Thursday, October 9, 2014

ಕನಸಿನ ಕನ್ಯೆ ನಿನ್ನ ನೋಡಿ.. (ಪ್ರೇಮಪತ್ರ-14)

(ಚಿತ್ರ : ವಿನಾಯಕ ಹೆಗಡೆ)
ಓಹ್ ಗೆಳತಿ..

        ನಿಜವಾ ಇದು. ನನ್ನೆದುರು ನಿಂತಿದ್ದು ನೀನೇ ಹೌದಾ ಎಂದು ಮತ್ತೆ ಮತ್ತೆ ಪರೀಕ್ಷೆ ಮಾಡಿಕೊಂಡು ಪತ್ರಿಸುತ್ತಿದ್ದೇನೆ ಗೆಳತಿ. ಕನಸಲ್ಲ. ಸತ್ಯ ಎನ್ನುವುದು ರುಜುವಾತಾದಾಗ ನನಗಾದ ರೋಮಾಂಚನ ಬಣ್ಣಿಸಲು ಪದಗಳು ಸಾಲುತ್ತಿಲ್ಲ.
         ಗೆಳತಿ, ನೀನು ನನ್ನ ಪರಿಚಯವಾಗಿದ್ದು ಹೇಳಿಯೇಬಿಡುತ್ತೀನಿ. ಇಲ್ಲವಾದರೆ ಏನೋ ಬಾಕಿ ಉಳಿಸಿದ ಹಾಗೆ ಆಗುತ್ತದೆ ನೋಡು. ಆವತ್ತು ಇದ್ದಕ್ಕಿದ್ದಂತೆ ನನಗೆ ಮಿಸ್ ಕಾಲ್ ಬಂದಿತ್ತು. ನಾನು ಅದಕ್ಕೆ ತಿರುಗಿ ಪೋನ್ ಮಾಡಿದ್ದಾಗ `ಹಲೋ..' ಎಂದಿದ್ದು ನೀನೇ ಅಲ್ಲವಾ.. ಅದೆಂತಹ ಇಂಪಾದ ಮಾತು ನಿನ್ನದು. ನಾನು ಪೋನ್ ಮಾಡುತ್ತಿದ್ದವನು ಒಮ್ಮೆ ಸುಮ್ಮನಾಗಿಬಿಟ್ಟಿದ್ದೆ. ನೀನೆ ಮುಂದುವರಿದು `ಯಾರಿದು ಮಾತಾಡ್ರೀ..' ಎಂದಿದ್ದೆ. ಕೊನೆಗೆ ನಾನು ನಿನ್ನ ಬಳಿ `ಮೊಸ್ ಕಾಲು ಕೊಟ್ಟವರು ನೀವು. ನನ್ನ ಬಳಿ ಯಾರು ಅಂತ ಕೇಳಿದರೆ ಹೇಗೆ..?' ಎಂದಿದ್ದೆ. ನಿನಗೆ ಆಗ ಸಿಟ್ಟು ಬಂದಿತ್ತೋ, ಗೊಂದಲವಾಗಿತ್ತೋ ನನಗೆ ನೆನಪಿಲ್ಲ. ಕೊನೆಗೆ ನೀನು `ಹೇಯ್ ನೀವು ಅವರಲ್ಲವಾ...' ಎಂದಿದ್ದೆ. ನಾನು ಹೌದು ಎಂದಾಗ `ನಿಮ್ಮ ಬರವಣಿಗೆಗೆ ನಾನು ಬಹಳ ಫಿದಾ ಆಗಿಬಿಟ್ಟಿದ್ದೇನೆ. ನಿಮ್ ಕಥೆ ಚನ್ನಾಗಿದೆ ಕಣ್ರೀ ಎಂದಿದ್ದೆ..' ಅಲ್ಲವಾ. ಆಗಲೇ ನಿನ್ನ ಇಂಪಾದ ಮಾತಿಗೆ ನಾನು ಮರುಳಾಗಿದ್ದೆ. ಹೆಸರೇನು ಅಂತ ಕೇಳಿದಾಗ `ಪಾರಿಜಾತ..' ಅಂದಿದ್ದೆ. ನಾನು ಬೆರಗಿನಿಂದ `ಅಂತಹ ಹೆಸರು ಇಡ್ತಾರಾ..' ಎಂದು ಬೆಪ್ಪಾಗಿ ಕೇಳಿದ್ದೆ. ನೀನು ಪ್ರತಿಯಾಗಿ `ಯಾಕೆ ಇಡಬಾರದು..?' ಎಂದಿದ್ದೆ. ನಿನ್ನ ಹೆಸರು ನನಗೆ ಆಗಲೇ ಆಪ್ತವಾಗಿತ್ತು. ಇಷ್ಟವಾಗಿತ್ತು.
          ಆ ನಂತರ ನೀನು ಪದೇ ಪದೆ ಪೋನ್ ಮಾಡುವುದು, ಅದೂ ಇದೂ ಸುದ್ದಿ ಹೇಳುವುದು ನಡೆದೇ ಇತ್ತು. ನೀನು ಪೋನ್ ಮಾಡಿದಾಗಲೆಲ್ಲ ನಾನು ಖುಷಿಯಿಂದಲೇ ಉತ್ತರ ನಿಡುತ್ತಿದ್ದೆ. ಹರಟೆ ಹೊಡೆಯುತ್ತಿದ್ದೆ. ಕೊನೆ ಕೊನೆಗಂತೂ ನಿನ್ನ ಪೋನ್ ಯಾವಾಗ ಬರುತ್ತದೆಯೋ ಎಂದು ಕಾಯುತ್ತ ಕುಳಿತುಬಿಡುತ್ತಿದ್ದೆ. ಹೀಗೆ ನೀನು ನನ್ನನ್ನು ಆವರಿಸಿಕೊಂಡಿದ್ದು ಎಂದರೆ ತಪ್ಪಿಲ್ಲ ನೋಡು. ಆಮೇಲೆ ಆಮೇಲೆ ನೀನಿಲ್ಲದ ಜಗತ್ತೇ ಇಲ್ಲ ಅನ್ನಿಸತೊಡಗಿದ್ದು ಸುಳ್ಳಲ್ಲ.
ನೀನೆಂದರೆ ನನ್ನೊಳಗೆ ಏನೋ ಒಂದು ಸಂಚಲನ
ನಾ ಬರೆಯದ ಕವಿತೆಗಳ.. ನೀನೆ ಒಂದು ಸಂಕಲನ
             ಈ ಹಾಡು ನನ್ನ ಪಾಲಿಗೆ ಪರಮಾಪ್ತ. ಪದೇ ಪದೆ ನಾನು ಈ ಹಾಡನ್ನು ಗುನುಗುತ್ತ ಇರುತ್ತೇನೆ. ನಿನ್ನ ಜೊತೆಗೆ ಸಖ್ಯ ಬೆಳೆದ ನಂತರ ನಾನು ಈ ಈ ಹಾಡನ್ನು ಅದೆಷ್ಟು ಸಹಸ್ರ ಸಾರಿ ಹಾಡಿದ್ದೆನೋ ಲೆಕ್ಖವಿಲ್ಲ ಬಿಡು. ನಿನ್ನ ನೆನಪಾದಾಗಾಲೆಲ್ಲ ಈ ಹಾಡು ತನ್ನಿಂದ ತಾನೇ ನನ್ನ ಬಾಯಲ್ಲಿ ಗುನುಗುತ್ತದೆ. ಮನಸ್ಸು ತನ್ನಿಂದ ತಾನೇ ರೋಮಾಂಚನಗೊಳ್ಳುತ್ತದೆ.
             ಮೊನ್ನೆ ತಾನೆ ನೀನು ಹೇಳಿದ್ದೆ ಸಿಗಬೇಕು ಮಾರಾಯಾ.. ಅಂತ. ನಾನು ಮತ್ತಷ್ಟು ಖುಷಿಯಾಗಿದ್ದೆ ಆಗ. ನೀನು ಬಂದಿದ್ದು, ಮಾತಾಡಿಸಿದ್ದು, ನಿನ್ನ ಜೊತೆಗೆ ಕಾಫಿಡೇಯಲ್ಲಿ ಕಾಫಿ ಕುಡಿದಿದ್ದು ಎಲ್ಲವೂ ನನಗೆ ಕನಸಂತೆ ಇದೆ. ಎದುರಿಗೆ ಬಂದ ನೀನು ನನಗೆ ಒಮ್ಮೆ ಸ್ವರ್ಗದಿಂದಿಳಿದ ದೇವತೆಯಂತೆ ಕಂಡಿದ್ದೆ. ನೀನು ಎದುರು ಬಂದು ಮಾತನಾಡಿಸುತ್ತಿದ್ದಾಗಲಂತೂ ನನಗೆ ಅದು ಕನಸಾ, ನನಸಾ ಎನ್ನುವುದು ತಿಳಿಯಲಿಲ್ಲ. ಪೆಚ್ಚಾಗಿ ನಿಂತು ನೋಡುತ್ತಲೇ ಇದ್ದೆ. ನೀನು ಬಂದು ಒಂದೆರಡು ಸಾರಿ ಹಾಯ್ ಅಂದಾಗ ನನಗೆ ತಿಳಿದೇ ಇರಲಿಲ್ಲ. ಕೊನೆಗೊಮ್ಮೆ ವಾಸ್ತವಕ್ಕೆ ಬಂದಿದ್ದೆ. ನನ್ನ ಪಾಲಿನ ಕನಸಿನ ಕನ್ಯೆ ನೀನು. ನೀನು ಎದುರಿಗೆ ಬಂದಿದ್ದು ನನಗೆಷ್ಟು ಖುಷಿಕೊಟ್ಟಿತು ಗೊತ್ತಾ? ಅದೇ ಕಾರಣಕ್ಕೆ ಬಹು ದಿನಗಳ ನಂತರ ನಾನು ಮತ್ತೊಮ್ಮೆ ಬರವಣಿಗೆಗೆ ಕುಳಿತಿದ್ದು.
            ಈಗ ತಾನೇ ಮಳೆ ಬಂದಿ ನಿಂತಿದೆ. ಧೋ ಎಂದು ಮೂರ್ನಾಲ್ಕು ತಾಸು ಮಳೆ ಸುರಿದಿತ್ತು. ಗುಡುಗು, ಸಿಡಿಲು ಕೂಡ ಅಬ್ಬರಿಸಿತ್ತು.  ಅಪರೂಪಕ್ಕೆ ಕರೆಂಟ್ ಇರಲಿಲ್ಲ. ಮನಸ್ಸು ಕೂಡ ಮೌನವಾಗಿತ್ತು. ಮನಸೋಇಚ್ಛೆ ಸುರಿದ ಮಳೆ ನಿಂತ ಮೇಲೆ ನಿನ್ನ ನೆನಪು ಮತ್ತಷ್ಟು ಜೋರಾಗುತ್ತಿದೆ. ಮಳೆ ಸುರಿದ ನಂತರವೂ ಹನಿಗಳು ಪಟಪಟಿಸುತ್ತಿವೆ. ಈ ಕ್ಷಣ ನೀನು ನನ್ನ ಜೊತೆಗಿದ್ದಿದ್ದರೆ ಸುಮ್ಮನೆ ಒಂದು ವಾಕ್ ಮಾಡಬಹುದಿತ್ತು. ಕೈ ಕೈ ಹಿಡಿದು ಬಹುದೂರ ಸಾಗಬಹುದಿತ್ತು. ಖಾಲಿ ಪೀಲಿ ಕಥೆಗಳನ್ನೋ, ಸುಳ್ಳೆ ಪಿಳ್ಳೆ ಸುದ್ದಿಗಳನ್ನೂ ಖುಷಿಯಿಂದ ಹಂಚಿಕೊಳ್ಳಬಹುದಿತ್ತು ಅನ್ನಿಸುತ್ತಿದೆ.
            ನಿಜ ಹೇಳಿಬಿಡುತ್ತೇನೆ ಗೆಳತಿ.. ನೀನು ನನ್ನ ಬರಹಗಳ, ಕವಿತೆಗಳ ಅಭಿಮಾನಿಯೇ ಇರಬಹುದು. ಆದರೆ ನಾನು ಬರೆಯದೇ ಅನೇಕ ವಸಂತಗಳೇ ಕಳೆದಿದ್ದವು ನೋಡು. ನಿನ್ನ ಸಖ್ಯ ಬೆಳೆದ ನಂತರವೇ ನಾನು ಮತ್ತೊಮ್ಮೆ ಬರವಣಿಗೆಯತ್ತ ಮುಖಮಾಡಿದ್ದು. ಇವತ್ತಂತೂ ಬಹಳ ಕವಿತೆಗಳು ಮನದಲ್ಲಿ ಮೂಡುತ್ತಿವೆ. ಬೇಡ ಬೇಡ ಎಂದರೂ ಮನಸಿನೊಳಗಳ ಬಾವಗಳು ಅಕ್ಷರದ ರೂಪವನ್ನು ತಾಳಿ ಹೊರಬರುತ್ತಿವೆ.
             ಇದನ್ನು ನಾನು ಪ್ರೇಮವೆನ್ನಲಾ? ಅಥವಾ ಸ್ನೇಹಕ್ಕಿಂತ ಮಿಗಿಲಾದ ಇನ್ನೊಂದು ರೂಪವೆನ್ನಲಾ. ಗೊಂದಲದಲ್ಲಿದ್ದೇನೆ. ನೀನು ನನ್ನನ್ನು ಭೇಟಿ ಮಾಡಿ ಹೋದ ಅರ್ಧಗಂಟೆಯಲ್ಲೇ ಮತ್ತೆ ಪೋನ್ ಮಾಡಿ ಮಾತಾಡಿದೆಯಲ್ಲ. ನನ್ನ ಮನದ ಹಕ್ಕಿಗೆ ಮತ್ತೆ ರೆಕ್ಕೆ ಬಲಿತಂತಾಗಿದೆ. ಖುಷಿಯಿಂದ ಬಾನನ್ನು ಮುಟ್ಟುವ ಸಡಗರ ತುಂಬಿಕೊಂಡಿದೆ.
              ಕಾಲೇಜು ದಿನಗಳಲ್ಲಿ ನನ್ನಿಂದ ಅನೇಕ ಜನರು ಪ್ರೇಮಪತ್ರ ಬರೆಸಿಕೊಂಡು ಹೋಗಿದ್ದಾರೆ. ಹಲವರ ಪ್ರೇಮ ಸಕ್ಸಸ್ಸಾಗಿದೆ. ಮತ್ತೆ ಕೆಲವರು ನಾನು ಬರೆದುಕೊಟ್ಟ ಪ್ರೇಮಪತ್ರ ಕೊಟ್ಟು ಬೈಸಿಕೊಂಡವರೂ ಇದ್ದಾರೆ. ಒಂದಕ್ಷರ ನೆಟ್ಟಗೆ ಬರೆಯಲಿಕ್ಕೆ ಬರದವನು ಉದ್ದದ, ಚೆಂದದ ಪ್ರೇಮಪತ್ರ ಹೇಗೆ ಬರೆದುಕೊಟ್ಟ ಎಂದು ಅನುಮಾನ ಮೂಡಿ ವಿಚಾರಿಸಿದ್ದರು. ನಾನು ಬರೆದುಕೊಟ್ಟಿದ್ದು ಗೊತ್ತಾಗಿತ್ತು. ಪಾ..ಪ. ಅವರ ಪ್ರೇಮದ ಸೌಧ ಉದುರಿ ಬಿದ್ದಿತ್ತು. ಎಂತಾ ತಮಾಷೆ ಅಲ್ಲವಾ? ಇಷ್ಟಾದರೂ ಆ ದಿನಗಳಲ್ಲಿ ನಾನು ನನಗೆ ಅಂತ ಯಾರಿಗೂ ಪ್ರೇಮಪತ್ರ ಬರೆದೇ ಇರಲಿಲ್ಲ ನೋಡು. ಯಾರಿಗೂ ಬರೆಯಬೇಕು ಅನ್ನಿಸಲಿಲ್ಲ. ಇಷ್ಟವೂ ಆಗಿರಲಿಲ್ಲ. ಕಾಲೇಜು ಮುಗಿದ ನಂತರ ಇದೀಗ ನೀನು ಇಷ್ಟವಾಗಿದ್ದೀಯ. ನನಗಾಗಿ ಪತ್ರ ಬರೆಯುತ್ತಿದ್ದೇನೆ. ವಿಚಿತ್ರವೆನ್ನಿಸುತ್ತಿರುವುದು ಪ್ರೇಮಪತ್ರ ಬರೆಯುವ ಶೈಲಿ ಬದಲಾಗಿರುವ ಕಾರಣಕ್ಕೆ. ಆಗ ಬರೆಯುತ್ತಿದ್ದ ಶೈಲಿಗೂ ಈಗಿನದ್ದಕ್ಕೂ ಅಜಗಜಾಂತರ ವ್ಯತ್ಯಾಸವಾಗಿದೆ. ಅದ್ಯಾರದ್ದೋ ಪ್ರೇಮ ಕ್ಲಿಕ್ಕಾಗಲಿ ಎನ್ನುವ ಕಾರಣಕ್ಕೆ ನಾನು ಬರೆದುಕೊಡುತ್ತಿದ್ದ ಪತ್ರಗಳು ಬಹಳ ಚನ್ನಾಗಿ ಇರುತ್ತಿದ್ದವು. ಆದರೆ ನನಗಾಗಿ ಬರೆದುಕೊಳ್ಳುತ್ತಿರುವ ಈ ಪತ್ರ ಅದೆಷ್ಟು ಸಾರಿ ಬರೆದರೂ ಅಪೂರ್ಣ ಎನ್ನಿಸುತ್ತಿದೆ. ಅದೇನೋ ಕೊರತೆಯಾಗಿದೆ ಎಂದುಕೊಳ್ಳುತ್ತಿದ್ದೇನೆ. ಅದಕ್ಕಾಗಿಯೇ ಬರೆದು ಬರೆದು ನಾಲ್ಕಾರು ಸಾರಿ ಹರಿದು ಹಾಕಿದ್ದೇನೆ. ಈ ಪತ್ರವೂ ನನಗಷ್ಟು ತೃಪ್ತಿ ಕೊಟ್ಟಿಲ್ಲ. ಆದರೂ ನಿನಗೆ ಕಳಿಸುತ್ತಿದ್ದೇನೆ.
             ನೀನು ನನಗೆ ಬಹಳ ಇಷ್ಟವಾಗಿದ್ದೀಯಾ ಗೆಳತಿ. ನಿನ್ನ ನಡೆ, ನುಡಿಗಳು ಬಹಳ ಆಪ್ತವಾಗಿದೆ. ಮೇಲ್ನೋಟಕ್ಕೆ ಮನಸ್ಸು ನಿಷ್ಕಲ್ಮಷವೇನೋ ಅನ್ನಿಸುತ್ತಿದೆ. ನಿನ್ನ ನುಗುವಿದೆಯಲ್ಲ. ಅದಕ್ಕೆ ನಾನು ದಾಸನಾಗಿಬಿಟ್ಟಿದ್ದೇನೆ. ಕೆಲವರಿಗೆ ನಗು ಅದೆಷ್ಟು ಭೂಷಣ ಅಲ್ಲವಾ? ನಿನಗೆ ಅದು ಒಂದು ತೂಕ ಹೆಚ್ಚೇ ಎನ್ನಬಹುದೇನೋ. ನಾನು ನಿನ್ನನ್ನು ಇಷ್ಟಪಟ್ಟಿದ್ದೇನೆ. ನಿನ್ನ ಭಾವನೆಗಳನ್ನು ತಿಳಿಸು ಅಂತ ನೇರಾನೇರ ಹೇಳಿಬಿಡುತ್ತೇನೆ ಗೆಳತಿ. ಗೊಂದಲ ಬೇಡ ಎನ್ನುವ ಕಾರಣಕ್ಕೆ ಈ ನಿರ್ಧಾರ.
ನಿನ್ನ ಭಾವವ ನಾನು ತಿಳಿಯೆ
ಮನದ ತುಂಬ ನೀನೇ ಇರುವೆ...
ಎಂದು ಹಾಡುವಂತಾಗಿದೆ... ಗೆಳತಿ.. ಹೆಚ್ಚು ಕಾಯಿಸಬೇಡ. ನಿನ್ನೊಳಗೆ ನನ್ನೆಡೆಗೆರುವ ವಿಷಯ ಅರುಹಿಬಿಡು. ನಾನು ಪತ್ರ ಬರೆದೆ ಅಂತ ನೀನೂ ಬರೆಯಬೇಕಿಲ್ಲ ಗೆಳತಿ. ಆಧುನಿಕ ಜಗತ್ತಿನ ಮುಂದುವರಿದ ಯಾವುದಾದರೊಂದು ಮಾರ್ಗದ ಮೂಲಕ ಹೇಳಿದರೂ ಸಾಕು. ಪೋನ್ ಮಾಡು, ಮೆಸೇಜ್ ಮಾಡು.
          ಈ ಪತ್ರವನ್ನು ನೋಡಿ ನೀನು ಸಿಟ್ಟಾಗುವುದಿಲ್ಲ ಎನ್ನುವುದು ನನಗೆ ಗೊತ್ತು. ಆದರೆ ಇಂತವನ ಮನಸ್ಸಿನಲ್ಲಿ ಹೀಗೆಲ್ಲ ಭಾವನೆಗಳು ತುಂಬಿದೆಯಾ ಎಂದುಕೊಳ್ಳುತ್ತೀಯೇನೋ. ಆದರೆ ಇದ್ದಿದ್ದನ್ನು ನೇರವಾಗಿ ಹೇಳುವ ಸ್ವಭಾವ ನನ್ನದು. ನನ್ನ ಮನದೊಳಗಣ ವಿಷಯಗಳನ್ನು ನೇರಾನೇರ ನಿನ್ನ ಮುಂದೆ ಅರುಹಿದ್ದೇನೆ. ನಿಜಕ್ಕೂ ಈ ಸಾಲುಗಳನ್ನೆಲ್ಲ ಬರೆಯುವಾಗ ನಾಣು ಪಟ್ಟ ಪಾಡು ಅಷ್ಟಿಷ್ಟಲ್ಲ. ಹೀಗೆ ಬರೆಯಲಾ, ಹಾಗೆ ಬರೆಯಲಾ ಎಂದೆಲ್ಲ ಆಲೋಚಿಸಿದ್ದೆ. ಹೇಗ್ಹೇಗೋ ಬರೆಯಬೇಕು, ಬರೆಯಬಹುದು ಎಂದುಕೊಂಡಿದ್ದೆ. ಆದರೆ ಬರೆಯಲು ಕುಳಿತಾಗ ಮಾತ್ರ ಅವೆಲ್ಲ ಮರೆತೇ ಹೋಗಿದ್ದವು ನೋಡು. ಏನೇನೋ ಅಂದುಕೊಂಡಿದ್ದ ನಾನು ಮತ್ತಿನ್ನೇನನ್ನೋ ಬರೆದುಬಿಟ್ಟಿದ್ದೇನೆ. ಆದರೆ ಬೇಸರಿಸಬೇಡ ಗೆಳತಿ. ಪೂರ್ತಿ ಓದುತ್ತೀಯಾ ಎನ್ನುವ ನಂಬಿಕೆ ನನ್ನಲ್ಲಿದೆ.
          ಮೊಬೈಲು, ಮೆಸೇಜು. ಇಂಟರ್ನೆಟ್ಟು, ಫೇಸ್ಬುಕ್ಕು, ವಾಟ್ಸಾಪುಗಳ ಕಾಲದಲ್ಲಿ ಇವನೆಂತ ಪತ್ರ ಬರೆಯುತ್ತಿದ್ದಾನೆ ಎಂದುಕೊಳ್ಳಬೇಡ. ನಿನಗೆ ಅಕ್ಷರಗಳು ಇಷ್ಟ ಎನ್ನುವುದು ನನಗೆ ಗೊತ್ತಿದೆ. ಮುಂದುವರಿದ ಆ ಎಲ್ಲ ತಂತ್ರಜ್ಞಾನಗಳಲ್ಲಿ ಭಾವನೆಗಳನ್ನು ಬಿತ್ತರಿಸುವುದು ಕಷ್ಟ. ಬರಹಕ್ಕೆ, ಪತ್ರಕ್ಕೆ ಮಾತ್ರ ಅಂತಹ ತಾಕತ್ತಿದೆ. ಬೇಸರಿಸಬೇಡ ಗೆಳತಿ.
          ನಿನಗೆ ನಾನು ಇಷ್ಟವಾದರೆ ನನ್ನಂತಹ ಸಂತಸದ ಬಾನಾಡಿ ಇನ್ನೊಬ್ಬನಿಲ್ಲ ಎಂದುಕೊಳ್ಳುತ್ತೇನೆ. ನೀನು ನನ್ನನ್ನು ತಿರಸ್ಕರಿಸಿದರೂ ಬೇಜಾರೇನೂ ಆಗುವುದಿಲ್ಲ. ನನ್ನಂತವನನ್ನು ಪ್ರೀತಿಸುವ ಅರ್ಹತೆ ನಿನಗಿಲ್ಲ. ನನ್ನನ್ನು ನೀನು ಕಳೆದುಕೊಂಡೆ ಎಂದುಕೊಳ್ಳುತ್ತೇನೆ. ಬೇಗ ಉತ್ತರಿಸು ಗೆಳತಿ. ನಿನ್ ಉತ್ತರ ಧನಾತ್ಮಕವಾಗಿರಲಿ ಎನ್ನುವ ಆಶಯ ನನ್ನದು.

ಇಂತಿ
ಜೀವನ್

ನಿರೀಕ್ಷೆ


ಹಸಿದ ಜೀವಿಗಷ್ಟು ಆಹಾರ
ವಿರಹಿಗೆ ಪ್ರೀತಿ
ಎಲ್ಲೆಲ್ಲೂ ಪ್ರತೀಕ್ಷೆ
ಬಾಳ ಪಯಣದಲ್ಲೆಲ್ಲ ನಿರೀಕ್ಷೆ ||

ಬೆಂದ ಭುವಿಯೊಡಲಿಗಷ್ಟು ಮಳೆ
ನಿರಭ್ರ ಮೌನಕ್ಕೆರಡು ಉಲಿ
ಮಕ್ಕಳಿಲ್ಲದ ಮನದ ಬಯಕೆ
ಪ್ರತಿಯೊಂದೂ ನಿರೀಕ್ಷೆ ||

ಜೀವಸಂಕುಲದೊಡಲಿಗೆ ನಿಶೆ ಕಳೆಯೋ ವೇಳೆ
ಆ ಅರ್ಕನಾಗಮನದ
ತಿಳಿಬಿಸಿಲ ಹೊಂಬೆಳಕ ಆಸೆ
ಜೀವಿಸುವೊಲು ನಿರೀಕ್ಷೆ ||

ಬಾಳ ಪಯಣದ ಪಥದಿ
ಕಷ್ಟಗಳೆದುರಾಗಿರಲು
ಮೆಟ್ಟಿ ನಿಲ್ವೆನೆಂಬ ಛಲದಿ
ಗೆಲುವೆನೆಂಬ ನಿರೀಕ್ಷೆ ||

ಭಕುತನಾ ಹಲ ಭಕುತಿ
ದೇವ ಕೇಳುವನೆನೋ
ಎದುರು ಮೂಡುವನೇನೋ
ಎನುವುದೊಂದು ನಿರೀಕ್ಷೆ ||

ಕೆಟ್ಟ ಮಗ ಹಿಡಿದ
ಹಾದಿ ಸರಿಯಾಗಲು
ಹೆತ್ತೊಡಲು ಬಯಸೋ 
ಹಿತವೇ ನಿರೀಕ್ಷೆ  ||

***
(ಈ ಕವಿತೆಯನ್ನು ಬರೆದಿರುವುದು 03-07-2006ರಂದು ದಂಟಕಲ್ಲಿನಲ್ಲಿ)

Wednesday, October 8, 2014

ಬೆಂಗಾಲಿ ಸುಂದರಿ-29


          ಬೆಳೆದು ನಿಂತ ಪೈರಿನ ನಡುವೆ ಅಡಗಿ ಕೂರುವುದು ಸುಲಭದ ಕೆಲಸವಾಗಿರಲಿಲ್ಲ. ಮಧುಮಿತಾಳಂತೂ ಭಯದಿಂದ ಥರಗುಟ್ಟುತ್ತಿದ್ದಳು. ಭಯದಿಂದ ವಿನಯಚಂದ್ರನನ್ನು ಯಾವ ರೀತಿ ಹಿಡಿದುಕೊಂಡಿದ್ದಳೆಂದರೆ ವಿನಯಚಂದ್ರ ತತ್ತರಿಸಿದ್ದ. ಪೊಲೀಸರು ಅಲ್ಲೇ ಇದ್ದಾರಾ? ಹೋದರಾ ಒಂದೂ ಗೊತ್ತಾಗಲಿಲ್ಲ. ಗುಂಡು ಸಿಡಿದ ಸದ್ದು ಕೇಳಿಸಿತ್ತು, ಹೆದರಿಸಲು ಹೊಂದು ಹೊಡೆದರಾ? ಅಥವಾ ಗುಂಡು ಯಾರಿಗಾದರೂ ತಗುಲಿದೆಯಾ? ತಮ್ಮಿಬ್ಬರಿಗೂ ಏನೂ ಆಗಿಲ್ಲ. ಜೊತೆಯಲ್ಲಿ ಬಂದಿದ್ದ ಸಲೀಂ ಚಾಚಾ ಮಾತ್ರ ಕಾಣುತ್ತಿಲ್ಲ. `ಓಡಿ...' ಎಂದು ಸಲೀಂ ಚಾಚಾ ಹೇಳಿದ್ದಷ್ಟೇ. ಹಿಂದಕ್ಕೆ ತಿರುಗಿ ನೋಡದೇ ಓಡಿದ್ದೆವಲ್ಲ.  ಓಡುವ ಭರದಲ್ಲಿ ಆತ ಓಡಿದನೇ, ಪೊಲೀಸರ ಕೈಗೆ ಸಿಕ್ಕಿಕೊಂಡನೇ ಒಂದೂ ಗಮನಿಸಲಿಲ್ಲವಲ್ಲ. ಛೇ.. ಆತ ತಪ್ಪಿಸಿಕೊಂಡರೆ ಸಾಕಿತ್ತು ಎಂದುಕೊಂಡರು ಮಧುಮಿತಾ ಹಾಗೂ ವಿನಯಚಂದ್ರರು.
             ಪೊಲೀಸರು ಬಂದಿದ್ದೇನೋ ಸರಿ. ಆದರೆ ಅವರೇ ನಮ್ಮನ್ನು ಬೆನ್ನಟ್ಟಿದರು? ಅವರು ನಮ್ಮನ್ನು ಬೆನ್ನಟ್ಟಿದ್ದೇ ಹೌದಾ? ಗುಂಡು ಹಾರಿಸಿದ್ಯಾಕೆ? ಎಂಬುದು ಬಗೆಹರಿಯಲಿಲ್ಲ. ಬಹುಶಃ ಹಿಂಸಾಚಾರಿಗಳನ್ನು ಪೊಲೀಸರು ಹುಡುಕುತ್ತ ಸಾಗಿರಬೇಕು. ಅವರ ಕಣ್ಣಿಗೆ ದಾರಿಯಲ್ಲಿ ನಡೆಯುತ್ತ ಬಂದಿದ್ದ ನಾವು ಕಾಣಿಸಿರಬೇಕು. ನಮ್ಮ ಚಲನವಲನದ ಮೇಲೆ ಕಣ್ಣಿಟ್ಟು ಬರುತ್ತಿದ್ದ ಪೊಲೀಸರಿಗೆ ನಮ್ಮಲ್ಲಿ ಅದೇನೋ ಅನುಮಾನ ಮೂಡಿಸುವ ಅಂಶಗಳು ಕಾಣಿಸಿರಲೇಬೇಕು. ಸಲೀಂ ಚಾಚಾ `ಓಡಿ..' ಹೇಳದೇ ಇದ್ದಿದ್ದರೆ ತಮ್ಮ ಮೇಲೂ ಗುಂಡು ಹಾರಿಸುತ್ತಿದ್ದರೇನೋ. ಅಥವಾ ನಾವು ಓಡಿದ್ದನ್ನು ಕಂಡೇ ಗುಂಡು ಹಾರಿಸಿದರೋ. ಯಾಕೋ ಆಲೋಚಿಸಿದಷ್ಟೂ ಗೋಜಲು ಗೋಜಲಾಗುತ್ತಲೇ ಸಾಗಿತ್ತು. ಹದಿನೈದು ನಿಮಿಷ ಕಾದರು. ಈ ಕಾಯುವಿಕೆಯೆನ್ನುವುದು ಬಿಸಿಲಿಗೆ ಕಾದಿದ್ದ ಬಂಡೆಗಲ್ಲಿನ ಮೇಲೆ ನಿಂತ ಅನುಭವವನ್ನು ನೀಡಿತ್ತು. ಅಡಗಿ ಕುಳಿತವರಿಗೆ ಚಡಪಡಿಕೆ ಶುರುವಾಗಿತ್ತು. ಅಡಗಿ ಕುಳಿತಲ್ಲಿಂದ ರಸ್ತೆ ಸರಿಯಾಗಿ ಕಾಣುತ್ತಿರಲಿಲ್ಲ. ರಸ್ತೆಯಲ್ಲಿ ವಾಹನ ಹೋದ ಸದ್ದೂ ಕೇಳುತ್ತಿರಲಿಲ್ಲ.
            ವಿನಯಚಂದ್ರ ನಿಧಾನವಾಗಿ ಎದ್ದು ಬೆಳೆದಿದ್ದ ಪೈರಿನ ನಡುವಿನಿಂದ ಇಣುಕಿದ. ರಸ್ತೆಯಲ್ಲಿ ಯಾರೂ ಕಾಣಲಿಲ್ಲ. ಪೊಲೀಸರು ಹೋಗಿದ್ದಾರೆನ್ನಿಸಿತು. ಮಧುಮಿತಾಳಿಗೆ ಸನ್ನೆ ಮಾಡಿ ಹೆಜ್ಜೆಯ ಮೇಲೆ ಹೆಜ್ಜೆಯನ್ನಿಡುತ್ತಾ ಕಳ್ಳ ಬೆಕ್ಕಿನಂತೆ ಮುಂದಕ್ಕೆ ಬಂದ. ರಸ್ತೆಯ ಹತ್ತಿರ ಹತ್ತಿರಕ್ಕೆ ಬಂದಂತೆಲ್ಲ ಯಾರೂ ಇಲ್ಲದ್ದು ಸ್ಪಷ್ಟವಾಯಿತು. ನಿರಾಳವಾದ. ಮುಂದಕ್ಕೆ ಸಾಗಿದ. ಮಧುಮಿತಾ ಹಿಂಬಾಲಿಸಿದಳು. ರಸ್ತೆಯನ್ನು ಬಳಸಿದರೆ ಅಲ್ಲಿ ಯಾರೂ ಇರಲಿಲ್ಲ. ಸಲೀಂ ಚಾಚಾನಿಗಾಗಿ ಹುಡುಕಿದ. ಕಾಣಲಿಲ್ಲ. ದೊಡ್ಡದಾಗಿ `ಚಾಚಾ..' ಎಂದು ಕೂಗಿದ. ಮಧುಮಿತಾಳೂ ಸಲೀಂ ಚಾಚಾನ ಹೆಸರು ಹಿಡಿದು ಕೂಗಲಾರಂಭಿಸಿದ್ದಳು. ಮಾರುತ್ತರ ಬರಲಿಲ್ಲ. ಅರೇ ಚಾಚಾ ಎಲ್ಲಿಗೆ ಹೋದ? ಪೊಲೀಸರು ಆತನನ್ನು ಹೊತ್ತೊಯ್ದರೇ? ಎನ್ನುವ ಅನುಮಾನವೂ ಮೂಡಿ ಮನಸ್ಸಿನಲ್ಲಿ ಭಯದ ಛಾಯೆ ಆವರಿಸಿತು. ಆದರೂ ಹುಡುಕುವುದನ್ನು ಬಿಡಲಿಲ್ಲ.
        ರಸ್ತೆಯ ಇನ್ನೊಂದು ಪಾರ್ಶ್ವದಲ್ಲಿಯೂ ಗದ್ದೆಗಳು ಬೆಳೆದು ನಿಂತಿದ್ದವು. ಮಧುಮಿತಾ ಆ ಕಡೆಯಲ್ಲಿ ಹುಡುಕಾಟ ನಡೆಸಲು ಹೋದಳು. ಕೆಲ ಕ್ಷಣಗಳ ನಂತರ ದೊಡ್ಡಾದಗಿ ಚೀರಿದ ಮಧುಮಿತಾ ವಿನಯಚಂದ್ರನನ್ನು ಕರೆದಳು. ಸಲೀಂ ಚಾಚಾನಿಗಾಗಿ ಹುಡುಕಾಟ ನಡೆಸುತ್ತಿದ್ದ ವಿನಯಚಂದ್ರ ಗಡಬಡಿಸಿ ಓಡಿಬಂದ. ನೋಡಿದರೆ ಗದ್ದೆಯ ಒಐರಿನ ನಡುವೆ ಸಲೀಂ ಚಾಚಾ ಬಿದ್ದುಕೊಂಡಿದ್ದ. ತೊಟ್ಟುಕೊಂಡಿದ್ದ ಬಟ್ಟೆ ರಕ್ತಸಿಕ್ತವಾಗಿತ್ತು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಸಲೀಂ ಚಾಚಾನನ್ನು ಕಂಡಾಕ್ಷಣವೇ ವಿನಯಚಂದ್ರ ಹಾಗೂ ಮಧುಮಿತಾ ಕಂಪಿಸತೊಡಗಿದ್ದರು.
         ವಿನಯಚಂದ್ರ ಸಲೀಂ ಚಾಚಾನನ್ನು ಪರೀಕ್ಷಿಸಿ ನೋಡತೊಡಗಿದ. ಪೊಲೀಸರು ಹೊಡೆದ ಗುಂಡು ಸಲೀಂ ಚಾಚಾನ ಹೊಟ್ಟೆಯನ್ನು ತೂರಿಕೊಂಡು ಹೋಗಿತ್ತು. ಕರುಳಿದ್ದ ಜಾಗದಲ್ಲಿ ದೊಡ್ಡದೊಂದು ರಂಧ್ರವಾಗಿ ಅಲ್ಲಿಂದ ನೆತ್ತರು ಸೋರಿ ಹೋಗಲು ಆರಂಭಿಸಿತ್ತು. ಪರೀಕ್ಷಿಸಿ ನೋಡಿದಾಗ ಸಲೀಂ ಚಾಚಾ ಸತ್ತಿಲ್ಲ ಎನ್ನುವುದು ಗಮನಕ್ಕೆ ಬಂದಿತು. ಆತನಿಗೆ ಗುಂಡು ತಗುಲಿತ್ತು. ಪ್ರಜ್ಞೆ ತಪ್ಪಿತ್ತು. ಅಪಾರ ರಕ್ತಸ್ರಾವ ಆಗಿತ್ತು. ತಕ್ಷಣವೇ ಮಧುಮಿತಾ ತನ್ನ ಚೀಲದಲ್ಲಿದ್ದ ನೀರನ್ನು ತೆಗೆದು ಸಲೀಂ ಚಾಚಾನ ಮುಖಕ್ಕೆ ಚಿಮುಕಿಸಿದಳು. ವಿನಯಚಂದ್ರ ರಣ ಬಿಸಿಲಿನಲ್ಲೂ ತಣ್ಣಗಾಗುತ್ತಿದ್ದ ಆತನ ಪಾದಗಳನ್ನು ನೀವುತ್ತಿದ್ದ. ಕೊಂಚ ಹೊತ್ತಿನ ಬಳಿಕ ಸಲೀಂ ಚಾಚಾನಿಗೆ ಪ್ರಜ್ಞೆ ಮರಳಿತು. ಆದರೆ ಚಾಚಾನಿಗೆ ಮಾತನಾಡಲು ಶಕ್ತಿಯೇ ಇರಲಿಲ್ಲ. ಒಂದೆರಡು ಸಾರಿ ಏನೋ ಹೇಳಲು ಪ್ರಯತ್ನಿಸಿದನಾದರೂ ನಾಲಿಗೆ ಹೊರಳಲಿಲ್ಲ. ನಿತ್ರಾಣನಾಗಿದ್ದ ಸಲೀಂ ಚಾಚಾ ಮಾತನಾಡಲು ಕಷ್ಟಪಡುತ್ತಿದ್ದ. ಮಧುಮಿತಾ ನೀರನ್ನು ಕುಡಿಸಿ ಚಾಚಾನಿಗೆ ಗಾಳಿ ಹಾಕಿದಳು. ಕೆಲ ಸಮಯದ ಬಳಿಕೆ ಸಲೀಂ ಚಾಚಾ ಮಾತನಾಡುವಷ್ಟು ಶಕ್ತಿ ಪಡೆದುಕೊಂಡ.
         `ಬೇಟಾ.. ಈಗ ಗುಂಡು ಹೊಡೆದರಲ್ಲ ಅವರು ಪೊಲೀಸರೇ ಅಲ್ಲ. ಮುಂದೆ ಯಾವುದೋ ಕಡೆ ಪುಂಡಾಟಿಕೆ ನಡೆಯುತ್ತಿದೆ. ಹಿಂಸಾಚಾರ ಜೋರಾಗಿದೆ. ಈ ಗುಂಪು ಅಲ್ಲಿಂದಲೇ ಬಂದಿದೆ. ಪುಂಡರ ಗುಂಪು ಪೊಲೀಸರ ರೀತಿ ವೇಷ ಹಾಕಿಕೊಂಡು ಬಂದಿದೆ. ದೂರದಿಂದ ನಾನು ಇವರನ್ನು ಪೊಲೀಸರು ಎಂದೇ ತಿಳಿದಿದ್ದೆ. ಆದರೆ ತೀರಾ ಹತ್ತಿರಕ್ಕೆ ಬಂದಾಗಲೇ ಇವರು ಪೊಲೀಸರಲ್ಲ ಎನ್ನುವುದು ಅರ್ಥವಾಯಿತು. ಆ ಗುಂಪಿನ ನಡವಳಿಕೆ ಅಸಹಜವಾಗಿತ್ತು. ಪೊಲೀಸರ ಬಳಿ ಇರುವ ಬಂದೂಕಿಗಿಂತ ಇವರ ಬಂದೂಕು ಬೇರೆ ರೀತಿಯಿತ್ತು. ಬಣ್ಣವೂ ಅಷ್ಟೇ ದೂರದಿಂದ ಮಾತ್ರ ಪೊಲೀಸರ ಬಟ್ಟೆ. ಆದರೆ ಹತ್ತಿರದಿಂದ ನೋಡಿದರೆ ಅದರ ಬಣ್ಣವೇ ಬೇರೆ. ಆ ಕಾರಣದಿಂದಲೇ ನಾನು ನಿಮ್ಮ ಬಳಿ ಓಡಿ ಎಂದು ಹೇಳಿದೆ. ನೀವು ಓಡಿ ತಪ್ಪಿಸಿಕೊಂಡಿರಿ. ನಾನೂ ಓಡಿ ತಪ್ಪಿಸಿಕೊಳ್ಳುತ್ತಿದ್ದ ಸಂದರ್ಭದಲ್ಲೇ ಅವರು ಗುಂಡು ಹಾರಿಸಿದರು. ನನ್ನ ದುರಾದೃಷ್ಟ ಗುಂಡು ತಗುಲಿತು..' ಎಂದು ಹೇಳಿದವನಿಗೆ ಮತ್ತೆ ಸುಸ್ತಾಗಿ ಕೆಲಕಾಲ ಸುಮ್ಮನಾದ.
           ವಿನಯಚಂದ್ರ `ಛೇ.. ದ್ರೋಹಿಗಳು...' ಎಂದು ಸಿಡುಕಿದ.
          `ನನ್ನ ಹೊಟ್ಟೆಗೆ ಗುಂಡುಬಿದ್ದಿದೆ. ನಾನು ಖಂಡಿತ ಉಳಿಯುವುದಿಲ್ಲ. ಸಾವು ನನ್ನ ಕಣ್ಣ ಮುಂದೆ ಸುಳಿದಾಡುತ್ತಿದೆ. ನಾನು ಸತ್ತ ತಕ್ಷಣ ನನ್ನ ಬಗ್ಗೆ ತಲೆ ಕೆಡಿಸಿಕೊಳ್ಳದೇ ನೀವು ಮುಂದುವರಿಯಿರಿ. ಭಾರತ ತಲುಪುವವರೆಗೂ ಪ್ರಯಾಣ ಮಾಡುತ್ತಲೇ ಇರಿ. ನಿಮಗೆ ನಾನು ಇಲ್ಲದಿದ್ದರೂ ತೊಂದರೆಯಿಲ್ಲ. ಹೋಗುವ ಮಾರ್ಗದ ಬಗ್ಗೆ ತಿಳಿಸಿದ್ದೇನೆ. ಆ ಪ್ರಕಾರವಾಗಿ ಸಾಗಿ. ಯಾವುದೇ ಅಪಾಯ ಎದುರಾದರೂ ಅದನ್ನು ಎದುರಿಸಿ. ಅಪಾಯ ದೊಡ್ಡದಾಗಿತ್ತೋ ಅದನ್ನು ಪರಿಹಾರ ಮಾಡುವಂತಹ ಶಾರ್ಟ್ ಕಟ್ಟುಗಳನ್ನು ಹುಡುಕಿ ಸಾಗಿ. ನಿಮ್ಮನ್ನು ಭಾರತಕ್ಕೆ ತಲುಪಿಸುವ ಹೊಣೆಗಾರಿಕೆ ನನ್ನದಾಗಿತ್ತು. ಆದರೆ ನಾನು ಅರ್ಧದಲ್ಲಿಯೇ ನಿಮ್ಮನ್ನು ಕೈಬಿಡುವಂತಾಗುತ್ತಿದೆ. ನೀವು ಮುಂದಕ್ಕೆ ಹೋಗಿ ಭಾರತ ಮುಟ್ಟಿದರೆ ನಾನು ನಿರಾಳ. ಸತ್ತ ನಂತರ ಆತ್ಮವೆನ್ನುವುದು ಇದ್ದರೆ ಆಗ ಶಾಂತಗೊಳ್ಳುತ್ತದೆ...' ಎಂದ ಸಲೀಂ ಚಾಚಾ. ಮಾತುಗಳು ತೊದಲಲು ಆರಂಭಗೊಂಡಿದ್ದವು.
           `ಚಾಚಾ.. ಇಲ್ಲ.. ನೀನು ಸಾಯೋದಿಲ್ಲ. ನಿನ್ನನ್ನು ಉಳಿಸಿಕೊಳ್ಳುತ್ತೇವೆ. ನಾವು ತಾಂಗೈಲ್ ನ ಹೊರ ವಲಯದಲ್ಲೇ ಇದ್ದೇವೆ. ಇಲ್ಲೇ ಎಲ್ಲಾದರೂ ಆಸ್ಪತ್ರೆ ಇದ್ದೇ ಇರುತ್ತದೆ. ನಿನ್ನನ್ನು ಅಲ್ಲಿಗೆ ಕರೆದುಕೊಂಡು ಹೋಗುತ್ತೇವೆ..' ಎಂದು ವಿನಯಚಂದ್ರ ಹೇಳಿದವನೇ ಸಲೀಂ ಚಾಚಾನನ್ನು ಎತ್ತುಕೊಳ್ಳಲು ಮುಂದಾದ. ಆಗ ಸನ್ನೆಯ ಮೂಲಕವೇ ಬೇಡ ಎಂದ ಸಲೀಂ ಚಾಚಾ.
             `ಬೇಟಾ.. ಬೇಡ. ಉಪಯೋಗವಿಲ್ಲ. ನೀನೆಷ್ಟೇ ಶತಪ್ರಯತ್ನ ಮಾಡಿದರೂ ನಾನು ಬದುಕುವುದಿಲ್ಲ. ನೀನು ನನ್ನನ್ನು ಹೊತ್ತುಕೊಂಡು ಹೋಗುವುದು, ಹತ್ತಾರು ಕಿಲೋಮೀಟರ್ ಅಲೆಯುವುದು, ಆಸ್ಪತ್ರೆ ಹುಡುಕುವುದು, ಆಸ್ಪತ್ರೆಯಲ್ಲಿ ವೈದ್ಯರೋ, ಅವರಿಗೆ ಏನಾದರೂ ಸಬೂಬು ಹೇಳುವುದು.. ಇವೆಲ್ಲ ಸಾಧ್ಯವಾಗದ ಮಾತು. ನನ್ನೊಳಗಿನ ರಕ್ತವೆಲ್ಲ ಬಸಿದುಹೋಗಿದೆ. ಖಂಡಿತ ಇನ್ನು ಹೆಚ್ಚು ಸಮಯ ನಾನು ಬದುಕಲಾರೆ. ನನ್ನ ಸಾವು ಸ್ಪಷ್ಟವಾಗಿದೆ. ನಾನು ಸಾಯುವುದು ಮುಖ್ಯವಲ್ಲ. ನೀವು ಬದುಕುವುದು ಬಹುಮುಖ್ಯ. ನಾನು ಸತ್ತ ವಿಷಯ ನನ್ನ ಕುಟುಂಬಕ್ಕೆ ತಿಳಿದರೆ ಕೆಲಕಾಲ ದುಃಖ ಪಡುತ್ತಾರೆ. ತೊಂದರೆಯಿಲ್ಲ. ನೀವು ಭಾರತ ತಲುಪಿ ಚನ್ನಾಗಿ ಬದುಕಿದರೆ ಅದರಂತಹ ಸಂತಸದ ವಿಷಯ ಇನ್ನೊಂದಿಲ್ಲ. ಬೇಟಾ ನಿಮಗೆ ನಾನು ಮಗುವಾಗಿ ಹುಟ್ಟುತ್ತೇನೆ. ಆಮೇಲೆ ನೀವು ನನ್ನನ್ನು ಚನ್ನಾಗಿ ನೋಡಿಕೊಳ್ಳಬಹುದಂತೆ. ನನ್ನ ಬ್ಯಾಗಿನಲ್ಲಿ ಮ್ಯಾಪ್ ಇದೆ. ತಿಂಡಿ ಇದೆ. ನೀರು ಸೇರಿದಂತೆ ಅಗತ್ಯ ವಸ್ತುಗಳು, ಇದೆ. ಕೊಂಚ ಹಣವೂ ಇದೆ. ನಿಮಗೆ ಅದು ಉಪಯೋಗಕ್ಕೆ ಬರುತ್ತದೆ. ಅವನ್ನು ತೆಗೆದುಕೊಳ್ಳಿ. ಸಾಗುವ ಮಾರ್ಗವಂತೂ ಗೊತ್ತಿದೆಯಲ್ಲ ಬೇಟಾ...' ಎಂದ ಸಲೀಂ ಚಾಚಾ.
         `ಚಾಚಾ.. ಬೇಡ.. ಸಾಯುವ ಮಾತಾಡ ಬೇಡ. ಈ ಬೆಂಗಾಲಿ ನಾಡಿನಲ್ಲಿ ನಮಗೆ ನಿನ್ನನ್ನು ಬಿಟ್ಟರೆ ಬೇರೆ ಯಾರೂ ಇಲ್ಲ ಚಾಚಾ...' ಎಂದಳು ಮಧುಮಿತಾ.
          `ಬೇಟಿ.. ಇಲ್ಲ ಬೇಟಿ. ನೀವು ಪ್ರೇಮಿಗಳು. ಒಬ್ಬರನ್ನೊಬ್ಬರು ಇಷ್ಟಪಟ್ಟವರು. ನಾಳಿನ ಒಳ್ಳೆಯ ಭವಿಷ್ಯಕ್ಕಾಗಿ ಇಂದು ಹೋರಾಟವನ್ನು ಮಾಡುತ್ತಿರುವವರು. ನಿಮ್ಮ ಈ ಹೋರಾಟದ ಮಾರ್ಗದಲ್ಲಿ ನಾನು ಒಂದು ಮೆಟ್ಟಿಲು ಅಂದುಕೊಳ್ಳಿ. ಆವತ್ತು ನಾನು ಹೇಳಿದ್ದೆ ನಾನು ಸತ್ತಾದರೂ ನಿಮ್ಮನ್ನು ಭಾರತ ತಲುಪುವಂತೆ ಮಾಡುತ್ತೇನೆ ಅಂತ. ಆದರೆ ನಾನು ಸಾಯುತ್ತಿದ್ದೇನೆ. ನಿಮ್ಮನ್ನು ಭಾರತ ತಲುಪಿಸಲಾಗುತ್ತಿಲ್ಲ. ಛೇ.. ಮುಂದೆ ನಿಮ್ಮ ಬದುಕು ಚನ್ನಾಗಿ ಇದ್ದರೆ ನನ್ನನ್ನು ಮರೆಯಬೇಡಿ. ನಾನು ನಿಮಗಾಗಿ ಸಾವನ್ನಪ್ಪಿದ್ದೆ ಎನ್ನುವುದು ನೆನಪಾದರೆ ಸಾಕು ನಾನು ಧನ್ಯನಾಗುತ್ತೇನೆ..' ಎಂದು ಸಲೀಂ ಚಾಚಾ ಸುಮ್ಮನಾದ.
           ಸಲೀಂ ಚಾಚಾನ ಪ್ರಾಣಪಕ್ಷಿ ಹಾರಿಹೋಯಿತೆ ಎಂದುಕೊಂಡ ವಿನಯಚಂದ್ರ. ಆತ ಸಾವನ್ನಪ್ಪಿರಲಿಲ್ಲ. ಆದರೆ ನಿತ್ರಾಣಗೊಂಡಿದ್ದ ಆತನ ಬಾಯಿಂದ ಮಾತುಗಳು ಹೊರಬರದಂತಾಗಿದ್ದವು. ಕಣ್ಣುಗಳನ್ನು ಮುಚ್ಚಿ-ತೆರೆದು ಮಾಡುತ್ತಿದ್ದ. ಇನ್ನರೆಘಳಿಗೆಯಲ್ಲಿ ಆತ ಸಾಯುತ್ತಾನೆ ಎನ್ನುವುದು ನಿಕ್ಕಿಯಾಗಿತ್ತು. ಇದ್ದಕ್ಕಿದ್ದಂತೆ ಸಲೀಂ ಚಾಚಾನ ಕಣ್ಣುಗಳು ಉಜ್ವಲ ದೀಪದಂತೆ ಕಾಣತೊಡಗಿತು. ಅದೆಷ್ಟು ಹೊಳಪಾಗಿ ಕಾಣಿಸಿತೆಂದರೆ ಮಧುಮಿತಾ ಹಾಗೂ ವಿನಯಚಂದ್ರ ಒಮ್ಮೆ ಬೆರಗು ಪಟ್ಟುಕೊಂಡರು. ಮತ್ತೊಂದು ನಿಮಿಷದಲ್ಲಿಯೇ ಸಲೀಂ ಚಾಚಾನ ದೇಹ ನಿಶ್ಚಲವಾಯಿತು. ಎದೆಬಡಿತ ಸ್ಥಬ್ಧವಾಯಿತು. ಕೈಕಾಲುಗಳು ತಣ್ಣಗಾದವು. ಉಸಿರಾಟ ನಿಂತುಹೋಯಿತು. ಸಲೀಂ ಚಾಚಾ ಪ್ರಾಣಬಿಟ್ಟಿದ್ದ.
            ಮಧುಮಿತಾ ಹಾಗೂ ವಿನಯಚಂದ್ರ ಇಬ್ಬರೂ ರೋಧಿಸತೊಡಗಿದ್ದರು. ಇಬ್ಬರಲ್ಲಿಯೂ ಅಳುವಿನ ಅಣೆಕಟ್ಟೆ ಒಡೆದಂತಾಗಿತ್ತು. ಅಣ್ಣನಲ್ಲ, ತಮ್ಮನಲ್ಲ, ಮಾವನಲ್ಲ, ಸಂಬಂಧಿಯೂ ಅಲ್ಲ.. ಹೋಗಲಿ ಊರಿನವನಾ ಅದೂ ಅಲ್ಲ. ಪರಿಚಯಸ್ಥನಂತೂ ಅಲ್ಲವೇ ಅಲ್ಲ. ಯಾವುದೋ ನಾಡಿನಿಂದ ಬಂದ ನನಗೆ ಯಾವುದೋ ನಾಡಿನಲ್ಲಿ ಯಾರಿಂದಲೋ ಪರಿಚಯವಾದವನು ಸಲೀಂ ಚಾಚಾ. ಅಂತವನು ನನ್ನನ್ನು ಭಾರತ ತಲುಪಿಸಬೇಕು, ನಮ್ಮ ಪ್ರೇಮ ಗೆಲ್ಲಬೇಕು ಎಂದು ಜೊತೆಗೆ ಬಂದನಲ್ಲ. ತನ್ನ ಮಕ್ಕಳು, ಹೆಂಡತಿಯರು, ಕುಟುಂಬ, ಮನೆ, ಜಮೀನು ಎಲ್ಲವನ್ನೂ ಬಿಟ್ಟು ಭಾರತಕ್ಕೆ ಕಳಿಸಲು ಜೊತೆಗೂಡಿ ಬಂದಿದ್ದನಲ್ಲ. ಇಂತಹ ಚಾಚಾನನ್ನು ಅನುಮಾನಿಸಿದೆನಲ್ಲ. ಧರ್ಮಾಂತರ ಮಾಡುತ್ತಿದ್ದಾನೆ ಎಂದುಕೊಂಡೆನಲ್ಲ. ಛೇ. ಎಂದುಕೊಂಡ ವಿನಯಚಂದ್ರ.
            ವಿನಯಚಂದ್ರನ ಮನಸ್ಸಿನಲ್ಲಿದ್ದ ದುಃಖ ಅಸಹನೆಯ ರೂಪವನ್ನು ತಾಳಿತ್ತು. ಏನನ್ನು ಕಂಡರೂ ಸಿಟ್ಟು ಬರಲು ಆರಂಭಿಸಿತ್ತು. ಮಧುಮಿತಾ ಅಳುತ್ತಲೇ ಇದ್ದಳು. ಸಲೀಂ ಚಾಚಾನ ದೇಹ ನಿಶ್ಚಲವಾಗಿ ಬಿದ್ದಿತ್ತು. ತಕ್ಷಣ ಸಲೀಂ ಚಾಚಾನ ದೇಹವನ್ನು ಮಣ್ಣು ಮಾಡಲು ಸಾಧ್ಯವಾ ಎಂದು ಸುತ್ತಮುತ್ತ ನೋಡಿದ ವಿನಯಚಂದ್ರ. ಮಣ್ಣು ಮಾಡಲು ಅಗತ್ಯವಾದ ಹತ್ಯಾರ ಸಿಗಲಿಲ್ಲ. ಕಾಲಬುಡದಲ್ಲಿದ್ದ ಮಣ್ಣನ್ನು ಕೈಯಲ್ಲಿ ಬಗೆಯಲು ಸಾಧ್ಯವಾ ಎಂದೂ ಪ್ರಯತ್ನಿಸಿದ. ಕೆಲಕಾಲ ಹಾಗೆ ಮಾಡಿ ಕೈತುಂಬಾ ಗಾಯಮಾಡಿಕೊಂಡ. ಕೊನೆಗೊಮ್ಮೆ ಸಲೀಂ ಚಾಚಾನ ನಿಶ್ಚಲ ದೇಹವನ್ನು ಹೊತ್ತುಕೊಂಡು ಅದೇ ಬೈರು ಬೆಳೆದಿದ್ದ ಗದ್ದೆಯ ನಡುವೆ ತೆಗೆದುಕೊಂಡು ಹೋಗಿ ಒಂದು ಕಡೆ ಮಲಗಿಸಿದ. ನಂತರ ಸುತ್ತಲ ಪೈರನ್ನು ಕಿತ್ತು ತಂದು ಸಲೀಂ ಚಾಚಾನ ದೇಹದ ಮೇಲೆ ಹರವಿದ. ಅರ್ಧಗಂಟೆಯ ನಂತರ ಆತನ ದೇಹ ಸಂಪೂರ್ಣವಾಗಿ ಪೈರಿನಿಂದ ಮುಚ್ಚಿತ್ತು. ಸುತ್ತಲ ಗದ್ದೆಗೆ ಬೆಂಕಿ ತಾಗದಂತೆ ಎಚ್ಚರ ವಹಿಸಿ ಸಲೀಂ ಚಾಚಾನನನು ಮುಚ್ಚಿದ್ದ ಪೈರು ರಾಶಿಗೆ ಬೆಂಕಿ ಹಾಕಿದ ವಿನಯಚಂದ್ರ.
          `ಕ್ಷಮಿಸು ಚಾಚಾ.. ನೀನು ನನಗೆ ನಂಬಿಕೆಯ ಪಾಠಗಳನ್ನು ಹೇಳಿದ್ದೆ. ನಾವು ಹೇಗೆ ಬೆಳೆಸಿಕೊಳ್ಳುತ್ತೇವೆಯೋ ಆಗೆ ನಮ್ಮ ನಂಬಿಕೆಗಳು ಬೆಳೆದುನಿಲ್ಲುತ್ತವೆ ಎಂದಿದ್ದ. ನಿಮ್ಮ ಧರ್ಮದ ಪ್ರಕಾರ ಸತ್ತವರನ್ನು ಹೂಳಬೇಕು. ಆದರೆ ನಾನು ನಿನ್ನ ಧರ್ಮದವನಲ್ಲ. ನನ್ನ ನಂಬಿಕೆ ಬೇರೆ. ನಿನ್ನ ದೇಹವನ್ನು ಅಗ್ನಿಗೆ ಅರ್ಪಿಸುತ್ತಿದ್ದೇನೆ. ಸಾಧ್ಯವಿದ್ದರೆ ನಿನ್ನ ದೇಹವನ್ನು ನಾನು ಹೂತು ಹಾಕುತ್ತಿದ್ದೆ. ಆದರೆ ನಾನು ಎಷ್ಟು ಪ್ರಯತ್ನ ಪಟ್ಟರೂ ಒಂದಡಿ ಆಳದ ಗುಂಡಿಯನ್ನೂ ನನ್ನ ಬಳಿ ತೋಡಲು ಸಾಧ್ಯವಾಗಲಿಲ್ಲ. ನಿನ್ನ ಧರ್ಮದ ನಂಬಿಕೆಯನ್ನು ನಾನು ಹಾಳು ಮಾಡಿದ್ದೇನೆ. ಆದರೆ ನನಗೆ ಇದು ಅನಿವಾರ್ಯವಾಗಿತ್ತು. ಚಾಚಾ.. ಕ್ಷಮಿಸಿಬಿಡು. ನನಗೆ ಬೇರೆ ಮಾರ್ಗವೇ ಇರಲಿಲ್ಲ...' ಎಂದ ವಿನಯಚಂದ್ರ.
          ಚಾಚಾನ ದೇಹ ನಿಧಾನವಾಗಿ ಅಗ್ನಿಯಲ್ಲಿ ಭಸ್ಮವಾಗುತ್ತಿತ್ತು. ದೂರದಿಂದ ನೋಡುತ್ತಿದ್ದ ವಿನಯಚಂದ್ರನ ಮೂಗಿಗೆ ಚಾಚಾನ ದೇಹ ಸುಟ್ಟ ವಾಸನೆ ಬಡಿಯುತ್ತಿತ್ತು. ಮಧುಮಿತಾ ಅತ್ತು ಅತ್ತು ವಿನಯಚಂದ್ರನ ಭುಜಕ್ಕೆ ಒರಗಿ ನಿಂತಿದ್ದಳು. ಇಷ್ಟುಹೊತ್ತೂ ಕಿಡಿಕಾರುತ್ತಿದ್ದನೋ ಎಂಬಂತಿದ್ದ ಸೂರ್ಯ ನಿಧಾನವಾಗಿ ಬಾನಂಚಿಗೆ ಜಾರುತ್ತಿದ್ದ. ಸೂರ್ಯನ ಸವಾಲು ಸೋತಿತೋ ಎನ್ನುವಂತಿತ್ತು. ಚಾಚಾನ ಚೀಲವನ್ನು ಹೊತ್ತುಕೊಂಡ ವಿನಯಚಂದ್ರ. ಒಂದೇ ದಿನದಲ್ಲಿ ಹಲವು ಆಘಾತಗಳು ಸಂಭವಿಸಿದ್ದವು. ಮೊದಲು ಚಾಚಾನ ಸೈಕಲ್ ರಿಕ್ಷಾ ಹಿಂಸಾಚಾರಿಗಳ ಪುಂಡಾಟಕ್ಕೆ ಬೆಂಕಿಗೆ ಆಹುತಿಯಾಗಿತ್ತು. ಇದೀಗ ಸಲೀಂ ಚಾಚಾ ಕೂಡ ಸತ್ತಿದ್ದ. ಆತನ ದೇಹಕ್ಕೆ ವಿನಯಚಂದ್ರನೇ ಅಗ್ನಿಸ್ಪರ್ಷ ಮಾಡಿದ್ದ. ವಿನಯಚಂದ್ರನಿಗೆ ಸೈಕಲ್ ರಿಕ್ಷಾ ಹಾಗೂ ಸಲೀಂ ಚಾಚಾನ ನಡುವೆಯಿದ್ದ ಅವಿನಾಭಾವ ಸಂಬಂಧ ಒಮ್ಮೆ ಮನಸ್ಸಿನಲ್ಲಿ ಮೂಡಿತು. ಮಧುಮಿತಾಳನ್ನು ಹಿಡಿದುಕೊಂಡು ನಿಧಾನವಾಗಿ ಮುಂದಕ್ಕೆ ನಡೆಯತೊಡಗಿದ. ನಡೆಯಬೇಕಿದ್ದ ದಾರಿ ಇನ್ನೂ ಸಾಕಷ್ಟಿತ್ತು. ನಡೆದಂತೆಲ್ಲ ದೀರ್ಘವಾಗುತ್ತಿದೆಯೋ ಅನ್ನಿಸಿತು.

(ಮುಂದುವರಿಯುತ್ತದೆ...)

Monday, October 6, 2014

ಬೆಂಗಾಲಿ ಸುಂದರಿ-28

(ತಾಂಗೈಲ್ ನ ಬೀದಿ, ಸೈಕಲ್ ರಿಕ್ಷಾಗಳನ್ನು ಗಮನಿಸಿ)
         ತಾಂಗೈಲ್ ನಗರಿಯಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು ಸ್ಪಷ್ಟವಾಗಿತ್ತು. ಮಧುಮಿತಾಳ ಕಾಲಮೇಲೆ ಹಾಯಾಗಿ ಮಲಗಿದ್ದ ವಿನಯಚಂದ್ರನಿಗೆ ಕಣ್ಣುಬಿಟ್ಟಾಗ ಒಮ್ಮೆ ಅಲ್ಲೋಲ ಕಲ್ಲೋಲ. ಸಲೀಂ ಚಾಚಾ ಬೆಂಗಾಲಿ ಹಾಗೂ ಉರ್ದುವಿನಲ್ಲಿ ಕೂಗುತ್ತಿದ್ದ. ಭಯದಿಂದ ಮಧುಮಿತಾ ಕೂಡ ಥರ ಥರನೆ ನಡುಗುತ್ತಿದ್ದಳು. ಸೈಕಲ್ ರಿಕ್ಷಾ ತುಳಿದಿದ್ದ ಸುಸ್ತಿನಲ್ಲಿ ಅದೆಷ್ಟು ಹೊತ್ತು ಮಲಗಿದ್ದನೋ ವಿನಯಚಂದ್ರ. ಮಧುಮಿತಾ ವಿನಯಚಂದ್ರನನ್ನು ಎಬ್ಬಿಸಲು ನಾಲ್ಕೈದು ಸಾರಿ ಕರೆದಿದ್ದಳು. ಗಾಢ ನಿದ್ರೆಯ ಕಾರಣ ವಿನಯಚಂದ್ರನಿಗೆ ಎಚ್ಚರವೇ ಆಗಿರಲಿಲ್ಲ. ಮೈಚೆಲ್ಲಿ ಮಲಗಿದ್ದೆನೆಂದುಕೊಂಡ ವಿನಯಚಂದ್ರ ತನ್ನನ್ನು ತಾನೇ ಒಮ್ಮೆ ಬೈದುಕೊಂಡ.
            ತಾಂಗೈಲ್ ನಗರದ ಕಡೆಯಿಂದ ಗುಂಪು ಗುಂಪಾಗಿ ಜನ ನುಗ್ಗಿ ಬರುತ್ತಿದದ್ದರು. ಜನಸಾಮಾನ್ಯರು ಓಡಿ ಬರುತ್ತಿದ್ದರೆ ಯುವ ಪುಂಡರ ಗುಂಪು ಕೈಯಲ್ಲಿ ತರಹೇವಾರಿ ಆಯುಧಗಳನ್ನು ಹಿಡಿದುಕೊಂಡು ರಣಕೇಕೆ ಹಾಕುತ್ತ ನುಗ್ಗಿ ಬರುತ್ತಿತ್ತು. ಎತ್ತ ನೋಡಿದರೂ ಪೊಲೀಸರ ಸುಳಿವೇ ಇರಲಿಲ್ಲ. ಕೆಲವು ಜನರ ಕೈಯಲ್ಲಿ ರಕ್ತ ಸಿಕ್ತ ಉದ್ದನೆಯ ತಲವಾರ್ ಕಾಣುತ್ತಿತ್ತು. ಅದರಿಂದ ತೊಟ್ಟಿಕ್ಕುತ್ತಿದ್ದ ರಕ್ತ ನೋಡಿದ ತಕ್ಷಣ ಈಗಷ್ಟೇ ಯಾರದ್ದೋ ಬಲಿ ಹಾಕಿ ಬಂದಿದೆ ಎಂದು ಅಂದಾಜು ಮಾಡಬಹುದಿತ್ತು.
            ವಿನಯಚಂದ್ರ ಮತ್ತೊಮ್ಮೆ ತಲೆ ಕೊಡವಿಕೊಂಡು `ಇಲ್ಲೂ ಹಿಂಸಾಚಾರವೇ..? ನಾವೆಲ್ಲೇ ಹೋದರೂ ಹಿಂಸಾಚಾರ ನಮ್ಮನ್ನು ಬೆನ್ನು ಬಿಡುತ್ತಿಲ್ಲವಲ್ಲ.. ಇದ್ಯಾಕೋ ಒಳ್ಳೆಯದೆನ್ನಿಸುತ್ತಿಲ್ಲ.. ಛೇ..' ಎಂದುಕೊಂಡ.
            ಸಲೀಂ ಚಾಚಾ ರಸ್ತೆಯ ಪಕ್ಕಕ್ಕೆ ಸೈಕಲ್ ರಿಕ್ಷಾ ಹಾಕಿದ್ದ. ನಿಲ್ಲಿಸಿದವನೇ ವಿನಯಚಂದ್ರ ಹಾಗೂ ಮಧುಮಿತಾಳ ಬಳಿ `ತಕ್ಷಣ ಅಡಗಿಕೊಳ್ಳಿ..' ಎಂದ. ಅರೇ ಯಾಕೆ ಅಡಗಿಕೊಳ್ಳಬೇಕು? ಯಾರಿಂದ ತಪ್ಪಿಸಿಕೊಳ್ಳಬೇಕು? ಏನೊಂದೂ ಬಗೆಹರಿಯಲಿಲ್ಲ. ಗಾಡಿಯಿಂದ ಜಿಗಿದವರೇ ಅಲ್ಲೆಲ್ಲೋ ಚಿಕ್ಕದೊಂದು ಪೊದೆಯನ್ನು ಹೊಕ್ಕರು. ಎಷ್ಟು ವೇಗವಾಗಿ ಪೊದೆಯೊಳಗೆ ನುಗ್ಗಿದ್ದರೆಂದರೆ ಮೊದಲು ಹೋದ ಸಲೀಂ ಚಾಚಾನ ಮೇಲೆ ವಿನಯಚಂದ್ರ ಹಾಗೂ ಮಧುಮಿತಾ ಬಿದ್ದುಬಿಟ್ಟಿದ್ದರು. ಅಡಿಗೆ ಸಿಲುಕಿದ ಮುದಿ ಜೀವ ಸಲೀಂ ಚಾಚಾ ಒಮ್ಮೆಲೆ ಇಬ್ಬರ ಭಾರಕ್ಕೆ ನಲುಗಿ ಹೋಗಿ `ಯಾ ಅಲ್ಲಾ..' ಎಂದಿದ್ದ.
           ಅಷ್ಟರಲ್ಲಿ ಗುಂಪೊಂದು ಓಡಿಬಂದು ಇವರು ನಿಲ್ಲಿಸಿದ್ದ ಸೈಕಲ್ ರಿಕ್ಷಾವನ್ನು ಸುತ್ತುವರಿಯಿತು. ಕಂಡದ್ದನ್ನೆಲ್ಲ ಹಾಳುಮಾಡುವ ಹುಚ್ಚಿನಲ್ಲಿದ್ದ ಆ ಗುಂಪು ಸೈಕಲ್ ರಿಕ್ಷಾವನ್ನು ಒದ್ದು, ಕಾಲಿಂದ ತುಳಿದು, ಮುರಿದು ಹಾಕಿತು. ಅಷ್ಟಕ್ಕೆ ಸುಮ್ಮನಾಗದ ಗುಂಪು ಸೈಕಲ್ ರಿಕ್ಷಾದ ಹಿಂಬದಿಯ ಇಬ್ಬರು ಕುಳಿತುಕೊಳ್ಳಬಹುದಾದ ಸುಖಾಸೀನ ಸೀಟಿನ ಮೇಲೆ ಬಿಸಿಲು ಬೀಳಬಾರದೆಂದು ಹಾಕಿದ್ದ ತಾಡಪತ್ರಿಯನ್ನು ಹರಿದುಹಾಕಿತು. ಮತ್ತೊಬ್ಬ ಓಡಿಬಂದವನೇ ಸೈಕಲ್ ರಿಕ್ಷಾಕ್ಕೆ ಬೆಂಕಿ ಹಚ್ಚಿಯೇ ಬಿಟ್ಟಿದ್ದ. ಪೊದೆಯೊಳಗೆ ಅವಿತಿದ್ದ ಸಲೀಂ ಚಾಚಾ ಒಮ್ಮೆಲೆ ಕನಲಿಹೋಗಿದ್ದ. ವಿನಯಚಂದ್ರನ ಮನಸ್ಸಿನಲ್ಲಿ ಸಿಟ್ಟು ಉಕ್ಕಿ ತಕ್ಷಣವೇ ಎದ್ದು ಹೋಗಿ ಆ ಗುಂಪನ್ನು ಬಡಿದುಬಿಡಲೇ ಎನ್ನಿಸಿ ಚಡಪಡಿಸಿದ. ಸಲೀಂ ಚಾಚಾ ಗಟ್ಟಿಯಾಗಿ ಆತನ ಕೈ ಹಿಡಿಯದಿದ್ದರೆ ಎದ್ದು ಹೋಗಿ ಬಿಡುತ್ತಿದ್ದನೇನೋ. ಹಿಂಸಾಚಾರದ ಹಸಿವೆಯಲ್ಲಿದ್ದವರಿಗೆ ವಿನಯಚಂದ್ರ ಸಿಕ್ಕಿಬಿದ್ದು ಬಲಿಯಾಗಿಬಿಡುತ್ತಿದ್ದ. ಹತ್ತು ಹದಿನೈದು ನಿಮಿಷದ ಆಟಾಟೋಪದ ನಂತರ ಆ ಗುಂಪು ಮುಂದೆ ಮತ್ತೇನಾದರೂ ಸಿಗಬಹುದೋ ಎಂದು ಎಲ್ಲಿಂದ ಹೊರಟಿತು. ಸಲೀಂ ಚಾಚಾ, ಮಧುಮಿತಾ ಹಾಗೂ ವಿನಯಚಂದ್ರ ಒಮ್ಮೆ ನಿಟ್ಟುಸಿರುಬಿಟ್ಟರು.
            ಅಡಗಿ ಕುಳಿತಿದ್ದ ಪೊದೆ ಅಸಹನೀಯ ಎನ್ನಿಸಿತ್ತು. ಕ್ಷಣ ಕ್ಷಣವೂ ಅದೆಷ್ಟೋ ತಾಸುಗಳಾಯಿತೋ ಎನ್ನುವಂತಾಗಿತ್ತು. ಪೊದೆಯೊಂದ ಹೊರಬರಲು ಯಾರಿಗೂ ಧೈರ್ಯ ಸಾಲುತ್ತಿಲ್ಲ. ಯಾವ ಕ್ಷಣದಲ್ಲಿ ಆ ಗುಂಪು ಮತ್ತೆ ಬಂದು ಅಟಕಾಯಿಸಿಕೊಳ್ಳುತ್ತದೆಯೋ, ಏನು ಮಾಡುತ್ತಾರೋ ಎನ್ನುವ ದುಗುಡ. ಮಧುಮಿತಾ ವಿನಯಚಂದ್ರನ ಭುಜಕ್ಕೆ ಒರಗಿ ಕುಳಿತಿದ್ದಳು. ಮೈಗೆ ಮೈ ಒತ್ತಿ ಕುಳಿತಿದ್ದರಿಂದ ಆಕೆಯ ಉಸಿರಾಟವೂ ವಿನಯಚಂದ್ರನ ಅರಿವಿಗೆ ಬರುತ್ತಿತ್ತು. ಕೈಯಿಂದ ವಿನಯಚಂದ್ರನ ಅಂಗಿಯನ್ನು ಬಿಗಿಯಾಗಿ ಹಿಡಿದು ಕುಳಿತಿದ್ದಳು. ವಿನಯಚಂದ್ರ ಒಂದೆರಡು ಸಾರಿ ಆಕೆಯ ಕೈಯನ್ನು ಹಿತವಾಗಿ ಅದುಮಿ ಸಮಾಧಾನ ಹೇಳಲಿ ಯತ್ನಿಸಿದನಾದರೂ ಆಕೆಯೊಳಗಿನ ಭಯ ಕಡಿಮೆಯಾಗಲಿಲ್ಲ.
              ಒಂದು ತಾಸೋ ಅಥವಾ ಇನ್ನೂ ಹೆಚ್ಚೋ.. ವಾತಾವರಣ ಸ್ವಲ್ಪ ಶಾಂತವಾದಂತೆನ್ನಿಸಿ ಸಲೀಂ ಚಾಚಾ ನಿಧಾನವಾಗಿ ಪೊದೆಯಿಂದ ಹೊರಕ್ಕೆ ಬಂದ. ಆತನ ಪ್ರೀತಿಯ ಸೈಕಲ್ ರಿಕ್ಷಾ ಉರಿದು ಹೋಗಿತ್ತು. ನಿಧಾನವಾಗಿ ನಡೆದು ಸೈಕಲ್ ರಿಕ್ಷಾ ಬಳಿ ಹೋಗಿ ನಿಂತವನ ಕಣ್ಣಿನಿಂದ ಧಾರಾಕಾರ ನೀರು ಸುರಿಯಲಾರಂಭಿಸಿತ್ತು. ಅದೆಷ್ಟು ಕಾಲ ಆತನ ಜೀವನವನ್ನು ಸೈಕಲ್ ರಿಕ್ಷಾ ಕಟ್ಟಿಕೊಟ್ಟಿತ್ತೋ. ಏಕಾಏಕಿ ಸುಟ್ಟು ಭಸ್ಮವಾಗಿದ್ದ ಸೈಕಲ್ ರಿಕ್ಷಾವನ್ನು ನೋಡಿ ಸಲೀಂ ಚಾಚಾ ರೋಧಿಸತೊಡಗಿದ್ದ. ಆತನನ್ನು ಸಮಾಧಾನ ಪಡಿಸುವ ಧೈರ್ಯ ವಿನಯಚಂದ್ರನಲ್ಲೂ ಇರಲಿಲ್ಲ. ಆಪ್ತವಾಗಿದ್ದ ಮಧುಮಿತಾಳಲ್ಲೂ ಇರಲಿಲ್ಲ. ಅದೊಮ್ಮೆ ಸಿಟ್ಟಿನಿಂದ ಬೆಂಗಾಲಿಯಲ್ಲಿ-ಉರ್ದುವಿನಲ್ಲಿ ಅದೇನನ್ನೋ ಬೈದು ಹಿಂಸಾಚಾರಿಗಳ ಗುಂಪು ಹೋಗಿದ್ದ ದಿಕ್ಕಿನತ್ತ ಮಣ್ಣು ತೂರಿದ. ನಂತರ ಒಮ್ಮೆಲೆ ವಿನಯಚಂದ್ರ ಹಾಗೂ ಮಧುಮಿತಾಳ ಬಳಿ `ಹೊರಡೋಣ ನಡೀರಿ..' ಎಂದ. ವಿನಯಚಂದ್ರ ಸುಮ್ಮನೆ ಸಲೀಂ ಚಾಚಾನನ್ನು ದಿಟ್ಟಿಸಿದ ಹಾಲುಬಿಳುಪಿನ ಗಡ್ಡ ಧೂಳು ಧೂಳಾಗಿತ್ತು. ಕಣ್ಣು ಕೆಂಪಗಾಗಿತ್ತು. ಧರಿಸಿದ್ದ ಉದ್ದನೆಯ ನಿಲುವಂಗಿ ಮಣ್ಣಾಗಿತ್ತು. `ಚಾಚಾ.. ನಮ್ಮನ್ನು ಕ್ಷಮಿಸಿ ಬಿಡು. ಇದೆಲ್ಲಕ್ಕೂ ನಾವೇ ಕಾರಣ..' ಎಂದ.
            `ಅದ್ಯಾಕೆ ಹಂಗಂತೀದಿ ಬೇಟಾ... ನೀನೂ ಅಲ್ಲ ಅಥವಾ ನಾನೂ ಅಲ್ಲ. ಹೀಗೆ ಆಗಬೇಕೆಂಬುದು ಅಲ್ಲಾನ ಆಜ್ಞೆ. ಅದರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡ. ಚಲ್ ಬೇಟಾ ' ಎಂದ ಚಾಚಾ
            `ನಮ್ಮನ್ನು ಭಾರತಕ್ಕೆ ಮುಟ್ಟಿಸಬೇಕು ಎನ್ನುವ ಕಾರಣಕ್ಕೆ ನೀನು ಎಲ್ಲವನ್ನೂ ಬಿಟ್ಟು ಬಂದೆ. ಆದರೆ ನಮಗಾಗಿ ಬಂದ ನಿನ್ನ ಜೀವನಾಧಾರವಾಗಿದ್ದ, ಅದೆಷ್ಟೋ ದಶಕಗಳ ಕಾಲ ಬದುಕು ಕಟ್ಟಿಕೊಟ್ಟಿದ್ದ ಸೈಕಲ್ ರಿಕ್ಷಾ ಸುಟ್ಟು ಹೋಯಿತಲ್ಲ. ..' ಎಂದ.
             `ಸುಮ್ಮನಿರು ಬೇಟಾ.. ಅದಕ್ಕೆ ಯಾಕೆ ಹಂಗಂದುಕೊಳ್ಳುತ್ತೀಯಾ. ಬದುಕಿನಲ್ಲಿ ಇಂತದ್ದು ಆಗ್ತದೆ ಹೋಗ್ತದೆ.. ಬಿಟ್ಹಾಕು. ಇನ್ನೊಂದು ಎರಡೋ ಮೂರೋ ವರ್ಷ. ನಾನು ಅದನ್ನು ಮೂಲೆಗೆ ತಳ್ಳುತ್ತಿದ್ದೆನೇನೋ. ನನಗೂ ವಯಸ್ಸಾಗಿತ್ತಲ್ಲ. ಆಗೀಗ ಈ ಕೆಲಸ ಬಿಟ್ಟು ಬಿಡಬೇಕು ಎಂದುಕೊಳ್ಳುತ್ತಿದ್ದೆ. ಈ ಮೂಲಕವಾದರೂ ನನ್ನ ಕೆಲಸಕ್ಕೆ ನಿವೃತ್ತಿ ಸಿಗುತ್ತೆ. ಸಾಕು ತಗೋ...' ಎಂದ ಸಲೀಂ ಚಾಚಾ.
            `ಆದರೂ...' ಎಂದು ಮುಂದೇನೋ ಹೇಳ ಹೊರಟಿದ್ದ ವಿನಯಚಂದ್ರನನ್ನು ನಡುವೆಯೇ ತಡೆದ ಸಲೀಂ ಚಾಚಾ      `ನನಗೆ ನಿಜಕ್ಕೂ ಬೇಜಾರಾಗುತ್ತಿರುವುದು ನಿಮ್ಮನ್ನು ಭಾರತದ ಗಡಿಯವರೆಗೆ ಸೈಕಲ್ ರಿಕ್ಷಾ ಮೂಲಕ ಕಳಿಸಬೇಕು ಎಂದುಕೊಂಡಿದ್ದೆ. ಆದರೆ ಸಾಧ್ಯವಾಗಲಿಲ್ಲ. ಈಗಲೇ ಕಷ್ಟ ಪಟ್ಟು ಸಾಗಬೇಕಿದ್ದ ನಮ್ಮ ಪಯಣ ಇನ್ನು ಮುಂದೆ ಮತ್ತಷ್ಟು  ಕಠಿಣವಾಗುತ್ತದೆ.. ಆದರೂ ಸಾಗೋಣ.  ನನಗಂತೂ ಬದುಕಿನ ಆಶಾವಾದ, ನಂಬಿಕೆ ಕಳೆದುಹೋಗಿಲ್ಲ. ಸಾಗೋಣ. ಹೇಗೆ ಸಾಧ್ಯವೋ ಹಾಗೆ ಮುಂದಕ್ಕೆ ಸಾಗೋಣ. ಏನಂತೀಯಾ..?' ಎಂದ.
              `ಹುಂ.. ಆದರೆ ಅದೇ ಹೇಗೆ ಅಂತ..' ವಿನಯಚಂದ್ರ ಕೇಳಿದ್ದ.
              `ಏನಾದರೂ ಸಿಗುತ್ತೋ ನೋಡೋಣ. ವಾಹನಗಳು, ಬಸ್ಸುಗಳು, ಇಂತದ್ದೇ ಸೈಕಲ್ ರಿಕ್ಷಾಗಳು.. ಸಿಕ್ಕಿದ್ದರಲ್ಲಿ ಪ್ರಯಾಣ ಮಾಡೋಣ. ಕಾಡಿ ಬೇಡಿಯಾದರೂ ಹೋಗೋಣ. ಸಿಕ್ಕಿಲ್ಲವಾ ಇದ್ದೇ ಇದೆಯಲ್ಲ ಕಾಲ್ನಡಿದೆ..' ಎಂದ ಸಲೀಂ ಚಾಚಾ..
              `ಹುಂ..' ಎಂದ ವಿನಯಚಂದ್ರನ ಮನಸ್ಸಿನಲ್ಲಿ ಸ್ಲಾವೋಮಿರ್ ರಾವಿಸ್ ನ ಮಹಾಪಲಾಯನ ಥಟ್ಟನೆ ನೆನಪಾಯಿತು. ಸ್ಲಾವೋಮಿರ್ ರಾವೀಸ್ ಹಾಗೂ ಆತನ ಏಳು ಜನಸ ಹಚರರ ತಂಡ ರಷ್ಯಾದ ಕಪ್ಪು ಜೈಲು ಜಗತ್ತಿನಿಂದ ತಪ್ಪಿಸಿಕೊಂಡು ನಿಂತಲ್ಲಿ ನಿಲ್ಲದೇ ಎರಡೋ ಮೂರೋ ತಿಂಗಳುಗಳ: ಕಾಲ ಹಿಮ, ಮರುಭೂಮಿ, ಕಾಡು, ನದಿ, ತೊರೆ ಎನ್ನದೇ ದೇಶ ದೇಶಗಳನ್ನು ದಾಟಿ ಕೊನೆಗೊಮ್ಮೆ 8000 ಕಿ.ಮಿ ದೂರದ ಭಾರತವನ್ನು ತಲುಪಿದ್ದರಲ್ಲ. ನಡೆಯುವ ದಾರಿಯಲ್ಲಿ ಮೂರೋ ನಾಲ್ಕೋ ಜನರು ಸಾವನ್ನಪ್ಪಿದ್ದರಲ್ಲ. ಆಹ್ ಆ ಪಯಣ ಹೇಗಿರಬಹುದು. ಯಾಕೋ ನಮ್ಮ ಬದುಕೂ ಕೂಡ ಹಾಗೇ ಆಗುತ್ತಿದೆಯಾ? ನಮ್ಮ ಪಯಣದಲ್ಲಿ ಬಹುದೂರ ಕಾಲ್ನಡಿಗೆ ಮಾಡಿ ಸಾಗಬೇಕಾದದ್ದೂ ಇದೆಯೇ ಎಂದುಕೊಂಡ.
                 ಸಲೀಂ ಚಾಚಾ  `ನಡೀರಿ..' ಎಂದ. ಮುಂದಕ್ಕೆ ಹೆಜ್ಜೆ ಹಾಕಿದರು. ಬಿಸಿಲ ಝಳ ನಿಧಾನಕ್ಕೆ ಏರುತ್ತಿತ್ತು. ಹಿಂಸಾಪೀಡಿತ ಪ್ರದೇಶದಲ್ಲಿ ಬಿಸಿಲು ತೀಕ್ಷ್ಣವೇನೋ ಅನ್ನಿಸುತ್ತದೆ. ಧಾರಾಕಾರವಾಗಿ ಮೈಯಿಂದ ಬೆವರು ಸುರಿಯಲಾರಂಭಿಸಿತ್ತು. ಒರೆಸಿಕೊಳ್ಳುತ್ತ ಮುಂದಕ್ಕೆ ಹೆಜ್ಜೆ ಹಾಕಿದರು. ಯುವ ಜೋಡಿಗಳಾದ ವಿನಯಚಂದ್ರ ಹಾಗೂ ಮಧುಮಿತಾಳ ಸಮಕ್ಕೆ ಸಲೀಂ ಚಾಚಾ ನಡೆಯುತ್ತಿದ್ದ. ಆರೆಂಟು ದಶಕಗಳ ಕಾಲ ಸೈಕಲ್ ತುಳಿದಿದ್ದ ಜೀವ ಭಾರಿ ಗಟ್ಟಿಯಿತ್ತು. ತಾಂಗೈಲ್ ನಗರದ ಒಳಹೊಕ್ಕರೆ ಇನ್ನೇನಾದರೂ ಅಪಾಯ ಸಂಭವಿಸಬಹುದು ಎನ್ನುವ ಕಾರಣಕ್ಕೆ ಹೊರ ವರ್ತುಲ ರಸ್ತೆಯಲ್ಲಿಯೇ ಸಾಗಿದರು. ಹೊರ ಭಾಗದಲ್ಲಿಯೇ ಹಿಂಸಾಚಾರದ ಪ್ರತಿಫಲನ ಕಣ್ಣಿಗೆ ಕಾಣುತ್ತಿತ್ತು. ಈ ನಗರದ ಒಳಭಾಗದಲ್ಲಿ ಇನ್ಯಾವ ರೀತಿ ಹಿಂಸಾಚಾರ ಸಂಭವಿಸಿರಬಹುದು ಎಂದುಕೊಂಡರು ಎಲ್ಲರೂ.
            `ಚಾಚಾ.. ಇಲ್ಲೂ ಹಿಂದುಗಳ ಮೇಲಿನ ಹಿಂಸಾಚಾರವಾ..?' ಎಂದು ಕೇಳಿದ ವಿನಯಚಂದ್ರ.
            `ಅಲ್ಲ.. ಬಾಂಗ್ಲಾದಲ್ಲಿ ಎಲ್ಲ ಹಿಂಸಾಚಾರವೂ ಹಿಂದೂಗಳ ಮೇಲೆ ಮಾತ್ರ ನಡೆಯುತ್ತದೆ ಎಂದುಕೊಂಡೆಯಾ..?' ಸಲೀಂ ಚಾಚಾನ ಮಾತು ನೇರವಾಗಿ ಬಂದು ಬಡಿದಿತ್ತು..
             `ಹಾಗಲ್ಲ.. ಹಿಂಸಾಚಾರಕ್ಕೊಂದು ಕಾರಣ ಬೇಡವಾ..?'
             `ಊಹೂಂ ಬೇಡವೇ ಬೇಡ. ಅಭದ್ರ ಪ್ರದೇಶದಲ್ಲಿ ಪ್ರಭಲರು ತಮ್ಮ ಸಾಮರ್ಥ್ಯ ತೋರಿಸಲಿಕ್ಕೆ ಹಿಂಸಾಚಾರದ ಮಾರ್ಗ ಹಿಡಿಯುತ್ತಾರೆ. ಯಾರು ದುರ್ಬಲರು ಸಿಗುತ್ತಾರೋ ಅವರ ಮೇಲೆ ತಮ್ಮ ಪೌರುಷ ಪ್ರದರ್ಶನ ಮಾಡುತ್ತಾರೆ. ಸಿಕ್ಕ ಸಿಕ್ಕವರನ್ನು ಕೊಚ್ಚುತ್ತಾರೆ. ಇಲ್ಲಿ ನಡೆದಿದ್ದು ಹಿಂದೂಗಳ ಮೇಲಿನ ದೌರ್ಜನ್ಯವಲ್ಲ. ಮುಸಲ್ಮಾನ-ಮುಸಲ್ಮಾನರ ನಡುವೆ ನಡೆದ ಹಿಮಸಾಚಾರ. ಬಹುಶಃ ಈ ಗಲಾಟೆಯ ಹಿಂದೆ ರಾಜಕೀಯ ಕಾರಣಗಳಿರಬೇಕು. ಬಿಡು.. ಇಂತಹ ಗಲಾಟೆಗಳು ರಾಜಕಾರಣವಿಲ್ಲದೇ ನಡೆಯುವುದೇ ಇಲ್ಲ. ಪರಿಸ್ಥಿತಿ ನೋಡಿದರೆ ಕನಿಷ್ಟ 25-30 ಜನರಾದರೂ ಹತ್ಯೆಯಾಗಿದ್ದಾರೆ. ಮಕ್ಕಳು, ಹೆಂಗಸರು ಇದರಲ್ಲಿ ಸೇರಿರಬಹುದು. ನನಗೆ ಗೊತ್ತಿಲ್ಲ. ನಾನು ಅಂದಾಜು ಮಾಡಿದ್ದಷ್ಟೇ..' ಎಂದ ಚಾಚಾ.
              `ಬಡಪಾಯಿಗಳ ಜೀವಕ್ಕೆ ಬೆಲೆಯೇ ಇಲ್ಲವೇ..? ಇದೆಂತ ನಾಡು..?'  ವಿನಯಚಂದ್ರ ಎಂದುಕೊಂಡನಾದರೂ ಅದು ಪಕ್ಕದಲ್ಲಿದ್ದವರಿಗೆ ಕೇಳಿಸಿತು.
(ತಾಂಗೈಲ್ ನ ಶತಮಾನಗಳಷ್ಟು ಹಳೆಯದಾದ ಮಸೀದಿ)
              `ನಾಡು ಯಾವತ್ತೂ ಕೆಟ್ಟದಾಗಿರುವುದಿಲ್ಲ ಬೇಟಾ. ಅಲ್ಲಿನ ಜನರು ಕೆಟ್ಟವರಾಗಿರುತ್ತಾರೆ. ಇಲ್ಲೂ ಅಷ್ಟೇ ನಾಡು ಕೆಟ್ಟದ್ದಲ್ಲ. ಜನರು ಕೆಟ್ಟವರು. ಅದರಲ್ಲೂ ರಾಜಕಾರಣಿಗಳು ಬಲು ಕೆಟ್ಟವರು. ಎಂತಹ ಜನ್ನತ್ ಆಗಿದ್ದರೂ ಅವರು ಅದನ್ನು ಅರೆಘಳಿಗೆಯಲ್ಲಿ ಕುಲಗೆಡಿಸಿಬಿಡುತ್ತಾರೆ..' ಎಂದ ಸಲೀಂ ಚಾಚಾ. ವಿನಯಚಂದ್ರ ತಲೆಯಾಡಿಸಿದ.
            ಬಿಸಿಲು ಮತ್ತಷ್ಟು ಪ್ರಖರವಾಯಿತು. ಹೆದ್ದಾರಿ ಸುಡುತ್ತಿತ್ತು. ನಡೆಯುತ್ತಿದ್ದವರು ಬಸವಳಿಯತೊಡಗಿದ್ದರು. ರಸ್ತೆಯಲ್ಲಿ ಮಾತ್ರ ಯಾವುದೇ ವಾಹನವೂ ಸುಳಿದಾಡುತ್ತಿರಲಿಲ್ಲ. ಬೇಕೆಂದರೆ ಒಂದೇ ಒಂದು ಮರವೂ ದಾರಿ ಪಕ್ಕದಲ್ಲಿ ಇರಲಿಲ್ಲ. ನೆರಳೆನ್ನುವುದು ದುಸ್ತರವಾಯಿತು. ಇಕ್ಕೆಲದಲ್ಲಿ ಗದ್ದೆ ಬಯಲಿದ್ದರೂ ಗಾಳಿ ಮಾತ್ರ ಸುಳಿದಾಡುತ್ತಿರಲಿಲ್ಲ. ಗಾಳಿಗೂ ಹಿಂಸಾಚಾರದ ಭೀತಿ ತಟ್ಟಿರಬೇಕೇನೋ. ಸುಮ್ಮನಿತ್ತು. ಬಾಯಾರಿಕೆಗೆ ಚೀಲದಲ್ಲಿದ್ದ ನೀರಿನ ಬಾಟಲಿಗಳು ಆಗಲೇ ಖಾಲಿಯಾಗಿದ್ದವು. ಸೈಕಲ್ ರಿಕ್ಷಾ ತುಳಿಯುವುದಾದರೂ ಬೇಕು. ಹೀಗೆ ನಡೆಯುವುದು ಬೇಡ ಎಂದುಕೊಂಡ ವಿನಯಚಂದ್ರ.
          `ಬೇಟಾ.. ಇದೇ ರಸ್ತೆಯಲ್ಲಿ ನಾವು ಸಾಗಿದರೆ ಎಲೆಂಗಾ ಎನ್ನುವ ಊರು ಬರುತ್ತದೆ. ಏಲೆಂಗಾದಿಂದ ನಾವು ಮಾರ್ಗ ಬದಲಾಯಿಸಬೇಕು. ಬ್ರಹ್ಮಪುತ್ರಾ ನದಿಯನ್ನು ದಾಟಬೇಕು. ದಾಟಿದ ನಂತರ ನಮ್ಮ ಮಾರ್ಗ ಮತ್ತೆ ಬದಲಾಗುತ್ತದೆ. ಅಲ್ಲಿದಂ ಸೀದಾ ಅಸ್ಸಾಂ ಗಡಿಯತ್ತ ಸಾಗಬೇಕು. ಹೆಚ್ಚೂ ಕಡಿಮೆ ನಾವಿನ್ನೂ ಮುನ್ನೂರಕ್ಕೂ ಅಧಿಕ ಕಿಲೋಮೀಟರ್ ಸಾಗಬೇಕಾಗಿದೆ. ನೆನಪಿಟ್ಟುಕೋ..' ಸಲೀಂ ಚಾಚಾ ನಿರ್ದೇಶನ ನೀಡಿದ್ದ.
           `ಆ ಗಡಿಯಲ್ಲಿ ಏಜೆಂಟ ಸಿಗುತ್ತಾನೆ. ಆತನ ಅಣತಿಯಂತೆ ನಡೆದುಕೊಳ್ಳಬೇಕು. ಆತ ಭಾರತಕ್ಕೆ ದಾಟಿಸುವ ಕೆಲಸ ಮಾಡುತ್ತಾನೆ. ಒಂದು ವೇಳೆ ಆತ ಸಿಗಲಿಲ್ಲ ಎಂದಿಟ್ಟುಕೊಳ್ಳಿ ಗಡಿಯಿಂದ ಅನತಿ ದೂರದಲ್ಲಿ ಕನಿಷ್ಟ ಎರಡು ದಿನ ಗಮನವಿಟ್ಟು ಕಾದು ನೋಡಿದರೆ ಹೇಗೆ ದಾಟಬೇಕು ಎನ್ನುವುದು ಗೊತ್ತಾಗುತ್ತದೆ. ಸಮಯ ಸಿಕ್ಕಾಗ ದಾಟಿಕೊಳ್ಳಿ. ಇದು ನಮ್ಮ ಎರಡನೇ ಮಾರ್ಗ..' ಎಂದ ಸಲೀಂ ಚಾಚಾ.
           `ಹುಂ..'  ಎಂದ ವಿನಯಚಂದ್ರ `ಈ ಏಜೆಂಟನನ್ನು ನಂಬಬಹುದಾ..?' ಎಂದು ಕೇಳಿದ.
            `ನಂಬುವುದು ಕಷ್ಟ. ಅರ್ಧಕ್ಕರ್ಧ ನಂಬೋಣ. ನಂಬಿಕೆ ಉಳಿಸಿಕೊಂಡರೆ ಸುಲಭ. ಇಲ್ಲವಾದರೆ ನಮ್ಮದೇ ಮಾರ್ಗವಿದೆಯಲ್ಲ. ಅದೃಷ್ಟವಿದ್ದರೆ ಭಾರತಕ್ಕೆ ದಾಟಿಕೊಳ್ಳಬಹುದು. ಇಲ್ಲವೇ ಈನೆಲದ ರಕ್ತದ ದಾಹಕ್ಕೆ ಇನ್ನೊಂದಷ್ಟು ಹನಿಗಳು ಬಿತ್ತು ಎಂದುಕೊಳ್ಳುವುದು' ಎಂದ ಸಲೀಂ ಚಾಚಾ `ಬಾಂಗ್ಲಾದಲ್ಲಿ ಈ ಏಜೆಂಟರಿದ್ದಾರಲ್ಲ ಅವರನ್ನು ಪೂರ್ತಿಯಾಗಿ ನಂಬಲೇಬಾರದು. ಅವರು ಏನೋ ಮಾರ್ಗ ಹೇಳುತ್ತಾರೆ ಎಂದುಕೊಂಡರೆ ನಾವು ಇನ್ನೊಂದನ್ನು ಸದಾ ತಯಾರಿಸಿ ಇಟ್ಟುಕೊಂಡಿರಲೇ ಬೇಕು. ನಾನು ಅದೇ ಕಾರಣಕ್ಕೆ ಇನ್ನೊಂದು ಮಾರ್ಗವನ್ನು ಹೇಳಿದ್ದು...' ಎಂದ.
           ಅಷ್ಟರಲ್ಲಿ ದೂರದಲ್ಲಿ ಯಾವುದೋ ವಾಹನ ಬರುತ್ತಿರುವ ಸದ್ದು. ಅಸ್ಪಷ್ಟವಾಗಿ ಕಾಣಿಸುತ್ತಿತ್ತು. ಬಿಸಿಲಿನ ಝಳದಿಂದ ಮರೀಚಿಕೆಯ ರಥ ಸುಳಿಯುತ್ತಿದ್ದರೂ ಸದ್ದಿನ ಕಾರಣದಿಂದ ಯಾವುದೋ ವಾಹನ ಎನ್ನುವುದು ಸ್ಪಷ್ಟವಾಯಿತು. ಹತ್ತಿರ ಹತ್ತಿರ ಬಂದಂತೆಲ್ಲ ಅದೊಂದು ಪೊಲೀಸ್ ವಾಹನ ಎನ್ನುವುದೂ ತಿಳಿಯಿತು. ಭಾರಿ ಸದ್ದಿನೊಂದಿಗೆ ಬರುತ್ತಿದ್ದ ವಾಹನ ಕಂಡ ತಕ್ಷಣ ಸಲೀಂ ಚಾಚಾನಿಗೆ ಅದೇನನ್ನಿಸಿತೂ `ಓಡಿ..' ಎಂದು ಕಿರುಚಿದ. ವಿನಯಚಂದ್ರ ಹಾಗೂ ಮಧುಮಿತಾ ಸುತ್ತ ಮುತ್ತ ನೋಡಿದರೆ. ದೂರ ದೂರದವರೆಗೂ ಬರೀ ಗದ್ದೆ ಬಯಲು. ಬೆಳೆ ಬೆಳೆದು ನಿಂತಿತ್ತು. ಆದರೆ ಮರಗಳಿಲ್ಲ. ಪೊದೆಯೂ ಇಲ್ಲ. ಎಲ್ಲಿಗೆ ಅಂತ ಓಡುವುದು? ಆದರೂ ಗದ್ದೆಯ ಹತ್ತಿರ ಓಡಿ ಹೋಗಿ ಬೆಳೆದು ನಿಂತ ಪೈರಿನೊಳಕ್ಕೆ ನುಗ್ಗಿಯೇ ಬಿಟ್ಟರು. ಆಳೆತ್ತರಕ್ಕೆ ಬೆಳೆದಿದ್ದ ಗದ್ದೆಯಲ್ಲಿ ಅಡಗಿ ಕುಳಿತರು. ಹಿಂದಿನಿಂದ ಢಮ್ಮೆನ್ನುವ ಸದ್ದು ಕೇಳಿಸಿತು. ಸದ್ದು ಕೇಳಿದ ತಕ್ಷಣವೇ ಮಧುಮಿತಾಳಿಗೆ ಅರೇ ಸಲೀಂ ಚಾಚಾ ನಮ್ಮೊಂದಿಗೆ ಬಂದಿಲ್ಲವಲ್ಲ. ಅವರೆಲ್ಲಿ ಓಡಿಹೋದರು ಎನ್ನುವ ಪ್ರಶ್ನೆ ಮೂಡಿತು. ದೇವರೇ ಪೊಲೀಸರು ಗುಂಡು ಹೊಡೆದಿದ್ದು ಸಲೀಂ ಚಾಚಾನಿಗೆ ತಾಗದಿರಲಿ. ಆತ ತಪ್ಪಿಸಿಕೊಳ್ಳಲಿ ಎಂದುಕೊಂಡಳು.
          ತಮ್ಮೊಂದಿಗೆ ಓಡಿ ಬಂದಿರದ ಸಲೀಂ ಚಾಚಾನಿಗೆ ಗುಂಡು ತಾಗಿದೆಯಾ ಎನ್ನುವ ಬಾವನೆ ಕಾಡಿತಾದರೂ ಮನಸ್ಸು ಅಂತಹ ಶಂಕೆಯನ್ನು ಮಾಡಲು ಒಮ್ಮೆ ಹಿಂದೇಟು ಹಾಕಿತು. ಹಾಳಾದ ಪೊಲೀಸರು ಇಲ್ಯಾಕೆ ಬಂದರೂ ಇವರ ಮನೆ ಹಾಳಾಗ ಎಂದು ಬೈದುಕೊಂಡಳು ಮಧುಮಿತಾ. ತಾವು ಅಡಗಿದ್ದ ಗದ್ದೆಯ ಇನ್ನೊಂದು ಕಡೆಗೋ, ರಸ್ತೆಯ ಮತ್ತೊಂದು ಪಾರ್ಶ್ವದ ಗದ್ದೆ ಬಯಲಿನಲ್ಲಿಯೋ ಸಲೀಂ ಚಾಚಾ ಅಡಗಿ ಕುಳಿತಿದ್ದಾನೆ. ತಮ್ಮನ್ನು ಬೆದರಿಸಲು ಪೊಲೀಸರು ಗುಂಡು ಹಾರಿಸಿದ್ದಾರೆ ಎಂದುಕೊಂಡಳು. ಕೆಲ ಹೊತ್ತು ವಾಹನದ ಸದ್ದು ಗುರುಗುಡುತ್ತಲೇ ಇತ್ತು. ವಿನಯಚಂದ್ರ ಹಾಗೂ ಮಧುಮಿತಾ ಉಸಿರನ್ನೇ ಆಡುತ್ತಿಲ್ಲವೇನೋ ಎನ್ನುವಷ್ಟು ತಣ್ಣಗೆ ಗದ್ದೆ ಬಯಲಿನ ಮಧ್ಯ ಅಡಗಿಕುಳಿತಿದ್ದರು. ಮನದ ತುಂಬೆಲ್ಲ ಸಲೀಂ ಚಾಚಾನದ್ದೇ ಆಲೋಚನೆ. ಏನೂ ಕೇಡಾಗರಿದಲಿ ಎನ್ನುವ ಪ್ರಾರ್ಥನೆ ಮಾಡಲಾರಂಭಿಸಿದ್ದರು.

(ಮುಂದುವರಿಯುತ್ತದೆ..)

Sunday, October 5, 2014

ಬೆಂಗಾಲಿ ಸುಂದರಿ-27

(ಈದ್ಗಾ ಮೈದಾನ ಕರಾಟಿಯಾ)
          ಬೆಳಗಿನ ಜಾವದಲ್ಲಿ ಸಲೀಂ ಚಾಚಾ ಹಾಗೂ ಮಧುಮಿತಾ ಇಬ್ಬರೂ ನಿದ್ದೆಗೆ ಜಾರಿದ್ದರು. ಸೈಕಲ್ ರಿಕ್ಷಾ ತುಳಿಯುತ್ತಿದ್ದ ವಿನಯಚಂದ್ರ ತನ್ನೊಳಗೆ ತಾನು ಆಲೋಚನೆ ಮಾಡುತ್ತ ಮುಂದಕ್ಕೆ ಸಾಗುತ್ತಿದ್ದ. ಆತನ ಮನದ ತುಂಬ ನೂರಾರು ಆಲೋಚನೆಗಳು. ತನ್ನ ಮನೆ, ಅಮ್ಮ, ಅಪ್ಪ ಹಾಗೂ ತಂಗಿ ನೆನಪಾಗಿದ್ದರು. ತನ್ನೂರಿನ ದೊಡ್ಡ ಮನೆ ಕೂಡ ನೆನಪಿಗೆ ಬಂದಿತ್ತು. ಅವರೆಲ್ಲ ಏನು ಮಾಡುತ್ತಿದ್ದಾರೋ. ಬಾಂಗ್ಲಾ ನಾಡಿನಿಂದ ಮಗ ಹಿಂತಿರುಗಿ ಬಂದಿಲ್ಲ ಎನ್ನುವ ಆತಂಕ ಅವರ ಮನದಲ್ಲಿ ಇರಬಹುದು. ಅತ್ತಿಗೆಯನ್ನು ಕರೆದುಕೊಂಡು ಬರುತ್ತೇನೆ ಎಂದು ತಂಗಿಗೆ ತಮಾಷೆ ಮಾಡಿದ್ದ ವಿನಯಚಂದ್ರ. ಆದರೆ ತಾನು ಬೆಂಗಾಲಿ ನಾಡಿನಲ್ಲಿ ಬದುಕಿಗಾಗಿ, ಭಾರತವನ್ನು ಮುಟ್ಟಬೇಕೆಂದು ಈ ರೀತಿ ಅಲೆದಾಡುತ್ತಿದ್ದೇನೆ. ಅದು ಹಾಳಾಗಲಿ ಜೀವವನ್ನು ಹೇಗೆ ಉಳಿಸಿಕೊಳ್ಳಬೇಕು ಎಂದು ಒದ್ದಾಡುತ್ತಿದ್ದೇನೆ. ಈ ವಿಷಯ ಗೊತ್ತಾದರೆ ಅದೆಷ್ಟು ನೊಂದುಕೊಳ್ಳುತ್ತಾರೋ ಎಂದುಕೊಂಡ ವಿನಯಚಂದ್ರ.
            ಅಪ್ಪನಿಗೆ ಸಿಟ್ಟು ಬರುತ್ತಿತ್ತು ನಿಜ. ಆದರೆ ಸಿಟ್ಟು ಮಾಡಿದ ಮಾತ್ರಕ್ಕೆ ಮಕ್ಕಳು ಕಷ್ಟ ಪಡಬೇಕು ಎಂದು ಯಾವತ್ತೂ ಭಾವಿಸಿರಲಿಲ್ಲ. ಮಕ್ಕಳ ಸುಖಕ್ಕಾಗಿ ಏನೆಲ್ಲ ಮಾಡಿದ್ದನಲ್ಲ. ಆದರೆ ಗೊತ್ತು ಗುರಿಯಲ್ಲದ ಈ ನಾಡಿನಲ್ಲಿ ನಾನು ಪಡುತ್ತಿರುವ ಈ ಪಾಡು ಅಪ್ಪನಿಗೆ ತಿಳಿದರೆ ಆತನ ಮನಸ್ಸಿನಲ್ಲಿ ಇನ್ನೆಂತಹ ತರಂಗಗಳು ಏಳಬಹುದು ಎಂದೆಲ್ಲ ಆಲೋಚಿಸಿದ. ಇದೇ ಸಮಯದಲ್ಲಿ ವಿನಯಚಂದ್ರನಿಗೆ ಕಬ್ಬಡ್ಡಿಯನ್ನು ಶಾಸ್ತ್ರೋಕ್ತವಾಗಿ ಕಲಿಸಿದ ಚಿದಂಬರ ಕೋಚ್ ಅವರೂ ಕಬ್ಬಡ್ಡಿಯ ವಿಶ್ವಕಪ್ಪಿಗೆ ಬಂದಾಗ ಮಿತ್ರನಾಗಿದ್ದ ಸೂರ್ಯನ್, ಆಪ್ತತೆಯಿಂದ ತಿದ್ದಿದ ಜಾಧವ್ ಸರ್ ನೆನಪಾದರು. ಕಬ್ಬಡ್ಡಿಯ ಆಟಗಾರರೆಲ್ಲ ಕಣ್ಣಮುಂದೆ ಬಂದರು.
            ಬಾಂಗ್ಲಾ ನಾಡಿನಲ್ಲಿ ಕಳೆದುಹೋಗಿದ್ದರೂ ಬಾಂಗ್ಲಾ ಟಿ.ವಿಯಲ್ಲಿ ತಮ್ಮನ್ನು ಹುಡುಕಬೇಕೆಂದು ಜಾಹೀರಾತು ಕೊಟ್ಟರಲ್ಲ. ಇದು ಯಾರ ಕೆಲಸವಿರಬಹುದು. ಭಾರತ ಸರ್ಕಾರ ಕೊಟ್ಟಿತೆ.? ಭಾರತದ ಕಬ್ಬಡ್ಡಿ ಸಂಸ್ಥೆ ಕೊಟ್ಟಿತೆ? ಜಾಧವ್ ಸರ್ ಕೊಟ್ಟರಾ? ಅಥವಾ ತಮಿಳು ನಾಡಿನ ಸರ್ಕಾರದಲ್ಲಿ ತನ್ನ ಸಂಬಂಧಿಕರಿದ್ದಾರೆ ಎಂದು ಹೇಳಿದ್ದನಲ್ಲ ಸೂರ್ಯನ್.. ಆತ ಕೊಟ್ಟನೆ. ಅಪ್ಪ-ಅಮ್ಮ ದುಗುಡಪಟ್ಟುಕೊಂಡು ಕೊಟ್ಟಿರಬಹುದು, ಅದ್ಯಾವುದೋ ಚಾನಲ್ಲಿನಲ್ಲಿ ಕೆಲಸ ಮಾಡುತ್ತಿದ್ದಾನಲ್ಲ ಸಂಜಯ ಅವನ ಕೆಲಸವೇ ಇದು? ಎಂದೆಲ್ಲ ಆಲೋಚನೆಗಳು ವಿನಯಚಂದ್ರನಲ್ಲಿ ಸುಳಿದವು. ಅವರ ಪ್ರೀತಿಗೆ ವಿನಯಚಂದ್ರನ ಕಣ್ಣು ಹನಿಗೂಡಿದವು.
          ಢಾಕಾದಿಂದ ಹೊರಟು ಎಷ್ಟು ದಿನವಾಗಿರಬಹುದು ಎಂದು ಆಲೋಚನೆ ಮಾಡಿದ ವಿನಯಚಂದ್ರ. ಮೂರು ದಿನಗಳಾದವಾ? ನಾಲ್ಕಾಯಿತಾ? ಎಂದುಕೊಂಡ. ಆದರೆ ದಿನಗಳೆಷ್ಟಾದವು ಎನ್ನುವುದು ನೆನಪಿಗೆ ಬರಲಿಲ್ಲ. ಸಲೀಂ ಚಾಚಾ ಜೊತೆಗಿದ್ದಿದ್ದರಿಂದ ಬಾಂಗ್ಲಾದೇಶದಲ್ಲಿ ತೊಂದರೆಯಾಗಲಿಲ್ಲ. ಆತ ಇಲ್ಲದಿದ್ದರೆ ಬಾಂಗ್ಲಾ ನಾಡಿನಲ್ಲಿಯೇ ಅದೆಷ್ಟು ಸಾರಿ ಗಿರಕಿ ಹೊಡೆಯುತ್ತಿದ್ದೆವೋ ಎಂದುಕೊಂಡ ವಿನಯಚಂದ್ರ. ಮಧುಮಿತಾ ಬಾಂಗ್ಲಾ ನಾಡಿನವಳೇ. ಆದರೆ ಇಂತಹ ಹಿಂಸಾಚಾರ ಭುಗಿಲೆದ್ದ ಸಂದರ್ಭದಲ್ಲಿ ಆಕೆಗೂ ಏನು ಮಾಡಬೇಕು ಎನ್ನುವುದು ಬಗೆ ಹರಿಯುವುದಿಲ್ಲ. ಇಂತಹ ಸಂದರ್ಭದಲ್ಲಿ ಸಲೀಂ ಚಾಚಾನನ್ನು ಸುಮ್ಮನೆ ಅನುಮಾನಿಸಿದೆನಾ ಎಂದೂ ಮನಸ್ಸಿನಲ್ಲಿ ಅನ್ನಿಸಿತು. ಛೇ ಎಂದು ತಲೆಕೊಡವಿದ. ಅಷ್ಟರಲ್ಲಿ ಒಂದು ಊರು ಕಾಣಿಸಿತು. ಬೆಂಗಾಲಿಯಲ್ಲಿದ್ದ ಆ ಊರನ್ನು ಕಷ್ಟಪಟ್ಟು ಓದಲು ಯತ್ನಿಸಿದ ವಿನಯಚಂದ್ರ. ಹಬ್ಲಾ ತೆಂಗಾರಿಪಾರಾ ಎಂದೇನೋ ಓದಿಕೊಂಡ. ಇದೆಂತಹ ವಿಚಿತ್ರ ಊರು ಎಂದುಕೊಂಡ. ಈ ಊರಿನ ಹೆಸರು ಕೇಳಿರದ, ನೋಡಿರದ ತನಗೆ ಇದು ವಿಚಿತ್ರ ಎನ್ನಿಸುತ್ತಿದೆ. ಆದರೆ ಈ ಊರಿನವರಿಗೆ ಇದೇ ವಿಶಿಷ್ಟ ಹೆಸರಾಗಿರಬೇಕು. ಬೇರೆ ಊರಿನ ಜನರು, ಪ್ರವಾಸಿಗರು ನಮ್ಮೂರಿಗೆ ಬಂದಾಗ ನಮ್ಮೂರಿನ ಹೆಸರನ್ನು ಕೇಳಿ ಇದೇ ರೀತಿ ಭಾವನೆಗಳನ್ನು ವ್ಯಕ್ತಪಡಿಸುವುದಿಲ್ಲವೇ? ತಮ್ಮೂರೂ ಇದೇ ರೀತಿ ವಿಚಿತ್ರವಾಗುವುದಿಲ್ಲವೇ ಎಂದನ್ನಿಸಿತು. ಚಿಕ್ಕದಾಗಿ ನಕ್ಕ.
          ಮೂಡಣದಲ್ಲಿ ರವಿ ಕಿತ್ತಳೆ ಹಣ್ಣಿನ ಬಣ್ಣದಲ್ಲಿ ಮೂಡುತ್ತಿದ್ದ. ಸಾಗುವ ದಾರಿ ಸಾಕಷ್ಟಿದೆ ಎನ್ನಿಸಿತು ವಿನಯಚಂದ್ರನಿಗೆ. ಸಲೀಂ ಚಾಚಾನ ಬಳಿ ಇವತ್ತು ಹಗಲಿಡಿ ಸೈಕಲ್ ತುಳಿಯೋಣವೇ ಎಂದು ಕೇಳೋಣ ಎನ್ನಿಸಿತು. ಸಾಧ್ಯವಾದರೆ ಸಂಜೆಯೊಳಗೆ ತಾಂಗೈಲ್ ನಗರವನ್ನು ದಾಟಿ ಮುಂದಕ್ಕೆ ಹೋಗಲು ಪ್ರಯತ್ನಿಸಬೇಕು. ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಭಾರತವನ್ನು ಮುಟ್ಟಿದರೆ ಸಾಕು ಎಂದುಕೊಂಡ. ಯಾಕೋ ಈ ಬೆಂಗಾಲಿ ನಾಡು ಖುಷಿ ಕೊಡುತ್ತಿಲ್ಲ. ಅಸಹನೀಯ ಎನ್ನಿಸುತ್ತಿದೆಯಲ್ಲ ಎಂಬ ಭಾವನೆ ಆತನ ಮನದೊಳಗೆ. ಅಷ್ಟರಲ್ಲಿ ಮಧುಮಿತಾ ಎದ್ದಿದ್ದಳು. ಸಲೀಂ ಚಾಚಾ ಕೂಡ ನಿದ್ದೆಯಿಂದೆದ್ದ.
         ಪ್ರಾಥರ್ವಿಧಿ ಮುಗಿಸಲು ಪಕ್ಕಕ್ಕೆ ಸೈಕಲ್ ನಿಲ್ಲಿಸಿದ ವಿನಯಚಂದ್ರ. ಸೈಕಲ್ಲಿನಲ್ಲಿದ್ದ ನೀರಿನಿಂದ ಮುಖಮಾರ್ಜನ ಮಾಡಿಕೊಂಡ ಬಳಿಕ ಸಲೀಂ ಚಾಚಾನ ಬಳಿ `ಚಾಚಾ.. ಕರಾಟಿಯಾದಿಂದ ಮುಂದಕ್ಕೆ ಹೋಗಿ ಬಿಡೋಣ. ಸಾಧ್ಯವಾದರೆ ಸಂಜೆಯೊಳಗೆ ತಾಂಗೈಲ್ ತಲುಪೋಣ. ನಾನು ಸೈಕಲ್ ತುಳಿಯಲು ಸಿದ್ಧ.. ಒಮ್ಮೆ ಭಾರತದ ಗಡಿಯೊಳಕ್ಕೆ ಹೋಗಿಬಿಟ್ಟರೆ ಸಾಕು ಎನ್ನಿಸಿಬಿಟ್ಟಿದೆ ಚಾಚಾ' ಎಂದ ವಿನಯಚಂದ್ರ ಒಮ್ಮೆ ತಲೆಕೊಡವಿದ.
         ಸಲೀಂ ಚಾಚಾ `ನಾನೂ ಅದನ್ನೇ ಹೇಳೋಣ ಅಂತಿದ್ದೆ ನೋಡು. ನಾವು ಎಷ್ಟು ವೇಗವಾಗಿ ಹೋಗುತ್ತೀವೋ ಅಷ್ಟು ಒಳ್ಳೆಯದು. ಯಾಕೋ ನನ್ನ ಮನಸ್ಸಿನಲ್ಲಿ ಅದೇನೋ ಭೀತಿ ಕಾಡುತ್ತಿದೆ. ಮುಂದೇನೋ ಆಗುತ್ತದೆ ಎನ್ನುವ ಬಾವ ಬಿಟ್ಟೂ ಬಿಡದೆ ಕಾಡುತ್ತಿದೆ. ಮಲಗಿದ್ದೆನಲ್ಲ ಏನೇನೋ ಹುಚ್ಚು ಕನಸುಗಳು. ಎರಡು ಸಾರಿ ಬೆವೆತು ಬಿಟ್ಟಿದ್ದೆ. ಎರಡು ಸಾರಿ ಎಚ್ಚರೂ ಆಗಿತ್ತು. ನೀನು ನಿನ್ನ ಪಾಡಿಗೆ ಸೈಕಲ್ ತುಳಿಯುತ್ತಿದ್ದೆಯಲ್ಲ. ಹಾಗಾಗಿ ನಾನು ನಿನ್ನನ್ನು ಮಾತಾಡಿಸಲು ಹೋಗಲಿಲ್ಲ. ಇನ್ನುಮುಂದೆ ನಾವು ವಿಶ್ರಾಂತಿಗಾಗಿ ನಿಲ್ಲುವುದೇ ಬೇಡ. ಸಾಗುತ್ತಲೇ ಇರೋಣ. ಊಟ, ತಿಂಡಿ, ಗುಟುಕು ನಿದ್ದೆ ಇಷ್ಟೇ ಸಾಕು. ಮೊದಲು ಗಡಿಯನ್ನು ಮುಟ್ಟೋಣ. ಆಮೇಲೆ ಒಳ್ಳೆಯ ಸಮಯ ನೋಡಿಕೊಂಡು ನೀವು ಗಡಿಯನ್ನು ದಾಟಿಬಿಡಿ. ನಾನು ಮರಳುತ್ತೇನೆ..' ಎಂದ ಚಾಚಾ.
           ವಿನಯಚಂದ್ರನ ಮನಸ್ಸಿನಲ್ಲಿ ಇಂತಹ ಚಾಚಾನನ್ನು ಅನುಮಾನಿಸಿ ತಪ್ಪು ಮಾಡಿದೆ ಎನ್ನುವ ಪಶ್ಚಾತ್ತಾಪ ಕಾಡಿತು. ಖಾದಿರ್ ಭಾಯ್ ಮನೆಯಿಂದ ತಂದಿದ್ದ ರೊಟ್ಟಿ, ಖಾರದ ಚಟ್ನಿಯನ್ನು ತಿನ್ನುವಾಗ ವಿನಯಚಂದ್ರನಿಗೆ ಹುಬ್ಬಳ್ಳಿ ನೆನಪಾಯಿತು. ಅಲ್ಲಿಯೂ ಇಂತದ್ದೇ ಖಡಕ್ಕಾದ ರೊಟ್ಟಿ, ಚಟ್ನಿ ಮಾಡುತ್ತಾರಲ್ಲಾ.. ಇಷ್ಟೇ ಖಾರವಾಗಿರುತ್ತದೆ.. ಆದರೆ ಬಹಳ ರುಚಿಕಟ್ಟಾಗಿರುತ್ತದೆ ಎಂದುಕೊಂಡವನೇ ಸಲೀಂ ಚಾಚಾನ ಬಳಿ ಹೇಳಿದ. ಸಲೀಂ ಚಾಚಾ ತಾನು ಚಿಕ್ಕವನಿದ್ದಾಗ ಹೈದರಾಬಾದಿನಲ್ಲಿ ಇಂತಹ ತಿಂಡಿ ತಿನ್ನುತ್ತಿದ್ದೆ. ಆಗ ಒಂದೆರಡು ಸಾರಿ ಹುಬ್ಬಳ್ಳಿಯ ರೊಟ್ಟಿ, ಚಟ್ನಿಯ ಖಾರದ ಬಗ್ಗೆ ಕೇಳಿದ್ದೆ ಎಂದರು. ಈ ವಿಷಯದ ಬಗ್ಗೆ ಅಷ್ಟಾಗಿ ತಿಳಿಯದ ಮಧುಮಿತಾ ಸಲೀಂ ಚಾಚಾ ಹಾಗೂ ವಿನಯಚಂದ್ರನನ್ನು ಸುಮ್ಮನೆ ನೋಡಿದಳು.
(ಢಾಕಾ-ತಾಂಗೈಲ್ ದಾರಿ ಮಧ್ಯದಲ್ಲಿ ಕಾಣುವ ದೃಶ್ಯ)
          ವಿನಯಚಂದ್ರ ಸೈಕಲ್ ತುಳಿಯಲು ಮತ್ತೆ ಸಜ್ಜಾದ ಸಂದರ್ಭದಲ್ಲಿ ಮಧುಮಿತಾ `ನಾನು ಸೈಕಲ್ ತುಳಿಯುತ್ತೇನೆ..' ಎಂದಳು.
          `ನೀನಾ.. ಬೇಡ ಮಾರಾಯ್ತಿ.. ನೀನು ಸೈಕಲ್ ತುಳಿದು ಏನಾದ್ರೂ ಹೆಚ್ಚೂ ಕಡಿಮೆಯಾದರೆ ನಾನೇ ನಿನ್ನನ್ನು ನೋಡಿಕೊಳ್ಳಬೇಕಲ್ಲ.. ಆಮೇಲೆ ಏನಾದರೂ ಆಗಿ ನಿನ್ನನ್ನು ಹೊತ್ತುಕೊಂಡು ಹೋಗುವಂತಾದರೆ ನಾನೇನು ಮಾಡಬೇಕು ಹೇಳು' ಎಂದು ಕಣ್ಣುಮಿಟುಕಿಸಿದ. `ಥೂ ಹೋಗೋ..' ಎಂದವಳೇ ಸೈಕಲ್ ಏರಿಯೇಬಿಟ್ಟಳು.
           ಇವಳು ಯಾವ ರೀತಿ ಸೈಕಲ್ ತುಳಿಯುತ್ತಾಳೋ ದೇವರೆ ಎಂದುಕೊಂಡೇ ವಿನಯಚಂದ್ರ ಹಿಂದಿನ ಸೀಟನ್ನೇರಿದ. ಸಲೀಂ ಚಾಚಾ ಕೂಡ ಕುಳಿತ. ಮಧುಮಿತಾ ಯಾವಾಗ ಸೈಕಲ್ ಕಲಿತಿದ್ದಳೋ. ಚನ್ನಾಗಿಯೇ ತುಳಿಯಲಾರಂಭಿಸಿದಳು. ಸ್ವಲ್ಪ ಸಮಯದ ನಂತರ ಬಾವಾಖೋಲಾ ಎಂಬ ಪುಟ್ಟ ಹಳ್ಳಿ ಸಿಕ್ಕಿತು. ಅಲ್ಲಿಗೆ ಬರುವ ವೇಳೆಗೆ ಮಧುಮಿತಾಳಿಗೆ ಸುಸ್ತಾಗಿರಬೇಕು ಎಂದುಕೊಂಡ ವಿನಯಚಂದ್ರ ಸೈಕಲ್ ತಾನೇ ಪಡೆದುಕೊಂಡ. ಮಧುಮಿತಾಳಿಗೆ ನಿಜಕ್ಕೂ ಸುಸ್ತಾಗಿತ್ತು. ಕೇಳಿದ ತಕ್ಷಣ ಕೊಟ್ಟುಬಿಟ್ಟಳು. ನಗುತ್ತಾ ಸೈಕಲ್ ಹತ್ತಿದ ವಿನಯಚಂದ್ರ ಮಧುಮಿತಾಳನ್ನು ಕೀಟಲೆ ಮಾಡುತ್ತಲೇ ಮುಂದಕ್ಕೆ ಸಾಗಿದ.
            ಉದ್ದನೆಯ ಹಾದಿ. ಅಕ್ಕಪಕ್ಕ ವಿಶಾಲವಾದ ಗದ್ದೆ ಬಯಲುಗಳು. ಸೂರ್ಯನ ಮೊದಲ ಕಿರಣಗಳು ಭೂಮಿಗೆ ಆಗ ತಾನೇ ಮುತ್ತಿಕ್ಕಲು ಆರಂಭಿಸಿದ್ದವು. ರಾತ್ರಿಯಿಂದ ಇದ್ದ ಚಳಿಯ ವಾತಾವರಣ ನಿಧಾನವಾಗಿ ಕಡಿಮೆಯಾಗಿ ಬಿಸಿಲಿನ ಝಳ ಆರಂಭವಾಗಿತ್ತು.
           `ಚಾಚಾ ನಾವು ಹೊರಟು ಎಷ್ಟು ದಿನಗಳಾದವು? ನೆನಪಿದೆಯಾ?' ಎಂದು ಕೇಳಿದ.
           `ಬೇಟಾ.. ಎಂಟು ದಿನಗಳಾಗಿರಬೇಕು ನೋಡು. ಲೆಕ್ಖ ಇಟ್ಟಿಲ್ಲ. ಅಂದಾಜು ಮಾಡಿದ ಪ್ರಕಾರ ಎಂಟು ದಿನ ಕಳೆದಿದೆ. ಯಾಕೋ..?' ಎಂದ ಚಾಚಾ.
             `ಯಾಕೂ ಇಲ್ಲ. ನನಗೆ ಸುಮ್ಮನೆ ಕುತೂಹಲ. ನಾವು ಪಯಣ ಆರಂಭಿಸಿ ಎಷ್ಟು ದಿನಗಳಾಗಿರಬಹುದು ಅಂತ. ಇನ್ನೆಷ್ಟು ದಿನ ಬೇಕಾಗಬಹುದು? ನನಗೆ ಹಗಲು ರಾತ್ರಿಗಳು ಸರಿಯುವುದಷ್ಟೇ ಗೊತ್ತಾಗುತ್ತಿದೆ. ದಿನಗಳನ್ನು ಎಣಿಸುವುದನ್ನು ನಿಲ್ಲಿಸಿದ್ದೇನೆ. ಯಾಕೋ ಹಾಗೆ ದಿನಗಳನ್ನು ಲೆಕ್ಖ ಹಾಕಲೂ ನನಗೆ ಭಯವಾಗುತ್ತದೆ ಚಾಚಾ'
               `ಬೇಟಾ.. ನಾವು ಇಲ್ಲಿಯವರೆಗೆ ರಾತ್ರಿ ಪ್ರಯಾಣ.. ಹಗಲು ವಿಶ್ರಾಂತಿ ಎನ್ನುವಂತೆ ಸಾಗಿ ಬಂದಿದ್ದೇವೆ. ಹಾಗಾಗಿ ದಿನಗಳು ಜಾಸ್ತಿ ಬೇಕಾದವು. ಇನ್ನುಮುಂದೆ ಹಗಲು-ರಾತ್ರಿ ಪಯಣ ಮುಂದುವರಿಸೋಣ. ನಾವು ಎಷ್ಟು ಬೇಗ ಸಾಗುತ್ತೀವೋ ಅಷ್ಟು ಒಳ್ಳೆಯದು. ಏನಂತೀಯಾ? '
              `ಹೌದು.. ಹೌದು.. ಅದು ಸರಿ. ಅದೇ ಸರಿಯಾದುದು' ಎಂದ ವಿನಯಚಂದ್ರ.
              ಮತ್ತೊಂದು ತಾಸಿನ ಅವಧಿಯಲ್ಲಿ ಕರಾಟಿಯಾ ಸಿಕ್ಕಿತು. ಸಾಕಷ್ಟು ದೊಡ್ಡದಾಗಿದ್ದ ಈ ಪಟ್ಟಣ ಬಾಂಗ್ಲಾದ ನಾಡಿನ ಸುಂದರ ಗ್ರಾಮಗಳಲ್ಲೊಂದು ಎನ್ನಿಸಿತು. ಸಲೀಂ ಚಾಚಾ ಈ ಪಟ್ಟಣ ನೋಡಿದ ತಕ್ಷಣ `ಬೇಟಾ.. ಈ ಊರಿದೆಯಲ್ಲ ಬಹಳ ಒಳ್ಳೊಳ್ಳೆಯ ಸಂಗತಿಗಳನ್ನು ಹೊಂದಿದೆ. ಇಲ್ಲೊಂದು ರೋಖಿಯಾ ಮೊಹಲ್ ಅಂತ ಇದೆ. ಪ್ರಾಚೀನ ಕಟ್ಟಡ. ಸ್ವಲ್ಪ ಹಾಳಾಗಿದೆ. ಆದರೆ ನೋಡುಗರನ್ನು ಬಹಳ ಸೆಳೆಯುತ್ತದೆ. ಬಾಂಗ್ಲಾದ ಮೇಲೆ ಪಾಕಿಸ್ತಾನ ದಾಳಿ ಮಾಡಿತ್ತಲ್ಲ 1971ರಲ್ಲಿ ಆಗ ಈ ಕಟ್ಟಡಕ್ಕೆ ಬಹಳ ಹಾನಿಯಾಗಿದೆ. ಇಟ್ಟಿಗೆಯಿಂದ ಮಾಡಿದ್ದ ಈ ಕಟ್ಟಡ ಶಿಥಿಲವಾಗಲು ಆ ದಾಳಿ ಕಾರಣ ಎನ್ನಬಹುದು. ಸರ್ಕಾರ ಈ ಕಟ್ಟಡ ಉಳಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿ ಐದಾರು ವರ್ಷಗಳೇ ಕಳೆದಿವೆ. ಇದುವರೆಗೂ ಕಟ್ಟಡ ಹಾಗೆಯೇ ಇದೆ. ಈ ಮಹಲ್ ಬಗ್ಗೆ ತಿಳಿದವರೆಲ್ಲ ಬಂದು ಖುಷಿಯಿಂದ ನೋಡಿ ಹೋಗುತ್ತಾರೆ' ಎಂದ.
            ವಿನಯಚಂದ್ರ ಬೆರಗಿನಿಂದ ಕೇಳಿದ. `ಮತ್ತಿನ್ನೇನೇನಿದೆ..? ನಾವೂ ಹೋಗಿ ನೋಡಬಹುದಾ?'
             ` ನಾವು ನೋಡಲಿಕ್ಕೆ ಆಗುವುದಿಲ್ಲ. ಇಂತಹ ಹಿಂಸಾಪೀಡಿತ ಸಮಯದಲ್ಲಿ ಅದನ್ನು ನೋಡುತ್ತ ಇರಲಿಕ್ಕಾಗುತ್ತದಾ? ಜೀವ ಉಳಿದರೆ ಮತ್ತೆ ಎಂದಾದರೂ ಬಾಂಗ್ಲಾಕ್ಕೆ ಬಂದು ಅವನ್ನೆಲ್ಲ ನೋಡಬಹುದು' ಎಂದ ಚಾಚಾ ಮಾತು ಮುಂದುವರಿಸಿದ `ಕರಾಟಿಯಾ ಜಮೀಂದಾರ್ ಬಾರಿ ಅಂತೊಂದು ಕಟ್ಟಡವಿದೆ. ಇದು ಒಂದಾನೊಂದು ಕಾಲದಲ್ಲಿ ಈ ಪ್ರದೇಶವನ್ನು ಆಳಿದ ಬಹುದೊಡ್ಡ ಜಮೀನ್ದಾರನ ಮನೆ. ಈಗ ಆ ಜಮೀನ್ದಾರನ ವಂಶಸ್ಥರು ಅಲ್ಲಿ ವಾಸ ಮಾಡುತ್ತಿದ್ದಾರೆ. ಆದರೂ ಅದೊಂದು ಪ್ರವಾಸಿ ಸ್ಥಳವಾಗುವತ್ತ ಮುನ್ನಡೆದಿದೆ. ದೊಡ್ಡ ಪಟ್ಟಣ. ಆದರೆ ಕಳೆದ ದಶಕದವರೆಗೂ ಜಮೀನ್ದಾರಿ ಪದ್ಧತಿಯಲ್ಲಿ ನಲುಗಿತ್ತು. ಇದೀಗ ಅಲ್ಪ ಸ್ವಲ್ಪ ಬದಲಾಗಿದೆ..' ಎಂದ ಚಾಚಾ.
          ಚಾಚಾನ ಅಣತಿಯಂತೆ ಕರಾಟಿಯಾದ ಹೊರವಲಯದಲ್ಲಿಯೇ ಸೈಕಲ್ ಚಾಲನೆ ಮಾಡಿದ ವಿನಯಚಂದ್ರ. ದೂರದ ಬೆಟ್ಟ ಹೇಗೆ ಕಣ್ಣಿಗೆ ನುಣ್ಣಗೆ ಕಾಣುತ್ತದೆಯೋ ಕರಾಟಿಯಾ ಕೂಡ ದೂರದಿಂದ ಬಹಳ ಸುಂದರವಾಗಿ ಕಾಣಿಸಿತು. ಪಟ್ಟಣದ ಒಳಹೊಕ್ಕರೆ ಇನ್ನೇನೇನನ್ನು ಕಾಣಬಹುದೋ ಎಂದುಕೊಂಡ ವಿನಯಚಂದ್ರ. ತಾವು ತಲುಪಲೇಬೇಕು ಎಂದು ನಿಶ್ಚಯ ಮಾಡಿಕೊಂಡಿದ್ದ ತಾಂಗೈಲ್ ಕೆಲವೇ ತಾಸುಗಳ ಅವಧಿಯಲ್ಲಿತ್ತು. ಸಲೀಂ ಚಾಚಾ ಸೈಕಲ್ ಚಾಲನೆಗೆ ತೊಡಗಿದ. ವಿನಯಚಂದ್ರ ಮಧುಮಿತಾಳ ಪಕ್ಕಕ್ಕೆ ಬಂದು ಕುಳಿತ. ಹಲವು ತಾಸುಗಳ ಸೈಕಲ್ ಚಾಲನೆಯ ಕಾರಣ ಕೊಂಚ ಸುಸ್ತಾದಂತಿದ್ದ ವಿನಯಚಂದ್ರ ಹಾಗೇ ಮಧುಮಿತಾಳ ಕಾಲ ಮೇಲೆ ಒರಗಿದ. ಮದುಮಿತಾ ವಿನಯಚಂದ್ರನ ತಲೆಗೂದಲ್ಲಿ ಕೈಹಾಕಿ ಆಡತೊಡಗಿದಳು. ಹಾಗೆ ಕಣ್ಮುಚ್ಚಿದ ವಿನಯಚಂದ್ರನಿಗೆ ಅದ್ಯಾವಾಗ ನಿದ್ದೆ ಬಂದಿತ್ತೋ.. ಕಣ್ಣು ಬಿಟ್ಟಾಗ ದೊಡ್ಡದೊಂದು ಗಲಾಟೆ. ಯಾರೋ ಕೂಗುತ್ತಿದ್ದರು. ಮತ್ಯಾರೋ ಚೀರುತ್ತಿದ್ದರು. ಪೊಲೀಸ್ ಸೈರನ್ನುಗಳು ಅರಚುತ್ತಿದ್ದವು. ಗುಂಡಿನ ಸದ್ದು ಮೊರೆಯುತ್ತಿತ್ತು. ಏನಾಗುತ್ತಿದೆ ಎನ್ನುವುದು ಒಮ್ಮೆ ಬಗೆಹರಿಯಲಿಲ್ಲ. ಭಾರತವನ್ನು ತಲುಪಬೇಕೆನ್ನುವ ಮಹದುದ್ದೇಶವನ್ನು ಹೊಂದಿ ಢಾಕಾದಿಂದ ಸೈಕಲ್ ಮೂಲಕ ಸಾಗಿ ಬಂದಿದ್ದವರನ್ನು ತಾಂಗೈಲ್ ನಗರಿ ಸ್ವಾಗತಿಸಿದ್ದು ಹೀಗೆ..

(ಮುಂದುವರಿಯುತ್ತೆ)