Wednesday, January 21, 2015

ಅಘನಾಶಿನಿ ಕಣಿವೆಯಲ್ಲಿ-9

                 ಮನೆಯಲ್ಲಾಗಲೇ ಇಬ್ಬರು ವಿಶೇಷ ವ್ಯಕ್ತಿಗಳ ಆಗಮನವಾಗಿತ್ತು. ಒಬ್ಬರು ವಿಕ್ರಮನ ಅಜ್ಜಿ ಮಹಾಲಕ್ಷ್ಮಿ. ಎರಡು ದಿನಗಳ ಹಿಂದೆ ಇವರು ತನ್ನ ತಮ್ಮ ಚಂದ್ರಶೇಖರನ ಮನೆಗೆ ಹೋಗಿದ್ದರು ಯಾವುದೋ ಕಾರ್ಯದ ನಿಮಿತ್ತ. ಮನೆಗೆ ಬಂದು ನಿಲ್ಲುತ್ತಿದ್ದಂತೆಯೇ ಮೊಮ್ಮಗನ ಆಗಮನ ಸುದ್ದಿ ಕೇಳಿ ಮುಖ ಊರಗಲವಾಗಿತ್ತು. ಮನೆಗೆ ಬಂದಿದ್ದ ಇನ್ನೊಬ್ಬ ವ್ಯಕ್ತಿ ವಿಕ್ರಮನ ಭಾವ ವಿನಾಯಕ. ವಿಕ್ರಮ ತಾನು ಬರುತ್ತಿದ್ದ ವಿಷಯವನ್ನು ಪೋನ್ ಮಾಡಿ ತಿಳಿಸಿದ್ದರಿಂದ ಸಕಾಲಕ್ಕೆ ಆಗಮಿಸಿದ್ದ.
                ವಿಕ್ರಮ ತನ್ನ ಅಜ್ಜಿಯನ್ನು ಪರಿಚಯಿಸುತ್ತಾ `ಇವರ ಜೊತೆ ಮಾತನಾಡುವುದೆಂದರೆ ಹಳೆಯ ಕಾಲದ ಾಚಾರ, ವಿಚಾರ, ನೆನಪು, ಬದುಕು, ತಲೆಮಾರುಗಳ ಲೋಕಕ್ಕೆ ಹೋದಂತೆ..' ಎಂದ. ನಂತರ ವಿಕ್ರಂ ವಿನಾಯಕನನ್ನು ಪರಿಚಯ ಮಾಡಿಸುತ್ತಾ `ಈತ ಒಬ್ಬ ಕವಿ. ಒಳ್ಳೆಯ ನಟ. ಜೊತೆಗೆ ಮಿಮಿಕ್ರಿ ಮಾಡಬಲ್ಲ. ಒಳ್ಳೆ ಕ್ರೀಡಾಪಟು ಕೂಡ ಹೌದು. ಜೊತೆಗೆ ಇವನಿಗೆ ಗ್ರಾಫಾಲಜಿ ಬರ್ತದೆ. ಓದೋ ಹುಚ್ಚು ಸ್ವಲ್ಪ ಹೆಚ್ಚು. ಜೊತೆಗೆ ಯಾರೇ ಒಳ್ಳೆಯ ವ್ಯಕ್ತಿಗಳಿರಲಿ ಅವರನ್ನು ಮಾತನಾಡಿಸಿ, ಗೆಳೆತನ ಮಾಡಿಕೊಳ್ಳುವುದು ಈತನ ಪ್ರಮುಖ ಕೆಲಸ. ಒಂದು ರೀತಿಯಲ್ಲಿ ಆಲ್ ರೌಂಡರ್ ಎಂದರೆ ತಪ್ಪಾಗಲಿಕ್ಕಿಲ್ಲ ನೋಡಿ..' ಎಂದ.
               `ಯೇ ವಿಕ್ರಮಾ.. ಎಂತೆಂತಾದ್ರೂ ಹೇಳಡದಾ.. ಇಲ್ದೋದ್ದು, ಅಲ್ದೋದ್ದು ಎಲ್ಲಾ ಎಂತಕ್ಕೆ ಹೇಳ್ತ್ಯಾ?.. ಥೋ..' ಎಂದು ವಿನಾಯಕ ವಿಕ್ರಮನ ವಿವರಣೆಯನ್ನು ಕೊಂಚ ವಿರೋಧಿಸಿದ. ಅಷ್ಟರಲ್ಲಿ ಮಧಗಯ ಬಾಯಿ ಹಾಕಿದ ಪ್ರದೀಪ `ನಿಮ್ ಗೆ ಗ್ರಾಫಾಲಜಿ ಗೊತ್ತಿದೆಯಾ? ಓಹ್.. ನಾನು ಸ್ವಲ್ಪ ಹುಷಾರಾಗಿರಬೇಕು...' ಎಂದ.
               `ಯಾಕಪ್ಪಾ..' ಎಂದು ಕೇಳಿದ ವಿಕ್ರಮನಿಗೆ `ಈತ ನನ್ನ ತರಲೆಗಳನ್ನೆಲ್ಲಾ ಕಂಡು ಹಿಡಿದುಬಿಟ್ಟರೆ?' ಎಂದಾಗ ಎಲ್ಲರೂ ಒಮ್ಮೆ ನಕ್ಕರು.
               ಆ ದಿನ ಹಾಗೇ ಮಾತನಾಡುತ್ತಾ ಮರುದಿನ ಯಾವುದಾದರೂ ಪ್ರದೇಶಗಳ ವೀಕ್ಷಣೆಗೆ ಹೋಗೋಣ ಎಂದುಕೊಂಡರು. ಸುತ್ತಮುತ್ತ ಏನಿದೆ ಎಂದುಕೊಂಡಾಗ `ಲಾಲಗುಳಿ ಜಲಪಾತ' ಹಾಗೂ `ಗಿರ ಗಿರ ಪತ್ಥರ್..' ಇದೆ ಎನ್ನುವುದು ತಿಳಿಯಿತು. ಅದನ್ನು ನೋಡಿ ಬನ್ನಿ ಎನ್ನುವ ಮಾತುಗಳನ್ನು ಮನೆಯ ಹಿರಿಯರು ಹೇಳಿದರು. ಸರಿಯೆಂದರು ಎಲ್ಲರೂ. ಮರುದಿನ ಹೋಗುವುದಕ್ಕೆ ತಯಾರಿ ಮಾಡಿಕೊಂಡು ಎಲ್ಲರೂ ಮಲಗಿದರು.

*****8*****

               ಮರುದಿನ ಎಪ್ರಿಲ್ 11. ಎಲ್ಲರೂ ನಸುಕಿನಲ್ಲೆದ್ದು ಹೊರಡಲು ಅನುವಾದರು. ಅಷ್ಟರಲ್ಲಾಗಲೇ ವಿಕ್ರಮನ ತಾಯಿ ಲಕ್ಷ್ಮಿ ಹಲಸಿನಕಾಯಿಯ ತೆಳ್ಳೇವನ್ನೂ ಮದ್ಯಾಹ್ನದ ಊಟಕ್ಕೆ ಸಾಕಷ್ಟು ತಿಂಡಿಗಳನ್ನೂ, ಪುಳಿಯೋಗರೆ, ಹಲಸಿನಕಾಯಿಯ ಪಲ್ಯ, ಪುಳಿಯೋಗರೆ, ಫಲಾವ್ ಗಳನ್ನೆಲ್ಲಾ ಮಾಡಿಕೊಟ್ಟರು. ಎಲ್ಲವನ್ನೂ ಕಾರಿಗೆ ತುಂಬಿಕೊಂಡರು. ಕಿರಿಯರ ನಡುವೆ ಹಿರಿಯರೇಕೆ ಎಂದು ಭಟ್ಟರು, ಲಕ್ಷ್ಮೀಬಾಯಿ ಹಾಗೂ ಮಹಾಲಕ್ಷ್ಮಮ್ಮ ತಾವು ಜಲಪಾತ ನೋಡಲು ಬರುವುದಿಲ್ಲ ಎಂದರು. ಅದೂ ಅಲ್ಲದೇ ತಮ್ಮದೇ ಮನೆಯ ಬಳಿ ಇರುವ ಈ ಸ್ಥಳಗಳನ್ನು ಅನೇಕ ಬಾರಿ ನೋಡಿದ್ದರಿಂದ ಮತ್ತೇಕೆ ಎಂದುಕೊಂಡರು.
             ಒಟ್ಟಿನಲ್ಲಿ ಅಲ್ಲಿಗೆ ಹೊರಟವರು ವಿಕ್ರಮ್, ವಿನಾಯಕ, ಪ್ರದೀಪ, ವಿಜೇತಾ ಹಾಗೂ ರಮ್ಯ. ಅಲ್ಲಿಗೆ ಹೊರಟಿದ್ದೇನೋ ಕಾರಿನಲ್ಲಿ. ಆದರೆ ವಿಕ್ರಮನಿಗೂ ಆ ಪ್ರದೇಶ ಹೊಸತೇ. ತಮ್ಮೂರಾದರೂ ತಾನು ಅಲ್ಲಿ ಅಡ್ಡಾಡಿದ್ದು ಅಷ್ಟರಲ್ಲೇ ಇದೆ. ಚಿಕ್ಕಂದಿನಲ್ಲಿ ಒಮದೆರಡು ಸಾರಿ ಹೋಗಿದ್ದನಾದರೂ ಈಗಲೂ ಮಾರ್ಗಗಲೆಲ್ಲ ಅಸ್ಪಷ್ಟವಾಗಿದೆ. ಈ ಕಾರಣಕ್ಕಾಗಿ ಆ ಪ್ರದೇಶದ ಒಳಹೊರಗನ್ನು ಬಲ್ಲ ಸ್ಥಳೀಯ ಸಿದ್ದಿ ವ್ಯಕ್ತಿಯೊಬ್ಬನನ್ನು ಕರೆದೊಯ್ದರು. ಅಂತಹ ದಟ್ಟ ಕಾಡಿನ ಮಧ್ಯದಲ್ಲಿ ಸಿದ್ಧಿಗಳು ಎಲ್ಲಿಂದ ಬಂದರೋ. ಶತ ಶತಮಾನಗಳಿಂದ ಅವರು ಇಲ್ಲಿಯೇ ಇರಬೇಕು. ಬಹುಶಃ ಬ್ರಿಟೀಷರೋ., ಮತ್ತಿನ್ಯಾರೋ ಕರೆತಂದಿದ್ದಾರೇನೋ..
             ಇವರ ಜೊತೆಗೆ ಮಾರ್ಗದರ್ಶಿಯಾಗಿ ಬಂದ ಸಿದ್ಧಿಯ ಹೆಸರು ರಾಬರ್ಟ ಸಿದ್ದಿ. ಆಗಾಗ  ಭಟ್ಟರ ಮನೆಗೆ ಕೆಲಸಕ್ಕೆ ಬರುತ್ತಿದ್ದವನು. ಇವರ ಜೊತೆಗೆ ಹೊರಡುವ ಮೊದಲು  ವಿಕ್ರಮನನ್ನು ನೋಡಿ `ಓಹ್... ನೀ ಯಾವತ್ತು ಬಂದ್ಯೋ..?' ಎಂದು ಕೇಳಿದವನಿಗೆ ವಿಕ್ರಮ ಎಲ್ಲವನ್ನೂ ಸವಿವರವಾಗಿ ಹೇಳಿದ್ದ. ಗಿರಗಿರ ಪಥ್ಥರ್ ಹಾಗೂ ಲಾಲಗುಳಿ ಜಲಪಾತ ತೋರಿಸಲು ಹೇಳಿದ್ದ.
`ಗಿರ್ ಗಿರ್ ಪತ್ಥರ್ ಗೆ ಹೋಗದೇನೋ ಸರಿ.. ಅಲ್ಲೋ ಬಟಾ.. ಲಾಲಗುಳಿಗ್ ಯಂತಕ್ ಹೊಂಟ್ಯೋ..? ಅಲ್ಲೆಂತ ಐತೆ ಬದ್ನೆಕಾಯಿ? ನೀರಿಲ್ಲ ಎಂತ ಇಲ್ಲ..' ಎಂದನಾದರೂ ಬರಲು ಒಪ್ಪಿಕೊಂಡಿದ್ದ.
             ದಾರಿಯಲ್ಲಿ ಸಿದ್ಧಿಗಳದ್ದೇ ಒಮದೆರಡು ಕಾಲೋನಿಗಳನ್ನು ಹಾದು ಹೋಗಿ, ಒಂದೆರಡು ದಾರಿಯನ್ನು ಬದಲಾಯಿಸಿದವರು ಕೊನೆಗೆ ನಾಲ್ಕೈದು ಕಿಲೋಮೀಟರ್ ಪ್ರಯಾಣಿಸಿದ ನಂತರ ವಾಹನ ನಿಲ್ಲಿಸಿದರು. ಅಲ್ಲಿಂದ ಕಾಲ್ನಡಿಗೆಯಲ್ಲಿ ತೆರಳಬೇಕಿತ್ತು. `ಇಲ್ಲಿಂದ ಗಿರ್ ಗಿರ್ ಪತ್ಥರ್ ಗೆ ಐದು ಕಿಲೋಮೀಟರ್.. ಎಲ್ಲ ನಡ್ಕೊಂಡೇ ಹೋಗಬೇಕು. ಗಾಡಿ ಹೋಗಾದಿಲ್ಲ..' ಎಂದ ರಾಬರ್ಟ ಸಿದ್ದಿ. ಎಲ್ಲ ಕಾರಿನಿಂದ ಇಳಿದರು. ರಾಬರ್ಟ ಮುಂದೆ ಹೆಜ್ಜೆ ಹಾಕಿದರೆ ಎಲ್ಲರೂ ಹಿಂಬಾಲಿಸಿದರು. ಹೋಗುತ್ತಿದ್ದ ಮಾರ್ಗವಂತೂ ಸೂರ್ಯನ ರಶ್ಮಿಗಳು ಭೂಮಿಗೆ ಬೀಳದಂತಿದ್ದ ದಟ್ಟಕಾನನ. ಗವ್ವ ಎನ್ನುವ ಅರಣ್ಯ. ಅಲ್ಲಲ್ಲಿ ಸಾಗುವಾನಿ ಪ್ಲಾಂಟೇಶನ್ನುಗಳು. ಸಿದ್ದಿ ವೇಗವಾಗಿ ಹೋಗುತ್ತಿದ್ದ. ಅವನ ವೇಗಕ್ಕೆ ವಿನಾಯಕನನ್ನು ಹೊರತು ಪಡಿಸಿ ಉಳಿದವರು ಸಾಗಲು ಕಷ್ಟಪಡಬೇಕಾಯಿತು.
              ದಾರಿ ಸಾಗಲೆಂದು ರಾಬರ್ಟನೊಡನೆ ಎಲ್ಲರೂ ಮಾತಿಗಿಳಿದರು. ಅಪರಿಚಿತರ ಬಳಿ ರಾಬರ್ಟ ಮೊದ ಮೊದಲಿಗೆ ಮಾತನಾಡಲು ಹಿಂಜರಿದನಾದರೂ ನಂತರ ಸರಾಗವಾಗಿ ಮಾತನಾಡತೊಡಗಿದ. ವಿಜೇತಾ ರಾಬರ್ಟನ ಬಳಿ `ನೀವೆಲ್ಲರೂ ಕ್ರಿಶ್ಚಿಯನ್ನರಾ..?' ಎಂದು ಕೇಳಿದಳು. ಅದಕ್ಕೆ ಪ್ರತಿಯಾಗಿ ರಾಬರ್ಟ `ಇಲ್ಲ.. ನಮ್ಮಲ್ಲಿ ಕೆಲವರು ಮುಸ್ಲಿಂರೂ, ಹಿಂದೂಗಳೂ ಇದ್ದಾರೆ..' ಎಂದ.
              `ನಾಗರೀಕತೆಯಿಂದ ಅದೆಷ್ಟೇ ದೂರದಲ್ಲಿದ್ದರೂ ಇಲ್ಲೂ ಕೂಡ ಧರ್ಮಗಳಿದೆಯಲ್ಲ ಮಾರಾಯಾ...' ಎಂದ ಪ್ರದೀಪನಿಗೆ ವಿಕ್ರಮ್ ವಿವರಣಾತ್ಮಕವಾಗಿ `ಅದು ಹಾಗಿರೋದಿಲ್ಲ ಪ್ರದೀಪ್.. ಮೂಲತಃ ಇವರು ಯಾವುದೇ ಜಾತಿಯನ್ನು ಅನುಸಿರಿಸದವರಲ್ಲ. ಯಾರೋ ಒಂದಿಷ್ಟು ಮಿಷನರಿಗಳು ಬಂದು ಹಣ ಕೊಡ್ತಾರೆ. ಹಲವರನ್ನು ತಮ್ಮ ಧರ್ಮಕ್ಕೆ ಸೇರಿಸಿಕೊಳ್ಳುತ್ತಾರೆ. ಮದರಸಾಗಳೂ, ಹಿಂದೂ ಸಂಘಟನೆಗಳೂ ಇಲ್ಲಿ ಹಿಂದೆ ಬಿದ್ದಲ್ಲ. ಹಾಗಾಗಿ ಇಲ್ಲಿ ಹೀಗಾಗಿದೆ...' ಎಂದ.
              `ಛೇ.. ಛೇ ಇದೆಂತಹ ವ್ಯವಸ್ಥೆನಪ್ಪಾ.. ಕಾಡಿನ ನಡುವೆ ಬದುಕುತ್ತಿರುವವರನ್ನು ಅವರ ಪಾಡಿಗೆ ಬಿಡುವುದೂ ಇಲ್ಲವಲ್ಲಾ..' ಎಂದು ತಲೆಕೊಡವಿದ ಪ್ರದೀಪ.
              `ನಿಮ್ಮ ಸ್ಥಿತಿಗತಿ ಈಗ ಹೇಗಿದೆ..?' ಎಂದು ಕೇಳಿದಳು ವಿಜೇತಾ.
              `ಅದೆಂತಾ ಹೇಳದೋ.. ಯಾರೋ ಒಂದು ಪಕ್ಷದವರು ಬಂದು ಮನೆ ಕಟ್ಟಿಕೊಟ್ಟರು. ಮೊದಲು ನಾವಿದ್ದ ಊರು ಅದೇನೋ ಹೆಸರಿತ್ತು. ಪಕ್ಷದವರು ಬಂದು ಮನೆ ಕಟ್ಟಿಸಿದ್ದಕ್ಕೆ ಆ ಪಕ್ಷದ ನಾಯಕನ ಹೆಸರನ್ನೇ ನಮ್ಮೂರಿಗೆ ಇಟ್ಟರು. ಈಗ ಅವರು ಕಟ್ಟಿಕೊಟ್ಟ ಮನೆ  ಹಾಗೂ ಊರಿಗೆ ಇಟ್ಟ ಹೆಸರು. ಇವೆರಡೇ ಇದ್ದಿದ್ದು. ಮತ್ತೆಂತದ್ದೂ ಇಲ್ವೋ. ದುಡಿಯೋದಿಕ್ಕೆ ಜಮೀನು ಇಲ್ಲ. ಕಾಡಂತೂ ಮುಟ್ಟಾಂಗಿಲ್ಲ. ಬಹಳ ತೊಂದರೆಲಿದ್ದಿದ್ದು..' ಎಂದು ಹಲುಬಿಕೊಂಡ ಸಿದ್ದಿ.
          ಅಷ್ಟರಲ್ಲಾಗಲೇ ಗಿರ ಗಿರ ಪತ್ಥರ್ ಬಂದಿತ್ತು. ಮಲೆನಾಡಿನ ದಟ್ಟ ಕಾಡಿನಲ್ಲಿ ಹಾದು ಬರುತ್ತಿದ್ದವರಿಗೆ ಇದ್ದಕ್ಕಿದ್ದಂತೆ ಮುಂದಿನ ಭಾಗವನ್ನು ಯಾರೋ ಕತ್ತರಿಸಿ ಇಟ್ಟಿದ್ದಾರೆಂಬಂತಹ ಭೂರಚನೆ. ಇದ್ದಕ್ಕಿದ್ದಂತೆ ಎದುರಿನ ಭೂಭಾಗವೇ ಇಲ್ಲ ಎನ್ನಿಸಿತ್ತು. ಗುಡ್ಡದ ತುದಿಗೆ ನಿಂತವರಿಗೆ ಕೆಳಗೆ ಹಸಿರು ಅರಣ್ಯಗಳು ಕಾಣಿಸಿದವು. ದೂರದಲ್ಲಿ ಕಪ್ಪಗೆ ಹರಿಯುತ್ತಿದ್ದ ಕಾಳಿ ನದಿ ಕಾಣಿಸಿತು. ಸುಂಯ್.. ಎನ್ನುವ ಶಬ್ದದೊಂದಿಗೆ ಬೀಸಿ ಬರುತ್ತಿದ್ದ ಗಾಳಿ.
             `ಇಲ್ಲಿ ಕಲ್ ಒಗಿಯೋ ಬಟಾ..' ಎಂದ ಸಿದ್ದಿ. `ಎಲ್ಲರೂ ಚಿಕ್ಕ ಚಿಕ್ಕ ಕಲ್ಲನ್ನು ಒಗೆದರು. ಆ ಕಲ್ಲು ನೇರವಾಗಿ ಕೆಳಕ್ಕೆ ಬೀಳಲಿಲ್ಲ. ಒಗೆದ ಕಲ್ಲು ಕ್ಷಣಕಾಲ ಗಾಳಿಯಲ್ಲಿ ಗಿರ ಗಿರನೆ ತಿರುಗಿ ನಿಧಾನವಾಗಿ ಕೆಳಕ್ಕಿಳಿಯತೊಡಗಿತು. ಆಗ ರಾಬರ್ಟ ಸಿದ್ದಿಯೆಂದ `ನೋಡಿ.. ಇಲ್ಲಿ ಕಲ್ಲು ಒಗೆದರೂ ಬೇಗ ಕೆಳಕ್ಕೆ ಹೋಗಾದಿಲ್ಲ. ನಿಧಾನಕ್ಕೆ ಗಿರ ಗಿರ ತಿರುಗ್ತಾ ತಿರುಗ್ತಾ ಕೆಳಕ್ಕೆ ಬೀಳ್ತದೆ.. ಗಾಳಿಯ ಒತ್ತಡಕ್ಕೆ ಹಿಂಗಾಗ್ತದೆ ಅಂತ ಯಾರೋ ಒಬ್ಬರು ಹೇಳಿದ್ದರು. ಇದೇ ಕಾರಣಕ್ಕೆ ಈ ಪ್ರದೇಶಕ್ಕೆ ಗಿರ ಗಿರ ಪತ್ಥರ್ ಅನ್ನುವ ಹೆಸರು ಬಂದಿದೆ..' ಎಂದ.
              ಹೆಸರಿಗೆ ತಕ್ಕ ಪ್ರದೇಶ ಎಂದುಕೊಂಡವರು ಸಾಕಷ್ಟು ಪೋಟೋಗಳನ್ನು ಹೊಡೆದುಕೊಂಡರು. ರಾಬರ್ಟ ಅಲ್ಲಿಯೇ `ನಂದೋಂದ್ ತಕಾಳಿ..' ಎಂದ. ಆತನ ಪೋಟೋವನ್ನೂ ತೆಗೆದುಕೊಂಡರು ಎಲ್ಲರೂ. ಅಷ್ಟರಲ್ಲಿ ಹಿಂದೆ ಪೊದೆಯಲ್ಲಿ ಏನೋ ಸದ್ದಾಯಿತು. ಪ್ರದೀಪ ಒಮ್ಮೆಲೆ ಎಚ್ಚರಿಕೆಯಿಂದ ನಡೆಯತೊಡಗಿದೆ. ಯಾರೋ ಇದ್ದಾರೆ. ಯಾರೋ ನಮ್ಮನ್ನು ಹಿಂಬಾಲಿಸುತ್ತಿದ್ದಾರೆ ಎನ್ನಿಸತೊಡಗಿತು ಆತನಿಗೆ. ರಾಬರ್ಟ ಸಿದ್ದಿ ಮಾತ್ರ `ಹಂದಿ.. ಹಂದಿ ಬಂದಿರಬೇಕು.. ಅದ್ಕೆ ಅಲ್ಲಿ ಸದ್ದಾಗ್ತದೆ..' ಎಂದ. ಎಲ್ಲರೂ ಸುಮ್ಮನಾದರು. ಪ್ರದೀಪ ಮಾತ್ರ ಸುಮ್ಮನಾಗಲಿಲ್ಲ. ಸದ್ದು ಬಂದ ಕಡೆಗೆ ಗಮನವನ್ನು ಇರಿಸಿದ್ದ.
              ಒಂದು ತಾಸಿನ ನಂತರ ಗಿರ ಗಿರ ಪತ್ಥರ್ ನಿಂದ ಎಲ್ಲರೂ ವಾಪಾಸಾದರು. ಮರಳಿ ಸಾಗಿ ಕವಲೊಡೆದ ಮಾರ್ಗದಲ್ಲಿ ಚಲಿಸಿ ಲಾಲಗುಳಿ ಜಲಪಾತದ ಕಡೆಗೆ ತೆರಳಿದರು. ಜಲಪಾತಕ್ಕಿಂತ ಒಂದೆರಡು ಕಿ.ಮಿ ದೂರದಲ್ಲೇ ಕಾರು ನಿಲ್ಲಿಸಿದರು. ಅಲ್ಲಿಂದ ನಡೆದು ಸಾಗಬೇಕಿತ್ತು. ಕೊಂಚ ದಾರಿ ಮಾಡಿಕೊಂಡು ಕೆಳಗಿಳಿದವರಿಗೆ ಹಾಲ್ನೊರೆಯಂತಹ ಜಲರಾಶಿ ಕಾಣಿಸಿತು. ಜಲಪಾತ ಅಷ್ಟೇನೂ ಎತ್ತರವಿರಲಿಲ್ಲ. ಜೋಗದಂತೆ, ಉಂಚಳ್ಳಿಯಂತೆ ಎತ್ತರದಿಂದ ಭೋರೆಂದು ಧುಮ್ಮಿಕ್ಕುವ ಜಲಪಾತ ಅದಾಗಿರಲಿಲ್ಲ. ಬದಲಾಗಿ ಬಂಡೆಯಿಂದ ಬಂಡೆಗೆ ಕೆಳಕ್ಕೆ ಜಿಗಿಯುತ್ತ ಸಾಗುತ್ತಿದ್ದ ಚಿಕ್ಕ ಚಿಕ್ಕ ಜಲಧಾರೆಗಳ ಸಂಗಮ ಅದಾಗಿತ್ತು. ಕಪ್ಪು ಕಾಳಿ ನದಿಯ ನೀರು ಕೆಳಕ್ಕೆ ಇಳಿಯುವ ಸಂದರ್ಭದಲ್ಲಿ ನೀರು ನೀರು ಮಥಿಸಿ ಬೆಳ್ಳಗೆ ಫಳಫಳಿಸುತ್ತಿದ್ದುದು ವಿಸ್ಮಯಕಾರಿಯಾಗಿತ್ತು.
                `ನೀರಿಗೆ ಇಳಿಬ್ಯಾಡ್ರೋ...' ಎಂದು ಎಚ್ಚರಿಕೆ ನೀಡಿದ ರಾಬರ್ಟ ಸಿದ್ದಿ. `ಯಾಕೆ..?' ಎಂದು ಕೇಳಿದರು ಎಲ್ಲರೂ. `ನೀರಿನಲ್ಲಿ ಸೆಳವು ಉಂಟು.. ಮತ್ತೆ ಈ ನೀರು ಚೊಲೋ ಇಲ್ರಾ.. ದಾಂಡೇಲಿ ಕಾಗದ ಕಾರ್ಖಾನೆ ನೀರು ಇದಕ್ಕೆ ಸೇರ್ತದೋ.. ಹಂಗಾಗಿ ನೀರು ಹಾಳಾಗದೆ.. ನೀವು ನೀರಿಗೆ ಇಳಿದರೆ ಮತ್ತೆಂತಾದ್ರೂ ರೋಗ ಬಂದರೆ.. ಅದಕ್ಕೆ ಹೇಳಿದ್ದು..' ಎಂದ ರಾಬರ್ಟ ಸಿದ್ದಿ. ಆದರೂ ಆ ಪರಿಸರ ಸುಂದರವಾಗಿತ್ತು.ಸಮುದ್ರದ ಕರೆಗೆ ಓಗೊಟ್ಟು ಓಡುವ ನದಿ ಕಮರಿಯನ್ನು ಲೆಕ್ಖಿಸದೇ ಇಳಿಯುವ, ಆಳಕ್ಕೆ ಬೀಳುವ ಪರಿ ಬಹು ಬೆರಗಿಗೆ ಕಾರಣವಾಗುತ್ತಿತ್ತು.
              ವಿಜೇತಾ, ವಿಕ್ರಮನ ಬಿಂಬಗ್ರಾಹಿಗಳು ಒಂದೆ ಸಮನೆ ಚಲಿಸತೊಡಗಿದ್ದವು. ರಮ್ಯ ಬಂಡೆಯಿಂದ ಬಂಡೆಗೆ ಜಿಗಿಯುವ ಚಿನ್ನಾಟಕ್ಕೆ ತೊಡಗಿಕೊಂಡಿದ್ದಳು. ಪ್ರದೀಪ `ಇಳಿದು ಬಾ ತಾಯೇ.. ಇಳಿದು ಬಾ..' ಎಂದು ಹಾಡುತ್ತಿದ್ದ. ಬಾವುಕ ಜೀವಿಯಾದ ವಿನಾಯಕನ ಕವಿಮನಸ್ಸು ಕವಿತೆಯ ಕಡೆಗೆ ತುಡಿಯುತ್ತಿತ್ತು. ಹೊಸದೊಂದು ಕವಿತೆಯನ್ನು ಕಟ್ಟಲು ಹಾತೊರೆಯುತ್ತಿತ್ತು. ತಕ್ಷಣವೇ ವಿನಾಯಕ ತಡಮಾಡದೇ
`ಹೊನ್ನ ಹೊಂಜೊನ್ನ ಧಾರೆ
ಇಳಿಯ ಮೇಲಣ ಸ್ವರ್ಗ ನೀರೆ,
ಇಳಿವ ನೀರೆಲ್ಲ ಅಮೃತಧಾರೆ
ಲಾಲಗುಳಿ.. ನೀನೇ ಮಿನುಗುತಾರೆ...'
ಎಂದು ದೊಡ್ಡದಾಗಿ ಹೇಳಿಬಿಟ್ಟ. ಒಮ್ಮೆಲೆ ಇದನ್ನು ಕೇಳಿದ ಎಲ್ಲರೂ ವಿನಾಯಕನ ಆಶುಕವಿತ್ವಕ್ಕೆ ತಲೆದೂಗಿದರು. ವಾಹ್.. ವಿನಾಯಕನ ಬೆನ್ನು ತಟ್ಟಿದರು.
            ನಂತರ ವಿನಾಯಕ, ವಿಕ್ರಮ ಹಾಗೂ ರಾಬರ್ಟ ನದಿಯಲ್ಲಿ ಈಜಲು ನೀರಿಗೆ ಇಳಿದರು. ಪ್ರದೀಪ ನೀರಿಗೆ ಇಳಿಯಲು ಹಿಂಜರಿದ. ನಂಗೆ ಈಜು ಬರೋದಿಲ್ಲ ಎಂದ. ಆದರೂ ಪಟ್ಟು ಬಿಡದ ಉಳಿದವರು ಪ್ರದೀಪನನ್ನು ನೀರಿಗೆ ಎಳೆದೇ ಬಿಟ್ಟರು. ಆದರೆ ನೀರಿಗಿಳದ ನಂತರ ಪ್ರದೀಪ ಈಜು ಬರದವರಂತೆ ಹೆದರಲಿಲ್ಲ. ಮುಳುಗಲಿಲ್ಲ. ಈಜಾಡಲಾರಂಭಿಸಿದ. ಕಾಳಿ ನದಿಗೆ ಸೆಳವು ಜಾಸ್ತಿ. ಒಮ್ಮೆಯಂತೂ ಸೆಳವಿದ್ದಲ್ಲಿಯೂ ಹೋಗಿ ಬಂದ. ಎಲ್ಲರ ಎಧೆ ಝಲ್ಲೆನ್ನುತ್ತಿದ್ದರೆ ಪ್ರದೀಪ ಆರಾಮಾಗಿ ಈಸುಬಿದ್ದು ಬಂದ. ಆಗ ಮಾತ್ರ ಎಲ್ಲರಿಗೂ ಅಚ್ಚರಿ. ಕೊನೆಗೆ ವಿಚಾರಿಸಿದಾಗ ಪ್ರದೀಪ ತನಗೆ ಈಜು ಗೊತ್ತಿದೆಯೆಂದೂ ಸಾಗರದ ಕೆಳದಿ ಕೆರೆಯಲ್ಲಿ ಈಜು ಕಲಿತವನೆಂದೂ ತಿಳಿಯಿತು. ಮೊದಲೇ ಎಲ್ಲರ ಮನಸ್ಸಿನಲ್ಲಿ ನಿಗೂಢತೆಯ ಛಾಯೆಯನ್ನು ಹುಟ್ಟಿಸಿದ್ದ ಪ್ರದೀಪ ಮತ್ತೊಮ್ಮೆ ನಿಘೂಢನಾದ. ಎಲ್ಲವನ್ನೂ ತಿಳಿದಿದ್ದರೂ ಏನೂ ಗೊತ್ತಿಲ್ಲ ಎನ್ನುವ ನಾಟಕವಾಡಿದ ಪ್ರದೀಪನ ಬಗ್ಗೆ ಪ್ರತಿಯೊಬ್ಬರೂ ಸಂಶಯಿಸುವಂತಾದ.
               ಸುಮಾರು ಹೊತ್ತಿನ ತನಕ ಈಜಾಡಿದವರಿಗೆ ಕೊನೆಗೊಮ್ಮೆ ಮನದಣಿಯಿತು. ನೀರಿನಿಂದೆದ್ದು ಕೊಂಡೊಯ್ದಿದ್ದ ಬುತ್ತಿಯನ್ನು ಬಿಚ್ಚಿ, ಹೊಟ್ಟೆ ತುಂಬ ತಿಂದು ನೀರು ಕುಡಿದು ವಿರಮಿಸಿದರು. ವಿಜೇತಾಳ ಕ್ಯಾಮರ ಕೆಲಸ ಮಾಡುತ್ತಲೇ ಇತ್ತು. ಜಲಪಾತದ ವಿವಿಧ ಕೋನಗಳು, ಅಲ್ಲಿನ ನಿಸರ್ಗದ ರಮ್ಯ ಚಿತ್ತಾರವನ್ನೆಲ್ಲ ಆಕೆ ಸೆರೆ ಹಿಡಿಯುತ್ತಿದ್ದಳು. ಕಾಳಿ ನದಿ ಸೃಷ್ಟಿ ಮಾಡಿದ್ದ ಬಗೆ ಬಗೆಯ ಕಲ್ಲಿನ ಚಿತ್ತಾರಗಳು ವಿಜೇತಾಳ ಕ್ಯಾಮರಾದಲ್ಲಿ ಬಂಧಿಯಾದವು. ಎಷ್ಟು ಚಿತ್ರಗಳನ್ನು ಕ್ಲಿಕ್ಕಿಸಿದರೂ ವಿಜೇತಾಳ ಕ್ಯಾಮರಾಕ್ಕೆ ದಣಿವಾಗಲಿಲ್ಲ ಬಿಡಿ.
               ಈ ಮಧ್ಯ ಪ್ರದೇಪ ತನ್ನ ವಿಚಿತ್ರ ಧ್ವನಿಯಲ್ಲಿ `ಇಳಿದು ಬಾ ತಾಯಿ ಇಳಿದು ಬಾ..' ಎಂದು ಗುನುಗುತ್ತಲೇ ಇದ್ದ. ರಾಬರ್ಟ ಸಿದ್ದಿ ಬಿದಿರಿನ ಗಳಗಳನ್ನು, ಬೇಟೆಗೆ ಜೀವಿಗಳನ್ನೂ ಹುಡುಕತೊಡಗಿದ್ದರೆ ರಮ್ಯ ನೀರಿನಲ್ಲಿ ಆಟವಾಡತೊಡಗಿದ್ದಳು. ವಿಕ್ರಮ ಒಂದೆಡೆ ಕುಳಿತು ತಾನು ಮಾಡಬೇಕಿದ್ದ ಕೆಲಸದ ಬಗ್ಗೆ ಆಲೋಚನೆ ಮಾಡುತ್ತಿದ್ದ. ವಿನಾಯಕನ ಕವಿಮನಸ್ಸು ಕವನದ ಜನ್ಮಕ್ಕೆ ಹಾತಿರೆಯುತ್ತಿತ್ತಾದರೂ ರಮ್ಯಳ ನೀರಾಟ ಅದಕ್ಕೆ ಭಂಗ ತಂದಿತು. ರಮ್ಯ ನೀರಾಡುತ್ತ ಆಡುತ್ತ ವಿನಾಯಕನಿ ನೀರು ಸೋಕಿದ್ದಳು. ವಿನಾಯಕನೂ ನೀರಾಟಕ್ಕೆ ಇಳಿದು ಬಿಟ್ಟಿದ್ದ.
              ಅಷ್ಟರಲ್ಲಿಯೇ ರಾಬರ್ಟ `ಹೋಯ್... ಯಾರೋ ಅದು.. ಹಂಗ್ ಓಡ್ತಿಯಲ್ಲೋ.. ನಿಲ್ಲೋ...' ಎಂದು ಕೂಗಿದ.
              ಎಲ್ಲರೂ ಗಡಬಡಿಸಿ ಎದ್ದು ಬಂದು ನೋಡುವಷ್ಟರಲ್ಲಿ ಒಬ್ಬಾತ ಓಡಿ ಹೋಗಿದ್ದ. ಕೊನೆಗೆ ಯೋಚಿಸಿದಾಗ ಮೊದಲು ಕಾಟ ಕೊಡುತ್ತಿದ್ದ ವ್ಯಕ್ತಿಯೇ ಈತ ಎನ್ನುವುದೂ ತಿಳಿಯಿತು. `ಆತ ಇಲ್ಲಿಗೂ ಬಂದನಾ..?' ಎಂದು ಗೊಣಗಿದ ವಿಕ್ರಮ್. `ಯಾರು..? ಏನು? ಯಾರಾತ..?' ವಿನಾಯಕನ ಪ್ರಶ್ನೆ. `ಯಾರಿಲ್ಲ ಬಿಡು.. ಇನ್ನೊಮ್ಮೆ ಹೇಳ್ತೀನಿ..' ಎಂದ ವಿಕ್ರಮ್.
               ಅಷ್ಟು ಹೊತ್ತಿಗೆ ಸಾಕಷ್ಟು ಸಮಯವೂ ಆಗಿದ್ದರಿಂದ ವಾಪಸ್ಸಾಗಲು ಮುಂದಾದರು. ವಾಪಸ್ಸಾಗುವ ಮುನ್ನ ಲಾಲಗುಳಿ ಜಲಪಾತಕ್ಕೊಂದು ಗುಡ್ ಬೈ ಹೇಳಿ ಕಣ್ಣೀರು ಮನೆಯ ಕಡೆಗೆ ಹಾದಿ ಹಿಡಿದರು.

(ಮುಂದುವರಿಯುತ್ತದೆ)             

No comments:

Post a Comment