Thursday, October 30, 2014

ಒಪ್ಪಿಬಿಡು ಮನವೇ

(ಚಿತ್ರ : ವಿನಾಯಕ ಹೆಗಡೆ)
ಒಪ್ಪಿಬಿಡು ಮನವೇ ನೀ
ನನ್ನೊಡಲ ಪ್ರೀತಿಯಾ
ತೊರೆಯದಿರು ಜೊತೆ ನೀನು
ನನ್ನೊಡಲ ಬುತ್ತಿಯಾ |

ನೀನಿರುವೆ ನನ ಪ್ರಾಣ
ಸಕಲ ಜೀವವೂ ನೀನು
ನನ್ನ ಬಾಳೆಲೆಯ ನವ
ಚೈತ್ರದುಸಿರು ನೀನು |

ನಾನು ನಿನ್ನಯ ಪ್ರೇಮಿ
ಜೊತೆ ಬಾಳ್ವೆ, ನಿನ್ನ ಹಿತ
ಬಾಳು ಕರಗುವ ಮುನ್ನ
ಒಮ್ಮೆ ಒಪ್ಪಿಬಿಡು ಮನವೇ |

ಕಳೆದಿರಲಿ ಹಳೆ ದುಃಖ
ಮೂಡಿ ಬರಲೀ ಪ್ರೀತಿ
ನನ್ನ ನೀನೊಪ್ಪಿದೊಡೆ
ಬಾಳ್ವೆ ಪೂರಾ ಸ್ವಾತಿ ||

***
(ಈ ಕವಿತೆಯನ್ನು ಬರೆದಿರುವುದು 01-11-2006ರಂದು ದಂಟಕಲ್ಲಿನಲ್ಲಿ)

Monday, October 27, 2014

ಮುರೇಗಾರ್ ಸಮಸ್ಯೆಗೆ ಮುಕ್ತಿ ಎಂದು?

(ಮುರೇಗಾರ್ ಜಲಪಾತ)

          ಶಿರಸಿ ತಾಲೂಕಿನ ಸಾಲ್ಕಣಿ ಗ್ರಾ.ಪಂ ವ್ಯಾಪ್ತಿಯ ಮುರೇಗಾರ್ ಹಾಗೂ ಸುತ್ತಮುತ್ತಲ ಪ್ರದೇಶಗಳು ಹಲವಾರು ಸಮಸ್ಯೆಗಳಿಂದ ಬಳಲುತ್ತಿವೆ. ಅಸಮರ್ಪಕ ರಸ್ತೆ, ವಿದ್ಯುತ್ ಸಮಸ್ಯೆ ಈ ಊರುಗಳನ್ನು ಬಾಧಿಸುತ್ತಿದೆ.
ಶಿರಸಿಯನ್ನು ಜಿಲ್ಲೆಯಲ್ಲಿ ಮುಂದುವರಿದ ತಾಲೂಕು ಎಂದು ಕರೆಯಲಾಗುತ್ತದೆ. ಈ ತಾಲೂಕಿನ ಸಾಲ್ಕಣ ಪಂಚಾಯತ ವ್ಯಾಪ್ತಿಯಲ್ಲಿರುವ ಮುರೇಗಾರ್ ಹಾಗೂ ಸುತ್ತಮುತ್ತಲ ಪ್ರದೇಶಗಳು ಸಮರ್ಪಕ ರಸ್ತೆ ಸಂಚಾರದಿಂದ ಬವಣೆ ಎದುರಿಸುವಂತಾಗಿದೆ. ಮುರೇಗಾರ್, ಹುಡ್ಲೇಜಡ್ಡಿ, ದುಗ್ಗುಮನೆ, ಶಿರ್ಲಬೈಲ್, ಮಳ್ಳಿಕೈ ಈ ಮುಂತಾದ ಊರುಗಳಿಗೆ ತೆರಳುವ ರಸ್ತೆ ತೀವ್ರವಾಗಿ ಹಾಳಾಗಿದ್ದು ಸಂಚಾರ ಅಸಾಧ್ಯ ಎನ್ನುವಂತಾಗಿದೆ.
ಶಿರಸಿಯಿಂದ ಸಾಲ್ಕಣಿಗೆ ತೆರಳುವ ಮುಖ್ಯ ರಸ್ತೆಯಿಂದ 5 ಕಿ.ಮಿ ಅಂತರದಲ್ಲಿ ಈ ಎಲ್ಲ ಊರುಗಳಿವೆ. ಈ ಊರಿಗೆ ತೆರಳಲು ಡಾಂಬರು ರಸ್ತೆಯನ್ನು ನಿರ್ಮಾಣ ಮಾಡಲಾಗಿದೆ. ಆದರೆ ನಿರ್ವಹಣೆಯ ಕೊರತೆಯಿಂದಾಗಿ ಡಾಂಬರು ರಸ್ತೆ ಈಗಾಗಲೇ ಕಿತ್ತು ಹೋಗಿದೆ. ರಸ್ತೆಯಲ್ಲಿ ದೊಡ್ಡ ದೊಡ್ಡ ಹೊಂಡಗಳು ಉಂಟಾಗಿದ್ದು ಮಾರ್ಗದಲ್ಲಿ ಸಂಚಾರ ಮಾಡುವವರು ಹರಸಾಹಸ ಪಡಬೇಕಾದ ಪರಿಸ್ಥಿತಿಯಿದೆ. ಈ ಮಾರ್ಗದಲ್ಲಿ ಸಿಗುವ ಘಟ್ಟ ಪ್ರದೇಶದಲ್ಲಂತೂ ಡಾಂಬರು ರಸ್ತೆಯನ್ನು ಹುಡುಕಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ದ್ವಿಚಕ್ರ ವಾಹನ ಸವಾರರಂತೂ ರಸ್ತೆಯಲ್ಲಿ ಎದ್ದಿರುವ ಕಲ್ಲುಗಳು ಯಾವ ಕ್ಷಣದಲ್ಲಿ ವಾಹನವನ್ನು ಪಂಚರ್ ಮಾಡುತ್ತದೆಯೋ ಎನ್ನುವ ಭಯದಿಂದಲೇ ಸಾಗಬೇಕಾಗಿದೆ. ದೊಡ್ಡ ದೊಡ್ಡ ಹೊಂಡಗಳಲ್ಲಿ ನೀರು ತುಂಬಿಕೊಂಡಿದ್ದು ಸಂಪೂರ್ಣ ರಸ್ತೆಯನ್ನು ಆವರಿಸಿಕೊಂಡಿದೆ. ಹೊಂಡದ ಆಳವನ್ನರಿಯೇ ಮುಂದೆ ಸಾಗುವವರು ಬಿದ್ದ ಉದಾಹರಣೆಗಳೂ ಇದೆ.
ಈ ರಸ್ತೆಯನ್ನು 2004ರಿಂದ 2006ರ ಅವಧಿಯಲ್ಲಿ ಡಾಂಬರೀಕರಣ ಮಾಡಲಾಗಿದೆ. ಆದರೆ ರಸ್ತೆ ನಿರ್ಮಾಣ ಮಾಡಿದ ದಶಕಗಳು ಕಳೆಯುವಲ್ಲಿಯೇ ಸಂಪೂರ್ಣ ಹಾಳಾಗಿರುವುದು ಕಾಮಗಾರಿಯ ಗುಣಮಟ್ಟವನ್ನು ತೋರಿಸುತ್ತದೆ. ಈ ವರ್ಷ ಈ ರಸ್ತೆ ಮರುಡಾಂಬರೀಕರಣಕ್ಕಾಗಿ 1.5 ಲಕ್ಷ ರು. ಬಿಡುಗಡೆಯಾಗಿತ್ತು. ಆದರೆ ಈ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿಲ್ಲ. ಇದರಿಂದಾಗಿ 200ಕ್ಕೂ ಅಧಿಕ ಮನೆಗಳ 3000ಕ್ಕೂ ಹೆಚ್ಚಿನ ಜನರು ಹಾಳಾದ ರಸ್ತೆಯಲ್ಲಿ ಪ್ರಯಾಸದಿಂದ ಸಾಗುವ ಪರಿಸ್ಥಿತಿ ನಿರ್ಮಾಣಗೊಂಡಿದೆ.
ಮುರೇಗಾರ್ ಜಲಪಾತಕ್ಕೆ ತೆರಳುವ ರಸ್ತೆಯನ್ನು ಕಳೆದ ವರ್ಷ ಅಗಲೀಕರಣ ಮಾಡಲಾಗಿತ್ತು. ಇದಕ್ಕಾಗಿ 1.20 ಲಕ್ಷ ರು. ವೆಚ್ಚದಲ್ಲಿ ಅಲ್ಲಲ್ಲಿ ಅಗಲೀಕರಣವನ್ನೂ ಕೈಗೊಳ್ಳಲಾಗಿತ್ತು. ಆದರೆ ಈ ವರ್ಷದ ಮಳೆಗೆ ರಸ್ತೆ ಸಂಪೂರ್ಣ ಕೊಚ್ಚಿಕೊಂಡು ಹೋಗಿದೆ. ಕೆಲವು ಕಡೆಗಳಲ್ಲಂತೂ ರಸ್ತೆಯ ಮಧ್ಯದಲ್ಲಿಯೇ ದೊಡ್ಡ ದೊಡ್ಡ ಕಾಲುವೆಗಳು ಉಂಟಾಗಿವೆ. ದುಗ್ಗುಮನೆ ಸನಿಹದಲ್ಲಿ ಮೋರಿಯೊಂದರ ಪಾಶ್ರ್ವ ಮಳೆ ನೀರಿಗೆ ಕೊಚ್ಚಿಕೊಂಡು ಹೋಗಿದೆ. ಮುರೇಗಾರ್ ಜಲಪಾತವನ್ನು ವೀಕ್ಷಣೆ ಮಾಡಲು ಆಗಮಿಸುವ ಪ್ರವಾಸಿಗರು ಈ ಮಾರ್ಗದಲ್ಲಿ ಕಷ್ಟಪಟ್ಟು, ರಸ್ತೆಯನ್ನು ಹಳಿಯುತ್ತ ಪ್ರಯಾಣ ಮಾಡುತ್ತಿದ್ದಾರೆ. ಹೊಂಡಮಯ ರಸ್ತೆಯಿಂದಾಗಿ ಹೈರಾಣಾಗುತ್ತಿದ್ದಾರೆ.
(ಹಾಳು ರಸ್ತೆ)
ಸಾಲ್ಕಣಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ವಿದ್ಯುತ್ ಸಮಸ್ಯೆಯೂ ತೀವ್ರವಾಗಿದೆ. ಮುರೇಗಾರ್ ಹಾಗೂ ಸುತ್ತಮುತ್ತಲ ಊರುಗಳಿಗೆ ಸಾಲ್ಕಣಿ ಸಮೀಪದ ಟಿ.ಸಿ.ಯಿಂದಲೇ ವಿದ್ಯುತ್ ಸರಬರಾಜು ಆಗುತ್ತದೆ. ಆದರೆ ಅಸಮರ್ಪಕ ವಿದ್ಯುತ್ ಸರಬರಾಜಿನ ಕಾರಣ ಕತ್ತಲೆಯಲ್ಲಿಯೇ ಕಾಲಕಳೆಯುವ ಪರಿಸ್ಥಿತಿ ಈ ಭಾಗದ ಜನರದ್ದಾಗಿದೆ. ಪದೇ ಪದೆ ಟಿ.ಸಿ. ಹಾಳಾಗುತ್ತದೆ. ವಿದ್ಯುತ್ ಮಾರ್ಗದಲ್ಲಿ ದೋಷ ಸಂಭವಿಸುತ್ತದೆ. ವಿದ್ಯುತ್ ತಂತಿಗಳ ಮೇಲೆ ಮರದ ರೆಂಬೆಗಳು ಮುರಿದು ಬೀಳುತ್ತಿರುತ್ತದೆ. ಆದರೆ ಹೆಸ್ಕಾಂ ಈ ಭಾಗದ ಕಡೆಗೆ ಗಮನ ಹರಿಸುತ್ತಿಲ್ಲ. ಹುಲೇಕಲ್, ಸಾಲ್ಕಣಿ ಭಾಗದಲ್ಲಿರುವ ಲೈನ್ಮನ್ ಮುರೇಗಾರ್ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ವಿದ್ಯುತ್ ಸಮಸ್ಯೆ ಉಂಟಾದರೆ ಆ ಕಡೆಗೆ ಆಗಮಿಸುವುದೇ ಇಲ್ಲ. ಕಳೆದ ಎರಡು-ಮೂರು ವರ್ಷಗಳಲ್ಲಿ ಒಮ್ಮೆಯೂ ಈ ಗ್ರಾಮಗಳಿಗೆ ಬಂದಿಲ್ಲ ಎಂದು ಸ್ಥಳೀಯರು ಕಿಡಿಕಾರುತ್ತಾರೆ. ಈ ಕುರಿತು ಇಲಾಖೆಯ ಅಧಿಕಾರಿಗಳಲ್ಲಿ ಕೇಳಿದರೆ ಗ್ರಾಮಸ್ಥರೆ ಸರಿಪಡಿಸಿಕೊಳ್ಳಿ ಎಂದು ಉತ್ತರ ನೀಡಿದ್ದಾರೆ. ಇದರಿಂದಾಗಿ ಮುರೇಗಾರ್, ದುಗ್ಗುಮನೆ, ಶಿರ್ಲಬೈಲ್, ಹುಡ್ಲೆಜಡ್ಡಿ, ಮಳ್ಳಿಕೈ ಈ ಮುಂತಾದ ಕಡೆಗಳಲ್ಲಿ ವಿದ್ಯುತ್ ಸಮಸ್ಯೆ ಉಂಟಾದರೇ ಸ್ಥಳೀಯರೇ ಸರಿಪಡಿಸಿಕೊಳ್ಳುತ್ತಿದ್ದಾರೆ.
ಶಿರಸಿಯಿಂದ ಕೇವಲ 22 ಕಿ.ಮಿ ದೂರದಲ್ಲಿರುವ ಈ ಗ್ರಾಮಗಳಲ್ಲಿ ಸಮಸ್ಯೆಗಳು ಜ್ವಲಂತವಾಗಿದೆ. ಅಗತ್ಯ ವಸ್ತುಗಳನ್ನು ಕೊಳ್ಳಲು ಸಾಲ್ಕಣಿ, ಹುಲೇಕಲ್ ಅಥವಾ ಶಿರಸಿಗೆ ಆಗಮಿಸುವ ಅನಿವಾರ್ಯತೆಯಿದೆ. ಆದರೆ ರಸ್ತೆ ಸಮರ್ಪಕವಾಗಿಲ್ಲ. ವಿದ್ಯುತ್ ಸಮಸ್ಯೆ ತೀವ್ರವಾಗಿದೆ. ಕಳೆದ ಅವಧಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದವರು ಈ ಕುರಿತು ಗಮನ ಹರಿಸಿಲ್ಲ ಎನ್ನುವ ಆಕ್ರೋಶ ಗ್ರಾಮಸ್ಥರಲ್ಲಿದೆ. ಈಗಲೂ ಯಾವುದೇ ಜನಪ್ರತಿನಿಧಿಗಳು ತಮ್ಮ ಗೋಳನ್ನು ಕೇಳುತ್ತಿಲ್ಲ. ಪ್ರವಾಸಿ ತಾಣವಾದ ಮುರೇಗಾರ್ ಜಲಪಾತಕ್ಕೆ ತೆರಳುವ ರಸ್ತೆಯನ್ನೂ ಸರಿಪಡಿಸಲು ಮುಂದಾಗಿಲ್ಲ. ಆ ನೆಪದಲ್ಲಾದರೂ ಈ ಊರುಗಳಿಗೆ ಸರ್ವಋತು ರಸ್ತೆಯಾಗುತ್ತದೆ ಎನ್ನುವ ಕನಸು ಕನಸಾಗಿಯೇ ಉಳಿದಿದೆ. ಜಿಲ್ಲೆಯವರೇ ಆದ ಪ್ರವಾಸೋದ್ಯಮ ಸಚಿವರು, ಸ್ಥಳೀಯ ಶಾಸಕರು, ಜನಪ್ರತಿನಿಧಿಗಳು ಇತ್ತ ಗಮನ ಹರಿಸಬೇಕಿದೆ. ರಸ್ತೆ ಹಾಗೂ ವಿದ್ಯುತ್ ಸಮಸ್ಯೆಗೆ ಪೂರ್ಣವಿರಾಮ ಹಾಕಬೇಕಾದ ಅಗತ್ಯವಿದೆ.

***
ರಸ್ತೆ ಹಾಗೂ ವಿದ್ಯುತ್ ಸಮಸ್ಯೆ ನಮ್ಮ ಭಾಗದಲ್ಲಿ ತೀವ್ರವಾಗಿದೆ. ರಸ್ತೆಯಲ್ಲಿ ದೊಡ್ಡ ದೊಡ್ಡ ಹೊಂಡಗಳು ಬಿದ್ದಿದ್ದು ಸಂಚರಿಸುವುದು ಅಸಾಧ್ಯ ಎನ್ನುವಂತಾಗಿದೆ. ರಸ್ತೆ ದುರಸ್ತಿ ಮಾಡಿಸಿಕೊಡಿ ಎಂದು ಹಲವಾರು ಸಾರಿ ಅರ್ಜಿ ಅದಕ್ಕೆ ಮನ್ನಣೆ ದೊರಕಿಲ್ಲ. ಈ ಭಾಗದಲ್ಲಿ ವಿದ್ಯುತ್ ಸಮಸ್ಯೆ ತೀವ್ರವಾಗಿದೆ. ಲೈನ್ಮನ್ ಈ ಭಾಗಕ್ಕೆ ವಿದ್ಯುತ್ ಸಮಸ್ಯೆಯನ್ನು ಸರಿಪಡಿಸಲು ಆಗಮಿಸುವುದೇ ಇಲ್ಲ. ಸ್ಥಳೀಯರೇ ದುರಸ್ತಿ ಮಾಡಿಸಿಕೊಳ್ಳುತ್ತಿದ್ದಾರೆ. ಕೂಡಲೇ ಈ ಸಮಸ್ಯೆಗಳನ್ನು ಸಂಬಂಧಪಟ್ಟವರು ಸರಿಪಡಿಸಬೇಕಾಗಿದೆ.
ರಾಘವೇಂದ್ರ ಎನ್ ನಾಯ್ಕ, ಇಲೆಕ್ಟ್ರಿಕ್ ಕೆಲಸಗಾರ, ಶಿರ್ಲಬೈಲ್


***
(ಇದು ಕನ್ನಡಪ್ರಭ ಪತ್ರಿಕೆಯಲ್ಲಿ ಪ್ರಕಟಗೊಂಡಿದೆ)

Sunday, October 26, 2014

ಬದಲು ಬಯಕೆ

ಇರುಳು ಹಾಯುವ ಹಾದಿಯಲ್ಲಿ
ಒಮ್ಮೆ ಮಾತನು ಆಡುವಾ |
ಸಾವು ಸುಳಿಯುವ ಬದುಕಿನಲ್ಲಿ
ಹಳೆಯ ಸೇಡನು ಮರೆಯುವಾ ||

ಬದುಕಿನಾ ಈ ರೇಖೆಯೊಳಗೆ
ಸೇಡು ಉನ್ನತಿ ಮೆರೆಯುತ್ತಿತ್ತು |
ಎದೆಯ ಆಳದ ಹುಮ್ಮಸ್ಸೆಲ್ಲ
ದ್ವೇಷವಾಗಿಯೇ ಸುರಿಯುತ್ತಿತ್ತು ||

ಈಗ ಹಾದಿಯು ಮಂಜು-ಮಂಜು
ಸ್ವಷ್ಟ ಚಿತ್ರಣ ಇಲ್ಲವೇ |
ನಿನ್ನೆ ಮಾಡಿದ ಕರ್ಮವೆಲ್ಲವೂ
ಮನದ ನೆನಪಲಿ ಉಳಿದಿವೆ ||

ಇನ್ನು ದ್ವೇಷವ ಮರೆತು ನಾವು
ಹೊಸತು ಲೋಕವ ಕಟ್ಟುವಾ |
ದ್ವೇಷ-ಸೇಡಿಗೆ ಅರ್ಥವಿಲ್ಲ
ಎಂದು ಲೋಕಕೆ ಸಾರುವಾ ||

**
(ಈ ಕವಿತೆಯನ್ನು ದಂಟಕಲ್ಲಿನಲ್ಲಿ ಬರೆದಿದ್ದು, 11-12-2006ರಂದು)

Saturday, October 25, 2014

ದೀಪಾವಳಿ ಆಚಾರ-ವಿಚಾರ

ದೀಪವಾಳಿ ತಯಾರಿ
(ಬಲಿವೇಂದ್ರನನ್ನು ಕೂರಿಸುತ್ತಿರುವುದು)

ದೀಪಾವಳಿ ಹಬ್ಬದ ಸಡಗರ ಮೇರೆ ಮೀರಿದೆ. ದೀಪಗಳ ಹಬ್ಬಕ್ಕೆ ಜನಸಾಮಾನ್ಯರು ಸಂಭ್ರಮದಿಂದ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಬಲಿವೇಂದ್ರನ ಪೂಜೆಗಾಗಿ ಮನೆ ಮನೆಯಲ್ಲಿ ವಿಶೇಷ ತಯಾರಿ ಮಾಡಿಕೊಂಡಿದ್ದಾರೆ.
ಬೆಳಕಿನ ಹಬ್ಬವಾದ ದೀಪಾವಳಿಯನ್ನು ದೊಡ್ಡಹಬ್ಬ ಎಂದೇ ಕರೆಯುತ್ತಾರೆ. ಎಲ್ಲ ಹಬ್ಬಗಳಿಗೂ ಕಿರೀಟವಿಟ್ಟಂತಹ ಹಬ್ಬ ಇದು. ನಗರ ಹಾಗೂ ಗ್ರಾಮೀಣ ಪ್ರದೇಶದ ಜನಸಾಮಾನ್ಯರು ತಮ್ಮನ್ನು ತಾವು ಮರೆತು ಆನಂದಿಸುವಂತಹ ಹಬ್ಬ. ಇಂತಹ ದೀಪಾವಳಿಯ ಸಂಭ್ರಮ ಬುಧವಾರದಿಂದ ಆರಂಭವಾಯಿತು. ಮನೆ ಮನೆಗಳಲ್ಲಿ ಬೂರೆ ಹಬ್ಬ ಎಂದು ಕರೆಯುವ ಈ ದಿನದಂದು ಬೂರೆ ನೀರನ್ನು ಮನೆಯೊಳಕ್ಕೆ ತರುವ ಮೂಲಕ ಹಬ್ಬ ಆರಂಭವಾಗುತ್ತದೆ. ಬೂರೆ ನೀರು ತಂದ ನಂತರ ಬಲಿವೇಂದ್ರನ ಹೋಲಿಕೆಯ ಮೂರ್ತಿಯನ್ನು ಕೂರಿಸಲಾಗುತ್ತದೆ. ಮಣೆಯ ಮೇಲೆ ಮಣ್ಣಿನ ಚಿತ್ತಾರ ಬಿಡಿಸಿ ಅದರ ಮೇಲೆ ತಾಮ್ರದ ಬಿಂದಿಗೆಯಲ್ಲಿ ನೀರನ್ನು ಹಾಕಿ, ಅದರ ಬಾಯಿಗೆ ಅಗಲವಾದ ಬಟ್ಟಲನ್ನು ಇಟ್ಟು ಅದರ ಮೇಲೆ ಅಕ್ಕಿಯನ್ನು ಹರವಿ, ತೆಂಗಿನ ಕಾಯಿ ಇಡಲಾಗುತ್ತದೆ. ತೆಂಗಿನಕಾಯಿಯ ಮೇಲೆ ಜೋಡು ಕೋಡನ್ನು ಹೊಂದಿರುವ ಅಡಿಕೆ ಸಿಂಗಾರದಿಂದ ಬಲೀಂದ್ರ ಮೂರ್ತಿಯನ್ನು ಕೂರಿಸಲಾಗುತ್ತದೆ. ಮೂರ್ತಿಯ ಅಕ್ಕಪಕ್ಕ ಬಲಿತ ಸೌತೆಕಾಯಿ ಹಾಗೂ ಮೊಗೆ ಕಾಯಿಗಳನ್ನು ಇಡಲಾಗುತ್ತದೆ.
(ಗೋಪೂಜೆ)
ಮೂರು ದಿನಗಳ ಕಾಲ ಬಲೀಂದ್ರ ಮೂತರ್ಿಯನ್ನು ಪೂಜೆ ಮಾಡಲಾಗುತ್ತದೆ. ಹಬ್ಬದ ಸರಣಿಯ ಎರಡನೇ ದಿನವಾದ ಗುರುವಾರ ವಾಹನ ಪೂಜೆ ಹಾಗೂ ಲಕ್ಷ್ಮೀ ಪೂಜೆ ನಡೆಯುತ್ತದೆ. ತಮ್ಮ ತಮ್ಮ ಮನೆಯ ವಾಹನಗಳು, ಆಭರಣಗಳನ್ನು ಇಂದು ಪೂಜೆ ಮಾಡಲಾಯಿತು. ವಾಹನಗಳಿಗೆ ಸಿಂಗರಿಸಿ ಸಭ್ರಮಿಸಿದರು. ಮೂರನೇ ದಿನವಾದ ಶುಕ್ರವಾರ ಗೋಪೂಜೆ ನಡೆಯಲಿದೆ. ಶುಕ್ರವಾರದಂದು ಗೋವನ್ನು ಸಿಂಗರಿಸಿ, ಗೋವಿನ ಪೂಜೆ ಮಾಡಿ ಸಂಭ್ರಮಿಸುತ್ತಾರೆ.
ಹಬ್ಬದ ತಯಾರಿಗಾಗಿ ಕಳೆದ ಮೂನರ್ಾಲ್ಕು ದಿನಗಳಿಂದ ಜನರು ಮಾರುಕಟ್ಟೆಗಳತ್ತ ಮುಖಮಾಡಿದ್ದರು. ಅಗತ್ಯದ ವಸ್ತುಗಳನ್ನು ಕೊಳ್ಳಲು ಮುಗಿಬಿದ್ದಿದ್ದರು. ತರಕಾರಿಗಳು, ಗೋವೆಕಾಯಿ, ಕಬ್ಬು, ಅಡಿಕೆ ಸಿಂಗಾರ, ಪುಂಡಿ ನಾರಿನ ಹಗ್ಗ, ಗೋವುಗಳ ಕುತ್ತಿಗೆಗೆ ಕಟ್ಟುವ ಗಂಟೆ, ಆಕಾಶಬುಟ್ಟಿ, ಹೂವುಗಳು ಸೇರಿದಂತೆ ವಿವಿಧ ವಸ್ತುಗಳನ್ನು ಕೊಳ್ಳಲು ಜನಸಾಮಾನ್ಯರು ಮಾರುಕಟ್ಟೆಯ ಕಡೆಗೆ ಮುಖ ಮಾಡಿದ್ದು ಸಾಮಾನ್ಯವಾಗಿತ್ತು. ಮಾರುಕಟ್ಟೆಗಳಲ್ಲಿಯೂ ಕೂಡ ದೀಪಾವಳಿಯ ಅಗತ್ಯ ವಸ್ತುಗಳ ಬೆಲೆಯಲ್ಲಿ ಏರಿಕೆಯಾಗಿತ್ತು. ತರಕಾರಿ ದರದಲ್ಲಿ ಸಾಮಾನ್ಯ ದಿನಕ್ಕಿಂದ 10-20 ರು. ಏರಿಕೆಯಾಗಿದ್ದರೆ, ದವಸ ಧಾನ್ಯಗಳಲ್ಲಿಯೂ ಕೂಡ 5-10 ರು. ಹೆಚ್ಚಳವಾಗಿತ್ತು. ಪುಂಡಿ ನಾರಿನ ಹಗ್ಗಕ್ಕೆ ಜೋಡಿಗೆ 20, 30, 40 ರು. ದರ ನಿಗದಿಯಾಗಿದ್ದರೆ ಹೂವುಗಳ ಬೆಲೆ ಮೊಳಕ್ಕೆ 30 ರಿಂದ 50 ರು. ಮುಟ್ಟಿತ್ತು. ಇದರಿಂದ ಜನಸಾಮಾನ್ಯರು ಅಗತ್ಯ ವಸ್ತುಗಳನ್ನು ಕೊಳ್ಳಲು ಹಿಂದೇಟು ಹಾಕಿದರು.
(ಎತ್ತ ನೋಡಿದರತ್ತ ಹಣತೆಗಳು)
ಪಟಾಕಿ ಸದ್ದು ಕೂಡ ಹಬ್ಬದ ಸಡಗರವನ್ನು ಹೆಚ್ಚಿಸಿದೆ. ಪರಿಸರ ಸ್ನೇಹಿ ದೀಪಾವಳಿಯನ್ನು ಆಚರಿಸಲು ಎಲ್ಲೆಡೆ ಜಾಗೃತಿ ಮೂಡಿಸಲಾಗುತ್ತಿದ್ದರೂ ಕೂಡ ಪಟಾಕಿ ಸಿಡಿಸುವ ಸಂತಸಕ್ಕೆ ತಡೆಯುಂಟಾಗಿಲ್ಲ. ಮಕ್ಕಳಾದಿಯಾಗಿ ಪಟಾಗಿ ಸಿಡಿಸಿ ಸಂತಸಪಟ್ಟರು. ಪಟಾಕಿ ಸಿಡಿಸುವ ಸಂಭ್ರಮವನ್ನು ಹೆಚ್ಚಿಸುವ ಸಲುವಾಗಿ ತರಹೇವಾರಿ ಪಟಾಕಿಗಳು ಅಂಗಡಿಗಳಲ್ಲಿ ಗಮನ ಸೆಳೆಯುತ್ತಿದ್ದವು. ಗ್ರಾಮೀಣ ಭಾಗದಲ್ಲಿಯೂ ಪಟಾಕಿ ಅಬ್ಬರ ಜೋರಾಗಿದೆ. ದೀಪಾವಳಿಯ ಹಬ್ಬ ಧಾಮರ್ಿಕವಾಗಿ ಮಾತ್ರ ಮಹತ್ವವನ್ನು ಪಡೆದುಕೊಂಡಿಲ್ಲ. ಬದಲಾಗಿ ಪರಿಸರ ಸ್ನೇಹಿ ಹಬ್ಬವಾಗಿದೆ. ಪ್ರಕೃತಿ ಮಾತೆಯನ್ನು ಪೂಜಿಸಲಾಗುತ್ತದೆ, ಆರಾಧಿಸಲಾಗುತ್ತದೆ. ಪ್ರಾಣಿ ಪಕ್ಷಿಗಳಿಗೂ ಈ ಹಬ್ಬದಲ್ಲಿ ಊಟೋಪಚಾರ ಮಾಡಿಸಲಾಗುತ್ತದೆ. ಪ್ರಾಣಿಗಳಲ್ಲಿ ದೇವರನ್ನು ಕಾಣಲಾಗುತ್ತದೆ.
ಬೆಳಕಿನ ಹಬ್ಬವೆಂದರೆ ಜೀವನದಲ್ಲಿ ಬೆಳಕನ್ನು ಹೊತ್ತಿಸುವಂತದ್ದು ಎನ್ನುವ ಭಾವನೆ ಹಲವು ಪ್ರದೇಶದಲ್ಲಿದೆ. ಯಾವುದೇ ಮಂಗಲಕಾರ್ಯ ಮಾಡುವುದಿದ್ದರೂ ದೀಪಾವಳಿಯ ನಂತರ ಎನ್ನುವ ನಂಬಿಕೆ ಬಹುತೇಕ ಕಡೆಗಳಲ್ಲಿದೆ. ಹಬ್ಬ ಆರಂಭವಾಗುತ್ತಿದ್ದಂತೆಯೇ ಮಣ್ಣಿನ ಹಣತೆಯಲ್ಲಿ ದೀಪ ಹಚ್ಚುತ್ತಾರೆ. ಅದರಲ್ಲೂ ಶೇಂಗಾ ಎಣ್ಣೆ ದೀಪ ಶ್ರೇಷ್ಟವಾದದ್ದು ಎನ್ನಲಾಗುತ್ತದೆ. ಗ್ರಾಮೀಣ ಪ್ರದೇಶದ ಮನೆಗಳಲ್ಲಿ ಹಣತೆಯ ದೀಪ ರಾರಾಜಿಸುತ್ತಿದ್ದರೆ ಪಟ್ಟಣಗಳಲ್ಲಿ ವಿದ್ಯುತ್ ದೀಪಗಳ ಆಕಾಶ ಬುಟ್ಟಿಗಳು ತೂಗಾಡುತ್ತವೆ. ವಿದ್ಯುತ್ ದೀಪಗಳ ಅಲಂಕಾರವನ್ನು ಪಟ್ಟಣದ ಮನೆ, ಅಂಗಡಿಗಳಲ್ಲಿ ಕಾಣಬಹುದಾಗಿದೆ.
(ಗೋವುಗಳನ್ನು ಓಡಸುತ್ತಿರುವುದು)
       ಹಬ್ಬ ಆರಂಭವಾಗುತ್ತಿದ್ದಂತೆಯೇ ಒಂದಲ್ಲ ಒಂದು ರೀತಿಯಲ್ಲಿ ಪ್ರಕೃತಿಯ ಆರಾಧನೆ ನಡೆಯುತ್ತದೆ. ಗೋವುಗಳಿಗೆ ಸಿಹಿ ಕಡುಬನ್ನು ಮಾಡಿ ತಿನ್ನಿಸಲಾಗುತ್ತದೆ. ಅದೇ ರೀತಿ ಗಂಟೆ, ವಿವಿಧ ನಮೂನೆಯ ದಂಡೆಗಳನ್ನು ಕಟ್ಟುವ ಮೂಲಕ ಗೋವುಗಳ ಶೃಂಗಾರ ಆರಂಭಗೊಳ್ಳುತ್ತದೆ. ಗೋಪೂಜೆ ದಿನವಾದ ಶುಕ್ರವಾರ ಗೋವುಗಳ ಪೂಜೆಯ ಜೊತೆ ವಿಶೇಷವಾದ ಭಕ್ಷ್ಯಗಳನ್ನು ನೀಡಲಾಗುತ್ತದೆ. ಇನ್ನಷ್ಟು ಅಲಂಕರಿಸಲಾಗುತ್ತದೆ. ಸಾಮೂಹಿಕವಾಗಿ ಗೋವುಗಳ ಶೃಂಗಾರ, ಪೂಜೆ, ಓಟ ಇತ್ಯಾದಿಗಳು ನಡೆಯುತ್ತವೆ. ಅಂದು ಸಂಜೆ ಬಲಿವೇಂದ್ರನನ್ನು ಕಳಿಸುವ ಮೂಲಕ ಹಬ್ಬದ ಸಂಭ್ರಮಕ್ಕೆ ತೆರೆ ಬೀಳುತ್ತದೆಯಾದರೂ ಬಿದಿಗೆಯ ದಿನ ವಸ್ತ್ರ ಉಡಿಕೆಯ ದಿನ ಅಥವಾ ವಸ್ತೊಳಿಕೆಯ ದಿನ ಎಂದು ಕರೆದು, ಹೊಸ ವಸ್ತ್ರವನ್ನು ತೊಟ್ಟು ಸಂಭ್ರಮಿಸುತ್ತಾರೆ. ಅಲ್ಲಿಗೆ ಹಬ್ಬ ಸಂಪೂರ್ಣಗೊಳ್ಳುತ್ತದೆ.

****
ಆಚರಣೆ'
(ಎತ್ತುಗಳ ಸಿಂಗಾರ)

ಬೆಳಕಿನ ಹಬ್ಬ ದೀಪಾವಳಿಯ ಮೂರನೇ ದಿನದ ಸಂಭ್ರಮ ಸಡಗರದಿಂದ ನಡೆಯಿತು. ಮನೆ ಮನೆಗಳಲ್ಲಿ ಗೋವಿನ ಪೂಜೆಯನ್ನು ಮಾಡುವ ಮೂಲಕ ಶಾಸ್ತ್ರ-ಸಂಪ್ರದಾಯ ಸಹಿತವಾಗಿ ಆಚರಿಸಲಾಯಿತು.
ಮುಂಜಾನೆ ಗೋವುಗಳನ್ನು ಸ್ನಾನ ಮಾಡಿಸುವುದರಿಂದ ಆರಂಭಗೊಳ್ಳುವ ಬಲಿಪಾಡ್ಯಮಿಯ ಸಡಗರ ನಿಧಾನವಾಗಿ ರಂಗೇರಿತು. ಅಡಿಕೆ, ಪಚೋಲಿ, ಪುಂಡಿ ನಾರು  ಸೇರಿದಂತೆ ಹಳ್ಳಿಗರೇ ತಯಾರಿಸಿದ ವಿಶಿಷ್ಟ ಬಗೆಯ ಹಾರದಿಂದ ಗೋವುಗಳನ್ನು ಅಲಂಕರಿಸುವುದು ವಾಡಿಕೆಯಾಗಿದೆ. ಶೇಡಿ ಹಾಗೂ ಕೆಮ್ಮಣ್ಣಿನಿಂದ ಗೋವುಗಳ ಮೈಮೇಲೆ ಚಿತ್ತಾರ ಬರೆಯುವ ಮೂಲಕ ಮತ್ತು ಗೋವುಗಳ ಕೋಡುಗಳಿಗೆ ಕೆಮ್ಮಣ್ಣು-ಶೇಡಿಯ ಬಣ್ಣ ಬಳಿದು ಸಿಂಗರಿಸಲಾಯಿತು. ಗೋ ಮಾತೆಯ ಪೂಜೆಯಲ್ಲಿ ಧನ್ಯತಾ ಭಾವ ಕಂಡುಕೊಂಡ ಆಸ್ತಿಕರು ಮನೆ ಮನೆಗಳಲ್ಲಿ ತಯಾರು ಮಾಡುವ ಹೋಳಿಗೆ, ಕಡುಬು ಸೇರಿದಂತೆ ವಿಶಿಷ್ಟ ತಿನಿಸುಗಳನ್ನೆಲ್ಲ ಗೋವುಗಳಿಗೆ ತಿನ್ನಿಸಿ ಸಂಭ್ರಮಿಸಿದರು. ಗೋವಿನ ರಕ್ಷಣೆಗಾಗಿ ಪಾರಂಪರಿಕವಾಗಿ ಆಚರಿಸುತ್ತ ಬಂದ ಹುಲಿಯಪ್ಪನ ಪೂಜೆಯನ್ನು ಸಾರ್ವತ್ರಿಕವಾಗಿ ನಡೆಸಲಾಯಿತು. ಇದೇ ಸಂದರ್ಭದಲ್ಲಿ ಮನೆಯ ಆಧಾರ ಸ್ಥಂಭವೆಂದೇ ಪರಿಗಣಿಸಲ್ಪಡುವ ಪ್ರಧಾನ ಕಂಬಕ್ಕೂ ಪೂಜೆ ಮಾಡುವ ಸಂಪ್ರದಾಯ ಮಲೆನಾಡಿನ ವಿಶೇಷತೆಗಳಲ್ಲೊಂದಾಗಿದೆ. ತಮ್ಮ ಜಮೀನು ಮನೆಗಳನ್ನು ರಕ್ಷಿಸುವ ಗಣಗಳಿಗೆ ತೆಂಗಿನ ಕಾಯಿ ಒಡೆಯುವ ಮೂಲಕ ಪೂಜೆ ಸಲ್ಲಿಸುವುದೂ ಸಹ ಈ ಪ್ರದೇಶದ ವೈಶಿಷ್ಟ್ಯತೆಯಾಗಿದೆ. ಈ ಎಲ್ಲ ಪೂಜೆ ಗಳು ಮುಗಿದ ನಂತರವೇ ಮನೆ ಮನೆಗಳ ಗೋವುಗಳನ್ನು ಬಯಲಿಗೆ ಬಿಡಲಾಗುತ್ತದೆ.
(ಭೂತಪ್ಪನಿಗೆ ಪೂಜೆ)
ಗೋವಿನ ಬಯಲಿನಲ್ಲಿ ಎಲ್ಲರ ಮನೆಗಳಿಂದ ಆಗಮಿಸಿದ ಹಸುಗಳು ಒಂದೆಡೆ ಸೇರುತ್ತವೆ. ಈ ಬಯಲಿನಲ್ಲಿ ಎತ್ತುಗಳನ್ನು ಸಿಂಗರಿಸಿ ಓಡಿಸಲಾಯಿತು. ಓಡುವ ಎತ್ತು, ಹೋರಿಗಳ ಜೊತೆಗೆ ಅವುಗಳ ಮಾಲೀಕರೂ ಓಡಿ ಸಂಭ್ರಮಿಸಿದರು. ನಂತರ ಊರ ಸುತ್ತಮುತ್ತಲೂ ಇರುವ ಚೌಡಿ, ಬೀರಲು, ಜಟಕ, ನಾಗರು ಸೇರಿದಂತೆ ಸಮಸ್ತ ಊರು ರಕ್ಷಣೆ ಮಾಡುವ ದೇವಗಣಗಳನ್ನು ಪೂಜಿಸಲಾಯಿತು. ಮನೆ ಮನೆಗಳಲ್ಲಿ ಆಯುಧಗಳು, ಯಂತ್ರಗಳು, ಹೊಸ್ತಿಲು, ತುಳಸಿ ಕಟ್ಟೆ, ಕೊಟ್ಟಿಗೆ ಈ ಮುಂತಾದವುಗಳಿಗೆಲ್ಲ ಪೂಜೆ ನಿಡುವ ಮೂಲಕ ದೀಪಾವಳಿ ಪ್ರಕೃತಿಯ ಆರಾಧಿಸುವ ಹಬ್ಬ ಎನ್ನುವ ವಿಶೇಷಣಕ್ಕೆ ಪುಷ್ಟಿ ಸಿಕ್ಕಂತಾಯಿತು.
ಸಂಜೆ ತುಳಸಿ ಪೂಜೆಯ ನಂತರ ಬಲಿವೇಂದ್ರನನ್ನು ಕಳಿಸುವ ಸಂಪ್ರದಾಯ ನಡೆಯಿತು. ಈ ಸಂದರ್ಭದಲ್ಲಿ ಬಹುತೇಕ ಜನರು ಮನೆಯ ಸುತ್ತಮುತ್ತಲ ಪ್ರದೇಶಗಳಲ್ಲಿ ಜೊಂಜನ್ನು ಹಚ್ಚಿಡುತ್ತಾರೆ. ಮನೆಯಂಗಳದ ವರೆಗೂ ಶಿಂಡ್ಲೇ ಕಾಯಿಯ ಜೊಂಜನ್ನು ಉರಿಸಲಾಗುತ್ತದೆ. ತನ್ಮೂಲಕ ಬೆಳಕಿನ ಹಬ್ಬ ತೆರೆಯೆಳೆಯುತ್ತಿದ್ದಂತೆಯೇ ಬಲಿವೇಂದ್ರನನ್ನು ಮುಂದಿನ ವರ್ಷಕ್ಕಾಗಿಯೂ ಕರೆಯಲಾಯಿತು.
(ಭಾರ ಎತ್ತುವ ಸ್ಪರ್ಧೆ)
             ಹೊಸ ಬಟ್ಟೆಗಳನ್ನು ಧರಿಸುವ ಎಲ್ಲ ವಯೋಮಾನದವರು ಈ ಹಬ್ಬವನ್ನು ಹೊಸ ವರ್ಷವೆನ್ನುವ ನಂಬುಗೆಯಿಂದಲೂ, ಶೃದ್ಧೆಯಿಂದ ಆಚರಿಸುವುದು ವಿಶೇಷವಾಗಿದೆ. ಹಬ್ಬದ ದಿನ ಸಾರ್ವಜನಿಕ ಸ್ಥಳದಲ್ಲಿ ತೆಂಗಿನ ಕಾಯಿ ಒಡೆಯುವ ಜೂಜಾಟ ಸೇರಿದಂತೆ ಹಲವಾರು ವಿಧದ ಸಾಹಸವನ್ನು ಪ್ರದರ್ಶಿಸಬಲ್ಲ ಕ್ರೀಡೆಗಳನ್ನು ಪಣಕ್ಕಿಟ್ಟು ಆಡಲಾಗುತ್ತದೆ. ಕೆಲವೊಂದು ಪ್ರದೇಶಗಳಲ್ಲಿ ರಾತ್ರಿಯಿಂದ ಬೆಳಗಿನ ತನಕವೂ ಜೂಜಾಟಗಳು ನಡೆಯುತ್ತವೆ. ಇಂದಿನ ಜೂಜಾಟಕ್ಕೆ ಬಹುತೇಕ ಯಾರೂ ಅಡ್ಡಿಪಡಿಸುವುದಿಲ್ಲ. ಇಲ್ಲಿ ಮನರಂಜನೆಯು ಪ್ರಾಮುಖ್ಯತೆ ಪಡೆಯುತ್ತದೆ.
ಸಿದ್ದಾಪುರ ತಾಲೂಕಿನ ಕಾನಸೂರು ಪಂಚಾಯತ ವ್ಯಾಪ್ತಿಯ ಅಡ್ಕಳ್ಳಿಯಲ್ಲಿ ಬಾರ ಎತ್ತುವ ಸ್ಫಧರ್ೆಯಗಳನ್ನು ಹಮ್ಮಿಕೊಳ್ಳುವ ಮೂಲಕ ವಿಶಿಷ್ಟವಾದಿ ದೀಪಾವಳಿಯನ್ನು ಆಚರಿಸಲಾಯಿತು. ಸುತ್ತಮುತ್ತಲ ಕಾನಸೂರು, ಕಲ್ಮಟ್ಟಿಹಳ್ಳಿ, ಮಲೆನಳ್ಳಿ, ಕಲ್ಮನೆ, ಅಡ್ಕಳ್ಳಿ, ಸೊಂಡ್ಲಬೈಲ್, ಮುತ್ತಮುರ್ಡ, ಕೋಡಸಿಂಗೆ, ಹಿತ್ಲಕೈ, ಬಾಳಗಾರ್, ದಂಟಕಲ್ ಈ ಮುಂತಾದ ಊರುಗಳ ಯುವಕರು 60 ಕೆ.ಜಿ.ಗೂ ಅಧಿಕ ಭಾರದ ಕಲ್ಲನ್ನು ಎತ್ತಲು ಪ್ರಯತ್ನಿಸಿದರು. ಹಲವು ಈ ಭಾರದ ಕಲ್ಲನ್ನು ಎತ್ತದೇ ಬಸವಳಿದರೆ ಕೆಲವು ಯುವಕರು ಅದನ್ನು ಎತ್ತಲು ಸಫಲರಾದರು. ಭಾರದ ಕಲ್ಲನ್ನು ಎತ್ತಿದ ಯುವಕರು ಕಲ್ಲನ್ನು ಹೊತ್ತುಕೊಂಡೇ ಸ್ಥಳೀಯ ಭೂತಪ್ಪನ ಕಟ್ಟೆಯನ್ನು ಮೂರು ಸಾರಿ ಪ್ರದಕ್ಷಿಣೆ ಹಾಕುವುದು ವಾಡಿಕೆ. ಹೀಗೆ ಮಾಡಿದ ಯುವಕರಿಗೆ ವಿಶೇಷ ಬಹುಮಾನಗಳನ್ನೂ ನೀಡಲಾಗುತ್ತದೆ. ಪ್ರತಿ ವರ್ಷ ನಿಗದಿತ ಸಂಖ್ಯೆಯಲ್ಲಿ ಭಾಗವಹಿಸುವ ಯುವಕರು ಕಲ್ಲನ್ನು ಎತ್ತಲು ವಿಫಲರಾದರೆ ಬಹುಮಾನವನ್ನು ಬರುವ ವರ್ಷಕ್ಕಾಗಿ ಕಾಯ್ದಿರಿಸಲಾಗುತ್ತದೆ. ಹೀಗೆ ಒಂದೊಂದು ಊರಿನಲ್ಲಿ ಒಂದೊಂದು ವೈವಿಧ್ಯತೆಯೊಂದಿಗೆ ಆಟಗಳಲ್ನಡೆದು ಹಬ್ಬದ ಸಂಭ್ರಮವನ್ನು ಹಂಚಿಕೊಂಡರು.

**
(ಈ ಎರಡೂ ಲೇಖನಗಳು ಕನ್ನಡಪ್ರಭದಲ್ಲಿ ಪ್ರಕಟವಾಗಿದೆ )

Friday, October 24, 2014

ಬೆಂಗಾಲಿ ಸುಂದರಿ-35

(ಬೋಗ್ರಾದ ಖಾಲಿ ಖಾಲಿ ಬೀದಿ)
            ಕಾಣೆಯಾಗಿರುವವನು ವಿನಯಚಂದ್ರನಾದರೂ ಆತನ ಪರಮಾಪ್ತ ಗೆಳೆಯನಾಗಿ ಬದಲಾಗಿದ್ದ ಸೂರ್ಯನ್ ಪಟ್ಟ ಪಾಡು ಅಷ್ಟಿಷ್ಟಲ್ಲ. ತನ್ನದೇ ಸಾಮರ್ಥ್ಯ ಬಳಕೆ ಮಾಡಿ ವಿನಯಚಂದ್ರನನ್ನು ಹೇಗೆ ಹುಡುಕಲು ಸಾಧ್ಯ ಎನ್ನುವುದನ್ನೆಲ್ಲ ಪ್ರಯತ್ನಿಸಿದ್ದ. ವಿನಯಚಂದ್ರ ಹಾಗೂ ಮಧುಮಿತಾ ಇಬ್ಬರೂ ಒಟ್ಟಾಗಿ ಸಮಸ್ಯೆಯ ಸುಳಿಯಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಸೂರ್ಯನ್ ಗೆ ಬಲವಾಗಿ ಅನ್ನಿಸುತ್ತಿತ್ತು. ತಾನೇ ಬಾಂಗ್ಲಾಕ್ಕೆ ಹೋಗಿ ಬಿಡಲಾ ಎಂದೂ ಆಲೋಚಿಸಿದ್ದ. ಆದರೆ ಬಾಂಗ್ಲಾ ನಾಡಿನಲ್ಲಿ ವಿಮಾನ, ರೈಲು, ರಸ್ತೆ, ದೂರವಾಣಿ ಇವೆಲ್ಲ ಹಿಂಸಾಚಾರದಿಂದ ಕಲಸುಮೇಲೋಗರವಾಗಿರುತ್ತವೆ. ಅಸ್ತವ್ಯಸ್ತವಾಗಿರುತ್ತವೆ ಎಂದುಕೊಂಡು ಸುಮ್ಮನಾಗಿದ್ದ. ತಮಿಳುನಾಡಿನ ಸರ್ಕಾರದಲ್ಲಿದ್ದ ರಾಜಕಾರಣಿಗಳು ಸಹಾಯ ಮಾಡುವ ಭರವಸೆಯನ್ನು ನೀಡಿದ್ದರು. ವಿನಯಚಂದ್ರ ಖಂಡಿತವಾಗಿಯೂ ಭಾರತಕ್ಕೆ ಮರಳುತ್ತಾನೆ ಎನ್ನುವ ವಿಶ್ವಾಸ ಸೂರ್ಯನದ್ದಾಗಿತ್ತು.
              ವಿನಯಚಂದ್ರ ಭಾರತಕ್ಕೆ ಮರಳುವಲ್ಲಿ ಏನೋ ಸಮಸ್ಯೆಯಾಗಿದೆ. ಆದರೆ ಏನೆಂಬುದು ಗೊತ್ತಾಗುತ್ತಿಲ್ಲ ಎಂದುಕೊಂಡ. ಯಾವುದಕ್ಕೂ ಇರಲಿ ಎಂದುಕೊಂಡ ಸೂರ್ಯನ್ ಮಧುಮಿತಾ ಭಾರತದಲ್ಲಿ, ಭಾರತದ ನಿವಾಸಿಯಾಗಿ ಉಳಿಯಲು ಬೇಕಾದ ದಾಖಲೆಪತ್ರಗಳನ್ನು ತಯಾರು ಮಾಡಲು ಹೊರಟಿದ್ದ. ಬಾಂಗ್ಲಾದೇಶದಿಂದ ಭಾರತಕ್ಕೆ ವಲಸೆ ಬಂದಿದ್ದಾಳೆ ಎನ್ನುವುದನ್ನು ತಪ್ಪಿಸಿ, ಮಧುಮಿತಾ ಭಾರತದ ನಿವಾಸಿ ಎಂದು ತೋರಿಸಲು ಅನುವಾಗುವಂತೆ ಅಗತ್ಯ ಕ್ರಮಗಳನ್ನು ಸೂರ್ಯನ್ ಕೈಗೊಳ್ಳಲು ಆರಂಭಿಸಿದ್ದ. ಏನೇ ಸಮಸ್ಯೆ ಬಂದರೂ ಅಗತ್ಯದ ದಾಖಲಾತಿ ಪತ್ರಗಳು ಸಹಾಯ ನೀಡಬೇಕು ಎಂಬುದು ಆತನ ಉದ್ದೇಶವಾಗಿತ್ತು. ತಮಿಳುನಾಡು ಸರ್ಕಾರದ ಸಚಿವರು ಈ ನಿಟ್ಟಿನಲ್ಲಿ ಸೂರ್ಯನ್ ಸಹಾಯಕ್ಕೆ ಸಂಪೂರ್ಣವಾಗಿ ನಿಂತುಬಿಟ್ಟಿದ್ದರು. ಆದ್ದರಿಂದ ಸೂರ್ಯನ್ ಗೆ ಎಲ್ಲ ರೀತಿಯ ಅನುಕೂಲವೂ ಆಯಿತು.

***

          ರಾತ್ರಿಯಲ್ಲೆಲ್ಲೋ ಎಚ್ಚರಾಯಿತು ಮಧುಮಿತಾಳಿಗೆ. ಚಳಿಯಾಗದಂತೆ ಬೆಚ್ಚಗೆ ಹಿಡಿದಿಡಲು ವಿನಯಚಂದ್ರ ಪ್ರಯತ್ನ ನಡೆಸುತ್ತಿದ್ದ. ಕೊನೆಗೆ ಆಕೆಯನ್ನು ಬೆಚ್ಚಗೆ ತಬ್ಬಿ ಹಿಡಿದು ಕುಳಿತಿದ್ದ. ವಿನಯಚಂದ್ರನ ಮೇಲೆ ಮತ್ತಷ್ಟು ಗೌರವ ಮೂಡಿತು ಮಧುಮಿತಾಳಿಗೆ. ವಿನಯಚಂದ್ರನಿಗೆ ನಿದ್ದೆ ಮಾಡಲು ಹೇಳಿದ ಮಧುಮಿತಾ ತಾನು ಎಚ್ಚರಿರುವುದಾಗಿ ಹೇಳಿದಳು. ಅದಕ್ಕೆ ಪ್ರಾರಂಭದಲ್ಲಿ ವಿನಯಚಂದ್ರ ಒಪ್ಪಲಿಲ್ಲ. ಕೊನೆಗೊಮ್ಮೆ ಹಿತವಾಗಿ ಮುತ್ತು ನೀಡಿ ವಿನಯಚಂದ್ರನನ್ನು ಒಪ್ಪಿಸಿದಳು. ಅಲ್ಲೇ ಮಧುಮಿತಾಳ ಭುಜಕ್ಕೆ ಒರಗಿ ನಿದ್ರಿಸಲು ಆರಂಭಿಸಿದ ವಿನಯಚಂದ್ರ.
         ಮಧುಮಿತಾಳ ಮನಸ್ಸಿನ ತುಂಬ ಕಳೆದೊಂದು ತಿಂಗಳ ಅವಧಿಯಲ್ಲಿ ನಡೆದಿದ್ದ ಘಟನೆಗಳು ಸುಳಿದುಬರಲು ಆರಂಭಿಸಿದ್ದವು. ಭಾರತದ ಯಾವುದೋ ಮೂಲೆಯ ಹುಡುಗನ ಪರಿಚಯವಾಗಿ ಆತನನ್ನು ತಾನು ಪ್ರೀತಿಸುತ್ತೇನೆ ಎಂದು ಕನಸಿನಲ್ಲಿಯೂ ಮಧುಮಿತಾ ಅಂದುಕೊಂಡಿರಲಿಲ್ಲ. ವಿನಯಚಂದ್ರನ ಪರಿಚಯವಾಗಿದ್ದು, ಪರಿಚಯ ಸ್ನೇಹಕ್ಕೆ ತಿರುಗಿದ್ದು, ಬಂದ ಬೆಳೆದಿದ್ದು, ನಾಚಿಕೊಂಡು ನಾಚಿಕೊಂಡು ಆತನೇ ಪ್ರೇಮನಿವೇದನೆ ಮಾಡಿದ್ದು, ಇದಕ್ಕೇ ಕಾಯುತ್ತಿದ್ದೆನೋ ಎಂಬಂತೆ ಒಪ್ಪಿಕೊಂಡಿದ್ದು ಎಲ್ಲವೂ ಕಣ್ಣೆದುರು ಸುಳಿಯಿತು. ಅಲ್ಲಿಯವರೆಗೆ ಹಿತವಾಗಿದ್ದ ಬದುಕು ಆ ನಂತರದ ದಿನಗಳಲ್ಲಿ ಏನೆಲ್ಲ ತಿರುವುಗಳನ್ನು ಪಡೆದುಕೊಂಡು ಬಿಟ್ಟಿತಲ್ಲ ಎನ್ನುವುದು ನೆನಪಾಗಿ ಬೆದರಿದಳು ಮಧುಮಿತಾ.
          ಬಾಂಗ್ಲಾ ದೇಶದಲ್ಲಿ ಭುಗಿಲೆದ್ದ ಹಿಂಸಾಚಾರ, ಹಿಂದೂಗಳನ್ನೇ ಗುರಿಯಾಗಿಟ್ಟುಕೊಂಡು ನಡೆಸಿದ ದಾಳಿಗಳು, ಅದಕ್ಕೆ ಬಲಿಯಾದ ತನ್ನ ಕುಟುಂಬ, ಸಲೀಂ ಚಾಚಾನ ಆತಿಥ್ಯ, ಆತನ ಮುಂದಾಳತ್ವದಲ್ಲೇ ಭಾರತ ತಲುಪಲು ಹೊರಟಿದ್ದು, ಸಲೀಂ ಚಾಚಾನ ನಿಧನ ನಂತರದ ತಮ್ಮ ಬದುಕು ಎಲ್ಲವೂ ನೆನಪಾಗಿ ಕಣ್ಣೀರಿನ ರೂಪದಲ್ಲಿ ಧರೆಗಿಳಿಯಲು ಪ್ರಯತ್ನಿಸಿತು. ತಾನು ಅಳಲಾರಂಭಿಸಿದರೆ ವಿನಯಚಂದ್ರನ ನಿದ್ದೆಗೆಲ್ಲಿ ಭಂಗ ಬರುತ್ತದೆಯೊ ಎಂದುಕೊಂಡ ಮಧುಮಿತಾ ಕಣ್ಣೀರನ್ನು ಒರೆಸಿಕೊಂಡಳು.
(ಬೋಗ್ರಾದಲ್ಲಿರುವ ಒಂದು ಬೌದ್ಧ ಧಾಮ)
          ಇಬ್ಬನಿ ನಿಧಾನವಾಗಿ ಇಳಿಯಲು ಆರಂಭಿಸಿತ್ತು. ಬೆಳಗಿನ ಜಾವವಿರಬೇಕು ಎಂದುಕೊಂಡಳು ಮಧುಮಿತಾ. ಮೂರ್ನಾಲ್ಕು ತಾಸಿನ ಚುಟುಕು ನಿದ್ದೆ ಮಾಡಿದ ವಿನಯಚಂದ್ರ ಎದ್ದ. ಕಣ್ಣು ಮುಚ್ಚಿಕೊಂಡೇ ಮೆಲು ದನಿಯಲ್ಲಿ `ಮಧು..' ಎಂದ.
         `ಹೂಂ..'ಅಂದಳು. `ಹೀಗೆ ಇದ್ದು ಬಿಡೋಣವಾ..?' ಎಂದ. ಮಾತಾಡಲಿಲ್ಲ ಮಧುಮಿತಾ. `ನಿನ್ನ ಭುಜ ಎಷ್ಟೆಲ್ಲ ಮೆತ್ತಗಿದೆ. ಸದಾ ನಿನ್ನ ಭುಜ ಹೀಗೆ ಇರುತ್ತದೆ. ನನ್ನ ತಲೆಗೆ ದಿಂಬಿನಂತೆ.. ಅಂತಾದರೆ ಎಷ್ಟು ಶತಮಾನಗಳಾದರೂ ಹೀಗೆ ಇದ್ದು ಬಿಡೋಣ..' ಎಂದು ತುಂಟತನದಿಂದ ಕೇಳಿದ್ದ. `ಥೂ.. ಹೋಗೋ..ಯಾವಾಗಲೂ ನಿನಗೆ ಇಷ್ಟೇ' ಎಂದಿದ್ದಳು ಅವಳು.
           ಮೂಡಣದಲ್ಲಿ ನೇಸರ ನಿಧಾನವಾಗಿ ಏರಿ ಬರುತ್ತಿದ್ದ. ಬಾನಿನ್ನೂ ಕಿತ್ತಳೆ ವರ್ಣದಿಂದ ರಂಗು ರಂಗಾಗಿ ಕಾಣಲು ಆರಂಭಿಸುತ್ತಿದ್ದಾಗಲೇ ರಾತ್ರಿ ಯಾವ ರೀತಿ ಕಂಪೌಂಡ್ ಗೋಡೆ ಹಾರಿದ್ದರೋ ಅದೇ ದಾರಿಯಲ್ಲಿ ಮರಳಿ ಹೊರಟರು. ರಾತ್ರಿ ಎತ್ತರ ಗೊತ್ತಾಗಿರಲಿಲ್ಲವಾದರೂ ಬೆಳಗಿನ ವೇಳೆಗೆ ಯಾಕೋ ತುಂಬ ಎತ್ತರವಿದೆ ಎನ್ನಿಸಿತು. ಕಂಪೌಂಡ್ ಏರಿದ ವಿನಯಚಂದ್ರ ಮಧುಮಿತಾಳನ್ನು ಹತ್ತಿಸಿಕೊಳ್ಳಲು ಕೈಚಾಚಿದ. ಆಕೆಯ ಭಾರ ತೀವ್ರವಾಗಿ ದಬಾರನೆ ಕೆಳಕ್ಕೆ ಬಿದ್ದ. ಕೊಂಚ ನೋವಾಯಿತು. ಎರಡನೇ ಸಾರಿ ತಾನು ಕಂಪೌಂಡ್ ಏರುವ ಬದಲು ಆಕೆಯನ್ನು ಹಿಡಿದು ಹತ್ತಿಸಿದ. ನಿಧಾನವಾಗಿ ಕಂಪೌಂಡ್ ದಾಟಿಕೊಂಡರು.
        ಬೋಗ್ರಾ ನಗರಿ ಆಗ ತಾನೇ ಮುಂಜಾವಿನ ಸುಖನಿದ್ದೆಯಿಂದ ಎಚ್ಚರವಾಗುತ್ತಿತ್ತು. ಬೀದಿ ಬೀದಿಗಳು ಖಾಲಿ ಖಾಲಿಯಾಗಿದ್ದವು. ಇವರು ಮುಂದಕ್ಕೆ ಹೊರಡಲೇ ಬೇಕಾಗಿತ್ತು. ಭಾರತದ ಗಡಿಗೆ ಹತ್ತಿರದಲ್ಲಿರುವ ರಂಗಪುರಕ್ಕೆ ಎಷ್ಟು ಸಾಧ್ಯವೋ ಅಷ್ಟು ಬೇಗ ಹೋಗಬೇಕಾಗಿತ್ತು. ಬಸ್ಸಿನ ಮೂಲಕ ಸಾಗಲು ಕನಿಷ್ಟ ಆರೆಂಟು ಗಂಟೆಗಳ ಕಾಲ ಪ್ರಯಾಣ ಮಾಡಲೇಬೇಕಾಗಿತ್ತು. ನಡೆಯಲಿಕ್ಕೆ ಹೊರಟರೆ ಮೂರು ದಿನಗಳಾದರೂ ಸಾಗಬೇಕಾಗಿತ್ತು. ವಿನಯಚಂದ್ರ ಮಧುಮಿತಾಳ ಬಳಿ ಈ ವಿಷಯದ ಕುರಿತು ಚರ್ಚೆ ಮಾಡಿದ. ಕಿಸೆಯೊಳಗಿನ ಹಣವನ್ನು ಎಣಿಸಿಕೊಂಡ. ರಂಗಪುರವನ್ನು ತಲುಪಲು ಸಾಕಾಗುವಷ್ಟು ಹಣವಿರಲಿಲ್ಲ. ಮುಂದೇನು ಮಾಡುವುದು ಎನ್ನುವ ಆಲೋಚನೆ ಇಬ್ಬರಲ್ಲೂ ಕಾಡಿತು. ಕೊನೆಗೆ ಮಧುಮಿತಾಳೇ `ಎಷ್ಟು ದೂರ ಸಾಧ್ಯವೋ ಅಷ್ಟು ದೂರ ಹೋಗೋಣ.. ಬಸ್ಸಿನಲ್ಲೇ ಆದರೆ ಕಂಡಕ್ಟರನ ಬಳಿ ಕಾಡಿ ಬೇಡಿ ಪ್ರಯಾಣ ಮಾಡೋಣ. ಆತ ನಮ್ಮನ್ನು ಕರೆದೊಯ್ದರೆ ಸರಿ. ಇಲ್ಲವಾದರೆ ಅಲ್ಲೆ ಎಲ್ಲಾದರೂ ಇಳಿದು ನಡೆದು ಹೊರಡೋಣ.. ಏನಂತೀಯಾ..?' ಎಂದಳು. ವಿನಯಚಂದ್ರ ಒಪ್ಪಿಕೊಂಡಿದ್ದ.
         ಬೋಗ್ರಾದ ಬಸ್ಸು ನಿಲ್ದಾಣದ ಕಡೆಗೆ ತೆರಳಿದರು. ಮುಂಜಾವಿನಲ್ಲಿ ಖಾಲಿ ಖಾಲಿಯಾಗಿದ್ದ ಬೋಗ್ರಾದಲ್ಲಿ ನಡೆಯುವುದೆಂದರೆ ವಿಚಿತ್ರ ಖುಷಿಯನ್ನು ನೀಡುತ್ತಿತ್ತು. ಎಲ್ಲಿ ನೋಡಿದರೂ ಜನರಿರಲಿಲ್ಲ. ಆಗೊಮ್ಮೆ ಈಗೊಮ್ಮೆ ವಾಹನಗಳು ಭರ್ರೆಂದು ಸಾಗುತ್ತಿದ್ದವು. ಸೈಕಲ್ ರಿಕ್ಷಾಗಳ ಟ್ರಿಣ್ ಟ್ರೀಣ್ ಸದ್ದು ಕೇಳಿಸುತ್ತಿತ್ತು. ಕೆಲ ಹೊತ್ತಿನಲ್ಲಿಯೇ ಬೋಗ್ರಾ ಬಸ್ಸು ನಿಲ್ದಾಣ ಸಿಕ್ಕಿತು. ಅಲ್ಲಿಗೇ ಹೋಗಿ ಕೆಲ ಹೊತ್ತು ಕಾದರೂ ಬಸ್ಸು ಸಿಗಲಿಲ್ಲ. ಒಂದು ತಾಸಿನ ನಂತರ ಲಡಕಾಸಿ ಬಸ್ಸೊಂದು ನಿಧಾನವಾಗಿ ಬಂದಿತು. ವಿನಯಚಂದ್ರ ಬೇಗನೇ ಬಸ್ಸನ್ನೇರಲು ಹೊರಟವನು ಬಸ್ಸನ್ನು ನೋಡಿ ಕೆಲ ಕಾಲ ಹಿಂದೇಟು ಹಾಕಿದ. ಈ ಬಸ್ಸು ರಂಗಪುರವನ್ನು ತಲುಪಬಲ್ಲದೇ ಎಂದೂ ಆಲೋಚಿಸಿದ. ವಿನಯಚಂದ್ರನ ಮನದಾಳವನ್ನು ಅರಿತಂತೇ ಮಾತನಾಡಿದ ಮಧುಮಿತಾ `ಬಾಂಗ್ಲಾದಲ್ಲಿ ಇದಕ್ಕಿಂತ ಲಡಕಾಸಿ ಬಸ್ಸುಗಳಿವೆ. ದೂರ ದೂರಿಗೆ ಇವುಗಳ ಮೂಲಕವೇ ಪ್ರಯಾಣ ಕೈಗೊಳ್ಳೋದು. ಏನೂ ಚಿಂತೆ ಮಾಡಬೇಡ. ಇದರಲ್ಲೇ ಹೋಗೋಣ..' ಎಂದು ಖಂಡತುಂಡವಾಗಿ ಹೇಳಿದ್ದಳು. ವಿನಯಚಂದ್ರ ಬಸ್ಸನ್ನೇರಿದ್ದ.
       ಖಾಲಿಯಿದ್ದ ಬಸ್ಸು ಹೊರಡುವ ಮುನ್ನ ಬಸ್ಸಿನಲ್ಲಿ ಒಬ್ಬಾತ ಬಾಳೆ ಹಣ್ಣನ್ನು ಮಾರಲು ತಂದಿದ್ದ. ಹೊಟ್ಟೆಗೆ ಸಾಕಾಗುವಷ್ಟು ಹಣ್ಣನ್ನು ತಿಂದರು. ವಿನಯಚಂದ್ರ ಮತ್ತೊಮ್ಮೆ ಜೇಬಿನಲ್ಲಿದ್ದ ಹಣವನ್ನು ಎಣಿಸಿಕೊಂಡ. ಅಷ್ಟರಲ್ಲಿ ಬಸ್ಸಿನ ಕಂಡಕ್ಟರ್ ಬಂದಿದ್ದ. ಕೊನೆಗೆ ಕಂಡಕ್ಟರ್ ಬಳಿ ತನ್ನಲ್ಲಿ ಇರುವ ಹಣದ ಬಗ್ಗೆ ತಿಳಿಸಿ ಎಲ್ಲಿಯವರೆಗೆ ಸಾಧ್ಯವೋ ಅಲ್ಲಿಯ ತನಕ ಕರೆದೊಯ್ಯಿರಿ ಎಂದ. ಹಣವನ್ನು ಎಣಿಸಿದ ಕಂಡಕ್ಟರ್ `ಪೀರ್ ಗಂಜ್ ವರೆಗೆ ಪ್ರಯಾಣ ಮಾಡಬಹುದು..' ಎಂದು ಹೇಳಿ ಟಿಕೇಟ್ ನೀಡಿದ. `ಪೀರ್ ಗಂಜಿನಿಂದ ರಂಗಪುರ ಎಷ್ಟು ದೂರ..?' ಎಂದು ಕೇಳಿದ ವಿನಯಚಂದ್ರ. `ಬಸ್ಸಿನಲ್ಲಾದರೆ ಎರಡು ತಾಸುಗಳ ಪಯಣ ತಾಸುಗಳ ಪ್ರಯಾಣ..' ಎಂದು ಕಂಡಕ್ಟರ್ ಮುಂದಕ್ಕೆ ತೆರಳಿದ್ದ.
         ಇವರಂದುಕೊಂಡದ್ದಕ್ಕಿಂತ ನಿಧಾನವಾಗಿ ಬಸ್ಸು ತೆರಳಲು ಆರಂಭಿಸಿತು. ಬೋಗ್ರಾದ ಬಸ್ ನಿಲ್ದಾಣದಿಂದ ಬಸ್ಸು ಮುಂದಕ್ಕೆ ಹೊರಡುವ ವೇಳೆಗೆ ಸೂರ್ಯ ಆಗಲೇ ಬಾನಿನ ಮೇಲಕ್ಕೆ ಬರಲು ಆರಂಭಿಸಿದ್ದ. `ಬಾಳೆಹಣ್ಣು ತಿಂದಿದ್ದು ಒಳ್ಳೇದೇ ಆಯ್ತು.. ಇಲ್ಲವಾಗಿದ್ದರೆ ಉಪವಾಸವಿರಬೇಕಿತ್ತು.. ಈ ಬಸ್ಸು ಯಾಕೋ ಬಹಳ ನಿಧಾನ ಹೋಗ್ತಾ ಇದೆ ಕಣೆ ಮಧು..' ಎಂದ ವಿನಯಚಂದ್ರ. `ಹೂಂ..' ಅಂದ ಮಧುಮಿತಾ ಸುಮ್ಮನಾದಳು. ಬಸ್ಸು ಆಮೆಗತಿಯಲ್ಲಿಯೇ ಮುಂದುವರಿಯುತ್ತಿತ್ತು. ಬೋಗ್ರಾದಲ್ಲಿ ನಿಧಾನಕ್ಕೆ ಜನಸಂದಣಿಯೂ ಹೆಚ್ಚಾಗುತ್ತಿತ್ತು. ಮೂರ್ನಾಲ್ಕು ತಿರುವುಗಳನ್ನು ದಾಟಿ ರಂಗಪುರದ ಕಡೆಗೆ ಆಗಮಿಸುವ ಮುಖ್ಯ ರಸ್ತೆಗೆ ಬರುವಷ್ಟರಲ್ಲಿ ಬಹಳಷ್ಟು ಹೊತ್ತು ಸರಿದಿದ್ದವು.

(ಮುಂದುವರಿಯುತ್ತದೆ)