Sunday, November 5, 2017

ಮದ್ವೆ ಮಾಡ್ಕ್ಯಳೆ (ಭಾಗ-3)

ಯನ್ ಅಣ್ಣಯ್ಯ ಒಳ್ಳೆ ಮಾಣಿ
ಮದ್ವೆ ಮಾಡ್ಕ್ಯಳೆ...
ಅವನಂತವ್ರು ಬೇರೆವ್ ಇಲ್ಲೆ
ಮದ್ವೆ ಮಾಡ್ಕ್ಯಳೆ..|

ಖಾಲಿ ಪೀಲಿ ಪೋಲಿ ಅಲ್ಲ
ಮದ್ವೆ ಮಾಡ್ಕ್ಯಳೆ...
ಎಲ್ಲೆಲ್ಲೆಲ್ಲೂ ತಿರುಗ್ತ್ನಿಲ್ಲೆ
ಮದ್ವೆ ಮಾಡ್ಕ್ಯಳೆ... |

ಬೇರೆ ಹುಡ್ಗೀರ್ ನೋಡಂವ್ ಅಲ್ಲ
ಮದ್ವೆ ಮಾಡ್ಕ್ಯಳೆ...
ನಿನ್ ಜೊತೆ ಬಾಳ್ವೆ ಮಾಡ್ತಾ
ಮದ್ವೆ ಮಾಡ್ಕ್ಯಳೆ... |

ಚಟ ಮಾಡಿ ಹಾಳಾಜ್ನಿಲ್ಲೆ
ಮದ್ವೆ ಮಾಡ್ಕ್ಯಳೆ...
ಗನಾ ಗುಣ ಬೆಳೆಸ್ಕಂಡ್ ಇದ್ದ
ಮದ್ವೆ ಮಾಡ್ಕ್ಯಳೆ... |

ಒಳ್ಳೆ ಜಾಬು ಅಣ್ಣಂಗಿದ್ದು
ಮದ್ವೆ ಮಾಡ್ಕ್ಯಳೆ...
ದೊಡ್ ಅಮೌಂಟಿನ ಸ್ಯಾಲರಿ ಬರ್ತು
ಮದ್ವೆ ಮಾಡ್ಕ್ಯಳೆ... |

ಮದ್ವೆ ಮಾಡ್ಕ್ಯಳೆ ಕೂಸೆ
ಮದ್ವೆ ಮಾಡ್ಕ್ಯಳೆ...
ಅಣ್ಣನ ಜೊತೆಗೆ ಚೊಲೋ ಇರ್ತೆ
ಮದ್ವೆ ಮಾಡ್ಕ್ಯಳೆ... |





(ಈ ಕವಿತೆ ಬರೆದಿದ್ದು 2017ರ ನವೆಂಬರ್ 5ರಂದು. ಬೆಂಗಳೂರಿನಲ್ಲಿ)
(ಈ ಹಿಂದೆ ಮದ್ವೆ ಮಾಡ್ಕ್ಯಳೆ ಎನ್ನುವ ಎರಡು ಕವಿತೆಗಳನ್ನು ಬರೆದಿದ್ದೆ. ಒಂದು ಹುಡುಗ ಹೇಳುವುದು, ಇನ್ನೊಂದು ಹುಡುಗನ ತಂದೆ ತಾಯಿ ಅರಿಕೆ ಮಾಡುವಂತಹ ಕವಿತೆ.. ಇದು ಮೂರನೇ ಭಾಗ.. ಹವ್ಯಕ ಮಾಣಿಯ ಸಹೋದರಿಯೊಬ್ಬಳು ತನ್ನ ಸಹೋದರನನ್ನು ಮದುವೆಯಾಗು ಎಂದು ಹೇಳುವ ಟಪ್ಪಾಂಗುಚ್ಚಿ ಕವಿತೆ.. ನಿಮಗಿಷ್ಟವಾಗಬಹುದು.. ಓದಿ ಅಭಿಪ್ರಾಯಿಸಿ..)

Saturday, October 28, 2017

ಚೌಕಟಿ ಹೆಗಡೆ ಪುರಾಣ

ಚೌಕಳಿ ಚೌಕಳಿ ಅಂಗಿ, ಮಾಸಲು ಮಣ್ಣ ಬಣ್ಣದ ದೊಗಳೆ ಪ್ಯಾಂಟು ಹಾಕಿಕೊಂಡ ಅನಾಮತ್ತು ಆರಡಿ ಮೂರಿಂಚು ಎತ್ತರದ ಆದರೆ ಅಷ್ಟೇನೂ ದೃಢಕಾಯವಲ್ಲದ ಬಡಕಲು ಶರೀರದ ವ್ಯಕ್ತಿ ನಮ್ಮೂರ ದಾರಿಯಲ್ಲಿ ನಡೆದು ಬರುತ್ತಿದ್ದಾನೆ ಎಂದರೆ ಖಂಡಿತವಾಗಿಯೂ ಅವನು ಚೌಕಟಿ ಹೆಗಡೆಯೇ ಹೌದು ಎಂಬುದು ನಮ್ಮೂರು ಮಾತ್ರವಲ್ಲ ಸುತ್ತಮುತ್ತಲ ಫಾಸಲೆಯ ಚೌಕಟಿ ಹೆಗಡೆಯನ್ನು ಬಲ್ಲಾದವರ ಅಭಿಪ್ರಾಯ. ಮನೇಗದ್ದೆಯ ಶಿರಿ ಹೆಗಡೆ ಎಂಬ ಸ್ವಲ್ಪ ವಿಶಿಷ್ಟವಾದ ಮನೋಭಾವದ ಹಾಗೂ ಉಳಿದಂತೆ ಸೀದಾಸಾದ ಆದ ವ್ಯವ್ಯಕ್ತಿ ಚೌಕಟಿ ಹೆಗಡೆ ಎಂದು ಹೆಸರಾಗಿ ಎಲ್ಲರ ಮನಸ್ಸಿನಲ್ಲಿಯೂ ಅಚ್ಚಳಿಯದೇ ಉಳಿದುಕೊಂಡಿದ್ದು ಮಾತ್ರ ಶತಮಾನದ ವೈಶಿಷ್ಟ್ಯ ಎಂಬ ಖ್ಯಾತಿ ನಮ್ಮ ಭಾಗದಲ್ಲಿದೆ.
ಒಂದಾನೊಂದು ಕಾಲದಲ್ಲಿ, ತನ್ನ ಯವ್ವನದಲ್ಲಿ ಮನೆಗದ್ದೆ ಶ್ರೀಧರಮೂರ್ತಿ ಹೆಗಡೆ ಎಂಬ ಪೂರ್ಣನಾಮಧೇಯವನ್ನು ಹೊಂದಿದ್ದ ಈ ವ್ಯಕ್ತಿ ಕಾಲಾಂತರದಲ್ಲಿ ಶಿರಿ ಹೆಗಡೆಯಾಗಿ ಬದಲಾಗಿದ್ದನ್ನು ಕಂಡವರು ಅನೇಕರಿದ್ದಾರೆ. ಇಂತಹ ಶಿರಿ ಹೆಗಡೆಯೇ ತದನಂತರದಲ್ಲಿ, ಯಾವುದೋ ಒಂದು ಹಂತದಲ್ಲಿ ಚೌಕಟಿ ಹೆಗಡೆಯಾಗಿ ಅಭಿದಾನವನ್ನು ಪಡೆದುಕೊಂಡಿರುವುದು ಹಲವರಲ್ಲಿ ಎಂದೂ ಮರೆಯಲಾಗದಂತಹ ವಿಸ್ಮಯದ ಸಂಗತಿ.
 ಮೂಲತಃ ಆರೆಕರೆ ಭಾಗಾಯ್ತದ ಜಮೀನನ್ನು ಹೊಂದಿದ್ದ ಶಿರಿ ಹೆಗಡೆ ಒಂದು ಕಾಲದಲ್ಲಿ ದೊಡ್ಡ ಕುಳ. ಅಲ್ಲದೇ ಕೈಕಾಲಿಗೂ ಆಳು-ಕಾಳು ಹೊಂದಿದ್ದ. ಅದಕ್ಕಿಂತಲೂ ಹೆಚ್ಚಾಗಿ ಒಂದಾನೊಂದು ಕಾಲದಲ್ಲಿ ಹೈನೋದ್ಯಮದ ಪಂಟರ್ ಈತ. ಮನೆಯಲ್ಲಿ ಏನಿಲ್ಲವೆಂದರೂ ಕನಿಷ್ಟ 15ಕ್ಕೂ ಹೆಚ್ಚಿನ ಕಾಲ್ನಡೆಗಳಿದ್ದವು ಎಂದರೆ ಆತನ ಹೈನುಗಾರಿಕೆಯ ಹೆಚ್ಚುಗಾರಿಕೆಯನ್ನು ಅರಿಯಲೇಬೇಕು ಬಿಡಿ. ಆದರೆ ಕಾಲಾನಂತರದಲ್ಲಿ ಅದೆಲ್ಲವನ್ನೂ ಕಳೆದುಕೊಂಡಿದ್ದು ಮಾತ್ರ ಜಗತ್ತಿನ ಬದಲಾಣೆಗೆ ಸಾಕ್ಷಿಯಾಗಿದ್ದು ಸುಳ್ಳಲ್ಲ. ಜಮೀನನ್ನು ಹೊಂದಿದ್ದ ಸಂದರ್ಭದಲ್ಲಿ  ಶ್ರೀಧರಮೂರ್ತಿ ಹೆಗಡೇರು ಎನ್ನುವ ಗೌರವವನ್ನು ಗಳಿಸಿಕೊಂಡಿದ್ದವನು ತನ್ನ ಜಮೀನು ಹಾಗೂ ಕೊಟ್ಟಿಗೆಯಲ್ಲಿನ ರಾಸುಗಳನ್ನು ಕಳೆದುಕೊಂಡ ಹಾಗೆಲ್ಲ ಹೆಸರು, ಗೌರವವನ್ನೂ ಕಳೆದುಕೊಂಡಿದ್ದ. ಆರೆಕರೆ ಜಮೀನು ಮೂರೆಕರೆಗೆ ಇಳಿದಾಗ ಶಿರಿ ಹೆಗಡೆಯಾದ ಈತ ಎಲ್ಲ ಜಮೀನು ಕಳೆದುಕೊಂಡು ಅಕ್ಷರಶಃ ಬೀದಿಗೆ ಬಿದ್ದ ಸಂದರ್ಭದಲ್ಲೇ ಚೌಕಟಿ ಹೆಗಡೆಯಾಗಿ ಬದಲಾಗಿದ್ದ.
 ಚೌಕಟಿ ಹೆಗಡೆ ಆರು ಅಡಿ ಮೂರಿಂಚು ಎತ್ತರದವನು ಎಂದು ಆಗಲೇ ಹೇಳಿದೆನಲ್ಲ ಮಾರಾಯ್ರೇ. ಆತನಿಗೆ ಚೌಕಟಿ ಹೆಗಡೆ ಎಂಬ ಹೆಸರು ಬರಲು ಕಾರಣ ಏನು ಎನ್ನುವುದನ್ನು ಹೇಳದೇ ಇದ್ದರೆ, ಸ್ವಾರಸ್ಯವೇ ಇರುವುದಿಲ್ಲ ಬಿಡಿ. ಇಂತಹ ಮಾಸ್ಟರ್ಪೀಸ್ ಕಟೌಟ್ ಚೌಕಟಿ ಹೆಗಡೆ ಆಗೀಗ ನಮ್ಮೂರಿಗೆ ಬರುತ್ತಾನೆ. ಚೌಕಟಿ ಹೆಗಡೆಯನ್ನು ಬಲ್ಲಾದವರಿಗೆ ಆತ ದೂರದಿಂದಲೇ ಇಂವ ಇಂತವನೇ ಎಂಬುದು ನಜರಿಗೆ ಬರುತ್ತದೆ. ಆದರೆ ಊರಿಗೆ ಯಾರಾದರೂ ಹೊಸಬರು ಬಂದರೆ ಮಾತ್ರ ಇವರು ಯಾರು ಬಲ್ಲಿರೇನು ಎಂದು ಮೂಗಿನ ಒಳಗೆ ಬೆರಳಿಡುವುದು ಖಚಿತ. ಹೀಗೆ ಒಂದು ಯಮಗಂಡ ಕಾಲದಲ್ಲಿ ಈತ ನಮ್ಮೂರಿಗೆ ಕಾಲಿರಿಸಿದ್ದ. ಆ ಸಂದರ್ಭದಲ್ಲಿ ನಮ್ಮೂರಿನಲ್ಲಿ ಏನೋ ಒಂದು ವಿಶೇಷ ಕಾರ್ಯಕ್ರಮದ ಸಂಭ್ರಮ. ನೂರಾರರು ಜನರು ನೆಂಟರು-ಇಷ್ಟರು ನಮ್ಮೂರಿನಲ್ಲಿ ಗೌಜಿಯನ್ನು ಹುಟ್ಟುಹಾಕಿದ್ದರು. ನೂರಾರು ಜನರು ಸೇರಿದ್ದ ಸಂದರ್ಭದಲ್ಲಿ ಚೌಕಟಿ ಹೆಗಡೆ ಊರಿನ ಫಾಸಲೆಯಲ್ಲಿ ಕಾಲಿಟ್ಟಾಗ ಕೇಳಬೇಕೇ? ಒಂದಲ್ಲಾ ಒಂದು ಕಡೆ ಈತ ಕ್ವಶ್ಚನ್ ಮಾರ್ಕ್ ಆಗದೇ ಇರುತ್ತಾನೆಯೇ? ಆ ಸಂದರ್ಭದಲ್ಲಿ ನಮ್ಮೂರಿನಲ್ಲಿ ದಿವ್ಯ ಉಪಸ್ಥಿತಿ ಹೊಂದಿದ್ದ ವ್ಯಕ್ತಿಯೊಬ್ಬನಿಗೆ ಶಿರಿ ಹೆಗಡೆ ಬಹಳ ಕುತೂಹಲಕರವಾಗಿ ಕಂಡಿದ್ದ. ಹೇಳಿ ಕೇಳಿ ಅದು ಇಸ್ಪೀಟ್, ರಮ್ಮಿ, ಅಂದರ್ ಬಾಹರ್ನ ಖದರ್ರಿನ ಕಾಲ. ಊರಿಗೆ ಬಂದ ಬಹುತೇಕರು ಆ ಅಂತರಾಷ್ಟ್ರೀಯ ಕ್ರೀಡೆಯಲ್ಲಿ ಗಿನ್ನಿಸ್ ರೆಕಾರ್ಡ್ ಹೋಲ್ಡರ್ಗಳು.
 ಶಿರಿ ಹೆಗಡೆಯನ್ನು ನೋಡಿದ ವ್ಯಕ್ತಿ ಸ್ವಲ್ಪ ತಮಾಷೆಯ ಸ್ವಭಾವದವನೂ ಆಗಿದ್ದ. ಅಲ್ಲದೇ ಅವರಿವರನ್ನು ಕಾಲೆಳೆಯುತ್ತ, ವ್ಯಂಗ್ಯವಾಗಿ ಆಡಿಕೊಳ್ಳುತ್ತ ಇರುವವನೂ ಆಗಿದ್ದ. ಅಂತಹವನು ಶಿರಿ ಹೆಗಡೆಯನ್ನು ಕಾಡಿಸಲು ಮುಂದಾದ. ಶಿರಿ ಹೆಗಡೆಗೆ ಏನಾದರೂ ಬಿರುದು, ಬಾವಲಿಗಳನ್ನು ನೀಡಬೇಕಲ್ಲ ಎಂಬ ಅಂಶ ಆತನ ಮನಸ್ಸಿನಲ್ಲಿ ಮೂಡಿತು. ಆ ವ್ಯಕ್ತಿಗೆ ಶಿರಿ ಹೆಗಡೆ ಇಸಪೀಟ್ ಆಟದ ಚೌಕಟ್ (ಡೈಸ್)ನಂತೆ ಕಾಣಿಸಿದನಂತೆ. ಚೌಕಟ್ ಹೇಗೆ ಉದ್ದುದ್ದವಾಗಿ ಇರುತ್ತದೆಯೋ ಅದೇ ರೀತಿ ಕಾಣಿಸಿದ್ದನಂತೆ. ಅಲ್ಲದೇ ದುರದೃಷ್ಟವೋ ಅಥವಾ ಎಂದಿನಂತೇ ಸಹಜ ಸಂಗತಿಯೋ ಏನೋ ಆ ದಿನ ಶಿರಿ ಹೆಗಡೆ ಚೌಕ ಚೌಕ ಬಣ್ಣದ ಡಿಸೈನ್ ಹೊಂದಿದ್ದ ಅಂಗಿಯನ್ನು ಹಾಕಿಕೊಂಡು ಬಂದಿದ್ದ. ಈ ಕಾರಣದಿಂದಲೇ ಶಿರಿ ಹೆಗಡೆಯನ್ನು ನೋಡಿ ವ್ಯಕ್ತಿ `ಇವನ್ಯಾರೋ ಚೌಕಟಿ ಹೆಗಡೆ... ಚೌಕಳಿ ಚೌಕಳಿ ಮನೆಯಂತಿದ್ದಾನಲ್ಲ' ಎಂದು ನಾಲ್ಕು ಜನರಿಗೆ ಕೇಳುವಂತೆಯೇ ಕರೆದುಬಿಟ್ಟಿದ್ದ. ಅಂದಿನಿಂದಲೇ ಶಿರಿ ಹೆಗಡೆ ಎಂಬ ಹೆಸರು ಮರೆಯಾಗಿ ಚೌಕಟಿ ಹೆಗಡೆ ಎಂಬ ಹೆಸರು ಮನೆಗದ್ದೆಯ  ಶ್ರೀಧರಮೂರ್ತಿಗೆ ಪ್ರಾಪ್ತವಾಗಿತ್ತು.
 ಇನ್ನು ಮುಂದಿನ ಸಂದರ್ಭಗಳಲ್ಲೆಲ್ಲ ಚೌಕಟಿ ಹೆಗಡೆಯನ್ನು ಚೌಕಟಿ ಹೆಗಡೆ ಎಂದೇ ಕರೆಯೋಣ. ಪ್ರಸ್ತುತ ನಮ್ಮ ಕಥೆಯಲ್ಲಿ ಚೌಕಟಿ ಹೆಗಡೆಯ ಪುರಾಣ ಹೇಳುವುದೇ ಆಗಿರುವುದರಿಂದ ಶ್ರೀಧರಮೂರ್ತಿ ಹೆಗಡೆ ಎಂಬ ಹೆಸರು ಪರಕೀಯವಾಗುತ್ತದೆ. ಹೀಗಾಗಿ ಚೌಕಟಿ ಎಂಬ ಹೆಸರಿನಲ್ಲಿಯೇ ಮುಂದುವರಿಯೋಣ. ಚೌಕಟಿ ಹೆಗಡೆಯ ಗಾತ್ರವನ್ನೇನೋ ಹೇಳಿಯಾಯಿತು. ಅಲ್ಲದೇ ಆತನ ವಸ್ತ್ರವಿನ್ಯಾಸವನ್ನೂ ಅರುಹಿ ಆಯಿತು. ಇನ್ನುಳಿದ ಆತನ ವಿವರಗಳನ್ನು, ಪ್ರವರಗಳನ್ನೆಲ್ಲ ಹೇಳಲೇಬೇಕಲ್ಲ ಮಾರಾಯ್ರೇ.. ಇವುಗಳಲ್ಲಿಯೇ ಇದೆ ನೋಡಿ ಆಸಕ್ತಿದಾಯಕ ಅಂಶಗಳು.  ಚೌಕಟಿ ಹೆಗಡೆಯ ಬಾಹ್ಯ ರೂಪಗಳು ಎಷ್ಟು ಮಹತ್ವದ್ದೆನ್ನಿಸುತ್ತವೆಯೋ, ಆತನ ಬಿಳಿಯ ಗಡ್ಡ ಕೂಡ ಇನ್ನೊಂದು ವಿಶಿಷ್ಟ ಅಂಶಗಳಲ್ಲಿ ಒಂದು. ಆತನ ಗಡ್ಡ ಬಿಳಿಯದೆಂದರೆ ಬಿಳಿಯದು ಖಂಡಿತವಾಗಿಯೂ ಅಲ್ಲ ಬಿಡಿ. ಅದೊಂಥರಾ ಮಾಸಿದ ಬಿಳಿ ಬಣ್ಣ ಅಥವಾ ಕಂದು ಎಂದರೆ ತಪ್ಪಾಗುವುದಿಲ್ಲ ನೋಡಿ. ಹಾಲುಬಣ್ಣದ ಬಿಳುಪು ಕಂದಾಗಲು ಮುಖ್ಯಕಾರಣ ಎಂದರೆ ಆತನ ಮೋಟು ಬೀಡಿ. ಹಾ ಹೇಳಲು ಮರೆತಿದ್ದೆ ನೋಡಿ, ಈ ಚೌಕಟಿ ಹೆಗಡೆ ಬೀಡಿ ಸೇದುವುದರಲ್ಲಿ ಎತ್ತಿದ ಕೈ. ಆದರೆ ಆತ ಪೂತರ್ಿ ಬೀಡಿಯನ್ನು ಸೇದಿದ್ದನ್ನು ಯಾವತ್ತೂ ಕಂಡವರಿಲ್ಲ. ಆತ ಬೀಡಿ ಸೇದುತ್ತಿದ್ದ ಸಂದರ್ಭದಲ್ಲಿ ಪ್ರತಿಯೊಬ್ಬರೂ ಚೌಕಟಿ ಹೆಗಡೆ ಕೈಯಲ್ಲಿ ಮೋಟು ಬೀಡಿಯನ್ನೇ ಕಂಡಿದ್ದಾರೆ. ಈ ಕಾರಣದಿಂದಲೇ ಮೋಟು ಬೀಡಿಯ ಚೌಕಟಿ ಹೆಗಡೆ ಎಂದು ಕರೆಯುವವರೂ ಇದ್ದಾರೆ. ಇಂತಹ ಮೋಟು ಬೀಡಿಯ ಹೊಗೆ ತಾಗಿದ ಕಾರಣದಿಂದ ಚೌಕಟಿ ಹೆಗಡೆಯ ಗಡ್ಡದ ರೂಪು ಬದಲಾಗಿದೆ ಎಂದು ಹೇಳುವವರೂ ಇದ್ದಾರೆ.
 ಚೌಕಟಿ ಹೆಗಡೆಯ ಹಲ್ಲುಗಳ ಬಗ್ಗೆ ಹೇಳಬೇಕು. ಈ ಹಲ್ಲುಗಳು ತಮ್ಮ ಮೂಲ ರೂಪ, ಬಣ್ಣ ಹಾಗೂ ವಾಸನೆಯನ್ನು ಕಳೆದುಕೊಂಡು ಹಲವು ದಶಕಗಳೇ ಕಳೆದಿವೆ. ಈತನ ಹಲ್ಲಿನ ನಿಜವಾದ ರೂಪ ಕಂಡವರು ಯಾರೂ ಇಲ್ಲ ಎನ್ನಲಾಗುತ್ತದೆ. ಸಹಜವಾಗಿ ಪ್ರತಿಯೊಬ್ಬರ ಹಲ್ಲುಗಳ ಬಣ್ಣ ಬಿಳಿ. ಮತ್ತೆ ಕೆಲವರ ಬಣ್ಣ ಹಳದಿಯೂ ಇರುತ್ತದೆ ಬಿಡಿ. ಆದರೆ ಚೌಕಟಿ ಹೆಗಡೆಯ ಮೇಲ್ಪಂಕ್ತಿ ಹಾಗೂ ಕೆಳ ಪಂಕ್ತಿಯ ತಲಾ ನಾಲ್ಕು ಹಲ್ಲುಗಳ ಬಣ್ಣ ಕಡುಗೆಂಪು. ಇನ್ನುಳಿದ ಹಲ್ಲುಗಳಲ್ಲಿ ಒಂದೆರಡು ಹಾಳಾಗಿರುವ ಕಾರಣ ಅವುಗಳ ಬಣ್ಣ ನೀಲಿ. ಕವಳ, ಗುಟ್ಕಾ, ತಂಬಾಕಿನ ಕಾರಣದಿಂದ ಹಲ್ಲುಗಳು ಈ ಬಣ್ಣಕ್ಕೆ ಬಂದಿವೆ ಎನ್ನುವ ಅಭಿಪ್ರಾಯ ಚೌಕಟಿ ಹೆಗಡೆಯ ಕುರಿತು ದೀರ್ಘ ಸಂಶೋಧನೆ ಮಾಡಿದದ ವ್ಯಕ್ತಿಗಳದ್ದು. ಬಿಡಿ ಈತನೂ ಅಷ್ಟೇ ದಿನಕ್ಕೆ ಕನಿಷ್ಟ ಒಂದು ಡಜನ್ನಷ್ಟು ಕವಳ ಹಾಕುತ್ತಾನೆ. ಪ್ರತಿಯೊಂದು ಕವಳಕ್ಕೂ ಅರ್ಧ ಎಸಳು ತಂಬಾಕು ಬೇಕೇ ಬೇಕು. ಇನ್ನು ಗುಟ್ಕಾ ಎಷ್ಟು ಎನ್ನುವುದು ಮಾತ್ರ ಲೆಕ್ಖ ಇಟ್ಟವರಿಲ್ಲ ನೋಡಿ.
 ಚೌಕಟಿ ಹೆಗಡೆ ಎಂಬುವವನು ಮೇಲ್ನೋಟಕ್ಕೆ ಒಳ್ಳೆಯವನು. ಆದರೆ ಆತನಲ್ಲಿಯೂ ಒಂದೆರಡು ಕೆಟ್ಟಗುಣಗಳಿವೆ ಎನ್ನುವುದು ಪ್ರತಿಯೊಬ್ಬರಿಗೂ ತಿಳಿದಿರುವ ಗುಟ್ಟೇ ಸರಿ. ಆತ ಸಣ್ಣ ಪ್ರಮಾಣದಲ್ಲಿ ಕಳ್ಳತನ ಮಾಡುತ್ತಾನೆ ಎನ್ನುವ ಮಾಹಿತಿಗಳು ಬಹುತೇಕರಿಗೆ ತಿಳಿದಿದೆ ಬಿಡಿ. ಹಾಗಂತ ಆತ ಯಾರದ್ದೋ ಮನೆಗೆ ಕನ್ನವಿಕ್ಕಿದ್ದಾನೆ ಎಂದೋ ಅಥವಾ ಯಾರ ಮನೆಯಲ್ಲಿಯೋ ಇರುವ ಚಿಕ್ಕಪುಟ್ಟ ಸಾಮಾನು-ಸರಂಜಾಮುಗಳನ್ನು ಕದ್ದುಕೊಂಡು ಹೋಗುತ್ತಾನೆ ಎಂದುಕೊಂಡರೆ ಖಂಡಿತವಾಗಿಯೂ ಅದು ತಪ್ಪು. ಮನೆಗಳಿಗೆ ಸಂಬಂಧಿಸಿದ ಯಾವುದೇ ಒಂದು ವಸ್ತುವನ್ನೂ ಕೂಡ ಆತ ಕದ್ದುಕೊಂಡು ಹೋಗುವುದಿಲ್ಲ. ಈ ದೆಸೆಯಿಂದ ಚೌಕಟಿ ಹೆಗಡೆ ಬಹಳ ಒಳ್ಳೆಯವನು ಬಿಡಿ. ಆದರೆ ಆತ ತೋಟಗಳಲ್ಲಿನ ಸಣ್ಣಪುಟ್ಟ ವಸ್ತುಗಳನ್ನು ಖಂಡಿತವಾಗಿಯೂ ಕದ್ದೊಯ್ಯುತ್ತಾನೆ. ಸಾಮಾನ್ಯವಾಗಿ ನಮ್ಮೂರಿನ ತೋಟಗಳಲ್ಲಿ, ತೋಟಪಟ್ಟಿಯ ಮಧ್ಯದಲ್ಲಿ ಅಲ್ಲಲ್ಲಿ ಸೂಜಿ ಮೆಣಸಿನ ಗಿಡಗಳನ್ನು ಬೆಳೆಯುತ್ತಾರೆ. ತೋಟದ ಫಲವತ್ತತೆಗೆ ತಕ್ಕಂತೆ ಉತ್ತಮವಾಗಿ ಕಾಯಿಗಳನ್ನು ಬಿಡುತ್ತವೆ. ಇಂತಹ ಸೂಜು ಮೆಣಸನ್ನು ಆತ ಕೊಯ್ದುಕೊಂಡು ಹೋಗುತ್ತಾನೆ ಎನ್ನುವುದು ಆತನ ಮೇಲೆ ಇರುವ ಗಂಭೀರ ಆರೋಪ.
 ಅಷ್ಟೇ ಅಲ್ಲದೇ ಶೀಗೆಕಾಯಿಗಳು, ಅಣಲೆ ಕಾಯಿಗಳು, ಅಂಟುವಾಳ ಕಾಯಿಗಳು, ಜಾಯಿಕಾಯಿ, ಕಂಚೀಕಾಯಿ ಹೀಗೆ ವಿವಿಧ ಸಾಂಬಾರ ಪದಾರ್ಥಗಳನ್ನು ಈತ ಕೊಯ್ದುಕೊಂಡು ಹೋಗುತ್ತಾನೆ ಎನ್ನುವುದು ಈತನ ಮೇಲೆ ಇರುವ ಮತ್ತಷ್ಟು ಆರೋಪಗಳು. ಈ ಕುರಿತು ಚೌಕಟಿ ಹೆಗಡೆಯನ್ನು ಕೇಳಿದರೆ ಆತ ಹೇಳುವುದೇ ಬೇರೆ ಬಿಡಿ. ಆತನ ಪ್ರಕಾರ ಇದು ತಪ್ಪಲ್ಲವೇ ಅಲ್ಲ. ಮಂಗನೋ ಅಥವಾ ಇನ್ಯಾವುದೋ ಕಾಡು ಪ್ರಾಣಿಗಳು ಹಾಳು ಮಾಡುವುದನ್ನು ತಾನು ಕೊಯ್ಯುತ್ತೇನೆ ಅಷ್ಟೇ ಎನ್ನುತ್ತಾನೆ. ಸಾಮಾನ್ಯವಾಗಿ ನಮ್ಮೂರಿನಲ್ಲಿ ಇಂತಹ ಬೆಳೆಗಳನ್ನು ಕೊಯ್ದು ಮಾರಾಟ ಮಾಡುವುದರಲ್ಲಿ ಯಾರೂ ಆಸಕ್ತಿ ತೋರುವುದಿಲ್ಲ. ಆಗೀಗ ಮನೆ ಬಳಕೆಗೆ ಇಂತವನ್ನು ಕೊಯ್ಯುತ್ತಾರೆ ಬಿಟ್ಟರೆ ಉಳಿದದ್ದೆಲ್ಲ ಕಾಡುಪ್ರಾಣಿಗಳ ಪಾಲಾಗುತ್ತದೆ. ಹೀಗಿರುವ ಸಂದರ್ಭದಲ್ಲಿ ತಾನು ಕೊಯ್ದರೆ ತಪ್ಪೇನಿಲ್ಲ ಎನ್ನುವುದು ಚೌಕಟಿ ಹೆಗಡೆಯ ವಾದ. ಈ ಕುರಿತು ಚಿಂತನೆ ನಡೆಸಿದಾಗ ಆತ ಹೇಳುವುದರಲ್ಲಿ ತಪ್ಪಿಲ್ಲ ಎಂದೂ ಅನ್ನಿಸುತ್ತದೆ. ಕೊಯ್ದಿದ್ದನ್ನು ಪಟ್ಟಾಗಿ ಒಣಗಿಸಿ, ಸಂಸ್ಕರಿಸಿ ನಾಲ್ಕು ಕಾಸು ಮಾಡಿಕೊಂಡು, ಆ ಕಾಸಿನಿಂದ ಗಣೇಶ ಬೀಡಿಯನ್ನೋ, ಮಂಗಳೂರು ಬೀಡಿಯನ್ನೋ ತೆಗೆದುಕೊಂಡು ಇಳಿಸಂಜೆಯ ಹೊತ್ತಿಗೆ ಧಮ್ಮು ಎಳೆದರೆ ಆತನಿಗೆ ಸಿಗುವ ಸುಖವೇ ಬೇರೆ ಬಿಡಿ.
 ಹಾ, ಇಷ್ಟು ಹೊತ್ತೂ ಕೂಡ ನೆನಪಾಗಿರಲಿಲ್ಲ ನೋಡಿ. ಆತನಲ್ಲಿನ ಇನ್ನೊಂದು ಪ್ರಮುಖ ಗುಣ ಎಂದರೆ ಓಸಿ. ದೋ ನಂಬರಿನ ಮಟ್ಕಾದಲ್ಲಿ ಚೌಕಟಿ ಹೆಗಡೆಯದ್ದು ಎತ್ತಿದ ಕೈ. ಪ್ರತಿದಿನವೂ ಚೌಕಟಿ ಹೆಗಡೆ ಕನಿಷ್ಟ ನೂರು ರೂಪಾಯಿ ಮೊತ್ತದ ಓಸಿಯನ್ನು ಆಡದೇ ಇದ್ದರೆ ಆತನಿಗೆ ನಿದ್ದೆ ಬರುವುದೂ ಇಲ್ಲವೇನೋ. ಪ್ರತಿದಿನ ಅವರಿವರ ಬಳಿ ನಿನಗೆ ಆ ಕನಸು ಬಿತ್ತಾ, ಈ ಕನಸು ಬಿತ್ತಾ ಎಂದು ಕೇಳುವ ಈತ ಕನಸಿನ ಆಧಾರದ ಮೇಲೆ ನಂಬರನ್ನು ಹುಡುಕಿ ತೆಗೆದು, ಆ ನಂಬರಿಗೆ ಹಣ ಹೂಡುವ ಕಾರ್ಯವನ್ನೂ ಮಾಡುತ್ತಾನೆ. ಇಂತಹ ವ್ಯಕ್ತಿಯ ಪಾಲಿಗೆ ನಾನು ಒಂದೆರಡು ಸಾರಿ ಅದೃಷ್ಟ ದೇವರಾಗಿದ್ದೆ. ನನ್ನ ಬಳಿಯೂ ಒಂದೆರಡು ಸಾರಿ ಕನಸಿನ ಬಗ್ಗೆ ಕೇಳಿದ್ದ ಈತ. ನಾನು ನನಗೆ ರಾತ್ರಿಯ ವೇಳೆ ಬೀಳುತ್ತಿದ್ದ ಕನಸಿನ ಬಗ್ಗೆ ಹೇಳುತ್ತಿದ್ದೆ. ಇದರ ಆಧಾರದ ಮೇಲೆ ಯಾವುದೋ ರೇಖಾಗಣಿತವನ್ನು ಲೆಕ್ಕ ಹಾಕಿ ನಂಬರು ಹುಡುಕಿ ಅದಕ್ಕೆ ದುಡ್ಡು ಹೂಡಿದ್ದ. ವಿಚಿತ್ರವೆಂದರೆ ಒಂದೆರಡು ಸಾರಿ ದುಡ್ಡು ಬಂದೇ ಬಿಟ್ಟಿತ್ತು. ಆ ನಂತರದಲ್ಲಿ ನನ್ನ ಬೆನ್ನು ಬಿದ್ದು, ಕನಸು ಬಿದ್ದರೆ ಹೇಳು ಮಾರಾಯ ಎಂದು ತಿಂಗಳು ಗಟ್ಟಲೆ ಕಾಡಿದ್ದು ನನಗೆ ಸದಾ ನೆನಪಿನಲ್ಲಿ ಇತ್ತು. ಆ ನಂತರ ಎಷ್ಟೋ ದಿನಗಳ ವರೆಗೆ ನಾನು ಚೌಕಟಿ ಹೆಗಡೆಯ ನಜರಿಗೆ ಬೀಳದಂತೆ ತಪ್ಪಿಸಿಕೊಂಡು ಓಡಾಡಿದ್ದೆ..!
 ಇಂತಹ ಚೌಕಟಿ ಹೆಗಡೆ ಇತ್ತೀಚಿನ ದಿನಗಳಲ್ಲಿ ಭಾರೀ ಸುಭಗನಾಗಿದ್ದಾನೆ ಎನ್ನುವ ಮಾತುಗಳು ನನ್ನನ್ನೂ ಸೇರಿದಂತೆ ಹಲವರಲ್ಲಿ ಅಚ್ಚರಿಯನ್ನು ಹುಟ್ಟು ಹಾಕಿದೆ. ಚೌಕಟಿ ಹೆಗಡೆ ಓಸಿ ಬಿಟ್ಟನಂತೆ ಎನ್ನುವುದು ನಮಗೆ ಮೊಟ್ಟಮೊದಲು ಕೇಳಿ ಬಂದ ಸುದ್ದಿ. ಅಬ್ಬ ಏನೋ ಆಗಿದೆ ಚೌಕಟಿ ಹೆಗಡೆಗೆ ಅಂದುಕೊಳ್ಳುತ್ತಿದ್ದಾಗಲೇ, ಚೌಕಟಿ ಹೆಗಡೆ ಮೋಟು ಬೀಡಿಯ ಸಹವಾಸವನ್ನೂ ಬಿಟ್ಟನಂತೆ ಎನ್ನುವ ಮಾತು ಕಿವಿಗೆ ಬಿದ್ದಾಗ ಮಾತ್ರ ನಮಗೆ ಶಾಕ್ ಆಗಿದ್ದು ಸತ್ಯ. ಇದೇನಿದು ಚೌಕಟಿ ಹೆಗಡೆ ಇದ್ದಕ್ಕಿದ್ದಂತೆ ಹೀಗಾದನಲ್ಲ ಎಂದುಕೊಳ್ಳುತ್ತಿರುವ ವೇಳೆಗೆ ಆತ ತಾನು ಕಳೆದುಕೊಂಡಿದ್ದನ್ನೆಲ್ಲ ಮತ್ತೆ ಸಂಪಾದಿಸಬೇಕು ಎಂಬ ಹುಕಿಗೆ ಬಿದ್ದಿದ್ದಾನಂತೆ ಎನ್ನುವ ಮಾತು ಕೇಳಿ ಬಂದಾಗ ಮೊದಲ ಬಾರಿಗೆ ನನಗೆ ಆತನ ಮೇಲೆ ಅಭಿಮಾನ ಉಕ್ಕಿತು. ಜಮೀನು, ರಾಸುಗಳನ್ನು ಮತ್ತೆ ಪಡೆಯಬೇಕು. ಅದೆಲ್ಲವನ್ನೂ ನ್ಯಾಯಯುತ ಮಾರ್ಗದಲ್ಲಿಯೇ ಸಂಪಾದಿಸಬೇಕು ಎನ್ನುವ ಆಶಯ ಇಟ್ಟುಕೊಂಡ ಚೌಕಟಿ ಹೆಗಡೆ ತೋಟಗಳಲ್ಲಿ ಮಾಡುತ್ತಿದ್ದ ಸಣ್ಣಪುಟ್ಟ ಕರಾಮತ್ತುಗಳನ್ನೂ ನಿಲ್ಲಿಸಿದ ಮಾಹಿತಿ ಸಿಕ್ಕವು. ಹಾಗಾದರೆ ಆತ ಮುಂದೇನು ಮಾಡಬಹುದು ಎಂದು ಆಲೋಚಿಸುತ್ತಿದ್ದ ಸಂದರ್ಭದಲ್ಲಿಯೇ ಆತ ಕೊಳಿ ಅಡಿಕೆ ವ್ಯಾಪಾರ ಸೇರಿದಂತೆ ಹಲವು ಸಣ್ಣ-ಪುಟ್ಟ ವ್ಯಾಪಾರ ನಡೆಸಲು ಆರಂಭಿಸಿದ ವಿಷಯ ತಿಳಿದು ಬೆರಗು ಮೂಡಿತು. ಇಷ್ಟೆಲ್ಲದದ ನಡುವೆ ನನಗೆ ಕಾಡಿದ್ದು ಹಾಗೂ ಕಾಡುತ್ತಿರುವುದೇನೆಂದರೆ ಚೌಕಟಿ ಹೆಗಡೆ ಇದ್ದಕ್ಕಿದ್ದಂತೆ ಸುಭಗನಾಗಿದ್ದು ಹೇಗೆ ಎನ್ನುವುದು..! ತಾನು ಕಳೆದುಕೊಂಡಿದ್ದನ್ನು ಮತ್ತೆ ಸಂಪಾದಿಸಲು ಮುಂದಾಗಿದ್ದೇಕೆ ಎನ್ನುವುದು ಖಂಡಿತವಾಗಿಯೂ ನನಗೆ ಗೊತ್ತಿಲ್ಲ ನೋಡಿ. ಅದನ್ನು ಹುಡುಕುವ ಯತ್ನ ಮಾಡುತ್ತಿದ್ದೇನೆ. ಗೊತ್ತಾದರೆ ಖಂಡಿತವಾಗಿಯೂ ತಿಳಿಸುತ್ತೇನೆ ಹಾ..!

Wednesday, October 25, 2017

ಪೇಪರ್ ಹಾಕುವ ಹುಡುಗನೂ ಕ್ಯಾಶ್ ಲೆಸ್

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ನಗದು ರಹಿತ ವ್ಯವಹಾರಕ್ಕೆ ನಗರದಲ್ಲಿ ಪೇಪರ್ ಹಾಕುವ ಯುವಕನೊಬ್ಬ ತನ್ನದೆ ಆದ ಕೊಡುಗೆ ನೀಡುತ್ತಿದ್ದು, ಎಲ್ಲರಿಗೂ ಮಾದರಿಯಾಗಿದ್ದಾನೆ.
ಶಿರಸಿಯ ಗಣೇಶ ನಗರದ ಮದನ ಬಿ. ಗೌಡ ಎನ್ನುವ ಯುವಕ ನಗದು ರಹಿತ ವ್ಯವಹಾರವನ್ನು ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸುತ್ತಿದ್ದಾನೆ.  ಕಳೆದ ಹತ್ತು ವರ್ಷಗಳಿಂದ ಈತ ಪೇಪರ್ ಹಾಕುತ್ತಿದ್ದು, ನಗರದ ಸುಮಾರು 300 ಮನೆಗಳಿಗೆ ಪ್ರತಿನಿತ್ಯ ದಿನಪತ್ರಿಕೆ ಹಂಚುತ್ತಾನೆ. ದುಡಿದು ತಿನ್ನುವ ಈತನಿಗೆ ನಗದು ರಹಿತ ವ್ಯವಹಾರ ಅನಿವಾರ್ಯವಲ್ಲ. ದೇಶ ಬದಲಾಗುವ ಸಂದರ್ಭದಲ್ಲಿ ನಾವೂ ಸಹ ಬದಲಾಗಬೇಕು ಎನ್ನುವ ಮಹತ್ವಾಕಾಂಕ್ಷೆಯಿಂದ ಮದನ್ ಈ ಕೆಲಸಕ್ಕೆ ಮುಂದಾಗಿದ್ದಾನೆ.
ಪ್ರತಿ ತಿಂಗಳು ದಿಪತ್ರಿಕೆಯ ಬಿಲ್ ಕಲೆಕ್ಟ ಮಾಡುವಾಗ ತನ್ನ ಅಕೌಂಟ್ ನಂಬರ್ ನೀಡಿ ಹಣವನ್ನು ಹಾಕಲು ಹೇಳುತ್ತಾನೆ. ಅದರ ಜೊತೆಗೆ ಬಿಲ್ ಹಿಂಬದಿಯಲ್ಲಿ ಪೆಟಿಎಮ್ ಹಾಗೂ ಭೀಮ್ ಆಪ್ ಬಳಸಿಯೂ ಸಹ ಹಣ ಸಂದಾಯ ಮಾಡುವ ವ್ಯವಸ್ಥೆಯನ್ನು ಕಲ್ಪಿಸಿದ್ದಾನೆ. ಈಗಾಗಲೇ ಸುಮಾರು 30 ಕ್ಕೂ ಅಧಿಕ ಜನರು ಇತನ ಜತೆ ನಗದು ರಹಿತ ವ್ಯವಹಾರಕ್ಕೆ ಕೈಜೋಡಿಸಿದ್ದಾರೆ.
ದೇಶದಲ್ಲಿ ಬದಲಾಣೆಯ ಹಾದಿಯಲ್ಲಿದೆ. ನಾವು ಸಹ ಬದಲಾಗಬೇಕಿದೆ. ಕಾಲಕ್ಕೆ ತಕ್ಕಂತೆ ನಾವು ಹೊಂದಿಕೊಂಡು ಹೋಗಬೇಕು. ನಾವು ಮೊದಲು ಯೋಜನೆಯನ್ನು ರೂಢಿಸಿಕೊಂಡರೆ ಇನ್ನೊಬ್ಬರಿಗೆ ತಿಳಿ ಹೇಳಲು ಸಾಧ್ಯ. ಆದ್ದರಿಂದ ನೋಟ್ ಬ್ಯಾನ್ ನಂತರದಿಂದ ನಾನು ನಗದು ರಹಿತ ವ್ಯವಹಾರ ಮಾಡುತ್ತಿದ್ದೇನೆ" ಎಂದು ಮದನ ಗೌಡ ಹೇಳುತ್ತಾರೆ.
 ಕೆಲವೊಂದು ಮಂದಿ ಕಡಿಮೆ ಹಣವನ್ನು ನಗದು ರಹಿತವಾಗಿ ನೀಡುವುದಕ್ಕೆ ಇಷ್ಟ ಪಡುವುದಿಲ್ಲ. ಈ ಪ್ರಯತ್ನಕ್ಕೆ ಜನರಿಂದ ಮಿಶ್ರ ಪ್ರತಿಕ್ರಿಯೆ ದೊರಕುತ್ತಿದೆ ಎಂದು ತಿಳಿಸಿದ್ದಾರೆ.


-----------
ಪೇಟ್ರೋಲ್ ಬಂಕ್, ಹೋಟೇಲ್ ಹೀಗೆ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡಗಳು ನಡೆಯುವ ಎಲ್ಲಾ ಕಡೆಯುವಲ್ಲಿಯೂ ನಾನು ನಗದು ರಹಿತವಾಗಿಯೇ ವ್ಯವಹಾರ ನಡೆಸುತ್ತೇನೆ. 
ಮದನ ಗೌಡ, 
ಪೇಪರ್ ಹಾಕುವ ಯುವಕ 

Thursday, October 19, 2017

ಮುಕ್ತಿ ವಾಹಿನಿ

ನಗುವವರೆಂದೂ ನನ್ನ ಜೊತೆ
ಪಯಣಿಸುವುದಿಲ್ಲ
ಕೇಕೆ ಕಲರವಗಳ ಸದ್ದು
ನನ್ನೊಳಿಲ್ಲ|

ಕೆಲವೊಮ್ಮೆ ಒಬ್ಬಂಟಿ
ಆಗಾಗ ಜಂಟಿ
ಬಂಧುಬಾಂಧವರು ಸುತ್ತ
ಬತ್ತದಂತ ಅಳುವೇ
ಸುತ್ತಮುತ್ತ |

ಬರುವವರಲ್ಲಿ ಮುಗಿಯದ
ಕಣ್ಣೀರು
ಬಿಕ್ಕುತ್ತ ಸಾಗುವವರೇ ಎಲ್ಲರೂ,
ಕಿವಿ ಗಡಚಿಕ್ಕಿದೆ
ತಮಟೆಯ ಸದ್ದು
ಯಮ ಸನಿಹಕೆ ಬಂದರೂ
ಅವನೆದೆಗೂ ಗುದ್ದು |

ಮನೆಯಿಂದ ಮಸಣ
ನನ್ನ ಏಕೈಕ ಮಾರ್ಗ
ನಡುವೆ ಪ್ರತಿಧ್ವನಿಸುವುದು
ಗೋವಿಂದ...ಗೋವಿಂದಾ..
ರಾಮ ನಾಮ ಸತ್ಯ ಹೇ...|

ನನಗೂ ನಗುವ
ಕೇಳುವ ಆಸೆಯಿದೆ
ಪುಟ್ಟ ಮಗುವ ಅಳುವ
ಹೊಸಹುಟ್ಟಿನ ಕೇಕೆಯ
ಕೇಳುವ ಆಸೆ ಹೆಚ್ಚಿದೆ |

ನಾನು ಮುಕ್ತಿ ವಾಹಿನಿ
ನನಗಿದೆ ಕರ್ತವ್ಯ
ಸತ್ತವರ ಹೊತ್ತೊಯ್ಯುವ
ಕೈಂಕರ್ಯ ನನ್ನದು
ಹುಟ್ಟುವವರ ಕರೆದೊಯ್ಯುವ
ಕನಸು ಕಾಣುವ ಅರ್ಹತೆಯೆನಗಿಲ್ಲ |

ಆದರೂ
ಕನಸು ಕಾಣುತ್ತೇನೆ ನಾನು
ಸತ್ತವರ ಹೊತ್ತೊಯ್ಯುವ
ಕಾರ್ಯದ ನಡುವೆಯೂ
ಹೊಸ ಹುಟ್ಟಿನ,
ಮಗುವಿನ ಅಳುವಿಗಾಗಿ |

ಅತ್ತಿತ್ತ ತುಯ್ದಾಡಿ
ತೊಟ್ಟಿಲಾಗುತ್ತೇನೆ ||


===================

(ಈ ಕವಿತೆಯನ್ನು ಬರೆದಿರುವುದು ಅಕ್ಟೋಬರ್ ೧೮, ೨೦೧೭ರಂದು ದಂಟಕಲ್ಲಿನಲ್ಲಿ)

Wednesday, September 27, 2017

ಮೋಹಿನಿಯಾಗಿ ಬರುತ್ತಿದ್ದಾಳೆ ಸಿದ್ದಾಪುರದ ಭಾರತಿ

ಈಕೆ ನಮ್ಮದೇ ಸಿದ್ದಾಪುರದ ಹವ್ಯಕರ ಹುಡುಗಿ. ಅಭಿನಯ, ನೃತ್ಯ, ಯೋಗಾಭ್ಯಾಸದಲ್ಲಿ ಎತ್ತಿದ ಕೈ. ಕಾಲೇಜು ದಿನಗಳಲ್ಲಿಯೇ ಅತ್ಯುತ್ತಮ ನಟಿ ಎಂದು ರಾಜ್ಯ ಮಟ್ಟದಲ್ಲಿ ಪ್ರಶಸ್ತಿ ಗಳಿಸಿಕೊಂಡಾಕೆ. ಚಿಕ್ಕ ವಯಸ್ಸಿನಲ್ಲಿ ದೊಡ್ಡ ಕನಸು ಹಾಗೂ ಆದರ್ಶಗಳನ್ನು ಮನಸ್ಸಿನಲ್ಲಿ ತುಂಬಿಕೊಂಡಾಕೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಯಾರೇ ನೀ ಮೋಹಿನಿ ಧಾರವಾಹಿಯಲ್ಲಿ ಈಕೆಯದು ಮೋಹಿನಿಯ ಪಾತ್ರ. ಮೊದಲ ಧಾರಾವಾಹಿಯೇಲ್ಲಿಯೇ ಸಾಕಷ್ಟು ಸ್ಟ್ರಾಂಗ್ ಹಾಗೂ ಕಠಿಣ ಪಾತ್ರ ನಿರ್ವಹಣೆಯ ಹೊಣೆ ಈಕೆಯ ಹೆಗಲ ಮೇಲಿದೆ. ಧಾರಾವಾಹಿ ಲೋಕಕ್ಕೆ ಕಾಲಿಟ್ಟ ನಮ್ಮೂರ ಹುಡುಗಿಯನ್ನು ಬೆಂಬಲಿಸೋಣ ಬನ್ನಿ..

ಕಣ್ಣಿನಲ್ಲಿ ಅಗಾಧವಾದ ಸಾಧನೆಯ ಕನಸು. ಮನಸ್ಸಿನಲ್ಲಿ ಕಾರ್ಮಿಕರಿಗೆ, ಸಾಮಾಜಿಕವಾಗಿ ಸೌಲಭ್ಯಗಳನ್ನು ಒದಗಿಸುವ ತುಡಿತ. ಕರಗತವಾಗಿರುವ ಅಭಿನಯ ಕಲೆ. ಅಗಾಧವಾದ ಪ್ರತಿಭೆ. ಇವೆಲ್ಲವನ್ನೂ ಇಟ್ಟುಕೊಂಡು ಧಾರವಾಹಿ ಲೋಕಕ್ಕೆ ಕಾಲಿಟ್ಟಿದ್ದಾಳೆ ಭಾರತಿ ಹೆಗಡೆ. ಜೀ ಕನ್ನಡ ವಾಹಿನಿಯಲ್ಲಿ ಆರಂಭಗೊಂಡಿರುವ ಯಾರೇ ನೀ ಮೋಹಿನಿ ಧಾರವಾಹಿಯಲ್ಲಿ ಮೋಹಿನಿ ಪಾತ್ರವನ್ನು ಹಾಕಿರುವ ಭಾರತಿ ಹೆಗಡೆ ಈಗಾಗಲೇ ಬಿತ್ತರವಾಗಿರುವ ಧಾರವಾಹಿ ಟ್ರೇಲರ್ಗಳಲ್ಲಿ ಸಾಕಷ್ಟು ಹೆಸರು ಗಳಿಸಿದ್ದಾಳೆ. ಕೆಲವೇ ದಿನಗಳಲ್ಲಿ ತೆರೆಯ ಮೇಲೆ ಕಾಣಿಸಿಕೊಳ್ಳಲಿರುವ ಭಾರತಿ ಅವರ ಕನಸ್ಸು ದೊಡ್ಡದಿದೆ. ಹೊಸ ಆಕಾಂಕ್ಷೆಗಳೊಂದಿಗೆ ಧಾರವಾಹಿ ಲೋಕಕ್ಕೆ ಕಾಲಿಟ್ಟಿರರುವ ಭಾರತಿ ಹೆಗಡೆಯವರುಮಾತಿಗೆ ಸಿಕ್ಕಾಗ ತಮ್ಮ ಕುರಿತು, ಆಸೆ, ಆಕಾಂಕ್ಷೆಗಳ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ.

* ನಿಮ್ಮ ಊರು, ನಿಮ್ಮ ಬಗ್ಗೆ, ಕುಟುಂಬದವರ ಬಗ್ಗೆ ಹೇಳಿ
ನನ್ನ ಊರು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ. ನಮ್ಮದು ಕೃಷಿ ಕುಟುಂಬ. ಅಪ್ಪ ಕೃಷಿಕರು. ತಾಯಿ ಗೃಹಿಣಿ. ಅಣ್ಣ ಕೂಡ ಕೃಷಿಕರು. ಪ್ರಾಥಮಿಕ ಶಾಲೆಯ ಅಭ್ಯಾಸವನ್ನು ನಾನು ಊರಿನಲ್ಲಿಯೇ ಮಾಡಿದ್ದೇನೆ. ಉನ್ನತ ಶಿಕ್ಷಣ ಬೆಂಗಳೂರಿನಲ್ಲಿ ಕೈಗೊಂಡಿದ್ದೇನೆ. ಬಿಎ ಪದವಿಯನ್ನು ಬೆಂಗಳೂರಿನ ಅಮ್ಮಣ್ಣಿ ಕಾಲೇಜಿನಲ್ಲಿ ಮಾಡಿರುವ ನಾನು, ಎಂಎಸ್ಡಬ್ಲೂವನ್ನು ಕ್ರೈಸ್ಟ್ ಯುನಿವರ್ಸಿಟಿಯಲ್ಲಿ ಕೈಗೊಂಡಿದ್ದೇನೆ. ಇನ್ನೂ ಹೆಚ್ಚಿನ ಓದಿನ ಕನಸು ಇದೆ. ಅಭಿನಯದ ಜೊತೆಗೆ ಓದನ್ನು ಮುಂದುವರಿಸುತ್ತಿದ್ದೇನೆ.

* ನಿಮ್ಮ ಅಭಿನಯ, ಆಸಕ್ತಿಗಳ ಕುರಿತು ಹೇಳಿ..
ನನಗೆ ಚಿಕ್ಕಂದಿನಿಂದ ನೃತ್ಯ, ನಟನೆ, ಸಂಗೀತದಲ್ಲಿ ಆಸಕ್ತಿ. ನಾನು ಆಕ್ಟಿಂಗ್ಗೆ ವಿಶೇಷ ತರಬೇತಿಯನ್ನೇನೂ ಪಡೆದುಕೊಂಡಿಲ್ಲ. ಚಿಕ್ಕಂದಿನಲ್ಲಿ ಪ್ರತಿಭಾ ಕಾರಂಜಿಯಲ್ಲಿ ಪಾಲ್ಗೊಳ್ಳುತ್ತಿದ್ದೆ. ಆಗೆಲ್ಲ ಬಹುಮಾನಗಳು ಬಂದಿವೆ. ನಂತರ ಅದನ್ನೇ ಸ್ವಲ್ಪ ಮಾರ್ಪಡಿಸಿಕೊಂಡೆ. ನಾನು ಭರತನಾಟ್ಯವನ್ನು ಕಲಿತಿದ್ದೇನೆ. ಕಾಲೇಜಿನಲ್ಲಿ ಓದುತ್ತಿದ್ದ ಸಂದರ್ಭದಲ್ಲಿ ನಾಟಕ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದೆ. 2009ರಿಂದ 2012ರ ವರೆಗಿನ ಕಾಲೇಜು ಅಧ್ಯಯನದ ಸಂದರ್ಭದಲ್ಲಿ ಸತತ ಮೂರು ವರ್ಷಗಳ ಕಾಲ ಅತ್ಯುತ್ತಮ ನಟಿ ಎಂಬ ರಾಜ್ಯ ಮಟ್ಟದಲ್ಲಿ ಪ್ರಶಸ್ತಿ ಸಿಕ್ಕಿದೆ. ಇದರ ಜೊತೆಗೆ ಸಂಗೀತ ಕೇಳೋದು ನನ್ನ ಆಸಕ್ತಿಯ ವಿಷಯ. ಯೋಗಾಭ್ಯಾಸ ಮಾಡಿದ್ದೇನೆ. ಯೋಗಾಸನ ನನ್ನ ಆಸಕ್ತಿಯ ವಿಷಯವೂ ಹೌದು.

* ಮನೆಯಲ್ಲಿ ಧಾರಾವಾಹಿ ನಟನೆ ಬಗ್ಗೆ ಬೆಂಬಲ ಇದೆಯಾ?
ಹೌದು. ಅಪ್ಪ, ಅಮ್ಮ ಹಾಗೂ ಅಣ್ಣ ನನ್ನ ನಟನೆ ಹಾಗೂ ಈ ರೀತಿಯ ಸಾಮಾಜಿಕ ಚಟುವಟಿಕೆಗಳಿಗೆ ಸಂಪೂರ್ಣ ಬೆಂಬಲ ನೀಡಿದ್ದಾರೆ. ನೀಡುತ್ತಲೂ ಇದ್ದಾರೆ. ನಾನು ಒಳ್ಳೆಯದನ್ನು ಮಾಡಿದಾಗಲೆಲ್ಲ ನನ್ನ ಬೆನ್ನಿಗೆ ನಿಂತು ಪ್ರೋತ್ಸಾಹಿಸಿದ್ದಾರೆ. ನನ್ನ ಬೆಳವಣಿಗೆಗೆ ಪೂರಕವಾಗಿ ಉತ್ತೇಜನ ನೀಡಿದ್ದಾರೆ.


* ಯಾರೇ ನೀ ಮೋಹಿನಿ, ಇದು ನಿಮ್ಮ ಮೊದಲ ಧಾರವಾಹಿಯಾ? ಈ ಮೊದಲು ಯಾವುದಾದರೂ ಧಾರಾವಾಹಿಯಲ್ಲಿ ನಟನೆ ಮಾಡಿದ್ದೀರಾ?
ಪೂರ್ಣ ಪ್ರಮಾಣದ, ಮುಖ್ಯ ಪಾತ್ರ ಇರುವ ಧಾರವಾಹಿ ಎಂದರೆ ಅದು ಯಾರೇ ನೀ ಮೋಹಿನಿ. ಈ ಧಾರಾವಾಹಿಗೂ ಮೊದಲು ನಾನು ಬಣ್ಣ ಹಚ್ಚಿದ್ದೆ. 4-5 ವರ್ಷಗಳ ಹಿಂದೆ ಜನಶ್ರೀ ಸುದ್ದಿ ವಾಹಿನಿಗಾಗಿ ತಯಾರಿಸಲಾಗಿದ್ದ `ಸಮಾಜ`  ಎಂಬ ಕಿರುಚಿತ್ರ ಸರಣಿಯಲ್ಲಿ ಪಾತ್ರ ಮಾಡಿದ್ದೆ. ನಂತರ ಕಲಸರ್್ ಸೂಪರ್ನಲ್ಲಿ ಬರುತ್ತಿರುವ ಶಾಂತಂ ಪಾಪಂನ ಒಂದು ಎಪಿಸೋಡ್ನಲ್ಲಿ ಸಾಮಾಜಿಕ ಹೋರಾಟಗಾರ್ತಿಯ ಪಾತ್ರ ಮಾಡಿದ್ದೆ. ಇದೀಗ ಯಾರೇ ನೀ ಮೋಹಿನಿ ಧಾರವಾಹಿಯಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದೇನೆ.

* ಯಾರೇ ನೀ ಮೋಹಿನಿ ಪಾತ್ರದ ಹೇಗಿದೆ? ನಿಮ್ಮದು ನೆಗೆಟಿವ್ ಪಾತ್ರವಾ?
ಯಾರೇ ನೀ ಮೋಹಿನಿಯಲ್ಲಿ ನನ್ನದು ವಿಶಿಷ್ಟ ಪಾತ್ರ. ಇದರಲ್ಲಿ ಈಗಾಗಲೇ ಸತ್ತುಹೋಗಿರುವ ಮೋಹಿನಿಯ ಪಾತ್ರವನ್ನು ನಾನು ನಿರ್ವಹಿಸುತ್ತಿದ್ದೇನೆ. ಸ್ವಲ್ಪ ವಿಶಿಷ್ಟ ಹಾಗೂ ವಿಭಿನ್ನವಾದ ಪಾತ್ರ ನನ್ನದು. ಈ ಧಾರಾವಾಹಿಯಲ್ಲಿ ಅತ್ತೆಗೆ ಕಾಟ ಕೊಡುವ ಮೋಹಿನಿಯಾಗಿ ನಾನು ನಟನೆ ಮಾಡಿದ್ದೇನೆ. ಪ್ರೀತಿಸುವ ಗಂಡ, ಸಾಯಿಸುವ ಅತ್ತೆ ಇದು ಮುಖ್ಯ ಹಂದರ. ಜೊತೆಯಲ್ಲಿ ಮುಗ್ಧವಾಗಿರುವ ಗಂಡನ ರಕ್ಷಣೆಯ ಹೊಣೆಯೂ ನನ್ನ ಪಾತ್ರಕ್ಕಿದೆ. ಧಾರಾವಾಹಿಯಲ್ಲಿರುವ ಇನ್ನೊಂದು ಮುಖ್ಯ ಪಾತ್ರವಾದ ಬೆಳ್ಳಿಯನ್ನು ನನ್ನ ಗಂಡನ ಜೊತೆಗೆ ಸೇರಿಸುವ ಬಹುಮುಖ್ಯ ಕಾರ್ಯವೂ ಮೋಹಿನಿಯದ್ದು. ಖಂಡಿತವಾಗಿಯೂ ಇದು ನೆಗೆಟಿವ್ ಪಾತ್ರ ಅಂತ ಹೇಳಲಾರೆ. ಪಾಸಿಟಿವ್ ಹಾಗೂ ನೆಗೆಟಿವ್ ಎರಡೂ ಶೇಡ್ ಇದೆ. ಪ್ರತಿ ಹಂತದಲ್ಲಿಯೂ ಗಂಡ ಹಾಗೂ ಬೆಳ್ಳಿಯನ್ನು ಕಾಪಾಡುವ ಪಾತ್ರವಾಗಿ ಪಾಸಿಟಿವ್ ಆಗಿ ಕಾಣಿಸಿಕೊಳ್ಳುವ ನಾನು ಅತ್ತೆಯ ವಿಷಯದಲ್ಲಿ ನೆಗೆಟಿವ್ ಶೇಡ್ನಲ್ಲಿ ಕಾಣಿಸಿಕೊಳ್ಳುತ್ತೇನೆ.

* ಈ ಧಾರವಾಹಿಗೆ ನೀವು ಆಯ್ಕೆಯಾಗಿದ್ದು ಹೇಗೆ? ಶೃತಿ ನಾಯ್ಡು ಅವರ ಪ್ರೊಡಕ್ಷನ್ ಅಲ್ವಾ..
ಶಾಂತಂಪಾಪಂ ನಲ್ಲಿ ನಟಿಸಿದಾಗ ಕೆಲವರು ನನಗೆ ಧಾರವಾಹಿ ಆಫರ್ ಕೊಟ್ಟಿದ್ದರು. ನಂತರ ಯಾರೇ ನೀ ಮೋಹಿನಿ ಧಾರಾವಾಹಿ ಆಡಿಷನ್ ಬಗ್ಗೆ ಗೊತ್ತಾಯಿತು. ಆಡಿಷನ್ನಲ್ಲಿ ಭಾಗವಹಿಸಿದೆ. 2 ಸಾರಿ ಸ್ಕ್ರೀನ್ ಟೆಸ್ಟ್ ನಡೆಯಿತು. ಅದರಲ್ಲಿಯೂ ಆಯ್ಕೆಯಾದೆ. ಈ ಸಂದರ್ಭದಲ್ಲಿ ಶೃತಿ ನಾಯ್ಡು ಅವರು ಪರಿಚಯವಾದರು. ಮೀಡಿಯಾ ಬಗ್ಗೆ ಒಲವಿತ್ತು. ಮುಖ್ಯ ಪಾತ್ರಗಳನ್ನು ಬಯಸಿದ್ದೆ. ಅದೇ ಸಿಕ್ಕಿತು.

* ಮೊದಲ ಪಾತ್ರದಲ್ಲೇ ಮೋಹಿನಿಯಾಗಿದ್ದೀರಲ್ಲ
ಹಾಗೇನೂ ಇಲ್ಲ. ಪಾತ್ರ ಬಹಳ ಸ್ಟ್ರಾಂಗ್ ಆಗಿದೆ. ಮಾಧುರಿ ದೀಕ್ಷಿತ್ ಅಂತಹ ಮಹಾನ್ ನಟಿಯರೇ ಮೋಹಿನಿಯ ಪಾತ್ರ ಮಾಡಿದ್ದಾರೆ. ನನಗೆ ಬಹಳ ಸವಾಲಿನ ಪಾತ್ರ. ಮೋಹಿನಿಯಾಗಿದ್ದಕ್ಕೆ ಖಂಡಿತವಾಗಿಯೂ ಬೆಜಾರಿಲ್ಲ. ಖುಷಿಯಾಗುತ್ತಿದೆ. ಎಲ್ಲರೂ ಈಗೀಗ ನನ್ನನ್ನು ಮೋಹಿನಿ ಅಂತಲೇ ಕರೆಯುತ್ತಿದ್ದಾರೆ. ಬಹಳ ಸಂತೋಷವಾಗ್ತಿದೆ. ಈಗ ಕೆಲವು ದಿನಗಳ ಕಾಲ ನನ್ನ ಪಾತ್ರ ಮೋಹನಿಯಾಗಿ ಬರುತ್ತದೆ. ಕೆಲವು ದಿನಗಳ ನಂತರ ಫ್ಲಾಷ್ಬ್ಯಾಕ್ ಕಥೆ ಆರಂಭವಾಗುತ್ತೆ. ಅಲ್ಲಿ ನನ್ನ ನಿಜವಾದ ಪಾತ್ರ ಆರಂಭ ಅನ್ನಬಹುದು

* ಧಾರಾವಾಹಿ ತಂಡ ಹೇಗಿದೆ?
ಧಾಆರಾವಾಹಿ ಟೀಂ ಸಂಪೂರ್ಣ ಬೆಂಬಲ ನೀಡುತ್ತಿದೆ. ಎಪಿಸೋಡ್ ನಿರ್ದೇಶಕರಾದ ಸಂತೋಷ್ ಗೌಡರ್ ಅವರು ಎಲ್ಲ ಸಂದರ್ಭಗಳಲ್ಲಿಯೂ ಬೆಂಬಲ ನೀಡುತ್ತಾರೆ. ಸಲಹೆ, ಸಹಕಾರ ನೀಡುತ್ತಾರೆ. ನನಗೆ ನಟನೆ ಕಷ್ಟವೇನಲ್ಲ. ಮೊದಲ ಸಾರಿ ಕ್ಯಾಮರಾಆ ಎದುರಿಸಿದಾಗ ಭಯವೇನೂ ಆಗಲಿಲ್ಲ. ಆಂಕರಿಂಗ್ ಮಾಅಡುತ್ತ ಬಂದವಳಾದ್ದರಿಂದ ಸ್ಟೇಜ್ ಫಿಯರ್ ಕೂಡ ಇರಲಿಲ್ಲ. ಹೀಗಾಗಿ ಮೊದಲ ಸಾರಿ ಕ್ಯಾಮರಾ ಎದುರಿಸಿದ್ದಕ್ಕೆ ತೊಂದರೆ ಏನೂ ಆಗಲಿಲ್ಲ.


* ನಿಮ್ಮ ನಟನೆ ಬಗ್ಗೆ ನಿಮ್ಮ ಬಳಗ, ಊರಿನವರು ಏನಂತಾರೆ? ರೆಸ್ಪಾನ್ಸ್ ಹೇಗಿದೆ?
ನಾನು ಊರಿನಿಂದ ಬಂದು 8 ವರ್ಷಗಳೆ ಆದವು. ಯಾರೇ ನೀ ಮೋಹಿನಿ ಧಾರವಾಹಿ ಶುರುವಾದ ನಂತರ ಊರಿಗೆ ಹೋಗಿಲ್ಲ. ಆದರೆ ಊರಿನಿಂದ ಪೋನ್ಗಳು ಬರುತ್ತಿರುತ್ತವೆ. ಪಾಸಿಟಿವ್ ರೆಸ್ಪಾನ್ಸ್ ಇದೆ. ಫೇಸ್ ಬುಕ್ಕಲ್ಲಿ ಕೂಡ ಒಳ್ಳೆಯ ರೆಸ್ಪಾನ್ಸ್ ಇದೆ. ನನಗೆ ಪ್ರೆಂಡ್ಸ್ ಕಡಿಮೆ. ಕಡಿಮೆ ಅನ್ನುವುದಕ್ಕಿಂತಲೂ ಹೆಚ್ಚಾಗಿ, ನಾನು ಸೆಲೆಕ್ಟಿವ್. ಬಳಗದವರೆಲ್ಲ ಒಳ್ಳೆಯ ಅಭಿಪ್ರಾಯಗಳನ್ನೇ ಹೇಳುತ್ತಿದ್ದಾರೆ.


* ಸಾಮಾಜಿಕವಾಗಿ ಮುಂದುವರಿಯುವ ಇಚ್ಛೆ ವ್ಯಕ್ತಪಡಿಸಿದ್ದೀರಿ. ಅದರ ಬಗ್ಗೆ ಹೇಳಿ
ಧಾರಾವಾಹಿ ಲೋಕಕ್ಕೆ ಬರುವ ಮೊದಲು ನಾನು ಲೇಬರ್ ಡಿಪಾರ್ಟ್ಮೆಂಟಿನಲ್ಲಿ ನಾನು ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದೆ. 2014-15ರಲ್ಲಿ ಈ ಕೆಲಸ ಮಾಡುತ್ತಿದ್ದ ನಾನು ನಂತರದಲ್ಲಿ ಅದನ್ನು ಬಿಟ್ಟಿದ್ದೇನೆ. ಎನ್ಜಿಓಗಳಲ್ಲಿ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದು ನನಗೆ ಮೊದಲಿನಿಂದಲೂ ಆಸಕ್ತಿ. ನನ್ನದೇ ಆದ ಎನ್ಜಿಓ ಆರಂಬಿಸುವ ಆಸೆಯೂ ಇದೆ. ಸಾಮಾಜಿಕವಾಗಿ ಜನಸಾಮಾನ್ಯರಿಗೆ ಸಹಾಯ ಮಾಡುವ ಗುರಿ ಇದೆ. ಇದೀಗ ನಾನು ಚಂದ್ರಾ ಲೇ ಔಟ್ನಲ್ಲಿ ವಾರದಲ್ಲಿ ಐದು ದಿನಗಳ ಕಾಲ ಯೋಗಾಸನ ಕ್ಲಾಸ್ ನಡೆಸುತ್ತಿದ್ದೇನೆ. ಜೊತೆಯಲ್ಲಿ ಪ್ರಚೋದಯ ನಾಟ್ಯಾಲಯ ಎನ್ನುವ ಭರತನಾಟ್ಯ ಶಾಲೆಯನ್ನೂ ಕೂಡ ತೆರೆದಿದ್ದೇನೆ. ಆಸಕ್ತರಿಗೆ ನೃತ್ಯ ಹೇಳಿಕೊಡುತ್ತಿದ್ದೇನೆ.

* ಬಹಳಷ್ಟು ಆಫರ್ ಬಂದಿರಬೇಕಲ್ಲ? ಸಿನೆಮಾ ಆಫರ್ಗಳಿಗೆ ಒಪ್ಕೋತೀರಾ?
ಹೌದು ಬಹಳಷ್ಟು ಆಫರ್ ಬಂದಿದೆ. ಎಲ್ಲ ಆಫರ್ಗಳೂ ಸಿನೆಮಾಗಳಿಗೇ ಬಂದಿದೆ. ಒಳ್ಳೆಯ ಪಾತ್ರಗಳು ಸಿಕ್ಕರೆ ಖಂಡಿತವಾಗಿಯೂ ನಾನು ನಟಿಸುತ್ತೇನೆ. ಸುದೀಪ್, ದರ್ಶನ್, ಪುನೀತ್ ಸರ್ ಅವರ ಜೊತೆಗೆ ನಟಿಸಲು ಆಸೆಯಿದೆ. ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ನನಗೆ ಆಸಕ್ತಿ ಇದೆ. ಈ ಕಾರಣದಿಂದ, ಸಿನೆಮಾಗಳಲ್ಲಿ ಆಫರ್ ಬಂದರೆ ಮಾಡಲೋ, ಬೇಡವೋ ಅನ್ನುವ ಗೊಂದಲವೂ ಕಾಡುತ್ತಿದೆ. ಆದರೆ ಪಾತ್ರ ಚನ್ನಾಗಿದ್ದರೆ ಖಂಡಿತವಾಗಿಯೂ ನಟಿಸುತ್ತೇನೆ. ಮಾಡೆಲಿಂಗ್ ಆಫರ್ ಕೂಡ ಬರ್ತಿದೆ. ಆದರೆ ಮೊದಲೇ ಹೇಳಿದಂತೆ ನಾನು ಸೆಲೆಕ್ಟಿವ್. ಕಥೆ ಚನ್ನಾಗಿರಬೇಕು. ಪಾತ್ರ ಕೂಡ.