿ ಬಾಲವನ್ನು ಕಾಲ ಎಜ್ಜೆಯಲ್ಲಿ ಹಾಕಿ ಮುದುರುವ ಕುನ್ನಿಯಂತೆ.. ಕಮ್-ಕಿಮ್ ಅನ್ನದೇ ನಿಂತಿದ್ದೆವು.
ನಮ್ಮ ಬಳಿಗೆ ಬಂದ. ಅದ್ಯಾರೋ ಪುಣ್ಯಾತ್ಮ  ನಾವು ದನವನ್ನು ಬೆರೆಸಿದವರು ಎಂದು ಹೇಳಿದ್ದರಿಂದ ನಮಗೆ ಸಮಾ ಮಂತ್ರಾಕ್ಷತೆ ನಡೆಯಿತು. ಸುಮಾರು ಹೊತ್ತು ಬೈದ. ನಾವು ಸುಮ್ಮನೆ ನಿಂತಿದ್ದೆವು. ಕೊನೆಗೆ ಬಹಳ ಹೊತ್ತಿನ ನಂತರ ಆತ ಸಿಟ್ಟಿನಿಂದಲೇ `ಅಲ್ಲಾ.. ನೀವು ಹೊಟ್ಟಿಗೆ ಎಂತಾ ತಿಂತೀರಿ..?' ಎಂದು ಕೇಳಿದ.
ಆಗ ನನ್ನ ಜೊತೆಯಲ್ಲೇ ಇದ್ದ ಮಾತಿನ ಮಲ್ಲಿ ತಂಗಿ ಕೈಯಲ್ಲಿದ್ದ ಕೆಂಪು ಬಣ್ಣದ ಕಾಫಿ ಹಣ್ಣನ್ನು ತೋರಿಸುತ್ತಾ `ಅಷ್ಟೂ ಕಾಣೋದಿಲ್ವೇನೋ... ಕಾಫಿ ಹಣ್ಣು..' ಎಂದು ಬಿಡಬೇಕೆ..
ಆತ ಒಮ್ಮೆಲೇ ಬಯ್ಯುವುದನ್ನು ಬಿಟ್ಟು ದೊಡ್ಡದಾಗಿ ನಗಲು ಪ್ರಾರಂಭಿಸಿದಾಗಲೇ ನನಗೆ ಹಾಗೂ ತಂಗಿಗೆ ನಾವು ಏನು ಹೇಳಿದ್ದೆವೆಂದು ಅರ್ಥವಾಗಿದ್ದು.
ಬಹುಶಃ ಹೀಗೆ ಹೇಳಿದ್ದರಿಂದಲೇ ನಮಗೆ ಹೊಡೆತ ಬೀಳುವುದೂ ತಪ್ಪಿ ಹೋಯಿತೇನೋ.. ಆತನ ಸಿಟ್ಟು ಅರ್ಧಕ್ಕರ್ಧ ಇಳಿದಿತ್ತು. ಕೊನೆಗೆ ನಮ್ಮ ಬಳಿ `ನಿಮಗ್ಯರು ಹೇಳಿದ್ದು ದನಾ ಹೊಡಿಯಾಕೆ..?' ಎಂದ. ನಾವು ಬೋಳೆ ಸಂಕರನಂತೆ ಮೇಲಿನಮನೆಯ ನರಸಿಂಹಣ್ಣನ ಹೆರಸನ್ನು ಹೇಳಿಬಿಟ್ಟೆವು.
ಪಾಪ.. ಮನೆಯಲ್ಲಿ ನರಸಿಂಹಣ್ಣ ಇರಲಿಲ್ಲವಂತೆ.. ಅವರ ಮನೆಯಾಕಿ ಇದ್ದಳು.. ಈ ಯಜಮಾನ ಅಲ್ಲಿಗೆ ಹೋಗಿ ತನ್ನ ಸೆನ್ಸಾರ್ ಲೆಸ್ ಬೈಗುಳ ಬೈದು ಆಕೆ ಕಣ್ಣೀರು ಹಾಕಿದ ಪ್ರಸಂಗವೂ ನಡೆಯಿತು.
ಏನ್ ಮಾಡೋದು..? ಬಾಲ್ಯದಲ್ಲಿ ಹೀಗೆ ಇಲ್ಲದಿದ್ದರೆ ಆಗುತ್ತದೆಯೇ..? ನೆನಪು ಮಾಡಿಕೊಂಡಾಗಲೆಲ್ಲ.. ನಗು ಬರುತ್ತದೆ.. ಹಾಂ.. ನಾವು ಹಾಗೆ ಬೆನ್ನಟ್ಟಿ ದ್ದಕ್ಕೆ ತೀರಾ ಇತ್ತೀಚಿನ ಕೆಲ ವರ್ಷಗಳ ವರೆಗೂ ಆತನ ದನಗಳು ನಮ್ಮೂರಿನ ಬ್ಯಾಣಗಳಲ್ಲಿ ಕದ್ದು ಮೇಯುತ್ತಿರಲಿಲ್ಲ.. ನಮ್ಮೂರಿಗರು ಆ ಸಂದರ್ಭದಲ್ಲಿ ನಮಗೆ ಬೈದರೂ ಕಳ್ಳ ದನಗಳ ಕಾಟ ತಪ್ಪಿಸಿಕೊಂಡಿದ್ದಕ್ಕೆ ಮನಸ್ಸಿನಲ್ಲಿಯೇ ನಮಗೆ ಥ್ಯಾಂಕ್ಸ್ ಹೇಳಿರಲಿಕ್ಕೆ ಸಾಕು ಬಿಡಿ..
ನಮ್ಮೂರಿನ ಹುಡುಗರಿಗೆ ಕಾಡು ಸುತ್ತಿ ಗೊತ್ತಿಲ್ಲ.. ಕಿಲಾಡಿ ಮಾಡಿ ಗೊತ್ತಿಲ್ಲ.. ದಿನಾ ಶಾಲೆ-ಊಟ-ಮನೆ... ಹೋಂ ವರ್ಕುಗಳಲ್ಲಿ ಮುಳುಗಿ ಏಳುತ್ತಿವೆ. ರಜಾ ಸಿಕ್ಕರೆ ಸೈಕಲ್ ಹೊಡೆಯುತ್ತಾರಾದರೂ ಉಳಿದ ಕಿಲಾಡಿಗಳನ್ನು ಕೇಳಲೇ ಬೇಡಿ. ಈಗ ಮತ್ತೆ ಆತನ ದನಗಳು ಕಳ್ಳ ಮೇಯಲು ಬರುತ್ತಿವೆ.ನಮ್ಮೂರಿನ ಹುಡುಗರು ಜೋರಿಲ್ಲ ಬಿಡಿ..
ಆತನ ದನಗಳಿಗೂ ಇದು ಗೊತ್ತಾಗಿರಬೇಕು... ನಾವು ದೊಡ್ಡವರಾಗಿದ್ದೇವೆ... ಆ ಯಜಮಾನನಿಗೆ ವಯಸ್ಸಾಗಿದೆ.. ಸಿಕ್ಕಾಗ ಪ್ಯಾಲೆ ನಗುವನ್ನು ನಗುತ್ತಾನೆ.. ಅವನ ಪಾಲಿಗೆ ನಾವು `ಹೆಗುಡ್ರೇ...' ಆಗಿ ಬಿಟ್ಟಿದ್ದೇವೆ.. ನನ್ನ ತಂಗಿ `ಅಮ್ಮಾವ್ರಾ'ಗಿದ್ದಾಳೆ..

ಮೊನ್ನೆ ಒಮ್ಮೆ ಸಿಕ್ಕಾಗ ಆದನ್ನು ನೆನಪು ಮಾಡಿದ್ದೆ...ಆತನಿಗೆ ನೆನಪಿತ್ತೋ.. ಮರೆತಿತ್ತೋ ಗೊತ್ತಿಲ್ಲ.. ನಮ್ಮೂರಿನತ್ತ ದನವನ್ನು ಅವನೇ ಅಟ್ಟಿಕೊಂಡು ಬರುತ್ತಿದ್ದಾಗ ಈ ಪ್ರಸಂಗವನ್ನು ನೆನಪು ಮಾಡಿಕೊಟ್ಟು ಹುಷಾರು ಎಂದು ಲೈಟಾಗಿ ವಾರ್ನಿಂಗ್ ಮಾಡಿದ್ದೆ... ಅದಕ್ಕಾತ ಹೆಗುಡ್ರೆ.. ಈಗಿನ ಹುಡ್ರ ಹತ್ರ ಹಂಗಿದ್ದೆಲ್ಲಾ ಕೇಳ್ ಬ್ಯಾಡಿ ಎಂದು ದೇಶಾವರಿ ನಗೆ ನಕ್ಕಿದ್ದ..

ಹೌದಲ್ಲ ಅನ್ನಿಸುತ್ತಿದೆ.

Sunday, December 8, 2013

ಚಟ ಬಿಡಿ

ಚಟ ಬಿಡಿ, ಚಟ ಬಿಡಿ, ಚಟ ಬಿಡಿ
ಬದುಕ ಬೇಕೆಂದರೆ ಚಟ ಬಿಡಿ ||

ಸೇಂದಿ ಸಾರಾಯಿ ಬಿಟ್ಟು ಬಿಡಿ,
ಗುಟ್ಕಾ, ಮಟ್ಕಾದ ದೋಸ್ತಿ ಬಿಡಿ ||

ಬೀಡಿ ಸಿಗರೇಟು ದೂರವಿಡಿ
ಬ್ರಾಂದಿ ಚುಟ್ಟಾಗಳ ಮರೆತುಬಿಡಿ ||


ಚಟ ಬಿಡಿ ಚಟ ಬಿಡಿ, ಚಟ ಬಿಡಿ
ನಯಾ ಜಮಾನಾವ ಉಳಿಸಿಕೊಡಿ ||

ಮಚ್ಚು ಲಾಂಗುಗಳ ಸಂಘ ಬಿಡಿ
ದುಷ್ಟ ಚಟಗಳ ದೂರವಿಡಿ ||

ಚಟ ಬಿಡಿ ಚಟ ಬಿಡಿ ಚಟ ಬಿಡಿ
ಸಿಗ್ನಲ್ ನೋಡಿ ಲೈನು ಹೊಡಿ ||

ಹರೆಯದ ಹುಡುಗರೆ ಚಟ ಬಿಡಿ
ಬೆಳೆದ ಹುಡುಗಿಯರ ದೂರವಿಡಿ ||

ಡೀಸೆಂಟ್ ಹುಡುಗರೆ ತಿಳಿದುಬಿಡಿ
ಅರಿತು ನೋಡಿ ಮನಸು ಕೊಡಿ ||


(ಕಾಲೇಜು ದಿನಗಳಲ್ಲಿ ಶಿರಸಿ ತಾಲೂಕಿನ ಬೆಳಲೆಯಲ್ಲಿ ಎಂಇಎಸ್ ಕಲಾ & ವಿಜ್ಞಾನ ಕಾಲೇಜು ಎನ್ನೆಸ್ಸೆಸ್ ಕ್ಯಾಂಪ್ ನಡೆದಿತ್ತು. ಆ ಸಂದರ್ಭದಲ್ಲಿ ಎನ್ನೆಸ್ಸೆಸ್ ಯೋಜನಾಧಿಕಾರಿ ಜಿ. ಟಿ. ಭಟ್ಟರು ಹಾಗೂ ಆರ್. ವೈ ಖಾನರು ಚಟಗಳನ್ನು ದೂರವಿಡುವ ಕುರಿತು ಒಂದು ಕವಿತೆ ಬರೆದು ಕೊಡಲು ಹೇಳಿದ್ದರು. ಬಹಳ ಹೊತ್ತು ಕಷ್ಟ ಪಟ್ಟ ನಂತರ ಹಾಗೆ ಸುಮ್ಮನೆ ಬರೆದ ಕವಿತೆ ಇದು.. ಟಪ್ಪಾಂಗುಚ್ಚಿಯಾಗಿ ಅನ್ನಿಸಿದರೆ ಥ್ಯಾಂಕ್ಯೂ.. ಅಂದಹಾಗೆ ಈ ಹಾಡನ್ನು ಬರೆದಿದ್ದು 15-02-2008ರಂದು)

Wednesday, December 4, 2013

ಚದುರಂಗದ ಕುದುರೆಯ ಬೆನ್ನೇರಿ -ಭಾಗ 8

ಭಯದ ನೆರಳಿನಲ್ಲಿ ತೀರ್ಥಂಕರನೊಂದಿಗೆ
ಇಗೀ ಇಲ್ಲಿದೆ ನೋಡಿ ಬಸವನ ಬಾಗೇವಾಡಿ

ಸಂಜೆಯವರೆಗೆ ನಾನು ಖುಷಿಯಾಗಿದ್ದೆ. ಸಂಜೆಯ ಅನಂತರ ಮುಂದಿನ ದಿನ ಅದ್ಯಾರು ನನ್ನ ವಿರುದ್ಧ ಮ್ಯಾಚಿಗೆ ಬೀಳ್ತಾರೋ ಎಂಬ ಕುತೂಹಲಭರಿತ ಭಯ ಆವರಿಸಿತು. ಅಲ್ಲದೇ ನಂಗೆ ಆಟಕ್ಕೆ ಬೀಳುವವರು ಅನಿಕೇತನ್ ಪಾವಸೆ, ಸಾಗರ್ ಚಿಂಚೋಳಿಮಠ, ಸಮೀರ್ ಘೋಟ್ನೆ ಈ ಮೂವರಲ್ಲಿ ಒಬ್ಬರು ಎಂಬುದು ಖಾತ್ರಿಯಾಗಿತ್ತು. ಈ ಮೂವರು ಮಾತ್ರ ನನಗಿಂತ ಹೆಚ್ಚಿನ ಪಾಯಿಂಟುಗಳನ್ನು ಗೆದ್ದಿದ್ದರು. ಆದ್ದರಿಂದ ಇವರಲ್ಲಿಯೇ ಮ್ಯಾಚು ಬೀಳುತ್ತದೆ ಎಂದುಕೊಂಡೆ. ಈ ಮೂವರ ಪೈಕಿ ಇಬ್ಬರನ್ನು ಸೋಲಿಸುವುದು ಕಷ್ಟವಿತ್ತಾದರೂ ಮೂರನೆಯವನನ್ನು ಸೋಲಿಸಬಲ್ಲೆ ಎನ್ನುವ ಆತ್ಮವಿಶ್ವಾಸ ನನ್ನಲ್ಲಿತ್ತು. ಆದರೆ ನನಗ್ಯಾಕೋ, ನನ್ನ ವಿರುದ್ಧ ಸಾಗರ್ ಚಿಂಚೋಳಿಮಠನೇ ನನ್ನ ವಿರುದ್ಧ ಬೀಳುತ್ತಾನೆ ಎನ್ನಿಸಿತು. ಏನುಮಾಡಬೇಕೋ ತಿಳಿಯಲಿಲ್ಲ. ಕತ್ತಲೆಯಲ್ಲಿ ಭಯ ಹೆಚ್ಚಂತೆ..ರಾತ್ರಿಯಾದಂತೆ ನನ್ನೊಳಗಿನ ಭೀತಿ, ತಳಮಳ ಹೆಚ್ಚಾಯಿತು.
ಆದರೆ, ನಮ್ಮ ಹುಡುಗರು ಆ ದಿನ ಕೊಂಚ ಹೆಚ್ಚಾಗಿಯೇ ತಿಂಡಿ ತಿಂದಿದ್ದರಿಂದ ರಾತ್ರಿಯ ಊಟಕ್ಕೆ ಸ್ವಲ್ಪ ದುಡ್ಡು ಕಡಿಮೆ ಬಿದ್ದುಬಿಟ್ಟಿತು. ಹಾಗಾಗಿ ಅದನ್ನು ಇಸ್ಕೊಂಡು ಬರೋಣವೆಂದು ನಾನು ಹಾಗೂ ಪಾವಸ್ಕರ ನಮ್ಮ ಮ್ಯಾನೇಜರ್ N H Goudaರು ಉಳಿದುಕೊಂಡಿದ್ದ `ವಿಮೋಚನ' ಬಾರ್ & ಲಾಡ್ಜಿಗೆ ಹೋದೆವು. ಹೇಗೋ, ಏನೋ ಅಂದ್ಕೊಂಡು ಒಳಗೆ ಕಾಲಿಟ್ಟೆವು. ಗೌಡರು 3ನೇ ಮಹಡಿಯಲ್ಲಿದ್ದಾರೆಂದು ತಿಳಿಯಿತು. ಹೋಗುವ ವೇಳೆಗೆ 2ನೇ ಮಹಡಿಯಲ್ಲಿ ಶಿರಸಿಯ ಹುಡುಗ ನಾಗರಾಜ ಹೆಗಡೆ ಸಿಕ್ಕ. ಬ್ಲೂ ಸೆಲೆಕ್ಷನ್ನಿಗೆ ಬಂದಿದ್ದ ಆತನೂ ಅಲ್ಲಿ ಉಳಿದುಕೊಂಡಿದ್ದ. ಅವನೊಂದಿಗೆ ಹರಟೆಗೆ ಕುಳಿತೆವು. ಕೊನೆಗೆ ಮಾತು ಗೌಡರ ಕುರಿತು ಹೊರಳಿದಾಗ ಆತ `ನೀವು ಈಗ ಗೌಡರನ್ನು ಕಾಣದೇ ಇರೋದೇ ಒಳ್ಳೆಯದು' ಅಂದ.
`ಯಾಕೆ..?' ಅಂದ್ವಿ.
`ಇದು ಬಾರ್ & ಲಾಡ್ಜ್..' ಅಂದ..
`ಅಂದ್ರೆ ಕುಡ್ದಿದ್ದಾರೆ ಅಂತ ಅರ್ಥನಾ..?' ಎಂದೆ.
`ನಿ..ನಿಂಗೆ ಅಷ್ಟೂ ಅರ್ಥ ಆಗಲಿಲ್ವಾ..' ಎಂದು ಕೆಣಕಿ ತಿವಿದ ಪಾವಸ್ಕರ.
`ಬಿಡು..ಅರ್ಥ ಆಯ್ತು..'ಅಂದೆ.
ಹಾಗೆಯೇ ಸ್ವಲ್ಪಹೊತ್ತು ಕಳೆದಿದ್ದರಿಂದ ಅನುಮಾನಗೊಂಡು ನಮ್ಮನ್ನು ಹುಡುಕಲು ಕಿಟ್ಟು ಹಾಗೂ ಆನಂದ ಅಲ್ಲಿಗೆ ಬಂದರು. ಕೊನೆಗೆ ಅವರನ್ನು ನಾಗರಾಜ ಹೆಗಡೆ ಬಳಿ ಮಾತನಾಡಲು ಬಿಟ್ಟು ನಾನು ಹಾಗೂ ಪಾವಸ್ಕರ ಗೌಡರಿದ್ದ ರೂಮಿನ ಕಡೆಗೆ ಸಾಗಿದೆವು. ಅವರ ರೂಮು ಹತ್ತಿರಾದಂತೆಲ್ಲ ನಂಗೆ ಒಂಥರಾ ಅನ್ನಿಸಿತು. ಪಾವಸ್ಕರನ ಬಳಿ `ನೀನ್ಹೋಗಿ ಕೇಳೋ..'ಅಂದೆ. ಆತನಿಗೆ ಏನನ್ನಿಸಿತೋ ಏನೋ., ನೀನೂ ಬಾ ಅಂದ. ಅಂತೂ ಇಂತೂ ನಾನು ಅಂವ ಇಬ್ಬರೂ ನಿಧಾನವಾಗಿ ಹೋಗಿ ಬಾಗಿಲಲ್ಲಿ ಇಣುಕಿದೆವು.
ಆಗ ಕಾಣ್ತು.. ಅಲ್ಲಲ್ಲ.. ಕಂಡವು.. ಕಂಡರು.. ಆರೇಳು ಜನ.. ಎಲ್ಲರ ಕೈಯಲ್ಲೂ ಗ್ಲಾಸುಗಳು. ಗೌಡರ ಕೈಯಲ್ಲೂ ಅರ್ಧ ಪೆಗ್ಗು. ಗೋಗಟೆ ಕಾಲೇಜಿನ ಲೆಕ್ಚರ್ ಕೈಯಲ್ಲಿ ಪೂರ್ತಿ ಪೆಗ್ಗು. ಜೊತೆಗೆ ಆಟದ ಲೀಸ್ಟು. ವಿಚಿತ್ರವೆಂದರೆ ಅಲ್ಲಿದ್ದರು ಗೋಗಟೇ ಕಾಲೇಜಿನ ಆ ಆರು ಜನ ಆಟಗಾರರು.
ಅವರ idea ಪ್ರಕಾರವೇ list ತಯಾರಾಗುತ್ತಿತ್ತು..! ಒಮ್ಮೆ ಇಣುಕಿದ ಪಾವಸ್ಕರ `ಸರ್..' ಅಂದ. ಎಲ್ಲರೂ ಒಮ್ಮೆ ಬೆಚ್ಚಿ ಬಿದ್ದರು. ನಂಗೆ ತಕ್ಷಣ ಅಲ್ಲಿ ನಿಲ್ಲಲಾಗಲಿಲ್ಲ. ಪಾವಸ್ಕರನನ್ನು ಹಿಡಿದು ಎಳೆದುಕೊಂಡು ಬಂದೆ. ಅಷ್ಟರಲ್ಲಿ ಆ ರೂಮಿನಿಂದ ಹೊರ ಬಂದಾತ `ಏನು..?' ಅಂದ. ನಾವು ಕಾರಣ ತಿಳಿಸಿದೆವು. `ನಿಲ್ಲಿ ಬರ್ತಾರೆ..' ಅಂದ ಆತ.  ನಮ್ಮ ಕಸಿವಿಸಿ, ಗಲಿಬಿಲಿಯನ್ನು ಗಮನಿಸಿದ ಆತ ಹೋಗುವ ಮುನ್ನ `ಸ್ವಲ್ಪ ಹುಷಾರು.. ಅವರು ದೇವರಾಗಿ ಬಿಟ್ಟಿದ್ದಾರೆ..' ಎಂದ.
ನಾನು ನವೀನನ ಬಳಿ `ಬಗಲ್ ಮೆ ಶತ್ರು.. ಇಲ್ಲೆ ಇದ್ದಾನೋ..' ಅಂದೆ.
ಅದಕ್ಕೆ ಉತ್ತರವಾಗಿ ಪಾವಸ್ಕರ `ನೀನು ಬ್ಲೂ ಆಗೋ ಆಸೆ ಬಿಟ್ಬಿಡು..' ಅಂದ.
ಅಷ್ಟರಲ್ಲಿ ಅಲ್ಲಿಗೆ ಬಂದ ಗೌಡರು ಏನೆಂದು ಕೇಳಿದರು. ಹೇಳಿದೆವು. ದುಡ್ಡು ಕೊಟ್ಟರು. ನಾವು ಹೊರಡಲು ಅನುವಾದ ತಕ್ಷಣ `ನಿಲ್ಲಿ' ಅಂದರು. ನನ್ನ ಕರೆದು `ನಾಳೆ ನಿನ್ನ ವಿರುದ್ಧ ಚಿಂಚೋಳಿಮಠನ ವಿರುದ್ಧ ಬಿದ್ದೈತಿ..' ಎಂದರು.
`ಗೊತ್ತು ಸಾರ್.. ಹಿಂಗೆ ಆಗ್ತದೆ ಎಂದು ಗೊತ್ತಿತ್ತು.. ' ಅಂದೆ ಸಿಟ್ಟು ಹಾಗೂ ಅಸಹನೆಯಿಂದ.
ಆಗ ಪಾವಸ್ಕರ `ಸರ.. ಇದನ್ನ ಹ್ಯಾಂಗೂ ಚೇಂಜ್ ಮಾಡ್ಲಿಕ್ಕೆ ಆಗೋದಿಲ್ಲೇನ್ರಿ.. ಸರ ಸಮೀರನನ್ನು ಹ್ಯಾಂಗಾದ್ರೂ ಮಾಡಿ ವಿನಯನ ವಿರುದ್ಧ ಹಾಕಿಸಿ.. ಬಹಳ ದಿನಗಳ ಸೇಡು ಬಾಕಿ ಉಂಟು.. ಅವನ್ನ ಹೊಡೀತಿವಿ.. ಹಾಕಿಸ್ರಿ..' ಅಂದ.
`ಏ.. ಹಂಗೆಲ್ಲಾ ಬರಾಂಗಿಲ್ಲಪ್ಪ.. ರೂಲ್ಸೋ.. ರೂಲ್ಸು.. ಅಂವ.. ಆ ಕುಂಟ ಲೆಕ್ಚರ್ರು ಕೇಳಾಂಗಿಲ್ಲೋ..' ಎಂದರು.
ನಾನು `ಗೊತ್ತಾಯ್ತು ಬಿಡಿ ಸಾರ್.. ನಾಳೆ ತಲೆಯೆತ್ತಿ ಸೋಲ್ತೀನಿ.. ಆದ್ರೂ ನೀವು ಹೀಗ್ಮಾಡ್ಬಾರ್ದಿತ್ತು..ಬಾರಲೇ ಪಾವಸ್ಕರ..ಹೋಗಾಣ..' ಎನ್ನುತ್ತಾ ಹೊರಟು ಬಂದೆ.. ಪಾವಸ್ಕರ ಹಿಂಬಾಲಿಸಿದ.. ಹಿಂಭಾಗದಲ್ಲಿ `ಯೇ.. ವಿನಯ.. ನನ್ ಮಾತ್ ಕೇಳಲೆ..' ಎಂದು ಪದೇ ಪದೆ ಹೇಳುತ್ತಿದ್ದುದು ಕಿವಿಯ ಮೇಲೆ ಬೀಳುತ್ತಿತ್ತು.
ಕೆಳಗೆ ನಾಗರಾಜನ ರೂಮಿಗೆ ಬಂದೆ. ನಾಗರಾಜ ಎಲ್ಲಾ ಗೊತ್ತಿದ್ದವನಂತೆ ನಗುತ್ತಿದ್ದ. ಆನಂದ `ಏನು..?' ಎಂಬಂತೆ ನೋಡಿದ. ನವೀನ ಸಿಟ್ಟಿನಿಂದ `ಲೋಫರ್ಸ್.. ಮ್ಯಾಚ್ ಫಿಕ್ಸಿಂಗ್ ಕಣಲೇ..' ಎಂದ. `ನಂಗೊತ್ತಿತ್ತು.. ಗೌಡರ ಹಕೀಕತ್ತು.. ಮೊದಲನೇ ದಿನವೇ ನನಗೆ ಇದರ ಬಗ್ಗೆ ಪರಿಚಯ ಇತ್ತು..' ಎಂದ ನಾಗರಾಜ.
`ಈಗೇನ್ ಮಾಡೋದು..?' ಎಂದ ಆನಂದ.
`ಒಂದ್ ಸಾರಿ ನಮ್ M K Hegdeರಿಗೆ ಪೋನ್ ಮಾಡಿ ಕೇಳೋಣ.. ಅವರೇನಂತಾರೆ ಅಂತ ತಿಳ್ಕೊಳ್ಳೋಣ. ಅವರು ಹೇಳ್ದಾಂಗೆ ಮಾಡೋಣ..' ಎಂಬ ಸಲಹೆ ಕೊಟ್ಟ ಪಾವಸ್ಕರ.
ಕೊನೆಗೆ ಅಲ್ಲಿಯೇ ಇದ್ದ ಕಾಯಿನ್ ಬೂತಿಗೆ ಹೋಗಿ ಪೋನಾಯಿಸಿ ಹಿಂಗಿಂಗಾಯ್ತು ಅಂದೆವು. ಅದೆಷ್ಟು ಸಿಟ್ಟು ಬಂದಿತ್ತೋ ಎಂ. ಕೆ. ಹೆಗಡೆಯವರಿಗೆ `ಆ ಗೌಡರು ಅಲ್ಲಿ ಅದೇನ್ ಮಾಡ್ತಾ ಇದ್ದಾರೆ..? ಅವರಿಗೆ ಏನೇನ್ ಮಾಡ್ಬೇಕು ಎಲ್ಲಾ ಗೊತ್ತಿದೆ.. ಅದನ್ನು ಬಿಟ್ಟು ಹಿಂಗೆಂತಕ್ಕೆ ಮಾಡ್ತಾ ಇದ್ದಾರೆ..'ಎಂದವರು ಸಡನ್ನಾಗಿ `ಬಹಳ ತಗೊಂಡಿದ್ದಾರಾ..? ದುಡ್ಡು ಸುಮಾರು ಓಡಾಡಿರಬೇಕು..' ಅಂದರು. ಕೊನೆಗೆ ನಾವು ಎಲ್ಲ ಉತ್ತರ ಹೇಳಿದ ಮೇಲೆ ಅವರು ನಮ್ಮ ಬಗ್ಗೆ ಕನಿಕರಿಸಿ `ನಿಮಗೆಲ್ಲಾ ಲಾಡ್ಜಲ್ಲಿ ವ್ಯವಸ್ಥೆ ಮಾಡಿದ್ದಾರಾ..? ವ್ಯವಸ್ಥೆನಾದ್ರೂ ಚನ್ನಾಗಿ ಮಾಡಿರಬಹುದು ಅಲ್ವಾ.. ಲೇಡೀಸ್ ಹೇಗಿದ್ದಾರೆ..?' ಎಂದರು.
ಅದಕ್ಕೆ ಉತ್ತರವಾಗಿ ನಾವು ನಮಗೆ ಕೊಟ್ಟಿದ್ದ ನುಶಿಕೋಟೆಯ ಕೋಣೆಯ ಬಗ್ಗೆ, ನಮ್ಮ ತಿಂಡಿಯ ಪಡಿಪಾಟಲು, ಲೇಡೀಸ್ ಪಡುತ್ತಿರುವ ತೊಂದರೆ ಇವೆಲ್ಲದರ ಬಗ್ಗೆ ಹೇಳಿದಾಗ ಮತ್ತೆ ಸಿಟ್ಟುಮಾಡಿಕೊಂಡ ಹೆಗಡೆಯವರು `ಅಲ್ರೋ.. ಮ್ಯಾನೇಜುಮೆಂಟು ಭಾರಿ ದುಡ್ಡು ಕೊಡ್ತದೆ ಕಣ್ರೋ.. ಅವ್ರು ಕೊಡೋ ದುಡ್ಡು ನೋಡಿದ್ರೆ ನಿಮ್ಮನ್ನು ತಿಂಗಳುಗಳ ಕಾಲ ಬೇಕಾದ್ರೂ ಲಾಡ್ಜಲ್ಲಿ ಇಡಬಹುದಾಗಿತ್ತು. ಹುಂ.. ಅದೆಲ್ಲಾ ಈಗ ಹಾಗೆ ಹಾಳಾಗ್ತಾ ಇದೆ..' ಅಂದರು. ಕೊನೆಯದಾಗಿ ಪಾವಸ್ಕರ `ಸರ್ ನಿಮ್ಮನ್ನು ನಾವು ತುಂಬಾ miss ಮಾಡ್ಕೋತಾ ಇದ್ದೀವಿ.. ನೀವಿರಬೇಕಿತ್ತು ಸಾರ್.. ಗೋಗಟೆಯ ಸೊಕ್ಕು ಮುರಿಯಬಹುದಿತ್ತು..' ಅಂದು ಪೋನ್ ಇಟ್ವಿ. ಸರಿಸುಮಾರು 30 ಕಾಯಿನ್ನುಗಳು ಖಾಲಿಯಾಗಿದ್ದವು.
ಅಷ್ಟರಲ್ಲಿ ಅದೇ ದಾರಿಯಲ್ಲಿ ಗೋಗಟೆ ಹುಡುಗರು ಮರಾಟಿಯಲ್ಲಿ ಅದೇನೇನೋ ದೊಡ್ಡದಾಗಿ ಹೇಳುತ್ತಾ ನಗುತ್ತಾ ಇಳಿದು ಹೋಗುತ್ತಿದ್ದರು. ನನಗೆ ಪಾವಸ್ಕರ ಎಲ್ಲಿ ಅವರ ಜೊತೆಗೆ ಹೊಡೆದಾಟಕ್ಕೆ ಹೊರಡುತ್ತಾನೋ ಎನ್ನುವ ದಿಗಿಲಿತ್ತು.
ನಮ್ಮ ತಂಡ ಗೌಡರಿಗೆ ಬಯ್ಯುತ್ತಾ ಊಟ ಮಾಡಿ ನಾಳೆ ಗೋಗಟೆ ಕಾಲೇಜಿನ ಹುಡುಗರನ್ನು ಸೋಲಿಸಿದಂತೆ ಕನಸು ಕಾಣುತ್ತಾ ನುಶಿಕೋಟೆಗೆ ವಾಪಸ್ಸಾದೆವು.
ದೂರದಲ್ಲಿ ಗುಡುಗುವ ಸದ್ದು ಕೇಳುತ್ತಿತ್ತು.. ಸಿಕ್ಕಾಪಟ್ಟೆ ಮೋಡವಾಗಿದ್ದ ಲಕ್ಷಣಗಳೂ ಇದ್ದವು. ಸೆಖೆ ಹೆಚ್ಚಿದ್ದು ಮೈಮೇಲಿನ ಬಟ್ಟೆ ಕಿತ್ತೊಗೆಯುವಷ್ಟಾಗಿದ್ದವು..  ಮಲಗಿ ನಿದ್ರಿಸಿದೆವು. ನನಗೆ ನಿದ್ದೆ ಹತ್ತಲಿಲ್ಲ. ಮೊದ ಮೊದಲು ಗೌಡರ ಮ್ಯಾಚ್ ಫಿಕ್ಸಿಂಗ್ ನೆನಪಾಯಿತು. ನಂತರ ಆನಂದ, ಕಿಟ್ಟು, ನವೀನ , ನಮ್ಮ ಲೇಡೀಸ್ ಟೀಮಿನ ಸದಸ್ಯೆಯರು ನನ್ನ ಮೇಲಿಟ್ಟ ಭರವಸೆ, ನಾನು ಬ್ಲೂ ಆಗಬೇಕೆಂದು ಅವರೆಲ್ಲ ಪ್ರಯತ್ನ ಪಡುತ್ತಿರುವುದನ್ನು ಅನ್ನಿಸಿ ಕಣ್ಣೀರಾಯಿತು. ಕೊಂಚ ಸಮಯ ಕಳೆದ ನಂತರ ನವೀನ `ವಿನೂ.. ನಿದ್ದೆ ಬರ್ಲಿಲ್ವಾ..' ಎಂದ. `ಹೂಂ..' ಅಂದೆ.. `ಮ್ಯಾಚ್ ಆಡೋಣ್ವಾ..' ಎಂದ.. `ಸತ್ರಿ ನನ್ ಮಕ್ಳಾ.. ಈಗ್ಲೆ 12 ಗಂಟೆಗೂ ಹೆಚ್ಚಾಗಿದೆ.. ಮುಚ್ಕೊಂಡು ಮಲಕ್ಕೋಳ್ರೋ.. ನಿದ್ದೆ ಬರ್ತದಾ ನೋಡ್ತೀನಿ..' ಎಂದು ಕಿಟ್ಟು ಬೈದ..
ಅರೇ... ಯಾರಿಗೂ ನಿದ್ದೆ ಬಂದಿರಲಿಲ್ಲವೇ..


21-09-2007, ಶುಕ್ರವಾರ
`ಏ ಏಳ್ರಲೆ.. ಲೋಫರ್ಸ್.. ಏಳೂವರೆಯಾಯ್ತು.. ಮಕ್ಳಾ.. ಹಂದಿ ಹಂಗೆ ಬಿದ್ಕೊಂಡಿದ್ರೇನ್ರೋ..' ಅನ್ನೋ ಧ್ವನಿಕೇಳಿ ಎಲ್ಲ ದಡಬಡಿಸಿ ಎದ್ದೆವು. ಬಾಗಿಲು ತೆರೆದವರಿಗೆ ಎದುರಿಗೆ ಕಂಡಿದ್ದು ಲೋಫರ್ರುಗಳಿಗಿಂತ ಲೋಫರ್ರಾದ ನಾಗರಾಜ..!!
ಆತ ಬೆಳಿಗ್ಗೆ ಎದ್ದವನೇ ಚೆಸ್ ಪ್ರಾಕ್ಟೀಸಿಗೆ ನಮ್ಮ ನುಶಿಕೋಟೆಗೆ ಬಂದುಬಿಟ್ಟಿದ್ದ. ನಾವಿನ್ನೂ ಎದ್ದೇ ಇರಲಿಲ್ಲ. ಕಾರಣ ಗೊತ್ತಿದ್ದುದ್ದೇ ಆಗಿತ್ತು.
ರೂಮಿಂದ ಹೊರಗೆ ಕಾಲಿಟ್ಟರೆ ನೆಲವೆಲ್ಲ ಒದ್ದೆಮುದ್ದೆ.. ರಾತ್ರಿ ಯಾವಾಗಲೋ ಮಳೆ ಬಂದ ಕುರುಹು.. ಮಣ್ಣಿನ ವಾಸನೆ ಗಮ್ಮೆನ್ನುತ್ತಿತ್ತು.. ಕೊನೆಗೆ ಒಂದಿಷ್ಟು ಚೆಸ್ ಆಡಿ ನಾವು ಸಂಪೂರ್ಣ ತಯಾರಾಗುವ ವೇಳೆಗೆ ಸಮಯ ಒಂಭತ್ತಕ್ಕೆ ಢಣ್ಣೆಂದಿತು. ಮ್ಯಾಚು ಚಿಂಚೋಳಿಮಠನ ಮೇಲೆ ಬಿದ್ದಿದ್ದು ಫಿಸ್ಕಾಗಿಯೇ ಇತ್ತು. ಛೇಂಜಾಗಿರಲಿಲ್ಲ. ಎಲ್ಲರೂ ನನ್ನ ಬಳಿ ಬಂದು ಸಂತಾಪ ಸೂಚಕ ಮಾತುಗಳನ್ನು ಆಡುವವರೇ.. `ಬಸವನ ಬಾಗೇವಾಡಿ ಬಸವಣ್ಣ.. ಕಾಪಾಡೋ ತಂದೆ..' ಎನ್ನುತ್ತಾ ಮ್ಯಾಚಿಗೆ ಕುಳಿತೆ.
ಯಾಕೋ ಕಣ್ಣಿಗೆ ಬೋರ್ಡು ಕಾಣಲೇ ಇಲ್ಲ. ಗೌಡರ ಮೋಸವೇ ಎದ್ದೆದ್ದು ಕಾಣುತ್ತಿತ್ತು. ಸಾಯ್ಲಿ ಬಿಡು ಎಂದು neglect ಮಾಡಿದೆ. ಆ ಚಿಂಚೋಳಿಮಠನೂ ಭಯಂಕರವಾಗಿ ಆಡಿಬಿಟ್ಟ. ಪಾವಸ್ಕರ ಪದೇ ಪದೆ ನನ್ನ ಬಳಿ ಇಣುಕಿ `ಡ್ರಾ ಕೇಳೋ.. ಕೊಟ್ಟರೆ ಕೊಡಲಿ..' ಎಂದ. ನಾನು ಕೇಳಿದೆ.. `ನೋ.. ಅಂದ..' ಟೈಂಪಾಸ್ ಮಾಡಿದೆ.. ವರ್ಕೌಟ್ ಆಗಲಿಲ್ಲ.. ಕೊನೆಗೆ ಮ್ಯಾಚನ್ನು ಹೀನಾಯವಾಗಿ ಸೋತೆ.
ಅಲ್ಲಿಗೆ ನನ್ನ ಬ್ಲೂ ಆಸೆಗೆ ತಿಲಾಂಜಲಿ ನೀಡಿದೆ. ಮುಂದಿನ ಮ್ಯಾಚು ಏನಾದರೇನು ಎಂದುಕೊಂಡೆ. ಅದಕ್ಕೆ ಸರಿಯಾಗಿ ಒಬ್ಬ ಬಕರಾ ಬಿದ್ದ. ಹೀನಾಯವಾಗಿ ಸೋಲಿಸಿದೆ. ಯಾರ ಮೇಲಿನ ಸೇಡನ್ನೋ, ಸಿಟ್ಟನ್ನೋ ಇನ್ಯಾರ ಮೇಲೋ ತೀರಿಸಿಕೊಂಡೆ. ಕೊನೆಗೆ ನನ್ನ ಪಾಯಿಂಟು 4.5 ಆಯಿತು. ಬ್ಲೂ ಆಗಲಿಲ್ಲ. ರಿಸರ್ವ ಬ್ಲೂ ಆದೆ.
ಶತಮಾನದ ದುರಂತವೆಂಬಂತೆ ನಾಗರಾಜ ಹೆಗಡೆ ಬ್ಲೂ ಆಗಿಬಿಟ್ಟ.! ಆತ ಮೊದಲನೇ ಮ್ಯಾಚಿನಲ್ಲೇ ಸೋತು ಪ್ರಭಲ ಎದುರಾಳಿಗಳು ಸಿಗದಂತೆ ಮಾಡಿಕೊಂಡು ಗೆದ್ದಿದ್ದ. ನಮ್ಮ ಕಾಲೇಜಿನ ಲೇಡೀಸ್ ಟೀಮಿನ 2-3 ಆಟಗಾರರು ಆತನಿಗೆ ಸಿಕ್ಕು ಸೋತಿದ್ದರು. ನಾವು ಸೋತು ಆತ ಬ್ಲೂ ಆದಮೇಲೆ ಶುರುವಾಯಿತು ನೋಡಿ ಆತನ ಅಸಲಿ ವರಸೆ..ನಮಗೆ ಆಟವೇ ಬರುವುದಿಲ್ಲ ಎಂಬಂತೆ ಮಾತಾಡತೊಡಗಿದ. ನಾನು ಹಾಗೆ ಮಾಡಿದೆ.. ಹೀಗೆ ಮಾಡಿದೆ.. ಎಂದು ಬಡಾಯಿ ಕೊಚ್ಚಿಕೊಂಡ.
ಅನಿಕೇತನ್ ಪಾವಸೆ, ಸಾಗರ ಚಿಂಚೋಳಿಮಠ, ನಾಗರಾಜ ಹೆಗಡೆ, ಸಮೀರ ಗೋಟ್ನೆ ಹಾಗೂ ಗೋಗಟೆ ಕಾಲೇಜಿನ ಇನ್ನೊಬ್ಬ ಆಟಗಾರ ಬ್ಲೂ ಆದರು. ನಾನು, ರಾಜೇಂದ್ರ ಬಾಬು ಹಾಗೂ ಕುಮಟಾದ ಹುಡುಗನೊಬ್ಬ ಸೇರಿ ಮೂವರು ರಿಸರ್ವ ಬ್ಲೂ ಆದೆವು.
ನನಗೆ ಬಹು ಬೇಜಾರಾಗಿತ್ತು. ಸೋತಿದ್ದಕ್ಕೂ, ಗೌಡರ ಮೇಲೂ.ಕೊನೆಗೊಮ್ಮೆ ನನ್ನೊಳಗಿನ ತಳಮಳವನ್ನು ತಾಳಲಾರದೇ `ಸರ್.. ನೀವು ಹೀಗ್ಮಾಡ್ಬಾರ್ದಿತ್ತು..' ಅಂದಿದ್ದೆ.. ಅದಕ್ಕವರು `ಅಲ್ಲೋ.. ನಾನೇನೂ ಮಾಡಾಕ ಬರ್ತಿಲ್ಲಿಲ್ಲೋ..' ಅಂದರು. ಹಾಗೇ ಮುಂದುವರಿದು `ಖರೆ ಹೇಳ್ಬೇಕು ಅಂದ್ರೆ ನಿನ್ನ ಸೋಲಿಗೆ ನೀನೇ ಕಾರಣ.. ನಂಗೊತ್ತೈತಿ.. ನೀನು ಚನ್ನಾಗಾಡ್ತಿ ಅಂತ.. ಆದರೆ ನಮ್ಮ ಕಾಲೇಜಿನ ಲೇಡೀಸ್ ಟೀಮನ್ನು ಬ್ಲೂ ಸೆಲೆಕ್ಷನ್ನಿಗೆ ಆಡ್ಸಿದ್ದಿ ನೋಡು ಅದೇ ನಿನ್ನ ಸೋಲಿಗೆ ಕಾರಣವಾಯಿತು. ಅದೇ ನಿನ್ನ ದೊಡ್ಡ ತಪ್ಪು. ನಮ್ಮ ಕಾಲೇಜಿನ ಲೇಡೀಸ್ ಟೀಂ ಆಟಗಾರರನ್ನು ಸೋಲಿಸಿಯೇ ಆ ನಾಗರಾಜ ಬ್ಲೂ ಆಗಿದ್ದು..ಹಿಂಗ್ ಮಾಡಬಾರದಿತ್ತು.. ನಿನ್ನ ಸೋಲಿಗೆ ನೀನೆ ಕಾರಣ..' ಎಂದರು.
ನಾನು ವಾದ ಮಾಡಿದೆ. ಆದರೆ ಗೌಡರು ಕೇಳುವ ಹುಮ್ಮಸ್ಸಿನಲ್ಲೇ ಇರಲಿಲ್ಲ.. ಕೊನೆಗೊಮ್ಮೆ ಪಾವಸ್ಕರನ ಜೊತೆಗೆ ಈ ವಿಷಯ ಚರ್ಚೆ ಮಾಡಿದೆ. ಅದೇ ಸಮಯಕ್ಕೆ ಅಲ್ಲಿಗೆ ಬಂದ ಲೇಡೀಸ್ ಟೀಂ ಕ್ಯಾಪ್ಟನ್ ಪೂರ್ಣಿಮಾ ಟಿ. ಹೆಗಡೆ ನನ್ನ ಜೊತೆ ಮಾತಿಗೆ ನಿಂತರು. `ನಮ್ಮ ಟೀಮನ್ನು ಆಡಿಸದಿದ್ದರೆ ತಲೆಗೆ 100 ರುಪಾಯಿಯಂತೆ 400 ರು. ಉಳಿತಿತ್ತು. ಅದು ಉಳಿಯಲು ನೀ ಕೊಡಲಿಲ್ಲ.. ಅದಕ್ಕೆ ನಮ್ಮನ್ನು ಆಡಿಸಿದ ನೆಪ ಹೇಳಿದರು..' ಎಂದಳು ಆಕೆ. ಹೌದೇನೋ ಅನ್ನಿಸಿತು. ದುಡ್ಡು ಏನನ್ನು ಬೇಕಾದರೂ ಮಾಡಿಸುತ್ತದಾ..? ಅಂದುಕೊಂಡೆವು..

(ಮುಂದುವರಿಯುತ್ತದೆ..)
(ಮುಂದಿನ ಭಾಗದಲ್ಲಿ ನಿರೀಕ್ಷಿಸಿ.. ಬಾಗೇವಾಡಿಯಿಂದ ಕೂಡಲಕ್ಕೆ..ನೆರೆಯ ದಾರಿಯಲ್ಲಿ ಕಣ್ಣೀರದಾರೆ..)

Tuesday, December 3, 2013

Funny ಹನಿಗಳು


71.ಹುದ್ದೆ-ನಿದ್ದೆ

ಒಂದು ಸಾಹಿತ್ಯ ಸಮ್ಮೇಳನದಲ್ಲಿ ಕುಳಿತಿದ್ದೆ
ಕೊಟ್ಟಿದ್ದರು ಅಧ್ಯಕ್ಷರ ಹುದ್ದೆ |
ಎಲ್ಲರ ಮಾತು ಕಥೆ, ಪೀಠಿಕೆ ಮಿಗಿವಾ
ಬಂದಿತ್ತಾಗಲೇ ನನಗೊಂದು ಸುಖನಿದ್ದೆ ||

72.ಕೋಗಿಲೆ-ಕಾಗೆ
 
ಕನ್ನಡದ ಕೋಗಿಲೆಯೊಂದು ಹಾಡುತ್ತಿತ್ತು|
ಕೇಳಿ ಸ್ಪೂರ್ತಿಯುಕ್ಕಿದ ರಂಗ
ಹಾಡಲು ಹೋದ|
ಕೇಳಿದ ಜನ ಅವನನ್ನು
ವಾಪಾಸ್ಸು ಕಳಿಸುತ್ತಾ ಎಂದರು,
ಸುಮ್ಮನಿರು ಕಾಗೆ ||

73.ಜನರೇಷನ್ ಗ್ಯಾಪ್

ಆ ಮನೆಯಲ್ಲಿರುವುದು
ಅಜ್ಜಿ-ಮಗು ಪಾಪು|
ಜೊತೆಯಲ್ಲೇ ಉಂಟು
ಜನರೇಷನ್ ಗ್ಯಾಪು||

74.RUMಭೆ

ರಂಭೆಯಿಂದ ಮತ್ತು
ಹೇಗೆ ಸಾಧ್ಯ?
ಮತ್ತೇನಿದ್ದರೂ 
RUMಭೆಯಿಂದಲ್ಲವೇ?

75.ಕಾರಣ

ವಿಶ್ವಕ್ಕೆಲ್ಲ ಜಾಗತೀಕರಣ,
ಔದ್ಯೋಗೀಕರಣ, ಖಾಸಗೀಕರಣ,
ಸಾಮಾಜೀಕರಣ, ಆಧುನೀಕರಣ
ಹೀಗೆಲ್ಲ ಇದ್ದರೆ , ಭಾರತಕ್ಕೆ
ಒಂದೇ ಕಾರಣ-ರಾಜಕಾರಣ ||

76.ಗಾಯತ್ರಿ

ಭಟ್ಟರು ಪ್ರತಿದಿನ ನನ್ನಲ್ಲಿ
ಗಾಯತ್ರಿ ಜಪ ಮಾಡಬೇಕೆಂದು|
ನಾನು `ಗಾಯತ್ರಿ ಗಾಯತ್ರಿ' ಎಂದು
ಜಪ ಮಾಡಹತ್ತಿದೆ ಇದು ತಪ್ಪೇ..?

77.ಬೀchee ಹಾಸ್ಯ

ನಮ್ಮ ಗುರು ತಿಂಮ
ಹಾಸ್ಯ ಮಾಡಿದಾಗ
ಜನರು ವಾ ಬೀchee
ಅದ್ಭುತ ಹಾಸ್ಯವೆಂದರು|
ನಾನು ಹಾಸ್ಯ ಮಾಡಿದಾಗ
ಥೂ..ಛೀ.. ಇದು ಹಾಸ್ಯವೇ ಎಂದರು||

78.ಸರ್ಕಾರಿ ನೌಕರ

ಜನರ ಸೇವೆಯನ್ನು
ದನದ ಸೇವೆ
ಎಂದು ತಿಳಿದವ
ಸರ್ಕಾರಿ ನೌಕರ

79.ಚಂದ್ರನಲ್ಲಿ ಬಾವುಟ

ನಮ್ಮ ಜನ
ಚಂದ್ರನಿಗೂ ಕೊಟ್ಟರು ಕಾಟ|
ನೆಟ್ಟರು ಗೂಟ, ಜೊತೆಗೆ
ಅಮೆರಿಕೆಯ ಬಾವುಟ ||

80.(ವಾ)ನರ

ನರ, ನಾಗರೀಕತೆಯಲ್ಲಿ
ಸಿಲುಕಿ, ಆಧುನಿಕತೆಯಲ್ಲಿ
ಮುಂದುವರಿದು ಆಗುತ್ತಿದ್ದಾನೆ
ವಾನರ||

Monday, December 2, 2013

ಅಣೆಕಟ್ಟು (ಕಥೆ)

`ಅಜ್ಜಾ.. ನಮ್ ಅಘನಾಶಿನಿ ಹೊಳಿಗೆ ಅಣೆಕಟ್ಟು ಹಾಕ್ತ್ವಡಾ..'
ಎಂದು ಶಾಲೆಯಿಂದ ಓಡೀಡಿ ಬರುತ್ತಲೇ ಮೊಮ್ಮಗ ಒಂದೇ ಉಸುರಿಗೆ ಹೇಳಿದಾಗ ವಿಘ್ನೇಶ್ವರ ಹೆಗಡೆಯವರಿಗೆ ಒಮ್ಮೆಲೆ ಆಕಾಶವೇ ತಲೆಯ ಮೇಲೆ ಕಳಚಿ ಬಿದ್ದಂತೆ ಆಯಿತು. ಅದೇನೋ ತಳಮಳ.. ತಾನು ಕೇಳಿದ ವಿಷಯ ನಿಜವೋ, ಸುಳ್ಳೋ ಎಂದು ತಿಳಿಯಲು ಮತ್ತೊಮ್ಮೆ ಮೊಮ್ಮಗನನ್ನು ಏನೆಂದು ಕೇಳಿದರು.
ಅದಕ್ಕವನು `ಅಜ್ಜಾ.. ನಮ್ಮ ಈ ಅಘನಾಶಿನಿ ನದಿಗೆ ಅಣೆಕಟ್ಟು ಕಟ್ತ್ವಡಾ.. ಅದಕ್ಕಾಗಿ ಸರ್ವೆ ಎಲ್ಲಾ ನಡೀತಾ ಇದ್ದಡಾ.. ಅಣೆಕಟ್ಟಿಂದ ನಮ್ಮೂರೆಲ್ಲಾ ಮುಳುಗಿ ಹೋಗ್ತಡಾ..' ಎಂದ.
`ಮಳ್ಳ ಹುಡ್ರು.. ಯಂತದ್ದೋ ಸುದ್ದಿ ಕೇಳ್ಕ್ಯಬತ್ತ.. ಇಲ್ಲಿ ಬಂದು ಇನ್ನೆಂತೆಂತದ್ನೋ ಹೇಳ್ತ.. ಯಾರು ಹೇಳಿದ್ವಾ ನಿಂಗೆ ಇದ್ನಾ..' ಎಂದು ತುಸು ಸಿಟ್ಟಿನಿಂದಲೇ ಕೇಳಿದರು ಹೆಗಡೆಯವರು.
`ಅಜ್ಜಾ ಯಂಗಳ ಶಾಲೆಲ್ಲಿ ಮಾಸ್ತರ್ರು, ಹುಡುಗ್ರು ಎಲ್ಲಾ ಮಾತಾಡ್ಕ್ಯತ್ತಾ ಇದ್ದಿದ್ದ.. ನಿನ್ನೆಯಾ ಟೀ.ವಿ.. ತೋರ್ಸಿದ್ವಡಾ..' ಎಂದ ಮೊಮ್ಮಗ.
ಒಮ್ಮೆಲೆ ದಿಗ್ಭ್ರಾಂತಿಯಾದರೂ ಸಾವರಿಸಿಕೊಂಡು ಮೊಮ್ಮಗ ಹೇಳಿದ ವಿಷಯವನ್ನು ಕೇಳಲೋ ಅಥವಾ ಇತರರಲ್ಲಿ ಚರ್ಚಿಸಲೋ ಎಂಬಂತೆ ಅವರು ನಿಧಾನವಾಗಿ ತಮ್ಮ ದೊಡ್ಡ ಮನೆಯ ಚಿಕ್ಕ ಪ್ರಧಾನಬಾಗಿಲನ್ನು ದಾಟಿ ಹೆಬ್ಬಾಗಿಲನ್ನು ಹಾದು ಹೊರಬಂದರು. ಅಲ್ಲಿಯೇ ಸ್ವಲ್ಪ ದೂರದಲ್ಲಿ ಹಲವು ಹಿರಿಯ ಜೀವಿಗಳ ವಿಹಾರ, ಮಾತಿನ ತಾಣವಾಗಿದ್ದ ಅಶ್ವತ್ಥ ಮರದ ಚಾವಡಿ ಕಟ್ಟೆಯ ಬಳಿಗೆ ಸಾಗಿದರು.

**

ಉತ್ತರ ಕನ್ನಡ ಕನ್ನಡ ನಾಡಿನ ಹೆಮ್ಮೆಯ ಕಿರೀಟಕ್ಕೊಂದು ಮುಕುಟಮಣಿ. ಅಂತಹ ಮುಕುಟದಲ್ಲಿರುವ ಜಿಲ್ಲೆಯ ತುಂಬ ಮಲೆನಾಡಿನ ಸೆರಗು ಹಾಸಿಬಿದ್ದಿದೆ. ಅಂತಹ ಮಲೆನಾಡಿನ ಒಂದು ಪುಟ್ಟ ಊರು ದಂಟಕಲ್. ಐದಾರು ಮನೆಗಳಿರುವ ಈ ಊರಿಗೆ ತಾಯಿ ಅಘನಾಶಿನಿಯೇ ಜೀವದ ಸೆಲೆ. ಇಂತಹ ಊರಿನಲ್ಲಿರುವ ದೊಡ್ಡ ಮನೆಯ ಯಜಮಾನರೇ ವಿಘ್ನೇಶ್ವರ ಹೆಗಡೆಯವರು. ಯಜಮಾನಿಕೆಗೆ ತಕ್ಕ ಗಾಂಭೀರ್ಯ, ನಡೆ-ನುಡಿ, ಕಠೋರತೆ ಅವರದ್ದು. ಕರುಣೆ, ಮೃದು, ಪ್ರೀತಿ ಅಲ್ಲೊಮ್ಮೆ ಇಲ್ಲೊಮ್ಮೆ ಇಣುಕುತ್ತಿತ್ತು. ಯವ್ವನದಲ್ಲಿ ಹುಲಿಯಂತೆ ಅಬ್ಬರಿಸಿದ್ದ ಹೆಗಡೆಯವರು ವಯೋಸಹಜವಾಗಿ ಮೆತ್ತಗಾಗಿದ್ದರು.
ನಿಧಾನವಾಗಿ ಅವರು ಸಾಗುವ ವೇಳೆಗೆ ಆ ಚಾವಡಿ ಕಟ್ಟೆಯಲ್ಲಿ ಆಗಲೇ ನಾಲ್ಕಾರು ಮುದಿ ಜೀವಗಳು ಆಗಮಿಸಿ ತಮ್ಮ ಎಂದಿನ ಮಾತುಕಥೆಯಲ್ಲಿ ತೊಡಗಿಕೊಂಡಿದ್ದರು. ವಿಘ್ನೇಶ್ವರ ಹೆಗಡೆಯವರು ನಿಧಾನವಾಗಿ ಚಾವಡೀಕಟ್ಟೆಯನ್ನು ತಲುಪುವ ವೇಳೆಗಾಗಲೇ ಪಕ್ಕದ ಮನೆಯ ಮಧುಕೇಶ್ವರಜ್ಜ `ಈ ಸರ್ಕಾರದವ್ಕೆ ಬ್ಯಾರೆ ಕೆಲ್ಸವೇ ಇಲ್ಲೆ.. ಕೆ.ಇ.ಬಿ.ಯವ್ಕಂತೂ ತಲೆನೇ ಸರಿಯಿಲ್ಲೆ.. ಬ್ಯಂಗ್ಳೂರು, ದಿಲ್ಲಿ, ಬಾಂಬೆ ಪಟ್ನಕ್ಕೆಲ್ಲಾ ಕರೇಂಟು ಕೊಡವು ಹೇಳಿ.. ಬಂಗಾರದ ಪವನ ಸರದಂತಾ ನಮ್ಮೂರನ್ನಾ.. ಚಿನ್ನದ ಬೆಳೆ ಕೊಡುವ ನಮ್ಮ ಭೂಮಿನ ಮುಳುಗಸ್ತ.. ಇದು ಒಳ್ಳೇದಕ್ಕೆ ಬಂದ ಬುದ್ದಿಯಲ್ಲಾ..' ಎಂದು ಜೋರಾಗಿ ಹೇಳುತ್ತಿರುವುದು ಕೇಳಿಸಿತು.
ಅಷ್ಟರಲ್ಲಿ ಅಲ್ಲಿಗೆ ಆಗಮಿಸಿದ ವಿಘ್ನೇಶ್ವರ ಹೆಗಡೆಯವರು ಈ ಮಾತಿಗೆ ಪ್ರತಿಯಾಗಿ `ಬಹುಶಃ ನಮ್ಮ ಈ ಹೊಳಿಗೆ ಅಣೆಕಟ್ಟು ಕಟ್ತ್ವಿಲ್ಲೆ ಕಾಣ್ತಾ.. ಈ ಸುದ್ದಿ ಸುಳ್ಳಾಗಿಕ್ಕು ಅನಿಸ್ತು..' ಎಂದು ಹೇಳಿದರು.
ಆಗ ಅಲ್ಲಿಯೇ ಇದ್ದ ವಿಘ್ನೇಶ್ವರ ಹೆಗಡೆಯವರ ಹಿರಿಯ ಮಗ ಸುಬ್ರಾಯ..`ಅಯ್ಯೋ.. ಇಲ್ಯಾ ಅಪ್ಪಯ್ಯಾ.. ಕಟ್ಟಿನ ಕೆಲ್ಸ ಶುರುವಾಗೋಜಡಾ.. ಬುಲ್ಡೋಜರೆಲ್ಲಾ ಮಾನಿಹೊಳೆಗೆ ಬಂದಿಗಿದಡ.. ಕೆಲಸಗಾರರೆಲ್ಲಾ ಬಂದಿಗಿದ್ವಡಾ.. ನಾಳೆನೋ, ನಾಡಿದ್ದೋ ನಮ್ಮ ಬದಿಗೆಲ್ಲಾ ನೀರಿನ ಮಟ್ಟ ಅಳೆಯಲೆ ಬತ್ವಡಾ.. ಥೋ.. ನಮ್ಮನ್ನೂ ಆ ಕಾಳಿ ನದಿ ಕಟ್ಟಿನ ಟೈಮಲ್ಲಿ ಮಾಡ್ದಾಂಗೆ ಮಾಡ್ತ್ವ ಯಂತದೇನ..' ಎಂದು ಭೀತರಾಗಿ ನುಡಿಯುತ್ತಿದ್ದಂತೆ ವಿಘ್ನೇಶ್ವರ ಹೆಗಡೆಯವರ ಎದೆಯಾಳದ ಧಿಗಿಲು ಹೆಚ್ಚಾಯಿತು.
`ಅಲ್ದಾ.. ಇಲ್ಲಿ ಮುಳ್ಸಿರೆ.. ಎಲ್ಲಿ ಜಮೀನು ಕೊಡ್ತ್ವಾ..? ಅದೆಂತಾದ್ರೂ ಹೇಳಿದ್ವಾ..? ನಮಗೆ ಪರಿಹಾರ ಕೊಡ್ತ್ವಾ?..' ಎಂದು ಕೇಳಿದ ಹಿಂದಿನಮನೆಯ ಮಾಬ್ಲಜ್ಜ.
ಅದಕ್ಕೆ ಪ್ರತಿಯಾಗಿ ಅಲ್ಲಿಯೇ ಇದ್ದ ಗಣಪಜ್ಜ 'ಹೂಂ.. ಕೋಡ್ತ..ಕೋಡ್ತ.. ಯಲ್ಲಾದ್ರೂ ಬೈಲಸೀಮೆ ಬದಿಗೆ ಜಮೀನು ಕೊಡ್ತ.. ಪರಿಹಾರ ಹೇಳಿ ಕೊಡ್ತ ಅದು ನಮ್ಮ ಹೂಸಿಗೂ ಸಮಾ ಆಗ್ತಿಲ್ಲೆ..' ಎಂದು ಸಿಟ್ಟಿನಿಂದ ನುಡಿದ.
`ಇಂತಾ ಜಮೀನಿನ ಬದ್ಲು ಯಂತಾ ಬೋಳು ಗುಡ್ಡೆ ಕೊಡ್ತ್ವ ಯಂತದೇನ..? ಇಸ್ಟೆಲ್ಲಾ ಬೆಳೆದಿದ್ನಾ ಚೋಲೋ ಇದ್ದ ಜಮೀನು ಬಿಟ್ಟಿಕ್ಕೆ ಹೋಗಿ ಎಲ್ಲಿ ಹೋಗಿ ಹ್ಯಾಂಗೆ ದುಡಿಯವೇನ..' ಎಂದು ಸ್ವಗತದಲ್ಲೇ ಉಸುರಿದ ಮಾಬ್ಲಜ್ಜ.
ಅಣೆಕಟ್ಟು ಹಾಗೂ ಅದರ ಕುರಿತು ಇನ್ನೂ ಹಲವು ಚರ್ಚೆಗಳು ನಡೆಯಿತು. ಮೊದಲೇ ಭೀತಿಯಲ್ಲಿದ್ದ ವಿಘ್ನೇಶ್ವರ ಹೆಗಡೆಯವರು ಮತ್ತೆ ಮತ್ತೆ ಈ ಚರ್ಚೆಯನ್ನೇ ಕೇಳಿ ಕೇಳಿ ಬೇಸರ ಬಂದ ಅವರು ಅಲ್ಲಿಂದೆದ್ದು ಬೇರೆ ಕಡೆಗೆ ಸಾಗಿದರು. ಆಗಲೇ ಅವರ ಮನಸ್ಸಿನೊಳಗಿದ್ದ ಭೀತಿಯ ಭೂತ ಬೃಹದಾಕಾರವಾಗಿ ಕುಣಿಯತೊಡಗಿತ್ತು.
ಅಲ್ಲಿಯೇ ಸ್ವಲ್ಪ ದೂರದಲ್ಲಿ ಅಂಗಳದಲ್ಲಿ ಹಾಕಿದ್ದ ಅಟ್ಟದ ಕೆಳಗಿನ ತಂಪಿನ ಪ್ರದೇಶದಲ್ಲಿ ಹಲವು ಜನರು ಸೇರಿ ಚಾಲಿ ಸುಲಿಯುತ್ತಿದ್ದರು. ಮೇಲಿನ ಮನೆಯ ಸುಶೀಲಕ್ಕ, ಮಾದಕ್ಕ, ಗದ್ದೇಮನೆಯ ನಾಗರತ್ನ, ಹೊಸಮನೆಯ ನಾಗವೇಣಿ, ಕಮಲಕ್ಕ, ದೊಡ್ಡಮನೆಯ ಮಂಕಾಳಕ್ಕ, ಪಕ್ಕದ ಮನೆಯ ಮಾಲಕ್ಷ್ಮಕ್ಕ ಮುಂತಾದ ನಾಮಾಂಕಿತರು ಹಲವು ಸುದ್ದಿಗಳನ್ನು ಹೇಳುತ್ತಾ ಚಾಲಿ ಸುಲಿಯುವುದರಲ್ಲಿ ನಿರತರಾಗಿದ್ದರು. ವಿಘ್ನೇಶ್ವರ ಹೆಗಡೆಯವರು ಅತ್ತ ಹೋಗಿ ನೋಡಿದರೆ ಅಲ್ಲಿಯೂ ಅಣೆಕಟ್ಟೆಯ ಸುದ್ದಿಯೇ ಚರ್ಚೆಯಾಗುತ್ತಿತ್ತು.
ಚಾವಡಿ ಕಟ್ಟೆಯಲ್ಲಿಯೇ ಬೇಸರ, ಭೀತಿಯನ್ನು ಹೊಂದಿದ್ದ ವಿಘ್ನೇಶ್ವರ ಹೆಗಡೆಯವರ ಮನದಾಳದ ಭೀತಿ ಈಗ ದ್ವಿಗುಣಗೊಂಡಿತು. ತುಮುಲ ಇಮ್ಮಡಿಸಿತು. `ಜೀವವಿರುವ ವರೆಗೆ ಅಘನಾಶಿನಿ ನದಿಗೆ ಅಣೆಕಟ್ಟನ್ನು ಕಟ್ಟಲು ಬಿಡಬಾರದು..' ಎಂದು ಅವರು ಆಗಲೇ ಮನಸ್ಸಿನಲ್ಲಿ ನಿರ್ಧರಿಸಿಕೊಂಡರು. ಆದರೂ ಅವರ ಮನಸ್ಸು ಏಕಾಂತ ಹಾಗೂ ಶಾಂತತೆಯನ್ನು ಬಯಸುತ್ತಿತ್ತು. ಬಾಲ್ಯದಿಂದಲೂ ಅವರಿಗೆ ಎಲ್ಲ ರೀತಿಯ ಸುಖ, ಶಾಂತಿ, ಸಮಾಧಾನಗಳನ್ನು ನೀಡಿದ್ದ, ನೀಡುತ್ತಿದ್ದ ಅಘನಾಶಿನಿ ದಡದ ಕಡೆಗೆ ಸಾಗಿದರು.
ಮನೆಯ ಮುಂದಿನ ಅಂಗಳದ ಆಚೆಗಿನ ತೋಟವನ್ನು ದಾಟಿಬಂದು, ಗದ್ದೆಯ ಪಕ್ಕದಲ್ಲಿ ಹಾದುಹೋಗಿ, ಚಿಕ್ಕಂದಿನಿಂದಲೂ ಕುಳಿತುಕೊಳ್ಳುತ್ತಿದ್ದ ಆನೆಕಲ್ಲಿನ ಮೇಲೇರಿ ವಿಶ್ರಮಿಸಿಕೊಳ್ಳಲಾರಂಭಿಸಿದರು. ಅವರಿಗೆ ಆಗ ಒಂದೊಂದಾಗಿ ಕಳೆದು ಹೋದ ಜೀವನದ ಕ್ಷಣಗಳು ನೆನಪಾಗಲಾರಂಭಿಸಿದವು.
ಚಿಕ್ಕಂದಿನಲ್ಲಿ ಅಘನಾಶಿನಿ ನದಿಯಲ್ಲಿ ಈಜಿದ್ದು, ಆಡಿದ್ದು, ಮಳೆಗಾಲದಲ್ಲಿ ಉಕ್ಕೇರಿ ಹರಿದು ಹೋಗುವ ವೇಳೆಗೆ ತಮ್ಮ ಪಾಲಿನ ಗದ್ದೆ ಹಾಗೂ ತೋಟವನ್ನು ನದಿ ನೀರು ಮುಳುಗಿಸಿದ್ದು, ಅದಕ್ಕೆ ಅರಶಿಣ, ಕುಂಕುಮ ಹಾಕಿ ಭಾಗಿನ ನೀಡಿ `ಅಮ್ಮಾ.. ತೊಂದ್ರೆ ಕೊಡಡಾ...' ಹೇಳಿ ಬೇಡಿಕೊಂಡಿದ್ದು, ಹಲವಾರು ವರ್ಷಗಳ ಹಿಂದೆ ಭೀಖರವಾದ ಬರಗಾಲ ಬಂದಾಗ ಈ ನದಿಯೇ ಆಸರೆಯಾದದ್ದು. ಎಲ್ಲವೂ ನೆನಪಾಯಿತು. ತಲೆತಲಾಂತರಗಳಿಂದ ಕಾಣುತ್ತಿದ್ದ ಈ ನದಿಗೆ ಕೆಲ ವರ್ಷಗಳ ಹಿಂದೆ ಮಾರಿಗದ್ದೆ ಯೋಜನೆಯ ಮೂಲಕ ಶಿರಸಿಗೆ ನೀರು ಕೊಂಡೊಯ್ಯುವ ಕಾಮಗಾರಿ ಪ್ರಾರಂಭವಾದಾಗ ಜನರೆಲ್ಲ ಸೇರಿ ಹೋರಾಟ ಮಾಡಿದ್ದನ್ನೂ, ತಾನು ಮುಂದಾಳಾಗಿದ್ದನ್ನೂ ನೆನಪು ಮಾಡಿಕೊಂಡರು. ಆಗ ವಿಫಲವಾಗಿದ್ದ ಹೋರಾಟದಿಂದ ಬಹಳ ನೊಂದಿದ್ದ ಹೆಗಡೆಯವರು ಅಣೆಕಟ್ಟಿನ ಸುದ್ದಿಯನ್ನು ಕೇಳಿ ಕ್ರೋಧವನ್ನು ಹೊಂದಿದರು. ಹೀಗೆ ಹಲವಾರು ಘಟನಾವಳಿಗಳ ಸಾಲನ್ನು ನೆನಪು ಮಾಡಿಕೊಂಡು ಅಣೆಕಟ್ಟಿನ ಕಾರ್ಯವನ್ನು ಹೇಗೆ ನಿಲ್ಲಿಸಬೇಕೆಂದು ಯೋಚಿಸುತ್ತಿದ್ದ ಅವರಿಗೆ ಸಮಯ ಜಾರಿಹೋದದ್ದೇ ತಿಳಿಯಲಿಲ್ಲ.
ಅತಿಯಾದ ದುಃಖದಿಂದ ಅವರು, ಅತಿಭಾವುಕ ಪ್ರಕೃತಿಯೊಂದಿಗೆ ಮಾತನಾಡುವಂತೆ ನದಿಯೊಂದಿಗೆ ಮಾತನಾಡಲಾರಂಭಿಸಿದರು. ನದಿಯ ನೀರಿನಲ್ಲಿ ತಮ್ಮ ಪ್ರತಿಬಿಂಬವನ್ನು ತಾವೇ ನೋಡಿಕೊಳ್ಳುತ್ತ `ಅಮ್ಮಾ.. ಅಘನಾಶಿನಿ.. ನೀ ಮಾಡಿದ ಉಪ್ಕಾರಾನಾ ಆನು ಹ್ಯಾಂಗೆ ಮರೆಯಲಿ..? ನೀ ಯಂಗೆ ಅನ್ನ ಕೊಟ್ಟೆ, ಸುಖ, ಶಾಂತಿ, ಸಮೃದ್ಧಿ, ಐಶ್ವರ್ಯ ಎಲ್ಲಾ ಕೊಟ್ಟೆ. ಯನ್ನ ಜಮೀನಿಗೆ ನೀರು ಕೊಟ್ಟು ನಂದನವನ ಮಾಡಿದೆ.. ಆದರೆ ನಿನ್ನನ್ನು ಕಾಪಾಡಲು ಯನ್ಕೈಲಿ ಆಗ್ತಾ ಇಲ್ಲೆ..ಎಂತಾ ಮಾಡವ್ವು..' ಎಂದು ಹೇಳಲಾರಂಭಿಸಿದರು. ಇದ್ದಕ್ಕಿದ್ದಂತೆ ಆವೇಶ ಬಂದವರಂತೆ `ಇಲ್ಲೆ.. ಆನು ನಿಂಗೆ ಕಟ್ಟು ಹಾಕಲು ಬಿಡ್ತ್ನಿಲ್ಲೆ..ಅದೆಂತದೇ ಬರ್ಲಿ ಆನು ಎದುರು ನಿಂತ್ಕಂಬವ್ನೇಯಾ..' ಎಂದು ಬಡಬಡಿಸಲಾರಂಭಿಸಿದ ಅವರು ಮುಸ್ಸಂಜೆಯ ಜೀರುಂಡೆಗಳ ಕಿರ್ರೋ ಎಂಬ ಧ್ವನಿಯನ್ನು ಕೇಳಿ ವಾಸ್ತವಕ್ಕೆ ಮರಳಿದರು. ಆಗಲೇ ಅವರು `ಹೇಗಾದರಾಗಲಿ.. ಈ ಅಣೆಕಟ್ಟನ್ನು ನಿಲ್ಲಿಸಬೇಕು. ಇದಕ್ಕಾಗಿ ಏನು ಬೇಕಾದರೂ ಮಾಡುತ್ತೇನೆ..' ಎಂದು ಮನದಲ್ಲೇ ನಿರ್ಧರಿಸಿ ಮನೆಯಕಡೆಗೆ ದಾರಿಯನ್ನು ಹಿಡಿದು ಹೊರಟರು.

**

ಇದಾಗಿ ಮೂರ್ನಾಲ್ಕು ವಸಂತಗಳು ಸರಿದುಹೋದವು. ಅಷ್ಟರಲ್ಲಾಗಲೇ ಹಲವು ಹಣ್ಣೆಲೆಗಳು ಉದುರಿದ್ದವು. ಹೊಸ ಚಿಗುರುಗಳು ಉದಯಿಸಿದ್ದವು. ಅಘನಾಶಿನಿ ಅಣೆಕಟ್ಟೆಯ ವಿರುದ್ಧದ ಹೋರಾ ಒಂದು ಸಮಯದಲ್ಲಿ ಉಗ್ರವಾಗ, ಈಗ ವಿಫಲತೆಯ ಹಾದಿಯಲ್ಲಿ ಸಾಗುತ್ತಿತ್ತು. ಅಣೆಕಟ್ಟೆ ನಿರ್ಮಾಣದ ಕಾರ್ಯವೂ ಪೂರ್ಣಗೊಳ್ಳುವ ಹಂತದಲ್ಲಿತ್ತು. ಅಘನಾಶಿನಿ ಕಣಿವೆಯ ತುಂಬ ದೊಡ್ಡ ದೊಡ್ಡ ಯಂತ್ರಗಳು ಸದ್ದು ಮಾಡುತ್ತಿದ್ದವು. ದೊಡ್ಡ ದೊಡ್ಡ ಬುಲ್ಡೋಜರುಗಳು ನದಿಯ ದಡದಗುಂಟ ಹಸಿ ಹಸಿರಾಗಿದ್ದ ಸಾಲು ಸಾಲಿನ ದೈತ್ಯ ಅಪ್ಪೆಯ ಮರಗಳನ್ನು ಬುಡಕತ್ತರಿಸುವ ಕಾರ್ಯದಲ್ಲಿ ನಿರತವಾಗಿದ್ದವು. ಅಷ್ಟಲ್ಲದೇ ತೋಟಗಳೂ ಯಂತ್ರಗಳ ಬಾಯಿಗೆ ನುಗ್ಗಾಗುತ್ತಿದ್ದವು.
ಅಘನಾಶಿನಿ ಅಣೆಕಟ್ಟು ವಿರೋಧಿ ಚಳುವಳಿಯ ನಾಯಕರಲ್ಲಿ ಒಬ್ಬರಾಗಿದ್ದ ವಿಘ್ನೇಶ್ವರ ಹೆಗಡೆಯವರ ಮನೆಯಾಗಲೇ ಅವರ 5 ಮಕ್ಕಳಲ್ಲಿ ಹಿಸೆಯೂ ಆಗಿಹೋಗಿತ್ತು. ಸರ್ಕಾರ ಎಲ್ಲರಿಗೂ ಪರಿಹಾರದ ಹಣವನ್ನೂ, ಬೇರೆಡೆಗೆ ಜಮೀನನ್ನೂ ನೀಡಿತ್ತು. ಹಲವರು ಆಗಲೇ ಊರನ್ನೂ ಬಿಟ್ಟು ಸಾಗಿದ್ದರು.
ವಿಘ್ನೇಶ್ವರ ಹೆಗಡೆಯವರ ಮಕ್ಕಳೂ ಸಹ ಊರಿನಿಂದ ಬೇರೆಡೆಗೆ ಹೊರಡುವ ಸನ್ನಾಹದಲ್ಲಿದ್ದರು. ಮಕ್ಕಳು ತಮ್ಮ ತಂದೆಯನ್ನು ಆಗಲೇ ಒಪ್ಪಿಸುವ ಪ್ರಯತ್ನದಲ್ಲಿ ತೊಡಗಿದ್ದರು. ಮಕ್ಕಳ ಒತ್ತಾಯಕ್ಕೆ ಮೊದ ಮೊದಲು ವಿರೋಧವನ್ನೇ ಮಾಡಿದರು ಹೆಗಡೆಯವರು. ಯಾರು ಏನು ಹೇಳಿದರೂ ಈ ಊರನ್ನು ಬಿಟ್ಟು ಬೇರೆ ಕಡೆಗೆ ಹೋಗಲಾರೆ ಎಂದುಕೊಂಡಿದ್ದ ಅವರು ಕೊನೆಗೊಮ್ಮೆ ಮಕ್ಕಳ ಒತ್ತಾಯಕ್ಕೆ ಕಟ್ಟುಬಿದ್ದು ಊರನ್ನು ಬಿಟ್ಟು ಹೋಗಲು ಒಪ್ಪಿದರು.

**

ಆ ದಿನ ಊರನ್ನು ಬಿಟ್ಟು ಹೋಗಲು ಒಳ್ಳೆಯ ದಿನ ಎಂದು ವಿಘ್ನೇಶ್ವರ ಹೆಗಡೆಯವರು ಭಾವಿಸಿದ್ದರು. ಮೊದಲೇ ಮನೆಯ ಸಾಮಾನು ಸರಂಜಾಮುಗಳನ್ನೆಲ್ಲ ಬೇರೆಡೆಗೆ ಸಾಗಿಸಿಯಾಗಿತ್ತು. ಮನೆಯ ಸದಸ್ಯರು ಬೇರೆಯ ಕಡೆಗೆ ಸಾಗುವುದು ಮಾತ್ರ ಬಾಕಿ ಉಳಿದಿತ್ತು.
ಆ ದಿನ ಮನೆಯಲ್ಲಿ ಪೂಜೆ ಎಂಬಂತೆ ಏನೋ ಒಂದು ಚಿಕ್ಕ ಧಾರ್ಮಿಕ ಕಾರ್ಯಕ್ರಮ ಏರ್ಪಡಿಸಿದ್ದರು. ಮದ್ಯಾಹ್ನದ ವೇಳೆಗೆ ಧಾರ್ಮಿಕ ವಿಧಿವಿಧಾನಗಳೆಲ್ಲ ಮುಗಿದು ಬೇರೆಡೆಗೆ ಹೋಗಲು ವಾಹನವೂ ಬಂದಾಗಿತ್ತು.
ಎಲ್ಲರೂ ಹೊರಡುವ ತರಾತುರಿಯಲ್ಲಿದ್ದಾಗ `ಈಗ ಬಂದೆ..' ಎನ್ನುತ್ತಾ ವಿಘ್ನೇಶ್ವರ ಹೆಗಡೆಯವರೊಬ್ಬರೇ ಅಘನಾಶಿನಿ ದಡದಲ್ಲಿನ ಆನೆಕಲ್ಲಿನ ಕಡೆಗೆ ಸಾಗಿದರು.
ಅಲ್ಲಿ ಕುಳಿತೊಮ್ಮೆ ನದಿಯ ನೀರನ್ನೇ ತದೇಕ ಚಿತ್ತದಿಂದ ದಿಟ್ಟಿಸುತ್ತಾ `ಯನ್ನ ಕ್ಷಮಿಸಿಬಿಡು ತಾಯಿ.. ನಿಂಗೆ ಕಟ್ಟೋ ಅಣೆಕಟ್ಟನ್ನು ನಿಲ್ಸಲೆ ಯನ್ನ ಕೈಲಿ ಆಜಿಲ್ಲೆ.. ಆನು ಅದಕ್ಕೆ ಶತಪ್ರಯತ್ನ ಮಾಡಿದಿ.. ಆದರೆ ಯಂತಾ ಮಾಡಿದ್ರೂ ಯನ್ನ ಕೈಲಿ ಆಜೇ ಇಲ್ಲೆ.. ಯನ್ನ ಪ್ರಯತ್ನಗಳೆಲ್ಲ ವಿಫಲವಾಗೋತು. ಆನು ಸೋತೋಗ್ಬಿಟಿ.. ಈಗ ಎಲ್ಲಾರೂ ಯನ್ನ ಈ ಊರು ಬಿಟ್ಟಿಕ್ಕೆ ಹೋಗು ಹೇಳ್ತಾ ಇದ್ದ. ಈಗಲೂ ಆನು ಯಂತಾ ಮಾಡವ್ವು ಹೇಳಿ ಯಂಗೆ ಗೊತ್ತಾಗ್ತಾ ಇಲ್ಲೆ.. ಹರಿಯೋ ನೀರಿಗೆ ತಡೆ ಹಾಕ್ಲಾಗ ಹೇಳಿ ಹೇಳ್ತ.. ಆದರೂ ನಿಂಗೆ ಕಟ್ಟು ಹಾಕ್ತಾ ಇದ್ದ.. ಅವ್ವುಕೆ ಗ್ಯಾರಂಟಿ ಒಳ್ಳೇದಾಗ್ತಿಲ್ಲೆ..' ಎಂದು ಆರ್ತರಾಗಿ ನುಡಿದರು.
ಹಾಗೆಯೇ ಸ್ವಲ್ಪ ಹೊತ್ತು ಭಾವುಕರಾಗಿದ್ದ ಅವರು ಕೊಂಚ ಹೊತ್ತು ಆಲೋಚಿಸಿದ ನಂತರ ದೊಡ್ಡ ದನಿಯಲ್ಲಿ  `ಇಲ್ಲೆ.. ಆನು ಈ ಊರು ಬಿಟ್ಟಿಕ್ಕೆ ಹೋಗ್ತ್ನಿಲ್ಲೆ.. ಈ ಭೂಮಿಲ್ಲೇ ಆನು ಇರ್ತಿ.. ಆನು ಬದುಕಿದ್ದು ಇಲ್ಲೇಯಾ.. ಸಾಯೋದೂ ಇಲ್ಲೇಯಾ.. ಯಂಗೆ ಇಷ್ಟೆಲ್ಲ ಉಪ್ಕಾರ ಮಾಡಿದ ನದೀನ ಬಿಟ್ಟು ಆನು ಎಲ್ಲಿಗೂ ಹೋಗ್ತ್ನಿಲ್ಲೆ..' ಎಂದು ಹೇಳುವ ವೇಳೆಗಾಗಲೇ ಅವರ ಕಣ್ಣಿನಿಂದ ಒಂದೆರಡು ಹನಿ ನೀರು ಪಟ ಪಟನೆ ನದಿ ನೀರಿಗೆ ಉದುರಿತು. ಆ ನದಿ ನೀರು ನದಿಯಲ್ಲಿ ಬಿದ್ದು ನದಿಯ ಜಿಳು ಜುಳು ನಾದದೊಂದಿಗೆ ಸೇರಿ ಕಿಂಕಿಣಿಯಾಗಿ ಸಾಗುತ್ತಿದ್ದಾಗ ವಿಘ್ನೇಶ್ವರ ಹೆಗಡೆಯವರ ಉಸಿರು ಸ್ಥಬ್ಧವಾಯಿತು. ದೇಹ ನಿಶ್ಚಲವಾಯಿತು. ಅವರು ಲೋಕದ ಪಾಲಿಗೆ ಮುಗಿದ ಅಧ್ಯಾಯವಾದರು. ಮರೆಯದ ಆದರ್ಶವಾದರು.

**
(ಈ ಕತೆಯನ್ನು ಬರೆದಿದ್ದು 20-09-2005ರಂದು ದಂಟಕಲ್ಲಿನಲ್ಲಿ)
(ಶಿರಸಿಯ ಲೋಕಧ್ವನಿ ಪತ್ರಿಕೆಯಲ್ಲಿ ಈ ಕಥೆ ಪ್ರಕಟಗೊಂಡಿದೆ. ಇದೇ ಕಥೆಯ ಒಂದು ಎಳೆಯನ್ನಾದರಿಸಿ ನಾವು ಮಾಡಿ, ಆಡಿ ತೋರಿಸಿದ ನಾಟಕ ಕರ್ನಾಟಕ ವಿವಿಯಲ್ಲಿ ಬಹುಮಾನ ಗಳಿಸಿದೆ.)