Thursday, August 18, 2022

ಗಾಳಿಪಟ-2 ಮೂಲಕ ಮತ್ತೆ ಮೋಡಿ ಮಾಡಿದ ಯೋಗರಾಜ್ ಭಟ್-ಗಣೇಶ್(ನಾನು ನೋಡಿದ ಚಿತ್ರಗಳು -7)

ಇತ್ತೀಚಿನ ದಿನಗಳಲ್ಲಿ ನೋಡಲೇಬೇಕು ಅನ್ನಿಸಿ ಕಾದು ಕಾದು ನೋಡಿದ ಸಿನಿಮಾ ಅಂದರೆ ಅದು ಗಾಳಿಪಟ 2. ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಯೋಗರಾಜ್ ಭಟ್ ಅವರ ಕಾಂಬಿನೇಷನ್ ಚಿತ್ರ ಎನ್ನುವುದು ಈ ಚಿತ್ರದ ಕಡೆಗೆ ಇದ್ದ ಮೊದಲ ಕಾರಣವಾಗಿದ್ದರೆ, ಗಾಳಿಪಟ ಸಿನಿಮಾದ ಮೊದಲ ಭಾಗಕ್ಕೆ ಸಿಇಕ್ವೆಲ್ ಬರುತ್ತಿದೆ ಎನ್ನುವುದು ಇನ್ನೊಂದು ಕಾರಣ.

ಸಿನಿಮಾದಲ್ಲಿ ಬಹಳಷ್ಟು ಇಷ್ಟವಾದವು. ಕೆಲವಷ್ಟು ಕಷ್ಟವಾದವು. ಸಿನಿಮಾದಲ್ಲಿ ನಮಗೆ ಇಷ್ಟವಾಗಲು ಹಲವು ಸಂಗತಿಗಳಿವೆ. ಅದರಲ್ಲಿ ಮೊದಲನೆಯದು ಯೋಗರಾಜ್ ಭಟ್ ಅವರ ನವಿರಾದ ಚಿತ್ರಕಥೆ. ಸರಳ ಕಥಾ ಹಂದರ. 

ಮೊದಲ ಭಾಗದಲ್ಲಿ ಮುಗಿಲು ಪೇಟೆಯನ್ನು ನೋಡಿದ್ದ ನಾವು ಇಲ್ಲಿ ನೀರು ಕೋಟೆಯನ್ನು ನೋಡುತ್ತೇವೆ, ಅದೇ ರೀತಿ ಟರ್ಕಿ ದೇಶದ ಹಿಮದ ಸಾಲಿನ ಮೇಲೆ ಓಡಾಡುತ್ತೇವೆ. ನೀರು, ಐಸು, ಆಗೊಮ್ಮೆ ಈಗೊಮ್ಮೆ ಬರುವ ಬೆಂಗಾಡಿನ ಪ್ರದೇಶ ಇವೆಲ್ಲವೂ ಸೆಳೆಯುತ್ತವೆ. ಆದರೆ ಸಿನಿಮಾದ ಮೊದಲರ್ಧ ಸ್ವಲ್ಪ ಸುದೀರ್ಘವಾಯಿತು ಎನ್ನಿಸುತ್ತದೆ. ಅಲ್ಲದೆ ಮೊದಲಾರ್ಧದಲ್ಲಿ ಬ್ಯಾಕ್ ಟು ಬ್ಯಾಕ್ ಬರುವ ಹಾಡುಗಳು ಕಥೆಯ ಓಟಕ್ಕೆ ಸ್ವಲ್ಪ ಕಡಿವಾಣ ಹಾಕುತ್ತದೆ.

ಗಣೇಶ್ ಹಾಗೂ ದಿಗಂತ್ ಕಾಲೇಜಿಗೆ ಮರಳಿ ಬರಲು ಕಾರಣಗಳಿದ್ದವು. ಆದರೆ ಪವನ್ ಯಾಕೆ ಬಂದರು ಎನ್ನುವುದು ಗೊತ್ತಾಗಲಿಲ್ಲ. ಚಿತ್ರ ಆರಂಭವಾಗಿ ಕೆಲವೇ ನಿಮಿಷಗಳಾದ ಮೇಲೆ ಗಣೇಶ್ ನಾಯಕಿಯನ್ನು ಪಟಾಯಿಸಲು ನದಿಯಲ್ಲಿ ಈಜು ಬರದಂತೆ ನಟಿಸುವ ಸನ್ನಿವೇಶವೊಂದಿದೆ. ಪಕ್ಕದಲ್ಲೇ ಸೇತುವೆ ಇದ್ದರೂ ನಾಯಕ, ನಾಯಕಿ ನದಿಯೊಳಕ್ಕೆ ಇಳಿದು ದಾಟಲು ಹೊರಟಿದ್ದು ಸ್ವಲ್ಪ ವಿಚಿತ್ರ ಅನ್ನಿಸಿತು. 

ಇನ್ನು ಹಾಡುಗಳಂತೂ ಆಹಾ. ಜಯಂತ್ ಕಾಯ್ಕಿಣಿ ಬರೆದ ನೀನು ಬಗೆಹರಿಯದ ಹಾಡು, ನಾನಾಡದ ಮತ್ತೆಲ್ಲವ ಕದ್ದಾಲಿಸು ಹಾಗೂ ಯೋಗರಾಜ್ ಭಟ್ಟರು ಬರೆದ ನಾವು ಬದುಕಿರಬಹುದು ಪ್ರಾಯಶಃ ಈ ಹಾಡುಗಳಂತೂ ಪದೇ ಪದೇ ಗುನುಗುವಂತೆ ಮಾಡುತ್ತವೆ. ಭಟ್ಟರು ಬರೆದ ದೇವ್ಲೇ ದೇವ್ಲೇ ಹಾಡಂತೂ ಪಡ್ಡೆ ಹುಡುಗರ ಪಾಲಿಗೆ ಒಳ್ಳೆಯ ಕಿಕ್ ನೀಡುತ್ತದೆ. ಹಾಗೆಯೆ ಎಕ್ಸಾಂ ಕುರಿತಾದ ಹಾಡು ಸಹ ಇಷ್ಟವಾಗುತ್ತವೆ. ಗಣೇಶ್ ಮಗ ವಿಹಾನ್ ದು ಇಲ್ಲಿ ಚಿಕ್ಕ ಪಾತ್ರ. ಒಳ್ಳೆಯ ಎಂಟ್ರಿ. ಇನ್ನು ವಿಜಯ್ ಸೂರ್ಯ ಮಾತ್ರ ಸರ್ಪ್ರೈಸ್ ಎಂಟ್ರಿ.

ಸಿನಿಮಾ ಲೊಕೇಷನ್ನುಗಳು ಬಹಳ ಚನ್ನಾಗಿದೆ. ಕುದುರೆಮುಖ, ಟರ್ಕಿ ಇತ್ಯಾದಿ ಸ್ಥಳಗಳು ಕಣ್ಣಿಗೆ ಮುದ ನೀಡುತ್ತವೆ. ಆದರೆ ಚಿತ್ರದಲ್ಲಿ ಜೋಗ ಜಲಪಾತವನ್ನು ಸುಮ್ಮನೆ ಮೂರು ಸೆಕೆಂಡ್ ಕಾಲ ತೋರಿಸಿದರು ಅಷ್ಟೇ. ಜೋಗ ಜಲಪಾತವಲ್ಲದೆ ಬೇರೆ ಯಾವುದೇ ಜಲಪಾತ ತೋರಿಸಿದ್ದರೂ ಯಾವೂದೇ ನಷ್ಟವಿರಲಿಲ್ಲ. 

ಕಾರಣಾಂತರಗಳಿಂದ ಕಾಲೇಜಿಗೆ ಬಂದು ಕನ್ನಡ ಕಲಿಯಲು ಮುಂದಾಗುವ ಮೂವರು ಯುವಕರು, ಅವರಿಗೊಬ್ಬ ಕನ್ನಡ ಲೆಕ್ಚರು, ಆ ಲೆಕ್ಚರ್ ಗೆ ಒಬ್ಬ ಕಾಣೆಯಾದ ಮಗ.. ಇಂತಹ ಕಥಾ ಹಂದರದಲ್ಲಿ ಸಾಕಷ್ಟು ಟ್ವಿಸ್ಟ್ ಇದೆ. ನಗೆಯ ಚಿಲುಮೆಯೇ ಇದೆ. ಭಾವನಾತ್ಮಕ ಸನ್ನಿವೇಶಗಳಿವೆ, ತಾಯಿಯ ಪ್ರೀತಿ ಇದೆ. ಗುರು - ಶಿಷ್ಯರ ಅವಿನಾಭಾವ ಸಂಬಂಧವೂ ಇದೆ. ಎರಡು ಮೂರು ಸಾಧಾರಣ ಚಿತ್ರಗಳನ್ನು ಮಾಡಿದ್ದ ಯೋಗರಾಜ ಭಟ್ಟರು ಇನ್ನೊಮ್ಮೆ ಒಳ್ಳೆಯ ಕಥೆಯ ಮೂಲಕ ಮರಳಿ ಬಂದಿದ್ದಾರೆ. 

ಇನ್ನು ನಟನೆ ವಿಷಯಕ್ಕೆ ಬಂದರೆ ಹಲವಾರು ಫುಲ್ ಮಾರ್ಕ್ಸ್ ಪಡೆಯುತ್ತಾರೆ. ಕನ್ನಡ ಲೆಕ್ಚರ್ ಪಾತ್ರಧಾರಿ ಅನಂತ್ ನಾಗ್ ಅಂತೂ ವಾಹ್.. ಅವರ ಅಭಿನಕ್ಕೆ ಸಾಟಿಯೇ ಇಲ್ಲ. ಇನ್ನು ಗಣೇಶ್. ಇಂದಿನ ತಮ್ಮ ನಗಿಸುವ, ನಗಿಸುತ್ತಲೇ ಅಳಿಸುವ ಪಾತ್ರದಲ್ಲಿ ಮತ್ತೊಮ್ಮೆ ಮೋದಿ ಮಾಡಿದ್ದಾರೆ. ಗಂಭೀರ ಪಾತ್ರದಲ್ಲಿ ಪವನ್ ಇಷ್ಟವಾಗುತ್ತಾರೆ. ಗಣೇಶ್ ಅಂತಹ ಕಚಗುಳಿ ನಟರು ಇದ್ದರೂ ಸಿನಿಮಾದಲ್ಲಿ ಅತ್ಯಂತ ಹೆಚ್ಚು ನಗಿಸುವವರು ದಿಗಂತ್. ದಿಗಂತ್ ಅವರನ್ನು ಅಘೋರಿ ರೂಪದಲ್ಲಿ ನೋಡುವುದೇ ಮಜಾ. ದಿಗಂತ್ ತೆರೆಯ  ಮೇಲೆ ಇದ್ದಷ್ಟು ಹೊತ್ತು ನಗುವಿಗೆ ನಗುವಿಗೆ ಕೊರತೆಯೇ ಇಲ್ಲ. ರಂಗಾಯಣ  ರಘು, ಸುಧಾ ಬೆಳವಾಡಿ, ಪದ್ಮಜಾ, ಶ್ರೀನಾಥ್ ಅವರುಗಳು ಬಹಳ ಇಷ್ಟವಾಗುತ್ತಾರೆ. ಬುಲೆಟ್ ಪ್ರಕಾಶ್ ಒಂದೇ ಒಂದು ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ನಟಿಯರಾದ ವೈಭವೀ ಶಾಂಡಿಲ್ಯ, ಸಂಯುಕ್ತ ಮೆನನ್, ಶರ್ಮಿಳಾ ಮಾಂಡ್ರೆ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. 

ಪ್ಯಾನ್ ಇಂಡಿಯಾ, ಬಾಲಿವುಡ್, ಟಾಲಿವುಡ್, ಕಾಲಿವುಡ್ ಇತ್ಯಾದಿ ಸಿನಿಮಾಗಳಗಳ ಅಬ್ಬರಗಳ ನಡುವೆ ಅಚ್ಚ ಕನ್ನಡದ ಸಿನಿಮಾ ಬಹಳ ಇಷ್ಟವಾಗುತ್ತದೆ. ಈ ನೋಡುಗರಿಗಂತೂ ಪೈಸೆ ವಸೂಲ್ ಪಕ್ಕಾ. ಸಾಧ್ಯವಾದರೆ ಸಿನಿಮಾ ಮಂದಿರಗಳಿಗೆ ತೆರಳಿ ಈ ಚಿತ್ರ ವೀಕ್ಷಿಸಿ.

Sunday, August 7, 2022

ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ (ನಾನು ನೋಡಿದ ಚಿತ್ರಗಳು -6)

 ಇತ್ತೀಚಿನ ದಿನಗಳಲ್ಲಿ ಬೇರೆ ಬೇರೆ ಭಾಷೆಯ ಹಲವು ಸಿನಿಮಾಗಳನ್ನು ನಾನು ನೋಡಿದ್ದರೂ, ಕನ್ನಡ ಭಾಹೆಯ ಸಿನಿಮಾ ನೋಡಿದ್ದು ಒಂದೇ ಒಂದು. ಅದೇ ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ ಸಿನಿಮಾ. ಈ ಸಿನಿಮಾ ಬಿಡುಗಡೆಯಾದ ವೇಳೆ ನಾನು ಶಿರಸಿಯ ನಟರಾಜ ಟಾಕೀಸಿನಲ್ಲಿ ಇದನ್ನು ನೋಡಬೇಕು ಎಂದುಕೊಂಡಿದ್ದೆ. ಕೊನೆಗೂ ಆ ಟಾಕೀಸಿಗೆ ಈ ಸಿನಿಮಾ ಬರಲೇ ಇಲ್ಲ. ಕೊನೆಗೆ OTT ಯಲ್ಲಿ ನೋಡಿದ್ದಾಯ್ತು.

ವಿನಾಯಕ ಕೋಡ್ಸರ ಅವರ ಹಲವು ಪ್ರಯತ್ನಗಳಲ್ಲಿ ಇದೂ ಒಂದು. ಮೊದಲ ಬಾರಿಗೆ ಸಿನಿಮಾ ನಿರ್ದೇಶನದ ಕಾರ್ಯಕ್ಕೆ ಅವರು ಮುಂದಾಗಿದ್ದಾರೆ. ಸಿನಿಮಾ ಹಲವು ವಿಷಯಗಳಲ್ಲಿ ಆಪ್ತ ಎನ್ನಿಸಿತು.
2300 ಈಗಿನ ದಿನಮಾನದಲ್ಲಿ ತೀರಾ ದೊಡ್ಡ ಮೊತ್ತವೇನಲ್ಲ. ಕೇವಲ 2300 ರೂಪಾಯಿಗೆ ನಾಯಕ ಅಷ್ಟೆಲ್ಲ ಒದ್ದಾಡುತ್ತಾನಾ ಎನ್ನುವ ಭಾವನೆ ನನ್ನ ಮನಸ್ಸಿನಲ್ಲಿ ಕಾದಿದ್ದು ಸುಳ್ಳಲ್ಲ. ಕೇವಲ 2300 ರೂಪಾಯಿಗಾಗಿ ನಾಯಕ ಹೋರಾಟ ನಡೆಸುವ ಕಥೆಯನ್ನು ನಿರ್ದೇಶಕರು ಮಾಡಿದ್ದಾರೆ, ಲಕ್ಷ, ಕೋಟಿಗಳಲ್ಲಿ ಹಣ ಲೆಖ್ಖ ಮಾಡುವ ದಿನಮಾನದಲ್ಲಿ ನಿರ್ದೇಶಕರು ಸಾವಿರ ರೂಪಾಯಿಗಾಗಿ ಹೋರಾಡುವ ಕಥೆ ಮಾಡಿದ್ದೂ ಸರಿಯಲ್ಲ ಎನ್ನುವ ಭಾವನೆ ಸಿನಿಮಾ ನೋಡುವಾಗ ನನಗೆ ಅನ್ನಿಸಿದ್ದು ಸುಳ್ಳಲ್ಲ. ಆದರೆ ಸಿನಿಮಾ ಮುಂದುವರಿದಂತೆಲ್ಲ ಈ ಭಾವನೆಗಳು ಬದಲಾದವು.
ನನ್ನ ಪರಿಚಯದ ಗೆಳೆಯನೊಬ್ಬ ಸೈಬರ್ ಜಾಲಕ್ಕೆ ಸಿಲುಕಿ ಅಪಾರ ಹಣ ಕಳೆದುಕೊಂಡಿದ್ದ. ಆ ವೇಳೆ ಅನೇಕರು ಸೈಬರ್ ಜಾಲದಲ್ಲಿ ಸಿಲುಕಿ ಕಳೆದುಕೊಂಡ ಹಣ ಯಾವತ್ತೂ ಮರಳಿ ಬರುವುದಿಲ್ಲ ಎಂದಿದ್ದರಂತೆ. ಆದರೆ ಆ ಗೆಳೆಯ ಪೊಲೀಸ್ ಕಂಪ್ಲೇಂಟ್ ಕೊಟ್ಟು, ನ್ಯಾಯಾಲಯದ ಮೆಟ್ಟಿಲು ಏರಿ, ಹಲವು ತಿಂಗಳುಗಳ ಕಾಲ ಪೊಲೀಸ್ ಸ್ಟೇಷನ್ ಹಾಗೂ ಬ್ಯಾಂಕ್ ಮೆಟ್ಟಿಲು ಸವೆಸಿ ಕೊನೆಗೂ ಆ ಹಣವನ್ನು ಖದೀಮರಿಂದ ವಾಪಾಸ್ ಕಕ್ಕಿಸುವಲ್ಲಿ ಯಶಸ್ವಿಯಾಗಿದ್ದ. ಈ ಸಿನಿಮಾ ನೋಡಿದ ತಕ್ಷಣ ಆ ಗೆಳೆಯನ ಬಳಿ, `ಇದು ನಿನ್ನದೇ ಕಥೆ' ಎಂದಿದ್ದೆ.
ಮಲೆನಾಡು, ಶರಾವತಿ ನದಿ, ಅಡಿಕೆ ಕೊಯ್ಲು, ಹವ್ಯಕ ಸಂಸ್ಕೃತಿ ಹೀಗೆ ಹಲವು ವಿಷಯಗಳಲ್ಲಿ ಸಿನಿಮಾ ಬಹಳ ಆಪ್ತವಾಯಿತು. ನನ್ನ ಇಷ್ಟದ ನಟರಲ್ಲಿ ಒಬ್ಬನಾದ ದಿಗಂತ್ ಸಿನಿಮಾದಲ್ಲಿ ಅಚ್ಚುಕಟ್ಟಾಗಿ ನಟಿಸಿದ್ದಾನೆ. ಐಂದ್ರಿತಾ ಕೂಡ ಸೊಗಸಾಗಿ ನಟಿಸಿದ್ದಾಳೆ. ನಮ್ಮ ನಡುವೆಯೇ ಇದ್ದು, ಆಗಾಗ ಭೇಟಿಯಾಗುವ ಗೋಕರ್ಣ ಪುರಾಣದ ರೂವಾರಿ ಎಂ. ಎ. ಹೆಗ್ದೆಯವರದ್ದು ಅಚ್ಚರಿಯ ನಟನೆ. ಹಿತ್ಲಕೈ ಗಣಪತಿ ಭಟ್ಟರು, ವಿದ್ಯಾಮೂರ್ತಿ, ರಂಜಿನಿ ರಾಘವನ್, ಬಾಳೇಸರ ವಿನಾಯಕ ಹೀಗೆ ಎಲ್ಲರೂ ಲೀಲಾಜಾಲವಾಗಿ ನಟಿಸಿ ನೋಡುಗರನ್ನು ಖುಷಿ ಪಡಿಸುತ್ತಾರೆ.
ವಿನಾಯಕ ಕೋಡ್ಸರ ಅವರ ಮೊದಲ ಸಿನಿಮಾ ಇದಾಗಿರುವ ಕಾರಣ ಸಿನಿಮಾದಲ್ಲಿ ಇರುವ ಕೆಲವು ಚಿಕ್ಕಪುಟ್ಟ ಲೋಪ ದೋಷಗಳಿಗೆ ಮಾಫಿ. ಬೇರೆ ರೀತಿಯ ಮಾತು, ಸಂಸ್ಕೃತಿ, ಆಚರಣೆ, ನಡೆ ನುಡಿಯನ್ನು ಹೊಂದಿರುವ ಹವ್ಯಕರ ಬದುಕನ್ನು ಬಹಳ ಚನ್ನಾಗಿ ಚಿತ್ರಿಸಿದ್ದಾರೆ. ಮಲೆನಾಡಿಗೆ ಬಹಳಷ್ಟು ಬಣ್ಣ ತುಂಬಿದ್ದಾರೆ. ಇವರ ಮುಂದಿನ ಚಿತ್ರ ಯಾವುದಿರಬಹುದು? ಮಲೆನಾಡಿನ ಆಚೆಗಿನ ಚಿತ್ರವನ್ನು ಮಾಡಬಹುದೇ ಎನ್ನುವ ಕುತೂಹಲ ಇದೆ.
ನಮ್ಮೂರ ಮಂದಾರ ಹೂವೆ ಸಿನಿಮಾದ ನಂತರ ಮತ್ತೊಮ್ಮೆ ಈ ಚಿತ್ರ ಹವ್ಯಕರ ಸಂಸ್ಕೃತಿ ಅನಾವರಣ ಮಾಡಿದೆ ಅನ್ನುವುದನ್ನು ಹೆಮ್ಮೆಯಿಂದ ಹೇಳಬಹುದು. ಚಿತ್ರ ಅಮೆಜಾನ್ ಪ್ರೈಮ್ ನಲ್ಲಿದೆ. ಇನ್ನೂ ನೋಡಿಲ್ಲ ಅಂದ್ರೆ ತಪ್ಪದೆ ನೋಡಿ.

Friday, July 16, 2021

ಇರುವುದೆಲ್ಲವ ಬಿಟ್ಟು... (ಕಥಾ ಸರಣಿ ಭಾಗ-5)

(2014 ರಲ್ಲಿ ಬರೆದಿದ್ದ, ವಾಣಿ-ವಿನಾಯಕರ ಪ್ರೇಮ ಕಥೆಯ ಮುಂದುವರಿದ ಭಾಗ.. )


 `ವಾಣಿ..ತಮ್ಮಂಗೆ ಉಪನಯನ ಮಾಡನ..' ಎಂದು ಸುಧೀಂದ್ರ ಹೇಳಿದ್ದಕ್ಕೆ ಸುಮ್ಮನೆ ತಲೆ ಅಲ್ಲಾಡಿಸಿ ಹೂಂ ಅಂದಿದ್ದಳು ವಾಣಿ.

ಅದಾಗಿ ಕೆಲವೇ ದಿನಗಳಲ್ಲಿ ಸುಧೀಂದ್ರ ಎಲ್ಲ ತಯಾರಿಗಳನ್ನೂ ಆರಂಭಿಸಿದ್ದ. ಉಪನಯನದ ದಿನಾಂಕವನ್ನೂ ತನ್ನ ಪುರೋಹಿತ ಭಟ್ಟರ ಬಳಿ ಕೇಳಿಸಿಕೊಂಡು ಬಂದಿದ್ದಲ್ಲದೇ ಉಪನಯನದ ಕಾರ್ಡನ್ನೂ ಮುದ್ರಿಸಿಯಾಗಿತ್ತು.

`ನಿನ್ನ ಬಳಗದವರನ್ನೂ ಉಪನಯನಕ್ಕೆ ಕರೆಯಲೆ ಶುರು ಮಾಡಿದ್ಯಾ..?' ಎಂದು ಸುಧೀಂದ್ರ ಕೇಳಿಯೂ ಆಗಿತ್ತು. ಆಗ ವಾಣಿಗೆ ಮೊದಲು ನೆನಪಾಗಿದ್ದೇ ವಿನಾಯಕ.

ಸುಧೀಂದ್ರನ ಜೊತೆಗೆ ಮದುವೆಯಾಗಿ ಮಗನೂ ಹುಟ್ಟಿ ಇದೀಗ ಉಪನಯನದ ಸಮಯ ಬರುವ ವೇಳೆಗೆ ಜಗತ್ತು ಅದೆಷ್ಟೋ ಬದಲಾವಣೆಯನ್ನು ಹೊಂದಿತ್ತು. ಜಗತ್ತಿನ ಓಟಕ್ಕೆ ತಕ್ಕಂತೆ ಶಿರಸಿಯೂ ಕೂಡ ಆಧುನಿಕತೆಯ ಜಾಲದೊಳಕ್ಕೆ ಸಿಲುಕಿಯಾಗಿತ್ತು. ಹಳೆಯ ಹಂಚಿನ ಮನೆಗಳೆಲ್ಲ ಸಿಮೆಂಟಿನ ಕಟ್ಟಡಗಳಾಗಿ ಬದಲಾಗಿದ್ದವು. ಎಲ್ಲ ಕಟ್ಟಡಗಳಿಗೂ ಕಪ್ಪು ಬಣ್ಣದ, ಬಿಸಿಲು ನಿರೋಧಕ ಗಾಜುಗಳ ಅಳವಡಿಕೆಯಾಗಿತ್ತು. ಎರಡು ಮಹಡಿಯ ಮನೆಗಳ ಬದಲಾಗಿ ನಾಲ್ಕು-ಐದು ಮಹಡಿಗಳ ಕಟ್ಟಡಗಳು ತಲೆ ಎತ್ತಿ, ಗಗನದ ಕಡೆಗೆ ಮುಖ ಮಾಡಿದ್ದವು.

ತಾಸಿಗೆ ಒಂದು ಬಸ್ಸು ಓಡಾಡುತ್ತಿದ್ದ ಕಡೆಗಳಲ್ಲೆಲ್ಲ ಐದು-ಆರು ಬಸ್ಸುಗಳು ಓಡಾಡತೊಡಗಿತ್ತು. ಅಷ್ಟೇ ಅಲ್ಲದೇ ಮನೆ ಮನೆಗೊಂದು ಬೈಕು-ಕಾರು ಸವರ್ೇಸಾಮಾನ್ಯ ಎನ್ನುವಂತಾಗಿತ್ತು. ಎಲ್ಲಕ್ಕಿಂತ ಮಿಗಿಲಾಗಿ ಮಲೆನಾಡು ಇನ್ನೊಂದು ಬಹುದೊಡ್ಡ ಬದಲಾವಣೆಗೆ ಸಾಕ್ಷಿಯಾಗಿತ್ತು.

ಮಲೆನಾಡಿನ ಮನೆ-ಮನಗಳನ್ನು ಬೆಸೆದಿದ್ದ ಅಂಚೆ ಇದೀಗ ಬಹುಜನರ ನಿರ್ಲಕ್ಷ್ಯಕ್ಕೆ ಕಾರಣವಾಗಿತ್ತು. ಪತ್ರ ಸಂಸ್ಕೃತಿಯನ್ನು ಹುಟ್ಟಹಾಕಿದ್ದ ಅಂಚೆಯ ಮೂಲಕ ಇದೀಗ ಯಾವುದೇ ಪತ್ರಗಳ ವಿನಿಮಯ ಇಲ್ಲ ಎನ್ನುವಂತಾಗಿತ್ತು. ವಾರಕ್ಕೊಮ್ಮೆಯೋ, ಹತ್ತು ದಿನಗಳಿಗೆ ಒಮ್ಮೆಯೋ ಮನೆ ಅಂಗಳಕ್ಕೆ ಬಂದು ಪತ್ರ ಬಂದಿದೆ ಎನ್ನುವ ಅಂಚೆಯ ಅಣ್ಣ ನಾಪತ್ತೆಯಾಗಿದ್ದ. ಎಲ್ಲೋ ಅಪರೂಪಕ್ಕೊಮ್ಮೆ ಸೊಸೈಟಿಯ ಅಢಾವೆ ಪತ್ರಿಕೆಯೋ, ಇನ್ಯಾವುದೋ ನೋಟಿಸು ಸರಬರಾಜಿಗೆ ಮಾತ್ರ ಅಂಚೆಯ ಅಣ್ಣ ಸೀಮಿತವಾಗಿದ್ದ. ಪತ್ರ ವಿನಿಮಯದ ಜಾಗದಲ್ಲೀಗ ಮೊಬೈಲ್ ಎಂಬ ಮಾಯಾ ರಾಕ್ಷಸ ಫೆವಿಕಾಲ್ ಅಂಟಿಸಿಕೊಂಡು ಕುಳಿತಿದ್ದ.

ಮಾಯಾವಿ ಮೊಬೈಲ್ ಕೂಡ ಮಲೆನಾಡಿನಲ್ಲಿ ಸುಮ್ಮನೆ ಬರಲಿಲ್ಲ. ಮೊದ ಮೊದಲ ದಿನಗಳಲ್ಲಿ ಬಿಸ್ಸೆನ್ನೆಲ್ ಮೂಲಕ ಬಂದವನು ಸಿಮ್ ಕಾಡರ್ಿಗಾಗಿ ಉದ್ದುದ್ದದ ಸರತಿ ಸಾಲಿನಲ್ಲಿ ಜನರನ್ನು ನಿಲ್ಲಿಸಿದ್ದ. ಶಿರಸಿ ನಗರದಲ್ಲಿ ಒಂದೋ ಎರಡೋ ಟವರ್ ಮೂಲಕ ಜನರನ್ನು ಬೆಸೆಯಲು ಆರಂಭಿಸಿದ ಮೊಬೈಲ್ ಮಾಯಾವು ನಂತರದ ದಿನಗಳಲ್ಲಿ ಹಳ್ಳಿ ಹಳ್ಳಿಗಳ ಕಡೆಗೂ ಮುಖ ಮಾಡಿದ್ದ. ಬಿಸ್ಸೆನ್ನೆಲ್ ಜೊತೆ ಜೊತೆಯಲ್ಲಿಯೇ ಖಾಸಗಿ ಮೊಬೈಲ್ ಕಂಪನಿಗಳೂ ಬಂದವು. ಅಗ್ಗದ ದೂರವಾಣಿ ಕರೆಗಳ ಜೊತೆಗೆ ಅಗ್ಗದ ಇಂಟರ್ನೆಟ್ ಕೂಡ ನೀಡಲು ಆರಂಭಿಸಿದ್ದವು. ಮೊಬೈಲ್ ಎನ್ನುವ ಮಾಯಾವುಯನ್ನು ಅಂಗೈನಲ್ಲಿ ಹಿಡಿದಿದ್ದ ಮಲೆನಾಡಿನ ಮಂದಿ ತಮ್ಮನ್ನು ತಾವು ಬದಲಾವಣೆಗೆ ಒಗ್ಗಿಸಿಕೊಂಡಿದ್ದರು. ಸದ್ದಿಲ್ಲದೆ ಪತ್ರ ಬರೆಯುವ ಸಂಸ್ಕೃತಿ ಮಾಯವಾಗಿತ್ತು.

ಪತ್ರವನ್ನು ಬರೆದು ಪೋಸ್ಟ್ ಮಾಡುತ್ತಿದ್ದ ದಿನಗಳೇ ಚನ್ನಾಗಿತ್ತಲ್ಲವಾ ಎಂದುಕೊಂಡಳು ವಾಣಿ. ಆ ದಿನಗಳಲ್ಲಿ ಪತ್ರ ಬರೆದು ಪೋಸ್ಟ್ ಮಾಡಿ, ಅದಕ್ಕೆ ತಿಂಗಳುಗಳ ವರೆಗೆ ಉತ್ತರ ಬರುವುದನ್ನೇ ನಿರೀಕ್ಷೆ ಮಾಡುತ್ತಿದ್ದ ದಿನಗಳು ಎಷ್ಟು ಹಸುರಾಗಿದ್ದವಲ್ಲವಾ ಎಂದುಕೊಂಡಳು ಅವಳು. ಪತ್ರ ಅದೆಷ್ಟೋ ಮನಸ್ಸುಗಳನ್ನು ಬೆಸೆದಿತ್ತು ಅಲ್ಲವೇ. ಪತ್ರ ಬರೆಯುತ್ತಿದ್ದ ದಿನಗಳ ಪ್ರೀತಿಗೆ ಅದಷ್ಟು ಪಾವಿತ್ರ್ಯತೆ ಇತ್ತು ಅಲ್ಲವೇ ಎಂದುಕೊಂಡಳು ವಾಣಿ. ಈಗಿನ ಪ್ರೀತಿ ಹಾಗೆ ಅಲ್ಲವೇ ಅಲ್ಲ. ಮೊಬೈಲ್ ನಲ್ಲಿ ಹುಟ್ಟಿ, ಚಾಟಿಂಗ್ ನಲ್ಲಿ ಬೆಳೆದು ಡೇಟಿಂಗ್ ನಲ್ಲಿ ಅಂತ್ಯವಾಗಿಬಿಡುತ್ತವೆ ಎಂದು ನಿಟ್ಟುಸಿರು ಬಿಟ್ಟಳು. ಈಗೆಲ್ಲ ಪ್ರೀತಿ ಹುಟ್ಟಿದ ತಾಸು ಘಳಿಗೆಯಲ್ಲಿಯೇ ಅದನ್ನು ನಿವೇದನೆ ಮಾಡಿಕೊಂಡು ಬಿಡುತ್ತಾರೆ. ಆದರೆ ಆಗ ಹಾಗಿರಲಿಲ್ಲ. ಒನ್ ವೇ ಲವ್ ಆಗಿದ್ದರೂ ಅದನ್ನು ಹೇಳಿಕೊಳ್ಳಲು ವರ್ಷಗಟ್ಟಲೆ ಕಾದಿದ್ದು, ಪರಿತಪಿಸಿದ್ದು ಇರುತ್ತದಲ್ಲ. ಹೇಳಿಕೊಳ್ಳಲಾಗದೆಯೇ ಪ್ರೀತಿ ಸತ್ತು ಹೋಗಿರುವ ನಿದರ್ಶನ ಇದೆಯಲ್ಲ ಎಂದುಕೊಂಡಳು. ತನ್ನದೂ ಹಾಗೆಯೇ ಆಗಿತ್ತಲ್ಲವಾ ಎಂದು ನಿಟ್ಟುಸಿರು ಬಿಟ್ಟಳು.

ಗಂಡ ಸುಧೀಂದ್ರ ತನಗಾಗಿಯೇ ಒಂದು ಮೊಬೈಲ್ ತಂದುಕೊಟ್ಟಿದ್ದ. ನಂತರ ತನ್ನನ್ನು ಕಾಲೇಜು ದಿನಗಳ ಗೆಳೆಯರ ವಾಟ್ಸಾಪ್ ಬಳಗಕ್ಕೆ ಗೆಳತಿಯರು ಸೇರಿಸಿದ್ದರು. ಅಲ್ಲೆಲ್ಲ ಆಕೆ ವಿನಾಯಕನನ್ನು ಹುಡುಕಿದ್ದಳು. ಆ ಗುಂಪಿನಲ್ಲಿ ವಿನಾಯಕ ಕಂಡಿದ್ದನಾದರೂ, ಒಂದೇ ಒಂದು ಮೆಸೆಜ್ ಮಾಡಿರಲಿಲ್ಲ. ವಿನಾಯಕ ಸಂಪೂರ್ಣವಾಗಿ ಬದಲಾಗಿರಬಹುದೇನೋ ಎಂದುಕೊಂಡಿದ್ದಳು ವಾಣಿ. ಮದುವೆಯಾಗಿ ಮಕ್ಕಳ ಜೊತೆ ಖುಷಿಯಾಗಿರುವ ವಿನಾಯಕನಿಗೆ ತನ್ನ ನೆನಪೂ ಇರಲಿಕ್ಕೆ ಸಾಧ್ಯವಿಲ್ಲ ಎಂದುಕೊಂಡಿದ್ದಳು.

   ಸುದೀರ್ಘ ಬಂಧ ಬೆಳೆಯುವುದಕ್ಕೆ ಸಣ್ಣ ನೆಪ ಸಾಕಾಗುತ್ತದೆ. ವಾಣಿಗೂ ಕೂಡ ಆಗಾಗ ವಿನಾಯಕನನ್ನು ಮಾತನಾಡಿಸಬೇಕು ಎನ್ನುವ ಆಸೆ ಆಗುತ್ತಲೇ ಇತ್ತು. ಆದರೆ ತಾನಾಗಿಯೇ ಮಾತನಾಡಿಸಿದರೆ ವಿನಾಯಕ ಮಾತನಾಡಬಹುದೇ? ಗೊತ್ತಿಲ್ಲದವರಂತೆ ನಡೆದುಕೊಳ್ಳಬಹುದೇ? ತಾನಾಗಿ ಮಾತನಾಡಿಸಿ ಅವಮಾನ ಮಾಡಿಸಿಕೊಳ್ಳಬೇಕೇ? ಸುಮ್ಮನೆ ಇದ್ದು ಬಿಡಲೇ? ಹೀಗೆ ಹಲವು ತಳಮಳ ತೊಳಲಾಟಗಳಲ್ಲಿ ಒದ್ದಾಡಿದ್ದಳು. ವಿನಾಯಕನನ್ನು ಮಾತನಾಡಿಸಲು ಇದೀಗ ನೆಪ ಒಂದು ಸಿಕ್ಕಂತಾಗಿತ್ತು.

   `ಹಾಯ್ ವಿನಾಯಕ, ಹೇಂಗಿದ್ದೆ? ನಾನು ವಾಣಿ..' ವಾಟ್ಸಾಪ್ ನಲ್ಲಿ ಹೀಗೆ ಮೆಸೇಜ್ ಮಾಡಿದ್ದ ವಾಣಿ, ತನ್ನ ಮೆಸೇಜಿಗೆ ಪ್ರತ್ಯುತ್ತರ ಬರುವ ವರೆಗೂ ಪಟ್ಟ ತಳಮಳ ಅಷ್ಟಿಷ್ಟಲ್ಲ. ನಿಮಿಷ ನಿಮಿಷಕ್ಕೂ ಮೊಬೈಲ್ ನೋಡುತ್ತಾ, ವಾಟ್ಸಾಪ್ ತೆರೆಯುತ್ತಾ, ಕುಂತಲ್ಲಿ ಕೂರಲಾಗದೆ, ನಿಂತಲ್ಲಿ ನಿಲ್ಲಲಾಗದೆ ಒದ್ದಾಡಿದ್ದಳು. ಚಡಪಡಿಸಿದ್ದಳು. ಕೊನೆಗೂ ಒಮ್ಮೆ ಉತ್ತರ ಬಂದಿತ್ತು. `ಹಾಯ್ ವಾಣಿ? ಎಂತ ಆಶ್ಚರ್ಯ. ನಾನು ಚನ್ನಾಗಿದ್ದಿ. ನೀ ಹೇಂಗಿದ್ದೆ?' ವಿನಾಯಕ ಉತ್ತರಿಸಿದ್ದ. ವಾಣಿಗೆ ಆಗ ಒಮ್ಮೆ ಸ್ವರ್ಗವೇ ಅಂಗೈಗೆ ಸಿಕ್ಕಿದೆಯೋ ಅನ್ನಿಸಿತ್ತು. ವಿನಾಯಕ ನನ್ನ ಮರೆತಿಲ್ಲ ಎಂದು ಖುಷಿ ಪಟ್ಟಳು ವಾಣಿ.

ಉಭಯ ಕುಶಲೋಪರಿ ಸಾಂಪ್ರತ ನಡೆದ ಬಳಿಕ ವಾಣಿ ತನ್ನ ಮಗನ ಉಪನಯನಕ್ಕಾಗಿ ವಿನಾಯಕನ್ನು ಕರೆದಳು. ಅದಕ್ಕೆ ವಿನಾಯಕ ಬರುತ್ತೇನೆ ಎಂದೂ ಹೇಳಿದ. ಈ ಎಲ್ಲ ಮಾತುಗಳ ನಂತರ ನಡೆದ ಕ್ಷಣಕಾಲದ ನಿಶ್ಯಬ್ಧ ಅದೆಷ್ಟೋ ಪ್ರಶ್ನೆಗಳನ್ನು ಕೇಳಿತು. ಅದೆಷ್ಟೋ ಉತ್ತರಗಳನ್ನೂ ಹೇಳಿತು.

      ಕಾಲೇಜು ಮುಗಿದ ನಂತರ ನಾನು ಒಮ್ಮೆ ಧೈರ್ಯ ಮಾಡಿ ವಿನಾಯಕನ ಬಳಿ ಹೇಳಿ ಬಿಡಬೇಕಿತ್ತು ಎಂದುಕೊಂಡಳು ವಾಣಿ. ಛೆ ತಾನೇ ಚೂರೇ ಚೂರು ಧೈರ್ಯ ಮಾಡಿದ್ದರೆ ವಿನಾಯಕ ನನ್ನವನಾಗುತ್ತಿದ್ದನಲ್ಲ ಎಂದುಕೊಂಡಳು. ಮರೆತ ವಿನಾಯಕನನ್ನು, ವಿನಾಯಕನ ಜೊತೆಗಿನ ಸಾಂಗತ್ಯವನ್ನು ಮತ್ತೆ ಮತ್ತೆ ನೆನಪು ಮಾಡಿಕೊಂಡಿದ್ದಳು ವಾಣಿ.

ಇತ್ತ ವಿನಾಯಕನ ಮನಸ್ಸಿನಲ್ಲಿ ಕೂಡ ತರಂಗಗಳೆದ್ದಿತ್ತು. ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ ಎನ್ನುವ ಹಾಗೆ ಆಗಿತ್ತು.


(ಮುಂದುವರಿಯುತ್ತದೆ)

Sunday, May 3, 2020

ಅಂ-ಕಣ - 12

ಇಲ್ಲೊಬ್ಬಳು
ರಾತ್ರಿ ನನಗೆ
ಭಯವೇ ಆಗೋಲ್ಲ
ಎನ್ನುತ್ತಿದ್ದಾಳೆ!
ಹಗಲಲ್ಲಿ
ಬೆಚ್ಚಿ ಬೀಳುತ್ತಾಳೆ!


-------------


(2013 ರಲ್ಲಿ ಬರೆದಿದ್ದು)

ನಿನ್ನೆಯಿಂದ ಮನಸ್ಸು ಕಲ್ಲವಿಲವಾಗಿದೆ...
ಏನು ಮಾಡಬೇಕು ಏನು ಮಾಡಬಾರದು ಎನ್ನುವ ವಿವೇಚನೆ...

ಎಲೆಕ್ಷನ್ ಬಿಸಿಯ ನಡುವೆಯೂ ಮನಸ್ಸು ಮರುಗುತ್ತಿದೆ....
ಪಾಕಿಸ್ತಾನದ ಜೈಲಿನಲ್ಲಿ ಹಲ್ಲೆಗೊಳಗಾಗಿ ಸಾವನ್ನಪ್ಪಿದ ಸರಬ್ ಜಿತ್ ಸಿಂಗ್
ಸಾವನ್ನಪ್ಪಿರುವ ಕುರಿತು.. ಮನಸ್ಸು ಕುದಿಯುತ್ತಿದೆ...

ಅದೆಷ್ಟು ಜನ ಹೀಗೆ ಸಾವನ್ನಪ್ಪಿದ್ದಾರೋ ಗೊತ್ತಿಲ್ಲ...
ಇನ್ನೆಷ್ಟು ಜನ ಸಾಯಬೇಕೋ...
ಸರಬ್ ಜಿತ್ ಅಂತಿಮವಾಗಿ ಹೀಗೆ ಸಾಯಲಿಕ್ಕಾಗಿಯೇ 22 ವರ್ಷ ಜೈಲಿನಲ್ಲಿ ಕಳೆದು ಬಿಟ್ಟನಲ್ಲ..?
ನಮ್ಮ ಸರ್ಕಾರ ಆನತನ್ನು ಬಿಡುಗಡೆ ಗೊಳಿಸುವ ಬಗ್ಗೆ 22 ವರ್ಷಗಳಿಂದ ಬಾಯಿ ಮಾತಿನಲ್ಲಿಯೇ ಕಾಲ ಕಳೆಯಿತೆ..?
ಒಬ್ಬ ಸೈನಿಕ ತನ್ನ ನಾಡಿನವನು ಸತ್ತ, ಆತನನ್ನು ನೆರೆಯ ಪ್ಯಾಲಿಸ್ಟೈನ್ ದವರು ಕೊಂದರೆಂದರೆ ಸಾಕು.. ಪುಟ್ಟ ಇಸ್ರೇಲಿಗರು ಅಪ್ಪಟ ಸ್ವಾಭಿಮಾನಿಗಳು... ಅದಕ್ಕೆ ಪ್ರತಿಯಾಗಿ ಬಾಂಬು ದಾಳಿ ಮಾಡಿಯೋ., ರಾಕೆಟ್ಟು ಹಾರಿಸಿಯೋ 8-10 ಜನರನ್ನು ಕೊಂದು ಸೇಡಿ ತೀರಿಸಿಕೊಳ್ಳುತ್ತಾರೆ...
ಆದರೆ ನಾವ್ಯಾಕೆ ಹೀಗೆ..?

ಅಮಾಯಕನೋ.. ಅಲ್ಲವೋ... ಭಾರತೀಯ ಜನಸಾಮಾನ್ಯ.. ಸರಬ್ ಜೀತ್...
ನಿಜವಾಗಿಯೂ ಖೈದಿಗಳಿಂದ ಹಲ್ಲೆಗೊಳಗಾಗಿ ಸತ್ತ ಎನ್ನುವುದು ಖಂಡಿತ ಸುಳ್ಳು...
ಯಾವುದೋ ಅಧಿಕಾರಿ ಹಲ್ಲೆ ಮಾಡಿಯೇ ಕೊಂದಿರಬೇಕು... ಎಂದು ಮನಸ್ಸು ಶಂಕಿಸುತ್ತದೆ...
ಕಸಬ್, ಅಪ್ಝಲ್ ಗುರು ಹೀಗೆ ಉಗ್ರರನ್ನು ಕೊಂದಿದ್ದಕ್ಕೆ ಪ್ರತಿಯಾಗಿ ಸೇಡನ್ನು ತೀರಿಸಿಕೊಂಡಿರಲೂ ಬಹುದು..
ಆದರೆ ನಾವೇಕೆ ಸುಮ್ಮನಿದ್ದೇವೆ..?
ಪಾಕಿಸ್ತಾನದ ವಿರುದ್ಧ ಒಮ್ಮೆ ಗುಡುಗಿದರೆ ಸಾಕಿತ್ತು... ನಾಯಿ ಬುದ್ಧಿಯ ಪಾಕಿಸ್ತಾನ ಕುಂಯ್ ಗುಟ್ಟುತ್ತಿತ್ತು...
ನಮ್ಮ `ಮೌನ'ಮೋಹನ ಯಾಕೆ ಇನ್ನೂ ಮುರುಳಿ ಗಾನ ನುಡಿಸ್ತಾ ಇದ್ದಾರೆ ಅರ್ಥವಾಗುತ್ತಿಲ್ಲ...

`ಪಾಕಿಸ್ತಾನದ ಜೈಲಿನಲ್ಲಿ ಸರಬ್ ಜಿತ್ ಸಾವು.. ತಿಹಾರ್ ಜೈಲಿನಲ್ಲಿ ಪಾಕ್ ಖೈದಿಗಳಿಗೆ ಬಂದೋಬಸ್ತ್ ಎನ್ನುವ ಸುದ್ದಿಗಳು ಬರುತ್ತಿವೆ... ಮತ್ತೆ ಮನಸ್ಸು ಬೆಂಕಿಯ ಆಗರ...
ಇನ್ನೆಷ್ಟು ಹತ್ಯೆಯಾಗಬೇಕು ನಾವು ಎಚ್ಚೆತ್ತುಕೊಳ್ಳಲು..?
ಪಾಕಿಸ್ತಾನ ಕೊಲ್ಲುತ್ತಲೇ ಇರಬೇಕೇ..?
ನಾವು ಸಾಯುತ್ತಲೇ ಇರಬೇಕೆ..?

ಈ ನಡುವೆ `ನಮೋ' ಎಂದರೂ ನಾಯಕ ಬದಲಾಗುವ ಸೂಚನೆ ಸಿಗುತ್ತಿಲ್ಲ....
ಈಗಿರುವವರೆಲ್ಲ ಸತ್ತು ಮಲಗಿದ್ದಾರೆ...
ಉತ್ತರದ ಕಾಶ್ಮೀರದ ಅಕ್ಸಾಯ್ ಚಿನ್ ಪ್ರದೇಶದಲ್ಲಿ ಚೀನಿ ಡ್ರಾಗನ್ ಗಳು ನಮ್ಮ ನೆಲವನ್ನು ಚುನ್ ಚುನ್ ಕರ್ ಎನ್ನುವಂತೆ... ಕಿತ್ತು ಕೊಳ್ಳುತ್ತಿವೆ...
ಆದರೂ ನಾವು ಸುಮ್ಮನಿದ್ದೇವೆ...

ಇದು ಸಹನೆಯಾ..?
ಅಸಹಾಯಕತೆಯಾ..?
ಸೋಗಲಾಡಿತನವಾ..?
ಯಾರನ್ನೋ ಮೆಚ್ಚಿಸುವಂತಹ ಮಹಾನುಭಾವತನವಾ..?

ಏನನ್ನಬೇಕು..?
ಸತ್ತಮೇಲೆ ಭಾರತಕ್ಕೆ ಬಂದು ಮಣ್ಆಗುತ್ತಿರುವ ಸರ್ಬಜಿತ್ ಸಿಂಗ್ ಗೆ ಅಶ್ರುತರ್ಪಣ..
ಸೌಂಡು ಮಾಡದ ನಾಯಕರಿಗೆ ಧಿಕ್ಕಾರ...

---------------

ಎಲ್ಲ ಕೂಲಿ ಕಾರ್ಮಿಕರು ಅವರವರ ಊರುಗಳಿಗೆ ವಾಪಾಸಾಗುತ್ತಿದ್ದಾರೆ..!
ಬಾಂಗ್ಲಾದವರು....?


--------

ಸಂಭವಾಮಿ
ಯುಗೇ ಯುಗೇ...

ರಾಮಾಯಣ ಧಾರವಾಹಿಗೂ ಅನ್ವಯ ಆಗುತ್ತದೆ!

----------

ಅವಳ ಬಳಿ
ಕವಿಯಾಗು ಎಂದೇ
ಕವಿತೆಯಾಗುವ
ಕಷ್ಟ ನಂಗೆ ಬೇಡ,
ನನ್ನ ಆತ್ಮಕಥೆಯನ್ನು
ನೀನೆ ಬರೆದುಬಿಡು ಎಂದಳು!

Saturday, March 28, 2020

ಕತ್ತಲೆಕಾನು (ಕಥೆ ಭಾಗ- 3)

ನನಗೆ ಈಗ ನಿಜಕ್ಕೂ ಗಾಬರಿಯಾಯಿತು. ` ತಮಾಷೆ ಮಾಡಬೇಡಿ, ಹೇಳಿ, ಒಂದು ಲಾರಿ ಹೋಗಿರಬೇಕಲ್ಲ ಇದೆ ದಾರಿಯಾಗಿ..' ಎಂದೇ.
`ರೀ ನನಗೇನು ತಲೆ ಹಾಳಾಗಿದೆಯಾ. ಯಾವ ಲಾರಿನೂ ಇಲ್ಲ ಏನೂ ಇಲ್ಲ. ಹೋಗ್ರಿ ಸುಮ್ನೆ' ಎಂದ ಗಾರ್ಡ್. ನಾನು ನಿಧಾನವಾಗಿ ಮುಂದೆ ಹೋದೆ. ನನ್ನ ತಲೆಯಲ್ಲಿ ನೂರಾರು ಪ್ರಶ್ನೆಗಳು ತರಂಗಗಳಂತೆ ಎದ್ದು ಬಂದಿದ್ದವು.
ಮಾವಿನಗುಂಡಿಯಲ್ಲಿ ಒಂದು ಚಹಾ ಅಂಗಡಿ ಬಾಗಿಲು ಹಾಕುತ್ತಿತ್ತು. ಸೀದಾ ಅತ್ತ ಹೋಗಿ `ಒಂದು ಟಿ ಕೊಡಿ' ಎಂದೇ. ಆತ ನನ್ನನ್ನು ಒಮ್ಮೆ ದುರುಗುಟ್ಟಿಕೊಂಡು ನೋಡಿ, ಹ್ಮ್ ಎಂದು ಚಹಾ ತರಲು ಹೋದ.
ಅರೆ ನಾನು ಗೇರುಸೊಪ್ಪದಿಂದ ಆ ಲಾರಿಯ ಜೊತೆ ಬಂದಿದ್ದೇನಲ್ಲ. ಎಲ್ಲಿ ಹೋಗಲು ಸಾಧ್ಯ. ದಾರಿ ಮಧ್ಯದಲ್ಲಿ ಎಲ್ಲಾದರೂ ಕಳ್ಳ ನಟ ಹೊಡೆಯಲು ಅದು ಹೋಯಿತೇ? ಅಥವಾ ಬೇರೆ ಮಧ್ಯದಲ್ಲಿ ಯಾವುದಾದರು ಊರಿಗೆ ಹೋಯಿತೇ ಎಂಬ ಆಲೋಚನೆಗಳು ಬಂದವು. ಆದರೆ ಯಾರೇ ಆಗಿದ್ದರೂ ಕೂಡ ಅಂಕುಡೊಂಕಿನ ಹಾದಿಯಲ್ಲಿ ಅಷ್ಟೆಲ್ಲ ವೇಗವಾಗಿ ಗಡಿ ಓಡಿಸಲು ಸಾಧ್ಯವೇ ಇಲ್ಲ. ಇದರಲ್ಲಿ ಏನೋ ಇದೆ ಎಂದುಕೊಂಡೆ.
ನೋಡೋಣ ಈ ಚಹಾ ಅಂಗಡಿಯವನಿಗಾದರು ಗೊತ್ತಿರಬಹುದು, ಬರಲಿ ಅವ ಎಂದು ಸುಮ್ಮನಾದೆ. ಕೆಲ ಹೊತ್ತಿನ ನಂತರ ಹಬೆಯಾಡುತ್ತಿದ್ದ ಬಿಸಿ ಬಿಸಿ ಚಹಾ ಜೊತೆಗೆ ಬಂದ ಅವ. ಅವನ ಬಳಿ `ಹೊಯ್, ಈ ದಾರಿಯಲ್ಲಿ ಈಗಷ್ಟೇ ಯಾವುದಾದ್ರೂ ಲಾರಿ ಹೋಗಿದ್ದು ನೋಡಿದ್ರಾ' ಎಂದು ಕೇಳಿದೆ.
`ಲಾರಿಯಾ? ಯಾವ ಲಾರಿ? ಹೇಗಿದೆ ಬಣ್ಣ?' ಎಂದು ನನ್ನ ಬಳಿಯೇ ಮರು ಪ್ರಶ್ನೆ ಹಾಕಿದ. ಅದಕ್ಕೆ ನಾನು ಮೊದಲಿಂದ ನಡೆದ ಎಲ್ಲ ವಿಷಯ ಹೇಳಿದೆ.
ಅದಕ್ಕೆ ಕೊನೆಗೆ ಅವನು ಹೇಳಿದ ` ಹೊಯ್ ಮಾರಾಯ್ರೆ, ನಿಮ್ಮ ಅದೃಷ್ಟ ಚೊಲೋ ಇದೆ ಬಿಡಿ'ಎಂದ
ನಾನು ಗಾಬರಿಯಾಗಿ `ಯಾಕೆ ಎಂತ ಆಯಿತು?' ಎಂದೇ.
`ಅದು ಲಾರಿಯಲ್ಲ. ನೀವು ಬಂದಿದ್ದು ಲಾರಿಯ ಜೊತೆಗೂ ಅಲ್ಲ'
`ಮತ್ತೆ.. ಎಂತದ್ದು ಅದು?'
`ಅದು ಈ ಭಾಗದ ಭೂತ'
`ತಮಾಷೆ ಮಾಡಬೇಡಿ ಮಾರಾಯ್ರೆ.. ನಾನು ಆ ಲಾರಿಯ ಜೊತೆಗೆ ಬಂದಿದ್ದೆ, ಅದರ ಬೆಳಕು ಕಂಡಿದ್ದೇನೆ. ಆ ಲಾರಿ ಸೂಸುತ್ತಿದ್ದ ಹೊಗೆಗೆ ಮುಖ ಕೊಟ್ಟಿದ್ದೇನೆ. ಆ ಹೊಗೆಯ ಬಿಸಿ ಅನುಭವ ನನಗಾಗಿದೆ..' ಎಂದೇ.
`ಹ್ಮ್ಮ್,. ಈ ಥರ ಅನುಭವ ಹಲವರಿಗಾಗಿದೆ. ಬಹಳ ಜನರು ಇದೆ ರೀತಿ ಹೇಳಿದ್ದಾರೆ. ಆದರೆ ನಿಜಕ್ಕೂ ಅಂತಹ ಲಾರಿ ಇಲ್ಲವೇ ಇಲ್ಲ..' ಎಂದ.
ನಾನು ಬೆಪ್ಪಾಗಿ ನೋಡಲು ಆರಂಭಿಸಿದೆ.
`ಸುಮಾರು ವರ್ಷಗಳ ಹಿಂದೆ ಕತ್ತಲೆಕನು ಘಟ್ಟದಲ್ಲಿ ತಮಿಳುನಾಡಿನ ಲಾರಿಯೊಂದು ಉರುಳಿ ಶರಾವತಿ ಕಣಿಗೆಗೆ ಬಿದ್ದಿತ್ತು. ಆ ಲಾರಿಯಲ್ಲಿದ್ದ ಡ್ರೈವರ್ ಹಾಗೂ ಕ್ಲೀನರ್ ಇಬ್ಬರೂ ಸಾವನ್ನಪ್ಪಿದ್ದರು. ಅವರ ಹೆಣ ಕೂಡ ಸಿಕ್ಕಿರಲಿಲ್ಲ. ಅಂದಿನಿಂದ ಈ ಲಾರಿ ಭೂತ ಹಲವರನ್ನು ಕಾಡುತ್ತಿದೆ ನೋಡಿ.' ಎಂದ.
` ಈ ಲಾರಿ ಹಲವರಿಗೆ ಸಿಕ್ಕಿದೆ. ಹಲವರನ್ನು ಹೆದರಿಸಿದೆ,. ಕಾಡಿದೆ. ಬೀಳಿಸಿದೆ. ಹಲವಾರು ಗಾಯಗೊಂಡಿದ್ದಾರೆ. ಹಲವಾರು ತೀವ್ರ ಜ್ವರದಿಂದ ಬಳಲಿದ್ದಾರೆ. ಹಲವಾರು ಮತಿಭ್ರಮಣೆಗೆ ಒಳಗಾಗಿದ್ದಾರೆ. ಅದರಲ್ಲಿ ಇಷ್ಟುಹೊತ್ತು ಸರಿಯಾಗಿ ಇದ್ದಿದ್ದು ಎಂದರೆ ನೀವೊಬ್ಬರೇ ಇರಬೇಕು ನೋಡಿ' ಎಂದ.
ತಕ್ಷಣ ನನಗೆ ಆ ಲಾರಿ, ಅದರ ಹೊಗೆಯ ಅನುಭವ, ಅದರಿಂದ ಕೇಳಿ ಬರುತ್ತಿದ್ದ ತಮಿಳು ಹಾಡು ಎಲ್ಲ ನೆನಪಾಯಿತು. ಅದು ಭೂತವಾಗಿತ್ತು ಎಂದು ಕೇಳಿದಾಗಿನಿಂದ ಬರಲು ಶುರುವಾಗಿದ್ದ ಬೆವರು ಇನ್ನಷ್ಟು ಧಾರಾಕಾರವಾಗಿತ್ತು.
ನಾನು ಚಹಾದ ಬಿಲ್ಲು ಕೊಡುವಂತೆ ನನ್ನ ಮುಂದೆ ನಿಂತಿದ್ದ ಹೋಟೆಲಿನವನ ಕಾಲಿನ ಕಡೆಗೆ ದೃಷ್ಟಿ ಹೋಯಿತು. ಏನೋ ಸರಿ ಇಲ್ಲ ಎನ್ನುವಂತೆ ಅನ್ನಿಸಿತು. ದಿಟ್ಟಿಸಿ ನೋಡಿದೆ. ಆತನ ಕಾಲು ನೋಡಿ ಒಮ್ಮೆ ಎದೆಯಲ್ಲಿ ಚಳುಕು ಶುರುವಾಯಿತು. ಆತನ ಕಾಲು ತಿರುಗಾಮುರುಗ ಇತ್ತು. ಅಂದರೆ ಈತನೂ ಭೂತನೇ? ಅಯ್ಯೋ ದೇವರೇ.. ಎಲ್ಲಿಗೆ ಬಂದೇನಪ್ಪಾ ನಾನು ಎಂದುಕೊಳ್ಳುತ್ತಿರುವಂತೆ ಮೈಯಲ್ಲಿ ನಡುಕ ಶುರುವಾಗಿತ್ತು. ಎದೆಯಲ್ಲಿ ಅದೇನೋ ನೋವು. `ಅಹ್...' ಎಂದೇ. ಅದೇ ನನ್ನ ಕೊನೆಯ ಶಬ್ಧವಾಗಿತ್ತು.

(ಮುಗಿಯಿತು)