Sunday, June 2, 2013

ಚಿನ್ನು ಮೊಲ ಹಾಗೂ ಕಣ್ಣೀರು..

ಚಿನ್ನು ಮೊಲ ಹಾಗೂ ಕಣ್ಣೀರು..


ಬಾಂಧವ್ಯ ನೋಡಿ ಹೇಗಿರುತ್ತದೆ ಅಂತ,...
ಅದೆಲ್ಲಿ ಅಮ್ಮನ ಮಡಿಲಲ್ಲಿ ಬೆಚ್ಚಗೆ ಮಲಗಿ ಹಾಲು ಕುಡಿಯಬೇಕಿತ್ತೋ...
ಅದೆಷ್ಟು ಚೆಂದವಾಗಿ ಚೆಂಗನೆ ನೆಗೆಯುತ್ತ ಹುಲ್ಲು ಹಾಸಿನ ಮೇಲೆ ನರ್ತನ ಮಾಡಬೇಕಿತ್ತೋ...
ಆದರೆ ಹಾಗಾಗಲಿಲ್ಲ...

ಈಗ ಎರಡು ದಿನಗಳ ಹಿಂದೆ  ನನ್ನ ಭಾವ ಬೈಕೇರಿ ಮನೆಯ ಕಡೆಗೆ ಮರಳುತ್ತಿದ್ದಾಗ ರಸ್ತೆ ಮಧ್ಯ ಮಳೆಯಲ್ಲಿ ಏನೋ ಬಿದ್ದುಕೊಂಡಿದ್ದು ಕಾಣಿಸಿತು... ರಾತ್ರಿಯಾಗಿತ್ತು. ಲೈಟಿನ ಬೆಳಕಿನಲ್ಲಿ ಅದೇನೆಂಬುದು ಸ್ಪಷ್ಟವಾಗಿರಲಿಲ್ಲ..
ಗಾಡಿ ನಿಲ್ಲಿಸದಾಗ ನಿಧಾನವಾಗಿ ಪಕ್ಕಕ್ಕೆ ಸರಿದು ಹೋಯಿತೆಂಬುದು ಆತನೇ ಹೇಳಿದ ಸಂಗತಿ..
ಬೈಕಿನಡಿಯಲ್ಲಿ ಬಿತ್ತೇ?
ಹುಡುಕಿದಾಗ ಕಂಡಿದ್ದ ಪುಟ್ಟ ಮೊಲದ ಮರಿ..
ಅದೆಷ್ಟು ಪುಟ್ಟದು ಅಂದರೆ ಗುಬ್ಬಿಗಿಂತ ಸ್ವಲ್ಪ ದೊಡ್ಡ ಗಾತ್ರವಿರಬೇಕು ಅಷ್ಟೇ..

ಮಳೆಯಲ್ಲಿ ನಡುಗುತ್ತಾ.. ಓಡಿಹೋಗಲೂ ಶಕ್ತಿಯಿಲ್ಲದೇ..
ಅಮ್ಮನ ಸುಳಿವಿಲ್ಲದೆ ಕಂಗಾಲಾಗಿತ್ತು...
ಸಾಮಾನ್ಯವಾಗಿ ರಾತ್ರಿಯ ವೇಳೆಯಲ್ಲಿ ನಾನು ಬೈಕ್ ಮೇಲೆ ಹೋಗುವಾಗಲೆಲ್ಲ ದೊಡ್ಡ ದೊಡ್ಡ ಮೊಲಗಳು ಬೈಕಿನ ಲೈಟಿಗೆ ಕಣ್ಣು ಕೊಡುತ್ತ ಬೆಳಕು ಕಂಡಲ್ಲಿ ದಾರಿಗಡ್ಡವಾಗಿ ಓಡುತ್ತವೆ.. ನಮಗಿನಂತ ಮುಂದೆ.. ನಾವು ಅಥವಾ ಮೊಲ ಸ್ವಲ್ಪ ಯಾಮಾರಿದರೂ ಮೈಕಡಿಗೆ ಜೀವ ಕೊನೆಯಾಗುತ್ತದೆ.. ಅದಕ್ಕೆ ರಾತ್ರಿ ನಾನು ಮೊಲ ಕಂಡಾಗಲೆಲ್ಲ ಬಹಳ ಸ್ಲೋ ರೈಡಿಂಗ ಮಾಡುತ್ತೇನೆ..

ಬಹುಶಃ ಆ ಮರಿಯ ತಾಯಿ ಯಾವುದೋ ಬೈಕಿನಡಿ ಬಿದ್ದಿರಬೇಕು..
ಅಥವಾ ಮೊಲವನ್ನು ತಿನ್ನುವವರ ಕೈಗೆ ಸಿಕ್ಕಿತೋ ಕಾಣೆ..
ಮಳೆಯಿತ್ತಲ್ಲ ಪುಟ್ಟಮರಿಯನ್ನು ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ಯುವಾಗ ಅಮ್ಮ ಎಲ್ಲೋ ಕಾಣೆಯಾಯಿತು..
ಮರಿಗೆ ದಿಕ್ಕೇ ತೋಚಲಿಲ್ಲ..
ಭಾವನ ಕೈಗೆ ಸಿಕ್ಕಿತು..
ಕಾಲು ಮೈ, ಕಣ್ಣಲೆಲ್ಲ ಮಣ್ಣುರಾಡಿ.. ಮನ್ಣಿನ ಮುದ್ದೆಯಂತಾಗಿದ್ದ ಮರಿಯನ್ನು ನಾಜೂಕಿನಿಂದ ಎತ್ತಿಕೊಂಡು ಬಂದಿದ್ದ..
ಮನೆಗೆ ಬಂದು ಬೆಚ್ಚನೆಯ ಬಟ್ಟೆಯಲ್ಲಿ ಒರೆಸಿ ಬೆಚ್ಚಗೆ ಗೋಣಿಯ ಚಾದರ ಮಾಡಿ ಹೊದೆಸಿ ಬೆಕ್ಕಿನ ಕಾಟ ತಪ್ಪಿಸುವ ಸಲುವಾಗಿ ಡಬ್ಬಿಯಲ್ಲಿ ಗೂಡು ಮಾಡಿ ಮಲಗಿಸಿದ್ದ..

ಆಮೇಲೆ ಸಮಸ್ಯೆ ಶುರು..
ತಂದಿದ್ದೇವೆ..? ಅದೆಂತ ತಿನ್ನುತ್ತದೆ ಎಂಬುದು ಗೊತ್ತಿಲ್ಲ
ಮೊಲಕೆ ಉಪ್ಪು ಅಂದರೆ ಆಗದು ಹುಷಾರು ಅಂತ ಯಾರೋ ಹೇಳಿದ್ದರು..
ಉಪ್ಪನ್ನು ದೂರವಿಟ್ಟೆವು..
ಮೊಲ ತಾಯಿ ಹಾಲನ್ನು ಬಿಟ್ಟು ಉಳಿದಂತೆ ನೀರನ್ನು ಮಾತ್ರ ಕುಡಿಯುತ್ತದೆ ಎಂದು ಯಾರೋ ಹೇಳಿದರು..
ಗೊಂದಲವಾಯಿತು.. ಒಂದಷ್ಟು ಎಳೆಯ ಹುಲ್ಲು, ಬೆಂಡೆಕಾಯಿ ಮುಂತಾದ ತರಕಾರಿ ತಂದೆವು..
ಚಿಕ್ಕ ಚಿಕ್ಕ ತುಂಡನ್ನಾಗಿ ಮಾಡಿ ಅದರ ಎದುರು ಇಟ್ಟದ್ದೂ ಆಯ್ತು..
ಕ್ಯಾರೇಟ್ ಇಸ್ಟ ಎಂದು ಯಾರದ್ದೋ ಮನೆಯಿಂದ ತಂದು ಇಟ್ಟದ್ದಾಯ್ತು..
ನಮ್ಮೆದುರು ಏನೆಂದರೆ ಏನನ್ನೂ ತಿನ್ನಲಿಲ್ಲ..

ಆದರೆ ನಾವು ಅತ್ತ ಇತ್ತ ಹೋದಾಗ ತಿನ್ನುತ್ತಿತ್ತೆಂದು ಕಾಣುತ್ತದೆ..
ಅರ್ಧ ತಿಂದು ಬಿಟ್ಟಿದ್ದ ಹಣ್ಣಿನ ಸಿಪ್ಪೆಗಳು ಸಾಕ್ಷಿ ಹೇಳುತ್ತಿದ್ದವು..
ಆದರೆ ನಮ್ಮೆದುರು ಮಾತ್ರ ಮಂಗನ ಉಪವಾಸ...

ಈ ಮರಿ ಬಂದದ್ದೇ ತಡ ಮನೆಯಲ್ಲಿ ಜೀವಕಳೆ..
ತಂಗಿಗಂತೂ ಸ್ವರ್ಗವೇ ಧರೆಗಿಳಿದಂತೆ ಆಗಿತ್ತು..
ಇನ್ನು ತಂಗಿ ಮಗನಿಗೆ ಬಹಳ ಸಂತೋಷವಾಗಿತ್ತು..
ಒಂದೂ ವರೆ ವರ್ಷದ ಆತನಿಗೆ ಎಲ್ಲ ಪ್ರಾಣಿಗಳೂ, ಪಕ್ಷಗಳೂ ಸೇರಿದಂತೆ ಸಕಲ ಜಗತ್ತುಗಳೂ ಕುತೂಹಲದ, ಬೆರಗುಹುಟ್ಟಿಸುವ ಅಂಶಗಳು.. ಮನೆಗೆ ಬಂದು ಕಾಟ ಕೊಡುತ್ತಿದ್ದ ಮಾಳಬೆಕ್ಕನ್ನು ಮನೆಯ ಸದಸ್ಯನನ್ನಾಗಿ ಮಾಡಿದ್ದ ಕೀರ್ತಿ ಆತನಿಗೆ ಸಲ್ಲಬೇಕು.. (ಅದಕ್ಕೇ ನಾವು ಕಾಮರಾಜ ಅಂತ ಹೆಸರನ್ನಿಟ್ಟಿದ್ದೆವು.) ಆ ಬೆಕ್ಕೂ ಕೂಡ ಆತನಿಗೆ ಬಹಳ ಒಗ್ಗಿಬಿಟ್ಟಿದೆ...
ನಾವು ಮುಟ್ಟಲು ಹೋದರೆ ಓಡಿಹೋಗುವ ಆಥವಾ ಸಿಟ್ಟನ್ನು ಮಾಡಿಕೊಳ್ಳುವ ಆ ಬೆಕ್ಕಿಗೆ ಆತ ಏನು ಮಾಡಿದರೂ ತೊಂದರೆಯಿಲ್ಲ.. ತಂಗಿಮಗ ಶ್ರೀವತ್ಸ ಅದಕ್ಕಾಗಿಯೇ  ಬೆಕ್ಕಿನ ಬಾಲವನ್ನು ಎಳೆಯುವುದರ ಆದಿಯಾಗಿ ಅದನ್ನು ಗೊಂಬೆಯಂತೆ ತಿರುಗಿಸುವುದು, ಅದರ ಜೊತೆಗೆ ಆಡುವುದು ಮಾಡುತ್ತಿದ್ದ.. ಅದಕ್ಕೆ ತಕ್ಕಂತೆ ಅದೂ ಕೂಡ ಆಡುತ್ತಿತ್ತು...
ಈಗ ಮೊಲದ ಮರಿ ಮನೆಗೆ ಬಂದರೆ ಆತನನ್ನು ತಡೆಯುವವರ್ಯಾರು..?

ಮೊಲವನ್ನು ಇಟ್ಟಿದ್ದ ಡಬ್ಬಿಯತ್ತ ನಿಮಿಷಕ್ಕೊಂದು ಬಾರಿ ಹೋಗಿ ಕುಕ್ಕರುಗಾಲಲ್ಲಿ ಕುಳಿತು ಕುತೂಹಲದಿಂದ ಅದನ್ನು ನೋಡುವುದು ಕಣ್ಣರಳಿಸುವುದು, ಅಚ್ಚರಿಯಿಂದ ಆಮ್ಮನನ್ನು ಕರೆಯುವುದು ಆತನ ಆಟವಾಗಿಬಿಟ್ಟಿತು..
ಮೊಲದ ಮರಿಗೂ ಏನನ್ನಿಸಿತೋ ಗೊತ್ತಿಲ್ಲ..
ಆತ ಬಂದಾಗಲೆಲ್ಲ ಚಂಗನೆ ನೆಗೆದು ಕುಣಿಯುತ್ತಿತ್ತು..
ಡಬ್ಬಿಯಿಂದ ಹೊರಬರಲು ಯತ್ನಿಸುತ್ತಿತ್ತು..
ಇದನ್ನು ನೋಡಿ ಮತ್ತಷ್ಟು ಹರ್ಷ ಗೊಳ್ಳುತ್ತಿದ್ದುದು ಶ್ರೀವತ್ಸ...

ತಂಗಿ ಈ ಮೊಲದ ಮರಿಗೆ ಚಿನ್ನು ಎನ್ನುವ ಹೆಸರನ್ನಿಟ್ಟೇ ಬಿಟ್ಟಳು...
ಮೊದಲಿಂದಲೂ ಮೊಲವನ್ನು ಸಾಕಬೇಕೆಂಬ ನಮ್ಮ ಉತ್ಕಟ ಇಚ್ಛೆ ಈ ಮೂಲಕ ಪೂರ್ತಿಯಾಗಿತ್ತು..
ಜೊತೆಯಲ್ಲಿ ಹೊಸ ಸಮಸ್ಯೆಗಳು ಹುಟ್ಟಿದ್ದವು.. ಬೆಕ್ಕಿನ ಕಾಟ ತಡೆಯುವುದು, ಆಹಾರ ಹುಡುಕುವುದು, ರಕ್ಷಣೆ ಮಾಡುವುದು ಇತ್ಯಾದಿ.. ಇದಕ್ಕೆ ತಕ್ಕಂತೆ ನನ್ನ ಅಪ್ಪನ ಬಳಿ ಅದ್ಯಾರೋ ಮೊಲವನ್ನು ಮನೆಯಲ್ಲಿ ಸಾಕಿದರೆ ಮಕ್ಕಳು ಸಾಯುತ್ತಾರೆ ಎಂದು ಹೇಳಿದರಂತೆ... ಪ್ರಾರಂಭವಾಯಿತು ವಿರೋಧ ಪಕ್ಷದ ಧರಣಿ... ಬಹುಮತ ನಮ್ಮ ಪರವಿತ್ತು... ವಿರೋಧಿಗಳ ಅಲೆ ಸಣ್ಣದಾಯಿತು.. ಬಡಪಾಯಿ ಮೊಲ ಉಳಿಯಿತು..

ಎರಡು ದಿನ ಮೊಲದೊಡನೆ ಸಹಜವಾಗಿ, ತಮಾಷೆಯಾಗಿ ಕಳೆಯಿತು..
ಆದರೆ ನಿನ್ನೆ ರಾತ್ರಿ (ಜೂನ್ 1ರಂದು) ಮೊಲ ಇದ್ದಕ್ಕಿದ್ದಂತೆ ಮಲಗಿತು.. ಎಂದಿನ ಲವಲವಿಕೆಯಿಲ್ಲ.. ಮಲಗಿಯೇ ಇತ್ತು.. ಹುಷಾರಿಲ್ಲವೋ ಗೊತ್ತಾಗಲಿಲ್ಲ.. ಸತ್ತೇ ಹೋಯಿತೆ..? ಊಹುಂ.. ಉಸಿರಾಟ ಮಾಡುತ್ತಿದೆ. ಆದರೆ ಮೊಲವನ್ನು ನಿಲ್ಲಿಸ ಹೋದರೆ ಬುಡುಕ್ಕನೆ ಬೀಳುವುದು, ಮುಂದಿನ ಎರಡು ಕಾಲನ್ನು ಒದ್ದುಕೊಳ್ಳುವುದು ಮಾಡಲು ಆರಮಬಿಸಿತು. ಹಸಿವಾಯಿತೆ ಎಂದುಕೊಂಡು ತಿಂಡಿ ಕೊಟ್ಟೆವು, ಕ್ಯಾರೆಟ್ ಇಟ್ಟೆವು..ಊಹೂಂ ಏನನ್ನೂ ಮುಟ್ಟುತ್ತಿಲ್ಲ...
ಯಾಕೋ ಮನಸ್ಸಿನಲ್ಲಿ ಅಳುಕು..

ಅಷ್ಟರಲ್ಲಿ ಅದನ್ನು ನೋಡಿದ ಅಮ್ಮ `ತಮಾ.. ಇದು ಬದುಕುವುದು ಕಷ್ಟ .. ತಾಯಿ ಹಾಲು ಕುಡಿದು ಬೆಳೆದ ಮೊಲಕ್ಕೆ ನಾವು ತಿಂಡಿಕೊಟ್ಟರೂ ಒಗ್ಗಿಕೊಳ್ಳಲಿಲ್ಲ.. ಏನೋ ಹೆಚ್ಚು ಕಡಿಮೆ ಆದಂತಿದೆ..'ಎಂದಾಗ ಮನಸ್ಸು ಭಾರ ಭಾರ...
`ಮೊಲಕ್ಕೆ ಅಷ್ಟುದ್ದದ ಹಲ್ಲಿದೆ.. ಏನನ್ನಾದರೂ ತಿನ್ನುತ್ತದೆ..' ಎಂದು ವಿಚಿತ್ರ ವಾದವನ್ನು ಮಾಡಿದ್ದು ತಂಗಿ..
ಶ್ರೀವತ್ಸ ಮಲಗಿದ್ದನಾದ್ದರಿಂದ ಈ ಸಂದರ್ಭದಲ್ಲಿ ಅವನ ಉಪಸ್ಥಿತಿ ಇರಲಿಲ್ಲ..
ಭಾವನಿಗೆ ಯಾಕಾದರೂ ತಂದೆನೋ ಎನ್ನುವಷ್ಟು ಮನಸ್ಸು ವಿಚಲಿತವಾಗಿತ್ತು..
ಮಳೆಯಲ್ಲಿ ಸಾಯುತ್ತಿತ್ತು.. ಕಾಗೆ ಗೆ ಆಹಾರವಾಗುತ್ತಿತ್ತು.. ಛೇ.. ಇಲ್ಲಿ ತಂದರೂ ಬದುಕುತ್ತಿಲ್ಲವಲ್ಲ ಎಂದು ಪೇಚಾಡಿದ..

ರಾತ್ರಿ ಅದಕ್ಕೆ ಸಾಕಷ್ಟು ಬಂದೋಬಸ್ತು ಮಾಡಿ ಬೆಚ್ಚಗೆ ಮಲಗಿಸಿದೆವು..
ಬೆಳಗಾಗುವ ವೇಳೆಗೆ ಮೊಲ ಬದುಕಿರಲಿಲ್ಲ..
ಚಿನ್ನು ಜೀವ ಬಿಟ್ಟಿತ್ತು...

ಯಾಕೋ ಮನಸ್ಸೆಲ್ಲ ಒದ್ದೆಯಾದಂತೆನಿಸಿತು..
ಬೆಳಿಗ್ಗೆ ಎದ್ದವನೆ ಓಡಿಬಂದು ಡಬ್ಬಿಯನ್ನು ನೋಡಿದ ಶ್ರೀವತ್ಸ ನೋಡುತ್ತಲೇ ಇದ್ದ..
ನೋಡುತ್ತಲೇ ಇದ್ದ..
ಮೊಲ ಕುಣಿಯುತ್ತಲೇ ಇಲ್ಲ...
ಕೊನೆಗೆ ಆತನಿಗೆ ಏನನ್ನಿಸಿತೋ ಏನೋ.. ಅಳಲು ಪ್ರಾರಂಭಿಸಿದ... ಹೇಳಲು ಆತನಿಗಿನ್ನೂ ಮಾತು ಬರುವುದಿಲ್ಲವಲ್ಲ...
ಅಮ್ಮಾ..  ಮೀ.. ಮೀ... ಅಮ್ಮಾ.. ಮೀ.. ಮೀ.. ಎಂದು ಮೊಲವನ್ನು ತೋರಿಸುತ್ತ ಻ಳಲು ಪ್ರಾರಮಭಿಸಿದ.. ಚಾಕ್ಲೆಟ್ ತೋರಿಸಿ ಆಮಿಷವೊಡ್ಡಿದರೂ ಮರುಳಾಗುತ್ತಿಲ್ಲ..
ಮೊಲದ ಮರಿ ಆತನನ್ನು ಅಷ್ಟು ಕಾಡಿತ್ತು.. ಆತ ಅಷ್ಟು ಹಚ್ಚಿಕೊಂಡಿದ್ದ..

ಈ ಚಿತ್ರಣವನ್ನು ನೋಡಿ ನಮ್ಮ ಕಣ್ಣಂಚಲ್ಲೂ ನೀರು...
ನೆನಪಾದಾಗ ಮನಸ್ಸು ಕಲ್ಲವಿಲ...

Saturday, June 1, 2013

ಬೆಂಗಳೂರು-ಊಟಿ-ವಯನಾಡು-ಬೆಂಗಳೂರು - ಭಾಗ 3

ಬೆಂಗಳೂರು-ಊಟಿ-ವಯನಾಡು-ಬೆಂಗಳೂರು - ಭಾಗ 3


ಮಾಸಿಲ ಮಣಿಯಿಂದ ಕಣ್ಣೆತ್ತಿ ನೋಡಿದರೆ ದೂರದಲ್ಲಿ ಊಟಿಯ ಗಿರಿಶಿಖರಗಳು ನಮ್ಮನ್ನು ಕೈಬೀಸಿ ಕರೆಯುತ್ತವೆ...
ಬಾನು ಚುಂಬಿಸಿದಂತೆ ಕಾಣು ಈ ಗಿರಿಶಿಖರಗಳ ಮರೆಯಿಂದ ಸೂರ್ಯ ಆಣುಕುತ್ತಾನೆ..
ಆಗ ಕಾಣುವ ದೃಶ್ಯ ಚಿತ್ತಾರ ವರ್ಣನೆಗೆ ನಿಲುಕದ್ದು..

ಇಲ್ಲಿ ಕೊಂಚ ಮಾಸಿಲಮಣಿಯ ರಸ್ತೆಯ ಬಗ್ಗೆ ಹೇಳಬೇಕು...
ಮೈಸೂರಿನಿಂದ ಊಟಿಗೆ ಹೋಗುವುದಾದರೆ ಮುಖ್ಯವಾಗಿ ಇರುವುದು ರಾಷ್ಟ್ರೀಯ ಹೆದ್ದಾರಿ.. ಬಂಡಿಪುರದಿಂದ ಮಧುಮಲೈ ಅರಣ್ಯಕ್ಕೆ ಪ್ರವೇಶ ಮಾಡುವಾಗ ಒಂದು ಡಾಂಬರು ರಸ್ತೆ ಸಾಗುತ್ತದೆ.. ಇದು ಮಾಸಿಲಮಣಿಯ ಮೂಲಕ ಊಟಿಗೆ ಹೋಗುತ್ತದೆ.. ರಾಷ್ಟ್ರೀಯ ಹೆದ್ದಾರಿಯ ಮೂಲಕ ಘಟ್ಟ ಹತ್ತಿದರೆ 65-70 ಕಿ.ಮಿ ದೂರ. ಆದರೆ ಮಾಸಿಲ ಮಣಿಯದ್ದು ಶಾರ್ಟ್ ಕಟ್ ರಸ್ತೆ.. 36-40 ಕಿ.ಮಿಗೆ ಊಟಿ ಕಾಣಬಲ್ಲದು..

ರಸ್ತೆ ಚನ್ನಾಗಿದೆ ಎಂದು ಯಾರೋ ಹೇಳಿದರು..
ನಾವು ಹೊರಟೆವು..
ಅದು ನೋಡಿದರೆ ಯದ್ವಾತದ್ವಾ ಘಟ್ಟ...
36 ಕಿ.ಮಿ ಏರುವಷ್ಟರಲ್ಲಿ 70 ಕಿ.ಮಿ ಸುತ್ತಿಬಂದಷ್ಟೇ ಅನುಭವವಾಗುತ್ತದೆ.. ಹೆಚ್ಚೂ ಕಡಿಮೆ 65 ಡಿಗ್ರಿ ಕೋನದಲ್ಲಿ ಏರಬೇಕು..
ಹತ್ತಿರ ಹತ್ತಿರ 70ಕ್ಕೂ ಹೆಚ್ಚು ಹೇರ್ ಪಿನ್ ತಿರುವುಗಳು.. ಟೆರ್ರಿಬಲ್...
ನಮ್ಮ ಹುಚ್ಚುಖೋಡಿಗೆ ಇದೆಲ್ಲಾ ಎಲ್ಲಿ ತಾಗ್ತದೆ ಹೇಳಿ...

ಸಿನೆಮಾ ಇದ್ದಿದ್ದು ತ್ರೀ ಈಡಿಯೆಟ್ಸ್ ಆದರೂ ನಾವು ಫೋರ್ ಈಡಿಯೆಟ್ಸ್ ಹೊರಟಿದ್ದೆವು...
ಏನೋ ಥ್ರಿಲ್ಲು... ಮನಸ್ಸು ಫ್ರಿಲ್ಲು...

ಮಂಗದ ಜೊತೆಗೆ ಮಂಗನಾಟ... 

ಮಾಸಿಲಮಣಿಯಲ್ಲಿ ಚಾ ಕುಡಿದ ಸುದ್ದಿ ಆಗಲೆ ಹೇಳಿದ್ದೇನೆ...
ಇಬ್ಬನಿ ತಬ್ಬಿದ ಇಳೆಯಲ್ಲಿ...4-5 ಕಿ.ಮಿ ಸಾಗಿದೆವು...
ಅಲ್ಲೊಂದು ಸೇತುವೆ...
ಮಂಗಗಳ ಸಾಲು..
ರಸ್ತೆಗಡ್ಡಲಾಗಿ ನಿಂತಿದ್ದವು...

ನಾವು ಗಾಡಿ ನಿಲ್ಲಿಸಿದೆವು..
ಮಂಗಗಳು ಮುಗಿಬಿದ್ದಿದ್ದವು..
ಓಡಿಸಿದೆವಾದರೂ ಒಂದು ಮಂಗ ಅಲ್ಲಾಡಲೇ ಇಲ್ಲ...
ಸುತ್ತೆಲ್ಲ ಕಾಡು..
ನಾವು ನಿಂತದ್ದು ಸೇತುವೆಯ ಮೇಲೆ...
ಬೈಕಿನ ಹಾರನ್ ಸದ್ದಿಗೆ ಮಂಗ ಹೆದರಲಿಲ್ಲ...
ನಮ್ಮಂತವರನ್ನು ಅದೆಷ್ಟು ಜನರನ್ನು ಕಂಡಿತ್ತೋ...
ಹಫ್ತಾ ವಸೂಲಿಗೆ ನಿಂತು ಬಿಟ್ಟಿತ್ತು ಅನ್ನಿಸುತ್ತದೆ.. ನಮ್ಮ ಕೈಯಲ್ಲಿ ಏನೆಂದರೆ ಏನೂ ಇರಲಿಲ್ಲ.. ಅದು ತಿನ್ನುವಂತದ್ದು...
ಇದೊಳ್ಳೆ ಗ್ರಾಚಾರಕ್ಕೆ ಬಂತಲ್ಲಾ ಸಿವಾ ಅಂದ್ಕೊಂಡೆವು...
ಮಂಗ ದಾರಿಯನ್ನು ಬಿಡುತ್ತಿಲ್ಲ...

ನಾವು ಬೈಕಿಂದ ಇಳಿದೆವು..
ಮೋಹನ ಫುಲ್ ಜೋಷಲ್ಲಿದ್ದ..
ಕೈತೋಳು ಮಡಿಸುತ್ತಲೂ ಇದ್ದ...
ಹಿಂದೆ ಕಿಟ್ಟು ಕ್ಯಾಮರಾ ರೆಡಿ ಇಟ್ಕೊಂಡಿದ್ದ...
ನಾನು ಕಾಮೆಂಟರಿ ಹೇಳಬೇಕಾ.. ಸುದ್ದಿ ಬರೆಯಲು ರೆಡಿ ಆಗಬೇಕಾ.. ಅನ್ನೋ ಗೊಂದಲದಲ್ಲಿದ್ದೆ..
ಮಂಗಕ್ಕೂ ಮೋಹನನಿಗೂ ಮಾರಾಮಾರಿ ಗ್ಯಾರಂಟಿ ಅಂದ್ಕೊಂಡಿದ್ದೆವು..
ಮೋಹನ ಬರುವ ಸ್ಟೈಲಿಗೆ ಮಂಗ ಗುರ್ ಎಂದಿತು..
ಒಮ್ಮೆ ಹಿಂದೇಟು ಹಾಕಿದ..
`ಸಾಯ್ಲಪಾ.. ಇದೊಳ್ಳೆ ಗ್ರಾಚಾರ ಬಂತಲೋ ಮಾರಾಯಾ..' ಅಂದ...
ಮಾರಾಮಾರಿಗೆ ಮುಗಿಯುವುದಿಲ್ಲ ಪ್ರಕರಣ ಅನ್ನಿಸಿತು..
ರಾಜಿ ಪಂಚಾಯ್ತಿಗೆ ಮಾಡುವುದೊಂದೆ ಬಾಕಿ...

ಇಳಿದು ರಸ್ತೆ ಪಕ್ಕದಲ್ಲಿ ಹೋಗಿ ನಿಂತೆವು.. ಸೇತುವೆ ತಡೆಗೋಡೆಯಬಳಿ ಆಪ್ತ ಸಮಾಲೋಚನೆ ಸಾಗಿತು..
ಮಂಗಕ್ಕೂ ಕುತೂಹಲ ಅನ್ನಿಸ್ತು.. ಸೀದಾ ಬಂದು ನಮ್ಮ ನಡುವೆ ಕುಳಿತಿತು..
ರಾಘವ ಸಿಕ್ಕಿದ್ದೇ ಛಾನ್ಸು ಅಂದುಕೊಂಡು ಪೋಟೋ ತೆಗೆದ...
ಮಂಗನ ಜೊತೆಗೂ ಫೋಟೋ ಸೆಷನ್ನು... ಮುಗಿಯಿತು...
ಮಂಗ ಪೋಟೋಕ್ಕೆ ಪೋಸು ಕೊಟ್ಟು... ಸುಮ್ಮನೆ ಹೋಯಿತು...
ಮಂಗನ ಭಾಷೆ ನಮೆಗ ಬರೋದಿಲ್ಲವಲ್ಲ...
`ಕಂಜೂಸಿ ನನ್ಮಕ್ಕಳು..' ಅಂತ ಬೈದಿರಬೇಕು... ಇನ್ನೇನೇನು.. `ಎ..' ಸರ್ಟಿಪೀಕೇಟ್ ಡೈಲಾಗುಗಳನ್ನು ಹೊಡೆಯಿತೋ.. ನಮಗೆ ಅರ್ಥವಾಗಲಿಲ್ಲ... ಮಂಗಕ್ಕೆ ಮಂಗನಾಟಕ್ಕೆ ಸಲಾಮು ಹೊಡೆದು ಮುಂದಕ್ಕೆ ಹೊರಟೆವು...

****

ಅಲ್ಲಿಂದ ಮುಂದೆ ಶುರುವಾದದ್ದು ಊಟಿಯ ಘಟ್ಟ..
ಅಂಕುಡೊಂಕಿನ ಹಾದಿ...
ಎಂಟೆದೆಯ ಭಂಟರೆಂಬ ಪೋಸಿನಲ್ಲಿ ನಾವು ಹತ್ತಲು ಗಾಡಿಯನ್ನು ಗುರ್ರೆನ್ನಿಸಿದೆವು...
ಎಷ್ಟೇ ಎಕ್ಸಲರೇಟರ್ ವತ್ತಿದರೂ ಗಾಡಿಯ ಕಿಲೋಮೀಟರ್ ಕಡ್ಡಿ 5-10ಕ್ಕಿಂತ ಜಾಸ್ತಿಯನ್ನು ತೋರಿಸುತ್ತಿರಲಿಲ್ಲ..
ಹೊಸ ಗಾಡಿಯಾದರೂ ಉಬ್ಬಸ ಬಿಡುತ್ತದೆಯೇ..
ಆಗಾಗ ಇಂಜಿನ್ನನ್ನು ತಣಿಸಲು 5 ನಿಮಿಷಗಳ ಬಿಡುವು...


ಅಲ್ಲೆಲ್ಲೋ...
ಬಾನಿನಿಂದ ಮುತ್ತಿನ ನೀರ ಹನಿ ಕೆಳಗಿಳಿದು ಬರುತ್ತಿತ್ತು...
ಹಣೆಯ ಮೇಲೆ ವಿಭೂತಿಯಂತೆ ನೀಳ...
ಬಿಳಿ ಮುತ್ತುಗಳು...
ದೂರದಲ್ಲಿ ಜುಳು ಜುಳು ನಿನಾದ...
ತಮಿಳು ಭಾಷೆಯಲ್ಲಿ ಜಲಪಾತದ ಹೆಸರು ಬರೆದಿತ್ತು...
ಈ ಜಲಪಾತಕ್ಕೆ ಎಂತಾ ಹೆಸರು ಎಂದು ತಲೆ ಕೆರೆದುಕೊಳ್ಳುವಷ್ಟರಲ್ಲಿ ಆಂಗ್ಲರು `ಕಲ್ಲಟ್ಟಿ ಫಾಲ್ಸ್...' ಎಂದು ಬರೆದಿಟ್ಟಿದ್ದೂ ಕಂಡಿತು..
ತಮಿಳರಿಗೆ ಬೈದು...
ಇಂಗ್ಲೀಷಿನವರಿಗೆ ಥ್ಯಾಂಕ್ಸುಗಳನ್ನು ಹೇಳಿ ಮುಂದೆ ಹೆಜ್ಜೆ ಹಾಕಿದೆವು...

ಏರಿದಂತೆಲ್ಲ... ತೂಕ ಕಳೆದುಕೊಳ್ಳುತ್ತ ಹೋದೆವೇನೋ ಅನ್ನುವ ಅನುಭವ..
ನಾವು ಚಿಕ್ಕವರಾದಂತೆ... ಕಾಡುವ ಭಾವ..
ಮನಸ್ಸು ಉಲ್ಲಾಸಂಗಾ ಉತ್ಸಾಹಂಗಾ...

ಮೇಲೆರಿ ಒಮ್ಮೆ ಹಿಂತಿರುಗಿ ನೋಡಿದರೆ ನಾವು ಬಂದ ಜಾಗದ ಸುಳಿವೇ ಇಲ್ಲ..
ಮೋಡ ಮುತ್ತಿಕ್ಕಿ ಸಂಪೂರ್ಣ ಪ್ರದೇಶವನ್ನು ತನ್ನ ತೆಕ್ಕೆಯೊಳಗೆ ಸೆಳೆದು ಬಚ್ಚಿಟ್ಟುಕೊಂಡಿದೆ...
ಚಿಕ್ಕ ಚಿಕ್ಕ ಮನೆಗಳು ಕಾಣುತ್ತಿತ್ತು..
ಹೂಕೋಸು, ಎಲೆಕೋಸು, ಚಹಾ ಗಿಡಗಳ ಪ್ಲಾಂಟೇಷನ್ನುಗಳು ಕಾಣತೊಡಗಿದೆವು...
ವಾಸ್ತುಪ್ರಕಾರ ಊಟಿಗೆ ಬಂದಂತಾಯಿತು.. ಎಂದುಕೊಂಡೆವು...

ಬಂಡೆಗಲ್ಲಿನ ಗುಡ್ಡ, ಒಂದಕ್ಕಿಂತ ಒಂದು ದೊಡ್ಡದು.. ಅದರ ಎದುರು ನಾವು ಇರುವೆಯಂತವರು ಎನ್ನಿಸುವಂತಹ ದೈತ್ಯದೇಹಿ ಗುಡ್ಡಗಳು... ಒಂದೊಂದು ಗುಡ್ಡಕ್ಕೂ ಅಲ್ಲಿ ನೋಡಲೆ.. ಇಲ್ಲಿ ನೋಡಲೆ ವಾಹ್... ಸೂಪರ್ರ ಎನ್ನವು ಉದ್ಗಾರ..

ನಾವು ಚಳಿಗಾಲ ಸೂರ್ಯನ ಬಿಸಿಲಿಗೆ ಮೈ ಒಡ್ಡಿ ನಿಲ್ಲುತ್ತೇವೆ..
ಹವ್ಯಕರು ಅದನ್ನು ಬಿಸಿಲು ಕಾಸುವುದು ಎನ್ನುತ್ತಾರೆ..
ಊಟಿಯ ಜನರು ಬಿಸಿಲು ಕಾಯಿಸುತ್ತ ರಸ್ತೆ ಪಕ್ಕ ನಿಂತಿದ್ದರೆಂದರೆ ಊಹಿಸಿಕೊಳ್ಳಿ ಚಳಿಯ ಅಗಾಧತೆ ಎಷ್ಟಿರಬಹುದೆಂದು..

ಅಷ್ಟರಲ್ಲಿ ನಾವು ಬಿಟ್ಟು ಬಂದಿದ್ದ ರಾಷ್ಟ್ರೀಯ ಹೆದ್ದಾರಿ ಸುತ್ಹಾಕಿಕೊಂಡು ಬಂದಿದ್ದು.. ಅದನ್ನು ಹಿಡಿದು ಹೊರಟೆವು...
ಅಲ್ಲೆಲ್ಲೋ.. ಎತ್ತೆತ್ತರದ ನೀಲಗಿರಿ ಮರಗಳು...
ಮೂಗಿನ ತುಂಬ ನೀಲಗಿರಿಯ ಕಂಪು..
ಜೊತೆ ಜೊತೆಗೆ ಮೆಂಥಾಲನ್ನು ಹಾಕಿದಂತಹ ತಂಪು ತಂಗಾಳಿ ನಮ್ಮ ಮೂಗಿನ ಮೂಲಕ ನಮ್ಮ ಹೃದಯವನ್ನು ನಾಟಿ ಹಾಯೆನಿಸಿತಯ,,,..

ರಸ್ತೆಗೆ ಫ್ಲೆವರ್ಸುಗಳನ್ನು ಹಾಕಿದ್ದರು..
ಟಾರು ರಸ್ತೆಯಲ್ಲ.. ಇಂಗ್ಲೆಂಡೋ.. ನೆದರ್ಲೆಂಡೋ...
ಯಾವುದೋ ಕೌಂಟಿಯನ್ನು ನೆನಪಿಗೆ ತಂದವು...
ಊಟಿಯ ಸರಹದ್ದಿಗೆ ಬಂದಿದ್ದರೂ ಊಟಿಯ ನಗರದೊಳಗೆ ನಾವುನ್ನೂ ಕಾಲಿರಿಸಿರಲಿಲ್ಲ...
ಅದಿನ್ನೂ ಬೋರ್ಡುಗಳ ಮೂಲಕ ಹೀಗೆ ಬನ್ನಿ.. ಹೀಗೆ ಬನ್ನಿ ಎಂದು ಹೇಳುತ್ತಲೇ ಇತ್ತು...

---

ತಮಿಳರಿಗೆ ಲೆಕ್ಖ ಬರೋದಿಲ್ವಾ ಸಾರ್...

ಈ ತಮಿಳರಿಗೆ ಲೆಕ್ಖ ಸರಿಯಾಗಿ ಬರೋದಿಲ್ಲವೇ ಅನ್ನುವ ಅನುಮಾನ ಊಟಿಗೆ ಹೋಗುವಾಗ ನಮಗೆ ಆಯಿತು..
ಕಿಲೋಮೀಟರು ಕಲ್ಲುಗಳಲ್ಲೆಲ್ಲ ತಪ್ಪು ತಪ್ಪು ಲೆಕ್ಖ..
ಒಂದು ಕಡೆ ಊಟಿ 10 ಕಿ.ಮಿ ಎಂದು ಬರೆಯುತ್ತಾರೆ.. ಮತ್ತೆ ನಾಲ್ಕೈದು ಕಿ.ಮಿ ಹಾದು ಬಂದ ನಂತರ ಊಟಿಯ ದೂರ 12 ಕಿಮಿ ಆಗಿರುತ್ತದೆ..
ದಾರಿ ಸಾಗಿದಂತೆಲ್ಲ ಖರ್ಚಾಗಬೇಕು ತಾನೆ.. ಆದರೆ ತಮಿಳಿಗರ ಲೆಕ್ಖ ಹೆಚ್ಚಾಗಿತ್ತು..
ನಾಲ್ಕೈದು ಕಡೆಗಳಲ್ಲಿ ಇಂತಹ ಅನುಭವ ಆದ ನಂತರ ನಮಗೆ ಲೆಕ್ಖ ಬರೋದಿಲ್ಲ ಎನ್ನುವುದು ಕನ್ ಫರ್ಮ್ ಆಯಿತು...

ಇತ್ತೀಚೆಗೆ ಜಯಲಲಿತಾ ಮು.ಮಂ ಆದ ನಂತರ ಕಾವೇರಿ ವಿಷಯದಲ್ಲಿ ಎಷ್ಟು ನೀರು ಕೊಟ್ಟರೂ ಕಡಿಮೆ ಎಂದಳಲ್ಲಾ.. ಆಗ ಪಕ್ಕಾ ಆಯ್ತು ನೋಡಿ.. ತಮಿಳಿಗರ ಲೆಕ್ಖ ಹಾಕುವ ರೀತಿ...
ಅವರಿಗೊಂಡು ವಣಕ್ಕಂ ಹೇಳುತ್ತ ನಾವು ಒಣಗಿದೆವು...


(ಮುಂದುವರಿಯುತ್ತದೆ...)

Thursday, May 30, 2013

ಮಿಡಿ-ಮಿನಿ ಕಥೆಗಳು

ಮಿನಿ ಕಥೆಗಳು...
 ಒಂದೆರಡು ಮಾತುಗಳು :
ಹಾಗೆ ಸುಮ್ಮನೆ ಬರೆದಿದ್ದು... ಇವು ನ್ಯಾನೋ ಕಥೆಗಳ ಜಾತಿಗೆ ಸೇರುತ್ತವಾ.. ಗೊತ್ತಿಲ್ಲ..
ಸುಮ್ಮ ಸುಮ್ಮನೆ ನೀನು ಉದ್ದುದ್ದ ಕಥೆಗಳನ್ನು ಬರೀತಿಯಾ.. ಎಳೀತೀಯಾ ಅಂತ ಯಾರೋ ಭಯಂಕರ ಕಾಮೆಂಟು ಮಾಡಿದ್ದರು..
ಚಿಕ್ಕ ಕಥೆ ಬರೆಯಲು ಬರುತ್ತದಾ ಎಂದು ಪ್ರಯತ್ನ ಮಾಡಿದಾಗ ಹೊರಬಿದ್ದದ್ದು... ಓದ್ಹೇಳಿ..

=========================================

ಸೇಡು

ಅವಳನ್ನು ತಿರಸ್ಕರಿಸಿ ಅವಳ ಮೇಲೆ ಸೇಡು ತೀರಿಕೊಳ್ಳಬೇಕೆಂದು ಹವಣಿಸಿದ್ದೆ...
ಮರೆಯಲು ಯತ್ನಿಸಿದಂತೆಲ್ಲ ನೆನಪಾಗಿ ಕಾಡಿದಳು..


**

ಭೀತಿ

ಯಾವುದೇ ಮದುವೆ ದಿಬ್ಬಣಗಳು ಕಂಡರೂ... ಬೋರ್ಡುಗಳು ಕಣ್ಣಿಗೆ ಬಿದ್ದರೂ...
ಮನಸ್ಸು ದೇವರೆ ಅಲ್ಲಿ ಅವಳ ಹೆಸರು ಕಾಣದಿರಲಿ... ಎಂದು ಯಾಚಿಸುತ್ತದೆ..

**

ಮೌನ..

ಗಂಡನನ್ನು ಬಯ್ಯುತ್ತಿದ್ದ ನೇತ್ರಕ್ಕನ ಬಾಯಿ ಕೊನೆಗೂ ಬಂದಾಯಿತು...
ಮಣ್ಣಾದಳು...ಹೆಣ್ಣಾದಳು..

***


ದುರ್ವಿಧಿ

ಭವಿಷ್ಯ ಹೇಳುವುದೇ ಅನ್ನ ಎಂದುಕೊಂಡಿದ್ದವನಿಗೆ ಸಾಡೇಸಾತ್ ಶನಿ ಹಿಡಿದದ್ದು ಗೊತ್ತಾಗಲೇ ಇಲ್ಲ..

****

ದೂರಾಲೋಚನೆ

ಅವಳಿಗೆ ಇಷ್ಟ ಅನ್ನುವ ಕಾರಣಕ್ಕಾಗಿ ಅವನು ಮನೆಯ ಜಮೀನಿನ ತುಂಬ ಪಪ್ಪಾಯಿ ಗಿಡಗಳನ್ನು ಹಚ್ಚಿದ. ಅದು ದೊಡ್ಡದಾಗಿ ಬೆಳೆದು ಹಣ್ಣು ನೀಡುವ ಹೊತ್ತಿಗೆ ಅವಳು ಅವನನ್ನು ಬಿಟ್ಟು ಹೋದಳು.
ಅವನೀಗ ಪಪ್ಪಾಯಿ ವ್ಯಾಪಾರಿ.
ಕೈಯಲ್ಲಿ ಝಣ ಝಣ ರುಪಾಯಿ.


**
ಅಭಿಮಾನಿ

ನನ್ನ ಗೆಳತಿ ಬಿಟ್ಟೂ ಬಿಡದೆ ಕಾಡಿಸಿ ನಿನಾಸಂ ಸತೀಶನ ಸಿನೆಮಾಗಳನ್ನು ತೋರಿಸಿದಳು..
ಅವಳ ಒತ್ತಾಯಕ್ಕೆ ನೋಡಿದೆ. ಅವಳ ಬಿಟ್ಟು ಹೋದಳು..
ನಾನು ಸತೀಶನ ಫ್ಯಾನ್ ಆಗಿಬಿಟ್ಟೆ.

Tuesday, May 28, 2013

ಬೆಂಗಳೂರು-ಊಟಿ-ವಯನಾಡು-ಬೆಂಗಳೂರು - ಭಾಗ 2

(ಎಂದೋ ಅರ್ಧ ಬರೆದಿಟ್ಟಿದ್ದ ನಮ್ಮ ಪ್ರವಾಸ ಕಥನಕ್ಕೆ ಮರು ಚಾಲನೆ.. ಈ ಪ್ರವಾಸ ಹೊರಟಿದ್ದು ನಾನು, ಕಿಟ್ಟು, ರಾಘವ ಹಾಗೂ ಮೋಹನ.. ಅದರ ಸಂತಸದ ಝಲಕ್ ಇಲ್ಲಿದೆ.)
(ಇಲ್ಲಿಯವರೆಗೆ.. ಬೆಂಗಳೂರಿನಿಂದ ಮೈಸೂರು ಮಾರ್ಗವಾಗಿ ಗುಂಡ್ಲುಪೇಟೆಗೆ ಬಂದಿದ್ದನ್ನು ಈ ಮೊದಲೇ ಹೇಳಿದ್ದೇನೆ.. ಹಳೆಯ ಪೋಸ್ಟನ್ನು ನೋಡಿ)

ಡವ ಡವ ನಡುಕವ..

ಮರುದಿನ ಮುಂಜಾನೆ 4 ಗಂಟೆಗೆಲ್ಲಾ ಎದ್ದು ಗುಂಡ್ಲುಪೇಟೆಯನ್ನು ಬಿಟ್ಟೆವು..
ರಾತ್ರಿ ಬಂಡಿಪುರ ಅರಣ್ಯದ ಬಾಗಿಲು ಮುಚ್ಚುತ್ತಾರೆ. ನಂತರ ಅದನ್ನು ತೆರೆಯುವುದು ಮುಂಜಾನೆಯೇ..
ಬೆಳಗಿನ ಕಾನನದ ನಿಸರ್ಗ ಸೌಂದರ್ಯವನ್ನು ಮಿಸ್ ಮಾಡ್ಕೋಬಾರದು ಎನ್ನುವ ದೃಷ್ಟಿಯಿಂದ ನಾವು ಮುಂಜಾನೆ ಹೊರಟೆವು.. ಅದಲ್ಲದೆ ಬಂಡಿಪುರ ಅರಣ್ಯ ತನಿಖಾ ಠಾಣೆಯಲ್ಲಿ ಸಾಕಷ್ಟು ಟ್ರಾಫಿಕ್ ಕೂಡ ಇರುತ್ತದೆಂಬುದು ನಮ್ಮ ಮುಖ್ಯ ಕಾರಣವಾಗಿತ್ತು.
ನಾವು ಅರಣ್ಯದ ಗೇಟ್ ತಲುಪುವ ವೇಳೆಗೆ ಆಗಲೇ ಗಂಟೆ ಐದನ್ನೂ ದಾಟಿತ್ತು..
ಮಧ್ಯದಲ್ಲಿ ಚಳಿ ನಡುಕ ಶುರುವಾಯಿತು ನೋಡಿ...
 ಹಲ್ಲು ಕಟ ಕಟ.. ಕೈಕಾಲು ಥರ ಥರ...
ಮೋಹನನಿಗೆ ಬೈಕ್ ಹೊಡೆಯುವ ಮನಸ್ಸೇ ಇಲ್ಲ..
ಅಲ್ಲೆಲ್ಲೋ ಒಂದು ಕಡೆ ಬೈಕ್ ನಿಲ್ಲಿಸಿದೆವು...
ರಸ್ತೆ ಪಕ್ಕದ ದರಕು, ಇತ್ಯಾದಿ ಸೇರಿಸಿ ಬೆಂಕಿ ಹಾಕಿಯೇಬಿಟ್ಟೆವು...
ಚಳಿ ಕಾಸಿದ ನಂತರವೇ ನಮ್ಮ ಕೈಗಳಿಗೆ ಜೀವ ಬಂದಿದ್ದು,,,!!!

ಅದ್ಯಾವುದೋ ಕಡೆ ಸೂರ್ಯ ನಿಧಾನವಾಗಿ ಬೆಳಗನ್ನು ಪಸರಿಸುತ್ತಿದ್ದ..
ಗುಂಡ್ಲುಪೇಟೆಯಿಂದ ಬಂಡಿಪುರದ ಕಡೆಗೆ ಹೋಗುವಾಗ ಬಲಭಾಗದಲ್ಲಿ ಹಿಮವದ್ ಗೋಪಾಲಸ್ವಾಮಿ ಬೆಟ್ಟ ಕಾಣುತ್ತದೆ..
ಬಾನನ್ನು ಮುಟ್ಟಿದಂತೆ ಕಾಣುವ ಬೆಟ್ಟದ ಬೆಡಗು ಮೂಕ ವಿಸ್ಮಿತಗೊಳಿಸುತ್ತದೆ..
ನಾನು ಹಾಗೂ ಕಿಟ್ಟು ಇಬ್ಬರೂ ಅದೆಷ್ಟು ಬೆರಗುಗೊಂಡೆವೆಂದರೆ.. ಪದಗಳೇ ಸಾಲುತ್ತಿಲ್ಲ..
ರಾಘುವಿನ ಟಿವಿಎಸ್ ಎಕ್ಸಿಡಿ.. ಹಾಗೂ ಮೋಹನನ ವಿಕ್ಟರ್... ಝುಂ ಅನ್ನುತ್ತಿತ್ತು..

ಇಬ್ಬನಿ ಮಾಲೆ ಮಾಲೆಯಾಗಿ ಇಳಿಯುತ್ತಲಿತ್ತು....
10-15 ಮೀಟರ್ ದೂರದ ಇದುರು ಭಾಗ ಕಾಣುತ್ತಲೇ ಇಲ್ಲ...
ಇದೇ ಕಾರಣಕ್ಕೆ ಎದುರು ಬದಿ ಯಾರೇ ಬಂದರೂ ನಮಗೆ ಕಾಣುತ್ತಲೇ ಇರಲಿಲ್ಲ...
ಫೆ.19ರ ದಿನ..
ಇಬ್ಬನಿಯ ಕಾರಣದಿಂದಲೇ  ನಮಗೆ ಬಂಡಿಪುರದ ಕಾನನ ಸೌಂದರ್ಯ ಕೊಂಚ ತಪ್ಪಿಹೋಯಿತೆಂದರೂ ತಪ್ಪಿಲ್ಲ...
ಮುಂದೆ ಸಾಗಿದಂತೆ.. ಅದೊಂದು ಊರು.. ತಮಿಳಿನಲ್ಲಿ ಬರೆದಿತ್ತು ಹೆಸರು..
ಮಧುಮಲೆ ಅರಣ್ಯ ವ್ಯಾಪ್ತಿಯ ಒಳಗಿದೆ...
ಎದುರು ಭಾಗದಲ್ಲಿ ಒಂದು ದೈತ್ಯ ಆನೆ ನಿಂತಿದೆ....

ನನಗೆ ಏನೂ ಅನ್ನಿಸಲಿಲ್ಲ... ರಾಘುವಿನ ಬೈಕೇರಿ ಕುಳಿತಿದ್ದ ಕಿಟ್ಟು ಒಮ್ಮೆ ಹೌಹಾರಿದ್ದ...
ನಾನು, ರಾಘು ಆಗಲೇ ಅಧೇ ಮಾರ್ಗದಲ್ಲಿ ಊಟಿಗೆ ಒಂದು ಟ್ರಿಪ್ ಹಾಕಿ ಬಂದಿದ್ದರಿಂದ ಆ ಆನೆಯನ್ನು ಅದ್ಯಾವಾಗಲೋ ನೋಡಿದ್ದೆವು..
ಕಿಟ್ಟುವಿನ ಹೌಹಾರಿಕೆ ಕಂಡು ನನಗಂತೂ ಒಳಗೊಳಗೆ ನಗು...
ರಾಘವನ ಕ್ಯಾಮರಾ ಕಿಟ್ಟುವಿನ ಕೈಲಿತ್ತು...
ಬೈಕು ಚಲಿಸುತ್ತಿದ್ದಂತೆಯೇ ಪೋಟೋ ತೆಗೆಯುತ್ತಿದ್ದ...

ನಡುವೆ ತಮಿಳುನಾಡು ರಾಜ್ಯದ ಚೆಕ್ ಪೋಸ್ಟ್..
ಎಲ್ಲ ವಾಹನಗಳನ್ನೂ ಚೆಕ್ ಮಾಡುತ್ತಿದ್ದರು..
ನಾನು ರಾಘುವಿನ ಬೈಕ್ ಹೊಡೆಯುತ್ತಿದ್ದೆ..
ಹೆಲ್ ಮೆಟ್ ಹಾಕಿರಲಿಲ್ಲ..
ಹಿಂದೆ ಕುಳಿತ ರಾಘು ಹಾಕಿದ್ದ..
ಅಲ್ಲಿದ್ದ ಪೊಲೀಸ್ ಅಧಿಕಾರಿ ನನ್ನನ್ನು ನಿಲ್ಲಿಸಿ ಹೆಲ್ ಮೆಟ್ ಎಂದ...
ರಾಘುವನ್ನು ತೋರಿಸಿದೆ...
ಡೋಂಟ್ ಕ್ಯಾರ್ ಎಂದ...ಅಧಿಕಾರಿ..
ಪೇಪರ್ ಜಾಬಿತ್ತಲ್ಲ... ಪ್ರೆಸ್ ಕಾರ್ಡ್ ತೋರಿಸಿದೆ...
ಸಂಯುಕ್ತ ಕರ್ನಾಟಕದ ಜಾಬಿನಲ್ಲಿದ್ದ ಕಾಲ...
ಕನ್ನಡ ಪತ್ರಿಕೆ ಕಾರ್ಡು ತೋರಿಸಿದ್ದೇ ತಡ.. ಮತ್ತಷ್ಟು ಸಿಟ್ಟು ಏರಿತು ಅನ್ನಿಸುತ್ತದೆ...
ಸಿಟ್ಟಾಗಿ ಫೈನ್ ಹಾಕಿಯೇ ಬಿಟ್ಟ..

ಕಿಟ್ಟು.. ನಿನ್ನ ಜರ್ನಲಿಸಂ ಜಾಣತನ ಇಲ್ಲಿ ತೋರಿಸಬೇಡ ಮಾರಾಯ ಎಂದ..
ಒಂಥರಾ ಎನ್ನಿಸಿತು ನನಗೆ...ಅವಮಾನ..
ಝಾಡಿಸೋಣ ಎನ್ನಿಸಿಕೊಂಡರೂ ಸುಮ್ಮನಾದೆ..

ಅರ್ಣಯವಲಯ ದಾಟಿ ಕೊಂಚ ಮುಂದಕ್ಕೆ ಹೋದಂತೆ ರಸ್ತೆಯಲ್ಲಿ ಮಾರ್ಗ ಬದಲಾಯಿಸಬೇಕು...
ರಾಷ್ಟ್ರೀಯ ಹೆದ್ದಾರಿಯನ್ನು ಪಕ್ಕಕ್ಕೆ ಬಿಟ್ಟು ಇನ್ನೊಂದು ಸೀದಾ ಸಾದಾ ಹಾದಿಯಲ್ಲಿ ಹೋಗಬೇಕು..
ಆ ಮಾರ್ಗ ಹಿಡಿದೆವು.. ಊಟಿಗೆ ಮಾಸಿಲಮಣಿಯ ಮಾರ್ಗದಲ್ಲಿ ಹೋಗುವಂತಹ ದಾರಿ ಅದು.
ನಡುವೆಯೆಲ್ಲೋ ಹುಲಿ ರಕ್ಷಿತಾರಣ್ಯದ ಬೋರ್ಡಿತ್ತು...

ಕರ್ನಾಟಕ ಸರ್ಕಾರ ದ ಚಿತ್ರವೂ ಇತ್ತು... ಅರೆ ತಮಿಳುನಾಡಿನಿಂದ ಮತ್ತೆ ಕರ್ನಾಟಕಕ್ಕೆ ಬಂದೆವೆ..? ಎಂದು ಕೊಂಡೆವು...
ಸ್ವಲ್ಪ ಹೊತ್ತಿನ ನಂತರ ಮಾಸಿಲ ಮಣಿ ಎನ್ನುವ ಕರ್ನಾಟಕ ವ್ಯಾಪ್ತಯ ಊರು ಸಿಕ್ಕಿತು. ಸಂಪೂರ್ಣ ತಮಿಳರೇ ಇದ್ದ, ತಮಿಳು ಬೋರ್ಡುಗಳೇ ಇರುವ ಕರ್ನಾಟಕದ ಊರು.. ಸರಿಯಾಗಿ ಅಭಿವೃದ್ಧಿ ಮಾಡಿದ್ದರೆ ತಾಲೂಕಾ ಕೇಂದ್ರವಾಗಬಹುದಿತ್ತು.. ಅಂತಹ ಊರದು... ಕರ್ನಾಟಕದ ಯಾವುದೇ ರಾಜಕಾರಣಿ ಆ ಊರಿಗೆ ಹೋಗಿದ್ದಿಲ್ಲವೇನೋ... ಇಬ್ಬನಿಯ ಹಾಲೆಯೊಳಗೆ ಹುದುಗಿಹೋಗಿತ್ತು...

ಅಲ್ಲಿ ಹೋಗಿ ಹೊಟೆಲೊಂದನ್ನು ಹುಡುಕಿ ಬಿಸ್ಸಿ ಬಿಸ್ಸಿ ಮಸಾಲೆ ಟೀ ಕುಡಿದು .. ತಿಂಡಿ ತಿಂದೆವು... ಸೂರ್ಯ ಇಣುಕಿದ್ದ..
ಯಾವುದೋ ಕಲ್ಲುಬಂಡೆಯ ಮೇಲೆ ಆಡೊಂದು ಬಿಸಿಲು ಕಾಯಿಸುತ್ತಿತ್ತು...
ಕಿಟ್ಟು ಕ್ಯಾಮರಾ ಹಿಡಿದ...

ತಕ್ಷಣ ಎದ್ದು ನಿಂತ ಆಡು.. ಮೈ ಕೊಡವಿ.. ಮೊಖವನ್ನೊಮ್ಮೆ ತಿರುಗಿ ಪೋಸ್ ಕೊಟ್ಟಿತು... ಪೋಟೋ ತೆಗೆದ ಕಿಟ್ಟು ಥ್ಯಾಂಕ್ಸ್ ಎಂದರೆ ಆಡು ಕೇಳುತ್ತದೆಯೇ..? ಬೆನ್ನತ್ತಿತು... ಕೊನೆಗೆ ಬಾಳೆ ಹಣ್ಣಿನ ಹಪ್ತಾ ವಸೂಲಿ ಮಾಡಿ ಜಾಗ ಖಾಲಿ ಮಾಡಿತು...

ಮಾಸಿಲಮಣಿಯಲ್ಲಿ ನಮ್ಮದೂ ಪೋಟೋ ಸೆಷನ್ ನಡೆಯಿತು...
ಬೈಕೇರಿ ಊಟಿಯ ಗುಡ್ಡವನ್ನು ಹತ್ತಲು ಅನುವಾಗಿ ಹೊರಟೆ..
(ಮುಂದುವರಿಯುತ್ತದೆ..)



ವಿಸ್ಮಯಗಳ ಗೂಡು ಈ ಮಲೆನಾಡು ಭಾಗ -3

    ಮಲೆನಾಡಿಗೆ ಮಲೆನಾಡೇ ಸಾಟಿ. ಇಲ್ಲಿನ ವೃಕ್ಷ ಸಂಕುಲ, ಪಕ್ಷಿ, ಮೃಗ ಸಮೂಹ ಇವುಗಳಿಗೆ ಮಲೆನಾಡನ್ನು ಬಿಟ್ಟರೆ ಬೇರೆ ಏನೂ ಇಲ್ಲ. ಇಲ್ಲಿನ ಕಾನನ-ತಾಣಗಳೆಲ್ಲ ನಿತ್ಯ ಹಸಿರು ಹಸಿರು.
    ಮಲೆನಾಡೇ ಹಾಗೆ ದೂರದಿಂದ ನೋಡಿದರೆ ಅರ್ಥವೇ ಆಗದು. ಒಳಹೊಕ್ಕರೆ ವಿಸ್ಮಯ ಲೋಕ. ಇಲ್ಲಿ ಸಿಕಾಡಗಳ ಮಧುರಾತಿ ಮಧುರ ಉಲಿಯಿದೆ. ರಕ್ತ ಹೀರುವ ಉಂಬಳಗಳ ಜೊತೆಯಿದೆ. ವಿಶಿಷ್ಟ ಎನ್ನಿಸುವ ಬಸವನ ಹುಳುಗಳಿವೆ. ಮಂಗಟ್ಟೆ ಹಕ್ಕಿಯ ಶ್ರೀಮಂತ ತಾಣವೂ ಇದೇ ಮಲೆನಾಡು. ಇಲ್ಲಿ ಬಣ್ಣಬಣ್ಣಗಳ ಅಣಿಬೆಗಳಿವೆ. ಮಿಗಿಲಾಗಿ ಹಸುರು ಎಲೆಯನ್ನೂ ಮರೆಸುವ ಹಸುರುಳ್ಳೆ ಹಾವಿದೆ. ಪ್ರೀತಿಯ, ದುರ್ಬೀನಿಗೆ ಮಾತ್ರ ಕಾಣಿಸುವಂತಹ ದಾಟುಬಳ್ಳಿ ಹಾವಿದೆ.
    ಜೊತೆ ಜೊತೆಗೆ ಇಲ್ಲಿ ನಮ್ಮನ್ನೇ ಆಕರ್ಷಿಸಬಲ್ಲಂತಹ ನಿಸರ್ಗ ಧಾಮಗಳಿವೆ. ಜಲಪಾತಗಳಿವೆ. ಮಹಾರಾಷ್ಟ್ರದಿಂದ ಕೇರಳದವರೆಗೆ ಹಬ್ಬಿರುವ ಪಶ್ಚಿಮ ಘಟ್ಟದ ಸೆರಗಿನಲ್ಲಿಯೇ ಇರುವ ಮಲೆನಾಡು ಎಂದರೆ ಮಲೆಗಳ ನಾಡು. ಭೂದೇವಿಯ ಮೊಲೆ ನಾಡು. ಇದೇ ಜೀವಸದೃಷ ಅಮೃತಸವಿಯನ್ನೂ, ಜೀವರಸವನ್ನೂ ಹಿಡಿದಿಟ್ಟ ತಾಣ.
    ಬಾನೆತ್ತರಕ್ಕೆ ಚಾಚಿ ನಿಂತ ಮರಗಳು ಮಲೆನಾಡಿಗೆ ಕಿರೀಟದಂತೆ ಕಂಡರೆ ಬಳುಕುವ ನದಿಗಳು ಹಳ್ಳಗಳು ಮಲೆನಾಡಿನ ಆಭರಣಗಳು. ಅಲ್ಲಲ್ಲಿ ಕಾಣುವ ಜಲಪಾತ ಆಭರಣದ ಹೊಳೆಯುವ ಮಣಿಗಳು. ಹಸಿರು ಕಾನನವೇ ಮಲೆನಾಡಿನ ಸೀರೆ. ಗಿರಿ ಕಂದರಗಳು ಮೇಳೈಸಿ, ಮೆರೆವ ಈ ನಾಡೇ ವಿಸ್ಮಯಗಳ ಗೂಡು. ಭುವಿಯ ಸ್ವರ್ಗ. ಬೊಮ್ಮನ ಕಲ್ಪನೆಯ ಪ್ರದೇಶ.
    ಯಾಕೋ ಗೊತ್ತಿಲ್ಲ....
    ಹುಟ್ಟುವಿಯಾದರೆ
    ಇಲ್ಲೇ ಇನ್ನು...
    ಈ ಮಲೆನಾಡಲ್ಲೇ ಅನ್ನು...
    ಎಂದು ಹಾಡೋಣ ಅನ್ನಿಸುತ್ತಿದೆ. ಕವಿ ದಿನಕರದ ಹಾಡುಗಳು ಹಾಗೇ ಸುಮ್ಮನೆ ಕಿವಿಯ ಮೇಲೆ ಸುಳಿದು ಹೋಗುತ್ತವೆ..
    ಬ್ರಹ್ಮ ಪುರಸೊತ್ತು ಸಿಕ್ಕಾಗ ಬಿಡಿಸಿದ ಚಿತ್ರವೇ ಮಲೆನಾಡು ಇರಬೇಕು. ಅಷ್ಟು ಸುಂದರವಾಗಿದೆ. ಸೊಗಸಾಗಿ ಮೂಡಿಬಂದಿದೆ. ಈ ನಾಡಿನಲ್ಲಿ ಭೀಮ, ಪರಶುರಾಮ ಅಡ್ಡಾಡಿದ್ದಾರಂತೆ. ಅಲ್ಲಲ್ಲಿ ಕುರುಹಗಳನ್ನು ಬಿಟ್ಟುಹೊಗಿದ್ದು ಈಗಲೂ ನಮಗೆ ಕಾಣಸಿಗುತ್ತದೆ. ದೇವತೆಗಳು ಇಲ್ಲೆಲ್ಲೋ ಬಂದು ಅಡಗಿ ಕುಳಿತಂತೆ ನಮಗೆ ಭಾಸವಾಗುತ್ತದೆ.
    ಇಲ್ಲಿ ನಿಸರ್ಗ ಮಾತೆ ನಿಂತು ಮೆರೆದಿದ್ದಾಳೆ. ಮೆರೆದು ನಲಿದಿದ್ದಾಳೆ. ನಲಿದು ಕುಣಿದಿದ್ದಾಳೆ. ಕುಣಿದು ದಣಿದಿದ್ದಾಳೆ. ದಣಿದು ಮೈಚೆಲ್ಲಿ ಮಲಗಿಬಿಟ್ಟಿದ್ದಾಳೆ. ಆಕೆಗೆ ಎಚ್ಚರವೇ ಇಲ್ಲ. ಅಂತಹ ಮೈಮರೆವಿನಲ್ಲಿಯೂ ಚೆಲುವು ಚೆಲ್ಲಿ ನಿಂತಿದೆ..
    ಯಾಕೋ ಗೊತ್ತಿಲ್ಲ.. ಇಂತಹ ಮಲೆನಾಡಿನ ನಡುವೆ ಕಳೆದುಹೋಗಬೇಕು ಎನ್ನಿಸುತ್ತಿದೆ. ಗವ್ವೆನ್ನುವ ಕಾಡುಗಳು, ಟ್ವಂಯ್ ಟ್ವಂಯ್ ಎಂದು ಕೂಗುವ ಸಿಕಾಡಗಳ ಸದ್ದಿನ ನಡುವೆ ನನ್ನನ್ನೇ ನಾನು ಮರೆತು ಬಿಡಬೇಕು ಎನ್ನಿಸುತ್ತಿದೆ. ಅದ್ವಾವನೋ ಅಧಿಕಾರಿ.. ಬ್ರಿಟೀಷರವನು.. ಉತ್ತರಕನ್ನಡದ ಕಾಡುಗಳನ್ನೆಲ್ಲ ಪಾದಯಾತ್ರೆಯ ಮೂಲಕ ಸುತ್ತಿದ್ದನಂತೆ.. ನನಗೂ ಅದೇ ಆಸೆ.. ಶಿವಾನಂದ ಕಳವೆಯಂತೆ ಮತ್ತೊಮ್ಮೆ ಕಾಡು ಮೇಡಿನ ಜಾಡು ಹಿಡಿದು ಸಾಗಬೇಕು.. ಆಗಾಗ ಕಣ್ಣೆದುರು ಬರುವ ಮೃಗ ಸಮೂಹಕ್ಕೆ ಹಾಯ್ ಹೇಳಿ ಬರಬೇಕು..ಅನ್ನಿಸುತ್ತಿದೆ..
    ಭಯವಾಗುತ್ತಿದೆ.. ವಿಸ್ಮಯಗಳ ಗೂಡಿಗೆ ಯಾರದ್ದೂ ದೃಷ್ಟಿ ತಾಗಿದಂತಿದೆ. ಒಂದಾದ ಮೇಲೆ ಒಂದರಂತೆ ಯೋಜನೆಗಳ ಶಾಪ ಬಂದೆರಗುತ್ತಿದೆ. ಯೋಜನೆಗಳ ಭಾರಕ್ಕೆ ಕಾಳಿ ನದಿ ಸುಸ್ತಾಗಿದೆ. ಭದ್ರಾ ಬಣ್ಣಕಳೆದುಕೊಂಡಿದ್ದಾಳೆ. ತುಂಗಿ ಅಳುತ್ತಿದ್ದಾಳೆ. ಶರಾವತಿಯ ಚೆಲುವು ಮರೆತಿದೆ. ಇನ್ನುಳಿದವುಗಳು ಅಘನಾಶಿನಿ, ನೇತ್ರಾವತಿ, ಗಂಗಾವಳಿ.. ಮುಂತಾದ ಮೂರೋ ನಾಲ್ಕೋ ನದಿಗಳು... ಅವುಗಳ ಕಡೆಗೂ ಆಡಳಿತ ಶಾಹಿಗಳ ಕಣ್ಣು ಬಿದ್ದಂತಿದೆ. ಅಘನಾಶಿನಿಗೆ ಅಣೆಕಟ್ಟು ಕಟ್ಟಿ ವಿದ್ಯುತ್ ಉತ್ಪಾದನೆಗೆ ತೊಡಗುವ ಹವಣಿಕೆ ಅವರದ್ದು. ನೇತ್ರಾವತಿಯನ್ನೇ ತಿರುಗಿಸಿ ಬಿಡುವ ಹೂಟವೂ ಅವರದ್ದು. ಆದರೆ ಬಲಿಯಾಗುವುದು ಮಾತ್ರ ಮಲೆನಾಡು. ಇಲ್ಲಿನ ಜೀವಿ ಸಂಕುಲ.
    ಈಗಲೇ ಹಲವಾರು ಯೋಜನೆಗಳಿಂದ ಬೆಂದಿದೆ ಮಲೆನಾಡು. ಇನ್ನೆಷ್ಟು ಯೋಜನೆಗಳು ಬೇಕೋ.. ಮಲೆನಾಡಿನ ಒಡಲು ಭೂದೇವಿಯ ಗುಡಿ. ಅದನ್ನು ಹಾಳುಮಾಡುವ ಯತ್ನ ನಡೆಯುತ್ತಿದೆ. ಅಧಿಕಾರ ಶಾಹಿಗಳಿಗೆ ಧಿಕ್ಕಾರ ಹೇಳೋಣ. ಮಲೆನಾಡಿನ ಮಡಿಲಲ್ಲಿ ನನಗೆ ವಾಸಸ್ಥಾನ ನೀಡಿ ಪೋಷಿಸುತ್ತಿರುವಾಕೆಗೆ ಥ್ಯಾಂಕ್ಸ್ ಹೇಳೋಣ.