Sunday, July 19, 2015

ಅಘನಾಶಿನಿ ಕಣಿವೆಯಲ್ಲಿ-23

            ಉಂಚಳ್ಳಿ ಜಲಪಾತದ ಬಳಿ ಅರಣ್ಯಗಳ್ಳರು ಹಾಗೂ ಫಾರೆಸ್ಟ್ ಆಪೀಸರ್ ಜೊತೆ ಅರಣ್ಯಗಳ್ಳತನ ಕುರಿತಂತೆ ನಡೆದ ಮೇಲಾಟದ ವಿಷಯ ಸಂಜೆಯ ವೇಳೆಗೆ ಎಲ್ಲ ಕಡೆ ಹರಡಿಹೋಗಿತ್ತು. ಪಾತರಗಿತ್ತಿಯನ್ನು ಹಿಡಿಯುವ ನೆಪದಲ್ಲಿ ಅಘನಾಶಿನಿ ಕಣಿವೆಗೆ ಬಂದ ಯುವ ಪಡೆಗೂ ಕೂಡ ಸಂಜೆಯ ಸಮಯದಲ್ಲಿಯೇ ವಿಷಯ ತಿಳಿದಿತ್ತು. ಮರುದಿನ ಏನಾದರಾಗಲಿ ಅರಣ್ಯಗಳ್ಳರು ಹಾಗೂ ಪಾರೆಸ್ಟ್ ಆಫೀಸರ್ ನಡುವೆ ನಡೆದ ಛೇಸಿಂಗ್ ಜಾಗಕ್ಕೆ ಹೋಗುವುದು ಒಳಿತು ಎಂದುಕೊಂಡರು ಎಲ್ಲರೂ. ಸುಮ್ಮನೇ ಹೋಗುವುದೇಕೆ, ಉಂಚಳ್ಳಿ ಜಲಪಾತವನ್ನು ನೋಡುವ ನೆಪವನ್ನು ಇಟ್ಟುಕೊಳ್ಳೋಣ ಎಂದುಕೊಂಡು ನಿರ್ಧಾರ ಮಾಡಿದವರು ವಿಕ್ರಮ ಹಾಗೂ ವಿಜೇತಾ. ವಿನಾಯಕನ ಬಳಿ ಈ ಸಂಗತಿಯನ್ನು ಅರುಹಿದಾಗ ಅವನೂ ಒಪ್ಪಿಗೆ ಸೂಚಿಸಿದ್ದ.
            ಸಂಜೆಯ ವೇಳೆ ಊಟ ಮುಗಿಸಿ ಹಾಸಿಗೆಯತ್ತ ಮುಖ ಮಾಡಿದ್ದರು ಎಲ್ಲರೂ. ಪ್ರತಿಯೊಬ್ಬರ ಮನಸ್ಸಿನಲ್ಲಿಯೂ ಪೊಲೀಸ್ ಸ್ಟೇಶನ್, ಗುಡ್ಡೇ ತೋಟದ ಗಣಪತಿ ದೇವಾಲಯದಲ್ಲಿ ನಡೆದ ಘಟನೆಗಳೇ ಮನಸ್ಸಿನಲ್ಲಿ ಇಣುಕುತ್ತಿದ್ದವು. ಪೊಲೀಸರಿಗೇನೋ ಸಬೂಬನ್ನು ಹೇಳಿ ತಪ್ಪಿಸಿಕೊಂಡು ಬಂದದ್ದಾಗಿದೆ. ಆದರೆ ದೇವಸ್ಥಾನದ ಆವರಣದಲ್ಲಿ ವಿಷ್ಣು ಎಡವಿ ಬಿದ್ದಿದ್ದು ಮಾತ್ರ ಯಾರಿಗೂ ಅರಗಿಸಿಕೊಳ್ಳಲು ಆಗುತ್ತಿಲ್ಲ. ವಿಷ್ಣುವೇನೋ ಇಂತದ್ದನ್ನೆಲ್ಲ ತಲೆಗೆ ಹಾಕಿಕೊಳ್ಳುವವನಲ್ಲ. ಆದರೆ ಉಳಿದವರ ಮನಸ್ಸು ಮಾತ್ರ ಏನೋ ಆಗುತ್ತಿದೆ, ಆಗುತ್ತದೆ ಎನ್ನುವ ಚಿಂತನೆ ನಡೆಸಿದ್ದರು. ಅಪಾಯ ಕಾದಿರಬಹುದಾ? ಯಾವ ರೀತಿಯ ಅಪಾಯ ಆಗಬಹುದು? ವಿಷ್ಣುವಿನ ಜೀವಕ್ಕೆ ಏನಾದರೂ ತೊಂದರೆ ಆಗುತ್ತದೆಯೇ? ಮತ್ತಿನ್ನೇನಾದರೂ ಕಂಟಕ ಇದೆಯೇ ಹೀಗೆಲ್ಲ ಆಲೋಚನೆ ಮಾಡಿದರು. ಆಲೋಚನೆಯಲ್ಲಿ ಮುಳುಗಿದ್ದವರಿಗೆ ಅದ್ಯಾವಾಗ ನಿದ್ದೆ ಬಂದಿತ್ತೋ ಗೊತ್ತಾಗಲಿಲ್ಲ.
           ವಿಜೇತಾಳಿಗೆ ನಡುರಾತ್ರಿ ಮತ್ತೆ ಎಚ್ಚರಾಯಿತು. ದಂಟಕಲ್ಲಿಗೆ ಬಂದ ಹೊಸತರಲ್ಲಿ ನಡುರಾತ್ರಿ ಎಚ್ಚರಾಗಿತ್ತು. ಈಗ ಮತ್ತೊಮ್ಮೆ ಎಚ್ಚರಾಗಿತ್ತು. ದಂಟಕಲ್ಲಿನ ಮೇಲ್ಭಾಗದಲ್ಲಿಯೇ ದಟ್ಟವಾಗಿ ಹಬ್ಬಿರುವ ಕಾಡಿನಲ್ಲಿ ಮತ್ತೆ ಯಥಾ ಪ್ರಕಾರ ಮರಕಡಿಯುವ ಸದ್ದು. ಒಮ್ಮೊಮ್ಮೆ ಗರಗಸ ಸದ್ದು ಮಾಡಿದರೆ ಮತ್ತೊಮ್ಮೆ ಕೊಡಲಿಯ ಸದ್ದು ಕೇಳುತ್ತಿತ್ತು. ಗಾಳಿಯ ಚಲನೆಯ ಆಧರಿಸಿ ದಟ್ಟವಾಗಿ ಹಾಗೂ ಕ್ಷೀಣವಾಗಿ ಕಿವಿಗೆ ಬಡಿಯುತ್ತಿತ್ತು. ವಿಜೇತಾ ಬಹಳ ಕಾಲ ಇದನ್ನು ಆಲಿಸಿದಳು. ಕೊನೆ ಕೊನೆಗೆ ಅಸಹನೀಯ ಎನ್ನಿಸಿ ಹೊರಗೆ ಎದ್ದು ಬಂದಳು. ಮಹಡಿಯ ಇನ್ನೊಂದು ಕಡೆಯಲ್ಲಿ ವಿಕ್ರಮ, ವಿಷ್ಣು, ವಿನಾಯಕ ಹಾಗೂ ಪ್ರದೀಪರು ಮಲಗಿದ್ದರು. ನಿಧಾನವಾಗಿ ವಿಕ್ರಮನ ಕಡೆ ಸರಿದು ಹೋದ ವಿಜೇತಾ ಅವನನ್ನು ಎಬ್ಬಿಸಲು ಪ್ರಯತ್ನಿಸಿದಳು.
              ವಿಕ್ರಮನಿಗೂ ನಿದ್ದೆ ಬಂದಿರಲಿಲ್ಲ. ವಿನಯಚಂದ್ರನಿಗೆ ಅಷ್ಟೇ ಅಲ್ಲ ಪಕ್ಕದಲ್ಲಿ ಮಲಗಿದ್ದವರಿಗೆ ಯಾರಿಗೂ ಕೂಡ ನಿದ್ದೆ ಬಂದಿರಲಿಲ್ಲ. ವಿಜೇತಾ ಎದ್ದು ಬಂದಿದ್ದನ್ನು ಕಂಡು `ಏನಾಯ್ತು?' ಎಂದ ವಿಕ್ರಮ. ಅದಕ್ಕೆ ಪ್ರತಿಯಾಗಿ ವಿಜೇತಾ ಕತ್ತಲಿನಲ್ಲಿ ಕೇಳಿಬರುತ್ತಿದ್ದ ಸದ್ದಿನ ಬಗ್ಗೆ ಹೇಳಿದಳು. ಯಾರೋ ಮರ ಕಡಿಯುತ್ತಿದ್ದಾರೆ ಎಂದೂ ತಿಳಿಸಿದಳು.
             ವಿಕ್ರಮ ಹಾಗೂ ಉಳಿದವರಿಗೂ ಈ ವಿಷಯ ತಿಳಿದಿತ್ತು. ಕಾಡಿಗೆ ಹೋಗಿ ಬರೋಣವಾ ಎಂದುಕೊಂಡರು. ಪ್ರದೀಪ ಹೂ ಅಂದ. ವಿಷ್ಣುವೂ ಹೂ ಅಂದುಬಿಟ್ಟಿದ್ದ. ಕೊನೆಗೆ ನಡು ರಾತ್ರಿಯಾದರೂ ಸರಿ ಹೋಗಿ ಬರೋಣ. ಐದಾರು ಜನರಿದ್ದರೆ ಯಾವುದೇ ತೊಂದರೆ ಇರುವುದಿಲ್ಲ. ಮರ ಕಡಿಯುತ್ತಿರುವ ಪೋಟೋಗಳು ಸಿಕ್ಕರೆ ಅಷ್ಟೇ ಸಾಕು ಎಂದುಕೊಂಡರು ಎಲ್ಲರೂ. ವಿನಾಯಕನ ಬಳಿ ಹೇಳಿದಾಗ ಮೊದಲಿಗೆ ವಿರೋಧಿಸಿದನಾದರೂ ಕೊನೆಗೆ ಒಪ್ಪಿಕೊಂಡ. ಮನೆಯಲ್ಲಿ ಇದ್ದ ಮೂರಡಿಯ ಬ್ಯಾಟರಿಯನ್ನು ಎತ್ತಿಕೊಂಡ. ಒಂದು ಕಿ.ಮಿ ದೂರದ ವರೆಗೂ ಆ ಬ್ಯಾಟರಿ ಬೆಳಕನ್ನು ಬೀರುತ್ತಿತ್ತು. ವಿನಾಯಕ ಸೀದಾ ಹೊರಕ್ಕೆ ಬಂದವನೇ ಪಂಜರದಲ್ಲಿ ಕೂಡಿ ಹಾಕಲಾಗಿದ್ದ ಮುದ್ದಿನ ನಾಯಿ ರಾಮುವನ್ನು ಹೊರಗೆ ಬಿಟ್ಟ. ಅದೇನು ಸೂಟು ಸಿಕ್ಕಿತ್ತೋ ರಾಮುವಿಗೆ. ಛಂಗನೆ ನೆಗೆಯಿತು. ತನ್ನ ಮನಯ ಯಜಮಾನ ಕಾಡಿನ ಕಡೆಗೆ ತೆರಳುತ್ತಿದ್ದಾನೆ ಎಂಬುದು ನಾಗಿಗೆ ಅದ್ಹೇಗೋ ತಿಳಿದುಬಿಟ್ಟಿತ್ತು. ಬಾಲ ಹಾಗೂ ಮೈಯನ್ನು ವಿಚಿತ್ರವಾಗಿ ಕುಳಿಸುತ್ತ ನೆಗೆಯತೊಡಗಿತ್ತು.
            ಕಾಡನ್ನು ಅರಿತಿದ್ದ ವಿನಾಯಕ ಎಲ್ಲರನ್ನೂ ಹಿತ್ಲಾಕಡೆಗೆ ಕರೆದುಕೊಂಡು ಗುಡ್ಡ ಹತ್ತಿಸಿದ. ಎಲ್ಲರೂ ಸುಮ್ಮನೆ ಬನ್ನಿ ಎಂದು ಹೇಳಲು ಮರೆಯಲಿಲ್ಲ. ಪ್ರತಿಯೊಬ್ಬರ ಬಳಿಯೂ ಚಿಕ್ಕ ಬೆಳಕು ಇದ್ದೇ ಇದ್ದು. ಮೊಬೈಲ್ ಟಾರ್ಚುಗಳೂ ಇದ್ದವು. ಸದ್ದಿಲ್ಲದೇ ಗುದ್ದವನ್ನು ಏರ ತೊಡಗಿದರು. ಹತ್ತಿರದಲ್ಲೇ ಇದ್ದ ರಸ್ತೆಯನ್ನು ದಾಟಿ ಕಾನನದಲ್ಲಿ ಸದ್ದು ಕೇಳಿ ಬಂದ ಕಡೆಗೆ ಮುಖ ಮಾಡಿದರು. ವಿಜೇತಾ ಹಾಗೂ ವಿಕ್ರಮ ಇಬ್ಬರೂ ತಮ್ಮ ಬಳಿ ಇದ್ದ ನೈಟ್ ವಿಷನ್ ಕ್ಯಾಮರಾವನ್ನು ಸಜ್ಜಾಗಿ ಇರಿಸಿಕೊಂಡಿದ್ದರು. ಯಾವ ಕ್ಷಣದಲ್ಲಿ ಬೇಕಾದರೂ ಪೋಟೋ ತೆಗೆಯುವ ಸಂದರ್ಭ ಎದುರಾಗಬಹುದಿತ್ತು. ಅದಕ್ಕಾಗಿ ಇಬ್ಬರೂ ಚುರುಕಾಗಿ ಸಾಗುತ್ತಿದ್ದರು. ಇಬ್ಬರ ಕೈಗಳೂ ಕ್ಯಾಮರಾ ಮೇಲಿದ್ದವು.
           ರಾಜು ಮುಂದಕ್ಕೆ ಸಾಗುತ್ತಿತ್ತು. ರಾಜುವಿನ ಹಿಂದೆ ರಾಜುವಿನ ಜಾಡಿನಲ್ಲಿ ವಿನಾಯಕ ಮೌನವಾಗಿ ಸಾಗುತ್ತಿದ್ದ. ಅವನ ಹಿಂದೆ ಪ್ರದೀಪ, ವಿಕ್ರಮ, ವಿಜೇತಾ ಹಾಗೂ ಕೊನೆಯಲ್ಲಿ ವಿಷ್ಣು. ಒಬ್ಬರಿಗೊಬ್ಬರ ನಡುವೆ ಮಾರು ದೂರ ಅಂತರ. ಪ್ರದೀಪ ಮಾತ್ರ ದೊಡ್ಡದೊಂದು ಕಬ್ಬಿಣದ ರಾಡನ್ನು ಹಿಡಿದು ಸಾಗುತ್ತಿದ್ದ. ವಿನಾಯಕನ ಹಿಂದೆ ಜಾಡು ಹಿಡಿದು ಸಾಗುತ್ತಿದ್ದರೂ ಕೂಡ ಹಿಂಬಾಲಿಸುತ್ತಿದ್ದವರು ಆಗೊಮ್ಮೆ ಈಗೊಮ್ಮೆ ದಾರಿ ತಪ್ಪುತ್ತಿದ್ದರು. ಕಾಡಿನಲ್ಲಿ ಮುಂದೆ ಮುಂದೆ ಸಾಗಿದಂತೆಲ್ಲ ಕತ್ತಲೆಯ ನೀರವತೆಯನ್ನು ಸೀಳಿ ಬರುವಂತಹ ಕಾಡು ಹಕ್ಕಿಗಳ ಕೂಗು ಕಿರ್ರೆಂದು ಕೇಳಿಸುತ್ತಿದ್ದವು. ಮರ ಕಡಿಯುವ ಸದ್ದು ಕೂಡ ನಿಧಾನವಾಗಿ ದೊಡ್ಡದಾಗತೊಡಗಿತ್ತು. ಎಲ್ಲರೂ ಮುಂದೆ ಮುಂದೆ ಹೆಜ್ಜೆ ಹಾಕಿದರು.
             ಕೊನೆಗೊಮ್ಮೆ ವಿನಾಯಕ ಗಕ್ಕನೆ ನಿಂತ. ನಿಂತವನೇ ಮುಂದೆ ಹೋಗುತ್ತಿದ್ದ ರಾಜುವಿನ ಕುತ್ತಿಗೆ ಪಟ್ಟಿಯನ್ನು ಹಿಡಿದುಕೊಂಡ. ರಾಜು ಕೊಸರಾಡತೊಡಗಿತು. ಹಿಂಬಾಲಿಸುತ್ತಿದ್ದವರೆಲ್ಲ ಒಮ್ಮೆ ಢಿಕ್ಕಿ ಹೊಡೆದರೋ ಎನ್ನುವಂತೆ ನಿಂತರು. ಪಿಸುಮಾತಿನಲ್ಲಿ ಹಿಂದಿದ್ದವರ ಬಳಿ `ಅದೋ ಅಲ್ಲಿ ನೋಡಿ.. ಮರ ಕೊಯ್ಯುತ್ತಿದ್ದಾರೆ..' ಎಂದ.
             ಕಾಡಿನ ಮೌನದಲ್ಲಿ ಕೊಂಚ ದೂರದಲ್ಲಿ ಲಾಟೀನು ಬೆಳಕಿನಲ್ಲಿ ಒಂದಿಷ್ಟು ಜನ ಮರ ಕಡಿಯುತ್ತಿದ್ದರು. ಅಲ್ಲಿಯೆ ದಡೆಯನ್ನೂ ಮಾಡಿಕೊಂಡು ನಿರಾತಂಕವಾಗಿ ತಮ್ಮ ಕೆಲಸವನ್ನು ಮುಂದುವರಿಸಿದ್ದರು. ವಿಜೇತಾ ಹಾಗೂ ವಿಕ್ರಮ ಇಬ್ಬರೂ ತಮ್ಮ ಕ್ಯಾಮರಾಕ್ಕೆ ಕೆಲಸಕೊಟ್ಟರು. ಅನುಮಾನ ಬಾರದಿರಲಿ ಎನ್ನುವ ಕಾರಣಕ್ಕಾಗಿ ಇಬ್ಬರೂ ಕ್ಯಾಮರಾದ ಫ್ಲಾಷ್ ಲೈಟನ್ನು ಆರಿಸಿದ್ದ ಕಾರಣ ಅದೆಷ್ಟು ಪೋಟೋ ತೆಗೆದರೂ ಮರಗಳ್ಳರಿಗೆ ಗೊತ್ತಾಗಲಿಲ್ಲ. ಪ್ರದೀಪ ಮಾತ್ರ ಕೈಯಲ್ಲಿದ್ದ ಕಬ್ಬಿಣದ ರಾಡನ್ನು ಸಜ್ಜಾಗಿ ಇರಿಸಿಕೊಂಡಿದ್ದ.
            ಅಷ್ಟರಲ್ಲಿಯೇ ಅಚಾತುರ್ಯವೊಂದು ಘಟಿಸಿಬಿಟ್ಟಿತು. ರಾಮುವಿನ ಕುತ್ತಿಗೆ ಪಟ್ಟಿಯನ್ನು ಹಿಡಿದುಕೊಂಡಿದ್ದ ವಿನಾಯಕ ಎಂದೆನಲ್ಲ. ದೊಡ್ಡದೊಂದು ಬೇಟೆ ಕಣ್ಣಮುಂದೆ ಇದೆ ಎಂದು ಭಾವಿಸಿದ ರಾಮು ಇದ್ದಕ್ಕಿದ್ದಂತೆ ಕೊಸರಾಡಲಾರಂಭಿಸಿತು. ಕೊಸರಾಡಿದಂತೆಲ್ಲ ವಿನಾಯಕ ತನ್ನ ಹಿಡಿತವನ್ನು ಬಿಗಿ ಮಾಡಿದ್ದ. ಆದರೆ ಕೊನೆಗೊಮ್ಮೆ ಇದ್ದಕ್ಕಿದ್ದಂತೆ ಕುತ್ತಿಗೆ ಪಟ್ಟಿಯಿಂದ ಉಳುಚಿಕೊಂಡ ರಾಮು ಸೀದಾ ಮರಗಳ್ಳರಿದ್ದ ಕಡೆಗೆ ಓಡಿಬಿಟ್ಟಿತ್ತು. `ಅಯ್ಯೋ ಭಾನಗಡಿ ಆಯ್ತಲ್ಲ..' ಎಂದುಕೊಂಡ ವಿನಾಯಕ ತನ್ನ ಹಿಂದೆ ನಿಂತಿದ್ದವರ ಬಳಿ ಓಡಲು ತಯಾರಾಗುವಂತೆ ತಿಳಿಸಿದ. ಈ ಕತ್ತಲಲ್ಲಿ ಗೊತ್ತಿರದ ಕಾಡಿನಲ್ಲಿ ಹೇಗೆ ಓಡುವುದು? ಎಲ್ಲರೂ ತಬ್ಬಿಬ್ಬಾದರು.
            ರಾಮು ಮರಗಳ್ಳರ ಬಳಿ ಓಡಿದ್ದೇ ತಡ. ಒಮ್ಮೆ ಕಾಡೇ ಅದರುವಂತೆ ಕೂಗಿತು. ಮರಗಳ್ಳರು ಒಮ್ಮೆ ಬೆಚ್ಚಿಬಿದ್ದಿದ್ದರು. ಸುಮ್ಮನೆ ಇರದ ರಾಮು ಸೀದಾ ಹೋಗಿ ಒಬ್ಬನ ಕಾಲಿಗೆ ಗಬಕ್ಕನೆ ಕಚ್ಚಿಯೇ ಬಿಟ್ಟಿತು. ಒಮ್ಮೆ ಮರಕಡಿಯುತ್ತಿದ್ದವನೊಬ್ಬ ತನ್ನ ಕಾಲಿಗೆ ನಾಯಿ ಕಚ್ಚಿದ್ದರಿಂದ ತಬ್ಬಿಬ್ಬಾದ. ಕಚ್ಚಿದ್ದು ಏನು ಎನ್ನುವುದು ಗೊತ್ತಾಗದೇ ಕಾಲು ಝಾಡಿಸಿದ. ಆತ ಕಾಲು ಝಾಡಿಸಿದಂತೆಲ್ಲ ರಾಮುವಿನ ಕಡಿತ ಬಿಗಿಯಾಯಿತು. ರಾಮುವಿನ ಬಿಗಿಗೆ ಒಮ್ಮೆ ಜಾರಿ ಬಿದ್ದ ಮರಗಳ್ಳ `ಅಯ್ಯಯ್ಯಪ್ಪಾ...' ಎಂದ. ತಕ್ಷಣ ಜೊತೆಯಲ್ಲಿದ್ದವರೆಲ್ಲ ಹುಷಾರಾದರು. ಏನೋ ಅಪಾಯ ಎದುರಾಗಿದೆ ಎಂದು ಭಾವಿಸಿದರು.
          ಕೆಳಕ್ಕೆ ಬಿದ್ದ ಮರಗಳ್ಳನಿಗೆ ಸಹಾಯ ಮಾಡಲು ಮುಂದಾದರು. ನಾಯಿ ಕಚ್ಚಿ ಹಿಡಿದಿರುವುದು ಗೊತ್ತಾಗಿತ್ತು. ನಾಯಿ ಬಂದಿದ್ದೆ ಎಂದಾದರೆ ಜೊತೆಯಲ್ಲಿ ಇನ್ಯಾರೋ ಇರಬೇಕು. `ಯಾರೋ ಇದ್ದಾರೆ ಹುಡುಕ್ರೋ..' ಎಂದು ಕೂಗಿದ ಒಬ್ಬಾತ. ಇನ್ನೊಬ್ಬಾತ ಕೈಯಲ್ಲಿದ್ದ ಕೊಡಲಿಯಿಂದ ರಾಮುವಿನ ಕಡೆಗೆ ಬೀಸಿದ್ದ. ರಾಮು ಕೂದಲೆಳೆಯ ಅಂತರದಲ್ಲಿ ತಪ್ಪಿಸಿಕೊಂಡಿತ್ತಾದರೂ ಕೊಡಿಲಿಯ ಏಟು ಕಾಲಿಗೆ ಬಿದ್ದಿತ್ತು. ಕೊಡಲಿಯ ಏಟು ಬಿದ್ದಿದ್ದೇ ಕಚ್ಚಿದ್ದವನನ್ನು ಬಿಟ್ಟ ರಾಮು ಕಂಯೋ ಎಂದು ಕೂಗಿ ಓಡಲು ಆರಂಭಿಸಿತು.
            ಇದೇ ವೇಳೆ ಇನ್ನೊಂದು ಪ್ರಮುಖ ಘಟನೆಯೂ ನಡೆದಿತ್ತು. ರಾಮುವಿಗೆ ಬೀಸಿದ್ದ ಕೊಡಲಿ ರಾಮುವಿನ ಕಾಲಿಗೆ ಗಾಯ ಮಾಡಿ ಸೀದಾ ರಾಮು ಕಚ್ಚಿ ಹಿಡಿದಿದ್ದವನ ಕಾಲಿಗೆ ತಾಗಿತ್ತು. ಆತನ ಕಾಲಿನ ಮೇಲೆ ಬಿದ್ದ ಪರಿಣಾಮ ಕಾಲು ಸಿಗಿದು ಹೋಗಿತ್ತು. ಕೊಡಲಿ ಏಟು ಬಿದ್ದ ಕಾರಣ ಆತ `ಅಯ್ಯಯ್ಯೋ.. ಸತ್ನ್ಯೆಪ್ಪಾ...' ಎಂದು ಕೂಗಿದ. ದಂಟಕಲ್ ಕಾಡು ಒಮ್ಮೆ ಬೆಚ್ಚಿ ಬಿದ್ದಿತ್ತು.
           ನಾಯಿಯ ಜೊತೆಗೆ ಯಾರ ಬಂದಿದ್ದಾರೆ ಎಂದು ಅನುಮಾನ ಪಟ್ಟುಕೊಂಡ ಮರಗಳ್ಳರು ಸುತ್ತಮುತ್ತ ಹುಡುಕಲು ಆರಂಭಿಸಿದ್ದರು. ಅವರ ಕಣ್ಣಿಗೆ ವಿನಾಯಕ ಹಾಗೂ ಅವರ ಜೊತೆಗಾರರು ಕಾಣಿಸಿಕೊಂಡಿದ್ದರು. ಕೂಡಲೇ ಮೂರು ಜನ ವಿನಾಯಕನ ಹಾಗೂ ಜೊತೆಗಾರರನ್ನು ಹಿಂಬಾಲಿಸಿ ಬಂದಿದ್ದರು. ಮರಗಳ್ಳರ ಕೈಗೆ ಸಿಕ್ಕರೆ ತಮ್ಮ ಕಥೆ ಮುಗಿದಂತೆಯೇ ಎಂದುಕೊಂಡು ಎಲ್ಲರೂ ಓಡಲು ಆರಂಭಿಸಿದ್ದರು.
             ವಿಕ್ರಮ, ಪ್ರದೀಪ, ವಿನಾಯಕ ಹಾಗೂ ವಿಷ್ಣು ಹೇಗಾದರೂ ಮಾಡಿ ಓಡಿಬಿಡಬಲ್ಲರು. ಅದರೆ ವಿಜೇತಾ ಹೇಗೆ ತಾನೆ ಓಡಿಯಾಳು. ಗಂಡಸರ ಸರಿಸಮಾನವಾಗಿ ಓಡುವುದೂ ಕಷ್ಟವೇ. ಕತ್ತಲ ಕೂಪದಲ್ಲಿ ಗೊತ್ತಿರದ ಜಾಗದಲ್ಲಿ ಗಂಡಸರೇ ಎದ್ದೋ ಬಿದ್ದೋ, ಎಡವುತ್ತಲೋ ಓಡುತ್ತಿದ್ದರು. ವಿಜೇತಾ ಕೂಡ ಮೊದ ಮೊದಲು ಗಂಡಸರ ವೇಗಕ್ಕೆ ತಕ್ಕಂತೆ ಓಡಿದ್ದಳು. ಆದರೆ ನಿಧಾನವಾಗಿ ಆಕೆಯಲ್ಲಿ ಶಕ್ತಿ ಕಡಿಮೆಯಾಗತೊಡಗಿತ್ತು. ವಿನಾಯಕನ ಹಿಂದೆಯೇ ಓಡುತ್ತಿದ್ದ ಆಕೆ ನಿಧಾನಕ್ಕೆ ಹಿಂದೆ ಬಿದ್ದಿದ್ದಳು. ಇದನ್ನು ಮೊಟ್ಟಮೊದಲು ಗಮನಿಸಿದವನು ಪ್ರದೀಪ.
             ಮರಗಳ್ಳರೂ ವೇಗವಾಗಿಯೇ ಓಡಿಬರುತ್ತಿದ್ದರು. ನಾಲ್ಕು ಜನ. ನಿಧಾನವಾಗಿ ಮರಗಳ್ಳರಿಗೂ ಹಾಗೂ ಯುವ ಪಡೆಗೂ ಇದ್ದ ಅಂತರ ಕಡಿಮೆಯಾಗುತ್ತ ಬಂತು. ಆಗ ಪ್ರದೀಪ ಇದ್ದಕ್ಕಿದ್ದಂತೆ ಆಲೋಚನೆ ಮಾಡಿದ. ಇನ್ನು ತಡ ಮಾಡಿದರೆ ಶತ್ರು ದಾಳಿ ಮಾಡುವುದು ನಿಶ್ಚಿತ. ವಿಜೇತಾಳಲ್ಲಿ ಶಕ್ತಿ ಕಡಿಮೆಯಾಗುತ್ತಿದೆ. ಆಕೆಯನ್ನು ಮರಗಳ್ಳರು ಹಿಡಿದುಕೊಳ್ಳುತ್ತಾರೆ. ಏನಾದರೂ ಮಾಡಬೇಕು ಎಂದುಕೊಂಡ. ತಕ್ಷಣವೇ ತನ್ನ ವೇಗವನ್ನು ಕಡಿಮೆಮಾಡಿಕೊಂಡ. ವಿಜೇತಾಳ ಬಳಿ ಜೋರಾಗಿ ಓಡು ಎಂದ. ಆಕೆ ತುಸು ಮುಂದಕ್ಕೆ ಹೋದಳು ಎಂದ ತಕ್ಷಣ ಪ್ರದೀಪ ಒಮ್ಮೆಲೆ ಗಕ್ಕನೆ ನಿಂತ. ನಿಂತವನೇ ಸೀದಾ ಉಲ್ಟಾ ತಿರುಗಿದ. ಅಷ್ಟೇ ಅಲ್ಲ ಮರಗಳ್ಳರಿಗೆ ಅಭಿಮುಖವಾಗಿ ಓಡ ತೊಡಗಿದ. ಕತ್ತಲೆಯಲ್ಲಿ ಮರಗಳ್ಳರಿಗೆ ಪ್ರದೀಪನ ಈ ರೀತಿಯ ಚರ್ಯೆ ಅರ್ಥವೇ ಆಗಲಿಲ್ಲ.
           ಉಲ್ಟಾ ಓಡುತ್ತಿದ್ದ ಪ್ರದೀಪ ಮರಗಳ್ಳರು ಹತ್ತಿರಕ್ಕೆ ಬರುವವರೆಗೂ ಕಾದ. ನಾಲ್ಕು ಜನರಲ್ಲಿ ಒಬ್ಬಾತ ಹತ್ತಿರ ಬಂದ. ಓಡುತ್ತಿದ್ದ ಪ್ರದೀಪ ತಕ್ಷಣ ತನ್ನ ಕೈಯಲ್ಲಿದ್ದ ಕಬ್ಬಿಣದ ರಾಡನ್ನು ಬಲವಾಗಿ ಬೀಸಿದ. ಹೊಡೆತ ಬಲವಾಗಿ ಮರಗಳ್ಳನ ತಲೆಗೆ ಬಿದ್ದಿತ್ತು. `ವಿಕಾರವಾಗಿ ಕೂಗಿಕೊಂಡ ಮರಗಳ್ಳ ತಕ್ಷಣವೇ ಕುಸಿದು ಬಿದ್ದಿದ್ದ. ಇದನ್ನು ನೋಡಿದವರೇ ಉಳಿದ ಮರಗಳ್ಳರು ಒಮ್ಮೆ ತಬ್ಬಿಬ್ಬಾದರು. ಎದುರಾಳಿ ಈ ರೀತಿ ದಾಳಿ ಮಾಡಬಲ್ಲ ಎನ್ನುವ ಸುಳಿವು ಖಂಡಿತವಾಗಿಯೂ ಇರಲಿಲ್ಲ. ಪ್ರದೀಪ ಹೊಡೆದಿದ್ದನ್ನು ಕಂಡು ಒಮ್ಮೆಲೆ ಹೆದರಿದ ಮರಗಳ್ಳರು ವಿನಾಯಕನ ತಂಡವನ್ನು ಬೆನ್ನಟ್ಟುವುದನ್ನು ಬಿಟ್ಟು ಸೀದಾ ದಿಕ್ಕಾಪಾಲಾಗಿ ಓಡಲು ಆರಂಭಿಸಿದರು. ಪ್ರದೀಪ ಮಾತ್ರ ಈಗ ಅವರ ತಿರುಗಿ ಬಿದ್ದಿದ್ದ. ಓಡುತ್ತಿದ್ದವರ ಪೈಕಿ ಒಬ್ಬನ ಬೆನ್ನಟ್ಟಿದ್ದ. ಕಾಡಿನ ದಾರಿಯಲ್ಲಿ ಬಹಳ ದೂರ ಬೆನ್ನಟ್ಟಿದ್ದ. ಆದರೆ ಕೊನೆಗೂ ಮರಗಳ್ಳ ಸಿಗಲಿಲ್ಲ. ತಪ್ಪಸಿಕೊಂಡಿದ್ದ. ಕೈಯಲ್ಲಿದ್ದ ಕಬ್ಬಿಣದ ರಾಡು ಒದ್ದೆ ಓದ್ದೆಯಾಗಿತ್ತು. ಏದುಸಿರು ಬಿಡುತ್ತ ವಾಪಾಸಾಗುತ್ತಿದ್ದ ಸಂದರ್ಭದಲ್ಲಿ ದಾರಿಯ ಪಕ್ಕದಲ್ಲಿ ಯಾರೋ ನರಳಿದ ಸದ್ದಾಯಿತು. ಮತ್ತೊಮ್ಮೆ ಪ್ರದೀಪ ಜಾಗೃತನಾಗಿ ಕೈಯಲ್ಲಿದ್ದ ರಾಡನ್ನು ಬೀಸಲು ತಯಾರಾಗಿದ್ದುಕೊಂಡು ಅತ್ತ ಹೊರಳಿದ.
           ಪ್ರದೀಪ ತೀರಾ ಹತ್ತಿರಕ್ಕೆ ಬಂದ ಎನ್ನುವಷ್ಟರಲ್ಲಿ ಬವ್...ಎಂದಿತು ಸದ್ದು. ಪ್ರದೀಪ ಒಮ್ಮೆ ಬೆಚ್ಚಿದ್ದ. ನೋಡಿದರೆ ರಾಮು. ಮರಗಳ್ಳನ ಕೊಡಲಿ ಏಟು ತಾಗಿ ಗಾಯಗೊಂಡಿದ್ದ ರಾಮು ತಪ್ಪಿಸಿಕೊಂಡು ಬಂದು ಮಟ್ಟಿಯೊಂದನ್ನು ಹೊಕ್ಕು ಕುಳಿತಿತ್ತು. ಪ್ರದೀಪ ಬಂದಿದ್ದನ್ನು ಕಂಡು ಮರಗಳ್ಳನೇ ಇರಬೇಕು, ತನ್ನ ಮೇಲೆ ದಾಳಿ ಮಾಡಲು ಬಂದಿರಬೇಕು ಎಂದು ಗುರ್ರೆಂದಿತ್ತು. ಪ್ರದೀಪನಿಗೆ ರಾಮುವಿನ ಪರಿಸ್ಥಿತಿ ಗೊತ್ತಾಗಿ `ರಾಮು... ಕುರೂಯ್..' ಎಂದ. ತನ್ನ ಹೆಸರು ಹಿಡಿದು ಕರೆದಿದ್ದನ್ನು ಕೇಳಿದ ರಾಮು ಇವನ್ಯಾರೋ ತನ್ನ ಪರಿಚಯದವನೇ ಇರಬೇಕು ಎಂದುಕೊಂಡು ನಿಧಾನವಾಗಿ ಹೊರಬಂದಿತು. ರಾಮು ನಿಧಾನವಾಗಿ ಬಂದಿದ್ದನ್ನು ನೋಡಿದ ಪ್ರದೀಪ ರಾಮುವಿಗೆ ದೊಡ್ಡ ಗಾಯವೇ ಆಗಿದೆ ಎಂದುಕೊಂಡ. ತಕ್ಷಣವೇ ಹತ್ತಿರಕ್ಕೆ ಬಂದ ರಾಮುವಿನ ತಲೆ ನೇವರಿಸಿದ. ಪರಿಚಿತರನ್ನು ಕಂಡ ರಾಮು ಒಮ್ಮೆಲೆ ಪ್ರದೀಪನ ಕೈ ನೆಕ್ಕಲು ಆರಂಭಿಸಿತು. ತಕ್ಷಣ ಪ್ರದೀಪ ತನ್ನ ಕೈಯಿಂದ ರಾಮುವನ್ನು ಎತ್ತಿಕೊಂಡು ವಾಪಾಸು ಹೊರಟ.
            ಕತ್ತಲ ದಾರಿಯಲ್ಲಿ ಕಾನನದಲ್ಲಿ ಹಲವಾರು ಸಾರಿ ಪ್ರದೀಪನಿಗೆ ದಾರಿ ತಪ್ಪಿತ್ತು. ಕಾಡಿನಲ್ಲಿ ಅಲೆದು ಅಲೆದು ಕೊನೆಗೊಮ್ಮೆ ದಂಟಕಲ್ಲಿಗೆ ಹೋಗುವ ದಾರಿ ಸಿಕ್ಕಿತ್ತು. ಅದೇ ದಾರಿಯಲ್ಲಿ ಬಹುದೂರ ಸಾಗಿದವನಿಗೆ ಕೊನೆಗೊಮ್ಮೆ ದಂಟಕಲ್ಲಿನ ಮನೆಗಳು ಕಾಣಿಸಿದ್ದವು. ದಡಬಡನೆ ಅತ್ತ ಹೆಜ್ಜೆ ಹಾಕಿದ. ದಂಟಕಲ್ಲಿನ ಮನೆಯನ್ನು ತಲುಪುವ ವೇಳೆಗೆ ಆಗಲೇ ಪ್ರದೀಪನಿಂದ ಧಾರಾಕಾರ ಬೆವರು ಸುರಿಯುತ್ತಿತ್ತು.
            ಕಾಡಿನ ದಾರಿಯಲ್ಲಿ ಓಡಿ ಬಂದಿದ್ದ ವಿನಾಯಕ, ವಿಜೇತಾ, ಪ್ರದೀಪ ಹಾಗೂ ವಿಷ್ಣು ಪ್ರದೀಪ ಬರದಿದ್ದುದನ್ನು ನೋಡಿ ಕಂಗಾಲಾಗಿ ಕಾಯುತ್ತ ಕುಳಿತಿದ್ದರು. ಕಾಡಿನಲ್ಲಿ ಕೇಳಿಸಿದ್ದ ಆರ್ತನಾದಕ್ಕೆ ದಂಟಕಲ್ ಊರಿನ ಜನರೂ ಕೂಡ ನಡು ರಾತ್ರಿಯಲ್ಲಿ ಎದ್ದು ಬಂದಿದ್ದರು. ಪ್ರದೀಪ ಬಂದಿದ್ದನ್ನು ಕಂಡು ವಿನಾಯಕನ ಬಳಗ ಕೊಂಚ ನಿರಾಳವಾದರೂ ರಕ್ತಮಯವಾಗಿದ್ದ ಆತನ ಕೈ ಹಾಗೂ ಕೈಯಲ್ಲಿದ್ದ ಕಬ್ಬಿಣದ ರಾಡನ್ನು ನೋಡಿ ಹೌಹಾರಿದರು. ರಾಮುವನ್ನು ಹೊತ್ತುಕೊಂಡು ಬರುತ್ತಿದ್ದುದನ್ನೂ ನೋಡಿ ಮನೆಯವರೆಲ್ಲ ಆಲೋಚನೆಗೆ ಬಿದ್ದರು.

(ಮುಂದುವರಿಯುತ್ತದೆ...)
           

Thursday, July 9, 2015

ಅಘನಾಶಿನಿ ಕಣಿವೆಯಲ್ಲಿ-22

             ದೇವಸ್ಥಾನದಲ್ಲಿ ಪೂಜೆ ಮುಗಿಸಿ ಭಟ್ಟರ ಬಳಿ ಮಾತನಾಡಿ ಹಾಗೆಯೇ ಎಲ್ಲರೂ ವಾಪಾಸಾಗುತ್ತಿದ್ದರು. ವಿಕ್ರಮ, ವಿನಾಯಕ, ವಿಜೇತಾ, ಪ್ರದೀಪರು ದೇವಸ್ಥಾನದಿಂದ ಹೊರಗೆ ಬಂದಿದ್ದರು. ವಿಷ್ಣು ದೇವಸ್ಥಾನದಲ್ಲಿಯೇ ಇದ್ದವನು ಹಾಗೆಯೇ ಹೊರಬರುತ್ತಿದ್ದ. ಇದ್ದಕ್ಕಿದ್ದಂತೆ ದೇವಸ್ಥಾನದ ಬಾಗಿಲ ಪಟ್ಟಿ ಎಡವಿ ದಡಾರನೆ ಬಿದ್ದು ಬಿಟ್ಟ. ಆತ ಬಿದ್ದಿದ್ದನ್ನು ಕಂಡು ಎಲ್ಲರೂ ಒಮ್ಮೆ ಭೀತಿ ಪಟ್ಟುಕೊಂಡರು. ಇದೇನಿದು ಹೀಗಾಯಿತಲ್ಲ ಎಂದುಕೊಂಡರು. ಪ್ರದೀಪ ಬೇಗನೇ ಬಂದು ವಿಷ್ಣುವನ್ನು ಹಿಡಿದು ಎಬ್ಬಿಸಿದ. ಪುಣ್ಯಕ್ಕೆ ವಿಷ್ಣುವಿಗೆ ಏಟು ಬಿದ್ದಿರಲಿಲ್ಲ. ಕಾಲು ಎಡವಿ ಕವುಚಿ ಬಿದ್ದಿದ್ದ ಕಾರಣ ಒಮ್ಮೆ ಮೈ ಕೈ ಜಜ್ಜಿತ್ತು. ಕೆಲಕಾಲ ವಿಷ್ಣು ದೇವಸ್ಥಾನದ ಹೊರಗಿನ ಕಟ್ಟೆಯಲ್ಲಿ ಸಾವರಿಸುತ್ತ ಕುಳಿತ.
          ವಿಷ್ಣು ಬಿದ್ದಿದ್ದನ್ನು ನೋಡಿ ಭಟ್ಟರು ಇದ್ದಕ್ಕಿದ್ದಂತೆ ಏನನ್ನಿಸಿತೋ ಏನೋ ದೇವಸ್ಥಾನದ ಒಳಕ್ಕೆ ಹೋಗಿ ಒಮ್ಮೆ ತುಪ್ಪದ ದೀಪವನ್ನು ಹಚ್ಚಿಟ್ಟರು. ದೇವಸ್ಥಾನದ ಬಾಗಿಲಿನಲ್ಲಿ ಬಿದ್ದಿದ್ದು ಅದು ಗಣಪನಿಗೆ ವಿರುದ್ಧವಾಗಿ ಬಿದ್ದಿದ್ದು ಮಾತ್ರ ಅಪಶಕುನದ ಹಾಗೇ ಅನ್ನಿಸಿತು. ಛೇ ಹೀಗಾಗಬಾರದಿತ್ತು ಎನ್ನಿಸಿತು. `ಯೇ ತಮಾ.. ಒಳಗೆ ಬಾ ಇಲ್ಲಿ.. ಒಂದ್ ಸಾರಿ ದೇವರ ಹತ್ತಿರ ಏನೂ ಕೆಡುಕು ಆಗದೇ ಇರಲಿ ಹೇಳಿ ಬೇಡ್ಕ.. ಒಳ್ಳೇದಾಗ್ತು..' ಎಂದರು ಭಟ್ಟರು.
         ` ನಾನು ಅಪಶಕುನ ನಂಬೋದಿಲ್ಲ ಬಿಡಿ..' ಎಂದ ವಿಷ್ಣು. ಆದರೂ ಭಟ್ಟರು ಹೇಳುದಂತೆ ದೇವರ ಎದುರು ಬಂದು ನಮಸ್ಕರಿಸಿದಂತೆ ಮಾಡಿದ. ವಿಷ್ಣುವಿನ ಉತ್ತರ ಮಾತ್ರ ಎಲ್ಲರಲ್ಲಿಯೂ ಆಶ್ಚರ್ಯವನ್ನು ತಂದಿತ್ತು. ಇದಾದ ಸ್ವಲ್ಪ ಸಮಯದ ನಂತರ ಎಲ್ಲರೂ ದೇವಾಲಯದಿಂದ ವಾಪಾಸು ಹೊರಟರು.
           ಮನುಷ್ಯ ತಾನೇ ಎಲ್ಲರಿಗಿಂತ ಮಿಗಿಲು ಎಂದುಕೊಳ್ಳುತ್ತಾನೆ. ಆದರೆ ಆಗಾಗ ಪ್ರಕೃತಿ ಅಥವಾ ನಮ್ಮ ಮೇಲಿರುವ ಕಾಣದ ಶಕ್ತಿಗಳು ಮುಂದೆ ಆಗುವ ಅನಾಹುತಗಳನ್ನು ಸೂಚ್ಯವಾಗಿ ತಿಳಿಸುತ್ತವೆ. ದೇವರ ಶಕ್ತಿಯನ್ನು ನಂಬುವವರು ಮಾತ್ರ ಇಂತಹ ಸೂಚನೆಗಳಿಂದಾಗಿ ಎಚ್ಚರಿಕೆಯನ್ನು ವಹಿಸಿಕೊಳ್ಳುತ್ತಾರೆ. ವಿಷ್ಣುವಿಗೂ ಕೂಡ ಮುಂದೆ ಆಗುವ ಯಾವುದೋ ಅಪಾಯವನ್ನು ಈ ರೀತಿಯ ಸೂಚನೆಯ ರೂಪದಲ್ಲಿ ದೇವರು ನೀಡಿದನೇ? ಗೊತ್ತಾಗಲಿಲ್ಲ. ಆದರೆ ಉಳಿದವರಿಗೆ ಮಾತ್ರ ಮುಂದೆ ಏನೋ ಅಪಾಯ ಬಂದು ಒದಗಲಿದೆ. ವಿಷ್ಣು ಯಾವುದೋ ತೊಂದರೆಯಲ್ಲಿ ಸಿಲುಕಿಕೊಳ್ಳಲಿದ್ದಾನೆ ಎನ್ನುವುದು ಮಾತ್ರ ಸ್ಪಷ್ಟವಾಗುತ್ತಿತ್ತು. ವಿಷ್ಣು ಇದನ್ನು ನಂಬಲು ತಯಾರಿರಲಿಲ್ಲ. ಇದೇ ಕಥೆಗೆ ತಿರುವನ್ನು ನೀಡಲಿದೆಯೇ? ಆಲೋಚನೆ ಮಾಡಿದಷ್ಟೂ ಗೋಜಲು ಗೋಜಲಾಗಿ ಪರಿಣಮಿಸುತ್ತಿತ್ತು.

****

          `ಎರಡು ತೇಗದ ಮರ ಅರ್ಜೆಂಟು ಬೇಕು. ನಮ್ಮೂರ ಕಾಡಿನಲ್ಲಿ ಇದ್ದಿದ್ದು ಸುಳ್ಳು. ಉಂಚಳ್ಳಿ ಜಲಪಾತದ ಬಳಿ ಬಹಳ ಇದೆ. ಅಲ್ಲಿಗೆ ಹೋಗಿ ಕಡಿದುಕೊಂಡು ಬನ್ನಿ. ನನ್ನ ಬಳಿ ಇರುವ ಅಡ್ರೆಸ್ ಗೆ ತಲುಪಿಸಿ..' ಮುಂದಾಳು ಸೂಚನೆ ನೀಡಿದ್ದ. ಜೊತೆಗಿದ್ದವರು ಒಪ್ಪಿಕೊಂಡಿದ್ದರು. `ನೋಡಿ ಮಾರ್ಗ ಮಧ್ಯದಲ್ಲಿ ಈಗ ಚೆಕ್ ಪೋಸ್ಟ್ ಮಾಡಲಾಗಿದೆ. ಯಾವುದೇ ವಾಹನಗಳನ್ನಾದರೂ ಬಿಗಿಯಾಗಿ ಪಹರೆ ಕಾಯಲಾಗುತ್ತಿದೆ. ಸ್ವಲ್ಪ ಅನುಮಾನ ಬಂದರೂ ಸಾಕು ಹಿಡಿದು ಹಾಕುತ್ತಾರೆ. ಹೇಗೆ ಸಾಗಿಸಬೇಕು, ಯಾವ ಥರ ಹೋಗಬೇಕು ಎನ್ನುವುದನ್ನು ನಾನು ಬಿಡಿಸಿ ಹೇಳಬೇಕಿಲ್ಲ ತಾನೆ. ಒಳ ದಾರಿಗಳು, ಕಳ್ಳ ಮಾರ್ಗಗಳೆಲ್ಲ ಗೊತ್ತಿದೆಯಲ್ಲ..' ಎಂದ ಬಾಸ್. ಎಲ್ಲರೂ ತಲೆಯಾಡಿಸಿದರು.
          ಇದಾಗಿ ಒಂದು ದಿನ ಕಳೆಯುತ್ತಿದ್ದಂತೆಯೇ ಉಂಚಳ್ಳಿ ಜಲಪಾತದ ಬಳಿಯ ಕಾಡಿನಲ್ಲಿ ಎರಡು ಬೃಹತ್ ತೇಗದ ಮರಗಳು ಧರಗುರುಳಿದ್ದವು. ದೊಡ್ಡದೊಂದು ಟ್ರಕ್ಕಿನಲ್ಲಿ ಯಾವುದೋ ಪಾರ್ಸಲ್ಲನ್ನು ತುಂಬಿಕೊಂಡು ಹೋಗಲಾಗುತ್ತಿದೆ ಎನ್ನುವಂತೆ ಮಾಡಿ ಅದರೊಳಕ್ಕೆ ತೇಗದ ಮರದ ತುಂಡುಗಳನ್ನು ತುಂಬಿ ಮುಂದಕ್ಕೆ ಒಯ್ಯಲಾಯಿತು. ಟ್ರಕ್ಕಿನ ಚಹರೆಯನ್ನು ಬದಲಿಸಿದ್ದ ಕಾರಣ ಮುಖ್ಯ ರಸ್ತೆಯಲ್ಲಿಯೇ ಹೋಗಬೇಕು ಎನ್ನುವ ತೀರ್ಮಾನ ಕಳ್ಳ ಸಾಗಾಣಿಕೆದಾರರದ್ದಾಗಿತ್ತು. ಅಲ್ಲೊಂದು ಕಡೆ ಅರಣ್ಯ ಇಲಾಖೆಯ ಚೆಕ್ ಪೋಸ್ಟ್ ಇತ್ತು. ಟ್ರಕ್ ಹತ್ತಿರ ಬರುತ್ತಿದ್ದಂತೆಯೇ ಟ್ರಕ್ಕನ್ನು ಇಬ್ಬರು ಗಾರ್ಡುಗಳು ಕೈ ಅಡ್ಡ ಹಾಕಿ ನಿಲ್ಲಿಸಿ ಬಿಟ್ಟರು. ಟ್ರಕ್ಕಿನಲ್ಲಿದ್ದವರಿಗೆ ಒಮ್ಮೆ ಭಯವಾಯಿತಾದರೂ ಜೊತೆಯಲ್ಲಿದ್ದವನೊಬ್ಬ ರೇಶನ್ ಸಾಗಿಸುತ್ತಿದ್ದೇವೆ ಎಂದ.
          ಆದರೆ ಗಾರ್ಡುಗಳಿಗೆ ಮಾತ್ರ ಅನುಮಾನ ಬಂದಂತಾಯಿತು. ಗಾಡಿ ನಿಲ್ಲಿಸಿ ಎಂದವರೇ ಟ್ರಕ್ಕಿನ ಹಿಂಭಾಗಕ್ಕೆ ಹೋಗಿ ತಪಾಸಣೆ ನಡೆಸಲು ಮುಂದಾದರು. ಕೂಡಲೇ ಬೆದರಿಸ ಕಳ್ಳಸಾಗಾಣಿಕೆದಾರರು ಅರಣ್ಯ ಇಲಾಖೆಯವರು ಹಾಕಿದ್ದ ಚೆಕ್ ಪೋಸ್ಟಿನ ಅಡ್ಡ ಕಂಬವನ್ನು ದಡಾರನೆ ಟ್ರಕ್ಕಿನ ಮೂಲಕ ಕಿತ್ತು ಮುಂದಕ್ಕೆ ಗಾಡಿಯನ್ನು ಚಲಾಯಿಸಿಯೇ ಬಿಟ್ಟರು. ತಕ್ಷಣ ಎಚ್ಚೆತ್ತುಕೊಂಡ ಗಾರ್ಡುಗಳು ಟ್ರಕ್ಕಿನ ನಂಬರ್ ಬರೆದುಕೊಂಡರು. ಅರಣ್ಯ ಇಲಾಖೆಯ ಕಚೇರಿಗೆ ಮಾಹಿತಿ ನೀಡಲು ಮುಂದಾದರು. ವಯರ್ ಲೆಸ್ ಮೂಲಕ ಹತ್ತಿರದ ಕಚೇರಿಗೆ ವಿಷಯವನ್ನು ತಿಳಿಸಿದರು. ಟ್ರಕ್ಕು, ಬಣ್ಣ, ಟ್ರಕ್ಕಿನಲ್ಲಿ ಏನನ್ನೋ ಕಳ್ಳಸಾಗಾಣಿಕೆ ಮಾಡಲಾಗುತ್ತಿದೆ ಕೂಡಲೇ ಹಿಡಿಯಿರಿ ಎಂದಿದ್ದಷ್ಟೇ ಅಲ್ಲದೇ ತಮ್ಮ ಬಳಿ ಇದ್ದ ಬೈಕಿನ ಮೂಲಕ ಲಾರಿಯನ್ನು ಬೆನ್ನತ್ತಿದರು. ಆ ನಂತರ ನಡೆದಿದ್ದು ಮಾತ್ರ ಸಿನೆಮಾ ಮಾದರಿಯ ಕಣ್ಣಾಮುಚ್ಚಾಲೆ. ಲಾರಿಯನ್ನು ಹಿಂಬಾಲಿಸಿ ಹಿಡಿಯಲು ಅನೇಕ ಸಾರಿ ಪ್ರಯತ್ನಿಸಿ ಸೋತರು ಗಾರ್ಡುಗಳು. ಕೊನೆಗೊಮ್ಮೆ ಟ್ರಕ್ಕಿನಲ್ಲಿದ್ದವರು ಏನೋ ಟ್ರಿಕ್ಕು ಮಾಡಿದರು. ಇದರಿಂದಾಗಿ ಟ್ರಕ್ಕನ್ನು ಬೆನ್ನತ್ತಿ ಹೋಗುತ್ತಿದ್ದ ಗಾರ್ಡುಗಳು ರಸ್ತೆ ಪಕ್ಕದ ಕಾಲುವೆಯಲ್ಲಿ ದಬಾರನೆ ಬಿದ್ದರು. ಬಿದ್ದವರೇ ತಮಗಾಗಿದ್ದ ಗಾಯವನ್ನೂ ನೋಡಿಕೊಳ್ಳದೇ ಹಿಗ್ಗಾ ಮುಗ್ಗಾ ಬಯ್ಯಲು ಆರಂಬಿಸಿದರು. ವೇಗವಾಗಿ ಹೋಗುತ್ತಿದ್ದ ಟ್ರಕ್ ರಸ್ತೆಯ ತಿರುವಿನಲ್ಲಿ ಕಣ್ಮರೆಯಾಯಿತು.

***

             ದೇಗುಲ ದರ್ಶನ ಮಾಡಿದವರು ಮನೆಗೆ ವಾಪಾಸಾಗುತ್ತಿದ್ದ ದಾರಿಯಲ್ಲಿ ಕಾಡನ್ನು ವೀಕ್ಷಣೆ ಮಾಡುತ್ತ ಬರುತ್ತಿದ್ದರು. ದಾರಿಯ ಇಕ್ಕೆಲಗಳಲ್ಲಿ ಅದೆಷ್ಟೋ ದೈತ್ಯ ಮರಗಳನ್ನು ಕಡಿದ ದೃಶ್ಯ ಕಾಣಿಸುತ್ತಿತ್ತು. ಮರಗಳ ಬುಡಗಳಷ್ಟೇ ನಿಂತಿದ್ದವು. ದೊಡ್ಡ ದೊಡ್ಡ ಬೊಡ್ಡೆಗಳಿದ್ದವು. ಬರುತ್ತಿದ್ದವರೆಲ್ಲ ಒಮ್ಮೆ ಛೇ ಎಂದುಕೊಂಡು ತಲೆಯನ್ನು ಕೊಡವಿದರು. ಬಂದ ದಾರಿಯಲ್ಲಿಯೇ ನದಿಯನ್ನು ದಾಟಿ ಮುನ್ನಡೆದರು. ವಿಕ್ರಮ ಹಾಗೂ ವಿಜೇತಾರಿಗೆ ಮಾತ್ರ ತಾವು ಮಾಡಬೇಕೆಂದುಕೊಂಡಿದ್ದ ಕೆಲಸ ಮುನ್ನಡೆಯುತ್ತಿಲ್ಲ ಎನ್ನುವ ತಲೆಬಿಸಿ ಹೆಚ್ಚಿತ್ತು. ಯಾವುದೋ ಒಂದು ಜಾಡನ್ನು ಹುಡುಕಿ, ಇನ್ನೇನು ಸುಳಿವು ಸಿಕ್ಕಿತು ಎನ್ನುವಷ್ಟರಲ್ಲಿ ಛೇ ಅದಲ್ಲ ಇದು  ಬೇರೆ ಮಾರ್ಗ ಬದಲಾಗುತ್ತಿತ್ತು. ಹೊಸ ಪಯಣವನ್ನು ಹುಡುಕಬೇಕಾಗುತ್ತಿತ್ತು. ವಿಕ್ರಮ ಹಾಗೂ ವಿಜೇತಾರು ಅದೆಷ್ಟು ಸಾರಿ ತಲೆ ಕೊಡವಿಕೊಂಡಿದ್ದರೋ.
               ಉಳಿದೆಲ್ಲ ಕೆಲಸವನ್ನು ಖೈದು ಮಾಡಿ ತಾವು ಬಂದ ಕೆಲಸಕ್ಕೇ ಮೊದಲು ಪ್ರಾಶಸ್ತ್ಯವನ್ನು ನೀಡಬೇಕು ಎಂದುಕೊಳ್ಳುತ್ತಿದ್ದಾಗಲೇ ಪಕ್ಕದ ಮನೆಯ ಗಣಪಜ್ಜ ಓಡಿ ಬಂದಿದ್ದ. ಕೈಯಲ್ಲಿ ಕೆಲವು ಕಾಗದಪತ್ರಗಳಿದ್ದವು. ಅಜ್ಜ ಬಂದವರೆ ಹೋಗಿ ಬಂದ್ರಾ ದೇವಸ್ತಾನಕ್ಕೆ..' ಎಂದರು. ಎಲ್ಲರೂ ತಲೆಯಾಡಿಸಿದರು. ಕೈಯಲ್ಲಿದ್ದ ಕಾಗದಪತ್ರವನ್ನು ತೆಗೆಯುತ್ತಾ `ನೋಡಿ. ಯನ್ನ ಅಪ್ಪಯ್ಯ ಗಣೇಶ ಹೆಗಡೆ ಅವರು ಅಡಿಕೆಯಿಂದ ಚಹಾ ಹಾಗೂ ಕಾಫಿಯ ತರಹ ಪೇಯವನ್ನು ತಯಾರು ಮಾಡಿದ್ದರಂತೆ. ಮೈಸೂರಿನ ಆಹಾರ ಗುಣಮಟ್ಟ ಪರಿಷ್ಕರಣ ಮಂಡಳಿಯಿಂದ ಪ್ರಮಾಣ ಮತ್ರ ಕೂಡ ಬಂದಿದೆ ನೋಡಿ.. ಏನೋ ಹುಡುಕುತ್ತಿದ್ದೆ. ಇದು ಸಿಕ್ಕಿತು. ತಕ್ಷಣ ನಿಮಗೆ ತೋರಿಸೋಣ ಎಂದು ತೆಗೆದುಕೊಂಡು ಬಂದಿ..' ಎಂದ ಗಣಪಜ್ಜ.
          ತೀರ್ಥಹಳ್ಳಿಯಲ್ಲಿ ಇತ್ತೀಚೆಗೆ ಯುವ ವಿಜ್ಞಾನಿಯೊಬ್ಬರು ಅಡಿಕೆಯಿಂದ ಪೇಯವನ್ನು ಕಂಡು ಹಿಡಿದಿದ್ದಾರೆ ಎನ್ನುವುದನ್ನು ಓದಿ ತಿಳಿದಿದ್ದ ವಿಜೇತಾ ಹಾಗೂ ವಿಕ್ರಮರಿಗೆ ಇದರಿಂದ ಅಚ್ಚರಿಯಾಯಿತು. ಅರ್ಧ ಶತಕದಷ್ಟು ವರ್ಷಗಳ ಹಿಂದೆಯೇ ಮಲೆನಾಡಿನ ಹಳ್ಳಿ ಮೂಲೆಯಲ್ಲಿ ಅಜ್ಜನೊಬ್ಬ ತಯಾರಿಸಿದ್ದ ಅಡಿಕೆ ಪೇಯ ಇತಿಹಾಸದ ಕಾಲಗರ್ಭದೊಳಗೆ ಮರೆಯಾಗಿ ಹೋಗಿತ್ತು. ಮತ್ತೆ ಎಲ್ಲೋ ಏನೋ ನೆನಪುಗಳು ಮರುಕಳಿಸಿದ ಹಾಗಾಯಿತು. ದಂಟಕಲ್ ಎಂಬ ಹಳ್ಳಿಯಲ್ಲಿ ಯಾವುದೋ ಕಾಲದಲ್ಲಿ ಏನೇನನ್ನೆಲ್ಲಾ ಮಾಡಿದ್ದರಲ್ಲಾ ಎಂದು ಯುವ ಪಡೆ ಹುಬ್ಬೇರಿಸುವ ಹಾಗೆ ಆಯಿತು.
          ಗಣೇಶಜ್ಜ ನ ಹಲವಾರು ಮುಖಗಳ ಅನಾವರಣವಾದಂತಾಗಿತ್ತು. ಸ್ವಾತಂತ್ರ್ಯ ಹೋರಾಟಗಾರನಾಗಿ, ಸಮಾಜ ಸೇವಕನಾಗಿ, ಶಿಕ್ಷಣ ಪ್ರೇಮಿಯಾಗಿ, ಕೃಷಿ ವಿಜ್ಞಾನಿಯಾಗಿ ಗಣೇಶಜ್ಜ ಅನಾವರಣಗೊಂಡಿದ್ದ. ಬಾದಾಮಿ ತೋಟ ಮಾಡಿದ್ದ, ಚಹಾ ಗಿಡಗಳನ್ನು ಬೆಳೆದಿದ್ದ, ಅನಂತ ಭಟ್ಟನ ಅಪ್ಪೆ ಮಿಡಿ ತಳಿ ರಕ್ಷಣೆ ಮಾಡಿದ್ದ, ಅಡಿಕೆಯ ಮೌಲ್ಯವರ್ಧನೆಯಲ್ಲಿ ತೊಡಗಿದ್ದ, ಬಹು ಉತ್ಪನ್ನ ತಯಾರಿಕೆಗೆ ಮುಂದಾಗಿದ್ದ. ಇವೆಲ್ಲ ಯುವ ಪಡೆಯ ಮನಸ್ಸನ್ನು ಸೂರೆಗೊಳಿಸಿತ್ತು. ಎಲ್ಲರೂ ಅಜ್ಜನಿಗೆ ನಮಿಸಿದರು.

(ಮುಂದುವರಿಯುತ್ತದೆ)

(ಗಣೇಶಜ್ಜ ಮಾಡಿದ್ದೆಲ್ಲವೂ ನಿಜವಾದ ಘಟನೆಗಳಾಗಿವೆ. ಯಾವುದೇ ಕಲ್ಪನೆಗಳಲ್ಲ)

Wednesday, July 8, 2015

ಪುನೀತೆ

ಬಾಳಿನಾ ಹರಹಿನಲಿ
ಬದುಕುವುದ ಕಲಿತೆ
ಹೃದಯಾದಾಕಾಶದಲಿ
ಪ್ರೀತಿಯನು ಅರಿತೆ ||

ನೋವಿನ ನಡುವಿನಲಿ
ನಗುವುದನು ಕಲಿತೆ
ನಗು ನಗುವ ಜೊತೆಯಲ್ಲಿ
ಅಳುವುದನು ಮರೆತೆ ||

ಬದುಕಿನ ಬೀದಿಯಲಿ
ಎಡವುವುದ ಮರೆತೆ
ಎಡವಿ ಬಿದ್ದೆಡೆಯಲ್ಲಿ
ಬರೆದೆ ನಾ ಕವಿತೆ ||

ಗೆಲುವಿನ ಚಣದಲ್ಲಿ
ಎಲ್ಲವನೂ ಸೋತೆ
ಸೋತು ಬಸವಳಿದಾಗ
ಗೆಲ್ಲುವುದನು ಕಲಿತೆ ||

ಎಲ್ಲವನು ಮರೆತಾಗ
ಎಲ್ಲವನು ಕಲಿತೆ
ಯಾವುದೋ ಘಟ್ಟದಲಿ
ಆಗಿರುವೆ ಪುನೀತೆ ||

***

(ಈ ಕವಿತೆಯನ್ನು ಬರೆದಿರುವುದು 13-11-2005ರಂದು ದಂಟಕಲ್ಲಿನಲ್ಲಿ)
(2005-06ನೇ ಸಾಲಿನ ಎಂ.ಇ.ಎಸ್. ಎಂ. ಎಂ. ಕಲಾ ಮತ್ತು ವಿಜ್ಞಾನ ಕಾಲೇಜಿನ ಕವನ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನವನ್ನು ಗಳಿಸಿಕೊಂಡಿದೆ)

Monday, July 6, 2015

ಅಘನಾಶಿನಿ ಕಣಿವೆಯಲ್ಲಿ-21

            ದಂಟಕಲ್ಲಿನಲ್ಲಿ ಪ್ರತಿಯೊಬ್ಬರೂ ಪೊಲೀಸರು ಬಂಧಿಸಿದ ಕಾರಣವನ್ನು ಕೇಳುವವರೇ ಆಗಿದ್ದರು. ಅವರೆಲ್ಲರಿಗೂ ಕಾರಣವನ್ನು ಹೇಳುವಷ್ಟರಲ್ಲಿ ಸುಸ್ತೋ ಸುಸ್ತು. ಪೊಲೀಸರ ದರ್ಪ, ಪ್ರದೀಪನ ಸಮಯಪ್ರಜ್ಞೆ, ಗಪ್ಪಜ್ಜನ ಪ್ರೀತಿ ಇತ್ಯಾದಿಗಳೆಲ್ಲ ಬಾಯಿಂದ ಬಾಯಿಗೆ ರಸವತ್ತಾಗಿ, ರೋಚಕವಾಗಿ ಹರಿದು ಬಂದಿದ್ದು ಮಾತ್ರ ವಿಶೇಷವಾಗಿತ್ತು. ಮಲೆನಾಡಿನ ಹಳ್ಳಿಗೆ ಬಂದಿದ್ದ ಯುವ ಪಡೆ ಮಲೆನಾಡಿನ ತುಂಬೆಲ್ಲ, ಅಷ್ಟೇ ಏಕೆ ರಾಜ್ಯದಾದ್ಯಂತ ಒಂದೇ ಕ್ಷಣದಲ್ಲಿ ಹೆಸರು ಮಾಡಿದ್ದು ಮಾತ್ರ ಸುಳ್ಳಲ್ಲ. ಪೊಲೀಸರಿಗೆ ಅದ್ಯಾರು ಮಾಹಿತಿ ನೀಡಿದ್ದರೋ ಏನೋ, ತಮ್ಮನ್ನು ನಕ್ಸಲರು ಎಂದುಕೊಂಡು ಬಂಧಿಸಿದ್ದು ಮಾತ್ರ ವಿಚಿತ್ರವಾಗಿತ್ತು. ಆದರೂ ಈ ಬಂಧನದ ಹಿಂದೆ ಇನ್ಯಾವುದೋ ಸಂಚಿದೆ ಎಂದು ವಿಕ್ರಮನಿಗೆ ಒಮ್ಮೆ ಅನ್ನಿಸಿತ್ತಾದರೂ ತನ್ನೆದುರು ಇರುವ ಅಗೋಚರ ಶತ್ರು ಇಷ್ಟೆಲ್ಲ ಮುಂದಕ್ಕೆ ಯೋಚಿಸಿರಲಾರ ಎಂದುಕೊಂಡ.
               ಅದ್ಯಾವುದೋ ದೊಡ್ಡ ಕಂಟಕ ಇಷ್ಟು ಚಿಕ್ಕದರಲ್ಲೇ ಹೋಯಿತು ಎಂದುಕೊಂಡರು ಎಲ್ಲರೂ. ಖಂಡಿತವಾಗಿಯೂ ಗುಡ್ಡೇತೋಟದ ಕೋಟೆ ವಿನಾಯಕನ ಶ್ರೀರಕ್ಷಯಿಂದ ದೊಡ್ಡ ಆಪತ್ತು ಚಿಕ್ಕದರಲ್ಲಿಯೇ ಪರಿಹಾರವಾಗಿದೆ ಎಂದುಕೊಂಡರು ಎಲ್ಲರೂ. ಮರುದಿನ ಗುಡ್ಡೇತೋಟಕ್ಕೆ ಹೋಗಿ ದೇವರಿಗೆ ಪೂಜೆ ಮಾಡಿ ಬರಬೇಕು ಎಂದು ನಿಶ್ಚಯಿಸಿಕೊಂಡರು.

000000

              `ಗುಡ್.. ಒಳ್ಳೆಯಕ ಕೆಲಸ ಮಾಡಿದ್ದಿರಿ. ಆದರೆ ಇಷ್ಟು ಸುಲಭದಲ್ಲಿ ಅವರು ತಪ್ಪಿಸಿಕೊಂಡು ಬರುತ್ತಾರೆ ಎನ್ನುವುದು ಮಾತ್ರ ಗೊತ್ತಿರಲಿಲ್ಲ ನೋಡಿ..' ಎಂದ ಒಬ್ಬಾತ.
             `ನಾವೇನೋ ಸರಿಯಾದ ಮಾಹಿತಿಯನ್ನೇ ಕೊಟ್ಟಿದ್ದೆವು. ಪೊಲೀಸರ ಬಳಿ ದಂಟಕಲ್ಲಿಗೆ ಬಂದಿದ್ದವರು ನಕ್ಸಲರು ಎಂದೇ ಹೇಳಿದ್ದೆವು. ಅಷ್ಟೇ ಅಲ್ಲದೇ ಮೀಡಿಯಾಕ್ಕೂ ತಿಳಿಸಿ ಆಗಿತ್ತು. ಆದರೆ ಬಂಧಿಸಿದವರಲ್ಲಿ ಒಬ್ಬಾತ ಮಾತ್ರ ದೊಡ್ಡ ದೊಡ್ಡ ಕಾಂಟ್ಯಾಕ್ಟ್ ಹೊಂದಿದ್ದಾನೆ. ಅವನೇ ಇಷ್ಟು ಬೇಗ ಎಲ್ಲರೂ ವಾಪಾಸು ಬರಲು ಪ್ರಮುಖ ಕಾರಣ ನೋಡಿ..' ಎಂದ ಇನ್ನೊಬ್ಬಾತ.
           `ಓಹ್ ಹೌದಾ. ಯಾವುದಕ್ಕೂ ಹುಷಾರಾಗಿರಿ. ಯಾವುದೇ ಅವಕಾಶಕ್ಕಾಗಿ ಕಾಯುತ್ತಿರಿ. ಅನುಕೂಲಕರ ಅವಕಾಶ ಸಿಕ್ಕ ತಕ್ಷಣ ಬಂದಿದ್ದವರನ್ನು ಹಣಿದು ಹಾಕಿ. ಯಾಕೋ ಅವರು ಸುಮ್ಮನೆ ಬಂದಿಲ್ಲ ಎಂಬ ಅನುಮಾನ ಬರುತ್ತಿದೆ. ಪಾತರಗಿತ್ತಿ ಸರ್ವೆ ಮಾಡುವುದು, ಕಾಡು ಸುತ್ತುವುದು ಕೇವಲ ನೆಪ ಇರಬೇಕು. ನಾವು ಎಲ್ಲದಕ್ಕೂ ಸಜ್ಜಾಗಿ ಇರೋಣ. ಸದವಕಾಶ ಸಿಕ್ಕ ತಕ್ಷಣ ಅವರನ್ನು ವಾಪಾಸು ಕಳಿಸುವ ಕೆಲಸ ಮಾಡೋಣ..'ಎಂದು ಮೊದಲನೆಯವನು ಹೇಳಿದ್ದಕ್ಕೆ ಎರಡನೆಯವರು ಒಪ್ಪಿಗೆ ಸೂಚಿಸಿದ. ತಲೆಯಲ್ಲಾಡಿಸಿದ.
            ವಿಕ್ರಮ ಹಾಗೂ ಆತನ ಜೊತೆಗಾರರು ದಂಟಕಲ್ ಹಾಗೂ ಸುತ್ತಮುತ್ತಲ ಹಳ್ಳಿಗೆ ಬಂದಿರುವುದನ್ನು ಗಮನಿಸುವವರೂ ಇದ್ದಾರೆ ಎನ್ನುವುದು ಮಾತ್ರ ಸಾಬೀತಾಗಿತ್ತು. ಅವಕಾಶ ಸಿಕ್ಕರೆ ವಿಕ್ರಮನ ತಂಡವನ್ನು ಹಣಿದು ಹಾಕಲೂ ಸನ್ನದ್ದರಾಗಿದ್ದರು. ಆದರೆ ವಿಕ್ರಮನ ಗುಂಪಿಗೆ ಇದರ ಅರಿವಿದೆಯಾ? ಬಲ್ಲವರ್ಯಾರು?

++++++

          ಮುಂಜಾನೆದ್ದು ಪ್ರಾತರ್ವಿಧಿಗಳನ್ನು ಮುಗಿಸಿ ಎಲ್ಲರೂ ಗುಡ್ಡೇತೋಟಕ್ಕೆ ತೆರಳಲು ಸಜ್ಜಾದರು. ಮನೆಯಿಂದ ಹೊರಟು ಅಘನಾಶಿನಿ ನದಿಗುಂಟ ಹಾದು ಬಂದು ಗದ್ದೆಯ ಮನೆ ಬಳಿ ತೆರಳಿದರು. ಅಲ್ಲಿಯೇ ಇರುವ ಕಾಕಾಲಗದ್ದೆ ಎಂಬಲ್ಲಿ ಅಘನಾಶಿನಿ ನದಿ ವಿಶಾಲವಾಗಿ ಹರಿಯುತ್ತಾಳೆ. ಉಳಿದ ಕಡೆಗಳಲ್ಲಿ ಎದೆ ಮಟ್ಟವೋ, ಕುತ್ತಿಗೆ ಮಟ್ಟವೋ ಆಳವಾಗಿ ಹರಿಯುವ ಅಘನಾಶಿನಿ ನದಿ ಕಾಕಾಲ ಗದ್ದೆ ಎಂಬಲ್ಲಿ ಮಾತ್ರ ಪಾದ ಮುಳುಗುವಷ್ಟು ಮಾತ್ರ ಆಳವಾಗಿದ್ದಾಳೆ. ವಿಶಾಲವಾಗಿ ಹರಿಯುವ ಕಾರಣ ಕಾಕಾಲ ಗದ್ದೆಯಲ್ಲಿ ನದಿ ಆಳವಾಗಿಲ್ಲ. ಚಿಕ್ಕ ಮಕ್ಕಳೂ ಕೂಡ ಸಲೀಸಾಗಿ ನದಿಯನ್ನು ನಡೆದುಕೊಂಡು ದಾಟಬಹುದು. ಅಷ್ಟೇ ಏಕೆ ಕೆಲವು ಉತ್ಸಾಹಿ ಹೈದರು ಈ ಕಾಕಾಲ ಗದ್ದೆಯಲ್ಲಿಯೇ ತಮ್ಮ ಬೈಕನ್ನೂ ದಾಟಿಸುವ ಸಾಹಸ ಮಾಡುತ್ತಾರೆ. ಈ ಪ್ರದೇಶಕ್ಕೆ ಕರೆದುಕೊಂಡು ಬಂದ ವಿನಾಯಕ ಹೊಳೆಯನ್ನು ದಾಟಬೇಕು ಎಂದ. ಅಘನಾಶಿನಿಯನ್ನು ದಾಟಲೋಸುಗ ಎಲ್ಲರೂ ನದಿಯಲ್ಲಿ ಕಾಲಿಟ್ಟು. ನದಿ ನೀರು ಅದೆಷ್ಟು ತಣ್ಣಗಿತ್ತು ಎಂದರೆ ಪಾದದ ಮೂಲಕ ನೆತ್ತಿಯೂ ತಂಪಾದಂತೆ ಅನ್ನಿಸಿತು.
            ವಿಜೇತಾ ಹಾಗೂ ಮಹಿಳಾ ಮಣಿಯರು ತಂಪಾದ ನೀರಿನಲ್ಲಿ ಆಡಲು ಮುಂದಾಗಿದ್ದರು. ಆದರೆ ಮೊದಲು ದೇಗುಲ ದರ್ಶನ ಮಾಡಿ ನಂತರ ಮುಂದಿನ ಕೆಲಸ ಎಂದುಕೊಂಡು ನದಿಯನ್ನು ಬೇಗನೇ ದಾಟಲು ಮುಂದಾದರು. ನದಿಯನ್ನು ದಾಟಿದಂತೆಯೇ ದೊಡ್ಡದೊಂದು ಗದ್ದೆ ಬಯಲು ಸಿಗುತ್ತದೆ. ಹಿತ್ತಲಕೈ ಗ್ರಾಮಕ್ಕೆ ಸೇರಿದ ಈ ಗದ್ದೆ ಬಯಲಿನ ಪಕ್ಕದಲ್ಲಿಯೇ ಒಂದೆರಡು ಮನೆಗಳಿರುವ ಕಾಕಾಲಗದ್ದೆ ಎನ್ನುವ ಹಳ್ಳಿ ಇದೆ. ಇಲ್ಲಿ ಹಾದು ಮುಂದಕ್ಕೆ ಅಡಿ ಇಟ್ಟಂತೆಲ್ಲ ನಿಧಾನವಾಗಿ ಕಾಡು ಆವರಿಸತೊಡಗಿತು. ಸರಿಸುಮಾರು 1 ಕಿ.ಮಿ ದೂರದವರೆಗೆ ಕಾಡಿನ ದಾರಿಯಲ್ಲಿ ನದಿಗೆ ಸಮಾನಾಂತರವಾಗಿ ಸಾಗಿದ ನಂತರ ದೊಡ್ಡದೊಂದು ಗುಡ್ಡ ಎದುರಾಯಿತು.
            `ಈ ಗುಡ್ಡದ ಮೇಲೆಯೇ ಗುಡ್ಡೇತೋಟ ಊರಿದೆ. ಇಲ್ಲಿಯೇ ಕೋಟೆ ವಿನಾಯಕನ ದೇವಸ್ಥಾನ ಇದೆ..' ಎಂದ ವಿನಾಯಕ. ಎಲ್ಲರೂ ಗುಡ್ಡವನ್ನು ಏರಲು ಉತ್ಸುಕರಾದರು. ಎದೆಯ ಮಟ್ಟಕ್ಕಿದ್ದ ಗುಡ್ಡವನ್ನು ಏರುವುದು ಸುಲಭವಲ್ಲ ನೋಡಿ. ಪ್ರತಿಯೊಬ್ಬರಿಗೂ ಏದುಸಿರುವ ಬರುತ್ತಿತ್ತು. ಆದರೂ ಗುಡ್ಡವನ್ನೇರುವ ಛಲ ಯಾರಲ್ಲೂ ಕಡಿಮೆಯಾಗಿರಲಿಲ್ಲ. ದೇಹಕ್ಕೆ ಸುಸ್ತಾಗುತ್ತಿತ್ತದ್ದರೂ ಅದನ್ನು ತೋರಿಸಿಕೊಳ್ಳದೇ ಮುಂದಕ್ಕೆ ಹೋಗುತ್ತಿದ್ದರು.
           ಇದ್ದಕ್ಕಿದ್ದಂತೆ `ಅರೇ.. ಅಲ್ಲಿ ನೋಡಿ.. ಅದು ಕಾಡುಕೋಣ ಅಲ್ಲವಾ..' ಎಂದ ಪ್ರದೀಪ.
           ಪ್ರದೀಪ ತೋರಿಸಿದತ್ತ ಎಲ್ಲರೂ ದೃಷ್ಟಿ ಹಾಯಿಸಿದರು. ` ಹೌದು.. ಕಾಡುಕೋಣದ ಹಿಂಡು ಅಲ್ಲಿ ಹುಲ್ಲು ತಿನ್ನುತ್ತಿದೆ ನೋಡಿ.. ಆರು ಇದೆ. ಅಲ್ಲಲ್ಲ.. ಎಂಟು ಇರಬೇಕು ನೋಡಿ..' ಎಂದ ವಿನಾಯಕ.
            ಸನಿಹದಲ್ಲೇ ಇದ್ದ ನೀರಿನ ಒರತೆಯಲ್ಲಿ ಕಾಡೆಮ್ಮೆಗಳ ಹಿಂಡೊಂದು ಹುಲ್ಲು ತಿನ್ನುತ್ತ ಆರಾಮಾಗಿ ನಿಂತಿತ್ತು. ದೇವಸ್ಥಾನ ನೋಡಲು ಹೊರಟಿದ್ದವರನ್ನು ಕಾಡೆಮ್ಮೆಗಳು ಒಮ್ಮೆ ತಲೆಯೆತ್ತಿ ನೋಡಿದವು. ಯುವ ಪಡೆಯ ಮಾತು, ಕತೆಗಳು ಕಾಡೆಮ್ಮೆಗಳಲ್ಲಿಯೂ ವಿಸ್ಮಯ ಮೂಡಿಸಿರಬೇಕು. ಹಾಗೆಯೇ ಕೆಲಕಾಲ ತಲೆ ಎತ್ತಿ ನೋಡುತ್ತಿದ್ ಅವುಗಳು ಯುವ ಪಡೆಯಿಂದ ತಮಗೆ ಯಾವುದೇ ಅಪಾಯ ಆಗುವುದಿಲ್ಲ ಎಂದುಕೊಂಡಿರಬೇಕು. ನಿಧಾನವಾಗಿ ತಮ್ಮ ಕೆಲಸದಲ್ಲಿ ತಾವು ನಿರತವಾದವು. ಯುವ ಪಡೆ ಕೂಡ ಕೆಲ ಕಾಲ ಕಾಡೆಮ್ಮೆಗಳನ್ನು ನೋಡಿ, ಅವುಗಳ ಗಾತ್ರ, ನಿಲುವುಗಳನ್ನೆಲ್ಲ ಲೆಕ್ಖಹಾಕಿ, ಅವುಗಳ ಬಗ್ಗೆ ಮಾತನಾಡುತ್ತ ಮುಂದಕ್ಕೆ ಹೆಜ್ಜೆ ಇಟ್ಟಿತು.
           ಗುಡ್ಡೇತೋಟದ ದೇವಸ್ಥಾನವನ್ನು ದರ್ಶನ ಮಾಡಬೇಕೆಂದರೆ ಎದೆಯ ಎತ್ತರದ ಗುಡ್ಡವನ್ನು ಏರುವುದು ಅನಿವಾರ್ಯ. ಗುಡ್ಡವನ್ನು ಏರಿದ ನಂತರ ಸ್ವಲ್ಪ ವಿಶಾಲ ಎನ್ನಬಹುದಾದ ಸ್ಥಳ ಸಿಕ್ಕಿತು. ಬಯಲಿನಲ್ಲಿ ಒಂದು ಕಡೆ ಗದ್ದೆಯನ್ನು ಬೆಳೆಯಲಾಗಿದದ್ದರೆ ಇನ್ನೊಂದು ಕಡೆಯಲ್ಲಿ ಹಳೆಯದು ಎನ್ನುವಂತಹ ದೇವಾಲಯ ಭವ್ಯವಾಗಿ ನಿಂತಿತ್ತು. ದೇಗುಲದ ಎದುರು ಒಂದು  ದೇವಕಣಗಿಲೆ ಮರವಿತ್ತು. ಅದರಲ್ಲಿ ಬಿಳಿಯ ಬಣ್ಣದ ಹೂವುಗಳು ಸುವಾಸನೆಯನ್ನು ಬೀರುತ್ತ ಅರಳಿ ನಿಂತಿದ್ದವು. ದೇಗುಲದ ಹಿಂಭಾಗದಲ್ಲಿ ಸ್ವರ್ಣವಲ್ಲಿ ಸಂಸ್ಥಾನದ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮೀಜಿಗಳ ಅಮೃತ ಹಸ್ತದಿಂದ ಉದ್ಘಾಟನೆಯಾದ ಭೋಜನ ಶಾಲೆಯಿತ್ತು.
            ಗುಡ್ಡೇತೋಟದ ಕೋಟೆ ವಿನಾಯಕನ ಸನ್ನಿಧಾನದ ಒಳಗೆ ಎಲ್ಲರೂ ಕೈ ಕಾಲುಗಳನ್ನು ತೊಳೆದುಕೊಂಡು ಕಣ್ಣಿಗೆ ನೀರನ್ನು ಹಚ್ಚಿಕೊಂಡು ಮುನ್ನಡೆದರು. ದೇಗುಲದ ಅರ್ಚಕರು ಆಗಲೇ ಪೂಜೆಯಲ್ಲಿ ನಿರತರಾಗಿದ್ದರು. ದೇಗುಲದ ಒಳಕ್ಕೆ ಕಾಲಿರಿಸಿದವರೇ ದೇವಾಲಯವನ್ನು ನಾಲ್ಕೈದು ಸಾರಿ ಸುತ್ತು ಹೊಡೆದು ಗಂಟೆಯನ್ನು ಭಾರಿಸಿ ದೇವರಿಗೆ ಉದ್ದಾಂಡ ನಮಸ್ಕಾರವನ್ನೂ ಮಾಡಿದರು. ಇವರಿಗಾಗಿಯೇ ಕಾಯುತ್ತಿದ್ದರೋ ಎನ್ನುವಂತೆ ದೇವಾಲಯದಲ್ಲಿ ಅರ್ಚಕರು ಮಂಗಳಾರತಿಯನ್ನು ಕೈಗೊಂಡರು. ಪ್ರತಿಯೊಬ್ಬರೂ ಹಣ್ಣು-ಕಾಯಿ ಮಾಡಿಸಿಕೊಂಡು ದೇವರಿಂದ ಪ್ರಸಾದ ಪಡೆದು ಒಳ್ಳೆಯದನ್ನು ಮಾಡಪ್ಪ ಭಗವಂತಾ ಎಂದರು.
             ವಿಕ್ರಮ, ವಿಜೇತಾರು ತಾವು ಬಂದಿದ್ದ ಕಾರ್ಯ ಕೈಗೂಡಲಿ ಎಂದು ಬೇಡಿಕೊಂಡರು. ಅಷ್ಟರಲ್ಲಿಯೇ ಗರ್ಭಗುಡಿಯಲ್ಲಿ ಪೂಜಾ ಕೈಂಕರ್ಯವನ್ನು ಮುಗಿಸಿ ಹೊರಬಂದರು. `ಅರೇ ವಿನಾಯಕ.. ಯಾರಪ್ಪಾ ಬಂದವರು ಎಂದುಕೊಂಡೆ.. ಇವರೆಲ್ಲ ಯಾರು...?' ಎಂದರು.
          `ಇವರೆಲ್ಲ ನನ್ನ ಗೆಳೆಯರು ಬೆಂಗಳೂರು ಕಡೆಯಿಂದ ಬಂದಿದ್ದಾರೆ. ನಮ್ಮೂರ ಭಾಗದಲ್ಲಿ ಪಾತರಗಿತ್ತಿ ಹಾಗೂ ವಿವಿಧ ಪ್ರಾಣಿಗಳ ದಾಖಲೆ ಮಾಡಲು ಬಂದಿದ್ದಾರೆ..' ಎಂದ.
            `ಹೌದಾ.. ಯಾರೋ ಬಂದಿದ್ದಾರೆ ಎಂದು ಸುದ್ದಿಯಾಗಿತ್ತು. ಇವರೇಯೋ ಹೇಗೆ..' ಎಂದರು. ಎಲ್ಲರೂ ತಲೆಯಾಡಿಸಿದರು.
            ವಿನಾಯಕ ಭಟ್ಟರ ಬಳಿ ದೇವಸ್ಥಾನದ ವಿಶೇಷತೆಗಳನ್ನು ಎಲ್ಲರಿಗೂ ಹೇಳಿ ಎಂದ. ದೇವಸ್ಥಾನದ ವಿಶೇಷತೆಗಳನ್ನು ಹೇಳಲು ಮುಂದಾದ ಭಟ್ಟರು ಎಲ್ಲರನ್ನೂ ಒಂದು ಕಡೆ ಕುಳ್ಳಿರಿಸಿದರು.
          `ನೋಡಿ ಈ ದೇವಸ್ಥಾನಕ್ಕೆ ಕನಿಷ್ಟವೆಂದರೂ 500 ರಿಂದ 600 ವರ್ಷ ಇತಿಹಾಸವಿದೆ. ಬಹಳಾ ಘಟಾಘಟಿ ಜಾಗ. ಈ ಮೊದಲು ಈ ದೇವಸ್ಥಾನ ನಮ್ಮೂರಿಗೆ ಹತ್ತಿರದ ಹೂವಿನಮನೆಯ ಕೋಟೆಗುಡ್ಡ ಎಂಬಲ್ಲಿ ಇತ್ತು. ಆ ನಂತರ ಅದ್ಯಾರಿಗೂ ಕನಸಿನಲ್ಲಿ ಬಂದ ಕಾರಣ ಇಲ್ಲಿಗೆ ದೇವಸ್ಥಾನವನ್ನು ಬದಲಿಸಲಾಯಿತು. ಬಾಳೂರಿನ ಅರಸರ ಆಳ್ವಿಕೆಯ ಕಾಲದಲ್ಲಿ ಈ ದೇವಸ್ಥಾನಕ್ಕೆ ಕಟ್ಟಡವನ್ನು ನಿರ್ಮಾಣ ಮಾಡಲಾಯಿತು. ಬಾಳೂರು ಅರಸರು ದೇವಸ್ಥಾನ ನಿರ್ಮಾಣ ಮಾಡಿದ ಕಾರಣದಿಂದಾಗಿ ದೇಗುಲದ ಮುಂದೆ ಒಂದು ನಂದಿ ಆಕೃತಿಯನ್ನು ಸ್ಥಾಪಿಸಲಾಗಿದೆ. ಈ ನಂದಿ ಬಾಳೂರ ಅಸನ ಪ್ರತೀಕ. ಗಣಪನ ದೇವಾಲಯದ ಮುಂದೆ ನಂದಿ ಇರುವ ಕೆಲವೇ ಕೆಲವು ವಿಶಿಷ್ಟ ನಿದರ್ಶನಗಳಲ್ಲಿ ಇದು ಒಂದು ನೋಡಿ..' ಎಂದರು ಭಟ್ಟರು. ಎಲ್ಲರೂ ಅತ್ತ ಕಡೆ ಕಣ್ಣು ಹಾಯಿಸಿದರು.
              `ಈ ದೇವಸ್ಥಾನಕ್ಕೆ ಇನ್ನೂ ಒಂದು ವಿಶೇಷತೆಯಿದೆ ನೋಡಿ. ಈ ಗಣಪನನ್ನು ಎಲೆಕ್ಷನ್ ಗಣಪ ಎಂದೂ ಕರೆಯಲಾಗುತ್ತದೆ. ಅಂದರೆ ಎಲೆಕ್ಷನ್ ಸಮಯದಲ್ಲಿ ನಮ್ಮ ಗಣಪನಿಗೆ ಎಲ್ಲಿಲ್ಲದ ಬೇಡಿಕೆ. ಚುನಾವಣೆಯಲ್ಲಿ ಟಿಕೆಟ್ ಬೇಕಾದವರು ಇಲ್ಲಿಗೆ ಬಂದು ಹರಕೆ ಹೊತ್ತುಕೊಂಡರೆ ಟಿಕೆಟ್ ಸಿಗುತ್ತದೆ ಎನ್ನುವ ನಂಬಿಕೆಯಿದೆ. ಟಿಕೆಟ್ ಸಿಕ್ಕವರಲ್ಲಿ ಕೆಲವರು ಗೆಲುವಿಗಾಗಿ ಪೂಜೆಯನ್ನು ಮಾಡಿಸುವುದೂ ಇದೆ. ಗೆದ್ದವರೂ ಬಂದು ಪೂಜೆ ಮಾಡಿಸುತ್ತಾರೆ ನೋಡಿ. ಈ ಕಾರಣದಿಂದ ನಮ್ಮ ಗಣಪ ಎಲೆಕ್ಷನ್ ಗಣಪ ಆಗಿದ್ದಾನೆ. ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿಯೂ ಕೂಡ ಹಲವರು ಬಂದು ಪೂಜೆ ಮಾಡಿಸಿದ್ದರು ನೋಡಿ..' ಎಂದರು ಭಟ್ಟರು.
             `ದೇವರಿಗೆ ಪೂಜೆ ಸಲ್ಲಿಸಿ, ಗಂಟೆಯನ್ನು ಹರಕೆಯ ರೂಪದಲ್ಲಿ ಒಪ್ಪಿಸುವುದು ಇಲ್ಲಿನ ವಾಡಿಕೆ. ಕಾಡಿನ ಮಧ್ಯದಲ್ಲಿ ಇರುವ ಈ ದೇವರನ್ನು ನೋಡಲು ರಾಜ್ಯದ ಹಲವು ಕಡೆಗಳಿಂದ ಬರುತ್ತಾರೆ ನೋಡಿ. ಇಂತಹ ಈ ದೇವಾಲಯದ ಪ್ರದೇಶ ಗುಡ್ಡದ ಮೇಲಿದ್ದರೂ ಇಲ್ಲಿ ನೀರಿನ ಸೆಲೆ ಚನ್ನಾಗಿದೆ. ಎಲ್ಲ ಭಗವಂತನ ಆಶೀರ್ವಾದ ನೋಡಿ..' ಎಂದರು ಭಟ್ಟರು.
            ಪ್ರತಿಯೊಬ್ಬರೂ ದೇವರ ಮಹಿಮೆಯ ಬಗ್ಗೆ ಅಚ್ಚರಿ ತೋರಿಸುತ್ತಾ ವಾಪಾಸಾಗಲು ಮುಂದಾದರು. ಆಗ ಇದ್ದಕ್ಕಿದ್ದಂತೆ ಅಚಾತುರ್ಯವೊಂದು ಘಟಿಸಿಬಿಟ್ಟಿತು. ಯಾರೂ ಅಂದುಕೊಂಡಿರದ ಘಟನೆಯೊಂದು ಜರುಗಿತು. ಅಚಾನಕ್ ಆಗಿ ನಡೆದ ಘಟನೆ ಎಲ್ಲರ ಮನಸ್ಸಿನಲ್ಲಿ ಭಯದ ಛಾಯೆ ಆವರಿಸಿತು.

(ಮುಂದುವರಿಯುತ್ತದೆ.)

Tuesday, June 30, 2015

ಅಘನಾಶಿನಿ ಕಣಿವೆಯಲ್ಲಿ-20

              ಮುಂಜಾನೆಯ ಮಂಜಿನ ಪರದೆ ದಂಟಕಲ್ಲನ್ನು ಆವರಿಸಿಕೊಂಡಿತ್ತು. ಬೆಳ್ಂಬೆಳಿಗ್ಗೆ ಮನೆಯ ಮುಂದೆ ರಂಗೋಲಿಯನ್ನು ಹಾಕುತ್ತಿರುವ ಹೊತ್ತಿನಲ್ಲಿಯೇ ಅದೇನೋ ವಾಹನ ಬಂದ ಸದ್ದಾಯಿತು. ಬೆಳ್ಳಂಬೆಳಿಗ್ಗೆ ಯಾರಿರಬಹುದು ಎನ್ನುವ ಕುತೂಹಲ ಎಲ್ಲರ ಮನಸ್ಸಿನಲ್ಲಿಯೂ ಮೂಡಿತು.
             ಮಂಜಿನ ಪರದೆಯನ್ನು ಹರಿದುಕೊಂಡು ಜೀಪೊಂದು ಬಂದು ಮನೆಯಂಗಳದಲ್ಲಿ ನಿಂತಿತು. ಮನೆಯಂಗಳದಲ್ಲಿ ಹಾಕಿದ್ದ ದೊಡ್ಡ ದೊಡ್ಡ ಕಂಬದ ಮೇಲೆ ಅಟ್ಟ ರಾರಾಜಿಸುತ್ತಿದ್ದರೆ ಗುರುಗುಡುತ್ತ ಬಂದ ಜೀಪು ಅಟ್ಟದ ಕೆಳಗೆ ನಿಂತುಕೊಂಡಿತು. ಧಡ ಧಢ್ ಎಂದು ಇಬ್ಬರು ಇಳಿದರು. ಇಳಿದ ತಕ್ಷಣವೇ ಗೊತ್ತಾಗಿದ್ದು. ಬಂದವರು ಪೊಲೀಸರು ಎಂಬುದು. ಎಲ್ಲರಲ್ಲೂ ಅಚ್ಚರಿ. ಬೆಳ್ಳಂಬೆಳಿಗ್ಗೆ ಪೊಲೀಸರು ಬಂದಿದ್ದಾರೆ ಎನ್ನುವುದು ಎಲ್ಲರ ಮನಸ್ಸಿನಲ್ಲಿಯೂ ಮೂಡಿತು. ಊರಿನ ಒಂದೆರಡು ಹೈದರಂತೂ ತಮ್ಮೂರಿ ಫಾಸಲೆಯಲ್ಲಿ ಯಾವುದಾದರೂ ಗಲಾಟೆ, ಕಳ್ಳತನಗಳು ನಡೆದಿದೆಯೇ ಎಂದು ಜ್ಞಾಪಿಸಿಕೊಳ್ಳುತ್ತಿದ್ದಾಗಲೇ ಪೊಲೀಸ್ ಅಧಿಕಾರಿಯೊಬ್ಬ `ಈ ಊರಿಗೆ ಯಾರೋ ಒಂದಿಷ್ಟು ಜನ ಬಂದಿದ್ದಾರಂತಲ್ಲ. ಯಾರವರು? ಈಗೆಲ್ಲಿದ್ದಾರೆ? ತೋರಿಸಿ' ಎಂದು ದರ್ಪದಿಂದಲೇ ಹೇಳಿದ.
             ಊರಿನ ನಾಗರಿಕರು ಒಮ್ಮೆ ಬೆಚ್ಚಿಬಿದ್ದು ವಿನಾಯಕನ ಮನೆಯನ್ನು ತೋರಿಸಿದರು. ಬೆಳಗಿನ ಸವಿನಿದ್ದೆಯಲ್ಲಿ ಎಲ್ಲರೂ ಇದ್ದರು. ಬೆಳ್ಳಬೆಳಿಗ್ಗೆ ಬಂದ ಪೊಲೀಸ್ ಜೀಪಿನ ಸದ್ದು ಎಲ್ಲರ ನಿದ್ದೆಯನ್ನು ಹೊಡೆದೋಡಿಸಿತ್ತಾದರೂ ಯಾರೂ ಇನ್ನೂ ಹಾಸಿಗೆಯನ್ನು ಬಿಟ್ಟು ಎದ್ದಿರಲಿಲ್ಲ. ಮನೆಯೊಳಕ್ಕೆ ನುಗ್ಗಿದವರೇ ಪೊಲೀಸರು ವಿಕ್ರಂ, ಪ್ರದೀಪ, ವಿಷ್ಣು ಸೇರಿದಂತೆ ಊರಿಗೆ ಹೊಸದಾಗಿ ಬಂದಿದ್ದವರನ್ನೆಲ್ಲ ಹಿಡಿದುಕೊಂಡರು. ಕಕ್ಕಾಬಿಕ್ಕಿಯಾಗಿ ಎಲ್ಲರೂ ಏನಾಗುತ್ತಿದೆ ಎಂದುಕೊಳ್ಳುತ್ತಿರುವ ಸಂದರ್ಭದಲ್ಲಿಯೇ ದರದರನೆ ಎಳೆದು ಜೀಪಿನೊಳಕ್ಕೆ ತುಂಬಿದ ಪೊಲೀಸರು ಭರ್ರೆಂದು ಹೊರಟೇಬಿಟ್ಟಿದ್ದರು. ಯಾರಿಗೂ ಏನಾಗಿದೆ, ಏನಾಗುತ್ತಿದೆ ಎನ್ನುವುದರ ಅರಿವು ಮಾತ್ರ ಇರಲಿಲ್ಲ. ವಿಜೇತಾ ಹಾಗೂ ವಿಕ್ರಂ ಮಾತ್ರ ತಮ್ಮನ್ನು ಯಾಕೆ ಹೀಗೆ ಪೊಲೀಸರು ಎಳೆದುಕೊಂಡು ಹೋಗುತ್ತಿದ್ದಾರೆ ಎಂಬುದು ಗೊತ್ತಾಗದ ಕಾರಣ ಸಾಕಷ್ಟು ಪ್ರತಿಭಟನೆಯನ್ನೂ ಮಾಡಿದರು.
            `ನಮ್ಮನ್ನು ಯಾಕೆ ಹೀಗೆ ಎಳೆದುಕೊಂಡು ಹೋಗುತ್ತಿದ್ದೀರಿ..' ಅಸಹನೆಯಿಂದ ಕೇಳಿದ್ದಳು ವಿಜೇತಾ.
            `ಬಾಯಿಮುಚ್ಚಿಕೊಂಡು ಜೀಪ್ ಹತ್ತಿ. ಪೊಲೀಸ್ ಸ್ಟೇಷನ್ ಗೆ ಹೋದ ಮೇಲೆ ಗೊತ್ತಾಗುತ್ತದೆ..' ಎಂದು ಪೊಲೀಸರು ಗದರಿದ್ದರು.
             `ನೋಡಿ ನಾವು ಯಾವುದೇ ತಪ್ಪು ಮಾಡಿಲ್ಲ. ಯಾವುದೇ ಅರೆಷ್ಟ್ ವಾರಂಟ್ ಇಲ್ಲದೇ ನಮ್ಮನ್ನು ಯಾಕೆ ಹೀಗೆ ಕರೆದೊಯ್ಯುತ್ತಿದ್ದೀರಿ..' ಸಿಟ್ಟಿನಿಂದಲೇ ಕೇಳಿದ್ದ ವಿಕ್ರಂ. ಪ್ರದೀಪ ಮಾತ್ರ ಏನೂ ಮಾತನಾಡದೇ ಸುಮ್ಮನೇ ಇದ್ದ. ಯಾರು ಎಷ್ಟು ಕೇಳಿದರೂ ಪೊಲೀಸರು ಯಾಕೆ ಕರೆದೊಯ್ಯುತ್ತಿದ್ದಾರೆ ಎನ್ನುವುದು ಮಾತ್ರ ಗೊತ್ತಾಗಲಿಲ್ಲ. ವಿಕ್ರಮ ಹಾಗೂ ವಿಜೇತಾ ಇಬ್ಬರಿಗೂ ತಾವು ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿಬಿಡೋಣ ಎಂದುಕೊಂಡರು. ನಾಲಿಗೆಯ ತುದಿಯವರೆಗೂ ಬಂದಿದ್ದನ್ನು ಹಾಗೇ ಸುಮ್ಮನೇ ಉಳಿದುಬಿಟ್ಟರು. ಪತ್ರಿಕೆಯವರು ತಾವು ಎಂದು ಹೇಳಲೇ ಇಲ್ಲ.
           ಅರ್ಧಗಂಟೆ ಪಯಣದ ನಂತರ ಜೀಪು ಪೊಲೀಸ್ ಸ್ಟೇಶನ್ ಎದುರು ಬಂದು ನಿಂತಿತು. ಶಿರಸಿ ಪೊಲೀಸ್ ಠಾಣೆಗೆ ಕರೆತರಲಾಗುತ್ತದೆ ಎಂದುಕೊಂಡಿದ್ದವರಿಗೆ ಅಚ್ಚರಿಯಾಗಿತ್ತು. ಸಿದ್ದಾಪುರ ಪೊಲೀಸ್ ಠಾಣೆಗೆ ಕರೆತರಲಾಗಿತ್ತು. ಈ ಕುರಿತು ವಿಸ್ಮಯದಿಂದ ನೋಡುತ್ತಿದ್ದಾಗಲೇ ದಂಟಕಲ್ ಸಿದ್ದಾಪುರ ತಾಲೂಕಿನ ವ್ಯಾಪ್ತಿಗೆ ಬರುತ್ತದೆ. ಆದ್ದರಿಂದ ಸಿದ್ದಾಪುರ ಠಾಣೆಗೆ ಕರೆತರಲಾಗಿದೆ ಎಂಬ ಮಾಹಿತಿ ಸಿಕ್ಕಿತು. ಆದರೆ ಯಾವ ಕಾರಣಕ್ಕೆ ಹೀಗೆ ಕರೆತರಲಾಗಿದೆ ಎಂಬುದು ಮಾತ್ರ ಗೊತ್ತಾಗಲಿಲ್ಲ.

***

              ಬೆಳ್ಳಂಬೆಳಿಗ್ಗೆ ಪೊಲೀಸರು ದಂಟಕಲ್ಲಿಗೆ ಏಕಾಏಕಿ ಬಂದು ಊರಿಗೆ ಬಂದಿದ್ದವರನ್ನು ಬಂಧಿಸಿ ಕರೆದೊಯ್ದಿದ್ದು ಊರಿನಾದ್ಯಂತ ಸಂಚಲನಕ್ಕೆ ಕಾರಣವಾಗಿತ್ತು. ಕಾಡನ್ನು ಸುತ್ತಲು ಬಂದಿದ್ದವರು ಭಯೋತ್ಪಾದಕರೇ ಇರಬೇಕು ಎಂದುಕೊಂಡರು ಹಲವರು. ಅಘನಾಶಿನಿ ಅಣೆಕಟ್ಟೆಗೆ ಸರ್ವೆ ಮಾಡಲು ಬಂದಿದ್ದಾರೆ ಎಂದುಕೊಂಡಿದ್ದವರು ಕೆಲವರು. ನಕ್ಸಲರಿರಬೇಕು ಎಂದು ಒಂದಿಬ್ಬರು ಮಾತನಾಡಿಕೊಂಡರು. ಯಾವುದೋ ಊರಿನಲ್ಲಿ ಕೊಲೆ ಮಾಡಿ ತಲೆ ತಪ್ಪಿಸಿಕೊಂಡು ಬಂದವರು ಇವರು ಎಂದುಕೊಂಡಿದ್ದವರು ಮತ್ತಷ್ಟು ಜನ. ಯಾರಿಗೂ ಕೂಡ ಯಾವ ಕಾರಣಕ್ಕಾಗಿ ಪೊಲೀಸರು ಇವರನ್ನು ಬಂಧಿಸಿದ್ದಾರೆ ಎನ್ನುವುದು ತಿಳಿದಿರಲಿಲ್ಲ. ಈ ಕಾರಣದಿಂದಾಗಿ ತಲೆಗೊಂದರಂತೆ ಮಾತನಾಡಲು ಆರಂಭಿಸಿದ್ದರು.
            ಪೊಲೀಸರು ಹೀಗೆ ಬಂದು ವಿಜೇತಾ, ವಿಕ್ರಂ, ವಿನಾಯಕ ಹಾಗೂ ವಿಷ್ಣುವನ್ನು ಬಂಧಿಸಿ ಕರೆದೊಯ್ದಿದ್ದರಿಂದ ವಿನಾಯಕ ಹಾಗೂ ಹುಲಿ ಕೊಂದ ಗಣಪಜ್ಜ ಮಾತ್ರ ನಂಬಲು ತಯಾರಿರಲಿಲ್ಲ. ಯಾವುದೇ ತಪ್ಪು ಮಾಡಿಲ್ಲ ಎನ್ನುವುದು ಸ್ಪಷ್ಟವಾಗಿತ್ತು. ಪೊಲೀಸರು ಇವರನ್ನು ಬಂಧಿಸಿ 10 ನಿಮಿಷ ಕಳೆಯುವುದರೊಳಗಾಗಿ ಗಣಪಜ್ಜ ಬಂದು ವಿನಾಯಕನನ್ನು ಭೇಟಿ ಮಾಡಿದ್ದ. ಯಾವ ಕಾರಣಕ್ಕೆ ಬಂಧನ ಮಾಡಲಾಗಿದೆ ಎಂದು ವಿಚಾರಿಸಿದ್ದನಾದರೂ ವಿನಾಯಕನಿಗೆ ಮಾಹಿತಿ ಇಲ್ಲದ ಕಾರಣ ಸುಮ್ಮನೇ ಉಳಿದಿದ್ದ. ತಾನು ಸಿದ್ದಾಪುರ ಪೊಲೀಸ್ ಸ್ಟೇಷನ್ನಿಗೆ ಹೋಗಿ ಮಾಹಿತಿಯನ್ನು ಪಡೆದುಕೊಳ್ಳುತ್ತೇನೆ ಎಂದು ವಿನಾಯಕ ಹೊರಟು ನಿಂತಿದ್ದ. ಅದೇ ಸಂದರ್ಭದಲ್ಲಿ ಗಣಪಜ್ಜನೂ ಕೂಡ ತಾನೂ ಬರುತ್ತೇನೆ ಎಂದು ತಯಾರಾಗಿ ಬಿಟ್ಟಿದ್ದ. ಅಜ್ಜನ ಹುಮ್ಮಸ್ಸು ವಿನಾಯಕನಿಗೆ ಅಚ್ಚರಿಯನ್ನು ತಂದಿತ್ತು.
           ಗಣಪಜ್ಜ ಹೊರಡುವ ಮುನ್ನ ಸುಮ್ಮನೆ ಉಳಿಯಲಿಲ್ಲ. ತನ್ನ ಪರಿಚಯದ ಹಿರಿಯರಿಗೆ, ಹಳೆಯ ತಲೆಮಾರಿನ ರಾಜಕಾರಣಿಗಳಿಗೆಲ್ಲ ಒಮ್ಮೆ ಪೋನಾಯಿಸಿ ಅವರಿಗೆಲ್ಲ ವಿಷಯವನ್ನು ತಿಳಿಸಿದ. ಪೊಲೀಸ್ ಠಾಣೆಗೆ ಬಂದು ಸಹಾಯ ಮಾಡುವಂತೆಯೂ ತಿಳಿಸಿದ. ನಂತರ ವಿನಾಯಕನ ಜೊತೆಗೂಡಿ ಸಿದ್ದಾಪುರದ ಕಡೆಗೆ ತೆರಳಿದ.

****

       ಸಿದ್ದಾಪುರ ಪೊಲೀಸ್ ಠಾಣೆಯ ಬಳಿ ಜೀಪಿನಿಂದ ವಿಕ್ರಂ, ವಿಜೇತಾ, ವಿಷ್ಣು ಹಾಗೂ ಪ್ರದೀಪರು ಇಳಿಯುತ್ತಿದ್ದಂತೆ ಒಂದಿಷ್ಟು ಪೇಪರಿನವರು, ಟಿವಿ ಚಾನಲ್ಲಿನವರು ಮುತ್ತಿಕೊಂಡರು. ಆಗಲೇ ಒಂದೆರಡು ಜನ ಇವರ ಪೋಟೋಗಳನ್ನೂ ಕ್ಲಿಕ್ಕಿಸಿಕೊಂಡು ಬಿಟ್ಟಿದ್ದರು. ಆದರೆ ಯಾರೊಬ್ಬರೂ ಕೂಡ ಸುಖಾಸುಮ್ಮನೆ ಬಂಧಿಸಲ್ಪಟ್ಟವರ ಬಳಿ ಮಾತನಾಡಲು ತಯಾರಿರಲಿಲ್ಲ. ಎಲ್ಲರನ್ನೂ ಪೊಲೀಸ್ ಠಾಣೆಯೊಳಕ್ಕೆ ಕರೆದೊಯ್ಯಲಾಯಿತು. ಇತ್ತ ವಿವಿಧ ಟಿವಿ ಚಾನಲ್ಲುಗಳಲ್ಲಿ ಉತ್ತರ ಕನ್ನಡದಲ್ಲಿ ನಕ್ಸಲೀಯರ ಸೆರೆ, ಸಿದ್ದಾಪುರದ ಕಾನಸೂರಿನ ಹಳ್ಳಿಯಲ್ಲಿ ಅಡಗಿದ್ದ ನಕ್ಷಲರು ಎನ್ನುವ ಸುದ್ದಿ ಬಿತ್ತರವಾಗತೊಡಗಿತ್ತು.
            ಪೊಲೀಸ್ ಠಾಣೆಯೊಳಕ್ಕೆ ಕರೆದೊಯ್ದಿದ್ದೇ ತಡ ಯಾರನ್ನೂ ಒಂದೂ ಮಾತು ಕೇಳದೇ ಕಂಬಿಯ ಕೋಣೆಯೊಳಕ್ಕೆ ಹಾಕಲಾಯಿತು. ವಿಕ್ರಂ ಹಾಗೂ ವಿಷ್ಣುವಿಗೆ ನಾಲ್ಕೇಟನ್ನು ಹಾಕಿಯೂ ಬಿಟ್ಟದ್ದರು. ನೀವು ಯಾವ ಕಡೆಯಿಂದ ಬಂದವರು. ಎಷ್ಟು ಸಮಯದಿಂದ ಇಲ್ಲಿ ಇದ್ದಿರೀ. ನಿಮ್ಮ ಕಾರ್ಯ ಚಟುವಟಿಕೆಗಳ ಬಗ್ಗೆ ಹೇಳಿ. ಏನೇನು ಭಾನಗಡಿ ಮಾಡಲು ಆರಂಭಿಸಿದ್ದೀರಿ ಎಂದೆಲ್ಲ ಪೊಲೀಸರು ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೇಳಲು ಆರಂಭಿಸಿದ್ದರು. ತಾವು ಕಾಡನ್ನು ಸುತ್ತಲು ಬಂದವರು, ಪಾತರಗಿತ್ತಿಗಳ ಅಧ್ಯಯನಕ್ಕಾಗಿ ಬಂದಿದ್ದೇವೆ ಎಂದು ಎಲ್ಲರೂ ಹೇಳುತ್ತಿದ್ದರೂ ಪೊಲೀಸರು ಮಾತ್ರ ಅದನ್ನು ಕೇಳುತ್ತಿರಲಿಲ್ಲ.
               ಪ್ರದೀಪ ಮಾತ್ರ ಬಹಳ ಸೀರಿಯಸ್ಸಾಗಿದ್ದ. ಮನಸ್ಸಿನಲ್ಲಿ ಅದೇನೋ ಆಲೋಚನೆ. ಪೊಲೀಸರು ಆತನಿಗೂ ಹೊಡೆಯಲು ಬಂದರು. ವಿಚಾರಣೆ ನಡೆಸಲು ಮುಂದಾದರು. ತಕ್ಷಣ ಆತ ಇದ್ದಕ್ಕಿದ್ದಂತೆ ಅರ್ಧ ಇಂಗ್ಲೀಷ್ ಹಾಗೂ ಹಿಂದಿ ಭಾಷೆಯಲ್ಲಿ ಅದೇನೋ ಕೋಡ್ ಹೇಳಿದ. ಹೊಡೆಯುತ್ತಿದ್ದ ಪೊಲೀಸರು ಇದ್ದಕ್ಕಿದ್ದಂತೆ ಸುಮ್ಮನಾದರು. ತಕ್ಷಣವೇ ಅವರು ತಮ್ಮ ಮೇಲಧಿಕಾರಿಗಳಿಗೆ ಮಾಹಿತಿಯನ್ನು ನೀಡಿದರು. ಇದ್ದಕ್ಕಿದ್ದಂತೆ ಎಲ್ಲರನ್ನೂ ಇರಿಸಲಾಗಿದ್ದ ಕೋಣೆಗೆ ಬಂದ ಹಿರಿಯ ಪೊಲೀಸ್ ಅಧಿಕಾರಿಗಳು ಪ್ರದೀಪನನ್ನು ಒಂದೆಡೆಗೆ ಕರೆದೊಯ್ದರು. ಕೋಣೆಯಿಂದ ಹೊರಕ್ಕೆ ಎಲ್ಲೋ ಕರೆದುಕೊಂಡು ಹೋದರು. ಎಲ್ಲರಿಗೂ ಒಮ್ಮೆಲೆ ಅಚ್ಚರಿಯಾಗಿದ್ದು ಸುಳ್ಳಲ್ಲ.
           ಪ್ರದೀಪನನ್ನು ಹೊರಕ್ಕೆ ಕರೆದುಕೊಂಡು ಹೋದ ಹತ್ತೋ ಹದಿನೈದೋ ನಿಮಿಷದ ನಂತರ ಎಲ್ಲರನ್ನೂ ಇದ್ದಕ್ಕಿದ್ದಂತೆ ಬಿಡುಗಡೆ ಮಾಡಲಾಯಿತು. ಎಲ್ಲರೂ ಹೊರಕ್ಕೆ ಬಂದರು. ಹೊರಭಾಗದಲ್ಲಿ ಪ್ರದೀಪ ಪೊಲೀಸ್ ಅಧಿಕಾರಿಗಳ ಜೊತೆಗೆ ನಗುತ್ತಾ ಮಾತನಾಡುತ್ತಿದ್ದವನು ಇದ್ದಕ್ಕಿದ್ದಂತೆ ಗಂಭೀರನಾದ.
            `ಏನಿದು ಪ್ರದೀಪ..ಯಾಕೆ ಹೀಗಾಯ್ತು? ' ವಿಕ್ರಮ ಕೇಳಿದ್ದ.
            `ಇಲ್ಲಿ ಬೇಡ ಮುಂದೆ ಹೇಳುತ್ತೇನೆ..' ಎಂದ ಪ್ರದೀಪ
            `ಏನೋ ತಪ್ಪು ಮಾಹಿತಿಯಿಂದ ನಿಮ್ಮನ್ನು ಬಂಧಿಸಿದ್ದೆವು. ನಮ್ಮನ್ನು ಕ್ಷಮಿಸಿ.. ಮುಂದೆ ಇಂತಹ ತಪ್ಪಾಗುವುದಿಲ್ಲ..' ಎಂದು ಪೊಲೀಸ್ ಅಧಿಕಾರಿ ಇವರ ಬಳಿ ಕೇಳಿಕೊಂಡಾಗಲಂತೂ ಮತ್ತಷ್ಟು ಅಚ್ಚರಿ.
            `ಅಲ್ರೀ.. ನಾವ್ ಅಸ್ಟ್ ಹೇಳ್ತಾ ಇದ್ವಿ ನಾವ್ ನಕ್ಸಲರಲ್ಲ ಅಂತ, ನಮ್ಮ ಮಾತನ್ನು ಯಾಕೆ ಕೇಳಲಿಲ್ಲ ಅಂತ. ನೋಡಿ ಈಗ ..' ಎಂದು ರೇಗಿದ ವಿಕ್ರಮ.
           `ಅಯ್ಯೋ ಗೊತ್ತಾಗಲಿಲ್ಲ ನೋಡಿ. ಇನ್ನು ಮುಂದೆ ಈ ಥರ ಆಗೋದಿಲ್ಲ ಬಿಡಿ..' ಎಂದರು ಪೊಲೀಸ್ ಅಧಿಕಾರಿ. ನಂತರ ಎಲ್ಲರೂ ಪೊಲೀಸ್ ಠಾಣೆಯ ಹೊರಗೆ ಬರುತ್ತಿದ್ದಂತೆಯೇ ಗಣಪಜ್ಜನನ್ನು ಕೂರಿಸಿಕೊಂಡು ಬಂದ ಜೀಪು ಗಕ್ಕನೆ ನಿಂತಿತು. ವಿನಾಯಕ ಜೀಪಿನಿಂದ ಓಡಿದಂತೆ ಇಳಿದ. ಠಾಣೆಯಿಂದ ಹೊರ ಬರುತ್ತಿದ್ದವರ ಬಳಿ ಏನಾಯಿತು ಎಂದು ಕೇಳಿದ. ಅವರು ನಡೆದ ವಿಷಯವನ್ನು ತಿಳಿಸಿದರು.
           ಅಷ್ಟರಲ್ಲಿ ವಿಕ್ರಮನ ಪೋನ್ ರಿಂಗಣಿಸಲು ಆರಂಭವಾಯಿತು. ನೋಡಿದರೆ ಮಂಗಳೂರಿನಿಂದ ನವೀನಚಂದ್ರ ಅವರು ಪೋನ್ ಮಾಡಿದ್ದರು. ವಿಕ್ರಂ `ಹಲೋ..' ಎಂದ.
          `ನೋಡ್ರಿ ವಿಕ್ರಂ ಸಿದ್ದಾಪುರದ ಬಳಿ ನಕ್ಸಲರ ಬಂಧನ ಆಗಿದೆಯಂತೆ. ನೀವು ಅಲ್ಲೇ ಇದ್ದೀರಿ. ಸ್ವಲ್ಪ ಮಾಹಿತಿ ಕಳಿಸಿ ನೋಡೋಣ..' ಎಂದರು. ತಕ್ಷಣ ವಿಕ್ರಮ ನಡೆದಿದ್ದೆಲ್ಲವನ್ನೂ ಹೇಳಿದ. ಆಗ ಸಿಟ್ಟಾದ ನವೀನಚಂದ್ರರು `ಒಂದ್ ಕೆಲಸ ಮಾಡಿ.. ಪೊಲೀಸರು ಹೀಗೆ ಮಾಡಿದರು ಅಂತ ಅದನ್ನೇ ಒಂದು ಸುದ್ದಿ ಮಾಡಿಬಿಡಿ. ಅವರಿಗೆ ಬುದ್ದಿ ಕಲಿಸೋಣ..' ಎಂದರು. ವಿಕ್ರಮ ಒಪ್ಪಿಕೊಂಡ. ಸಿದ್ದಾಪುರದ ಇಂಟರ್ನೆಟ್ ಸೆಂಟರಿನಲ್ಲಿ ಕುಳಿತು ನಡೆದಿದ್ದೆಲ್ಲವನ್ನೂ ವರದಿ ಮಾಡಿ ಮತ್ತೆ ಜೀಪ್ ಹತ್ತಿದ
           ದಾರಿ ಮಧ್ಯದಲ್ಲಿ ಪ್ರದೀಪನ ಬಳಿ ಮಾತಿಗೆ ನಿಂತರು ಎಲ್ಲರೂ. `ಅಲ್ಲ ಪೊಲೀಸರ ಬಳಿ ಅದೇನೋ ಕೋಡ್ ಹೇಳಿದೆಯಲ್ಲ.. ಅದೇನು ಮಾರಾಯಾ? ಆಮೇಲೆ ನಿನ್ನನ್ನು ಅವರು ಇದ್ದಕ್ಕಿದ್ದಂತೆ ದೂರಕ್ಕೆ ಕರೆದುಕೊಂಡು ಹೋದರು. ಅವರ ಬಳಿ ನೀನೇನು ಹೇಳಿದ್ಯೋ. ಹಾಗೇ ನಿನ್ನನ್ನು ಸೇರಿದಂತೆ ಎಲ್ಲರನ್ನೂ ಇದ್ದಕ್ಕಿದ್ದಂತೆ ಬಿಟ್ಟುಬಿಟ್ಟರು. ಅದೆಂತ ಮೋಡಿ ಮಾಡಿದೆ ನೀನು..?' ಎಂದು ಕೇಳಿದ ವಿಕ್ರಮ.
         ಒಮ್ಮೆ ಕಕ್ಕಾಬಿಕ್ಕಿಯಾದರೂ ಸಾವರಿಸಿಕೊಂಡ ಪ್ರದೀಪ `ಅಯ್ಯೋ ಅದು ಪೊಲೀಸ್ ಕೋಡ್ ವರ್ಡ್. ಹಿಂದೆ ನಾನು ಪೊಲೀಸರಿಗೆ ಮಾಹಿತಿ ಕೊಡುವ ಕೆಲಸ ಮಾಡುತ್ತಿದ್ದೆ. ಆ ಕೋಡ್ ವರ್ಡ್ ಹೇಳಿದ ಕೂಡಲೇ ಏನೋ ಮಹತ್ವದ ವಿಷಯ ಇರಬೇಕು ಎಂದುಕೊಂಡು ನನ್ನನ್ನು ದೂರಕ್ಕೆ ಕರೆದೊಯ್ದರು. ಅದೇ ಅವಕಾಶ ಬಳಸಿಕೊಂಡು ನಮ್ಮ ಪರಿಚಯದ ಮಂತ್ರಿಗಳೊಬ್ಬರಿಗೆ ಪೋನ್ ಮಾಡಿದೆ. ಅವರು ಪೊಲೀಸರಿಗೆ ಎಲ್ಲವನ್ನೂ ತಿಳಿಸಿ ಹೇಳಿದರು. ನಮ್ಮನ್ನು ಬಿಡುಗಡೆಯೂ ಮಾಡಿದರು' ಎಂದ.
            `ಅಲ್ಲ ಮಾರಾಯಾ.. ನಿಂಗೆ ಮಂತ್ರಿಗಳೂ ಗೊತ್ತಾ..?' ಎಂದು ಆಶ್ಚರ್ಯದಿಂದ ಕೇಳಿದ ವಿಕ್ರಮ.
            `ಹು. ಅವರ ಕಾರ್ ಡ್ರೈವರ್ ಆಗಿದ್ದೆ. ಹಾಗಾಗಿ ಗೊತ್ತು. ನಮಗೆ ಸಹಾಯ ಮಾಡಿದರು ನೋಡಿ..' ಎಂದ ಪ್ರದೀಪ.
             ಪ್ರದೀಪ ಸಾಮಾನ್ಯ ಮನುಷ್ಯನೇನಲ್ಲ. ಬಹಳಷ್ಟು ಕೆಲಸಗಳನ್ನು ಮಾಡಿ ಪರಿಚಯವಿದೆ ಎಂದುಕೊಂಡರು ಎಲ್ಲರೂ. ವಿಕ್ರಮನಿಗೆ ಪ್ರದೀಪನ ಮೇಲೆ ಮೊದಲೇ ಇದ್ದ ಅನುಮಾನ ಮತ್ತಷ್ಟು ಹೆಚ್ಚಿತು.  ಪ್ರದೀಪ ಖಂಡಿತ ಏನನ್ನೋ ಮುಚ್ಚಿಡುತ್ತಿದ್ದಾನೆ ಎಂದುಕೊಂಡ.
            ಜೀಪಿನಲ್ಲಿಯೇ ಇದ್ದ ಗಣಪಜ್ಜ ಮಾತ್ರ `ನಂಗೆ ಗೊತ್ತಿತ್ರಾ ತಮಾ.. ನಿಂಗಳದ್ದು ಎಂತದೂ ತಪ್ಪಿಲ್ಲೆ ಹೇಳಿ. ಅದಕ್ಕೆ ಆನು ಬಂದಿದ್ದು. ಬಪ್ಪಕ್ಕಿದ್ರೆ ಎಲ್ಲರಿಗೂ ಪೋನ್ ಮಾಡಿ ರಾಜಕೀಯ ಒತ್ತಡನೂ ತಂದಿದ್ದಿ ನೋಡಿ. ಅಂತೂ ಬಿಡುಗಡೆ ಆತ ಇಲ್ಯ. ದೇವರು ದೊಡ್ಡವ್ವ ನೋಡಿ. ಮನೆಗೆ ಹೋದವ್ವು ಮೊದಲು ಗುಡ್ಡೇತೋಟದ ಗಣಪತಿಗೆ ಹಣ್ಣು ಕಾಯಿ ಮಾಡಿಶಿಕೊಂಡು ಬನ್ನಿ. ಎಂತಾದ್ರೂ ಗ್ರಹಚಾರ ಇದ್ರೆ ತಕ್ಷಣವೇ ಪರಿಹಾರ ಮಾಡ್ತ ಅಂವ. ಬಹಳ ಘಟಾಘಟಿ ದೇವರು. ಒಳ್ಳೆ ಜಾಗನೂ ಹೌದು. ವಿನಾಯ್ಕ ಮೊದ್ಲು ಎಲ್ರನ್ನೂ ಕರ್ಕೊಂಡು ಹೋಗಿ ಬಾರಾ..' ಎಂದ. ಎಲ್ಲರೂ ತಲೆಯಾಡಿಸಿದರು.
             ಎಲ್ಲರನ್ನೂ ಹೊತ್ತ ಜೀಪು ಮರಳಿ ದಂಟಕಲ್ಲನ್ನು ತಲುಪುವ ವೇಳೆಗೆ ಆಗಲೇ ಮಧ್ಯಾನದ ಸುಡುಬಿಸಿಲು ರಾಚುತ್ತಿತ್ತು. ನೆತ್ತಿಯನ್ನು ಸುಡಲು ಆರಂಭಿಸಿತ್ತು. ಊರಿನ ಕುತೂಹಲದ ಕಣ್ಣುಗಳು ಪೊಲೀಸ್ ಸ್ಟೇಶನ್ನಿಗೆ ಹೋದಷ್ಟೇ ವೇಗವಾಗಿ ಇವರು ವಾಪಾಸು ಬಂದರು ಎನ್ನುವ ಅಚ್ಚರಿಯೊಂದಿಗೆ ಕಾಯಿತ್ತಿತ್ತು.