Sunday, September 11, 2016

ಮುಂಗಾರು ಮಳೆ ಭಾಗ 2ರಿಂದ ನನಗೆ ವಯಕ್ತಿಕ ಶಾಪ ವಿಮೋಚನೆ : ಜಯಂತ ಕಾಯ್ಕಿಣಿ (ಸಂದರ್ಶನ)

ಕನ್ನಡ ಸಾಹಿತ್ಯ ಲೋಕದಲ್ಲಿ ಜಯಂತ ಕಾಯ್ಕಿಣಿಯವರು ತಮ್ಮದೇ ಆದ ಛಾಪನ್ನು ಮೂಡಿಸಿದವರು. ಕಥೆಗಾರರಾಗಿ ಓದುಗರನ್ನು ಸೆಳೆದ ಜಯಂತ ಕಾಯ್ಕಿಣಿಯವರು ಕಳೆದೊಂದು ದಶಕದಿಂದೀಚೆಗೆ ಚಿತ್ರ ಸಾಹಿತಿಯಾಗಿ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಮುಂಗಾರು ಮಳೆ ಚಲನಚಿತ್ರದ ಹಿಟ್ ಗೀತೆಗಳನ್ನು ನೀಡಿದ ಜಯಂತ ಕಾಯ್ಕಿಣಿಯವರು ಮುಂಗಾರು ಮಳೆ ಕವಿ, ಮಳೆ ಕವಿ, ಪ್ರೇಮಕವಿ ಎಂದೆಲ್ಲ ಕರೆಸಿಕೊಳ್ಳುತ್ತಿದ್ದಾರೆ. ಯುವ ಜನರ ಕನಸುಗಳಿಗೆ ಅಕ್ಷರ ರೂಪವನ್ನು ನೀಡಿದವರು ಜಯಂತ ಕಾಯ್ಕಿಣಿ. ಕನ್ನಡ ಚಿತ್ರರಂಗದಲ್ಲಿ ಮಧುರ ಹಾಡುಗಳ ಟ್ರೆಂಡ್ ಸೃಷ್ಟಿಸಿದವರು ಇವರು. ಮತ್ತೆ ಮತ್ತೆ ಕೇಳುವಂತಹ, ಏಕಾಂತದಲ್ಲಿ ಗುನುಗುವಂತಹ ಹಾಡುಗಳನ್ನು ನೀಡಿದವರು ಕಾಯ್ಕಿಣಿ. ಅನಿಸುತಿದೆ ಯಾಕೋ ಇಂದು.., ನಿನ್ನಿಂದಲೇ, ಮಿಂಚಾಗಿ ನೀನು ಬರಲು ಹೀಗೆ ಸಾಲು ಸಾಲು ಹಿಟ್ ಗೀತೆಗಳನ್ನು ಕೊಟ್ಟವರು ಜಯಂತರು. ಅವರು ಮುಂಗಾರು ಮಳೆಗೆ ಗೀತೆಯನ್ನು ಬರೆದು 10 ವರ್ಷಗಳೇ ಕಳೆದಿವೆ. ಈ ಹತ್ತು ವರ್ಷದ ನಂತರ ಮುಂಗಾರು ಮಳೆ ಚಿತ್ರದ ಮುಂದುವರಿದ ಭಾಗ ಬಿಡುಗಡೆಯಾಗಿದೆ. ಮುಂಗಾರು ಮಳೆ ಭಾಗ-2ರಲ್ಲಿ 2 ಗೀತೆಗಳನ್ನು ಜಯಂತ ಕಾಯ್ಕಿಣಿ ಅವರು ಬರೆದಿದ್ದು ಈ ಎರಡೂ ಗೀತೆಗಳು ಈಗಾಗಲೇ ಜನಮನ ಸೂರೆಗೊಂಡಿದ್ದು ವೈರಲ್ ಆಗಿದೆ. ಮುಂಗಾರುಮಳೆ ಭಾಗ-2 ಬಿಡುಗಡೆಯಾದ ಸಂದರ್ಭದಲ್ಲಿಯೇ ಮಾತಿಗೆ ಸಿಕ್ಕಿದ್ದ ಪ್ರೇಮಕವಿ ಜಯಂತ ಕಾಯ್ಕಿಣಿಯವರು ಚಿತ್ರರಂಗ, ಚಿತ್ರಗೀತೆಗಳು, ಚಿತ್ರ ಸಾಹಿತ್ಯದ ಬಗ್ಗೆ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದು ಹೀಗೆ..

ಪ್ರಶ್ನೆ : ಮುಂಗಾರು ಮಳೆ ಭಾಗ-2 ಬರುತ್ತಿದೆ. ಏನನ್ನಿಸುತ್ತಿದೆ?
ಮುಂಗಾರು ಮಳೆ ಭಾಗ ಎರಡು ಸಿನೆಮಾವನ್ನು ನಾನಿನ್ನೂ ನೋಡಿಲ್ಲ. ಆದರೆ ಕೆಲವು ಭಾಗಗಳನ್ನು ಮಾತ್ರ ನಾನು ನೋಡಿದ್ದೇನೆ. ಸಂತೋಷದ ಸಂಗತಿ ಎಂದರೆ ಮುಂಗಾರು ಮಲೆ ಭಾಗ ಎರಡಕ್ಕೆ ನಾನು ಬರೆದ ಎರಡೂ ಹಾಡುಗಳನ್ನು ಜನರು ಬಹಳ ಪ್ರೀತಿಯಿಂದ ಸ್ವೀಕರಿಸಿದ್ದಾರೆ. ಸರಿಯಾಗಿ ನೆನಪಿದೆ ನನಗೆ ಹಾಗೂ ಗಮನಿಸು ನೀ ಒಮ್ಮೆ ಎಂಬ ಹಾಡುಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ನಾನು ಹೋದ ಕಡೆಯಲ್ಲೆಲ್ಲ ಈ ಹಾಡುಗಳ ಬಗ್ಗೆ ನನಗೆ ಖುಷಿಯಿಂದ ಮಾತನಾಡುತ್ತಿದ್ದಾರೆ. ಇದು ನನಗೆ ವಯಕ್ತಿಕವಾಗಿ ಒಂದು ಶಾಪ ವಿಮೋಚನೆ.
ಸರಿಯಾಗಿ ಹತ್ತು ವರ್ಷಗಳ ಹಿಂದೆ ಮುಂಗಾರುಮಳೆ ಭಾಗ ಒಂದು ಬಿಡುಗಡೆಯಾಗಿತ್ತು. ಆ ಸಿನೆಮಾಕ್ಕೆ ಹಾಡನ್ನು ಬರೆದ ನಂತರದಲ್ಲಿ ನಾನು 300 ಹಾಡುಗಳನ್ನು ಬರೆದಿದ್ದೇನೆ. ಆದರೆ ಸಿಕ್ಕಿದವರೆಲ್ಲ ಮುಂಗಾರು ಮಳೆಯನ್ನೇ ಮಾತನಾಡುತ್ತಿದ್ದರು. ನೀವು ಏನೆ ಬರೆಯಿರಿ ಮುಂಗಾರು ಮಳೆ ಸಿನೆಮಾ ಹಾಡೇ ಬೆಸ್ಟ್ ಎಂದು ಹೇಳುತ್ತಿದ್ದರು. ಯಾವುದೇ ಒಂದು ದೊಡ್ಡ ಹಿಟ್ ಸಿನೆಮಾ ಬಂದರೆ ಅದರ ಮುಂದಿನ ಭಾಗದ ಸಿನೆಮಾ ಬಂದಾಗಲೂ ಕೂಡ ಮೊದಲನೇ ಭಾಗ ನೆನಪಿನಲ್ಲಿ ಉಳಿಯುತ್ತದೆ. ಇದೊಂಥರಾ ಮೊದಲನೇ ಪ್ರೇಮ ಇದ್ದಂತೆ. ಅದು ತಾಜಾ ಇರುತ್ತದೆ. ತಾಜಾ ಇದ್ದಾಗ ಎಲ್ಲರೂ ಇಷ್ಟ ಪಡುತ್ತಾರೆ. ಉದಾಹರಣೆಗೆ ನಿಮಗೆ ಯಾವುದಾದರೂ ಒಂದು ಹೊಟೆಲ್ಗೆ ಹೋಗಿ ಬನ್ಸ್ ಬಾಜಿ ತಿಂದಿರಿ, ಇಷ್ಟವಾಯಿತು ಎಂದುಕೊಳ್ಳಿ. ಅದನ್ನು ನಿಮ್ಮ ಗೆಳೆಯನಿಗೆ ಹೇಳಿ ಆತನನ್ನೂ ಕರೆದುಕೊಂಡು ಹೋಗುತ್ತೀರಿ. ಆಗ ಮೊದಲಿನ ರುಚಿಯಂತೆ ನಿಮಗೆ ಅನ್ನಿಸುವುದಿಲ್ಲ. ಆತನಿಗೆ ಅದು ರುಚಿಸುತ್ತದೆ. ಜನರು ಮೊದಲ ಭಾಗಕ್ಕೂ ಎರಡನೆ ಭಾಗಕ್ಕೂ ಹೋಲಿಕೆ ಮಾಡಿ ನೋಡುತ್ತಾರೆ. ಹೀಗಾಗಿ ಮುಂಗಾರು ಮಳೆ ಎನ್ನುವುದು ನನಗೆ ಒಂದು ರೀತಿಯಲ್ಲಿ ಶಾಪದ ಹಾಗೆ ಆಗಿತ್ತು. ಇದು ಒಳ್ಳೆಯ ಅರ್ಥದ ಶಾಪ. ಮುಂಗಾರು ಮಳೆಯ ಎರಡನೇ ಭಾಗದ ಚಿತ್ರದಲ್ಲಿನ ಹಾಡುಗಳು ಅದನ್ನು ಮರೆಸಿ ಹಿಟ್ ಆಗಿದೆ. ನನಗೆ ವಯಕ್ತಿಕವಾಗಿ ಇದೊಂದು ಖುಷಿಯ ಸಂಗತಿ. ಹತ್ತು ವರ್ಷಗಳಿಂದ ಬರೆಯುತ್ತಿದ್ದರೂ ಕೂಡ ಇದುವರೆಗೂ ಜನರಿಗೆ ಇಷ್ಟವಾಗುತ್ತಿದೆ. ಜನರಿಗೆ ಇಷ್ಟವಾಗುತ್ತಿದ್ದರೆ ಇನ್ನೂ ಕೆಲವು ದಿವಸಗಳ ಕಾಲ ಬರೆಯಬಹುದು ಎನ್ನುವ ಆತ್ಮವಿಶ್ವಾಸ.

ಪ್ರಶ್ನೆ : ಮುಂಗಾರು ಮಳೆ ಸಿನೆಮಾ ಬಂದ ನಂತರ ನೀವು ಪ್ರೇಮಕವಿ, ಮಳೆ ಕವಿ ಎಂದೇ ಖ್ಯಾತಿಯನ್ನು ಪಡೆದಿರಿ. ಈ ಸಿನೆಮಾಕ್ಕೂ ಮೊದಲಿನ ನಿಮ್ಮ ಬರಹಗಳು, ಪ್ರೇಮಕವಿತೆಗಳ ಬಗ್ಗೆ ಹೇಳಿ
ಮುಂಗಾರು ಮಳೆ ಸಿನೆಮಾಕ್ಕೂ ಮೊದಲು ನಾನು ಪ್ರೇಮ ಕವಿತೆಗಳನ್ನು ಬರೆದೇ ಇರಲಿಲ್ಲ. ನನ್ನದು ಬದುಕಿನ ಕುರಿತಾದ ಪ್ರೇಮ. ಬದುಕಿಗೆ ಬರೆದ ಪ್ರೇಮಪತ್ರಗಳು ಕವಿತೆಯಾಗುತ್ತವೆ. ಬದುಕಿ ಬರೆದ ಪ್ರೇಮಪತ್ರಗಳು ಕಥೆಯಾಗುತ್ತವೆ. ನನ್ನ ಮುಖ್ಯ ಸಾಹಿತ್ಯದಲ್ಲಿ ಪ್ರೇಮ ಸಣ್ಣ ವಿಷಯ. ಆದರೆ ಸಿನೆಮಾದಲ್ಲಿ ಪ್ರೇಮವೇ ಪ್ರಮುಖ ವಿಷಯ. ಹೀಗಾಗಿ ಸಿನೆಮಾ ಎನ್ನುವುದು ನನ್ನ ಜೀವನ ದರ್ಶನದ ಅಭಿವ್ಯಕ್ತಿ ಅಲ್ಲ. ಸಿನೆಮಾ ಹಾಡುಗಳು ಎಂದರೆ ಯಾವುದೋ ಸಂದರ್ಭಕ್ಕೆ, ಯಾವುದೋ ಪಾತ್ರಕ್ಕೆ ಹೊಸೆಯುವ ಹಾಡುಗಳಷ್ಟೆ. ಅದು ನನ್ನ ಜೀವನದ ದರ್ಶನ ಅಲ್ಲ. ಆ ಪಾತ್ರಕ್ಕೆ ಏನು ಬೇಕೋ ಅದನ್ನು ನೀಡುವುದು ಅಷ್ಟೆ.

ಪ್ರಶ್ನೆ : ನೀವು ಮುಂಗಾರು ಮಳೆ ಸಿನೆಮಾಕ್ಕೆ ಕವಿತೆಗಳನ್ನು ಬರೆದ ನಂತರ ನಿಮ್ಮನ್ನು ಅನುಕರಣೆ ಮಾಡುವವರು ಬಹಳ ಜನರಾದರು. ಬೇರೆಯವರು ಬರೆದರೂ ಇದು ಜಯಂತ ಕಾಯ್ಕಿಣಿಯವರು ಬರೆದ ಗೀತೆ ಎನ್ನುವ ಹಂತವನ್ನು ತಲುಪಿತು. ಈ ಬಗ್ಗೆ ಏನು ಹೇಳುತ್ತೀರಿ ?
ಭಾರತ ದೇಶದಲ್ಲಿ ಕೋಟಿಗಟ್ಟಲೆ ಹಾಡುಗಳು ಪ್ರೀತಿಯ ಮೇಲೆ ಬಂದು ಹೋಗಿದೆ. ಪ್ರೀತಿಯ ಕುರಿತು ಎಷ್ಟಾದರೂ ಹಾಡುಗಳನ್ನು ಬರೆಯಬಹುದು. ಅದೇ ಪ್ರೀತಿ, ಮೊದಲ ಪ್ರೀತಿ, ಏಕಮುಖ ಪ್ರೀತಿ, ಎರಡನೇ ಪ್ರೀತಿ, ಅದೇ ವಿರಹ, ಸರಸ, ಹೀಗೆ ಎಲ್ಲೆಲ್ಲೂ ಪ್ರೀತಿಯೇ. ಅದರ ಬಗ್ಗೆಯೇ ಮತ್ತೆ ಹೇಗೆ ಹೊಸದನ್ನು ಹೇಳಲು ಸಾಧ್ಯ? ಅದದೇ ಪ್ರೀತಿ ಮತ್ತೆ ಮತ್ತೆ ಮರುಕಳಿಸುತ್ತದೆ. ಪ್ರೀತಿಯ ಬಗ್ಗೆ ಹೊಸದಾಗಿ ಹೇಳುವುದು ಕಷ್ಟವೇ. ನಾನು ಚಿತ್ರಗೀತೆ ರಚನೆಕಾರನಾಗುವ ಮೊದಲು ಚಿತ್ರಗೀತೆ ರಚನೆಕಾರರನ್ನು ಬಹಳ ಉಢಾಫೆಯಾಗಿ ಕಾಣುತ್ತಿದ್ದೆ. ಇದನ್ನು ಯಾರು ಬೇಕಾದರೂ ಬರೆಯಬಹುದು ಎಂಬಂತೆ ಲೇವಡಿ ಮಾಡುತ್ತಿದ್ದೆ. ಬಾನಲ್ಲೂ ನೀನೆ, ಬಯಲಲ್ಲೂ ನೀನೆ, ಮನೆಯಲ್ಲೂ ನೀನೆ, ಹೊರಗೂ ನೀನೆ ಹೀಗೆ ಬರೆದುಕೊಂಡು ಹೋಗಬಹುದಲ್ಲ ಎಂದುಕೊಂಡಿದ್ದೆ. ಯಾವಾಗ ನಾನು ಚಿತ್ರಗೀತೆಗಳನ್ನು ಬರೆಯಲು ಆರಂಭಿಸಿದೆನೋ ಈಗ ಅದರ ಕಷ್ಟ ಸುಖಗಳೆಲ್ಲ ಗೊತ್ತಾಗಲು ಆರಂಭವಾಗಿದೆ. ಇದರ ಜೊತೆಗೆ ಸೆಟ್ ಆಗಿರುವ ಟ್ಯೂನಿಗೆ ಬರೆಯುವುದು ಸುಲಭವಲ್ಲ. ಅದಕ್ಕೆ ಅದರದೇ ಆದ ಕೌಶಲವಿದೆ. ಅದನ್ನು ಬಳಸಿಕೊಳ್ಳಬೇಕು. ಅದೇ ಪ್ರೀತಿಯ ಬಗ್ಗೆ ಹೊಸ ಮಾತನ್ನು ಹೇಗೆ ಹೇಳುವುದು? ಈ ಬಗ್ಗೆ ಬಹಳಷ್ಟು ಸಾರಿ ನನಗೆ ಕಾಡಿದ್ದಿದೆ. ಇದನ್ನೇ ನಾನು `ಏನೆಂದು ಹೆಸರಿಡಲಿ, ಅದೇ ಪ್ರೀತಿ, ಅದೇ ರೀತಿ, ಹೇಗಂತ ಹೇಳುವುದು..' ಅಂತ ಬರೆದಿದ್ದೆ. ಏಕೆಂದರೆ ನನಗೆ ಯಾವುದೇ ಸಾಲುಗಳು ಆಗ ಹೊಳೆಯುತ್ತಿರಲಿಲ್ಲ. ಇದು ಪ್ರತಿಯೊಬ್ಬ ಗೀತರ ರಚನೆಕಾರನ ಕಷ್ಟ.
ನನಗೆ ತುಂಬಾ ಹಿಂದಿ ಹಾಡುಗಳ ಪ್ರೇಮವಿದೆ. ಕೆಲವರಿಗೆ ಹಾಗಾಗಿ ನನ್ನ ಹಾಡುಗಳಲ್ಲಿ ಹಿಂದಿ ಹಾಡುಗಳ ಛಾಯೆ ಕಾಣಬಹುದು. `ಕೇದಿಗೆ ಗರಿಯಂತ ನಿನ್ನ ನೋಟ..' ಎಂಬ ಸಾಲು ನಿನ್ನಿಂದಲೇ... ಹಾಡಿನಲ್ಲಿದೆ. ಕೇದಿಗೆ ಗರಿ ಎಂದಕೂಡಲೇ ಬೇಂದ್ರೆ ನೆನಪಾಗುತ್ತಾರೆ. ಏಕೆಂದರೆ ಕೇದಿಗೆ ಗರಿ ಸಿಕ್ಕಿದ್ದೇ ಬೇಂದ್ರೆ ಅವರಿಂದ. ಕವಿತೆ ಬರೆಯುವುದು ಸಂಯುಕ್ತ ಕಲಾಪ. ಇದು ನನ್ನದು, ಅದು ನಿನ್ನದು ಎಂದು ಹೇಳಲು ಸಾಧ್ಯವಿಲ್ಲ. ಅದು ಬೆಳದಿಂಗಳಿನಂತೆ ಎಲ್ಲರಿಗೂ ಸೇರಿದ್ದು.

ಪ್ರಶ್ನೆ : ಸಾಮಾನ್ಯ ಸಾಹಿತ್ಯವನ್ನು ಇಷ್ಟಪಡುವವರು ಚಿತ್ರ ಸಾಹಿತ್ಯದ ಬಗ್ಗೆ ಮೂಗು ಮುರಿಯುತ್ತಾರೆ. ಈ ಬಗ್ಗೆ ನೀವೇನು ಹೇಳುತ್ತೀರಿ?
ಯಾವ ಸಾಹಿತ್ಯ ಯಾರಿಗೆ ಇಷ್ಟ ಎನ್ನುವುದು ಅವರವರ ಅಭಿವ್ಯಕ್ತಿಗೆ ಸೇರಿದ್ದು. ಅವರವರಲ್ಲಿ ಯಾವ ರೀತಿ ಅಭಿವ್ಯಕ್ತಿ ಇರುತ್ತದೆಯೋ ಅದಕ್ಕೆ ತಕ್ಕಂತೆ ಅವರು ಸಾಹಿತ್ಯವನ್ನು ಇಷ್ಟ ಪಡುತ್ತಾರೆ. ನಾನು ಎರಡೂ ಕವಿತೆಗಳನ್ನು ಬರೆಯುತ್ತಿರುತ್ತೇನೆ. ನನ್ನ ಕವನ ಸಂಕಲನಗಳೂ ಬರುತ್ತಿರುತ್ತವೆ. ಕಥಾ ಸಂಕಲನಗಳೂ ಬರುತ್ತಿರುತ್ತವೆ. ಸಿನೆಮಾ ಹಾಡುಗಳೂ ಬರುತ್ತಿರುತ್ತವೆ. ನನ್ನ ಹಾಡುಗಳನ್ನು ಇಷ್ಟಪಡುವವರು ಅಂಗಡಿಗಳಿಗೆ ಹೋದಾಗ `ಇವರು ಕಥೆಗಳನ್ನೂ ಬರೆಯುತ್ತಾರಾ..? ನೋಡ್ವಾ' ಎಂದು ಪುಸ್ತಕಗಳನ್ನು ಕೊಂಡ ಉದಾಹರಣೆಗಳಿವೆ. ಅದೇ ರೀತಿ ನನ್ನ ಸಾಹಿತ್ಯದ ಅಭಿಮಾನಿಗಳು `ಜಯಂತ ಏನೋ ಹಾಡು ಬರೆದಿದ್ದಾನಂತಲ್ಲ.. ಕೇಳ್ವಾ..' ಎಂದು ಹಾಡನ್ನು ಕೇಳಲು ಆರಂಭಿಸುತ್ತಾರೆ. ಹೀಗೆ ಒಂದನ್ನು ಇಷ್ಟ ಪಡುವವರು ಇನ್ನೊಂದರತ್ತ ಹೊರಳುತ್ತಲೇ ಇರುತ್ತಾರೆ. ಆದರೆ ಇದು ಶ್ರೇಷ್ಟ ಸಾಹಿತ್ಯ, ಇದು ಕನಿಷ್ಟ ಸಾಹಿತ್ಯ ಎಂಬಂತಹ ಮಡಿವಂತಿಕೆ ಸಲ್ಲ. ಇದು ಮುಖ್ಯ ಧಾರೆಯ ಸಾಹಿತ್ಯ, ಇದು ಬೇರೆಯದು ಎನ್ನುವ ಭಾವನೆಯೂ ಸಲ್ಲದು. ಎಲ್ಲವುಗಳಿಗೂ ಅದರದೇ ಆದ ಇತಿಮಿತಿಯಿದೆ. ಆದರೆ ಸಿನೆಮಾ ಸಾಹಿತ್ಯ ಎಂಬುದು ಪೂರಕ ಸಾಹಿತ್ಯ. ಇದೊಂಥರಾ ನಾಟಕಕ್ಕೆ ಹಾಡು ಬರೆದಂತೆ. ಯಾವುದೋ ಕಾರ್ಯಕ್ರಮಕ್ಕೆ ಸ್ವಾಗತಗೀತೆಯನ್ನು ಬರೆದಂತೆ. ಅದರ ಉದ್ದೇಶ ಅಷ್ಟಕ್ಕೇ ಸೀಮಿತವಾದದ್ದು. ನಾವು ಬರೆಯುವ ಸಾಹಿತ್ಯ ಸ್ವಂತದ ಸಾಹಿತ್ಯ. ಅಂದರೆ ಬದುಕಿನಕುರಿತಾದ ಸಾಹಿತ್ಯ.


ಪ್ರಶ್ನೆ : ಹೊಸ ಚಿತ್ರ ಸಾಹಿತಿಗಳ ಬಗ್ಗೆ ನಿಮ್ಮ ಅಭಿಪ್ರಾಯ. ಇತ್ತೀಚಿನ ಚಿತ್ರಗಳಲ್ಲಿ ಹೆಚ್ಚಿತ್ತಿರುವ ಅಶ್ಲೀಲ ಚಿತ್ರಗೀತೆಗಳ ಕುರಿತು ನೀವು ಏನು ಹೇಳಲು ಬಯಸುತ್ತೀರಿ?
ಎಲ್ಲ ಕಾಲದಲ್ಲಿಯೂ ಎಲ್ಲ ಕ್ಷೇತ್ರಗಳಲ್ಲಿಯೂ ಶೆ.20ರಷ್ಟು ಜೊಳ್ಳು ಇದ್ದೇ ಇರುತ್ತದೆ. ಅದೇ ರೀತಿ ಸಿನಿಮಾ ಲೋಕದಲ್ಲಿಯೂ ಕೂಡ ಶೆ.20ರಷ್ಟು ಜೊಳ್ಳು ಇದ್ದೇ ಇರುತ್ತವೆ. ಸಿನೆಮಾ ಸಾಹಿತ್ಯವನ್ನು ಹೊರತುಪಡಿಸಿ ಇತರ ಸಾಹಿತ್ಯಕ್ಕೆ ಬಂದರೆ ಅದರಲ್ಲಿಯೂ ನೂರಕ್ಕೆ ನೂರರಷ್ಟು ಉತ್ತಮ ಸಾಹಿತ್ಯ ಎಲ್ಲಿದೆ. ಕ್ರಿಕೆಟ್ ಆಟದಲ್ಲಿಯೂ ಶೇ.100ರಷ್ಟು ಶ್ರೇಷ್ಟವಾದುದು ಎಲ್ಲಿದೆ? ಪತ್ರಿಕೋದ್ಯಮದಲ್ಲಿ ಎಲ್ಲ ಶ್ರೇಷ್ಟ ಎಲ್ಲಿದೆ? ಅಂಗಡಿಯಲ್ಲಿ ಸಿಗುವ ಮಸಾಲೆದೋಸೆಯಲ್ಲಿಯೂ ಎಲ್ಲಾ ಶ್ರೇಷ್ಟವಾಗಿರುವುದಿಲ್ಲ. ಇವೆಲ್ಲದರಲ್ಲಿಯೂ ಶೆ.20ರಷ್ಟು ಕಳಪೆಯಾದದ್ದು ಹಾಗೂ ತೆಗೆದುಹಾಕಬಹುದಾದಂತಹವುಗಳು ಇದ್ದೇ ಇರುತ್ತವೆ. ಸಿನೆಮಾ ರಂಗ ಎನ್ನುವುದು ದೊಡ್ಡ ಉದ್ದಿಮೆ. ಹೀಗಾಗಿ ಇಲ್ಲಿಯೂ ಕೂಡ ಇಂತಹ ಜೊಳ್ಳುಗಳು ಇದ್ದೇ ಇರುತ್ತವೆ. ಕನ್ನಡ ಸಾಹಿತ್ಯವನ್ನು ಉದ್ಧಾರ ಮಾಡುತ್ತೇವೆ ಎಂದು ಯಾರೂ ಮಾಡುತ್ತಿಲ್ಲ. ದುಡ್ಡು ಮಾಡಬೇಕೆಂಬ ಕಾರಣಕ್ಕಾಗಿಯೇ ಎಲ್ಲರೂ ಮಾಡುತ್ತಿರುವುದು ಇದು. ಇದೊಂದು ಬ್ಯುಸಿನೆಸ್. ಅದರ ಉಪ ಉತ್ಪನ್ನಗಳಾಗಿ ಇಂಗತವುಗಳೆಲ್ಲ ಬರುತ್ತಿರುತ್ತವೆ. ಆದರೆ ಇಂತವುಗಳು ಬೇಗನೆ ಹೋಗುತ್ತವೆ. ಮನೆಯಲ್ಲಿ ಮಾಡಿದ ಗಂಜಿ ಅಥವಾ ಉಪ್ಪಿನಕಾಯಿಗಳು ಬಹಳ ಕಾಲ ಉಳಿಯುತ್ತವೆ. ಆದರೆ ರಸ್ತೆಯಲ್ಲಿ ಮಾಡಿದ ಭೇಲ್ಪುರಿಗಳನ್ನು ಪಾರ್ಸಲ್ ಮಾಡಿ ಮನೆಗೆ ತಂದು ಸ್ವಲ್ಪ ಲೇಟಾಗಿ ತಿಂದರೂ ಅದು ಸ್ವಾದ ಕಳೆದುಕೊಳ್ಳುತ್ತವೆ. ಇವೆಲ್ಲ ಭೇಲ್ಪುರಿ ತರಹದ ರಚನೆಗಳು. ಬೇಗನೆ ಉಳಿಯುವುದಿಲ್ಲ.


ಪ್ರಶ್ನೆ : ಹಿರಿಯ ಸಾಹಿತಿಗಳ ನಂತರ, ಇಂದಿನ ತಲೆಮಾರಿನ ಕವಿಗಳು ರಾಜ್ಯ ಮಟ್ಟದಲ್ಲಿ ಬೆಳೆಯುತ್ತಿಲ್ಲ ಎನ್ನುವ ಮಾತುಗಳಿದೆ. ಯಾವುದೇ ಜಿಲ್ಲೆಗಳಿಗೆ ಹೋಲಿಸಿದರೆ ಅಲ್ಲಿನ ಕವಿಗಳು ಅಲ್ಲಿಗಷ್ಟೇ ಸೀಮಿತರಾಗುತ್ತಿದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯ.
ರಾಜ್ಯ ಮಟ್ಟ, ಜಿಲ್ಲಾ ಮಟ್ಟ ಇಂತಹದ್ದೆಲ್ಲ ಇಲ್ಲ. ಈ ಮಟ್ಟಗಳನ್ನೆಲ್ಲ ಮನುಷ್ಯರು ಮಾಡಿಕೊಂಡಿರುವುದು. ಒಮ್ಮೆ ವಿಷ್ಣು ನಾಯ್ಕ ಅವರು ನಮ್ಮ ಮನೆಗೆ ಬಂದಿದ್ದರು. ಅವರು ನಮ್ಮ ಗೋಕರ್ಣದ ಮನೆಗೆ ಬಂದಿದ್ದ ಸಂದರ್ಭದಲ್ಲಿ ತಂದೆಯವರ ಬಳಿ ನಾನೊಂದು ರಾಜ್ಯ ಮಟ್ಟದ ಸಾಹಿತ್ಯ ಕಾರ್ಯಕ್ರಮ ಮಾಡುತ್ತೇನೆ ಎಂದರು. ಆಗನ ನನ್ನ ತಂದೆ ಗೌರೀಶ ಕಾಯ್ಕಿಣಿಯವರು ಅಲ್ಲಿ ಇದ್ದ ನಿತ್ಯಪುಷ್ಪದ ಗಿಡವನ್ನು ತೋರಿಸಿ `ವಿಷ್ಣು ಇದು ಯಾವ ಮಟ್ಟದ್ದು..' ಎಂದು ಕೇಳಿದರು. ಏಕೆಂದರೆ ಆ ಗಿಡ ಇದ್ದಲ್ಲೇ ಇದ್ದು ವಿಶ್ವದ ಜೊತೆಗೆ ಸಂವಾದ ಮಾಡುತ್ತದೆ. ಹೋಬಳಿ ಮಟ್ಟ, ಆ ಮಟ್ಟ ಈ ಮಟ್ಟ ಎಲ್ಲ ರಾಜಕೀಯ ರಂಗಕ್ಕೆ ಸೇರಿದ್ದಷ್ಟೇ. ಸಾಹಿತ್ಯ ಇರುವುದು ಲೆಟರ್ಹೆಡ್ಡಿಗೆ, ವಿಸಿಟಿಂಗ್ ಕಾಡರ್ಿಗೆ, ಬಯೋಡೆಟಾಕ್ಕೆ ಇರುವ ವಿಷಯವಲ್ಲ. ಅದು ಜೀವನವನ್ನು ಅರ್ಥ ಮಾಡಿಕೊಳ್ಳಲು ಖಾಸಗಿಯಾಗಿ ನಡೆಯುವಂತದ್ದು. ಎಲ್ಲರ ಜೊತೆ ಸಂಬಂಧದಲ್ಲಿ ನಡೆಯುವಂತದ್ದು. ಅದರಲ್ಲಿ ಈ ರೀತಿಯ ಪಂಗಡಗಳೆಲ್ಲ ಇಲ್ಲ. ಒಳ್ಳೆಯ ಕವಿ ಒಳ್ಳೆಯ ಕವಿಯಷ್ಟೇ. ಅವನನ್ನು ರಾಜ್ಯದವರು ಗುರುತಿಸಬಹುದು ಅಥವಾ ದೇಶ ಮಟ್ಟದಲ್ಲಿ ಗುರುತಿಸಬಹುದು. ಅಥವಾ ಅವನ ಊರಿನವರು ಮಾತ್ರ ಗುರುತಿಸಬಹುದು. ನನಗೆ ಆ ಥರದ ಮಟ್ಟಗಳಲ್ಲಿ ನಂಬಿಕೆಯಿಲ್ಲ.

--------------

(ವಿಶ್ವವಾಣಿಗಾಗಿ ಮಾಡಿದ ಸಂದರ್ಶನ ಇದು. ಈ ಸಂದರ್ಶನವು ಸೆ.11ರ ಭಾನುವಾರದ ವಿಶ್ವವಾಣಿಯ ಸಂ-ಗಮ ಪುಟದಲ್ಲಿ ಪ್ರಕಟವಾಗಿದೆ)

No comments:

Post a Comment