Tuesday, October 14, 2014

ಅಪರಾಧಿ ನಾನಲ್ಲ (ಕಥೆ)

           ಅಂದಿನ ಕೆಲಸ ಮುಗಿಸಿ ಮನೆಗೆ ಬಂದು ಊಟ ಮಾಡಿ ಟಿವಿ ಹಚ್ಚಿದ ತಕ್ಷಣ ನಿರೂಪಕಿ ಯಾವುದೋ ಸುದ್ದಿಯನ್ನು ಪದೇ ಪದೆ ಹೇಳತೊಡಗಿದ್ದಳು. `ಉಡುಪಿಯಲ್ಲಿ ನಕ್ಸಲ್ ನಿಗ್ರಹ ಪಡೆಯಿಂದ ಕೋಂಬಿಂಗ್. ನಕ್ಸಲರ ಜೊತೆಗೆ ಗುಂಡಿನ ಕಾಳಗ. ಇಬ್ಬರ ಹತ್ಯೆ..' ಎಂದು ಹೇಳುತ್ತಿದ್ದಳು.
           ಹೇಳಿದ್ದನ್ನೇ ತಾನು ನಾಲ್ಕು ಸಾರಿ ಹೇಳಿ, ಸ್ಥಳೀಯ ವರದಿಗಾರರಿಂದ ಎರಡು ಸಾರಿ ಹೇಳಿಸಿ, ಟಿವಿ ಪರದೆಯ ಮೇಲೆ ಮೂರು ಸಾರಿ ಅದೇ ಸಾಲುಗಳನ್ನು ಮರುಪ್ರಕಟಿಸಿ, ಮತ್ತೆ ತಾನು ಎರಡು ಸಾರಿ ಹೇಳುವಲ್ಲಿಗೆ ಹೇಳಿದ್ದೇ ವಿಷಯವನ್ನು ಹತ್ತುನಿಮಿಷಕ್ಕೆ ಎಳೆದಿದ್ದಳು. ನಾನು ಮತ್ತಿನ್ನೇನಾದರೂ ಹೊಸ ಸುದ್ದಿ ಹೇಳುತ್ತಾಳೋ ಎಂದು ಕಾದೆ. ಆಕೆ ಹೇಳಲಿಲ್ಲ. ಇವರ ಹಣೆಬರಹವೇ ಇಷ್ಟು ಎಂದುಕೊಂಡು ಚಾನಲ್ ಬದಲಾಯಿಸಿದೆ.
           ಆದರೆ ಮನಸ್ಸಿನ ತುಂಬ ನಕ್ಸಲರು, ನಕ್ಸಲ್ ಪೀಡಿತ ಪ್ರದೇಶದ ಬಗ್ಗೆ ಆಲೋಚನೆ ಶುರುವಾಯಿತು. ಬಹು ದಿನಗಳಿಂದ ನನ್ನ ಮನಸ್ಸಿನಲ್ಲಿ ನಕ್ಸಲ್ ಪೀಡಿತ ಪ್ರದೇಶಕ್ಕೆ ಹೋಗಿ ಬರಬೇಕು. ಅಲ್ಲಿನ ಜನಜೀವನ ಹೇಗಿರುತ್ತದೆ ಎನ್ನುವುದನ್ನು ವೀಕ್ಷಿಸಬೇಕು. ನಕ್ಸಲ್ ನಿಗ್ರಹ ಪಡೆಯ ಕೋಂಬಿಂಗ್ ನೋಡಬೇಕು. ಜನಸಾಮಾನ್ಯರ ದೈನಂದಿನ ಜೀವನವನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನ ಮಾಡಬೇಕು. ಸಾಧ್ಯವಾದರೆ ಅಲ್ಲಿ ಉಳಿದುಕೊಳ್ಳಲು ಪ್ರಯತ್ನ ಮಾಡಬೇಕು ಎಂಬ ಆಸೆ ಕಾಡುತ್ತಿತ್ತು. ಇದೀಗ ಉಡುಪಿ ಜಿಲ್ಲೆಯಲ್ಲಿ ನಕ್ಸಲ್ ಎನ್ ಕೌಂಟರ್ ನಡೆದಿದೆಯಲ್ಲ. ಅಲ್ಲಿಗೆ ಹೋಗಿಬರೋಣ ಎಂದುಕೊಂಡೆ. ಹೆಚ್ಚಿನ ಮಾಹಿತಿಗಾಗಿ ಮತ್ತದೇ ಸುದ್ದಿ ವಾಹಿಸಿಯ ಮೊರೆ ಹೊಕ್ಕೆ.
            `ಕುದುರೆಮುಖ ರಾಷ್ಟ್ರೀಯ ಉದ್ಯಾನದ  ಬಳಿ ಇರುವ ಗ್ರಾಮವೊಂದರಲ್ಲಿ ನಕ್ಸಲ್ ನಿಗ್ರಹ ಪಡೆಯು ನಕ್ಸಲರ ಜೊತೆಗೆ ಗುಂಡಿನ ಕಾಳಗ ನಡೆಸಿದೆ. ಗುಂಡಿನ ಕಾಳಗಕ್ಕೆ ಇಬ್ಬರು ನಕ್ಸಲರು ಬಲಿಯಾಗಿದ್ದಾರೆ. ಇಬ್ಬರು ಪೊಲೀಸರಿಗೂ ಗಾಯವಾಗಿದೆ. ಘಟನಾ ಸ್ಥಳದಲ್ಲಿ ಪೊಲೀಸ್ ಕಾವಲು ಬಿಗಿಯಾಗಿದೆ.' ಎಂದು ಹೇಳುತ್ತಿದ್ದರು. ಮರುದಿನ ಅಲ್ಲಿಗೆ ಹೋಗಲೇಬೇಕು ಎಂದುಕೊಂಡು ತಕ್ಷಣವೇ ಕಾರ್ಯಪ್ರವೃತ್ತನಾದೆ. ನಕ್ಸಲ್ ಪೀಡಿತ ಪ್ರದೇಶಕ್ಕೆ ಹೋಗಬೇಕಾದರೆ ಮಾಡಿಕೊಳ್ಳಬೇಕಾದ ಪೂರ್ವತಯಾರಿಯಲ್ಲಿ ತೊಡಗಿದೆ. ಹೊಸದಾಗಿ ಕೊಂಡಿದ್ದ ಡಿಎಸ್ಎಲ್ಆರ್ ಕ್ಯಾಮರಾವನ್ನು ತಯಾರು ಮಾಡಿಟ್ಟುಕೊಂಡೆ.
            ಮರುದಿನವೇ ಗಾಡಿಯನ್ನು ತೆಗೆದುಕೊಂಡು ನಕ್ಸಲ್ ಪೀಡಿತ ಪ್ರದೇಶಕ್ಕೆ ಹೊರಟೆ. ನನ್ನ ಊರಿನಿಂದ ನಿರಂತರ ಮೂರು ತಾಸುಗಳ ಪಯಣದ ನಂತರ ಉಡುಪಿ ಜಿಲ್ಲೆಯಿಂದ ಕಾರ್ಕಳಕ್ಕೆ ಬಂದು ಅಲ್ಲಿಂದ ಟಿವಿಯಲ್ಲಿ ಬಿತ್ತರಿಸಿದ್ದ ನಕ್ಸಲ್ ಪೀಡಿತ ಗ್ರಾಮದ ಕಡೆಗೆ ಹೊರಟೆ. ಕೆಲ ಕಿಲೋಮೀಟರುಗಳ ದೂರದ ನಂತರ ಕುದುರೇಮುಖ ರಾಷ್ಟ್ರೀಯ ಉದ್ಯಾನದ ತಪಾಸಣಾ ಕೇಂದ್ರ ಸಿಕ್ಕಿತು. ಅಲ್ಲಿ ನನ್ನನ್ನು ಪೊಲೀಸರು ತಡೆದರು. ನನ್ನಂತೆ ಇನ್ನೂ ಅನೇಕ ವಾಹನಗಳನ್ನೂ ಅವರು ತಡೆದಿದ್ದರು ಎನ್ನಿ. ನಾನು ನನ್ನ ಬೈಕನ್ನು ಪಕ್ಕಕ್ಕೆ ನಿಲ್ಲಿಸಿ ನನ್ನ ಸರದಿಗಾಗಿ ಕಾಯುತ್ತ ನಿಂತೆ. ಆದರೆ ಪೊಲೀಸರು ಅಲ್ಲಿದ್ದವರಲ್ಲಿ ಯಾರನ್ನೂ ಮುಂದಕ್ಕೆ ಬಿಡುವ ಹಾಗೆ ಕಾಣಲಿಲ್ಲ. ನಾನು ಸೀದಾ ಅಲ್ಲಿದ್ದ ಪೊಲೀಸನೊಬ್ಬನ ಬಳಿ `ತುರ್ತಾಗಿ ಹೋಗಬೇಕಾಗಿದೆ.. ನನ್ನನ್ನು ಬಿಡಿ..' ಎಂದೆ. ಆತ ಒಪ್ಪಲೇ ಇಲ್ಲ. ನಾನು ಪರಿಪರಿಯಾಗಿ ಕೇಳಿಕೊಂಡೆ. ಕೊನೆಗೆ ನನ್ನ ಮನೆಯಲ್ಲಿ ಹಿರಿಯರ ಆರೋಗ್ಯ ಸಮಸ್ಯೆ ಉಂಟಾಗಿದೆ. ಸೀರಿಯಸ್ ತೊಂದರೆಯಿದೆ. ಬೇಗನೇ ಹೋಗಬೇಕಿತ್ತು. ಎಂದೆ. ನನ್ನ ಮಾತನ್ನು ನಂಬಿದನಿರಬೇಕು. ಹಲವಾರು ಪತ್ರಗಳಲ್ಲಿ ಸಹಿ ಪಡೆದುಕೊಂಡು, ನಾನು ಹೊರಟ ಸಮಯವನ್ನು ನಮೂದು ಮಾಡಿಕೊಂಡು ಮುಂದಕ್ಕೆ ಹೋಗಲು ಬಿಟ್ಟ.
           ನಾನು ಕುದುರೆಮುಖ ರಾಷ್ಟ್ರೀಯ ಅರಣ್ಯ ಪ್ರದೇಶಕ್ಕೆ ಹೋಗುವವನು ನಕ್ಸಲ್ ಪೀಡಿತ ಪ್ರದೇಶ ಬಂದ ತಕ್ಷಣ ಸೀದಾ ನನ್ನ ಗಾಡಿಯನ್ನು ಅತ್ತ ತಿರುಗಿಸಿದೆ. ನಾನು ಹೊರಡುವ ಮುನ್ನ ಸಂಪೂರ್ಣ ಮಾಹಿತಿ ಕಲೆಹಾಕಿ ಬಂದಿದ್ದರಿಂದ ನನಗೆ ಸಮಸ್ಯೆಯಾಗಲಿಲ್ಲ. ಮುಖ್ಯ ರಸ್ತೆಯಿಂದ ಮೂರ್ನಾಲ್ಕು ಕಿಲೋಮೀಟರ್ ದೂರ ಹೋದ ನಂತರ ಕಾಡು ಮತ್ತಷ್ಟು ದಟ್ಟವಾಯಿತು. ನನಗೆ ಅಚ್ಚರಿಯಾಗಿದ್ದೆಂದರೆ ಅಂತಹ ಪ್ರದೇಶದಲ್ಲಿ ನಕ್ಸಲ್ ನಿಗ್ರಹ ಪಡೆಯ ಒಬ್ಬೇ ಒಬ್ಬ ಸಿಬ್ಬಂದಿಯೂ ತಪಾಸಣೆ ಮಾಡುತ್ತಿಲ್ಲ ಎನ್ನುವುದು. ಒಂಟಿ ದಾರಿಯಲ್ಲಿ ನಾನೊಬ್ಬನೇ ಒಬ್ಬಂಟಿಯಾಗಿ ಮುಂದಕ್ಕೆ ಸಾಗುತ್ತಿದ್ದೆ. ಮತ್ತೊಂದು ಮೂರ್ನಾಲ್ಕು ಕಿಲೋಮೀಟರ್ ದೂರಕ್ಕೆ ಸಾಗಿದರೂ ಕೂಡ ಯಾರೊಬ್ಬರೂ ನನಗೆ ಕಾಣಿಸಲಿಲ್ಲ. ಹೀಗೆ ಸಾಗುತ್ತಿದ್ದಾಗ ಅಲ್ಲೊಂದು ಕಡೆ ಒಂದಷ್ಟು ಜನರು ನನ್ನನ್ನು ಅಡ್ಡಗಟ್ಟಿದರು. ಅವರ ಕೈಯಲ್ಲೆಲ್ಲ ಕತ್ತಿಗಳಿದ್ದವು, ಗುದ್ದಲಿ, ಪಿಕಾಸಿ ಮುಂತಾದ ಆಯುಧಗಳಿದ್ದವು. ನಾನು ಎದುರಿಗೆ ಕಂಡಿದ್ದೇ ತಡ ನನ್ನನ್ನು ಬೆನ್ನಟ್ಟಿ ಬಂದರು. ನನಗೆ ಒಮ್ಮೆಲೆ ಜೀವ ಕೈಗೆ ಬಂದಿತು. ಯಾರು ಇವರು, ನನ್ನ ಮೇಲೆ ಯಾವ ಕಾರಣಕ್ಕೆ ದಾಳಿ ಮಾಡುತ್ತಿದ್ದಾರೆ. ನಾನು ಏನಾದರೂ ತಪ್ಪು ಮಾಡಿದ್ದೇನಾ? ಅಥವಾ ನಕ್ಸಲರೇ ಈ ವೇಶ ತೊಟ್ಟುಕೊಂಡು ಬಂದಿದ್ದಾರಾ ಎಂದೆಲ್ಲ ಆಲೋಚಿಸಿದೆ.
           ನಾನು ಆ ಹಳ್ಳಿಯ ಹಾಳು ರಸ್ತೆಯಲ್ಲಿ ಅದೆಷ್ಟು ವೇಗವಾಗಿ ಗಾಡಿ ಓಡಿಸಿದ್ದೆ ಎಂದರೆ ಕೆಲವೇ ಕ್ಷಣಗಳಲ್ಲಿ ನಕ್ಸಲರ ವಿರುದ್ಧ ಕಾರ್ಯಾಚರಣೆ ನಡೆದ ಊರು ಸಿಕ್ಕಿತು. ಒಂದಿಬ್ಬರು ಹಿರಿಯರು ಅಲ್ಲಿನ ಮನೆಗಳ ಮುಮದೆ ಕುಳತಿದ್ದರು. ನಾನು ಅವರ ಬಳಿ ಹೋಗಿ ನನ್ನ ವಿಚಾರವನ್ನು ತಿಳಿಸಿದೆ. ನಾನು ಬಂದ ಕಾರಣವನ್ನೂ, ನನ್ನ ವಿವರವನ್ನೂ ಹೇಳಿದೆ. ಆ ಮನೆಗಳ ಮುಂದೆ ಕುಳಿತಿದ್ದ ಹಿರಿಯರು ನನ್ನ ಬಗ್ಗೆ ಮೊದಲಿಗೆ ಅನುಮಾನ ವ್ಯಕ್ತಪಡಿಸಿದರಾದರೂ ಕೊನೆಗೆ ನನ್ನನ್ನು ನಂಬಲು ಆರಂಭಿಸಿದರು. ಅಷ್ಟರಲ್ಲಿ ದಾರಿ ಮಧ್ಯದಲ್ಲಿ ನನಗೆ ಸಿಕ್ಕು, ನನ್ನನ್ನು ಅಡ್ಡಗಟ್ಟಿದ್ದ ಗುಂಪು ಅಲ್ಲಿಗೆ ಬಂದಿತು. ಬಂದವರೇ ಏಕಾಏಕಿ ನನ್ನ ಮೇಲೆ ಏರಿಬಂದರು. ಒಂದಿಬ್ಬರು ನಾಲ್ಕೇಟುಗಳನ್ನು ಬಿಗಿದೂ ಬಿಟ್ಟರು. ಹೊಡೆತ ತಿಂದ ನನಗೆ ಒಂದೆರಡು ಕಡೆ ಚಿಕ್ಕ ಗಾಯಗಳಾಗಿ ರಕ್ತವೂ ಒಸರಿತು. ಅಷ್ಟರಲ್ಲಿ ಅಲ್ಲೇ ಇದ್ದ ಒಬ್ಬ ಹಿರಿಯ ನನ್ನನ್ನು ರಕ್ಷಣೆ ಮಾಡಿದ. ಕೊನೆಗೆ ನಾನು ಹೇಳಿದ್ದ ನನ್ನ ವಿಷಯವನ್ನೇ ಆ ಗುಂಪಿನ ಮುಂದಕ್ಕೆ ತಿಳಿಸಿದ. ನಂತರವೇ ಅವರೆಲ್ಲ ನನ್ನ ಜೊತೆಗೆ ಸಮಾಧಾನದಿಂದ ಮಾತನಾಡಿದ್ದು.
           ನಾನು ಕೆಲವು ಪತ್ರಿಕೆಗಳಿಗೆ ಹವ್ಯಾಸಿಯಾಗಿ ಬರೆಯುತ್ತಿರುತ್ತೇನೆ. ಆ ವಿಷಯವನ್ನು ಅವರಿಗೆ ತಿಳಿಸಿದೆ. ಇದನ್ನು ಕೇಳಿದ್ದೇ ತಡ ನನ್ನ ಮೇಲೆ ಹಲ್ಲೆ ಮಾಡಿದ ಜನರು ಕಂಗಾಲಾಗಿಬಿಟ್ಟರು. ಏನೋ ಬಹುದೊಡ್ಡ ತಪ್ಪು ಮಾಡಿದ್ದೇವೆನ್ನುವಂತೆ ದಮ್ಮಯ್ಯ ಗುಡ್ಡೆ ಹಾಕಿದರು. ಅವರಲ್ಲೇ ಒಬ್ಬಾತ `ಅಲ್ಲಾ ಮಾರಾಯ್ರೆ.. ನೀವು ಪೇಪರ್ರಿನವರು ಅಂತ ಹೇಳುತ್ತೀರಿ.. ಅದೆಂತ ಆ ಪೊಲೀಸರ ಥರ ಬಟ್ಟೆ ಹಾಕಿಕೊಂಡು ಬರುವುದು..? ನಿಮ್ಮನ್ನು ಪೊಲೀಸರು ಅಂದುಕೊಂಡೆವಲ್ಲ ಮಾರಾಯ್ರೆ...' ಎಂದ. ನನಗೆ ಒಮ್ಮೆ ಗೊಂದಲ ಮೂಡಿತು. ಅರೇ ಒಂದು ವೇಳೆ ನಾನು ಪೊಲೀಸನೇ ಆಗಿದ್ದರೆ ನನಗೆ ಹೊಡೆಯುತ್ತಿದ್ದರೇ? ಕೇವಲ ಪೊಲೀಸರು ತೊಡುವ ಬಟ್ಟೆಯ ತರಹದ್ದೇ ಬಟ್ಟೆ ನಾನು ತೊಟ್ಟು ಬಂದಿದ್ದಕ್ಕೆ ಹೊಡೆಯುತ್ತಾರೆಂದರೆ ಏನೋ ಸಮಸ್ಯೆ ಇದೆ ಎನ್ನುವುದು ಗೊತ್ತಾಯಿತು.
           ನನಗೆ ಆಗ ಸಂಪೂರ್ಣ ಅರಿವಾಗಿದ್ದೆಂದರೆ ಖಯಾಲಿಗೆ ಬಿದ್ದು ಮಿಲಿಟರಿಯವರು ಹಾಕಿಕೊಳ್ಳುತ್ತಾರಲ್ಲ ಅದೇ ರೀತಿಯ ಒಂದು ಜರ್ಕೀನ್ ಹಾಕಿಕೊಂಡು ಬಂದಿದ್ದೆ. ಅದನ್ನು ನೋಡಿ ನಾನು ನಕ್ಸಲ್ ನಿಗ್ರಹ ಪಡೆಯ ಅಧಿಕಾರಿ ಎಂದುಕೊಂಡು ಹಲ್ಲೆ ಮಾಡಿದ್ದರು. ಆದರೆ ನನಗೆ ಅರಿವಾಗದೇ ಇದ್ದಿದ್ದು ಎಂದರೆ ಪೊಲೀಸರ ಮೇಲೆ ಇವರು ಯಾಕೆ ಹಲ್ಲೆ ಮಾಡಲು ಹೋಗಿದ್ದರು ಎನ್ನುವುದು. ಓಹೋ ಇದೇ ಕಾರಣಕ್ಕೆ ನಾನು ಬರುವ ದಾರಿಯಲ್ಲಿ ನಕ್ಸಲ್ ನಿಗ್ರಹ ಪಡೆಯ ಒಬ್ಬನೇ ಒಬ್ಬ ಸಿಬ್ಬಂದಿಯೂ ಕಾಣಿಸಲಿಲ್ಲ ಎಂದುಕೊಂಡೆ.
            ನನ್ನ ಮೇಲೆ ಹಲ್ಲೆ ಮಾಡಿದವರಲ್ಲೇ ಒಂದಿಬ್ಬರು ತಮ್ಮನ್ನು ಕ್ಷಮಿಸಿ ಎಂದು ಹೇಳಿದ್ದಷ್ಟೇ ಅಲ್ಲದೇ ನನ್ನ ಆದರಾತಿಥ್ಯಕ್ಕೆ ನಿಂತರು. ಹೊಡೆತ ತಿಂದಿದ್ದ ನೋವು ಮರೆಯುವಷ್ಟು ಪ್ರೀತಿಯಿಂದ ಮಾತನಾಡಿಸಿದರು. ಕೊನೆಗೆ ನಾನು ಎಲ್ಲರ ಬಳಿ ಮಾಹಿತಿ ಪಡೆಯಲು ಮುಂದಾದೆ. ಕಾಡು ತಿರುಗಿಸಿ ಎಂದೆ. ಗುಂಡಿನ ಕಾಳಗ ನಡೆದ ಸ್ಥಳವನ್ನು ನೋಡಬೇಕಲ್ಲ ಎಂದೂ ಹೇಳಿದೆ. ಎಲ್ಲರೂ ಮೌನವಹಿಸಿದರು. ಕೊನೆಗೆ ನಾನು ಸಾಕಷ್ಟು ಒತ್ತಾಯ ಮಾಡಿದ ನಂತರ ಒಂದಿಬ್ಬರು ಮಾತಿಗೆ ನಿಂತರು. ನಾನು ಚಕ್ಕನೆ ಅವರ ಪೋಟೋ ತೆಗೆದುಕೊಂಡೆ. ಅವರಲ್ಲೊಬ್ಬ `ಹೋಯ್.. ಇಲ್ಲಿ ಬನ್ನಿ ಮಾರಾಯ್ರೆ.. ನಾವು ಆ ಗುಂಡಿನ ಕಾಳಗ ನಡೆದ ಸ್ಥಳಕ್ಕೆ ಹೋಗಿ ಬರುವಾ.. ಆಮೇಲೆ ಎಲ್ಲ ಮಾಹಿತಿ ತಗೆದುಕೊಂಡರೆ ಆಯಿತು..' ಎಂದ. ನಾನು ಆತನನನ್ನು ಹಿಂಬಾಲಿಸಿದೆ.
            ದೊಡ್ಡದೊಂದು ಕಲ್ಲುಗುಡ್ಡ, ದೈತ್ಯ ಕಾನನಗಳು, ಗವ್ವೆನ್ನುವ ಕಾಡು, ಕಾಡುವ ವನ್ಯ ಜೀವಿಗಳು, ಎದೆಯೆತ್ತರದ ದರೆಗಳು.. ಬಹುಶಃ ಗುಂಡಿನ ಚಕಮಕಿ ನಡೆದ ಸ್ಥಳದ ಚಹರೆ ಹೀಗೆಯೇ ಇರಬೇಕೇನೋ ಎಂದುಕೊಂಡು ನಾನು ಆತನ ಹಿಂದಕ್ಕೆ ಹೆಜ್ಜೆ ಹಾಕುತ್ತಿದ್ದೆ. ಮಾತಿನ ನಡುವೆ ನನ್ನನ್ನು ಸ್ಥಳ ವೀಕ್ಷಣೆಗೆ ಕರೆದೊಯ್ಯುತ್ತಿದ್ದವರ ಬಳಿ `ಯಜಮಾನ್ರೆ.. ನಿಮ್ಮ ಹೆಸರೆಂತದ್ದು..?' ಎಂದು ಕೇಳಿದ್ದೆ.
            ತಕ್ಷಣವೇ ಆತ `ಹೋಯ್.. ನಿಮ್ಮದು ಶಿರಸಿಯಾ?' ಎಂದು ಕೇಳಿದವನೇ ತನ್ನ ಹೆಸರು ಕೃಷ್ಣ ಶೆಟ್ಟಿ ಎಂದೂ ತಿಳಿಸಿದ. ಊರಿನಲ್ಲಿ 25 ಮನೆಗಳಿವೆ. ಒಂದು ಶಾಲೆಯಿದೆ. ಎಂದೆಲ್ಲ ಹೇಳಿದವನು ಊರಿನ ಮಾಹಿತಿಯನ್ನು ಕೊಡುತ್ತ ಹೋದ. ಆತನ ಮಾತಿನ ಪ್ರಕಾರವೇ ಆ ಊರು ನಿಸರ್ಗದ ನಡುವೆಯಿದ್ದರೂ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಲೇ ಇದೆ. ನಾಗರಿಕ ಜಗತ್ತಿನ ಯಾವುದೇ ಸೌಲಭ್ಯಗಳು ಉರಿಗೆ ಸಿಗುತ್ತಿಲ್ಲ. ವಿದ್ಯುತ್, ರಸ್ತೆ, ದೂರವಾಣಿಗಳಿಂದ ಊರು ದೂರವಾಗಿದೆ. ಈ ಪ್ರದೇಶದಲ್ಲಿ ಹೇರಳ ನೀರಿದ್ದರೂ ಸದ್ಬಳಕೆ ಸಾಧ್ಯವಾಗುತ್ತಿಲ್ಲ. ಕಾಡಿನ ಕಾರಣ ವನ್ಯ ಮೃಗಗಳ ಹಾವಳಿ ಹೆಚ್ಚಿದೆ ಎನ್ನುವುದು ತಿಳಿಯಿತು.
            ಇಂತಹ ಊರಿನ ಸಮಸ್ಯೆ ಮುಂದಿಟ್ಟುಕೊಂಡು ನ್ಯಾಯ ಕೊಡಿಸುವ ಮಾತುಗಳನ್ನಾಡುತ್ತಲೇ ನಕ್ಸಲರು ಕಾಲಿಟ್ಟರು.  ಊರಿನಲ್ಲಿ ಒಂದೆರಡು ಜನ ಓದಿಕೊಂಡವರು ಅವರಿಗೆ ಸಹಾಯವನ್ನೂ ಮಾಡಿದರು. ಒಂದೆರಡು ಮೂರು ಸಾರಿ ಊರಿನಲ್ಲಿಯೇ ನಕ್ಸಲರ ಸಭೆಗಳೂ ನಡೆದವು ಎನ್ನುವ ಮಾಹಿತಿಯನ್ನೂ ಕೃಷ್ಣಯ್ಯ ಶಟ್ಟರು ನೀಡಿದರು. ಹೀಗೆಂದವರೇ `ಈ ನಕ್ಸಲರು ಬಂದಿದ್ದರಿಂದಲೇ ನಮ್ಮೂರಿನ ಶಾಂತಿ-ನೆಮ್ಮದಿಗಳು ಕಳೆದು ಹೋದವು. ಅವರ ಹಿಂದೆ ನಕ್ಸಲ್ ನಿಗ್ರಹ ಪಡೆಯವರೂ ಬಂದವು. ಬೆನ್ನು ಬೆನ್ನಿಗೆ ಗುಂಡಿನ ಕಾಳಗಗಳೂ ನಡೆಯಲು ಆರಂಭಿಸಿದವು. ಇವರು ಅವರನ್ನು ಬೆನ್ನಟ್ಟುವುದು, ಅವರು ಇವರನ್ನು ಅಟ್ಟಿಸಿಕೊಂಡು ಹೋಗುವುದು ನಡೆಯಿತು. ಹೀಗಿದ್ದಾಗಲೇ ಒಂದು ಸಾರಿ ನಕ್ಸಲರು ನಮ್ಮೂರಲ್ಲೇ ಪಕ್ಕದ ಮನೆಯ ಒಬ್ಬರನ್ನು ಕೈ ಕತ್ತರಿಸಿದ್ದರು. ಕಾರಣ ಕೇಳಿದಾಗ ನಕ್ಸಲ್ ನಿಗ್ರಹ ಪಡೆಗೆ ಮಾಹಿತಿ ರವಾನೆ ಮಾಡುತ್ತಿದ್ದರು ಎಂದು ಹೇಳಿದರು. ನೆಮ್ಮದಿಯಿಂದ ನಮ್ಮೂರು ಭಯ-ಭೀತಿಯಿಂದ ಬಸವಳಿದಿದ್ದೇ ಆವಾಗ.. ಈ ಊರು ನಮಗೀಗ ಸಾಕೆನ್ನಿಸಿಬಿಟ್ಟಿದೆ.. ನೋಡಿ..' ಎಂದಿದ್ದರು. ನಾನು ಮೌನದಿಂದ ಅವರ ಮಾತನ್ನು ಆಲಿಸತೊಡಗಿದ್ದೆ.
           `ಕಳೆದೊಂದು ವರ್ಷದಿಂದ ಇದೇ ಆಗಿಬಿಟ್ಟಿದೆ ನೋಡಿ. ಇದ್ದೊಂದು ಶಾಲೆಯೂ ಮುಚ್ಚಿ ಹೋಗಿದೆ. ಶಾಲೆ ಕಲಿಸಲು ಬರುತ್ತಿದ್ದ ಶಿಕ್ಷಕರು ಹೆದರಿಕೊಂಡು ಈ ಊರಿನಿಂದಲೇ ವರ್ಗ ಮಾಡಿಸಿಕೊಂಡು ಹೋಗಿದ್ದಾರೆ. ಕಾಡಿನ ಮಧ್ಯ ಆರಾಮಾಗಿ ಬದುಕುತ್ತಿದ್ದವರು ರಾತ್ರಿ ಹಗಲು ಎನ್ನದೇ ಗುಂಡಿನ ಸದ್ದನ್ನು ಕೇಳುವಂತಾಗಿದೆ ನೋಡಿ.. ಯಾಕಾದರೂ ಹೀಗಾಗುತ್ತದೆಯೋ ಎಂದುಕೊಂಡರೆ ಅದೋ ನಿನ್ನೆ ಬೇರೆ ಗುಂಡಿನ ಚಕಮಕಿಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಎರಡು ಪ್ರದೇಶಗಳಲ್ಲಿ ಗುಂಡಿನ ಕಾಳಗ ನಡೆದಿದೆ. ಪೊಲೀಸರಿಗೂ ಗುಮಡು ತಾಗಿದೆ...' ಎಂದು ಹೇಳುವಷ್ಟರಲ್ಲಿ ಚಿಕ್ಕದೊಂದು ಗದ್ದೆ ಬಯಲು ಸಿಕ್ಕಿತು. ಶೆಟ್ಟರು ಅಲ್ಲಿಯೇ ಒಂದು ಕಡೆ ಕರೆದೊಯ್ದು ನಿಲ್ಲಿಸಿ `ಇದೇ ಜಾಗ ನೋಡಿ..' ಎಂದರು.
            `ನಾನು ಸುತ್ತಮುತ್ತ ಹುಡುಕಾಡಿದೆ. ಗುಂಡಿನ ಕಾಳಗ ನಡೆಯುವ ಸ್ಥಳ ಹಾಗಿರುತ್ತದಂತೆ ಹೀಗಿರುತ್ತದಂತೆ ಎಂದೆಲ್ಲ ಕೇಳಿದವನನ್ನು ಗದ್ದೆ ಬಯಲಿನಲ್ಲಿ ನಿಲ್ಲಿಸಿ ಇಗೋ ಇಲ್ಲಿದೆ ನೋಡಿ ಎಂದು ತೋರಿಸುತ್ತಿದ್ದರೆ ಜಾಗವನ್ನು ನೋಡಿದ ನನಗೆ ಭ್ರಮನಿರಸನವಾಗಿತ್ತು. `ಎಲ್ಲಿ..?' ಎಂದೆ.. ಕೆಳಗೆ ತೋರಿಸಿ `ಇದೇ ನೋಡಿ ಇಲ್ಲೇ ಒಬ್ಬನು ಸತ್ತಿದ್ದು, ನಕ್ಸಲ್ ನಿಗ್ರಹ ಪಡೆಯ ಗುಂಡಿಗೆ ಬಲಿಯಾಗಿದ್ದು..' ಎಂದ. ಅಲ್ಲೊಂದಷ್ಟು ಹೊಂಡಗಳು ಬಿದ್ದಿದ್ದವು. ರಕ್ತ ಕೂಡ ಬಿದ್ದಿತ್ತು. ಮಹಜರು ಮಾಡಿದಂತಹ ಗುರುತುಗಳಿದ್ದವು. ನಾನು ನೋಡಿ ಚಕಚಕನೆ ಪೋಟೋ ಕ್ಲಿಕ್ಕಿಸತೊಡಗಿದೆ. ಶೆಟ್ಟರು ಜಾಗ ತೋರಿಸುತ್ತ ನಿಂತಿದ್ದರು. `ಅದು ಸರಿ  ಶೆಟ್ಟರೆ.. ಈ ಬಗ್ಗೆ ಹೆಚ್ಚಿನ ಮಾಹಿತಿ ಕೊಡಿ..' ಎಂದವನೇ `ನನಗೆ ಇನ್ನೂ ಅರ್ಥ ಆಗದೇ ಇದ್ದಿದ್ದು ಅಂದರೆ ನೀವೆಲ್ಲ ಯಾಕೆ ನನ್ನನ್ನು ಹಲ್ಲೆ ಮಾಡಲು ಯತ್ನಿಸಿದ್ದು? ಕೊನೆಗೆ ಕೇಳಿದಾಗ ಪೊಲೀಸರು ಎನ್ನುವ ಗುಮಾನಿ ಮೇಲೆ ಹಲ್ಲೆಗೆ ಯತ್ನಿಸಿದೆ ಎಂದರಲ್ಲ? ಅಂತದ್ದೆಂತಹ ಕಾರಣ ಇದೆ? ಪೊಲೀಸರು ಏನಾದರೂ ಮಾಡಿದ್ದಾರಾ ನಿಮಗೆ..? ಏನೋ ಗೊಂದಲವಾಗುತ್ತಿದೆಯಲ್ಲ..? ಏನದು ಹೇಳಿ... ಬಿಡಿಸಿ ಹೇಳಿ..' ಎಂದೆ.
          ಕೃಷ್ಣ ಶೆಟ್ಟರು ನಿಧಾನವಾಗಿ ಹೇಳುತ್ತ ಹೋದರು. ಕೇಳುತ್ತಿದ್ದ ನಾನು ಮೈತುಂಬ ಬೆವರುತ್ತ ನಿಂತೆ. ಮನಸ್ಸಿನಲ್ಲಿ ಏನೋ ತಳಮಳ ಶುರುವಾಯಿತು.

***
         ಅಪ್ಪು ಶೆಟ್ಟರು ನಮ್ಮೂರಿನವರೇ. ಮೂಲ ಕುಂದಾಪುರ. ಇಲ್ಲಿಗೆ ಬಂದು ಉಳಿದಿದ್ದಾರೆ. ಇಲ್ಲಿಗೆ ಬಂದ ಮೇಲೆ ಅವರ ಅದೃಷ್ಟ ಖುಲಾಯಿಸಿ ಒಂದೆಕರೆ ಜಮೀನು ಮಾಡಿಕೊಂಡಿದ್ದಾರೆ. ಜಮೀನಿನಲ್ಲಿ ತೆಂಗು, ಅಡಿಕೆ ಮರಗಳಿವೆ. ಒಳ್ಳೆಯ ಫಸಲು ಕೂಡ ಬರುತ್ತಿದೆ. ಹಾಗೆ ನೋಡಿದರೆ ನಮ್ಮೂರಲ್ಲಿ ಅಪ್ಪು ಶೆಟ್ಟರೇ ಎಲ್ಲರಿಗಿಂತ ಸ್ವಲ್ಪ ಅನುಕೂಲಸ್ಥರು ಎನ್ನಬಹುದು. ಇವರ ಒಬ್ಬನೇ ಮಗ ನಿರಂಜನ. ಈ ನಿರಂಜನ ಇದ್ದಾನಲ್ಲ ಅವನೆಂದರೆ ಎಲ್ಲರಿಗೂ ಅಚ್ಚುಮೆಚ್ಚು. ಊರಿನವರಿಗೆ ಪ್ರೀತಿ ಪಾತ್ರನಾಗಿ ಬದುಕಿದವನು ನಿರಂಜನ. ನಮ್ಮೂರಿನಲ್ಲಿ ಮೊಟ್ಟ ಮೊದಲು ಕಾಲೇಜು ಮೆಟ್ಟಿಲು ಹತ್ತಿದವನೆಂದರೆ ಇದೇ ನಿರಂಜನನೇ. ನಮ್ಮೂರಿನಿಂದಲೇ ಪ್ರತಿದಿನ ಕಷ್ಟಪಟ್ಟು ಕಾಲೇಜಿಗೆ ಹೋಗಿ ಬಂದು ಮಾಡುತ್ತಿದ್ದ. ಇದು ಮೂರ್ನಾಲ್ಕು ವರ್ಷದ ಹಿಂದಿನ ಮಾತು. ಆಮೇಲೆ ಕಾಲೇಜು ಮುಗಿಯಿತು. ಅಪ್ಪು ಶೆಟ್ಟರ ಅಣತಿಯಂತೆ ಕಾಲೇಜು ಮುಗಿದ ಮೇಲೆ ಮನೆಯಲ್ಲೇ ಉಳಿದು ಜಮೀನು ನೋಡಿಕೊಳ್ಳುವ ಕಾಯಕದಲ್ಲಿ ನಿರತನಾಗಿದ್ದ.
           ಹೀಗಿದ್ದಾಗಲೇ ನಮ್ಮೂರಿಗೆ ನಕ್ಸಲರು ಮೊದಲು ಕಾಲಿರಿಸಿದರು. ಯಾವು ಯಾವುದೋ ಸಮಸ್ಯೆಗಳು, ಕಾರಣಗಳನ್ನು ಮುಂದಿಟ್ಟುಕೊಂಡು ನಮ್ಮೂರಿನ ಸುತ್ತಮುತ್ತ ಒಡಾಡತೊಡಗಿದವರು ನಕ್ಸಲರು. ಇವರನ್ನು ಮೊಟ್ಟ ಮೊದಲ ಬಾರಿಗೆ ವಿರೋಧಿಸಿದವನೇ ನಮ್ಮ ನಿರಂಜನ. ನಮ್ಮೂರಿನಲ್ಲಿ ನಿರಂಜನ ಕಾಲೇಜು ಮೆಟ್ಟಿಲು ಹತ್ತಿದ ನಂತರ ನಾಲ್ಕಾರು ಜನ ಹುಡುಗರು ಕಾಲೇಜಿನಲ್ಲಿ ಓದಿದ್ದಾರೆ. ಆದರೆ ಅವರೆಲ್ಲ ನಕ್ಸಲರ ಮರುಳು ಮಾತಿಗೆ ಬಲಿಯಾಗಿ ಅವರ ಜೊತೆಗೆ ಹೊರಟು ನಿಂತಿದ್ದಾಗ ನಿರಂಜನನೇ ತಡೆದಿದ್ದ. ಒಂದೆರಡು ಸಾರಿ ನಿರಂಜನನಿಗೂ ಹಾಗೂ ನಕ್ಸಲರ ಗುಂಪಿನ ನಡುವೆಯೂ ಘರ್ಷಣೆಗಳಾಗಿದ್ದವು. ನಕ್ಸಲರು ಬಂದು ಒಂದೆರಡು ಸಾರಿ ನಿರಂಜನನನ್ನು ಕೊಲ್ಲುವುದಾಗಿ ಬೆದರಿಕೆಯನ್ನೂ ಹಾಕಿ ಹೋಗಿದ್ದರು. ಆದರೆ ನಿರಂಜನ ಅದಕ್ಕೆ ಸೊಪ್ಪು ಹಾಕಿರಲಿಲ್ಲ.
           ನಮ್ಮೂರಲ್ಲಿ ಇರುವ ಏಕೈಕ ಶಾಲೆಗೆ ಶಿಕ್ಷಕರ ಕೊರತೆ ಮೊದಲಿನಿಂದಲೂ ಇದೆ. ಕಾಡಿನ ನಡುವೆ ಇರುವ ಈ ಶಾಲೆಗೆ ಶಿಕ್ಷಕರು ವರ್ಗವಾಗಿ ಬಂದರೂ ಮೂರು ತಿಂಗಳಿಗಿಂತ ಹೆಚ್ಚಿನ ಕಾಲ ಇರುವುದೇ ಇಲ್ಲ. ಕಾಡು ಹಾಗೂ ಕೊಂಪೆಯ ಕಾರಣ ಶಿಕ್ಷಕರು ಇಲ್ಲಿಂದ ಕಾಲ್ಕಿತ್ತಿದ್ದೇ ಹೆಚ್ಚು. ಹೊರ ಜಗತ್ತಿನ ಸಂಪರ್ಕವಿಲ್ಲ. ಆಧುನಿಕ ಯಂತ್ರಗಳಿಲ್ಲ. ದೂರವಾಣಿಯಿಲ್ಲ. ವಿದ್ಯುತ್ ಕೂಡ ಕಂಬ, ತಂತಿಗಳಿವೆ. ಆದರೆ ಆಗೀಗ ವಿದ್ಯುತ್ ಬಂದರೆ ಬಂದೀತು ಅಷ್ಟೆ ಎನ್ನುವಂತಹ ವಾತಾವರಣ.ಇಂತಹ ಊರಿನಲ್ಲಿ ಯಾವ ಮಾಸ್ತರ್ರು ಉಳಿಯುತ್ತಾರೆ ಹೇಳಿ. ಮಾಸ್ತರ್ ಊರು ಬಿಟ್ಟರೆ ನಿರಂಜನನಿಗೆ ಶಾಲೆಯ ಕೆಲಸ. ಆತನೇ ಮಕ್ಕಳನ್ನು ಕೂರಿಸಕೊಂಡು ವಿದ್ಯೆ ಕಲಿಸುವ ಕಾರ್ಯ ಮಾಡುತ್ತಿದ್ದ.
            ಹೀಗಿದ್ದಾಗ ನಕ್ಸಲರ ಕಾರುಬಾರು ನಮ್ಮೂರಲ್ಲಿ ಜೋರಾಯಿತು. ನಮ್ಮೂರಿನ ಒಂದೆರಡು ಮನೆಗಳವರು ಆಂತರಿಕವಾಗಿ ನಕ್ಸಲರಿಗೆ ಬೆಂಬಲವನ್ನೂ ನೀಡಲು ಆರಂಭಿಸಿದರು. ಹೀಗಿದ್ದಾಗ ಒಂದು ಸಾರಿ ನಕ್ಸಲರು ನಮ್ಮೂರಿನ ಶಾಲೆಯ ಆವರಣದಲ್ಲಿಯೇ ಸಭೆಯೊಂದನ್ನು ನಡೆಸಿದ್ದರು. ಇದರಿಂದ ಸಿಟ್ಟಾಗಿದ್ದ ನಿರಂಜನ ನಕ್ಸಲರನ್ನು ಊರಿಗೆ ಬರದಂತೆ ಮಾಡಲು ಚಿಂತಿಸಿ ನಕ್ಸಲ್ ನಿಗ್ರಹ ಪಡೆಗೆ ಮಾಹಿತಿ ನೀಡಿದ್ದ. ಬಹುಶಃ ನಿರಂಜನ ಹೇಳಿದ ನಂತರವೇ ಇರಬೇಕು ನಮ್ಮೂರಿಗೆ ನಕ್ಸಲ್ ನಿಗ್ರಹ ಪಡೆ ಕಾಲಿರಿಸಿದ್ದು. ಆನಂತರದ ದಿನಗಳಲ್ಲಿ ನಮ್ಮೂರು ದಿನವಹಿ ಗುಂಡಿನ ಕಾಳಗದ ಸದ್ದು ಕೇಳುವಂತಾಗಿದ್ದು.
          ನಕ್ಸಲ್ ನಿಗ್ರಹ ಪಡೆಯೇನೋ ಬಂದಿತು. ಅವರ ಹಿಂದೆ ಸಾಲು ಸಾಲು ಅಧಿಕಾರಿಗಳು ಬಂದರು. ಅಧಿಕಾರಿಗಳ ಎದುರು ನಿರಂಜನ ನಮ್ಮೂರಿನ ಸಮಸ್ಯೆಗಳ ಕುರಿತು ತಿಳಿಸುತ್ತಲೇ ಹೋದ. ಅರ್ಜಿಗಳ ಮೇಲೆ ಅರ್ಜಿ ಕೊಡುತ್ತಲೇ ಹೋದ. ಆದರೆ ಆ ಅರ್ಜಿಗಳಿಗೆ ಯಾವುದೇ ಪುರಸ್ಕಾರ ಸಿಗಲಿಲ್ಲ. ಅವೆಲ್ಲಿ ಹೋದವೋ ಅರ್ಥವಾಗಲಿಲ್ಲ. ಒಂದು ಹಂತದಲ್ಲಿ ನಿರಂಜನ ರೋಸಿ ಹೋಗಿದ್ದಂತೂ ಹೌದು. ಹೀಗಿದ್ದಾಗಲೇ ನಿರಂಜನನ ಕಣ್ಣಿಗೆ ಒಂದು ದೊಡ್ಡ ಅಪರಾಧ ಜಗತ್ತು ಕಣ್ಣುಬಿಟ್ಟಿತ್ತು.
          ಊರಿಗೆ ಬಂದಿದ್ದ ನಕ್ಸಲ್ ನಿಗ್ರಹ ಪಡೆ ಕೇವಲ ನಕ್ಸಲರನ್ನು ಹೆಡೆಮುರಿ ಕಟ್ಟುವ ಕಾರ್ಯ ಮಾತ್ರ ಮಾಡುತ್ತಿರಲಿಲ್ಲ. ಬದಲಾಗಿ ಊರಿನಲ್ಲಿ ಇಲ್ಲ ಸಲ್ಲದ ಕಾರ್ಯಗಳಲ್ಲಿ ಅದು ತೊಡಗಿಕೊಳ್ಳಲಾರಂಭಿಸಿತು. ಹಲವಾರು ಅಪರಾಧಿ ಕಾರ್ಯಗಳನ್ನು ನಡೆಸಲು ಶುರುಮಾಡಿತು. ಅದೊಂದು ದಿನ ನಿರಂಜನ ಕಣ್ಣಿಗೆ ಈ ಚಟುವಟಿಕೆಗಳು ಬಿದ್ದವು.
         ನಮ್ಮೂರಿನ ಫಾಸಲೆಯಲ್ಲಿ ಆಯುರ್ವೇದ ಗಿಡಮೂಲಿಕೆಗಳು ಹೇರಳವಾಗಿದೆ. ನಿರಂಜನನೇ ಹೇಳಿದಂತೆ ಜಗತ್ತಿನ ಯಾವ ಮೂಲೆಯಲ್ಲೂ ದೊರಕದಂತಹ ಅಪರೂಪದ ವನಸ್ಪತಿಗಳು ಇಲ್ಲಿ ಸಿಗುತ್ತವಂತೆ. ಆತ ಹೇಳಿ ಖುಷಿಪಟ್ಟಿದ್ದ. ನಾವೂ ಒಂದು ರೀತಿಯಲ್ಲಿ ಹೆಮ್ಮೆ ಪಟ್ಟುಕೊಂಡಿದ್ದೆವು. ನಕ್ಸಲ್ ನಿಗ್ರಹ ಪಡೆ ಇಲ್ಲಿಗೆ ಬಂದಿತ್ತಲ್ಲ. ಬಂದ ಒಂದೆರಡು ತಿಂಗಳ ಕಾಲ ಸುಮ್ಮನಿತ್ತು. ಕೇವಲ ನಕ್ಸಲ್ ನಿಗ್ರಹದ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿತ್ತು. ಆದರೆ ಕಾಲಕ್ರಮೇಣ ಈ ಪಡೆಯ ಬೇರೆ ಕೆಲಸಗಳೂ ಆರಂಭಗೊಂಡವು. ಪಡೆಯಲ್ಲಿದ್ದ ಒಂದೆರಡು ಅಧಿಕಾರಿಗಳು ನಿಧಾನವಾಗಿ ನಮ್ಮೂರಿನಲ್ಲಿ ಸಿಗುತ್ತಿದ್ದ ಆಯುರ್ವೇದ ಔಷಧಿಗಳನ್ನು ಕದ್ದು ಮಾರತೊಡಗಿದರು. ಮೊದ ಮೊದಲಿಗೆ ಒಂದೊಂದೇ ಗಿಡ ಕಿತ್ತು ಒಯ್ಯಲು ಆರಂಭಿಸಿದ ಅವರು ನಂತರ ತಮ್ಮ ಜೀಪು ಹೊರಟಾಗಲೆಲ್ಲ ರಾಶಿ ರಾಶಿಗಟ್ಟಲೆ ಔಷಧಿಗಳನ್ನು ಒಯ್ಯ ತೊಡಗಿದ್ದರು. ನಿರಂಜನನ ಕಣ್ಣಿಗೆ ಇದು ಬಿದ್ದಿದ್ದು ಅದೊಂದು ದಿನ.
           ವಿಷಯ ಗೊತ್ತಾದ ನಂತರ ನಿರಂಜನ ನಕ್ಸಲ್ ನಿಗ್ರಹ ಪಡೆಯ ಈ ಕಾರ್ಯವನ್ನು ವಿರೋಧಿಸಿದ. ನಕ್ಸಲ್ ನಿಗ್ರಹ ಪಡೆಯ ಅಧಿಕಾರಿಗಳ ಬಳಿ ಮಾತನಾಡಿದ. ಅವರು ಮಾಡುತ್ತಿದ್ದ ಈ ಕಾರ್ಯದ ವಿರುದ್ಧ ಸೂಕ್ಷ್ಮವಾಗಿ ಎಚ್ಚರಿಕೆಯನ್ನೂ ನೀಡಿದ. ಪರಿಣಾಮವಾಗಿ ಆಯುರ್ವೇದ ಔಷಧಿ ಕದ್ದು ಮಾರಾಟ ಮಾಡುವುದು ನಿಲ್ಲುವುದಕ್ಕಿಂತ ಹೆಚ್ಚಾಗಿ ನಿರಂಜನನ ವಿರುದ್ಧ ಅಧಿಕಾರಿಗಳು ಸಿಟ್ಟಾದರೆ ಎಂದೇ ಹೇಳಬಹುದು. ಆಯುರ್ವೇದ ಔಷಧಿಗಳನ್ನು ಅಧಿಕಾರಿಗಳು ಕದ್ದೊಯ್ಯುತ್ತಿದ್ದ ಸಂದರ್ಭದಲ್ಲಿ ಒಂದೆರಡು ಬಾರಿ ಅವರನ್ನು ಅಡ್ಡಗಟ್ಟಿ ಹಿಡಿದ. ಆ ನಂತರವಂತೂ ಆ ಅಧಿಕಾರಿಗಳ ಸಿಟ್ಟು ತಾರಕಕ್ಕೆ ಏರಿತು ಎಂದೇ ಹೇಳಬಹುದು.
             ಹೀಗಿದ್ದಾಗ ಈಗೊಂದು ನಾಲ್ಕು ದಿನಗಳ ಹಿಂದೆ ನಮ್ಮೂರ ಫಾಸಲೆಯಲ್ಲಿ ನಕ್ಸಲರು ಕಾಣಿಸಿಕೊಂಡರು. ಆ ವಿಷಯ ನಕ್ಸಲ್ ನಿಗ್ರಹ ಪಡೆಗೆ ತಿಳಿಯಿತು. ಅವರು ಬಂದು ಇಲ್ಲಿ ಕೂಂಬಿಂಗ್ ಮಾಡತೊಡಗಿದರು. ಬಂದವರು ತಮಗೆ ಬೇಕಾದ ಆಯುರ್ವೇದ ಔಷಧಿಗಳನ್ನು ಸಂಗ್ರಹ ಮಾಡಲು ಆರಂಭಿಸಿದರು. ನಿರಂಜನನಿಗೂ ಇದು ತಿಳಿಯಿತು. ಆತ ಅವರನ್ನು ತಡೆಯಲು ಇದೇ ಗದ್ದೆ ಬಯಲಿಗೆ ಬಂದಿದ್ದ. ಹೀಗಿದ್ದಾಗಲೇ ನಿಗ್ರಹ ಪಡೆಯ ಕಣ್ಣಿಗೆ ನಕ್ಸಲರು ಕಾಣಿಸಿಕೊಂಡಿದ್ದರು. ಅದೋ ನೋಡಿ ಎಂದು ಕೃಷ್ಣ ಶೆಟ್ಟರು ನನಗೆ ತೋರಿಸಿದರು. ಒಂದಷ್ಟು ಮರಗಳಿದ್ದ ಜಾಗ ಕಾಣಿಸಿತು. ಅಲ್ಲೇ ನಕ್ಸಲರು ಕಣ್ಣಿಗೆ ಬಿದ್ದಿದ್ದು. ಅದೇ ಸಂದರ್ಭದಲ್ಲಿ ಫೈರಿಂಗ್ ಕೂಡ ಶುರುವಾಯಿತು. ಇತ್ತಂಡಗಳೂ ಗುಂಡಿನ ಚಕಮಕಿ ನಡೆದೇ ಬಿಟ್ಟವು.
           ಹೀಗಿದ್ದಾಗಲೇ ಅದ್ಯಾವನೋ ಒಬ್ಬ ಅಧಿಕಾರಿಗೆ ನಿರಂಜನನ ವಿರುದ್ಧ ಭಾರಿ ಸಿಟ್ಟಿತ್ತು. ತಾವು ಆಯುರ್ವೇದ ಔಷಧಿ ಮಾರುವುದನ್ನು ತಡೆಯುತ್ತಾನಲ್ಲ. ಈತನಿಗೊಂದು ಗತಿ ಕಾಣಿಸಬೇಕು. ಮೇಲಧಿಕಾರಿಗಳಿಗೆ ಕಂಪ್ಲೇಂಟ್ ಮಾಡುವ ಇವನನ್ನು ಮಟ್ಟ ಹಾಕಬೇಕು ಎಂದುಕೊಂಡ ಆತ ಏಕಾ ಏಕಿ ನಿರಂಜನನ ಮೇಲೆ ಗುಂಡು ಹಾರಿಸಿಬಿಟ್ಟ.. ಒಂದೇ ಗುಂಡು ನಿಂರಜನನ ಪ್ರಾಣ ಪಕ್ಷಿ ಹಾರಿಹೋಗಿತ್ತು.. ಎಂದವರೇ ಕೃಷ್ಣ ಶೆಟ್ಟರು ಕಣ್ಣೀರುಗರೆಯಲು ಆರಂಭಿಸಿದರು.
         ನನಗೆ ಆಘಾತವಾಗಿತ್ತು. ಟಿವಿ ಚಾನಲ್ ಬಿತ್ತರಿಸಿದ ವರದಿಯಲ್ಲಿ ಇಬ್ಬರು ನಕ್ಸಲರು ಸತ್ತಿದ್ದಾರೆ ಎಂದಿತ್ತು. ಆದರೆ ಇಲ್ಲಿ ಸತ್ತ ಇಬ್ಬರ ಪೈಕಿ ಒಬ್ಬ ನಿರಪರಾಧಿ. ನಕ್ಸಲನೇ ಅಲ್ಲ. ಒಬ್ಬ ನಕ್ಸಲನನ್ನು ಪೊಲೀಸರು ಕೊಂದಿದ್ದು ಖರೆಯಾಗಿದ್ದರೂ ಇನ್ನೊಬ್ಬನನ್ನು ಬೇಕಂತಲೇ ಹತ್ಯೆ ಮಾಡಿದ್ದರು. ಛೇ ಹೊರ ಜಗತ್ತಿನಲ್ಲಿ ಸುಳ್ಳು ಸುದ್ದಿ ಬಿತ್ತರವಾಗುತ್ತಿದೆಯಲ್ಲ.. ಎಂದುಕೊಂಡು ಚಡಪಡಿಸಿದೆ.
         ಸಾವರಿಸಿಕೊಂಡ ಕೃಷ್ಣ ಶೆಟ್ಟರು ಮಾತು ಮುಂದುವರಿಸಿದರು. ನಕ್ಸಲ್ ನಿಗ್ರಹ ಪಡೆಯವರೇ ನಿರಂಜನನ್ನು ಹತ್ಯೆ ಮಾಡಿದರು ಎನ್ನುವ ಸುದ್ದಿ ಊರಿನ ತುಂಬ ಕಾಡ್ಗಿಚ್ಚಿನಂತೆ ಹಬ್ಬಿತು. ನಾವೆಲ್ಲ ಬಂದು ಸೇರುವ ಹೊತ್ತಿಗೆ ಪಡೆಯವರು `ನಕ್ಸಲರೇ ಈತನನ್ನು ಹತ್ಯೆ ಮಾಡಿದ್ದಾರೆ..' ಎಂದು ಹಬ್ಬಿಸಲು ನೋಡಿದರು. ಆದರೆ ನಾವು ನಂಬಲಿಲ್ಲ. ನಮ್ಮೂರಿಗರು ನಕ್ಸಲ್ ನಿಗ್ರಹ ಪಡೆಯ ವಿರುದ್ಧ ಸಿಟ್ಟಿಗೆದ್ದರು. ತಕ್ಷಣವೇ ಮನೆ ಮನೆಯ ಜನರೆಲ್ಲ ಸಿಡಿದೆದ್ದರು. ಕೈಗೆ ಸಿಕ್ಕ ಆಯುಧಗಳನ್ನು ತಂದು ನಕ್ಸಲ್ ನಿಗ್ರಹ ಪಡೆಯ ಮೇಲೆ ಎರಗಿ ಬಿದ್ದರು. ಒಂದಿಬ್ಬರು ನಮ್ಮ ಕೈಲಿ ಏಟನ್ನೂ ತಿಂದರು. ನಾವು ಯಾವಾಗ ತಿರುಗಿಬಿದ್ದೆವೋ ಆಗ ನಮ್ಮೂರನ್ನು ಬಿಟ್ಟ ಹೋದವರು ಇದುವರೆಗೂ ಮರಳಿಲ್ಲ ನೋಡಿ. ಅದಕ್ಕೇ ನೀವು ಬಂದಿದ್ದನ್ನು ನೋಡಿ ನಕ್ಸಲ್ ನಿಗ್ರಹ ಪಡೆಯ ಅಧಿಕಾರಿಗಳೇ ಮತ್ತೆ ಬಂದರೇನೋ ಎಂದು ನಾವು ಹಲ್ಲೆಗೆ ಮುಂದಾಗಿದ್ದು ಎಂದರು ಕೃಷ್ಣ ಶೆಟ್ಟರು.
          ನಾನು ಮೌನವಾಗಿ ನಿಂತಿದ್ದೆ. ನಮ್ಮೂರಿನ ಎಲ್ಲರ ಕನಸಿನಂತೆ ಬತ್ತದ ಚಿಲುಮೆಯಂತೆ ಇದ್ದ ನಿರಂಜನ. ಅಪ್ಪು ಶೆಟ್ಟರ ಏಕೈಕ ಮಗ. ಪಾ..ಪ ಅವರು ಈಗ ಹಾಸಿಗೆ ಹಿಡಿದು ಕುಳಿತಿದ್ದಾರೆ. ನಾಲ್ಕು ದಿನದ ಹಿಂದೆ ನಡೆದ ಈ ಘಟನೆ ನನಗೆ ಇನ್ನೂ ಕಣ್ಣ ಮುಂದೆ ಇದೆ. ಇನ್ನೂ ಇಪ್ಪತ್ತೈದು ಮೀರಿರಲಿಲ್ಲ. ಮದುವೆ ಮಕ್ಕಳನ್ನು ಕಾಣಬೇಕಿದ್ದ ಆತ. ಅನ್ಯಾಯ ತಡೆಯಲು ಹೋಗಿ ತಾನೇ ಅನ್ಯಾಯವಾಗಿ ಹತ್ಯೆಯಾಗಿದ್ದ. ನಕ್ಸಲರನ್ನು ನಿಗ್ರಹಿಸಬೇಕಿದ್ದವರು ನಿರಂಜನನ್ನು ಹತ್ಯೆ ಮಾಡಿದ್ದರು. ಆ ದಿನ ನಾವು ಗಲಾಟೆ ಮಾಡಿದ ನಂತರದಿಂದ ಇದುವರೆಗೂ ನಿಮ್ಮನ್ನು ಹೊರತು ಪಡಿಸಿದರೆ ಬೇರೆ ಯಾರೊಬ್ಬರೂ ಬರಲಿಲ್ಲ. ನಕ್ಸಲ್ ನಿಗ್ರಹ ಪಡೆಯವರು ಹಾಗಿರಲಿ ಆವತ್ತು ಓಡಿ ಹೋದ ನಕ್ಸಲರು ಇಂದಿನವರೆಗೆ ಈ ಕಡೆಗೆ ಬಂದಿಲ್ಲ ನೋಡಿ. ಬಂದರೆ ಅವರಿಗೂ ಗತಿ ಕಾಣಿಸುತ್ತೇವೆ.. ಎಂದರು ಕೃಷ್ಣ ಶೆಟ್ಟರು.
           ನಿಧಾನವಾಗಿ ಮರಳಿದ ನಾವು ಅಪ್ಪು ಶೆಟ್ಟರನ್ನು ನೋಡಿದೆ. ಹಾಸಿಗೆಯಲ್ಲಿ ಈಗಲೋ ಆಗಲೋ ಎನ್ನುವಂತೆ ಮಲಗಿದ್ದರು. ಮಗನನ್ನು ಕಳೆದುಕೊಂಡಿದ್ದ ದುಃಖ ಅವರನ್ನು ಬಾಧಿಸುತ್ತಿತ್ತು. ನಾನು ನಿಧಾನವಾಗಿ ಅವರ ಬಳಿ ಹೋದೆ ಸಮಾಧಾನ ಮಾಡಲು ಯತ್ನಿಸಿದೆ. ಆದರೆ ನಾನು ಸಮಾಧಾನ ಮಾಡಲು ಯತ್ನಿಸಿದಂತೆಲ್ಲ ಅವರು ಮತ್ತಷ್ಟು ದುಃಖಿತರಾಗುತ್ತಿದ್ದಂತೆ ಅನ್ನಿಸಿತು. ನಾನು ಎದ್ದು ಅಸಮಧಾನದಿಂದ ಅತ್ತಿತ್ತ ತಿರುಗಾಡಲು ಯತ್ನಿಸಿದೆ. ಅಷ್ಟರಲ್ಲಿ ನನ್ನ ಬಳಿಗೆ ಕೃಷ್ಣ ಶೆಟ್ಟರು ಬಂದರು. `ಈ ಘಟನೆ ನಡೆದಿದ್ದು ಯಾವಾಗ ಅಂದಿರಿ..?' ನಾನು ಕೇಳಿದೆ.
            `ನಾಲ್ಕು ದಿನಗಳ ಹಿಂದೆ..' ಎಂದರು ಕೃಷ್ಣ ಶೆಟ್ಟರು. `ಹೌದಾ... ಆದರೆ ಈ ಘಟನೆ ನಿನ್ನೆ ನಡೆದಿದೆ ಅಂತ ಟಿವಿಯಲ್ಲಿ ಬಂತಲ್ಲ.. ಅದನ್ನು ನೋಡಿದವನೇ ನಾನು ಇಲ್ಲಿಗೆ ಬಂದೆ..' ಎಂದೆ.
              `ಇಲ್ಲ.. ಇದು ನಾಲ್ಕು ದಿನದ ಹಿಂದೆ ನಡೆದಿದ್ದು.. ಅವರು ಘಟನೆ ಮುಚ್ಚಿ ಹಾಕಲು ಹೀಗೆ ಹೇಳಿರಬೇಕು ನೋಡಿ..' ಎಂದರು ಶೆಟ್ಟರು.
               `ಅವರು ನಿನ್ನೆ ಘಟನೆ ನಡೆದಿದ್ದು ಎಂದರು. ಜೊತೆಗೆ ನಕ್ಸಲ್ ನಿಗ್ರಹ ಪಡೆಯವರು ಇಬ್ಬರು ನಕ್ಸಲರನ್ನು ಹತ್ಯೆ ಮಾಡಿದ್ದಾರೆ ಎಂದೂ ಟಿವಿಯಲ್ಲಿ ಬರುತ್ತಿದೆ. ಎಂತಹ ಸುಳ್ಳಿ ಹೇಳಿದರಲ್ಲ. ಮೋಸಗಾರರು... ನಿರಪರಾಧಿ, ಅಮಾಯಕ ನಿರಂಜನನ್ನು ಹತ್ಯೆ ಮಾಡಿದ್ದಲ್ಲದೇ ಆತನಿಗೂ ನಕ್ಸಲ್ ಪಟ್ಟ ಕಟ್ಟಿದರಲ್ಲ.. ತಮ್ಮ ತಪ್ಪು ಮುಚ್ಚಿಕೊಳ್ಳುವುದಕ್ಕಾಗಿ ಹೇಗೆಲ್ಲ ಹೇಳಿದರಲ್ಲ.. ಛೇ..' ಎಂದೆ.
             ನನ್ನ ಮಾತನ್ನು ಕೇಳಿದ ಅಪ್ಪು ಶೆಟ್ಟರು ತಕ್ಷಣ ಹಾಸಿಗೆಯಿಂದ ಎದ್ದರು. ಮಗನ ಸಾವಿನಿಂದ ಕಂಗೆಟ್ಟಿದ್ದ ಅವರು ಈಗಲೋ ಆಗಲೋ ಎನ್ನುತ್ತಿದ್ದವರು ಥಟ್ಟನೆ ಎದ್ದು ನಿಂತರು. `ಹೋಯ್.. ನಿಮ್ ಹೆಸರೆಂತದು.. ಅದೆಂತದಾರೂ ಇರಲಿ.. ಇಲ್ನೋಡಿ.. ನನ್ನ ಮಗ ನಕ್ಸಲನಲ್ಲ.. ನನ್ನ ಮಗ ಯಾವ ಅಪರಾಧವನ್ನೂ ಮಾಡಿಲ್ಲ. ನನ್ನ ಮಗನನ್ನು ಕೊಂದವರು ನಕ್ಸಲ್ ನಿಗ್ರಹ ಪಡೆಯವರು.. ಅವರು ಮೋಸಗಾರರು. ಹೊರ ಜಗತ್ತಿನಲ್ಲಿ ನನ್ನ ಮಗ ನಕ್ಸಲ. ಆತನನ್ನು ಹತ್ಯೆ ಮಾಡಿದ್ದೇವೆ ಎಂದು ಹೇಳಿದ್ದಾರಾ..' ಎಂದು ಕಟಕಟನೆ ಹಲ್ಲು ಕಡಿದರು. ಅಲ್ಲಿಯವರೆಗೂ ಹಾಸಿಗೆಯಲ್ಲಿ ಬಿದ್ದುಕೊಂಡಿದ್ದ ಅವರಲ್ಲಿ ಇದ್ದಕ್ಕಿದ್ದಂತೆ ದೈತ್ಯ ಶಕ್ತಿ ಬಂದಿತ್ತು. ನನ್ನನ್ನು ಬಂದು ಭುಜವನ್ನು ಹಿಡಿದು.. `ನನಗೊಂದು ಸಹಾಯ ಮಾಡಿ.. ನೀವು ಈ ಕೂಡಲೇ ಹೊರಡಿ. ನಿಮ್ಮ ಜೊತೆಗೆ ನಾನೂ ಬರುತ್ತೇನೆ. ಅದ್ಯಾರ ಬಳಿ ಹೇಳುತ್ತೀರೋ.. ಏನು ಮಾಡುತ್ತೀರೋ ಗೊತ್ತಿಲ್ಲ. ನನ್ನ ಮಗ ನಕ್ಸಲನಲ್ಲ. ನನ್ನ ಮಗ ಅಪರಾಧಿಯಲ್ಲ ಎಂದು ಸಾಬೀತು ಮಾಡಬೇಕಿದೆ. ಜಗತ್ತಿಗೆ ಸಾರಿ ಹೇಳಬೇಕಿದೆ. ನನ್ನ ಮಗನನ್ನು ನಕ್ಸಲ್ ನಿಗ್ರಹ ಪಡೆ ವಿನಾಕಾರಣ, ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಹತ್ಯೆ ಮಾಡಿತು ಎಂದು ಹೇಳಬೇಕಿದೆ. ನನ್ನನ್ನು ಕರೆದುಕೊಂಡು ಹೋಗಿ. ನಿಮ್ಮ ಕಾಲಿಗೆ ಬೀಳುತ್ತೇನೆ ಮಾರಾಯ್ರೆ.. ನನಗೆ ಇದೊಂದು ಸಹಾಯ ಮಾಡಿ..' ಎಂದು ದೀನನಾಗಿ ಹೇಳಿದರು.
           ನಾನು ತಕ್ಷಣ ಅಲ್ಲಿಂದ ಹೊರಡಲು ಅನುವಾದೆ. ನನ್ನ ಗಾಡಿಯನ್ನು ಮತ್ತೆ ಚಾಲೂ ಮಾಡಿದೆ. ಇಡೀ ಊರು ನನ್ನನ್ನು ತದೇಕಚಿತ್ತದಿಂದ ನೋಡುತ್ತಿದ್ದರೆ ಉಟ್ಟ ಬಟ್ಟೆಯಲ್ಲಿಯೇ ಅಪ್ಪು ಶೆಟ್ಟರು ವೇಗವಾಗಿ ಬಂದು ನನ್ನ ಗಾಡಿಯ ಹಿಂದಿನ ಸೀಟಿನಲ್ಲಿ ಕುಳಿತುಕೊಂಡರು. ನಾನು ಮತ್ತೆ ನಗರದ ಕಡೆಗೆ ಹೊರಟಿದ್ದೆ.

**
(ಈ ಕತೆಯನ್ನು ಬರೆದಿದ್ದು ಅ.14 ಹಾಗೂ 15ರಂದು ಶಿರಸಿಯಲ್ಲಿ)

ಹನಿ ಪಟಾಕಿಗಳು

ಮಿಕ

ಅಮೆರಿಕವೆಂಬುದೊಂದು
ಕುತಂತ್ರಿ ತೋಳ |
ಅದಕ್ಕೆ ಬಲಿ ಬೀಳುವುದು
ಭಾರತದಂತಹ ಮಿಕ ||

ಆವಾಜ್

ನವೆಂಬರ್ ಬಂತೆಂದರೆ
ಕನ್ನಡದೆಡೆಗೆ
ಕೇಳುತ್ತದೆ ಅವಾಜ್
ಹಾಕುವವರು ಮಾತ್ರ
ವಾಟಾಳ್ ನಾಗರಾಜ್ ||

ನಾಕ-ನರಕ

ನಾಕ, ನಾಕ ಎನ್ನುತ್ತಿದ್ದ
ಜನರಿಗೆ ಅರ್ಥವಾಗಲಿಲ್ಲ,
ಜಗತ್ತಿನ ಅತಿದೊಡ್ಡ ನರಕವೆಂದರೆ
ಅದು ಅಮೆರಿಕ ||

ಬಿರುದು

ಅವನು ಪಡೆಯಬೇಕೆಂದಿದ್ದ
ಬಿರುದು ಗಾಯನ ಲೋಕದಲ್ಲಿ
ಗಾನ ಗಂಧರ್ವ |
ಆತನ ಹಾಡು ಕೇಳಿದ ಜನ
ಕೊಟ್ಟರು ಅವನಿಗೆ ಬಿರುದು
ಗಾನ ಗಾರ್ಧಭ ||

ವಾಸ್ತವ

ದೂರದ ಗುಡ್ಡ
ಕಣ್ಣಿಗೆ ನುಣುಪು |
ಗೆಳತೀ ಹಾಗೇ ನಿನ್ನ
ಮುಖವೂ ಕೂಡ |
ದೂರವಿದ್ದಷ್ಟೇ
ಕಾಣುವುದು ನುಣುಪು ||

Monday, October 13, 2014

ಭಾವಾಶಯ

ಒಂದು ಕವನದ ಜೊತೆಗೆ
ಭಾವದೊಡಲು ಬೇಕು |
ಮನವ ತಣಿಸಲು ಬೇಕು
ಒಂದು ಹಾರಯಿಕೆ |

ಕವನ ಗೆಲ್ಲಲು ಬೇಕು
ಪ್ರೀತಿಸುವ ಮನವೊಂದು |
ಅರ್ಥವಾಗಲು ಬೇಕು
ಹೊಸತು ಪರಿಭಾಷೆ |

ಕವನ ಹುಟ್ಟಲು ಬೇಕು
ನವ ಉಸಿರು, ಹಸಿ ಮನಸು |
ಬಾಳು ಬದುಕಲು ಬೇಕು
ಗಮ್ಯತೆಯ ಬಿಂದು |

ಮನಸು ಅರಳಲು ಬೇಕು
ನಲಿವೊಂದು ಸ್ಪೂರ್ತಿ |
ಜೊತೆ ಬೇಕು ಆದರ್ಶ
ಮನಕೊಂದು ಮೂರ್ತಿ |

**
(ಈ ಕವಿತೆಯನ್ನು ಬರೆದಿರುವುದು 26-10-2006ರಂದು ದಂಟಕಲ್ಲಿನಲ್ಲಿ)

Sunday, October 12, 2014

ಬೆಂಗಾಲಿ ಸುಂದರಿ-32

(ಬಾಂಗ್ಲಾದೇಶದ ಗ್ರಾಮೀಣ ಪ್ರದೇಶ)
          ಮುಂದಕ್ಕೆ ಸಾಗುವುದು ಅನಿವಾರ್ಯವೂ ಅತ್ಯಗತ್ಯವೂ ಆಗಿತ್ತು. ಕೆಲಕಾಲ ವಿಶ್ರಮಿಸಿಕೊಂಡ ಬಳಿಕ ಮತ್ತೆ ಮುಂದಕ್ಕೆ ಹೆಜ್ಜೆಹಾಕಿದರು ಮಧುಮಿತಾ ಹಾಗೂ ವಿನಯಚಂದ್ರ. ಆಗಲೇ ಸಾಕಷ್ಟು ಕತ್ತಲೆ ಕವಿದಿತ್ತು. ಹೆದ್ದಾರಿಯ ಪಕ್ಕದಲ್ಲಿಯೇ ರೈಲ್ವೆ ಹಳಿ ಹಾದು ಹೋಗಿತ್ತು. ನಡೆಯುತ್ತಿದ್ದವರಿಗೆ ಬಾಂಗ್ಲಾದ ಅಪ್ಪಟ ಗ್ರಾಮೀಣ ಭಾಗಗಳ ಪರಿಚಯವಾಗತೊಡಗಿತ್ತು. ಮನೆಗಳು ನಿಧಾನವಾಗಿ ಕಡಿಮೆಯಾಗಿ ಅಲ್ಲಲ್ಲಿ ಕುರುಚಲು ಕಾಡುಗಳು, ನಡು ನಡುವೆ ಗದ್ದೆಗಳು, ಬಯಲುಗಳು ಕಾಣಿಸತೊಡಗಿದ್ದವು. ನದಿಯಾಚೆಗೆ ಹಿಂಸಾಚಾರ ತೀವ್ರವಾಗಿದ್ದರೂ ನದಿಯ ಇನ್ನೊಂದು ಭಾಗದಲ್ಲಿ ಹಿಂಸಾಚಾರವಿದ್ದಂತೆ ಕಾಣಿಸಲಿಲ್ಲ. ಅಲ್ಲೊಂದು ಇಲ್ಲೊಂದು ವಾಹನಗಳು ಸಂಚಾರ ಮಾಡುತ್ತಿದ್ದವು. ವಿನಯಚಂದ್ರ ಕೆಲವು ವಾಹನಗಳನ್ನು ನಿಲ್ಲಿಸಲು ಪ್ರಯತ್ನಪಟ್ಟನಾದರೂ ಯಾರೂ ಕೂಡ ಇವರ ಬಳಿ ನಿಲ್ಲಿಸಲಿಲ್ಲ.
                    `ಕಾಲ್ನಡಿಯೆಯೇ ಹಣೆಯಲ್ಲಿ ಬರೆದುಕೊಂಡಿದ್ದರೆ ಏನುಮಾಡಲಿಕ್ಕೆ ಬರುತ್ತದೆ ಹೇಳು..' ಎಂದಳು ಮಧುಮಿತಾ..
                     `ಹುಂ.. ಹೌದು ಕಣೆ.. ಬಾ ನಡೆಯೋಣ..ನಮ್ಮಲ್ಲಿ ಕಸುವು ಸಾಕಷ್ಟಿದೆ ಅಲ್ಲವಾ' ಎಂದು ಮತ್ತಷ್ಟು ಹುಮ್ಮಸ್ಸಿನಿಂದ ಹೆಜ್ಜೆ ಹಾಕಿದರು. ಅಲ್ಲೆಲ್ಲೋ ಒಂದು ಕಡೆಯಲ್ಲಿ ರಾತ್ರಿಯ ಊಟವನ್ನೂ ಮಾಡಿದರು.
                      `ವಿನು ನೀನು ನನಗೆ ಸಿಗದೇ ಇದ್ದರೆ ನನ್ನ ಗತಿ ಏನಾಗುತ್ತಿತ್ತೋ ಅಲ್ಲವಾ?.' ಎಂದಳು ಮಧುಮಿತಾ
                      `ಗೊತ್ತಿಲ್ಲ ಮಧು. ನೀನು ನನಗೆ ಸಿಕ್ಕಿದ್ದು ಮಾತ್ರ ನನ್ನ ಅದೃಷ್ಟ ಎಂದೇ ಹೇಳಬೇಕು ನೋಡು. ಕಾಲೇಜಿನ ದಿನಗಳಲ್ಲಿ ಒಂದಿಬ್ಬರು ಹುಡುಗಿಯರು ನನ್ನಲ್ಲಿ ಆಸಕ್ತಿಯನ್ನು ಮೂಡಿಸಿದ್ದರಾದರೂ ತೀರಾ ಇಷ್ಟಪಡುವಷ್ಟು ಹತ್ತಿರವಾಗಿರಲಿಲ್ಲ. ಆದರೆ ನೀನು ಮಾತ್ರ ಮೊದಲ ನೋಟದಲ್ಲೇ ನನಗಿಷ್ಟವಾಗಿಬಿಟ್ಟೆ. ನನ್ನ ಮನಸ್ಸನ್ನು ಆವರಿಸಿಕೊಂಡು ಬಿಟ್ಟಿದ್ದೆ. ನಿಜ ಹೇಳುತ್ತೇನೆ ಮಧು. ಆ ದಿನ ನಾವು ಕಾಂತಾಜಿ ದೇವಾಲಯಕ್ಕೆ ಹೋಗಿದ್ದೆವಲ್ಲ. ಆ ದಿನ ನನಗೆ ಹುಷಾರಿರಲಿಲ್ಲ ಎಂದು ಸೂರ್ಯನ್ ಹೇಳಿದ್ದ ನೆನಪಿದೆಯಾ? ಅದು ನಿಜವಲ್ಲ. ನಿನ್ನ ಜೊತೆ ಮಾತನಾಡಬೇಕು, ನಿನ್ನ ಸನಿಹ ಇರಬೇಕು ಎನ್ನುವ ಕಾರಣಕ್ಕಾಗಿ ಸೂರ್ಯನ್ ಮಾಡಿದ ಪ್ಲಾನ್ ಅದಾಗಿತ್ತು' ಎಂದ ವಿನಯಚಂದ್ರ.
                      `ನಂಗೊತ್ತಿತ್ತು. ಆ ದಿನ ನಿನಗೆ ಏನೂ ಆಗಿರಲಿಲ್ಲ ಎನ್ನುವುದು ನನಗೆ ತಿಳಿದಿತ್ತು. ನೀನು ನಾಟಕ ಮಾಡುತ್ತಿದ್ದುದೂ ನನಗೆ ತಿಳಿದಿತ್ತು ವಿನು. ಆದರೂ ನಾನು ನಿನ್ನ ಜೊತೆ ಮಾತನಾಡಿದೆ. ಬೆರೆತೆ. ಯಾಕೆ ಗೊತ್ತಾ, ಮೊದಲ ನೋಟದಲ್ಲಿಯೇ ನೀನೂ ನನಗೆ ಇಷ್ಟವಾಗಿಬಿಟ್ಟಿದೆ' ಎಂದು ಮಧುಮಿತಾ ಹೇಳಿದಾಗ ವಿನಯಚಂದ್ರ ಬೆರಗಾಗಿದ್ದ. ಯಲಾ ಇವಳಾ ಎಂದುಕೊಳ್ಳುತ್ತಿದ್ದಾಗಲೇ ಮಾತು ಮುಂದುವರಿಸಿದ ಮಧುಮಿತಾ `ನಾನು ಢಾಕಾ ಯುನಿವರ್ಸಿಟಿಯಲ್ಲಿ ಎಂಎಯನ್ನೂ ಮುಗಿಸಿದ್ದೇನೆ. ನನ್ನ ಕಾಲೇಜು ಬದುಕಿನಲ್ಲಿ ಅದೆಷ್ಟೋ ಜನರು ಪ್ರೇಮ ನಿವೇದನೆ ಮಾಡಿಕೊಂಡಿದ್ದರು. ಎಲ್ಲರೂ ಮುಸಲ್ಮಾನರು. ಯಾರೊಬ್ಬರನ್ನೂ ನಾನು ಇಷ್ಟ ಪಡಲಿಲ್ಲ ನೋಡು. ಒಂದಿಬ್ಬರಂತೂ ಅತ್ಯಾಚಾರ ಮಾಡಿಬಿಡುತ್ತೇನೆ ಎಂದೂ ಬೆದರಿಕೆ ಹಾಕಿದ್ದರು. ಮುಖಕ್ಕೆ ಆಸಿಡ್ ಎರಚುತ್ತೇನೆ ಎಂದೂ ಹೆದರಿಸಿದ್ದರು. ಆದರೆ ನಾನು ಮಾತ್ರ ಅವರ ಬೆದರಿಕೆಗೆ ಜಗ್ಗಿರಲಿಲ್ಲ, ಕುಗ್ಗಿರಲಿಲ್ಲ ನೋಡು. ಆದರೆ ಆ ದಿನ ಹೊಟೆಲಿನಲ್ಲಿ ಯಾವಾಗ ನಿನ್ನನ್ನು ಕಂಡೆನೋ ಆ ಕ್ಷಣವೇ ಇಷ್ಟವಾಗಿಬಿಟ್ಟೆ ವಿನು. ಬಾಗಿಲು ತೆಗೆದಾಕ್ಷಣ ನೀನು ನನ್ನನ್ನು ಬಿಟ್ಟ ಕಣ್ಣು ಬಿಟ್ಟಂತೆ ನೋಡುತ್ತಿದ್ದುದು ನನ್ನ ಅರಿವಿಗೆ ಬಂದಿತ್ತು. ನಾನೂ ಕೂಡ ಅಷ್ಟೇ ಅಚ್ಚರಿ, ಪ್ರೀತಿಯಿಂದ ನಿನ್ನನ್ನು ನೋಡಲು ಆರಂಭಿಸಿದ್ದೆ..' ಎಂದು ಮಧುಮಿತಾ ಹೇಳಿದಾಗ ಮಾತ್ರ ವಿನಯಚಂದ್ರ ಮತ್ತಷ್ಟು ಅಚ್ಚರಿ ಹಾಗೂ ಹೆಮ್ಮೆಯಿಂದ ವಿನಯಚಂದ್ರ ನೋಡಿದ್ದ.
               `ಮಧು ನಾವು ಭಾರತವನ್ನು ತಲುಪುತ್ತೀವೋ ಇಲ್ಲವೋ ಗೊತ್ತಿಲ್ಲ. ಇಲ್ಲಿಯವರೆಗೆ ಒಟ್ಟಾಗಿದ್ದೇವೆ. ಪ್ರೇಮದ ರಸಾನುಭೂತಿಯನ್ನು ಅನುಭವಿಸಿದ್ದೇವೆ. ನಮ್ಮ ಮುಂದಿನ ಭವಿಷ್ಯ ಖಂಡಿತವಾಗಿಯೂ ನನಗೆ ಗೊತ್ತಿಲ್ಲ. ನಿನಗೂ ಗೊತ್ತಿಲ್ಲ. ಬದುಕಿದರೆ ಒಟ್ಟಿಗೆ ಒಬ್ಬರನ್ನೊಬ್ಬರು ಸದಾಕಾಲ ಪ್ರೀತಿಸುತ್ತಾ ಜೀವನ ನಡೆಸೋಣ. ಶ್ರೀಮಂತಿಕೆ ಬಂದರೆ ಬರಲಿ, ಬಡತನ ಇದ್ದರೆ ಇರಲಿ ನಮ್ಮ ಪ್ರೀತಿ ಮುಕ್ಕಾಗಬಾರದು. ಸದಾಕಾಲ ನಾವು ಪ್ರೀತಿಸುತ್ತ ಬದುಕಬೇಕು. ಸಾವು ಬರುತ್ತದೆ ಎಂದರೆ ಅದಕ್ಕೂ ಹೆದರಬಾರದು. ಒಂದೇ ಏಟಿಗೆ ಸತ್ತು ಹೋಗೋಣ.. ಅಲ್ಲವಾ' ಎಂದ ವಿನಯಚಂದ್ರ.
               `ಗೆಲ್ಲುತ್ತೇವೆ ವಿನು ನಾವು. ಸಾವಿನ ಮಾತು ಯಾಕೆ ಈ ಸಂದರ್ಭದಲ್ಲಿ ಹೇಳು. ನಾವು ಗೆಲ್ಲೋಣ. ಭಾರತವನ್ನು ತಲುಪೋಣ. ಭಯ ಬೇಡ..' ಎಂದಿದ್ದಳು ಮಧುಮಿತಾ. ಇಬ್ಬರಲ್ಲೂ ಭಯದ ನಾಡಿನಲ್ಲಿಯೂ ಭರವಸೆಯ ಬೆಳಕು ಮೂಡಿತ್ತು.
                 ಚೀಲದಲ್ಲಿ ಊಟ, ತಿಂಡಿ ಕಡಿಮೆಯಾಗುತ್ತಿತ್ತು. ಹೆಚ್ಚೆಂದರೆ ಇನ್ನೊಂದು ದಿನಕ್ಕೆ ಸಾಕಾಗುವಷ್ಟು ಮಾತ್ರ ಬಾಕಿ ಉಳಿದಿತ್ತು. ಜೇಬಿನಲ್ಲಿ ದುಡ್ಡೂ ಕೂಡ ಅಗತ್ಯ ಪ್ರಮಾಣದಲ್ಲಿ ಇರಲಿಲ್ಲ. ಭಾರತವನ್ನು ತಲುಪಿದರೂ ಭಾರತದಲ್ಲಿ ಹೊಟ್ಟೆಗೇನು ಮಾಡುವುದು ಎನ್ನುವ ಸಮಸ್ಯೆ ಇವರ ತಲೆಯಲ್ಲಿ ಕೊರೆಯಲಾರಂಭಿಸಿತ್ತು. ಈಗ ಖರ್ಚು ಮಾಡುತ್ತಿರುವುದೇ ಕನಿಷ್ಟ ಪ್ರಮಾಣದ್ದು. ಆ ನಡುವೆಯೂ ದುಡ್ಡಿನ ಖರ್ಚನ್ನು ಇನ್ನಷ್ಟು ಕಡಿಮೆ ಮಾಡಲು ಚಿಂತಿಸಿದರು. ನೇರವಾದ ರಸ್ತೆ ಎಷ್ಟು ನಡೆದರೂ ಮುಗಿಯುವುದೇ ಇಲ್ಲವೇ ಎಂದುಕೊಂಡರು ಇಬ್ಬರೂ. ಅಷ್ಟರಲ್ಲಿ ಒಂದು ಜೀಪು ಅದೇ ಮಾರ್ಗದಲ್ಲಿ ಸಾಗಿ ಬಂದಿತು. ವಿನಯಚಂದ್ರ ಕೈ ಮಾಡುವ ಮೊದಲೇ ಜೀಪು ನಿಂತಿತು. ಜೀಪಿನಲ್ಲಿ ನಾಲ್ಕೈದು ಜನರಿದ್ದುದು ಕಂಡುಬರುತ್ತಿತ್ತು. ಜೀಪಿನ ಡ್ರೈವರ್ `ಬರ್ತೀರಾ ಸಾಬ್..' ಎಂದು ಕೇಳಿದ್ದ. ವಿನಯಚಂದ್ರನಿಗೆ ಹೋಗುವ ಮನಸ್ಸಿತ್ತು. ಮಧುಮಿತಾ ಯಾಕೋ ಹಿಂದೇಟು ಹಾಕಿದಳು. ವಿನಯಚಂದ್ರನನ್ನು ಕೈ ಹಿಡಿದು ಜಗ್ಗಿ ನಿಲ್ಲಿಸಿದಳು. ಮಧುಮಿತಾಳಿಗೆ ಯಾಕೋ ಅನುಮಾನ ಬಂದಂತಾಗಿತ್ತು. ಅಷ್ಟರಲ್ಲಿ ಜೀಪಿನಲ್ಲಿದ್ದವರೇ ಮೂರ್ನಾಲ್ಕು ಜನರು ಜೀಪಿನಿಂದ ಇಳಿದು ಬಂದು ಏಕಾಏಕಿ ವಿನಯಚಂದ್ರ ಹಾಗೂ ಮಧುಮಿತಾರನ್ನು ಹಿಡಿದು ಗಾಡಿಯೊಳಕ್ಕೆ ತುಂಬಿಕೊಂಡುಬಿಟ್ಟರು.
           ಜೀಪಿನ್ನು ಏರುವಾಗ ವಿನಯಚಂದ್ರ ಹಾಗೂ ಮಧುಮಿತಾ ಸಾಕಷ್ಟು ಪ್ರತಿರೋಧ ಒಡ್ಡಿದರಾದರೂ ಅದು ಸಾಕಾಗಲಿಲ್ಲ. ಕೂಗಿದರು, ಗಲಾಟೆ ಮಾಡಿದರು. ಕೊಸರಾಡಿದರು. ಜೀಪಿನಲ್ಲಿದ್ದವರು ಅವ್ಯಾವುದಕ್ಕೂ ಸೊಪ್ಪು ಹಾಕಲಿಲ್ಲ. ಬಯಲಿನಲ್ಲಿ ನಡೆದು ಬರುತ್ತಿದ್ದ ಕಾರಣ ಇವರು ಕೂಗಿದ್ದು ಮತ್ಯಾರಿಗೂ ಕೇಳಿಸಲೇ ಇಲ್ಲ. ಯಾರವರು, ಯಾಕೆ ಇವರನ್ನು ಗಾಡಿಯಲ್ಲಿ ತುಂಬಿಕೊಂಡು ಹೋಗುತ್ತಿದ್ದಾರೆ ಒಂದೂ ಅರ್ಥವಾಗಲಿಲ್ಲ. ವಿನಯಚಂದ್ರ ಜಬರದಸ್ತಿಗೆ ಇಳಿದ. ಜೀಪಿನಲ್ಲಿದ್ದವರು ವಿನಯಚಂದ್ರನ ಮುಖ ಮೂತಿ ನೋಡದೆ ನಾಲ್ಕೇಟು ಬಿಗಿದರು. ವಿನಯಚಂದ್ರ ಆ ಏಟಿಗೆ ತತ್ತರಿಸಿದ. ಪ್ರಜ್ಞೆತಪ್ಪಿ ಬಿದ್ದ.
           ಹತ್ತು ಹದಿನೈದು ಕಿಲೋಮೀಟರ್ ದೂರ ಚಲಿಸಿದ ಜೀಪು ನಂತರ ಅಲ್ಲೇ ಒಂದು ಕಡೆ ಊರಿನೊಳಕ್ಕೆ ತಿರುಗಿತು. ವಿನಯಚಂದ್ರನಿಗೆ ಯಾವುದೋ ಲೋಕದಲ್ಲಿ ಸಾಗುತ್ತಿದ್ದಂತೆ ಅನ್ನಿಸುತ್ತಿತ್ತು. ಜೀಪು ಸಾಗುತ್ತಿರುವುದು ಗೊತ್ತಾಗುತ್ತಿತ್ತಾದರೂ ಕೈಕಾಲು ಆಡುತ್ತಿರಲಿಲ್ಲ. ಮಾತಾಡೋಣ ಎಂದರೆ ನಾಲಿಗೆಯೇ ಬಿದ್ದು ಹೋಗಿದೆಯೇನೋ ಎಂಬಂತಾಗಿತ್ತು. ಅಲ್ಲೊಂದು ಮನೆಯ ಎದುರು ಜೀಪು ನಿಂತಿತ್ತು. ಮನೆಯೆಂದರೆ ಮನೆಯಲ್ಲ ಅದು. ದೊಡ್ಡ ಜಮೀನ್ದಾರನ ಬಂಗಲೆ ಎನ್ನಬಹುದು. ಹುಬ್ಬಳ್ಳಿ ಕಡೆಯಲ್ಲಿ ವಾಡೆಗಳಿರುತ್ತಾವಲ್ಲ. ಆ ರೀತಿಯದ್ದು. ದೊಡ್ಡ ಕೋಟೆಯಂತಹ ರಚನೆ. ವಿನಯಚಂದ್ರನಿಗೆ ಅದು ಅಸ್ಪಷ್ಟವಾಗಿ ಗೊತ್ತಾಗುತ್ತಿತ್ತು. ಯಾರೋ ಇಬ್ಬರು ಮಧುಮಿತಾಳನ್ನು ಕೈಯಲ್ಲಿ ಹಿಡಿದುಕೊಂಡು ಹೋಗುತ್ತಿದ್ದರೆ ಮತ್ತಿಬ್ಬರು ವಿನಯಚಂದ್ರನ್ನು ದರದರನೆ ಎಳೆದುಕೊಂಡು ಹೋಗುತ್ತಿದ್ದರು. ಆ ಮನೆಯ ಒಳಗೆ ಸುತ್ತಿ ಬಳಸಿ ಸಾಗುತ್ತಿರುವುದು ತಿಳಿಯುತ್ತಿತ್ತು. ಕೊನೆಗೆ ಅದೊಂದು ಕತ್ತಲೆಯ ಕೋಣೆಗೆ ಒಯ್ದು ಮಧುಮಿತಾ ಹಾಗೂ ವಿನಯಚಂದ್ರನನ್ನು ಹಾಕಿ ಕೋಣೆಯ ಬಾಗಿಲನ್ನು ಹಾಕಿಬಿಟ್ಟರು.
           ವಿನಯಚಂದ್ರನಿಗಿನ್ನೂ ಸ್ಪಷ್ಟವಾಗಿ ಎಚ್ಚರಾಗಿರಲಿಲ್ಲ. ಮಧುಮಿತಾ ಮಾತ್ರ ಭಯದಿಂದ ಮಾತೇ ಬಾರದಂತೆ ಕುಳಿತಿದ್ದಳು. ಯಾರು, ಯಾಕೆ ಇಲ್ಲಿಗೆ ಕರೆತಂದಿದ್ದಾರೆ ಒಂದೂ ಬಗೆಹರಿಯಲಿಲ್ಲ. ಮಧುಮಿತಾ ಮಾತ್ರ ಪಕ್ಕದಲ್ಲೇ ಕವುಚಿ ಬಿದ್ದುಕೊಂಡಿದ್ದ ವಿನಯಚಂದ್ರನನ್ನು ಬಡಿದು ಎಬ್ಬಿಸಲು ಪ್ರಯತ್ನಿಸಿದಳು. ನಾಲ್ಕೈದು ಸಾರಿ ಪ್ರಯತ್ನಿಸಿದ ನಂತರ ನಿಧಾನವಾಗಿ ವಿನಯಚಂದ್ರ ಕಣ್ಣುಬಿಟ್ಟ. ಕಣ್ಣುತೆರೆದವನಿಗೆ ಒಮ್ಮೆ ತಾನೆಲ್ಲಿದ್ದೇನೆ, ಏನಾಗುತ್ತಿದೆ ಒಂದೂ ತಿಳಿಯಲಿಲ್ಲ.
          `ಮಧು.. ಏನಿದು..? ನಾವೆಲ್ಲಿದ್ದೇವೆ? ಏನಾಗುತ್ತಿದೆ..?' ಅರ್ಥವಾಗದವನಂತೆ ಕೇಳಿದ.
          `ನನಗೂ ಗೊತ್ತಿಲ್ಲ ವಿನೂ.. ಯಾರೋ ಎಳೆದುಕೊಂಡು ಬಂದರು. ಗಾಡಿಯಲ್ಲಿ ನಿನಗೆ ಹೊಡೆದರು. ನೀನು ಎಚ್ಚರ ತಪ್ಪಿದೆ. ನಂತರ ನಮ್ಮಿಬ್ಬರನ್ನೂ ಎಲ್ಲೋ ಕರೆದುಕೊಂಡು ಬಂದು ಮನೆಯೊಂದರಲ್ಲಿ ಕೂಡಿಹಾಕಿದ್ದಾರೆ. ಅದಷ್ಟೇ ಗೊತ್ತಿದೆ.. ಆದರೆ ಯಾಕೆ ಹೀಗೆ, ನಾವೇನು ತಪ್ಪು ಮಾಡಿದ್ದೇವೆ.. ಒಂದೂ ಗೊತ್ತಿಲ್ಲ.. ಅಬ್ಬಾ.. ಗಾಡಿಯಲ್ಲಿದ್ದವರು ಕುಡಿದಿದ್ದರು. ಅದೆಷ್ಟು ತೊಂದರೆ ಕೊಟ್ಟರು ಅಂದರೆ ಛೀ...' ಎಂದಳು ಮಧುಮಿತಾ..
         `ಛೇ... ಕ್ರೂರಿಗಳು..' ಎಂದ ವಿನಯಚಂದ್ರ.. `ಮುಂದೇನು ಮಾಡುವುದು? ಎಲ್ಲೋ ಹೋಗುವವರು ಎಲ್ಲಿಗೆ ಬಂದೆವಪ್ಪಾ? ಇಲ್ಲಿಂದ ತಪ್ಪಿಸಿಕೊಂಡು ಹೋಗುವುದು ಹೇಗೆ? ಅದು ಸಾಧ್ಯವಾ? ಅಸಾಧ್ಯವಾ? ನಮಗೇಕೆ ಇಷ್ಟೆಲ್ಲ ಕಷ್ಟಗಳು ಎದುರಾಗುತ್ತಿವೆ..' ಎಂದ ಅಸಹನೆಯಿಂದ.
           ಕೆಲ ಹೊತ್ತಿನ ಬಳಿಕ ಯಾರೋ ಆ ಕೋಣೆಯ ಬಾಗಿಲು ತೆರೆಯುತ್ತಿರುವ ಸದ್ದಾಯಿತು. ವಿನಯಚಂದ್ರ ಕೂಡಲೇ ಜಾಗೃತನಾದ. ಕೋಣೆಯ ತುಂಬ ಕತ್ತಲಾವರಿಸಿದ್ದರೂ ಕಣ್ಣು ಆ ಕತ್ತಲೆಗೆ ಹೊಂದಿಕೊಂಡಿತ್ತು. ಮಬ್ಬಾದ ದೀಪದ ಬೆಳಕಿನಲ್ಲಿ ಆ ಕೋಣೆಯನ್ನೆಲ್ಲ ಸರಸರನೆ ಹುಡುಕಾಡಿದ ವಿನಯಚಂದ್ರ ಆತ್ಮರಕ್ಷಣೆಗೆ ಏನಾದರೂ ಆಯುಧ ಸಿಗಬಲ್ಲದೇ ಎಂದು ಹುಡುಕತೊಡಗಿದ. ಅಲ್ಲೆಲ್ಲೋ ಮೂಲೆಯಲ್ಲಿ ಮಂಚದ ಕಾಲಿನ ಮುರಿದ ರಚನೆಯಂತದ್ದಿತ್ತು. ಅದನ್ನೇ ತೆಗೆದು ಜಾಗೃತೆಯಿಂದ ಅಡಗಿಸಿ ಇಟ್ಟುಕೊಂಡ. ಬಾಗಿಲು ತೆಗೆದು ಒಳಬಂದಿತೊಂದು ಆಕೃತಿ. ಮೊದಲಿಗೆ ಸರಿಯಾಗಿ ಗೊತ್ತಾಗಲಿಲ್ಲ. ತೀರಾ ಹತ್ತಿರಕ್ಕೆ ಬಂದ ನಂತರ ಒಳಬಂದಿದ್ದೊಬ್ಬಳು ಹೆಂಗಸು ಎನ್ನುವುದು ಅರಿವಾಯಿತು. ಒಳಬಂದವಳೇ ಕೈಯ್ಯಲ್ಲಿ ತಿಂಡಿಯನ್ನು ಹಿಡಿದುಕೊಂಡು ಬಂದಿದ್ದಳು.
         ಮಧುಮಿತಾಳ ಬಳಿ ಬಂದ ಆಕೆ ಕೈಯಲ್ಲಿದ್ದುದ್ದನ್ನು ಕೊಟ್ಟು ತಿನ್ನು ಎಂದಳು. ಮಧುಮಿತಾ ಒಮ್ಮೆ ಆ ಹೆಂಗಸನ್ನು ನೋಡಿದವಳೇ ಆಕೆ ಕೊಟ್ಟಿದ್ದನ್ನು ತಿನ್ನಲು ನಿರಾಕರಿಸಿದಳು. `ನಮ್ಮನ್ಯಾಕೆ ಇಲ್ಲಿ ಕೂಡಿ ಹಾಕಿದ್ದಾರೆ.. ಯಾರು ನೀವು..? ಏನು ಇದೆಲ್ಲ..?' ಎಂದು ಸಿಟ್ಟಿನಿಂದ ಕೇಳಿದಳು ಮಧುಮಿತಾ.
          ಯವ್ವನವನ್ನು ಆಗಷ್ಟೇ ದಾಟುತ್ತಿದ್ದ ಆ ಹೆಂಗಸು ಮಧುಮಿತಾಳ ಕೈಯನ್ನು ಹಿಡಿದುಕೊಂಡು `ಅದೊಂದು ದೊಡ್ಡ ಕಥೆ.. ಏನಂತ ಹೇಳುವುದು..' ಎಂದಳು.. ಅದಕ್ಕುತ್ತರವಾಗಿ `ಈ ರೀತಿಯ ಸುತ್ತುಬಳಸಿನ ಮಾತುಗಳು ಬೇಡ.. ನಿಜ ಹೇಳಿ.. ನೀವ್ಯಾರು? ನಮ್ಮನ್ಯಾಕೆ ಇಲ್ಲಿ ಕೂಡಿ ಹಾಕಿದ್ದೀರಿ?' ಎಂದು ಚೀರಿದಳು.
          `ಇಲ್ಲ.. ನಾನು ಈ ಕೆಲಸ ಮಾಡಿಲ್ಲ. ಈ ಕೆಲಸ ಮಾಡಿದವನು ಮುಷ್ಪಿಕರ್. ಆತ ಈ ಸುತ್ತಮುತ್ತಲ ಭಾಗದ ಬಹುದೊಡ್ಡ ಜಮೀನ್ದಾರ. ಯಾರೇ ಹೊಸ ಹುಡುಗಿಯರು, ಹೆಂಗಸರು ಕಾಣಲಿ ಅವರನ್ನು ಎಳೆದುಕೊಂಡು ಬಂದು ಅವರ ಮೇಲೆ ಅತ್ಯಾಚಾರ ಮಾಡುವುದು ಆತನ ಕೆಲಸ. ಅದಕ್ಕಾಗಿಯೇ ತನ್ನದೊಂದು ಪಡೆಯನ್ನೇ ನೇಮಿಸಿಕೊಂಡಿದ್ದಾರೆ. ಆತನ ಕಣ್ಣಿಗೆ ನೀನು ಕಾಣಿಸಿದ್ದೀಯಾ.. ಅದೇ ಕಾರಣಕ್ಕೆ ನಿನ್ನನ್ನು ಎಳೆದುಕೊಂಡು ಬಂದಿದ್ದಾರೆ..' ಎಂದು ಹೇಳಿದಳು ಆ ಹೆಂಗಸು.
         ಮಾತು ಕೇಳಿ ಬೆಚ್ಚಿ ಬಿದ್ದರು ವಿನಯಚಂದ್ರ ಹಾಗೂ ಮಧುಮಿತಾ. ಮುಂದೇನು ಮಾಡುವುದು ಎಂದು ಆಲೋಚನೆ ಮಾಡುತ್ತಿದ್ದಾಗಲೇ ತಿಂಡಿಯನ್ನು ತಂದಾಕೆಯೇ ಮಾತು ಮುಂದುವರಿಸಿದಳು. `ಪ್ರತಿ ದಿನ ಇದೇ ರೀತಿ ಆಗಿದೆ. ಇವರು ಯಾರು ಯಾರನ್ನೋ ಎಳೆದುಕೊಂಡು ಬರುತ್ತಾರೆ. ಅವರ ಮೇಲೆ ಅತ್ಯಾಚಾರ ನಡೆಯುತ್ತದೆ. ಬೆಳಗಾಗುವ ವೇಳೆಗೆ ಕೆಲವರು ಸತ್ತಿರುತ್ತಾರೆ. ಅರೆ ಜೀವ ಆಗಿರುವವರನ್ನು ಅದೇ ಗುಂಪು ಎಲ್ಲೋ ಹೋಗಿ ಒಗೆದು ಬರುತ್ತಾರೆ...' ಎಂದು ನಿಟ್ಟುಸಿರು ಬಿಟ್ಟವಳು `ನನ್ನನ್ನು ಮದುವೆಯಾದಾಗಿನಿಂದ ಇದನ್ನು ನೋಡಿ ರೋಸಿ ಹೋಗಿದ್ದೇನೆ. ನಾನು ಮದುವೆಯಾದ ನಂತರ ಅದೆಷ್ಟೋ ಸಹಸ್ರ ಹೆಂಗಳೆಯರು ತಮ್ಮ ಬದುಕನ್ನು ಇಲ್ಲಿ ಕಳೆದುಕೊಂಡಿದ್ದಾರೆ. ಅನೇಕ ಸಾರಿ ಇವನ್ನು ಪ್ರತಿಭಟಿಸಿದ್ದೇನೆ. ಆದರೆ ಪ್ರತಿಭಟನೆ ಮಾಡಿದಾಗಲೆಲ್ಲ ಮೈಸುಲಿಯುವಂತಹ ಹೊಡೆತಗಳು ಬಿದ್ದಿವೆ..' ಎಂದಳು.
          `ನೀನು ಇದನ್ನು ಹೇಳಲು ನಮ್ಮೆದುರು ಬಂದೆಯಾ?' ಎಂದು ಕೇಳಿದ ಮಧುಮಿತಾ ಮತ್ತೇನೋ ಹೊಳೆದಂತೆ `ನಿನ್ನ ಯಜಮಾನ ಎಳೆದುಕೊಂಡು ಬರುವ ಪ್ರತಿಯೊಬ್ಬ ಹೆಂಗಸರ ಬಳಿಯೂ ನೀನು ಇದೇ ಕಥೆಯನ್ನು ಹೇಳುತ್ತೀಯಾ? ಅವರಿಗೆ ನೀನು ಈ ಕಥೆ ಹೇಳುವುದನ್ನು ಬಿಟ್ಟು ಬೇರೆ ಸಹಾಯ ಮಾಡುವುದೇ ಇಲ್ಲವೇ? ನಿನ್ನದೂ ಒಂದು ಬದುಕಾ. ಥೂ..' ಎಂದಳು ಮಧುಮಿತಾ.
           `ಬಯ್ಯಬೇಡಿ. ಅವರಲ್ಲಿ ಶಕ್ತಿಯಿದೆ. ನಾನು ಅಸಹಾಯಕಿ. ನಾನು ಈ ಕೆಲಸವನ್ನಲ್ಲದೇ ಇನ್ನೇನು ಮಾಡಬಲ್ಲೆ ಹೇಳಿ? ನಾನು ಏನು ಮಾಡಲು ಹೋದರೂ ನನ್ನನ್ನು ಹೊಡೆಯುತ್ತಾರೆ. ಬಡಿಯುತ್ತಾರೆ. ಕೊಲ್ಲಲಿಕ್ಕೂ ಹೇಸುವುದಿಲ್ಲ ಕ್ರೂರಿಗಳು' ಎಂದು ಹೇಳಿದಾಕೆ ಅಳುವುದೊಂದೇ ಬಾಕಿ.
         `ಅಸಹಾಯಕಿ.. ಎಂತಹ ನೆಪವನ್ನು ಹೇಳ್ತೀಯಾ ನೀನು. ನೆಪ ಅಷ್ಟೆ. ನಿನಗೆ ಮನಸ್ಸಿಲ್ಲ ಅಷ್ಟೇ. ಯಾರು ಯಾರದ್ದೋ ಬದುಕು ಹಾಳಾದರೆ ನಿನಗೇನು. ನೀನು ಮಾತ್ರ ಆರಾಮಾಗಿರ್ತೀಯಾ. ಕೈಯಲ್ಲಿ ಆಗೋದಿಲ್ಲ ಅಂತೀಯಲ್ಲ.. ನಾವು ತಪ್ಪಿಸಿಕೊಳ್ಳಬೇಕು. ಸಹಾಯ ಮಾಡ್ತೀಯಾ?' ಎಂದು ಕೇಳಿಬಿಟ್ಟಳು ಮಧುಮಿತಾ.
            ಬೆರಗು ಗಣ್ಣಿನಿಂದ ನೋಡಿದ ಆ ಹೆಂಗಸು ಕೆಲಕಾಲ ಮೌನವಾದಳು. ಅಷ್ಟರಲ್ಲಿ ವಿನಯಚಂದ್ರ ಅಲ್ಲಿಯೇ ಇರುವುದು ಗಮನಕ್ಕೆ ಬಂದಿತ್ತು. ಆತನ ಕಡೆಗೆ ದೃಷ್ಟಿ ಹಾಯಿಸಿ `ಇವರ್ಯಾರು?' ಎಂದಳು. ಮುಷ್ಪೀಕರ್ ನ ಬಂಟರೇ ಯಾರೋ ಇಲ್ಲಿದ್ದಾರೆ. ತನ್ನ ಮಾತನ್ನು ಅವರು ಕೇಳಿಬಿಟ್ಟಿದ್ದಾರೆ ಎನ್ನುವ ಭಯ ಆಕೆಯಲ್ಲಿ ಒಮ್ಮೆ ಕಾಡಿತು. ಕೊನೆಗೆ ಮಾತಿಗೆ ನಿಂತ ಮಧುಮಿತಾಳೆ ತಾವು ಯಾವ ಕಾರಣಕ್ಕೆ ಬಂದಿದ್ದೇವೆ. ಯಾರು? ಎತ್ತ ಸಾಗುತ್ತಿದ್ದೇವೆ ಎನ್ನುವುದನ್ನು ತಿಳಿಸಿದಳು. ಎಲ್ಲ ಹೇಳಿದ ನಂತರ ಮಧುಮಿತಾ ಹಾಗೂ ವಿನಯಚಂದ್ರ ತಪ್ಪಿಸಿಕೊಳ್ಳಲು ಸಹಾಯ ಮಾಡುವುದಾಗಿ ಭರವಸೆ ನೀಡಿದಳು.
         ತಪ್ಪಿಸಿಕೊಳ್ಳುವ ಕಾರ್ಯ ಬಹುಬೇಗನೆ ಆಗಬೇಕಾಗಿತ್ತು. ಯಾವ ಕ್ಷಣದಲ್ಲಿ ಮುಷ್ಪೀಕರ್ ಮಧುಮಿತಾಳನ್ನು ತನ್ನ ಮಂಚಕ್ಕೆ ಬರುವಂತೆ ಬುಲಾವ್ ನೀಡುತ್ತಾನೋ ಗೊತ್ತಿರಲಿಲ್ಲ. ತಪ್ಪಿಸಿಕೊಳ್ಳುವುದೇನೋ ಸರಿ. ಆದರೆ ಮುಷ್ಪೀಕರ್ ನಿಗೆ ಯಾಕೆ ಬುದ್ಧಿ ಕಲಿಸಿ ಹೋಗಬಾರದು ಎನ್ನುವ ಆಲೋಚನೆ ವಿನಯಚಂದ್ರನ ಮನಸ್ಸಿನಲ್ಲಿ ಮೂಡಿತು. ತಕ್ಷಣವೇ ಮಧುಮಿತಾಳ ಕಿವಿಯಲ್ಲಿ ಈ ವಿಷಯವನ್ನು ತಿಳಿಸಿದ. ಮಧುಮಿತಾ ಕೂಡ ಆ ವಿಷಯಕ್ಕೆ ಒಪ್ಪಿಗೆ ಸೂಚಿಸಿದಳು. ಅಲ್ಲೇ ಎದುರಿಗಿದ್ದ ಮುಷ್ಪೀಕರನ ಹೆಂಡತಿಯ ಬಳಿ ಈ ವಿಷಯವನ್ನು ತಿಳಿಸಿದಳು. ಹೀಗೊಂದು ಸಾಧ್ಯತೆಯನ್ನು ಯಾವತ್ತೂ ಯೋಚಿಸಿರಲಿಲ್ಲವೋ ಎಂಬಂತೆ  `ಯಾ ಅಲ್ಲಾ..' ಎಂದವಳೇ `ತಾನೂ ಇದಕ್ಕೆ ಕೈ ಜೋಡಿಸುತ್ತೀನಿ.. ಒಳ್ಳೆಯ ಸಾಧ್ಯತೆ. ಆದರೆ ನೀವು ಯಾವ ರೀತಿ ಬುದ್ಧಿ ಕಲಿಸುತ್ತೀರಿ ಹಾಗೂ ಇದರಿಂದ ಅಪಾಯವೇನೂ ಆಗುವುದಿಲ್ಲ ಅಲ್ಲವಾ?' ಎಂದು ಕೇಳಿದಳು.
          ಪ್ರತಿಯಾಗಿ ವಿನಯಚಂದ್ರ `ಯಾವ ರೀತಿ ಬುದ್ಧಿ ಕಲಿಸಬೇಕು ಎನ್ನುವುದು ಇನ್ನೂ ಗೊತ್ತಿಲ್ಲ. ಇನ್ನು ಮುಂದೆ ಹೆಂಗಸರ ಬದುಕನ್ನು ಹಾಳುಮಾಡಬಾರದು. ಆ ರೀತಿಯಲ್ಲಿ ಏನಾದರೂ ಮಾಡಬೇಕು. ನಿಮ್ಮ ಸಹಾಯ ಸಹಕಾರ ಇಲ್ಲದೇ ಈ ಕೆಲಸ ಅಸಾಧ್ಯ. ಈ ಕೆಲಸ ಅಪಾಯಕರವಂತೂ ಹೌದು. ಆದರೆ ಎಷ್ಟು ದೊಡ್ಡ ಪ್ರಮಾಣದ್ದೆಂಬುದು ನಮಗೂ ಗೊತ್ತಿಲ್ಲ. ನಮ್ಮಿಂದ ಆಗದಿದ್ದರೆ ನೀವಾದರೂ ಈ ಕೆಲಸ ಮಾಡಲೇಬೇಕು. ನಂತರ ನಮಗೆ ಬೋಗ್ರಾವನ್ನು ತಲುಪುವ ಮಾರ್ಗವನ್ನೂ ನೀವೇ ತಿಳಿಸಬೇಕು. ಹೇಳಿ ನಿಮ್ಮಿಂದ ಇದು ಸಾಧ್ಯವಾ? ಆಗೋದಿಲ್ಲ ಅಂತಾದರೆ ಹೇಳಿಬಿಡಿ.. ನಾವೇ ಈ ಕೆಲಸವನ್ನು ಹೇಗಾದರೂ ಮಾಡುತ್ತೇವೆ. ಆದರೆ ದಯವಿಟ್ಟು ಯಾರ ಬಳಿಯೂ ಈ ಬಗ್ಗೆ ಬಾಯಿ ಬಿಡಬೇಡಿ..' ಎಂದ.
            `ಖಂಡಿತ ಯಾರ ಬಳಿಯೂ ಹೇಳೋದಿಲ್ಲ..' ಎಂದವಳೇ ಒಮ್ಮೆ ಎದ್ದು ಹೋಗಿ ಕೋಣೆಯ ಕದವನ್ನು ಗಟ್ಟಿಯಾಗಿ ಹಾಕಲಾಗಿದೆಯೋ ಇಲ್ಲವೋ ಎಂದು ನೋಡಿಕೊಂಡು ಬಂದಳು. `ಆ ಹರಾಮಖೋರನನ್ನು ನನ್ನ ಗಂಡ ಎನ್ನಲು ನಾಚಿಕೆಯಾಗುತ್ತಿದೆ. ಸಮಯ ಸಿಕ್ಕಾಗ ಆತನಿಗೆ ಬುದ್ಧಿ ಕಲಿಸಬೇಕು ಎಂದು ನಾನು ಅನೇಕ ಸಾರಿ ಆಲೋಚನೆ ಮಾಡಿದ್ದೇ. ಆದರೆ ಆ ಕೆಲಸ ನನ್ನೊಬ್ಬನಿಂದ ಸಾಧ್ಯವಾಗುವುದಿಲ್ಲ ಎಂದು ಸುಮ್ಮನಾಗಿದ್ದೆ. ಆದರೆ ನೀವು ಇವತ್ತು ದೇವರಂತೆ ಬಂದಿದ್ದೀರಿ. ಅಲ್ಲಾಹುವೇ ನಿಮ್ಮನ್ನು ಕಳಿಸಿದ್ದಾನೆ ಎಂದುಕೊಳ್ಳುತ್ತೇನೆ. ಇಲ್ಲಿಯವರೆಗೆ ಆತ ಅವರಿವರ ಬದುಕನ್ನು ಹಾಳುಮಾಡಿದ್ದೇ ಸಾಕು. ಇನ್ನು ಮುಂದಾದರೂ ಉಪಕಾರಿಯಾಗಿ ಬಾಳಲಿ..' ಎಂದು ಹೇಳಿದ ಆಕೆಯ ಬಾಯಲ್ಲಿ ಎಷ್ಟೋ ದಿನಗಳ ಅಸಹನೆ, ನೋವು ತುಂಬಿರುವುದು ಸ್ಪಷ್ಟವಿತ್ತು. ತಕ್ಷಣವೇ ಮನಸ್ಸಿನಲ್ಲಿ ಏನೋ ಆಲೋಚನೆ ಮಾಡಿದ ವಿನಯಚಂದ್ರ ಕೂಡಲೇ ಇಬ್ಬರ ಬಳಿಯೂ ಮಾಡಬೇಕಾದ ಕಾರ್ಯಗಳನ್ನು ವಿವರಿಸಿದ. ಆ ಪ್ರಕಾರವಾಗಿ ಕಾರ್ಯಪ್ರವೃತ್ತರಾದರು.

(ಮುಂದುವರಿಯುತ್ತದೆ)

Saturday, October 11, 2014

ಪ್ಯಾಟೆ ದನಗಳ ಹಳ್ಳಿ ಲೈಪು

ಒಂದು ದಿನ ಪೇಟೆಯ ದನಗಳು
ಹಳ್ಳಿಯ ಕಡೆಗೆ ವಲಸೆ ಹೊರಟವು |
ಪೇಟೆ ಬೇಜಾರಾಗಿಬಿಟ್ಟಿದೆ
ಹಳ್ಳಿ ಬದುಕು ಮಜಾ ಮಾಡೋಣ
ಎಂದು ಧಾವಿಸಿದವು |

ಹಳ್ಳಿಗೇನೋ ಬಂದೇಬಿಟ್ಟವು
ಎಲ್ಲವೂ ಚಿತ್ರ ವಿಚಿತ್ರ |
ಹಳ್ಳಿಯಲ್ಲೂ ದನಗಳಿವೆ
ಬಡಕಲು ಶರೀರಿ ಸಾಧು |
ಪೊಗರು ಮಾಡೋದಿಲ್ಲ |
ಅಲ್ಲೆಲ್ಲೋ ವಾಹನ ಬಂದರೂ
ದೂರಕೆ ಓಡ್ತಾವಲ್ಲ ||

ನಮ್ಮಲ್ಲೆಲ್ಲೂ ಹಂಗೇನಿಲ್ಲ..
ಗಾಡಿಯ ಸದ್ದಿಗೆ ಹೆದರೋದಿಲ್ಲ
ಉಜ್ಜಿಕೊಂಡೇ ಸಾಗುವವರು ನಾವು |
ಬೇಕಾದ್ರೆ ಜೀವ
ಉಳಿಸ್ಕೋಬೇಕು ನೀವು ||

ಹಳ್ಳಿದನಗಳು ತಿಂತಾವಂತೆ
ಅದೇನೋ ಹಸಿರು ಹುಲ್ಲು |
ನಮ್ ಬಾಯಿಗೆ ಅದು ರುಚಿಸೋದಿಲ್ಲ
ಹುಲ್ಲಿನ ರುಚಿ ಗೊತ್ತೇ ಇಲ್ಲ |
ನಮ್ಮದೇನಿದ್ರೂ ಪ್ಲಾಸ್ಟೀಕ್ ಚೀಲ
ಗೋಡೆಮೇಲಿನ ಕಾಗದ ಎಲ್ಲೋ ||

ನಗರದ ಹಸುಗಳು ನಾವೇನಿದ್ದರು
ನೋಡಲು ದಷ್ಟಪುಷ್ಟ |
ಹಳ್ಳಿ ಹಸುಗಳು ಎಲುಬು ಚಕ್ಕಳ
ಪಾಪ ಕಷ್ಟ ಕಷ್ಟ ||

ನಗರದ ತುಂಬ ನಾವೇ ರಾಜರು
ಬಿಡಾಡಿ ದನಗಳು ನಾವು |
ಕೇಳೋರಿಲ್ಲ ಕಟ್ಟೋರಿಲ್ಲ
ಸ್ವರ್ವ ಸ್ವತಂತ್ರರ ತಾವು |

ಹಳ್ಳಿ ದನಗಳಿಗೆ ಹಗ್ಗದ ಬಂಧನ
ಬಿಚ್ಚಲೆ ಬೇಕು ಹಗ್ಗ |
ಕಟ್ಟ ಬೇಕು, ಅಟ್ಟಬೇಕು
ಸ್ವಾತಂತ್ರ್ಯವೇ ಇಲ್ಲ ||

ನಗರದ ಬೀದಿಯು ನಮಗೆ ಜಗತ್ತು
ನಮಗ್ಯಾರ ಹಂಗಿಲ್ಲ |
ಓಡಿದರೂನೂ ಕುಣಿದರೂನೂ
ನಮ್ಮನು ಕೇಳೋರಿಲ್ಲ ||

ರಸ್ತೆಯೇ ನಮ್ಮ ಮನೆ
ರಸ್ತೆಯೇ ಹಾಸಿಗೆ
ಹಳ್ಳೀಲಿ ಹೀಗೇನಿಲ್ಲ |
ಕೊಟ್ಟಿಗೆಯಂತೆ ಕಟ್ಟಿ ಹಾಕುವರು
ಕುತ್ತಿಗೆಗೊಂದು ಹಗ್ಗ ||
ಹೊಟ್ಟೆಗೆ ಅಷ್ಟು ಹುಲ್ಲು, ನೀರು
ಹಾಲಿನ ಬಯಕೆ ಪಕ್ಕಾ ||

ಹಳ್ಳಿ ದನಗಳು ಹಾಲನು ಕೊಡದಿರೆ
ಬೆನ್ನಿನ ಮೇಲೆ ಏಟು |
ಅಯ್ಯೋ ಪಾಪ ಅವರ ಪಾಡು
ರೂಪಾಯಿ ಲೆಕ್ಕದ ನೋಟು ||

ನಮ್ಮ ಬದುಕು ನಮಗೆ ಚೆಂದ
ಹಳ್ಳಿ ಬದುಕು ಕಷ್ಟ.
ವಯಸ್ಸಾದರೆ ಕಟುಕನ ಮನೆಗೆ
ಅಟ್ಟುವುದೇ ಪಕ್ಕ ||

ಬೇಡವೇ ಬೇಡ ಹಳ್ಳಿ ಬದುಕು
ಎಂದವು ನಗರದ ಹಸುಗಳು
ಹಳ್ಳಿಗಿಂತ ನಗರವೇ ವಾಸಿ
ಎನ್ನುತ ನಗರಕೆ ಮರಳಿದವು |
ಹಳ್ಳಿ ಬದುಕಿಗೆ ಹೆದರಿದವು |
ಮತ್ತೆ ನಗರಕೆ ಓಡಿದವು ||