Sunday, May 16, 2010

ನೋವು-ನೆರವು ದಾಖಲಾದಾಗ....

ಕಳೆದ ವರ್ಷ ಉತ್ತರ ಕರ್ನಾಟಕ ಹಲವು ಪ್ರದೇಶಗಳಲ್ಲಿ ಸುರಿದ ಭಾರಿ ಮಳೆ-ನೆರೆಯ ಭೀಕರತೆ ಈಗ ಇತಿಹಾಸ. ಆದರೆ ಸಂಕಷ್ಟಕ್ಕೀಡಾಗಿ ಜೀವನದ ಹಳಿ ತಪ್ಪಿದವರ ಬದಕು-ಬವಣೆ, ಸಮಯದಲ್ಲಿ ಸ್ಪಂದಿಸಿದವರ ಕಾರ್ಯವನ್ನು ದಾಖಲು ಮಾಡುವ ಅಪರೂಪದ ಕೆಲಸ  ರಾಜಧಾನಿಯ ಚ್ರೈತ್ರ ರಶ್ಮಿ ಪ್ರಕಾಶನದಿಂದ ನಡೆದಿದೆ.
ಈ ಪ್ರಕಾಶನ ಸಂಸ್ಥೆ ಹೊರತಂದ `ನೆರೆಯ ನೋವಿಗೆ ಸ್ಪಂದನ' ಪುಸ್ತಕ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ಬಸವನಗುಡಿಯ ಸೃಷ್ಟಿ ವೆಂಚರ್ಸ್ ನ ಪುಳಿಯೋಗರೆ ಪಾಯಿಂಟ್ ಕಟ್ಟಡದಲ್ಲಿ ನಡೆದಾಗ, ನೋವಿನ ನೆನಪು ಸಭಿಕರ ಹೃದಯವನ್ನು ಆವರಿಸಿಕೊಂಡಿತೆಂದರೆ ಅತಿಶಯೋಕ್ತಿಯಲ್ಲ. ಇದಕ್ಕೆ ಈ ಮೂರು ಘಟನಾವಳಿಗಳೇ ತುಣುಕುಗಳೇ ಸಹೃದಯರ ಎದೆತುಂಬಿಬರಲು ಸಾಕಾಗಿತ್ತು.


`ನಮ್ಮ ಹಣಿಬಾರ ಛಂದ ಇಲ್ಲ ಬಿಡ್ರಿ. ತುಸು ಕಾಳು ಪಾಳ ನಿತ್ಯದ ಗಂಜಿಗೆ ಇಟಕೊಂಡಿದ್ವಿ. ಅದೂ ಹೋತು. ಜೀವ ಇದ್ದೂ ಇಲ್ಲದಂಗಾಗೇದ. ನಾವೂ ಹೊಳೆ ನೀರಿನಾಗ ಕೊಚ್ಚಿಕೊಂಡು ಹೋಗಿದ್ರ ಭೇಷಿತ್ತು'.
-----
`ಕುಡಿಯಾಕ ಬೇರೆ ನೀರೇ ಇಲ್ರಿ. ಈ ಪ್ರವಾಹದ ರಾಡಿ ನೀರಲ್ಲೇ ಅನ್ನ-ಸಾರು ಮಾಡ್ತಾರ್ರಿ. ಎಷ್ಟು ದಿನ ಬದುಕ್ತೀವಿ ಅನ್ನಾದು ಆ ದೇವ್ರಿಗೆ ಗೊತ್ತದ...'
----
`ಮಳೀ ಸಂಜೀಕ ಅಥವಾ ರಾತ್ರೀಗ ನಿಲ್ಲಬಹ್ದು ಅಂತಾ ಅಂದ್ಕೊಂಡಿದ್ವಿ. ರಾತ್ರಿ ಮಲಗಿದ ಮ್ಯಾಗ ಮಳಿ ಆರ್ಭಟ ಮತ್ತೂ ಜೋರಾತು. ಡೋಣಿ ಊರೊಳಗ ನುಗ್ತಾ ಐತಿ ಅಂತ ಗೊತ್ತಾತು. ಮನಿಗಳೆಲ್ಲಾ ಕುಸಿಯಾಕ ಹತ್ತಿದ್ವು. ತುಂಬಿದ ಮನಿ ಬಿಟ್ಟು ಹೋಗೋದು ಹ್ಯಾಂಗ ಅಂತ ಚಿಂತಿ ಆತು. ಆದ್ರ ಮೊದಲು ಜೀಂವಾ ಉಳೀಲಿ. ನಂತ್ರ ಮನೀ ಅಂತ ಇದ್ದ ಬದ್ದ ಆಹಾರ, ಅಕ್ಕಿ-ಬ್ಯಾಳಿ ಎಲ್ಲ ಗಂಟು ಕಟಗೊಂಡ ಮನಿಯಿಂದ ಹೊರಗ ಓಡಿದ್ವಿ. ಹತ್ತೇ ನಿಮಿಷಕ್ಕ ಮನೀ ಕೊಚಿಗಂಡು ಹೋತು...'
-------
ಎಸ್. ಎಂ. ಜಾಮದಾರ ಹಾಗೂ ಸಾವಯವ ಕೃಷಿ ಮಿಷನ್ ಅಧ್ಯಕ್ಷ ಆ. ಶ್ರೀ. ಆನಂದ್ ನೆರೆಯ ಸಮಯದಲ್ಲಿ ತಾವು ಕೈಗೊಂಡ ಕ್ರಮಗಳನ್ನು ಸಭೆಗೆ ತಿಳಿಸಿದರು. ನೊಂದವರಿಗೆ ಸಹಾಯ ಮಾಡಿದ ಸಾವಯವ ಕೃಷಿ ಮಿಷನ್ನಿನ ಕಾರ್ಯಗಳನ್ನು ವಿವರಿಸಲಾಯಿತು.
ಉತ್ತರ ಕರ್ನಾಟಕದ ಮಂದಿಯ ಆಹಾರ, ಉತ್ಪಾದನೆ, ಬೇಳೆ ಕಾಳು ಬೆಳೆಯುವಿಕೆ, ರೈತಾಪಿ ಕೆಲಸಗಳ ಬಗ್ಗೆ ಆನಂದ್ ಸಾಕಷ್ಟು ಮಾಹಿತಿ ನೀಡಿದರು.
ನೆರೆ ಹಾವಳಿಯಲ್ಲಿ ಸಿಲುಕಿ ಹಲವು ಜನರನ್ನು ರಕ್ಷಿಸಿದ ಬಯಲು ನಾಡಿನ ತಿಮ್ಮಣ್ಣ ಹುಳಸದ್ ಉಪಸ್ಥಿತರಿದ್ದರು. ಪ್ರವಾಹ ಬಂದಾಗ ತಮ್ಮ ಹೊಲ ಹಾಳಾಗುವುದನ್ನೂ ಲೆಕ್ಕಿಸದೇ ಕೆರೆಯ ಕೋಡಿ ಒಡೆದು ಊರನ್ನು ಉಳಿಸಿದ ನೆರೆ ಸಂತ್ರಸ್ಥ ಭೀಮನಗೌಡ ಪಾಟೀಲರು ದೂರದ ಬಾಗಲಕೋಟೆಯಿಂದ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಆಗಮಿಸಿ, ನೆರೆಯ ಸಂದರ್ಭದಲ್ಲಿ ತಾವು ಹಾಗೂ ಉತ್ತರ ಕರ್ನಾಟಕದ ಜನರು ಅನುಭವಿಸಿದ ನೋವನ್ನು ಹಂಚಿಕೊಂಡರು.
ಪ್ರಾಸ್ತಾವಿಕವಾಗಿ ಮಾತನಾಡಿದ `ನೆರೆಯ ನೋವಿಗೆ ಸ್ಪಂದನ' ಪುಸ್ತಕದ ಸಂಪಾದಕ ರಾಮಚಂದ್ರ ಹೆಗಡೆ ಸಿ ಎಸ್ ತಾವು ಉತ್ತರ ಕರ್ನಾಟಕಕ್ಕೆ ನೆರೆ ಸಂತ್ರಸ್ಥರ ಜೊತೆ ಮಾತನಾಡಲು ಹೋದಾಗ ಆದ ಅನುಭವವನ್ನು ಸಭೆಯ ಮುಂದಿಟ್ಟರು.

ಪುಸ್ತಕದ ಬಗ್ಗೆ
`ನೆರೆ ನೋವಿಗೆ ಸ್ಪಂದನ' ಪುಸ್ತಕ ಸಂಪೂರ್ಣವಾಗಿ ನೆರೆ ಸಂತ್ರಸ್ತರ ಜೀವನ ಹಾಗೂ ನೆರೆ ಹಾವಳಿಯ ಭೀಕರತೆಯನ್ನು ತೆರೆದಿಡುತ್ತದೆ. ನೆರೆ ಪೀಡಿತ ಪ್ರದೇಶಗಳಹಳ್ಳಿಗಳಿಗೆ ಭೇಟಿ ನೀಡಿ ಅಲ್ಲಿನ ಜನರನ್ನು ಮಾತನಾಡಿಸಿ ಅವರ ಅನುಭವಗಳನ್ನು ದಾಖಲಿಸಿದ ರಾಮಚಂದ್ರ ಹೆಗಡೆ ಹಾಗೂ ಅವರ ಬಳಗದ ಕಾರ್ಯ ಮಚ್ಚುವಂತಹದ್ದು. ದಾಖಲಾಗದ ಹಲವು ನೆರೆ ಸಂಗತಿಗಳನ್ನು, ನೆರೆಯ ನೋವಿಗೆ ತಕ್ಷಣವೇ ಸ್ಪಂದಿಸಿದವರ ಮತ್ತು ನೆರೆಯಲ್ಲಿ ಸಿಲುಕಿದ ಜನರನ್ನು ಉಳಿಸಿದ ವ್ಯಕ್ತಿಗಳ ಕಾರ್ಯವನ್ನು ಈ ಪುಸ್ತಕ ವಿವರಿಸುತ್ತದೆ.
ರಾಮಚಂದ್ರ ಹೆಗಡೆ, ಎನ್ವೀ ವೈದ್ಯ ಹೆಗ್ಗಾರ ಅವರ ಲೇಖನ, ಸಂಜಯ ಭಟ್ಟ ಬೆಣ್ಣೆಗದ್ದೆ, ಅರ್ಪಿತಾ ಭಟ್ಟ, ನವೀನ ಗಂಗೋತ್ರಿ, ಪ್ರಿಯಾ ಕಲ್ಲಬ್ಬೆ ಅವರ ಕವನಗಳು ಓದುಗರ ಮನಸ್ಸಿಗೆ ನಾಟುವ ಈ ಪುಸ್ತಕದ ಬೆಲೆ 20ರೂ. ಮಾನವೀಯ ಉದ್ದೇಶವೇ ಪ್ರಧಾನವಾಗಿಟ್ಟುಕೊಂಡು ಪ್ರಕಟವಾಗಿರುವ ಪುಸ್ತಕ ಇದಾಗಿದೆ ಎನ್ನುವುದು ಪ್ರಕಾಶಕರ ನುಡಿ.

 -----------------------------------------------
ವಿ.ಸೂ ..
ಇದು ನೆರೆ ನೋವಿನಲ್ಲಿ ನೊಂದವರ ಕಥೆ..
ನೆರೆಯಲ್ಲಿ ಬಸವಳಿದವರಿಗೆ ಸಮಾಧಾನ ಹೇಳಿದವರ ಕಥೆ..
ಇಂತಹ ಹಲವು ಸಂಗತಿಗಳನ್ನು ಸಂಗ್ರಹಿಸಿದ್ದಾರೆ ರಾಚಮ್ ಅಣ್ಣ..
ಅವರಿಗೆ ಧನ್ಯವಾದ.. 
ಪುಸ್ತಕ ನೆರೆ ನೋವಿಗೆ ಸಿಕ್ಕ ಜನರಿಗೆ ಸಮಾಧಾನ ಹೇಳುತ್ತದೆ..
ಈ ಪುಸ್ತಕದ ಬೆಲೆ ಕೇವಲ ೨೦ ರೂಪಾಯಿಗಳು..
ಇದನ್ನು ಕೊಂಡು ಓದಿರಿ...

-ವಿನಯ ದಂಟಕಲ್

Monday, April 26, 2010

ಸಾನಿಯಾ ಕಾಲಿಟ್ಟೊಡನೆ ಪವರ್ ಕಟ್.., ಗುಟ್ಕಾ ಔಟ್..

ಅಯ್ಯೋ ಪಾಪಾ. ಮೂಗುತಿ ಸುಂದರಿಗೆ ಇಂತಹ ಪಾಡು ಬರಬಾರದಿತ್ತು. ಮೊನ್ನೆಯಷ್ಟೇ ಪಾಕಿಸ್ತಾನದ ಶೋಯೆಬ್ ಮಲ್ಲಿಕ್ನನ್ನು ಮದುವೆಯಾಗಿ ಭಾರತಕ್ಕೆ ಬಾಯ್ ಬಾಯ್ ಹೇಳಿದ ಈಕೆಗೆ ಪಾಕಿಸ್ತಾನದಲ್ಲಿ ದೊರಕಿದ್ದು ಭವ್ಯ ಸ್ವಾಗತ. ಆದರೆ ಅದಾದ ಕೆಲವೇ ದಿನಗಳಲ್ಲಿ ಆಕೆಗೆ ಪಾಕಿಸ್ತಾನದ ಜನರ ಅಸಲಿ ಮುಖದ ಪರಿಚಯವಾಗತೊಡಗಿದೆ.
ಮದುವೆಯ ಔತಣಕೂಟ ಕಾರ್ಯಕ್ರಮಕ್ಕಾಗಿ ಪಾಕಿಸ್ತಾನದಲ್ಲಿ ಅದ್ದೂರಿಯ ಕಾರ್ಯಕ್ರಮ ಹಮ್ಮಿಕೊಂಡಿದ್ದ ಶೋಯೆಬ್ ಕುಟುಂಬಕ್ಕೆ ಮೊದಲನೆಯದಾಗಿ ಶಾಕ್ ನೀಡಿದ್ದು ಅಲ್ಲಿನ ವಿದ್ಯುತ್ ಇಲಾಖೆ. ಈ ಕಾರ್ಯಕ್ರಮದಲ್ಲಿ ಅತಿಯಾಗಿ ವಿದ್ಯುತ್ ಬಳಕೆ ಮಾಡಿಕೊಂಡಿದ್ದರ ಬಗ್ಗೆ ನೋಟಿಸ್ ನೀಡಿದ ಪಾಕ್ ವಿದ್ಯುತ್ ಮಂಡಳಿ ಶೋಯೆಬ್ ಮನೆಯ `ಪವರ್ ಕಟ್' ಮಾಡಿಬಿಟ್ಟಿತು. ಇದರಿಂದ ಪಾಪಾ ಸಾನಿಯಾಗೆ ಅದೆಷ್ಟು ನೋವಾಗಿರಬೇಡ..?
ಪಾಕಿಸ್ತಾನಿಯನನ್ನು ಮನಮೆಚ್ಚಿ ಮದುವೆಯಾಗಿದ್ದಾಗಿದೆ. ಇನ್ನು ಆತನ ಜೊತೆ ಪಾಕಿಸ್ತಾನದಲ್ಲಿ ಆರಾಮವಾಗಿ ಬದುಕಿ ಜೀವಿಸಬಹುದು ಎಂದು ಕನಸು ಕಂಡಿದ್ದ ಆಕೆಗೆ ಈ ಪವರ್ ಕಟ್ ಅಲ್ಲಿನ ವಾಸ್ತವತೆಯ ಪರಿಚಯ ಮಾಡಿಕೊಟ್ಟಿರಬೇಕು.
ಪಾಪ ಇಷ್ಟೇ ಆಗಿದ್ದರೆ ಚೆನ್ನಾಗಿತ್ತು. ಈಗ ಪಾಕ್ನಲ್ಲಿ ಅವಳ ಹೆಸರಿನಲ್ಲಿ ಗುಟ್ಕಾವೊಂದು ತಯಾರಾಗಿ ಮಾರುಕಟ್ಟೆಗೆ ಬಿಡುಗಡೆ ಆಗಿದೆ. ಆ ಗುಟ್ಕಾದ ಹೆಸರು `ಸಾನಿಯಾ ಭಾಭಿ '. ಅದರ ಜೊತೆಗೆ `72% ಎಕ್ಸ್ಟ್ರಾ ಸ್ಟ್ರಾಂಗ್' ಎಂಬ ಅಡಿಬರಹ ಬೇರೆ. ಇನ್ನೂ ಒಂದು ಹೆಜ್ಜೆ ಮುಂದಿಟ್ಟಿರುವ ಆ ಗುಟ್ಕಾ ಕಂಪನಿ ಆ ಗುಟ್ಕಾ ಪ್ಯಾಕ್ ಮೇಲೆ `ತಾಜಗೀ ಬರ್ ಹೋ ಅಂಗ್ ಅಂಗ್.... ಜಬ್ ಹೋ ಸಾನಿಯಾ ಭಾಬಿ ಗುಟ್ಕಾ ಸಂಗ್' ಎಂಬ ಬರಹವನ್ನೂ ಮುದ್ರಿಸಿಬಿಟ್ಟಿದೆ.
ಇದರಿಂದ ಬಹಳ ಪರಿಶಾನ್ ಆಗಿರುವ ಸಾನಿಯಾ ಯಾಕಾದರೂ ಭಾರತ ಬಿಟ್ಟೆನೋ ಎಂದು ಕನವರಿಸುತ್ತಿರಬಹುದು...

Thursday, April 22, 2010

ಮಧ್ಯಮ ಶೂರರು...

ಟೆಸ್ಟ್ ಕ್ರಿಕೆಟ್ಗೆ ಅದರದೇ ಆದ ಖದರಿದೆ. ಎಷ್ಟೇ ಹೊಸ ನಮೂನೆಯ ಕ್ರಿಕೆಟ್ ಆಟಗಳು ಬಂದರೂ ಟೆಸ್ಟ್ನ ವೈಭವ ಎಲ್ಲೂ ಸಿಗಲಾರದು. ಟೆಸ್ಟ್ ಆಡುವ ಆಟಗಾರರೂ ಅಷ್ಟೇ. ಕ್ರಿಕೆಟ್ ಪುಸ್ತಕದಲ್ಲಿ ದಾಖಲಾಗಿರುವ ಎಲ್ಲ ರೀತಿಯ ಆಟದ ಶಾಟ್ಗಳನ್ನೂ ಪ್ರದರ್ಶಿಸಿ  ನೋಡುಗರಿಗೆ ಹಬ್ಬದೂಟವನ್ನು ನೀಡುತ್ತಾರೆ. ಕಾಲಕ್ಕೆ ತಕ್ಕಂತೆ ಬದಲಾಗುತ್ತಾ ಬಂದ ಟೆಸ್ಟ್ ಕ್ರಿಕೆಟ್ ಹೊಸತನವನ್ನೂ ಹೊಸ ಆಟಗಾರರನ್ನೂ ಹೊಂದಿ ಉತ್ತಮ ರೀತಿಯಲ್ಲಿ ಬದಲಾಗುತ್ತಾ ಬಂದಿದೆ. ಬ್ರಾಡಮನ್, ಗೂಚ್, ಹ್ಯಾಡ್ಲಿ, ಕಪಿಲ್ ದೇವ್, ಸೋಬರ್ರ್ಸ್ ತಹ ಆಟಗಾರರನ್ನು ಕಂಡ ಟೆಸ್ಟ್ ಲಾರಾ, ಸಚಿನ್, ಹೇಡನ್ರಂತಹ ಆಟಗಾರರನ್ನೂ ಕಂಡಿದೆ.
ಇಂದಿನ ದಿನಮಾನದಲ್ಲಿ ಟೆಸ್ಟ್ ಸಹ ಹೊಡೆಬಡೆಯ ಆಟಕ್ಕೆ ಮಾರುಹೋಗುತ್ತಿದೆ. ಸೆಹವಾಗ್, ಯುವರಾಜ್ರಂತಹ ಆಟಗಾರರು ಒಂದು ದಿನದ ಪಂದ್ಯದಂತೆ ಟೆಸ್ಟನಲ್ಲೂ ಹೊಡೆ ಬಡಿ ಆಟ ಆಡಲು ಪ್ರಾರಂಭಿಸಿದ್ದಾರೆ. ಕ್ಲಾಸಿಕ್ ಹಾಗೂ ಸುಂದರ ಆಟದ ಗೂಡು ಎಂದು ಹೆಸರಾಗಿದ್ದ ಟೆಸ್ಟ್ ಈಗ ಅಬ್ಬರದ ಆಟವಾಗಿ ಬದಲಾಗುತ್ತಿದೆ. ಇಂತಹ ಬದಲಾಗುತ್ತಿರುವ ಟೆಸ್ಟ್ ಆಟದಲ್ಲಿ ಕೆಲವರು ಆ ಆಟಗಾರರಿದ್ದಾರೆ. ಹಳೆಯ ಶೈಲಿ, ಬ್ಯಾಟ್ ಬೀಸುವಿಕೆಯನ್ನು ಹೊಂದಿರುವಂತಹ ಆಟಗಾರರು. ದ್ರಾವಿಡ್, ಲಕ್ಷ್ಮಣ್, ಕಾಲಿಸ್, ಪಾಂಟಿಂಗ್, ಚಂದ್ರಪಾಲ್, ಕಾಲಿಂಗ್ವುಡ್ ಮುಂತಾದವರೇ ಈ ಆಟಗಾರರು.
ಇವರ ಶೈಲಿ ಅದೇ ಹಳೆಯ ರೀತಿಯದು. ಬ್ಯಾಟಿಂಗಿಗೆ ಬಂದರಂತೂ ಮಿನಿಮಂ 100 ಗ್ಯಾರಂಟಿ. ಇವರ ಆಟವನ್ನು ನೋಡುವುದೆಂದರೆ ಸುಂದರ ಸಿನೆಮಾ ವೀಕ್ಷಿಸಿದಂತೆ. ಆಟವೂ ಅಷ್ಟೆ ಗಂಭೀರ ಹಾಗೂ ವೈಭವೋಪೇತ. ಈ ಆಟಗಾರರು ಸಾಮಾನ್ಯವಾಗಿ ಕ್ರೀಸಿಗೆ ಬರುವ ವೇಳೆಗೆ ತಂಡದಲ್ಲಿ 3-4 ವಿಕೆಟ್ಗಳು ಬಿದ್ದಿರುತ್ತವೆ. ತಂಡದ ಪಾಲಿಗೆ ಆಪದ್ಭಾಂದವರಂತೆ ಬರುವ ಇವರು ಸೋಲಿನತ್ತ ಸಾಗುವ ತಂಡವನ್ನು ಗೆಲುವಿನೆಡೆಗೆ ತಂದು ನಿಲ್ಲಿಸುತ್ತಾರೆ.
ಈ ಆಟಗಾರರು ಸೆಹವಾಗ್, ಅಫ್ರೀದಿಯಂತೆ ಗುಡುಗುವುದಿಲ್ಲ. ಬದಲಾಗಿ ಕ್ರೀಸಿಗೆ ಕಚ್ಚಿಕೊಂಡು ನಿಂತುಬಿಡುತ್ತಾರೆ. ಬೌಂಡರಿಗಳ ಮೇಲೆ ಬೌಂಡರಿ ಬಾರಿಸುತ್ತಾರೆ. ಬೌಲರ್ಗಳ ಬೆವರಿಳಿಸುತ್ತಾರೆ. ತಮ್ಮ ವಿಶಿಷ್ಟ ಬ್ಯಾಟಿಂಗ್ನಿಂದ ತಂಡದ ಭವಿಷ್ಯವನ್ನೇ ಬದಲಾಯಿಸುತ್ತಾರೆ.
ಸಾಮಾನ್ಯವಾಗಿ ಟೆಸ್ಟ್ ಆಡುವ ತಂಡಗಳಲ್ಲೆಲ್ಲ ಇಂತಹ ಒಬ್ಬಿಬ್ಬರು ಆಟಗರರು ಇದ್ದೇ ಇರುತ್ತಾರೆ. ದಕ್ಷಿಣ ಆಫ್ರಿಕಾದ ಪಾಲಿಗೆ ಕಾಲಿಸ್, ಆಮ್ಲಾ, ಶ್ರೀಲಂಕಾ ಪಾಲಿಗೆ ಜಯವರ್ಧನೆ, ಆಸ್ಟ್ರೇಲಿಯಾದಲ್ಲಿ ಪಾಂಟಿಂಗ್, ಮೈಕ್ ಹಸ್ಸಿ, ಕ್ಲಾರ್ಕ, ಇಂಗ್ಲೆಂಡ್ನಲ್ಲಿ ಕಾಲಿಂಗ್ವುಡ್, ಪಾಕಿಸ್ತಾನದಲ್ಲಿ ಮೊಹಮ್ಮದ್ ಯುಸುಫ್ ಹಾಗೂ ಮಿಸ್ಬಾ ಉಲ್ ಹಕ್, ವೆಸ್ಟ್ ಇಂಡಿಸ್ ಪಾಲಿಗೆ ಚಂದ್ರಪಾಲ್ ಹಾಗೂ ಭಾರತದ ಪಾಲಿಗೆ ದಿ ವಾಲ್ ದ್ರಾವಿಡ್ ಹಾಗೂ ವಿವಿಎಸ್ ಲಕ್ಷ್ಮಣ್ ಇಂತಹ ಆಟವನ್ನು ಆಡುತ್ತಾರೆ. ತಂಡದ ಹಾಗೂ ದೇಶದ ಪಾಲಿಗೆ ಇವರು ಬಹಳ ನಂಬಿಕಸ್ತ ಬ್ಯಾಟ್ಸ್ಮನ್ನುಗಳು. ಯಾರೇ ಔಟಾಗಲಿ, ಎಸ್ಟೇ ವಿಕೆಟ್ ಬೀಳಲಿ. ಇವರಿದ್ದಾರಲ್ಲ ಎಂಬ ಭಾವನೆ ಎಲ್ಲರ ಮನದಲ್ಲಿಯೂ ಅಚ್ಚೊತ್ತಿರುತ್ತದೆ. ಇವರು ಎಷ್ಟೇ ಬಾಲ್ಗಳನ್ನು ಹಾಳು ಮಾಡಲಿ, ಎಷ್ಟೇ ಕುಟುಕಲಿ ಅದರ ಹಿಂದೆ ಗೆಲುವಿನ ಉದ್ದೇಶ ಇದ್ದೇ ಇರುತ್ತದೆ.
ಈ ಬ್ಯಾಟ್ಸ್ಮನ್ಗಳ ಎದುರು ಬಾಲ್ ಮಾಡುವುದು ಎಂತಹ ಯಶಸ್ವಿ ಬೌಲರ್ಗೇ ಆದರೂ ಅದು ಬಹಳ ಕಷ್ಟ. ಯಾವುದೇ ರೀತಿಯ ಬೌಲ್ ಹಾಕಲಿ ಇವರದ್ದು ಒಂದೇ ಧ್ಯಾನ ಅದನ್ನು ಕಟ್ ಮಾಡುವುದು ಹಾಗೂ ಅದೇ ರೀತಿ ಬೌಂಡರಿ ಗಳಿಸುವುದು. ದಿನಗಟ್ಟಲೇ ಕ್ರೀಸಿನಲ್ಲಿ ನಿಂತುಬಿಡುವ ಇವರು ಬೌಲರ್ಗಳ ಸಹನೆಯನ್ನು ಪರೀಕ್ಷೆ ಮಾಡುತ್ತಾರೆ. ಆದರೆ ಬೌಲರ್ ಎಷ್ಟೇ ಒದ್ದಾಡಿದರೂ ಇವರ ವಿಕೆಟ್ ಪಡೆಯುವುದು ಮಾತ್ರ ಬಹಳ ಕಷ್ಟ.
ಭಾರತದ ಟೆಸ್ಟ್ ತಂಡವನ್ನೇ ತೆಗೆದುಕೊಂಡರೆ ಇಲ್ಲಿ ಸೆಹವಾಗ್ರನ್ನು ಬೇಗನೆ ಔಟ್ ಮಾಡಬಹುದು, ಸಚಿನ್ನ್ನು ಬೇಗನೆ ಔಟ್ ಮಾಡಬಹುದು, ಇನ್ನುಳಿದಂತೆ ಗಂಭೀರ್ ಯುವರಾಜ್, ಧೋನಿ ಅಂತವರನ್ನೂ ಔಟ್ ಮಾಡಬಹುದು ಆದರೆ ದ್ರಾವಿಡ್ ಹಾಗೂ ಲಕ್ಷ್ಮಣ್ ಒಮ್ಮೆ ಕ್ರೀಸಿನಲ್ಲಿ ಝಾಂಡಾ ಊರಿದರೆಂದರೆ ಊಹು ಯಾರೆಂದರೆ ಯಾರಬಳಿಯೂ ಅವರನ್ನು ಔಟ್ ಮಾಡಲು ಸಾಧ್ಯವೇ ಇಲ್ಲ. ಶತಕಗಳನ್ನು ಹೊಡೆದ ನಂತರವೇ ಅವರು ವಿಕೆಟ್ ಒಪ್ಪಿಸುವುದು. ಅಂತಹ ಆಟದ ವೈಖರಿ ಅವರದ್ದು. ತೀರಾ ಇತ್ತೀಚೆಗೆ ಈ ಇಬ್ಬರೂ ಆಟಗಾರರೂ ತಂಡದಲ್ಲಿ ಆಡದಿದ್ದರಿಂದ ದಕ್ಷಿಣ ಆಫ್ರಿಕಾದ ವಿರುದ್ಧ ಹೀನಾಯವಾಗಿ ಸೋತಿದ್ದು ನೆನಪಿನಲ್ಲಿ ಇರಬಹುದು. ಕೊನೆಗೆ ಮರು ಪಂದ್ಯದಲ್ಲಿ ಲಕ್ಷ್ಮಣ್ ಶತಕ ಹೊಡೆದು ಮ್ಯಾಚ್ ಗೆದ್ದಿದ್ದು ಯಾವಾಗಲೂ ನೆನಪಿರುತ್ತದೆ.
ಟೆಸ್ಟ್ ಇತಿಹಾಸವನ್ನು ಕೆದಕಿದಾಗ ಇಂತಹ ಆಟಗಾರರು ಬಹಳಷ್ಟು ಜನರಿದ್ದರು. ತಮ್ಮ ಮನಮೋಹಕ ಆಟದಿಂದ ಎಲ್ಲರ ಮನಸ್ಸನ್ನು ಗೆಲ್ಲುತ್ತಿದ್ದ ಇವರು ಮ್ಯಾಚುಗಳನ್ನೂ ಸಲೀಸಾಗಿ ಗೆದ್ದುಬಿಡುತ್ತಿದ್ದರು. ಗವಾಸ್ಕರ್, ಗುಂಡಪ್ಪ ವಿಶ್ವನಾಥ್, ಬ್ರಾಡಮನ್ ಹಾಗೆಯೇ ಬ್ರಿಯಾನ್ ಲಾರಾ, ಇಂಜಮಾಮ್-ಉಲ್-ಹಕ್, ಅಜರ್ುನ ರಣತುಂಗಾ, ಸ್ಟೀವ್ ವಾ ಇಂತವರೆಲ್ಲ ಹೊಡೆ ಬಡಿ ಆಟಕ್ಕಿಂತ ಭಿನ್ನವಾದ ಕ್ರಿಕೆಟ್ ಆಡಿ ಜನಮಾನಸದಲ್ಲಿ ಅಜರಾಮರವಾಗಿ ಉಳಿದವರು. ಎಷ್ಟೇ ಸೆಹವಾಗ್, ಅಫ್ರೀದಿ, ಪೀಟರ್ಸನ್, ಸ್ಮಿತ್ರಂತಹ ಆಟಗಾರರು ಬಂದರೂ ಟೆಸ್ಟ್ ಅಂದಕೂಡಲೇ ಇವರು ಪದೆ ಪದೆ ನೆನಪಾಗುತ್ತಾರೆ. ಬಹುಶಃ ಇಂತಹ ಆಟಗಾರರಿಲ್ಲದ ಟೆಸ್ಟ್ ಕ್ರಿಕೆಟ್ನ್ನು ನೋಡಿದರೆ ಮೊದಲಿನ ಖುಷಿ ದಕ್ಕಲಾರದು.


Thursday, April 15, 2010

ಒಂದಷ್ಟು ಹನಿಗಳು...

ಹಿಂದೆ ಯಾವಾಗಲೋ ಬರೆದ ಒಂದೆರಡು ಹನಿ ಕವನಗಳನ್ನು ನಿಮ್ಮ ಮುಂದೆ ಬರೆದು ಇಡುತ್ತಿದ್ದೇನೆ..


9)ಪ್ರೀತಿಗೆ ಕಾರಣ

ಪ್ರಿಯಾ,
ನೀನು 
ನಿನ್ನ ಕೈಯಲ್ಲಿ 
ಫಳ ಫಳನೆ 
ಹೊಳೆಯುತ್ತಿರುವ 
ಚಿನ್ನದ ನೆಕ್ಲೆಸ್ ನಷ್ಟೇ 
ಸುಂದರ......!!!!


10)ಧನ್ವಂತರಿ...!!!

ಧನ್ವಂತರಿ ಧನ್ವಂತರಿ
ರೋಗಗಳೆಲ್ಲ ಓಡಿಹೊಯಿತ್ರಿ..
ಆದ್ರೂ ಮೈ ಮರಿಬ್ಯಾದ್ರಿ,
ಆಗಾಗ್ ಇಲ್ಲಿಗೆ ಬರ್ತಾ ಇರ್ರಿ...!!!

Monday, April 12, 2010

ಅರ್ಜಿಗಿರಿ



ಅರ್ಜಿ ಗಿರಿ

ನಿಮಗೆ ನಮ್ಮೂರಿನಲ್ಲಿರುವ ಅನೇಕ ವಿಶೇಷತೆಗಳ ಬಗ್ಗೆ ಹೇಳಲೇಬೇಕು. ಹಲವು ವೈಶಿಷ್ಟ್ಯ ಹಾಗೂ ವೈಚಿತ್ರ್ಯಗಳು ಇಲ್ಲಿ ತುಂಬಿ ಕಣ್ಣಿಗೆ ರಾಚುತ್ತವೆಯಾದರೂ ಎದ್ದು ಕಾಣುವುದು ಇಲ್ಲಿನ `ಅರ್ಜಿ ಗಿರಿ'.
ಹಲೋ ಒಂದು ನಿಮಿಷ. ನೀವೇನು ಅರ್ಜಿ ಗಿರಿ ಹೆಸರು ಕೇಳಿದ ಕೂಡ್ಲೇ ಇದೇನೋ ಗೂಂಡಾಗಿರಿ, ಗಾಂಧಿಗಿರಿ ಇಂಥವುಗಳ ಸಾಲಿಗೆ ಸೇರುವಂಥದ್ದು ಅಂದ್ಕೊಂಡ್ರಾ? ಅಲ್ಲ.. ಈ ಅರ್ಜಿ ಗಿರಿ ಇವೆಲ್ಲಕ್ಕಿಂತ ಡಿಫರೆಂಟು..
ನಮ್ಮೂರಿನ ಈ ಅರ್ಜಿ ಗಿರಿಯ ಬಗ್ಗೆ ಹೇಳಬೇಕಂದ್ರೆ ರಾಮಾಯಣದ ಹಾಗೇ ಅರ್ಜಿಯಾಯಣ ಎಂಬ ಇನ್ನೊಂದು ಭಾರಿ ಗೃಂಥವನ್ನೆ ಬರೆಯಬೇಕಾಗಲೂ ಬಹುದು. ಅಷ್ಟು ದೊಡ್ಡದು ಅದು..
ಹಿಂದೆ ಎಲ್ಲೋ ಎರಡು ಶತಮಾನಗಳ ಹಿಂದೆ ಊರಿಗೆ ರಸ್ತೆ ಮಾಡಿಸುವ ಮಹದುದ್ದೇಶದಿಂದ ಯಾವುದೋ ಹಿರಿ ತಲೆ ಬ್ರಿಟೀಷ್ ಸಕರ್ಾರಕ್ಕೆ ಕೊಟ್ಟ ಅರ್ಜಿಯಿಂದಲೇ ಈ ಅರ್ಜಿ ಗಿರಿಕಾಂಡ ಪ್ರಾರಂಭವಾಗುತ್ತದೆ. ಈಗಂತೂ ಈ ಅರ್ಜಿ ಗಿರಿಗೆ ಕೈಹಾಕದ ವ್ಯಕ್ತಿಯೇ ಇಲ್ಲ ನಮ್ಮೂರಲ್ಲಿ ಅಂದರೆ ಅದರ ತೀವ್ರಗತಿ ನಿಮಗರ್ಥವಾದೀತು.!!
ಅರ್ಜಿ ಗಿರಿಎಂದರೆ ಬೇರೇನೂ ಅಲ್ಲ.  ಊರಿಗೆ ಯಾವುದೇ ಕೆಲಸವಾಗಬೇಕಾದರಾಗಲಿ, ಕಾರ್ಯಗಳು ಆಗಬೇಕಾದರಾಗಲೀ, ಯಾವುದೋ ಜನಪ್ರತಿನಿಧಿಗೋ, ಅಧಿಕಾರಿಗೋ, ಜಿಲ್ಲಾ ಕಲೆಕ್ಟರಿಗೊ ಗ್ರಾಮ ಪಂಚಾಯತಿ ಮೇಂಬರ್ರಿಗೋ ಅರ್ಜಿ ಗುಜರಾಯಿಸೋದೆ ಆಗಿದೆ.
ಇವರು ಉಳಿದೆಲ್ಲ ವಿಷಯಗಳಲ್ಲಿ ಹೇಗೆಯೆ ಇರಲಿ, ಅರ್ಜಿ ಗಿರಿಯ ವಿಷಯ ಬಂದಾಗ ಪಕ್ಕಾ ಅಹಿಂಸಾ ವೃತಸ್ಥರು. ಮಂದಗಾಮಿಗಳು.. ಇಲ್ಲಿಯವರಿಗೆ ಏನು ಗೊತ್ತಿಲ್ಲದಿದ್ದರೂ ಯಾರ್ಯಾರಿಗೆ ಅರ್ಜಿ ಕೊಟ್ಟರೆ ಹೇಗೆ ಎಂಬ ಸುದ್ದಿ ಗೊತ್ತಿದೆ. ವಿದ್ಯುತ್ ತೊಂದರೆಗೆ ಸೆಕ್ಷನ್ ಆಫೀಸರು, ಬಸ್ಸಿಗೆ ಡಿಪೊ ಮ್ಯಾನೇಜರು, ರಸ್ತೆಗೆ ರಾಜಕಾರಣಿ, ಬರ-ನೆರೆ ಬಂದರೆ ಕಂದಾಯ ಇಲಾಖೆ ಈ ಮುಂತಾದ ಕೆಲವು ವಿಭಾಗದವರಿಗೆ ನಮ್ಮೂರಿಗರ ಹ್ಯಾಂಡ್ ರೈಟಿಂಗಿನ ಪರಿಚಯ ಅದ್ಯಾವಾಗಲೂ ಆಗಿ ಹೋಗಿದೆಯಂತೆ.
ನಿಮಗೆ ಗೊತ್ತಿಲ್ಲ. ಯಾವುದೆ ಊರಿನಲ್ಲಾದರೂ ಎಲ್ಲರಿಗೂ ಸಂಬಂದಿಸಿದಂತೆ ಏನಾದರೊಂದು ಕಾಮನ್ ಸುದ್ದಿ ಇರಲಿಕ್ಕಿಲ್ಲ. ಆದರೆ ಇಲ್ಲಿ ತೊಂಭತ್ತರ ಹಿರಿಯರಾದಿಯಾಗಿ ಒಂಭತ್ತರ ಕಿರಿಯರವರೆಗೂ ಅರ್ಜಿಯೆಂಬ ಕಾಮನ್ ಸಂಗತಿ ಗೊತ್ತೇ ಇದ್ದು ಬಿಟ್ಟಿದೆ. ಪರೀಕ್ಷಿಸಿ ನೋಡಿ ಬೇಕಾದರೆ, ಇಲ್ಲಿಯವರೆಗೂ ನಮ್ಮೂರಿಗರು ಕೊಟ್ಟ ಅರ್ಜಿಗಳನ್ನು ಲೆಖ್ಖ ಹಾಕಿದರೆ, ಗಿನ್ನಿಸ್ಸು ಬುಕ್ಕಿನಲ್ಲಿ ಮೊದಲ ಸ್ಥಾನ ಯಾರ ಪೈಪೋಟಿಯೂ ಇಲ್ಲದೆಯೇ ಇಲ್ಲಿಗರಿಗೆ ದಕ್ಕಿಬಿಡುತ್ತದೆ.
ಇಲ್ಲಿ ಯಾರಾದರೂ ಹಿರಿಯರು ಕಿರಿಯರ ಬಳಿ `ತಮಾ, ಪೆನ್ನು  ಪಟ್ಟಿ ತಗೊಂಡು ಬಾ' ಅಂದಕೂಡಲೇ ಊರಿಗರು ಯಾವುದಕ್ಕೋ ಅರ್ಜಿ ಬಿತ್ತು ಎಂದುಕೊಳ್ಳುತ್ತಾರೆ. ಅದಕ್ಕೆ ಸರಿಯಾಗಿ ಕಿರಿಯರು `ಶುರುವಾಯ್ತು ಅರ್ಜಿ ಕಾಟ' ಎಂದು ಗೊಣಗಲು ಮೊದಲಾಗುತ್ತಾರೆ. ಹಾಗೆಯೇ ಇಲ್ಲಿಯ ಕಿರಿಯರು, ಮಕ್ಕಳು ಸಂಜೆಯ ವೇಳೆ ಬಾಯಿಪಾಠ ಹೇಳಿ ಹೋಂ ವರ್ಕರ್  ಮಾಡದಿದ್ದರೂ ಅರ್ಜಿ ಬರೆಯುವ ಕೆಲಸ ಮಾಡೆಮಾಡುತ್ತವೆ.
ಇಲ್ಲಿಯ ಹೆಂಗಸರೂ ಕೂಡ ಅರ್ಜಿ ಗಿರಿಯ ವಿಷಯದಲ್ಲಿ ಹಿಂದೆ ಬಿದ್ದವರಲ್ಲ. ಅಂತ-ಇಂತ ಯಾವುದೇ ಸ್ತ್ರೀವಾದಿ ಸಂಘಟನೆಗಳು ಇಲ್ಲಿ ಇಲ್ಲದಿದ್ದರೂ ಅವರು ಅರ್ಜಿ ಕೊಡುವ ಕೈಂಕರ್ಯ ಮರೆತಿಲ್ಲ. ಇಲ್ಲಿ ಪುರುಷರು ಅರ್ಜಿ ಕೊಡುವ ಇಲಾಖೆಗಳೇ ಬೇರೆ.. ಅದೇ ರೀತಿ ಸ್ತ್ರೀಯರ ರೂಟೇ ಬೇರೆ. ಪುರುಷರದ್ದು ಬಹುತೇಕ ವ್ಯಾವಹಾರಿಕವಾದರೆ ಸ್ತ್ರೀಮಣಿಗಳು ಸ್ಥಳಿಯ ಶಾಲೆಗೆ, ಆಸ್ಪತ್ರೆಗೆ, ಪತ್ರಿಕೆಗಳಿಗೆಲ್ಲ ಅರ್ಜಿ  ಕೊಡುವ ಕಾರ್ಯವನ್ನು ಮದುವೆ ಮನೆಯಲ್ಲಿ ಕೇರಿ ಕರೆಯುವ ಹಾಗೇ ಹಲವರ ಜೊತೆಗೆ ಸೇರಿ ಕೈಗೊಳ್ಳುತ್ತಾರೆ.
ನಮ್ಮೂರಲ್ಲಿ ಅರ್ಜಿ ಕೊಡುವವರದ್ದು ಒಂದು ಗುಂಪಾದರೆ ಅರ್ಜಿ  ಜಡಿಯುವವರದ್ದು ಮತ್ತೊಂದು ಗುಂಪು. ಇಲ್ಲಿ ಅರ್ಜಿ ಕೊಡುವವರು ಸಮಾಜಸೇವಕರು. ಸ್ವಾರಥರು ಹಾಗೂ ಲೋಕ ಕಲ್ಯಾಣಾರ್ಥವಾಗಿ ಕೆಲಸ ಮಾಡುವಂಥವರು. ಆದರೆ ಈ ಅರ್ಜಿ  ಜಡಿಯುವವರು ಇದ್ದಾರಲ್ಲ ಇವರು ಮಾತ್ರ ಪಕ್ಕಾ ಅಡ್ಡ ಪಿಕರ್ಿಗಳು. ಇವರಿಗೆ ಮಾಡಲು ಬೇರೆ ಕೆಲಸವೇ ಇಲ್ಲವೇನೋ ಎಂಬಂತೆ ಇದ್ದು, ಆಗಾಗ ಏನಾದರೂ ಅಡ್ಡ ಅರ್ಜಿ ಗಳನ್ನು ಜಡಿಯುತ್ತಿರುತ್ತಾರೆ. ಇವರ ಕೆಲಸ ಮತ್ತೇನಲ್ಲ, ಏನಾದರೂ ಆಗುವಂಥ ಕೆಲಸಗಳಿದ್ದರೆ ಅವು ಆಗದಂತೆ ಮಾಡಿ ಮಜಾ ತೆಗೆದುಕೊಳ್ಳುವುದು.  ಯಾವುದೇ ರಸ್ತೆ ಕಾರ್ಯಗಳಿದ್ದರೆ ಅವನ್ನು ತಡೆಯುವುದು. ಪಕ್ಕದ ಮನೆಯ ಹಸುಗೂಸು ಅಳುತ್ತದೆಂದು ಶಬ್ದಮಾಲಿನ್ಯದ ಕಾರಣ ನೀಡಿ ಗ್ರಾಮ ಪಂಚಾಯ್ತಿಗೆ ತಳ್ಳಿ ಅರ್ಜಿ ಕೊಡುವುದು. ಇಂಥದ್ದೇ ಈ ಮಂದಿಗಳು ನಡೆಸುವ ಪುಂಡರಪೂಟಿಗೆ ಉದಾಹರಣೆಗಳು.
ನಮ್ಮೂರಿನ ಈ ಅರ್ಜಿ ಗಿರಿಯ ಸುದ್ದಿ ಕೇಳಿದ ಯಾವುದೋ ಬುದ್ಧಿಜೀವಿ ಈ ಬಗ್ಗೆ ಅಧ್ಯಯನ ನಡೆಸಲು ಬರುವವರಿದ್ದಾರೆಂಬ ಗಾಳಿ ಸುದ್ದಿ ಬಂದಿದೆ. ಅವರು ಹಾಗೆ ಬಂದರೆಂದರೆ ಖಂಡಿತ ಒಂದು ಪಿ.ಎಚ್.ಡಿ ಸಿಕ್ಕೇ ಸಿಗುತ್ತದೆಂಬುದು ಎಲ್ಲರ ವಾದ.
ನಮ್ಮೂರಿನಲ್ಲಿರುವ ಸೂರಕ್ಕಿ ಸೀತಾರಾಮ ಅಲಿಯಾಸ್ ಶೀತೂಭಾವ, ಉಳಿದ ಎಲ್ಲ ಕೆಲಸಗಳಲ್ಲಿ ಹಿಂದುಳಿದಿದ್ದರೂ ಅರ್ಜಿ  ಕೊಡುವುದರಲ್ಲಿ ಫೇಮಸ್ಸು. ಆದರೆ ಈತ ಇಲ್ಲಿಯವರೆಗೆ ಕೊಟ್ಟ ಅರ್ಜಿ ಯಿಂದ ಒಂದೇ ಒಂದು ಉಪಯೋಗವೂ ಆಗದೆ ಇರುವುದು ವಿಧಿ ವಿಲಾಸವೋ, ದುರಂತವೂ ಗೊತ್ತಾಗದು. ಅಲ್ಲದೇ ಈ ಶೀತೂಭಾವ ಅರ್ಜಿ ಯ ಕುರಿತಾಗಿ `ಅರ್ಜಿ ನಿನ್ನೆ ಇಂದು ನಾಳೆ' ಎಂಬ ಮಹಾನ್ ಪುಸ್ತಕವೊಂದನ್ನೂ ಬರೆಯುತ್ತಿದ್ದಾರೆ. ಇದು ಅರ್ಜಿ ಟ್ರೇನಿಂಗ್ ಕೋರ್ಸ್ಗೆ ಒಳ್ಳೆಯ ಹ್ಯಾಂಡ್ಬುಕ್ ಆದೀತು ಎಂಬುದು ಎಲ್ಲರ ಅನಿಸಿಕೆ. ಇನ್ನೂ ವಿಚಿತ್ರವೆಂದರೆ ಬೆಂಗಳೂರಿನ ಯಾವುದೋ ದೇಸಾಯಿ, ಬಾಬೂ ಮುಂತಾದ ನಿದರ್ೇಶಕರು `ನಮ್ಮ ಪ್ರೀತಿಯ ಅರ್ಜಿ ' ಎಂಬ ಚಲನಚಿತ್ರ ಮಾಡಲು ಮುಂದಾಗಿದ್ದಾರಂತೆ.
ಇಷ್ಟಕ್ಕೇ ನಿಲ್ಲುವುದಿಲ್ಲ ಈ ಅರ್ಜಿ ಗಿರಿಯ ಪ್ರತಾಪ.. ಪ್ರತಿ ಸಲ ಚುನಾವಣೆ ಬಂದಾಗ ಊರೂರಿಗೆ ತೆರಳುವ ಜನಪ್ರತಿನಿಧಿಗಳು ಈ ಊರಿಗೆ ಬರುವುದೇ ಇಲ್ಲ. ಯಾಕಂದರೆ ನಮ್ಮೂರಿನಲ್ಲಿ ತುಂಬಾ ಅರ್ಜಿ ಗಿರಿಯ ಘಾಟಿದೆಯಂತೆ. ಇದು ನಮ್ಮೂರಿನ ಅರ್ಜಿ ಗಿರಿಯ ಪುಂಡರಪೂಟು. ಈಗಿನ ನಮ್ಮೂರಿನಲ್ಲಿ ಅದರ ಘಮಲು ನೋಡಿದರೆ ಕನಿಷ್ಟ ಒಂದೆರಡು ಶತಮಾನಗಳಷ್ಟಾದರೂ ಗಟ್ಟಿಯಾಗಿ ಇಲ್ಲಿ ಅರ್ಜಿ ಗಿರಿ ನಿಲ್ಲಬಹುದೆಂಬ ಗುಮಾನಿಯಿದೆ.
ಅಂದ ಹಾಗೆ ಲೇಟೆಸ್ಟಾದ ಬ್ರೆಕಿಂಗ್ ನ್ಯೂಸ್ ಏನಂದ್ರೆ ನಮ್ಮೂರಿಗರು ಅರ್ಜಿ ಗಿರಿಯ ಟ್ರೇನಿಂಗ್ ಕೋರ್ಸನ್ನು ಪ್ರಾರಂಭಿಸಲು ಮುಂದಾಗಿದ್ದಾರಂತೆ. ಆ ಟ್ರೇನಿಂಗು ಪ್ರಾಕ್ಟಿಕಲ್ಲು ಹಾಗೂ ಥಿಯರಿ ಎರಡೂ ಪ್ರಕಾರಗಳಲ್ಲಿ ಇದೆಯಂತೆ ಎಂಬುದು ಅಚ್ಚರಿ. ಜೊತೆಗೆ ಪೋಸ್ಟಲ್ ಕೋರ್ಸ್ ಕೂಡ  ಇದೆ ಎಂಬುದು ಹುಬ್ಬೇರುವ ಸಂಗತಿ.
ಆದರೆ ನಮ್ಮೂರಿನ ಅರ್ಜಿ ಗಿರಿಯಲ್ಲಿ ದೊಡ್ಡದೊಂದು ದೋಷವಿರುವುದು ನಾಡಿನ ಹೆಮ್ಮೆಯ ಟಿವಿಯೊಂದರ ಲೈವ್ ಆಪರೇಷನ್ನಿನಿಂದ ಬೆಳಕಿಗೆ ಬಂದು ಎಲ್ಲರ ಚರ್ಚೆಗೆ ಕಾರಣವಾಗಿದೆ. ಪ್ರಸ್ತುತ ನಮ್ಮೂರಿಗರು ಬರೆಯುತ್ತಿರುವ ಅರ್ಜಿ ಗಳಲ್ಲಿ ಸರಿಯಾದ ರೀತಿ, ನೀತಿ, ರಿವಾಜು ಇಲ್ಲದಿರುವುದು ಆ ಆಪರೇಷನ್ ಟೀವಿಯಿಂದ ತಿಳಿದುಬಂದಿದೆ. ಅಂದರೆ, ನಮ್ಮೂರಿಗರು ಕೊಡುವ ಅರ್ಜಿಯ ಫಾರಮೆಟು ಉಲ್ಟಾ-ಪಲ್ಟಾ ಆಗಿರುತ್ತದಂತೆ. ಅಲ್ಲದೇ ಅರ್ಜಿ ಗೆ ಉದ್ದನೆಯ ಹಾಳೆಯೂ ಬಳಕೆಯಾಗುತ್ತಿಲ್ಲವಂತೆ.... ಎಂಬುದನ್ನು ನಾನು ಯಾವುದೋ ಇಲಾಖೆಯ ಮುಖ್ಯಸ್ಥರ ಮೂಲಕ ತಿಳಿದೆ.
ನನಗೂ ಒಮ್ಮೆ ಈ ಅರ್ಜಿ ಗಿರಿಯ ರೋಗ ಹಿಡಿದಿತ್ತು.. ಯಾರ್ಯಾರೋ ಕೆಳಿಕೊಂಡರೆಂದು ಅರ್ಜಿ  ಬರೆದೂ ಬರೆದೂ ಬೆವರು ಸುರಿಸಿದ್ದೆ.,. ಕೊನೆಗೊಮ್ಮೆ ಅರ್ಜಿ ಬರೆಯುವುದರ ವಿರುದ್ಧ ಒಂದು ದಿನ ಟ್ಯೂಬ್ಲೈಟ್ ಬೆಳಕಿನಲ್ಲಿ ಇದ್ದಕ್ಕಿದ್ದಂತೆ ಜ್ಞಾನೋದಯವಾದ ಮೇಲೆ ಬಿಟ್ಟುಬಿಟ್ಟೆ.!!!
ಇಂತಿಪ್ಪ ಅರ್ಜಿ ಗಿರಿ ನಿಮ್ಮಲ್ಲಿಗೂ ಬಂದು ಕಾಲಿಟ್ಟೀತು.. ಅಂದಹಾಗೆ ಅಜಿ ಬರೆಯುವುದಕ್ಕೆ ನೀವೂ ಉತ್ಸುಕರಾಗಿದ್ದೀರಾ? ನಿಮಗೆ ಅರ್ಜಿ ಬರೆಯಲು ಟ್ರೇನಿಂಗು ಬೇಕಾ? ಹಾಗಾದ್ರೆ ಯಾಕೆ ತಡ? ಈಗಲೇ ಅರ್ಜಿ ಗಿರಿಯ ಪೋಸ್ಟಲ್ ಟ್ರೇನಿಂಗ್ ಕೋರ್ಸ್ಗೆ ಸೇರ್ರಲಾ...

-ವಿನಯ್ ಹೆಗಡೆ