Friday, March 13, 2015

ಇತಿಹಾಸ ಹಾಗೂ ಪ್ರಕೃತಿಯ ವಿಸ್ಮಯ : ನಿಘೂಡ ಮಣ್ಣಿನ ಬೊಂಬೆಗಳು

ತರಹೇವಾರಿ ಮಣ್ಣಿನ ಗೊಂಬೆಗಳು, ಬೇರೆ ಬೇರೆ ರೀತಿಯ ಮಣ್ಣಿನ ಆಕೃತಿಗಳು, ನೀರಿನ ಹೂಜಿ, ಸ್ತ್ರೀ, ಕೊಡ, ಹೂದಾನಿ ಸೇರಿದಂತೆ ಬಗೆ ಬಗೆಯ ಮಡಿಕೆಯ ಚಿತ್ತಾರಗಳು. ಇವು ಶಿರಸಿ ತಾಲೂಕಿನ ಮುಷ್ಕಿ-ಶಿರಗುಣಿ ಸನಿಹದ ದೇವರ ಕಾಡಿನಲ್ಲಿ ಕಂಡಂತಹ ವಿಸ್ಮಯ.
ತಾಲೂಕಿನಲ್ಲಿ ಅನೇಕ ಕಡೆಗಳಲ್ಲಿ ಮಣ್ಣಿನ ಗೊಂಬೆಗಳು ಹಾಗೂ ಮಣ್ಣಿನ ವಿಚಿತ್ರ ಆಕೃತಿಗಳು ಸಿಗುತ್ತವೆ. ಮುಷ್ಕಿ-ಶಿರಗುಣಿ, ವಾನಳ್ಳಿ, ಜಡ್ಡೀಗದ್ದೆ, ಬಂಡಲ, ಸಾಲಕಣಿ ಅಲ್ಲದೇ ಸಿದ್ದಾಪುರ ತಾಲೂಕಿನ ಹಿತ್ತಲಕೈ ಈ ಮುಂತಾದ ಪ್ರದೇಶಗಳಲ್ಲಿ ಮಣ್ಣಿನ ಗೊಂಬೆಗಳು ಕಣ್ಣಿಗೆ ಬೀಳುತ್ತವೆ. ಈ ಗೊಂಬೆಗಳು ಸಿಗುವ ಪ್ರದೇಶದಲ್ಲಿ ಸೂರ್ಯನ ಕಿರಣಗಳು ಭೂಮಿಯನ್ನು ತಾಕದೇ ಇರುವಷ್ಟು ದಟ್ಟವಾದ ಕಾಡಿದೆ. ಸ್ಥಳೀಯರು ಇಂತಹ ಮಣ್ಣಿನ ಗೊಂಬೆಗಳು ಸಿಗುವ ಸ್ಥಳಕ್ಕೆ ದೇವರಿಗೆ ಸೇರಿದ ಪ್ರದೇಶ ಎಂದು ಕರೆಯುತ್ತಾರೆ. ಈ ಕಾಡಿನ ಜಾಗವನ್ನು ದೇವರ ಕಾನು ಎಂದೂ ಕರೆಯುತ್ತಾರೆ.
ಸ್ಥಳೀಯರ ಪ್ರಕಾರ ಇಂತಹ ಪ್ರದೇಶದಲ್ಲಿ ಪ್ರತಿ ವರ್ಷ ಮಡಿಕೆಗಳು ಏಳುತ್ತವಂತೆ. ವರ್ಷಂಪ್ರತಿ ಹೊಸ ಹೊಸ ಮಡಿಕೆ ಆಕೃತಿಗಳು ಮನ್ಣಿನ ಆಳದಿಂದ ಮೇಲೆ ಬರುತ್ತವಂತೆ. ಇಂತಹ ಆಕೃತಿಗಳನ್ನು ವರ್ಷಕ್ಕೊಮ್ಮೆ ಪೂಜೆ ಮಾಡಿ ನಂತರ ಅವನ್ನು ಒಂದೆಡೆ ಗುಡ್ಡದಂತೆ ಪೇರಿಸಿ ಇಡಲಾಗುತ್ತದೆ. ತಾಲೂಕಿನ ಶಿರಗುಣಿಯ ಬಳಿಯಲ್ಲಿ ಮಣ್ಣಿನ ಮಡಿಕೆಯ ವಿಚಿತ್ರ ಆಕೃತಿಗಳ ಗೊಂಬೆಗಳನ್ನೆಲ್ಲ ಒಂದೆಡೆ ಸೇರಿಸಿ ಚಿಕ್ಕದೊಂದು ದಿಬ್ಬವನ್ನೇ ಮಾಡಲಾಗಿದೆ. ಇಲ್ಲಿ ಎರಡು ದೈತ್ಯ ಹುತ್ತಗಳಿವೆ. ಈ ಹುತ್ತಗಳಿರುವ ಪ್ರದೇಶದಲ್ಲಿ ಮಡಿಕೆಗಳು ಉದ್ಭವವಾಗುತ್ತವೆ ಎಂದು ಸ್ಥಳೀಯರು ಹೇಳುತ್ತಾರೆ. ಹುತ್ತದ ರಕ್ಷಣೆಗಾಗಿ ಗುಡಿಯನ್ನು ನಿರ್ಮಾಣ ಮಾಡಲಾಗಿದೆ. ಸ್ಥಳೀಕವಾಗಿ ನಾಗರ ಬನ ಎಂದು ಕರೆಯಲಾಗುತ್ತಿದೆ. ಜೊತೆ ಜೊತೆಯಲ್ಲಿ ದೇವರ ವಿವಿಧ ಗಣಗಳು ಇಲ್ಲಿವೆ ಎಂದೂ ಹೇಳಲಾಗುತ್ತದೆ.
ಮಾರ್ಚ್ ತಿಂಗಳ ಕೊನೆಯ ಭಾಗ, ಎಪ್ರಿಲ್ ಅಥವಾ ಮೇ ತಿಂಗಳಿನಲ್ಲಿ ಇಂತಹ ಮಡಿಕೆಗಳು ಏಳುವ ಸ್ಥಳದಲ್ಲಿ ಸ್ಥಳೀಯರು ಪೂಜೆ ಮಾಡುತ್ತಾರೆ. ವಾರ್ಷಿಕವಾಗಿ ಮಾಡುವ ಇಂತಹ ಪೂಜೆಗಳಲ್ಲಿ ಹೊಸದಾಗಿ ಉದ್ಭವವಾದ ಮಣ್ಣಿನ ಮಡಿಕೆಗಳನ್ನು ಪೂಜೆ ಮಾಡಲಾಗುತ್ತದೆ. ಸುಗ್ಗಿ ಹಬ್ಬ ಎಂದೂ ಈ ಪೂಜೆಯನ್ನು ಕರೆಯಲಾಗುತ್ತದೆ. ಬೆಳೆಗಳನ್ನು ಕಾಪಾಡುವ ಸಲುವಾಗಿ ಇಂತಹ ಪೂಜೆಗಳನ್ನು ಕೈಗೊಳ್ಳಲಾಗುತ್ತದೆ ಎಂದು ಶಿರಗುಣಿ ಭಾಗದ ಜನಸಾಮಾನ್ಯರು ಹೇಳುತ್ತಾರೆ. ಪೂಜೆಯ ಸಂದರ್ಭದಲ್ಲಿ ಶುಚಿತ್ವಕ್ಕೆ ಹೆಚ್ಚಿನ ಗಮನವನ್ನು ನೀಡಲಾಗುತ್ತದೆ. ಸ್ಥಳೀಯರ ಪ್ರಕಾರ ಇಂತಹ ವಾರ್ಷಿಕ ಪೂಜೆಗೆ ಗಾಮನ ಹಬ್ಬ ಎಂದೂ ಕರೆಯಲಾಗುತ್ತದೆ.
ನೆಲದಿಂದ ತನ್ನಿಂದ ತಾನೆ ಮಣ್ಣಿನ ಮೂರ್ತಿಗಳು ಹುಟ್ಟಿ ಬರುತ್ತವೆ. ಇದು ವಿಸ್ಮಯವನ್ನು ಮೂಡಿಸುತ್ತದೆ. ವರ್ಷದ ಎಲ್ಲಾ ಸಮಯದಲ್ಲಿಯೂ ಮಣ್ಣಿನ ಆಕೃತಿಗಳು ಮೂಡಿ ಬರುತ್ತವೆ. ಹೀಗೆ ಮಣ್ಣಿನ ಮೂರ್ತಿಗಳು ಹುಟ್ಟಿ ಬರುವ ಪ್ರದೇಶದಲ್ಲಿ ದೇವರ ತಾಣಗಳನ್ನು ಮಾಡಲಾಗಿದೆ. ಶಿರಗುಣಿ ಭಾಗದಲ್ಲಿ ಮೂರ್ತಿಗಳು ಉದ್ಭವವಾಗುವ ಪ್ರದೇಶದಲ್ಲಿ ಚೌಡಿ, ನಾಗರು ಸೇರಿದಂತೆ ದೇವ-ದೇವತೆಗಳ 11 ಗಣಗಳಿವೆ ಎನ್ನುವುದು ನಂಬಿಕೆ. ನಮ್ಮಲ್ಲಿ ಪ್ರತಿ ವರ್ಷ ವಿಶೇಷ ಪೂಜೆ ಮಾಡಲಾಗುತ್ತದೆ. ನನ್ನ ಅರಿವಿಗೆ ಬಂದಂತೆ ಕನಿಷ್ಟ 40 ವರ್ಷಗಳಿಂದ ಈ ಪ್ರದೇಶದಲ್ಲಿ ಮಣ್ಣಿನ ಮೂರ್ತಿಗಳು ಹುಟ್ಟುತ್ತಿವೆ. ಒಂದೊಂದು ವರ್ಷ ಒಂದೊ ಎದರೋ ಮೂರ್ತಿಗಳು ಹುಟ್ಟಿದರೆ ಒಂದೊಂದು ವರ್ಷ ಆರೆಂಟು ಮಡಿಕೆಗಳು ಮೇಲೆ ಬರುತ್ತವೆ. ಆದರೆ ಈ ಮಡಿಕೆಯ ಆಕರತಿಗಳು ಹೇಗೆ ಹುಟ್ಟುತ್ತವೆ ಎನ್ನುವುದು ನಮಗೆ ಗೊತ್ತಿಲ್ಲ ಎಂದು ಮುಸ್ಕಿಯ ಎ. ವಿ. ಭಟ್ಟ ಅವರು ಹೇಳುತ್ತಾರೆ.
ಮಣ್ಣಿನ ಮಡಿಕೆಗಳು ಏಳುವ ಸ್ಥಳಕ್ಕೆ ಬೇರೆ ಬೇರೆ ಪ್ರದೇಶಗಳಲ್ಲಿ  ಬೇರೆ ಬೇರೆ ರೀತಿಯ ನಂಬಿಕೆಗಳಿವೆ. ಚೌಡಿಕಟ್ಟೆ, ನಾಗರಬನ, ಬೀರಪ್ಪನ ಕಟ್ಟೆ, ದೇವರ ಕಾನು ಹೀಗೆ ವಿವಿಧ ಹೆಸರುಗಳಿಂದ ಕರೆಯುವ ಈ ಸ್ಥಳಗಳ ಕುರಿತು ಇತಿಹಾಸಕಾರರಾದ ಲಕ್ಷ್ಮೀಶ ಹೆಗಡೆ ಅಧ್ಯಯನವನ್ನು ಮಾಡಿದ್ದಾರೆ. ಪರಿಸರ ಬರಹಗಾರ ಶಿವಾನಂದ ಕಳವೆ ಅವರು ಹಲವಾರು ಮಾಹಿತಿಗಳನ್ನು ಕಲೆಹಾಕಿದ್ದಾರೆ. ಇಂತಹ ದೇವರಕಾಡುಗಳನ್ನು ಉಳಿಸುವ ಸಲುವಾಗಿ ಪಶ್ಚಿಮ ಘಟ್ಟ ಕಾರ್ಯಪಡೆಯ ನಿಕಟಪೂರ್ವ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಹಲವು ಕ್ರಮಗಳನ್ನು ಕೈಗೊಂಡಿರುವುದೂ ಉಲ್ಲೇಖನೀಯ.
ಆದರೆ ವಾಸ್ತವದಲ್ಲಿ ಇಂತಹ ಪ್ರದೇಶದಗಳಲ್ಲಿ ಮಣ್ಣಿನ ಮಡಿಕೆ ಹುಟ್ಟುತ್ತದೆ ಎನ್ನುವುದು ಸ್ಥಳೀಯರ ಕಲ್ಪನೆಯಾಗಿದೆ. ಇಂತಹ ಮಣ್ಣಿನ ಮಡಕೆಗಳಿಗೆ 2 ಶತಮಾನಗಳ ಇತಿಹಾಸವಿದೆ. ಹಿಂದೆ ಈ ಪ್ರದೇಶಗಳು ಜೈನರ ಆಳ್ವಿಕೆಯ, ಜೈನರು ಪೂಜೆ ಮಾಡುವ ಸ್ಥಳಗಳಾಗಿದ್ದವು. ಜೈನರು ಮಣ್ಣಿನಿಂದ ವಿವಿಧ ಮೂತರ್ಿಗಳನ್ನು ಮಾಡಿ ಪೂಜಿಸಿ ಆ ನಂತರದಲ್ಲಿ ಅವನ್ನು ಮಣ್ಣಿನಲ್ಲಿ ಹೂಳುತ್ತಿದ್ದರು. ಆದರೆ ಕಾಲ ಕ್ರಮೇಣ ಈ ಭಾಗದಲ್ಲಿ ಜೈನರ ಪ್ರಾಬಲ್ಯ ಕಡಿಮೆಯಾಯಿತು. ಮನ್ಣಿನಲ್ಲಿ ಹೂಳಿದ ಮೂತರ್ಿಗಳು ನಿಧಾನವಾಗಿ ಮಳೆಗಾಲದ ಸಂದರ್ಭದಲ್ಲಿ ಭೂಮಿಯಿಂದ ಮೇಲೆ ಬರಲು ಆರಂಭಿಸಿದವು. ಇದನ್ನೇ ಸ್ಥಳೀಯರು ಮಣ್ಣಿನ ಮೂತರ್ಿ ಹುಟ್ಟುವುದು ಎನ್ನುತ್ತಿದ್ದಾರೆ. ಇದರಲ್ಲೇನೂ ನಿಗೂಡತೆಯಿಲ್ಲ ಎಂದು ಇತಿಹಾಸಕಾರರಾದ ಲಕ್ಷ್ಮೀಶ ಹೆಗಡೆ ಸೋಂದಾ ಹೇಳುತ್ತಾರೆ.
***
ಮಣ್ಣಿನ ಮಡಿಕೆಗಳು ಏಳುವ ಸ್ಥಳಗಳು ಶಿರಸಿಯಲ್ಲಿ ಸಾಕಷ್ಟಿವೆ. ಸ್ಥಲೀಯರು ಇಂತಹ ಸ್ಥಳದಲ್ಲಿ ವಾಷರ್ಿಕವಾಗಿ ಪೂಜೆ ಮಾಡುತ್ತಾರೆ. ಇದನ್ನು ಗಾಮನ ಹಬ್ಬ ಎಂದು ಕರೆಯಲಾಗುತ್ತದೆ. ಮಳೆ ಹನಿ ಬಿದ್ದು ಮಣ್ಣಿ ಸಡಿಲವಾದಾಗ ನೆಲದಲ್ಲಿ ಹೂತಿಟ್ಟ ಗೊಂಬೆಗಳು ಮೇಲಕ್ಕೆ ಬರುತ್ತವೆ. ಇದನ್ನು ಸ್ಥಳೀಯರು ಮಡಿಕೆ ಏಳುವುದು ಎನ್ನುತ್ತಾರೆ ಅಷ್ಟೇ. ಈ ಗೊಂಬೆಗಳಿಗೆ 300-400 ವರ್ಷಗಳ ಇತಿಹಾಸವಿದೆ.
ಶಿವಾನಂದ ಕಳವೆ

***

(ಮಾ.13ರಂದು ಕನ್ನಡಪ್ರಭದ ಉತ್ತರ ಕನ್ನಡ ಆವೃತ್ತಿಯಲ್ಲಿ ಪ್ರಕಟವಾಗಿದೆ)

No comments:

Post a Comment