Wednesday, October 7, 2015

ಅಘನಾಶಿನಿ ಕಣಿವೆಯಲ್ಲಿ-27

             ಉಂಚಳ್ಳಿ ಜಲಪಾತವನ್ನು ನೋಡುವುದೇ ಒಂದು ಸೊಬಗು. ಥಟ್ಟನೆ ನೋಡಿದರೆ ಗೋಕರ್ಣದ ಆತ್ಮಲಿಂಗದ ಆಕಾರದಲ್ಲಿ ಕಾಣುವ ಜಲಪಾತದ ಚೆಲುವಿಗೆ ಸಾಟಿಯಿಲ್ಲ ಬಿಡಿ. ದೂರದಿಂದಲೇ ಭೋರೆಂದು ಸದ್ದು ಮಾಡುವ ಜಲಪಾತಕ್ಕೆ ಸರ್ವ ಕಾಲದಲ್ಲಿಯೂ ಪ್ರವಾಸಿಗರು ದಂಡು ದಂಡಾಗಿ ಆಗಮಿಸುತ್ತಾರೆ. ವಿಕ್ರಮ ಹಾಗೂ ತಂಡಕ್ಕೆ ಜಲಪಾತದ ಬುಡಕ್ಕೆ ತಲುಪುವ ತವಕ ಮತ್ತಷ್ಟು ಹೆಚ್ಚಿತು. ಜಲಪಾತ ವೀಕ್ಷಣೆಗೆ ಹಾಕಲಾಗಿದ್ದ ಸಿಮೆಂಟ್ ಮೆಟ್ಟಿಲುಗಳನ್ನು ಇಳಿದು ಪಕ್ಕದಲ್ಲಿಯೇ ಜರುಗಿ ಜಲಪಾತದ ಬುಡಕ್ಕೆ ಇಳಿಯಲಾರಂಭಿಸಿದರು. ಎಪ್ರಿಲ್ ತಿಂಗಳಾದ್ದ ಕಾರಣ ಜಲಪಾತದಲ್ಲಿ ಸಾಕಷ್ಟು ನೀರು ಇರಲಿಲ್ಲ. ಸೀದಾ ಜಲಪಾತ ಬೀಳುವ ಪ್ರದೇಶಕ್ಕೆ ತೆರಳಿ, ಜಲಪಾತದ ನೀರಿಗೆ ತಲೆಕೊಟ್ಟು ನಿಲ್ಲಬಹುದಾಗಿತ್ತು.
         ಅರ್ಧಗಂಟೆಯ ಸಮಯದಲ್ಲಿ ಜಲಪಾತದ ಬುಡಕ್ಕೆ ತಲುಪಿದ್ದರು. ದೊಡ್ಡ ದೊಡ್ಡ ಕಲ್ಲು ಬಂಡೆಗಳನ್ನು ದಾಟಿ ನೀರು ಬೀಳುತ್ತಿದ್ದ ಪ್ರದೇಶಕ್ಕೆ ಹೋದವರಿಗೆ ಆಸೆ ತಡೆಯಲಿಲ್ಲ. ಸೀದಾ ತೊಟ್ಟಿದ್ದ ಬಟ್ಟೆ ಯನ್ನು ಲೆಕ್ಕಿಸದೇ ಜಲಪಾತದ ನೀರಿಗೆ ತಲೆ ಕೊಟ್ಟರು. ದೊಡ್ಡದೊಂದು ನೀರಿನ ಗುಂಡಿಯನ್ನು ಈಜಲು ವಿನಾಯಕ ಮುಂದಾದ. ವಿಷ್ಣು ಹಾಗೂ ಪ್ರದೀಪ ಕೂಡ ವಿನಾಯಕನನ್ನು ಹಿಂಬಾಲಿಸಿದರು. ವಿಜೇತಾಳನ್ನು ಹೊರತುಪಡಿಸಿ ಉಳಿದೆಲ್ಲ ಹೆಂಗಳೆಯರು ಜಲಪಾತ ಬೀಳುತ್ತಿದ್ದ ಜಾಗಕ್ಕೆ ಸುತ್ತು ಬಳಸಿನ ಹಾದಿಯಲ್ಲಿ ಸಾಗಿ ತಲೆಕೊಟ್ಟು ನಿಂತರು. ಕ್ಷಣ ಕ್ಷಣಕ್ಕೂ ರೋಮಾಂಚನ ಅನುಭವಿಸಿದ ಇವರೆಲ್ಲರ ಬಾಯಿಂದ ಹಾ... ಹೋ... ಎನ್ನುವ ಕೂಗು ಉಂಚಳ್ಳಿ ಜಲಪಾತದ ಕಣಿವೆಯಿಂದ ಅಲೆ ಅಲೆಯಾಗಿ ಕೇಳುತ್ತಿತ್ತು. ಜಲಪಾತದ ಸದ್ದಿಗೆ ಪೈಪೋಟಿ ನೀಡುವಂತಿತ್ತು ಇವರ ಕೂಗು.
         ವಿಕ್ರಮ ಹಾಗೂ ವಿಜೇತಾ ಇಬ್ಬರೇ ದೂರದಲ್ಲಿ ಕಲ್ಲು ಬಂಡೆಯ ಮೇಲೆ ಕುಳಿತು ನೀರಿಗೆ ತಲೆ ಕೊಟ್ಟವರ ಹಾಗೂ ಜಲಪಾತದ ಗುಂಡಿಯಲ್ಲಿ ಈಸು ಬಿದ್ದಿದ್ದವರನ್ನು ನೋಡುತ್ತಿದ್ದರು. ವಿನಾಯಕ ಇದ್ದಕ್ಕಿದ್ದಂತೆ ವಿಜೇತಾಳ ಬಳಿ `ನಾನು ಒಂದು ವಿಷಯ ಕೇಳಲಾ..?' ಎಂದ.
          `ಹುಂ.. ಕೇಳು.. ನೀನು ಏನನ್ನಾದರೂ ಕೇಳಲು ನನ್ನ ಪರ್ಮಿಷನ್ ಬೇಕಾ? ಇವತ್ತೇನು ಹೊಸ ರೀತಿ ಕೇಳ್ತಾ ಇದ್ದೀ..?' ಎಂದಳು ವಿಜೇತಾ.
          `ಇದು ಸಾಮಾನ್ಯ ವಿಷಯ ಅಲ್ಲ. ಸ್ವಲ್ಪ ಬೇರೆಯ ವಿಷಯ. ಕೇಳಲೋ.. ಬೇಡವೋ ಅಂತ..' ಎಂದ ವಿಕ್ರಮ.
          `ಇದೊಳ್ಳೆ ಕಥೆ ನಿಂದು. ನನ್ನ ಹತ್ರ ಕೇಳೋಕೆ ಮುಜುಗರವಾ? ನಿಂದೊಳ್ಳೆ ಕಥೆ ಮಾರಾಯಾ.. ಸುಮ್ನೆ ಕೇಳು..'
           `ಹೆಂಗ್ ಕೇಳೋದು ಅಂತ ಗೊತ್ತಾಗ್ತಾ ಇಲ್ಲ.. ಯಾಕೋ ಸ್ವಲ್ಪ ನರ್ವಸ್ ಆಗಿದ್ದೇನೆ ನೋಡು..'
           `ಹೆಂಗೆ ಅಂದ್ರೆ..? ಬಾಯಲ್ಲಿ ಕೇಳು ಮಾರಾಯಾ.. ನೀನು ನರ್ವಸ್ ಆಗೋದಾ? ದಿ ಗ್ರೇಟ್ ಕರಾಟೆ ಚಾಂಪಿಯನ್ ನರ್ವಸ್ ಆಗೋದು ಅಂದ್ರೆ ಏನ್ ತಮಾಷೆನಾ? ಅಂತದ್ದೇನಪ್ಪಾ ವಿಷಯ..' ತಮಾಷೆ ಮಾಡಿದಳು ವಿಜೇತಾ.
            `ತಮಾಷೆ ಮಾಡ್ಬೇಡ ಪ್ಲೀಸ್.. ಹೆಂಗ್ ಕೇಳೋದು ಅಂತ ನಂಗೆ ಗೊತ್ತಾಗ್ತಿಲ್ಲ. ಮತ್ತೆ.. ನೀನು ಯಾರನ್ನಾದರೂ ಲವ್ ಮಾಡಿದ್ಯಾ?'
             ಇದ್ದಕ್ಕಿದ್ದಂತೆ ಸ್ವಲ್ಪ ಗಂಭೀರವಾದ ವಿಜೇತಾ ಒಮ್ಮೆ ವಿಕ್ರಮನನ್ನು ತೀಕ್ಷ್ಣವಾಗಿ ನೋಡಿದಳು. ನಂತರ ಇದು ತಮಾಷೆಯಿರಬೇಕು ಎಂದುಕೊಂಡು `ಹು.. ಮಾರಾಯಾ.. ಪಿಯುಸಿಯಲ್ಲಿ ಇರಬೇಕಾದರೆ ಒಬ್ಬ ಹುಡುಗ ಪ್ರಪೋಸ್ ಮಾಡಿದ್ದ ನೋಡು. ಒಳ್ಳೆಯ ಹುಡುಗ. ಆದರೆ ಹೇಳಿಕೊಳ್ಳಲು ಸಂಕೋಚ ಪಟ್ಟುಕೊಂಡಿದ್ದ. ಆತ ಹೆದರಿ ಹೆದರಿ ಹೇಳಿಕೊಂಡಿದ್ದ. ನಾನು ಸಿಟ್ಟಿನಿಂದಲೇ ಆತನಿಗೆ ಉತ್ತರ ಕೊಟ್ಟಿದ್ದೆ. ಆ ನಂತರ ಯಾಕೋ ಇಷ್ಟವಾಗಿದ್ದ ಆತ. ಆತನ ಪ್ರಪೋಸಲ್ ಗೆ ಒಪ್ಪಿಗೆ ಸೂಚಿಸಬೇಕು ಅಂತ ನಾನು ಅವನನ್ನು ಹುಡುಕಿ ಹೊರಟಿದ್ದೆ. ಆದರೆ ಆ ನಂತರ ಅಂವ ಏನಾದನೋ ಗೊತ್ತಿಲ್ಲ ನೋಡು.. ನಾಪತ್ತೆಯಾಗಿದ್ದ. ಆಮೇಲಿ ಡಿಗ್ರಿ ಓದುವಾಗ ಒಂದಿಬ್ಬರು ಲವ್ ಮಾಡ್ತೀಯಾ ಅಂತ ಕೇಳಿದ್ದರು. ನನಗೆ ಇಷ್ಟವಾಗಿರಲಿಲ್ಲ.. ರಿಜೆಕ್ಟ್ ಮಾಡಿದ್ದೆ.. ಹೌದು.. ಈಗ ಈ ಪ್ರಶ್ನೆ ಯಾಕೆ ಕೇಳಿದ್ದು..?'
            `ಹಿಂಗೆ ಸುಮ್ನೆ ಕೇಳಿದ್ದು ನೋಡು.. ಯಾಕೋ ನೀನು ಯಾರನ್ನಾದರೂ ಲವ್ ಮಾಡ್ತಿರಬಹುದಾ ಎಂಬ ಕುತೂಹಲ ಕಾಡಿತು. ಅದ್ಕೆ ಕೇಳಿದೆ ಅಷ್ಟೆ..' ವಿಕ್ರಮ ಉತ್ತರಿಸಿದ್ದ.
             `ಸುಮ್ನೆ ಎಲ್ಲಾ ಕೇಳೊ ವ್ಯಕ್ತಿಯಲ್ಲವಲ್ಲ ನೀನು.. ಏನೋ ಕಾರಣ ಇರಬೇಕು ನೋಡು. ಯಾವುದಾದರೂ ಪ್ರಪೋಸಲ್ ಬಂದಿದೆಯಾ? ಅಥವಾ ಜಾತಕ ಗೀತಕ ಬಂದಿದೆಯಾ.. ಹೇಳು ಮಾರಾಯಾ... ತಲೆಯಲ್ಲಿ ಹುಳ ಬಿಡಬೇಡ..' ವಿಜೇತಾ ಹೇಳಿದ್ದಳು.
             `ಏ ಏನಿಲ್ಲ. ಸುಮ್ನೆ ಕೇಳಿದೆ..'
             `ಹೇಳೋ ಮಾರಾಯಾ.. ನನ್ನನ್ನು ಯಾರಾದರೂ ಲವ್ ಮಾಡ್ತಾರಾ.. ನಾನು ಸಧ್ಯಕ್ಕೆ ಖಾಲಿ ಇದ್ದೇನೆ ನೋಡು.. ಯಾರಾದರೂ ನಿನ್ನ ಬಳಿ ಕೇಳಿದ್ದರೆ ಡೈರೆಕ್ಟಾಗಿ ಬಂದು ಕೇಳೋಕೆ ಹೇಳು.. ಇಷ್ಟ ಆದರೆ ಥಟ್ಟನೆ ಒಪ್ಪಿಕೊಂಡು ಬಿಡ್ತೀನಿ ನೋಡು..' ಮತ್ತೆ ತಮಾಷೆಯಾಗಿ ಹೇಳಿದ್ದಳು ವಿಜೇತಾ.
             `ಅಯ್ಯಯ್ಯೋ.. ಯಾರೂ ಹೇಳಿಲ್ಲ ನನ್ನ ಹತ್ರ. ನಾನೇ ಸುಮ್ಮನೆ ಕೇಳಿದೆ ನೋಡು..' ವಿಕ್ರಮ ತೊದಲಿದ.
             `ಇಲ್ಲ ಇದರಲ್ಲಿ ಏನೋ ಇದೆ. ನೀನು ಸುಮ್ಮನೆ ಕೇಳಿಲ್ಲ ಬಿಡು. ಯಾರಪ್ಪಾ ಅದು ನನ್ನ ಬಗ್ಗೆ ವಿಚಾರಿಸಿದ್ದು? ಯಾರಾದರೂ ನನ್ನ ಲವ್ ಮಾಡ್ತಾ ಇದ್ದಾರಾ ಹೇಗೆ? ನೀನೇನಾದ್ರೂ ಲವ್ ಮಾಡ್ತಾ ಇದ್ದೀಯಾ ಹೇಗೆ? ಹಂಗೇನಾದ್ರೂ ಇದ್ರೆ ಡೈರೆಕ್ಟ್ ಆಗಿ ಹೇಳ್ ಬಿಡು ಮಾರಾಯಾ.. ಮತ್ತಿನ್ಯಾರಾದ್ರೂ ಮನಸ್ಸಿನೊಳಗೆ ತೂರಿಕೊಳ್ಳುವ ಮೊದಲು ನಿಂಗೆ ಒಕೆ ಅಂತ ಹೇಳಿ ಬಿಡ್ತೀನಿ..' ಡೈರೆಕ್ಟ್ ಶೂಟ್ ಮಾಡಿದ್ದಳು ವಿಜೇತಾ. ಅವಳ ಮಾತಿನಲ್ಲಿ ತಮಾಷೆಯ ಸೆಳಕಿದ್ದರೂ ಸೀರಿಯಸ್ ಅಂಶಗಳು ಸಾಕಷ್ಟಿದ್ದವು.
            ವಿಕ್ರಮ ಬೆವೆತು ಹೋಗಿದ್ದ. ಏನು ಹೇಳಬೇಕು ಎನ್ನುವುದು ಆತನಿಗೆ ಗೊತ್ತಾಗಲಿಲ್ಲ. ಪರಿಚಯವಾದ ದಿನದಿಂದಲೇ ವಿಕ್ರಮನಿಗೆ ಮಾಡಿದರೆ ಇಂತಹ ಹುಡುಗಿಯನ್ನು ಲವ್ ಮಾಡಬೇಕು ಎನ್ನಿಸಿದ್ದು ಸುಳ್ಳಲ್ಲ. ಯಾಕೋ ಮೊದಲ ಸಂದರ್ಶನದ ದಿನದಂದೆ ವಿಜೇತಾ ವಿಕ್ರಮನಿಗೆ ಇಷ್ಟವಾಗಿ ಬಿಟ್ಟಿದ್ದಳು.ನಂತರದ ದಿನಗಳಲ್ಲಿ ವಿಕ್ರಮನಿಗೆ ಆಕೆ ಮತ್ತಷ್ಟು ಹತ್ತಿರವಾಗಿದ್ದಳು. ಹತ್ತಿರವಾದಂತೆಲ್ಲ ಪ್ರೀತಿಯ ಸಸಿ ಮೊಳಕೆಯೊಡೆದು ಹೆಮ್ಮರವಾಗಿತ್ತು. ವಿಕ್ರಮ ಕೂಡ ಆ ಸಸಿಗೆ ಪೋಷಣೆ ನೀಡಿ ಎದೆಯಲ್ಲಿ ಬೆಚ್ಚಗೆ ಕಾಪಾಡಿಕೊಂಡಿದ್ದ.
            ಕೆಲವು ದಿನಗಳಿಂದ ತನ್ನ ಮನದ ಅಭಿಲಾಷೆಯನ್ನು ಹೇಳಬೇಕು ಎಂದುಕೊಳ್ಳುತ್ತಿದ್ದ ವಿಕ್ರಮ. ಅದಕ್ಕೆ ಸರಿಯಾದ ಸಮಯ ಹಾಗೂ ಸಂದರ್ಭ ಒದಗಿ ಬಂದಿರಲಿಲ್ಲ. ತಾನು ಹೇಳಿಕೊಳ್ಳಬೇಕು ಅಂದಾಗಲೆಲ್ಲ ಜೊತೆಯಲ್ಲಿ ಮತ್ಯಾರೋ ಇರುತ್ತಿದ್ದರು. ಹೇಗಾದರೂ ಮಾಡಿ ಹೇಳಿಕೊಳ್ಳಬೇಕು ಎಂದುಕೊಂಡವನಿಗೆ ನೆನಪಾದದ್ದು ಉಂಚಳ್ಳಿ ಜಲಪಾತ. ಅಲ್ಲಿಗೆ ಹೋದಾಗ ತನ್ನ ಮನಸ್ಸಿನ ಭಾವನೆಯನ್ನು ವಿಜೇತಾಳಿಗೆ ಹೇಳಬೇಕು ಎಂದುಕೊಂಡಿದ್ದ ವಿಕ್ರಮ. ಎಲ್ಲರನ್ನೂ ಎಲ್ಲಾದರೂ ಸಾಗಹಾಕಿ ಅವಳೆದು ತನ್ನ ಅಂತರಂಗವನ್ನು ತೋಡಿಕೊಳ್ಳಬೇಕು ಎಂದುಕೊಂಡವನಿಗೆ ಇದುವರೆಗೆ ತಾನು ಬಯಸಿದಂತೆಯೇ ಎಲ್ಲವೂ ಆಗಿತ್ತು. ಜಲಪಾತಕ್ಕೆ ಬಂದಿದ್ದವರೆಲ್ಲಿ ಉಳಿದವರು ಅವರವರ ಲೋಕದಲ್ಲಿದ್ದರು. ವಿಜೇತಾ ಹಾಗೂ ವಿಕ್ರಮ ಇಬ್ಬರೆ ಜೊತೆಯಲ್ಲಿ ಕುಳಿತು ಮಾತನಾಡುತ್ತಿದ್ದರು. ಆದರೆ ವಿಕ್ರಮನಿಗೆ ಮಾತ್ರ ಮನದಾಳದ ಭಾವನೆಗಳನ್ನು ಏನೂ ಮಾಡಿದರೂ ಹೇಳಿಕೊಳ್ಳಲು ಆಗುತ್ತಿಲ್ಲ. ಇದು ಆತನಿಗೆ ಅಚ್ಚರಿಯನ್ನು ತಂದಿತ್ತು.
          ವಿಜೇತಾಳೇ ನೇರವಾಗಿ ಕೇಳುತ್ತಿದ್ದಾಳೆ. ಆದರೆ ತನಗೆ ಮಾತ್ರ ಹೇಳಿಕೊಳ್ಳಲು ಆಗುತ್ತಿಲ್ಲ. ಯಾಕೆ ಈ ಥರಾ? ಎಂದುಕೊಂಡ ವಿಕ್ರಮ. ಅವಳೇ ಕೇಳುತ್ತಿದ್ದಾಗ ತನಗೆ ಹೌದು ನಿನ್ನನ್ನು ಪ್ರೀತಿಸುತ್ತಿದ್ದೇನೆ ಎಂದು ಹೇಳಲು ಆಗುತ್ತಿಲ್ಲವಲ್ಲ. ಯಾಕೋ ಈ ಪ್ರೇಮ ಎನ್ನುವುದು ಸುಲಭವಲ್ಲ ಅನ್ನಿಸಿತು ಅವನಿಗೆ. ಕರಾಟೆಯಲ್ಲಿ ತನ್ನೆದುರು ಹತ್ತಾರು ಜನರು ಏಕಕಾಲಕ್ಕೆ ಮುಗಿ ಬೀಳಲಿ ಅವರನ್ನು ಮಣ್ಣುಮುಕ್ಕಿಸುತ್ತೇನೆ. ಆದರೆ ಇವಳಿಗೆ ಪ್ರೇಮದ ವಿಷಯ ತಿಳಿಸುವುದು ಹೇಗೆ? ಎಂದ.
           `ಹೇಯ್.. ಎಂತಾ ಆಲೋಚನೆ ಮಾಡ್ತಾ ಇರೋದು.. ಯಾರು ಕೇಳಿದ್ದು ಹೇಳು ಮಾರಾಯಾ..' ಎಂದು ವಿಜೇತಾ ತಿವಿದಾಗಲೇ ವಿಕ್ರಮ ವಾಸ್ತವಕ್ಕೆ ಮರಳಿದ್ದು.
            `ಏನ್ ಹೇಳೋದು ಅಂತ ಗೊತ್ತಾಗ್ತಾ ಇಲ್ಲೆ. ನಿನ್ ಬಗ್ಗೆ ವಿಷಯ ಗೊತ್ತಾಗಬೇಕಿತ್ತು, ನೀನು ಯಾರನ್ನಾದರೂ ಪ್ರೀತಿಸ್ತಾ ಇದ್ಯಾ ಅನ್ನೋದು ತಿಳಿದುಕೊಳ್ಳಬೇಕು ಅನ್ನೋದು ನಿಜ. ಆದರೆ...' ನಿಲ್ಲಿಸಿದ ವಿಕ್ರಮ
             `ಎಂತ ಆದರೆ.. ಒಗಟಾಗಿ ಮಾತನಾಡಬೇಡ. ಸ್ವಲ್ಪ ಬಿಡಿಸಿ ಹೇಳು ಮಾರಾಯಾ..'
              `ನಂಗೇ ಬೇಕಾಗಿತ್ತು...ಅದ್ಕೆ ಕೇಳಿದ್ದು..' ತೊದಲಿದ ವಿಕ್ರಮ.
               `ಅಂದರೆ ಎಂತ? ಸ್ವಲ್ಪ ಬಿಡಿಸಿ ಹೇಳೋ ಮಾರಾಯಾ.. ನಿಂಗೆಂತಾ ಬೇಕಾಗಿದ್ದು. ನಿಂಗ್ ನನ್ನ ವಿಷ್ಯ ಗೊತ್ತಿದ್ದಿದ್ದೇ. ಆದರೆ ಮತ್ತೆಂತಕ್ ಕೇಳ್ತಾ ಇದ್ದಿದ್ದು..?' ಕಾಡಿಸಿದಳು ವಿಜೇತಾ. ಅವಳಿಗೆ ಸ್ವಲ್ಪ ಅನುಮಾನ ಬರಲು ಆರಂಭವಾಗಿತ್ತು. ವಿಕ್ರಮನೇ ತನ್ನನ್ನು ಲವ್ ಮಾಡುತ್ತಿರಬಹುದಾ? ಕೆಲ ದಿನಗಳಿಂದ ಮನಸ್ಸಿನಲ್ಲಿ ಮೂಡಿದ್ದ ಅನುಮಾನದ ಸೆಲೆಯೊಂದು ದೊಡ್ಡದಾದಂತೆ ಭಾಸವಾಯಿತು.
              `ಹುಂ.. ನಾನು ನಿನ್ನ ಪ್ರೀತಿಸ್ತಾ ಇದ್ದೆ. ಆದರೆ ಹೇಳ್ಕಳೋದು ಹೆಂಗೆ ಅಂತ ಒದ್ದಾಡ್ತಿದ್ದೆ ನೋಡು. ಹೇಳೋಕೂ ಆಗದೇ, ನನ್ನಲ್ಲೇ ಇಟ್ಟುಕೊಳ್ಳೋದಕ್ಕೂ ಆಗದೇ ಪರಿತಪಿಸುತ್ತಿದ್ದೆ. ನಾನು ನಿನ್ನ ಪ್ರೀತಿಸ್ತಾ ಇದ್ದೇನೆ. ನೀನು ನನ್ನ ಪ್ರೀತಿಸ್ತೀಯಾ? ನಿನ್ನ ಮನಸ್ಸಿನಲ್ಲಿ ನನಗೆ ಸ್ವಲ್ಪ ಜಾಗ ಕೊಡ್ತೀಯಾ..?' ಹೇಗೋ ಧೈರ್ಯ ಮಾಡಿಕೊಂಡು ವಿಕ್ರಮ ಕೇಳಿಯೇ ಬಿಟ್ಟಿದ್ದ.
               ವಿಜೇತಾ ಅವಾಕ್ಕಾಗಿದ್ದಳು. ವಿಜೇತಾಳ ಮನಸ್ಸಿನಲ್ಲಿ ಚಿಕ್ಕದೊಂದು ಅನುಮಾನದ ಸೆಲೆಯಿತ್ತಾದರೂ ವಿಕ್ರಮ ಇಷ್ಟು ನೇರಾ ನೇರ ಕೇಳುತ್ತಾನೆ ಎಂದುಕೊಂಡಿರಲಿಲ್ಲ. ಇನ್ನಷ್ಟು ದಿನಗಳ ನಂತರ ಕೇಳಬಹುದು ಎಂದುಕೊಂಡಿದ್ದಳೇನೋ. ವಿಕ್ರಮ ಕೇಳಿದರೆ ಏನು ಹೇಳಬೇಕು ಎನ್ನುವುದು ವಿಜೇತಾಳಿಗೆ ಗೊತ್ತಿರಲಿಲ್ಲ. ಸುಮ್ಮನೆ ಕಾಡಿಸುತ್ತಿದ್ದಳಾದರೂ ಆಕೆಯಲ್ಲಿಯೇ ಸ್ಪಷ್ಟ ಭಾವನೆ ಇನ್ನೂ ಇರಲಿಲ್ಲ. ಆಲೋಚಿಸತೊಡಗಿದಳು ವಿಜೆತಾ.

(ಮುಂದುವರಿಯುತ್ತದೆ)

Saturday, October 3, 2015

ಅಘನಾಶಿನಿ ಕಣಿವೆಯಲ್ಲಿ-26

             ಉಂಚಳ್ಳಿ ಜಲಪಾತದ ಮಾರ್ಗದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳಿಗೂ, ಮರಗಳ್ಳರಿಗೂ ನಡೆದಿದ್ದ ಕಣ್ಣಾಮುಚ್ಚಾಲೆಯ ಘಟನೆಗೂ, ದಂಟಕಲ್ಲಿನಲ್ಲಿ ನಡೆದಿದ್ದ ಮರಗಳ್ಳರ ಮೇಲಿನ ದಾಳಿಯ ನಡುವೆಯೂ ಏನೋ ಸಂಬಂಧ ಇರಬೇಕು ಎಂದು ತರ್ಕಿಸುತ್ತಿದ್ದ ಪ್ರದೀಪ. ಮರಗಳ್ಳರು ಹಲವು ಕಡೆಗಳಲ್ಲಿದ್ದರೂ ಸಾಮಾನ್ಯವಾಗಿ ಯಾರಾದರೂ ಮರಗಳ್ಳತನ ಮಾಡುತ್ತಿದ್ದ ಸಂದರ್ಭದಲ್ಲಿ ಕಣ್ಣಿಗೆ ಕಾಣಿಸಿದರೆ ಓಡಿ ಹೋಗುತ್ತಾರೆ. ಆದರೆ ಈ ಎರಡೂ ಘಟನೆಗಳಲ್ಲಿ ಮರಗಳ್ಳರು ಮೈಮೇಲೆ ಏರಿ ಬಂದಿದ್ದರು. ಜನಸಾಮಾನ್ಯರು ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳ ಮೇಲೆ ಧಾಳಿ ನಡೆಸಲು ಪ್ರಯತ್ನಿಸಿದ್ದರು. ಈ ಹಿನ್ನೆಲೆಯಲ್ಲಿ ದಾಳಿಗೆ ಮುಂದಾದ ಮರಗಳ್ಳರು ಖಂಡಿತ ಒಂದೇ ಗುಂಪಿಗೆ ಸೇರಿರಬೇಕು. ಖಂಡಿತ ಈ ಮರಗಳ್ಳರನ್ನು ಯಾವುದೋ ವ್ಯಕ್ತಿ ಅಥವಾ ಯಾವುದೋ ತಂಡ ನಿರ್ವಹಣೆ ಮಾಡುತ್ತಿರಬೇಕು. ಮರಗಳ್ಳರಿಗೆ ಎಲ್ಲೋ ಖಂಡಿತ ತರಬೇತಿಯೂ ಸಿಗುತ್ತಿರಬೇಕು ಎಂದು ಪ್ರದೀಪ ಆಲೋಚಿಸಿದ್ದ. ಮುಂದಿನ ದಿನಗಳಲ್ಲಿ ಪ್ರದೀಪನ ಆಲೋಚನೆಗೆ ಪೂರಕವಾಗಿ ಘಟನೆಗಳು ನಡೆಯಲಿದ್ದವು.
             ಉಂಚಳ್ಳಿ ಜಲಪಾತಕ್ಕೆ ಹೋಗಬೇಕು ಎಂದು ನಿರ್ಧಾರ ಮಾಡಿಕೊಂಡಿದ್ದವರು ಅನಿರೀಕ್ಷಿತವಾಗಿ ನಡೆದ ಮರಗಳ್ಳರ ಮೇಲಿನ ಹಲ್ಲೆಯ ಘಟನೆಯಿಂದ ತಮ್ಮ ಯೋಜನೆಯನ್ನು ಬದಲಾಯಿಸಿಕೊಳ್ಳಬೇಕಾಯಿತು. ಮರಗಳ್ಳರು ಹಗೆಯನ್ನು ಸಾಧಿಸಬಹುದು ಎಂದು ಆಲೋಚನೆ ಮಾಡಿಕೊಂಡಿದ್ದ ಇವರು ಕಾಲಕಾಲಕ್ಕೆ ತಮ್ಮ ಯೋಜನೆಗಳನ್ನು ಬದಲಾಯಿಸಿಕೊಳ್ಳಬೇಕಾಗುತ್ತದೆ ಎನ್ನುವುದನ್ನೂ ಮನಗಂಡಿದ್ದರು. ಅದು ಅನಿವಾರ್ಯವೂ ಆಗಿತ್ತು.
                ಮರುದಿನದಿಂದಲೇ ರಾಮುವಿನ ಧಾಳಿಯಿಂದ ಗಾಯಗೊಂಡಿದ್ದ ವ್ಯಕ್ತಿಯನ್ನು ಹುಡುಕುವ ಕೆಲಸ ಆರಂಭವಾಯಿತು. ಆರೋಗ್ಯ ಗಣತಿಯ ನೆಪವನ್ನು ಮಾಡಿಕೊಂಡು ವಿಕ್ರಮ, ಪ್ರದೀಪ, ವಿನಾಯಕ, ವಿಜೇತಾ, ವಿಷ್ಣು ಇವರೆಲ್ಲ ತಲಾ ಎರಡೆರಡು ತಂಡಗಳಂತೆ ಒಂದೊಂದು ಊರಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಲು ಆರಂಭಿಸಿದರು. ದಂಟಕಲ್ಲಿನ ಸುತ್ತಮುತ್ತ ಇರುವ ಊರುಗಳಿಗೆಲ್ಲ ಹೋಗಲಾಯಿತು. ಕೊನೆಗೊಮ್ಮೆ ಬೇಣದಗದ್ದೆಯ ಆಚೆಗೆ ಇರುವ ಹೊಸಗದ್ದೆ ಎಂಬಲ್ಲಿ ಬಾಸು ಗೌಡ ಎಂಬಾತನ ಮನೆಯಲ್ಲಿ ಬಾಸು ಗೌಡನ ಕಾಲಿಗೆ ಗಾಯವಾಗಿರುವ ವಿಷಯ ಪತ್ತೆಯಾಯಿತು. ಮನೆಯ ಮಾಡಿನ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಜಾರಿಬಿದ್ದು ಹಗರು ದಬ್ಬೆ ಬಡಿದು ಗಾಯವಾಗಿದೆ ಎಂದು ಬಾಸು ಗೌಡನ ಮನೆಯಲ್ಲಿ ಸಬೂಬನ್ನು ಹೇಳಿದರು. ಬಾಸು ಗೌಡನೂ ಸ್ಥಳದಲ್ಲಿದ್ದ. ಆತನ ಕಾಲಿಗೆ ಗಾಯವಾಗಿತ್ತು. ಗಾಯಕ್ಕೆ ಬ್ಯಾಂಡೇಜ್ ಸುತ್ತಲಾಗಿತ್ತು. ಮುಂಜಾನೆಯೇ ಎದ್ದು ಯಾವುದೋ ಆಸ್ಪತ್ರೆಗೆ ಹೋಗಿ ಬಂದಿರಬೇಕು ಎಂದುಕೊಂಡರು.
            ಬಾಸು ಗೌಡನ ಮನೆಯನ್ನು ಸೂಕ್ಷ್ಮವಾಗಿ ಪರೀಕ್ಷೆ ಮಾಡಿದಾಗ ಎಲ್ಲಿಯೂ ಮಾಡು ನಿರ್ಮಾಣ ಮಾಡಿದಂತಹ ಕುರುಹು ಸಿಗಲಿಲ್ಲ. ಆತ ಸುಳ್ಳು ಹೇಳಿದ್ದು ಸ್ಪಷ್ಟವಾಗಿತ್ತು. ಮರುದಿನದಿಂದಲೇ ಆತನ ಮೇಲೆ ಕಣ್ಣಿಡಬೇಕು ಎಂದುಕೊಂಡರು ಎಲ್ಲರೂ. ಆತ ಎಲ್ಲೆಲ್ಲಿ ಹೋಗುತ್ತಾನೆ? ಏನು ಮಾಡುತ್ತಾನೆ ಎನ್ನುವುದನ್ನು ಸೂಕ್ಷ್ಮವಾಗಿ ತಿಳಿದುಕೊಳ್ಳಬೇಕು ಎಂದುಕೊಂಡರು.
               ಬಾಸು ಗೌಡ ಮರಗಳ್ಳತನ ಮಾಡುತ್ತಿದ್ದಾನೆ ಎನ್ನುವುದು ಸ್ಪಷ್ಟವಾದ ಮೇಲೆ ಆತನ ಹಿನ್ನೆಲೆಯನ್ನು ತಿಳಿದುಕೊಳ್ಳಲು ವಿಕ್ರಮನ ತಂಡ ಪ್ರಯತ್ನಿಸಿತು. ಬಹಳ ಕಡೆಗಳಲ್ಲಿ ವಿಚಾರಿಸಿದಾಗ ಬಾಸು ಗೌಡ ಮೂಲತಃ ಈ ಕಡೆಯವನಲ್ಲವೆಂದೂ ತೀರ್ಥಹಳ್ಳಿಯಿಂದ ಬಂದವನೆಂದೂ ತಿಳಿಯಿತು. ಬಂದ ಹೊಸತರಲ್ಲಿ ಅವರಿವರ ಮನೆಯಲ್ಲಿ ಕೆಲಸ ಮಾಡುತ್ತಿದ್ದನೆಂಬುದೂ ತಿಳಿಯಿತು. ನಂತರ ಇದ್ದಕ್ಕಿದ್ದಂತೆ 407 ವಾಹನವನ್ನು ಕೊಂಡಾಗ ಮಾತ್ರ ಪ್ರತಿಯೊಬ್ಬರೂ ಬಾಸು ಗೌಡನ ಬಗ್ಗೆ ಹುಬ್ಬೇರಿಸಿದ್ದರು. ಆತ 407 ವಾಹನವನ್ನು ಕೊಂಡುಕೊಂಡ ಮೂರು ದಿನಗಳಲ್ಲಿಯೇ ಪೊಲೀಸರು ಬಾಸು ಗೌಡನನ್ನು ಬಂಧಿಸಿದಾಗ ಮಾತ್ರ ಬಾಸು ಗೌಡನ ಅಸಲೀ ಮುಖ ಹೊರಬಂದಿತ್ತು. ಸುತ್ತಮುತ್ತಲ ಊರುಗಳಲ್ಲಿ ಬಾಸುಗೌಡ ವೆನಿಲ್ಲಾ ಕಳ್ಳತನ ಮಾಡುತ್ತಿದ್ದ ಎನ್ನುವುದು ಪೊಲೀಸರ ಬಂಧನದ ನಂತರವೇ ಜಗಜ್ಜಾಹೀರಾಗಿತ್ತು. ವೆನಿಲ್ಲಾ ಕದ್ದು ಕದ್ದು ಸಾಕಷ್ಟು ಹಣ ಮಾಡಿಕೊಂಡು ಕೊನೆಗೊಮ್ಮೆ 407 ವಾಹನವನ್ನು ಕೊಂಡಿದ್ದ. ಬಾಸುಗೌಡನ ಪೋಟೋ ಇಂದಿಗೂ ಪೊಲೀಸ್ ಠಾಣೆಯಲ್ಲಿ ಇದೆ ಎಂದು ಒಂದಿಬ್ಬರು ಮಾಹಿತಿ ನೀಡಿದ್ದರು. ಇಂತಹ ಬಾಸುಗೌಡನನ್ನು `ಪಾಪ..' ಹೋಗಲಿ ಬಿಡಿ ಎಂದುಕೊಂಡು ಬೇಣದಗದ್ದೆಯ ಸುಬ್ರಹ್ಮಣ್ಯ ಹೆಗಡೆ ಬೇಲು ಕೊಡಿಸಿ ಬಿಡುಗಡೆ ಮಾಡಿಸಿದ್ದರಂತೆ.
             ಬಿಡುಗಡೆಯಾದ ಮೇಲೆ ಸಾಚಾತನ ತೋರಿಸಿದ ಬಾಸು ಗೌಡ ತನ್ನ 407 ವಾಹನದಲ್ಲಿ ಅವರಿವರಿಗೆ ಮನೆ ಕಟ್ಟುವ ಕೆಂಪು ಕಲ್ಲುಗಳನ್ನು, ಜಲ್ಲಿ, ಮರಳುಗಳನ್ನು ತಂದುಕೊಡುವ ಕೆಲಸ ಮಾಡತೊಡಗಿದ. ಮೂರ್ನಾಲ್ಕು ವರ್ಷ ಕಳೆದ ಮೇಲೆ ಸಣ್ಣ ಪ್ರಮಾಣದ ರೌಡಿಯಿಸಂ ಕೆಲಸಕ್ಕೂ ಬಾಸು ಗೌಡ ಇಳಿದಿದ್ದ. ಜನರಿಂದ ಮುಂಗಡ ಹಣ ಪಡೆದುಕೊಳ್ಳುವುದು, ಅದಕ್ಕೆ ಪ್ರತಿಯಾಗಿ ಸೆಕೆಂಡ್ ಗುಣಮಟ್ಟದ ಕಲ್ಲುಗಳನ್ನು ಸರಬರಾಜು ಮಾಡುವ ಕಾರ್ಯ ಮಾಡುತ್ತಿದ್ದ. ಇದಕ್ಕೆ ಪ್ರತಿಯಾಗಿ ಜನಸಾಮಾನ್ಯರು ಗಲಾಟೆ ಮಾಡಿದರೆ ತಂದು ಹಾಕಿದ್ದ ಕಲ್ಲನ್ನು ಬಲಾತ್ಕಾರವಾಗಿ ಎತ್ತಿಕೊಂಡು ಬರುವ ಕೆಲಸವನ್ನೂ ಮಾಡುತ್ತಿದ್ದ. ಈ ಕುರಿತಂತೆ ಒಂದೆರಡು ಸಾರಿ ಪೊಲೀಸ್ ಠಾಣೆಗಳಲ್ಲಿ ಪ್ರಕರಣವೂ ದಾಖಲಾಗಿತ್ತು. ಆದರೆ ಹಣದ ಪ್ರಭಾವ ಹಾಗೂ ರೌಡಿಯಿಸಮ್ಮಿನ ಕಾರಣದಿಂದ ಅಂತಹ ಪ್ರಕರಣ ಮುಚ್ಚಿಹಾಕುವ ಕಾರ್ಯದಲ್ಲಿ ಬಾಸು ಗೌಡ ಯಶಸ್ವಿಯಾಗುತ್ತಿದ್ದ. ಇಂತಹ ಬಾಸುಗೌಡ ಮರಗಳ್ಳತನ ಮಾಡುತ್ತಿದ್ದ ಎನ್ನುವುದು ಈಗ ಆಗಿರುವ ಗಾಯದಿಂದ ಗೊತ್ತಾದಂತಾಗಿತ್ತು. ರಾಮು ಮಾಡಿದ ದಾಳಿಯಿಂದಾಗಿ ಬಾಸು ಗೌಡನ ಇನ್ನೊಂದು ಮುಖ ಜಗತ್ತಿಗೆ ತಿಳಿದಂತಾಗಿತ್ತು. ಪ್ರದೀಪ ಈ ಎಲ್ಲ ಮಾಹಿತಿಗಳನ್ನು ಪಡೆದುಕೊಂಡು ಆಲೋಚನೆಯಲ್ಲಿ ಬಿದ್ದಿದ್ದ.
             ಮರಗಳ್ಳತನ ಮಾಡಿ ಗಾಯಗೊಂಡಿರುವವನು ಬಾಸು ಗೌಡನಾದರೆ ತನ್ನ ಕೈಯಲ್ಲಿ ಹೊಡೆತ ತಿಂದು ಸಾವನ್ನಪ್ಪಿದವನು ಯಾರು ಎನ್ನುವುದು ಪ್ರದೀಪನ ತಲೆಯಲ್ಲಿ ಕೊರೆಯಲಾರಂಭಿಸಿತ್ತು. ಬಾಸುಗೌಡ ಪಕ್ಕದ ಊರಿನವನೇ ಆಗಿದ್ದರೂ ಸತ್ತವನು ಎಲ್ಲಿಯವನು? ಪಕ್ಕದ ಊರಿನವನಾಗಿದ್ದರೆ ಗೊತ್ತಾಗಬೇಕಿತ್ತಲ್ಲ. ಯಾರೂ ಸಾವನ್ನಪ್ಪಿರುವ ಬಗ್ಗೆ ಮಾಹಿತಿ ಬಂದಿಲ್ಲ. ಬೇರೆ ಕಡೆಯಿಂದ ಬಂದವನೇ ಎಂದು ಆಲೋಚಿಸಿದ. ಸುತ್ತಮುತ್ತ ಮಾಹಿತಿ ಸಂಗ್ರಹಿಸಿದಾಗ ಇಬ್ಬರಿಗೆ ಹಾರ್ಟ್ ಎಟ್ಯಾಕ್ ಆಗಿ ಆಸ್ಪತ್ರೆಯಲ್ಲಿದ್ದಾರೆ ಎನ್ನುವ ಮಾಹಿತಿ ಸಿಕ್ಕಿತ್ತು. ಒಬ್ಬರಿಗೆ ಬ್ರೈನ್ ಟ್ಯೂಮರ್ ಆಗಿ ಮಂಗಳೂರಿನ ಆಸ್ಪತ್ರೆಗೆ ಎರಡು ದಿನಗಳ ಹಿಂದೆ ಕರೆದೊಯ್ಯಲಾಗಿದೆ ಎನ್ನುವ ಮಾಹಿತಿಯೂ ಸಿಕ್ಕಿತ್ತು. ಇವರ್ಯಾರೂ ಅಲ್ಲ. ಬೇರೆ ಇನ್ಯಾರು ಸತ್ತಿರಬಹುದು ಎಂದು ಪ್ರದೀಪ ಆಲೋಚನೆ ಮಾಡಲಾರಂಭಿಸಿದ್ದ.

***

              ಒಂದೆರಡು ದಿನಗಳಲ್ಲಿ ಏನೆಲ್ಲ ನಡೆದು ಹೋದವಲ್ಲ ಎಂದುಕೊಂಡ ವಿಕ್ರಮ. ಪ್ರದೀಪನಿಂದ ಸುಮ್ಮ ಸುಮ್ಮನೇ ಯಾವುದೋ ಸಮಸ್ಯೆ ಉದ್ಭವವಾಗಿರಬಹುದೇ ಎಂದೂ ಆತನ ಮನದಲ್ಲಿ ಮೂಡಿತು. ಪ್ರದೀಪ ಖಂಡಿತವಾಗಿಯೂ ಸಾಮಾನ್ಯನಲ್ಲ. ಈತ ಬೇರೇನೋ ಇರಬೇಕು ಎನ್ನುವ ಶಂಕೆ ಮತ್ತಷ್ಟು ಬಲವಾಯಿತು. ಅಷ್ಟರಲ್ಲಿ ಅವನ ಬಳಿಗೆ ಬಂದ ವಿಜೇತಾ `ವಿಕ್ಕಿ.. ಉಂಚಳ್ಳಿ ಜಲಪಾತಕ್ಕೆ ಹೋಗಿ ಬರೋಣವಾ? ಯಾಕೋ ಮನಸ್ಸೆಲ್ಲ ಒಂಥರಾ ಆಗಿದೆ. ಸ್ವಲ್ಪ ಮನಸ್ಸಿಗೆ ರಿಲ್ಯಾಕ್ಸ್ ಸಿಗುತ್ತೇನೋ ಅಂತ..' ಎಂದಳು.
             `ಖಂಡಿತ. ನಾನೂ ಅದನ್ನೇ ಹೇಳೋಣ ಅಂದುಕೊಂಡಿದ್ದೆ. ನೀನು ಹೇಳಿದ್ದು ಚೆನ್ನಾಯಿತು ನೋಡು. ಎಲ್ಲರಿಗೂ ಹೇಳುತ್ತೇನೆ. ಇವತ್ತೇ ಹೋಗಿ ಬರೋಣ..' ಎಂದು ತಯಾರಾಗಲು ಅನುವಾದ ವಿಕ್ರಮ.
              `ಬೇಗ.. ' ಅವಸರಿಸಿದಳು ವಿಜೇತಾ.
               ಕೆಲವೇ ಸಮಯದಲ್ಲಿ ಎಲ್ಲರಿಗೂ ಸುದ್ದಿ ತಿಳಿದು ಪ್ರತಿಯೊಬ್ಬರೂ ತಯಾರಾದರು. ವಿಕ್ರಮ ಕಾರನ್ನು ತೆಗೆದಿದ್ದ. ವಿನಾಯಕ, ವಿಷ್ಣು, ಪ್ರದೀಪ, ವಿಜೇತಾ, ವಿಕ್ರಮ ಹಾಗೂ ವಿನಾಯಕನ ತಂಗಿಯರು ತಯಾರಾಗಿ ಕಾರನ್ನೇರಿದ್ದರು. ದಂಟಕಲ್ಲಿನಿಂದ ಒಂದು ತಾಸಿನ ಅಂತರದಲ್ಲಿ ಯಲುಗಾರ, ಹೊಸಗದ್ದೆ, ಹೇರೂರು, ಹೆಗ್ಗರಣೆ ಈ ಮುಂತಾದ ಊರುಗಳನ್ನು ದಾಟಿ ಉಂಚಳ್ಳಿ ಜಲಪಾತದ ಬಳಿ ತೆರಳಿದರು.
              ಅಘನಾಶಿನಿ ನದಿಯಿಂದ ಸೃಷ್ಟಿಯಾಗುವ ಈ ಜಲಪಾತವನ್ನು ಲೂಷಿಂಗ್ಟನ್ ಜಲಪಾತ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ. ಶಿರಸಿಯಿಂದ 30 ಕಿಲೋಮೀಟರ್ ಅಂತರದಲ್ಲಿರುವ ಈ ಜಲಪಾತದ ಎತ್ತರ 116 ಮೀಟರ್. 1845ರಲ್ಲಿ ಉತ್ತರ ಕನ್ನಡದಲ್ಲಿ ಸರ್ವೇ ಕಾರ್ಯ ನಿರ್ವಹಿಸುತ್ತಿದ್ದ ಬ್ರಿಟೀಷ್ ಅಧಿಕಾರಿ ಜೆ. ಡಿ. ಲೂಷಿಂಗ್ಟನ್ ಈ ಜಲಪಾತವನ್ನು ಕಂಡುಹಿಡಿದ ಎಂಬ ಮಾಹಿತಿಯಿದೆ. ಆದ್ದರಿಂದ ಈ ಜಲಪಾತವನ್ನು ಲೂಷಿಂಗ್ಟನ್ ಜಲಪಾತ ಎಂದು ಕರೆಯುತ್ತಾರೆ. ಈ ಜಲಪಾತದ ನೀರು ಬೀಳುವಾಗ ಭಾರಿ ದೊಡ್ಡ ಶಬ್ದ ಉಂಟುಮಾಡುತ್ತದೆ. ಆ ಕಾರಣದಿಂದ ಸ್ಥಳೀಯರು ಈ ಜಲಪಾತವನ್ನು `ಕೆಪ್ಪ ಜೋಗ' ಎಂದು ಕರೆಯುತ್ತಾರೆ. ವರ್ಷದ ಎಲ್ಲ ಕಾಲದಲ್ಲಿಯೂ ಈ ಜಲಪಾತದ ದರ್ಶನ ಲಭ್ಯ. ಮಳೆಗಾಲದಲ್ಲಂತೂ ಇದು ರುದ್ರರಮಣೀಯ.
              ಬೇಸಿಗೆಯಾದ್ದರಿಂದ ಜಲಪಾತದಲ್ಲಿ ನೀರು ಅಷ್ಟಾಗಿ ಇರಲಿಲ್ಲ. ಆದರೆ ಜಲಪಾತ ಬಹಳ ಸುಂದರವಾಗಿ ಕಾಣುತ್ತಿತ್ತು. ಕಾರಿನಿಂದ ಇಳಿದವರು ಓಡಿದಂತೆ ಸಾಗಿದರು. ವೀಕ್ಷಣಾ ಗೋಪುರದ ಬಳಿ ನಿಂತು ಜಲಪಾತ ನೋಡಿದವರಿಗೆ ಸಮಯ ಸರಿದಿದ್ದೇ ಗೊತ್ತಾಗಲಿಲ್ಲ. ಜಲಪಾತಕ್ಕೆ ಮಳೆಗಾಲದ ಅಬ್ಬರ ಇರಲಿಲ್ಲ. ಕಲಕಲಕಿಸುತ್ತ ಇಳಿದು ಬರುತ್ತಿದ್ಧಳು ಅಘನಾಶಿನಿ. ಮಳೆಗಾಲದಲ್ಲಿ ಅಬ್ಬರದಿಂದ ಸದ್ದು ಮಾಡುತ್ತಿದ್ದವಳು ಇವಳೇ ಹೌದಾ ಎನ್ನುವಷ್ಟು ಸೌಮ್ಯ. ಒಂದೇ ನೋಟಕ್ಕೆ ಎಲ್ಲರ ಮನಸ್ಸನ್ನು ಕದ್ದು ಬಿಟ್ಟಿದ್ದಳು.
           'ಕೆಳಗೆ ಹೋಗಬಹುದಾ?' ಕೇಳಿದ್ದಳು ವಿಜೇತಾ.

(ಮುಂದುವರಿಯುತ್ತದೆ)

Friday, October 2, 2015

ಅಂ-ಕಣ-7

ನಿಶ್ಚಿಂತೆ

ತಲೆ ಮೇಲೆ
ಹತ್ತಿ ಕೂರುವವರು
ತಲೆ ದೊಡ್ಡದೋ, ಸಣ್ಣದೋ
ಎಂದು
ತಲೆ ಕೆಡಿಸಿಕೊಳ್ಳುವುದಿಲ್ಲ ||


ಹೊಸಮನೆ ಹೆಸರು

ಸಿನಿಮಾ ನಿರ್ದೇಶಕ
ಮಠ ಗುರುಪ್ರಸಾದ್
ಹೊಸ ಮನೆ ಕಟ್ಟಿಸಿದರೆ
ಇಡಬಹುದಾದ
ಹೊಸ ಹೆಸರು
ಗುರು-ವಿಲ್ಲಾ|
ಗುರುವಿಲ್ಲಾ||


ದಪ್ಪ

ದಪ್ಪ ಇರುವವರನ್ನು
ನೋಡಿದಾಗಲೆಲ್ಲಾ
HOWದಪ್ಪ ಎನ್ನಿಸುತ್ತದೆ ||

Tuesday, September 22, 2015

ಮಾಸ್ತರ್ ಮಂದಿ-7

             ಇಲ್ಲಿಯ ತನಕ ಪ್ರಾಥಮಿಕ ಶಾಲೆಯಲ್ಲಿ ಕಲಿಸುತ್ತಿದ್ದ ಶಿಕ್ಷಕರ ಬಗ್ಗೆ ಬರೆದಿದ್ದೇನೆ. ನಂತರ ಹೈಸ್ಕೂಲಿನಲ್ಲಿ ಕಲಿಸಿದವರ ಬಗ್ಗೆ ಬರೆಯಲೇ ಬೇಕು. ಪ್ರತಿಯೊಬ್ಬರ ಬದುಕಿನಲ್ಲಿಯೂ ಹೈಸ್ಕೂಲು ಎನ್ನುವುದು ಬದಲಾವಣೆಯ ಪ್ರಮುಖ ಘಟ್ಟ. ಬಾಲ್ಯದ ಬದುಕನ್ನು ಕಳೆದು ಟೀನೇಜ ಬದುಕಿಗೆ ಕಾಲಿಡುವ ಘಳಿಗೆ ಇದು. ಯಾವು ಯಾವುದೋ ಆಕರ್ಷಣೆ, ಹುಚ್ಚು ಬಯಕೆಗಳಿಗೆ ಬಿದ್ದುಬಿಡುವ ಸಮಯವೂ ಇದೆ. ಇಂತಹ ಸಂದರ್ಭದಲ್ಲಿ ಕಲಿಸುವ ಶಿಕ್ಷಕರು ಬಹಳ ಪ್ರಭಾವ ಬೀರುತ್ತಾರೆ ಎನ್ನುವುದು ಸುಳ್ಳಲ್ಲ ನೋಡಿ. ಅಂದಹಾಗೆಯೇ ನಾನು ಹೈಸ್ಕೂಲನ್ನು ಓದಲು ಹೋಗಿದ್ದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿರುವ ಕಾನಲೆಯಲ್ಲಿ. ಆ ದಿನಗಳಲ್ಲಿ ನಮ್ಮ ಮನೆಯಲ್ಲಿ ಜಸ್ಟ್ ಹಿಸೆ ಆಗಿತ್ತು. ಅಪ್ಪನ ಕೈಯಲ್ಲಿ ನಯಾಪೈಸೆ ದುಡ್ಡಿರಲಿಲ್ಲ. ಹೆಂಗಪ್ಪಾ ಓದಿಸೋದು ಎಂದು ಹೇಳುತ್ತಿದ್ದ ಹಾಗೆಯೇ ನಾನು ಕಾನಲೆಯಲ್ಲಿ ಓದುತ್ತೇನೆ ಎಂದು ಹೇಳಿಬಿಟ್ಟಿದ್ದೆ. ನನಗೆ ಗುರಣ್ಣ ಹಾಗೂ ಗಿರೀಶಣ್ಣ ಇರುತ್ತಾರೆ ಎನ್ನುವ ಕಾರಣವೂ ಮುಖ್ಯವಾಗಿತ್ತು. ಕಾನಲೆಯಲ್ಲಿ ದೊಡ್ಡಪ್ಪನ ಮನೆಯಲ್ಲಿ ಈ ವಿಷಯ ಪ್ರಸ್ತಾಪ ಮಾಡಿದಾಗ ಓಕೆ ಎಂದಿದ್ದರು. ಅರ್ಧ ಭಯದಿಂದ, ಅರ್ಧ ಕುತೂಹಲದಿಂದ ನನ್ನ ಹಡಪ ಕಟ್ಟಿಕೊಂಡು ಹೈಸ್ಕೂಲಿಗೆ ಕಾಲಿಟ್ಟಿದ್ದೆ.
                ಕಾನಲೆ ಹೈಸ್ಕೂಲಿನ ಬಗ್ಗೆ ಕೆಲವು ಮಾತುಗಳನ್ನು ಹೇಳಿದ ನಂತರವೇ ನನಗೆ ಕಲಿಸಿದ ಶಿಕ್ಷಕರ ಬಗ್ಗೆ ವಿವರಗಳನ್ನು ನೀಡುತ್ತೇನೆ. ಕಾನಲೆಯಲ್ಲಿ ಮುಖ್ಯವಾಗಿ ಮೂರು ಕೇರಿಗಳಿವೆ. ಬ್ರಾಹ್ಮಣರ ಕೇರಿ, ಅಚ್ಚೆಕೇರಿ ಹಾಗೂ ಇನ್ನೊಂದು ಕೇರಿ. ಸಾಗರ ಹಾಗೂ ಸಿದ್ದಾಪುರಕ್ಕೆ ಖಾಸಗಿ ಬಸ್ಸುಗಳು ಹೆಚ್ಚಾಗಿ ಓಡಾಡುವ ಮೇನ್ ರೋಡಿನಲ್ಲಿ ಬ್ರಾಹ್ಮಣರ ಕೇರಿಯಿದ್ದರೆ ಆ ಕೇರಿಯ ಕೊಟ್ಟ ಕೊನೆಯಲ್ಲಿ ಗುಡ್ಡದ ಮೇಲೆ ಕಾನಲೆ ಹೈಸ್ಕೂಲಿತ್ತು. 5 ಎಕರೆಯ ಕಂಪೌಂಡಿನಲ್ಲಿದ್ದ ಹೈಸ್ಕೂಲಿಗೆ ನಾನು ಬರುವ ವೇಳೆಗೆ ಹೊಸ ಕಟ್ಟಡ ನಿರ್ಮಾಣವಾಗಿ ಮೂರೋ ನಾಲ್ಕೋ ವರ್ಷಗಳು ಕಳೆದಿದ್ದವು. ಇಂಗ್ಲೀಷಿನ L ಆಕಾರದಲ್ಲಿ ಕೈಸ್ಕೂಲಿ ನಿರ್ಮಾಣವಾಗಿದ್ದರೆ ಅದಕ್ಕೆ ತಾಗಿಕೊಂಡಂತೆ ದೊಡ್ಡ ಮೈದಾನವಿತ್ತು. ಗೊಚ್ಚುಮಣ್ಣಿನ ಮೈದಾನದಲ್ಲಿ ಉರುಳಿಬಿದ್ದರೆ ಮೈ ಕೈ ತರಚಿ ಹೋಗುತ್ತಿತ್ತು ಬಿಡಿ. ಹೈಸ್ಕೂಲಿಗೆ ಹೋಗುವ ರಸ್ತೆಯ ಕುರಿತಂತೆ ಗಲಾಟೆ ನಡೆಯುತ್ತಿತ್ತು.
            ಕಾನಲೆಯ ಹೈಸ್ಕೂಲು ಐದು ಎಕರೆ ಕಂಪೌಂಡು ಎಂದು ಆಗಲೇ ಹೇಳಿದ್ದೆನಲ್ಲ. ಈ ಐದು ಎಕರೆ ಜಮೀನು ಕಾನಲೆಯ ಬ್ರಾಹ್ಮಣರ ಕೇರಿಗೆ ಸರ್ಕಾರಿ ಗೋಮಾಳ ಎನ್ನುವ ಹೆಸರಿನಲ್ಲಿತ್ತು. ಆದರೆ ಊರಿಗೆ ಹೈಸ್ಕೂಲು ಬಂದರೆ ಒಳ್ಳೆಯದಲ್ಲವೇ ಎನ್ನುವ ಕಾರಣಕ್ಕಾಗಿ ಊರ ಬ್ರಾಹ್ಮಣರ ಮುಖಂಡರುಗಳು ಸೇರಿಕೊಂಡು ಜಾಗ ಬಿಟ್ಟುಕೊಟ್ಟಿದ್ದರು. ಆದರೆ ಈ ಹೈಸ್ಕೂಲಿಗೆ ಬರಲು ರಸ್ತೆಯೇ ಸರಿ ಇರಲಿಲ್ಲ. ಗಡೇಮನೆ ಹಾಗೂ ಕಾನಲೆಗೆ ಸೇರಿದ ಗುಡ್ಡದ ಹಿಂಭಾಗದಲ್ಲಿ ಹೈಸ್ಕೂಲಿಗೆ ಬರಲು ಗುಡ್ಡವನ್ನು ಹತ್ತಬೇಕು. ಹೈಸ್ಕೂಲಿಗೆ ಬರಲು ರಸ್ತೆಗೆ ಜಾಗವನ್ನು ನೀಡಲು ಯಾರೂ ತಯಾರಿರಲಿಲ್ಲ. ಈ ಕಾರಣದಿಂದ ಒಂದಿಷ್ಟು ದಿನ ಕಾಲುಹಾದಿಯೇ ಹೈಸ್ಕೂಲಿಗೆ ಗತಿಯಾಗಿತ್ತು. ನಂತರದ ದಿನಗಳಲ್ಲಿ ಸ್ಥಳೀಯ ಗ್ರಾಮ ಪಂಚಾಯತಿಗೆ ಅಧ್ಯಕ್ಷನಾಗಿ ಆಯ್ಕೆಯಾಗಿದ್ದ ಸೊಸೈಟಿ ರಾಮಪ್ಪ ಎನ್ನುವವನ ಮನೆಯ ಪಕ್ಕದಲ್ಲಿ ರಸ್ತೆಯಾಯಿತು. ನಂತರ ಪುಟ್ಟಜ್ಜನ ಮನೆ ಪಕ್ಕದಲ್ಲಿ ರಸ್ತೆಯಾಯಿತು.
           ಪುಟ್ಟಜ್ಜನ ಮನೆಯ ಪಕ್ಕದಲ್ಲಿ ಪುಟ್ಟಜ್ಜನ ಮನೆ ಜಾಗದಲ್ಲಿಯೇ ರಸ್ತೆ ಮಾಡಿದ್ದು ಹಲವಾರು ದಿನಗಳ ಕಾಲ ಗಲಾಟೆಗೂ ಕಾರಣವಾಗಿತ್ತು. ಪುಟ್ಟಜ್ಜ ಮೂರು ಮೂರು ಇಂಜೆಕ್ಷನ್ ಅರ್ಜಿಗಳನ್ನೂ ಹಾಕಿದ್ದರು. ಆದರೆ ಆ ನಂತರದ ದಿನಗಳಲ್ಲಿ ಕಾನಲೆಯ ಶೇಷಗಿರಿಯಣ್ಣ ಹಾಗೂ ಇತರರು ಜಾಗವನ್ನು ಬಿಟ್ಟುಕೊಡುವ ಮೂಲಕ ದೊಡ್ಡತನ ಮೆರೆದಿದ್ದರು. ಪದೆ ಪದೆ ನಡೆಯುತ್ತಿದ್ದ ಗಲಾಟೆಗೆ ಪುಲ್ ಸ್ಟಾಪ್ ಹಾಕಿದ್ದರು. ಇಂತಹ ಕಾನಲೆಯ ಹೈಸ್ಕೂಲಿನಲ್ಲಿ ನಾನು ಓದುತ್ತಿದ್ದ ಸಂದರ್ಬದಲ್ಲಿ 150ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದರು. ಅವರಲ್ಲಿ ನನ್ನ ಕ್ಲಾಸಿನಲ್ಲಿ ನಾವು ನಾಲ್ಕು ಜನ ಹಾಗೂ ಮೇಲಿನ ಕ್ಲಾಸಿನಲ್ಲಿ ನಾಲ್ಕು ಜನ ಸೇರಿ ಒಟ್ಟೂ ಎಂಟು ಜನ ಬ್ರಾಹ್ಮಣರ ಹುಡುಗರಿದ್ದರು. ಉಳಿದವರೆಲ್ಲ ದೀವರು, ಗೌಡರು, ಒಕ್ಕಲಿಗರು, ಶೆಟ್ಟರು ಈ ಮುಂತಾದವರೇ ಆಗಿದ್ದರು. ಹೈಸ್ಕೂಲಿನ ಶಿಕ್ಷಕರ ವಿಷಯ ಸಾಕಷ್ಟು ಹೇಳಲೇಬೇಕು ಬಿಡಿ. ಬಿಆರ್.ಎಲ್, ಸಿ.ಆರ್.ಎಲ್, ಪಿಬಿಎನ್, ವನಮಾಲಾ ಟೀಚರ್, ವಿನೋದಾ ನಾಯ್ಕ, ಕೆಬಿಎನ್, ಲಕ್ಷಪ್ಪ ಸರ್, ಭಾರತೀ ಹೆಗಡೆ, ಎಚ್.ಎಸ್.ಎಸ್., ಗ್ರೇಸ್ ಪ್ರೇಮಕುಮಾರಿ ಇವರ ಬಗ್ಗೆ ಹೇಳುವುದು ಸಾಕಷ್ಟಿದೆ ಎನ್ನಿ.

ವನಮಾಲಾ ಮೇಡಮ್ :
ಸಾಗರದಿಂದ ಕಾನಲೆಗೆ ಡೈಲಿ ಬಂದು ಹೋಗಿ ಮಾಡುತ್ತಿದ್ದ ವನಮಾಲಾ ಮೇಡಮ್ ಆ ದಿನಗಳಲ್ಲಿ ನನ್ನ ಕ್ಲಾಸಿನ ಅನೇಕ ಹುಡುಗರ ಮನಸ್ಸನ್ನು ಕದ್ದವರು ಬಿಡಿ. ನೋಡಲು ಸುಂದರವಾಗಿದ್ದರು. ನಕ್ಕರೆ ಗುಳಿಕೆನ್ನೆ ಎದ್ದು ಕಾಣುತ್ತಿತ್ತು. ಅಪರೂಪಕ್ಕೆ ಬಯ್ಯುತ್ತಿದ್ದರು. ಸಿಟ್ಟು ಕಡಿಮೆ. ಧ್ವನಿ ಕೂಡ ಬಹಳ ಕಡಿಮೆ. ನಿಧಾನವಾಗಿ ಪಾಠ ಮಾಡುತ್ತಿದ್ದ ವನಮಾಲಾ ಮೇಡಮ್ಮಿಗೆ ಬಹುಶಃ 25-26ರ ಆಜೂಬಾಜಿನಲ್ಲಿ ವಯಸ್ಸಾಗಿತ್ತೇನೋ ಬಿಡಿ. ಇನ್ನೂ ಮದುವೆಯಾಗಿರಲಿಲ್ಲ. ವಿ.ಎನ್.ಆರ್. ಎಂದು ಶಾರ್ಟ್ ಫಾರ್ಮಿನಲ್ಲಿ ಕರೆಯುತ್ತಿದ್ದೆವು. ಸಮಾಜ ವಿಜ್ಞಾನವನ್ನು ಕಲಿಸಲು ಬರುತ್ತಿದ್ದರು. ಎಂಟನೇ ಕ್ಲಾಸಿನಲ್ಲಿ ನಾನು ಓದುತ್ತಿದ್ದಾಗ ಇವರ ಮೊದಲ ತರಗತಿಗೆ ನಾನು ಅಟೆಂಡ್ ಆಗಿದ್ದೆ. ಶಿವಮೊಗ್ಗ ಜಿಲ್ಲೆಯಲ್ಲಿದ್ದ ಹೈಸ್ಕೂಲಿನಲ್ಲಿ ಉತ್ತರ ಕನ್ನಡದಿಂದ ಬಂದಿದ್ದ ಏಕೈಕ ಹುಡುಗ ನಾನಾಗಿದ್ದೆ ಬಿಡಿ. ಶಿವಮೊಗ್ಗ ಸೀಮೆಯಲ್ಲಿ ಪ್ರತಿಯೊಬ್ಬರ ಹೆಸರನ್ನೂ ಇನ್ ಶಿಯಲ್ ಮೂಲಕ ಕರೆಯುತ್ತಿದ್ದರೆ ನಮ್ಮಲ್ಲಿ ಮಾತ್ರ ಉದ್ದುದ್ದಕ್ಕೆ ಕರೆಯುತ್ತಿದ್ದರು. ಹೆಸರಿನ ಮುಂದೆ ಅಪ್ಪನ ಹೆಸರು ಹಾಗೂ ಊರಿನ ಹೆಸರನ್ನು ಶಿವಮೊಗ್ಗ ಸೀಮೆಯಲ್ಲಿ ಮೊದಲ ಅಕ್ಷರದ ಜೊತೆಗೆ ಕರೆಯುತ್ತಿದ್ದರು. ಆದರೆ ನನಗೆ ಹಾಗಲ್ಲ ನೋಡಿ. ನಾನು ವಿನಯ ಸುಬ್ರಾಯ ಹೆಗಡೆ ಎಂದೇ ಕರೆಸಿಕೊಳ್ಳಬೇಕಿತ್ತು. ಒಮ್ಮೆ ವನಮಾಲಾ ಮೇಡಮ್ ಈ ಹೆಸರನ್ನು ಕೇಳಿ ತಮಾಷೆಯೂ ಮಾಡಿದ್ದರು.
ಎಂಟನೇ ಕ್ಲಾಸಿನಲ್ಲಿ ನಾನು ಹೈಸ್ಕೂಲಿಗೆ ಬುದ್ಧಿವಂತ ಹುಡುಗ ಎನ್ನುವ ಬಿರುದು ಬಾವಲಿಯನ್ನು ಗಳಿಸಿಕೊಂಡಿದ್ದೆ. ಅಕ್ಷರವೂ ಸಾಕಷ್ಟು ಸುಂದರವಾಗಿ ಮೂಡುತ್ತಿತ್ತು. ಆ ಕಾರಣದಿಂದ ನಾನು ಮಾಡಿಕೊಳ್ಳುತ್ತಿದ್ದ ನೋಟ್ಸಿಗೆ ಸಾಕಷ್ಟು ಬೇಡಿಕೆ ಬರುತ್ತಿತ್ತು. ಹೈಸ್ಕೂಲಿನ ಹುಡುಗಿಯರ ವಲಯದಲ್ಲಿ ನನ್ನ ನೋಟ್ ಪುಸ್ತಕ ಯಾವಾಗಲೂ ಓಡಾಡುತ್ತಿತ್ತು. ವನಮಾಲಾ ಮೇಡಮ್ ಕೂಡ ಪರೀಕ್ಷೆಯ ದಿನಗಳಲ್ಲಿ ನನ್ನ ನೋಟ್ಸನ್ನು ಪಡೆದುಕೊಂಡು ಹೋಗಿ ಅದರಲ್ಲಿನ ವಿಷಯಗಳನ್ನು ಪ್ರಶ್ನೆ ರೂಪದಲ್ಲಿ ಕೇಳುತ್ತಿದ್ದರು.
ಒಂಭತ್ತನೇ ಕ್ಲಾಸಿನಲ್ಲಿದ್ದಾಗ ಒಂದು ಘಟನೆ ಜರುಗಿತ್ತು. ವನಮಾಲಾ ಮೇಡಂ ಅವರಿಗೆ ಸಿಕ್ಕಾಪಟ್ಟೆ ಜ್ವರ. ಮೂರ್ನಾಲ್ಕು ದಿನ ಹೈಸ್ಕೂಲಿಗೆ ಬಂದಿರಲಿಲ್ಲ. ಆ ಸಂದರ್ಭದಲ್ಲಿಯೇ ಎಕ್ಸಾಂ ಕೂಡ ಬಂದಿತ್ತು. ಯಥಾಪ್ರಕಾರ ನನ್ನ ನೋಟ್ಸನ್ನು ತೆಗೆದುಕೊಂಡು ಹೋದ ವನಮಾಲಾ ಮೇಡಮ್ ಅದರ ಮೇಲೆ ಪ್ರಶ್ನೆ ಪತ್ರಿಕೆ ತಯಾರು ಮಾಡಿದ್ದರು. ಬರೆಯಲು ಅಸಾಧ್ಯ ಎನ್ನುವಂತಾಗಿದ್ದರಿಂದ ಎಂಟನೇ ತರಗತಿಯಲ್ಲಿ ಓದುತ್ತಿದ್ದ ಒಬ್ಬ ವಿದ್ಯಾರ್ಥಿನಿಯಿಂದ ಪ್ರಶ್ನೆಗಳನ್ನು ಬರೆಸಿದ್ದರು. ಆ ದಿನಗಳಲ್ಲಿ ಪರೀಕ್ಷೆಗಳಲ್ಲಿ ನನಗೆ 25ಕ್ಕೆ 20ರ ಮೇಲೆ ಅಂಕಗಳು ಬೀಳುತ್ತಿತ್ತು ಎಂದೆನಲ್ಲ. ನನಗೆ ಪ್ರತಿಸ್ಪರ್ಧಿಗಳೂ, ಆಗದೇ ಇದ್ದವರೂ ಸಾಕಷ್ಟು ಸಂಖ್ಯೆಯಲ್ಲಿದ್ದರು. ಅವರು ಈ ಸಾರಿ ಮಾತ್ರ ನನ್ನಿಂದ ವನಮಾಲಾ ಮೇಡಂ ನೋಟ್ಸನ್ನು ಪಡೆದು ಪ್ರಶ್ನೆ ಪತ್ರಿಕೆ ರೂಪಿಸಿದ್ದಾರೆ ಎನ್ನುವುದನ್ನು ತಿಳಿದು ಸುಳ್ಳು ಸುಳ್ಳೇ ಗಾಳಿ ಸುದ್ದಿಯನ್ನು ಹಬ್ಬಿಸಿಬಿಟ್ಟರು. ವಿನಯನ ನೋಟ್ ಬುಕ್ಕಿನ ಮೇಲೆ ವನಮಾಲಾ ಮೇಡಂ ಯಾವ ಯಾವ ಪ್ರಶ್ನೆ ತೆಗೆದಿದ್ದೇನೆ ಎಂದು ಟಿಕ್ ಮಾಡಿದ್ದಾರೆ. ಇದರಿಂದ ವಿನಯನಿಗೆ ಜಾಸ್ತಿ ಅಂಕಗಳು ಬೀಳುತ್ತವೆ. ಎಂಟನೇ ತರಗತಿ ವಿದ್ಯಾರ್ಥಿನಿಯಿಂದ ಬರೆಸಿದ್ದಾರೆ ಎಂದೂ ಹಬ್ಬಿಸಿದರು. ಅಷ್ಟೇ ಅಲ್ಲದೇ ಈ ವಿಷಯವನ್ನು ಇಂಗ್ಲೀಷ್ ಕಲಿಸಲು ಬರುತ್ತಿದ್ದ ಬಿ.ಆರ್.ಎಲ್. ಅವರ ಬಳಿ ಹೇಳಿಬಿಟ್ಟಿದ್ದರು. ಅವರೋ ಶಾಲೆಯಲ್ಲಿ ಗಲಾಟೆಯನ್ನೂ ಮಾಡಿದರು ಎನ್ನಿ. ಈ ಸಂದರ್ಭದಲ್ಲಿ ಜ್ವರ ಕಡಿಮೆಯಾದ ಮೇಲೆ ಶಾಲೆಗೆ ವಾಪಾಸು ಬಂದ ವನಮಾಲಾ ಮೇಡಂ ಮೊಟ್ಟ ಮೊದಲ ಬಾರಿಗೆ ಬಂದು ಜಗಳ ಮಾಡಿದ್ದು ನೋಡಬೇಕಿತ್ತು. ಚೆಂದದ ಮೇಡಮ್ ಇಷ್ಟು ಸಿಟ್ಟು ಮಾಡಿಕೊಳ್ಳಲು ಸಾಧ್ಯವೇ ಎಂದು ಬೆರಗಿನಿಂದ ನೋಡಿದ್ದೆ.
ನನ್ನ ನೋಟ್ ಬುಕ್ಕಿನ ತಪಾಸಣೆಯೂ ಆಗಿತ್ತು. ಅದರ ಮೇಲೆ ಯಾವುದೇ ಟಿಕ್ಕುಗಳಿರಲಿಲ್ಲ. ಎಂಟನೇ ಕ್ಲಾಸಿನಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ ಪ್ರಶ್ನೆ ಪತ್ರಿಕೆಯನ್ನು ತನ್ನ ಕೈಯಲ್ಲಿ ಮೇಡಮ್ ಬರೆಸಿರುವುದಾಗಿ ಒಪ್ಪಿಕೊಂಡಳು. ಕೊನೆಗೆ ಗಲಾಟೆ ಹೆಚ್ಚಾಗಿ ಮರು ಪರೀಕ್ಷೆ ಮಾಡಲಾಯಿತು. ವಿಚಿತ್ರ ಎಂದರೆ ಮೊದಲು ಮಾಡಿದ್ದ ಪರೀಕ್ಷೆಯಲ್ಲಿ ನನಗೆ 25ಕ್ಕೆ 21 ಅಂಕಗಳು ಬಿದ್ದಿದ್ದವು. ಆದರೆ 2ನೇ ಸಾರಿ ಮಾಡಿದ ಪರೀಕ್ಷೆಯಲ್ಲಿ ನನಗೆ 25ಕ್ಕೆ 24 ಅಂಕಗಳು ಬೀಳುವ ಮೂಲಕ ನನ್ನ ಮೇಲೆ ಬರುತ್ತಿದ್ದ ಆಪಾದನೆಯನ್ನೂ ತಪ್ಪಿಸಿಕೊಂಡಿದ್ದೆ ಬಿಡಿ.
ನಮಗೆ ದೈಹಿಕ ಶಿಕ್ಷಕರಾಗಿ ಸಿ.ಆರ್. ಲಿಂಗರಾಜು ಎನ್ನುವವರಿದ್ದರು. ಅದೇನು ಕಾರಣವೋ ಗೊತ್ತಿಲ್ಲ. ವನಮಾಲಾ ಮೇಡಮ್ಮಿಗೂ ಲಿಂಗರಾಜ ಸರ್ ಗೂ ಬಹಳ ಗಲಾಟೆ ನಡೆಯುತ್ತಿತ್ತು. ಕ್ಲಾಸಿನ ನಡುವೆಯೇ ಒಂದೆರಡು ಸಾರಿ ಈ ಇಬ್ಬರೂ ಜಗಳ ಮಾಡಿಕೊಂಡಿದ್ದನ್ನು ನಾವಿಬ್ಬರೂ ಕಂಡಿದ್ದೇವೆ. ಸಮಾಜ ವಿಜ್ಞಾನದ ತರಗತಿ ಸಂದರ್ಭದಲ್ಲಿ ಲಿಂಗರಾಜು ಸರ್ ಕ್ಲಾಸ್ ತೆಗೆದುಕೊಂಡು ಬಿಡುತ್ತಿದ್ದರು. ಲಿಂಗರಾಜು ಸರ್ ಕ್ಲಾಸ್ ಸಂದರ್ಭದಲ್ಲಿ ವನಮಾಲಾ ಮೇಡಂ ಸ್ಪೆಷಲ್ ಕ್ಲಾಸ್ ತೆಗೆದುಕೊಂಡು ಬಿಡುತ್ತಿದ್ದರು. ಇದರಿಂದ ಇಬ್ಬರ ನಡುವೆ ಗಲಾಟೆ ಬಹಳ ಆಗಿತ್ತೆನ್ನಿ. ಗಲಾಟೆ ನಮಗೆ ಮಜಾ ಅನ್ನಿಸಿತ್ತು. ಆ ಸಂದರ್ಭದಲ್ಲಿ ನಾವು ವಿದ್ಯಾರ್ಥಿಗಳೆಲ್ಲ ವನಮಾಲಾ ಮೇಡಂ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದೆವು. ನಮಗೆಲ್ಲ ಸಿಕ್ಕಾಪಟ್ಟೆ ಹೊಡೆಯುತ್ತಿದ್ದ ಲಿಂಗರಾಜ ಮಾಸ್ಟರ್ರಿಗೆ ಶರಂಪರ ಬಯ್ಯುತ್ತಿದ್ದೆವು ಬಿಡಿ. ಇತ್ತೀಚೆಗೆ ಕಾನಲೆ ಹೈಸ್ಕೂಲಿಗೆ ಭೇಟಿ ಕೊಟ್ಟಿದ್ದೆ. ಅಲ್ಲಿ ವನಮಾಲಾ ಮೇಡಮ್ ಇರಲಿಲ್ಲ. ಯಾವುದೋ ಹೈಸ್ಕೂಲಿಗೆ ವರ್ಗವಾಗಿದೆ ಎನ್ನುವ ಮಾಹಿತಿ ಬಂತು. ತಕ್ಷಣವೇ ಈ ಘಟನೆಗಳೆಲ್ಲ ನೆನಪಾಯಿತು.

(ಮುಂದುವರಿಯುತ್ತದೆ)

ಅಂ-ಕಣ-6

ಸಲಿಗೆ(ಸಲುಗೆ)

ಕೆಲವರನ್ನು 
ಹತ್ತಿರ ಬಿಟ್ಟುಕೊಂಡರೆ 
ತಲೆಯ ಮೇಲೆ 
ಹತ್ತಿ ಕುಳಿತುಕೊಳ್ಳುತ್ತಾರೆ..!!!

ಗೊಂದಲ

ಆಕೆ ತಿರುಗಿ 
ನೋಡುತ್ತಾಳೆ ಎಂದುಕೊಂಡೆ
ಕನ್ನಡಿಯಲ್ಲಿ ಇಣುಕಿದಳು ||

ಆರ್ತನಾದ

ಭಗವಾನರಿಗೆ 
ಪ್ರಶಸ್ತಿ ಕೊಟ್ಟ 
ಸಾಹಿತ್ಯ ಅಕಾಡೆಮಿ 
ಪ್ರತಿಭಟನೆಗೆ ಪ್ರತಿಯಾಗಿ 
ಹೀಗೆ ಹೇಳಬಹುದೇ?
`ಹೇ ಭಗವಾನ್....!!!'

ಬದಲಾವಣೆ

ನನ್ನನ್ನು ಬದಲಿಸಿದಳು
ಅವಳು ಬದಲಾದಳು ||

ಅಯ್ಯೋ ಪಾಪ:

ಹಿಂದೆ  ಭಗವಾನ್ ಅಂತ ಕನ್ನಡ ಸಿನೆಮಾ ಒಂದು ಬಂದಿತ್ತು. ದರ್ಶನ್ ಹಾಗೂ ಸಾಯಿಕುಮಾರ್ ಹೀರೋ ಆಗಿದ್ದರು. ಸಿನೆಮಾದಲ್ಲಿ ಹಲವಾರು ಭರ್ಜರಿ ಡೈಲಾಗುಗಳಿದ್ದವು. ಸಾಯಿಕುಮಾರ್ ಬ್ರಾಂಡಿನ ಹೇಯ್... ನಿನ್ನ..ನ್.. ಅನ್ನುವ ಡೈಲಾಗುಗಳಿಗೂ ಕೊರತೆಯಿರಲಿಲ್ಲ. ಇದೀಗ ಭಗವಾನ್ ಹೇಳಿಕೆಗಳು ಅದೇ ರೀತಿ ಇದೆ. ಒಟ್ನಲ್ಲಿ ಅಯ್ಯೋ ಪಾ...ಪ..

ವೈರುಧ್ಯ :

ಭಗವಂತ ಅಂದರೆ
ಗೌರವ
ಭಗವಾನ್ ಎಂದರೆ
ರೌರವ ||

ಕಾಣೆ

ಆಕೆ
ಕನ್ನಡಿಯಲ್ಲಿ ಕಂಡೂ
ಕಾಣೆಯಾದಳು ||