Thursday, February 3, 2011

ತಾ ತಾ ಗುಬ್ಬಿ ತಾವನ ಗುಬ್ಬಿ.. ಮುಚ್ಚಳ ತೆಗೆದರೆ ಮುನ್ನೂರು ಗುಬ್ಬಿ


ಮನೆಯ  ಮಾಳಿಗೆಯ ಮೇಲೆ ಅತ್ತ ಇತ್ತ ಹಾರಾಡುತ್ತಾ, ಚಿಂವ್ ಚಿಂವ್ ಎನ್ನುವ ಕೂಗು ಹಾಕುತ್ತಾ ಮನುಷ್ಯ ವಾಸಸ್ಥಾನದ ಸುತ್ತಮುತ್ತ ಅಡ್ಡಾಡುವ ಗುಬ್ಬಿಗಳು ಮಾನವನ ಪ್ರಾಚೀನ ಒಡನಾಡಿ. ಗುಬ್ಬಿಯನ್ನು ಇಂಗ್ಲೀಷಿನಲ್ಲಿ ಸ್ಪಾರೋ ಎಂದು ಕರೆಯುತ್ತಾರೆ. 
ಎನಿಮೇಲಿಯಾ ಪ್ರಬೇ‘ಕ್ಕೆ ಸೇರಿದ ಇದು ಪೆಸ್ಸಿರೈಡೆ ಕುಟುಂಬದ ಜೀವಿ.

ಆಹಾರ-ವಿಹಾರ-ವೈವಿಧ್ಯ 
ಗುಬ್ಬಿಗಳಲ್ಲಿ ಮುಖ್ಯವಾಗಿ ಎರಡು ವಿಧ. ಮನೆ ಗುಬ್ಬಿ ಹಾಗೂ ಕಾಡಿನ ಗುಬ್ಬಿ ಎಂಬ ಎರಡು ವಿಧವಿರುವ ಗುಬ್ಬಿಗಳಲ್ಲಿ ಒಂದು ವರ್ಗ ಸದಾ ಮಾನವನ ಇರುವಿಕೆಯನ್ನು ಬಯಸುತ್ತದೆ. ಮತ್ತೊಂದು ವರ್ಗ ಕಾಡಿನಲ್ಲಿಯೇ ವಾಸಿಸುತ್ತದೆ.
ಇವು ಯಾವಾಗಲೂ ಗುಂಪು ಗುಂಪಾಗಿಯೇ ವಾಸಿಸುತ್ತವೆ. ನೂರಕ್ಕೂ ಹೆಚ್ಚಿನ ಸಂಖ್ಯೆಯ ಗುಂಪುಗುಂಪುಗಳನ್ನು ರಚಿಕೊಂಡಿರುವ ಗುಬ್ಬಿಗಳು ಬಹಳ ಚಿಕ್ಕ ಪಕ್ಷಿಗಳು. ಇವುಗಳ ಗಾತ್ರ 11 ಸೆಂಟೀಮೀಟರರ್ನಿಂದ 15 ಸೆಂಟಿಮೀಟರ್ಗಳು. ಕೆಲವೊಂದು ಗುಬ್ಬಿಗಳು 18 ಸೆಂಟೀಮೀಟರ್ಗಳಷ್ಟು ದೊಡ್ಡದಾಗಿ ಬೆಳೆಯುವುದೂ ಉಂಟು. 
ಗುಬ್ಬಿ ವಿಶ್ವವ್ಯಾಪಿ ಪಕ್ಷಿ. ಗುಬ್ಬಿಗಳಿಲ್ಲದ ಪ್ರದೇಶವೇ ಇಲ್ಲ. ಏಷ್ಯಾ, ಅಮೇರಿಕಾ, ಆಫ್ರಿಕಾ, ಆಸ್ಟ್ರೇಲಿಯಾಗಳಲ್ಲಿ ಗುಬ್ಬಿಗಳು ಕಾಣಸಿಗುತ್ತವೆಯಾದರೂ ಅವುಗಳ ಗಾತ್ರದಲ್ಲಿ ಬದಲಾವಣೆಯಿರುತ್ತವೆ.ಗುಬ್ಬಿಗಳು ಹೆಚ್ಚಾಗಿ ಹಣ್ಣುಗಳು, ಬೀಜಗಳು, ಕಾಳುಗಳು ಹಾಗೂ ಚಿಕ್ಕ ಚಿಕ್ಕ ಕೀಟಗಳನ್ನು ತಿನ್ನುತ್ತವೆ. ಸೀಬೆ ಹಣ್ಣುಗಳೆಂದರೆ ಇವಕ್ಕೆ ಅಚ್ಚುಮೆಚ್ಚು. ಆದ್ದರಿಂದಲೇ ಸೀಬೆ ಮರದ ಸುತ್ತ ಇವುಗಳು ದಂಡುಕಟ್ಟಿಕೊಂಡು ವಾಸಿಸುತ್ತವೆ.ಬಣ್ಣ-ಅಂದ-ಚೆಂದಸಾಮಾನ್ಯವಾಗಿ ಮಾಸಲು ಬಣ್ಣ ಹೊಂದಿರುವ ಈ ಗುಬ್ಬಿಯ ದೇಹದ ಮೆಲೆ ಅಲ್ಲಲ್ಲಿ ಬಿಳಿ ಬಣ್ಣದ ರೋಮಗಳಿರುತ್ತವೆ. ಉದ್ದನೆಯ ಪುಕ್ಕ ಹೊಂದಿರುವ ಇವು ರೆಕ್ಕೆ ಬಡಿಯುವ ವೇಗ ಬಹಳ ಜೋರು.ಹೆಣ್ಣು ಗುಬ್ಬಿಯನ್ನು ಆಕರ್ಷಿಸಲು ಗಂಡು ಗುಬ್ಬಿ ತನ್ನ ದೇಹ ಸೌಂದರ್ಯಕ್ಕೆ ಹೆಚ್ಚಿನ ಮಹತ್ವ ನೀಡುತ್ತದೆ. ಅಲ್ಲದೆ ತನ್ನ ದೇಹವನ್ನು ವಿಶಿಷ್ಟವಾಗಿ ಬಾಗಿಸಿ ಬಳುಕಿಸುವ ಮೂಲಕ ಅದು ಎಲ್ಲರನ್ನೂ ಆಕರ್ಷಿಸುತ್ತದೆ.

ಗೌರವದ ಭಾವನೆ
ಕರ್ನಾಟಕದಲ್ಲಿ ಸುಗ್ಗಿ ಕಾಲದಲ್ಲಿ ಗುಬ್ಬಿಗಳು ಹೆಚ್ಚಳವಾಗುತ್ತವೆ. ಆದ್ದರಿಂದಲೇ ಕರ್ನಾಟಕದ ಹಳ್ಳಿಗರು ಗುಬ್ಬಿಯನ್ನು ಸುಗ್ಗಿಯ ದೂತರು ಎಂದೇ ಕರೆಯುತ್ತಾರೆ. ಹಳ್ಳಿಗರಿಗೆ ಗುಬ್ಬಿ ಎಂದರೆ ಪವಿತ್ರ ಭಾವನೆ. ಅದನ್ನು ಬಹಳ ಗೌರವದಿಂದ ಕಾಣುತ್ತಾರೆ. ಕೆಲವೊಮ್ಮೆ ಇವು ಭತ್ತದ ಬೆಳೆಯನ್ನು ತಿಂದರೂ ಹೆಚ್ಚಿನ ವೇಳೆ ಇವು ಭತ್ತಕ್ಕೆ ಕಾಟ ಕೊದುವ ಕೀಟಗಳನ್ನು ತಿನ್ನುತ್ತವೆ. ಆದ್ದರಿಂದ ಇವುಗಳೂ ರೈತನ  ಮಿತ್ರನಾಗಿಯೇ ಹೆಸರುವಾಸಿ.

ಮೊಟ್ಟೆ-ಮರಿ
ಮನೆಯ ಮಾಡಿನ ಮೇಲೆ, ತಾರಸಿ ಮೇಲೆ ಗೂಡು ಕಟ್ಟುವ ಗುಬ್ಬಿಗಳು ಒಮ್ಮೆಲೆ 2-3 ಮೊಟ್ಟೆಗಳನ್ನು ಇಡುತ್ತವೆ. ಮೊಟ್ಟೆಗೆ ಗಂಡು ಹಾಗೂ ಹೆಣ್ಣು ಗುಬ್ಬಿಗಳು ಸರದಿ ಪ್ರಕಾರ ಕಾವು ಕೂರುತ್ತವೆ. ಮೊಟ್ಟೆಯೊಡೆದು ಹೊರ ಬರುಬ ಮರಿ ದೊಡ್ಡದಾಗಿ, ರೆಕ್ಕೆ ಬಲಿತು ಹಾರಲು ಪ್ರಾರಂಭಿಸುವವರೆಗೂ ಅದರ ಆರೈಕೆ ಈ ಎರಡೂ ಗುಬ್ಬಿಗಳದ್ದು. ಇವು ಹೆಚ್ಚು ಸಂಘ ಜೀವಿಗಳು. ಜೊತೆ ಜೊತೆಯಾಗಿ ಜೀವಿಸುವ ಇವು ಬಹಳ ಚೊಕ್ಕಟ ಪ್ರಾಣಿಗಳು. ತಮ್ಮ ದೇಹವನ್ನು ಶುಚಿಯಾಗಿಡಲು ಹೆಚ್ಚಿನ ಮಹತ್ವ ನೀಡುವ ಇವು ನೀರಿನಲ್ಲಿ ಆಗಾಗ ಸ್ನಾನ ಮಾಡುತ್ತವೆ. ಅಲ್ಲದೆ ಆಗಾಗ ತಮ್ಮ ದೇಹವನ್ನು ಶುಚಿಯಾಗಿಡಲು ಅಗತ್ಯವಾದ ಎಲ್ಲ ಕ್ರಮಗಳನ್ನೂ ಕೈಗೊಳ್ಳುತ್ತವೆ.
ಈ ಗುಬ್ಬಿಗಿಗೂ ಮಕ್ಕಳೆಂದರೆ ಪ್ರೀತಿ. ಪುಟ್ಟ ಪುಟ್ಟ ಮಕ್ಕಳು ಬಯಲಿನಲ್ಲಿ ಕೈಯಲ್ಲಿ ಏನಾದರೂ ತಿಂಡಿಗಳನ್ನು ಹಿಡಿದುಕೊಂಡಿದ್ದರೆ ಇವು ತುಸು ಹೆಚ್ಚು ಸಲಿಗೆ ತೆಗೆದುಕೊಂಡು ಯಾವುದೇ ಭಯವಿಲ್ಲದೆ ಮಕ್ಕಳ ಕೈಯಲ್ಲಿನ ತಿಂಡಿಗಳಿಗೆ ಬಾಯಿ ಹಾಕುತ್ತವೆ. ಬೆಕ್ಕುಗಳು, ಕಾಗೆಗಳು, ಗೂಬೆಗಳು, ಈ ಮುಂತಾದ ಪ್ರಾಣಿಗಳು ಗುಬ್ಬಿ ಪಾಲಿಗೆ ಯಮದೂತರು. ತಮ್ಮ ಆಹಾರಕ್ಕಾಗಿ ಗುಬ್ಬಿಗಳನ್ನಿವು ಬೇಟೆಯಾಡಿ ತಿನ್ನುತ್ತವೆ.

ಅಳಿವಿನ ಅಂಚಿನಲ್ಲಿ..
ಸುಮಾರು 10 ಸಾವಿರ ವರ್ಷಗಳಿಗಿಂತ ಹಿಂದಿನಿಂದಲೂ ಮಾನವ ಹಾಗೂ ಗುಬ್ಬಿಯ ಒಡನಾಟ ಸಾಗಿ ಬಂದಿದೆ. ನಮ್ಮ ಜನಪದದ ಕಥೆಗಳಲ್ಲೂ ಗುಬ್ಬಿಗಳು ಹಾಸು ಹೊಕ್ಕಾಗಿವೆ. ಮಕ್ಕಳ ಪ್ರೀತಿಯ ಕಾಕಣ್ಣ ಗುಬ್ಬಣ್ಣ ಕಥೆಯಲ್ಲಿಯೂ ಇವುಗಳಿಗೆ ಬಹು ಮುಖ್ಯ ಸ್ಥಾನ. ಆಸೆ ಬುರುಕ ಕಾಗೆಗೆ ಪುಟಾಣಿ ಗುಬ್ಬಿ ಬಿದ್ಧಿಕಲಿಸುವ ಬಗೆಯಂತೂ ಮಕ್ಕಳನ್ನು ಆಧುನಿಕ ಕಾರ್ಟೂನುಗಳಿಗಿಂತ ಹೆಚ್ಚಾಗಿ ಸೆಳೆಯುತ್ತವೆ. ಇಂತಹ ಗುಬ್ಬಿಗಳು ಇದೀಗ ಅಳಿವಿನ ಅಂಚಿನಲ್ಲಿವೆ. ಮಾನವ ಆಧುನಿಕತೆಯತ್ತ ಸಾಗಿದಂತೆಲ್ಲ ಗುಬ್ಬಿ ಅವನತಿಯತ್ತ ಸಾಗುತ್ತಿದೆ. 
5-10 ವರಷಳ ಹಿಂದೆ ಲಕ್ಷಾಂತರ ಗುಬ್ಬಿಗಳು ಕಾಣಸಿಗುತ್ತಿದ್ದವು. ಆದರೆ ಈಗ ಒಂದೆರಡು ಗುಬ್ಬಿಯನ್ನು ನೋಡಬೇಕಾದರೂ ಕಷ್ಟ ಪಡಬೇಕು. ಮಾನವ ತೀವ್ರಗತಿಯಲ್ಲಿ ಯಾಂತ್ರೀಕೃತನಾಗುತ್ತಿದ್ದಾನೆ. ಇದರ ಪರಿಣಾಮ ಇಂತಹ ಮುಗ್ಧ ಪ್ರಾಣಿ ಹಾಗೂ ಪಕ್ಷಿಗಳ ಮೇಲಾಗುತ್ತಿದೆ. ಮೊಬೈಲ್ ತರಂಗಾಂತರಗಳು ಗುಬ್ಬಿಗಳ ಆರೋಗ್ಯಕ್ಕೆ ಮಾರಕ ಎಂಬ ಸಂಶೋಧನೆಯೊಂದು ಹೊರಬಿದ್ದಿದೆ. ಅದಕ್ಕೆ ತಕ್ಕಂತೆ ಗುಬ್ಬಿಗಳೂ ಕಣ್ಮರೆಯಾಗುತ್ತಿವೆ. ಗುಬ್ಬಿಗಳನ್ನು ರಕ್ಷಿಸಿ ಅವುಗಳ ಜೀವನಕ್ಕೆ ಬದುಕಿಗೆ ನೆರವಾಗದಿದ್ದಲ್ಲಿ ಮುಂದೊಮ್ಮೆ ಕಾಕಣ್ಣ ಗುಬ್ಬಣ್ಣ ಕಥೆಗಳಲ್ಲಿ ಮಾತ್ರ ಇವು ಉಳಿದುಕೊಳ್ಳುವ ಸಾಧ್ಯತೆಗಳಿವೆ. ಮಕ್ಕಳ ಪ್ರೀತಿಯ ಗುಬ್ಬಿಗಳು ಕಣ್ಮರೆಯಾಗುವ ಸಾಧ್ಯತೆಗಳು ಹೆಚ್ಚಿವೆ.

ವಿ ಸು...
ಪತ್ರಿಕೆಯೊಂದಕ್ಕೆ ಬರೆದ ಬರಹದ ಯಥಾವತ್ ಪ್ರತಿ..

Sunday, September 26, 2010

ಕೆಲವು ಹನಿಗಳು

ಕರ್ಮವೀರ ವಿಶೇಷಾಂಕ ಕ್ಕೆ ನೀಡಿರುವ ಕೆಲವು ಚುಟುಕಗಳು..
ನಿಮ್ಮ ಓದಿಗಾಗಿ.
ಅನಿಸಿಕೆ ತಿಳಿಸಿ..

11) ಹೃದಯದ ಸ್ಥಿತಿ
ನಲ್ಲೆ ನೀನು ಒಪ್ಪಿದರೆ
ಈ ಹೃದಯ ನಿನದು
ಆದರೆ ನೀನು ಒಪ್ಪದಿದ್ದರೆ
ಇದರ ಸ್ಥಿತಿ ಬರ್ಬಾದು !
       
12) ತಾಳಿ
ಹರೆಯಕ್ಕೆ,
ಯವ್ವನದೊಡಲಿಗೆ
ಸಿಕ್ಕ ಒಂದು
ಕಡಿವಾಣ.
ಗಂಡಿನ ಲಗಾಮು.

13) ಸೂರ್ಯ
ಭೂಮಿಯೊಡಲ
ಸಂಪತ್ತು ಹುಡುಕಲು
ದೇವರು ಬಿಡುವ
ಟಾರ್ಚು !

14)ಸ್ವಾತಂತ್ರ್ಯ ದಿನ
ದೇಶ
ಬ್ರಿಟೀಷರ ಕೈತಪ್ಪಿ
ರಾಜಕಾರಣಿಗಳ ಕೈ
ಅಪ್ಪಿದ ದಿನ !

15)ಚಂದ್ರ
ರಾತ್ರಿ ಭೂಮಿಗೆ
ನಿದ್ರೆಯ ಕೊಡದೇ,
ಕಾವಲು ನಿಂತು
ಲೈನ್ ಹೊಡೆಯುತ್ತಿರುವ ಭೂಪ !!

16)ಹನಿಗವಿ
ಯುವ ಕವಿಯಾದ ನಾನು
ಅವಳನ್ನು ಕಂಡಾಗಲೆಲ್ಲಾ
ಆಗುತ್ತೇನೆ ಠಟಿಜಥಿ ಕವಿ
ಹನಿ ಕವಿ ಹಾಗೂ `ಹನಿ' ಕವಿ !!

17).ಮದುವೆ
ಮದುವೆಯೆಂದರೆ
ಎರಡು ನಿಷ್ಪಾಪಿ
ಜೀವಿಗಳನ್ನು
ನರಕಕ್ಕೆ ಕಳಿಸುವ
ದಾರಿ!

18)ದೀಪಾವಳಿ
ಬಾಳನ್ನು ಬೆಳಗಿದೆ
ದೀಪಾವಳಿ!
ಸಂತಸ ಪಡುವವನ
ಕಿಸೆಯೊಳಗಣ ಹಣವಾಗಿದೆ
ದಿವಾಳಿ!!

19)ಕಾರಣ
ವಿಶ್ವಕ್ಕೆಲ್ಲ ಜಾಗತೀಕರಣ,
ಔದ್ಯೋಗೀಕರಣ, ಖಾಸಗೀಕರಣ,
ಸಾಮಾಜೀಕರಣ, ಆಧುನೀಕರಣ
ಹೀಗೆಲ್ಲ ಇದ್ದರೆ, ಭಾರತಕ್ಕೆ
ಒಂದೇ ಕಾರಣ, ರಾಜಕಾರಣ !!

20)ಗೋರ್ಮೆಟ್ ನೌಕರ
ಜನರ ಸೇವೆಯನ್ನು
ದನದ ಸೇವೆ
ಎಂದು ತಿಳಿದವ
ಸರಕಾರಿ ನೌಕರ!!

21)ಹುಚ್ಚು
ಭೂಮಿಯ ಮೇಲೆ
ಎಲ್ಲರಿಗೂ ಹಿಡಿದಿದೆ ಹುಚ್ಚು !
ಅದರಲ್ಲೂ ಮೆಗಾ
ಸೀರಿಯಲ್ ನೋಡುವವರಿಗೆ
ತುಸು ಹೆಚ್ಚು !!

22)ಚಂದ್ರನಲ್ಲಿ ಬಾವುಟ
ನಮ್ಮ ಜನ
ಚಂದ್ರನಿಗೂ ಕೊಟ್ಟರು ಕಾಟ!
ನೆಟ್ಟರು ಗೂಟ, ಜೊತೆಗೆ
ಅಮೆರಿಕೆಯ ಬಾವುಟ !!

23)ನಾಕ-ನರಕ
ನಾಕ ನಾಕ ಎನ್ನುತ್ತಿದ್ದ
ಜನರಿಗೆ ಅರ್ಥವಾಗಲಿಲ್ಲ,
ಜಗತ್ತಿನ ಅತಿದೊಡ್ಡ ನರಕವೆಂದರೆ
ಅದು ಅಮೆರಿಕ !!

24)(ವಾ)ನರ
ನರ, ನಾಗರಿಕತೆಯಲ್ಲಿ
ಸಿಲುಕಿ, ಆಧುನೀಕತೆಯಲ್ಲಿ
ಮುಂದುವರಿದು ಆಗುತ್ತಿದ್ದಾನೆ
ವಾನರ !!

25)ವಾಸ್ತವ
ದೂರದ ಗುಡ್ಡ
ಕಣ್ಣಿಗೆ ನುಣುಪು!
ಗೆಳತೀ ಹಾಗೇ ನಿನ್ನ
ಮುಖವೂ ಕೂಡ !!
ದೂರವಿದ್ದರಷ್ಟೇ
ಕಾಣುವುದು ನುಣುಪು !!!

26)ಮೊಡವೆ
ಮದುವೆಗೆ ಮುನ್ನ
ಹುಡುಗಿಯರ ಕಾಡುವ
ಅವರ ಸೊಕ್ಕನ್ನು ಮುರಿಯುವ
ಏಕೈಕ ಸಾಧನ ಮೊಡವೆ !!

27)ಜಮ್ಮು-ಕಾಶ್ಮೀರ
ಭಾರತದ ಅತ್ಯಂತ ಚೆಂದದ ಭಾಗ
ಜಮ್ಮು ಕಾಶ್ಮೀರ !
ಆದರೆ ಅಲ್ಲಿದೆ ಪ್ರತಿದಿನ ಗುಂಡಿನ
ನೆಗಡಿ, ಕೆಮ್ಮು, ದಮ್ಮು, ಜ್ವರ !!

Monday, September 13, 2010

ಏಕ ರೇಖಾ ಗಣಪ ಬಲು ಅಪರೂಪ

ವಿಘ್ನನಿವಾರಕ ಗಣೇಶನ ಚಿತ್ರವನ್ನು ಬಿಡಿಸುವವರು, ಮೂರ್ತಿ ಕೆತ್ತುವವರು ಬಹಳ ಮಂದಿ ಇದ್ದಾರೆ. ಆದರೆ ಕೇವಲ ಒಂದೇ ಸಾಲಿನ ಮೂಲಕ ಗಣೇಶನನ್ನು ಮೂಡಿಸುವ ಚಿತ್ರಕಾರರು ಸ್ವಲ್ಪ ವಿರಳವೆಂದೇ ಹೇಳಬಹುದು. ಈ ರೀತಿಯ ಅಪರೂಪದ ಚಿತ್ರ ಬಿಡಿಸುವುದು ಸವಾಲಿನ ಕೆಲಸವೇ ಸರಿ. ಇಂತಹ ಬಹು ಕಠಿಣ ಕಲೆಯನ್ನು ಒಲಿಸಿಕೊಂಡು ಚಿತ್ರವನ್ನು ರಚಿಸುವ ಕಲಾವಿದರೊಬ್ಬರಿದ್ದಾರೆ. ಅವರೇ ಸೈಯದ್ ಹುಸೈನಿ.
ಲಲಿತಕಲೆಯಲ್ಲಿ ಡಿಪ್ಲೊಮಾ ಮುಗಿಸಿರುವ ಇವರು ಏಕ ರೇಖೆಯಲ್ಲಿ ಗಣೇಶನನ್ನು ಚಿತ್ರಿಸುತ್ತಾರೆ. ಇವರ ಚಿತ್ರದಲ್ಲಿ ಗಣೇಶನ ಕಿರೀಟದಿಂದ ಇಲಿಯ ಬಾಲದವರೆಗೂ ಕೇವಲ ಒಂದೇ ರೇಖೆ ಇರುವುದು ವಿಶೇಷ. ಇದುವರೆಗೆ ಸುಮಾರು 100ಕ್ಕೂ ಹೆಚ್ಚು ಏಕರೇಖಾ ಗಣೇಶನ ಚಿತ್ರ ಬಿಡಿಸಿದ್ದಾರೆ.
ಹುಸೈನಿ ಮೊದಲ ಸಾರಿ ಚಿತ್ರ ಬಿಡಿಸಿದ್ದು ಮೂರನೇ ತರಗತಿಯಲ್ಲಿದ್ದಾಗ. ಆ ನಂತರ ಅವರು ಇದುವರೆಗೂ ಬಹಳಷ್ಟು ಚಿತ್ರಗಳನ್ನು ಬಿಡಿಸಿದ್ದಾರೆ. ಕನರ್ಾಟಕ ವಿಶ್ವವಿದ್ಯಾಲಯದಲ್ಲಿ ಲಲಿತಕಲೆಯಲ್ಲಿ ಪದವಿ ಮುಗಿಸಿರುವ ಇವರಿಗೆ ಚಿತ್ರ ಬಿಡಿಸುವುದು ನೀರು ಕುಡಿದಷ್ಟು ಸುಲಭ.
ಇವರು ಸುಮಾರು 3000ಕ್ಕೂ ಹೆಚ್ಚು ಏಕರೇಖಾ ಚಿತ್ರವನ್ನು ಬಿಡಿಸಿದ್ದಾರೆ. ಕೇವಲ ಗಣೇಶನ ಚಿತ್ರವನ್ನಷ್ಟೇ ಅಲ್ಲ, ಕುದುರೆ ಮುಂತಾದ ಹಲವು ಚಿತ್ರಗಳನ್ನು, ಹಲವು ವ್ಯಕ್ತಿಗಳ ಭಾವ ಚಿತ್ರಗಳನ್ನೂ ರಚಿಸಿದ್ದಾರೆ.
ಏಳೆಂಟು ವರ್ಷಗಳ ಹಿಂದೆ ಗಣೇಶನ ಚಿತ್ರ ಬಿಡಿಸಲು ಪ್ರಾರಂಭಿಸಿದ ಇವರಿಗೆ ಇಂದು ಏಕರೇಖಾ ಗಣೇಶನ ಚಿತ್ರ ಬಿಡಿಸಲು ಕನಿಷ್ಟ ಅರ್ಧ ಗಂಟೆ ಸಾಕು. ಕೆಲವೊಮ್ಮೆ ಕೆಲವು ಚಿತ್ರ ಬಿಡಿಸಲು ದಿನಗಟ್ಟಲೆ ಸಮಯವನ್ನು ತೆಗೆದುಕೊಂಡಿದ್ದೂ ಇದೆ. ಹುಸೈನಿ ಪ್ರಾರಂಭದಲ್ಲಿ ಗಣೇಶನ ಆಯಿಲ್ ಪೇಂಟ್ ಹಾಗೂ ಇತರೆ ಚಿತ್ರಗಳನ್ನು ಬಿಡಿಸುತ್ತಿದ್ದರು. ಆ ನಂತರ ಒಂದು ದಿನ ಗಣೇಶನ ಚಿತ್ರವನ್ನು ಏಕರೇಖೆಯಲ್ಲಿ ಬಿಡಿಸುವ ಆಲೋಚನೆ ಮೂಡಿತು. ಆ ನಂತರ ಕೆಲವು ದಿನಗಳು ಪ್ರಯತ್ನಿಸಿ ಚಿತ್ರ ಬಿಡಿಸಲು ಪ್ರಾರಂಭಿಸಿದರು.
ಚಿಕ್ಕಂದಿನಲ್ಲಿ ಹುಸೈನಿ ಅವರ ತಾಯಿ ಉಲ್ಲನ್ನಿನ ಸ್ವೆಟರ್ ಹಾಕುವ ವೇಳೆ ಇವರು ಆ ಉಲ್ಲನ್ನಿನ ಉಂಡೆಯ ಜೊತೆ ಆಟವಾಡುತ್ತಿದ್ದರು. ಅಷ್ಟೇ ಅಲ್ಲದೆ ಅದರಿಂದ ವಿವಿಧ ಚಿತ್ರಗಳನ್ನು ನೆಲದ ಮೇಲೆ ಮೂಡಿಸುತ್ತಿದ್ದರು. ಇದೇ ಅವರ ಏಕ ರೇಖಾ ಚಿತ್ರಕ್ಕೆ ಸ್ಫೂರ್ತಿ ನೀಡಿತು. ನಂತರ ಅವರ ತಾಯಿ ಹುಸೈನಿ ಅವರ ಕಲೆಗೆ ನೀರೆರೆದು ಪೋಷಿಸಿದರು.
ಚಿಕ್ಕಂದಿನಿಂದಲೆ ಒಲಿದುಬಂದ ಕಲೆಯನ್ನು ಬೆಳೆಸಿಕೊಂಡ ಇವರು ಹಲವು ರೀತಿಯ ಚಿತ್ರಗಳನ್ನು ಬಿಡಿಸಿದ್ದರೂ ಹೆಸರು ಗಳಿಸಿದ್ದು ಏಕರೇಖೆಯ ಗಣಪನ ಚಿತ್ರಗಳ ಮೂಲಕ. ಕಷ್ಟದ ಕಲೆಯಲ್ಲೂ ವಿಭಿನ್ನತೆ ಮೆರೆದ ಇವರು, ನಿಂತಿರುವ ಗಣೇಶ, ಕುಳಿತ ಏಕದಂತ, ಇಲಿಯ ಮೇಲೆ ಗಣೇಶನ ಸವಾರಿ, ನೃತ್ಯ ಮಾಡುತ್ತಿರುವ ಗಣಪ-ಹೀಗೆ ಹಲವು ಬಗೆಯ ಗಣಪನ ಚಿತ್ರಗಳನ್ನು ಬಿಡಿಸಿದ್ದಾರೆ.
ಚಿತ್ರ ಬಿಡಿಸುವುದೇ ಇವರ ವೃತ್ತಿ. ಅವರು ಬಿಡಿಸಿರುವ ಅದೆಷ್ಟೋ ಚಿತ್ರಗಳು ಉತ್ತಮ ಬೆಲೆಗೆ ಮಾರಾಟವಾಗಿವೆ.
ಕೇವಲ ಚಿತ್ರ ಬಿಡಿಸುವುದು ಮಾತ್ರ ಇವರ ಕೆಲಸವಲ್ಲ. ಪೇಪರ್ ಕಟಿಂಗ್ನಲ್ಲೂ ಇವರದ್ದು ಎತ್ತಿದ ಕೈ. ಬಗೆಬಗೆಯ ನಮೂನೆ ಗಳು, ಹಲವು ಆಕಾರಗಳು ಇವರ ಕೈಯಲ್ಲಿ ಅರಳಿವೆ. ಇವರ ಕೈಗೆ ಕುಂಚ ಸಿಕ್ಕರೆ ಹೇಗೆ ಗೆರೆಗಳು ಮಾತನಾಡುತ್ತವೆಯೋ ಹಾಗೆಯೆ ಖಾಲಿ ಪೇಪರ್ ಹಾಗೂ ಕತ್ತರಿ ಸಿಕ್ಕರೆ ಸಾಕು ಅವು ಜೀವ ತಳೆಯುತ್ತವೆ.
ಬೆಂಗಳೂರಿನ ಜಯನಗರದಲ್ಲಿ ವಾಸ ಮಾಡುತ್ತಿರುವ ಹುಸೈನಿ ಏಕರೇಖೆಯ ಚಿತ್ರಕಲೆ ಹಾಗೂ ಪೇಪರ್ ಕ್ರಾಫ್ಟ್ ಬಗ್ಗೆ ಹಲವು ಕಡೆ ತರಬೇತಿ, ಪ್ರದರ್ಶನ ಹಾಗೂ ಪ್ರಾತ್ಯಕ್ಷಿಕೆಗಳನ್ನು ನೀಡಿದ್ದಾರೆ. 34 ವರ್ಷದ ಹುಸೈನಿ ಮೂಲತಃ ಮಂಡ್ಯ ಜಿಲ್ಲೆಯ ಶಿವನಸಮುದ್ರದವರು.
ಅಂಚೆಕುಂಚ ಪ್ರಶಸ್ತಿಯನ್ನು ನಾಲ್ಕು ಸಾರಿ ಮುಡಿಗೇರಿಸಿ ಕೊಂಡಿರುವ ಹುಸೈನಿ 2009ರಲ್ಲಿ ಜಪಾನ್ ಹಬ್ಬದಲ್ಲೂ ಭಾಗವಹಿಸಿ ಬಂದಿದ್ದಾರೆ. ಬೆಂಗಳೂರು, ಮೈಸೂರು, ಉಡುಪಿ, ಧಾರವಾಡ ಮುಂತಾದ ಕಡೆಗೆಲ್ಲ ಇವರು ಏಕವ್ಯಕ್ತಿ ಪ್ರದರ್ಶನ ಗಳನ್ನು ನೀಡಿದ್ದಾರೆ. ಹುಸೈನಿ ಅವರನ್ನು 9845153277. ಈ ಸಂಖ್ಯೆ ಮೂಲಕ ಸಂಪರ್ಕಿಸಬಹುದು.

Tuesday, August 24, 2010

ವಿದ್ಯುತ್ ಬಿಲ್ ಗೆ ವಿನಾಯಿತಿ ಇಲ್ಲವೆ?

ಕರ್ನಾಟಕ ವಿದ್ಯುತ್ ಮಂಡಳಿ ಪ್ರತಿ ಸಾರಿ ವಿದ್ಯುತ್ ಬಿಲ್ ನೀಡುವಾಗಲೂ ಅದರಲ್ಲಿ ಅಧಿಕ ಪ್ರಮಾಣದ ಮೇಲೆ ದಂಡ ಎಂಬ ವಾಖ್ಯವೊಂದು ಕಾಣಿಸುತ್ತದೆ. ಈ ಬಗ್ಗೆ ಇಲಾಖೆಯಯನ್ನು ಕೇಳಿದರೆ ನಿಗದಿತ ಪ್ರಮಾಣಕ್ಕಿಂತ ಅಧಿಕ ವಿದ್ಯುತ್ ಬಳಸಿದರೆ ಈ ದಂಡವನ್ನು ಹಾಕಲಾಗುತ್ತದೆ ಎಂದು ಹೇಳುತ್ತಾರೆ. ಹೆಚ್ಚಿನ ವಿದ್ಯುತ್ ಬಳಸಿದಾಗ ಹೆಚ್ಚಿನ ದಂಡವನ್ನೂ ಹಾಕಿದ ಉದಾಹರಣೆಗಳಿವೆ.
ಆದರೆ ನನ್ನಲ್ಲಿ ಮೂಡುತ್ತಿರುವ ಪ್ರಶ್ನೆ ಇಷ್ಟೇ. ವಿದ್ಯುತ್ತನ್ನು ನಿಗದಿತ ಪ್ರಮಾಣಕ್ಕಿಂತ ಹೆಚ್ಚಿಗೆ ಬಳಸಿದಾಗ ದಂಡ ಹಾಕುವ ವಿದ್ಯುತ್ ಇಲಾಖೆ ಅತ್ಯಲ್ಪ ಪ್ರಮಾಣದಲ್ಲಿ ವಿದ್ಯುತ್ ಬಳಸುವ ಕುಟುಂಬಗಳಿಗೆ ವಿನಾಯಿತಿ ಯಾಕೆ ನೀಡುವುದಿಲ್ಲ?
ಕೆಲವು ಕುಟುಂಬಗಳು ತಿಗಳಿಗೆ 10 ಯುನಿಟ್ಗಿಂತ ಕಡಿಮೆ ವಿದ್ಯುತ್ ಬಳಸುತ್ತವೆ. ಅವುಗಳ ವಿದ್ಯುತ್ ಬಿಲ್ ಮೊತ್ತ 50 ರೂಪಾಯಿಗಳನ್ನೂ ಮುಟ್ಟುವುದಿಲ್ಲ. ಇಂತಹ ಕುಟುಂಬಗಳ ವಿದ್ಯುತ್ ಬಿಲ್ಗೆ ವಿನಾಯಿತಿಯನ್ನು ಇಲಾಖೆ ನೀಡದೇ ಇರುವುದು ವಿಚಿತ್ರ ಎನಿಸುತ್ತದೆ.
ಇಲಾಖೆ ಈ ಬಗ್ಗೆ ತಕ್ಷಣ ಚಿಂತಿಸಿ ವಿದ್ಯುತ್ ಬಿಲ್ ವಿನಾಯಿತಿಯನ್ನು ನೀಡುತ್ತದೆ ಎಂಬುದು ನಮ್ಮ ಆಶಯ.

Monday, August 23, 2010

`ಆಸರೆ' ಸಖ್ಯವಾಗುವಂತಾದರೆ...

ಅಲ್ಲಲ್ಲಿ ಮೂತ್ರದ ವಾಸನೆ, ಎಲ್ಲೆಂದರಲ್ಲಿ ಬಿದ್ದುಕೊಂಡಿರುವ ಭಿಕ್ಷುಕರು, ಸುಕ್ಕು ಗಟ್ಟಿದ ಮುಖ. ಹರಡಿಕೊಂಡ ತಲೆಕೂದಲು, ಆ ಕೂದಲುಗಳಿಗೆ ಎಣ್ಣೆಯಿಲ್ಲ, ದೇಹಕ್ಕೆ ಸ್ನಾನವಿಲ್ಲ. ಎತ್ತ ನೋಡಿದರತ್ತ ಕೊಳಕು, ಅಸಹ್ಯ ವಾತಾವರಣ, ಕೆಲವರು ಕಾಯಿಲೆಯಿಂದ ನರಳುತ್ತಿರುವವರು. ಇಂತಹವರನ್ನು ಸರಿಯಾಗಿ ನೋಡುವವರಿಲ್ಲ. ಸ್ನಾನ ಮಾಡಿಸುವವರಿಲ್ಲ. ದನದ ಕೊಟ್ಟಿಗೆಯಂತೆ ಕಾಣುವ ಕೊಠಡಿಗಳು. ಇದು  ಬೆಂಗಳೂರು ಮಹಾನಗರಿಯ ನಿರಾಶ್ರಿತರ ಕೇಂದ್ರದಲ್ಲಿ ಕಂಡುಬಂದ ಸ್ಥಿತಿ-ಗತಿ. ಇದೇ ಸುಮನಹಳ್ಳಿಯಲ್ಲಿರುವ ನಿರಾಶ್ರಿತರ ಕೇಂದ್ರದ ಪರಿಸ್ಥಿತಿ.
ಬೀದಿ ಬದಿಯಲ್ಲಿ ಭಿಕ್ಷೆ ಬೇಡುವ ಭಿಕ್ಷುಕರಿಗೆ ಪುನರ್ವಸತಿ ನೀಡಬೇಕೆಂದು ಸ್ಥಾಪಿಸಲಾಗಿರುವ ಈ ಕೇಂದ್ರದಲ್ಲಿನ ಸರಣಿ ಸಾವು ಮತ್ತು ಅದರ ದುಸ್ಥಿತಿಯಿಂದಾಗಿ ಈಗ ಸುದ್ದಿ ಮಾಡಿದೆ.
ಈ ಭಿಕ್ಷುಕರ ಪುನರ್ವಸತಿ ಕೇಂದ್ರದ ಒಳಗೆ ಕಾಲಿಟ್ಟರೆ ಸಾಕು ಅಸಹ್ಯಕರ ವಾತಾವರಣ. ಆರೋಗ್ಯವಂತರು, ಅನಾರೋಗ್ಯಕ್ಕೊಳಗಾದವರು, ಬಡಕಲು ಶರೀರದವರು ಹೀಗೆ ವಿವಿಧ ರೀತಿಯ ನಿರಾಶ್ರಿತರು, ಭಿಕ್ಷುಕರ ಕಣ್ಣುಗಳಲ್ಲಿನ ಯಾಚನೆ, ಅಸಹಾಯಕ ನೋಟ ಎಂತಹವರಲ್ಲಾದರೂ ಮರುಕ ಹುಟ್ಟಿಸುತ್ತದೆ.
ಎಲ್ಲೋ ಭಿಕ್ಷೆ ಬೇಡುತ್ತಿದ್ದ ಭಿಕ್ಷುಕರನ್ನು ಹಿಡಿದು ತಂದು ಈ ನಿರಾಶ್ರಿತರ ಶಿಬಿರದಲ್ಲಿಡಲಾಗಿದೆ. ಈ ಭಿಕ್ಷುಕರ ದುಸ್ಥಿತಿ ಹೇಳತೀರದು. ಸರಿಯಾದ ಆಹಾರವಿಲ್ಲದೆ, ದಿನನಿತ್ಯ ಸ್ನಾನವಿಲ್ಲ, ರೋಗಬಂದರೆ ಸೂಕ್ತ ಚಿಕಿತ್ಸೆಯಿಲ್ಲ, ಇನ್ನೊಂದು ರೀತಿಯಲ್ಲಿ ಹೇಳಬೇಕೆಂದರೆ ಈ ಭಿಕ್ಷುಕರದ್ದು ನಾಯಿಪಾಡು ಎಂದರೂ ತಪ್ಪಾಗಲಾರದು.
ಈ ಜನರ ಪಾಲಿಗೆ ಯಾವುದಾದರೂ ಸರ್ಕಾರಿ ಕಾರ್ಯಕ್ರಮಗಳು ಬಂತೆಂದರೆ ಹಬ್ಬ. ಸ್ವಾತಂತ್ರ್ಯ ದಿನಾಚರಣೆ, ಗಾಂಧಿ ಜಯಂತಿ ಮುಂತಾದ ಸಕರ್ಾರಿ ಕಾರ್ಯಕ್ರಮಗಳಂದು ಇವರಿಗೆ ಸಿಹಿ ತಿಂಡಿ ಹಾಗೂ ವಿಶೇಷ ಊಟಗಳು ಲಭ್ಯ. ಇಲ್ಲದಿದ್ದರೆ ಹಳಸಲನ್ನವೇ ಗತಿ.
ಈ ಪುನರ್ವಸತಿ ಕೇಂದ್ರದಲ್ಲಿ ಅಲ್ಲಲ್ಲಿ ಅಡ್ಡಾಡುತ್ತಿರುವ ಭಿಕ್ಷುಕರು ಒಂದೆಡೆಯಾದರೆ, ಲೋಕದ ಪರಿವೆಯೆ ಇಲ್ಲದಂತೆಮಲಗಿಕೊಂಡಿರುವವರು ಮತ್ತೊಂದೆಡೆ. ಇನ್ನು ಈ ಕೇಂದ್ರದಲ್ಲಿರುವ ಹಲವು ಭಿಕ್ಷುಕರು ಬುದ್ದಿಮಾಂದ್ಯರು. ಇವರನ್ನು ಇಲ್ಲಿ ಯಾರೂ ಕೇಳುವವರೇ ಇಲ್ಲ.
 ಇವರನ್ನು ನೋಡಿಕೊಳ್ಳುತ್ತಿರುವ ಸಿಬ್ಬಂದಿಗಳು ತಮಗೆ ಬೇಕಾದ ಎಲ್ಲ ಕೆಲಸಗಳನ್ನು ಈ ಭಿಕ್ಷುಕರ ಕೈಯಲ್ಲಿ ಮಾಡಿಸುತ್ತಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಗಾಯಾಳುಗಳಿಗೆ ಸೂಕ್ತ ಔಷಧ ನೀಡದ ಪರಿಣಾಮ ಗಾಯದಿಂದ ಕೀವು ಸೋರುತ್ತಿದ್ದ ದೃಶ್ಯವೂ ಕಾಣಬಹುದಾಗಿತ್ತು.
ಈ ವಸತಿಗೃಹವೂ ಅಷ್ಟೇ. ಅದರ ಒಳಗೆ ಕಾಲಿಟ್ಟರೆ ಸಾಕು ಗಬ್ಬು ವಾಸನೆ. ರೋಗಗಳಿಂದ ಹಾಸಿಗೆ ಹಿಡಿದ ಭಿಕ್ಷುಕರು ಅಲ್ಲೆ ಮಲ, ಮೂತ್ರ ವಿಸರ್ಜನೆ ಮಾಡಿಕೊಂಡಿದ್ದರಿಂದ ಒಳಗಡೆ ಗಬ್ಬು ವಾಸನೆ. ಇಂತಹ ವಾತಾವರಣದಲ್ಲೇ ಅವರು ಮಲಗಿ ನಿದ್ರಿಸಬೇಕಾಗುತ್ತದೆ. ಇವರು ಊಟ ಮಾಡುವ ಕೋಣೆಯ ಪರಿಸ್ಥಿತಿಯೂ ಭಿನ್ನವಾಗೇನೂ ಇಲ್ಲ. ಶುಚಿತ್ವ ಇಲ್ಲದ ಈ ಕೋಣೆಯಲ್ಲಿಯೇ ಊಟ ನೀಡಲಾಗುತ್ತಿದೆ.
ಭಿಕ್ಷುಕರಲ್ಲಿ ಹಲವರು ಸಾಂಕ್ರಾಮಿಕ ರೋಗಗಳಿಂದ ನರಳುತ್ತಿದ್ದಾರೆ. ಆದರೆ ಇವರನ್ನು ಪ್ರತ್ಯೇಕವಾಗಿ ಇರಿಸಿ ಚಿಕಿತ್ಸೆ ನೀಡುವ ಕೆಲಸ ನಡೆದಿಲ್ಲ. ಇವರನ್ನೂ ಆರೋಗ್ಯವಂತ ವ್ಯಕ್ತಿಗಳ ಜೊತೆ ಇರಿಸಲಾಗುತ್ತಿದೆ. ಇದರಿಂದ ಆರೋಗ್ಯವಂತರೂ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಜೊತೆಗೆ ಬುದ್ಧಿಮಾಂದ್ಯರ ಜೊತೆಗೆ ಆರೋಗ್ಯವಂತ ಭಿಕ್ಷುಕರನ್ನು ಇಡಲಾಗುತ್ತಿದೆ. ಇದು ಆರೋಗ್ಯವಂತ ಭಿಕ್ಷುಕರ ಮೇಲೆ ತೀವ್ರವಾದ ಪರಿಣಾಮ ಉಂಟು ಮಾಡುತ್ತಿದೆ.
 ಈ ನರಕದ ಸಹವಾಸ ಸಾಕು ಎಂದೇ ಹಲವು ಭಿಕ್ಷುಕರು ಅಲ್ಲಿಂದ ತಪ್ಪಿಸಿಕೊಂಡಿದ್ದಾರೆ ಎಂಬ ಮಾತು ಕೇಳಿಬಂದಿದೆ. ಕೆಲವರು ತಪ್ಪಿಸಿಕೊಳ್ಳಲು ಪ್ರಯತ್ನಿಸಿ ವಿಫಲರಾಗಿದ್ದಾರೆ.
ಈ ಕೇಂದ್ರದಲ್ಲಿ ಈಗಾಗಲೆ 286 ಜನರು ಸಾವನ್ನಪ್ಪಿದ್ದಾರೆ. ಇವರ ಸಾವಿಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.
ಒಟ್ಟಿನಲ್ಲಿ ಬೆಂಕಿಯಿಂದ ಬಾಣಲೆಗೆ ಹಾಕಿದಂತಾಗಿದೆ ಈ ಭಿಕ್ಷುಕರ ಸ್ಥಿತಿ. ಕಳೆದ ಶನಿವಾರ ಮುಖ್ಯಮಂತ್ರಿ ಬಿ.ಎಸ್. ಯಡಿಯರೂಪ್ಪ ಅವರು ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ಸ್ಥಿತಿಯನ್ನು ಅರಿತಿದ್ದು, ಈ ನಿರಾಶ್ರಿತರ ಕೇಂದ್ರವನ್ನು ಮಾದರಿ ಕೇಂದ್ರವನ್ನಾಗಿ ಮಾಡುವ ಆಶ್ವಾಸನೆ ನೀಡಿದ್ದಾರೆ. ಇದು ಕಾರ್ಯರೂಪಕ್ಕೆ ಆದಷ್ಟು ಬೇಗ ಬಂದು, ನಿರಾಶ್ರಿತರಿಗೆ `ಆಸರೆ' ನೀಡುತ್ತಿರುವ ಕೇಂದ್ರವು ಅಲ್ಲಿರುವವರಿಗೆ ಸಖ್ಯವಾಗುವಂತಾದರೆ ಸ್ಥಾಪನೆಯ ಉದ್ದೇಶವೂ ಸಾರ್ಥಕವಾಗುತ್ತದೆ.