Sunday, November 10, 2013

ನಿನ್ನ ಪ್ರೇಮಿ (ಗಝಲ್)

ನೀನು ಇರುಳು ನೋಡಿ ನಗುವ ಚಂದ್ರಮುಖಿ|
ನಾನು ನಿನ್ನ ಸುತ್ತುವ ಪ್ರೇಮಿ ||2||

ನೀನು ಉರಿಯೋ ಒಂದು ಹಣತೆ|
ನಾನು ಹಣತೆಯೊಳಗಣ ತೈಲ ||4||

ನೀನು ಸವಿ ಸವಿಯ ಸಕ್ಕರೆ
ನಾನು ನಿನ್ನ ಮುತ್ತುವ ಇರುವೆ ||6||

ನೀನು ಉಲಿದಾಡುವ ಕೋಗಿಲೆ|
ನಾನು ನಿನಗಾಸರೆ ನಿಲ್ಲೋ ಮಾಮರ  ||8||

ನೀನು ಬೆಳೆಯ ಬಯಸೋ ಬಳ್ಳಿ
ನಾನು ನಿಂತು ಕರೆವ ಹೆಮ್ಮರ ||10||

ನೀನು ಬೀಸಿ ಬರುವ ತಂಗಾಳಿಯಲೆ|
ನಾನು ನಿಂತು ನಲಿವ ದಡದ ಬಂಡೆ ||12||

ಕೊನೆಯಲ್ಲಿ, ನೀನು ನಗುವ ತಾವರೆ|
ನಾನು ನಿನ್ನ ಬಯಸೋ ಪ್ರೇಮಿ ||14||

(ಬರೆದಿದ್ದು ದಂಟಕಲ್ಲಿನಲ್ಲಿ 16-11-2006ರಂದು)

Saturday, November 9, 2013

ಚದುರಂಗದ ಕುದುರೆಯ ಬೆನ್ನೇರಿ -ಭಾಗ 3

                  ಇನ್ನುಳಿದಂತೆ ನಮ್ಮ ಮಹಿಳಾ ಮಣಿಯರ ಕಡೆಗೆ ದೃಷ್ಟಿ ಹರಿಸೋಣ.. ಬಿ ಅಲರ್ಟ್..
ಅವರ ತಂಡದ ನಾಯಕಿ ನನ್ನದೇ ಕ್ಲಾಸಿನ ಪೂರ್ಣಿಮಾ ಟಿ. ಹೆಗಡೆ.. ಸೌಮ್ಯ ಸ್ವಭಾವದಾಕೆ.ಸಿಟ್ಟು ಬಂದು ತಿರುಗಿಬಿದ್ದಳು ಎಂದರೆ ಮುಗಿಯಿತು.. ತಕ್ಕ ಮಟ್ಟಿಗೆ  ಹಾಸ್ಯ ಕೂಡ ಕೂಡ ಮಾಡಬಲ್ಲಂತವಳು.
                 ಇನ್ನೊಬ್ಬಳು ಪೂರ್ಣಿಮಾ ಜಿ. ಹೆಗಡೆ. ಈಕೆಯಂತೂ (ಆಗಿನ ದಿನಗಳಲ್ಲಿ) ಒಮ್ಮೆ ಕಿವಿಗೆ ಮೋಬೈಲ್ ಇಟ್ಟರೆ ಮುಗಿಯಿತು. ಒಂದೋ ಕರೆನ್ಸಿ ಖಾಲಿಯಾಗಬೇಕು.. ಅಥವಾ ಎದುರಿಗಿದ್ದವರು ಹುಚ್ಚು ಹಿಡಿದುಬಿಡಬೇಕು.. ತಕ್ಕಮಟ್ಟಿಗೆ ಮುದ್ದು-ಮೊದ್ದು ಎಲ್ಲವೂ ಹೌದು. ಬಿಂದಾಸ್ ಸ್ವಭಾವ..
               ಮತ್ತೊಬ್ಬಾಕೆ ಪವಿತ್ರಾ ಹೆಗಡೆ. 2nd B.Aಯ ಹುಡುಗಿ. ಮುಗ್ದೆ ಅನ್ನುವುದಕ್ಕಿಂತ ಮಿಗಿಲಾಗಿ ಏನೂ ಅರಿಯದವಳು ಅಂದರೆ ಚೆನ್ನ.. ಆಕೆಗೋ ಮಿಸ್ ಸಂಜನಾ ಗಾಂಧಿ ಉರುಫ್ ಪೂಜಾ ಗಾಂಧಿ ಎಂದೇ ನಾನು ಕರೆಯುತ್ತಿದ್ದುದು. ತಕ್ಕಮಟ್ಟಿಗೆ ಹಾಗೆಯೂ ಕಾಣುತ್ತಾಳೆನ್ನಿ..
ಕೊನೆಯದಾಗಿ ಲೇಡೀಸ್ ತಂಡದ ಮತ್ತೊಬ್ಬ ಸದಸ್ಯೆ ತೃಪ್ತಿ ಹೆಗಡೆ. ನೋಡಲಿಕ್ಕೆ ಮಾತ್ರ ಕುಳ್ಳು ಹಾಗೂ ಸೈಲೆಂಟು... ಬಾಯಿ ಬಿಟ್ಟರೆ ಮಾತ್ರ ಆಟಂಬಾಂಬು..ಲಕ್ಷ್ಮಿ ಧಡಲ್ ಅಲ್ಲಲ್ಲಲ್ಲಲ್ಲ `ತೃಪ್ತಿ ದಢಲ್'.. ಬಹುಶಃ ಈ tourಗೆ, ಖುಷಿಗೆ ಈಕೆಯ ಕಾಣಿಕೆಯೂ ಬಹಳ ಹೆಚ್ಚಿದೆ ಅಂದರೆ ತಪ್ಪಿಲ್ಲ.. ಆದರೆ ಇಬ್ಬರು ಒಂದೇ ರೀತಿಯ ಗುಣದವರಲ್ಲಿ ಹೊಂದಾಣಿ ಇರುವುದಿಲ್ಲ ಎಂಬಂತೆ ಪಯಣದ ಆರಂಭದಿಂದ ಕೊನೆಯವರೆಗೂ ಮೆರೆದಿದ್ದು ತೃಪ್ತಿ-ಕೃಷ್ಣಮೂರ್ತಿ ಅವರ ಜಗಳ-ವಾದ-ಗಲಾಟೆ-ಮಾತುಕತೆ-ಕಾಲೆಳೆಯುವಿಕೆ.. ಇತ್ಯಾದಿ ಇತ್ಯಾದಿ. ಟೂರಿನುದ್ದಕ್ಕೂ ಇವರನ್ನು ನಿಯಂತ್ರಿಸಲು ಸಾಧ್ಯವೇ ಆಗಲಿಲ್ಲ..! ಯಾರಿಗೂ..

                               ಮತ್ತೆ ಮರಳಿ ಬಸ್ಸಿನ ಬಗ್ಗೆ ಹೇಳುತ್ತೇನೆ.. ಇನ್ನೂ ಮುಗಿದಿಲ್ಲ  ನೋಡಿ.. ಹುಬ್ಬಳ್ಳಿಯಲ್ಲಿ ರಾಣಿಚನ್ನಮ್ಮ ಟೂರ್ಸ್ & ಟ್ರಾವೆಲ್ಸಿನ ಖಾಲಿ ಬಸ್ಸಿನಲ್ಲಿ ಕುಳಿತ ನಮಗೆ ಹೊತ್ತು ಕಳೆಯಲು ಏನು ಮಾಡಬೇಕು ಎನ್ನುವುದೇ ತೋಚಲಿಲ್ಲ.  ಬಸ್ಸಿನೊಳಗೆ ಇದ್ದ ವೀಡಿಯೋ ಪ್ಲೇಯರ್ರಿನಲ್ಲಿ ಯಾವುದೋ ತಲೆನೋವು ತರುವಂತಕ ಭೀಖರ ಕನ್ನಡ ಸಿನೆಮಾ ಹಾಕಿದ್ದರು.. ಬಹುಶಃ ಯಾವುದೋ ಹಾರರ್ ಸಿನೆಮಾ ಇರಬೇಕು.. ಅದರಲ್ಲಿನ ಹಾರರ್ ಸನ್ನಿವೇಶಗಳನ್ನು ನೋಡಿದರೆ ಭಯದ ಬದಲಾಗಿ ನಗು ಉಕ್ಕುಕ್ಕಿ ಬರುವಂತಿದ್ದರೂ ಚಿತ್ರ ನೋಡಲು ಆಗಲಿಲ್ಲ. ಹೀಗಾಗಿ ನಾವು ಬಸ್ಸಿನ ಕೊನೆಯ ಸೀಟಿನ ಸರದಾರ/ಸರದಾರಿಣಿಯರು ಸೇರಿ `ಇಸಪೀಟ್' ಆಟ ಶುರುಹಚ್ಚಿಕೊಂಡೆವು. ಅದೂ ಸ್ವಲ್ಪ ಸಮಯದಲ್ಲಿಯೇ ಬೇಸರವನ್ನು ತಂದಿತು. ಅಂತ್ಯಾಕ್ಷರಿಯನ್ನು ಹೇಳಿದೆವು. ಅದೂ ಬೋರಾಯ್ತು.. ಕೊನೆಗೆ ಸುದ್ದಿಯನ್ನೂ ಹೇಳಿದೆವು.. ನಮ್ಮ ಸುದ್ದಿಯ ಭರಕ್ಕೆ ಅನೇಕರು ಬಲಿಯಾದರು. ಆದರೆ ಕಿಟ್ಟು-ತೃಪ್ತಿಯರ ವಾದದ ಕಾರಣದಿಂದಾಗಿ ಅದೂ ಕೆಲ ಸಮಯಗಳಲ್ಲಿ ಬೇಸರವನ್ನು ತಂದಿತು.
                     ಈ ಮದ್ಯದಲ್ಲಿಯೇ nature lover ಆದ ನಾನು ದಾರಿಯಲ್ಲಿ ಸಿಗುವ ಊರುಗಳ ಬೋರ್ಡುಗಳನ್ನೆಲ್ಲ ಕುತೂಹಲದಿಂದ ನೋಡಲು ಆರಂಭಿಸಿದ್ದೆ. ನವಲಗುಂದ-ನರಗುಂದ-ಕಿಲಾರ-ಕಲ್ಲೂರು.. ಅದೆಷ್ಟೋ ಉದ್ದುದ್ದದ ಮಜ ಮಜವಾದ ಹೆಸರುಗಳು.. ಅಗಲಗಲ ಊರುಗಳು.. ಊರಿನ ಹೊಟ್ಟೆಯನ್ನು ಸೀಳಿದಂತೆ ಹಾದು ಹೋದ ಹುಬ್ಬಳ್ಳಿ-ಬಿಜಾಪುರ ರಾಷ್ಟ್ರೀಯ ಹೆದ್ದಾರಿ. ಹಳ್ಳಿಗಳಲ್ಲೆಲ್ಲೋ ಬಸ್ಸು ನಿಲ್ಲುತ್ತಿದ್ದಷ್ಟು ಹೊತ್ತು ಕಲರವ. ಉಳಿದ ಸಮಯದಲ್ಲಿ ಬಸ್ಸಿನ ವಂಯ್ಯೋ ಸದ್ದು. ಟೈಂ ಕೀಪ್ ಮಾಡುವ ಕಾರಣದಿಂದ ಬಸ್ಸನ್ನು ಅದರ ಚಾಲಕ ವೇಗದೂತವಾಗಿ ಚಾಲನೆ ಮಾಡುತ್ತಿದ್ದ. ಬಸ್ಸಿನ ಅಕ್ಕಪಕ್ಕ ವೀಕ್ಷಣೆ ಮಾಡಿದರಂತೂ ಕಣ್ಣ ಬಿಂಬದ ದೃಷ್ಟಿ ಹರಿಯುವವರೆಗೂ ಬಯಲು-ಹೊಲಗಳೇ ಕಾಣುತ್ತಿದ್ದವು. ಸೂರ್ಯಕಾಂತಿಯ ಸೊಬಗು, ಹತ್ತಿ ಧಾನ್ಯಗಳ ಬೆಡಗು, ಬೆರಗು. ಕಬ್ಬಿನ ಗದ್ದೆಯ ಮೆರಗು, ನಡುನಡುವೆಯೆಲ್ಲೋ ಭತ್ತದ ಬಣವೆಗಳು, ಮನೆಗಳು, ಕೆರೆಗಳು, ಚಿಕ್ಕ ಚಿಕ್ಕ ಗುಡ್ಡಗಳು, ಬೋನ್ಸಾಯ್ ನಂತಹ ಕುಬ್ಜ ಮರಗಳು, ನಡು ನಡುವೆ ಸಿಗುತ್ತಿದ್ದ ನದಿಗಳು, ಕೆಲವು ಬತ್ತಿದ್ದವು. ಜೊತೆ ಜೊತೆಗೆ ವಿಶೇಷ ಎನ್ನಿಸಿದ್ದು ಬಿಸಿಲ ಬೇಗೆಯ ದಾರಿಯಲ್ಲಿ ಸಾಗುತ್ತಿದ್ದಂತೆ ಹೆದ್ದಾರಿ ಅಕ್ಕಪಕ್ಕದಲ್ಲಿ ನೆಟ್ಟಿದ್ದ ಸಾಲು ಸಾಲು ಮರಗಳು. ಇವುಗಳನ್ನೇ ಎಷ್ಟಂತ ನೋಡೋದು ಸ್ವಾಮಿ.. ನೋಡಿದ್ದನ್ನೇ ನೋಡಿದರೆ ಕೆಲವೊಮ್ಮೆ ಇಷ್ಟವಾಗುತ್ತದೆ ನಿಜ. ಆದರೆ ಹಲವು ಸಾರಿ ಬೇಸರ ಬಂದು ಬಿಡುತ್ತವೆ.ನನಗೂ ಹಾಗೆ ಆಯ್ತು.. ನೋಡಿ ನೋಡಿ ಬೇಸರ ಬಂದೇ ಬಿಟ್ಟಿತು. ಅದಕ್ಕೆ ಇನ್ನಷ್ಟು ಇಂಬೆನ್ನುವಂತೆ ಬಿಸಿಲಿನ ಕಾವು ಹೆಚ್ಚಾಯಿತು. ಇದುವರೆಗೂ ಗ್ಯಾಪ್ ಅಥವಾ ಬ್ರೇಕ್ ಇಲ್ಲದಂತೆ ವಟಗುಟ್ಟುತ್ತಿದ್ದ ಮಹಿಳಾಮಣಿಗಳು ಸುಸ್ತಾಗಿ, ಉತ್ಸಾಹ ರಹಿತರಾಗಿ ಕುಳಿತಿದ್ದರು. ವಿಚಿತ್ರವೋ, ವಿಶಿಷ್ಟವೋ, ಅಥವಾ ಇನ್ಯಾವುದೋ.. ಪೂರ್ಣಿಮಾ ಬೆಂಗ್ರೆಯ ಬೊಬೈಲಿಗೂ ಸುಸ್ತಾಗಿತ್ತೋ ಏನೋ ಗೊತ್ತಿಲ್ಲ.. ಬಹು ಹೊತ್ತಿನ ನಂತರ ಅದೂ ಸುಮ್ಮನಿತ್ತು.

ಬಸ್ಸು ಓಡುತ್ತಲೇ ಇತ್ತು.. ಅದೆಲ್ಲೋ ನಡುವೆ ಬಸ್ಸಿನ ಡ್ರೈವರ್ ಕೂಡ ಬದಲಾದ. ಪರಿಣಾಮವೋ ಎಂಬಂತೆ ಬಸ್ಸಿನ ವೇಗ ಇಮ್ಮಡಿಸಿತು. ಬಸ್ಸಿನಲ್ಲಿ ಕುಳಿತಿದ್ದ ನಮ್ಮ ತೂಕಡಿಕೆ ಮುಮ್ಮಡಿಸಿತು.  ಬಸ್ಸಿನ ತುಂಬ ಇದ್ದವರೆಲ್ಲ ಬಹುತೇಕ ಕುಂಭಕರ್ಣ ಸಿನಿಮಾದ ಹೀರೋಗಳೇ ಆಗಿದ್ದರು. ಇದ್ದವರ ಪೈಕಿ ನನಗೆ ಹಾಗೂ ಕಿಟ್ಟುವಿಗೆ ಮಾಡಲು ಏನೂ ಕೆಲಸವಿರಲಿಲ್ಲ.  ಹಾಗಾಗಿ ಎದ್ದು ಹೋಗಿ ಬಸ್ಸಿನ ಕಂಡಕ್ಟರ್ (ಏಜೆಂಟ್) ಬಳಿ ಅದೂ ಇದೂ ಮಾತಿಗೆ ಪ್ರಾರಂಭಿಸಿದೆವು.. ಕೊನೆಗೆ ಡ್ರೈವರ್ರನ್ನೂ ಮಾತಿಗೆ ಎಳೆದೆವು..
ನನಗೇಕೋ ಬಸ್ಸಿನ ಬಾಗಿಲಲ್ಲಿ ನಿಲ್ಲುವ ಅವ್ಯಕ್ತ ಆಸೆಯುಂಟಾಗಿ ಹೋಗಿ ನಿಂತೆ.. ಆಹ್... ಬೀಸುವ ಗಾಳಿಯ ರಭಸಕ್ಕೆ ಮೈಯೊಡ್ಡಿ ನಿಂತರೆ ಏನು ಆನಂದ.. ಅಂತೂ ಬಹಳ ಖುಷಿಯೇ ಲಭಿಸಿತು ಇದರಿಂದ.. ಈ ನಡುವೆ ಮತ್ತೆ ಉತ್ಸಹವನ್ನು ಗಳಿಸಿಕೊಂಡ ಕಿಟ್ಟು ಮತ್ತೆ ಮಹಿಳಾ ಮಣಿಯರ ಜೊತೆಗೆ ಕಾಡು ಹರಟೆ ಹೊಡೆಯಲು ಹೊರಟುಹೋದ.. ನನಗೋ ಬಸ್ಸಿನ ಕಂಡಕ್ಟರ್ ಬಳಿ ಜೊತೆಗೆ ಮಾತನಾಡುತ್ತಾ, ಬಸ್ಸಿನ ಬಾಗಿಲಲ್ಲಿ ನಿಂತು ಪಯಣಿಸುವುದು ಖುಷಿ ಕೊಟ್ಟಿತ್ತು.. ಪ್ರತಿ ಊರು-ನದಿ ಇವೆಲ್ಲವುಗಳಿಗೂ ಆತನಿಂದ live ಕಾಮೆಂಟರಿ ಕೇಳುತ್ತಿದ್ದೆ.. ವಿಚಿತ್ರವೋ, ವಿಶಿಷ್ಟವೋ.. ಪ್ರತಿಯೊಂದು ಊರಿನ ಇತಿಹಾಸದ ಸಮೇತ ಆತ ಹೇಳುತ್ತಿದ್ದ ಪರಿಗೆ ನಾನು ಬೆರಗಾಗಿದ್ದೆ.. ಇಂವ ಬಸ್ಸಿನ ಕ್ಲೀನರ್ರಾ..? ಏಜೆಂಟನಾ..? ಅಥವಾ ಯಾವುದೋ ಇತಿಹಾಸತಜ್ಞನಾ..? ಆತ ನೀಡುತ್ತಿದ್ದ ಮಾಹಿತಿಗಳು ನನ್ನನ್ನು ಗೊಂದಲಕ್ಕೆ ತಳ್ಳಿದ್ದಂತೂ ಸತ್ಯ. ಮಧ್ಯದಲ್ಲೆಲ್ಲೋ ಮಲಪ್ರಭೆಯೂ ಮರೆಯಾಗಿದ್ದಳು.. ಮಾತಿನ ಭರದಲ್ಲಿ ನನಗದು ಅರಿವೇ ಆಗಿರಲಿಲ್ಲ..

                                   ಹಾಗೆ ನೋಡುತ್ತಿದ್ದೆ.. ಥಟ್ಟನೆ ಒಂದು ಬಹುದೊಡ್ಡ ಸಾಗರ ನಮ್ಮೆದುರು ಕಾಣಿಸಿತು. ಅರೇ ಇದೇನಿದು ಬಯಲ ನಾಡಿನಲ್ಲಿ ಮಹಾಸಾಗರವೇ..? ಯಾಕೋ ನನ್ನ ಕವಿ ಮನಸ್ಸು ಜೀವತಳೆಯುತ್ತಿತ್ತು.. ಇಂತ ಬೆಂಗಾಡಿನಲ್ಲಿ ಸಮುದ್ರ ಎಲ್ಲಿಂದ ಬಂತು..? ಎಂದುಕೊಂಡೆ.. ಉದ್ದಾನುದ್ದ ಕಣ್ಣು ಹರಿಯುವವರೆಗೆ ನೋಡಿದರೂ ಬರೀ ನೀರು.. ನೀರು.. ನೀರು.. ನಡುವೆ ಉದ್ದಾನುದ್ದದ ಸೇತುವೆ..  ಸೇತುವೆ ಮೇಲೆ ನಮ್ಮ ವಾಹನದ ಒಂಟೀ ಪಯಣ.. 
ಇದೇನಿದು ಎಂದು ನಾನು ನನ್ನ ಪಕ್ಕದಲ್ಲಿದ್ದ ಬಸ್ಸಿನ ಏಜೆಂಟ್ ಬಳಿ ಕೇಳಿದೆ. ಅದಕ್ಕವನು ಅದು ಕೃಷ್ಣೆಯ ಅಣೆಕಟ್ಟಿನ ಹಿನ್ನೀರಿನ ಪ್ರದೇಶ ಎಂದು ಹೇಳಿದ. ಕೃಷ್ಣೆ ಮುಳುಗಿಸಿದ ಪ್ರದೇಶದಲ್ಲಿ ನಡುವೆ ನೇರಾನೇರವಾಗಿ ಸೇತುವೆ ನಿರ್ಮಾಣ ಮಾಡಲಾಗಿತ್ತು.. ಆಲಮಟ್ಟಿಯ ಅಗಾಧತೆ ವಿಸ್ಮಯವನ್ನು ಮೂಡಿಸಿತು.. ಅಷ್ಟರ ಜೊತೆಗೆ ಇದ್ದಕ್ಕಿದ್ದಂತೆ  ಈ ಸೇತುವೆ ಮುರಿದುಬಿದ್ದರೆ ಏನು ಮಾಡೋದು.. ದೇವಾ... ಮನಸ್ಸಿನಲ್ಲಿ ಯೋಚಿಸಿದಂತೆ ಭಯ ಉಂಟಾಯಿತು.. ಸೇತುವೆಯ ಉದ್ದ ಸರಿಸುಮಾರು 3 ಕಿಲೋಮೀಟರ್ ಅಂತೆ.. ಅಬ್ಬಾ ಅದೆಷ್ಟು ಉದ್ದ..? 3*1000 ಮೀಟರ್ =3000 ಮೀಟರ್ ಎಂದು ಹಲವಾರು ನಮೂನಿಯ ಲೆಕ್ಖವನ್ನೆಲ್ಲ ಮಾಡಿದೆ.
ಬಸ್ಸಿನಲ್ಲಿದ್ದ ಹಲವರು 1 ರುಪಾಯ್, 2 ರುಪಾಯ್, 5 ರು. ಕೆಲವರು 10 ರು. ಎಂಬಂತೆ ತೆಗೆದು ತೆಗೆದು ಆ ನೀರಿಗೆ ತೂರುತ್ತಿದ್ದರು. ಹಾಗೆ ಮಾಡಿದರೆ ಒಳ್ಳೆಯದಾಗುತ್ತದಂತೆ.. ಕೃಷ್ಣೆ ತೃಪ್ತಳಾಗುತ್ತಾಳಂತೆ.. ನಾವು ಮಾಡುವ ಪಯಣ ಸುರಳೀತವಾಗಿ ನಡೆಯುತ್ತದಂತೆ.. ಯಾವುದೇ ಅಡ್ಡಿ ಆತಂಕ ಬರದಂತೆ ಕೃಷ್ಣೆ ಕಾಪಾಡುತ್ತಾಳಂತೆ.. ಹಾಗಂತ ಅವರ ನಂಬಿಕೆಯೆಂದು ಏಜೆಂಟ್ ಹೇಳಿದ.. ನಾನೂ ಹಾಗೆ ಮಾಡಿದೆ...

(ಮುಂದುವರಿಯುತ್ತದೆ)
(ಮುಂದಿನ ಭಾಗದಲ್ಲಿ ನಿರೀಕ್ಷಿಸಿ : ಗುಮ್ಮಟ ನಗರಿ, ಬಾಗೇವಾಡಿ ಹಾಗೂ ಸೊಳ್ಳೆಯ ರೂಮು)

Friday, November 8, 2013

ಹನಿ-ಮಿನಿ ಚುಟುಕಗಳು

66.ವ(ವೇ)ದನೆ

ಹೇ ಚಂದಿರ ವದನೆ
ನೀ ಎದುರಿದ್ದಾಗ ನನ್ನದು
ನಗುವೆ ನಯನೆ |
ದೂರವಾದರೆ ಮಾತ್ರ
ಹೇಳಿಕೊಳ್ಳಲಾಗದ ವೇದನೆ ||


67.ಚಿನ್ಹೆ

ಮಳೆ ಪ್ರೀತಿಯ
ಚಿನ್ಹೆಯಾದರೆ
ಸಂಸಾರದ್ದು
ಗುಡುಗು-ಸಿಡಿಲು
ಒಮ್ಮೊಮ್ಮೆ ಮಿಂಚು|
ಯಾವಾಗಲೂ ಪ್ರವಾಹ ||

68.ತಮ್ಮ

ಎಂತ ವಿಚಿತ್ರ ಅಲ್ವಾ |
ಬಿದಿರಿನ ತಮ್ಮ
ದೂರ್ವೆಯಂತೆ ||

69.ಕಾರಣ

ನೋಡೆ ಸಖಿ
ಚಂದಿರ ಅಳುತ್ತಿದ್ದಾನೆ..|
ಯಾಕಂದರೆ ಅಲ್ಲಿಗೂ
ಮಾನವ ಕಾಲಿಟ್ಟಿದ್ದಾನೆ ||

70.ನಗು way

ನಗುವಿಗೆ ಅದೆಷ್ಟು ತಾಕತ್ತು..
ನಗಿಸಿ-ನಗಿಸಿ ಸುಸ್ತು ಮಾಡಿ
ಕೊನೆಗೊಮ್ಮೆ ಕಣ್ಣಲ್ಲಿ
ನೀರನ್ನೂ ತರಿಸಿಬಿಡುತ್ತೆ

Tuesday, November 5, 2013

ಆನೂ ಪ್ಯಾಟಿಗೆ ಬರ್ತಿದ್ದಿ

ಆನೂ ಪ್ಯಾಟಿಗೆ ಬರ್ತಿದ್ದಿ
ಅಪ್ಪಯ್ಯಾ, ಆನೂ ಜಾತ್ರಿಗೆ ಬರ್ತಿದ್ದಿ ||

ಜಾತ್ರೆಯ ನೋಡವ್ವು,
ತೊಟ್ಟಿಲು ಹತ್ತವ್ವು,
ಭಾರೀ ಚೊಲೋ ಇರುವ
          ಸರ್ಕಸ್ಸು ನೋಡವ್ವು ||

ಬಳೆ ಪ್ಯಾಟೆಲಿ ತಿರುಗವ್ವು,
ಬೆಂಡು-ಬತ್ತಾಸ್ ಕೊಳ್ಳವ್ವು,
ಲಕ್ಷ್ಮೀ ಟಾಕೀಸ್ನಲ್ಲಿ ಹೊಸ
         ಪಿಚ್ಚರ್ ನೋಡವ್ವು ||

ಹೊಸ ಅಂಗಿ ಕೊಳ್ಳವ್ವು,
ಪ್ಯಾಟೇಲಿ ತಿರುಗವ್ವು,
ಬೇಗ ಬೇಗನೆ ನಾವು
          ಜಾತ್ರಿಗೆ ಹೋಪನ  ||

ಮಾರಿ ಗದ್ದುಗೆ ನೋಡವ್ವು
ಹಣ್ಣು ಕಾಯಿ ಮಾಡ್ಸವ್ವು,
ರಗಳೆ ಮಾಡೋ ಮಾಣಿಗೆ
          ತುತ್ತೂರಿ ತಗಳವ್ವು ||

ಕೊಟೆಕೆರೆಲಿ ತಿರುಗವ್ವು,
ನಟರಾಜ ರೋಡಲ್ ಹೋಗವ್ವು
ಪ್ಯಾಷನ್ ಪ್ಯಾಲೇಸಲ್ಲಿ 
           ಹೊಸ ಅಂಗಿ ಕೊಳ್ಳವ್ವು  ||

(ಆತ್ಮೀಯರೇ... 
ಪ್ರದ್ತುತ ಇದೂ ಒಂದು ಹವ್ಯಕ ಗೀತೆ.. ಹವ್ಯಕ ಹಾಡುಗಳನ್ನು ಕೇಳುವ ಹುಚ್ಚಿರುವ ನನಗೆ ಅದೇ ಧಾಟಿಯಲ್ಲಿ ಹಾಡೊಂದನ್ನು ರಚನೆ ಮಾಡುವ ಹುಚ್ಚು ಹತ್ತಿ ಬರೆದಿದ್ದು. ತನ್ನ ತಂದೆಯ ಬಳಿ ಶಿರಸಿಯ ಜಾತ್ರೆಗೆ ಹೋಗೋಣ ಎಂದು ಹಟ ಮಾಡುವ ಚಿಕ್ಕ ಹುಡುಗಿಯ ಭಾವನೆ ಈ ಹಾಡಿನ ಮೂಲಕ ವ್ಯಕ್ತವಾಗಿದೆ. ಹಾಸ್ಯದ ಈ ಹಾಡನ್ನು ನಮ್ಮೂರಿನ ಹಳ್ಳಿ ಹಾಡುಗಳ ಸರದಾರಿಣಿ ಕಮಲಾಕ್ಷ್ಮೀ ಹೆಗಡೆ ಅವರಿಗೆ ನೀಡಿದ್ದೆ. ಸಿಟ್ಟು ಬಂದ ಆಕೆ ಎಂತೆಂತಾ ಗಬ್ ಗಬ್ ಹಾಡು ಬರಿತ್ಯೋ ಎಂದು ಹೇಳಿದ್ದರೂ ನಂತರ ಅದನ್ನು ಹಾಡುವ ಪ್ರಯತ್ನವನ್ನೂ ಮಾಡಿದ್ದಳು..ಚಿಕ್ಕ ಮಕ್ಕಳ ಮನಸ್ಸಿನ ಭಾವನೆಯನ್ನು ತಿಳಿಸುವ ಹಳ್ಳಿ ಹಾಡು ಇದು.) (ಇದನ್ನು ಶಿರಸಿಯಲ್ಲಿ 23-01-2008ರಂದು ಬರೆದಿದ್ದೇನೆ.)

Friday, November 1, 2013

ಚದುರಂಗದ ಕುದುರೆಯ ಬೆನ್ನೇರಿ -ಭಾಗ 2

ವಿಶಿಷ್ಟ ಸಾಮ್ರಾಟ್ ಬಸ್ಸು...


ನನ್ನ ಈ ಪ್ರವಾಸ ಕಥನದಲ್ಲಿ ವಿಶೇಷ ಪಾತ್ರವಾಗಿದ್ದು ಈ ಸಾಮ್ರಾಟ್ ಬಸ್ಸಿ ಅಂದರೂ ತಪ್ಪಿಲ್ಲ. ಈ ಬಸ್ಸಿನಲ್ಲಿ ನಾವು ಅಜಮಾಸು 8 ಗಂಟೆಗಳ ಕಾಲ ಪ್ರಯಾಣ ಮಾಡಿದ ಕಾರಣ ಅದರ ನೆನಪಿನ್ನೂ ಹಸಿಹಸಿಯಾಗಿದೆ. ಶಿರಸಿಯಿಂದ ಹುಬ್ಬಳ್ಳಿ ಹಾಗೂ ಹುಬ್ಬಳ್ಳಿಯಿಂದ ದೂರದ ಗುಮ್ಮಟ ನಗರಿ ಬಿಜಾಪುರದ ವರೆಗೆ ಈ ಬಸ್ಸು ನಮ್ಮ ಸಾಥಿಯಾಗಿತ್ತಲ್ಲ ಅದರ ಪಯಣವೇ ಮಜವಾಗಿದೆ.
ಶಿರಸಿಯಲ್ಲಿ ಬಸ್ಸು ಏರಿದಾಗ ಅದರ ಸೀಟೆಲ್ಲ ಖಾಲಿ ಖಾಲಿಯಾಗಿದ್ದವು. ಬಸ್ಸಿನಲ್ಲಿದ್ದ ಟಿವಿಯಲ್ಲಿ ಕ್ರೇಜಿ ಸ್ಟಾರ್ ನ ಬಣ್ಣದ ಗೆಜ್ಜೆ ಚಿತ್ರ ಮೂಡಿಬರುತ್ತಿತ್ತು. ಯಾಕೋ ಗೊತ್ತಿಲ್ಲ ಆ ಹೀರೋ ಅಂದರೆ ನಮ್ಮ ಬಳಗದಲ್ಲಿದ್ದ ತೃಪ್ತಿಗೆ ಆಗದು. ಅದನ್ನು ತಿಳಿದುಕೊಂಡ ಕೃಷ್ಣಮೂರ್ತಿ ಆಕೆಯ ಜೊತೆಗೆ ಕೀಟಲೆಗಿಳಿದ. ಮಾತಿನ ಮೂಲಕ ಛೇಡಿಸಹತ್ತಿದ. ತೃಪ್ತಿ ಆ ಹೀರೋನನ್ನು ಬೈಯ್ಯಲು ಆರಂಭಿಸಿದರೆ ಕಿಟ್ಟು ಅವನನ್ನು ಹೊಗಳುವುದು, ಆಕೆ ಆತನ ಸಿನಿಮಾ ಡಬ್ಬಾ ಇದೆ ಎಂದರೆ ಆತ ಇಲ್ಲ ಅದು ಚನ್ನಾಗಿದೆ ಎನ್ನುವುದು..ಆತನ ಹಾಡುಗಳೆಲ್ಲ ನನಗೆ ಪಂಚಪ್ರಾಣ. ಹಾಡನ್ನು ನೋಡುತ್ತಿದುವುದೇ ಹೊಸದೊಂದು ಕ್ರೇಜ್ ಹುಟ್ಟುಹಾಕುತ್ತದೆ ಎನ್ನುವುದು.. ಈ ಮುಂತಾಗಿ ಆಕೆಯನ್ನು ಛೇಡಿಸುತ್ತಿದ್ದ.
ಚಿತ್ರ ಮುಂದುವರಿದಂತೆಲ್ಲ ಬಸ್ಸು ರಶ್ಶೋ ರಶ್ಶಾಗತೊಡಗಿತು. ಕೊನೆಗೆ ಇದೇ ಜನಜಂಗುಳಿಯ ಪ್ರತಾಪದಿಂದಲೇ ಬಣ್ಣದ ಗೆಜ್ಜೆಯ ಕೊನೆ ಕೊನೆಯ ಝಲಕುಗಳನ್ನು ಕಣ್ಣಲ್ಲಿ ತುಂಬಿಕೊಳ್ಳಲು ಆಗಲೇ ಇಲ್ಲ.
ಮಧ್ಯದಲ್ಲೆಲ್ಲೋ, ಮುಂಡಗೋಡಿರಬೇಕು. ಪ್ರಯಾಣಿಕನೊಬ್ಬ ಬಸ್ ಕಂಡಕ್ಟರ್ ಬಳಿ ಜಗಳ ಪ್ರಾರಂಭಿಸಿದ. ಚಿಲ್ಲರೆ ಜಗಳ ತಾರಕಕ್ಕೇರುವ ಹೊತ್ತಿಗೆ ಪ್ರಯಾಣಿಕರು ತಮ್ಮ ಜೊತೆಗಾರನ ಮೇಲೆ ತಿರುಗಿಬಿದ್ದರು. ಪರಿಣಾಮವಾಗಿ ಆತ ಗಪ್ ಚುಪ್ ಆದ. ಹಾಳಾದ ರಸ್ತೆ, ಚಾಲಕನ ನಿಯಂತ್ರಣ ಮೀರಿದ ವೇಗ.. ಇವುಗಳ ಪರಿಣಾಮ ಶಿರಸಿಯಲ್ಲಿ ತಿಂದಿದ್ದ ಪುರಿ ಭಾಜಿ ಹೊಟ್ಟೆಯಲ್ಲಿ ಕಲಸು ಮೇಲೋಗರವಾಗಿದ್ದರೂ ಹುಬ್ಬಳ್ಳಿಯನ್ನು ತಲುಪುವ ವೇಳೆಗೆ ಸಂಪೂರ್ಣ ಜೀರ್ಣೋದ್ಧಾರಗೊಂಡಿತ್ತು.

ಹುಬ್ಬಳ್ಳಿಯಿಂದ ಬಿಜಾಪುರದವರೆಗೆ...
ಇದು ಅನಾಮತ್ತು ಐದೂವರೆ ಗಂಟೆಗಳ ಮ್ಯಾರಥಾನ್ ಪಯಣ. ಬಯಲುಸೀಮೆಯಲ್ಲಿ ವಾಹನದಲ್ಲಿ ಕುಳಿತು ಸಾಗುವುದಕ್ಕೂ ಸಹನೆ ಬೇಕು. ಸುಮಾರು 350 ಕಿ.ಮಿ ದೂರದ ಈ ಪಯಣಕ್ಕೆ ದೈಹಿಕ ಸಾಮರ್ಥ್ಯದ ಜೊತೆಗೆ ಮಾನಸಿಕ ಶಕ್ತಿಯೂ ಅಗತ್ಯ. ಹುಬ್ಬಳ್ಳಿಯಲ್ಲಿ ಟಿಪಿಕಲ್ ಬೈಲು ಸೀಮೆಯ ಖಾರದ ಊಟ ಮಾಡಿ 11.30ಕ್ಕೆ ರಾಣಿ ಚನ್ನಮ್ಮಾ ಬಸ್ಸನ್ನೇರಿದೆವು. ಅದರ ಜೊತೆಯಲ್ಲಿಯೇ ನಮ್ಮ ಅಷ್ಟದಳ  ಹಾಗೂ ಒಂದು ದಳದಳ ದ  ಗೌಜು ಬಸ್ಸಿನ ಟಾಪನ್ನೂ ಮೀರಿ ಆಚೆಗೆ ಹಾಯ್ದಿತ್ತು. ಬಸ್ಸಿನಲ್ಲಿ ಅಷ್ಟು ಜನರಿರಲಿಲ್ಲ. ಹಾಗಾಗಿ ಕೊನೆಯ 8 ಸೀಟುಗಳು ನಮಗಾಗಿಯೇ ಎಂಬಂತೆ ಖಾಲಿಖಾಲಿಯಾಗಿದ್ದವು. ನಮ್ಮ ಗೌಡರನ್ನು ಮುಂದೆಲ್ಲೋ ಒಂದು ಸೀಟಲ್ಲಿ ಒಬ್ಬಂಟಿಯಾಗಿ ಕುಳ್ಳಿರಿಸಿ ನಾವು ಎಮಟೂ ಜನರು ಕೊನೆಯ ಸೀಟಿನಲ್ಲಿ ಆಸೀನರಾಗುವ ವೇಳೆಗೆ ಬಸ್ಸಿನಲ್ಲಿ ಪೋಂ.. ಪೋಂ..

ಇಷ್ಟರ ಜೊತೆಗೆ  ನಮ್ಮ ಎಂಟೂ ಜನರ ಗುಣಾವಗುಣಗಳನ್ನು ಪರಿಚಯ ಮಾಡಿಕೊಡದಿದ್ದರೆ ತಪ್ಪಾಗುತ್ತದೆ. ಮೊದಲು ನನ್ನಿಂದಲೇ ಶುರುವಾಗಲಿ..ನಾನೊಂಥರಾ ಇದ್ದವರಲ್ಲಿಯೇ ಭಾವಾರ್ಥಿ. ಜೊತೆಗೆ nature lover. ಜೊತೆಗೆ ಈಗ ಬಾಯ್ಸ್ ಟೀಮಿನ ಕ್ಯಾಪ್ಟನ್. ಹರಟೆಗೆ ಹರಟೆ. ಕೊರೆತಕ್ಕೆ ಸಮಯ ಸಿಕ್ಕಾಗಲೆಲ್ಲ ಕೊರೆತ. ಹಾಡಿಗೆ ಹಾಡು ಹಾಗೆಯೇ ಸಿಟ್ಟಿಗೆ ಸಿಟ್ಟು ನನ್ನ ಆಸ್ತಿ. . ಜೊತೆಗೆ ಇನ್ನೂ ಹತ್ತು ಹಲವು ಗುಣಗಳಿವೆ.. ಆದರೆ ಇಲ್ಲಿ ಅದು ಅನ್ ಇಂಟರೆಸ್ಟಿಂಗ್ ಬಿಡಿ..
ಇನ್ನು ನಮ್ಮ ಟೀಂ ಎಂಇಎಸ್ ಬಗ್ಗೆ ಹೇಳಬೇಕೆಂದರೆ ಎರಡನೇಯವನಾಗಿ ಆನಂದ ನಾಯ್ಕ. ನಮ್ಮಲ್ಲಿದ್ದವರ ಪೈಕಿ ಥಂಡು ಥಂಡು ಕೂಲ್ ಕೂಲ್.. ಬಸ್ಸಿನಲ್ಲಿ ಮಾತನಾಡದೇ ತನ್ನದೇ ಲೋಕದಲ್ಲಿ ತಾನು ಕುಳಿತು ಕಣ್ಣಿನಲ್ಲಿಯೇ ಕನಸು ಕಾಣುತ್ತಿರುವಂತಹ ವ್ಯಕ್ತಿ. ಜೊತೆಗೆ ಎಲ್ಲರಿದ್ದರೂ ಏಕಾಂಗಿ.. ಥಟ್ಟನೆ ನೋಡಿದರೆ ಇವನಿಗೆ ಲವ್ ಫೇಲ್ಯೂರಾ ಎಂದು ಭಾವಿಸುವಷ್ಟು ಒಬ್ಬಂಟಿ. ಒಂಥರಾ ಗುಜರಿಗೆ ಹಾಕಿದ ಬಸ್ಸಿನ ಹಾಗೇ.. ನಮ್ಮ ಜೊತೆಗೆ ಪಯಣ ಮಾಡಿದ ಬಡಪಾಯಿ. ಅಫ್ಕೋರ್ಸ್..LOVE ಅಂದರೆ ಪರಮ ಕುತೂಹಲ. ನಾವು ಲವ್ವಿನ ಕುರಿತು ಹೇಳುತ್ತಿದ್ದ ಸತ್ಯ ಹಾಗೂ ಸುಳ್ಳಿನ ಸುದ್ದಿಗಳನ್ನೆಲ್ಲ ನಂಬಿಬಿಟುವಷ್ಟು ಒಳ್ಳೆಯವನು. ಇನ್ನೊಂದು ಈತನ ದೊಡ್ಡಗುಣವೆಂದರೆ ಅನುಕರಣೆ. ಎಂತವರನ್ನಾದರೂ ಬೆಹತರೀನ್ ಆಗಿ ಅನುಕರಣೆ ಮಾಡುವ ಈತನನ್ನು ನಮ್ಮ ಪಯಣದಲ್ಲಿ ಅನೇಕ ಸಾರಿ ಅನುಕರಣೆಯ ಹಾದಿಗಿಳಿಸಿ ನಮ್ಮೊಳಗೊಂದಾಗುವಂತೆ ಮಾಡಿದ್ದು ನಮ್ಮ ದೊಡ್ಡ ಸಾಧನೆಗಳಲ್ಲಿ ಒಂದು. ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ನಾಗಭೂಷಣ ಗೌಡರ ತೀರ್ಥ ಪ್ರಸಾದ ಸೇವನೆ ಯ ನಟನೆಯನ್ನು ಅತ್ಯತ್ತಮವಾಗಿ ಅನುಕರಣೆ ಮಾಡಿ ತೋರಿಸಿ ನಮ್ಮಿಂದ ಅಭಿನವ ಕಲಾವಿದ ಎನ್ನುವ ಬಿರುದನ್ನು ಪಡೆದುಕೊಂಡಿದ್ದ..
ಉಳಿದ ಇನ್ನಿಬ್ಬರು ಹುಡುಗರ ಬಗ್ಗೆ ವಿಶೇಷವಾಗಿ ಹೇಳಲೇಬೇಕು. ಒಬ್ಬ ಧಡಿಯ ನವೀನ ಪಾವಸ್ಕರ ಇನ್ನೊಬ್ಬ ಲಂಬೂ ಕಿಟ್ಟಿ. ನಮ್ಮ ಈ ಪ್ರವಾಸ ಕಥನ -ಯಾನಕ್ಕೆ ವಿಶೇಷ ಅರ್ಥ, ಮೆರಗು ಬಂದಿದ್ದೇ ಈ ಇಬ್ಬರಿಂದ. ಮೊದಲು ನವೀನನ ಪ್ರವರ ಹೇಳಿಕೊಂಡು ಮುಂದಕ್ಕೆ ಸಾಗುತ್ತೇನೆ. ಇಂವ ನವೀನ ಪಾವಸ್ಕರ. ವಯಸ್ಸಿಗೆ ಮೀರಿದ ದೇಹ ಈತನ  ಭೌಗೋಳಿಕ ಲಕ್ಷಣ. ಹೋಲಿಸಿ ಹೇಳಬೇಕೆಂದರೆ ದೊಡ್ಡ ವೋಲ್ವೋ ಲಾರಿಯಂತವನು. ಅಂತಹ ದೈತ್ಯ ದೇಹಕ್ಕೆ ತಕ್ಕ ಹೊಟ್ಟೆ ಇರದಿದ್ದರೆ ಹೇಗೆ ಹೇಳಿ..? ಜೊತೆಗೆ ಗಟ್ಟುಮುಟ್ಟಾದ ಆಳುವೂ ಹೌದು. ಪ್ರೀತಿಗೆ ಜೈ. ಜಗಳ-ಗಲಾಟೆ ಹೊಡೆದಾಟಕ್ಕೂ ಸೈ. ಈತ ಸಾಮಾನ್ಯವಾಗಿ ನಡೆದುಕೊಂಡರೂ ಎದುರಿನವರಿಗೆ ಹುಚ್ಚಾಪಟ್ಟೆ ನಗು ಹುಟ್ಟುತ್ತದೆ. ಈತನ ಹಾವ-ಭಾವ-ನಡೆ-ನುಡಿಗಳೇ ನಮಗೆ ಆಕರ್ಷಣೀಯ ಎನ್ನಿಸುತ್ತದೆ. ಇವುಗಳೇ ನಮ್ಮ ಪಯಣಕ್ಕೆ ವಿಶೇಷವಾದ ಮೆರಗಿನ ಜೊತೆಗೆ ಖುಷಿಯನ್ನು ನೀಡಿದ್ದು ಎಂದರೆ ತಪ್ಪಿಲ್ಲ. ಚನ್ನಾಗಿ ಚೆಸ್ ಆಡುತ್ತಾನೆ. ಆನಂದ ನಾಯ್ಕ ಹಾಗೂ ನವೀನ ಪಾವಸ್ಕರ ಸೇರಿದರೆ 3-4 ಗಂಟೆಗಳ ಕಾಲ ಚೆಸ್ ಆಡಿಬಿಡಬಲ್ಲರು. ನೋಡುಗರು ಹಣ್ಣಾಗುವುದಂತೂ ಗ್ಯಾರಂಟಿ.
ಇನ್ನುಳಿದವನೆಂದರೆ ಕಿಟ್ಟು. ಅಲಿಯಾಸ್ ಕರಷ್ಣಮೂರ್ತಿ ದೀಕ್ಷಿತ್ ಉರುಫ್ ದೀಕ್ಷಿತ ಅಥವಾ ಕೆಡಿ. ಈತನ ಬಗ್ಗೆ ಹೇಳಬೇಕೆಂದರೆ ಕಷ್ಟದ ಕೆಲಸವೂ ಹೌದು. Onle line ನಲ್ಲಿ ಹೇಳಬೇಕೆಂದರೆ ಈತನೊಬ್ಬ ಡಿಫರೆಂಟ್ ಫೆಲ್ಲೋ.. ಬಹುಶಃ ಈತ ನಮ್ಮ ಪಯಣದಲ್ಲಿಲ್ಲ ಎಂದಾಗಿದ್ದರೆ ನಾನು ಈ ಪ್ರವಾಸ ಕಥನವನ್ನು ಬರೆಯುತ್ತಿಲೇ ಇರಲಿಲ್ಲವೇನೋ..
ಕಿಟ್ಟು/ಕಿಟ್ಟಿಯ ಬಗೆಗ ಹೇಳಬೇಕಾದರೆ ಸ್ವಲ್ಪ ಫ್ಲಾಷ್ ಬ್ಯಾಕ್ ಗೆ ಹೋಗಿ ಬರುತ್ತೇನೆ. ಮನಸ್ಸಿನಲ್ಲಿ ನಿಮ್ಮಿಷ್ಟದ ಫ್ಲಾಷ್ ಬ್ಯಾಕಿನ ಸಿನೆಮಾ ನೆನಪು ಮಾಡಿಕೊಳ್ಳಬಹುದು. ನಿಜವಾಗಿಯೂ ಹೇಳಬೇಕೆಂದರೆ ಕಿಟ್ಟುವನ್ನು ಕಾಲೇಜಿನ CHESS ತಂಡದ ಆಟಗಾರನಾಗಿ ಕರೆದೊಯ್ಯಲು ಆಟದ ಗಂಧಗಾಳಿಯೇ ಗೊತ್ತಿರದಿದ್ದ ಎನ್. ಎಚ್. ಗೌಡರಿಗೆ ಸುತಾರಾಮ್ ಇಷ್ಟವಿರಲಿಲ್ಲ. ನಾವು ಹೊರಡಲು ಎರಡು ಮೂರು ದಿನಗಳಿರುವ ವರೆಗೂ ಆತ ಬರುವುದೋ ಇಲ್ಲವೋ ಎನ್ನುವ ಹೊಯ್ದಾಟ ನಡೆದೇ ಇತ್ತು. ಕೋಚ್ ಎಂ. ಕೆ. ಹೆಗಡೆಯವರೂ ಈ ಕುರಿತು ಸ್ಪಷ್ಟ ನಿರ್ಧಾರ ಮಾಡಲು ಅನುಮಾನಿಸುತ್ತಿದ್ದರು. ಆದರೆ ನನಗೆ ಮಾತ್ರ ಕಿಟ್ಟುವನ್ನು ಕರೆದೊಯ್ಯಲೇ ಬೇಕು ಎಂಬ ಭಾವನೆ ಬಂದಿತ್ತು. ಇದಕ್ಕೆ ಕಾರಣಗಳು ಹಲವಿದ್ದವು. ಕಿಟ್ಟುವಿನ ಆಟ ಚನ್ನಾಗಿತ್ತು. ಕೆಲವು ಸಾರಿ ಸುಲಭದಲ್ಲಿ ಮ್ಯಾಚ್ ಸೋತಿದ್ದರೂ ಆತನ ಮೇಲೆ ಒತ್ತಡ ಬಿದ್ದಂತೆಲ್ಲ ಗೆಲ್ಲುತ್ತಾ ಹೋಗುವ ಗುಣವಿತ್ತು. ಟೆನ್ಶನ್ ಮಾಡಿಕೊಳ್ಳದೇ ಆಡುವುದು ಆತನ ವಿಶೇಷ ಗುಣ. ಎಂತದ್ದೇ ಸೋಲಿನ ಸಂದರ್ಭವಿರಲಿ ನಗುತ್ತಾ, ಎದುರಾಳಿಯನ್ನು ನಗಿಸುತ್ತಾ ಆಟವಾಡುವುದು ಆತನಿಗೆ ಒಲಿದು ಬಂದ ಗುಣ ಎಂದರೂ ತಪ್ಪಿಲ್ಲ ಬಿಡಿ. ಜೊತೆಯಲ್ಲಿ ಆಟಕ್ಕೆ ಸಡನ್ ತಿರುವು ನೀಡಬಲ್ಲವನಾಗಿದ್ದ.  ಇದ್ದಕ್ಕಿದ್ದಂತೆ ಪಿನ್ ಇಟ್ಟು ಢಂ ಅನ್ನಿಸುವ ಆತನ ಆಟಕ್ಕೆ ಹಲವಾರು ಸಾರಿ ನಾನೇ ಬಲಿಯಾಗಿದ್ದೆ.!
ಅಲ್ಲದೇ ಈತ ನನ್ನ ಪರಮಾಪ್ತ ಮಿತ್ರ. ನಾನು-ರಾಘು-ಕಿಟ್ಟು ಕಾಲೇಜಿನಲ್ಲಿ ಪರಮಾಪ್ತ ದೋಸ್ತರು ಎಂಬುದು ಕಾಲೇಜಿನ ಕಾರಿಡಾರಿನಲ್ಲಿ ಕೊಬ್ಬಿನಿಂದ ಬೆಳೆದಿದ್ದ ಆಕೇಸಿಯಾ ಮರಗಳಿಗೂ ಗೊತ್ತಿದ್ದವು. ಆತ ಇಂತಹ ಪಯಣದಲ್ಲಿ ಜೊತೆಗೂಡಿದರೆ ಪ್ರಯಾಣ ಖುಷಿಯಾಗಿರುತ್ತದೆ. ಪ್ರಯಾಣ ಹಸಿ ಹಸಿರಾಗಿ ನೆನಪಿನಾಳದಲ್ಲಿ ನಿಲ್ಲಬೇಕೆಂದರೆ ಕಿಟ್ಟುವಿನಂತಹವರು ಒಬ್ಬರಾದರೂ ಇರಬೇಕು ಎಂದು ನನಗೆ ಅನ್ನಿಸಿತ್ತು. ಪರಮಾಪ್ತ ದೋಸ್ತ ಬರ್ತಾನೆ ಅಂದ್ರೆ ಯಾರು ಬಿಡ್ತಾರೆ ಹೇಳಿ..?
ಇಂತಹ ಕಾರಣಗಳೇ ನನಗೆ ಕಿಟ್ಟುವಿನ ಅಗತ್ಯತೆಯನ್ನು ಎದ್ದು ತೋರಿಸುವಂತೆ ಮಾಡಿದವು. ಅಲ್ಲದೇ team ನ captain ಆದ ನನಗೆ ಆತನೊಬ್ಬ ಸಮರ್ಥ ಹಾಗೂ ಅತ್ಯಗತ್ಯ ಆಟಗಾರನಂತೆ ಕಾಣಿಸಿದ. ಹಾಗಾಗಿಯೇ ನಮಗೆ ಚೆಸ್ ಕಲಿಸಿದ ಎಂ. ಕೆ. ಹೆಗಡೆಯವರ ಬಳಿ ಚಿಕ್ಕ ಚಾಲೆಂಜೊಂದನ್ನು ಮಾಡಿ ಅವನನ್ನು ಕಳಿಸಲು ಕೇಳಿದೆ. ಬಗಲ್ ಮೆ ದುಷ್ಮನ್ ಎನ್ನುವಂತೆ ಕಿಟ್ಟು ಬರುವುದು ನವೀನ ಪಾವಸ್ಕರನಿಗೆ ಇಷ್ಟವೇ ಇರಲಿಲ್ಲ. ನೀರಾರು ಸಾರಿ ಅಂವ ಬ್ಯಾಡ.. ಅಂವ ಬಂದರೆ ಹೊಗೆ ಗ್ಯಾರಂಟಿ ಎಂದು ನನ್ನಲ್ಲಿಯೂ, ಕ್ರೀಡಾ ವಿಭಾಗದ ಮುಖ್ಯಸ್ಥರಾಗಿದ್ದ ನಾಗಭೂಷಣ ಗೌಡರ ಬಳಿಯೂ ಹೇಳಿದ್ದ. ಆದರೆ ನಾನು ಪಟ್ಟು ಸಡಿಲಿಸಿರಲಿಲ್ಲ. ಅವನಿಂದಾಗಿ ತಂಡ ಸೋತರೆ ಅದಕ್ಕೆ ನಾನೇ ಹೊಣೆಯಾಗುತ್ತೇನೆ ಎಂದೂ ಮಾತಿನ ಭರದಲ್ಲಿ ಹೇಳಿಬಿಟ್ಟಿದ್ದೆ. ಕೊನೆಗೆ ಒಲ್ಲದ ಮನಸ್ಸಿನಿಂದ ಕಿಟ್ಟುವನ್ನು ಟೀಂ ಮೆಂಬರ್ ಆಗಿ ಕಳಿಸಿದ್ದರು.
ಆದರೆ ನನ್ನ ನಿರೀಕ್ಷೆ ಹುಸಿಯಾಗಲಿಲ್ಲ ಎಂಬುದು ಮುಂದಕ್ಕೆ ನಿಮಗೆ ಗೊತ್ತಾಗುತ್ತದೆ.. ಓದಿ.. ಆತ ನಮ್ಮ ಪಯಣದಲ್ಲಿ ಆಟವೊಂದೇ ಅಲ್ಲದೇ ಎಲ್ಲ ಕಡೆಗಳಲ್ಲಿಯೂ ಟ್ವಿಂಕಲ್ ಟಸ್ಟಾರ್ ಆಗಿ ಮೆರೆದುಬಿಟ್ಟ. ಕೊನೆಗೊಮ್ಮೆ ನನ್ನ ಚಾಲೆಂಜನ್ನು ಉಳಿಸಿದ ಕೀರ್ತಿಯೂ ಈತನಿಗೆ ಸಲ್ಲಲೇ ಬೇಕು. ಈತನ ಒಡನಾಟದಿಂದ ಪಯಣದ ನಡುವೆ ಅನೇಕ ಗಂಭೀರ ಸಮಸ್ಯೆಗಳು ನಮ್ಮನ್ನು ಹಿಡಿಬಿಡದೇ ಕಾಡಿದರೂ ತನ್ನಿಂದ ತಾನೇ ಸಾಲ್ವ್ ಆಗಿ ಹೋದವು. ಟೆನ್ಶನ್ ಸಮಯದಲ್ಲಿ ಆತ ಉಕ್ಕಿಸುತ್ತಿದ್ದ ಟೈಮಿಂಗ್ಸ್ ಭರಿತ ಡೈಲಾಗ್ ಹಾಗೂ ಹಾಸ್ಯದ ಮಾತುಗಳು ನಮ್ಮನ್ನು ಪಯಣದುದ್ದಕ್ಕೂ ಜೀವಂತಿಕೆಯಿಂದ ಕಾಪಾಡಿದವು ಎಂದರೆ ಅತಿಶಯೋಕ್ತಿಯಲ್ಲ.

(ಮುಂದುವರಿಯುತ್ತದೆ)
(ಮುಂದಿನ ಭಾಗದಲ್ಲಿ ನಿರೀಕ್ಷಿಸಿ ಮಹಿಳಾ ಮಣಿಗಳ ಪರಿಚಯ, ಕಾಡಿದ ಗೌಡರು ಹಾಗೂ ಬಿಜಾಪುರದ ಕಡೆಗಿನ ಪಯಣ)