Wednesday, January 21, 2015

ಅಘನಾಶಿನಿ ಕಣಿವೆಯಲ್ಲಿ-9

                 ಮನೆಯಲ್ಲಾಗಲೇ ಇಬ್ಬರು ವಿಶೇಷ ವ್ಯಕ್ತಿಗಳ ಆಗಮನವಾಗಿತ್ತು. ಒಬ್ಬರು ವಿಕ್ರಮನ ಅಜ್ಜಿ ಮಹಾಲಕ್ಷ್ಮಿ. ಎರಡು ದಿನಗಳ ಹಿಂದೆ ಇವರು ತನ್ನ ತಮ್ಮ ಚಂದ್ರಶೇಖರನ ಮನೆಗೆ ಹೋಗಿದ್ದರು ಯಾವುದೋ ಕಾರ್ಯದ ನಿಮಿತ್ತ. ಮನೆಗೆ ಬಂದು ನಿಲ್ಲುತ್ತಿದ್ದಂತೆಯೇ ಮೊಮ್ಮಗನ ಆಗಮನ ಸುದ್ದಿ ಕೇಳಿ ಮುಖ ಊರಗಲವಾಗಿತ್ತು. ಮನೆಗೆ ಬಂದಿದ್ದ ಇನ್ನೊಬ್ಬ ವ್ಯಕ್ತಿ ವಿಕ್ರಮನ ಭಾವ ವಿನಾಯಕ. ವಿಕ್ರಮ ತಾನು ಬರುತ್ತಿದ್ದ ವಿಷಯವನ್ನು ಪೋನ್ ಮಾಡಿ ತಿಳಿಸಿದ್ದರಿಂದ ಸಕಾಲಕ್ಕೆ ಆಗಮಿಸಿದ್ದ.
                ವಿಕ್ರಮ ತನ್ನ ಅಜ್ಜಿಯನ್ನು ಪರಿಚಯಿಸುತ್ತಾ `ಇವರ ಜೊತೆ ಮಾತನಾಡುವುದೆಂದರೆ ಹಳೆಯ ಕಾಲದ ಾಚಾರ, ವಿಚಾರ, ನೆನಪು, ಬದುಕು, ತಲೆಮಾರುಗಳ ಲೋಕಕ್ಕೆ ಹೋದಂತೆ..' ಎಂದ. ನಂತರ ವಿಕ್ರಂ ವಿನಾಯಕನನ್ನು ಪರಿಚಯ ಮಾಡಿಸುತ್ತಾ `ಈತ ಒಬ್ಬ ಕವಿ. ಒಳ್ಳೆಯ ನಟ. ಜೊತೆಗೆ ಮಿಮಿಕ್ರಿ ಮಾಡಬಲ್ಲ. ಒಳ್ಳೆ ಕ್ರೀಡಾಪಟು ಕೂಡ ಹೌದು. ಜೊತೆಗೆ ಇವನಿಗೆ ಗ್ರಾಫಾಲಜಿ ಬರ್ತದೆ. ಓದೋ ಹುಚ್ಚು ಸ್ವಲ್ಪ ಹೆಚ್ಚು. ಜೊತೆಗೆ ಯಾರೇ ಒಳ್ಳೆಯ ವ್ಯಕ್ತಿಗಳಿರಲಿ ಅವರನ್ನು ಮಾತನಾಡಿಸಿ, ಗೆಳೆತನ ಮಾಡಿಕೊಳ್ಳುವುದು ಈತನ ಪ್ರಮುಖ ಕೆಲಸ. ಒಂದು ರೀತಿಯಲ್ಲಿ ಆಲ್ ರೌಂಡರ್ ಎಂದರೆ ತಪ್ಪಾಗಲಿಕ್ಕಿಲ್ಲ ನೋಡಿ..' ಎಂದ.
               `ಯೇ ವಿಕ್ರಮಾ.. ಎಂತೆಂತಾದ್ರೂ ಹೇಳಡದಾ.. ಇಲ್ದೋದ್ದು, ಅಲ್ದೋದ್ದು ಎಲ್ಲಾ ಎಂತಕ್ಕೆ ಹೇಳ್ತ್ಯಾ?.. ಥೋ..' ಎಂದು ವಿನಾಯಕ ವಿಕ್ರಮನ ವಿವರಣೆಯನ್ನು ಕೊಂಚ ವಿರೋಧಿಸಿದ. ಅಷ್ಟರಲ್ಲಿ ಮಧಗಯ ಬಾಯಿ ಹಾಕಿದ ಪ್ರದೀಪ `ನಿಮ್ ಗೆ ಗ್ರಾಫಾಲಜಿ ಗೊತ್ತಿದೆಯಾ? ಓಹ್.. ನಾನು ಸ್ವಲ್ಪ ಹುಷಾರಾಗಿರಬೇಕು...' ಎಂದ.
               `ಯಾಕಪ್ಪಾ..' ಎಂದು ಕೇಳಿದ ವಿಕ್ರಮನಿಗೆ `ಈತ ನನ್ನ ತರಲೆಗಳನ್ನೆಲ್ಲಾ ಕಂಡು ಹಿಡಿದುಬಿಟ್ಟರೆ?' ಎಂದಾಗ ಎಲ್ಲರೂ ಒಮ್ಮೆ ನಕ್ಕರು.
               ಆ ದಿನ ಹಾಗೇ ಮಾತನಾಡುತ್ತಾ ಮರುದಿನ ಯಾವುದಾದರೂ ಪ್ರದೇಶಗಳ ವೀಕ್ಷಣೆಗೆ ಹೋಗೋಣ ಎಂದುಕೊಂಡರು. ಸುತ್ತಮುತ್ತ ಏನಿದೆ ಎಂದುಕೊಂಡಾಗ `ಲಾಲಗುಳಿ ಜಲಪಾತ' ಹಾಗೂ `ಗಿರ ಗಿರ ಪತ್ಥರ್..' ಇದೆ ಎನ್ನುವುದು ತಿಳಿಯಿತು. ಅದನ್ನು ನೋಡಿ ಬನ್ನಿ ಎನ್ನುವ ಮಾತುಗಳನ್ನು ಮನೆಯ ಹಿರಿಯರು ಹೇಳಿದರು. ಸರಿಯೆಂದರು ಎಲ್ಲರೂ. ಮರುದಿನ ಹೋಗುವುದಕ್ಕೆ ತಯಾರಿ ಮಾಡಿಕೊಂಡು ಎಲ್ಲರೂ ಮಲಗಿದರು.

*****8*****

               ಮರುದಿನ ಎಪ್ರಿಲ್ 11. ಎಲ್ಲರೂ ನಸುಕಿನಲ್ಲೆದ್ದು ಹೊರಡಲು ಅನುವಾದರು. ಅಷ್ಟರಲ್ಲಾಗಲೇ ವಿಕ್ರಮನ ತಾಯಿ ಲಕ್ಷ್ಮಿ ಹಲಸಿನಕಾಯಿಯ ತೆಳ್ಳೇವನ್ನೂ ಮದ್ಯಾಹ್ನದ ಊಟಕ್ಕೆ ಸಾಕಷ್ಟು ತಿಂಡಿಗಳನ್ನೂ, ಪುಳಿಯೋಗರೆ, ಹಲಸಿನಕಾಯಿಯ ಪಲ್ಯ, ಪುಳಿಯೋಗರೆ, ಫಲಾವ್ ಗಳನ್ನೆಲ್ಲಾ ಮಾಡಿಕೊಟ್ಟರು. ಎಲ್ಲವನ್ನೂ ಕಾರಿಗೆ ತುಂಬಿಕೊಂಡರು. ಕಿರಿಯರ ನಡುವೆ ಹಿರಿಯರೇಕೆ ಎಂದು ಭಟ್ಟರು, ಲಕ್ಷ್ಮೀಬಾಯಿ ಹಾಗೂ ಮಹಾಲಕ್ಷ್ಮಮ್ಮ ತಾವು ಜಲಪಾತ ನೋಡಲು ಬರುವುದಿಲ್ಲ ಎಂದರು. ಅದೂ ಅಲ್ಲದೇ ತಮ್ಮದೇ ಮನೆಯ ಬಳಿ ಇರುವ ಈ ಸ್ಥಳಗಳನ್ನು ಅನೇಕ ಬಾರಿ ನೋಡಿದ್ದರಿಂದ ಮತ್ತೇಕೆ ಎಂದುಕೊಂಡರು.
             ಒಟ್ಟಿನಲ್ಲಿ ಅಲ್ಲಿಗೆ ಹೊರಟವರು ವಿಕ್ರಮ್, ವಿನಾಯಕ, ಪ್ರದೀಪ, ವಿಜೇತಾ ಹಾಗೂ ರಮ್ಯ. ಅಲ್ಲಿಗೆ ಹೊರಟಿದ್ದೇನೋ ಕಾರಿನಲ್ಲಿ. ಆದರೆ ವಿಕ್ರಮನಿಗೂ ಆ ಪ್ರದೇಶ ಹೊಸತೇ. ತಮ್ಮೂರಾದರೂ ತಾನು ಅಲ್ಲಿ ಅಡ್ಡಾಡಿದ್ದು ಅಷ್ಟರಲ್ಲೇ ಇದೆ. ಚಿಕ್ಕಂದಿನಲ್ಲಿ ಒಮದೆರಡು ಸಾರಿ ಹೋಗಿದ್ದನಾದರೂ ಈಗಲೂ ಮಾರ್ಗಗಲೆಲ್ಲ ಅಸ್ಪಷ್ಟವಾಗಿದೆ. ಈ ಕಾರಣಕ್ಕಾಗಿ ಆ ಪ್ರದೇಶದ ಒಳಹೊರಗನ್ನು ಬಲ್ಲ ಸ್ಥಳೀಯ ಸಿದ್ದಿ ವ್ಯಕ್ತಿಯೊಬ್ಬನನ್ನು ಕರೆದೊಯ್ದರು. ಅಂತಹ ದಟ್ಟ ಕಾಡಿನ ಮಧ್ಯದಲ್ಲಿ ಸಿದ್ಧಿಗಳು ಎಲ್ಲಿಂದ ಬಂದರೋ. ಶತ ಶತಮಾನಗಳಿಂದ ಅವರು ಇಲ್ಲಿಯೇ ಇರಬೇಕು. ಬಹುಶಃ ಬ್ರಿಟೀಷರೋ., ಮತ್ತಿನ್ಯಾರೋ ಕರೆತಂದಿದ್ದಾರೇನೋ..
             ಇವರ ಜೊತೆಗೆ ಮಾರ್ಗದರ್ಶಿಯಾಗಿ ಬಂದ ಸಿದ್ಧಿಯ ಹೆಸರು ರಾಬರ್ಟ ಸಿದ್ದಿ. ಆಗಾಗ  ಭಟ್ಟರ ಮನೆಗೆ ಕೆಲಸಕ್ಕೆ ಬರುತ್ತಿದ್ದವನು. ಇವರ ಜೊತೆಗೆ ಹೊರಡುವ ಮೊದಲು  ವಿಕ್ರಮನನ್ನು ನೋಡಿ `ಓಹ್... ನೀ ಯಾವತ್ತು ಬಂದ್ಯೋ..?' ಎಂದು ಕೇಳಿದವನಿಗೆ ವಿಕ್ರಮ ಎಲ್ಲವನ್ನೂ ಸವಿವರವಾಗಿ ಹೇಳಿದ್ದ. ಗಿರಗಿರ ಪಥ್ಥರ್ ಹಾಗೂ ಲಾಲಗುಳಿ ಜಲಪಾತ ತೋರಿಸಲು ಹೇಳಿದ್ದ.
`ಗಿರ್ ಗಿರ್ ಪತ್ಥರ್ ಗೆ ಹೋಗದೇನೋ ಸರಿ.. ಅಲ್ಲೋ ಬಟಾ.. ಲಾಲಗುಳಿಗ್ ಯಂತಕ್ ಹೊಂಟ್ಯೋ..? ಅಲ್ಲೆಂತ ಐತೆ ಬದ್ನೆಕಾಯಿ? ನೀರಿಲ್ಲ ಎಂತ ಇಲ್ಲ..' ಎಂದನಾದರೂ ಬರಲು ಒಪ್ಪಿಕೊಂಡಿದ್ದ.
             ದಾರಿಯಲ್ಲಿ ಸಿದ್ಧಿಗಳದ್ದೇ ಒಮದೆರಡು ಕಾಲೋನಿಗಳನ್ನು ಹಾದು ಹೋಗಿ, ಒಂದೆರಡು ದಾರಿಯನ್ನು ಬದಲಾಯಿಸಿದವರು ಕೊನೆಗೆ ನಾಲ್ಕೈದು ಕಿಲೋಮೀಟರ್ ಪ್ರಯಾಣಿಸಿದ ನಂತರ ವಾಹನ ನಿಲ್ಲಿಸಿದರು. ಅಲ್ಲಿಂದ ಕಾಲ್ನಡಿಗೆಯಲ್ಲಿ ತೆರಳಬೇಕಿತ್ತು. `ಇಲ್ಲಿಂದ ಗಿರ್ ಗಿರ್ ಪತ್ಥರ್ ಗೆ ಐದು ಕಿಲೋಮೀಟರ್.. ಎಲ್ಲ ನಡ್ಕೊಂಡೇ ಹೋಗಬೇಕು. ಗಾಡಿ ಹೋಗಾದಿಲ್ಲ..' ಎಂದ ರಾಬರ್ಟ ಸಿದ್ದಿ. ಎಲ್ಲ ಕಾರಿನಿಂದ ಇಳಿದರು. ರಾಬರ್ಟ ಮುಂದೆ ಹೆಜ್ಜೆ ಹಾಕಿದರೆ ಎಲ್ಲರೂ ಹಿಂಬಾಲಿಸಿದರು. ಹೋಗುತ್ತಿದ್ದ ಮಾರ್ಗವಂತೂ ಸೂರ್ಯನ ರಶ್ಮಿಗಳು ಭೂಮಿಗೆ ಬೀಳದಂತಿದ್ದ ದಟ್ಟಕಾನನ. ಗವ್ವ ಎನ್ನುವ ಅರಣ್ಯ. ಅಲ್ಲಲ್ಲಿ ಸಾಗುವಾನಿ ಪ್ಲಾಂಟೇಶನ್ನುಗಳು. ಸಿದ್ದಿ ವೇಗವಾಗಿ ಹೋಗುತ್ತಿದ್ದ. ಅವನ ವೇಗಕ್ಕೆ ವಿನಾಯಕನನ್ನು ಹೊರತು ಪಡಿಸಿ ಉಳಿದವರು ಸಾಗಲು ಕಷ್ಟಪಡಬೇಕಾಯಿತು.
              ದಾರಿ ಸಾಗಲೆಂದು ರಾಬರ್ಟನೊಡನೆ ಎಲ್ಲರೂ ಮಾತಿಗಿಳಿದರು. ಅಪರಿಚಿತರ ಬಳಿ ರಾಬರ್ಟ ಮೊದ ಮೊದಲಿಗೆ ಮಾತನಾಡಲು ಹಿಂಜರಿದನಾದರೂ ನಂತರ ಸರಾಗವಾಗಿ ಮಾತನಾಡತೊಡಗಿದ. ವಿಜೇತಾ ರಾಬರ್ಟನ ಬಳಿ `ನೀವೆಲ್ಲರೂ ಕ್ರಿಶ್ಚಿಯನ್ನರಾ..?' ಎಂದು ಕೇಳಿದಳು. ಅದಕ್ಕೆ ಪ್ರತಿಯಾಗಿ ರಾಬರ್ಟ `ಇಲ್ಲ.. ನಮ್ಮಲ್ಲಿ ಕೆಲವರು ಮುಸ್ಲಿಂರೂ, ಹಿಂದೂಗಳೂ ಇದ್ದಾರೆ..' ಎಂದ.
              `ನಾಗರೀಕತೆಯಿಂದ ಅದೆಷ್ಟೇ ದೂರದಲ್ಲಿದ್ದರೂ ಇಲ್ಲೂ ಕೂಡ ಧರ್ಮಗಳಿದೆಯಲ್ಲ ಮಾರಾಯಾ...' ಎಂದ ಪ್ರದೀಪನಿಗೆ ವಿಕ್ರಮ್ ವಿವರಣಾತ್ಮಕವಾಗಿ `ಅದು ಹಾಗಿರೋದಿಲ್ಲ ಪ್ರದೀಪ್.. ಮೂಲತಃ ಇವರು ಯಾವುದೇ ಜಾತಿಯನ್ನು ಅನುಸಿರಿಸದವರಲ್ಲ. ಯಾರೋ ಒಂದಿಷ್ಟು ಮಿಷನರಿಗಳು ಬಂದು ಹಣ ಕೊಡ್ತಾರೆ. ಹಲವರನ್ನು ತಮ್ಮ ಧರ್ಮಕ್ಕೆ ಸೇರಿಸಿಕೊಳ್ಳುತ್ತಾರೆ. ಮದರಸಾಗಳೂ, ಹಿಂದೂ ಸಂಘಟನೆಗಳೂ ಇಲ್ಲಿ ಹಿಂದೆ ಬಿದ್ದಲ್ಲ. ಹಾಗಾಗಿ ಇಲ್ಲಿ ಹೀಗಾಗಿದೆ...' ಎಂದ.
              `ಛೇ.. ಛೇ ಇದೆಂತಹ ವ್ಯವಸ್ಥೆನಪ್ಪಾ.. ಕಾಡಿನ ನಡುವೆ ಬದುಕುತ್ತಿರುವವರನ್ನು ಅವರ ಪಾಡಿಗೆ ಬಿಡುವುದೂ ಇಲ್ಲವಲ್ಲಾ..' ಎಂದು ತಲೆಕೊಡವಿದ ಪ್ರದೀಪ.
              `ನಿಮ್ಮ ಸ್ಥಿತಿಗತಿ ಈಗ ಹೇಗಿದೆ..?' ಎಂದು ಕೇಳಿದಳು ವಿಜೇತಾ.
              `ಅದೆಂತಾ ಹೇಳದೋ.. ಯಾರೋ ಒಂದು ಪಕ್ಷದವರು ಬಂದು ಮನೆ ಕಟ್ಟಿಕೊಟ್ಟರು. ಮೊದಲು ನಾವಿದ್ದ ಊರು ಅದೇನೋ ಹೆಸರಿತ್ತು. ಪಕ್ಷದವರು ಬಂದು ಮನೆ ಕಟ್ಟಿಸಿದ್ದಕ್ಕೆ ಆ ಪಕ್ಷದ ನಾಯಕನ ಹೆಸರನ್ನೇ ನಮ್ಮೂರಿಗೆ ಇಟ್ಟರು. ಈಗ ಅವರು ಕಟ್ಟಿಕೊಟ್ಟ ಮನೆ  ಹಾಗೂ ಊರಿಗೆ ಇಟ್ಟ ಹೆಸರು. ಇವೆರಡೇ ಇದ್ದಿದ್ದು. ಮತ್ತೆಂತದ್ದೂ ಇಲ್ವೋ. ದುಡಿಯೋದಿಕ್ಕೆ ಜಮೀನು ಇಲ್ಲ. ಕಾಡಂತೂ ಮುಟ್ಟಾಂಗಿಲ್ಲ. ಬಹಳ ತೊಂದರೆಲಿದ್ದಿದ್ದು..' ಎಂದು ಹಲುಬಿಕೊಂಡ ಸಿದ್ದಿ.
          ಅಷ್ಟರಲ್ಲಾಗಲೇ ಗಿರ ಗಿರ ಪತ್ಥರ್ ಬಂದಿತ್ತು. ಮಲೆನಾಡಿನ ದಟ್ಟ ಕಾಡಿನಲ್ಲಿ ಹಾದು ಬರುತ್ತಿದ್ದವರಿಗೆ ಇದ್ದಕ್ಕಿದ್ದಂತೆ ಮುಂದಿನ ಭಾಗವನ್ನು ಯಾರೋ ಕತ್ತರಿಸಿ ಇಟ್ಟಿದ್ದಾರೆಂಬಂತಹ ಭೂರಚನೆ. ಇದ್ದಕ್ಕಿದ್ದಂತೆ ಎದುರಿನ ಭೂಭಾಗವೇ ಇಲ್ಲ ಎನ್ನಿಸಿತ್ತು. ಗುಡ್ಡದ ತುದಿಗೆ ನಿಂತವರಿಗೆ ಕೆಳಗೆ ಹಸಿರು ಅರಣ್ಯಗಳು ಕಾಣಿಸಿದವು. ದೂರದಲ್ಲಿ ಕಪ್ಪಗೆ ಹರಿಯುತ್ತಿದ್ದ ಕಾಳಿ ನದಿ ಕಾಣಿಸಿತು. ಸುಂಯ್.. ಎನ್ನುವ ಶಬ್ದದೊಂದಿಗೆ ಬೀಸಿ ಬರುತ್ತಿದ್ದ ಗಾಳಿ.
             `ಇಲ್ಲಿ ಕಲ್ ಒಗಿಯೋ ಬಟಾ..' ಎಂದ ಸಿದ್ದಿ. `ಎಲ್ಲರೂ ಚಿಕ್ಕ ಚಿಕ್ಕ ಕಲ್ಲನ್ನು ಒಗೆದರು. ಆ ಕಲ್ಲು ನೇರವಾಗಿ ಕೆಳಕ್ಕೆ ಬೀಳಲಿಲ್ಲ. ಒಗೆದ ಕಲ್ಲು ಕ್ಷಣಕಾಲ ಗಾಳಿಯಲ್ಲಿ ಗಿರ ಗಿರನೆ ತಿರುಗಿ ನಿಧಾನವಾಗಿ ಕೆಳಕ್ಕಿಳಿಯತೊಡಗಿತು. ಆಗ ರಾಬರ್ಟ ಸಿದ್ದಿಯೆಂದ `ನೋಡಿ.. ಇಲ್ಲಿ ಕಲ್ಲು ಒಗೆದರೂ ಬೇಗ ಕೆಳಕ್ಕೆ ಹೋಗಾದಿಲ್ಲ. ನಿಧಾನಕ್ಕೆ ಗಿರ ಗಿರ ತಿರುಗ್ತಾ ತಿರುಗ್ತಾ ಕೆಳಕ್ಕೆ ಬೀಳ್ತದೆ.. ಗಾಳಿಯ ಒತ್ತಡಕ್ಕೆ ಹಿಂಗಾಗ್ತದೆ ಅಂತ ಯಾರೋ ಒಬ್ಬರು ಹೇಳಿದ್ದರು. ಇದೇ ಕಾರಣಕ್ಕೆ ಈ ಪ್ರದೇಶಕ್ಕೆ ಗಿರ ಗಿರ ಪತ್ಥರ್ ಅನ್ನುವ ಹೆಸರು ಬಂದಿದೆ..' ಎಂದ.
              ಹೆಸರಿಗೆ ತಕ್ಕ ಪ್ರದೇಶ ಎಂದುಕೊಂಡವರು ಸಾಕಷ್ಟು ಪೋಟೋಗಳನ್ನು ಹೊಡೆದುಕೊಂಡರು. ರಾಬರ್ಟ ಅಲ್ಲಿಯೇ `ನಂದೋಂದ್ ತಕಾಳಿ..' ಎಂದ. ಆತನ ಪೋಟೋವನ್ನೂ ತೆಗೆದುಕೊಂಡರು ಎಲ್ಲರೂ. ಅಷ್ಟರಲ್ಲಿ ಹಿಂದೆ ಪೊದೆಯಲ್ಲಿ ಏನೋ ಸದ್ದಾಯಿತು. ಪ್ರದೀಪ ಒಮ್ಮೆಲೆ ಎಚ್ಚರಿಕೆಯಿಂದ ನಡೆಯತೊಡಗಿದೆ. ಯಾರೋ ಇದ್ದಾರೆ. ಯಾರೋ ನಮ್ಮನ್ನು ಹಿಂಬಾಲಿಸುತ್ತಿದ್ದಾರೆ ಎನ್ನಿಸತೊಡಗಿತು ಆತನಿಗೆ. ರಾಬರ್ಟ ಸಿದ್ದಿ ಮಾತ್ರ `ಹಂದಿ.. ಹಂದಿ ಬಂದಿರಬೇಕು.. ಅದ್ಕೆ ಅಲ್ಲಿ ಸದ್ದಾಗ್ತದೆ..' ಎಂದ. ಎಲ್ಲರೂ ಸುಮ್ಮನಾದರು. ಪ್ರದೀಪ ಮಾತ್ರ ಸುಮ್ಮನಾಗಲಿಲ್ಲ. ಸದ್ದು ಬಂದ ಕಡೆಗೆ ಗಮನವನ್ನು ಇರಿಸಿದ್ದ.
              ಒಂದು ತಾಸಿನ ನಂತರ ಗಿರ ಗಿರ ಪತ್ಥರ್ ನಿಂದ ಎಲ್ಲರೂ ವಾಪಾಸಾದರು. ಮರಳಿ ಸಾಗಿ ಕವಲೊಡೆದ ಮಾರ್ಗದಲ್ಲಿ ಚಲಿಸಿ ಲಾಲಗುಳಿ ಜಲಪಾತದ ಕಡೆಗೆ ತೆರಳಿದರು. ಜಲಪಾತಕ್ಕಿಂತ ಒಂದೆರಡು ಕಿ.ಮಿ ದೂರದಲ್ಲೇ ಕಾರು ನಿಲ್ಲಿಸಿದರು. ಅಲ್ಲಿಂದ ನಡೆದು ಸಾಗಬೇಕಿತ್ತು. ಕೊಂಚ ದಾರಿ ಮಾಡಿಕೊಂಡು ಕೆಳಗಿಳಿದವರಿಗೆ ಹಾಲ್ನೊರೆಯಂತಹ ಜಲರಾಶಿ ಕಾಣಿಸಿತು. ಜಲಪಾತ ಅಷ್ಟೇನೂ ಎತ್ತರವಿರಲಿಲ್ಲ. ಜೋಗದಂತೆ, ಉಂಚಳ್ಳಿಯಂತೆ ಎತ್ತರದಿಂದ ಭೋರೆಂದು ಧುಮ್ಮಿಕ್ಕುವ ಜಲಪಾತ ಅದಾಗಿರಲಿಲ್ಲ. ಬದಲಾಗಿ ಬಂಡೆಯಿಂದ ಬಂಡೆಗೆ ಕೆಳಕ್ಕೆ ಜಿಗಿಯುತ್ತ ಸಾಗುತ್ತಿದ್ದ ಚಿಕ್ಕ ಚಿಕ್ಕ ಜಲಧಾರೆಗಳ ಸಂಗಮ ಅದಾಗಿತ್ತು. ಕಪ್ಪು ಕಾಳಿ ನದಿಯ ನೀರು ಕೆಳಕ್ಕೆ ಇಳಿಯುವ ಸಂದರ್ಭದಲ್ಲಿ ನೀರು ನೀರು ಮಥಿಸಿ ಬೆಳ್ಳಗೆ ಫಳಫಳಿಸುತ್ತಿದ್ದುದು ವಿಸ್ಮಯಕಾರಿಯಾಗಿತ್ತು.
                `ನೀರಿಗೆ ಇಳಿಬ್ಯಾಡ್ರೋ...' ಎಂದು ಎಚ್ಚರಿಕೆ ನೀಡಿದ ರಾಬರ್ಟ ಸಿದ್ದಿ. `ಯಾಕೆ..?' ಎಂದು ಕೇಳಿದರು ಎಲ್ಲರೂ. `ನೀರಿನಲ್ಲಿ ಸೆಳವು ಉಂಟು.. ಮತ್ತೆ ಈ ನೀರು ಚೊಲೋ ಇಲ್ರಾ.. ದಾಂಡೇಲಿ ಕಾಗದ ಕಾರ್ಖಾನೆ ನೀರು ಇದಕ್ಕೆ ಸೇರ್ತದೋ.. ಹಂಗಾಗಿ ನೀರು ಹಾಳಾಗದೆ.. ನೀವು ನೀರಿಗೆ ಇಳಿದರೆ ಮತ್ತೆಂತಾದ್ರೂ ರೋಗ ಬಂದರೆ.. ಅದಕ್ಕೆ ಹೇಳಿದ್ದು..' ಎಂದ ರಾಬರ್ಟ ಸಿದ್ದಿ. ಆದರೂ ಆ ಪರಿಸರ ಸುಂದರವಾಗಿತ್ತು.ಸಮುದ್ರದ ಕರೆಗೆ ಓಗೊಟ್ಟು ಓಡುವ ನದಿ ಕಮರಿಯನ್ನು ಲೆಕ್ಖಿಸದೇ ಇಳಿಯುವ, ಆಳಕ್ಕೆ ಬೀಳುವ ಪರಿ ಬಹು ಬೆರಗಿಗೆ ಕಾರಣವಾಗುತ್ತಿತ್ತು.
              ವಿಜೇತಾ, ವಿಕ್ರಮನ ಬಿಂಬಗ್ರಾಹಿಗಳು ಒಂದೆ ಸಮನೆ ಚಲಿಸತೊಡಗಿದ್ದವು. ರಮ್ಯ ಬಂಡೆಯಿಂದ ಬಂಡೆಗೆ ಜಿಗಿಯುವ ಚಿನ್ನಾಟಕ್ಕೆ ತೊಡಗಿಕೊಂಡಿದ್ದಳು. ಪ್ರದೀಪ `ಇಳಿದು ಬಾ ತಾಯೇ.. ಇಳಿದು ಬಾ..' ಎಂದು ಹಾಡುತ್ತಿದ್ದ. ಬಾವುಕ ಜೀವಿಯಾದ ವಿನಾಯಕನ ಕವಿಮನಸ್ಸು ಕವಿತೆಯ ಕಡೆಗೆ ತುಡಿಯುತ್ತಿತ್ತು. ಹೊಸದೊಂದು ಕವಿತೆಯನ್ನು ಕಟ್ಟಲು ಹಾತೊರೆಯುತ್ತಿತ್ತು. ತಕ್ಷಣವೇ ವಿನಾಯಕ ತಡಮಾಡದೇ
`ಹೊನ್ನ ಹೊಂಜೊನ್ನ ಧಾರೆ
ಇಳಿಯ ಮೇಲಣ ಸ್ವರ್ಗ ನೀರೆ,
ಇಳಿವ ನೀರೆಲ್ಲ ಅಮೃತಧಾರೆ
ಲಾಲಗುಳಿ.. ನೀನೇ ಮಿನುಗುತಾರೆ...'
ಎಂದು ದೊಡ್ಡದಾಗಿ ಹೇಳಿಬಿಟ್ಟ. ಒಮ್ಮೆಲೆ ಇದನ್ನು ಕೇಳಿದ ಎಲ್ಲರೂ ವಿನಾಯಕನ ಆಶುಕವಿತ್ವಕ್ಕೆ ತಲೆದೂಗಿದರು. ವಾಹ್.. ವಿನಾಯಕನ ಬೆನ್ನು ತಟ್ಟಿದರು.
            ನಂತರ ವಿನಾಯಕ, ವಿಕ್ರಮ ಹಾಗೂ ರಾಬರ್ಟ ನದಿಯಲ್ಲಿ ಈಜಲು ನೀರಿಗೆ ಇಳಿದರು. ಪ್ರದೀಪ ನೀರಿಗೆ ಇಳಿಯಲು ಹಿಂಜರಿದ. ನಂಗೆ ಈಜು ಬರೋದಿಲ್ಲ ಎಂದ. ಆದರೂ ಪಟ್ಟು ಬಿಡದ ಉಳಿದವರು ಪ್ರದೀಪನನ್ನು ನೀರಿಗೆ ಎಳೆದೇ ಬಿಟ್ಟರು. ಆದರೆ ನೀರಿಗಿಳದ ನಂತರ ಪ್ರದೀಪ ಈಜು ಬರದವರಂತೆ ಹೆದರಲಿಲ್ಲ. ಮುಳುಗಲಿಲ್ಲ. ಈಜಾಡಲಾರಂಭಿಸಿದ. ಕಾಳಿ ನದಿಗೆ ಸೆಳವು ಜಾಸ್ತಿ. ಒಮ್ಮೆಯಂತೂ ಸೆಳವಿದ್ದಲ್ಲಿಯೂ ಹೋಗಿ ಬಂದ. ಎಲ್ಲರ ಎಧೆ ಝಲ್ಲೆನ್ನುತ್ತಿದ್ದರೆ ಪ್ರದೀಪ ಆರಾಮಾಗಿ ಈಸುಬಿದ್ದು ಬಂದ. ಆಗ ಮಾತ್ರ ಎಲ್ಲರಿಗೂ ಅಚ್ಚರಿ. ಕೊನೆಗೆ ವಿಚಾರಿಸಿದಾಗ ಪ್ರದೀಪ ತನಗೆ ಈಜು ಗೊತ್ತಿದೆಯೆಂದೂ ಸಾಗರದ ಕೆಳದಿ ಕೆರೆಯಲ್ಲಿ ಈಜು ಕಲಿತವನೆಂದೂ ತಿಳಿಯಿತು. ಮೊದಲೇ ಎಲ್ಲರ ಮನಸ್ಸಿನಲ್ಲಿ ನಿಗೂಢತೆಯ ಛಾಯೆಯನ್ನು ಹುಟ್ಟಿಸಿದ್ದ ಪ್ರದೀಪ ಮತ್ತೊಮ್ಮೆ ನಿಘೂಢನಾದ. ಎಲ್ಲವನ್ನೂ ತಿಳಿದಿದ್ದರೂ ಏನೂ ಗೊತ್ತಿಲ್ಲ ಎನ್ನುವ ನಾಟಕವಾಡಿದ ಪ್ರದೀಪನ ಬಗ್ಗೆ ಪ್ರತಿಯೊಬ್ಬರೂ ಸಂಶಯಿಸುವಂತಾದ.
               ಸುಮಾರು ಹೊತ್ತಿನ ತನಕ ಈಜಾಡಿದವರಿಗೆ ಕೊನೆಗೊಮ್ಮೆ ಮನದಣಿಯಿತು. ನೀರಿನಿಂದೆದ್ದು ಕೊಂಡೊಯ್ದಿದ್ದ ಬುತ್ತಿಯನ್ನು ಬಿಚ್ಚಿ, ಹೊಟ್ಟೆ ತುಂಬ ತಿಂದು ನೀರು ಕುಡಿದು ವಿರಮಿಸಿದರು. ವಿಜೇತಾಳ ಕ್ಯಾಮರ ಕೆಲಸ ಮಾಡುತ್ತಲೇ ಇತ್ತು. ಜಲಪಾತದ ವಿವಿಧ ಕೋನಗಳು, ಅಲ್ಲಿನ ನಿಸರ್ಗದ ರಮ್ಯ ಚಿತ್ತಾರವನ್ನೆಲ್ಲ ಆಕೆ ಸೆರೆ ಹಿಡಿಯುತ್ತಿದ್ದಳು. ಕಾಳಿ ನದಿ ಸೃಷ್ಟಿ ಮಾಡಿದ್ದ ಬಗೆ ಬಗೆಯ ಕಲ್ಲಿನ ಚಿತ್ತಾರಗಳು ವಿಜೇತಾಳ ಕ್ಯಾಮರಾದಲ್ಲಿ ಬಂಧಿಯಾದವು. ಎಷ್ಟು ಚಿತ್ರಗಳನ್ನು ಕ್ಲಿಕ್ಕಿಸಿದರೂ ವಿಜೇತಾಳ ಕ್ಯಾಮರಾಕ್ಕೆ ದಣಿವಾಗಲಿಲ್ಲ ಬಿಡಿ.
               ಈ ಮಧ್ಯ ಪ್ರದೇಪ ತನ್ನ ವಿಚಿತ್ರ ಧ್ವನಿಯಲ್ಲಿ `ಇಳಿದು ಬಾ ತಾಯಿ ಇಳಿದು ಬಾ..' ಎಂದು ಗುನುಗುತ್ತಲೇ ಇದ್ದ. ರಾಬರ್ಟ ಸಿದ್ದಿ ಬಿದಿರಿನ ಗಳಗಳನ್ನು, ಬೇಟೆಗೆ ಜೀವಿಗಳನ್ನೂ ಹುಡುಕತೊಡಗಿದ್ದರೆ ರಮ್ಯ ನೀರಿನಲ್ಲಿ ಆಟವಾಡತೊಡಗಿದ್ದಳು. ವಿಕ್ರಮ ಒಂದೆಡೆ ಕುಳಿತು ತಾನು ಮಾಡಬೇಕಿದ್ದ ಕೆಲಸದ ಬಗ್ಗೆ ಆಲೋಚನೆ ಮಾಡುತ್ತಿದ್ದ. ವಿನಾಯಕನ ಕವಿಮನಸ್ಸು ಕವನದ ಜನ್ಮಕ್ಕೆ ಹಾತಿರೆಯುತ್ತಿತ್ತಾದರೂ ರಮ್ಯಳ ನೀರಾಟ ಅದಕ್ಕೆ ಭಂಗ ತಂದಿತು. ರಮ್ಯ ನೀರಾಡುತ್ತ ಆಡುತ್ತ ವಿನಾಯಕನಿ ನೀರು ಸೋಕಿದ್ದಳು. ವಿನಾಯಕನೂ ನೀರಾಟಕ್ಕೆ ಇಳಿದು ಬಿಟ್ಟಿದ್ದ.
              ಅಷ್ಟರಲ್ಲಿಯೇ ರಾಬರ್ಟ `ಹೋಯ್... ಯಾರೋ ಅದು.. ಹಂಗ್ ಓಡ್ತಿಯಲ್ಲೋ.. ನಿಲ್ಲೋ...' ಎಂದು ಕೂಗಿದ.
              ಎಲ್ಲರೂ ಗಡಬಡಿಸಿ ಎದ್ದು ಬಂದು ನೋಡುವಷ್ಟರಲ್ಲಿ ಒಬ್ಬಾತ ಓಡಿ ಹೋಗಿದ್ದ. ಕೊನೆಗೆ ಯೋಚಿಸಿದಾಗ ಮೊದಲು ಕಾಟ ಕೊಡುತ್ತಿದ್ದ ವ್ಯಕ್ತಿಯೇ ಈತ ಎನ್ನುವುದೂ ತಿಳಿಯಿತು. `ಆತ ಇಲ್ಲಿಗೂ ಬಂದನಾ..?' ಎಂದು ಗೊಣಗಿದ ವಿಕ್ರಮ್. `ಯಾರು..? ಏನು? ಯಾರಾತ..?' ವಿನಾಯಕನ ಪ್ರಶ್ನೆ. `ಯಾರಿಲ್ಲ ಬಿಡು.. ಇನ್ನೊಮ್ಮೆ ಹೇಳ್ತೀನಿ..' ಎಂದ ವಿಕ್ರಮ್.
               ಅಷ್ಟು ಹೊತ್ತಿಗೆ ಸಾಕಷ್ಟು ಸಮಯವೂ ಆಗಿದ್ದರಿಂದ ವಾಪಸ್ಸಾಗಲು ಮುಂದಾದರು. ವಾಪಸ್ಸಾಗುವ ಮುನ್ನ ಲಾಲಗುಳಿ ಜಲಪಾತಕ್ಕೊಂದು ಗುಡ್ ಬೈ ಹೇಳಿ ಕಣ್ಣೀರು ಮನೆಯ ಕಡೆಗೆ ಹಾದಿ ಹಿಡಿದರು.

(ಮುಂದುವರಿಯುತ್ತದೆ)             

Monday, January 19, 2015

ಹಕ್ಕಿಗಳೇ ಹಾರಿಬಿಡಿ

ಹಕ್ಕಿಗಳೇ ಹಾರಿಬಿಡಿ ಬಾನಂಗಳಕೆ
ರೆಕ್ಕೆ ಬಲಿತಿದೆ, ಪುಕ್ಕ ಬೆಳೆದಿದೆ ಹಾರಿಬಿಡಿ |

ಇನ್ನೇಸು ದಿನ ತಂದೆ ತಾಯ್ಗಳ ಹಂಗು?
ಕಾಯುತಿದೆ ಮುಂದೊಂದು ಗಮ್ಯ ಬಿಂದು.
ಜೊತೆಯೆಲ್ಲೋ ಉಂಟು ಸಂಗಾತಿ ಹಕ್ಕಿ
ಹಾರಿದರೇ ನವಪುಳಕ, ನೀ ಚುಕ್ಕಿ |

ತಂದೆ ರೆಕ್ಕೆ ದುರ್ಬಲ, ತಾಯ್ಗಣ್ಣು ಮಂಜು
ತಂದು ಹಾಕುವರಿಲ್ಲ, ನೋವೇ ನಂಜು.
ಹಕ್ಕಿಗಳೇ ಹಾರಿಬಿಡಿ, ಬೇಟೆ ಹಿಡಿ.
ಹಾದಿಯೊಳಗಣ ಕಷ್ಟ  ಮರೆತುಬಿಡಿ |

ಕಲಿವಾಗೊಮ್ಮೆ ಬಿದ್ದಿರಬಹುದು ಈಗ ಜಟ್ಟಿ
ಸರ್ವಾತ್ಮ ಜೀವದೊಳು ನೀನೇ ಜಟ್ಟಿ
ಹಕ್ಕಿ ಹದ್ದನು ನೀನು ಗೆಲ್ಲಬಲ್ಲೆ
ಗಮ್ಯತೆಯ ರಮ್ಯತೆಯ ಪಡೆಯಬಲ್ಲೆ |

***
(ಈ ಕವಿತೆಯನ್ನು 3-06-2006ರಂದು ದಂಟಕಲ್ ನಲ್ಲಿ ಬರೆಯಲಾಗಿದೆ)

(ಆಕಾಶವಾಣಿ ಕಾರವಾರದಲ್ಲಿ ವಾಚನ ಮಾಡಿದ್ದೇನೆ)

Friday, January 16, 2015

ಅಘನಾಶಿನಿ ಕಣಿವೆಯುಲ್ಲಿ-8

               `ಅಮಾ... ಆನು ವಿಕ್ರಮ.' ಎಂದು ಹೇಳಿದಾಗ ಆಕೆಯ ಮುಖವರಳಿತು. ಖುಷಿಯಿಂದ `ಏನೋ.. ನಂಬಲೆ ಆಯ್ದಿಲ್ಲೆ ನೋಡು.. ಇಷ್ಟು ಉದಯಪ್ಪಾಗ ಎಲ್ಲಿಂದ ಬಂದೆ? ಯಂಗ ಒಂದ್ ಸಾರಿ ಗೊತ್ತೇ ಆಯ್ಲೆ.. ಅರೇ.. ಕಾರು ತಯಿಂದೆ. ಯಾರದ್ದು? ಅರೇ ಕಾರಲ್ಲಿ ಯಾರಿದ್ದ?  ಬಾ ವಳಗ ಹೋಪನ. ಬಿಸಿ ಬಿಸಿ ದ್ವಾಸೆ ಮಾಡಿದ್ದೆ ಬಿಲ್ಯ. ಕಾರಲ್ಲಿದ್ದವರನ್ನೂ ಕರಿ. ನಿನ್ನಂತೂ ಕಾಂಬುಲೇ ಔತ್ಲ್ಯಲೇ..' ಎಂದು ಗ್ರಾಮ್ಯ ಭಾಷೆಯಲ್ಲಿ ವಿಕ್ರಮನಿಗೆ ಹೇಳಿದಳು ಆತನ ತಾಯಿ ಲಕ್ಷ್ಮೀಬಾಯಿ.
              `ಅಮಾ.. ಆನು ಈಗಷ್ಟೆ ಬೈಂದೆ. ಕಾರು ಯನ್ನ ಮ್ಯಾಲಿನ ಆಫೀಸರದ್ದು. ಕಾರಲ್ಲಿದ್ದವರು ಯನ್ನ ಪ್ರೆಂಡ್ಸು..' ಎಂದು ಹೇಳಿ ವಿಕ್ರಂ ಕಾರಿನ ಬಳಿ ತಾಯಿಯನ್ನು ಕರೆದೊಯ್ದ. ಕಾರಿನಲ್ಲಿದ್ದವರನ್ನು ಪರಿಚಯಿಸಿದ. ಎಲ್ಲರೂ ಕೈಯಲ್ಲಿದ್ದ ಮಣಭಾರದ ಲಗೇಜುಗಳನ್ನು ಹೊತ್ತು ಒಳಗೆ ಹೋದರು.
              ವಿಕ್ರಮನದು ಭವ್ಯ ಮನೆ. ಇಡಿ ಮನೆ ಮರದಿಂದಲೇ ಮಾಡಿದ್ದು. ಹಳೆಯ ಕಾಲದ ಮನೆ ಎಂದು ನೋಡಿದೊಡನೆ ಹೇಳಬಹುದಿತ್ತು. ಯಾವ ಶತಮಾನದಲ್ಲಿ ಮನೆಯನ್ನು ಕಟ್ಟಲಾಗಿತ್ತೋ. ಬೀಟೆ, ತೇಗಗಳ ಮರಗಳಿಂದಲೇ ಮಾಡಿದ್ದು ಸ್ಪಷ್ಟವಾಗಿತ್ತು. ಎಲ್ಲರೂ ಒಳಗೆ ಹೋಗುವ ವೇಳೆಗೆ ವಿಕ್ರಮನ ತಂಗಿ ರಮ್ಯ ಎದುರಾದಳು. ಆಕೆಯನ್ನು ಎಲ್ಲರಿಗೂ, ಎಲ್ಲರನ್ನೂ ಆಕೆಗೂ ಪರಿಚಯಿಸಿದ ವಿಕ್ರಂ. ಅಷ್ಟರಲ್ಲಿ ತಿಂಡಿ ತಯಾರಿದೆಯೆಂಬ ಅಮ್ಮನ ಬುಲಾವ್ `ಆಸ್ರಿಗೆ ಕುಡಿಯಲಾತು..' ಕೇಳಿಸತೊಡಗಿತು. ಎಲ್ಲರೂ ಮುಖ, ಕೂಕಾಲುಗಳನ್ನು ತೊಳೆದು ತಿಂಡಿ ತಿನ್ನಲು ಕುಳಿತರು. ಅವರಿಗೆ ಭರ್ಜರಿಯಾಗಿ ದೋಸೆಗಳ ಮೇಲೆ ದೋಸೆಯನ್ನು ಹಾಕಿದರು. ದೋಸೆಯ ರುಚಿ ಆಹ್...! ಜೊತೆಗೆ ಕಾಯಿ ಚಟ್ನಿ.. ಅದೆಷ್ಟು ದೋಸೆಗಳು ಉದರವನ್ನು ಸೇರಿದವೋ.
             ಅಂತೂ ತಿಂಡಿ ಮುಗಿಸುವ ವೇಳೆಗಾಗಲೇ ಬೆಳಗಿನ ಎಲ್ಲಾ ಸ್ನಾನ, ಸಂಧ್ಯಾವಂದನೆ, ದೇವರಪೂಜೆ ಇತ್ಯಾದಿ ಕೆಲಸ ಮುಗಿಸಿ ಯಾರದ್ದೋ ಮನೆಗೆ ಯಾವುದೋ ಕೆಲಸಕ್ಕೆ ಹೋಗಿದ್ದ ವಿಕ್ರಮನ ತಂದೆ ರಾಜಾರಾಮ ಭಟ್ಟರು ಮನೆಗೆ ಬಂದರು. ಬಂದವರು ವಿಕ್ರಮನನ್ನು ನೋಡಿ `ಮಾಣಿ.. ಈಗ ಬೈಂದ್ಯ..' ಎಂದವರಿಗೆ ವಿಕ್ರಮ್ ತಲೆಯಲ್ಲಾಡಿಸಿ ಏನನ್ನೋ ಹೇಳಲು ಬಾಯಿ ತೆರೆಯುವಷ್ಟರಲ್ಲಿ `ಓ ವಿಜೇತಾ.. ಓ ಪ್ರದೀಪ್.. ಅರಾಮಿದ್ರಾ? ಆಸ್ರಿಗೆ ಕುಡದಾತಾ?' ಎಂದೆಲ್ಲಾ ಕೇಳಿದಾಗ ವಿಕ್ರಮನಿಗೆ ಒಮ್ಮೆಗೇ ಆಶ್ಚರ್ಯ ಹಾಗೂ ದಿಗ್ಭ್ರಾಂತಿ. `ನಾನು ಸರ್ಪ್ರೈಸ್ ಕೊಡಬೇಕು ಎಂದು ಇವರ ಬಗ್ಗೆ ಹೇಳ್ದೇ ಇದ್ರೂ ಅಪ್ಪಯ್ಯನಿಗೆ ಹೇಗೆ ತಿಳಿಯಿತು?' ಎಂದು ಆಲೋಚಿಸುತ್ತಾ `ಅರೇ.. ಅಪ್ಪಯ್ಯಾ.. ಇವಿಬ್ರೂ ಇದೇ ಮೊದ್ಲು ನಿಂಗೆ ಸಿಕ್ತಾ ಇದ್ದ. ಆದ್ರೂ ನಿಂಗೆ ಹ್ಯಾಂಗೆ ಇವ್ರ ಬಗ್ಗೆ ಗೊತ್ತಾತು?' ಎಂದು ವಿಕ್ರಮ ಕೇಳಿದಾಗ ತಬ್ಬಿಬ್ಬಾಗುವ ಸರದಿ ಭಟ್ಟರದ್ದಾಯಿತು.
            ಆದರೂ ತಕ್ಷಣ ಸಾವರಿಸಿಕೊಂಡು `ಅಲ್ದಾ ನೀನು ಪತ್ರ ಬರೆದಿದ್ಯಲ.. ಅದ್ರಲ್ಲಿ ತಿಳಿಸಿದ್ದೆ. ಅದಕ್ಕಾಗಿ ಗೊತ್ತಾತು ಬಿಲ್ಯಾ..' ಎಂದರು. ಆದರೆ ವಿಕ್ರಂ `ನಾನು ಬರೆದ ಲೆಟರಿನಲ್ಲಿ ಈ ಬಗ್ಗೆ ತಿಳಿಸಿಯೇ ಇರಲಿಲ್ಲ. ಆದರೂ ಹೇಗೆ ತಿಳಿಯಿತು? ಇದರಲ್ಲೇನೋ ವಿಶೇಷತೆ, ನಿಘೂಡತೆ ಇದೆ..' ಅಂದುಕೊಂಡ. ನಂತರ ದೂರದ ಪಯಣಿಗರೆಲ್ಲ ರಾತ್ರಿ ನಿದ್ದೆಗೆಟ್ಟ ಆಯಾಸ ಪರಿಹಾರಕ್ಕಾಗಿ ಹಾಸಿಗೆಗೆ ತೆರಳಿದರು. ಅಲ್ಲಿಗೆ ಕಥೆಗೆ ಒಂದು ದೊಡ್ಡ ತಿರುವು ಸಿಕ್ಕಂತಾಗಿತ್ತು.
             ಹಾಗಾದರೆ ರಾಜಾರಾಮ ಭಟ್ಟರಿಗೆ ವಿಜೇತಾ, ಪ್ರದೀಪರ ಬಗ್ಗೆ ಹೇಗೆ ತಿಳಿಯಿತು? ಇವರಿಗೆ ಮೊದಲೇ ಈರ್ವರ ಪರಿಚಯ ಇತ್ತೇ? ಅಥವಾ ಬೇರೆ ಯಾರಾದರೂ ತಿಳಿಸಿದ್ದರೇ? ಇದು ಮಾತ್ರ ನಿಗೂಢವಾಗಿತ್ತು. ಜೊತೆಗೆ ವಿಕ್ರಮನನ್ನು ಹಿಂಬಾಲಿಸುತ್ತಿದ್ದ ನಿಗೂಢ ವ್ಯಕ್ತಿ ಇಲ್ಲಿಗೂ ಬಂದಿದ್ದ. ಆತ ಹೀಗೆ ವಿಕ್ರಮನ ಹಿಂಬಾಲಿಸಲು ಕಾರಣ ಏನು? ಇಷ್ಟೆಲ್ಲ ನಡೆದಿದ್ದಿ ಎಪ್ರಿಲ್ 10ರಂದು.

****

          ಮದ್ಯಾಹ್ನದ ವರೆಗಿನ ಗುಟುಕು ನಿದ್ದೆಗೆ ಎಲ್ಲರೂ ಕ್ರಿಯಾಶೀಲರಾದರು. ಊರಿನ ಪರಿಸರವನ್ನು ಆಸ್ವಾದಿಸಲು ಹೊರಗೆ ಹೊರಟರು. ವಿಕ್ರಂ, ವಿಜೇತಾ, ರಮ್ಯ, ಪ್ರದೀಪರು ಹೊರಟರೆಂದರೆ ಊರಿಗೆ ಊರೇ ಮತ್ತೆ ಮತ್ತೆ ನೋಡಲಾರಂಭಿಸಿತ್ತು. ಆದರೆ ಗುಸು ಗುಸು ಸುದ್ದಿ ಮಾತನಾಡುವಷ್ಟು ಮನೆಗಳು ಹತ್ತಿರದಲ್ಲಿ ಇಲ್ಲವಾದ ಕಾರಣ ಇವರು ಎಲ್ಲರ ಬಾಯಿಗೆ ಆಹಾರವಾಗುವುದು ತಪ್ಪಿತು. ಇದರ ಪರಿವಿಲ್ಲದ ಇವರು ಊರು, ಊರಿನ ಪರಿಸರ, ಊರ ತುದಿಯಲ್ಲಿರುವ ಕಾಳಿ ನದಿಯ ಉಪನದಿ ಇಲ್ಲೆಲ್ಲ ತಿರುಗಾಡಿದರು.
           ಮುಖ್ಯ ಸಂಗತಿಗಳನ್ನು ಬರೆದಿಟ್ಟುಕೊಳ್ಳುತ್ತಿದ್ದ ವಿಜೇತಾ ಆಗಾಗ ಸುಂದರ ಪೋಟೋಗಳನ್ನು ಕ್ಲಿಕ್ಕಿಸುತ್ತಿದ್ದಳು. ಪ್ರದೀಪನಿಗೆ ಇವುಗಳಲ್ಲಿ ಆಸಕ್ತಿ ಇಲ್ಲದ ಕಾರಣ ಆತ ಈ ಯಾವ ಕೆಲಸಗಳನ್ನೂ ನಡೆಸಲಿಲ್ಲ. ಆದರೂ ಎಲ್ಲಾ ಕಡೆ ಏನನ್ನೋ ಹುಡುಕುವಿಕೆಯ, ಕಳ್ಳದೃಷ್ಟಿಯ ಬೀರುತ್ತಿದ್ದ. ಆಗಾಗ ಬಾಯಲ್ಲಂತೂ `ರಮ್ಯ ಜೀವನ.. ಸಂಪೂರ್ಣ ವಿಧಿಯ ಕಲಾವಿಧಾನ...' ಎಂತಲೋ ಮತ್ಯಾವುದೋ ಸುಂದರ ಹಾಡುಗಳನ್ನು ಹಾಡುತ್ತ ಸಾಗುತ್ತಿದ್ದ. ವಿಕ್ರಮ ಎಲ್ಲವುಗಳಿಗೆ ವಿವರಣೆ ನೀಡುತ್ತಿದ್ದರೆ, ವಾಚಾಳಿ ರಮ್ಯ ಪ್ರತಿಯೊಂದರ ಬಗೆಗೂ ಸಾಕಷ್ಟು ಹರಟುತ್ತಿದ್ದಳು. ಕಾಡಿನ ನಡು ನಡುವಿನ ಗದ್ದೆಗಳು, ತೋಟ, ತೋಟದ ಮಧ್ಯ ಮಧ್ಯದಲ್ಲಿ ತೆಂಗಿನಮರಗಳು, ಮಾವು, ಹಲಸು ಮರಗಳು ಆ ಊರಿನ ಸೊಬಗಿಗೆ ತಾವೇನನ್ನೋ ಕೊಟ್ಟಿದ್ದೇವೆ ಎನ್ನುವಂತಿದ್ದವು. ಇವರು ಮುಖ್ಯವಾಗಿ ಒಂದು ದಾರಿಯನ್ನು ಹಿಡಿದು ಹೋಗಿದ್ದರು. ಕೊನೆಗೆ ಅಲ್ಲೊಂದು ಪುಟ್ಟ ಕಟ್ಟಡ ಕಂಡು ಬಂದಿತು. ಅದನ್ನು ತೋರಿಸಿದ ವಿಕ್ರಮ್ `ಇದೇ ನಾನು ಕಲಿತ ಪ್ರೈಮರಿ ಶಾಲೆ..' ಎಂದ.
             ಆ ಶಾಲೆ ಹಳ್ಳಿಗಾಡಿನ ನ್ಯೂನತೆಗಳನ್ನೇ ಮೈವೆತ್ತಿಕೊಂಡಂತಿತ್ತು. ಎಂದೋ ಹಾಕಲಾಗಿದ್ದ ಸಿಮೆಂಟು ಅಲ್ಲಲ್ಲಿ ಕಿತ್ತು ಹೋಗಿತ್ತು. ಅಲ್ಲಲ್ಲಿ ಹಂಚುಗಳು ಒಡೆದಿದ್ದವು. ಈ ಶಾಲೆ ಸರ್ಕಾರದ ದಿವ್ಯ ನಿರ್ಲಕ್ಷ್ಯದ ಕನ್ನಡಿಯಂತೆ ಕಂಡಿತು. ಇವರು ಹೋದ ದಿನ ಶಾಲೆಯಲ್ಲಿ ಸಾಕಷ್ಟು ವಿದ್ಯಾರ್ಥಿಗಳಿದ್ದರು. ಅದರೊಳಗೆ ದೊಡ್ಡದಾಗಿ ಓದಿ ಹೇಳುತ್ತಿದ್ದ ಮಾಸ್ತರರ ಧ್ವನಿ `ಬಾರ ಬಾರ ಆತೀ ಹೈ ಮುಝಕೋ.. ಮಧುರ ಯಾದ ಬಚಪನ ತೇರಿ...' ಎಂಬ ಸಾಲುಗಳೂ ಜೊತೆಗೆ ಹತ್ತೆಂಟು ಮಕ್ಕಳು ಇದೇ ಸಾಲನ್ನು ಪುನಃ ಉಚ್ಛಾರ ಮಾಡಿದ್ದೂ ಕೇಳುತ್ತಿತ್ತು.
             `ಈ ಶಾಲೆ ಹಲವು ವಿಶೇಷತೆಗಳಿವೆ. ಪ್ರತಿ ಮಳೆಗಾಲದಲ್ಲಿ ಶಾಲೆಗೆ ಅನಿರ್ದಿಷ್ಟಾವಧಿ ರಜಾ ಸಿಗುತ್ತದೆ. ಉಕ್ಕೇರಿ ಹಳ್ಳ-ಕೊಳ್ಳಗಳು ಊರಿಗೂ ಹೊರಜಗತ್ತಿಗೂ ಸಂಪರ್ಕವನ್ನು ಕಲ್ಪಿಸುತ್ತವೆ. ಯಲ್ಲಾಪುರದಿಂದ ನಮ್ಮೂರ ಶಾಲೆಗೆ ಪ್ರತಿದಿನ ಮಾಸ್ತರ್ರು ಬಂದು ಕಲಿಸಿ ಹೋಗುತ್ತಾರೆ. ತಮ್ಮದೊಂದು ಬೈಕ್ ತರುತ್ತಾರೆ. ಆದರೆ ಮಳೆಗಾಲದಲ್ಲಿ ಮಾತ್ರ ಅವರು ಶಾಲೆಗೆ ಬರುವುದು ತಪ್ಪುತ್ತದೆ. ಹಳ್ಳ-ಕೊಳ್ಳದ ನೀರಿನ ಸೆಳವು ಇಳಿದ ನಂತರವೇ ಮಾಸ್ತರ್ರು ಶಾಲೆಗೆ ಮರಳುವುದು. ಅಲ್ಲಿಯವರೆಗೂ ಮಕ್ಕಳಿಗೆ ಶಾಲೆ ನಡೆಯುವುದಿಲ್ಲ. ಸ್ಥಳೀಯವಾಗಿ ಪಿಯುಸಿ ಮುಗಿಸಿದವರಿದ್ದರೆ ಅವರು ಶಾಲೆಗೆ ಬಂದು ಮಕ್ಕಳಿಗೆ ಪಾಠ ಹೇಳುವ ಕೆಲಸವನ್ನು ಮಾಡುತ್ತಾರೆ.. ಇದು ಈ ಶಾಲೆಯ ವಿಶೇಷತೆಗಳು..' ಎಂದ ವಿಕ್ರಮ.
             ಮಧ್ಯದಲ್ಲಿ ಬಾಯಿ ಹಾಕಿದ ರಮ್ಯ. `ನಾವು ಶಾಲೆಗೆ ಹೋಗುತ್ತಿದ್ದ ದಿನಗಳು ಬಹಳ ಬೊಂಬಾಟ್.. ಅಣ್ಣ ಏಳನೇ ಕ್ಲಾಸಲ್ಲಿ ಓದುತ್ತಿದ್ದ. ನಾನು ಒಂದನೇ ಕ್ಲಾಸು.. ಸತೀಶ ಮಾಸ್ತರ್ರು ನಮ್ಮ ಮೊದಲ ಮಾಸ್ತರ್ರು.. ಆಮೇಜೆ ಜಿ. ಎಸ್. ಭಟ್ಟರು, ಅದಾದ ಮೇಲೆ ತಾರಕ್ಕೋರು, ಗಂಗಕ್ಕೋರು, ಗಡ್ಕರ್ ಮಾಸ್ತರ್ರು, ಹರೀಶ ಮಾಸ್ತರ್ರು ಎಲ್ಲಾ ನಮಗೆ ಕಲಿಸ್ತಿದ್ರು.. ಅವರೆಲ್ಲ ಎಷ್ಟು ಸ್ಟ್ರಿಕ್ಟ್ ಆಗಿದ್ದರು ಎಂದರೆ ನಾವೆಲ್ಲಾ ಗಡಗಡ.. ಸತೀಶ ಮಾಸ್ತರ್ರು, ಜಿ. ಎಸ್. ಭಟ್ಟರು ದೊಡ್ಡ ದೊಡ್ಡ ಬೆತ್ತಗಳಿಂದ ನಮಗೆ ಹೊಡೆಯುತ್ತಿದ್ದರೆ ನಮ್ಮ ಕೈ, ಬೆನ್ನ ಮೇಲೆ ಬಾಸುಂಡೆಗಳು ಬರುತ್ತಿದ್ದವು. ಇದ್ದವರ ಪೈಕಿ ಗಡ್ಕರ್ ಮಾಸ್ತರ್ರು ಪಾಪದವರು. ಯಾವಾಗಲೂ ನಗಿಸುತ್ತಿದ್ದರು. ಆದರೆ ಅಣ್ಣನಿಗೆ ಮಾತ್ರ ಅವರು ಅಂದರೆ ಕನಸಲ್ಲೂ ಕಾಡುತ್ತಾರೆ. ನಮಗೆಲ್ಲ ಮದ್ಯಾಹ್ನ ಆಟಕ್ಕೆ ಬಿಟ್ಟಿದ್ದಾಗ ಅಣ್ಣನಿಗೆ ಬುಲಾವ್ ನೀಡುತ್ತಿದ್ದ ಗಡ್ಕರ್ ಮಾಸ್ತರ್ರು ತಮ್ಮೊಡನೆ ಚೆಸ್ ಆಡಲು ಕೂರಿಸಿಕೊಳ್ಳುತ್ತಿದ್ದರು. ನಾವೆಲ್ಲ ಬಯಲಲ್ಲಿ ಆಡುತ್ತಿದ್ದರೆ ಪಾ..ಪ ಅಣ್ಣ ಆಸೆಗಣ್ಣಿನಿಂದ ನೋಡುತ್ತಿದ್ದ.. ಇನ್ನೊಂದ್ ಮಜಾ ಅಂದ್ರೆ  ಗಡ್ಕರ್ ಮಾಸ್ತರ್ರಿಗೆ ದೃಷ್ಟಿ ದೋಷ ಇತ್ತು. ಯಾವಾಗಲೂ ಚೆಸ್ಸಿನಲ್ಲಿ ಕಪ್ಪು ಕಾಯಿ ಅವರದ್ದೇ ಆಗಬೇಕಿತ್ತು. ಅಣ್ಣನದ್ದು ಬಿಳಿಯ ಕಾಯಿ. ಅಣ್ಣ ಕಡ್ಡಾಯವಾಗಿ ಸೋಲಲೇಬೇಕು. ಪಾ..ಪ ಅಣ್ಣನ ಪಚೀತಿ ಮಜವಾಗಿತ್ತು..' ಎಂದಾಗ ಎಲ್ಲರೂ ನಕ್ಕರು.
             ಹೀಗೆ ಮಾತುಗಳು ಸಾಗುತ್ತಿದ್ದಾಗ ಎಲ್ಲರೂ ತಮ್ಮ ತಮ್ಮ ಮರೆತ ಬಾಲ್ಯದ ನೆನಹುಗಳ ಕಡೆಗೆ ಸಾಗಿದಾಗ ಪ್ರದೀಪ ಒಮ್ಮೆಲೆ ನಸುನಕ್ಕ. `ಯಾಕಪ್ಪಾ..' ಎಂದು ಕೇಳಿದಾಗ ಪ್ರದೀಪ `ಅಯ್ಯೋ ನಮ್ ಹುಡ್ಗುಗೆ ನಾನು ಹೈಸ್ಕೂಲ್ನಲ್ ಇದ್ದಾಗ ಮೊಟ್ಟ ಮೊದಲ ಬಾರಿಗೆ ಲವ್ ಲೆಟರ್ ಬರೆದಿದ್ನಪ್ಪಾ.. ಅಯ್ಯೋ ಅದೊಂದು ಗೋಳಿನ ಕಥೆ ಬಿಡಿ...' ಎಂದು ತನ್ನ ಕಥೆಯನ್ನೆಲ್ಲ ಹೇಳಿದ. ಎಲ್ಲರೂ ನಕ್ಕರು.
         ಒಂದಷ್ಟು ಪ್ರದೇಶಗಳನ್ನು ವೀಕ್ಷಿಸುವ ವೇಳೆಗೆ ಆಗಲೇ ಸಕಲ ಜೀವನ ಚೈತನ್ಯಕ್ಕೆ ಕಾರಣಕರ್ತನಾದ ನೇಸರ ಪಶ್ಚಿಮದೆಡೆಗೆ ಹೊರಟಿದ್ದ. ಎಲ್ಲರೂ ಮರಳಿ ಮನೆಯತ್ತ ನಿಧಾನವಾಗಿ ಹೆಜ್ಜೆ ಹಾಕಿದರು. ಇವರೂ ಮನೆಯ ಕಡೆಗೆ ಮರಳಲು ಮುಂದಾದರು. ಹೆಜ್ಜೆ ಹಾಕಿದರು.
         ಅವರು ಸ್ವಲ್ಪ ದೂರ ಬಂದಿರಬಹುದು. ಅಷ್ಟರಲ್ಲೊಬ್ಬರು ವಯಸ್ಸಾದ ವ್ಯಕ್ತಿ ಆ ದಾರಿಯಲ್ಲಿ ಬಂದರು. ಸಾಕಷ್ಟಿದ್ದ ಕೆಂಪಡರಿದ್ದ ಅವರ ಪಂಚೆ ಇಳಿಸಂಜೆಯ ಕೆಂಬಣ್ಣಕ್ಕೆ ಮತ್ತಷ್ಟು ಕೆಂಪಡರಿತ್ತು. ಬಾಯ್ತುಂಬ ಬಡವರ ಅಮೃತವಾದ ಕವಳವನ್ನು ಮೆಲ್ಲುತ್ತಾ ಆಗಾಗ ತುಪ್ಪುತ್ತಾ, ಏನನ್ನೋ ಹುಡುಕುವ ರೀತಿಯಲ್ಲಿ ಆಗಾಗ ಸೂರ್ಯನ ಕಿರಣಗಳ ಮರೆಮಾಡಿ ಕಣ್ಣು ಕೀಲಿಸುತ್ತಾ ಬರುತ್ತಿದ್ದರು.
        ದೂರದಿಂದಲೇ ಆತನನ್ನು ಗುರುತಿಸಿದ ರಮ್ಯ `ನೋಡಿ ಅಲ್ಲಿ ಬರ್ತಾ ಇದ್ವಲಿ ಅವರೇ ರಾಮಕೃಷ್ಣ ಗಾಂವ್ಕಾರರು. ನಮ್ಮೂರಿನವರೇ.. ಇಲ್ಲೇ ಸ್ವಲ್ಪ ದೂರದಲ್ಲಿ ಅವರ ಮನೆಯಿದೆ...' ಎಂದು ಹೇಳುವ ವೇಳೆಗೆ ಅವರು ಹತ್ತಿರ ಬಂದು `ನೀವ್ಯಾರು? ನಿಂಗವ್ಕೆ ಯಲ್ಲಾತು? ಗುರ್ತು ಸಿಕ್ಕಿದ್ಲ್ಯಲೇ ಯಂಗ..' ಎಂದು ಕೇಳಿದಾಗ ವಿಕ್ರಮ್ `ನಾನು ಗಾಂವ್ಕಾರಜ್ಜ ವಿಕ್ರಮ. ರಾಜಾರಾಮ ಭಟ್ರ ಮಗ. ಇವೆಲ್ಲ ಯನ್ನ ಪ್ರೆಂಡ್ಸು..' ಎಂದ.
           ಅದಕ್ಕೆ ಗಾಂವ್ಕಾರರು `ಯೇ ನೀ ಮಂಗ್ಲೂರಲ್ಲಿದ್ಯಡ.. ಯಂತಾ ಮಾಡ್ತಾ ಅಲ್ಲಿ? ಯಲ್ಲಾ ಸುಡುಗಾಡು ನೌಕರಿ ಹೇಳ್ತ.. ಯಂತಾ ಮಾಡ್ತ್ವ ಏನ..' ಎಂದು ಹೇಳಿದಾಗ ವಿಕ್ರಮ್ ಒಂದೆರಡು ದೀರ್ಘ ವಾಕ್ಯಗಳ ಉತ್ತರ ಕೊಟ್ಟ.
            `ಈ ನಿನ್ನ ಗೆಳೆಯಂದಿಕ್ಕಳ್ನ ನೀ ಹೋಪೂದ್ರೊಳಗ ಯಮ್ಮನೆಗೆ ತೆಕಂಡು ಬಾ ಬಿಲ್ಯ..'ಎಂದು ಹೇಳಿ ತಮ್ಮ ಮನೆಗೆ ಆಮಂತ್ರಣವನ್ನು ನೀಡಿ ಹೊರಟು ಹೋದರು ಗಾಂವ್ಕಾರರು.
            ಗಾಂವ್ಕಾರರು ಹೋದ ನಂತರ ಅವರ ಬಗ್ಗೆ ವಿಕ್ರಮ್, ರಮ್ಯ ಇಬ್ಬರೂ ಹೆಚ್ಚಿನ ವಿವರಣೆ ನೀಡಿದರು. ಇವರ ಮಾತಿನಿಂದ `ಗಾಂವ್ಕಾರರದ್ದು ಚಿಕ್ಕ, ಸುಂದರ ಕುಟುಂಬವಾಗಿತ್ತು. ಸುಖ, ಶಾಂತಿ, ಸಂಪತ್ತು ತುಳುಕುತ್ತಿದ್ದ ಕಾಲದಲ್ಲಿ ಇದ್ದೊಬ್ಬ ಮಗ ಇದ್ದಕ್ಕಿದ್ದಂತೆ ಕಾಣೆಯಾದ. ಇನ್ನೂತನಕ ಆತನ ಸುಳಿವು ತಿಳಿಯದ ಕಾರಣ ಅದೇ ಚಿಂತೆಯಲ್ಲಿ ಕೊರಗುತ್ತಿದ್ದ ಗಾಂವ್ಕಾರರು ಪ್ರತಿಯೊಬ್ಬ ಯುವಕನಲ್ಲೂ ತನ್ನ ಕಳೆದುಹೋದ ಮಗನನ್ನು ಹುಡುಕುತ್ತಿದ್ದಾರೆ' ಎನ್ನುವ ವಿಷಯ ತಿಳಿದುಬಂದಿತು.
           ವಿಕ್ರಮ್ `ಗಾಂವ್ಕಾರರ ಮಗ ಒಳ್ಳೆಯ ಪ್ರತಿಭಾವಂತನಾಗಿದ್ದ. ಹಾಡು, ಚಿತ್ರಕಲೆ, ರಂಗೋಲಿ ಹಾಕುವುದು, ಮಿಮಿಕ್ರಿ ಇವುಗಳಲ್ಲೆಲ್ಲ ಎತ್ತಿದ ಕೈ ಆಗಿತ್ತು. ನನಗಿಂತ ಎರಡು ವರ್ಷ ಸೀನಿಯರ್. ಪಾಪ ಈಗ ಎಲ್ಲಿದ್ದಾನೋ..? ಹೇಗಿದ್ದಾನೋ..? ಅಥವಾ ಬದುಕಿದ್ದಾನೋ ಗೊತ್ತಿಲ್ಲ. ಪಾಪ.. ಈ ವೃದ್ಧ ತಂದೆ ತಾಯ್ಗಳ ದುಃಖ ಹೇಳತೀರದು..' ಎಂದ.
            ಈ ಬಗ್ಗೆ ಕೊಂಚ ಮರುಗುವಿಕೆ ಕೊರಗುವಿಕೆಯೆಲ್ಲ ನಡೆಯುವ ವೇಳೆಗೆ ಕತ್ತಲೆಯ ರಥ ಬೆಳಕ ಗಾಡಿಯನ್ನಟ್ಟಿ ಆಗಿತ್ತು. ಆ ಸಂದರ್ಭದಲ್ಲಿಯೇ ಇವರೆಲ್ಲ ಮನೆಯನ್ನು ತಲುಪಿದ್ದರು.

 (ಮುಂದುವರಿಯುತ್ತದೆ..)

Tuesday, January 13, 2015

ಶೇರು ಹನಿಗಳು

ಮುಖ್ಯಸ್ಥ

ಸಾಮಾಜಿಕ ಜಾಲತಾಣಗಳಲ್ಲಿ
ಕಂಡ ಕಂಡದ್ದನ್ನೆಲ್ಲ
ಶೇರ್ ಮಾಡುವವನನ್ನು
ಶೇರೂಗಾರ ಎನ್ನಬಹುದೆ?

ತೋಫಾ..

ಹಿಂದುಸ್ಥಾನದ ಬಗ್ಗೆ
ಪ್ರತಿಯೊಂದನ್ನೂ ಶೇರ್
ಮಾಡುವವನನಿಗೆ
ಶೇರ್-ಎ-ಹಿಂದುಸ್ಥಾನ್
ಬಿರುದನ್ನು ಕೊಡಬಹುದು |

ಹೀಗೂ ಉಂಟೇ

ಸಾಮಾಜಿಕ ಜಾಲತಾಣದಲ್ಲಿ
ಅತಿ ಹೆಚ್ಚು ಶೇರ್
ಮಾಡುವ ಅಪ್ಪಂದಿರಿಗೆ
ಶೇರ್ಪಾ ಎನ್ನಬಹುದು |

ಪ್ರತಿದಾಳಿ

ಶೇರ್ ಮಾಡುವ ವ್ಯಕ್ತಿ
ಶೇರ್ ಮಾಡುವ ಇನ್ನೊಬ್ಬ
ವ್ಯಕ್ತಿಯ ಜೊತೆ ಸ್ಪರ್ಧೆಗಿಳಿದು
ದಾಳಿ-ಪ್ರತಿದಾಳಿ
ನಡೆಸಿದರೆ
ಶೇರ್ ಗೆ ಸವ್ವಾ ಶೇರ್
ಎನ್ನಬಹುದು |

Sunday, January 11, 2015

ರಾಜು ನಾಯಿಯ ನೆನಪು

           ನನಗೀಗಲೂ ನೆನಪಿದೆ. ನಾನು ಮನೆಯಲ್ಲಿ ಮೊಟ್ಟಮೊದಲು ಸಾಕಿದ್ದು ಒಂದು ನಾಯಿ. ಚಿಕ್ಕವನಿದ್ದಾಗ. ಅಂದರೆ ಪ್ರೈಮರಿ ವಯಸ್ಸು. 1 ರಿಂದ 4 ಕ್ಲಾಸಿನ ಒಳಗೆ. ಆ ನಾಯಿಗೆ ರಾಜೂ ಅಂತ ಹೆಸರಿಟ್ಟಿದ್ದೆ. ಸಾಮಾನ್ಯವಾಗಿ ನಾಯಿಗೆ ರಾಜೂ, ರಾಮೂ, ಟಿಪ್ಪು ಇತ್ಯಾದಿ ಹೆಸರು ಇಡುವುದು ಕಾಮನ್ನು. ಆ ದಿನಗಳಲ್ಲಿ ನಾನು ಚಿಕ್ಕವನಿದ್ದ ಕಾರಣ ಹೆಸರಿಗೆ ವಿಶೇಷ ಸರ್ಕಸ್ ಮಾಡಲಿಲ್ಲ. ರಾಜೂ ಎಂಬ ಸಾಮಾನ್ಯ ಹೆಸರನ್ನಿಟ್ಟಿದ್ದೆ.
(ಥೇಟ್ ಹಿಂಗೇ ಇತ್ತು ರಾಜು... )
               ಆ ರಾಜೂ ನಾಯಿಗೆ ನಾನೆಂದರೆ ಬಹಳ ಅಚ್ಚುಮೆಚ್ಚಾಗಿಬಿಟ್ಟಿತ್ತು ನೋಡಿ. ಪ್ರೈಮರಿ ಸಮಯದಲ್ಲಿ ಅತ್ಯಂತ ಹೆಚ್ಚಿನ ಕಿಲಾಡಿಯವನಾಗಿದ್ದ ನಾನು ಪರೀಕ್ಷೆಯಲ್ಲಿ ತೆಗೆದುಕೊಳ್ಳುವ ಮಾರ್ಕ್ಸುಗಳು ಅಷ್ಟಕ್ಕಷ್ಟೇ ಆಗಿತ್ತು. ನಾನು ಕಡಿಮೆ ಮಾರ್ಕು ತೆಗೆದುಕೊಂಡಾಗಲೆಲ್ಲ ಅಪ್ಪ-ಅಮ್ಮ ಜೋರಾಗಿ ಬೈದು, ಬಡಿದು ಮಾರ್ಕ್ಸ್ ವಾದಿ ಎನ್ನಿಸಿಕೊಳ್ಳುತ್ತಿದ್ದರು. ನಾನು ಬೆದರಿದ ಇಲಿಮರಿಯಂತೆ  ಸುಮ್ಮನಿದ್ದಾಗ ನನ್ನ ಪರ ವಹಿಸಿ ಧ್ವನಿ ಎತ್ತುತ್ತಿದ್ದವರೆಂದರೆ ಇಬ್ಬರೇ. ಒಬ್ಬರು ನನ್ನಜ್ಜ ಇಗ್ಗಜ್ಜ. ಇನ್ನೊಬ್ಬರು ರಾಜು ನಾಯಿ.
            ಅಜ್ಜ ನನ್ನನ್ನು ವಹಿಸಿಕೊಂಡು ಬರುವುದು ಸಾಮಾನ್ಯ ಸಂಗತಿ ಬಿಡಿ. ಆದರೆ ರಾಜು ನಾಯಿ.. ಮಜಾ ಅನ್ನಿಸಿದ್ದೇ ಆವಾಗ. ಬೀದಿ ಬದಿಯಲ್ಲೆಲ್ಲೋ ಬಿದ್ದುಕೊಂಡಿದ್ದ ನಾಯಿಯನ್ನು ಮನೆಗೆ ತಂದು, ಅವಿಭಕ್ತ ಕುಟುಂಬದ ನನ್ನ ಚಿಕ್ಕಪ್ಪಂದಿರ ವಿರೋಧದ ನಡುವೆಯೂ ಸಾಕಿದ ನನ್ನ ಮೇಲೆ ರಾಜುವಿಗೆ ಅದೇನೋ ವಿಶೇಷ ಪ್ರೀತಿ ಬೆಳೆದು ಬಿಟ್ಟಿತ್ತು. ಶಾಲೆಯಿಂದ ಸಂಜೆ ಮನೆಗೆ ಬಂದವನೇ ನಾನು ದೋಸೆಯನ್ನು ತಿನ್ನುವುದು ಪ್ರತಿಧಿನ ರೂಢಿ. ದೋಸೆಯನ್ನು ನಾನು ತಿನ್ನುವ ಮುನ್ನ ರಾಜುವಿಗೂ ಹಾಕಲೇಬೇಕು. ಇಲ್ಲವಾದರೆ ರಾಜುವಿನಿಂದ `ಅಯ್ಯೋ...' ಎನ್ನುವ ಊಳಾಟ ಗ್ಯಾರಂಟಿ. ನನ್ನನ್ನು ಯಾರಾದರೂ ಬಯ್ಯಲಿ, ಹೊಡೆಯಲು ಕೈಯೆತ್ತಿಕೊಂಡು ಬರಲಿ ಅಂತವರನ್ನು ಬೆನ್ನಟ್ಟಿ ಹೋಗುತ್ತಿತ್ತು ರಾಜು. ಅನೇಕರು ಇದನ್ನು ಪರೀಕ್ಷೆ ಮಾಡುವ ಸಲುವಾಗಿಯೇ ನನ್ನನ್ನು ಬೈದು, ಹೊಡೆದಿದ್ದೂ ಇದೆ ಎನ್ನಿ.
             ಭಾನುವಾರ ಬಂತೆಂದರೆ ನನಗೂ ರಾಜು ವಿಗೂ ಅದೇನೋ ಅಡಗರ. ಇಬ್ಬರೂ ಮನೆಯಿಂದ ಒಂದೋ ಒಂದೂವರೆಯೂ ಕಿ.ಮಿ ದೂರದಲ್ಲಿದ್ದ ಕುಚಗುಂಡಿ ಗದ್ದೆಯತ್ತ ಹೊರಟುಬಿಡುತ್ತಿದ್ದೆವು. ಅಲ್ಲೇ ಇರುವ ಕಾಕಾಲ ಗದ್ದೆಯಲ್ಲಿ ವಿಶಾಲವಾಗಿ ಹರಿಯುವ ಅಘನಾಶಿನಿ ನದಿಯನ್ನು ದಾಟಿ ನಾನು ಆಚೆ ದಡದಲ್ಲಿ ನಿಂತು `ರಾಜೂ ಕುರೂಯ್...' ಎಂದು ಕರೆದರೆ ಒಂದೆರಡು ಸಾರಿ ನೀರನ್ನು ಕಂಡು ಚಡಪಡಿಸುವ ರಾಜು ಏಕಾ ಏಕಿ ನೀರಿಗೆ ಧುಮುಕಿ ಲಬಕ್ ಲಬಕ್ ಎಂದು ಮುಳುಗುತ್ತ, ಯಡ್ರಾ ಬಡ್ರಾ ಈಸುತ್ತ ನಾನಿದ್ದ ದಡಕ್ಕೆ ಬಂದಾಗ ನನ್ನಲ್ಲಿ ನಗುವಿರುತ್ತಿತ್ತು. ಇತ್ಲಾ ದಡಕ್ಕೆ ಬಂದ ನಾಯಿ ನದಿ ದಾಟಿದ್ದ ಕಾರಣಕ್ಕೆ ತನ್ನ ವದ್ದೆಯಾದ ಮೈಯನ್ನು ಪಟ್ಟಾ ಪಟ್ಟಾ ಎಂದು ನನ್ನತ್ತ ಕುಡುವುತ್ತಿತ್ತು.. `ಹಚ್ಯಾ ಹೊಲಸು ಕುನ್ನಿ..' ಎಂದು ನಾನು ಬಯ್ಯುತ್ತಿದ್ದೆನಾದರೂ ಅಕ್ಕರೆಯ ಪ್ರಿತಿಗೆ ಎನ್ನುವುದು ಸುಳ್ಳಲ್ಲ ನೋಡಿ.
          ಒಂದು ಭಾನುವಾರ ನಾನು ರಾಜು ಜೊತೆಗೆ ಗದ್ದೆಗೆ ಹೋಗಿದ್ದೆ. ಯಾವಾಗಲೂ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ನನ್ನ ಚಿಕ್ಕಪ್ಪಂದಿರಾದ ನಾಗೇಂದ್ರ ಹಾಗೂ ಮಹೇಶರು ಆವತ್ತು ಯಾವ ಕಾರಣಕ್ಕೋ ಅಲ್ಲಿರಲಿಲ್ಲ. ನಾನು ಹೋದವನಿಗೆ ಹೊತ್ತು ಹೋಗಬೇಕಲ್ಲ. ಮದ್ಯಾಹ್ನದ ಹೊತ್ತು ಬೇರೆ. ಮನೆಯಲ್ಲಿದ್ದರೆ ಊಟಕ್ಕೆ ಬಾ ಎಂಬ ಬುಲಾವೂ ಬರುತ್ತಿತ್ತು. ಹೋದವನು ಗದ್ದೆಯಲ್ಲೆಲ್ಲ ಸುತ್ತಾಡಿದೆ. ಅಲ್ಲೊಂದು ಕಡೆ ಗದ್ದೆಯ ಹಾಳಿಯ ಮೇಲೆ ನಾಲ್ಕೈದು ಬಿಳಿಯ ಮೊಟ್ಟೆಗಳು ಕಾಣಿಸಿತು. ಕುತೂಹಲದಿಂದ ನೋಡುತ್ತಿದ್ದಂತೆ ರಾಜು ಒಂದು ಮೊಟ್ಟೆಯನ್ನು ಕಚ್ಚಿಯೇ ಬಿಟ್ಟಿತು. ಪಾ...ಪ  ಆ ಮೊಟ್ಟೆಯಲ್ಲಿ ಇನ್ನೊಂದು ವಾರ ಕಳೆದಿದ್ರೆ ಹಕ್ಕಿಯಾಗಿ ಹಾರಿ ಹೊರ ಹೋಗಲು ಬಯಸಿದ್ದ ಬೆಳ್ಳಕ್ಕಿ ಮರಿಯೊಂದು ಜೀವ ತಳೆಯುತ್ತಿತ್ತು. ರಾಜು ಮೊಟ್ಟೆಯೊಡೆದದ್ದೇ ಒಡೆದದ್ದು ಒಂದೆರಡು ಸಾರಿ ವಿಲಿ ವಿಲಿ ಒದ್ದಾಡಿದ ಆ ಹಕ್ಕಿಯ ಜೀವ ಚಟ್ಟನೆ ಹಾರಿ ಹೋಯಿತು. ನಾನು ಸಿಟ್ಟಿನಿಂದ ರಾಜುವಿನ ಬೆನ್ನಿಗೆ ಗನಾಕಿ ಬಡಿದೆ. ಕಂಯ್ಕ್ ಎಂದು ಓಡಿದ ನಾಯಿ ಸುಮಾರು ಹೊತ್ತಿನ ವರೆಗೂ ನನ್ನಿಂದ ಸುರಕ್ಷಿತ ಅಂತರವನ್ನೇ ಕಾಪಾಡಿಕೊಂಡಿತ್ತು.
          ಹಕ್ಕಿಯ ಮೊಟ್ಟೆ ಒಡೆಯಿತಲ್ಲ ಛೇ,. ಎಂದುಕೊಂಡು ಮುಂದಕ್ಕೆ ಬರುತ್ತಿದ್ದಂತೆ ಅಲ್ಲೊಂದು ಕಡೆ ಕುಚಗುಂಡಿಯ ಒಬ್ಬಾತ ದನಗಳನ್ನು ಮೇಯಿಸುತ್ತಿದ್ದ. ಹೆಸರು ಸರಿಯಾಗಿ ನೆನಪಾಗುತ್ತಿಲ್ಲ. ಕುಚಗುಂಡಿಯ ಮಂಜ ಎನ್ನುವವನ ಮಗ ಎಂಬುದು ಅಸ್ಪಷ್ಟವಾಗಿ ನೆನಪಿದೆ. ಅವನ ಬಳಿ ಹೋದವನೇ ಅದೂ ಇದೂ ಮಾತಿಗೆ ನಿಂತೆ. ಆತ ಸುಮಾರು ಹೊತ್ತು ಹಲುಬಿದ. ಅಷ್ಟರಲ್ಲಿ ಅಲ್ಲೆಲ್ಲೋ ಅಡ್ಡಾಡಿದ ರಾಜು ಹತ್ತಿರ ಬಂದಿತು. ದನ ಮೇಯಿಸುತ್ತಿದ್ದವನ ಕಣ್ಣಿಗೆ ರಾಜು ಬಿದ್ದಿತು. ಅಲ್ಲಿ ಹುಲ್ಲು ಮೇಯುತ್ತಿದ್ದ ದನಗಳ ಕಣ್ಣಿಗೆ ರಾಜು ಬಿದ್ದ ಪರಿಣಾಮ ಒಂದೆರಡು ದನಗಳು ಬುಸ್ಸೆನ್ನುತ್ತ ರಾಜುವನ್ನು ಬೆನ್ನಟ್ಟಿ ಬಂದವು. ಅವುಗಳ ಭಯಕ್ಕೆ ಹೆದರಿ ನನ್ನ ಕಾಲ ಬುಡದಲ್ಲಿ ಬಂದು ಮಲಗಿತು ರಾಜು. ರಾಜುವನ್ನು ಕಂಡಾತ `ನಂಗೆ ಕೊಡ್ರಾ ಈ ಕುನ್ನಿಯಾ..' ಎಂದ ದನಕಾಯುವವ. ನಾನು ಆಗೋದಿಲ್ಲ ಎಂದೆ. ಮತ್ತೊಂದೆರಡು ಸಾರಿ ಕೇಳಿದ. ನಾನು ಮತ್ತೆ ನಕಾರಾತ್ಮಕ ಉತ್ತರ ನೀಡಿದೆ. ಆತ ಸುಮ್ಮನಾದ.
            ಅಲ್ಲೇ ಒಂದು ಮಾಳ ಇತ್ತು. ನಾನು ಸೀದಾ ಮಾಳ ಹತ್ತಿದೆ. ಕೆಳಗೆ ನಿಂತಿದ್ದ ರಾಜು ಮತ್ತೆ ಚಡಪಡಿಸಲಾರಂಭಿಸಿತು. ನನ್ನ ಹಾಗೂ ರಾಜುವನ್ನು ನೋಡುತ್ತಿದ್ದ ಆ ದನಕಾಯುವ ವ್ಯಕ್ತಿ, `ಹೋಯ್.. ಆ ನಾಯಿಯನ್ನು ಹೊತ್ಕಂಡು ಹೋಗ.. ಮಾಳದ ಮೇಲೆ ಹತ್ಸಾ...' ಎಂದ. ನಾನು ತುಂಟ ಎಂದು ಆಗಲೇ ಹೇಳಿದ್ದೆನಲ್ಲಾ.. ಆತ ಹೇಳಿದಂತೆ ಮಾಡಿದೆ. ಮಾಳದ ಮೇಲೆ ಹತ್ತಿಸಿದೆ. ಮೊದ ಮೊದಲು ಹೆದರಿದಂತೆ ಇದ್ದ ರಾಜು ಕೊನೆಗೆ ಮಾಳದಲ್ಲೇ ಕುಣಿಯಲಾರಂಭಿಸಿತು. ಸುಮಾರು ಹೊತ್ತು ಕಳೆದ ಮೇಲೆ ನನಗೆ ಹಸಿವಾಗಲಾರಂಭಿಸಿತು. ನಾನು ಸೀದಾ ಮಾಳದಿಂದ ಇಳಿದೆ. ಹಾಗೆ ಇಳಿಯುವವನು ರಾಜುವನ್ನು ಹಿಡಿದು ಇಳಿಯಲಾರಂಭಿಸಿದೆ. ಕೊನೆಗೆ ಅದೇ ದನಕಾಯುವವನು `ರಾಜುವನ್ನು ಅಲ್ಲೇ ಬಿಟ್ಟು ಇಳಿಯಾ.. ಎಂತಾ ಮಾಡ್ತೈತಿ ನೋಡ್ವಾ...' ಎಂಬ ಐಡೀರಿಯಾ ಕೊಟ್ಟ.
            ನನಗೆ ಸರಿಯೆನ್ನಿಸಿ ನಾಯಿಯನ್ನು ಮಾಳದ ಮೇಲೆಯೇ ಬಿಟ್ಟು ಕೆಳಕ್ಕಿಳಿದೆ. ಇಳಿದು ಮನೆಗೆ ಹೊರಟವನಂತೆ ನಟಿಸಿದೆ. ರಾಜು ಒಂದೆರಡು ಸಾರಿ ನೋಡಿತು. ಚಡಪಡಿಸಿತು. ಮಾಳವೆಂದರೆ ಸಾಮಾನ್ಯವಾಗಿ ನೆಲದಿಂದ 6-7 ಅಡಿ ಎತ್ತರದಲ್ಲಿರುತ್ತದೆ. ಚಡಪಡಿಸಿದ ನಾಯಿ ಸೀದಾ ಜಿಗಿದೇ ಬಿಟ್ಟಿತು. ಜಿಗಿದ ನಾಯಿ ಮತ್ತೆ ಮೇಲೇಳುವಾಗ ಕಂಯೋ ಕಂಯೋ ಎಂದು ಕೂಗುತ್ತಲೇ ಇತ್ತು. ನಾನು ಏನೋ ಭಾನಗಡಿ ಆಗಿದೆ ಎಂದು ಹೆದರಿದೆ. ನಾಯಿಯನ್ನು ಹೊತ್ತುಕೊಂಡು ಓಡಿದೆ. ಗದ್ದೆಯಲ್ಲಿಯೇ ಇದ್ದ ಮನೆಯಲ್ಲಿ ನಾಯಿಯನ್ನು ಬಿಟ್ಟವನೇ ಮನೆಯ ಕಡೆಗೆ ಕಾಲ್ಕಿತ್ತೆ.
           ವಾಸ್ತವದಲ್ಲಿ ಆಗಿದ್ದೇನೆಂದರೆ ಮಾಳದಿಂದ ಕೆಳಕ್ಕೆ ನಾಯಿ ಜಿಗಿದಿದ್ದೇನೋ ಖರೆ. ಮಾಳಕ್ಕೆ ಹತ್ತಲು ಬಿದಿರಿನಿಂದ ಏಣಿಯೊಂದನ್ನು ಮಾಡಿದ್ದರು. ಆ ಏಣಿಯಿಂದ ಚಿಕ್ಕ ಚೂಪಾದ ಚೂರೊಂದು ಮುಂದಕ್ಕೆ ಚಾಚಿಕೊಂಡಿತ್ತು. ನಾಯಿ ಜಿಗಿದಿದ್ದೇ ಈ ಚೂರಿಗೆ ತಾಗಿತು. ಕಾಲೆಜ್ಜೆ ಸಿಕ್ಕಿಬಿದ್ದು ತಲೆಕೆಳಗಾಗಿ ನಾಗಿ ಬಿದ್ದಿತ್ತು. ಆ ರಭಸಕ್ಕೆ ನಾಯಿಯ ಕಾಲೊಂದು ಮುರಿದು ಬಿಟ್ಟಿತ್ತು. ನಾನು ಗದ್ದೆಯಲ್ಲಿ ಬಿಟ್ಟವನೇ ಮನೆಗೆ ಓಡಿ ಮನೆಯಲ್ಲಿಯೇ ನಿಂತಿದ್ದು.
          ನಾನು ಉಸಿರು ಬಿಡುತ್ತ ಓಡಿ ಬಂದಿದ್ದನ್ನು ನೋಡಿದ ಮನೆಯವರಿಗೆ ನಾನೇನೋ ಭಾನಗಡಿ ಮಾಡಿರುವುದು ಪಕ್ಕಾ ಆಯಿತು. ಆದರೆ ಏನು ಭಾನಗಡಿ ಮಾಡಿದ್ದೇನೆ ಎನ್ನುವುದು ತಿಳಿಯಲಿಲ್ಲ. ಪೊಲೀಸ್ ಸ್ಟೇಷನ್ನುಗಳಲ್ಲಿ ನಡೆಯುವುದಕ್ಕಿಂತ ಹೆಚ್ಚಿಗೆ ತನಿಖೆ ನಡೆಯಿತು. ನಾನು ಏನನ್ನೂ ಬಾಯಿ ಬಿಡಲಿಲ್ಲ. ಆ ಸಮಯದಲ್ಲೇ ಮನೆಯವರ್ಯಾರೋ ರಾಜು ನಾಯಿ ಇಲ್ಲದ್ದನ್ನು ಗಮನಿಸಿದರು. ಅದಕ್ಕೆ ತಕ್ಕಂತೆ ಮತ್ಯಾರೋ ರಾಜು ನಾಯಿ ನನ್ನ ಜೊತೆಗೆ ಹೋಗಿದ್ದನ್ನೂ ಕಂಡಿದ್ದರು. ಅವರು ಹೇಳಿದ್ದೇನೆಂದರೆ ನಾನು ರಾಜುವಿಗೆ ಏನೋ ಮಾಡಿಬಿಟ್ಟಿದ್ದೇನೆ. ಹಾಗಾಗಿ ರಾಜು ಕಾಣಿಸುತ್ತಿಲ್ಲ ಎನ್ನುವುದು.
           ಆಗ ಶುರುವಾಯ್ತು ನೋಡಿ ಅಪ್ಪನ ಹೊಡೆತ... ಅಬಾಬಾಬಾ... ಕೊನೆಗೆ ನಾನು ಬಾಯಿಬಿಟ್ಟಿದ್ದೆ. ಆ ಮದ್ಯಾಹ್ನ ೂಟ ಮುಗಿಸಿ ಮದ್ಯಾಹ್ನದ ಗುಕ್ಕು ನಿದ್ದೆ ಮುಗಿಸಿ ಸಂಜೆ ಆಗಬೇಕು ಎನ್ನುವಷ್ಟರಲ್ಲಿ ಗದ್ದೆಯ ಕಡೆಗಿಂದ ನಿಧಾನವಾಗಿ ಕಾಲನ್ನು ಎಳೆಯುತ್ತ ಬರುತ್ತಿತ್ತು ನೋಡಿ ರಾಜು ಕುನ್ನಿ.. ಸಧ್ಯ ಏನೂ ಆಗಿಲ್ಲವಲ್ಲ ಎನ್ನುವ ನಿಟ್ಟುಸಿರು ನನ್ನಲ್ಲಿ. ಆದರೆ ಆ ಘಟನೆಯ ನಂತರ ರಾಜು ಮಾತ್ರ ನನ್ನ ಪರವಾಗಿ ನಿಲ್ಲುವುದನ್ನು ನಿಲ್ಲಿಸಿತ್ತು. ಯಾರಾದರೂ ನನಗೆ ಬೈಯಲಿ, ಹೊಡೆಯಲಿ ಅದು ಗುರ್ರೆಂದು ಅವರನ್ನು ಅಟ್ಟಿಸಿಕೊಂಡು ಹೋಗುವುದನ್ನು ನಿಲ್ಲಿಸಿಬಿಟ್ಟಿತ್ತು. ಪಾ..ಪ ಅದೇನೋ ಆಘಾತವಾಗಿತ್ತು ಅದಕ್ಕೆ.
            ಇಂತಹ ರಾಜು ನನ್ನನ್ನು ಶಾಲೆಗೆ ಕಳಿಸಿಕೊಡಲು ಬರುತ್ತಿತ್ತು. ನಮ್ಮೂರಿನಿಂದ ನಾನು ಹೋಗುತ್ತಿದ್ದ ಅಡ್ಕಳ್ಳಿ-ಕೋಡ್ಸಿಂಗೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 2.5 ಕಿ.ಮಿ ದೂರವಾಗುತ್ತದೆ. ಎಷ್ಟೇ ವೇಗವಾಗಿ ನಡೆದರೂ 30 ನಿಮಿಷ ಬೇಕೇ ಬೇಕು. ನಾನು, ನನ್ನ ಜೊತೆಗೆ ಬಾಳಗಾರ್ ಗಪ್ಪತಿ, ಹಂಚಳ್ಳಿಯ ಶ್ರೀಪಾದ, ಶ್ರೀಪಾದನ ತಂಗಿ ನಾಗರತ್ನಾ, ಸಂತೋಷಣ್ಣ, ಮೇಲಿನಮನೆಯ ರಂಜು ಇಷ್ಟು ಜನ ಶಾಲೆಗೆ ಹೋಗುವವರು. ದಾರಿಯಲ್ಲಿ ದೊಡ್ಡದೊಂದು ಗುಡ್ಡ, ಗವ್ವೆನ್ನುವ ಕಾಡು, ಹೆಣ ಸುಡುವ ಸ್ಮಷಾನ ಇಷ್ಟ ಸಿಕ್ಕೇ ಸಿಗುತ್ತಿತ್ತು. ನಮ್ಮ ಧೈರ್ಯಕ್ಕೆ ರಾಜು ಬರುತ್ತಿದ್ದ. ರಾಜುವಿನ ಧೈರ್ಯಕ್ಕೆ ನಾವಿರುತ್ತಿದ್ದೆವು.
           ಶಾಲೆಗೆ ಹೊರಟ ನಮ್ಮ ಹಿಂದೋ, ಮುಂದೋ ಬಾಲ ಅಲ್ಲಾಡಿಸುತ್ತ ಬರುತ್ತಿದ್ದ ರಾಜುವನ್ನು ದಾರಿ ಮಧ್ಯ ಅನೇಕ ಸಾರಿ `ರಾಜು.. ಮನೆಗೆ ನಡಿಯಾ...' ಎಂದು ನಾನು ಬಯ್ಯುತ್ತಿದ್ದರೂ ಆತ ಜೊತೆಗೆ ಬರುತ್ತಿದ್ದ. ಮುಂದೋ, ಹಿಂದೋ ಎಸ್ಕಾರ್ಟ್ ಮಾಡುತ್ತಿದ್ದ. ಅಂತವನ ಬೆನ್ನ ಮೇಲೆ ಒಂದೆರಡು ಸಾರಿ ನಾನು ನನ್ನ ಪಾಟಿಚೀಲವನ್ನು ಹಾಕಿ ಕಟ್ಟಿ ಕಳಿಸಿದ್ದೂ ಇದೆ. ದಾರಿ ಮಧ್ಯದಲ್ಲಿ ಅವನ್ನು ಬೀಳಿಸಿ, ಬಾಲ ಅಲ್ಲಾಡಿಸುತ್ತಾ  ನಿಂತಿದ್ದ ರಾಜು ನನ್ನ ಕಣ್ಣೆದುರಿಗೆ ಇನ್ನೂ ಸ್ಪಷ್ಟವಾಗಿದೆ. ನಮ್ಮ ಜೊತೆಗೆ ಶಾಲೆಯ ಬಳಿ ಬರುವ ರಾಜು ಶಾಲೆಯ ಆಟದ ಬಯಲಿನಲ್ಲಿ ನಿಂತು ಎದುರು ಒಮ್ಮೆ ನೋಡುತ್ತಿದ್ದ. ಬಯಲಿನಲ್ಲಿ ಯಾವುದಾದರೂ ಬೇರೆಯ ನಾಯಿಗಳಿದ್ದರೆ ಸದ್ದಿಲ್ಲದೇ ಮನೆಗೆ ವಾಪಾಸಾಗುತ್ತಿದ್ದ ರಾಜು, ಯಾರೂ ಇಲ್ಲ ಎಂದಾದರೆ ಮೈದಾನದಲ್ಲೇ ಸುತ್ತಾಡುತ್ತಿದ್ದ. ನಾನು ಕಲ್ಲು ಹೊಡೆದು ಓಡಿಸಿದ ಮೇಲೆಯೇ ಮನೆಗೆ ವಾಪಾಸಾಗುತ್ತಿದ್ದ. ಅನೇಕ ಸಾರಿ ಈ ಮೈದಾನದಲ್ಲಿಯೇ ರಾಜು ಬೇರೆಯ ನಾಯಿಗಳೊಂದಿಗೆ ಜಿದ್ದಾ ಜಿದ್ದಿನ ಕಾಳಗ ಮಾಡಿದ್ದನ್ನು ನಾನು ನೋಡಿದ್ದೇನೆ. ಗಾಯ ಮಾಡಿಕೊಂಡು ಬರುತ್ತಿದ್ದ ನಾಯಿಗೆ ಬೂದಿಯನ್ನು ಹಚ್ಚಿ ಸಮಾಧಾನ ಪಡಿಸಿದ್ದೇನೆ.
             ರಾಜು ಇದ್ದ ಸಮಯದಲ್ಲಿಯೇ ಬೆಳ್ಳ ಎನ್ನುವ ಇನ್ನೊಂದು ನಾಯಿ ನಮ್ಮ ಮನೆಯಲ್ಲಿತ್ತು. ಎಲ್ಲಿಂದಲೋ ಬಂದು ನಮ್ಮನೆಯಲ್ಲಿ ಉಳಿದಿದ್ದ ನಾಯಿ ಅದು. ಚಿಕ್ಕಪ್ಪಂದಿರು ಈ ನಾಯಿಯನ್ನು ಅಕ್ಕರೆಯಿಂದ ಸಾಕಿದ್ದರು. ಬೆಳ್ಳ ಹಾಗೂ ರಾಜು ಅಣ್ಣ ತಮ್ಮಂದಿರಂತಿದ್ದರು. ನಮ್ಮ ಮನೆಯಲ್ಲಿಯೇ ಅವರು ಜಾಗವನ್ನೂ ಪಾಲು ಮಾಡಿಕೊಂಡಿದ್ದರು. ಬೆಳ್ಳ ಹೆಬ್ಬಾಗಿಲ ಬಳಿ ತನ್ನ ಕಾರ್ಯಸ್ಥಾನ ಮಾಡಿಕೊಂಡಿದ್ದರೆ ರಾಜು ಹಿತ್ಲಾಕಡಿಗೆ ಉಳಿದಿದ್ದ. ಅಡಿಕೆ ಕೊಯ್ಲಿನ ಸಂದರ್ಭದಲ್ಲಿ ಅಡಿಕೆ ಬೇಯಿಸಲು ಹೆಬ್ಬಾಗಿಲ ಬಳಿ ಹಾಕುತ್ತಿದ್ದ ದೊಡ್ಡ ಒಲೆ ಬೆಳ್ಳನ ವಾಸಸ್ತಾನವಾಗಿದ್ದರೆ ಹಿತ್ಲಾಕಡಿಗೆ ಬಚ್ಚಲಮನೆಯ ಒಲೆ ರಾಜುವಿನ ಅಂತಪುರವಾಗಿತ್ತು. ಇಬ್ಬರಿಗೂ ಭಯಂಕರ ದೋಸ್ತಿಯಿದ್ದರೂ ದೋಸೆ ಹಾಕುವಾಗ ಅಥವಾ ಅನ್ನ ಹಾಕುವಾಗ ಮಾತ್ರ ಪಕ್ಕಾ ಶತ್ರುಗಳ ತರ. ಪರಸ್ಪರ ಹಲ್ಲು ತೋರಿಸುವುದು, ಗುರ್ರೆನ್ನುವುದು, ಕಾಲು ಕೆರೆಯುವುದು ನಡೆದೇ ಇತ್ತು. ಹೀಗೆ ಜಗಳ ಆರಂಭವಾದ ಸಂದರ್ಭದಲ್ಲಿ ಇವೆರಡರ ಪೈಕಿ ಸ್ವಲ್ಪ ಸಣ್ಣದಾಗಿದ್ದ ರಾಜುವೇ ಸೋಲೊಪ್ಪಿಕೊಳ್ಳುತ್ತಿತ್ತು ಬಿಡಿ. ಆಮೇಲೆ ನಾನು ಬೆಳ್ಳನನ್ನು ಸರಪಳಿಯಿಂದ ಕಟ್ಟಿಹಾಕಿದ ನಂತರ ರಾಜುವಿಗೆ ಪ್ರತ್ಯೇಕವಾಗಿ ಅನ್ನ ಹಾಕುತ್ತಿದ್ದೆ. ಅನ್ನ ಹಾಕಿದವನು ಅಲ್ಲೇ ನಿಂತಿದ್ದರೆ ರಾಜು ನನಗೂ ಗುರ್ರೆನ್ನುತ್ತಿತ್ತು. ಆಗ ಮಾತ್ರ ನಾಯಿಯ ಬೆನ್ನು ಮುರಿದು ಬಿಡಬೇಕು ಎನ್ನುವಷ್ಟು ಸಿಟ್ಟು ಬರುತ್ತಿತ್ತು.
             ನಾನು ರಾಜುವನ್ನು ಸಾಕಿರುವುದು ನನ್ನ ಚಿಕ್ಕಪ್ಪಂದಿರಿಗೆ ಇಷ್ಟವಿರಲಿಲ್ಲ. ಮೊದ ಮೊದಲು ಅದನ್ನು ಸಾಕಿದ್ದು ಇಷ್ಟ ಪಟ್ಟವರಂತೆ ನಟಿಸಿದ್ದರು. ಆದರೆ ಕೊನೆ ಕೊನೆಗೆ ಅವರು ಮಾತು ಮಾತಿಗೂ ಬಯ್ಯತೊಡಗಿದ್ದರು. ನಾನು ಚಿಕ್ಕವನಾಗಿದ್ದ ಕಾರಣ ನಾನೇನೇ ಹೇಳಿದರೂ ಅದಕ್ಕೆ ಬೆಲೆಯೇ ಇರುತ್ತಿರಲಿಲ್ಲ. ಅಪ್ಪಯ್ಯ ಮನೆ ಯಜಮಾನನಾಗಿದ್ದ ಕಾರಣ ತಮ್ಮಂದಿರ ಬೇಜಾರನ್ನು ಶಮನ ಮಾಡುವ ಕಾಯಕದಲ್ಲಿ ನಿರತನಾಗುತ್ತಿದ್ದ. ಈಗಿನ ರಾಜಕಾರಣಿಗಳು ಹೇಗೆ ಅಲ್ಪ ಸಂಖ್ಯಾತರನ್ನು ಓಲೈಸುತ್ತಾರೋ ಹಾಗೆ.
           ನಾನು ಅಥವಾ ನನ್ನಮನೆಯಲ್ಲಿ ಏನೇ ಒಳ್ಳೆಯದನ್ನು ಸಾಕಿದರೂ, ವಸ್ತುಗಳನ್ನು ಸಾಕಿದರೂ ಅದನ್ನು ನನಗೆ ಕೊಡಿ ಎಂದು ಕೇಳುವವರು ಆಗಲೂ ಇದ್ದರು ಈಗಲೂ ಇದ್ದಾರೆ. ಹೀಗಿದ್ದಾಗ ಚಾರೆಕೋಣೆಯ ಒಬ್ಬರು ನಮ್ಮೂರಿಗೆ ಬಂದಿದ್ದರು. ನಮ್ಮ ಮನೆಯ ಪಕ್ಕದ ಮನೆಗೆ ಚಾರೇಕೋಣೆಯ ಸಂಬಂಧವೂ ಇದೆ ಎನ್ನಿ. ಬಂದವರೇ ಅವರ ಮನೆ ಕಾಯಲು ನಾಯಿಯೊಂದು ಬೇಕು. ರಾಜುವನ್ನು ಕೊಡುತ್ತೀರಾ ಎಂದು ಕೇಳಿದರು. ನಾನು ಇಲ್ಲ ಎಂದೆ. ಆದರೆ ಅಪ್ಪ ತಮ್ಮಂದಿರನ್ನು ಓಲೈಸುವ ಸಲುವಾಗಿ ರಾಜುವನ್ನು ಕೊಟ್ಟುಬಿಡಲು ನಿರ್ಧಾರ ಮಾಡಿದ್ದರು. ನಾನು ಶಾಲೆಗೆ ಹೋಗಿದ್ದ ಸುಸಂದರ್ಭವನ್ನೇ ನೋಡಿ ರಾಜುವನ್ನು ಕೊಟ್ಟು ಹಾಕಿದ್ದರು. ಮನೆಗೆ ಬಂದವನು ನಾನು ಆ ದಿನ ಮಾಡಿದ ರಂಪಾಟ ಅಷ್ಟಿಷ್ಟಲ್ಲ ಬಿಡಿ. ಆ ದಿನ ನನಗೆ ಮನೆಯಲ್ಲಿನ ಎಲ್ಲ ಸದಸ್ಯರೂ ಯಥಾನುಶಕ್ತಿ ಹೊಡೆದು ಬಿಟ್ಟಿದ್ದರು. ನಾನು ಸುಮ್ಮನಾಗಿರಲಿಲ್ಲ.
            ಅತ್ತ ಚಾರೆಕೋಣೆಗೆ ಹೋದ ರಾಜು ಸುಮ್ಮನಿರುತ್ತದೆಯೇ? ಅಲ್ಲಿ ತಾನೂ ಪ್ರತಿಭಟನೆ ಶುರುಮಾಡತೊಡಗಿತ್ತು. ಮೊದಲೆರಡು ದಿನ ಊಟ ಮಾಡಲಿಲ್ಲ. ಏನೋ ರೋಗ ಬಂದವರಂತೆ ನಟಿಸಿತು. ಕೊನೆಗೆ ಹಸಿವು ಸಿಕ್ಕಾಪಟ್ಟೆ ಹೆಚ್ಚಿದಾಗ ಹಾಲು ಕುಡಿದು ಅನ್ನ ಊಟ ಮಾಡಿತಂತೆ. ನಾಲ್ಕು ದಿನಕ್ಕೆಲ್ಲಾ ನಾಯಿ ಅವರ ಮನೆಯವರಂತೆ ಆಯಿತು. ನಾಯಿಗೆ ಹಳೆಯದೆಲ್ಲ ಮರೆತಿದೆ. ಇನ್ನು ತೊಂದರೆಯಿಲ್ಲ ಎಂದು ಕಟ್ಟಿದ್ದ ಸರಪಳಿ ಬಿಚ್ಚಿ ಬಿಟ್ಟರು. ಆಗ ನಾಯಿಯ ಅಸಲಿ ಬಣ್ಣ ಬಯಲಾಯಿತು ನೋಡಿ. ಸೀದಾ ಅಲ್ಲಿಂದ ಓಡಿದ ರಾಜು  ನಾಲ್ಕು ಸಾರಿ ಅಘನಾಶಿನಿ ನದಿಯನ್ನು ದಾಟಿ, ಒಂದು ಒಪ್ಪತ್ತಿನೊಳಗೆಲ್ಲ ನಮ್ಮ ಮನೆಗೆ ಹಾಜರಾಗಿಬಿಟ್ಟಿತ್ತು.
            ಧರಿದ್ರ ನಾಯಿ ಮತ್ತೆ ಬಂತಾ..? ಎಂದು ಚಿಕ್ಕಪ್ಪ ಬಯ್ಯುತ್ತಿದ್ದರೆ `ತಮಾ.. ನೋಡಾ... ನಾಯಿ ಬಂತಲಾ... ಉಂಚಳ್ಳಿ ಜಲಪಾತದ ಹತ್ತಿರದಿಂದ ನಡೆದುಕೊಂಡು ಬಂತಲಾ.. ಅದಕ್ಕೊಂದು ದೋಸೆ ಹಾಕಾ...' ಎಂದು ಅಮ್ಮ ಖುಷಿಯಿಂದ ಹೇಳಿದ್ದು ಇನ್ನೂ ನೆನಪಿನಲ್ಲಿದೆ. ಆ ದಿನದಿಂದ ಮತ್ತೆ ರಾಜು ಹಾಗೂ ನಾನೂ ಒಂದೇ ದೋಣಿಯ ಕಳ್ಳರಾಗಿಬಿಟ್ಟಿದ್ದೆವು.
             ಇದಾಗಿ ಆರೆಂಟು ತಿಂಗಳಾಗಿತ್ತು. ನಮ್ಮ ಮನೆಯಲ್ಲಿ ಕೊನೆಕೊಯ್ಲಿನ ಹಂಗಾಮು. ಮನೆಯಲ್ಲಿ ಕೊನೆ ಕೊಯ್ದಿದ್ದರು. ಸಿಕ್ಕಾಪಟ್ಟೆ ಚಳಿ ಬೇರೆ. ಜನವರಿಯೇನೋ. ಅಂಗಳದಲ್ಲಿ ಅಡಿಕೆ ಬೇಯಿಸಲು ಬೆಂಕಿ ಹಾಕಿದ್ದರು. ಆ ಬೆಂಕಿಯ ಮುಂದೆ ರಾಜು ಮಲಗಿದ್ದ. ಯಾವತ್ತೂ ಆ ಒಲೆಯ ಎದುರು ಮಲಗುತ್ತಿದ್ದ ಬೆಳ್ಳ ಆವತ್ತು ಮಾತ್ರ ಸದ್ದಿರದೇ ಮನೆಯ ಒಳಗೆ ಬಂದು ರಬ್ಬಿಕೊಂಡು ಮಲಗಿದ್ದ. ರಾತ್ರಿ ಯಾವುದೋ ಜಾಗದಲ್ಲಿ  ನಾಯಿ ದೊಡ್ಡದಾಗಿ ಕೂಗಿದ ಸದ್ದು. ಆ ನಂತರ ನಾಯಿ ಕಂಯೋ.. ಎಂದು ಕೂಗಿದ್ದೂ ಕೇಳಿಸಿತು. ತಕ್ಷಣ ಚಿಕ್ಕಪ್ಪಂದಿರು ದೊಡ್ಡ ಬಡಿಗೆಯನ್ನು ಹಿಡಿದು ಮನೆಯಿಂದ ಹೊರಕ್ಕೆ ಬಂದಿದ್ದರು. ಆದರೆ ಅಷ್ಟರಲ್ಲಿ ಗುರ್ಕೆ (ಹುಲಿಯ ಜಾತಿಗೆ ಸೇರಿದ್ದು, ಮರಿ ಚಿರತೆ ಎನ್ನಬಹುದು) ರಾಜುವನ್ನು ಕಚ್ಚಿ ಹೊಡಿದುಕೊಂಡು ಹೋಗಿತ್ತು.
         ಬೆಳಗ್ಗೆ ಎದ್ದ ನಾನು ರಾಜುಗಾಗಿ ಹುಡುಕಿದರೆ ಎಲ್ಲಿದೆ ನಾಯಿ? `ತಮಾ ಇಲ್ನೋಡು.. ರಾಜುವನ್ನು ಎಳೆದೊಯ್ದ ಗುರುತು.. ನೋಡು ನೆಲ ಹೆಂಗೆ ಉಗುರಿನಲ್ಲಿ ಗಟ್ಟಿಯಾಗಿ ಗೀರಿದ್ದು.. ಗುರ್ಕೆ ಹಿಡಿದಾಗ ತಪ್ಪಿಸಕ್ಕಂಬಲೆ ಭಾರಿ ಪ್ರಯತ್ನ ಮಾಡಿತ್ತು ಕಾಣ್ತು ನೋಡು..' ಎಂದರು ಅಮ್ಮ. ಸ್ವಲ್ಪ ಹೊತ್ತಿನಲ್ಲಿ ಅಲ್ಲಿಗೆ ಬಂದ ಬೆಳ್ಳ ರಾಜುವನ್ನು ಗುರ್ಕೆ ಹಿಡಿದ ಜಾಗವನ್ನು ಮೂಸಿ ನೋಡಿದ. ಹೂಕ್ಷ್.. ಎಂದು ಒಮ್ಮೆ ಸೀನಿದ. ರಾತ್ರಿ ಗುರಕೆ ಬಂದಿರುವುದನ್ನು ಅರಿತ ಬೆಳ್ಳ ಮನೆಯೊಳಕ್ಕೆ ಹೊಕ್ಕಿದ್ದನೇನೋ. ರಾಜುವಿಗೆ ಅದು ಗೊತ್ತಾಗಿರಲಿಲ್ಲ. ಚಳಿ, ಒಳ್ಳೆ ಬೆಂಕಿ ಹಾಕಿದ್ದಾರೆ. ಬೆಳ್ಳನೂ ಇಲ್ಲ. ಆರಾಮಾಗಿ ಮಲಗೋಣ ಎಂದು ನಿದ್ರೆಗೆ ಜಾರಿದ್ದ ರಾಜು ಗುರ್ಕೆ ಬಾಯಿಗೆ ಬಲಿಯಾಗಿದ್ದ. ಬೆಳ್ಳ ಸೀನಿದ್ದು ಮಾತ್ರ ನನಗೆ ನಿಟ್ಟುಸಿರಿನ ಹಾಗೇ ಅನ್ನಿಸಿತು.
             ಈ ಘಟನೆ ಜರುಗಿ ಕನಿಷ್ಟ 20 ವರ್ಷಗಳೇ ಸರಿದಿವೆ. ಅದಾದ ಮೇಲೆ ಕನಿಷ್ಟ 10ಕ್ಕೂ ಹೆಚ್ಚು ನಾಯಿಗಳನ್ನೂ, 15ಕ್ಕೂ ಹೆಚ್ಚು ಬೆಕ್ಕುಗಳನ್ನೂ ನಾನು ತಂದು ಸಾಕಿದ್ದೇನೆ. ನಾಯಿಗಳಿಗೆ ನಿಖಿತಾ, ಬಿಂಬಿ, ಭೀಮಣ್ಣ ಖಂಡ್ರೆ ಹೀಗೆ ತರಹೇವಾರಿ ಹೆಸರುಗಳನ್ನೂ, ಸೋನು, ಮೋನು, ಸಾಂಬ, ರಂಗೀಲಾ ಈ ಮುಂತಾದ ಬೆಕ್ಕಿಗೂ ಇಟ್ಟು ಖುಷಿ ಪಟ್ಟಿದ್ದೇನೆ. ಆದರೆ ಮೊದಲು ಸಾಕಿದ ನಾಯಿ ರಾಜು ಮಾತ್ರ ಇನ್ನೂ ನೆನಪಿನಲ್ಲಿದೆ. ಪ್ರತಿ ಚಳಿಗಾಲದಲ್ಲಿ ರಾಜುವಿನ ನೆನಪು ಕಾಡುತ್ತಿರುತ್ತದೆ. ಎಷ್ಟೇ ನಾಯಿಗಳನ್ನು ತಂದರೂ ಮನದ ಮೂಲೆಯಲ್ಲಿದ್ದ ರಾಜು ಮತ್ತೊಮ್ಮೆ ಕಣ್ಣೆದುರು ಬಂದಂತಾಗುತ್ತದೆ. ರಾಜೂ ಕುರೂಯ್.. ಎಂದು ಕರೆಯೋಣ ಅನ್ನಿಸುತ್ತಿದೆ. ನಾಯಿಯೊಂದು ಅಚ್ಚಳಿಯದೇ ಉಳಿದಿದ್ದು ಹೀಗೆ.