Sunday, December 28, 2014

ಅಘನಾಶಿನಿ ಕಣಿವೆಯಲ್ಲಿ-5

        ಇದಾಗಿ ಒಂದೆರಡು ದಿನ ಕಳೆದಿರಬಹುದು. ಆ ದಿನ ಬೆಳ್ಳಂಬೆಳಿಗ್ಗೆ ಪ್ರದೀಪ ಏಕಾಏಕಿ ವಿಕ್ರಮನ ರೂಮಿಗೆ ಬಂದ. ಅವನನ್ನು ಕಂಡ ವಿಕ್ರಂ `ಏನಪ್ಪಾ ಎಲ್ಲೊ ಹೋಗಿದ್ದೆ. ಬಹಳ ದಿನ ಆಯ್ತಲ್ಲ ನಿನ್ನ ಸುಳಿವಿಲ್ಲದೇ. ಬೇಕಾದಾಗ ಸಿಗೋನಲ್ಲ ನೀನು. ನೀ ಭಲೇ ಆಸಾಮಿ. ಯಾವಾಗಾದ್ರೂ ಬರ್ತೀಯಾ.. ಯಾವಾಗಾದ್ರೂ ಸಿಕ್ತೀಯಾ.. ನಾಪತ್ತೆ ಆಗ್ತೀಯಾ.. ಏನಪ್ಪಾ ಏನ್ ಕಥೆ ನಿಂದು..?' ಎಂದು ಕೇಳಿದ.
        `ಏನಿಲ್ಲ ಮಾರಾಯಾ. ಎಂತದ್ದೋ ಇಂಪಾರ್ಟೆಂಟ್ ಕೆಲಸ ಇತ್ತು.  ಅದರಲ್ಲಿ ತಲ್ಲೀನ ಆಗಿದ್ದೆ. ಅದಕ್ಕಾಗಿ ಬಂದಿರಲಿಲ್ಲ ನೋಡು. ಅದಿರ್ಲಿ ಏನೋ ಪೇಪರ್ ನವರು ಸಂದರ್ಶನಕ್ಕೆ ಬಂದಿದ್ದರಂತೆ. ಭಾರಿ ಭಾರಿ ರಿಪೋರ್ಟೂ ಆಗಿದ್ಯಂತೆ. ಏನಪ್ಪಾ ವಿಶೇಷ?' ಎಂದು ಕೇಳಿದ ಪ್ರದೀಪ.
        `ಅದನ್ನೇ ಹೇಳಿದ್ನಪ್ಪ. ಅವರಿಗೆ ನಿನ್ನ ಪರಿಚಯ ಮಾಡ್ಕೊಡೋಣ ಅಂದುಕೊಂಡಿದ್ದರೆ ನೀನು ನಾಪತ್ತೆ...' ಎಂದ ವಿಕ್ರಂ.
         `ಅದಿರ್ಲಿ.. ಒಂದು ಮುಖ್ಯ ವಿಷ್ಯ ಹೇಳ್ಬೇಕಿತ್ತು. ಅದೇನಂದ್ರೆ ನಾವು ಬೆಂಗಳೂರಿಗೆ ಹೋಗಿದ್ವಲ್ಲಾ ಆಗೆಲ್ಲಾ ನಾನು ಬಹಳ ಜನರನ್ನು ನೋಡಿದೆ. ಒಬ್ಬತ್ತಾ ನಮ್ಮನ್ನ ಅದರಲ್ಲೂ ಮುಖ್ಯವಾಗಿ ನಿನ್ನನ್ನ ಫಾಲೋ ಮಾಡ್ತಾ ಇದ್ದ..' ಎಂದ ಪ್ರದೀಪ.
        `ಹಹ್ಹ... ತಮಾಷೆ ಮಾಡ್ತಿದ್ದೀಯಾ.. ಬೇರೆ ಕೆಲಸ ಇಲ್ಲವಾ ನಿನಗೆ.? ಹೊತ್ತಲ್ಲದ ಹೊತ್ತಲ್ಲಿ ಜೋಕ್ ಮಾಡಬೇಡ.. ನನ್ನನ್ನ ಫಾಲೋ ಮಾಡೋಕೆ ನಾನೇನು ರಜನೀಕಾಂತನಾ? ಅಥವಾ ಮತ್ತಿನ್ಯಾರಾದ್ರೂ ಸೆಲೆಬ್ರಿಟಿನಾ? ಹೋಗ್ ಹೋಗೋ.. ನಿನ್ ಮಾತಿಗೂ ಒಂದು ಮಿತಿ ಇರಲಿ ಮಾರಾಯಾ..' ಎಂದ ವಿಕ್ರಂ.
        `ಇಲ್ಲ ಮಾರಾಯಾ.. ರಿಯಲಿ. ನಾನು ನಿಜಾನೇ ಹೇಳ್ತಾ ಇದ್ದೀನಿ. ನಾನು ಅಬಸರ್ವ್ ಮಾಡ್ತಾ ಇದ್ದೆ ಮಾರಾಯಾ.. ನೀನು ನಂಬೋದಾದ್ರೆ ನಂಬು.. ಬಿಟ್ಟರೆ ಬಿಡು. ಆದರೆ ಹುಷಾರಾಗಿರು ಅಷ್ಟೇ.. ನೀನು ನಂಬಲಿಲ್ಲ ಅಂದರೆ ನನ್ನ ಗಂಟೆಂತದ್ದೂ ಖರ್ಚಾಗೋದಿಲ್ಲ ಮಾರಾಯಾ..' ಎಂದು ಹೇಳಿದವನೇ `ಸರಿ ನಾನಿನ್ನು ಬರ್ತೀನಿ..' ಎಂದವನೇ ಹೊರಟೇ ಹೋದ.
         ವಿಕ್ರಮನಿಗೆ ಒಮ್ಮೆ ದಿಗ್ಬ್ರಮೆ ಆಯಿತು. ಇದೇನಪ್ಪಾ ಇದು ಹೀಗೆ ಎಂದುಕೊಂಡ. ನನ್ನನ್ನು ಫಾಲೋ ಮಾಡೋರೂ ಇದ್ದಾರಾ? ಯಾರು ಅವರು? ಯಾಕೆ ನನ್ನನ್ನು ಫಾಲೋ ಮಾಡ್ತಾ ಇದ್ದಾರೆ? ಪ್ರದೀಪನೇ ಸುಳ್ಳು ಹೇಳಿದನೇ? ಅಥವಾ ಆತ ಹೇಳಿದ್ದರಲ್ಲಿ ನಿಜವಿರಬಹುದೇ? ಇದರಲ್ಲೇನೋ ನಿಘೂಡತೆಯಿದೆ. ಈ ಪ್ರದೀಪನನ್ನೇ ಅರ್ಥ ಮಾಡಿಕೊಳ್ಳಲು ಆಗಲಿಲ್ಲ. ಆತನ ಮಾತನ್ನು ಅರ್ಥ ಮಾಡಿಕೊಳ್ಳುವುದು ಹೇಗೆ? ಏನಾದ್ರೂ ಆಗ್ಲಿ. ಸಮಸ್ಯೆ ಹತ್ತಿರಕ್ಕೆ ಬಂದಾಗ ನೋಡಿಕೊಳ್ಳೋಣ ಎಂದು ಆ ವಿಷಯವನ್ನು ಅಲ್ಲಿಗೆ ಮರೆತುಬಿಟ್ಟ ವಿಕ್ರಂ. ಇದಾಗಿ ಬಹಳ ದಿನಗಳವರೆಗೆ ಅಂದರೆ ಹೆಚ್ಚೂ ಕಡಿಮೆ ತಿಂಗಳುಗಳ ಕಾಲ ಪ್ರದೀಪನ ಪತ್ತೆಯೇ ಇರಲಿಲ್ಲ. ಹಾಗೆಯೇ ಆ ಅಪರಿಚಿತ ವ್ಯಕ್ತಿಯೂ ಕೂಡ.

***5***

           ನಂತರ ವಿಕ್ರಮನಿಗೆ ಅದೇನಾಯ್ತೋ ಗೊತ್ತಿಲ್ಲ. ಇದ್ದಕ್ಕಿದ್ದಂತೆ ವಿಕ್ರಮನಿಗೆ ತನ್ನ ಅದ್ವೈತ ಆತ್ಮರಕ್ಷಣೆ ಕೇಂದ್ರದ ಮೇಲೆಯೇ ಆಸಕ್ತಿ ಕಳೆದುಹೋಯಿತು. ಆಗೀಗ ತನ್ನ ತರಬೇತಿ ಕೇಂದ್ರಕ್ಕೆ ಭೇಟಿ ನೀಡುತ್ತಿದ್ದನಾದರೂ ಏನೋ ಒಂದು ಅನ್ಯಮನಸ್ಕ ಭಾವನೆ ಅವನಲ್ಲಿ ಬೆಳೆದು ಬಿಟ್ಟಿತ್ತು. ತಾನು ಹೋಗದಿದ್ದರೂ ಅವನು ತರಬೇತಿ ನೀಡಿದ ಹುಡುಗರು ಕೇಂದ್ರದಲ್ಲಿ ಚನ್ನಾಗಿ ಕಲಿಸುತ್ತಿದ್ದರು. ತಾನಿಲ್ಲದಿದ್ದರೂ ತರಬೇತಿ ಕೇಂದ್ರ ಬೆಳೆಯುತ್ತದೆ ಎನ್ನುವುದು ಆತನ ಅನುಭವಕ್ಕೆ ಬಂದಿತ್ತು.
            ಇದೇ ಸಂದರ್ಭದಲ್ಲಿ ವಿಕ್ರಮನ ಅದ್ವೈತ ಆತ್ಮರಕ್ಷಣೆ ಕೇಂದ್ರದ ಬಳಿಯಲ್ಲೇ ತಲೆಯೆತ್ತಿದ್ದ ಇನ್ನೊಂದು ವ್ಯಾಯಾಮ ಶಾಲೆ ಪ್ರಭಲವಾಗಿಬಿಟ್ಟಿತ್ತು. ಆ ತರಬೇತಿ ಕೇಂದ್ರದ ತರಹೇವಾರಿ ಗಿಮ್ಮಿಕ್ಕಿನ ಎದುರು ವಿಕ್ರಮನ ತರಬೇತಿ ಕೇಂದ್ರ ಸೋಲಲು ಆರಂಭಿಸಿತ್ತು. ಅದೇ ಸಂದರ್ಭದಲ್ಲಿ ಅಲ್ಲಿನ ಕೆಲವು ಕುತಂತ್ರಿಗಳ ಕುತಂತ್ರವನ್ನೂ ಮಾಡಿದರು. ಸುತ್ತಮುತ್ತಲೂ ವಿಕ್ರಮನ ತರಬೇತಿ ಕೇಂದ್ರದ ಹೆಸರನ್ನೂ ಹಲವರು ಹಾಳುಮಾಡಿಬಿಟ್ಟರು. ವಿಕ್ರಮನಲ್ಲಿ ಕಲಿಯುತ್ತಿದ್ದ ಅನೇಕರು ಎದುರಾಳಿ ತರಬೇತಿ ಕೇಂದ್ರವನ್ನು ಸೇರುವಲ್ಲಿಗೆ ವಿಕ್ರಮ ಸೋತು ಸುಣ್ಣವಾಗಿದ್ದ. ಇದ್ದಕ್ಕಿದ್ದಂತೆ ತನಗೇ ಈ ರೀತಿಯ ಮಂಕು ಕವಿಯಿತು ಎನ್ನುವುದು ವಿಕ್ರಮನಿಗೆ ತಿಳಿಯಲೇ ಇಲ್ಲ. ಕೊನೆಗೆ ಒಂದು ದಿನ ವಿಕ್ರಮ ತಾನು ಪ್ರೀತಿಯಿಂದ ಕಟ್ಟಿ ಬೆಳೆಸಿದ್ದ ಅದ್ವೈತ ಆತ್ಮರಕ್ಷಣೆ ಕೇಂದ್ರವನ್ನು ಅನಿವಾರ್ಯವಾಗಿ ಬಾಗಿಲು ಹಾಕಿದ.
       ಅದ್ವೈತ ಆತ್ಮರಕ್ಷಣೆಯನ್ನು ಬಾಗಿಲು ಹಾಕುವ ಸಂದರ್ಭದಲ್ಲಿ ವಿಕ್ರಮ ಸಾಲಕ್ಕೂ ತುತ್ತಾಗಬೇಕಾಯಿತು. ಎಲ್ಲರೂ ಬಿಟ್ಟುಹೋಗುತ್ತಿದ್ದ ಸಂದರ್ಭದಲ್ಲಿ ಕೈ ಹಿಡಿದವರು ಯಾರೂ ಇರಲಿಲ್ಲ. ಸಹಾಯ ಮಾಡಬಹುದಾಗಿದ್ದ ಪ್ರದೀಪ ಕಾಣೆಯಾಗಿದ್ದ. ಆತ್ಮರಕ್ಷಣೆ ಕೇಂದ್ರದ ಬಿಲ್ಡಿಂಗಿನ ಬಾಡಿಗೆ ತುಂಬಲೂ ಹಣವಿಲ್ಲದಂತಾದ ಪರಿಸ್ಥಿತಿ ಆತನದ್ದಾಗಿತ್ತು. ಕೊನೆಗೆ ಬಾಗಿಲು ಹಾಕಿ ಅಲ್ಲಿದ್ದ ಕೆಲವೊಂದು ಜಿಮ್ ವಸ್ತುಗಳನ್ನು ಮಾರಾಟ ಮಾಡಿದಾಗ ಸಾಲದ ಮೊತ್ತ ಕೊಂಚ ಇಳಿಕೆಯಾಗಿತ್ತಾದರೂ ಪೂರ್ತಿ ಚುಕ್ತಾ ಆಗಿರಲಿಲ್ಲ.
        ವ್ಯಾಯಾಮ ಕೇಂದ್ರದ ಬಾಗಿಲು ಹಾಕಿದ ಮರುಕ್ಷಣದಿಂದ ವಿಕ್ರಂ ನಿರುದ್ಯೋಗಿಯಾಗಿದ್ದ. ತಾನು ಓದಿದ್ದ ಡಿಗ್ರಿ ಸರ್ಟಿಫಿಕೇಟನ್ನು ಹಿಡಿದು ಹಲವು ಕಡೆಗಳಲ್ಲಿ ಉದ್ಯೋಗಕ್ಕಾಗಿ ಪ್ರಯತ್ನಿಸಿದ. ಆದರೆ ವಿಕ್ರಮನ ದುರಾದೃಷ್ಟವೋ ಏನೋ ಎಲ್ಲೂ ಉದ್ಯೋಗ ಸಿಗಲಿಲ್ಲ. ಆತ ಪ್ರಯತ್ನಿಸುವುದು ಬಿಡಲಿಲ್ಲ. ಉದ್ಯೋಗವೂ ಹದಪಟ್ಟಿಗೆ ಸಿಗಲಿಲ್ಲ.
        ಹೀಗಿದ್ದಾಗಲೇ ಅವನ ಊರಾದ ಕಣ್ಣೀರು ಮನೆಯಿಂದ ತಂಗಿ ರಮ್ಯ ಬರೆದಿದ್ದ ಪತ್ರ ಬಂದು ತಲುಪಿತು. ತಂದೆ ಮನೆಯಲ್ಲಿ ಬಹಳ ಸಿಟ್ಟಾಗಿದ್ದಾರೆಂದೂ, ಬೆಂಗಳೂರಿಗೆ ಹೋಗುವುದು ಇಷ್ಟವಿರಲಿಲ್ಲವೆಂದೂ ತಿಳಿಯಿತು. ಆದರೆ ಮನೆಯ ಉಳಿದೆಲ್ಲ ಸದಸ್ಯರೂ ಇದರಿಂದ ಸಿಟ್ಟಾಗಿದ್ದಾರೆಂದೂ, ಬೆಂಗಳೂರು ಪ್ರವಾಸ ಶುಯಭವಾಗಲಿ ಎಂದು ತಿಳಿಸಿದ್ದಾರೆ ಎಂದು ಪತ್ರದಲ್ಲಿ ಬರೆಯಲಾಗಿತ್ತು. ಎಲ್ಲರೂ ಹಾಗಿರುವಾಗ ಅಪ್ಪನೇಕೆ ಹೀಗೆ ಎಂದುಕೊಂಡ ವಿಕ್ರಂ. ಮತ್ತೆ ಪುನಃ ಕೆಲಸ ಹುಡುಕುವ ಕಾರ್ಯ ಆರಂಭವಾಯಿತು. ಕೊನೆಗೊಮ್ಮೆ `ಮಂಗಳೂರು ಮೇಲ್' ಪತ್ರಿಕೆಯಲ್ಲಿ ಕೆಲಸ ಖಾಲಿಯಿದೆ ಎನ್ನುವುದು ತಿಳಿದುಬಂದಿತು. ಕೊನೆಯ ಪ್ರಯತ್ನ ಮಾಡೋಣ ಎಂದುಕೊಂಡು ಪತ್ರಿಕಾ ಕಚೇರಿಯ ಕಡೆಗೆ ಹೊರಟ.
       ಇನ್ನೇನು ಪತ್ರಿಕಾಲಯದ ಕಾಂಪೋಂಡ್ ಒಳಕ್ಕೆ ಕಾಲಿಡುವಷ್ಟರಲ್ಲಿ ಒಂದು ಸ್ಕೂಟಿ ಹೊರಗಿನಿಂದ ಬಂದಿತು. ಒಂದು ಕ್ಷಣ ಒಳಹೋಗುವವನು ನಿಂತ. ಆ ಸ್ಕೂಟಿಯ ಮೇಲೆ ಬಂದಿದ್ದಾಕೆಯೇ ಬಂದಿದ್ದಾಕೆಯೇ ವಿಜೇತಾ. ಆಕೆ ತಮ್ಮ ಪತ್ರಿಕಾಲಯದ ಎದುರು ವಿಕ್ರಮನನ್ನು ಕಂಡು ಒಂದರೆಘಳಿಗೆ ಅವಾಕ್ಕಾದಳು. ಅಚ್ಚರಿಯಿಂದ ನೋಡಿ, ಸ್ಕೂಟಿ ನಿಲ್ಲಿಸಿದರು.
       `ಏನಿಲ್ಲಿ? ಪತ್ರಿಕಾಲಯದ ಮೇಲೆ ಕರಾಟೆ, ಕುಂಗ್ ಫೂ ತೋರ್ಸೋಕೆ ಬಂದ್ರಾ?' ಎಂದು ತಮಾಷೆಯಿಂದ ಕೇಳಿದಳು.
       `ಇಲ್ಲ.. ಕೆಲಸ ಕೇಳೋಕೆ ಬಂದಿದ್ದೇನೆ..' ಎಂದು ಸೀರಿಯಸ್ಸಾಗಿಯೇ ಹೇಳಿದ.
       `ವಾಟ್... ನಿಮ್ ಕುಂಗ್-ಫೂ.. ಕರಾಟೆ ಶಾಲೆಯ ಕತೆ ಏನಾಯ್ತು?' ಎಂದು ಅಚ್ಚರಿಯಿಂದ ಕೇಳಿದಳು ವಿಜೇತಾ. ಆಕೆಗೆ ತುಸು ಹೆಚ್ಚೆನ್ನಿಸುವಂತೆ ತನ್ನ ಈಗಿನ ಸ್ಥಿತಿಗೆ ಕಾರಣ ತಿಳಿಸಿದ. ಆಗ ಆಕೆ ತಮ್ಮ ಪತ್ರಿಕೆಯಲ್ಲಿ ಕೆಲಸ ಖಾಲಿ ಇರುವುದನ್ನು ಹೇಳಿ, ಆ ಕೆಲಸಕ್ಕೆ ಸೇರಬಹುದು ತಾನು ಈ ಕುರಿತು ಮಾತನಾಡುತ್ತೇನೆ ಎಂದೂ ಹೇಳಿದಳು. ಆಫೀಸಿನೊಳಕ್ಕೆ ಕರೆದೊಯ್ದಳು.
       ಕಚೇರಿ ಒಳಗೆ ಹಲವಾರು ಜನರಿದ್ದರು. ಹಲವು ಕಂಪ್ಯೂಟರ್ ಗಳು. ಕಂಪ್ಯೂಟರ್ ಮುಂದೆ ಕುಳಿತು ಚಕ ಚಕನೆ ಕೆಲಸ ಮಾಡುತ್ತಿದ್ದ ಜನರು, ಏನೋ ಗಡಿಬಿಡಿ, ಧಾವಂತದಲ್ಲಿದ್ದಂತೆ ಕಾಣುವ ಜನರು. ಎರಡು ಮಹಡಿಯ ಕಟ್ಟಡದಲ್ಲಿ ಕೆಳ ಮಹಡಿಯಲ್ಲಿ ಪ್ರಿಂಟಿಂಗ್ ಮೆಷಿನುಗಳು ಗರ್ರೆನ್ನುತ್ತಿದ್ದರೆ ಮೇಲ್ಮಹಡಿಯಲ್ಲಿ ಕಚೇರಿ ಕೆಲಸ ನಡೆಯುತ್ತಿತ್ತು. ಆಕೆ ಸೀದಾ ವಿಕ್ರಮನನ್ನು ಸಂಪಾದಕರ ಕೊಠಡಿಯೊಳಕ್ಕೆ ಕರೆದೊಯ್ದಳು. ಸಂಪಾದಕರು ಯಾರೋ? ಹೇಗೋ? ಏನೋ ಎಂದುಕೊಳ್ಳುತ್ತಲೇ ಒಳಗೆ ಹೋದವನಿಗೆ ಒಮ್ಮೆಲೆ ಆಶ್ವರ್ಯ. ಯಾಕಂದ್ರೆ ಒಳಗೆ ಸಂಪಾದಕ ಸ್ಥಾನದಲ್ಲಿದ್ದವರು ನವೀನಚಂದ್ರ. ಇದನ್ನು ನೋಡಿ ವಿಕ್ರಂ `ಇದೇನ್ ಸಾರ್. ನೀವು ಈ ಸೀಟಲ್ಲಿ..' ಎಂದು ಅಚ್ಚರಿಯಿಂದಲೇ ಕೇಳಿದ.
       ನಸುನಗುತ್ತ ಮಾತನಾಡಿದ ನವೀನ್ ಚಂದ್ರ `ಓಹ್ ವಿಕ್ರಂ. ಬನ್ನಿ.. ಬನ್ನಿ.. ಮೊದಲಿದ್ದ ಸಂಪಾದಕರು ರಿಟೈರ್ ಆದರು ನೋಡಿ. ಇದೀಗ ನಾನೇ ಈ ಪತ್ರಿಕೆಗೆ ಸಂಪಾದಕ..' ಎಂದರು. `ಅದ್ಸರಿ.. ಇದೇನು ತಾವಿಲ್ಲಿಗೆ ಬಂದಿದ್ದು..?' ಎಂದೂ ಕೇಳಿದರು.
       `ಸರ್ ಕೆಲಸ ಖಾಲಿಯಿದೆ ಅಂತ ತಿಳಿಯಿತು. ಅದಕ್ಕೆ ಕೆಲಸ ಕೇಳೋಣ ಅಂತ ಬಂದಿದ್ದೇನೆ..' ನೇರವಾಗಿ ಹೇಳಿದ ವಿಕ್ರಂ ತನ್ನೆಲ್ಲ ವಿಷಯಗಳನ್ನೂ ತಿಳಿಸಿದ. ಒಮ್ಮೆ ದೀರ್ಘನಿಟ್ಟುಸಿರು ಬಿಟ್ಟ ನವೀನಚಂದ್ರ ಅವರು ತಲೆ ಕೊಡವಿದರು. `ಸರ್ ನಾನು ಜರ್ನಲಿಸಂ ಓದಿಲ್ಲ. ಆದರೆ ರಿಪೋಟರ್ಿಂಗು, ಪೋಟೋಗ್ರಫಿಯಲ್ಲಿ ಆಸಕ್ತಿಯಿದೆ. ತಾವು ಈ ಕೆಲಸ ಕೊಟ್ಟರೆ ಅನುಕೂಲವಾಗುತ್ತದೆ. ನನಗೆ ಈಗ ಕೆಲಸದ ಅನಿವಾರ್ಯತೆ ಬಹಳ ಅಗತ್ಯ..' ಎಂದು ಪಟಪಟನೆ ಹೇಳಿದ ವಿಕ್ರಂ.
       ನೋಡಿ ವಿಕ್ರಂ. ನಮ್ಮಲ್ಲಿ ಇರೋದು ವರದಿಗಾರರ ಕೆಲಸ. ಈ ಕೆಲಸ ಮಾಡೋಕೆ ಜರ್ನಲಿಸಂ ಆಗಿರಬೇಕು ಅನ್ನುವ ಕಡ್ಡಾಯವೇನಿಲ್ಲ. ಧೈರ್ಯ, ಬರವಣಿಗೆ, ಆಸಕ್ತಿ ಇಷ್ಟಿದ್ದರೆ ಸಾಕು. ನಿಮಗೆ ಈ ಕೆಲಸ ಕೊಡುತ್ತಿದ್ದೇನೆ. ಒಂದೆರಡು ದಿನ ನಮ್ಮ ವರದಿಗಾರರ ಜೊತೆಗೆ ಓಡಾಡಿ. ಕೆಲಸ ಅರಿವಾಗುತ್ತದೆ. ಬೇಕಾದರೆ ವಿಜೇತಾಳ ಸಹಾಯವನ್ನು ಪಡೆದುಕೊಳ್ಳಿ. ನಿಮ್ಮ ಕೆಲಸದಲ್ಲಿ ಸಹನೆ, ಶೃದ್ಧೆ ಇರಲಿ. ನಿಮ್ಮಲ್ಲಿ ಅಗಾಧ ಧೈರ್ಯ ಇದೆ. ಯಾವುದಕ್ಕೂ ಭಯ ಪಡೋದಿಲ್ಲ ಎನ್ನುವ ನಂಬಿಕೆಯಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ನಿಮಗೆ ಬಹುದೊಡ್ಡ ಜವಾಬ್ದಾರಿಗಳನ್ನು ವಹಿಸಬಹುದು. ಏಕಾಗ್ರತೆ, ನಂಬಿಕೆ, ಕೆಲಸದೆಡೆಗೆ ಪ್ರೀತಿ ಇಟ್ಟುಕೊಳ್ಳಿ..' ಎಂದು ನವೀನಚಂದ್ರ ಹೇಳುತ್ತಿದ್ದಂತೆ `ಓಕೆ ಸರ್.. ಆಗ್ಲಿ.. ನನಗೆ ಒಪ್ಗೆ ಇದೆ. ನಿಮ್ಮ ನಂಬಿಕೆ ಹಾಳು ಮಾಡೋದಿಲ್ಲ ನಾನು..' ಎಂದು ವಿಕ್ರಂ ಹೇಳಿದ.
`ನಿನ್ನ ಕೆಲಸದ ವಿವರ, ನೀತಿ-ನಿಯಮ ಇತ್ಯಾದಿಗಳ ಬಗ್ಗೆ ವಿಜೇತಾ ಹೇಳುತ್ತಾಳೆ. ಅವಳ ಹತ್ರ ತಿಳ್ಕೋ. ಆದ್ರೆ ನೆನಪಿಟ್ಕೋ ಅವಳ ಹತ್ತಿರ ಕೆಲಸ ಮಾಡೋದು ಬಹಳ ಡೇಂಜರ್ರು. ಅವಳೂ ಕೂಡ ಹುಂಭ ಧೈರ್ಯದ ಹುಡುಗಿ. ಎಂತೆಂತದ್ದೋ ಸುದ್ದಿಗಳನ್ನು ಹೆಕ್ಕಿ ತರುತ್ತಾಳೆ. ಸಾಕಷ್ಟು ಜನರು ಅವಳ ಮೇಲೆ ಅಟ್ಯಾಕ್ ಮಾಡುತ್ತಿರುತ್ತಾರೆ. ನೀನು ಜೊತೆಗಿದ್ರೆ ಅವಳಿಗೆ ಶಕ್ತಿ ಬರುತ್ತದೆ. ಧೈರ್ಯ ಇದ್ದರೆ ಮಾತ್ರ ಈ ಫೀಲ್ಡು ಗೆಲ್ಲಿಸುತ್ತದೆ..' ಎಂದು ಅರ್ಧ ಉಪದೇಶ ಮತ್ತರ್ಧ ಎಚ್ಚರಿಕೆಯ ಧ್ವನಿಯಲ್ಲಿ ಹೇಳಿದರು ನವೀನಚಂದ್ರ.
      ಏನನ್ನೋ ಹೇಳಲು ಬಾಯಿತೆರೆದ ವಿಕ್ರಂ `ಥ್ಯಾಂಕ್ಯೂ ಸರ್.. ನಿಮ್ಮ ಈ ಉಪಕಾರ ಎಂದಿಗೂ ಮರೆಯೋದಿಲ್ಲ..' ಎನ್ನುತ್ತಾ ವಿಜೇತಾಳ ಹಿಂದೆ ಹೊರಟ. ಆಗ ಆತನ ಮನಸ್ಸಿನಲ್ಲಿ `ನನ್ನ ಕಥೆಯನ್ನು ಹೇಳುವ ಮೊದಲೆ ನವೀನಚಂದ್ರ ಅವರು ತಮಗೆಲ್ಲಾ ಗೊತ್ತಿದೆ ಎನ್ನುವಂತೆ ವತರ್ಿಸಿದರಲ್ಲ. ನಾನು ಹೇಳುವ ಮೊದಲೇ ಅವರೇ ನನ್ನ ಕುಂಗ್ ಫೂ ಕರಾಟೆ ಶಾಲೆಯ ವ್ಯಥೆಯನ್ನೆಲ್ಲ ಅವರೇ ಮೊದಲು ಹೇಳುತ್ತಿದ್ದರಲ್ಲ.. ಇದು ಹೇಗೆ?' ಎನ್ನುವ ಅನುಮಾನ ಕಾಡಿತು. ಪತ್ರಿಕೆಯವರಲ್ವಾ.. ಗಮನಿಸಿರಬೇಕು ಎಂದುಕೊಂಡು ಸುಮ್ಮನಾದ.
       ಆಕೆ ಸೀದಾ ಕಚೇರಿಯ ಒಳಕ್ಕೆ ಹೋಗಿ ಉಪಸಂಪಾದಕರ ಕೊಠಡಿಯನ್ನು ಹೊಕ್ಕಳು. ಉಪಸಂಪಾದಕರು ಹೇಗಿತರ್ಾರೋ, ಯಾರೋ? ಅವರು ಇನ್ನೇನು ಕೇಳುತ್ತಾರೋ ಎನ್ನುವ ಆಲೋಚನೆಯಲ್ಲಿಯೇ ವಿಕ್ರಂ ಒಳಹೋದ. ನೋಡಿದರೆ ವಿಜೇತಾ ಉಪಸಂಪಾದಕರ ಸೀಟಿನಲ್ಲಿ ಕುಳಿತಿದ್ದಳು. ವಿಸ್ಮಯದಿಂದ ನೋಡುತ್ತಿದ್ದಾಗಲೇ `ನೋಡು ಹೇಳಲಿಕ್ಕೆ ಮರೆತಿದ್ದೆ. ನಾನು ಪತ್ರಿಕೆಯ ಉಪಸಂಪಾದಕು. ದೊಡ್ಡ ದೊಡ್ಡ ಪತ್ರಿಕೆಗಳಲ್ಲಿ ಹತ್ತಾರು ಜನ ಉಪಸಂಪಾದಕರಿರ್ತಾರೆ. ಆದರೆ ನಮ್ಮದು ಬೆಳೆಯುತ್ತಿರುವ ಪತ್ರಿಕೆ. ಇದಕ್ಕೆ ನಾನು ಉಪಸಂಪಾದಕಿ. ನವೀನಚಂದ್ರ ಸರ್ ಸಂಪಾದಕರಾದ ಮೇಲೆ ನಾನು ಉಪಸಂಪಾದಕಿಯಾದೆ. ನಾನು ಮೊದಲು ಕೆಲಸ ಮಾಡುತ್ತಿದ್ದ ಹುದ್ದೆ ಖಾಲಿಯಿದೆ. ಅದಕ್ಕೆ ನಿನ್ನನ್ನು ಸೇರಿಸಿಕೊಳ್ತಾ ಇರೋದು..' ಎಂದಳು.
         `ನಿಮ್ಮನ್ನು ನಮ್ಮ ಕ್ರೈಂ ರಿಪೋರ್ಟರ್ ಆಗಿ ಸೇರಿಸಿಕೊಳ್ತಾ ಇದ್ದೀವಿ. ಅಪರಾಧ ವರದಿ ಮಾಡೋದು ನಿಮ್ಮ ಮುಖ್ಯ ಕೆಲಸ. ಸಾಕಷ್ಟು ರಿಸ್ಕಿನ ಕೆಲಸ. ಆದರೆ ನಿಮ್ಮ ಮೊದಲಿನ ಕೆಲಸ ಇಲ್ಲಿ ಸಹಾಯಕ್ಕೆ ಬರಬಹುದು. ಚಾಲೇಂಜಿಂಗ್ ಆಗಿರುತ್ತದೆ. ಆದರೆ ಅದೇ ಮಜಾ ಕೊಡುತ್ತದೆ. ಮೊದಲು 15 ದಿನ ಜೊತೆಗೆ ನಾನು ಇದ್ದು ಕೆಲಸ ಹೇಳಿಕೊಡುತ್ತೇನೆ. ನಂತರ ನಿಮಗೆ ಎಲ್ಲ ರೂಢಿಯಾಗುತ್ತದೆ. ನಿಮಗೆ ಪ್ರಾರಂಭದಲ್ಲಿ 12 ಸಾವಿರ ರು. ಸಂಬಳ ನಿಗದಿ ಮಾಡಿದ್ದಾರೆ. ಮುಂದೆ ನಿಮ್ಮ ಕೆಲಸದ ವೈಖರಿ ನೋಡಿ ಸಂಬಳ ಏರಿಕೆಯಾಗುತ್ತ ಹೋಗುತ್ತದೆ. ಹೊಸದಾಗಿ ಪತ್ರಿಕೋದ್ಯಮಕ್ಕೆ ಬರುತ್ತಿದ್ದೀರಾ. ಶುಭವಾಗಲಿ. ಯಶಸ್ಸು ನಿಮಗೆ ಸಿಗಲಿ.  ನೀವು ಯಶಸ್ವಿಯಾಗುತ್ತೀರಾ. ಇದು ನನ್ನ ಹಾಗೂ ನವೀನಚಂದ್ರ ಅವರ ನಂಬಿಕೆ. ಹೇಳಿ ಯಾವಾಗಿಂದ ಕೆಲಸಕ್ಕೆ ಬರುತ್ತೀರಾ?' ಎಂದು ಕೇಳಿದಳು ವಿಜೇತಾ.
         `ಈಗಲೇ ಬರಲು ನಾನು ತಯಾರು..' ಎಂದವನ ಮುಖವನ್ನು ಒಮ್ಮೆ ನೋಡಿ ಮೆಚ್ಚುಗೆ ಸೂಚಿಸಿದಳು ವಿಜೇತಾ. `ಈಗ ಬೇಡ.. ನಾಳಿಂದ ಬನ್ನಿ.. ' ಎಂದವಳೇ `ಬನ್ನಿ ನಮ್ಮ ಆಫೀಸಿನ ಎಲ್ಲರನ್ನೂ ಪರಿಚಯ ಮಾಡಿಕೊಡ್ತೀನಿ..' ಎಂದು ಕರೆದುಕೊಂಡು ಹೋಗಿ ಎಲ್ಲರನ್ನೂ ಪರಿಚಯಿಸಿದಳು.
         ಕೆಲಸ ಸಿಕ್ಕ ಖುಷಿಯಲ್ಲಿ ಅಲ್ಲಿ ಇಲ್ಲಿ ಸುತ್ತಾಡಿ ಮರಳಿ ಮನೆಗೆ ಬರುವಾಗ ಸಂಜೆಯಾಗುತ್ತಿತ್ತು. ಮನೆಗೆ ಪೋನ್ ಮಾಡಿದರೆ ಎಂದಿನಂತೆ ಡೆಡ್ಡಾಗಿತ್ತು. ಪತ್ರ ಗೀಚಿ ಸುಮ್ಮನಾದ. `ಅಂತೂ ಕೆಲಸ ಸಿಕ್ತಲ್ಲ..' ಎಂದು ನಿಟ್ಟುಸಿರು ಬಿಟ್ಟ.
         ಮರುದಿನದಿಂದಲೇ ಕೆಲಸಕ್ಕೆ ಹೋಗಲಾರಂಭಿಸಿದ. ಮೊದ ಮೊದಲು ಸ್ವಲ್ಪ ಕಷ್ಟವಾಯಿತಾದರೂ ವಾರ ಕಳೆಯುವಷ್ಟರಲ್ಲಿ ಪತ್ರಿಕೋದ್ಯಮ ಅರ್ಥವಾಗತೊಡಗಿತ್ತು. ನಂತರ ಯಾವುದೇ ಸಮಸ್ಯೆಯಾಗಲಿಲ್ಲ. ಮೊದ ಮೊದಲು ವಿಜೇತಾ ವಿಕ್ರಂನಿಗೆ ಮಾರ್ಗದರ್ಶನ ನೀಡಿದಳು. ನಂತರ ವಿಕ್ರಂ ಸ್ವತಂತ್ರವಾಗಿ ಕೆಲಸ ಮಾಡತೊಡಗಿದ.

****

       ಕೆಲಸ ಕೊಡಿಸಿದ ಕಾರಣಕ್ಕೋ ಅಥವಾ ಕೆಲಸ ಬಗ್ಗೆ ಮಾರ್ಗದರ್ಶನ ನೀಡಿದ್ದಕ್ಕೋ ವಿಜೇತಾಳ ಬಗ್ಗೆ ವಿಕ್ರಮನಿಗೆ ಮನಸ್ಸಿನಲ್ಲಿ ಗೌರವ ಮನೆಮಾಡಿತ್ತು. ಆಕೆಯ ಜೊತೆಗಿನ ಓಡಾಡ ಸ್ನೇಹಭಾವವನ್ನೂ ತುಂಬಿತ್ತು. ಉತ್ತಮ ಸ್ನೇಹಿತರಾಗಿ ಕೆಲದಿನಗಳಲ್ಲಿಯೇ ಅವರು ಬದಲಾಗಿದ್ದರು. ಕೆಲವೊಮ್ಮೆ ಆಕೆ ತಾನು ಹೋಗುತ್ತಿದ್ದ ಕೆಲಸಕ್ಕೂ ಕರೆದೊಯ್ಯುತ್ತಿದ್ದಳು. ತೀರಾ ರಿಸ್ಕೆನ್ನಿಸುತ್ತಿದ್ದ ಕೆಲಸದಲ್ಲಿ ವಿಕ್ರಂ ಜೊತೆಗಿರುತ್ತಿದ್ದ. ಆಪ್ತವಾದಾಗ ತನ್ನ ಮನೆಗೂ ಕರೆದೊಯ್ದಿದ್ದಳು ವಿಜೇತಾ. ಮನೆಯಲ್ಲಿ ಆಕೆಯ ತಂದೆ, ತಾಯಿ ಹಾಗೂ ತಮ್ಮ ಇದ್ದರು. ಚಿಕ್ಕ ಕುಟುಂಬದಲ್ಲಿ ತಂದೆ ಏನೋ ಕೆಲಸ ಮಾಡುತ್ತಿದ್ದ. ತಮ್ಮ ಇನ್ನೂ ಓದುತ್ತಿದ್ದ.
     
****

       ಹೀಗಿದ್ದಾಗಲೇ ಒಂದು ದಿನ ಮಂಗಳೂರಿನ ಬಂದರಿನಲ್ಲಿ ಒಬ್ಬನ ಕೊಲೆಯಾಗಿತ್ತು. ಇದರ ವರದಿಗಾರಿಕೆಯ ಕೆಲಸ ವಿಕ್ರಮನದ್ದಾಗಿತ್ತು. ಮಂಗಳೂರು ಮೇಲ್ ಪತ್ರಿಕೆ ಕೊಲೆ ಅಥವಾ ಇನ್ಯಾವುದೋ ನಿಘೂಡ ಸನ್ನಿವೇಶಗಳು ನಡೆದಿದ್ದ ಸಂದರ್ಭದಲ್ಲಿ ಅದನ್ನು ಪತ್ತೆ ಹಚ್ಚುವ ಕಾರ್ಯವನ್ನೂ ಮಾಡುತ್ತಿತ್ತು. ಈ ಕಾರಣಕ್ಕಾಗಿಯೇ ಮಂಗಳೂರು ಮೇಲ್ ಓದುಗರ ಮನಸ್ಸಿನಲ್ಲಿ ವಿಭಿನ್ನ ಸ್ಥಾನವನ್ನು ಪಡೆದುಕೊಂಡಿತ್ತು. ಈ ಕೊಲೆಯ ಕುರಿತು ವರದಿಯ ಜೊತೆಗೆ ಪತ್ತೆದಾರಿ ಕೆಲಸವನ್ನೂ ಮಾಡುವ ಆಲೋಚನೆ ವಿಕ್ರಮನದ್ದಾಗಿತ್ತು. ಆತ ಅದಾಗಲೇ ಕೊಂಡಿದ್ದ ತನ್ನ ಹೊಸ ಬೈಕನ್ನೇರಿ ಹೊರಡಲು ಅನುವಾಗುತ್ತಿದ್ದಂತೆಯೇ ವಿಜೇತಾ ತಾನೂ ಬರುತ್ತೇನೆಂದಳು. ನವೀನಚಂದ್ರನ ಒಪ್ಪಿಗೆ ಪಡೆದು ಹೊರಟಳು.
        ಇವರು ಹೋಗುವ ವೇಳೆಗಾಗಲೇ ಶವದ ಮಹಜರು ನಡೆದಿತ್ತು. ಪೊಲೀಸರು ಜನರನ್ನು ಚದುರಿಸುತ್ತಿದ್ದರು. ಇವರು ಹೋಗಿ ಎಲ್ಲ ರೀತಿಯ ವರದಿ ಪಡೆದು ಸತ್ತವನ ಪೋಟೋ ತೆಗೆದುಕೊಂಡರು. ಮಾಹಿತಿ ಎಲ್ಲ ಪಡೆದ ನಂತರ ತಿಳಿದಿದ್ದೇನೆಂದರೆ ಕೊಲೆಯಾಗಿದ್ದವನೊಬ್ಬ ಪೊಲೀಸ್ ಅಧಿಕಾರಿ. ಆದರೆ ಆ ಅಧಿಕಾರಿ ತನ್ನ ಡ್ಯೂಟಿಯ ವಸ್ತ್ರದಲ್ಲಿರಲಿಲ್ಲ. ಆತನನ್ನು ಬೆಳಗಿನ ಜಾವದಲ್ಲಿ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿತ್ತು. ಆದರೆ ಕೊಲೆಗೆ ಬಳಕೆ ಮಾಡಿದ್ದ ಚಾಕು ಅಲ್ಲಿ ಇರಲಿಲ್ಲ. ಆರೋಪಿ ಚಾಣಾಕ್ಷತನದಿಂದ ಹತ್ಯೆ ಮಾಡಿದ್ದ. ಯಾವುದೇ ಸುಳಿವು ಪೊಲೀಸರಿಗೆ ಲಭ್ಯವಾಗದೇ ಇದ್ದಿದ್ದು ಸೊಷ್ಟವಾಗಿತ್ತು. ಪೊಟೋಗ್ರಾಫರ್ ಗಳು ಒಂದಿಷ್ಟು ಜನ ಶವದ ವಿವಿಧ ಭಂಗಿಯ ಪೋಟೋಗಳನ್ನು ಕ್ಲಿಕ್ಕಿಸುತ್ತಿದ್ದರು. ಎಲ್ಲವನ್ನು ಸಂಗ್ರಹಿಸಿ ವಾಪಾಸು ಬರುತ್ತಿದ್ದ ಸಂದರ್ಭದಲ್ಲಿ ವಿಕ್ರಮನ ಕಣ್ಣಿಗೊಂದು ಲಾಕೆಟ್ ನೆಲದ ಮೇಲೆ ಬಿದ್ದಿರುವುದು ಕಾಣಿಸಿತು. ಜನಜಂಗುಳಿಯ ನಡುವೆ ಯಾರ ಗಮನಕ್ಕೂ ಬಂದಿರಲಿಲ್ಲ. ವಿಕ್ರಮ ಬಗ್ಗಿ ಅದನ್ನು ಎತ್ತಿಕೊಂಡ. ಆ ಲಾಕೆಟ್ ತೀರಾ ವಿಶೇಷವಾಗಿರದಿದ್ದರೂ ಎಸ್. ಎಂದು ಬರೆದಿದ್ದ ಕೀ ಬಂಚ್ ಅದಾಗಿತ್ತು. ಇರ್ಲಿ.. ನೋಡೋಣ ಎಂದು ಅದನ್ನು ಕಿಸೆಯಲ್ಲಿ ಹಾಕಿಕೊಂಡ.
        ಬಹುಶಃ ಈ ಕೀಬಂಚ್ ಮುಂದೆ ಹಲವು ಚಿತ್ರ ವಿಚಿತ್ರ ತಿರುವುಗಳಿಗೆ, ತೊಂದರೆಗೆ ಒಡ್ಡುತ್ತದೆ ಎನ್ನುವುದು ಗೊತ್ತಿದ್ದಿದ್ದರೆ ವಿಕ್ರಮ ಆ ಲಾಕೇಟನ್ನು ಎತ್ತಿಟ್ಟುಕೊಳ್ಳುತ್ತಲೇ ಇರಲಿಲ್ಲವೇನೋ. ಪಾ..ಪ.. ಆತನಿಗೆ ಅದು ಗೊತ್ತಾಗಲೇ ಇಲ್ಲ. ಅಷ್ಟಕ್ಕೂ ಅದೆಲ್ಲಾ ತಿಳಿಯಲು ಆತನೇನು ಜ್ಯೋತಿಷಿಯೇ..?

(ಮುಂದುವರಿಯುತ್ತದೆ)     

Saturday, December 27, 2014

ಒಲವು

(ರೂಪದರ್ಶಿ: ಅನುಷಾ ಹೆಗಡೆ)
ಕವಿತೆಯಾಗು ಗೆಳತಿ ನೀನು
ನನ್ನ ಬಾಳಿಗೆ
ತುಂಬಿ ಬಿಡಲಿ ಒಂದೇ ಕ್ಷಣ ದಿ
ಮನದ ಜೋಳಿಗೆ!

ನೀನೆಂದರೆ ನನ್ನ ಒಳಗೆ
ಸದಾ ಅಕ್ಷರ
ನಿನ್ನ ಕಾಣದಿರೆ ಅಂದು
ಮನವು ತತ್ತರ !

ನೀನೆಂಬುದು ನನ್ನ ಪಾ
ಲಿಗೊಂದು ಅದ್ಭುತ
ನಿನ್ನ ಕಡೆಗೆ ನನ್ನ ಒಲವು
ಮೇರು ಪರ್ವತ !

ಸದಾ ನಿನ್ನ ನಗುವೊಂದೇ
ನನ್ನ ಬದುಕ ಶಕ್ತಿ
ನಿನ್ನ ಒಲವು ನನಗೆ ಸಿಗಲು
ಬದದುಕಿಗಂದೇ ತೃಪ್ತಿ.



Thursday, December 25, 2014

ತಮಾಷೆಯ ಹನಿಗಳು

ಕಂಸ

ಕಂಸ ಎಂದರೆ ಕೃಷ್ಣನ
ಮಾವ ಎನ್ನುವುದೊಂದೇ ಅಲ್ಲ|
ಇನ್ನೊಂದಿದೆ.
ಆಗಾಗ ಬರಹದ, ಮದ್ಯ ಹಾಗೂ
ವ್ಯಾಕರಣದ ನಡುವೆ
ಬಂದು ಕಾಡುತ್ತಿರುತ್ತದೆ ||

ಶನಿ

ಇಂದಿನ ಸಾಲಿಗರಂತೆ
ಎಲ್ಲೆಂದರಲ್ಲಿ ತಡೆದು
ಕಾಟ ಕೊಡುವಾತ |
ಕೈಯ, ಮೈಯ
ತ್ರಾಣ ಹೀರಿ ಬಿಡುವಾತ |

ಗಾಢ-ಪ್ರೀತಿ

ನನ್ನ ಕಣ್ಣಿಗೆ ನೀನು
ಸುಂದರ ಹೂವಿನಂತೆ ಕಾಣುವೆ |
ಆದ್ದರಿಂದ ನಾನು ದುಂಬಿಯಂತೆ
ನಿನ್ನ ಹೀರುತ್ತಿರುವೆ ||

ಅರ್ಜುನ

ಇವನೇ ಆಧುನಿಕ ರಾಜಕೀಯ
ವ್ಯಕ್ತಿಗಳಿಗೆ ಆದರ್ಶ ವ್ಯಕ್ತಿ |
ಏಕೆಂದರೆ ಇವನೇ ಕೃಷ್ಣ
ಮಾಡಿದ ಅಷ್ಟೂ ಕೆಲಸಗಳನ್ನು
ತಾನೇ ಮಾಡಿದ್ದೆಂದಾತ ||

ನಾಂಡ್ರೋಲಿನ್

ಆಗೊಮ್ಮೆ ಆಗಿದ್ದ ಅಕ್ತರ್
ಪಾಕಿಸ್ತಾನಕ್ಕೆ ಮಹಾನ್ |
ಆದರೆ ಆ ಪುಣ್ಯಾತ್ಮನನ್ನು
ಹಾಳು ಮಾಡಿದ್ದು ಮಾತ್ರ ನಾಂಡ್ರೋಲಿನ್ ||

Wednesday, December 24, 2014

ಅಘನಾಶಿನಿ ಕಣಿವೆಯಲ್ಲಿ-4


          ಮೂರ್ತಿಗಳ ಮನೆಯನ್ನು ಸೇರುವ ವೇಳೆಗೆ ಆಗಲೇ ಮದ್ಯಾಹ್ನ ಕಳೆದು ಸಂಜೆ ಧಾವಿಸುತ್ತಿತ್ತು. ಬಂದವರು ವಿಶ್ರಾಂತಿಗಾಗಿ ನಿಲ್ಲಲೇ ಇಲ್ಲ. ಬೆಂಗಳೂರಿನ ಬೀದಿಗಳಲ್ಲಿ ತಿರುಗಾಡುವ ಹುಚ್ಚು ಎಲ್ಲರಿಗೂ. ತಿರುಗಿದರು. ಮೂರ್ತಿಯವರ ಮನೆಯಿದ್ದ ಮಲ್ಲೇಶ್ವರಂ, ಬ್ರಿಗೇಡ್ ರೋಡ್, ಎಂ. ಜಿ. ರೋಡ್ ಸೇರಿದಂತೆ ಬಹಳಷ್ಟು ಕಡೆಗಳಲ್ಲಿ ಓಡಾಡಿ ಬಂದರು. ಮರಳಿ ಮೂರ್ತಿಯವರ ಮನೆ ಸೇರುವ ವೇಳೆಗೆ ಸಂಜೆ 9ನ್ನೂ ದಾಟಿತ್ತು.
           ಬರುವ ವೇಳೆಗೆ ಅಲ್ಲಿಯೇ ಇದ್ದ ಮೂರ್ತಿಯವರು `ಏನ್ರಪ್ಪಾ ಬೆಂಗಳೂರು ತಿರುಗಾಡಿ ಬಂದಿರಾ? ಯಾವ್ ಯಾವ್ ಕಡೆಗೆ ಹೋಗಿದ್ರಿ?' ಎಂದು ಕೇಳಿದರು.
          `ಇಲ್ಲ.. ಇಲ್ಲ.. ಎಲ್ಲ ಕಡೆ ಹೋಗಿಲ್ಲ.. ಮಲ್ಲೇಶ್ವರಂ ಅಷ್ಟೇ ಓಡಾಡಿದ್ವಿ ನೋಡಿ..' ಎಂದು ತಮಾಷೆ ಮಾಡಿದ ವಿಕ್ರಂ. `ಹಿಡಿಸ್ತಾ ಬೆಂಗಳೂರು?' ಕೇಳಿದರು ಮೂರ್ತಿಗಳು.
           `ಹುಂ.. ಬೆಂಗಳೂರು ಹಿಡಿಸದರೇ ಇದ್ದರೆ ಹೇಗೆ ಹೇಳಿ? ಮಂಗಳೂರಿನಂತೆ ಸೆಖೆ, ಉಪ್ಪುನೀರು ಯಾವುದೂ ಇಲ್ಲಿಲ್ಲ. ತಂಪು ಹವೆ, ಆಹ್ಲಾದಕರ ವಾತಾವರಣ.. ಬಹಳ ಖುಷಿಯಾಗುತ್ತದೆ..' ಎಂದ ವಿಕ್ರಂ. ಆ ಸಮಯದಲ್ಲಿ ಮೂರ್ತಿಯವರ ಮನೆಯವರೆಲ್ಲ  ಆಗಮಿಸಿದ್ದರು. ಹೀಗಾಗಿ ಎಲ್ಲರನ್ನೂ ಮತ್ತೊಮ್ಮೆ ಪರಿಚಯಿಸಿದರು.

*****4*****

           `ನೋಡಿ.. ನಾಳೆ ಜವರಿ 26. ಎಲ್ಲರೂ ಗಣರಾಜ್ಯೋತ್ಸವದ ತಲೆಬಿಸಿಯಲ್ಲಿ ಇರ್ತಾರೆ. ಇಂಥ ಟೈಮನ್ನು ನಾವು ಹಾಳುಮಾಡ್ಕೋಬಾರ್ದು. ಇಂಥ ಹೊತ್ತಲ್ಲಿ ಪೊಲೀಸರು ಬೇರೆ ಕಡೆ ಯೋಚನೆ ಮಾಡ್ತಿರ್ತಾರೆ. ನಾವು ಹೆಚ್ಚು ಹೆಚ್ಚಿನ ಪ್ರಮಾಣದಲ್ಲಿ ಈ ವಸ್ತುಗಳನ್ನ ಅಂದ್ರೆ ಗಾಂಜಾ, ಕೋಕೋ ಎಲೆಗಳು, ಆಯುರ್ವೇದ ಔಷಧಿಗಳು, ಆಫೀಮು ಇವನ್ನೆಲ್ಲ ಸಾಗಿಸಬೇಕು. ಕಾರವಾರ, ತದಡಿ, ಭಟ್ಕಳ, ಅಂಕೋಲಾ, ಧಾರೇಶ್ವರ  ಈ ಭಾಗಗಳಲ್ಲಿ ಬೀಚಿನ ಮೂಲಕ ವಿದೇಶಗಳಿಗೆ ಈ ವಸ್ತುಗಳನ್ನು ಸಾಗಿಸುವುದು ಸುಲಭ. ನೆನಪಿರ್ಲಿ ಎಲ್ಲ ಕಡೆ ಹುಷಾರಾಗಿರಬೇಕು. ವಿದೇಶದಿಂದ ಬರುವ ಮಾಲುಗಳನ್ನು ಸರಿಯಾಗಿ ಸಂಗ್ರಹ ಮಾಡಿಕೊಳ್ಳಿ. ಬಂದ ಮಾದಕ ವಸ್ತುಗಳನ್ನು ಸರಿಯಾಗಿ ಹಂಚಿಕೆ ಮಾಡಬೇಕು. ಶಿರಸಿಯಲ್ಲೂ ಈ ಕಾರ್ಯ ಸಮರ್ಪಕವಾಗಿ ಆಗಬೇಕು. ನೆನಪಿರ್ಲಿ. ಸ್ವಲ್ಪ ಎಚ್ಚರ ತಪ್ಪಿದರೂ ನಿಮ್ಮೆಲ್ಲರ ತಲೆ ಎಗರುತ್ತದೆ ನೆನಪಿಟ್ಕೊಂಡಿರಿ..' ಎಂದು ಒಬ್ಬಾತ ಅದೊಂದು ನಿಘೂಡ ಸ್ಥಳದಲ್ಲಿ ತನ್ನವರಿಗೆ ಹೇಳುತ್ತಿದ್ದ. ಉಳಿದವರು ಅದಕ್ಕೆ ತಲೆಯಲ್ಲಾಡಿಸುತ್ತಿದ್ದರು.
           ಜನರನ್ನು ಒಳ್ಳೆಯತನದಿಂದ ಕೆಟ್ಟತನಕ್ಕೆಳೆಯುವ, ಅವರಿಗೆ ಬೇರೆ ಯಾವುದರೆಡೆಗೂ ಯೋಚನೆಯೇ ಇರದಂತೆ, ಮಾದಕ ವಸ್ತುಗಳ ದಾಸರನ್ನಾಗಿ ಮಾಡುವ ಜಾಲವೊಂದು ಅಲ್ಲಿತ್ತು. ಅಲ್ಲದೇ ಮಲೆನಾಡಿನ ಮಡಿಲಲ್ಲಿ ಬೆಳೆಯುವ ಅತ್ಯಮೂಲ್ಯ ಗಿಡಮೂಲಿಕೆಗಳನ್ನು ಕದ್ದು ಸಾಗಿಸಿ ಬಹು ರಾಷ್ಟ್ರೀಯ, ಔಷಧಿ ತಯಾರಿಕಾ ಸಂಸ್ಥೆಗಳಿಗೆ ಮಾರಾಟವನ್ನು ಮಾಡಲಾಗುತ್ತಿತ್ತು. ಈ ಜಾಲಕ್ಕೆ ಜನರ ಒಳಿತು, ಕೆಡುಕುಗಳು ಇಷ್ಟವಿರಲಿಲ್ಲ. ಹಣಗಳಿಕೆಯೊಂದೇ ಮೂಲೋದ್ಧೇಶವಾಗಿತ್ತು. ಪೊಲೀಸ್ ಇಲಾಖೆ ಇವರ ಬೆನ್ನು ಬಿದ್ದು ದಶಕಗಳೇ ಕಳೆದಿದ್ದವು. ಆದರೆ ಇಲಾಖೆ ಚಿಕ್ಕ ಜಾಡನ್ನು ಹಿಡಿಯಲೂ ವಿಫಲವಾಗಿತ್ತು. ಗೂಢಚರ ಇಲಾಖೆ ತಮ್ಮ ಅಧಿಕಾರಿಗಳನ್ನು ಈ ಜಾಲದ ಹಿಂದೆ ಬಿಟ್ಟಿತ್ತು. ಜೊತೆ ಜೊತೆಯಲ್ಲಿ ಖಾಸಗಿ ಗೂಢಚಾರರೂ ಕೂಡ ತಮ್ಮದೇ ಕೆಲಸವನ್ನು ಮಾಡಲು ಆರಂಭಿಸಿದ್ದರು. ಈ ಜಾಲವನ್ನು ಬೇಧಿಸಿದರೆ ತಮಗೆ ಹೆಮ್ಮೆ ಎಂದುಕೊಂಡಿದ್ದರು. ಆದರೆ ಒಂದು ಸಣ್ಣ ಎಳೆ ಸಿಕ್ಕಿತು ಎಂದು ಹುಡುಕಲು ಆರಂಭಿಸಿದರೆ ಗೊಂದಲ ಉಂಟಾಗಿ ಎತ್ತೆತ್ತಲೋ ಸಾಗುತ್ತಿತ್ತು.

****

         ಜನವರಿ 26. ಗಣರಾಜ್ಯದ ದಿನ. ಮೊದಲೇ ನಿರ್ಧರಿಸಿದಂತೆ ವಿಕ್ರಂ ಹಾಗೂ ಜೊತೆಗಾರರು ವಿಧಾನ ಸೌಧದ ಎದುರು ಬಂದು ಸೇರಿದರು. ಅಲ್ಲಿಂದ ಪರೇಡ್ ಗ್ರೌಂಡಿಗೆ ಹೋದರು. ಏನೋ ವಿಶೇಷ ನಡೆಯುತ್ತದೆ ಎಂದುಕೊಂಡು ಹೋದವರಿಗೆ ರಾಜಕಾರಣಿಗಳ ಭಾಷಣ ಬೇಸರವನ್ನು ತರಿಸಿತು. ನಿರಾಸೆಯಿಂದ ಸುತ್ತಮುತ್ತಲೂ ಓಡಾಡಲು ಆರಂಭಿಸಿದರು. ಚಿನ್ನಸ್ವಾಮಿ ಕ್ರೀಡಾಂಗಣವನ್ನು ವೀಕ್ಷಿಸಿ, ಹತ್ತಿರದಲ್ಲೇ ಇದ್ದ ಕಬ್ಬನ್ ಪಾರ್ಕನ್ನು ವೀಕ್ಷಣೆಗೆ ಹೊರಟರು. ಕಬ್ಬನ್ ಪಾರ್ಕಿನಲ್ಲಿದ್ದ ಪ್ರೇಮಿಗಳ ಜೋಡಿಗಳನ್ನು ನೋಡಿ ಬೆರಗಾದರು. ಕೆಲವೆಡೆ ಅಸಹ್ಯವನ್ನೂ ಪಟ್ಟುಕೊಂಡರು. ಜೊತೆಗಿದ್ದ ಪ್ರದೀಪನ ಕಣ್ಣಿಗೆ ವಿಶೇಷ ಸಂಗತಿಯೊಂದು ಬಿದ್ದಿತು. ವಿಕ್ರಂ ಹಾಗೂ ಅವನ ಜೊತೆಗಾರರು ಎಲ್ಲ ಕಡೆಗೆ ಓಡಾಡುತ್ತಿದ್ದರೂ ವ್ಯಕ್ತಿಯೊಬ್ಬ ಇವರನ್ನು ಹಿಂಬಾಲಿಸುತ್ತಿದ್ದ. ಬಹಳ ಸಮಯದಿಂದ ವಿಕ್ರಂ-ಜೊತೆಗಾರರು ಹೋದ ಕಡೆಯಲ್ಲೆಲ್ಲ ಬರುತ್ತಿದ್ದ. ಚಲನವಲನ ವೀಕ್ಷಿಸುತ್ತಿದ್ದ. ಪ್ರದೀಪ ಮೊದ ಮೊದಲು ಇದನ್ನು ಅಲಕ್ಷಿಸಿದನಾದರೂ ನಂತರ ಆ ವ್ಯಕ್ತಿ ಹಿಂಬಾಲಿಸುತ್ತಿದ್ದುದು ಖಚಿತವಾದ ನಂತರ ತಾನು ಸ್ವಲ್ಪ ಎಚ್ಚರಿಕಿಯಿಂದ ಇರತೊಡಗಿದೆ. ಈ ವಿಷಯವನ್ನು ಮೊದಲು ವಿಕ್ರಂನಿಗೆ ತಿಳಿಸೋಣ ಎಂದುಕೊಂಡನಾದರೂ ಕೊನೆಗೆ ಬೇಡ ಎಂದುಕೊಂಡು ಸುಮ್ಮನಾದ. ಹಾಗಾದರೆ ಹೀಗೆ ಹಿಂಬಾಲಿಸುತ್ತಿದ್ದ ವ್ಯಕ್ತಿ ಯಾರು? ಪ್ರದೀಪನೇನಾದರೂ ವಿಕ್ರಂನಿಗೆ ಈ ವಿಷಯ ತಿಳಿಸಿದ್ದರೆ ಮುಂದೇನಾದರೂ ತಿರುವು ಘಟಿಸುತ್ತಿತ್ತೇ? ಇದೇನಿದು ಇಂತಹ ಗೂಢತೆ?

*****

             ಒಂದೆರಡು ದಿನಗಳನ್ನು ಬೆಂಗಳೂರಿನಲ್ಲಿ ಕಳೆದ ಮೇಲೆ ನಿರ್ಣಾಯಕ ಎನ್ನಿಸಿದಂತಹ ದಿನಗಳು ಬಂದವು. ಜನವರಿ 28. ಆ ದಿನದ ಸೂರ್ಯ ಟೆನ್ಶನ್ ನೊಂದಿಗೆ ಹುಟ್ಟಿದನೇನೋ ಎನ್ನುವಂತೆ ಎಲ್ಲರಿಗೂ ಅನ್ನಿಸತೊಡಗಿತ್ತು. ಎಲ್ಲರೂ ಸಮಗ್ರ ತಯಾರಿಯೊಂದಿಗೆ ನಿಗದಿತ ಸ್ಥಳಕ್ಕೆ ಹೋದರು. ಅಲ್ಲಾಗಲೇ ಜನರೆಲ್ಲರೂ ಸೇರಿದ್ದರು.
             ಅದೊಂದು ದೊಡ್ಡ ಬಯಲಿನಲ್ಲಿ ವಿವಿಧ ಸ್ಪರ್ಧೆಗಳು ನಡೆಯಲಿದ್ದವು. ಅಲ್ಲಿ ಹೋಗಿ ಕುಳಿತುಕೊಳ್ಳುವ ವೇಳೆಗಾಗಲೇ ಸ್ಪರ್ಧಾ ಘೋಷಣೆಯೂ ಆಯುತು. ಪ್ರಾರಂಭದ ಒಂದೆರಡು ಸ್ಪರ್ಧೆಗಳಲ್ಲಿ ಗೆಲುವುಗಳನ್ನೇ ಕಾಣಲಿಲ್ಲ. ನಂತರ ಜೂಡೋದಲ್ಲಿ ಒಬ್ಬಾತ ಬಹುಮಾನ ಗಳಿಸಿದ. ನಂತರ ಗೆಲುವೆಂಬುದು ಎಲ್ಲ ಕಡೆಗಳಿಂದಲೋ ಎದ್ದೋಡಿ ಬಂದಿತು. ಕುಂಗ್-ಫೂ, ಕತ್ತಿ-ವರಸೆ, ಕರಾಟೆ, ವಾಲ್ ಕ್ಲೈಂಬಿಂಗ್ ಗಳಲ್ಲೆಲ್ಲಾ ಭರ್ಜರಿ ಗೆಲುವುದು ವಿಕ್ರಮನ ಅದ್ವೈತ ಆತ್ಮರಕ್ಷಣೆ ಕೇಂದ್ರದ ತಂಡಗಳಿಗಾಯಿತು.
            ತಮಾಷೆಗೆ ಎಂಬಂತೆ 3 ಸ್ಪರ್ಧೆಗಳಲ್ಲಿ ವಿಕ್ರಂ ಪಾಲ್ಗೊಂಡಿದ್ದ. ಆದರೆ ಆ ಮೂರೂ ಸ್ಪರ್ಧೆಯ ಪ್ರಥಮ ಸ್ಥಾನ ವಿಕ್ರಂನಿಗೆ ಮೀಸಲಾಯಿತು. ಇದರಿಂದ ಖುಷಿಯೋ ಖುಷಿ ಹೊಂದಿದ ಆತ.
            ಒಟ್ಟಿನಲ್ಲಿ ಬೆಂಗಳೂರಿನ ಪ್ರವಾಸ ಗೆಲುವನ್ನೇ ತಂದಿತು ಅವರಿಗೆ. ಮರುದಿನ ಕನ್ನಡದ ಬಹುತೇಕ ಎಲ್ಲಾ ಕ್ರೀಡಾ ಪುಟಗಳಲ್ಲಿ ಇವರ ಸಾಧನೆಯನ್ನು ಪ್ರಶಂಶಿಸಿ ಬರೆದಿದ್ದರು. ಮಂಗಳೂರ ಸಾಹಸಿಗರು, ವಿಕ್ರಂನ ತಂಡದ ವಿಕ್ರಮ ಮುಂತಾದ ತಲೆಬರಹದೊಂದಿಗೆ ವರದಿಗಳು ಬಂದಿದ್ದವು. ಹೀಗೆ ಒಮ್ಮಿಂದೊಮ್ಮೆಲೆ ವಿಕ್ರಮ ಕರ್ನಾಟಕದಾದ್ಯಂತ ಮನೆ ಮಾತಾದ. ಇದರಿಂದ ಮೂರ್ತಿಯವರ ಮನೆಯಲ್ಲಂತೂ ಬಹಳ ಸಂತಸ ಪಟ್ಟರು. ತಾವೇ ಗೆದ್ದಂತೆ ಕುಣಿದಾಡತೊಡಗಿದರು.
            ವಿಕ್ರಂ ತಂಡದವರು ಜನವರಿ 29ರಂದು ಬೆಂಗಳೂರಿನಲ್ಲೇ ಉಳಿದು ಜನವರಿ 30ರಂದು ಮಂಗಳೂರಿಗೆ ವಾಪಾಸಾದರು. ರೂಮಿನಲ್ಲಿ ಬಂದು ಕುಳಿತುಕೊಳ್ಳುವಷ್ಟರಲ್ಲೇ ವಿಕ್ರಮನ ಮೊಬೈಲ್ ಬಿಡುವಿಲ್ಲದಂತೆ ರಿಂಗಣಿಸತೊಡಗಿತ್ತು. ಪೋನಿನ ಮೇಲೆ ಫೋನ್. ಅಭಿನಂದನೆಗಳ ಸುರಿಮಳೆ. ಎಲ್ಲ ಕರೆಗಳನ್ನು ಸ್ವೀಕರಿಸಿ, ಅವರ ಅಭಿನಂದನೆಯನ್ನು ಸ್ವೀಕರಿಸುವಷ್ಟರಲ್ಲಿ ವಿಕ್ರಂ ಸುಸ್ತೋ ಸುಸ್ತು.
           ಆ ದಿನ ವಿಕ್ರಂ ಬಹಳ ಸಂತಸದಿಂದ ಸ್ವರ್ಗಕ್ಕೇ  ಮೂರು ಗೇಣು ಎಂಬಂತೆ ಆಡತೊಡಗಿದ್ದ. ಅದರ ನೆನಪಲ್ಲೇ ಆತ ಮಲಗಿ ಸವಿ ಕನಸನ್ನೂ ಕಾಣಲಾರಂಭಿಸಿದ.

****
     
          ಮರುದಿನ, ವಿಕ್ರಂ ಬಹಳ ಲೇಟಾಗಿ ಎದ್ದ. ತಿಂಡಿ ಇತ್ಯಾದಿಯನ್ನು ಮುಗಿಸುವ ವೇಳೆಗಾಗಲೇ ಆತನ ರೂಮಿನ ಕಾಲಿಂಗ್ ಬೆಲ್ ಸದ್ದಾಗತೊಡಗಿತು. ಹೋಗಿ ಬಾಗಿಲು ತೆಗೆದ. ಬಾಗಿಲಲ್ಲಿ ಒಬ್ಬಾಕೆ ನಿಂತಿದ್ದಳು. ಹಿಂದೆ ಒಬ್ಬಾತ ಗಡ್ಡದವನು ನಿಂತಿದ್ದ. ವಿಕ್ರಮನಿಗೆ ಒಮ್ಮೆಲೆ ಅಚ್ಚರಿಯಾದರೂ ಸಾವರಿಸಿಕೊಂಡು ಅವರನ್ನು ಒಳಕ್ಕೆ ಸ್ವಾಗತಿಸಿದ. ಬ್ಯಾಚುಲರ್ ರೂಮ್. ಒಳಗಿದ್ದ ವಸ್ತುಗಳು ಸಾಕಷ್ಟು ಅಸ್ತವ್ಯಸ್ತವಾಗಿದ್ದವು. ಮುಜುಗರದಿಂದ ಅವನ್ನೆಲ್ಲ ಮುಚ್ಚಿಡುವ ಪ್ರಯತ್ನ ಮಾಡಿದ. ಬಂದ ಆಗಂತುಕರು ನಕ್ಕರು.
          ಅವರೀರ್ವರೂ ಒಳಕ್ಕೆ ಬಂದವರೇ ತಮ್ಮ ಪರಿಚಯವನ್ನು ತಿಳಿಸಿದರು. ಅವರೀರ್ವರಲ್ಲಿ ಒಬ್ಬಾಕೆ ವಿಜೇತಾ ಎಂದೂ, ಇನ್ನೊಬ್ಬ ಗಡ್ಡಧಾರಿ ವ್ಯಕ್ತಿ ನವೀನಚಂದ್ರ ಎಂದೂ ತಿಳಿಯಿತು. ನವೀನಚಂದ್ರ ಮಂಗಳೂರು ಮೇಲ್ ಪತ್ರಿಕೆಯ ಉಪಸಂಪಾದಕರೆಂದೂ, ವಿಜೇಜಾ ಅದರ ವರದಿಗಾರ್ತಿಯೆಂದೂ ತಿಳಿಯಿತು. ನವೀನಚಂದ್ರ ಸುಮಾರು 50ರ ಆಸುಪಾಸಿನವನು. ವಿಜೇತಾಳಿಗೆ ಬಹುಶಃ 22-23 ಇರಬಹುದು. ಆಗ ತಾನೇ ಕಾಲೇಜನ್ನು ಮುಗಿಸಿ ಬಂದಿದ್ದಳೇನೋ ಎಂದುಕೊಂಡ. ಚಂದನೆಯ ದುಂಡು ಮುಖ. ಒಮ್ಮೆ ನೋಡಿದರೆ ಮತ್ತೊಮ್ಮೆ ನೋಡಬೇಕು ಎನ್ನಿಸುವಂತಿದ್ದಳು ಅವಳು.
         `ನಿಮ್ಮ ಬಗ್ಗೆ ಪೇಪರಿನಲ್ಲಿ ನೋಡಿದೆ. ನಿಮ್ಮಂಥವರು ಮಂಗಳೂರಿನವರು ಎಂದರೆ ಹೆಮ್ಮೆಯ ಸಂಗತಿ. ಹಾಳು ಬಿದ್ದು ಹೋಗುತ್ತಿರುವ ಇಂದಿನ ಯುವ ಜನತೆಗೆ ತಿಳಿ ಹೇಳಲು ನಿಮ್ಮನ್ನು ಬಳಸಿ, ನಿಮ್ಮ ಸಂದರ್ಶನ ಮಾಡಲು ಬಂದಿದ್ದೇವೆ.' ಎಂದು ನವೀನಚಂದ್ರ ಹೇಳಿದರು.
          `ಅಯ್ಯೋ ಅಂತಹ ದೊಡ್ಡ ಸಾಧನೆ ನಾವೇನೂ ಮಾಡಿಲ್ಲ.. ಥೋ... ಬಿಡಿ..' ಎಂದ ವಿಕ್ರಂ.
          `ಇಲ್ಲ.. ಇಲ್ಲ.. ನೀವು ಈಗ ಮಾಡಿರುವ ಸಾಧನೆ ಬಹು ದೊಡ್ಡದು ನೋಡಿ..' ಎಂದಳು ವಿಜೇತಾ. ಆಕೆಯ ಧ್ವನಿ ಮಧುರವಾಗಿತ್ತು.
          `ಏನೋ, ಎಂಥೋ.. ನಾನು ಕಲಿಸಿದೆ, ನನ್ನ ಪ್ರೆಂಡ್ಸ್ ಪ್ರದೀಪ್ ಜೊತೆಗಿದ್ದು ಸಹಾಯ ಮಾಡಿದ. ಗೆದ್ವಿ. ಅದಿರ್ಲಿ ಬಿಡಿ.. ನಿಮ್ಮನ್ನ ನನ್ನ ಸಾಹಸಿ ತಂಡದ ಬಳಿಗೆ ಕರೆದೊಯ್ಯುತ್ತೇನೆ. ಬನ್ನಿ ಎಂದು ಅವರನ್ನು ಕರೆದೊಯ್ದ.
           ಹೀಗೆ ಕರೆದೊಯ್ದಿದ್ದನ್ನೂ ಕೂಡ ಆ ಅಪರಿಚಿತ ವ್ಯಕ್ತಿ ವೀಕ್ಷಿಸಿ, ಫಾಲೋ ಮಾಡುತ್ತಿದ್ದ. ಆತ ತಾನು ಕಂಡಿದ್ದನ್ನು ಇನ್ನೊಬ್ಬರಿಗೆ ತಿಳಿಸುತ್ತಿದ್ದ. ಆದರೆ ಯಾಕೆ ಹೀಗೆ ಮಾಡುತ್ತಿದ್ದಾನೆ ಎನ್ನುವುದು ಮಾತ್ರ ನಿಘೂಡವಾಗಿತ್ತು.
          ವಿಕ್ರಂ ಅವರಿಬ್ಬರನ್ನೂ ಅದ್ವೈತ ಆತ್ಮರಕ್ಷಣೆ ಕೇಂದ್ರಕ್ಕೆ ಕರೆದೊಯ್ದ. ಎಲ್ಲರನ್ನೂ ಪರಿಚಯಿಸಿದ. ಅವರು ಏನೇನೋ ಪ್ರಶ್ನೆ ಕೇಳಿದರು. ಇವರು ಉತ್ತರಿಸಿದರು. ಆದರೆ ಆ ದಿನ ಮಾತ್ರ ಪ್ರದೀಪನ ಸುಳಿವೇ ಇರಲಿಲ್ಲ. ಆತನ ಪರಿಚಯಿಸಲು ಆದಿನ ಸಾಧ್ಯವಾಗಲೇ ಇಲ್ಲ. ನವೀನ ಚಂದ್ರ ಹಾಗೂ ವಿಜೇತಾ ಇಬ್ಬರೂ ತಮ್ಮನ್ನು ಮತ್ತೆ ಭೇಟಿಯಾಗಬೇಕೆಂದು ಹೇಳಿ ಹೊರಟುಹೋದರು.
          ಮರುದಿನ ಮಂಗಳೂರು ಮೇಲ್ ನಲ್ಲಿ ಇವರ ಸಂದರ್ಶನವೇ ಪ್ರಮುಖ ಸುದ್ದಿಯಾಗಿ ಹೊರಹೊಮ್ಮಿತ್ತು. ಇದರಿಂದ ಖುಷಿಯಾದ ವಿಕ್ರಂ ಅದಕ್ಕೆ ಕಾರಣರಾದವರಿಗೆ ಮನದಲ್ಲಿಯೇ ಥ್ಯಾಂಕ್ಸ್ ಎಂದುಕೊಂಡ. ಮುಂದೊಂದು ದಿನ ಇದೇ ಹೊಸ ತಿರುವನ್ನು ನೀಡಲಿತ್ತು.

*****

(ಮುಂದುವರಿಯುತ್ತದೆ)

Monday, December 22, 2014

ಜೊತೆ (ಕಥೆ)

      ಅವಳು ಮಕ್ಕಳು ಹುಟ್ಟಿದ ಒಂದೂ ವರೆ ವರ್ಷದ ತರುವಾಯ ಅನಿತಾ ಮತ್ತೆ ಕೆಲಸಕ್ಕೆ ಸೇರಬೇಕು ಎಂದು ಬಯಸಿದಳು. ಅದಕ್ಕಾಗಿ ಹಲವಾರು ಕಡೆಗಳಲ್ಲಿ ಅಪ್ಲಿಕೇಶನ್ನುಗಳನ್ನೂ ಹಾಕಿ ಬಂದಿದ್ದಳು. ಕೊನೆಗೊಂದು ಕಂಪನಿ ಆಕೆಯನ್ನು ಇಂಟರ್ವ್ಯೂಗೆ ಕರೆದಿತ್ತು. ಶುಭದಿನದಂದು ಆಕೆ ಇಂಟರ್ವ್ಯೂಗೆ ಹೋದ ಅನಿತಾ ಸರದಿಯ ಪ್ರಕಾರ ಕಾದು ತನ್ನ ಸಮಯ ಬಂದಾಗ ಕಂಪನಿ ಮಾಲೀಕರ ಚೇಂಬರ್ ಒಳ ಹೊಕ್ಕಳು. ಒಳ ಹೋಗಿ ನೋಡಿದವಳಿಗೆ ಒಮ್ಮೆ ದಿಘ್ಬ್ರಾಂತಿ. ಮಾಲೀಕನ ಸೀಟಿನಲ್ಲಿ ಕುಳಿತವನು ವಿನಾಯಕನೇ. ಅವನನ್ನೇ ಕಂಡ ಹಾಗೆ ಆಗುತ್ತದೆಯಲ್ಲ. ಅವನೇ ಹೌದಾ? ಅಥವಾ ಬೇರೆ ಯಾರಾದರೂ? ಜಗತ್ತಿನಲ್ಲಿ ಒಂದೇ ಥರದ ಜನ 7 ಮಂದಿ ಇರುತ್ತಾರಂತೆ. ವಿನಾಯಕನ ರೀತಿ ಇರುವ ವ್ಯಕ್ತಿಯಾ ಇವನು? ಎಂದುಕೊಂಡಳು ಅನಿತಾ.
                 ಒಮ್ಮೆ ಕಣ್ಣುಜ್ಜಿಕೊಂಡು ನೋಡಿದರೂ ರೂಪ ಬದಲಾಗಲಿಲ್ಲ. ವಿನಾಯಕನೇ ಹೌದು ಕಾಲೇಜು ದಿನಗಳಲ್ಲಿ ನೋಡಿದ್ದಕ್ಕಿಂತ ಬಹಳ ದಪ್ಪಗಾಗಿದ್ದಾನೆ. ರೂಪು ಕೊಂಚ ಚೇಂಜಾಗಿದೆ. ಆದರೆ ಈತ ಮಾಲೀಕನಾಗಲು ಹೇಗೆ ಸಾಧ್ಯ? ಏನಾಯ್ತು.. ಎಂದು ಕೊಂಡವಳಿಗೆ ಒಮ್ಮೆ ಭೂಮಿ ನಿಂತಂತಹ ಅನುಭವ. ಕಣ್ಣಲ್ಲಿ ಧಳ ಧಳನೆ ನೀರು ಇಳಿಯುತ್ತಲಿತ್ತು.

*****

            `ನಮಗೆ ಕೂಸು ಹುಟ್ಟಿದ್ರೆ ಅವನಿ ಹೇಳಿ ಹೆಸರು ಇಡೊಣ.. ಮಾಣಿ ಹುಟ್ಟಿದರೆ ಅತ್ರಿ ಅಂತ ಹೆಸರಿಡೋಣ.. ಏನಂತೀಯಾ..?' ವಿನಾಯಕ ಕೇಳಿಬಿಟ್ಟಿದ್ದ.
             `ಮಾರಾಯಾ.. ಅದೆಲ್ಲ ಕೊನೆಗಾಯ್ತು.. ಮೊದಲು ನಮಗೆ ಮದುವೆಯಾಗಲಿ.. ಆಮೇಲೆ ಮಕ್ಕಳು ಮರಿ ಎಲ್ಲ.. ಆಮೇಲೆ ಮಕ್ಕಳ ಹೆಸರನ್ನು ಯೋಚಿಸಿದರಾಯ್ತು.. ಬಿಡು..' ಎಂದಿದ್ದಳು ಅನಿತಾ.
             `ನಮಗೆ ಮದುವೆ ಆಗೇ ಆಗ್ತದೆ ಮಾರಾಯ್ತಿ.. ಯಾಕೆ ನೀನು ಹಂಗೆ ಆಲೋಚನೆ ಮಾಡೋದು? ನಮ್ಮನ್ನು ದೂರ ಮಾಡುವವರು ಯಾರಿದ್ದಾರೆ ಹೇಳು? ಅದು ಬಿಟ್ಹಾಕು.. ಈ ಹೆಸರುಗಳು ಹೇಗಿದೆ ಹೇಳು..?' ಎಂದು ಕೇಳಿದ್ದ ವಿನಾಯಕ.
             `ಹೆಸರು ಬಹಳ ಚಂದಿದ್ದು... ಆದರೆ ಈ ಹೆಸರೇ ಯಾಕೆ?'
             `ಈ ಎರಡೂ ಹೆಸರು ಯಾಕೋ ಬಹಳ ಇಷ್ಟವಾಗಿದೆ.. ನಿಂಗೂ ಇಷ್ಟವಾದರೆ ಮುಂದೆ ನಮಗೆ ಹುಟ್ಟುವ ಮಕ್ಕಳಿಗೆ ಇಡೋಣ...' ಎಂದ ವಿನಾಯಕ.
             `ನಮ್ಮ ಮದುವೆ ಇನ್ನೂ ಬಹಳ ಸಮಯ ಹಿಡಿಯುತ್ತದೆ ಮಾರಾಯಾ.. ಇನ್ನೂ ನಮ್ಮ ಓದು ಮುಗೀಬೇಕು.. ಆಮೇಲೆ ನಮ್ಮ ಮನೆಯಲ್ಲಿ ಮದುವೆ ಪ್ರಸ್ತಾಪ ಇಡಬೇಕು.. ಮದುವೆಗೆ ಮನೆಯಲ್ಲಿ ಒಪ್ಪಿಕೊಳ್ಳಬೇಕು.. ಉಫ್.. ಇಷ್ಟೆಲ್ಲ ಆಗಲಿಕ್ಕಿ ಇನ್ನೂ ಮೂರ್ನಾಲ್ಕು ವರ್ಷಗಳೇ ಬೇಕು.. ಆದರೂ ನೀನು ಈಗಲೇ ನಮ್ಮ ಮಕ್ಕಳಿಗೆ ಹೆಸರು ಇಡುವ ಹಂತಕ್ಕೆ ಬಂದೆಯಲ್ಲ ಮಾರಾಯಾ.. ಎಂತಾ ಕನಸೋ ನಿನ್ನದು...' ಎಂದಳು.
             ಹುಂ ಎಂದು ನಸುನಕ್ಕಿದ್ದ ವಿನಾಯಕ. ಹಿತವಾಗಿ ಆತನ ಕೈಯನ್ನು ಹಿಡಿದು ನಡೆಯತೊಡಗಿದಳು ಅನಿತಾ. ಮಾತು ಮುಂದಕ್ಕೆ ಸಾಗಿತ್ತು.
            ವಿನಾಯಕ ಹಾಗೂ ಅನಿತಾ ಪ್ರೀತಿಸಲಿಕ್ಕೆ ಹಿಡಿದು ಆರು ತಿಂಗಳಾಯಿತು. ವಿನಾಯಕನಿಗೆ ಕಾಲೇಜಿನಲ್ಲಿ ಸುಮ್ಮನೆ ಪರಿಚಯವಾದವಳು ಅನಿತಾ. ಪರಿಚಯ ಸ್ನೇಹವಾಗಿ, ಬಿಡಿಸದ ಬಂಧವಾಗಿ ಅದ್ಯಾವುದೋ ಘಳಿಗೆಯಲ್ಲಿ ಮಾರ್ಪಟ್ಟಿತ್ತು. ಓದುತ್ತಿದ್ದ ಕಾಲೇಜಿನಲ್ಲಿ ಸುದ್ದಿಯಾಗುವಷ್ಟು ಬಂಧ ಬೆಳೆದಿತ್ತು. ಇಬ್ಬರೂ ಒಬ್ಬರಿಗೊಬ್ಬರು ಜೀವಕ್ಕೆ ಜೀವ ಎನ್ನುವಷ್ಟು ಒಂದಾಗಿದ್ದು. ಹೀಗಿದ್ದಾಗಲೇ ವಿನಾಯಕ ಅನಿತಾಳ ಬಳಿ ತನ್ನ ಮನಸ್ಸಿನಲ್ಲಿ ಮೂಡಿದ ಭಾವನೆಯನ್ನು ಬಿಚ್ಚಿಟ್ಟಿದ್ದ. ಆಕೆಯೂ ಅದಕ್ಕೆ ಹಿತವಾಗಿ ಮಾತನಾಡಿದ್ದಳು.
            `ಅಲ್ಲಾ.. ಅವನಿ ಹಾಗೂ ಅತ್ರಿ ಎನ್ನುವ ಹೆಸರೇ ಯಾಕೆ ನಿನ್ನ ಮನಸ್ಸಿನಲ್ಲಿ ಮೂಡಿದ್ದು?' ಎಂದೂ ಕೇಳಿದ್ದಳು ಅನಿತಾ. `ಅವನಿ ಎನ್ನುವ ಹೆಸರಿನಲ್ಲಿ ಅ ಅಕ್ಷರ ಇದೆ. ವ ಇದೆ. ನಿ ಇದೆ. ಅ ಅಂದರೆ ನಿನ್ನ ಹೆಸರಿನ ಮೊದಲ ಅಕ್ಷರ ಅನಿತಾ. ವ ಹಾಗೂ ನಿ ಯಲ್ಲಿ ನನ್ನ ಹೆಸರಿನಲ್ಲಿರುವ ಅಕ್ಷರಗಳಿವೆ. ಅದಕ್ಕೆ ಅವನಿ ಹೆಸರು ಆಯ್ಕೆ ಮಾಡಿಕೊಂಡಿದ್ದು. ಅತ್ರಿ ಹೆಸರು.. ಸುಮ್ಮನೆ ಆಯ್ಕೆಮಾಡಿಕೊಂಡಿದ್ದು. ಆದರೂ ಅದಲ್ಲಿ ನಿನ್ನ ಹೆಸರಿನಲ್ಲಿರುವ ಅಕ್ಷರಗಳಿವೆ..' ಎಂದು ಹೇಳಿ ಪೆಚ್ಚು ನಗು ನಕ್ಕಿದ್ದ ವಿನಾಯಕ.  `ನಿಂಗೆ ಪಕ್ಕಾ ಹುಚ್ಚೇಯಾ...' ಎಂದು ನಕ್ಕಿದ್ದಳು ಅನಿತಾ.
             ಇಬ್ಬರೂ ಈ ಹೆಸರುಗಳ ಬಗ್ಗೆ ತಮಾಷೆ ಮಾಡಿಕೊಂಡಿದ್ದರೂ ಮನಸ್ಸಿನಲ್ಲಿ ಮಾತ್ರ ನೆನಪಿಟ್ಟುಕೊಂಡಿದ್ದರು. ಇದೇ ಹೆಸರನ್ನು ಇಡಬೇಕು ಎಂದುಕೊಂಡೂ ಆಗೀಗ ಅಂದುಕೊಳ್ಳುತ್ತಿದ್ದರು. ಹೀಗೆ ಹೆಸರನ್ನು ಇಟ್ಟುಕೊಳ್ಳುವುದರಲ್ಲೂ ಒಂಥರಾ ಮಜವಿದೆ ಎಂದು ಇಬ್ಬರಿಗೂ ಅನ್ನಿಸಿತ್ತು. ಭೂಮಿಯೆಂಬ ಅರ್ಥ ಕೊಡುವ ಅವನಿ, ಮಹಾಮುನಿ ಅತ್ರಿಯ ಹೆಸರುಗಳು ವಿನಾಯಕನಿಗೆ ಯಾವ ಕ್ಷಣದಲ್ಲಿ ಹೊಳೆದವೋ ಎಂದುಕೊಂಡಿದ್ದಳು ಅನಿತಾ.
             `ಚೆಂದದ ಹೆಸರು ಕಣೋ ವಿನು.. ಇಂತಹ ವಿಶಿಷ್ಟ ಕಾರಣಗಳಿಗೆ ನೀನು ನಂಗಿಷ್ಟವಾಗ್ತೀಯಾ.. ಐ ಲವ್ ಯೂ..' ಎಂದು ಹೇಳಿದ್ದಳು ಅನಿತಾ. ಖುಷಿಯಿಂದ ಅವಳನ್ನು ತಬ್ಬಿ ನೇವರಿಸಿದ್ದ ವಿನಾಯಕ.
             ಅವರ ಪ್ರೇಮಯಾನದ ಬದುಕು ಕಾಲೇಜು ದಿನಗಳಲ್ಲಿ ಸರಳವಾಗಿ, ಸುಂದರವಾಗಿ ಯಾವುದೇ ತೊಂದರೆಯಿಲ್ಲದೇ ನಿರಾತಂಕವಾಗಿ ಮುಂದಕ್ಕೆ ಸಾಗಿತ್ತು. ಕಾಲೇಜು ಜೀವನ ಮುಕ್ತಾಯ ಎನ್ನುವುದು ಅವರ ಬಾಳ ನೌಕೆಗೆ ತಡೆಯನ್ನೊಡ್ಡಿತ್ತು. ಕಾಲೇಜು ಮುಗಿದ ತಕ್ಷಣ ವಿನಾಯಕನ ಮುಂದೆ ಬದುಕಿನ ಕಲ್ಲು ಮುಳ್ಳಿನ ದಾರಿ ಎದುರು ನಿಂತು ಅಣಕಿಸುತ್ತಿತ್ತು. ಆದರೆ ಅನಿತಾಳಿಗೆ ಈ ಸಮಸ್ಯೆ ಇರಲಿಲ್ಲ. ಮನೆಯಲ್ಲಿ ಸಾಕಷ್ಟು ಅನುಕೂಲಸ್ತರಾಗಿದ್ದರು. ಅನಿತಾಳೇ ತಂದೆಯ ಬಳಿ ಹರಪೆ ಬಿದ್ದು ಬೆಂಗಳೂರಿಗೆ ಜಾಬ್ ಮಾಡಲು ಹೋಗುತ್ತೇನೆ ಎಂದಿದ್ದಳು. ಆಕೆಯ ಅಪ್ಪಯ್ಯ ಅದಕ್ಕೆ ಒಪ್ಪಿಗೆಯನ್ನೂ ಕೊಟ್ಟುಬಿಟ್ಟಿದ್ದ. ಇತ್ತ ವಿನಾಯಕನ ಬದುಕು ಮಾತ್ರ ಎತ್ತೆತ್ತಲೋ ಸಾಗುತ್ತಿತ್ತು.
***
           ಕೆಳ ಮಧ್ಯಮವರ್ಗದ ಕುಟುಂಬಕ್ಕೆ ಸೇರಿದ ವಿನಾಯಕನ ಮನೆಯಲ್ಲಿ ಕಾಲೇಜು ಮುಗಿಸಿದವನು ಕೆಲಸ ಮಾಡಲೇಬೇಕಾದ ಜರೂರತ್ತಿತ್ತು. ಸೊಸೈಟಿಯ ಸಾಲದ ನೊಟೀಸು ಪದೇ ಪದೆ ಬಂದು ಪೋಸ್ಟ್ ಮನ್ ಮೂಲಕ ಕದ ತಟ್ಟುತ್ತಿತ್ತು. ವಿನಾಯಕನ ಅಪ್ಪಯ್ಯ ಮಗನ ಬಳಿ ಏನಾದರೂ ಕೆಲಸವನ್ನು ಹಿಡಿ ಎನ್ನುವ ಒತ್ತಡವನ್ನೂ ಹಾಕತೊಡಗಿದ್ದ. ಹುಡುಗಿಯರಿಗೆ ಬಹುಬೇಗನೆ ಕೆಲಸ ಸಿಕ್ಕಿಬಿಡುತ್ತದೆ.. ಆದರೆ ಹುಡುಗರಿಗೆ ಹಾಗಲ್ಲ. ವಿನಾಯಕನ ಪರಿಸ್ಥಿತಿಯೂ ಇದೇ ಆಗಿತ್ತು. ವರ್ಷಗಳು ಉರುಳಿದರೂ ವಿನಾಯಕನಿಗೆ ಗಟ್ಟಿ ಕೆಲಸ ಸಿಗಲೇ ಇಲ್ಲ. ಅತ್ತ ಅನಿತಾ ವಿನಾಯಕನ ಮೇಲೆ ಒತ್ತಡ ಹಾಕತೊಡಗಿದ್ದಳು.
          `ಮನೆಲಿ ಅಪ್ಪಯ್ಯ ಗಮಡು ನೋಡಲೆ ಹಿಡದ್ದಾ.. ಬೇಗ ನೀ ಒಂದ್ ಜಾಬ್ ಹಿಡಿ ಮಾರಾಯಾ.. ಆಮೇಲೆ ಅಪ್ಪಯ್ಯನ ಕೈಲಿ ಹೇಳು.. ಯನ್ನ ಮದುವೆ ಆಗುವ ಬಗ್ಗೆ ಮಾತನಾಡು...' ಎಂದು ಅನಿತಾ ಹೇಳಿದಾಗಲೆಲ್ಲ ವಿನಾಯಕ ಸಬೂಬು ಹೇಳುತ್ತಿದ್ದ. ವಿನಾಯಕನ ಕೆಲಸದ ಅನ್ವೇಷಣೆ ಸಾಗಿಯೇ ಇತ್ತು. ಅದ್ಯಾವುದೋ ಸಾಡೆ ಸಾತಿನ ಶನಿ ವಿನಾಯಕನ ಹೆಗಲ ಮೇಲೆ ಏರಿ ಕುಳಿತಿದ್ದ. ಯಾವುದೇ ಕೆಲಸ ವಿನಾಯಕನ ಕೈಯನ್ನು ಭದ್ರವಾಗಿ ಹಿಡಿದಿರಲಿಲ್ಲ.
           ಇತ್ತ ಅನಿತಾ ಕೂಡ ನೋಡುವಷ್ಟು ನೋಡಿದಳು. ವಿನಾಯಕನಿಗೆ ಯಾವುದೇ ಕೆಲಸ ಸಿಗುವ ಭರವಸೆ ಉಳಿದಿರಲಿಲ್ಲ. ಅಪ್ಪಯ್ಯ ಒಂದಿನ ಬೆಂಗಳೂರಿನಲ್ಲಿ ಸಿಎ ಪಾಸು ಮಾಡಿ ಒಳ್ಳೆ ಕೆಲಸದಲ್ಲಿದ್ದ ಹುಡುಗನೊಬ್ಬ ಪೋಟೋ ತೋರಿಸಿ ಮದುವೆ ಪ್ರಸ್ತಾಪ ಇಟ್ಟೇಬಿಟ್ಟದಿದ್ದರು. ಕೊಟ್ಟ ಕೊನೆಯ ಬಾರಿಗೆ ವಿನಾಯಕನ ಬಳಿ ಕೆಲಸದ ವಿಷಯ ಹೇಳಿದ ಅನಿತಾ ಕೊನೆಗೊಮ್ಮೆ ಅಪ್ಪಯ್ಯ ತೋರಿಸಿದ ಹುಡುಗನನ್ನು ಮದುವೆಯಾಗಲು ಹೂಂ ಅಂದುಬಿಟ್ಟಿದ್ದಳು. ಧಾಂ.. ಧೂಂ.. ಆಗಿ ಮದುವೆಯೂ ನಡೆಯಿತು. ಸಿ.ಎ. ಮಾಡಿ ಕೆಲಸದಲ್ಲಿದ್ದ ಹುಡುಗನ ಹೆಂಡತಿಯಾಗಿ ಅನಿತಾ ಬೆಂಗಳೂರಲ್ಲಿ ಬದುಕು ಕಟ್ಟಿಕೊಳ್ಳುತ್ತಿದ್ದರೆ ವಿನಾಯಕ ಒಳಗೊಳಗೆ ಮರುಗಿ, ಕೊರಗಿ, ಖಿನ್ನತೆಯಿಂದ ಬಳಲಿ ಹೋಗಿದ್ದ. ಬದುಕಿನ ಎಲ್ಲ ದಾರಿಗಳು ಮುಚ್ಚಿ ಹೋದಂತಾಗಿ ಮಂಕಾಗಿ ಕುಳಿತಿದ್ದ. ಬದುಕಿನ ದಾರಿಯಲ್ಲಿ ದೊಡ್ಡದೊಂದು ಗುಡ್ಡ ಕುಸಿದು ಬಿದ್ದಂತೆ ದಿಕ್ಕು ಕಾಣದಂತೆ ಉಳಿದುಬಿಟ್ಟಿದ್ದ.
            ಅನಿತಾಳ  ಮದುವೆ ಯಾರೊಬ್ಬನ ಜೊತೆಗೋ ಆದಾಗಲೇ ವಿನಾಯಕನ ಹೆಗಲಿನ ಮೇಲೆ ಕುಳಿತಿದ್ದ ಶನಿ ನಿಧಾನವಾಗಿ ಇಳಿದುಬಿಟ್ಟಿದ್ದ. ಅದ್ಯಾವುದೋ ಕ್ಷಣದಲ್ಲಿ ಮಾಡಿಕೊಂಡಿದ್ದ ಪುಣ್ಯದ ಫಲವಾಗಿ ವಿನಾಯಕನಿಗೆ ಹೆಸರಾಂತ ಕಂಪನಿಯೊಂದರಲ್ಲಿ ಕೆಲಸವೂ ಸಿಕ್ಕಿತ್ತು. ಪರಿಣಾಮವಾಗಿ ವಿನಾಯಕ ಕೂಡ ಬೆಂಗಳೂರು ವಾಸಿಯಾಗಿದ್ದ.
           ಬೆಂಗಳೂರಿನ ಬದುಕು ವಿನಾಯಕನಿಗೆ ದುಡ್ಡು ಮಾಡುವ ದಾರಿಯನ್ನು ಕಲಿಸಿಬಿಟ್ಟಿತ್ತು. ಬೆಂಗಳೂರಿಗೆ ಹೋದ ಎರಡೇ ವರ್ಷದಲ್ಲಿ ಒಂದೆರಡು ಸೈಟುಗಳನ್ನು ಕೊಳ್ಳುವಷ್ಟು ಹಣವೂ ಸಂಗ್ರಹವಾಗಿತ್ತು. ಹೀಗಿದ್ದಾಗಲೇ ವಿನಾಯಕನ ಮನೆಯಲ್ಲೂ ಆತನಿಗೆ ಹುಡುಗಿಯನ್ನು ಹುಡುಕಿ ಮದುವೆ ಮಾಡಲು ಮುಂದಾಗಿದ್ದರು. ವಿನಾಯಕ ಕೂಡ ಸಾಕಷ್ಟು ಹುಡುಗಿಯರನ್ನು ನೋಡಿದನಾದರೂ ಯಾರೊಬ್ಬರೂ ಇಷ್ಟವಾಗಲಿಲ್ಲ. ಅನಿತಾಳ ನೆನಪಿನ್ನೂ ಆತನ ಮನಸ್ಸಿನಲ್ಲಿ ಕೂತಿತ್ತು. ಪದೇ ಪದೆ ಕೊರೆಯುತ್ತಲೇ ಇತ್ತು.
**********

        ಮದುವೆಯಾಗಿ ಮೂರು ವರ್ಷ ಕಳೆದ ನಂತರವೂ ಅನಿತಾಳಿಗೆ ವಿನಾಯಕ ನೆನಪಾಗುತ್ತಲೇ ಇದ್ದ. ಕೆಲಸ ಮಾಡುವ ಗಂಡ, ಕೈತುಂಬ ಸಂಬಳ ತರುತ್ತಾನೆ. ಕಾರಿದೆ, ದೊಡ್ಡದೊಂದು ಫ್ಲಾಟ್ ಇದೆ. ವೀಕೆಂಡಲ್ಲಿ ಹೊಗೆನಕಲ್ ಜಲಪಾತಕ್ಕೋ, ಮುತ್ತತ್ತಿಗೋ, ಬನ್ನೇರುಘಟ್ಟಕ್ಕೋ, ಅಪರೂಪಕ್ಕೊಮ್ಮೆ ಕೊಡಗಿಗೋ, ಮೈಸೂರಿಗೋ ಕರೆದುಕೊಂಡು ಹೋಗಿ ಬರುತ್ತಾನೆ. ಆದರೂ ಏನೋ ಕೊರತೆಯಿದೆ ಎನ್ನುವುದು ಆಕೆಗೆ ಅನ್ನಿಸಲು ಆರಂಭಿಸಿತ್ತು. ತಾನೂ ಕೆಲಸಕ್ಕೆ ಹೂಗುವವಳಾದರೂ ಆಗೀಗ ವಿನಾಯಕನ ನೆನಪು ಥಟ್ಟನೆ ನೆನಪಾಗುತ್ತಿತ್ತು. ಹೀಗಿದ್ದಾಗಲೇ ಅನಿತಾಳಿಗೆ ಅವಳಿ ಜವಳಿ ಮಕ್ಕಳು ಜನಿಸಿದ್ದರು.

************

            ವಿನಾಯಕ ಕೊನೆಗೂ ಹುಡುಗಿಯೊಬ್ಬಳನ್ನು ಮದುವೆಯಾಗಲು ಒಪ್ಪಿದ. ಹೀಗಾಗುವ ವೇಳೆಗೆ ಕೈಗೆ ಸಿಕ್ಕಿದ್ದ ಕೆಲಸವನ್ನು ಬಿಟ್ಟು ಬಿಟ್ಟಿದ್ದ ವಿನಾಯಕ ತನ್ನದೇ ಸ್ವಂತ ಕಂಪನಿಯೊಂದನ್ನು ಹುಟ್ಟು ಹಾಕಿದ್ದ. ಮದುವೆಯಾದ ನಂತರವಂತೂ ಆ ಕಂಪನಿ ಲಾಭದ ಗುಡ್ಡವನ್ನು ಏರಲಾರಂಭಿಸಿತ್ತು. ಇದಕ್ಕೆ ಕೈ ಹಿಡಿದವಳ ದೆಸೆ ಎನ್ನಬಹುದು. ಬಹುತೇಕರು ಹೀಗೆಯೇ ಹೇಳುತ್ತಾರೆ. ಕಂಪನಿ ಆರಂಭಿಸಿ ವರ್ಷ ಕಳೆಯುವಷ್ಟರಲ್ಲಿ ನಾಲ್ಕಾರು ಕಡೆಗಳಲ್ಲಿ ಶಾಖೆಗಳನ್ನೂ ತೆರೆದು ವಿಸ್ತಾರವಾಗುತ್ತಲಿತ್ತು. ಹೀಗಿದ್ದಾಗಲೇ ಒಂದು ದಿನ ವಿನಾಯಕ ಕಂಪನಿಯ ಹೊಸದೊಂದು ಶಾಖೆಗೆ ಕೆಲಸಗಾರರನ್ನು ನೇಮಿಸಿಕೊಳ್ಳಲು ಜಾಹೀರಾತು ನೀಡಿದ್ದ. ಸಾಕಷ್ಟು ಅರ್ಜಿಗಳೂ ಬಂದಿದ್ದವು. ಇಂಟರ್ವ್ಯೂಗೆ  ಬಂದವರಲ್ಲಿ ಅನಿತಾಳೂ ಇರುತ್ತಾಳೆ ಎಂದು ಕನಸಿನಲ್ಲೂ ಅಂದಕೊಂಡಿರಲಿಲ್ಲ.
          ಎದುರಿಗೆ ಅನಿತಾ ಬಂದು ನಿಂತಿದ್ದಾಗ ಏನು ಹೇಳಬೇಕು ಎನ್ನುವುದು ವಿನಾಯಕನಿಗೆ ಒಮ್ಮೆಗೆ ತೋಚಲೇ ಇಲ್ಲ. ಸುಮ್ಮನೆ ಗರಬಡಿದವನಂತೆ ಕುಳಿತಿದ್ದ. ಅನಿತಾಳೂ ತಬ್ಬಿಬ್ಬಾಗಿ ನಿಂತಿರುವುದು ಸ್ಪಷ್ಟವಾಗಿತ್ತು. `ಬನ್ನಿ ಕುಳಿತುಕೊಳ್ಳಿ..' ಎಂದವನೇ `ಚನ್ನಾಗಿದ್ದೀಯಾ?..' ಎಂದು ಕೇಳಿದ್ದ. ಕಣ್ಣಲ್ಲಿ ಹನಿಗೂಡಿಸಿಕೊಂಡಿದ್ದ ಅನಿತಾ ಹೂಂ ಅಂದಿದ್ದು ವಿನಾಯಕನ ಕಿವಿಗೆ ಕೇಳಿಸಲಿಲ್ಲ. ಅಷ್ಟು ಅಸ್ಪಷ್ಟವಾಗಿತ್ತು. ಉಳಿದಂತೆ ವಿನಾಯಕ ಸಂದರ್ಶನದಲ್ಲಿ ಬೇರೇನನ್ನೂ ಕೇಳಲಿಲ್ಲ. ಮೌನವಾಗಿಯೇ ಕುಳಿತಿದ್ದ ಅನಿತಾ ಕೆಲ ಘಳಿಗೆಯ ನಂತರ ವಾಪಾಸು ಬಂದಿದ್ದಳು.
         ಇದಾದ ಮರುದಿನವೇ ಕೆಲಸ ಅನಿತಾಳಿಗೆ ಸಿಕ್ಕಿರುವುದು ಖಾತ್ರಿಯಾಗಿತ್ತು.

********
           ತನ್ನದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೂ ವಿನಾಯಕ ಅನಿತಾಳನ್ನು ಎಂದೂ ಮಾತನಾಡಿಸಲು ಮುಂದಾಗಲಿಲ್ಲ. ಅನಿತಾ ಮಾತ್ರ ಒಂದೆರಡು ಸಾರಿ ಮಾತನಾಡಲು ಪ್ರಯತ್ನಿಸಿದ್ದಳಾದರೂ ವಿನಾಯಕ ಕಂಪನಿಗೆ ಬಾಸ್ ಆಗಿದ್ದ ಕಾರಣ ತೀರಾ ಹುಡಾಯಲು ಹೋಗಿರಲಿಲ್ಲ.
           ವರ್ಷವೊಂದು ಕಳೆದಿತ್ತು. ವಿಚಿತ್ರವೆಂದರೆ ವಿನಾಯಕನಿಗೂ ಅವಳಿಜವಳಿ ಮಕ್ಕಳು ಹುಟ್ಟಿದ್ದರು. ಮಕ್ಕಳು ಹುಟ್ಟಿದ್ದ ಖುಷಿಯಲ್ಲಿ ಕಂಪನಿಯ ಕೆಲಸಗಾರರಿಗೆಲ್ಲ ಪಾರ್ಟಿಕೊಡಲು ಮುಂದಾದ ವಿನಾಯಕ. ಮಕ್ಕಳ ಹೆಸರಿಡುವ ಕಾರ್ಯ ಮುಗಿದ ನಂತರ ಬಂದು ಎಲ್ಲರಿಗೂ ಪಾರ್ಟಿಗೆ ಏರ್ಪಾಟು ಮಾಡಿದ್ದ. ಪ್ರತಿಯೊಬ್ಬರೂ ಕುಟುಂಬದ ಸದಸ್ಯರ ಜೊತೆಗೆ ಬರಬೇಕೆಂಬ ತಾಕೀತನ್ನೂ ಮಾಡಿದ್ದ. ಆತನ ತಾಕೀತಿಗೆ ಪ್ರತಿಯಾಗಿ ಅನಿತಾಳೂ ತನ್ನ ಗಂಡನನ್ನು ಕರೆದುಕೊಂಡು ಬಂದಿದ್ದಳು.
           ವಿನಾಯಕ ಪಾರ್ಟಿಯಲ್ಲಿ ಅನಿತಾಳಿಗೆ ಸಿಕ್ಕಿದ್ದ. ತನ್ನ ಹೆಂಡತಿಗೆ ಪರಿಚಯ ಮಾಡಿದ್ದ. ಅನಿತಾಳ ಗಂಡ ವಿನಾಯಕನಿಗೆ ಹಾಗೂ ವಿನಾಯಕನ ಹೆಂಡತಿ ಅನಿತಾಳಿಗೆ ಆಪ್ತರಾಗಿದ್ದರು. ಯಾವುದೋ ಕಾಲದ ಗೆಳೆಯರೇನೋ ಎಂಬಂತೆ ಮಾತಿಗೆ ಕುಳಿತಿದ್ದರು. ಮಾತಿನ ಮಧ್ಯದಲ್ಲಿಯೇ ವಿನಾಯಕ ಅನಿತಾಳ ಗಂಡನ ಬಳಿ ಮಕ್ಕಳ ಬಗ್ಗೆ ಕೇಳಿದ್ದ. ಅದಕ್ಕೆ ಪ್ರತಿಯಾಗಿ ಇಬ್ಬರು ಮಕ್ಕಳ ವಿಷಯವನ್ನು ತಿಳಿಸಿದ್ದ ಅನಿತಾಳ ಗಂಡ ಅವಳಿ-ಜವಳಿ ಮಕ್ಕಳಲ್ಲಿ ಒಬ್ಬ ಹುಡುಗ ಇನ್ನೊಬ್ಬಳು ಹುಡುಗಿ ಎನ್ನುವುದನ್ನು ತಿಳಿಸಿದ್ದ. ಹುಡುಗನಿಗೆ ಅತ್ರಿಯೆಂದೂ ಹುಡುಗಿಗೆ ಅವನಿಯೆಂದೂ ಹೆಸರಡಲಾಗಿದೆ. ಅನಿತಾಳ ಒತ್ತಾಯದಿಂದಲೇ ಈ ಹೆಸರನ್ನು ಇಟ್ಟಿದ್ದಾಗಿ ತಿಳಿಸಿದರು. ವಿನಾಯಕ ಮಾತನಾಡುತ್ತಿದ್ದವನು ಇದ್ದಕ್ಕಿದ್ದಂತೆ ಮೌನಿಯಾಗಿದ್ದ. ಮನಸ್ಸಿನಲ್ಲಿ ಒನಕೆಯಿಂದ ಕುಟ್ಟಿದ ಅನುಭವವಾಗಿತ್ತು. ಕಣ್ಣಂಚು ಹನಿಗೂಡಿದ್ದರೂ ಮಾತು ಮರೆಸಿ ಸುಮ್ಮನಾಗಿದ್ದ.
******
       ವಿನಾಯಕನ ಹೆಂಡತಿಯ ಬಳಿ ಮಾತಿಗೆ ಕುಳಿತಿದ್ದ ಅನಿತಾಳಿಗೆ ಗಮನವೆಲ್ಲ ವಿನಾಯಕ ಹಾಗೂ ತನ್ನ ಗಂಡ ಮಾತನಾಡುತ್ತಿರುವುದರ ಮೇಲೆಯೇ ನಿಂತಿತ್ತು. ಮಾತಿನ ಭರದಲ್ಲಿ ವಿನಾಯಕ ಎಲ್ಲಾದರೂ ತನ್ನ ಗಂಡನ ಬಳಿ ತಾವಿಬ್ಬರೂ ಪ್ರೀತಿಸಿದ ವಿಷಯ ಹೇಳಿಬಿಡುತ್ತಾನಾ ಎಂದೂ ಕ್ಷಣಕಾಲ ಅನುಮಾನಿಸಿದ್ದಳು ಅನಿತಾ. ವಿನಾಯಕನಿಗೆ ಕೆಲಸ ಇಲ್ಲ ಎನ್ನುವ ಕಾರಣಕ್ಕಾಗಿ ಆತನನ್ನು ಧಿಕ್ಕರಸಿ ಹೋಗಿದ್ದಕ್ಕೆ ಪ್ರತಿಯಾಗಿ ವಿನಾಯಕ ಎಲ್ಲಾದರೂ ತನ್ನ ಹಾಗೂ ಅವನ ಪ್ರೇಮದ ಕುರಿತು ಹೇಳಿ ಸಂಸಾರದಲ್ಲಿ ಹುಳಿ ಹಿಂಡಿಬಿಟ್ಟರೆ ಎಂದೂ ಆಲೋಚಿಸತೊಡಗಿದ್ದಳು. ಆದರೆ ನಗು ನಗುತ್ತ ಮಾತನಾಡುತ್ತಿದ್ದ ಅವರು ಯಾವ ಹೊತ್ತಿನಲ್ಲೂ ಸಿಟ್ಟಾಗಿದ್ದು ಕಾಣಿಸಲಿಲ್ಲ. ಬದಲಾಗಿ ಯಾವುದೋ ಮಾತಿಗೆ ಇದ್ದಕ್ಕಿದ್ದಂತೆ ವಿನಾಯಕ ಮೌನಿಯಾಗಿದ್ದು ಮಾತ್ರ ಕಾಣಿಸಿತು. ಯಾರಿಗೂ ಕಾಣದಂತೆ ಕಣ್ಣೊರೆಸಿಕೊಂಡಿದ್ದು ಮಾತ್ರ ಅನಿತಾಳಿಗೆ ಸ್ಪಷ್ಟವಾಗಿತ್ತು. ಅನಿತಾ ದೀರ್ಘ ನಿಟ್ಟುಸಿರು ಬಿಟ್ಟದ್ದಳು.
****
           `ಅವಳಿ ಜವಳಿ ಮಕ್ಕಳು ನೋಡಿ ನಮಗೆ.. ಒಂದು ಗಂಡು ಒಂದು ಹೆಣ್ಣು...' ಎಂದು ವಿನಾಯಕನ ಹೆಂಡತಿ ಹೇಳುತ್ತಿದ್ದಂತೆ ಅನಿತಾ ತನಗೂ ಅವಳಿ ಜವಳಿ ಮಕ್ಕಳು ಹುಟ್ಟಿದ್ದು ನೆನಪಾಯಿತು. ಒಂದು ಕ್ಷಣ ಎಲ್ಲೋ ಏನೋ ನೆನಪಾದಂತಾಯಿತು. `ಹೆಸರೆಂತಾ ಇಟ್ಟಿದ್ದಿ?' ಕೇಳಿದ್ದಳು  ಅನಿತಾ.. `ಕೂಸಿಗೆ ಅವನಿ.. ಮಾಣಿಗೆ ಅತ್ರಿ... ನಮ್ಮನೆಯವರೇ ಈ ಹೆಸರು ಇಟ್ಟಿದ್ದು.. ಎಂತಾ ಚಂದ ಹೆಸರು ಅಲ್ದಾ...' ಎಂದು ವಿನಾಯಕನ ಹೆಂಡತಿ ಹೇಳುತ್ತಿದ್ದಂತೆ ಅನಿತಾ ಮೌನಿಯಾಗಿದ್ದಳು. ಮಾತು ಮರೆತಂತಾಗಿದ್ದಳು.


(ಮುಗತ್ತು)