Monday, December 7, 2015

ಅಘನಾಶಿನಿ ಕಣಿವೆಯಲ್ಲಿ-30

`ನಮ್ ಬದಿಗೆ ಕಳ್ಳರು ಬಂಜವಡಾ? 30-40ರಷ್ಟು ಜನ ಉತ್ತರ ಭಾರತದ ಬಂದಿದ ಬಂಜ ಹೇಳ್ತಾ ಇದ್ದ. ಬಂದವ್ವು ಮನುಷ್ಯರದ್ದು ಕಿಡ್ನಿ, ಕಣ್ಣು ಎಲ್ಲಾ ಕೀಳ್ತವಡಾ..' ಎಂದು ಮರುದಿನ ಶಾಲೆಯಿಂದ ಬಂದ ರಾಜೀವ ಮನೆಯಲ್ಲಿ ದೊಡ್ಡದಾಗಿ ಹೇಳಿದಾಗ ಎಲ್ಲರ ಕಿವಿ ನೆಟ್ಟಗಾಗಿದ್ದವು.
`ಸುಳ್ ಸುಳ್ ಸುದ್ದಿ ಹೇಳಡಾ ಮಾರಾಯಾ..' ಎಂದು ಮನೆಯ ಹಿರಿಯರು ಗದರುತ್ತಿದ್ದಂತೆ ರಾಜೀವ ಪಟ್ಟು ಬಿಡದೇ ಮತ್ತದೇ ವಿಷಯವನ್ನು ಹೇಳಿದ.
`ಶಾಲೆಯಲ್ಲಿ ದೋಸ್ತರೆಲ್ಲ ಮಾತನಾಡ್ತಾ ಇದ್ದಿದ್ದ. ಈ ವಿಷಯ ಹೇಳಿದ್ದ ನೋಡು. ನೇಪಾಳದ ಬದಿಯವ್ವು ಬಂಜವಡಾ ಹೇಳಿ ಹೇಳ್ತಾ ಇದ್ದ. ಗಂಡಸ್ರು, ಹೆಂಗಸ್ರು ಎಲ್ಲ ಬಂಜವಡಾ ಹೇಳಿ ಹೇಳಕತ್ತಾ ಇದ್ದಿದ್ದ..' ರಾಜೀವ ಮಂಕಾಗಿದ್ದರೂ ಸ್ಫುಟವಾಗಿ ಹೇಳಿದ್ದ.
ರಾಜೀವನ ಮಾತನ್ನು ಕೇಳಿ ಅಕ್ಕ ಪಕ್ಕದ ಮನೆಯವರೆಲ್ಲ ಅಲ್ಲಿಗೆ ಬಂದು ನೆರೆದರು. `ಹೌದು ನಾನೂ ಕೇಳಿದ್ದೆ. ಸಾಗರ ತಾಲೂಕಲ್ಲಿ ಮೊದಲು ಬಂದಿದ್ವಡಾ. ಈಗ ಸಿದ್ದಾಪುರ ಹಾಗೂ ಶಿರಸಿ ಬದಿಗೂ ಬಂಜ್ವಡಾ. ನನ್ ಕಿವಿಗೂ ಬಿಜ್ಜು ಈ ವಿಷ್ಯ. ಯಾರಾದ್ರೂ ಒಬ್ಬೊಬ್ರೇ ಹೋಗ್ತಾ ಇದ್ರೆ ಅವರನ್ನ ತಡೆದು ಅಡ್ಡ ಹಾಕಿ ಕೈಯಲ್ಲಿದ್ದಿದ್ದಿದ್ದು ಕಿತ್ತುಕೊಂಡು ಹೋಗ್ತವಡಾ..' ಪಕ್ಕದಲ್ಲಿದ್ದವರ್ಯಾರೋ ದನಿ ಸೇರಿಸಿದ್ದರು.
`ಹೌದು ಈ ವಿಷಯ ನನ್ನ ಕಿವಿಗೂ ಬಂಜು. ಕಳ್ಳರು ಬಂದಿದ್ದು ನಿಜ. ಅವ್ರು ಕಳ್ಳರೋ, ದರೋಡೆಕೋರರೋ ಅಥವಾ ಮಾನವನ ಅಂಗಾಂಗಗಳನ್ನು ಕದ್ದು ಮಾರಾಟ ಮಾಡುವವರೋ ಗೊತ್ತಿಲ್ಲ ನೋಡಿ.. ಎರಡೋ ಮೂರೋ ಜನರನ್ನು ಅಡ್ಡಗಟ್ಟಿದ್ದು ನನ್ನ ಕಿವಿಗೂ ಬಿಜ್ಜು. ಬೇಣದಗದ್ದೆ ಬಾಬೂನ್ನ ಮೊನ್ನೆ ಸಂಜೆ ಅಡ್ಡಗಟ್ಟಿದಿದ್ವಡಾ ನೋಡಿ. ಹಸುಮನೆಯ ರಾಮಣ್ಣನ್ನೂ ಅಡ್ಡ ಹಾಕಿದಿದ್ದ ಹೇಳಿ ಸುದ್ದಿ ಸಿಕ್ಕಿದ್ದು. ಯಾವುದೋ ಪೇಪರ್ರಲ್ಲೂ ಬಂಜಪಾ..' ಎಂದರು ಇನ್ನೊಬ್ಬರು ಹಿರಿಯರು.
`ಹೌದಾ.. ಆನೂ ಪೇಪರ್ ಓದಿದ್ದಿ. ಅದರಲ್ಲಿ ಗಾಳಿ ಸುದ್ದಿ ಹೇಳೂ ಕೊಟ್ಟಿದ್ವಲಾ..' ಅವರಲ್ಲೇ ಶುರುವಾಗಿತ್ತು ವಾದ.
`ಸುಳ್ಳು ಸುದ್ದಿ ಹೇಳಾಗಿದ್ದರೆ ಬಾಬೂ ಹಾಗೂ ರಾಮಣ್ಣನ ಅಡ್ಡ ಹಾಕಿದವ್ವು ಯಾರು?' ಮತ್ತೊಬ್ಬಾತ ಬಾಯಿ ಹಾಕಿದ್ದ.
ಈ ವಿಷಯವನ್ನು ಮೌನವಾಗಿ ಕೇಳುತ್ತಿದ್ದ ವಿಕ್ರಮ ಹಾಗೂ ವಿನಾಯಕ ದೋರದಲ್ಲಿದ್ದ ಪ್ರದೀಪ, ವಿಜೇತಾರನ್ನು ಕರೆದರು. ಪ್ರದೀಪ ಹಾಗೂ ವಿಜೇತಾರಿಗೆ ಈ ವಿಷಯ ಬಹಳ ಆಸಕ್ತಿಕರ ಎನ್ನಿಸಿತು.
ಅಷ್ಟರಲ್ಲಿ ಮನೆಯ ಮಹಿಳೆಯರೊಬ್ಬರು ಬಂದು `ಕಳ್ಳರು ಆಗಿದ್ರೂ ಆಗಿರಲಕ್ಕು. ನಾವು ಸಣ್ಣಕಿದ್ದಾಗ ಇರಾಣಿ ಮಂದಿ ಅಂತ ಬರ್ತಿದ್ದ. ನೂರು ಜನರ ಇರಾಣಿ ಜನರ ಗುಂಪು ಊರಿಗೆ ಬರುವ ಮೊದಲೇ ಊರ ಮುಖಂಡನ ಬಳಿ ಪರವಾನಗಿ ಪತ್ರವನ್ನು ಪಡೆದುಕೊಳ್ತಾ ಇತ್ತು. ಆ ಪರವಾನಗಿ ಪತ್ರವನ್ನು ಇರಾಣಿ ಮಂದಿಗಳ ಖದರಿಗೆ ಹೆದರಿ ಪಟೇಲ ಬರಕೊಡ್ತಿದ್ದ. ಅಂವ ಬರೆದು ಕೊಡಲೆ ಒಪ್ಪದೇ ಇದ್ದರೆ ಕೈಕಾಲು ತೆಗೆದು ಬರೆದಿಕೊಳ್ತಿದ್ದ. ಮನೆ ಮನೆಗೆ ಬರುತ್ತಿದ್ದ ಇರಾಣಿ ಮಂದಿಗಳಿಗೆ ಅವರು ಕೇಳಿದ್ದನ್ನು ಕೊಡಲೇಬೇಕಿತ್ತು. ಇಲ್ಲೆ ಹೇಳಾಗಿದ್ದರೆ ಮನೆಯಲ್ಲಿನ ಹೆಣ್ಣು ಮಕ್ಕಳನ್ನೂ ಎಳೆದುಕೊಂಡು ಹೋಗ್ತಿದ್ದರು.. ಈಗ ಬಂದಿರುವ ಕಳ್ಳರೂ ಹಂಗೇ ಇದ್ದಿಕ್ಕು..' ಎಂದಾಗ ಮಾತ್ರ ಒಬ್ಬಿಬ್ಬರು ದಿಘಿಲಾದರು. ಪ್ರದೀಪನ ಕಣ್ಣು ಈಗ ಮಾತ್ರ ಬಹಳ ಗಂಭೀರವಾಯಿತು. ಕಳ್ಳರ ಬಂದಿದ್ದು ಹೌದಾ? ಇದರ ಹಿಂದಿನ ಮರ್ಮ ಏನೋ ಇದೆ ಎನ್ನಿಸುತ್ತದೆ ಎಂದು ಆಲೋಚಿಸಿದ.
ಅಷ್ಟರಲ್ಲಿ ಅಲ್ಲಿಗೆ ಬಂದ ಗಣಪಜ್ಜ `ಹೋಯ್.. ಎಂತದ್ರೋ ಅದು..' ಎಂದ. ಪ್ರತಿಯೊಬ್ಬರೂ ತಮಗೆ ತಿಳಿದಿದ್ದ ವಿಷಯವನ್ನು ಮತ್ತೊಮ್ಮೆ ಸಾದ್ಯಂತವಾಗಿ ವಿವರಿಸಿದರು.
`ಇರಾಣಿ ಮಂದಿಗ ಬರ್ತಿದ್ದ ಅನ್ನೊಂದು ನಂಗೂ ಗೊತ್ತಿದ್ದು. ನಾನೂ ನೋಡಿದ್ದಿ ಅವರನ್ನಾ. ಇರಾನ್ ಹಾಗೂ ಇರಾಕ್ ನಡುವೆ ಕೊಲ್ಲಿ ಯುದ್ಧ ನಡೆದಿದ್ದ ಸಂದರ್ಭದಲ್ಲಿ ಇರಾನ್ ನಲ್ಲಿ ನಿರಾಶ್ರಿತರಾದವರು ಹೀಗೆ ಬಂದಿದ್ದರು ಎನ್ನುವುದನ್ನು ನಾನು ಕೇಳಿದ್ದೇನೆ. ಇರಾಕ್ ಸೊಕಾ ಸುಮ್ಮನೆ ಇರಾನ್ ಮೇಲೆ ಯುದ್ಧ ಮಾಡಿತ್ತಲ್ಲ. ಆಗ ಭಾರತ ನಿರಾಶ್ರಿತರಿಗೆ ಎಲ್ಲ ಸೌಲಬ್ಯವನ್ನು ನೀಡುವ ಭರವಸೆ ನೀಡಿತ್ತಲ್ಲ. ಆ ಭರವಸೆಯ ಲಾಭವನ್ನು ಪಡೆದುಕೊಂಡು ಇರಾನಿ ಮಂದಿ ಹೀಗೆ ಮಾಡುತ್ತಿದ್ದರು. ಆದರೆ ಯಾವಾಗ ಇರಾಣಿ ಮಂದಿಗಳು ಮಾಡುತ್ತಿದ್ದ ಹಾವಳಿಯ ವಿವರ ಭಾರತ ಸರ್ಕಾರಕ್ಕೆ ಗೊತ್ತಾಯಿತೋ ಆ ನಂತರದ ದಿನಗಳಲ್ಲಿ ಇರಾಣಿ ಮಂದಿಗಳ ಹಾವಳಿಗೆ ಸರ್ಕಾರ ಕಡಿವಾಣ ಹಾಕಿತು. ಕಟ್ಟು ನಿಟ್ಟಾಗಿ ಇರಾಣಿ ಮಂದಿಗಳ ಮೇಲೆ ಕಣ್ಣಿಟ್ಟು ಅವರನ್ನು ತಂಡು ಮಾಡಿತು. ಆದರೆ ಈಗ ಕಳ್ಳರು ಬಂದಿದ್ದಾರೆ, ಅವರು ಮನುಷ್ಯರ ಅಂಗಾಂಗಗಳನ್ನು ಕಳ್ಳತನ ಮಾಡುತ್ತಾರೆ ಎನ್ನುವುದರ ಬಗ್ಗೆ ನನಗೆ ಅನುಮಾನಗಳಿವೆ. ಈಗೊಂದು ದಶಕದ ಹಿಂದೆ ಇಂಥದ್ದೇ ಸುದ್ದಿಯಾಗಿತ್ತು ನೋಡಿ..'ಎಂದರು ಗಣಪಜ್ಜ.
ಎಲ್ಲರೂ ತದೇಕಚಿತ್ತರಾಗಿ ಕೇಳುತ್ತಿದ್ದಂತೆಯೇ ಮಾತು ಮುಂದುವರಿಸಿದ ಗಣಪಜ್ಜ `ಈಗ್ಗೆ ಒಂದು ದಶಕಗಳ ಹಿಂದೆಯೂ ಇದೇ ರೀತಿ ಕಳ್ಳರು ಬಂದಿದ್ದಾರೆ ಎನ್ನುವ ಸುದ್ದಿ ಹಬ್ಬಿತ್ತು. ಇದೇ ಸುದ್ದಿ ನಂತದಲ್ಲಿ ಯಾವುದೋ ಮೋಹಿನಿ ದಾರಿ ಹೋಕರನ್ನು ಕಾಡುತ್ತಾಳೆ ಎನ್ನುವ ರೀತಿಯೂ ಬದಲಾಗಿತ್ತು. ಜನರು ಗಾಳಿ ಸುದ್ದಿಯ ಜಾಡಿಗೆ ಬಲಿಯಾಗಿದ್ದರು. ಆ ದಿನಗಳಲ್ಲಿ ಪ್ರತಿಯೊಬ್ಬರೂ ತಲೆಗೊಂದರಂತೆ ಮಾತನಾಡಿದ್ದರು. ಆದರೆ ವಾಸ್ತವದಲ್ಲಿ ಅಂತಹ ಗಾಳಿ ಸುದ್ದಿಯ ಹಿಂದಿನ ಅಸಲಿಯತ್ತು ಬೇರೆ ಇತ್ತು ನೋಡಿ..' ಎಂದರು ಅಜ್ಜ.
`ಅಂದರೆ ಕಳ್ಳರು ಬಂದಿದ್ದಾರೆ ಅನ್ನೋದು ಸುಳ್ಳಾ..?' ನಡುವೆ ಬಾಯಿ ಹಾಕಿದ್ದ ಒಬ್ಬರು ಸುಮ್ಮನಿರಲಾರದೇ ಕೇಳಿಯೂ ಬಿಟ್ಟರು.
`ಹೌದು. ಬಹುಶಃ ಕಳ್ಳರು ಬಂದಿದ್ದಾರೆ ಎನ್ನುವುದು ಗಾಳಿ ಸುದ್ದಿಯೇ ಹೌದು. ಇದು ಮರಗಳ್ಳರು, ಕಳ್ಳನಾಟಾ ಮಾಡುವವರು ಹರಿಬಿಡುವ ಗಾಳಿ ಸುದ್ದಿ. ದಶಕದ ಹಿಂದೆ ಇದೇ ಗಾಳಿ ಸುದ್ದಿ ಹಬ್ಬಿದ್ದಾಗಲೂ ಕಳ್ಳ ನಾಟಾ ಹೊಡೆಯುವವರಿಂದಲೇ ಹೀಗಾಗಿದೆ ಎಂಬುದು ಗೊತ್ತಾಗಿತ್ತು. ಈಗಲೂ ಹಾಗೇ ಆಗಿರಬೇಕು..' ಎಂದರು ಗಣಪಜ್ಜ.
`ಹಾಗಾದರೆ ವೈಜಯಂತಿ ಪುರದಲ್ಲಿ ನೇಪಾಳಿ ವ್ಯಕ್ತಿಯೊಬ್ಬನನ್ನು ಊರವರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ ಎನ್ನುವ ಸುದ್ದಿ ಪೇಪರಿನಲ್ಲಿ ಬಂದಿತ್ತಲ್ಲ.. ಅದೇನು..' ಒಬ್ಬಾತ ಕೇಳಿಯೇಬಿಟ್ಟಿದ್ದ.
`ಅದು ನನಗೆ ಗೊತ್ತಿಲ್ಲ. ಆದರೆ ಕಳ್ಳರು ಬಂದಿದ್ದಾರೆ, ಅವರು ಅಡ್ಡಗಟ್ಟಿದ್ದಾರೆ ಎನ್ನುವ ಸುದ್ದಿ ಮಾತ್ರ ಶುದ್ಧ ಸುಳ್ಳು. ಇದು ಕಳ್ಳ ನಾಟಾ ಹೊಡೆಯುವವರು ಹಬ್ಬಿಸಿದ ಸುದ್ದಿಯೇ ಹೌದು..' ಅಜ್ಜ ಖಂಡತುಂಡವಾಗಿ ಹೇಳಿದ್ದರು.
`ಹಾಗಾದರೆ ಬಾಬೂ ಹಾಗೂ ರಾಮಣ್ಣನನ್ನ ಅಡ್ಡಗಟ್ಟಿದ್ದಾರೆ ಎಂದರಲ್ಲ. ಅದೂ ಸುಳ್ಳಾ?..' ಇನ್ನೊಬ್ಬಾತ ವಾದಿಸಿದ್ದ.
`ಅವರನ್ನು ಅಡ್ಡಗಟ್ಟಿದ್ದಾರೆ ಅಂತ ಅವರೇ ಬಂದು ಹೇಳಿದರಾ? ಇಲ್ಲವಲ್ಲ. ಯಾರೋ ಹೇಳಿದ್ದು ತಾನೆ? ಇಷ್ಟಕ್ಕೂ ಈ ಬಾಬೂ ಹಾಗೂ ರಾಮಣ್ಣ ಏನು ಸುಭಗರಲ್ಲವಲ್ಲ.. ನಮ್ಮ ಭಾಗದಲ್ಲಿ ಕಳ್ಳ ನಾಟಾ ಮಾಡುವುದರಲ್ಲಿ ಎತ್ತಿದ ಕೈ ಎಂದು ಹೆಸರಾದವರಲ್ಲವೇ? ಯಾರಾದರೂ ಸಾಮಾನ್ಯ ವ್ಯಕ್ತಿಯನ್ನು ಕಳ್ಳರು ಅಡ್ಡಗಟ್ಟಿದ್ದಾರೆ ಎನ್ನುವ ಸುದ್ದಿ ಹಬ್ಬಿದೆಯಾ ಹೇಳಿ? ಇಲ್ಲ ತಾನೇ? ಕಳ್ಳ ನಾಟಾ ಮಾಡುವ ವ್ಯಕ್ತಿಗಳನ್ನೇ ಕಳ್ಳರು ಅಡ್ಡಗಟ್ಟುತ್ತಾರೆ ಎಂದರೆ ಇದರ ಹಿಂದೆ ಬೇರೆ ಏನೋ ಹುನ್ನಾರವಿದೆ ಎನ್ನಿಸುವುದಿಲ್ಲವೇ?' ಗಣಪಜ್ಜ ಹೇಳಿದ್ದ. ಆತನ ಮಾತು ಕೇಳಿದವರಿಗೆಲ್ಲ ಏನೋ ಹೊಳೆದಂತಾಯಿತು.
`ಇದು ನಿಸ್ಸಂಶಯವಾಗಿ ಕಳ್ಳನಾಟಾ ಹೊಡೆಯುವುರದ್ದೇ ಕೆಲಸ. ತಮ್ಮ ಕೆಲಸ ಮಾಡಿಕೊಳ್ಳಲು ನೇಪಾಳಿ ಕಳ್ಳರ ಹೆಸರನ್ನು ಹೇಳಿ ಬಿಟ್ಟಿದ್ದಾರೆ ಅಷ್ಟೇ. ಬೇಕಾದರೆ ಪರೀಕ್ಷೆ ಮಾಡಿಕೊಳ್ಳಿ..' ಎಂದು ಹೇಳಿದವರೇ ಹೆಗಲ ಮೇಲಿದ್ದ ಬಿಳಿಯ ಟರ್ಕೀಸ್ ಟವೇಲನ್ನು ಒಮ್ಮೆ ಝಾಡಿಸಿ `ಇದೇ ಫರ್ಮಾನು..' ಎಂಬಂತೆ ಎದ್ದು ಹೋದರು ಗಣಪಜ್ಜ. ಒಮ್ಮೆ ಅಲ್ಲಿ ದೀರ್ಘ ಮೌನ ಆವರಿಸಿತು. ಆ ನಂತರ ಪ್ರತಿಯೊಬ್ಬರೂ ಒಬ್ಬರ ಹಿಂದೆ ಒಬ್ಬರಂತೆ ನಿಧಾನವಾಗಿ ಜಾಗ ಖಾಲಿ ಮಾಡಿದರು. ಆದರೆ ಪ್ರದೀಪ ಹಾಗೂ ಆತನ ಬಳಗಕ್ಕೆ ಮಾತ್ರ ಹೊಸತೇನೋ ಮಾರ್ಗ ಸಿಕ್ಕಂತಾಗಿತ್ತು. ತಕ್ಷಣ ಪ್ರದೀಪ ಅಲ್ಲಿಯೇ ಇದ್ದ ಪೋನ್ ಬಳಿ ತೆರಳಿ ಚಕಚಕನೆ ನಂಬರ್ ಡಯಲ್ ಮಾಡಿದ. ಅರೆಘಳಿಗೆಯಲ್ಲಿ ಯಾರಿಗೋ ಪೋನ್ ಮಾಡಿ ವಿಷಯವನ್ನು ತಿಳಿಸಿದ. ಮತ್ತೆ ಅರೆ ಘಳಿಗೆಯಲ್ಲಿ ಪ್ರದೀಪ ಪೋನ್ ಮಾಡಿದ್ದ ವ್ಯಕ್ತಿ ಏನೋ ಹೇಳಿದಂತಾಯಿತು. ಪ್ರದೀಪ ಪೋನ್ ಇರಿಸಿ ಉಳಿದವರ ಬಳಿ ಬಂದ.
ವಿಕ್ರಮ ಅಸಹನೆಯಿಂದ `ಯಾರಿಗೆ ಪೋನ್ ಮಾಡಿದ್ದು? ಯಾಕೆ ಮಾಡಿದ್ದು? ಮಾರಾಯಾ ಮೊದಲಿನಿಂದಲೂ ನೀನು ಏನೋ ಒಂದು ರೀತಿ ನಿಘೂಢ ಕೆಲಸ ಮಾಡ್ತಾ ಇದ್ದೀಯಾ? ಹೇಳ್ಕೊಂಡು ಮಾಡು. ಅದೇನು ಅಂತ. ನಿನ್ನ ಮೇಲೆ ಬಹಳ ಅನುಮಾನ ಬರ್ತಾ ಇದೆ. ಇಷ್ಟಕ್ಕೂ ನೀನು ಯಾರು ಅಂತ. ಕೇಳಿದರೆ ಏನೋ ಸುಳ್ಳು ಹೇಳ್ತೀಯಲ್ಲಾ.. ಈಗ ನೀನು ನಿಜ ಹೇಳಲೇಬೇಕು..' ಎಂದ. ವಿನಾಯಕ, ವಿಜೇತಾರು ವಿಕ್ರಮನ ಜೊತೆಗೂಡಿದ್ದರು. ಪ್ರದೀಪ ಒಮ್ಮೆ ಕಕ್ಕಾಬಿಕ್ಕಿಯಾಗಿದ್ದ.

(ಮುಂದುವರಿಯುತ್ತದೆ..)

Wednesday, December 2, 2015

ಸಜ್ಜನರೊಡನೆ.. ಸಜ್ಜನಘಡದ ಕಡೆಗೆ -4

(ಶಿವಾಜಿ ಕಟ್ಟಿಸಿದ ಸಜ್ಜನಘಡದ ಮಹಾದ್ವಾರ)
            ನಮ್ಮ ಪಾಲಿಗೆ ನಿಲೇಶ ಮಂತ್ರಿ ಆಟೋ ಚಾಲಕ ಅಷ್ಟೇ ಆಗಿರಲಿಲ್ಲ. ಗೈಡ್ ಕೂಡ ಆಗಿದ್ದ. ಸಜ್ಜನಘಡದ ಅಂಕುಡೊಂಕಿನ ದಾರಿಯಲ್ಲಿ ನಮ್ಮನ್ನು ಕರೆದೊಯ್ಯುತ್ತಿದ್ದ ಮಂತ್ರಿ ಅಲ್ಲೊಂದು ಕಡೆ 50 ಅಡಿ ಎತ್ತರದ ಹನುಮಂತನ ಪ್ರತಿಮೆ ತೋರಿಸಿದ. `ಮುಂಬಯಿ ಕಡೆಯ ಒಂದಿಬ್ಬರು ರಿಚ್ ಪಾರ್ಟಿ ಬಂದು ಈ ಪ್ರದೇಶದಲ್ಲಿ ಜಮೀನನ್ನು ಕೊಂಡು ಕಾಲೇಜು ಸೇರಿದಂತೆ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸುತ್ತಿದ್ದಾರೆ. ಇದೋ ನೋಡಿ, ಈ ಹನುಮಂತನ ಪ್ರತಿಮ ನಿರ್ಮಾಣ ಮಾಡಿದವರೂ ಅಂತವರೇ..' ಎಂದ.
            ನಿಧಾನವಾಗಿ ಬೆಳಗಾಗಿತ್ತು. ನಿಮಗೆ ನನ್ನ ಕಡೆಯಿಂದ ತೋಫಾ ಇದೆ ಎಂದಿದ್ದೆನಲ್ಲ. ತೋರಿಸುತ್ತೇನೆ ಬನ್ನಿ ಎಂದವರೇ ಸಜ್ಜನಘಡಕ್ಕೆ ಬಲಕ್ಕೆ ತಿರುಗುವ ಕ್ರಾಸಿನಿಂದ ಸೀದಾ ಮುಂದಕ್ಕೆ ಆಟೋ ಚಾಲನೆ ಮಾಡಿದರು. ಮಾಡಿದವರೇ ಅಲ್ಲೊಂದು ಕಡೆ ಗುಡ್ಡದ ಮರುಕಲಿನಲ್ಲಿ ಆಟೋ ನಿಲ್ಲಿ ಇಳೀರಿ ಎಂದರು. ನಾವೆಲ್ಲ ಇಳಿದೆವು. ಇಳಿದಂತೆ ರಸ್ತೆಯನ್ನು ದಾಟಿ ಗುಡ್ಡವನ್ನು ಹತ್ತಿಸಿದರು ನಿಲೇಶ ಮಂತ್ರಿ. ಅಲ್ಲೊಂದು ಕಡೆ ನಮಗೆ ನಮ್ಮಷ್ಟೇ ದೊಡ್ಡ ಗಾತ್ರದ ಪೈಪ್ ಒಂದು ಕಾಣಿಸಿತು. ಪಕ್ಕದಲ್ಲಿದ್ದ ದೈತ್ಯ ಗುಡ್ಡವೊಂದರಿಂದ ಬಂದಿದ್ದ ಪೈಪ್ ಅದು. ಸೀದಾ ಸಜ್ಜನಘಡದ ಗುಡ್ಡದ ಮೇಲಕ್ಕೆ ಹಾಕಲಾಗಿತ್ತು. ನಾವೆಲ್ಲ ವಿಸ್ಮಯದಿಂದ ನೋಡುತ್ತಿದ್ದಂತೆ ಸಜ್ಜನಘಡಕ್ಕೆ ಪಕ್ಕದ ಗುಡ್ಡದಿಂದ ನೀರನ್ನು ಹರಿಸಲಾಗುತ್ತದೆ. ಅದಕ್ಕೆ ಈ ಪೈಪ್ ಹಾಕಲಾಗಿದೆ ಎಂದರು ನಿಲೇಶ ಮಂತ್ರಿ. ನಾವು ಒಮ್ಮೆ ಬೆರಗಾದೆವು. ಗುರುತ್ವಾಕರ್ಷಣ ಶಕ್ತಿಯನ್ನು ಬಳಕೆ ಮಾಡಿಕೊಂಡು ನೀರಿನ ಪೈಪ್ ಹಾಕಿರುವುದು ಖುಷಿಯನ್ನೂ ತಂದಿತು.
             ಗುಡ್ಡದ ಮರುಕಲನ್ನು ದಾಟಿ ನೋಡಿದ ನಮಗೆ ದೂರದ ಕಣಿವೆಯಲ್ಲೊಂದು ಅಣೆಕಟ್ಟು ಕಾಣಿಸಿತು. ಕೃಷ್ಣಾ ನದಿಯ ಉಪನದಿಗೆ ಅಣೆಕಟ್ಟನ್ನು ನಿರ್ಮಾಣ ಮಾಡಲಾಗಿತ್ತು. ಸಾಗರೋಪಾದಿಯಲ್ಲಿ ಕಾಣುತ್ತಿತ್ತು. ಮಂಜು ಬೀಳುತ್ತಿದ್ದ ಕಾರಣ ಸ್ವರ್ಗದ ಸಿರಿ ಭುವಿಗೆ ಇಳಿದು ಬಂದಿದೆಯೇನೋ ಎಂಬಂತೆ ಕಾಣಿಸಿತು. ನೋಡಿ ಈ ಅಣೆಕಟ್ಟನ್ನು ನಾಲ್ಕು ಮೀಟರ್ ಏರಿಸುತ್ತಾರಂತೆ ಎಂದು ಅಲ್ಲಿಯೇ ಮಾಹಿತಿ ನೀಡಿದರು ಮಂತ್ರಿ. ಕೆಲಕಾಲ ಅಲ್ಲಿ ನಿಂತು ಸಾಕಷ್ಟು ಪೋಟೋಗಳನ್ನು ಕ್ಲಿಕ್ಕಿಸಿಕೊಂಡೆವು.
            ವಾಪಾಸು ಬಂದು ಮತ್ತೆ ಆಟೋವನ್ನು ಏರಿದೆವು. ತಿರುಗಿಸಿದ ಆಟೋವನ್ನು ಸೀದಾ ಸಜ್ಜನಘಡದ ಕಡೆಗೆ ಚಲಾಯಿಸಿದ. ಮತ್ತೊಂದೆರಡು ಅಂಕುಡೊಂಕನ್ನು ಹಾದು ಹೋದ ಆಟೋ ಒಂದು ಕಿಲೋಮೀಟರ್ ನಂತರ ಸಜ್ಜನಘಡವನ್ನು ತಲುಪಿತು. ಸಜ್ಜನಘಡದ ಪ್ರಮುಖ ದ್ವಾರದಿಂದ ಬಹುದೂರದಲ್ಲಿಯೇ ಆಟೋ ನಿಲ್ಲಿಸಿದ ಮಂತ್ರಿ. ಸಾಕಷ್ಟು ವಾಹನಗಳು ಆಗಲೇ ಸಜ್ಜನಘಡಕ್ಕೆ ಬಂದಿದ್ದವು. ಆಟೋ ಇಳಿದವರೇ ನಿಲೇಶ ಮಂತ್ರಿಯ ಜೊತೆ ನಾನು, ಪ್ರಶಾಂತ ಹಾಗೂ ಸಂಜಯ ನಿಂತುಕೊಂಡು ಪೋಟೋ ತೆಗೆಸಿಕೊಂಡೆವು. ಹೋಗುವ ಮುನ್ನ ಬಾಯಿತುಂಬಾ ನಮ್ಮನ್ನು ಹರಸಿ ಹೋದ ನಿಲೇಶ ಮಂತ್ರಿ. ಈ ಗಡಬಡೆಯಲ್ಲಿ ನಿಲೇಶ ಮಂತ್ರಿಯ ಮೊಬೈಲ್ ನಂಬರ್ ತೆಗೆದುಕೊಳ್ಳುವುದನ್ನು ನಾವು ಮರೆತೇ ಬಿಟ್ಟಿದ್ದೆವು ಬಿಡಿ.
           ಮೂವರೂ ಸಜ್ಜನಘಡವನ್ನು ಏರಲು ಹೊರಟ ಸಂದರ್ಭದಲ್ಲಿ ಚುಮು ಚುಮು ಮಳೆ. 17ನೇ ಶತಮಾನದಲ್ಲಿ ನಿರ್ಮಾಣ ಮಾಡಲಾಗಿದ್ದ ಕಲ್ಲಿನ ದಾಡಿ. ದೈತ್ಯ ಕೋಟೆ. ನಡೆದು ಸಾಗಿದೆವು. ಅಲ್ಲೊಂದು ಕಡೆ ಶಿವಾಜಿ ಮಹಾರಾಜ ನಿರ್ಮಾಣ ಮಾಡಿದ್ದ ಬೃಹತ್ ದ್ವಾರವೊಂದು ನಮ್ಮನ್ನು ಸ್ವಾಗತಿಸಿತು. ಈ ದ್ವಾರದ ಬಳಿ ನಾವೆಲ್ಲ ಮತ್ತೆ ಪೋಟೋ ತೆಗೆಸಿಕೊಂಡೆವು. ದೈತ್ಯ ದ್ವಾರಕಮಾನನ್ನು ಕಲ್ಲಿನಿಂದ ಮಾಡಿದ್ದರೆ ಅದಕ್ಕೆ ಮಾಡಲಾಗಿದ್ದ ಬಾಗಿಲು ಮರ ಹಾಗೂ ಕಬ್ಬಿಣದ್ದಾಗಿತ್ತು. ಸೀದಾ ಒಳನಡೆದ ನಮಗೆ ಅಲ್ಲೊಂದು ಮ್ಯಾಪ್ ಕಾಣಿಸಿತು. ಮುನ್ನಡೆದೆವು.
            ಮೂರ್ನಾಲ್ಕು ಕಟ್ಟಡಗಳನ್ನು ದಾಟಿ ಮುಂದಕ್ಕೆ ಸಾಗಿದ ನಮಗೆ ಸ್ಥಳಿಯರ್ಯಾರೋ ಸ್ನಾನ ಮಾಡುವ ಸ್ಥಳ ತೋರಿಸಿದರು. ಬಿಸಿನೀರು ಕೂಡ ಬರ್ತದೆ. ಸ್ನಾನ ಮಾಡಬಹುದು ಎಂದರು. ಪ್ರಶಾಂತ ಭಾವ ಮೊದಲು ಸ್ನಾನಕ್ಕೆ ಹೋದ. ಆತನ ನಂತರ ನಾನು, ನನ್ನ ನಂತರ ಸಂಜಯ ಸ್ನಾನ ಮುಗಿಸಿದ. ಸ್ನಾನ ಮುಗಿಸಿ ಶುಭ್ರ ಬಿಳಿ ಬಣ್ಣದ ಲುಂಗಿ ಹಾಗೂ ಉತ್ತರೀಯವನ್ನು ಹೊದ್ದು ಮುನ್ನಡೆದೆವು. ನಮ್ಮ ಧಿರಿಸು ಎಂತವರನ್ನೂ ಮೋಡಿ ಮಾಡುವಂತಿತ್ತು. ವಾಪಾಸು ಬಂದು ಛತ್ರವೊಂದರಲ್ಲಿ ನಮ್ಮ ಲಗೇಜನ್ನು ಇರಿಸಲು ಅನುವಾದೆವು. ನಮ್ಮ ದಿರಿಸನ್ನು ನೋಡಿ ಬೆರಗಾದ ಆ ಛದ್ರದ ಉಸ್ತುವಾರಿ ನೋಡಿಕೊಂಡವರು ನಮಗೆ ಪ್ರತ್ಯೇಕ ಕೋಣೆಯೊಂದನ್ನು ನೀಡಿದರು. ಈ ಕೋಣೆಯಲ್ಲಿ ನಮ್ಮ ಲಗೇಜನ್ನು ಇರಿಸಿ ಸಮರ್ಥ ರಾಮದಾಸರ ಆರಾಧ್ಯ ದೈವವನ್ನು ನೋಡಲು ಮುನ್ನಡೆದೆವು.
            ಆರಂಭದಲ್ಲಿಯೇ ಸದ್ಗರು ಶ್ರೀಧರಸ್ವಾಮಿಗಳು ತಪಸ್ಸನ್ನಾಚರಿಸಿದ ಶ್ರೀಧರ ಕುಟಿ ನಮ್ಮ ಸೆಳೆಯಿತು. ಸೀದಾ ಒಳಗೆ ಹೊರಟೆವು. ಶ್ರೀಧರ ಸ್ವಾಮಿಗಳ ಭವ್ಯ ಮೂರ್ತಿಯೊಂದು ಕೋಣೆಯೊಳಗೆ ಬೆಳಗುತ್ತಿತ್ತು. ಅದರ ಹೊರಭಾಗದಲ್ಲಿ ಕೆಲಕಾಲ ನಿಂತ ನಾವು ನಂತರ ಧ್ಯಾನಕ್ಕೆ ಕುಳಿತೆವು. ಕೆಲಕಾಲ ಮೈಮರೆತು ಧ್ಯಾನ ಮಾಡುತ್ತಿದ್ದಂತೆಯೇ ಕುಟಿಯ ಒಳಭಾಗದಿಂದ ವೃದ್ಧರೊಬ್ಬರು ಬಂದರು. `ನಿಮಗೆ ಎಲ್ಲಾಯಿತು?' ಎಂದು ಕೇಳಿದರು. ನಮಗೆ ಒಮ್ಮೆ ತಬ್ಬಿಬ್ಬು. ಅಚ್ಚ ಮರಾಠಿಯ ಮಧ್ಯದಲ್ಲಿರುವ ಸ್ಥಳದಲ್ಲಿ ಕನ್ನಡ ಭಾಷೆಯಲ್ಲಿ ನಮ್ಮನ್ನು ಮಾತನಾಡಿಸಿದ್ದರು. ಅಷ್ಟೇ ಅಲ್ಲ ಹವ್ಯಕ ಕನ್ನಡದಲ್ಲಿ ಮಾತನಾಡುತ್ತಿದ್ದರು. ನಾವು ಬೆರಗಿನಿಂದ ಕರ್ನಾಟಕ ಎಂದೆವು. `ಅದು ಗೊತ್ತಾತು. ಕರ್ನಾಟಕದಲ್ಲಿ ಎಲ್ಲಿ?' ಎಂದರು. ನಾನು ಹಾಗೂ ಸಂಜಯ ಸಿರಸಿ ಎಂದರೆ ಪ್ರಶಾಂತ ಯಲ್ಲಾಪುರ ಎಂದ.
           `ಬೇಗ.. ನಿಮ್ಮ ಧ್ಯಾನ ಮುಗಿಸಿ ಬನ್ನಿ. ಒಳಗೆ ಪ್ರಸಾದ ಕೊಡುತ್ತೇನೆ..' ಎಂದರು ವೃದ್ಧರು. `ನಿಮಗೆ ಎಲ್ಲಾಯಿತು? ನಮ್ಮನ್ನು ಹೇಗೆ ಗುರುತಿಸಿದಿರಿ..' ಎಂದು ಸಂಜಯ ಕೇಳಿಯೇಬಿಟ್ಟ. `ನನಗೆ ಕುಮಟಾ ಆಯಿತು. ನಿಮ್ಮ ಬಟ್ಟೆ ಹಾಗೂ ನಿಮ್ಮ ಸಂಸ್ಕೃತಿಯೇ ನನಗೆ ಎಲ್ಲವನ್ನು ಹೇಳಿತು. ಬನ್ನಿ ಒಳಗೆ..' ಎಂದವರೇ ನಮ್ಮನ್ನು ಒಳಕ್ಕೆ ಕರೆದೊಯ್ದರು. ಆ ಕುಟಿಯ ಒಳಗೆ ಸಾಮಾನ್ಯರಿಗೆ ಯಾರಿಗೂ ಪ್ರವೇಶವಿರಲಿಲ್ಲ. ಆದರೆ ಆ ವೃದ್ಧರು ನಮ್ಮನ್ನು ಒಳಕ್ಕೆ ಕರೆದೊಯ್ದಿದ್ದರು. ಒಳಕ್ಕೆ ಹೋದವರೇ ಎರಡೂ ಬೊಗಸೆಯನ್ನು ಹಿಡಿಯಿರಿ ಎಂದರು. ಕೈಯಲ್ಲಿ ದೊಡ್ಡದೊಂದು ಬುತ್ತಿಯನ್ನು ನೀಡಿದರು. ತಿನ್ನಿ ಎಂದರು. ಆಹ್. ಎಂತಾ ಮಧುರವಾಗಿತ್ತು ಅದು ಅಂತೀರಿ. ಸಕ್ಕರೆ, ಬೆಣ್ಣೆಯ ಮಿಶ್ರಣವಾದ ಅಂತಹ ಆಹಾರವನ್ನು ಯತಿವರೇಣ್ಯರು ಸೇವಿಸುತ್ತಾರಂತೆ. ತಿಂದು ಮುಗಿಸುತ್ತಿದ್ದಂತೆಯೇ ಬಾಳೆಯ ಹಣ್ಣಿನ ಪಾಯಸವನ್ನು ಬೊಗಸೆ ತುಂಬಾ ನೀಡಿದರು. ಕುಡಿದೆವು. ನಾವು ಬೆಳಿಗ್ಗೆ ಏನನ್ನೂ ತಿಂದಿರಲಿಲ್ಲ. ಆದರೆ ಆ ವೃದ್ಧರು ನೀಡಿದ ಆ ಪ್ರಸಾದವಿದೆಯಲ್ಲ ಅದು ನಮಗೆ ಹಸಿವನ್ನು ಮರೆಸಿತು. ಜೀವನದಲ್ಲಿ ಇಷ್ಟು ರುಚಿಕರವಾದದ್ದನ್ನು ತಿಂದಿಲ್ಲವೇನೋ ಎನ್ನಿಸಿತು. ಸಜ್ಜನಘಡದಲ್ಲಿ ಎಲ್ಲವನ್ನೂ ನೋಡಿಕೊಂಡು ಬನ್ನಿ. ಒಂದು ವೇಳೆ ಇಲ್ಲಿಯೇ ಉಳಿಯುತ್ತೀರಿ ಎಂದಾದರೆ ಈ ಕುಟೀರಕ್ಕೆ ಬನ್ನಿ ಎನ್ನುವ ವೃದ್ಧರು ಹೇಳುತ್ತಿದ್ದಂತೆಯೇ ನಾವು ಶ್ರೀಧರ ಕುಟೀರದಿಂದ ಹೊರಕ್ಕೆ ಬಂದಿದ್ದೆವು.

(ಮುಂದುವರಿಯುತ್ತದೆ)

Friday, November 27, 2015

ಅಘನಾಶಿನಿ ಕಣಿವೆಯಲ್ಲಿ -29

`ಯಾರು ನೀನು?' ಹುಚ್ಚನ ಮಾತಿಗೆ ತಕ್ಷಣವೇ ಪ್ರತಿಕ್ರಿಯೆ ನೀಡಿದ್ದ ಪ್ರದೀಪ.
`ನಾನು ಯಾರು ಬೇಕಾದರೂ ಆಗಿರಲಿ. ಅದು ಮುಖ್ಯವಲ್ಲ. ನಿಮ್ಮ ಕೆಲಸ ಏನಿದೆಯೋ ಅದರ ಕಡೆಗೆ ಗಮನ ಹರಿಸಿಕೊಳ್ಳಿ.. ನಾನು ಹುಚ್ಚ ಎಂದಷ್ಟೇ ನಿಮ್ಮ ಗಮನದಲ್ಲಿರಲಿ. ಅದು ಸಾಕು ಬಿಡಿ..' ಎಂದ ಆ ಹುಚ್ಚ.
`ಇದು ಯಾಕೋ ಸರಿ ಕಾಣುತ್ತಿಲ್ಲ. ನೀನು ಯಾರು? ನಮ್ಮ ಕೆಲಸದ ಬಗ್ಗೆ ನೀನೇಕೆ ಹೇಳುತ್ತಿದ್ದೀಯಾ?' ಈ ಸಾರಿ ಉತ್ತರ ನೀಡುವ ಸರದಿ ವಿಕ್ರಮನದ್ದಾಗಿತ್ತು.
`ಆಗಲೇ ಹೇಳಿದೆನಲ್ಲ. ನಾನು ಹುಚ್ಚ. ನೀವೇ ನನ್ನನ್ನು ಉಂಚಳ್ಳಿ ಜಲಪಾತದ ಒಡಲಿನಿಂದ ಕಾಪಾಡಿಕೊಂಡು ಬಂದಿದ್ದೀರಲ್ಲ. ನೋಡಿ ನಾನು ಯಾರು ಬೇಕಾದರೂ ಆಗಿರಲಿ. ನಿಮಗೆ ತೊಂದರೆ ಕೊಡುವವನು ನಾನಲ್ಲ. ನಿಮಗೆ ಸಹಾಯ ಮಾಡುವುದು ನನ್ನ ಮುಖ್ಯ ಕೆಲಸ. ನನ್ನಿಂದ ನಿಮಗೆ ಯಾವ ರೀತಿಯ ಸಹಾಯ ಬೇಕು ಎನ್ನುವುದನ್ನು ನೀವು ಹೇಳಿ. ಹೇಳದಿದ್ದರೂ ತೊಂದರೆಯೇನಿಲ್ಲ ಬಿಡಿ..' ಎಂದ ಹುಚ್ಚ.
ಎಲ್ಲರಿಗೂ ಒಮ್ಮೆ ಅಚ್ಚರಿ. ಈತ ನಿಜವಾಗಿಯೂ ಹುಚ್ಚನೇ? ಅಥವಾ ಹುಚ್ಚನ ವೇಷದಲ್ಲಿರುವ ಯಾವುದಾದರೂ ವ್ಯಕ್ತಿಯೋ? ನಮ್ಮ ಮೇಲೆ ನಿಗಾ ವಹಿಸುವ ಸಲುವಾಗಿ ಯಾರಾದರೂ ಬೆನ್ನು ಬಿದ್ದಿದ್ದಾರೋ ಹೇಗೆ ಎನ್ನುವ ಆಲೋಚನೆಗಳೆಲ್ಲ ಮನಸ್ಸಿನಲ್ಲಿ ಮೂಡಿದವು. ಅಷ್ಟರಲ್ಲಿಯೇ ಇನ್ನೊಂದು ಘಟನೆ ನಡೆದು ಹೋಗಿತ್ತು. `ನೋಡಿ ನಿಮ್ಮೆದುರು ಇರುವ ಸವಾಲು ಸಣ್ಣದಲ್ಲ. ಹುಷಾರಾಗಿರಿ. ನೀವು ಈಗಾಗಲೇ ಸಿಂಹದ ಬಾಯಿಗೆ ಕೈ ಹಾಕಿದ್ದೀರಿ. ಈಗಾಗಲೇ ಒಬ್ಬನ ಸಾವಿಗೆ ಕಾರಣರಾಗಿದ್ದೀರಿ. ಶತ್ರು ಸುಮ್ಮನೇ ಇರುವುದಿಲ್ಲ. ನಿಮ್ಮೆದುರು ಸೇಡು ತೀರಿಸಿಕೊಳ್ಳಲು ಕಾಯುತ್ತಿದ್ದಾನೆ. ಪ್ರತಿಯೊಬ್ಬರೂ ಎಚ್ಚರದಿಂದ ಇರಿ. ಭಯ ಬೇಡ. ನಿಮ್ಮ ಚಲನವಲನಗಳನ್ನು ನಾನು ಸಾಧ್ಯವಾದಷ್ಟೂ ಗಮನಿಸುತ್ತಲೇ ಇರುತ್ತೇನೆ.' ಎಂದು ಹೇಳಿದ ಹುಚ್ಚ ಇದ್ದಕ್ಕಿದ್ದಂತೆ ಗಾಡಿಯಿಂದ ಕೆಳಗೆ ಜಿಗಿದೇ ಬಿಟ್ಟ.
ಹುಚ್ಚ ಗಾಡಿಯಿಂದ ಕೆಳಗೆ ಜಿಗಿಯಬಹುದು ಎನ್ನುವುದನ್ನು ಯಾರೂ ನಿರೀಕ್ಷೆ ಮಾಡಿರಲಿಲ್ಲ. ವಾಹನ ಚಾಲನೆ ಮಾಡುತ್ತಿದ್ದ ವಿನಾಯಕ ಹಟಾತ್ತನೆ ಗಾಡಿ ಬ್ರೇಕ್ ಹಾಕಿದ. ಗಾಡಿಯಲ್ಲಿ ಕುಳಿತಿದ್ದವರೆಲ್ಲ ಒಮ್ಮೆ ಮುಗ್ಗರಿಸಿಬಿದ್ದರು. ಪ್ರದೀಪ ಕೂಡ ಹುಚ್ಚನ ಹಿಂದೆ ಅವನಷ್ಟೇ ವೇಗವಾಗಿ ಗಾಡಿಯಿಂದ ಜಿಗಿದಿದ್ದ. ಅವನ ಹಿಂದೆ ವಿಕ್ರಮ ಕೂಡ ಇಳಿದಿದ್ದ. ಹುಚ್ಚನ ಬಗ್ಗೆ ಬಹಳ ಅಚ್ಚರಿಯಾಗಿತ್ತು. ಆತನನ್ನು ಹಿಡಿಯುವುದು ವಿಕ್ರಮ ಹಾಗೂ ಪ್ರದೀಪನ ಉದ್ದೇಶವಾಗಿತ್ತು. ಆದರೆ ವಾಹನದಿಂದ ಜಿಗಿದಿದ್ದ ಹುಚ್ಚ ಪಕ್ಕದ ಕಾಡೊಳಕ್ಕೆ ನುಗ್ಗಿ ಮರೆಯಾಗಿ ಬಿಟ್ಟಿದ್ದ. ಪ್ರದೀಪ ಹಾಗೂ ವಿಕ್ರಮ ಕೂಡ ಹುಚ್ಚನಷ್ಟೇ ವೇಗವಾಗಿ ಕಾಡೊಳಗೆ ನುಗ್ಗಿದ್ದರೂ ಅರೆಘಳಿಗೆಯಲ್ಲಿ ಆತ ತಪ್ಪಿಸಿಕೊಂಡು ಬಿಟ್ಟಿದ್ದ. `ಛೇ.. ಸ್ವಲ್ಪದರಲ್ಲಿ ತಪ್ಪಿಸಿಕೊಂಡ..' ಎಂದು ಗೊಣಗಿದ ಪ್ರದೀಪ.
`ಇಂವ ಯಾರು ಮಾರಾಯಾ. ನಮ್ಮ ಕೆಲಸದ ಬಗ್ಗೆ ಅಷ್ಟು ನಿಖರವಾಗಿ ಹೇಳ್ತಾ ಇದ್ದ. ಇಂವ ಹುಚ್ಚ ಅಂತೂ ಅಲ್ಲ. ಕಾಡುಗಳ್ಳರ ಬಗ್ಗೆ ಸರ್ಕಾರ ಏನಾದರೂ ವಿಶೇಷ ಅಧಿಕಾರಿಯನ್ನು ನೇಮಕ ಮಾಡಿದೆಯಾ? ಅವನು ಇವನೇನಾ? ನಮ್ಮ ಕಾರ್ಯದ ಬಗ್ಗೆ ಎಷ್ಟು ಸಲೀಸಾಗಿ ಹೇಳ್ತಾ ಇದ್ದ. ಒಂದ್ ಸಾರಿ ಎಷ್ಟ್ ಆಶ್ಚರ್ಯ ಆಗಿತ್ತು ಮಾರಾಯಾ..' ಎಂದ ವಿಕ್ರಮ.
`ಹುಂ. ನಂಗೂ ಹಂಗೆ ಅನ್ನಿಸ್ತಾ ಇದ್ದು. ಖಂಡಿತ ಇಂವ ಹುಚ್ಚನಂತೂ ಅಲ್ಲ. ನೋಡು ಏನೇ ಆಗಲಿ, ಇಂವ ಯಾರೇ ಆಗಿರಲಿ, ಇನ್ನುಮುಂದೆ ನಾವು ಬಹಳ ಹುಷಾರಾಗಿ ಇರಬೇಕು. ಅಷ್ಟೇ ಅಲ್ಲ, ನಮ್ಮ ಕೆಲಸವನ್ನು ಇನ್ನಷ್ಟು ತ್ವರಿತವಾಗಿ ಮಾಡಿ ಮುಗಿಸಬೇಕು. ಇಲ್ಲ ಅಂದರೆ ಸಲ್ಲದ ಸಮಸ್ಯೆಯನ್ನು ತಲೆಯ ಮೇಲೆ ಎಳೆದುಕೊಂಡಂತೆ ಆಗುತ್ತದೆ..' ಎಂದ ಪ್ರದೀಪ.
`ಹೌದು. ನನಗೂ ಹಾಗೆಯೇ ಅನ್ನಿಸುತ್ತಿದೆ. ಅಷ್ಟೇ ಅಲ್ಲ ಈ ಕೆಲಸವನ್ನು ಯಾಕಾದರೂ ಶುರು ಹಚ್ಚಿಕೊಂಡೆನೋ ಎಂದೂ ಅನ್ನಿಸಲು ಆರಂಭಿಸಿದೆ ನೋಡು. ಒಂದು ಸಾರಿ ಕೆಲಸ ಮುಗಿದರೆ ಸಾಕು. ಅಷ್ಟಾಗಿಬಿಟ್ಟಿದೆ...' ವಿಕ್ರಮ ನಿಟ್ಟುಸಿರಿನಿಂದ ಹೇಳಿದ್ದ.
`ಮುಗಿಸೋಣ. ಬೇಗನೇ ಮುಗಿಸಿಬಿಡೋಣ. ಏನ್ ಬೇಕಾದರೂ ಆಗಲಿ..' ಎಂದ ವಿಕ್ರಮ.
ವಾಪಾಸು ಕಾರಿನ ಬಳಿ ಬಂದಕೂಡಲೇ ವಿನಾಯಕ `ಏನಾಯ್ತು? ಸಿಕ್ಕಿದ್ನಾ ಅವ?' ಎಂದು ಕೇಳಿದ. ಇಬ್ಬರೂ ಇಲ್ಲ ಎಂದು ತಲೆಯಲ್ಲಾಡಿಸಿದರು. ಅಷ್ಟರಲ್ಲಿ ಮಧ್ಯದಲ್ಲಿ ಬಾಯಿ ಹಾಕಿದ ರಮ್ಯ `ಅಂವ ಯಾರು? ನಿಮ್ಮ ಕೆಲಸದ ಬಗ್ಗೆ ಏನೋ ಹೇಳಿದನಲ್ಲ. ನಿಜ ಹೇಳಿ. ನೀವು ಯಾವ ಉದ್ದೇಶದಿಂದ ಈ ಕಡೆಗೆ ಬಂದಿದ್ದೀರಿ? ನಿಮಗೆ ಶತ್ರುಗಳು ಇರಲು ಸಾಧ್ಯವಾ? ಆ ಹುಚ್ಚ ಶತ್ರುಗಳ ಬಗ್ಗೆ ಎಚ್ಚರಿಕೆಯಿಂದ ಇರಿ ಎಂದನಲ್ಲ. ಅದರ ಅರ್ಥ ಏನು? ಏನೋ ಮುಚ್ಚಿಡುತ್ತಿದ್ದೀರಿ.. ಹೇಳೀ..' ಎಂದಳು.
`ಏನು ಇಲ್ಲ ಮಾರಾಯ್ತಿ. ಈ ಮರಗಳ್ಳರ ಬಗ್ಗೆ ಹೇಳಿದ್ದು ಆತ. ದಂಟಕಲ್ಲಿನಲ್ಲಿ ಮರ ಕಡಿಯುತ್ತಿದ್ದ ಒಬ್ಬಾತನ ಸಾವಿಗೆ ನಾವು ಕಾರಣರಾದೆವಲ್ಲ. ಅದಕ್ಕೆ ನಮ್ಮ ವಿರುದ್ಧ ಸೇಡು ತೀರಿಸಿಕೊಳ್ಳಲು ಮರಗಳ್ಳರು ಸಜ್ಜಾಗಿದ್ದಾರಂತೆ. ಇದನ್ನೇ ಅವನು ಹೇಳಿದ್ದು..' ವಿಕ್ರಮ ಸಮಜಾಯಿಶಿ ನೀಡಿದ.
`ಅವ ಹುಚ್ಚ. ನಿಮ್ಮ ಬಗ್ಗೆ ಅವನಿಗೆ ಗೊತ್ತಿಲ್ಲ. ಅವ ಯಾಕೆ ನಿಮ್ಮ ಬಳಿ ಬಂದು ಹೇಳಬೇಕು? ಅವನಿಗೆ ನಿಮ್ಮ ಬಳಿ ಹೇಳುವುದರಿಂದ ಆಗುವ ಲಾಭ ಏನು?..?' ರಮ್ಯ ಪಟ್ಟು ಬಿಡದೇ ಕೇಳಿದ್ದಳು.
ನಡುವೆ ಬಾಯಿ ಹಾಕಿದ ವಿನಾಯಕ `ನಿಂಗ್ ಗೊತ್ತಾಗ್ತಿಲ್ಲೆ ಸುಮ್ಮಂಗ್ ಕುತ್ಕ ನೋಡನ. ಅಂವ ಹುಚ್ಚ ಇದ್ದಿಕ್ಕು ಅಥವಾ ಹುಚ್ಚ ಅಲ್ಲದೇ ಇದ್ದಿಕ್ಕು. ಮರಗಳ್ಳರ ಪತ್ತೆಗೆ ಸರ್ಕಾರ ಯಾರನ್ನಾದರೂ ನೇಮಕ ಮಾಡಿಕ್ಕು. ಆ ಅಧಿಕಾರಿಯೇ ಈ ರೀತಿ ಮಾರು ವೇಷದಲ್ಲಿ ಓಡಾಟ ನಡೆಸುತ್ತಿರಬಹುದು. ಆತನಿಗೆ ನಮ್ಮೂರಿನಲ್ಲಿ ಮರಗಳ್ಳರ ಮೇಲೆ ಹಲ್ಲೆ ನಡೆದು, ಒಬ್ಬ ಕಳ್ಳ ನಾಟಾ ಸಾಗಣೆದಾರ ಸತ್ತಿರುವ ಬಗ್ಗೆ ಗೊತ್ತಾಗಿರಲಕ್ಕು. ನಮ್ಮ ಬಗ್ಗೆ ಮಾಹಿತಿ ಕಲೆ ಹಾಕಿರಲಕ್ಕು. ಅದಕ್ಕೆಂತಕ್ ಈ ಥರ ತಲೆಕೆಡಿಸ್ಕಳ್ತೆ?' ಎಂದು ದಬಾಯಿಸಿದ. ರಮ್ಯ ಏನೋ ಹೇಳಲು ಮುಂದಾದವಳು ಹಾಗೆಯೇ ಸುಮ್ಮನಾದಳು.
ಪ್ರತಿಯೊಬ್ಬರಲ್ಲೂ ಹಲವಾರು ಪ್ರಶ್ನೆಗಳಿದ್ದವು. ಯಾವುದನ್ನೂ ಕೇಳಿದರೂ ಸ್ಪಷ್ಟ ಉತ್ತರ ಸಿಗುತ್ತದೆ ಎನ್ನುವ ನಿಂಬಿಕೆ ಇಲ್ಲವಾದ್ದರಿಂದ ಪ್ರತಿಯೊಬ್ಬರ ಪ್ರಶ್ನೆಗಳೂ ಬಾಯಿಂದ ಹೊರಗೆ ಬರಲೇ ಇಲ್ಲ. ಪ್ರತಿಯೊಬ್ಬರೂ ಮೌನವಾಗಿಯೇ ಕಾರಿನಲ್ಲಿ ಕುಳಿತಿದ್ದರು. ವಿನಾಯಕ ಮುಂದಕ್ಕೆ ಕಾರನ್ನು ಚಾಲನೆ ಮಾಡಿದ.
ದಾರಿ ಮಧ್ಯದಲ್ಲಿ ಕೆಲ ದಿನಗಳ ಹಿಂದೆ ಮರಗಳ್ಳರಿಗೂ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳಿಗೂ ಜಟಾಪಟಿ ನಡೆದ ಸ್ಥಳ ಬಂದಿತು. ಅಲ್ಲೊಂದು ಕಡೆ ನಿರ್ಮಾಣ ಮಾಡಲಾಗಿದ್ದ ಚೆಕ್ ಪೋಸ್ಟ್ ಕಿತ್ತು ಹೋಗಿತ್ತು. ಅದನ್ನು ನೋಡಿಕೊಂಡು ಮುಂದಕ್ಕೆ ನಡೆದರು. ಒಂದಿಬ್ಬರು ಅರಣ್ಯ ಇಲಾಖೆಯ ಕಾವಲುಗಾರರು ಮಿಕಿ ಮಿಕಿ ನೋಡುತ್ತ ನಿಂತಿದ್ದರಷ್ಟೇ. ಮರಳಿ ದಂಟಕಲ್ಲನ್ನು ತಲುಪುವ ವೇಳೆಗೆ ಸೂರ್ಯ ಆಗಲೇ ಬಾನಂಚಿಗೆ ಜಾರಿದ್ದ.

(ಮುಂದುವರಿಯುತ್ತದೆ)

Monday, November 2, 2015

ಅಘನಾಶಿನಿ ಕಣಿವೆಯಲ್ಲಿ -28

              ವಿಕ್ರಮ ಸಧ್ಯದಲ್ಲಿಯೇ ಪ್ರಪೋಸ್ ಮಾಡಬಹುದು ಎನ್ನುವ ನಿರೀಕ್ಷೆಯಿತ್ತು. ಆದರೆ ಹೀಗೆ ಉಂಚಳ್ಳಿ ಜಲಪಾತದಲ್ಲಿ ಪ್ರಪೋಸ್ ಮಾಡುತ್ತಾನೆ ಎನ್ನುವುದನ್ನು ವಿಜೇತಾ ನಿರೀಕ್ಷಿಸಿರಲಿಲ್ಲ. ತಕ್ಷಣವೇ ಒಪ್ಪಿಕೊಂಡು ಬಿಡಲಾ ಎಂದು ಆಲೋಚಿಸಿದಳು ವಿಜೇತಾ. ಆದರೆ ವಿಕ್ರಮನನ್ನು ಸ್ವಲ್ಪ ಆಟ ಆಡಿಸೋಣ, ತಕ್ಷಣಕ್ಕೆ ಒಪ್ಪಿಕೊಳ್ಳಬಾರದು ಎಂದುಕೊಂಡಳು. `ನೀನು ನನ್ನ ಲವ್ ಮಾಡ್ತಾ ಇದ್ಯಾ? ಜೋಕ್ ಮಾಡ್ತಾ ಇದ್ದೀಯಾ ಅಥವಾ ತಮಾಷೆಯಾ?' ಎಂದು ಕೇಳಿದಳು ವಿಜೇತಾ.
            `ತಮಾಷೆಯಲ್ಲ. ಇದು ನಿಜ. ಬೇಗ ಹೇಳು ಪ್ಲೀಸ್. ಏನೇ ಇರಲಿ, ನಿನ್ನ ನಿರ್ಧಾರ ತಕ್ಷಣ ತಿಳಿಸು..' ವಿಕ್ರಮ ಗೋಗರೆಯುವ ರೀತಿಯಲ್ಲಿ ಹೇಳಿದ.
             `ನಿಜವಾಗಿಯೂ ನನಗೆ ಆಶ್ಚರ್ಯ ಆಗ್ತಾ ಇದ್ದು ನೋಡು. ಖಂಡಿತ ನೀನು ಈ ರೀತಿ ಆಲೋಚನೆ ಮಾಡ್ತೀಯಾ ಅಂತ ಅಂದ್ಕೊಂಡಿರ್ಲಿಲ್ಲ..'
             `ಅಂದರೆ.. ನಿಂಗೆ ಇಷ್ಟ ಇಲ್ಲವಾ..?' ಎಂದು ಕೇಳಿದ ವಿಕ್ರಮ ಧ್ವನಿಯಲ್ಲಿ ನಿರಾಸೆಯ ಪದರವಿತ್ತು.
            `ಉಹೂಂ. ಇಷ್ಟವಿಲ್ಲ ಅಂತ ಹೇಳಲಾರೆ. ಹಾಗಂತ ಹೂ ಅನ್ನೋದಕ್ಕೂ ಆಗ್ತಾ ಇಲ್ಲ. ಸ್ವಲ್ಪ ಗೊಂದಲ. ನನಗೆ ಆಲೋಚನೆ ಮಾಡೋಕೆ ಸ್ವಲ್ಪ ಟೈಂ ಬೇಕು. ಇನ್ನೊಂದೆರಡು, ಮೂರು ದಿನಗಳಲ್ಲಿ ಹೇಳಲಾ?' ಕೇಳಿದಳು ವಿಜೇತಾ.
           `ಹೂಂ. ಆದರೆ ಬೇಗ ಹೇಳು ಪ್ಲೀಸ್. ಕಾಯುವಿಕೆ ಕಷ್ಟ..' ಎಂದವನು ಪೂರ್ತಿಯಾಗಿ ಶರಣಾದನೋ ಎಂಬಂತಿದ್ದ.
            ಅಷ್ಟರಲ್ಲಿ ಜಲಪಾತದ ಬುಡದ ಗುಂಡಿಯಲ್ಲಿ ಈಸು ಬಿದ್ದಿದ್ದ ವಿನಾಯಕ ಮೇಲಕ್ಕೆ ಬಂದು ವಿಕ್ರಮನ ಬಳಿ `ಏನಪ್ಪಾ.. ಏನ್ ವಿಷ್ಯ. ಹೇಳಿದ್ಯಾ? ಹಣ್ಣೋ.. ಕಾಯೋ..' ಎಂದ.
             ವಿಜೇತಾಳಿಗೆ ಒಮ್ಮೆಲೆ ಅಚ್ಚರಿ. ಅರೇ ಈ ವಿಷ್ಯ ಎಲ್ಲರಿಗೂ ಗೊತ್ತಿದೆಯಲ್ಲ. ನನಗೆ ಮಾತ್ರ ಗೊತ್ತಿರಲಿಲ್ಲ. ಅನುಮಾನ ಇತ್ತಾದರೂ ಎಲ್ಲರಿಗೂ ಗೊತ್ತಾಗಿರಬಹುದು ಎಂದುಕೊಂಡಿರಲಿಲ್ಲವಲ್ಲ ಎಂದುಕೊಂಡಳು. `ಯಾಕಪ್ಪಾ.. ಏನಾಯ್ತು.. ಸಪ್ಪಗಿದ್ದೀಯಾ..' ವಿನಾಯಕ ವಿಕ್ರಮನನ್ನು ಛೇಡಿಸಿದ.
            `ನಾನು ಹೇಳೋದನ್ನೆಲ್ಲ ಹೇಳಿದ್ದಿ ನೋಡಿ ವಿನು. ಸ್ವಲ್ಪ ಟೈಂ ಬೇಕು ಅಂತ ಹೇಳಿದ್ದು. ಇಷ್ಟು ದಿನ ಕಾದು ಕುಳಿತಿದ್ದಿ. ಇನ್ನೊಂದೆರಡು ದಿನ ಕಾಯೋದು ಕಷ್ಟವಾ?..' ವಿಕ್ರಮ ಹೇಳಿದ. ನಾಚಿದ ವಿಜೇತಾ ದೂರದಲ್ಲಿ ನೀರಾಟವಾಡುತ್ತಿದ್ದ ರಮ್ಯಳ ಬಳಿ ಹೋಗಿ ಕುಳಿತುಕೊಂಡಳು.
            ಪ್ರದೀಪ, ವಿಷ್ಣು ಕೂಡ ಈಸು ಬಿದ್ದವರು ಮೇಲೆದ್ದು ಬಂದು ಬಿಸಿಲಿಗೆ ಮೈಯೊಡ್ಡಿ ನಿಂತರು. ವಿಕ್ರಮ ಹಾಗೂ ವಿನಾಯಕ ಇಬ್ಬರೂ ಮಾತನಾಡುತ್ತಲೇ ಉಂಚಳ್ಳಿ ಜಲಪಾತದ ಛಾಯಾಚಿತ್ರಗಳನ್ನು ಕ್ಯಾಮರಾದಲ್ಲಿ ಸೆರೆ ಹಿಡಿಯಲು ಆರಂಭಿಸಿದರು.
ಜಲಪಾತದ ಇತಿಹಾಸವೂ ವಿಶಿಷ್ಟವಾಗಿದೆ. ಜಲಪಾತವನ್ನು ಬ್ರಿಟೀಷ್ ಅಧಿಕಾರಿ ಜಾರ್ಜ್ ಲೂಷಿಂಗ್ ಟನ್ ಎಂಬಾತ ಪತ್ತೆ ಹಚ್ಚಿದ ಕಾರಣಕ್ಕಾಗಿ ಲೂಷಿಂಗ್ ಟನ್ ಜಲಪಾತ ಎನ್ನುವ ಹೆಸರನ್ನೂ ಪಡೆದುಕೊಂಡಿದೆ. ಪಶ್ಚಿಮ ಘಟ್ಟದ ತುದಿಯಿಂದ ಕರಾವಳಿಯತ್ತ ಓಡುವ ನದಿ ಭೊರ್ಗರೆಯುತ್ತ ಇಳಿಯುವುದನ್ನು ನೋಡುವುದೇ ಚಂದ. ಈ ಸಂದರ್ಭದಲ್ಲಿ ಉಂಟಾಗುವ ಸಪ್ಪಳಕ್ಕೆ ಕಿವಿ ಕಿವುಡಾಗುವಂತಾಗುತ್ತದೆ. ಈ ಕಾರಣದಿಂದಲೇ ಇದನ್ನು ಕೆಪ್ಪ ಜೋಗ ಎಂದೂ ಕರೆಯಲಾಗುತ್ತದೆ. ಪ್ರತಿ ವರ್ಷ ಮಳೆಗಾಲದಲ್ಲಿ ಜಲಪಾತ ಚೈತನ್ಯದಿಂದ ಮನಸೆಳೆಯುತ್ತದೆ.
               ಬೋರ್ಘರೆಯುವ ನದಿ ಮಾಡುವ ಸಪ್ಪಳ ಮೂರ್ನಾಲ್ಕು ಕಿ.ಮಿ ದೂರದ ವರೆಗೂ ಕೇಳುತ್ತದೆ. ಗೋಕರ್ಣದ ಆತ್ಮಲಿಂಗದ ಆಕಾರದಲ್ಲಿ ಕಣಿವೆಯಾಳಕ್ಕಿಳಿಯುವ ಜಲಪಾತದ ಚಿತ್ರಣ ಮೈಮನಸ್ಸನ್ನು ಆವರಿಸುತ್ತದೆ. ಜಲಪಾತದ ಎರಡೂ ಕಡೆಗಳಲ್ಲಿರುವ ದೈತ್ಯ ಘಟ್ಟಗಳು, ಬಾನೆತ್ತರಕ್ಕೆ ಚಾಚಿ ನಿಂತ ಮರಗಳು ಜಲಪಾತಕ್ಕೆ ಶೋಭೆಯನ್ನು ನೀಡುತ್ತವೆ. ದಟ್ಟಕಾನನದ ನಡುವೆ ಸೌಂದರ್ಯದ ಖನಿಯಾಗಿ ಬೆಡಗು ಮೂಡಿಸುತ್ತಿರುವ ಜಲಪಾತಕ್ಕೆ ಪ್ರವಾಸಿಗರು ಸಹಸ್ರ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಬೆಂಗಳೂರು, ಮಂಡ್ಯ, ಹಾಸನ, ಕೋಲಾರ, ಮೈಸೂರು, ಚಿಕ್ಕಮಗಳೂರು, ಬಿಜಾಪುರ, ಬಳ್ಳಾರಿ, ಚಿತ್ರದುರ್ಗ, ರಾಯಚೂರು, ಮಹಾರಾಷ್ಟ್ರದ ರತ್ನಗಿರಿ, ಕೊಲ್ಲಾಪುರ, ಪೂಣಾ ಹೀಗೆ ರಾಜ್ಯ ಹಾಗೂ ಹೊರ ರಾಜ್ಯದ ಪ್ರವಾಸಿಗರು ಜಲಪಾತದ ವೀಕ್ಷಣೆಗೆ ಆಗಮಿಸುತ್ತಾರೆ. ವಿಕ್ರಮ ಹಾಗೂ ಗೆಳೆಯರು ಜಲಪಾತ ನೋಡಲು ಹೋಗಿದ್ದಾಗ ಮಾತ್ರ ಸಾಕಷ್ಟು ಜನರಿರಲಿಲ್ಲ. ಅಲ್ಲೊಬ್ಬರು, ಇಲ್ಲೊಬ್ಬರು ಇದ್ದರು ಅಷ್ಟೇ.
              `ಹಸಿವಾಗ್ತಾ ಇದೆ. ಕಟ್ಟಿಸಿಕೊಂಡು ಬಂದಿರುವ ಫಲಾವ್ ನ ಎಲ್ಲಾ ತೆಗಿರಿ..' ಎಂದು ರಮ್ಯ ಕೂಗಿದವಳೇ ದೊಡ್ಡದೊಂದು ಬಂಡೆಯ ಮೇಲೆ ಏರಿ ತಿಂಡಿ ತಿನ್ನಲು ತಯಾರಾಗಿಬಿಟ್ಟಳು. ಉಳಿದವರಿಗೂ ಅದೇ ಸರಿ ಎನ್ನಿಸಿ ರಮ್ಯಳನ್ನು ಹಿಂಬಾಲಿಸಿದರು. ಮದ್ಯಾಹ್ನದ ವೇಳೆಗೆಲ್ಲಾ ಉಂಚಳ್ಳಿ ಜಲಪಾತವನ್ನು ವೀಕ್ಷಣೆ ಮಾಡಿ, ಆ ಭಾಗದಲ್ಲಿ ಸಂಚಾರ ಮಾಡಿದವರು ಮದ್ಯಾಹ್ನದ ನಂತರ ಜಲಪಾತದ ಬುಡದಿಂದ ಮೇಲಕ್ಕೆ ಬಂದರು. ಅಷ್ಟರಲ್ಲಿ ಜಲಪಾತದ ವೀಕ್ಷಣಾ ಗೋಪುರದಲ್ಲಿ ಚಿಕ್ಕದೊಂದು ಗಲಾಟೆಯೆ ನಡೆದಿತ್ತು.
              ಮಾನಸಿಕ ಅಸ್ವಸ್ತ ವ್ಯಕ್ತಿಯೊಬ್ಬ ಆ ಭಾಗದಲ್ಲಿ ಕೆಲ ದಿವಸಗಳಿಂದ ಓಡಾಡುತ್ತಿದ್ದ. ಉಂಚಳ್ಳಿ ಜಲಪಾತದ ಭಾಗದಲ್ಲಿ ಓಡಾಟ ಮಾಡುತ್ತಿದ್ದ ವ್ಯಕ್ತಿ ಅಲ್ಲಿಗೆ ಆಗಮಿಸುವ ಪ್ರವಾಸಿಗರ ಬಳಿ ಊಟ, ತಿಂಡಿಯನ್ನು ಪಡೆದುಕೊಂಡಿದ್ದ. ಕೆಲ ದಿನಗಳ ಕಾಲ ಸುಮ್ಮನೆ ಇದ್ದ ಆ ವ್ಯಕ್ತಿ ನಂತರದ ದಿನಗಳಲ್ಲಿ ಅಲ್ಲಿಗೆ ಆಗಮಿಸುವ ಪ್ರವಾಸಿಗರನ್ನು ಕೆಕ್ಕರಿಸಿ ನೋಡುವುದು, ತೊಂದರೆ ಕೊಡುವುದು ಈ ಮುಂತಾದ ಕೆಲಸಗಳನ್ನು ಮಾಡಲು ಆರಂಭಿಸಿದ. ಇದರಿಂದ ಪ್ರವಾಸಿಗರು ಬೇಸತ್ತಿದ್ದರು. ಸ್ಥಳೀಯರಿಗೆ ಈ ಕುರಿತು ಹೇಳಲಾಗಿ ಒಂದೆರಡು ಸಾರಿ ಮಾನಸಿಕ ಅಸ್ವಸ್ತ ವ್ಯಕ್ತಿಯನ್ನು ಪಕ್ಕದೂರಿಗೆ ಗಡಿಪಾರು ಮಾಡಿ ಬಂದಿದ್ದರು. ಆದರೆ ಹೀಗೆ ಗಡಿಪಾರು ಮಾಡಿ ಬಂದ ಒಂದೆರಡು ದಿನಗಳ ಒಳಗಾಗಿ ಆ ವ್ಯಕ್ತಿ ಮತ್ತೆ ಅಲ್ಲಿ ಪ್ರತ್ಯಕ್ಷನಾಗುತ್ತಿದ್ದ.
          ಮೂರ್ನಾಲ್ಕು ಸಾರಿ ಈ ರೀತಿ ನಡೆದ ನಂತರ ಆ ವ್ಯಕ್ತಿ ಜಲಪಾತ ವೀಕ್ಷಣೆಗೆ ಆಗಮಿಸಿದ್ದ ಪ್ರವಾಸಿಗರೊಬ್ಬರ ಜೊತೆ ಅಸಹ್ಯವಾಗಿ ವರ್ತನೆ ಮಾಡಿದ್ದ. ಇದರಿಂದ ಸಿಟ್ಟಿಗೆದ್ದ ಪ್ರವಾಸಿಗರು ಆತನ ಮೇಲೆ ಹಲ್ಲೆ ಮಾಡಿದ್ದರು. ಪರಿಣಾಮವಾಗಿ ಗಲಾಟೆ ನಡೆದಿತ್ತು. ಮಾನಸಿಕ ಅಸ್ವಸ್ತ ವ್ಯಕ್ತಿ ಹೊಡೆತ ತಾಳಲಾಗದೇ ಕೂಗಾಡುತ್ತಿದ್ದ. ಜೊತೆ ಜೊತೆಯಲ್ಲಿಯೇ ಅವಾಚ್ಯ ಶಬ್ದಗಳಿಂದ ನಿಂದನೆಯನ್ನೂ ಮಾಡುತ್ತಿದ್ದ. ಇದನ್ನು ನೋಡಿದ ಪ್ರದೀಪ ಗಲಾಟೆಯನ್ನು ಬಿಡಿಸಲು ಮುಂದಾದ. ಸಿಟ್ಟಿಗೆದ್ದವರನ್ನು ಸಮಾಧಾನ ಮಾಡಿದ. ಅಷ್ಟೇ ಅಲ್ಲದೇ ಹುಚ್ಚನನ್ನು ಹಿಡಿದುಕೊಂಡು ಬಂದ. ಬಂದವನೇ ಅವನನ್ನು ವಿಕ್ರಮನ ಕಾರಿನಲ್ಲಿ ಕೂರಿಸಿದ.
           ವಿಕ್ರಮನಿಗೆ ಇದು ಅಸಹ್ಯ ಎನ್ನಿಸಿತು. ಯಾರೋ ಹುಚ್ಚನನ್ನು ತಂದು ಗಾಡಿಯಲ್ಲಿ ಕೂರಿಸಿದನಲ್ಲ ಎನ್ನಿಸಿತು. ಸಿಟ್ಟಿನಿಂದ ಪ್ರದೀಪನ ಬಳಿ ಕೂಗಾಡಲು ಆರಂಭಿಸಿದ. `ಇದೆಂತ ಹುಚ್ಚಾಟ ನಿಂದು? ಅವನನ್ನು ಗಾಡಿಯಲ್ಲಿ ಹತ್ತಿಸಿದ್ದು. ಛೇ. ಮೊದ್ಲು ಇಳಿಸು..' ಎಂದ.
            `ಇಲ್ಲ ಮಾರಾಯಾ.. ಅವನನ್ನು ಬೇರೆ ಎಲ್ಲಾದರೂ ಕರೆದುಕೊಂಡು ಹೋಗಿ ಬಿಡೋಣ. ಅಥವಾ ಯಾವುದಾದರೂ ಮಾನಸಿಕ ತಜ್ಞರ ಬಳಿ ಕರೆದುಕೊಂಡು ಹೋಗಿ ಬಿಡೋಣ. ಇಲ್ಲಿದ್ದರೆ ಅವನನ್ನು ಹೊಡೆದು ಕೊಂದೇ ಬಿಡುತ್ತಾರೆ. ಸರಿಯಲ್ಲ ಅದು. ಮಾನವೀಯತೆಯೂ ಅಲ್ಲ. ಮೊದಲು ಬೇರೆ ಎಲ್ಲಾದರೂ ಬಿಡೋಣ.. ನಡಿ. ಗಾಡಿ ಚಾಲೂ ಮಾಡು..' ಎಂದ.
              ಅಸಮಧಾನದಿಂದಲೇ ವಿಕ್ರಮ ಗಾಡಿಯನ್ನು ಚಾಲೂ ಮಾಡಿದ. ಗೊಣಗುತ್ತಲೇ ಉಳಿದವರೂ ಹತ್ತಿಕೊಂಡರು. ಉಂಚಳ್ಳಿ ಜಲಪಾತದಿಂದ ಅಂಕುಡೊಂಕಿನ ಹಾದಿಯಲ್ಲಿ ಮರಳಲು ಆರಂಭಿಸಿದರು. `ಏ.. ಏನ್ರೋ.. ನಿಮಗೆ ಮಾಡಲಿಕ್ಕೆ ಬೇರೆ ಕೆಲ್ಸಾ ಇಲ್ಲವಾ? ಹೋಗಿ ಹೋಗಿ ಈ ಕಾಡಿಗೆ ಬಂದು ಕಳ್ಳರನ್ನು ಹುಡುಕಲು ಹೊರಟಿದ್ದೀರಾ? ತಲೆ ಸರಿ ಉಂಟಾ? ಎಚ್ಚರ ತಪ್ಪಿದರೆ ಮರಗಳ್ಳರ ಗುಂಪು ನಿಮ್ಮನ್ನು ಕಡಿದು ಹಾಕಿ ಬಿಡಬಹುದು. ಹುಷಾರು..' ಎಂದು ಇದ್ದಕ್ಕಿದ್ದಂತೆ ಆ ಹುಚ್ಚ ಮಾತನಾಡಿದಾಗ ಒಮ್ಮೆಗೆ ಕಾರಲ್ಲಿದ್ದವರು ಬೆಚ್ಚಿ ಬಿದ್ದರು.

(ಮುಂದುವರಿಯುತ್ತದೆ..)

Thursday, October 29, 2015

ಸಜ್ಜನರೊಡನೆ.. ಸಜ್ಜನಘಡದ ಕಡೆಗೆ -3

           ಆಟೋದಲ್ಲಿ ಲಗೆಜ್ ಹೇರುವ ಜಾಗದಲ್ಲಿ ನಾನು ಕುಳಿತಿದ್ದೆ. ಉಸಿರು ಕಟ್ಟುತ್ತಿತ್ತು. ಆಟೋ ಓಡಿಸುತ್ತಿದ್ದ ಚಾಲಕನ ಬಳಿ ಸಂಜಯ ಮಾತಿಗೆ ನಿಂತಿದ್ದ. ಸಜ್ಜನಘಡಕ್ಕೆ ಹೋಗುವುದು ಹೇಗೆ ಎಂಬ ವಿವರಗಳನ್ನು ಕೇಳಲು ಆರಂಭಿಸಿದ್ದ. ಸಜ್ಜನಘಡಕ್ಕೆ ಬಸ್ ವ್ಯವಸ್ಥೆ ಬಹಳ ಕಡಿಮೆ ಇದೆಯೆಂದೂ, ಯಾವುದಾದರೂ ಖಾಸಗಿ ವಾಹನಗಳನ್ನು ಮಾಡಿಕೊಂಡು ಹೋಗಬಹುದೆಂದೂ ಆಟೋ ಚಾಲಕ ತಿಳಿಸಿದ. ಮಾತಿಗಿಳಿದಿದ್ದ ಸಂಜಯ ಆತನ ಹೆಸರು ನೀಲೇಶ ಮಂತ್ರಿ ಎಂಬುದನ್ನು ಕೇಳಿ ತಿಳಿದುಕೊಂಡ. ಸಂಜಯ ಆಟೋವನ್ನು ಮಾಡಿಸಿಕೊಂಡು ಹೋದರೆ ಹೇಗೆ ಎನ್ನುವ ಬಗ್ಗೆ ಪ್ರಶಾಂತ ಭಾವನ ಬಳಿ ಕೇಳಿದ. ರೇಟು ಎಷ್ಟಾಗಬಹುದು ಎನ್ನುವ ಚರ್ಚೆ ನಡೆಯಲಾಗಿ ಕೊನೆಗೊಮ್ಮೆ ಆಟೋ ಮಾಡಿಸಿಕೊಂಡು ಹೋಗೋಣ ಎಂದು ಎಲ್ಲರೂ ಒಪ್ಪಿಕೊಂಡರು. 600 ರು. ಗೆ ಮಾತಾಯಿತು.
          ಸತಾರಾ ನಗರಕ್ಕೆ ಬಂದು ಆಟೋ ನಿಲ್ಲಿಸಿ, ಆಟೋದಲ್ಲಿದ್ದ ಎಲ್ಲರನ್ನೂ ಇಳಿಸಿದ ಆಟೋ ದ್ರೈವರ್ ನಮ್ಮನ್ನು ಕೂರಿಸಿಕೊಂಡು ಪೆಟ್ರೂಲ್ ಬಂಕಿನತ್ತ ಸಾಗಿದ. ಬಂಕಿನಲ್ಲಿ ಪೆಟ್ರೂಲ್ ತುಂಬಿಸಿಕೊಂಡವನೇ ನಮ್ಮ ಬಳಿ ದುಡ್ಡು ಕೇಳಿದಾಗ ಒಮ್ಮೆಲೆ ನಮಗೆ ಪಿಗ್ಗಿ ಬಿದ್ದೆವೇನೋ ಅನ್ನುವ ಅನುಮಾನ. ಆದರೆ ಆತನ ಆಟೋವನ್ನು ನಾವು ಇಳಿಯುವ ಕೆಲಸ ಮಾತ್ರ ಮಾಡಲಿಲ್ಲ. ಹಾಗಾಗಿ ಎಲ್ಲೋಗ್ತಾನೆ ನೋಡೋಣ ಎನ್ನುವ ಧೈರ್ಯ ನಮ್ಮಲ್ಲಿ ಮೂಡಿತು.
           ಬೆಳಗಿನ ಜಾವ 5 ಗಂಟೆ ಆಗಿದ್ದ ಕಾರಣ ಸತಾರಾದಲ್ಲಿ ಯಾವುದೇ ಪೆಟ್ರೋಲ್ ಬಂಕುಗಳು ಬಾಗಿಲು ತೆರೆದಿರಲಿಲ್ಲ. ಸತಾರಾ ನಗರಿಯಲ್ಲಿ ಒಂದೆರಡು ಕಡೆಗಳಲ್ಲಿ ಸುತ್ತಾಡಿಸಿದ ಆಟೋ ಡ್ರೈವರ್. ಆಮೇಲೆ ಮಾತು ಶುರು ಮಾಡಿದ ನೋಡಿ. ಇನ್ನು ಸಜ್ಜನಘಡಕ್ಕೆ ಹೋಗುವ ವರೆಗೆ ಅವನ ಬಾಯಲ್ಲಿನ ವಿಷಯವನ್ನೇ ಹೇಳುತ್ತೇನೆ.
          `ಇದು ನೋಡಿ ಸತಾರಾದ ಕ್ರಿಕೆಟ್ ಸ್ಟೇಡಿಯಂ. ಇಲ್ಲಿ ರಣಜಿ ಪಂದ್ಯಗಳು ಜಾಸ್ತಿ ನಡೆಯುತ್ತವೆ.'
          `ಈ ಸತಾರಾ ಇದೆಯಲ್ಲ, ಮಹಾರಾಷ್ಟ್ರದ ದೊಡ್ಡ ಜಿಲ್ಲೆಗಳಲ್ಲಿ ಇದೂ ಒಂದು. ಎಲ್ಲ ಸೌಲಭ್ಯಗಳೂ ಇಲ್ಲಿದೆ. ಸತಾರಾದ ಸುತ್ತಮುತ್ತ ಒಟ್ಟೂ ಏಳು ದೊಡ್ಡ ದೊಡ್ಡ ಬೆಟ್ಟಗಳಿವೆ. ಇವನ್ನು ತಾರಾ ಎಂದು ಕರೆಯುತ್ತಾರೆ. ಏಳು ನಕ್ಷತ್ರಗಳಿರುವ ಈ ಊರಗೆ ಒಂದಾನೊಂದು ಕಾಲದಲ್ಲಿ ಸಾತ್ ತಾರಾ ಎಂದು ಕರೆಯುತ್ತಿದ್ದರಂತೆ. ಇದೇ ಈಗ ಸತಾರಾ ಆಗಿದೆ. ಇದೋ ನೋಡಿ, ಈಗ ಸರಿಯಾಗಿ ಕಾಣುವುದಿಲ್ಲ. ಪೂರ್ತಿ ಬೆಳಕಾಗಲಿ. ಇಲ್ಲೊಂದು ದೈತ್ಯ ಗುಡ್ಡವಿದೆ. ಗುಡ್ಡದ ಮೇಲೊಂದು ಕೋಟೆ. ಅದನ್ನು ಅಜಿಂಕ್ಯತಾರಾ ಎಂದು ಕರೆಯಲಾಗುತ್ತದೆ. ಈ ಸುತ್ತಮುತ್ತಲ ಪ್ರದೇಶಗಳೆಲ್ಲ ಹಿಂದೂ ಸಾಮ್ರಾಟ ಶಿವಾಜಿ ಓಡಾಡಿದ ನಾಡು. ಇಲ್ಲೆಲ್ಲ ಶಿವಾಜಿಯ ಖುರಪುಟದ ಸದ್ದುಗಳಿವೆ..' ಎಂದು ಆಟೋ ಡ್ರೈವರ್ ಹಿಂದಿ ಹಾಗೂ ಮರಾಠಿ ಮಿಶ್ರಿತ ಭಾಷೆಯಲ್ಲಿ ಹೇಳುತ್ತಲೇ ಇದ್ದ. ನಾವು ಮೌನವಾಗಿ ಕೇಳುತ್ತಿದ್ದರೂ ಮಧ್ಯಮದ್ಯದಲ್ಲಿ, ಗೊಂದಲ ಬಗೆಹರಿಸಿಕೊಳ್ಳುತ್ತಿದ್ದೆವು.
            ಸತಾರಾದ ಬಾನಿನಲ್ಲೀ ಸೂರ್ಯ ಇನ್ನೂ ಹುಟ್ಟಿರಲಿಲ್ಲ. ಮೋಡಗಳು ಸಾಕಷ್ಟು ದಟ್ಟೈಸಿದ್ದರೂ ಮಳೆ ಸುರಿಯುವ ಲಕ್ಷಣಗಳಿರಲಿಲ್ಲ. ಗುಡ್ಡ ಹತ್ತಿ, ಇಳಿದು ಆಟೋ ಸಾಗುತ್ತಲೇ ಇತ್ತು. ಇದ್ದಕ್ಕಿದ್ದಂತೆ ಸುರಂಗವೊಂದು ನಮ್ಮೆದುರು ಕಾಣಿಸಿತು. ಹಾದು ಹೋಗುತ್ತಿದ್ದಂತೆಯೇ ಆಟೋ ಡ್ರೈವರ್ ಬೆಳ್ಳಂಬೆಳಿಗ್ಗೆ ನನಗೆ ಸಮರ್ಥ ರಾಮದಾಸರನ್ನು ದರ್ಶನ ಮಾಡುವ ಭಾಗ್ಯವನ್ನು ನೀವು ಕರುಣಿಸಿದ್ದೀರಿ. ಪ್ರತಿದಿನ 4 ಗಂಟೆಗೆ ಎದ್ದು ನಾನು ಬಾಡಿಗೆ ಹೊಡೆಯಲು ಆರಂಭಿಸುತ್ತೇನೆ. ಆದರೆ ಅಪರೂಪಕ್ಕೆ ಮಾತ್ರ ಇಂತಹ ಅವಕಾಶ ನಮಗೆ ಲಭ್ಯವಾಗುತ್ತದೆ. ನಾನು ಇವತ್ತು ಧನ್ಯನಾಗಿದ್ದೇನೆ. ನಿಮ್ಮಬಳಿ ತಲಾ 50 ರು. ನಂತೆ ಜಾಸ್ತಿ ಪಡೆದುಕೊಂಡಿದ್ದೆನೆ ಎನ್ನುವುದು ನನಗೆ ಗೊತ್ತಿದೆ. ಆದರೆ ಇದು ಅನಿವಾರ್ಯ. ನಾನು ಈ ಕಾರಣದಿಂದಾಗಿ ನಿಮಗೆ ಒಂದು ತೋಫಾ ಕೊಡಲು ಇಷ್ಟ ಪಡುತ್ತೇನೆ..' ಎಂದ ಆಟೋ ಡ್ರೈವರ್.
            ಸೀದಾ ಚಹಾ ಅಂಗಡಿಯೊಂದರ ಬಳಿ ನಿಲ್ಲಿಸಿದ ಆತ. ನಿಲ್ಲಿಸಿದವನೇ ಪ್ರತಿಯೊಬ್ಬರಿಗೂ ಬಿಸ್ಸಿ ಬಿಸಿ ಚಹಾ ಆರ್ಡರ್ ಮಾಡಿದ. ಬೆಲ್ಲದ ಚಹ ಬಹಳ ಹಿತವಾಗಿತ್ತು. ಆಟೋದಿಂದ ಆಳಿಸಿದವನೇ ಒಮ್ಮೆ ಹಿಂತಿರುಗಿ ನೋಡಿ ಎಂದ. ನೋಡಿದೆವು. ಆಹ್, ಎಂತ ಸುಂದರ ದೃಶ್ಯ ಅದು. ದೊಡ್ಡದೊಂದು ಸುರಂಗ. ಸುರಂಗದ ನಡುವೆ ಕಾಣುತ್ತಿದ್ದ ಸತಾರಾದ ಮನೆ ಮನೆಗಳು. ಮನೆಮನೆಗಳಲ್ಲಿ ಬೆಳಗಿಸಿದ್ದ ವಿದ್ಯುತ್ ದೀಪಗಳು. ಅದೆಂತಹ ಆಕರ್ಷಕ. ಅದೆಂತಹ ಸೊಬಗು. ನಾವೆಲ್ಲ ಅದೆಷ್ಟು ಪೋಟೋಗಳನ್ನು ತೆಗೆಸಿಕೊಂಡೆವೋ. ಚಹಾ ಕುಡಿದಾದ ನಂತರ ಮತ್ತೆ ನಮ್ಮ ಪಯಣ ಸಾಗಿತು.
            `ನಮ್ಮವರೂ ಇದ್ದಾರೆ ಅದೆಲ್ಲೋ ದೂರ ದೂರದ ಸ್ಥಳಗಳಂತೆ, ಅಲ್ಲೆಲ್ಲಿಗೋ ಹೋಗುತ್ತಾರಂತೆ. ಆದರೆ ನೀವು ನೋಡಿ ದೂರದ ಕರ್ನಾಟಕದಿಂದ ನಮ್ಮ ಪ್ರದೇಶ ಅದರಲ್ಲೂ  ಮುಖ್ಯವಾಗಿ ಸ್ವಾಮಿ ಸಮರ್ಥರು ನಡೆದಾಡಿದ ಸ್ಥಳವನ್ನು ನೋಡಲು ಬಂದಿದ್ದೀರಿ. ನಮ್ಮವರಿಗೆ ಇದು ಗೊತ್ತೇ ಇಲ್ಲ. ಸ್ವಾಮಿ ಸಮರ್ಥರಾಮದಾಸರ ಸ್ಥಳದ ಬಗ್ಗೆ ಯಾರೂ ಗಮನ ಕೊಡುವುದೇ ಇಲ್ಲ. ನಮ್ಮವರಿಗೆ ನಮ್ಮದರ ಬಗ್ಗೆ ಅಸಡ್ಡೆ. ಆದರೆ ನಿಮ್ಮನ್ನು ನೋಡಿ ನನಗೆ ಬಹಳ ಸಂತೋಷವಾಗುತ್ತಿದೆ. ನಿಜಕ್ಕೂ ನೀವು ಪುಣ್ಯಪುರುಷರು. ನಿಮಗೆ ನಮಸ್ಕಾರಗಳನ್ನು ತಿಳಿಸಲೇಬೇಕು. ನೀವು ಅಲ್ಲಿಂದ ಬಂದಿದ್ದೀರಿ. ಬೆಳ್ಳಂಬೆಳಿಗ್ಗೆ ದೇಗುಲ ದರ್ಶನಕ್ಕೆ ಕಾರಣರಾಗುತ್ತಿದ್ದೀರಿ. ನಿಮಗೆ ನಾನೊಂದು ವ್ಯೂ ಪಾಯಿಂಟನ್ನು ತೋರಿಸುತ್ತೇನೆ. ಇದು ನನ್ನ ಇನ್ನೊಂದು ತೋಫಾ..' ಎಂದು ಆಟೋ ಡ್ರೈವರ್ ಮಾತನಾಡುತ್ತಲೇ ಇದ್ದ.
            ನಾವು ಅಷ್ಟರಲ್ಲಿ ಮಹಾಭಲೇಶ್ವರ, ರಾಯಘಡದ ಬಗ್ಗೆ ಕೇಳಿದೆವು. `ಮಹಾಭಲೇಶ್ವರದಲ್ಲೇನಿದೆ ಮಣ್ಣು. ನಿಜ. ಅಲ್ಲಿ ನೋಡುವಂತದ್ದು ಸಾಕಷ್ಟಿದೆ. ಆದರೆ ಎಲ್ಲವೂ ದುಬಾರಿ. ಆದರೆ ಸತಾರಾದಲ್ಲಿ ಹಾಗಲ್ಲ. ಸಜ್ಜನಘಡದಲ್ಲಂತೂ ಎಲ್ಲವೂ ಫ್ರಿ. ಊಟ, ವಸತಿ ಎಲ್ಲವೂ ಕೊಡುತ್ತಾರೆ. ಮಹಾಭಲೇಶ್ವರ ನೋಡುವುದು ಬೇಡ. ಸುಮ್ಮನೆ ನಿಮಗೆ ದುಡ್ಡು ಜಾಸ್ತಿಯಾಗಿದ್ದರೆ ಹೋಗಿ ಬನ್ನಿ ಅಷ್ಟೆ. ರಾಯಘಡವನ್ನು ನೋಡಬಹುದು. ಶಿವಾಜಿ ಮಹಾರಾಜರ ರಾಜಧಾನಿ ಅದು. ಚನ್ನಾಗಿದೆ ಎಂದು ಆತ ಉತ್ತರಿಸಿದ್ದ. ಆತನ ಉತ್ತರ ಕೇಳಿದ ನಾವು ರಾಯಘಡ ಹಾಗೂ ಮಹಾಭಲೇಶ್ವರವನ್ನು ನೋಡಿ ಬರುವ ಆಲೋಚನೆಯನ್ನು ಕೈಬಿಟ್ಟೆವು.
           ಶಿವಾಜಿ ಮಹಾರಾಜರು ಆರಂಭದಲ್ಲಿ ರಾಯಘಡವನ್ನು ತಮ್ಮ ರಾಜಧಾನಿಯನ್ನಾಗಿ ಮಾಡಿಕೊಂಡರಂತೆ. ಆ ನಂತರ ಅವರಿಗೆ ಸಜ್ಜನಘಡದಲ್ಲಿ ಸ್ವಾಮಿ ಸಮರ್ಥ ರಾಮದಾಸರು ಇರುವ ಬಗ್ಗೆ ಮಾಹಿತಿ ಸಿಕ್ಕಿತಂತೆ. ರಾಮದಾಸರನ್ನು ಭೇಟಿಯಾಗಬೇಕು ಎಂದು ಶಿವಾಜಿ ಮಹಾರಾಜ್ ಕುದುರೆಯನ್ನೇರಿ ಬಂದರಂತೆ. ಸಿಟ್ಟು ಹಾಗೂ ಅಹಂಕಾರದಿಂದ ಸಜ್ಜನಘಡವನ್ನು ಏರಿ ಬಂದ ಸಂದರ್ಭದಲ್ಲಿ ಸಮರ್ಥ ರಾಮದಾಸರು ಧ್ಯಾನ ಹಾಗೂ ಪೂಜೆಯಲ್ಲಿ ನಿರತರಾಗಿದ್ದರಂತೆ. ಶಿವಾಜಿ ಬಂದು ಸಮರ್ಥ ರಾಮದಾಸರ ಎದುರು ಗತ್ತಿನಿಂದ ಕುಳಿತರಂತೆ. ಆದರೆ ರಾಮದಾಸರು ಅದನ್ನು ಗಮನಿಸಿಯೂ ಗಮನಿಸದಂತೆ ಉಳಿದರಂತೆ. ಕೊನೆಗೆ ಶಿವಾಜಿ ನಮಸ್ಕಾರ ಮಾಡಿ ಆಶಿರ್ವಾದ ಬೇಡಿದರಂತೆ. ಕೊನೆಗೆ ಸಮರ್ಥ ರಾಮದಾಸರು ಅತ್ಯಂತ ಮಿದುವಾದ ಕಲ್ಲನ್ನು ಹೊತ್ತುಕೊಂಡು ಬಾ. ಹುಡುಕಿ ತಾ. ಆಗ ಆಶಿರ್ವಾದ ಮಾಡುತ್ತೇನೆ. ಹಿಂದೂ ಸಾಮ್ರಾಟನಾಗುತ್ತೀಯಾ ಎಂದರಂತೆ. ಕೊನೆಗೆ ಶಿವಾಜಿ ಮಹಾರಾಜರು ಬಹಳ ಹುಡುಕಿ ಕೊನೆಗೊಂದು ಮೃದು ಕಲ್ಲನ್ನು ಹೊತ್ತು ತಂದರಂತೆ. ಆ ಕಲ್ಲನ್ನು ನೋಡಿದ ರಾಮದಾಸರು ಕೈಯಲ್ಲಿ ಮುಟ್ಟಿ `ಇದು ಗಟ್ಟಿಯಾಗಿದೆ. ಇನ್ನೂ ಮಿದುವಾದ ಕಲ್ಲನ್ನು ತನ್ನಿ..' ಎಂದರಂತೆ. ಕೊನೆಗೆ ಹುಡುಕಿ ತಂದಾಗ ಮತ್ತೆ ಇದೇ ಘಟನೆ ಪುನರಾವರ್ತನೆ ಆಯಿತಂತೆ. ಕೊನಗೊಮ್ಮೆ ಶಿವಾಜಿ ಮಹಾರಾಜರು ದಿಕ್ಕೆಟ್ಟು ಸೋತಂತಾಗಿ ಸಜ್ಜನಘಡಕ್ಕೆ ತೆರಳಿ ಸ್ವಾಮಿ ರಾಮದಾಸರ ಚರಣದಲ್ಲಿ ಶರಣಾದರಂತೆ. ಆಗ ಸಮರ್ಥ ರಾಮದಾಸರು ಹೇಳಿದ್ದೆಂದರೆ `ಮೃದುವಾದ ಕಲ್ಲು ಎಂದರೆ ಏನೆಂದುಕೊಂಡೆ ಮಹಾರಾಜಾ. ನೀನೇ ಮೃದುವಾದ ಕಲ್ಲು. ನೀನು ಕಲ್ಲಿನಷ್ಟು ಕಠಿಣ. ಆದರೆ ಸಿಟ್ಟು ಹಾಗೂ ಅಹಂಕಾರವನ್ನು ಬಿಟ್ಟು ಮೃದುವಾಗಿ ಬಾ ಎಂದು ಹೇಳಿದ್ದೆನಷ್ಟೇ ಎಂದು ಹೇಳಿದಾಗ ಶಿವಾಜಿ ಮಹಾರಾಜರ ಕಣ್ಣಿನಲ್ಲಿ ಆಶ್ರುಧಾರೆ ಸುರಿಯಲಾರಂಭಿಸಿತಂತೆ. ಆ ಕ್ಷಣದಲ್ಲಿ ಸಮರ್ಥ ರಾಮದಾಸರು ಶಿವಾಜಿ ಮಹಾರಾಜರ ತಲೆಯ ಮೇಲೆ ಕೈ ಇಟ್ಟು ಹಿಂದೂ ಸಾಮ್ರಾಟನಾಗಿ ಲೋಕವಿಖ್ಯಾತನಾಗಿ. ವಿಜಯೀಭವ ಎಂದು ಹರಸಿದರಂತೆ. ನಂತರದ ದಿನಗಳಲ್ಲಿ ಶಿವಾಜಿ ಮಹಾರಾಜ ಯಾವರೀತಿ ವಿಖ್ಯಾತಿ ಗಳಿಸಿದ ಎನ್ನುವುದು ಇತಿಹಾಸ ಎಂದು ಆಟೋ ಡ್ರೈವರ್ ದೀರ್ಘವಾಗಿ ಹೇಳಿದಾಗ ನಮಗೆ ಒಮ್ಮೆಲೆ ಮೈಯೆಲ್ಲ ಪುಳಕವಾಯಿತು. ನಾವು ಆಟೋ ಡ್ರೈವರ್ ಜೊತೆ ಬಂದಿದ್ದೇವೋ ಅಥವಾ ಸತಾರಾದ ಸಮಗ್ರ ಮಾಹಿತಿಯನ್ನು ತಿಳಿದುಕೊಂಡು ಬಂದಿರುವ ಗೈಡ್ ಜೊತೆ ಬಂದಿದ್ದೇವೋ ಎನ್ನುವ ಅನುಮಾನವೂ ನಮ್ಮನ್ನು ಕಾಡಿತು. 600 ರು. ಕೊಟ್ಟಿದ್ದಕ್ಕೂ ಅನ್ಯಾಯವಾಗಲಿಲ್ಲ ಎಂದುಕೊಂಡೆವು.
          `ಶಿವಾಜಿ ಮಹಾರಾಜರು ನಂತರದ ದಿನಗಳಲ್ಲಿ ಸಜ್ಜನಘಡಕ್ಕೆ ದೊಡ್ಡದೊಂದು ದ್ವಾರವನ್ನು ಕಟ್ಟಿಸಿದರು. ಕೋಟೆಯೊಂದನ್ನು ನಿರ್ಮಾಣ ಮಾಡಿದರು. ಅಷ್ಟೇ ಅಲ್ಲ. ಅಲ್ಲಿ ಒಂದೆರಡು ದೇಗುಲಗಳ ಕಟ್ಟಡವನ್ನೂ ಕಟ್ಟಿಸಿದರು. ಇದೇ ಸಜ್ಜನಘಡದಲ್ಲಿಯೇ ಮಾಫಳಾ ಯುವಕರ ಜೊತೆ ಸೇರಿ ರಕ್ತ ತರ್ಪಣ ನೀಡಿ ಹಿಂದೂ ರಕ್ಷಣೆಗೆ ಶಿವಾಜಿ ಪಣ ತೊಟ್ಟಿದ್ದು. ಒಮ್ಮೆ ನೀವು ಈ ನಾಡಿನಲ್ಲಿ ಶಿವಾಜಿ ಮಹಾರಾಜ ಕುದುರೆಯ ಮೇಲೆ ಹೋಗುತ್ತಿದ್ದುದನ್ನು ಕಲ್ಪನೆ ಮಾಡಿಕೊಳ್ಳಿ ಎಂದ. ನಮಗೆ ಮೈಯೆಲ್ಲ ಒಮ್ಮೆಗೆ ರೋಮಾಂಚನ.
           ನಿಧಾನವಾಗಿ ಬೆಳಗಾಗುತ್ತಿತ್ತು. ಆಕಾಶದೆತ್ತರದ ದೂರದಲ್ಲೊಂದು ಬೆಳಕಿನ ಬಿಂಬವನ್ನು ತೋರಿಸಿದ ಆಟೋ ಡ್ರೈವರ್ ಅದೋ ನೋಡಿ ಅಲ್ಲಿಯೇ ಸಜ್ಜನ ಘಡ ಇದೆ. ನಾವು ಅದನ್ನು ಏರಬೇಕು ಎಂದ. ಕತ್ತನ್ನು ಎತ್ತಿ ನೋಡಿ ಹಿತವಾಗಿ ನೋವು ಮಾಡಿಕೊಂಡೆವು. ಸತಾರಾದಿಂದ 17 ಕಿ.ಮಿ ದೂರದಲ್ಲಿರುವ ಸಜ್ಜನಘಡಕ್ಕೆ ಹೋಗುವ ಸಲುವಾಗಿ ಆಟೋ ಏರಿದ್ದ ನಾವು ಅಂಕುಡೊಂಕಿನ ದಾರಿಯಲ್ಲಿ ಸಾಗುತ್ತಲೇ ಇದ್ದೆವು. ಬೆಳಗಿನ ಮುಂಜಾವು ನಮ್ಮನ್ನು ಹಿತವಾಗಿ ಚುಂಬಿಸುತ್ತಿತ್ತು. ಮಂಜಿನ ಹನಿಗಳು ಮುತ್ತಿಕ್ಕುತ್ತಿದ್ದವು. ಅಲ್ಲಿಯೇ ಇದ್ದ ಮಿಲಿಟರಿ ಕ್ಯಾಂಪನ್ನು ನೀಲೇಶ ಮಂತ್ರಿ ತೋರಿಸಿದ. ಮರಾಠಾ ಪ್ಲಟೂನ್ ಇಲ್ಲಿಯೇ ತಯಾರಾಗುತ್ತದೆ. ಇಲ್ಲಿ ತರಬೇತಿ ಪಡೆದವರು ಪ್ರತಿಯೊಬ್ಬರೂ ಸೈನ್ಯಕ್ಕೆ ಆಯ್ಕೆಯಾಗುತ್ತಾರೆ ಎಂದು ಹೆಮ್ಮೆಯಿಂದ ಹೇಳಿದ. ನಮಗೂ ಹೆಮ್ಮೆ ಎನ್ನಿಸಿ ಎದೆಯುಬ್ಬಿತು.

(ಮುಂದುವರಿಯುತ್ತದೆ)