Thursday, November 10, 2016

500, 1000 ರು. ನೋಟು ನಿಷೇಧ : ದೇವಸ್ಥಾನಗಳ ಹುಂಡಿ ಒಡೆಯಲು ನಿರ್ಧಾರ

ಅರ್ಚಕರು ದೇವಸ್ಥಾನಗಳ ಹುಂಡಿ ಒಡೆಯಲು ಮುಂದಾಗಿದ್ದಾರೆಯೇ? ಹೌದು. ಅಚ್ಚರಿ ಪಡಬೇಡಿ. ಇದು ಮಂಗಳವಾರ ಪ್ರಧಾನಿ ನರೇಂದ್ರ ಮೋಡಿಯವರು ದೇಶದಾದ್ಯಂತ 500 ಹಾಗೂ 100 ರು. ನೋಟು ನಿಷೇಧಿಸಿದ ಪರಿಣಾಮ.
ಎಲ್ಲ ದೇವಸ್ಥಾನಗಳಲ್ಲಿಯೂ ಕಾಣಿಕೆ ಹುಂಡಿಗಳಿರುತ್ತವೆ. ದೇವಸ್ಥಾನಕ್ಕೆ ಆಗಮಿಸುವ ಭಕ್ತಾದಿಗಳು ಕಾಣಿಕೆ ಹುಂಡಿಯಲ್ಲಿ ಹಣವನ್ನು ಹಾಕುತ್ತಾರೆ. ದಿನವಹಿ ಸಾವಿರಾರು ರು.ಗಳವರೆಗೆ ಇಂತಹ ಕಾಣಿಕೆ ಹುಂಡಿಗಳಲ್ಲಿ ಹಣ ಸಂಗ್ರಹವಾಗುತ್ತದೆ. ಇದೀಗ ದೇಶದಾದ್ಯಂತ 500 ರು. ಹಾಗೂ 1000 ರು. ನೋಟುಗಳನ್ನು ರದ್ದುಪಡಿಸಿರುವುದರಿಂದ ಈ ಕಾಣಿಕೆ ಹುಂಡಿಗಳನ್ನು ತೆರೆಯಲೇಬೇಕಾದ ಅನಿವಾರ್ಯತೆ ಉಂಟಾಗಿದೆ. ದೇವಸ್ಥಾನಗಳ ಆಡಳಿತವನ್ನು ನೋಡಿಕೊಳ್ಳುತ್ತಿರುವವರು ಇಂತಹ ಹುಂಡಿಗಳನ್ನು ತೆರೆಯಲು ಮುಂದಾಗಿದ್ದಾರೆ.
ಪ್ರತಿ ಕಾಣಿಕೆ ಹುಂಡಿಗಳಲ್ಲಿಯೂ ಬಹುಪಾಲು ಚಿಲ್ಲರೆ ಮೊತ್ತ ಸಂಗ್ರಹವಾಗುತ್ತದೆ. ಆಗೊಮ್ಮೆ ಈಗೊಮ್ಮೆ 10, 50 ಹಾಗೂ 100 ರು. ನೋಟುಗಳನ್ನೂ ಕಾಣಿಕೆಯ ಮೊತ್ತದಲ್ಲಿ ಹಾಕಲಾಗುತ್ತದೆ. ಸ್ವಲ್ಪ ಹೆಸರು ಮಾತಿನ ದೇವಸ್ಥಾನಗಳಾದರೆ ಅಂತಹ ದೇವಸ್ಥಾನಗಳ ಕಾಣಿಕೆ ಹುಂಡಿಗೆ ಹಾಕುವ ಮೊತ್ತವೂ ಜಾಸ್ತಿಯಾಗುತ್ತದೆ. ಪ್ರಸಿದ್ಧ ಸ್ಥಳಗಳಲ್ಲಿ 100ಕ್ಕಿಂತ ಹೆಚ್ಚಿನ ಅಂದರೆ 500 ಹಾಗೂ 1000 ರು. ನೋಟುಗಳನ್ನೂ ಕಾಣಿಕೆ ಹಾಕುವುದುಂಟು. ಇದೀಗ 500 ಹಾಗೂ 1000 ರು. ನೋಟುಗಳನ್ನು ರದ್ದು ಪಡಿಸಿರುವುದರಿಂದ ಕಾಣಿಕೆ ಹುಂಡಿಗಳಲ್ಲಿ ಸಂಗ್ರಹವಾಗಿರುವ ಇಂತಹ ನೋಟುಗಳನ್ನು ಬ್ಯಾಂಕಿಗೆ ಮರಳಿಸುವ ಅನಿವಾರ್ಯತೆ ಉಂಟಾಗಿದೆ
           ಡಿಸೆಂಬರ್ 31ರ ಒಳಗೆ ಈ ನೋಟುಗಳನ್ನು ಬ್ಯಾಂಕುಗಳಿಗೆ ಮರಳಿಸದೇ ಇದ್ದಲ್ಲಿ ಈ ನೋಟುಗಳು ಬೆಲೆ ಕಳೆದುಕೊಳ್ಳುತ್ತವೆ. ಈ ನಿಟ್ಟಿನಲ್ಲಿ ಹಲವು ದೇವಸ್ಥಾನಗಳ ಆಡಳಿತ ಮಂಡಳಿಗಳು ಈಗಾಗಲೇ ಕಾಣಿಕೆ ಹುಂಡಿಯನ್ನು ತೆರೆದು ಅದರಲ್ಲಿ ಸಂಗ್ರಹವಾಗಿರುವ 500 ಹಾಗೂ 1000 ರು. ನೋಟುಗಳನ್ನು ವಿಂಗಡಿಸಲು ಮುಂದಾಗಿದೆ. ದೇವಸ್ಥಾನದ ಅರ್ಚಕರು ಹಾಗೂ ಆಡಳಿತ ಮಂಡಳಿಯ ಸಿಬ್ಬಂದಿ ಕಾಣಿಕೆ ಹುಂಡಿಗಳನ್ನು ಒಡೆದು, ನೋಟುಗಳ ವಿಂಗಡಣೆ ಮಾಡಲು ಮುಂದಾಗಿದ್ದಾರೆ.
ಕಾಣಿಕೆ ಹುಂಡಿಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ 500 ಹಾಗೂ 100 ನೋಟುಗಳು ಸಿಗುವುದಿಲ್ಲ. ಚಿಲ್ಲರೆಗಳು ಹಾಗೂ 10, 20ರು ನೋಟುಗಳೇ ಅಧಿಕವಾಗಿರುತ್ತವೆ. ಹುಂಡಿಯನ್ನು ತೆರೆದು ಹುಡುಕಿದರೆ ಒಂದೊಂದು ಹುಂಡಿಗಳಲ್ಲಿ 5-10ರಷ್ಟು ಮಾತ್ರ ದೊಡ್ಡ ಮೊತ್ತದ ನೋಟುಗಳು ಸಿಗಬಹುದು. ಯಾರಾದರೂ ಹರಕೆಯನ್ನು ಹೊತ್ತುಕೊಂಡಿದ್ದರೆ ಅಂತವರು ಮಾತ್ರ ದೊಡ್ಡ ಮೊತ್ತವನ್ನು ಕಾಣಿಕೆ ಹಾಕುತ್ತಾರೆ. ಅಂತಹ ಸಂದರ್ಭಗಳಲ್ಲಿ ಮಾತ್ರ ಕಾಣಿಕೆ ಹುಂಡಿಗಳಲ್ಲಿ 500 ರಿಂದ 1000 ರು. ನೋಟುಗಳು ಸಿಗಬಹುದಾಗಿದೆ ಎಂದು ಅರ್ಚಕರೊಬ್ಬರು ತಿಳಿಸಿದ್ದಾರೆ.
ಒಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು 500 ಹಾಗೂ 1000 ರು. ನೋಟುಗಳನ್ನು ರದ್ದು ಪಡಿಸಿ ಆದೇಶ ಹೊರಡಿಸಿರುವುದು ದೇವಸ್ಥಾನಗಳ ಕಾಣಿಕೆ ಹುಂಡಿಗಳ ಮೇಲೂ ಪರಿಣಾಮವನ್ನು ಬೀರಿದೆ. ಸಾಮಾನ್ಯವಾಗಿ ದೇವಸ್ಥಾನಗಳಲ್ಲಿ ಕಾಣಿಕೆ ಹುಂಡಿ ಭರ್ತಿಯಾದಾಗ ಮಾತ್ರ ತೆರೆಯಲಾಗುತ್ತದೆ. ಆದರೆ ಮೋದಿಯವರ ಅದೇಶದಿಂದ ಕಾಣಿಕೆ ಹುಂಡಿ ಭರ್ತಿಯಾಗುವ ಮೊದಲೇ ತೆರೆದು ನೋಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹುಂಡಿ ತೆರೆಯುವ ಆಡಳಿತ ಮಂಡಳಿ ನಿರ್ಧಾರ ಜನಸಾಮಾನ್ಯರಲ್ಲಿ ವಿಸ್ಮಯಕ್ಕೂ ಕಾರಣವಾಗಿದೆ.

-------------

ಚಿಕ್ಕ ದೇವಸ್ಥಾನದ ಹುಂಡಿಗಳನ್ನು ಸಾಮಾನ್ಯವಾಗಿ ವರ್ಷಕ್ಕೆ ಒಂದು ಸಾರಿಯೋ ಅಥವಾ ಎರಡು ಸಾರಿಯೋ ತೆರೆಯಲಾಗುತ್ತದೆ. ಅಥವಾ ಹುಂಡಿಗಳು ಭರ್ತಿಯಾದಾಗ ತೆರೆಯಲಾಗುತ್ತದೆ. ಆದರೆ ಈಗ 500 ಹಾಗೂ 1000 ರು. ನೋಟುಗಳನ್ನು ರದ್ದು ಪಡಿಸಿರುವ ಕಾರಣ ಹುಂಡಿಗಳನ್ನು ತೆರೆಯಲೇಬೇಖಾದ ಅನಿವಾರ್ಯತೆ ಉಂಟಾಗಿದೆ. ಕಾಣಿಕೆ ಹುಂಡಿಯಲ್ಲಿ ಈ ನೋಟುಗಳು ಸೇರಿಕೊಂಡಿದ್ದರೆ ಅವುಗಳನ್ನು ಬ್ಯಾಂಕಿಗೆ ನೀಡುವ ಕಾರಣಕ್ಕಾಗಿ ತಪಾಸಣೆ ಅಗತ್ಯವಾಗಿದೆ. ಇಲ್ಲವಾದಲ್ಲಿ ಹುಂಡಿಗಳಲ್ಲಿನ ನೋಟುಗಳು ಯಾರ ಗಮನಕ್ಕೂ ಬಾರದಂತೇ ಬೆಲೆ ಕಳೆದುಕೊಳ್ಳುವ ಸಂದರ್ಭ ಬರಬಹುದಾಗಿದೆ. ಈ ನಿಟ್ಟಿನಲ್ಲಿ ಹಲವು ದೇವಸ್ಥಾನಗಳ ಆಡಳಿತ ಮಂಡಳಿಗಳವರು ಕಾಣಿಕೆ ಹುಂಡಿ ತೆರೆಯುವ ನಿರ್ಕೈಧಾರಗೊಂಡಿದ್ದಾರೆ.
ಶ್ರೀಹರಿ ಭಟ್
ಅರ್ಚಕರು
ಬಾಣಸವಾಡಿ
ಬೆಂಗಳೂರು


(ನ.10ರ ವಿಶ್ವವಾಣಿಯಲ್ಲಿ ಪ್ರಕಟವಾಗಿದೆ)

No comments:

Post a Comment