Tuesday, March 10, 2015

ಬೆಳಕಿನಂತ ಹುಡುಗಿಗೊಂದು ಪತ್ರ -(ಪ್ರೇಮಪತ್ರ-15)

ನನ್ನೊಲವಿನ ಬೆಳಕೆ...,

               ಬಹುಶಃ  ಕ್ರಿಕೆಟಿನಲ್ಲಾಗಿದ್ದರೆ ಶತಕದ ಸಂಭ್ರಮ ಆಚರಣೆ ಮಾಡಬಹುದಿತ್ತು. ಆದರೆ ಇದು ಕ್ರಿಕೆಟ್ ಅಲ್ಲ. ನಮ್ಮದೇ ಬಹುಕು. ಹೌದು ನಾ ನಿನ್ನ ಬಳಿ ಮೊಟ್ಟ ಮೊದಲ ಸಾರಿ ಪ್ರೇಮದ ಕೋರಿಕೆಯನ್ನು ಇಟ್ಟ ನಂತರ ಬಹುಶಃ ಇದು ನೂರೋ ಅಥವಾ ಇನ್ನೂ ಜಾಸ್ತಿಯೋ ಆಗಿರಬೇಕು. ನನ್ನ ಕೋರಿಕೆ ಕಥೆ ಏನಾಯ್ತು ಎಂದು ಕೇಳಿದ್ದು. ಆಗೆಲ್ಲಾ ನೀನು ಹೇಳಿದ್ದೊಂದೇ ಮಾತು ನಂಗಿನ್ನೂ ಸಮಯ ಬೇಕು.
               ನಾನು ನಿನ್ನ ಮೊಟ್ಟಮೊದಲ ಬಾರಿಗೆ ನೋಡಿದ್ದು ಅದ್ಯಾವುದೋ ಸಮಾರಂಭವೊಂದರಲ್ಲಿ. ನೀನು ಹಾಗೂ ನಿನ್ನ ಗೆಳತಿಯರು ಸಮಾರಂಭದ ವೇದಿಕೆಯ ಮೇಲೆ ವಿವಿಧ ಜವಾಬ್ದಾರಿಗಳನ್ನು ಹೊತ್ತುಕೊಂಡು ಪಾತರಗಿತ್ತಿಯಂತೆ ಅತ್ತ ಇತ್ತ ಓಡಾಡುತ್ತಿದ್ದಿರಿ. ನಿನ್ನನ್ನು ನೋಡಿದವನೇ ನಾನು ಬಹುವೇ ಇಷ್ಟ ಪಟ್ಟಿದ್ದೆ. ನಿನ್ನ ಹೆಸರು ಏನಿರಬಹುದು? ನೀನು ಏನು ಮಾಡುತ್ತಿರಬಹುದು ಎಂದೆಲ್ಲಾ ಆಲೋಚಿಸಿ ನಿನ್ನ ಬಗ್ಗೆ ನನ್ನ ದೋಸ್ತರ ಬಳಿ ಕೇಳೋಣ ಎಂದುಕೊಳ್ಳುತ್ತಿದ್ದಾಗಲೇ ಕಾರ್ಯಕ್ರಮ ಆಯೋಜಿಸಿದ್ದವರು ನಿನ್ನ ಹೆಸರನ್ನು ಹೇಳಿದ್ದರು. ಬೆಳಕಿನಂತಹ ಹುಡುಗಿ ನೀನು ನನ್ನ ಮನಸ್ಸಿನಲ್ಲಿ ಆಗಲೇ ಗೂಡು ಕಟ್ಟಿದ್ದೆ.
               ಆ ನಂತರ ನಿನ್ನನ್ನು ನೋಡಬೇಕು, ಮಾತನಾಡಬೇಕು ಎಂದುಕೊಂಡು ನಾನು ಮಾಡಿದ ಕೆಲಸ ಅಷ್ಟಿಷ್ಟಲ್ಲ. ನನ್ನ ದೋಸ್ತರಿಗೆ ನಿನ್ನ ಪರಿಚಯವಿತ್ತಾದರೂ ನಾನು ನಿನ್ನನ್ನು ಪರಿಚಯ ಮಾಡಿಕೊಳ್ಳಬೇಕು ಎಂದುಕೊಂಡೆ. ಗೆಳೆಯರೆಲ್ಲ ಸೇರಿ ಅದೆಲ್ಲೋ ಜಲಪಾತವೊಂದಕ್ಕೆ ಪ್ರವಾಸವನ್ನೂ ಏರ್ಪಡಿಸಿ ನಿನ್ನನ್ನು ಕರೆದಿದ್ದರು. ಖುಷಿಯೆಂಬಂತೆ ನೀನು ಬಂದಿದ್ದೆ. ನನ್ನ ಮನಸ್ಸು ಅರಳಿತ್ತು. ಬಂದವಳನ್ನು ನಾನು ಪರಿಚಯ ಮಾಡಿಕೊಂಡಿದ್ದೆ. ಜಲಪಾತಕ್ಕೆ ಸುಮ್ಮನೆ ಪ್ರವಾಸ ಹೋಗಿದ್ದು ನಾವು. ಜಲಪಾತ ನೋಡಿದ ಖುಷಿಗಿಂತ ನಿನ್ನೊಡನೆ ಮಾತನಾಡಿದ್ದಕ್ಕೆ ಮತ್ತಷ್ಟು ಆನಂದವಾಗಿತ್ತು ನನಗೆ. ಆಗಲೇ ಅಲ್ಲವೇ ನಿನ್ನ ಬಳಿ ನಾನು ಮೊಬೈಲ್ ನಂಬರ್ ಪಡೆದಿದ್ದು.
              ಮೊಬೈಲ್ ನಂಬರ್ ಪಡೆದದ್ದೇನೋ ಆಯ್ತು. ಆಮೇಲೆ ದಿನವಿಡೀ ವಾಟ್ಸಾಪ್ ನಲ್ಲಿ ಚಾಟಿಂಗು ಆರಂಭವಾಯಿತು. ಮೊಬೈಲಿನಲ್ಲಿ ಮಾತು ಕತೆ ಮಧ್ಯ ರಾತ್ರಿಯವರೆಗೂ ಮುಂದುವರಿಯುತ್ತಿತ್ತು. ಆಗಲೇ ನನ್ನೊಳಗೆ ಚಿಗುರಿದ್ದ ನೀನೆಂಬ ಗಿಡ ಮತ್ತಷ್ಟು ಹೆಮ್ಮರವಾಗಲು ಆರಂಭಿಸಿದ್ದು. ಹೀಗಿದ್ದಾಗಲೇ ನನ್ನದೇ ದೋಸ್ತನೊಬ್ಬ ನಿನ್ನ ಬಳಿ ನಾನು ಇಷ್ಟ ಪಡುತ್ತಿರುವುದನ್ನು ಹೇಳಿದ್ದ. ನೀನು ಅಚ್ಚರಿಯಿಂದ ನನ್ನ ಬಳಿ ಕೇಳಿದ್ದೆ `ಯಾಕೆ? ಯಾಕೆ ನನ್ನನ್ನು ಇಷ್ಟಪಟ್ಟೆ' ಅಂತ.
           ನಿನ್ನ ಪ್ರಶ್ನೆಗೆ ನಾನು ಮೊದಲು ತಬ್ಬಿಬ್ಬಾಗಿದ್ದು ನಿಜ. ಆದರೆ ಕೊನೆಗೆ ಸಾವರಿಸಿಕೊಂಡು ನಿನ್ನನ್ನು ಇಷ್ಟ ಪಡಲು ಕಾರಣ ಹೇಳಿದ್ದೆ. ಮಾರುದ್ದದ ಮೆಸೇಜನ್ನು ನಾನು ಅನಾಮತ್ತು 15 ನಿಮಿಷಗಳ ಕಾಲ ಟೈಪ್ ಮಾಡಿ ಬರೆದಿದ್ದೆ. ಆಗೆಲ್ಲಾ ಎಷ್ಟು ಚಡಪಡಿಕೆಯಾಗಿತ್ತು ಗೊತ್ತಾ. ಆದರೆ ಎಲ್ಲವನ್ನೂ ನೀನು ಆವತ್ತೇನೋ ಕೇಳಿದ್ದೆ. ಆದರೆ ನನ್ನ ಪ್ರಶ್ನೆಗೆ ಮಾತ್ರ ಉತ್ತರವನ್ನೇ ಕೊಡಲಿಲ್ಲ.
          ಆ ದಿನದ ನಂತರ ನಾನು ನೀನು ಅದೆಷ್ಟು ಸಾರಿ ಭೇಟಿಯಾಗಿದ್ದೇವಲ್ಲ. ಮಾತನಾಡಿದ್ದೇವೆ. ಮೆಸೇಜ್ ಮಾಡಿಕೊಂಡಿದ್ದೇವೆ. ಪೋನಿನಲ್ಲಿ ಹರಟಿದ್ದೇವೆ. ಮೆಸೇಜ್ ಮಾಡದೇ ಮಿಸ್ ಮಾಡಿಕೊಂಡಿದ್ದೇವೆ. ನಾಟ್ ರೀಚೆಬಲ್ ಆಗಿ ಕಾಡಿಸಿಕೊಂಡಿದ್ದೇವೆ. ನಾನು ಪಿರಿ ಪಿರಿ ಊರು ತಿರುಗುವುದನ್ನು ನೋಡಿ ನಿನ್ನ ಕಾಲಿಗೆ ಚಕ್ರದ ಸುಳಿ ಇದೆಯೇನೋ ಮಾರಾಯಾ ಎಂದೆಲ್ಲ ಕೇಳಿದ್ದು ನನಗಿನ್ನೂ ಹಸಿ ಹಸಿರಾಗಿಯೇ ಇದೆ.
            ಬಹುಶಃ ನಾನು ನೀನು ಮಾತನಾಡಿದ್ದು ಅದೆಷ್ಟು ತಾಸುಗಲೋ. ನೀನು ಒಂದೊಂದು ಅಕ್ಷರವಾಗಿಯೂ ನನ್ನ ಬಳಿ ಉಲಿಯುತ್ತಿದ್ದರೆ ನಾನು ಇಂಚಿಂಚು ನಿನಗೆ ಶರಣಾಗುತ್ತಿದ್ದೆ. ಮನಸ್ಸಿನಲ್ಲಿ ನಿನ್ನದೇ ರೂಪವನ್ನು ಕೆತ್ತಿಕೊಳ್ಳುತ್ತಿದ್ದೆ. ಹಾಗೆ ನೋಡಿದರೆ ನೀನು ನನ್ನ ಬಳಿ ನಕ್ಕು ಮಾತನಾಡಿದ್ದು ಕಡಿಮೆ. ಗಂಭೀರವಾಗಿ ಮಾತನಾಡಿದ್ದೀಯಾ. ಕಾಡಿಸಿದಾಗಲೆಲ್ಲ ಗದರಿದ್ದೀಯಾ. ಆದರೆ ಇವೆಲ್ಲವೂ ನನಗೆ ಇಷ್ಟವಾಗಿದೆ. ನಿನ್ನ ನಗುವಿಗಿಂತಲೂ ಹೆಚ್ಚು ಆಪ್ತವಾಗಿಬಿಟ್ಟಿದೆ.
            ಮೊದಲ ಸಾರಿ ನಾನು ನಿನಗೆ ಪ್ರಪೋಸ್ ಮಾಡಿದ ನಂತರ ಅದೆಷ್ಟು ನೂರು ಸಾರಿ ಕೇಳಿದ್ದೇನೋ. ಮೊದಲ ಸಾರಿ ಉತ್ತರ ಹೇಳದಿದ್ದರೂ ನಂತರದ ದಿನಗಳಲ್ಲಿ ನೀನು ನನಗೆ ಸಮಯ ಬೇಕು ಮಾರಾಯಾ ಎಂದಿದ್ದೆ. ಮನಸ್ಸಿನಲ್ಲಿ ಗೊಂದಲದ ತರಂಗಗಳು ಎದ್ದಿವೆ. ಏನು ಹೇಳಬೇಕೋ ಕಾಣೆ ಎಂದು ಹೇಳಿದ್ದೆ. ಮುಂದಿನ ಬದುಕು ಯಾವ ರೀತಿಯಿರುತ್ತದೆಯೋ ಕಾಣೆ ಎಂದೂ ಹೇಳಿದ್ದೆ. ಅದಕ್ಕೆಲ್ಲ ನಾನು ನನ್ನ ನಿಲುಕಿಗೆ ಸಿಕ್ಕಂತೆ ಉತ್ತರ ವನ್ನು ಕೊಟ್ಟಿದ್ದೆ. ನಾನು ಪದೇ ಪದೆ ಕೇಳುತ್ತಲೇ ಇದ್ದೆ. ನೀನು ಟೈಂ ಕೊಡು ಮಾರಾಯಾ.. ಇದು ಬದುಕಿನ ವಿಷಯ. ಆಲೋಚನೆ ಮಾಡಿ ಹೇಳ್ತೇನೆ ಎಂದಿದ್ದೆ. ಸ್ವಾರ್ಥಿ ನಾನು.. ಆಲೋಚನೆ ಮಾಡಿ ಹೇಳು. ಎಷ್ಟು ಬೇಕಾದರೂ ಟೈಂ ತಗೋ. ಆದರೆ ನನ್ನ ಪ್ರಪೋಸಲ್ಲಿಗೆ ನೋ ಅನ್ನಬೇಡ ಎಂದೂ ಹೇಳಿದ್ದೆ ಅಲ್ವಾ.
              ಈಗಲೂ ನಾನು ಕೇಳುತ್ತಿದ್ದೇನೆ. ಮುಕ್ಕಾಲು ಪಾಲು ನೀನು ಇಷ್ಟವಾಗಿದ್ದೀಯಾ ಕಣೋ. ಆದರೆ ಕಾಲು ಭಾಗದಷ್ಟು ನನ್ನಲ್ಲೇ ಏನೋ ಅಳುಕು. ಅದೇನೆಂಬುದನ್ನು ಹೇಳಲಿಕ್ಕೆ ಆಗುತ್ತಿಲ್ಲ. ಮನೆಯವರ ಭಯವಾ? ಮುಂದಿನ ಬದುಕಿನ ಪ್ರಶ್ನೆಯಾ? ಗೊಂದಲವಿನ್ನೂ ಸ್ಪಷ್ಟವಾಗಿಲ್ಲ. ಒಮ್ಮೊಮ್ಮೆ ಒಂದೊಂದು ರೀತಿ ಅನ್ನಿಸುತ್ತಿದೆ. ನಾನಿನ್ನೂ ಸ್ಪಷ್ಟ ನಿರ್ಧಾರಕ್ಕೆ ಬಂದಿಲ್ಲ ಮಾರಾಯಾ.. ನಂಗೆ ಯಾಕೋ ಇನ್ನೂ ಸ್ವಲ್ಪ ಸಮಯಬೇಕು ಅನ್ನಿಸ್ತಾ ಇದೆ ಅಂತಲೂ ಹೆಳಿದ್ದೆ. ನಾನು ಮತ್ತೆ ಮತ್ತೆ ಕಾಯುತ್ತಿದ್ದೇನೆ. ನೀನು ಒಂದು ಸಾರಿ ಹೂ ಅಂದು ಬಿಡುತ್ತಿದ್ದೀಯಾ ಎಂದುಕೊಂಡಿದ್ದೇನೆ.
            ನಿಜ ಹೇಳ್ತಾ ಇದ್ದೀನಿ ಬೆಳಕೇ.. ನಿನ್ನನ್ನು ನಾನು ಖಂಡಿತ ಚನ್ನಾಗಿ ನೋಡಿಕೊಳ್ಳುತ್ತೇನೆ. ಬದುಕಿನಲ್ಲಿ ನೋವು ಬರದಂತೆ ನೋಡಿಕೊಳ್ಳುತ್ತೇನೆ ಎಂದು ಹೇಳುವುದಿಲ್ಲ. ನೋವುಗಳು ಆಕಸ್ಮಿಕವಂತೆ. ಥಟ್ಟನೆ ಬಂದು ಕಾಡುತ್ತವೆ. ಆದರೆ ಇಂತಹ ನೋವಿನ ಕ್ಷಣದಲ್ಲಿ ನಾನು ನಿನ್ನ ಜೊತೆಗೆ ಇರುತ್ತೇನೆ. ಕೈಹಿಡಿದು ಜೊತೆಗೆ ಸಾಗುತ್ತೇನೆ. ನಾನು ಒಳ್ಳೆ ಜಾಬ್ ಹಿಡಿಯಬೇಕು ಎಂದಿದ್ದೆ. ಖಂಡಿತ ಗೆಳತಿ, ನಾನು ನಿನ್ನ ಪಾಲಿಗೆ ಏಣಿಯಾಗುತ್ತೇನೆ. ನೀನು, ನಿನ್ನ ಕುಟುಂಬ, ನಾನು ಹಾಗೂ ನನ್ನ ಕುಟುಂಬ ಒಟ್ಟಾಗಿ ಖುಷಿಯಿಂದ ಬಾಳು ನಡೆಸಬೇಕು ಎನ್ನುವ ಕನಸು ನನ್ನದು. ನನಗೆ ನನ್ನ ಕುಟುಂಬ ಬೇರೆ ಅಲ್ಲ. ನಿನ್ನ ಕುಟುಂಬವೂ ಬೇರೆಯಲ್ಲ. ನಿನ್ನ ಅಪ್ಪ ಅಮ್ಮ ನನಗೂ ಅಪ್ಪ ಅಮ್ಮನಂತೆ ಅಲ್ಲವಾ? ಎಂದು ನಾನು ಕೇಳಿದ್ದಿನ್ನೂ ಕಿವಿಯಲ್ಲಿ ಮತ್ತೆ ಮತ್ತೆ ನೆನಪಾಗುತ್ತಿದೆ.
                 ನಿನ್ನ ಹತ್ತಿರ ಮಾತಾಡಬೇಕು ಸಿಗು ಅಂದಿದ್ದೆ ನಾನು. ಅದೆಷ್ಟೋ ಸಾರಿ ನಿನ್ನ ಹತ್ತಿರ ಕೇಳಿಕೊಂಡ ನಂತರ ಸಿಗಲು ನೀನು ಒಪ್ಪಿದ್ದೆ. ಆದರೆ ನೀನು ಜೊತೆಯಲ್ಲಿದ್ದಾಗ ಮಾತ್ರ ಏನನ್ನೂ ಮಾತನಾಡಲಿಕ್ಕೆ ಆಗಿರಲೇ ಇಲ್ಲ. ಎಷ್ಟೆಲ್ಲ ಮಾತನಾಡುವುದು ಬಾಕಿ ಇತ್ತು. ಆದರೆ ನಿನ್ನೆದುರು ನನ್ನ ಮಾತು ಹೊರಡಲೇ ಇಲ್ಲ. ಸುಮ್ಮನೇ ಉಳಿದಿದ್ದೆ ನಾನು. ನೀನು ಮಾತನಾಡುತ್ತಿದ್ದರೆ ನಾನು ನಿನ್ನನ್ನು ನೋಡುತ್ತ ಕುಳಿತಿರುತ್ತಿದ್ದೆ. ಬಹುಶಃ ಈ ಪತ್ರ ಬರೆಯಲು ಅದೇ ಕಾರಣ ಇರಬೇಕು ನೋಡು. ನಾನು ಬಾಯಲ್ಲಿ ಆಡಲು ಸಾಧ್ಯವಾಗದ ಮಾತುಗಳನ್ನೆಲ್ಲ ಅಕ್ಷರ ರೂಪದಲ್ಲಿ ಇಡುತ್ತಿದ್ದೇನೆ.
                 ಮತ್ತೊಮ್ಮೆ.. ಮಗದೊಮ್ಮೆ ಹೇಳುತ್ತೇನೆ ಬೆಳಕೇ.. ನಾ ನಿನ್ನ ಇಷ್ಟಪಟ್ಟಿದ್ದೇನೆ. ಮನದಲ್ಲಿ ನಿನ್ನದೊಂದು ಗುಡಿ ಭದ್ರವಾಗಿ ಸ್ಥಾಪನೆಯಾಗಿಬಿಟ್ಟಿದೆ. ನಾವು ಮುಂದೆ ಅದೆಷ್ಟೋ ವಸಂತಗಳನ್ನು ಜೊತೆಯಾಗಿ ಬಾಳಬೇಕಿದೆ. ಒಟ್ಟಾಗಿ ಹೆಜ್ಜೆ ಹಾಕಬೇಕಿದೆ. ನಾನು ಮುಂದಿನ ಬದುಕಿನ ತುಂಬ ನಿನ್ನ ಜೊತೆಗೆ ಆಸರೆಯಾಗಿ ಇರುತ್ತೇನೆ. ನೀನು ನನಗೆ ಜೊತೆಯಾಗಿರು. ಕಷ್ಟದಲ್ಲಿ, ಸುಖದಲ್ಲಿ, ಶಾಂತಿ, ನೆಮ್ಮದಿಯಲ್ಲಿ ಇಬ್ಬರೂ ಒಟ್ಟಾಗಿ ಸಾಗೋಣ. ಒಲವಿನ ಜೊತೆಗೆ ಜೀವನ ನಡೆಸೋಣ. ಒಲವನ್ನು ಕೊಟ್ಟು, ಒಲವನ್ನು ಪಡೆದು ನಡೆಯೋಣ. ಬೆಳಕಿನ ಹುಡುಗಿ.. ನನ್ನ ಬಾಳಲ್ಲಿ ಎಂದಿಗೂ ಬೆಳಕಿನಂತಿರು. ಜೊತೆಯಾಗಿರು.
                   ನಂಗೆ ಸಮಯ ಬೇಕು ಅಂದಿದ್ದೆ.. ತಗೋ.. ಆಲೋಚನೆ ಮಾಡು.. ಯಾವುದೇ ಅಳುಕು ಬೇಡ. ಭಯ ಬೇ...ಡ.. ನಿನ್ನ ಜೊತೆಗೆ ನಾನಿದ್ದೇನೆ. ಸಮಸ್ಯೆಯನ್ನು ಒಟ್ಟಾಗಿ ಪರಿಹಾರ ಮಾಡೋಣ. ಜೊತೆಗೆ ಹೆಜ್ಜೆಹಾಕೋಣ. ಬೇಗನೆ ನನಗೆ ಉತ್ತರ ಕೊಡು. ಖುಷಿ ಖುಷಿಯಾಗಿ ಜೀವನ ಸವೆಸೋಣ. ಮತ್ತೆ ಮತ್ತೆ ಹಸಿರಾಗೋಣ. ಬೇಗ ುತ್ತರ ಕೊಡು. ನೀ ಕೊಡುವ ಉತ್ತರ ನನ್ನ ಪಾಲಿಗೆ ಹಸಿರಾಗಿರಲಿ, ಉಸಿರಾಗಿರಲಿ. ಬರಡು ಮಾಡದೇ ಇರಲಿ.

ಇಂತಿ ನಿನ್ನವನು
ವಿನಯವಂತ        

Saturday, March 7, 2015

ಮಿನಿ ಹನಿಗಳು

ಮಾರುತಿ ಕಾರು

ಹವ್ಯಕನಿಗೆ ಹಣ ಬರತೊಡಗಿದರೆ
ಕೊಳ್ಳುವನು ಮಾರುತಿ ಕಾರು |
ಹಣ ಖಾಲಿಯಾದರೆ ಮಾತ್ರ
ಕಾರು ಮಾರುತಿ ||

ಮಂತ್ರಿ ಭ್ರ(ನಿ)ಷ್ಟ

ಅವನೊಬ್ಬ ಮಂತ್ರಿ
ಪಕ್ಷಕ್ಕೆ ಬಹುನಿಷ್ಟ |
ಹಣದ ವಿಷಯದಲ್ಲಿ ಆತ
ಅಷ್ಟೇ  ಭ್ರಷ್ಟ ||

ಹಾಸ್ಯಕವಿ

ಅವನೊಬ್ಬ ಹಾಸ್ಯಕವಿ
ಅವನ ನಗೆ ಹನಿಗಳಿಗೆ
ಮಾತ್ರ, ನಗಿ ಎಂದು
ಹೇಳಬೇಕಷ್ಟೆ||

ಹಾವಿನ ವಿಷ

ಭೂಮಿಯ ಮೇಲೆ
ತೆವಳಿಯೂ ಕೂಡ
ಸಂಗ್ರಹಿಸಿದೆ ವಿಷ |
ಅದು ಯಮನ ಪಾಷ ||

ಬದಲಾವಣೆ

ಮೊದಲೊಮ್ಮೆ ಆಗಿತ್ತು
ಚಿನ್ನದ ಬೆಳೆ ವೆನಿಲ್ಲಾ |
ಈಗ ಅದು ಆಗಿದೆ
ಬೆಳೆದವನಿಗೆ ಏನಿಲ್ಲಾ ||

Friday, March 6, 2015

ಬೆಣಚುಕಿಂಡಿ

ಪದೇ ಪದೆ ಇಣುಕುವಿಕೆ
ಹೊಸದೊಂದು ಲೋಕ-ಅರ್ಥವನ್ನೇ
ಕಟ್ಟಿ ಕೊಟ್ಟೀತು |

ಒಮ್ಮೆ ಕಪ್ಪು-ಬಿಳುಪು, ಮತ್ತೊಮ್ಮೆ
ವರ್ಣಮಯ|  ಒಮ್ಮೆ ಸರ್ವಸುಖ
ಮತ್ತೊಮ್ಮೆ ಜೀವಚ್ಛವ ||

ಒಮ್ಮೊಮ್ಮೆ ಕತ್ತಲು, ಅರೆಘಳಿಗೆ
ಬೆಳಕು, ಇಣುಕು ನೋಟದಲ್ಲೇ
ಬದುಕು-ಬಿರುಕು ||

ನಿಜ. ಬೆಣಚು ಕಿಂಡಿಯೇ ಹೀಗೆ
ಅನಂತ ವಿಶ್ವಕ್ಕೊಂದು ಚೌಕಟ್ಟು
ಚಿಕ್ಕ, ಚೊಕ್ಕ ಪರೀಧಿ ||

ಅಲ್ಲ... ಅಂಕೆಗೆ ನಿಲುಕದ,
ವಿಶ್ವವನ್ನು ಹಿಡಿದು ಕಣ್ಣೆದುರು
ಕಟ್ಟುಕೊಟ್ಟು ಬಿಡುತ್ತದೆ ||

***

(ಈ ಕವಿತೆಯನ್ನು 13-04-2007ರಂದು ದಂಟಕಲ್ಲಿನಲ್ಲಿ ಬರೆದಿದ್ದೇನೆ)

Wednesday, March 4, 2015

ಅಘನಾಶಿನಿ ಕಣಿವೆಯಲ್ಲಿ-14

              `ದೇವಸ್ತಾನಕ್ಕೆ ನಾನು ಹಾಗೂ ದೀಪು ಇಬ್ಬರೂ ಹೋಗಿದ್ವಿ. ದೇವಸ್ತಾನದಲ್ಲಿ ಸಿಕ್ಕಾಪಟ್ಟೆ ಜನ ಇದ್ದರು. ನಾನು ದೇವಸ್ತಾನದ ಒಳಕ್ಕೆ ಹೋದೆ. ಹಿಂದೆಯೇ ಉಳಿದುಕೊಂಡ ಪ್ರದೀಪ ಅದೆಲ್ಲೋ ತಪ್ಪಿಸಿಕೊಂಡುಬಿಟ್ಟ. ನಂತರ ದೇವಸ್ತಾನ, ಅಲ್ಲಿ ಇಲ್ಲಿ ಎಲ್ಲ ಕಡೆಗೆ ಹುಡುಕಿದೆ. ಬಹಳ ಹೊತ್ತು ಕಾದೆ. ಆದರೆ ಸಿಗಲಿಲ್ಲ. ಕೊನೆಗೆ ಬಸ್ ಸ್ಟಾಂಡಿಗೆ ಬಂದು ಇಲ್ಲಿ ಹುಡುಕಿದರೆ ಇಲ್ಲಿಯೂ ಇಲ್ಲ ಮಾರಾಯಾ.. ಎಲ್ಲಿಗೆ ಹೋಗಿಬಿಟ್ಟನೋ.' ಎಂದ ವಿನಾಯಕ.
             `ಹೌದಾ.. ಥೋ.. ಇದೊಂದು ಹೊಸ ತಲೆಬಿಸಿ ಬಂತಲಾ ಮಾರಾಯ... ಬಾ ಮೊದ್ಲು ಹುಡ್ಕನ.. ನಮಗೆಲ್ಲ ಶಿರಸಿ ಗೊತ್ತಿದ್ದು. ಅವಂಗೆ ಗೊತ್ತಿಲ್ಲೆ. ಎಲ್ಲಿ ಅಲೆದಾಡ್ತಾ ಇರ್ತ್ನೋ.. ಬನವಾಸಿ ರೋಡು ಹಿಡಿದು ಹೋದ್ನಾ ಎಂತದೇನ ಮಾರಾಯಾ.. ಥೋ..' ಎಂದು ಗೊಣಗಾಡುತ್ತ ಎಲ್ಲರ ಜೊತೆ ಸೇರಿ ಹುಡುಕಾಡತೊಡಗಿದ ವಿಕ್ರಮ.
             ಅರ್ಧ ತಾಸಿನ ಹುಡುಕಾಟದ ನಂತರ ಪ್ರದೀಪ ಸಿಕ್ಕ. ಅದ್ಯಾವುದೋ ಬಝಾರ ರಸ್ತೆಯಿಂದ ಬಸ್ ಸ್ಟಾಂಡ್ ಕಡೆಗೆ ನಡೆದುಕೊಂಡು ಬರುತ್ತಿದ್ದ. ಹುಡುಕುತ್ತಿದ್ದವರು ನಿರಾಳರಾದರು. `ಲೇ ಹಲ್ಕಟ್.. ಎಲ್ಲಿ ಹಾಳ್ ಬಿದ್ದು ಹೋಗಿದ್ಯಲೆ..' ಎಂದು ಬೈದ ವಿಕ್ರಮ
           `ಇಲ್ಲ ಮಾರಾಯಾ.. ದೇವಸ್ತಾನದಲ್ಲಿ ಸಿಕ್ಕಾಪಟ್ಟೆ ಜನ ಇದ್ದರು. ವಿನಾಯಕ ತಪ್ಪಿಹೋದ. ದೇವಸ್ತಾನದ ತುಂಬೆಲ್ಲ ಹುಡುಕಾಡಿದೆ. ಕಾಣಿಸಲಿಲ್ಲ. ನನ್ನನ್ನು ಹುಡುಕುತ್ತಾ ಇರಬೇಕು ಅಂತ ಎಲ್ಲ ಕಡೆ ಹುಡುಕಾಡುತ್ತ ಬಂದೆ. ಕೊನೆಗೆ ಬಸ್ ನಿಲ್ದಾಣದ ಬಳಿ ಇರಬೇಕು ಎಂದುಕೊಂಡು ಬಂದರೆ ಕಾಣಿಸಲಿಲ್ಲ ನೋಡು. ಎಲ್ಲಿ ಹೋದರೂ ಇಲ್ಲಿ ಬರ್ತಾರಲ್ಲಾ ಅಂದುಕೊಂಡು ನಾನೇ ಬರ್ತಾ ಇದ್ದಾಗ ಇದೋ ನೀವು ಸಿಕ್ಕಿದ್ರಿ ನೋಡಿ..' ಎಂದ ಪ್ರದೀಪ.
           ವಿಕ್ರಮನಿಗೆ ಪ್ರದೀಪ ಯಾಕೋ ಸುಳ್ಳು ಹೇಳುತ್ತಿದ್ದಾನೆ ಅನ್ನಿಸಿತು. ಅಲ್ಲದೇ ಅಪರಿಚಿತ ಪ್ರದೇಶದಲ್ಲಿ ಕಾಣೆಯಾದಾಗ ಇರಬೇಕಾದಂತಹ ಗಾಬರಿ, ಭಯ ಇತ್ಯಾದಿ ಭಾವನೆಗಳು ಪ್ರದೀಪನ ಮುಖದ ಮೇಲೆ ಇರಲಿಲ್ಲ. ವಿಕ್ರಮ ಇದನ್ನು ಗಮನಿಸಿದ್ದ. ಕೊನೆಗೊಮ್ಮೆ ಅವರೆಲ್ಲರೂ ಶಿರಸಿಯಿಂದ ವಾಪಾಸಾದರು.
           ಯಾರಿಗೂ ಮಾರಿಕಾಂಬಾ ದೇವಸ್ತಾನದ ರಸ್ತೆಯೇ ಬೇರೆ, ಪ್ರದೀಪ ಬಸ್ ಸ್ಟಾಂಡ್ ಕಡೆಗೆ ಆಗಮಿಸುತ್ತಿದ್ದ ಬಝಾರಿನ ರಸ್ತೆಯೇ ಬೇರೆ ಎನ್ನುವ ಅನುಮಾನ ಬರದೇ ಇರುವುದು, ಪ್ರದೀಪನನ್ನು ಹೆಚ್ಚಿಗೆ ವಿಚಾರಣೆ ನಡೆಸದೇ ಇರುವುದು ಕಥೆಯ ಮುಂದಿನ ಬಹುದೊಡ್ಡ ತಿರುವಿಗೆ ಕಾರಣವಾಗಿತ್ತು. ಪ್ರದೀಪ ಮಾತ್ರ ದೊಡ್ಡ ಸಮಸ್ಯೆಯಿಂದ ಪಾರಾದಂತಹ ಸಂತಸವನ್ನು ಅನುಭವಿಸಲು ಆರಂಭಿಸಿದ್ದ. ಆ ದಿನ ಎಪ್ರಿಲ್ 15 ನೇ ತಾರೀಕಾಗಿತ್ತು.

***

          ವಿಕ್ರಂ ಕೊನೆಗೊಂದು ದಿನ ವಿನಾಯಕನಿಗೆ ತಮ್ಮ ತಂಡ ಯಾವ ಕಾರಣಕ್ಕಾಗಿ ಶಿರಸಿ, ದಂಟಕಲ್ಲಿಗೆ ಆಗಮಿಸಿದೆ ಎನ್ನುವುದರ ಕಾರಣವನ್ನು ತಿಳಿಸಿದ. ವಿನಾಯಕ ಅದಕ್ಕೆ ಪ್ರತಿಯಾಗಿ ತನ್ನ ಸಹಾಯ ಯಾವಾಗಲೂ ಸಿಗುತ್ತದೆ. ಜೊತೆಯಲ್ಲಿ ಈ ವಿಷಯವನ್ನು ಮತ್ತಿನ್ಯಾರಿಗೂ ತಿಳಿಸುವುದಿಲ್ಲ ಎಂದೂ ಹೇಳಿದ.

****12****

            `ತಮಾ.. ದ್ಯಾವನ್ನ ಕರ್ಕಂಡು ಹೋಗಿ ನಿಂಗವೆಲ್ಲಾ ನಮ್ಮೂರ ಕಾನನ್ನು ಸುತ್ತಾಡ್ಕ್ಯಂಡ್ ಬರ್ರಾ...' ಎಂದು ಶ್ರೀಕಂಠ ಹೆಗಡೆಯವರು ಹೇಳಿದಾಗ ಎಲ್ಲರನ್ನೂ ಕರೆದುಕೊಂಡು ಕಾಡಿನ ಕಡೆಗೆ ಹೊರಟ ವಿನಾಯಕ ಶ್ರೀರಾಮಚಂದ್ರ ಕಪಿಗಳೊಡನೆ ಲಂಕೆಗೆ ಹೊರಟಂತೆ.
             ದ್ಯಾವ ತಂಡಕ್ಕೆ ಮುಂದಾಳು. ಇಡಿಯ ಮೈಗೊಂದು ಬಿಳಿಯ ನಿಲುವಂಗಿ, ಸೊಂಟಕ್ಕೊಂದು ಕೊಳಕಾದ ಪಂಚೆ ಇವಿಷ್ಟು ದ್ಯಾವನ ವಸ್ತವಿನ್ಯಾಸಗಳಾಗಿದ್ದವು. ಸೊಂಟಕ್ಕೊಂದು ಅಂಡುಗೊಕ್ಕೆ ಕಟ್ಟಿಕೊಂಡು ಅದಕ್ಕೆ ಕತ್ತಿಯನ್ನು ತೂಗು ಹಾಕಿದ್ದ. ದ್ಯಾವ ಮುಂದೆ ಮುಂದೆ ಹೋದಂತೆಲ್ಲ ಆ ಕತ್ತಿ ಲಟ ಲಟ ಎಂದು ಸದ್ದು ಮಾಡುತ್ತಿತ್ತಲ್ಲದೇ ದ್ಯಾವನ ಕಾಲಿಗೆ ಬಡಿಯುತ್ತಿತ್ತು. ಹೆಗಲ ಮೇಲೆ ಮಾರುದ್ದದ ಕೋಲನ್ನು ಹೊತ್ತು ನಡೆಯುತ್ತಿದ್ದ ದ್ಯಾವನಿಗೆ ಕನಿಷ್ಟ 50 ವರ್ಷಗಳಾಗಿವೆ. ಆತನ ಅಸಲೀ ವಯಸ್ಸು ಎಷ್ಟೆನ್ನುವುದು ಯಾರಿಗೂ ಗೊತ್ತಿಲ್ಲ. `ನಾನು ಚಿಕ್ಕವನಿದ್ದಾಗ ಹೇಗಿದ್ದನೋ.. ಈಗಲೂ ದ್ಯಾವ ಹಾಗೆಯೇ ಇದ್ದಾನೆ..' ಎಂದು ವಿನಾಯಕ ದ್ಯಾವನ ಬಗ್ಗೆ ಹೇಳಿಬಿಟ್ಟಿದ್ದ.
              ದ್ಯಾವನ ಬಳಿಯೇ ವಯಸ್ಸನ್ನು ಕೇಳಿದರೆ ಮೂರು ಮೂವತ್ತು ವಯಸ್ಸಾಯಿತು ಎನ್ನುತ್ತಾನೆ. ಮೂರು ಮೂವತ್ತು ಅಂದರೆ 90 ವರ್ಷ ವಯಸ್ಸಾಗಿರಬೇಕು. ತಮಾಷೆ ಮಾಡಬೇಡ ದ್ಯಾವ.. ನಿನ್ ವಯಸ್ಸೆಷ್ಟು ಎಂದು ಕೇಳಿದರೆ `ಅದನ್ನು ಕಟ್ಟಿಗ್ಯಂಡು ಎಂತಾ ಮಾಡ್ತೀರಿ ನೀವು ಹೇಳಿ..' ಎಂದು ಸಾಗಹಾಕುತ್ತಾನೆ. ಶ್ರೀಕಂಠ ಹೆಗಡೆಯವರು ಹೇಳಿದ ಪ್ರಕಾರ ದ್ಯಾವ ತನಗಿಂತ ದೊಡ್ಡವನು ಎಂಬುದು ಪಕ್ಕಾ. ವಯಸ್ಸು ಬಹಳ ಆಗಿದ್ದರೂ ಆತನ ತಲೆಗೂದಲು ನೆರೆತಿರಲಿಲ್ಲ. ಆತನ ಮೈಬಣ್ಣ  ಬಿಸಿಲಿನಲ್ಲಿ ಕೆಲಸ ಮಾಡಿ ಅದೆಷ್ಟು ಕಪ್ಪಗಾಗಿತ್ತೋ, ತಲೆಗೂದಲೂ ಕೂಡ ಅದೇ ರೀತಿ ಇತ್ತು. ಇಂತಹ ದ್ಯಾವ ಗ್ರಾಮೀಣ ಭಾಗದ ವಿಶ್ವಕೋಶ. ಕಾಡಿನ ಬಗ್ಗೆ ತಿಳಿದುಕೊಳ್ಳದ ವಿಷಯವೇ ಇಲ್ಲ. ಇಂತಹ ಮುಂದಾಳುಗಳನ್ನು ಹೊಂದಿದ್ದರೆ ಯಾರು ತಾನೆ ಕಾಡಿನಲ್ಲಿ ಭಯದಿಂದ ನಡೆಯುತ್ತಾರೆ?
             ದ್ಯಾವನ ಹಿಂದೆ ವಿಕ್ರಮ, ವಿನಾಯಕ, ವಿಷ್ಣು ಹಾಗೂ ಪ್ರದೀಪರು ವೀರ ಸೇನಾನಿಗಳಂತೆ ಮುಂದಕ್ಕೆ ಹೊರಟರು. ಈ ನಾಲ್ವರು ಗಂಭೀರವಾಗಿ ಮುಮದೆ ಸಾಗುತ್ತಿದ್ದರೆ ರಮ್ಯಾ, ಸ್ನೇಹ, ವಿಜೇತರ ಗುಂಪು ರಾಣೀವಾಸದ ಗುಂಪಿನಂತೆ ಕೇಕೆಯೊಂದಿಗೆ ಸಾಗುತ್ತಿತ್ತು. ಮುಂದಿದ್ದವರ ಸಾಲು ಯುದ್ಧಕ್ಕೆ ಹೊರಟವರಂತಿದ್ದರೆ ಹಿಂದಿದ್ದವರ ಸಾಲು ಯುದ್ಧಕ್ಕೆ ರಣಕಹಳೆಯನ್ನು ಊದುತ್ತಿದ್ದ ಹಾಗಿತ್ತು.
             `ಹೋಯ್.. ಸ್ವಲ್ಪ ಸುಮ್ಮಂಗ್ ಬನ್ನಿ ನೋಡ್ವಾ.. ಬರೀ ಕಚಾ ಪಚಾ ಹಲ್ಬಕಂತ ಬರ್ಬೇಡಿ.. ಅದೆಂತಾ ಗಲಾಟೆ ಮಾಡ್ಕಂತ ಬರ್ತೀರಿ..?' ಎಂದು ದ್ಯಾವ ಅಸಹನೆಯಿಂದ ಗದರಿದಾಗಲೇ ಮಹಿಳಾ ಮಣಿಗಳು ಸುಮ್ಮನಾಗಿದ್ದು.
              `ಕಾನ್ ನೋಡಕ್ಕೆ ಅಂತ ಬಮದ್ ಕಂಡು ಹಿಂಗ್ ಕೂಗ್ತಾ ಬರ್ತಾ ಇದ್ರೆ ಕಾಡ್ನಾಗೆ ಯಾವುದೇ ಪ್ರಾಣಿ ಇದ್ರೂ ಓಡಿ ಹೋಗ್ತದೆ. ನಿಮಗೆಂತ ಮಣ್ಣೂ ಸಿಗಾದಿಲ್ಲ ನೋಡಿ.. ಹಗಲ್ನಾಗೆ ಎಂತಾದ್ರೂ ಓಡಾಡ್ತಾ ಇದ್ರೆ ಅವೆಲ್ಲ ನಾಪತ್ತೆಯಾಗ್ತವೆ.. ಸ್ವಲ್ಪ ಸುಮ್ಮಂಗಿರಿ ನೋಡ್ವಾ..' ಎಂದು ಮತ್ತೊಮ್ಮೆ ಹೇಳಿದ ದ್ಯಾವ.
              `ದ್ಯಾವ ಇಲ್ಲಿ ಹುಲಿ ಉಂಟಾ..?' ಎಂದು ಕೇಳಿದಳು ವಿಜೇತಾ.
              `ಹೌದಮ್ಮಾ. ಈ ಕಾನಿನಾಗೆ ಮೂರು ಐತೆ. ಈಗ ಬ್ಯಾಸ್ಗೆ ಬಂತಲ್ರಾ.. ಹಂಗಾಗಿ ಕಣ್ಣಿಗ್ ಕಾಣೂದಿಲ್ಲಾ. ಮಳೆ ಮುಗದು ಚಳಿಗಾಲ ಬಂದ್ ತಕ್ಷಣ ಈ ಕಡೆಗೆ ಬರ್ತಾವೆ ನೋಡಿ. ಖಾಯಂ ಇಲ್ಲಿ ಇರೋದಿಲ್ಲ. ಮತ್ತೀಹಳ್ಳಿ, ನಿಲ್ಕುಂದ, ಭತ್ತಗುತ್ತಿಗೆ, ಹೆಗ್ಗರಣಿ ಹಿಂಗೆ ಸುತ್ತಾಡ್ತಾ ಇರ್ತಾವೆ. ಆದರೆ ಗಮಯಾ, ಹಂದಿ, ಬರ್ಕ, ಜಿಂಕೆ, ಮಿಕ ಇವೆಲ್ಲ ಐತೆ. ಆವಾಗಾವಾಗ ಕಾಣ್ತಾ ಇರ್ತದೆ ..' ಎಂದ ದ್ಯಾವ.
               `ನೀ ನೋಡಿದ್ಯಾ ಹುಲಿನಾ..?' ಎಂದು ಕೇಳಿದಳು ಆಕೆ.
               `ಹೌದಮ್ಮಾ.. ಸುಮಾರ್ ಸಾರಿ ಕಂಡೀನಿ. ನಾನು ಜೇನು ಕುಯ್ಯಾಕೆ ಹೋಗ್ತಿದ್ದಾಗೆಲ್ಲಾ ಕಾಣ್ತಿದ್ವು ಅವು..' ಎಂದ ಆತ.
                `ಆಗೆಲ್ಲಾ ನಿಂಗೆ ಭಯ ಆಗಿಲ್ವಾ..?'
                `ಹೋಗ್ರಮ್ಮಾ.. ನಾವ್ಯಾಕೆ ಹೆದರ್ಕಬೇಕು ಹುಲಿಗೆ.. ಹೆದರುವಂತದ್ದು ನಾವೇನಾದ್ರೂ ಮಾಡಿದ್ದೀವಾ ಹುಲಿ ಗೆ.. ಸುಮ್ಮ ಸುಮ್ಮನೆ ನಮ್ಮ ಮೇಲೆ ದಾಳಿ ಮಾಡಲಿಕ್ಕೆ ಹುಲಿಗೆ ತಲೆ ಹನ್ನೆರಡಾಣೆ ಆಗಿರ್ತದಾ? ನೋಡ್ರಮ್ಮಾ.. ಮನುಷ್ಯರಾದ್ರೆ ಸೊಕಾ ಸುಮ್ಮನೆ ಮೈಮೇಲೆ ಬರ್ತವೆ ಅನ್ನಬೌದು. ಆದರೆ ಹುಲಿ ಹಂಗಲ್ಲ ನೋಡಿ.. ನಾವೇನೂ ಮಾಡದೇ ಅದು ನಮ್ಮ ಮೈಮೇಲೆ ಏರಿ ಬರುವುದಿಲ್ಲ. ಅದರ ಪಾಡಿಗೆ ಅದು ಇರ್ತದೆ ನಮ್ಮ ಪಾಡಿಗೆ ನಾವಿರ್ತೇವೆ..' ಎಂದ ದ್ಯಾವ. ವಿಜೇತಾಳಿಗೆ ಅವನ ಮಾತು ಹೌದೆನ್ನಿಸಿತು.
               ನಂತರ ಮಾತುಗಳು ಕಾಡೆಮ್ಮೆ ಹಾಗೂ ಉಳಿದ ಪ್ರಾಣಿಗಳ ಬಗೆಗೆ ಸರಿಯಿತು. ವಿನಾಯಕ ತಾನು ಕಾಲೇಜು ಓದುತ್ತಿದ್ದ ಸಂದರ್ಭದಲ್ಲಿ ಕಾಲೇಜಿಗೆ ಹೋಗುವಾಗ ಪದೇ ಪದೆ ಕಾಡೆಮ್ಮೆ, ಜಿಂಕೆಗಳಿಗೆ ಎದುರಾ ಬದರಾಗುತ್ತಿದ್ದುದನ್ನು ಹೇಳಿದ. ಕೆಲವು ಸಾರಿ ಮನೆಯ ಪಕ್ಕದಲ್ಲಿಯೇ ಸೀಳುನಾಯಿಗಳ ಹಿಂಡು ಹಾದು ಹೋಗುತ್ತದೆ ಎನ್ನುವುದನ್ನೂ ಹೇಳಿದ. ಆತ ಕಾಡಿನ ಕತೆಗಳನ್ನು ವಿವರಿಸಿ ವಿವರಿಸಿ ಹೇಳುತ್ತಿದ್ದರೆ ಉಳಿದವರು ಬಿಟ್ಟ ಕಣ್ಣು ಬಿಟ್ಟಂತೆ ನೋಡುತ್ತಿದ್ದರು.             

ಒಮ್ಮೆ ತಿರುಗಿ ನೋಡು

ಗೆಳತಿ ನೀನು ನನ್ನ ಕಡೆಗೆ
ಒಮ್ಮೆ ತಿರುಗಿ ನೋಡು
ಬದುಕಿ ನಾವು ಬಾಳಬೇಕು
ಸದಾ ಕಾಲ ಜೋಡು ||

ಸದಾ ಕಾಲ ಜೊತೆಗಿರಲಿ
ನಿನ್ನದೊಂದು ಕಿರುನಗು
ಕಳೆದು ಬಿಡಲಿ ಕಷ್ಟ ದು:ಖ
ಶತಮಾನದ ಬಿಗು ||

ಮುನ್ನಡೆಯುವ ಮುನ್ನ ನನ್ನ
ತಿರುಗಿ ನೋಡು ಗೆಳತಿ
ತುಂಬಿಕೊಂಡು ನಿಂತಿರುವೆ
ನನ್ನೊಳಗೆ ಪ್ರೀತಿ ||

ಹುಸಿಮುನಿಸ ಮರೆತು ಬಿಡು
ನಾನಿರುವೆ ಜೊತೆಗೆ
ಜೊತೆಗೆ ನೀನು ಹೆಜ್ಜೆ ಹಾಕು
ಮೆರೆದು ಬಿಡಲಿ ಒಸಗೆ ||

***
(ಈ ಕವಿತೆಯನ್ನು ಬರೆದಿರುವುದು 04-03-2014ರಂದು ಶಿರಸಿಯಲ್ಲಿ)