Wednesday, January 28, 2015

ನಾನು-ನೀನು-ಪ್ರೀತಿ (ಗಝಲ್)

ನಾನು ಪ್ರೇಮದ ದೋಣಿ ನೀನೇ ಹಾಯಿ
ನಾನು ಉಲಿಯುವ ಸ್ವರ ನೀನೇ ಬಾಯಿ ||

ನಾನು ಹರಿಯುವ ನದಿ ನೀನೇ ಕಡಲು
ದುಮ್ಮಿಕ್ಕಿ, ಓಡೋಡಿ ಸೇರುವೆ ಒಡಲು ||

ನಾನು ಕಪ್ಪೆಯ ಚಿಪ್ಪು ನೀನು ಮುತ್ತು
ನೀನಿಲ್ಲದಿರೆ ಮಾತ್ರ ಬದುಕಿಗೆ ಕುತ್ತು ||

ನಾನು ಬಣ್ಣ ನೀನು ನೀರಿನ ತಿಳಿ
ಆಡೋಣ ಎಂದೆಂದೂ ಬಣ್ಣದೋಕುಳಿ ||

ನಾನು ಬಿರು ಭೂಮಿ ನೀನು ಹನಿಮಳೆ
ಬಾನಿಂದ ನೀನಿಳಿಯೆ ಹಸಿಯಾಗಲಿ ಇಳೆ ||


***

(ಸುಮ್ಮನೆ ಬರೆಯುತ್ತ ಸಾಗಿದ ಎರಡೆರಡು ಸಾಲುಗಳು.. ಗಝಲ್ ವ್ಯಾಪ್ತಿಗೆ ಬರುತ್ತದೋ ನಾನರಿಯೆ.. ಸುಮ್ಮನೆ ಒಂದು ಪ್ರಯತ್ನ ಮಾಡಿದ್ದೇನೆ ಅಷ್ಟೇ )
(ಕವಿತೆ ಬರೆದಿದ್ದು 28-1-2015ರಂದು ಶಿರಸಿಯಲ್ಲಿ)


Tuesday, January 27, 2015

ಅಘನಾಶಿನಿ ಕಣಿವೆಯಲ್ಲಿ-10

(ಸೀತಾದಂಡೆ.)
            ವಾಪಸ್ಸಾಗುವ ದಾರಿಯನ್ನು ಹಿಡಿದು ಎಲ್ಲರೂ ಬರುತ್ತಿದ್ದರು. ಸ್ವಲ್ಪ ದೂರ ಬಂದಿರಬಹುದಷ್ಟೇ, ಆಗ ಅಲ್ಲಿ ಒಬ್ಬ ವ್ಯಕ್ತಿ ನೆಲದ ಮೇಲೆ ಬಿದ್ದು ಹೊರಳಾಡುತ್ತಿರುವುದು, ಒದ್ದಾಡುತ್ತಿರುವುದು ಕಾಣಿಸಿತು. ಆ ವ್ಯಕ್ತಿಯ ಬಾಯಲ್ಲಿ ಬಿಳಿ ನೊರೆ ಬರುತ್ತಿತ್ತು. ಹತ್ತಿರ ಹೋಗಿ ನೋಡಿದಾಗ ಅಲ್ಲಿ ಬಿದ್ದಾತ ಆಗಷ್ಟೇ ಜಲತಾತದಿಂದ ಓಡಿ ಕಣ್ಮರೆಯಾದ, ಎಲ್ಲೆಂದರಲ್ಲಿ ಹಿಂಬಾಲಿಸಿ ಕಾಟಕೊಟ್ಟು ಕಾಡುತ್ತಿದ್ದ ಅಪರಿಚಿತನೇ ಎಂಬುದು ತಿಳಿಯಿತು. ಎಲ್ಲರೂ ಗಡಬಡಿಸಿ ಕೇಳಿದಾಗ ಆತ `ಹಾವು.. ಹಾವು..' ಎಂದು ಅಸ್ಪಷ್ಟವಾಗಿ ತೊದಲಿದ. ಎಲ್ಲರೂ ನೋಡಲಾಗಿ ಕಾಲಿನ ಪಾದದ ಬಳಿ ಹಾವು ಕಚ್ಚಿದ ಗುರುತು ಕಾಣಿಸಿತು. ವಿಕ್ರಮ ತಕ್ಷಣ ಪ್ರಥಮ ಚಿಕಿತ್ಸೆಗೆಂಬಂತೆ ಒಂದು ದಾರ ಹಾಗೂ ಬ್ಲೇಡನ್ನು ತೆಗೆದುಕೊಂಡ. ತಕ್ಷಣವೇ ಪ್ರದೀಪ `ಏ ವಿಕ್ರಂ.. ನಿನಗೆ ತಲೆ ಕೆಟ್ಟಿದೆಯಾ.. ಎಲ್ಲೆಂದರಲ್ಲಿ ಆತ ನಿನ್ನನ್ನು ಫಾಲೋ ಮಾಡಿ, ಕಾಟಕೊಟ್ಟವನು ಇವನು.. ಇಂತವನಿಗೆ ಪ್ರಥಮ ಚಿಕಿತ್ಸೆ ಯಾಕೆ ಮಾರಾಯಾ? ನಿನ್ನ ಫಾಲೋ ಮಾಡಿದವನ ಜೀವ ಉಳಿಸಲಿಕ್ಕೆ ನೋಡ್ತೀಯಲ್ಲೋ..' ಎಂದ.
             `ಏ ಸುಮ್ನಿರೋ.. ಪಾಪ ಆತ ಸಾಯ್ತಿದ್ದಾನೆ. ಸೇಡಿದ್ದರೆ ಅದು ಕೊನೆಗಿರಲಿ. ಈಗ ಆತನನ್ನು ಉಳಿಸೋದು ಮುಖ್ಯ. ಬದುಕಿ ಉಳಿದರೆ ಯಾಕೆ ನಮ್ಮನ್ನು ಆತ ಹಿಂಬಾಲಿಸುತ್ತಿದ್ದ ಎಂಬುದನ್ನು ಕೇಳಿದರಾಯ್ತು..' ಎಂದ ವಿಕ್ರಂ. ಜೊತೆಗೆ ಪ್ರದೀಪನ ಮಾತನ್ನು ನಿರ್ಲಕ್ಷಿಸಿ ಆಗಂತುಕನಿಗೆ ಪ್ರಥಮ ಚಿಕಿತ್ಸೆ ನೀಡಿದ.
              ಸ್ವಲ್ಪ ಹೊತ್ತಿನ ನಂತರ ಆ ಅಪರಿಚಿತ ವ್ಯಕ್ತಿ ಚೇತರಿಸಿಕೊಂಡ. ತಕ್ಷಣ ವಿಕ್ರಂ `ಈಗ ಹೇಳು.. ಯಾರು ನೀನು..?' ಎಂದ.
            `ಅದನ್ನೆಲ್ಲಾ ಆಮೇಲೆ ಹೇಳ್ತೀನಿ.. ಮೊದಲು ನಿಮ್ಮ ಮನೆಗೆ ಹೋಗೋಣ ನಡೀರಿ..' ಎಂದ ಆಗಂತುಕ.
            `ನಮ್ಮ ಮನೆಗಾ..? ಅದೆಲ್ಲಾ ಆಗೋದಿಲ್ಲ..'
            `ಮೊದ್ಲು ಹೋಗೋಣ.. ಆ ನಂತ್ರ ನಾನ್ಯಾರು ಎನ್ನುವುದನ್ನೆಲ್ಲಾ ಹೇಳ್ತೀನಿ.. ಪ್ಲೀಸ್ ನಾನು ಹೇಳೋದನ್ನು ಕೇಳಿ..' ಅಂಗಲಾಚಿದ ಆಗಂತುಕ.
             `ಓಕೆ.. ಸರಿ..' ಎಂದ್ಹೇಳಿ ಆತನನ್ನು ಕರೆದೊಯ್ಯಲು ಹೊರಟ ವಿಕ್ರಮನನ್ನು ಪ್ರದೀಪ ಮತ್ತೆ ವಿರೋಧಿಸಿದ. ಈಗಲೂ ಪ್ರದೀಪನ ಮಾತನ್ನು ತೆಗೆದುಹಾಕಲಾಯ್ತು. ಅಂತೂ ಸಂಜೆಯ ವೇಳೆಗೆ ಆ ಆಗಂತುಕನೊಡಗೂಡಿ ಅವರ ತಂಡ `ಕಣ್ಣೀರು ಮನೆ'ಗೆ ವಾಪಸಾಯಿತು.
              ಹಾಗಾದರೆ ಇದೇ ಕಥೆಗೆ ದೊಡ್ಡ ತಿರುವೇ? ಆ ಆಗಂತುಕ ಯಾರಿರಬಹುದು? ಆತ ಒಳ್ಳೆಯವನೇ? ಕೆಟ್ಟವನೇ? ಎಲ್ಲವುಗಳಿಗೂ ಕಾಲವೇ ಉತ್ತರ ಹೇಳಬೇಕು.

*****9*****

            ಅತ್ತ ಬೇಣದಗದ್ದೆಯ ಶಿವರಾಮನ ಮನೆಯಲ್ಲಿ, ಅಲ್ಲಿಗೆ ಬಂದಿದ್ದ ಸುಬ್ರಮಣ್ಯ ಅಲಿಯಾಸ್ ಸುಬ್ಬಣ್ಣ ಯಾವುದೋ ವಿಷಯಕ್ಕಾಗಿ ಶತಪಥ ತಿರುಗುತ್ತಿದ್ದ. ಆತನಿಗೆ ಬರಬೇಕಿದ್ದ ವಸ್ತುಗಳಿಗೋ, ಬರಬೇಕಿದ್ದ ವ್ಯಕ್ತಿಗಳಿಗೋ ಕಾಯುತ್ತಿರುವುದು ಸ್ಪಷ್ಟವಾಗಿತ್ತು. ಅದಲ್ಲದೇ ಈಗ್ಗೆರಡು ದಿನಗಳಿಂದ ತನ್ನ ಅಣ್ಣ ಬೇಣದಗದ್ದೆಯ ಶಿವರಾಮನಲ್ಲಿಯೂ ಏನೋ ಒಂದು ಬದಲಾವಣೆ ಆಗಿತ್ತು. ಮೊದಲಿನ ಹಾಗೇ ಇಲ್ಲದ ಆತನಿಗೆ ತಾನು ಮಾಡುತ್ತಿರುವ ಕೆಲಸದ ಬಗ್ಗೆ ಅನುಮಾನ ಬಂದಿದೆಯಾ ಎಂದೂ ಸುಬ್ರಹ್ಮಣ್ಯ ಯೋಚನೆ ಮಾಡುತ್ತಿದ್ದ. `ಹಾಗಾಗದಿದ್ದರೆ ಸಾಕು..' ಎಂದುಕೊಳ್ಳುತ್ತಿದ್ದ.
             ಹಾಗಾದರೆ ಆತ ಮಾಡುತ್ತಿದ್ದ ಕೆಲಸ ಏನು? ಮುಂದೆ ಶಿವರಾಮ್ ಹಾಗೂ ಸುಬ್ಬಣ್ಣ ಏನಾಗುತ್ತಾರೆ? ಎಲ್ಲವೂ ಗೋಜಲು ಗೋಜಲಾಗಲು ಆರಂಭಿಸಿತ್ತು.

*****

                `ಅದಕ್ಕುತ್ತ ಆನು ಹೇಳ್ತಿ.. ತಡಿ...' ಎಂದು ಧ್ವನಿ ಬಂದಾಗ ಎಲ್ಲರಿಗೆ ಅಚ್ಚರಿ. ತಿರುಗಿ ನೋಡಿದರೆ ರಾಜಾರಾಮ ಭಟ್ಟರು.
                  ಆ ಆಗಂತುಕನನ್ನು ಕಣ್ಣೀರು ಮನೆಗೆ ಕರೆತಂದ ನಂತರ ಆತನನ್ನು ವಿಚಾರಿಸಲಾಗಿ ರಾಜಾರಾಮ ಭಟ್ಟರು ಹೀಗೆಂದಿದ್ದರು.
               `ವಾಟ್.. ಇಂವನ ಬಗ್ಗೆ ನಿಂಗೊತ್ತಿದ್ದನಾ ಅಪ್ಪಯ್ಯಾ..' ಎಂದು ಕಕ್ಕಾಬಿಕ್ಕಿಯಾಗಿ ಕೇಳಿದ್ದ ವಿಕ್ರಮ. `ಹುಂ.. ಹೌದಾ.. ಪ್ವಾರಾ.. ಯಂಗೊತ್ತಿದ್ದು.. ಅದು ದೊಡ್ಡ ಕಥೆ.. ಇಂವ ಇದ್ನಲಾ.. ಇಂವ ಬೇರೆ ಯಾರೂ ಅಲ್ದಾ.. ಯಂಗಳ ರಾಂಕೃಷ್ಣ ಗಾಂವ್ಕಾರರ ಮನೆ ಪ್ವಾರನಾ.. ವಿಷ್ಣು..' ಎಂದು ಹೇಳಿದರು ಭಟ್ಟರು.
                `ಆ..? ಹೌದಾ..? ಹಂಗಾದ್ರೆ ಅಂವ ಯನ್ನ ಫಾಲೋ ಮಾಡಿದ್ದೆಂತಕ್ಕೆ? ಎಲ್ಲೋದ್ರೂ ಹಿಂದಿಂದೇ ಬರ್ತಿದ್ದಿದ್ದು, ಹುಡುಕ್ತಿದ್ದು, ಮಾತು ಕೇಳಲು ಪ್ರಯತ್ನ ಮಾಡ್ತಿದ್ದಿದ್ದು ಯಂತಕ್ಕೆ..?' ಕೇಳಿದ ವಿಕ್ರಮ.
                `ಹೇಳ್ತಿ ತಡಿ.. ಇಂವ ಸಣ್ಣಕ್ಕಿದ್ದಾಗ ಮನೆ ಬಿಟ್ಟು ಓಡಿ ಹೋಯಿದ್ನಡಾ ಹೇಳಿ ಹೇಳ್ತಿಪ್ವಿಲ್ಯಾ.. ಅದಾದ ಮೇಲೆ ಒಂದ್ ಸಲ ಯಂಗ ಯಾವ್ದೋ ಊರಲ್ಲಿ ಸಿಕ್ಕಿದ್ದ ಬಿಲ್ಯ.. ಅಲ್ಲಿ ಇವ್ನ ಪರಿಸ್ಥಿತಿ ಭಾಳ ತೊಂದ್ರೇಲಿ ಇತ್ತು.. ಆಗ ಇಂವನ್ನ ಾನೇ ಕಾಪಾಡಿದ್ದು..'
              `ಅದೇನೋ ಸರಿ.. ಆದ್ರೆ ಅಂವ ಯನ್ನ ಹಿಂದಿಂದೇ ಬರ್ತಿದ್ದಿದ್ದು ಯಂತಕ್ಕೆ? ವಿಷ್ಣೂನೇ ಹೇಳಿ ಯಂಗೆಂತಕ್ಕೆ ತಿಳೀದಿಲ್ಲೆ? ನಿ ಯಂತಕ್ಕೆ ಹೇಳಿದ್ಲೆ?'' ಎಂದು ನಡುವೆ ಬಾಯಿ ಹಾಕಿ ಕೇಳಿದ ವಿಕ್ರಮ.
               ``ಅಂವನ್ನ ನಿಂಗೆ ಸಹಾಯ ಮಾಡ ಹೇಳಿ ಆನೆ ಕಳಿಸಿದ್ದಿದ್ದಿ ಬಿಲ್ಯ. ನಿಂಗೆ ಯಾರೇ ತೊಂದ್ರೆ ಕೊಟ್ಟರೂ ಅಂವ ನಿನ್ನ ಉಳಿಸ್ತಿದ್ದ. ಹಂಗಾಗಿ ನಿನ್ನ ಜೊತೆಗೆ ಅಂವ ಬರ್ತಿದ್ದ. ಅಂವ ಆವಾಗಾವಾಗ ತನ್ನ ವೇಷ ಬದಲಾಯಿಸ್ತಿದ್ದ. ಅದಕ್ಕಾಗಿ ನಿಂಗೆ ಗೊತ್ತಾಯ್ದಿಲ್ಲೆ.. ಮತ್ತೆ ಅದನ್ನ ನಿಂಗೆ ತಿಳಿಸದು ಯಂಗೆ ಸಡಿ ಕಂಡಿದ್ಲೆ. ಜೊತಿಗೆ ನೀನು ಯಂತದ್ದನ್ನೇ ಮಾಡಿದ್ರೂ ಮಾಡ್ತಿದ್ರೂ ಅದನ್ನ ಯಂಗೆ ತಿಳಿಸ್ತಿದ್ದ. ನೀನು ಕುಂಗ್ ಫು ಶಾಲೆ ಬಿಟ್ಟು ಪೇಪರ್ರಿಗೆ ಸೇರಿದ್ದನ್ನೆಲ್ಲಾ ಯಂಗೆ ಇವನೇ ಹೇಳಿ ಬಿಟ್ಟಿಕಿದ.' ಎಂದರು ಭಟ್ಟರು.
            `ಅಯ್ಯಪ್ಪಾ.. ಎಲ್ಲಿಂದ ಎಲ್ಲೀವರೆಗೆ ಲಿಂಕ್ ಉಂಟಪ್ಪಾ..' ಎಂದು ಗೊಣಗಿದ ಪ್ರದೀಪ. ವಿಕ್ರಮ ಕಕ್ಕಾಬಿಕ್ಕಿಯಾಗಿದ್ದ.
            `ಇಷ್ಟೇ ಅಲ್ಲ ತಡಿ.. ನಿನ್ನ ಆ ಕುಂಗ್ ಫೂ ಶಾಲೆ ಯಂಗೆ ಇಷ್ಟ ಆಯ್ದಿಲ್ಲೆ.. ನಿಂಗೂ ಅದು ಗೊತ್ತಿದ್ದು.. ಅದಕ್ಕಾಗೇ ನೀನಾಗೇ ಆ ಶಾಲೆ ಬಾಗಿಲು ಹಾಕ್ಲಿ ಹೇಳಿ ನಾನು ಮಾಡಿದ್ದಿ.. ಕೊನೆಗೆ ಆ ಮಂಗ್ಳೂರಿನ ಪೇಪರ್ರಿನಲ್ಲಿ ಕೆಲ್ಸ ಸೊಗೋ ಹಂಗೆ ಮಾಡಿ, ನಿನ್ನ ಕೆಲಸ ಬದ್ಲು ಮಾಡದಿ.. ಇಷ್ಟೇ ಅಲ್ದಾ.. ಇನ್ನೂ ಒಂದು ಮುಖ್ಯ ಸಂಗ್ತಿ ಹೇಳ್ತಿ ಕೇಳು.. ಈ ವಿಜೇತಾ ಇದ್ದಲಾ.. ಇದು ಯಂಗೆ ಮೊದಲಿಂದ್ಲೂ ಗೊತ್ತಿತ್ತಿದ್ದೇಯಾ.. ಯನ್ನ ಷಡ್ಕ ಅಂದ್ರೆ ನಿನ್ನ ಆಯಿಯ ಕೌಟುಂಬಿಕ ಸಂಬಂಧಿಕರಡ. ಹಂಗಾಗಿ ಅವ್ಳೂ ಇದರಲ್ಲಿ ಮುಖ್ಯ ಪಾತ್ರ ವಹಿಸಿದ್ದ..' ಎಂದರು ಭಟ್ರು.
             ವಿಕ್ರಮನಿಗೆ ಮತ್ತೆ ದಿಘ್ಬ್ರಾಂತಿ. ತಾನು ನಂಬಿದ್ದ ವಿಜೇತಾ ಹೀಗಿರಲು ಸಾಧ್ಯ ಎಂದುಕೊಂಡಿರದ ವಿಕ್ರಮನಿಗೆ ಶಾಕ್ ಮೇಲೆ ಶಾಕ್. ತಾನು ನಂಬಿಕೊಂಡಿದ್ದೆಲ್ಲವೂ ಸುಳ್ಳಾದಂತೆ, ಜಗತ್ತಿನಲ್ಲಿ ತನ್ನ ವಿರುದ್ಧದಲ್ಲಿ ಗೂಢಚಾರಿಕೆ ಮಾಡಿದಂತೆ ಅನ್ನಿಸಿತು. ತಾನಂದುಕೊಂಡಿದ್ದೆಲ್ಲವೂ ನಿಜವಲ್ಲ. ತಾನೊಬ್ಬನೆ ಒಂದು ಕಡೆ.. ಉಳಿದವರೆಲ್ಲ ತನ್ನ ವಿರುದ್ಧ ಇರುವವರೇ.  ತನ್ನ ಅಸ್ತಿತ್ವವೇ ಸುಳ್ಳಾ.. ಇವರೆಲ್ಲರ ಆಟದ ಕಾಯಿಯಾಗಿ ತಾನು ಬಳಕೆಯಾದೆನಾ ಎಂದುಕೊಂಡ ವಿಕ್ರಮ. `ವಾಟ್.. ಇದನ್ನೆಲ್ಲಾ ನಂಬೂಲೆ ಆವ್ತ್ಲೆ.. ಹೌದಾ ವಿಜೇತಾ..?' ಎಂದ ವಿಕ್ರಮ.
               `ಯಸ್.. ಇದೆಲ್ಲಾ ನಂಗೂ ಗೊತ್ತಿತ್ತು.. ನನ್ನ ಹೆಲ್ಪ್ ಕೂಡ ಇತ್ತು. ಏನೋ ಲೈಫ್ ನಲ್ಲಿ ಒಂದು ಟ್ವಿಸ್ಟ್ ಇರಲಿ ಅಂತ ಹೀಗೆ ಮಾಡಿದೆ. ಆದರೆ ಈ ಊರನ್ನು ನಾನು ನೋಡಿರಲಿಲ್ಲ. ಯಾರ್ಯಾರದ್ದೋ ಮೂಲಕ ಭಟ್ರ ಬಗ್ಗೆ, ನಿನ್ನ ಬಗ್ಗೆ ನನಗೆ ತಿಳೀತು. ಏನೋ ಹೀಗೆ ಮಾಡಿದೆ. ಆದರೆ ಈ ವಿಷ್ಣುವಿನ ಬಗ್ಗೆ ನನಗೆ ಗೊತ್ತಿರಲಿಲ್ಲ. ಇನ್ನು ನಿನ್ನ ಬಗ್ಗೆ ಹೇಳಬೇಕಂದ್ರೆ ನಿನ್ನ ಚಿಕ್ಕಂದಿನಿಂದ್ಲೂ ನೋಡ್ತಿದ್ದೆ. ಆದರೆ ನಾನು ಬೆಳೆಯುತ್ತಿದ್ದಂತೆ ನನ್ನ ಮಮ್ಮಿ ಡ್ಯಾಡಿ ಮಂಗಳೂರಿಗೆ ಬಂದರು. ಹಾಗಾಗಿ ನೀನು ಏನಾದೆ ಎನ್ನುವುದು ಗೊತ್ತಾಗಿರಲಿಲ್ಲ. ಆ ನಂತರ ನಿನ್ನನ್ನು ನೋಡಿದ್ದು ಮಂಗಳೂರಿನಲ್ಲಿ ಕುಂಗ್ ಫೂ ಸಂದರ್ಶನದಲ್ಲಿ. ನಂತರ ಭಟ್ರು ಪರಿಚಯವಾದರು. ಕೊನೆಗೆ ನೀನು ಗೊತ್ತಿದ್ರೂ ಗೊತ್ತಿಲ್ಲದ ಹಾಗೆ ನಡೆದುಕೊಂಡೆ. ನಿಂಗೊತ್ತಿರಬಹುದು, ಒಂದಿನ ನೀನು ನಮ್ಮನೆಗೆ ಬಂದಿದ್ದಾಗ ನನ್ನ ಡ್ಯಾಡಿ ಶಿರಸಿ ಏರಿಯಾದಲ್ಲಿ ಎಲ್ಲಾ ಗೊತ್ತಿದೆ ಎಂದಿದ್ದರು. ಹೀಗೆ.. ಮೂಲತಃ ಅವರೂ ಇಲ್ಲಿಯ ಏರಿಯಾದವರೇ. ಜೊತೆಗೆ ನನಗೂ ಕೂಡ ಈ ಏರಿಯಾ ನೋಡೋಣ ಎನ್ನಿಸ್ತು ನಿಂಜೊತೆ ಬಂದು ಬಿಟ್ಟೆ..' ಎಂದಳು ವಿಜೇತಾ..
                ಉಫ್... ಒಂದು ಹೊಡೆತದ ಮೇಲೆ ಇನ್ನೊಂದು ಹೊಡೆತ.. ಒಂದನ್ನು ನಂಬಬೇಕೋ ಬೇಡ್ವೋ ಎನ್ನುವುದರೊಳಗೆ ಇನ್ನೊಂದು... ಯಾವ ಯಾವ ರೀತಿಯ ತಿರುವುಗಳು.. ಎಷ್ಟೆಲ್ಲಾ ಚೇಂಜು.. ಇದೆಲ್ಲ ಹೌದಾ.. ಆದರೆ ಯಾಕಾಗಿ ಇವೆಲ್ಲಾ? ನಿಮ್ಮೆಲ್ಲರ ಪಾಲಿಗೆ ನಾನು ಆಟದ ವಸ್ತು ಆದೆನಾ? ನಿಮ್ಮೆಲ್ಲರಿಗೂ ಎಲ್ಲವೂ ಗೊತ್ತಿದೆ. ಆದರೆ ನಾನು ಮಾತ್ರ ಏನೂ ಗೊತ್ತಿಲ್ಲದ ಹಾಗೆ ಬಫೂನ್ ಆಗಿಬಿಟ್ಟೆ.. ಪ್ರದೀಪ, ವಿನಾಯಕ.. ನೀವೂ ಈ ಸುರುಳಿಯ ಒಂದು ಭಾಗ ಆಗಿದ್ದರೆ ಹೇಳಿ ಬಿಡ್ರಪ್ಪಾ.. ಶಾಕುಗಳ ಸರಮಾಲೇ ಈಗಲೇ ಮುಗಿದು ಹೋಗಲಿ..' ದೀನನಾಗಿದ್ದ ವಿಕ್ರಮ
            ಪ್ರದೀಪ ಹಾಗೂ ವಿನಾಯಕರು ತಮಗೂ ಇದಕ್ಕೂ ಯಾವುದೇ ಸಂಬಂಧಿವಿಲ್ಲ. ತಮಗೇನೂ ಗೊತ್ತಿಲ್ಲ ಎಂದರು.
            `ತಂದೆಯಾದವಂಗೆ ಮಗನ್ನ ಸರಿಯಾದ ಹಾದಿಯಲ್ಲಿ ಹೋಗೂಲೆ ಹೇಳೋ ಹೊಣೆ ಇರ್ತು. ನೀನೂ ಕೂಡ ಒಳ್ಳೆಯ ದಾರಿಯಲ್ಲಿ ಹೋಗೂದು ನಂಗೆ ಬೇಕಿತ್ತು ಅದಕ್ಕಾಗಿ ಹಿಂಗೆ ಮಾಡಿದೆ..' ಎಂದರು ಭಟ್ಟರು.
              `ಹಂಗಾರೆ ಕುಂಗ್ ಫೂ ಕಲ್ಸೂದು ಒಳ್ಳೆ ದಾರಿ ಅಲ್ದಾ..?'
              `ಒಳ್ಳೇದೋ ಕೆಟ್ಟದ್ದೋ.. ನಮಗ್ಯಾಕೆ ಬೇಕು ಆ ಹೊಡೆದಾಟದ ವೃತ್ತಿ? ನಿನ್ನ ಆ ಹೊಲ್ಸು ಉಸಾಬರಿ ನಮಗೆ ಬೇಕಾದ ಹಣ ಕೊಡ್ತ್ಲೆ. ಅದು ಜೊತೆಗೆ ಸುಖಾ ಸುಮ್ನೆ ಮೈ ಮುರಿಯೋ ಹಂಗೆ ಒದ್ದಾಡೂದು. ಇನ್ನು ನಾವು ಹವ್ಯಕರು. ನಮಗೆಲ್ಲಾ ಇದು ಅವ್ತ್ಲೆ.. ನಾವು ಯಂತಿದ್ರೂ ಸಸ್ಯಾಹಾರಿಗಳು. ಅಂತಾದ್ದೆಲ್ಲಾ ಆ ನಾಯ್ಕರಿಗೋ, ಗೌಡ್ರಿಗೋ, ಕುಣಬಿ ಮರಾಟ್ಯಕ್ಕಗೋ, ಸಿದ್ದಿಗಳಿಗೋ ಲಾಯಕ್ಕು.. ಅದ್ಕೆ ಹಿಂಗ್ಮಾಡಿದಿ ಬಿಲ್ಯ. ಇನ್ನು ನೀನು ಪತ್ರಿಕೆಗೆ ಸೇರಿದ್ದು ನಾನು ಒಪ್ದಿ. ಯಂತಕ್ಕಂದ್ರೆ ಅದರಲ್ಲಿ ನಿಂಗೆ ಹೆಸರು ಬತ್ತು. ನಾಕು ಜನ ನಿನ್ನ ಬಗ್ಗೆ ಹೆಮ್ಮೆಯಿಂದ ಮಾತಾಡದ್ನ ನೋಡಲಾವುತು,, ಹಂಗಾಗಿ ಹಿಂಗ್ ಮಾಡದಿ..'
              ಭಟ್ಟರ ಈ ಮಾತಿಗೆ ವಿಕ್ರಮ ಏನೂ ಮಾತಾಡಲಿಲ್ಲ. ಅವನ ತಲೆಯ ತುಂಬಾ ದಿಗ್ಬ್ರಾಂತಿ, ವಿಶಿಷ್ಟತೆ, ಅಚ್ಚರಿ, ನಿಘೂಡತೆಗಳಲ್ಲೇ ತುಂಬಿ ಹೋಗಿತ್ತು. ಅಷ್ಟು ಹೊತ್ತಿಗೆ ಸಾಕಷ್ಟು ಕತ್ತಲೂ ಆವರಿಸಿದ್ದರಿಂದ ಎಲ್ಲರೂ ಮುಂದಿನ ಕಾರ್ಯಗಳತ್ತ ಮುಖಮಾಡಿದರು. ವಿಕ್ರಮ ಯೋಚಿಸಡೊಗಿದ್ದ.
               ಅಷ್ಟರಲ್ಲೇ ಊಟಕ್ಕೆ ಬುಲಾವ್ ಬಂದಿತ್ತು. ಊಟ ಮುಗಿದ ನಂತರ ವಿನಾಯಕ, ಪ್ರದೀಪ, ವಿಜೇತಾ ಇವರೆಲ್ಲ ವಿಷ್ಣುವಿನ ಬಳಿ ಮಾತನಾಡತೊಡಗಿದ್ದರು. ಆದರೆ ವಿಕ್ರಂ ಅವರ ಜೊತೆಗೆ ಸೇರಲಿಲ್ಲ. ಮನೆಯ ಹೊರಗೆ ಅಂಗಳದಲ್ಲಿ ಒಮದು ಕಡೆ ಕುಳಿತು ಆಲೋಚಿಸತೊಡಗಿದ್ದ.

(ಮುಂದುವರಿಯುತ್ತದೆ..)

Friday, January 23, 2015

ಬಂಡಲದ ಬವಣೆ

ಬಂಡಲ ಬವಣೆ
ಭಾಗ-1

***

(ಇದು ದೈನಂದಿನ ಪರಿಸ್ಥಿತಿ)
ಶಿರಸಿ ತಾಲೂಕಿನ ಬಂಡಲ ಗ್ರಾಮ ಪಂಚಾಯತ ವ್ಯಾಪ್ತಿಯ ಹೆಬ್ರೆ ಗ್ರಾಮದ 7 ಹಳ್ಳಿಗಳ ಪರಿಸ್ಥಿತಿ ದೇವರಿಗೆ ಪ್ರೀತಿ ಎಂಬಂತಾಗಿದೆ. ರಸ್ತೆ, ವಿದ್ಯುತ್ ಸೇರಿದಂತೆ ಹಲವಾರು ಮೂಲಭೂತ ಸೌಕರ್ಯಗಳಿಂದ ಈ ಹಳ್ಳಿಗಳು ವಂಚಿತವಾಗಿದೆ. ಗ್ರಾಮಸ್ಥರು ಮೂಲಭೂತ ಸೌಕರ್ಯಕ್ಕಾಗಿ ಜನಪ್ರತಿನಿಧಿಗಳಿಗೆ ಮನವಿ ಅರ್ಪಿಸಿ ಹೈರಾಣಾಗಿದ್ದಾರೆ.
ಬಂಡಲ ಪಂಚಾಯತದ ಹೆಬ್ರೆ ಗ್ರಾಮ ಶಿರಸಿ ತಾಲೂಕಿನ ಅತಿ ದೊಡ್ಡ ಗ್ರಾಮ ಎನ್ನುವ ಖ್ಯಾತಿಯನ್ನು ಗಳಿಸಿದೆ. ಈ ಗ್ರಾಮದಲ್ಲಿರುವ ಗಾಡನಗದ್ದೆ, ಸಂಪೆಗದ್ದೆ, ಹೊಡಹಾಡನಗದ್ದೆ, ಬಿಳಿಜಡ್ಡಿ, ಯಡ್ಲಮನೆ, ದೇವಕಣಿ, ಹಡನಗದ್ದೆ ಈ ಮುಂತಾದ ಗ್ರಾಮಗಳು ನಾಗರಿಕ ಜಗತ್ತಿನ ಹಲವಾರು ಸೌಲಭ್ಯಗಳಿಂದ ವಂಚಿತವಾಗಿದೆ. ರಾಗಿಹೊಸಳ್ಳಿಯಿಂದ ಜಲಗದ್ದೆ-ಸಂಪೆಗದ್ದೆ ಮೂಲಕ ಬೆಣಗಾಂವ್ ಊರಿಗೆ ತೆರಳುವ ಮಾರ್ಗ ಮಧ್ಯದಲ್ಲಿರುವ ಈ ಗ್ರಾಮಗಳನ್ನು ತಲುಪಲು ಸಾಹಸ ಪಡಬೇಕಾದಂತಹ ಪರಿಸ್ಥಿತಿಯಿದೆ. ಈ ಹಳ್ಳಿಗಳಲ್ಲಿ ಕನಿಷ್ಟ 150 ಮನೆಗಳಿವೆ. 800-1000ಕ್ಕೂ ಅಧಿಕ ಜನರಿದ್ದಾರೆ. ಬಂಡಲ ಗ್ರಾಮ ಪಂಚಾಯತದಿಂದ 8 ಕಿ.ಮಿ, ರಾಗಿಹೊಸಳ್ಳಿಯಿಂದ 4 ಕಿ.ಮಿ ಹಾಗೂ ದೇವನಳ್ಳಿಯಿಂದ 13 ಕಿ.ಮಿ ದೂರದಲ್ಲಿ ಈ ಗ್ರಾಮಗಳಿವೆ. ಮರಾಠಿಗರು, ಗೌಡರು ಹಾಗೂ ಬ್ರಾಹ್ಮಣರು ಈ ಊರುಗಳಲ್ಲಿ ವಾಸ ಮಾಡುತ್ತಿದ್ದಾರೆ.
ದಟ್ಟ ಕಾನನ ಹಾಗೂ ಬೆಣ್ಣೆಹೊಳೆಯ ಸನಿಹದಲ್ಲೇ ಇರುವ ಈ ಹಳ್ಳಿಗಳಿಗೆ ತೆರಳಲು ಸರಿಯಾದ ರಸ್ತೆಯಿಲ್ಲ. ಕಚ್ಚಾರಸ್ತೆಯೊಂದಿದ್ದರೂ ಒದ್ದಾಡುತ್ತ ಸಂಚಾರ ಮಾಡಬೇಕಾದ ಪರಿಸ್ಥಿತಿ ಇದೆ. ಮೂರು ಕಡೆಗಳಲ್ಲಿ ಹಳ್ಳಗಳನ್ನು ದಾಟಬೇಕು. ಯಾವುದೇ ಹಳ್ಳಕ್ಕೆ ಸೇತುವೆಯಿಲ್ಲ. ಮಳೆಗಾಲದಲ್ಲಂತೂ ಈ ಹಳ್ಳಗಳು ಉಕ್ಕೇರಿ ಹರಿಯುತ್ತವೆ. ಇದರಿಂದಾಗಿ ಮಳೆಗಾಲದ ಆರು ತಿಂಗಳುಗಳ ಕಾಲ ಈ ಎಲ್ಲ ಊರುಗಳು ಹೊರ ಜಗತ್ತಿನ ಸಂಪರ್ಕವನ್ನು ಕಳೆದುಕೊಳ್ಳುತ್ತವೆ. ಅನಿವಾರ್ಯ ಕಾರಣಗಳಿಗೆ ಹೊರ ಪ್ರದೇಶಗಳಿಗೆ ತೆರಳಬೇಕೆಂದರೂ ಉಕ್ಕಿ ಹರಿಯುವ ಹಳ್ಳದಲ್ಲಿ ನೀರು ಕಡಿಮೆಯಾಗುವುದನ್ನು ಕಾಯಬೇಕಾಗುತ್ತದೆ. ಅಂದರೆ ಬೇಸಿಗೆ ಬರುವ ವರೆಗೆ ಸಂಪರ್ಕವನ್ನೇ ಕಡಿದುಕೊಳ್ಳುವಂತಾಗಿದೆ. ಮಳೆಗಾಲ ಪ್ರಾರಂಭವಾಯಿತೆಂದರೆ ಈ ಊರುಗಳು ದ್ವೀಪವಾಗುತ್ತವೆ. ಹಳ್ಳಗಳಿಗೆ ಸೇತುವೆಯಿಲ್ಲ. ಕಚ್ಚಾರಸ್ತೆಯಲ್ಲಿ ಓಡಾಡುವಂತಿಲ್ಲ. ಹಾಗಾದರೆ ದಿನವಹಿ ಇಲ್ಲಿರುವ ಸಾವಿರಾರು ಜನರು ಜೀವನ ಸಾಗಿಸುವುದಾದರೂ ಹೇಗೆ ಎನ್ನುವ ಪ್ರಶ್ನೆಗೆ ಜನಪ್ರತಿನಿಧಿಗಳಿಂದಲೂ ಉತ್ತರ ಸಿಗುತ್ತಿಲ್ಲ.
(ಹಳ್ಳದಲ್ಲಿ ಸರ್ಕಸ್ ಅನಿವಾರ್ಯ)
ಈ ಗ್ರಾಮಗಳಿಗೆ ತೆರಳುವ ಮಾರ್ಗ ಮಧ್ಯದಲ್ಲಿ ಮುಖ್ಯವಾಗಿ ಜಲಗದ್ದೆ ಹಳ್ಳ, ಸಂಪೆಗದ್ದೆ ಹಳ್ಳ ಹಾಗೂ ಬೆಣ್ಣೆಹೊಳೆಗಳು ಸಿಗುತ್ತವೆ. ಈ ಮೂರು ಹೊಳೆಗಳಿಗೂ ಸೇತುವೆ ನಿರ್ಮಾಣ ಅತ್ಯಾವಶ್ಯಕವಾಗಿದೆ. ಜಲಗದ್ದೆ ಹಳ್ಳಕ್ಕೆ 20 ಅಡಿ ಉದ್ದದ, 12 ಅಡಿ ಅಗಲದ ಸೇತುವೆ, ಸಂಪೆಗದ್ದೆ ಹಳ್ಳಕ್ಕೆ 20 ಅಡಿ ಉದ್ದದ, 12 ಅಡಿ ಅಗಲದ ಸೇತುವೆಯ ಅಗತ್ಯವಿದೆ. ಬೆಣ್ಣೆಹೊಳೆಗೆ 60 ಮೀಟರ್ ಉದ್ದದ ಸೇತುವೆ ನಿರ್ಮಾಣವಾಗಬೇಕಿದೆ. ಬಿಳಿಜಡ್ಡಿಯಲ್ಲಿ ಈಶ್ವರ ದೇವಸ್ಥಾನವಿದೆ. ಈ ಊರಿಗೆ ತೆರಳುವ ಮಾರ್ಗದಲ್ಲಿಯೂ ಹಳ್ಳವೊಂದಿದ್ದು ಅದಕ್ಕೂ ಮೋರಿ ನಿರ್ಮಾಣ ಆಗಬೇಕಾಗಿದೆ. ಜಲಗದ್ದೆ ಹಳ್ಳದಿಂದ ಬೆಣಗಾಂವ ಕೂಡು ರಸ್ತೆಯವರೆಗೆ 4 ಕಿ.ಮಿ ಅಂತರವಿದ್ದು ರಸ್ತೆ ಸುಧಾರಣೆಯನ್ನು ಮಾಡಬೇಕಾದ ಅಗತ್ಯವಿದೆ. ಸ್ಥಳೀಯರು ಮಳೆಗಾಲದಲ್ಲಿ ಜಲಗದ್ದೆ ಹಳ್ಳದ ವರೆಗೆ ಪ್ರಯಾಸಪಟ್ಟು ವಾಹನ ಚಾಲನೆ ಮಾಡಿಕೊಂಡು ಬರುತ್ತಾರೆ. ಮಳೆಗಾಲ ಸೇರಿದಂತೆ 6 ತಿಂಗಳುಗಳ ಕಾಲ ಅಗತ್ಯವಾದ ವಸ್ತುಗಳನ್ನು ಬೇಸಿಗೆಯಲ್ಲಿಯೇ ಸಂಗ್ರಹಿಸಿ ಇಟ್ಟುಕೊಳ್ಳುವುದೂ ಈ ಗ್ರಾಮಸ್ಥರ ಕೆಲಸವಾಗಿದೆ. ಮಳೆಗಾಲದ ಮಧ್ಯದಲ್ಲಿಯೇ ಯಾವುದಾದರೂ ವಸ್ತುಗಳು ಖಾಲಿಯಾದರೆ ಗ್ರಾ
ಪ್ರತಿ ವರ್ಷ ಸ್ಥಳೀಯರು 80ಕ್ಕೂ ಅಧಿಕ ಆಳು ಖರ್ಚು ಮಾಡಿ ರಸ್ತೆಯನ್ನು ದುರಸ್ತಿ ಮಾಡಿಕೊಳ್ಳುತ್ತಿದ್ದಾರೆ. ಪ್ರತಿವರ್ಷ ರಸ್ತೆ ದುರಸ್ತಿಗಾಗಿಯೇ 10 ಸಾವಿರ ರು.ಗೂ ಅಧಿಕ ಖರ್ಚು ತಗುಲುತ್ತಿದೆ. ರಸ್ತೆ ದುರಸ್ತಿ ಮಾಡಬೇಕಾಗಿದ್ದ ಗ್ರಾಮ ಪಂಚಾಯತ, ಸ್ಥಳೀಯ ಸಂಸ್ಥೆಗಳು ಈ ಕುರಿತು ಗಮನ ಹರಿಸುತ್ತಿಲ್ಲ. ತಮಗೆ ಸಂಬಂಧವೇ ಇಲ್ಲದಂತೆ ವರ್ತಿಸುತ್ತಿದೆ. ಇದರಿಂದಾಗಿ ಜನಸಾಮಾನ್ಯರು ಹೈರಾಣಾಗಿ ಹೋಗಿದ್ದಾರೆ. ಹಳ್ಳಗಳಿಗೆ ಮೋರಿ ನಿರ್ಮಾಣ ಮಾಡಬೇಕು, ತಸ್ತೆ ದುರಸ್ತಿ ಮಾಡಿಸಿ ರಸ್ತೆಯ ಇಕ್ಕೆಲಗಳಲ್ಲಿಯೂ ಕಾಲುವೆಯನ್ನು ಮಾಡಬೇಕೆಂಬುದು ಸ್ಥಳೀಯರ ಆಗ್ರಹವಾಗಿದೆ. ಆದರೆ ಸ್ಥಳೀಯರ ಆಗ್ರಹಕ್ಕೆ ಮಾತ್ರ ಯಾವುದೇ ಕಿಮ್ಮತ್ತು ಸಿಗುತ್ತಿಲ್ಲ. ಮೂಲಭೂತ ಸೌಕರ್ಯ ಒದಗಿಸುವವರು ನಿದ್ರಿಸುತ್ತ ಕಾಲತಳ್ಳುತ್ತಿದ್ದಾರೆ.

***

(ತಮಾಷೆನೇ ಅಲ್ಲಾ..)
ಜಲಗದ್ದೆ ಹಳ್ಳಕ್ಕೆ ಸೇತುವೆ ನಿರ್ಮಾಣ ಮಾಡಿಕೊಡಬೇಕು ಎಂದು ಎರಡು ದಶಕಗಳಿಂದ ಆಗ್ರಹಿಸುತ್ತ ಬಂದಿದ್ದೇವೆ. ಒಮ್ಮೆ ಈ ಸೇತುವೆ ನಿರ್ಮಾಣಕ್ಕೆ ರೂಪುರೇಷೆ ನಡೆದು ಪೈಪುಗಳನ್ನೂ ಹಾಕಲಾಗಿತ್ತು. ಆದರೆ ಅಸಮರ್ಪಕ ನಿರ್ವಹಣೆಯಿಂದಾಗಿ ಮಳೆಗಾಲದಲ್ಲಿ ಪೈಪುಗಳು ಕೊಚ್ಚಿಕೊಂಡು ಹೋಗಿದ್ದವು. ನಂತರ ಹಾಕಲಾಗಿದ್ದ ಪೈಪನ್ನೂ ತೆಗೆಯಲಾಗಿದೆ. ಇದೀಗ ಹಳ್ಳದ ಮೂಲಕ ಸಂಚಾರ ಮಾಡುವುದು ಅಸಾಧ್ಯ ಎನ್ನುವಂತಾಗಿದೆ. ಕೂಡಲೇ ಸಂಬಂಧಪಟ್ಟವರು ಸಮಸ್ಯೆಯನ್ನು ಪರಿಹರಿಸಬೇಕಾಗಿದೆ.
ಆನಂದು ಮರಾಠಿ
ದೇವಕಣಿ

**

ರಸ್ತೆ ಮಧ್ಯ ಸಿಗುವ ಯಾವ ಹಳ್ಳಗಳಿಗೂ ಸೇತುವೆಯಿಲ್ಲ. ಮಳೆಗಾಲದಲ್ಲಿ ಹಳ್ಳಗಳು ಉಕ್ಕೇರಿ ಹರಿಯುತ್ತವೆ. ಮಳೆಗಾಲದಲ್ಲಿ ಕನಿಷ್ಟ ಆರು ತಿಂಗಳುಗಳ ಕಾಲ ಈ ಎಲ್ಲ ಗ್ರಾಮಗಳು ಹೊರ ಜಗತ್ತಿನ ಸಂಪರ್ಕ ಕಳೆದುಕೊಳ್ಳುತ್ತವೆ. ಈ ಭಾಗದ ಜನಪ್ರತಿನಿಧಿಗಳು ನಮ್ಮ ಸಮಸ್ಯೆ ಪರಿಹರಿಸಲು ಮುಂದಾಗುತ್ತಿಲ್ಲ. ಮನವಿಗಳ ಮೇಲೆ ಮನವಿ ಸಲ್ಲಿಸಿ ಸಾಕಾಗಿದೆ. ನಮ್ಮ ಸಹನೆಯೂ ಬತ್ತಿಹೋಗಿದೆ. ಕೂಡಲೇ ಸಂಚಾರ ಸಮಸ್ಯೆ ಪರಿಹಾರ ಮಾಡದಿದ್ದಲ್ಲಿ ಉಗ್ರ ಹೋರಾಟವನ್ನೂ ಮಾಡಲಾಗುತ್ತದೆ.
ಗಜಾನನ ಭಟ್ಟ
ಸಂಪೆಗದ್ದೆ


****

ಬಂಡಲ ಬವಣೆ
ಭಾಗ-2

(ಮುರಿದಿದೆ ವಿದ್ಯುತ್ ಕಂಬ)
ಬಂಡಲ ಪಂಚಾಯತ ವ್ಯಾಪ್ತಿಯ ಊರುಗಳ ಮೂಲ ಸೌಲಭ್ಯಗಳ ಕುರಿತಂತೆ ಜನಪ್ರತಿನಿಧಿಗಳು ಈವರೆಗೂ ಬಂಡಲ್ ಬಿಟ್ಟಿದ್ದೇ ಹೆಚ್ಚು. ಸಂಪೆಗದ್ದೆ-ಬೆಣಗಾಂವ್ ರಸ್ತೆಯ ದುಸ್ಥಿತಿ ಉಂಟುಮಾಡುತ್ತಿರುವ ಸಮಸ್ಯೆ ಒಂದೆರಡಲ್ಲ. ಜಲಗದ್ದೆ ಹಳ್ಳಕ್ಕೆ ಸೇತುವೆ ನಿರ್ಮಾಣ ಮಾಡದ ಕಾರಣ ಹೆಬ್ರೆ ಗ್ರಾಮದ 7 ಹಳ್ಳಿಗಳ ಜನರು ನಿತ್ಯ ನರಕವನ್ನು ಅನುಭವಿಸುತ್ತಿದ್ದಾರೆ.
ಗಾಡನಗದ್ದೆ, ಸಂಪೆಗದ್ದೆ, ಹೊಸಹಾಡನಗದ್ದೆ, ಬಿಳಿಜಡ್ಡಿ, ದೇವಕಣಿ, ಯಡ್ಲಮನೆ, ಹಡನಗದ್ದೆ ಈ ಊರುಗಳ ಜನರು ಅಗತ್ಯ ವಸ್ತುಗಳನ್ನು ಕೊಳ್ಳಲು ರಾಗಿಹೊಸಳ್ಳಿಯನ್ನು ಅವಲಂಬಿಸಿದ್ದಾರೆ. 4-6 ಕಿ.ಮಿ ದೂರದಲ್ಲಿರುವ ರಾಗಿಹೊಸಳ್ಳಿಗೆ ಬರಬೇಕೆಂದರೆ ಕನಿಷ್ಟ 2 ಹಳ್ಳಗಳನ್ನು ದಾಟುವುದು ಅನಿವಾರ್ಯ. ಪ್ರಾಥಮಿಕ ಸಹಕಾರಿ ಸಂಘದ ಕೆಲಸಕ್ಕೆ, ಪಡಿತರ ಪಡೆಯಲು, ದವಸಧಾನ್ಯ ಕೊಳ್ಳಲು, ಬ್ಯಾಂಕ್ ವ್ಯವಹಾರ ಸೇರಿದಂತೆ ಅಗತ್ಯ ಕೆಲಸಗಳಿಗೆ ರಾಗಿಹೊಸಳ್ಳಿಗೆ ಬರಬೇಕು. ಈ ಊರುಗಳ ಮಕ್ಕಳು ಶಾಲೆಗೆ ಬರಬೇಕೆಂದರೂ ರಾಗಿಹೊಸಳ್ಳಿಗೇ ಆಗಮಿಸಬೇಕು. ಮಳೆಗಾಲದಲ್ಲಿ ಹಳ್ಳಗಳಲ್ಲಿ ನೀರು ಉಕ್ಕುವ ಕಾರಣ ಆರು ತಿಂಗಳುಗಳ ಕಾಲ ಈ ಗ್ರಾಮಗಳು ರಾಗಿಹೊಸಳ್ಳಿ ಹಾಗೂ ಹೊರ ಜಗತ್ತಿನ ಸಂಪರ್ಕದಿಂದ ವಂಚಿತವಾಗುತ್ತಿವೆ.
ವಿದ್ಯುತ್ ಸಮಸ್ಯೆ ಈ ಊರಿನ ಜ್ವಲಂತ ಸಮಸ್ಯೆಗಳಲ್ಲೊಂದು. ಮನಸ್ಸುಬಂದಾಗ ವಿದ್ಯುತ್ ಆಗಮಿಸುತ್ತದೆ. ಒಮ್ಮೆ ಹೋದ ವಿದ್ಯುತ್ ನಾಲ್ಕು-ಐದಿ ದಿನಗಳವರೆಗೆ ನಾಪತ್ತೆಯಾಗುತ್ತದೆ. ಮಳೆಗಾಲದಲ್ಲಂತೂ ವಿದ್ಯುತ್ ಸಮಸ್ಯೆಗೆ ಮುಕ್ತಿಯೇ ಇಲ್ಲ ಎನ್ನಬಹುದು. ದಟ್ಟ ಕಾಡಿನಲ್ಲಿ ಹಾದು ಹೋಗಿರುವ ವಿದ್ಯುತ್ ಮಾರ್ಗದ ಮೇಲೆ ಮಳೆಗಾಲದಲ್ಲಿ ಮರ ಮುರಿದು ಬೀಳುವುದು, ಕೊಂಬೆಗಳು ತುಂಡಾಗಿ ವಿದ್ಯುತ್ ತಂತಿಯ ಮೇಲೆ ಬೀಳುವುದರಿಂದಾಗಿ ಕಗ್ಗತ್ತಲೆ ಎನ್ನುವುದು ಸರ್ವೇಸಾಮಾನ್ಯ ಎನ್ನುವಂತಾಗಿದೆ. ಮಳೆಗಾಲದಲ್ಲಿ ಗಾಳಿ, ಮಳೆಯ ರಭಸಕ್ಕೆ ವಿದ್ಯುತ್ ಕಂಬಗಳು ಸಾಲು ಸಾಲಾಗಿ ಮುರಿದು ಬೀಳುತ್ತವೆ. ಮಳೆಗಾಲದ ಆರಂಭದಲ್ಲಿ ಈ ಕಾರಣದಿಂದಾಗಿ ವಿದ್ಯುತ್ ವ್ಯತ್ಯಯ ಉಂಟಾದರೆ ಮಳೆಗಾಲ ಕಳೆದು ಗ್ರಾಮಗಳಿಗೆ ತೆರಳುವ ಹಳ್ಳಗಳಲ್ಲಿ ಪ್ರವಾಹ ಕಡಿಮೆಯಾಗುವ ವರೆಗೂ ಈ ಕಂಬಗಳನ್ನು ಬದಲಾಯಿಸಲು, ತುಂಡಾದ ವಿದ್ಯುತ್ ತಂತಿಯನ್ನು ಸರಿಪಡಿಸಲು ಯಾರೂ ಆಗಮಿಸುವುದಿಲ್ಲ.
ಮುರಿದು ಬಿದ್ದ ವಿದ್ಯುತ್ ಕಂಬಗಳನ್ನು ಬದಲಾಯಿಸಲು ಹೆಸ್ಕಾಂ ಇಲಾಖೆಗೆ ಮನವಿ ಮಾಡಿಕೊಂಡರೂ ಬೆಲೆ ಸಿಗುತ್ತಿಲ್ಲ. ಊರಿಗೆ ತೆರಳುವ ಮಾರ್ಗ ಮಧ್ಯದ ಜಲಗದ್ದೆ ಹಳ್ಳ ಉಕ್ಕಿ ಹರಿಯುವ ಕಾರಣ  ಹೆಸ್ಕಾಂ ಇಲಾಖೆ ಹೊಸ ಕಂಬಗಳನ್ನು ಕಳಿಸಿದರೂ ವಾಹನವನ್ನು ಹಳ್ಳ ದಾಟಿಸಲಾಗದೇ ಕೈಚೆಲ್ಲುತ್ತಾರೆ. ಇದು ಕಳೆದ ನಾಲ್ಕೈದು ವರ್ಷಗಳಿಂದ ಪ್ರತಿ ಮಳೆಗಾಲದಲ್ಲಿ ಮರುಕಳಿಸುತ್ತಿರುವ ಸಮಸ್ಯೆಯಾಗಿದೆ. ಬೇಸಿಗೆಯಲ್ಲೂ ವಿದ್ಯುತ್ ವೋಲ್ಟೇಜ್ ಸಮಸ್ಯೆ ತೀವ್ರವಾಗಿದೆ. ಸಿಂಗಲ್ ಫೇಸ್ ಗಿಂತ ಹೆಚ್ಚಿನ ವಿದ್ಯುತ್ ಬಂದಿದ್ದೇ ಇಲ್ಲ. ಇದರಿಂದಾಗಿ ರೈತಾಪಿ ವರ್ಗ ಹೈರಾಣಾಗಿದೆ. ತಮ್ಮ ಬೆಳೆಗಳಿಗೆ ನೀರುಣಿಸಲು ಸಾಧ್ಯವಾಗದ ಸ್ಥಿತಿಯಲ್ಲಿದ್ದಾರೆ. ಮನೆಯಲ್ಲಿ ಮಿಕ್ಸರ್‌ಗಳಿದ್ದರೂ ಅವುಗಳ ಬಳಕೆಗೆ ಸಿಂಗಲ್ ಫೇಸ್ ವಿದ್ಯುತ್ ಸಾಕಾಗುವುದಿಲ್ಲ. ಹೆಸ್ಕಾಂ ಇಲಾಖೆಗೆ ಹಾಗೂ ರಸ್ತೆ ಸರಿಪಡಿಸದ ಜನಪ್ರತಿನಿಧಿಗಳಿಗೆ ಸಾರ್ವಜನಿಕರು ಹಿಡಿಶಾಪ ಹಾಕಿ ಸುಸ್ತಾಗಿದ್ದಾರೆ.
(ತಲೆ ಹೊರೆಯೇ ಅನಿವಾರ್ಯ)
ಈ ಗ್ರಾಮಗಳ ವ್ಯಾಪ್ತಿಯಲ್ಲಿ ಕಿರಿಯ ಪ್ರಾಥಮಿಕ ಶಾಲೆಯೊಂದಿತ್ತು. ಆದರೆ ರಸ್ತೆ ದುರವಸ್ಥೆಯ ಕಾರಣ ಈ ಶಾಲೆಗೆ ಶಿಕ್ಷಕರು ಆಗಮಿಸುವುದು ದುಸ್ತರವಾಗುತ್ತಿತ್ತು. ಮಕ್ಕಳ ಸಂಖ್ಯೆಯೂ ಕಡಿಮೆಯಿದ್ದ ಕಾರಣ ಕಿರಿಯ ಪ್ರಾಥಮಿಕ ಶಾಲೆಯನ್ನು ಮುಚ್ಚಲಾಗಿದೆ. ಇದೀಗ ಅನಿವಾರ್ಯವಾಗಿ 6 ಕಿ.ಮಿ ದೂರದ ರಾಗಿಹೊಸಳ್ಳಿ ಶಾಲೆಯನ್ನು ಅವಲಂಬಿಸುವುದು ಅನಿವಾರ್ಯವಾಗಿದೆ. ಇಲ್ಲವಾದಲ್ಲಿ 6 ಕಿ.ಮಿ ದೂರದ ಬೆಣಗಾಂವ್ ಹಿರಿಯ ಪ್ರಾಥಮಿಕ ಶಾಲೆಗೆ ತೆರಳಬೇಕು. ಪ್ರೌಢಶಾಲೆಗೆ ಹೋಗಬೇಕೆಂದರೆ ಕನಿಷ್ಟ 8 ಕಿ.ಮಿ ಸಾಗಲೇಬೇಕು. 8 ಕಿ.ಮಿ ದೂರದಲ್ಲಿರುವ ಬಂಡಲದ ಪ್ರೌಢಶಾಲೆ ಅಥವಾ 13 ಕಿ.ಮಿ ದೂರದಲ್ಲಿರುವ ದೇವನಳ್ಳಿಯ ಪ್ರೌಢಶಾಲೆಗೆ ತೆರಳಬೇಕಾದ ದುಸ್ಥಿತಿ ಈ ಗ್ರಾಮಗಳ ಮಕ್ಕಳದ್ದಾಗಿದೆ. ಮಳೆಗಾಲದಲ್ಲಿ ಉಕ್ಕೇರುವ ಹಳ್ಳ ದಾಟಲು ಯತ್ನಿಸಿ ಮಕ್ಕಳು ನೀರುಪಾಲಾಗುವ ಸಾಧ್ಯತೆಗೂ ತೀವ್ರವಾಗಿದೆ. ಈ ಬವಣೆಯನ್ನು ತಪ್ಪಿಸಬೇಕು, ಮಕ್ಕಳಿವೆ ವಿದ್ಯಾಭ್ಯಾಸ ನೀಡಬೇಕೆನ್ನುವ ಕಾರಣಕ್ಕಾಗಿ ಸುತ್ತಮುತ್ತಲ ಗ್ರಾಮಗಳ ಗ್ರಾಮಸ್ಥರು, ಸಂಬಂಧಿಕರ ಮನೆಗಳಲ್ಲಿಯೋ, ಪರಿಚಯಸ್ತರ ಮನೆಯಲ್ಲಿಯೋ ಮಕ್ಕಳನ್ನು ಬಿಟ್ಟು ಶಾಲೆ, ಪ್ರೌಢಶಾಲೆಗಳೀಗೆ ಕಳಿಸುತ್ತಿದ್ದಾರೆ.
ರಾಗಿಹೊಸಳ್ಳಿಯಲ್ಲಿ ಪೋಸ್ಟ್ ಇದೆ. ಇಲ್ಲಿ ಕೆಲಸ ಮಾಡುವ ಪೋಸ್ಟ್ ಮನ್ ಒಳ್ಳೆಯವರು. ಹೇಗಾದರೂ ಮಾಡಿ ಪತ್ರಗಳನ್ನು ಸಂಬಂಧಪಟ್ಟವರಿಗೆ ತಲುಪಿಸಬೇಕೆಂದು ಪ್ರಯತ್ನಿಸುತ್ತಾರೆ. ಆದರೆ ಅಸಮರ್ಪಕ ರಸ್ತೆ, ಮಳೆಗಾಲದಲ್ಲಿ ಉಕ್ಕೇರುವ ಹಳ್ಳ ಪೋಸ್ಟ್‌ಮನ್ ಗಳಿಗೂ ಸಮಸ್ಯೆಯನ್ನು ಒಡ್ಡುತ್ತಿದೆ. ಮಾಸಾಶನ, ಪತ್ರಗಳು ಸೇರಿದಂತೆ ತ್ವರಿತವಾಗಿ ವಿಲೇವಾರಿ ಮಾಡಬೇಕಾದ ಪತ್ರಗಳನ್ನು ನಿಗದಿತ ಸ್ಥಳಕ್ಕೆ ತಲುಪಿಬೇಕೆಂದರೆ ಈ ಊರಿನ ರಸ್ತೆಗಳು ಹಾಳಾಗಿರುತ್ತವೆ. ಇಲ್ಲವೇ ರಸ್ತೆ ಮಧ್ಯದಲ್ಲಿ ಮರಗಳು ಉರುಳಿ ಬಿದ್ದಿರುತ್ತವೆ. ಮಳೆಗಾಲದಲ್ಲಿ ಹಳ್ಳದಾಟುವುದು ಅಸಾಧ್ಯ ಎನ್ನುವಂತಾಗಿದೆ. ಹೀಗಾಗಿ ಅನಿವಾರ್ಯ ಸಂದರ್ಭಗಳಲ್ಲಿ ಪತ್ರಗಳು ನಿಗದಿತ ಸ್ಥಳ ತಲುಪಲು ವಿಳಂಬವಾಗಿದ್ದೂ ಇದೆ.
(ಸ್ಥಳೀಯರೇ ಮಾಡಿಕೊಂಡ ಕಾಲುಸಂಕ)
ಎಲ್ಲ ಸಮಸ್ಯೆಗಳಿಗೆ ಮೂಲ ಕಾರಣವಾಗಿರುವ ರಸ್ತೆಯನ್ನು ಸರಿಪಡಿಸಬೇಕು. 7 ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಜಲಗದ್ದೆ ಹಳ್ಳಕ್ಕೆ ಸೇತುವೆ ನಿರ್ಮಾಣ ಮಾಡಬೇಕು. ತನ್ಮೂಲಕ ಈಗ ಉಂಟಾಗುತ್ತಿರುವ ಶಿಕ್ಷಣ, ವಿದ್ಯುತ್, ಪಡಿತರ, ಬ್ಯಾಂಕ್, ಪೋಸ್ಟ್ ಈ ಮುಂತಾದ ಎಲ್ಲ ಸಮಸ್ಯೆಗಳಿಗೂ ಪೂರ್ಣವಿರಾಮ ಹಾಕಬೇಕು ಎನ್ನುವುದು ಸ್ಥಳೀಯರ ಒತ್ತಾಯವಾಗಿದೆ. ಜನಪ್ರತಿನಿಧಿಗಳು ಈ ಸಮಸ್ಯೆಗೆ ಸ್ಪಂದಿಸುತ್ತಾರೆಯೇ ಎಂಬುದನ್ನು ಕಾದು ನೋಡಬೇಕಾಗುತ್ತದೆ.

***

ರಸ್ತೆ ಸಮಸ್ಯೆಯ ಕಾರಣ ಕೆಲವೊಮ್ಮೆ 50ಕೆ.ಜಿ.ಗೂ ಅಧಿಕ ಭಾರದ ವಸ್ತುಗಳನ್ನು ತಲೆಯ ಮೇಲೆ ಹೊತ್ತುಕೊಂಡು ಬರಬೇಕಾಗುತ್ತದೆ. 5-6 ಕಿ.ಮಿ ನಡೆದು ಹಳ್ಳಗಳನ್ನು ದಾಟಿ, ಕಾಡಿನ ದಾರಿಯಲ್ಲಿ ಬರಬೇಕೆಂದರೆ ಹರಸಾಹಸವನ್ನೇ ಮಾಡಬೇಕು. ಸುತ್ತಮುತ್ತಲ ಊರುಗಳಿಗೆ ಅಗತ್ಯ ವಸ್ತುಗಳು ಲಭ್ಯವಾಗುವ ರಾಗಿಹೊಸಳ್ಳಿಗೆ ಮಳೆಗಾಲದಲ್ಲಿ ಹೋಗುವುದು ಬಹು ಕಷ್ಟದ ಕೆಲಸ
ಗಣಪತಿ ಮರಾಠಿ
ಯಡ್ಲಮನೆ

***

(ಇಂತಹ ರಸ್ತೆಗಳು ಇನ್ನೂ ಇದೆ..)
ಬೇಸಿಗೆಯಲ್ಲೂ ನಮ್ಮೂರಿನಲ್ಲಿ ವಿದ್ಯುತ್ ಸಮಸ್ಯೆ ಪರಿಹಾರವಾಗುವುದಿಲ್ಲ. ಯಾವಾಗಲೂ ಸಿಂಗಲ್ ಫೇಸ್ ವಿದ್ಯುತ್ ಇರುತ್ತದೆ. ಮಿಕ್ಸರ್ ಕೂಡ ಕೆಲಸ ಮಾಡುವುದಿಲ್ಲ. ಮಳೆಗಾಲದಲ್ಲಿ ಆರು ತಿಂಗಳುಗಳ ಕಾಲ ವಿದ್ಯುತ್ ನಾಪತ್ತೆ ಎನ್ನುವಂತಹ ಪರಿಸ್ಥಿತಿಯಿದೆ. ಕೂಡಲೇ ಈ ಸಮಸ್ಯೆಗಳನ್ನು ಪರಿಹಾರ ಮಾಡಬೇಕಾದ ಅಗತ್ಯವಿದೆ.
ಮಂಜುನಾಥ ಹೆಗಡೆ
ಗಾಡನಗದ್ದೆ

***

ಬಂಡಲ ಬವಣೆ
ಭಾಗ-3

ತಾಲೂಕಿನ ಬಂಡಲ ಪಂಚಾಯತದ ಹೆಬ್ರೆ ಗ್ರಾಮದ ಜಲಗದ್ದೆ ಮಜರೆಯಲ್ಲಿ ಆರೋಗ್ಯ ಸಮಸ್ಯೆ ತೀವ್ರವಾಗಿದೆ. ಇಲ್ಲಿನ ಜನಸಾಮಾನ್ಯರು ಖಾಯಿಲೆ ಬಿದ್ದರೆ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯಲು ಹರಸಾಹಸ ಪಡಬೇಕಾದಂತಹ ಸ್ಥಿತಿಯಿದೆ.
ಹೆಬ್ರೆ ಗ್ರಾಮದ ವ್ಯಾಪ್ತಿಯ ಸಂಪೆಗದ್ದೆ, ಗಾಡನಗದ್ದೆ, ಹೊಸಹಾಡನಗದ್ದೆ, ಯಡ್ಲಮನೆ, ದೇವಕಣಿ, ಬಿಳಿಜಡ್ಡಿ, ಹಡನಗದ್ದೆ ಈ ಎಲ್ಲ ಹಳ್ಳಿಗಳಲ್ಲಿ ವೃದ್ಧರು, ಖಾಯಿಲೆ ಪೀಡಿತರಿದ್ದಾರೆ. 40-50 ವೃದ್ಧರು ಹಾಗೂ 15-20ರಷ್ಟು ಕಾಯಿಲೆ ಪೀಡಿತರು ಇದ್ದಾರೆ. ಅಂಧರು, ಪಾರ್ಕಿನ್‌ಸನ್ ಖಾಯಿಲೆ ಪೀಡಿತರು, ಅಸ್ತಮಾ, ಸೇರಿದಂತೆ ಹಲವಾರು ಖಾಯಿಲೆಗಳಿಂದ ಬಳಲುತ್ತಿರುವವರೂ ಇದ್ದಾರೆ. ವಯೋಸಹಜ ಖಾಯಿಲೆಗಳನ್ನು ಅನುಭವಿಸುತ್ತಿರುವವರೂ ಹಲವು ಜನ. ಆದರೆ ಇವರನ್ನು ಆಸ್ಪತ್ರೆಗೆ ಕೊಂಡೊಯ್ಯುವುದೆಂದರೆ ಸಾಹಸ ಮಾಡಿದಂತೆಯೇ.
ಈ ಎಲ್ಲ ಊರುಗಳಿಗೆ ಹತ್ತಿರದ ಆಸ್ಪತ್ರೆಯೆಂದರೆ ಜಾನ್ಮನೆಯ ಪ್ರಾಥಮಿಕ ಆರೋಗ್ಯ ಕೇಂದ್ರ. ಜಾನ್ಮನೆಗೆ 20 ಕಿ.ಮಿ ಪ್ರಯಾಣ ಮಾಡಬೇಕು. ಇನ್ನುಳಿದಂತೆ ಹೆಗಡೇಕಟ್ಟಾ ಅಥವಾ ಕತಗಾಲಕ್ಕೆ ಪ್ರಯಾಣ ಮಾಡಬೇಕು. ಕತಗಾಲಕ್ಕೆ ಹಾಗೂ ಹೆಗಡೇಕಟ್ಟಾದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ತೆರಳಬೇಕೆಂದರೆ ಕನಿಷ್ಟ 25 ಕಿ.ಮಿ ಪ್ರಯಾಣ ಮಾಡುವುದು ಅನಿವಾರ್ಯ. ತೀವ್ರ ಪ್ರಮಾಣದ ಖಾಯಿಲೆಗಳಾಗಿದ್ದರೆ 40 ಕಿ.ಮಿ ದೂರದಲ್ಲಿರುವ ಶಿರಸಿ ಅಥವಾ ಕುಮಟಾಕ್ಕೆ ಹೋಗಿ ಬರಲೇಬೇಕಾದ ಅನಿವಾರ್ಯತೆಯಿದೆ. ಇದರಿಂದಾಗಿ ಸ್ಥಳೀಯರು ಹೈರಾಣಾಗಿದ್ದಾರೆ.
(ಬರೀ ಕಾಡಿನ ದಾರಿ)
ಮಳೆಗಾಲ ಬಂತೆಂದರೆ ಈ ಊರುಗಳ ಜನಸಾಮಾನ್ಯರು, ವೃದ್ಧರು, ಖಾಯಿಲೆ ಪೀಡಿತರು ಜೀವಭಯದಿಂದ ಬದುಕಬೇಕಾಗುತ್ತದೆ. ಮಳೆಗಾಲದಲ್ಲಿ ಕಾಡುವ ಜ್ವರ ಮುಂತಾದ ಖಾಯಿಲೆಗಳಿಗೆ ಔಷಧಿ ಪಡೆಯಬೇಕೆಂದರೆ ಜಾನ್ಮನೆಗೋ, ಹೆಗಡೇಕಟ್ಟಾಕ್ಕೋ, ಶಿರಸಿಗೋ ಹೋಗಿ ಬರಬೇಕು. ಅಸಮರ್ಪಕ ರಸ್ತೆ ಸೌಕರ್ಯದ ಕಾರಣ ಮಳೆಗಾಲದಲ್ಲಿ ಈ ಊರುಗಳಿಗೆ ಯಾವುದೇ ವಾಹನಗಳೂ ಆಗಮಿಸುವುದಿಲ್ಲ. ಜಲಗದ್ದೆ ಹಳ್ಳ ಉಕ್ಕಿ ಹರಿಯುವ ಕಾರಣ ಊರಿಗೂ ಹೊರ ಜಗತ್ತಿಗೂ ಸಂಪರ್ಕ ಕಡಿದುಹೋಗುತ್ತದೆ. ಅಲ್ಲದೇ ದಟ್ಟಡವಿಯಲ್ಲಿ ರಸ್ತೆಗೆ ಅಡ್ಡಲಾಗಿ ಮರಗಳು ಉರುಳಿಬಿಳುತ್ತಿರುತ್ತದೆ. ಖಾಯಿಲೆ ಪೀಡಿತರನ್ನು ಇಂತಹ ಸಂದರ್ಭದಲ್ಲಿ ಕಂಬಳಿಯಲ್ಲಿ ಹೊತ್ತುಕೊಂಡು 4-5 ಕಿ.ಮಿ ನಡೆದು ಮುಖ್ಯ ರಸ್ತೆಗೆ ಬಂದು ಅಲ್ಲಿ ವಾಹನಗಳಿಗೆ ಕಾದು ನಂತರ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕಾದಂತಹ ದುಸ್ಥಿತಿ ಈ ಗ್ರಾಮಗಳಲ್ಲಿ ಇದೆ. ಬೇಸಿಗೆಯಲ್ಲಿಯೂ ಈ ಗ್ರಾಮಗಳ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಯೇನೂ ಇಲ್ಲ.
ಯಡ್ಲಮನೆ ಎಂಬಲ್ಲಿ ಒಂದೇ ಮನೆಯಲ್ಲಿ ಮೂವರು ಅಂಧರಿದ್ದಾರೆ. ತಂದೆ ಹಾಗೂ ಇಬ್ಬರು ಹೆಣ್ಣುಮಕ್ಕಳಿಗೆ ಕಣ್ಣು ಕಾಣಿಸುವುದಿಲ್ಲ. ಸರ್ಕಾರ ಇವರಿಗೆ ಅಂಗವಿಕಲರ ಮಾಸಾಶನವನ್ನು ನೀಡುತ್ತಿದೆ. ಆದರೆ ಇದನ್ನು ತೆಗೆದುಕೊಂಡು ಬರುವುದೇ ಪ್ರಾಯಾಸದ ಕೆಲಸವಾಗಿದೆ. ಮಾಸಾಶನ ಪಡೆಯಲು ಕನಿಷ್ಟ 4-5 ಕಿ.ಮಿ ನಡೆದುಕೊಂಡು ಹೋಗುವುದು ಅನಿವಾರ್ಯ. ಸರ್ಕಾರಕ್ಕೆ, ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತ, ರಸ್ತೆಯಲ್ಲಿ ಏಳುತ್ತ-ಬೀಳುತ್ತ ಮಾಸಾಶವನ್ನು ತೆಗೆದುಕೊಂಡು ಬರುತ್ತಿದ್ದಾರೆ.
ಈ ಗ್ರಾಮಗಳಲ್ಲಿನ ವೃದ್ಧರು ಹಾಗೂ ಖಾಯಿಲೆಪೀಡಿತರ ಕಡೆಗೆ ಜನಪ್ರತಿನಿಧಿಗಳು, ಆಳರಸರು ಕನಿಕರ ತೋರುತ್ತಿಲ್ಲ ಎನ್ನುವ ಆರೋಪ ವ್ಯಾಪಕವಾಗಿದೆ. ಇಷ್ಟೆಲ್ಲ ಸಮಸ್ಯೆಗಳಿದ್ದರೂ ರಸ್ತೆ ಸುಧಾರಣೆಗೆ ಮುಂದಾಗುತ್ತಿಲ್ಲ, ಜಲಗದ್ದೆ ಹಳ್ಳಕ್ಕೆ ಸೇತುವೆ ನಿರ್ಮಾಣ ಮಾಡುತ್ತಿಲ್ಲ ಎಂದು ಹಿಡಿಶಾಪ ಹಾಕುತ್ತಿದ್ದಾರೆ. ಸರ್ಕಾರ ಆರೋಗ್ಯ ಭಾಗ್ಯವನ್ನು ಘೋಷಣೆ ಮಾಡಿದೆ. ಆದರೆ ಈ ಗ್ರಾಮಸ್ಥರ ಪಾಲಿಗೆ ಈ ಭಾಗ್ಯ ಸಿಗುತ್ತಿಲ್ಲ. ಮುಂದುವರಿದ ಕ್ಷೇತ್ರದ ಹಿಂದುಳಿದ ಪ್ರದೇಶದಲ್ಲಿ ಈ ಜನರಿದ್ದಾರೆ. ಸರ್ಕಾರ ಈ ಕುರಿತು ತ್ವರಿತವಾಗಿ ಕ್ರಮಕೈಗೊಳ್ಳಬೇಕಾಗಿದೆ.
(ವಾಹನ ರಿಪೇರಿ ಸ್ಥಳೀಯರದ್ದೇ..)
ಈ ಭಾಗದಲ್ಲಿ ಬೆಣ್ಣೆಹೊಳೆ ಹಾದು ಹೋಗಿದೆ. ಬೆಣ್ಣೆಹೊಳೆಯನ್ನು ದಾಟಲು ಸ್ಥಳೀಯರು ಕಾಲು ಸಂಕವನ್ನು ಮಾಡಿಕೊಂಡ್ಡಿದ್ದಾರೆ. ಮರ, ಬಿದಿರು, ಕಾಡುಬಳ್ಳಿಗಳಿಂದ ನಿರ್ಮಾಣ ಮಾಡಿರುವ ಕಾಲುಸಂಕ ಒಂದು ವರ್ಷದ ಅವಧಿಯಲ್ಲಿ ಹಾಳಾಗಿ ಹೋಗುತ್ತಿದೆ. ಪ್ರತಿ ಸಾರಿ ಮಳೆಗಾಲ ಆರಂಭವಾಗುವ ಮೊದಲು ಮತ್ತೆ ಕಾಲುಸಂಕ ನಿರ್ಮಾಣ ಮಾಡಿಕೊಳ್ಳುತ್ತಾರೆ. ಉಕ್ಕೇರಿ ಹರಿಯುತ್ತಿರುವ ಬೆಣ್ಣೆಹೊಳೆಯ ಸೇತುವೆಯನ್ನು ಈ ಕಾಲುಸಂಕದ ಸಹಾಯದಿಂದ ದಾಟುತ್ತಿದ್ದರೆ ಜೀವ ಕೈಗೆ ಬರುತ್ತದೆ. ಖಾಯಿಲೆ ಪೀಡಿತರನ್ನೂ ಈ ಕಾಲುಸಂಕದ ಮೇಲೆ ಕಂಬಳಿಯಲ್ಲೇ ಹೊತ್ತುಕೊಂಡು ಸಾಗುತ್ತಾರೆ. ಈ ಭಾಗದಲ್ಲಿ ಇಷ್ಟೆಲ್ಲ ಸಮಸ್ಯೆಗಳಿದ್ದರೂ ಜನಪ್ರತಿನಿಧಿಗಳು ಇವರ ಸಹಾಯಕ್ಕೆ ಬರುತ್ತುಲ್ಲ. ಇದು ಆಡಳಿತ ಯಂತ್ರ ಜಡ್ಡುಗಟ್ಟಿರುವುದಕ್ಕೆ ಸ್ಪಷ್ಟ ನಿದರ್ಶನ ಎನ್ನಬಹುದಾಗಿದೆ.

***

ನಮ್ಮ ಭಾಗದಲ್ಲಿ ವೃದ್ಧರು ಹಾಗೂ ಖಾಯಿಲೆ ಪೀಡಿತರ ಸಂಖ್ಯೆ ಸಾಕಷ್ಟಿದೆ. ಮಳೆಗಾಲ ಬಂತೆಂದರೆ ಭಯವಾಗುತ್ತದೆ. ಮಳೆಗಾಲದಲ್ಲಿ ಖಾಯಿಲೆಯಿಂದ ಹಾಸಿಗೆ ಹಿಡಿದರೆ ಔಷಧಿ ಮಾಡಿಸೋಣ, ಆಸ್ಪತ್ರೆಗೆ ಹೋಗೋಣ ಎಂದರೂ ಸಾಧ್ಯವಾಗುವುದಿಲ್ಲ. ರಸ್ತೆ ಸರಿಯಿಲ್ಲ. ಜಲಗದ್ದೆ, ಬಿಳಿಜಡ್ಡಿ ಹಳ್ಳಗಳಿಗೆ ಸೇತುವೆಯೇ ಇಲ್ಲ. ಉಕ್ಕೇರಿ ಹರಿಯುವ ಹಳ್ಳಗಳನ್ನು ದಾಟಲು ಸಾಧ್ಯವಾಗದೇ ಅಸಹಾಯಕರಾದ ಸನ್ನಿವೇಶ ಎಷ್ಟೋ ಸಾರಿ ಎದುರಾಗಿದೆ. ಕೂಡಲೇ ಸರ್ಕಾರ ಈ ಸಮಸ್ಯೆ ಪರಿಹಾರ ಮಾಡಬೇಕಿದೆ.
ಮಾಬ್ಲೇಶ್ವರ ಹೆಗಡೆ
ಬಿಳಿಜಡ್ಡಿ

***
(ರಸ್ತೆ ಮಧ್ಯ ಮರ ಬೀಳುವುದು ಇಲ್ಲಿ ಕಾಮನ್ನು)

ನಮ್ಮ ಭಾಗದ ಜನಪ್ರತಿನಿಧಿಗಳು ಚುನಾವಣೆ ಬಂತೆಂದರೆ ಸಾಕು ನಮ್ಮೂರಿನ ಕಡೆಗೆ ಮುಖ ಮಾಡುತ್ತಾರೆ. ಉಳಿದ ಸಮಯದಲ್ಲಿ ನಮ್ಮ ಸಮಸ್ಯೆಗಳು ಅವರ ಕಣ್ಣಿಕೆ ಕಾಣಿಸುವುದೇ ಇಲ್ಲ. ಸ್ಥಳೀಯರಿಂದ ಹಿಡಿದು ಎಲ್ಲ ಹಂತದ ಜನಪ್ರತಿನಿಧಿಗಳಿಗೆ ನಾವು ಮನವಿಗಳ ಮೇಲೆ ಮನವಿ ಸಲ್ಲಿಸುತ್ತಲೇ ಇದ್ದೇವೆ. ಪ್ರತಿಯೊಬ್ಬರೂ ಭರವಸೆ ನೀಡುತ್ತಲೇ ಇದ್ದಾರೆ. ನಮ್ಮ ಭಾಗದ ಸಮಸ್ಯೆ ಸಮಸ್ಯೆಯಾಗಿಯೇ ಉಳಿದಿದೆ.
ರತ್ನಾಕರ
ಯಡ್ಲಮನೆ

****

ಬಂಡಲ ಬವಣೆ
ಭಾಗ-4

ತಾಲೂಕಿನ ಬಂಡಲ ಪಂಚಾಯತದ ಜಲಗದ್ದೆಯ ಸುತ್ತಮುತ್ತಲ ಪ್ರದೇಶಗಳ ಸಮಸ್ಯೆಗಳು ಬಗೆದಷ್ಟೂ ಹೊರಬೀಳುತ್ತಿವೆ. ದೂರವಾಣಿ ಸಮಸ್ಯೆಯೂ ಈ ಗ್ರಾಮಗಳನ್ನು ಜ್ವಲಂತವಾಗಿ ಕಾಡುತ್ತಿದೆ. ಸಮಸ್ಯೆ ಪರಿಹಾರಕ್ಕಾಗಿ ಮನವಿಗಳ ಮೇಲೆ ಮನವಿ ಸಲ್ಲಿಸಿ ಸಾಕಾಗಿದೆ.
ಜಲಗದ್ದೆ ಗ್ರಾಮದ ಸುತ್ತಮುತ್ತಲ 7 ಗ್ರಾಮಗಳಲ್ಲಿ ಒಂದೋ ಎರಡೋ ಮನೆಗೆ ದೂರವಾಣಿ ಸಂಪರ್ಕ ಕಲ್ಪಿಸಲಾಗಿದೆ. ಉಳಿದ ಹಲವಾರು ಮನೆಗಳವರು ದೂರವಾಣಿ ಸಂಪರ್ಕ ಕಲ್ಪಿಸಬೇಕೆಂದು ಮನವಿ ಸಲ್ಲಿಸಿ ಸುಸ್ತಾಗಿದ್ದಾರೆ. ಆದರೆ ಈ ಮನವಿಗೆ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಬಂಡಲದಲ್ಲಿ ಬಿಎಸ್‌ಎನ್‌ಎಲ್ ಮೊಬೈಲ್ ಟವರ್ ಇದೆ. ಆದರೆ ಮೊಬೈಲ್ ಸಿಗ್ನಲ್ ಈ ಊರುಗಳಲ್ಲಿ ಸಿಗುವುದಿಲ್ಲ. ಕೆಲವು ಕಡೆಗಳಲ್ಲಿ ಮರದ ಮೇಲೆ ಏರಿ ನಿಂತರೆ ಸಿಗ್ನಲ್ ಸಿಗುತ್ತದೆ. ಒಂದಿಬ್ಬರು ಮರವನ್ನೇರಿ ಮೊಬೈಲಿನಲ್ಲಿ ಮಾತನಾಡುವ ಸಾಹಸವನ್ನೂ ಮಾಡಿದ್ದಾರೆ. ಈ ಭಾಗದ ದೂರವಾಣಿ ಸಮಸ್ಯೆ ಪರಿಹಾರ ಮಾಡಬೇಕು, ಮನವಿ ಸಲ್ಲಿಸಿದವರಿಗೆ ಸ್ಥಿರ ದೂರವಾಣಿ ಸಂಪರ್ಕ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
(ಬದುಕ ಕದಡಿದೆ ಬೆಣ್ಣೆಹೊಳೆ)
ಸಂಪೆಗದ್ದೆ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ವಾಹನ ಕೆಟ್ಟು ನಿಂತರೆ ಅದನ್ನು ಸರಿಪಡಿಸಲು ಯಾರೂ ಆಗಮಿಸುವುದಿಲ್ಲ. ಬೈಕ್ ಹಾಳಾದರೆ, ಪಂಚರ್ ಆದರೆ 6-7 ಕಿ.ಮಿ ದೂರದಿಂದ ವಾಹನ ಸರಿಪಡಿಸುವವರನ್ನು ಕರೆದುಕೊಂಡು ಬರಬೇಕು. ಸಮಯಕ್ಕೆ ಸರಿಯಾಗಿ ಅವರು ಸಿಗುವುದೂ ಇಲ್ಲ. ಇದರಿಂದಾಗಿ ಸ್ಥಳೀಯರೇ ವಾಹನಗಳನ್ನು ಕಷ್ಟಪಟ್ಟು ಸರಿಪಡಿಸಿಕೊಳ್ಳಲು ಆರಂಭಿಸಿದ್ದಾರೆ. ವಾಹನಗಳು ಹಾಳಾದಾಗ ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುವುದು ಸರ್ವೇಸಾಮಾನ್ಯ ಎನ್ನುವಂತಾಗಿದೆ.
ತಾಲೂಕಿನ ಬಂಡಲ ಪಂಚಾಯತ ವ್ಯಾಪ್ತಿಯ ಹೆಬ್ರೆ ಗ್ರಾಮಕ್ಕೆ 1995-96ರಿಂದ 16,11,300 ರು. ವೆಚ್ಚದಲ್ಲಿ 56 ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗಿದೆ. ಆದರೆ ಜಲಗದ್ದೆ ಮಜರೆಯ 7 ಗ್ರಾಮಗಳಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿಯನ್ನು ಕೈಗೊಳ್ಳಲಾಗಿಲ್ಲ. ಜಲಗದ್ದೆ ಮಜರೆಗೆ ಸಂಬಂಧಿಸಿದಂತೆ 2002-03ರಲ್ಲಿ ಜಲಗದ್ದೆ ಮೇಲಿನಕೇರಿ ರಸ್ತೆ ಸುಧಾರಣೆಗೆ ಸಂಬಂಧಿಸಿದಂತೆ 6250 ರು., 2011-12ರಲ್ಲಿ ಜಲಗದ್ದೆಯಲ್ಲಿ ಜಲಗದ್ದೆ ಕೇರಿ ಪಾದಚಾರಿ ರಸ್ತೆ ನಿರ್ಮಾಣಕ್ಕೆ 30,000 ರು., 2011-12ರಲ್ಲಿ ಜಲಗದ್ದೆ ಕೇರಿ ಪಾದಚಾರಿ ರಸ್ತೆ ನಿರ್ಮಾಣಕ್ಕೆ ಹೆಚ್ಚುವರಿ 40,000 ರು., 2012-13ರಲ್ಲಿ ಜಲಗದ್ದೆ ಕೇರಿ ರಸ್ತೆ ನಿರ್ಮಾಣಕ್ಕೆ 30,000 ರು., 2013-14ರಲ್ಲಿ ಜಲಗದ್ದೆ ರಸ್ತೆ ಸುಧಾರಣೆಗೆ ಮುಂದುವರದಿದ ಕಾಮಗಾರಿಯ ಹೆಸರಿನಲ್ಲಿ 10,000 ರು. ಮಂಜೂರು ಮಾಡಿ ಕಾಮಗಾರಿಯನ್ನು ಕೈಗೊಳ್ಳಲಾಗಿದೆ. ಜಲಗದ್ದೆ ಮಜರೆಯ ಅಡಿಯಲ್ಲಿ ಜಲಗದ್ದೆಯನ್ನು ಹೊರತುಪಡಿಸಿ ಸಂಪೆಗದ್ದೆ, ಹಡನಗದ್ದೆ, ಬಿಳಿಜಡ್ಡಿ, ದೇವಕಣಿ, ಗಾಡನಗದ್ದೆ, ಯಡ್ಲಮನೆ ಈ ಊರುಗಳು ಬರುತ್ತವೆ. ಆದರೆ ಈ ಊರುಗಳಿಗೆ ತೆರಳುವ ರಸ್ತೆಗಳಿಗೆ ಒಂದೇ ಒಂದು ರು. ಖರ್ಚು ಮಾಡಲಾಗಿಲ್ಲ ಎನ್ನುವುದನ್ನು ಬಂಡಲ ಗ್ರಾಮ ಪಂಚಾಯತದ ದಾಖಲೆಗಳೇ ಮಾಹಿತಿ ನೀಡುತ್ತವೆ.
ಅಲ್ಲದೇ ಪಂಚಾಯತ ವ್ಯಾಪ್ತಿಯ ಯಟಗಾರ ಹಾಗೂ ಮುಂಡಗಾರಗಳಲ್ಲಿ ಜಿಲ್ಲಾ ಪಂಚಾಯತ ಹಾಗೂ ತಾಲೂಕಾ ಪಂಚಾಯತ ಅನುದಾನದ ಅಡಿಯಲ್ಲಿ ಕಾಲುಸಂಕ, ಕುಡಿಯುವ ನೀರು, ಝರಿ ನೀರು ಯೋಜನೆ, ರಸ್ತೆ ಸುಧಾರಣೆ, ರಸ್ತೆಯನ್ನು ಮೇಲ್ದರ್ಜೆಗೆ ಏರಿಸುವುದೂ ಸೇರಿದಂತೆ ಹಲವಾರು ಯೋಜನೆಗಳನ್ನು ಕೈಗೊಳ್ಳಲಾಗಿದೆ. ಆದರೆ ಸಂಪೆಗದ್ದೆ ಹಾಗೂ ಸುತ್ತಮುತ್ತಲ ಊರುಗಳಿಗೆ ಯಾವುದೇ ಅಭಿವೃದ್ಧಿ ಕಾಮಗಾರಿಯನ್ನು ಕೈಗೊಳ್ಳದೇ ಇರುವುದನ್ನು ಗಮನಿಸಿದರೆ ಈ ಭಾಗದ ಜನಪ್ರತಿನಿಧಿಗಳು ಉದ್ದೇಶಪೂರ್ವಕವಾಗಿ ತಾರತಮ್ಯ ಮಾಡುತ್ತಿರುವುದು ಸ್ಪಷ್ಟವಾಗಿದೆ. ಈ ಗ್ರಾಮಗಳಲ್ಲಿನ ಸಮಸ್ಯೆಗಳ ಕುರಿತು ಸರಣಿ ಲೇಖನ ಪ್ರಕಟಿಸಲು ಆರಂಭಿಸಿದ ತಕ್ಷಣ ಎಚ್ಚೆತ್ತುಕೊಂಡಂತೆ ನಟನೆ ಮಾಡುತ್ತಿರುವ ಜನಪ್ರತಿನಿಧಿಗಳು ಇದೀಗ ಹಣ ಬಿಡುಗಡೆಯಾಗಿದೆ ಎಂದು ಹೇಳುತ್ತಿದ್ದಾರೆ.
(ಸ್ಥಳೀಯರ ನಿವಾಸ)
ಇದೀಗ ಪಂಚಾಯತ ವ್ಯಾಪ್ತಿಯ ಸಂಪೆಗದ್ದೆಯ ರಸ್ತೆ ಸುಧಾರಣೆಗೆ 40 ಸಾವಿರ ರು. ಮಂಜೂರಾಗಿದೆ. ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಇಂಜಿನಿಯರ್ ಸ್ಥಳ ಪರಿಶೀಲನೆ ಮಾಡಿಕೊಂಡು ಬಂದಿದ್ದಾರೆ. ಶೀಘ್ರದಲ್ಲಿಯೇ ರಸ್ತೆ ಸುಧಾರಣೆ ಕಾಮಗಾರಿ ಆರಂಭಿಸಲಾಗುತ್ತದೆ ಎಂದೂ ಭರವಸೆ ನೀಡಿದ್ದಾರೆ. ಕಳೆದ ಮೂರ್ನಾಲ್ಕು ವರ್ಷಗಳ ಅವಧಿಯಲ್ಲಿ ಜಲಗದ್ದೆ ಹಳ್ಳದಿಂದ ಸಂಪೆಗದ್ದೆ ರಸ್ತೆ ಸುಧಾರಣೆಗಾಗಿ ಹಣ ಬಿಡುಗಡೆಯಾಗಿತ್ತು. ಜಲಗದ್ದೆ ಹಳ್ಳಕ್ಕೆ ಸೇತುವೆ ನಿರ್ಮಾಣ ಸೇರಿದಂತೆ ಹಲವಾರು ಯೋಜನೆಗಳಿಗೂ ಅನುದಾನ ಬಂದಿತ್ತು. ಆ ಸಂದರ್ಭದಲ್ಲಿ ಸ್ಥಳೀಯ ತಾ.ಪಂ ಸದಸ್ಯರೋರ್ವರು ಸ್ಥಳೀಯರನ್ನು ಎತ್ತಿಕಟ್ಟುವ ಮೂಲಕ ಕಾಮಗಾರಿ ಕೈಗೊಳ್ಳಲು ಅಡ್ಡಗಾಲು ಹಾಕಿದರು. ಪರಿಣಾಮವಾಗಿ ರಸ್ತೆ ಸುಧಾರಣೆಗೆ ಮಂಜೂರಾಗಿದ್ದ ಹಣ ಬೇರೆ ಕಡೆಗೆ ವರ್ಗಾವಣೆಯಾಗಿದೆ ಎಂದು ಸ್ಥಳೀಯರು ಆರೋಪಿಸುತ್ತಾರೆ. ಈ ಸಾರಿ ಬಿಡುಗಡೆಯಾದ ಹಣವನ್ನೂ ಬೇರೆ ಕಡೆಗೆ ವರ್ಗಾವಣೆ ಮಾಡಬಾರದು ಎಂದು ಆಗ್ರಹಿಸುತ್ತಿದ್ದಾರೆ. ಈಗಾಗಲೇ ಬಿಡುಗಡೆಯಾಗಿದೆ ಎಂದು ದಾಖಲೆಯಲ್ಲಿ ತೋರಿಸುವ ಮೊತ್ತ ಊರಿನ ಅಭಿವೃದ್ಧಿಗೆ ಅರೆಕಾಸು ಎಂಬಂತಾಗಿದೆ.
ಜನಪ್ರತಿನಿಧಿಗಳಾದವರು ತಮ್ಮ ಹೊಣೆಗಾರಿಕೆ ಮರೆತು, ಗ್ರಾಮ ಗ್ರಾಮಗಳ ನಡುವೆ ಜನರನ್ನು ಎತ್ತಿಕಟ್ಟಿ ಅಭಿವೃದ್ಧಿಗೆ ಅಡ್ಡಗಾಲು ಹಾಕುತ್ತಿರುವುದು ಶೋಭೆ ತರುವಂತಹ ಕೆಲಸವಲ್ಲ. ಮಾಡಿದ ತಪ್ಪನ್ನು ಮುಚ್ಚಿಕೊಳ್ಳಲು ಜನರನ್ನು ಕರೆಸಿ ಪ್ರತಿಭಟನೆಯನ್ನು ಮಾಡಿಸುವ ಇಂತಹ ಜನಪ್ರತಿನಿಧಿಗಳು ಇನ್ನುಮುಂದಾದರೂ ಎಚ್ಚೆತ್ತುಕೊಳ್ಳುತ್ತಾರೆಯೇ ಎಂಬುದನ್ನು ಕಾದುನೋಡಬೇಕಾಗಿದೆ.

***

(ದುರ್ಬಲ ಕಾಲುಸಂಕದಲ್ಲಿ ದುರ್ಭರ ಪಯಣ)
ಮೂರ್ನಾಲ್ಕು ಸಾರಿ ಜಲಗದ್ದೆ ಹಳ್ಳದಿಂದ ರಸ್ತೆ ಸುಧಾರಣೆಗೆ ಜಿ.ಪಂ ಹಾಗೂ ತಾ.ಪಂ ಅಡಿಯಲ್ಲಿ ಅನುದಾನ ಮಂಜೂರಾಗಿತ್ತು. ಆದರೆ ನಮ್ಮ ಭಾಗದ ಜನಪ್ರತಿನಿಧಿಗಳು ಆ ಅನುದಾನಕ್ಕೆ ಅಡ್ಡಗಾಲು ಹಾಕಿದರು. ಅಭಿವೃದ್ಧಿ ಮಾಡಿದ ಸ್ಥಳದಲ್ಲಿಯೇ ಮತ್ತೆ ಮತ್ತೆ ಅಭಿವೃದ್ಧಿ ಮಾಡುತ್ತ ಕಾಲತಳ್ಳುವ ಜನಪ್ರತಿನಿಧಿಗಳಿ ನಮ್ಮ ಬವಣೆ ಗೊತ್ತಿದ್ದರೂ ಜಾಣಕುರುಡರಂತೆ ವರ್ತನೆ ಮಾಡುತ್ತಿದ್ದಾರೆ.
ಮಂಜುನಾಥ ಭಟ್ಟ



***

ಬಂಡಲ ಬವಣೆ
ಭಾಗ-5


ಬಂಡಲ ಗ್ರಾಮ ಪಂಚಾಯತ ಅಭಿವೃದ್ಧಿ ಕೆಲಸದಲ್ಲಿ ಸಾಕಷ್ಟು ಹಿನ್ನಡೆಯಲ್ಲಿದೆ ಎನ್ನುವುದು ಅಲ್ಲಿಯ ಹಳ್ಳಿಗಳನ್ನು ಗಮನಿಸಿದಾಗ ಗೋಚರಿಸುತ್ತದೆ. ಈ ಪಂಚಾಯತಕ್ಕೆ ಸಂಬಂಧಪಟ್ಟ ಜನಪ್ರತಿನಿಧಿಗಳ ಬದ್ಧತೆಯೂ ಪ್ರಶ್ನಾರ್ಹವಾಗಿದೆ.
ಶಿರಸಿ-ಕುಮಟಾ ರಾಜ್ಯ ಹೆದ್ದಾರಿಯಲ್ಲಿರುವ ಬಂಡಲದ ಒಳ ಹೊಕ್ಕರೆ ಜನಪ್ರತಿನಿಧಿಗಳ ಬಂಢಾರವೇ ಬಯಲಾಗುತ್ತದೆ. ಇಲ್ಲಿಯ ಜನರ ನಿತ್ಯದ ಗೋಳನ್ನು ಆಲಿಸುವವರೇ ಇಲ್ಲ. ಪ್ರತಿಯೊಂದಕ್ಕೂ ಗೋಳಾಡುತ್ತಿರುವ ಜನರ ಬದುಕೇ ಮೂರಾಬಟ್ಟೆಯಾಗಿದೆ. ಪ್ರಾಥಮಿಕ ಸೌಕರ್ಯ ಕಲ್ಪಿಸಲು ಮೀನ-ಮೇಷ ಎಣಿಸುತ್ತಿರುವ ಜನಪ್ರತಿನಿಧಿಗಳು ತಾರತಮ್ಯ ಧೋರಣೆ ಅನುಸರಿಸುತ್ತಿದ್ದಾರೇನೋ ಅನ್ನಿಸಿದರೆ ತಪ್ಪಲ್ಲ. ರಾಜಕೀಯ ಧೋರಣೆಯಿಂದಾಗಿಯೇ ಸಾರ್ವಜನಿಕರು ತಮ್ಮ ಹಕ್ಕಾಗಿರುವ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಪಕ್ಷ ರಾಜಕಾರಣ ಮುಖಕ್ಕೆ ರಾಚುತ್ತದೆ. ಇನ್ನಾದರೂ ಜನಪ್ರತಿನಿಧಿಗಳು ಓಟಿಗಾಗಿ ಕೆಲಸಮಾಡುವ ಪರಿಪಾಠವನ್ನು ಬಿಡಬೇಕಾಗಿದೆ. ಬದಲಾಗಿ ಸಾರ್ವಜನಿಕರ ಹಿತರಕ್ಷಣೆಗೆ ಆದ್ಯತೆ ನೀಡಬೇಕಾಗಿದೆ.
ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಚುನಾವಣೆಯ ನಂತರ ಅಭಿವೃದ್ಧಿಯೇ ತಮ್ಮ ಮೂಲಮಂತ್ರ ಎಂದು ಪ್ರತಿಯೊಂದು ಪಕ್ಷದ ಧುರೀಣರೂ ಹೇಳುತ್ತಾರೆ. ಆದರೆ ವಾಸ್ತವದಲ್ಲಿ ಅದು ಕೇವಲ ಕಣ್ಣೊರೆಸುವ ಹೇಳಿಕೆ ಎನ್ನುವುದಕ್ಕೆ ಪ್ರತಿನಿತ್ಯವೂ ನಿದರ್ಶನ ಸಿಗುತ್ತಲೇ ಇರುತ್ತದೆ. ಇದಕ್ಕೆ ಬಂಡಲ ಪಂಚಾಯತವೊಂದೇ ನಿದರ್ಶನವಲ್ಲ. ಒಬ್ಬ ಪಂಚಾಯತ ಸದಸ್ಯನಿಂದ ಶಾಸಕ, ಸಂಸದ, ಸಚಿವರವರೆಗೂ ಇದೇ ರೀತಿಯ ರಾಜಕೀಯ ಲಾಭ-ಲೆಕ್ಖಾಚಾರದ ಪ್ರಚಾರವನ್ನು ಅಳೆದು ತೂಗಿಯೇ ಆಯಾ ಪ್ರದೇಶದ ಅನುದಾನವನ್ನು ಬಿಡುಗಡೆ ಮಾಡುತ್ತಿರುವುದು ಸಂಪ್ರದಾಯವಾಗಿದೆ. ಅದಕ್ಕೆ ಇನ್ನಾದರೂ ಕಡಿವಾಣ ಹಾಕಬೇಕು. ಈಗ ಬೇಕಾಗಿರುವುದು ಬಂಡಲ ಪಂಚಾಯತಕ್ಕೆ ದೊಡ್ಡ ಮೊತ್ತದ ಅನುದಾನವಾಗಿದೆ. ಸಾವಿರ ರು.ಗಳ ಅನುದಾನ ಯಾವುದಕ್ಕೂ ಸಾಕಾಗದು. ಸೇತುವೆ ನಿರ್ಮಾಣ, ರಸ್ತೆ ನಿರ್ಮಾಣ, ಪ್ರಾಥಮಿಕ ಆರೋಗ್ಯ ಕೇಂದ್ರ ಹೀಗೆ ಸಾಕಷ್ಟು ಕೆಲಸ, ಕಾರ್ಯಗಳು ಆಗಬೇಕಾಗಿದೆ.
(ಬಂಡಲ ಗ್ರಾ.ಪಂ ಕಟ್ಟಡ)
ಶಿರಸಿ-ಸಿದ್ದಾಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಬಂಡಲ ಪಂಚಾಯತದ ಹೆಬ್ರೆ ಹಾಗೂ ಸುತ್ತಮುತ್ತಲ ಪ್ರದೇಶ ಈ ಮೊದಲು ಅಂಕೋಲಾ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿತ್ತು. ಅಂಕೋಲಾ ಕ್ಷೇತ್ರದ ವ್ಯಾಪ್ತಿಯಲ್ಲಿದ್ದಾಗ ಕನಿಷ್ಟ ಮೂರು ಅವಧಿಯವರೆಗೆ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಚುನಾಯಿತರಾಗಿದ್ದರು. ಈಗ ಶಿರಸಿ-ಸಿದ್ದಾಪುರ ಕ್ಷೇತ್ರದ ವ್ಯಾಪ್ತಿಗೆ ಬಂದ ಮೇಲೆ ಕಾಗೇರಿಯವರು ಎರಡು ಸಾರಿ ಆಯ್ಕೆಯಾಗಿದ್ದಾರೆ. ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವರಾಗಿಯೂ ಆಡಳಿತ ನಡೆಸಿದ್ದಾರೆ. ಇದೀಗ ಕಾಗೇರಿಯವರು ಶಾಸಕರಾಗಿ ಹತ್ತಿರ ಹತ್ತಿರ 22 ವರ್ಷಗಳಾಗುತ್ತಿದೆ. ಸಂಪೆಗದ್ದೆ ಹಾಗೂ ಸುತ್ತಮುತ್ತಲ 7 ಗ್ರಾಮಗಳ ಗ್ರಾಮಸ್ಥರು ಕಳೆದ 22 ವರ್ಷಗಳಿಂದಲೂ ರಸ್ತೆ, ಸೇತುವೆಗಾಗಿ ಕಾಗೇರಿಯವರಿಗೆ ಮನವಿ ಸಲ್ಲಿಸುತ್ತಲೇ ಇದ್ದಾರೆ. ಶಾಸಕರಾಗಿ 2 ದಶಕಗಳಾಗುತ್ತ ಬಂದ ಸಂದರ್ಭದಲ್ಲಿ ಅದರ ಸವಿ ನೆನಪಿಗಾಗಿ ಸೇತುವೆ ನಿರ್ಮಾಣ ಮಾಡಿಕೊಡಿ ಎಂದೂ ಕೋರಿದ್ದಾರೆ. ಕಾಗೇರಿಯವರು ಈ ಕುರಿತು ಕಳೆದ 22 ವರ್ಷಗಳಿಂದ ರಸ್ತೆ ಸುಧಾರಣೆ ಮಾಡುವ ಭರವಸೆಯನ್ನು ನೀಡುತ್ತಲೇ ಇದ್ದಾರೆ. ಆದರೆ ಇದುವರೆಗೂ ಅವರ ಭರವಸೆ ಈಡೇರಿಲ್ಲ ಎನ್ನುವುದು ಸ್ಥಳೀಯರ ಆರೋಪವಾಗಿದೆ. ಆರ್. ವಿ. ದೇಶಪಾಂಡೆಯವರು ಕಳೆದ ನಾಲ್ಕು ದಶಕಗಳಿಂದ ಈ ಜಿಲ್ಲೆಯನ್ನು ಆಳುತ್ತಿದ್ದಾರೆ. ಇದೀಗ ರಾಜ್ಯದ ಪ್ರವಾಸೋದ್ಯಮ ಹಾಗೂ ಉನ್ನತ ಶಿಕ್ಷಣ ಸಚಿವರಾಗಿದ್ದಾರೆ. ಜಿಲ್ಲಾ ಉಸ್ತುವಾರಿಯ ಹೊಣೆಯನ್ನೂ ಹೊತ್ತಿದ್ದಾರೆ. ಹಿರಿಯ ರಾಜಕಾರಣಿ ದೇಶಪಾಂಡೆಯವರು ಬಂಡಲ ಗ್ರಾಮ ಪಂಚಾಯತಿಯ ಹೆಬ್ರೆ ಗ್ರಾಮದ ಸಂಪೆಗದ್ದೆ ಹಾಗೂ ಸುತ್ತಮುತ್ತಲ ಗ್ರಾಮಗಳ ಕತ್ತಲೆಯನ್ನು ಕಳೆಯಬೇಕಾಗಿದೆ.
(ಸ್ಥಳೀಯರ ಬವಣೆ)
ಸಂಸದ ಅನಂತಕುಮಾರ ಹೆಗಡೆಯವರೂ ಸಂಸದರಾಗಿ ಕನಿಷ್ಟ 20 ವರ್ಷಗಳಾಗುತ್ತಿದೆ. ಸಂಸದ ಅನಂತಕುಮಾರ ಹೆಗಡೆಯವರಿಗೂ ಸ್ಥಳೀಯರು ಮನವಿಯನ್ನು ಸಲ್ಲಿಸಿದ್ದಾರೆ. ಆದರೆ ಗ್ರಾಮ ಪಂಚಾಯತಿ ಮಟ್ಟದ ರಸ್ತೆ ಅಭಿವೃದ್ಧಿ ಕಾಮಗಾರಿಗಳೆಲ್ಲ ನನ್ನ ವ್ಯಾಪ್ತಿಗೆ ಬರುವುದಿಲ್ಲ. ದೊಡ್ಡ ದೊಡ್ಡ ಕಾರ್ಯಗಳಿದ್ದರೆ ಹೇಳಿ ಅದನ್ನು ಮಾಡಿಸೋಣ. ಚಿಕ್ಕಪುಟ್ಟ ಕೆಲಸಗಳು ಬೇಡ ಎಂದು ಹೇಳಿ ತಮ್ಮನ್ನು ಸಾಗಹಾಕಿದ್ದಾರೆ ಎಂದು ಸಂಪೆಗದ್ದೆ ಹಾಗೂ ಸುತ್ತಮುತ್ತಲ 6 ಗ್ರಾಮಗಳ ಗ್ರಾಮಸ್ಥರು ಹೇಳುತ್ತಾರೆ.
ನಾಲ್ಕೈದು ಗ್ರಾಮಗಳ ಜನರು ಬೈದರೂ ತಪ್ಪಿಲ್ಲ. ಹತ್ತೆಂಟು ಗ್ರಾಮಗಳ ಜನರು ಬೈಯುವುದನ್ನು ತಪ್ಪಿಸಿಕೊಳ್ಳುವಂತಹ ಕೆಲಸಗಳನ್ನು ತಾವು ಮಾಡುತ್ತಿದ್ದೇವೆ. ಅಭಿವೃದ್ಧಿ ಕಾರ್ಯಗಳು ಸದಾ ಚಾಲ್ತಿಯಲ್ಲಿದೆ ಎನ್ನುವುದನ್ನು ತೋರಿಸಲು ಗುದ್ದಲಿಪೂಜೆಗಳನ್ನು ನಡೆಸುತ್ತಲೇ ಇದ್ದೇವೆ. ಯಾವ ಸ್ಥಳದಲ್ಲಿ ಯಾವ ರೀತಿಯ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕು ಎನ್ನುವುದನ್ನು ಹಿರಿಯ ಜನಪ್ರತಿನಿಧಿಗಳು ತಮಗೆ ಕಲಿಸಿಕೊಟ್ಟಿದ್ದಾರೆ ಎಂದು ಹೇಳಿಕೊಂಡು ಓಡಾಡುವ ಜನಪ್ರತಿನಿಧಿಗಳೂ ಇದ್ದಾರೆ. ಇಂತವರಿಂದಲೇ ಬಂಡಲ ಪಂಚಾಯತದ ಬವಣೆ ಇನ್ನಷ್ಟು ಹೆಚ್ಚಾಗಿದೆ. ಬಾಯಿ ಮಾತಿನಲ್ಲಿ ಅಭಿವೃದ್ಧಿಯ ಬಗ್ಗೆ ಹೇಳುವುದನ್ನು ಬಿಟ್ಟು ಯೋಜನೆಗಳನ್ನು ಅನುಷ್ಟಾನ ಮಾಡಿ ಜನರ ವಿಶ್ವಾಸ ಗಳಿಸುವುದು ಅತ್ಯಾವಶ್ಯಕವಾಗಿದೆ.
ಬಂಡಲ ಪಂಚಾಯತ ವ್ಯಾಪ್ತಿಯ ಹೆಬ್ರೆ ಗ್ರಾಮ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ರಸ್ತೆ ಸುಧಾರಣೆ, ಸೇತುವೆ ನಿರ್ಮಾಣಕ್ಕಾಗಿ ಜಿ.ಪಂ ಅಡಿಯಲ್ಲಿ ಅನುದಾನ ಮಂಜೂರಾಗಿದೆ. ಯಾವ ಪ್ರದೇಶಕ್ಕೆ ಹಣ ಹಾಕಿದರೆ ಸೂಕ್ತ ಎನ್ನುವುದನ್ನು ಪರಿಶೀಲನೆ ಮಾಡಲಾಗುತ್ತದೆ. ಸ್ಥಳ ಪರಿಶೀಲನೆಯ ನಂತರ ಅನುದಾನದ ಅಡಿಯಲ್ಲಿ ಯೋಜನೆ ಅನುಷ್ಟಾನವನ್ನು ಮಾಡಲಾಗುತ್ತದೆ ಎಂದು ಈ ಭಾಗದ ಜಿ.ಪಂ ಸದಸ್ಯ ಆರ್. ಡಿ. ಹೆಗಡೆ ಜಾನ್ಮನೆ ತಿಳಿಸಿದ್ದಾರೆ.
ಸಂಪೆಗದ್ದೆ ರಸ್ತೆ ಸುಧಾರಣೆ ಹಾಗೂ ಜಲಗದ್ದೆ ಹಳ್ಳಕ್ಕೆ ಸೇತುವೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ. ರಸ್ತೆ ಸುಧಾರಣೆ ನನ್ನ ಗಮನದಲ್ಲಿದೆ. ಈ ಕುರಿತು ಯಾವುದೇ ಹಣ ವರ್ಗಾವಣೆಯಾಗಿಲ್ಲ. ಸ್ಥಳೀಯರ ಬಳಿ ಚರ್ಚೆ ಮಾಡಿ ರಸ್ತೆ ಸುಧಾರಣೆಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸ್ಥಳೀಯ ತಾ.ಪಂ ಸದಸ್ಯ ಸಂತೋಷ ಗೌಡರ್ ಹೇಳಿದ್ದಾರೆ.

***

(ಈ ಎಲ್ಲ ಐದು ಭಾಗಗಳೂ ಕನ್ನಡಪ್ರಭದ ಉತ್ತರ ಕನ್ನಡದ ಪುರವಣಿಯಲ್ಲಿ ಅಭಿವೃದ್ಧಿಯೇ ಬಂಡಲ್ ಎನ್ನುವ ಶೀರ್ಷಿಕೆಯ ಅಡಿಯಲ್ಲಿ ಪ್ರಕಟಗೊಂಡಿದೆ.)

Wednesday, January 21, 2015

ಅಘನಾಶಿನಿ ಕಣಿವೆಯಲ್ಲಿ-9

                 ಮನೆಯಲ್ಲಾಗಲೇ ಇಬ್ಬರು ವಿಶೇಷ ವ್ಯಕ್ತಿಗಳ ಆಗಮನವಾಗಿತ್ತು. ಒಬ್ಬರು ವಿಕ್ರಮನ ಅಜ್ಜಿ ಮಹಾಲಕ್ಷ್ಮಿ. ಎರಡು ದಿನಗಳ ಹಿಂದೆ ಇವರು ತನ್ನ ತಮ್ಮ ಚಂದ್ರಶೇಖರನ ಮನೆಗೆ ಹೋಗಿದ್ದರು ಯಾವುದೋ ಕಾರ್ಯದ ನಿಮಿತ್ತ. ಮನೆಗೆ ಬಂದು ನಿಲ್ಲುತ್ತಿದ್ದಂತೆಯೇ ಮೊಮ್ಮಗನ ಆಗಮನ ಸುದ್ದಿ ಕೇಳಿ ಮುಖ ಊರಗಲವಾಗಿತ್ತು. ಮನೆಗೆ ಬಂದಿದ್ದ ಇನ್ನೊಬ್ಬ ವ್ಯಕ್ತಿ ವಿಕ್ರಮನ ಭಾವ ವಿನಾಯಕ. ವಿಕ್ರಮ ತಾನು ಬರುತ್ತಿದ್ದ ವಿಷಯವನ್ನು ಪೋನ್ ಮಾಡಿ ತಿಳಿಸಿದ್ದರಿಂದ ಸಕಾಲಕ್ಕೆ ಆಗಮಿಸಿದ್ದ.
                ವಿಕ್ರಮ ತನ್ನ ಅಜ್ಜಿಯನ್ನು ಪರಿಚಯಿಸುತ್ತಾ `ಇವರ ಜೊತೆ ಮಾತನಾಡುವುದೆಂದರೆ ಹಳೆಯ ಕಾಲದ ಾಚಾರ, ವಿಚಾರ, ನೆನಪು, ಬದುಕು, ತಲೆಮಾರುಗಳ ಲೋಕಕ್ಕೆ ಹೋದಂತೆ..' ಎಂದ. ನಂತರ ವಿಕ್ರಂ ವಿನಾಯಕನನ್ನು ಪರಿಚಯ ಮಾಡಿಸುತ್ತಾ `ಈತ ಒಬ್ಬ ಕವಿ. ಒಳ್ಳೆಯ ನಟ. ಜೊತೆಗೆ ಮಿಮಿಕ್ರಿ ಮಾಡಬಲ್ಲ. ಒಳ್ಳೆ ಕ್ರೀಡಾಪಟು ಕೂಡ ಹೌದು. ಜೊತೆಗೆ ಇವನಿಗೆ ಗ್ರಾಫಾಲಜಿ ಬರ್ತದೆ. ಓದೋ ಹುಚ್ಚು ಸ್ವಲ್ಪ ಹೆಚ್ಚು. ಜೊತೆಗೆ ಯಾರೇ ಒಳ್ಳೆಯ ವ್ಯಕ್ತಿಗಳಿರಲಿ ಅವರನ್ನು ಮಾತನಾಡಿಸಿ, ಗೆಳೆತನ ಮಾಡಿಕೊಳ್ಳುವುದು ಈತನ ಪ್ರಮುಖ ಕೆಲಸ. ಒಂದು ರೀತಿಯಲ್ಲಿ ಆಲ್ ರೌಂಡರ್ ಎಂದರೆ ತಪ್ಪಾಗಲಿಕ್ಕಿಲ್ಲ ನೋಡಿ..' ಎಂದ.
               `ಯೇ ವಿಕ್ರಮಾ.. ಎಂತೆಂತಾದ್ರೂ ಹೇಳಡದಾ.. ಇಲ್ದೋದ್ದು, ಅಲ್ದೋದ್ದು ಎಲ್ಲಾ ಎಂತಕ್ಕೆ ಹೇಳ್ತ್ಯಾ?.. ಥೋ..' ಎಂದು ವಿನಾಯಕ ವಿಕ್ರಮನ ವಿವರಣೆಯನ್ನು ಕೊಂಚ ವಿರೋಧಿಸಿದ. ಅಷ್ಟರಲ್ಲಿ ಮಧಗಯ ಬಾಯಿ ಹಾಕಿದ ಪ್ರದೀಪ `ನಿಮ್ ಗೆ ಗ್ರಾಫಾಲಜಿ ಗೊತ್ತಿದೆಯಾ? ಓಹ್.. ನಾನು ಸ್ವಲ್ಪ ಹುಷಾರಾಗಿರಬೇಕು...' ಎಂದ.
               `ಯಾಕಪ್ಪಾ..' ಎಂದು ಕೇಳಿದ ವಿಕ್ರಮನಿಗೆ `ಈತ ನನ್ನ ತರಲೆಗಳನ್ನೆಲ್ಲಾ ಕಂಡು ಹಿಡಿದುಬಿಟ್ಟರೆ?' ಎಂದಾಗ ಎಲ್ಲರೂ ಒಮ್ಮೆ ನಕ್ಕರು.
               ಆ ದಿನ ಹಾಗೇ ಮಾತನಾಡುತ್ತಾ ಮರುದಿನ ಯಾವುದಾದರೂ ಪ್ರದೇಶಗಳ ವೀಕ್ಷಣೆಗೆ ಹೋಗೋಣ ಎಂದುಕೊಂಡರು. ಸುತ್ತಮುತ್ತ ಏನಿದೆ ಎಂದುಕೊಂಡಾಗ `ಲಾಲಗುಳಿ ಜಲಪಾತ' ಹಾಗೂ `ಗಿರ ಗಿರ ಪತ್ಥರ್..' ಇದೆ ಎನ್ನುವುದು ತಿಳಿಯಿತು. ಅದನ್ನು ನೋಡಿ ಬನ್ನಿ ಎನ್ನುವ ಮಾತುಗಳನ್ನು ಮನೆಯ ಹಿರಿಯರು ಹೇಳಿದರು. ಸರಿಯೆಂದರು ಎಲ್ಲರೂ. ಮರುದಿನ ಹೋಗುವುದಕ್ಕೆ ತಯಾರಿ ಮಾಡಿಕೊಂಡು ಎಲ್ಲರೂ ಮಲಗಿದರು.

*****8*****

               ಮರುದಿನ ಎಪ್ರಿಲ್ 11. ಎಲ್ಲರೂ ನಸುಕಿನಲ್ಲೆದ್ದು ಹೊರಡಲು ಅನುವಾದರು. ಅಷ್ಟರಲ್ಲಾಗಲೇ ವಿಕ್ರಮನ ತಾಯಿ ಲಕ್ಷ್ಮಿ ಹಲಸಿನಕಾಯಿಯ ತೆಳ್ಳೇವನ್ನೂ ಮದ್ಯಾಹ್ನದ ಊಟಕ್ಕೆ ಸಾಕಷ್ಟು ತಿಂಡಿಗಳನ್ನೂ, ಪುಳಿಯೋಗರೆ, ಹಲಸಿನಕಾಯಿಯ ಪಲ್ಯ, ಪುಳಿಯೋಗರೆ, ಫಲಾವ್ ಗಳನ್ನೆಲ್ಲಾ ಮಾಡಿಕೊಟ್ಟರು. ಎಲ್ಲವನ್ನೂ ಕಾರಿಗೆ ತುಂಬಿಕೊಂಡರು. ಕಿರಿಯರ ನಡುವೆ ಹಿರಿಯರೇಕೆ ಎಂದು ಭಟ್ಟರು, ಲಕ್ಷ್ಮೀಬಾಯಿ ಹಾಗೂ ಮಹಾಲಕ್ಷ್ಮಮ್ಮ ತಾವು ಜಲಪಾತ ನೋಡಲು ಬರುವುದಿಲ್ಲ ಎಂದರು. ಅದೂ ಅಲ್ಲದೇ ತಮ್ಮದೇ ಮನೆಯ ಬಳಿ ಇರುವ ಈ ಸ್ಥಳಗಳನ್ನು ಅನೇಕ ಬಾರಿ ನೋಡಿದ್ದರಿಂದ ಮತ್ತೇಕೆ ಎಂದುಕೊಂಡರು.
             ಒಟ್ಟಿನಲ್ಲಿ ಅಲ್ಲಿಗೆ ಹೊರಟವರು ವಿಕ್ರಮ್, ವಿನಾಯಕ, ಪ್ರದೀಪ, ವಿಜೇತಾ ಹಾಗೂ ರಮ್ಯ. ಅಲ್ಲಿಗೆ ಹೊರಟಿದ್ದೇನೋ ಕಾರಿನಲ್ಲಿ. ಆದರೆ ವಿಕ್ರಮನಿಗೂ ಆ ಪ್ರದೇಶ ಹೊಸತೇ. ತಮ್ಮೂರಾದರೂ ತಾನು ಅಲ್ಲಿ ಅಡ್ಡಾಡಿದ್ದು ಅಷ್ಟರಲ್ಲೇ ಇದೆ. ಚಿಕ್ಕಂದಿನಲ್ಲಿ ಒಮದೆರಡು ಸಾರಿ ಹೋಗಿದ್ದನಾದರೂ ಈಗಲೂ ಮಾರ್ಗಗಲೆಲ್ಲ ಅಸ್ಪಷ್ಟವಾಗಿದೆ. ಈ ಕಾರಣಕ್ಕಾಗಿ ಆ ಪ್ರದೇಶದ ಒಳಹೊರಗನ್ನು ಬಲ್ಲ ಸ್ಥಳೀಯ ಸಿದ್ದಿ ವ್ಯಕ್ತಿಯೊಬ್ಬನನ್ನು ಕರೆದೊಯ್ದರು. ಅಂತಹ ದಟ್ಟ ಕಾಡಿನ ಮಧ್ಯದಲ್ಲಿ ಸಿದ್ಧಿಗಳು ಎಲ್ಲಿಂದ ಬಂದರೋ. ಶತ ಶತಮಾನಗಳಿಂದ ಅವರು ಇಲ್ಲಿಯೇ ಇರಬೇಕು. ಬಹುಶಃ ಬ್ರಿಟೀಷರೋ., ಮತ್ತಿನ್ಯಾರೋ ಕರೆತಂದಿದ್ದಾರೇನೋ..
             ಇವರ ಜೊತೆಗೆ ಮಾರ್ಗದರ್ಶಿಯಾಗಿ ಬಂದ ಸಿದ್ಧಿಯ ಹೆಸರು ರಾಬರ್ಟ ಸಿದ್ದಿ. ಆಗಾಗ  ಭಟ್ಟರ ಮನೆಗೆ ಕೆಲಸಕ್ಕೆ ಬರುತ್ತಿದ್ದವನು. ಇವರ ಜೊತೆಗೆ ಹೊರಡುವ ಮೊದಲು  ವಿಕ್ರಮನನ್ನು ನೋಡಿ `ಓಹ್... ನೀ ಯಾವತ್ತು ಬಂದ್ಯೋ..?' ಎಂದು ಕೇಳಿದವನಿಗೆ ವಿಕ್ರಮ ಎಲ್ಲವನ್ನೂ ಸವಿವರವಾಗಿ ಹೇಳಿದ್ದ. ಗಿರಗಿರ ಪಥ್ಥರ್ ಹಾಗೂ ಲಾಲಗುಳಿ ಜಲಪಾತ ತೋರಿಸಲು ಹೇಳಿದ್ದ.
`ಗಿರ್ ಗಿರ್ ಪತ್ಥರ್ ಗೆ ಹೋಗದೇನೋ ಸರಿ.. ಅಲ್ಲೋ ಬಟಾ.. ಲಾಲಗುಳಿಗ್ ಯಂತಕ್ ಹೊಂಟ್ಯೋ..? ಅಲ್ಲೆಂತ ಐತೆ ಬದ್ನೆಕಾಯಿ? ನೀರಿಲ್ಲ ಎಂತ ಇಲ್ಲ..' ಎಂದನಾದರೂ ಬರಲು ಒಪ್ಪಿಕೊಂಡಿದ್ದ.
             ದಾರಿಯಲ್ಲಿ ಸಿದ್ಧಿಗಳದ್ದೇ ಒಮದೆರಡು ಕಾಲೋನಿಗಳನ್ನು ಹಾದು ಹೋಗಿ, ಒಂದೆರಡು ದಾರಿಯನ್ನು ಬದಲಾಯಿಸಿದವರು ಕೊನೆಗೆ ನಾಲ್ಕೈದು ಕಿಲೋಮೀಟರ್ ಪ್ರಯಾಣಿಸಿದ ನಂತರ ವಾಹನ ನಿಲ್ಲಿಸಿದರು. ಅಲ್ಲಿಂದ ಕಾಲ್ನಡಿಗೆಯಲ್ಲಿ ತೆರಳಬೇಕಿತ್ತು. `ಇಲ್ಲಿಂದ ಗಿರ್ ಗಿರ್ ಪತ್ಥರ್ ಗೆ ಐದು ಕಿಲೋಮೀಟರ್.. ಎಲ್ಲ ನಡ್ಕೊಂಡೇ ಹೋಗಬೇಕು. ಗಾಡಿ ಹೋಗಾದಿಲ್ಲ..' ಎಂದ ರಾಬರ್ಟ ಸಿದ್ದಿ. ಎಲ್ಲ ಕಾರಿನಿಂದ ಇಳಿದರು. ರಾಬರ್ಟ ಮುಂದೆ ಹೆಜ್ಜೆ ಹಾಕಿದರೆ ಎಲ್ಲರೂ ಹಿಂಬಾಲಿಸಿದರು. ಹೋಗುತ್ತಿದ್ದ ಮಾರ್ಗವಂತೂ ಸೂರ್ಯನ ರಶ್ಮಿಗಳು ಭೂಮಿಗೆ ಬೀಳದಂತಿದ್ದ ದಟ್ಟಕಾನನ. ಗವ್ವ ಎನ್ನುವ ಅರಣ್ಯ. ಅಲ್ಲಲ್ಲಿ ಸಾಗುವಾನಿ ಪ್ಲಾಂಟೇಶನ್ನುಗಳು. ಸಿದ್ದಿ ವೇಗವಾಗಿ ಹೋಗುತ್ತಿದ್ದ. ಅವನ ವೇಗಕ್ಕೆ ವಿನಾಯಕನನ್ನು ಹೊರತು ಪಡಿಸಿ ಉಳಿದವರು ಸಾಗಲು ಕಷ್ಟಪಡಬೇಕಾಯಿತು.
              ದಾರಿ ಸಾಗಲೆಂದು ರಾಬರ್ಟನೊಡನೆ ಎಲ್ಲರೂ ಮಾತಿಗಿಳಿದರು. ಅಪರಿಚಿತರ ಬಳಿ ರಾಬರ್ಟ ಮೊದ ಮೊದಲಿಗೆ ಮಾತನಾಡಲು ಹಿಂಜರಿದನಾದರೂ ನಂತರ ಸರಾಗವಾಗಿ ಮಾತನಾಡತೊಡಗಿದ. ವಿಜೇತಾ ರಾಬರ್ಟನ ಬಳಿ `ನೀವೆಲ್ಲರೂ ಕ್ರಿಶ್ಚಿಯನ್ನರಾ..?' ಎಂದು ಕೇಳಿದಳು. ಅದಕ್ಕೆ ಪ್ರತಿಯಾಗಿ ರಾಬರ್ಟ `ಇಲ್ಲ.. ನಮ್ಮಲ್ಲಿ ಕೆಲವರು ಮುಸ್ಲಿಂರೂ, ಹಿಂದೂಗಳೂ ಇದ್ದಾರೆ..' ಎಂದ.
              `ನಾಗರೀಕತೆಯಿಂದ ಅದೆಷ್ಟೇ ದೂರದಲ್ಲಿದ್ದರೂ ಇಲ್ಲೂ ಕೂಡ ಧರ್ಮಗಳಿದೆಯಲ್ಲ ಮಾರಾಯಾ...' ಎಂದ ಪ್ರದೀಪನಿಗೆ ವಿಕ್ರಮ್ ವಿವರಣಾತ್ಮಕವಾಗಿ `ಅದು ಹಾಗಿರೋದಿಲ್ಲ ಪ್ರದೀಪ್.. ಮೂಲತಃ ಇವರು ಯಾವುದೇ ಜಾತಿಯನ್ನು ಅನುಸಿರಿಸದವರಲ್ಲ. ಯಾರೋ ಒಂದಿಷ್ಟು ಮಿಷನರಿಗಳು ಬಂದು ಹಣ ಕೊಡ್ತಾರೆ. ಹಲವರನ್ನು ತಮ್ಮ ಧರ್ಮಕ್ಕೆ ಸೇರಿಸಿಕೊಳ್ಳುತ್ತಾರೆ. ಮದರಸಾಗಳೂ, ಹಿಂದೂ ಸಂಘಟನೆಗಳೂ ಇಲ್ಲಿ ಹಿಂದೆ ಬಿದ್ದಲ್ಲ. ಹಾಗಾಗಿ ಇಲ್ಲಿ ಹೀಗಾಗಿದೆ...' ಎಂದ.
              `ಛೇ.. ಛೇ ಇದೆಂತಹ ವ್ಯವಸ್ಥೆನಪ್ಪಾ.. ಕಾಡಿನ ನಡುವೆ ಬದುಕುತ್ತಿರುವವರನ್ನು ಅವರ ಪಾಡಿಗೆ ಬಿಡುವುದೂ ಇಲ್ಲವಲ್ಲಾ..' ಎಂದು ತಲೆಕೊಡವಿದ ಪ್ರದೀಪ.
              `ನಿಮ್ಮ ಸ್ಥಿತಿಗತಿ ಈಗ ಹೇಗಿದೆ..?' ಎಂದು ಕೇಳಿದಳು ವಿಜೇತಾ.
              `ಅದೆಂತಾ ಹೇಳದೋ.. ಯಾರೋ ಒಂದು ಪಕ್ಷದವರು ಬಂದು ಮನೆ ಕಟ್ಟಿಕೊಟ್ಟರು. ಮೊದಲು ನಾವಿದ್ದ ಊರು ಅದೇನೋ ಹೆಸರಿತ್ತು. ಪಕ್ಷದವರು ಬಂದು ಮನೆ ಕಟ್ಟಿಸಿದ್ದಕ್ಕೆ ಆ ಪಕ್ಷದ ನಾಯಕನ ಹೆಸರನ್ನೇ ನಮ್ಮೂರಿಗೆ ಇಟ್ಟರು. ಈಗ ಅವರು ಕಟ್ಟಿಕೊಟ್ಟ ಮನೆ  ಹಾಗೂ ಊರಿಗೆ ಇಟ್ಟ ಹೆಸರು. ಇವೆರಡೇ ಇದ್ದಿದ್ದು. ಮತ್ತೆಂತದ್ದೂ ಇಲ್ವೋ. ದುಡಿಯೋದಿಕ್ಕೆ ಜಮೀನು ಇಲ್ಲ. ಕಾಡಂತೂ ಮುಟ್ಟಾಂಗಿಲ್ಲ. ಬಹಳ ತೊಂದರೆಲಿದ್ದಿದ್ದು..' ಎಂದು ಹಲುಬಿಕೊಂಡ ಸಿದ್ದಿ.
          ಅಷ್ಟರಲ್ಲಾಗಲೇ ಗಿರ ಗಿರ ಪತ್ಥರ್ ಬಂದಿತ್ತು. ಮಲೆನಾಡಿನ ದಟ್ಟ ಕಾಡಿನಲ್ಲಿ ಹಾದು ಬರುತ್ತಿದ್ದವರಿಗೆ ಇದ್ದಕ್ಕಿದ್ದಂತೆ ಮುಂದಿನ ಭಾಗವನ್ನು ಯಾರೋ ಕತ್ತರಿಸಿ ಇಟ್ಟಿದ್ದಾರೆಂಬಂತಹ ಭೂರಚನೆ. ಇದ್ದಕ್ಕಿದ್ದಂತೆ ಎದುರಿನ ಭೂಭಾಗವೇ ಇಲ್ಲ ಎನ್ನಿಸಿತ್ತು. ಗುಡ್ಡದ ತುದಿಗೆ ನಿಂತವರಿಗೆ ಕೆಳಗೆ ಹಸಿರು ಅರಣ್ಯಗಳು ಕಾಣಿಸಿದವು. ದೂರದಲ್ಲಿ ಕಪ್ಪಗೆ ಹರಿಯುತ್ತಿದ್ದ ಕಾಳಿ ನದಿ ಕಾಣಿಸಿತು. ಸುಂಯ್.. ಎನ್ನುವ ಶಬ್ದದೊಂದಿಗೆ ಬೀಸಿ ಬರುತ್ತಿದ್ದ ಗಾಳಿ.
             `ಇಲ್ಲಿ ಕಲ್ ಒಗಿಯೋ ಬಟಾ..' ಎಂದ ಸಿದ್ದಿ. `ಎಲ್ಲರೂ ಚಿಕ್ಕ ಚಿಕ್ಕ ಕಲ್ಲನ್ನು ಒಗೆದರು. ಆ ಕಲ್ಲು ನೇರವಾಗಿ ಕೆಳಕ್ಕೆ ಬೀಳಲಿಲ್ಲ. ಒಗೆದ ಕಲ್ಲು ಕ್ಷಣಕಾಲ ಗಾಳಿಯಲ್ಲಿ ಗಿರ ಗಿರನೆ ತಿರುಗಿ ನಿಧಾನವಾಗಿ ಕೆಳಕ್ಕಿಳಿಯತೊಡಗಿತು. ಆಗ ರಾಬರ್ಟ ಸಿದ್ದಿಯೆಂದ `ನೋಡಿ.. ಇಲ್ಲಿ ಕಲ್ಲು ಒಗೆದರೂ ಬೇಗ ಕೆಳಕ್ಕೆ ಹೋಗಾದಿಲ್ಲ. ನಿಧಾನಕ್ಕೆ ಗಿರ ಗಿರ ತಿರುಗ್ತಾ ತಿರುಗ್ತಾ ಕೆಳಕ್ಕೆ ಬೀಳ್ತದೆ.. ಗಾಳಿಯ ಒತ್ತಡಕ್ಕೆ ಹಿಂಗಾಗ್ತದೆ ಅಂತ ಯಾರೋ ಒಬ್ಬರು ಹೇಳಿದ್ದರು. ಇದೇ ಕಾರಣಕ್ಕೆ ಈ ಪ್ರದೇಶಕ್ಕೆ ಗಿರ ಗಿರ ಪತ್ಥರ್ ಅನ್ನುವ ಹೆಸರು ಬಂದಿದೆ..' ಎಂದ.
              ಹೆಸರಿಗೆ ತಕ್ಕ ಪ್ರದೇಶ ಎಂದುಕೊಂಡವರು ಸಾಕಷ್ಟು ಪೋಟೋಗಳನ್ನು ಹೊಡೆದುಕೊಂಡರು. ರಾಬರ್ಟ ಅಲ್ಲಿಯೇ `ನಂದೋಂದ್ ತಕಾಳಿ..' ಎಂದ. ಆತನ ಪೋಟೋವನ್ನೂ ತೆಗೆದುಕೊಂಡರು ಎಲ್ಲರೂ. ಅಷ್ಟರಲ್ಲಿ ಹಿಂದೆ ಪೊದೆಯಲ್ಲಿ ಏನೋ ಸದ್ದಾಯಿತು. ಪ್ರದೀಪ ಒಮ್ಮೆಲೆ ಎಚ್ಚರಿಕೆಯಿಂದ ನಡೆಯತೊಡಗಿದೆ. ಯಾರೋ ಇದ್ದಾರೆ. ಯಾರೋ ನಮ್ಮನ್ನು ಹಿಂಬಾಲಿಸುತ್ತಿದ್ದಾರೆ ಎನ್ನಿಸತೊಡಗಿತು ಆತನಿಗೆ. ರಾಬರ್ಟ ಸಿದ್ದಿ ಮಾತ್ರ `ಹಂದಿ.. ಹಂದಿ ಬಂದಿರಬೇಕು.. ಅದ್ಕೆ ಅಲ್ಲಿ ಸದ್ದಾಗ್ತದೆ..' ಎಂದ. ಎಲ್ಲರೂ ಸುಮ್ಮನಾದರು. ಪ್ರದೀಪ ಮಾತ್ರ ಸುಮ್ಮನಾಗಲಿಲ್ಲ. ಸದ್ದು ಬಂದ ಕಡೆಗೆ ಗಮನವನ್ನು ಇರಿಸಿದ್ದ.
              ಒಂದು ತಾಸಿನ ನಂತರ ಗಿರ ಗಿರ ಪತ್ಥರ್ ನಿಂದ ಎಲ್ಲರೂ ವಾಪಾಸಾದರು. ಮರಳಿ ಸಾಗಿ ಕವಲೊಡೆದ ಮಾರ್ಗದಲ್ಲಿ ಚಲಿಸಿ ಲಾಲಗುಳಿ ಜಲಪಾತದ ಕಡೆಗೆ ತೆರಳಿದರು. ಜಲಪಾತಕ್ಕಿಂತ ಒಂದೆರಡು ಕಿ.ಮಿ ದೂರದಲ್ಲೇ ಕಾರು ನಿಲ್ಲಿಸಿದರು. ಅಲ್ಲಿಂದ ನಡೆದು ಸಾಗಬೇಕಿತ್ತು. ಕೊಂಚ ದಾರಿ ಮಾಡಿಕೊಂಡು ಕೆಳಗಿಳಿದವರಿಗೆ ಹಾಲ್ನೊರೆಯಂತಹ ಜಲರಾಶಿ ಕಾಣಿಸಿತು. ಜಲಪಾತ ಅಷ್ಟೇನೂ ಎತ್ತರವಿರಲಿಲ್ಲ. ಜೋಗದಂತೆ, ಉಂಚಳ್ಳಿಯಂತೆ ಎತ್ತರದಿಂದ ಭೋರೆಂದು ಧುಮ್ಮಿಕ್ಕುವ ಜಲಪಾತ ಅದಾಗಿರಲಿಲ್ಲ. ಬದಲಾಗಿ ಬಂಡೆಯಿಂದ ಬಂಡೆಗೆ ಕೆಳಕ್ಕೆ ಜಿಗಿಯುತ್ತ ಸಾಗುತ್ತಿದ್ದ ಚಿಕ್ಕ ಚಿಕ್ಕ ಜಲಧಾರೆಗಳ ಸಂಗಮ ಅದಾಗಿತ್ತು. ಕಪ್ಪು ಕಾಳಿ ನದಿಯ ನೀರು ಕೆಳಕ್ಕೆ ಇಳಿಯುವ ಸಂದರ್ಭದಲ್ಲಿ ನೀರು ನೀರು ಮಥಿಸಿ ಬೆಳ್ಳಗೆ ಫಳಫಳಿಸುತ್ತಿದ್ದುದು ವಿಸ್ಮಯಕಾರಿಯಾಗಿತ್ತು.
                `ನೀರಿಗೆ ಇಳಿಬ್ಯಾಡ್ರೋ...' ಎಂದು ಎಚ್ಚರಿಕೆ ನೀಡಿದ ರಾಬರ್ಟ ಸಿದ್ದಿ. `ಯಾಕೆ..?' ಎಂದು ಕೇಳಿದರು ಎಲ್ಲರೂ. `ನೀರಿನಲ್ಲಿ ಸೆಳವು ಉಂಟು.. ಮತ್ತೆ ಈ ನೀರು ಚೊಲೋ ಇಲ್ರಾ.. ದಾಂಡೇಲಿ ಕಾಗದ ಕಾರ್ಖಾನೆ ನೀರು ಇದಕ್ಕೆ ಸೇರ್ತದೋ.. ಹಂಗಾಗಿ ನೀರು ಹಾಳಾಗದೆ.. ನೀವು ನೀರಿಗೆ ಇಳಿದರೆ ಮತ್ತೆಂತಾದ್ರೂ ರೋಗ ಬಂದರೆ.. ಅದಕ್ಕೆ ಹೇಳಿದ್ದು..' ಎಂದ ರಾಬರ್ಟ ಸಿದ್ದಿ. ಆದರೂ ಆ ಪರಿಸರ ಸುಂದರವಾಗಿತ್ತು.ಸಮುದ್ರದ ಕರೆಗೆ ಓಗೊಟ್ಟು ಓಡುವ ನದಿ ಕಮರಿಯನ್ನು ಲೆಕ್ಖಿಸದೇ ಇಳಿಯುವ, ಆಳಕ್ಕೆ ಬೀಳುವ ಪರಿ ಬಹು ಬೆರಗಿಗೆ ಕಾರಣವಾಗುತ್ತಿತ್ತು.
              ವಿಜೇತಾ, ವಿಕ್ರಮನ ಬಿಂಬಗ್ರಾಹಿಗಳು ಒಂದೆ ಸಮನೆ ಚಲಿಸತೊಡಗಿದ್ದವು. ರಮ್ಯ ಬಂಡೆಯಿಂದ ಬಂಡೆಗೆ ಜಿಗಿಯುವ ಚಿನ್ನಾಟಕ್ಕೆ ತೊಡಗಿಕೊಂಡಿದ್ದಳು. ಪ್ರದೀಪ `ಇಳಿದು ಬಾ ತಾಯೇ.. ಇಳಿದು ಬಾ..' ಎಂದು ಹಾಡುತ್ತಿದ್ದ. ಬಾವುಕ ಜೀವಿಯಾದ ವಿನಾಯಕನ ಕವಿಮನಸ್ಸು ಕವಿತೆಯ ಕಡೆಗೆ ತುಡಿಯುತ್ತಿತ್ತು. ಹೊಸದೊಂದು ಕವಿತೆಯನ್ನು ಕಟ್ಟಲು ಹಾತೊರೆಯುತ್ತಿತ್ತು. ತಕ್ಷಣವೇ ವಿನಾಯಕ ತಡಮಾಡದೇ
`ಹೊನ್ನ ಹೊಂಜೊನ್ನ ಧಾರೆ
ಇಳಿಯ ಮೇಲಣ ಸ್ವರ್ಗ ನೀರೆ,
ಇಳಿವ ನೀರೆಲ್ಲ ಅಮೃತಧಾರೆ
ಲಾಲಗುಳಿ.. ನೀನೇ ಮಿನುಗುತಾರೆ...'
ಎಂದು ದೊಡ್ಡದಾಗಿ ಹೇಳಿಬಿಟ್ಟ. ಒಮ್ಮೆಲೆ ಇದನ್ನು ಕೇಳಿದ ಎಲ್ಲರೂ ವಿನಾಯಕನ ಆಶುಕವಿತ್ವಕ್ಕೆ ತಲೆದೂಗಿದರು. ವಾಹ್.. ವಿನಾಯಕನ ಬೆನ್ನು ತಟ್ಟಿದರು.
            ನಂತರ ವಿನಾಯಕ, ವಿಕ್ರಮ ಹಾಗೂ ರಾಬರ್ಟ ನದಿಯಲ್ಲಿ ಈಜಲು ನೀರಿಗೆ ಇಳಿದರು. ಪ್ರದೀಪ ನೀರಿಗೆ ಇಳಿಯಲು ಹಿಂಜರಿದ. ನಂಗೆ ಈಜು ಬರೋದಿಲ್ಲ ಎಂದ. ಆದರೂ ಪಟ್ಟು ಬಿಡದ ಉಳಿದವರು ಪ್ರದೀಪನನ್ನು ನೀರಿಗೆ ಎಳೆದೇ ಬಿಟ್ಟರು. ಆದರೆ ನೀರಿಗಿಳದ ನಂತರ ಪ್ರದೀಪ ಈಜು ಬರದವರಂತೆ ಹೆದರಲಿಲ್ಲ. ಮುಳುಗಲಿಲ್ಲ. ಈಜಾಡಲಾರಂಭಿಸಿದ. ಕಾಳಿ ನದಿಗೆ ಸೆಳವು ಜಾಸ್ತಿ. ಒಮ್ಮೆಯಂತೂ ಸೆಳವಿದ್ದಲ್ಲಿಯೂ ಹೋಗಿ ಬಂದ. ಎಲ್ಲರ ಎಧೆ ಝಲ್ಲೆನ್ನುತ್ತಿದ್ದರೆ ಪ್ರದೀಪ ಆರಾಮಾಗಿ ಈಸುಬಿದ್ದು ಬಂದ. ಆಗ ಮಾತ್ರ ಎಲ್ಲರಿಗೂ ಅಚ್ಚರಿ. ಕೊನೆಗೆ ವಿಚಾರಿಸಿದಾಗ ಪ್ರದೀಪ ತನಗೆ ಈಜು ಗೊತ್ತಿದೆಯೆಂದೂ ಸಾಗರದ ಕೆಳದಿ ಕೆರೆಯಲ್ಲಿ ಈಜು ಕಲಿತವನೆಂದೂ ತಿಳಿಯಿತು. ಮೊದಲೇ ಎಲ್ಲರ ಮನಸ್ಸಿನಲ್ಲಿ ನಿಗೂಢತೆಯ ಛಾಯೆಯನ್ನು ಹುಟ್ಟಿಸಿದ್ದ ಪ್ರದೀಪ ಮತ್ತೊಮ್ಮೆ ನಿಘೂಢನಾದ. ಎಲ್ಲವನ್ನೂ ತಿಳಿದಿದ್ದರೂ ಏನೂ ಗೊತ್ತಿಲ್ಲ ಎನ್ನುವ ನಾಟಕವಾಡಿದ ಪ್ರದೀಪನ ಬಗ್ಗೆ ಪ್ರತಿಯೊಬ್ಬರೂ ಸಂಶಯಿಸುವಂತಾದ.
               ಸುಮಾರು ಹೊತ್ತಿನ ತನಕ ಈಜಾಡಿದವರಿಗೆ ಕೊನೆಗೊಮ್ಮೆ ಮನದಣಿಯಿತು. ನೀರಿನಿಂದೆದ್ದು ಕೊಂಡೊಯ್ದಿದ್ದ ಬುತ್ತಿಯನ್ನು ಬಿಚ್ಚಿ, ಹೊಟ್ಟೆ ತುಂಬ ತಿಂದು ನೀರು ಕುಡಿದು ವಿರಮಿಸಿದರು. ವಿಜೇತಾಳ ಕ್ಯಾಮರ ಕೆಲಸ ಮಾಡುತ್ತಲೇ ಇತ್ತು. ಜಲಪಾತದ ವಿವಿಧ ಕೋನಗಳು, ಅಲ್ಲಿನ ನಿಸರ್ಗದ ರಮ್ಯ ಚಿತ್ತಾರವನ್ನೆಲ್ಲ ಆಕೆ ಸೆರೆ ಹಿಡಿಯುತ್ತಿದ್ದಳು. ಕಾಳಿ ನದಿ ಸೃಷ್ಟಿ ಮಾಡಿದ್ದ ಬಗೆ ಬಗೆಯ ಕಲ್ಲಿನ ಚಿತ್ತಾರಗಳು ವಿಜೇತಾಳ ಕ್ಯಾಮರಾದಲ್ಲಿ ಬಂಧಿಯಾದವು. ಎಷ್ಟು ಚಿತ್ರಗಳನ್ನು ಕ್ಲಿಕ್ಕಿಸಿದರೂ ವಿಜೇತಾಳ ಕ್ಯಾಮರಾಕ್ಕೆ ದಣಿವಾಗಲಿಲ್ಲ ಬಿಡಿ.
               ಈ ಮಧ್ಯ ಪ್ರದೇಪ ತನ್ನ ವಿಚಿತ್ರ ಧ್ವನಿಯಲ್ಲಿ `ಇಳಿದು ಬಾ ತಾಯಿ ಇಳಿದು ಬಾ..' ಎಂದು ಗುನುಗುತ್ತಲೇ ಇದ್ದ. ರಾಬರ್ಟ ಸಿದ್ದಿ ಬಿದಿರಿನ ಗಳಗಳನ್ನು, ಬೇಟೆಗೆ ಜೀವಿಗಳನ್ನೂ ಹುಡುಕತೊಡಗಿದ್ದರೆ ರಮ್ಯ ನೀರಿನಲ್ಲಿ ಆಟವಾಡತೊಡಗಿದ್ದಳು. ವಿಕ್ರಮ ಒಂದೆಡೆ ಕುಳಿತು ತಾನು ಮಾಡಬೇಕಿದ್ದ ಕೆಲಸದ ಬಗ್ಗೆ ಆಲೋಚನೆ ಮಾಡುತ್ತಿದ್ದ. ವಿನಾಯಕನ ಕವಿಮನಸ್ಸು ಕವನದ ಜನ್ಮಕ್ಕೆ ಹಾತಿರೆಯುತ್ತಿತ್ತಾದರೂ ರಮ್ಯಳ ನೀರಾಟ ಅದಕ್ಕೆ ಭಂಗ ತಂದಿತು. ರಮ್ಯ ನೀರಾಡುತ್ತ ಆಡುತ್ತ ವಿನಾಯಕನಿ ನೀರು ಸೋಕಿದ್ದಳು. ವಿನಾಯಕನೂ ನೀರಾಟಕ್ಕೆ ಇಳಿದು ಬಿಟ್ಟಿದ್ದ.
              ಅಷ್ಟರಲ್ಲಿಯೇ ರಾಬರ್ಟ `ಹೋಯ್... ಯಾರೋ ಅದು.. ಹಂಗ್ ಓಡ್ತಿಯಲ್ಲೋ.. ನಿಲ್ಲೋ...' ಎಂದು ಕೂಗಿದ.
              ಎಲ್ಲರೂ ಗಡಬಡಿಸಿ ಎದ್ದು ಬಂದು ನೋಡುವಷ್ಟರಲ್ಲಿ ಒಬ್ಬಾತ ಓಡಿ ಹೋಗಿದ್ದ. ಕೊನೆಗೆ ಯೋಚಿಸಿದಾಗ ಮೊದಲು ಕಾಟ ಕೊಡುತ್ತಿದ್ದ ವ್ಯಕ್ತಿಯೇ ಈತ ಎನ್ನುವುದೂ ತಿಳಿಯಿತು. `ಆತ ಇಲ್ಲಿಗೂ ಬಂದನಾ..?' ಎಂದು ಗೊಣಗಿದ ವಿಕ್ರಮ್. `ಯಾರು..? ಏನು? ಯಾರಾತ..?' ವಿನಾಯಕನ ಪ್ರಶ್ನೆ. `ಯಾರಿಲ್ಲ ಬಿಡು.. ಇನ್ನೊಮ್ಮೆ ಹೇಳ್ತೀನಿ..' ಎಂದ ವಿಕ್ರಮ್.
               ಅಷ್ಟು ಹೊತ್ತಿಗೆ ಸಾಕಷ್ಟು ಸಮಯವೂ ಆಗಿದ್ದರಿಂದ ವಾಪಸ್ಸಾಗಲು ಮುಂದಾದರು. ವಾಪಸ್ಸಾಗುವ ಮುನ್ನ ಲಾಲಗುಳಿ ಜಲಪಾತಕ್ಕೊಂದು ಗುಡ್ ಬೈ ಹೇಳಿ ಕಣ್ಣೀರು ಮನೆಯ ಕಡೆಗೆ ಹಾದಿ ಹಿಡಿದರು.

(ಮುಂದುವರಿಯುತ್ತದೆ)             

Monday, January 19, 2015

ಹಕ್ಕಿಗಳೇ ಹಾರಿಬಿಡಿ

ಹಕ್ಕಿಗಳೇ ಹಾರಿಬಿಡಿ ಬಾನಂಗಳಕೆ
ರೆಕ್ಕೆ ಬಲಿತಿದೆ, ಪುಕ್ಕ ಬೆಳೆದಿದೆ ಹಾರಿಬಿಡಿ |

ಇನ್ನೇಸು ದಿನ ತಂದೆ ತಾಯ್ಗಳ ಹಂಗು?
ಕಾಯುತಿದೆ ಮುಂದೊಂದು ಗಮ್ಯ ಬಿಂದು.
ಜೊತೆಯೆಲ್ಲೋ ಉಂಟು ಸಂಗಾತಿ ಹಕ್ಕಿ
ಹಾರಿದರೇ ನವಪುಳಕ, ನೀ ಚುಕ್ಕಿ |

ತಂದೆ ರೆಕ್ಕೆ ದುರ್ಬಲ, ತಾಯ್ಗಣ್ಣು ಮಂಜು
ತಂದು ಹಾಕುವರಿಲ್ಲ, ನೋವೇ ನಂಜು.
ಹಕ್ಕಿಗಳೇ ಹಾರಿಬಿಡಿ, ಬೇಟೆ ಹಿಡಿ.
ಹಾದಿಯೊಳಗಣ ಕಷ್ಟ  ಮರೆತುಬಿಡಿ |

ಕಲಿವಾಗೊಮ್ಮೆ ಬಿದ್ದಿರಬಹುದು ಈಗ ಜಟ್ಟಿ
ಸರ್ವಾತ್ಮ ಜೀವದೊಳು ನೀನೇ ಜಟ್ಟಿ
ಹಕ್ಕಿ ಹದ್ದನು ನೀನು ಗೆಲ್ಲಬಲ್ಲೆ
ಗಮ್ಯತೆಯ ರಮ್ಯತೆಯ ಪಡೆಯಬಲ್ಲೆ |

***
(ಈ ಕವಿತೆಯನ್ನು 3-06-2006ರಂದು ದಂಟಕಲ್ ನಲ್ಲಿ ಬರೆಯಲಾಗಿದೆ)

(ಆಕಾಶವಾಣಿ ಕಾರವಾರದಲ್ಲಿ ವಾಚನ ಮಾಡಿದ್ದೇನೆ)