Thursday, November 3, 2016

ಸಜ್ಜನರೊಡನೆ.. ಸಜ್ಜನಘಡದ ಕಡೆಗೆ -6

(ಸಮರ್ಥ ರಾಮದಾಸರ ಸಮಾಧಿಯಿರುವ ಮಂದಿರ)
            ಸಂಜಯ ಧ್ಯಾನಸ್ಥನಾದಂತಿದ್ದ. ನಾನು ಅವನ ವೀಡಿಯೋ ಮಾಡುತ್ತಲೇ ಇದ್ದೆ. ಈ ನಡುವೆ ಮೊಬೈಲ್ ಮೆಮೋರಿ ಸಾಕಷ್ಟು ಭರ್ತಿಯಾಗಿ ಮೊಬೈಲ್ ಎಚ್ಚರಿಕೆಯ ಸಂದೇಶವನ್ನು ರವಾನೆ ಮಾಡಲು ಆರಂಭಿಸಿತ್ತು. ನಾನು ಸಂಜಯನನ್ನು ಕೂಗಿ ಕರೆದೆ. ಕೆಲ ಕಾಲದ ನಂತರ ಆತ ಹತ್ತಿ ಬಂದ. ನನ್ನ ಮೂಬೈಲನ್ನು ಅವನ ಬಳಿ ಕೊಟ್ಟು ನಾನು ಸಜ್ಜನ ಘಡ ಒಂದು ಮೂಲೆಯ ತುತ್ತ ತುದಿಯಲದಲಿ ಹೋಗಿ ನಿಂತೆ. ಸಾಕಷ್ಟು ಪೋಟೋಗಳನ್ನು ಕ್ಲಿಕ್ಕಿಸಿಯಾಯಿತು. ಅಷ್ಟರಲ್ಲಿ ಮೂರ್ನಾಲ್ಕು ಸಾರಿ ತುಂತುರು ಮಳೆ ನಮ್ಮನ್ನು ಸಾಕಷ್ಟು ಒದ್ದೆಯನ್ನು ಮಾಡಿತ್ತು. ಭೋರ್ರೆನ್ನುವ ಗಾಳಿ ಕಿವಿಯ ಮೂಲಕ ನಮ್ಮ ಬೆನ್ನುಮೂಳೆಯ ಆಳವನ್ನು ತಲುಪಿ ನಡುಕ ಹುಟ್ಟಿಸಿತ್ತು.
          ವಾಪಾಸಾದೆವು. ವಾಪಾಸಾದರೆ ಪ್ರಶಾಂತ ಭಾವ ಕಾಣಲೊಲ್ಲ. ಎಲ್ಲೋ ಹೋಗಿರಬೇಕು ಎಂದುಕೊಂಡು ಹುಡುಕಾಡಿದೆವು. ಕಾಣಲಿಲ್ಲ. ಸುತ್ತಮುತ್ತ ಹುಡುಕಿದೆವು. ಊಹೂ ಆತನ ಸುಳಿವಿರಲಿಲ್ಲ. `ಇಂವ ಎತ್ಲಾಗ್ ನಾಪತ್ತೆಯಾದ್ನೋ ಮಾರಾಯಾ..' ಎಂದುಕೊಂಡು ಹುಡಕಾಡುತ್ತಿದ್ದಾಗಲೇ ನನ್ನ ಪೋನ್ ರಿಂಗಣಿಸುತ್ತಿತ್ತು. ನಾನು ಅದನ್ನೆತ್ತಿ ಮಾತನಾಡಿದಾಗ ಪ್ರಶಾಂತ ಭಾವ ತಾನು ರೂಮ್ ತಲುಪಿದ್ದೇನೆಂದೂ, ಅಲ್ಲಿಗೆ ಬರಬೇಕೆಂದೂ ಹೇಳಿದ್ದ.
           ರೂಮಿಗೆ ತೆರಳಿ ಮಧ್ಯಾಹ್ನ ಎಷ್ಟು ಹೊತ್ತಿಗೆ ಹೊರಡುವುದು ಎಂಬುದನ್ನೆಲ್ಲ ಲೆಕ್ಕ ಹಾಕಲು ಆರಂಭಿಸಿದ್ದೆವು. ಸಜ್ಜನಗಡದಲ್ಲಿ ಮದ್ಯಾಹ್ನ ಊಟ ಹಾಕುತ್ತಾರೆ. ಪ್ರಸಾದ ಸ್ವೀಕರಿಸಿದ ಹಾಗೂ ಆಗುತ್ತದೆ. ಅದನ್ನು ಮಾಡಿಯೇ ಸಾಗೋಣ ಎಂದುಕೊಂಡೆವು. ಮದ್ಯಾಹ್ನವಾಗಿತ್ತು. ಯಾರೋ ಒಬ್ಬರು ಊಟಕ್ಕೆ ಕರೆದರು. ನಾವು ಅತ್ತ ತೆರಳಿದೆವು. ನಮ್ಮ ಮನಸ್ಸಿನಲ್ಲಿ ವರದಳ್ಳಿಯಿತ್ತು. ಅಲ್ಲಿಯಂತೆ ಇಲ್ಲಿಯೂ ಊಟ ನೀಡಬಹುದೇನೋ ಎಂದುಕೊಂಡೆವು. ಊಟಕ್ಕೆ ತಟ್ಟೆಯ ಮುಂದೆ ಕುಳಿತಿದ್ದರು. ಯಾರೋ ಒಬ್ಬರು ರಾಮನಾಮವನ್ನು ದೊಡ್ಡದಾಗಿ ಹೇಳಲು ಆರಂಭಿಸಿದರು. ನಾವೂ ದನಿಗೂಡಿಸಿದೆವು.
            ಅನ್ನ ಬಡಿಸುತ್ತಿದ್ದಾರೆಂದುಕೊಂಡು ನಾವು ಕಾದೆವು. ಆದರೆ ಬಡಿಸುತ್ತಿದ್ದವರು ಅನ್ನವನ್ನು ಹಾಕುತ್ತಿರಲಿಲ್ಲ. ಬದಲಾಗಿ ಬೇರೆ ಇನ್ನೇನೋ ಹಾಕಿದಂತೆ ಕಾಣಿಸಿತು. ಅದೇನಿರಬಹುದು ಎನ್ನುವ ಕುತೂಹಲ ನಮ್ಮದಾಗಿತ್ತು. ಹತ್ತಿರ ಬಂದಂತೆಲ್ಲ ಅವರು ಬಡಿಸುತ್ತಿದ್ದುದು ಅನ್ನವಲ್ಲ ಎನ್ನುವುದು ಸ್ಪಷ್ಟವಾಯಿತು. ರವೆ ರವೆಯಾಗಿತ್ತು. ರವೆಯಿಂದ ಮಾಡಿದ ಗಂಜಿಯಿರಬೇಕು ಎಂದುಕೊಂಡೆವು. ನಮಗೂ ಹಾಕಿದರು. ಅದನ್ನು ಕೈಗೆತ್ತಿಕೊಂಡು ಬಾಯಿಗಿಟ್ಟಾಗಲೇ ನಮಗೆ ಸ್ಪಷ್ಟವಾಗಿತ್ತು. ಅದು ರವೆಯಿಂದಲೇ ಮಾಡಿದ್ದರು. ಅನ್ನದಂತೆ ಬೇಯಿಸಿ, ಉಪ್ಪನ್ನು ಹಾಕಿ ನೀಡಿದ್ದರು. ಗಂಜಿಯಷ್ಟು ತೆಳ್ಳಗಿರಲಿಲ್ಲ. ಮೊಟ್ಟಮೊದಲ ಬಾರಿಗೆ ತಿನ್ನುತ್ತಿದ್ದೆವು. ಅದಕ್ಕೆ ಶೇಂಗಾ ಬೆರೆಸಿದ ಮಜ್ಜಿಗೆಯನ್ನು ಸುರುವಿದರು. ನಾವು ಮೆಲ್ಲಿದೆವು. ಮಹಾರಾಷ್ಟ್ರದ ಆಹಾರವಿರಬೇಕು ಎಂದುಕೊಂಡೆವು.
          ಪ್ರಶಾಂತ ಭಾವ ನನ್ನ ಬಳಿ `ವಿನಯಾ.. ನೋಡಾ.. ಮಹಾರಾಷ್ಟ್ರದವರು ಅವರ ಸಂಸ್ಕೃತಿಯನ್ನು ಬಿಟ್ಟುಕೊಡ್ತ್ವಿಲ್ಲೆ. ಆದರೆ ನಾವೇಯಾ ನಮ್ಮ ಸಂಸ್ಕೃತಿ ಬಿಡ್ತಾ ಇದ್ದಿದ್ದು. ವದ್ದಳ್ಳಿಯಲ್ಲಿಯೂ ನಮ್ಮ ಸಂಸ್ಕೃತಿಯ ಆಹಾರ ಮಾಡಿ ಬಡಿಸವು. ಆವಾಗ ಬೆಲೆ ಬರ್ತು ನೋಡು..' ಎಂದು ಉದ್ದನೆಯ ಉಪನ್ಯಾಸವನ್ನು ನೀಡಿದ್ದ. ಸಂಜಯ ಅದಕ್ಕೆ ಅಹುದಹುದೆನ್ನುತ್ತ ತಲೆಯನ್ನಾಡಿಸಿದ್ದ. ಬಾಯಿಗಿಡುವ ಮೊದಲು ಈ ಆಹಾರವ್ಯಾಕೋ ನಮ್ಮ ಹೊಟ್ಟೆಯೊಳಗೆ ಇಳಿಯುವುದಿಲ್ಲ ಎಂದುಕೊಂಡಿದ್ದೆವು. ಆದರೆ ನಂತರ ಅದನ್ನು ಮೆಲ್ಲಿದೆವು. ಸರಾಗವಾಗಿ ಇಳಿಯಿತು. ಇಷ್ಟವಾಯಿತು. ಬೆಲ್ಲದಿಂದ ಮಾಡಿದ ಕಡ್ಲೆಬೇಳೆ ಪಾಯಸವನ್ನೂ ಬಡಿಸಲಾಗಿ ಅದನ್ನೂ ತಿಂದೆವು.
            ಊಟದ ನಂತರ ನಮ್ಮ ನಮ್ಮ ರೂಮಿಗೆ ವಾಪಸಾದೆವು. ಸಜ್ಜನಗಡವನ್ನು ನೋಡಿ ಧನ್ಯರಾಗಿದ್ದೆವು. ಊರಿಗೆ ಮರಳಬೇಕಲ್ಲ ಎಂದುಕೊಂಡೆವು. ನನಗೋ ಹತ್ತಿರದಲ್ಲಿಯೇ ಇದ್ದ ಮಹಾಭಲೇಶ್ವರವನ್ನೋ ಅಥವಾ ಸತಾರಾ ಬಳಿ ಇರುವ ಅಜಿಂಕ್ಯತಾರಾ ಕೋಟೆಯನ್ನೋ ನೋಡುವ ಆಸೆಯಿತ್ತು. ಪ್ರಶಾಂತ ಭಾವ ಪ್ರಯತ್ನಿಸೋಣ ಎಂದಿದ್ದ. ಸಜ್ಜನಗಡದಲ್ಲಿ ನಮಗೆ ಬೇಕಾಗಿದ್ದನ್ನೆಲ್ಲ ಕೊಂಡೆವು. ನಂತರ ಮರಳುವ ಮನಸ್ಸಾಯಿತು. ವಾಪಾಸು ಎಲ್ಲಿಗೆ ಬಂದರೆ ವಾಹನ ಸಿಗುತ್ತದೆ ಎಂದುಕೊಂಡೆವು.
         ಸಜ್ಜನಗಡ ಕ್ರಾಸಿಗೆ ಮದ್ಯಾಹ್ನ ಬಸ್ ಬರುತ್ತದೆ ಎಂದು ಯಾರೋ ಹೇಳಿದ ನೆನಪಿತ್ತು. ಸಜ್ಜನಗಡದಿಂದ ಸೀದಾ ಇಳಿಯಲಾರಂಭಿಸಿದೆವು. ಒಂದು, ಎರಡು ಕಿಲೋಮೀಟರ್ ಇಳಿದ ನಂತರ ಸಜ್ಜನಗಡ ಕ್ರಾಸ್ ಸಿಕ್ಕಿತು. ಅಲ್ಲಿ ಎಷ್ಟೋ ಹೊತ್ತು ಕಾದೆವು. ಊಹೂ ಬಸ್ಸಿನ ಸುಳಿವಿರಲಿಲ್ಲ. ಮಾರ್ಗದಲ್ಲಿ ಬರುತ್ತಿದ್ದ ಕಾರು, ಆಟೋ ರಿಕ್ಷಾಗಳಿಗೆಲ್ಲ ಕೈ ಮಾಡಿದೆವು. ಯಾರೊಬ್ಬರೂ ನಿಲ್ಲಿಸಲಿಲ್ಲ. ಬಹುತೇಕ ಗಾಡಿಗಳು ಭರ್ತಿಯಾಗಿ ಬರುತ್ತಿದ್ದವೆನ್ನಿ. ಬಸ್ ಬರದೇ ಇದ್ದರೆ ಏನು ಮಾಡುವುದು ಎನ್ನುವ ಪ್ರಶ್ನೆ ಎಲ್ಲರ ಮನಸ್ಸಿನಲ್ಲಿಯೂ ಮೂಡಿತ್ತು. `ವಿನಯಾ... ನಡ್ಕೊಂಡು ಹೋಗೋಣ್ವಾ? ' ಎಂದು ಪ್ರಶಾಂತ ಭಾವ ಮೂರ್ನಾಲ್ಕು ಸಾರಿ ಕೇಳಿದ್ದ. ಸಂಜಯ ಓಕೆ ಅಂದಿದ್ದ. ನಾನೂ ಹೂಂ ಅಂದಿದ್ದೆನಾದರೂ 17 ಕಿ.ಮಿ ನಡೆಯಬೇಕಲ್ಲ ಎಂದು ಹಿಂದೇಟು ಹಾಕಿದ್ದೆ. ಅದೆಲ್ಲದಕ್ಕಿಂತ ಮುಖ್ಯವಾಗಿ ಕಳೆದ ರಾತ್ರಿ ನಿದ್ದೆಗೆಟ್ಟಿದ್ದೆವಲ್ಲ ಹಾಗಾಗಿ ನನಗಂತೂ ಕಣ್ಣು ಕವಿದು ಕವಿದು ಬರಲು ಆರಂಭವಾಗಿತ್ತು. ಅಲ್ಲೊಂದು ಕಡೆ ಕಲ್ಲಿನ ಮೇಲೆ ಕುಳಿತು ತೂಕಡಿಸಹತ್ತಿದ್ದೆ. ಸಂಜಯ ಹಾಗೂ ಪ್ರಶಾಂತ ಭಾವನ ಪಾಡೂ ಇದಕ್ಕಿಂತ ಹೊರತಾಗಿರಲಿಲ್ಲ. ಪ್ರಶಾಂತ ಭಾವ ನಡ್ಕೊಂಡು ಹೋಗೋಣ ಎಂದು ಬಾಯಲ್ಲಿ ಹೇಳುತ್ತಿದ್ದನಾದರೂ ಒಂದೇ ಒಂದು ಹೆಜ್ಜೆ ಹಾಕದೇ ಇರಲು ಇದೇ ಪ್ರಮುಖ ಕಾರಣವಾಗಿತ್ತೆನ್ನಿ.
          ಅರ್ಧ ಗಂಟೆಗೂ ಅಧಿಕ ಕಾಲ ಕಾಯ್ದ ನಂತರ ಬಸ್ ಬಂದಿತ್ತು. ನಮ್ಮ ಕೆಎಸ್ಆರ್ಟಿಸಿಯು 20-25 ವರ್ಷಗಳ ಹಿಂದೆ ಓಡಿಸುತ್ತಿತ್ತಲ್ಲ ಅಂತಹದೇ ಲಟೂರಿ ಬಸ್. 30-35 ಸೀಟಿನ ಬಸ್ಸುಗಳು. ನಾವು 50ಕ್ಕೂ ಹೆಚ್ಚಿನ ಜನ ಕಾಯುತ್ತಿದ್ದೆವು. ಬಸ್ ಖಂಡಿತವಾಗಿಯೂ ಸತಾರಾ ಮುಟ್ಟುವುದಿಲ್ಲ ಎನ್ನುವುದು ಮೇಲ್ನೋಟಕ್ಕೆ ನಮ್ಮ ಭಾವನೆ. ಪ್ರಶಾಂತ ಹಾಗೂ ಸಂಜಯರು ನನ್ನನ್ನು ಮುಂದು ಮಾಡಿ ಬಿಟ್ಟಿದ್ದರು. ಸೀಟು ಹಿಡ್ಕೋ ಎಂದಿದ್ದರು. ನಾನು ಜನಜಂಗುಳಿಯ ಮಧ್ಯ ತಳ್ಳಾಡಿ, ದೂಡ್ಯಾಡಿ ಬಸ್ ಹತ್ತಿ ಮೂರು ಸೀಟು ಹಿಡಿದಿದ್ದೆ. ಕುಳಿತು ನಿದ್ರಿಸಿದ್ದೆ. ಬಸ್ ಹೊರಟ ನೆನಪು/ ಎಚ್ಚರಾಗುವ ವೇಳೆಗೆ ಬಸ್ ಸತಾರಾ ನಗರಿಯನ್ನು ತಲುಪಿತ್ತು. ಬಸ್ ನಿಲ್ದಾಣದ ಕಡೆಗೆ ಮುಖ ಮಾಡಿತ್ತು. ಅಲ್ಲೊಂದು ಕಡೆ ದಢಾರ್ ಎನ್ನುವ ಶಬ್ದ. ಬಾಂಬ್ ಸ್ಪೋಟವಾಯಿತೆ ಎಂದುಕೊಂಡು ನೋಡಿದೆ ನಾನು. ಬಸ್ ಸೀದಾ ರಸ್ತೆ ಪಕ್ಕದ ಕಬ್ಬಿಣದ ಕರೆಂಟ್ ಕಂಬಕ್ಕೆ ಢಿಕ್ಕಿ ಹೊಡೆದಿತ್ತು. ಹೊಡೆದ ರಬಸಕ್ಕೆ ಕಂಬ ಡೊಂಕಾಗಿ ಚಾಚಿಕೊಂಡಿತ್ತು. ವಿದ್ಯುತ್ ತಂತಿ ಒಂದಕ್ಕೊಂದು ತಾಗಿ ಬೆಂಕಿ ಹೊತ್ತಿಕೊಂಡಿತ್ತು. ನನ್ನ ಆಲೋಚನೆ ಏನೆಂದರೆ ಈಗ ಬಸ್ಸಿಗೆ ಬೆಂಕಿ ಬೀಳುತ್ತದೆ. ಬಸ್ಸಿನಲ್ಲಿ ಕುಳಿತಂತೆಯೇ ನಾವೆಲ್ಲ ಭಸ್ಮವಾಗುತ್ತೇವೆ ಎಂಬುದಾಗಿತ್ತು. ಆದರೆ ಅದ್ಯಾವ ಪವಾಡವೋ. ಹಾಗಾಗಲಿಲ್ಲ. ಬಸ್ಸು ಸುರಳೀತ ಸತಾರಾ ಬಸ್ ನಿಲ್ದಾಣ ತಲುಪಿತು. ಅಲ್ಲಿ ಬಸ್ ಇಳಿದ ತಕ್ಷಣ ಪ್ರಶಾಂತ ಭಾವ ಹಾಗೂ ಸಂಜಯನ ಬಳಿ ನಡೆದ ಘಟನೆಯನ್ನು ಹೇಳಿದೆ. ಆದರೆ ಅವರ್ಯಾರಿಗೂ ನಡೆದಿದ್ದು ಗೊತ್ತೇ ಇರಲಿಲ್ಲ. ಅಷ್ಟು ಗಾಢವಾಗಿ ನಿದ್ದೆ ಹೋಗಿದ್ದರು. ವಿಷಯ ಕೇಳಿ ಅಚ್ಚರಿಪಟ್ಟರು.
          ಸತಾರಾದಿಂದ ಸೀದಾ ಕೊಲ್ಲಾಪುರ ಬಸ್ ಹತ್ತಿದೆವು. ಬಸ್ಸಿನಲ್ಲಿ ಯಥಾ ಪ್ರಕಾರ ನಿದ್ದೆ. ಕೊಲ್ಲಾಪುರದಲ್ಲಿ ವಡಾ ಪಾವ್ ತಿಂದು ಮತ್ತೆ ಬಸ್ ಹತ್ತಿದ ನಮಗೆ ಯಥಾ ಪ್ರಕಾರ ನಿದ್ರಾರಾಣಿ ತಬ್ಬಿಕೊಂಡಿದ್ದಳು. ಬೆಳಗಾವಿಗೆ ಬರುವ ವೇಳೆಗೆ ರಾತ್ರಿಯ 9 ಗಂಟೆ. ಅಲ್ಲೊಂದು ಕಡೆ ಮೂವರೂ ಊಟ ಮುಗಿಸಿದೆವು. ಶಿರಸಿಗೆ ಬರಲು ನಮಗೆ ಡೈರೆಕ್ಟ್ ಬಸ್ ಇದೆಯಾ ಎಂಬ ಕುತೂಹಲ. ಬಸ್ ಇರಲಿಲ್ಲ. ಹುಬ್ಬಳ್ಳಿಯ ಕಡೆಗೆ ಮುಖ ಮಾಡಿದೆವು. ಮತ್ತೆ ನಿದ್ದೆ ಮಾಡಿ ಹುಬ್ಬಳ್ಳಿ ತಲುಪುವ ವೇಳೆಗೆ ರಾತ್ರಿ 1 ಗಂಟೆಯಾಗಿತ್ತು. ಅಲ್ಲಿಂದ ನಾನು ಹಾಗೂ ಸಂಜಯ ಶಿರಸಿಗೂ, ಪ್ರಶಾಂತ ಭಾವ ಗುಳ್ಳಾಪುರಕ್ಕೂ ತೆರಳಬೇಕಿತ್ತು. ನಮಗೆ ಬಸ್ ಇದ್ದರೂ ಪ್ರಶಾಂತ ಭಾವನಿಗೆ ಬಸ್ ಕಾಣಿಸಲಿಲ್ಲ. ಕೊನೆಗೆ ಕಾರವಾರಕ್ಕೆ ತೆರಳುವ ಯಾವುದೋ ಪೇಪರ್ ಗಾಡಿ ಕಾಣಿಸಿತು. ಪ್ರಶಾಂತ ಭಾವ ಅದರಲ್ಲಿ ಹೊರಟ. ಅವನನ್ನು ಕಳಿಸಿದ ನಾವು ಯಾವುದೋ ಬಸ್ ಹತ್ತಿದೆವು. ಕಣ್ಣಿನಲ್ಲಿ ಸಜ್ಜನಗಡದ ನೆನಪು. ಸುಳಿದು ಬರುತ್ತಿದ್ದ ನಿದ್ದೆ. ಕನಸೊಂದು ಮನದಲ್ಲಿ ಅರಳುತ್ತಿತ್ತು.
           ಶಿರಸಿಗೆ ಬಂದು ರೂಮಿಗೆ ಹೋಗಿ ಮಲಗುವ ವೇಳೆಗೆ ಬೆಳಗಿನ ಜಾವ 4 ಗಂಟೆ. ಮುಂದಿನ ವರ್ಷ, ಅಷ್ಟೇ ಏಕೆ ಪ್ರತಿ ವರ್ಷ ಸಜ್ಜನಗಡಕ್ಕೆ ಸಾಧ್ಯವಾದರೆ ಬರುತ್ತೇವೆ ಎಂದುಕೊಂಡು ನಾವು ನಿಶ್ಚಯಿಸಿದೆವು. ಈ ಪ್ರಯಾಣದ ನಂತರ ಇನ್ನೊಮ್ಮೆ ನಾವು ಸಜ್ಜನಗಡಕ್ಕೆ ಹೋಗಿ ಬಂದೆವು. ಆ ಸಾರಿ ನಾನು ಪ್ರಶಾಂತ, ಗುರುಪ್ರಸಾದ (ಭಾಮಿಷಿ ಷಟ್ಪದಿಯಲ್ಲಿ ಶ್ರೀಧರ ಸ್ವಾಮಿಗಳ ಚರಿತ್ರೆ ಬರೆಯುತ್ತಿರುವ ಕಲ್ಲಾರೆ ಗುರು) ಹಾಗೂ ನಮ್ಮೂರಿನ ನಾಗರಾಜ ಹೋಗಿ ಬಂದೆವು. ಸಂಜಯ ತಪ್ಪಿಸಿಕೊಂಡಿದ್ದ. ಒಟ್ಟಿನಲ್ಲಿ ಮೊಟ್ಟ ಮೊದಲ ಸಾರಿ ಹೋಗಿದ್ದ ಸಜ್ಜನ ಗಡ ಪ್ರವಾಸದ ನೆನಪು ಮನಸ್ಸಿನಲ್ಲಿ ಹಸಿಯಾಗಿಯೇ ಉಳಿದಿದೆ.

(ಮುಗಿಯಿತು)      

No comments:

Post a Comment