Thursday, May 26, 2016

ಶತಮಾನದಲ್ಲಿ ಇದೇ ಮೊದಲ ಬಾರಿ ಹರಿವು ನಿಲ್ಲಿಸಿದ ಅಘನಾಶಿನಿ/ ಅಳಿವಿನ ಅಂಚಿನಲ್ಲಿವೆ ನೀರುನಾಯಿಗಳು

ಬಿಸಿಲ ಬೇಗೆಗೆ ಬಸವಳಿದ ಮಲೆನಾಡು

ಮಲೆನಾಡಿನಲ್ಲಿ ಬರದ ಬೇಗೆಗೆ ಜಲಮೂಲಗಳು ಬತ್ತಲು ಆರಂಭಿಸಿದೆ. ಮಲೆನಾಡಿನ ನದಿಗಳು, ಹಳ್ಳಗಳು ಬತ್ತಿವೆ. ಶತಮಾನದ ಅವಧಿಯಲ್ಲಿ ಇದೇ ಮೊದಲ ಬಾರಿಗೆ ಅಘನಾಶಿನಿ ನದಿ ಸಂಪೂರ್ಣವಾಗಿ ಬತ್ತಿ ಹೋಗಿದ್ದು, ಹರಿವು ನಿಲ್ಲಿಸಿದೆ.

 ಅಘನಾಶಿನಿ ನದಿ ಮುಖ್ಯವಾಗಿ ಶಿರಸಿಯ ಶಂಕರಹೊಂಡ ಹಾಗೂ ಶಿರಸಿ ತಾಲೂಕಿನ ಶ್ರೀಕ್ಷೇತ್ರ ಮಂಜುಗುಣಿಯಲ್ಲಿ ಹುಟ್ಟುತ್ತದೆ. ನಂತರ ಈ ಎರಡೂ ಕವಲುಗಳು ಸಿದ್ದಾಪುರ ತಾಲೂಕಿನ ಮಾನಿಹೊಳೆ ಎಂಬಲ್ಲಿ ಸಂಗಮವಾಗಿ ಉಂಚಳ್ಳಿಯಲ್ಲಿ ಜಲಪಾತದ ಮೂಲಕ ಧುಮ್ಮಿಕ್ಕಿ ಕರಾವಳಿ ಪ್ರದೇಶವನ್ನು ಸೇರುತ್ತದೆ. ನಂತರ ಕುಮಟಾ ತಾಲೂಕಿನಲ್ಲಿ ಹರಿದು ಹೋಗುವ ನದಿ ಅಘನಾಶಿನಿ ಎಂಬಲ್ಲಿ ಅರಬ್ಬಿ ಸಮುದ್ರವನ್ನು ಸೇರುತ್ತದೆ. ಹೀಗೆ ಸಮುದ್ರವನ್ನು ಸೇರುವುದಕ್ಕೂ ಮೊದಲು 98 ಕಿಲೋಮೀಟರ್ ದೂರ ಹರಿಯುತ್ತದೆ. ಈ ಅವಧಿಯಲ್ಲಿ ಸಹಸ್ರಾರು ಕುಟುಂಬಗಳು, ಸಹಸ್ರಾರು ಎಕರೆ ಪ್ರದೇಶಗಳು ಅಘನಾಶಿನಿ ನದಿಯನ್ನೇ ಅವಲಂಭಿಸಿವೆ.
 ಅಘನಾಶಿನಿ ನದಿ ಈ ವರ್ಷ ಮೊಟ್ಟ ಮೊದಲ ಬಾರಿಗೆ ಸಂಪೂರ್ಣವಾಗಿ ಬತ್ತಿ ಹೋಗಿದೆ. ಶತಮಾನಗಳ ಅವಧಿಯಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ಈ ನದಿ ತನ್ನ ಹರಿವನ್ನು ನಿಲ್ಲಿಸಿದೆ. ಪರಿಣಾಮವಾಗಿ ಅಘನಾಶಿನಿ ಕಣಿಯ ರೈತರು, ಅಡಿಕೆ ಬೆಳೆಗಾರರು, ಅಘನಾಶಿನಿ ನದಿಯ ನೀರನ್ನೇ ನೆಚ್ಚಿಕೊಂಡಿದ್ದ ಜನಸಾಮಾನ್ಯರು ಹೈರಾಣಾಗಿದ್ದಾರೆ. ನದಿ ತೀರದದಲ್ಲಿದ್ದ ಅಡಿಕೆ ತೋಟಗಳು ಒಣಗಿ ಹೋಗಿವೆ. ಅಪ್ಪೆಮರಗಳು ನೀರಿಲ್ಲದೇ ಸೊರಗಿದೆ. ಕೆಪ್ಪ ಜೋಗ ಎನ್ನುವ ಹೆಸರನ್ನು ಪಡೆದು, ಎಲ್ಲರ ಕಿವಿ ಕಿವುಡಾಗುವಂತೆ ಅಬ್ಬರದಿಂದ ಧುಮ್ಮಿಕ್ಕುತ್ತಿದ್ದ ಉಂಚಳ್ಳಿ ಜಲತಾದ ಸದ್ದು ಅಡಗಿದೆ. ಅಘನಾಶಿನಿ ನದಿ ನೀರನ್ನೇ ಅವಲಂಬಿಸಿದ್ದ ಅಪರೂಪ ಸಿಂಗಳೀಕಗಳು, ಕಾಡೆಮ್ಮೆಗಳಿಗೂ ಕುಡಿಯಲು ನೀರಿಲ್ಲ.
 ಪ್ರತಿ ವರ್ಷ ಮೇ ತಿಂಗಳಿನಲ್ಲಿ ಅಘನಾಶಿನಿ ನದಿಯಲ್ಲಿ ನೀರಿನ ಹರಿವು ಕಡಿಮೆಯಾಗುತ್ತಿತ್ತು. ಎಪ್ರಿಲ್ ಹಾಗೂ ಮೇ ತಿಂಗಳಿನ ಬಿರು ಬೇಸಿಗೆಗೆ ನದಿಯಲ್ಲಿ ನೀರು ಕಡಿಮೆಯಾದರೂ ಕೂಡ ಕೃಷಿಗೆ, ಕೃಷಿಪೂರಕ ಚಟುವಟಿಕೆಗಳಿಗೆ ಅಭಾವ ಉಂಟಾಗುತ್ತಿರಲಿಲ್ಲ. ಆದರೆ ಈ ಸಾರಿ ಮಾತ್ರ ಎಪ್ರಿಲ್ ತಿಂಗಳಿನಲ್ಲಿ ನೀರಿನ ಮಟ್ಟ ಗಣನೀಯವಾಗಿ ಕುಸಿದಿತ್ತು. ಮೇ ತಿಂಗಳ ಆರಂಭದಲ್ಲಿಯೇ ನೀರು ಹರಿಯುವುದು ನಿಂತಿದೆ. ಶಿರಸಿ ನಗರಕ್ಕೆ ಅಘನಾಶಿನಿ ನದಿಯಿಂದ ನೀರು ಸರಬರಾಜು ಮಾಡಲಾಗುತ್ತಿತ್ತು. ಆದರೆ ನೀರು ಹರಿಯುವುದು ನಿಂತಿರುವ ಪರಿಣಾಮ ಶಿರಸಿ ನಗರಕ್ಕೆ ನೀರಿನ ಸರಬರಾಜು ನಿಂತಿದೆ. ಇದರಿಂದಾಗಿ ಶಿರಸಿ ನಗರದಲ್ಲಿ ಕುಡಿಯುವ ನೀರಿಗೆ ತೀವ್ರ ಸಮಸ್ಯೆ ಉಂಟಾಗಿದೆ. ಇದಲ್ಲದೇ ಅಘನಾಶಿನಿ ನದಿಯ ನೀರನ್ನೇ ಅವಲಂಭಿಸಿದ್ದ ಶಿರಸಿ ತಾಲೂಕಿನ ರೇವಣಕಟ್ಟಾ, ಸರಕುಳಿ, ಸಿದ್ದಾಪುರ ತಾಲೂಕಿನ ಹಿತ್ಲಕೈ, ಬಾಳೂರು, ಬಾಳೇಸರ ಮುಂತಾದ ಗ್ರಾಮಗಳಲ್ಲಿ ನೀರಿಲ್ಲದೇ ಜನಸಾಮಾನ್ಯರು ಹೈರಾಣಾಗಿದ್ದಾರೆ.
 ಅಘನಾಶಿನಿ ನದಿಯ ಉಪನದಿಗಳಲ್ಲಿಯೂ ಕೂಡ ನೀರಿಲ್ಲ. ಅಘನಾಶಿನಿ ನದಿ ಮೂಲದಲ್ಲಿಯೂ ಕೂಡ ನೀರಿಲ್ಲ. ಪ್ರಮುಖ ಉಪನದಿಯಾದ ಭತ್ತಗುತ್ತಿಗೆ ಹೊಳೆಯಲ್ಲಿ ನೀರಿಲ್ಲ. ಭತ್ತಗುತ್ತಿಗೆ ಹೊಳೆಯ ಮೂಲ ಎನ್ನಿಸಿಕೊಂಡಿರುವ ಹನುಮಂತಿ ಕೆರೆ ಹೂಳು ತುಂಬಿದೆ. ಬೆಣ್ಣೆಹಳ್ಳ, ಬುರುಡೆ ಜಲಪಾತಕ್ಕೆ ಕಾರಣವಾದ ಬೀಳಗಿ ಹೊಳೆಯಲ್ಲಿಯೂ ಕೂಡ ನೀರಿಲ್ಲ. ಇದೆಲ್ಲದರ ಪರಿಣಾಮ ಕರಾವಳಿ ಪ್ರದೇಶದಲ್ಲಿಯೂ ಕಾಣಿಸಿಕೊಳ್ಳಲು ಆರಂಭಿಸಿದೆ. ಅರಬ್ಬಿ ಸಮುದ್ರ ನೀರು ಅಘನಾಶಿನಿ ನದಿಯ ಒಳಗೆ ನುಗ್ಗಲು ಆರಂಭಿಸಿದೆ. ಅಘನಾಶಿನಿ ನದಿಯಲ್ಲಿ ನೀರಿನ ಹರಿವು ಕಡಿಮೆಯಾದ ಕಾರಣ ಹಲವು ಕಿಲೋಮೀಟರ್ ಒಳಭಾಗದ ವರೆಗೆ ಉಪ್ಪುನೀರು ನುಗ್ಗಿದೆ.
ದೇವರ ಅಭಿಷೇಕಕ್ಕೂ ನೀರಿಲ್ಲ :
 ಅಘನಾಶಿನಿ ನದಿ ತೀರದಲ್ಲಿದ್ದ ದೇವಸ್ಥಾನಗಳಲ್ಲಿ ದೇವರ ಅಭಿಷೇಕಕಕೂ ನೀರಿಲ್ಲ. ದೇವರ ಪೂಜೆಗಾಗಿ ಕಿಲೋಮೀಟರ್ ದೂರದಿಂದ ನೀರು ಹೊತ್ತು ತರಬೇಕಾದಂತಹ ಪರಿಸ್ಥಿತಿ ನಿಮರ್ಾಣವಾಗಿದೆ. ಗುಡ್ಡೇತೋಟದ ಕೋಟೆ ವಿನಾಯಕ, ಬಾಳೂರಿನ ದೇವಾಲಯಗಳಲ್ಲಿ ದೇವರ ಅಭಿಷೇಕಕ್ಕೆ ದೂರದ ಸ್ಥಳಗಳಿಂದ ನೀರನ್ನು ಹೊತ್ತು ತರಬೇಕಾದ ಪರಿಸ್ಥಿತಿ ನಿಮರ್ಾಣವಾಗಿದೆ. ಅಘನಾಶಿನಿ ನದಿಯಲ್ಲಿಯೇ ಆಳದ ಹೊಂಡಗಳಲ್ಲಿ ನಿಂತುಕೊಂಡಿರುವ ನೀರನ್ನು ತಂದು ದೇವಾಲಯ, ಮನೆಗಳಿಗೆ ಬಳಕೆ ಮಾಡಲಾಗುತ್ತಿದೆ. ಮಲೆನಾಡಿನ ಹಳ್ಳಿಗಳಲ್ಲಿಯೂ ಟ್ಯಾಂಕರ್ ಮೂಲಕ ಕುಡಿಯುವ ನೀರನ್ನು ಸರಬರಾಜು ಮಾಡುವಂತಹ ಪರಿಸ್ಥಿತಿ ನಿಮರ್ಾಣವಾಗಿದೆ.
 ಕೇವಲ ಅಘನಾಶಿನಿ ಮಾತ್ರವಲ್ಲ ಮಲೆನಾಡಿನಲ್ಲಿ ಹಲವಾರು ನದಿಗಳು ಬತ್ತಲು ಆರಂಭವಾಗಿದೆ. ಯಲ್ಲಾಪುರಕ್ಕೆ ನೀರಿನ ಮೂಲವಾಗಿದ್ದ ಬೇಡ್ತಿ ನದಿ ಈಗಾಗಲೇ ಬತ್ತಿ ಹೋಗಿದೆ. ಶಾಲ್ಮಲಾ ನದಿ ಕೂಡ ಬತ್ತಲು ಆರಂಭವಾಗಿದೆ. ಮಲೆನಾಡಿನ ಚಿಕ್ಕಪುಟ್ಟ ಹಳ್ಳಗಳು, ಜಲಮೂಲಗಳೆಲ್ಲ ಸಂಪೂರ್ಣವಾಗಿ ಬತ್ತಿಹೋಗಿದೆ. ಬರದ ಬೇಗೆ ಮಲೆನಾಡಿಗರನ್ನು ಹೈರಾಣಾಗಿಸಿದೆ. ಯಾವಾಗ ಮಳೆ ಬರುತ್ತದೆಯೋ ಎಂದು ಜನಸಾಮಾನ್ಯರು ಆಗಸದತ್ತ ಮುಖ ಮಾಡುತ್ತಿದ್ದಾರೆ.

--------

 ಅಘನಾಶಿನಿ ನದ ಈ ಹಿಂದೆ ಯಾವಾಗಲೂ ಬತ್ತಿರಲಿಲ್ಲ. ನನಗೆ ತಿಳಿದಂತೆ ಅಘನಾಶಿನಿ ನದಿ ಯಾವಾಗಲೂ ನೀರಿನ ಹರವನ್ನು ನಿಲ್ಲಿಸಿರಲಿಲ್ಲ. 1870ರ ದಶಕದಲ್ಲಿ ಭಾರಿ ಬರಗಾಲ ಬಂದ ಸಂದರ್ಭದಲ್ಲಿ ಉಳಿದ ಕಡೆಗಳಲ್ಲಿ ನೀರಿನ ಬವಣೆ ಆಗಿತ್ತಂತೆ. ಆದರೆ ಅಘನಾಶಿನಿ ನದಿ ಅಂತಹ ಸಂದರ್ಭದಲ್ಲಿಯೂ ಕೂಡ ಬತ್ತಿರಲಿಲ್ಲ. ಈ ಸಾರಿ ಸಂಪೂರ್ಣವಾಗಿ ಬತ್ತಿಹೋಗಿದೆ. ಗುಡ್ಡೇತೋಟದ ಕೋಟೆ ವಿನಾಯಕ ದೇವರಿಗೆ ಅಭಿಷೇಕ ಮಾಡಲು ಕಿಲೋಮೀಟರ್ ದೂರದಿಂದ ನೀರನ್ನು ಹೊತ್ತು ತರುವಂತಹ ಪರಿಸ್ಥಿತಿ ನಿಮರ್ಾಣವಾಗಿದೆ.ದತ್ತಾತ್ರೆಯ ಭಟ್
ಅರ್ಚಕರು

------------

 ಬರದ ಕಾರಣ ಅಘನಾಶಿನಿ ನದಿ ಶತಮಾನಗಳ ಇತಿಹಾಸದಲ್ಲಿ ಇದೇ ಮೊಟ್ಟಮೊದಲ ಬಾರಿಗೆ ಹರಿವನ್ನು ನಿಲ್ಲಿಸಿದೆ. ಈ ಅಘನಾಶಿನಿ ನದಿಯ ಹಲವು ಕಡೆಗಳಲ್ಲಿ ಬೀಡು ಬಿಟ್ಟು, ಆವಾಸಸ್ಥಾನ ಮಾಡಿಕೊಂಡಿದ್ದ ಅಪರೂಪದ ನೀರು ನಾಯಿಗಳು ಬಿಸಿಯಾಗಿರುವ ನೀರು ಹಾಗೂ ಆಹಾರದ ಅಭಾವದಿಂದಾಗಿ ಸಾವಿನ ಅಂಚನಲ್ಲಿವೆ.
 ಉತ್ತರ ಕನ್ನಡ ಜಿಲ್ಲೆಯಲ್ಲಿ 98 ಕಿಲೋಮೀಟರ್ ದೂರದ ವರೆಗೆ ಹರಿದು ಸಮುದ್ರ ಸೇರುವ ಅಘನಾಶಿನಿ ನದಿಯಲ್ಲಿ ಅಪರೂಪದ ಜೀವಿಯಾಗಿರುವ ನೀರುನಾಯಿಗಳು ವಾಸಸ್ಥಾನ ಮಾಡಿಕೊಂಡಿವೆ. ಕುಮಟಾ ತಾಲೂಕಿನ ಉಪ್ಪಿನಪಟ್ಟಣದಿಂದ ಉಂಚಳ್ಳಿ ಜಲಪಾತದ ವರೆಗಿನ ಪ್ರದೇಶದಲ್ಲಿ, ಘಟ್ಟದ ಮೇಲಿನ ಸಿದ್ದಾಪುರ ತಾಲೂಕಿನ ಮಾನಿಹೊಳೆಯ ಸುತ್ತಮುತ್ತ, ಶಿರಸಿ-ಸಿದ್ದಾಪುರ ತಾಲೂಕಿನ ಗಡಿಯಲ್ಲಿರುವ ಬಾಳಗಾರ, ನಾಡಗುಳಿ ಮುಂತಾದ ಪ್ರದೇಶದಲ್ಲಿ ಅಘನಾಶಿನಿ ನದಿಯಲ್ಲಿ ನೀರುನಾಯಿಗಳು ವಾಸಿಸುತ್ತವೆ. ಅಘನಾಶಿನಿ ನದಿಯ ಆಳದ ಸ್ಥಳಗಳನ್ನು ಆಯ್ಕೆ ಮಾಡಿಕೊಂಡು ಇವು ಗುಂಪು ಗುಂಪಾಗಿ ವಾಸ ಮಾಡುತ್ತಿವೆ. ಆದರೆ ಅಘನಾಶಿನಿ ನದಿ ಬರದ ಬೇಗೆಯಿಂದಾಗಿ ಹರಿವು ನಿಲ್ಲಿಸಿರುವ ಕಾರಣ ಅಪರೂಪದ ನೀರುನಾಯಿಗಳು ಸಾವಿನ ಅಂಚಿನಲ್ಲಿವೆ.
 ಇಂಗ್ಲೀಷಿನಲ್ಲಿ ಲೂತ್ರಾ ಲೂತ್ರಾ ಎನ್ನುವ ಹೆಸರಿನಿಂದ ಕರೆಯಲ್ಪಡುವ ನೀರುನಾಯಿಗಳು ಭಾರತದಲ್ಲಿ ಕಾಶ್ಮೀರ, ಅಸ್ಸಾಂಗಳಲ್ಲಿ ಹೇರಳವಾಗಿ ಕಾಣಸಿಗುತ್ತದೆ. ದಕ್ಷಿಣ ಭಾರತದ ಹಲವು ಕಡೆಗಳಲ್ಲಿಯೂ ನೀರುನಾಯಿಗಳನ್ನು ಕಾಣಬಹುದಾಗಿದೆ. ಆದರೆ ಕನರ್ಾಟಕದಲ್ಲಿ ಈ ನೀರು ನಾಯಿಯ ಆವಾಸ ಸ್ಥಾನ ಬಹಳ ಸೀಮಿತವಾಗಿದೆ. ಶುದ್ಧ ನೀರು ಇರುವ ಆಳವಾದ ನದಿಗಳಲ್ಲಿ ಇವು ಜೀವಿಸುತ್ತವೆ. ಉತ್ತರ ಕನ್ನ ಜಿಲ್ಲೆಯಲ್ಲಿ ಅಘನಾಶಿನಿ ನದಿ ಕಣಿವೆಯಲ್ಲಿ ಮಾತ್ರ ಈ ನೀರು ನಾಯಿಗಳು ಕಾಣಸಿಗುತ್ತವೆ. ಶತಮಾನಗಳ ಹಿಂದೆ ಶರಾವತಿ ಹಾಗೂ ಕಾಳಿ ನದಿಗಳಲ್ಲಿಯೂ ನೀರುನಾಯಿಗಳು ಇದ್ದವಂತೆ. ಆದರೆ ನಂತರದ ದಿನಗಳಲ್ಲಿ ಶರಾವತಿ, ಕಾಳಿ ನದಿಗಳಲ್ಲಿ ನೀರುನಾಯಿಗಳು ನಶಿಸಿಹೋದವು. ಆದರೆ ಅಘನಾಶಿನಿ ನದಿಯಲ್ಲಿ ಮಾತ್ರ ಸಂತಾನವೃದ್ಧಿ ಮಾಡಿಕೊಂಡು ಬದುಕಿದ್ದವು. ಆಳದ ನೀರಿನಲ್ಲಿ ಇರುವ ಮೀನುಗಳು, ಏಡಿಗಳು, ಕಪ್ಪೆಗಳು, ಕೊಕ್ಕರೆ, ನೀರುಕೋಳಿ, ಬಾತುಕೋಳಿಗಳು ನೀರುನಾಯಿಗಳ ಪ್ರಮುಖ ಆಹಾರ. ನದಿ ಸಮೀಪದ ಬಂಡೆಗಳ ಪೊಟರೆಗಳಲ್ಲಿ ಇವು ವಾಸ ಮಾಡುತ್ತವೆ. ನೋಡಲು ಬಹು ಸುಂದರವಾಗಿರುವ, ಮುದ್ದುಮುದ್ದಾಗಿರುವ ನೀರುನಾಯಿಗಳು ಒಮ್ಮೆಗೆ ಗರಿಷ್ಟ 4 ಮರಿಗಳನ್ನು ಹೆರುತ್ತವೆ. 60 ದಿನಗಳ ಅವಧಿಯಲ್ಲಿ ಗರ್ಭಧರಿಸಿ ಮರಿ ಹಾಕುತ್ತವೆ.
 ಅಘನಾಶಿನಿ ನದಿಯಲ್ಲಿ ವಾಸ ಮಾಡುತ್ತಿದ್ದ ನೀರುನಾಯಿಗಳಿಗೆ ಈವರೆಗೂ ಯಾವುದೇ ಸಮಸ್ಯೆ ಉಂಟಾಗಿರಲಿಲ್ಲ. ಆದರೆ ಈ ಸಾರಿ ಬರದ ಬೇಗೆಯಿಂದಾಗಿ ಅಘನಾಶಿನಿ ನದಿ ಹರಿವು ನಿಲ್ಲಿಸಿ ಸಂಪೂರ್ಣ ಬತ್ತಿದೆ. ಆಳದ ಗುಂಡಿಗಳಲ್ಲಿ ಅಲ್ಲಲ್ಲಿ ನೀರು ನಿಂತಿರುವಲ್ಲಿ ನೀರು ನಾಯಿ ಬದುಕಿದೆಯಾದರೂ ಬದಲಾದ ಪ್ರಾಕೃತಿಕ ಕಾರಣಗಳಿಂದಾಗಿ ಸಾವಿನ ಅಂಚಿನಲ್ಲಿವೆ. ಅಲ್ಲಲ್ಲಿ ನಿಂತಿರುವ ನೀರು ಬಿಸಿಲಿನ ಬೇಗೆಗೆ ಬಿಸಿಯಾಗಿದೆ. ನೀರಿನಲ್ಲಿದ್ದ ಮೀನುಗಳು ಈಗಾಗಲೇ ಸತ್ತು ತೇಲುತ್ತಿವೆ. ತಂಪು ನೀರಿನ ವಾತಾವರಣಕ್ಕೆ ಹೊಂದಿಕೊಂಡಿದ್ದ ನೀರುನಾಯಿಗಳು ಏಕಾಏಕಿ ಬಿಸಿಯಾಗಿರುವ ನೀರಿನಿಂದಾಗಿ ಚಡಪಡಿಸುತ್ತಿವೆ. ಸೂಕ್ಷ್ಮವಾಗಿರುವ ನೀರುನಾಯಿಗಳ ಚರ್ಮ ಇದಕ್ಕೆ ಹೊಂದಿಕೊಳ್ಳುತ್ತಿಲ್ಲ. ಇದಲ್ಲದೇ ಪ್ರಮುಖ ಆಹಾರವಾಗಿರುವ ಕಪ್ಪೆ, ಮೀನು, ಏಡಿಗಳೆಲ್ಲ ಬಿಸಿಲಿನ ಬೇಗೆಗೆ ಸತ್ತಿವೆ. ನೀರುಕೋಳಿ, ಬಾತುಕೋಳಿಗಳು ನೀರಿನ ಮೂಲವನ್ನು ಅರಸಿ ಬೇರೆ ಕಡೆಗೆ ವಲಸೆ ಹೋಗಿವೆ. ಇದರಿಂದಾಗಿ ಆಹಾರ ಕೂಡ ಸಿಗದಂತೆ ಆಗಿರುವ ನೀರುನಾಯಿಗಳು ಸಾವಿನ ಅಂಚನ್ನು ತಲುಪುತ್ತಿವೆ.
 ಉತ್ತರ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ ಮೂನರ್ಾಲ್ಕು ದಿನಗಳ ಕಾಲ ಅಲ್ಪ ಮಳೆಯಾಗಿದೆ. ಮಳೆಯ ಕಾರಣದಿಂದ ವಾತಾವರಣ ತಂಪಾಗಿದ್ದರೂ ಕೂಡ ನದಿಗಳಲ್ಲಿ ನೀರು ಹರಿದಿಲ್ಲ. ಅಘನಾಶಿನಿ ನದಿಯ ಪಾತ್ರದಲ್ಲಿ ಮಳೆ ಸುರಿದಿದ್ದರೂ ಇದರಿಂದಾಗಿ ಬತ್ತಿದ ನದಿಗೆ ಜೀವ ಬಂದಿಲ್ಲ. ಪರಿಣಾಮವಾಗಿ ಸಾವಿನ ಅಂಚು ತಲುಪಿರುವ ನೀರುನಾಯಿಗಳ ಬದುಕು ಇನ್ನೂ ದುರಂತದತ್ತಲೇ ಸಾಗುತ್ತಿದೆ. ಜೂನ್ ತಿಂಗಳಿನಲ್ಲಿ ಮಳೆ ಬರುತ್ತದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆದರೆ ಈಗಾಗಲೇ ಸಾವಿನ ಅಂಚಿನಲ್ಲಿರುವ ನೀರುನಾಯಿಗಳು ಇನ್ನೂ 15 ದಿನಗಳ ಕಾಲ ಸ್ವಲ್ಪ ನೀರಿನಲ್ಲಿ, ಆಹಾರವಿಲ್ಲದೇ ಬದುಕುವುದು ಅಸಾಧ್ಯ ಎನ್ನುವಂತಾಗಿದೆ.
 ಅಘನಾಶಿನಿ ನದಿ ಹರಿವು ನಿಲ್ಲಿಸಿದ ಪರಿಣಾಮ ಈಗಾಗಲೇ ಮೀನು, ಕಪ್ಪೆ, ಏಡಿ ಮುಂತಾದ ಜಲಚರಗಳ ಮೇಲೆ ಉಂಟಾಗಿದ್ದು ಅದರ ನಂತರದ ಹಂತ ಎಂಬಂತೆ ನೀರುನಾಯಿಗಳು ಬಲಿಯಾಗುತ್ತಿದೆ. ಇದೇ ಪರಿಸ್ಥಿತಿ ಮುಂದುವರಿದಲ್ಲಿ ನದಿಯ ಅಕ್ಕಪಕ್ಕದಲ್ಲಿರುವ ಅಪ್ಪೆಮರಗಳು, ಮಿಡಿಮಾವಿನ ಮರಗಳಮೇಲೂ ಉಂಟಾಗಲಿದೆ. ಈ ನದಿ ಪಾತ್ರದಲ್ಲಿ ನೀರಿನ ಸಂರಕ್ಷಣೆಗೆ ಆದ್ಯತೆ ನೀಡಿ, ನದಿಯನ್ನು ಪುನಶ್ಚೇತನಗೊಳಿಸದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಈ ಎಲ್ಲ ಜೀವ ಸಂಕುಲ ನಾಮಾವಶೇಷವಾಗುವುದರಲ್ಲಿ ಸಂದೇಹವೇ ಇಲ್ಲ

---------

 ನೀರುನಾಯಿಗಳು ಅಪರೂಪದ ಪ್ರಾಣಿಗಳು. ಅಳಿವಿನ ಅಂಚಿನಲ್ಲಿವೆ. ಇವನ್ನು ದೊಡ್ಡ ಪ್ರಮಾಣದಲ್ಲಿ ಚರ್ಮಕ್ಕಾಗಿ ಕಳ್ಳಸಾಗಾಣಿಕೆ ಮಾಡಲಾಗುತ್ತಿತ್ತು. ಇದೀಗ ನದಿ ಬತ್ತಿ ಹೋಗಿರುವಂತಹ ಅಪರೂಪದ ಕಾರಣದಿಂದಾಗಿ ಸಾಯುತ್ತಿದೆ. ಯಾವುದೇ ನದಿಯಲ್ಲಿ ಕನಿಷ್ಟ ಪಾರಿಸಾರಿಕ ಹರಿವು ಇರುವುದು ಅನಿವಾರ್ಯ. ಕನಿಷ್ಟ ಪಾರಿಸಾರಿಕ ಹರಿವು ಇದ್ದಾಗ ಮಾತ್ರ ನದಿ ನೀರನ್ನು ಅವಲಂಬಿಸಿರುವ ಜೀವಿ, ವೃಕ್ಷ, ಪಕ್ಷಿ ಸಂಕುಲಗಳು ಜೀವಂತ ಇರುತ್ತವೆ. ಅದು ನಿಂತರೆ ಏನು ದುಷ್ಪರಿಣಾಮ ಉಂಟಾಗಲಿದೆ ಎನ್ನುವುದಕ್ಕೆ ಇದು ಸ್ಪಷ್ಟ ನಿದರ್ಶನ. ನದಿ ಹರಿವು ನಿಂತಾಗಲೇ ಈ ರೀತಿ ದುರಂತ ಸಂಭವಿಸುತ್ತಿದೆ. ಇನ್ನು ನದಿ ತಿರುವು ಮಾಡಿದರೆ ಎಂತಹ ದುಷ್ಪರಿಣಾಮ ಆಗಬಹುದು ಎನ್ನುವುದು ಊಹೆಗೂ ನಿಲುಕುವುದಿಲ್ಲ.ಬಾಲಚಂದ್ರ ಸಾಯಿಮನೆ
ಪರಿಸರ ವಿಜ್ಞಾನಿ


(VISHWAVANI ARTICLE)

Friday, May 20, 2016

ಹಿಂದೂ ರಥೋತ್ಸವಕ್ಕೆ ರಥ ಕಟ್ಟುವವರು ಮುಸ್ಲೀಮರು

ಸೋಂದಾ ಸ್ವರ್ಣವಲ್ಲಿ ಮಠದಲ್ಲಿ ಭಾವೈಕ್ಯತೆ

 ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಅನೇಕ ನಿದರ್ಶನಗಳು ಸಿಗುತ್ತಲೇ ಇರುತ್ತವೆ. ಅನೇಕ ಕಡೆಗಳಲ್ಲಿ ಹಬ್ಬದ ಸಂದರ್ಭಗಳಲ್ಲಿ ಹಿಂದೂ-ಮುಸ್ಲೀಮರು ಹಲವಾರು ಸಂದರ್ಭಗಳಲ್ಲಿ ಒಟ್ಟಾಗಿ ಪಾಲ್ಗೊಳ್ಳುತ್ತಾರೆ. ಇಂತಹದ್ದೊಂದು ಭಾವೈಕ್ಯತೆಗೆ ಸೋಂದಾ ಸ್ವರ್ಣವಲ್ಲಿ ಮಠದ ರಥೋತ್ಸವ ಕೂಡ ಸಾಕ್ಷಿಯಾಗುತ್ತ ಬಂದಿದೆ.
 ಸೋಂದಾ ಸ್ವರ್ಣವಲ್ಲಿ ಮಠದಲ್ಲಿ ಪ್ರತಿವರ್ಷ ವೈಶಾಖ ಮಾಸದ ಶುಕ್ಲಪಕ್ಷದ ಚತುದಶರ್ಿಯ ದಿನದಂದು ಲಕ್ಷ್ಮೀನೃಸಿಂಹ ದೇವರ ರಥೋತ್ಸವ ನಡೆಯುತ್ತದೆ. ಈ ರಥೋತ್ಸವದಲ್ಲಿ ಎಳೆಯಲ್ಪಡುವ ರಥವನ್ನು ಮುಸ್ಲೀಮರೇ ಕಟ್ಟುತ್ತಾರೆ. ಹಿಂದೂಗಳ ಮಠವಾದ ಸ್ವರ್ಣವಲ್ಲಿ ಮುಸ್ಲೀಮರು ರಥ ನಿಮರ್ಾಣ ಮಾಡುತ್ತಾರೆ. ಶತ ಶತಮಾನಗಳಿಂದಲೂ ಈ ಆಚರಣೆ ನಡೆಯುತ್ತಲೇ ಬಂದಿರುವುದು ಸ್ವರ್ಣವಲ್ಲಿ ಮಠದ ಹಾಗೂ ಲಕ್ಷ್ಮೀನೃಸಿಂಹ ದೇವರ ರಥೋತ್ಸವದ ವೈಶಿಷ್ಟ್ಯವಾಗಿದೆ.
 ಪ್ರಾಚೀನ ಕಾಲದಿಂದಲೂ ಸ್ವರ್ಣವಲ್ಲಿಯಲ್ಲಿ ಸೋದೆ ಪೇಟೆಯ ಖಾಜಿ ಕುಟುಂಬವು ರಥವನ್ನು ಕಟ್ಟುವ ಕೆಲಸವನ್ನು ಶೃದ್ಧೆಯಿಂದ ಮಾಡಿಕೊಂಡು ಬರುತ್ತಿದೆ. ರಥ ಕಟ್ಟುವ ಕೆಲಸ ಮಾತ್ರವಲ್ಲದೇ ಹಬ್ಬ ಹರಿದಿನಗಳ ನಗಾರಿ ಬಾರಿಸುವ ಕೆಲಸವನ್ನೂ ಈ ಕುಟುಂಬಕ್ಕೆ ಸೇರಿದ ಮುಸ್ಲೀಮರು ಮಾಡಿಕೊಂಡು ಬರುತ್ತಿದ್ದಾರೆ. ಈ ಕುರಿತಂತೆ ಸ್ವರ್ಣವಲ್ಲಿ ಮಠದಲ್ಲಿ ವಿಚಾರಿಸಿದಾಗ ಸ್ವರ್ಣವಲ್ಲಿ ಮಠದ ಸುತ್ತಮುತ್ತಲ ಎಲ್ಲಾ ಮಠಗಳಲ್ಲಿಯೂ ಮುಸ್ಲೀಮರೇ ರಥವನ್ನು ಕಟ್ಟುತ್ತಿದ್ದರು. ಆದರೆ ಈಗ ಸ್ವರ್ಣವಲ್ಲಿ ಮಠದಲ್ಲಿ ಮಠದಲ್ಲಿ ಮಾತ್ರ ಮುಸ್ಲೀಮರು ರಥ ಕಟ್ಟುವ ಕಾರ್ಯ ನಡೆಯುತ್ತಿದೆ.
 ಹೊನ್ನಳ್ಳಿ ಎಂದು ಜನರ ಆಡುಮಾತಿನಲ್ಲಿ ಕರೆಸಿಕೊಳ್ಳುವ ಸ್ವರ್ಣವಲ್ಲಿ ಮಠದಲ್ಲಿ ನಡೆಯುವ ರಥೋತ್ಸವವು ವರ್ಷದ ಕೊಟ್ಟಕೊನೆಯ ರಥೋತ್ಸವ ಎನ್ನುವ ಖ್ಯಾತಿಯನ್ನು ಗಳಿಸಿಕೊಂಡಿದೆ. ರಥೋತ್ಸವಕ್ಕೂ 15 ದಿನ ಮೊದಲು ಅಂದರೆ ಅಕ್ಷಯ ತೃತೀಯಾದ ದಿನ ರಥವನ್ನು ತೆಗೆದು ಅದಕ್ಕೆ ಸೋದೆ ಪೇಟೆಯ ಅಬ್ದುಲ್ ಕರೀಬ್ ಖಾಸಾಬ್ (ಬಾಬು) ತಂಡವು ರಥವನ್ನು ವ್ಯವಸ್ಥಿತವಾಗಿ ಕಟ್ಟಲು ಆರಂಭಿಸುತ್ತದೆ. ಹಿಂದೆ ರಥವನ್ನು ಕಟ್ಟಲು ಅಬ್ದುಲ್ ಕರೀಂ ಖಾ ಸಾಬ್, ಅಬ್ದುಲ್ ರಜಾಕ್ ಅಬ್ದುಲ್ ರಸೀದ್, ಖಾಸೀಮ್ ಉಸ್ಮಾನ್ ಖಾನ್ ಹಾಗೂ ಇಬ್ರಾಹೀಮ್ ಉಸ್ಮಾನ್ ಖಾನ್ ಈ ನಾಲ್ಕು ಕುಟುಂಬಕ್ಕೆ ಸೇರಿದ ಸದಸ್ಯರುಗಳು ರಥ ಕಟ್ಟಲು ಶೃದ್ಧೆಯಿಂದ ಶ್ರಮಿಸುತ್ತಿದ್ದರು. ಇದಲ್ಲದೇ ಮಠದ ಇನ್ನಿತರ ಧಾಮರ್ಿಕ ಕಾರ್ಯಗಳಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದರು. ಆದರೆ ಈ ಕುಟುಂಬದಲ್ಲಿ ಅದೆಷ್ಟೋ ಜನರು ಉದ್ಯೋಗದ ನಿಮಿತ್ತ ಬೇರೆಡೆಗೆ ತೆರಳಿದ್ದಾರೆ. ಈಗ ಅಬ್ದುಲ್ ಕರೀಮ್ ಖಾ ಸಾಬ್ ಕುಟುಂಬ ಮಾತ್ರ ರಥ ಕಟ್ಟುವ ಕೆಲಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದೆ.

 ರಥ ನಿಮರ್ಾಣಕ್ಕಾಗಿ ಪ್ರತಿ ವರ್ಷವೂ ಹೊನ್ನಾವರ ತಾಲೂಕಿನ ಹಳ್ಳಲಿಯೊಂದರಿಂ ಅಜಮಾಸು 8000 ರು. ಮೌಲ್ಯದ ವಿಶಿಷ್ಟವಾದ ಕತ್ತವನ್ನು ತರಲಾಗುತ್ತದೆ. ಹೊಸ ಕತ್ತವನ್ನು ರಥದ ಆರಂಭಿಕ ಕೆಲಸಕ್ಕೆ ಬಳಕೆ ಮಾಡಿದರೆ ಹಳೆಯದಾಗಿರುವ ಕತ್ತವನ್ನು ಮರುವರ್ಷ ಎರಡನೆಯ ಹಂತದ ರಥ ಕಟ್ಟಲು ಬಳಕೆ ಮಾಡಲಾಗುತ್ತದೆ. ಒಮ್ಮೆ ಕತ್ತವನ್ನು ತೆಗೆದುಕೊಂಡು ಬಂದರೆ ಅದನ್ನು ಐದು ವರ್ಷಗಳ ಕಾಲ ಬಳಕೆ ಮಾಡಲಾಗುತ್ತದೆ. 15 ದಿನಗಳ ಅಂತರದಲ್ಲಿ ಖಾಜಿ ಕುಟುಂಬವು ರಥದ ಸಂಪೂರ್ಣ ನಿಮರ್ಾಣದ ಕಾರ್ಯಗಳನ್ನು ನಡೆಸುತ್ತದೆ. ರಥದ ಪತಾಕೆ ಕಟ್ಟುವವರೆಗೂ ನಿರಂತರವಾಗಿ ಈ ತಂಡದ ಕೆಲಸಗಳು ನಡೆಯುತ್ತವೆ. ಇದಲ್ಲದೇ ರಥೋತ್ಸವದ ದಿನ ರಥ ಸಾಗುವ ದಾರಿಯುದ್ದಕ್ಕೂ ರಥದ ನಿಯಂತ್ರಣಕ್ಕಾಗಿ ಸನ್ನೆಯನ್ನು ಹಾಕುವುದು, ರಥೋತ್ಸವದ ನಂತರದಲ್ಲಿ ರಥಕ್ಕೆ ಕಟ್ಟಲಾದ ಪರಿಕರಗಳನ್ನು ಬಿಚ್ಚುವುದು, ಅವುಗಳನ್ನು ಸ್ವಸ್ಥಾನದಲ್ಲಿ ಇಡುವುದು ಸೇರಿದಂತೆ ಅಗತ್ಯವಿರುವ ಎಲ್ಲಾ ಜವಾಬ್ದಾರಿಗಳನ್ನೂ ಕೈಗೊಳ್ಳುತ್ತದೆ. ರಥವನ್ನು ಕಟ್ಟಿಕೊಮಡು ಬರುತ್ತಿರುವ ಖಾಜಿ ಕುಟುಂಬಕ್ಕೆ ಪ್ರತಿ ವರ್ಷ ರಥ ನಿಮರ್ಾಣ ಮಾಡಿದ್ದಕ್ಕೆ ಪ್ರತಿಯಾಗಿ ದವಸ-ಧಾನ್ಯಗಳನ್ನು ಗೌರವಧನವಾಗಿ ನೀಡಲಾಗುತ್ತದೆ.
 ಹವ್ಯಕರ ಮಠವಾಗಿರುವ ಸ್ವರ್ಣವಲ್ಲಿಯ ರಥೋತ್ಸವದ ರಥವನ್ನು ಮುಸ್ಲೀಮರೇ ಕಟ್ಟುವ ಮೂಲಕ ಭಾವೈಕ್ಯತೆ, ಧರ್ಮ ಸಾಮರಸ್ಯವನ್ನು ಜಗತ್ತಿಗೆ ಸಾರಲಾಗುತ್ತಿದೆ. ಹಿಂದೂ-ಮುಸ್ಲಿಮರ ಅಪರೂಪದ ಭಾವೈಕ್ಯ ಕಾರ್ಯಕ್ಕೆ ಇದೊಂದು ನಿದರ್ಶನವಾಗಿದೆ.

Friday, May 6, 2016

ಸಂಪ್ರದಾಯದ ಹಾಡುಗಳಲ್ಲಿ ಶಿರಸಿ ಮಾರಿಕಾಂಬೆ ಹಾಗೂ ಜಾತ್ರೆಯ ವರ್ಣನೆ

(PHOTO CLICK : VINAY DANTKAL)
ಶಿರಸಿ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಜನರ ಬಾಯಲ್ಲಿ ಸಂಪ್ರದಾಯದ ಹಾಡುಗಳು ಸದಾ ಕೇಳಿ ಬರುತ್ತವೆ. ಹಾಲಕ್ಕಿಗಳ ಸಂಪ್ರದಾಯದ ಹಾಡಿನಲ್ಲಿ, ಲಂಬಾಣಿಗಳ ಜನಪದ ಗೀತೆಗಳಲ್ಲಿ, ಹವ್ಯಕರ ಹಳ್ಳಿ ಹಾಡಿನಲ್ಲಿ ಶಿರಸಿ ಮಾರಿಕಾಂಬೆ ಹಾಗೂ ಜಾತ್ರೆಯ ವರ್ಣನೆಗಳು ಸಾಕಷ್ಟು ಸಾರಿ ಕಾಣಸಿಗುತ್ತವೆ. ಶಿರಸಿಯ ಸಿರಿಯಾದ ಮಾರಿಕಾಂಬಾ ದೇವಿಯ ಕುರಿತಾದ ಕಥೆಗಳೂ ಕೂಡ ಲಾವಣಿಯ ರೂಪದಲ್ಲಿ, ಜಾನಪದದ ಹಾಡುಗಳಲ್ಲಿ ಕೇಳಸಿಗುತ್ತವೆ. ಇವು ವಿಶಿಷ್ಟವೂ, ಲಯಬದ್ಧವೂ ಆಗಿದೆ.
 ಶಿರಸಿಯಲ್ಲಿ ಅಧಿದೇವತೆ ಮಾರಿಕಾಂಬೆ ನೆಲೆ ನಿಂತ ಬಗ್ಗೆ ಕೂಡ ಅನೇಕ ಕಥೆಗಳಿವೆ. ಹಾಡುಗಳ ರೂಪದಲ್ಲಿಯೂ ಕೂಡ ಈ ಕತೆ ತಲೆಮಾರಿನಿಮದ ತಲೆಮಾರಿಗೆ ಹರಿದು ಬಂದಿರುವುದು ವಿಶೇಷ. ಉತ್ತರ ಕನ್ನಡದ ವಿಶೇಷ ಜಾನಪದ ಕಲೆಯಾದ ಡೊಳ್ಳು ಕುಣಿತ, ಬೇಡರ ವೇಷ ಈ ಮುಂತಾದ ಸಂದರ್ಭದಲ್ಲಿಯೂ ಕೂಡ ಮಾರಿಕಾಂಬೆಯ ಬಗೆಗಿರುವ ಸಾಂಪ್ರದಾಯದ ಹಾಡುಗಳು ಕೇಳಿ ಬರುತ್ತವೆ. ಜಾನಪದ ನೃತ್ಯವನ್ನು ಮಾಡುವಾಗ ತಾಯಿ ಮಾರಿಕಾಂಬೆಯನ್ನು ಭಜಿಸುವುದೂ ಕೂಡ ವಾಡಿಕೆಯಾಗಿದೆ.

 ಕುಣಿತೀನ ಅಂತ ಕಾಲಗೆಜ್ಜೆ ಕಟ್ಟಿಕೊಂಡೆ
 ಕುಣಿಯಾಕ ಕಾಲು ಬರುವಲ್ವೋ ಮಾರೆವ್ವ
 ಕಾಲಿಗೆ ಮತಿಯ ಕೊಡಿಸವ್ವ, ಮಾರವ್ವ...

ಎನ್ನುವ ಹಾಡೊಂದು ಡೊಳ್ಳು ಕುಣಿತದ ಸಂದರ್ಭದಲ್ಲಿ ಕೇಳಿ ಬರುತ್ತದೆ. ದೇವಿಯ ಜಾತ್ರೆಯ ಸಂದರ್ಭದಲ್ಲಿ ಡೊಳ್ಳು ಬಾರಿಸುವವರು ಹಾಗೂ ಕಥೆ ಹೇಳುವ ಕುರುಬರು ಈ ಹಾಡುಗಳನ್ನು ಹೇಳುತ್ತಾರೆ. ಹಾಡಿನ ಮೂಲವೇ ಮಾರಿಕಾಂಬೆಯನ್ನು ಪ್ರಸನ್ನಳಾಗು ಎನ್ನುವಂತೆ ಬೇಡಿಕೊಳ್ಳುತ್ತಾರೆ. ಲಯಬದ್ಧವಾಗಿ ಹಾಡಲ್ಪಡುವ ಈ ಹಾಡಿಗೆ ತಕ್ಕಂತೆ ಡೊಳ್ಳು ಕುಣಿತಗಾರರು ಹೆಜ್ಜೆ ಹಾಕುವುದೂ ಕೂಡಡ ವಿಶೇಷ. ಇದಲ್ಲದೇ ಮಾರಿಕಾಂಬಾ ದೇವಿಯನ್ನು ಇನ್ನೂ ಅನೇಕ ರೀತಿಯಿಂದ ಸ್ತುತಿಸಲಾಗುತ್ತದೆ.

 ಆದಿ ಮಾಯಾ ರೂಪದಿ | ಪ್ರಣವದಿ ಸೇರಿ |
 ಭೇದ ಭೇದಾಕಾರದಿ ||
 ಮೇದಿನಿಯೊಳವತರಿಸಿ ಭಕ್ತರ | ನಾದರಿಸಿ
 ತ್ರೈ ಮೂತರ್ಿಯವರ |
 ವೇದಶಾಸ್ತ್ರದೊಳೊಲಿದು ನೀಗತಿ|| ಆದಿ
 ಮಂಗಳೆ ಜಯತು
 ಶ್ರೀಮಹ | ದೇವಿಗಾರತಿ ಎತ್ತಿರೆ ||

ಎಂಬಂತಹ ದೇವಿಗೆ ಪೂಜೆ ಕೈಗೊಳ್ಳುವ ಹಾಡುಗಳೂ ಕೂಡ ಜನಜನಿತದಲ್ಲಿದೆ. ಮಾರಿಕಾಂಬೆ ದೇವಿ ಭೂಮಿಗೆ ಅವತರಿಸಿ ಬಂದಿರುವುದು, ದೇವಿ ಭಕ್ತರನ್ನು ಉದ್ಧರಿಸುವುದು ಹಾಗೂ ದೇವಿಯನ್ನು ಪ್ರಸನ್ನಗೊಳಿಸುವ ಬಗ್ಗೆ ಇಂತಹ ಗೀತೆಗಳಲ್ಲಿ ವರ್ಣನೆ ಮಾಡಲಾಗಿದೆ. ಅಲ್ಲದೇ ವೇದಶಾಸ್ತ್ರ ಪುರಾಣಗಳಲ್ಲಿ ದೇವಿಯ ಬಗ್ಗೆ ವರ್ಣನೆ ಮಾಡುವುದರ ಬಗ್ಗೆ ಗೀತೆ ಹೇಳುತ್ತದೆ.

 ನಾ ಬರೋ ದಾರಿಯ ದೊರು ಮೆಟ್ಟಿ ಕುಂಕುಮ
 ಚೆಲ್ಲಿ
 ರಾಗುವೇ ಬಿದ್ದಿದೆಯೊ ರಣದಲ್ಲಿ || ಶಿರಸಿಯ
 ಭೂಮಿಯ ದೇವತೆಯ ತಳದಲ್ಲಿ ||

ಈ ಹಾಡಿನಲ್ಲಿ ಶಿರಸಿಯ ಮಾರಮ್ಮನನ್ನು ಭೂಮಿದೇವಿ ಎಂದೇ ಸ್ತುತಿ ಮಾಡಲಾಗಿದೆ. ಅಲ್ಲದೇ ಮಾರಮ್ಮನನ್ನು ಸಾಕ್ಷಾತ್ ಪಾರ್ವತಿ ದೇವಿ ಎಂದೇ ವರ್ಣನೆ ಮಾಡಿರುವುದು ವಿಶೇಷ. ಜಾತ್ರೆಯ ದಾರಿಯಲ್ಲಿ ಬರುವಾಗ ಶಿರಸಿಯ ಮಾರಮ್ಮನಿಗೆ ಕರಿಮಣಿ, ಕುಂಕುಮಗಳನ್ನು ಅಪರ್ಿಸಿದ ರಾಶಿಯನ್ನು ಭಕ್ತೆಯರ ದಂಡು ಕಂಡ ತಕ್ಷಣ ಇಂತಹ ವರ್ಣನೆಯ ಹಾಡುಗಳನ್ನು ಹಾಡುತ್ತಾರೆ ಎಂಬ ನಂಬಿಕೆಯಿದೆ.

 ಸೋದಿಗ್ಹೋದೋರಿಗೇ, ಸೂಡಿದ್ಹೂಗು ಬಾಡದೇ
 ಅಂಗಾಂಗೆ ಮುಳ್ಳೂ ಮುರಿಯದೇ || ಬಂದರೇ
 ಸಿರುಸೀ ಸೇವಮ್ಮನಾ ಹರಕೀಯೇ
 ಸಿರುಸೀ ಸೇವಮ್ಮನ್ ಹರಕೀಯೇನಂದೀರೋ
 ಕೋಣನ ಮೇನೇ ಕುರಿಕೋಳೀ ||

ಹಿಂದೆ ಮಾರಿಕೋಣನನ್ನು ಕಡಿಯು ಕಾಲದಲ್ಲಿ ಕಟ್ಟಿ ರೂಢಿಯಾಗಿದ್ದ ಹಾಡು ಇದು. ಜನಸಾಮಾನ್ಯರ ಹರಕೆ ಕುರಿ ಕೋಳಿಗಳನ್ನು ಬಲಿ ಕೊಡುವುದು. ಇಲ್ಲಿ ಸೋದೆಗೆ ಹೋದವ ಗರತಿಯ ಗಂಡ ಎಂಬ ಅರ್ಥವನ್ನು ನೀಡುತ್ತದೆ. ಈ ಕಾರಣದಿಂದ ಇಲ್ಲಿ ಒಬ್ಬನನ್ನೇ ಬಹುವಚನದಿಂದ ಕರೆಯಲಾಗುತ್ತದೆ. ಶಿರಸಿಯಲ್ಲಿ ಮಾರಮ್ಮನ ಭಕ್ತ-ಭಕ್ತೆಯರಾದ ಅಸಾದಿಗಳು ಮಾರಮ್ಮನ ಹಬ್ಬದಲ್ಲಿ ದೇವಸ್ಥಾನದ ಮುಂದೆ ದೇವಿಯನ್ನು ಹಾಡಿನ ಮೂಲಕ ಹೊಗಳುತ್ತಾರೆ. ವಿಶೇಷವೆಂದರೆ ದೇವಿಯನ್ನು ಇವರು ಹಾಡಿನ ಮೂಲಕವೇ ಬಯ್ಗುಳವನ್ನೂ ಮಾಡುತ್ತಾರೆ.
 ಶಿರಸಿಯಲ್ಲಿ ಮಾರಮ್ಮ ನೆಲೆ ನಿಂತ ಬಗ್ಗೆಯೂ ಕೂಡ ಹಲವು ಹಾಡುಗಳು ಪ್ರಚಲಿತದಲ್ಲಿದೆ. ಅಸಾದಿಗಳು ಕೈಯಲ್ಲಿ ಹಲಗೆಯನ್ನು ಹಿಡಿದು ಶಿರಸಿಯ ತುಂಬ ಹಾಡು ಹೇಳುತ್ತಾ ತಿರುಗುವುದು ವಿಶೇಷ. ತನ್ನ ಗಂಡನನ್ನೇ ಕೊಂದು, ನಂತರ ಕೆಂಡದಲ್ಲಿ ಧುಮುಕಿ ಮಹಾಸತಿಯಾಗಿ ದೇವತೆಯಾದ ಛಲಗಾತಿ ಶಿರಸಿಯ ಮಾರಮ್ಮ. ಇಂತಹ ಮಾರಮ್ಮನನ್ನು ಮಹಿಷಾಸುರ ಮಧರ್ಿನಿಯಾದ ಪಾರ್ವತಿಗೂ ಹೋಲಿಕೆ ಮಾಡಲಾಗುತ್ತದೆ. ಮಾರಮ್ಮನನ್ನು ಇಲ್ಲಿ ಸಿರುಸಿಯ ಸೇವಮ್ಮ ಎಂದು ಕರೆಯುವುದೂ ಕೂಡ ವಿಶೇಷ.

 ಬಂಡಿಗಾಲಿಯ ಮೇನೇ ಬಂದಳಾ ದುರುಗಮ್ಮಾ
 ಗೆಂಡದಾ ಕಿಡಿಯೇ ಉದುರತ್ತೆ || ದುರುಗಮ್ಮಾ
 ಬಂದಳೀ ರಾಜಿ ಬೆಳಗುತ್ತೆ ||

ಎಂಬ ಹಾಡಿನಲ್ಲಿ ಬಂಡಿ ಹಬ್ಬ ಮಾಡುವ ಕಾಲದಲ್ಲಿ ಅಮ್ಮನವರ ಮೂತರ್ಿಯನ್ನು ನಾಲ್ಕು ಗಾಲಿಗಳುಳ್ಳ ಸಣ್ಣ ಬಂಡಿಯ ಮೇಲೆ ಮೆರವಣಿಗೆ ಮಾಡುತ್ತಿದ್ದ ದೃಶ್ಯವನ್ನು ನೆನಪಿಸುತ್ತದೆ. ಇಲ್ಲಿ ಗೆಂಡದಾ ಎಂದರೆ ಕೆಂಡದ ಕಿಡಿಯೇ ಎನ್ನುವ ಅರ್ಥವಿದೆ. ಅಂದರೆ ದೇವಿಯ ಮುಂಭಾಗದಲ್ಲಿ ಕೆಂಡ ಹಾಯುವ ಸಂಪ್ರದಾಯವನ್ನು ಹಾಡಿನಲ್ಲಿ ಬಿಂಬಿಸುತ್ತದೆ. ಅಲ್ಲದೇ ಅಪರೂಪದ ಸಂಪ್ರದಾಯಗಳನ್ನೂ ಕೂಡ ಇಂತಹ ಹಾಡುಗಳು ವಿವರಿಸುತ್ತ ಹೋಗುವುದು ವಿಶೇಷ.
 ಜಾನಪದ ಹಾಡುಗಳು ಮಾರಿಕಾಂಬಾ ಜಾತ್ರೆಯ ಸಂದರ್ಭದಲ್ಲಿ ಭಕ್ತಾದಿಗಳು ಕೈಗೊಳ್ಳಲೇ ಬೇಕಾದ ಹಲವಾರು ವಿಶೇಷ ಕಾರ್ಯಗಳ ಬಗ್ಗೆಯೂ ತಿಳಿಸುತ್ತದೆ. ದೇವಿಯ ಜಾತ್ರೆಗೆ ಬಂದವರು ಕಳ್ಳತನ-ಸುಲಿಗೆ ಇತ್ಯಾದಿಗಳನ್ನು ಮಾಡಬಾರದು ಎಂದೂ ಹಾಡಿನಲ್ಲಿಯೇ ಸೂಚ್ಯವಾಗಿ ಹೇಳಲಾಗುತ್ತದೆ. ಅಲ್ಲದೇ ಕಳ್ಳತನ-ದರೋಡೆ ಮಾಡಿದರೆ ಯಾವ ರೀತಿ ದೇವಿಯ ಕೋಪಕ್ಕೆ ಒಳಗಾಗಬಹುದು ಎನ್ನುವುದನ್ನೂ ಎಚ್ಚರಿಕೆಯ ರೀತಿಯಲ್ಲಿ ಹಾಡುವುದು ವಿಶೇಷ.

 ಹಾಳ ಮಾಡಬನ್ನೀ ಹನ್ನೆರಡ ರಾಜ್ಯವಾ
 ದೂಳ ಮಾಡ ಬನ್ನಿ ಸಿರಸೀಯ || ಸೇವಮ್ಮನ
 ಬಂಡಾರ ಸಿಕ್ಕಿದರೂ ಬಿಡಬೇಡೀ
 ಆದರೆ ಅವಳ ವಾಲೆ ಸಿಕಿದರೂ ತರಬೇಡಿ ||

ಎನ್ನುವ ಮಾತಿನಲ್ಲಿಯೇ ಎಷ್ಟೆಲ್ಲ ಅರ್ಥಗಳಿವೆ ಎನ್ನುವುದುದನ್ನು ಗಮನಿಸಬೇಕು. ಇಲ್ಲಿ ಬಂಡಾರ ಸಿಕ್ಕರೂ ಕೂಡ ಅದನ್ನು ತೆಗೆದುಕೊಂಡು ಬನ್ನಿ ಎಂದು ಹೇಳಲಾಗುತ್ತದೆ. ದೇವಿಗೆ ಹೇಗೆ ಬೇಕಾದರೂ ಭಕ್ತಿಯನ್ನು ತೋರಿಸಿ ಆದರೆ ದೇವಿಯ ಚಿನ್ನ, ಒಡವೆಗಳ ಕಡೆಗೆ ಮಾತ್ರ ಕಣ್ಣು ಹಾಕಬೇಡಿ ಎನ್ನುವ ಎಚ್ಚರಿಕೆಯನ್ನೂ ಹಾಕಲಾಗುತ್ತದೆ. ಇಷ್ಟೇ ಅಲ್ಲದೇ ಶಿರಸಿಯ ಮಾರಿಕಾಂಬೆಯ ಕುರಿತು ಅನೇಕ ಕಥೆಗಳೂ ಕೂಡ ವಿವಿಧ ಬಗೆಯಲ್ಲಿ ಹಾಡಿನ ಮೂಲಕ ಹೇಳಲಾಗುವುದು ವಿಶೇಷ.
 ಹವ್ಯಕರಿರಲಿ, ಲಂಬಾಣಿಗಳಿರಲಿ, ಗೌಳಿ, ಕುಣಬಿಗಳು ಸೇರಿದಂತೆ ವಿವಿಧ ಜಾತಿಗಳಿರಲಿ ಈ ಎಲ್ಲ ಜನಾಂಗದವರೂ ಕೂಡ ಬೇರೆ ಬೇರೆ ದಾಟಿಯಲ್ಲಿ, ರಾಗದಲ್ಲಿ ಹಲವಾರು ಸಂಪ್ರದಾಯದ ಹಾಡುಗಳನ್ನು ಹಾಡುತ್ತಾರೆ. ಇವರೆಲ್ಲ ಹಾಡುವ ಕ್ರಮ ಬೇರೆ ಬೇರೆಯಾದುದು. ಅಕ್ಕಿ ಕುಟ್ಟುವಾಗ, ರಾಗಿ ಬೀಸುವಾಗ, ಮಜ್ಜಿಗೆ ಕಡೆಯುವ ಸಂದರ್ಭ ಹೀಗೆ ಹಲವಾರು ಸಂದರ್ಭದಲ್ಲಿ ಹಾಡಲಾಗುವ ಈ ಹಾಡುಗಳಲ್ಲೆಲ್ಲ ಶಿರಸಿಯ ಮಾರಿಕಾಂಬೆಯ ಬಗ್ಗೆ ವರ್ಣನೆಯೇ ತುಂಬಿದೆ. ಜಾತಿ ಜನಾಂಗದವರು ವಿಶೇಷವಾಗಿ ಬಳಕೆ ಮಾಡುವ ನುಡಿಗಟ್ಟಿನಲ್ಲಿಯೇ ಹಾಡುಗಳನ್ನು ಹಾಡುವುದು ವಿಶೇಷ. ತಮಗೆ ತಿಳಿದಿರುವ ಭಾಷೆಯಲ್ಲಿ ದೇವಿಯ ಕುರಿತು ಹಾಡಿ ದೇವಿಯನ್ನು ಒಲಿಸಿಕೊಳ್ಳವು ಜನಪದರ ರೀತಿಯೇ ವಿಶಿಷ್ಟವಾದುದು. ಗ್ರಾಮೀಣ ಭಾಗದವರ, ಜನಪದರ ಇಂತಹ ವಿದ್ಯೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ

Wednesday, April 20, 2016

ಬೇಸರ ಮರೆತು ಒಂದಾದ ಯಕ್ಷ ದಿಗ್ಗಜರು

ದಿಗ್ಗಜರ ಒಗ್ಗೂಡುವಕೆಗೆ ಸಾಕ್ಷಿಯಾದ ಸಂಪಖಂಡ


           ಐದು ದಶಕಗಳ ಬೇಸರವನ್ನು ಮರೆತು ಒಂದಾದರು ದಿಗ್ಗಜರು. ಒಬ್ಬ ಯಕ್ಷ ದಿಗ್ಗಜರ ಹಾಡಿಗೆ ಇನ್ನೊಬ್ಬ ಯಕ್ಷ ದಿಗ್ಗಜರು ಯಕ್ಷನರ್ತನ ಮಾಡಿದರು. ಅಭಿಮಾನಿಗಳು ಪುಳಕಗೊಂಡರು. ಇಂತಹ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿದ್ದು ಶಿರಸಿ ತಾಲೂಕಿನ ಸಂಪಖಂಡದ ಗಜಾನನ ಪ್ರೌಢಶಾಲೆಯ ಆವರಣ.
           ನೆಬ್ಬೂರು ನಾರಾಯಣ ಭಾಗವತರು ಯಕ್ಷಗಾನದಲ್ಲಿ ದಿಗ್ಗಜ ಭಾಗವತರು. ಅದೇ ರೀತಿ ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರೂ ಕೂಡ ಯಕ್ಷಗಾನದ ಮೇರು ನಟ. ಇಬ್ಬರಿಗೂ ಅವರದೇ ಆದ ಅಭಿಮಾನಿಗಳಿದ್ದಾರೆ. ನೆಬ್ಬೂರರ ಹಾಡಿಗೆ, ಚಿಟ್ಟಾಣಿಯವರ ನರ್ತನಕ್ಕೆ ಮೆಚ್ಚಿ ತಲೆದೂಗಿದವರು ಸಹಸ್ರ ಸಹಸ್ರ ಸಂಖ್ಯೆಯ ಅಭಿಮಾನಿಗಳು. ಆದರೆ ಅನೇಕ ಅಭಿಮಾನಿಗಳಲ್ಲಿದ್ದ ಒಂದೇ ಒಂದು ಆಸೆಯೆಂದರೆ ಅದು ನೆಬ್ಬೂರು ನಾರಾಯಣ ಭಾಗವತರ ಹಾಡಿಗೆ ಚಿಟ್ಟಾಣಿ ರಾಮಚಂದ್ರ ಹೆಗಡೆಯವರು ಪಾತ್ರ ಮಾಡಬೇಕು ಎನ್ನುವುದು. ಆದರೆ ಈ ಇಬ್ಬರು ಮಹಾನ್ ಯಕ್ಷಪಟುಗಳ ನಡುವಿನ ಬೇಜಾರಿನಿಂದಾಗಿ ಅದು ಸಾಧ್ಯವೇ ಆಗಿರಲಿಲ್ಲ. ಸರಿ ಸುಮಾರು ಐದು ದಶಕಗಳಿಂದ ಯಕ್ಷಪ್ರೇಮಿಗಳು ಇಂತದ್ದೊಂದು ಸವಿಘಳಿಗೆಗೆ ಕಾಯುತ್ತಲೇ ಇದ್ದರು. ಸಂಪಖಂಡದಲ್ಲಿ ನಡೆದ ನೆಬ್ಬೂರು ನಾರಾಯಣ ಭಾಗವತ ಪ್ರತಿಷ್ಟಾನದ ವಾಷರ್ಿಕೋತ್ಸವ ಸಮಾರಂಭದಲ್ಲಿ ಈ ಇಬ್ಬರು ಯಕ್ಷ ದಿಗ್ಗಜರು ಬೇಸರ ಮರೆತು ಒಂದಾದರು.
                        ಕಾರ್ಯಕ್ರಮ ಉದ್ಘಾಟನೆ ಮಾಡಿದ ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರು ಮಾತನಾಡುತ್ತಾ ಐದು ದಶಕಗಳ ಹಿಂದೆ ನೆಬ್ಬೂರು ನಾರಾಯಣ ಭಾಗವತರು ಹಾಗೂ ತಾವು ಅಮೃತೇಶ್ವರಿ ಮೇಳದಲ್ಲಿ ಒಡನಾಡಿಗಳಾಗಿದ್ದವರು. ನಂತರದ ದಿನಗಳಲ್ಲಿ ಜನರಿಂದಾಗಿ ನಮಗೆ ಬೇಸರ ಉಂಟಾಯಿತು.ಆ ಸಂದರ್ಭದಲ್ಲಿಯೇ ನಾನು ಮೇಳವನ್ನು ಬದಲಾಯಿಸಿದೆ. ಐದು ದಶಕಗಳ ವರೆಗೂ ಆ ಬೇಸರ ಮುಂದುವರಿಯಿತು. ಆದರೆ ನನಗೆ ಒಂದು ಆಸೆಯಿದೆ. ನೆಬ್ಬೂರು ನಾರಾಯಣ ಭಾಗವತರ ಹಾಡುಗಾರಿಕೆಯಲ್ಲಿ ಪಾತ್ರ ಮಾಡಬೇಕು ಎನ್ನುವುದು ನನ್ನ ದೊಡ್ಡ ಆಸೆ. ಆದರೆ ಅನಾರೋಗ್ಯದ ಕಾರಣದಿಂದಾಗಿ ನೆಬ್ಬೂರರಿಗೆ ಹಾಡಲು ಸಾಧ್ಯವಾಗುತ್ತಿಲ್ಲ. ದೇವರ ಕೃಪೆಯಿದ್ದರೆ ನನ್ನ ಆಸೆ ಪೂರೈಸುತ್ತದೆ. ದೇವರ ದಯೆಯಿಮದ ನೆಬ್ಬೂರರು ಕೂಡಲೇ ಗುಣಮುಖರಾಗಿ ಮತ್ತೆ ರಂಗದಲ್ಲಿ ಹಾಡುತ್ತಾರೆ. ಆಗ ನಾನು ಪಾತ್ರ ಮಾಡುತ್ತೇನೆ ಎಂದರು. ಅಷ್ಟೇ ಅಲ್ಲದೇ ನೆಬ್ಬೂರು ನಾರಾಯಣ ಭಾಗವತರಿಗೆ ಅನಾರೋಗ್ಯವಾಗಿ ಹಾಸಿಗೆ ಹಿಡಿದಿದ್ದ ಸಂದರ್ಭದಲ್ಲಿ ನಾನು ಅವರನ್ನು ಭೇಟಿ ಮಾಡಿದ್ದೆ. ಆ ಸಂದರ್ಭದಲ್ಲಿ ನಮ್ಮಲ್ಲಿನ ಬೇಜಾರು ದೂರವಾಯಿತು. ನೆಬ್ಬೂರರ ಹಾಸ್ಯಪ್ರಜ್ಞೆಯಿಂದ ನನ್ನ ಮನಸ್ಸು ನಿರಾಳವಾಯಿತು ಎಂದರು.
                    ಚಿಟ್ಟಾಣಿ ರಾಮಚಂದ್ರ ಹೆಗಡೆಯವರು ಮಾತನಾಡಿದ ನಂತರ ನೆಬ್ಬೂರರು ಮಾತನಾಡಲು ಆಗಮಿಸಿದರು. ನೆಬ್ಬೂರು ನಾರಾಯಣ ಭಾಗವತರು ಮಾತನಾಡಿ ಅಮೃತೇಶ್ವರಿ ಮೇಳದಲ್ಲಿ 5 ದಶಕಗಳ ಹಿಂದೆ ನಾವು ಒಡನಾಡಿದವರು. ಕಾರಣಾಂತರಗಳಿಂದ ದೂರವಾಗಿದ್ದವರು ನಾವು. ಈಗ ಒಂದಾಗಬೇಕೆಂಬ ಮನಸ್ಸಿದೆ. ವಯೋಮಾನ ಹೆಚ್ಚಾದ ಕಾರಣ ರಂಗದಲ್ಲಿ ನಾವು ಒಂದಾಗಲು ಸಾಧ್ಯವಿಲ್ಲ. ಆದರೆ ಮಾನಸಿಕವಾಗಿ ನಾವಿಬ್ಬರೂ ಒಂದೇ. ಚಿಟ್ಟಾಣಿಯವರು ಈಗಲೂ ರಂಗದಲ್ಲಿ ಪಾತ್ರವಹಿಸುತ್ತಿದ್ದಾರೆ. ಆದರೆ ನನಗೆ ವಯೋಸಹಜ, ಅನಾರೋಗ್ಯದ ಕಾರಣ ರಂಗದ ಮೇಲೆ ಬರಲಾಗುತ್ತಿಲ್ಲ. ಚಿಟ್ಟಾಣಿಯವರಿಗೆ ಚಂಡೆ, ಮದ್ದಲೆಗಳೇ ಔಷಧವಾಗಿ ಪರಿಣಮಿಸಿದೆ. ಹಿರಿಯರು ಆಗಾಗ ಪ್ರತಿಷ್ಟಾನಕ್ಕೆ ಆಗಮಿಸಿ ಸಲಹೆ ಸೂಚನೆಗಳನ್ನು ನೀಡಬೇಕು. ಮುಂದಿನ ಪೀಳಿಗೆಗೆ ಮಾರ್ಗದರ್ಶನ ನೀಡಬೇಕಾದ ಅಗತ್ಯವಿದೆ ಎಂದರು.
                      ನೆಬ್ಬೂರರು ಮಾತನಾಡುತ್ತಿದ್ದ ಸಂದರ್ಭದಲ್ಲಿಯೇ ವೇದಿಕೆಯ ಮೇಲೆ ಕುಳಿತಿದ್ದ ಚಿಟ್ಟಾಣಿ ರಾಮಚಂದ್ರ ಹೆಗಡೆಯವರು ಎದ್ದು ಬಂದರು. ನೆಬ್ಬೂರರ ಬಳಿ ಬಂದು `ಒಂದು ಹಾಡು ಹಾಡಾ..' ಎಂದರು. ಅದಕ್ಕೆ ಹಸನ್ಮುಖದಿಂದಲೇ ನೆಬ್ಬೂರರು ಬೇಡ ಎಂದರು. ಚಿಟ್ಟಾಣಿಯವರು ಪಟ್ಟು ಬಿಡಲಿಲ್ಲ. ಕೊನೆಗೆ ನೆಬ್ಬೂರು ನಾರಾಯಣ ಭಾಗವತರು ಹಾಡಿಯೇ ಬಿಟ್ಟರು. ನೆಬ್ಬೂರರ ಸಿರಿಕಂಠದಲ್ಲಿ `ಕಂಡನು ಭಸ್ಮಾಸುರನು ಮೋಹಿನಿಯ ರೂಪವ' ಎಂಬ ಹಾಡು ಹೊರಹೊಮ್ಮಿದಂತೆಯೇ ಚಿಟ್ಟಾಣಿಯವರು ಅಭಿನಯವನ್ನು ಆರಂಭಿಸಿದರು. ವೇದಿಕೆಯ ಮೇಲೆ ಕುಣಿದ ಚಿಟ್ಟಾಣಿ ಬಹುಕಾಲದ ತಮ್ಮ ಮನಸ್ಸಿನ ಬಯಕೆಯನ್ನು ಪೂರೈಸಿಕೊಂಡರು. ಈ ಘಟನೆಗೆ ಸಾಕ್ಷಿಯಾದ ನೂರಾರು ಜನರು ಪುಳಕಗೊಂಡರು. ಸಂಘಟಕರ ಕಣ್ಣಾಲಿಗಳು ತುಂಬಿಬಂದವು.
                 ಕಲಾವಿದರುಗಳಲ್ಲಿ ಬೆಸರಗಳು ಸಹಜ. ಆದರೆ ಇಂತಹ ಅಪರೂಪದ ಕಾರ್ಯಕ್ರಮಗಳಲ್ಲಿ, ಸಂದರ್ಭಗಳಲ್ಲಿ ದಿಗ್ಗಜರು ಒಂದಾಗುತ್ತಾರೆ. ಯಕ್ಷಗಾನದ ಇಬ್ಬರು ದಿಗ್ಗಜರು ಒಂದಾಗುವಲ್ಲಿ ಸಂಪಖಂಡದ ಗಜಾನನ ಪ್ರೌಢಶಾಲೆಯ ಆವರಣ ಸಾಕ್ಷಿಯಾಯಿತು. ತನ್ಮೂಲಕ ಸಂಪಖಂಡ ಹಾಗೂ ನೆಬ್ಬೂರು ನಾರಾಯಣ ಭಾಗವತ ಪ್ರತಿಷ್ಟಾನದ ವಾಷರ್ಿಕೋತ್ಸವ ಕಾರ್ಯಕ್ರಮ ಇತಿಹಾಸದ ಪುಟಗಳಲ್ಲಿ ಚಿರಸ್ಥಾಯಿಯಾಯಿಗಿ ಉಳಿದುಕೊಂಡಿತು.
 

Saturday, April 16, 2016

ಮಾಸ್ತರ್ ಮಂದಿ -10

                ಹೈಸ್ಕೂಲಿನಲ್ಲಿ ಇನ್ನೂ ಹಲವು ಶಿಕ್ಷಕರಿದ್ದರು. ಮೆಚ್ಚಿನ ಶಿಕ್ಷಕರಾಗಿದ್ದರು ಎಂದರೆ ತಪ್ಪಾಗಲಿಕ್ಕಿಲ್ಲ ನೋಡಿ. ಅವರ ಪೈಕಿ ಥಟ್ಟನೆ ನೆನಪಾಗುವವರು ಎಂದರೆ ಲಕ್ಷಪ್ಪ ಮಾಸ್ತರ್ . ಅವರ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ.

ಲಕ್ಷಪ್ಪ :
      ಕೆ. ಲಕ್ಷಪ್ಪ ೆಎನ್ನುವ ಕಿರು ನಾಮಧೇಯ  ಇವರದ್ದು. 9ನೇ ಕ್ಲಾಸಿನಲ್ಲಿ ಇರುವಾಗ ಕಾನ್ಲೆ ಹೈಸ್ಕೂಲಿಗೆ ಬಂದವರು ಲಕ್ಷಪ್ಪ ಸರ್. ನನ್ನ ಹೈಸ್ಕೂಲ್ ಜೀವನದ ಅತ್ಯಂತ ಪ್ರಿಯ ಮಾಸ್ತರುಗಳಲ್ಲಿ ಒಬ್ಬರು. ಸಮಾಜ ವಿಜ್ಞಾನವನ್ನು ಇವರು ಕಲಿಸುತ್ತಿದ್ದರು. ಲಕ್ಷಪ್ಪ ಅವರಿಗೆ ನೆತ್ತಿಯ ಮೇಲೆ ಕೂದಲು ತೆಳ್ಳಗಾಗಿತ್ತು. ಅದನ್ನು ನೋಡಿ ಹೈಸ್ಕೂಲಿನ ಹುಡುಗರೆಲ್ಲ ತಮಾಷೆ ಮಾಡಿಕೊಳ್ಳುತ್ತಿದ್ದರು. ಸದಾ ಹಸನ್ಮುಖಿಯಾಗಿದ್ದ ಲಕ್ಷಪ್ಪ ಸರ್ ಆಗೊಮ್ಮೆ ಈಗೊಮ್ಮೆ ಸಿಟ್ಟಾಗುತ್ತಿದ್ದುದೂ ಇದೆ. ನಾನು ಅವರ ವಿಷಯದಲ್ಲಿ ಚನ್ನಾಗಿ ಬರೆಯುತ್ತಿದೆ. ಅಕ್ಷರಗಳೆಲ್ಲ ಚನ್ನಾಗಿ ಬರೆದು ನೀಟಾಗು ತೋರಿಸುತ್ತಿದೆ. ಶಾಲೆಗೆ ಬಂದ ಕೆಲವು ದಿನಗಳಲ್ಲಿಯೇ ಲಕ್ಷಪ್ಪ ಅವರ ಪ್ರಿಯ ಶಿಷ್ಯಂದಿರಲ್ಲಿ ನಾನೂ ಒಬ್ಬನಾಗಿಬಿಟ್ಟಿದ್ದೆ.
          ಲಕ್ಷಪ್ಪ ಸರ್ ಿತಿಹಾಸದ ಪುಟಗಳನ್ನೆಲ್ಲ ಬಹಳ ಸುಂದರವಾಗಿ ಕಲಿಸುತ್ತಿದ್ದರು. ಅದರಲ್ಲೂ ಐತಿಹಾಸಿಕ ಘಟನೆಗಳು, ಯುದ್ಧಗಳನ್ನೆಲ್ಲ ಕಣ್ಣಿಗೆ ಕಟ್ಟುವ ಹಾಗೆ ವರ್ಣಿಸುತ್ತಿದ್ದರು. ಲಕ್ಷಪ್ಪ ಸರ್ ಅವರು ರಕ್ಕಸತಂಗಡಿ ಯುದ್ಧವನ್ನು ರೋಚಕವಾಗಿ ಕಟ್ಟಿಕೊಟ್ಟಿದ್ದಿನ್ನೂ ನನ್ನ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದೆ.
           ಓದಿನಲ್ಲಿ ಮುಂದಿದ್ದ ನನಗೆ ಹೈಸ್ಕೂಲಿನಲ್ಲಿ ಅಂಕಗಳು ಸಾಕಷ್ಟು ಸಿಗುತ್ತಿದ್ದವು. ನಾನು ಎಂದರೆ ಓದುಗುಳಿ ಎಂದುಕೊಂಡಿರಬೇಕು ಅವರು. ಹೈಸ್ಕೂಲು ವಾರ್ಷಿಕೋತ್ಸವದ ಸಂದರ್ಭದಲ್ಲಿ 9 ನೇ ಕ್ಲಾಸಿನಲ್ಲಿದ್ದಾಗ ನಾನು ನಾಟಕವೊಂದರಲ್ಲಿ ಪ್ರಮುಖ ಪಾತ್ರ ವಹಿಸಿದ್ದೆ. ಅದನ್ನು ಲಕ್ಷಪ್ಪ ಸರ್ ಬಹಳ ಮೆಚ್ಚಿಕೊಂಡಿದ್ದರು. ಎಸ್ಸೆಲ್ಸಿಯಲ್ಲಿದ್ದಾಗ ಸಿನೆಮಾ ಹಾಡುಗಳಿಗೆ ನಮ್ಮ ದೋಸ್ತರ ತಂಡ ಸ್ಟೆಪ್ ಹಾಕಿತ್ತು. ಅದನ್ನು ನೋಡಿ ಫುಲ್ ಫಿದಾ ಆಗಿದ್ದ ಲಕ್ಷಪ್ಪ ಸರ್ `ಏನೋ.. ನೀನು ಡ್ಯಾನ್ಸ್ ಕೂಡ ಮಾಡ್ತೀಯೇನೋ..' ಎಂದು ನಕ್ಕಿದ್ದರು. ಅವರು ಖುಷಿಯಾಗಿ ಹೇಳಿದ್ದ ಮಾತು ನನಗೆ ಮಾತ್ರ ತಮಾಷೆಯೆನ್ನಿಸಿತ್ತು.
         ಎಸ್ಸೆಲ್ಸಿಯಲ್ಲಿದ್ದಾಗ ವಿದ್ಯಾರ್ಥಿಗಳದ್ದೇ ಒಂದು ತಂಡ ಮಾಡಿ ಓದಲು ಬಿಡುತ್ತಿದ್ದರು. ನಾನು ಇದ್ದ ತಂಡವನ್ನು ಲಕ್ಷಪ್ಪ ಸರ್ ಹಾಗೂ ಭಾರತಿ ಮೇಡಮ್ ಮುಂದಾಳತ್ವ ವಹಿಸಿಕೊಂಡಿದ್ದರು. ನಮ್ಮ ತಂಡ  ಉಳಿದೆಲ್ಲರ ತಂಡಕ್ಕಿಂತ ಜಾಸ್ತಿ ಅಂಕ ಗಳಿಸಬೇಕು ಎನ್ನುವುದು ಇವರ  ಆಶಯವಾಗಿತ್ತು. ನಾನು ಹುಡುಗರ ಪಾಲಿಗೆ ಮುಂದಾಳುವಾಗಿದ್ದೆ ಎನ್ನಿ.
         ಹೈಸ್ಕೂಲು 100ಕ್ಕೆ 100 ರಷ್ಟು ಫಲಿತಾಂಶ ಸಾಧಿಸಬೇಕು ಎನ್ನುವ ಮಹತ್ವಾಕಾಂಕ್ಷೆ ನಮ್ಮೆಲ್ಲರದ್ದಾಗಿತ್ತು. ಶಿಕ್ಷಕವೃಂದ ಕೂಡ  ಈ ಕುರಿತಂತೆ ಬಹಳ ಕ್ರಮ ಕೈಗೊಂಡಿದ್ದರು. ಎಸ್ಸೆಲ್ಸಿಯ  ಆರಂಭದ 3 ತಿಂಗಳಿನಲ್ಲಿಯೇ ಎಲ್ಲ ಶಿಕ್ಷಕರೂ ತಮ್ಮ ತಮ್ಮ ವಿಷಯಗಳನ್ನು ಕಲಿಸಿ ಮುಗಿದಿತ್ತು. ನಂತರ ಶುರುವಾಯಿತು ನೋಡಿ ನಮಗೆ ನಿಜವಾದ ಶಿಕ್ಷಣ. ಅಬ್ಬಾ. ಲಕ್ಷಪ್ಪ ಅವರ ಕನಸುಗಳೆಲ್ಲ ೆಷ್ಟು ಚನ್ನಾಗಿದ್ದವು ಅಂದರೆ... ಆಹ್.. ಅವರನ್ನು ಶಿಕ್ಷಣ ಇಲಾಖೆಯಲ್ಲಿ ಹೊಸ ರೀತಿಯ ಕನಸುಗಳನ್ನು ನೇಯಲು ಕಲಿಸಬೇಕು. ಹಾಗಿದ್ದವು. ವಿದ್ಯಾರ್ಥಿಗಳಲ್ಲಿ ತಂಡವನ್ನು ಮಾಡಿದರು. ತಂಡ ತಂಡಗಳ ನಡುವೆ ವಿವಿಧ ವಿಷಯಗಳಲ್ಲಿ ಸ್ಪರ್ಧೆ. ಹೆಚ್ಚು ಅಂಕ ಪಡೆದವರಿಗೆ ತಮ್ಮ ಕೈಯಿಂದಲೇ ಬಹುಮಾನ ವಿತರಣೆ ಮಾಡುತ್ತಿದ್ದರು. ಪ್ರತಿ ದಿನ ಪ್ರತಿ ವಿಷಯಗಳ ಬಗ್ಗೆ ಚರ್ಚಾ ಸ್ಪರ್ಧೆ. ವಿಶೇಷ  ಉಪನ್ಯಾಸ ಬೇರೆ. ಕೊನೆಯ ಎರಡು ತಿಂಗಳಂತೂ.. ಅಬ್ಬಬ್ಬಾ.. ಪ್ರತಿದಿನ ಪರೀಕ್ಷೆ ಮಾಡುತ್ತಿದ್ದರು. ಎಲ್ಲ ವಿಷಯಗಳ ಪರೀಕ್ಷೆ. ಇಷ್ಟೆಲ್ಲ ಮುತುವರ್ಜಿ ವಹಿಸಿದರೂ ಕೂಡ ನಮ್ಮ ಹೈಸ್ಕೂಲು 100% ಫಲಿತಾಂಶ ದಾಖಲಿಸಲೇ ಇಲ್ಲ. ಒಬ್ಬ ಹುಡುಗಿ ನಪಾಸಾಗಿದ್ದಳು. ಫಲಿತಾಂಶ ಶೆ.99ರಷ್ಟಾಗಿತ್ತು. ಇದಕ್ಕೆ ಲಕ್ಷಪ್ಪ ಅವರು ಬಹಳ ಬೇಜಾರು ಮಾಡಿಕೊಂಡಿದ್ದರು.
          ಎಸ್ಸಲ್ಸಿಯಲ್ಲಿದ್ದಾಗ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಪ್ರಮುಖವಾಗಿ ಇಡೀ ಹೈಸ್ಕೂಲಿನಿಂದ ನಾಲ್ಕು ತಂಡಗಳನ್ನು ಮಾಡಲಾಗುತ್ತದೆ. 8, 9 ಹಾಗೂ 10 ನೇ ಕ್ಲಾಸಿನ ಹುಡುಗರದ್ದು ನಾಲ್ಕು ಹಾಗೂ ಹುಡುಗಿಯರದ್ದು ನಾಲ್ಕು ತಂಡಗಳು. ಈ ತಂಡಗಳಿಗೆ ಒಬ್ಬ ನಾಯಕ. ತಂಡಕ್ಕೊಬ್ಬರು ಶಿಕ್ಷಕರು ಮೇಲ್ವಿಚಾರಕರು. ನಾನೊಂದು ತಂಡದಲ್ಲಿದ್ದೆ. ಉಪನಾಯಕನಾಗಿದ್ದೆ. ನಮ್ಮ ತಂಡದ ಮೇಲ್ವಿಚಾರಣೆಯನ್ನು ಲಕ್ಷಪ್ಪ ಮಾಸ್ತರ್ ನೋಡಿಕೊಳ್ಳುತ್ತಿದ್ದರು. ಹೈಸ್ಕೂಲಿನಲ್ಲಿದ್ದಾಗ ನಮ್ಮ ತಂಡದಲ್ಲಿ ನಾನು ಸಾಂಸ್ಕೃತಿಕ ವಿಭಾಗ ಹಾಗೂ ಕ್ರೀಡೆಯಲ್ಲಿ ಪ್ರಮುಖ ಸ್ಥಾನ ಹೊಂದಿದ್ದೆ. ಹಾಡು ಹೇಳುತ್ತಿದ್ದೆನಾದರೂ ಒಂದೇ ಒಂದು ಬಹುಮಾನ ಪಡೆಯಲಿಲ್ಲ ಬಿಡಿ.
            ಪ್ರತಿ ವಾರ  ಒಂದೊಂದು ಸಾಂಸ್ಕೃತಿಕ ಸ್ಪರ್ಧೆಗಳು ನಡೆಯುತ್ತಿದ್ದವು. ನಾನು ಪ್ರತಿವಾರ ವೂ ಹಾಡುತ್ತಿದ್ದೆ. ಬಹುಮಾನ ಸಿಗಲಿಲ್ಲ ಬಿಡಿ. ಆದರೆ ನನ್ನದೇ ಆದ ಕೆಲವು ವಿಭಾಗಗಳಿದ್ದವು. ಅದರಲ್ಲಿ ನನ್ನನ್ನು ಮೀರಿಸುವವರೇ ಇರುತ್ತಿರಲಿಲ್ಲ. ಕಂಠಪಾಠ ಸ್ಪರ್ಧೆ. ಕನ್ನಡ, ಹಿಂದಿ ಹಾಗೂ ಇಂಗ್ಲೀಷಿನ ಕವಿತೆಗಳನ್ನು ಉರು ಹೊಡೆದು ರಾಗವಾಗಿ ವಾಚನ ಮಾಡುವ ಸ್ಪರ್ಧೆ. ಇದರಲ್ಲಿ ನನ್ನದೇ ಎತ್ತಿದ ಕೈ ಆಗಿತ್ತು. ಅದೇ ರೀತಿ ರಸಪ್ರಶ್ನೆಯಲ್ಲಿ ನನ್ನನ್ನು ಮೀರಿಸುವವರೇ ಇರಲಿಲ್ಲ. ಇವುಗಳಲ್ಲಿ ಸಾಕಷ್ಟು ಬಹುಮಾನಗಳು ಬಂದಿವೆ ಬಿಡಿ.
           ಕ್ರೀಡಾ ಸ್ಪರ್ಧೆಗಳಲ್ಲಿ ನಾನು ಪಾಲ್ಗೊಳ್ಳುತ್ತಿದ್ದೆ. ಸಿಕ್ಕಾಪಟ್ಟೆ ಓಡುತ್ತಿದ್ದೆ. ಆದರೆ ಮೊದಲ ಸ್ಥಾನ ಯಾವತ್ತೂ ಸಿಕ್ಕಿಲ್ಲ. ಎರಡು ಅಥವಾ ಮೂರನೇ ಸ್ಥಾನ ಸಿಕ್ಕಿದೆ. ತಂಡ ವಿಭಾಗದಲ್ಲಿ ರಿಲೇಯಲ್ಲಿ ಪಾಲ್ಗೊಂಡಿದ್ದೆ. ಬಹುಮಾನಗಳು ಬಂದಿರಲಿಲ್ಲ. ಕಬ್ಬಡ್ಡಿಯಲ್ಲಿ ತಂಡದ ಭಾಗವಾಗಿದ್ದೆ. ಕೋಕೋ ಚನ್ನಾಗಿ ಆಡುತ್ತಿದ್ದೆ. ಅದರಲ್ಲೂ ತಂಡದ ಭಾಗವಾಗಿದ್ದೆ. ಲಾಂಗ್ ಜಂಪ್ ನಲ್ಲಿ ಪಾಲ್ಗೊಳ್ಳುತ್ತಿದ್ದೆ. ಖಾಯಂ ದ್ವಿತೀಯ ಸ್ಥಾನ ನನಗೆ ಕಟ್ಟಿಟ್ಟ ಬುತ್ತಿಯಾಗಿತ್ತು. ಕ್ರಿಕೆಟ್ ತಂಡದ ಕ್ಯಾಪ್ಟನ್ ಆಗಿದ್ದೆ. ಇಲ್ಲೊಂದು ಇಂಟರೆಸ್ಟಿಂಗ್ ವಿಷಯವಿದೆ. ಅದನ್ನು ಹೇಳಲೇಬೇಕು. ಫೈನಲ್ ಮ್ಯಾಚ್. ಹಾಗೂ ಹೀಗೂ ಫೈನಲ್ ತಲುಪಿದ್ದೆವು. ನಮಗೆ ಮೊದಲ ಬ್ಯಾಟಿಂಗ್ ಸಿಕ್ಕಿತ್ತು. ನಾನು ಕ್ಯಾಪ್ಟನ್ ಲೀಗ್ ಪಂದ್ಯಗಳಲ್ಲಿ ಚನ್ನಾಗಿ ಆಡಿರಲಿಲ್ಲ. ಫೈನಲ್ ಪಂದ್ಯ ಚನ್ನಾಗಿ ಆಡಬೇಕೆಂಬ ನಿರ್ಧಾರದೊಂದಿಗೆ ಕ್ರೀಸಿಗೆ ಹೋಗಿದ್ದೆ. ಬಿಡಿ ಆವಾಗ ಅಂತಹ ಹೆಸರಾಂತ ಆಟಗಾರನೇನಲ್ಲ ನಾನು. ಕುಲ್ಡಂಬಲ್ಡಿ ಶಾಟ್ ನನ್ನದು. ತಾಗಿದರೆ ಬೌಂಡರಿ. ಇಲ್ಲದಂರೆ ಜೋರಾಗಿ ಬೀಸುವ ಗಾಳಿ ಅಷ್ಟೇ. ಮೊದಲ ಎರಡು ಬಾಲುಗಳು ಎಳೆದು ಬಾರಿಸಿದೆ. ಬೌಂಡರಿಯಾಗಿತ್ತು.
              ನಮ್ಮ ಕ್ರಿಕೆಟ್ ಗ್ರೌಂಡಿನಲ್ಲಿ ವಿಶಿಷ್ಟ ನಿಯಮ ಒಂದಿತ್ತು. ಗ್ರೌಂಡ್ ದೊಡ್ಡದಿದ್ದರೂ ಕೀಪರ್ ಹಿಂಭಾಗ  ಮಾತ್ರ ದೊಡ್ಡದಾಗಿರಲಿಲ್ಲ. ಅಲ್ಲೊಂದು ದೊಡ್ಡ ಕೊಡ್ಲು ಇತ್ತು. ಆ ಕೊಡ್ಲಿಗೆ ಬಾಲ್ ತಾಗಿದರೆ 2 ರನ್ ಡಿಕ್ಲೇರ್ ಆಗುತ್ತಿತ್ತು. ನಾನು ಕೂಡ ಮೂರನೇ ಬಾಲ್ ಗೆ ಬ್ಯಾಟ್ ಬೀಸಿದೆ. ಎಡ್ಜ್ ಆಗಿ ಕೀಪರ್ ಹಿಂದೆ ಓಡಿತು. ನಾನು ಹೆಂಗಂದರೂ 2 ರನ್ ಡಿಕ್ಲೇರ ಬಿಡು ಎಂದುಕೊಂಡು ಅರ್ಧ ಪಿಚ್ಚಿಗೆ ಓಡಿದೆ. ಬಾಲ್ ಹೋಗಲೇ ಇಲ್ಲ. ಯಾರೋ ಕೂಗಿದರು. ಓಡು ಓಡು ಅಂತ. ನಾನು ಓಡಿದೆ. 2ನೇ ರನ್ ಗೆ ಮರಳುವಾಗ ರನ್ ಔಟ್ ಆದೆ. ಆಗ ಲಕ್ಷಪ್ಪ ಅವರ ಮುಖ ನೋಡಬೇಕಿತ್ತು ಕಣ್ರೀ. ಗಲಾಟೆಗೆ ಇಳಿದಿದ್ದರು. 2 ರನ್ ಡಿಕ್ಲೇರ್ ಇದ್ದಿದ್ದಕ್ಕೆ ವಿನಯ ರನ್ ಓಡಲಿಲ್ಲ. ನೀವು ಹೇಗೆ ರನೌಟ್ ಮಾಡಿದಿರಿ. ಇದು ಸರಿಯಲ್ಲ. ನಾಟೌಟ್.. ನಾಟೌಟ್ ಎಂದು ಉಳಿದ ಶಿಕ್ಷಕರ ಜೊತೆಗೆ ಗಲಾಟೆಗೆ ನಿಂತಿದ್ದರು. ಕೊನೆಗೆ ಅವರ ಗಲಾಟೆಗೆ ಉಳಿದವರು ಸೊಪ್ಪು ಹಾಕಲಿಲ್ಲ. ಕೊನೆಗೆ ಅಲವತ್ತುಕೊಂಡ ಅವರು ನಮ್ ಮ್ಯಾಚ್ ತೆಗೆದ್ರಿ ನೀವೆಲ್ಲ ಸೇರ್ಕೊಂಡು ಎಂದರು. ನಾನು ಸುಮ್ಮನಾಗಿದ್ದೆ. ನಮ್ಮ ತಂಡ ಗೌರವಾರ್ಹ ಮೊತ್ತವನ್ನೇನೋ ಸಂಪಾದಿಸಿತ್ತು. ನಂತರ  ಎದುರಾಳಿ ತಂಡ ಬ್ಯಾಟ್ ಮಾಡಲು ಬಂದಾಗ ನಾನು ಬೌಲಿಂಗನ್ನೂ ಮಾಡಿದ್ದೆ. ಎದುರಾಳಿ ತಂಡ ಜಯಭೇರಿ ಭಾರಿಸಿತ್ತು ಬಿಡಿ.
           ರಸಪ್ರಶ್ನೆಯಲ್ಲಿ ನನ್ನದು ಎತ್ತಿದ ಕೈ ಎಂದು ಹೇಳಿದ್ದೆನಲ್ಲ. ಹೌದು ಆ ದಿನಗಳಲ್ಲಿ ರಸಪ್ರಶ್ನೆ ಕುರಿತಂತೆ ನಾನು ಮುಟ್ಟಿದ್ದೆಲ್ಲ ಚಿನ್ನದಂತೆ ಎಂದರೆ ತಪ್ಪಾಗಲಿಕ್ಕಿಲ್ಲ. ಹೀಗೆ ಒಂದು ರಸಪ್ರಶ್ನೆ ಕಾರ್ಯಕ್ರಮ. ಸಾಗರ-ಶಿವಮೊಗ್ಗ ರಸ್ತೆಯ ಆನಂದಪುರದ ಬೆಕ್ಕಿನ ಕಲ್ಮಠದಲ್ಲಿ ನಡೆದಿತ್ತು. ನನ್ನನ್ನು ಹಾಗೂ ಜೊತೆಗಾರ ಕಿರಣ ನನ್ನು ಕರೆದುಕೊಂಡು ಲಕ್ಷಪ್ಪ ಸರ್ ಬೈಕಿನಲ್ಲಿ ತ್ರಿಬ್ಬಲ್ ರೈಡ್ ಮಾಡಿಕೊಂಡು ಹೋಗಿದ್ದರು. ರಸಪ್ರಶ್ನೆ ನಡೆಯಿತು. ಆಂಗ್ಲ ಮಾಧ್ಯಮ ವಿದ್ಯಾರ್ಥಿಗಳಿಗೆ ತೀವ್ರ ಪೈಪೋಟಿ ಒಡ್ಡಿದ ನಾನು ಅಂತಿಮವಾಗಿ ಮೂರನೇ ಬಹುಮಾನ ಪಡೆದುಕೊಂಡೆ. ಆಗ ಲಕ್ಷಪ್ಪ ಮಾಸ್ತರ್ ಓಡಿಬಂದು ನನ್ನನ್ನು ತಬ್ಬಿಕೊಂಡು ಎತ್ತಿಬಿಟ್ಟಿದ್ದರು.
         ಪ್ರತಿಭಾ ಕಾರಂಜಿ ಎನ್ನುವುದು ನಾನು ಎಸ್ಸೆಲ್ಸಿಯಲ್ಲಿದ್ದಾಗ ಆರಂಭವಾಯಿತು. ನಮ್ಮ ಹೈಸ್ಕೂಲಿನ ತಂಡವನ್ನು ತಾಳಗುಪ್ಪಾದ ಕೇಂದ್ರ ಶಾಲೆಗೆ ಕರೆದೊಯ್ಯಲಾಯಿತು. ಚಿತ್ರಕಲೆ, ರಸಪ್ರಶ್ನೆಗಳಲ್ಲಿ ನಾನು ಭಾಗವಹಿಸಿದ್ದೆ. ರಸಪ್ರಶ್ನೆಯಲ್ಲಿ ದ್ವಿತೀಯ ಸ್ಥಾನ ಬಂದಿತ್ತು. ಚಿತ್ರಕಲೆಯಲ್ಲಿ ನಾನು ತಾಜಮಹಲ್ ಚಿತ್ರ ಬಿಡಿಸಿದ್ದೆ. ಪ್ರಥಮ ಸ್ಥಾನ ಗಳಿಸಿದ್ದೆ. ಇದ್ದಕ್ಕಿದ್ದಂತೆ ಚರ್ಚಾ ಸ್ಪರ್ಧೆಗೆ ಸಂಬಂಧಿಸಿದಂತೆ ನನ್ನ ಹೆಸರನ್ನು ಕೂಗಿದರು. ನನಗೊಮ್ಮೆ ಅಚ್ಚರಿ. ನೋಡಿದರೆ ಲಕ್ಷಪ್ಪ ಸರ್ ನನ್ನ ಹೆಸರನ್ನು ಕೊಟ್ಟಿದ್ದರು. ಮೂರು ಜನ ಭಾಗವಹಿಸಿದ್ದ ಆ ಸ್ಪರ್ಧೆಯಲ್ಲಿ  ನಾನು ಎರಡನೇ ಸ್ಥಾನ ಪಡೆದೆ ಬಿಡಿ.
         ಇಂತಹ ಲಕ್ಷಪ್ಪ ಸರ್ ಗೆ ಇತ್ತೀಚೆಗೆ ಒಮ್ಮೆ ಪೋನ್ ಮಾಡಿದ್ದೆ. ಸಾಗರ ತಾಲೂಕಿನಲ್ಲಿಯೇ ಯಾವುದೋ ಒಂದು ಹೈಸ್ಕೂಲಿನಲ್ಲಿ ಶಿಕ್ಷಕರಾಗಿದ್ದಾರೆ. ನಾನು ಪರಿಚಯ ಮಾಡಿಕೊಂಡೆ. ನೆನಪಿತ್ತು ಅವರಿಗೆ. ಖುಷಿ ಪಟ್ಟರು. ನನ್ನ ಬಗ್ಗೆ ಕೇಳಿದರು. ಆ ಸಂದರ್ಬದಲ್ಲಿ ಶಿಕ್ಷಕರ ಸಮಸ್ಯೆಗಳ ಕುರಿತಂತೆ ಪ್ರತಿಭಟನೆ ನಡೆಯುತ್ತಿತ್ತು. ಅದರ ಬಗ್ಗೆ ವರದಿ ಮಾಡಬೇಕಿತ್ತು ಎಂದವರೆ ಮಾಹಿತಿ ನೀಡಿದರು. ನಾನು ಮಾಡಿದ್ದೆ. ಅದಕ್ಕೆ ವ್ಯಾಪಕ ಪ್ರತಿಕ್ರಿಯೆ ಕೂಡ ಬಂದಿತ್ತು. ಇಂತಹ ಶಿಕ್ಷಕರು ಯಾವಾಗಲೂ ಚನ್ನಾಗಿರಲಿ.

(ಮುಂದುವರಿಯುತ್ತದೆ)
(ಮುಂದಿನ ಕಂತಿನಲ್ಲಿ ಪಿಬಿಎನ್ ಭಾರತಿ ಮೇಡಂ ಬಗ್ಗೆ ಬರೆಯುತ್ತೇನೆ)