Wednesday, August 27, 2014

ಬೆಂಗಾಲಿ ಸುಂದರಿ-23

(ನಂದನ ಪಾರ್ಕ್)
          ಬಾಂಗ್ಲಾ ನಾಡಿನಲ್ಲಿ ಯಾವ ಕ್ಷಣ ಹೇಗಿರ್ತದೋ ಯಾರೂ ಊಹೆ ಮಾಡುವುದು ಅಸಾಧ್ಯ. ಇವತ್ತು ಶಾಂತವಾಗಿದ್ದ ಜಾಗ ನಾಳೆ ಹಿಂಸಾಚಾರ ಪೀಡಿತವಾಗಲೂಬಹುದು. ಇಂದು ಹೊತ್ತು ಉರಿಯುವ ಪ್ರದೇಶ ನಾಳೆ ಶಾಂತವಾಗಲೂ ಬಹುದು. ಅಷ್ಟು ವಿಚಿತ್ರವಾದ ನಾಡು ಎಂದರೆ ತಪ್ಪಾಗಲಿಕ್ಕಿಲ್ಲ. ಬೆಂಗಾಲಿಗಳು ಎಷ್ಟು ಸ್ನೇಹಿತರೋ ಅಷ್ಟೇ ಸಿಟ್ಟಿನವರೂ ಕೂಡ. ಹೊಸದಾಗಿ ನೋಡುವವರಿಗೆ ಬಾಂಗ್ಲಾ ಸುಲಭಕ್ಕೆ ಅರ್ಥವಾಗುವುದಿಲ್ಲ. ವಿನಯಚಂದ್ರನ ಪಾಡೂ ಅದೇ ರೀತಿಯಾಗಿತ್ತು. ಹಲವು ಜನರು ಬಾಂಗ್ಲಾದ ಕುರಿತು ಹಲವು ಬಗೆಯಲ್ಲಿ ಹೇಳಿದ್ದರೂ ಈ ನಾಡು ಮಾತ್ರ ಅರ್ಥವಾಗಿರಲಿಲ್ಲ. ಪ್ರತಿ ದಿನ ಹೊಸ ಬಗೆಯಲ್ಲಿ ತಿಳಿಯುತ್ತ ಹೋಗುತ್ತಿತ್ತು ಬಾಂಗ್ಲಾ.
           ಸಲೀಂ ಚಾಚಾ ಕೂಡ ಬಾಂಗ್ಲಾ ನಾಡಿನ ಹಲವು ವೈಶಿಷ್ಟ್ಯಗಳ ಬಗ್ಗೆ ವಿವರಿಸುತ್ತ ಹೋಗುತ್ತಿದ್ದ. ಮಾತಿನ ನಡುವೆಯೆಲ್ಲೋ ಸಲೀಂ ಚಾಚಾ ಅಡಿಕೆಯ ಕುರಿತು ಹೇಳಿದ. ತಕ್ಷಣ ವಿನಯಚಂದ್ರನ ಕಿವಿ ನೆಟ್ಟಗಾಯಿತು. ಮಾತಿಗೆ ನಿಂತ ವಿನಯಚಂದ್ರ `ಅಡಿಕೆ ನಮ್ಮ ಜೀವನಾಧಾರ. ನಮ್ಮ ಮಲೆನಾಡಿನಲ್ಲಿ ಮನೆ ಮನೆಗಳಲ್ಲಿ ಅಡಿಕೆ ಬೆಳೆದು ಜೀವನ ನಡೆಸುತ್ತಾರೆ. ಆದರೆ ಬಾಂಗ್ಲಾದೇಶದ ಅಡಿಕೆಗಳು ನಮ್ಮ ಹೊಟ್ಟೆಯ ಮೇಲೆ ಹೊಡೆಯುತ್ತವೆ. ಭಾರತಕ್ಕೆ ಕಳ್ಳ ದಾರಿಯಲ್ಲಿ ಬಾಂಗ್ಲಾ ಅಡಿಕೆ ಬರುವ ಕಾರಣ ನಮ್ಮ ಅಡಿಕೆಗೆ ಬೆಲೆ ಪಾತಾಳಕ್ಕೆ ಕುಸಿಯುತ್ತಿವೆ. ಈಗೀಗ ಈ ಕಳ್ಳ ಸಾಗಾಣಿಕೆ ತಡೆಯಲು ಕಟ್ಟುನಿಟ್ಟು ಕ್ರಮ ಕೈಗೊಳ್ಳಲಾಗುತ್ತದೆ. ಆದರೆ ಬಾಂಗ್ಲಾ ನಾಡಿನಲ್ಲಿ ಈ ಪ್ರಮಾಣದಲ್ಲಿ ಅಡಿಕೆ ಬೆಳೆಯುತ್ತಾರೆ ಎಂದರೆ ಅಚ್ಚರಿಯಾಗುತ್ತಿದೆ..' ಎಂದ.
           `ಹುಂ.. ನಾನೂ ಈ ಬಗ್ಗೆ ಕೇಳಿದ್ದೆ. ಅನೇಕ ಬಾಂಗ್ಲಾ ಅಡಿಕೆ ಬೆಳೆಗಾರರು ನನಗೆ ಪರಿಚಯವಿದ್ದಾರೆ. ಅವರು ಆಗಾಗ ಮಾತನಾಡುತ್ತಿದ್ದುದನ್ನು ನಾನು ಗಮನಿಸಿದ್ದೇನೆ. ಅವರು ಭಾರತಕ್ಕೆ ನನ್ನ ಮಾಲು ಹೇಗಾದರೂ ಹೋಗಿಬಿಟ್ಟರೆ ಸಾಕು. ನಾನು ಸಿಕ್ಕಾಪಟ್ಟೆ ಲಾಭ ಮಾಡಿಕೊಳ್ಳುತ್ತೇನೆ ಎಂದು ಹೇಳುತ್ತಿರುತ್ತಾರೆ. ಭಾರತದ ಮಾರುಕಟ್ಟೆಯೇ ಇವರಿಗೂ ಜೀವನಾಧಾರ. ಎರಡೂ ರಾಷ್ಟ್ರಗಳು ಅಡಿಕೆ ಕುರಿತು ಒಪ್ಪಂದ ಮಾಡಿಕೊಂಡಿದ್ದರೆ ಇಲ್ಲಿನ ಅನೇಕ ಬೆಳೆಗಾರರು ಜೀವನ ಕಟ್ಟಿಕೊಳ್ಳುತ್ತಿದ್ದರು..' ಎಂದ ಸಲೀಂ ಚಾಚಾ.
            `ಇಲ್ಲ ಚಾಚಾ.. ನಮ್ಮಲ್ಲಿ ಅಡಿಕೆ ಹೇರಳವಾಗಿ ಬೆಳೆಯುತ್ತಾರೆ. ನಮ್ಮ ಅಡಿಕೆ ಫಸಲು ಬಹಳವಿರುವ ಕಾರಣ ಬೇರೆ ದೇಶಗಳ ಅಡಿಕೆ ಬೇಕಾಗುವುದೇ ಇಲ್ಲ. ನಮ್ಮ ಅಡಿಕೆ ಮಾರುಕಟ್ಟೆ ಹಾಳು ಮಾಡುವ ಸಲುವಾಗಿ ಕಡಿಮೆ ಬೆಲೆಯಲ್ಲಿ ಇಲ್ಲಿನ ಅಡಿಕೆ ಕೊಳ್ಳಲಾಗುತ್ತಿದೆ. ಹೀಗೆ ಮಾಡುವುದರಿಂದ ಬಾಂಗ್ಲಾ ಬೆಳೆಗಾರರಿಗೂ ಒಳ್ಳೆ ಬೆಲೆ ಸಿಗುವುದಿಲ್ಲ. ನಮ್ಮ ಅಡಿಕೆ ಬೆಳೆಗಾರರೂ ಆತ್ಮಹತ್ಯೆಯ ಹಾದಿ ಹಿಡಿಯುವಂತಾಗುತ್ತದೆ. ಅದೇ ಕಾರಣಕ್ಕೆ ಈಗ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಹಾಗಾಗಿಯೇ ನಮ್ಮ ದೇಶದಲ್ಲಿ ಅಡಿಕೆ ಬೆಳೆಗಾರ ಅಲ್ಪ ಸ್ವಲ್ಪ ಹಣವನ್ನು ಕಾಣುವಂತಾಗಿದೆ..' ಎಂದ ವಿನಯಚಂದ್ರ. ಸಲೀಂ ಚಾಚಾ.. ಹುಂ ಎಂದು ದೀರ್ಘ ನಿಟ್ಟುಸಿರು ಬಿಟ್ಟ.
           ಅಲ್ಲೆಲ್ಲೋ ಸೈಕಲ್ ಚಾಲಿಸುತ್ತಿದ್ದವನು ಕೊಂಚ ಬಿಡುವು ಕೊಟ್ಟ ಚಾಚಾ. ನಿಲ್ಲಿಸಿದವನೇ ವಿನಯಚಂದ್ರನ ಬಳಿ ಬಲಗಡೆಯಲ್ಲಿ ಕೈಮಾಡಿ ತೋರಿಸುತ್ತ ಪನಿಸೈಲ್ ಆಚೆಗೆ ಭವಾನಿಪುರ ಅಂತೊಂದು ಪ್ರದೇಶವಿದೆ. ಅಲ್ಲಿ ಭವಾನಿ ದೇವಾಲಯವಿದೆ. ಬಹಳ ಚನ್ನಾಗಿದೆ. ಹಿಂದೂಗಳು ಸಾಕಷ್ಟು ಸಂಖ್ಯೆಯಲ್ಲಿ ಅಲ್ಲಿಗೆ ಬರುತ್ತಾರೆ ಎಂದ.  ಭಾರತದಲ್ಲಿ ಹಿಂದೂ ಊರುಗಳ ಹೆಸರುಗಳನ್ನೆಲ್ಲ ಅಹ್ಮದಾಬಾದ್, ಹೈದರಾಬಾದ್, ಫರೂಕಾಬಾದ್, ಹೀಗೆ ಮುಸ್ಲಿಂ ಹೆಸರುಗಳಾಗಿ ಬದಲಾಗಿದೆ. ಆದರೆ ಬಾಂಗ್ಲಾದಂತಹ ಮುಸಲ್ಮಾನರು ಬಹುಸಂಖ್ಯಾತರಾಗಿರುವ ದೇಶದಲ್ಲೂ ಹಿಂದೂ ಹೆಸರಾದ ಭವಾನಿಪುರವನ್ನು ಬದಲಾಯಿಸದೇ ಇರುವುದು ವಿನಯಚಂದ್ರನ ಮನಸ್ಸಿನಲ್ಲಿ ಅಚ್ಚರಿ ತಂದಿತು. ನಿಜಕ್ಕೂ ಬಾಂಗ್ಲಾ ನಾಡು ಅಚ್ಚರಿಯ ಮೂಟೆಯಂತೆ ಅನ್ನಿಸಿತು.
            ಆದರೂ ವಿನಯಚಂದ್ರನ ಮನಸ್ಸಿನಲ್ಲಿ ಬಾಂಗ್ಲಾದಲ್ಲಿನ ಹಿಂಸಾಚಾರದ ಬಗ್ಗೆಯೇ ಆಲೋಚನೆಗಳು. ಇಷ್ಟೆಲ್ಲ ವಿಶಿಷ್ಟವಾಗಿರುವ ನಾಡಿನಲ್ಲೇಕೆ ಈ ಪರಿಯ ಹಿಂಸಾಚಾರ? ಯಾಕೋ ಅರ್ಥವಾಗಲಿಲ್ಲ. ತಲೆ ಕೊಡವಿದ. ಸಲೀಂ ಚಾಚಾ ಮತ್ತೆ ಸೈಕಲ್ ತುಳಿಯಲು ಆರಂಭಿಸಿದ. ಸೈಕಲ್ ಏರಿದ ಕೆಲ ಸಮಯದಲ್ಲಿಯೇ ನಂದನ ಪಾರ್ಕ್ ಸಿಕ್ಕಿತು. ಸಲಿಂ ಚಾಚಾ ನಂದನ ಪಾರ್ಕಿನ ವಿಶೇಷತೆಗಳನ್ನು ತಿಳಿಸಿದ. ಇದೊಂದು ಫ್ಯಾಂಟಸಿ ಪಾರ್ಕ್ ಎಂದೂ ಹೇಳಿದ. ಇಲ್ಲಿಂದ ಮುಂದೆ ಅಪ್ಪಟ ಗ್ರಾಮೀಣ ಬಾಂಗ್ಲಾ ನಾಡು ತೆರೆದುಕೊಳ್ಳಲಿತ್ತು. ಬ್ರಹ್ಮಪುತ್ರಾ ನದಿಯ ವಿಶಾಲವಾದ ಹರವಿನ ಪ್ರದೇಶದಲ್ಲಿ ಸಾಗಬೇಕಿತ್ತು. ನಂದನ ಪಾರ್ಕಿನಿಂದ ನೇರ ರಸ್ತೆಯಲ್ಲಿ ಸಾಗಿದರೆ ಸಿಗುವ ಊರೇ ಚಂದ್ರ. ಊರಿಗೆ ಚಂದ್ರ ಎನ್ನುವ ಹೆಸರು ಇಡಲಾಗಿದೆ. ಎಷ್ಟು ಚೆಂದವಲ್ಲವಾ ಎಂದುಕೊಂಡ ವಿನಯಚಂದ್ರ. ತನ್ನ ಹೆಸರಲ್ಲೂ ಚಂದ್ರವಿದೆಯಲ್ಲ. ಊರ ಹೆಸರೂ ಚಂದ್ರ ಎಂದೂ ಅನ್ನಿಸಿತು ಆತನಿಗೆ. ಚಂದ್ರ ಎನ್ನುವ ಹೆಸರಿನ ಊರು ಹೇಗಿರಬಹುದು ಎನ್ನುವ ಕುತೂಹಲವೂ ಮೂಡಿತು. ಚಂದ್ರ ಊರಿಗೆ ಜಯದೇವಪುರ ಹಾಗೂ ತಂಗೈಲ್ ನಡುವಿನ ರಾಷ್ಟ್ರೀಯ ಹೆದ್ದಾರಿಯೂ ಹಾದುಹೋಗಿದೆ. ಮುಂದೇ ಇದೇ ಮಾರ್ಗದಲ್ಲಿ ಸಾಗಬೇಕಾಗುತ್ತದೆ ಎಂದು ಮಾಹಿತಿ ನೀಡಿದ ಸಲೀಂ ಚಾಚಾ.
           ಮತ್ತೊಂದು ಹತ್ತು ಕಿ.ಮಿ ಪಯಣದ ನಂತರ ಸಿಕ್ಕಿತು ಚಂದ್ರ. ಅರ್ಧ ಗ್ರಾಮೀಣ ಅರ್ಧ ನಗರ ಪ್ರದೇಶ. ದೊಡ್ಡದೊಂದು ಸುಂದರ ಮಸೀದಿ ಇಲ್ಲಿದೆ. ಹಾಲುಬಿಳುಪಿನ ಮಸೀದಿಯ ಗುಮ್ಮಟದಲ್ಲಿ ಚಿನ್ನದ ಬಣ್ಣದ ಹಾಳೆಯ ಲೇಪನ ಮಾಡಿದ್ದು ಎಂತಹ ಪ್ರವಾಸಿಗರನ್ನೂ ಕೂಡ ಇದು ಸೆಳೆಯುತ್ತದೆ. ಚಂದ್ರ ನಗರಿಯ ಮುಖ್ಯ ವೃತ್ತದ ಬಳಿ ಸಾಗುತ್ತಿದ್ದಂತೆಯೇ ಈ ಊರಿನಲ್ಲಿ ಏನೋ ಸರಿಯಿಲ್ಲ ಎನ್ನಿಸಿತು. ಇದನ್ನು ಮೊದಲು ಗಮನಿಸಿದ್ದು ಸಲೀಂ ಚಾಚಾ. ಅಲ್ಲಲ್ಲಿ ಬ್ಯಾರಿಕೇಡ್ ಗಳಿದ್ದವು. ಕೆಲವು ಕಡೆಗಳಲ್ಲಿ ಪೊಲೀಸರೂ ನಿಂತಿದ್ದರು. ಈ ಊರಿನಲ್ಲಿ ಹಿಂಸಾಚಾರ ಶುರುವಾಗಿದೆಯಾ ಎಂದುಕೊಂಡರು ಸೈಕಲ್ ಮೇಲಣ ಪಯಣಿಗರು. ಹಾಗಾಗದಿದ್ದರೆ ಸಾಕು ಎನ್ನುವ ಬಾವವೂ ಮೂಡಿತು. ಅವ್ಯಕ್ತ ಭೀತಿಯ ನಡುವೆಯೇ ಸೈಕಲ್ ತುಳಿಯತೊಡಗಿದ ಸಲೀಂ ಚಾಚಾ.
(ಚಂದ್ರಾ ನಗರಿಯ ಸುಂದರ ಮಸೀದಿ)
           ಚಂದ್ರ ನಗರಿಯ ಫಾಸಲೆಯನ್ನು ಇನ್ನೇನು ದಾಟಬೇಕು ಎನ್ನುವಷ್ಟರಲ್ಲಿ ಒಬ್ಬ ಪೊಲೀಸಿನವನು ಇವರನ್ನು ಅಡ್ಡಗಟ್ಟಿದ. ಸೈಕಲ್ ನಿಲ್ಲಿಸಿದವನೇ ಲಾಠಿಯನ್ನೆತ್ತಿಕೊಂಡು ಗದರಿಸುತ್ತಲೇ ಬಂದ. ಸಲೀಂ ಚಾಚಾ ಸುಮ್ಮನೆ ನಿಂತಿದ್ದ. ಪೊಲೀಸಿನವನು ಬಯ್ಯುತ್ತಲೇ ಯಾರು ನೀವೆಲ್ಲ ಈ ಮುಂತಾಗಿಯೇ ವಿಚಾರಣೆ ಆರಂಭಿಸಿದ. ಸಲೀಂ ಚಾಚಾ ತನ್ನ ಮಗ ಹಾಗೂ ಸೊಸೆ ಸೈಕಲ್ ಮೇಲೆ ಸಾಗುತ್ತಿದ್ದಾರೆ. ಮಿರ್ಜಾಪುರಕ್ಕೆ ಸೈಕಲ್ ಮೇಲೆ ಬರುತ್ತೇವೆಂದೆ ಹರಕೆ ಹೊತ್ತುಕೊಂಡಿದ್ದೇವೆ ಎಂದ. ಆದರೂ ಪೊಲೀಸ ಸುಮ್ಮನಾಗಲಿಲ್ಲ. ಕೊನೆಗೆ ವಿನಯಚಂದ್ರನ ಬಳಿ ಬಂದು ಹೆಸರೇನು ಎಂದೆಲ್ಲ ಕೇಳಿದ. ಅದಕ್ಕೆ  ವಿನಯಚಂದ್ರ ಗಟ್ಟಿಯಾಗಿಯೇ `ಅಹಮದ್' ಎಂದ. ಪೊಲೀಸನ ಕಣ್ಣು ಮಧುಮಿತಾಳ ಮೇಲೆ ಬಿದ್ದಿತ್ತು. ಆಕೆಯನ್ನೇ ಪದೆ ಪದೆ ನೋಡಲಾರಂಭಿಸಿದ್ದ. ವಿನಯಚಂದ್ರನಿಗೆ ಕಸಿವಿಸಿಯಾಗಿತ್ತು. ಯಾಕೋ ಆಕೆಯ ಬಗ್ಗೆ ಅನುಮಾನ ಬಂದಂತೆ ಪೊಲೀಸ ವರ್ತನೆ ಮಾಡತೊಡಗಿದ. ಕೊನೆಗೆ ಮಧುಮಿತಾಳ ಬಗ್ಗೆ ವಿಚಾರಣೆ ಮಾಡಿದ. ಪೊಲೀಸ ಕೇಳಿದ ಪ್ರಶ್ನೆಗಳಿಗೆಲ್ಲ ಉತ್ತರ ಕೊಟ್ಟರೂ ಪೊಲೀಸಿನವ ಸೊಕಾ ಸುಮ್ಮನೆ ಗಲಾಟೆಯನ್ನು ಆರಂಭಿಸಿದ್ದ. ಸಲೀಂ ಚಾಚಾನಿಗೆ ಯಾಕೋ ಪರಿಸ್ಥಿತಿ ಹದ ತಪ್ಪುತ್ತಿದೆ ಎನ್ನಿಸಿತು. ವಿನಯಚಂದ್ರನೂ ನಿಧಾನವಾಗಿ ತಾಳ್ಮೆ ಕಳೆದುಕೊಳ್ಳುತ್ತಿದ್ದ.
             ಕೊನೆಗೊಮ್ಮೆ ಪೊಲೀಸ ವಿನಯಚಂದ್ರನ ಜೊತೆಗೂ ಗಲಾಟೆ ಆರಂಭಿಸಿದ. ವಿನಯಚಂದ್ರ ಹಲವು ಸಾರಿ ಪೊಲೀಸನನ್ನು ಸಮಾಧಾನ ಮಾಡಲು ನೋಡಿದ. ಕೊನೆಗೆ ಇದ್ದಕ್ಕಿದ್ದಂತೆ ಅದೇನನ್ನಿಸಿತೋ ಏನೋ ರಪ್ಪನೆ ಕಪಾಳಕ್ಕೆ ಬಾರಿಸಿಯೇ ಬಿಟ್ಟ. ವಿನಯಚಂದ್ರನ ಹೊಡೆತ ಯಾವ ರೀತಿಯಿತ್ತೆಂದರೆ ಒಂದು ಸಾರಿ ಪೊಲೀಸ ಹಿಂದಕ್ಕೆ ಸರಿದನಲ್ಲದೇ ಕೆನ್ನೆಯನ್ನು ಹಿಡಿದುಕೊಂಡು ಸುಧಾರಿಸಿಕೊಳ್ಳುತ್ತ ಕುಳಿತ. ಸಿಟ್ಟಿಗೆದ್ದ ವಿನಯಚಂದ್ರ ಹಿಂದಿಯಲ್ಲಿ ಬಯ್ಯಲು ಆರಂಭಿಸಿದ್ದ. ಪೊಲೀಸನಿಗೂ ಸಿಟ್ಟು ಬಂದಿತ್ತೇನೋ. ವಿನಯಚಂದ್ರನನ್ನು ಗುರಾಯಿಸತೊಡಗಿದ್ದ. ಸಲೀಂ ಚಾಚಾ ಮಾತ್ರ ಬಹು ದೊಡ್ಡ ತಪ್ಪು ಸಂಭವಿಸಿಬಿಟ್ಟಿತು ಎನ್ನುವಂತೆ ಭಯಭೀತನಾಗಿದ್ದ. ವಿನಯಚಂದ್ರ ಹೊಡೆಯಲಿಕ್ಕೆ ಹೊಡೆದಿದ್ದ. ಹೊಡೆದ ನಂತರವೇ ತಾನೆಂತ ಕೆಲಸ ಮಾಡಿದೆ ಎನ್ನುವ ಅರಿವಾಗತೊಡಗಿತ್ತು. ಪೊಲೀಸ ನಿಧಾನವಾಗಿ ಚೇತರಿಸಿಕೊಳ್ಳುತ್ತಿರುವಷ್ಟರಲ್ಲೇ ಸಲೀಂ ಚಾಚಾ ಬೇಗ ಬೇಗನೆ ಸೈಕಲ್ ಹತ್ತಿ ಹೊರಟೇಬಿಟ್ಟಿದ್ದ. ಪೊಲೀಸ ಇದ್ದ ಜಾಗದಿಂದ ಕೆಲವು ಕಿ.ಮಿ ದಾಟಿ ಬಂದನಂತರವೇ ಎಲ್ಲರೂ ಸಮಾಧಾನಗೊಂಡಿದ್ದು.
            ಸಲೀಂ ಚಾಚಾ ಮೊದಲಿಗೆ ವಿನಯಚಂದ್ರನನ್ನು ತರಾಟೆಗೆ ತೆಗೆದುಕೊಂಡ. ಇಷ್ಟು ಸಿಟ್ಟಾಗುವುದು ಬೇಡವೇ ಬೇಡ. ಇಂತಹ ತಪ್ಪು ಮಾಡಿದರೆ ನೀವು ಬಾಂಗ್ಲಾ ನಾಡನ್ನು ದಾಟಿ ಭಾರತಕ್ಕೆ ಹೋಗುವುದೇ ಇಲ್ಲ. ಬಾಂಗ್ಲಾದ ಯಾವುದಾದರೂ ಒಂದು ಗದ್ದೆ ಬಯಲಿನಲ್ಲಿ ಖತಂ ಆಗುತ್ತೀರಿ. ಬಾಂಗ್ಲಾದ ಭತ್ತದ ಗದ್ದೆಗೆ ನಿಮ್ಮ ರಕ್ತ ನೀರಿನಂತೆ ಆಗುತ್ತದೆ. ಹೀಗೆ ಮಾಡಬೇಡ ಬೇಟಾ ಎಂದೂ ಹೇಳಿದ. ವಿನಯಚಂದ್ರ ಕೂಡ ತನ್ನರಿವಿಲ್ಲದಂತೇ ಈ ರೀತಿ ಆಗಿದ್ದೆಂದೂ ಹೇಳಿದ. ಮೂವರೂ ಒಬ್ಬರಿಗೊಬ್ಬರು ತಿಳಿ ಹೇಳಿಕೊಂಡು ಮುನ್ನಡೆದರು.
            ಕೆಲ ಕಿಲೋಮೀಟರುಗಳ ಪಯಣದ ನಂತರ ಕಾಲಿಯಾಕೈರ್ ಎಂಬ ಪಟ್ಟಣ ಸಿಕ್ಕಿತು. ಕಾಲಿಯಾಕೈರ್ ಪಟ್ಟಣವನ್ನು ತಲುಪುವ ವೇಳೆಗೆ ಪೊಲೀಸರು ಇನ್ನು ತಮ್ಮನ್ನು ಹುಡುಕಿ ಬರಲಾರರು ಎನ್ನುವ ಧೈರ್ಯ ಬಂದಿತು. ಮುಂದಕ್ಕೆ ಪಯಣಿಸಿದರು. ಆ ಊರಿನ ಫಾಸಲೆಯಲ್ಲಿ ಹರಿಯುತ್ತಿದ್ದ ನದಿಯ ಮೇಲಿನಿಂದ ಬೀಸಿ ಬರುತ್ತಿದ್ದ ತಂಗಾಳಿ ಮುಂಜಾವಿಗೆ ಹೊಸ ಬೆಡಗನ್ನು ನೀಡಿತು. ಹಗಲಿನಲ್ಲಿ ಪ್ರಯಾಣ ಮಾಡುವುದು ಬೇಡ ಎನ್ನುವ ನಿರ್ಧಾರ ಮಾಡಿದ್ದರೂ ಮಿರ್ಜಾಪುರವನ್ನು ತಲುಪಲೇಬೇಕು ಎನ್ನುವ ಕಾರಣಕ್ಕಾಗಿ ಬೆಳಗಾದರೂ ಸೈಕಲ್ ಹೊಡೆಯೋಣ ಎಂದುಕೊಂಡರು. ಮಿರ್ಜಾಪುರದಲ್ಲಿ ಭಾರತದ ಗಡಿಯೊಳಕ್ಕೆ ಕಳಿಸುವ ಏಜೆಂಟ್ ಭೇಟಿಯಾಗಿ ಅಗತ್ಯದ ನಿರ್ದೇಶನಗಳನ್ನು ನೀಡಲಿದ್ದ. ಆ ಕಾರಣಕ್ಕಾಗಿ ಏನೇ ತೊಂದರೆಯಾದರೂ ಸೈಕಲ್ ರಿಕ್ಷಾ ತುಳಿದು ಮಿರ್ಜಾಪುರವನ್ನು ಎಷ್ಟು ತ್ವರಿತವಾಗಿ ಸಾಧ್ಯವೋ ಅಷ್ಟು ಬೇಗ ತಲುಪುವ ನಿರ್ಧಾರ ಮಾಡಿದರು. ಬಾಂಗ್ಲಾ ನಾಡಿನ ಬಾನಿನಲ್ಲಿ ಸೂರ್ಯ ಉದಯಿಸಲು ಆರಂಭಿಸಿದ್ದ. ಮೂಡಣ ದಿಕ್ಕು ಕೆಂಪಾಗಿತ್ತು. ನಾಚಿದ ನಾರಿಯ ಕೆನ್ನೆಯಂತೆ ಸುಂದರವಾಗಿತ್ತು. ಬಾನಿನಲ್ಲಿ ಕೈ ಕೈ ಹಿಡಿದುಕೊಂಡು ಹೊರಟಂತೆ ಹಕ್ಕಿಗಳ ಹಿಂಡು ತಮ್ಮ ದೈನಂದಿನ ಕೆಲಸ ಕಾರ್ಯಗಳಿಗೆ ಹೊರಟಿದ್ದವು. ಅಲ್ಲೆಲ್ಲೊ ಚಿಕ್ಕ ಕೆರೆಯ ಬಳಿ ಸೈಕಲ್ ನಿಲ್ಲಿಸಿ ಪ್ರಾತರ್ವಿಧಿಗಳನ್ನು ಮುಗಿಸಿ ವಿನಯಚಂದ್ರ ಸೈಕಲ್ ತುಳಿಯಲು ಏರಿದ.

(ಮುಂದುವರಿಯುತ್ತದೆ..)

Monday, August 25, 2014

ಹೊಸ ಹನಿಗಳು

ಹೇಳಿಕೆ


ಅಚ್ಛೆ ದಿನ ಆನೆವಾಲೇ ಹೈ

ಎಂದು ಮೋದಿ ಹೇಳುತ್ತಿದ್ದರೂ
ಪೆಟ್ರೂಲ್ ಬೆಲೆ ಹೆಚ್ಚಾಗಿದೆ ನೋಡಿ
ಎಂದರು ಯು. ಟಿ. ಖಾದರು |
ಕಳೆದ ಹತ್ತು ವರ್ಷಗಳಿಂದ
ಅವರು ಸುಮ್ಮನಿದ್ದರು ||


ಹೊಣೆಗಾರಿಕೆ



ರಾಷ್ಟ್ರದಲ್ಲಿ ಹೀನಾಯ

ಸೋಲನ್ನು ಅನುಭವಿಸಿದ್ದರೂ
ಉಪ ಚುನಾವಣೆಯಲ್ಲಿ
ಗೆದ್ದ ತಕ್ಷಣ
ಸೋಲಿನ ಹೊಣೆ ಹೊತ್ತು
ಮೋದಿ ರಾಜಿ ನಾಮೆ ಕೊಡಬೇಕು
ಎಂದರಂತೆ ಕಾಂಗ್ರೆಸ್ಸಿಗರು |


ನಾಯಕತ್ವ



ರಾಷ್ಟ್ರದಲ್ಲಿ ಕಾಂಗ್ರೆಸ್

ಸೋತಾಗ ಕಾಂಗ್ರೆಸ್ಸಿಗರು
ಸೋಲಿಗೆ ಎಲ್ಲರೂ ಹೊಣೆ ಎಂದರು |
ಉಪ ಚುನಾವಣೆಯಲ್ಲಿ 
ಕಾಂಗ್ರೆಸ್ ಗೆದ್ದಾಗ ಮಾತ್ರ
ರಾಹುಲ್ ಗಾಂಧಿ ಯುವ ನಾಯಕತ್ವ
ಕಾರಣ ಎಂದರು. ||

ಪತಿವೃತೆ


ಪತಿಯನ್ನೇ
ವೃತವೆಂದು ತಿಳಿದು
ಸದಾಕಾಲ ಆತನನ್ನೇ
ಸೇವಿಸುವವಳು
ಪತಿವೃತೆ ||


ರಮ್ಯ

ಆಕೆ ಬಹು ರೂಪವತಿ
ರಮ್ಯ|
ನೋಡಲೂ ಕೂಡ ಅಷ್ಟೇ
ರಮ್ಯ |
ಜೊತೆಗೆ ಬಯಸಿದಾಗಲೆಲ್ಲ
ಮತ್ತು ನೀಡುವಳು
ಅದೇ RUMಯಾ ||

Sunday, August 24, 2014

50000

 
      ಖಂಡಿತ ಇದು ಹಂಚಿಕೊಳ್ಳಲೇಬೇಕಾದಂತಹ ಖುಷಿಯ ಸಂಗತಿ. ಹೌದು ಅಘನಾಶಿನಿ ಬ್ಲಾಗ್ ವೀಕ್ಷಕರ ಸಂಖ್ಯೆ 50000 ತಲುಪಿದೆ. ಯಾರ್ಯಾರು ನನ್ನ ಬ್ಲಾಗ್ ವೀಕ್ಷಣೆ ಮಾಡಿ, ಮೆಚ್ಚುಗೆ ಸೂಚಿಸಿ ಪ್ರತಿಕ್ರಿಯೆ ನೀಡಿದ್ದೀರೋ ಅವರೆಲ್ಲರಿಗೂ ಧನ್ಯವಾದಗಳನ್ನು ಹೇಳಲೇ ಬೇಕಾದದ್ದು ನನ್ನ ಕರ್ತವ್ಯ.
           ನಾನು ಈ ಬ್ಲಾಗನ್ನು ಬರೆಯಲು ಆರಂಭಿಸಿದ್ದು 29-08-2009ರಂದು. ಅದಕ್ಕೂ ಮುನ್ನ ಬರೆಯುತ್ತಿದ್ದೆನಾದರೂ ಬ್ಲಾಗ್ ಲೋಕ ನನಗೆ ಅಪರಿಚಿತವಾಗಿತ್ತು. ಬ್ಲಾಗ್ ಲೋಕವೇನು ಕಂಪ್ಯೂಟರ್ ಎಂಬುದೇ ನನಗೆ ಅಪರಿಚತವಾಗಿತ್ತು ಎಂದರೆ ತಪ್ಪಾಗಲಿಕ್ಕಿಲ್ಲ. ಆಗ ತಾನೆ ಕಂಪ್ಯೂಟರ್ ಕಲಿತಿದ್ದ ಹೊಸತು, ದೋಸ್ತರ ಸಲಹೆಯ ಮೇರೆಗೆ ಆರ್ಕುಟ್ ಅಕೌಂಟ್ ಓಪನ್ ಮಾಡಿದ್ದೆ. ನಾನು ಬರೆಯುವುದರ ಬಗ್ಗೆ ತಿಳಿದಿದ್ದ ದೋಸ್ತರು ಬ್ಲಾಗ್ ಮಾಡು ಎಂದು ಸಲಹೆ ಕೊಟ್ಟರು. ಒಂದು ಬ್ಲಾಗ್ ಮಾಡಿ ಸುಮ್ಮನೆ ಇಟ್ಟಿದ್ದೆ. ನೆನಪಾದಾಗ ಒಂದೆರಡು ಕವಿತೆಯೋ ಖಯಾಲಿಯ ಬರಹಗಳನ್ನೋ ಬರೆಯುತ್ತಿದ್ದೆ. 2011ರ ವರೆಗೂ ನಾನು ಬರೆದಿದ್ದು 10-15 ಬರಹಗಳಷ್ಟೆ. ಆದರೆ 2012ರಿಂದ ನಾನು ಆಕ್ಟಿವ್ ಆಗಿ ಬ್ಲಾಗ್ ಲೋಕದಲ್ಲಿ ಬರವಣಿಗೆಯನ್ನು ಆರಂಭಿಸಿದೆ. ಅಲ್ಲಿಂದೀಚೆಗೆ ಅಜಮಾಸು 315 ಬರಹಗಳು ನನ್ನ ಬ್ಲಾಗಿನ ಗೋಡೆಯಲ್ಲಿ ಮೂಡಿವೆ.
           ಅಘನಾಶಿನಿ ಎಂಬುದು ನನ್ನ ಬ್ಲಾಗಿಗೆ ಇಟ್ಟ ಹೆಸರು. ಇದಕ್ಕೆ ಹಲವು ಕಾರಣಗಳಿದೆ. ನಾನು ಹುಟ್ಟಿ ಬೆಳೆದ ದಂಟಕಲ್ ಎಂಬ ಊರಿನ ಅಂಚಿನಲ್ಲಿ ಹರಿಯುವ ನದಿ ಅಘನಾಶಿನಿ. ನನ್ನ ಬರವಣಿಗೆಯ ಓಂಕಾರ ಆರಂಭವಾದದ್ದು ಇದೇ ಅಘನಾಶಿನಿಯ ದಡದ ಮೇಲೆ. ನನ್ನ ನೋವು, ಖುಷಿಯ ಸನ್ನಿವೇಶಗಳಿಗೆಲ್ಲ ಅಘನಾಶಿನಿಯೇ ಮೆಟ್ಟಿಲಾದದ್ದು. ಗೆದ್ದಾಗಲೂ ಸೋತಾಗಲೂ ಅಘನಾಶಿನಿ ನದಿಯ ದಡದ ಬಂಡೆಗಳ ಮೇಲೆ ನಿಂತಿದ್ದಿದೆ ನಾನು. ಇಂತಹ ಕಾರಣಕ್ಕಾಗಿಯೇ ನಾನು ನನ್ನ ಬ್ಲಾಗಿಗೆ ಅಘನಾಶಿನಿ ಎಂದೂ ಟ್ಯಾಗ್ ಲೈನ್ ನನ್ನು ನದಿ ಕಣಿವೆ ಹುಡುಗನ ಭಾವ ಭಿತ್ತಿ ಎಂದೂ ಬರೆದಿದ್ದು.
           ಅಘನಾಶಿನಿ ಎಂಬ ಹೆಸರಿನ ಮೂರು ಬ್ಲಾಗುಗಳಿವೆ. ಗಂಗಾಧರ ಹೆಗಡೆ ಅವರ ಅಘನಾಶಿನಿ, ಸಮನ್ವಯಾ ಅವರ ಅಘನಾಶಿನಿ ಹಾಗೂ ನನ್ನ ಅಘನಾಶಿನಿ ಬ್ಲಾಗುಗಳು. ಈ ಮೂರರ ಪೈಕಿ ಗಂಗಾಧರ ಹೆಗಡೆ ಅವರು ನಾನು ಬ್ಲಾಗ್ ಬರೆಯಲು ಆರಂಭಿಸಿದ ಸಮಯದಲ್ಲಿಯೇ ಅವರೂ ಬ್ಲಾಗನ್ನು ಬರೆಯಲು ಶುರು ಮಾಡಿದರು. ಸಮನ್ವಯಾ ಅವರು ಒಂದೆರಡು ವರ್ಷದ ಹಿಂದೆ ಬ್ಲಾಗ್ ಆರಂಭಿಸಿದರು. ಆದರೆ ನನ್ನ ಬ್ಲಾಗು ಉಳಿದ ಇಬ್ಬರು ಬರೆದ ಬ್ಲಾಗಿಗಿಂತ ಹೆಚ್ಚು ಜನರನ್ನು ತಲುಪಿದೆ ಎನ್ನುವ ಹೆಮ್ಮೆ ನನ್ನದು. ಹಾಗಂತ ಅವರದ್ದು ಚನ್ನಾಗಿಲ್ಲ ಎಂದೂ ನಾನು ಹೇಳುತ್ತಿಲ್ಲ. ಆದರೆ ಅವರಿಬ್ಬರೂ ಆಕ್ಟಿವ್ ಆಗಲೇ ಇಲ್ಲ. ನಾನು ಆಕ್ಟಿವ್ ಆಗಿ ಬರೆಯುತ್ತಲೇ ಇದ್ದೇನೆ ಅಷ್ಟೆ.
          ಇಂದಿಗೂ ನನಗೆ ನೆನಪಿದೆ. ನಾನು ಮೊಟ್ಟಮೊದಲು ಬರೆದಿದ್ದೊಂದು ಕವಿತೆ. ನಾನು ಓದಿದ್ದು ಕಾನಲೆಯ ಹೂಸ್ಕೂಲಿನಲ್ಲಿ. ನಾನು 8 ನೇ ಕ್ಲಾಸ್ ಇದ್ದಾಗ ಅಣ್ಣ ಗಿರೀಶನದ್ದೊಂದು ಚಿಕ್ಕ ಬರಹ ತರಂಗದಲ್ಲಿ ಪ್ರಕಟವಾಗಿತ್ತು. ಅದನ್ನು ನೋಡಿ ಖುಷಿಯಿಂದ ನಾನು ಒಂದು ಹನಿಗವಿತೆ ಬರೆದು ಕಳಿಸಿದ್ದೆ. ಅದೂ ಚಿಣ್ಣರ ಅಂಗಳವೋ, ಬಾಲವನವೋ ಏನೋ ಒಂದಕ್ಕೆ. ಮಕ್ಕಳ ಕವಿತೆ. ತರಂಗದವರು ಅದನ್ನು ಪ್ರಕಟವನ್ನೂ ಮಾಡಿಬಿಟ್ಟರು. ಅದಕ್ಕೆ ನನಗೆ 30 ರು. ಸಂಭಾವನೆಯೂ ಬಂದಿತು. ಆ ನಂತರ ಗುರಣ್ಣನಿಗೆ ಒಂದಷ್ಟು ದಿನ ಬರೆಯುವ ಹುಚ್ಚು ಹತ್ತಿತ್ತು. ಆತ ಡಿಗ್ರಿ ಓದುತ್ತಿದ್ದ. ಸಾಕಷ್ಟು ಹುಡುಗಿಯರನ್ನೂ ಪ್ರೀತಿಸುತ್ತಿದ್ದ. ಆ ಕಾರಣಕ್ಕಾಗಿ ಹಲವು ಕವಿತೆಗಳನ್ನೂ ಒಗಾಯಿಸುತ್ತಿದ್ದ. ಹೀಗಿದ್ದಾಗಲೇ ಕಾನ್ಲೆಯ ಗುಡ್ಡದ ನೆತ್ತಿಯಲ್ಲಿ ಕುಳಿತು ಒಂದು ನಮ್ಮ ಶಾಲೆಯ ಚಂದಿರ ಅಂತ ಒಂದು ಕವಿತೆ ಬರೆದಿದ್ದೆ. ಇಂದು ರೀತಿ ಅಲ್ಲಿ ನೋಡು ಚಂದ್ರ ಬಿಂಬ, ಇಲ್ಲಿ ನೋಡು ಲೈಟ್ ಕಂಬ ರೀತಿಯ ಕವಿತೆ. ಬರೆದವನೇ ಗುರಣ್ಣನಿಗೆ ತೋರಿಸಿದ್ದೆ. ಹಿಗ್ಗಾಮುಗ್ಗಾ ಬೈದಿದ್ದ. ನಾನು ಬೇಜಾರು ಮಾಡ್ಕೊಂಡಿದ್ದೆ.
           ಅದಾದ ನಂತರ `ಇದು ನನ್ನದು.' ಎನ್ನುವ ಕವಿತೆ ಬರೆದಿದ್ದು ಫಸ್ಟ್ ಪಿಯುಸಿಯಲ್ಲಿ ನಮ್ಮೂರಿನ ಹುಳ್ಕಿನ ಜಡ್ಡಿ ಗದ್ದೆಯ ಗೇರು ಮರದ ಮೇಲೆ ಕುಳಿತು. ಆ ಮೇಲೆ ನಾನು ಫಸ್ಟ್ ಪಿಯುಸಿಯಲ್ಲಿ ಸೂರನಕೇರಿಯ ಗಣೇಶಜ್ಜನ ಮನೆಯಲ್ಲಿ ಉಳಿದುಕೊಂಡು ನಾಣಿಕಟ್ಟಾ ಕಾಲೇಜಿಗೆ ಹೋಗುತ್ತಿದ್ದೆ. ನಾನು ಹಾಗೂ ಗಿರೀಶಣ್ಣ ಇಬ್ಬರೂ ಪತ್ರದ ಮೂಲಕ ಪತ್ರಿಕೆಯೊಂದನ್ನು ಮಾಡಿದ್ದೆವು. ಆತ ಸಹೃದಯಿ ಎನ್ನುವ ತಲೆಬರಹದ ಅಡಿಯಲ್ಲಿ 2.50 ರು. ಅಂತರ್ದೇಸಿ ಪತ್ರದಲ್ಲಿ ಥೇಟು ಒಂದು ಪತ್ರಿಕೆ ಯಾವ ರೀತಿ ವಿವಿಧ ಸುದ್ದಿ, ಲೇಖನ, ಕಥೆ, ಕವನಗಳನ್ನು ಹೊಂದಿರುತ್ತದೆಯೋ ಅದೇ ರೀತಿ ಬರೆದು ಕಳಿಸುತ್ತಿದ್ದ. ನಾನು ಚಿಂತಾಮಣಿ ಎನ್ನುವ ಹೆಸರಿನಲ್ಲಿ ಬರೆದು ಕಳಿಸುತ್ತಿದ್ದೆ. ಸರಿಸುಮಾರು 2 ವರ್ಷ ಈ ರೀತಿ ನಾವು ಬರೆದುಕೊಳ್ಳುತ್ತಿದ್ದೆವು. ಆ ದಿನಗಳಲ್ಲಿಯೇ ಇರಬೇಕು ನನ್ನ ಬರವಣಿಗೆ ಇನ್ನಷ್ಟು ಜೋರಾದದ್ದು. `ಅಘನಾಶಿನಿ ಕಣಿವೆಯಲ್ಲಿ..' ಅಂತ ಒಂದು ಕಾದಂಬರಿಯನ್ನು ಆ ದಿನಗಳಲ್ಲಿಯೇ ನಾನು ಬರೆಯಲು ಆರಂಭಿಸಿದ್ದು. ಆದರೆ ಆ ಕಾದಂಬರಿ ಇನ್ನೂ ಪೂರ್ಣಗೊಂಡಿಲ್ಲ..!
            ಪ್ರೈಮರಿ ಶಾಲೆಯ ದಿನಗಳಿಂದ ಓದುವುದು ನನ್ನ ಗೀಳು. ಅದರಲ್ಲೂ ತೇಜಸ್ವಿಯೆಂದರೆ ನನ್ನ ಪಂಚಪ್ರಾಣ. ತೇಜಸ್ವಿ ನನಗೆ ಮೊಟ್ಟಮೊದಲು ಓದಲು ಸಿಕ್ಕಿದ್ದು 4ನೇ ಕ್ಲಾಸಿನಲ್ಲಿ. ವಾರಕ್ಕೊಂದು ಪುಸ್ತಕ ತೆಗೆದುಕೊಂಡು ಓದುವ ಗೃಂಥಾಲಯ ಚಟುವಟಿಕೆಯ ಅಂಗವಾಗಿ ತೇಜಸ್ವಿಯವರ ಪರಿಸರದ ಕಥೆ ಸಿಕ್ಕಿತ್ತು. ಅದಾದ ಮೇಲೆ ಹಕ್ಕಿಗಳ ಬಗ್ಗೆ ಬರೆದ ಪುಸ್ತಕ ಹೀಗೆ ಹತ್ತು ಹಲವು. ಹೈಸ್ಕೂಲಿನಲ್ಲಿಯೂ ಅಷ್ಟೇ. ಸಿಕ್ಕ ಹಲವಾರು ಪುಸ್ತಕಗಳನ್ನು ಓದುತ್ತಿದ್ದೆ. ಕಾನ್ಲೆ ಪ್ರೈಮರಿ ಶಾಲೆ ಮಾಸ್ತರ್ ಚಿದಂಬರ ಅವರ ಬಳಿ ಹರಪೆ ಬಿದ್ದು ಶಿವರಾಮ ಕಾರಂತರ ಬಾಲ ವಿಜ್ಞಾನ ಸರಣಿಗಳನ್ನು ಓದಿದ್ದೆ. ನಂತರ ಪಿಯುಸಿಯಲ್ಲಿ ವಿ. ಎಸ್. ಹೆಗಡೆಯವರು ಕನ್ನಡ ಲೆಕ್ಚರ್. ಆ ದಿನಗಳಲ್ಲಿ ಹಲವಾರು ಪುಸ್ತಕಗಳನ್ನು ಒತ್ತಾಯವಾಗಿ ಓದಿಸುತ್ತಿದ್ದರು. ಕರ್ವಾಲೋವನ್ನು ಆ ದಿನಗಳಲ್ಲಿ 50ಕ್ಕೂ ಅಧಿಕ ಸಾರಿ ಓದಿದ್ದೆ. ಯಯಾತಿ, ಹಿಟ್ಟಿನಹುಂಜ, ತುಘ್ಲಕ್ ಹೀಗೆ ಹಲವಾರು ಪುಸ್ತಕಗಳು ನನ್ನ ಒಡನಾಡಿಯಾಗಿದ್ದವು. ಡಿಗ್ರಿಗೆ ಬಂದ ಮೇಲಂತೂ ಎರಡು ದಿನಕ್ಕೊಂದು ಕಾದಂಬರಿಯೋ, ಕವನ ಸಂಕಲನವೋ ನನಗೆ ಬೇಕಿತ್ತು. ಮಿತ್ರ ರಾಘವ, ಪೂರ್ಣಿಮಾ, ಚೈತ್ರಿಕಾ ಆದಿ ಬೇದೂರು, ನಾಗರಾಜ ಹೆಗಡೆ, ಕೃಷ್ಣಮೂರ್ತಿ ದೀಕ್ಷಿತ ಇವರ ಗೃಂಥಾಲಯ ಕಾರ್ಡುಗಳನ್ನು ಪಡೆದು ನಾನು ಪುಸ್ತಕಗಳನ್ನು ಓದುತ್ತಿದ್ದೆ. ಇವೇ ನನ್ನ ಬರವಣಿಗೆಯನ್ನು ರೂಪಿಸಿದಂತವುಗಳು ಎಂದರೆ ತಪ್ಪಾಗಲಿಕ್ಕಿಲ್ಲ.
           ಪಿಯುಸಿ ಮುಗಿದಿತ್ತು. ಮನೆಯಲ್ಲಿ ಮುಂದಕ್ಕೆ ಓದೋದು ಬೇಡವೇ ಬೇಡ ಎಂದು ಪಟ್ಟಾಗಿ ಕೂತಿದ್ದರು ಅಪ್ಪ. ಅಮ್ಮನಿಗೆ ಮಗ ಓದಲಿ ಎನ್ನುವ ಆಸೆಯಿತ್ತು. ಡಿಗ್ರಿ ಮಾಡೋದೇ ಸೈ. ಯಾವ ಡಿಗ್ರಿ ಮಾಡೋದು? ಮಾಮೂಲಿ ಹಿಸ್ಟರಿ, ಎಕನಾಮಿಕ್ಸು, ಪೊಲಿಟಿಕಲ್ ಸೈನ್ಸು ಮಾಡಿದರೆ ಏನೂ ಆಗೋದಿಲ್ಲ ಎಂದರು ಲಾಯರ್ ಗಣಪಣ್ಣ. ಸೋ ಇನ್ನೇನಪ್ಪಾ ಅಂತಿದ್ದಾಗ ಈಗ ವಿಜಯವಾಣಿಯಲ್ಲಿ ಕೆಲಸ ಮಾಡುತ್ತಿರುವ ಚಿಕ್ಕಮ್ಮ ಭಾರತಿ ಹೆಗಡೆ `ತಮಾ ನೀನು ಬರಿತ್ಯಲಾ.. ಯಾಕೆ ಜರ್ನಲಿಸಂ ಮಾಡ್ಲಾಗ?' ಎಂದದ್ದೇ ತಡ ಎಲ್ಲೆಲ್ಲಿ ಜರ್ನಲಿಸಂ ಕೋರ್ಸಿಗಳಿವೆ ಎನ್ನುವುದನ್ನು ಹುಡುಕಲಾರಂಭಿಸಿದ್ದೆ. ಶಿರಸಿ ಎಂ. ಎಂ. ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಜರ್ನಲಿಸಂ ಇತ್ತು. ಆಪ್ಷನಲ್ ಇಂಗ್ಲೀಷು ಪೊಲಿಟಿಕಲ್ ಸೈನ್ಸು ಜರ್ನಲಿಸಂಗ್ಗೆ ಜೈ ಎಂದು ಸೇರಿಕೊಂಡೆ. ಡಿಗ್ರಿ ಮೊದಲ ವರ್ಷದಲ್ಲಿ ನನ್ನ ಸೀನಿಯರ್ ಆಗಿದ್ದ ಸಂಜಯ ಭಟ್ಟ ಬೆಣ್ಣೆ, ಗಣೇಶ ಮುರೇಗಾರ್, ಅಶ್ವತ್ಥ ಹೆಗಡೆ, ಸುಭಾಷ ಧೂಪದಹೊಂಡ, ಚೈತ್ರಾ ಹೆಗಡೆ, ರೂಪಾ ಇವರೆಲ್ಲ `ತಮಾ ನೀನು ಡಿಗ್ರಿಯಲ್ಲಿ ಎಷ್ಟು ಬರೆಯುತ್ತಿಯೋ, ಅದೆಷ್ಟು ಬೈಲೈನ್ ಬರುತ್ತದೆಯೋ ಅದು ನಿನಗೆ ಮುಂದಿನ ನಿನ್ನ ವೃತ್ತಿ ಬದುಕಿಗೆ ಪೂರಕವಾಗುತ್ತದೆ.. ಮೂರು ವರ್ಷದಲ್ಲಿ ಇಂತಿಷ್ಟು ಬೈಲೈನ್ ಬರಬೇಕು ಎನ್ನುವ ಗುರಿ ಇಟ್ಟುಕೊ...' ಎಂದರು. ನಾನು ಮೂರು ವರ್ಷದಲ್ಲಿ `50' ಬೈಲೈನ್ ಬರಬೇಕೆಂಬ ಗುರಿ ಇಟ್ಟುಕೊಂಡೆ. ಬರೆದೆ ಬರೆದೆ. ಕನ್ನಡದ ಬಹುತೇಕ ಎಲ್ಲ ದಿನಪತ್ರಿಕೆ, ವಾರ ಪತ್ರಿಕೆ, ಮಂತ್ಲಿ, ಹದಿನೈದು ದಿನದ ಪತ್ರಿಗೆಳಿಗೆಲ್ಲ ಬರೆದೆ. ಹಲವು ಪತ್ರಿಕಗೆಳು ಪ್ರಕಟಿಸಿದವು. ಸಂಭಾವನೆಯನ್ನೂ ಕೊಟ್ಟವು. ಪರಿಣಾಮವಾಗಿ ಮೂರು ವರ್ಷದಲ್ಲಿ 100ಕ್ಕೂ ಅಧಿಕ ಬೈಲೈನ್ ಬಂದವು. ಖಂಡಿತವಾಗಿಯೂ ಈ ಬೈಲೈನ್ ಗಳು ನನ್ನ ವೃತ್ತಿ ಬದುಕಿಗೆ ಸಹಕಾರಿಯಾದವು.
           ಡಿಗ್ರಿ ಟೈಮಿನಲ್ಲಿ ಕಂಪ್ಯೂಟರ್ ಕಲಿತಿದ್ದೆನಾದರೂ ತೀರಾ ಬ್ಲಾಗ್ ಬರೆಯುವ ಹಂತ ಮುಟ್ಟಿರಲಿಲ್ಲ. ಡಿಗ್ರಿ ಮುಗಿಸಿ ಎಲ್ಲ ಪತ್ರಿಕಾ ಕಚೇರಿಗಳಿಗೂ ರೆಸೂಮ್ ಕಳಿಸಿ, ಹೊಟ್ಟೆ ಪಾಡಿಗೆ ಸಿದ್ದಾಪುರ ಕೆಡಿಸಿಸಿ ಬ್ಯಾಂಕಿನಲ್ಲಿ ಡಾಟಾ ಎಂಟ್ರಿ ಕೆಲಸ ಮಾಡುವ ಸಂದರ್ಭದಲ್ಲೇ ಆರ್ಕುಟ್ಟು, ಫೇಸ್ಬುಕ್ಕು, ಬ್ಲಾಗು ಶುರು ಮಾಡಿಕೊಂಡಿದ್ದು. ನಂತರ ಸಿದ್ದಾಪುರ ಎ.ಪಿಎಂ.ಸಿ.ಯಲ್ಲಿ ಡೈಲಿ ವೇಜಸ್ ಮೇಲೆ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿಯೇ ಅಘನಾಶಿನಿ ಹುಟ್ಟಿಕೊಂಡಿದ್ದು. ಅಲ್ಲಿಂದ ಮುಂದೆ ನಿಮಗೆ ಗೊತ್ತೇ ಇದೆ. ಮುಂದೆ ಬೆಂಗಳೂರಿನಲ್ಲಿ ಸಂಯುಕ್ತ ಕರ್ನಾಟಕ ಕರೆದು ಕೆಲಸ ಕೊಟ್ಟಿತು. ಅದಾದ ಮೇಲೆ ನಾನು ಉದಯವಾಣಿಗೆ ಹೋದೆ.
            2011 ನನ್ನ ಬದುಕಿನಲ್ಲಿ ದೊಡ್ಡ ತಿರುವು ಕೊಟ್ಟ ವರ್ಷ. ಬೆಂಗಳೂರಿನಲ್ಲಿ ಉದಯವಾಣಿಯಲ್ಲಿ ಸ್ಪೋರ್ಟ್ಸ್ ರಿಪೋರ್ಟರ್ ಆಗಿ ಲೈಫು ಲೈಟಾಗಿ ಓಡುತ್ತಿದೆ ಎನ್ನುವಾಗಲೇ ಬದುಕು ತಿರುವು ಕೊಟ್ಟಿತ್ತು. ಪರಿಣಾಮವಾಗಿ ಮನೆಗೆ ವಾಪಾಸು ಬಂದೆ. ಒಂದಾರು ತಿಂಗಳು ಸುಮ್ಮನೆ ಉಳಿದೆ. ಆಮೇಲೆ ಕನ್ನಡಪ್ರಭದಲ್ಲಿ ನನ್ನ ಕೆಲಸ ಶುರುವಾಯಿತು. ಈ ನನ್ನ ಹಾದಿಯಲ್ಲಿ ನನಗೆ ಮಾರ್ಗದರ್ಶನ ಮಾಡಿದವರು ಹಲವರು. ಖಂಡಿತವಾಗಿಯೂ ಅವರ ಬಗ್ಗೆ ನಾನು ಹೇಳಲೇಬೇಕು.
            ಪ್ರೈಮರಿಯ ತಾರಾ ಮೇಡಮ್ಮು, ಸೊಕಾ ಸುಮ್ಮನೆ ಕಾರಣವಿಲ್ಲದೇ ಹಂಗಿಸುತ್ತಿದ್ದ ಸಿ. ಎಂ. ಹೆಗಡೆರು, ಹೈಸ್ಕೂಲಿನಲ್ಲಿ ಇಂಗ್ಲೀಷು ಹೇಳಿಕೊಟ್ಟ ಬಿಆರೆಲ್ಲು, ಹಿಸ್ಟರಿಯನ್ನು ರೋಚಕವಾಗಿ ಕಲಿಸಿದ ಲಕ್ಷಪ್ಪ ಮಾಸ್ತರ್ರು, ಹೊಡೆತದ ಮೂಲಕ ಅಲ್ಪ ಸ್ವಲ್ಪ ವಿದ್ಯೆಯನ್ನು ತಲೆಗೆ ಹತ್ತುವಂತೆ ಮಾಡಿದ ಪಿಬಿಎನ್ನು, ಮುಷ್ಟಿಕಟ್ಟಿಕೊಂಡು ಬೆನ್ನಿಗೆ ಗುದ್ನ ನೀಡುತ್ತಿದ್ದ  ಕಟ್ಬಿಟಿನಕೆರೆ ಎಸ್ಸೆಚ್ಚು, ಕನ್ನಡವನ್ನು ಚನ್ನಾಗಿ ಕಲಿಸಿದರೂ `ನ' ದಿಂದ ಕೊನೆಗೊಳ್ಳುವ ಶಬ್ದವನ್ನು ನನನನ ಎಂದು ಉಚ್ಛರಿಸುತ್ತಿದ್ದ ಗ್ರೇಸ್ ಪ್ರೇಂ ಕುಮಾರಿ, ಪಿಯುಸಿಯ ರಾ. ಜಿ. ಭಟ್ಟರು, ದೇವೇಂದ್ರ ಮೂರ್ತಿಗಳು, ಪಿಯುಸಿ ಕೊನೆಯ ವರ್ಷದಲ್ಲಿ ನಾನು ಹಾಗೂ ಅವರ ನಡುವೆ ಜಗಳವಾಗಿದ್ದರೂ ನನ್ನ ಏಳಿಗೆಗೆ ಕಾರಣವಾದ ವಿ. ಎಸ್. ಹೆಗಡೆಯವರು, ಉಮಾಕಾಂತ ಶಾಸ್ತ್ರಿಗಳು ಕಲಿಸಿದ್ದು ಕಡಿಮಯೇನಲ್ಲ. ಡಿಗ್ರಿಯಲ್ಲಂತೂ ಹುಡುಗರಿಗೆ ಮಾತ್ರ ಸಿಕ್ಕಾಫಟ್ಟೆ ಬಯ್ಯುತ್ತಿದ್ದ ವಿಜಯನಳಿನಿ ರಮೇಶ್ ಮೇಡಮ್ಮು, ತಮಾಷೆಯಾಗಿ ಕಲಿಸುತ್ತಿದ್ದ ರಾಜು ಹೆಗಡೆಯವರು, ಪ್ರತಿದಿನ ಒಬ್ಬೊಬ್ಬರನ್ನಾಗಿ ಎದ್ದು ನಿಲ್ಲಿಸಿ ಇವತ್ತಿನ ಪೇಪರ್ ಓದಿಕೊಂಡು ಬಂದಿದ್ದೀರಾ? ಏನು ಬಂದಿದೆ ಹೇಳಿ ಎಂದು ಕೇಳಿ, ಕ್ಲಾಸಿನಲ್ಲಿ ಶಿಕ್ಷೆ ನೀಡುತ್ತಿದ್ದ ಸಚ್ಚಿದಾನಂದ ಹೆಗಡೆಯವರು, ಗೀತಾ ವಸಂತ ಮೇಡಮ್ಮು, ರಾಘವೇಂದ್ರ ಜಾಜಿಗುಡ್ಡೆ, ನಂತರದ ದಿನಗಳಲ್ಲಿ ವೃತ್ತಿಯಲ್ಲಿ ತೊಡಗಿಕೊಮಡಾಗ ತಿದ್ದಿದ ಹರಿಪ್ರಕಾಶ ಕೋಣೆಮನೆ, ಮುಂಜಾನೆ ಸತ್ಯ, ರವಿ ದೇವಳಿ, ಶಿವಪ್ರಕಾಶ್, ಉದಯವಾಣಿಯಲ್ಲಿದ್ದಾಗ ಅಕ್ಷರಗಳನ್ನು ತಿದ್ದಿದ ರಾಘವೇಂದ್ರ ಗಣಪತಿ, ರವಿ ಹೆಗಡೆ, ಈಗ ಕನ್ನಡಪ್ರಭದಲ್ಲಿ ನನ್ನನ್ನು ತಿದ್ದುತ್ತಿರುವ ವಿಶ್ವೇಶ್ವರ ಭಟ್ಟರು, ವಿಶ್ವಾಮಿತ್ರ ಹೆಗಡೆಯವರು ಎಲ್ಲರಿಂದಲೂ ನಾನು ಕಲಿತದ್ದು ಹಲವು. ಬಹುಶಃ ಅವರು ನನ್ನನ್ನು ತಿದ್ದದೇ ಇದ್ದಿದ್ದರೆ ನಾನು ಖಂಡಿತ ಹೀಗಿರುತ್ತಿರಲಿಲ್ಲ. ನಾನು ಹಾದಿ ತಪ್ಪಿದಾಗಲೆಲ್ಲ ಹೀಗಲ್ಲ.. ಹೀಗೆ ಎಂದು ಹೇಳಿದವರೇ ಎಲ್ಲರೂ. ಅವರೆಲ್ಲರಿಗೂ ನಾನು ಶರಣು.
           ಇದೀಗ ಬ್ಲಾಗಿನ ಬಗ್ಗೆ ಒಂಚೂರು ಹೇಳಲೇ ಬೇಕು. ಖಂಡಿತವಾಗಿಯೂ 50 ಸಾವಿರ ಜನರು ನನ್ನ ಬ್ಲಾಗ್ ವೀಕ್ಷಣೆ ಮಾಡುತ್ತಾರೆ ಎನ್ನುವುದು ಬ್ಲಾಗ್ ಆರಂಭಿಸಿದಾಗ ನನಗೆ ಅನ್ನಿಸಿರಲಿಲ್ಲ. ಸುಮ್ಮನೆ ನಾನು ಬರೆಯುತ್ತೇನೆ. ಆದರೆ ಅದನ್ನು ಎಷ್ಟು ಜನರು ನೋಡುತ್ತಾರೆ ಎಂದುಕೊಂಡಿದ್ದೆ. 2011ರಿಂದೀಚೆಗೆ 3 ವರ್ಷದಲ್ಲಿ ಅಜಮಾಸು 38ರಿಂದ 40 ಸಾವಿರ ಜನರು ಬ್ಲಾಗನ್ನು ನೋಡಿದ್ದಾರೆ. ಭಾರತವೊಂದೇ ಅಲ್ಲ ಅಮೆರಿಕಾ, ಜರ್ಮನಿ, ರಷ್ಯಾ, ಬಹರೈನ್, ಯುಎಇ, ಸಿಂಗಾಪುರ, ಬೊಲಿವಿಯಾ, ಉಕ್ರೇನ್, ಪೊಲಾಂಡ್, ಆಸ್ಟ್ರೇಲಿಯಾ ಹೀಗೆ ಹತ್ತು ಹಲವು ದೇಶಗಳವರು ಬ್ಲಾಗ್ ವೀಕ್ಷಣೆ ಮಾಡಿದ್ದಾರೆ. ನೂರಾರು ಜನರು ಮೆಚ್ಚುಗೆಯ ಅಭಿಪ್ರಾಯಗಳನ್ನೂ ತಿಳಿಸಿದ್ದಾರೆ. ಒಂದಿಷ್ಟು ಬರಹಗಳು ಭಾರಿ ಚರ್ಚೆಯನ್ನೂ ಕಂಡಿವೆ. ಅವುಗಳ ನಡುವೆ ಕಂಡೂ ಕಾಣದಂತಾಗಿ ಹೋಗಿದ್ದು ಇನ್ನೂ ಹಲವಾರು ಲೇಖನಗಳು, ಬರಹಗಳು.
          ಮೊಟ್ಟ ಮೊದಲು ಬರೆದ ಅಘನಾಶಿನಿ ಕಣೀವೆಯಲ್ಲಿ ಕಾದಂಬರಿಯನ್ನೇ ಇನ್ನೂ ಮುಗಿಸಿಲ್ಲ. ಅಂತದ್ದರಲ್ಲಿ ಬೆಂಗಾಲಿ ಸುಂದರಿ ಎನ್ನುವ ಕಾದಂಬರಿಯನ್ನು ಡೈರೆಕ್ಟಾಗಿ ಬ್ಲಾಗಲ್ಲಿ ಬರೆಯಲು ಆರಂಭಿಸಿದ್ದೇನೆ. ಅದೀಗ ಅರ್ಧಕ್ಕೂ ಅಧಿಕ ಮುಗಿದಿದೆ. ಒಳ್ಳೆಯ ಅಭಿಪ್ರಾಯಗಳು ಕೇಳಿ ಬಂದಿವೆ. ಖುಷಿಯ ಸಂಗತಿಯೆಂದರೆ ಎರಡು ಪ್ರಕಾಶನದವರು ನನ್ನ ಬರವಣಿಗೆಯ ಪುಸ್ತಕಗಳನ್ನು ಪ್ರಕಟಿಸುತ್ತೇನೆ ಎಂದು ಮುಂದೆ ಬಂದಿದ್ದಾರೆ. ಆದರೆ ನನಗೆ ಭಯವಾಗುತ್ತಿದೆ. ಪುಸ್ತಕಗಳನ್ನು ಪ್ರಕಟಿಸುವಷ್ಟು ದೊಡ್ಡವನಾಗಿದ್ದೀನಾ ನಾನು? ಇನ್ನೂ ಕೆಲವು ವರ್ಷದ ನಂತರ ಪುಸ್ತಕ ಪ್ರಟಿಸೋಣ ಎಂದುಕೊಂಡು ಪ್ರಕಾಶನದವರಿಗೆ ಉತ್ತರ ನೀಡಿಲ್ಲ. ಅವರು ಕೇಳುತ್ತಲೇ ಇದ್ದಾರೆ. ನಾನು ಒಪ್ಪಿಗೆ ನೀಡಲಾ, ಬೇಡವಾ ಎನ್ನುವ ಗೊಂದಲದಲ್ಲಿಯೇ ಇದ್ದೇನೆ.
          ನನ್ನ ಬರವಣಿಗೆಯಲ್ಲಿ ಮನೆಯಲ್ಲಿ ಬೆಂಬಲವಾಗಿ ನಿಂತವರು ಹಲವರು. ಮೊಟ್ಟಮೊದಲಿಗೆ ನೆನೆಯಬೇಕಾದದ್ದು ಅಮ್ಮನನ್ನು. ಅಮ್ಮನ ಒತ್ತಾಸೆಯೇ ನನಗೆ ಬರೆಯಲು ಪ್ರೇರೇಪಣೆ. ಮಾವ ಪ. ಗ. ಭಟ್ಟರ ಆಶೀರ್ವಾದವೂ ಇದೆ. ಅಪ್ಪ-ತಂಗಿಯರ ಪ್ರೀತಿ ಕೂಡ ಮರೆಯುವಂತಿಲ್ಲ. ಜೊತೆಯಲ್ಲಿ ಹಲವು ಸಾರಿ ನೇರಾ ನೇರ, ಮತ್ತೆ ಕೆಲವು ಸಾರಿ ವ್ಯಂಗ್ಯವಾಗಿ ಸಲಹೆಯನ್ನು ನೀಡಿ, ಪ್ರತಿಕ್ರಿಯೆ ಕೊಡುತ್ತಾರೆ. ಅವರನ್ನು ನೆನಪು ಮಾಡಿಕೊಳ್ಳದೇ ಹೇಗಿರಲಿ?
            ನನಗಂತೂ 50 ಸಾವಿರ ಜನರು ವೀಕ್ಷಣೆ ಮಾಡಿರುವುದು ಬಹಳ ಖುಷಿಯನ್ನು ತಂದಿದೆ. 5 ವರ್ಷದಲ್ಲಿ ಈ ಬೆಳವಣಿಗೆಗೆ ಕಾರಣವಾದ ಎಲ್ಲರಿಗೂ ನನ್ನ ಧನ್ಯವಾದಗಳು. ಮುಂದೆ ಕೂಡ ನಿಮ್ಮ ಪ್ರೀತಿ ಸದಾ ಹೀಗೆ ಇರಲಿ. ನಾನು ಕೆಟ್ಟದಾಗಿ ಬರೆದಿದ್ದರೆ ಮುಲಾಜಿಲ್ಲದೆ ತಿಳಿಸಿ. ಒಳ್ಳೆಯದಿದ್ದರೆ ಅಭಿಪ್ರಾಯ ತಿಳಿಸಿ. 1 ಲಕ್ಷ ಜನರು ವೀಕ್ಷಣೆ ಮಾಡಿದಾಗ ಮತ್ತೆ ನಾನು ಆ ಖುಷಿ ಹಂಚಿಕೊಳ್ಳಲು ಸಿಗುತ್ತೇನೆ. ನಿಮ್ಮ ಪ್ರೀತಿಯನ್ನು ಸದಾ ನಾನು ಬಯಸುತ್ತೇನೆ. ಮತ್ತೊಮ್ಮೆ ಧನ್ಯವಾದಗಳು.

Saturday, August 23, 2014

ಅನಂತಮೂರ್ತಿಯವರಿಗೊಂದು ನಮನ


ಅನಂತ ಮೂರ್ತಿಯವರು ಇನ್ನಿಲ್ಲ.
ಕನ್ನಡ ಸಾಹಿತ್ಯ ಲೋಕಕ್ಕೆ ಶಾಕ್ ಸುದ್ದಿ ಹೌದು.
ಬದುಕಿದ್ದಾಗ ಹಲವಾರು ರೀತಿಯ ಸುದ್ದಿಗಳಿಗೆ ಗ್ರಾಸವಾಗಿ, ಸಾಹಿತ್ಯದಲ್ಲಿ ಜ್ಞಾನಪೀಠ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದ ಅವರು ಸದಾ ಸುದ್ದಿಯಲ್ಲಿ ಇರುತ್ತಿದ್ದವರು. ಇತ್ತೀಚಿನ ದಿನಗಳಲ್ಲಿ ಯಾವುದೇ ಕಾದಂಬರಿ, ಕಥೆ, ಸೇರಿದಂತೆ ಪುಸ್ತಕಗಳನ್ನು ಬರೆಯದಿದ್ದರೂ ಹಲವು ರೀತಿಯ ಹೇಳಿಕೆಗಳನ್ನು ಕೊಟ್ಟು ಸದಾ ಚರ್ಚೆಯಲ್ಲಿ ಇರುತ್ತಿದ್ದವರು. ಕಲಬುರ್ಗಿ ಪ್ರಕರಣವಂತೂ ಅನಂತಮೂರ್ತಿಯವರ ಮೇಲೆ ಸಾಕಷ್ಟು ಟೀಕೆಗಳನ್ನೂ ಬರುವಂತೆ ಮಾಡಿತು. ಮೋದಿ ಪ್ರದಾನಿಯಾದರೆ ದೇಶ ಬಿಟ್ಟು ಹೋಗುತ್ತೇನೆ ಎಂದು ಹೇಳುವ ಮೂಲಕ ರಾಜ್ಯ ಸರ್ಕಾರವನ್ನು ಓಲೈಕೆ ಮಾಡಲು ಯತ್ನಿಸಿದರಾದರೂ ಜನಸಾಮಾನ್ಯರು ಅನಂತ ಮೂರ್ತಿಯವರ ವಿರುದ್ಧ ತಿರುಗಿಬಿದ್ದರು. ಮೋದಿಯವರು ಪ್ರಧಾನಿಯಾದ ನಂತರವಂತೂ ಅನಂತ ಮೂರ್ತಿಯವರ ಬಳಿ ಯಾವಾಗ ದೇಶ ಬಿಟ್ಟು ಹೋಗುತ್ತೀರಿ ಎಂದು ಕೇಳಿದವರು ಹಲವರು. ಅದಕ್ಕೆ ಪ್ರತ್ಯುತ್ತರವಾಗಿ ಅನಂತಮೂರ್ತಿ ಅದೇನೋ ಸಬೂಬು ಹೇಳಿ ನುಣುಚಿಕೊಂಡರು. ಆದರೆ ಇತ್ತೀಚಿನ ಎರಡು ತಿಂಗಳಲ್ಲಿ ಅನಂತಮೂರ್ತಿಯವರು ಯಾವುದೇ ವಿವಾದದ ಹೇಳಿಕೆ ಕೊಡದೇ ಇದ್ದಾಗಲೇ ಏನೋ ಸರಿಯಿಲ್ಲ ಎನ್ನುವ ಭಾವನೆಯನ್ನು ಎಲ್ಲರಲ್ಲೂ ಹುಟ್ಟು ಹಾಕಿತ್ತು. ಬಹುಶಃ ಮೂರ್ತಿ ಮೇಲೆ ಮೂತ್ರ ವಿಷಯದ ಮೇಲೆ ವಿವಾದವಾಗಿದ್ದೆ ಕೊನೆಯಿರಬೇಕು. ಆ ನಂತರ ಅವರಿಂದ ವಿವಾದಗಳಾಗಲಿಲ್ಲ. ನಂತರದ ದಿನಗಳಲ್ಲಿ ಆರೋಗ್ಯದ ಸಮಸ್ಯೆ ಖಂಡಿತವಾಗಿಯೂ ಅವರನ್ನು ಕಾಡಿರಬೇಕು. ಅವರು ಸುಮ್ಮನಿದ್ದರು.
ನಾನು ಅನಂತ ಮೂರ್ತಿ ಅವರು ಬರೆದಿದ್ದನ್ನು ಓದಿದ್ದು ಬಹಳ ಕಡಿಮೆ. ಅನಂತಮೂರ್ತಿಯವರ ಸಂಸ್ಕಾರ ಹಾಗೂ ಭಾರತೀಪುರ ಈ ಎರಡು ಕಾದಂಬರಿಗಳನ್ನು ನಾನು ಓದಿದ್ದೇನೆ. ಇವನ್ನು ಓದಿದ್ದೂ ನನ್ನ ಕಾಲೇಜು ದಿನಗಳಲ್ಲಿ. ಖಂಡಿತವಾಗಿಯೂ ಆ ದಿನಗಳಲ್ಲಿ ಈ ಪುಸ್ತಕಗಳನ್ನು ನಾನು ಓದಲು ಕಷ್ಟಪಟ್ಟಿದ್ದು ನಿಜ. ನನ್ನ ಅಂದಿನ ಯೋಚನಾ ಲಹರಿ, ಅಧವಾ ನನ್ನ ಮಟ್ಟಕ್ಕೆ ಅದು ಒಗ್ಗಲಿಲ್ಲ. ಗಡುಚೆನ್ನಿಸಿತು.ಬಹುಶಃ ಆ ನಂತರವೇ ಅನಂತಮೂರ್ತಿಯವರ ಪುಸ್ತಕಗಳನ್ನು ಕಂಡರೆ ಅದರತ್ತ ನಾಣು ಅಷ್ಟಾಗಿ ಗಮನ ಹರಿಸಲಿಲ್ಲ. ಆದರೆ ಈಗ ಮತ್ತೊಮ್ಮೆ ಅವರ ಪುಸ್ತಕಗಳನ್ನು ಓದಬೇಕೆಂಬ ಮನಸ್ಸಾಗುತ್ತಿದೆ.
ಅನಂತಮೂರ್ತಿಯವರ ವಿರುದ್ಧ ನನಗೆ ತಿಳಿದಂತೆ ಮೊಟ್ಟ ಮೊದಲು ಬರೆದಿದ್ದು ಪ್ರತಾಪ ಸಿಂಹ ಅವರಿರಬೇಕು. ಪ್ರತಾಪ್ ಸಿಂಹ ಅವರು ಬೆತ್ತಲೆ ಜಗತ್ತಿನ ಅಂಕಣದಲ್ಲಿ ಬರೆದಿದ್ದ ಲೇಖನವೊಂದನ್ನು ಅನಂತಮೂರ್ತಿ ಅವರು ವಿರೋಧಿಸಿದಾಗ ಸಾಕಷ್ಟು ವಾದಗಳು ಜರುಗಿತ್ತು. ಪ್ರತಾಪಸಿಂಹ ಅನಂತಮೂರ್ತಿಯವರ ವಿರುದ್ಧ ತೊಡೆ ತಟ್ಟಿ ನಿಂತಿದ್ದರು. ಆ ನಂತರವೇ ಅನಂತಮೂರ್ತಿಯವರು ಹಲವು ಸಂದರ್ಭಗಳಲ್ಲಿ ವಿವಾದಾತ್ಮಕ ಹೇಳಿಕೆಗಳನ್ನೋ ಅಥವಾ ಅಂತಹ ಘಟನೆಗಳನ್ನೋ ಉಂಟುಮಾಡುತ್ತಿದ್ದರು. ಈ ಅಂಶಗಳನ್ನು ಖಂಡಿತ ಅವರ ತೆಗಳಿಕೆಗೆ ಹೇಳುತ್ತಿಲ್ಲ. ಸಾಹಿತ್ಯ ಜಗತ್ತಿನಲ್ಲಿ, ಬದುಕಿನಲ್ಲಿ ಅವರು ದೊಡ್ಡ ಹೆಮ್ಮರ. ನಾನು ಚಿಕ್ಕದೊಂದು ಎಲೆ ಅಷ್ಟೆ. ಆದರೆ ಅವರು ನಿಧನರಾಗಿರುವ ಈ ಸಂದರ್ಭದಲ್ಲಿ ಅವರ ಬಗ್ಗೆ ಹೊಗಳುತ್ತಿರುವ ಸಂದರ್ಭದಲ್ಲಿಯೇ ಅವರ ಈ ವಿಷಯಗಳೂ ನನಗೆ ನೆನಪಾಗುತ್ತಿವೆ.
ಈ ಸಂದರ್ಭದಲ್ಲಿಯೇ ಇನ್ನೊಂದು ವಿಷಯವನ್ನೂ ನಾನು ಹೇಳಲೇಬೇಕು. ನಿನ್ನೆ ಸಂಜೆ ಅನಂತಮೂರ್ತಿಯವರು ನಿಧನರಾದಾಗ ಅನೇಕರು ಪಟಾಕಿ ಹೊಡೆದು ಸಂಭ್ರಮಿಸಿದರು. ಮಂಗಳೂರು, ಚಿಕ್ಕಮಗಳೂರುಗಳಲ್ಲಿ ಪಟಾಕಿ ಹೊಡೆದರು. ಶಿರಸಿಯಲ್ಲೂ ಪಟಾಕಿ ಹೊಡೆದರು. ಇದು ನಿಜಕ್ಕೂ ಖಂಡನೀಯ ವಿಷಯವೇ ಹೌದು. ಅವರು ಎಂತದ್ದೇ ಹೇಳಿಕೆ ಕೊಟ್ಟಿರಲಿ ಆದರೆ ಸಾಹಿತ್ಯದ ವಿಷಯಕ್ಕೆ ಬಂದಾಗ ಮೇರು ಪರ್ವತವಾಗಿಯೇ ನಿಲ್ಲುತ್ತಾರೆ. ಪಟಾಕಿ ಹೊಡೆದು ಸಂಭ್ರಮಿಸಿದವರಲ್ಲಿ ಯಾರೊಬ್ಬರೂ ಸಾಹಿತ್ಯದಲ್ಲಿ ಸಾಧನೆ ಮಾಡಿದವರೆಂದು ಅನ್ನಿಸುತ್ತಿಲ್ಲ. ಇದೇ ಸಂದರ್ಭದಲ್ಲಿ ಇನ್ನೊಂದು ವಿಷಯ ಅಂದರೆ ವ್ಯಕ್ತಿಯೊಬ್ಬರು ಸತ್ತಾಗ ಸಂಭ್ರಮಿಸುವುದಿದೆಯಲ್ಲ.. ಛೇ. ಖಂಡಿತವಾಗಿಯೂ ವ್ಯಕ್ತಿ ಸತ್ತಾಗ ಪಟಾಕಿ ಹೊಡೆಯುವುದು ಎಷ್ಟು ದುರಂತವೋ ಅದೇ ರೀತಿ ಪಟಾಕಿ ಹೊಡೆದು ಸಂಭ್ರಮ ಪಡುತ್ತಾರೆ ಎಂದರೆ ಬಹುಶಃ ಆ ವ್ಯಕ್ತಿಯ ಜೀವನದ ದುರಂತವೂ ಇರಬೇಕು. ಸತ್ತ ಮೇಲೆ ಸಿಟ್ಟು, ದ್ವೇಷ, ವಿರೋಧವೆಲ್ಲ ಮಣ್ಣಾಗುತ್ತವೆ ಎನ್ನುತ್ತಾರೆ. ಆದರೆ ಅನಂತಮೂರ್ತಿಯವರು ಸತ್ತ ಮೇಲೂ ಪಟಾಕಿ ಹೊಡೆದು ಸಂಭ್ರಮಿಸಿದರು ಎಂದರೆ ಪಟಾಕಿ ಹೊಡೆದವರಲ್ಲಿ ಅದ್ಯಾವಪರಿ ಆಕ್ರೋಶವಿರಬಹುದು? ಅಬ್ಬಾ ಅನ್ನಿಸುತ್ತಿದೆ.
ಅನಂತಮೂರ್ತಿಯವರು ನಿಧನರಾದ ತಕ್ಷಣ ರಾಜ್ಯ ಸರ್ಕಾರ ಶಾಲಾ ಕಾಲೇಜುಗಳಿಗೆ ರಜಾ ಘೋಷಣೆ ಮಾಡಿತು. ಸರ್ಕಾರಿ ಕಚೇರಿಗಳಿಗೂ ರಜೆಯನ್ನು ನೀಡಿತು. ಬಹುಶಃ ರಾಜ್ಯ ಸರ್ಕಾರ ರಜೆ ನೀಡಿ ತಪ್ಪು ಮಾಡಿತೇನೋ ಎನ್ನಿಸುತ್ತಿದೆ. ಏಕೆಂದರೆ ರಜೆ ಸಿಕ್ಕಿತೆಂದರೆ ಎಂಜಾಯ್ ಮಾಡಲಿಕ್ಕೆ ಕೊಟ್ಟಿದ್ದಾರೆ ಎನ್ನುವುದು ಇತ್ತೀಚಿನ ದಿನಗಳಲ್ಲಿ ಜನರ ಮನಸ್ಸಿನಲ್ಲಿ ಮೂಡಿಬಿಟ್ಟಿದೆ. ಯಾವ ಕಾರಣಕ್ಕೆ ರಜೆ ಕೊಟ್ಟಿದ್ದಾರೆ ಎಂಬುದನ್ನು ಯಾರೂ ಆಲೋಚಿಸುವುದಿಲ್ಲ. ರಜಾ ಸಿಕ್ಕಿತಲ್ಲ ಎಂದು ಸಂಭ್ರಮಿಸುತ್ತಾರೆ. ಅನಂತಮೂರ್ತಿಯವರಿರಲಿ ಅಥವಾ ಇನ್ಯಾವುದೇ ಗಣ್ಯರು, ಸಾಹಿತಿಗಳು, ಮಾಜಿ ಮು.ಮಂ, ರಾಜಕಾರಣಿಗಳು ನಿಧನರಾದಾಗಲೂ ರಜಾ ಕೊಡಲಾಗುತ್ತದೆ. ರಜಾ ಕೊಟ್ಟಿದ್ದು ನಿಧನರಾಗಿದ್ದಾರೆ, ಶೋಕ ವ್ಯಕ್ತಪಡಿಸಲು. ಆದರೆ ಜನರು ಮಾತ್ರ ರಜಾದಲ್ಲಿ ಮಜಾ ಉಡಾಯಿಸುತ್ತಾರೆ. ಕೊಡುವ ರಜೆ ಮಜಾ ಮಾಡಲು ಬಳಕೆಯಾಗುತ್ತದೆ ಎಂದಾದರೆ ಗಣ್ಯರು ಸತ್ತಾಗ ಯಾಕೆ ರಜಾ ಘೋಷಣೆ ಮಾಡಬೇಕು? ಖಂಡಿತವಾಗಿಯೂ ಮಜಾ ಮಾಡಲು ಬಳಕೆಯಾಗುವ ಇಂತಹ ಘೋಷಿತ ರಜಾಗಳೂ ನಿಧನರಾದವರಿಗೆ ಅವಮಾನವನ್ನು ಉಂಟುಮಾಡುವುದಿಲ್ಲವೇ? ಸತ್ತಾಗ ಪಟಾಕಿ ಹೊಡೆದು ಸಂಬ್ರಮಿಸಿದ್ದಕ್ಕೂ, ರಜಾಕ್ಕೂ ವ್ಯತ್ಯಾಸವೆಲ್ಲಿ ಬರುತ್ತದೆ? ಬಹುಶಃ ಶನಿವಾರ ಕೊಟ್ಟ ರಜಾ ಕೂಡ ಎಷ್ಟೋ ಜನರಿಗೆ ವಿಕೆಂಡ್ ಪಾರ್ಟಿಗೋ, ಅದ್ಯಾವುದೋ ಟ್ರಿಪ್ಪಿಗೋ ಬಳಕೆಯಾಗಿರಬಹುದು. ಇದು ಅನಂತಮೂರ್ತಿಯವರಿಗೆ ಮಾಡಿದ ಅವಮಾನವಾಗಲಿಲ್ಲವೇ? ರಜಾ ಘೋಷಣೆ ಅವಮಾನ ಮಾಡುವುದಾದರೆ ಖಂಡಿತವಾಗಿಯೂ ಇಂತಹ ರಜಾ ಘೋಷಣೆ ನಿಲ್ಲಿಸಬೇಕು. ಅದರ ಬದಲಾಗಿ ನಿಧನರಾದ ವ್ಯಕ್ತಿಗೆ ಗೌರವ ನೀಡುವ ಸಲುವಾಗಿ ಸರ್ಕಾರಿ ಕಚೇರಿಗಳಲ್ಲಿ 1 ತಾಸೋ, 2 ತಾಸೋ ಹೆಚ್ಚುವರಿ ಕೆಲಸವನ್ನು ಮಾಡಬೇಕು. ಆ ಮೂಲಕವಾದರೂ ಸಾವನ್ನಪ್ಪಿದ ಮಹಾನ್ ಸಾಧಕರಿಗೆ ಗೌರವ ನೀಡುವಂತಹ ಪ್ರಕ್ರಿಯೆ ಬೆಳೆಯಬೇಕು. ಹಾಗಾದಾಗ ಮಾತ್ರ ನಿಧನರಾದವರ ಆತ್ಮಕ್ಕೆ ಶಾಂತಿ ದೊರಕಬಹುದು ಎನ್ನುವುದು ನನ್ನ ಭಾವನೆ

ಅನಂತಮೂರ್ತಿಯವರ ಆತ್ಮಕ್ಕೆ ಶಾಂತಿ ದೊರಕಲಿ.

Friday, August 22, 2014

ಬೆಂಗಾಲಿ ಸುಂದರಿ-22

(ಸೈಕಲ್ ರಿಕ್ಷಾ)
              ಸೈಕಲ್ ತುಳಿಯುತ್ತಲೇ ಇದ್ದ. ನೇರ ರಸ್ತೆ ಹಿಂದಕ್ಕೆ ಸರಿಯುತ್ತಲೇ ಇತ್ತು. ಬೆಸರವಾಗದಿರಲಿ ಎನ್ನುವ ಕಾರಣಕ್ಕೆ ಸಲೀಂ ಚಾಚಾ ಇಳಿದನಿಯಲ್ಲಿ ವಿನಯಚಂದ್ರನ ಜೊತೆಗೆ ಮಾತನಾಡುತ್ತಲೇ ಇದ್ದರು. ಇದ್ದಕ್ಕಿದ್ದಂತೆ ಅದೆಲ್ಲಿದ್ದರೋ ಎಂಬಂತೆ ಆರೇಳು ಜನ ಇವರಿದ್ದ ಸೈಕಲ್ ರಿಕ್ಷಾದ ಕಡೆಗೆ ನುಗ್ಗಿಬಂದರು. ನುಗ್ಗಿದ ರೀತಿಯಲ್ಲಿಯೇ ಆ ಗುಂಪು ದರೋಡೆಕೋರರೆಂದು ಮೇಲ್ನೋಟಕ್ಕೆ ತಿಳಿಯಬಹುದಾಗಿತ್ತು. ನುಗ್ಗಿದವರೇ ಸೈಕಲ್ ರಿಕ್ಷಾವನ್ನು ಅಡ್ಡಗಟ್ಟಿದರು. ಕ್ಷಣಕಾಲ ತಬ್ಬಿಬ್ಬಾದ ವಿನಯಚಂದ್ರ. ಅಷ್ಟೇ ಸಾಕಿತ್ತು. ಇಬ್ಬರು ಹಿಡಿದು ಸೈಕಲ್ ನಿಲ್ಲಿಸಿ ವಿನಯಚಂದ್ರನನ್ನು ಕೈಯಲ್ಲಿದ್ದ ಹಗ್ಗದಿಂದ ಕಟ್ಟಿಹಾಕಿದರು. ಸಾಕಷ್ಟು ದೃಢಕಾಯನಾಗಿದ್ದರೂ ಹಲವರ ಎದುರು ವಿನಯಚಂದ್ರನ ಆಟ ನಡೆಯಲಿಲ್ಲ. ಸಲೀಂ ಚಾಚಾ ಹಾಗೂ ಮಧುಮಿತಾಳನ್ನೂ ಹಿಡಿದರು.
            ಹಾಯಾಗಿ ಮಲಗಿ ನಿದ್ರಿಸುತ್ತಿದ್ದ ಮಧುಮಿತಾ ಒಮ್ಮೆ ಬೆಚ್ಚಿ ಬಿದ್ದು ಎದ್ದಳು. ಆದರೆ ಆಕೆ ಅಷ್ಟರಲ್ಲಿ ಬಂಧಿಯಾಗಿದ್ದರು. ಸಲೀಂ ಚಾಚಾ ಅದೇನೋ ಬಯ್ಯುತ್ತಿದ್ದ. ಬೆಂಗಾಲಿ ಹಾಗೂ ಉರ್ದುವಾದ್ದರಿಂದ ವಿನಯಚಂದ್ರನಿಗೆ ಅರ್ಥವಾಗಲಿಲ್ಲ. ದರೋಡೆಕೋರರ ಗುಂಪು ಸೈಕಲ್ ರಿಕ್ಷಾವನ್ನು ಪರಿಶೀಲಿಸಿತು. ಅದರಲ್ಲಿದ್ದ ಬ್ಯಾಗನ್ನು ಹುಡುಕಿ ಅಲ್ಲಿದ್ದ ಹಣವನ್ನೂ, ಬೆಲೆ ಬಾಳುವ ವಸ್ತುಗಳನ್ನೂ ದೋಚಿಕೊಂಡಿತು. ವಿನಯಚಂದ್ರನಿಗೆ ಎರಡೇಟು ಹೊಡೆದು, ಹಗ್ಗದಿಂದ ಕಟ್ಟಿಹಾಕಿ ಮುಂದಕ್ಕೆ ಹೋದರು. ಸಲೀಂ ಚಾಚಾ ಕಷ್ಟಪಟ್ಟು ಕೈಗೆ ಕಟ್ಟಿದ್ದ ಹಗ್ಗವನ್ನು ಬಿಚ್ಚಿ, ಮಧುಮಿತಾ ಹಾಗೂ ವಿನಯಚಂದ್ರನನ್ನೂ ಬಿಡಿಸಿದರು. ಸಲೀಂ ಚಾಚಾ ತಮ್ಮ ಜೀವ ಉಳಿದಿದ್ದಕ್ಕೆ ದೇವರಿಗೆ ಧನ್ಯವಾದ ಹೇಳಿದ. ಹೊಡೆಸಿಕೊಂಡಿದ್ದ ಹೊಡೆತದಿಂದ ವಿನಯಚಂದ್ರ ಸುಧಾರಿಸಿಕೊಳ್ಳುತ್ತಿದ್ದ.
                   ಮಧುಮಿತಾ `ಹಾಳಾದವರು.. ನಮ್ಮ ಎಲ್ಲ ಹಣವನ್ನೂ ಅಗತ್ಯ ವಸ್ತುಗಳನ್ನೂ ದೋಚಿಕೊಂಡು ಹೋದರು..' ಎಂದು ಹಿಡಿಶಾಪ ಹಾಕಿದಳು.
                   ಸಲೀಂ ಚಾಚಾ `ಪುಣ್ಯ.. ಅವರು ನಿನಗೇನೂ ಮಾಡಲಿಲ್ಲವಲ್ಲ..' ಎಂದರು. ನಿಧಾನವಾಗಿ ವಿನಯಚಂದ್ರ ಸುಧಾರಿಸಿಕೊಳ್ಳತೊಡಗಿದ.
             ದರೋಡೆಕೋರರು ಏನೇನನ್ನು ಕದ್ದೊಯ್ದಿದ್ದಾರೆ ಎಂದು ಪರೀಕ್ಷೆ ಮಾಡತೊಡಗಿದರು. ಬ್ಯಾಗಿನಲ್ಲಿದ್ದ ಸಂಪೂರ್ಣ ಹಣವನ್ನು ಅವರು ಹೊತ್ತೊಯ್ದಿದ್ದರು. ಅಷ್ಟೇ ಅಲ್ಲದೇ ವಿನಯಚಂದ್ರದ ಅತ್ಯಮೂಲ್ಯ ಕಾಗದಪತ್ರಗಳನ್ನೂ ಒಯ್ದುಬಿಟ್ಟಿದ್ದರು. ಮೊಬೈಲ್ ಕೂಡ ಕಿತ್ತುಕೊಂಡು ಹೋಗಿದ್ದರು. ಮಧುಮಿತಾ ಆಭರಣ ಧರಿಸುವ ಹುಚ್ಚಿನವಳಲ್ಲವಾದ್ದರಿಂದ ಆಭರಣ ಒಯ್ದಿರಲಿಲ್ಲ. ವಿನಯಚಂದ್ರ ಹಾಗೂ ಮಧುಮಿತಾ ಭಾರತಕ್ಕೆ ಹೋಗಬೇಕೆಂದಿದ್ದರೆ ಬಾಂಗ್ಲಾದಲ್ಲಿ ಇನ್ನೂ ನೂರಾರು ಕಿ.ಮಿ ಸಾಗಬೇಕಿತ್ತು. ಕೈಯಲ್ಲಿದ್ದ ಹಣವೆಲ್ಲ ದರೋಡೆಕೋರರ ಪಾಲಾಗಿತ್ತು. ಹಣವಿಲ್ಲದೇ ಮುಂದೆ ಸಾಗುವುದು ಬಹಳ ದುಸ್ತರವಾಗಿತ್ತು. ಸುಧಾರಿಸಿಕೊಂಡ ವಿನಯಚಂದ್ರ ಸಲೀಂ ಚಾಚಾನ ಬಳಿ ಮುಂದೇನು ಮಾಡುವುದು ಎಂದು ಕೇಳಿದ. ಸಲೀಂ ಚಾಚಾ ಏನೇ ಮಾಡಿದರೂ ಪ್ರಯಾಣ ನಿಲ್ಲುವುದು ಬೇಡ. ಮುಂದಕ್ಕೆ ಹೋಗೋಣ ಎಂದರು. ವಿನಯಚಂದ್ರ ತನ್ನ ಗುರುತಿನ ಚೀಟಿಯ ಬಗ್ಗೆ ಅನುಮಾನ ಉಂಟಾಯಿತು. ಬ್ಯಾಗನ್ನು ಹುಡುಕಿದ. ದರೋಡೆಕೋರರು ವಿನಯಚಂದ್ರನ ಗುರುತಿನ ಚೀಟಿಯನ್ನೂ ಕಿತ್ತುಕೊಂಡು ಹೋಗಿದ್ದರು. ಭಾರತಕ್ಕೆ ಪೋನು ಮಾಡೋಣ ಎಂದುಕೊಂಡರೆ ಮೊಬೈಲ್ ಪೋನ್ ಕೂಡ ಹೊತ್ತುಕೊಂಡು ಹೋಗಿದ್ದರು.
            ಸಲೀಂ ಚಾಚಾ ತಾನೇ ಸೈಕಲ್ ಚಲಾಯಿಸಲು ಆರಂಭಿಸಿದ. ಕೆಲವು ಗಂಟೆಗಳ ನಂತರ ಅಶೂಲಿಯಾ ಪಟ್ಟಣ ಸಿಕ್ಕಿತು. ಆಗ ಬೆಳಗಿನ ಜಾವ ಮೂಡುತ್ತಿತ್ತು. ಸಲೀಂ ಚಾಚಾ ಮೊದಲು ಅಶೂಲಿಯಾದಲ್ಲಿ ಉಳಿಯೋಣ ಎಂದು ಹೇಳಿದ್ದನಾದರೂ ಪ್ರಯಾಣ ಮುಂದುವರಿಸೋಣ ಎನ್ನುವ ನಿರ್ಧಾರ ಕೈಗೊಂಡಿದ್ದ. ಅಶೂಲಿಯಾದಿಂದ ಒಂದು ತಾಸಿನ ಅವಧಿಗೆ ಜಿರಾಬೋ ಪಟ್ಟಣ ಕೂಡ ಹಿಂದಕ್ಕೆ ಸರಿಯಿತು. ಕೊನೆಗೊಮ್ಮೆ ಜಿರಾಬೋದ ನಂತರ ಸಿಗುವ ಘೋಸ್ಬಾಗ್ ನಲ್ಲಿ ಉಳಿಯುವ ನಿರ್ಧಾಕ್ಕೆ ಸಲೀಂ ಚಾಚಾ ಬಂದಿದ್ದ. ಅಶೂಲಿಯಾ ಹಾಗೂ ಜಿರಾಬೋಗಳ ನಡುವೆ ಮಧ್ಯ ಮಧ್ಯ ಗದ್ದೆ ಬಯಲುಗಳಿದ್ದರೂ ಜಿರಾಬೋ ಘೋಸ್ಬಾಗ್ ಒಂದಕ್ಕೊಂದು ಕೂಡಿಕೊಂಡಿದ್ದವು. ಮಧ್ಯಮ ವರ್ಗದವರೇ ಹೆಚ್ಚಾಗಿದ್ದ ಪಟ್ಟಣ ಗೋಸ್ಬಾಗ್. ಗೋಸ್ಬಾಗ್ ತೆರಳುವ ವೇಳೆಗೆ ಪೂರ್ವದಲ್ಲಿ ಸೂರ್ಯ ಉದಯಿಸಿದ್ದ. ಮಧುಮಿತಾಳಿಗೆ ಹೊಟ್ಟೆ ಚುರುಗುಡುತ್ತಿತ್ತಾದರೂ ಹಸಿವಾಗಿದೆ ಎನ್ನಲು ಮುಜುಗರ. ಕೈಯಲ್ಲಿ ದುಡ್ಡಿಲ್ಲ. ಇದ್ದ ದುಡ್ಡನ್ನೆಲ್ಲ ದರೋಡೆಕೋರರು ಹೊತ್ತೊಯ್ದಿದ್ದರು. ಸಲೀಂ ಚಾಚಾನೇ ಮಧುಮಿತಾ ಹಾಗೂ ವಿನಯಚಂದ್ರನ ಬಳಿ ಹೊಟೆಲಿಗೆ ತೆರಳಿ ತಿಂಡಿ ತಿನ್ನೋಣ ಎಂದ. ಆದರೆ ವಿನಯಚಂದ್ರ ಹಾಗೂ ಮಧುಮಿತಾ ತಮಗೆ ಹಸಿವಿಲ್ಲ ಎಂದು ಹೇಳಿದರು. ಆದರೆ ಸಲೀಂ ಚಾಚಾನಿಗೆ ಅಸಲಿ ವಿಷಯ ತಿಳಿದಿತ್ತು. ತಕ್ಷಣವೇ ಕಣ್ಣು ಮಿಟುಕಿಸುತ್ತಾ `ಯಾಕೆ ದುಡ್ಡಿಲ್ಲ ಅಂತ ತಿಂಡಿ ಕೂಡ ತಿನ್ನೋದಿಲ್ಲವಾ? ಬನ್ನಿ ದುಡ್ಡಿದೆ..' ಎಂದು ಹೇಳಿದರು.
          `ಚಾಚಾ.. ಇದ್ದ ದುಡ್ಡನ್ನೆಲ್ಲ ದರೋಡೆಕೋರರು ಹೊತ್ತುಕೊಂಡು ಹೋಗಿದ್ದಾರೆ. ದುಡ್ಡಿದೆ ಅನ್ನುತ್ತೀಯಲ್ಲಾ... ಹಹ್ಹಾ..' ಎಂದ ವಿನಯಚಂದ್ರ.
          `ಅಯ್ಯೋ ಹುಚ್ಚಪ್ಪಾ... ತಾಳು..' ಎಂದವನೇ ಸಲೀಂ ಚಾಚಾ ಸೀದಾ ಸೈಕಲ್ ರಿಕ್ಷಾದ ಪ್ರಯಾಣಿಕರು ಕೂರುವ ಸೀಟನ್ನು ಹರಿಯಲಾರಂಭಿಸಿದ. ಸೀಟಿನ ಅಡಿಯಲ್ಲಿತ್ತು ದುಡ್ಡು. ಸಾವಿರ ಸಾವಿರ ಗಟ್ಟಲೆ ಹಣ. ವಿನಯಚಂದ್ರ ಹಾಗೂ ಮಧುಮಿತಾ ಇಬ್ಬರ ಕಣ್ಣಲ್ಲೂ ಅಚ್ಚರಿ. ಇದೇನು ಎಂಬಂತೆ ನೋಡಿದರು. ಸಲೀಂ ಚಾಚಾ `ಯಾವುದಕ್ಕೂ ಇರಲಿ ಎಂಬಂತೆ ಇಟ್ಟಿದ್ದೆ. ಯಾವಾಗಲೋ ಇಟ್ಟಿದ್ದೆ. ಅಂತೂ ಹೀಗೆ ಉಪಯೋಗಕ್ಕೆ ಬಂತು. ನೋಡು 10 ಸಾವಿರಕ್ಕೂ ಅಧಿಕ ಇದೆ.  ನಮ್ಮ ಹಿರಿಯರು ಇಂತದ್ದಕ್ಕೆ ಆಪದ್ಧನ ಎಂದು ಹೇಳುವುದಲ್ಲವಾ?' ಎಂದರು. ಸಲೀಮ ಚಾಚಾನ ಮುಂದಾಲೋಚನೆ ಖುಷಿ ತಂದಿತು.
           ಹತ್ತಿರದಲ್ಲೇ ಇದ್ದ ಹೊಟೆಲೊಂದಕ್ಕೆ ಹೋಗಿ ತಿಂಡಿ ತಿಂದರು. ಅಲ್ಲೊಂದು ಕಡೆ ರೂಮು ಮಾಡಿ ಕೊಂಚ ವಿಶ್ರಾಂತಿ ಪಡೆದುಕೊಂಡರು. ಮದ್ಯಾಹ್ನದ ಊಟ ಮುಗಿಸಿ ಸಂಜೆಯ ಉಟವನ್ನು ಕಟ್ಟಿಸಿಕೊಂಡು ಇಳಿ ಸಂಜೆಯಲ್ಲಿ ಪ್ರಯಾಣವನ್ನು ಮತ್ತೆ ಆರಂಭಿಸಿದರು. ಗೋಸ್ಭಾಗ್ ನಿಂದ ನರೋಸಿನ್ಹೋಪುರ ಮತ್ತೊಂದು ತಾಸಿನಲ್ಲಿ ಸಿಕ್ಕಿತು. ಬೆಂಗಾಲಿಯರು ಎಲ್ಲವನ್ನೂ ಓ ಎಂದು ಕರೆಯುತ್ತಾರೆ. ಭಾರತದ ಅಸ್ಸಾಂ ಬೆಂಗಾಲಿಗರ ಬಾಯಲ್ಲಿ ಅಸ್ಸೋಂ ಆಗುತ್ತದೆ. ನರಸಿಂಹಪುರ ನರೋಸಿಂಹೋಪುರವಾಗುತ್ತದೆ. ಬೆಂಗಾಲಿ ಭಾಷೆಯ ವಿಶಿಷ್ಟವೇ ಇದು. ನರೋಸಿಂಹೋಪುರ ಬೆಂಗಾಲಿಯ ಅತ್ಯಂತ ಪುರಾತನ ಪಟ್ಟಣಗಳಲ್ಲೊಂದು. ಢಾಕಾ-ಅಶೂಲಿಯಾ ಹೆದ್ದಾರಿಯ ಒಂದು ಪಾರ್ಶ್ವದಲ್ಲಿ ನರೋಸಿಂಹೋಪುರವಿದ್ದರೆ ಇನ್ನೊಂದು ಭಾಗದಲ್ಲಿ ಗದ್ದೆ ಬಯಲುಗಳು ವಿಸ್ತಾರವಾಗಿ ಹರಡಿಕೊಂಡಿದ್ದವು. ಸಲೀಂ ಚಾಚಾ ಹುರುಪಿನಿಂದ ಸೈಕಲ್ ಚಲಾಯಿಸುತ್ತಿದ್ದರು. ಮಧುಮಿತಾ ಹಾಗೂ ವಿನಯಚಂದ್ರ ಹಿಂದಿನ ಸೀಟಿನಲ್ಲಿ ಕುಳಿತಿದ್ದರು.
            ಮತ್ತೆ ಕೆಲವು ಕಿಲೋಮೀಟರುಗಳ ಅಂತರದಲ್ಲಿ ಜಾಮ್ಗೋರಾ ಪಟ್ಟಣ ಸಿಕ್ಕಿತು. ಜಾಮ್ಗೋರಾ ನಗರಿ ಬೈಪೈಲ್ ಎಂಬ ಪಟ್ಟಣದ ಉಪನಗರಿ. ಸಾಕಷ್ಟು ವಿಸ್ತಾರವಾಗಿಯೂ ಇತ್ತು. ನಗರದಲ್ಲಿ ಜನಸಂಚಾರ ಜೋರಾಗಿತ್ತು. ರಾತ್ರಿಯಾದರೂ ಜನಸಾಮಾನ್ಯರು ಓಡಾಡುತ್ತಿದ್ದರು. ವಿನಯಚಂದ್ರ, ಸಲೀಂ ಚಾಚಾ ಹಾಗೂ ಮಧುಮಿತಾಳ ಮನಸ್ಸಿನಲ್ಲಿ ಆತಂಖ ದೂರವಾಗಿತ್ತು. ಬೈಪೈಲ್ ನಗರಿಯ ಗಲ್ಲಿಗಲ್ಲಿಗಳು ಸೆಳೆಯುವಂತಿದ್ದವು. ಮಧುಮಿತಾ ತಾನು ಹಿಂದೊಮ್ಮೆ ಈ ನಗರಿಯಲ್ಲಿ ಅಡ್ಡಾಡಿರುವುದಾಗಿ ತಿಳಿಸಿದಳು. ನಗರಿ ಅಭಿವೃದ್ಧಿಯಲ್ಲಿ ಮುಂದುವರಿದಂತೆ ಕಾಣಿಸಿತು. ಒಂದೆರಡು ಸೆಣಬಿನ ಕಾರ್ಖಾನೆಗಳೂ ಕಾಣಿಸಿದವು. ದೊಡ್ಡ ದೊಡ್ಡ ಕಟ್ಟಡಗಳು ಕಾಣಿಸಿದವು. ಬಾಂಗ್ಲಾದ ಮುಂದುವರಿದ ಪ್ರದೇಶದಲ್ಲಿ ಇದೂ ಒಂದು ಎನ್ನಬಹುದು.
            ಮುಂದಕ್ಕೆ ಸಾಗಿದಂತೆ ನಬೀನಗರ-ಚಂದ್ರ ರಸ್ತೆ ಸಿಕ್ಕಿತು. ರಸ್ತೆಯಲ್ಲಿ ಬಲಕ್ಕೆ ಹೊರಳಿ ಮುಂದಕ್ಕೆ ಸಾಗಿತು ಸೈಕಲ್ ರಿಕ್ಷಾ. ಉದ್ದನೆಯ ಹೆದ್ದಾರಿಯಲ್ಲಿ ಸಾಳು ಸಾಲು ವಾಹನಗಳು ಸಾಗುತ್ತಿದ್ದವು. ರೊಯ್ಯಂನೆ ಓಡುವ ವಾಹನಗಳ ಹಾರನ್ ಶಬ್ದ ಕಿವಿಗೆ ರಾಚುತ್ತಿತ್ತು. ಬೈಪೈಲ್ ನಗರದಲ್ಲಿ ಸಾಕಷ್ಟು ಜನದಟ್ಟಣೆಯೂ ಇತ್ತು. ರಸ್ತೆ ರಸ್ತೆಗಳಲ್ಲಿ ಕೆಂಪುದೀಪವಿತ್ತು. ಈ ನಡುವೆ ವಿನಯಚಂದ್ರ ತಾನೇ ಸೈಕಲ್ ತುಳಿಯಲು ಮುಂದಾದ. ಸೈಕಲ್ ಏರಿದ. ಹಿಂದಿನ ಸೀಟಿಗೆ ಹೋಗಿ ಕುಳಿತ ಸಲೀಂ ಚಾಚಾ `ಬೇಟಿ.. ಈ ಹುಡುಗನಿದ್ದಾನಲ್ಲ ಬಹಳ ಒಳ್ಳೆಯವನು. ನಿನಗೆ ಒಳ್ಳೆಯ ಗಂಡನಾಗುತ್ತಾನೆ. ನೀನು ಇವನನ್ನು ಪ್ರೀತಿಸಿ ಒಳ್ಳೆಯ ಕೆಲಸವನ್ನು ಮಾಡಿದೆ. ಈತನಲ್ಲಿ ಒಳ್ಳೆಯ ಗುಣಗಳೇ ಇವೆ. ಕೆಟ್ಟವನಲ್ಲ. ಈತನ ಜೊತೆ ಚನ್ನಾಗಿ ಬಾಳು.. ನಿನ್ನ ಬದುಕು ಬಂಗಾರವಾಗುತ್ತದೆ..' ಎಂದರು.
           ನಾಚಿಕೊಂಡ ಮಧುಮಿತಾ ಸುಮ್ಮನೆ ತಲೆಯಾಡಿಸಿದಳು. ವಿನಯಚಂದ್ರನ ಜೊತೆಗೆ ಬಾಳಿದಂತೆ, ಖುಷಿಯಿಂದ ಬದುಕಿದಂತೆ ಕನಸು ಕಾಣಲಾರಂಭಿಸಿದಳು. ಮುಂದೆ ಬರುವ ಕಷ್ಟದ ದಿನಗಳ ಅರಿವು ಆಕೆಗೆ ಇರಲಿಲ್ಲವಾದ್ದರಿಂದ ಆ ಕ್ಷಣ ಸ್ವರ್ಗದಂತೆ ಭಾಸವಾಯಿತು.
            ಬೈಪೈಲ್ ನಗರ ದಾಟುತ್ತಿದ್ದಂತೆಯೇ ಮತ್ತೆ ಗದ್ದೆ ಬಯಲುಗಳು ಕಾಣಲಾರಂಭಿಸಿದವು. ಅಲ್ಲೊಂದು ಕಡೆ ಸೈಕಲ್ ರಿಕ್ಷಾ ನಿಲ್ಲಿಸಿ ಊಟಕ್ಕೆ ಮುಂದಾದರು. ರಸ್ತೆಯ ಪಕ್ಕದ ಗದ್ದೆ ಬಯಲಿನಲ್ಲಿ ಕುಳಿತು ಕಟ್ಟಿಸಿಕೊಂಡಿದ್ದ ಊಟವನ್ನು ಬಿಚ್ಚಿದರು. ಗದ್ದೆಯಿಂದ ಬೀಸಿ ಬರುತ್ತಿದ್ದ ಚಳಿಗಾಳಿ ಹಲ್ಲನ್ನು ಕಟಕಟಿಸುವಂತೆ ಮಾಡುತ್ತಿತ್ತು. ಊಟ ಮುಗಿಸಿ ನೀರು ಕುಡಿದು ಮತ್ತೆ ಸೈಕಲ್ ಬಳಿ ಹೋಗುವ ವೇಳೆಗೆ ಮಧುಮಿತಾಳಂತೂ ಚಳಿಯಿಂದ ಕಟಕಟಿಸಲು ಆರಂಭಿಸಿದ್ದಳು. ವಿನಯಚಂದ್ರ ಆಕೆಯನ್ನು ತಬ್ಬಿ ಹಿಡಿದು ಸೈಕಲ್ ಏರಿದ. ಸಲೀಂ ಚಾಚಾ ಸೈಕಲು ತುಳಿಯಲು ತೊಡಗಿದರು. ತನ್ನ ಕಾಲಮೇಲೆ ಮಧುಮಿತಾಳ ತಲೆಯನ್ನು ಇರಿಸಿಕೊಂಡು ನೇವರಿಸತೊಡಗಿದ. ಮಧುಮಿತಾಳಿಗೆ ಹಿತವಾಗಿತ್ತು. ಖುಷಿಯಿಂದ ನಸುನಕ್ಕಿದ್ದಳು. `ಯಾವ ಜನ್ಮದ ಪುಣ್ಯವೋ ಏನೋ.. ನೀ ನಂಗೆ ಸಿಕ್ಕಿದ್ದೀಯಾ ಗೆಳೆಯಾ.. ಬದುಕಿನಲ್ಲಿ ಏನೇನಾಗ್ತದೋ.. ನಾ ನಿನ್ ಜೊತೆಗಿರ್ತೀನಿ...' ಪಿಸುಗುಟ್ಟಿದಳು ಮಧುಮಿತಾ.
         `ಹೀಗೆ ಇದ್ದು ಬಿಡೋಣ ಅನ್ನಿಸ್ತದೆ ಕಣೆ. ಈಗ ಕಷ್ಟವಿದೆ ನಿಜ. ಮುಂದಿನ ಬದುಕು ಸುಂದರವಾಗಿರಬಹುದು. ಆಶಾವಾದದಲ್ಲೇ ಬದುಕು ಸಾಧಿಸಬೇಕು. ಈ ಬಾಂಗ್ಲಾ ನಾಡನ್ನು ಒಮ್ಮೆ ದಾಟಿ ಬಿಡೋಣ ಮುಂದೆ ಒಳ್ಳೆಯ ದಿನಗಳು ನಮಗೆ ಸಿಗಬಹುದು. ನನ್ನ ಪ್ರೀತಿಯ ಕರ್ನಾಟಕ, ಅಲ್ಲಿ ಪಶ್ಚಿಮ ಘಟ್ಟದಲ್ಲಿ, ಮಲೆನಾಡಿನ ಗುಡ್ಡದ ತಪ್ಪಲಿನಲ್ಲಿ ಇರುವ ದೊಡ್ಡ ಮನೆಯಲ್ಲಿ ನಾನು-ನೀನು ರಾಜ ರಾಣಿಯರಂತೆ ಬದುಕೋಣ. ಜೊರಗುಡುವ ಮಳೆ, ಕೊರೆಯುವ ಚಳಿ, ಬೇಸಿಗೆಯ ಹಿತವಾತಾವರಣ ಅಲ್ಲಿದೆ. ಮನೆಯೆದುರು ಇರುವ ಅಡಕೆ ತೋಟಗಳು, ಹಿಂಭಾಗದಲ್ಲಿರುವ ದಟ್ಟ ಕಾಡು ಖಂಡಿತ ನಿನಗೆ ಇಷ್ಟವಾಗುತ್ತದೆ. ಇನ್ನು ನನ್ನ ಅಪ್ಪ-ಅಮ್ಮನ ಬಗ್ಗೆ ಹೇಳಲೇಬೇಕು. ನಾನು ಇಷ್ಟಪಟ್ಟಿದ್ದು ಅವರಿಗೂ ಖಂಡಿತ ಇಷ್ಟವಾಗುತ್ತದೆ. ನನ್ನ ಆಯ್ಕೆಗೆ ಅವರು ಎದುರಾಡಿಲ್ಲ. ಎದುರಾಡುವುದೀ ಇಲ್ಲ. ನಾನು ಈಗಾಲೇ ನಿನ್ನ ಬಗ್ಗೆ ಹೇಳಿದ್ದೇನೆ. ಖಂಡಿತ ಅವರು ನಮಗಾಗಿ ಕಾಯುತ್ತಿರುತ್ತಾರೆ. ಇನ್ನು ತಂಗಿಯಂತೂ ಪ್ರೀತಿಯಿಂದ ಆದರಿಸುತ್ತಾಳೆ..' ಎಂದ.
          `ಹುಂ..' ಎಂದಳು ಮಧುಮಿತಾ. `ನಮ್ಮ ಮನೆಯ ಬಗ್ಗೆ ಬಹಳ ಕುತೂಹಲವಾಗ್ತಿದೆ ವಿನೂ.. ಆದರೆ ಅಲ್ಲಿಗೆ ಹೋಗಲಿಕ್ಕೆ ಇನ್ನೂ ಬಹಳ ಸವಾಲನ್ನು ಎದುರಿಸಬೇಕಿದೆ.. ಅಲ್ಲವಾ..' ಎಂದಳು ಮಧುಮಿತಾ.
        ಸಲೀಂ ಚಾಚಾ ನಡುವೆ ಬಾಯಿ ಹಾಕಿ `ಏನೂ ಆಗೋದಿಲ್ಲ.. ನಿಮ್ಮನ್ನು ಭಾರತದ ಗಡಿಯೊಳಗೆ ಹಾಕುವುದೇ ನನ್ನ ಜವಾಬ್ದಾರಿ.. ಹೆದರಬೇಡಿ. ನಾನಿರುವ ತನಕ ನಿಮಗೇನೂ ಆಗುವುದಿಲ್ಲ..' ಎಂದ. ಚಾಚಾನ ಪ್ರೀತಿಗೆ ಜೋಡಿ ಹಕ್ಕಿಗಳು ಕಣ್ಣೀರಾಗುವುದೋಂದೇ ಬಾಕಿ.  ಮನಸ್ಸಿನಲ್ಲಿಯೇ ಆತನಿಗೊಂದು ಧನ್ಯವಾದ ಹೇಳಿದರು. ಸೈಕಲ್ ಮುಂದಕ್ಕೆ ಸಾಗುತ್ತಲೇ ಇತ್ತು. `ಇದೋ ನೋಡಿ ಹೀಗೆ ಸಾಗಿದರೆ ಚಕ್ರೋಬೋರ್ತಿ (ಚಕ್ರವರ್ತಿ) ಅನ್ನುವ ಊರು ಸಿಗುತ್ತದೆ. ಮುಂದಕ್ಕೆ ಸಿಗುತ್ತದಲ್ಲ ಅದೇ ಪನೀಸೈಲ್. ಎಂತೆಂತ ಪ್ರದೇಶಗಳಿವೆ.. ನೋಡಿ..' ಎಂದು ಕತ್ತಲೆಯಲ್ಲಿಯೇ ಚಾಚಾ ಬೋರ್ಡನ್ನು ತೋರಿಸಿ ವಿವರಿಸುತ್ತಿದ್ದರೆ ಹಿಮದೆ ಕುಳಿತ ಜೋಡಿ ಹಕ್ಕಿಗಳು ಸುಮ್ಮನೆ ಕಣ್ತುಂಬಿಕೊಳ್ಳುತ್ತಿದ್ದವು. ಯಾವುದೋ ಕನಸಿನ ನಗರಿಯಲ್ಲಿ ರಥದ ಮೇಲೆ ಸಾಗಿದಂತೆ ಅವರಿಗೆ ಅನ್ನಿಸುತ್ತಿತ್ತು.

(ಮುಂದುವರಿಯುತ್ತದೆ..)